ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 18, 2010

ಸೃಷ್ಟಿ - ಸುರಭೋಗ

ಸೃಷ್ಟಿಯ ಸೊಬಗು ಅನನ್ಯ-ಅಪರಿಮಿತ. ಅದರಿಂದ ಸಿಗುವ ಆನಂದವೇ ಬೇರೆ! ಆ ಆತ್ಮತೃಪ್ತಿ ದುಡ್ಡುಕೊಟ್ಟು ಕೊಂಡುಕೊಳ್ಳಲಾಗದ್ದು ! ಎಷ್ಟೇ ದುಡ್ದಿರಲಿ ಅದರಿಂದ ಮಾತ್ರವೇ ಸುಖ-ನೆಮ್ಮದಿ ಎಂಬುದು ಸುಳ್ಳು. ಮುಂದಿನವಾರ 'ತಲಕಾಡಿಗೆ ಪಿಕ್ನಿಕ್ ಇದೆ' ಅನ್ನಿ ನಮ್ಮೆಲ್ಲರ ಕಿವಿ ನಿಮಿರುತ್ತದೆ! ಯವುದೋ ನಿಸರ್ಗಧಾಮವೆಂದರೆ, ಜಲಪಾತವೆಂದರೆ ಇದ್ದ-ಬದ್ದ ರಜಗುಜರಾಯಿಸಿ ಹೊರಟುಬಿಡುತ್ತೇವೆ, ಸ್ವಲ್ಪ ನೆಗಡಿ-ಜ್ವರ ಇದ್ದರೂ ಮಾತ್ರೆ ತೆಗೆದುಕೊಂಡಾದರೂ ಪ್ರವಾಸ ಹೊರಡುತ್ತೇವೆ! ಯಾಕೆಂದರೆ ಮನುಷ್ಯ ಕೂಡ ಒಂದು ಪ್ರಾಣಿ. ಇಹದ ಪ್ರತೀ ಜೀವಿಯೂ ಸೃಷ್ಟಿಯ ನಿಯಮಕ್ಕೊಳಪಟ್ಟಿದೆ. 'ಹಸಿರು' ಕಣ್ಣಿಗೆ ಹಬ್ಬವನ್ನು ಕಟ್ಟುತ್ತದೆ ! ನಿತ್ಯ ಹಸಿರಿನ ವನಗಳಲ್ಲಿ ಕಾಡು ಪ್ರಾಣಿಗಳ-ಪಕ್ಷಿಗಳ ಆವಾಸದ ಮಧ್ಯೆ ಒಂದಷ್ಟು ಹೊತ್ತು ಕಳೆದರೆ ಮನಸ್ಸಿಗೆ ಪುನಃಶ್ಚೇತನ ! ಅವುಗಳ ನಿತ್ಯ ನೈಸರ್ಗಿಕ ಬದುಕು-ಹಾರುವ-ಕೂಗುವ-ಕುಣಿಯುವ ರೀತಿ ನಮಗೆ ಹರುಷವನ್ನುಂಟುಮಾಡುತ್ತದೆ. ಬಹಳ ದಿನಗಳ ಬಳಿಕ ತಮಗೆ ಇದರಬಗೆಗೊಂದು ಗೀತೆ ಕಟ್ಟಿಕೊಡುತ್ತಿದ್ದೇನೆ. ನೀವಿದನ್ನ ಮನಸಾ ಅನುಭವಿಸಿ ಆನಂದಿಸಿದರೆ ನನ್ನ ಕೆಲಸ ಸಾರ್ಥಕ.



ಸೃಷ್ಟಿ - ಸುರಭೋಗ

ದಟ್ಟಕಾಡಿನಲೊಂದು ಪುಟ್ಟ ತೊರೆಯೆಡೆಯಲ್ಲಿ
ಮಟ್ಟಿಬಿದಿರನು ಬಳಸಿ ಗೂಡು ಕಟ್ಟಿಹೆನು
ಬೆಟ್ಟದಿಂದಿಳಿಯುತಾ ಬೆಳ್ಳಿ ನೊರೆಯನು ಚೆಲ್ಲಿ
ಹುಟ್ಟಿ ಹರಿಯುವ ನೀರಲೆನ್ನಮರೆತಿಹೆನು











ನವಿಲಿನಾ ನರ್ತನಕೆ ಕೋಗಿಲೆಯ ಗಾಯನವು

ಭುವಿಯ ನಂದನವಿದುವೆ ಎಂಥ ಸುರಭೋಗ
ಕವಿದ ಕಾರ್ಮೋಡಗಳ ಜಾತ್ರೆಯದು ಹೊರಟಾಗ
ಅವಧಿ ಮೀರಿದ ಕುಣಿತ ಇದು ರಾಜಭೋಗ !


ಶುಕ-ಪಿಕಗಳಾದಿ ಪಕ್ಷಿಗಳೆಲ್ಲ ಸಭೆ ಸೇರಿ
ಶಕುತಿ ಮೀರುತ ಹಾಡಿ ದಣಿಯುವಾ ವೇಳೆ
ಯುಕುತಿಯಿಂದಲ್ಲಲ್ಲಿ ಅಡಗುತ್ತ ನಾ ಕಳೆದೆ
ಭಕುತಿ ಮೂಡಿತು ಮನದಿ ಈ ಸೃಷ್ಟಿಮೇಲೆ












ಜಿಂಕೆ ಸಾರಂಗಗಳು ಕಡವೆ ಹಂದಿಗಳೆಲ್ಲ

ಮಂಕುಬಡಿದಾ ರೀತಿ ನಿಂತು ನೋಡಿಹವು
ಬಿಂಕದಾ ಕೆಂಭೂತ ಬಿನ್ನಾಣ ತೋರಿಸುತ
ಅಂಕದಾ ಪರದೆಯನು ಸರಿಸಿತೆರೆಯುತಿರೆ


ಚಿಟ್ಟೆಗಳು ಹಾರಾಡಿ ಬಣ್ಣದೋಕುಳಿಯಾಡಿ
ಮಟ್ಟಸದಿ ಸೃಜಿಸಿದವು ದೃಶ್ಯ ರೂಪಗಳ
ಒಟ್ಟಿನಲಿ ಹಾರಾಡಿ ಮಕರಂದ ಹೀರುತ್ತ
ಕಟ್ಟಿಹವು ಕಲಶಗಳ ಕುಶಲ ಜೇನುಗಳು


ರವಿಕಾಣದೀ ಜಾಗ ಅಹ ಎಂಥ ವೈಭೋಗ !
ಸವಿಯುತಿರೆ ಹೃನ್ಮನದ ಭಾವವದು ಕೆರಳಿ
ಕಿವಿಗಿಂಪು ಮನತಂಪು ಜುಳು ಜುಳು ನಿನಾದದಲಿ
ಕವಿ ಸೋತೆ ಶರಣು ಜನಕನ ಸೃಷ್ಟಿಯಲ್ಲಿ

Wednesday, February 17, 2010

' ವನಸುಮದೊಳೆನ್ನ ಜೀವನವು ವಿಕಸಿಸುವಂತೆ '

' ವನಸುಮದೊಳೆನ್ನ ಜೀವನವು ವಿಕಸಿಸುವಂತೆ ’

ಪದ್ಮಭೂಷಣ ದಿ| ಡಾ| ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಡಿ.ವಿ.ಗುಂಡಪ್ಪ , [Devanahalli Venkataramanaiah Gundappa Or Padmabhushan Dr. D V Gundappa) ಎಂದೆಲ್ಲ ಕರೆಸಿಕೊಳ್ಳುವ ನಮ್ಮ ಕನ್ನಡದ ಪ್ರಮುಖ ಕವಿ ’ಡೀವೀಜಿ’ ಎಂದೇ ಪ್ರಸಿದ್ಧರು. ಕವಿಯಾಗಿ, ತತ್ವನಿಷ್ಠರಾಗಿ, ತತ್ವಜ್ಞಾನಿಯಾಗಿ ಕನ್ನಡಕ್ಕೆ ಕಾವ್ಯ-ಸಾಹಿತ್ಯಕ್ಕೆ ಹೊಸ ಮುನ್ನುಡಿ ಬರೆದವರು.

ಬಾಲ್ಯ-ವಿದ್ಯಾಭ್ಯಾಸ

ಸ್ವಾತಂತ್ರ್ಯ ಪೂರ್ವ ೧೮೮೭ ರಲ್ಲಿ ಕೋಲಾರದ ಮುಳಬಾಗಿಲು ಎಂಬಲ್ಲಿ ತಮಿಳು ಮೂಲದ ಬ್ರಾಹ್ಮಣ ದಂಪತಿಗೆ ಮಗನಾಗಿ ಜನಿಸಿದ ಶ್ರೀಯುತರು ೧೮೯೮ ರಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿದರು. ಸ್ವಇಚ್ಛೆಯಿಂದ ಅವರು ಇಂಗ್ಲಿಷ್ ನಲ್ಲೂ ಪ್ರಾಥಮಿಕ ಹಂತದ ಓದನ್ನು ಮುಗಿಸಿದ DVG ಜಗದಮಿತ್ರ ಗಹನವಾಗಿ ತೆಗೆದು ಓದಿಕೊಂಡವರು.ಅವರು ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿ ಮಹಾರಾಜಾ ಹೈಸ್ಕೂಲ್ ನಲ್ಲಿ ಓಡತೊಡಗಿದರು. ಕಾರಣಾಂತರಗಳಿಂದ ಅವರು ಮೆಟ್ರಿಕ್ಯುಲೇಶನ್ ಪಾಸು ಮಾಡಲು ಸಾಧ್ಯವಾಗಲಿಲ್ಲ. ಇಲ್ಲಿಗೆ ಅವರ ವ್ಯವಸ್ಥಿತ ಕಲಿಕಾ ಪದ್ಧತಿಗೆ ಇತಿಶ್ರೀ ಹಾಡಿದರೂ ಅವರ ಜ್ಞಾನಾರ್ಜನೆ ಮಾತ್ರ ಮುಂದುವರಿದೇ ಇತ್ತು. ಅನೇಕ ವಿಷಯಗಳಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು; ಇದು ಅವರ ಶ್ರದ್ಧೆಯ ಓದಿನ ಫಲ ಎನ್ನಬಹುದು.

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ತಾನೇನು ಹುಲುಕಡ್ಡಿ ಎಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದಗುಡಿಯೂಳಿಗದಿ
ತಾಣನಿನಗಿಹುದಿಲ್ಲಿ | ಮಂಕುತಿಮ್ಮ

* ವೇದ, ವೇದಾಂತ, ಬ್ರಹ್ಮಸೂತ್ರ, ಧರ್ಮಸೂತ್ರಾದಿ ಮಹಾ ಮಹಾ ಉದ್ಗ್ರಂಥಗಳಲ್ಲಿ ಪಾಂಡಿತ್ಯ
* ಕನ್ನಡ , ಇಂಗ್ಲಿಷ್ ಮತ್ತು ಇತರೆ ಕೆಲವು ಭಾಷೆಗಳಲ್ಲಿ ಪಾಂಡಿತ್ಯ
* ಅಂದಿನ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಪಾಂಡಿತ್ಯ
* ರಾಮಾಯಣ, ಮಹಾಭಾರತಗಳಲ್ಲಿ ಆಳ -ಅಗಾಧ ಜ್ಞಾನ
* ಅಂದಿನ ಕಾಲದಲ್ಲಿ ಏಷ್ಯದಲ್ಲೇ ಮೊದಲನೇ ದೊಡ್ಡ ಅಣೆಕಟ್ಟೆಂಬ ಹೆಗ್ಗಳಿಕೆಗೆ ಪಾತ್ರವಾದ KRS ಅಥವಾ ಕೃಷ್ಣ ರಾಜ ಸಾಗರ ಇದರ ನಿರ್ಮಾಣ ಕಾರ್ಯ ನಡೆಯುವ ಸಮಯ ತಂತ್ರಜ್ಞಾನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ಸಹಾಯಕರಾಗಿದ್ದರು DVG
* ಮಹಾತ್ಮ ಗಾಂಧೀ ಮತ್ತು ಲೋಕಮಾನ್ಯ ತಿಲಕರ ಸಹಯೋಗದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲೂ ಶ್ರೀಯುತರು ಇದ್ದರು.
* ಶೇಕ್ ಸ್ಪೀಯರ್ ನ ಕೃತಿಗಳು ಮತ್ತು ಗ್ರೀಕ್ ನ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದ ಖ್ಯಾತಿ ಇವರದ್ದು.
* ಉಮರ್ ಖಯ್ಯಾಂ ಎಂಬ ಉರ್ದು ಮೂಲದ ಕವಿಯ ಕೃತಿಯನ್ನು ಕನಡಕ್ಕೆ ಭಾಷಾಂತರಿಸಿ ’ಉಮರನ ಒಸಗೆ’ ಎಂದು ಹೆಸರಿಸಿದರು.

ಈ ಹಂತದಲ್ಲಿ ಅವರ ಅನೇಕ ಕೃತಿಗಳು ಕಾಲೇಜು ಪದವಿ ವ್ಯಾಸಂಗದವರಿಗೆ ಪಠ್ಯದಲ್ಲಿ ಪಾಠವಾಗಿ ಬಳಸಲ್ಪಟ್ಟಿದ್ದವು ಅಲ್ಲದೇ ಕೆಲವು ಕೃತಿಗಳು ತತ್ವಜ್ಞಾನ ಓದುವ ವಿದ್ಯಾರ್ಥಿಗಳಿಗೆ ’ವಿಷಯವಸ್ತು’ [ thesis ].ವಾಗಿ ಬಳಕೆಗೊಂಡವು.

ಶ್ರೀಯುತರು ಬರೆದ ’ ಮಂಕುತಿಮ್ಮನ ಕಗ್ಗ ’ ಕನಡದ ಭಗವದ್ಗೀತೆ ಎಂಬ ಹೆಸರನ್ನು ಪಡೆದು ಪ್ರಸಿಧ್ಧವಾಯಿತು. ಒಂದೊಮ್ಮೆ ಇದನ್ನು ಇಂಗ್ಲಿಷ್ ನಲ್ಲಿ ಬರೆದಿದ್ದರೆ ಇದು ನೋಬೆಲ್ ಪ್ರಶಸ್ತಿಗೆ ಅರ್ಹತೆ ಪಡೆಯುತ್ತಿತ್ತು. ಇದರ ಅತೀ ವಿಶಿಷ್ಟ ಲಕ್ಷಣವೆಂದರೆ ಸಮಾಜದ ಯಾವುದೇ ವ್ಯಕ್ತಿ ಜಾತಿ,ಮತ,ಕುಲ ಭೇದವಿಲ್ಲದೇ ಈ ನಾಲ್ಕು ಸಾಲುಗಳ ಪದ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರ ಅರ್ಥವನ್ನೂ, ತತ್ವವನ್ನೂ ಪಡೆಯಬಹುದಿತ್ತು. ಸಮಾಜದ ಎಲ್ಲಾ ವರ್ಗಗಳಿಗೆ ಹೊಂದಾಣಿಕೆಯಾಗಿರುವ ಏಕೈಕ ಗ್ರಂಥ ಇದಾಗಿದೆ!

1. ಮಂಕುತಿಮ್ಮನ ಕಗ್ಗ
2. ಮರುಳ ಮುನಿಯನ ಕಗ್ಗ
3. ಅಂತಃಪುರ ಗೀತೆಗಳು
4. ಬಾಳಿಗೊಂದು ನಂಬಿಕೆ
5. ಸಂಸ್ಕೃತಿ
6. ಪುರುಷಸೂಕ್ತ
7. ದೇವರು
8. ರುಥ, ಸತ್ಯ ಮತ್ತು ಧರ್ಮ
9. ಈಶಾವಾಸ್ಯ ಉಪನಿಷತ್
10. ಸಾಹಿತ್ಯ ಶಕ್ತಿ
11. ಹಲವು ಮಹನೀಯರು
12. ಮೈಸೂರಿನ ದಿವಾನರು
13. ಕಲೋಪಾಸಕರು
14. ಉಮರನ ಒಸಗೆ

ಇವೆಲ್ಲ ಶ್ರೀಯುತರ ಪ್ರಮುಖ ಕೃತಿಗಳು.
೫೦೦ ಪುಟಗಳುಳ್ಳ ೧೧ ಸಂಪುಟದ ’ಜೀವನಧರ್ಮಯೋಗ ’ವೆಂಬ ಮಾಲಿಕೆ ಜನಸಾಮಾನ್ಯರ ನಿತ್ಯ ಜೀವನ ದರ್ಪಣವಾಗಿದ್ದು ಅದರಲ್ಲಿ DVG ಯವರ ಅನೇಕ ಸಮಕಾಲೀನ ಸಾಹಿತಿಗಳ ಪ್ರತಿಕ್ರಿಯೆಗಳೂ ಅಡಕವಾಗಿವೆ. ಇದನ್ನು ಡಾ|ಹಾ.ಮಾ.ನಾಯಕರು ತಮ್ಮ ಸಂಪಾದಕತ್ವದಲ್ಲಿ ೧೯೮೫ರಲ್ಲಿ ಪುಸ್ತಕಗಳರೂಪದಲ್ಲಿ ಪ್ರಕಟಿಸಿದರು.


ಕೆಲವು ಸಾಹಸಗಳು

ಅಗ್ಗಿನ ಕಾಲದಲ್ಲಿ ಶ್ರೀಯುತರು ಕನ್ನಡದಲ್ಲಿ ’ಭಾರತ’ ಮತ್ತು ’ಕರ್ನಾಟಕ’ ಎಂಬ ಕನ್ನಡ ಪತ್ರಿಕೆಗಳನ್ನು ನಡೆಸುತ್ತಿದ್ದರು! ಶ್ರೀಯುತರು ೧೯೪೫ ರಲ್ಲಿ, ಬಸವನ ಗುಡಿ ರಸ್ತೆಯಲ್ಲಿ ’ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್’ ನ್ನು ಸ್ಥಾಪಿಸಿದರು. ಆಕಾಲಕ್ಕೆ ಸ್ವಂತ ಕೃತಿಗಳಲ್ಲಿ ಅನೇಕವನ್ನು ಮುದ್ರಿಸಿದ ಇವರ ಮುದ್ರಿತ ಪುಟಗಳ ಸಂಖ್ಯೆ ಸುಮಾರು ೧೦,೦೦೦ ಮೀರಿತ್ತು.

ಶ್ರೀಯುತರು ಎಂದೂ ಪ್ರಚಾರವನ್ನು ಬಯಸಿರಲಿಲ್ಲ. ಅವರ ’ವನಸುಮದೊಳೆನ್ನ ಜೀವನವು ವಿಕಸಿಸುವಂತೆ’ ಹಾಡು ಅನೇಕರ ಗಮನಸೆಳೆಯಿತು. ಎಲೆಮರೆಯ ಕಾಯಿಯಂತೆ, ಅಡಗಿ ಪರಿಮಳ ಬೀರುವ ಹೂವಿನಂತೆ ಇರಬೇಕೆಂಬ ಅವರ ಇಂಗಿತ ಅವರ ನಿಸ್ಪೃಹ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇದನ್ನು ಕರ್ನಾಟಕ ಸಂಗೀತ ವಿದುಷಿ ಡಾ| ನಾಗವಲ್ಲಿ ನಾಗರಾಜ್ ಅವರ ಕಂಠ ಸಿರಿಯಲ್ಲಿ ತಾವು ಕೇಳಬಹುದಾಗಿದೆ. ಅವರಿಗೆ ಧನ್ಯವಾದಗಳು

[here is the link below, please copy & paste it in address bar of the browser, to enjoy the song
http://www.youtube.com/watch?v=hEE8XzDyibs ]


ಪ್ರಶಸ್ತಿ-ಪುರಸ್ಕಾರಗಳು













ಮೈಸೂರು
ಯುನಿವರ್ಸಿಟಿ ಶ್ರೀಯುತರ ಧೀಮಂತ ಕಾರ್ಯಗಳನ್ನು ಗಮನಿಸಿ ಗೌರವ ಡಾಕ್ಟರೇಟ್ ನೀಡಿ ತನ್ನ ಗೌರವ ಹೆಚ್ಚಿಸಿಕೊಂಡಿತು. ಇವರ ಕೃತಿ ಶ್ರೇಣಿಗಳಲ್ಲಿ ಒಂದಾದ ’ಜೀವನಧರ್ಮಯೋಗ ’(yoga of everyday life) ಕೇಂದ್ರ ಸಾಹಿತಿ ಅಕಾಡೆಮಿಯ ಪುರಸ್ಕಾರ ಪಡೆಯಿತು. ೧೯೭೪ ರಲ್ಲಿ ಭಾರತ ಸರಕಾರ ಡಾ | ಡೀವೀಜಿ ಯವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ೧೯೭೦ರಲ್ಲಿ ಕರ್ನಾಟಕ ಸರಕಾರದ ಆಗಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ, ಕನ್ನಡದ ಸೇವೆಗಾಗಿ ಹಾಗೂ ಸಾಧನೆಗಾಗಿ ಡಾ|ಡೀವೀಜಿಯವರನ್ನು ೯೦,೦೦೦ ರೂಪಾಯಿಗಳ ಗೌರವಧನ ಸಮರ್ಪಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಯುತರನ್ನು ಗೌರವಿಸಿತು; ಆ ಸಂಪೂರ್ಣ ಮೊತ್ತವನ್ನು ಶ್ರೀಯುತರು ಬಸವನ ಗುಡಿ ರಸ್ತೆಯಲ್ಲಿರುವ’ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್’ ಗೆ ದಾನವಾಗಿ ಕೊಟ್ಟು ಅದನ್ನು ಸ್ಥಾಪಿಸಿದರು. ಶ್ರೀಯುತರು ಮಡಿಕೇರಿಯಲ್ಲಿ ನಡೆದ ೧೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೮೮ ರಲ್ಲಿ ಭಾರತೀಯ ಅಂಚೆ ಅವರ ನೆನಪಲ್ಲಿ ಒಂದು ಅಂಚೆ ಚೀಟಿಯನ್ನು ಹೊರತಂತು. ೨೦೦೨-೦೩ ರಲ್ಲಿ DVG ಯವರ ಸ್ಮರಣಾರ್ಥ ಗಣಪತಿ ದೇವಸ್ಥಾನದ ಹಿಂಬಾಗ ’ಬ್ಯೂಗಲ್ ರಾಕ್ ಪಾರ್ಕ್’ ನಲ್ಲಿ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ವಿಪರ್ಯಾಸ

ಎಲ್ಲಿ ಡೀವೀಜಿ ದಶಕಗಳ ಕಾಲ ವಾಸವಾಗಿದ್ದು ಕನ್ನಡಕ್ಕೆ ಮಹಾನ್ ಕೃತಿಗಳನ್ನು ಬರೆದರೋ ಅಲ್ಲಿ ಇಂದು ಯಾವುದೇ ಸ್ಮಾರಕ ಉಳಿದಿಲ್ಲ, ಬದಲಾಗಿ ಕವಿಯ ಬಡತನವೋ ಎಂಬಂತೆ ಆ ಹಳೆಯ ಮನೆಯನ್ನು ಯಾರೋ ಕೊಂಡು ಇನ್ಯಾರಿಗೋ ಮಾರಾಟಮಾಡಿ ಈಗಲ್ಲಿ ಕಮರ್ಷಿಯಲ್ ಶಾಪಿಂಗ್ ಕಾಂಪ್ಲೆಕ್ಸ್ ಒಂದು ನಡೆಯುತ್ತಿದೆ, ಇದು ನಮ್ಮ ರಾಜಕೀಯದ ದೊಂಬರಾಟ ಕವಿಗೆ ಕೊಟ್ಟ ಅತೆದೊಡ್ಡ ’memorable memento' ಅನ್ನೋಣವೇ ? ಕೊನೇಪಕ್ಷ ಅವರ ಮನೆಯಿದ್ದ ಆ ರಸ್ತೆಯನ್ನಾದರೂ 'ಡಿ.ವಿ.ಜಿ.ರಸ್ತೆ' ಅಂತ ನಾಮಕರಣಮಾಡಿದ್ದಾರಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕಾಗಿದೆ !


ಕುಟುಂಬ-ಸ್ನೇಹಿತರು

ಒಬ್ಬನೇ ಮಗ ದಿ| ಬಿ.ಜಿ.ಎಲ್ ಸ್ವಾಮೀ [ಮದ್ರಾಸ್ ಯುನಿವರ್ಸಿಟಿಯಲ್ಲಿ ಬಾಟನಿ ಪ್ರೊಫೆಸ್ಸರ್ ಆಗಿದ್ದರು]ಮತ್ತು ಇಬ್ಬರು ಪುತ್ರಿಯರನ್ನು ಹೊಂದಿದ್ದ ಡೀವೀಜಿ ಇದ್ದುದರಲ್ಲೇ ತೃಪ್ತ ಜೀವನ ನಡೆಸಿದವರು. ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ‌ಇಸ್ಮಾಯಲ್,ದಿ|ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್, ಜಿ. ಎ. ನಟೇಸನ್ ಮುಂತಾದ ಕೆಲವು ಸ್ನೇಹಿತರ ಬಳಗವನ್ನು ಹೊಂದಿದ್ದರು. ಗಾಂಧೀ ಬಜಾರಿನ ವಿದ್ಯಾರ್ಥಿಭವನದಲ್ಲಿ ಎಷ್ಟೋ ಸಮಯ ಸಮಕಾಲೀನ ಕವಿ-ಸಾಹಿತಿಗಳೊಂದಿಗೆ ಕಾಪಿ ಕುಡಿಯುತ್ತ ಹರಟುವ ಮೃದು-ಮಧುರ ಭಾವದ ಸರಳ ಸಜ್ಜನ ಬಹಳ ತಮಾಷೆಯ ವ್ಯಕ್ತಿಯಾಗಿದ್ದರು ಕೂಡ ! ತಮ್ಮ ಅನುಭವಜನ್ಯ ಪಾಠಗಳೇ ’ಮಂಕುತಿಮ್ಮನ ಕಗ್ಗ’ ಮತ್ತು ’ಜೀವನಧರ್ಮ ಯೋಗ’ ಗಳೆಂಬ ಪುಸ್ತಕಗಳಾಗಿ ಹೊರಬಂದವೆಂಬುದು ಅನೇಕರು ಅಭಿಪ್ರಾಯ. ೧೯೭೫ ಅಕ್ಟೋಬರ್ ೭ ರಂದು ತಮ್ಮ ಇಹ ಜೀವನ ಯಾತ್ರೆ ಪೂರೈಸಿದರು; ಇತಿಹಾಸ ಸೇರಿದರು, ಅಮರರಾದರು, ಪೂಜ್ಯರಾದರು.ಅವರು ಕೊಟ್ಟ ಕಗ್ಗದ ಅತಿ ಜನಪ್ರಿಯ ಸಾಲುಗಳ ಮುಖಾಂತರ ಅವರನ್ನೊಮ್ಮೆ ಸ್ಮರಿಸೋಣ-

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು | ಮಂಕುತಿಮ್ಮ

ನುಡಿನಮನ
ಡೀವೀಜಿಯಂತಹ ವ್ಯಕ್ತಿಗಳ ಬಗೆಗೆ ಹೇಳಿಮುಗಿಯಿತು ಎನ್ನುವ ಮಾತು ಬರುವುದೇ ಇಲ್ಲ. ಪ್ರತಿಯೊಂದೂ analytical. ಆದರೂ ಕಾಲದ ಪರಿಮಿತಿಯಿಂದ ಇನ್ನೂ ಜಾಸ್ತಿ ಬರೆಯಲಾಗದಿದ್ದುದಕ್ಕೆ ತಮ್ಮಲ್ಲಿ ಕ್ಷಮೆಯಾಚಿಸುತ್ತ , ಕೃತಿಯಿಂದ ಕರ್ಮಯೋಗಿಯಾಗಿ ಹಲವರಿಗೆ ದಾರಿ ದೀವಿಗೆಯಾದ ಗುರು ಡೀವೀಜಿಯವರಿಗೆ ಜಗದ ಮಿತ್ರ ಈ ರೀತಿಯಲ್ಲಿ ಸದಾ ನುಡಿನಮನ ಸಲ್ಲಿಸುತ್ತಾನೆ -

ಗೀತೆಯನು ಬೋಧಿಸಿದ ಕನ್ನಡದಿ ಗುರುತಾನು
ಪಾತಿಮಾಡುತ ನೆಲದಿ ಸರಳತನದಲ್ಲಿ
ವೇತನದ ಚಿಂತೆಯದು ಕಾಡಲಿಲ್ಲಾತನನು
ಆತುರದಿ ನೀ ಸ್ಮರಿಸೋ | ಜಗದಮಿತ್ರ


Tuesday, February 16, 2010

ಅನುಲೋಮ

ಕೊರಗು, ಅಹಂಕಾರ, ದುಃಖ-ದುಮ್ಮಾನ, ನೋವು-ನಲಿವು,ಬಡತನ-ಸಿರಿತನ ಏನೇ ಇರಲಿ ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ನಡೆಯಬೇಕೆಂಬ ನಮ್ಮ ಹಿರಿಯ ಕವಿ ದಿ| ಶ್ರೀ ಡಿ.ವಿ.ಜಿ.ಯವರನ್ನು ಮತ್ತೆ ನೆನೆಪಿಸಿಕೊಳ್ಳುತ್ತ ಅವರ ಕಗ್ಗದ ಅನುಭಾವವನ್ನು ಅನುಸರಿಸಿ ಮತ್ತೆ ಚುಟುಕಗಳನ್ನು ಬರೆದಿದ್ದೇನೆ, ಕೆಲವರಿಗೆ ಇಂಥವೆಲ್ಲ ಅರ್ಥವಾಗದ ಕಗ್ಗಂಟು! ಆದರೂ ಡಿ.ವಿ.ಜಿ.ಯವರಷ್ಟು ಕ್ಲಿಷ್ಟ ಶಬ್ಧಗಳನ್ನು ಬಳಸದಿರಲು ಪ್ರಯತ್ನಿಸಿದ್ದೇನೆ. ನೆಗಡಿನೂ ಇದೆ ಕಮ್ಮಿ ಆಗ್ಬೇಕು - ಐಸ್ ಕ್ರೀಮೂ ಬೇಕು ಅಂದರೆ ತುಂಬಾ ಕಷ್ಟ, ಒಂದನ್ನು ಪಡೆಯುವಾಗ ಇನ್ನೊಂದರ ತ್ಯಾಗ ಅನಿವಾರ್ಯ! ಇಲ್ಲಿ ಅವರ ಕಗ್ಗದ ರೂಪುರೇಷೆಯ ರೀತಿಯಲ್ಲಿ ಕಾವ್ಯ ಮುಂದುವರಿದಿದೆ. ಆದರೆ ತಕ್ಕಮಟ್ಟಿಗೆ ಸರಳಶಬ್ಧಗಳನ್ನು ಉಪಯೋಗಿಸಿದ್ದೇನೆ,ಇನ್ನೂ ಸರಳ ಮಾಡಹೊರಟರೆ ಅದು ಅರ್ಥಹೀನವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸರಳೀಕರಿಸಿದ್ದೇನೆ. ಹೆಸರೊಂದಿದ್ದರೆ ಚೆನ್ನ ಅಲ್ಲವೇ ? ಅದಕ್ಕೇ ಈ ಚುಟುಕಗಳ ಮಾಲೆಯನ್ನು

'ಅನುಲೋಮ'

ಎಂದು ಕರೆದಿದ್ದೇನೆ. ಅನುಕೂಲದ ಸಮಯನೋಡಿ ಒಮ್ಮೆ ಓದಿಬಿಡಿ ಆಗದೇ?


'ಅನುಲೋಮ'
[ಚುಟುಕಗಳು]

ನೋವಿನಲಿ ಯಾರಿಹರು ಬರಲುಂಟೆ ನಿನ್ನಜನ
ನಲಿವಿನಲಿ ಕಂಡ ಕಂಡವರೆಲ್ಲ ಸಖರು
ಒಲವಿನಲಿ ಗೆಲುವೆಂಬ ತತ್ವ ನೀನನುಸರಿಸು
ಹಲವ ಹಂಬಲಿಸದಿರು | ಜಗದಮಿತ್ರ

ತನ್ನ ತಾನರಿಯುವುದು ಘನ್ನಮಹಿಮರ ಮಹತಿ
ತನ್ನೊಳಗೆತಾನಲ್ಲವೆಂಬ ಅನುಭೂತಿ
ಕನ್ನತಾಕದ ಪತ್ತು ಜನುಮಜನುಮಕು ಸಾಕು
ಬಿನ್ನಾಣವಿರೆ ಬರದು | ಜಗದಮಿತ್ರ

ಎಲುವಿರದ ನಾಲಿಗೆಯ ಹಲವು ಥರ ತಿರುಗಿಸುತ
ಹುಲುಮಾನವರ ಮಧ್ಯೆ ಹಲುಬುವುದು ಹಿತವೇ?
ಗೆಲುವಿನೋಳ್ ಸೋತದಿನದಾತಂಕ ನೆನೆಯುತ್ತ
ಬಲವುಬ್ರಹ್ಮನ ತೇಜ’ | ಜಗದಮಿತ್ರ

ಆರು ಒಂಬತ್ತೆಂಬ ಅಂಕೆಗಳ ತಿರುವಿದರೆ
ತೋರಿಬರುವುದು ನಿನಗೆ ವಿಕಸನದ ದಾರಿ
ಹಾರಿ ನೂರೆಂಟು ತನದೆಂದು ಸಾರುವ ಮುನ್ನ
ಮಾರಜನಕನ ನೆನೆಯೊ | ಜಗದಮಿತ್ರ

ಗಳಿಗೆಗೊಂದಾವರ್ತಿ ಬಳಗವೆಲ್ಲವ ಕರೆದು
ಸಳನ ಪೌರುಷ ಮೆರೆಯೆ ಹಂಬಲಿಸಬೇಡ
ಒಳಗಿರುವ ಸಿರಿತಾನು ಹಳವರಿದು ಹೊರಟಾಗ
ಗಳಗಳನೆ ಅಳುವೆ ನೀ | ಜಗದಮಿತ್ರ

ವಿದ್ಯೆಯಲಿ ಸೋತಿಹರೆ ಜಗವಿಹುದು ವಿಸ್ತರದಿ
ಗೆದ್ದೇಗೆಲುವೆನು ಎಂಬ ಬದ್ಧಕಟಿಯಿರಲಿ
ಸದ್ದುಮಾಡದೆ ಓದು ಕಾರ್ಯತತ್ಪರನಾಗು
ಎದ್ದು ಕುಣಿಯುವೆ ನೀನು| ಜಗದಮಿತ್ರ

ತಂತ್ರಜ್ಞಾನದಿ ಮತ್ತು ವೈದ್ಯರಂಗದಿ ಮಾತ್ರ
ಯಾಂತ್ರಿಕದ ಬದುಕು ಸ್ಥಿರವೆನಲು ಬೇಡ
ಮಂತ್ರಪಠಿಸುವರೆಲ್ಲ ಕಟ್ಟಿಹರು ಬಹುಮಹಡಿ
ತಂತ್ರದಿಂ ಪರದೊಳಗೆ ! ಜಗದಮಿತ್ರ

Monday, February 15, 2010

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೨

[ಚಿತ್ರಕೃಪೆ : ಅಂತರ್ಜಾಲ ]

ಹಿಂದೂಸ್ಥಾನವು ಎಂದೂ ಮರೆಯದ

ಭಾರತ ರತ್ನವು ನೀನಾಗು-ಭಾಗ ೨



ಹಿಂದಿನವಾರ ವ್ಯಕ್ತಿತ್ವ ವಿಕಸನದ ಕೆಲವು ಟೆಸ್ಟ್ ಗಳ ಬಗೆಗೆ ತಿಳಿದುಕೊಂಡಿರಿ. ಈ ವಾರ ....

ವಿದ್ಯೆ-ಸಂಸ್ಕೃತಿ-ಸಂಸ್ಕಾರಗಳ ಕುರಿತು


ವಿದ್ಯೆ

ವ್ಯಕ್ತಿ ಯಾವುದಕ್ಕೆ ಸಂಬಂಧಿಸಿದ ವಿದ್ಯೆಯನ್ನು ಕಲಿತಿರುತ್ತಾನೋ ಅದನ್ನವಲಂಬಿಸಿ ವೃತ್ತಿಯನ್ನು ಆಯ್ದುಕೊಳ್ಳುವುದು ಸೂಕ್ತ. ಇದಕ್ಕೆ ಕೆಲವು ಅಪವಾದಗಳಿವೆ. ಡಿಗ್ರಿಯಿಂದ ಮೆಕಾನಿಕಲ್ ಎಂಜಿನೀಯರ್ ಆಗಿರುವ ವ್ಯಕ್ತಿ ಇಂದು ಸಾಫ್ಟ್ ವೇರ್ ಎಂಜಿನೀಯರ್ ಆಗಿ ಕೆಲಸಮಾಡುತ್ತಿರುವುದು. ಇದು ಸಾಧ್ಯವಲ್ಲ ಅಂತ ಅಲ್ಲ. ಡಿಗ್ರಿ ಎಂಬುದು ಒಂದು ತಳಹದಿ, ಅದರ ಮೇಲೆ ಯವುದೇ ವೃತ್ತಿಗೆ ಸಂಬಂಧಿಸಿದ ಹೆಚ್ಚಿನ ಉದ್ಯೋಗ ಸಂತುಲಿತ ತರಬೇತಿ [ job oriented course ]ಯನ್ನು ಪಡೆದುಕೊಂಡರೆ ಅವರು ಬೇರೆ ಬೇರೆ ರಂಗಕ್ಕೂ ಧಾವಿಸಬಹುದು.ಯಾವ ರಂಗದಲ್ಲಿ ತನಗೆ ಆಸಕ್ತಿ ಇದೆ ಎಂಬುದನ್ನು ವ್ಯಕ್ತಿಯ ಮನಸ್ಸು ಅಥವಾ ಅಂತರಂಗ ವ್ಯಕ್ತಿಗೆ ಹೇಳುತ್ತಿರುತ್ತದೆ.

ಉದಾಹರಣೆಗೆ ಕೆಲವರಿಗೆ ಗಣಿತ ಪುಸ್ತಕ ತೆರೆದರೆ ನಿದ್ದೆಬರುತ್ತದೆ, ಜೀವಶಾಸ್ತ್ರ ತುಂಬಾ ಖುಷಿಕೊಡುತ್ತದೆ, ಇನ್ನು ಕೆಲವರಿಗೆ ವಿಜ್ಞಾನವೆಂದರೆ ಮಾರುದೂರ-ಸಾಮಾಜಿಕ ವಿಜ್ಞಾನ ಪಾರವಾಗಿಲ್ಲ, ಕೆಲವರಿಗೆ ಉಳಿ-ಸುತ್ತಿಗೆ ಕೊಟ್ಟರೆ ಒಳ್ಳೇ ಕೆಲಸಮಾಡುತ್ತಾರೆ-ಶಾಲೆಗೆ ಕಳಿಸಿದರೆ ಅಲ್ಲಿ ನಿದ್ದೆಮಾಡಲು ಪ್ರಯತ್ನಿಸುತ್ತಾರೆ. ಕೆಲವರಿಗೆ ಆಟ ಅದರಲ್ಲೂ ಕ್ರಿಕೆಟ್ ತುಂಬಾ ಇಷ್ಟ ಓದುವುದು ಬೇಡ.ಇವೆಲ್ಲ ವೈರುಧ್ಯಗಳ ನಡುವೆಯೂ ವ್ಯಕ್ತಿಗೆ ಬಲವಂತವಾಗಿಯಾದರೂ ಸಾಮಾನ್ಯ ಜ್ಞಾನ ಬರುವವರೆಗೆ ತಕ್ಕಮಟ್ಟದ ಕಲಿಕೆ [ Foundation Education ] ಕೊಡಲೇಬೇಕು, ಇಲ್ಲವೆಂದರೆ ಅವರು ಅನಕ್ಷರಸ್ಥರಾಗಿ ಉಳಿದುಬಿಡುತ್ತಾರೆ. ಸಾಮಾನ್ಯವಾಗಿ ವ್ಯಕ್ತಿಗೆ ಅತೀ ಮುಖ್ಯ ಘಟ್ಟವೆಂದರೆ ಪ್ರೌಢಶಾಲೆಯನ್ನು ಮುಗಿಸಿ ಕಾಲೇಜಿಗೆ ಸೇರುವ ಸಮಯ, ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ನುರಿತ ಹಿತೈಷಿಗಳಿಂದ ಆಗಬೇಕು. ವ್ಯಕ್ತಿಗೆ ಎಲ್ಲವನ್ನೂ ವಿಷಯಗಳನ್ನೂ ತೆರೆದಿಟ್ಟು, ಎಲ್ಲವುಗಳಬಗೆಗೆ ಸ್ಥೂಲವಾಗಿ ಸೂಕ್ತ ಮಾಹಿತಿ ಒದಗಿಸಬೇಕು. ಹತ್ತಾರುಬಾರಿ ವಿಚಾರಿಸಲು ವ್ಯಕ್ತಿಗೆ ಕೆಲದಿನಗಳ ಸಮಯವನ್ನು ಕೊಡಬೇಕು. ನಂತರ ಆ ವ್ಯಕ್ತಿಯಿಂದ ಬಂದ ಉತ್ತರವನ್ನು ಮಾರ್ಮಿಕವಾಗಿ ವಿಶ್ಲೇಷಿಸಬೇಕು. ಹೀಗೆ ಸಾಕಷ್ಟು ಸಾವಧಾನವಾಗಿ ಇಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದೇ ವಯಸ್ಸಿಗೆ ವ್ಯಕ್ತಿ ಹದಿವಯಸ್ಸಿನಲ್ಲಿರುವುದರಿಂದ ವ್ಯಕ್ತಿಗೆ ವಿರುದ್ಧಲಿಂಗೀ ವ್ಯಕ್ತಿಯಲ್ಲಿ ಆಕರ್ಷಣೆಯುಂಟಾಗುವುದು ಸಹಜ ಪ್ರಕ್ರಿಯೆ, ಆದರೆ ಅದನ್ನೇ ಹಿಂಬಾಲಿಸಿ,ಅದನ್ನೇ ಮುಖ್ಯವಿಷಯವನ್ನಾಗಿ ವ್ಯಕ್ತಿ ಪರಿಗಣಿಸದಂತೆ ತಕ್ಕ ವಿಲಂಬಿತ ಮಾರ್ಗದರ್ಶನ ಅಗತ್ಯ. ಈ ಹದಿವಯಸ್ಸಿನ ಕುರಿತಾದ ಸಮಸ್ಯೆಗಳನ್ನು ಇನ್ನೊಮ್ಮೆ ನೋಡೋಣ.


ಸಂಸ್ಕೃತಿ

ವ್ಯಕ್ತಿಯ ಹುಟ್ಟನ್ನು ಅವಲಂಬಿಸಿ ಅವನ ಸುತ್ತಲ ಜಗತ್ತಿನಲ್ಲಿ ಯಾವ ತೆರನಾದ ಆಚಾರ-ವಿಚಾರಗಳಿವೆಯೋ ಅದನ್ನು ವ್ಯಕ್ತಿ ಮೈಗೂಡಿಕೊಳ್ಳುತ್ತಾನೆ. ಉದಾಹರಣೆಗೆ ನಮ್ಮಲ್ಲಿ ನಾವು ಹಿಂದೂ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿ, ಅರೇಬಿಯನ್ ಸಂಸ್ಕೃತಿ ಅಂತೆಲ್ಲ ಹೇಳುತ್ತೇವೆ. ಇಲ್ಲಿ ನಮಗೆ ಕಾಣುವುದು ನಮ್ಮ ದೇಶ-ಭಾಷೆ, ಉಡುಪು, ಆಹಾರ-ವಿಹಾರ, ನಡವಳಿಕೆ ಇವುಗಳ ಉಪಸ್ಥಿತಿ ಅಥವಾ ಪ್ರಸ್ತುತಿ. ಮಡಿಪಂಚೆಯನ್ನುಟ್ಟು ಪಂಚಾಗ ಶ್ರವಣ ಮಾಡಬಹುದೇ ಹೊರತು ಯಾವುದೇ ಕಛೇರಿಯಲ್ಲಿ ಕೆಲಸಮಾಡುವುದು ಅನುಕೂಲಕರವಲ್ಲ. ಪ್ಯಾಂಟ್ ಹಾಕಿಕೊಂಡು ಪೂಜೆಮಾಡುವುದೂ ಸಮಂಜಸವಲ್ಲ. ಬಣ್ಣಬಣ್ಣದ ದಿರಿಸು ಶಾಲಾಮಕ್ಕಳಿಗೆ,ದಾಯಿಗಳಿಗೆ[ನರ್ಸ್ ಗಳು],ಸಮಾಜಸೇವಕರಿಗೆ ಯೋಗ್ಯವಲ್ಲ. ಕೊಳೆಯಾದ ಹಳೆ ಬಟ್ಟೆ ಮದುವೆ ಮುಂತಾದ ಸಮಾರಂಭಗಳಲ್ಲಿ ಧರಿಸಲು ಯೋಗ್ಯವಲ್ಲ. ಯಾರೋ ಹಾಡುತ್ತಿರುವಾಗ ಮುಂದೆ ಕುಳಿತು ಕಿಸಕ್ಕನೆ ನಗುವುದು ತರವಲ್ಲ. ಭಾಷಣದ ಮಧ್ಯೆ ಸಭಾಂಗಣದಲ್ಲಿ ಗುಜುಗುಜು ಮಾತನಾಡುವುದು, ಮದುವೆ ಮನೆಯಲ್ಲಿ ’ಈ ದೇಹದಿಂದ ದೂರವಾದೆ ಏಕೆ ಆತ್ಮನೇ’ ಎನ್ನುವ ಹಾಡು ಹಾಕುವುದು, ಗಲ್ಲಿಗಳಲ್ಲಿ ಗಣೇಶಾದಿ ವಿಗ್ರಹಗಳನ್ನು ಕೂರಿಸಿ ’ಹೂಂ ಅಂತೀಯಾ ಇಲ್ಲಾಂತೀಯಾ...’ ಹಾಡು ಹಾಕುವುದೂ ಸರಿಯಲ್ಲ. ಹೀಗೇ ನಮ್ಮ ಹಿಂದೆ ನಮ್ಮ ಪೂರ್ವಜರು ಬೆಳೆತೆಗೆದು ನಡೆತಂದ ಕೆಲವು ಆದರ್ಶಗಳಿವೆ---ಅವನ್ನೇ ಒಟ್ಟಾಗಿ ’ಸಂಸ್ಕೃತಿ’ ಎನ್ನುತ್ತೇವೆ. ಈ ಸಂಸ್ಕೃತಿ ಎನ್ನುವಲ್ಲಿ ಪ್ರಾದೇಶಿಕ ಭಿನ್ನತೆ ಇದ್ದರೂ ನಾವೇ ಹೇಳಿಕೊಂಡಂತೆ ನಮ್ಮದು ವಿವಿಧತೆಯಲ್ಲಿ ಏಕತೆ. ಅದಕ್ಕೇ ನಮ್ಮ ದೇಶದಲ್ಲಿ ಅನೇಕ ರಾಜ್ಯಗಳೆಂದು ವಿಂಗಡಿಸಿರುವುದು. ಸಂಸ್ಕೃತಿ ಹಳ್ಳಿಯಿಂದ ->ತಾಲೂಕಿಗೆ->ಜಿಲ್ಲೆಗೆ->ರಾಜ್ಯಕ್ಕೆ->ದೇಶಕ್ಕೆ ಹೀಗೆ ಬದಲಾಗುತ್ತಾ ಹೋಗುತ್ತದೆ. ಆದಾಗ್ಯೂ ದೇಶದ ಅತೀ ಸಾಮಾನ್ಯ ಪ್ರಜೆ ಅಥವಾ ಶ್ರೀಸಾಮಾನ್ಯನನ್ನು ಗಣನೆಗೆ ತೆಗೆದುಕೊಂಡು ಇದು ನಮ್ಮ ’ದೇಶದ ಸಂಸ್ಕೃತಿ’ ಎಂದು ಗುರುತಿಸಿದ್ದಾರೆ. ಹೀಗೆ ಗುರುತಿಸಲ್ಪಟ್ಟ ಸಂಸ್ಕೃತಿಯನ್ನು ಮಾನ್ಯಮಾಡುವುದು ಅಲ್ಲಲ್ಲಿಯ ಜನರ ಹಿತಾಸಕ್ತಿಗಳನ್ನು ಕಾಪಾಡಿದಂತೆಯೇ, ಇದನ್ನು ಮನದಂದು ವ್ಯಕ್ತಿ ತನ್ನ ರೂಢಮೂಲ ಕೊಳಕು ಸಂಸ್ಕೃತಿಯನ್ನು ಬಿಟ್ಟು ಸ್ಥಳೀಯ ಹಾಗೂ ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಎಲ್ಲರಿಗೂ ಒಳಿತು.


ಸಂಸ್ಕಾರ

’ಮನೆ
ಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು’ಎಂಬ ಮಾತು ಕೇಳಿದ್ದೀರಿ. ನಮ್ಮಲ್ಲಿ ಇನ್ನೊಂದು ಗಾದೆ ಇದೆ ’ತಾಯಿಯಂತೆ ಕರು ನಾಯಿಯಂತೆ ಬಾಲ’ ಎಂಬುದಾಗಿ. ಅರ್ಥ ತಾಯಿ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮೊದಲ ಗುರುವಾಗುತ್ತಾಳೆ. ಅವಳ ನಡೆ-ನುಡಿ, ಆಚಾರ-ವಿಚಾರಗಳು ಜೊತೆಗಿರುವ ಸಣ್ಣಮಗುವಿನ ಮನಸ್ಸಿನ ಮೇಲೆ ನೇರ ಪರಿಣಾಮಬೀರುತ್ತವೆ. ನೀವು ಪರೀಕ್ಷಿಸಿ ನೋಡಿ ಚಿಕ್ಕವಯಸ್ಸಿನ ಮಗು ತಾಯಿ ಮಾಡುವ ಅನೇಕ ಚಟುವಟಿಕೆಗಳನ್ನು ಬಹಳ ಗಮನಿಸುತ್ತದೆ,ಅನುಕರಿಸುತ್ತದೆ. ’ಮಗಾ ಇಲ್ಲಿ ಕೂರಬಾರದು, ಕಂಡಲ್ಲಿ ಉಗುಳಬಾರದು, ನಿನ್ನ ಬಟ್ಟೆ ನೀನೇ ಒಗೆದುಕೊಳ್ಳಬೇಕು, ಊಟದ ತಾಟಿನಲ್ಲಿ ಕೈತೊಳೆಯಬಾರದು, ದಿನಾಲೂ ಸ್ನಾನಮಾಡಬೇಕು, ದೇವರಿಗೆ ನಮಸ್ಕರಿಸಬೇಕು, ಹಿರಿಯರನ್ನು ಗೌರವಿಸಬೇಕು’ ಹೀಗೆ ತಾಯಿ ಹೇಳಿಕೊಟ್ಟರೆ ಅದನ್ನು ನಿಧಾನವಾಗಿ ಹಂತ ಹಂತವಾಗಿ ಮಗು ಅರಗಿಸಿಕೊಂಡು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ತಾಯಿ ಹೇಳುವ ನೀತಿಕಥೆಗಳು ಮಕ್ಕಳ ಮನಸ್ಸಿನಮೇಲೆ ಅಗಾಧಪರಿಣಾಮ ಬೀರುತ್ತವೆ. ಈ ವಿಷಯದಲ್ಲಿ ಶಿವಾಜಿಯ ಬಾಲ್ಯ, ತಿಲಕರ ಬಾಲ್ಯ, ಸ್ವಾಮಿ ವಿವೇಕಾನಂದರ ಬಾಲ್ಯ ತಮಗೆ ನೆನೆಪಿಗೆ ಬರಬಹುದು[ಓದಿದ್ದರೆ!] ಸಂಸ್ಕಾರದಲ್ಲಿ ಹಡೆದ ಸಂಸ್ಕಾರ ಮತ್ತು ಪಡೆದ ಸಂಸ್ಕಾರ ಎಂಬುದಾಗಿ ಗುರುತಿಸಬಹುದು. ಪಡೆದ ಸಂಸ್ಕಾರ ನಮ್ಮ ತಾಯಿಯಿಂದ ಬಂದ ಬಳುವಳಿ ಮತ್ತು ಹಡೆದ ಸಂಸ್ಕಾರ ಪೂರ್ವಜನ್ಮದ ಪುನರ್ಸ್ಮೃತಿಯಿಂದ ಬಂದದ್ದು. ಒಬ್ಬ ಅತೀ ಚಿಕ್ಕಹುಡುಗ ಅದ್ಬುತವಿದ್ಯೆಗಳಲ್ಲಿ ಪಾರಂಗತನೆಂದರೆ ಅದು ಅವನ ’ಪೂರ್ವದ ಮನ’ದ ಆಸ್ತಿ. ವ್ಯಕ್ತಿಯಲ್ಲಿ ಹುದುಗಿರುವ ಸುಪ್ತಶಕ್ತಿಯಾಗಿರುವ ಆತ್ಮ ಎಂಬುದು ಹೊಂದಿರುವ ಕೆಲವೇ ಲಕ್ಷಣಗಳಲ್ಲಿ ಮನಸ್ಸು ಎಂಬುದೂ ಕೂಡ ಸೇರಿಕೊಂಡಿದೆ. ಈ ಮನಸ್ಸಿನ ಒಳಮನಸ್ಸು ಎನ್ನುತ್ತೇವಲ್ಲ ಅದೇ ಸುಪ್ತಮನಸ್ಸು ಈ ಆತ್ಮದ ಅವಿಭಾಜ್ಯ ಅಂಗ ! ನಾವು ಮಾಡುವ ಎಲ್ಲ ಕೆಲಸಗಳನ್ನು ನೋಟ್ ಮಾಡಿಕೊಳ್ಳುವುದು ಯಾ ನಮೂದಿಸಿಕೊಳ್ಳುವುದು ಈ ಸುಪ್ತಮನಸ್ಸಿನ ಕೆಲಸ. ಇದರ ಬಗ್ಗೆ ಇನ್ನೊಮ್ಮೆ ವಿಸ್ತರಿಸಿ ಹೇಳುತ್ತೇನೆ. ಅದಕ್ಕೇ ನಮ್ಮ ಹಿರಿಯರು ನಮ್ಮ ಸುಪ್ತಮನಸ್ಸು ನಾವು ಮಾಡುವುದನ್ನು ನೆನಪಿಡಲಿ ಅಂತ ಆಗಾಗ ಭಗವನ್ನಾಮಸ್ಮರಣೆ ಮಾಡುತ್ತಿದ್ದರು, ಒಳಿತನ್ನು ಚಿಂತಿಸುತ್ತಿದ್ದರು, ಪರೋಪಕಾರಿಗಳಾಗಿದ್ದರು, ಕಷ್ಟಸಹಿಷ್ಣುಗಳಾಗಿದ್ದರು,ಸ್ವಾವಲಂಬಿಗಳಾಗಿದ್ದರು, ಸತ್ಯಸಂಧರಾಗಿದ್ದರು, ಭಕ್ತರಾಗಿದ್ದರು, ಭಾವುಕರಾಗಿದ್ದರು.

ಪಡೆದ ಸಂಸ್ಕಾರವನ್ನು ತಿದ್ದಬಹುದೇ ಹೊರತು ಹಡೆದ ಸಂಸ್ಕಾರವನ್ನು ತಿದ್ದಲು ಬರುವುದಿಲ್ಲ. ಉದಾಹರಣೆಗೆ : ಗಿಳಿಗಳು ಹಾರುತ್ತವೆ-ಮೊದಲಾಗಿ ಯಾರು ಕಲಿಸಿದರು ? ಹಡೆದ ಸಂಸ್ಕಾರ, ಸಾಕಿದ ಗಿಳಿಗಳು ಮಾತನ್ನು ಅನುಕರಿಸುತ್ತವೆ-ಪಡೆದ ಸಂಸ್ಕಾರ. ಈ ಪಡೆದ ಸಂಸ್ಕಾರದಲ್ಲಿ ಹಲವು ಬಗೆ. ಒಂದು ತಾಯಿ ಗಿಳಿಗೆ ಎರಡು ಮರಿಗಳು-ತಾಯಿಕಳೆದುಕೊಂದು ಬೇರೆಬೇರೆಯಾಗಿ ಒಂದು ಸನ್ಯಾಸಿಯಮನೆಗೂ ಇನ್ನೊಂದು ಕಟುಕನ ಮನೆಗೂ ಹೋಗಿ ಬೆಳೆಯುತ್ತವೆ ಈ ಕಥೆ ಸುಮಾರಾಗಿ ಎಲ್ಲರಿಗೂ ಗೊತ್ತಿದೆಯಲ್ಲವೇ ? ಅದನ್ನೇ ಪಡೆದ ಸಂಸ್ಕಾರವೆನ್ನುವುದು. ಬಂಗಾರವು ಮೂಲರೂಪದಲ್ಲಿ 'ಮಿಸುನಿಯಾಗಿರುತ್ತದೆ' ಮೆತ್ತಗಿರುತ್ತದೆ, ಅದನ್ನು ತಾಮ್ರ ಮುಂತಾದ ಲೋಹ ಬೆರೆಸಿ ಒಂದು ಹಂತಕ್ಕೆ ಬಂದಾಗ ಅದನ್ನು ನಾವು ಆಭರಣಕ್ಕೆ ಬಳಸುತ್ತೇವೆ.ಮಿಸುನಿ ಅದರ ಹಡೆದ[ಮೂಲ] ರೂಪ , ಆಭರಣಮಾಡಿ ಧರಿಸಿದ ಮೇಲೂ
ಅದರಲ್ಲಿರುವ ಬೇರೆ ಬೇರೆ ಲೋಹಗಳಿಂದ ಅದರ ಬಣ್ಣ ಸ್ವಲ್ಪ ಮಾಸುತ್ತದೆ , ಮತ್ತೆ ಅದಕ್ಕೆ ಪುಟ [ಪಾಲಿಶ್] ಕೊಟ್ಟು ಹೊಳೆಯುವಂತೆ ಮಾಡುತ್ತೇವೆ, ಹೀಗೇ ಪಡೆದ ಸಂಸ್ಕಾರ ಕಮ್ಮಿ ಇರುವಾಗ,ಹಳಸಿದಾಗ ಅದನ್ನು ತರಬೇತಿಯಿಂದ ಮತ್ತೆ ಪ್ರಜ್ವಲಿಸುವಂತೆ ಮಾಡಲು ಸಾಧ್ಯ!

ಹೀಗೆ ವ್ಯಕ್ತಿತ್ವ ವಿಕಸನದಲ್ಲಿ ವಿದ್ಯೆ-ಸಂಸ್ಕೃತಿ-ಸಂಸ್ಕಾರಗಳು ಪ್ರಮುಖಪಾತ್ರವಹಿಸುತ್ತವೆ ಅಥವಾ ಅವುಗಳೇ ವ್ಯಕ್ತಿಯ ವ್ಯಕ್ತಿತ್ವದ ಆಧಾರ ಸ್ತಂಭಗಳು!

[ಮುಂದಿನವಾರ ನೋಡೋಣ..................]

Sunday, February 14, 2010

ಚುಟುಕಗಳು

ಹಿರಿಯ ಕವಿ ದಿ|| ಶ್ರೀ ಡಿ.ವಿ.ಗುಂಡಪ್ಪನವರನ್ನು ನೆನೆಯುತ್ತ ಅವರ ಹಾದಿಯಲ್ಲಿ ಪ್ರಯತ್ನಿಸಿದ ಚುಟುಕಗಳು. ಶ್ರೀಯುತರ ಬಗೆಗೆ ತಾವು 'ಕವಿನೆನೆಪುಗಳು' ಮಾಲಿಕೆಯಲ್ಲಿ ಮುಂದೆ ಓದಲಿದ್ದೀರಿ.

ಚುಟುಕಗಳು

ಬದುಕುವ ಮೂರ್ಕಾಲ ಹಬ್ಬಿರಲಿ ಸ್ನೇಹದಲಿ
ಕೆದಕುತ್ತ ಕಳೆಯೋಣ ಎಲ್ಲ ಸಿಹಿನೆನಪು
ಅದುಬೇಡ ಇದುಬೇಡ ಎನ್ನುವುದದೇ ಬೇಡ
ಕದವ ತಟ್ಟುತ ತೆರೆಯೋ| ಜಗದಮಿತ್ರ


ರವಿಚಂದ್ರಬುಧ ಗುರುವು ರಾಹು ಕೇತುಗಳೆಲ್ಲ
ಭುವಿಯ ಕಬ್ಬದಿ ನಿನಗೆ ದಾರಿದೀಪಗಳು
ಕವಿವ ಕತ್ತಲೆಯ ಕಾರ್ಮೋಡಗಳ ಸರಿಸುತ್ತ
ಭವದ ಸಂಕಷ್ಟ ಮರೆ | ಜಗದಮಿತ್ರ


Saturday, February 13, 2010

ಪ್ರೀತಿ ಶಾಶ್ವತ

[ಚಿತ್ರ ಕೃಪೆ : ಅಂತರ್ಜಾಲ ]


ಪ್ರೀತಿ ಶಾಶ್ವತ

ನಾನು ಅವಳು ಕಂಡೆವು
ಕಣ್ಣಿನಲ್ಲೇ ಕೊಂಡೆವು
ನೆನಪಿನಲ್ಲೇ ಉಳಿದೆವು ಬಹಳಕಾಲವೂ

ಕಾಲ ಕೆಳೆದು ಹೋಯಿತು
ಶುಭ ಘಳಿಗೆಯು ಬಂದಿತು
ಮತ್ತೆ ಭೇಟಿಯಾದೆವೂ-ಆಗುತ್ತಿದ್ದೆವೂ

ಪಾರ್ಕಿನಲ್ಲಿ ಸುಮ್ಮನೇ
ತಬ್ಬಿಕೊಂಡು ಭಿಮ್ಮನೆ
ಪ್ರೀತಿಯಲ್ಲಿ ಕಳೆದೆವೂ ಬಹಳ ದಿನಗಳೂ

ಅಪ್ಪ ಕಣ್ಣು ಬಿಟ್ಟರು
ಅಮ್ಮ ಮುದುಡಿ ಅತ್ತರು
ಯಾರು ಜೀವ ತೆತ್ತರೂ ಬಿಡಿಸದಾ ಋಣ !

ಮಾವ ಬೀಸಿ ಅಸ್ತ್ರವ
ಅಗಲಿಸಲಿಕೆ ಶಸ್ತ್ರವ
ಏರಿ ಮೇಲೆ ಹಾರಲೂ ಬಗ್ಗದಾ ಕ್ಷಣ!

ಏನಿದಂತ ಪ್ರೀತಿಯು
ಇದಕೆ ಯಾವ ರೀತಿಯು
ಕೇಳಲಿಲ್ಲ ನಮ್ಮಯಾ ಮಧುರ ಮನಗಳು!

ಮಂಜಹನಿಯು ಮರಕತ
ಮುಂಜಾವಲಿ ನೆನೆಯುತ
ಗುಂಜಿಸಿದ ದಿನಗಳಾ ನೆನಪು ಶಾಶ್ವತ

ನಿಮ್ಮ ಜೊತೆಯಿಲಿದ್ದರೆ
ಮರೆವುದೆಲ್ಲ ತೊಂದರೆ
ಎಂದುಕೊಂಡು ಸವಿದೆವು ವರುಷವರುಷವೂ

ನಾವು ಈಗ ಇಬ್ಬರು
ನಮಗೆ ಕೀರ್ತಿಗೊಬ್ಬರು
ಬಂದಮೇಲೆ ಆಯಿತೂ ಪ್ರೀತಿ ಶಾಶ್ವತ

ಚಿಂದಿ ಆಯುವ ಬದುಕು

'ಸಾಮಾಜಿಕ ಕಳಕಳಿ' ಎಂಬುದು ನಮ್ಮೆಲ್ಲರ ಕರ್ತವ್ಯವೇ ಹೊರತು ಅದು ಹೊರೆಯಲ್ಲ. ನಮ್ಮ ಸುತ್ತ-ಮುತ್ತ ನಾವು ಓಡಾಡುವಾಗ ಪ್ರಕೃತಿಯ ಪಾಪದ ಕೂಸುಗಳಾದ ಚಿಂದಿ ಆಯುವ ಜನರನ್ನು ನೋಡುತ್ತೇವೆ. ಇತ್ತೀಚಿಗೆ ಅವರಿಗೆ ಕೆಲಸವೂ ಸಿಗದೇ ಬಹಳ ಕಾಲ ಉಪವಾಸದಲ್ಲೇ ಜೀವಿಸುತ್ತಾರೆ. ಕಂಡಲ್ಲೇ ಮಲಗುತ್ತ, ಡ್ರಗ್ ಗಳಿಗೆ ಆಡಿಕ್ಟ್ ಆಗಿ ಗತಿಯಿರದ ಚಿಕ್ಕ ಚಿಕ್ಕ ಹುಡುಗರೆಲ್ಲ ಸತ್ತವರ ರೀತಿಯಲ್ಲಿ ಬದುಕುತ್ತಾರೆ. ಅಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾರೆ, ಅಲ್ಲೇ ಮಲಗುತ್ತಾರೆ, ಎಲ್ಲಾ ಅಲ್ಲಲ್ಲೇ, ತಿಪ್ಪೆಗಳೇ ಪ್ರಧಾನ ಕಾರ್ಯಾಲಯವಾಗಿರುವ ಅವರಿಗೆ ಅದೇ ಇಷ್ಟ ಅಥವಾ ಅನಿವಾರ್ಯ! ಅಪ್ಪ ಯಾರೋ ಅಮ್ಮ ಯಾರೋ ಸರಿಯಾಗಿ ಅರಿತಿರದ ತಪ್ಪಿನ ಕಂದಮ್ಮಗಳಿವು! ಅವರದಲ್ಲದ ತಪ್ಪಿಗೆ ಅವರು ಪಡುವ ಪಾಡು ಒಂದು ರೀತಿಯಲ್ಲಿ ಹೃದಯವಿದ್ರಾವಕ. ಇವರಲ್ಲಿ ಯವುದೋ ಊರಿಂದ ಪಾಲಕರಮೇಲೆ ಸಿಟ್ಟುಗೊಂಡು ಬಂದವರಿರಬಹುದು, ರೈಲ್ವೆ, ಬಸ್ ಗಳಲ್ಲಿ ಪಾಲಕರನ್ನು ಮಿಸ್ ಮಾಡಿಕೊಂಡು ಬಂದು ಸೇರಿದ ಮಕ್ಕಳಿರಬಹುದು. ಆ ಚಿಕ್ಕ ಮಕ್ಕಳು ಯಾವುದಕ್ಕೋ ಕಿತ್ತಾಡಿಕೊಂಡು ಅಳುವುದನ್ನು ನೋಡಿದಾಗ, ಯಾರೂ ಕೇಳುವರಿಲ್ಲ,ಯಾರೂ ಮರುಗುವುದಿಲ್ಲ, ಯಾರೂ ಸಂತೈಸುವುದಿಲ್ಲ, ಸ್ನಾನ ಕಂಡಿಲ್ಲ, ತಲೆಗೆ ಎಣ್ಣೆ ಇಲ್ಲ-ಕೂದಲು ಬಾಚಿಲ್ಲ, ಯಾರೋ ಬಿಸಾಕಿದ ಹರಿದ ಬಟ್ಟೆ, ಒಂದು ಹರಕು ಪ್ಲಾಸ್ಟಿಕ್ ಚೀಲ ಇವಷ್ಟೇ ಇರುವುದು. ಅವರಬಗ್ಗೆ ಮನ ಮಮ್ಮಲ ಮರುಗುತ್ತದೆ. ದೈವವೆಂಬ ಶಕ್ತಿ ಇಂಥವರನ್ನೂ ಸೃಷ್ಟಿಸಬೇಕೆ ? ಅವರಿಗೆ ಬೇರೆ ಬದುಕು ಕೊಡಬಾರದಿತ್ತೇ ಎಂದೆನಿಸುತ್ತದೆ.




ಚಿಂದಿ ಆಯುವ ಬದುಕು

ಜೀವ ಸೃಷ್ಟಿಯಲಿ ಯಾವ ಗಳಿಗೇಲಿ ಬಂತೋ
ಕಾಣದಾಗಿದೆ ತುಸುವೇ ಹರುಷ ಹಣೆ ಬರಹ
ರಾಜ ಭೋಗವು ಬೇಡ ಕಾಡುವಾ ದಿನ ಬೇಡ
ಸಿಗಲಿ ಬದುಕದು ನಮಗೆ 'ಮಧ್ಯಮದ' ತರಹ

ಭೂರಮೆಯ ಪಾದದೊಳು ಹಲವುವಿಧ ಭಾಗದೊಳು
ನೋವು ಕಾವುಗಳಲ್ಲಿ ಬೇಯುವಾ ಬದುಕು
ಖಾರಮಯ ಕೆಂಗಣ್ಣ ಭಾರೀ ಗಾತ್ರದ ಹಿರಿಯ
ಸಾರಿ ಹತ್ತಿರ ಬಂದು ಬೈಯ್ಯುವುದು ಸಾಕು

ಬೆಳ ಬೆಳಗು ನಮನಮಗೆ ಹಗಲು ರಾತ್ರಿಯೇ ಇಲ್ಲ
ಒಳಗೊಳಗೇ ಹೊಗೆಯುತಿಹ ದೊಂಬಿ-ಜಗಳ
ಹಳೆಯದಾಗಿವೆ ಬಟ್ಟೆ ಹರಿದ ಮನಸಿನ ತೆರದಿ
ಖಳರು ಓಡಾಡುವರು ಸುಮ್ಮನೇ ಬಹಳ !

ಯಾರೋ ಇಟ್ಟರೆ ಊಟ ಇಲ್ಲದಿರೆ ಪರಿಪಾಟ
ಯಾರುಯಾರಿಗೆತಾನೆ ಬರುವರೆಷ್ಟು ದಿನ ?
ಊರು ಕೇರಿಯಲೆಲ್ಲ ಅಲೆದಲೆದು ಪೂರ್ತಿದಿನ
ಹೇರಿಕೊಂಡೆವು ಹೆಗಲ ಮೇಲೆ ಸಿಕ್ಕಿದನಾ

ಚಿಂದಿ ಆಯ್ವರು ಎಂಬ ನಮ್ಮೊಳಗೇ ಒಣ ಜಂಬ !
ಹಂದಿ-ನಾಯಿ ಕೂಡ ಸಹಬಾಳ್ವೆ ನಮದು
ಕುಂದು ಕೊರತೆಯ ಬಗೆಗೆ ಎಂದೂ ತಕರಾರಿಲ್ಲ
ಹೊಂದಿಕೊಂಡೀನಂಟು ತುಂಬಾ ಹಳೆಯದು

ಮುಂಬರುವ ದಿನಕಷ್ಟ ! ಪಾಲಿಕೆಯ ಸುತ್ತೋಲೆ
ತುಂಬಿಹೋಗುವರೆಲ್ಲಾ ಕಸದ ರಾಶಿಯನಾ
ಹುಂಬತನದಲಿ ಹೇಗೋ ಇಷ್ಟು ದಿನ ದೂಡಿದೆವು
ಸಂಬಳದ ಕೆಲಸವನು ಕೊಡುವರೇನಣ್ಣಾ?

Thursday, February 11, 2010

ಶಿವರಾತ್ರಿ ಪ್ರ-'ಯಾಣ'


ಶಿವರಾತ್ರಿ ಪ್ರ-'ಯಾಣ'

ಶಿವನ ಒಂದು ರೂಪವಾದ ಭೈರವೇಶ್ವರನ ತಾಣ-'ಯಾಣ' ತುಂಬಾ ಮನಮೋಹಕ ಪ್ರದೇಶ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಿಂದ ಸುಮಾರು ೩೬ ಕಿಲೋ ಮೀಟರ್ ದೂರದಲ್ಲಿದೆ. ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಕತಗಾಲ್ ಹತ್ತಿರದ ಆನೆಗುಂದಿ ಎಂಬಲ್ಲಿ ಇಳಿದುಕೊಂಡರೆ ಅಲ್ಲಿಂದ ಎಡಕ್ಕೆ ಸುಮಾರು ೧೬ ಕೀ.ಮೀ. ಹೋಗಬೇಕು. ಎರಡನೇ ಮಾರ್ಗ-ಶಿರಸಿಯಿಂದ ಮತ್ತಿಘಟ್ಟಕ್ಕೆ ಹೋಗುವ ದಾರಿಯಲ್ಲಿ ವಡ್ಡಿ ಕ್ರಾಸ್ ಎಂಬಲ್ಲಿ ಇಳಿದುಕೊಂಡರೆ ಸುಮಾರು ಕೀ.ಮೀ. ನಡೆಯಬೇಕು. ಸ್ವಂತದ ವಾಹನ ಇದ್ದರೆ ತುಂಬಾ ಅನುಕೂಲ, ನಡೆಯುವ ಪ್ರಮೇಯ ಇರುವುದಿಲ್ಲ, ಇದ್ದರೂ ಹೆಚ್ಚೆಂದರೆ ಕೀ.ಮೀ. ಅಷ್ಟೇ. ಉಳಿದುಕೊಳ್ಳಲು ಹತ್ತಿರದ ಪಟ್ಟಣಗಳೆಂದರೆ ಶಿರಸಿ ಅಥವಾ ಕುಮಟಾ ಮಾತ್ರ. ಎರಡೂ ಅಜಮಾಸ್ ೫೦ ಕೀ.ಮೀ. ದೂರ ಇವೆ. ಯಾಣದಲ್ಲಿ ಸದ್ಯಕ್ಕೆ ತಿಂಡಿ-ಊಟದ ವ್ಯವಸ್ಥೆ ಇರುವುದಿಲ್ಲ, ಪೂರ್ವ ತಯಾರಿ ಇಟ್ಟುಕೊಂಡೇ ಹೋದರೆ ಸೂಕ್ತ, ಇಲ್ಲವೆಂದರೆ ದಾರಿಯಲ್ಲಿ ಸಿಗುವ ಚಿಕ್ಕಪುಟ್ಟ ಅಂಗಡಿಗಳಿಂದ ಏನಾದರೂ ಕುರುಕಲು,ಬಿಸ್ಕತ್ ಪಡೆಯಬಹುದು ಅಷ್ಟೇ. ನೀರಿನ ತೊಂದರೆ ಇರುವುದಿಲ್ಲ, ನೈಸರ್ಗಿಕವಾಗಿ ಹರಿದು ಬರುವ ಮಿನರಲ್ ವಾಟರ್ ಲಭ್ಯ! ಇದೊಂದು ವಿಶಿಷ್ಟ ನೈಸರ್ಗಿಕ ಪ್ರವಾಸೀ ಸ್ಥಳ. ಕಾಡಿನ ಮಧ್ಯೆ ಯಾವ ಗೌಜು-ಗದ್ದಲವಿಲ್ಲದ ಪ್ರದೇಶ, ಹಸಿರು ಕಾನನ, ಎಂದಿಗೂ ಬತ್ತದ ನೀರಿನ ತೊರೆ ಇತ್ಯಾದಿ ಕಣ್ಣಿಗೆ 'ಹಬ್ಬ'ಕಟ್ಟುವ ಶಿವನ ವಾಸಸ್ಥಳ.

ಸ್ಥಳ ಪುರಾಣದಲ್ಲಿ ಭಸ್ಮಾಸುರ-ಮೋಹಿನಿ

ಕಲ್ಲಿನಿಂದ ಕೂಡಿದ ಭಸ್ಮವನ್ನು ಶಿವ ಕೋಪದಿಂದ ಬೀಸಾಡಿದಾಗ ದೈತ್ಯಶಕ್ತಿಯೊಂದರ ಉಗಮವಾಗುತ್ತದೆ. ಅವನೇ 'ಭಸ್ಮಾಸುರ' . ಹೀಗೆ ಹೆಸರು ಬರಲು ಕಾರಣ ಶಿವನಿಂದ ಅಸುರ ಪಡೆದ ವರ. ಹುಟ್ಟಿದ ತಕ್ಷಣ ಶಿವನನ್ನು ಒಲಿಸಿ-ಓಲೈಸಿ ತನ್ನ ಬಲಗೈಯನ್ನು ಯಾರ ತಲೆಯಮೇಲೆ ಇಡುತ್ತೇನೋ ಇಡಿಸಿಕೊಂಡವರು ಭಾಸ್ಮವಾಗಿಹೊಗಬೇಕು ಎಂಬ ವರವನ್ನು ಪಡೆದ. ಪಕ್ಕದಲ್ಲಿ ಅತಿ ಲಾವಣ್ಯವತಿಯಾದ ಶಿವೆಯನ್ನ ಕಂಡ. ಅವಳನ್ನೇ ಮೋಹಿಸಹೊರಟ. ಶಿವನ ಕೆಂಗಣ್ಣಿಗೆ ಗುರಿಯಾದ. ಶಿವನನ್ನೇ ಬೆದರಿಸಿ ಶಿವನ ಶಿರದ ಮೇಲೆ ಕೈ ಇಡುವುದಾಗಿ ಆರ್ಭಟಿಸಿದ. ಕಂಗಾಲಾದ ಶಿವ ಓಟಕ್ಕಿತ್ತ. ಅಟ್ಟಿಸಿಕೊಂಡು ಬಂದ ಭಸ್ಮಾಸುರ. ಈರ್ವರೂ ಓಡುತ್ತಾ ಓಡುತ್ತಾ ಯಾಣಕ್ಕೆ ಬಂದರು.

ಇಷ್ಟರಲ್ಲಿ ದೇವಗಣ ಸಭೆಸೇರಿದರು. ಏನಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು! ಆಗ ಮಹಾವಿಷ್ಣು ಒಂದು ನಾಟಕವನ್ನು ರೂಪಿಸಿದ. ತನ್ನ ಶಕ್ತಿಯಿಂದ ಅತಿ ರೂಪವತಿಯಾದ 'ಮೋಹಿನಿ'ಯನ್ನು ಸೃಷ್ಟಿಸಿದ. ಮೋಹಿನಿ ಧರೆಗೆ ಬಂದಳು. ಭಸ್ಮಾಸುರ ಹತ್ತಿರದಲ್ಲಿ ಸುಳಿದಾಡಿದಳು. ಮೋಹಿನಿಯನ್ನು ಕಂಡ ಭಸ್ಮಾಸುರ ಅವಳಿಗೆ ಮನಸೋತ, ಅವಳು ಹೇಳಿದ್ದನ್ನೆಲ್ಲ ಮಾಡುವುದಾಗಿಯೂ ಹೇಗಾದರೂ ಅವಳು ತನ್ನವಳಾಗಬೇಕೆಂದು ಪರಿ ಪರಿಯಿಂದ ಅವಳಿಗೆ ದುಂಬಾಲುಬಿದ್ದ. ಮೋಹಿನಿ ತಾನು ಹೇಳಿದ ರೀತಿ ನೃತ್ಯವನ್ನು ಮಾಡಿದರೆ ಅವನನ್ನು ವರಿಸುವುದಾಗಿ ಹೇಳಿದಳು. ಇಬ್ಬರೂ ನೃತ್ಯಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಮೋಹಿನಿ ತನ್ನ ಬಲಗೈಯನ್ನು ತನ್ನ ತಲೆಯಮೇಲೆ ಇಟ್ಟುಕೊಂಡಳು; ಅನುಸರಿಸುತ್ತಿರುವ ಭಸ್ಮಾಸುರ ಕೂಡ ಅದೇ ರೀತಿ ಮಾಡಿದ. ಕ್ಷಣದಲ್ಲಿ ಆತ ಅಲ್ಲೇ ಭಸ್ಮವಾದ!


ಶಿಲಾಮಯ, ನಿಸರ್ಗ್ ನಿರ್ಮಿತ, ಆಧಾರ ರಹಿತ ನಿಲುವು. ಒಂದನ್ನು ಭೈರವೇಶ್ವರ ಶಿಖರ ವೆಂದೂ ಇನ್ನೊಂದನ್ನು ಮೋಹಿನಿ ಶಿಖರವೆಂತಲೂ ಜನ ಗುರುತಿಸಿದ್ದಾರೆ. ಭೈರವೇಶ್ವರ ಶಿಖರ
ಅಗಲವಾಗಿದೆ, ಮೋಹಿನಿ ಅಮ್ಮನವರ ಶಿಖರ ಸ್ವಲ್ಪ ಮೊನಚಾಗಿದೆ. ನೋಡಲು ಮೋಹಿನಿ ಶಿಖರ ಎತ್ತರವಾಗಿ ಕಂಡರೂ ಭೈರವೇಶ್ವರ ಶಿಖರಕ್ಕಿಂತ ಮೋಹಿನಿ ಶಿಖರ ದೊಡ್ದದಾಗಿಲ್ಲ ಎಂಬುದು ಹೇಳಿಕೆ. ಮೋಹಿನಿ ಶಿಖರ ಬೆಳೆಯುತ್ತದೆಂದೂ ಆದರೂ ಭೈರವೇಶ್ವರ ಶಿಖರಕ್ಕಿಂತ ಎತ್ತರ ಬೆಳೆದಾಗ ತನ್ನಿಂದ ತಾನೇ ಶಿಖರದ ತುದಿ ಉದುರಿ ಬೀಳುತ್ತದೆಂದೂ ಅಲ್ಲಿನ ಜನ ಹೇಳುತ್ತಾರೆ. ಭೈರವೇಶ್ವರ ಶಿಖರದ ಒಳಗೆ ಗುಹೆಗಳಿವೆ, ನೋಡಲು ನಯನ ಮನೋಹರವಾಗಿವೆ, ಭೀತಿ ಹುಟ್ಟಿಸುವಷ್ಟು ದೊಡ್ಡದಾದಗುಹೆಗಳವು! ಇಂತಹ ಒಂದು ಮುಖ್ಯ ಗುಹೆಯಲ್ಲಿ ಭೈರವೇಶ್ವರ ದೇವರು ನೆಲೆಸಿದ್ದಾನೆ. ಹಿಂದೆ ನಡೆದ ಪುರಾಣೋಕ್ತ ಐತಿಹ್ಯದನೆನಪಿಗೆ ಈ ದೇವಸ್ಥಾನದಲ್ಲಿ ಶಿವ-ಮೋಹಿನಿ ಅಮ್ಮನವರಿಗೆ ಪೂಜೆ ಪ್ರತಿದಿನ ಸಲ್ಲುತ್ತದೆ.

ಇಲ್ಲಿ ಹತ್ತಿರದಲ್ಲಿಯೇ, ಕುಮಟಾದಿಂದ ಬರುವ ಮಾರ್ಗದಲ್ಲಿಯೇ ಒಂದು ಗುಡ್ಡವಿದ್ದು ಅದನ್ನು ಭಸ್ಮಾಸುರ ಬೂದಿಯಾದ ಸ್ಥಳವೆನ್ನುತ್ತಾರೆ, ಆಶ್ಚರ್ಯವೆಂದರೆ ಸುತ್ತಲ ಎಲ್ಲಾ ಗುಡ್ಡಗಳ ಮಣ್ಣು ಕೆಂಪು, ಇದು ಮಾತ್ರ ಕಪ್ಪು ಮಣ್ಣಿನಿಂದ ಕೂಡಿದೆ! ಇದು ವಿಜ್ಞಾನಿಗಳಿಗೂ ಸೋಜಿಗ ಉಂಟುಮಾಡಿದ ವಿಷಯವಾಗಿದೆ. ಯಾಣದ ದೇವರ ಗುಹೆಯಲ್ಲಿ ಕತ್ತಲು, ಇದನ್ನು ನೀಗಲು ಬಹಳ ಹಿಂದೆಯೇ ಸೌರ ವಿದ್ಯುತ್ ನಿಂದ ಉರಿಯುವ ದೀಪಗಳನ್ನು ಕೆಲ ವಿಜ್ಞಾನಿಗಳು ಬಂದು ಅಳವಡಿಸಿದ್ದಾರೆ. ಶಿಖರದಲ್ಲಿ ಅಲ್ಲಲ್ಲಿ ಜೇನು ಗೂಡುಗಳಿವೆ, ದೇವಸ್ಥಾನದಲ್ಲಿ ಸ್ವಚ್ಛತೆಯ ಕೊರತೆಯಾದಲ್ಲಿ, ಮೈಲಿಗೆಯಾದಲ್ಲಿ ಹೆಜ್ಜೇನುಗಳು
ಕಡಿಯುತ್ತವೆ
ಎಂಬ ಪ್ರತೀತಿ ಇದೆ. ಭೈರವೇಶ್ವರ ಗುಹಾಂತರ ದೇವಸ್ಥಾನದಲ್ಲಿ ನೀರು ಜೇನಹನಿಯ ರೀತಿ ದೇವರಮೇಲೆ ಸದಾ ತೊಟ್ಟಿಕ್ಕುತ್ತಿರುತ್ತದೆ. ಹಾಗೆ ತೊಟ್ಟಿಕ್ಕಿದ ನೀರು ಗುಹೆಯ ನೆಲದಲ್ಲಿ ಹರಿದು ಹೊರಗೆ ಹೋಗುತ್ತದೆ.

ಜಾತ್ರೆ
ಪ್ರತೀವರ್ಷ ಮಹಾಶಿವರಾತ್ರಿಯಂದು ಈ ದೇವಳದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಇಡೀದಿನ ನಾ ನಾ ಥರದ ಉತ್ಸವಗಳು, ಅಖಂಡ ಭಜನೆಗಳು, ಪಲ್ಲಕ್ಕಿ ಉತ್ಸವವೇ ಮೊದಲಾದ ಹಲವು ಸೇವೆಗಳು ನಡೆದು, ಶಿವರಾತ್ರಿಯ ಜಾಗರಣೆಯೊಂದಿಗೆ ಜಾತ್ರೆ ಕೊನೆಗೊಳ್ಳುವುದು. ಈ ಸಂದರ್ಭ ಸುತ್ತ-ಮುತ್ತಲ ಎಲ್ಲಾ ಪ್ರದೇಶಗಳಿಂದ ಸುಮಾರು ಹತ್ತಾರು ಸಾವಿರಜನ ಬಂದು ಹೋಗುತ್ತಾರೆ.

----
ಶಿವರಾತ್ರಿ

ಬೇಡನೊಬ್ಬ ಒಂದು ಸಂಜೆ ಆಹಾರ ಹುಡುಕುತ್ತ ಹೊರಟು ಒಂದು ಮೃಗವನ್ನು ಕಂಡು ಬೇಟೆಯಾಡಲು ಬೆನ್ನಟ್ಟಿ ಹೋಗುತ್ತಾನೆ. ಬಹಳ ಹಸಿದ ಕುಟುಂಬ,ಮನೆಯಲ್ಲಿ ಬೇರೆ ಏನೂ ತಿನ್ನಲು ಇರುವುದಿಲ್ಲ. ಹೀಗಾಗಿ ಬೇಟೆ ಸಿಗಲೇಬೇಕೆಂಬ ಹಠದಿಂದ ಮುಂದೆ ಮುಂದೆ ಹೋಗುತ್ತಾ ಕಾಡಲ್ಲಿ ಕತ್ತಲಾವರಿಸುತ್ತದೆ. ಕತ್ತಲಿನಲ್ಲಿ ಒಂದಷ್ಟು ದೂರ ನಡೆದ ಬೇಡ, ಬೇಸರಗೊಂಡು ತನ್ನ ಕುಟುಂಬವನ್ನು ನೆನೆಯುತ್ತ ಕ್ರೂರ ಮೃಗಗಳಿಂದ ತಪ್ಪಿಸಿಕೊಳ್ಳಲು ಆ ರಾತ್ರಿ ಕಾಡಲ್ಲೇ ಇರುವ ಯವುದೋ ಮರವೊಂದನ್ನೇರಿ ಕುಳಿತುಕೊಳ್ಳುತ್ತಾನೆ. ಏನೇ ಮಾಡಿದರೂ ಇಡೀ ರಾತ್ರಿ ಅವನಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಮರದ ಟೊಂಗೆಯಲ್ಲಿ ಕೈಗೆಸಿಗುವ ಎಲ್ಲಾ ಎಲೆಗಳನ್ನು ಒಂದೊಂದಾಗಿ ಕಿತ್ತು ಕೆಳಗೆ ಹಾಕುತ್ತ ಬೇಸರ ಕಳೆಯುತ್ತಾನೆ. ಅವನ ಅರಿವಿಗೆ ಗೋಚರವಾಗದ ಒಂದು ಘಟನೆ ನಡೆಯುತ್ತದೆ, ಅದೆಂದರೆ ಆ ಮರದ ಕೆಳಗೆ ಒಂದು ಶಿವಲಿಂಗವಿದ್ದು, ಆ ಮರ ಬಿಲ್ವ ಪತ್ರೆಯದ್ದಾಗಿರುತ್ತದೆ! ರಾತ್ರಿಯಿಡೀ ಆತ ಹಾಕಿದ ಬಿಲ್ವದ ಎಲೆಯಿಂದ ಗೊತ್ತಿಲ್ಲದೇ ನಡೆದ ಆ ಪೂಜೆಯಿಂದ ಶಿವ ಪ್ರಸನ್ನನಾಗಿ ಅವನಿಗೆ ಪ್ರತ್ಯಕ್ಷ ದರುಶನವಿತ್ತು ಅವನ ಕಷ್ಟಗಳನ್ನು ಕಳೆಯುತ್ತಾನೆ. ಮುಂದೆ ಪ್ರತೀವರ್ಷ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆ ರಾತ್ರಿ ’ಮಹಾಶಿವರಾತ್ರಿ’ ಎಂದು ಪರಿಗಣಿಸಲ್ಪಡುತ್ತದೆ; ಹಬ್ಬವಾಗಿ ದೇಶಾದ್ಯಂತ ಆಚರಿಸಲ್ಪಡುತ್ತದೆ.


ಶಿವನೊಬ್ಬ ಭಕ್ತರ ಭಕ್ತಾಗ್ರೇಸರ-ಬೋಳೆಶಂಕರ-ಬೋಲೆನಾಥ್
ನಿಜವಾಗಿಯೂ ಹೌದು. ನೀವು ಶಿವನ ಯಾವುದೇ ಕಥಾಮಾಲಿಕೆಯನ್ನು ತೆಗೆದುಕೊಳ್ಳಿ ಹಿಂದೆ-ಮುಂದೆ ನೋಡದೆ "ಭಕ್ತಾ , ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಏನು ಬೇಕೋ ಕೇಳು", ಆಕ್ಷಣ ನಮ್ಮ ಶಿವ ತನ್ನನ್ನೇ ಮರೆತಿರುತ್ತಾನೆ! ಏನೋ ಕೇಳಿದರೂ "ತಥಾಸ್ತು"ಎಂದುಬಿಡುತ್ತಾನೆ! ಹೀಗೇ ಮಾಡಿ ರಾವಣನಿಗೆ ಆತ್ಮಲಿಂಗ ಕೊಟ್ಟ. ಹೀಗೇ ಮಾಡಿ ಭಕ್ತ ಮಾರ್ಕಾಂಡೇಯನಿಗೆ ಜೀವದಾನ ಕೊಟ್ಟ. ಜಪಿಸಿದರೆ ಹುಚ್ಚೆದ್ದು ಕುಣಿವ ವ್ಯಕ್ತಿತ್ವ ನಮ್ಮ ಈಶನದ್ದು. ಅಷ್ಟೇ ಕೋಪವೂ ಬರುತ್ತದೆ. ಅಷ್ಟೇ ಸ್ವಾಭಿಮನಿಯೂ ಹೌದು. ಶಿವನ ಕೋಪದಿಂದ ದಕ್ಷಯಜ್ಞವೇ ಒಂದು ದೊಡ್ಡ ಪ್ರಮಾದದ ಘಟನೆಯಾಯಿತು. ತನ್ನ ಭಕ್ತರನೇಕರಿಗೆ ವಿಶೇಷ ವರದಾನ ಮಾಡಿದ ಶಿವ " ದೇಹಿ " ಎಂದು ಬರುವವರಿಗೆ " ಅಸ್ತು " ಎಂದು ಕೊಟ್ಟುಬಿಡುವ ಕರುಣಾಮೂರ್ತಿ! ಬೇಡರ ಕಣ್ಣಪ್ಪನನ್ನು ನೋಡಿ, ಹಿರಣ್ಯಕಶಿಪುವನ್ನು ನೋಡಿ, ರಾವಣನನ್ನು ನೋಡಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಶಂಭುವಿನಿಂದ ವರಪದೆದವರೇ.


' ಶಿವ 'ನೆಂದರೆ ಶುಭ ಎಂದರ್ಥ
ಶಿವನನ್ನು ಮೆಚ್ಚಿಸಲು ಹಲವಾರು ಪೂಜೆ-ಉಪಾಸನೆಗಳಿದ್ದರೂ ಗಜಚರ್ಮಧರ, ರುಂಡಮಾಲಧರ, ಭಸ್ಮವಿಲೇಪಿತ ಹೀಗೆಲ್ಲ ಕರೆಸಿಕೊಳ್ಳುವ ನಮ್ಮ ಸ್ವಯಂಭೂವಿಗೆ ನಮಕ-ಚಮಕಸಹಿತ
ರುದ್ರಾಭಿಷೇಕ, ಶ್ರೀರುದ್ರ ಇವುಗಳಿಂದಲೂ ಮೃತ್ಯುಂಜಯ,ಅಘೋರಾಸ್ತ್ರ ಮುಂತಾದ ಜಪಗಳಿಂದಲೂ ಶಿವ ಭಕ್ತರಿಗೆ ಸುಲಭಸಾಧ್ಯನಾಗುತ್ತಾನೆ. ರುದ್ರಪಾರಾಯಣಮಾಡುವುದರಿಂದ ಏಕಾಗ್ರತೆಯಿಂದ ಅದರ ಘೋಷವನ್ನು ಕೇಳುವುದರಿಂದ ನಮ್ಮ ರಕ್ತದೊತ್ತಡ ಸುಸ್ಥಿತಿಯಲ್ಲಿರುತ್ತದೆ[truly,scientifically proven sequence]. ಶ್ರೀರುದ್ರದ ಒಂದೊಂದು ಶ್ಲೋಕವೂ ಆಯುರ್ವೇದೀಯ ಔಷಧಿಗಳನ್ನು ಸೂಚಿಸುತ್ತದೆ. ರುದ್ರಪಾರಾಯಣದಿಂದ ಅನೇಕ ಹಂತದ ಮಾನಸಿಕ ವ್ಯಾಧಿಗಳು ನಿವಾರಣೆಯಾಗುತ್ತವೆ! ಅಭಿಷೇಕ ಇರುವಲ್ಲಿ ರುದ್ರವಿಲ್ಲದಿದ್ದರೆ ಅದು ಗೌಣ ! ಅಭಿಷೇಕದ ಕಲ್ಪನೆಯೇ ರುದ್ರದಿಂದ ಜನಿಸಿತೇನೋ ಎಂಬಷ್ಟು ಅದು ಅಭಿಷೇಕದ ಅವಿಭಾಜ್ಯ ಅಂಗ.

ಹರಿ-ಹರರಲ್ಲಿ ಭೇದವೆಣಿಸಬಾರದು
ಮೂಲ ಪರಬ್ರಹ್ಮನ ವಿವಿಧ ರೂಪಗಳಲ್ಲಿ ಎರಡು ರೂಪಗಳು. ಇವುಗಳಲ್ಲಿ ಭೇದ ಮಾಡಬಾರದು. ಹರಿ-ಹರ ಈರ್ವರೂ ಒಂದೇ. ನಮ್ಮ ಕೆಲವು ಹುಚ್ಚು ಆಚರಣೆಗಳಿಂದ ದೇವರನ್ನೇ divide & rule ಪಾಲಿಸಿಗೆ ಹಚ್ಚಿಬಿಟ್ಟಿದ್ದೇವೆ ನಾವು. ಇದನ್ನು ಗಮನಿಸಿಯೇ ಹಿರಿಯ ಕವಿ ಪು.ತಿ. ಅವರು 'ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು.......' ಎಂಬ ಹಾಡನ್ನು ಬರೆದರು. ಶಿವ-ಕೇಶವ,ಶಂಕರ-ನಾರಾಯಣ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದೈವಶಕ್ತಿಯ ಮೂಲ ಒಂದೇ. ಆರಾಧನೆಗೆ ಮೂರ್ತರೂಪ ಮಾತ್ರ ಬೇರೆ.




ಶಿವ
ಅರ್ಧನಾರೀಶ್ವರ. ಶಿವ ಬಂದರೆ ಅಲ್ಲಿ ಶಿವೆಯೂ ಬಂದಳು ಎಂದೇ ತಿಳಿದಿರಬೇಕು. ಜಗದ ಹಿತಕ್ಕಾಗಿ ಸದಾ ಓಡಾಡುವ ಇವರನ್ನು " ಜಗತಃ ಪಿತರೌ ಒಂದೇ ಪಾರ್ವತೀ ಪರಮೇಶ್ವರೌ " ಎನ್ನುತ್ತಾರೆ, ಜಗತ್ತಿನ ತಂದೆ-ತಾಯಿ ಎಂದು ಗುರುತಿಸಲ್ಪಡುವ ಶಿವ-ಶಿವೆಯರನ್ನು ಸ್ಮರಿಸುತ್ತ ಶಿವನಲ್ಲಿ ಹೀಗೆ ಪ್ರಾರ್ಥಿಸೋಣ-






ಕರಚರಣ
ಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶೃವನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯಜಯ ಕರುಣಾ
ಬ್ಧೇ ಶ್ರೀ ಮಹಾದೇವ ಶಂಭೋ ||

[ ಹೇ ಪರಶಿವನೇ, ನಮ್ಮ ದೇಹ,ವಚನ,ಮನಸ್ಸು.ಇವುಗಳ ಕರ್ಮಗಳಿಂದಲೂ, ಕೇಳುವುದು-ನೋಡುವುದು ಮೊದಲಾದ ಪಂಚೇಂದ್ರಿಯಗಳಿಂದ ಎಸಗುವ ಕರ್ಮಗಳಿಂದಲೂ ದೋಷಪೂರಿತರಾಗುವ ನಮಗೆ ಯಾವುದು ಹಿತ-ಯಾವುದು ಅಹಿತ, ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು ಇದರಬಗೆಗೆ ಗೊತ್ತಿರದೇ, ನಮ್ಮ ಅಜ್ಞಾನದಿಂದ ಎಸಗುವ ಸಮಸ್ತದೋಷಗಳನ್ನು ದೂರಮಾಡಿ ನಮ್ಮನ್ನೆಲ್ಲ ಕ್ಷಮಿಸಿ ರಕ್ಷಿಸು, ಅಸತ್ಯದಿಂದ ಸತ್ಯದೆಡೆಗೆ,ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನಮಾರ್ಗದೆಡೆಗೆ ಕರೆದೊಯ್ಯು ಎನ್ನುವುದು ಇದರಲ್ಲಿ ಅಡಗಿದ ತಾತ್ಪರ್ಯ ]

|| ಹರನಮಃ ಪಾರ್ವತೀಪತಯೇ ಹರ ಹರ ಮಹಾದೇವ ||

Wednesday, February 10, 2010

ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !



ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !

ರಾಮಾಯಣ ಕಾಲದ ಒಂದು ಶುಭ್ರ ಮುಂಜಾವು, ಎಲೆಗಳಮೇಲೆ ಮಂಜಿನ ಹನಿ ಬಿದ್ದು ಪಳ ಪಳಿಸುತ್ತಿರುವ ತಣ್ಣನೆಯ ವಾತಾವರಣ, ಕೋಗಿಲೆ-ಕಾಜಾಣಗಳು ಗಿಡಮರಗಲ್ಲಿ ಅವಿತು ಅಲ್ಲೇ ಅಘೋಷಿತ ಸ್ಪರ್ಧೆಯಿಂದ ತಮ್ಮ ಗಾಯನ ಕಚೇರಿಗಳನ್ನು ಸಾರ್ವಜನಿಕ ಹಿತಾಸಕ್ತಿಗೆ ಸಮರ್ಪಿಸುವ ವೇಳೆ, ಗೋವುಗಳು ಎದ್ದು ಮೇವುಕೊಡಿ ಎಂಬರ್ಥದಲ್ಲಿ 'ಅಂಬಾ' ಎನ್ನುತ್ತಿರುವ ಸಮಯ, ಹೆಂಗಳೆಯರು ತಮ್ಮ ಮನೆವಾರ್ತೆ ಕೆಲಸಗಳನ್ನು ಪ್ರಾರಂಭಿಸಿ ಮುಂದುವರೆಸಿದ ಕಾಲ, ಪರಿಜನರು-ಪುರಜನರು ಶೌಚ-ಸ್ನಾನಾದಿ ನಿತ್ಯ ನೈಮಿತ್ತಿಕ ಕೆಲಸಗಳನ್ನು ಪೂರೈಸಿ ದೇವರ ಪೂಜೆಯಲ್ಲಿತೊಡಗಿರುವ ಸಮಯ, ಶ್ರೀರಾಮಾದಿ ರಾಜ-ಸಂಸ್ಥಾನಿಕರು ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿ ಇನ್ನೇನು ಮುಗಿಸುವ ಕಾಲ ಎಲ್ಲೋ ಒಂದು ಭಯದ ಕೂಗು ಶ್ರೀರಾಮನಿಗೆ ಕೇಳಿಬರುತ್ತದೆ,

" ರಾಮಾ ರಕ್ಷಿಸು, ರಾಮಾ ರಕ್ಷಿಸು "

ಶ್ರೀರಾಮ ತಮಗೆಲ್ಲಾ ತಿಳಿದಿರುವಂತೆ ತನ್ನ ಬದುಕಿನ ಆದರ್ಶದಿಂದ ಮನೆಮಾತಾಗಿದ್ದ ವ್ಯಕ್ತಿ, ಪ್ರಜೆಗಳ ಸುಖದಲ್ಲೇ ವೈಯಕ್ತಿಕ
ದುಃಖವನ್ನು ಮರೆತ ವ್ಯಕ್ತಿ, ಏಕಪತ್ನೀ ವೃತಸ್ಥನಾಗಿ, ತುಂಬಾ ಘನತೆ-ಗಾಂಭೀರ್ಯದಿಂದ,ಸರಳ-ಸಜ್ಜನಿಕೆಯಿಂದ ಹುಣ್ಣಿಮೆಯಚಂದ್ರನೋಪಾದಿಯಲ್ಲಿ ಕಂಗೊಳಿಸಿದ ವ್ಯಕ್ತಿ. ಯಾರಿಗೆ ಶ್ರೀರಾಮ ಗೊತ್ತಿಲ್ಲ ? [except today's little kids who are not much fortunate to learn these world epics from their parents due to overcrowded work commitment & unhealthy 'homework' -'percentage','engineering & medical seat concept' right at the junior age of 5years!] ಬಹುಶಃ ಇಂಥವರಿಗಾದರೂ ಅರ್ಜೆಂಟಿಗೆ ಇರಲಿ ಅಂತ ನಮ್ಮ ಪೂರ್ವಜರು ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ನೆನಪುಮಾಡಿಕೊಳ್ಳಲು ಅನುವುಮಾಡಿಕೊಟ್ಟರು-

ಪೂರ್ವಂ ರಾಮ ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ |
ವೈದೇಹಿ ಹರಣಂ ಜಟಾಯು ಮರಣಂ
ಸುಗ್ರೀವ ಸಂಭಾಷಣಂ|
ವಾಲೀ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ಧಿ ರಾಮಾಯಣಮ್ ||

ಎಷ್ಟು ಸುಲಾಲಿತವಾಗಿದೆ ನೋಡಿ, ಬರೇ ನಾಲ್ಕು ಸಾಲುಗಳಲ್ಲಿ ಇಡೀ ರಾಮಾಯಣವನ್ನೇ ಬರೆದಿದ್ದಾರೆ! ಎಂತಹ ದೂರದರ್ಶಿತ್ವನಮ್ಮ ಪೂರ್ವಜರದು! ರಾಮಾಯಣ ಕಾಲ ಹಾಗಿತ್ತು, ನಮ್ಮ ವಿಜಯನಗರಕ್ಕಿಂತ ಅದ್ಬುತವಾಗಿತ್ತು. ಹೆಸರಿಗೆ ಕೂಡ ನಾವೆನ್ನುವುದು 'ರಾಮರಾಜ್ಯ' ಅಂತಲ್ಲವೇ ? ಪ್ರಜೆಗಳು ಸತ್ಪ್ರಜೆಗಳಾಗಿದ್ದರು! ಆಗಲೇ 'ಯಥಾ ರಾಜಾ ತಥಾ ಪ್ರಜಾ' ಎಂಬ ಮಾತು ಹುಟ್ಟಿದ್ದು! ಕೋಸಲ ದೇಶ ಸಮೃದ್ಧವಾಗಿತ್ತು. ಹಾದಿ ಬೀದಿಗಳಲ್ಲಿ ಮುತ್ತು-ರತ್ನ ವಜ್ರ-ವೈಡೂರ್ಯಗಳನ್ನು ರಾಶಿಹಾಕಿ ಮಾರುತ್ತಿದ್ದರು. ಮನೆಗಳಿಗೆ ಬೀಗಮುದ್ರೆ ಇರಲಿಲ್ಲ, ಕಳ್ಳರೇ ಇರದ ಕಾಲವದು. [ಇವತ್ತಿನ 'ಸಂಪಂಗಿ' ಥರದ ರಾಜಕಾರಣಿಗಳ ಕಾಲವಲ್ಲ,ಇವತ್ತು ಶಾಸಕರೇ ಕಳ್ಳರು !ಕಳ್ಳತನಮಾಡಿ ಸಿಕ್ಕಿಬಿದ್ದಾಗ ಎದೆನೋವು ಎಂದು 'ನಾಟಕಮಾಡಿ' ಆಸ್ಪತ್ರೆಸೇರಿ ಒಳಗಡೆಯಿಂದ ಕೇಸು ಖಲಾಸುಮಾಡಿಸುವುದು-ಖುಲಾಸೆ ಮಾಡಿಸುವುದು ಇವತ್ತಿನ ಅದ್ಬುತ ರಾಜಕೀಯ 'ಕಲೆ'! ಹೆಂಡವೇ ಅಮೃತ! ಇದು ಕಲಿಗಾಲ ] ಬೇಕಾದಷ್ಟು ಹಾಲು-ಹೈನ
ಪದಾರ್ಥಗಳಿದ್ದವು, ಬೇಕಷ್ಟು ದವಸ-ಧಾನ್ಯಾದಿಗಳಿದ್ದವು. ಪ್ರಜೆಗಳಿಗೆ ಅಂದಿನಕಾಲಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿದ್ದವು! ಪ್ರಜೆಗಳು ಉಂಡುಟ್ಟು ಸುಖವಾಗಿದ್ದರು,ತೃಪ್ತಿಯಿಂದಿದ್ದರು. ಪ್ರಜೆಗಳು ನೇರವಾಗಿ ಶ್ರೀರಾಮನಲ್ಲಿ ತಮ್ಮ ತೊಂದರೆಗಳಿದ್ದರೆ ಹೇಳಿಕೊಳ್ಳುತ್ತಿದ್ದರು, ಅವೆಲ್ಲ ಅತಿ ಶೀಘ್ರದಲ್ಲಿ ಬಗೆಹರಿಸಲ್ಪಡುತ್ತಿದ್ದವು. ಶ್ರೀರಾಮ ಪಶು-ಪಕ್ಷಿಗಳಿಂದಲೂ ಅವುಗಳ ಅಹವಾಲು ಆಲಿಸುತ್ತಿದ್ದನೆಂಬ ಒಂದು ಪ್ರತೀತಿ ಇದೆ.

ಇಂತಹ ರಾಮರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಯಾಕೀ ಆರ್ತನಾದ ?ಶ್ರೀರಾಮನಿಗೆ ಎಷ್ಟೋ ದೂರದಲ್ಲಿ ಹೊರಡಿಸಿದ ಈ ಕೂಗು ಕೇಳಿತೆಂದರೆ ನಿಮಗೆ ಅರ್ಥವಾಗಬೇಕು ! [ ಇವತ್ತು ವಿಧಾನಸೌಧದ ಎದುರುಗಡೆ ಕುಳಿತು ಕೂಗಿದರೂ ಕೇಳುವುದಿಲ್ಲ, ಇವತ್ತಿನ ಪ್ರಜೆಗಳೂ ಅಂದಿನಂತಿಲ್ಲ, ಬೆಂಕಿಪೊಟ್ಟಣದಲ್ಲಿ ಸರಿಯಾಗಿ 50 ಕಡ್ಡಿ ಇಲ್ಲದಿದ್ದರೂ ಧರಣಿಕೂರುವ ತರಗತಿ ಇವತ್ತಿನ ಪ್ರಜೆಗಳದ್ದು!] ರಾಮಚಂದ್ರ ಕಕ್ಕಾಬಿಕ್ಕಿಯಾದ ! ಹುಡುಕಲು ಅನುವಾದ. ಹೊರಟೇಬಿಟ್ಟ. ರಾಜಧಾನಿಯಿಂದ ಹೊರಗೆ ಬಂದ. ದೂರದಲ್ಲಿ ಒಂದು ಬಯಲು ಪ್ರದೇಶ....ಓ ...ಅಗೋ ......
ಅಲ್ಲಿ ಯಾರೋ ಕಾಣುತ್ತಿದ್ದಾರೆ.....ನಮ್ಮ ಹನುಮನಲ್ಲವೇ ? ಹೌದು ರಾಮನಿಗೆ ಅರ್ಥವಾಯಿತು!

ಹನುಮ ಯಾರನ್ನೋ ಗೋಳುಹುಯ್ದುಕೊಳ್ಳುತ್ತಿದ್ದ! ಯಾಕೆ? ಏನಾಯ್ತು ?

ಶ್ರೀರಾಮ ತಡಮಾಡಲಿಲ್ಲ, ನಡೆದೇ ನಡೆದ. ನಡೆದು ಆ ಸ್ಥಳಕ್ಕೆ ಬಂದ. ಬಂದು ವಿಚಾರಿಸಿದ. ಅರ್ಧ ಕುಳಿತ ಸ್ಥಿತಿಯಲ್ಲಿರುವ , ಕೂಗುತ್ತಿರುವ ಆ ವ್ಯಕ್ತಿಯನ್ನು ಉದ್ದೇಶಿಸಿ ಕೇಳಿದ --" ಯಾಕಪ್ಪಾ, ಏನು ತೊಂದರೆ ?"

" ಸ್ವಾಮೀ ಹನುಮನಿಂದ ಕಾಪಾಡಿ "

" ಯಾಕೋ ಹನುಮ ಅವನಿಗೆ ಹೊಡೆಯುತ್ತಿದ್ದೀಯಲ್ಲ? "

" ಸ್ವಾಮೀ ರಾಮಚಂದ್ರ, ಈತ ಮಲಶೋಧನೆಗೆ ಕುಳಿತಿದ್ದಾನೆ ! ಇಂತಹ ಅಸಹ್ಯಸ್ಥಿತಿಯಲ್ಲಿರುವಾಗ ನಿನ್ನ ನಾಮವನ್ನು ಜಪಿಸಿದ್ದಾನೆ, 'ರಾಮಾ ರಾಮಾ' ಎನ್ನುತ್ತಿದ್ದಾನೆ ,ಹೀಗಾಗಿ ಓಡಾಡುತ್ತ ಈಕಡೆ ಬಂದಿದ್ದ ನನಗೆ ಇದನ್ನು ನೋಡಿ ಸಹಿಸಲಾಗಲಿಲ್ಲ, ಎಲಾ ಮೈಲಿಗೆಯವನೆ ಈ ಸ್ಥಿತಿಯಲ್ಲಿ ನನ್ನ ರಾಮನನ್ನು ಜಪಿಸುವುದೇ ಎಂದುಕೊಂಡು ಒಂದು ಬಿಟ್ಟಿದ್ದೇನೆ "

" ಹನುಮಾ, ಈತ ತುಂಬಾ ಹತ್ತಿರದವನಪ್ಪಾ , ಮಲಬದ್ಧತೆಯಾಗಿ ಮೂರುದಿನಗಳ ಕಾಲ ಮಲವಿಸರ್ಜನೆ ಮಾಡಲಾಗಿರದ ಕಾರಣ ಇಂದು ಅಂತೂ ಇಂತೂ ಮಲವಿಸರ್ಜನೆಯಾಗಿ, ಅದರಿಂದ ಸ್ವಲ್ಪ ದೇಹ ಬಾಧೆ ಕಮ್ಮಿಯಾಗಿ, ಹಿತವಾಗಿ 'ರಾಮಾ ರಾಮಾ' ಎಂದು ನೆನಪುಮಾಡಿಕೊಂಡಿದ್ದಾನೆ, ಇದು ತಪ್ಪಲ್ಲವಪ್ಪಾ. ಇದು ನನಗೆ ಒಪ್ಪೇ, ಒಳ್ಳೆಯ ಭಾವನೆಯಿಂದ ಯಾರೇ ಎಲ್ಲೇ ಎಷ್ಟು ಹೊತ್ತಿಗೇ ನನ್ನನ್ನು ನೆನೆದರೂ ಅದು ನನಗೆ ನಾಟುತ್ತದೆ, ಹೀಗಾಗಿ ಈತನನ್ನು ಬಿಟ್ಟುಬಿಡು "

" ಸ್ವಾಮೀ ತಪ್ಪಾಯ್ತು, ನಾನೇ ಒಬ್ಬ ದೊಡ್ಡ ಭಕ್ತ ಅಂತ ತಿಳಿದುಕೊಂಡಿದ್ದೆ, ನನಗಿಂತಲೂ ಇಂತಹ ಕಷ್ಟದಲ್ಲಿ ಜಪಿಸಿದವರು ಹೆಚ್ಚು ಅಂತ ಮಾರ್ಗದರ್ಶನ ಮಾಡಿದೆಯಲ್ಲ ಸ್ವಾಮೀ, ಅರ್ಥವಾಯ್ತು, ಯಾವುದು ಇದುವರೆಗೆ ಅರ್ಥವಾಗಿರಲಿಲ್ಲವೋ ಈಗ ಅದು ಅರ್ಥವಾಯ್ತು, ಈತನನ್ನು ಬಿಟ್ಟಿದ್ದೇನೆ ಸ್ವಾಮೀ, ಮನ್ನಿಸು "

ನಿಮಗೂ ಈಗ ಅರ್ಥವಾಗಿರಬೇಕಲ್ಲ ? ಅಲ್ಲವೇ ? ಹೀಗೇ ಯಾವುದೇ ಸ್ಥಿತಿಯಲ್ಲಿ ನಾವಿದ್ದರೂ ಒಳ್ಳೆಯ ಸ್ಮರಣೆ, ಒಳ್ಳೆಯ ಜಪ,ನಾಮ ಜಪ ಇವಕ್ಕೆಲ್ಲ ಕಾಲ ದೇಶಗಳನ್ನು ಆತುಕೊಳ್ಳದೇ ಸಮಯವಾದಾಗ ಮಾಡಿಬಿಡಬೇಕು. ಅದರಿಂದ ಒಳಿತೇ ಹೊರತು ಕೆಡುಕಿಲ್ಲ !

ಮಂಗಲಂ ಕೌಸಲೇಂದ್ರಾಮಹನೀಯ ಗುಣಾತ್ಮನೆ|
ಚಕ್ರವರ್ತಿ ತನೂಜಾಯ ಸಾರ್ವಭೌಮಾಯ ಮಂಗಲಂ ||