ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 18, 2011

ಆ ಮುಖ


ಆ ಮುಖ

೧೯೯೭ರಲ್ಲಿ ನಾಗಮಂಗಲ ತಾಲೂಕು ಯಾವುದೋ ಹೋಬಳಿಯ ಕೆಂಪೇಗೌಡರ ಮಗ ನಾರಾಯಣ ಗೌಡರ ಕುಟುಂಬ ಆತನನ್ನು ಊಟಕ್ಕೆ ಕರೆದಿತ್ತು. ಬ್ರಾಹ್ಮಣನಾದ ಆತ ತಮ್ಮನೆಯಲ್ಲಿ ಊಟ ಮಾಡಬಹುದೇ ಎಂಬ ಸಂದೇಹವಿದ್ದರೂ ಏನೋ ಕರೆದು ನೋಡೋಣ ಎಂಬ ಅನಿಸಿಕೆಯಿರಬೇಕು. ಮಗ ದೊಡ್ಡವನಾಗಿ ಏನಾದರೂ ದುಡೀಲಿ ಎಂಬಂತೇ ರೈತ ಕೆಂಪೇಗೌಡರು ನಾರಾಯಣನನ್ನು ಬೆಂಗಳೂರಿಗೆ ಕಳಿಸಿದ್ದರು. ಅಲ್ಲಿಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನಾರಾಯಣ ದಿನಪತ್ರಿಕೆಯ ಸಬ್ ಏಜೆಂಟ್ ಆಗಿ ಕೆಲಸಮಾಡತೊಡಗಿದ್ದ. ಬರುವ ಹಣದಲ್ಲೇ ಕಷ್ಟಕ್ಕೇ ಅಂತ ಅಷ್ಟಿಷ್ಟು ಎತ್ತಿಟ್ಟು ನಂಬುಗೆಯವರಲ್ಲಿ ಚೀಟಿ ಹಾಕಿ ಸ್ವಲ್ಪ ಜಾಸ್ತಿ ಹಣ ಕೈಗೆ ಸಿಕ್ಕಾಗ ಚಿಕ್ಕ ಅಂಗಡಿಯೊಂದನ್ನು ಆರಂಭಿಸಿದ. ವರ್ಷಾರು ತಿಂಗಳಲ್ಲೇ ನಾರಾಯಣನ ಒಡನಾಟದಿಂದ ಆ ರಾಜಾಜಿನಗರದ ಆ ಪ್ರದೇಶದ ಸುತ್ತುವರಿ ಜನ ಆತನ ಅಂಗಡಿಗೆ ಅದೂ ಇದೂ ಕೇಳಿಕೊಂಡು ಬರಲು ಆರಂಭಿಸಿದರು. " ಚನ್ನಕೇಶವ ಪ್ರಾವಿಜನ್ ಸ್ಟೋರ್ಸ್" ಎಂಬುದು ಬರೇ ಅಂಗಡಿಯಾಗಿರದೇ ಸ್ನೇಹಿತರ ಬಳಗಕ್ಕೆ ಮೆಸ್ಸೆಂಜರ್ ಆಗಿ ಕಾರ್ಯನಿರ್ವಹಿಸುವ ಕೇಂದ್ರವಾಗಿತ್ತು. ಆತನೂ ಸೇರಿದಂತೇ ಹಲವಾರು ಜನ ಹಳ್ಳಿಯಿಂದ ಬಂದ ಮಿತ್ರರು ಅಲ್ಲಿ ಆಗಾಗ ಸೇರುತ್ತಿದ್ದರು. ಬೇರೇ ಬೇರೇ ರೂಮುಗಳಲ್ಲಿ ವಾಸಮಾಡುತ್ತಿದ್ದ ಅವರು ಪರಸ್ಪರ ಸಿಗಬೇಕಾದರೆ ಅದಕ್ಕೆ ನಾರಾಯಣನಲ್ಲಿ ತಿಳಿಸಿರುವ ಸಂದೇಶವೇ ಕಾರಣವಾಗಿರುತ್ತಿತ್ತು. ನಾರಾಯಣನಿಗೂ ಆತನಿಗೂ ವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಒಂದೇ ಓರಗೆಯ ಹುಡುಗರಾದುದರಿಂದಲೋ ಏನೋ ಅಲ್ಲಿ ಸೇರುವ ಎಲ್ಲಾ ಹುಡುಗರೂ ನಾರಾಯಣನನ್ನೂ ಗೆಳೆಯನನ್ನಾಗಿ ಸ್ವೀಕರಿಸಿದ್ದರು; ಸಾಮನುಗಳನ್ನೂ ನಾರಾಯಣನ ಅಂಗಡಿಯಲ್ಲೇ ಖರೀದಿಸುತ್ತಿದ್ದರು.

ನಾರಾಯಣನ ಅಂಗಡಿಗೆ ಹತ್ತಿರದ ಒಂದು ಮನೆಯಿಂದ ಪೀಯೂಸಿ ಓದುವಂತಹ ವಯದ ಹುಡುಗಿಯೊಬ್ಬಳು ಆಗಾಗ ಬರುತ್ತಿದ್ದಳು. ವಯೋಮಾನದ ಸಹಜ ವಾಂಛೆಯಿಂದ ನಾರಾಯಣನಿಗೂ ಅವಳಿಗೂ ಪ್ರೇಮಾಂಕುರವಾಗಿತ್ತೆಂದು ಬೇರೇ ಹೇಳಬೇಕೇನು ? ಕೃಷ್ಣವರ್ಣದ ಸಾದಾ ಸೀದಾ ಸುಂದರಿ ಆಕೆ. ಅವರೂ ಗೌಡರೇ ಎಂಬುದನ್ನರಿತ ಸ್ನೇಹಿತರಿಗೆ ನಾರಾಯಣನ ಲವ್ವು ಮುಗ್ಗರಿಸುವುದಿಲ್ಲ ಎಂಬ ಭರವಸೆಯಿತ್ತು. ಆರಂಭದಲ್ಲಿ ಆಕೆಗೆ ಅಪ್ಪನ ವಿರೋಧವಿತ್ತೇನೋ. ಅಪ್ಪನಿಗೆ ಬರುವ ಸಂಬಳ ಸಾಲುತ್ತಿರಲಿಲ್ಲವೋ ತಿಳಿಯದು; ಆತ ಮಗಳನ್ನು ಜಾಸ್ತಿ ಓದಿಸಲೊಲ್ಲ. ಅದೇ ವೇಳೆಗೆ ನಾರಾಯಣನ ಪರಿಚಯ ಮತ್ತು ಇನ್ನೂ ಬಲಿತಿರದ ಪ್ರೇಮ ಇದ್ದುದರಿಂದ ಹುಡುಗಿ ನಾರಾಯಣನಲ್ಲಿ ಸ್ಥಿತಿಗತಿ ಹೇಳಿಕೊಂಡಿದ್ದಳು. ಬಡತನದಲ್ಲೇ ಹುಟ್ಟಿಬೆಳೆದ ಅನುಭವವಿದ್ದ ನಾರಾಯಣ ಆಕೆಗೆ ಓದಿಸುವ ಅಭಯ ನೀಡಿದ! ಫೀಸನ್ನೂ ಬೇಕಾದ ಪರಿಕರಗಳನ್ನೂ ಕೊಡಿಸುವುದಾಗಿ ಒಪ್ಪಿ ಆಕೆಯನ್ನು ಕಾಲೇಜಿಗೆ ಸೇರಿಸಿದ. ಹಾಗೂ ಹೀಗೂ ಪೀಯೂಸಿ ಮುಗಿಸಿದ ಆಕೆ ನಾರಾಯಣನ ಹೃದಯದಲ್ಲಿ ಬಲವಾಗಿ ತಳವೂರಿದ್ದಳು. ಊರಿಗೆ ತಿಳಿಸಿದ ನಾರಾಯಣ ಮತ್ತು ರತ್ನ[ಆಕೆಯ ಹೆಸರು]ರ ವಿವಾಹ ಪಶ್ಚಿಮ ಕಾರ್ಡ್ ರಸ್ತೆಯ ಸಾದರ ವಿದ್ಯಾಭಿವೃದ್ಧಿಸಂಘದ ಕಲ್ಯಾಣಮಂಟಪದಲ್ಲಿ ನಡೆಯಿತು. ಬಹಳ ವಿಶೇಷವೆಂದರೆ ಮದುವೆಗೆ ಆತ ಕೂಡ ಬಂದಿದ್ದ!

ಮದುವೆ ಮುಗಿದು ಮನೆಮಾಡಿ ವರ್ಷದ ಕಾಲ ಕಳೆದುಹೋಯ್ತು. ಮದುವೆ ವಾರ್ಷಿಕೋತ್ಸವದ ಸಲುವಾಗಿ ಸ್ನೇಹಿತರ ಬಳಗಕ್ಕೆ ಮನೆಯಲ್ಲೇ ಚಿಕ್ಕದಾಗಿ ಊಟ ಇಟ್ಟುಕೊಂಡಿದ್ದರು. ಆತನೇನಪ್ಪಾ ಅಂದರೆ ಆತ ಪುಳಿಚಾರೆ ! ತುಂಡು ತಿನ್ನುವ ಜಾತಿಯವನಲ್ಲ. ಶತಮಾನಗಳಿಂದ ವೇದಗಳನ್ನು ಓದುತ್ತಾ ಬಂದ, ಪೂಜೆ-ಪುನಸ್ಕಾರ ನಡೆಸುತ್ತಾ ಬಂದ ಕುಲೀನ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಬೆಳೆದ ಆತನಿಗೆ ಸಹಜವಾಗಿ ಬ್ರಾಹ್ಮಣ್ಯದ ಲಕ್ಷಣಗಳು ಪ್ರಾಪ್ತವಾಗಿದ್ದವು. ಹಾಗಂತ ಆತ ಸ್ವಚ್ಛತೆಯುಳ್ಳ, ಪರಿಶುದ್ಧವಾದ ಮತ್ತು ಮಾಂಸಾಹಾರ ಇಲ್ಲದ ಯಾವುದೇ ತಿನಿಸುಗಳನ್ನಾಗಲೀ ಯಾರದೇ ಮನೆಯಲ್ಲಾದರೂ ಭುಂಜಿಸಲು ಸಿದ್ಧನಿದ್ದ; ನಡೆಸಿಯೂ ಇದ್ದ. || ಆಚಾರಹೀನಂ ನಪುನಂತಿ ದೇವಾಃ || ಆಯಾ ಜನ್ಮಕ್ಕೆ ತಕ್ಕಂತೇ ವ್ಯವಹಾರ ಮತ್ತು ಆಚಾರವಿಧಿಗಳನ್ನು ಪಾಲಿಸಬೇಕಂತೆ. ಅದನ್ನರಿತಿದ್ದ ಆತನಿಗೆ ಹಲವಾರು ಬಾರಿ ಬ್ರಾಹ್ಮಣನಾಗಿ ಹುಟ್ಟಿದ್ದೇ ತಪ್ಪಾಯಿತೇ ಎಂಬ ಅನುಮಾನ ಕೂಡ ಬಂದಿತ್ತು. ಬೇಕಾದ್ದನ್ನು ತಿನ್ನಲಾಗದ ಕುಡಿಯಲಾಗದ ಕಾರಣಕ್ಕೆ ಹಾಗೆ ಸಂದೇಹ ಹುಟ್ಟಿದ್ದಲ್ಲ; ಬದಲಾಗಿ ಸಮಾಜದಲ್ಲಿ ಎಲ್ಲಿ ನೋಡಿದರೂ ಬ್ರಾಹ್ಮಣರ ಅವಹೇಳನ, ಚುಚ್ಚುಮಾತುಗಳು ನಡೆದೇ ಇದ್ದವು. ಸರಕಾರೀ ರಂಗಗಳಲ್ಲಿ ಬ್ರಾಹ್ಮಣರಿಗೆ ಅವಕಾಶ ಇಲ್ಲದಾಗುತ್ತಾ ನಡೆದಿತ್ತು. ಬ್ರಾಹ್ಮಣರು ಮಡಿವಂತರು ಅವರು ಯಾರನ್ನೂ ಹತ್ತಿರ ಸೇರಿಸಲೊಲ್ಲರು ಎಂಬ ಧೋರಣೆಯನ್ನು ತಳೆದ ಇತರೆ ವರ್ಗಗಳ ಜನ ಬ್ರಾಹ್ಮಣ ದೂಷಣೆಯನ್ನು ಸಾಮೂಹಿಕವಾಗಿ ಆರಂಭಿಸಿದ್ದರು. ಯಾಕೆ ಬ್ರಾಹ್ಮಣರು ಮಡಿ ಎನ್ನುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಜ್ಞೆಯೇ ಇರಲಿಲ್ಲ. ಅಯ್ಯಪ್ಪ ಮಾಲೆ ಧರಿಸಿದ ಭಕ್ತರೇ ಅಷ್ಟು ಮಡಿ ಎನ್ನುತ್ತಾ ತಿರುಗುವಾಗ ನಿತ್ಯವೂ ಬ್ರಾಹ್ಮಣ್ಯವೆಂಬ ವ್ರತವನ್ನು ಆಚರಿಸಿ ಬದುಕುವ ಬ್ರಾಹ್ಮಣನನ್ನು ಯಾಕೆ ಆ ರೀತಿ ಹಳದಿಗಣ್ಣಿನಿಂದ ನೋಡುತ್ತಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ.

ನಾರಾಯಣ ಗೌಡರ ಮನೆಯಲ್ಲಿ ಶುದ್ಧವಾದ ಕೆಂಪುನೆಲದಮೇಲೆ ಅಗ್ರದ ಬಾಳೆಲೆ ಇಟ್ಟು ತೊಳೆದು ಉಪ್ಪು, ಉಪ್ಪಿನಕಾಯಿ ಇತ್ಯಾದಿಗಳನ್ನು ಬ್ರಾಹ್ಮಣರ ರೀತಿಯಲ್ಲೇ ಬಡಿಸಿದ್ದರು. ಬರುವವರಲ್ಲಿ ಆತನೂ ಇದ್ದನಲ್ಲ! ಚಿತ್ರಾನ್ನ, ಹಪ್ಪಳ, ಮುದ್ದೆ, ಅನ್ನ-ಸಾರು, ಪಲ್ಯ ಎಲ್ಲವೂ ಚೆನ್ನಾಗೇ ಇದ್ದವು. ಆತ ಖುಷಿಯಿಂದಲೇ ನಾರಾಯಣ ದಂಪತಿಯ ಆತಿಥ್ಯ ಸ್ವೀಕರಿಸಿದ. ನಾರಾಯಣ ದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ವೈಯ್ಯಕ್ತಿಕವಾಗಿ ಬ್ರಾಹ್ಮಣರಲ್ಲಿ ಪೂಜ್ಯಭಾವನೆಯನ್ನು ಹೊಂದಿದ್ದ ಜನ ಅವರು. " ಅನ್ನದಾತಾ ಸುಖೀಭವ" ಎಂದು ಹಾರೈಸಿ ಬೀಳ್ಕೊಂಡ ಆತನ ಬಳಗ ಹೀಗೇ ಬಲುದೊಡ್ಡದು. ಹೋದಲ್ಲೆಲ್ಲಾ ಸ್ನೇಹಿತರು ಮುತ್ತಿಕೊಳ್ಳುವ ಏನನ್ನಾದರೂ ಕೇಳುತ್ತಲೇ ಇರುವ ವ್ಯಕ್ತಿತ್ವವನ್ನು ಆತ ಬೆಳೆಸಿಕೊಂಡಿದ್ದ. ಜಾತಿಯ ನೀತಿಗಿಂತ ವ್ಯಕ್ತಿ-ವ್ಯಕ್ತಿಗಳ ಒಡನಾಟ ಮತ್ತು ಸ್ವಚ್ಛತೆಗೆ ಆತ ತುಂಬಾ ಬೆಲೆಕೊಡುತ್ತಿದ್ದ.

ಆತನ ಮದುವೆಯ ಸಮಯ ಬೆಂಗಳೂರಿನ ಎಲ್ಲಾ ಮಿತ್ರರನ್ನೂ ಅಹ್ವಾನಿಸಲು ತೆರಳಿದ್ದ. ಅಲ್ಲಿಯೂ ಅಷ್ಟೇ ಜಾತಿ-ಧರ್ಮಕ್ಕೆ ಪ್ರಾಮುಖ್ಯತೆ ಇರಲಿಲ್ಲ. ತನ್ನ ನೀತಿ ತನಗೆ ಅವರವರ ನೀತಿ ಅವರವರಿಗೆ ಎಂಬ ಮನೋಭಾವ ಆತನದ್ದು. ನಾನು ಆತನನ್ನು ಬಹಳಕಾಲದಿಂದ ಹತ್ತಿರದಿಂದ ಬಲ್ಲೆ! ಅವನ ಪ್ರತೀ ಹೆಜ್ಜೆಯೂ ನನಗೆ ತಿಳಿದೇ ಇದೆ. ಮದುವೆಗೆ ಆಮಂತ್ರಿಸಲು ಹೋದ ಆತ ದಲಿತರ ಶಿವು ಮನೆಯಲ್ಲಿ ಪ್ರೀತಿಯಿಂದ ಕೊಟ್ಟ ಪಾನಕ ಕುಡಿದ! ದಾವೂದ್ ಸಾಬರ ಮನೆಯಲ್ಲಿ ತಿಂಡಿತಿಂದ! ಹೀಗೇ ಎಲ್ಲರೊಳಗೂ ಆತ ಒಬ್ಬನಾಗಿದ್ದ. ದಾವೂದರ ಮನೆಯವರಿಗಂತೂ ಆತ ಬಹಳ ಮೆಚ್ಚು. ಆತನ ಸ್ನೇಹದ ಸಂಕೋಲೆಯಲ್ಲಿ ಕೃಷ್ಣಪ್ಪ ಗೌಡರು, ದಾವೂದ್ ಸಾಬರು, ಮಂಗಳೂರು ಮೂಲದ ಫ್ರಾನಿಸ್ ಮೆನೆಜಿಸ್, ನನ್ನಯ್ಯ ಮೇಸ್ತ, ದಾಮೋದರ ನಾಯ್ಕ, ವಾಸು ಪಟಗಾರ ಮೊದಲಾದವರಿದ್ದರು.

೧೨-೦೯-೨೦೧೧ ರಂದು ಪಂಡಿತೋತ್ತಮರಾದ ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರನ್ನು ಈ ಜಗತ್ತು ಕಳೆದುಕೊಂಡಿತು. ನಾವೆಲ್ಲಾ ತಿನ್ನುವುದಕ್ಕಾಗಿ ಬದುಕಿದ್ದರೆ ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದ ಕೆಲವರಲ್ಲಿ ಅವರೂ ಒಬ್ಬರು! ಅವರ ಸಂಸ್ಕೃತ ಮತ್ತು ಕನ್ನಡ ಭಾಷಾಪ್ರೌಢಿಮೆ ಅಸದೃಶವಾದುದು, ಅಮೋಘವಾದುದು. ಋಗ್ವೇದ ಮತ್ತು ಯಜುರ್ವೇದಗಳೆರಡನ್ನು ಆಳವಾಗಿ ಅಧ್ಯಯನ ಮಾಡಿ ದ್ವಿವೇದಿಯಾಗಿದ್ದ ಅವರು ಪಂಚ-ಪ್ರಪಂಚ, ಮೂರರ ಮಹಿಮೆ, ಭಾಸಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿ, ಸುದರ್ಶನ ಹೋಮ ವಿಧಿ, ಪಂಚ-ದುರ್ಗಾ ದೀಪ ನಮಸ್ಕಾರ ವಿಧಿ, ಮಹಾಗಣಪತೀ ಹವನವಿಧಿ, ಬ್ರಹ್ಮಕಲಶ ವಿಧಿ ಮುಂತಾದ ಜನಪ್ರಿಯ ಧಾರ್ಮಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಯಕ್ಷಗಾನ ಪ್ರಿಯರಾದ ಅವರು ನಾಕೈದು ಪ್ರಸಂಗಗಳ ಕರ್ತೃವೂ ಹೌದು. ಆಕಾಶವಾಣಿ ಕೇಂದ್ರಗಳಿಂದ ಅವರ ಸಂದರ್ಶನಗಳು ಬಿತ್ತರಗೊಂಡಿವೆ, ಪುರೋಹಿತರಾಗಿ ಅವರು ಪಠಿಸಿದ ಮಂತ್ರಗಳ ೯ ಧ್ವನಿಸುರುಳಿಗಳೂ ಮಾರುಕಟ್ಟೆಯಲ್ಲಿವೆ. ಕಸ್ತೂರಿ ಮಾಸಿಕದಲ್ಲಿ ’ಶಬ್ದ ಸಂಸಾರ’ವೆಂಬ ಚಿಕ್ಕ ಅಂಕಣವನ್ನು ಬಹಳ ಚೊಕ್ಕವಾಗಿ ಬರೆಯುತ್ತಿದ್ದ ಅವರು ಸಮಾಜಕ್ಕೆ ಇನ್ನೂ ಬೇಕಾಗಿತ್ತು, ವಿಧಿ ಯಾರನ್ನೂ ಹೇಳಿ-ಕೇಳಿ ಮಾಡುವುದಿಲ್ಲವಲ್ಲ, ಅನಾರೋಗ್ಯ ಬಾಧಿಸಿದ್ದ ಅವರು ದಿವಂಗತರಾಗಿದ್ದಾರೆ. ಸರಕಾರದ ಕಣ್ಣಿಗೆ ಬದುಕಿರುವವರೆಗೂ ಅವರು ಕಾಣಲಿಲ್ಲ-ಯಾವ ಪ್ರಶಸ್ತಿಗಳನ್ನೂ ಕೊಡಮಾಡಲಿಲ್ಲ. ಇರಲಿಬಿಡಿ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದವರಲ್ಲಿ ಆತನೂ ಒಬ್ಬ!

ಇತ್ತೀಚೆಗೆ ೨೦೧೧ ಡಿಸೆಂಬರ್ ೧೧ ರಂದು ಆತ ಕೆಲಸದ ನಿಮಿತ್ತ ವಿಜಯನಗರಕ್ಕೆ ತೆರಳಿದ್ದ. ದಾವೂದ್ ಸಾಬರ ಮನೆ ಇರುವುದು ವಿಜಯನಗರದಲ್ಲೇ. ಕೇರಳಮೂಲದ ದಾವೂದ್ ಮದುವೆಯಾದದ್ದು ಮದ್ರಾಸೀ ಹುಡುಗಿಯನ್ನು. ಮನೆಯಲ್ಲಿ ಆಡು ಭಾಷೆ ತಮಿಳು! ದಾವೂದ್ ಮಗ ರಶೀದ್ ಎಂಬಾತ ಆತನ ಸ್ನೇಹಿತ. ಆತನ ವಯಸ್ಸಿನವನೇ ಆದ ರಶೀದ್ ಎಷ್ಟು ಒಳ್ಳೆಯ ಹುಡುಗನೆಂಬುದು ಆತನಿಗೆ ಮಾತ್ರ ಗೊತ್ತು! ದಾವೂದ್ ಮನೆಯಲ್ಲಿ ಸ್ವಚ್ಛತೆಯಿದೆ. ಎಲ್ಲವೂ ಕ್ಲೀನು ಕ್ಲೀನು. ಅದರಲ್ಲಂತೂ ರಶೀದ್ ದಿನಕ್ಕೆರಡುಬಾರಿ ಸ್ನಾನ ಮಾಡುವಾತ. ಮನೆಯಲ್ಲಿ ಅವರು ಮಾಂಸಾಹಾರ ತಿಂದರೂ ಆತ ಬರುವ ದಿನ ಅಥವಾ ಬಂದ ದಿನ ಆ ವ್ಯವಹಾರವಿಲ್ಲ! ಆ ದಿನ ಎಲ್ಲೆಲ್ಲೂ ಅದರ ಸುದ್ದಿಕೂಡಾ ಇರುವುದಿಲ್ಲ. ಯಾವುದೋ ತಾಂತ್ರಿಕ ಕೆಲಸ ಸಮಯದಲ್ಲಿ ಮುಗಿಯದ್ದಾಗಿತ್ತು, ಅದಕ್ಕೆ ರಶೀದ್ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ. ದಾವೂದರ ಮನೆಯಲ್ಲೇ ಆ ಕೆಲಸ ನಡೆಸುತ್ತಿದ್ದುದರಿಂದ ಹೊತ್ತು ಸರಿದದ್ದು ಗೊತ್ತಾಗಲೇ ಇಲ್ಲ. ದಾವೂದ್ ಮನೆಗೆ ಆತ ಬಂದಾಗಲೇ ಬೆಳಗಿನ ೧೧ ಗಂಟೆ. ಕಪ್ ಟೀ ಕುಡಿದು ಕೆಲಸ ಆರಂಭಿಸಿದ್ದ. ಸಮಯ ಮೂರಾದರೂ ಕೆಲಸ ಮುಗಿಯಲೇ ಇಲ್ಲ. ಹೊರಗೆ ಊಟಕ್ಕೆ ಹೋಗಿಬರಲು ಅವರ ಒಪ್ಪಿಗೆ ಇರಲಿಲ್ಲ! ಇಂದು ತಮ್ಮನೆಯಲ್ಲೇ ಊಟಮಾಡಿ ಎಂಬ ಹಠಕ್ಕೆ ಆತ ಮಣಿದಿದ್ದ. ಅವರಿಗೂ ಅನ್ನಿಸಿತ್ತೋ ಏನೋ. ಅಂದು ಶುದ್ಧ ಸಸ್ಯಾಹಾರ. ಟೊಮೇಟೋ ಸಾರು, ಬೀನ್ಸಿನ ಪಲ್ಯ, ನಂದಿನಿ ಮೊಸರು[ ಅವರು ಮೊಸರನ್ನು ಮನೆಯಲ್ಲಿ ಮಾಡೋದಿಲ್ಲ]. ಉಂಡೆದ್ದು ತಾಟು ತೊಳೆಯುತ್ತೇನೆಂದರೆ ಅವರು ಕೇಳಿಯಾರೇ ? ಮತ್ತೆ ಕೆಲಸ ಸಾಗಿತ್ತು. ಇಡೀ ದಿನ. ಮತ್ತೆ ಸಾಯಂಕಾಲ ೬ ಗಂಟೆಗೆ ಅಲ್ಲೇ ಚಹಾ. ರಾತ್ರಿಯೂ ಆಗಿ ಹೋಯ್ತು. ಮಾರನೇ ದಿನ ಸಂಕಷ್ಟಿ! ಆತನಿಗೆ ಪೂಜೆಯಿದೆ-ವ್ರತವಿದೆ!! ರಾತ್ರಿ ೧೨ರ ತನಕವೂ ಕೆಲಸ ನಡೆದಿತ್ತು. ಮತ್ತೆ ರಾತ್ರಿ ೧೦ರ ಸುಮಾರಿಗೆ ಚಪಾತಿ ಮಾಡಿದ್ದೇವೆ ಎಂದು ಹಠಮಾಡಿದರೂ ಆತ ಸ್ವೀಕರಿಸಲಿಲ್ಲ, ಯಾಕೆಂದರೆ ಮನೆಯಲ್ಲಿ ಮಾಡಿದ್ದನ್ನು ಮಾರನೇ ದಿನಕ್ಕೆ ಬಾಕಿ ಉಳಿಸುವ ಹಾಗಿರಲಿಲ್ಲ! ರಾತ್ರಿ ಹನ್ನೆರಡಕ್ಕೆ ಹೊರಟು ಹತ್ತು ಕಿಲೋಮೀಟರು ಕ್ರಮಿಸಿ ಮನೆ ತಲುಪಿ ಊಟಮಾಡಿ ಮತ್ತೆ ಬೆಳತನಕ ಆತ ಕೆಲಸಮಾಡಿದ. ನಿದ್ದೆಗೆಟ್ಟರೂ ಕರ್ತವ್ಯವನ್ನು ಮರೆಯದ ಆತನನ್ನು ನಾನು ಮೆಚ್ಚುತ್ತೇನೆ.

ಮಡೆಸ್ನಾನದ ಬಗ್ಗೆ ಆತ ಅದೂ ಇದೂ ಮಾತಾಡುವವರ ಮಧ್ಯೆ ತನ್ನ ಅಭಿಪ್ರಾಯ ತಿಳಿಸಿದ್ದ. ಅದು ಬ್ರಾಹ್ಮಣರು ಜಾರಿಗೆ ತಂದ ಅನಿಷ್ಟ ಪದ್ಧತಿ ಎಂಬ ಧೋರಣೆ ಸರಿಯಲ್ಲ ಎಂಬುದನ್ನು ವಿಶದವಾಗಿ ತಿಳಿಯಪಡಿಸಿದ. ಹಲವುಜನ ಆತನ ಅಭಿಪ್ರಾಯವನ್ನು ಓದಿದರು. ಕೆಲವರು ಪರ ಮತ್ತೆ ಕೆಲವರು ವಿರುದ್ಧವಾಗಿದ್ದರು. ಒಬ್ಬಾತನಂತೂ ಆತನನ್ನೇ ಗುರಿಯಾಗಿಸಿ ಹರಿಹಾಯ್ದ. ಎಲ್ಲಾ ಬ್ರಾಹ್ಮಣರನ್ನೂ ಏಕದೃಷ್ಟಿಯಿಂದ ನೋಡುತ್ತಾ ಬೆರಳುಮಾಡಿ ತೋರಿಸುತ್ತಾ ಹೀಗಳೆಯುವುದು ಆತನಿಗೆ ಅಸಹನೀಯವಾಗಿತ್ತು. ಬ್ರಾಹ್ಮಣ್ಯವೆಂಬ ವ್ರತದ ಪಾಲನೆಯಲ್ಲಿ ಆದ ಕೆಲಮಟ್ಟಿನ ದೋಷಗಳೇ ಈ ಗತಿಗೆ ಕಾರಣ ಎಂಬುದು ಆತನ ಇಂಗಿತವಾಗಿತ್ತು. ಉನ್ನತ ಪೀಠಗಳಲ್ಲಿ ಕುಳಿತು ಪೂಜೆಗೊಳ್ಳುವ ದೇವರುಗಳನ್ನು ನಿತ್ಯ ಆರಾಧಿಸುವ ಬ್ರಾಹ್ಮಣರಿಗೆ ನಿಜವಾದ ಬ್ರಾಹ್ಮಣ್ಯದ ಅವಶ್ಯಕತೆಯಿದೆ. ಬ್ರಾಹ್ಮಣ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಣಬೆಗಳ ಸೇವನೆ ಕೂಡ ನಿಷೇಧ. ಸಾಮೂಹಿಕ ಜಾಗಗಳಲ್ಲಿ ಹೋಟೆಲ್ ಗಳಲ್ಲಿ ತಿನ್ನುವುದು ನಿಷಿದ್ಧ. ಸ್ನಾನ ಮುಖಮಾರ್ಜನೆ ಶುದ್ಧಾಚಾರ ಇಲ್ಲದೇ ತಯಾರಿಸುವ ಅಡಿಗೆಯ ಸೇವನೆ ನಿಷಿದ್ಧ. ಅತಿಖಾರ-ಅತಿ ಹುಳಿ-ಅತಿಸಿಹಿ ಮತ್ತು ಅತಿ ಉಪ್ಪು ಪದಾರ್ಥಗಳು ನಿಷಿದ್ಧ. ಪ್ರಾಣಿಗಳ/ಜೀವಿಗಳ ಮಾಂಸಲಭಾಗಗಳನ್ನು ತಿನ್ನುವುದು ನಿಷಿದ್ಧ. ಧಾನ್ಯಗಳಲ್ಲೇ ಕೆಲವು ಕೆಲವುದಿನಗಳಲ್ಲಿ ನಿಷಿದ್ಧ, ಕೆಲವುದಿನಗಳಲ್ಲಿ ಅನ್ನವೇ ನಿಷಿದ್ಧ!

ಇದಕ್ಕೆಲ್ಲಾ ವೈಜ್ಞಾನಿಕ ಕಾರಣವಿದೆಯೆಂದು ಆತ ಬಲ್ಲ. ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆಂಬುದನ್ನೂ ಆತ ಬಲ್ಲ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ ಎಂಬುದು ಆತನಿಗೆ ತಿಳಿದೇ ಇದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ[ಇದಕ್ಕೆ ತಾಕತ್ತು ಬೇಕಾಗುತ್ತದೆ]ಶಕ್ತರು ಎಂಬುದು ಆತನಿಗೆ ಗೊತ್ತು. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ಆತನಿಗೆ ತಲೆನೋವಾಗಿರುವ ವಿಷಯ.

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ [ವಿದ್ಯೆ ಕಲಿಸುವಿಕೆ] ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ ಆ ಗುರುಸ್ಥಾನಕ್ಕೆ ಆತ ಸದಾ ಕೃತಜ್ಞನಾಗಿದ್ದಾನೆ. ’ಆ ಮುಖ’ವೇ ಈ ಮುಖ, ಆತ ಬೇರಾರೂ ಅಲ್ಲ ನಾನೇ ! ನನ್ನೊಳಗಿನ ’ನಾನು’ ಹೊರಬಂದು ಇದನ್ನು ಬರೆದಿದ್ದೇನೆ.