ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 13, 2010

ಶ್ರೀರಾಮ ನಿರ್ಯಾಣ

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೆ ನೈವ ಜಾನೇ ನ ಜಾನೇ ||

ಪುಣ್ಯಪುರುಷರನ್ನು ಕಳೆದುಕೊಳ್ಳಲು ಮನಸ್ಸು ತಯಾರಾಗುವುದಿಲ್ಲ. ಅವರು ನಮ್ಮೊಟ್ಟಿಗೆ ಶಾಶ್ವತವಾಗಿ ಇದ್ದುಬಿಡಲಿ ಎಂಬ ಬಯಕೆ ನಮ್ಮದು. ಆದರೆ ಕಾಲನಿಗೆ ಹಾಗಲ್ಲ. ಕಾಲಚಕ್ರ ತಿರುಗುವ ಗತಿಯಲ್ಲಿ ಅದು ದಿವ್ಯ ಪುರುಷರನ್ನೂ ಇಲ್ಲಿ ಬಹಳ ಸಮಯ ಇರಗೊಡುವುದಿಲ್ಲ. ಮಹಾತ್ಮರ ನಿರ್ಯಾಣಗಳನ್ನು ಅವಲೋಕಿಸುವಾಗ ಹೃದಯವಂತರಿಗೆ ಕಣ್ಣಕೊನೆಯಲ್ಲಿ ಹನಿಗಳೆರಡು ಬಾರದೇ ಇರವು. ಭರತಖಂಡ ಕಂಡ ಅಂತಹ ಮಹಾಮಹಿಮನ ಅವತಾರ ಮುಕ್ತಾಯವನ್ನು ಅನಿವಾರ್ಯವಾದರೂ ನಾವು ಒಪ್ಪಿಕೊಳ್ಳಬೇಕಷ್ಟೇ. ಪರಮಾತ್ಮ ಮಾಹವಿಷ್ಣುವಿನ ಪೂರ್ಣಾವತಾರಗಳಲ್ಲಿ ಕೋಸಲಾಧಿಪ ಸೂರ್ಯ ವಂಶಜ ಶ್ರೀರಾಮಚಂದ್ರನ ರೂಪ ಕೂಡ ಒಂದು. ಅವತಾರಗಳಲ್ಲೇ ಶ್ರೇಷ್ಠ, ಎಂದಿಗೂ ನೆನಪಿಡಬಹುದಾದ ಅವತಾರಗಳಾದ ರಾಮಾವತಾರ ಮತ್ತು ಕೃಷ್ಣಾವತಾರಗಳು ಅತೀ ಪ್ರಾಮುಖ್ಯತೆ ಪಡೆದವುಗಳು. ಇವುಗಳಲ್ಲಿ ರೂಪ ಭೇದಗಳಿದ್ದರೂ ಯಾವುದೂ ಮೇಲೆ ಅಥವಾ ಕೆಳಗೆ ಎಂಬ ಯೋಚನೆ ಸಲ್ಲ. ಮಾನವ ಬದುಕಿಗೆ ಯಥಾ ಯೋಗ್ಯವಾದ ದಾರ್ಶನಿಕರಾಗಿ, ತಮ್ಮ ಜೀವಿತವನ್ನೇ ನಮಗಾಗಿ ಧಾರೆ ಎರೆದುಕೊಟ್ಟು ಹೋದ ಮಹಾನ್ ವ್ಯಕ್ತಿಗಳು ಶ್ರೀರಾಮ ಮತ್ತು ಶ್ರೀಕೃಷ್ಣ. ಈ ವ್ಯಕ್ತಿಗಳ ನೆನಪು ಬಂದಾಗ ಮನಸ್ಸು ಏನನ್ನೋ ಕಳಕೊಂಡಂತೆ ಒಳಗೊಳಗೇ ವಿಲವಿಲನೆ ಒದ್ದಾಡುತ್ತದೆ,ಚಡಪಡಿಸುತ್ತದೆ, ಕಾಣದ ಆ ಇಬ್ಬರನ್ನು ಎಲ್ಲೋ ಹುಡುಕಲು ತೊಡಗುತ್ತದೆ. ಅವರು ದೇವರು ಎನ್ನುವುದಕ್ಕಿಂತ ದಾರ್ಶನಿಕರು ಎಂದು ನೆನೆದು ನಮ್ಮಂತೆ ಮನುಷ್ಯರಾಗಿ ಪರೋಪಕಾರಿಯಾಗಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ನಮಗೆ ಅವರ ಒಂದಂಶವೂ ಸಾಧ್ಯವಿಲ್ಲವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಕೊನೇಪಕ್ಷ ನೆನೆಸಿ ಕೊಳ್ಳುವುದು ನಮ್ಮ ಕರ್ತವ್ಯವಷ್ಟೇ ?

ಶ್ರೀರಾಮನವಮಿಯ ಸುತ್ತ ಹೆಣೆದ ವಿಷಯ ಸಂಚಾಲಿತ ಈ ಕಂತಿನಲ್ಲಿ ರಾಮ ನಿರ್ಯಾಣವನ್ನು ಬರೆಯುವಾಗ ಮನಸ್ಸು ಅದುರಿತು, ಚದುರಿತು, ಬರೆಯದೇ ಆಚೆ ಓಡಿ ಹೋಗುವ ಸ್ಥಿತಿಗೆ ಬರುತ್ತಿತ್ತು. ಯಾಕೆಂದರೆ ರಾಮ ಎಲ್ಲೂ ಹೋಗಿಲ್ಲ, ರಾಮ ಗುಡಿಗಳಲ್ಲಿಲ್ಲ, ರಾಮ ನಮ್ಮಲ್ಲೇ ನೆಲೆಸಿದ್ದಾನೆ, ಅಂತಹ ರಾಮನ ಅವಸಾನವಾಯ್ತು ಎಂದು ಬರೆಯಲು ಮನಸ್ಸು ತಯಾರಾಗುತ್ತಲೇ ಇರಲಿಲ್ಲ. ಕಣ್ಣ ಹನಿಗಳೊಂದಿಗೆ ಕೊನೆಗೂ ಮನಸ್ಸನ್ನು ಕಟ್ಟಿಹಾಕಿ ಬರೆದ ಕಥನ-ಕಾವ್ಯ ಈ ಶ್ರೀರಾಮ ನಿರ್ಯಾಣ.

ಸತ್ಪ್ರಜೆಗಳಿಂದ ತುಂಬಿ, ರಾಮರಾಜ್ಯವೆಂದೇ ಹೆಸರು ಪಡೆದ ಅಯೋಧ್ಯೆ ಎಂದಿನಂತೆ ರಾಮನ ರಾಜ್ಯಭಾರದಲ್ಲಿ ಕಂಗೊಳಿಸುತ್ತಿತ್ತು. ಶ್ರೀರಾಮ ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತಿರಲು ಕಾಲನ ಆಗಮನವಾಗಿ ಆತ ನಡೆಸಿದ ಮಾತುಕತೆಯ ಫಲಶ್ರುತಿಗೆ ಮೊದಲನೆಯ ಆಹುತಿಯಾಗಿ ಶ್ರೀ ಲಕ್ಷ್ಮಣನ ದೇಹಾಂತ್ಯವಾಗುತ್ತದೆ. ಸರಯೂ ನದಿಯಲ್ಲಿ ಮುಳುಗಿ ಸರ್ಪದಂತೆ ಹೊರಳಿ ಹೊರಳಿ ತನ್ನ ದೆಹಾರ್ಪಣೆಗೈದ ಲಕ್ಷ್ಮಣ ವೈಕುಂಠದಲ್ಲಿ ಮಹಾವಿಷ್ಣುವಿನ ಹಾಸಿಗೆಯಾಗಿರುವ ವಾಸುಕಿಯೇ ಆತನ ರೂಪದಲ್ಲಿ ಭುವಿಗೆ ಬಂದಿದ್ದ ನೆಂಬ ಸಂದೇಶ ನಮಗೆ ಸಿಗುತ್ತದೆ. ಅಂತೆಯೇ ಸೀತಾಮಾತೆ ಕೂಡ ಶೀ ಮಹಾಲಕ್ಷ್ಮಿಯ ಭುವಿಯ ಅವತಾರ ! ಸಾಕ್ಷಾತ್ ಮಹಾವಿಷ್ಣು ರಾಮನಾಗಿ ಭೂಮಿಗೆ ಬಂದಾಗ ಅವರೆಲ್ಲ ಅವನ ಸಂಗಡಿಗರಾಗಿ ಬಂದರು. ಇದನ್ನೇ ಕಾಲ ಹೇಳಲು ಬಂದಿದ್ದ.
" ಶ್ರೀರಾಮ ಬಂದು ಬಹಳ ಕಾಲ ಸಂದುಹೋಯಿತು, ಇಲ್ಲೇ ಈ ಭೂಮಿಯಲ್ಲಿ ಇದ್ದುಬಿಟ್ಟೆಯಲ್ಲ, ನೀನು ವೈಕುಂಠದ ಶ್ರೀ ಮಹಾವಿಷ್ಣು ಎಂಬುದನ್ನು ನಿನಗೇ ನೆನಪಿಸಲೂ, ನಿನ್ನನ್ನು ಅಲ್ಲಿಗೆ ಪುನಃ ಆಹ್ವಾನಿಸಲೂ ಬಂದಿದ್ದೇನೆ, ಇನ್ನು ಇಲ್ಲಿಯ ರಾಜ್ಯಭಾರ ಸಾಕು, ತಿಳಿದು ಸಮಯನೋಡಿ ಶೀಘ್ರ ನಿನ್ನ ಅವತಾರ ಸಮಾಪ್ತಿಗೊಳಿಸು" --ಕಾಲಪುರುಷ ಆದೇಶಿಸಿದ್ದಾನೆ, ಎಚ್ಚರಿಸಿದ್ದಾನೆ.

ರಾಮ ಎಲ್ಲವನ್ನೂ ಅವಲೋಕಿಸಿದ್ದಾನೆ. ಪ್ರಜೆಗಳ ಹಿತಕ್ಕಾಗಿಯೇ ತನ್ನೆಲ್ಲ ಜೀವಿತವನ್ನು ಕಳೆದಿದ್ದಾನೆ. ರಾಮನಿಗೆ ದಿನವಹಿ ಪ್ರಜೆಗಳಬಗ್ಗೇ ತುಡಿತ ಬಿಟ್ಟರೆ ತನ್ನ ವೈಯಕ್ತಿಕ ಬೇಕು-ಬೇಡಗಳನ್ನು ಎಂದೂ ಆತ ಲಕ್ಷ್ಯಿಸಲಿಲ್ಲ. ಅಗ್ನಿದೇವನ ಅನುಗ್ರಹದಿಂದ ಪಾಯಸದ ಪಾಲನ್ನು ಉಂಡ ತನ್ನ ತಾಯಿ ಕೌಸಲ್ಯೆಯ ಉದರದಲ್ಲಿ ಜನಿಸಿದ ಕೌಸಲ್ಯಾರಾಮ. ಋಷಿಗಳು ನಿರ್ಧರಿಸಿ ತನಗೆ ಈ ಹೆಸರು ಕೊಟ್ಟರು. ಬಾಲ್ಯದಲ್ಲಿ ವಿದ್ಯಾಭ್ಯಾಸದ ಹಂತ ಬಂತು. ಮಹರ್ಷಿ ವಿಶ್ವಾಮಿತ್ರರು ಗುರುವಾಗಿ ಆಸ್ಥಾನಕ್ಕೆ ಬಂದು ತನ್ನನ್ನೂ ತಮ್ಮ ಲಕ್ಷ್ಮಣನನ್ನೂ ಕಾಡಿಗೆ ಕರೆದೊಯ್ದರು. ಅಲ್ಲಿ ನಮಗೆ ಬಿಲ್ಲು ವಿದ್ಯೆ ಹೇಳಿಕೊಟ್ಟರು, ಅದಕ್ಕೆ ಪೂರಕ ಮಂತ್ರೋಪದೇಶ ನೀಡಿದರು. ತಂದೆ ದಶರಥ ಚಿಕ್ಕವರೆಂಬ ಕಾರಣದಿಂದ ಕಾಡಿಗೆ ಕಳಿಸಲು ಹಿಂದೆ ಮುಂದೆ ನೋಡಿದಾಗ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತು ಕಾಡಿಗೆ ಕರೆದೊಯ್ದು ಬದುಕಿನ ಮಜಲುಗಳನ್ನು ತೋರಿಸುತ್ತ ನಡೆದರು.ಪೂಜ್ಯರಾದ ವಿಶ್ವಾಮಿತ್ರರು ಬರದೇ ಇದ್ದರೆ ಅಂದು ತಮಗೆ ಇಷ್ಟೊಂದು ಮನೋ ದಾರ್ಷ್ಟ್ಯತೆ ಬರುತ್ತಿರಲಿಲ್ಲ. ತಾಟಕೆಯನ್ನು ವಧಿಸಿ,ಸುಭಾಹು-ಮಾರೀಚರನ್ನು ಓಡಿಸಿ ಯಜ್ಞಪೂರ್ತಿಗೆ ಕಾವಲುನಿಂತು ಹಲವನ್ನು ಗುರುಮುಖದಿಂದ ಕಲಿತೆವು. ಪ್ರಾಯ ಪ್ರಭುದ್ಧರಾದಾಗ ಮತ್ತೆ ಋಷಿಗಳು ಹೇಳಿದ ಪ್ರಕಾರ ಶಿವಧನುಸ್ಸನ್ನು ಮುರಿದಿದ್ದಾಯ್ತು, ಸೀತೆಯನ್ನು ಮಡದಿಯಾಗಿ ಪಡೆದಿದ್ದಾಯ್ತು.

ರಾಜ್ಯಭಾರ ನಡೆಸಲು ಯುವರಾಜ ಪಟ್ಟಕ್ಕೆ ಮಂಥರೆಯ ಕುಹಕ ಉಪದೇಶದಿಂದ ಚಿಕ್ಕಮ್ಮ ಕೈಕೇಯಿ ಜಗಳಕ್ಕೆ ನಿಂತಾಗ ತಾಯಿ-ತಂದೆಯ ಮೂಕ ಆಜ್ಞೆಗೆ ಕಟ್ಟುಬಿದ್ದು ಪುನಃ ೧೪ ವರುಷ ವನವಾಸಕ್ಕೆ ತೆರಳಿದ್ದಾಯ್ತು ಆ ದಾಶರಥಿರಾಮ. ಕಾಡಿನಲ್ಲೂ ತಮಗೆ ತಮ್ಮಪಾಡಿಗೆ ಇರಲು ರಾಕ್ಷಸೀ ಪ್ರವೃತ್ತಿಯವರು ಬಿಡಲಿಲ್ಲ. ತಮ್ಮ ಭರತ ತಮ್ಮನ್ನು ಹುಡುಕುತ್ತ ಪಿತೃವಿಯೋಗದ ಸುದ್ದಿ ತಂದ,ಏನು ಮಾಡೋಣ, ವಿಧಿ ಕೊನೆಯ ಕ್ಷಣದಲ್ಲೂ ತಂದೆಯನ್ನು ನೋಡಲು ಅವಕಾಶಕೊಡಲಿಲ್ಲ. ಅತ್ತ ಕಾಡಲ್ಲಿ ಅಲ್ಲೊಬ್ಬಳು ಶೂರ್ಪನಖಿ ಅಡ್ಡ ಬಂದಳು, ಅವಳನ್ನು ಮಟ್ಟಹಾಕಲು ಹೋಗಿ ಗೊತ್ತಿಲ್ಲದ ರಾವಣನನ್ನು ಎದುರುಹಾಕಿಕೊಳ್ಳುವ ಪ್ರಮೇಯ ಬಂತು! ಬಂಗಾರದ ಜಿಂಕೆಯ ಆಮಿಷ ತೋರಿಸಿ ತನ್ನ ಸೆಳೆದು, ತನ್ನ ಅನಿವಾರ್ಯತೆಯಲ್ಲಿ ಸೀತೆಯನ್ನು ರಾವಣ ಕದ್ದೊಯ್ದ. ಸೀತೆಗಾಗಿ ಹುಡುಕಿ ಅಲೆದು ಬಳಲಿದೆ.ಮುಂದೆ ಸಾಗುತ್ತ ಜಟಾಯುವಿನ ಮೂಲಕ ವಿಷಯ ತಿಳಿದು ಹಾಗೇ ಹುಡುಕುವಾಗ ವಾನರ ವೀರರ ಪರಿಚಯವಾಯ್ತು. ವಾಲಿ-ಸುಗ್ರೀವ-ಹನುಮ-ಅಂಗದ ಮೊದಲಾದ ಹಲವರು ಸಿಕ್ಕರು. ನಿಸ್ಪೃಹ ಸೇವಕ ದಾಸಶ್ರೇಷ್ಠ ಹನುಮ ಜೊತೆಗೂಡಿದ, ಆತನ ಸಾಹಚರ್ಯದಿಂದಲೇ ಲಂಕೆಯ ಪತ್ತೆ, ಅಲ್ಲಿಗೆ ಗಮನ ಮತ್ತು ರಾವಣ ವಧೆ ಇವೆಲ್ಲ ನಡೆಯಿತು. ಅಂತೂ ಸೀತೆಯನ್ನು ಮರಳಿ ಪಡೆದು ರಾಜ್ಯಕ್ಕೆ ಮರಳುವಷ್ಟರಲ್ಲಿ ಎಲ್ಲಾ ಸೇರಿ ರಾಜ್ಯದ ಪಟ್ಟ ಕಟ್ಟಿ ಪಟ್ಟಾಭಿರಾಮನನ್ನಾಗಿಸಿದರು. ಮತ್ತೆ ಅಗಸನ ಮಾತಿಗೂ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಬೇಕಾದ ಪ್ರಸಂಗ ಬಂತು. ಕಾಡಲ್ಲಿ ಬಸುರಿ ಹೆಂಗಸನ್ನು ಬಿಟ್ಟುಬರುವ ಅನಿವಾರ್ಯತೆ ಬಂತು, ನಂತರ ಪುರದ ಪುಣ್ಯವೋ ತನ್ನ ಭಾಗ್ಯವೋ ಮಹರ್ಷಿ ವಾಲ್ಮೀಕಿಯ ಆಶ್ರಯ ತಮ್ಮ ಸೀತೆಗೆ ಸಿಕ್ಕು ಸುಪುತ್ರರಾದ ಲವ-ಕುಶರಿಗೆ ಒಳ್ಳೆಯ ಮುಹೂರ್ತದಲ್ಲಿ ಜನ್ಮನೀಡಿದಳು ಎಂಬುದು ವರ್ಷಗಳ ತರುವಾಯ ತಿಳಿದುಬಂತು. ಮರಳಿ ಕರೆತರಲು ಹೋದಾಗ ದುಃಖಿತ ಸೀತೆ ಜನನಿ ಭೂಮಿಯನ್ನು ಧ್ಯಾನಿಸಿ ಬಾಯ್ದೆರೆದ ಭೂಮಿಯಲ್ಲಿ ಹೊಕ್ಕು ನಮ್ಮನ್ನೆಲ್ಲ ತೊರೆದಳು.ಮಡದಿಯನ್ನು ಕಳೆದುಕೊಂಡ ರಾಮ ಯಾಕಾಗಿ ಬದುಕಬೇಕು, ಯಾವ ಮಡದಿಗಾಗಿ,ಅವಳ ರಕ್ಷಣೆಗಾಗಿ ಘನಘೋರ ಯುದ್ಧ ನಡೆಯಿತೋ ಅಂತಹ ಮಡದಿಯನ್ನೇ ಕಳೆದುಕೊಂಡು ಸೀತಾರಾಮ ಸೀತೆಯಿರದ ರಾಮನಾಗಿ ಬದುಕಿ ಏನು ಪ್ರಯೋಜನ,ಆದರೆ ಕರ್ತವ್ಯದ ಕೆರೆಯಿತ್ತು, ರಾಮ ತನಗಾಗಲ್ಲ, ಆತನೊಬ್ಬ ರಾಜ. ರಾಜಕಾರ್ಯದ ನಿಮಿತ್ತ ಆತ ಜೀವಿಸಬೇಕಾಗಿತ್ತು. ಇಂತಹ ವಿಷಮ ಸ್ಥಿತಿಗಳಲ್ಲೂ ಪರಿಸ್ಥಿಯನ್ನು ನಿಭಾಯಿಸುವ ಪಾಠಕಲಿತ-ಕಲಿಸಿದ ರಾಮ ಇಂದು ಹೊರಟು ನಿಂತಿದ್ದ!
ಕಾಲನ ಅನುಜ್ಞೆಯಂತೆ ಮರಳಿ ವೈಕುಂಠಕ್ಕೆ!

ಪ್ರೀತಿ ಪಾತ್ರರಾದ ಪ್ರಜೆಗಳ ಕಣ್ಣಲ್ಲಿ ನೀರು ಕಂಡವನಲ್ಲ ರಾಮ. ಅದನ್ನು ಕಾಣಬಯಸುವ ವ್ಯಕ್ತಿಯೂ ಅಲ್ಲ. ರಾಮನೇ ಸರ್ವಸ್ವವೆಂದು ತಿಳಿದು ಬದುಕಿದ್ದ ಪ್ರಜೆಗಳಿಗಾಗಿ ಬದುಕಿದ್ದ ರಾಜಾರಾಮ,ಆದರೂ ಇಂದು ಕರೆಯನ್ನು ಹಿಮ್ಮೆಟ್ಟಿಸುವಂತಿರಲಿಲ್ಲ.ತನ್ನ ಸ್ವಾರ್ಥಕ್ಕಾಗಿ ತಾನು ಬದುಕಿಲ್ಲ, ಸಿಂಹಾಸನಕ್ಕೆ ಅಂಟಿಕೊಂಡಿಲ್ಲ, ಬದಲು ಆಪ್ತತೆ ತುಂಬಿದ, ಮುಗ್ಧ ಪ್ರಜೆಗಳ ಪ್ರೀತಿಗಾಗಿ, ಅವರ ರಕ್ಷಣೆಗಾಗಿ, ಅವರ ಪೋಷಣೆಗಾಗಿ, ಅವರ ರಂಜನೆಗಾಗಿ, ಅವರ ಮುಖದ ಮುಗ್ಧ ನಗುವಿಗಾಗಿ, ಅವರ ಇಷ್ಟಾರ್ಥ ಸಿದ್ಧಿಗಾಗಿ, ಅವರ ಸಮಸ್ಯೆಗಳನ್ನು ಆಲೈಸಿ ಪರಿಹರಿಸಲಾಗಿ, ಅವರಿಗೊಂದು ಚಂದದ ಬಾಳ್ವೆ ಕಟ್ಟಿಕೊಡಲಾಗಿ, ಅವರ ನೆಂಟನಾಗಿ-ಭಂಟನಾಗಿ ರಾಮ ಪ್ರಜೆಗಳಿಗೆ ಮನಸೋತಿದ್ದ, ವೈಕುಂಠವನ್ನೇ ಮರೆತುಬಿಟ್ಟಿದ್ದ. ಪ್ರಜೆಗಳೂ ಅಷ್ಟೇ-- ಕಡ್ಡಿ ಅಲ್ಲಾಡಿದರೂ ರಾಮ, ಗಾಳಿಗೆ ಕಸ ತೂರಿಬಂದರೂ ರಾಮ, ನಿಂತರೂ ರಾಮ ಕುಂತರೂ ರಾಮ, ರಾಮಾವಲಂಬಿತ ಜೀವನ ಅವರದಾಗಿತ್ತು. ಏನಾದರೂ ರಾಮ ಮಾತ್ರ ತಮ್ಮನ್ನು ಬಿಟ್ಟುಕೊಡಲಾರ, ಎಂತಹ ಕ್ಷಣದಲ್ಲೂ ರಾಮನಿದ್ದಾನೆ ಎಂದೇ ಅವರು ಧೈರ್ಯದಿಂದ, ಪ್ರೀತಿಯಿಂದ,ಭಕ್ತಿಯಿಂದ ಜೀವಿಸಿದ್ದರು. ಪರಸ್ಪರ ನಿರಾತಂಕವಾಗಿ, ಸುಲಿಗೆ-ದರೋಡೆ-ಕಳ್ಳತನ-ಮೋಸ-ವಂಚನೆ ಇಲ್ಲದೇ ಪ್ರಾಮಾಣಿಕವಾಗಿ ಬದುಕು ನಡೆಸಿದ್ದರು. ಇಂತಹ ಸತ್ಪ್ರಜೆಗಳನ್ನು ಬಿಟ್ಟು ಹೊರಡಲು ರಾಮನ ಮನಸ್ಸು ಇಷ್ಟಪಟ್ಟಿರಲಿಲ್ಲ. ಆದರೂ ಇಂದು ಹೊರಟುನಿಂತಿದ್ದಾನೆ ಶ್ರೀರಾಮ. ಸ್ಥಿತಪ್ರಜ್ಞ ಋಷಿಸದೃಶ ರಾಮ ಅಳಲಾರ, ಅಳಲು ತೋಡಿಕೊಳ್ಳಲಾರ, ಹೇಳಲಾರ, ಹೇಳದೆ ಇರಲಾರ, ಆಡಲಾರ, ಅನುಭವಿಸಲಾರ. ಆತನ ಮನದಲ್ಲಿ ಉದ್ಭವಿಸಿದ ಆ ಮೂಕ ರೋದನ ಅದು ಅಸಾಧ್ಯ ವೇದನೆ. ತಣ್ಣೀರನ್ನೂ ತಣಿಸಿ ಕುಡಿ ಎಂಬ ಗಾದೆಯಂತೆ ನಿಧಾನವಾಗಿ ಪ್ರಜೆಗಳನ್ನು ಕರೆದು ತನ್ನ ನಿರ್ಯಾಣದ ನಿರ್ಧಾರವನ್ನು ಚಿಕ್ಕ ಮಕ್ಕಳಿಗೆ ಅಮ್ಮ " ಮನೆಯಲ್ಲೇ ಇರು ಇಲ್ಲೇ ವೈದ್ಯರಹತ್ತಿರ ಹೋಗಿಬರುತ್ತೇನೆ" ಎಂದು ಹೇಳಿ ಹೋಗುವಂತೆ ಹೇಳಿದ್ದಾನೆ, ನಿಧಾನ ನಿಧಾನ ನಿಧಾನ ಮಾಡುತ್ತಾ ಪುನಃ ಈ ರಾಮ ಬರುವುದಿಲ್ಲವೆಂತಲೂ ಸಾರಿಬಿಟ್ಟಿದ್ದಾನೆ. ಸಹಿಸಲು ಸಾಧ್ಯವೇ ಇಲ್ಲದ ಪ್ರಜೆಗಳು ಭೋರ್ಗರೆದು ಧುಮ್ಮಿಕ್ಕುವ ಜಲಲ ಧಾರೆಯಂತೆ ಕಣ್ಣೀರು ಹರಿಸಿದ್ದಾರೆ. ಇಂದು ಮಾತ್ರ ಆ ಕಣ್ಣೀರು ಒರೆಸುವ ಕೈ ಕೆಲಸಮಾಡುವ ಮಿತಿಯನ್ನು ಮೀರಿತ್ತು. ಆ ಸಂದರ್ಭ ರಾಮ ತನ್ನ ಬದುಕಿನ ಸಿಂಹಾವಲೋಕನ ಮಾಡಿದ್ದಾನೆ ---





ಶ್ರೀರಾಮ ನಿರ್ಯಾಣ


ಬದುಕು ಬಳ್ಳಿಯ ಹರಿವ ಕ್ಷಣವು ಬಂದಿಹುದೆನಗೆ
ಇದಕೆ ಸಂಕಟವಾಯ್ತು ಈ ಜಿಹ್ವೆಯೊಳಗೆ
ತದಕಾಡಿದರು ಸಿಗದ ಸತ್ಪ್ರಜೆಗಳಿಹ ರಾಜ್ಯ
ಅದಕಾಯ್ತು ವೇದನೆಯು ಮನದಗುಡಿಯೊಳಗೆ


ಉಂಡುಟ್ಟು ಸುಖವಾಗಿ ನಲಿವ ಪ್ರಜೆಗಳ ದಂಡು
ಕಂಡಷ್ಟೂ ಖುಷಿಯೆನಗೆ ದಿನವೂ ರಾಜ್ಯದಲಿ
ಒಂದಷ್ಟು ನಗೆಯ ಅಲೆಗಳು ಅವರ ವದನದಲಿ
ಬಂದಷ್ಟು ನಡೆವುದದು ರಾಜ್ಯ ತುಷ್ಟಿಯಲಿ


ಪುಣ್ಯ ನದಿ ಸರಯೂ ಹರಿದಿಹ ನಾಡು ಕೋಸಲೆಯು
ಗಣ್ಯ ಮನಗಳ ಇಹದ ಸ್ವರ್ಗಸಮ ಬೀಡು
ನಾಣ್ಯನಗದಾ ಚಿಂತೆ ಕಾಡದಿಹ ಸಿರಿತನವು
ವನ್ಯಸಂಪದ ತುಳುಕಿ ಹರಿದ ನಲುನಾಡು


ಮುನಿವರೇಣ್ಯರು ಹರಸಿ ನಡೆತಂದ ರಾಜ್ಯವಿದು
ಘನತೆವೆತ್ತಿಹ ದಶರಥನ ಸಂಸ್ಥಾನ
ಧನಕನಕ ಮುತ್ತು ರತ್ನವು ಹವಳ ವಜ್ರಗಳು
ಮನೆಮನೆಯ ತುಂಬಿಸಿದ ಪ್ರಜೆಗಳಾಸ್ಥಾನ


ಸೂರ್ಯವಂಶದ ಸಾಹಸಿಗಳಾಳಿದೀ ಭೂಮಿ
ಕಾರ್ಯಭಾರವು ಬೆಸೆದು ಮನದ ಮೂಸೆಯಲಿ
ಆರ್ಯ ಸಂಸ್ಕೃತಿಯಲ್ಲಿ ಮೇರುತೆರದಲಿ ಮೆರೆವ
ವೀರ್ಯವಂತರು ಬದುಕಿದೀ ದೇಶದಲ್ಲಿ


ಚಿನ್ನದಂತಹ ಮಡದಿ ಸೀತೆಗತಿಸಲು ಕೂಡ
ನನ್ನ ನೋವನು ಮರೆತೆ ರಾಜ್ಯಭಾರದಲಿ
ರನ್ನದಂತಹ ತಮ್ಮ ಲಕ್ಷ್ಮಣನ ಕಳಕೊಂಡೆ
ಇನ್ನಾಯ್ತು ವಿಧಿಯೆನಗೆ ಕಾಲರೂಪದಲಿ

Monday, April 12, 2010

ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......

ಸಾಧಿಸಲಾರದ್ದು ಅಂತ ಯಾವುದೂ ಇಲ್ಲದೇ ಹೋಗಿರುವುದು ರಾಜಕೀಯದ ನೆಂಟಸ್ತನಗಳಲ್ಲಿ ಮಾತ್ರ ! ನಾವು ಯಾರನ್ನು ಯಾವಾಗ ಹೇಗೆ ಯಾಕೆ ಬೆಂಬಲಿಸಬೇಕು ಎಂದು ತಿಳಿಯದೇ ಬೆಪ್ಪರಾಗಿ ಕೂರುವುದು ಅಲ್ಲಿ ಮಾತ್ರ, ಯಾಕೆಂದರೆ ಕಂಡ ಅಮಾವಾಸ್ಯೆ ಕಾಣುವ ಹುಣ್ಣಿಮೆಯಾಗುವುದು ಅಲ್ಲಿನ ವೈಶಿಷ್ಟ್ಯಗಳಲ್ಲೊಂದು ! ಆಮೇಲೆ

  1. ಯಾರೂ ಶಾಶ್ವತವಲ್ಲ
  2. ಆಗಿದ್ದು ಆಗಿಹೋಯಿತು ಬಿಟ್ಬಿಡಿ
  3. ನನ್ನ ತೇಜೋವಧೆಮಾಡಲು ಯಾರೋ ಹೊಂಚುಹಾಕಿದ ಕ್ರಮ
  4. ನನ್ನ ವಿರುದ್ಧ ಉದ್ದೇಶ ಪೂರಿತವಾಗಿ ಮಾಡಿದ ರಾಜಕೀಯ ಷಡ್ಯಂತ್ರ
  5. ಇರಲಿ ಬಿಡಿ ಅವರಿಗೂ ಒಂದು ಕಾಲ ಬರತ್ತೆ
  6. ಈಗ ಎಲ್ಲ ಮರೆತು ಹೊಂದಿಕೊಂಡು ಹೋಗೋಣ
  7. ನಮ್ಮ ಒಗ್ಗಟ್ಟಿನ ಪ್ರಯತ್ನ ಸಾಲಲಿಲ್ಲ
  8. ಸತ್ಯಕ್ಕೆ ದೂರವಾದ ಆಪಾದನೆ
  9. ನನ್ನ ಇಮೇಜ್ ಹಾಳುಮಾಡಲು ಆಗದವರು ಕೈಗೊಂಡ ಕ್ರಮ
  10. ನನ್ನ ಜನರಿಗಾಗಿ ನಾನು ಹಗಲಿರುಳೂ ಶ್ರಮಿಸುತ್ತೇನೆ
  11. ನನ್ನದು ಪಾರದರ್ಶಕ ನಡವಳಿಕೆ
  12. ಎಷ್ಟೇ ತೊಂದರೆ ಬರಲಿ ನಮ್ಮ ನಾಗರಿಕರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವರ ಸೇವೆ ಮಾಡುತ್ತೇನೆ
---ಇವೆಲ್ಲಾ ರಾಜಕೀಯ ಲೈಬ್ರರಿಯ ಶಬ್ಧಕೋಶದ 12 ಸ್ಯಾಂಪಲ್ ಗಳು. ನಮ್ಮಲ್ಲಿ ಯಾರಾದರೂ ರಾಜಕೀಯ ಸೇರುವವರಿದ್ದರೆ ಈ ಮೇಲಿನದು ಸೇರಿದಂತೆ ಅನೇಕ ಒಕ್ಕಣೆಗಳನ್ನು ಮತ್ತು ಅವುಗಳನ್ನು ಬಾಂಬು ಹಾಕಿದಂತೆ ಎಲ್ಲೆಲ್ಲಿ ಯಾವ್ಯಾವಾಗ ಹಾಕಬೇಕು ಎಂಬುದನ್ನು ಚೆನ್ನಾಗಿ ಚೋರಗುರುವಿನಲ್ಲಿ ಚಾಂಡಾಲ ಶಿಷ್ಯವೃತ್ತಿಯಿಂದ ಕಲಿತು, ಪಳಗಿ, ಉರುಹೊಡೆದು ನಂತರ ಒಂದು ದೊಡ್ಡ ಗಂಟನ್ನು ರೆಡಿ ಮಾಡಿಕೊಂಡು ರಾಜಕೀಯ ಪ್ರವೇಶಮಾಡಬೇಕು, ಹೇಗೆ ಭರತನಾಟ್ಯಕ್ಕೆ, ಕೂಚಿಪುಡಿ, ಕಥಕ್ ಇವಕ್ಕೆಲ್ಲ ರಂಗಪ್ರವೇಶ ಇದೆಯೋ ರಾಜಕೀಯದಲ್ಲೂ ಹಾಗೇ ಕಾರ್ಪೊರೇಟರ್ ಅಥವಾ ಪಂಚಾಯ್ತಿ ಸದಸ್ಯತ್ವದಿಂದ ವೇದಿಕೆಯಲ್ಲಿ ಪ್ರದರ್ಶನ ಆರಂಭ.

ಲಂಚಾಧಿಪ ನಮಸ್ತುಭ್ಯಂ ಪ್ರಜಾನಾಂ ಸಂಕಷ್ಟದಾಯಕಃ |
ಕೊಂಚವೂ ಬಿಡದೆ ನೆಕ್ಕುತ್ತ ಅರ್ಥ ಸಂಚಯನಂ ಕುರು ||

---ಇದು ಅವರ ಮೂಲ ಮಂತ್ರವಾಗಿರುತ್ತದೆ, ಇದನ್ನು ಉಪದೇಶವಿಲ್ಲದೇ ಹಾಗೇ ಬಳಸುವಂತಿಲ್ಲ ! ಹೀಗಾಗಿ ರಾಜಕೀಯಕ್ಕೆ ಉಪದೇಶವೂ ಬೇಕು. ಇಂತಹ ರಾಜಕೀಯದ ಹಲವು ಡೊಂಬರಾಟಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಕ್ಷಮಾಶೀಲರಾದ ನಮ್ಮ ಸಹಜ ಮನೋವೃತ್ತಿ ಎಲ್ಲವನ್ನೂ ಕ್ಷಮಿಸಿ ಸಹಿಸುತ್ತ ಖೂಳರ ಬೆಳವಣಿಗೆಗೆ ಸುಗಮ ಹಾದಿಯನ್ನು ಕಲ್ಪಿಸುತ್ತದೆ. ಸಾಲದ್ದಕ್ಕೆ ಇಂದಿನ ಹೊಸ ತಂತ್ರಜ್ಞಾನ ಪೂರಕದಷ್ಟೇ ಮಾರಕವೂ ಆಗಿರುವುದರಿಂದ ಅದನ್ನೇ ಏಟಿಗೆ ತಿರುಗೇಟಾಗಿ, ಬ್ರಹ್ಮಾಸ್ತ್ರಕ್ಕೆ ಸರ್ಪಾಸ್ತ್ರವಾಗಿ ಉಪಯೋಗಿಸುತ್ತಾ ಸಡ್ಡುಹೊಡೆದು ಎದ್ದು ನಿಲ್ಲಲು ಅವಕಾಶ ಸಿಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಕಾಣುತ್ತಿರುವ ದೃಶ್ಯಗಳಲ್ಲಿ ನನ್ನ ಫೋಟೋ ಬಳಸಿಕೊಂಡು ಅನಿಮೇಷನ್ ನಿಂದ ತಿರುಚಲಾಗಿದೆ--ತಕ್ಕಳ್ರಪ್ಪಾ ಮುಗಿದೇ ಹೋಯಿತು, ಇದೂ ಒಂದು ಬಾಂಬು! ಹೀಗೆ ವರ್ಷಗಳ ಹಿಂದೆ ಹೂತಿಟ್ಟ ಒಂದು ಬಾಂಬು ನಿನ್ನೆ ಸಿಡಿದಿದೆ ! ಮೂರು-ನಾಲ್ಕುವರ್ಷಗಳಿಂದ ನಡೆದುಕೊಂಡು ಬಂದಿದ್ದ ಕೇಸು ಪರಸ್ಪರರ ಆಪಸ್ನಾತೀ ಮಾತುಕತೆಯಿಂದ ರಾಜಿಯಾಗಿದೆ,ಕೇಸು ಖುಲಾಸೆಗೊಂಡಿದೆ ! ಇದರಲ್ಲಿ ಸೋತವರು ಪ್ರಜೆಗಳೇ ವಿನಃ ರಾಜಕೀಯವೂ ಅಲ್ಲ, ವಾದಿ-ಪ್ರತಿವಾದಿಗಳೂ ಅಲ್ಲ. ಯಾವುದನ್ನು ಸತ್ಯ ಅಂತ ನಿರ್ಧರಿಸಿ ಬೆಂಬಲಿಸಿ ಇಲ್ಲಿಯವರೆಗೆ ತಲೆಯಮೇಲೆ ಹೊತ್ತರೋ ಅದನ್ನು " ಸತ್ಯಾಸತ್ಯದ ಮಾತು ನಮಗ್ಯಾಕೆ, ಬನ್ನಿ ಹೋಗೋಣ ಸಾಕು " ಎಂಬ ರೀತಿಯಲ್ಲಿ ಒಂದೇ ನಿಮಿಷದಲ್ಲಿ ಇಬ್ಬರೂ ಸೇರಿಕೊಂಡು ಉಳಿದವರನ್ನು ಮಂಗಗಳ ಥರ ನೋಡಿ ನಗುತ್ತಿದ್ದಾರೆ ! ಎಂತಹ ವೈಪರೀತ್ಯ ನೋಡಿ ! ಇದನ್ನು ನೋಡಿದ ನಮ್ಮ ಗೀ ಗೀ ಮೇಳ ತಂಬೂರಿ ಮೀಟುತ್ತ ಹೀಗೆ ಹಾಡಿತು .........





ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......
[ ರೇಣುಕಾ ಮಹಾತ್ಮೆ-ಭಾಗ ]

ನಾವು ಬಂದೇವ ನಾವು ಬಂದೇವ ನಾವು ಬಂದೇವ ಕೇಸನ್ನು ನೋಡುದಕ್ಕ
ಮತ್ತೆ ವಾಪಸ್ ಪಡೆದು ರಾಜಿಯಾಗುದಕ್ಕ ಗೀಯ ಗೀಯ ಗಾಗೀಯ ಗೀಯ
ಗೀಯ ಗೀಯ ಗಾಗೀಯ ಗೀಯ.......


ಏನ್ರಪಾ ಎನಾತು ರಾಜೀ ಮಾಡ್ಕೊಳ್ಲಾಕ ಹತ್ತೀರಲ್ಲ ಅಂದ್ರ........ ಪೆದ್ರಾಂಗ ನಕ್ರಂತ..............
ಹಿರೀಕರು ಹೇಳ್ಯಾರಂತ .......ಎಂತಾ ನಗ್ತಾ ನಡೆದರಂತ............ ವಾರೆವ್ಹಾ ನಗ್ತಾ ನಡೆದರಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಎಂದೂ ಇಲ್ದಂತಾ ಖುಸಿ ಇಂದು ಮುಸುಡಾಗ್ ಬಂದು ನಾವು ಒಂದೇ ಎಂದರಂತ............. ಜನಾ ಕೇಳ್ರಿ ಮುಂದೆ ನಾವು ಒಂದೇ ಅಂದರಂತ........... ಯಾಕ್ರಪಾ ಏನಾತು ? ಮಠದೋರು ಹೇಳ್ಯಾರಂತ........ ಸುಮ್ನೇ ಒಂದಾಗಿ ಇರಿ ಅಂತ ಅದ್ಕೇ ಸುಮ್ನೇ ಒಂದಾಗುತಾರಂತ......... ಅದ್ಕೇ ಸುಮ್ನೇ ಒಂದಾಗುತಾರಂತಾ......... ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ಹೊನ್ನಾಳಿ ಪ್ಯಾಟ್ಯಾಗ ಪಡಗಾ ಹಿಡಿದು ಹಾನಾ ತಗೀತೀನಂತ ಕುಂತಿದ್ಳಲ್ಲ ಯವ್ವ ಆಕಿ ಕರಾಮತ್ತು ಎಲ್ಲಿಗೋತ ? .........ಸುಮ್ಕಿರಪ್ಪಾಸಿವಾ ನಿಂಗೊತ್ತಾಗಾಕಿಲ್ಲ.............. ಅವೆಲ್ಲ ಬರೇ ಡೊಂಬರಾಟ ನೋಡಂತ ಸುಮ್ಕೇ ಅದು ಡೊಂಬರಾಟ ನೋಡಂತ ................ತಾ ತಾ ತಾತಾ ಗೀಯಗೀಯ ಗಾಗೀಯ ಗೀಯ.......


ಯಪ್ಪಗ ಈಗ ಮಂಕ್ರಿಯಪ್ಪನ ಜಾಗ ಸಿಕ್ಕಾವಂತ ಬಕಾರಿ ಮಂಕ್ರಿಯಂತ
ಹಾಂಗಂದ್ರೇನಪಾ
ಸಿವಾ .........ಸಾರಾಯಿ ಹಿಡ್ಯೊದಂತ ........ಕಳ್ಳ ಭಟ್ಟಿ ನಿಲ್ಸೋದಂತ ಊರೂರು ಕೇರೀಲಿ ಅಲ್ದಾಡಿ ಸಾರಾಯಿ ನಿಲ್ಸೊದಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಯಕ್ಕನ್ನ ಕರಸ್ಕೊಂಡು ಬುದ್ಧಿ ಹೇಳಿದ್ರಂತ............. ಈಗ ಅಧಿಕಾರ ಐತಿ ನೋಡ ...........ಅದ್ಕ ಹೊಂದಾಣ್ಕಿ ಮಾತನಾಡ............... ನಿಂಗಒಳ್ಳೇದಾಗುತೈತ ............ಮತ್ತೆ ಸುಖಾ ಸಿಗುವುದೆಂತ ........ಒಹೋಹೋ ಅದ್ಕ ರಾಜಿ ಆತೇನು ? ....ಹುಂ ಮತ್ತ .............ಖುರ್ಚಿ ದುಡ್ಡು ಇರುವುದೆಂತ........ಅರಿತು ನಡೆದಾಗ ಖುಸಿಯಂತಾ ......ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ನರ್ಸಮ್ಮ ಆಚಾರಪ್ಪ ಒಂದೇ ಕಾರಲ್ಲಿ ಸದ್ಯ ಹೋಗಿಲ್ವಂತ ಮತ್ತೆ ಅದು ಮುಂದೀನ ಎಪಿಸೋಡ ಒಳ್ಳೆ ಬಣ್ಣಾದ ಎಪಿಸೋಡ ಕಣ್ಣುತಂಪಾಗೋ ಎಪಿಸೋಡ.............. ಯಾಕ್ರಪ್ಪಾ ಅಚಾರಪ್ಪಂಗ ತಡ್ಕೊಳ್ಳಾಕಾತೇನು?....ಸ್ವಲ್ಪ ತಡ್ಕೊಂಡು ಹೋದನಂತ ..ಹೆಂಗೂಗೊತ್ತಿರೋ ಮಾಲು ಅಂತ ......ರಾತ್ರಿ ಮತ್ತೆ ಸಿಗುವ ಅಂತಾ ........ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......

Sunday, April 11, 2010

ಮನದಿ ನೀರವ ಮೌನ


ಮನಸ್ಸಿನ ಮೂಲೆಯಲ್ಲಿ ಒಂದು ಕತ್ತಲ ಕೋಣೆ ಇದೆ ಅಂತ ತಿಳಿದುಕೊಳ್ಳೋಣ, ಅದರ ತುಂಬಾ ಭಾವನೆಗಳ ಹರವು. ಆಂಗ್ಲ ಭಾಷೆಯಲ್ಲಿ quickening ಅಂತಾರಲ್ಲ ಆ ಥರ ಮೊಟ್ಟೆಯ ಒಳಗೆ ಏನೋ ಅಲುಗಾಡಿದಂತೆ ಭಾಸ. ಇನ್ನೇನು ಮೊಟ್ಟೆಯೊಡೆದು ಭಾವನೆಗಳ ರೆಕ್ಕೆ-ಪುಕ್ಕ ಸಹಿತದ ಹಕ್ಕಿಗೆ ಹೊರಬರಲು ತವಕ. ಆದರೂ ಬರಲಾರದು, ಮಳೆ ಬಂದೇ ಬಿಟ್ಟಿತೇನೋ ಎಂಬ ಗುಡುಗು ಆದರೆ ಮಳೆ ಬರುವುದಿಲ್ಲ! ಮಳೆಗೆ ಪೂರಕ ಸನಿವೇಶಕ್ಕಾಗಿ ಕಾದಿದೆ ಪರಿಸರ ! ಒಳಗೆ ತುಡಿಯುವ ಆ ಶಕ್ತಿ ಅದರ ಭಕ್ತಿಯ ಪರಾಕಾಷ್ಟೆ ಮೆರೆದಾಗ, ಇಹದ ಮೇರೆ ಮೀರಿದಾಗ,ನಿಸ್ವಾರ್ಥದಲ್ಲಿ ಜಗದ ಒಳಿತಿಗೆ ತಪಿಸಿದಾಗ, ಮಾಯೆಯ ಜಗವೆಂಬುದನು ಅರಿತು ಅವಲೋಕಿಸಿ ಮುನ್ನಡೆದಾಗ, ಕುಂಟೆಬಿಲ್ಲೆ ಆಡುವ ಕೆಲಸಕ್ಕೆ ಬಾರದ ಸಾಗರದೋಪಾದಿಯ ಹಲವು ಭಾವನೆಗಳಿಗೆ ಬ್ರೇಕ್ ಹಾಕಿದಾಗ, ಆ ಮಧ್ಯೆ ಮೊಸರು ಕಡೆದು ಬೆಣ್ಣೆ ತೆಗೆದಂತೆ ಮಥಿತ ಮನದಿಂದ ಪರಿಪಕ್ವಗೊಂಡ [selected,hand picked ! ] ಭಾವನೆಗಳನ್ನು ಆಯ್ದುಕೊಂಡಾಗ, ಜಗದುದ್ಧಾರಕರ ಹಾದಿ ತುಳಿದಾಗ, ಅದು ಆಚೆ ಬರುತ್ತದೆ-ಬ್ರಹ್ಮರಂದ್ರದಿಂದ, ಬ್ರಹ್ಮರಂದ್ರ ಒಡೆದು ! ಅಲ್ಲಿ ಬರುವ ಆ ತಂಗಾಳಿ ಯಾವುದೋ ಅದ್ಭುತ ಶಕ್ತಿಯ ವ್ಯಕ್ತಿಯನ್ನು ಕಾಣದ ರೀತಿಯಲ್ಲಿ ಮಾರುವೇಷದಲ್ಲಿ ನಮ್ಮ ಹತ್ತಿರ ತಂದು ಪರಿಚಯಿಸಿ--" ಈತನೇ ನೋಡು ಪರಮಾತ್ಮ ನಿನ್ನ ಸನ್ನಿಧಿಯನ್ನು ಕಾಣ ಬಯಸಿದ್ದು, ನಿನ್ನ ದರುಶನ ಬಯಸಿದ್ದು " ಎಂದು ಉಸುರಿದಂತೆ, ಮತ್ತೆ ಜಾರಿ ಜಾರಿ ಲೌಕಿಕದೆಡೆಗೆ ಸುಳಿವ ಮನಕ್ಕೆ ಆ ಭಾವನೆಗಳ ಅಲೆಗಳ ಮಾಲೆಗಳ ಸಮರ್ಪಣೆ ಆದಂತೆ ಅನಿಸುತ್ತದೆ. ಅದೇ ಈಗ ಕವನದ ರೂಪದಲ್ಲಿ ---



ಮನದಿ ನೀರವ ಮೌನ


ಮನದಿ ನೀರವ ಮೌನದಾ ಕತ್ತಲೆಯ ಕೋಣೆ
ಒಳಗೆ ಏನೋ ತವಕ ನಡೆದಿಹುದು ಕೆಲಸ
ವನದಿ ರೋದಿಸಿದಂತೆ ಕೇಳದಿಹ ಕೂಗುಗಳು
ಗಳಿಗೆ ಗಳಿಗೆಗು ತುಡಿತ ಕಾಣದಿಹ ವಿರಸ

ಮೊಟ್ಟೆಯೊಡೆಯುತ ಹಕ್ಕಿ ಹೊರಬರುವ ರೀತಿಯಲಿ
ಕಟ್ಟಕಟರೆಂಬ ಸದ್ದಿನ ತಾಳಗಳಲಿ
ಕುಟ್ಟುತಾ ತಲೆಯ ಭಾಗವನೊಮ್ಮೆ ಒಳಗಿಂದ
ಸಟ್ಟನೆ ನೀಡುತಿದೆ ಹಲವು ಸಂದೇಶ

ಜಗವು ಕಾಣದ ಮಾಯೆ ಬರಹ ಬದುಕಿನ ಛಾಯೆ
ಖಗವೊ ಉರಗವೊ ಅದರ ವಿಷಯದಲಿ ಬರೆದು
ನಗೆಯು ನಾಟಕವು ಕಥೆ ಕವನಗಳ ಸಾಲಿನಲಿ
ಬಗೆದು ಒಳಿತನು ಮಿಕ್ಕ ಜೀವ ಪರಿಧಿಯಲಿ

ನಾಮುಂದು ತಾಮುಂದು ಭಾವಗಳ ತಹತಹದ
ಆ ಮಂದ ಮತಿಯೊಳಗೆ ಕುಂಟೆಬಿಲ್ಲೆಗಳು
ಸಾನಂದ ಪರಿಪಕ್ವ ತತ್ವಗಳ ಒಡ ಒಡನೆ
ನಾನೆಂದೂ ಎಣಿಸದಿಹ ನೂರು ನೋಟಗಳು

ದೂರದೂರಿಂದ ಬರುವಾ ತಣ್ಣನೆಯ ಗಾಳಿ
ಮಾರು ವೇಷದಿ ಯಾರನೋ ತಂದ ರೀತಿ
ಏರುತಿಳಿಯುತ ಸುಯ್ಯನದು ತಾನು ತೊಯ್ದಿರಲು
ಜಾರುವೀ ಮನಕೆ ಅಲೆಗಳ ಮಾಲೆ ತೊಡಿಸಿ

Friday, April 9, 2010

ಮಂಗೇಕಾಯಿ ದೊಣ !!



ಮಂಗೇಕಾಯಿ ದೊಣ


ಕವಲಕ್ಕಿಯಲ್ಲಿ ಯಕ್ಷಗಾನಗಳು ನಡೆಯುವುದು ಸರ್ವೇ ಸಾಮಾನ್ಯವಾಗಿತ್ತು. ಒಂದು ಸೀಸನ್ ಅಂದರೆ ನವೆಂಬರ್ ನಿಂದ ಮೇ ವರೆಗೆ ಮಳೆಇರದ ದಿನಗಳಲ್ಲಿ ಅನೇಕ ಮೇಳಗಳು[TROUPES] ಬಂದು ಆಟ ಆಡಿ ಹೋಗುತ್ತಿದ್ದವು. ಕೆರೆಮನೆ, ಅಮೃತೇಶ್ವರಿ, ಸಾಲಿಗ್ರಾಮ ಹೀಗೆಲ್ಲಾ ಅನೇಕ ಹೆಸರಿನ ಮೇಳಗಳು. ಅಂದಿನ ಪ್ರಸಂಗಗಳಾದರೋ ರಾತ್ರಿ ೯:೩೦ಕ್ಕೆ ಪ್ರಾರಂಭವಾಗಿ ಕೋಡಂಗಿ, ಬಾಲಗೋಪಾಲವೇಷ, ಸ್ತ್ರೀ ವೇಷದವರ ಗಣಪತಿ ಪೂಜೆ ಹೀಗೆ ಅದೂ ಇದೂ ಅಂತ ೧೧ ಗಂಟೆಯವರೆಗೆ ಎಳೆಯುತ್ತಿದ್ದರು, ಆಗ ಬರುವುದು ಕಟ್ಟುವೇಷಗಳ ಒಡ್ಡೋಲಗ ಎಂಬ ತಿಟ್ಟು.ಇದಕ್ಕೆಲ್ಲ ಸಭಾ ಲಕ್ಷಣ ಎಂದು ಕರೆಯುತ್ತಿದ್ದರು. ಆ ಹೊತ್ತಿಗೆ ಊರಪರವೂರ ದೊಡ್ಡ ದೊಡ್ಡ ಖುಳಗಳೆಲ್ಲ ನಿಧಾನವಾಗಿ ಹೆಗಲಿಗೆ ಶಾಲೋ, ಉದ್ದನೆಯ ಮಫ್ಲರ್ ಎಂಬ ತಲೆಗೆ ಕಟ್ಟಿಕೊಳ್ಳುವ ಉಣ್ಣೆಯ ವಸ್ತ್ರವೋ ಹೆಗಲಿಗೇರಿಸಿಕೊಂಡು ಟೆಂಟಿನ ಒಳಗೆ ಒಬ್ಬೊಬ್ಬರಾಗಿ ನಿಧಾನಕ್ಕೆ ಹೆಜ್ಜೆಯಿಡುತ್ತ ಬಂದು ಆರಾಮ ಖುರ್ಚಿಯಲ್ಲಿ ಆಸೀನರಾಗುತ್ತಿದ್ದರು. ಹೀಗೆ ನಮಗೆ ಚಿಕ್ಕ ಮಕ್ಕಳಿಗೆ ಇದನ್ನೆಲ್ಲಾ ತಿರುತಿರುಗಿ ನೋಡುತ್ತಾ ನೋಡುತ್ತಾ ಸಮಯ ಸರಿದು ಹೋಗುತ್ತಿತ್ತು.

ರಾತ್ರಿ ಅನೇಕಬಾರಿ ಮಧ್ಯೆ ಮಧ್ಯೆ ಕುಳಿತಲ್ಲೇ ಬಸ್ಸಿನಲ್ಲಿ ಓಲಾಡುತ್ತ ನಿದ್ದೆ ಮಾಡಿದ ಹಾಗೇ ನಿದ್ದೆ ಮಾಡಿ ಜೋರಾಗಿ ಚಂಡೆ ಬಡಿದಾಗ ಓಹೋ ಏನೋ ಜೋರಾಗಿ ನಡೆಯುತ್ತಿದೆ ಎಂದು ಗಾಡಿಗೆ ಬ್ರೇಕು ಬಿದ್ದ ಹಾಗೇ ಎದ್ದು ಕೂರುತ್ತ ಅನುಭವಿಸುವ ಅಂದಿನ ಯಕ್ಷಗಾನ ಆಟಗಳೇ [ಪ್ರದರ್ಶನಗಳೇ] ಹಾಗೆ.
ಹಿಂದೆ ಮುಂದೆ ಕಥೆ ತಿಳಿಯದೆ ಕೆಲವೊಮ್ಮೆ ಎಲ್ಲರೂ ನಕ್ಕರೆಂದು ನಾವು ನಗದಿದ್ದರೆ ಮರ್ಯಾದಿಗೆ ಕಮ್ಮಿ ಎಂದು ನಗುವುದಿತ್ತು. ಯಾಕೆಂದರೆ ಸಭಿಕರ ದೃಷ್ಟಿಯಲ್ಲಿ ನಾವು ನಿದ್ದೆ ಮಾಡಿದವರಲ್ಲ ನೋಡಿ! ಹೆಚ್ಚೆಂದರೆ ಪಕ್ಕದಲ್ಲಿ ಕುಳಿತ ಮಹನೀಯನಿಗೆ ನಮ್ಮ ನಿದ್ದೆ ಸ್ವಲ್ಪ ಗೊತ್ತಾಗಿರಬಹುದು, ಆದರೆ ನಾವು ಪಾಪ ಸಣ್ಣವರಲ್ಲವೇ ? ಅದಕ್ಕೇ ಅವರು ನಮ್ಮ ಪಕ್ಷ ! ಅವರೇನೂ ಅನ್ನುತ್ತಿರಲಿಲ್ಲ. ಎಲ್ಲರಿಗೂ ನಾವು ನಿದ್ದೆ ಮಾಡಿದ್ದು ತಿಳಿಯಬಾರದಲ್ಲ ?

ಅನೇಕ ಭಾವುಕರು ಯಕ್ಷಗಾನ ನೋಡಲು ಬರುತ್ತಿದ್ದರು, ಅದರಲ್ಲಿ ಕಾಯಂ ಬರುವ ಮುದುಕರೂ ಕೆಲವರಿದ್ದರು, ಬಹಳ ತಲೆ ಅಲ್ಲಾಡಿಸುತ್ತಾ ತನ್ಮಯತೆಯಿಂದ ನೋಡುತ್ತಿದ್ದ ಅವರು ಭಾವಾವೇಶಕ್ಕೆ ಒಳಗಾಗಿ ಕೆಲವೊಮ್ಮೆ ಯುದ್ಧ ಥರದ ಸನ್ನಿವೇಶಗಳಲ್ಲಿ ವೇದಿಕೆಯ ಹತ್ತಿರ ಹೋಗಿ ತಾವೇ ರಾವಣನನ್ನೋ, ಕೌರವನನ್ನೋ, ಮಾಗಧನನ್ನೊ ವಧಿಸಲು ಹೊರಟ ಥರ ಹೊರಟುಬಿಡುತ್ತಿದ್ದರು ! ಯಾರಾದರೂ ಹೋಗಿ ಅವರ ರಸಭಂಗ ಮಾಡಿ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆತರುತ್ತಿದ್ದರು. ಕೆಲವೊಮ್ಮೆ ತಪೋಭಂಗಗೊಂಡ ಋಷಿಗಳಂತೆ ಅವರು ಕೊಪಾವಿಷ್ಟರಾಗುತ್ತಿದ್ದರು, ಅಂತೂ ಸಮಾಧಾನಿಸಿ ಕುಳ್ಳಿರಿಸಲಾಗುತ್ತಿತ್ತು.

ಕವಲಕ್ಕಿಯಲ್ಲಿ ಆಟ
ಮುಗಿದ ಮರುದಿನ ನಮಗೆ ಸುತ್ತಲ ಶಾಲೆಗಳಿಗೆ ನನ್ನಂಥ ಕೆಲಮಕ್ಕಳಿಗೆ ಅಘೋಷಿತ ರಜೆ ! ಯಾಕೆಂದರೆ ಆ ದಿನ ಹಗಲೋ ರಾತ್ರಿಯೋ ಅದರ ಅರಿವೇ ನಮಗಾಗುತ್ತಿರಲಿಲ್ಲ. ಆ ಹಗಲೆಲ್ಲ ಜೊಲ್ಲುಸುರಿಸುತ್ತ ನಿದ್ದೆ ಮಾಡಿದರೂ ಮಧ್ಯೆ ಬಾಯಾರಿಕೆ, ಮತ್ತೆ ಅದೇ ವೇಷಗಳು, ಜೋರಾಗಿ ಚಂಡೆ ಗಕ್ಕನೆ ಎದ್ದು ಕೂರುವುದು, ನೆತ್ತಿಗೆರಿದ ಎರಡೋ ಮೂರೋ ಗಂಟೆಯ ಬಿಸಿಲಿನ ಸೂರ್ಯನ ಬೆಳಕನ್ನು ನೋಡಿ ಓಹೋ ಇದು ಹಗಲಿರಬೇಕು ನಾನೆಲ್ಲಿದ್ದೇನೆ ಎಂದು ನಾವಿರುವ ಸ್ಥಳವನ್ನು ಅಪರಿಚಿತರ ಮನೆಯ ಥರ ನೋಡುವುದು-ಇದೆಲ್ಲ ಆ ಕಳೆದ ರಾತ್ರಿ ತೊರೆದ ನಿದ್ದೆಯ ಪರಿಣಾಮ. ಆದರೂ ಅಂದಿಗೆ ಆಟವನ್ನು ಎಂದೂ ಬಿಡದ ನಿಷ್ಕಪಟ ಪ್ರೇಕ್ಷಕರು ನಾವು !

ಕವಲಕ್ಕಿಯಲ್ಲಿ ಆಟ ಮುಗಿದ ಮರುದಿನವಲ್ಲ ಆ ಮರುದಿನ ನಮ್ಮೂರಲ್ಲಿ ನಮ್ಮ ಮೇಳದ ಹಗಲು ಬಯಲಾಟ ! ಆಸಕ್ತ ಹುಡುಗರೆಲ್ಲ ಸೇರಿ ನಮಗೆ ನಾವೇ ಪ್ರಸಂಗ ಪಾತ್ರಗಳನ್ನೆಲ್ಲ ಹಂಚಿಕೊಂಡು, ಇದ್ದಿಲ ಮಸಿ ಮತ್ತು ಹಳ್ಳಗಳಲ್ಲಿ ಸಿಗುವ ಕೆಂಪುಕಲ್ಲು ತೇಯ್ದು ಮಾಡಿದ ಕೆಂಬಣ್ಣ, ಬಂಗಾರದ ಬಣ್ಣಕ್ಕೆ ಅರಿಶಿನಪುಡಿ ಹೀಗೆ ಒಂದೆರಡು ಬಣ್ಣಗಳನ್ನೆಲ್ಲ ಇಟ್ಟುಕೊಂಡು, ಹಳೆಯ ಉರುಟಿನ ಸೋರುವ ಸೀಮೆ ಎಣ್ಣೆ ಅಗ್ಗಿಷ್ಟಿಕೆ [ಸ್ಟವ್] ಅನ್ನು ಚಂಡೆಯಾಗಿ ಮಾಡಿಕೊಂಡು, ಹರಿದ ಚಾದರಗಳನ್ನು-ಬೆಡ್ ಶೀಟ್ ಗಳನ್ನು ಟೆಂಟಗಾಗಿ ಬಳಸಿಕೊಂಡು ಬಹಳ ಉತ್ಸುಕರಾಗಿ ಆಟ ಪ್ರಾರಂಭಿಸಿ ನಡೆಸುತ್ತಿದ್ದೆವು. ಸ್ವಲ್ಪ ಹಾಡಬಲ್ಲವರು ಭಾಗವತರಾಗುತ್ತಿದ್ದರು. ಸಾಹಿತ್ಯ ತಪ್ಪಿದರೆ ತೊಂದರೆಯಿರಲಿಲ್ಲ,ಎಲ್ಲಾ ಅಡ್ಜೆಸ್ಟ್ ಮೆಂಟ್. ಆದರೆ ಭಾವನೆಗೆ ಧಕ್ಕೆ ಬರದಂತೆ ಅದದೇ ರಾಗಗಳನು 'ಭಾಗವತ' ಹೊರಹೊಮ್ಮಿಸಬೇಕಾಗಿತ್ತು.

" ಭಳಿರೇ ಪರಾಕ್ರಮ ಕಂಠಿರವ "

" ಬನ್ನಿರಯ್ಯ "

" ಬಂದತಕ್ಕಂತಾ ಕಾರಣ "

ಕಾರಣ ಹೇಳಲು ಬರುತ್ತಿರಲಿಲ್ಲ ಏನೋ ಸ್ವಲ್ಪ ತಲೆತುರಿಸಿಕೊಂಡು
" ಯುದ್ಧ ಕೈಗೊಳ್ಳುವುದು "

ಎಂದೆಲ್ಲ ಮುಂದರಿವ ನಮ್ಮ ಯಕ್ಷಗಾನದಲ್ಲಿ ಯುದ್ಧಗಳೇ ಜಾಸ್ತಿ ! ಹಾಗಂತ ಹೊಡೆದಾಟವಲ್ಲ ! ಕೌರವ-ಭೀಮರ ನಡುವೆ, ರಾಮ-ರಾವಣರ ನಡುವೆ ನಡೆವ ಯುದ್ಧಗಳವು ! ಶರಸೇತು ಬಂಧನ ವೆಂಬ ಪ್ರಸಂಗ ತುಂಬಾ ಲೀಲಾಜಾಲವಾಗಿ ಆಡುವ ಕಾಯಂ ಪ್ರಸಂಗಗಳಲ್ಲೊಂದು ! ಯಾಕೆಂದರೆ ಅಲ್ಲಿ ಪಾತ್ರಧಾರಿಗಳ ಸಂಖ್ಯೆ ಕಮ್ಮಿ, ನಮ್ಮಲ್ಲಿ ಯಾರಾದರೂ ಹುಡುಗರು ಅಲ್ಲಿ-ಇಲ್ಲಿ ಅಜ್ಜನಮನೆಗೋ ಅತ್ತೆ ಮನೆಗೋ ಹೋಗುತ್ತಾ ಬರದೇ ಇದ್ದಾಗ ಆಟ ನಡೆಯಲೇ ಬೇಕಲ್ಲ ! ಒತ್ತಾಯದ ಟಿಕೆಟ್ ಇಶ್ಯೂ ಮಾಡಿದವರ ರೀತಿ ಆಟ ನಡೆಸೇ ನಡೆಸುತ್ತಿದ್ದೆವು ! ನೆಟ್ಟಗೆ ನಿಲ್ಲಿಸಿದ ದಪ್ಪ ತುದಿಯ ಕೋಲೊಂದು ಸ್ಟ್ಯಾಂಡ್ ಮೈಕ್ ಆಗಿ ಕೆಲಸಮಾಡುತ್ತಿತ್ತು ! ಪ್ರಮುಖ ಪಾತ್ರಧಾರಿಗಳು ಅಂದು ಭಾಗವಹಿಸಲು ರಜಹಾಕಿದ್ದರೆ ಅದಕ್ಕೆ ಸಮಜಾಯಿಷಿ ಕೊಟ್ಟು ವಿನಂತಿಸುವ ಭಾಷಣ ನನ್ನದಾಗಿರುತ್ತಿತ್ತು.

" ನಮ್ಮ ಅನಿವಾರ್ಯತೆಯಲ್ಲಿ ಸಹೃದಯೀ ಪ್ರೇಕ್ಷಕರು ಎಂದಿನಂತೆ ಸಹಕರಿಸಬೇಕೆಂದು ಪ್ರಾರ್ಥಿಸುತ್ತೇನೆ, ಮುಂಬರುವ ದಿನಗಳಲ್ಲಿ ಇನ್ನೂ ಉತ್ಕೃಷ್ಟ ರೀತಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡಿತೋರಿಸುವವ
ರಿದ್ದೇವೆ, ತಮ್ಮ ಪ್ರೋತ್ಸಾಹ ಹೀಗೇ ಸತತವಾಗಿರಲಿ "

--- ಇದು ಪ್ರಸಿದ್ಧ ಕಲಾವಿದರಾಗಿದ್ದ ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮಾತುಗಳನ್ನು ಅನುಕರಿಸಿದ್ದಾಗಿರುತ್ತಿತ್ತು ! ನಮ್ಮಲ್ಲೇ ಒಬ್ಬ [ ಶ್ರೀ] ಚಿಟ್ಟಾಣಿ, ಒಬ್ಬ [ಶ್ರೀ ಕೆರೆಮನೆ] ಮಹಾಬಲ ಹೆಗಡೆ, ಮತ್ತೊಬ್ಬ [ಶ್ರೀ] ನೆಬ್ಬೂರು, ಇನ್ನೊಬ್ಬ [ಶ್ರೀ]ಕಾಳಿಂಗನಾವುಡ ಹೀಗೆ ಎಲ್ಲರೂ ನಾವೇ! ಅಂದಿನ ಆ ಆಟಗಳು ಬಹಳ ರಸದೌತಣ ನಮಗೆ, [ಹೀಗೆ ಯಕ್ಷಗಾನ ಬಲ್ಲವರಿಗೆ ಅರ್ಥವಾಗುತ್ತದೆ ] ಅಲ್ಲಿ ಕೆಲವು ನಮಗಿಂತ ಚಿಕ್ಕ ಮಕ್ಕಳು ನಮ್ಮ ಪ್ರೇಕ್ಷಕರಾಗುತ್ತಿದ್ದರು. ಚಿಕ್ಕ ಮಕ್ಕಳಿಂದ ನಮಗೆ ಒಳ್ಳೆಯ ಕಲಾವಿದರಿಗೆ ಸಿಕ್ಕಷ್ಟು ಗೌರವ ಸಿಗುತ್ತಿತ್ತು, ಯಾಕೆಂದರೆ ಮುಂದೆ ಅವರು ನಮ್ಮಿಂದ ಕಲಿಯುವವರಿರುತ್ತಿದ್ದರು !

" ನಿನ್ನಯ ಬಲು ಏನೋ ಮಾರುತಿಯನ್ನು ನಿರೀಕ್ಷಿಪೆನು " -- ಈ ಹಾಡಿಗೆ ಹಾಗೂ

" ಊಟದಲಿ ಬಲು ನಿಪುಣನೆಂಬುದ ....ತಾ ತೈಯ್ಯಕ್ಕು ಧೀಂ ತತ್ತ ತೈಯ್ಯಕ್ಕು ಧೀಂ ತತ್ತ."

ಇಂತಹ ಹಾಡುಗಳಿಗೆ ನರ್ತಿಸಿದಾಗ ಚಪ್ಪಾಳೆ ಬೀಳಲೇ ಬೇಕು! ಇಲ್ಲಾ ಅಂದರೆ ಆತ ಚೆನ್ನಾಗಿ ಕುಣಿದಿಲ್ಲ ಎಂದರ್ಥ! ಮಾತು ಮಾತು ಮಾತು, ಏನಂತೀರಿ ನೀವು? ಅರ್ಥಗಳನ್ನು ನಮ್ಮ ಗೇರು ಬೆಟ್ಟದ ಜಾಗಗಳು, ಅಲ್ಲಿನ ಗಿಡಮರಗಳು ಕೇಳಿವೆ ಗೊತ್ತಾ ? [ಇಂದು ಆ ಮರಗಳೆಲ್ಲ ಮುದುಕಾಗಿ ನಾನು ಊರಿಗೆ ಹೋದಾಗ ನೋಡಿದರೆ ಬಹುಶಃ ಅವು ನನ್ನ ನೋಡಿ ನಗುತ್ತವೇನೋ ಅನ್ನಿಸುತ್ತಿದೆ ! ]

ಇಂತಹ ಪರಿಸರದಲ್ಲಿ ಪ್ರಾಥಮಿಕ ಶಾಲೆ ಕಲಿತವರು ನಾವು.

" ಶಾರದಾಂಬೆಯೆ ವಿಧಿಯ ರಾಣಿಯೆ ವಂದಿಸುವೆ ನಾ ನಿನ್ನನು ......." ಪ್ರಾರ್ಥನೆ ಹಾಡುತ್ತ ನಿಂತು ಹಿಂದೆ ಮುಂದೆ ಓಲಾಡುತ್ತಾ ಅಂದು ಹಾಡುವ ಪರಿ ಅದೊಂದು ನಮ್ಮದೇ ಲೋಕ ! ಅಂದಿನ ಶಿಕ್ಷಕರೂ ಕೂಡ ಇಂದಿನಂತಿರಲಿಲ್ಲ, ಅವರು ನಿಸ್ಪೃಹರಾಗಿರುತ್ತಿದ್ದರು. ಅವರಲ್ಲಿ ಮಕ್ಕಳಿಗೆ ಸರಿಯಾಗಿ ಕಲಿಸಬೇಕೆಂಬ ಒತ್ತಾಸೆ ಬಹಳವಾಗಿರುತ್ತಿತ್ತು. ಅದರಲ್ಲಿ ಕೆಲವರು ಸಂಗೀತ ಸಾಹಿತ್ಯ ಕಲೆಗಳಲ್ಲಿ ಹೆಚ್ಚಿನ ಆಸಕ್ತಿಯಿರುವವರೂ ಇರುತ್ತಿದ್ದರು. ಕೆಲವರಿಗೆ ಕಥೆಗಳನ್ನು ಹೇಳಬೇಕೆಂಬ ಮನೋಭೂಮಿಕೆ ಇರುತ್ತಿತ್ತು. ಶಾಸ್ತ್ರಿ ಮಾಸ್ತರು ಸಂಗೀತ ಕಲಿಸಿದರೆ ಕುಸಲೇಕರ್ ಮಾಸ್ತರು ಯಕ್ಷಗಾನ ಕಲಿಸುತ್ತಿದ್ದರು. ಗುರು ಮಾಸ್ತರು ಕಥೆ ಹೇಳಿದರೆ ಶಾನಭಾಗ್ ಮಾಸ್ತರು ಹಳ್ಳಿಯ-ಪಟ್ಟಣದ ಜೀವನದ ಬಗ್ಗೆ ಬಹಳ ರಸವತ್ತಾಗಿ ವಿವರಿಸುತ್ತಿದ್ದರು. ನಮಗೆ ಎಲ್ಲರೂ ಇಷ್ಟವೇ. ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿ ನಮ್ಮಲ್ಲಿನ ವ್ಯಕ್ತಿಗತ ವೈಶಿಷ್ಟ್ಯಗಳನ್ನು ಹುಡುಕಲು ಪ್ರಯತ್ನಿಸಿದ ಗುರುಗಳು ಅವರೆಲ್ಲಾ. ಅವರಿಗೆಲ್ಲ ಒಮ್ಮೆ ನಮಸ್ಕಾರಗಳು.

ಇಂತಹ ಶಾಲೆಯಲ್ಲಿ ಒಬ್ಬ ಸಹಪಾಟಿ ರಮೇಶ. ವಯಸ್ಸಿನಲ್ಲಿ ಸುಮಾರು ಹಿರಿಯನಾಗಿ ಡುಮ್ಕಿ ಹೊಡೆಯುತ್ತ ಆತ ನನ್ನ ಕ್ಲಾಸಲ್ಲಿ ನನಗೆ ಸಿಕ್ಕವ. ಅವನ ತಂದೆ ವ್ಯಾಪಾರೀ ವೃತ್ತಿಯವರಾದ್ದರಿಂದಲೋ ಏನೋ ಅವನಿಗೆ ಓದೇ ಇಷ್ಟವಾಗುತ್ತಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಇಂದು ಕಲಿತಿದ್ದು ನಾಳೆ ಪುನಃ ಕಲಿಯಬೇಕಾದ ಪರಿಸ್ಥಿತಿ ! ಆದರೂ ನಮ್ಮ ಗುರುಮಾಸ್ತರು ಅವನನ್ನು ತಿದ್ದಲು ಬಹಳ ಯತ್ನಿಸಿದವರು. ಕನ್ನಡ ಶಬ್ಧಗಳನ್ನೇ ಸರಿಯಾಗಿ ಬರೆಯಲು ಬರದ ಆತನಿಗೆ ಅನೇಕ ರೀತಿಯಲ್ಲಿ ಹೇಗೆ ಹೇಳಿದರೆ ಅರ್ಥವಾಗುತ್ತದೆ ಎಂಬುದನ್ನು ಶೋಧಿಸಲು ಹೊರಡುತ್ತಿದ್ದ ಸಂಶೋಧಕ ನಮ್ಮ ಗುರುಮಾಸ್ತರು ! ಹೀಗೆ ದಿನಗಳೆಯುತ್ತಿದ್ದವು. ನಾವು ಬೆಳೆಯುತ್ತಿದ್ದೆವು - ೬ ನೆ ತರಗತಿಯಲ್ಲಿ. ಒಂದುದಿನ ಹೀಗೆ ಏನೋ ಬರೆಯಲು ಕೊಟ್ಟರು. ಗಣಿತ ಕಲಿಸುತ್ತಿದ್ದರು. ಎಲ್ಲರೂ ಬರೆದರೂ ರಮೇಶ ಮಾತ್ರ ಬರೆಯಲಿಲ್ಲ. ಅವನನ್ನು ನಿಲ್ಲಿಸಿದರು.

" ಹೇ ರಮೇಶ, ಯಾಕೋ ಬರೆದಿಲ್ಲ ? ಇವತ್ತು ಬೆಳಿಗ್ಗೆ ಏನು ತಿಂಡಿ ಮಾಡಿದ್ರು ನಿಮ್ಮನೇಲಿ ? "

" ಮೊಗೇಕಾಯಿ ದೊಡ್ಣ "

ಮೊಗೇಕಾಯಿ ಅಂದರೆ ಮಂಗಳೂರು ಸೌತೆಕಾಯಿ. ಅದನ್ನು ಸಿಪ್ಪೆ, ತಿರುಳು ತೆಗೆದು ಚೆನ್ನಾಗಿ ತುರುಮಣೆಯಲ್ಲಿ ತುರಿದು ಅಥವಾ ಮೆಟ್ಟುಗತ್ತಿಯಲ್ಲಿ [ಈಳಿಗೆ ಮಣೆ] ಚಿಕ್ಕ ಚಿಕ್ಕ ತುಂಡು ಮಾಡಿ, ರುಬ್ಬಿದ ಅಕ್ಕಿಯ ಹಿಟ್ಟಿಗೆ ಅವುಗಳನ್ನು ಸೇರಿಸಿ ದಪ್ಪಗೆ ದೊಡ್ಡಗೆ ಈರುಳ್ಳಿ ದೋಸೆಯ ಥರ ಅದನ್ನು ಹುಯ್ಯುವುದರಿಂದ ಅದು ' ಮೊಗೇಕಾಯಿ ದೊಡ್ಣ ' ಎಂಬ ಹೆಸರು ಪಡೆದಿದೆ. ತಿನ್ನಲು ಒಂಥರಾ ಡಿಫರೆಂಟ್ ಆಗಿರುವ ಈ ದೋಸೆ ಇಂದಿಗೂ ನಮ್ಮಲ್ಲಿ ಚಾಲ್ತಿಯಲ್ಲಿದೆ, ಆರೋಗ್ಯಕ್ಕೆ ತುಂಬಾ ಹಿತಕರವೂ ಹೌದು. ಇರಲಿ ಗುರುಮಾಸ್ತರು ಮುಂದುವರಿಸಿ

" ಅದನ್ನೇ ಸರಿಯಾಗಿ ಬರಿ ನಿನ್ನನ್ನು ಈ ಸಲ ಪಾಸುಮಾಡುತ್ತೇನೆ "

ಸುಮಾರು ಸಮಯ ಕೊಟ್ಟರು, ಆತ ಬಹಳ ಪ್ರಯತ್ನಿಸಿದ, ಬಹಳ ಬಹಳ ಬಹಳ ಒದ್ದಾಡಿದ. ನಂತರ ಬರವಣಿಗೆ ಗುರುಗಳಿಗೆ ಪ್ರಕಟಿಸಿದ. ಆತ ಬರೆದಿದ್ದ-

' ಮಂಗೇಕಾಯಿ ದೊಣ '

ಗುರುಮಾಸ್ತರು ಅದನ್ನು ಎಲ್ಲರಿಗೂ ಓದಿಹೇಳಿದರು, ಇಡೀ ತರಗತಿಯ ಮಕ್ಕಳು ಬಿದ್ದು ಬಿದ್ದು ನಕ್ಕರು. ಆದರೆ ರಮೇಶ ಮರದ ಕೆಳಗೆ ಬಿದ್ದ ಮಂಗನ ಥರಾ ಇದ್ದ ಪಾಪ ! ನಾನು ಹೊರಗೆ ಸ್ವಲ್ಪ ನಕ್ಕರೂ ನನ್ನೊಳಗೆ ಆ ಪಾಪ ಪ್ರಜ್ಞೆ ಕಾಡುತ್ತಿತ್ತು. ಆತ ಒಳ್ಳೆಯ ಹುಡುಗ ಆದರೆ ವಿದ್ಯೆ ಹತ್ತುತ್ತಿರಲಿಲ್ಲ ! ಏನುಮಾಡುವುದು. ದಿನಾಲೂ ಬೆಳಿಗ್ಗೆ

' ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ '

'ವಿದ್ಯೆ ಕಲಿಯದವ ಹದ್ದಿಗಿಂತಲೂ ಕಡೆ '

--ಇವೆಲ್ಲಾ ಗಾದೆಗಳನ್ನು ನಾವು ಪಠಿಸುತ್ತಿದ್ದೆವು, ಅರ್ಥ ಎಷ್ಟರಮಟ್ಟಿಗೆ ಆಗುತ್ತಿತ್ತು ಅನ್ನುವುದು ಬೇರೆ ಪ್ರಶ್ನೆ!

ನನಗೆ ಅವನದೇ ಚಿಂತೆ ಮನಸ್ಸಲ್ಲಿ. ಪಾಪ ಏನಾದರಾಗಲಿ ಆತ ಕಲಿಯಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು. ಎಂದಿನಿಂದಲೂ ನಾನೊಬ್ಬ ಭಾವಜೀವಿಯೇ! ನನ್ನ ಸಾಂತ್ವನದ ಮಾತುಗಳಾದವು. ಆತನಿಗೆ ನನ್ನಮೇಲೆ ಎಲ್ಲಿಲ್ಲದ ಪ್ರೀತಿ. ವಿ. ಆರ್.ಭಟ್ ವಿ.ಆರ್.ಭಟ್ ಎನ್ನುತ್ತಾ ಸದಾ ಬೆನ್ನಟ್ಟುತ್ತಿದ್ದ. ಏನಾದರೂ ಗೊತ್ತಾಗದಿದ್ದರೆ ಬರೆದುಕೊಡು ಎಂದು ಕೇಳುತ್ತಿದ್ದ. ಮುಂದೆ ಹಾಗೆ ಹೇಗೋ ಅಂತೂ ನಮ್ಮ ಜೊತೆ ಅವನೂ ಏಳನೇ ತರಗತಿಗೆ ಬಂದ.

ಏಳನೇ ತರಗತಿ ಎಂದರೆ ಪ್ರಾಥಮಿಕ-ಮಾಧ್ಯಮಿಕ ಶಾಲೆಯ ಓದು ಮುಕ್ತಾಯವಾಗಿ ಪ್ರೌಢ ಶಿಕ್ಷಣಕ್ಕೆ ಬೇರೆ ಶಾಲೆಗೆ ಹೋಗಬೇಕು, ಮಧ್ಯೆ ಪಬ್ಲಿಕ್ ಪರೀಕ್ಷೆ ಒಂದಿರುತ್ತಿತ್ತು. [ನಾವು ಬರುವಷ್ಟರಲ್ಲಿ ಅದು ಶಾಲೆಯಲ್ಲೇ ನಡೆಸಬಹುದಾದ ಮಟ್ಟಕ್ಕೆ ಬಂತು] ಆತ ಹೇಗೆ ಪಾಸು ಮಾಡಬಲ್ಲ ಎಂದು ನನಗೆ ಅನ್ನಿಸುತ್ತಿತ್ತು. ಕೊನೆಗೂ ಆತ ಪಾಸಾಗಲಿಲ್ಲ, ಮತ್ತೆ ಅದೇ ಶಾಲೆಯಲ್ಲಿ ಉಳಿದುಕೊಂಡ.ನನಗೆ ತುಂಬಾ ಬೇಜಾರಾಯಿತು. ಹೀಗೆ ಎಷ್ಟೋ ಜನ ಸಹಪಾಟಿಗಳನ್ನು ಆತ ಪಡೆದಿದ್ದ, ಅವರೆಲ್ಲ ಮುಂದಕ್ಕೆ ಮುಂದಕ್ಕೆ ಹೋಗುತ್ತಿದ್ದರು.ಆತ ಮಾತ್ರ ಹಾಗೇ ಇರುತ್ತಿದ್ದ. ಆತ ಈಗಲೂ ಸಿಗುತ್ತಾನೆ. ತಮ್ಮನೆಗೆ ಬರುವಂತೆ
ನನಗೆ ದುಂಬಾಲು ಬೀಳುತ್ತಾನೆ. ಜೀವನದಲ್ಲಿ ಆತ ಸೋತಿಲ್ಲ ! ಈಗ ಆತ ಎಲೆಕ್ಟ್ರಿಕ್ ಕೆಲಸ ಕಲಿತು ಅದನ್ನು ಮಾಡುತ್ತಾನೆ, ಕೆಲವು ರೆಪೇರಿ ಕೆಲಸ ಮಾಡುತ್ತಾನೆ. ತಂದೆ ಮಾಡಿದ್ದ ವ್ಯಾಪಾರವನ್ನೂ ಮಾಡುತ್ತಾನೆ, ದುಡಿಯುತ್ತಾನೆ. ಹಳ್ಳಿಯಲ್ಲೇ ಸುಖವಾಗಿದ್ದಾನೆ.

ಬದುಕಿನಲ್ಲಿ ಓದು-ಅಕ್ಷರ ಕಲಿಕೆ ಮಾತ್ರ ವಿದ್ಯೆಯಲ್ಲ, ವೃತ್ತಿ ಕಲಿಕೆ ಕೂಡ ವಿದ್ಯೆ. ಇಂದಂತೂ ಎಷ್ಟೆಲ್ಲಾ ವಿದ್ಯೆಗಳಿವೆ, ಓದು ಬಾರದವರು ಎಂತೆಂತಹ ವೃತ್ತಿ ನಡೆಸಿದ್ದಾರೆ,ಚೆನ್ನಾಗಿ ದುಡಿದು ಬದುಕುತ್ತಿದ್ದಾರೆ.ಮಾಡುವ ಕೆಲಸದಲ್ಲಿ ಆಸಕ್ತಿ -ಶ್ರದ್ಧೆ ಮುಖ್ಯವೇ ಹೊರತು ಬರೇ ಅಕ್ಷರ ಕಲಿಕೆಯಲ್ಲ;ಪುಸ್ತಕದ ಬದನೇಕಾಯಿಯಲ್ಲಿ ಹೇಳಿದಷ್ಟನ್ನೇ ಬಾಯಿಪಾಠ ಮಾಡುವುದಲ್ಲ.

ಇವತ್ತಿಗೂ ಒಬ್ಬ ಡಿಗ್ರೀ ಪಡೆದ ಎಂಜಿನೀಯರ್ ಒಂದು ಸೆಂಟ್ರಿ ಫ್ಯುಗಲ್ ಪಂಪ್ ಬಗ್ಗೆ ಅದರ ರಿಪೇರಿ ಬಗ್ಗೆ ಕೇಳಿದರೆ ಅದನ್ನು ಬಾಯಲ್ಲಿ ಹಾಗೇ ಹೀಗೆ ಅಂತ ಹೇಳುತ್ತಾನೆಯೇ ಹೊರತು ಅವುಗಳ ರಿಪೇರಿ, ರೀವೈಂಡ್ ಕೆಲಸಗಳು ಅವನಿಗೆ ಬರುವುದಿಲ್ಲ ! ಯಾಕೆಂದರೆ ಆತ ಅದನ್ನು ಪ್ರಾಕ್ಟೀಸು ಮಾಡಿಲ್ಲ. ನಮ್ಮ ರಮೇಶ ಅದನ್ನು ಮಾಡಬಲ್ಲ. ಈತ ಯಾವ ಇಂಜಿನೀಯರಿಂಗ್ ಮಾಡಿಲ್ಲ, ಸಾಲದ್ದಕ್ಕೆ ಇಂದಿಗೂ ಸರಿಯಾಗಿ ಬರೆಯಲಿಕ್ಕೆ ಬರುತ್ತದೋ ಇಲ್ಲವೋ ! ಆದರೆ ಜೀವನದಲ್ಲಿ ಆತ ತಾನು ಕಲಿತ ಪಾಠ ದೊಡ್ಡದು, ಅದರಿಂದ ಆತನ ಜೀವನ ನಿರ್ವಹಣೆ ಸಾಗಿದೆ, ಆತನ ಸಹಪಾಟಿಗಳಾದವರು ದೊಡ್ಡ ದೊಡ್ಡ ನಗರಗಳ ಬೀದಿಗಳಲ್ಲಿ BIO-DATA ಹಿಡಿದು ಅಲೆಯುತ್ತಿದ್ದಾರೆ ಅಂದರೆ ಅಂದು ಸೋತ ರಮೇಶ ಇಂದು ಗೆದ್ದಿದ್ದಾನೆ, ನನಗೆ ಬಹಳ ಹೆಮ್ಮೆ, ನನ್ನ ಮನಸ್ಸಿಗೆ ಅದು ತುಂಬಾ ಖುಷಿ. ONLY PRACTICE MAKES MAN PERFECT !

ಹೀಗಾಗಿ ಎಂದೂ ಮರೆಯದ ಅನುಭವ ರಮೇಶ ತೋರಿಸಿದ ಇಂದಿನ ಹೊಸ
' ಮಂಗೇಕಾಯಿ ದೊಣ '


Thursday, April 8, 2010

ಹಾರಿಹೋದೆಯ ಗಿಣಿಯೆ ?

ಹಿಂದೂ ಮುಂದೂ ಗೊತ್ತಿಲ್ಲದ ಅನಿವಾರ್ಯ ಕಥನ --ಈ ಜೀವನ ! ಒಬ್ಬೊಬ್ಬರ ಜೀವನವೂ ಒಂದೊಂದು ಕಥೆ! ಕಥೆಗಾರರಿಗೆ ಕಥೆ ಬರೆಯಲು ವಿಷಯವಸ್ತು ಬೇರೆ ಬೇಕೇ ? ಇಂತಹ ಅನಿವಾರ್ಯ ಕಥನದ ಒಬ್ಬ ಅನಿರೀಕ್ಷಿತ ಸ್ನೇಹಿತನಲ್ಲದ ಸ್ನೇಹಿತನೊಬ್ಬನನ್ನು ಕಳೆದುಕೊಂಡೆ, ಆತನ ಮನೆ-ಕುಟುಂಬ-ಹೆಂಡತಿ-ಮಗು ಇದೆಲ್ಲ ನೆನಪಾಗಿ ಯಾಕೋ ಮನಸ್ಸು ಚಡಪಡಿಸಿತು. ಜೀವನದಲ್ಲಿ ಯಾರೂ ಯಾರಿಗೂ ಎಷ್ಟರ ಮಟ್ಟಿಗೆ ಸಹಾಯಮಾಡುತ್ತೇವೆ ಎಂದುಕೊಳ್ಳಲು ಆಗುವುದಿಲ್ಲ. ಆದರೆ ಕೆಲವು ವ್ಯಕ್ತಿಗಳು ಅವರ ಚಟಗಳಿಂದ ಅವರ ಅಹಮ್ಮಿನಿಂದ ಎಳವೆಯಲ್ಲೇ ಇಹವನ್ನು ತ್ಯಜಿಸಬೇಕಾಗಿ ಬರುತ್ತದೆ. ಅಂಥವರು ಯಾರ ಮಾತನ್ನೂ ಹಿತವಚನವನ್ನೂ ಕೇಳುವುದಿಲ್ಲ. ಮೇಲಾಗಿ ಅಂಥವರು 'ಅಂಥವರೆಂದು' ಗೊತ್ತಾಗುವುದೇ ನಮಗೆ ಬಹಳ ತಡವಾಗಿ ! ಆ 'ಅಂಥವರು' 'ಅಂಥ' ಸ್ಥಿತಿಯನ್ನೂ ಮೀರಿ ಮೇರೆದಾಟಿದಾಗ Out ಆಗಿಬಿಡುತ್ತಾರೆ ! ಅದು ಅವರ ದುಶ್ಚಟಗಳ ಪರಿಣಾಮ ! ವಾಮಮಾರ್ಗದಲ್ಲಿ ಹೋಗುವ ಕೆಲವರು ಹೇಗೆ ಅಲ್ಲಿನ ಕ್ಷುದ್ರ ದೇವತೆಗಳಿಗೆ ಕೊನೆಗೊಮ್ಮೆ ಅವರೇ ಬಲಿಯಾಗುತ್ತಾರೋ ಹಾಗೇ ದುಶ್ಚಟಗಳು ಚಟಸಾಮ್ರಾಟರನ್ನು ಬಲಿಹಾಕುತ್ತವೆ !

ನಮ್ಮ ಒಳಗಿನ ನ್ಯಾಯಾಂಗ [ ಮನಸ್ಸು] ಕಾರ್ಯಾಂಗ [ ಅವಯವಗಳು] ಶಾಸಕಾಂಗ [ಅನ್ನಾಂಗಗಳು] ತಮ್ಮದೇ ಆದ ರೀತಿ-ರಿವಾಜು ಇಟ್ಟುಕೊಂಡಿವೆ ! ಈ ರೀತಿ ತಪ್ಪಿದರೆ ಮೊದಲು ಶಾಸಕಾಂಗ ನಂತರ ಕಾರ್ಯಾಂಗ ನಂತರ ನ್ಯಾಯಾಂಗ ಒಂದೊಂದಾಗಿ ಕೆಲಸ ನಿಲ್ಲಿಸಿಬಿಡುತ್ತವೆ. ಹಳಿ ತಪ್ಪಿದ ರೈಲಿನಂತೆ ಯಾವಾಗ ಈ ಸ್ಥಿತಿ ಒಂದಕ್ಕೊಂದು ತಾಳ-ಮೇಳ ಇಲ್ಲದಂತಾಗುತ್ತದೋ ಆಗ ಸಾವು ಕೈಬೀಸಿ ಸೆಳೆದುಕೊಂಡುಬಿಡುತ್ತದೆ. ಯಾರೂ ಶಾಶ್ವತವಲ್ಲವಾದರೂ ಇರುವಷ್ಟು ದಿನ ನಮ್ಮ ಪ್ರತೀ ಜೀವನದಲ್ಲೂ ಲೌಕಿಕವಾಗಿ ಸಾಧನೆ ಮಾಡಲೇಬೇಕು.

ಇನ್ನೊಬ್ಬರಿಗೆ ಆದಷ್ಟೂ ಹೊರೆಯಾಗದ ಬದುಕನ್ನು ಬದುಕಲು ಸದಾ ಪ್ರಯತ್ನಿಸಬೇಕು. ಅದರಲ್ಲಂತೂ ಗೊತ್ತಿದ್ದೂ ಗೊತ್ತಿದ್ದೂ ದುಶ್ಚಟಗಳನ್ನು ಜಾಸ್ತಿಮಾಡುತ್ತಾ ಅದಕ್ಕೇ ತಮ್ಮನ್ನು ಮಾರಿಕೊಂಡು ಅವಲಂಬಿತರನ್ನು ಅರ್ಧದಲ್ಲಿ ಬಿಟ್ಟುಹೋಗುವ ಸ್ಥಿತಿ ಸರ್ವದಾ ಸಲ್ಲ. ಹೀಗೊಮ್ಮೆ ಅಕಸ್ಮಾತ್ ಅಂಥವರು ಮಧ್ಯೆ ಬಿಟ್ಟುಹೋದರೆ ಅಲ್ಲಿ ಹೆಂಡತಿ-ಮಕ್ಕಳ ಕಥೆ ಅದು ಹೇಳಲಾರದ ವ್ಯಥೆ. ಬದುಕಲಾರದ-ಬದುಕಿರಲಾರದ, ಬದುಕೇ ಅಸಹ್ಯವೆನಿಸಿಬಿಡುವ ಆ ದಿನಗಳನ್ನು ಹೆಂಡತಿ ಎಂಬ ಆ ಜೀವ ಅನುಭವಿಸುವುದನ್ನು ಯಾರಲ್ಲಿಯೂ ಹೇಳಿಕೊಳ್ಳಲಾರಳು. ತುಂಬಾ ಎಳೆಯ ಮಕ್ಕಳಾದರೆ ಅವುಗಳಿಗೆ ಇನ್ನೂ ಅರ್ಥವಾಗದ ಪರಿಸ್ಥಿತಿ, ಅವರ " ಅಪ್ಪ ಬೇಕು " ಎನುವ ಆಕ್ರಂದನಕ್ಕೆ ಆ ತಾಯಿ ಏನು ಮಾಡಿಯಾಳು ? ದುಡ್ಡುಕೊಟ್ಟು ಕೊಳ್ಳುವ ಬದುಕೇ ? ಚೈನೀಸ್ ಟಾಯ್ ಆಗಿದ್ರೆ ಹತ್ತಲ್ಲ ಹಲವು ಕೊಡಿಸಬಹುದು, ಆದರೆ ಹೋದ ವ್ಯಕ್ತಿಯನ್ನು ಮರಳಿ ತರಲು ಸಾಧ್ಯವೇ ? ಯಾರೂ ಬಯಸದ, ಯಾರಿಗೂ ಬೇಡದ ಈ ಸ್ಥಿತಿಯನ್ನು ಅನೇಕ ಸಂದರ್ಭಗಳಲ್ಲಿ ಕೈಯ್ಯಾರೆ ತಂದುಕೊಳ್ಳುವುದು ನಮ್ಮ ದುಶ್ಚಟಗಳಿಂದ ಅಲ್ಲವೇ ? ಗುಟ್ಕಾ, ಸಿಗರೇಟ್, ವೈನ್ ಹೀಗೆ ಯಾವುದೋ ಒಂದನ್ನೋ ಅಥವಾ ಎಲ್ಲವನ್ನೂ ನಮ್ಮ ಜೀವನದಲ್ಲಿ ಬಳಸಿ, ಬಿಡಲಾರದಷ್ಟು ಅವುಗಳ ನಂಟು ಬೆಳೆಸಿ ಕೊನೆಗೊಮ್ಮೆ ಹಲವರ ದುಃಖಕ್ಕೆ ಕಾರಣೀಭೂತರಾಗುತ್ತೇವೆ ! ಹೀಗಾಗದಿರಲಿ ಎಂಬ ಸದಾಶಯದೊಂದಿಗೆ ಗತಿಸಿದ ಗೆಳೆಯನ ಸ್ಮರಣೆಯ ಹಿನ್ನೆಲೆಯಲ್ಲಿ ಬರೆದ ಈ ಹಾಡನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. [ಈ ಹಾಡಿನ ಪಲ್ಲವಿಯನ್ನು ಹಿಂದೊಮ್ಮೆ ನನ್ನ ಸಣ್ಣ ಕಥೆಯಲ್ಲಿ ಬರೆದಿದ್ದೆ, ಅದು ಅಲ್ಲಿ ಆ ಕಥೆಗಾಗಿ ಬರೆದಿದ್ದು ಈ ರೀತಿ ಪೂರ್ಣವಾಗುತ್ತದೆ ಎಂಬ ಅನಿಸಿಕೆ ಇರಲಿಲ್ಲ,ವಿಧಿ ಹೀಗೆ ಬರೆಸಿತು !]




ಹಾರಿಹೋದೆಯ ಗಿಣಿಯೆ ?


ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ .......
ಆರಿಹೋಯಿತು ದೀಪ ಆರದೀ ಹಿಡಿಶಾಪ ?
ದಾರಿಯಲಿ ಅಗಲುತ್ತ ಕಾಣದೆಡೆಗೆ

ಮೇರು ಪರ್ವತದಂತೆ ಬೆಳೆವ ಕನಸನು ಕಂಡ
ಏರು ದಿಣ್ಣೆಗಳನ್ನು ಹತ್ತಿ ಇಳಿದು
ಜಾರುತೇಳುತ ಸಾಗುವೀನಮ್ಮ ಜೀವನದಿ
ದಾರಿ ಹಲವನು ನೆನೆಸಿ ಕನಸು ಸುಳಿದು

ನಾಳೆ ನಾಳೆಗಳೆಂಬ ಭಾರೀ ನಾಳೆಗಳಲ್ಲಿ
ವೇಳೆ ಸರಿದೂ ದೂರ ಬಹಳ ಕ್ರಮಿಸಿ
ಹೇಳಲೇನುಂಟೀಗ ಮುಗಿದು ಹೋಗಿಹ ಪಾಠ ?
ಕೇಳಿ ಮಾಡುವುದೇನು ಬರಿದೇ ಹರಸಿ ?

ಅಪ್ಪ ಎಲ್ಲಿ ಎಂದು ಎಳೆಮಗುವು ಕೇಳುತಿದೆ
ಅಪ್ಪಿ ಪ್ರೀತಿಯ ತೋರ್ವ ನಿನ್ನ ನೆನೆದೂ
ಬೆಪ್ಪರಾದಂತೆ ಕುಳಿತಿಹ ನಮ್ಮ ಹಿರಿಜನರ
ಸಪ್ಪೆ ಮುಖದಲಿ ಕಣ್ಣ ನೀರು ಹರಿದೂ

ನೆಮ್ಮದಿಯ ಸಂಸಾರ ನಮ್ಮದಾಗಲಿ ಎಂದು
ಹೆಮ್ಮೆಯಲಿ ಹರಸಿದರು ಹಲವು ಮಂದಿ
ಒಮ್ಮೆಯಾದರು ಮಗುವ ಮಾತು ಕೇಳಿದರಿಲ್ಲಿ
ಸುಮ್ಮನಿರುತಿದ್ದನಾ ಯಮನು ಕಳೆಗುಂದಿ

ಎಲ್ಲಿ ಕುಳಿತರು ಮನಕೆ ತನ್ನ ತನವೇ ಇಲ್ಲ
ಕಲ್ಲಾಗಿಹುದು ಹೃದಯ ಮಗುವ ನೆನೆಸಿ
ಬಲ್ಲವರು ಸಂತೈಸಿ ಬಳಲಿದರು ತಾವೆಲ್ಲ
ಇಲ್ಲವಾಗಿಹ ನಿನ್ನ ಆ ಇರವ ಸ್ಮರಿಸಿ
--------

[ ಓದಿ ಬೇಸರಗೊಂಡ ನಿಮ್ಮ ಮನಕ್ಕೆ ಸೈಡ್ ವಿಂಗ್ ನಲ್ಲಿ ' ಬೆಣ್ಣೆ ಮುರುಕು ' ಇಟ್ಟಿದ್ದೇನೆ, ತಿಂದು ಸಮಾಧಾನಿಸಿಕೊಳ್ಳಿ ]



Wednesday, April 7, 2010

ಕಳೆದು ಹೋಯ್ತು ಮನ !!

ಎಲ್ಲೋ ಕಳೆದು ಹೋಗಿದೆ ಮನಸ್ಸು, ಶಹರದ ಕಾಂಕ್ರೀಟು ಕಾಡುಗಳನ್ನು ನೋಡಿ ಬೇಸತ್ತು ಹೆಣ್ಣೊಬ್ಬಳು ತವರುಮನಗೆ ನಡೆದಂತೆ, ಬಣ್ಣದ ಓಕುಳಿಯಾಡುವ ಮಕ್ಕಳು ಅದೆಷ್ಟೋ ಹೊತ್ತು ತಮ್ಮನ್ನು ತಾವೇ ಮರೆತು ಕುಣಿವಂತೆ, ಕಣ್ಣತುಂಬಿಸಿಕೊಂಡ ದುಂಬಿ ತಾ ಹೂದೋಟದಿ ಹಾರಾಡಿ ಮಕರಂದ ಭುಂಜಿಸುತ್ತ ತನ್ನ ಮರೆತಂತೆ, ಹಾಡುತಿರುವ ಗಾಯಕನೊಬ್ಬ ಹಾಡಿ ಹಾಡಿ ಆ ಸ್ವರಗಳ ಆಲಾಪದಲ್ಲಿ ತನ್ಮಯತೆ ಮೆರೆದಂತೆ, ನೃತ್ಯಗಾತಿಯೊಬ್ಬಳು ನೃತ್ಯದಲ್ಲಿ ಸುತ್ತಲ ಜನರ ಇರವ ಮರೆತಂತೆ, ಚಿಗುರಿದ ಮಾಮರವ ಕಂಡು ಕೋಗಿಲೆ ಅದರಲಿ ಅವಿತಂತೆ, ಕೆಸರಹೊಂಡದಲ್ಲಿ ಎಮ್ಮೆ ತಾ ಮಲಗಿ ಹಾಯಾಗಿ ಇದ್ದುಬಿಡುವಂತೆ, ಮಗುವೊಂದು ಅಜ್ಜಿಯ ಕಥೆಯಲ್ಲಿ ಚಂದ್ರಲೋಕಕ್ಕೆ ಹೋಗಿರುವಂತೆ, ಹೊಟ್ಟೆಬಾಕನೊಬ್ಬ ಎದುರಿಗೆ ಇಟ್ಟದ್ದನ್ನೆಲ್ಲಾ ಕಬಳಿಸುತ್ತಾ ಮಿಕ್ಕುಳಿದವರಿಗೆ ಸ್ವಲ್ಪ ಇರಲಿ ಎಂಬುದ ಮರೆತಂತೆ--ಕಳೆದು ಹೋಗಿದೆ ಮನಸ್ಸು. ನಮ್ಮಲ್ಲಿನ ಜಾತ್ರೆ-ಅಲ್ಲಿನ ರಥ ವೈಭವ, ಅಲ್ಲಿನ ನದಿ-ತೊರೆ-ಗಿರಿ-ಪರ್ವತ, ಅಲ್ಲಿನ ಹಸಿರುಟ್ಟ ಭೂಮಿ-ತೋಟ-ಗದ್ದೆ, ಅಲ್ಲಿನ ಹಳ್ಳಿಯ ಆಲೆಮನೆ ಸಂಭ್ರಮ, ಗ್ರಾಮೀಣ ಜನರ ನಾಟಕ ಪ್ರದರ್ಶನವೇ ಮೊದಲಾಗಿ ಹಲವು ಹತ್ತು ಅಂಶಗಳು ಮನಸ್ಸನ್ನು ಆವರಿಸುತ್ತವೆ, ಮದುವೆಯಾಗಿ ದೂರದೂರಲ್ಲಿ ಇರುವ ಹುಡುಗಿ ತನ್ನ ತಂದೆ-ತಾಯಿಯನ್ನು ಕಂಡಂತೆ, ಪಶು ಮೇವನ್ನು ಕಂಡಂತೆ ಮನಸ್ಸು ಸಂತಸಪಡುತ್ತದೆ;ಪ್ರಪುಲ್ಲವಾಗುತ್ತದೆ

|| ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ || ---- ಎಂದಂತೆ

ಆಗಾಗ ಮನಸು ತನ್ನ ಮೂಲ ಜಾಗಕ್ಕೆ, ತೌರುಮನೆಗೆ ಹೋಗಿಬಿಡುತ್ತದೆ. ಅಲ್ಲಿನ ಆ ಆಹ್ಲಾದಕರ ವಾತಾವರಣ, ಆ ಸ್ವಚ್ಛಗಾಳಿ-ನೀರು, ಅಲ್ಲಿನ ಜನರ ನಿಷ್ಕಪಟ ಮನಸ್ಸು-ಆಡಂಬರ ರಹಿತ ಬದುಕು, ಅಲ್ಲಿನ ಪ್ರಕೃತಿಯ ನಿತ್ಯನೂತನ ಸೊಬಗು, ಅಲ್ಲೀಗ ಆಡುತ್ತಿರುವ ಮಕ್ಕಳ ಆಟ ಈ ಎಲ್ಲಾ ವಿಷಯಗಳು ಸೇರಿ ಸೆಳೆದು ಸೆಳೆದು ಹಸುವಿನ ಮುಂದೆ ಹುಲ್ಲನ್ನು ಹಿಡಿದು ಕರೆದೊಯ್ದಂತೆ ಅಲ್ಲಿಗೆ ಎಳೆದೊಯ್ದುಬಿಡುತ್ತವೆ.ಕಿಡ್ನಾಪ್ ಮಾಡಿಬಿಡುತ್ತವೆ! ಅಲ್ಲೆಲ್ಲಿಯೋ ಅಂಡಲೆಯುವ ಮನಸ್ಸು ಅದೆಲ್ಲಿ ಹೋಯಿತು ಎಂದು ಹುಡುಕುವ ಪ್ರಮೇಯ ಬರುತ್ತದೆ.

ಪ್ರತಿಯೊಬ್ಬ ಜೀವಿಗೂ ಹೀಗೇ. ತನ್ನ ಜನ್ಮ ಭೂಮಿಯ ಬಗ್ಗೆ ಬಹಳ ಆಪ್ತತೆ ಇರುತ್ತದೆ, ಎಂದೂ ಹೋಗಲಾರದಷ್ಟು ದೂರದಲ್ಲಿದ್ದರೂ ಒಮ್ಮೆ ಅಲ್ಲಿಯ ನೆನಪಲ್ಲಾದರೂ ಕಾಲ ಕಳೆಯುವ ಕೆಲಸ ಇಷ್ಟವಾಗುತ್ತದೆ. ಹೊರದೇಶಗಳಲ್ಲಿ ಇರುವ ಜನರ ಸದಾ ಒಂದು ಕೊರತೆಯೆಂದರೆ ಬೇಕಷ್ಟು ದುಡಿದರೂ ಅವರ ಊರಲ್ಲಿ, ಅವರ ಜಾಗದಲ್ಲಿ ಕಳೆದಿದ್ದ ಸಮಯ ಅವರನ್ನು ಸದಾ ಕಾಡುತ್ತಿರುತ್ತದೆ. ಆಗಾಗ ಹೋಗಿಬರುವಾ ಅನ್ನಿಸಿದರೂ ಆಗುವಮಾತಲ್ಲವಾಗಿ ವರ್ಷಕ್ಕೊಮ್ಮೆಯೋ ಎರಡಾವರ್ತಿಯೋ ಬಂದು ಸ್ವಲ್ಪ ಕಾಲ ಇದ್ದು ಮರಳಿ ಹೋಗುತ್ತಾರೆ. ಇಂತಹ ಘಳಿಗೆಯೊಂದು ಮನಃಪಟಲದ ಮೇಲೆ ಸರಿದುಹೊದಾಗ ಮೂಡಿದ ಕವನ---




ಕಳೆದು ಹೋಯ್ತು ಮನ !!

ಕಳೆದು ಹೋಯ್ತು ನನ್ನ ಮನವು ಹುಡುಕ ಹೊರಟೆ ಅದರನು
ಉಳಿದು ಬಿಡುತ ಹಾಗದೆಲ್ಲೋ ಅವಿತುಕೊಳುವ ಪರಿಯನು



ಶಹರವಾಸಕೊಮ್ಮೆ ರೋಸಿ ಕಹಳೆಯೂದಿ ಕಿವಿಯೊಳು
ಪಹರೆಯಲ್ಲಿ ಕಾಯುತಿದ್ದೆ ಕಣ್ತಪ್ಪಿಸಿ ಭುವಿಯೊಳು

ಮಲೆನಾಡಿನ ಸಿರಿ ಸೊಬಗನು ದಿನವಹಿ ಅದು ನೆನೆಸುತ
ಅಲೆಯುತ್ತಿತ್ತು ಮೇವನರಸಿ ಹಸಿರು ತೋಟ ಹುಡುಕುತ




ಮತ್ತೆ ಕರಾವಳಿಯಲೊಮ್ಮೆ ಉತ್ತಮ ಜಾತ್ರೆಗಳೊಳು
ಮೆತ್ತನೆ ಬಿರಿದಾನಂದದಿ ಮಘಮಘಿಸುವ ರಥದೊಳು




ಆಲೆಗಾಣ ತಿರುಗುವಾಗ ಸ್ವರಗಳ ಆಲೈಸುತ
ಶಾಲೆಮಕ್ಕಳಾಟ ಕಂಡು ಅವರಜೊತೆಗೆ ಮಿಳಿಯುತ





ಕೇದಿಗೆಬನ ಜಾಜಿ ಜೂಜಿ ಮಲ್ಲಿಗೆ ಸಂಪಿಗೆಗಳು
ಮೇದಿನಿ ಅಘನಾಶಿನಿ ಶರಾವತಿಯ ತಟದೊಳು




ಅರಳಿನಿಂತ ಕೆಂದಾವರೆ ಕೆರೆಯನೊಮ್ಮೆ ಈಕ್ಷಿಸಿ
ಮರುಳಾಗುತ ಕಳೆಯಿತೆಲ್ಲೋ ಸೋತೆ ನಾನು ವೀಕ್ಷಿಸಿ

Tuesday, April 6, 2010

ಬಾಟಲೀ ಪುತ್ರ ಪುರಾಣಂ




ಕುಡಿತವೆಂಬ ದುಶ್ಚಟಕ್ಕೆ ಬಲಿಯಾಗಿ ಅನೇಕರು ಮನೆ-ಮಠ ಮಾರುವಷ್ಟು ಅದಕ್ಕೇ ತಮ್ಮನ್ನು ಮಾರಿಕೊಂಡಿದ್ದಾರೆ. ಅಪ್ಪಿ ತಪ್ಪಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕುಡುಕನ ಮಡದಿಯಾಗಿ ಕನಸು ಕಟ್ಟಿ ಬಾಳುವ ಹೆಂಡತಿಯ ಗೋಳು ಹೇಳತೀರ. ಕುಡುಕನನ್ನು ತಿದ್ದುತ್ತೇನೆ, ಅವನ ಚಟವನ್ನು ಸಾತ್ವಿಕ ಶಕ್ತಿಯಿಂದ ಬಿಡಿಸುತ್ತೇನೆ ಎಂದು ಹೊರಟು ಅವನನ್ನೇ ಪ್ರೀತಿಸಿ ಮದುವೆಯಾಗಿ, ಮಗುವನ್ನು ಪಡೆದು ಒಂದೆರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯೊಬ್ಬಳನ್ನು ನೋಡಿ ಮರುಗಿದ್ದೇನೆ; ಹೌದು ಕುಡುಕರೇ ಹೀಗೆ, ಅವರು ಯಾರಿಗೂ ಬಗ್ಗದ ಅಧುನಿಕ ಕುಡುಕರು. ಹಿಂದೆ ಒಂದು ಕಾಲಕ್ಕೆ ಹಳ್ಳಿಯ ಭಟ್ಟಿ ಸಾರಾಯಿಗಳಿದ್ದವು.ಅವುಗಳನ್ನು ಕುಡಿಯುವವರೂ ಇದ್ದರು, ಅದರ ಪರಿಪಾಠ ಬದಲಿತ್ತು, ಅಲ್ಲಿ ಒಣ ಪ್ರತಿಷ್ಠೆಗಾಗಿ ಸಮೂಹಸನ್ನಿಗೊಳಗಾಗಿ ಕುಡಿಯುತ್ತಿರಲಿಲ್ಲ.ಆದರೆ ಅಂಥವರೂ ಕೂಡ ಸ್ವಲ್ಪ ತಿಳಿಸಿ ಹೇಳಿದರೆ ಬಿಡುವಲ್ಲಿ ಮುಂದಾಗುತ್ತಿದ್ದರು. ಇಂದು ಕುಡಿಯುವುದೂ ಒಂದು ಕಲೆ ! ಕಾರ್ಪೋರೆಟ್ ಕಲ್ಚರ್ ! ಗುಂಡು-ತುಂಡು ಎಂದು ಅನೇಕ ಹುಡುಗರು ಹೇಳುತ್ತಾ ತಿರುಗುವುದನ್ನು ನೋಡಿದ್ದೇನೆ. ಅದೆಲ್ಲಾ ಆದಮೇಲೆ ಅವರಿಗೆ ಇನ್ನೂ ಕೆಲವು ಇಲ್ಲದ್ದು ನೆನಪಾಗುತ್ತವೆ. ದೇಶದಲ್ಲಿ ಅಲೋಪಥಿ ಔಷಧ ಅಂಗಡಿಗಳು ಮತ್ತು ಬಾರ್ ಅಂಡ್ ರೆಸ್ಟಾರೆಂಟ್ ಗಳು ಮಿತಿ ಮೀರಿದ ವೇಗದಲ್ಲಿ ಹೆಚ್ಚುತ್ತಲೇ ಇವೆ. ಎಲ್ಲಿಯವರೆಗೆ ಇವುಗಳ ನಾಯಿಕೊಡೆಯ ರೀತಿಯ ವೇಗದ ಬೆಳವಣಿಗೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಕುಡುಕರ, ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಮ್ಮೆದುರಿಗೆ ಬರುವ ಯಾವ ವ್ಯಕ್ತಿ ಕುಡುಕರ ಸಾಲಿಗೆ ಸೇರುವುದಿಲ್ಲ ಎಂಬುದನ್ನು ಹೇಳುವುದೇ ಕಷ್ಟ, ಅದು ಅಷ್ಟು ಕೆಟ್ಟ ಜನಪ್ರಿಯ ತುಡಿತ ! ಸಂಘ ಸಂಸ್ಥೆಗಳು ಅನೇಕ ಪ್ರಯತ್ನಿಸುತ್ತಾ ಕುಡುಕರ ಚಟಗಳನ್ನು ಬಿಡಿಸಲು ಬಹಳ ವಿಸ್ತ್ರತ ಅಧ್ಯಯನ,ಅನುಸರಣ ಪ್ರಕ್ರಿಯೆಯಲ್ಲಿ ತೊಡಗಿವೆ, ಆದರೂ ಈ ಕುಡುಕ ಅಪ್ರತಿಮ ಕಳ್ಳ ಮನೋಭಾವದವರು. ತಾಯಿ-ಹೆಂಡತಿ-ಮಕ್ಕಳು ಯಾರಲ್ಲಿಯೂ ನಿಜ ಹೇಳದ ಅವರು 'ದೇವರಾಣೆ ಇನ್ನು ಕುಡಿಯುವುದಿಲ್ಲ ' ಎಂದು ಪ್ರತಿಜ್ಞೆ ಮಾಡಿ ಮಗ್ಗುಲಲ್ಲೇ ಮತ್ತೆ ಬಾಟಲಿ ಮಲಗಿಸಿ ಕೊಂಡೇಬಿಡುತ್ತಾರೆ !

ಒಂದುಕಡೆ ಕುಡುಕರ ಸಂಖ್ಯೆ ಜಾಸ್ತಿ ಆಗುವಂತೆ ಪ್ರೇರೇಪಿಸುವ, ಆ ಕೆಟ್ಟಕಲೆಯನ್ನು ಪೋಷಿಸುವ ಲಿಕ್ಕರ್ ಬ್ಯಾರನ್ [ಹೆಂಡದ ದೊರೆಗಳು] ಬೆಳೆಯುತ್ತಲೇ ಇದ್ದಾರೆ. ಅವರುಗಳ ಸಾಮ್ರಾಜ್ಯ ವಿಸ್ತರಣೆ ಸದಾ ಉನ್ನತಿಯಲ್ಲಿದೆ. ಅನೇಕ ಮಹಡಿಗಳ ಹೊಸ ಹೊಸ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಈ ಕಟ್ಟಡಗಳ ಬುನಾದಿಯ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳ ಕಣ್ಣೀರಿನ ಕಥೆಗಳಿವೆ, ಲಕ್ಷಾಂತರ ಎಳೆಯ ಕುಡುಕರ ಗೋರಿಗಳಿವೆ ! ಇತ್ತ ಕುಡುಕ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಅತ್ತ ಹೆಂಡದ ದೊರೆಗಳು ಬಿಸ್ನೆಸ್ ಮೀಟಿಂಗ್ ಗಳಲ್ಲಿ ಬ್ಯುಸಿಯಾಗಿರುತ್ತ, ಲಲನೆಯರ ಮಧ್ಯೆ ತೊಳಲಾಡುತ್ತಾ, ಬೇಡದ ಸಂಸ್ಕೃತಿಗಳ ಅಘೋಷಿತ ಹರಿಕಾರರಾಗಿ ವಿಜೃಂಭಣೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದು ತಾವೂ ಅತಿ ಶ್ರೇಷ್ಠರೆಂಬ ಹೆಗ್ಗಳಿಕೆಯಿಂದ ಕೊಬ್ಬುತ್ತಿದ್ದಾರೆ; ರಾಜ್ಯ ರಾಜ್ಯಗಳನ್ನೇ ಕೊಳ್ಳುವಷ್ಟು
ದುಡ್ಡುಮಾಡಿಕೊಂಡು ಅನೆಕದೇಶಗಳಲ್ಲಿ ವ್ಯವಹಾರ ನಡೆಸುವತ್ತ ಮುನ್ನುಗ್ಗಿದ್ದಾರೆ. ಇಂತಹ ಸಮಾಜ ಘಾತುಕರಿಗೆ,ಹಗಲು ದರೋಡೆಕೋರರಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ,ಕೊಟ್ಟು ಸನ್ಮಾನಿಸುತ್ತೇವೆ. ಇವರು ಚುನಾವಣೆಗಳಿಗೆ ನಿಲ್ಲಲು ಆಸ್ಪದ ಕೊಡುತ್ತೇವೆ, ನಾಳೆ ಒಂದು ದಿನ ಅಂತಹ ಹೆಂಡದ ದೊರೆಗಳ ಸಂಪೂರ್ಣ ಆಳ್ವಿಕೆಗೆ ಒಳಪಡುವ ಪ್ರಜಾಪ್ರಭುತ್ವವೆಂಬ ದುರಂತ ಕಥೆಯೊಂದರ ಹಂದರವನ್ನು ದೂರ ದೃಷ್ಟಿಯಿಂದ ನಾವು ಈಕ್ಷಿಸಬಹುದಾಗಿದೆ. ಇವತ್ತಿನ ನಮ್ಮಂಥವರ ಸ್ಥಿತಿ ಹೇಗಿದೆ ಅಂದರೆ ಬೆಕ್ಕಿಗೆ ಗಂಟೆ ಕಟ್ಟಲಾರದ ಇಲಿಗಳು ನಾವಾಗಿದ್ದೇವೆ. ನಮ್ಮಲ್ಲಿ ಈ ಕೆಟ್ಟ ಶಕ್ತಿಗಳ ವಿರುದ್ಧ ಭಂಡೇಳುವ ಸಂಘಶಕ್ತಿಯಿಲ್ಲ! ಆ ಸಂಘವನ್ನು ಕಟ್ಟುವ ಸಾಧ್ಯತೆ ಮೊದಲೇ ಕಾಣುತ್ತಿಲ್ಲ ! ಇಂತಹ ಕೈಲಾಗದ ಹತಾಶ ಮನೋಸ್ಥಿತಿಯಲ್ಲಿ ಹುಟ್ಟುವ ಹಲವು ಸಾತ್ವಿಕ ಕ್ರೋಧರೂಪಗಳು ಸಾಕಾರಪಡೆದು ಒಂದು ಕೃತಿಯಾಗಿ ಹೊರಬಂದರೆ ಹೇಗೆ? ಅದು ನಮ್ಮೆಲ್ಲಾ ನೊಂದ ಮಾತೆಯರ-ಮಹಿಳೆಯರ ಪರವಾಗಿ ಕುಡುಕರ ಬಗ್ಗೆ, ಅವರನ್ನು ಕುಣಿಸುವ,ಆಡಿಸುವ ಹೆಂಡದ ದೊರೆಗಳ ಬಗ್ಗೆ ಬರೆದ ಹಾಸ್ಯದ ಹೊನಲಾಗಲಿ ಅಲ್ಲವೇ ? ಇಂತಹ ಕೆಟ್ಟ ಸನ್ನಿವೇಶಗಳಲ್ಲಿ ನಮ್ಮ ಹರಕಂಗಿ ಮಾಬ್ಲೇಶ್ವರ ಕವಿ ಬರೆಯತೊಡಗುತ್ತಾನೆ !


ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಸೋಮಕಾಂಡದ ಪೇಯಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ನಭಯಂ ನಾಸ್ತಿ ಸ್ವಭಾವತಃ " ಅಂದರೆ ಕುಡಿತದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಅದರಲ್ಲೇ ಮುಳುಗಿ ಸಾಯುವವನಾಗಿರುತ್ತಾನೆ ಎಂದೂ ಅವನೊಳಗಿನ ಹೆಂಡ ಹೊರಗಿನ ಹೆಂಡವನ್ನು ಕರೆದು ಒಳ ಸೇರಿಸಿಕೊಳ್ಳಲು ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಕೆಟ್ಟ ದ್ರವಪದಾರ್ಥ ಅವನ ಕಣ್ಣಿಗೆ ಬಿತ್ತು. ಅದರಿಂದ ಬಂದ ಒಂದು ಆರ್ತನಾದ ಅವನಿಗೆ ಕೇಳಿಸಿತು .
ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ದ್ರವರೂಪದ ಆತ್ಮ ಹೀಗೆ ಉತ್ತರಿಸಿತು. " ಸ್ವಾಮೀ ರಾಮ, ನಿನ್ನ ಬರುವಿಕೆಗಾಗೇ ಇಷ್ಟು ದಿನ ಕಾದಿದ್ದೆನಪ್ಪಾ, ನನ್ನ ಗುರುತು ಸಿಗಲಿಲ್ಲವೇ? ಲಂಕೆಯಲ್ಲಿ ನಿನ್ನಜೊತೆ ಸಹಸ್ರಾರು ಕಪಿಗಳು ಸೇರಿ ರಾವಣನ ಸಂಹಾರವನ್ನು ಮಾಡುವ ಘಳಿಗೆಯಲ್ಲಿ ರಾವಣನ ಶರೀರದಲ್ಲಿ ಅಡಗಿದ್ದ ಅಸದೃಶ ಶಕ್ತಿ ನಾನಾಗಿದ್ದು, ಆತ ಸೋತು ಉಚ್ಚೆ ಹೊಯ್ದಾಗ ಆ ರೂಪದಲ್ಲಿ ಹೊರಬಿದ್ದು ಬಹಳ ತೊಳಲಾಡಿಬಿಟ್ಟೆ, ಆದರೂ ಬಿಡದೆ ನಿನ್ನ ಕಪಿ ಸೈನಿಕರನೇಕರು ನನ್ನನ್ನು ತುಳಿದು ಜಾರಿಬೀಳುವಂತೆ ಮಾಡಿದೆ. ಆ ಸ್ಥಿಯಲ್ಲಿ ಅದನ್ನರಿತ ನೀನು ಕೋಪದಿಂದ ನನಗೆ ಕೆಟ್ಟ ವಾಸನೆ ಹೊಡೆಯುವ ದ್ರವವಾಗಿ ಬಿದ್ದಿರು ಎಂದು ಶಾಪವಿತ್ತೆ "

ರಾಮ ಆಜ್ಞಾಪಿಸಿದ -" ಆಗಲಿ, ಆದದ್ದೆಲ್ಲ ಒಳ್ಳೆಯದೇ ಅಂತ ತಿಳಿ, ಕಲಿಯುಗದಲ್ಲಿ ಬಾಟಲಿಗಳಲ್ಲಿ ಬರ್ತಿಯಾಗುವ ಮದಿರೆಯಾಗಿ ನಿನ್ನ ವಶರಾಗುವ ಹಲವು ಪಾಪಿಜನರ ವಂಶ ನಿರ್ವಂಶ ಮಾಡಿ ಮರಳಿ ಪಾತಾಳಕ್ಕೆ ಹೋಗು, ಅಲ್ಲಿ ಮುಂದೆ ನೀ ಸುಖದಿಂದಿರು,ಕಾಲಾನಂತರದಲ್ಲಿ ಪ್ರಳಯ ಸಂಭವಿಸಿದ ಮೇಲೆ ಒಳ್ಳೆಯ ರೂಪವನ್ನ ಪಡೆದು ಸ್ವಸ್ಥಾನಕ್ಕೆ ಸೇರು "

ಹರಕಂಗಿ ಮಾಬ್ಲೇಶ್ವರ ಕವಿ ಬರೆದ ಈ ಪುರಾಣದ ಸಂಕ್ಷಿಪ್ತ ರೂಪ ತಮಗಾಗಿ----



[ಚಿತ್ರಗಳ ಋಣ : ಅಂತರ್ಜಾಲ]

ಬಾಟಲೀ ಪುತ್ರ ಪುರಾಣಂ

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ಮೊದಲಂ ಕಿಂಗಫಿಶರ್ ಬಾಟಲಿಂ ಬಗಲೊಳಿಟ್ಟು ಮದ್ದಾನೆ ಥರದಿಂದ ಮುನ್ನುಗ್ಗುತಂ ಎದುರಿಗೆ ಬಂದವಗೆಲ್ಲ ಗಣನೆಗಂ ತೆಗೆದುಕೊಳಲೇನಪ್ಪನೆ ಕಡುಪಾಪಂ ಬರ್ಪುದು ಅದಕಂ ಮರೆತು ತಳ್ಳುತ ಮುಂದೆ ಮುಳ್ಳು ಹಂದಿಯಥರದಿ ದುರುಗುಡುತಂ ಮುದದಿ ತಾನೊಬ್ಬನೇ ನಸುನಗುತಿದ್ದ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ವೋಡ್ಕಾ ವಿಸ್ಕಿಯದೇನು ಬಂತು ಮಹಹಾ ರಮ್ಮೇನು ಜಿನ್ನೆನ್ನುತಂ ಅಲ್ಲಿ ವೊಡಾಫೋನಿಲ್ಲವೇ ಕುಂತು ಕರೆಯಲವರ್ಗಳಂ ಡೋರು ಸಪ್ಲೈ ಮಾಳ್ಪರು ಮಿಗೆ ಬಿಲ್ಲಕೂಡಮವರೇ ತರ್ಪರು ಅನಿತರೊಳ್ ದ್ವೈತಮದ್ವೈತವಾಗಿ ವಿಶಿಷ್ಟಾದ್ವೈತಮಾಗಿ
ಹರಿಹರ ಭೇದವೆಣಿಸದೆ ಗಟಗಟನೆ ಕುಡಿದು ಉಮ್ಮಳಿಸಿದರೆ ಇಂದ್ರನ ಒಸಗೆ ಹತ್ತಿರವೆಂದನೈ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಮಲ್ಯರ್ ಖೋಡೆಗಳಾದಿ ಹಲವರ್ ನಿಸ್ವಾರ್ಥದಿಂ ಜನತೆಗಂ ಬಹು ಪ್ರೀತಿಲಿ ಕೊಡಮಾಳ್ಪರ್ ತಾವು ಹಲವು ರೂಪಂಗಳಂ ನೀಡುತಂ ಬಸಿದು ಕೊಡಲಾ ಬಾಟಲಿಯೋಳ್ ಹೊಸಲೋಕಕೆಲ್ಲ ಕರೆದೊಯ್ವ ಕುಸುಮಕೋಮಲಾಂಗಿಯರ ಚಿತ್ರವಂ ಬರೆದು ರಸ್ತೆಯಿಕ್ಕೆಲಕಂಟಿಸಲ್ಕೆ ನಮಗದನಂ ನೋಡುತ ನೆಶೆಬರ್ಪುದು ಇದು ಪಾನಂಗಳೊಳಗೆ ಅತಿ ಶ್ರೇಷ್ಠಮೆಂದ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಅವ ಧರಿಸಿ ಬಾಟಲಿಯ ಕೈಯ್ಯಲಿ ಹದನೆ ತಿರುಗಿಸಿ ಬೂಚು-ಮುಚ್ಚಳ ತೆಗೆದು ಬಿಸುಡುತ ಮೂಸುತಹಹ ಪರಿಮಳವು ಘನವೆನುತಂದದಲಿ ಸರಕ್ಕನೆ ಗ್ಲಾಸೊಳದನಂ ಬಗ್ಗಿಸುತ ಮಿಗೆ ಐಸು ಪೀಸುಗಳನೆಲ್ಲ ತೆಗೆತಂದು ಟಣಕು ಟಣಕು ಟಣಕೆನೆ ಅದರೊಳಿಟ್ಟು ಮೂರಾವರ್ತಿ ಎತ್ತಿ ಬಾಯ್ಗಿಳಿಸೆ ನಿಡುಸುಯ್ದು ಜಗವನೆ ಮರೆತ ವಿಚಿತ್ರವಂ ಕಂಡು ನಡುಗಿದ ನಮ್ಮ ಶಂಭೋ ಮಹಾದೇವ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಸಾಟಿಯುಂಟೆ ಮೂಜಗದಿ ಎನಗೇನುಕಮ್ಮಿ ಎಂದೆನುತ ಮಿಗೆ ತೂರಾಡುತಂ ಹಾರಿ ಹಾರಿ ತನ್ನಿರವನೆ ಮರೆತು ಥಕತೈ ಎನಲಂ ಸ್ವರ್ಗದಲಿರ್ಪ ಮಹಾಮಹಿಮ ಭರತಮುನಿ ಕಿಟಕಿಯಿಂದಾಚೆ ಗಾವುದ ಗಾವುದ ದೂರ ದೃಷ್ಟಿ ಬೀರೆ ಕಂಡನಪಸವ್ಯ
ಕುಂಡೋದರನ ಭರತನಾಟ್ಯವಂ ಅಯ್ಯೋ ಎಂದೆನುತ ಹಣೆಯಂ ತಾಂ ಚಚ್ಚಿಕೊಂಡ ನೋಡಾ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಒಂದಿನಿತು ಕಾಸಿಲ್ಲದಲೇ ಮುಗಿದಾದೊಂದುದಿನ ಪತ್ನಿಯಂ ಅಂಗಳದಿ ಎಳೆತಂದು ಭಕ್ತಿಯಿಂ ಮಂಗಳದ ಸೂತ್ರವಂ ಸರ್ರನೆ ಬಲಗೈಲಿ ತಾಂ ಪಿಡಿದು ಹರಿಯಲ್ಕೆ ಕೆನಲುತ ಕೆಂಡವಾದಳು ಗರತಿ ಗಂಡನ ಗುಂಡಿನಾಟದಲೀಂ ಮಿಗೆ ನಂಗಾನಾಚು ಮಾಡೆಂದ ಭೂಪನ ಕಂಡು ನಡುಗಿದರ್ ಪಕ್ಕದೊಳಿರ್ಪ ಅಂಗನೆಯರೆಲ್ಲ ಸೇರುತೈತಂದು ಭಂಗವ ಬಿಡಿಸಲ್ಕೆ ಎಳೆದೊಯ್ದರದೋ ಗೆಳತಿಯ ಮಾನಮಂ ಮುಚ್ಚುತ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಿಜಿ ಅಮೇರಿಕ ಸ್ವಿಟ್ಜರ್ ಲೆಂಡು ಜೆಪಾನು ಎಂತೆಲ್ಲ ತೂಫಾನಿನಂತೆ ಸಗ್ಗದ ವಿಮಾನಮಂ ಏರಿ ಅಂಬರಕೇರಿ ತೊಡೆಯಲಿ ಲ್ಯಾಪುಟಾಪಿಡುತಂ ಪಕ್ಕದಿ ಚಂದಿರಾನನೆಯರ ಸೆಳೆದುಕೊಳುತಂ ಮುಸಿ ಮುಸಿ ನಗುತ ಬಿಳಿ ಮಂಗನಂ ತೆರದಿ ತುಸು ಬಿಟ್ಟ ಗಡ್ದವಂ ಬರಿದೆ ಸ್ಟೈಲಿಗೆ ತುರಿಸಿಕೊಳುತಂ ವಸುಮತಿಯ ಮಡಿಲಲ್ಲಿ ಬಿದ್ದಿಹ ಹಲವರ ಕಸುವು ತನದೆಂದೆನುತ ಉಸುರಿ ನಕ್ಕನು ಹೆಂಡದೊರೆ ತಾಂ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಗರತಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ

Monday, April 5, 2010

ಕಳ್ಳಮನಕೆ ಬೋಧನೆ

ಬದುಕಿನಲ್ಲಿ ಅನೇಕರು ಕಳ್ಳತನಕ್ಕೆ ಇಳಿಯುವುದು ಏನೂ ತೋಚದಾಗ, ತಮಗೆ ಯಾವುದೇ ದುಡಿಮೆಯ ಮಾರ್ಗ ಕಾಣದಾಗ, ಬದುಕೆಂಬ ವ್ಯವಹಾರದಲ್ಲಿ ಸೋತಾಗ, ಆಸೆ ಅತಿಯಾದಾಗ. ಮನದಲ್ಲಿ ತುಂಬಿರುವ ಹಲವು ಮುಳ್ಳುಗಳಲ್ಲಿ ಇದೂ ಒಂದು ಮುಳ್ಳು. ಕಳ್ಳತನ ಅನುವಂಶೀಯತೆಯಲ್ಲ ! ಕಳ್ಳತನ ಹುಟ್ಟಾ ಬಂದಿದ್ದಲ್ಲ, ಬದಲಿಗೆ ಆಮೇಲೆ ಕಲಿತ ಕೆಟ್ಟ ಪಾಠ ! ಎಳವೆಯಲ್ಲೇ ಒಳ್ಳೆಯ ಗುರು ಸಿಗದಿದ್ದರೆ ಅಡ್ಡ ಮಾರ್ಗ ಹಿಡಿದು, ಬೆಳೆಯುತ್ತ ದೊಡ್ಡವರಾದಾಗ ಅದನ್ನೇ ಸರಿ ಎಂದು ಸಮರ್ಥಿಸುತ್ತ ತಿರುಗುವ ಮನಕ್ಕೆ ಸರಿಯಾದ ಗುರು ಸಿಕ್ಕರೆ ಪರಿವರ್ತಿತವಾಗಬಹುದು. ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿ | ಶ್ರೀ ಬೆಟಗೇರಿ ಕೃಷ್ಣ ಶರ್ಮರು ' ಕಳ್ಳರ ಗುರು ' ಎಂಬ ಕಥೆಯೊಂದನ್ನು ಬರೆದಿದ್ದಾರೆ, ಅದರಲ್ಲಿ ಕಳ್ಳ ಹೇಗೆ ರಾತ್ರಿ ದೊಂದಿ ಹೊತ್ತಿಸಿಕೊಂಡು ಬಂದು ವೈದ್ಯರೊಬ್ಬರ ಮನೆಯ ಬಾಗಿಲು ಬಡಿದು ಸಹಾಯಕ್ಕಾಗಿ ಬೇಡುವುದು, ವೈದ್ಯರು ತಮ್ಮ ಕರ್ತವ್ಯಪರತೆಯಿಂದ ಆತ ಕಳ್ಳನೆಂದು ಗೊತ್ತಿದ್ದರೂ ಆತನ ಜೊತೆಗೆ ಹೋಗಿ ಆತನ ಮಗುವನ್ನು ಕಾಯಿಲೆಯಿಂದ ಗುಣಮುಖವಾಗಿಸಿ ಬದುಕಿಸಿದ್ದು, ಮುಂದೆ ಆ ಕಳ್ಳ ತನ್ನ ಸ್ವಭಾವ ತಿದ್ದಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದು --ಇದನ್ನೆಲ್ಲ ಹೇಳಿದ್ದಾರೆ.

ಇವತ್ತಿನ ಸಿರಿಯ-ಸಂಪತ್ತಿನ ಬೆಡಗಿನ ವೈಭೋಗಗಳನ್ನು ಕಂಡು ಮನಸ್ಸು ಶೀಘ್ರ ಅವುಗಳನ್ನೆಲ್ಲ ಉಪಭೋಗಿಸುವ,ಉಪಯೋಗಿಸುವ ಆತುರಕ್ಕೆ ಒಳಗಾಗುತ್ತದೆ. ಅಂತಹ ಆತುರ ಕೆಲವೊಮ್ಮೆ ಮನಸ್ಸನ್ನು wild thinking ಹಚ್ಚುತ್ತದೆ, ಅಲ್ಲಿ ನಾವು ನಮ್ಮತನವನ್ನು ಮರೆತು ಏನೇನೋ ಕನಸುಕಂಡು ಆ ಹುಚ್ಚು ಸಾಹಸಕ್ಕೆ ಅಣಿಯಾಗುತ್ತೇವೆ. ಬೇಡದ ಆ ಸಂಪತ್ತಿಗೆ ಕೈಚಾಚಿ ಹಲವು ನೀತಿಬಾಹಿರ ಚಟುವಟಿಕೆಗಳಿಗೆ ಮನ ಮುಂದಾಗುತ್ತದೆ, ಇದಕ್ಕೆಲ್ಲ ಕಾರಣ overnight riches. ತ್ವರಿತ ಶ್ರೀಮಂತಿಕೆಯ ಬೆನ್ನು ಹತ್ತುವಿಕೆ. ಅವರ ಹತ್ತಿರ ಬಂಗಲೆಯಿದೆ ನನಗೂ ಇರಲಿ, ಅವರ ಹತ್ತಿರ BMW ಕಾರಿದೆ ನನ್ನ ಹತ್ತಿರವೂ ಇರಲಿ, ಅವರ ಮನೆಯಲ್ಲಿ ೫೬" ಎಲ್ ಈ ಡಿ ಟಿವಿ ಇದೆ ನಮ್ಮ ಮನೆಯಲ್ಲೂ ಇರಲಿ ಎಂಬ ಬಯಕೆ, ಅದೂ ನಾಳೆಯೇ ಬೇಕೆಂಬ ಆಸೆ. ಇಂತಹ ಆಸೆಗಳಿಗೆ ಕಡಿವಾಣ ಹಾಕದಿದ್ದರೆ ನಾವು ಯವುದೋ ಒಂದು ಅರ್ಥದಲ್ಲಿ ಕಳ್ಳರಾಗುತ್ತೇವೆ! ಇನ್ನು ಕೆಲವರು ಆಸ್ಪತ್ರೆಯ ಖರ್ಚಿಗಾಗಿ ದುಡ್ಡಿಲ್ಲದೆ, ಎಲ್ಲೂ ಸಾಲವೂ ಸಿಗದೇ ಅನಿವಾರ್ಯತೆಯಲ್ಲಿ ಕಳ್ಳರಾಗುತ್ತಾರೆ-ಅಂಥವರಲ್ಲಿ ನನ್ನ ಪ್ರಾರ್ಥನೆ--ನೀವು ನೇರ ಮಾಧ್ಯಮಗಳಲ್ಲಿ ನಿಮ್ಮ ಅನಿವಾರ್ಯತೆ ತಿಳಿಸಿ ಪ್ರಾರ್ಥಿಸಿ, ನಮ್ಮ ಜನ ಸಹಾಯಮಾಡುತ್ತಾರೆ, ಬದಲಾಗಿ ಕಳ್ಳತನ ಬೇಡ. ಇನ್ನು ಹೆಸರಿಗಾಗಿ ಕಳ್ಳತನ, ಕೃತಿ ಚೌರ್ಯಮಾಡಿಯಾದರೂ ಹೆಸರು ಪಡೆಯಬೇಕೆಂಬ ಉಳ್ಳವರ ಕಳ್ಳತನ,ಆಡಿಯೋ ವೀಡಿಯೋ ಪೈರೆಸಿ ಹೀಗೆ ಹಲವು ವಿಧದ ಕಳ್ಳತನಗಳಿವೆ, ಕಳ್ಳತನಗಳ ಕುರಿತಾಗಿ ಮನಸ್ಸು ಬೇಸರಿಸಿದಾಗ ಹುಟ್ಟಿದ ಕೆಲವು ಚುಟುಕಗಳನ್ನು ಸದ್ಗುರು ಡೀವೀಜಿಯವರನ್ನು ನೆನೆದು ಅವರ ಕಗ್ಗದ ರೀತಿಯಲ್ಲಿ ಬರೆಯಲು ಹೊರಟ ಪ್ರಯತ್ನದ ಕೂಸು ಇದು --



[ಚಿತ್ರ ಋಣ : ಅಂತರ್ಜಾಲ ]

ಕಳ್ಳಮನಕೆ ಬೋಧನೆ

ಕಳ್ಳತನ ಎಂಬುವುದು ಕಳ್ಳಿ ಹಾಲಿನ ರೀತಿ
ಮುಳ್ಳು ಕುಟುಕುತ ಜೀವಹಿಂಸಿಪ ಅನೀತಿ
ಎಳ್ಳು ನೀರನು ಬಿಟ್ಟು ಮರೆನಿನ್ನ ನೋವುಗಳ
ಜೊಳ್ಳು ನೀನಾಗದಿರು | ಜಗದಮಿತ್ರ

ಬೆಳ್ಳಗಿರುವುದು ಎಲ್ಲ ಹಾಲಲ್ಲ ತಿಳಿದಿರಲಿ
ಉಳ್ಳವರಲೂ ಕಳ್ಳ ಬುದ್ಧಿ ತಾನಿಹುದು
ಬೆಳ್ಳಕ್ಕಿ ಕೊಕ್ಕರೆಯ ಬೋಧನೆಯ ಕೇಳುತಲಿ
ಮಳ್ಳುಬೀಳಲು ಬೇಡ | ಜಗದಮಿತ್ರ

ಕಾಸುಕಾಂಚಾಣ ಬೆಳ್ಳಿಬಂಗಾರದೊಡವೆಗಳ
ವಾಸನೆಯ ಹಿಡಿದು ಬೆಂಬಲಿಸುವುದು ಬೇಡ
ವಾಸಿಯಾಗದ ರೋಗ ಅದುಮಾತ್ರ ವಸುಧೆಯೊಳು
ಬೀಸು ದೊಣ್ಣೆಯನದಕೆ | ಜಗದಮಿತ್ರ

ಕಂಡವರ ಮನೆಯ ಸಿರಿ ಕಣ್ತುಂಬಿ ಹಲುಬದಿರು
ಭಂಡಧೈರ್ಯದಿ ನುಗ್ಗಿ ದೋಚಲವುಗಳನು
ಉಂಡಮನೆಗೆರಡು ಬಗೆಯುವ ಯೋಚನೆಯ ಬಿಟ್ಟು
ಗಂಡು ನೀನಾಗಿ ಮೆರೆ | ಜಗದಮಿತ್ರ

ಶೀಘ್ರದಲಿ ಕೈತುಂಬ ತುಂಬಿಕೊಳುವಾಮನದಿ
ವ್ಯಾಘ್ರವೇಷಕೆ ಕೊಡದೆ ಕೆಟ್ಟ ಅವಕಾಶ
ಉಗ್ರನಾಗಿಹ ನಾರಸಿಂಹನನು ನೆನೆಯುತ್ತ
ಜಾಗ್ರತೆಯ ನೀನುಣಿಸು | ಜಗದಮಿತ್ರ

ಹೆಣ್ಣು ಹೊನ್ನು ಮಣ್ಣು ಮೂರು ವಿಷಯಗಳಲ್ಲಿ
ಕಣ್ತಪ್ಪಿ ಬೀಳದಿರು ಆಳ ಕಮರಿಯಲಿ
ಉಣ್ಣು ನಿನಗಿರುವಷ್ಟು ಸಣ್ಣವನು ನೀನಲ್ಲ !
ಕಣ್ಣು ಕೈಯ್ಯೊಳಗಿರಲಿ | ಜಗದಮಿತ್ರ

ಒಳ್ಳೆತನವಿರೆ ದೈವ ಕೊಡುವುದದು ನಿನಪಾಲು
ಸುಳ್ಳುಹೇಳುತ ಕರೆಯದಿರು ಸಂಪದವನು
ಪೊಳ್ಳುಮನಕೀ ಬೋಧೆ ತುಂಬು ನೀ ಕಲಿಸುತ್ತ
ಮುಳ್ಳುಗಳ ಹೊರತೆಗೆಯೋ | ಜಗದಮಿತ್ರ

Sunday, April 4, 2010

ಕನ್ನಡಮ್ಮನ ಕೈತುತ್ತು ನೆನೆದು

ಆಗಾಗ ನಾವು ಮಾಡಬೇಕಾದ ಕರ್ತವ್ಯಗಳಲ್ಲಿ ಕನ್ನಡಮ್ಮನ ನೆನಪೂ ಒಂದು. ನಮ್ಮಿಂದ ಏನನ್ನೂ ಕೇಳದ ತಾಯಿ ನಮಗೆಲ್ಲವನ್ನೂ ಕೊಡುತ್ತಲೇ ಇರುತ್ತಾಳೆ. ತಾಯಿಗೆ ತನ್ನ ಮಗಿವಿನ ಮೇಲೆ ಅದಮ್ಯ ಆಸೆ, ಬಿಟ್ಟಿರಲಾರದ ಪ್ರೀತಿ, ನಿರ್ವ್ಯಾಜ-ನಿಷ್ಕಳಂಕ ಹೊಕ್ಕುಳ ಬಳ್ಳಿಯ ಮೋಹದ ಹರಹು. ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ, ಒಮ್ಮೆ ಹೆತ್ತಮೇಲೆ ಅದು 100 % RECORDED IN MIND ! ಮಗು ಕುಂಟೋ-ಕುರುಡೋ-ಮೂಕವೋ-ಬುದ್ಧಿಮಾಂದ್ಯವೋ ಅದಕ್ಕಾಗಿ ಮಗುವನ್ನು ತೊರೆಯುವುದಿಲ್ಲ. ಎಷ್ಟೋ ಮಕ್ಕಳು ಪೋಲಿಯೋ ಆಗಿ ಬಳಲುತ್ತಿದ್ದರೂ ತಾಯಿ ತಾನು ಮುದುಕಾಗಿ ದೇಹ ಬಿಡುವವರೆಗೂ ಪ್ರೀತಿಯಿಂದ ಪೊರೆದಿದ್ದನ್ನು, ಹೊತ್ತು ಹೊತ್ತಿಗೆ ಅವರ ಬೇಕುಬೇಡಗಳನ್ನು ಕೇಳಿ ತಿಳಿದು ಪೂರೈಸಿದ್ದನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಇಂತಹ ಅಮ್ಮ ತನಗೇ ಹಸಿವಿದ್ದರೂ, ಆರೋಗ್ಯ ಕೆಟ್ಟಿದ್ದರೂ ತನ್ನ ಮಗು ಮಾತ್ರ ಉಂಡುಟ್ಟು ಸುಖವಾಗಿರಲಿ ಎಂದು ಬಯಸುತ್ತಾಳೆ,ಹಾರೈಸುತ್ತಾಳೆ, ಹರಸುತ್ತಾಳೆ , ತನ್ನಿಂದ ಆಗುವ ಸರ್ವ ಪ್ರಯತ್ನ ಮಾಡುತ್ತಾಳೆ. ಮಗು ದೊಡ್ಡದಾಗಿ ೫೦ ವರ್ಷವಾದರೂ ತಾಯಿಗೆ ಇನ್ನೂ ಅದು ಮಗುವೇ ! ಆ ಹಸಿ ಹಸಿ ಪ್ರೀತಿಯನ್ನು ಅವಳು ತೊಡೆದುಹಾಕುವುದೇ ಇಲ್ಲ. ಇಂತಹದೇ ಪ್ರೀತಿ ನಮ್ಮ ಕನ್ನಡಮ್ಮನದು, ಅಲ್ಲಿ ಹೇಳಲು ಬಾಯಿಲ್ಲ, ಹರಸಲು ಕಾಣುವ ಕೈಯಿಲ್ಲ, ಆದರೆ ಎಲ್ಲವೂ ಅವ್ಯಕ್ತ, ಆ ಅವ್ಯಕ್ತದಲ್ಲೇ ಆನಂದ ಕೊಡುವ ಪರಿ ಅದ್ಭುತ, ಶಾಶ್ವತ, ಚಿರಂತನ, ಚಿರನೂತನ. ಅಂತಹ ಹೆತ್ತ ಕನ್ನಡಮ್ಮ ಕೊಡುತ್ತಿರುವ ಕೈತುತ್ತನ್ನು ನೆನೆಸಿ ಬರೆದೆ, ನಿಮಗರ್ಪಿಸಿದೆ ಇಗೋ ಸ್ವೀಕರಿಸಿ ಈ ಹಾಡು--




ಕನ್ನಡಮ್ಮನ ಕೈತುತ್ತು ನೆನೆದು


ಕನ್ನಡ ಜನತೆಯ ಮನವನು ತಣಿಸಲು
ನನ್ನಾಸೆಯ ಕೃತಿ ಬರೆದಿಹೆನು
ಮುನ್ನಡೆಸಿರಿ ನೀವ್ ಬಂಧುಗಳೆಲ್ಲರು
ಉನ್ನತ ದಿನವನು ಬಯಸಿಹೆನು

ರನ್ನ ಷಡಕ್ಷರಿ ಪಂಪ ಹರಿಹರರು
ಕಣ್ಣತೆರೆಸಿದರು ಅಂದಿನಲಿ
ಜನ್ನ ಲಕುಮಿಪತಿ ಪೊನ್ನ ಮುದ್ದಣರು
ಮುನ್ನ ಬರೆದರದೋ ಪ್ರೀತಿಯಲಿ

ಅನುಕೂಲದಿ ಅರೆಗಳಿಗೆಯ ಎತ್ತಿಡಿ
ಮನೆವಾರ್ತೆಯ ಜೊತೆ ಅನುದಿನವು
ಇನಕುಲೇಂದ್ರನೋಲೈಸುತ ಬೆಳಗಿರಿ
ಮನುಕುಲಕಾಗುವ ಸುಪಥವನು

ಅನ್ನವೀಯುತಲಿ ಪೊರೆದೀ ಕನ್ನಡ
ಅನ್ಯ ಭಾಷೆಗಿಂತಲು ಮಿಗಿಲು
ಮಾನ್ಯಮಾಡಿ ನಿಮ್ಮೆದೆಗೂಡಲಿ ತುಸು
ನನ್ನೀ ಅಮ್ಮನ ಸುಖಮಡಿಲು

ವನರಾಶಿಯ ಸಹ್ಯಾದ್ರಿಯ ಶ್ರೇಣಿಯ
ಘನ ಖನಿಜದ ನಿಕ್ಷೇಪಗಳ
ಅನವರತವು ಕಾಪಿಡಿ ಕೊಲೆಗೈಯ್ಯದೆ
ಜನಕೀಯಲಿ ಸುಖ ಭೋಗಗಳ

ಕನವರಿಸಿದೆ ನಾ ಮುಂದಿನ ದಿನಗಳ
ಧನ-ಕನಕೇತರ ಕಣಜಗಳ
ಕೆನೆ ಹಾಲ್ಮೊಸರು ತುಪ್ಪ ಜೇನುಗಳ
ಕೊನೆಯಿರದಿರಲೀ ಊಟಗಳ

ಜನಸಂಪದವದು ಹರುಷದಿ ನಲಿಯಲಿ
ಮನದುಂಬುತ ಈ ಕೃತಿಗಳನು
ವನಸಿರಿಯದ ಶಾಶ್ವತವಿಡೆ ಜಗದಲಿ
ಕನಸದು ನನಸೆಂದೆನ್ನುವೆನು

Saturday, April 3, 2010

ಬ್ರೆಕಿಂಗ್ ನ್ಯೂಸ್ !!



ಬ್ರೆಕಿಂಗ್ ನ್ಯೂಸ್

" ಎಲ್ಲಾ ವೀಕ್ಷಕರಿಗೂ ಕಳಪೆ ಟಿವಿ 24 X 7 ಗೆ ಸ್ವಾಗತ, ನಾನು ಸಂಜನಾ,

" ಇವತ್ತಿನ ವಿಶೇಷ ಎಂದರೆ ಇಂದು ಕಳಪೆ ಟಿವಿ ಗೆ ಹತ್ತನೇ ವರ್ಷದ ಹುಟ್ಟಿದ ಹಬ್ಬ, ದೇಶಾದ್ಯಂತ ತನ್ನ ಬ್ರೆಕಿಂಗ್ ನ್ಯೂಸ್ ಮೂಲಕ ಮನೆಮಾತಾಗಿರುವ ಕಳಪೆ ಟಿವಿ ಜನಸಾಮಾನ್ಯರ ನಾಡಿಮಿಡಿತವನ್ನು ಬೆಂಬಲಿಸುತ್ತಾ ಟಿ.ಆರ್.ಪಿ ರೇಟಿನಲ್ಲಿ ಪ್ರಥಮಸ್ಥಾನ ಗಳಿಸಿ ಹಲವು ಕಂಪನಿಗಳ ಜಾಹೀರಾತುಗಳನ್ನು ದಿನವಿಡೀ ಪ್ರಸಾರಿಸುತ್ತಾ ಸಮಾಜದಲ್ಲಿ ಬಹಳ ಸ್ತುತ್ಯಾರ್ಹ ಕಾರ್ಯಕ್ರಮಗಳನ್ನು ಕೊಡುತ್ತಿದೆ, ಇದಕ್ಕಾಗಿ ಈ ಸಲದ ಪದ್ಮ ಪ್ರಶಸ್ತಿಯನ್ನು ಪಡೆಯುವಲ್ಲಿ ಕೂಡ ನಮ್ಮ ಕಳಪೆ ಟಿವಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಹೇಳಲು ಬಹಳ ಸಂತಸವೆನಿಸುತ್ತಿದೆ "

" ಇಂದು ಬೆಳಗಿನ ಜಾವ ಹಾಸಿಗೆಪಾಳ್ಯದಲ್ಲಿ ನಡೆದ ಮನಕಲಕುವ ಘಟನೆಯನ್ನು ತಮಗೆ ತೋರಿಸುತ್ತಿದ್ದೇವೆ ಈ ನೇರಪ್ರಸಾರದಲ್ಲಿ , ಬನ್ನಿ ಹಾಗಾದ್ರೆ ನಮ್ಮ ವರದಿಗಾರ ಪ್ರಾಣೇಶ್ ಈಗ ನಮ್ಮ ಸಂಪರ್ಕದಲ್ಲಿದ್ದಾರೆ ಅವರಜೊತೆ ಅದರ ಬಗ್ಗೆ ತಿಳಿದುಕೊಳ್ಳೋಣ "

" ಪ್ರಾಣೇಶ್ ಹೇಳಿ, ಕೇಳಿಸ್ತಾ ಇದ್ಯಾ ? "

" ಕೇಳಿಸ್ತಾ ಇದೇ ಸಂಜನಾ, ಇಲ್ಲಿ ಮಂಜುನಾಥ್ ಅವರ ಮನೆಯಲ್ಲಿ ಬೆಳಗಿನ ಜಾವ ಹಾಸಿಗೆಯಲ್ಲಿ ಏನೋ ಕಚ್ಚುತ್ತಿದೆ ಎನಿಸಿ ತುರಿಕೆಯಾಗಿ ಎದ್ದು ಲೈಟ್ ಹಾಕಿ ನೋಡಿದ್ದಾರೆ, ನೋಡಿದರೆ ಅತಿದೊಡ್ಡ ತಿಗಣೆ ಹಾಸಿಗೆಯನ್ನು ಬಿಟ್ಟು ಓಡುತ್ತಿತ್ತು , ಅಂತೂ ಹಲವುನಿಮಿಷಗಳ ಕಾಲ ಪ್ರಯತ್ನಿಸಿ ಆ ತಿಗಣೆಯನ್ನು ಹಿಡಿಯುವಲ್ಲಿ ಮಂಜುನಾಥ್ ಯಶಸ್ವಿಯಾಗಿದ್ದಾರೆ ಸಂಜನಾ "

" ನಂತರ ಏನ್ಮಾಡದ್ರು ಪ್ರಾಣೇಶ್ ? ಪ್ರಾಣಿದಯಾಸಂಘದವರಾಗಲೀ ಸರಕಾರದ ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಭೇಟಿ ನೀಡಿದ್ದಾರಾ ಅಲ್ಲಿಗೆ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿದ್ದ ಮಂಜುನಾಥ್ ಅವರು ತಿಗಣೆಯನ್ನು ಮನೆಯ ಹೊರಗೆ ತಂದು, ವರಾಂಡಾದಲ್ಲಿರುವ ನೆಲದಮೇಲಿಟ್ಟು ಕಲ್ಲಿನಿಂದ ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಇನ್ನು ಅದರ ಬಗ್ಗೆ ತನಿಕೆಯಾಗಬೇಕಷ್ಟೇ "

" ತುಂಬಾ ಜನ ಸೇರಿದ್ದಾರಾ ಅಲ್ಲಿ ? "

"ಹೌದು, ಮೊದಲು ಮಂಜುನಾಥ್ ಅವರ ಕೋಪದ ಕೂಗನ್ನು ಕೇಳಿ ಅಕ್ಕ-ಪಕ್ಕದವರೆಲ್ಲ ಬಂದರು, ಆಮೇಲೆ ಏನೋ ಗಲಾಟೆ ಅಂತ ರಸ್ತೆಯಲ್ಲಿ ಹೋಗುತ್ತಿರುವವರೆಲ್ಲಾ ನೋಡಲು ಬರುತ್ತಿದ್ದಾರೆ, ಒಟ್ನಲ್ಲಿ ಈಗಾಗಲೇ ಸಾವಿರಾರು ಜನ ಬಂದು ಹೋಗಿದ್ದಾರೆ, ಮಂಜುನಾಥ್ ಅವರ ಕೋಪ ಇನ್ನೂ ಇಳಿದಿಲ್ಲ"

" ಮಂಜುನಾಥ್ ಅವರಿಗೆ ಮೈಕ್ ಕೊಟ್ಟು ಮಾತನಾಡಿಸಲು ಸಾಧ್ಯವಾಗಬಹುದಾ ಪ್ರಾಣೇಶ್ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿರುವ ಅವರು ಏನನ್ನಾದರೂ ಕೇಳಿದರೆ ಹೊಡೆಯೋದಕ್ಕೆ ಬರುತ್ತಾರೆ, ಹೀಗಾಗಿ ತಕ್ಷಣಕ್ಕೆ ಅದು ಸಾಧ್ಯವಾಗುತ್ತಿಲ್ಲ, ಆಮೇಲೆ ಸ್ವಲ್ಪ ಪರಿಸ್ಥಿತಿ ತಣ್ಣಗಾದಮೇಲೆ ಪ್ರಯತ್ನಿಸಬಹುದು ಅಷ್ಟೇ "

" ವೀಕ್ಷಕರೇ ನೀವೀಗ ಟಿ.ವಿ ಪರದೆಯ ಮೇಲೆ ನೋಡುತ್ತಿರುವ ಕೆಂಪು ಬಣ್ಣದ ಜಾಗವೇ ತಿಗಣೆಯನ್ನು ಹೊಸಕಿಹಾಕಿರುವ ಜಾಗ, ಕೋಪದಲ್ಲಿದ್ದ ಮಂಜುನಾಥ್ ಅವರು ಹೇಳದೆ ಕೇಳದೆ ತಿಗಣೆಯನ್ನು ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಜಾಗೃತ ದಳಗಳು, ಪೊಲೀಸರು, ಸಂಬಂಧಪಟ್ಟ ಇಲಾಖೆಗಳವರು ಇನ್ನೂ ಬರುವುದರಲ್ಲಿದ್ದಾರೆ, ಬಹುಶಃ ಇಂದು ಸಾಯಂಕಾಲದ ಹೊತ್ತಿಗೆ ಪರಿಸ್ಥಿತಿ ಏನು ಎಂದು ಅರ್ಥವಾಗಬಹುದು "

" ಬನ್ನಿ ವೀಕ್ಷಕರೆ ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಸ್ಟುಡಿಯೋಗೆ ಇಂದು ಖ್ಯಾತ ಪರಿಸರವಾದಿ ಗುಣಪ್ಪರವರು ಮತ್ತು ತಿಗಣೆ ವಂಶಾಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಮಾನ್ಯ ತೊನ್ನುಪರಮೇಶಪ್ಪರವರು ಬಂದಿದ್ದಾರೆ ಅವರ ಜೊತೆ ಚರ್ಚೆಮಾಡೋಣ, ಮಾನ್ಯ ಗುಣಪ್ಪರವರೇ ತಮಗೆ ಕಳಪೆ ಟಿವಿ ಗೆ ಸ್ವಾಗತ "

" ನಮಸ್ಕಾರ"


" ಮಾನ್ಯ ತೊನ್ನು ಪರಮೇಶಪ್ಪರವರೇ ತಮಗೂ ಕೂಡ ಕಳಪೆ ಟಿವಿಗೆ ಆತ್ಮೀಯ ಸ್ವಾಗತ "

" ನಮಸ್ಕಾರ "

" ಗುಣಪ್ಪರವರೇ ಈಗ ತಮಗೊಂದು ಪ್ರಶ್ನೆ --ಇತ್ತೀಚಿನ ವರದಿಗಳ ಪ್ರಕಾರ ತಿಗಣೆಯ ಸಂತತಿ ನಶಿಸಿ ಹೋಗುತ್ತಿದೆ ಎನ್ನಲಾಗುತ್ತಿದೆ, ಇದು ನಿಜವೇ ? "

" ಮೊದಲನೆಯದಾಗಿ ತಿಗಣೆ ಎಂದರೆ ಅದು ಗೋಮಾತೆಗೆ ಸಮ, ಯಾಕೆಂದರೆ ನಿದ್ದೆ ಅತಿರೇಕವಾಗಿ ನಾವು ತುಂಬಾ ಆಲಸಿಯಾಗಿ ಹೊದ್ದು ಮಲಗೇ ಇದ್ದಾಗ ಅದು ಬಂದು ಎಚ್ಚರಿಸದಿದ್ದರೆ ಹೊರಗೆ ಲೋಕದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ, ಹೀಗಾಗಿ ಅಂತಹ ಆಪತ್ಕಾಲದಲ್ಲೂ ಎಬ್ಬಿಸಿ ಸಹಾಯಮಾಡುವ ತಿಗಣೆಯನ್ನು ' ಜಾಗೃತಜನ ಮಿತ್ರ ' ಎಂದು ಗೌರವಿಸಬೇಕಾದ್ದು ನಮ್ಮ ಕರ್ತವ್ಯ "


" ನೀವೇನಂತೀರಿ ಪರಮೇಶಪ್ಪ ? "


" ಈಗ ಗುಣಪ್ಪನವರು ಹೇಳಿದ್ದು ಸರಿಯೇ ಇದೆ, ತಿಗಣೆಯಲ್ಲಿ ಎಷ್ಟು ವಿಧ ಮತ್ತು ಅವುಗಳ ರಕ್ಷಣೆ ಮುಂದೆ ಹೇಗೆ ಎಂಬ ಬಗ್ಗೆ ತಮಗೆ ಗೊತ್ತಿರಬಹುದು ನಾನೀಗಾಗ್ಲೇ ಸಂಶೋಧನೆ ನಡೆಸಿದ್ದೇನೆ, ಇದು ನನಗೆ ಹೊಳೆದಿದ್ದು ಹಳೆಯ ನಮ್ಮ ಮನೆಯಲ್ಲಿ, ತಾತನ ಕಾಲದ ಹತ್ತಿ ದಿಂಬು ಉಪಯೋಗಿಸುತ್ತಿದ್ದಾಗ ! ಅಲ್ಲಿ ಅನೇಕಥರದ ಉದ್ದನೆಯ ,ಅಗಲದ, ಸಣ್ಣ, ದೊಡ್ಡ ಹೀಗೆ ಹಲವಾರು ಸೈಜಿನ ತಿಗಣೆಗಳು ಲಭ್ಯವಿವೆ, ಇನ್ನೂ ಹುಡುಕುತ್ತಲೇ ಇದ್ದೇನೆ. ತಾತ ಈಗ ಇರದ ಕಾರಣ ತಿಗಣೆಗಳ ಮೂಲ ಸಿಗುತ್ತಿಲ್ಲ, ಅವರಿದ್ದರೆ ಬಹಳಷ್ಟು ಮಾಹಿತಿ ಪಡೆಯಬಹುದಿತ್ತು "

" ವೀಕ್ಷಕರೇ, ಈಗ ನಮ್ಮೊಂದಿಗೆ ಚರ್ಚೆಗೆ ಇನ್ನೊಬ್ಬ ಧೀಮಂತ ವ್ಯಕ್ತಿ ಸೇರಿಕೊಳ್ಳಲಿದ್ದಾರೆ, ಮೈಪರಚಿಕೋನಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಮೇರಿಕಾದ ವಾಶಿಂಗ್ ಟನ್ ಡಿ.ಸಿ ಯಲ್ಲಿ ಉನ್ನತ ವ್ಯಾಸಂಗ ಪೂರೈಸಿ ಮರಳಿ ಭಾರತಕ್ಕೆ ಬಂದು ದೇಶಾದ್ಯಂತ 'ಜನಸೇವೆಗೆಂದು' ಬ್ರಾಂಚ್ ಹೊಂದಿರುವ ಟಿವಿ ಇಂಟರ್ನ್ಯಾಷನಲ್ ಹೆಲ್ತ್ ಕೇರ್ ಲಿಮಿಟೆಡ್ ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಟಿವಿ ಗಂಗಣ್ಣ [ತಿಗಣೆ ವಿರೋಧಕ ಗಂಗಣ್ಣ ಇರಬಹುದೇ ? ] ಬಂದಿದ್ದಾರೆ, ಅವರಿಂದ ತಿಗಣೆ ಕಚ್ಚಿದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ, ಮಾನ್ಯ ಡಾ|ಟಿವಿ ಗಂಗಣ್ಣರವರಿಗೆ ಸ್ವಾಗತ "


"ನಮಸ್ಕಾರ "


"ಡಾಕ್ಟರೇ, ಹೇಳಿ ತಿಗಣೆ ಕಚ್ಚಿದರೆ ಒಳ್ಳೆಯದೋ ಕೆಟ್ಟದ್ದೋ, ಅದರ ಪರಿಣಾಮಗಳೇನು ? "

" ತಿಗಣೆ ಕಚ್ಚಿದ್ದು ತುಂಬಾನೇ ಹಾಳು, ತಿಗಣೆಗಳನ್ನು ಹಲವು ಕಾಲದಿಂದ ಕಚ್ಚಿಸಿಕೊಳ್ಳುತ್ತಿರುವವರು ಸರಿಯಾದ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ತಪಾಸಣೆಮಾಡಿಸಿಕೊಳ್ಳಬೇಕು. ತಿಗಣೆಗಳು ಅನೇಕ ರೋಗಗಳನ್ನೂ ಹರಡುವ ಸಾಧ್ಯತೆಯನ್ನು ಅಮೇರಿಕಾದ ವಿಜ್ಞಾನಿಗಳು ಅಲ್ಲಗಳೆಯುತ್ತಿಲ್ಲ. ನಾನು ತಿಳಿದಮಟ್ಟಿಗೆ ತಿಗಣೆ ಕಚ್ಚಿದವರಿಗೆ ನಮ್ಮ ಹೆಲ್ತ್ ಕೇರ್ ಥರದ ಆಸ್ಪತ್ರೆಗಳಲ್ಲಿ ಸಂಪೂರ್ಣ ಸಿ.ಟಿ.ಸ್ಕ್ಯಾನಿಂಗ್ ಮಾಡಿ, ಬ್ಲಡ್ ಮತ್ತು ಯುರಿನ್ ಟೆಸ್ಟ್ ಮಾಡಿಸಿ, ಎಲ್ಲಕ್ಕೂ ಮಿಗಿಲಾಗಿ ಎಂ ಆರ್ ಆಯ್ ಸ್ಕ್ಯಾನಿಂಗ್ ಮಾಡಿಸಿಕೊಂಡ ಬಳಿಕವಷ್ಟೇ ಅವರ ದೇಹಸ್ಥಿತಿ ಯಾವ ಹಂತದಲ್ಲಿದೆ ಎಂದು ತೀರ್ಮಾನಕ್ಕೆ ಬರಲು ಸಾಧ್ಯ "

" ಅಲ್ಲ ಡಾಕ್ಟರೇ, ಆಸ್ಪತ್ರೆಗಳಲ್ಲಿ ಇದಕ್ಕೆಲ್ಲ ತುಂಬಾ ಖರ್ಚಾಗುತ್ತದಲ್ಲವೇ ? ಜನಸಾಮಾನ್ಯರಿಗೆ ಇದು ಹೊರೆಯಾಗುವುದಿಲ್ಲವೇ ಅಂತ ? "


" ಇಲ್ಲ, ಉನ್ನತ ವ್ಯಾಸಂಗವನ್ನು ಅಮೆರಿಕಾದಂತಹ ದೇಶಗಳಲ್ಲಿ ಪೂರೈಸಿ ಇಲ್ಲಿ ಇಷ್ಟು ಕಡಿಮೆ ಖರ್ಚಿನಲ್ಲಿ
ಶುಶ್ರೂಷೆಯನ್ನು ಒದಗಿಸಿಕೊಡುತ್ತಿರುವುದೇ ಒಂದು ದೊಡ್ಡ ಕೆಲಸ ! ಹೀಗಾಗಿ ಕಡಿಮೆ ವೆಚ್ಚದಲ್ಲಿ ಆಗಬೇಕೆನ್ನುವವರು ಇಂಡಿಯನ್ ಆಯುರ್ವೇದ ಕ್ಕೆ ಮೊರೆಹೋಗಲಿ ಏನೂ ಕೆಲಸಕ್ಕೆ ಬಾರದ ಆ ಪದ್ಧತಿ ಇತ್ತೀಚೆಗೆ ಬರೇ ಹೆಸರು ಮಾಡಿದೆ, ಹೀಗಾಗಿ ಜನರ ಮನಸ್ಸಿಗಾದರೂ ನೆಮ್ಮದಿ ಸಿಗಬಹುದು, ಒಳ್ಳೆಯ ಟ್ರೀಟ್ ಮೆಂಟ್ ಸಿಗಬೇಕೆಂದು ಬಯಸುವವರು ನಮ್ಮಂಥ ಆಯ್ ಎಸ್ ಓ ಸರ್ಟಿಫೈಡ್ ಆಸ್ಪತ್ರೆಗಳಿಗೆ ಬರುತ್ತಾರೆ, ಸ್ವಲ್ಪ ಹೆಚ್ಚೋ-ಕಮ್ಮಿಯೋ ಎಲ್ಲ ಸೌಲಭ್ಯ ಒಂದೇ ಕಡೆ ಪಡೆದು ಸಂಪೂರ್ಣ ಗುಣಮುಖರಾಗುತ್ತಾರೆ "

" ಆಯುರ್ವೇದ ಬಹಳ ಉನ್ನತವಾಗಿದೆ, ದೇಹದಲ್ಲಿ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ ಎಂದು ಹೇಳುತ್ತಾರೆ , ತಾವೇನೆನ್ನುತ್ತೀರಿ ಇದಕ್ಕೆ ? "


" ಆಯುರ್ವೇದ ಅನ್ನುವುದು ಅಳಲೇಕಾಯಿ ಪಂಡಿತರ ಪದ್ಧತಿ, ನಮ್ಮ ಅಲೋಪಥಿಯ ಹಾಗೆ ಅದಕ್ಕೆ ಬಹಳ ರೀತಿಯ ಪುಸ್ತಕಗಳಾಗಲೀ ಪರಿಕರಗಳಾಗಲೀ ಇಲ್ಲ, ಹೀಗಾಗಿ ಅದರ ಬಗ್ಗೆ ನಾನು ಹೇಳಲು ಇಷ್ಟಪಡುವುದಿಲ್ಲ "

" ಅಂತೂ ಭಾರತೀಯ ಆಯುರ್ವೇದ ಏನೂ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ತಮ್ಮದು, ಇರಲಿ, ವೀಕ್ಷಕರೆ ನಾವೀಗ ಒಂದು ಚಿಕ್ಕ ವಿರಾಮ ತೆಗೆದುಕೊಳ್ಳೋಣ, ಮತ್ತೆ ನಮ್ಮ ಚರ್ಚೆಯನ್ನು ಮುಂದುವರಿಸೋಣ ವಿರಾಮದ ನಂತರ, ಸೋ ಲೆಟ್ಸ್ ಟೇಕ್ ಅ ಸ್ಮಾಲ್ ಬ್ರೇಕ್ "

Friday, April 2, 2010

ದೀಪಂ ದೇವ ದಯಾನಿಧೇ-೨



ದೀಪಂ ದೇವ ದಯಾನಿಧೇ-
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೨ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||


ಶ್ರೀ ಆದಿಶಂಕರರು ಚಿಕ್ಕ ಬಾಲಕನಾಗಿದ್ದಾಗ ಅವರ ತಂದೆ ದಿನಾಲೂ ಹತ್ತಿರವಿರುವ ಒಂದು ಅಮ್ಮನವರ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದರು. ದಿನವೂ ಒಂದಷ್ಟು ಹಾಲನ್ನು ತೆಗೆದುಕೊಂಡು ಹೋಗಿ ಅದರಿಂದ ಅಭಿಷೇಕ ಮಾಡಿ, ಸ್ವಲ್ಪ ಉಳಿಸಿಕೊಂಡು ಮರಳಿ ಮನೆಗೆ ಬಂದಾಗ ದೇವಿಯ ಪ್ರಸಾದವೆಂದು ಅದನ್ನು ಶಂಕರರಿಗೆ ಕುಡಿಯಲು ಕೊಡುತ್ತಿದ್ದರು. ಶಂಕರರು ಯಾಕೆ ಇದನ್ನು ತರುತ್ತೀರಿ ವಿಚಾರಿಸಿದಾಗ ದೇವಿ ಹಾಲನ್ನು ತಾನು ಕುಡಿದು ಸ್ವಲ್ಪವನ್ನು ಪ್ರಸಾದವಾಗಿ ಕೊಂಡೊಯ್ಯಲು ಹೇಳುತ್ತಾಳೆ ಎಂದು ಶಂಕರನಿಗೆ ಹೇಳಿದರು. ಕೆಲವು ಸಮಯದ ನಂತರ ಕಾರ್ಯನಿಮಿತ್ತ ಕೆಲದಿನಗಳಕಾಲ ದೂರದ ಊರಿಗೆ ಪ್ರಯಾಣ ಮಾಡಬೇಕಾಗಿ ಬಂತು. ಆಗ ಅವರು ದೇವೀಪೂಜೆಯನ್ನು ಹೆಂಡತಿಗೆ ವಹಿಸಿ ಹೋದರು. ಶಂಕರರ ಅಮ್ಮ ದಿನವೂ ಗುಡಿಗೆ ಹೋಗಿ ಎಂದಿನಂತೆ ಪೂಜೆಯನ್ನು ನಡೆಸಿಕೊಂಡಿದ್ದರು ಮತ್ತು ಹಾಲನ್ನು ತಂದು ಮಗನಿಗೆ ಕೊಡುತ್ತಿದ್ದರು, ಇದರಲ್ಲಿ ಏನೂ ಬದಲಾವಣೆ ಇರಲಿಲ್ಲ. ಒಂದುದಿನ ಶಂಕರರ ತಾಯಿ ಋತುಮತಿಯಾಗಿರುತ್ತ ಪೂಜೆಯನ್ನು ಮಾಡಲಾರದಾದರು. ಬಾಲಕ ಶಂಕರನಿಗೆ ಪೂಜೆ ಮಾಡಿಕೊಂಡು ಬರುವಂತೆ ಹೇಳಿದರು. ಎಷ್ಟಿದ್ದರೂ ಚಿಕ್ಕ ಮುಗ್ಧ ಮುದ್ದು ಬಾಲಕ ಶಂಕರ ತಾಯಿಯ ಆಜ್ಞೆಯೂ ಮತ್ತು ತನ್ನ ಇಷ್ಟವೂ ಎರಡೂ ಪೂರೈಸಿತೆಂದು ಹಾಲು ತೆಗೆದುಕೊಂಡು ಪೂಜೆಗೆ ಹೋದರು. ಪೂಜೆ ಮುಗಿಯಿತು.
ಎದುರಿನ ಪಾತ್ರೆಯಲ್ಲಿ ಹಾಲುಮಾತ್ರ ಹಾಗೇ ಉಳಿದಿತ್ತು ! ಶಂಕರರು ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ. ತನ್ನ ಪೂಜೆಯಲ್ಲಿ ಏನೋ ದೋಷವಿರಬೇಕೆಂದು ಶಂಕರರು ಜೋರಾಗಿ ಅಳಲು ಪ್ರಾರಂಭಿಸಿದರು.

ಇದನ್ನು ಕಂಡ ದೇವಿ ಹಾಲನ್ನು ಪೂರ್ತಿಯಾಗಿ ಕುಡಿದುಬಿಟ್ಟಳು ! ಬಾಲಕ ಅಳು ನಿಲ್ಲಿಸಿ ಪಾತ್ರೆ ನೋಡಿದಾಗ ತೊಟ್ಟು ಹಾಲು ಕೂಡ ಇರಲಿಲ್ಲ. ಅಯ್ಯೋ ಇದೇನು ಬಂತು ನನಗೆ ದೇವಿ ಪ್ರಸಾದದ ಹಾಲು ಕೊಡುತ್ತಿಲ್ಲವಲ್ಲ ಎಂದುಕೊಳ್ಳುತ್ತಾ ಮತ್ತೆ ಅಳುವುದಕ್ಕೆ ಪ್ರಾರಂಭಿಸಿದರು ಶಂಕರರು. ಆಗ ಒಂದು ಘಟನೆ ಸಂಭವಿಸಿತು. ಶಂಕರರ ಮುಗ್ದ ಪ್ರೀತಿಗೆ,ಭಕ್ತಿಗೆ,ಪೂಜೆಗೆ ಮನಸೋತ ದೇವಿ ಪ್ರತ್ಯಕ್ಷಳಾಗಿ, ಶಂಕರರನ್ನು ಹಸುಳೆಯಂತಾಗಿ ಮಾಡಿ ಎತ್ತಿಕೊಂಡು ಸ್ತನ್ಯಪಾನ ಮಾಡಿಸಿದಳು. ಸ್ವಲ್ಪ ಹೊತ್ತಿನ ಬಳಿಕ ಶಂಕರನ್ನು ಮುದ್ದಾಡಿ ಪುನಃ ಮೊದಲಿನ ಬಾಲಕ ರೂಪಕ್ಕೆ ತಂದಿತ್ತಳು. ಬಾಲಕ ಶಂಕರ ದೇವಿಯ ಈ ದಿವ್ಯ ಪ್ರಸಾದದಿಂದ ಅತಿವಿಶಿಷ್ಟ ಜ್ಞಾನವನ್ನು ಪಡೆದರು. ಅವರ ಬಾಯಿಂದ ಆಗ ಹುಟ್ಟಿದ ಸ್ತೋತ್ರವೇ ' ಸೌಂದರ್ಯ ಲಹರೀ ' .

ಇತ್ತ ಊರಿಗೆ ತೆರಳಿದ್ದ ಶಿವಗುರು [ಶಂಕರರ ತಂದೆ] ಮರಳಿ ಬಂದರು. ಶಂಕರರ ವಿಷಯವಾಗಿ ಮಾತನಾಡುತ್ತ ತಿಳಿದಾಗ ಅವರಿಗೆ ಅದ್ಭುತವೂ,ಆಶ್ಚರ್ಯವೂ ಆಯಿತು. ಸೌಂದರ್ಯ ಲಹರಿಯ ಒಂದೊಂದೂ ಶ್ಲೋಕಗಳು ದೇವಿಯ ವಿವಿಧ ರೂಪ ವಿಶೇಷಗಳನ್ನು ಬಣ್ಣಿಸುತ್ತವೆ. ಮತ್ತು ಒಂದೊಂದೂ ಶ್ಲೋಕದ ಅನುಷ್ಠಾನದಿಂದ ಇಂತಿಂತದೇ ಫಲವನ್ನು ಪಡೆಯಬಹುದೆಂದು ವ್ಯಾಖ್ಯಾನಿಸಿ ತಿಳಿಸಿದರು. 100 ಶ್ಲೋಕಗಳುಳ್ಳ ಸೌಂದರ್ಯಲಹರೀ ಒಂದು ವಿಶಿಷ್ಟ ಸಾತ್ವಿಕ ಉಪಾಸನಾ ವಿಧಾನ. ಪ್ರಸಕ್ತ ಎಲ್ಲರ ಒಳಿತನ್ನು ಬಯಸಿ ದೇವಿಯ ವಿದ್ಯಾಲಕ್ಷ್ಮೀ ಸರಸ್ವತೀ ರೂಪವನ್ನು ಧ್ಯಾನಿಸುವ ಮೂರನೇ ಶ್ಲೋಕವನ್ನು ಇಲ್ಲಿ ಕೊಡುತ್ತಿದ್ದೇನೆ--

ಅವಿದ್ಯಾನಾಮಂತಸ್ತಿಮಿರ ಮಿಹಿರದ್ವೀಪನಗರೀ
ಜಡಾನಾಂ ಚೈತನ್ಯಸ್ತಬಕಮಕರಂದಸ್ರುತಿಝರೀ |
ದರಿದ್ರಾಣಾಂ ಚಿಂತಾಮಣಿಗುಣನಿಕಾ ಜನ್ಮ ಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪುವರಾಹಸ್ಯ ಭವತಿ ||

ಮಥಿತಾರ್ಥ-
ಅಜ್ಞಾನಿಗಳ ಅಂತಃಕರಣದಲ್ಲಿರುವ ಅವಿದ್ಯೆಯೆಂಬ ಕತ್ತಲೆಗೆ ಸೂರ್ಯೋದಯದಂತೆ, ಸಮುದ್ರ ಮಧ್ಯದಲ್ಲಿದ್ದ ಶುಭ್ರನಗರದಂತೆ, ಮಂದಬುದ್ಧಿಗಳಿಗೆ ಜ್ಞಾನವೆಂಬ ಹೂಗೊಂಚಲ ಮಧುರಸದಂತೆ, ದರಿದ್ರರಿಗೆ ಬೇಡಿದ್ದನ್ನು ಕೊಡುವಂತಹ ಚಿಂತಾಮಣಿಯಂತೆ ಇರುವ ಈ ಪಾದರೇಣುವು ಸಂಸಾರದಲ್ಲಿ ಮುಳುಗಿದವರಿಗೆ ಮುರಾರಿಯಾದ ಮಹಾವಿಷ್ಣುವಿನ ವರಾಹರೂಪದ ಕೋರೆದಾಡೆಗಳಂತೆ ಉದ್ಧಾರಕವಾಗಿದೆ.

ಶ್ಲೋಕವನ್ನು ನಿತ್ಯವೂ ಸ್ನಾನಾದಿ ಶುದ್ಧೀಕರಣ ಮಾಡಿಕೊಂಡು, ಸಾಧ್ಯವಾದರೆ ಏನನ್ನಾದರೂ [ವಿಶೇಷವಾಗಿ ಉದ್ದಿನವಡೆಯನ್ನು] ನೈವೇದ್ಯವಾಗಿಟ್ಟು, ಅನೇಕಸಾರಿ ಶ್ರದ್ಧಾಭಕ್ತಿಯಿಂದ ಪಠಿಸಿದರೆ, ವಿದ್ಯೆಯೂ, ಐಶ್ವರ್ಯವೂ ಲಭಿಸುತ್ತದೆಂದು ಶಂಕರರು ಹೇಳಿದ್ದಾರೆ.

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

Thursday, April 1, 2010

ನಶ್ವರದಲ್ಲಿರುವ ಶಾಶ್ವತ ನಾದ

ಶ್ರೀ ಆದಿ ಶಂಕರರು ' ಅಯಿಗಿರಿ ನಂದಿನಿ ' ಅಂತ ಅಮ್ಮನವರನ್ನು ಕಂಡು ಹಾಡಿ ನುತಿಸಿದರು. ಅದೇ ದಾಟಿಯಲ್ಲಿ ಬೇರೆ ಅರ್ಥದಲ್ಲಿ ಒಂದು ಹಾಡು ಬರೆಯುವ ಹೀಗೊಂದು ಪ್ರಯತ್ನ ನಡೆಯಿತು. ಪ್ರಕೃತಿಯಲ್ಲಿ ಒಂದು ಅಘೋಷಿತ ನಡೆಯಿದೆ, ಅಲ್ಲಿ ದೈವ ನಿರ್ಮಿತ ಪಂಚಭೂತಗಳ ವಿಲಂಬಿತ ಮತ್ತು ಶಾಶ್ವತ ಒಂದು ನಾದವಿದೆ. ಅದನ್ನು ಆಸ್ವಾದಿಸಲೇ ನಮಗೆ ಬಿಡುವೆಲ್ಲಿದೆ ? big bang ಅಂದರೆ ಕಿವಿ ನಿಮಿರುತ್ತದೆ ನಮಗೆ, ಆದರೆ ನಮ್ಮ ವೇದ-ಶಾಸ್ತ್ರಗಳು ತಮ್ಮ ಬೆಳಕಿಂಡಿಯಿಂದ ನಮಗೆ ಎತ್ತಿ ಕೊಡುತ್ತಿದ್ದರೆ ನಾವು ಬಾಲಿಶರಾಗುತ್ತೇವೆ; ಪೂರ್ವಾಗ್ರಹ ಪೀಡಿತರಾಗುತ್ತೇವೆ; ಹಿತ್ತಾಳೆಕಿವಿಯವರಾಗುತ್ತೇವೆ ! ನಮಗೆ ಅಮೇರಿಕ ಹೇಳಿದ್ದೇ ವೇದ. ಎಲ್ಟನ್ ಜಾನ್ ಬಾರಿಸಿದ್ದೇ ಗಿಟಾರು ! ನಮ್ಮ ಮೂಲ ಸಂಸ್ಕೃತಿಯ ಅಂದ-ಚಂದ ಯಾರಿಗೆ ಬೇಕು ಸ್ವಾಮಿ ? ಅದೆಲ್ಲಾ ಪುಸ್ತಕದ ಬದನೇಕಾಯಿ, ಕಾಲಹರಣ ಮಾಡುವ ಕಾಡುಹರಟೆ ಅಂದುಕೊಳ್ಳುತ್ತೇವೆ, ಅಲ್ಲವೇ ? ಶಾಲೆಯಲ್ಲಿ ನಮಗೆ ಇಂಗ್ಲೀಷ್ ಮಾಧ್ಯಮವೇ ಬೇಕು. ಮಕ್ಕಳು ಶಾಲೆಗೆ ಹೋದ ಮರುದಿನವೇ ಹರುಕು ಮುರುಕು ಆಂಗ್ಲಭಾಷೆಯಲ್ಲಿ 'ನೋ ಯಾ ಗೋ ಯಾ ' ಅಂದರೆ ನಮ್ಮೊಳಗೊಳಗೇ ಒಂಥರಾ ಅದಮ್ಯ ಆನಂದ, ಮೈಮನ ವೆಲ್ಲ ಗಾಳಿಯಿಂದ ಬಲೂನು ಬೀಗಿದಂತೆ ಬೀಗಿ ಖುಷಿಯೋ ಖುಷಿ ! ಎಲ್ಲರಲ್ಲೂ ಹೇಳಿಕೊಳ್ಳುವ ತವಕ! ಇನ್ನು ಸಿಕ್ಕಾಪಟ್ಟೆ ಬೇಕಾದ್ದನ್ನ ಬೇಡದ್ದನ್ನ ಎಲ್ಲವನ್ನೂ ತಿಂದು ತಿಂದು ಹೊಟ್ಟೆ ಬರಿಸಿಕೊಂಡು ಬೆಳಿಗ್ಗೆ ಉದ್ಯಾನದಲ್ಲಿ ವ್ಯಾಯಾಮ ಮಾಡಲು ಜಾಗಿಂಗ್ ಹೋಗುವಾಗ ದಾರಿಯಲ್ಲಿ ಅರ್ಧ ಕಾಪಿ ಕುಡಿದು ಪಾರ್ಕಿನಿಂದ ಮರಳಿ ಬರುವಾಗ ಪೂರಿಸಾಗು, ಕೇಸರಿಬಾತು ಕಂಪೆನಿಗೆ ಇಡ್ಲಿವಡೆ ಎಲ್ಲಾ ಮುಕ್ಕಿ ನೆಮ್ಮದಿಯಿಂದ ಜಾಗಿಂಗ್ ಪೂರೈಸಿ ಮರಳುತ್ತೇವೆ ! ಎಲ್ಲೋ ಯಾಕೋ ಸುಮ್ಮನೇ ಹುಡುಗರು ಹೊಡೆದಾಡಿದರೆ ರಾಜಕೀಯದ ಬಣ್ಣ ಹಚ್ಚಿ 'ಕೋಮು ಗಲಭೆ' ಎನ್ನುತ್ತೇವೆ ! ಪ್ರಕೃತಿ ಇವೆಲ್ಲವನ್ನೂ ನೋಡುತ್ತಾ ಸುಮ್ಮನೇ ನಮ್ಮೊಟ್ಟಿಗೆ ಹಾಗೆ ಸಾಗಿದೆ. ಅದು ನಮಗೆ ಮಿಥ್ಯಾಲೋಕದ ಹಲವು ಅನುಕೂಲಗಳನ್ನೂ ನೀಡದಂತೆ ಮಾಡಿ ನಾವು ಬಹಳ ಸುಖವೆಂದು ತಿಳಿದಾಗ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ! ಹೀಗಾಗಿ ಪ್ರಕೃತಿಯಲ್ಲಿ ಅನನ್ಯವಾಗಿ ಅನುರಳಿಸುವ ಆ ನಾದವನ್ನು ಆಲಿಸಲು ಪ್ರಯತ್ನಿಸಿದರೆ ಪ್ರಕೃತಿಗೆ ಅನುಗುಣವಾಗಿ ನಡೆದರೆ ನಮಗೆ ಸಮಸ್ಯೆಗಳು ಕಡಿಮೆ ಬರಬಹುದು. ಇಲ್ಲಿ ನಭೋಮಂಡಲದ ಅವಕಾಶಗಳ ನಡುವೆ ಬ್ರಹ್ಮಾಂಡದ ಒಂದೇ ರಾಗದ ಕೂಗು ಸದಾ ಹೊಮ್ಮುತ್ತಿದೆ, ಅದನ್ನು ಹಲವರು ' ಓಂ' ಕಾರವೆಂದರೆ ಕೆಲವರು ಏನೋ ಶಬ್ಧಎಂದಿದ್ದಾರೆ, ವಿಜ್ಞಾನಿಗಳು ಇನ್ನೂ big bang ತಲೆಯಲ್ಲೇ ಇದ್ದಾರೆ ! ಆ ಸ್ವರವನ್ನು ಅಲೈಸುತ್ತ, ಚೋದ್ಯವಾಗಿ ಬರೆದ ಒಂದು ಹಾಡು ನಿಮಗಾಗಿ---




[ಚಿತ್ರ ಋಣ : ಅಂತರ್ಜಾಲ]

ನಶ್ವರದಲ್ಲಿರುವ ಶಾಶ್ವತ ನಾದ

ಚಕಚಕ ಚಂಚಲ ಮಿಂಚಿನ ಗೊಂಚಲ
ಕಂಚಿನ ಶಬ್ಧದ ಮಾರ್ದನಿಯು
ಪಂಚಭೂತಗಳ ಇಂಚಿಂಚಲು ಅದು
ಸಂಚರಿಸುವ ಪರಿ ಅದ್ಬುತವು

ವತ್ಸರ ವತ್ಸರ ಕಳೆದು ವಿಲಂಬಿತ

ತಾತ್ಸಾರವು ಇರದಿಹ ನಡೆಯು
ಕುತ್ಸಿತ ಬುದ್ಧಿಯ ಹುಲುಮಾನವಗಿದು
ತತ್ಸಮ ಪ್ರತಿರೋಧದ ಗಣಿಯು

ನಶ್ವರದೀಜಗ ಬಲು ಬಲು ಸೋಜಿಗ

ಶಾಶ್ವತ ಮಡಿಲೊಳು ಅವಿತಿಡುತ
ಅಶ್ವಗಂಧ ಗೋಮೇದಿಕ ಕೇಸರಿ
ಈಶ್ವರನಾಟದ ದಾಳಗಳು

ಕಾಮ ಕ್ರೋಧ ಲೋಭ ಮೋಹ ಮದ
ಆಮಶಂಕೆ ಥರ ಮತ್ಸರವು
ರಾಮ-ಹನುಮ ದೈವಾದಿಗಳನು ನಾವ್
ಕೋಮಿಗೀಡುಮಾಡುವ ವಿಧಿಯು

ತಜ್ಜನಿತ ಜನಿತ ನವತಾಪದ

ಮಜ್ಜನದೋಳ್ ಮನ ಕಲುಷಿತವು
ಅಜ್ಜ-ಅಜ್ಜಿಯರ ಬಿಡದೀ ಮಾಯೆಯು
ನುಜ್ಜಾದರು ಗುಜ್ಜಾಡುತಲಿ

ಘಾತುಕ ಪಾತಕ ಬುದ್ಧಿಯು ನಮ್ಮದು

ಜಾತಕದಲಿ ಅದು ಬರೆದಿಹುದು
ನೀತಿಶತಕ ನೂರೆಂಟು ಓದಿದರು
ಭೀತಿಯೇ ಇಲ್ಲದ ಭಂಡತನ

ಮಜಮಜ ಬಲುಮಜ ಬಲು ಮೋಜಿನ ಮಜ

ನಿಜದರಿವದು ಯಾತಕೆ ಬೇಕು ?
ಅಜಗಜಾಂತರವು ಇರೆ ತೊಂದರೆಯೇನ್ ?
ರಜೋಗುಣದಿ ಮುನ್ನಡೆಯುವೆವು

ಬೀಗುತ ತೇಗುತ ಗಾತ್ರದ ಉದರವ

ಹಾಗೆ ಒಮ್ಮೆ ನೇವರಿಸುತಲಿ
ನೀಗುತಪಾನವಾಯು ಮಂದಸ್ಮಿತ
ರೋಗದ ಕಣಜವ ಬಚ್ಚಿಡುತ

Wednesday, March 31, 2010

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !



[ಚಿತ್ರಗಳ ಋಣ: ಅಂತರ್ಜಾಲ ]

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !

ಹಲವು ಸಲ ನಾವು ಎಷ್ಟು ಚಿಕ್ಕದಾಗಿ ವಿಚಾರಿಸುತ್ತೇವೆಂದರೆ ಸಣ್ಣದೊಂದು ಕೆಲಸ ಕೂಡ ಮಾಡಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು. ಇಲ್ಲಾ ಅದು ನನ್ನಿಂದ ಸಾಧ್ಯವಿಲ್ಲ, 'ಇದು ನನ್ನಿಂದ ಆಗದ ಮಾತು','ಅದೆಂದರೆ ನನಗೆ ತಲೆನೋವು', 'ಅದರ ಹತ್ತಿರ ಕೂಡ ಸುಳಿಯೋದಿಲ್ಲ', 'ನಾನು ಮಾಡಲಾರೆನಪ್ಪಾ ಬೇಕಾದ್ರೆ ಅವರು ಮಾಡಿಕೊಳ್ಳಲಿ' -- ಈ ಧೋರಣೆ ಸರಿಯಲ್ಲ. ಮನುಷ್ಯ ಪ್ರಯತ್ನ ಶೀಲನಾಗಿರಬೇಕು. ಬಹಳ ಪ್ರಯತ್ನಿಸಿಯೂ ಫಲಸಿಗದಿದ್ದರೆ ಹಿಡಿದ ಮಾರ್ಗ ಬದಲಾಯಿಸಿ ಬೇರೆ ಮಾರ್ಗದಲ್ಲಿ ತೊಡಗಿಕೊಳ್ಳಬೇಕು. ಅಂತೂ ಸರಿಯಾದ ಸತ್ಸಂಕಲ್ಪದಿಂದ ಪ್ರಯತ್ನಶೀಲರಾದರೆ ಅದಕ್ಕೆ ಫಲ ಇದ್ದೇ ಇದೆ.

ತೊಡಗಿಕೊಳ್ಳುವ ಕೆಲಸಗಳಲ್ಲಿ ಎರಡು ಬಗೆ. ಒಂದು ಏಕ ವ್ಯಕ್ತಿ ನಿರ್ವಹಿಸಬಹುದಾದದ್ದು, ಇನ್ನೊಂದು ಬಹುವ್ಯಕ್ತಿಗಳು ಸೇರಿ ನಿರ್ವಹಿಸಬಹುದಾದ ಕೆಲಸಗಳು. ಅನೇಕ ವೈಯಕ್ತಿಕ ಕೆಲಸಗಳನ್ನು ಒಬ್ಬರೇ ಮಾಡಿಕೊಳ್ಳಬಹುದು. ಹಾಗೇಯೇ ಅನೇಕ ಸಾಮಾಜಿಕ ಕೆಲಸಗಳನ್ನೂ ಕೂಡ. ಉದಾಹರಣೆಗೆ
ವೈಯಕ್ತಿಕ ಕೆಲಸಗಳು --
ನಮ್ಮ ಬಟ್ಟೆ ನಾವೇ ಒಗೆಯುವುದು, ಬಟ್ಟೆ ಇಸ್ತ್ರಿ ಮಾಡಿಕೊಳ್ಳುವುದು, ಬೇಕಾದ ಸಾಮಾನು ತಂದುಕೊಳ್ಳುವುದು, ತಿಂಡಿ-ತೀರ್ಥ ತಯಾರಿಸಿಕೊಳ್ಳುವುದು, ಪಾತ್ರೆ-ಪಗಡೆ ತೊಳೆದುಕೊಳ್ಳುವುದು,
ಸಾಮಾಜಿಕ ಕೆಲಸಗಳು--
ಮಂದಿರ ಮಸೀದಿಗಳನ್ನು ಸ್ವಚ್ಛಗೊಳಿಸುವುದು, ಬೀದಿ ದೀಪಗಳು ಇರದಿದ್ದರೆ ಹಾಕಿಸಲು ಪ್ರಯತ್ನಿಸುವುದು, ವೃದ್ಧರು-ಕುರುಡರು ರಸ್ತೆ ದಾಟುವಾಗ ಸ್ವಲ್ಪ ಸಹಾಯ ಮಾಡುವುದು, ಸರಕಾರೀ ಶಾಲೆಗೆ ಬೇಕಾದ ಯವುದೋ ಪರಿಕರ ತಂದುಕೊಡುವುದು, ಬೀದಿ ಗುಡಿಸುವವರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಂದ ಅದು ಸರಿಯಾಗಿ ನಡೆಯುವ ಹಾಗೆ ನೋಡಿಕೊಳ್ಳುವುದು.
ಇವೆಲ್ಲ ಯಾರೂ ಮಾಡಬಹುದಾದ ಅತಿ ಚಿಕ್ಕ ಕೆಲಸಗಳು.





ಇನ್ನು ಕೆಲವು ಕೆಲಸಗಳು ಸಾಮೂಹಿಕವಾಗಿರುತ್ತವೆ. ಆದರೆ ಕೆಲವು ಕೆಲಸಗಳಿಗೆ ಸಮೂಹ ಶಕ್ತಿಯೇ ಬೇಕು. ಅಲ್ಲಿಯೂ ವೈಯಕ್ತಿಕ ಮತ್ತು ಸಾಮಾಜಿಕ ಎಂದು ಎರಡು ವಿಭಾಗಗಳು. ಉದಾಹರಣೆಗಳು
ವೈಯಕ್ತಿಕ ಕೆಲಸಗಳು---
ಸ್ವಂತಕ್ಕೆ ಮನೆ ಕಟ್ಟಿಕೊಳ್ಳುವುದು, ದೊಡ್ಡ ಜಮೀನನ್ನು ಉತ್ತು ಬಿತ್ತುವುದು ಇತ್ಯಾದಿ.
ಸಾಮಾಜಿಕ ಕೆಲಸಗಳು--
ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಮಾರ್ಗ ರಚನೆ ಇತ್ಯಾದಿ.



ಕೆಲಸಗಳಲ್ಲಿ ನಮಗೆ ಆದರ್ಶವೆನ್ನಿಸುವ ಕೀಟಗಳು, ಪಶು-ಪಕ್ಷಿಗಳು ನಮ್ಮೆದುರಿಗೆ ಜೀವನಾಸಕ್ತಿಯನ್ನು ಕೆರಳಿಸಿ ಮನಸ್ಸಿಗೆ ಬೇಕಾದ ಆಸಕ್ತಿಯೆಂಬ ಇಂಧನವನ್ನು ದೊರಕಿಸಿಕೊಡುತ್ತವೆ. ಗೀಜಗ ಪಕ್ಷಿ ತನ್ನ ಗೂಡು ಅಲಂಕರಿಸಿಕೊಳ್ಳುವುದು, ಲಕ್ಷಾಂತರ ಗೆದ್ದಲುಗಳು ಸೇರಿ ಹುತ್ತ ಕಟ್ಟುವುದು, ಸಾವಿರಾರು ಜೇನುಗಳು ಸೇರಿ ಗೂಡುಕಟ್ಟುವುದು. ಮಾರೆತ್ತರ-ಅಗಲ ಬೆಳೆದ ಹುತ್ತ ನೋಡಿದರೆ ನಮಗೇ ಆಶ್ಚರ್ಯ, ಬಾಟಲಿಗಳಲ್ಲಿ ಲೀಟರ್ ಗಟ್ಟಲೆ ಜೇನುತುಪ್ಪ ನೋಡಿದಾಗ ನಮಗನ್ನಿಸುವುದು ಇಷ್ಟೊಂದು ಜೇನುತುಪ್ಪ ಬರುತ್ತದೆಯೇ ಎಂದು---ಯಸ್, ಎಲ್ಲವೂ ಸಾಧ್ಯ ಪ್ರಗತಿ ಪಥದಲ್ಲಿ, ಸದಾ ಚಲಶೀಲತೆಯಲ್ಲಿರುವ ವ್ಯಕ್ತಿತ್ವದಲ್ಲಿ, ಕೆಲಸಮಾಡುವ ಮನೋಧರ್ಮ ಬೆಳೆಸಿಕೊಂಡವರಲ್ಲಿ. ನಿಸರ್ಗ ನಮಗೆ ಇದರ ಜೊತೆಜೊತೆಗೆ ಒಗ್ಗಟ್ಟಿನ ತತ್ವವನ್ನೂ ಬೋಧಿಸುತ್ತದೆ. ಹಲವು ಗೆದ್ದಲುಗಳ ಪರಿಶ್ರಮ ಒಂದು ಹುತ್ತ! ಹಲವು ಜೇನುನೊಣಗಳ ಪರಿಶ್ರಮ ಹಲವು ಲೀಟರ್ ಜೇನುತುಪ್ಪ ! ಅಲ್ಲಿ ಜಗಳಗಳಿಲ್ಲ,ನಿತ್ಯದ ದೊಂಬಿಗಳಿಲ್ಲ, ಅಘೋಷಿತ ನಾಯಕತ್ವ, ಅದೇನೋ ಸಂಕೇತ- ನಮಗೆ ಅರ್ಥವಾಗದ್ದು, ಅವುಗಳಿಗೆ ಅರ್ಥವಾಗಿದ್ದು. ಕೆಲಸ ಯಾರು ಎಂದು ಹೇಗೆ ಎಲ್ಲಿ ಮಾಡಬೇಕೆಂಬುದನ್ನು ಯಾರು ನಿರ್ಣಯಿಸುತ್ತಾರೆ ಅಲ್ಲಿ ? ಹುತ್ತಕ್ಕೆ ಇದೇ ಆಕಾರವೆಂದೂ, ಜೇನುಗೂಡು ಹೀಗೇ ಜೋತು ಬಿದ್ದರೂ ಬೀಳದ ಅಂಟಿನಿಂದ ಕೂಡಿರಬೇಕೆಂದೂ ಯಾರು ಹೇಳಿದರು ? ಗೀಜಗ ಹಕ್ಕಿಗೆ ನೇಯ್ಗೆ ಕಲಿಸಿದ ಗುರು ಯಾರು. ಇದನ್ನು ನೋಡಿದಾಗ ನಮಗೆ ನಮ್ಮ basic instinct ಸರಿಯಾಗಿದ್ದರೆ ಕೆಲಸ ಮಾಡಲು ಮಾರ್ಗ ತನ್ನಿಂದ ತಾನೇ ತೋರುತ್ತದೆ.

ಶತಮಾನವೂ ಸರಿಯಾಗ ಮುಗಿದಿರದ ಇತಿಹಾಸದಲ್ಲಿ ನಾವು ಸರ್ ವಿಶ್ವೇಶ್ವರಯ್ಯನವರನ್ನು ನೋಡಿದ್ದೇವೆ. ಆ ಕಾಲದಲ್ಲಿ ರಭಸದಿಂದ ದುಮ್ಮಿಕ್ಕಿ ಹರಿವ ನದಿಗಳಿಗೆ ಒಡ್ಡು ಕಟ್ಟಲು ದೇಶದುದ್ದಗಲ ಸಂಚರಿಸಿದ ಕೆಲಸ ಮಾಡಿದ ಮಹಾನುಭಾವ ಅವರು. ಪ್ರಾರಂಭದಲ್ಲಿ ಕೆಲವರು ಅವರನ್ನು ಅಪಹಾಸ್ಯಮಾಡಿದರು. 'ತಲೆ ಇಲ್ಲದ ವ್ಯಕ್ತಿ ತರಲೆ ಕೆಲಸಕ್ಕೆ ಕೈಹಾಕಿದ್ದಾನೆ ಇದೆಲ್ಲಾ ಆಗುವುದು ಉಂಟೇ? ' ಆದರೆ ಅದು ಆಗಿದ್ದರಿಂದಲೇ ನಾವು ಇಂದು ಅನೇಕಕಡೆ ನೀರು, ವಿದ್ಯುಚ್ಛಕ್ತಿ ಪಡೆಯುತ್ತಿದ್ದೇವೆ.

ಆಗಲೂ ತರಲೆಗಳಿಗೇನೂ ಕಮ್ಮಿಯಿರಲಿಲ್ಲ. ಯಾರೋ ಒಬ್ಬಾತ ಕೇಳಿದ



" ನಾವು ಕಾರ್ಮಿಕರು ಇಷ್ಟು ಶ್ರಮ ವಹಿಸುತ್ತೇವೆ, ನಮಗೆ ಸಂಬಳ ಕಡಿಮೆ, ಆದರೆ ಎಂಜಿನೀಯರ್ ಎನಿಸಿಕೊಂಡು ಮೇಜು-ಕುರ್ಚಿ ಹತ್ತಿ ಕೂರುವ ವಿಶ್ವೇಶ್ವರಯ್ಯಗೆ ಮಾತ್ರ ಜಾಸ್ತಿ ಸಂಬಳವೇಕೆ ? "

ವಿಶ್ವೇಶ್ವರಯ್ಯನವರ ಕಿವಿಗೆ ಇದು ಬಿತ್ತು, ಅವರು ಆತನನ್ನು ಕರೆದು ಒಂದು ಕೋಳಿಮೊಟ್ಟೆ ತರಲು ಹೇಳಿದರು. ಆತ ತಂದ. ಅದನ್ನು ಮೇಜಿನಮೇಲೆ ನೆಟ್ಟಗೆ ನಿಲ್ಲಿಸುವಂತೆ ಹೇಳಿದರು, ಆತ ಪ್ರಯತ್ನಿಸಿ ಸೋತ. ತಾವು ನಿಲ್ಲಿಸುವ ಪ್ಲಾನ್ ಹೇಳಿ ಮಾಡಿ ತೋರಿಸಿದರು- ಒಂದು ಉಂಗುರವನ್ನು ಮೇಜಿನಮೇಲಿಟ್ಟು ಅದರಲ್ಲಿ ಮೊಟ್ಟೆ ನಿಲ್ಲಿಸಿದರು. ಆಮೇಲೆ ಹೇಳಿದರು ವಿಶ್ವೇಶ್ವರಯ್ಯನ ಇಂತಹ ಪ್ಲಾನಿಗೆ ಸಂಬಳವಪ್ಪಾ ಎಂದು. ವಿಶ್ವೇಶ್ವರಯ್ಯ ಪಡೆದ ಸಂಬಳದ ಬಹುಭಾಗವನ್ನು ಸಮಾಜಕ್ಕಾಗಿಯೇ ಕೊಟ್ಟರು! --ಇದೂ ಕೂಡ ಸ್ತುತ್ಯಾರ್ಹ. ನಮ್ಮಲ್ಲಿ ಸಂಬಳ ಪಡೆದ ನಾವು ಹತ್ತು ರೂಪಾಯಿ ದಾನವಾಗಿ ಕೊಡುವಾಗ ಹಿಂದೆ-ಮುಂದೆ ನೋಡುತ್ತೇವೆ, ಆದರೆ ಮಹಾತ್ಮರು ದಾನ ಮತ್ತು ತ್ಯಾಗಗಳನ್ನು ಮೈಗೂಡಿಸಿಕೊಂಡಿರುತ್ತಾರೆ.



ಹೀಗೇ ಇಂತಹ ವಿಶ್ವೇಶ್ವರಯ್ಯ ಅಂದಿನ ದೊಂದಿ ದೀಪದ ಕಾಲದಲ್ಲಿ ಅದು ಹೇಗೆ ಅಷ್ಟೊಂದು ಕ್ರಿಯಾಶೀಲರಾದರು ? ಅಲ್ಲವೇ ? ಅವರು ಮಾಡಲೇಬೇಕಾದ ಕೆಲಸವಂತೂ ಅದಾಗಿರಲಿಲ್ಲ, ಆದರೆ ಭವಿಷ್ಯದ ದೇಶದ ಕನಸನ್ನು ಕಂಡ ಭವ್ಯ ಭಾರತದ ಭಾಗ್ಯ ವಿಧಾತ ಅವರು. ತಮ್ಮ ವೈಯಕ್ತಿಕ ಜೀವನವನ್ನು ಕಡೆಗಣಿಸಿ ಸಮಾಜಮುಖಿಯಾಗಿನಿಂತು ಪ್ರಜೆಗಳ ಕ್ಷೇಮಕ್ಕಾಗಿ ತ್ಯಾಗ ಮಾಡಿದ ಕರ್ಮಯೋಗಿ ಅವರು. ಬೀದಿಯಲ್ಲಿ ಯಾರೋ ಅಪಘಾತಕ್ಕೀಡಾದರೆ ಸಂಬಂಧವೇ ಇಲ್ಲವೇನೋ ಎಂದುಕೊಂಡು ಸಾಗುವ ನಮಗೂ ಸಮಾಜದಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂಬ ವಸುದೈವಕುಟುಂಬ ಉದ್ದೇಶ ಹೊಂದಿ ಬದುಕಿದ್ದ ಅವರಿಗೂ ಅಜಗಜಾಂತರ ! ನಾವು ಸಂಬಳ-ಸಮಯ ಈ ಲೆಕ್ಕ ಮಾತ್ರ ಸರಿಯಾಗಿ ಕಲಿಯುತ್ತೇವೆ, ಆದರೆ ನಾವೇನು ಮಾಡಿದೆವು-ಏನು ಕೊಟ್ಟೆವು ಅದು ನಮಗೆ ನೆನಪಿಗೆ ಬರುವುದಿಲ್ಲ,ಬೇಕಾಗುವುದೂ ಇಲ್ಲ. ಇದು ಸರಿಯೇ ? ಬೀದಿಯಲ್ಲಿ ನಾಯಿಯೂ ಹಂದಿಯೂ ಬದುಕುತ್ತವೆ, ಅವುಗಳದ್ದೂ ಜೀವನವೇ. ಕೆಲಸಮಯದ ನಂತರ ಸತ್ತುಹೋಗುತ್ತವೆ-ಗೊತ್ತಿರದ ಇತಿಹಾಸ, ಅವುಗಳ ನಡೆಯೇ ಹಾಗೆ. ಬದುಕಿದರೆ ಇಂತಹ ಬದುಕಿಗೆ ಹೊರತಾದ ಧೀರ, ಗಂಭೀರ, ವೀರ ಬದುಕನ್ನು ತಮ್ಮ ಸಾಧನೆಯಿಂದ ತೋರಿಸುವ ಬದುಕು ಬದುಕಬೇಕು. ವೀರ ಎಂದ ತಕ್ಷಣ ಮಚ್ಚು-ಲಾಂಗು ಝಳಪಿಸುವುದಲ್ಲ-ಅದು ರೌಡಿಸಂ, ಧೀರ ಎಂದ ತಕ್ಷಣ ಹದಿನೆಂಟು ಮದುವೆಯಾಗಿ ನೂರಿಪ್ಪತ್ತು ಮಕ್ಕಳನ್ನು ಹುಟ್ಟಿಸುವುದಲ್ಲ-ಅದು ಪಿಡುಗು, ಗಂಭೀರ ಎಂದಾಕ್ಷಣ ಯಾರಿಗೂ ಉಪಕರಿಸದೇ ಮುಖ ಸಿಂಡರಿಸಿ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುವುದಲ್ಲ- ಅದು ವ್ಯರ್ಥ.

ಹಳ್ಳಿಯ ಮತ್ತು ಪಟ್ಟಣದ ಕಬ್ಬಿನಾಲೆಯ ಕಥೆ ನೆನಪಾಗುತ್ತಿದೆ-
ಹಳ್ಳಿಯಲ್ಲಿ ಕಬ್ಬಿನಾಲೆ ತಾವು ನೋಡಿರುತ್ತೀರಿ, ಅಲ್ಲಿ ಹೋರಿಯೊಂದು ಗಾಣವನ್ನು ತಿರುಗಿಸುವಂತಹ ವ್ಯವಸ್ಥೆ ಇರುತ್ತದೆ, ಹೋರಿಯ ಕೊರಳಿಗೆ ಒಂದು ಗಂಟೆ. ಎಲ್ಲೋ ಮೂಲೆಯಲ್ಲಿದ್ದು ಒಬ್ಬಾತನೆ ಬೆಲ್ಲದ ಕೊಪ್ಪರಿಗೆ ಮತ್ತದರ ಬೆಂಕಿ ಎಲ್ಲವನ್ನೂ ನಿರ್ವಹಿಸುತ್ತಾ ಕೇವಲ ತನ್ನ ' ಹೇ ..ಹೇ ..' ಎಂಬ ಶಬ್ಧದಿಂದ ಹೋರಿ ತಿರುಗುತ್ತಿರುವಂತೆ ಮಾಡುವುದು ಗಾಣದವನ ಕೆಲಸ, ಅಲ್ಲಿ ಆತ ಗಂಟೆಯ ಸದ್ದನ್ನು ಆಲಿಸುತ್ತಿರುತ್ತಾನೆ, ಗಂಟೆ ಕೇಳಿ ಬರುತ್ತಿದ್ದರೆ ಹೋರಿ ತಿರುಗುತ್ತಿದೆ ಎಂದು ಅರ್ಥ. ಅದು ಹಳ್ಳಿಯ ಹೋರಿ ಅದಕ್ಕೇ ಹಾಗೆ ತಿರುಗುತ್ತಿರುತ್ತದೆ. ಪಟ್ಟಣದ ಹೋರಿಗೆ ತಲೆ ಜಾಸ್ತಿ ! ಅದೂ ಕೆಟ್ಟವಿಚಾರದಲ್ಲಿ ! ಇಲ್ಲಿನ ಹೋರಿ ಯಜಮಾನಿಗೆ ಗಂಟೆ ಸದ್ದು ಕೇಳಿಸಿದರೆ ಸಾಕು ಎಂಬುದನ್ನು ಅರಿತು ನಿಂತಲ್ಲೇ ಕೊರಳನ್ನು ಅಲ್ಲಾಡಿಸುತ್ತದೆ ! ಬಡಪಾಯಿ ಗಾಣದವ ತಿರುಗಿ ನೋಡುವವರೆಗೂ ಹಾಗೇ ನಡೆದಿರುತ್ತದೆ. ಇದು ಮೈಗಳ್ಳತನಕ್ಕೆ ಒಂದು ಉದಾಹರಣೆ ಅಷ್ಟೇ !



ಸಜ್ಜನರು-ಮಾಹತ್ಮರು ಅನೇಕರು ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಬಗೆಗೆ ಓದಿಕೊಂಡು, ಅವರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಒಳ್ಳೆಯ ಸಂಕಲ್ಪದಿಂದ, ಒಳ್ಳೆಯ ಆಶಯ ಹೊತ್ತು, ಹೊತ್ತು ಕಳೆಯುವಾಗ ಚಿಂತನೆ ಮಾಡಿ ಕಳೆಯೋಣ, ಕ್ರಿಯಾಶೀಲರಾಗೋಣ, ಕೆಲಸ ಮಾಡೋಣ, ನಿಸ್ವಾರ್ಥರಾಗೋಣ, ಭಾರತ ಗುಡಿಯ ಕಟ್ಟೋಣ!