ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 21, 2010

ಎಂಥ ದಿವ್ಯ ಸ್ಪರ್ಶ

ಮಗುವಿನ ಬಗ್ಗೆ ಬರೆಯಲು ಹೊರಟೆ, ಕಾರಣ ಇಷ್ಟೇ, ಮಗನಿಗೆ ಹುಷಾರಿರದೆ ೩ ದಿನಗಳಾದವು, ವಿಪರೀತ ಜ್ವರ, ಯಾವ ಔಷಧವನ್ನೂ ಲೆಕ್ಕಿಸದ ಜ್ವರ, ಮಗುವಿನ ಮುಖದ ನಗೆ ಮಾಯವಾದಾಗ ಅದು ನಮ್ಮ ಮುಖ-ಮನಗಳ ಸಂಪೂರ್ಣ ಅಂತಃಸ್ಸತ್ವವನ್ನು ಎಳೆದು ಹಾಕಿದ ಹಾಗೇ.ಈ ಮಧ್ಯೆ ನಿನ್ನೆ ಒಂದು ಕ್ಷಣ ಆಚೆ ಬಂದು ಮಗನಕಡೆ ಹೋಗುವಷ್ಟರಲ್ಲಿ ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಕುಳಲ್ಲಿಟ್ಟ ಥರ್ಮಾಮೀಟರ್ ತೆಗೆದು ಬಾಯಲ್ಲಿ ಇಟ್ಟುಕೊಂಡು ಕಚ್ಚಿ, ಅದರ ಪಾದರಸವಿರುವ ಭಾಗ ಬಾಯಲ್ಲಿ ಒಡೆದುಹೋಯಿತು, ಪಾದರಸವೆಂಬುದು ತುಂಬಾ ವಿಷವಾದ್ದರಿಂದ ನಾವು ಸುತ್ತದ ಆಸ್ಪತ್ರೆಗಳಿಲ್ಲ, ಭಾನುವಾರವಾದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಗೊತ್ತಿರುವ ತಜ್ಞ ವೈದ್ಯರಿಲ್ಲ! ದೇವರಮೇಲೆ ಭಾರಹಾಕಿ ರಾತ್ರಿ ಕಳೆದಿದ್ದೇವೆ. ಇದರ ಬಗ್ಗೆ ಬಹಳ ಬರೆಯಲು ಇಂದು ಸಮಯವಿರದ ಕಾರಣ ತಮ್ಮಲ್ಲಿ ಕ್ಷಮೆ ಕೇಳಿ ಬರೇ ಒಂದು ಚಿಕ್ಕ ಹಾಡನ್ನು ಬರೆದಿದ್ದೇನೆ


ಎಂಥ ದಿವ್ಯ ಸ್ಪರ್ಶ

ಎಂಥ ದಿವ್ಯ ಸ್ಪರ್ಶ ನಿನದು ಮಂತ್ರ ಮುಗ್ಧ ಮಾಡಿತು !
ಬಂತು ಯಾಕೆ ತಾಪ ಜ್ವರವು ನಗುವ ನುಂಗಿ ಹಾಕಿತು?

ಕಾರಣವೇ ಇಲ್ಲ ಅದಕೆ ಬರಿದೇ ಬಂದು ನೂಕಿತು
ವಾರವಿಡೀ ನಮ್ಮ ಬದುಕು ಹೊರಳಿ ಬಾಡಿ ನರಳಿತು

ದೇವನಿತ್ತ ಶರೀರ ಪಂಚಭೂತ ಪರಿಧಿಯೋಳ್
ಭಾವದಟ್ಟ ಕಟ್ಟಳೆಗಳ ಗೂಡಿದು ವಿಶ್ರಮಿಸುವೋಲ್

ನಿನ್ನ ಮುಗುಳು ನಗೆಯು ತಂತು ಹಲವುಶಕ್ತಿ ಪೂರಕ
ಮೊನ್ನೆಯಿಂದ ನಗುವೇ ಇಲ್ಲ ಯಾವುದು ಮಾರಕ

ನಮ್ಮ ದುಃಖವ ದುಮ್ಮಾನವ ಕಳೆದೆವು ನಿನ್ನ ನೋಡುತ
ಒಮ್ಮೆ ಮತ್ತೆ ನಗೋ ಮಗುವೆ ಪುನಃ ಚೇತರಿಸುತ

9 comments:

  1. ಭಟ್ಟರೇ ,
    ನಿಮ್ಮ ದುಗುಡ ದುಮ್ಮಾನ ಬಲ್ಲೆ .ಮಕ್ಕಳಿಗೆ ಏನಾದರು ಹುಷಾರಿಲ್ಲದೆ ಹೋದರೆ ತಂದೆ -ತಾಯಿ ಕಂಗಲಾಗುವುದು ಸಹಜ .ಆದರೆ ನಿಮ್ಮ ಮಗುವಿನ ಬಗ್ಗೆ ಬರೆದದ್ದು ಓದಿ ಗಾಬರಿ ಆದೆ .ನಾನು ಕೂಡ ಒಬ್ಬ ತಾಯಿ. ಆ ನೋವು -ಸಂಕಟ - ಏನು ಅಂತ ಬಲ್ಲೆ . ನಿಮ್ಮ ಮಗು ಬೇಗ ಗುಣಮುಖ ಆಗಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ.ನಿಮ್ಮ ಭಾವಪೂರ್ಣ ಮಗುವಿನ ಪದ್ಯ ಮನ ಕಲಕಿತು.

    ReplyDelete
  2. ನಿಮ್ಮ ಭಾವ ತು೦ಬಿದ ಕವನ ಮನವನ್ನ ಕಲಕಿತು. ನಿಮ್ಮ ಮಗು ಬೇಗ ಗುಣಮುಖ ಆಗಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ.

    ReplyDelete
  3. ವಿ.ಆರ್.ಬಿ. ಯವರೆ,
    ದೇವರು ಎಲ್ಲಾ ಒಳ್ಳೇದು ಮಾಡುತ್ತಾನೆ. ನಿಮ್ಮ ದುಗುಡವನ್ನು ಸ್ನೇಹ ಪೂರ್ವಕವಾಗಿ ಹಂಚಿಕೊಂಡಿರಲ್ಲಾ ಕವನದ ಮೂಲಕ...ಮನಸು ತುಂಬಿ ಬಂದಿತು.
    ಮಗು ಬೇಗ ಗುಣಮುಖವಾಗಲಿ..ಧೈರ‍್ಯವಾಗಿರಿ. All the best.

    ReplyDelete
  4. ಆತ್ಮೀಯ ಶ್ರೀ ವಿಷ್ಣುಭಟ್,
    ನಮಸ್ತೆ,
    ನಿಮ್ಮೊಡನೆ ದೂರವಾಣಿಯಲ್ಲಿ ಮಾತನಾಡಿದ ಮೇಲೆ ಕೊಂಚ ಸಮಾಧಾನವಾಗಿದೆ.ಅಂತೂ ನಿಮ್ಮ ಮಗನಿಗೆ ಸರ್ವ ಶಕ್ತನಾದ ಭಗವಂತನು ಧೀರ್ಘಾಯುಷ್ಯವನ್ನು ಕೊಟ್ಟು ನಿಮ್ಮ ಮನೆಯು ನಗುನಗುತಾ ಇರಲಿ-ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಮಗುವಿಗೆ ಆರೋಗ್ಯ ಸರಿಯಿಲ್ಲದಾಗಲೂ ನಮ್ಮ ಕರೆಯನ್ನು ಮನ್ನಿಸಿ ನಮಗೆ ನಿಮ್ಮ ಕಷ್ಟವನ್ನು ತಿಳಿಸದೆ ಸಕಾಲಕ್ಕೆ ಬಂದು ನಮ್ಮೊಡನಿದ್ದು ವೇದಕ್ಕಾಗಿ ಆಂಭವಾಗಲಿರುವ ವೆಬ್ ಸೈಟ್ ಬಗ್ಗೆ ನಿಮ್ಮ ಸಲಹೆ ಸಹಕಾರವನ್ನು ನೀಡಿದಿರಿ.ನಿಮಗೆ ವೇದಸುಧೆ ಬಳಗಗದ ಪರವಾಗಿ ಕೃತಜ್ಞತೆಗಳನ್ನು ತಿಳಿಸುವೆ.ಎಂತಾ ಸಮಯದಲ್ಲೂ ಬಿಡದ ನಮ್ಮ ಸಾಹಿತ್ಯ ಪ್ರೇಮಕ್ಕೆ ಶರಣು.

    ReplyDelete
  5. ಭಟ್ಟರೇ,
    ನಿಮ್ಮ ಮಗುವಿನ ಜ್ವರ ಬೇಗ ಗುಣಮುಖ ವಾಗಲಿ ಎಂದು ಹಾರೈಸುವೆ
    ಮಕ್ಕಳಿಗೆ ಅರೋಗ್ಯ ಸರಿ ಇಲ್ಲದಿರೆ ತಂದೆ ತಾಯಿಗಳಿಗೆ ತುಂಬಾ ನೋವು
    ಒಳ್ಳೆಯದಾಗಲಿ

    ReplyDelete
  6. ಭಟ್ಟರೆ,
    ನಿಮ್ಮ ಮಗುವಿಗೆ ಬೇಗನೇ ಗುಣವಾಗಲಿ, ನಿಮ್ಮ ದುಗುಡ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ReplyDelete
  7. ಎಲ್ಲರಿಗೂ ನಮಸ್ಕಾರಗಳು, ನಿಮ್ಮ ಈ ಸಂದೇಶಗಳಿಗೆ ಮನಸೋತೆ, ನಾನು ಮೊದಲೇ ಹೇಳಿದ ಹಾಗೇ ಕವಿ-ಕಾವ್ಯ ಕಲ್ಪನೆ ಬಹುಶಃ ಕವಿಯ ನೋವಿನಲ್ಲೇ ಹುಟ್ಟುವುದು ಹೆಚ್ಚು, ತನ್ನ ನೋವಲ್ಲಿ ಜಗದ ನಲಿವನ್ನು ಕಾಣುವುದು ಕವಿಯ ಆಂತರ್ಯ, ಅಂತಿದ್ದರೆ ಮಾತ್ರ ಆತ ಕವಿ-ಸಾಹಿತಿ. ಬರೆಯಲಾರದ ನನ್ನ ಕ್ಷಣದಲ್ಲೂ ನಮ್ಮೆಲ್ಲ ಓದುಗರು ಬರೇ ಓದುಗರಲ್ಲ. ಅವರು ನನ್ನ ಕುಟುಂಬ, ನನ್ನ ಆತ್ಮೀಯರು, ನನ್ನ ಬಳಗ, ಪರಸ್ಪರ ಸ್ಪಂದಿಸಿ ಬದುಕುವ ಜನ, ಬಹಳ ವಿಕಸಿತ ಮನವುಳ್ಳ ಸ್ನೇಹಿತರು. ಇದನ್ನು ನೆಚ್ಚಿ ಕೇವಲ ನಾಲ್ಕಾದರೂ ಸಾಲು ನಾನು ಏನನ್ನು ಹೇಳಬಾರದು ಎಂದುಕೊಂಡಿದ್ದೆನೋ ಅದನ್ನೇ ತಡೆಯಲಾರದೆ ನಿಮ್ಮೆಲ್ಲರಲ್ಲಿ ಹಂಚಿಕೊಂಡಿದ್ದೇನೆ. ನಾಡಿದ್ದು ೨೫ ರಿಂದ ೩೦ ರವರೆಗೆ ನಾನು ವೃತಸ್ಥನಾಗಿ ಇರಬೇಕಾದ ಪ್ರಮೇಯ ಇತ್ತು-ಇದೆ. ಹೀಗಾಗಿ ಬೆಂಗಳೂರಿಂದ ನಮ್ಮೂರು ಹೊನ್ನಾವರದಲ್ಲಿ ದೈವೀ ಕಾರ್ಯದ ನಿಮಿತ್ತ ಹೋಗಿಬರಬೇಕಾದ ಅಗತ್ಯತೆ ಇದೆ--ಆ ದಿನಗಳಲ್ಲಿ ಬೇಸರಿಸದೆ ತಾವೆಲ್ಲ ನನ್ನ ಹಳೆಯ ಕೃತಿಗಳನ್ನು ತೆಗೆದು ಸ್ವಲ್ಪ ಓದುವಿರಾಗಿ ತಮ್ಮಲ್ಲಿ ಕಳಕಳಿಯ ವಿನಂತಿ. ಮಗನಿಗೆ ಸದ್ಯಕ್ಕೆ ವೈರಾಣು ಜ್ವರ- ಬೇದಿ ಬಿಟ್ಟರೆ ಪಾದರಸದ ಪರಿಣಾಮ ವ್ಯತಿರಿಕ್ತವಾದ ಹಾಗೆ ಕಂಡುಬಂದಿಲ್ಲ, ಅವನಿಗೆ ಹುಷಾರಾದರೇ ನಾವು ಹೊರಡಲು ಸಾಧ್ಯವೇ ಹೊರತು ತಡವಾಗಿ ವಾಸಿಯಾದರೆ ನಾವದನ್ನು ಅನುಸರಿಸಿ ಹೋಗಲು ಸಾಧ್ಯವಾಗುವುದಿಲ್ಲ. ನಮ್ಮೆಲ್ಲ ಇತಿಮಿತಿಗಳು ಸೂತ್ರಧಾರ ಭಗವಂತನ ಅಧೀನದಲ್ಲಿವೆ ಎಂಬುದು ನನಗಂತೂ ಬಹಳ ಹಿಂದೆಯೇ ಮನದಟ್ಟಾದ ವಿಷಯ, ಹೀಗಾಗಿ ನಾವೇನು ಮಾಡಬೇಕು-ಹೇಗಿರಬೇಕು ಎಂಬುದನ್ನು ದೈವಸಂಕಲ್ಪಕ್ಕೆ ಬಿಟ್ಟಿದ್ದೇನೆ.

    ಮನುಷ್ಯ ಕರ್ತವ್ಯ ಪಾಲನೆಯಲ್ಲಿ ತನ್ನ ವೈಯಕ್ತಿಕಗಳನ್ನೂ ಬದಿಗಿಟ್ಟು ಮುನ್ನಡೆಯಬೇಕೆಂಬುದು ನನ್ನ ಅಭಿಪ್ರಾಯ.ಬರೆದದ್ದನ್ನೇ ಬದುಕುವ, ಬದುಕಿದ್ದನ್ನೇ ಬರೆಯುವ ಸಾಲಿಗೆ ನನ್ನ ಜೀವನ ಸೇರಲಿ ಎಂಬುದು ನನ್ನ ಅಭೀಷ್ಟ. ಅನೇಕರು ದೂರವಾಣಿ ಮೂಲಕ ಮಾತಾಡಿದರು, ದೂರವಾಣಿ ಗೊತ್ತಿರದವರು ಸಾಧ್ಯವಾದ ಮಾರ್ಗದಲ್ಲಿ ಸಂಪರ್ಕಿಸಲು ಹೊರಟರು. ನಿಮ್ಮಂತಹ ರತ್ನಗಳು ನಮ್ಮ ಓದುಗ ಮಿತ್ರರು ಎಂಬುದನ್ನು ಸ್ಮರಿಸಲು ಮರೆಯುವುದಿಲ್ಲ. ಹರಿಹರಪುರ ಶ್ರೀಧರರವರು ತಡೆಯಲಾರದೆ ದೂರವಾಣಿ ಕರೆಮಾಡಿದರು,ಕೇವಲ ಕೆಲದಿನಗಳಲ್ಲೇ ಹತ್ತಿರಕ್ಕೆ -ಎತ್ತರಕ್ಕೆ ಬೆಳೆದ ಆತ್ಮೀಯತೆಗೆ ಹೇಳಲು ಶಬ್ಧಗಳಿಲ್ಲ ! ಶಶಿಯವರು, ಸೀತಾರಾಮ್ ಅವರು,ಸುಬ್ರಹ್ಮಣ್ಯರು, ಗುರುಮೂರ್ತಿಯವರು ಮತ್ತು ಸುನಾಥರು ಎಲ್ಲರೂ ನನ್ನಿಂದ ಈ ದಿನ ನನ್ನ ಈ ಹೇಳಿಕೆಯಿಂದ ತೊಂದರೆ-ಗಲಿಬಿಲಿ ಅನುಭವಿಸಿದಿರಿ ಎಂದು ಬೇರೆ ಹೇಳಬೇಕಿಲ್ಲ, ಇದು ನಮ್ಮ ಸಾತ್ವಿಕ ಅಂತಃಕರಣದ ಅನಿಸಿಕೆ, ನಾವೆಲ್ಲೋ ಇದ್ದೆವು, ಬಂದಿಲ್ಲಿ ಬ್ಲಾಗ್ ನಲ್ಲಿ ಸೇರಿದೆವು, ಸ್ನೇಹಿತರಾದೆವು, ಸಾಹಿತ್ಯದ ಜೊತೆ ಜೊತೆಗೆ ಇದು ನಮ್ಮೆಲ್ಲರ ಸಂಪರ್ಕ ಸೇತುವಾಯಿತು! ನಿಮ್ಮೆಲ್ಲರ ನಿರ್ವ್ಯಾಜ ಸ್ನೇಹ ಸಂಪಾದಿಸಿದ ನನಗೆ ಬೇರೆ ಸಂಪತ್ತಿನ ಹಂಗು ಬೇಕೇಕೆ ? ನನ್ನೊಡನೆ ನನ್ನ ಕಷ್ಟ-ಸುಖಕ್ಕಾದ ನಿಮ್ಮೆಲ್ಲರಿಗೆ ಧನ್ಯವಾದಗಳು, ಮತ್ತೆ ಬರೆಯುತ್ತೇನೆ, ಹೆಚ್ಚಿನ ರೀತಿಯಲ್ಲಿ, ದಯವಿಟ್ಟು ನನ್ನ ಅನಿವಾರ್ಯತೆಯಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕ ಕೃತಿ ಕೊಡಲಾಗದ್ದಕ್ಕೆ ಕ್ಷಮೆಯಿರಲಿ,

    " ನನಗೂ ನಿಮಗೂ ಕನ್ನಡವೇ ಮೇಲ್ಪಂಕ್ತಿ .
    ನನಗೂ ನಿಮಗೂ ಕನ್ನಡದಲೇ ಮುಕ್ತಿ " --ಎಂಬ ಕವಿಯ ಉಕ್ತಿಯೊಂದಿಗೆ ನಿಮಗೆಲ್ಲ ಸದಾ ಋಣಿಯಾಗಿದ್ದೇನೆ. ಎಲ್ಲಾ ಓದುಗ ಮಿತ್ರರಿಗೂ ನಮನಗಳು.

    ReplyDelete
  8. ಭಟ್ಟರೇ ,ಗಾಭರಿಯಾಗಬೇಡಿ .ವೈದ್ಯನಾಗಿ ,ಬೆಳೆದ ಎರಡು ಮಕ್ಕಳ ತಂದೆಯಾಗಿ ಈ ಮಾತು ಹೇಳುತ್ತಿದ್ದೇನೆ .ಮಕ್ಕಳಿಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಸ್ .ಮಗನಿಗೆ ಇಪ್ಪತೆಂಟು .ಮಗಳಿಗೆ ಇಪ್ಪತ್ತನಾಲಕ್ಕು.ಇಬ್ಬರಿಗೂ ಅದೆಷ್ಟು ಸಲ ಹುಷಾರು ತಪ್ಪಿ ಅದೆಷ್ಟು ನರಳಿ ಎಸ್ಷ್ಟುರಾತ್ರಿ ಗಳನ್ನು
    ನಿದ್ರೆ ಇಲ್ಲದೆ ಕಳೆದೆವೋ ಗೊತ್ತಿಲ್ಲ.ಇದನ್ನು ಎಲ್ಲಾ ತಂದೆ ತಾಯಂದಿರೂ ಅನುಭವಿಸಲೇ ಬೇಕು ಧೈರ್ಯ ವಾಗಿರಿ .ಮಗು ಮತ್ತೆ ಮೊದಲಿನಂತೆ
    ನಗುತ್ತಾ ನಿಮ್ಮನ್ನೂ ನಗಿಸುತ್ತದೆ .ಮಗುವಿಗೆ ಬೇಗ ಗುಣವಾಗಲಿ ಎಂದು ಹಾರೈಸುತ್ತೇನೆ .

    ReplyDelete
  9. ಡಾ| ಕೃಷ್ಣಮೂರ್ತಿಯವರೇ, ತಾವು ವೈದ್ಯರಾಗಿದ್ದೂ ತಮ್ಮ ಸಾಹಿತ್ಯಾಸಕ್ತಿ ಗಮನಿಸಿದ್ದೇನೆ, ಬಂದು ನಮಗೆ ದೈರ್ಯ ಹೇಳಿದ್ದೀರಿ, ನನಗೆ ಜ್ವರಕ್ಕಿಂತ ಪಾದರಸದ ಪರಿಣಾಮದ ಚಿಂತೆ ಬಹಳವಾಗಿತ್ತು, ಇಲ್ಲವೆಂದರೆ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸ್ಕೊಳ್ಳುವ ಪ್ರಮೇಯ ಇರುತ್ತಿರಲಿಲ್ಲ, ತಮ್ಮ ಸಹಾನುಭ್ಹೂತಿ ಮತ್ತು ಅನುಕಂಪಕ್ಕೆ ತುಂಬಾ ಆಭಾರಿ.

    ReplyDelete