ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 26, 2012

ಸತ್ಯಾನಂದ


ಸತ್ಯಾನಂದ

ಪೀಠಸ್ಥಾಪನೆ ಮಾಡುವ ಉದ್ದೇಶವೇ ಬೇರೆ ಎಂಬುದು ಭಕ್ತರಿಗೆ ತಿಳಿದರೆ ನಾಕಾರು ಜನರೂ ಇರಲಿಕ್ಕಿಲ್ಲ! ಅದಕ್ಕೇ ಉದ್ದೇಶ ವಿವರಿಸುವ ಗೋಜು ಯಾರಿಗೆ ಬೇಕು ? ಯಾರೋ ಒಂದಷ್ಟು ಜನ ಕೇಳಿದಾಗ ಅವರಲ್ಲಿ ಸಮಾನ ಮನಸ್ಕರನ್ನು ಆಯ್ದುಕೊಂಡು ಹತ್ತಿರಕ್ಕೆ ಬಿಟ್ಟುಕೊಂಡರೆ ಸರಿಯಪ್ಪ ! ಪೀಠವಿಲ್ಲದೇ ಯಾವುದನ್ನೂ ಸಾಧಿಸಲಾಗದು. ರಾಜಕೀಯದ ಕಳ್ಳ-ಖದೀಮರ ಕಪ್ಪುಹಣ ದೇಖರೇಖೆಯಲ್ಲಿ ಬಂದೋಬಸ್ತು ಮಾಡಿಡಲು ಅವರಿಗೂ ಜನಬೇಕು, ಜಾಗಬೇಕು. ಅಂತಹ ಜಾಗವನ್ನು ತಾನೇ ಸೃಷ್ಟಿ ಮಾಡಿಕೊಂಡುಬಿಟ್ಟರೆ ಹುಡುಕುವ ಕಣ್ಣುಗಳು ಸಾವಿರಾರು. ಅಲ್ಲಿಗೆ ತನ್ನ ಉದ್ದೇಶ ಸಾರ್ಥಕವೆಂದುಕೊಂಡ ಸತ್ಯಾನಂದ ಕಾವಿ ಶಾಟಿಯನ್ನು ಕೊಡವಿ ಮೇಲೆದ್ದ.

ಹೆಬ್ಬಂಡೆಯ ಹಾಸಿನಮೇಲೆ ಮೈಚಾಚುತ್ತಾ ಮತ್ತೆ ಮೆತ್ತಗೆ ಒರಗಿಕೊಂಡ ಸತ್ಯಾನಂದನಿಗೆ ಬಾಲ್ಯದ ನೆನಪುಗಳು. ಅಪ್ಪ-ಅಮ್ಮ-ಬಡತನ ಬಡತನ ಮತ್ತು ಬಡತನ ! ಎಳವೆಯಲ್ಲಿ ಓದು-ಬರಹ ಕಲಿಯಬೇಕಾಗಿದ್ದ ತನ್ನನ್ನು ದನಕಾಯಲು ಕಳುಹಿಸುವುದು ಅನಿವಾರ್ಯವಾಗಿತ್ತು. ಅಪ್ಪ-ಅಮ್ಮ ನಿತ್ಯದ ಕೂಳಿಗೇ ಪರದಾಡುವಾಗ ಇನ್ನೆಲ್ಲಿ ಓದಿಸಿಯಾರು? ಆದರೂ ಕಷ್ಟಪಟ್ಟು ಅಷ್ಟಿಷ್ಟು ಓದಿಸಲು ಮುಂದಾದರು. ಹಸಿರುಟ್ಟ ಹೊಲಗದ್ದೆಗಳ ನಡುವೆ ಬಿಸಿಲ ಬೋಳು ಗುಡ್ಡಗಳ ನಡುವೆ ಹಳ್ಳಿಯ ಬಾಲಕನಾಗಿದ್ದ ಸತ್ಯಾನಂದ ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಓರಗೆಯ ಬಾಲಕರ ಜೊತೆ ಸಿನಿಮಾ ನೋಡುತ್ತಿದ್ದ. ಆಹಹಾ...ಎಂತೆಂತಹ ಬಣ್ಣಬಣ್ಣದ ಸಿನಿಮಾಗಳು...ಕಾಣುವ ನಟ-ನಟಿಯರೆಲ್ಲಾ ದೇವ-ದೇವತೆಗಳ ಪ್ರತಿರೂಪದಂತೇ ಕಾಣುತ್ತಿದ್ದರೆ ಸತ್ಯ ತನ್ನನ್ನೇ ಮರೆಯುತ್ತಿದ್ದ! ವಾರಕ್ಕೊಮ್ಮೆಯಾದರೂ ಟೆಂಟ್ ಸಿನಿಮಾ ನೋಡದಿದ್ದರೆ ಊಟ ರುಚಿಸುತ್ತಿರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಹಾಗಿರಲೂ ಇಲ್ಲ!

ಬರುಬರುತ್ತಾ ಸತ್ಯನಿಗೆ ಹನ್ನೊಂದು-ಹನ್ನೆರಡು ವಯಸ್ಸು ಕಾಲಿಟ್ಟಿತು. ಸಿನಿಮಾ ಮಾತ್ರ ವಾರದ ಆರಾಧನೆಯಾಗಿ ಮುಂದುವರೆದೇ ಇತ್ತು. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣುವ ನಾಯಕಿಯರು ಬಹಳ ಸುಂದರವಾಗಿದ್ದಾದರೂ ಯಾಕೆ ಎಂಬುದು ಅವನಿಗೇ ತಿಳಿಯುತ್ತಿರಲಿಲ್ಲ! ಸಿನಿಮಾ ಮುಗಿದು ವಾರಗಳೇ ಕೆಲವೊಮ್ಮೆ ತಿಂಗಳುಗಳೇ ಕಳೆದರೂ ಕೆಲವು ನಾಯಕಿಯರನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೋ ನಾಯಕಿಯರನ್ನು ಹತ್ತಿರದಿಂದ ಕಾಣುವಾಸೆ, ಕೈಹಿಡಿಯುವಾಸೆ. ಆ ತುಡಿತದಲ್ಲೇ ಕೆಲವು ಕಾಲ ದೂಡುತ್ತಾ ದೂಡುತ್ತಾ ಹದಿಮೂರು ವಯಸ್ಸು ಕಳೆದು ಹದಿನಾಲ್ಕಕ್ಕೆ ಬಂತು. ಈಗ ಮಾತ್ರ ನಿಜಕ್ಕೂ ಒಳಗಿನ ತಹತಹ ತಾಳಲಾರದಾದ ಸತ್ಯಾನಂದ ದಿನವಿಡೀ ಸುಂದರಿಯರ ಕಲ್ಪನೆಯಲ್ಲೇ ಸುಸ್ತಾಗಿಹೋದ! ಊರಲ್ಲೆಲ್ಲಾ ಅಲೆದರೂ ಅಂತಹ ಸುಂದರ ಹುಡುಗಿಯರು ಎಲ್ಲೂ ಸಿಗುವುದಿಲ್ಲಾ ಎಂಬುದು ಆತನಿಗೆ ಗೊತ್ತು. ರಂಭೆ-ಊರ್ವಶಿ-ಅಪ್ಸರೆ-ಮೇನಕೆ ಆ..ಥೂ ..... ಎಲ್ಲರಿಗಿಂತಾ ಮೇಲು ಅಂಜಿತಾ ! ಸುಪುಷ್ಟವಾದ ಅವಳ ಉಬ್ಬುತಗ್ಗುಗಳನ್ನು ಕಣ್ತುಂಬ ತುಂಬಿಕೊಂಡ ಸತ್ಯ ನಿತ್ಯಾನುಷ್ಠಾನಕ್ಕೆ ತೊಡಗಿಬಿಟ್ಟ! ಅದು ತ್ರಿಕಾಲಪೂಜೆಯಲ್ಲ, ಸದಾ ಅದೇ ಧ್ಯಾನ-ಅದೇ ಮೌನ! ದೇವಿ ಅಂಜಿತಾ ’ಕಾಮೇಶ್ವರಿ’ಯ ಮೋಡಿ ಅಪಾರ-ಅವಳ ಮಹಿಮೆ ಅಪಾರ ಎಂದು ತಿಳಿದ ಸತ್ಯ ಸತ್ಯಾನ್ವೇಷಣೆಗಾಗಿ ’ರಮಣೀಚಲ’ ಪರ್ವತಕ್ಕೆ ತೆರಳಿ ತಪಸ್ಸಿಗೆ ಕೂತುಬಿಟ್ಟ!

ಅಪ್ಪ-ಅಮ್ಮ ಸಾಕಷ್ಟು ತಿಳಿಹೇಳಿದರು. ಮಗನೇ ಎಮ್ಮೆ ತೊಳೆದುಕೊಂಡು ದನಮೇಯಿಸಿಕೊಂಡು ಆರಾಮಾಗಿ ಸಂಸಾರಿಯಾಗಿ ಬದುಕಬೇಕಿದ್ದ ನಿನಗೆ ಸ್ವಲ್ಪ ವಿದ್ಯೆ ಕಲಿಸಿದ್ದರಿಂದ ನಮ್ಮ ಕೈಮೀರಿಹೋದೆಯಲ್ಲಾ... ನೀನು ಸಂಸಾರಿಯಾಗಿರಲಿ ಎಂದು ನಾವು ಬಯಸಿದ್ದರೆ ಎಲ್ಲವನ್ನೂ ಬಿಟ್ಟು ’ಸರ್ವಸಂಗ ಪರಿತ್ಯಾಗಿ’ಯಾಗಿ ಖಾವಿ ತೊಟ್ಟು ಬೆಟ್ಟವೇರಿಬಿಟ್ಟೆಯಲ್ಲಾ ಎಂದು ಪರಿತಪಿಸಿದರು. ಮರಳಿ ಕರೆದೊಯ್ಯಲು ಬಂದರು. ಆದರೆ ಸತ್ಯ ಮನಸ್ಸು ಮಾಡಲೇ ಇಲ್ಲ. ಅವನು ಸಾಕ್ಷಾತ್ ಅಂಜಿತಾ ’ಕಾಮೇಶ್ವರಿ’ಯಲ್ಲಿ ತನ್ನ ಕಣ್ಣುಗಳನ್ನು ನೆಟ್ಟಿದ್ದ. ಅಂಜಿತಾ ದೇವಿಯ ಭಕ್ತಿನಾದ ಆತನಿಗೆ ಅಂಜಿತಾ ಅಥವಾ ತತ್ಸಮಾನ ದೇವಿಯ/ದೇವಿಯರ ಸಾಕ್ಷಾತ್ಕಾರ ಆಗುವವರೆಗೂ ಆ ತಪಸ್ಸು ಬಿಟ್ಟು ಆತ ಮೇಲೇಳಲು ಸಿದ್ಧನಿರಲಿಲ್ಲ. ಹಗಲೆಲ್ಲಾ ಘೋರ ತಪಸ್ಸು! ಅಘೋರ ತಪಸ್ಸು !! ರಾತ್ರಿಯಾಯ್ತೆಂದರೆ ತಡೆಯಲಾರದ ಹುಮ್ಮಸ್ಸು! ಹಾರಿ ಕುಣಿವ ಗಮ್ಮತ್ತಿನ ಹುಮ್ಮಸ್ಸು! ಕುಂತಲ್ಲೇ ಹಾರುವುದೂ ಅಲ್ಲೇ ಕರಗತವಾಗಿಬಿಟ್ಟಿತು! ಮಗನ ಊಟ-ತಿಂಡಿಯ ಚಿಂತೆ ಹತ್ತಿದ ಮನೆಮಂದಿ ಕೆಲವುಕಾಲ ಅಲ್ಲಿಗೇ ಸಪ್ಲೈ ಮಾಡಿದರು. ಹೀಗಾಗಿ ತಪಸ್ಸು-ತಿಂಡಿ-ಊಟ-ಹಾರಾಟ, ತಪಸ್ಸು-ತಿಂಡಿ-ಊಟ-ಹಾರಾಟ ಇವಿಷ್ಟರಲ್ಲೇ ಕೆಲಕಾಲ ಕಳೆದ ಸತ್ಯನನ್ನು ಕಾಣಲು ಸುದ್ದಿಕೇಳಿದ ಸುತ್ತಲ ಗ್ರಾಮಗಳ ಜನ ನಿಧಾನವಾಗಿ ಒಬ್ಬೊಬ್ಬರೇ ಬರಹತ್ತಿದರು.

ಸ್ವಾಮಿಗಳು ಬಂದಿದ್ದಾರೆ ಎಂಬುದು ಸಹಜವಾಗಿ ಅನೇಕರಿಗೆ ಬಹಳ ಖುಷಿತರುವ ವಿಷಯವಾಗಿತ್ತು. ಏನೋ ತಮ್ಮ ಐಹಿಕ ಜೀವನದ ಕಷ್ಟನಷ್ಟಗಳಿಗೆ-ರೋಗರುಜಿನಗಳಿಗೆ ಪರಿಹಾರ ಕಲ್ಪಿಸಬಹುದೇನೋ ಎಂಬ ಆಸೆಕಂಗಳಿಂದ ಸ್ವಾಮಿಯನ್ನು ಖುದ್ದಾಗಿ ದರುಶನಮಾಡಲು ಜನ ಬಂದೇ ಬಂದರು! ಬಂದವರು ದಣಿದಿದ್ದರು. ಅಲ್ಲಿ ಕುಡಿಯಲು ನೀರಿಗೂ ತತ್ವಾರ. ಬಂದವರಲ್ಲೇ ಕೆಲವರು ಸೇವೆಗೆ ಒಂದು ಸಂಘ ಯಾಕೆ ಮಾಡಿಕೊಳ್ಳಬಾರದು? ಊಟ-ತಿಂಡಿ ವ್ಯವಸ್ಥೆಯನ್ನೂ ಮಾಡಿಕೊಂಡರೆ ಎಲ್ಲರಿಗೂ ಅನುಕೂಲ ಎಂಬ ಅನಿಸಿಕೆಯಿಂದ ಸ್ವಾಮಿಯ ಸೇವೆಗಿಂತ ಹೆಚ್ಚಾಗಿ ಬರುವ ’ಭಕ್ತರ’ ಸೇವೆಗಾಗಿ ಸಂಘ ಆರಂಭವಾಗಲೆಂದು ಸತ್ಯಾನಂದನಾಗಿ ಬದಲಾದ ಸತ್ಯ ಹೇಳಿಕೆಕೊಟ್ಟು ’ಅನುಗ್ರಹಿ’ಸಿದ! ಅಲ್ಲೇ ಸತ್ಯ ತನ್ನ ’ಅನುಕೂಲಗಳನ್ನೂ’ ಗ್ರಹಿಸಿದ! ಬಂದವರನ್ನು ತನ್ನ ಹತ್ತಿರವೇ ಇಟ್ಟುಕೊಳ್ಳಲು ಸ್ವಾಮಿ ಸರಳತೆಯನ್ನು ಮೆರೆದ; ನಿತ್ಯವೂ ಅದೇನು ಭಜನೆ, ಅದೇನು ಧ್ಯಾನ ಅಂತೀರಿ ! ಜನ ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹೇಳಿಕೊಂಡು ಸುದ್ದಿ ಬೆಂಕಿಯ ಕೆನ್ನಾಲಗೆಯಂತೇ ಬಹುಬೇಗ ಆವರಿಸಿಬಿಟ್ಟಿತು!

ಇಂತಿಪ್ಪ ಸ್ವಾಮಿಗೆ ಒಮ್ಮೆ ಕುಳಿತಲ್ಲೇ ಹೆಚ್ಚಿನಮಟ್ಟದ ’ಜ್ಞಾನೋದಯ’ವಾಯಿತು. ತಪಸ್ಸಿನ ಕೇಂದ್ರವನ್ನು ಈ ಕುಗ್ರಾಮದ ಬೋಳುಬೆಟ್ಟವಾದ ’ರಮಣೀಚಲ’ದಲ್ಲಿ ಇರಿಸುವುದಕ್ಕಿಂತಾ ಬೆಟ್ಟಹತ್ತುವ ತೊಂದರೆಯೇ ಇರದ ಜಾಗದ ಬಗ್ಗೆ ಚಿಂತನ-ಮಂಥನ ನಡೆಸುತ್ತಾ ಇದ್ದಾಗ ಬೆಂಗಳೂರಿನ ಪಕ್ಕದಲ್ಲೇ ಆದರೆ ’ಒಳ್ಳೊಳ್ಳೆಯ ಭಕ್ತರು’ ಬರಬಹುದೆಂಬ ಅನಿಸಿಕೆಯೂ ಆ ಕಾಲಕ್ಕೊದಗಿ ಸೈಂಧವಲವಣವನ್ನು ಅಭಿಮಂತ್ರಿಸಿ ಎದುರು ಹಿಡಿದಾಗ ಕಣ್ಣಿಗೆ ಗೋಚರವಾದದ್ದು : ಹಿಂದೆ ಅನೇಕ ಜನ್ಮಗಳಲ್ಲಿ ಸ್ವತಃ ತಾನೇ ತಪಸ್ಸಿದ್ಧಿಗೈದ ’ಪುಣ್ಯಕ್ಷೇತ್ರ’--’ಪರಿಧಿ’! ಪರಿಧಿಯಲ್ಲೇ ಪೀಠಸ್ಥಾಪನೆಯಾಗಿಬಿಟ್ಟರೆ ಬೆಳ್ಳನೆಯ ಜಿಂಕೆಗಳಂತಹ ಭಕ್ತರು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಸೋತು ನಿಡುಸುಯ್ದು ಬರುವಾಗ ತಣ್ಣಗೆ ಕೈಯ್ಯಾಡಿಸಿದರೆ ಸಮಾಧಾನ ಅವರಿಗೂ ತನಗೂ ಆಗುತ್ತದೆಂಬ ’ಜ್ಞಾನಚಕ್ಷು’ವಿಗೆ ಗೋಚರಿಸಿದ ಸತ್ಯವನ್ನೇ ನೆಚ್ಚಿ ರಾಜಧಾನಿಯನ್ನು ಓ ಸಾರಿ ಸಾರಿ ತಪೋಭೂಮಿಯನ್ನು ಪರಿಧಿಗೆ ವರ್ಗಾಯಿಸುವುದಾಗಿ ಘೋಷಿಸಿಯೇ ಬಿಟ್ಟ.

ಪೀಠ ಎಂದಮೇಲೆ ಒಂದಷ್ಟು ಪೂಜೆ-ಪುನಸ್ಕಾರ ಅಂತೆಲ್ಲಾ ನಡೆಸಬೇಕಲ್ಲಾ ಎಂಬ ಕಾರಣದಿಂದ ಮಂತ್ರವೇ ಅಲ್ಲದ ಮಂತ್ರಗಳನ್ನು ಕಲಿತ ಮಹಾಸ್ವಾಮಿಗಳು ಪರಿಧಿಯಲ್ಲಿ ಧ್ವಜ ನೆಟ್ಟು ಪೀಠಸ್ಥಾಪನೆ ಗೈದರು. ಅಹೋರಾತ್ರಿ ಉತ್ಸವವೋ ಉತ್ಸವ ಉತ್ಸವವೋ ಉತ್ಸವ! ಊರಕಡೆಗಳಿಂದ ಬಂದ ’ಭಕ್ತರು’ ಬೆಂಗಳೂರಿನಲ್ಲಿರುವ ತಮ್ಮ ನೆಂಟರಿಷ್ಟರಿಗೂ ಸ್ನೇಹಿತರಿಗೂ ವಿಷಯ ತಲ್ಪಿಸಿಯೇ ತಲ್ಪಿಸಿದರು. ಭಾನುವಾರ ಉಂಡಾಡಿಗಳಾಗುವ ಬೆಂಗಳೂರಿನ ಕೆಲವು ಬ್ರೆಮ್ಮಚಾರಿಗಳು ಭೋ ಗುಡುತ್ತಾ ಓಡೋಡಿ ಬಂದವರೇ ’ಸಂಭೋ’ ಎಂದು ಬೋರಲು ಬಿದ್ದರು. ಕುಳಿತಲ್ಲೇ ವಿನಾಕಾರಣ ಪಕಪಕನೇ ನಗುತ್ತಿದ್ದ ಸತ್ಯಾನಂದರನ್ನು ಕಂಡು ಜನ್ಮಸಾರ್ಥಕ ಮಾಡಿಕೊಂಡರು! ಮನದಣಿಯೇ ಜಾಜ್-ಪಾಪ್-ಇಂಡಿಪಾಪ್-ರಾಕ್-ಸಲ್ಸಾ ಎಂಬೆಲ್ಲಾ ತೆರನಾದ ಕುಣಿತಗಳಲ್ಲಿ ಸತ್ಯಾನಂದರಿಗೆ ಸೇವೆ ಸಲ್ಲಿಸಿದರು. ಆನಂದತುಂದಿಲರಾದ ಸತ್ಯಾನಂದರು ಇದು ನಿತ್ಯೋತ್ಸವವಾಗಲಿ ಎಂದು ಅಪ್ಪಣೆಕೊಡಿಸಿದರು. ಇಲ್ಲಿ ಜಾತಿ-ಮತ-ಪಂಥ, ಸಂಪ್ರದಾಯ-ಮಡಿ-ಮೈಲಿಗೆ-ವೇಷಭೂಷಣ ಎಂಬ ಕಟ್ಟುಪಾಡುಗಳಿಲ್ಲಾ, ನೀವು ಏನೇ ಮಾಡಿದರೂ ಎಲ್ಲಾ ವೆಲ್ ಕಂ ಎಲ್ಲಾ ನಮ್ಮ ಸೇವೆಯೇ ಸರಿ ಎಂದ ಸತ್ಯಾನಂದರ ಕಣ್ಣುಗಳಲ್ಲಿ ಹೊಸಹುರುಪನ್ನು ಕಂಡ ಪಡ್ಡೆಗಳು ಗುರುವಿನ ಜೊತೆಗೇ ಪಕಪಕಪಕಪಕನೆ ನಕ್ಕವು!

ವರುಷವೊಂದೆರಡು ಕಳೆದಿರಲು ನಿಧಾನವಾಗಿ ಆ ಬ್ರೆಮ್ಮಜಾರಿಗಳ ಜೊತೆಗೆ ಗಾಂಜಾವಾಲಾಗಳೂ ಅಫೀಮಿನವರೂ ಜೊತೆಯಾದರು! ಬ್ರೆಮ್ಮಜಾರಿಗಳು ತಾವಿನ್ನು ಹೀಗಿದ್ದಿದ್ದು ಸಾಕೂ...ಇನ್ನು ಏನಾದ್ರೂ ಸಾಧಿಸಬೇಕು ಎಂದುಕೊಂಡರು. ಲಿವ್-ಇನ್ ಎಂಬ ಹೊಸಪೀಳಿಗೆಯ ಜೀವನಕ್ರಮವನ್ನು ಪೀಠಕ್ಕೆ ಪರಿಚಯಿಸಿದ ಖ್ಯಾತಿ ಈ ’ಭಕ್ತರಿ’ಗೇ ಸಲ್ಲಬೇಕು. ಈಗೀಗ ಬ್ರೆಮ್ಮಜಾರಿಗಳ ಜೊತೆಗೆ ಬ್ರೆಮ್ಮಜಾರಿಣಿಯರೂ ಬರತೊಡಗಿದರು! ವಿದೇಶೀ ಬ್ರೆಮ್ಮಜಾರಿಗಳೂ ಬ್ರೆಮ್ಮಜಾರಿಣಿಯರೂ ಬಂದರು! ಎಲ್ಲವೂ ಬ್ರೆಮ್ಮಮಯವಾಗಿ ಫಾರಿನ್ ವೈನುಗಳು ಘಮಘಮಿಸತೊಡಗಿದವು! ಎಲ್ಲೆಲ್ಲೂ ಜೈಜೈಕಾರ, ಎಲ್ಲೆಲ್ಲೂ ನಿತ್ಯ ನೃತ್ಯ! ಪರಿಧಿ ಆಶ್ರಮ ನಿತ್ಯ-ಸತ್ಯ-ನಿರಂತರವೆಂಬ ಸ್ಲೋಗನ್ನು ಹಾಕಿಕೊಂಡು ಧ್ಯಾನ ಮತ್ತು ತಪಸ್ಸು ಈ ಪದಗಳಿಗೆ ಹೊಸ ’ಆಯಾಮ’ವನ್ನೇ ಕೊಟ್ಟಿತು! ನಿತ್ಯವೂ ಸಮಾನಮನಸ್ಕ ಹೊಸಹೊಸ ’ಭಕ್ತರು’ ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ ಪರಿಧಿಯ ಪೀಠಕ್ಕೆ ಬರುತ್ತಲೇ ಇದ್ದರು. ಪರಿಧಿಯ ವ್ಯಾಪ್ತಿ ಭೂಮಿಯಲ್ಲೂ ಗಾಳಿಯಲ್ಲೂ ವಿಸ್ತಾರವಾಗಿ ಸಿನಿಮಾ ಮಂದಿ-ರಾಜಕಾರಣಿಗಳಿಗೂ ಇದರ ಗಂಧ ಬಡಿಯಿತು!

ಕೆಲವು ಸಿನಿಮಾಗಳಲ್ಲಿ ನೋಡಿದ್ದನ್ನೇ ನೋಡಿ ಬೇಸತ್ತ ಪ್ರೇಕ್ಷಕ ಬೇರೇ ತೋರ್ಸಿ ಎಂದು ಬಡಕೊಂಡಿದ್ದರಿಂದ ಮಾರ್ಕೆಟ್ಟು ಬಿದ್ದುಹೋದ ನಟಿಯರಲ್ಲಿ ಅಂಜಿತಾ ದೇವಿಯೂ ಒಬ್ಬಳು. ಅವಳ ಅಂಗಸೌಷ್ಠವವನ್ನೇ ಅಂದಕಾಲತ್ತಿಲ್ ನಮ್ಮ ಸತ್ಯಾನಂದರು ಬಯಸಿದ್ದಲ್ಲವೇ? ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗದೇ ಇದ್ದುದರಿಂದ ಆರ್ಥಿಕ ಹಿನ್ನಡೆಯನ್ನು ಸತತ ಅನುಭವಿಸುತ್ತಿದ್ದ ಅಂಜಿತಾ ಪತಿಯ ಜೊತೆ ಜೀವಿಸುವುದೇ ಕಷ್ಟ ಎಂಬಂತಹ ಮಟ್ಟಕ್ಕೆ ಬಂದಿದ್ದಳು! ಲೆಕ್ಕಕ್ಕೆ ಪತಿಯಾದವ ನಟೀಮಣಿ ಪತ್ನಿಯ ಮಾತುಗಳಿಗೆಲ್ಲಾ ಅಸ್ತು ಅನ್ನುತ್ತಿರಲಿಲ್ಲವಾಗಿ ಹೆಸರಿಗೆ ಆದ ಮದುವೆ ಒಳಗೊಳಗೇ ಮುರಿದು ಬೀಳುವ ಹಂತ ತಲ್ಪಿತ್ತು. ಬೇಸರದಲ್ಲಿ ಬ್ರಹ್ಮಾಂಡ ಸುತ್ತುತ್ತಾ ಇದ್ದ ಅಂಜಿತಾಳಿಗೆ ಪರಿಧಿಯ ನಿತ್ಯಾನಂದರ ಪರದೆ ಸರಿಸಿದರೆ ಹೇಗೆ? -ಎಂಬ ವಿಚಾರ ಮನಸ್ಸಿಗೆ ಬಂತು! ಸಾಮಾನ್ಯವಾಗಿ ಈಗಿನ ಕಾಲಕ್ಕೆ ಹೊಸ ನಟಿಯರಿಗೆ ನಾಯಕಿ ಎಂದು ಸಿಗುವ ಅವಕಾಶ ಒಂದೋ ಎರಡೋ ಸಿನಿಮಾಗಳಿಗೆ ಮಾತ್ರ. ಆಮೇಲೆ ನೋಡುವ ನಮ್ಮ ಮಂದಿಗೂ ಬೇರೇ ಬೇಕು-ನಟಿಸುವ ನಾಯಕನಟ, ಸಹನಟ, ನಿರ್ದೇಶಕ, ನಿರ್ಮಾಪಕ ಎಲ್ಲರಿಗೂ ಬೇರೇ ಬೇಕು!--ಇದು ಸಿನಿಮಾ ರಂಗದ ನೆಳಲು-ಬೆಳಕಿನಾಟದ ನಿತ್ಯಸತ್ಯ! ಗೊತ್ತಿದ್ದೂ ಗೊತ್ತಿದ್ದೂ ತಮ್ಮ ಸೌಂದರ್ಯ-ನೇಮ್ ಆಂಡ್ ಫೇಮ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಇರುಳುಕಂಡ ಬಾವಿಗೆ ಹಗಲು ಉರುಳುವುದು ಇಂದಿನ ನಾಯಕಿಯರ ಇಚ್ಛಾಪ್ರಾರಬ್ಧ!

ಒಂದು ದಿನ ಪೀಠದಜನ ಬಾಗಿಲು ತೆಗೆಯುತ್ತಾರೆ ...ಏನಾಶ್ಚರ್ಯ : ಸ್ವತಃ ಅಂಜಿತಾ ದೇವಿ ಬಾಗಿಲಲ್ಲೇ ಪ್ರತ್ಯಕ್ಷವಾಗಿದ್ದಾಳೆ! ಆಶ್ರಮದ ಜನ ಒಳಗಡೆ ’ಧ್ಯಾನ’ಸ್ಥರಾಗಿದ್ದ ಸತ್ಯಾನಂದರೆಡೆಗೆ ಓಡಿಯೇ ಓಡಿದರು. " ಸತ್ಯಾನಂದ ಮಹಾಸ್ವಾಮಿಗಳೇ ಅಂಜಿತಾ ದೇವಿ ಬಂದಿದ್ದಾರೆ " ಎಂದಿದ್ದೇ ತಡ ಪೀಠದಿಂದ ಬೆಕ್ಕು ಹಾರಿದ ರೀತಿಯಲ್ಲಿ ಹಾರಿದ ಸತ್ಯಾನಂದರು ಆಶ್ರಮದ ಬಾಗಿಲಿಗೆ ತಾವೇ ತೆರಳಿ ಸ್ವಾಗತ ಕೋರಿದರು! ಬಂದಿರತಕ್ಕಂತಹ ಅಂಜಿತಾ ’ಕಾಮೇಶ್ವರಿ’ಯ ಸಾಕ್ಷಾತ್ ದರುಶನಮಾತ್ರದಿಂದ ಪುನೀತರಾದ ಸತ್ಯಾನಂದರು ಇರುವ ಮೂವತ್ತೆರಡು ಹಲ್ಲಿಗೆ ಮತ್ತೆರಡು ಹೆಚ್ಚಿಗೆ ಜೋಡಿಸಿದವರಂತೇ ಕಿವಿಯವರೆಗೂ ಬಾಯಿ ಚಿಲಿದರು! ನಗದೇ ವರ್ಷಗಳೇ ಕಳೆದಿದ್ದ ಅಂಜಿತಾ ಮನದಣಿಯೇ ’ಗುರು’ಗಳೊಂದಿಗೆ ನಕ್ಕಳು! ಸಮಾಗಮ ಬಹಳ ಸಂತೋಷಮಯವಾಗಿತ್ತು; ಆಶ್ರಮಕ್ಕೆ ಹೊಸ ಕಳೆಯೇ ಪ್ರಾಪ್ತವಾಗಿತ್ತು!

ಪೀಠಸ್ಥಾಪನೆಯಾಗಿ ವರ್ಷಗಳೇ ಕಳೆದರೂ ಆಪ್ತ ಸಹಾಯಕನಾಗಿ ಸತ್ಯಭಕ್ತಾನಂದನಾದ ತನಗೆ ಹೆಚ್ಚಿನ ಆದ್ಯತೆಯನ್ನಾಗಲೀ ತನ್ನ ಖರ್ಚಿಗೆ ಹೆಚ್ಚೆಂಬಷ್ಟು ಹಣವನ್ನಾಗಲೀ ನೀಡದೇ ಕೇವಲ ತನ್ನ ಸ್ವಾರ್ಥವನ್ನಷ್ಟೇ ನೋಡಿಕೊಳ್ಳುತ್ತಿದ್ದ ಸತ್ಯಾನಂದನನ್ನು ಕಂಡರೆ ಸತ್ಯಭಕ್ತಾನಂದನೊಬ್ಬನಿಗೆ ಈಗೀಗ ಅಷ್ಟಕ್ಕಷ್ಟೇ ಆಗಿತ್ತು. ಆಶ್ರಮದ ನಿತ್ಯ-ಸತ್ಯ ರಂಜನೀಯ ಕಥೆಗಳ ಸತ್ಯದರ್ಶನಮಾಡಿಕೊಂಡಿದ್ದ ಆತನಿಗೆ ’ಪೀಠ ಸೇವೆ ಸಾಕು’ ಎಂಬ ಭಾವ ಉದ್ಭವವಾಗಿತ್ತು. ವಯಸ್ಸೂ ಹೆಚ್ಚಾಗಿ ಸ್ವಂತ ಬುದ್ಧಿ ತುಸು ಬಲಿತು ಈ ಸಮಯದ ’ಸದುಪಯೋಗ’ ಮಾಡಿಕೊಳ್ಳುವ ರಾಜಕೀಯ ಬುದ್ಧಿಯೂ ಪ್ರಾಪ್ತವಾಗಿತ್ತು! ಪೀಠದ ಸಮಸ್ತ ವ್ಯವಹಾರಗಳನ್ನು ’ಗುರುಗಳಿ’ಗೆ ತೋರಿಸುವ ಟ್ರಾನ್ಸ್‍ಪರೆನ್ಸಿ ವ್ಯವಹಾರಕ್ಕಾಗಿ ಹೈಟೆಕ್ ಮಾಡಲು ಅನುಮತಿ ಪಡೆದ ಆತ ಎಲ್ಲೆಲ್ಲಾ ಕ್ಯಾಮೆರಾ ಇಟ್ಟಿದ್ದನೋ ಶಿವನೇ ಬಲ್ಲ-ಸತ್ಯನಿಗೆ ದೇವರಾಣೆ ಗೊತ್ತಿರಲಿಲ್ಲ! ಆನ್ ಲೈನ್ ದರ್ಶನ ಬುಕಿಂಗ್ ವ್ಯವಸ್ಥೆಯೂ ಇತ್ತು ! ಸರ್ವಾಂಗಸುಂದರ ಸತ್ಯಾನಂದರ ಸರ್ವಾಭರಣ ಪೂಜೆ, ಅಷ್ಟಾಂಗಸೇವೆ ಎಲ್ಲವೂ ಸೇರಿದಂತೇ ಶಯನೋತ್ಸವವನ್ನೂ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಸತ್ಯಭಕ್ತಾನಂದ ಕೈಗೊಂಡಿದ್ದು ಬಂದ ಹಾಲೀ ’ಭಕ್ತರಿ’ಗಾಗಲೀ ಅಲ್ಲಿರುವ ’ನಿತ್ಯಭಕ್ತ’ರಿಗಾಗಲೀ ತಿಳಿದಿರಲೇ ಇಲ್ಲ. " ಜೈ ಜಗದೀಶಹರೇ ಸ್ವಾಮಿ ಸತ್ಯಾನಂದ ಹರೇ ...." ಎಂದು ಬಿಲ್ಡಿಂಗು ಹರಿದುಬೀಳುವಂತೇ ಪ್ರಾರ್ಥಿನೆ ನಡೆಸಿ ಮುಖಕ್ಕೆ ಮಂಗಳಾರತಿ ಬೆಳಗುವ ಆ ’ಭಕ್ತರಿ’ಗೆ ಅವರವರ ಇಷ್ಟಾರ್ಥ ಅಲ್ಲಲ್ಲಿ ಪ್ರಾಪ್ತವಾಗುತ್ತಿತ್ತು!

ಒಳಗೊಳಗೇ ಉರಿದುಬೀಳುತ್ತಿದ್ದ ಸತ್ಯಭಕ್ತಾನಂದ ತನ್ನ ಕೊನೆಯ ಕರಾರನ್ನು ಖಡಾಖಂಡಿತವಾಗಿ ಸತ್ಯಾನಂದರಲ್ಲಿ ಹೇಳಿದ. " ನೀನು ಏನು ಮಾಡ್ಕೋತೀಯೋ ಮಾಡ್ಕೋ ಹೋಗು " ಎಂದು ಸತ್ಯಾನಂದರು ಆಶೀರ್ವದಿಸಿದ್ದು ಜಾಸ್ತಿ ಜೀರ್ಣವಾಗದೇ ಯಾವುದೋ ಮಾಧ್ಯಮದ ವಠಾರದಲ್ಲಿ ವಾಂತಿಮಾಡಿಕೊಂಡುಬಿಟ್ಟಿದ್ದಾನೆ! ಸಾಸಿವೆಯನ್ನು ಸಾಗರದಷ್ಟು ವಿಸ್ತರಿಸಬಲ್ಲ ಅಪರಮಿತ ತಾಕತ್ತುಳ್ಳ ಮಾಧ್ಯಮ ವಾಹಿನಿಗಳಲ್ಲಿ ದಿನಗಟ್ಟಲೆ ವಾರಗಟ್ಟಲೇ ಅದೇ ಕಥೆ ! ಸತ್ಯಾನಂದರ ’ತಪಸ್ಸಿ’ನ ಕಥೆ! ವಿಷಯ ಗಂಭೀರ ಎಂಬ ಕುರುಹು ತಿಳಿದ ಆಡಳಿತ ಪಕ್ಷದವರು ಸಂಬಂಧಿಸಿದವರನ್ನು ಆಶ್ರಮಕ್ಕೆ ದರ್ಶನಕ್ಕೆ ಕಳುಹಿದರೆ ಅಷ್ಟೊತ್ತಿಗಾಗಲೇ ಗಾಳಿಸುದ್ದಿ ಪಡೆದ ಸ್ವಾಮಿ ಸತ್ಯಾನಂದರು ಘೋರ ತಪಸ್ಸಿಗಾಗಿ ಹಲವು ಸಿಮ್ಮುಗಳ ಸಮೇತ ಹಿಮಾಲಕ್ಕೆ ತೆರಳಿಬಿಟ್ಟಿದ್ದರು!

ಅದು ಹೇಗೋ ಯಾವುದೋ ಆಧಾರ ದೊರೆತ ಕಾಲಜ್ಞಾನೀ ಪೋಲೀಸರು ಕೆಲವೊಮ್ಮೆ ಉತ್ತಮ ಕೆಲಸವನ್ನೂ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದು ಸತ್ಯಾನಂದರಿಗೆ ಕಷ್ಟವಾಗಿತ್ತು. ಜನ್ಮದಲೇ ಇಂತಹ ಶತ್ರುಗಳನ್ನು ಕಂಡಿರದ ಸತ್ಯಾನಂದರು ನಸುನಗುತ್ತಲೇ ತಾವು ’ಹುದುಗಿ ತಪಸ್ಸಿಗೆ’ ಕೂತಿದ್ದ ಸ್ಥಳದಿಂದ ನಿಧಾನವಾಗಿ ನಡೆತಂದರು! ಪೋಲೀಸರು ಕರೆದಲ್ಲೆಲ್ಲಾ ಹೋದರು! ರಾಜಕೀಯದವರ ಕೃಪೆಯಿಂದ ಸತ್ಯಾನಂದರಿಗೆ ಕಠಿಣ ಸಜೆಯಿರಲಿಲ್ಲ. ಅವರನ್ನು ಗೌರವಾನ್ವಿತ ಖೈದಿ ಎಂಬುದಾಗಿ ತಿಂಗಳುಗಳ ಕಾಲ ನಡೆಸಿಕೊಳ್ಳಲಾಯ್ತು!

ಹಲವು ಸರ್ಕಸ್ಸುಗಳನ್ನು ಮಾಡಿದ ಮಿಕ್ಕುಳಿದ ಸತ್ಯಭಕ್ತಾನಂದ ಸಮೂಹ ’ಗುರುಗಳನ್ನು’ ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವಲ್ಲಿ ಅಂತೂ ಯಶಸ್ವಿಯಾಯ್ತು! ಹೊರಗೆ ಬಂದ ’ಸ್ವಾಮಿಗಳು’ ಪಕಪಕಪಕಪಕನೇ ನಕ್ಕರು! ಮರುದಿನ ಪ್ರಾಯಶ್ಚಿತ್ತಕ್ಕಾಗಿ ಬೆಂಗಳೂರಿನ ಸುತ್ತ ಸಿಗುವ ಎಲ್ಲಾ ಅಂಗಡಿಗಳಲ್ಲಿ ಸಿಗಬಹುದಾದ ಸೀಮೆ ಎಣ್ಣೆ ಖರೀದಿಸಲಾಯ್ತು. ಉರುಟಾದ ಚಿಕ್ಕ ಅಗಳ ಹೊಡೆದು ಅದರಲ್ಲಿ ಕಟ್ಟಿಗೆ ತುಂಡುಗಳನ್ನು ಹಾಕಿ ಸೀಮೆ ಎಣ್ಣೆ ಸುರಿದು ’ಪಂಚಾಗ್ನಿ’ ಹೊತ್ತಿಸಿ ಸತ್ಯಾನಂದರು ರಾಮಾಯಣದ ಸೀತೆಯ ಅಗ್ನಿದಿವ್ಯಕ್ಕಿಂತಲೂ ಹೆಚ್ಚಿನ ಸತ್ವಪರೀಕ್ಷೆ ಎಂದು ಸ್ವಯಂ ಘೋಷಿಸಿದರು! ಮತ್ತೆ ಮಾಧ್ಯಮವಾಹಿನಿಗಳಿಗೆ ಹಬ್ಬವೋ ಹಬ್ಬ ! ಆಶ್ರಮಕ್ಕೆ ಎಲ್ಲಿಲ್ಲದ ಜನ !! ಮತ್ತೆ ಮುಖಕ್ಕೆ ಮಂಗಳಾರತಿ! "ಸಂಭೋ ಮಹಾದೇವ ಸತ್ಯಾನಂದ"!

ಅಂಜುತ್ತಲೇ ಇದ್ದ ಅಂಜಿತಾ ತನ್ನ ಸ್ವಾಮಿ ಜೈಲಿನಿಂದ ಹೊರಬರುವವರೆಗೂ ಅಜ್ಞಾತವಾಸ ಅನುಭವಿಸಿದಳು! ಸತ್ಯಾನಂದ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಕ್ಕೆ ಮುಖ ಕೊಟ್ಟ ಅಂಜಿತಾ ತಮ್ಮ ನಡುವೆ ಅಂಥಾದ್ದೇನೂ ನಡೆದಿರಲಿಲ್ಲ ಎಲ್ಲಾ ವೀಡಿಯೋ ಮಾರ್ಫಿಂಗು ಎಂದಳು ! ಥೂ ಹಾಳಾದ್ ನನ್ಮಗಂದು ಟೆಕ್ನಾಲಜಿ ಕೆಲವೊಮ್ಮೆ ಸದ್ಬಳಕೆಯಾದರೂ ಕೆಲವೊಮ್ಮೆ ದುರ್ಬಳಕೆಯಾಗುತ್ತದೆ ಎಂಬುದಕ್ಕೆ ಈ ಮಾರ್ಫಿಂಗ್ ಎಂದಿ ಜಾರಿಕೊಳ್ಳುವ ಕ್ರಿಯೆ ಉದಾಹರಣೆ ಆಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ! ಸಿಕ್ಕಿದ ಅಷ್ಟೂ ಸಿಡಿಗಳನ್ನೂ ವೀಡಿಯೋ ನೋಡಿ ಅದು ಒರಿಜಿನಲ್ಲೋ ಮಾರ್ಫಿಂಗೋ ಎಂದು ಹೇಳಲು ಪ್ರಯೋಗಾಲಯಕ್ಕೆ ಕಳಿಸಿದರು! ಪ್ರಯೋಗಾಲಯದಲ್ಲಿ ವೀಡಿಯೋ ಮಾರ್ಫಿಂಗ್ ಎಂಬ ವಿಷಯವೇ ಹೊಚ್ಚಹೊಸದು-ಅಲ್ಲಿ ಅದನ್ನು ಪರಿಶೀಲಿಸಲು ಅಂತಹ ಯಾವುದೇ ಉಪಕರಣ ಇನ್ನೂ ಸಿದ್ಧವಿಲ್ಲ--ಹೀಗಾಗಿ ಅಲ್ಲಿನ ಸಿಬ್ಬಂದಿ ಮುಖಮುಖ ನೋಡಿಕೊಂಡು ನಕ್ಕರು! ಅಂತೂ ವಿಷಯ ಸಮಂಜಸವಾಗಿ ಇತ್ಯರ್ಥವಾಗದೇ ’ಸತ್ಯಾನಂದರ ಕಥೆ’ ಸುಳ್ಳೆಂದು ತೀರ್ಮಾನಿಸಿದರು!

ಜೈಲಿನಿಂದ ಮರಳಿದ ಸತ್ಯಾನಂದರಿಗೆ ಕನಸಲ್ಲೂ ಹಾರಿಬೀಳುವ ಅನುಭವ! ನಿತ್ಯ ದುಃಸ್ವಪ್ನ ಆರಂಭವಾಗಿ ಕೆಲವು ರಾತ್ರಿ ನಿದ್ದೆಯನ್ನೇ ತೊರೆದರು. ಹೊಸ ಇಮೇಜಿನ ಬಿಲ್ಡಪ್ಪಿಗಾಗಿ ಹೊಸಹೊಸ ಯೋಜನೆಗಳನ್ನೂ ಆಯೋಜನೆಗಳನ್ನೂ ಆರಂಭಿಸಿದರು! ಕುಂಡೆಯೋಗವನ್ನೂ ಕಲಿಸಿ ಬಂದ ಭಕ್ತರು ತಾವಾಗಿಯೇ ಕುಳಿತಲ್ಲೇ ಹಾರುವುದನ್ನೂ ಕಲಿಸಿದರು! ಹೋದವರು ಹೋಗಲಿ ಬಾರದವರು ಬಾರದೇ ಇರಲಿ ಎಂದುಕೊಂಡ ಒಂದು ತೆರನಾದ ಸಮೂಹ ಇವತ್ತಿಗೂ ಅಲ್ಲಿ ತನ್ನ ನಿತ್ಯಸೇವೆಯನ್ನು ಜಾರಿಯಲ್ಲಿಟ್ಟಿದೆ. ಆಶ್ರಮದಲ್ಲಿ ರಾತ್ರಿ ವಿದ್ಯುತ್ ಸರ್ಕಿಟ್ ಬದಲಾಗಿಹೋಗುತ್ತದೆ! ಯಾವ ಕ್ಯಾಮೆರಾಗಳೂ ಕೆಲಸಮಾಡದಂತೇ ಅದರ ಪವರ್ ಆನ್ ಪೆಟ್ಟಿಗೆಯನ್ನು ಖಜಾನೆಗಿಂತಲೂ ಭದ್ರಪಡಿಸಿದ ಸತ್ಯಾನಂದರು ಕೀಲಿಯನ್ನು ಕಾವಿಶಾಟಿಯಲ್ಲೇ ಕಟ್ಟಿಕೊಂಡಿದ್ದಾರೆ! ಅಂಜಿತಾ ಮತ್ತೆ ಮತ್ತೆ ಬರುತ್ತಾ ತನ್ನ ’ದೈಹಿಕ ಕಾಯಿಲೆ’ಗೆ ಪರಿಹಾರ ಕಂಡುಕೊಂಡಿದ್ದಾಳೆ! ಒಂದಾನೊಂದು ಕಾಲಕ್ಕೆ ಸಿನಿಮಾಗಳಲ್ಲಿ ನೋಡಿದ, ನೋಡಿ ಪಡೆಯಲಾರದೇ ಕನವರಿಸಿ ಕಾತರಿಸಿ ಬಳಲಿದ್ದ ಬಾಲಕ ಸತ್ಯ ಸ್ವಲ್ಪ ತಡವಾದರೂ ಸತ್ಯಾನಂದರಾಗಿ ಅಂಜಿತಾ ಕಾಮೇಶ್ವರಿಯ ಸಾಕ್ಷಾತ್ ದರ್ಶನ ಭಾಗ್ಯವನ್ನು ಕಾಯಂ ಕಬ್ಜಾಕ್ಕೆ ಪಡೆದಿದ್ದು ನಿಜಕ್ಕೂ ಈ ಭುವಿಯ ’ಸಾಧಕರಿ’ಗೆ ಆಶ್ಚರ್ಯವಾಗಿದೆ!