ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 1, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)-2

ಚಿತ್ರ ಕೃಪೆ : ಅಂತರ್ಜಾಲ

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)

ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ

ಭಾಗ-೨

ಸರ್ವರಿಗೂ ಹಾದರದ ಸ್ವಾಗತ


" ಬಾಬಾರೋ ರಸಿಕಾ .............. " ಅಯ್ಯಯ್ಯೋ ಇದೆಂತಾ ಭರತನಾಟ್ಯವೆನ್ನುವ ಹೊತ್ತಿಗೆ ಸೈಡ್ ವಿಂಗ್ ನಲ್ಲಿ ಅನೌನ್ಸರ್ ಹೆಳಿದ " ಆಮಂತ್ರಣದಲ್ಲಿ ತಪ್ಪಾಗಿ ಭರತನಾಟ್ಯ ಎಂದು ಪ್ರಿಂಟಾಗಿದ್ದಕ್ಕೆ ನಮ್ಮ ಹೈಕ್ಳೆಲ್ಲಾ ಬೋ ಬೆಜಾರ್ದಾಗಿದ್ರು ಅದು ತಪ್ಪಾಗಿರೋದು ಈಗ್ ನೀವೆಲ್ಲಾ ನೋಡುತ್ತಿದ್ದೀರಿ ಹದ್ಬುತ ಡ್ಯಾನ್ಸು "

ಭರತನಾಟ್ಯದ ಹೆಸರಲ್ಲಿ ಇಬ್ಬರು ಪ್ರಾಯದ ಹುಡುಗಿಯರು ಅತೀ ಕಮ್ಮಿ ಬಟ್ಟೆಯಲ್ಲಿ ನಂಗಾನಾಚ್ ಗೆ ತೊಡಗಿದ್ದರು. ನನಗಂತೂ ಮಜಾ ಹಾಳ್ ಬೀಳ್ಲಿ ಅಲ್ಲಿಂದ ಎದ್ದು ಓಡಿಹೋದರೆ ಸಾಕಾಗಿತ್ತು.

ರಸಿಕಾ ರಸಿಕಾ ಹಾಡು ಮುಕ್ಕಾಲು ಆಗುತ್ತಿರುವಾಗ ಅದ್ಯಾವನೋ ಎಣ್ಣೆ ಕುಡಿದವ ವೇದಿಕೆಯೇರಿ ಒಬ್ಬ ಹುಡುಗಿಯ ಹತ್ತಿರವೇ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ! ಅದನ್ನು ನೋಡಿ ಸುಮಾರು ಹದಿನೈದಿಪ್ಪತ್ತು ಪಡ್ಡೆಗಳೂ ಕುಣಿಯ ಹತ್ತಿದವು.

ರಸಿಕಾ ಹಾಡು ಹಾಗೇ ಹಾಗೇ ಮುಗೀತು. ಮುಗಿದ ಮೇಲೆ ಸಂಘದ ಕೆಲವರು ಬಂದು ವೇದಿಕೆಯೇರಿದ್ದ ಎಲ್ಲರನ್ನೂ ಒಮ್ಮೆ ಕೆಳಗೆ ಕಳಿಸಿದರು. [ ಇಬ್ಬರು ನೃತ್ಯಾಂಗನೆಯರನ್ನು ಬಿಟ್ಟು]

" ಈಗ ಮತ್ತೊಂದು ಅದ್ಬುತ ಡ್ಯಾನ್ಸ್ ಕುಮಾರಿ ಮೆಗಾಸ್ರೀ ಮತ್ತು ಕುಮಾರಿ ಹೇಮಾಸ್ರೀರವರುಗಳಿಂದ "

" ಹೇ ಮುಚ್ಲಾ ಬಾಯ್ನ ಬ್ಯಾಗ್ ಸುರುಮಾಡ್ಲ ಡಾನ್ಸ್ ನ ತಡ್ಕೊಳಕಾಯಾಕಿಲ್ಲ ನಂ ತಾವ ಇಲ್ಲಿ " --ಸಭೆಯಿಂದ ಕೇಳಿದ್ದು!

" ಜಾಣಾ ಓ ಜಾಣಾ ಜಾಣಾ ಓ ಜಾಣಾ......ಝಣ ಝಣ ಈ ಕಾಂಚಾಣ......." ಏನಬ್ಬರ ಅಂತೀರಿ.... ತಿರುಗಿ ನೋಡಿದೆ ಸಭೆಯಕಡೆ ಚಳಿಗೆ ಚಾದರಹೊದ್ದು ಎಣ್ಣೆಯ ಅಮಲಲ್ಲಿದ್ದ ಮುದುಕರೆಲ್ಲಾ ಕುಣಿಯತೊಡಗಿದ್ದಾರೆ!
ಅಯ್ಯಯ್ಯೋ ! ನಾನೊಬ್ಬನೇ ಹಾಗೆ ಕೂತಿದ್ದು ಬಿಟ್ಟರೆ ಯಾರೂ ಸರಿಯಾಗಿ ಕೊತುಕೊಳ್ಳುತ್ತಲೇ ಇರಲಿಲ್ಲ. ಅಲ್ಲಿ ಸೇರಿದ್ದ ಹಳ್ಳಿಯ ಹೆಂಗಸರೂ ಸೇರು-ಪಾವು ಅಂತ ಸ್ವಲ್ಪ ಅಮಲಾಗಿದ್ದರು! ಅವರಲ್ಲೂ ಕೆಲವರು ಅಲ್ಲಲ್ಲೇ ಸಣ್ಣಗೆ ಕುಣಿಯುತ್ತಿದ್ದರು! ಸಿಳ್ಳೆಯೇನು , ರಾಕೆಟ್ಟೇನು , ಚಪ್ಪಾಳೆಯೇನು ಛೆ ಛೆ ಮರೆಯಲಾಗದ್ದು ಬಿಡಿ, ಇದನ್ನೆಲ್ಲ ನೀವು ಲೈವ್ ಆಗಿ[ನೇರವಾಗಿ] ನೋಡಿದರೇನೆ ಅನುಭವಕ್ಕೆ ಬರೋದು. ಎರಡು ನೃತ್ಯ ಮುಗಿಯಲು ಒಂದೂವರೆ ಗಂಟೆ ಸ್ಮಯ ಹಿಡಿಯಿತು. ಅಂತೂ ನಂಗಾನಾಚ್ ಕಲಾವಿದೆಯರು ಸುಸ್ತಾದರು-ಇನ್ನು ಕುಣಿಯದಾದರು ಎನ್ನುವಾಗ ಅನೌನ್ಸರ್ ಕೂಗಿದ " ಹಿವತ್ತಿನ ಕಾರ್ಯಕ್ರಮಗೋಳ ಮದ್ಯ ನಮ್ಮ ಮೆಗಾಸ್ರೀ ಮತ್ತು ಹೇಮಾಸ್ರೀಯವರ ಡ್ಯಾನ್ಸ್ ಸೂಪ್ಪರಾಗಾಯ್ತು "

ಆತನಿಗೆ ಮಾತನಾಡಲೇ ಬಿಡುತ್ತಿರಲಿಲ್ಲ. ಮುದುಕರಿಗೆ ಇನ್ನೂ ಡ್ಯಾನ್ಸ್ ನೋಡಬೇಕಾಗಿತ್ತಂತೆ ಅಂತ ತಿಳೀತು. ಅವರೆಲ್ಲಾ ತರತರವಾಗಿ ಬೊಬ್ಬೆಹಾಕುತ್ತಿದ್ದರು. ಹುಳಿಸೆಮುಪ್ಪಾದರೂ ಹುಳಿಮುಪ್ಪೇ ಅನ್ನುವ ಗಾದೆ ಹುಟ್ಟಿದ್ದು ಇದೇ ಊರಲ್ಲೆ ? ಅಂತೂ ಅನೌನ್ಸರ ಬೌನ್ಸರ್ ಥರನೂ ಕೆಲಸ ಮಾಡಿ ಅವರನ್ನೆಲ್ಲ ದಬ್ಬಿ ಕೂರಿಸಿದ. ಮತ್ತೆ ವೇದಿಕೆಯೇರಿ ಕೂಗಿದ " ಈಗ ನಮ್ಮ ಸಂಘದ ಅವ್ಯಾಸಿ ಕಲಾವಿದ್ರಗೋಳಿಂದ ದ್ರೌಪತೀ ವಸ್ತ್ರಾಪ ಅರಣ ಹೆಂಬ ಸುಂದರ ಪೌರಾಣಿಕ ನಾಟ್ಕ, ಹೆಲ್ಲರೂ ಸಾಂತರೀತಿಯಿಂದ ಕೂತ್ಕೊಳಿ ಇಲ್ಲಾಂದ್ರೆ ನಾಟ್ಕ ಬಂದ್ಮಾಡಾಕೋಯ್ತೀವಿ ಮತ್ತೆ ಹೇಳ್ಬುಟ್ಟಿದ್ದೇನಿ "

ಇನ್ನೊಂದ ಸಲ ಅದೇ ಹೇಳಿಕೆಯನ್ನು ರಿಪೀಟ್ ಮಾಡ್ದ.

ಅಂತೂ ನಾಟಕದ ಆರಂಭ ಇನ್ನೇನು ....

" ಗಜವದ ನಾ ಬೇಡುವೇ ಗೌರಿ ತನೇಯಾ ... ಗಜವದ ನಾ ಬೇಡುವೇ ........" ಕ್ಯಾಸಿಯೋ [ಕೀ ಬೋರ್ಡು] ಜೋರಾಗಿತ್ತು.
ನಿರ್ದೇಶಕರೇ ಹಾಡುಗಾರರೂ ಆಗಿರುವುದರಿಂದ ಹಾಡು ಪ್ರಾರಂಭವಾಯಿತು.

ಕಥೆ ಮುಂದುವರಿದಿತ್ತು. ಮೊದಲಿಗೆ ಪಾಂಡವರು ಮಾತಾಡೊದು. ಶುರುವಾಗೋಯ್ತು... ಭೀಮ ಇರಲಿಲ್ಲ! ಬಾಕಿ ಎಲ್ಲಾ ಇದ್ದರು. " ಹೇ ಹೆಲ್ಲಲೇ ಭೀಮಾ ? ಎಲ್ಲೋಗ್ ಕೂತ್ವನೋ ಅವನ್ಮನೆಕಾಯಾಕೋಗ ಇಂತಿಂತಾ ಹೆಮರ್ಜೆನ್ಸಿ ಟೇಮ್ನಾಗೇ ಇಂಗೇ ಕೈಕೊಡೋದು ಮುಂದಿನ ವರ್ಸ ಹಿಂತಾನನ್ಮಕ್ಳಿಗ್ ಒಬ್ಬರ್ಗೂ ಪಾರ್ಟ್ ಕೊಡಾಕಿಲ್ಲ " ನಾಟಕದ ವ್ಯವಸ್ಥಾಪಕರ ಕೂಗು!

ಭೀಮನ ಪಾತ್ರ ಮಾಡಿದ್ದು ಕೇಬಲ್ ಭೈರಪ್ಪ. ಅವನಿಗೆ ಊರಲ್ಲಿ ಪಕ್ಕದೂರಲ್ಲಿ ಅಲ್ಲಲ್ಲಿ ಕೆಲವು ಗೆಳತಿಯರ ಸಹವಾಸವಂತೆ! ಆದಿನ ಯಾವುದೋ ಹೊಸಗೆಳತಿ ಬಂದಿದ್ದಾಗಿಯೂ ಆಕೆಯೊಡನೆ ಆತ ಸಾಯಂಕಾಲದವರೆಗೆ ಮಾತನಾಡುತ್ತಿದ್ದುದನ್ನು ಸಾಣೆ ಹಳ್ಳದ ಸುರೇಶ ಕಂಡಿದಾನಂತೆ ! ಎಲ್ಲಾ ಅಂತೆಕಂತೆ ಇಂತದ್ದೇ ಮಾತಿತ್ತು. ಆದರೆ ಭೀಮನ ಪಾತ್ರದ ಪ್ರವೇಶದ ಅವಶ್ಯಕತೆಯಿದ್ದರೂ ಇನ್ನೂ ಭೀಮ ಬರದಿದ್ದುದು ಬಹಳಜನರಿಗೆ ಗಲಿಬಿಲಿ ಉಂಟುಮಾಡಿತ್ತು. ನಾಟಕದಲ್ಲಿ ಮಧ್ಯೆ ಹಾಗೆ ಯಾರನ್ನು ಆ ಪಾತ್ರಕ್ಕೆ ತಾಲೀಮು ಇಲ್ಲದೇ ಹೊಂದಿಸುವುದು?ನಿರ್ದೇಶಕರು ಎಲ್ಲಾ ಕಿತ್ತೆಸೆದು ಓಡಿಹೋಗುವಷ್ಟು ಕೋಪದಲ್ಲಿದ್ದರು. ಆದರೂ ನಾಟಕ ಮುಗಿದ ಹೊರತೂ ಅವರ ಸಂಭಾವನೆ ಸಿಕ್ಕಿರುವುದಿಲ್ಲವಾಗಿ ಅನಿವಾರ್ಯವಾಗಿ ಹಾಗೂ ಹೊಟ್ಟೆಪಾಡಿನ ನೆನಪಾಗಿ ಅಲ್ಲೇ ಉಳಿದರು. ಬಹಳ ಜನರ ಹತ್ತಿರ ಹುಡುಕಲು ಹೇಳಿದರು.

ಇತ್ತ ಕೇಬಲ್ ಭೈರಪ್ಪನ್ನ ಹುಡುಕಲು ಸುರೇಶನನ್ನೇ ಮುಂದಾಗಿ ಕಳಿಸಿ ಎಲ್ಲರೂ ಪ್ರಯತ್ನಿಸುತ್ತಿದ್ದರು. ಸುರೇಶ ಸುಮಾರು ಎಂಟತ್ತು ಮಂದಿ ಪಡ್ಡೆಗಳೊಂದಿಗೆ ಹುಡುಕಲು ಹೋದ. ಸಾಣೆ ಹಳ್ಳದ ಸೇತುವೆ[ ಹತ್ತಿರ ಸುಳುಕಾಡುತ್ತಿರುವಾಗ ಅವರಿಗೆಲ್ಲ ಅರೆಗತ್ತಲಲ್ಲಿ ಸಣ್ಣಗೆ ಗುಣು ಗುಣು ಮಾತಿನ ಸದ್ದು ಕೇಳಿಬರುತ್ತಿತ್ತು. ಸುರೇಶನಿಗೆ ಬಹಳ ಕುತೂಹಲವಿದ್ದುದರಿಂದ ಆತ ಸೇತುವೆ ಕೆಳಗೆ ನೋಡಲು ಮುಂದಾದ. ಟಾರ್ಚ್ ಹತ್ತಿಸಿಕೊಂಡು ಒಂದಿಬ್ಬರು ಆತನ ಜೊತೆಗೆ ಬಂದರು. ಅಲ್ಲಿಳಿದು ನೀರಿಲ್ಲದೇ ಆರಿದ್ದ ಜಾಗದಲ್ಲಿ ಬೆಳೆದಿದ್ದ ಸಣ್ಣ ಕುರುಚಲು ಗಿಡಗಳ ಮಧ್ಯೆ ನಾಲ್ಕು ಕಾಲುಗಳು ಕಂಡವು! ಸುರೇಶನ ಅನುಮಾನ ಗಟ್ಟಿಯಾಯಿತು. ಸರಿಯಾದ ಮೂರುಸೆಲ್ಲಿನ ಟಾರ್ಚ್ ನ ಬೆಳಕನ್ನು ಹತ್ತಿರವೇ ಹೋಗಿ ಫೋಕಸ್ ಮಾಡಿದ. ಪಕ್ಕದೂರಿನ ರಮ್ಯಾಳೊಂದಿಗೆ ’ಭೀಮ’ ’ ಕ್ರೀಡೆ’ಯಲ್ಲಿ ನಿರತನಾಗಿದ್ದ. ಬೆಳಕು ಮೈಮೇಲೆ ಬೀಳುತ್ತಿದ್ದಂತೆಯೇ ಯಾರಿಗೂ ಮುಖವನ್ನೂ ಸರಿಯಾಗಿ ತೋರಿಸದೇ ಬಟ್ಟೆಯನ್ನೂ ಧರಿಸದೇ ಇಬ್ಬರೂ ಸತ್ನೋ ಇದ್ನೋ ಅಂತ ಓಡಿಹೋದರು!

" ಆ ಭೀಮ ಸಿಕ್ಕ ಭೀಮ ಸಿಕ್ಕ ಇಡ್ಕೊಳಿ ಇಡ್ಕೊಳಿ " ಕೂಗುತ್ತಾ ಅವರೆಲ್ಲ ಕತ್ತಲಲ್ಲೇ ಆತನ ಬೆನ್ನುಹತ್ತಿದರು.

ನಾಟಕದ ನಿರ್ದೇಶಕರು ಪಾತ್ರಧಾರಿಗಳನ್ನು ರಂಗಕ್ಕೆ ಸಜ್ಜುಗೊಳಿಸುವಷ್ಟರಲ್ಲಿ ಹೈರಾಣಾಗಿದ್ದರು, ಆದರೂ ಈ ಬೇಡದ ಸಮಸ್ಯೆಗಳಿರದಿದ್ದರೆ ನಾಟಕ ಹೇಗೋ ನಡೆಯುತ್ತಿತ್ತು. ಈ ರೀತಿ ಹೊಸ ಹೊಸ ’ದ್ರೌಪತೀ ವಸ್ತ್ರಾಪಹರಣ’ಗಳು ಹುಟ್ಟಿಕೊಂಡು ಪಾತ್ರಧಾರಿಗಳೇ ನಾಪತ್ತೆಯಾದರೆ ಹೇಗೆ ತಾನೇ ನಾಟಕಮಾಡಲು ಸಾಧ್ಯ ? ಅಂತೂ ಮುಖ ಒಣಗಿಸಿಕೊಂಡು ಕೂತಿದ್ದರು.

ಸುಮಾರು ಅರ್ಧರಾತ್ರಿ ಕಳೆದು ಹೋಗಿ ಬೆಳಗಿನ ೨ ಗಂಟೆಯಾಗಿಬಿಟ್ಟಿತ್ತು ಅನಿಸುತ್ತದೆ. ಸಭಿಕರಲ್ಲಿ ಕೆಲವರು ಕಾಡುಗಳ್ಳರು ರಾತ್ರಿ ಕಾಡಲ್ಲಿ ಮರದದಿಮ್ಮಿಯನ್ನು ಕತ್ತರಿಸುವಾಗ ಆಗುವ ಸದ್ದಿನಂತೇ " ಗೊರಾರ್ ಸಾಂ ......ಗೊರಾರ್ ಸಾಂ...... ಗೊರಾರ್ ಸಾಂ " ಎಂದು ಗೊರಕೆ ಹೊಡೆಯುತ್ತಿದ್ದರೆ ಅತೀ ಕುಡುಕರು ಕುರುಕ್ಷೇತ್ರದಲ್ಲಿ ಮಲಗಿದ ಹೆಣಗಳಂತೇ ಬಾಯಿಂದ ಜೊಲ್ಲು ಸುರಿಸುತ್ತಾ ಈ ಲೋಕದ ಪರಿವೆಯೇ ಇಲ್ಲದೇ ಮಲಗಿದ್ದರು. ಅರ್ಧಂಬರ್ದ ಕುಡಿದವರು " ಬಾಬಾರೋ ರಸಿಕಾ ಬಾಬಾರೋ ರಸಿಕಾ ಏ ಬಾ ಮಕ್ಕಾ....ಬೂಂ... ಬಾ.... ಮನಿಕ್ಕಾ....ಹೂಂ... " ಅಂತೇನೋ ಗೊಣಗುತ್ತಿದ್ದರು. ಇನ್ನೂ ಕೆಲವರು ಅಲ್ಲಲ್ಲೇ ಹತ್ತತ್ತು ಜನ ಗುಂಪಾಗಿ ಇಸ್ಪೀಟು ಆಡುತ್ತಿದ್ದರು [ತಿಂಗಳ ಬೆಳಕಲ್ಲಿ], ಬೀಡಿ ಸಿಗರೇಟುಗಳ ಹೊಗೆ ಹೋಮಮಾಡಿದ ರೀತಿಯಲ್ಲಿ ಬರುತ್ತಲೇ ಇತ್ತು! ಹುರಿಗಡ್ಲೆ, ಕಡ್ಲೇ ಬೀಜ[ಶೇಂಗಾ], ಬಟಾಣಿ ಇವನ್ನೆಲ್ಲ ಪಕ್ಕದ ಇಕ್ಕೆಲಗಳಲ್ಲಿ ಬಂದುಕೂತ ತಾತ್ಕಾಲಿಕ ರಟ್ಟಿನ ಪೆಟ್ಟಿಗೆಯ ಅಂಗಡಿಗಳಿಂದ ಖರೀದಿಸಿ ತಿಂದವರು, ಮಕ್ಕಳು ಹೀಗೆ ಹಲವರು ಕೆಟ್ಟ ಕೆಟ್ಟ ಹೂಂಸು ಬಿಡುತ್ತಿದ್ದರು. ಸೀನುವುದು, ಕ್ಯಾಕರಿಸಿ ಕಫ ಉಗಿಯುವುದು, ಮಹಾ ರೋಗ ಹಿಡಿದವರಂತೇ ಆಗಾಗ ಕೆಮ್ಮುವುದು, ಬ್ರಾಂಕೈಟಿಸ್ ಇದ್ದವರು ಶ್ವಾಸದಲ್ಲಿ ಸಪ್ತಸ್ವರ ನುಡಿಸುವುದು-- ಈ ಎಲ್ಲಾ ಕಲಾವಿದರ ಸಹಭಾಗಿತ್ವ ಇದ್ದೇ ಇತ್ತು.


ಅಂತೂ ಬೆನ್ನತ್ತಿದ್ದರೂ ಸಿಗದ ಭೀಮ ತನ್ನ ತೆವಲು ಆದಷ್ಟು ತೀರಿತ್ತಲ್ಲ ಹೀಗಾಗಿ ಮುಸಿಮುಸಿ ನಗುತ್ತ ಅಲ್ಲೆಲ್ಲೋ ಹೇಗೋ ಪಂಚೆಸುತ್ತುಕೊಂಡು ಬಣ್ಣದ ಮನೆಗೆ ಬಂದ! ಆತನಿಗೆ ಬಣ್ಣ ಹಚ್ಚಿ ವೇಷ ಹಾಕಿದ್ದೂ ಆಯಿತು. [ನಡು ನಡುವೆ ಅವರ ಮತುಗಳನ್ನೆಲ್ಲ ಸಮಯದ ಅಭಾವದಿಂದ ಕೈಬಿಟ್ಟಿದ್ದೇನೆ ]

ನಾಟಕ ಅಷ್ಟು ಹೊತ್ತು ಹೇಗೇಗೋ ಭೀಮನಿಲ್ಲದೇ ನಡೆದಿದ್ದು ಅಂತೂ ಭೀಮನ ಪ್ರವೇಶವಾಯಿತು. ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯುವ ಸನ್ನಿವೇಶ ಬಂತು.

" ಏ ಕ್ರಿಷ್ಣಾ ವಾಸುದೇವಾ ಮುರಾರಿ, ಹೈದು ಜನ ಗಂಡಂದಿರಿದ್ದೂ ನನ್ನನ್ನು ಒಬ್ಬರೂ ಕಾಪಾಡಲು ಮುಂದೆಬರುತ್ತಿಲ್ಲವಲ್ಲಾ, ನನ್ನ ಮಾನ ಅರಣವಾಗಿ ಓಗುತ್ತಿದೆ ಕ್ರಿಷ್ಣಾ, ಹೋ ಅಣ್ಣಾ ನೀನು ಬೇಗನೇ ಬಾ ಹಣ್ಣಾ ನೀ ಬೇಗನೇ ಬಾ, ಹೀ ಆರ್ತಳ ಮೊರೆ ಕೇಳದೇ ಹಣ್ಣಾ ನಿನಗೆ ಹೀ ಬಡವಳಮೇಲೆ ದಯೆಬಾರದೇ , ದಯಮಾಡಿ ಏಗಾದರೂ ಬಡ್ಡಿಗಾದರೂ ಕೊಡು [ಎಂದುಬಿಟ್ಟ ಯಾಕೆಂದರೆ ಆತ ಲೇವಾದೇವಿ ವ್ಯವಹಾರದವನಾಗಿದ್ದುದರಿಂದ ಅದೇ ಅಭ್ಯಾಸ!] "

ನಿರ್ದೇಶಕರ ಕಣ್ಣು ಮತ್ತೆ ಕೆಂಪಗಾಯಿತು[ ಕತ್ತಲಲ್ಲೂ ನನಗೆ ಅವರ ಕೆಂಪು ಕಣ್ಣು ಕಾಣುತ್ತಿತ್ತು ಅಂದರೆ ನೀವೇ ತಿಳ್ಕೊಳಿ ಎಷ್ಟು ಕೆಂಪಾಗಿರಬಹುದು ಎಂದು!] ಹಾಗೂ ಅವರು ಸಾವರಿಸಿಕೊಂಡು ಮಾತನ್ನು ತಿದ್ದಿಕೊಟ್ಟರು. ದುಶ್ಯಾಸನ ಸೀರೆ ಎಳೆಯುತ್ತಲೇ ಇದ್ದ. ಕೃಷ್ಣ ಬರಬೇಕಾಗಿತ್ತು. ಬಂದಿರಲಿಲ್ಲ. ಯಾರೋ ಕ್ರಿಷ್ಣನ ಪಾತ್ರ ಮಾಡಿದ ಗಂಗಹನುಮಯ್ಯ[ನಿವೃತ್ತ ಬಿ.ಎಸ್.ಎನ್.ಎಲ್ ವ್ಯವಸ್ಥಾಪಕರು]ರವರಿಗೆ ಭೇದಿ ಶುರುವಾಗಿದೆ ಅದಕ್ಕೇ ಅವರು ಹತ್ತಾರುಸಲ ಭೇದಿ ಮಾಡೀ ಮಡೀ ಸೋತು ಈಗ ಡಾಕ್ಟರನ್ನು ಕಾಣಲು ಹೋಗಿದ್ದಾರೆ ಎಂಬ ಸುದ್ದಿಯನ್ನು ತಂದರು! ನಿರ್ದೇಶಕರ ಫಜೀತಿ ಬೇಕೆ !

ದುಶ್ಯಾಸನ ನಿಲ್ಲಿಸಲೇ ಇಲ್ಲ, ಸೀರೆಯನ್ನು ಎಳೆಯುತ್ತಲೇ ಇದ್ದ! ಬಣ್ಣ ಬಣ್ಣದ ಸೀರೆಗಳೈದಾರನ್ನು ನಿರ್ದೇಶಕರು ದ್ರೌಪದಿ ಪಾತ್ರಧಾರಿಗೆ ಉಡಿಸಿದ್ದರು. ಎಲ್ಲವೂ ಮುಗಿಯುತ್ತಿದ್ದರೂ ಕೃಷ್ಣ ಬರಲಿಲ್ಲ. ವಿಷಯ ಗೊತ್ತಾಯಿತು.
["ರುಖಾವಟ್ ಕೇಲಿಯೇ ಖೇದ್ ಹೈ ಕೇವಲ್ ಆಪತ್ಕಾಲಿಕ ಸೇವಾ ಯೇಹಿ ಅಭೀ ನಹೀ ಮಿಲ್ಸಕ್ತಾಹೈ " [ಬಿ.ಎಸ್.ಎನ್.ಎಲ್]]

ದ್ರೌಪದಿ ಪಾತ್ರ ಮಾಡಿದ ಚಿಕ್ಕಹನುಮಂತರಾಯಪ್ಪ ಅಲ್ಲಲ್ಲಿ ಓಡಾಡುವಾಗ ದುಶ್ಯಾಸನನ ಪಾತ್ರ ಮಾಡಿದ ಮಾಡಿದ ದಫೇದಾರ್ ತಿಮ್ಮೇಗೌಡರ ಮದುವೆಗೆ ಬೆಳೆದುನಿಂತ ಮಗಳನ್ನು ಆಗಾಗ ಚುಡಾಯಿಸುತ್ತಿದ್ದ. ಸಮಯ ಕಾಯುತ್ತಿದ್ದ ತಿಮ್ಮೇಗೌಡರು ಇದೇ ಸರಿಯಾದ ಸಮಯವೇಂದು ತಿಳಿದು ಎಲ್ಲಾ ಸೀರೇಗಳನ್ನೂ ದರದರದರನೇ ಎಳೆದು ಬಿಸಾಕಿ ಬರೇ ಪಟ್ಟಾಪಟ್ಟಿ ಚೆಡ್ಡಿಯೊಂದನ್ನು ಬಿಟ್ಟು ಎಲ್ಲವನ್ನೂ ಕಿತ್ತೂ ಹರಿದೂ ಹಾಕಿಬಿಟ್ಟರು ಮಾತ್ರವಲ್ಲ

" ನನ್ಮಗ್ನೇ ನನ್ ಮಗ್ಳ ಸುದ್ದೀಗ್ ಬತ್ತೀಯಾ, ಆದಿಬೀದೀಲಿ ಓಗ್ವಾಗ ಬರ್ವಾಗ ಇಂದೆ ಬೀಳ್ತಿಯೇನಲೇ ಮಾಡ್ಸ್ತೀನ್ ನಿಂಗೆ ಹಿರು ................................" ಅಂತ ಅವಾಚ್ಯ ಶಬ್ಧಗಳನ್ನೆಲ್ಲ ಉಪಯೋಗಿಸಿ ಬಯ್ಯುವುದರೊಂದಿಗೆ ಚೆನ್ನಾಗಿ ನಾಲ್ಕು ಏಟನ್ನೂ ಕೊಟ್ಟರು. ಅಷ್ಟರಲ್ಲಿ ಯಾರೋ ತಪ್ಪಿಸಿದರು. ಮೂಗಿನಮೇಲೆ ಏಟು ತಿಂದ ’ದ್ರೌಪತಿ’ಯ ಮೂಗಿನಿಂದ ರಕ್ತ ಒಸರಹತ್ತಿತ್ತು. ಅವನನ್ನು ಕೂಡಲೇ ಬಣ್ಣದಮನೆಗೆ [ಡ್ರೆಸ್ಸಿಂಗ್ ರೂಮ್]ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ನೀರು ಸಿಂಪಡಿಸಿ ಅದೂ ಇದೂ ಉಪಚಾರ ಮಾಡಿದ ಮೇಲೆ ಸ್ವಲ್ಪ ಚೇತರಿಸ್ಕೊಂಡ.

ನಿರ್ದೇಶಕರು ಈ ನಡುವೆ ಎಲ್ಲೋ ಎದ್ದು ಹೋದರು. ಅವರ ಕಥೆ ಏನಾಯಿತು ಎನ್ನುವುದು ತಿಳಿಯಲೇ ಇಲ್ಲ. ನಾನೊಬ್ಬ ಮಾತ್ರ ಕಾಡಲ್ಲಿ ಹುಲಿಯನ್ನು ಕಂಡ ಮಂಗ ಮರದಮೇಲೇ ಹಾಗೆ ಹೆದರಿ ಕುಳಿತಂತೇ ಕುಳಿತೇ ಇದ್ದೆ-ಬೆಳಕಿಗಾಗಿ, ಹೊಸಗಾಳಿಗಾಗಿ, ನನ್ನ ಮೂಲ ಸಂಸ್ಕೃತಿಯನ್ನು ಮರಳಿ ಸೇರುವುದಕ್ಕಾಗಿ!