ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 9, 2012

ಮೂಲವನ್ನೆ ಮರೆತ ಜಾತ್ರೆ !

 ಚಿತ್ರಋಣ: ಅಂತರ್ಜಾಲ
ಮೂಲವನ್ನೆ ಮರೆತ ಜಾತ್ರೆ !

[ಸನ್ಮಿತ್ರರೇ, ಹೀಗೊಂದು ಪ್ರಯತ್ನ ಎಂಬ ಮಾಲಿಕೆಯಲ್ಲಿ  ಪ್ರಪಂಚದ ಸ್ವಾರಸ್ಯಗಳನ್ನು ಗಹನವಾಗಿ ಬಣ್ಣಿಸುವ ಪ್ರಯತ್ನ ಸತತ ನಡೆಸಿಯೇ ಇದ್ದೇನೆ. ಅಂತಹದೊಂದು ಹಾಡು ಇಂದಿನ ಕಥಾನಕ, ನಿಮ್ಮೆಲ್ಲರ ಓದಿಗಾಗಿ ಇದೋ ಇಲ್ಲಿದೆ:]


ದೇವನಿತ್ತ ದೇಹದಲ್ಲಿ ’ಬದುಕು’ ಕಥೆಯ ಪಾತ್ರವಾಗಿ 
ಭಾವಗಳನು ಮಿಳಿಸಿಕೊಂಡ ಅಂತರಾತ್ಮನೇ |
ಯಾವ ಭಾಗದಲ್ಲಿ ಅವಿತೆ ಪಂಚಭೂತ ಕಾಯದಲ್ಲಿ ?
ದೇವನೆಡೆಗೆ ತಿರುಗಿಸೆನ್ನ ನಿನಗೆ ವಂದನೆ || ಪ ||

ಜಾವಜಾವದಲ್ಲು ಮನದಿ ಲೋಗರಾಟ ಮಾಯೆ ಮುಸುಕಿ
ಜೀವ ಹಿಂಡಿ ಅಗಿದು ಜಗಿದು ಹಿಪ್ಪೆಮಾಡಿತು |
ನೋವನುಂಡಮೇಲು ಮತ್ತೆ ನಲಿವಿನಾಸೆ ಮೂಡುತಿಲ್ಲಿ
ಮಾವ ಅತ್ತೆ ಅಳಿಯ ಮಗಳು ಬಂಧ ಕಾಡಿತು! || ೧ ||

ವಾವೆ ಮುಗಿಯದಂಥ ಯಾತ್ರೆ ಮೂಲವನ್ನೆ ಮರೆತ ಜಾತ್ರೆ
ಸಾವು-ಹುಟ್ಟು-ಸಾವು-ಹುಟ್ಟು ತಿರುಗು ಚಕ್ರವು |
ಕಾವ ದೈವ ಕಾಣಲಾರ ತನ್ನ ಜಾಗ ತೋರಲಾರ
ಕಾವು ಹೆಚ್ಚೆ ಗಚ್ಚು ಮುರಿದು ಎಲ್ಲ ವಕ್ರವು ! || ೨ ||

ಮಾವು ತೆಂಗು ಕಂಗು ಹಲಸು ಹಲವು ವಿಧದ ಫಲಗಳಿಂದ
ಬೇವು-ಬೆಲ್ಲ ಸುಖ-ದುಃಖಗಳ ಸಖ್ಯಗಾಥೆಯು |
ಭಾವಪೂರ್ಣ ಸನ್ನಿವೇಶ ಋತು-ಮಾಸ-ಪಕ್ಷಗಳಲಿ
ಜೀವನಾಗಿ ಕಾಣುವಂತ ಇಹದ ಗೀತೆಯು || ೩ ||

ಗಾವುದದಾ ದೂರವಲ್ಲ ಯೋಜನಗಳ ಹಂಗದಿಲ್ಲ
ನಾವು ನಮ್ಮೊಳಲ್ಲೆ ಕಾಂಬ ಸತ್ಯಮಾರ್ಗವ |
ಕೇವಲಾತ್ಮನಾಗೆ ಹೊರಡು ಕೈವಲ್ಯದ ಬೆಳಕ ಹುಡುಕಿ
ಆವ ಬಂಧ ಬಿಗಿಯದಂಥ ತಥ್ಯಮಾರ್ಗವ  || ೪ ||

4 comments:

  1. ತು೦ಬಾ ಚೆನ್ನಾಗಿದೆ. ಸರಾಗವಾಗಿ ಹಾಡುವ೦ತಿದೆ. ಅರ್ಥವ೦ತಿಕೆಯೂ ಇದೆ.

    ReplyDelete
    Replies
    1. ಅನಿಸಿಕೆ ಪ್ರಕಟಿಸಿದ ವಿಚಾರಪ್ರಿಯರಿಗೆ ಧನ್ಯವಾದಗಳು.

      Delete
  2. ಹಾಡಿನ ಕೊನೆಯಲ್ಲಿ ಪ್ರಶ್ನೆಗೆ ಉತ್ತರವನ್ನೂ ನೀವೇ ಕೊಟ್ಟಿದ್ದೀರಿ.

    [ಮಾವ ಅತ್ತೆ ಅಳಿಯ ಮಗಳು ಬಂಧ ಕಾಡಿತು]
    ಹೆಂಡತಿ-ಮಕ್ಕಳು/ಗಂಡ ಮಕ್ಕಳೆಂಬ ಈ ಬಂಧ ಇದೆಯಲ್ಲಾ! ಇದು ಎಲ್ಲಕ್ಕಿಂತಲೂ ಹೆಚ್ಚು ಕಾಡುತ್ತದೆ.ಏನಾದರೂ ಮಾಡಿ ಕ್ರಮೇಣ ಈ ಬಂಧವನ್ನು ಕಡಿಮೆ ಮಾಡುತ್ತಾ ಭಗವಂತನ ಬಂಧವನ್ನು ಹೆಚ್ಚು ಮಾಡಿಕೊಳ್ಳುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ. ತಿದ್ದುಪಡಿ ಸೂಚಿಸಬಹುದು.

    ReplyDelete
    Replies
    1. ಶ್ರೀಧರರೇ, ಇಲ್ಲಿ ಸೂಚ್ಯವಾಗಿ ಮತ್ತು ಸಾಂದರ್ಭಿಕ ಪ್ರಾಸಕ್ಕಾಗಿ ಮಾವ-ಅತ್ತೆ-ಅಳಿಯ-ಮಗಳು ಎಂದು ಹೇಳಿದ್ದೇನೆಯೇ ಹೊರತು ಹೆಂಡತಿ-ಮಕ್ಕಳು ಇವರಿಲ್ಲವೆಂದಲ್ಲ, ಒಟ್ಟಿನಲ್ಲಿ ಐಹಿಕ ಸಂಬಂಧಗಳ ಸಂಕೋಲೆ ಎಂಬುದು ಅರ್ಥ. ಅನಿಸಿಕೆ ಪ್ರಕಟಿಸಿದ ನಿಮಗೆ ಧನ್ಯವಾದಗಳು.

      Delete