ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, May 24, 2010

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಇವತ್ತು ಅನಿವಾರ್ಯವಾಗಿ ಮತ್ತೆ ಇದೇ ಅಂಕಣ ಬರೆಯಬೇಕಾಗಿ ಬಂತು. ನಮ್ಮ ಬಾಂಧವರನೇಕರು ಕರ್ನಾಟಕದ ನೆಲದಲ್ಲೇ ವಿಮಾನ ದುರಂತದಲ್ಲಿ ಮಡಿದರು. ಸುಮಾರು ೧೬೦ ಜನ ಅಸುನೀಗಿದ ಆ ಕ್ಷಣ ವಿಮಾನದಲ್ಲಿದ್ದೂ ಜಿಗಿದು ಜೀವ ಉಳಿಸಿಕೊಂಡು ಬಂದ ಸಾವಿಗೆ ಬಾಗಿಲುಹಾಕಿ ಬದುಕಿಬಂದ ೭-೮ ಮಂದಿಯನ್ನು ವಿಚಾರಿಸಿದರೆ ಮಾತನಾಡಿಸಿದರೆ ವಿಮಾನದ ಒಳಗಿನ ಅಂತಿಮ ಕ್ಷಣದ ಚಿತ್ರವನ್ನು ಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವಭಯದಿಂದ ಚೀರುತ್ತಿದ್ದುದಾಗಿ ಅವರಲ್ಲಿ ಒಬ್ಬರು ಈಗಾಗಲೇ ಹೇಳಿದ್ದಾರೆ.

ಹಲವಾರು ಬಾರಿ ನಾನು ಹತ್ತಿರದಿಂದ ಮಾಲಿಕೆಯಲ್ಲಿ ಹೇಳುತ್ತಲೇ ಬಂದಿರುವ ಸಾಮಾನ್ಯ ವಿಷಯ ಜಗತ್ತನ್ನೆಲ್ಲ ಯಾವುದೋ ಶಕ್ತಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ; ತನ್ನ ಇಚ್ಛೆಯಂತೆ ಅದು ನಿರ್ವಹಿಸುತ್ತದೆ. ಕೆಲವರು ಎಷ್ಟೇ ಅವಿತುಕೊಂಡರೂ ಬಿಡದೇ ಸೆಳೆದಪ್ಪುವ ಸಾವು ಇನ್ನು ಕೆಲವರು ತನ್ನನ್ನು ಕರೆದುಕೋ ಅಂತ ಕೂಗಿ ಕರೆದರೂ ಹತ್ತಿರ ಬರುವುದಿಲ್ಲ! ಕೆಲವರನ್ನು ಕುಂತಲ್ಲಿ ನಿಂತಲ್ಲಿ ಆ ಕ್ಷಣಕ್ಕೇ ಹೃದಯ ಸ್ತಂಭಿಸಿ ಬರಸೆಳೆದರೆ ಇನ್ನು ಕೆಲವರು ನರಳಿ ನರಳಿ ಬದುಕುಳಿವಂತೇ ಮಾಡಿ ಯಾಕಪ್ಪಾ ಈ ಜೀವನ ಎನಿಸುವಷ್ಟು ಅವರಿಗೆ ಪೀಡನೆ ಕೊಡುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದ್ದು ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಕೊಂಕಣ ರೈಲ್ವೆ ಸಲುವಾಗಿ ಕೆಲೆಸಮಾಡುತ್ತಿರುವಾಗ ಬೆಟ್ಟದಿಂದ ಉರುಳಿಬಂದ ಕಲ್ಲು ಬೆನ್ನಮೇಲೆ ಬಿದ್ದು ಆ ದಿನದಿಂದ ಅವರು ಮಲಗಿದಲ್ಲೇ ಜೀವಹಿಡಿದು ಅರ್ಧದೇಹಧಾರಿಯಾಗಿ[ ಶರೀರದ ಕೆಳಭಾಗಕ್ಕೆ ಸ್ವಾಸ್ಥ್ಯವಿಲ್ಲ]ಅಮ್ಮನಿಂದ ಸೇವೆ ಮಾಡಿಸ್ಕೊಳ್ಳುತ್ತ ಬದುಕಿರುವುದು. ಯಾಕೆ ಹೀಗೆ ? ಒಂದೋ ಸರಿಯಾಗಿ ಇರಲಿ ಅಥವಾ ಹೋಗಿಬಿಟ್ಟರೆ ಚೆನ್ನ ಎಂದುಕೊಂಡರೆ ಯಾವುದೂ ನಮ್ಮ ಕೈಲಿಲ್ಲ. ನಾವೆಣಿಸಿದ ರೀತಿ ನಡೆಯುವುದೇ ಇಲ್ಲ.

ಈ ಲೋಕದ ವ್ಯವಹಾರವೇ ಹಾಗೆ! ನಾವು ಚಾಲಕರು ಎಂದುಕೊಂಡ ವಾಹನ ನಮ್ಮ ನಿಯಂತ್ರಣ ತಪ್ಪಿ ಇನ್ನೆಲ್ಲೋ ಸಾಗಬಹುದು, ಅಥವಾ ನಾವು ನಮ್ಮ ಕೈತಪ್ಪಿ ಹೊಯಿತೆಂದು ಕೈಚೆಲ್ಲುವಾಗ ಅನಿರೀಕ್ಷಿತ ತಿರುವಿನಿಂದ ನಮ್ಮ ವಾಹನ ನಮ್ಮ ನಿಯಂತ್ರಣಕ್ಕೆ ಮರಳಿ ಸಿಗಬಹುದು. ಎಷ್ಟೋ ಅಪಘಾತಗಳಲ್ಲಿ ಕೆಲವು ಚಿಕ್ಕಮಕ್ಕಳು ಮಾತ್ರ ಬದುಕಿ ಉಳಿಯುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ವಾಹನ ದುರಂತವೊಂದರಲ್ಲಿ ಎಲ್ಲರೂ ಸತ್ತರೂ ಚಿಕ್ಕ ಮಗುವೊಂದು ದೂರ ಎಸೆಯಲ್ಪಟ್ಟು ಏನೂ ಏಟಾಗದೇ ಹಾಗೇ ಬದುಕಿ ಕ್ಷೇಮವಾಗಿತ್ತು!


ಸಮಾಜದಲ್ಲಿ ಎಲ್ಲಾ ಥರದ ವ್ಯವಸ್ಥೆ ಇದ್ದರೂ ಹಾವು ಕಚ್ಚಿದ ನೆಪದಿಂದ ಸಾವು ಬರುವುದು, ನಾಯಿ ಕಚ್ಚಿದ ನೆಪದಿಂದ ಹುಚ್ಚು ಹಿಡಿದು ಸಾಯುವುದು, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಹಾಕಾಯಿಲೆಗಳಾದ ಟಿ.ಬಿ.,ಕ್ಯಾನ್ಸರ್ ಇತ್ಯಾದಿಗಳು ಜನರನ್ನು ಬಲಿತೆಗೆದುಕೊಳ್ಳುವುದು, ಯಕ್ಕಶ್ಚಿತ ಕಾಯಿಲೆಯಾದ ಕಾಮಾಲೆ ಜೀವಗಳನ್ನೇ ತಿಂದುಹಾಕುವುದು, ಪಾರ್ಕಿನ್ಸನ್, ಪೋಲಿಯೋ ಮುಂತಾದ ಕಾಯಿಲೆಗಳು ಔಷಧಗಳಿದ್ದರೂ ಬರುವುದು, ಕುಂಟರು-ಕುರುಡರು-ಮೂಕರು-ಹೆಳವರು ಅನಿರೀಕ್ಷಿತವಾಗಿ ಜನಿಸುವುದು...ಇವೆಲ್ಲಾ ನೋಡಿದರೆ ಪ್ರತಿಯೊಂದಿ ಜೀವಿಯ ಹುಟ್ಟು-ಸಾವಿನ ಹಿಂದೆ ಒಂದು ದೊಡ್ಡ ಕರ್ಮದ ಜಾಲವೇ ಹೆಣೆಯಲ್ಪಟ್ಟಿದೆ, ಅದು ನಾಟ್ ಅಂಡರ್ಸ್ಟ್ಯಾಂಡೇಬಲ್ ವೆರಿ ಬಿಗ್ ರಿಮೋಟ್ ನೆಟ್ ವರ್ಕ್!

ನಮಗೆ ಇದೇ ನೌಕರಿ ಸಿಗಲಿ, ನಮಗೆ ಇದೇ ವಿದ್ಯೆ ಬರಲಿ, ನಮಗೆ ಬೇಕಾದಷ್ಟು ಹಣ ಸಿಗಲಿ, ನಮಗೆ ರಾಶಿ ರಾಶಿ ಒಡವೆ-ವಸ್ತ್ರ ಸಿಗಲಿ ಎಂಬೆಲ್ಲಾ ನಮ್ಮ ಆಸೆಗಳು ಕೇವಲ ಆಸೆಗಳಾಗಿರಲೂ ಬಹುದು ಅಥವಾ ಆಸೆಗಳು ಕೈಗೂಡಬಹುದು. ಇದನ್ನೆಲ್ಲ ಅರಿತ ನಮ್ಮ ಪೂರ್ವಜರು ತಮ್ಮ ಅನುಭವದಿಂದ ಬರೆದ ಕೆಲವು ಶ್ಲೋಕಗಳನ್ನು ನೋಡಿ-

ಜನನೀಂ ಜನ್ಮಸೌಖ್ಯಾನಾಂ ವರ್ಧಿನೀ ಕುಲಸಂಪದಾಂ |
ಪದವೀಂ ಪೂರ್ವಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಈ ಮಾತಿನ ಹರವು ಎಷ್ಟೊಂದು ಗಂಭೀರ ! ಯಾರು ಎಲ್ಲಿ, ಹೇಗೆ, ಯಾವಾಗ, ಯಾವರೀತಿ, ಯಾರಿಗೆ ಮಗುವಾಗಿ ಹುಟ್ಟಬೇಕು, ಏನೆಲ್ಲಾ ಉಪಭೋಗಿಸಬೇಕು, ಏನು ವೃತ್ತಿ ಮಾಡಬೇಕು, ಯಾವರೀತಿ ದುಡಿಮೆ ಆ ವ್ಯಕ್ತಿಗೆ ಸಿಗಬೇಕು, ಆತನ ದುಡಿಮೆಗೆ ಯಾವರೀತಿ ಪ್ರತಿಫಲ ಸಿಗಬೇಕು, ವ್ಯಕ್ತಿಗೆ ಎಲ್ಲಿಯ ಸಂಬಂಧಗಳು ಬೆಳೆಯಬೇಕು, ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯಬೇಕು, ಯಾವ ಕಾಯಿಲೆ ವ್ಯಕ್ತಿಗೆ ಬಾಧಿಸಬೇಕು, ಯಾವ ಅಪಘಾತವನ್ನು ವ್ಯಕ್ತಿ ಎದುರಿಸಬೇಕು/ಎದುರಿಸಬಾರದು, ಯಾವ್ಯಾವ ವ್ಯಕ್ತಿಗಳನ್ನು-ಸಂಬಂಧಿಕರನ್ನು ಯಾವ್ಯಾವಾಗ ಕಳೆದುಕೊಳ್ಳಬೇಕು ಇವೆಲ್ಲಾ ವಿಷಯಗಳು ಪೂರ್ವ ನಿರ್ಧರಿತ, ಇದು ಮೇಲ್ನೋಟಕ್ಕೆ ನಮ್ಮ ಊಹೆಗೆ ನಿಲುಕದ್ದಾದರೂ ವಸ್ತುನಿಷ್ಠ ಸತ್ಯ ಇಂದಿಗೂ ಎಂದಿಗೂ ಎಂದೆದಿಗೂ-ಈ ಲೋಕ ಇರುವಲ್ಲೀವರೆಗೂ!

ಇನ್ನೊಂದು ಮಾತು ನೋಡಿ-
|| ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ||

ಅಂದರೆ ನಮಗೆ ಒಂದು ಸಾಕು ಪಶುವನ್ನು ಇಟ್ಟುಕೊಳ್ಳಲಾಗಲೀ, ಮದುವೆಯಾಗಿ ಒಬ್ಬರಜೊತೆ ಸಂಸಾರ ನಡೆಸಲಾಗಲೀ, ಮಕ್ಕಳನ್ನು ಪಡೆಯಲಾಗಲೀ, ಮನೆಯನ್ನು ಕಟ್ಟಿ ವಾಸಿಸಲಾಗಲೀ ಅದಕ್ಕೆಲ್ಲ ಋಣವೆಂಬುದಿರಬೇಕು. ಋಣದ ಬಂಧನವಿರದಿದ್ದರೆ ಏನೂ ಮಾಡಿದರೂ ಅವುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಸುಲಭಸಾಧ್ಯವಾಗುವ ಈ ಕೆಲಸಗಳು ಇನ್ನು ಕೆಲವರಿಗೆ ಕಬ್ಬಿಣದ ಕಡಲೆ ಜಗೆದಂತೆ!ಕೇವಲ ದೈಹಿಕ ಹಿಂಸೆ ಮಾತ್ರ ಹಿಂಸೆಯೇ ?ಜೀವನದಲ್ಲಿ ಸಾಂದರ್ಭಿಕವಾಗಿ ಆರ್ಥಿಕವಾಗಿ ಸಾಲಸೋಲಗಳನ್ನು ಮಾಡಿಕೊಂಡು ಒದ್ದಾಡುವುದು,ತೊಳಲಾಡುವುದೂ ಕೂಡ ನಮ್ಮ ಹಣೆಬರಹವೇ ಆಗಿದೆ. ಎಲ್ಲರಿಗೂ ಜೀವನ ಹೂವಿನ ಹಾಸಿಗೆಯಲ್ಲ, ಆದರೆ ಕೆಲವರಿಗೆ ಜೀವನ ಹೂಬನ ! ಇದಕ್ಕೆ ಏನನ್ನೋಣ ? ಇದಕ್ಕೆಲ್ಲ ಕಾರಣ ನಮ್ಮ ವಿಧಿ ಎಂದು ನಾವು ಹೇಳುತ್ತೇವಲ್ಲ ಆ ವಿಧಿಗೂ ಒಂದು ನಿಯಮವಿದೆ,ನಿರ್ಬಂಧವಿದೆ. ಅದಕ್ಕೆ ಯಾರೂ ಅತೀತರಲ್ಲ. ಹೀಗೆ ವಿಧಿ ತನ್ನ ಡೈರಿಯಲ್ಲಿ ನಮ್ಮ ಸರ್ವಿಸ್ ರೆಕಾರ್ಡ್ ಬರೆಯುವಾಗ ಯಾವ ಲಂಚವನ್ನೂ ಸ್ವೀಕರಿಸುವುದಿಲ್ಲ, ಯಾರ ಮಗ/ಮಗಳು ಎಂಬ ಸ್ಥಾನಮಾನವನ್ನೂ ನೋಡುವುದಿಲ್ಲ. ದೆರ್ ಎವರಿಥಿಂಗ್ ಈಸ್ ಕಾಮನ್ ಆಂಡ್ ಸಿಂಪಲ್,ಕಾಣದ ವಿಧಿ ದೂರದಿಂದ ಪ್ರತ್ಯಕ್ಷವಾಗಿ ನಮ್ಮ ಬಗ್ಗೆ ಏನು ನೋಡಿದೆಯೋ ಅದನ್ನು ಬರೆದುಬಿಡುತ್ತದೆ. ಅದು ಬದಲಾಯಿಸಲಾರದ ಶಾಶ್ವತ ಬ್ಲಾಕ್ ಬಾಕ್ಸ್. ದೆರ್ ಎಂಡ್ಸ್ ದಿ ಮ್ಯಾಟರ್!

ನಾವು ಹಾರುತ್ತೇವೆ-ವಿಮಾನ ಹಾರಿಸುತ್ತೇವೆ, ವಾಹನ ಚಲಾಯಿಸುತ್ತೇವೆ, ವೈದ್ಯರಾಗಿ ಎಲ್ಲಾ ಕಾಯಿಲೆಗಳಿಗೆ ಔಷಧ ಹುಡುಕಿ ೦ಏನನ್ನೋ ಸಾಧಿಸ ಬಯಸುತ್ತೇವೆ, ರಾಜಕಾರಣಿಯಾಗಿ ಇಡೀ ಭೂಮಂಡಲವನ್ನೇ ಆಪೋಶನ ತೆಗೆದುಕೊಳ್ಳುವ ಅತಿಯಾಸೆಗೆ ಬಲಿಯಾಗುತ್ತೇವೆ, ಪರರನ್ನು ಹಿಂಸಿಸಿ ಮೋಜುಮಾಡಿಸುತ್ತೇವೆ, ಇನ್ನೊಬ್ಬರನ್ನು ಕುಣಿಸಿ ನಾವು ಸಂತಸಪಡುತ್ತೇವೆ, ಅಣ್ಣ-ತಮ್ಮಂದಿರಾಗಿದ್ದವರು ದಾಯಾದಿಗಳಾಗಿ ಭೂಮಿ ಪಾಲು ಹಂಚಿಕೊಳ್ಳಲು ಗುದ್ದಾಡುತ್ತೇವೆ, ವಿವಿಧ ಕಾರಣಗಳಿಗೆ ನ್ಯಾಯಬೇಡಿಕೆ ಇಟ್ಟು ನ್ಯಾಯಾಲಯ ನಡೆಸುತ್ತೇವೆ, ನಮ್ಮೊಳಗೇ ಆಳುವವರು, ಶಿಕ್ಷಿಸುವವರು-ಭಕ್ಷಿಸುವವರು-ನಿಂದಿಸುವವರು-ಹೊಗಳು ಭಟ್ಟಂಗಿಗಳು ಎಲ್ಲರನ್ನೂ ಸೃಜಿಸಿಕೊಳ್ಳುತ್ತೇವೆ. ಆದರೆ ನಾವು ನಮಗೆ ಗೊತ್ತಿಲ್ಲದೇ ಯಾವುದನ್ನೋ ಮಾಡುತ್ತಿದ್ದೇವೆ, ಗೊತ್ತಿದೆ ಎಂದು ತಿಳಿದು ಮೂರ್ಖರಾಗಿದ್ದೇವೆ!

ಹಾಗಂತ ಯಾವುದೂ ನಮಗರಿವಿಲ್ಲದಲ್ಲವಲ್ಲ ! ಅರಿವಿಗಿರುತ್ತದೆ ಆದರೆ ಕಾಲ ಮೀರಿಹೋಗಿರುತ್ತದೆ. ಒಮ್ಮೆ ಅಪಘಾತವದಾಗ ಅಯ್ಯೋ ದೇವರೇ ಐದು ನಿಮಿಷ ಮೊದಲೇ ಆಗಿದ್ದರೆ ಏನೂ ಆಗುತ್ತಿರಲಿಲ್ಲವಲ್ಲ-ಹೀಗಾಗಿಬಿಟ್ಟಿತಲ್ಲ, ಮೊದಲೇ ತಿಳಿದಿದ್ದರೆ ’ಸಿ.ಡಿ’ ತಯಾರುಮಾಡುವವರ ಬಲೆಗೆ ಬೀಳುತ್ತಿರಲಿಲ್ಲವಲ್ಲ ಅಂತ ಇತ್ತೀಚೆಗೆ ಕೆಲವು ಮಾಜಿ ಮಂತ್ರಿಗಳೂ ತಮ್ಮೊಳಗೇ ಹಪಹಪಿಸಿದ್ದಾರೆ! ಕಾಲ ಯಾರನ್ನೂ ಯಾವುದನ್ನೂ ಕಾಯುವುದಿಲ್ಲ! ಪರೀಕ್ಷೆ ಬರೆಯಲೇ ಬೇಕು, ಬರೆದಮೇಲೆ ಬರುವ ಫಲಿತಾಂಶ ಅನುಭವಿಸಲೇ ಬೇಕು.ದೇವರೇ ಪರೀಕ್ಷೆ ಮುಂದೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಹಲವತ್ತುಕೊಳ್ಳುತ್ತೇವೆ ಆದರೆ ಅದು ಎಲ್ಲಾ ಸರ್ತಿ ಸಾಧ್ಯವೇ? ಅಂತೂ ಹೀಹಾಗಬೇಕು-ಹೀಗಾಗಬಾರದು ಎಂಬುದು ಮೊದಲೇ ನಿರ್ಧರಿಸಲ್ಪಟ್ಟಿರುವ ವಿಚಾರ ಎಂದಹಾಗಾಯಿತು.

ಇನ್ನೂ ಒಂದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು, ಕೇವಲ ಹೋಮ,ಪೂಜೆ-ಪುನಸ್ಕಾರಗಳಿಂದ ಅಥವಾ ಪ್ರಾರ್ಥನೆಗಳಿಂದ ನಮ್ಮ ಪೂರ್ವದ ಕರ್ಮಬಂಧನ ಕಡಿದುಹೋಗುವುದಿಲ್ಲ! ಅದು ಕಡಿಯಲು ನಮ್ಮ ಆದರ್ಶಗಳು,ಪರೋಪಕಾರ,ಅಹಿಂಸೆ,ಸಹಾಯ,ತ್ಯಾಗ,ಸೌಜನ್ಯ,ಪರಹಿತ ಇಂತಹ ಅನೇಕ ಸತ್ಕಾರ್ಯಗಳು ಕಾರಣ. ಲೋಹಕ್ಕೆ ನಮ್ಮ ಇನ್ನೊಂದು ಪ್ರತ್ಯಾಮ್ಲೀಯ ಗುಣವಿರುವ ಪದಾರ್ಥವನ್ನು ನಾವು ಉಜ್ಜಿದಾಗ ಕ್ರಮೇಣ ಹೇಗೆ ಹೊಳಪು ಸಿಗುವುದೋ ಹಾಗೇ ಸತತ ಒಳ್ಳೆಯ ಕಾರ್ಯಗಳನ್ನು ಒಳ್ಳೆಯ ಮನಸ್ಸಿನಿಂದ ಮಾಡುತ್ತಾ ಬದುಕಿದರೆ ಜನ್ಮಾಂತರಗಳಲ್ಲಿ ನಮ್ಮ ಕಾಫಿ ಫಿಲ್ಟರ್ ನಂತೇ ಆತ್ಮಕ್ಕೆ ಸೋಸುವ ಸಂಸ್ಕಾರ ಸಿಕ್ಕು ಅದು ಉತ್ತಮ ತರಗತಿಯನ್ನು ಹೊಂದುತ್ತ ನಡೆಯುತ್ತದೆ ಅಲ್ಲದೇ ಕೊನೆಗೊಮ್ಮೆ ಅದು ಪರಮಾತ್ಮನ ಸಾಯುಜ್ಯವನ್ನು ಸೇರಲು ಉಪಕ್ರಮಿಸಿ ಯಶಸ್ವಿಯಾಗುತ್ತದೆ. ಅಲ್ಲಿಯವರೆಗೆ ನಮ್ಮ ಕೊಡುಗೆಗಳಿಗೆಲ್ಲ ’ಇಂಥವರಿಂದ ಇಂಥಾ ಕೊಡುಗೆ’[ಉದಾಹರಣೆ: ಕೊಡೆಗೆ-ಮುದ್ದೇಗೌಡರು ಮತ್ತು ಕುಟುಂಬದವರು] ಎಂದು ಚಿಕ್ಕ ಕೊಡುಗೆಗೂ ನಾಮಫಲಕ ಬರೆಸಿಹಾಕುತ್ತಾರಲ್ಲ ಹಾಗೇ ಅವು ಅರ್ಥಹೀನವಾಗಿ, ಕ್ಷುಲ್ಲಕವಾಗಿ ಕಾಣುತ್ತವೆ.

ದೇವತೆಗಳು ಅವತರಿಸಲೂ ಕೂಡ ಹಲವಾರು ಕಾರಣಗಳಿರುತ್ತವೆ, ಅಂತಹ ದೈವಾಂಶ ಸಂಭೂತರಾದ ಶ್ರೀರಾಮ,ಶ್ರೀಕೃಷ್ಣ ಇವರೆಲ್ಲ ಜನ್ಮದಲ್ಲಿ ಅನೇಕ ತೊಂದರೆಗಳನ್ನು-ಕಷ್ಟಕೋಟಲೆಗಳನ್ನು ಅನುಭವಿಸಿದ್ದಾರೆ ಎನ್ನುವಾಗ ನಾವೆಲ್ಲ ಹುಟ್ಟಲು ನಮ್ಮ ಕರ್ಮಗಳು ನಮ್ಮನ್ನು ಬಾಧಿಸುವುದೇ ಕಾರಣ ಎನ್ನಬಹುದೇನೋ. ಇದನ್ನೆಲ್ಲ ಅರಿತು ನಾವು ಸಮಾಜದಲ್ಲಿ ನಮ್ಮಿಂದ ಅನ್ಯಾಯ,ಅಪಚಾರ,ಬ್ರಷ್ಟಾಚಾರ,ದುರಾಚಾರವೇ ಮುಂತಾದ ಖೂಳವೃತ್ತಿಗಳನ್ನು ದಮನಿಸಿ ಬದುಕೋಣ, ಪರಸ್ಪರ ಪ್ರೀತಿಯಿಂದ-ಜಗದ ಜೀವಿತದ ಗುರಿಯನ್ನು ಅರ್ಥೈಸಿ ಮುಂಬರುವ ಜನ್ಮಗಳಲ್ಲಿ ಒಳ್ಳೆಯ ಹಂತಕ್ಕೆ ತಲುಪೋಣ ಅಲ್ಲವೇ?

Friday, May 21, 2010

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

[ಚಿತ್ರ ಕೃಪೆ : ಫೋಟೋ ಸರ್ಚ್ ಡಾಟ್ ಕಾಂ ]

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

ಪ್ಯಾಂಟಿನ ಜೇಬಿಗೆ ಕೈಹಾಕಿ ತೆಗೆದರೆ ಅದೆಂತದೋ ಕೆಟ್ಟ ವಾಸನೆ ಹೊಡೆಯುತ್ತಿತ್ತು! ಸಹಿಸಿಕೊಳ್ಳಲು ಆಗದ್ದು! ಒಗೆದು ಇಸ್ತ್ರಿ ಮಾಡಿ ಚೆನ್ನಾಗೇ ಇತ್ತಲ್ಲ ಹೇಗೆ ಬಂತು ಈ ವಾಸನೆ ? ವಾಸನಾ ಮೂಲವನ್ನು ಹುಡುಕುವ ಪ್ರಯತ್ನ ನಡೆಯಿತು. ವಾಸನೆಯ ಜಾಡು ಹಿಡಿದು ದಟ್ಟಕಾಡಲ್ಲಿ ಪ್ರಾಣಿಯನ್ನರಸಿ ಹೊರಟ ರೀತಿಯಲ್ಲಿ ಹೊರಟಾಯಿತು! ಅಲ್ಲಿ ಕೈಲಿ ರಕ್ಷಣೆಗೆ ಬಂದೂಕು ಇರುವಂತೆ ಇಲ್ಲಿ ಒಳ್ಳೆಯ ಸೆಂಟಿನ ಅವಶ್ಯಕತೆಯಿತ್ತು.


ಅಂದಹಾಗೇ ಕೆಲವರಿಗೆ ವಾಸನೆ ಎಂಬುದರ ಕಲ್ಪನೆಯೇ ಇರುವುದಿಲ್ಲ. ಅವರು ಅದರ ಮಧ್ಯದಲ್ಲೇ ಹಾಯಾಗಿರುತ್ತಾರೆ. ಕೆಲವರ ಮನೆಗೆ ನಾವು ಹೋದಾಗ ಅಲ್ಲಿ ಹಳೆಯ ನಾರುವ ಬಟ್ಟೆಯದ್ದೋ, ಕೊಳೆತ ಕಾಲುಚೀಲ[ಸಾಕ್ಸ್]ದ್ದೋ, ತೊಳೆಯದೇ ಬಿಸಕಿದ ಟವೆಲ್ಲಿನದೋ, ಮುಗ್ಗಿದ ಮಲ್ಟಿಪರ್ಪಸ್ ಒರೆಸುವ ಬಟ್ಟೆಯದೋ ಅಂತೂ ವಾಸನಾಲೋಕ ಅರಳಿಕೊಂಡು ನಮ್ಮ ಮೂಗಿಗೆ ತನ್ಮೂಲಕ ಮೈಮನಕ್ಕೆಲ್ಲ ಅಮರಿಕೊಂಡು ಅಲ್ಲಿಂದ ಕಾಲ್ಕಿತ್ತರೆ ಸಾಕೆನ್ನುವಷ್ಟಾಗಿಬಿಡುತ್ತದೆ, ಆದರೆ ಅವರು ಮಾತ್ರ ಎಂದಿನಂತೆ ತಮ್ಮಕಾರ್ಯ ಅದೇ ’ಪರಿಮಳ’ದಲ್ಲಿ ಮುಂದುವರಿಸಿರುತ್ತಾರೆ!

ನೋಡಿ ಸ್ವಾಮೀ, ಇಂದ್ರಿಯಗಳಲ್ಲಿ ಘ್ರಾಣೇಂದ್ರಿಯ ಇದೆಯಲ್ಲ, ಅಲ್ಲಿಂದ ಆಘ್ರಾಣಿಸಲ್ಪಟ್ಟ ವಾಸನೆ ನೇರವಾಗಿ ನಮ್ಮ ಆತ್ಮದವರೆಗೂ ತಲ್ಪುತ್ತದಂತೆ, ಅದಕ್ಕೆಂದೇ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ವಾಸನೆ ಕೂಡ ಸಲ್ಲ ಎಂದು ಸನ್ಯಾಸಧರ್ಮ ಹೇಳುತ್ತದೆ. ನಾವು ತಿಂದುಂಡು ತೇಗುವ, ಉಡುವ, ನೋಡುವ, ಮುಟ್ಟುವ,ಹಿಡಿಯುವ,ಅಪ್ಪುವ,ಒಪ್ಪುವ, ಎಲ್ಲಾ ವಸ್ತುಗಳಿಗೆ ಒಂದಿಲ್ಲೊಂದು ವಾಸನೆ ಇದ್ದೇ ಇರುತ್ತದೆಯಲ್ಲವೇ? ಕೆಲವು ಸುವಾಸನೆಯಾದರೆ ಇನ್ನು ಕೆಲವು ದುರ್ವಾಸನೆ. ಈ ವಾಸನೆಗಳ ಲೋಕ ತೆರೆದಿಡುವ ಜಗತ್ತೇ ಅತಿ ವಿಶಿಷ್ಟ! ಏನಿದ್ದರೂ ನಾವನುಭವಿಸುವ ವಸ್ತುಗಳು ಭೌತಿಕವಾಗಿ ನಮ್ಮ ಅನುಭೂತಿಗೆ ಸಿಗುವುದಾದರೆ ಅವುಗಳ ವಾಸನೆಗಳ ಛಾಯೆ ಅತ್ಮಕ್ಕೆ ಅಂಟಿಕೊಳ್ಳುವ ಅಂಶಕ್ಕೆ ಸೇರುತ್ತವಂತೆ! ಹೀಗಗಿ ಸಾವಿಲ್ಲದ ಆತ್ಮ ವಾಸನೆಗಳ ಮೂಲವನ್ನು ಹೊತ್ತುಕೊಂಡೇ ಸಾಗುತ್ತದೆ. ಅದಕ್ಕೇ ಆದಷ್ಟೂ ಸುವಸನಾಭರಿತ ಪದಾರ್ಥವನ್ನು ಬಳಸೋಣ ಎಂದು ಒಂದು ವಾದ!

ವಾಸನೆ ಅಂದ ತಕ್ಷಣ ನೆನಪಾಗುವುದು ಮೂಗು. ಮೂಗಿನ ಮ್ಯಾನುಫ್ಯಾಕ್ಚರಿಂಗ ನಲ್ಲಿ ಹಲವು ವೈವಿಧ್ಯಮೆರೆವ ಭಗವಂತ ಕೆಲವರಿಗೆ ಬಂದೂಕಿನ ನಳಿಗೆಯ ಥರದ ಮೂಗು ಕೊಟ್ಟರೆ ಇನ್ನು ಕೆಲವರಿಗೆ ಸಂಪಿಗೆಯ ಎಸಳಿನ ನಾಸಿಕ, ಮತ್ತೆಕೆಲವರಿಗೆ ಹಂದಿಯ ಮೂತಿಯ ಥರದ್ದಾದರೆ ಇನ್ನೂ ಕೆಲವರಿಗೆ ಬೆಕ್ಕಿನ ಮೂಗಿನ ಹಾಗೇ ಚಪ್ಪಟೆ ಮೂಗು ಕೊಟ್ಟಿರುತ್ತಾನೆ! ಹಾವಿನ ಮುಖದ ಮೂಗು ಕೆಲವರಿಗಾದರೆ ಗೋವಿನಹಾಗೇ ದೊಡ್ಡ ಹೊಳ್ಳೆಯ ಮೂಗು ಕೆಲವರಿಗೆ! ತಾವು ನೈಜೀರಿಯಾ ಮೂಲದವರನ್ನು ನೋಡಿ, ಸಾಕ್ಷಾತ್ ಕಾಡುಕೋಣದ ಹೂಂಕರಿಸುವ ಮೂಗು ಅವರದ್ದು!ಅಪರೂಪದಲ್ಲಿ ಕೆಲವರಿಗೆ [ಶೂರ್ಪನಖಿಯ ನೆನಪು ಸದಾ ಇರಲೆಂದು ಇರಬೇಕು!]ಕತ್ತರಿಸಿದ ಹಾಗಿರುವ ಮೂಗು!ಕೆಲವರಿಗೆ ಕಾಲು ಕೇಜಿ ನಶ್ಯ ತುಂಬಿಡುವಷ್ಟು ದೊಡ್ಡಗಾತ್ರದ ಡಬ್ಬದ ರೀತಿಯ ಮೂಗು!ಕೆಲವರಿಗೆ ಮಣ್ಣಿನಿಂದ ಮಾಡಿದ ವಿಗ್ರಹಗಳಿಗೆ ಲಾಸ್ಟ್ ಮಾಮೆಂಟ್ ನಲ್ಲಿ ಕಲಾವಿದ ಜೋಡಿಸಿದಂತೆ ಬ್ರಹ್ಮ ಜೋಡಿಸಿದ್ದಾನೇನೋ ಅಂತನ್ನಿಸುವಮೂಗು. ಆಮೇಲೆ ಸೊಟ್ಟಮೂಗು, ಉದ್ದಮೂಗು, ಮೊಂಡು ಮೂಗು, ಗಿಣಿ ಮೂಗು, ಗರುಡ ಮೂಗು, ಕಪ್ಪೆ ಒತ್ತಿಟ್ಟ ಹಾಗಿನ ಮೂಗು ಇವೆಲ್ಲ ಮಿಕ್ಕುಳಿದ ಸಾಮಾನ್ಯ ಪ್ರಭೇದಗಳು!ಸದ್ಯಕ್ಕೆ ಆನೆಯ ಮೂಗಿನ ಥರದ ಮೂಗನ್ನು ಮಾತ್ರ ಕೊಟ್ಟಿಲ್ಲವಲ್ಲ ಎಂದುಕೊಳ್ಳಬೇಕು ಏನಂತೀರಾ? ಪುಣ್ಯಾತ್ಮ ದೇವರು ಮೂಗಿನ ಆಕಾರದಂತೆ ಆಘ್ರಾಣ ಶಕ್ತಿಯನ್ನೂ ಪರ್ಸಂಟೇಜ್ ನಲ್ಲಿ ಕರುಣಿಸಿದ್ದಾನೇನೋ ಅನಿಸುತ್ತಿದೆ. ಹೇಳಿದೆನಲ್ಲ-ಕೆಲವರಿಗೆ ವಾಸನೆಗಳಲ್ಲಿ ಭೇದವೇ ಇಲ್ಲ!

ನಶ್ಯಂ ವಶ್ಯಕರಮ್ ವಸ್ತ್ರೆಲ್ಲ ಸಿಂಬ್ಳಾಕರಮ್ --ಅಂತ ಯಾರೋ ಹೇಳಿದಹಾಗಯ್ತು, ಯಾಕೆ ಗೊತ್ತೇ ಈ ನಶ್ಯದವರು ಇರುತ್ತಾರಲ್ಲ ಅವರ ಹಿಂದೆ-ಮುಂದೆ ಇರುವವರು ತುಂಬಾ ಹುಷಾರಾಗಿರಬೇಕು. ತಟಕ್ಕನೆ ಮಿಂಚಿ-ಗುಡುಗಿದಂತೆ ಯಾವಾಗಲಾದರೂ ಅವರು ಆಆಆಆಆಆಅ ಕ್ಷೀಈಈಈಈಈಈಈ ಅಂದುಬಿಡುತ್ತಾರೆ, ಅವರ ಆ ಊಊಊಊಊಊಊದ್ದ ಸೀನಿನೊಟ್ಟಿಗೆ ಹಿಂದೆ-ಮುಂದೆ ಇರುವವರ ಬಟ್ಟೆಯ ’ಸೀನು’ ಬದಲಾಗಿಬಿಡಬಹುದು! ನಶ್ಯವನ್ನು ಉಪಯೋಗಿಸುವ ಯಾರೇ ಪುಣ್ಯಾತ್ಮನನ್ನು ಕೇಳಿ ಆತ ಮೂಗಿರುವುದೇ ಅದಕ್ಕೆ ಅಂದರೆ ಆಶ್ಚರ್ಯವಿಲ್ಲ! ನನಗೆ ಗೊತ್ತಿರುವ ಹಾಗೆ ಸಿಗರೇಟು ಸೇದುವ ಒಬ್ಬ ಮಹಾನುಭಾವ ಅದರ ಕುರಿತು ವ್ಯಾಖ್ಯಾನಿಸುತ್ತ ಸಿಗರೇಟಿನ ಹೊಗೆ ಶರೀರದ ಒಳಗಿರುವ ಕೀಟಾಣುಗಳನ್ನೆಲ್ಲ ಹೊಡೆದೋಡಿಸುತ್ತದೆ ಎನ್ನುತ್ತಿದ್ದ...ಬಹುಶಃ ಮನೆಗಳಲ್ಲಿ ಧೂಪದ ಹೊಗೆ ಹಾಕುತ್ತಾರಲ್ಲ ಹಾಗೇ ಇರಬೇಕು ಏನಂತೀರಿ?!!

ಕೆಲವರ ಮುಖ ಬೆಳಿಗ್ಗೆ ನೋಡಿದರೆ ಕೆಲಸವೇ ಆಗುವುದಿಲ್ಲ ಎಂಬ ಇನ್ನೂ ಕೆಲವರ ಅಂಬೋಣ ಕಾರಣ ನನಗೀಗ ಸಿಕ್ಕಿದೆ! ಆ ನಸೀಬುಗೆಟ್ಟ ಮುಖಗಳವರು ಸರಿಯಾಗಿ ಮುಖಮಾರ್ಜನೆ,ನಿತ್ಯ ನೈಮಿತ್ತಿಕ ಸ್ವಚ್ಛತಾಕೆಲಸಗಳನ್ನು ಮಾಡದೇ ಆಳಸಿಗಳಾಗಿ ಅದೀಗತಾನೇ ಹಾಸಿಗೆಯಿಂದ ಎದ್ದು ಬಂದವರ ಮುಖ ಹೊತ್ತಿರುತ್ತಾರೆ. ಜೀವನದಲ್ಲಿ ಏನಿದೆ ಮಹಾ ಎಂಬ ತತ್ವೋಪದೇಶ ನೀಡುವ ಅಂಥವರು ಅಲ್ಲಿಲ್ಲಿ ಸುತ್ತುತ್ತ ಹಾಗೂ ಹೀಗೂ ಜೀವಿಸುತ್ತಾರೆ! ಅವರು ಮಾಡಿದ್ದೆಲ್ಲ ಸರಿ ಎಂಬ ಧೋರಣೆ ತಳೆದಿರುವ ಅವರಲ್ಲಿ ಮಾಡಿದ್ದನ್ನು ಪ್ರಶ್ನಿಸಲು ಬೇರೆಯವರಿಗೆ ಅವಕಾಶವೇ ಇಲ್ಲ! ಇಂತಹ ಜನ ಎದುರಾಗಿ ಸಿಕ್ಕರೆ ಅವರು ಬೇರೆಯವರ ಮೂಡ್ ಕೆಡಿಸಿಬಿಡುತ್ತಾರೆ! ಮೂಡ್ ಕಳೆದುಕೊಂಡ ಜನ ಅದಕ್ಕೆ ಕಾರಣೀಭೂತರಾದ ’ಭೂತ’ಗಳನ್ನು ಬೈಯ್ಯುವುದರಲ್ಲಿ ತಪ್ಪೇನಿದೆ? ಇನ್ನು ಕೆಲವರು ಐಏಎಸ್,ಡಾಕ್ಟರೇಟ್ ಎಲ್ಲಾ ಮಾಡಿರುತ್ತಾರೆ--ಆದರೆ ಅವರ ಬಟ್ಟೆಬರೆ-ಅವರು ಮನೆಯಲ್ಲಿ-ಹತ್ತಿರದವರೊಡನೆ ನಡೆದುಕೊಳ್ಳುವ ರೀತಿಗೆ ಮಾತ್ರ ಮತ್ತೆ ಅವರಿಗೆ ಈ ವಿಷಯಗಳಲ್ಲಿ ಐಏಎಸ್,ಡಾಕ್ಟರೇಟ್ ಮಾಡಿಸಬೇಕಾಗುತ್ತದೆ!

ಬಹುಶಃ ಈ ವಾಸನಾ ಗ್ರಹಿಕೆ ಎಂಬುದಿದೆಯಲ್ಲ ಅದು ರ್‍ಊಟ್ ಕಲ್ಚರ್ ಅಂದರೆ ತಪ್ಪಲ್ಲವೇನೋ! ಮೂಲ ಸಂಸ್ಕಾರವಿಲ್ಲದಿದ್ದರೆ ವಾಸನೆಗಳೆಲ್ಲ ಅರ್ಥಹೀನವೇನೋ! ಪಟ್ಟಣಗಳಲ್ಲಿ ತಿಪ್ಪೆ ಎತ್ತುವ ಗಾಡಿಗಳಲ್ಲಿ ಕೆಲಸಗಾರರು ಹಾಯಾಗಿ ಹಾಡುಹೇಳಿಕೊಂಡು ಹೋಗುತ್ತಿರುವುದಿಲ್ಲವೇ ? ಮೀನು-ಕೋಳಿ-ಮಟನ್ ಮಾರುವ ಜನರಿಗೆ ಮೂಗಿಲ್ಲವೇ? ಕೆಲವು ಮೀನು ಸಾಗಾಣಿಕೆಯ ಲಾರಿಗಳನ್ನು ನೆನೆಸಿಕೊಂಡರೆ ದಿನವಿಡೀ ವಾಂತಿ ಫ಼್ರೀ! ಒಮ್ಮೆ ಹೀಗಾಯ್ತು- ಮೀನುಮರುವ ಹೆಂಗಸರು ಪೇಟೆಯಿಂದ ಅವರ ಹಳ್ಳಿಗೆ ರಾತ್ರಿ ವಾಪಸ್ಸಾಗಬೇಕಾಗಿತ್ತು ಆದರೆ ಆಅ ದಿನದ ಕೊನೆಯ ಬಸ್ ಆಗಲೇ ಹೋಗಿಬಿಟ್ಟಿದ್ದರಿಂದ ಅವರು ಶಹರದ ಬಸ್ ಶೆಲ್ಟರ್ನಲ್ಲೇ ರಾತ್ರಿ ಮಲಗುವ ಪ್ರಮೇಯ ಬಂತು. ಅಲ್ಲಿ ಮಲ್ಲಿಗೆ ಮಾರುವ ಹೆಂಗಸರು ಹಗಲು ಹೊತ್ತು ಮಲ್ಲಿಗೆ ಮಾರಿದ್ದರಿಂದ ಅಲ್ಲಲ್ಲಿ ಮಲ್ಲಿಗೆಯ ಪಕಳೆಗಳು ಬಿದ್ದಿದ್ದು ಮಲ್ಲಿಗೆಯ ಪರಿಮಳ ಘಮ್ಮೆಂದು ಒಸರುತ್ತಿತ್ತು. ಮೀನುಗಾರ್ತಿಯರಿಗೆ ಬಹಳ ಹೊತ್ತು ನಿದ್ದೆಯೇ ಬರಲಿಲ್ಲವಂತೆ! ಕಾರಣ ಇಷ್ಟೇ ಮಲ್ಲಿಗೆಯ ಕೆಟ್ಟ ವಾಸನೆ ಅವರ ಮೂಗಿಗೆ ಸೋಕುತ್ತಲೇ ಇತ್ತು! "ಅಕ್ಕಾ ನಂಗೆ ನಿದ್ದೆನೇ ಬಂದಿಲ್ಲ ಕಣೇ, ಆ ಮಲ್ಗೇ ವಾಸ್ನೆ ಐತಲ್ಲಾ ಹಾಳಾದ್ದು, ಏನ್ಮಾಡೂದು ಇವಾಗ?" ಅಂತ ಒಬ್ಬಾಕೆ ಇನ್ನೊಬ್ಬಳಿಗೆ ಕೇಳಿ ಅವರಲ್ಲೇ ಪ್ಲಾನು ಹೊಳೆದು ಮೀನುಹಾಕಿದ ಬುಟ್ಟಿಯನ್ನು ಮುಖಕ್ಕೆ ಮುಚ್ಚಿಕೊಂಡು ಮಲಗಿದಮೇಲೆ ಜಗತ್ತಿಗೇ ನಿದ್ದೆ ಆವರಿಸಿದಂತೇ ಏನು ನಿದ್ದೆ ಅಂತೀರಿ! ಅಂತೂ ವಾಸನೆಗಳನ್ನು ಅಘ್ರಾಣಿಸಲು ಕೊಟ್ಟ ಯಂತ್ರದ ಮಹಿಮೆ ಅಪಾರ!

ಛೆ ಛೆ... ನಾನು ಎಲ್ಲೋ ಬಂದುಬಿಟ್ಟೆನಲ್ಲಾ... ಅಂದಹಾಗೇ ಅಂತೂ ತೊಳೆದು ಉಟ್ಟ ಪ್ಯಾಂಟಿನ ಜೇಬಿನ ವಾಸನೆಗೆ ಮೂಲ ಅದರಲ್ಲಿ ಹಾಕಿದ್ದ ಹರಕಲು ನೋಟು!

ನೋಟು ಹಳೆಯದಾದರೇನು ನೋಟ ನವನವೀನ!
ಮನದ ಭಾವ ಕೆರಳುವುದಕೆ ವಾಸನೆಗಳು ಜಾಣಾ !


ಅಯ್ಯಯ್ಯೋ ನೋಟು ಎಂದರಾಗಲಿಲ್ಲ, ಅದರ ಆತ್ಮಕಥೆಯೇ ಬೇರೆ! ಅದನ್ನು ಇನ್ನೊಮ್ಮೆ ಇಟ್ಟುಕೊಳ್ಳೋಣ! ಐದು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳ ೭-೮ ನಮೂನೆಯ ನೋಟುಗಳಿವೆ ಅಲ್ಲವೇ? ಆದರೆ ನಮ್ಮಲ್ಲಿ ಏಳೆಂಟು ನೂರು ವಿಧದ ನೋಟುಗಳಿವೆ! ಒಂದೇ ದೇಶ, ಒಂದೇ ಕಾಯಿದೆ ಅದು ಹೇಗೆ ಅಂತೀರಾ ಹಾಗಾದ್ರೆ ನಿಧಾನವಾಗಿ ನೆನಪುಮಾಡಿಕೊಳ್ಳಿ. ಮೊನ್ನೆ ನೀವು ಬಸ್ಸಿನಲ್ಲಿ ಬರುವಾಗ ಕಂಡಕ್ಟರ್ ಗೆ ಐನೂರರ ನೋಟು ಕೊಟ್ಟು ಆತ ಬೆರಳಿಗೆ ಎಂಜಲನ್ನು ತಾಗಿಸಿಕೊಂಡು ಚಪ ಚಪ ಚಪನೆ ಎಣಿಸಿದ ಚಿಲ್ಲರೆ ಪಡೆದದ್ದರಲ್ಲೇ ಹಲವು ಥರದ ನೋಟುಗಳಿವೆ! ಒಂದೊಂದ ಮಹಾತ್ಮೆಯೇ ಒಂದೊಂದು ಥರ! ಒಂದು ಎಣ್ಣೆಯ ಅಭ್ಯಂಜನ ಮಾಡಿದ್ದು, ಇನ್ನೊಂದು ಮಳೆಯಲ್ಲಿ ನೆನೆದ ಹಂದಿಯಹಾಗೆ ಆಗಿದ್ದು, ಮತ್ತೊಂದು ಕುಂಕುಮ ಅಂಟಿಸಿಕೊಂಡ ಸುಮಂಗಲೆ, ಇನ್ನೊಂದು ಅರಿಶಿನದಲ್ಲಿ ಅದ್ದಿದ್ದು, ಹಾಗೇ ಮತ್ತೊಂದು ಮೇಲಿಂದ ನೀಲಿ ಇಂಕು ಪೇರಿಸಿಕೊಂಡಿದ್ದು, ಮತ್ತೊಂದು ಕಪ್ಪು ಕಲೆಯನ್ನು ಹಚ್ಚಿದ್ದು, ಇನ್ನೂ ಒಂದು ಹೆಸರು ಬರೆಸಿಕೊಂಡಿದ್ದು,ಮಗುದೊಂದು ಹಾಲು ಕುಡಿದಿದ್ದು,ಮತ್ತಾಮಗುದೊಂದು ಗಡ್ಡದ ಕ್ರೀಮ್ ನ್ನು ಹಚ್ಚಿಸಿ ಗಡ್ಡಮಾಡಿಸಿಕೊಂಡಿದ್ದು, ಕೊನೆಯದಾಗಿ ಪಾನೀಪೂರಿಯವನ ಕೈಲಿ ಪಾನೀ ಕುಡಿದಿದ್ದು,ಮಸಾಲ ಪೂರಿ ತಿಂದಿದ್ದು---ಇವೆಲ್ಲಾ ವೈವಿಧ್ಯಗಳು! ಮೌಲ್ಯ ಏನೇ ಇದ್ದರೂ ಭಾರತೀಯತೆ ಮೆರೆಯುತ್ತೇವೆ --ವಿವಿಧತೆಯಲ್ಲಿ ಏಕತೆ, ಏಕದರಲ್ಲಿ ಅನೇಕತೆ!

ಮಡಚಿದ್ದು, ನಾಲ್ಕು ಭಾಗಮಾಡಿ ಪ್ಲಸ್ ಪ್ಲಾಸ್ಟರ್ ಹಾಕಿದ್ದು, ಜಗತ್ತಿಗೇ ದುರ್ಬೀನು ಹಿಡಿವಂತೆ ತೂತಾಗಿರುವುದು, ಅನೇಕಬಾರಿ ಪಿನ್ನುಮಾಡಿಸಿಕೊಂಡು ಮಸಾಲೆ ದೋಸೆಯಂತೆ ತೂತಾಗಿದ್ದು, ಅಸಲಿಗೆ ಗುರುತಿನ ಸಂಖ್ಯೆಯೇ ಬೇರೆಯಾಗಿದ್ದು, ನೀರಿಲ್ಲದೇ ಬಿಸಿಲಲ್ಲಿ ಒಣಗಿ ಒಡೆದ ಗದ್ದೆಯ ಮೇಲ್ಮೈಥರದ್ದು, ಮಣ್ಣಲ್ಲೇ ಹುಟ್ಟಿ ಮಣ್ಣಲ್ಲೇ ಸಾಯ್ವ ತತ್ವ ಓದಿದ್ದು--ಹೀಗೆ ಇವೆಲ್ಲ ಇತರ ಪ್ರಭೇದಗಳು! ಇಲ್ಲೂ ಅದೇ ವಿವಿಧತೆಯಲ್ಲಿ ಏಕತೆ!

ಹೀಗೇ ಇಂತಹ ಯವುದೋ ಮೂಲದಿಂದ ಬಂದ ನೋಟೊಂದು ಒಂದೆರಡು ನೋಟುಗಳ ಮಧ್ಯೆ ಕೆಲಕಾಲ ಬಂದು ನನ್ನ ಪ್ಯಾಂಟಿನ ಜೇಬಿನಲ್ಲಿ ವಾಸ್ತವ್ಯ ಹೂಡಿತ್ತು! ಅದು ಹಾಗೇ ಕೆಲನಿಮಿಷಗಳಲ್ಲೇ ಮತ್ಯಾರದೋ ಕೈಗೆ ಸರಿದು ಹೋಗಿತ್ತು! ಆದರೆ ಅದರ ಬಂದು ಹೋಗುವ ನಡುವೆ ತನ್ನ ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ಎಂಬ ನಿಜದ ಅರಿವನ್ನು ಮೂಡಿಸಿಯೇ ಹೋಗಿತ್ತು!ಇದ್ದರೆ ಇರಬೇಕು ವಾಸನೆಯ ನೋಟಿನ ರೀತಿ ಎಂದು ನೆನಪಿಸಿಕೊಳ್ಳಲೋ ಎಂಬಂತೆ ಅದರ ವಾಸನಾಬಲ ನನ್ನ ಮೂಗನ್ನಡರಿ ನನ್ನ ಜಂಘಾಬಲವನ್ನೇ ನುಂಗಿಹಾಕಿತ್ತು! ಹೊರಗಿನಿಂದ ಯಾರದೋ ಕೈಲಿರುವ ಆ ನೋಟು ಸಿನಿಮಾ ಹಾಡೊಂದನ್ನು ಹಾಡಿದ ಹಾಗೇ ಅನಿಸುತ್ತಿತ್ತು.....ಜನ್ಮ ಜನ್ಮದಾ ಅನುಬಂಧ.. ನೋಟು ಜೇಬುಗಳ ಪ್ರೇಮಾನುಬಂಧ!

Thursday, May 20, 2010

ಗ್ರಾಮಾನಂದ ಲಹರೀ


ಇಂದಿನ ನವ ಪೀಳಿಗೆಗೆ ಹಿಂದಿನ ಗ್ರಾಮೀಣ ಬದುಕು-ಪರಿಸರ ಕೇವಲ ನೆನಪು ಮಾತ್ರ. ಅಂದಿನ ಜೀವನದ ಮಜಾ ಇಂದಿಲ್ಲ. ಇಂದು ಕೇವಲ ನಮ್ಮದು ಆತುರದ ಬದುಕು. ಅಂದು ಅದು ವಿಭಿನ್ನವಾಗಿ ಪ್ರತೀ ಕ್ಷಣವನ್ನು ರುಚಿರುಚಿಯಾಗಿ ಅನುಭವಿಸುವ, ಹಂಚಿಕೊಳ್ಳುವ ಬದುಕಾಗಿತ್ತು. ಇವತ್ತು ನೀವು ಊರಿಗೆ ಹೋದರೆ ನೆರೆಯಾತ ಎಲ್ಲೋ ಹೊರಟುನಿಂತಾಗ ನೀವು ನಿಮ್ಮ ಬಾಲ್ಯದ ಪ್ರವೃತ್ತಿಯಂತೆ " ಎಲ್ಲಿಗಪ್ಪ ಹೊರಟುಬಿಟ್ಟೆ ? " ಅಂತ ಕೇಳಿದರೆ ಆತ " ಇಲ್ಲೇ ಪೇಟೆಗೆ, ಸ್ವಲ್ಪ ಕೆಲ್ಸ ಇತ್ತು ಅದಕ್ಕೇ..." ಎನ್ನುತ್ತಾನೆ. ಯಾವ ಕೆಲ್ಸ, ಎಲ್ಲಿ ಅದೆಲ್ಲ ಹಂಚಿಕೊಳ್ಳಲಾರದ ವಿಷಯವಸ್ತು ಈಗ. ಅದೇ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ಹೀಗಿರಲಿಲ್ಲ. ಹಳ್ಳಿಯಲ್ಲಿ ಅಕ್ಕಪಕ್ಕ ಯಾರಾದರೂ ಪೇಟೆಗೆ ಹೊರಟರೆ ನೆರೆ-ಕೆರೆಯ ಮನೆಗಳಿಗೆ ಏನಾದರೂ ತರುವುದಿದೆಯೇ ಎಂದು ಕೇಳಿಕೊಂಡು ಅದನ್ನು ಹೋಗಿ ಬರುವಾಗ ತಂದುಕೊಡುತ್ತಿದ್ದರು. ಈಗ ಕೇವಲ ಒಂದು ದಿನಪತ್ರಿಕೆ ತರಲು ಪ್ರತೀ ಮನೆಯಾತನೂ ತಾನೇ ಪೇಟೆಗೆ ಹೋಗಿಬರುತ್ತಾನೆ. ಕೇಳಿದರೆ ಅದೇ ಮೇಲಿನ ರೀತಿ ಉತ್ತರ. ["ಒಂದು ಸ್ವಲ್ಪ ಕೆಲ್ಸ ಇತ್ತು"]. ಈಗಂತೂ ರಾಜಕೀಯದವರ ಪಂಚಾಯತ ಚುನಾವಣೆ ಗಾಳಕ್ಕೆ ಸಿಲುಕಿ ಗ್ರಾಮೀಣ ಜನರಲ್ಲೂ ಹಿಂದಿದ್ದ ಪ್ರೀತಿ-ವಿಶ್ವಾಸ-ಆತ್ಮೀಯತೆಗಳು ಕೇವಲ ಪುಸ್ತಕದ ಶಬ್ಢವಾಗುತ್ತಿವೆ;ಕೋಶಸೇರುತ್ತಿವೆ! ಮಾಧ್ಯಮದಲ್ಲಿ ಯಾರೋ ಪರಿಚಯದವರ ಮುಖ ಕಂಡರೆ " ಓ ಅವ್ನಾ ಅದು ಹ್ಯಾಗೆ ಟಿ.ವಿಯಲ್ಲಿ ಬಂದ ಮಾರಾಯ " ಎಂದುಕೊಳ್ಳುತ್ತ ಕೈ ಕೈ ಹೊಸಕಿಕೊಂಡು ಹೊಟ್ಟೆಕಿಚ್ಚುಪಟ್ಟು ತಾನೂ ಹೇಗಾದರೂ ಸತ್ತ ಹೆಗ್ಗಣವನ್ನಾದರೂ ಪೂಜಿಸಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಬಯಸುವ ಕೆಟ್ಟಚಾಳಿಗೆ ಇಳಿಯುತ್ತಿದ್ದಾರೆ!ಇರಲಿ.

ಹಿಂದೆ ನಮ್ಮ ಗ್ರಾಮೀಣ ಬದುಕು ಸಾಂಪ್ರದಾಯಕ ಕಲೆಗಳಿಂದ,ಗ್ರಾಮೀಣ ಕ್ರೀಡೆಗಳಿಂದ, ಗ್ರಾಮೀಣ ಜಾತ್ರೆ-ಹಬ್ಬ-ಹರಿದಿನಗಳಗಳ ಸಹಬಾಳ್ವೆಯಿಂದ, ಗ್ರಾಮೀಣ ತಿಂಡಿ-ತೀರ್ಥ-ಹಣ್ಣು-ಹಂಪಲುಗಳಿಂದ ತುಂಬಿ ಬಹಳ ಹುಲುಸಾಗಿತ್ತು. ತರಾವರಿ ಹಣ್ಣುಗಳು, ಸ್ಪರ್ಧೆಗಳು, ಪೂಜೆಗಳು, ನಾಟಕ-ಜಾತ್ರೆಗಳು, ಪೇಟೆಯಿಂದ ಬಂದ ನಾನಾತರದ ಅಪರೂಪದ ದಿನಬಳಕೆ ವಸ್ತುಗಳು, ಮಣ್ಣಿನಲ್ಲಿ ಅರಳಿದ ಮಡಿಕೆ-ಕುಡಿಕೆ-ಹಣತೆ-ತಾಟು-ಬೋಗುಣಿ ಮುಂತಾದ ಸಾಮಾನುಗಳು ಇರುತ್ತಿದ್ದವು. ಮಂಗಳವನ್ನು ಮನೆಗೆ ಕರೆಯಲು ಬಳೆಗಾರ,ಚಿನಿವಾರ,ದರ್ಜಿ,ಪಡಸಾಲಿ ಮುಂತಾದ ಹಲವಾರು ಹಳ್ಳಿಮಾರಾಟಗಾರರು ಬರುತ್ತಿದ್ದರು. ಇಂದಿಗೆ ಅದು ಕಥೆ. ಮಕ್ಕಳು ರಜದಲ್ಲಿ ಊರೆಲ್ಲ ಅಲೆಯುತ್ತ, ಮರಕೋತಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಚಿನ್ನಿದಾಂಡು, ಚೆನ್ನೆಮಣೆ, ಕಬಡ್ಡಿ[ಸುರಗುದ್ದು] ಮುಂತಾದ ಅನೇಕ ಆಟಗಳನ್ನು ಆಡುತ್ತ, ಹಣ್ಣಿನ ಮರಗಳಿಗೆ ಕಲ್ಲು ಎಸೆಯುತ್ತ ಕುಣಿದು,ನಲಿದು ಕುಪ್ಪಳಿಸುತ್ತಿದ್ದರು. ಮುದುಕರು ಪರಸ್ಪರರ ಮನೆಗಳಲ್ಲೋ ಅಥವಾ ದೇವಸ್ಥಾನಗಳ ಹತ್ತಿರದ ಕಟ್ಟೆಗಳಮೇಲೋ ಕುಳಿತು ತಮ್ಮ ಬಾಲ್ಯವನ್ನು ನೆನೆಸಿ ನಗುತ್ತಿದ್ದರು. ಹೆಂಗಳೆಯರು ಜಾತ್ರೆ,ನೆಂಟರಮನೆ ಇತ್ಯಾದಿ ತಿರುಗುತ್ತ ತಮಗೆ ಅಪರೂಪವೆನಿಸುವ ಬಳಕೆಯ ವಸ್ತುಗಳನ್ನು ಖರೀದಿಸುತ್ತಿದ್ದರು. ಇಂದಿಗೆ ಅದು ಕೇವಲ ಕಥೆ ಅಂದರೆ ತಪ್ಪಾಗಲಾರದಲ್ಲ? ಅಲ್ಲಿ ಬಡವ-ಶ್ರೀಮಂತ ಎಂಬ ಭೇದ ಬಹಳವಾಗಿ ಇರಲಿಲ್ಲ. ಯರೋ ಒಂದಿಬ್ಬರು ಮುಖಂಡರನ್ನು ಬಿಟ್ಟರೆ ಮಿಕ್ಕವರೆಲ್ಲ ಒಂದೇ ಸ್ತರದಲ್ಲಿ ಇರುತ್ತಿದ್ದರು. ಬದುಕು ಯಾಂತ್ರಿಕವಾಗಿರಲಿಲ್ಲ;ನಿಸ್ತೇಜವಾಗಿರಲಿಲ್ಲ. ಅಲ್ಲಿ ಕೊಳ್ಳುಬಾಕ ಸಂಕೃತಿಯಿರಲಿಲ್ಲ. ನಾಮುಂದು ತಾಮುಂದು ಎಂಬ ಪೈಪೋಟಿ, ನಾಮೇಲೆ ತಾಮೇಲೆ ಎಂಬ ಅಹಂ ಯಾವುದೂ ಇರಲಿಲ್ಲ. ನಿತ್ಯ ಬೆಳಗಾದರೆ ಕಾಣುವ ಹಿತ್ತಗಿಡಗಳೇ ಮದ್ದಾಗಿ ಇರುವ ಅಲ್ಪರೋಗಗಳನ್ನು ವಾಸಿಮಾಡುತ್ತಿದ್ದವು! ಜನಸಾಮಾನ್ಯರಿಗೆಲ್ಲ ಮಧುಮೇಹ,ಹೃದ್ರೋಗ ಇತ್ಯಾದಿ ಶ್ರೀಮಂತರ ಕಾಯಿಲೆಗಳು ಬರುತ್ತಿರಲಿಲ್ಲ. ಇಂದಿಗೆ ಅದೊಂದು ಮುಗಿದುಹೋದ ಅಪ್ಪಟ ಗ್ರಾಮೀಣ ಸೊಗಡಿನ ಅಧ್ಯಾಯ! ಆ ಅಧ್ಯಾಯದ ನೆನೆಕೆಯಲ್ಲಿ ಹುಟ್ಟಿದ ಕೂಸುಮರಿ ಈ ಹಾಡು --


ಗ್ರಾಮಾನಂದ ಲಹರೀ

ಬಲು ಸೊಗಸು ಆ ಹಲಸು ಹಸಿರು-ಕೆಂಪಿನ ಮಾವು
ಒಲವನಿಕ್ಕುವ ಜನರ ನಡುವೆ ಕೂಗುವ ಗೋವು
ಬಲವನರಿಯಲು ಕ್ರೀಡೆ ಗಂಭೀರ ತುಸು ನೋವು
ಮುಲುಗುತಿದೆ ಮನ ನೆನೆದು ಗ್ರಾಮೀಣದೊಳಹರಿವು

ಬೀಸುತಿಹ ತಂಗಾಳಿ ತಂಪಡರಿ ಮೈಮನದಿ
ರಾಶಿ ವ್ಯಸನಂಗಳನು ಬೆದಕಿ ತೆಗೆದೂ
ನಾಸಿಕಕೆ ಹಬ್ಬಿ ಮುದವಾವರಿಸಿ ಪರಿಮಳದಿ
ಈ ಸೊಬಗ ಬಣ್ಣಿಸಲು ಮುಸುಕು ಕವಿದೂ

ಅತ್ತಿತ್ತ ಸುಳಿಯುತಿಹ ಜನರ ಗುಂಪುಗಳೆಲ್ಲ
ಇತ್ತತ್ತ ಬಂದು ಭೂರಮೆಯೊಸಗೆ ಪಡೆದೂ
ಕತ್ತೆತ್ತಿ ಎಲ್ಲಿ ನೋಡಿದರಲ್ಲಿ ಫಲಪುಷ್ಪ
ಹತ್ತುತ್ತ ಮರಗಿಡಗಳಾ ಜಾಡು ಹಿಡಿದೂ

ಶಾಲೆಮಕ್ಕಳು ರಜದಿ ಆಟವಾಡುತಲಲ್ಲಿ
ಕಾಲವರಿಯದೇ ದಿನಗಳವು ಭರದಿ ಕಳೆದೂ
ಕೋಲು ಬಡಿಗೆಯ ಹಿಡಿದು ಹಾರಿ ಕಲ್ಲನು ತೂರಿ
ಬೇಲ ಹಲಸೂ ಮಾವು ಕೆಡಗುತಲಿ ಕುಣಿದೂ

ಮುಪ್ಪಿನಾ ಜನರೆಲ್ಲ ಕಲೆಯುತ್ತ ಬಯಲಲ್ಲಿ
ನೆಪ್ಪು ಕರೆಯುತ ಮನದಿ ಅವರ ಹರೆಯ
ಒಪ್ಪಿನಲಿ ನಕ್ಕರದೋ ತುಂಟಾಟ ಹಂಬಲಿಸಿ
ತಪ್ಪಿಹೋಯಿತು ಇನ್ನು ಬಹದೇ ಪ್ರಾಯ ?

ಸಡಗರದ ನಾರಿಯರು ಹಡಗಿನೋಪಾದಿಯಲಿ
ಹುಡುಗುಮಕ್ಕಳ ನಡೆಸಿ ಜಾತ್ರೆಯಲಿ ನಡೆದೂ
ನಡುರಾತ್ರಿ ಜಾವದಾವರೆಗಿರ್ಪ ಜಾತ್ರೆಯಲಿ
ಕಡೆದು ಕೊರಸುತ ದರಕೆ ವಸ್ತುಗಳ ಪಡೆದೂ

Wednesday, May 19, 2010

ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು !!


ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು


ಮಡಿ ಎಂದರೆ ಸ್ವಚ್ಛತೆ ಅಥವಾ ಸ್ವಚ್ಛತೆಯೇ ಮಡಿ ಎನ್ನಬಹುದು. ನಮ್ಮ ಪೂರ್ವಜರು ಕೊಳೆಯಿಂದ, ಗಲೀಜಿನಿಂದ, ಮಲದಿಂದ, ಅಸ್ವಚ್ಛತೆಯಿಂದ ಹರಡಬಹುದಾದ ಅನೇಕ ಸಾಂಕ್ರಾಮಿಕ,ಅಸಾಂಕ್ರಾಮಿಕ ಕಾಯಿಲೆಗಳನ್ನು ದೂರವಿಡಲು ’ಮಡಿ’ಯನ್ನು ಹುಟ್ಟುಹಾಕಿದರು.

ಮನುಷ್ಯನ ಕಣ್ಣು,ಮೂಗು,ಕಿವಿ,ಬಾಯಿ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು ಮತ್ತದೇ ಕಣ್ಣು, ಮೂಗು,ಕಿವಿ,ಬಾಯಿ,ಚರ್ಮ, ಗುದದ್ವಾರ, ಮೂತ್ರದ್ವಾರ,ಗುಹ್ಯದ್ವಾರ,ಉಗುರುಗಳ ಸಂದಿ ಹೀಗೇ ನವದ್ವಾರಗಳ ಮೂಲಕ ಶರೀರದ ಒಳಗಿನ ಕಲ್ಮಷಗಳನ್ನು ಹೊರಹಾಕುತ್ತಿರುತ್ತವೆ-ಇದು ಸಹಜ ಪ್ರಕ್ರಿಯೆ. ಈ ಶರೀರ ತ್ಯಾಜ್ಯಗಳು ಅನುಪಯುಕ್ತ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆಯಲ್ಲದೇ ಹೊರಬಂದ ನಂತರ ಪ್ರಕೃತಿಯಲ್ಲಿರುವ, ವಾಯುವಿನಲ್ಲಿರುವ ಇನ್ನಿತರ ಬ್ಯಾಕ್ಟೀರಿಯಾಗಳೊಡನೆ ಸೇರಿ ಅಸಹ್ಯಕರ ವಾಸನೆಯನ್ನು ಸೃಜಿಸುತ್ತವೆ.

ಅದರಲ್ಲಂತೂ ನಾವು ತಿನ್ನುವ ಆಹಾರಗಳ ಮೇಲೆ ಅವಲಂಬಿಸಿ ನಮ್ಮ ಶರೀರದ ನೈರ್ಮಲ್ಯಗ್ರಂಥಿಗಳು ವಿವಿಧ ವಾಸನೆಯ ತ್ಯಾಜ್ಯಗಳನ್ನು ಹೊರದಬ್ಬುತ್ತವೆ. ಉದಾಹರಣೆಗೆ ನಾವು ಹಲಸಿನ ಹಣ್ಣು ತಿಂದಿದ್ದರೆ ಮಾರನೇ ದಿನ ಹಲಸಿನ ಹಣ್ಣಿನ ದುರ್ಬಲಗೊಂಡ ವಾಸನೆಯನ್ನು ನಮ್ಮ ಮಲದ ರೂಪದಲ್ಲಿ ಕಾಣಬಹುದು, ಬೆಳ್ಳುಳ್ಳಿ ತಿಂದವರ ಮಲ ಸ್ವಲ್ಪ ಬೆಳ್ಳುಳ್ಳಿಯ ವಾಸನಾಯುಕ್ತವಾಗಿರುತ್ತದೆ. ಸೀಬೆಹಣ್ಣನ್ನು ಅತಿಯಾಗಿ ತಿಂದವರ ಬೆವರು ಸೀಬೆಹಣ್ಣಿನ ವಾಸನೆಯನ್ನೇ ಹೊಂದಿರುತ್ತದೆ! ಒಟ್ಟಾರೆ ನಮ್ಮ ಶರೀರದ ತ್ಯಾಜ್ಯಗಳಲ್ಲಿ ಹಲವು ಥರದ ಸೂಕ್ಷ್ಮಾಣು ಜೀವಿಗಳು ಇದ್ದು ಅವು ವಾಸನೆಗೆ ಕಾರಣವಾಗುತ್ತವೆ ಎಂಬುದಂತೂ ಸತ್ಯ. ಮಲವಿಸರ್ಜನೆಗೆ ಮಾಡಿದಮೇಲೆ ಕೈಯ್ಯನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು, ಮಲ-ಮೂತ್ರವಿಸರ್ಜಿಸಿದ ನಂತರ ಕೈಕಾಲೌಗಳನ್ನು ತೊಳೆದುಕೊಳ್ಳಬೇಕಾದ್ದು ಸ್ವಚ್ಛತೆಯ ಅವಿಭಾಜ್ಯ ಅಂಗ. ಕಂಡಕ್ಟರ್ ಕೊಟ್ಟ ನೋಟು ಅಥವಾ ಇನ್ಯಾರೋ ಬಳಸಿ ನಮ್ಮ ಕೈಸೇರುವ ಪ್ರತೀ ವಸ್ತುವಿನಲ್ಲೂ ಕೆಟ್ಟ ಬ್ಯಾಕ್ಟೀರಿಯಾಗಳು ಇರಬಹುದು,ಹೀಗಾಗಿ ತಿಂಡಿ-ಊಟಕ್ಕೂ ಮೊದಲು ಕೈಗಳನ್ನು ಸ್ವಛ್ಛವಾಗಿ ತೊಳೆದುಕೊಳ್ಳುವುದಕ್ಕೆ ಆದ್ಯತೆ ಕೊಡಬೇಕು.


ನಮ್ಮ ಶರೀರ ಎಷ್ಟು ಗೊಂದಲದ ಗೂಡೆಂದರೆ ತಿಂದ ಆಹಾರದ ಕಣಗಳು ಹಲ್ಲುಗಳ ಸಂದಿಯಲ್ಲಿ ಸಿಕ್ಕಿಕೊಂಡು ಕೊಳೆತು ದುರ್ಗಂಧವನ್ನು ಬೀರುವುದರ ಜೊತೆಗೆ, ಅಲ್ಲಿ ಹುಟ್ಟುವ ಸೂಕ್ಷ್ಮಾಣು ಜೀವಿಗಳು ಹಲ್ಲುಗಳ ಮೇಲ್ಪದರವನ್ನು ಕೊರೆದೋ ಅಥವಾ ಸಿಹಿಯ ರಾಸಾಯನಿಕ ಪ್ರಕಿಯೆಯಿಂದ ಹಲ್ಲುಗಳ ಮೇಲ್ಪದರ ಕರಗಿಯೋ ಹಲ್ಲುಗಳು ಹುಳುಕಾಗಿ ಹಲ್ಲುನೋವು ಪ್ರಾರಂಭವಾಗುವುದು-ಇದು ಕಾಲಕ್ಕೆ ಸರಿಯಾಗಿ ಹಲ್ಲುಜ್ಜದವರ ಸ್ಥಿತಿ. ಇನ್ನು ಹಲ್ಲು ಉಜ್ಜುತ್ತಲೇ ಇದ್ದರೂ ಕೆಲವು ಹಲ್ಲುಗಳು ಹಾಳಾಗುವುದು ಅನುವಂಶೀಯ ಪ್ರಕ್ರಿಯೆ! ಆದರೆ ನಮ್ಮಲ್ಲಿ ಅನೇಕರು ಎಷ್ಟು ಸಮಯ ಆಹಾರ ತಿಂದ ನಂತರ ಹಲ್ಲುಜ್ಜುತ್ತೇವೆ. ಹಲ್ಲುಜ್ಜಲು ನಮ್ಮ ಪ್ರಾಚೀನರು ಇದ್ದಿಲು,ಸ್ಪಟಿಕ ಇವುಗಳನ್ನೆಲ್ಲ ಸೇರಿಸಿ ತಯಾರಿಸಿದ ದಂತಮಂಜನ ಪುಡಿಯನ್ನು ಉಪಯೋಗಿಸುತ್ತಿದ್ದರು.ಆದರೆ ನಮ್ಮಲ್ಲಿ ಈಗ ಅನೇಕ ವಿಧದ ಟೂತ್ ಪೇಸ್ಟ್ ಗಳು ಬಂದರೂ ಅವು ಒಂದೇ ಬಹಳ ವಾಣಿಜ್ಯೀಕರ್‍ಅಣದ ಧೋರಣೆಯಿಂದ ತಯಾರಿಸಲ್ಪಟ್ಟ ಕಳಪೆಯವು ಅಥವಾ ಅವು ಸರಿಯಾದ ದಂತಮಂಜನದ ಮೂಲವಸ್ತುಗಳನ್ನು ಹೊಂದಿರುವುದಿಲ್ಲ! ಹೀಗಿದ್ದರೂ ನಮ್ಮಲ್ಲಿ ಇದನ್ನಾದರೂ ಕೊನೇಪಕ್ಷ ಸರಿಯಾಗಿ ಉಪಯೋಗಿಸುವವರು ವಿರಳ. ದಂತಕ್ಷಯವೆಂಬ ಹೆಸರು ಕೇಳಿದ್ದೇವೆ-ಆದರೆ ಅದನ್ನು ತಡೆಗಟ್ಟುವುದು ಸಾಧ್ಯವೆಂಬುದನ್ನು ನೆನಪಿಡುವುದಿಲ್ಲ! ಗುಟ್ಕಾ,ಕೋಲಾ,ಚಿಪ್ಸ್ ಗಳಂಥ ರೆಡಿ ಟು ಯೂಸ್ ಪದಾರ್ಥಗಳು ಹಲ್ಲಿನ ಮೇಲೆ ದುಷ್ಪರಿಣಾಮ ಮಾಡಿದರೂ ಅವುಗಳು ನಮಗೆ ಬೇಕೇ ಬೇಕು ಅಲ್ಲವೇ? ನಮ್ಮ ಹಿಂದಿನವರು ಒಮ್ಮೆ ಆಹಾರ ಸೇವಿಸಿದಮೇಲೆ ಕನಿಷ್ಠ ೧೦ ಸರ್ತಿ ಶುದ್ಧ ನೀರಿನಿಂದ ಬಾಯಿಮುಕ್ಕಳಿಸುತ್ತಿದ್ದರು. ಬೇವಿನ ಕಡ್ಡಿ, ಮುತ್ತುಗದ ಕಡ್ಡಿ ಮುಂತಾದ ಕಡ್ಡಿಗಳನ್ನು ಉಪಯೋಗಿಸಿ ದಂತಮಂಜನಮಾಡುತ್ತಿದ್ದರು!

ಏನೇ ಇರಲಿ ನಮ್ಮ ಶರೀರ ನಿರ್ಮಲವಾಗಿದ್ದರೆ ಅದು ನಮಗೆ ಆರೋಗ್ಯಪೂರ್ಣ ದಿನಗಳನ್ನು ಕೊಟ್ಟು ಯಾವುದೇ ಕೆಲಸ ಮಾಡಲು ಸಹಕಾರಿಯಾಗುತ್ತದೆ,ನಾವು ಹಾಗಾಗೇ ಇದ್ದರೆ ಮಿಕ್ಕುಳಿದ ಜನರಿಗೆ ನಮ್ಮ ದುರ್ವಾಸನೆ ಸಹಿಸಲು ಸಾಧ್ಯವಗದಿರುವುದರ ಜೊತೆಗೆ ನಮ್ಮ ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಸರ್ವೇಂದ್ರಿಯಗಳಿಗೆ ಪ್ರಧಾನವಾಗಿ ಸ್ನಾನ ಬೇಕು. ದಿನಕ್ಕೆ ಎರಡಾವರ್ತಿ ಕೊನೇಪಕ್ಷ ಒಮ್ಮೆ ಮುಡಿಯಿಂದ ಅಡಿಯವರೆಗೆ ಸ್ನಾನಮಾಡಲೇಬೇಕು. ಹಾಗೊಮ್ಮೆ ಮಾಡಿದಾಗ ಇಡೀ ಶರೀರ ನವ ಚೈತನ್ಯ ಪಡೆದು ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಪ್ರಪುಲ್ಲಗೊಂಡ ಮನಸ್ಸು ಸಾಧನೆಗೆ ಅನುಕೂಲಕರವಾಗಿರುತ್ತದೆ. ಹೀಗಾಗಿ ನಮ್ಮೆಲ್ಲಾ ಆಚರಣೆಗಳಲ್ಲಿ ಸ್ನಾನಮಾಡಿ ಮಡಿಯಾಗು ಎಂದು ಹೇಳುತ್ತೇವೆ. ಸ್ನಾನ ಮಾಡಿದಾಗ ಸಿಗುವ ಫ್ರೆಶ್ನೆಸ್ ನಿಂದ ಮುಂದಿನ ನಮ್ಮ ಕೆಲಸಗಳು ಬಹಳ ಉತ್ಸುಕತೆಯಿಂದ ಪೂರೈಸಲ್ಪಡುತ್ತವೆ. ಮನಸ್ಸಿಗೆ ಮಂಕು ಕವಿದಿದ್ದರೆ ಒಮ್ಮೆ ಸ್ನಾನಮಾಡಿ ನೋಡಿ, ಅಷ್ಟರಲ್ಲೇ ಅರ್ಧ ಮಂಕು ಮಾಯ!

ಸ್ನಾನ ಮಾಡಿದಮೇಲೆ ಸ್ವಚ್ಛ ಬಟ್ಟೆ ಉಟ್ಟುಕೊಂಡರೆ ಮನಸ್ಸು ಇನ್ನಷ್ಟು ಉಲ್ಲಸಿತವಾಗಿರುತ್ತದೆ. ಶುದ್ಧ ಬಟ್ಟೆ ನಮಗೆ ಪೊಸಿಟಿವ್ ಎನರ್ಜಿ ಕೊಡುತ್ತದೆ, ಉನ್ನತ ಚೈತನ್ಯವನ್ನು ಒದಗಿಸುತ್ತದೆ. ಅದಕ್ಕೇ ಎಲ್ಲಾ ಕೆಲಸಗಳಿಗೂ ಒಂದೇ ತೆರನಾದ ಬಟ್ಟೆ ಇರದಿರಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ’ಮಡಿ’ ಎಂಬ ಬಟ್ಟೆಯನ್ನು ಸೃಜಿಸಿದರು. ನಾರಿನಿಂದ ಮಾಡಿದ್ದು, ಬಿಳಿಯ ಬಣ್ಣ ಹೊಂದಿದ್ದು, ಬೇರೇ ಕಲೆಗಳಿರದ ಶುದ್ಧ ಬಟ್ಟೆಯನ್ನು ಶುದ್ಧ ನೀರಿನಲ್ಲಿ ಅದ್ದಿ ತೆಗೆದು ಹಿಂಡಿ ಗಾಳಿಯಲ್ಲಿ ಸೂರ್ಯನ ಬಿಸಿಲಲ್ಲಿ ಪ್ರತ್ಯೇಕವಾಗಿ ಒಣಗಿಸಿ, ಬೇರೆ ಬಟ್ಟೆಗಳಿಗೆ ಸೋಕಿಸದೇ ಉಟ್ಟರೆ ಅದು ಮಡಿ ಬಟ್ಟೆ, ದಾಟ್ ಹ್ಯಾಸ್ ಗಾಟ್ ಪೊಸಿಟಿವ್ ಎನರ್ಜಿ ಜನರೇಟೆಡ್ ಅಂಡರ್ ದಿ ಸನ್! ಅಂತಹ ಬಟ್ಟೆ ಉಟ್ಟು ಕುಳಿತಾಗ ಒಳ್ಳೆಯ ಕಾರ್ಯಗಳನ್ನು ಮಾಡಲು ಮನಸ್ಸೆಂಬ ವೇದಿಕೆ ಸಂಪೂರ್ಣ ಸಜ್ಜಾಗುತ್ತದೆ, ಇಲ್ಲದಿದ್ದರೆ ಇಲ್ಲ! ಒಮ್ಮೆ ಉಪಯೋಗಿಸಿದ ಈ ಮಡಿಯನ್ನು ಮತ್ತೆ ಉಪಯೋಗಿಸಲು ಮತ್ತೆ ಅದೇ ತೊಳೆಯುವ,ಒಣಗಿಸುವ ಕ್ರಮ ಅನುಸರಿಸಬೇಕು. ಒಮ್ಮೆ ತೊಳೆದು, ಉಟ್ಟು, ಅದ್ದನ್ನುಟ್ಟಾಗಲೇ ತಿಂಡಿ-ತೀರ್ಥ,ಊಟ ಇತ್ಯಾದಿಗಳನು ಪೂರೈಸಿದರೆ, ಅದಕ್ಕೆ ನಮ್ಮ ಬೆವರು, ತುಪ್ಪ, ಹಾಲು-ಮೊಸರು ಇತ್ಯಾದಿ ಯವುದೇ ಪದಾರ್ಥ ಹತ್ತಿಕೊಂಡಿದ್ದರೆ ಅದು ಕ್ರಮೇಣ ಕೆಟ್ಟ ವಾಸನೆಸೂಸುವ ವಿಶೇಷ ಬಟ್ಟೆಯಾಗಿ ಪರಿವರ್ತಿತವಾಗುತ್ತದೆಯೇ ಹೊರತು ಅದು ಮಡಿಯಾಗುವುದಿಲ್ಲ! ಹಿರಿಯರು ಹೇಳಿದ್ದಾರೆ ನಾರು ಅಥವಾ ರೇಷ್ಮೆ ಬಟ್ಟೆ ಶುದ್ಧ ಅಂತ, ಹೀಗಾಗಿ ಅದನ್ನುಟ್ಟು ಏನೇ ಮಾಡಿದರೂ ಮೈಲಿಗೆ ಸೋಕದ ಅದ್ಭುತ ಬಟ್ಟೆ ಅದು ಅಂತ ತಿಳಿದು ವರ್ತಿಸಿದರೆ ಅದು ನಮ್ಮ ಗಾಢಾಂಧಕಾರವಲ್ಲದೇ ಮತ್ತೇನೂ ಅಲ್ಲ! ಅಲ್ಲಿ ದೇವರು ನಮಗೆ ಸಹಾಯಕನಗಿ ಬಂದು ಅಯ್ಯಾ ಬಟ್ಟೆ ಒಗೆದುಕೋ ಎಂದು ಹೇಳುವುದಿಲ್ಲ ! ಪ್ರತಿದಿನ ನಾವು ಬಳಸುವ ಬಟ್ಟೆಯನ್ನು ನೇರ ಬಿಸಿಲಲ್ಲಿ ಒಣಗಿಸಲಾಗದಿದ್ದರೂ, ಒಗೆದು ಒಣಗಿಸಿದ ಬಟ್ಟೆಯನ್ನು ಧರಿಸಬೇಕೇ ವಿನಃ ಬಳಸಿದ ಬಟ್ಟೆಯನ್ನೇ ವಾರಾಂತ್ಯದವರೆಗೆ ಅದು ಪರರಿಗೆ ತೀರಾ ಅಸಹ್ಯವಗುವವವರೆಗೆ ಬಳಸುವುದು ಶುದ್ಧಾಚಾರದ ಕೊರತೆಯ ಶುದ್ಧ ಲಕ್ಷಣ! ಕೆಲವರು ಒಳ ಉಡುಪುಗಳನ್ನೂ ಕೂಡ ಹಾಗೇ ಒಗೆಯದೇ ಬಳಸುವುದು ನನ್ನ ಗಮನಕ್ಕೆ ಬಂದಿದೆ- ಶಿವ ಶಿವಾ ಎನ್ನೊಡೆಯನೇ ಎಂದುಕೊಂಡು ಸುಮ್ಮನಾಗಿದ್ದೇನೆ-ಸುಮ್ಮನಾಗುತ್ತೇನೆ, ಸ್ವಲ್ಪ ಸುಲಭ ಸಾಧ್ಯರಾದರೆ ತಿಳಿಹೇಳುತ್ತೇನೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು-ಮಡಿಮಾಡಲು ಇರುವ ಜನರೇ ಮಡಿವಾಳರು! ಹರಿವ ನದಿಯ ಹೊಸ ಶುದ್ಧ ನೀರಲ್ಲಿ ಬಟ್ಟೆಗಳನ್ನು ಶುಭ್ರಗೊಳಿಸುವುದು ಅವರ ಕಾಯಕವಾಗಿತ್ತು, ಆದರೆ ಇಂದು ಅದೂ ಕೂಡ ವಾಣಿಜ್ಯೀಕರಣದಿಂದ ದೂರದ ಮಾತಾಗಿದೆ. ನದಿಗಳು ಬತ್ತಿವೆ, ಜಲಮೂಲಗಳು ನಾಪತ್ತೆಯಾಗಿವೆ. ಇರುವ ಕೂಡಿಟ್ಟ ನೀರಲ್ಲೇ ಅನೇಕ ಬಟ್ಟೆಗಳನ್ನು ಒಗೆಯಬೇಕಾಗಿ ಬಂದು ಮಡಿಯೆಂಬುದು ಕೇವಲ ಶಬ್ಢವಾಗಿದೆ!


ಮೋಚಿಗಳನ್ನು ಮತ್ತು ಕ್ಷೌರಿಕರನ್ನು ಸಂಪರ್ಕಿಸಿದಾಗ ಹಿರಿಯರು ಮೈಲಿಗೆಯ ಭಾವ ಹೊಂದುತ್ತಿದ್ದರು, ಕಾರಣ ಅವರು ಹಲವಾರು ಜನರ ಸಂಪರ್ಕಕ್ಕೆ ಬರುತ್ತಾರೆ, ಅವರ ಕೈ ಹಲವರನ್ನು ಸಂಪರ್ಕಿಸುತ್ತದೆ, ಅಲ್ಲಿ ಬ್ಯಾಕ್ಟೀರಿಯಾಗಳು ಹರಿದಾಡುತ್ತವೆ.ಅದಕ್ಕೇ ಮನಗೆ ಬಂದ ಮೇಲೆ ಸ್ನಾನಾದಿಗಳನ್ನು ಪುನಃ ಪೂರೈಸಿ ಶುಚಿಗೊಳ್ಳುತ್ತಿದ್ದರು.ಇಂದು ಅಧುನಿಕತೆಯ ಸೋಗಿನಲ್ಲಿ ಕ್ಷೌರಿಕರಲ್ಲಿ ಗಡ್ಡಬೋಳಿಸಿಕೊಂಡ ನಮ್ಮಲ್ಲಿ ಬಹಳಜನ ಹಾಗೇ ಇನ್ನಾವುದೋ ಕೆಲಸಕ್ಕೆ ಹೋಗುತ್ತೇವೆ, ಅವನು ನಮ್ಮ ಮೈಗೆ ಹಾಸುವ ಬಟ್ಟೆ, ಉಜ್ಜುವ ಬ್ರಶ್,ಕ್ಷೌರ ಕತ್ತಿ ಎಲ್ಲವನ್ನೂ ಹಲವರಿಗೆ ಉಪಯೋಗಿಸುತ್ತಿರುತ್ತಾನೆ ಎಂಬುದನ್ನು ಮರೆಯುತ್ತೇವೆ. ಯಾರೋ ಬಂದು ಬೆವರು ವಾಸನೆ ಸೂಸುತ್ತ ನಮ್ಮೆದುರಲ್ಲೇ ಅವರ ಕಂಕುಳ ಸಂದಿಯ ಕೂದಲನ್ನು ಅದೇ ಕ್ಷೌರಕತ್ತಿಯಿಂದ ತೆಗೆಸಿಕೊಂಡಾಗ ಮನಸ್ಸಿಗೆ ಒಂಥರಾ ಆಗುತ್ತದೆಯಲ್ಲವೇ? ಆದರೆ ಮರುಕ್ಷಣ ಅದನ್ನು ಮರೆತು ಮತ್ತೆ ಹಾಗೆ ಮುನ್ನುಗ್ಗುತ್ತೇವೆ ಅಲ್ಲವೇ? ಈಗೀಗ ಏಡ್ಸ್ ಎಂಬ ರೋಗ ಬಂದ ಮೇಲೆ ಕೊನೇಪಕ್ಷ ಕತ್ತಿಯ ಬ್ಲೇಡ್ [ಮುಂದಲುಗು]ಅನ್ನಾದರೂ ಬದಲಾಯಿಸುತ್ತಾರಲ್ಲ ಎಂಬುದೇ ಒಂದು ಸಂತಸದ ವಿಷಯ. ಇರಲಿ ನಮ್ಮ ಪ್ರಾಚೀನರು ಸ್ವಚ್ಛತೆಯ ದೃಷ್ಟಿಯಿಂದ ಹಾಗೆ ಇದನ್ನೆಲ್ಲ ಮೈಲಿಗೆ ಅಂದಿದ್ದು ತಪ್ಪೇ ?

ಪರಿಮಳ ದ್ರವ್ಯಗಳ ಬಳಕೆ ನಮ್ಮ ಜೀವನಕ್ಕೆ ಜೀವನೋತ್ಸಾಹ ಇಮ್ಮಡಿಸಲು ಕಾರಣವಗುತ್ತದೆ. ಅನಾದಿ ಕಾಲದಿಂದಲೂ ಯಾಲಕ್ಕಿ,ಪಚ್ಚೆತೆನೆ,ಲವಂಗ,ಕರ್ಪೂರ,ಪಚ್ಚಕರ್ಪೂರ, ಕೇಸರಿ, ಶ್ರೀಗಂಧ,ತುಲಸಿ, ಭಿಲ್ವ ಮುಂತಾದ ಅನೇಕಾನೇಕ ಮೂಲವಸ್ತುಗಳಿಂದ ಪರಿಮಳ ದ್ರವ್ಯಗಳನ್ನು ತಯಾರಿಸಿ ಉಪಯೋಗಿಸುತ್ತಿದ್ದರು. ಇಂದು ನಾವು ಕ್ರತ್ರಿಮವಾಗಿ ಅನೇಕ ಪರಿಮಳದ್ರವ್ಯಗಳನ್ನು ಸಿದ್ಧಪಡಿಸುವುದನ್ನು ಕಾಣುತ್ತೇವೆ, ಆದರೆ ಬಳಸುವುದು ಸ್ನಾನಮಾಡದಾಗ! ಇದು ಸರಿಯದ ಕ್ರಮ ಅಲ್ಲ. ನಾವು ಸ್ನಾನವನ್ನೇ ಮಾಡಿದ್ದರೂ ಕಾಲಾನುಕ್ರಮದಲ್ಲಿ ಗಂಟೆಗಳಕಾಲ ಕೆಲಸದಲ್ಲಿ ತೊಡಗಿರುವಾಗ ನಮ್ಮ ಬೆವರು ಹರಿದೋ, ಎಂಜಲು-ಕಣ್ಣೀರು ಹರಿದೋ ನಾವು ಮತ್ತೆ ವಾಸನೆಸೂಸುವ ಯಂತ್ರವಗುತ್ತೇವೆ. ಅದನ್ನು ಪರರು ಆಡಲಾರದೇ ಅನುಭವಿಸಲಾರದೇ ತಡೆದುಕೊಂಡು ಮನಸ್ಸಲ್ಲೇ ಶಪಿಸುತ್ತಿರುತ್ತಾರೆ. ಕೆಲವರಂತೂ ತಮ್ಮ ಪಕ್ಕದಿಂದ ಎದ್ದು ಹೋದರೆ ಸಾಕು ಈ ಆಸಾಮಿ ಎಂದು ಎದುರುನೋಡುತ್ತಿರುತ್ತಾರೆ. ಹೀಗಾಗಿ ಇಂತಹ ವ್ಯತ್ಯಸ್ಥ ಸ್ಥಿತಿಯಲ್ಲೂ ಎಲ್ಲರಿಗೆ ಮುದನೀಡುವ ವ್ಯಕ್ತಿತ್ವ ನಮ್ಮದಗಿರಲು ತಕ್ಕ ಹಾಗೂ ಮೂಗು ಒಡೆದುಹೋಗುವಂತ ಘಾಟು ಇರದ ಆದರೆ ಲಘು-ಹಿತಕರ ಪರಿಮಳ ಬೀರುವ ಪರಿಮಳ ದ್ರವ್ಯಗಳನ್ನು ಉಪಯೋಗಿಸುವುದು ಬಹಳ ಸಿಂಧು.


ಇದನ್ನೆಲ್ಲ ತಿಳಿದೇ ನಮ್ಮ ಪೂರ್ವಜರು ಯಾವುದೇ ಯಜ್ಞಯಾಗಾದಿ ಮಹಾನ್ ಕಾರ್ಯಗಳ ಪೂರ್ವಭಾವಿಯಾಗಿ ಮಧುಪರ್ಕ ಎಂಬ ಕ್ರಿಯೆಯನ್ನು [ಕರ್ತೃವಿಗೆ ಸ್ನಾನಾದಿ ಶೌಚ ಕಾರ್ಯಗಳಾದಮೇಲೆ] ಮಾಡಿಸುತ್ತಿದ್ದರು. ಅದಾದಮೆಲೆ ಪಂಚಗವ್ಯವಿತ್ತು, ಮಂತ್ರಾಚಮನ-ಮಂತ್ರ ಜಲ ಪ್ರೋಕ್ಷಣ ಇತ್ಯಾದಿಗಳನ್ನು ಮಾಡಿಸಿ ಶುದ್ಧೀಕರಣ ಕ್ರಿಯೆಯನ್ನು ಪೂರ್ತಿಗೊಳಿಸುತ್ತಿದ್ದರು. ಇವತ್ತು ನಮಗದು ಆಡಂಬರವೆಂದೆನಿಸಿದರೆ ಅದು ನಮ್ಮ ತರಾತುರಿಯ ಜೀವನದ ಸಂಕೇತವಷ್ಟೇ!

ಇನ್ನು ಮನೆಯ ವಾತಾವರಣದ ಬಗ್ಗೆ ಹೇಳುವುದಾದರೆ ಕೆಲವರ ಮನೆಗಳಿಗೆ ಹೋದರೇ ಸಾಕು ನಮಗೆ ತೆನ್ನಾಲಿ ರಾಮನ ಬೆಕ್ಕು ಹಾಲುಕುಡಿದ ಅನುಭವ! ನಮ್ಮ ಪರಿಸರ-ಮನೆ-ವಾಸಸ್ಥಳ ಶುದ್ಧವಾಗಿದ್ದರೇನೇ ನಮಗೆ ಎಲ್ಲಾರೀತಿಯ ಉತ್ತಮ ಚೈತನ್ಯ ಒದಗಿ ಬರುವುದು. ಮನೆಯಲ್ಲಿ ಕಸದ ಸಂಗ್ರಹ ಬಹಳ ಸಮಯ ಇರಬಾರದು. ಮಾಡಿದ ತಿನಿಸು-ಪದಾರ್ಥ ಬೇಗ ಖಾಲಿಯಾಗಬೇಕು, ಅನ್ನದಂತಹ ಪದಾರ್ಥ ಒಂದು ಜಾವದ ನಂತರ ಉಪಯೋಗ ಯೋಗ್ಯವಲ್ಲ! ಬೆವರು ಸೋಕಿದ ಬಟ್ಟೆ, ಮಕ್ಕಳ ಉಚ್ಚೆತಾಗಿದ ಬಟ್ಟೆ, ಜೊಲ್ಲುತಾಗಿದ ಬಟ್ಟೆ ಹೀಗೇ ಬಳಸಿದ ಬಟ್ಟೆಗಳನ್ನು ಬಹಳ ಹೊತ್ತು ಒಗೆಯದೇ ಹಾಗೇ ಇಡಬಾರದು. ಎಲ್ಲಿ ಇವುಗಳೆಲ್ಲ ಹಾಗೇ ಕುಂತಿರುತ್ತವೆಯೋ ಅಲ್ಲಿ ಅಲಕ್ಷ್ಮಿಯ ಆವಾಸವಗುತ್ತದೆ, ದರಿದ್ರತನ ಬರುತ್ತದೆ, ಮನಸ್ಸಿಗೆ ದುಗುಡ ಹಣುಕುತ್ತದೆ, ಪರಿಸರ-ಮನೆ ರೋಗ ಗ್ರಸ್ತವಾಗುತ್ತದೆ. ಅದಕ್ಕೇ ಮನೆಯಲ್ಲಿ, ಪರಿಸರದಲ್ಲಿ ಆದಷ್ಟೂ ಸ್ವಚ್ಛತೆ ಮುಖ್ಯ. ಸ್ವಚ್ಛತೆಯೇ ಎಲ್ಲಾ ಪೂರಕ ಹಾಗೂ ಪ್ರೇರಕ ಚೈತನ್ಯ ನಮಗೊದಗುವಂತೆ ಮಾಡುವ ಮೂಲ ಪ್ರಕ್ರಿಯೆ.

ಮನೆಯ ವಾತಾವರಣ ಶುದ್ಧವಾಗಿರಲೆಂದು ಗೋಮಯದಿಂದ [ಕರುವಿರುವ ಹಸುವಿನ ತಾಜಾ ಸಗಣಿಯಿಂದ]ಮನೆಯ ನೆಲಗಳನ್ನೂ, ಹೊರ ಅಂಗಳಗಳನ್ನೂ ಸಾರಿಸುತ್ತಿದ್ದರು,ತಾಜ ಸಗಣಿಯಲ್ಲಿ ಕ್ರಿಮಿನಾಶಕವಿದೆ ಎಂದು ತಮಗೆಲ್ಲ ಮೊದಲೊಮ್ಮೆ ಹೇಳಿದ್ದೇನೆ. ಆ ಸಗಣಿ ಕೂಡ ಭಾರತೀಯ ತಳಿಯ ಕರುವಿರುವ ಹಸುವಿನ ತಾಜಾ ಸಗಣಿಯಾಗಿರಬೇಕು-ಇದು ಕರಾರು, ಅದಿಲ್ಲದಿದ್ದರೆ ಯಾವುದೋ ದಿನ ಹಾಕಿದ ಹಳಸಲು ಸಗಣಿ ಅಥವಾ ವಿದೇಶೀ ಮಿಶ್ರ ತಳಿಯ ಹಸುವಿನ ಸಗಣಿ ವ್ಯತಿರಿಕ್ತ ಪರಿಣಾಮ ಕೊಟ್ಟೀತು! ಇದಕ್ಕೆ ಶಾಸ್ತ್ರಕಾರರು,ಅಚಾರ್ಯರು ಜವಾಬ್ದಾರರಲ್ಲ. ನಮಗೆ ವೇದ್ಯವಲ್ಲದ ವಿಷಯಗಳನ್ನು ಅರಿತು ನಡೆಯಬೇಕಾದ್ದು ನಮ್ಮ ಕರ್ತವ್ಯ. ಬೆಂಕಿಗೆ,ವಿದ್ಯುತ್ತಿಗೆ ಚಿಕ್ಕವರು ದೊಡ್ಡವರು ಎಂಬ ಭೇದ ಹೇಗಿಲ್ಲವೋ ಹಾಗೇ ಅರಿಯದೇ ಮಾಡಿದ ತಪ್ಪು ಅದು ತಪ್ಪೇ ಎಂದು ಪರಿಗಣಿಸಲ್ಪಡುತ್ತದೆ, ಅದಕ್ಕಾಗಿ ನಮ್ಮ ಪೂರ್ವಜರನ್ನು ದೂಷಿಸುವ ಹಕ್ಕು ನಮಗಿಲ್ಲ, ನೆನಪಿರಲಿ! ಇಂದು ನಗರವಾಸಿಗಳು ನಾವು ಅನೇಕರು ಸಗಣಿ ಸಿಗದ ಹತಭಾಗ್ಯರು, ಪೂಜ್ಯಮಾತೆ ಗೋವನ್ನು ದೂರ ಇಟ್ಟು ಅದರ ಉತ್ಪನ್ನಗಳನ್ನು ಮಾತ್ರ ಬಳಸಿಕೊಂಬವರು. ನಮಗಾಗಿ ಪರ್ಯಾಯವಾಗಿ ಫಿನಾಯ್ಲ್ ಸಿಗುತ್ತದೆ, ಗೋ ಅರ್ಕ ಸಿಗುತ್ತದೆ, ಇವುಗಳನ್ನು ಬಳಸಿ ನೆಲ ಸಾರಿಸಿ ಮನೆ-ಪರಿಸರ ಸ್ವಚ್ಛವಾಗಿಡೋಣ ಅಲ್ಲವೇ? ಅನುಕೂಲ ಇದ್ದಾಗ್ಯೂ ಟಿ.ವಿ. ಮುಂದೆ ಕಾಲಹರಣ ಮಾಡುತ್ತ ಕೆಲಸಮಾಡದೆ ಆಲಸ್ಯ ಮೆರೆದರೆ ಅಗ ಅಲ್ಲಿ ಕೂದ ಅಲಕ್ಷ್ಮಿ ಬರುತ್ತಾಳೆ ಎಚ್ಚರ!

ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವಗಲೋ ಸ್ನಾನ, ಎಲ್ಲೋ ಊಟ, ಹೇಗೋ ನಿದ್ದೆ, ವಾರಕ್ಕೊಮ್ಮೆ ಬಟ್ಟೆ ಒಗೆತ ಇವೆಲ್ಲ ನಮಗೆ ಬೇಡದ ಅಥವಾ ಮಾರಕ ಚೈತನ್ಯವನ್ನು ತರುತ್ತವೆ. ಹೀಗಾಗಿ ನಮ್ಮ ಪೂರ್ವಜರು ಯಾಕೆ ಮಡಿ ಎಂದರು, ಯಾಕೆ ಸ್ವಚ್ಛತೆ ಎಂದರು ಯಾಕೆ ಪರಿಮಳಯುಕ್ತ ಮಂಗಳ ದ್ರವ್ಯಗಳನ್ನು ಬಳಸುತ್ತಿದ್ದರು ಎಂಬುದನ್ನು ಒಮ್ಮೆ ಮನಗಾಣೋಣವೇ?

Tuesday, May 18, 2010

ಶ್ರೀ ಶಂಕರ ಸ್ಮೃತಿ



ಶ್ರೀ ಶಂಕರ ಸ್ಮೃತಿ

ಕೇರಳದ ಕಾಲಟಿಯಲ್ಲಿ ಕ್ರಿ..೬೩೦ ರಲ್ಲಿ ಜನಿಸಿ ೬೬೨ರವರೆಗೆ ಬದುಕಿದ್ದ ಶ್ರೀ ಆದಿಶಂಕರರು ವೈಶಾಖ ಶುದ್ಧ ಪಂಚಮಿಯಂದುಅವತರಿಸಿದ ಪರಮೇಶ್ವರನ ರೂಪ ಎಂಬ ಪ್ರತಿಪಾದನೆಯಿದೆ. ಮನುಷ್ಯಮಾತ್ರರಿಂದಲೂ ಇವೆಲ್ಲಾ ಸಾಧ್ಯ ಎಂಬ ಅನೇಕಕೆಲಸಗಳನ್ನು ಮಾಡಿತೋರಿಸಿದ ಮಹಾಮೇಧಾವಿ, ಮುನಿ ಶಂಕರರ ಬಗ್ಗೆ ಬರೆಯಲು ಹೊರಟರ್ ಶಬ್ಢಗಳೇ ಸೋಲುತ್ತವೆ!

ಆದಿ ಶಂಕರರನ್ನು ನೆನೆಸಿಕೊಳ್ಳಲು ಹಲವು ಕಾರಣಗಳು ಸಿಗುತ್ತವೆ.

. ಅವರು ಬಾಲ ಪ್ರತಿಭೆ-ಇಲ್ಲಿಯ ತನಕ ಜಗತ್ತು ಕಂಡು ಕೇಳರಿಯದ ಅಪ್ರತಿಮ ಮತ್ತು ಅನ್ಯಾದೃಶ ಬಾಲಪ್ರತಿಭೆ ಶ್ರೀ ಶಂಕರರು.

. ಸಂಸ್ಕೃತದ ಮೇರು ಕವಿ-ಮಹಾಕವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕಾವ್ಯ ಪ್ರಭೆಯನ್ನು ಹೊಮ್ಮಿಸಿ, ಸಂಸ್ಕೃತಭಾಷೆಗೆ ಮತ್ತಷ್ಟು ಉತ್ಕೃಷ್ಟ ಸ್ಥಾನ ಒದಗಿಸಿದ, ಭಾಷಾ ಸಾಹಿತ್ಯವನ್ನು ಸುಲಲಿತ ಶಬ್ಧಗಳಿಂದ ಅಲಂಕರಿಸಿದ ಪ್ರಜ್ಞಾನ ಬ್ರಹ್ಮ ಶ್ರೀಶಂಕರರು.

. ದಾರ್ಶನಿಕತೆಗೆ ದಾರ್ಶನಿಕರು-ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ, ಆದರೆ ಶಂಕರರಂತಹ ಆದರ್ಶ ದಾರ್ಶನಿಕರುಸಿಗುವುದು ವಿರಳ. ಜಗತ್ತಿನ ಎಲ್ಲೇ ಯಾರೇ ಯಾವಾಗಲೇ ಬಯಸಿದರೂ ಅವರವರ ಧರ್ಮದಲ್ಲೇ ಇದ್ದುಕೊಂಡು ಕೇವಲತತ್ವಾನುಭೂತಿಯಿಂದ ಜಗತ್ತನ್ನು ನೋಡುವ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರರು ಯಾವ ದೀಕ್ಷೆಯನ್ನೂ ಹೇಳದೇತಮ್ಮ ತತ್ವವನ್ನು ಅನುಸರಿಸಲು ರಾಜಮಾರ್ಗವನ್ನು ತೋರಿದರು!

. ಕಣ್ಣಿಗೆ ಕಟ್ಟುವ ಅದ್ವೈತ- ನಾವು ಯಾವ ಜೀವಿಯನ್ನೇ ತೆಗೆದುಕೊಂಡರೂ ಅದರಲ್ಲಿ ನಮ್ಮೊಳಗಿರುವ ಪರಮಾತ್ಮನೇ ಇದ್ದಾನೆಎಂಬ ಸತ್ಯ ತಿಳಿದಾಗ ವಿಶ್ವ ಬ್ರಾತ್ವತ್ವ ಬರುತ್ತದಲ್ಲವೇ ? ಇದರಿಂದ ಪ್ರಾಣಿಹಿಂಸೆ, ಮಾಂಸಾಹಾರ, ವೈರತ್ವ,ಜಗಳ,ದೊಂಬಿ,ಕಚ್ಚಾಟ ಸಾಕಷ್ಟು ದೂರವಾಗಿ ಮಾನವ ಸಂಸ್ಕೃತಿಯನ್ನು ಅನುಸರಿಸಲು ಅನುಕೂಲವಾಗುತ್ತದೆಯಲ್ಲವೇ?

. ಪ್ರಾಂತ ಭೇದ ನಿವಾರಕ-ಇಡೀ ಭರತಖಂಡವನ್ನು ಬದುಕಿದ್ದ ೩೨ ವರ್ಷಗಳಲ್ಲೇ ಮೂರಾವರ್ತಿ ಸುತ್ತಿದ ಮಹಾನುಭಾವಶಂಕರರು ಮಾನವ ಕುಲಕ್ಕೆ ಮಾರ್ಗದರ್ಶಿಸಲು ಆಮ್ನಾಯ ಮಠಗಳೆಂಬ ನಾಲ್ಕು ಪ್ರಮುಖ ಪೀಠಗಳನು ಸ್ಥಾಪಿಸಿದರು. ಶೃಂಗೆರಿ, ಪುರಿ,ದ್ವಾರಕೆ ಹಾಗೂ ಜ್ಯೊತಿರ್ಮಠಗಳೆಂಬ ಪೀಠಗಳಲ್ಲಿ ಮೊದಲಾಗಿ ಸ್ಥಳೀಯರಲ್ಲದವರನ್ನು ಕುಳ್ಳಿರಿಸಿ ಪೀಠಾಧಿಪತಿಗಳೆಂದುಜನತೆಗೆ ಬೋಧಿಸಿದರು. ಶೃಂಗೇರಿಗೆ ಉತ್ತರದ ಸುರೇಶ್ವರಾಚಾರ್ಯರನ್ನು ಕೂರಿಸಿದರೆ ದಕ್ಷಿಣದ ಹಸ್ತಾಮಲಕರನ್ನು ಉತ್ತರದಪೀಠದಲ್ಲಿ ನೆಲೆಸುವಂತೆ ಮಾಡಿದರು.

. ವಿಶ್ವವ್ಯಾಪಕ ತತ್ವ-ಯಾವ ಧರ್ಮದವರನ್ನೂ ಹೀಗಳೆಯದ ಶಂಕರರು ಬೇರೆ ಧರ್ಮದ ಪ್ರಮುಖರಿಂದ ಗೌರವವನ್ನು ಪಡೆದವರು. ಮಾತಾಂತರವೆಂಬ ಗೋಜಲಿಗೆ ಕಾರಣವಾಗಬಹುದಾದ ದೀಕ್ಷೆಯನ್ನೇ ಪ್ರತಿಪಾದಿಸದೇ ಸರ್ವಧರ್ಮೀಯರೂ ಅನುಸರಿಸಬಹುದಾದ ಆದರ್ಶ ಜೀವನ ಪಥವನ್ನು ತೋರಿಸಿಮನುಕುಲಕ್ಕೆ ಇದು ಹಿತಎಂಬುದನ್ನು ಪ್ರಾತ್ಯಕ್ಷಿಕೆಗಳೊಂದಿಗೆ ತೋರಿಸಿದರು.

. ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ಭವತಿ-ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಸನ್ಯಾಸಿಯಾಗಿಯೂ ತೋರಿಸಿದ ಮಾನವೀಯ ಕರುಣಾಮೂರ್ತಿ ಶ್ರೀ ಶಂಕರರು. " ಅಮ್ಮಾ ನಿನ್ನ ಅಂತ್ಯಕಾಲದಲ್ಲಿ ಎಲ್ಲಿದ್ದರೂ ನಿನ್ನಲ್ಲಿಗೆ ಬಂದು ತಲ್ಪುತ್ತೇನೆ" ಎಂಬ ಮಾತನ್ನು ಹೇಳಿದಂತೆ ನಡೆಸಿಕೊಟ್ಟ ಮಾತೃಪ್ರೇಮಿ ಶ್ರೀ ಶಂಕರರು ಎಲ್ಲರಿಂದಲೂ ವಂದಿಸಲ್ಪಡುವ ಯತಿಗಳೂ ಕೂಡ ಹಡೆದ ಅಮ್ಮನಿಗೆ ಹೇಗೆ ತಲೆಬಾಗಬೇಕೆಂದು ತೋರಿಸಿದರು. ಲೋಕದಲ್ಲಿ ಕೆಟ್ಟ ಮಗ ಜನಿಸಬಹುದೇ ಹೊರತು ಕೆಟ್ಟತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

. ಸಂಶಯ ನಿವಾರಕ-ಯಾವುದೇ ಸಿದ್ಧಾಂತವನ್ನು ನಿಷ್ಕರ್ಷೆಗೆ ಒಳಪಡಿಸಿದರೆ ಸಹಜವಾಗಿ ಅದರ ಮೂಲವಸ್ತು ಅದ್ವೈತದೆಡೆಗೆವಾಲುತ್ತದೆ. ಆಲದ ಮರದ ಪಕ್ಕದಲ್ಲಿ ಹೇಗೆ ಬೇರೆ ಗಿಡಗಳು ವಿಜೃಂಭಿಸಲು ಅಸಾಧ್ಯವೋ ಹಾಗೇ ಅದ್ವೈತವೆಂಬುದು ಎಲ್ಲಗಿಡಮರಗಳನ್ನೂ ಮೀರಿದ ಅಗಲ ಎತ್ತರ ಉಳ್ಳ ಆಲದಮರ ಎಂಬುದು ನಮಗೆ ಗೋಚರವಾಗುತ್ತದೆ! ಸಂಶಯಗಳಿಗೆ ಸಂಪೂರ್ಣನಿವಾರಣೆ ಹಾಗೂ ನಿರ್ಣಯಾತ್ಮಕ ಸಂದೇಶ ಸಿಗುವುದು ಅದ್ವೈತತೆಯಲ್ಲಿ ಮಾತ್ರ ಎಂಬುದನ್ನು ಇಂದಿಗೂ ಯಾರೇ ಆದರೂ ಮನಗಾಣಬಹುದು.

. ಅದ್ವಿತೀಯ ಸಾಧಕರು-ಬದುಕಿನಲ್ಲಿ ಇವತ್ತಿಗೆ ನಮ್ಮ ವಿದ್ಯಾಭ್ಯಾಸವೇ ಸರಿಯಾಗಿ ಮುಗಿಯದ ೩೨ ವಯಸ್ಸಿಗೆ ಇಡೀಬ್ರಹ್ಮಾಂಡವನ್ನೇ ಅರಿತು, ಅರೆದು ಕುಡಿದು ಅರ್ಥೈಸಿ ಬ್ರಹ್ಮಸೂತ್ರಗಳಿಗೆಲ್ಲ ಭಾಷ್ಯಬರೆದರು! ಯಾವ ಭಾಷೆ ಕ್ಲಿಷ್ಟವಾಗಿ ಸಂಕೀರ್ಣಶಬ್ಢಗಳಿಂದ ಕೂಡಿದೆಯೋ ಅದನ್ನೇ ಬಳಸಿ ಅದಕ್ಕೇ ತನ್ನ ಅನೇಕ ಕೊಡುಗೆ ಕೊಡುವಷ್ಟು ಸಾಧನೆ ಮಾಡಿದರು. ವಿಮಾನ,ರೈಲುಅಥವಾ ಯಾವುದೇ ಯಂತ್ರಚಾಲಿತ ವಾಹನಗಳ ಅವಲಂಬನೆ ಇಲ್ಲದೇ ಇಡೀ ದೇಶವನ್ನು ಅಂದಿನ ಕಾಡುಗಳ ಹಾದಿ ತುಳಿದುಸುತ್ತಿದ, ’ಇದಮಿತ್ಥಮ್ಎಂದು ತೋರಿಸಿದ ಪ್ರಾಕ್ಟಿಕಲ್ ಎಂಜಿನೀಯರ್ ನಮ್ಮ ಶಂಕರರು! ಜೀವಿತದ ಒಂದರೆಘಳಿಗೆಯನ್ನೂಸುಮ್ಮನೇ ವ್ಯಯಿಸದೆ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂಬುದಕ್ಕೆ, ಹೇಗೆ ಪ್ರಾಡಕ್ಟಿವ್ ಆಗಿರಬಹುದು ಎಂಬುದಕ್ಕೆ ಉತ್ತಮಉದಾಹರಣೆಯಾಗಿ ಬದುಕಿದ ಮಾಷ್ಟರ್ ಆಫ್ [ಆಲ್] ಬ್ಯುಸಿನೆಸ್ ಎಡ್ಮಿನಿಷ್ಟ್ರೇಶನ್ ಡಿಗ್ರಿಯನ್ನು ತಾನಾಗೇ ಸ್ಥಾನ ಅಲಂಕರಿಸಿ ಸ್ಥಾನಕ್ಕೇ ಕೀರ್ತಿಕಳಶವಿಟ್ಟ ಮಾನವ ಸಂಪನ್ಮೂಲದ ಮಹಾಮೇರು ನಮ್ಮ ಶಂಕರರು!

೧೦. ನಿಸ್ವಾರ್ಥರು-ಬದುಕು ಪೂರ್ತಿ ಲೋಕದ ಜನರ ಕಲ್ಯಾಣಕ್ಕಾಗಿ ವ್ಯಯಿಸಿದ, ಪಾರಮಾರ್ಥ ಚಿಂತನೆಯಿಂದ ಲೋಕವನ್ನು ಬೆಳಗಲು ಅನೇಕ ಸಾವಿರ ಸಾವಿರ ಕೃತಿಗಳನ್ನು ಬರೆದು, ತೋರಿಸಿ, ತಿಳಿಹೇಳಿ, ಮಾರ್ಗದರ್ಶಿಸಿ ತನ್ನ ಜೀವಿತಾವಧಿಯನ್ನು ಪರಸೇವೆಗೆ ಮೀಸಲಿಟ್ಟ ಪರಮಹಂಸ ಪರಿವ್ರಾಜಕಾಚಾರ್ಯರು ಶ್ರೀ ಶಂಕರರು.

ಸನ್ಯಾಸಿಗೆ-ಗುರುವಿಗೆ ಅವರ ನೆರವಿಗೆ, ಅವರ ಇಹದ ಬದುಕಿನ ಭೌತಿಕ ದೇಹಕ್ಕೆ ಅನಾರೋಗ್ಯವಾದಾಗ ಅವರನ್ನು ನೋದಿಕೊಳ್ಳಲು ಅವರಿಗೆ ಮನೆಮಂದಿ ಎಂಬ ಜನರಿಲ್ಲ! ಅಣ್ಣ-ತಮ್ಮ,ಅಕ್ಕ-ತಂಗಿಯರಿಲ್ಲ! ಬದಲಾಗಿ ನಾವೆಲ್ಲಾ ಅಂಥವರ ಶುಶ್ರೂಷೆಮಾಡಬೇಕು, ಅದು ನಮ್ಮ ಅದ್ಯ ಕರ್ತವ್ಯ.

ಯಾರೋ ಕೇಳಿದರು " ಅಂತಹ ಮಹಾತ್ಮರಿಗೆ ರೋಗ ಬರುವುದೇಕೆ? ಒಂದೊಮ್ಮೆ ಬಂದರೆ ತಾವೇ ತಪಸ್ಸಿದ್ಧಿಯಿಂದ ಅದನ್ನು ಬರದಂತೆ ನಿವಾರಿಸಿಕೊಳ್ಳಬಹುದಲ್ಲವೇ? "

ಇದಕ್ಕೆ ಉತ್ತರ--
ಸನ್ಯಾಸಿಗಳೂ ಜನ್ಮಾಂತರದ ಕರ್ಮವನ್ನು ಅನುಭವಿಸಲೇ ಬೇಕು. ಅವರ ಭೌತಿಕ ಕಾಯಕ್ಕೆ ಹಿಂದಿನ ಜನ್ಮಗಳ ಲವಲೇಶವಿದ್ದರೆ ಅದರಿಂದ ಅವರು ಮುಕ್ತರಾಗುವುದಿಲ್ಲ. ಅದನ್ನು ಪರಿಹರಿಸಿಕೊಳ್ಳಲು ಅವರು ಶಾರ್ಟ್ ಕಟ್ ಉಪಯೋಗಿಸುವುದಿಲ್ಲ,ಬದಲಿಗೆ ಅನುಭವಿಸಿಯೇ ಮುಂದಿನ ಕಾರ್ಯಕ್ಕೆ ಅಣಿಗೊಳ್ಳುತ್ತಾರೆ! ಹೀಗಾಗಿ ಅವರು ತಮ್ಮ ಮೇಲೆಯೇ ಮಂತ್ರಸಿದ್ಧಿ ಪ್ರಯೋಗಿಸಿಕೊಂಡು ಪಡೆದು ಬಂದ ಕರ್ಮಫಲವನ್ನು ತೊಡೆದುಹಾಕಲು ಇಷ್ಟಪಡುವುದಿಲ್ಲ-ಇದು ಗುರುತತ್ವದ ಒಂದು ಅಂಶಕೂಡ.

ಇಂತಹ ಸದ್ಗುರು ಸಂಕುಲಕ್ಕೆ ಕಳಶಃಪ್ರಾಯರಾಗಿ ನಿಂತ ನಮ್ಮ ಜಗದ್ಗುರು ಶಂಕರರನ್ನು ಒಮ್ಮೆ ಸ್ಮರಿಸೋಣ ಬನ್ನಿ-


ಸ್ಮರಿಸುವೆವಯ್ಯಾ ಶಂಕರ ಗುರುವರ
ನುತಿಸುವೆವಯ್ಯಾ ಭವಹರ

ಕಾಷಾಯಾಂಬರ ಕರದಿ ಕಮಂಡಲ
ಪದ್ಮಕರದಿ ಶಂಖ ಚಕ್ರವ ಪಿಡಿದು
ಶ್ರೀಪಾದನು ತಾನೆನ್ನುವ ರೂಪವ
ಲೋಕದಿ ತೋರಿದೆ ಬದುಕಿ ಮುನಿವರ

ವ್ಯಾಪಾರವು ಈ ಜೀವನ ನಾಟಕ
ಆಪ್ಯಾಯತೆಯಲಿ ಮೋಹದ ಮುಸುಕು
ಕೋಪ ಲೋಭ ಮದ ಮಾತ್ಸರ್ಯಗಳಲಿ
ಕಾಮನೆಗಳ ಅಲೆ ಬಲೆಯ ತೋರಿದನೇ

ಭರತ ಖಂಡದೀ ಭುವಿಯಲಿ ಜನಿಸುತ
ಅವಿರತ ಶ್ರಮಿಸುತ ಜನರನುದ್ಧರಿಸಿ
ಕವಿಕುಲಗುರು ನೀನಾಗುತ ವಿಶ್ವಕೆ
ಸವಿಯೂಟವ ನೀಡಿದೆಯೋ ಶಾಶ್ವತ

Sunday, May 9, 2010

ಅಮ್ಮಾ..ಎಂದರೇ ತೃಪ್ತಿಯು


ಕೇವಲ ಮದರ್‍ಸ ಡೇ ಆಚರಣೆಯಿಂದ ಯಾವ ಪ್ರಯೋಜನವೂ ಈ ಜಗತ್ತಿನಲ್ಲಿಲ್ಲ, ಬದಲಾಗಿ ಆ ತಾಯಂದಿರನ್ನು ಪ್ರತಿ ದಿನ ಪ್ರತಿ ಕ್ಷಣ ನೆನಪಿಸಿಕೊಂಡು ಅವರಿಗೆ ಅವರ ಮುಪ್ಪಿನ ಕಾಲದಲ್ಲಿ ಅವರನ್ನು ಎಲ್ಲಿಗೂ ಸಾಗಹಾಕದೆ, ವೃದ್ಧಾಶ್ರಮಕ್ಕೆ ಸೇರಿಸದೆ, ಅವರ ಅವಶ್ಯಕತೆಗಳನ್ನು-ಬೇಡಿಕೆಗಳನ್ನು ಪೂರೈಸಿದರೆ ಅದೇ ನಿಜವಾದ ಮದರ್‍ಸ್ ಡೇ ! ನಾವು ಪ್ರತಿನಿತ್ಯ ಟಿ.ವಿ ಚಾನೆಲ್ ಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತ/ಓದುತ್ತ ಇರುತ್ತೇವೆ--ಮಕ್ಕಳಿದ್ದೂ ಬೀದಿಪಾಲಾದ ಅಮ್ಮಂದಿರ ಬಗ್ಗೆ. ಯಾವ ತಾಯಿ ಕೂಡ ತನ್ನ ಮಗುವನ್ನು ಹಡೆದಾಗ ಮುಂದೆ ಅದರಿಂದ ತನ್ನ ಸ್ವಾರ್ಥಕ್ಕಾಗಿ ಏನನ್ನೋ ಬಯಸಿ ಹಡೆಯುವುದಿಲ್ಲ. ಅದು ನಿಸರ್ಗ ಸಹಜ ಕ್ರಿಯೆ. ಹಡೆದ ಮಗುವನ್ನು ಅತಿ ಪ್ರೀತಿಯಿಂದ ಲಾಲನೆ-ಪಾಲನೆ-ಪೋಷಣೆಮಾಡಿ ಬೆಳೆಸಿ, ಪ್ರಾಥಮಿಕ ವಿದ್ಯೆಯನ್ನು ತಾನೇ ಪ್ರಾರಂಭಿಸಿ ಮುನ್ನಡೆಸುವ ಅಮ್ಮನ ಪಾತ್ರ ಪ್ರತೀ ವ್ಯಕ್ತಿಯ ಬದುಕಿನಲ್ಲೂ ಬಹಳ ಅರ್ಥಗರ್ಭಿತ;ಸತ್ವಪೂರ್ಣ. ಅಮ್ಮನ ಆ ಜಾಗವನ್ನು ಯಾರೂ ತುಂಬಲು ಸಾಧ್ಯವೇ ಇಲ್ಲ.

ನಾವೆಲ್ಲ ಕೇವಲ ಶ್ರೀಸಾಮಾನ್ಯರು, ಇನ್ನು ಮಹಾತ್ಮರೆನಿಸಿದ ಶ್ರೀ ಆದಿಶಂಕರರು ತಾಯಿಗೆ ಒಬ್ಬನೇ ಮಗನಾಗಿದ್ದರು. ದೈವೇಚ್ಛೆಯಂತೆ ಸನ್ಯಾಸ ಸ್ವೀಕರಿಸಿದ ಅವರು ತಾಯಿಗೊಮ್ಮೆ ವಚನವಿತ್ತರು " ಅಮ್ಮಾ ನಿನ್ನ ಅಂತ್ಯಕಾಲಕ್ಕೆ ಎಲ್ಲಿದ್ದರೂ ಬಂದು ಸೇರುತ್ತೇನಮ್ಮ " ಎಂದು. ಹಾಗೇ ಅನೇಕ ವರ್ಷಗಳ ನಂತರ ಶಂಕರರು ಲೋಕಕಲ್ಯಾಣಾರ್ಥ ಬಹುದೂರದಲ್ಲಿರುವಾಗ ಅವರಿಗೆ ಧ್ಯಾನಾಸಕ್ತರಾಗಿ ಕುಳಿತೊಂದು ದಿನ ಅಮ್ಮನ ಅಂತ್ಯಕಾಲ ಸಮೀಪಿಸಿದ್ದು ತಿಳಿದುಬಂತು, ಕೂಡಲೇ ಕೇರಳದ ಕಾಲಟಿಗೆ ಧಾವಿಸಿದ ಶಂಕರರು ಅಮ್ಮನ ಸನಿಹಕ್ಕೆ ಬಂದರು, ಅದಾಗಲೇ ಅಮ್ಮ ಇಹದ ಬಂಧನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು, ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ತನ್ನ ತಪೋಬಲದಿಂದ ಅನುಗ್ರಹಿಸಿದ ಶಂಕರರು ಕೇವಲ ಒಬ್ಬನೇ ಮಗನಾದ ಕಾರಣ ಅಮ್ಮನ ಅಂತ್ಯಕ್ರಿಯೆಗೆ ಸ್ವತಃ ಮುಂದಾದರು. ನೆರೆಹೊರೆಯ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಸನ್ಯಾಸಿಗೆ ಕಾರ್ಮಾಧಿಕಾರವಿಲ್ಲ-ಅವ್ರು ಅದನ್ನೆಲ್ಲ ಮಾಡುವ ಹಾಗಿಲ್ಲ ಎಂಬುದು. ಯಾರ ಸಹಾಯಕ್ಕಾಗಿ ಕಾಯದೇ ಶಂಕರರು ತಮ್ಮ ಪೂರ್ವಾಶ್ರಮದ ಮನೆಯ ಪಕ್ಕದಲ್ಲೇ ಅಮ್ಮನ ಅಂತ್ಯಕ್ರಿಯೆ ನಡೆಸಿದರು. ಇಹದ ಕರ್ತವ್ಯವಾದ ಅಂತ್ಯೇಷ್ಟಿಯ ವಿಧಿವಿಧಾನಗಳನ್ನು ತಮ್ಮ ದಿವ್ಯ ತಪಸ್ಸಿದ್ಧಿಯ ಫಲದಿಂದ ಅರಿತು ಪೂರೈಸಿ ಅಮ್ಮನ ಇಹದ ಋಣವನ್ನು ನೆನೆದರು. ಅಂದಿನಿಂದ ಸನ್ಯಾಸ ಧರ್ಮದಲ್ಲಿ ಹೇಗಿರಬೇಕು ಎಂಬ ಅಧ್ಯಾಯಗಳನ್ನು ಬರೆದರು. ಹೀಗಿರುವಾಗ ಅಮ್ಮನಿಗೆ ಯಾವ ರೀತಿಯಲ್ಲೂ ಉಪಕರಿಸದೇ ನಮ್ಮ ಸ್ವಾರ್ಥದಲ್ಲೇ ಮುಳುಗಿರುವ ನಾವು ಕೇವಲ ಹೀಗೊಂದು ಪಾಶ್ಚಾತ್ಯರ ಗೌಣ ಪದ್ಧತಿಯನ್ನು ಅನುಕರಿಸಿ ಅನುಸರಿಸುವುದರಿಂದ ಮದರ್‍ಸ ಡೇ ಅರ್ಥಪೂರ್ಣವೇ ? ಅನೇಕ ಗಂಡಸರು ಮದುವೆಯಾದಮೇಲೆ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ದೂರಮಾಡುತ್ತಾರೆಂಬುದು ಸರ್ವ ವೇದ್ಯ ಸಂಗತಿ. ಇಂದಿನ ಅಮ್ಮಂದಿರಂತೂ ಹಿಂದಿನವರ ಥರ ಇಲ್ಲ, ಅವರು ಹೊಂದಿಕೊಳ್ಳುವ ಸ್ವಭಾವದವರಗಿರುತ್ತಾರೆ, ಎಲ್ಲೋ ಏನೋ ಅಭಿಪ್ರಾಯ ಭೇದ ಬಂದುದಕ್ಕೆ ಅದನ್ನು ತಿದ್ದಬೇಕೇ ಹೊರತು ಅಮ್ಮನನ್ನು ದೂರಮಾಡುವುದು,ಯಾರದೋ ಸುಪರ್ದಿಗೆ ನೋಡಿಕೊಳ್ಳಲು ಬಿಡುವುದು ತರವಲ್ಲ. ಹೀಗೇ ಆಲೋಚಿಸುತ್ತಿರುವಾಗ ಇಳಿದ ಕಣ್ಣಿನ ಧಾರೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿ ನಿಮ್ಮ ಮುಂದಿಡುತ್ತಿದ್ದೇನೆ.......

ಅಮ್ಮಾ..ಎಂದರೇ ತೃಪ್ತಿಯು

ಅವ್ವಾ ಎನ್ನಲೇ ?
ಅಬ್ಬೇ ನಿನ್ನನೂ
ಅಮ್ಮಾ..ಎಂದರೇ ತೃಪ್ತಿಯು
ಚೆನ್ನಾದ ಬಾಳು ನೀಡಿ
ನಮ್ಮನ್ನು ಹರಸಿದೆ
ಹಣ್ಣಾದ ನಿನ್ನ ಜೀವ
ನಮಗಾಗೀ ತುಡಿದಿದೇ
ಇನ್ನೆಲ್ಲಿ ತೀರಿಸಲಮ್ಮ
ನಿನ್ನೊಡಲಿನ ಆ ಋಣ.......ಅವ್ವಾ ಎನ್ನಲೇ ?||ಪ||


ಒಂಬತ್ತು ತಿಂಗಳಷ್ಟು
ನಮ್ಮನ್ನು ಬಸಿರೊಳೂ
ಮುಂದಷ್ಟು ವರುಷ ದಿನವೂ
ಸೊಂಟ ತೋಳಿನಲೀ ಹೊತ್ತೂ
ಈ ಲೋಕದ ಬದುಕಿನ ಹೆಜ್ಜೆ
ಕಲಿಸಿದೆ ನೀ ಪ್ರತಿ ಕ್ಷಣ......ಅವ್ವಾ ಎನ್ನಲೇ ? ||೧||


ಅಂಬೆಗಾಲನಿಕ್ಕಿ ಬೆಳೆದೂ
ಅಡುತ್ತಾ ಮಡಿಲೊಳೂ
ತುಂಬ ತಪ್ಪು ಹೆಜ್ಜೆ ಇಡುತಾ
ನಡೆದಂತಾ ದಿನಗಳೂ
ಹಂಬಲಿಸಿ ಬದುಕಿನ ತೊಡಕು
ಬೆಂಬಿಡದೇ ಅರೆಕ್ಷಣ.......ಅವ್ವಾ ಎನ್ನಲೇ ? ||೨||


ಓದು ಬರಹ ಕಲಿಸುತ ದಿನವೂ
ಕಥೆ ನೀತಿ ನಿಯಮಂಗಳಾ
ಸಾಧು ಗೋಧು ಪಿರಂಗಿ ಚಾರೀ
ಕಣ್ಣಾ ಮುಚ್ಚಾಲೆ ಆಟಂಗಳಾ
ವೇದ ಸಾರವೇ ತುಂಬಿದ ಶ್ಲೋಕ
ಆದೆ ಜ್ಞಾನದ ಹರಿವಾಣ.....ಅವ್ವಾ ಎನ್ನಲೇ ? ||೩||


ಹೊತ್ತಾರೆ ಅನ್ನವನಿಕ್ಕಿ
ಸಂತಸದೀ ನೋಡುತಾ
ಒಟ್ಟಾರೆ ಕಷ್ಟಗಳನೂ
ನಮ್ಮ ನಗುವಲಿ ಕಳೆಯುತಾ
ಹೆತ್ತ ಕರುಳಿನ ಕುಡಿಯೊಳು ನಿತ್ಯ
ತುಂಬಿ ಭವಿತವ್ಯದ ಹೂರಣ.....ಅವ್ವಾ ಎನ್ನಲೇ ? ||೪||


ಬೆಳೆಬೆಳೆಯುತ ದೊಡ್ಡವರಾಗಿ
ಸೇರಿದೆವೂ ಪಟ್ಟಣ
ಕಳೆಗುಂದಿದ ನಿನ್ನಯ ಮುಖವಾ
ಮರೆಯುತ್ತಾ ಜೀವನ
ಮುಪ್ಪಡರಿದ ನಿನ್ನಯ ಬದುಕಲಿ
ಬಂದೇವೇ ಅರೆಕ್ಷಣ?......ಅವ್ವಾ ಎನ್ನಲೇ ? ||೫||


Saturday, May 8, 2010

ಹಾಳು ಮಂಡೆ ಖಾದಿಯ ದೆವ್ವ !!


ಕೆಲವು ಸನ್ನಿವೇಶಗಳಿಗೆ ನಮ್ಮ ಜನಪದರು ರಚಿಸಿದ ಹಾಡುಗಳು ಬಹಳ ರುಚಿಸುತ್ತವೆ. ಅವುಗಳ ತಿಟ್ಟನ್ನು ಬಳಸಿಕೊಂಡು ಹಾಡು ಬರೆದರೆ ಬರೆದ ನಮಗೇ ನಗ್ಬೇಕೋ ಅಳಬೇಕೋ ಅನ್ನೋ ಪರಿಸ್ಥಿತಿ ! ರಾಜಕೀಯದಲ್ಲಿ ಬಹಳಜನ ಹಾರಪ್ಪಗಳಿದ್ದಾರೆ! ನಮಗೆ ಎದುರಿಗೆ ಕಾಣುವುದು ಕೆಲವೇ ಕೆಲವು! ಅಲ್ಲಿ ಯಾವ ಹಾರಪ್ಪರಿಗೂ ಹಾರುವಾಗ ಮರ್ಯಾದೆ, ಪರಿಣಾಮ ಇದರ ಬಗ್ಗೆಲ್ಲ ಲಕ್ಷ್ಯವಿಲ್ಲ, ಇದನ್ನೆಲ್ಲ ಅರಿತೇ ಆದಿಶಂಕರರು ಆ ಕಾಲದಲ್ಲೇ ಹೇಳಿದ್ದಾರೆ

|| ಕಾಮಾತುರಾಣಾಂ ನಭಯಂ ನ ಲಜ್ಜಾ ||

ಕಾಮುಕರು ಆತುರದಲ್ಲಿ ನಾಚಿಕೆ,ಭಯ ಇವೆಲ್ಲವನ್ನೂ ಬಿಟ್ಟಿರುತ್ತಾರಂತೆ. ಅವರ ಏಕಮೇವ ಗುರಿ ಕಾಮದ ತೆವಲನ್ನು ತೀರಿಸಿಕೊಳ್ಳುವುದಾಗಿರುತ್ತದೆ. ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನ ನೀಡಿ-ಬೇಡ, ಹಣದ ಥೈಲಿ ನೀಡಿ-ಆಗ ಅದೂ ಬೇಡ, ಓ ಅವಳಿದ್ದಾಳಲ್ಲ ಆ ಅವಳು-ಅವಳು ಮಾತ್ರ ಬೇಕು! ಅವಳ ಸಂಗಡ ಆಟ ಮುಗಿದಮೇಲೇ ಮುಂದಿನ ಕೆಲಸ ! ಅಲ್ಲೀವರೆಗೆ ಅವರು ’ಸರಕಾರದ ಕೆಲಸಗಳಲ್ಲಿ’ ತುಂಬಾ ಬ್ಯೂಸಿ! ಸುಮ್ಮನೇ ಅಂದಾಜಿಗೆ ನೀವು ಸಿ.ಡಿ. ಎನ್ನೋ ಪದ ಬಳಸಿನೋಡಿ ಬಹುತೇಕರು ದುಸ್ವಪ್ನ ಕಂಡವರಂತೆ ಹೌಹಾರಿ ಬೀಳುತ್ತಾರೆ. ತಮ್ಮ ಎಲ್ಲಾ ’ಬಳಕೆಯ ಜಾಗ’ಗಳನ್ನು ಕುಂತಲ್ಲಿಂದಲೇ ಬಿಗಿಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವೇ ದಿನಗಳಲ್ಲಿ ಸಿ.ಡಿ. ಮಾಧ್ಯಮ ನಿಷೇಧಕ್ಕೆ ಒಳಗಾದರೂ ಆಶ್ಚರ್ಯವಿಲ್ಲ! ಇಂಥವರನ್ನು ನಮ್ಮ ಆಳುವ ದೊರೆಗಳಾಗಿ ಪಡೆದ ನಾವು ನತದೃಷ್ಟರೋ ಅಥವಾ ಹತಭಾಗ್ಯರೋ ಗೊತ್ತಾಗುತ್ತಿಲ್ಲ. ನಿನ್ನೆಯೇ ಹೇಳಿದ ಹಾಗೇ ಹಲವಾರು ಪಕ್ಷಗಳು ಇರುವ ಅಪಕ್ವ-ಅಸಿಂಧು ಆಡಳಿತ ವೈಖರಿ ನಮ್ಮ ರಾಜಕೀಯ. ಮತ್ತೆ ಚುನಾವಣೆ, ಅಪವಿತ್ರ ಮೈತ್ರಿ, ಸಮ್ಮಿಶ್ರ ಸರಕಾರ, ಹಗ್ಗ-ಜಗ್ಗಾಟ, ಮತ್ತೆ ಪತನ, ಮತ್ತೆ ಚುನಾವಣೆ-ಏನೀ ಡೊಂಬರಾಟ? ಚುನಾವಣೆಗೆ ತಗಲುವ ಎಲ್ಲಾ ವೆಚ್ಚಗಳನ್ನು ಭರಿಸುವವರು ಯಾರು ? ಅಧಿಕಾರಿಗಳ ಆಸ್ತಿಯನ್ನು ಶೋಧಿಸುವ ನಮ್ಮ ಲೋಕಾಯುಕ್ತರಿಗೆ ರಾಜಕೀಯ ಪುಢಾರಿಗಳ,ಮುಖಂಡರ,ಮುಂದಾಳುಗಳ ಆಸ್ತಿಗಳನ್ನು-ಅವು ಅಷ್ಟು ಬೇಗ ಹೇಗೆ ಯಾವ ಆದಾಯ ಮೂಲದಿಂದ ಬಂದದ್ದೆನ್ನುವುದನ್ನು ಶೋಧಿಸಲು ಅವಕಾಶವಿಲ್ಲವೇಕೆ? ಯಾರು ಕೇಳಬೇಕು ಇದನ್ನು? ಯಾರು ಕೇಳುತ್ತಾರೆ ಇದನ್ನು? ನಾವೆಲ್ಲ ನಮ್ಮಪಾಡಿಗೆ ನಾವು ನಮ್ಮ ಹೊಟ್ಟೆಪಾಡಿಗೆ ದುಡಿಯುವುದರಲ್ಲಿ ಬ್ಯೂಸಿ, ಚುನಾವಣೆ ಬಂದರೆ ಸರದಿಯಲ್ಲಿ ನಿಂತು ಮತ ಚಲಾಯಿಸಿಬಿಟ್ಟರೆ ನಮ್ಮ ಕರ್ತವ್ಯ ಮುಗಿಯಿತು ! ಏನು ಮಾಡೋಣ ಮಹಾಶಯರೇ ಇನ್ನಾದರೂ ನಾವು ಎಚ್ಚೆತ್ತುಕೊಳ್ಳುವೆವೇ? ಹೋಗ್ಲಿ ಸದ್ಯ ಈ ಹಾಡನ್ನಾದ್ರೂ ಕೇಳಿ.....

ಹಾಳು ಮಂಡೆ ಖಾದಿಯ ದೆವ್ವ

ಹಾಳು ಮಂಡೆ ಖಾದಿಯ ದೆವ್ವ ಕ್ವಾರಣ್ಯಕ್ಕೆ ತಾ ಬಂದವ್ನೇ
ಕ್ವಾರಣ್ಯ ನೀಡವ್ವ ಖಾದಿ ದೆವ್ವನಿಗೆ

ಕೊಡವಾಗೆಲ್ಲ ಕೊಡುತ್ತಾನಪ್ಪಾ ರಾತ್ರಿ ಹಾಲಪ್ಪ
ಅವನ್ ಮುನದ್ರೆ ರೌಡೀಪಡೆ ಬಿಡ್ತಾನ ಕಣಪ್ಪ
ಬಾಯ್ತೆಗದ್ರೆ ತಂದೇನ್ ತಪ್ಪಿಲ್ಲ ಅಂತಾನಪ್ಪ
ಕುಂಬಳಕಾಯಿ ಕದ್ದವ್ರು ಯಾರೆಂದ್ರೆ ತನ್ ಹೆಗಲ ನೋಡ್ಕಂಡ ಹಾರಪ್ಪಾ......ಕ್ವಾರಣ್ಯ


ಗೆಳ್ಯ ಗೆಳ್ಯ ಅಂತ ತಿರುಗ್ತಾ ಇದ್ನಪ್ಪ ಹಾಳಪ್ಪ
ಲೋಕಸಭೆ ಇಲೆಕ್ಸನ್ನಾಗೆ ಜೊತೆಗೆ ಭಾಳ ಓಡಾಡಿದ್ನಂತಪ್ಪ
ಆವಾಗ್ಲೇ ಅಟಕಾಯ್ಸಿ ಕಣ್ಣಿಟ್ಟು ಆಮೇಲೆ ಒಂದಪ
ರಾತ್ರೀ ನಿಮ್ಮನೆಲೇ ಊಟ ಅಂದ್ಕೊಂಡು ಬಂದು ನಡುರಾತ್ರಿ ತನ್ ಪುಂಗಿ ಹೊರತಗ್ದ ಹಾರಪ್ಪಾ.....ಕ್ವಾರಣ್ಯ


ಹುಡುಗೀರಂದ್ರೆ ಭೋ ಇಷ್ಟ ಕಣಪ್ಪ ಹಾರಪ್ಪಂಗೆ
ಅವರನ್ ಬಿಟ್ಟ್ ಇರೋದು ಭೋ ಕಷ್ಟ ಕಣಪ್ಪ ಹೋರಪ್ಪಂಗೆ
ಅವ್ರಿಲ್ದೆ ಇದ್ರೆ ಹೊಟ್ಟೆಗ್ ಆಹಾರ ಸರಬ್ರಾಜೇ ಆಗಲ್ಲಪ್ಪ
ಅವ್ರೊಂದ್ ಕಿತಾ ಜೊತೆಗ್ ಮಲೀಕಂಡ್ರೆ ಜಗವೆಲ್ಲಾ ಭೋ ಸುಂದ್ರ ಅಂದವ್ನೇ ಹಾರಪ್ಪಾ........ಕ್ವಾರಣ್ಯ


ರಾಜೀ ಆದ್ರೆ ರಾಜೀನಾಮೆ ಹೋಗಿ ವಾಪಸ್ ಕೂರ್ತಾನಪ್ಪ
ರಾಜೀಗ್ ಬೇಕು ಕೋಟಿ ಕೋಟಿ ಕಳ್ಳ ದುಡ್ಡು ಕಾಂಚಾಣ ನೋಡಪ್ಪ
ಒಳ್ಳೆ ಐನಾತಿ ಪಾಲ್ಟಿ ಕೈಲಿ ಸಿಗಾಕಂಡ್ನಲ್ಲಪ್ಪ ಹಾರಪ್ಪ
ಇನ್ನ್ ಪುಂಗಿ ಊದೋದಿರ್ಲಿ ತನ್ ಒಳಸೇರಿದ ಪುಂಗಿ ಎಲ್ಲೋತು ಅಂತ ಹುಡುಕಾಕತ್ತಾನಪ್ಪ ಹಾರಪಾ.....ಕ್ವಾರಣ್ಯ


ಅಭವಾಗುತೈತಣ್ಣೋ ..... ಪ್ರಜೆಗೋಳ ಪುಣ್ಯವೋ ಸರಕಾರ್ದ ಪಾಪಾನೋ
ಯಡವಟ್ಟಿನ್ ಹಾರಪ್ಪ ಸೊರ ಸೊರ ಸೊರಬಾದಿಂದ ಬಂದ್ನೋ
ಮಾತಾಡನೋ ಯಪ್ಪಾ ಮಾತಾಡನೋ
ಬೀಸಾಡಿದ್ನೋ ಹಂಗೇ ರಾಜೀನಾಮೆನೋ
ನಾಳೆ ಬರ್ತೀನಿ ಅಂತ ಟಿವಿ ಜನರ್ತಾವ ಕುಂತು ಸಾರಿ .....ಅಲೆಲೆಲೆಲೆಲೆ
ಎದ್ದೋದ ಎಲ್ಲೋ ಕಾಣೆ ಆರಕ್ಸಕ್ರು ಇದ್ದು ಪೆದ್ದಾಗಿ ನೋಡಿ ..........ಅಲೆಲೆಲೆಲೆಲೆಲೆಲೆಲೆಲೆ

Friday, May 7, 2010

ರಾಜ ನೀತಿ

ಇವತ್ತಿನ ದಿನಮಾನವನ್ನು ನೆನೆಸಿಕೊಂಡರೆ ಒಮ್ಮೆ ನಗುವೂ ಇನ್ನೊಮ್ಮೆ ವಿಷಾದವೂ, ಮಗುದೊಮ್ಮೆ ಭಯವೂ, ಮತ್ತೊಮ್ಮೆ ಕ್ಲೇಶವೂ ಆವರಿಸುತ್ತದೆ. ಕಾರಣ ಹುಡುಕಿದರೆ ಧುತ್ತನೆ ಎದುರಾಗುವುದು ಪ್ರಕ್ಷುಬ್ಧ ರಾಜಕೀಯ! ಎಲ್ಲಿಲ್ಲ ರಾಜಕೀಯ ಹೇಳಿ? ದಿಲ್ಲಿಯಲ್ಲಿರಬೇಕಾದ ರಾಜಕೀಯ ಹಳ್ಳಿಯ ಮೂಲೆ ಮೂಲೆಗೂ ತಲುಪಿ ಹುಲುಸಾಗಿದ್ದ ಜೀವನ ಹೊಲಸಾಗಿಬಿಟ್ಟಿದೆ! ಮಿತ್ರರು, ದಾಯದಿಗಳು ಹೆಚ್ಚೇಕೆ ಮನೆಮಂದಿಯೇ ತಮ್ಮೊಳಗೆ ಪಕ್ಷಪಂಗಡವೆಂತ ಹೊಡೆದಾಡಲು ತೊಡಗಿರುವುದು ಈ ದುರಂತ ರಾಜಕೀಯದ ಅಪಶ್ರುತಿ ಫಲಶ್ರುತಿ. ಸಿಂಹದ ಹೊಟ್ಟೆಯಲ್ಲಿ ಹೇಗೆ ಸಿಂಹವೇ ಜನಿಸುವುದೋ ನರಿಯ ಹೊಟ್ಟೆಯಲ್ಲಿ ಹೇಗೆ ನರಿಯೇ ಹುಟ್ಟುವುದೋ ಹಾಗೇ ಖೂಳರೇ ತುಂಬಿದ ರಾಜಕೀಯದಲ್ಲಿ ಮತ್ತೆ ಸಾಕಷ್ಟು ಖೂಳರು ಸೇರಿಕೊಳ್ಳುತ್ತಿದ್ದಾರೆ. ರಾಜಕೀಯವೆಂದರೆ ಅದೊಂದು ಅಘೋಷಿತ ’ಸಮಾನ ಮನಸ್ಕ ದುಡ್ಡುಮಾಡುವವರ ಸಹಕರ ಸಂಘ’! ಅಲ್ಲಿ ಒಬ್ಬರಿಗೊಬ್ಬರು ಪಕ್ಷಭೇದ ಮರೆತು ಒಳಗೊಳಗೆ ಮಿತ್ರರಾಗಿರುತ್ತಾರೆ,ಆಗಾಗ ದೂರವಾಣಿಯಲ್ಲಿ ಮಾತನಾಡುತ್ತ ಹರಟುತ್ತ ಪರಸ್ಪರರ ವೈಯ್ಯಕ್ತಿಕ ಹಿತಾಸಕ್ತಿಗಳಿಗೆ ಸೊಪ್ಪುಹಾಕುತ್ತಿರುತ್ತಾರೆ ! ಎನೂ ಅರಿಯದ ಮುಗ್ಢ ಜನಸಾಮಾನ್ಯ ಪಕ್ಷದ ಹೆಸರಿನ ರಾಜಕೀಯದಲ್ಲಿ ಬಲಿಪಶುವಿನರೀತಿ ಬದುಕುತ್ತಿದ್ದಾನೆ. ’ಯಾರು ಬಂದ್ರೂ ಇಷ್ಟೇ ಹಣೆಬರಹ’ ಎಂದುಕೊಂಡು ಸುಮ್ಮನಾಗಿ ಪಾಲಿಗೆ ಬಂದ ತಲೆಯಮೇಲಿನ ತಲಗಂದಾಯವನ್ನು ಸಂದಾಯಮಾಡುತ್ತ ರಾಜಕೀಯದವರ ಡೊಂಬರಾಟಕ್ಕೆ ಪರೋಕ್ಷ ದೇಣಿಗೆ ನೀಡುತ್ತ ಬದುಕು ಸವೆಸುತ್ತಿದ್ದಾನೆ.

ರಾಜಕೀಯದಲಿ ಇಂದು ಮುತ್ಸದ್ಧಿಗಳು ದೂರ್ವಾಗುತ್ತಿದ್ದಾರೆ, ಇನ್ನೇನಿದ್ದರೂ ಅದು ಕನಸಿನ ಮಾತೇ ಸರಿ! ಇನ್ನು ಮುಂದೆ ರಾಜಕೀಯ ಬರೇ ರೌಡಿಗಳ,ಕಿಡಿಗೇಡಿಗಳ,ಖೂಳರ ಅಧಿಕೃತ ಅಡ್ಡೆಯಾಗಿ ಮಾರ್ಪಡುತ್ತದೆ. ಯಾವ ಹಿಂದೂಸ್ಥಾನದಲ್ಲಿ,ಯಾವ ಭಾರತದಲ್ಲಿ ಅಮೇರಿಕದ ಥರ ಕೇವಲ ಎರ್‍ಅಡು ದೊಡ್ಡಪಕ್ಷಗಳಿರಬೇಕಿತ್ತೋ ಅಂಥಲ್ಲಿ ಈಗ ಸಾವಿರಾರು ಪಕ್ಷಗಳಿವೆ, ಮನೆಗೊಂದು,ಜಾತಿಗೊಂದು,ಗಲ್ಲಿಗೊಂದು,ಹಳ್ಳಿಗೊಂದು ಹೀಗೇ ಪಕ್ಷಗಳಿಗೆ ಲೆಕ್ಕವೇ ಇಲ್ಲ. ದುಡ್ಡಿದೆಯಾ ಬನ್ನಿ ಪಕ್ಷಮಾಡೋಣ! ನನಗೆ ಸೀಟು ಸಿಕ್ಕಿಲ್ಲ, ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ, ನನಗೆ ಬೇಕಾದ ಖಾತೆ ಸಿಕ್ಕಿಲ್ಲ, ನನಗೆ ಪಕ್ಷದಲ್ಲಿ ಆದ್ಯತೆ ಸಿಕ್ಕಿಲ್ಲ --ಎಂಬೀಥರದ ಕ್ಷುಲ್ಲಕ ಕಾರಣಗಳಿಂದ ಪಕ್ಷಾಂತರ ಅಥವಾ ಹೊಸ ಪಕ್ಷದ ಉದಯ! ನ್ಯಾಯ ನೀತಿ ಕೇವಲ ಬೋರ್ಡಿನಲ್ಲಿರುವ ಅಂಕಿಅಂಶಗಳು! ’ಮೌಲ್ಯಯುತ ರಾಜಕಾರ್‍ಅಣ’ ಎಂಬ ಹೇಸಿಗೆ ಹುಟ್ಟಿಸಿದ ಶಬ್ಧದ ಸತತ ಬಳಕೆ. ಹೀಗೇ ಹೇಳಹೊರಟರೆ ಸರಕಾರದ ಕೆಲಸ (ಎದುರಿಗೆ ಬಂದು ಉಗಿಯಲಾರದೇ ಕಳವಳಿಸುತ್ತ ಕುಳಿತ) ಕೆಲಸ ! ಸಂವಿಧಾನವನ್ನು ಸ್ವಾತಂತ್ರ್ಯ ಬಂದಾಗ ಅಂದಿನ ಕಾಲಕ್ಕೆ ನಾವು ಬರೆದೆವು, ಅಂದು ಅದರ ಬಗ್ಗೆ ಬಹಳ ವಿಶ್ಲೇಷಣೆ ನಡೆಯಲು ಸಮಯವಿರಲಿಲ್ಲ, ಇಂದು ಅದು ನಮಗೆ ಆಸ್ತಿಭಾರ-ಅದನ್ನು ತಿದ್ದಲು ನಾವು ಬಿಡುವುದಿಲ್ಲ ಯಾಕೆಂದರೆ ನಮಗೆ ಬೇಕಾದ ರೀತಿಯ ರಾಜಕಾರ್‍ಅಣಕ್ಕೆ ಮುಂದೆ ಅವಕಾಶವಿರುವುದಿಲ್ಲ ಎಂದು ಮನಸಲ್ಲೇ ಮಂತ್ರ ಜಪಿಸಿ ಹಾಗೇ ಕಾಲಕಳೆಯುತ್ತಿದ್ದರೆ ನಮ್ಮ ರಾಜಕರಣಿಗಳು; ಇದು ದೇಶದ ದುರಂತ, ದೇಶದ ಜನರ ದುರಂತ! ೨೧ನೇ ಶತಮಾನದ ಅಕ್ಷರಸ್ಥ ಪ್ರಜೆಗಳ ದುರಂತ! ಒಮ್ಮೆ ಸಂವಿಧಾನವನ್ನು ಸರಿಯಾಗಿ ಪುಸ್ತಕ ರೂಪದಲ್ಲಿ ತಂದು ಎಲ್ಲರಿಗೂ ಓದಿಸಿ, ಅದಕ್ಕೆ ಸ್ವಲ್ಪ ಬದಲಾವಣೆಗಳು ಅನಿವಾರ್ಯ,ಭಾಷೆ ಹೇಗೆ ಬೆಳೆಯುತ್ತದೋ ಹಾಗೇ ಸಂವಿಧಾನಕೂಡ ಬೆಳೆಯುತ್ತದೆ. ಪ್ರಸಕ್ತ ಅಲ್ಲಿರುವ ಅನೇಕ ರೂಪರೇಷೆಗಳು ಈಗಿನ ಖೂಳ ರಾಜಕರಣಿಗಳ ಖೊಳ್ಳೆಹೊಡೆಯುವ ಸಂಸ್ಕೃತಿಗೆ ಪೂರಕವಗಿವೆ, ಹೀಗಾಗಿ ಅವುಗಳ ಮಾರ್ಪಾಟು ಆಗಲೇ ಬೇಕೆಂದರೆ ಬೆಕ್ಕಿಗೆ ಗಂಟೆಕಟ್ಟುವ ಕಥೆಯಾಗಿದೆ ನಮ್ಮ ಜೀವನ, ಕಥೆಯಲ್ಲ ಜೀವನ.


ಇಂತಹ ದಿನಗಳಲ್ಲಿ ಹಿಂದಿನ ತನ್ನ ಆದರ್ಶ ಜೀವನ ಕ್ರಮದಿಂದ ಶಾಶ್ವತ ದೈವತ್ವವನ್ನು ಪಡೆದ ಶ್ರೀರಾಮನ ಅಂದಿನ ರಾಜಕಾರ್ಯವೆಲ್ಲಿ ಇಂದಿನ ರಾಮನ ವೇಷದವರ ರಾಜಕೀಯವೆಲ್ಲಿ! ಛೆ ಛೆ .. ಈ ಜನ ರಾಮನ ವೇಷವಲ್ಲ ಹೆಸರು ಹೇಳಲೂ ಅರ್ಹರಲ್ಲ! ಆದರೆ ಹೆಚ್ಚಾಗಿ ವೇದಿಕೆಯೇರಿ ರಾಮನ ವೇಷಹಾಕುವವರೇ ಇವರಾಗಿರುವುದು ವಿಪರ್ಯಾಸವೂ ಉಪದ್ವ್ಯಾಪವೂ ಆಗಿದೆ. ಕಂಡಲ್ಲಿ ನುಗ್ಗುವ ನುಸುಳುವ ಕಚ್ಚೆಹರುಕ ರಾಜಕರಣಿಗೆ ದೊಡ್ಡ ಕಚ್ಚೆಹರುಕರಿಂದ ಶ್ರೀರಕ್ಷೆ ಬೇರೆ! ಇದು ನಮಗೇ ನಾವು ಮಾಡಿಕೊಂಡ ಅವಮಾನವಲ್ಲವೇ? ಒಪ್ಪ ಆಪಾದಿತ ರಾಜಕಾರಣಿ ಇದ್ದಕ್ಕಿದ್ದಲ್ಲೇ ಭೂಗತನಾದಾಗ ಬಂಧಿಸಲಾಗದ ನಮ್ಮ ಆರಕ್ಷಕರು, ಸುಳಿವೇ ಸಿಗದ ಯಾವುದೋ ಮೂಲೆಯಿಂದ ನಿತ್ಯಾನಂದನನ್ನು ಹುಡುಕಿತಂದರು! ಗೊತ್ತಾಗದ್ದೋ ಗೊತ್ತಾಗಿದ್ದೋ ಅಂತೂ ನಾವೆಲ್ಲ ಕಣ್ಣೀದ್ದೂ ಕುರುಡರು,ಕಿವಿಯಿದ್ದೂ ಕಿವುಡರು! ಪ್ರತೀಬಾರಿ ಯಾರೋ ಬರುತ್ತಾರೆ, " ಅಮ್ಮಾ ತಾಯೇ, ಹಸಿವೂ " ಅಂದ ಹಾಗೇ ಮತದಾರರಾದ ನಮ್ಮ ಕಾಲಿಗೆ ಬೀಳುತ್ತಾರೆ-ತಮ್ಮ ಸ್ವಾರ್ಥಸಾಧನೆಯಾಗುವವರೆಗೆ. ಹುಟ್ಟಿದ ತಪ್ಪಿಗೋ, ಒತ್ತಾಯಕ್ಕೋ,ಅನಿವಾರ್ಯತೆಗೋ, ದೇಶಾಭಿಮಾನಕ್ಕೋ ಕಟ್ಟುಬಿದ್ದು ನಾವು ಮತದಾನಮಾಡುತ್ತೇವೆ-ಅಪಾತ್ರರಿಗೆ! ನೆನಪಿಡಿ ಸ್ನೇಹಿತರೇ ನಾವು ಮಾಡುವುದು ಬಹುತೇಕ ಅಪಾತ್ರದಾನ! [ಅಪಾತ್ರದಾನಮಾಡುವುದರಿಂದ ಕೇಡು, ಅದಕ್ಕಿಂತ ದಾನಮಾಡದಿರುವುದು ಒಳ್ಳೆಯದು ಎಂದಿದ್ದಾರೆ ಪ್ರಾಜ್ಞರು.] ಚುನಾಯಿತ ಪ್ರತಿನಿಧಿ ಯಾರೆಂದು ನಾವು ಟಿ.ವಿ.ಯಲ್ಲೇ ನಾವು ನೋಡಬೇಕೇ ಹೊರತು ಅವರು ರಾತ್ರಿ ಕಳೆದು ಬೆಳಗಾಗುವಾಗ ಹೀರ್‍ಓ ಆಗಿರುತ್ತಾರೆ! ನಮ ಕೈಗೆಸಿಗಲಾರದ, ಸಮಾಜದ ಅವಶ್ಯಕ ಕೆಲಸ ಮಾಡಿಕೊಡಲಾಗದ ’ಜನನಾಯಕ’ ರಾಗಿ ಅಭಿಮಾನಿಗಳೆಂಬ ಸೋಗಿನಲ್ಲಿ ಬೆಂಗಾವಲಿಗೆ ರೌಡಿಪಡೆನಿರ್ಮಿಸಿಕೊಂಡು ನಾವು ಕೆಲಸ ಮಾಡಿಕೊಡಿ ಎಂದು ಒತ್ತಾಯಿಸಿದರೆ ನಮ್ಮ ಮೇಲೆ ಚೂ ಬಿಡುತ್ತಾರೆ! ಅನೇಕ ಹೀನಾಯ ಕೆಲಸ, ಕೊಲೆ-ಸುಲಿಗೆ,ದುರಾಚಾರ,ಅತ್ಯಾಚಾರ,ಬ್ರಷ್ಟಾಚಾರ ನಡೆಸುತ್ತ, ಜನರಿಂದ ತೆರಿಗೆ ಬಂದ ಹಣದಲ್ಲಿ ಸಿಂಹಪಾಲನ್ನು ನೀರಿನಂತೆ ಖರ್ಚುಮಾಡುತ್ತಾರೆ-ತಮ್ಮ ಕೆಲಸಕ್ಕೆ,ಪಡೆದ ಲಂಚವನ್ನು ವರ್ಗಾಯಿಸುತ್ತರೆ ತಮ್ಮ ಗುಪ್ತ ಖಾತೆಗೆ. ಸನ್ಮಾನ್ಯ ಲೋಕಾಯುಕ್ತರೆಂಬವರು ಇಂಥವರನ್ನು ಹಿಡಿಯಲು ಯೋಗ್ಯರಲ್ಲ! ಯಾಕೆಂದರೆ ನಮ್ಮ ಸಂವಿಧಾನದಲ್ಲಿ ಅದಕ್ಕೆ ಆಸ್ಪದವಿಲ್ಲ! ಯಾರೋ ಪುಣ್ಯಾತ್ಮರು ಇಂಥವರ ಕಥೆಯನ್ನು ಬಹಿರಂಗಗೊಳಿಸಿದರೆ ಅವರಮೇಲೆ ಸಾಕಿಕೊಂಡ ರೌಡಿಪಡೆಯನ್ನು ಚೂ ಬಿಡುತ್ತಾರೆ, ಬದುಕಿದೆಯಾ ಬಡಜೀವವೇ ಅಂದು ತಪ್ಪಿಸಿಕೊಳ್ಳಲು ಏನೇ ಮಾಡಿದರೂ ಅನೇಕಾವರ್ತಿ ಸೋಲು ಖಚಿತ;ಸಾವು ಉಚಿತ! ಅನಾಥ ಶವವಾಗಿ ಎಲ್ಲೆಲ್ಲೋ ಬೀಳುವುದಕ್ಕಿಂತ ’ನಮಗೆ ಯಾಕೆ ಬೇಕು ಎನ್ನುತ್ತ’ ಕಾಲಹಾಕುವ ಪಾಪದ ಜನ ನಾವಾಗುತ್ತೇವೆ;ಇದು ಇಂದಿನ ನಮ್ಮ ಪ್ರಜಾಪ್ರಭುತ್ವ! ಒಬ್ಬ ರೇಣುಕಾಚಾರ್ಯ, ಒಬ್ಬ ಸಂಪಂಗಿ, ಒಬ್ಬ ಹಾಲಪ್ಪ ಹೀಗೇ ನಮ್ಮ ಸುತ್ತಲ ರಾಜಕೀಯವೇ ಎಲ್ಲಾ ಈ ರೀತಿ ರಾಮವೇಷದವರ ವೇದಿಕೆಯಾಗಿಬಿಟ್ಟಿದೆ. ನಿನ್ನೆ ಸಂಪಾದಕರೊಬ್ಬರು ಬರೆದಿದ್ದಾರೆ-ಬರೆಯುವ ಮನಸ್ಸು ಬರುತ್ತಿಲ್ಲ ಎಂದು, ಸ್ವಾಮೀ ಬರೆಯಲು ಮನಸ್ಸಿಲ್ಲದಿದ್ದರೂ ಬರೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಬರೆಯಬೇಕಾಗಿದೆ. ಬರೆದರೆ ಮಿತ್ರರನೇಕರು ಓದಿ ಮುಂದಿನ ಸಮಾಜದ ಉದ್ಧಾರಕ್ಕೆ ಅಲ್ಲೆಲ್ಲೋ ಅವರಲ್ಲೊಬ್ಬ ವಿವೇಕಾನಂದ ಹುಟ್ಟಿಬರಬಹುದು, ಸುಭಾಷ್ಚಂದ್ರ ಬೋಸ್ ಹುಟ್ಟಿಬರಬಹುದು, ಲಾ ಲಾ ಲಜಪತರಾಯ್ ಬರಬಹುದು, ಲೋಕಮಾನ್ಯ ಮತ್ತೆ ಜನಿಸಬಹುದು ಎಂಬುದೇ ನನ್ನ ಆಶಯ. ನಾವಂತೂ ಅಂತಹ ಮೇಧಾವಿಗಳಾಗಲು,ದೇಶಾಭಿಮಾನಿಗಳಾಗಲು ಸಾಧ್ಯವಾಗಿಲ್ಲ ನಮ್ಮ ಕೃತಿಯನ್ನು ಓದಿ ಸ್ಪೂರ್ತಿಪಡೆದು ಯಾರಾದರೂ ಅಂಥವರು ಒಡಮೂಡಲಿ, ದೇಶದ ಹೊಲಸು ರಾಜಕೀಯವನ್ನು ಬೇರು ಕಿತ್ತು, ಬೆಂಕಿಹಚ್ಚಿ ಬೂದಿಮಾಡಿ, ಸಾಗರಗಳಲ್ಲಿ ಚೆಲ್ಲಲಿ, ಇಲ್ಲಿ ಪುನಃ ಚಪ್ಪನ್ನೈವತ್ತಾರು ರಾಜರು ಬಂದರೂ ಚಿಂತೆಯಿಲ್ಲ ಶ್ರೀರಾಮನ ಸ್ವಭಾವದ ಲಕ್ಷಭಾಗಗಳಲ್ಲಿ ಒಂದು ಭಾಗವನ್ನಾದರೂ ಅಳವಡಿಸಿಕೊಂಡ ರಾಜರು ಬರಲಿ, ನಮಗೆ ಆಗ ಇಂದಿನ ಈ ಹೊಲಸು ತುಂಬಿದ, ಹೂಳುತುಂಬಿದ, ಹಾಳಪ್ಪಗಳು-ಖೂಳರು ನಡೆಸುವ ಪ್ರಜಾಪ್ರಭುತ್ವವೆಂಬ ನಾಟಕವೇ ಬೇಡ!



ರಾಜ ನೀತಿ
ಅಂದು....

ಜನನಿ ಜನಕರ ಮನದ ಅಳಲುಗಳ ತಾನರಿದು
ವನಕೆ ನಡೆದನು ರಾಮ ಸಿರಿಭೋಗ ತೊರೆದು
ಜನತೆ ಕಣ್ಣೀರಿಡುತ ತಾವ್ ನಡೆಯಲ್ಜೊತೆಯಲ್ಲಿ
ಮನುಕುಲೋತ್ತಮ ಮರುಗಿ | ಜಗದಮಿತ್ರ


ಭಾರ್ಯೆಯನು ಕಳಕೊಂಡು ಮನದಿ ಚಿಂತಿತನಾಗಿ
ಆರ್ಯಾವರ್ತದಿ ಹುಡುಕಿ ಮುನ್ನಡೆದ ರಾಮ
ವೀರ್ಯವಂತನು ಗುಡುಗಿ ವಧಿಸುತಾರಾವಣನ
ಶೌರ್ಯಮೆರೆಯುತ ಗೆದ್ದ | ಜಗದಮಿತ್ರ


ಕಲ್ಲಾಗಿ ಬಿದ್ದ ಅಹಲ್ಯೆ ತಾ ಕೂಗಿರಲು
ಅಲ್ಲಿಗೈತಂದು ಮನ್ನಿಸಿ ದೋಷತೊಡೆದು
ಎಲ್ಲವನು ಕ್ಷಮಿಸಿ ಮರುಜನುಮವಂ ನೀಡಿ
ಬಲ್ಲನೆನ್ನುತ ನುಡಿದ | ಜಗದಮಿತ್ರ


ಶಬರಿ ಭಕ್ತಿಗೆ ಮೆಚ್ಚಿ ಹಣ್ಣು ಎತ್ತುತ ಕಚ್ಚಿ
ಶಬರರಂದದಿ ಮಗನ ಪ್ರೀತಿಯನು ತೋರಿ
ಶುಭವು ಸತತವು ಎಂದು ಹರಸಿ ಹಾರೈಸುತ್ತ
ಅಭಯನೀಡಿದ ನೋಡ | ಜಗದಮಿತ್ರ


ಅಗಸನಾಡಿದ ಮಾತು ಅನುಗಾಲ ಮನಕೆಣಕಿ
ಅರಸ ಕಳುಹಿದ ಮಡದಿ ಜಾನಕಿಯ ವನಕೆ
ಸೊಗಸಲ್ಲ ಜನಮನದ ನುಡಿಯ ಕಡೆಗಣಿಸಿದರೆ
ವರಸೆಯಲಿ ಮಿಗಿಲಿಲ್ಲ | ಜಗದಮಿತ್ರ


....ಇಂದು

ಪ್ರಜೆಗಳಾಡುವ ಮಾತು ಪ್ರಭುವಾಲಿಸದೆ ಕುಂತು
ರಜವಹಾಕುತ ಭೂಗತರಾಗಿ ಕ್ಷಣದಿ
ಮಜದಿ ಮಾರ್ಜಾಲ ಕಣ್ಮುಚ್ಚಿ ಹಾಲ್ಕುಡಿದಂತೆ
ನಜಭಂಡರಾಗಿಹರು | ಜಗದಮಿತ್ರ

ರಾಜಕಾರ್ಯದಿ ಹಲವು ನೀತಿ ಬಾಹಿರರಾಗಿ
ರಾಜಿಪರು ಧನಮದದಿ ಗೆಲುವೆನೆಂದೆನುತ
ಬೀಜದಲೇ ಕುಷ್ಟ ಹಿಡಿದಿಹ ನಮ್ಮ ಪ್ರಭುಗಳಿಗೆ
ರಾಜಿಸೂತ್ರವು ಒಳಗೆ | ಜಗದಮಿತ್ರ

ಚಡ್ಡಿಹರುಕರು ಕುಡುಕ ಖೂಳರಕ್ಕಸ ರೌಡಿ
ಬಡ್ಡಿಕಾಸಿನ ದೊರೆಗಳ್ ಸೇರುತದುಪಕ್ಷ
ದುಡ್ಡುಮಾಡುವ ದಂಧೆ ಪ್ರಜೆಗೆ ಪುಂಗಿಯ ಊದಿ
ಖಡ್ಡ ಕೆಂಚರ ತಾಣ | ಜಗದಮಿತ್ರ

ಹಾಲೋ ಹಾಲಾಹಲವೋ ತಿಳಿಯದಾಗಿದೆ ಜಗದಿ
ಕಾಲನೆಳೆಯುತ ಬೇಯಿಸುತ ತಮ್ಮ ಬೇಳೆ
ವಾಲಿ ರಾವಣರೆಲ್ಲ ರಾಮವೇಷದಿ ಬಂದು
’ಹಾಲಪ್ಪ’ರಾಗಿಹರು | ಜಗದಮಿತ್ರ

Saturday, May 1, 2010

ಕನಸು

ಕನ್ನಡದ ಇಂದಿನ ಪ್ರಖ್ಯಾತ ಕವಿಗಳಲ್ಲಿ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಒಬ್ಬರು. ನಾನು ಇಷ್ಟಪಡುವ ಕವಿಗಳಲ್ಲಿ ಅವರೂ ಒಬ್ಬರು. ನವೋದಯ ಸಾಹಿತ್ಯ ಮತ್ತು ನವ್ಯಕಾವ್ಯಗಳ ಭರಾಟೆಯಿಂದ ತತ್ತರಿಸಿದ ಕನ್ನಡ ಸಾಹಿತ್ಯ ಲೋಕಕ್ಕೆ ಸದಭಿರುಚಿಯ ಸರಾಗವಾಗಿ ಹಾಡಬಲ್ಲ ಕವನ ಸಾಹಿತ್ಯವನ್ನು ಒದಗಿಸಿದ ಮಹಾನುಭಾವ ಅವರು. ಅವರ ಅನೇಕ ಭಾವಗೀತೆಗಳು ರಾಗಬದ್ಧವಾಗಿದ್ದು ಹಲವು ಸಂಗೀತಗಾರರಿಂದ ಸಂಗೀತ ಸಂಯೋಜನೆಗೊಂಡು ಬಹುತೇಕ ಪ್ರತಿಯೊಂದು ಸಂಗೀತ ಗೋಷ್ಠಿಯಲ್ಲಿ ಹಾಡಲ್ಪಡುವಷ್ಟು ಜನಪ್ರಿಯವಾಗಿವೆ. ಅನೇಕ ಧ್ವನಿ ಸುರುಳಿಗಳರೂಪದಲ್ಲಿ ನಮ್ಮ ಮಧ್ಯೆಯಲ್ಲಿ ಅನುರಳಿಸುತ್ತಿವೆ. ಆಲೈಸಿದಾಗ ತುಂಬಾ ಇಂಪಾಗಿ ಕೇಳಿ ಬಹಳ ಮುದನೀಡುತ್ತವೆ! ಮೇಲಾಗಿ ಅವರ ಕವನಗಳು ಅವರೇ ಎದುರು ನಿಂತು ಅರ್ಥ ಹೇಳಿದರೇನೋ ಎನ್ನುವಷ್ಟು ಸರಳ ಶಬ್ಧಗಳಿಂದ ಕೂಡಿವೆ. ಓದುಗರ ಮನಸ್ಸಿನಲ್ಲಿ ಭಾವತರಂಗಗಳನ್ನೆಬ್ಬಿಸುವ ಅವು ಕವಿ ನಮಗಾಗೇ ಬರೆದರೇನೋ ಎಂಬಷ್ಟು ನಮಗೆ-ನಮ್ಮ ಹೃದಯಕ್ಕೆ ಹತ್ತಿರವಾಗುತ್ತವೆ. ಪ್ರತೀ ಕವನದಲ್ಲೂ ಏನೋ ಆಪ್ತತೆ, ಏನೋ ಅಪ್ಯಾಯಮಾನ ಅನಿಸಿಕೆ, ಏನೋ ಅನನ್ಯ ಭಾವನೆ ! ಈ ಕವಿ ನಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂಬಷ್ಟು ಮಾಂತ್ರಿಕತೆ, ಮಾಯದ ಮೋಡಿಗಾರನಂತೆ ತನ್ನತ್ತ ಸೆಳೆಯುವ ಕಾಂತತ್ವ []ಶ್ರೀಯುತರ ’ ದೀಪಿಕಾ ’ ಕವನ ಸಂಕಲವನ್ನು ಬಹಳ ಹಿಂದೆಯೇ ಓದಿದ್ದೆ. ಅದರಲ್ಲಿನ ಕವನಗಳು ಬಹಳ ಜನಪ್ರಿಯವಾಗಿವೆ. ಅವುಗಳಲ್ಲೊಂದು ’ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ !...’ ಇದನ್ನು ಬಹಳ ಸಮಯ ನನ್ನ ಮನಸ್ಸು ಗುನುಗುನಿಸುತ್ತಲೇ ಇರುತ್ತದೆ.

ಮೊನ್ನೆ ಅನಿರೀಕ್ಷಿತವಾಗಿ ಮೊದಲು ಬಿದ್ದ ಬೇಸಿಗೆ ಮಳೆಗೆ ಹಾಗೇ ರಸ್ತೆಯಲ್ಲಿ ನೆನೆದಿದ್ದೆ. ಆ ದಿನ ಗುಡುಗು ಸಿಡಿಲಿನ ಆರ್ಭಟ ಬಹಳವಾಗಿತ್ತು. ರಾತ್ರಿ ಮಲಗಿದ ಮೇಲೆ ಕೂಡ ಮಳೆ ಹನಿಯುತ್ತಿತ್ತು. ವಿದ್ಯುದ್ದೀಪ ಇರಲಿಲ್ಲ. ಆ ರಾತ್ರಿ ಕನಸುಕಂಡೆ. ಕನಸಿನಲ್ಲಿ ಎಲ್ಲಿಂದಲೋ ಹಾರುವ ತಟ್ಟೆಯೊಂದು ಬಂದು ನನ್ನ ಮೈಗೆ ಸೋಕಿ ನಿಂತಹಾಗೆ, ಅದರ ಥಳುಕಿನ ಬಣ್ಣಗಳು,ಬಣ್ಣದ ದೀಪಗಳು ಕಣ್ಣುಕೋರೈಸುವ ವೈಭವದಿಂದ ಕೂಡಿದ್ದವು. ಅದರಲ್ಲಿನ ವ್ಯಕ್ತಿಗಳಾಗಲೀ,ಬೇರೆ ಯಾವುದೇ ಥರದ ಜೀವಿಗಳಾಗಲೀ ಕಾಣುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಯಾವುದೋ ಮಾಧ್ಯಮದಲ್ಲಿ ಆಗಾಗ ಕಾಣುವ ಆದರೆ ಗುರುತಿಸಿ ಹಿಡಿಯಲು, ಸಂಶೋಧಿಸಲು ಸಿಗದ ಹಾರುವ ತಟ್ಟೆಗಳು ಮತ್ತು ಅವುಗಳು ವಿದೇಶಗಳಲ್ಲಿ ನೆಲಕ್ಕಿಳಿದು ಹೊಲಗದ್ದೆಗಳಲ್ಲಿ ಮೂಡಿಸಿದ ನಕ್ಷೆ-ಚಿತ್ತಾರಗಳು ಬಿತ್ತರಗೊಳ್ಳುವಾಗ ನೋಡಿದ್ದೆ. ಅದರ ಪ್ರತಿಫಲಿತ ಪರಿಣಾಮವೋ ಏನೋ ಕನಸಿನ ರೂಪದಲ್ಲಿ ಬಂದಿತ್ತು. ನಾನು ಆ ತಟ್ಟೆಯನ್ನು ಕನಸಲ್ಲೂ ಅಷ್ಟು ದೂರದಿಂದ ನೋಡುತ್ತಿದ್ದೆ. ತಟ್ಟೆಯ ಜೊತೆ ಒಬ್ಬನೇ ಇರುವುದರಿಂದ ತುಂಬಾ ಭಯ ಹುಟ್ಟಿಸಿತ್ತು, ಯಾಕೆಂದರೆ ಅದರಲ್ಲಿ ಯಾರಿರಬಹುದು, ಏನುಮಾಡಬಹುದು ಎಂಬುದು ತಿಳಿಯುತ್ತಿರಲಿಲ್ಲ!ಆದರೂ ಅದನ್ನು ನೋಡಿದಾಗ ಮೈಮನವೆಲ್ಲ ಪುಳಕಗೊಂಡಿತ್ತು,ಬಹಳ ಖುಷಿಯಾಗಿತ್ತು. ಆ ಭಯಮಿಶ್ರಿತ ಖುಷಿ ಹಾಗೇ ಸುಮಾರು ಹೊತ್ತು ಮುಂದುವರಿದಿರಬೇಕು ! ಕೊನೆಗೊಮ್ಮೆ ಯಾಕೋ ಎಚ್ಚರವಾಗಿಬಿಟ್ಟಿತು, ಗಡಿಯಾರ ನಾಲ್ಕುಗಂಟೆ ತೋರಿಸುತ್ತಿತ್ತು. ಅದನ್ನು ನಮ್ಮ ಲಕ್ಷ್ಮೀನಾರಾಯಣಭಟ್ಟರ ಶೈಲಿಯಲ್ಲಿ ಕವನಿಸಿ ನಿಮ್ಮ ಮುಂದಿಡುತ್ತಿದ್ದೆನೆ---


ಕನಸು

ಎಲ್ಲೋ ನಡೆಯಿತೋ ಮನಸು
ತಲ್ಲಣಿಸಿತೋ !
ಹುಲ್ಲೆಯಂತೆ ಹಾರಿ ಹೆದರಿ
ಒಲ್ಲೆನೆಂದಿತೋ


ದೂರದೊಂದು ಲೋಕದಿಂದ
ಹಾರುವಾ ತಟ್ಟೆಯಲೀ ಬಂದ
ಯಾರೋ ತಾಕಿ ನನ್ನಾ ಮೈಗೆ
ಭಾರೀ ಭಯವ ತಂದರಿಲ್ಲಿ


ಹಸಿರು ಕೆಂಪು ನೀಲಿ ಹಳದಿ
ಹೊಸತು ದೀಪ ರಾಶಿಗಳಲಿ
ಮಿಸುನಿ ಮೆರುಗು ಥಳುಕು ಬಣ್ಣ
ಎಸೆದು ಕೋರೈಸಿಹುದು ಕಣ್ಣ


ಎಂದೂ ನೋಡದಂಥಾ ಕನಸು
ಇಂದು ನನ್ನ ಮನದಾ ತುಂಬಾ
ಮಿಂದೆ ಅದರ ಸೆಳವಿನಲ್ಲಿ
ಚಂದದಿಂದ ನಲಿಯುತಲ್ಲಿ


ನೌಕೆಯಷ್ಟೇ ಕಂಡೆ ನಾನು
ನೂಕಿದವರು ಕಾಣಲಿಲ್ಲ
ಬಾಕಿಯಿತ್ತು ಹಲವು ಸಂಗ್ತಿ
ನಾಕು ಗಂಟೆಗೆಚ್ಚರವಾಗಿ

Friday, April 30, 2010

ಉಳ್ಳವರಿಗೆ ದಿನವೂ ಹಬ್ಬ !!



ಉಳ್ಳವರಿಗೆ ದಿನವೂ ಹಬ್ಬ !!

ನಮ್ಮ ಜೀವನದಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವಿನ ಹಿಂದೆ ಕನಿಷ್ಟಪಕ್ಷ ಒಬ್ಬ ವ್ಯಕ್ತಿಯ ಕೆಲಸದ ಸಾಧನೆ ಇರುತ್ತದೆ. ಒಮ್ಮೆ ಹಾಗೆ ಕೂತು ಚಿಂತನೆ ಮಾಡಿದರೆ ಆಗ ನಮಗೆ ಕಾಣುವುದು ಮನುಷ್ಯ ತನ್ನ ಬದುಕಿಗಾಗಿ ಇಷ್ಟೆಲ್ಲಾ ಸಾಮಾನು ಸರಂಜಾಮುಗಳನ್ನು ಬಳಸುತ್ತಾನಲ್ಲ, ಒಂದೊಮ್ಮೆ ಯಾರಿಗೂ ಬಿಡುವಿರದಿದ್ದರೆ ಇವನ್ನೆಲ್ಲ ಮಾಡಲಾಗುತ್ತಿತ್ತೇ?-ಅಂತ. ಕೆಲವರು ಕೆಲಸವನ್ನು ನೇರವಾಗಿ ಮಾಡಿದರೆ ಉಳಿದವರು ಅದನ್ನು ಪರೋಕ್ಷವಾಗಿ ಮಾಡುತ್ತಾರೆ, ಯಾಕೆಂದರೆ ಒಂದು ಕಟ್ಟಡದ ನಿರ್ಮಾಣ ಎಂದುಕೊಳ್ಳೋಣ--ಅಲ್ಲಿ ತಂತ್ರಜ್ಞರ ಕೆಲಸವಿದೆ,ಗಣಕಯಂತ್ರದಲ್ಲಿ ನಕ್ಷೆ ಹಾಗೂ ಕಟ್ಟಡದ ಭಾವೀ ರೂಪರೇಷೆಗಳನ್ನು ತಯಾರಿಸಿಕೊಡುವವರ ಕೆಲಸವಿದೆ,ಹಣಕಾಸು-ಖರ್ಚು ವೆಚ್ಚದ ಲೆಕ್ಕಹಾಕಿ ಸಂಭಾವ್ಯ ಬಜೆಟ್ ಮಾಡಿಕೊಡುವವರ ಕೆಲಸವಿದೆ, ಆಮೆಲೆ ಕೂಲಿಗಳು,ಗಾರೆಯವರೌ,ಬಡಗಿಗಳು,ವಿದ್ಯುತ್ ಕೆಲಸದವರು,ಬಣ್ಣದವರು ಹೀಗೆಲ್ಲಾ ಅಂತ ಅನೇಕ ಕೆಲಸವಿರುತ್ತದೆ. ಆ ಕಟ್ಟಡಕ್ಕೆ ಬೇಕಾಗುವ ಪರಿಕರ ಸಾಮಗ್ರಿಗಳನ್ನು ಮತ್ತೆ ಬೇರೆಲ್ಲೊ ಕೆಲಸದ ಮೂಲಕವೇ ತಯಾರಿಸಲಾಗುತ್ತದೆ. ಹೀಗೆ ಒಟ್ಟಾರೆ ಕೆಲಸವನ್ನು ಮಾಡಿದರೇನೇ ಅದಕ್ಕೊಂದು ಫಲ ಸಿಗುತ್ತದೆ.

ಕಾರ್ಮಿಕರು ಅಂದಾಕ್ಷಣ ನಮಗೆ ಕಣ್ಣಿಗೆ ಬೀಳುವುದು ಕಾರ್ಖಾನೆಯ ಕೆಲಸಗಾರರು. ಆದರೆ ಕಾರ್ಮಿಕರಲ್ಲಿ ಕಟ್ಟಡದ ಕೂಲಿ ಕಾರ್ಮಿಕರು ಬಹಳ ನಗಣ್ಯರು. ಎಲ್ಲಿಂದಲೋ ಗುತ್ತಿಗೆದಾರರು ಕರೆದಾಗ ಬರುತ್ತಾರೆ, ಅವರಿಗೆ ಉಳಿದುಕೊಳ್ಳಲು ಜಾಗವೂ ಕಷ್ಟ! ಕಲ್ಲು, ಮಣ್ಣು, ಮರಳು, ಇಟ್ಟಿಗೆ, ಸಿಮೆಂಟು ಇವನ್ನೆಲ್ಲ ಹೊರುತ್ತಾರೆ. ತಮ್ಮ ಚಿಕ್ಕ ಮಕ್ಕಳಿನ ನಾಳಿನ ಭವಿಷ್ಯದ ಕನಸನ್ನು ಹೊತ್ತವರಲ್ಲ ಅವರು! ಇವತ್ತಿನ ಬದುಕು- ಹೊಟ್ಟೆ ತುಂಬಿಸಲು ತುತ್ತು ಸಿಕ್ಕರೆ ಸಾಕು. ಆ ಅನೇಕ ಮಹಲುಗಳನ್ನು, ಆಪಾರ್ಟ್ಮೆಂಟ್ ಗಳನ್ನು ನೋಡುವಾಗ ತುತ್ತಿಗಾಗಿ ಎಷ್ಟೆಲ್ಲಾ ಕೂಲಿಜನರು ಬಂದು ಪರದಾಡುತ್ತ ಅವುಗಳನ್ನು ಕಟ್ಟಲು ಕೆಲಸ ಮಾಡಿರಬಹುದು ಎಂದೆನಿಸುತ್ತದೆ. ಮನೆಯನ್ನು ಕಟ್ಟಿಸಿದವ, ಖರೀದಿಸಿದವ ಆ ಚಿಂತೆಯ ಹಂಗಿಲ್ಲದೆ ಬರೇ ದುಡ್ಡುಕೊಟ್ಟ ಚಿಂತೆಯಲ್ಲೇ ಇರುತ್ತಾನೆ! ಗುತ್ತಿಗೆದಾರ ಕೆಲಸ ಮುಗಿದಮೇಲೆ ಅವರನ್ನೆಲ್ಲ ಅಲ್ಲಿಂದ ಸಾಗಹಾಕುತ್ತಾನೆ.ಆಮೇಲೆ ಬೇರೇಡೆ ಕೆಲಸವಿದ್ದರೆ ಕೆಲಸ ಇಲ್ಲದಿದ್ದರೆ ಕೆಲಸಹುಡುಕುವ ಕೆಲಸ ! ಜಲ್ಲಿ-ಮರಳಿನ ರಾಶಿಗಳಲ್ಲಿ ಅವರ ಚಿಕ್ಕ ಕಂದಮ್ಮಗಳು ಯಾವ ಆಟದ ಸಾಮಗ್ರಿಗಳೂ ಇಲ್ಲದೇ ಸಹಜ ಬಾಲಿಶ ಪ್ರವೃತ್ತಿಯಾದ ಆಟಕ್ಕೆ ಏನೂ ಇಲ್ಲದೇ ಅಳುತ್ತಲೋ ನಿದ್ದೆಮಾಡುತ್ತಲೋ ಏಳುತ್ತ ಬೀಳುತ್ತಲೋ ಇರುತ್ತವೆ.

ಹಿಂದೆ ನಾನೊಂದು ಬಾಡಿಗೆಮನೆಯಲ್ಲಿರುವಾಗ ಅದರ ಎದುರಿನ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಎಲ್ಲಿಂದಲೋ ಕಾರ್ಮಿಕರು ಬಂದರು. ಅವರಪೈಕಿ ಒಂದು ಜೋಡಿಗೆ ನಡೆದಾಡುವಷ್ಟುದೊಡ್ಡದಾದ ಒಂದು ಮಗುವಿತ್ತು. ಸುಮಾರು ೪ ವರ್ಷ ವಯಸ್ಸು ಇರಬಹುದು. ಎದುರಿನ ರಸ್ತೆಯಲ್ಲಿ ಪಕ್ಕದ ಉಳ್ಳವರ ಮನೆಗಳ ಹಲವು ಮಕ್ಕಳು ಸೇರಿಕೊಂಡು ಆಡುತ್ತಿದ್ದರು. ಆ ಮಗುವಿಗೆ ತಾನೂ ಆಡಬೇಕೆಂಬ ಆಸೆ.ತನಗೆ ಚಂಡು ಬೇಕೆಂಬ ಬಯಕೆ! ಆ ಮಗು ಓಡೋಡಿ ಬಂದು ಆ ಆಡುತ್ತಿರುವ ಮಕ್ಕಳ ಜೊತೆ ಆಡಲು ಬಯಸುತ್ತಿತ್ತು. ಆದರೆ ಅವರು ಆ ಮಗುವನ್ನು ತಮ್ಮ ಗುಂಪಿಗೆ ಸೇರಿಸುತ್ತಿರಲಿಲ್ಲ. ಆ ಮಗು ಒಂದೇ ಸಮ ಅಳಲು ತೊಡಗಿತ್ತು. ಅದಕ್ಕೆ ತನ್ನ ತಂದೆ-ತಾಯಿ ಕೂಲಿಯವರು, ನನಗೆ ಇದನ್ನೆಲ್ಲ ತಂದುಕೊಡಲು ಶಕ್ತರಲ್ಲ ಎಂದು ತಿಳಿದಿರಲಿಲ್ಲ! ತನಗೊಂದು ಚೆಂಡು ಬೇಕು, ತಾನೂ ಆಡಬೇಕು. ಅಳುತ್ತಿರುವ ಆ ಮಗುವಿಗೆ ಮಗುವಿನ ಅಮ್ಮ ಬಂದು ಒಂದೇಟು ಕೊಟ್ಟು ಕರೆದುಕೊಂಡುಹೋದಾಗ ನನಗೆ ಕಣ್ಣೀರು ಬಂತು.

ಅದೇ ಪರಿಸರದ ಪಕ್ಕದ ಮನೆಯಲ್ಲಿ ಇರುವ ಚಿಕ್ಕ ಹುಡುಗನ ಹತ್ತಿರ ಒಂದು ಮಕ್ಕಳ ಮೂರು ಗಾಲಿಯ ಸೈಕಲ್ ಇತ್ತು. ಅದನ್ನು ಆತ ಹೊರಗಡೆ ತಂದು ಆಡುತ್ತಿದ್ದ. ಅವರಮನೆಯ ಗೇಟಿನ ಸಂದಿಯಿಂದ ಇನ್ನೊಬ್ಬ ಹುಡುಗ ಸದಾ ಅದನ್ನು ನೋಡುತ್ತಿದ್ದ. ಆತನಿಗೆ ಒಂದೇ ಒಂದುಸಲ ಸೈಕಲ್ ಆಡಬೇಕೆಂಬ ಹಂಬಲ.ತಂದೆ-ತಾಯಿ ತಂದುಕೊಡುವಷ್ಟು ಸ್ಥಿತಿವಂತರಲ್ಲ. ಆತ ಮುಖ ಸಪ್ಪಗೆ ಮಾಡಿಕೊಂಡು ನಿಂತಿದ್ದ, " ಏನಪ್ಪಾ ಮರಿ ಏನಾಗಬೇಕಿತ್ತು ? " ಅಂತ ಕೇಳಿದಾಗ, ಒಮ್ಮೆ ದೃಷ್ಟಿನೆಟ್ಟು ಆಳವಾಗಿ ನನ್ನನ್ನು ನೋಡಿದ ಆತನಿಗೆ ನಾನು ಬಯ್ಯುವವನಲ್ಲ ಎಂಬುದು ಖಾತರಿಯಾದಮೇಲೆ " ಅಂಕಲ್ ನಾನು ಸೈಕಲ್ ಆಡಬೇಕಾಗಿತ್ತು, ಅಲ್ಲಿ ಒಳಗಡೆ ಹೋದ್ರೆ ಆಂಟಿ ಬೈತಾರೆ ಅದಕ್ಕೆ ಸುಮ್ನೇ ಹೀಗೆ ನೋಡ್ತಾ ಇದೀನಿ" ನನಗೆ ಪಾಪ ಅನ್ನಿಸಿತು. ಮಕ್ಕಳಿಗೆ ಏನುತಾನೇ ಗೊತ್ತು?


ಇಂತಹ ಮನಕಲಕುವ ಹಲವು ಸನ್ನಿವೇಶಗಳು ಕೂಲಿಕಾರ್ಮಿಕರ ಬದುಕಲ್ಲಿವೆ. ಅವರು ಬಡತನದಲ್ಲೇ ಹಲವು ಮಕ್ಕಳನ್ನು ಹೆರುತ್ತಾರೆ. ಬೇಗ ದೊಡ್ಡವರಾಗಿ ಎಲ್ಲರೂ ದುಡಿದು ಹೆಚ್ಚು ಕೂಲಿ ಸಂಪಾದಿಸಿ ತಮ್ಮನ್ನು ನೋಡಿಕೊಳ್ಳಲಿ ಎಂಬ ಆಸೆ. ಹಡೆದ ಅನೇಕ ಮಕ್ಕಳಲ್ಲಿ ಹಲವು ಮಕ್ಕಳು ರೋಗರುಜಿನಗಳಿಗೆ ತುತ್ತಾಗಿ ಬಳಲಿ ಅಲ್ಲೇ ಮರಳ ರಾಶಿಗಳ ಮೇಲೆ ಸತ್ತುಹೋಗುತ್ತವೆ, ನಿಸ್ಸಹಾಯ ಕೂಲಿ ದಂಪತಿ ಆ ನೋವನ್ನು ಮರೆಯಲು ಕುಡಿಯುತ್ತಾರೆ. ಮೊನ್ನೆ ಒಬ್ಬ ಅಂಗಡಿಯಲ್ಲಿ ನಿಂತಾಗ ತಾತನೊಟ್ಟಿಗೆ ಒಂದು ಮಗುಬಂತು.ಆ ತಾತ ಹೆಳಿದ " ಒಂದು ೫೦ಪೈಸೆ ಚಾಕ್ಲೇಟ್ ಕೊಡಿ ಸರ್ " ಆಗ ಆ ಮಗು "ತಾತಾ ತಾತಾ ನಂಗೆ ಅದು ಕೊಡ್ಸು ಇದಲ್ಲ ಅದು ಕೊಡ್ಸು " ಅಂತ ಒಂದು ಚಿಕ್ಕ ’ಪರ್ಕ್’ ತೋರಿಸಿ ಅಳುತ್ತಿತ್ತು. ನಾನು ಹೆಳಿದೆ "ಕೊಡಿ ಸರ್ ನಾನು ದುಡ್ಡು ಕೊಡ್ತೇನೆ" ಅಂಗಡಿಯಾತ ತೆಗೆದು ಕೊಟ್ಟಾಗ ಆ ಮಗು ಕುಣಿದು ಕುಪ್ಪಳಿಸಿತು ! ಮಕ್ಕಳ ಲೋಕವೇ ಹಾಗೆ! ಅವರಿಗೆ ತಂದೆತಾಯಿಗಳ ಆರ್ಥಿಕತೆ ಅರ್ಥವಾಗುವುದಿಲ್ಲ. ಅರ್ಥವಾಗುವ ದಿನವನ್ನು ಅವರು ತಲ್ಪುವ ವೇಳೆಗೆ ಅಂದರೆ ೭-೮ ವಯಸ್ಸಿಗೆ ಅವು ಅದೂ ಇದೂ ಕೆಲಸಕ್ಕೆ ತೊಡಗಬೇಕಾದ ಪರಿಸ್ಥಿತಿ.

ಒಬ್ಬರು ಹೇಳಿದ್ರು- ರಾತ್ರಿಯಿಡೀ ಎದುರುಗಡೆ ಕೂಲಿಯವರ ಮಗು ನಿಮಿಷ ಬಿಡದೇ ಕೆಮ್ಮುತ್ತಿತ್ತು, ತಂದೆ-ತಾಯಿ ಎಣ್ಣೆಹಾಕಿಕೊಂಡು ನಿದ್ದೆಯಲ್ಲಿದ್ದರು, ಮಗುವಿನ ಪಾಡುಬೇಡ. ಎಲ್ಲೋ ಎಚ್ಚರವಾದಾಗ ತಂದೆ ಮಗುವಿಗೊಂದು ಹೊಡೆತ ಕೊಟ್ಟು ಬೈದಿದ್ದನ್ನು ಕೇಳಿದೆ. ಮಗು ಕೆಮ್ಮಿನೊಂದಿಗೆ ಅಳುತ್ತಲೂ ಇತ್ತು.ಈ ಕಡೆ ಮನೆಯಲ್ಲಿ ಇದ್ದ ಕೆಮ್ಮಿನ ಔಷಧ ಕೊಡಲು ಹೋದರೆ ಆ ಕುಡುಕ ದಂಪತಿ ತನಗೆ ಬೈದರೆ ಎಂಬ ಭಯ, ಆ ಕಡೆ ಮಗುವಿನ ಸಹಿಸಲಾರದ ಬಳಲುವಿಕೆಯ ಕೆಮ್ಮಿನ ಸದ್ದು. ಇಡೀ ರಾತ್ರಿ ಹಾಗೇ ಕಳೆದಿದ್ದೇನೆ-- ಎನ್ನುತ್ತ ತನ್ನ ಅಸಹಾಯಕತೆಯನ್ನು ಹೇಳಿದರು.

ಹೀಗೇ ಅವರೂ ಮನುಷ್ಯರೇ ನಾವೂ ಮನುಷ್ಯರೇ, ಆದರೆ ಸೌಲಭ್ಯ ವಂಚಿತರ ಅಹವಾಲನ್ನು ಒಮ್ಮೆ ಅವಲೋಕಿಸೋಣ. ಅವರ ಮಕ್ಕಳೂ ನಮ್ಮ ಮಕ್ಕಳಂತೆಯೇ. ಮಕ್ಕಳ ಮನಸ್ಸು ಮುಗ್ಧ. ಅವುಗಳಿಗೆ ಆಸ್ತಿ-ಅಂತಸ್ತಿನ ಗೊಡವೆ ಇಲ್ಲ.


ನಮ್ಮಲ್ಲಿ ಅನೇಕರು ನಾವು ಜನ್ಮದಿನ, ಆದಿನ ಈ ದಿನ ಅಂತೆಲ್ಲಾ ಬಹಳ ದುಂದುವೆಚ್ಚಮಾಡುತ್ತೇವೆ. ವಿವಿಧ ತಿಂಡಿ,ಪಾರ್ಟಿ, ಸ್ವೀಟು, ಗಿಫ಼್ಟು ಎಂದು ಖರ್ಚುಮಾಡುತ್ತೇವೆ, ಅದರ ಬದಲಿಗೆ ಆ ಜನ್ಮದಿನದಂದು ಇಂತಹ ಕೂಲಿಗಳ ಮಕ್ಕಳಿಗೆ, ಅನಾಥಾಶ್ರಮದ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕೆ ಏನಾದರೂ ಕೊಡಿಸುವುದರಲ್ಲಿ ಆಚರಿಸಿದರೆ ಅದು ಎಷ್ಟು ಅರ್ಥಪೂರ್ಣ ಅಲ್ಲವೇ ? ಇತ್ತೀಚೆಗೆ ಒಬ್ಬರ ಮನೆಯಲ್ಲಿ ಕೆಲವು ಪಠ್ಯಪುಸ್ತಕಗಳು-ನೋಟ್ ಬುಕ್ ಗಳ ರಾಶಿ ನೋಡಿದೆ. ಅವರದ್ದೇನೂ ಅಂಗಡಿಯಿರಲಿಲ್ಲ. ಆದರೂ ಅಷ್ಟೆಲ್ಲಾ ಏಕೆ ಎಂದು ನಾನು ವಿಚಾರಿಸಿದೆ, ಯಾವುದನ್ನೂ ಹೇಳಿಕೊಳ್ಳದ ಆತ ಅಂತೂ ಕೊನೆಗೊಮ್ಮೆ ಹೇಳಿದ್ದು, ನನ್ನ ಮಗನ ಜನ್ಮದಿನದಂದು ನಾವು ಅನಾಥಾಶ್ರಮದ ಮಕ್ಕಳಿಗೆ ಒಂದುದಿನದ ಊಟ ಮತ್ತು ಈ ಪುಸ್ತಕಗಳನ್ನು ಕೊಡುತ್ತೇವೆ ಎಂದು. ಎಂತಹ ಆದರ್ಶಪ್ರಾಯ ಗುಣ! ನಮ್ಮ ನಡುವೆಯೇ ಎಲೆಮರೆಯ ಕಾಯಿಯಂತೆ ಇರುವ ಇಂಥವರು ಇದ್ದಾರೆ, ಆದರೆ ಸಂಖ್ಯೆ ತೀರಾ ವಿರಳ !

ಎಷ್ಟೋ ಜನ ಚಟಗಳಿಗಾಗಿ ದಿನವೂ ಸಹಸ್ರಾರು ರೂಪಾಯಿ ವ್ಯಯಿಸುತ್ತಾರೆ,ಅಂತಹ ಮಹಾನುಭಾವರಲ್ಲಿ ನನ್ನ ಅರಿಕೆ ಇಷ್ಟೇ-- "ಸ್ವಾಮೀ ನಿಮ್ಮ ಚಟಕ್ಕೆಂದು ಉಪಯೋಗಿಸುವ ನೂರು ರೂಪಾಯಿಗಳಲ್ಲಿ ಕೇವಲ ಒಂದು ರೂಪಾಯಿಯನ್ನು ಬಡಮಕ್ಕಳ ಖರ್ಚಿಗೆ ಎತ್ತಿಡಿ.ಅಂಥವರನ್ನು ಕಂಡು ಅವರ ಕೈಗೆ ವಸ್ತು-ಆಹಾರ-ಬಟ್ಟೆ-ಆಟಿಕೆ ಈ ರೂಪಗಳಲ್ಲಿ ಕೊಡಿ,ಹಲವು ಚಟಗಳಲ್ಲಿ ಇದೂ ಒಂದು ಎಂದು ತಿಳಿದುಕೊಳ್ಳಿ,ಇದರಿಂದ ನಿಮಗೆ ಪುಣ್ಯ ಲಭಿಸೀತು! ನೀವು ಕಳೆಯುವ ಹಣ ದ್ವಿಗುಣವಾಗಿ ನಿಮ್ಮ ಕೈಗೆ ಮರಳೀತು !"


ನಮ್ಮ ಹಳ್ಳಿಯಲ್ಲಿ ಹಿಂದೊಮ್ಮೆ ನೋಡಿದ್ದು-- ಮದುವೆ ಮನೆಯಲ್ಲಿ ಊಟ ಮುಗಿದಾಗ ಎಂಜಲೆಲೆಗಳನ್ನು ಬಿಸಾಡಿದ ಜಾಗದಲ್ಲಿ ೨-೩ ಜನ ಇದ್ದರು. ಅವರು ಅಲ್ಲಿ ಎಲೆಗಳಲ್ಲಿ ಮಿಕ್ಕುಳಿದ ಸ್ವೀಟು, ಅನ್ನ ಮುಂತಾದ್ದನ್ನು ಎತ್ತಿಕೊಂಡು ಬೇರೆ ಬೇರೆ ಪಾತ್ರೆಗೆ ತುಂಬಿಸಿಕೊಳ್ಳುತ್ತಿದ್ದರು! ಬಹಳ ಬೇಸರವಾಯಿತು. ಅನೇಕರು ಹೆಚ್ಚೆಂದು ಚೆಲ್ಲಿದ ಆಹಾರ, ತಿಪ್ಪೆಗೆ ತೂರಿದ ಆಹಾರ, ಬೀಡಾಡಿ ನಾಯಿಗಳಿಗೆ ಸೇರಬೇಕಾದ ಆ ಆಹಾರ ಭಿಕ್ಷುಕರನ್ನು ಕೈ ಬೀಸಿ ಕರೆದಿತ್ತು. ನನಗೆ ಅಂದೇ ಅನ್ನಿಸಿತ್ತು ನಾವೆಲ್ಲ ವಿನಾಕಾರಣ ದುಂದುವೆಚ್ಚಮಾಡುತ್ತೇವೆ ಎಂದು ! ಇಂತಹ ದುಂದುವೆಚ್ಚಕ್ಕೆ ಕಡಿವಾಣ ಇರಲಿ. ಆರ್ತರಿಗೆ ಹಸಿದವರಿಗೆ ಹಂಚಿತಿನ್ನುವ ಮನೋಭಾವ ಬರಲಿ.


ಅನೇಕ ವರ್ಗದ ಕಾರ್ಮಿಕರೂ ಕೂಡ ಅಸಂಘಟಿತರೇ, ಇವತ್ತು ಅದಕ್ಕೇ ತಮ್ಮ ಉಳಿವಿಗಾಗಿ ಎಲ್ಲರೂ ಅವರವರ ವೃತ್ತಿಪರ ಸಂಘಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಒಳ್ಳೆಯದೇ. ಆದರೆ ಸಂಘಟನೆಗಳೇ ಇಲ್ಲದ ಜನರಿಗೆ ಅವರ ಜೀವನಕ್ಕೆ ಯಾರೂ ದಿಕ್ಕಿರುವುದಿಲ್ಲ. ಅವರು ನಿರಕ್ಷರಕುಕ್ಷಿಗಳಾಗಿ ಜೀವನವೇ ಹೀಗೆ ಎಂದು ನಡೆದಿದ್ದಾರೆ! ಅವರ ಹೆಸರಲ್ಲಿ ಸಿಗುವ ಸರಕಾರೀ ಸೌಲಭ್ಯ ಬೇರಾರದೋ ಪಾಲಾಗುತ್ತಿರುವುದು ವಿಪರ್ಯಾಸ. ಬೀಡಿ ಕಾರ್ಮಿಕರು, ಗುಡಿಕೈಗಾರಿಕೆಯವರು,ಊದುಬತ್ತಿ ಹೊಸೆಯುವವರು ಹೀಗೆ ಹಲವಾರು ರಂಗ ಕಂಡು ಬರುತ್ತದೆ.

ಎಲ್ಲರೂ ದುಡಿಯುವುದು ಹೊಟ್ಟೆಗಾಗಿ. || ಉದರ ನಿಮಿತ್ತಂ ಬಹುಕೃತ ವೇಷಂ || ನಮ್ಮ ನಮ್ಮ ಬದುಕಿಗಾಗಿ ನಮ್ಮಿಷ್ಟದ ರಂಗಗಳನ್ನು ಆಯ್ಕೆಮಾಡಿಕೊಂಡು ಕೆಲಸಮಾಡುತ್ತಿರುತ್ತೇವೆ, ಮಧ್ಯೆಯೇ ಪರರ ಬಗ್ಗೆ, ಕೈಲಾಗದವರ ಬಗ್ಗೆ, ವಿದ್ಯೆಯಿಲ್ಲದೆ ಏನೂಮಾಡಲಾಗದೇ ಇರುವವರ ಬಗ್ಗೆ, ಕೂಲಿಗಳ ಮಕ್ಕಳ ಹಾಗೂ ಅನಾಥ ಮಕ್ಕಳ ಬಗ್ಗೆ ನಮ್ಮ ಕಾಳಜಿ ಇರಲಿ. ಕೂಲಿಯೋರ್ವನಿಗೆ ಏನಾದರೂ ಅವಶ್ಯಕ ವಸ್ತು-ಸಾಮಾನು ಕೊಟ್ಟು [ದುಡ್ಡುಕೊಟ್ಟರೆ ಎಣ್ಣೆಗೆ ಹೋದೀತು !]ನಾವು ಈ ದಿನವನ್ನು ಕಳೆದರೆ ಅದು ನಿಜವಾದ ಕಾರ್ಮಿಕ ದಿನಾಚರಣೆ ! ಇಂತಹದ್ದಕ್ಕೆ ಆದರ್ಶರಾಗಿದ್ದ ದಿ. ಡಾ|ವಿಷ್ಣುವರ್ಧನ್ ಅವರು ಹಾಡಿದ ಹಾಡಿನ ಸಾಲಿನೊಂದಿಗೆ ಲೇಖನ ಪೂರ್ನಗೊಳಿಸಲೇ ?


ತುತ್ತು ಅನ್ನ ತಿನ್ನೋಕೇ ಬೊಗಸೇ ನೀರು ಕುಡಿಯೋಕೇ...
ತುಂಡುಬಟ್ಟೆ ಸಾಕು ನಮ್ಮ ಮಾನಾಮುಚ್ಚೋಕೇ......
ಅಂಗೈಯ್ಯಗಲ ಜಾಗಾ ಸಾಕು ಹಾಯಾಗಿರೋಕೇ ....

Monday, April 26, 2010

ನೆನೆವುದೆನ್ನ ಮನ ಶ್ರೀಗಜಾನನ



ಅನಂತ ಶಕ್ತಿ ಸಂದೋಹ ಪೂರ್ಣಸ್ಯ ಪರಮಾತ್ಮನಃ |
ವಿಘ್ನ ವಿದ್ವಂಸಿನೀ ಶಕ್ತಿಂ ಗಜರಾಜಮುಪಾಸ್ಮಹೇ ||

ಅನಂತ ಶಕ್ತಿಗಳ ಆಗರವಾಗಿ ಭಗವಂತನ ಪೂರ್ಣರೂಪ ಪಡೆದ ವಿಘ್ನ ವಿದ್ವಂಸಕ ಶಕ್ತಿಯೇ ಶ್ರೀ ಮಹಾಗಣಪತಿ. ಗಣಗಳಿಗೆಅಧಿಪತಿಯಾಗಿ ಮೆರೆವ ಒಂದು ದೈವೀಶಕ್ತಿಯೇ ಗಣಾಧಿಪತಿ ಅಥವಾ ಗಣಪತಿ. ಈ ಗಣಪತಿ ಎಂಬ ಗಜಮುಖ ರೂಪ ವಿಶ್ವದ ಎಲ್ಲೆಡೆಜನಪ್ರಿಯತೆ ಪಡೆದ ದೈವರೂಪ. ಅನೇಕ ದೇಶಗಳಲ್ಲಿ ವಿವಿಧ ರೂಪಗಳಿಂದ ಕಂಗೊಳಿಸುವ ಮೂರ್ತಿ ಈ ವಿಶ್ವಂಭರ. ವಿಶ್ವವನ್ನೇಧರಿಸಿಯೂ ಮತ್ತು ವಿಶ್ವದೊಳಗೆ ಹೊಕ್ಕೂ ಇರುವುದರಿಂದ ಈತನಿಗೆ ವಿಶ್ವಂಭರ ಎಂಬ ಹೆಸರು. ಬಹಳ ದೊಡ್ಡ ಹಾಗೂ ಉದ್ದನೆಯಹೊಟ್ಟೆ ಇರುವುದರಿಂದ ಲಂಬೋದರ ಎಂದರೆ ಒಂದೇ ಕೋರೆ ಹಲ್ಲನ್ನು ಇಟ್ಟುಕೊಂಡಿದ್ದರಿಂದ ಏಕದಂತ ಎಂತಲೂ ಹೊಗೆಯಬಣ್ಣದಲ್ಲಿ ಕೆಲವೊಮ್ಮೆ ಕಾಣುವುದರಿಂದ ಧೂಮ್ರವರ್ಣ ಎಂತಲೂ ಕರೆಯುತ್ತಾರೆ. ಹಣೆಯ ಮೇಲೆ ಅಪ್ಪ ಕೊಟ್ಟ ಚಂದ್ರನನ್ನುಧರಿಸಿದ್ದರಿಂದ ಬಾಲಗಣಪನನ್ನು ಬಾಲಚಂದ್ರನೆಂದೂ ವಿಕಟನಾಟಕಗಳನ್ನು ಪ್ರದರ್ಶಿಸುವುದರಿಂದ ವಿಕಟನೆಂದೂ ನಾರದರುಕರೆದರು. ವಕ್ರತುಂಡನಾದ ಈತ ಕೃಷ್ಣಪಿಂಗಾಕ್ಷ ಎಂಬ ನಾಮಧೇಯವನ್ನೂ ಪಡೆದ. ಪಾರ್ವತಿಯ ಮಗನೆಂಬ ಹೆಗ್ಗಳಿಕೆಯಿಂದಅಮ್ಮನ ರಕ್ಷಣೆಯ ಬಾಗಿಲ ಭಟನಾಗಿ ಅಮ್ಮನ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸಿ ತನ್ನ ಪ್ರಾಣಹರಣವಾದರೂ
ಕರ್ತವ್ಯದಲ್ಲಿ ಒಮ್ಮೆ ವೀರಮರಣವನ್ನಪ್ಪಿದ್ದ ಗೌರಿಯ ಮುದ್ದುಕಂದ ಶ್ರೀಮುದ್ದುಗಣಪ. ಮೂಷಿಕಾಸುರನನ್ನು ಮರ್ದಿಸಿ ತನ್ನವಾಹನವನ್ನಾಗಿಸಿಕೊಂಡ ಇಲಿದೇರ ಈ ಬೆನಕ. ಆನೆಯ ಮೊಗವನ್ನು ಹೊತ್ತರೂ ಅಲ್ಲೇ ನಸುನಗುತ್ತಾ ಎಲ್ಲರನ್ನು ನಗಿಸುವಸ್ವಭಾವದ ಜನಪ್ರಿಯ ದೈವ ನಮ್ಮ ಜನಗಣಾಧಿಪ. ಪ್ರತಿ ಮನೆಯಲ್ಲೂ ವಾಹನದಲ್ಲೂ ಹಾದಿ ಬೀದಿಯ ಮಧ್ಯೆಯೂ ಮನೆಯಮುಂದಿನ ಕಾಂಪೌಂಡ್ ಗೋಡೆಯಲ್ಲೂ ಹೀಗೆ ಬಹುತೇಕ ಎಲ್ಲಕಡೆ ತನಗೊಂದು ಶಾಶ್ವತ ಸ್ಥಾನ ದೊರಕಿಸಿಕೊಂಡ ನಮ್ಮೀವಿನಾಯಕ ಸದಾ ವಿಶ್ವವಂದ್ಯ. ನಂಬಿದವರಿಗೆ ಇಷ್ಟಾರ್ಥಗಳನ್ನು ಇತ್ತು ಪೊರೆವ ನಮ್ಮ ಸುಮುಖ ದುರ್ಮುಖನೆಂದೂ ಕರೆದರೆ ಇಲ್ಲಾಎನ್ನಲಿಲ್ಲ.

ಸ್ಥೂಲವಾಗಿ ನಮಗೆ ಕಾಣುವ ಗಣಪತಿಯ ರೂಪಕ್ಕೆ, ಅವನ ಪ್ರತೀ ಅಂಗಾಂಗಗಳು ಇಂತಿಂಥದ್ದನ್ನೇ ತಿಳಿಸುತ್ತವೆ ಎಂಬುದುಅನೇಕರ ವಾದವಾದರೆ ಮತ್ತೆ ಮೂಲಾಧಾರ ಚಕ್ರದಲ್ಲಿ ಪ್ರತೀ ಮಾನವನಲ್ಲಿ ಇರುವ ಕುಂಡಲಿನೀ ಶಕ್ತಿಯೇ ಈ ಗಜಕರ್ಣಿಕ. ಅಥರ್ವಣ ವೇದದಲ್ಲಿ ಗಣಪತಿಯನ್ನು

ತ್ವಂ ಗುಣತ್ರಯಾತೀತಃ | ತ್ವಂ ಅವಸ್ಥಾತ್ರಯಾತೀತಃ | ತ್ವಂ ದೇಹತ್ರಯಾತೀತಃ | ತ್ವಂ ಕಾಲತ್ರಯಾತೀತಃ |ತ್ವಂ ಮೂಲಾಧಾರಸ್ಥಿತೋಸಿ ನಿತ್ಯಮ್| ತ್ವಂ ಶಕ್ತಿತ್ರಯಾತ್ಮಕಃ | ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್ |

ಹೀಗೆಲ್ಲ ವರ್ಣಿಸಿ ಈತ ಜ್ಞಾನಮಯನೂ ವಿಜ್ಞಾನಮಯನೂ ಆಗಿದ್ದಾನೆ ಎಂದಿದ್ದಾನೆ ಸ್ವತಃ ಅಥರ್ವ ವೇದಕರ್ತ ದೇವರು!

ಮೂಲ ಪರಬ್ರಹ್ಮ ರೂಪವಾದ ಈ ಮಹಾಗಣಪತಿ ಪಾರ್ವತೀಪರಮೇಶ್ವರರ ಮಗನಾಗಿ ಗಜಮುಖನಾಗಿ ಅವತರಿಸುತ್ತಾನೆ. ಗಣೇಶಪುರಾಣದಲ್ಲಿ ಗಣಪತಿಯ ೧೭ ಅವತಾರಗಳನ್ನು ಕಾಣಬಹುದು. ತ್ರೇತಾಯುಗದಲ್ಲಿ ಮಯೂರೇಶ್ವರನಾಗಿ ಕಂಗೊಳಿಸಿದಈತ ಕಾಲಾನುಕ್ರಮದಲ್ಲಿ ಸಿಂಹವಾಹನನಾಗಿ ಅತ್ರಿ-ಅದಿತಿಗಳಿಗೂ ಮಗನಾಗಿ ಜನಿಸಿದ್ದ! ರಕ್ತಬೀಜಾಸುರನನ್ನು ಸಂಹರಿಸಿರಕ್ತಾಂಬರಧರನಾಗಿ ಕೆಂಪು ಬಣ್ಣದಿಂದ ಪ್ರಜ್ವಲಿಸಿದ. ಪಾಶ ಅಂಕುಶಗಳನ್ನು ಹಿಡಿದು ನಡೆದು ವಿಘ್ನಕರ್ತನೂ-ವಿಘ್ನಹರ್ತನೂ ಆಗಿವಿಘ್ನೇಶ್ವರನಾದ. ಐದು ಮುಖವುಳ್ಳ ಹೇರಂಭನಾದ. ಕಲಿಯುಗದಲ್ಲಿ ದ್ವಿಭುಜನಾದ.

ಗನೇಶಕವಚವೆಂಬ ಮಂತ್ರದಲ್ಲಿ--

ಧ್ಯಾಯೆತ್ ಸಿಂಹಗತಂ ವಿನಾಯಕಮಮುಂ ದಿಗ್ಭಾಹುಮಾದ್ಯೇ ಯುಗೇ |
ತ್ರೇತಾಯಂ ತು ಮಯೂರ ವಾಹನಮುಮಂ ಷಡ್ಭಾಹುಕಂ ಸಿದ್ಧಿದಂ ||
ದ್ವಾಪರೇತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭು ತುರ್ಯೇತು |
ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ||

ಹೀಗೆ ಹೆಳಿದ್ದಾರೆ. ಗೌರಿ ತನ್ನ ಮುದ್ದು ಕಂದನಿಗೆ ರಾಕ್ಷಸ ಬಾಧೆ ತಪ್ಪಲಿ ಎಂಬ ಕಾರಣದಿಂದ ಋಷಿಗಳಿಂದ ಕೇಳಿ ಪಡೆದ ಮೂಲಗಣಪನ ಸ್ತೋತ್ರ ಇದು. ಒಂದು ಶಕ್ತಿ ತನ್ನ ರಕ್ಷಣೆಗೆ ತನ್ನಮೂಲರೂಪವನ್ನೇ ಹೇಗೆ ಬಳಸುತ್ತದೆ ಎಂದು ಇಲ್ಲಿ ಕಾಣಬಹುದು. ಇಂದಿಗೂ ’ಗಣೇಶಕವಚ’ವನ್ನು ಮಕ್ಕಳ ರಕ್ಷಣೆಗಾಗಿ ಪಠಿಸಿ ಅರ್ಚನೆಮಾಡಿ ಪ್ರಾಸದ ಕುಂಕುಮವನ್ನು ಧರಿಸುವಂತೆಯೂ ಅಥವಾ ಆಮಂತ್ರವನ್ನೇ ಯಂತ್ರರೂಪದಲ್ಲಿ/ತಾಯತರೂಪದಲ್ಲಿ ಧರಿಸುವಂತೆಯೂ ಬಳಸುತ್ತಾರೆ.

ಒಟ್ಟಿನಲ್ಲಿ ಗಣೇಶ ಎಂಬುದು ಅದೊಂದು ಅದ್ಬುತ ಶಕ್ತಿ! ಪರಮ ಚೈತನ್ಯ ! ಹಾಗಾಗಿಯೇ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

--ಅಂತ ಶ್ವೇತ ಪೀತಾಂಬರ ಧಾರಿಯೂ ಸ್ವತಃ ಮಹಾವಿಷ್ಣುವೂ ಚಂದ್ರನ ಬಣ್ಣವುಳ್ಳವನೂ ನಾಲ್ಕು ಕೈ ಉಳ್ಳವನೂ ಆದಗಣಪತಿಯನ್ನು ಹೀಗೊಮ್ಮೆ ಸೌಮ್ಯವಾಗಿ ಧ್ಯಾನಿಸಿದರೂ

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |

ಎಂದು ತಡೆಯಲಾರದ ಬರಿಗಣ್ಣಿಂದ ನೋಡಲಾರದ ಆ ದಿವ್ಯ ಪ್ರಭೆಯನ್ನು ನಮಿಸುತ್ತೇವೆ. ಒಂದೇ ಸೂರ್ಯನನ್ನು ನೆಟ್ಟಗೆನೋಡಲಾರದ ನಾವು ಕೋಟಿಸೂರ್ಯನ ಪ್ರಭೆಯನ್ನು ನೋಡಲು ಸಾಧ್ಯವೇ ? ಆದರೂ ಮಹಾತ್ಮರಾಗಿ ಬದುಕನ್ನುಮನುಕುಲಕ್ಕಾಗಿ ಸವೆಸಿದ ಋಶಿಗಳನೇಕರು, ಮನೀಷಿಗಳು ಎಲ್ಲರ ಹಿತಕ್ಕಾಗಿ ಅವರೆಲ್ಲ ಸಾಕ್ಷಾತ್ಕರಿಸಿಕೊಂಡು ದಿವ್ಯ ಚಕ್ಷು ಪಡೆದುನೋಡಿದ ರೂಪಗಳನ್ನು ಬೇರೆ ಬೇರೆ ಶ್ಲೋಕಗಳಲ್ಲಿ ಹೀಗೆಲ್ಲಾ ಹೇಳಿದ್ದಾರೆ.


ಅಣಿಮಾ ಗರಿಮಾದಿ ಅಷ್ಟಸಿದ್ಧಿಗಳನ್ನು ತನ್ನಲ್ಲೇ ಇರಿಸಿಕೊಂಡ ಗಜಾನನನನ್ನು ಕೇವಲ ಬರವಣಿಗೆಯಿಂದ ವರ್ಣಿಸಲು ಸಾಧ್ಯವಿಲ್ಲ.

ಕವಿಂ ಕವೀನಾಂ ಮುಪವಶ್ರವಸ್ತಮಂ | ----ಕವಿಗಳಿಗೇ ಕವಿಯಾಗಿ, ಲಿಪಿಕಾರನಾಗಿ ನಮಗೆಲ್ಲ ವ್ಯಾಸರು ಹೇಲಿದ
ಮಹಾಭಾರತವನ್ನು ಭಗವದ್ಗೀತೆಯ ಸಹಿತ ಬರೆದು ಕರುಣಿಸಿದ ಗೀರ್ವಾಣ ಲಿಪಿಕರ್ತ ಜ್ಯೇಷ್ಟರಾಜನನ್ನು ನಾವು ಸಣ್ಣಕಾವ್ಯರೂಪದಲ್ಲಿ ಧ್ಯಾನಿಸಿ ಪುನೀತರಾಗೋಣವೇ ?


[ನೆನೆವುದೆನ್ನ ಮನ ಎಂದು ಮೂರಾವರ್ತಿ ಅಂದರೆ ತ್ರಿಕರಣ ಪೂರ್ವಕ ಸ್ಮರಿಸಿ ೩ ವರ್ಷಗಳ ಹಿಂದೆ ಇಡಗುಂಜಿಮಹಾಗಣಪತಿಯನ್ನು ನೆನೆದು ಬರೆದ ಭಕ್ತಿ ರೂಪ, ಆತನ ಪ್ರಸಾದ ಇಂದು ತಮ್ಮೆಲ್ಲರಿಗಾಗಿ, ಭುಂಜಿಸಿ ಕೃತಾರ್ಥರಾಗಿ --]


ನೆನೆವುದೆನ್ನ ಮನ ಶ್ರೀಗಜಾನನ

ನೆನೆವುದೆನ್ನಮನ ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ || ಪ ||

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ || ೧ ||

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಶದಿ ಲಿಂಗ ಧರೆಗಿಳಿಸಿಹ ಗಣಿಮಾ || ೨ ||

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ || ೩ ||

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಶೆ ಸಾಲದು ನಿನಗೆ ನಮಿಸಲು ದಿನಪತಿ
ರೋಶದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ || ೪ ||

ಮಲಗಿಹಳಹ ನೀರೆ

ಇಡೀ ಭಾರತವನ್ನೇ ಒಂದು ನಾರಿಯ ಥರ ನೋದುವ ಪ್ರಯತ್ನ ಇದು. ಭಾರತಮಾತೆಯ ಸೊಬಗನ್ನು ನೈಸರ್ಗಿಕವಾಗಿ ಮನುಷ್ಯ ರೂಪಕ್ಕೆ ಹೊಲಿಸುತ್ತ ನಡೆದರೆ ಆಗ ನಮಗೆ ಯಾರೋ ಮಲಗಿದ ರೀತಿ ಕಾಣುತ್ತದೆಯಲ್ಲವೇ ? ನಮ್ಮ ನೋಟವನ್ನೂ ಆ ರೀತಿಯಲ್ಲಿ ಇಟ್ಟುಕೊಂಡಾಗ ಸಮೃದ್ಧ ನಾರಿಯೋರ್ವಳು ಮಲಗಿದ ರೀತಿ ಕಾಣಸಿಗುತ್ತದೆ.



ಮಲಗಿಹಳಹ ನೀರೆ


ಮಲಗಿಹಳಹ ನೀರೆ ನೀರವದಿ
ಹೊಲಗಳ ಹೊದಿಕೆಯಡಿ ವಿಸ್ತಾರದಿ


ಬಣ್ಣದ ಸೀರೆ ಕುಬುಸವ ತೊಡುತಾ
ಬಿನ್ನಾಣಗಿತ್ತಿ ಮೆರುಗನು ಪಡೆದು
ನುಣ್ಣನೆ ಮೈಗೆ ಪುಣ್ಯ ನದಿಗಳಾ
ಸಣ್ಣಗೆರೆಗಳಾ ಚೌಕಳಿ ಹಿಡಿದು


ಬೆಣ್ಣೆ ಹಚ್ಚಿದ ಹಿಮದ ಜಡೆಗಳು
ಕಣ್ಮನ ತಣಿಸುವ ಶರಧಿಯ ಸೀರೆ
ತಣ್ಣನ ಪರ್ವತ ಸ್ತನಗಳ ತೋರಿ
ಉಣ್ಣಲಾಸೊಬಗನು ಹಂಚುತೆಲ್ಲರಿಗೆ


ಭೂಶಿರಗಳ ಥರ ಉದ್ದನೆ ಉಗುರು
ಭೇಷಾಗಿಹ ಕರಾವಳಿ ತೊಡೆಗಳು
ಆಶೆಯ ಚಪ್ಪಟೆ ಭೂಮಿಯ ಉದರ
ರಾಶಿ ರಾಶಿ ಮನು ಮಕ್ಕಳ ಹಡೆದು


ಹಲವು ತೆರನ ಆ ನಸುಮೈಗಂಪು
ಬೆಳವಲ ಮಡಿಲು ನಳಿದೋಳುಗಳು
ಒಲವ ಸೂಸಿ ಮಂದಸ್ಮಿತ ಸುಸ್ಮಿತ
ಬಲವು ಬ್ರಹ್ಮನದು ಕರಗಿ ಹರಿಯಲು

Saturday, April 24, 2010

ದೀಪ, ಆರತಿ ,ಮತ್ತು ತೀರ್ಥ ದ ಸುತ್ತ


ದೀಪ, ಆರತಿ ,ಮತ್ತು ತೀರ್ಥ ದ ಸುತ್ತ

ದೀಪ

ಎಣ್ಣೆಯ ದೀಪಕ್ಕೆ ವಿಶೇಷ ಕಳೆ ಇದೆ,ತುಪ್ಪದ ದೀಪಕ್ಕೆ ಅತಿ ವಿಶಿಷ್ಟ ಲಕ್ಷಣವಿದೆ, ಈ ದೀಪಗಳ ಸುತ್ತ ಪರ್ಭೆಯಿದೆ,ಪ್ರಕಾಶವಿದೆ,ಶಾಖವಿದೆ, ಒಂಥರಾ ಆಹ್ಲಾದಕರ ಸುವಾಸನೆಯಿದೆ. ಬೆಳಗುವ ದೀಪ ನೋಡಿದಾಗ ಮನಸ್ಸು ತುಂಬಾ ಲವಲವಿಕೆ ತುಂಬಿಕೊಳ್ಳುತ್ತದೆ, ನೀಲಾಂಜನವನ್ನು ನೋಡಿದಾಗ ನಮ್ಮಲ್ಲಿ ವಿಶಿಷ್ಟ ಅನುಭೂತಿ ಉಂಟಾಗುತ್ತದೆ. ದೀಪ ಎಲ್ಲಿದೆಯೋ ಅಲ್ಲಿ ಅಂಧಕಾರ ಕರಗುತ್ತದೆ, ಕ್ರಿಮಿ ಕೀಟಗಳು ಆವಾಸವಾಗಿರುವ ಕತ್ತಲ ಜಾಗ ಬೆಳಕಿನಿಂದ ಪ್ರಜ್ವಲಿಸಿದಾಗ ಅವುಗಳು ದೂರ ಸರಿದುಹೋಗಿ ನಮ್ಮ ಆವಾಸಕ್ಕೆ ಅನುಕೂಲವಾಗುತ್ತದೆ. ತುಪ್ಪದ ದೀಪದ ಪರಿಮಳ ಮನದ ಕ್ಲೇಶವನ್ನು ಕಳೆಯುತ್ತದೆ, ಸರಿಯಾಗಿ ದಿಟ್ಟಿಸಿ ನೋಡಿ - ತುಪ್ಪದ ದೀಪದ ಬಣ್ಣವೇ ದೀಪಗಳಲ್ಲಿ ವಿಶಿಷ್ಟ! ಬೆಳ್ಳಿಯ ಹಣತೆಯಲ್ಲಿ ತುಪ್ಪವನ್ನು ಹಾಕಿ, ಶುದ್ಧ ಹತ್ತಿಯ ಬತ್ತಿಯಿಂದ ದೀಪ ಬೆಳಗಿದರೆ ಅದರ ಸಲ್ಲಕ್ಷಣ ನಮಗೆ ತರುವ ಸಂತಸ ಬಹಳ. ದೀಪವನ್ನು ಮಣ್ಣ ಹಣತೆಯಲ್ಲೂ ಬೆಳಗಬಹುದು. ಜ್ಞಾನಕ್ಕೂ ದೀಪಕ್ಕೂ ಇರುವ ಸಾಮಾನ್ಯತೆ ಎಂದರೆ ದೀಪ ಕತ್ತಲೆಯನ್ನು ಓಡಿಸುತ್ತದೆ ಹೇಗೋ ಹಾಗೆ ಓದು-ಜ್ಞಾನಾರ್ಜನೆ ನಮ್ಮ ಮನದ ಕತ್ತಲೆಯನ್ನು ಓಡಿಸುತ್ತದೆ. ಅದಕ್ಕೇ

ದೀಪ ಮೂಲೇ ತತೋ ಬ್ರಹ್ಮಾ ದೀಪ ಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಃ ಪ್ರೋಕ್ತ ದೀಪರಾಜಾಯತೇ ನಮಃ ||

ಈ ಶ್ಲೋಕದಲ್ಲಿ ದೀಪವನ್ನೇ ದೈವವೆಂದು ತಿಳಿದು ಅದರ ಮೂಲ ಭಾಗವನ್ನು ಬ್ರಹ್ಮ, ಮಧ್ಯೆ ವಿಷ್ಣು, ತುದಿಯಲ್ಲಿ ಶಿವ ಎಂದು ಹೆಸರಿಸಿ ನಮಿಸುವುದು ಬಹಳ ಆಪ್ತ ಕೆಲಸ ಅಲ್ಲವೇ, ಅದಲ್ಲದೆ ಸಾಯಂಕಾಲ ದೀಪ ಬೆಳಗುವಾಗ

ಶಿವಂಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜೋತಿರ್ನಮೊಸ್ತುತೇ ||

ಆಹಾ ಎಷ್ಟು ಹಿತವಾಗಿ ಹೇಳಿದ್ದಾರೆ ನೋಡಿ! ನನ್ನ ಶತ್ರುವಿಗೂ ಈ ದೀಪ ಹಿತಕರವಾಗಲಿ, ಅಂದರೆ ಯಾರಿಗೂ ಸಂಕಷ್ಟ ಬಾರದಿರಲಿ ಎಂಬ ಅರ್ಥವಲ್ಲವೇ?
ಮೇಲಾಗಿ ಇದನ್ನೆಲ್ಲಾ ನೋಡಿ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದರ ಮೂಲಕ ಪ್ರಾರಂಭಿಸುತ್ತೇವೆ ಅಲ್ಲವೇ ? ದೀಪದಲ್ಲಿ ತಾತ್ಕಾಲಿಕ ದೀಪ ಮತ್ತು ನಂದಾದೀಪ ಎಂಬ ಎರಡು ಬಗೆ, ತಾತ್ಕಾಲಿಕ ದೀಪ ಆ ಕ್ಷಣದಲ್ಲಿ ಹಚ್ಚಿಕೊಳ್ಳುವುದಾದರೆ ನಂದಾದೀಪ ಆರದೇ ಉರಿಯುವ ದೀಪ. ಹಳೆಯ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನೋಡ ಸಿಗುವ ಈ ದೀಪ ಆರುವುದಕ್ಕೆ ಅವಕಾಶವಿಲ್ಲದಂತೆ ಅದನ್ನು ನೋಡಿಕೊಳ್ಳುತ್ತಾರೆ.
|| ತಮಸೋಮಾ ಜ್ಯೋತಿರ್ಗಮಯ || ಅಂತ ಹೇಳಿ ಬೆಳಗುವ ಈ ದೀಪ ಎಲ್ಲರ ಮನೆಮನ ಬೆಳಗುವುದಲ್ಲವೇ ?

ಆರತಿ

ದೀಪದ ಸಂಕ್ಷಿಪ್ತ ರೂಪ ಆರತಿ. ದೀಪ ಬಹಳ ಹೊತ್ತು ಉರಿದರೆ ಆರತಿ ಕೆಲಸಮಯ ಉರಿಯುವ ದೀಪ. ಆರತಿಯಲ್ಲಿ ಹಲವು ಥರದ, ಆಕಾರದ, ದೊಡ್ಡ,ಸಣ್ಣ ಆರತಿಗಳಿವೆ. ನಾಗಾರತಿ, ಕುಂಭಾರತಿ, ಕೂರ್ಮಾರತಿ,ಗರುಡಾರತಿ, ರಥಾರತಿ, ಏಕಾರತಿ, ಪಂಚಾರತಿ, ದ್ವಿದಳ ನಾಗಾರತಿ,ತ್ರಿದಳ ನಾಗಾರತಿ, ಉರುಟು ಕರ್ಪೂರದಾರತಿ ಇವೆಲ್ಲ ಆರತಿಯ ವಿವಿಧ್ಯಗಳು. ಆಕಾರ, ಗಾತ್ರ ಮತ್ತು ಎತ್ತರಗಳಲ್ಲಿ ವೈವಿಧ್ಯತೆ ಮೆರೆಯುವ ಆರತಿಗಳದ್ದು ದೇವರಿಗೆ ತಮ್ಮನ್ನು ಅರ್ಪಿಸಿಕೊಂಡ ಹೆಮ್ಮೆ ! ಅದು ಒಪ್ಪಲೇಬೇಕಾದ ನಿಜವಷ್ಟೇ ? ಈ ಆರತಿಗಳಿಂದ ಮನಸ್ಸು ಬಹಳ ಪ್ರಪುಲ್ಲ ಗೊಳ್ಳುತ್ತದೆ. ಆರತಿ ಬೆಳಗಿದಾಗ ಸಿಗುವ ಪ್ರತಿಸಲದ ಆನಂದ ಅದೊಂದು ಅವಿಸ್ಮರಣೀಯ ಕ್ಷಣವಾಗಿ ಅನುರಣಿಸುತ್ತಿರುತ್ತದೆ. ಭಾವುಕರಾದ ನಾವನೇಕರು ಆ ಆರತಿಗಳ ಅಂದದಲ್ಲಿ ಕಳೆದುಹೋಗುತ್ತೇವೆ;ನಮ್ಮನ್ನೇ ನಾವು ಮರೆಯುತ್ತೇವೆ. ಹೀಗಾಗಿ ಇಂತಹ ಮಂಗಲಾರತಿಗಳಿಗೆ ಹುಚ್ಚು ಮಂಗಳಾರತಿ ಎಂದು ಕರೆಯುವ ವಾಡಿಕೆ ಕೂಡ ಕೆಲವುಕಡೆ ಕಂಡುಬರುತ್ತದೆ! ನಮ್ಮ ಮನಸ್ಸಿನ ಭಾವನೆಗಳನ್ನು ದೇವರಿಗೆ ಅರ್ಪಿಸುತ್ತ, ಆ ಕ್ಷಣದಲ್ಲಿ ಏನೋ ಒಂದು ವೈಭವವನ್ನು ಅನುಭವಿಸುವ ಕಲ್ಪನೆಯಿಂದ ಸಾಕಾರಗೊಂಡ ಈ ಆರತಿಗಳು ಒಂದೊಂದೂ ಒಂದೊಂದು ವೈಶಿಷ್ಟ್ಯವನ್ನು ತೋರುತ್ತವೆ. ಆರತಿ ನೋಡಿ ಸಂತಸಪಡಬೇಕೆಂಬ ನಮ್ಮ ಹುಚ್ಚು ತಣಿವವರೆಗೂ ನಾವು ಆರತಿ ಬೆಳಗುವುದರಿಂದ ಈ ಆರತಿಗಳು ಹಾಗೆ ಕರೆಸಿಕೊಂಡಿವೆ ಎಂದರೆ ತಪ್ಪಾಗಲಾರದೇನೋ! ಒಟ್ಟಿನಲ್ಲಿ ಆರತಿಗಳು ನಮ್ಮ ಮನಸ್ಸಿಗೆ ಆನಂದವನ್ನು, ತನ್ಮಯತೆಯನ್ನು ತಂದುಕೊಡುವ ಸಾಧನಗಳು. ಮೇಲಾಗಿ ಈ ಆರತಿಗಳಿಂದ ಹೊರಡುವ ಧೂಮಗಳು ನಮ್ಮ ಭಾವನೆಗೆ ರೆಕ್ಕೆ ಪುಕ್ಕ ಕೊಟ್ಟು ಬಲಿಯಲು ಸಹಕಾರಿಯಾಗುತ್ತವೆ. ಕೊನೆಯಲ್ಲಿ ಬೆಳಗುವ ಕರ್ಪೂರದ ಆರತಿಯಿಂದ ಹೊರಡುವ ಧೂಮ ಕ್ರಿಮಿನಾಶಕವಾಗಿದೆ. ಕರ್ಪೂರದಾರತಿ ಯನ್ನು ಕೊನೆಯಲ್ಲಿ ಬೆಳಗುವ ಐತಿಹ್ಯವೇನೆಂದರೆ ಹೇಗೆ ಕರ್ಪೂರ ತನ್ನನ್ನೇ ತಾನು ಕರಗಿಸಿ ಬೆಳಕು ಕೊಟ್ಟು ನಿಶ್ಯೇಷವಾಗುವುದೋ ಹಾಗೆ ನಮ್ಮನ್ನೂ ನಿನ್ನಲ್ಲಿ ಕರಗಿಸಿಕೊಂಡು ಕೀರ್ತಿಶೇಷರನ್ನಾಗಿ ಮಾಡೆಂದು ದೇವರಲ್ಲಿ ಪ್ರಾರ್ಥಿಸುವುದೇ ಈ ಆರತಿಯ ವಿಶೇಷ. ಆರತಿಗಳನ್ನು ಬೆಳಗಲು ಯಾವುದರ ನಂತರ ಯಾವುದು ಮತ್ತು ಎಷ್ಟು ಆವರ್ತಿ ಅವುಗಳನ್ನು ಎತ್ತಬೇಕು ಎನ್ನುವುದರ ಬಗ್ಗೆ ನಿಯಮಗಳಿವೆ, ಆದರೆ ನಮ್ಮ ಹುಚ್ಚಿನಲ್ಲಿ ಬೆಳಗುವ ಆರತಿಗಳನ್ನು ಬತ್ತಿ ಆರುವವರೆಗೂ ಎತ್ತುತ್ತಲೇ ಇರುತ್ತೇವೆ !

ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ
ದೀಪಂ ಗ್ರಹಾಣ ದೇವೇಶ ತ್ರಿಲೋಕ್ಯ ತಿಮಿರಾಪಹ |
ಭಕ್ತ್ಯಾ ದೀಪಂ ಪ್ರಯಚ್ಚಾಮಿ ದೇವಾಯ ಪರಮಾತ್ಮನೇ
ತ್ರಾಹಿಮಾಮ್ ನರಕಾದ್ಘೋರಾತ್ ದಿವ್ಯಃ ಜ್ಯೋತಿ ನಮೋಸ್ತುತೆ ||

ಹೀಗೆಲ್ಲ ಹಲವಾರು ಮಂತ್ರಗಳಿಂದ, ಸ್ತುತಿಗಳಿಂದ ದೇವರನ್ನು ಪ್ರಾರ್ಥಿಸುತ್ತ ಎತ್ತುವ ಆರತಿ ವೈಜ್ಞಾನಿಕವಾಗಿ, ಮನೋವೈಜ್ಞಾನಿಕವಾಗಿ ಶುಭಫಲಕಾರಿ ಎನ್ನುವುದು ಸ್ತುತ್ಯಾರ್ಹ ವಿಷಯ, ನಮ್ಮ ಪೂರ್ವಜರು ದಡ್ಡರಲ್ಲವಷ್ಟೇ ? !!!

ತೀರ್ಥ

ತೀರ್ಥ ಎಂಬುದು ದೇವರ ಅಭಿಷೇಕದ ನೀರು, ಪಂಚಾಮೃತ, ಎಳೆನೀರು, ಕಾಯಿನೀರು, ಕಷಾಯ ಹೀಗೇ ಯಾವರೂಪದಲ್ಲಾದರೂ ಇರಬಹುದು, ಆದರೆ ಮೂಲ ದ್ರವರೂಪ ಅಷ್ಟೇ. ಸಾಲಿಗ್ರಾಮ ಎಂಬುದನ್ನು ನಾವು ನೋಡಿರುತ್ತೇವೆ, ಇಂದಿನ ಹೊಸ ಪೀಳಿಗೆಗೆ ಪಂಚಾಯತನ ವಿಗ್ರಹಗಳ ಪರಿಚಯವಿಲ್ಲವಾಗಿ ಹೇಳಬೇಕಾಗಿಬರುತ್ತದೆ. ಸಾಲಿಗ್ರಾಮದ ಮೇಲೆ ಪಚ್ಚಕರ್ಪೂರ ಸಹಿತ ಅಷ್ಟಗಂಧ ಲೇಪಿಸಿ, ಅದನ್ನು ಶಂಖದಲ್ಲಿ ತುಂಬಿಸಿಕೊಂಡ ಶುದ್ಧ ನೀರಿನಿಂದ ತುಳಸಿ ಇಟ್ಟು ಪುರುಷ ಸೂಕ್ತದಿಂದ ಅಭಿಷೇಚಿಸಿದಾಗ ದೊರೆಯುವ ಆ ಮಿಶ್ರಿತ ನೀರೆ ನಮಗೆ ಮನೆಗಳಲ್ಲಿ ಸಿಗಬಹುದಾದ ತೀರ್ಥ. ಇದಕ್ಕೆ ರೋಗನಿವಾರಕ ಶಕ್ತಿ ಇದೆ. IT ENHANCES IMMUNITY IN OUR BODY. ಇನ್ನುಳಿದಂತೆ ಎಲ್ಲಾ ತೀರ್ಥಗಳೂ ಪರಿಣಾಮಕಾರಿಗಳೇ. ವಿಶೇಷವಾದ ಕಷಾಯ ತೀರ್ಥಗಳನ್ನು ಬ್ರಹ್ಮೋತ್ಸವ ಅಥವಾ ವಿವಿಧ ಉತ್ಸವದ ಸಮಯದಲ್ಲಿ ಉತ್ಸವ ಮುಗಿಸುವ ವೇಳೆ ದೇವರಿಗೆ ಅವಬೃತ ಕಾರ್ಯ ನಡೆಸುವಾಗ ನಿವೇದಿಸಲಾಗುವ ವಿವಿಧ ಗಿಡಮೂಲಿಕೆಗಳು ಮತ್ತು ಯಾಲಕ್ಕಿ,ಲವಂಗ,ಪಿಪ್ಪಲಿ ಇತ್ಯಾದಿ ಹಲವಾರು ದ್ರವ್ಯಗಳಿಂದ ಕುದಿಸಿ ತಯಾರಿಸಿದ ಕಷಾಯ--ಒಮ್ಮೆ ಅವಕಾಶವಾದರೆ ಕುಡಿದು ನೋಡಿ, ಜನ್ಮದಲ್ಲಿ ಅದರ ರುಚಿ ಮರೆಯಲಾರಿರಿ, ಅದ್ಬುತ ಮತ್ತು ಅದರ ಪರಿಣಾಮ ಕೂಡ ಅಷ್ಟೇ ಅದ್ಬುತ. ತೀರ್ಥಗಳು ಸಹಜವಾಗಿ ಖನಿಜಯುಕ್ತವಾಗಿರುತ್ತವೆ.

ಹೀಗೇ ನಮ್ಮ ಸುತ್ತ ದಿನನಿತ್ಯ ನಾವು ಬಳಸುವ ಈ ಮೂರು ಅಂಶಗಳು ವೈಜ್ಞಾನಿಕ ಮತ್ತು ಅರ್ಥಪೂರ್ಣ, ನಮ್ಮ ಪೂರ್ವಜರ ಪ್ರತೀ ನಡೆಯೂ ಹಾಗೇ ಅಲ್ಲವೇ ?

--------
ಇನ್ನು ಮತ್ತೆ ಮುಂದಿನ ಕೃತಿ ಸ್ವಲ್ಪ ತಡವಾಗಿ, ಈ ಕೃತಿ ಕೂಡ ಸೈಬರ್ ನಲ್ಲಿ ಕುಳಿತು ಪ್ರಕಟಿಸಿದ್ದು, ನೆಟ್ ತೊಂದರೆ ಇರುವುದರಿಂದ ದಯವಿಟ್ಟು ಸಹಕರಿಸಿ.

Tuesday, April 20, 2010

ಮಗುವಿನ ಮೊಗದ ಜಗ

ಮಗುವಿನ ಮೊಗದಲ್ಲಿ ಅರಳುವ ಮುಗ್ಧ ನಗೆಯಲ್ಲಿ ಎಣಿಸಲಾರದಷ್ಟು ಅದ್ಬುತ ಭಾವನೆಗಳಿವೆ. It is a treasure of thoughts ! ದಿನವಿಡೀ ಕೆಲಸ ಮಾಡಿ ದಣಿದು ಬಂದರೂ ಸಂಜೆ ಮಗುವಿನ ಮುಖದಲ್ಲಿ ಅರಳುವ ನಗು ನೋಡಿ ನಮ್ಮ ಕ್ಲೇಶವನ್ನು, ಸುಸ್ತನ್ನು ಒಮ್ಮೆಲೇ ಕಳೆದುಕೊಳ್ಳುತ್ತೇವೆ. Such an electrifying smile ! ಅದಕ್ಕಿರುವ ಆ ಶಕ್ತಿ ಬಹುಶಃ ಬೇರೆ ಯಾವುದಕ್ಕೂ ಇರಲಾರದು. ಮಕ್ಕಳ ಜಗತ್ತೇ ಹಾಗೆ. ದೂರದಲ್ಲಿ ಯಾರದೋ ಮಗು ನಗುತ್ತಿದ್ದರೂ ಅದನ್ನು ನೋಡಿಯೇ ನಾವು ಸಂತಸ ಪಡುತ್ತೇವೆ. ಮಗುವಿನಲ್ಲಿ ಆ ಮುಗ್ಧ ಭಾವನೆಗಳಿವೆ. ಅದಕ್ಕೆ ವ್ಯವಹಾರದ ಹೊರ ಜಗತ್ತು ಗೊತ್ತಿಲ್ಲ ! ಅದು ತಿಳಿದಿರುವುದು ಕಣ್ಣಿಗೆ ಕಾಣುವ ಅಪ್ಪ-ಅಮ್ಮ ಮತ್ತು ಸುತ್ತಲ ಹತ್ತಾರು ಹತ್ತಿರದ ಬಂಧುಗಳನ್ನು ಮಾತ್ರ. ಚಿಕ್ಕ ಶಿಶುವಿನಿಂದ ಹಿಡಿದು ೭-೮ ವರ್ಷಗಳ ವರೆಗೂ ಮಗುವಿನ ಲೋಕದ ಪರಿಯೇ ವಿಭಿನ್ನ.

ಅನೇಕ ಆಟಿಕೆಗಳನ್ನು ತಂದುಕೊಳ್ಳುವುದು, ರಾಶಿ ಹಾಕುವುದು, ಕಿತ್ತಾಡಿ ಹರಡುವುದು, ಅದರಲ್ಲಿ ಕೆಲವನ್ನು ಎತ್ತಿಕೊಂಡು ಇನ್ನೊಂದು ಕಡೆ ಜೋಡಿಸಿಕೊಳ್ಳುವುದು, ಜೋಡಿಸಿದ ವಸ್ತುಗಳು ಬಿದ್ದಾಗ ಅಳುವುದು, ಮತ್ತೆ ಪುನರಪಿ ಪ್ರಯತ್ನಿಸುವುದು, ಪಕ್ಕದ ಮನೆಗಳ ಮಕ್ಕಳೊಡನೆ ಆಟವಾಡುವುದು, ದೊಡ್ಡವರನ್ನು ಅನುಕರಿಸುವುದು, ಟಿವಿ ಕಾರ್ಯಕ್ರಮಗಳನ್ನು ಅನುಕರಿಸುವುದು, ಕೆಲವೊಮ್ಮೆ ತನ್ನದೇ ಆದ ಶೈಲಿಯಲ್ಲಿ ಏನೋ ಹಾಡಿಕೊಳ್ಳುವುದು, ಜೋರಾಗಿ ಓಡಿ ಬೀಳುವುದು, ಬೀಳುವುದನ್ನು ಯಾರೂ ನೋಡಲಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಸುಮ್ಮನೇ ಎದ್ದು ಹೋಗುವುದು, ಬೀಳುವುದನ್ನು ನಾವು ನೋಡಿಬಿಟ್ಟರೆ ಬೋ ಅಂತ ಮರ್ಯಾದೆಯಾಗಿ ಅಳಲು ಮುಂದಾಗುವುದು, ವೈದ್ಯರ ಆಟ, ಅಡಿಗೆ ಆಟ, ವಾಹನ ಚಾಲನೆ ಆಟ, ಅಡಗಿಕೊಳ್ಳುವ ಆಟ, ಪುಸ್ತಕಗಳಲ್ಲಿ ಏನೋ ಗೀಚಿ ಚಿತ್ರ ಬರೆದೆನೆಂದು ತೋರಿಸುವುದು, ಅಪ್ಪನ ಮೇಲೆ ಆನೆ ಸವಾರಿ, ಉಪ್ಪು ಬೇಕಾ ಚಪ್ಪೆ ಬೇಕಾ ಪುರ್ ಪುರ್ ಪುರ್ ಎಂದು ಬೆನ್ನಮೇಲೇರಿ ಕುಣಿಯುವುದು ....ಹೀಗೇ ಒಂದೇ ಎರಡೇ ? ಅಲ್ಲೆಲ್ಲಾ ಮಧ್ಯೆ ಮಧ್ಯೆ ಕಿಲ ಕಿಲ ನಗು, ಕಾಲ ಗೆಜ್ಜೆಯ ಸಣ್ಣನೆಯ ನಿನಾದ, ತಪ್ಪು ಹೆಜ್ಜೆಗಳ ನಡೆತ, ಕೆಲವೊಮ್ಮೆ ಭಯಮಿಶ್ರಿತ ವಿಷಾದ, ಮುರಿದ ಗೊಂಬೆಯ ಬಗ್ಗೆ ರೋದನ, ತಿಂಡಿ-ಊಟ ಬೇಡವೆಂಬ ಹಠ, ದೂರದ ಚಂದ್ರನ ಲೋಕಕ್ಕೆ ಹೋಗಿ ಏನೆಲ್ಲಾ ಹುಡುಕಿ ತೆಗೆದು ತರುವ ಆಸೆ, ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಮಗುವಿನ ಮೊಗದ ಜಗತ್ತನ್ನು ಕಂಡು ಬರೆದ ನಾಲ್ಕು ಸಾಲು ಈ ಕವನದ ರೂಪ---





ಮಗುವಿನ ಮೊಗದ ಜಗ


ಮಗುವೆ ನಿನ್ನಯ ಮೊಗದ ಮೊಗೆದು ಬಡಿಸುವ ಖುಷಿಯ

ನಗುವಿನೊಂದಿಗೆ ನಲಿವಾ ಜಗದೊಡೆಯ ನಾನು !
ಬಗೆಬಗೆಯ ವೇಷದಲಿ ನನ್ನ ರಮಿಸುವ ವಿಷಯ
ಲಘುಬಗೆಯಲೀ ಕಲಿತ ಜಾಣ ಮರಿ ನೀನು

ಇಂದ್ರ ನಂದನದಂತೆ ಭುವಿಯ ಅಂಗಣದಲ್ಲಿ
ಚಂದ್ರಮನ ನಾಚಿಸುವ ದುಂಡು ಮುಖವರಳಿ
ಸಾಂದ್ರತೆಯ ಹೆಚ್ಚಿಸುವ ವಿದ್ಯುನ್ಮಾನದ ದೀಪ
ಲಾಂದ್ರದಲಿ ಜಗದ ಭಾವಗಳೆಲ್ಲ ಕೆರಳಿ

ಬಿಂದು ಹನಿ ಹನಿಯಾಗಿ ಹನಿಯು ಹಳ್ಳವದಾಗಿ
ಕುಂದಣದ ಚಿತ್ತಾರ ಮೂಡಿ ಜೀವದಲಿ
ನೊಂದ ಮನವಿರಲೇನು ನಿನ್ನ ನಗುವದು ಸಾಕು
ಒಂದಿನಿತು ಮರೆಯೆ ಚಿಂತೆಯ ತೊರೆಯುತಿಲ್ಲಿ

ರಂಜಿಸುವ ಆಟಗಳು ಬಹು ವಿಧದ ನೋಟಗಳು

ಮಂಜಹನಿ ಹರಳುಗಟ್ಟಿದ ತೆರನ ಸೊಗಸು
ನಂಜನರಿಯದ ಮನಸು ಮುಗ್ಧತೆಯ ಸಾಕಾರ
ಸಂಜೆಸೂರ್ಯನ ಕಿರಣ ನೆನೆಯಿತದು ಮನಸು