ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 16, 2010

ವಿಕೃತಿಯ ಅಹವಾಲು



ದಕ್ಷಿಣೋತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳ ಗಂಡು ಮೆಟ್ಟಿನ ಕಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ತನ್ನ ಸಮಗ್ರತನದ ವೈಶಿಷ್ಟ್ಯದಿಂದ ವಿದೇಶಗಳವರೆಗೆ ವ್ಯಾಪಿಸಿ ಜಗನ್ಮಾನ್ಯವಾದ ಪ್ರಸಿದ್ಧ ಕಲೆ ಯಕ್ಷಗಾನ. ಬಲ್ಲವರಿಗೆ ಆ ಬಣ್ಣದ ವೇಷವಷ್ಟೇ ಅಲ್ಲದೇ ಅದರಲ್ಲಿ ಸಂಪೂರ್ಣ ಸಾಹಿತ್ಯ-ಸಂಗೀತ-ನೃತ್ಯವೇ ಮೊದಲಾದ ನವರಸಗಳೂ ಮೇಳೈಸಿ ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನವಾಗಿ ಪರಿಣಮಿಸಿದ ಈ ಕಲೆಯ ಬಡಗುತಿಟ್ಟಿನ ಶೈಲಿಯಲ್ಲಿ ವಿಕೃತಿಯ ಆದಿಯಲ್ಲಿ ನಮ್ಮ ಆದಿಪೂಜಿತ ಇಡಗುಂಜಿ ಮಹಾಗಣಪತಿಯಲ್ಲಿ ಪ್ರಾರ್ಥಿಸುವ ರೀತಿಯಲ್ಲಿ, ಒಂದೇ ಒಂದು ರಾಗವನ್ನು ಬಳಸಿಕೊಂಡು ಪ್ರಯತ್ನಿಸಿ ಬರೆದ, ಬರೇ ಮದ್ದಲೆ-ತಾಳಗಳೊಂದಿಗೆ ಹಾಡಿಕೊಳ್ಳಬಹುದಾದ ಈ ಹಾಡು- ಇದು ಇಂದಿನ ನೈವೇದ್ಯ -- ಮೊದಲಾಗಿ ಮಹಾಗಣಪತಿಗೆ ತನ್ಮೂಲಕ ನಿಮಗೆ----



[ಯಕ್ಷಗಾನದ ದಿಗ್ಗಜ ರಾಷ್ಟ್ರಪ್ರಶಸ್ತಿ ವಿಜೇತ ದಿ| ಶಂಭು ಹೆಗಡೆ ಕೆರೆಮನೆಯವರ ಚಿತ್ರ]

ವಿಕೃತಿಯ ಅಹವಾಲು

ಹೆಸರುಂಡೆ ಕಾಯ್ಗಡುಬು ಮೊಸರು ಪಂಚಖಾದ್ಯ ಹೊಸಹೊಸ ಬಕ್ಷ್ಯಂಗಳು |
ನಸುನಕ್ಕು ಇಡಗುಂಜಿ ಗಣರಾಯ ಮೆಲ್ಲುತಾ ಖುಷಿಯಿಂದ ತಾ ಕುಣಿದನು ||

ಸಕಲಗ್ರಹ ಬಲ ನೀನೆ ನೆರೆನಂಬಿಹೆನು ನಿನ್ನ ವಿಕೃತಿ ಬಂದೆರಗಿಹುದು |
ಭಕುತಿಯೋಳ್ ನಿನ್ನಯ ಅಡಿದಾವರೆಗೆರಗಿ ಯುಕುತಿಪಾಲಿಸು ಎಂಬೆನು ||



ಇಳೆಯೊಳು ನೂರೆಂಟು ರಾಜಕೀಯದ ಕೆಲಸ ಭರದಿಂದ ಸಾಗಿಹುದು |
ಹೊಳೆವ ದಿರಿಸಿನಲ್ಲಿ ಹಗಲಿರುಳು ಮೆರೆಯುತ್ತಾ ಕೊಳೆಯತುಂಬುತಲಿಹರು ||

ಗಣಿ ಧಣಿಗಳು ಸೇರಿ ಗುಣವತಿ ಭೂತಾಯ ಹಣಕಾಗಿ ಹಾಳ್ಗರೆವರೂ |
ಎಣಿಸದೇ ಲೋಕದ ಮುಂದಿನ ಬದುಕನ್ನು ಬಣಬಣಮಾಡುವರೂ ||

ಸಿರಿವಂತ ಮಿತ್ತಲ ಮೊದಲಾದ ಜನರೆಲ್ಲಾ ಹೊತ್ತಲೇ ಮಾತನಾಡಿ |
ದೊರೆವಂತ ಅದಿರಿನ ನಿಕ್ಷೇಪಗಳನೆಲ್ಲ ಪಡೆವರೂ ಸಂಚುಮಾಡಿ ||

ಗೇಣಿ ಕಾಲವು ಹೋಗಿ ಖೇಣಿ ಕಾಲವು ಬಂದು ನೈಸು ರಸ್ತೆಯ ಮಾಳ್ಪರು |
ಗಾಣದೆತ್ತಿನ ರೀತಿ ಬದುಕನು ಬದುಕುತ್ತ ಕಾಣದಾದರು ರೈತರು ||

ಪರಮಾರ್ಥದೊಳು ನಿನ್ನ ಪರಿರ್ಪೂರ್ಣರೂಪವ ಶರಣೆಂದು ತಾವ್ ಪಡೆಯಲು
ದರುಮಾರ್ಥದೊಳು ತಮ್ಮ ಸುಖದ ಜೀವನ ತ್ಯಜಿಸಿ ಸಕಲರ ಮುನ್ನಡೆಸಲು |

ಕಾವಿಯ ತಾವ್ ತೊಟ್ಟು ನೇಮನಿಷ್ಠೆಯ ಬಿಡದೆ ಭೂಮಿಯ ಸುಖ ತೊರೆದರು
ಕಾವಿವೇಷವ ತೊಟ್ಟು ಬಿಟ್ಟೂ ಬಿಡದೆ ಸುಖಿಸಿ ಮಸಿಬಳಿಯೇ ಹಲವರಿಹರು ||

ಇಂತಿಪ್ಪ ಕನ್ನಡ ರಾಜ್ಯದ ವರದಿಯ ಪರಿತಪಿಸುತ ತಂದೆನು |
ಬಂತಪ್ಪ ಹೊಸ ವತ್ಸರವದು ತಿಳಿಯದು ಕಂತುಪಿತನೆ ನೆನೆದೆನು ||

ಹೊಸವರ್ಷದಲಿ ನಮಗೆ ಕಸುವಿತ್ತು ಕಾಪಾಡು ನೊಸಲ ನೇವರಿಸೆನ್ನಲು |
ಬಿಸುಸುಯ್ದು ಅಳಲೇಕೆ ಭುವಿಯಲ್ಲೇ ಇರ್ಪೆನು ಹೆಸರಿಟ್ಟು ನಡೆಯೆಂದನು ||


11 comments:

  1. ವಿ. ಆರ್. ಭಟ್ಟರೇ...

    ತುಂಬಾ ಸೊಗಸಾಗಿ ಬರೆದಿದ್ದೀರಿ...

    ನಿಮ್ಮ ಆಶಯ ಸುಂದರವಾಗಿ ವ್ಯಕ್ತವಾಗಿದೆ...

    ನಿಮಗೂ..
    ನಿಮ್ಮ ಕುಟುಂಬಕ್ಕೂ..
    ನಿಮ್ಮ ಓದುಗ ಬಳಗಕ್ಕೂ..

    ಹೊಸ ಸಂವತ್ಸರದ ಶುಭಾಶಯಗಳು...

    ReplyDelete
  2. ಮಹಾಗಣಪತಿ ನಿಮ್ಮ ಆಶಯದ ಮೂಲಕ ’ವಿಕೃತಿ’ ಯಲ್ಲಿ ಎಲ್ಲರನ್ನೂ ಹರಸಲಿ. ಬರೆಯುವ ನಿಮ್ಮ ಒಲವಿಗೆ ಇನ್ನಷ್ಟು ಶಕ್ತಿ ತುಂಬಲಿ. ಸದಾಶಯದ ಹಾರೈಕೆ ಕೊಟ್ಟಿದ್ದಕ್ಕೆ ಧನ್ಯವಾದ..

    ReplyDelete
  3. ಪಾರ್ಥಿಸುವಾಗ ಹೆಚ್ಚಿನದಾಗಿ ಸಾರ್ವಜನಿಕರಿಗಾಗಿ,ಎಲ್ಲರ ಹಿತಕ್ಕಾಗಿ, ಎಲ್ಲರ ಒಳಿತಿಗಾಗಿ,ಕೇವಲ ಸ್ವಲ್ಪ ವೈಯಕ್ತಿವಾಗಿ ಪ್ರಾರ್ಥಿಸಬೇಕೆಂಬುದು ವಸುದೈವ ಕುಟುಂಬಿಕರ ಆಶಯ, ಹಾಗೇ ಪ್ರಯತ್ನಿಸಿದ್ದೇನೆ, ಮೊದಲಾಗಿ ಬಂದು ಶುಭಾಶಂಸನೆಗೈದ ಪ್ರಕಾಶ್ ಮತ್ತು ಸುಬ್ರಹ್ಮಣ್ಯ ರಿಗೂ ಮತ್ತು ಓದಿದ-ಓದಲಿರುವ ಸರ್ವರಿಗೂ ಶ್ರೀ ಇಡಗುಂಜಿ ಮಹಾಗಣಪತಿ ಹರಸಲಿ, ಧನ್ಯವಾದಗಳು

    ReplyDelete
  4. ವೀ ಆರ್ ಸರ್,
    ಲೇಟ್ ಆಗಿ ಯುಗಾದಿಯ ವಿಶ್ ಮಾಡುತ್ತಿದ್ದೇನೆ..
    ನಿಮ್ಮ ಮನೆಯವರಿಗೂ ನಿಮಗೂ ವರ್ಷವಿಡೀ ಹರುಷ ತುಂಬಿರಲಿ ..ಎಂದು ಹಾರೈಸುತ್ತೇನೆ....
    ನಿಮ್ಮ ಬ್ಲೋಗನಲ್ಲಿರುವ ಲಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಯ ಬಗ್ಗೆ ಕೊಂಚ ತಿಳಿಸಿ ಸರ್,... ಸುಮ್ಮನೇ ಹಾಕಿದ್ದೋ ಇಲ್ಲ ಬೇರೆ ಏನಾದರೂ ಕಾರಣವಿದೆಯೂ?

    ReplyDelete
  5. ತಮ್ಮ ಪ್ರಾರ್ಥನೆ ನನ್ನದೂ ಸಹ. ಪ್ರಾರ್ಥನೆ ಸುಶ್ರಾಯವಾಗಿ ರಾಗಬದ್ಧವಾಗಿ ಮೂಡಿದೆ. ಇಡಗು೦ಜಿ ಶ್ರೀ ಸಿದ್ಧಿ ವಿನಾಯಕ ವಿಕೃತಿನಾಮ ಸ೦ವತ್ಸರದಲ್ಲಿ ಸಕಲರಿಗೂ ಸನ್ಮ೦ಗಳವನ್ನು೦ಟು ಮಾಡಲೆ೦ದು ಭಕ್ತಿಪೂರ್ವಕ ಕೇಳಿಕೊಳ್ಳುವೆ.

    ReplyDelete
  6. ಭಟ್ಟರೇ ,
    ನಿಮಗೂ ,ನಿಮ್ಮ ಮನೆಯವರೆಲ್ಲರಿಗೂ ವಿಕ್ರತಿಯು ಸುಕ್ರುತಿಯನ್ನು ತರಲೆಂದು ಹಾರೈಸುವೆ .
    ತುಂಬಾ ಸೊಗಸಾಗಿ ಬರೆದಿದ್ದೀರಿ......

    ReplyDelete
  7. ಚೆನ್ನಾದ ಪ್ರಾರ್ಥನೆ ಮಾಡಿಹಿರಿ ಭಟ್ಟರೆ,
    ಇನ್ನೇನು ಕೇಳಲಿಕೆ ಉಂಟು?
    ನಿಮ್ಮಯ ಹಿಂದೆಯೇ ನಾವೂನು ನಿಲ್ಲುವೆವು,
    ಕಮ್ಮನೆ ಕಜ್ಜಾಯ ತಿನ್ನಲುಂಟು!

    ReplyDelete
  8. ಬ್ಲಾಗ್ ನಲ್ಲಿ ಕಟ್ಟಿರುವ ಲಿಂಬೆಹಣ್ಣು -ಮೆಣಸಿನಕಾಯಿ ಸುಮ್ನೇ ತಮಾಷೆಗಾಗಿ, ಏನೂ ತಮಾಷೆಯಿಲ್ಲ ಅನಿಸಿದರೆ ಅದನ್ನಾದರೂ ನೋಡಿ ನಕ್ಕೊಂಡು ಮರಳಲಿ ಅಂತ 'ಭೂತ ಪಿಶಾಚಿಗಳನ್ನು ಓಡಿಸಲು ' ಅಂತ ಹೀಗೇ ಸುಮ್ನೇ ಹಾಕಿದ್ದೇನೆ, ಓದುಗ ಮಿತ್ರರಾದ ಶ್ವೇತ, ಸೀತಾರಾಮ್, ಶಶಿ, ಸುನಾಥ ಸಾಹೇಬರು ಎಲ್ಲರೂ ಬಂದು ಹಾರಿಸಿದಿರಿ, ನಿಮ್ಮ ಪ್ರೀತಿಗೆ ತುಂಬಾ ಆಭಾರಿ, ಮತ್ತೆ ಮತ್ತೆ ನಿಮಗೆ ಶುಭಾಶಯ ಕೋರುತ್ತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

    ReplyDelete
  9. ಒಂದು ಸಣ್ಣ ತಿದ್ದುಪಡಿ, ಈ ಮೇಲಿನ ನನ್ನ ಉತ್ತರದಲ್ಲಿ ಹಾರಿಸಿದಿರಿ ಅಂತಾಗಿಬಿಟ್ಟಿದೆ ದಯವಿಟ್ಟು ಹಾರೈಸಿದಿರಿ ಅಂತ ಓದಿಕೊಳ್ಳಿ.

    ReplyDelete
  10. ||ಶ್ರೀಮದ್ವಿಕೃತಿನಾಮಸಂವತ್ಸರಃ ಸರ್ವೇಭ್ಯಃ ಶುಭಮ್ ಆತನೋತು ||

    ಸೂರ್ಯನಾರಾಯಣ ಜೋಯಿಸ್ .ಕೆ.ಎನ್.

    ReplyDelete
  11. ಬಂದು,ಓದಿ, ಎಲ್ಲರಿಗೂ ಶುಭ ಹಾರೈಸಿದ ಸೂರ್ಯನಾರಾಯಣ ಜೋಯಿಸ್ ಅವರಿಗೆ ಧನ್ಯವಾದಗಳು

    ReplyDelete