ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 7, 2012

ಹರಿಣವೊಂದು ಮರಳಿ ಬಂದು ........


ಹರಿಣವೊಂದು ಮರಳಿ ಬಂದು ........

ಒಂದೂರಿನಲ್ಲಿ ಒಬ್ಬ ಮಹಾರಾಜನ ಸಂಸ್ಥಾನವಿತ್ತು. ಅರಮನೆಯ ಕಲ್ಪನೆ ಮಾಡಿಕೊಳ್ಳಿ ಮತ್ತದಕ್ಕೆ ವಿವರಣೆ ಬೇಡ. ಅಂತಃಪುರದಲ್ಲಿ ರಾಜನ ಪಟ್ಟದ ರಾಣಿ. ಈ ರಾಣಿ ಬಹಳ ದಢೂತಿ, ತಿಂದೂ ತಿಂದೂ ತಿಂದೂ ಶರೀರ ನಡೆಯಲಾಗದಷ್ಟು ಭಾರವಾಗಿತ್ತು. ಆದರೂ ಜಿಹ್ವಾಚಾಪಲ್ಯ ಮಾತ್ರ ನಿಂತಿರಲಿಲ್ಲ; ಬೇಡುತ್ತಲೇ ಇತ್ತು. ಬೇಕಾದ್ದು ಸಿಗುವಾಗ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ವಿಚಾರ ರಾಣಿಗೆ ಬರಲೇ ಇಲ್ಲ. ಇಡೀ ದಿನ ಮಲಗಿರುವುದು, ವಿಶಾಲವಾದ ಆ ಮಹಲಿನಲ್ಲಿ ಅಲ್ಲಿಲ್ಲಿ ಕೂತು ಕಾಲಹರಣಮಾಡುವುದು ಮಾಡುತ್ತಿದ್ದಳು. ಅವಳಿಗೊಬ್ಬ ಮುದುಕಿ ಮುಖ್ಯ ಬಾಣಸಿಗಳಾಗಿ ಕೆಲಸ ಮಾಡುತ್ತಿದ್ದಳು. ನಿತ್ಯವೂ ತರತರದ ನೈವೇದ್ಯ ತಯಾರಾಗುತ್ತಿತ್ತು. ನಾನಾ ವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಯ ಪೂರ್ವದಲ್ಲೇ ಮಹಾರಾಣೀಸಾಹೇಬಳನ್ನು ಕೇಳಿ ತಯಾರಿಸುತ್ತಿದ್ದರು. ಮಾಡಿದ ಅಡುಗೆಯಲ್ಲೂ ಅದಿಲ್ಲಾ ಇದಿಲ್ಲಾ ಎನ್ನುತ್ತಾ ಮಲೆದಾಡುವುದು ರಾಣಿಯ ಸ್ವಭಾವ. ಅಡುಗೆ ಅಜ್ಜಿಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳುವುದು ಸಾಧ್ಯವಿರಲಿಲ್ಲ.

ಹೀಗೇ ಒಂದು ದಿನ ಅಡುಗೆ ಸಿದ್ಧವಾಗಿತ್ತು. ಲಡ್ಡು, ಶ್ಯಾವಿಗೆ, ಕೋಸಂಬರಿ ನಾನಾ ಸೋಪಸ್ಕರಗಳು ಮೇಜವಾನಿಗೆ ಊಟದ ಮೇಜಿನಮೇಲೆ ಇಡಲ್ಪಟ್ಟಿದ್ದವು. ಅಡುಗೆ ಅಜ್ಜಿ ರಾಣಿಯನ್ನು ಊಟಕ್ಕೆ ಎಬ್ಬಿಸಿ ಕರೆತಂದಳು. ರಾಣಿ ಬಂದವಳೇ ಎಲ್ಲವನ್ನೂ ತೋರಿಸು ಎಂದಳು. ಮುಚ್ಚಳ ತೆಗೆದು ಬಿಸಿಬಿಸಿಯಾಗಿರುವ ಎಲ್ಲಾ ಪದಾರ್ಥಗಳನ್ನೂ ಅಡುಗೆಯಾಕೆ ತೋರಿಸಿದಳು. ಎಲ್ಲವನ್ನೂ ಕಣ್ತುಂಬಾ ನೋಡಿದ ರಾಣಿ ತನಗಿವತ್ತು ಜಿಂಕೆಯ ಮಾಂಸವನ್ನು ತಿನ್ನುವ ಆಸೆಯಾಗಿದೆ, ಜಿಂಕೆಮಾಂಸ ತರಿಸಿ ಅಡುಗೆ ಮಾಡು ಆಮೇಲೇ ನಾನು ಊಟಮಾಡುವುದು ಎಂದು ಹಠಮಾಡತೊಡಗಿದಾಗ ಅಡುಗೆ ಅಜ್ಜಿ ನಾಳೆ-ನಾಡಿದ್ದರಲ್ಲಿ ಅದನ್ನೇ ಮಾಡಿಕೊಡುತ್ತೇನೆ ಇವತ್ತು ಹೇಗಾದರೂ ದಯವಿಟ್ಟು ಸ್ವೀಕರಿಸಿ ಎಂದು ಅಂಗಲಾಚಿದಳು. ರಾಣಿ ಅರೆ ಮನಸ್ಸಿನಿಂದಲೇ ಊಟ ಪೂರೈಸಿದಳು. ಅಡುಗೆಯ ಅಜ್ಜಿ ದೂತರ ಮುಖೇನ ಮಹಾರಾಜರಿಗೆ ವಿಷಯ ತಿಳಿಸಿ ಹರಿಣದ ಮಾಂಸ ತರಿಸಿಕೊಡುವಂತೇ ಕೇಳಿಕೊಂಡಳು.

ಮಹಾರಾಜಾಧಿರಾಜನ ಸಭೆ ಮುಗಿದ ತರುವಾಯ ದೂತನಿಂದ ವಿಷಯ ತಿಳಿದು ರಾಜ ಅಂತಃಪುರಕ್ಕೈತಂದ. ಬಿಜಯಂಗೈದ ಮಹಾರಾಜನನ್ನು ರಾಣಿ ಆದರಿಸಲಿಲ್ಲ. ಆಕೆ ಮಲಗೇ ಇದ್ದಳು. ಕೊನೆಗೊಮ್ಮೆ ರಾಜ ಕರೆದಾಗ ಎದ್ದಳು. ರಾಜ ಕೇಳಿದ ಯಾಕೆ ಸರಿಯಾಗಿ ಊಟಮಾಡಲಿಲ್ಲವಂತೆ ? ಎಂದು. ತನಗೆ ಜಿಂಕೆಯ ಮಾಂಸದ ಬಯಕೆ ಇರುವುದನ್ನು ಆಕೆ ತಿಳಿಸಿ ತುರ್ತಾಗಿ ಅದರ ವ್ಯವಸ್ಥೆಯಾಗಬೇಕು ಎಂದಳು. ರಾಜ ಅರಮನೆಯ ಹಜಾರದೆಡೆಗೆ ನಡೆದುಬಂದ. ದೂತರ ಮುಖಾಂತರ ಅರಮನೆಯ ಬೇಟೆಗಾರನನ್ನು ಕರೆಸಿದ. ಬೇಟೆಗಾರನಿಗೆ ಹರಿಣವೊಂದನ್ನು ತರಿದು ಮಾಂಸವನ್ನು ತರುವಂತೇ ಆಜ್ಞಾಪಿಸಿದ. ರಾಜಾಜ್ಞೆ ಶಿರಸಾವಹಿಸಿದ ಬೇಟೆಗಾರ ಕಾಡಿಗೆ ತೆರಳಿದ. ಕಾಡಲ್ಲಿ ಅಲೆದೂ ಅಲೆದೂ ಬಹುದೂರ ಪ್ರಯಾಣಿಸುತ್ತಾ ಇದ್ದಾಗ ಸುಸ್ತಾಗಿ ನಿದ್ದೆ ಬರುವ ರೀತಿ ಆಯ್ತು. ನೆಲದಮೇಲೆ ಮಲಗಿದರೆ ಹುಲಿ-ಸಿಂಹಗಳೋ ಕರಡಿಗಳೋ ಬರಬಹುದಲ್ಲ. ಸುರಕ್ಷತೆಗಾಗಿ ಹತ್ತಿರದಲ್ಲೇ ಇದ್ದ ಪ್ರಾಣಿಗಳು ಏರಲಾರದ ಮರವೊಂದನ್ನೇರಿ ಅಗಲದ ಟೊಂಗೆಯಮೇಲೆ ತನ್ನನ್ನು ಹಗ್ಗದಿಂದ ಬೀಳದಂತೇ ಬಂಧಿಸಿಕೊಂಡು ನಿದ್ದೆ ಮಾಡಿದ.

ಸಮಯ ಮೀರಿ ಹೋಗುತ್ತಿತ್ತು. ರಾಜನ ಆಸ್ಥಾನಕ್ಕೆ ಬೇಗ ಮರಳಿ ಹೋಗಬೇಕಾಗಿತ್ತು. ಬೇಟೆ ಸಿಗದ್ದಕ್ಕೆ ಬೇಸರದಿಂದಲೇ ಎಚ್ಚರಗೊಂಡ ಬೇಡ ದೂರದ ಜಾಗವೊಂದರಲ್ಲಿ ಹರಿಣದ ಮರಿಯೊಂದು ಜಿಗಿಯುವುದನ್ನು ಕಂಡ. ಅಹಹಾ ಎಂತಹ ಸುಂದರ ಮರಿ. ಆ ಪುಟ್ಟ ಮರಿಯ ಜೊತೆ ತಾಯಿ ಹರಿಣವೂ ಇರಲೇಬೇಕೆಂದು ಮರವಿಳಿದು ಬೇಗನೇ ಹುಡುಕುತ್ತಿದ್ದ. ಹುಲ್ಲೆಯ ಮರಿ ಜಿಗಿಜಿಗಿದು ಹಾರುತ್ತಾ ಹಸಿರು ಹುಲ್ಲನ್ನು ಅಲ್ಪ ತಿನ್ನುತ್ತಾ ಆಟವಾಡುತ್ತಿತ್ತು. ಅನತಿ ದೂರದಲ್ಲಿ ಅಮ್ಮ ಜಿಂಕೆ ಮೇಯುತ್ತಿದ್ದುದನ್ನು ಕಂಡ ಬೇಡ ಅದರೆಡೆಗೆ ಬಾಣ ನೆಟ್ಟ. ಇನ್ನೇನು ಬಾಣಬಿಡಬೇಕು....ಅಷ್ಟರಲ್ಲಿ ಆ ಅಮ್ಮ ಜಿಂಕೆ ಬೇಡನೆಡೆಗೇ ನಡೆದು ಬಂತು. ಬೇಡ ಕ್ಷಣಕಾಲ ತನ್ನ ಕಣ್ಣುಗಳನ್ನೇ ನಂಬದಾದ. ಬೇಕಾಗಿದ್ದ ವಸ್ತು ನಿರಾಯಾಸವಾಗಿ ದೊರೆತ ಖುಷಿಯಲ್ಲಿ ಬಾಣವನ್ನು ತಡೆಹಿಡಿದ. ಮುಂದೆ ಬಂದ ಜಿಂಕೆ ಬೇಡನ ಮುಂದೆ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿತು.

" ಅಯ್ಯಾ ಅರಮನೆ ಬೇಟೆಗಾರನೇ, ದಯವಿಟ್ಟು ನನ್ನ ಮಾತು ಕೇಳು. ನನ್ನ ಪತಿರಾಯನಿಗೆ ಆರೋಗ್ಯ ಸರಿಯಿಲ್ಲ. ಆತ ಆಹಾರ ತಿನ್ನಲಾರದೇ ಬಳಲುತ್ತಿದ್ದಾನೆ. ದೂರದ ನಮ್ಮ ವಸತಿಯೆಡೆಯಲ್ಲಿ ಮಲಗಿದ್ದಾನೆ. ಆತನಿಗೆ ಔಷಧಿಯ ಹುಲ್ಲನ್ನು ತೆಗೆದುಕೊಂಡು ಹೋಗಿ ಕೊಟ್ಟು ಮರಳಿ ನಿನ್ನಲ್ಲಿಗೆ ಬರುತ್ತೇನೆ. ಅ ಮೇಲೆ ನೀನು ನನ್ನನ್ನು ವಧಿಸುವವನಾಗು. ನಾನು ವಚನಬ್ರಷ್ಟಳಾಗಲಾರೆ, ಕೊಟ್ಟ ಮಾತಿನ ಪ್ರಕಾರ ಮರಳಿ ನಿನಗೆ ಶರಣಾಗುತ್ತೇನೆ, ದಯಮಾಡಿ ಅಲ್ಲಿನ ತನಕ ನನಗೆ ಅವಕಾಶ ಕೊಡು " ಎಂದು ಪ್ರಾರ್ಥಿಸಿತು. ಕಟುಕನಾದ ಬೇಡನೂ ಚಣಕಾಲ ಆಲೋಚಿಸಿದ. ದೈವವೇ ತನಗೆ ಹರಿಣವನ್ನು ತೋರಿಸಿತ್ತು, ಅಂತಹ ದೈವವನ್ನೇ ನಂಬಿ, ಹರಿಣ ಮರಳಿಬರುತ್ತದೆ ಎಂಬ ಅನಿಸಿಕೆಯಿಂದ, ಸಾಯುವ ಮುನ್ನ ತನ್ನ ಪತಿಗಾಗಿ ಔಷಧವನ್ನು ಕೊಟ್ಟುಬರುವ ಅವಕಾಶವನ್ನು ನೀಡಬೇಕು ಎಂದು ನಿರ್ಧರಿಸಿ ಒಪ್ಪಿಗೆ ನೀಡಿದ. ಬೇಡನ ಅನುಮತಿ ಪಡೆದ ಜಿಂಕೆ ಆತನಿಗೆ ನಮಿಸಿ ತನ್ನ ಏನೂ ಅರಿಯದ ಪುಟ್ಟ ಮರಿಯೊಡನೆ ಪತಿಯೆಡೆಗೆ ತೆರಳಿತು.

ಬೇಗ ಬರುತ್ತೇನೆಂದಿದ್ದ ಮಡದಿ ತಡವಾಗಿ ಬಂದಿದ್ದು ಗಂಡು ಹರಿಣಕ್ಕೆ ಆಶ್ಚರ್ಯವಾಗಿತ್ತು! ಬಂದ ಮಡದಿಯ ಮುಖದಲ್ಲಿ ಎಂದಿನ ಹುರುಪಿನ ಕಳೆ ಇರಲಿಲ್ಲ. ಬಹುಶಃ ತನ್ನ ಅನಾರೋಗ್ಯದಿಂದ ಪತ್ನಿಗೆ ಬೇಜಾರಾಗಿರಬೇಕೆಂದು ಯೋಚಿಸಿತು ಗಂಡು ಜಿಂಕೆ. ಪತಿರಾಯನಿಗೆ ಅವಸರದಲ್ಲಿ ಔಷಧಯುಕ್ತ ಹುಲ್ಲನ್ನು ನೀಡಿ ತಾನು ತಡವಾಗಿ ಬಂದಿದ್ದಕ್ಕೆ ಕಾರಣ ತಿಳಿಸಿತು. ವಚನ ನೀಡಿದ ತಾನು, ಇನ್ನೂ ಬೆಳೆಯ ಬೇಕಾದ ಕಂದಮ್ಮನನ್ನೂ ಔಷಧದ ಹುಲ್ಲನ್ನೂ ತಲುಪಿಸಿ ಮರಳಿ ಹೋಗಲು ಬಂದಿರುವುದಾಗಿ ತಿಳಿಸಿತು. ಔಷಧಿಯ ಹುಲ್ಲನ್ನು ತಿಂದ ಪತಿರಾಯ ಪತ್ನಿಹುಲ್ಲೆಯೊಡನೆ ಮಾತಿಗಿಳಿದ. ನಮಗಿನ್ನೂ ಚಿಕ್ಕ ಮಗುವಿದೆ. ನಾನು ಹೋದರೆ ನಿಮಗೇನೂ ತೊಂದರೆಯಾಗಲಾರದು. ನೀನಾದರೋ ಮರಿಗೆ ಹಾಲೂಡಿಸಬೇಕಾಗುತ್ತದೆ. ನೀನು ಗತಿಸಿದರೆ ಮರಿಗೆ ಹಾಲು ಕೊಡುವವರಾರು ? ಹೇಗೂ ಶೀಕಿಗೆ ಬಿದ್ದವ ತಾನು. ಬೇಡನಿಗೆ ನೀನಿತ್ತ ವಚನ ಪೂರೈಕೆಗಾಗಿ ತಾನೇ ಅಲ್ಲಿಗೆ ಹೋಗಿ ತನನ್ನೇ ಅವನಿಗೆ ಅರ್ಪಿಸಿಕೊಳ್ಳುವುದಾಗಿ ಹೇಳಿತು ಗಂಡು ಹರಿಣ. ಹೆಣ್ಣು-ಗಂಡು ಜಿಂಕೆಗಳು ಮಾತನಾಡುತ್ತಿರುವ ವಿಷಯವನ್ನು ಆಲಿಸುತ್ತಿದ್ದ ಮರಿ ಜಿಂಕೆ ಅಪ್ಪ-ಅಮ್ಮರಲ್ಲಿ ಯಾರನ್ನೂ ಕಳೆದುಕೊಂಡು ಬದುಕಲು ನನಗಿಷ್ಟವಿಲ್ಲಾ ತಾನೇ ಅಲ್ಲಿಗೆ ಹೋಗುವುದಾಗಿ ಹೇಳಿತು. ವಿಷಯ ಇತ್ಯರ್ಥವಾಗದೇ ಆ ಇಡೀ ಹರಿಣ ಕುಟುಂಬ ಬೇಡನೆಡೆಗೆ ನಡೆದುಬಂತು.

ಬೇಡನಿಗೆ ಆಶ್ಚರ್ಯವೋ ಆಶ್ಚರ್ಯ! ತಾನು ಬಯಸಿದ್ದು ಒಂದೇ ಹರಿಣ. ಈಗ ದೊರೆಯುವುದು ಒಂದಕ್ಕಿಂತಾ ಹೆಚ್ಚು ! ದೂರದಿಂದಲೇ ನಗುತ್ತಿದ್ದ ಆ ಬೇಡ. ಹರಿಣಗಳು ಬೇಡನ ಹತ್ತಿರಕ್ಕೆ ನಡೆತಂದವು. ತಮ್ಮಲ್ಲಿ ಇತ್ಯರ್ಥವಾಗದ ವಿಷಯವನ್ನೂ ಮತ್ತು ಕೊಟ್ಟವಚನವನ್ನು ಪಾಲಿಸುವ ಧರ್ಮ ಸಮ್ಮತ ನಡೆಯನ್ನೂ ತಿಳಿಸಿ ತಾವು ಮರಳಿ ಬಂದುದಾಗಿ ಹೇಳಿದವು. ವಿಷಯ ತಿಳಿದ ಬೇಡನ ಮನಸ್ಸು ವಿಲವಿಲನೆ ಒದ್ದಾಡಿತು. ಅವರೊಳಗಿನ ಕುಟುಂಬದ ಆ ಪ್ರೀತಿಯನ್ನು ಅಗಲಿರಲಾರದ ಆ ಬದುಕನ್ನೂ ನೆನೆದು ವಧಿಸಲು ಬಳಸುವ ಬಾಣವನ್ನು ಪುನಃ ಅದರ ಸ್ವಸ್ಥಾನಕ್ಕೆ ಸೇರಿಸಿದ. ಹರಿಣಗಳಿಗೆ ಮಂಡಿಯೂರಿ ಕಣ್ಣೀರ್ಗರೆದು ಕೈಮುಗಿದ. ತಾನು ಉಪವಾಸವೇ ಇದ್ದರೂ ಚಿಂತೆಯಿಲ್ಲಾ ನಿಮ್ಮಂತಹ ಕುಟುಂಬವನ್ನು ನಾಶಮಾಡಲಾರೆ. ಇಂದಿನಿಂದ ನನಗಿದೊಂದು ಪಾಠ. ಇನ್ನು ಮೇಲೆ ನಾನು ಪ್ರಾಣಿಗಳನ್ನು ವಧಿಸಲಾರೆ ಎಂದು ತಿಳಿಸಿ ಅವುಗಳಿಂದ ಬೀಳ್ಕೊಂಡ.

ಬೇಡನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಮಹಾರಾಜ, ಆತ ಬಂದ ಸುದ್ದಿ ತಲುಪಿ ಅರಮನೆಯ ಹಜಾರಕ್ಕೆ ಬಂದ. ಬಂದರಾಜನನ್ನು ಕಂಡು ಬೇಡ ಸಾಷ್ಟಾಂಗ ವಂದಿಸಿದ. ಬಿಲ್ಲು-ಬತ್ತಳಿಕೆಗಳನ್ನು ರಾಜನ ಪಾದಕ್ಕೆ ಅರ್ಪಿಸಿ ತಾನಿನ್ನು ಅರಮನೆ ಬೇಟೇಗಾರನ ಹುದ್ದೆಯಿಂದ ನಿವೃತ್ತಿ ಬಯಸಿದ್ದಾಗಿ ತಿಳಿಸಿದ. ಮತ್ತು ಜಿಂಕೆಯ ಮಾಂಸವನ್ನು ತರದಿದ್ದುದಕ್ಕೆ ಕಾರಣವನ್ನೂ ವಿವರಿಸಿದ. ಬೇಡನ ಆಂತರ್ಯದ ಬದಲಾವಣೆಯನ್ನು ಕಂಡು ಚಕಿತಗೊಂಡ ಮಹಾರಾಜ ಅವನಿಗೆ ನೂರು ವರಹಗಳನ್ನೂ ಹೊನ್ನಸರವನ್ನೂ ಕೊಟ್ಟು ಸತ್ಕರಿಸಿದ. ತನ್ನ ರಾಜ್ಯದಲ್ಲಿ ಇಂತಹ ಅಪ್ಪಟ ಹೃದಯ ವೈಶಾಲ್ಯತೆ ಇರುವ ವ್ಯಕ್ತಿಯನ್ನು ಕಂಡು ತಾನು ಬಹಳ ಸಂತುಷ್ಟನಾಗಿದ್ದೇನೆ ಮಾತ್ರವಲ್ಲಾ ಆ ನೆನಪಿನಲ್ಲಿ ಈ ದಿನದಿಂದಲೇ ಅರಮನೆಯಲ್ಲಿ ಮಾಂಸಾಹಾರವನ್ನು ನಿಷೇಧಿಸುವುದಾಗಿ ಘೋಷಿಸಿದ. ಅಂದಿನಿಂದ ರಾಣಿಯ ನಡವಳಿಕೆಯಲ್ಲೂ ಹಲವು ಮಾರ್ಪಾಟುಗಳಾದವು. ಕಟುಕ ಹೃದಯದ ಬೇಡನೊಬ್ಬ ದಯೆ, ಕರುಣೆ, ವಾತ್ಸಲ್ಯದ ಪಾಠವನ್ನು ಆ ಇಡೀ ಅರಮನೆಗೇ ಬೋಧಿಸಿದ್ದ!

ಮನುಷ್ಯರಾದ ನಾವು ನಮ್ಮ ಹೊಟ್ಟೆಗಾಗಿ ಹಲವು ಪ್ರಾಣಿಗಳನ್ನು ವಧಿಸುತ್ತೇವೆ. ಹರಣಮಾಡುವ ಜೀವಗಳ ಸಂಖ್ಯೆಗೆ ಲೆಕ್ಕವಿಲ್ಲ! ಆಹಾರಕ್ಕಾಗಿಯೋ, ಚರ್ಮದ ಉಡುಗೆ-ತೊಡುಗೆಗಳಿಗಾಗಿಯೋ ಪ್ರಾಣಿಗಳ ವಧೆ ನಡೆದೇ ಇದೆ. ನಮಗೆಲ್ಲಾ ಕುಟುಂಬ ವ್ಯವಸ್ಥೆ ಇರುವಂತೇ ಅವುಗಳಿಗೂ ಇರಬಹುದಲ್ಲಾ ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತರಕಾರಿಗಳಿಗೆ/ ಆಹಾರ ಧಾನ್ಯಗಳಿಗೆ ಜೀವನವೇ ಅಷ್ಟು! ಅವುಗಳಿಗೆ ಆ ಮಟ್ಟದ ಮೆದುಳೆಂಬ ಅಂಗವನ್ನು ಪರಮಾತ್ಮ ನೀಡಿಲ್ಲ. ಹೀಗಾಗಿ ಅವುಗಳ ಸೇವನೆ ಯಾವುದೇ ವಧೆಯಲ್ಲ. ಆದರೂ ಧಾನ್ಯಗಳೂ ಬೀಜಗಳೂ ಹಾಗೇ ಇರುತ್ತಿದ್ದರೆ ಇನ್ನೊಂದು ಹುಟ್ಟಿಗೆ ಕಾರಣವಾಗುತ್ತವಾದ್ದರಿಂದ ಅವುಗಳನ್ನು ಸಂಸ್ಕರಿಸಿ ಭುಂಜಿಸುವಾಗ ಭಾವುಕರು ಅನ್ನಬ್ರಹ್ಮನಿಗೆ ಕೈಮುಗಿದು ಬದುಕುವುದಕ್ಕಾಗಿ ಮಾತ್ರ ನಿನ್ನನ್ನು ಸೇವಿಸಬೇಕಾಗಿ ಬಂದುದಾಗಿ ಪ್ರಾರ್ಥಿಸುತ್ತಾರೆ. ಇಂದಿನ ನವಜನಾಂಗ ತಿನ್ನುವುದಕ್ಕಾಗೇ ಬದುಕುತ್ತದೆ ಎಂಬುದು ವಿಪರ್ಯಾಸ!

ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ. ಅಂತಹ ಉತ್ತಮ ಸಂಸ್ಕಾರಗಳು ನಮಗೊದಗಬೇಕಾದರೆ ನಾವು ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ. ನನ್ನ ಹಲವು ಲೇಖನಗಳನ್ನು ಓದುವ ಅನೇಕ ’ಟ್ಯಾಬ್ಲಾಯ್ಡ್ ಕಲಾವಿದರು’ ಗುಂಪು ಗುಂಪಾಗಿ ಬಂದು ವಿಷಕಾರುವ ಬ್ರಾಹ್ಮಣ, ಕೆಟ್ಟ ಬ್ರಾಹ್ಮಣರ ಕುಲ ಎಂದೆಲ್ಲಾ ಆಡುವುದನ್ನು ಅವಲೋಕಿಸಿದ್ದೇನೆ. ಅದು ಅವರ ತಪ್ಪಲ್ಲ. ಅದು ಅವರ ಅಜ್ಞಾನ. ಅವರ ಜೀವಿತದಲ್ಲಿ ಮೊಲಕ್ಕೆ ಮೂರೇ ಕಾಲು ಎಂಬುದನ್ನು ಅವರು ನಂಬುತ್ತಾರೆ, ಅದಷ್ಟೇ ಅವರಿಗೆ ಕಾಣಸಿಗುತ್ತದೆ. ಮೊಲದ ಓಟದ ಪರಿಮಿತಿಗೆ ಇವರ ಓಟ ಹೋಗಲಾಗದುದರಿಂದ ಹಾರುವ ಮೊಲಕ್ಕಿರುವುದು ಮೂರೇ ಕಾಲು ಎಂದು ದೂರದಲ್ಲಿರುವ ಅವರಿಗೆ ಭಾಸವಾಗುವುದು ಸತ್ಯ. ಮಾಂಸಾಹಾರ ಜನ್ಯ ಅಹಂಕಾರ, ತಾಮಸ ಬುದ್ಧಿಯಿಂದ ಅವರ ಸಂಸ್ಕಾರಗಳು ಆ ಮಟ್ಟದಲ್ಲೇ ಆಡುತ್ತಿರುತ್ತವೆ. ತಪ್ಪಿದ್ದರೂ ಯಾವತ್ತೂ ಯಾರಲ್ಲೂ ಕ್ಷಮೆ ಬೇಡುವ ಪರಿಪಾಟ ಅವರದ್ದಾಗುವುದಿಲ್ಲ. " ಬ್ರಾಹ್ಮಣರು ಜರಿದರು, ಬ್ರಾಹ್ಮಣರು ನಮ್ಮನ್ನು ಹತ್ತಿಕ್ಕಿದರು, ಬ್ರಾಹ್ಮಣರು ತಮಗೆ ಸಹಪಂಕ್ತಿ ಕೊಡುವುದಿಲ್ಲ. ಬ್ರಾಹ್ಮಣರು ತಮ್ಮನ್ನು ಕೀಳಾಗಿ ಕಾಣುತ್ತಾರೆ " ಎಂಬ ಘೋಷವಾಕ್ಯ ಎಲ್ಲೆಲ್ಲೂ ರಾರಾಜಿಸುತ್ತದೆ.

ನನ್ನ ದೇಶಬಾಂಧವರೇ,ನಿಮಗಿದೋ ನನ್ನ ಆತ್ಮೀಯ ಕರೆ: ಬನ್ನಿ ಎಲ್ಲರೂ ಬ್ರಾಹ್ಮಣರಾಗಿ. ನಾವು ’ವೇದಸುಧೆ’ಯಲ್ಲಿ ಅದನ್ನೇ ಹೇಳುತ್ತಲೇ ಬಂದಿದ್ದೇವೆ. ಮಾಂಸಾಹಾರ ವರ್ಜಿಸಿ;ಶಾಕಾಹಾರಿಗಳಾಗಿ. ಉತ್ತಮ ಸಂಸ್ಕಾರಗಳು ನಿಮ್ಮದಾಗಲಿ. ಭಾರತೀಯ ಮೂಲದ ಉತ್ತಮ ಗ್ರಂಥಗಳು, ಮಹಾಕಾವ್ಯಗಳೂ, ವೇದ-ವೇದಾಂಗಗಳೂ ನಿಮ್ಮ ನಿಲುವಿಗೆ ದೊರೆಯಲಿ ಎಂದು ಆಹ್ವಾನಿಸುತ್ತಿದ್ದೇನೆ. ಬರಿದೇ ಜರಿಯುವುದರಲ್ಲಿ ಹುರುಳಿರುವುದಿಲ್ಲ. ಯಾರೋ ಮೊನ್ನೆ ಅನಾನಿಮಸ್ಸೆಂಬ ಹೆಸರಲ್ಲಿ ತಮಗೆ ಮೇಲ್ಮಟ್ಟಕ್ಕೆ ಬರಲು ಅವಕಾಶ ಕೊಡುತ್ತಿಲ್ಲಾ ಎಂದು ಆಕ್ರೋಶ ತೋಡಿಕೊಂಡಿದ್ದಾರೆ. ನೋಡೀ, ಎಲ್ಲರಿಗೂ ಆ ಅವಕಾಶಗಳು ಹಿಂದೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ: ಇದಕ್ಕೆ ಉತ್ತಮ ಉದಾಹರಣೆ ಮಹರ್ಷಿ ಮಹೇಶ್ ಯೋಗಿಗಳು. ಅವರು ಹುಟ್ಟಾ ಬ್ರಾಹ್ಮಣರಲ್ಲ! ಆದರೆ ಬ್ರಾಹ್ಮಣ್ಯವನ್ನು ಅನುಸರಿಸಿದರು; ಬ್ರಾಹ್ಮಣರಾದರು!

ಮೊನ್ನೆ ಉಡುಪಿಯ ಹತ್ತಿರದ ಸೇಂಟ್ ಮೇರೀಸ್ ದ್ವೀಪದಲ್ಲಿ ವಿದೇಶೀಯರನ್ನು ಸ್ವಾಗತಿಸಿ ಅರೆಬೆತ್ತಲೆ ಕುಣಿತವನ್ನು ನಡೆಸಿದ್ದಾರೆ. ನಿನ್ನೆ ಮಂತ್ರಿಯೊಬ್ಬರು ವಿಧಾನಸಭೆಯಲ್ಲಿ ಕಾಮಕೇಳಿಯ ದೃಶ್ಯವಿಹಾರಕ್ಕೆ ನಾಂದಿ ಹಾಡಿದ್ದಾರೆ! ಇದೆಲ್ಲಾ ನಡೆಯುತ್ತಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಸತ್ತೆಯ ಅನಿವಾರ್ಯ ಅಂಗವಾದ ಚುನಾವಣೆಗಳಲ್ಲಿ ಬಹುತೇಕ ರೌಡಿಗಳೇ ಸ್ಪರ್ಧಿಸುತ್ತಾರೆ! ಹಿಂದೊಂದು ಕಾಲಕ್ಕೆ ಆಳುವ ರಾಜರು ದೈವತ್ವವನ್ನು ಪಡೆದಿರುತ್ತಿದ್ದರು. ಪ್ರಜೆಗಳನ್ನು ದೇವರೆಂದು ರಾಜರೂ ರಾಜರನ್ನು ದೇವರೆಂದು ಪ್ರಜೆಗಳೂ ಪೂಜನೀಯ ಭಾವದಿಂದ ಕಾಣುತ್ತಿದ್ದರು. ಕರ್ನಾಟಕದ ಎಷ್ಟೊಂದು ಮನೆಗಳಲ್ಲಿ ಮೈಸೂರು ಮಹಾರಾಜರ ಫೊಟೋ ಇಲ್ಲ ? ಮೈಸೂರಿನ ಆಡಳಿತವಿದ್ದ ಪ್ರದೇಶಗಳಲ್ಲಿ ದಸರಾ ಬೊಂಬೆಗಳಲ್ಲಿ ಪ್ರಮುಖವಾಗಿ ಕಾಣುವುದು ರಾಜ-ರಾಣಿಯರನ್ನು ! ರಾಜ-ರಾಣಿಯರನ್ನು ಜನ ಆದರದಿಂದ ಪೂಜಿಸುವ ಮಟ್ಟಕ್ಕೆ ಏರಿಸಿದ್ದರು ಎಂದಮೇಲೆ ರಾಜ-ರಾಣಿಯ ಔನ್ನತ್ಯ ಎಂತಹದಿದ್ದೀತು? ಬ್ರಿಟಿಷರು ಇದ್ದಾಗಲೂ ಇಲ್ಲಿನ ನೈತಿಕ ಮೌಲ್ಯಗಳಿಗೆ ಅವರು ಭಾರೀ ಗೌರವ ಕೊಟ್ಟಿದ್ದರು. ಇದನ್ನು ಸ್ವತಃ ನನ್ನಜ್ಜ ಹೇಳಿದ್ದರ ಜೊತೆಗೆ ಮೊನ್ನೆ ಬೆಂಗಳೂರಿಗೆ ಬಂದಿದ್ದ, ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಚೆನ್ನೈ ಮೂಲದ ಕಲ್ಯಾಣಮ್ ಕೂಡ ಹೇಳಿದ್ದಾರೆ.

ಬರಿದೇ ಬ್ಲೈಂಡ್ ಫಾಲೋವರ್ಸ್ ಆಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಬೇಡಿ: ಅದು ನಮ್ಮ ಉದ್ಧಾರಕ್ಕಿರುವುದಲ್ಲ ಬದಲಿಗೆ ವಿನಾಶಕ್ಕೆಳಸುವುದು. ಭಾರತೀಯ ಮೂಲ ಗ್ರಂಥಗಳ ಬಗ್ಗೆ ಮಿತ್ರ ಶ್ರೀವತ್ಸ ಜೋಶಿ ಕಳೆದ ಭಾನುವಾರ ’ವಿಜಯ ಕರ್ನಾಟಕ’ದಲ್ಲಿ ಅವರ ’ಪರಾಗಸ್ಪರ್ಶ’ ಅಂಕಣದಲ್ಲಿ ’ಅಗ್ನಿಮೀಳೇ ಪುರೋಹಿತಂ’ ಎಂಬ ಲೇಖನ ಬರೆದಿದ್ದನ್ನು ಅನೇಕರು ಓದಿರಬಹುದಲ್ಲ ? ಮೂಲವನ್ನೇ ಗೌರವಿಸದೇ ಕಣ್ಣಿಗೆ ಹಳದಿಬಣ್ಣದ ಪಟ್ಟಿಕಟ್ಟಿಕೊಂಡು ಎಲ್ಲವೂ ಹಳದಿಯಾಗಿ ಕಾಣುತ್ತಿದೆ-ಏನೂ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಹೆಂಡವನ್ನು ರುಚಿ ನೋಡಲೆಂದು ಮೊದಲು ಕುಡಿಯುತ್ತಾರಂತೆ, ಆಮೇಲೆ ಒಳಗೆ ಸೇರಿದ ಹೆಂಡ ಹೊರಗಿನ ಹೆಂಡವನ್ನು ಬಾ ಎನ್ನುತ್ತದಂತೆ, ಆಮೇಲೊಂದು ದಿನ ಅದೇ ಹೆಂಡ ಹೊರಗೆ ನಿಂತು ಬಾ ಎಂದು ಕುಡುಕನನ್ನು ಹೊಂಡದಲ್ಲಿ ಮುಚ್ಚಿಸುತ್ತದಂತೆ! ಇವತ್ತಿನ ಮನೆಗಳಲ್ಲಿ ಟೆರೇಸ್ ಗಾರ್ಡನ್ ಮಾಡಿ ಕುಳಿತು ಹೆಂಡದ ಪಾರ್ಟಿಗಳನ್ನು ನಾವು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದೇವೆ. ಯಾವುದೆಲ್ಲಾ ನಮಗೆ ಬೇಡವೋ ಅವಷ್ಟೂ ಬಂದಿವೆ, ಬರುತ್ತಿವೆ, ಬರುತ್ತವೆ. ಅವುಗಳನ್ನು ತರಲು ಆ ಯಾ ಸಂಸ್ಕೃತಿಗೆ ಇದೀಗಾಗಲೇ ಮನಸೋತ ವಿಟಪುರುಷರು ರಾಯಭಾರಿಗಳಾಗಿದ್ದಾರೆ! ಮಹಾತ್ಮರನ್ನೂ, ಪ್ರಸಿದ್ಧ ಕ್ಷೇತ್ರಗಳನ್ನೂ ಕುಡಿದ ಅಮಲಿನಲ್ಲಿ ನಾವು ಚಿತ್ರಿಸ ಹೊರಡುತ್ತೇವೆ; ನಮ್ಮ ಮೇಲೇ ನಾವು ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಅರಿತೋ ಅರಿಯದೆಯೋ ಕುರಿಮೆಂದೆಯಲ್ಲಿರುವ ಇನ್ನೊಂದು ಕುರಿಯಂತೇ ಎಡಪಂಥದ ಬುದ್ಧಿಜೀವಿಗಳು ಎನಿಸಿಕೊಳ್ಳುವುದಕ್ಕೆ ಯುವ ಜನಾಂಗ ಇಷ್ಟಪಡುತ್ತದೆ.

ಯಾವ ನೆಲದಲ್ಲಿ ಸಂತರು, ಹರಿದಾಸರು ಗೋಪಾಲಬುಟ್ಟಿಯನ್ನೂ ಹರಿದೀಕ್ಷೆಯನ್ನೂ ಪಡೆದರೋ ಅದೇ ನೆಲದಲ್ಲಿ ’ಬಾಟಲಿ’ಯನ್ನೂ ’ಬುದ್ಧಿಜೀವಿಚೀಲ’ವನ್ನೂ ದೀಕ್ಷೆಯಾಗಿ ನಾವಿಂದು ಪಡೆಯಹೊರಟಿದ್ದೇವೆ! ಹಿಂದೆ ಇದ್ದವರಿಗೆ ಆಗಿಹೋದವರಿಗೆ ಬುದ್ಧಿ ಇರಲಿಲ್ಲಾ ಆವರೆಲ್ಲಾ ಮಂಕುದಿಣ್ಣೆಗಳೆಂದು ಅವರೆಲ್ಲರುಗಳ ಮೇಲೆ ಗೂಬೆ ಕೂರಿಸುತ್ತಾ ಲೋಕೋಪಕಾರಕ್ಕಾಗಿ ನಮ್ಮ ಜನನವಾಗಿದೆ ಎಂದೇ ಭಾವಿಸುತ್ತೇವೆ; ಹಾಗೇ ಅಹಂಕಾರದಿಂದ ಮೆರೆಯತೊಡಗುತ್ತೇವೆ. ’ಅಗ್ನಿಮೀಳೇ ಪುರೋಹಿತಂ’ ಎಂಬುದರ ಅರ್ಥಕ್ಕೆ ಅನರ್ಥಹಚ್ಚಿ ಓಹೋ ಪುರೋಹಿತರು ತಮಗೆ ಮಾತ್ರ ಅಗ್ನಿ ಎಂದು ಹೇಳುತ್ತಾರೆ ಎಂದುಕೊಳ್ಳುತ್ತೇವೆ; ಸಂಸ್ಕೃತಿಯ ಆಕರವಾದ ತಾಯಿ ಸಂಸ್ಕೃತಕ್ಕೆ ’ಸತ್ತ ಭಾಷೆ’ ಎಂಬ ಬಿರುದು ಕೊಟ್ಟಿದ್ದೇವೆ. ಒಬ್ಬ ಕುಣಿದ ಎಂದು ಇನ್ನೊಬ್ಬ ಕುಣಿದ, ಇನ್ನೊಬ್ಬ ಕುಣಿದಾ ಎಂದು ಮತ್ತೊಬ್ಬ ಕುಣಿದ ....ಹೀಗೇ ಬ್ರಾಹ್ಮಣರು ನಮ್ಮನ್ನು ತುಳಿದರು ಎನ್ನುತ್ತಾ ಹೊರಗೆ ತೋರಗೊಡದೇ ಬಚ್ಚಿಟ್ಟ ವಿಷಗಳಿಂದ ಬುಸುಗುಟ್ಟುವ ಕಾಳಿಂಗಗಳಾಗಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಇನ್ನಾದರೂ ಅರಿಯಲು ನೀವೆಲ್ಲಾ ಮೇಲಿನ ಕಥೆಯ ಬೇಡನಲ್ಲಾದ ಬದಲಾವಣೆಯನ್ನು ತಂದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ; ಅದನ್ನೇ ಸ್ವಾಗತಿಸುತ್ತೇನೆ.


[ಈಗ ಸಮಷ್ಟಿಯಲ್ಲಿನ ನಮ್ಮ ಎಂಬುದನ್ನು ಇಲ್ಲಿಗೆ ನಿಲ್ಲಿಸುತ್ತಾ ] ಬ್ರಾಹ್ಮಣರೆನಿಸಿದ ನಮ್ಮ ಬಗ್ಗೆ :

ಇನ್ನು ಜಾತಿಯಿಂದಲೂ ನೀತಿಯಿಂದಲೂ ವಸುಧೈವ ಕುಟುಂಬಕಮ್ ಎಂಬುದನ್ನು ನಂಬಿ, ಕೆಲವು ಆದರ್ಶಗಳನ್ನು ಆತು, ಬೈಸಿಕೊಳ್ಳುವ ಬ್ರಾಹ್ಮಣರಾದರೂ ಸಮಸ್ತರಿಗೂ ಒಳಿತಾಗಲಿ ಎಂದೇ ನಾವು ಸದಾ ಹಾರೈಸಿದ್ದೇವೆ; ಹಾರೈಸುತ್ತಿದ್ದೇವೆ; ಹಾರೈಸುತ್ತೇವೆ:

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು ||

4 comments:

  1. संस्कारात् द्विज उच्यते । ಮಡೆಸ್ನಾನ ಆತು, ಈಗ ಪಂಕ್ತಿಭೇದ, ವಿವೇಕಾನಂದ ಆದಮೇಲೆ ಶ್ರೀಧರಸ್ವಾಮಿಗಳು, ಮೊನ್ನೆ ಶ್ರೀನಿವಾಸರು ಹೊಸದಿಗಂತದಲ್ಲಿ ವಿವಿಧ ಪಂಕ್ತಿಭೇದಗಳು ಸಹ್ಯ. ಭೋಜನಪಂಕ್ತಿಭೇದ ಅಸಹ್ಯವೇಕೆ ಎಂದು ಚೆಲೋ ಬರೆಜ್ರು ಭಟ್ಭಾಗ ಓದಿದ್ರ ?

    ReplyDelete
    Replies
    1. ಉತ್ತರವನ್ನು ಮೊದಲಿನ ಪ್ರತಿಕ್ರಿಯೆ ಹೇಳುತ್ತದೆ ! ಭೋಜನಕ್ಕೆ ಸರಕಾರೀ ಸೌಲತ್ತುಗಳು ಸಿಗುವುದಿಲ್ಲ; ಮೀಸಲಾತಿಯೂ ಇಲ್ಲ. ಹೀಗಾಗಿ ಅಲ್ಲೆಲ್ಲಾ ಒಟ್ಟಿಗೇ ನಡೆಯಲಿ ಎಂಬುದು ನಮ್ಮ ಧೋರಣೆ !

      Delete
  2. ನಿಮ್ಮ ಬರಹಗಳಲ್ಲಿ ನನಗೆ ಅತೀ ಇಷ್ಟವಾದ ಬರಹ ಇದು.. ತುಂಬಾ ಕೃತಜ್ನತೆಗಳು..

    ReplyDelete
  3. ಓದುಗ ಮಹಾಶಯರೇ, ಭಾರತೀಯ ಮೂಲ ಸಂಸ್ಕೃತಿಯ ಉಳಿವಿನ ಬಗ್ಗೆ ಆಸ್ಥೆ ತಳೆದಿರುವ ನಿಸ್ಪೃಹ ರಾಜಕಾರಣಿಗಳಲ್ಲಿ ಇವತ್ತಿನ ಕಾಗೇರಿ ಒಬ್ಬರು.ಭಗವದ್ಗೀತೆಯ ಅಳವಡಿಕೆ ಪಠ್ಯದಲ್ಲಾಗುವುದರಿಂದ ಅವರಿಗಾಗುವ ಲಾಭ: ದೇಶದ ಸಂಕೃತಿಯ ಉಳಿವಿಗೆ ತಾನು ಅಳಿಲು ಸೇವೆಯ ಕೊಡುಗೆ ನೀಡಿದೆ ಎಂದುದೇ ಹೊರತು ಮತ್ತೇನಲ್ಲ. ಪಕ್ಷಾತೀತವಾಗಿ ಚಿಂತನೆ ಮಾಡಬೇಕಾದ ಇಂತಹ ಮಹತ್ತರ ವಿಷಯಗಳಲ್ಲಿ ರಾಜಕಾರಣಿಗಳು ಇಲ್ಲದ ರಾಜಕೀಯ ತೂರಿಸುವುದು ವಿಷಾದನೀಯ, ಖಂಡನೀಯ. ಈ ಕುರಿತು ಹೊಸದಿಗಂತದಲ್ಲಿ ೯.೦೨.೨-೧೨ ರಂದು ಡಾನಿ ಪಿರೇರಾ ತಮ್ಮ ’ದಿಶಾ’ ಅಂಕಣ ಬರೆದರು ಮತ್ತು ೧೦.೦೨.೨೦೧೨ರಂದು ಎಂ.ಶ್ರೀನಿವಾಸನ್ ಅವರು ’ಚಿತ್ತ ಭಿತ್ತಿ’ ಬರೆದಿದ್ದಾರೆ. ಇವುಗಳನ್ನು ತಾವು ದಯಮಾಡಿ ಓದಿಕೊಳ್ಳಿ. ಯಾರೋ ಬರುವುದು ಇರುವುದು ಹೋಗುವುದು ಇದು ಎಲ್ಲರ ಜೀವನದ ಭಾಗ, ಆದರೆ ನಮ್ಮ ಹಿರಿಯರು, ನಮ್ಮ ಪೂರ್ವಜರು ಅನುಗ್ರಹಿಸಿದ್ದ ಉತ್ತಮ ಸಂಸ್ಕೃತಿ ಅಳಿಯದಿರಲಿ ಎಂಬುದು ನನ್ನ ಅಪೇಕ್ಷೆ.

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು.

    ReplyDelete