ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 17, 2012

ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ!

ಚಿತ್ರಋಣ: ಅಂತರ್ಜಾಲ
ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ! 

ಇಂತಹ ವಿಷಯಗಳನ್ನು ಬರೆಯುತ್ತಲೇ ಇದ್ದೇನೆ. ಇತ್ತೀಚೆಗೆ ದಿನಪತ್ರಿಕೆಯೊಂದನ್ನು ವೇದಿಕೆಯಾಗಿ ಬಳಸಿಕೊಂಡು ಕನ್ನಡದ ಸ್ವರ ವ್ಯಂಜನಗಳ ಬಗ್ಗೆ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಬಗ್ಗೆ ಪುಂಕಾನುಪುಂಕವಾಗಿ ಲೇಖನಗಳನ್ನು ವಿಶದೀಕರಿಸುವ ಹೊಸ ಅನಾಮಧೇಯ ಸಂಘವೊಂದು ಬೆಳೆಯುತ್ತಿದೆ! ಕನ್ನಡದ ಬೆಳವಣಿಗೆಗೆ ನಮ್ಮ ಭಾಷೆಯಲ್ಲಿನ ಕೆಲವು ಅಕ್ಷರಗಳ ಮತ್ತು ಮಹಾಪ್ರಾಣಗಳ ಬಳಕೆಯೇ ಕಾರಣ ಎಂಬ ಅವರ ವಿಚಿತ್ರಗತಿಯ ಅನಿಸಿಕೆ ತೀರಾ ಬಾಲಿಶವಾಗಿ ತೋರಿಬರುತ್ತಿದೆ. ಭಾಷಾ ಬೆಳವಣಿಗೆಗೆ ಭಾಷೆಯ ಮೂಲಾಕ್ಷರಗಳು, ಸ್ವರಗಳು, ವ್ಯಂಜನಗಳು ಅಡ್ಡಿಯಾಗಿವೆ ಎಂದು ಇದೇ ಹೊಸದಾಗಿ ಮತ್ತು ನನ್ನ ಜೀವಿತಾವಧಿಯಲ್ಲಿ ಇದೇ ಮೊದಲಾಗಿ ನಾನು ಕೇಳುತ್ತಿದ್ದೇನೆ. ಮಹಾಪ್ರಾಣದ ಉಪಯೋಗ ಬೇಡ ಎನ್ನುವ ಆ ಸಂಘದ ಸದಸ್ಯರು ’ಭಟ್ಟ’ ಎನ್ನುವ ಪದವನ್ನು ’ಬಟ್ಟ’ ಎಂದು ಬರೆದರೆ ’ಮಧ್ಯ’ ಎನ್ನುವ ಪದವನ್ನೂ ಹಾಗೇ ಬಳಸಬೇಕಾಯ್ತಲ್ಲವೇ? ಈಗಾಗಲೇ ಅಪಭ್ರಂಶವನ್ನೇ ಕನ್ನಡವೆಂದು ಆಡತೊಡಗಿದ ಕೆಲವರಿಗೆ ’ಮಧ್ಯ’ಕ್ಕೂ ’ಮದ್ಯ’ಕ್ಕೂ ಅಂತರವೇ ಇಲ್ಲಾ ಅನ್ನಿ!   

ಈ ಬೆಳವಣಿಗೆಗೆ ಕಾರಣ ಭಾಷೆಯಲ್ಲ, ಬದಲಾಗಿ ಕನ್ನಡದಲ್ಲಿ ಸಂಸ್ಕೃತವೆಂಬ ’ಪುರೋಹಿತಶಾಹಿ ಭಾಷೆ’ಯ ಪದಗಳು ಬೇಡ ಎಂಬ ಅನಿಸಿಕೆ ಅವರದಾಗಿದೆ. ಮೊನ್ನೆ ಒಬ್ಬ ಪತ್ರಕರ್ತರಲ್ಲಿ ನಾನು ಮಾತನಾಡುತ್ತಿದ್ದೆ: ಎಡಪಂಥೀಯರಾದರೆ ಜನ ಬೇಗ ಗುರುತಿಸುತ್ತಾರೆ ಅದೇ ಬಲಪಂಥೀಯರ ಜೊತೆಗಿದ್ದರೆ ಹತ್ತರ ಜೊತೆ ಹನ್ನೊಂದರಂತೇ ಇರಬೇಕಾಗುತ್ತದೆ ಎಂದು ನಕ್ಕೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿದರು. ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ಎತ್ತಿ ತೋರಿಸಿ ತಮಗೆ ಅದ್ದೂರಿಯ ಪ್ರಚಾರ, ಸ್ಥಾನಮಾನ ಸಿಗಲಿ ಎಂಬ ಉದ್ದೇಶದಿಂದ ’ಎಡಪಂಥ’ವೆಂಬ ವಾಮಮಾರ್ಗದಿಂದ ಸಮಾಜಕ್ಕೆ ಹೊಸವ್ಯಕ್ತಿಯಾಗಿ ಪ್ರವೇಶಿಸುವುದು ನಿಜಕ್ಕೂ ಸ್ವಾಗತಾರ್ಹವಲ್ಲ. ಪುರದ ಹಿತವನ್ನೇ ಬಯಸುವ ಜನರಿಗೆ ಪುರೋಹಿತರು ಎನ್ನುತ್ತೇವೆ. ’ಪುರೋಹಿತಶಾಹಿ’ ಎಂಬ ಪದವನ್ನು ಯಾವ ಪುಣ್ಯಾತ್ಮ ಸೃಷ್ಟಿಸಿದನೋ ನನ್ನರಿವಿಗಿಲ್ಲ. ಪುರೋಹಿತರು ಮಾಡಿಸುವ ಯಾಗ, ಯಜ್ಞ, ಹೋಮ ನೇಮಗಳು ಸಮಾಜದ ಒಳಿತಿಗಾಗಿ ವೇದಗಳಲ್ಲಿ ಹೇಳಲ್ಪಟ್ಟಿವೆ ಮತ್ತು ವೈಜ್ಞಾನಿಕವಾಗಿ ಈಗಾಗಲೇ ಅವುಗಳ ಉತ್ತಮ ಪರಿಣಾಮಗಳು ನಿಷ್ಕರ್ಷೆಗೆ ಒಳಗಾಗಿವೆ. ಅಷ್ಟಕ್ಕೂ ಯಾವ ಪುರೋಹಿತನೂ ಇಂಥಾ ಹೋಮವನ್ನು ಮಾಡಿಸಲೇ ಬೇಕು ಎಂದು ತಾನಾಗಿ ಯಾರನ್ನೂ ಹುಡುಕಿ ಹೋಗಿ ಹೇಳಿದ್ದು ಸುಳ್ಳು. ಮಾಡುವ ಪೂಜೆ, ಹೋಮ-ನೇಮಗಳಿಂದ ಏನೂ ಸಿಗದಿದ್ದರೂ ಕೊನೇಪಕ್ಷ ಕರ್ತೃವಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ.

ವೇದಮಂತ್ರಗಳು, ಉಪನಿಷತ್ತು-ಭಾಷ್ಯಗಳು ಮೊದಲಾದವೆಲ್ಲಾ ಸಂಸ್ಕೃತದಲ್ಲಿ ಉಪಲಬ್ಧವಿದ್ದುದರಿಂದ ಅವುಗಳನ್ನು ತಿಳಿದುಕೊಳ್ಳಲು ಪುರೋಹಿತವರ್ಗ ಸಂಸ್ಕೃತಭಾಷೆಯನ್ನು ಓದಿತೇ ಹೊರತು ಅದು ಯಾರಿಗೂ ಗೊತ್ತಾಗದ ಭಾಷೆಯಾಗಿ ತಮಗೆ ಮಾತ್ರ ಸೀಮಿತವಾಗಿರಲಿ ಎಂಬ ದುರುದ್ದೇಶ ಅವರದಲ್ಲ. ಅಷ್ಟಕ್ಕೂ ಭಾರತೀಯ ಮೂಲದ ಸಂಸ್ಕೃತ ಭಾಷೆಯಷ್ಟು ಸೊಗಸಾದ ಭಾಷೆ ಪ್ರಪಂಚದಲ್ಲೇ ಇನ್ನೊಂದಿಲ್ಲ ಎಂಬುದನ್ನು ಎಲ್ಲೇ ನಿಂತು ಹೇಳಲೂ ಹೆದರುವ ವ್ಯಕ್ತಿ ನಾನಲ್ಲ. ಭಾರತೀಯ ಮೂಲ ಸಂಸ್ಕೃತಿಯನ್ನು ಸಾರಿದ್ದೇ ಸಂಸ್ಕೃತ ಎಂದರೆ ತಪ್ಪಲ್ಲ. ಅಂತಹ ಸಂಸ್ಕೃತ ಭಾಷೆಯನ್ನು ಪುರೋಹಿತವರ್ಗಗಳು, ಬ್ರಾಹ್ಮಣರು ಬಳಸಿದ್ದಾರೆ, ಬಳಸುತ್ತಿದ್ದಾರೆ ಮತ್ತು ಬಳಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅದನ್ನು ’ಸತ್ತ ಭಾಷೆ’ ಎಂದು ದೂರುವುದು ಕಾಣುತ್ತಿದೆ; ಈ ಬೆಳವಣಿಗೆ ವಿಷಾದನೀಯ ಮತ್ತು ಖಡಾಖಂಡಿತವಾಗಿಯೂ ಖಂಡನೀಯ. ಭಾಷೆ ಚೆನ್ನಾಗಿರಬೇಕೆಂದರೆ ಅದಕ್ಕೆ ಅದರದ್ದೇ ಆದ ನಿರ್ದಿಷ್ಟ ಛಂದಸ್ಸು, ವ್ಯಾಕರಣಗಳ ನಿರ್ಬಂಧನೆ ಇರಲೇಬೇಕು. ಬೇರೇ ಭಾಷೆಗಳಿಂದ ಪದಗಳನ್ನು ಸ್ವೀಕರಿಸಬಹುದೇ ಹೊರತು ತನ್ನ ಮೂಲಸ್ವರೂಪದಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳಬಾರದು-ಆಗಮಾತ್ರ ಭಾಷೆ ಸದಾ ಎತ್ತರದ ಸ್ಥಾನದಲ್ಲಿರುತ್ತದೆ ಎಂಬುದು ಭಾಷಾತಜ್ಞರ ಅನಿಸಿಕೆಯಾಗಿದೆ; ಅದು ನನ್ನ ಅನಿಸಿಕೆಯೂ ಕೂಡಾ.

ಹರಿಯುವ ನದಿಯು ಕಾಲಕ್ರಮದಲ್ಲಿ ತನ್ನ ಪಾತ್ರವನ್ನು ಅಲ್ಲಲ್ಲಿ ಬದಲಾಯಿಸಿದಂತೇ ನಮ್ಮ ಕನ್ನಡ ಆಗಾಗ ಬದಲಾಗಿದೆ! ನದಿಯಲ್ಲಿ ಹೂಳು ಸೇರಿಕೊಂಡಂತೇ ಕನ್ನಡದಲ್ಲಿ ಬೇರೇ ಭಾಷೆಗಳ ಪದಗಳೂ ಅತಿಯಾಗಿ ವಿಜೃಂಭಿಸುತ್ತಿವೆ. ಸಂಸ್ಕೃತವೊಂದನ್ನುಳಿದು ಉಳಿದ ಭಾಷೆಗಳ ಅತಿಯಾದ ಪ್ರಭಾವವೇ ಕನ್ನಡದಮೇಲೆ ಜಾಸ್ತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ತನ್ನ ಮೂಲವನ್ನೇ ಮರೆತು ಹಲವನ್ನು ಸ್ವೀಕರಿಸಿದರೆ ಆಗ ಬೆಳವಣಿಗೆಯ ಬದಲಿಗೆ ವಿನಾಶದ ಹಾದಿ ಹಿಡಿಯಬೇಕಾದೀತು! ಕೇವಲ ’ಪುರೋಹಿತಶಾಹಿಯ ಭಾಷೆ’ ಎಂಬ ಒಂದೇ ಕಾರಣಕ್ಕೆ ಸಂಸ್ಕೃತವನ್ನು ದೂರುತ್ತಾ ಕನ್ನಡದಿಂದ ಸಂಸ್ಕೃತವನ್ನು ಆಮೂಲಾಗ್ರವಾಗಿ ಕಿತ್ತೆಸೆಯಲು ಹೊರಟ ಅಸಂಘಟಿತ ’ಅನಾಮಧೇಯ ಸಂಘ’ದವರು ಕನ್ನಡದಲ್ಲಿನ  ಹಲವು ಮೂಲ ಪದಗಳು ಸಂಸ್ಕೃತದ ಕೊಡುಗೆಗಳೇ ಆಗಿವೆ ಎಂಬುದನ್ನು ಕಿಂಚಿತ್ತಾದರೂ ಯೋಚಿಸಬೇಕಾಗುತ್ತದೆ. ಉದಾಹರಣೆಗೆ: ನೀರು ಎಂಬ ಪದಕ್ಕೆ ಕನ್ನಡದಲ್ಲಿ ಯಾವ ಪದವನ್ನು ಬಳಸುತ್ತೀರಿ? ಜಲ, ಉದಕ...ಇವೆಲ್ಲಾ ಸಂಸ್ಕೃತಮೂಲದವೇ ಆಗಿವೆ. ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯವನ್ನೂ ಮುಚ್ಚಿಸುವ ತರಾವರಿ ಪ್ರಯತ್ನಗಳು ನಡೆದಿವೆ!

ದೇಶವಾಸಿಗಳ ಔನ್ನತ್ಯವನ್ನು ಬಯಸಿದ ಸಮಾಜದ ಒಂದು ಸ್ವಸ್ಥ ವರ್ಗ, ಮಾನವ ಬದುಕಿನ ಉತ್ತಮ ಅಂಶಗಳನ್ನು ಕಲೆಹಾಕಿದ ಅಥವಾ ಬದುಕುವ ಕಲೆಯನ್ನು ತಿಳಿಸಿಕೊಡುವ ಉನ್ನತ ಆಕರ ಗ್ರಂಥಗಳನ್ನು ಬಳಸುವ ಸಲುವಾಗಿ, ಅತಿವಿಶಿಷ್ಟವಾದ ದೇವನಾಗರೀ ಲಿಪಿಯನ್ನು ಕಲಿಯುತ್ತದೆ, ಸಂಸ್ಕೃತ ಭಾಷೆಯನ್ನು ಕಲಿಯುತ್ತದೆ ಎಂದಾದಾಗ, "ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ-ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತ ಭಾಷೆ ಬಳಸಿಕೊಳ್ಳುತ್ತಾರೆ-ಹೋಮ-ನೇಮ ಮಾಡಿಸುತ್ತಾರೆ" ಎಂಬ ಅಪವಾದ ಹೊರಬೇಕಾಗಿ ಬಂದಿರುವುದು ಸಮಾಜದಲ್ಲಿ ಎಡಪಂಥೀಯ ರಕ್ಕಸಕುಲದ ಬೆಳವಣಿಗೆ ಸಂಖ್ಯೆಯಲ್ಲಿ ವಿಪರೀತವಾಗುತ್ತಿರುವುದನ್ನು ತಿಳಿಸುತ್ತದೆ. ವಿದೇಶೀ ಮೂಲದ, ಲಂಗುಲಗಾಮು ರಹಿತ ಸ್ವೇಚ್ಛಾಚಾರದ ಲಿವ್-ಇನ್ ಭಾರತಕ್ಕೆ ಬಂದಮೇಲಂತೂ ದೇಶವಾಸಿಗಳ ಮೂಲ ಸಂಸ್ಕೃತಿಯ ಮೇಲೆ ಅದರ ಅಡ್ಡ ಪರಿಣಾಮ ಈಗಾಗಲೇ ಆಗುತ್ತಿದೆ ಎಂಬುದು ದೃಗ್ಗೋಚರವಾದ ವಿಷಯ. ನಾನು ಹಿಂದೊಮ್ಮೆ ಬರೆದಿದ್ದೆ: ಮರಾಠೀ ಮೂಲದ ಉದ್ಯಮಿಯೊಬ್ಬರು, ಕಳೆದ ಸಾಲಿನಲ್ಲಿ ಮುಂಬೈಯಲ್ಲಿ ಅದ ಏಕಕಾಲದ ಅತಿವೃಷ್ಟಿಯಂದು ಯಾರ್ಯಾರೋ ಯಾರ್ಯಾರಿಗೋ ತಮ್ಮ ಮನೆಗಳಲ್ಲಿ ಅತಿಥಿಗಳಾಗಿ ಕರೆದು ಆಶ್ರಯ ನೀಡಿ ಸತ್ಕರಿಸಿದ್ದನ್ನು ನೆನೆದರು-ಭಾರತೀಯ ಸಂಸ್ಕೃತಿಯನ್ನು ನೆನೆದು ಕಣ್ಣೀರಾದರು ಎಂದು. ಹೆಚ್ಚಿನ ಆರ್ಥಿಕತೆ ಇದ್ದರೂ ಇಲ್ಲದಿದ್ದರೂ ಇರುವುದರಲ್ಲೇ ಸಂತೃಪ್ತಭಾವವನ್ನು ಪಡೆಯುವ ಕಲೆಯನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟಿದೆಯೇ ವಿನಃ ಕ್ರೆಡಿಟ್ ಕಾರ್ಡ್ ಕಲ್ಚರನ್ನಲ್ಲ! ’ಢೋಂಗೀ ಧನಿಕ’ರಾಗಿ ಒಳಗೊಳಗೇ ಅನುಭವಿಸುವ ಆರ್ಥಿಕ-ಮಾನಸಿಕ ಒತ್ತಡಗಳನ್ನಲ್ಲ. 

ದಿನಪತ್ರಿಕೆಯೊಂದರ ಸಂಪಾದಕರು ಬದಲಾಗುತ್ತಿದ್ದಂತೆಯೇ ಆ ಪತ್ರಿಕೆಯ ಅಂಕಣಗಳೂ, ಅಂಕಣಕಾರರೂ ಬದಲಾಗಿದ್ದು ಕಾಣಿಸುತ್ತಿದೆ. ಸಮಾಜಕ್ಕೆ ನೀತಿಯನ್ನು, ಸನ್ಮಾರ್ಗವನ್ನು ಬೋಧಿಸುವ ನೈತಿಕ ಜವಾಬ್ದಾರಿಯನ್ನು ಮಾಧ್ಯಮ ಮಾಡುತ್ತಿತ್ತು; ಆದರೆ ಈಗ ಅದು ಹಾಗಿಲ್ಲ. ’ಮಾಧ್ಯಮ’ ಎಂಬುದು ’ಹೆಚ್ಚಿನ ಸಂಪಾದನೆಯ-ಮಾಧ್ಯಮ’ವಾಗಿ ಪರಿಣಮಿಸಿದ ಈ ಕಾಲದಲ್ಲಿ ಬೇಕಾದ್ದು-ಬೇಡಾದ್ದು ಎಲ್ಲವನ್ನೂ ಸೇರಿಸಿಕೊಂಡು ಪತ್ರಿಕೆಯೋ ವಾಹಿನಿಯೋ ಸಮಾಜವನ್ನು ತಲ್ಪುತ್ತಿದೆ. ದಿನವೂ ವಾಹಿನಿಗಳಲ್ಲಿ ಕೆಟ್ಟಘಟನೆಗಳು, ಕೊಲೆ-ಸುಲಿಗೆ-ದರೋಡೆಗಳು ವೈಭವೀಕರಿಸಲ್ಪಡುತ್ತಿವೆ. ಒಬ್ಬಾತ ಹನ್ನೆರಡು ಮದುವೆಯಾಗಿದ್ದ, ಪೋಲೀಸರು ಕೇಳಿದಾಗ ಆತ ಹೇಳಿದ: "ಟಿವಿ ಯಲ್ಲಿ ಒಬ್ಬ ಮಾಡಿದ್ದನ್ನು ತೋರಿಸಿದ್ದರು ಅದೇರೀತಿ ನಾನೂ ಮಾಡಿದೆ!" ನಿತ್ಯವೂ ವೀಕ್ಷಕರಲ್ಲಿ, ಓದುಗರಲ್ಲಿ ಮಕ್ಕಳ ಸಂಖ್ಯೆಯೂ ಒಂದು ಭಾಗವಿರುತ್ತದಷ್ಟೇ? ಕೆಟ್ಟದನ್ನೇ ಒಳ್ಳೆಯದೇನೋ ಎಂಬಂತೇ ಎತ್ತಿ ಎತ್ತಿ ತೋರಿಸುವ, ಓದಿಸುವ ಮಾಧ್ಯಮವಿರುವಾಗ ಎಳೆಯ ಮಕ್ಕಳ ಮನಸ್ಸಿನಮೇಲೆ ಅದು ವ್ಯತಿರಿಕ್ತ ಪರಿಣಾಮ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವರದಿಯಾದ ಒಂದು ಘಟನೆ ಹೀಗಿದೆ: ಮನೆಯಲ್ಲಿ ಹೋಳಿಗೆ ಮಾಡುತ್ತಿದ್ದರು, ಅನುಕೂಲಸ್ಥರ ಮಹಡಿಮನೆ, ಬಾಲಕ ಮಹಡಿಗೆ ತೆರಳಿದ. ನೇಣುಹಾಕಿಕೊಳ್ಳುವ ದೃಶ್ಯವನ್ನು ಆತ ಟಿವಿಯಲ್ಲಿ [’ಮರುಸೃಷ್ಟಿ’ಯಲ್ಲಿ]ನೋಡಿದ್ದನಂತೆ-ಅದನ್ನು ಕ್ರಿಯಾತ್ಮಕವಾಗಿ ನಡೆಸಿದ. ಹೋಳಿಗೆಮಾಡಿ ಮುಗಿಯುವ ವೇಳೆಗೆ ಮನೆಜನ ಬಾಲಕನನ್ನು ಹುಡುಕಿದರು-ಬಾಲಕ ಸತ್ತುಹೋಗಿದ್ದ! ಸಂವೇದನೆಯೇ ಇಲ್ಲದ ಮತ್ತು ಸಂಪಾದನೆಯೇ ಮುಖ್ಯವಾದ ಮಾಧ್ಯಮಗಳಿಂದ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ?

ಹೊಸ ಸಂಪಾದಕತ್ವದಲ್ಲಿ ಜನರನ್ನು ತಲ್ಪುತ್ತಿರುವ ದಿನಪತ್ರಿಕೆಯೊಂದು ಜನರಿಗೆ ’ಬಯ್ಗುಳ’ದ ಬಗ್ಗೆ ಅಂಕಣವನ್ನೇ ಆರಂಭಿಸಿದ ಹಾಗಿದೆ! ಸಭ್ಯ ಮತ್ತು ಸ್ವಸ್ಥ ಸಮಾಜಕ್ಕೆ ಬಯ್ಗುಳದ ಬಗ್ಗೆಯೂ ಹೊಸದಾಗಿ ತಿಳುವಳಿಕೆ ನೀಡಬೇಕೇ? ನೋಡೀ ಸ್ವಾಮೀ ಸಂಸ್ಕೃತದಂತಹ ’ಪುರೋಹಿತಶಾಹಿ ಭಾಷೆ’ ಇಂತಹ ಕೆಟ್ಟ ಯೋಜನೆ ಮತ್ತು ಯೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ! ನವಿಲು ಕುಣಿಯಿತು ಎಂದು ಕೆಂಬೂತನೂ ...ಎಂಬ ಗಾದೆ ನಿಮಗೆ ತಿಳಿದೇ ಇದೆ. ನಾಯಿಗೆ ಆಹಾರ ಸಿಗದಾಗ, ಸಿಕ್ಕ ಹಳೆಯ ಎಲುಬಿನ ತುಂಡನ್ನೇ ಅಗಿಯುತ್ತಾ, ತನ್ನ ದವಡೆಯಲ್ಲಿ ಗಾಯವಾಗಿ ಸೋರುವ ರಕ್ತವನ್ನೇ ತಾನು ಚಪ್ಪರಿಸುತ್ತದಂತೆ, ಅದೇರೀತಿ ಸುದ್ದಿಮನೆಯಲ್ಲಿ ಸಿಗುವ ಸುದ್ದಿಗಳು ಸಾಲದಾದಾಗ ಯಾ ಹೊಸತನವನ್ನು ಕೊಡುವ ಹುಚ್ಚುಹಂಬಲ ಅತಿಯಾದಾಗ ’ಬಯ್ಗುಳ’ದಂತಹ ವಿಪರೀತ ಅಂಕಣಗಳು ಒಡಮೂಡಲು ಸಾಧ್ಯ; ಇದಕ್ಕೆ ಸಂಪಾದಕರು ಕಾರಣವೋ ವರದಿಗಾರರು ಕಾರಣವೋ ಓದುಗರೇ ಹುಡುಕಬೇಕಾಗಿದೆ.

ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ’ಪತ್ರಿಕಾಕರ್ತರನ್ನು ಗೌರವಿಸುವ ಕಾರ್ಯಕ್ರಮ’ಕ್ಕೆ ಒಮ್ಮೆ ಡೀವೀಜಿಯವರು ಹೋಗಿದ್ದರಂತೆ. ಮೈಸೂರು ಸರಕಾರ ಪತ್ರಿಕಾಕರ್ತರನ್ನು ಹೊಗಳಿ ಅವರಿಗೆ ಒಂದಷ್ಟು ಹಣಕೊಟ್ಟು ಕಳಿಸುವ ಇರಾದೆ ಮಹಾರಾಜರ ಕಾಲದಲ್ಲೂ ಇತ್ತು ಎನಿಸುತ್ತದೆ. ಸನ್ಮಾನ ಮುಗಿದು ಡೀವೀಜಿ ಬೆಂಗಳೂರಿಗೆ ಮರಳಿ ಬಂದ ಕೆಲವೇ ದಿನಗಳಲ್ಲಿ ಅವರಿಗೆ  ೨೦೦ ರೂ. ತಲ್ಪಿತಂತೆ! ತನಗೆ ತಲ್ಪಿದ ಇನ್ನೂರು ರೂಪಾಯಿಯನ್ನು ಹಿಡಿದುಕೊಂಡು ನೇರವಾಗಿ ಸಂಬಂಧಪಟ್ಟ ಕಚೇರಿಗೆ ತೆರಳಿದ ಡೀವೀಜಿಯವರು ಯಾಕೆ ಹಾಗೆ ತನಗೆ ಹಣ ಕಳಿಸಿದ್ದು ಎಂದು ಕೇಳಿದರಂತೆ. "ನೀವು ಮೈಸೂರಿಗೆ ಬರ-ಹೋಗುವ ಖರ್ಚೂ ಸೇರಿದಂತೇ ನಿಮಗೆ ಖರ್ಚುಗಳಿರುತ್ತವೆ-ಅದಕ್ಕಾಗಿ" ಎಂದು ಬಂದ ಉತ್ತರಕ್ಕೆ ದಂಗಾದ ಡೀವೀಜಿ ಆ ಇನ್ನೂರು ರೂಪಾಯಿಗಳನ್ನು ಸರಕಾರಕ್ಕೆ ಮರಳಿಸಿದರು. ಪತ್ರಕರ್ತನಿಗೆ ತನ್ನ ದಿನನಿತ್ಯದ ಖರ್ಚಿನ ಭಾಗವಾಗಿ ಪತ್ರಿಕೆಗೆ ವರದಿಮಾಡಲು ವಿನಿಯೋಗಿಸುವ ಸಮಯ-ಪರಿಕರಗಳೂ ಸೇರಿವೆ ಎಂಬುದು ಅವರ ಅನಿಸಿಕೆಯಾಗಿತ್ತಂತೆ. ಹಣವನ್ನೇ ಗುರಿಯಾಗಿಸಿಕೊಂಡು ಅವರೆಂದೂ ಪತ್ರಿಕಾಕರ್ತರಾಗಲಿಲ್ಲ; ಡೀವೀಜಿ ತಮ್ಮ ತಪ್ಪುಗಳನ್ನು ಬರೆದುಬಿಡುತ್ತಾರೆ ಎಂಬ ಹೆದರಿಕೆಯೂ ಸರಕಾರಕ್ಕೆ ಇಲ್ಲದಿರಲಿಲ್ಲ! ಅಂದಿನ ಸರಕಾರದ ಕೆಲಸಕ್ಕೆ ಮುಂಚಿತವಾಗಿ ಸಲಹೆ ಪಡೆಯುವ ಸಲುವಾಗಿ ಸ್ವತಃ ವಿಶ್ವೇಶ್ವರಯ್ಯನವರೇ ಡೀವೀಜಿಯವರ ಕಚೇರಿಗೆ ಬರುತ್ತಿದ್ದರಂತೆ!! 

ಹಲವು ಬೇಡದ ಹೂರಣಗಳನ್ನು ತುಂಬಿಸಿ ವರದಿಯನ್ನು ಒಪ್ಪಿಸಿ, ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದೇವೆಂದು ಬಡಾಯಿಕೊಚ್ಚಿಕೊಳ್ಳುವುದಕ್ಕಿಂತಾ, ಸಮಾಜಮುಖಿಯಾಗಿ ಕೆಲವೇ ವರದಿಗಳನ್ನು ಸಲ್ಲಿಸುವುದು ಹಿತಕರವೆನಿಸುತ್ತದೆ. ಕೆಲಸಕ್ಕೆ ಬಾರದ ವ್ಯಕ್ತಿಗಳ ಒಣಕಥೆಗಳನ್ನೂ ಜಂಬದ ಸರಕುಗಳನ್ನೂ ಬಿಂಬಿಸುವುದಕ್ಕಿಂತಾ ಸಶಕ್ತವಾದ ಮತ್ತು ಮೊನಚಾದ ಲೇಖನಗಳು ಪ್ರಕಟಿಸಲ್ಪಟ್ಟರೆ, ಅವು ಖಡ್ಗದಂತೇ ಕೆಲಸಮಾಡಬಲ್ಲವು ಮತ್ತು ಆಳುವ ಪ್ರಭುಗಳಿಗೆ [ಅವರಿಗೆ ಒಪ್ಪಿಕೊಳ್ಳುವ ಸ್ವಭಾವ ಇದ್ದರೆ] ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಹೇಳಬಲ್ಲವು; ಅಶಕ್ತವಾದ ಮತ್ತು ರೋಗಗ್ರಸ್ತ ಮನಸ್ಸುಗಳ ವಿಚಿತ್ರ ತೆವಲುಗಳುಳ್ಳ ಬರಹಗಳಿಗಿಂತ ಈ ದಾರಿ ಉತ್ತಮವೆನಿಸುತ್ತದೆ. ಎಲ್ಲಿಯವರೆಗೆ ಎಡಪಂಥೀಯ ಅಧುನಿಕ ರಾಕ್ಷಸರ ಮನದಲ್ಲಿ, ಬಾಯಲ್ಲಿ, ಕೃತಿಯಲ್ಲಿ  ಸುಖಾಸುಮ್ನೇ ’ಪುರೋಹಿತಶಾಹಿ’ ಮತ್ತು ಪುರೋಹಿತಶಾಹಿ ಭಾಷೆ [ಸಂಸ್ಕೃತ]’ ಎಂಬ ಧೋರಣೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಸ್ವಸ್ಥ ಸಮಾಜದ ನಿರ್ಮಾಣ ’ಕನ್ನಡಿಯಲ್ಲಿ ಕಂಡ ಗಂಟಾ’ಗಿರುತ್ತದೆಯೇ ವಿನಃ ಅದು ನಮಗೆಟುವುಕಿದಿಲ್ಲ! ಕನ್ನಡದ ಬೆಳವಣಿಗೆಯೂ ಆಗ ಸಾಧ್ಯವಾಗುವುದಿಲ್ಲ.