ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 14, 2010

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!


ಅಂತೂ ಇಂತೂ ನಿತ್ಯಾನಂದನ ಬಿಡುಗಡೆಯಾಯ್ತು! ಆತನ ಭಕ್ತರ ಮನಸ್ಸಿಗೆ ಕಾಡಿನಿಂದ ಶ್ರೀರಾಮ ವನವಾಸ ಮುಗಿಸಿ ಬಂದದ್ದಕ್ಕಿಂತ ತುಸು ಹೆಚ್ಚೇ ಖುಷಿಯಾಯ್ತು. ಛೆ ಛೆ ನಮ್ಮ ಸ್ವಾಮೀಜಿ ಹಾಗಲ್ಲ- ತುಂಬಾ ಸೆನ್ಸಿಟಿವೆ ಮ್ಯಾಟರು ಎನ್ನುತ್ತಿರುವ ನಿತ್ಯಭಕ್ತಾನಂದರುಗಳಿಗೆಲ್ಲ ನಮೋನ್ನಮಃ ! ಭಾರತಮಾತೆ ಬಹುಶಃ ಬಹಳದಿನಗಳಮೇಲೆ ಪುರುಸೊತ್ತು ಮಾಡಿಕೊಂಡು ಒಮ್ಮೆ ನಕ್ಕಿರಬೇಕು! ಸ್ವಲ್ಪ ಕಣ್ಣು ಕ್ಲೀಯರ್ ಇದ್ದವರಿಗೆ ಪಂಚಾಗ್ನಿ ಎಂದು ಹೆಸರಿಸಿದ ಚಳಿಗೆ ಹಾಕಿಕೊಳ್ಳುವ ಬೆಂಕಿಯ ಮಧ್ಯೆ ಆಗಾಗ ಸಣ್ಣಗೆ ಕಣ್ಣು ಕಿರಿದಾಗಿ ತೆರೆದು ಮೀಡಿಯಾದವರ ಕ್ಯಾಮರಾ ನೋಡುತ್ತಿದ್ದ ನಿತ್ಯಾನಂದನನ್ನು ನೋಡಲು ಕಣ್ಣುಗಳೆರಡೂ ಸಾಲದು! ನಿತ್ಯ ಬರುತ್ತಿದ್ದಂತೆ ಇಡೀ ಆಶ್ರಮಕ್ಕೆ ಆಶ್ರಮವೇ ಎದ್ದು ಕುಣಿಯಿತು. ಪೂರ್ಣಕುಂಭ ಸ್ವಾಗತ ಬೇರೆ! ಲೋಕದಲ್ಲಿ ಇನ್ನೆಲ್ಲೂ ಸಿಗದ ಆನಂದವನ್ನು ಪಡೆಯುತ್ತಿರುವ ಎಲ್ಲಾ ಆನಂದಗಳು-ಮಾತಾನಂದಗಳು ಖುದ್ದು ಹಾಜರಿದ್ದು ನಿತ್ಯಾನಂದವನ್ನು ಬರಮಾಡಿಕೊಂಡರು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಹಲವು ಜನ ಹೆಚ್ಚಿನ ಶಿಕ್ಷಣ ಪಡೆದ ಭಕ್ತರೂ ಇದ್ದರು. ಅಂದಹಾಗೆ ಈ ಪಂಚಾಗ್ನಿಗೆ ಸೀಮೆ ಎಣ್ಣೆ ಸುರಿದು ಶಾಸ್ತ್ರೋಕ್ತವಾಗಿ ಬೆಂಕಿ ಹಚ್ಚಲಾಯಿತು! ಅಲ್ಪ ಸ್ವಲ್ಪ ಹೊಗೆಉಗುಳುತ್ತ ಆಗಾಗ ಅರ್ಧ ಅಡಿ ಎತ್ತರಕ್ಕೆ ಉರಿದ ಬೆಂಕಿಯನ್ನೇ ಮಾಧ್ಯಮದವರು ಕಷ್ಟಪಟ್ಟು ಕವರೇಜ್ ಮಾಡಿ ಸಾರ್ವಜನಿಕರಿಗೆ ಪಂಚಾಗ್ನಿ ಎಂದು ತೋರಿಸಬೇಕಾಯಿತು! ಇಂತಹ ಅಡ್ಡಕಸುಬಿ ಖಡ್ಡ ಸ್ವಾಮಿಗಳು ಬಹಳ ಒಳ್ಳೆಯ ಶಬ್ಢಗಳನ್ನೆಲ್ಲ ದುರುಪಯೋಗ ಮಾಡುತ್ತಾರಲ್ಲ ಎಂಬುದೇ ಖೇದದ ಮಾತು. ಅಂತೂ ಪಂಚಾಗ್ನಿ ಪ್ರಾಯಶ್ಚಿತ್ತ ಲೋಕ ಮಾಡಿದ ತಪ್ಪಿಗೆ ಎಂದೂ ಭಕ್ತರು ಟಿ.ವಿಯಲ್ಲಿ ಕೂತು ಹೇಳಿಕೆ ಕೊಟ್ಟರು! ಈ ಲೋಕಕಲ್ಯಾಣಾಥದ ಪ್ರಾಯಶ್ಚಿತ್ತದ ೨೧ ದಿನಗಳ ಕಾಲ ಪ್ರತೀ ದಿನ ಗಾಂಜಾ-ಆಫೀಮು ಬಳಕೆಯೂ ಇದ್ದರೆ ಬಿದ್ದ ಮಳೆಯ ಚಳಿಗೆ ಸ್ವಲ್ಪ ಬೆಚ್ಚಗೆ ಹಚ್ಚಗೆ ಇರಬಹುದಾಗಿತ್ತು ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ ಅನಿಸುತ್ತದೆ.

ಪಂಚಾಗ್ನಿಯ ವರ್ಣನೆ ಕೆಲವು ವೇದ-ಪುರಾಣ ಭಾಗಗಳಲ್ಲಿ ಇದೆ ಎಂಬುದನ್ನು ಕೇಳಿದ್ದೇನೆ. ವ್ಯಕ್ತಿ ತನಗೆ ತಾನೇ ಪ್ರಾಯಶ್ಚಿತ್ತಕ್ಕಾಗಿ ೪೫ ದಿನಗಳ ಕಾಲ ಚತುರಸ್ರ ಮಂಡಲ ಅಂದರೆ ಚೌಕಾಕಾರದ ಕುಂಡವನ್ನು ಸುತ್ತಲೂ ಕೊರೆದು, ಅದರಲ್ಲಿ ವ್ಯಕ್ತಿ ತಾನು ಕುಳಿತಾಗ ಹೊರಗೆ ಕಾಣದಷ್ಟು ಎತ್ತರದವರೆಗಿನ ಬೆಂಕಿಯನ್ನು ನಾಲ್ಕೂ ದಿಕ್ಕಿನಲ್ಲಿ ಉರಿಸಿದರೆ ಮೇಲಿಂದ ಉರಿವ ಸೂರ್ಯ ಐದನೆಯ ಅಗ್ನಿ ಎಂಬುದನ್ನೂ ಪರಿಗಣಿಸಿ, ಸತತ ನಲವತ್ತೈದು ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಆರಂಭಿಸಿ ಅಪರಾಹ್ನದವರೆಗೆ ಪ್ರತಿನಿತ್ಯ ನಡೆಸುವ ಪ್ರಾಯಶ್ಚಿತ್ತ ವಿಧಿ ಇದು. ಇದನ್ನು ಹೋಗಿ ಯವುದೋ ಚಿಲ್ಲರೆ ಬೆಂಕಿಗೆ ಹೋಲಿಸಿ ಪಂಚಾಗ್ನಿ ಎಂದರೆ-ಹೇಳಿದ್ದನ್ನು ನಾವೆಲ್ಲ ಕೋಲೆ ಬಸವನ ಥರ ಸರಿಯೆಂದು ನಂಬಿದರೆ ಜಗತ್ತಿನಲ್ಲಿ ಮೂರ್ಖರ ಸಂಖ್ಯೆ ಜಾಸ್ತಿಯಾದೀತು ಎಂಬುದು ನಮ್ಮ ಅಂಬೋಣ!

ಪರಮಹಂಸರದು ಅತೀತಾಶ್ರಮ-ಅವರು ಏನುಬೇಕಾದರೂ ಮಾಡಬಹುದು ಎಂದೆಲ್ಲ ಹುಚ್ಚು ಹೇಳಿಕೆ ಕೊಡುವ ಆಧ್ಯಾತ್ಮಿಕವಾಗಿ ಏನೂ ಓದದ-ಅರಿಯದ ಆನಂದಗಳನ್ನು-ಮಾತಾನಂದಗಳನ್ನು ನೋಡಿದರೆ ಪಾಪ ಅನ್ನಿಸುತ್ತಿತ್ತು. ಅಲ್ಲಾ ಸ್ವಾಮೀ ನಮಗೆ ಸನ್ಮಾರ್ಗ ಬೋಧಿಸುವ ಸರಿಯಾದ ಸನ್ಯಾಸಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇರುವಾಗ ಇವರಿಗೆಲ್ಲ ಯಾವ ಮಂಕು ಕವಿದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅನೇಕ ಕಾಂತರು-ಕಾಂತೆಯರೂ-ಕಾಂತಿಯರೂ ಬಂದು ದೊಪ್ಪೆಂದು ಅಡ್ಡಬೀಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಒಟ್ಟಿನಲ್ಲಿ ನಿತ್ಯಾನಂದನಿಗೆ ಪುಗಸಟ್ಟೆ ಪ್ರಚಾರ ಸಿಕ್ಕಂತಾಯ್ತು. ನಮ್ಮ ಸಮಾಜವೇ ಹೀಗೆ. ಇಂತಹ ಹಗಲುಗಳ್ಳರನ್ನೇ ನಂಬುವುದು,ಅವರು ಎಲ್ಲರ ಮಧ್ಯೆ ವಿಜೃಂಭಿಸುವಂತೆ ಮಾಡುವುದು. ನೆನೆಪಿರಲಿ-ಬಿಡದಿಗೆ ಭಕ್ತರು ಹೆಚ್ಚುವ ಕಾಲ ಬಂದಿದೆ! ನಿತ್ಯಾನಂದನಿಗೆ ಶುಕ್ರದೆಸೆ ಬಂದಿದೆ. ನಾವೂ ಯಾಕೆ ಕಮ್ಮಿ ಎನಿಸಿಕೊಳಬೇಕು? ನಾವೆಲ್ಲ ಸೇರಿ ಒಂದು ಭಜನೆ ಹಾಡಿದರೆ ಹೇಗೆ? ತಗಳಿ-- ಭಜನೆ ನಾನೇ ರಚಿಸಿ ಕೊಟ್ಟಿದ್ದೇನೆ >>>

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!

[ರಾಮ ಮಂತ್ರವ ಜಪಿಸೋ ಎಂಬಂತೆ ]

ಪಂಚಾಗ್ನಿಯ ಉರಿಸೋ ನಿತ್ಯನೇ ನಿನ್ನ
ಪಂಚಾಗ್ನಿಯ ಉರಿಸೋ

ನಾರೀನರರ ಮಧ್ಯೆ ಕೆದಕಿ ವರ್ತುಳ ಕೊರೆದು
ನೂರಾರು ಲೀಟರು ಸೀಮೆ ಎಣ್ಣೆಯ ಸುರಿದು
ಭಾರೀ ಜನಸ್ತೋಮ ಮತ್ತೆ ಮೀಡಿಯಾದವರು
ಹಾರಿ ಬಂದು ನೋಡಿ ದಂಗುಬಡಿಸಿಕೊಂಬ

ಪಂಚಾಗ್ನಿಯು ಎಂದರೇನೆಂದು ತಿಳಿಯದೆ
ಹೊಂಚು ಹಾಕಿ ಜನಕೆಳೆಯೊ ನಾಮವನು
ಮಂಚವೇರಿ ಮುದದಲಿ ನರ್ತಿಸು ಮತ್ತೆ
ಕೊಂಚ ನೆನೆಪಿರಲಿ-ಸೀಡಿ ಕ್ಯಾಮರಾಗಳು!

ಓದಿದವರಿಗೆಲ್ಲ ಮಂಕು ಬೂದಿಯ ಎರಚಿ
ಮಾಧವ ಕಲೆ ಕಲಿಸಿದೆಯೊ ನೀ ಗುರುವೇ ?
ಆದಿನಾರಾಯಣ ತಾನೇ ಎಂದರೂ
ಖೇದ ನಮಗೆ ಜನ ನಂಬುತಾ ಕೆಟ್ಟರು!

’ಪರಮಹಂಸ’ ಶಬ್ಧವನೆಲ್ಲ ಬಳಸುತ
ಚರಮ ಹರಿಯುವಂತ ನೋವುತಾರದಿರೊ
ಕರುಮನಮದು ಅನುಭವಿಸಿ ತೀರಲು
ಮರಿಮಕ್ಕಳು ಕಾವಿ ನೋಡಿ ಹೆದರಲು !

ಕಾಂತರನೇಕರು ನಿನ್ನ ಭಕುತರು
ಕಾಂತಿಯರೂ ಕಾವಿ ತೊಟ್ಟು ಬಂದರು
ಆಂತರ್ಯದಿ ಎರ್ರೋಟಿಕ್ ಪ್ಲೆಷರು
ಶಾಂತಿಮಾಡು ನೀ ಕಾವಿಯ ತೆರೆದು !

ಬಿಡದಿಯ ಭಕ್ತರ ದಂಡನು ತೊರೆದು
ತಡಮಾಡದೆ ಹಿಮಾಲಯ ಹಿಡಿದು
ಬಿಡದೇ ಖಾಕಿಗಳು ನಿನ್ನ ಹುಡುಕಲು
ಅಡಿಗಡಿಗೂಮ್ಮೆ ನಗುತಲಿ ತಾ ಬಂದೆ !

7 comments:

  1. ಸತ್ಯದರ್ಶನ ಮಾಡಿಸಿದ್ದೀರಿ ಭಟ್ಟರೆ. ಸೀಮೇಎಣ್ಣೆ ಸುರಿದು ಪಂಚಾಗ್ನಿಯನ್ನು ಸೃಷ್ಟಿಸುವ ಮತ್ತು ಅದನ್ನು ಅಜ್ಞಾನಿಗಳಂತೆ ವರದಿ ಮಾಡಿರುವ ಪತ್ರಿಕೆಗಳಿಗೆ ಎಲೆ-ಅಡಿಕೆ ಹಾಕಿಕೊಂಡು ಉಗಿಯಬೇಕು. ಜೈಲಿನಲ್ಲಿ ಇರುವವರೆಗೂ ’ನಿತ್ಯಾನಂದ’ ಎನ್ನುತ್ತಿದ್ದ ಮಾಧ್ಯಮಗಳು ಈಗ ’ನಿತ್ಯಾನಂದ ಸ್ವಾಮಿಜಿ’ ಎನ್ನುತ್ತಿವೆ. ಎಂತಹ ಮಾಟಗಾರರಿವರು !.

    ವಾಸ್ತವವನ್ನು ಚೆನ್ನಾಗಿ ವಿಡಂಬಿಸಿದ್ದೀರಿ. ಅದೆಷ್ಟು ದೊಡ್ಡವರ ದುಡ್ಡು ನಿತ್ಯಾನಂದನ ಬಳಿ ಸಿಕ್ಕಿಹಾಕಿಕೊಂಡಿದೆಯೋ ಯಾರಿಗೆ ಗೊತ್ತು !!??

    ಪಂಚಾಗ್ನಿಯಲ್ಲಿ(ಹೆಲವೆಡೆ ಹೊಟ್ಟಿನ ಬೆಂಕಿ ಎಂದಿದೆ..confusion) "ಕುಮಾರಿಲಭಟ್ಟರು " ತಮ್ಮ ದೇಹವನ್ನು ದಹಿಸಿಕೊಳ್ಳುತ್ತಿದ್ದರು, ಆಗ ಶ್ರೀ ಶಂಕರರು ಅಲ್ಲಿಗೆ ಆಗಮಿಸಿದರೆಂದು ಓದಿದ್ದೇನೆ. ನನಗೂ ಇದರ ಬಗ್ಗೆ ಸ್ಪಷ್ಟತೆಯಿಲ್ಲ. ತಮಗೆ ಗೊತ್ತಿದ್ದರೆ ತಿಳಿಸಬಹುದೆ ?

    ReplyDelete
  2. ಭಟ್ಟರೆ,
    ನಿತ್ಯಾನಂದ ಭಜನೆ ತುಂಬ ಚೆನ್ನಾಗಿದೆ. ಬಿಡದಿ ಆಶ್ರಮದಲ್ಲಿ ನಿತ್ಯವೂ ಹಾಡಲು ಯೋಗ್ಯವಾಗಿದೆ!

    ReplyDelete
  3. ತಮ್ಮ ಕಡು ವಿಡ೦ಬನೆಯು ಕಡಿಮೆಯಾಯಿತು ಪ೦ಚಾಗ್ನಿ-ನಿತ್ಯಾನ೦ದನಿಗೆ. ಸಿಡಿ-ಕ್ಯಾಮೆರಾ ಬಗ್ಗೆ ಎಚ್ಚರವಿರಲಿ ಎ೦ದು ಎಚ್ಚರಿಸಿದ್ದು ಚೆನ್ನಾಗಿದೆ. ಮೊದಲು ಅವನ ಸುತ್ತ ಸೇರಿರುವ -ಆನ೦ದ ಆನ೦ದಿಯರನ್ನು ಹಿಡಿದು ಪಚಾ೦ಗ್ನಿಯಲ್ಲಿ ಉರಿಸಿದರೆ ಸಮಾಜದ ಸ್ವಲ್ಪ ಸ್ವಾಸ್ಥ್ಯವನ್ನು ನೋಡಬಹುದೇನೋ?
    ಚೆ೦ದದ ಲೇಖನ. ಪತ್ರಿಕೆಗೆ ಕನಿಷ್ಠ ವಾಚಕರ ವಾಣಿಗಾದರೂ ಕಳಿಸಿ.

    ReplyDelete
  4. ಬಹಳ ಚೆನ್ನಾಗಿದೆ ತಮ್ಮ ಮಾತಿನ ಪೆಟ್ಟು. ನಿತ್ಯಾನಂದ ಭಾರೀ ಚತುರ, ಅವನು ಎಲ್ಲವನ್ನೂ ತೊರೆದೇ ಸಂನ್ಯಾಸಿ ಆದವನಿಗೆ ಅವುಗಳ ಚಿಂತೆ ಎಲ್ಲಿ(ಮಾನ ಮರ್ಯಾದೆ, ನೀತಿ ತೊರೆದವ). ಇನ್ನೂ ಅವನನ್ನು ಆರಾಧಿಸುತ್ತಿರುವ ಮಂದಿ ಮೂರ್ಖರಲ್ಲದೆ ಮತ್ತೇನು! ತಮ್ಮ ಕವನ ಯಾವತ್ತೂ ಚೆನ್ನಾಗಿರುತ್ತೆ.

    ReplyDelete
  5. ಪಂಚಾಗ್ನಿಗಿಂತ ನಮ್ಮ ಒಡಲೊಳಗಿನ ಅಗ್ನಿಯೇ ಸುಡುತ್ತಿರುವಾಗ, ಮನದಲ್ಲಿ ಬೇಗುದಿ ಎಂಬ ಅಗ್ನಿ ದಹದಹಿಸುತ್ತಿರುವಾಗ, ಹೊರಗೆ ಬೂಟಾಟಿಕೆಗೆ ಯಾಕೆ ಪಂಚಾಗ್ನಿ ಎಲ್ಲ? ಪಂಚಾಗ್ನಿಯ ಬಗ್ಗೆ ನಾನಂತೂ ಬಹಳ ತಲೆಕೆಡಿಸಿಕೊಂಡಿಲ್ಲ ಸುಬ್ರಹ್ಮಣ್ಯರೇ, ಆದಷ್ಟೂ ಅದರ ಬಗ್ಗೆ ಪ್ರಯತ್ನಿಸಿ ತಿಳಿಸಲು ನೋಡುತ್ತೇನೆ! ಆದರೆ ನನಗಾದ ಆಶ್ಚರ್ಯವೆಂದರೆ ಇಂತಹ ಒಳ್ಳೆಯ ಸಂಸ್ಕಾರ-ಶಬ್ಧಗಳನ್ನೆಲ್ಲ ವಿರೂಪಕ್ಕೆ ಬಳಸುತ್ತಿರುವುದು.

    ಸುನಾಥ ಸಾಹೇಬರೇ, ಬಿಡದಿಯಲ್ಲಿ ಇದನ್ನು ರಾಷ್ಟ್ರಗೀತೆಯಂತೆ ಎಲ್ಲಾಕಾರ್ಯಕ್ರಮಗಳಿಗೂ ಮುನ್ನ ಹಾಡಿದರೆ ಒಳ್ಳೆಯದೇನೋ ಅನಿಸುತ್ತಿದೆ!

    ಸೀತಾರಾಮ ಸರ್, ಅತಿಶಿಕ್ಷಿತರು ಆ ಆನಂದ-ಮಾತಾನಂದಗಳು, ಅವರಿಗೆ ಮನಶ್ಯಾಂತಿ ಇಲ್ಲ, ಹೀಗಾಗಿ ವಿದೆಶೀಯರಂತೆ ಅಲ್ಲಿಗೆ ಸೇರಿಕೊಂಡಿದ್ದಾರೆ. ಅವರನ್ನೇ ಮರುಳುಮಾಡಿದ ನಿತ್ಯಾನಂದನ ಬುದ್ಧಿಗೆ ಏನನ್ನುತ್ತೀರಿ? ಕೆಲವು ಮಾತಾನಂದಗಳು ಅನೇಕಬಾರಿ ಮಾತೆಯರಾಗುವ ಪೂರ್ವತಯಾರಿ ನಡೆಸಿ ಮತ್ತೆ ಸದ್ಯಕ್ಕೆ ಮರಿನಿತ್ಯಾನಂದಗಳು ಬೇಡ ಎಂಬ ಅನಿಸಿಕೆಯಿಂದ ಹೊರಬಂದಿದ್ದಾರೆ ಎನಿಸುತ್ತಿದೆ.

    ಸಾಗರಿಯವರೇ, ನನಗೆ ನನ್ನ ಕಾವ್ಯಗಳೇ ರುಚಿಸದ ಸ್ಥಿತಿ ನಿತ್ಯಾನಂದ ವಿಹಾರದಿಂದ ಉಂಟಾಗಿದೆ! ಏನುಮಾಡೋಣ, ಸಹಿಸಿಕೊಳ್ಳಬೇಕು. ಇನ್ನೂ ಏನೇನು ಕಾದಿದೆಯೋ ಪಂಚಾಗ್ನಿ ಮನುಷ್ಯರೂಪದಲ್ಲಿ ಬಂದರೆ ಕೇಳಬಹುದಿತ್ತು ಅಲ್ಲವೇ ?

    ಪ್ರತಿಕ್ರಿಯಿಸಿದ ತಮಗೆಲ್ಲರಿಗೂ ಧನ್ಯವಾದಗಳು, ಇನ್ನೂ ಓದಲಿರುವ, ಓದಿ ಸುಮ್ಮನೇ ನೇಪಥ್ಯ ಸೇರಿರುವ ಎಲ್ಲಾ ಮಿತ್ರರಿಗೂ ಕೂಡ ಧನ್ಯವಾದಗಳು.

    ReplyDelete
  6. ಭಟ್ ಸರ್,,
    ನಾನು ಪೇಪರ್ ನಲ್ಲಿ ಓದಿ,,ಬೇಸರ ಆಯಿತು... ಅಲ್ಲ ಏನೋ ನ್ಯೂಸ್ ಸಿಗುತ್ತೆ ಅಂತ,, ಇಂಥ ಚೀಪ್ ಜನರ ನ್ಯೂಸ್ ಅನ್ನು ಕೊಡುತ್ತಾರಲ್ಲ ಪೇಪರ್ ನವರು ಟಿವ ನವರು,, ಬೇರೆ ಒಳ್ಳೆಯ ಯಾವ ನ್ಯೂಸ್ ಕೂಡ ಸಿಗಲಿಲ್ಲವೇ....
    ಇನ್ನು ಪಂಚಾಗ್ನಿಯ ವಿಚಾರ ಗೊತ್ತಿರಲಿಲ್ಲ... ನಿಮ್ಮ ಬರಹ ಓದಿ ತಿಳಿದುಕೊಂಡೆ.... ಒಳ್ಳೆಯ ಬರಹ...

    ReplyDelete