ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 18, 2010

ಭೂರಮೆಯ ಭೂರಿಯೂಟ

ಮನಸ್ಸು ಬಾಡಿದಾಗ, ನೋವಿಗೀಡಾದಾಗ, ಕೋಪಗೊಂಡಾಗ,ಪರಿತಾಪ ಪಡುವಾಗ, ನಿಶ್ಚೇಷ್ಟಿತವಾದಾಗ, ದುಃಖಿತವಾದಾಗ, ತಾಳ್ಮೆ ಕಳೆದುಕೊಂಡಾಗ, ಸೈರಣೆ ಇಲ್ಲದಾದಾಗ, ಅಸಹನೆ ಜಾಸ್ತಿಯಾದಾಗ, ವೈರುಧ್ಯ ತುಂಬಿಕೊಂಡಾಗ, ಗೊಂದಲದ ಗೂಡಾದಾಗ, ದಾರಿಯೇ ಕಾಣದಾದಾಗ, ಮಸುಕು ಮಸುಕಾಗಿ ಕುಂತಾಗ, ತಲೆಗೇನೂ ತೋಚದಾದಾಗ, ದ್ವೇಷ ಭುಗಿಲೆದ್ದಾಗ, ಅವಮಾನಿತವಾದಾಗ, ಏನೋ ಕಳೆದುಹೋದ ಸ್ಥಿತಿ ಅನುಭವಿಸುವಾಗ, ಪ್ರೀತಿಪಾತ್ರರನ್ನು ಕಳಕೊಂಡ ಹಸಿಹಸಿ ಬಿಟ್ಟಿರಲಾರದ ತುಡಿತಕ್ಕೊಳಗಾದಾಗ. ಸಂಪ್ಪತ್ತು ಕಳ್ಳತನದಲ್ಲಿ ಕಳೆದು ಹೋದಾಗ -- ಎಲ್ಲಾ ಹೊತ್ತಿನಲ್ಲೂ ನಮ್ಮನ್ನು ತನ್ನ ಮಕ್ಕಳೆಂದು ಅತೀ ಪ್ರೀತಿಯಿಂದ ನೋಡುವುದು ನಿಸರ್ಗ-ಭೂತಾಯಿ-ಭೂರಮೆ ಮಾತ್ರ!

ನಾವು ಏನೇ ಕೊಡಲಿ, ಕೊಡದಿರಲಿ, ಭೂಮಿಯನ್ನು , ಅದರ ನೇರ ಮಕ್ಕಳಾದ ಗಿಡಮರಗಳನ್ನು ಕಡಿದು-ಕತ್ತರಿಸಿದರೂ, ಭೂಮಿಯನ್ನೇ ಅಗೆದರೂ, ಉತ್ತರೂ , ಬೀಜ ನೆಟ್ಟರೂ, ತಾರು ರಸ್ತೆ ನಿರ್ಮಿಸಿದರೂ, ಬಂಗಲೆ -ಮಹಲುಗಳನ್ನು ಕಟ್ಟಿದರೂ, ದೇವಸ್ಥಾನ-ಮಸೀದಿ-ಚರ್ಚು-ಗುರುದ್ವಾರ ಹರಿದ್ವಾರಗಳೆಂದು ಬಡಿದಾಡಿದರೂ ಪ್ರಕೃತಿ ಮಾತೆ ಸದಾ ನಿರ್ವಿಣ್ಣ, ನಿರಪೇಕ್ಷಿತ ಅಲ್ಲವೇ ? ನಮ್ಮಿಂದ ಏನನ್ನೂ ಬಯಸದೇ ನಮಗೆ ಎಲ್ಲವನ್ನೂ ಕೊಡುವ ನಿಸರ್ಗಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವೇ ? ಅದು ಎಂದಿದ್ದರೂ ಕನಸಿನ ಮಾತೇ ಸರಿ !

ಏನೇ ನೋವುಕೊಡಲಿ ಅದನ್ನೆಲ್ಲಾ ನಲಿವಿನಿಂದ ಸ್ವೀಕರಿಸಿ, ಬಡವ-ಬಲ್ಲಿದ, ಜಾತಿ-ಮತಗಳ ಭೇದ ಇಲ್ಲದೇ ಏಕರೂಪವಾಗಿ ಮತ್ತು ಅದೇ ಪ್ರೀತಿಯಿಂದ ನೋಡುವುದು ಈ ಭೂರಮೆ. ನಮ್ಮಿಂದ ಏನೊಂದನ್ನೂ ಬಯಸದೇ, ತನ್ನಷ್ಟಕ್ಕೇ ತಾನಿದ್ದು ಪರೋಪಕಾರಿಯಾಗಿ ಕಣ್ಣಿಗೆ ಕಾಣುವ ಪ್ರಪಂಚದ ಪಂಚ ಭೂತಗಳಲ್ಲಿ
ಒಂದಾದ ಈ ಭೂರಮೆಯನ್ನು ಎಷ್ಟೇ ಕೊಂಡಾಡಿದರೂ ಅದು ನಮ್ಮ ಖುಷಿಗಷ್ಟೇ ಹೊರತು ನಮ್ಮಿಂದ ಹೊಗಳಿಕೆ ಬಂದಿಲ್ಲ ಎಂದು ಭೂರಮೆ ಎಂದೂ strike ಮಾಡುವುದಿಲ್ಲ, ಎಂದೂ ಧರಣಿ ನಡೆಸುವುದಿಲ್ಲ. ಸ್ವತಃ ಅವಳೇ ಧರಿತ್ರಿ-ಧರಣಿ ! ಇಂತಹ ಭೂತಾಯ ನಿಸರ್ಗದ ಮಡಿಲಲ್ಲಿ ಮುಂಜಾನೆ ಒಮ್ಮೆ ಹೀಗೇ round ಹೋಗಿಬನ್ನಿ, ಕೇವಲ ಕೇವಲ ಅರ್ಧ ಗಂಟೆ ಸಾಕು ! ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಅಲ್ಲಿದೆ ಉತ್ತರ, ಅದು ಪೇಯಗಳಿಂದ, ಆಲ್ಕೊಹಾಲಿನಿಂದ, ಮಾದಕ ವ್ಯಸನಗಳಿಂದ,ಗುಟ್ಕಾ-ತಂಬಾಕಿನ ಚಟಗಳಿಂದ ಬರಲಾರದ-ಸಿಗಲಾರದ ಅದಮ್ಯ solution. Solution for all your needs ! ಮನುಷ್ಯನ ಅತೀ ಕೊನೆಯ ಆಸೆ ಅಂದರೆ ಮನಸ್ಸು ತೃಪ್ತಿಯಿಂದ-ಸಂತೋಷದಿಂದ-ನೆಮ್ಮದಿಯಿಂದ ಇರುವುದು. ಎಷ್ಟಿದ್ದರೇನು ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವಲ್ಲ ? ಹೀಗಾಗಿ ನಿಸರ್ಗದ ಮಡಿಲಲ್ಲಿ ಸಹಜವಾಗಿ ಆ ಅಮ್ಮ ಕೊಡುವ ಪ್ರೀತಿ ತಕ್ಕ ಮಟ್ಟಿಗೆ ಸಿಗುತ್ತದೆ. ಅದು ಪರೋಕ್ಷ, ಅದು ಸ್ಫೂರ್ತಿ, ಅದು ಚೈತನ್ಯ, ಅದು ನೂರಾನೆ ಬಲ, ಅದು ಸ್ಥೈರ್ಯ , ಅದು instant recharge. ನಮ್ಮನ್ನೇ ಮರೆತು ಸುಮ್ಮನೇ ಏನೂ ಮಾತಾಡದೆ ಹೋಗಿ ತಿರುಗಾಡಿ ಒಮ್ಮೆ ಪ್ರಯತ್ನಿಸಿ ನೋಡಿ. ಅದನ್ನು ನೋಡಿಯೇ ಬರೆದ ಕವನ ನಿಮಗಾಗಿ -



[ಚಿತ್ರ ಋಣ: ಅಂತರ್ಜಾಲ]

ಭೂರಮೆಯ ಭೂರಿಯೂಟ

ಮಂಜಮುಂಜಾವದಲಿ ಹೀಗೊಮ್ಮೆ ನಲಿಯಿತದು ಮನಸು
ರಂಜನೆಯೇ ಅದಕಾಯ್ತು ನಸುನಗುತಿರಲೊಮ್ಮೆ ಬಲು ಸೊಗಸು

ಸುಮ್ಮ ಸುಮ್ಮನೇ ನಾ ನಡೆಯುತುದ್ಯಾನದಲಿ
ನಲಿವೆ ಗಿಡಮರಗಳ ಕಂಡು
ಹೆಮ್ಮೆಯಾತಕೋ ಮನದಿ ಭಿಮ್ಮನೇ ಬೀಗುವೆ
ಅವುಗಳ ಸಿರಿವಂತಿಕೆಯನುಂಡು

ಬಾಳಬಾಂದಳದಲ್ಲಿ ಮುನ್ನೋಟ ಬೀರುತ್ತ ಪ್ರಕೃತಿಯ
ಬಿಟ್ಟಿರಲು ನನಗದಸಾಧ್ಯ
ಆಳಅಗಲಗಳ ಅಳೆಯಲದು ವಿಸ್ತಾರ ವಿಸ್ತಾರ
ಸಾಗರದಾದಿಯ ನೈವೇದ್ಯ !

ನೀರವ ಮೌನದ ನಡುವೆ ನೂರೆಂಟು ಹಕ್ಕಿಗಳ
ಪ್ರೀತಿಯ ಕಲರವದಿಂಚರವೂ
ಅರ್ಣವನೋಡೋಡಿ ಮೇಲೆದ್ದು ಬರಲಾಗ ಅಹಹಾ
ನನ್ನಲಿ ಮಿಂಚಿನ ಸಂಚಾರವೂ

ಜಾರಿಬಿದ್ದರೂ ಖುಷಿಯೇ ಮೇಲಕೆದ್ದರೂ ಹಿತವೇ
ಭೂರಮೆಯ ಭೂರಿಯೂಟ ನೆನೆದು
ವಾರದುದ್ದಕೂ ದಿನವೂ ವಿಶ್ರಮಿಸೆ ನನಗಾಯ್ತು
ಗುನುಗುನುಗುನಿಸುತಾ ನಲಿದು

ಹಸಿರು ಕೆಂಪು ಹಳದಿ ನೀಲಿ ಬಿಳಿ ತಿಳಿಹಸಿರು
ಒಂದೆರಡೇ ಬಣ್ಣಗಳಾ ಚಿತ್ತಾರ ?
ಉಸಿರು ಜೀವನಕೆ ಗಳಿಗೆ ಗಂಟೆ ನಿಮಿಷವದಾಗಿ
ಸಣ್ಣಗಾಗಿ ನಲ್ಮೆಯ ಸಾಕಾರ !

6 comments:

  1. ಬೆಳಗಾಗಾಗೆದ್ದು ನಮಗೂ ನಿಮ್ಮ ಕವನದ ಭೂರಿ ಭೋಜನ...

    ReplyDelete
  2. ಭೂಮಾತೆಯ ಮಡಿಲಲ್ಲಿ ತಲೆಯಿಟ್ಟು ಮಲಗಿ, ಮಮತೆ ಅನುಭವಿಸಿ, ಬ೦ದಷ್ಟು ಹರುಷವಾಯಿತು ತಮ್ಮ ಈ ಕವನ-ಲೇಖನ ಓದಿ. ಚೆ೦ದದ ಕವನ.

    ನಿನ್ನೆ ಎಮ್ಮೆಫ಼ುಶೆನಿ ಬಗ್ಗೆ ಬರೆದು ನೀವು ವ್ಯಗ್ರಗೊಳಿಸಿದ್ದ ಮನಸ್ಸನ್ನು ಇ೦ದು ತ೦ಪು ಮಾಡಿದಿರಿ.

    ReplyDelete
  3. ಭಾವಕ್ಕೆ ಸೋಲದ ಜೀವವೇ ಇಲ್ಲ..ಅದು ಕಶೇರುಕದ ಮೊದಲಕೊಂಡಿ ಮೀನಾಗಿರಲಿ ಕಡೆಯ ಕಿಂಗು ಮಾನವ....ಇದನ್ನು ಪ್ರಕೃತಿಯೆಡೆಗೆ ತೋರಿಸಿ...ಅದರ ಅಗಾಧಗಳಲ್ಲಿ ಒಂದಾದ ಹಸಿರನ್ನು ಕವನಿಸಿದ್ದೀರಿ ಸುಂದರವಾಗಿ...ಅಭಿನಂದನೆ ವಿ.ಆರ್.ಬಿ ಯವರಿಗೆ.

    ReplyDelete
  4. ಭೂರಮೆಯ ಸಿರಿಯ ಬಗೆಗೆ ಸುಂದರವಾದ ಕವನ ಬರೆದಿದ್ದೀರಿ. ಮನಸ್ಸಿಗೆ ಉಲ್ಲಾಸ ನೀಡುವಲ್ಲಿ ಭೂರಮೆಗೆ ಯಾರು ಸಾಟಿ?

    ReplyDelete
  5. ಸುಂದರ ಚಿತ್ರದೊಂದಿಗೆ ನಿಮ್ಮ ಕವನ ,ಲೇಖನ ಸೊಗಸಾಗಿದೆ.ನಿಜ ಭೂತಾಯಿಯ ವಿಶೇಷ ಗುಣವೇ ಅದೇ ತಾನೇ
    ನಿಮ್ಮ instant recharge ಸೊಗಸಾಗಿತ್ತು.

    ReplyDelete
  6. ಹಳೆಯ ಬೇರು ಹೊಸ ಚಿಗುರು ಈ ತತ್ವದಂತೆ ನವೋದಯ ಸಾಹಿತ್ಯದ ಪ್ರಾಕಾರವನ್ನು ಅಳವಡಿಸಿಕೊಂಡು ಹಳೆಯ ಕವಿಗಳನ್ನು ಸ್ಮರಿಸಿಕೊಂಡು ನಾನು ಕೊಡುವ ಕಥನ-ಕಾವ್ಯ ಅದು ನನ್ನದೇ ಲೋಕ. ನವ್ಯಕಾವ್ಯವನ್ನು ನಾನು ಬರೆಯಲು ಇಷ್ಟಪಡದಿದ್ದರೂ ಅದನ್ನು ಬಳಸುವವರ ಭಾವನೆಗಳಿಗೆ ತುಂಬಾ ಮನ್ನಣೆ ಕೊಡುವ ಸ್ವಭಾವ ನನ್ನದು. ಜೀವನದ ಹಲವು ಮಜಲುಗಳಲ್ಲಿ ಈಗಾಗಲೇ ಹಲವು ಸಜ್ಜನ ವ್ಯಕ್ತಿತ್ವಗಳನ್ನು ನೋಡಿದ,ಒಡನಾಡಿದ ಅನುಭವದಿಂದ ನನಗೆ ದೊರೆತ ಪ್ರಸಾದ ಮತ್ತು ನಮ್ಮ ಹಿರಿಯ ತಲೆಮಾರಿನ ಕವಿ-ಸಾಹಿತಿಗಳಿಂದ ಪಡೆದ ಪಂಚಾಮೃತ ಇವನ್ನೆಲ್ಲ ಸೇರಿಸಿ ನನ್ನ ಸ್ಪೂರ್ತಿಗೆ ನಾನೇ ಒಂದು ತಿಟ್ಟನ್ನು ಹಾಕಿಕೊಂಡಿದ್ದೇನೆ.ಸ್ನೇಹಿತರು ಬಹಳವಾಗಿ ಮೆಚ್ಚುತ್ತ ದಿನಾಲೂ ನನಗೆ ಬರೆಯುವ ಮೇಲ್ ಗಳಿಗೆ ಉತ್ತರಿಸಲೂ ವೇಳೆ ಕಷ್ಟ! ಆದರೂ ಎಲ್ಲರಿಗೂ ಈ ಮೂಲಕ ಸಾಮೂಹಿಕವಾಗಿ ನಿವೇದನೆ ಏನೆಂದರೆ ನಿಮ್ಮೆಲ್ಲರ ಭಾವನೆಗಳಿಗೆ ಬಹಳ ಗೌರವವಿದೆ, ನೀವೆಲ್ಲರೂ ನನ್ನ ಕುಟುಂಬವೇ ಎಂಬ ಹಮ್ಮಿದೆ ಆದರೆ ಅಹಮ್ಮಿಲ್ಲ, ನಿಮ್ಮೆಲ್ಲರ ಮನೆಯ ಸದಸ್ಯ ನಾನಾಗಿ ಸತತವಾಗಿ ನಿಮ್ಮ ಒತ್ತಾಸೆಗಳಂತೆ ಕಥನ-ಕವನಗಳನ್ನು ಕೊಡಲು ಪ್ರಯತ್ನಿಸುತ್ತೇನೆ, ನನ್ನ ಕೃತಿಗಳನ್ನು ಪ್ರೋತ್ಸಾಹಿಸುತ್ತ,ಆಸ್ವಾದಿಸುತ್ತಾ ಮುನ್ನಡೆಸಿರುವ ನಿಮ್ಮೆಲ್ಲರ ಪ್ರೀತಿ ಇದೇ ಥರ ಎಂದೂ, ಎಂದೆಂದೂ ಹಸಿರಾಗಿರಲಿ,ನಳನಳಿಸುತ್ತಿರಲಿ ಎಂದು ವಿನಂತಿಸುತ್ತೇನೆ.
    ಹರಿ-ಹರರಲ್ಲಿ ಹೇಗೆ ಬೇಧ ಇಲ್ಲವೋ ಹಾಗೆ ಕಾವಿ-ಸಾಹಿತಿಗಳಲ್ಲಿ ಬೇಧವಿಲ್ಲ, ಎಲ್ಲರೂ ಅನುಭಾವಿಗಳೇ, ಎಲ್ಲರೂ ಒಂದಾಗಿ ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿರೋಣ ಎಂದು ನನ್ನ ಸಹೋದ್ಯೋಗಿ ಕವಿ-ಸಾಹಿತಿ ಮಿತ್ರರಲ್ಲಿ-ಬ್ಲಾಗಿಗರಲ್ಲಿ ವಿನಮ್ರ ವಿಜ್ಞಾಪನೆ.ಕೇವಲ ಎರಡು ತಿಂಗಳಲ್ಲಿ ನಿಮ್ಮೆಲ್ಲರಿಂದ ಪ್ರೋತ್ಸಾಹ ಅಪಾರ, ಈ ಪ್ರೋತ್ಸಾಹ ಎಲ್ಲರಿಗೂ ಎಲ್ಲಕಾಲಕ್ಕೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಕಥೆಯೋ ಕಾಗೆಯೋ ವರ್ಣಿಸುವುದು ಅದು ಕಾವಿ-ಸಾಹಿತಿಯ ರಚನಾ ಚಾತುರ್ಯ, ನಮ್ಮೆಲ್ಲರಿಗೂ ಅಂತಹ ಅವಕಾಶ, ಮತ್ತು ಅನುಕೂಲ ದೇವಿ ಸರಸ್ವತಿ ಕರುಣಿಸಲಿ ಎಂದು ಭಜಿಸುತ್ತ ಇಂದಿನ ನನ್ನ ಕೃತಿಗೆ ನೇರವಾಗಿ ಪ್ರತಿಕ್ರಿಯಿಸಿದ ಸರ್ವಶ್ರೀ ಸುಬ್ರಹ್ಮಣ್ಯ, ಸೀತಾರಾಮ್, ಡಾ | ಆಜಾದ್, ಸುನಾಥ ಮತ್ತು ಶ್ರೀಮತಿ ಶಶಿ ಜೋಯಿಸ್ ಈ ಎಲ್ಲರಿಗೂ ತುಂಬಾ ಆಭಾರಿ, ಇದಲ್ಲದೇ ಪರೋಕ್ಷವಾಗಿ ನನ್ನೊಡನೆ ನಡೆತಂದ ನನ್ನೆಲ್ಲಾ ನೇಪಥ್ಯದ ಓದುಗರಿಗೆ ಸದಾ ಋಣಿ.

    ReplyDelete