ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 30, 2011

’ವೇದಸುಧೆ’ ಅಂಬೆಗಾಲಿಕ್ಕಿದ ಚಂದ


’ವೇದಸುಧೆ’ ಅಂಬೆಗಾಲಿಕ್ಕಿದ ಚಂದ

ನಿನ್ನೆ ೩೦.೦೧.೨೦೧೧ ರಂದು ಹಾಸನದ ಶ್ರೀ ಶಂಕರಮಠದ ಶ್ರೀಭಾರತೀತೀರ್ಥ ಸಂಭಾಂಗಣದಲ್ಲಿ ಸುಮಾರು ೭೦೦ ಜನರಷ್ಟು ಸೇರಿದ್ದರು. ಬಂದವರಲ್ಲಿ ಅನೇಕರು ಬ್ಲಾಗಿಗರೂ ಇದ್ದರೆಂಬುದು ಸಂತಸದ ವಿಷಯ. ತಮಗೆಲ್ಲಾ ಮೊದಲೇ ಹೇಳಿದ ಹಾಗೇ ’ವೇದಸುಧೆ’ಯ ವಾರ್ಷಿಕೋತ್ಸವದ ಸಂಭ್ರಮ. ವೇದಸುಧೆ ಬಳಗ ಅದರಲ್ಲೂ ಪ್ರಮುಖವಾಗಿ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್, ಕವಿ ಸುರೇಶ್, ಕವಿ ನಾಗರಾಜ್, ರಾಮಸ್ವಾಮಿ ಮೊದಲಾದವರು ತಮ್ಮ ಅನೇಕ ದಿನಗಳ ಶ್ರಮಕ್ಕೆ ಫಲವನ್ನು ಕಾಣುತ್ತಿದ್ದರು. ಬೆಳಿಗ್ಗೆ ಬಿಸಿಬಿಸಿ ಶ್ಯಾವಿಗೆ ಬಾತು, ಕಾಫಿ/ಟೀ ೯ ಗಂಟೆಗೆ ಎಲ್ಲರಿಗೂ ನೀಡಲ್ಪಟ್ಟು ಉಪಾಹಾರ ಅಚ್ಚುಕಟ್ಟಾಗಿ ಮುಗಿದರೆ ಸಭಾಕಾರ್ಯಕ್ರಮ ಸರಿಯಾಗಿ ಹತ್ತು ಗಂಟೆಗೆ ಆರಂಭವಾಯಿತು. ಕವಿ ಸುರೇಶ್ ಅವರು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ಅತಿಥಿಗಳೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರೆ, ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಶ್ರೀಧರ್ ಅವರು ’ವೇದಸುಧೆ’ ರೂಪುತಳೆದ ಬಗೆಯನ್ನು ವಿವರಿಸಿದರು. ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್, ಶ್ರೀಕಂಠಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಮಾರಿ ಸಹನಾಳಿಂದ ಮನಮೋಹಕ ದೀಪನೃತ್ಯ ನಡೆಯಿತು. ಶರ್ಮರಿಂದ ಪ್ರವಚಿಸಲ್ಪಟ್ಟ ’ವೇದೋಕ್ತ ಜೀವನಪಥ’ ಎಂಬ ಶ್ರಾವ್ಯಮಾಧ್ಯಮ ತಟ್ಟೆಯ ಬಗ್ಗೆ ವೇದಸುಧೆಯ ಶ್ರೀ ವಿಶಾಲ್ ಅವರು ಮಾತನಾಡಿದರು. ನಂತರ ಆ ಶ್ರಾಯ್ವ ಮಾಧ್ಯಮ ತಟ್ಟೆ[ಆಡಿಯೋ ಸೀಡಿ] ಬಿಡುಗಡೆಗೊಂಡಿತು. ಶಿವಮೊಗ್ಗೆಯ ಕುಮಾರಿ ಅಂಬಿಕಾ ಸುಶ್ರಾವ್ಯವಾಗಿ ವಯೋಲಿನ್ ನುಡಿಸಿದರು. ನಂತರ ಆರಂಭವಾದ ’ಆರೋಗ್ಯಕರ ಬದುಕು ಮತ್ತು ವೇದ’ ವಿಚಾರಸಂಕಿರಣದಲ್ಲಿ ಡಾ|ಶ್ರೀವತ್ಸ ಎಸ್.ವಟಿ, ಡಾ| ವಿವೇಕ್, ಕುಮಾರಿ ಶೃತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ನಾಗರಾಜ್ ದೀಕ್ಷಿತ್ ಮತ್ತು ನಾನು ಭಾಗವಹಿಸಿದ್ದೆವು. ವಿವಿಧ ದೃಷ್ಟಿಕೋನಗಳ ವಿಚಾರಧಾರೆಗಳು ಹರಿದವು. ಮಧ್ಯೆ ಮಧ್ಯೆ ಶ್ರೀಮತೀ ಲಲಿತಾ ರಮೇಶ್ ಮತ್ತು ಕುಮಾರಿ ಸ್ವಾತಿ ಮತ್ತು ಕುಮಾರಿ ಸಹನಾ ಈ ಮೂವರಿಂದ ಸುಮಧುರ ಗೀತ ಗಾಯನಗಳು ನಡೆದವು. ಶ್ರೀ ಸುಧಾಕರ ಶರ್ಮರು ತಮ್ಮ ಆಳವಾದ ವಿಶ್ಲೇಷಣೆಯೊಂದಿಗೆ ವಿಚಾರ ಸಮನ್ವಯಗೊಳಿಸಿದರು. ವೇದಸುಧೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿ ನಿಂತಿರುವ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಸಿ.ಎಚ್.ಕೃಷ್ಣಸ್ವಾಮಿಯವರು [ಹಲವು ವೇದಿಕೆಗಳಲ್ಲಿ ನಡೆಯುವಂತೇ:ಯಾವ ಸಬೂಬನ್ನೂ ಹೇಳಿ ತೆರಳದೇ]ಕಾರ್ಯಕ್ರಮದ ಅಂತ್ಯದವರೆಗೂ ವೇದಿಕೆಯಲ್ಲೇ ಹಾಜರಿದ್ದು ಸಮಯಾಭಾವದಿಂದ ಕೇವಲ ಎರಡೇ ಹಿತನುಡಿಗಳಲ್ಲಿ ತಮ್ಮ ಮಾತು ಮುಗಿಸಿದರು. ವೇದಸುಧೆಯ ವತಿಯಿಂದ ವೇದಿಕೆಯಲ್ಲಿರುವ ಎಲ್ಲರಿಗೂ ಹಾರಾರ್ಪಣೆಯ ಗೌರವದೊಂದಿಗೆ ವೇದಸುಧೆ ಹೊರತಂದ ’ವೇದೋಕ್ತ ಜೀವನ ಪಥ’ ಸೀಡಿ ನೀಡಿ ಸನ್ಮಾನಿಸಲಾಯಿತು. ವೇದಸುಧೆ ಬಳಗದ ನೇತೃತ್ವ ವಹಿಸಿ ಕಾರ್ಯಕ್ರಮದ ರೂವಾರಿಯಾದ ಶ್ರೀ ಹರಿಹರಪುರ ಶ್ರೀಧರ್ ಅವರಿಗೆ ವೇದಸುಧೆ ಬಳಗದ ಮಿಕ್ಕೆಲ್ಲರೂ ಸೇರಿ ಹಾರಾರ್ಪಣೆ ಮಾಡಿ ಗೌರವಿಸಿದರು.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಮಧ್ಯಾಹ್ನ ೩ ಗಂಟೆ ಯಾಗಿತ್ತಾದರೂ ಜ್ಞಾನದಾಹಿಗಳಾದ ಸಭಿಕರು ದೈಹಿಕ ಹಸಿವನ್ನು ತಡೆಯುತ್ತ ತಮ್ಮ ಜ್ಞಾನದ ಹಸಿವಿಗೆ ಪುಷ್ಟಿನೀಡಿದ್ದರು. ವೇದಸುಧೆಯ ಬಳಗದಲ್ಲಿ ಪ್ರೇರಕರಾದ ಶ್ರೀ ಶರ್ಮರು ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಕೆಲವು ಪುಸ್ತಕಗಳನ್ನು ಮುದ್ರಣ ವೆಚ್ಚಪಡೆದು ವಿತರಿಸುವ ಏರ್ಪಾಟುಮಾಡಿದ್ದರು. ಪುಷ್ಕಳ ಭೋಜನ ವ್ಯವಸ್ಥೆಯಾಗಿತ್ತು. ಎಲ್ಲರೂ ಊಟ ಮಾಡಿಬಂದ ಮೇಲೆ ಅದಾಗಲೇ ತಡವಾಗಿತ್ತಾದ್ದರಿಂದ ೪ ಗಂಟೆಯಿಂದ ಹಾಸನದ ಮನೆಮನೆ ಕವಿಗೋಷ್ಠಿ ಆರಂಭಗೊಂಡಿತು. ಬೋರೇಗೌಡರಾದಿಯಾಗಿ ಹಲವು ನಿವೃತ್ತ ಅಧಿಕಾರಿಗಳು ಜನಪದ ಗೀತೆಗಳನ್ನು ಲಯಬದ್ಧವಾಗಿ ಹಾಡಿ ರಂಜಿಸಿದರು. ಅತಿಥಿಗಳನ್ನು ಸ್ವಾಗತಿಸಿ ಗುಲಾಬಿ ಹೂ ಗಳನ್ನು ನೀಡಿ ಗೌರವಿಸಲಾಯಿತು. ಸಂಘಟನೆಯಲ್ಲದ ಸಂಘಟನೆಯೆನಿಸಿದ ’ಮನೆ ಮನೆ ಕವಿಗೋಷ್ಠಿ’ಯ ಹದಿನಾಲ್ಕು ವರ್ಷಗಳ ನಡಿಗೆಯನ್ನು ಕಾರ್ಯದರ್ಶಿ ಶ್ರೀ ಎಸ್. ಸತ್ಯನಾರಾಯಣ ಅವರು ವಿವರಿಸಿದರು. ವೇದಿಕೆಯಲ್ಲಿ ಶ್ರೀ ಸುಧಾಕರ ಶರ್ಮ ಉದ್ಘಾಟಕರಾಗಿ ಭಾಗವಹಿಸಿ ಗಿಡವೊಂದಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನಡೆಯಿತು. ಪುಸ್ತಕಗಳ ಬಿಡುಗಡೆಗಾಗಿ ಆಗಮಿಸಿದ್ದ ಅತಿಥಿಗಳಾದ ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಆಶಾಲತಾ ಮತ್ತು ಕಾರವಾರದ ಆಕಾಶವಣಿಯ ಮುಖ್ಯಸ್ಥರಾದ ಶ್ರೀ ವಸಂತ ಕುಮಾರ್ ಪೆರ್ಲ ಅವರುಗಳು ಕ್ರಮವಾಗಿ ಕವಿ ನಾಗರಾಜ್ ಕೃತ ’ಮೂಢ ಉವಾಚ’ ಮತ್ತು ಕೊಟ್ರೇಶ್ ಉಪ್ಪಾರ ಕೃತ ’ಮೃತ್ಯುವಿನಾಚೆಯ ಬದುಕು’ ಕವನ ಸಂಕಲನಗಳನ್ನು ಬಿಡುಗಡೆಮಾಡಿದರು. ಕೃತಿಗಳ ಕುರಿತು ಅತಿಥಿಗಳು ವಿಚಾರ ಮಂಡಿಸಿದರೆ, ಲೇಖಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

’ವೇದಸುಧೆ; ಮತ್ತು ’ಮನೆಮನೆಕವಿಗೋಷ್ಠಿ’ ಜಂಟಿಯಾಗಿ ಏರ್ಪಡಿಸಿದ್ದ ಇಡೀ ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಸಂಪನ್ನಗೊಂಡವು ಎಂಬಲ್ಲಿಗೆ ’ವೇದಸುಧೆ’ ಚಂದವಾಗಿ ಅಂಬೆಗಾಲಿಕ್ಕುತ್ತಿದೆ ಎನ್ನುವುದು ಸಾಬೀತಾಯಿತು. ವೇದಕ್ಕೆ ಜಾತಿ ಮತ, ಧರ್ಮಗಳ ಗಡಿಯಿಲ್ಲ! ವೇದವೆಂದರೆ ಅತ್ಯಪೂರ್ವ ಮಾನವೀಯ ಸುಖ ಜೀವನವನ್ನು ಸಾಧಿಸುವ ಕಲೆ. ವೇದ ಎಲ್ಲರದಾಗಲಿ, ವೇದ ಎಲ್ಲರಿಗಾಗಿರಲಿ. ಮುಂಬರುವ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲಾವಾರು ನಡೆಯುವಂತೇ ’ವೇದಸುಧೆ’ ಬೆಳೆಯಲಿ ಮತ್ತು ಎಲ್ಲರೂ ವೇದಾಮೃತಪಾನ ಮಾಡುವಂತಾಗಲಿ ಎಂಬುದು ’ವೇದಸುಧೆ’ ಯ ಸದಾಶಯ. ಈ ಸಂದರ್ಭದಲ್ಲಿ ವೇದಸುಧೆ ತಮ್ಮೆಲ್ಲರಿಗೆ ಶುಭಹಾರೈಸುತ್ತಿದೆ . ಚಿತ್ರಗಳು ಮತ್ತು ಇನ್ನಷ್ಟು ವಿವರಗಳನ್ನು ’ವೇದಸುಧೆ’ ಬ್ಲಾಗಿನಲ್ಲಿ ನಿರೀಕ್ಷಿಸಿ:
http://vedasudhe.blogspot.com