ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 9, 2012

ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಚಿತ್ರಋಣ :ಅಂತರ್ಜಾಲ
ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಮಹಾಸ್ವಾನಿಗಳು ಮೈತುಂಬಾ ಕೆಂಪುಶಾಲನ್ನು ಹೊದ್ದಿದ್ದರು. ತಲೆಗೆ ಕೆಂಪು ರೇಷ್ಮೆಯ ಮುಂಡಾಸನ್ನು ಸುತ್ತಿದ್ದರು. ಹಣೆಯಲ್ಲಿ ಧರಿಸಿದ್ದ ವಿಭೂತಿಯ ಅವಶೇಷವೂ ಇತ್ತು. ನಿಧಾನವಾಗಿ ಭಾವುಕರಾಗಿ,  ಇಳಿಸಂಜೆ ಮೋಡಕವಿದ ವಾತಾವರಣದಲ್ಲಿ ಗಾಂಧೀಬಜಾರಿನಲ್ಲಿ ಹೆಜ್ಜೆಹಾಕುತ್ತಿದ್ದಾಗ ದೂರದಿಂದಲೇ ಇದನ್ನು ಕಂಡು ಜಂಗಮರೊಬ್ಬರು ಓಡೋಡಿ ಬಂದರು. ನಮಸ್ಕರಿಸುತ್ತಾ "ಶರಣು, ತಮ್ಮದು ಯಾವ ಮಠ?" ನಮ್ಮ ಮಹಾಸ್ವಾಮಿಗಳು ಉತ್ತರಿಸದರು "ನಮ್ಮದು ತಿಮ್ಮಲಿಂಗದೇವರ ಮಠ." ಆಗ ಜಂಗಮರು "ಏನಾದರೂ ತತ್ವ ಅಪ್ಪಣೆಯಾಗಬೇಕು" ಎಂದರು. ಸಂತೋಷಗೊಂಡ ಮಹಾಸ್ವಾಮಿಗಳು ಜಂಗಮರನ್ನು ಬಸವನಗುಡಿಯ ಕ್ಲಬ್ ಎದುರಿಗಿರುವ ಸಣ್ಣ ಉದ್ಯಾನಕ್ಕೆ ಕರೆದೊಯ್ದರು. ಸಂಜೆಯವೇಳೆ ಕ್ಲಬ್ಬಿಗೆ ಬರಬಹುದಾದ ತಮ್ಮ ಪರಿಚಿತರಿಗೆ ಕಾಣದಂತೇ ಕುಳಿತು ತತ್ವಪದಳನ್ನು ಆಶುವಾಗಿ ಕಟ್ಟಿಹೇಳಿದರು:

ನವಕೋಟಿ ಹಣವೇನು ಶಿವಭಕ್ತಿಯಿಲ್ಲದೇ-ಜಂಗಮಯ್ಯ |
ಶಿವಭಕ್ತಿಯಿರುವಾಗ ನವಕೋಟಿ ಹಣವೇಕೆ? ಜಂಗಮಯ್ಯ ||
ಭದ್ರಾಕ್ಷಿಯಿಲ್ಲದೇ ರುದ್ರಾಕ್ಷಿಯಿಂದೇನು ಜಂಗಮಯ್ಯ |
ಭದ್ರಾಕ್ಷಿಯಿದ್ದರೆ ರುದ್ರಾಕ್ಷಿಯೇತಕೋ ಜಂಗಮಯ್ಯ ||
.
.
.
.
.
ಏನೇನೋ ಗತ್ತುಮಾಡಿದ ನಮ್ಮಶಿವ 
ಏನೋ ಗಮ್ಮತುಮಾಡಿದ |
ಪಟ್ಟೆಬೂದಿ ಹಚ್ಚಿಕೊಂಡು | ಬೆಟ್ಟದೋಳ್ನ ಕಟ್ಟಿಕೊಂಡು
ಹುಚ್ಚು ಹುಚ್ಚು ಲೀಲೆಮಾಡಿದ ||
ಬೆತ್ತಲೇಲಿ ನೃತ್ಯಮಾಡಿದ-ನಮ್ಮಶಿವ
ಕತ್ತಲೇಲಿ ಸೃಷ್ಟಿಮಾಡಿದ |
ಬೆತ್ತಲೇಲಿ ನೃತ್ಯಮಾಡಿ | ಕತ್ತಲೇಲಿ ಸೃಷ್ಟಿಮಾಡಿ
ಸೊಟ್ಟಾಪಟ್ಟೆ ಲೋಕಮಾಡಿದ ||

ತಂಬೂರಿ-ಚಿಟಿಕೆಗಳಿಲ್ಲದ ಜಾಗವನ್ನು ಕೈತಟ್ಟಿ ತಾಳಹಾಕಿ ಮೈಕುಲುಕಿಸಿ ರಾಗವಾಗಿ ಹಾಡಿದರು ಮಹಾಸ್ವಾಮಿಗಳು. ತಲೆಯಲ್ಲಾಡಿಸುತ್ತಾ ತತ್ವಪದಗಳನ್ನು ಕೇಳುತ್ತಿದ್ದ ಜಂಗಮರು "ಟೀಪು ಅಪ್ಪಣೆಯಾಗಬೇಕು ಗುರುವೇ" ಎಂದಾಗ ಹಾಡಿದ ತತ್ವಪದಗಳಿಗೆ ವ್ಯಾಖ್ಯಾನವನ್ನೂ ಮಾಡಿದರು. ಈ ಇಡಿಯ ಸಂದರ್ಭವನ್ನು ಆಸ್ವಾದಿಸಬಯಸುವವರು ಡಿವಿಜಿಯವರ ’ಜ್ಞಾಪಕಚಿತ್ರಶಾಲೆ’ಯ ಏಳನೇಭಾಗವನ್ನು ಓದಬೇಕು. ಸರಳಮುಗ್ಧ ಸ್ವಭಾವವನ್ನು ಗೌರವಿಸಿ ಅದರಂತೇ ನಡೆದು ಸಮಾಧಾನ ನೀಡಬಲ್ಲ ಹೃದಯವಂತಿಕೆ ಮತ್ತು ಸರಳಪದಗಳಲ್ಲಿಯ ಹೆಣೆದ ತತ್ವಪದಗಳಲ್ಲಿಯೂ ಗಹನವೇದಾಂತದ ಸಂದೇಶಗಳನ್ನು ಹುದುಗಿಸಿ ಕಟ್ಟಿಕೊಡಬಲ್ಲ ಬಲ್ಮೆ ಡಿವಿಜಿಯವರಿಗೆ ಸಹಜವಾಗಿ ರಕ್ತಗತವಾಗಿತ್ತು. ಅಂದಹಾಗೇ ಗಾಂಧೀಬಜಾರಿನಲ್ಲಿ ಜಂಗಮರಿಗೆ ಸಿಕ್ಕ ಆ ಮಹಾಸ್ವಾಮಿಗಳು ಡಿವಿಜಿ ಎಂದರೆ ಆಶ್ಚರ್ಯಪಡಬೇಡಿ ! ಹರಿಹರ ಭೇದವನ್ನು ಅಳಿಸಲು ತಮ್ಮದು ತಿಮ್ಮ[ಹರಿ]ಲಿಂಗ[ಹರ]ದೇವರ ಮಠ ಎಂದಿದ್ದನ್ನು ಗಮನಿಸಬೇಕು. ಚಿಕ್ಕಂದಿನಿಂದಲೂ ಸಂನ್ಯಾಸ ಮತ್ತು ಪರಿವ್ರಾಜಕತ್ವದೆಡೆಗೆ ಅವರ ಮನಸ್ಸು ವಾಲುತ್ತಿತ್ತು. ಸದಾ ಅವಧೂತಪ್ರಜ್ಞೆಯನ್ನು ಹೊಂದಿದ್ದ ಡೀವಿಜಿ ಅಂತಹ ದಿರಿಸುಗಳಲ್ಲಿ ಅವಧೂತರಂತೆಯೋ ಜಂಗಮರಂತೆಯೋ ಕಾಣುತ್ತಿದ್ದರು ! ಎಪ್ಪತ್ತು ದಾಟಿದ ನಂತರವೂ ಅವರಿಗೆ ಭೈರಾಗಿ-ಜಂಗಮ ಜೀವನದ ಆಕರ್ಷಣೆ ಹೋಗಿರಲಿಲ್ಲ. ಅಂತಹ ಒಂದು ಪ್ರಸಂಗವೇ ಈ ಮೇಲೆ ಹೇಳಿದ್ದು.     

ಮಹಾತ್ಮರಿಗೆ ಜೀವನದಲ್ಲಿ ಕಷ್ಟಗಳಿರುವುದಿಲ್ಲವೆಂದೇನೂ ಅಲ್ಲ; ಎದುರಾದ ಕಷ್ಟಗಳಿಗೆ ತಮ್ಮಲ್ಲೇ ಪರಿಹಾರ ಕಂಡುಕೊಳ್ಳುವುದು ಅವರ ಸಾಮರ್ಥ್ಯ. ಕಷ್ಟ ಮನುಷ್ಯ ಸಹಜ ಎಂಬ ಭಾವದಿಂದ ತನಗೆ ಬಂದ ಕಷ್ಟವನ್ನು ಮೂರನೆಯವರಾಗಿ ಎದುರುನಿಂತು ಉತ್ತರಹೇಳಿಕೊಂಡು ಸಮಾಧಾನ ಪಡುವುದು ಅವರ ಐಚ್ಛಿಕ ನಡೆಗಿರುವ ಹಿರಿಮೆ. ೧೮-೧೯-೨೦ನೇ ಶತಮಾನದ ಕನ್ನಡದ ಬಹುತೇಕ ಕವಿಗಳು ಜೀವನದಲ್ಲಿ ಬಡವರಾಗೇ ಇದ್ದರು. ಬಡತನ ಅವರಿಗೆ ಸಹಿಸಲಸಾಧ್ಯ ವೇದನೆಯಾಗಿ ಕಾಡಲಿಲ್ಲ; ಬಡತನ ತಮಗೆ ದೇವರುಕೊಟ್ಟ ಭಾಗ್ಯ ಎಂದುಕೊಂಡೇ ಅದನ್ನವರು ಅನುಭವಿಸಿದರು; ಮುರುಕು ಗುಡಿಸಲೋ ಹರುಕು ಚಾಪೆಯೋ ಅದರಲ್ಲೇ ತೃಪ್ತಿಯಿಂದ ಕಾವ್ಯ-ಸಾಹಿತ್ಯದ ಕೃಷಿ ನಡೆಸಿದರು. ಬಡತನದಲ್ಲಿ ಕಣ್ಣೆದುರು ಸಾಯುವ ಮಕ್ಕಳ ಅನಿವಾರ್ಯ ಅಗಲಿಕೆಯ ನೋವನ್ನು ಸಹಿಸಿಯೂ ಬದುಕಿದವರು ವರಕವಿ ಬೇಂದ್ರೆ. ದೇಶಪರ್ಯಟನೆಯ ಕನಸನ್ನು ಕಾಣುತ್ತಾ ಆರ್ಥಿಕ ಹೀನ ಸ್ಥಿತಿಯಲ್ಲಿ ಎಲ್ಲಿಗೂ ಹೋಗಲಾರದಾದಾಗ ಇರುವಲ್ಲೇ ಕಾವ್ಯದಲ್ಲಿ, ಕೃತಿಗಳಲ್ಲಿ ವಿಹರಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಬಡತನ ಅವರನ್ನೆಲ್ಲಾ ಆಳಲಿಲ್ಲ; ಆದರೆ ಅವರಿಗೂ ಬಡತನವಿತ್ತು ಎಂಬುದನ್ನು ಅಂಥವರ ಕೃತಿಗಳಿಂದ ಅಂದಾಜಿಸಿಕೊಳ್ಳಬಹುದಾಗಿದೆ. ಬದುಕಿನ ಬಂಡಿಗಳು ಸಾಗುವ ಮಾರ್ಗಗಳು ವಿಭಿನ್ನ; ಕೆಲವರಿಗೆ ಅವು ಸುಸೂತ್ರ, ಇನ್ನು ಕೆಲವರಿಗೆ ಅವು ಅತಂತ್ರ. ಸಾಗುವ ಹಾದಿ ಸುಗಮವೋ ದುರ್ಗಮವೋ ಅದನ್ನು ಕಾರಣವಾಗಿಸಿಕೊಳ್ಳದೇ ಪಾಲಿಗೆಬಂದದ್ದೇ ಪಂಚಾಮೃತವೆಂದು ಒಪ್ಪಿ, ನ್ಯಾಯ-ನೀತಿ-ಧರ್ಮಮಾರ್ಗದಿಂದ ಬದುಕಿ, ಬದುಕನ್ನು ಆದರ್ಶವಾಗಿ ತೋರಿಸಿದವರು ಆ ಕವಿಗಳು. ಕೆಲವರಿಗಂತೂ ಮನೆಯಲ್ಲಿ ನಿತ್ಯಪಡಿಗೂ ಕಷ್ಟವಿತ್ತು. ಆದರೂ ಅವರ ಮನೆಗಳಲ್ಲಿ ನಂದಾದೀಪ ನಂದುತ್ತಿರಲಿಲ್ಲ; ಬರುವ ಅತಿಥಿಗಳಿಗೆ ಅಶನ-ವಶನಕ್ಕೆ ಕೊರತೆಯಾಗುತ್ತಿರಲಿಲ್ಲ !

ತಲೆಪಾಗಿನೊಳಕೊಳಕ ಪಂಚೆನಿರಿಯೊಳಹರುಕ
ತಿಳಿಸುವೆಯೆ ರಜಕಗಲ್ಲದೆ ಲೋಗರಿಂಗೆ ?
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ-
ನಿಳೆಗೆ ಹರಡುವುದೇಕೊ-ಮಂಕುತಿಮ್ಮ

ಸವರಿದ ಕೈಗಿದ್ದ ಕೊಳೆಯಿಂದ, ಹರಿದ ಬೆವರಿನಿಂದ ತಲೆಗೆ ಸುತ್ತಿದ ಮುಂಡಾಸು ಹೊಲಸಾಗಿರಬಹುದು, ಉಟ್ಟಪಂಚೆಯ ನಿರಿಗೆಯಲ್ಲಿ ಹರುಕುಕೂಡ ಇರಬಹುದು ಅದನ್ನು ತೊಳೆದುಕೊಡುವ ರಜಕನೊಬ್ಬನಿಗಲ್ಲದೇ ಲೋಕಕ್ಕೆಲ್ಲಾ ಹೇಳುತ್ತಾರ್ಯೇ? "ಹೋಯ್ ನನ್ನ ಪಂಚೆ ಹರಿದುಹೋಗಿದೆ", "ಹೋಯ್ ನನ್ನ ಬಟ್ಟೆ ನಾರುತ್ತಿದೆ" ಎಂದು ಯಾರಾದರೂ ಪ್ರಚಾರಮಾಡುವುದು ವಿಹಿತವೇ? ಅಂತೆಯೇ ನಮ್ಮೊಳಗಿನ ಅಳಲು-ದುಗುಡ-ದುಃಖ-ದುಮ್ಮಾನಗಳನ್ನು ನಮ್ಮೊಳಗೇ ಬಗೆಹರಿಸಿಕೊಳ್ಳಬೇಕು. ನಮ್ಮೊಳಗೇ ಒಬ್ಬನಿದ್ದಾನಲ್ಲ, ಅವನೊಡನೆ ಮಾತ್ರ ಹಂಚಿಕೊಳ್ಳಬೇಕು ಎಂಬುದು ಈ ಕಗ್ಗದ ತಾತ್ಪರ್ಯ.

ತಿಮ್ಮಗುರುವಿಗೆ ಬದುಕು ಪೂರ್ತಿ ನೂರಾರು ಸಮಸ್ಯೆಗಳಿದ್ದರೂ ಅವುಗಳನ್ನವರು ಕಂಡ, ನಿಭಾಯಿಸಿದ ರೀತಿಕಂಡು ಬೆರಗಾಗುತ್ತೇವೆ. ಸರಕಾರಕ್ಕೆ ಒದಗಿಸಿದ ಸೇವೆಗೆ ಸಂದ ಅದೆಷ್ಟೋ ಧನಾದೇಶ ಪತ್ರ[ಚೆಕ್ಕು]ಗಳನ್ನು ಅವರು ಹಣವಾಗಿ ಪರಿವರ್ತಿಸಲೇ ಇಲ್ಲ. ಸಾರ್ವಜನಿಕರು ಕಟ್ಟಿದ ತೆರಿಗೆಯ ನಯಾಪೈಸೆಯೂ ಸಾರ್ವಜನಿಕ ಕೆಲಸಗಳಿಗೋ ಸರಕಾರದ ಕೆಲಸಗಳಿಗೋ ವಿನಿಯೋಗವಾಗಬೇಕೇ ಹೊರತು ಇನ್ಯಾವುದೋ ಕಾರಣಗಳಿಗೆ ಯಾರ್ಯಾರದೋ ಕೈಸೇರಬಾರದು ಎಂಬ ಅಭಿಲಾಶೆ ಅವರದಾಗಿತ್ತು. ಬಯಸಿದರೆ ಬೇಕಷ್ಟು ಹಣಗಳಿಸಿ ಸಿರಿವಂತರಾಗಿ ಬದುಕುವ ಅವಕಾಶಗಳೂ ಅರ್ಹತೆಯೂ ಡಿವಿಜಿಯವರಿಗಿದ್ದವು. ತನ್ನ ಸಾಮಾನ್ಯ ಜೀವನಕ್ಕೆ ಎಷ್ಟು ಕಮ್ಮಿ ಧನ ಬೇಕೋ ಅಷ್ಟನ್ನು ಮಾತ್ರ ನೇರವಾಗಿ ತಾನು ನಡೆಸಿದ ವೃತ್ತಿಯಿಂದ ಗಳಿಸಿದರೇ ಹೊರತು ಬಹುಮಾನವಾಗಿಯೋ, ಸನ್ಮಾನವಾಗಿಯೋ ಬಂದ ಹಣವನ್ನೂ ಸಲಹೆಗಳಿಗೆ ಗೌರವವಾಗಿ ಸಲ್ಲಿಸಲ್ಪಟ್ಟ ಹಣವನ್ನೋ ಅವರು ಸ್ವೀಕರಿಸಲೇ ಇಲ್ಲ. ಸರ್.ಎಂ. ವಿಶ್ವೇಶ್ವರಯ್ಯನವರು ಡಿವಿಜಿಯವರ ಸಮಕಾಲೀನರಾಗಿದ್ದು ಸರಕಾರದ ಹಲವು ಕಾರ್ಯಕ್ರಮಗಳಿಗೆ, ಕೆಲಸಗಳಿಗೆ ರಾಜನೀತಿಯ ಸಲಹೆಗಳನ್ನು ಗುಂಡಪ್ಪನವರಿಂದ ಪಡೆಯುತ್ತಿದ್ದರು. ಅದಕ್ಕಾಗಿ ಮೈಸೂರು ಸರಕಾರ ಅವರಿಗೆ ಒತ್ತಾಯಪೂರ್ವಕವಾಗಿ ಧನಾದೇಶಗಳನ್ನು ನೀಡುತ್ತಿತ್ತು; ಸ್ವೀಕರಿಸಲು ಒಪ್ಪದೇ ಇದ್ದರೆ ಮುಂದೆ ಅಂತಹ ಸಲಹೆಗಳನ್ನು ಕೇಳುವುದಿಲ್ಲ ಎಂದೂ ಸರಕಾರದ ಅಧಿಕಾರಿಗಳು ತಿಳಿಸಿದಾಗ, ಸಾರ್ವಜನಿಕರ ಹಿತಕ್ಕಾಗಿ ತಾನು ಸಲಹೆಗಳನ್ನು ಕೊಡುವುದು ಒಳಿತು-ಅದರಿಂದ ವಿಮುಖನಾಗಬಾರದು ಎಂಬ ದೃಷ್ಟಿಯಿಂದ ಹೊರನೋಟಕ್ಕೆ ಧನಾದೇಶಗಳನ್ನು ಪಡೆಯಲು ಒಪ್ಪಿದರು; ಪಡೆದ ಎಲ್ಲಾ ಧನಾದೇಶಗಳನ್ನೂ  ಕಬ್ಬಿಣದ ಪೆಟ್ಟಿಗೆಯಲ್ಲಿ[ಟ್ರಂಕ್] ಹಾಗೇ ಇಟ್ಟುಬಿಟ್ಟರು! ಇದು ಸರಕಾರದ ಗಮನಕ್ಕೂ ಬರಲಿಲ್ಲ!

ಹೀಗೆ ಬಾಳಿದ ತಿಮ್ಮಗುರುವಿನ ಸತಿಸುತರ ಬಗ್ಗೆ ನಾವು ಬಹಳಷ್ಟನ್ನು ಕೇಳಿಲ್ಲ. ಕಾರಣವಿಷ್ಟೇ: ತಿಮ್ಮಗುರು ತಮ್ಮ ವೈಯ್ಯಕ್ತಿಕವನ್ನು ಬಹಳವಾಗಿ ಯಾರಲ್ಲೂ ಪ್ರಸ್ತಾವಿಸುತ್ತಿರಲಿಲ್ಲ. ಡಿವಿಜಿಯವರು ನಿತ್ಯ ಪುರಂದರದಾಸರೆಂಬುದನ್ನು ಎಲ್ಲರೂ ಬಲ್ಲರು. ಅದೇ ಬದುಕಿಗೆ ಗುಂಡಪ್ಪನವರು ತಮ್ಮನ್ನು ಒಗ್ಗಿಸಿಕೊಂಡುಬಿಟ್ಟಿದ್ದರು. ಅವರ ಮಡದಿ ಭಾಗೀರಥಮ್ಮನವರು ಆರ್ಥಿಕವಾಗಿ ಅನುಕೂಲವುಳ್ಳ ಕುಟುಂಬದಿಂದಲೇ ಬಂದವರಾದರೂ ಪತಿಯೊಂದಿಗೆ ಬದುಕುವಾಗ ಪತಿಯ ಇಚ್ಛೆಯನ್ನೇ ಅನುಸರಿಸಿದವರು. ಎಂದೂ ಗಂಡ ಗುಂಡನ ಆಶಯಗಳಿಗೆ ವಿರುದ್ಧವಾಗಿ ನಡೆದವರಲ್ಲ. ’ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದ ಬಿಕ್ಕಟ್ಟಿನ ಕಾಲದಲ್ಲಿ ಗುಂಡಪ್ಪನವರ ಹತ್ತಿರದ ನೆಂಟರೊಬ್ಬರ ಮನೆಯಲ್ಲಿ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೆಂಡತಿಮಕ್ಕಳು ಅಲ್ಲಿಗೆ ತೆರಳಬೇಕೆಂದು ಹೇಳಿ ತಾವು ಯಾವುದೋ ಬರವಣಿಗೆಗೆ ತೊಡಗಿದ್ದರು. ಸಂಜೆಯಾದರೂ ಹೆಂಡತಿ ಹೊರಟಂತೇ ಕಾಣಲಿಲ್ಲ. ಆ ಬಗೆಗೆ ಪ್ರಶ್ನಿಸಿದಾಗ "ಮಕ್ಕಳನ್ನು ಕಳುಹಿಸಿದ್ದೇನೆ" ಎಂಬ ಉತ್ತರ ಪಡೆದು "ಇಲ್ಲಾ ಇಲ್ಲಾ ತೀರಾ ಹತ್ತಿರದವರ ಮನೆ ನೀನು ಹೋಗಲೇಬೇಕು" ಎಂದು ಅನುಜ್ಞೆ ನೀಡಿದಾಗ ಉಪಾಯಗಾಣದ ಭಾಗೀರಥಮ್ಮನವರು ಗದ್ಗದಿತರಾಗಿ ಹೇಳಿದರು "ನೋಡಿ, ನೀವು ಹೋಗುವಂತೇ ಬಲವಂತಮಾಡುತ್ತಿದ್ದೀರಿ. ನನಗಿರುವುದು ಇದೊಂದೇ ಸೀರೆ. ಇದೂ ಅಲ್ಲಲ್ಲಿ ಹರಿದಿದೆ. ಇಂಥಾ ಸೀರೆಯುಟ್ಟು ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವುದು ಅವರಿಗೂ ಮುಜುಗರ ಉಂಟುಮಾಡಬಹುದು. ನನಗೇನೋ ಇದರಲ್ಲೇ ಸಮಾಧಾನವಿದೆ. ಆದರೆ ಜನ ನಿಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಅದು ನನಗೆ ಹಿಡಿಸುವುದಿಲ್ಲ. ಧರ್ಮಪತ್ನಿಯಾಗಿ ನಾನು ನಿಮ್ಮ ಮರ್ಯಾದೆಯನ್ನು ಕಾಪಾಡಬೇಕಲ್ಲವೇ? ಹೊಸಸೀರೆ ಬೇಕೆಂದು ನಾನೇನೂ ಬಯಸುತ್ತಿಲ್ಲ, ಆದರೆ ಈ ಸಂದರ್ಭದಲ್ಲಿ ಯುಕ್ತವಾದ ನಿರ್ಧಾರವನ್ನು ನಾನು ಕೈಗೊಂಡಿದ್ದೇನೆ, ಅದಕ್ಕೆ ನೀವು ಅಡ್ಡಿಯಾಗಬಾರದೆಂಬುದು ನನ್ನ ಬೇಡಿಕೆ."   

ಕವಿ ನರಸಿಂಹಸ್ವಾಮಿಯವರಿಗೆ ವೆಂಕಮ್ಮ ಹೇಗೆ ಅನ್ವರ್ಥವಾದ ಮಡದಿಯಾಗಿದ್ದರೋ ಹಾಗೆಯೇ ಅಥವಾ ಅದಕ್ಕೂ ತುಸು ಮಿಗಿಲಾದ ರೀತಿಯಲ್ಲೇ ಗಂಡನ ನೆರಳಾಗಿ ಬದುಕಿದವರು ಭಾಗೀರಥಮ್ಮ. ಇಂಥಾ ಭಾಗೀರಥಮ್ಮ ಎಳವೆಯಲ್ಲೇ, ಹರೆಯದಲ್ಲೇ ಅಗ್ನಿಆಕಸ್ಮಿಕಕ್ಕೆ ಬಲಿಯಾದರು. ಆಗಿನ್ನೂ ಡಿವಿಜಿಯರಿಗೆ ಮೂವೈತ್ತೈದೂ ತುಂಬಿರಲಿಲ್ಲ. ಮನದನ್ನೆಯ ಅವಸಾನವನ್ನು ಸಹಿಸಿಕೊಂಡು ತನ್ನ ’ನಿವೇದನ’ವನ್ನು ಆ ನೆನಪಿನಲ್ಲಿ ರಚಿಸಿದರೆಂದು ಕೆಲವರ ಅಭಿಪ್ರಾಯ. ಅದರಲ್ಲಿನ ಶೀರ್ಷಿಕಾ ಕವನ ಡಿವಿಜಿಯವರ ಮನದ ನವಿರಾದ ಭಾವನೆಗಳನ್ನು ಸ್ಪಷ್ಟಪಡಿಸುತ್ತವೆ: 

ಎನ್ನಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದೆ ಬರಹವ |
ಇನ್ನದೆಂತು ನೋಡಿನಗುತ
ಲೊರೆವೆ ಸರಸವ ||

ಕಿರಿಯ ಮಕ್ಕಳಳುವ ದನಿಗೆ
ಹಿರಿಯರಿಡುವ ಕಣ್ಣಪನಿಗೆ
ಕರಗದೆದೆಯ ಬಿದಿಯು ಬಣಬು
ಕವಿತೆಗೊಲಿವನೇಂ |
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ||

ನಿಡುಗಾಲ ತನ್ನ ಬಯಕೆಗಳನ್ನೆಲ್ಲಾ ಅದುಮಿ ಪತಿಸೇವೆಗೈದ ಹರೆಯದ ಮನದನ್ನೆ, ಸಾಧ್ವಿ ಸತ್ತು ಮಲಗಿದಾಗ, ಎಳೆಯ ಮಕ್ಕಳು ಕಂಬನಿಗರೆಯುತ್ತಿರುವಾಗ, ಸುತ್ತಸೇರಿದ ಹಿರಿಯರೂ ಕಂಡೂಕಾಣಿಸದಂತೇ ಅತ್ತು ಕಣ್ಣೊರೆಸಿಕೊಳ್ಳುತ್ತಿರುವಾಗ ಕವಿಯಲ್ಲುಂಟಾದ ಭಾವಗಳು ಹೇಗಿದ್ದವು ಎಂಬುದಕ್ಕೆ ಇದು ಕನ್ನಡಿ. ತನಗಾಗಿ ಬದುಕನ್ನೇ ಅರ್ಪಿಸಿಕೊಂಡು, ಗಂಡ ಗುಂಡಪ್ಪನ ಬದುಕುವ ರೀತಿಯನ್ನೇ ಒಪ್ಪಿಕೊಂಡು ಅದೇ ತನ್ನ ಭಾಗ್ಯವೆಂದು ಪರಿಗಣಿಸಿ ಡಿವಿಜಿಯವರೊಡನೆ ಹೆಜ್ಜೆಹಾಕಿದವರು ಭಾಗೀರಥಮ್ಮನವರು. ಎಷ್ಟೇ ಆರ್ಥಿಕ ಮುಗ್ಗಟ್ಟು ಎದುರಾದರೂ ಅದನ್ನೆಲ್ಲಾ ಧಿಕ್ಕರಿಸಿ, ಸಹಿಸಿ, ವಹಿಸಿಕೊಂಡು, ಬರೆದಂತೆಯೇ ಬದುಕಿದ ಅತ್ಯಂತ ವಿರಳ ಸಾಹಿತಿ-ಕವಿ ಗುಂಡಪ್ಪನವರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆ ಹೀಗೇ ಹಲವಾರು ಪ್ರಕಾರಗಳಲ್ಲಿ ದೇಶಕ್ಕಾಗಿ ದುಡಿದವರು, ನುಡಿದವರು, ಮಿಡಿದವರು ಡಿವಿಜಿ. ಸಂಸಾರಿಯೋ? ಹೌದು ಸಂಸಾರಿ, ಅವಧೂತರೋ? ಹೌದು ಅವಧೂತರು, ವೇರ್ದಾಂತಿಯೋ? ಹೌದು ವೇದಾಂತಿ-ಹೀಗೇ ಹಲವು ಮುಖಗಳಲ್ಲಿ ಶೋಭಿಸುತ್ತಾ ಆಸ್ತಿಕತೆಯಲ್ಲಿರುವ ನಾಸ್ತಿಕತೆಯನ್ನೂ ನಾಸ್ತಿಕತೆಯಲ್ಲಿರುವ ಆಸ್ತಿಕತೆಯನ್ನೂ ಹೊರತೆಗೆದು ತೋರಿಸುತ್ತಾ ’ಪರೋಪಕಾರಾರ್ಥಮಿದಂ ಶರೀರಂ’ ಎಂಬ ವ್ಯಾಖ್ಯೆಗೆ ಸಮರ್ಪಕ ಉದಾಹರಣೆಯಾಗಿ ನಿಲ್ಲುವ ಧೀಮಂತ ವ್ಯಕ್ತಿ ಗುಂಡಪ್ಪನವರು. ಅನೇಕಬಾರಿ ಆಲೋಚಿಸುವಾಗ ಅವರೊಬ್ಬ ವ್ಯಕ್ತಿ ಎನಿಸುವುದಕ್ಕಿಂತಾ ಹೆಚ್ಚಾಗಿ ಒಂದು ಸಂಸ್ಥೆ ಅಥವಾ ಸಂಸ್ಥಾನ ಎಂದರೇ ಸಮಂಜಸ ಎನಿಸುತ್ತದೆ; ನಾನು ಎನ್ನುವುದನ್ನು ಮರೆತು ನಾವು ಎಂಬುದನ್ನೇ ಆತುಕೊಂಡಿದ್ದ ಅವರಿಗೆ ದೇಶದ ಎಲ್ಲರ ಸಂಸಾರವೂ ಅವರದೇ ಆಗಿತ್ತು! ದೇಶವೇ ಅಥವಾ ಜಗವೇ ಅವರ ಕುಟುಂಬವಾಗಿತ್ತು. ||ವಸುಧೈವ ಕುಟುಂಬಕಮ್|| ಎಂಬುದನ್ನು ಅಕ್ಷರಶಃ ನಡೆಸಿದವರು, ಹಾಗೆ ಬಾಳಿದವರು ಡಿವಿಜಿ. ಇಂಥಾ ಮಹಾತ್ಮನ ಜೀವನದ ಘಳಿಗೆಗಳನ್ನು ಸೆರೆಹಿಡಿಯಲು ಪ್ರಾಮಾಣಿಕವಾಗಿ ನಡೆದ ಪ್ರಯತ್ನ ’ಬ್ರಹ್ಮಪುರಿಯ ಭಿಕ್ಷುಕ’ ಎಂಬ, ಅವಧಾನಿ ಗಣೇಶರು ಬರೆದ ಪುಸ್ತಕ. ವೇಗದ ಓದುಗರು ೪೫ ನಿಮಿಷಗಳಲ್ಲಿ ಓದಿಸಾಗಬಹುದಾದ ೧೫೮ ಪುಟಗಳ ಸಂಗ್ರಹಾರ್ಹ ಹೊತ್ತಿಗೆ ಮತ್ತೊಮ್ಮೆ ನಿಮ್ಮ ನೆನಪಿಗಾಗಿ ಈ ಹೊತ್ತಿಗೆ! ನಮಸ್ಕಾರ.   


Monday, December 3, 2012

ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ

ಿತ್ರಋಣ: ಅಂತರ್ಜಾಲ
ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ 

ಮೂಕ ವೇದಾಂತಕ್ಕೆ ನೋಂತನು
ವಾಕಮಂ ಬಿಟ್ಟಿರಲು ನಿಜಸುತನ್
ಈಕುಮಾರವ್ಯಾಸನಾದನು ಮಾತಿಗೇಧಾತು |
ಶ್ಲೋಕ ಫಣಿತಿಯೊಳಲ್ಲವೇ ಸು
ಶ್ಲೋಕನಾನಿರೆ ಕುವರ ನಿವನೆನ
ಗೇಕಲಿಸಿದನು ಭಾಮಿನಿಯನೀ ವಾರ್ಧಕದೆ ಚತುರಂ ||
 

ಸಾಂಸ್ಕೃತಿಕ ಕುಟುಂಬ ಸ್ವಸ್ಥಾನಕ್ಕೆ ಹೊರಟುನಿಂತಾಗ ಮತ್ತೆಂದು ಸೇರಿಯೇವು ಎಂಬ ಅನಿಸಿಕೆ. ಸೇರಿದ ವಿದ್ವಾಂಸರೊಡನೆ ಮೂರುದಿನಗಳಲ್ಲಿ ಪಡೆದುಕೊಂಡ ಅನುಭವ ಓದಿ ಬರುವಂಥದ್ದಲ್ಲ! ಮರೆಯಲಳವಲ್ಲ! ಒಬ್ಬೊಬ್ಬರಲ್ಲೂ ಒಂದೊಂದು ಕಾವ್ಯ-ಸಾಹಿತ್ಯ ವಿನೋದ ವೈಶಿಷ್ಟ್ಯ. ನಡುನಡುವೆ ಪ್ರೊ| ಅ.ರಾ.ಮಿತ್ರ. ಶತಾಯುಷಿ ಪ್ರೊ| ಜಿ.ವಿ ಇಂಥಾ ಹಿರಿಯರ ಆಗಮನ. ಮಂಗಳವೇದಿಕೆಯಂಗಳದಲ್ಲಿ ’ಪದ್ಯಪಾನ’ ಹಮ್ಮಿಕೊಂಡಿದ್ದ ಶತಾವಧಾನ ಕಾರ್ಯಕ್ರಮ ಅಭೂತಪೂರ್ವವಾಗಿತ್ತು! ಕವಿ-ಕಾವ್ಯ ರಸದೌತಣ ಕಬ್ಬಿಗ ಮನಸ್ಸಿಗೆ ಅಮೋದವೂ ಪ್ರಮೋದವೂ ಪ್ರಬೋಧವೂ ಆಗಿತ್ತು. ಹಿರಿಯರಾದ ಡಾ|ಎಸ್.ಆರ್. ರಾಮಸ್ವಾಮಿಯಂಥವರು ಮೂರು ದಿನವೂ ಕುಳಿತು ಆಸ್ವಾದಿಸುವಷ್ಟರ ಮಟ್ಟಿಗೆ ಅವಧಾನ ಮಹತ್ತು ಪಡೆದಿತ್ತು. ಸಾವಿರ ಸಭಾಸದರು, ಅದಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಹೊರಾಂಗಣದಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಕುಳಿತು ದೊಡ್ಡ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದವರು, ಅದಕ್ಕೂ ಮಿಕ್ಕಿದ ಸಂಖೆಯಲ್ಲಿ ಅಂತರ್ಜಾಲದ ಮೂಲಕ ವೀಕ್ಷಿಸಿದವರು ...ಹೀಗೇ ಶ್ರೋತೃಗಳ ಸಂಖ್ಯೆ ಬಹಳವಿತ್ತು. ಶತಾವಧಾನದ ಕಾವ್ಯವಾಚನದಲ್ಲಿ ಹಾಡಿದ ಪ್ರಬುದ್ಧ/ಪ್ರಸಿದ್ಧ ಗಮಕಿ ಕೆದಿಲಾಯರನ್ನಾಗಲೀ, "ಅವಧಾನಿಗಳೇ ನಿಮ್ಮ ಮನೆಯಲ್ಲಿ ಸೊಳ್ಳೆ ಯಾವ ಛಂದಸ್ಸಿನಲ್ಲಿ ಗುಂಯ್ ಗುಡುತ್ತದೆ?" ಎಂಬಿತ್ಯಾದಿ ರಸಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ ಸೂರ್ಯಪ್ರಕಾಶ ಪಂಡಿತರನ್ನಾಗಲೀ ಯಾರಾದರೂ ಮರೆಯಲು ಸಾಧ್ಯವೇ? ಅಷ್ಟೇ ಏಕೆ ’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ ಎಂಬ ಪದ್ಯಪಾನ ಮುಂದೊಡ್ಡಿದ ಸಮಸ್ಯೆಗೆ ಅಭಿಜಾತ ಶಿಷ್ಟ ಸಾಹಿತ್ಯದ ಛಂದಸ್ಸುಗಳನ್ನು ಬಳಸಿ ೩೦ ಕ್ಕೂ ಅಧಿಕ ಪರಿಹಾರಗಳನ್ನು ಬರೆದ ಮೇಲುಕೋಟೆಯ ಅರೈಯರ್ ಶ್ರೀರಾಮಶರ್ಮರು, [ಅನೇಕ ಉತ್ತಮ ಗ್ರಂಥಗಳನ್ನು ಬರೆದ]ತಂಬಾಕಿನಚಟದ ಬಗ್ಗೆ ಆಶುಕವಿತೆಯನ್ನು ಕೇಳಿದ ಎಂ.ಏ ಹೆಗಡೆಯವರು, ವಿದ್ವಾನ್ ತ್ಯಾಗಲಿ ರಾಮಚಂದ್ರ ಶರ್ಮ ಇಂತಹ ಅನೇಕಾನೇಕರ ಸಾಹಿತ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಾಗ ಸಂಭಾವ್ಯ ಜಗತ್ತಿನಲ್ಲಿ ಶಿಷ್ಟಸಾಹಿತ್ಯಕ್ಕೆ ಮತ್ತೆ ಆದ್ಯತೆ ಸಿಗುವುದರಲ್ಲಿ ಸಂಶಯವಿರಲಿಲ್ಲ.           

ಶತಾವಧಾನ ನಡೆದಿದ್ದು ನಿಮಗೆಲ್ಲಾ ಈಗಾಗಲೇ ತಿಳಿದೇ ಇರುವಂತೇ ಬೆಂಗಳೂರಿನ ಜಯನಗರದ, ಎನ್.ಎಮ್.ಕೆ,ಆರ್.ವಿ ಕಾಲೇಜಿನ ಮಂಗಳ ಮಂಟಪದಲ್ಲಿ. ಅರ್ಧ ಕೀ.ಮೀ ದೂರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಅಲ್ಲಿಂದ ಭವ್ಯ ಮೆರವಣಿಗೆ ಆರಂಭವಾಯ್ತು. ಅಲಂಕೃತ ವಾಹನದಲ್ಲಿ ವಾಗ್ದೇವಿ ಶಾರದೆಯ ವಿಗ್ರಹವಿತ್ತು. ಅದರ ಹಿಂದೆ ಶತಾವಧಾನಿ ಗಣೇಶರು ಜನರ ಮಧ್ಯೆ ನಡೆಯುತ್ತಿದ್ದರು. ಅದಕ್ಕೂ ಹಿಂದೆ ಸಾಲಂಕೃತ ಪಲ್ಲಕ್ಕಿಯಲ್ಲಿ ವಿವಿಧ ಅವಧಾನಿಗಳ ಪುಸ್ತಕಗಳನ್ನು ಇರಿಸಲಾಗಿತ್ತು. ಅನೇಕ ಸಾಹಿತಿಗಳು, ವಿದ್ವಾಂಸರು, ಪೃಚ್ಛಕರು ಅಭಿಮಾನದಿಂದ ಸ್ವಯಂಪ್ರೇರಿತರಾಗಿ ಕೈಯ್ಯಲ್ಲಿ ಶತಾವಧಾನ ಎಂದು ಬರೆದ ಕೀರ್ತಿಬಾವುಲಿಗಳನ್ನು ಹಿಡಿದು ನಡೆದಿದ್ದರು. ವೈದಿಕರನೇಕರು ವೇದಘೋಷಗಳನ್ನು ನಡೆಸುತ್ತಾ ನಡೆದಿದ್ದರೆ, ನಾದಸ್ವರ ಮತ್ತು ಚಂಡೆ ವಾದಕರು ಮೆರವಣಿಗೆಗೆ ಕಳೆಯಿತ್ತಿದ್ದರು. ಜಯಘೋಷಗಳು ಆಗಾಗ ಮೊಳಗುತ್ತಿರಲು ಮೆರವಣಿಗೆ ಮಂಗಳಮಂಟಪಕ್ಕೆ ಬಂತು. ಮಂಗಳಮಂಟಪದ ದ್ವಾರದಲ್ಲಿ ಬುಧಜನರನೇಕರು ಶತಾವಧಾನಿಗೆ ಶುಭಕೋರಿ ಸ್ವಾಗತಿಸಿದರು. ವೇದಿಕೆಯೆಡೆಗೆ ಬಿಜಯಂಗೈದ ಗಣೇಶರು ಮಧ್ಯೆ ಆಸೀನರಾದಮೇಲೆ ಪೃಚ್ಛಕರು ತಮ್ಮ ಹೆಸರುಗಳನ್ನು ಕರೆದಂತೆ ಬಂದು ಆಸನದಲ್ಲಿ ಮಂಡಿಸಿದರು. ವಂದನಾ ಗೀತೆಯೊಂದಿಗೆ ಆರಂಭವಾದ ಶತಾವಧಾನ ಸಮಸ್ಯಾಪೂರಣ ಭಾಗದಿಂದ ಮೊದಲನೇ ಸುತ್ತಿನಲ್ಲಿ ಆರಂಭಗೊಂಡಿತು. ದತ್ತಪದಿ, ಆಶುಕವಿತೆ, ಕಾವ್ಯವಾಚನ, ಸಂಖ್ಯಾಬಂಧ, ಚಿತ್ರಕಾವ್ಯ, ಅಪ್ರಸ್ತುತಪ್ರಸ್ತುತಿ ಹೀಗೆ ಹಲವು ಅಂಗಗಳಲ್ಲಿ ಸಾಹಿತ್ಯದ ಮಜಲುಗಳು ಮಗ್ಗುಲು ತಿರುಗುತ್ತಿದ್ದವು. ಸಾಹಿತ್ಯಾಸಕ್ತಿರಿಗೆ ’ಪದ್ಯಪಾನ’ ಅರ್ಪಿಸಿದ ರಾಜ್ಯೋತ್ಸವದ ನಿಜವಾದ ಕೊಡುಗೆ ಇದಾಗಿತ್ತು. ಪದ್ಯಪಾನದ ಮಿತ್ರಬಳಗ, ತಮ್ಮ ತನು-ಮನ-ಧನ ವ್ಯಯಿಸಿ ಹಗಲಿರುಳೂ ಶ್ರಮವಹಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಅವರಿಗೆ ಅಕ್ಷರಗಳಲ್ಲಿ ವಂದನೆಗಳನ್ನು ಹೇಳಿದರೆ ತೀರಾ ಬಾಲಿಶವಾದೀತು; ಕೃತ್ರಿಮವಾದೀತು.   

ಅವಧಾನವನ್ನು ನಾನು ನೋಡಿದ್ದೆನೇ ಹೊರತು ವೇದಿಕೆಯಲ್ಲಿ ಪೃಚ್ಛಕನಾಗಿ ಭಾಗವಹಿಸಿರಲಿಲ್ಲ; ಹಾಗೊಂದು ನಿರೀಕ್ಷೆಕೂಡ ಇಟ್ಟುಕೊಂಡಿರಲಿಲ್ಲ. ೭ ತಿಂಗಳ ಹಿಂದೆ ಪೃಚ್ಛಕರ ಹುಡುಕಾಟ ಆರಂಭಿಸಿದ ’ಪದ್ಯಪಾನ’ ನನ್ನಲ್ಲೂ ಭಾಗವಹಿಸುವಂತೇ ಕೇಳಿತು; ಒಪ್ಪಿಕೊಳ್ಳುವ ಧೈರ್ಯ ಇರಲಿಲ್ಲ, ಯಾಕೆಂದರೆ ಪ್ರಶ್ನೆ ಕೇಳುವುದು ಯಾರಲ್ಲಿ ಎಂಬುದನ್ನು ಬಲ್ಲೆನಾದ್ದರಿಂದ ಪ್ರಶ್ನೆಗಳನ್ನು ಕೇಳಲು ನಾನು ಸಮರ್ಥನೇ ಎಂದು ಚಿಂತಿಸುತ್ತಿದ್ದೆ; ಎರಡುಮೂರು ದಿನಗಳಕಾಲ ಉತ್ತರಕೊಡಲಿಲ್ಲ. ಕೊನೆಗೆ ಮಿಂಚಂಚೆಯಲ್ಲಿ ಒಪ್ಪಿಗೆ ಸೂಚಿಸಿದೆ. ಪ್ರಶ್ನೆಗೆ ಅವಧಾನಿಗಳು ತಿರುಪ್ರಶ್ನೆ ಹಾಕಿಬಿಟ್ಟರೆ ಜೀರ್ಣಿಸಿಕೊಳ್ಳುವ ತಾಕತ್ತು ನನಗೆಲ್ಲಿ ಎಂಬ ಕಾರಣವೇ ನನ್ನನ್ನು ಹಿಂಡುತ್ತಿತ್ತು. ಮೇಲಾಗಿ ಅವಧಾನಿ ಗಣೇಶರು ಅವಧಾನಗಳಲ್ಲಿ ಕಟ್ಟುನಿಟ್ಟು, ಅಲ್ಲಿ ಪ್ರೀತಿನಾತಿಯಿಂದ, ಸ್ನೇಹದ ಸಂಕೋಲೆಯಿಂದ ಯಾರನ್ನೂ ಕರೆಯುವುದಿಲ್ಲ, ಪೃಚ್ಛಕರು ಅವಧಾನ ನಡೆಯುವ ವಾರಕ್ಕೂ ಮುಂಚೆ ಅವರನ್ನು ಸಂಪರ್ಕಿಸುವುದನ್ನು ನಿಲ್ಲಿಸಬೇಕಾಗುತ್ತದೆ; ಯಾಕೆಂದರೆ ಪೃಚ್ಛಕರ-ಅವಧಾನಿಗಳ ನಡುವೆ ಯಾವುದೋ ಮ್ಯಾಚ್ ಫಿಕ್ಸಿಂಗ್ ಇದೆ ಎಂಬ ಭಾವನೆ ಈಗಿನ ಜನರಲ್ಲಿ ಮೂಡಲೂಬಹುದು ಎಂಬ ಕಾರಣಕ್ಕೆ. ಶತಾವಧಾನದಲ್ಲಂತೂ ದೂರದ ಊರುಗಳಿಂದ ಮತ್ತು ವಿದೇಶಗಳಲ್ಲಿ ವಾಸಿಸುವ ಕನ್ನಡಿಗರು ಪೃಚ್ಛಕರಾಗಿ ಬಂದಿದ್ದರು. ವ್ಯವಸ್ಥೆಯ ಹೊಣೆಯನ್ನು ’ಪದ್ಯಪಾನ’ ಹೊತ್ತುಕೊಂಡಿತ್ತು. ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡೂ ಅಭಿಜಾತ ಕಾವ್ಯ-ಸಾಹಿತ್ಯದಲ್ಲಿ ಆಸಕ್ತಿ ತಳೆದು, ಪದ್ಯವಿದ್ಯೆಯನ್ನು ಕಲಿಸುವ ಸಲುವಾಗಿ ಕಲೆತ ಹಲವು ಸಮಾನ ಮನಸ್ಕರ ಸಂಸ್ಥೆ ’ಪದ್ಯಪಾನ.’ ಗಣೇಶರಿಗೆ ೫೦ನೇ ಜನ್ಮದಿನದ ಗುರುತಿಗಾಗಿ ’ಪದ್ಯಪಾನ’, ’ಶತಾವಧಾನ’ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾರ್ಯಕ್ರಮದಲ್ಲಿ ನಖದಿಂದ ಶಿಖದವರೆಗೆ ಎನ್ನುವಂತೇ ಆದಿಯಿಂದ ಅಂತ್ಯದವರೆಗೆ ಪ್ರತೀ ಹೆಜ್ಜೆ ಅಚ್ಚುಕಟ್ಟಾಗಿತ್ತು. ಒಳ್ಳೆಯ ಸಭಾಗೃಹ, ಉತ್ತಮ ವೇದಿಕೆ, ಅದಕ್ಕೆ ಸರಳ ಅಲಂಕಾರ, ಧ್ವನಿ-ಬೆಳಕುಗಳ ಸಂಯೋಜನೆ, ಹೊರವಲಯದಲ್ಲಿ ಗಣೇಶರ ಪುಸ್ತಕಗಳ ಮಾರಾಟದ ಮಳಿಗೆ, ಸಾರ್ವಜನಿಕರಿಗೆ ಊಟ-ತಿಂಡಿಗೆ ಹೋಟೆಲ್, ಪೃಚ್ಛಕರಿಗೆ ವಾಹನಾದಿ ಸಾಗಾಟ ವ್ಯವಸ್ಥೆ, ಊಟ-ತಿಂಡಿ ಎಲ್ಲವನ್ನೂ ಹೇಗಿರಬೇಕೋ ಹಾಗೇ ಇರಿಸಿದ್ದರು. ಸಾಹಿತ್ಯಾಸಕ್ತ ಸ್ವಯಂಸೇವಕರು ತಮ್ಮ ಪೂರ್ಣ ಸಮಯವನ್ನು ನಮ್ಮೆಲ್ಲರ ಸೇವೆಗಾಗಿ ಮೀಸಲಿಟ್ಟು, ಕುಡಿಯುವ ನೀರು, ಕಾಫಿ-ಟೀ ಎಲ್ಲವನ್ನೂ ಸರಬರಾಜು ಮಾಡುತ್ತಿದ್ದರು. ಮಾತಿನಲ್ಲೂ ಅದೆಂಥಾ ಆತ್ಮೀಯತೆ ಅಂತೀರಿ! ಮೂರು ದಿನಗಳು ಕಳೆದಿದ್ದು ತಿಳಿಯಲೇ ಇಲ್ಲ! ಭಾನುವಾರ ರಾತ್ರಿ ೮ ಗಂಟೆಗೆ ಅವಧಾನ ಮುಗಿದಾಗ ಮುಗಿದುಹೋಯ್ತಲ್ಲ ಎಂಬ ಭಾವನೆ; ಇನ್ನಷ್ಟು ಬೇಕಿತ್ತು ಎಂಬ ಹಪಹಪಿಕೆ. ಏನೂ ಅಲ್ಲದ ನನ್ನನ್ನು ವೇದಿಕೆಗೆ ಹತ್ತಿಸಿದ್ದರಲ್ಲಾ ಆ ಗುಂಗಿನಲ್ಲಿ ನನಗೆ ನನ್ನ ಪ್ರಶ್ನಾಭಾಗವಾದ ಆಶುಕವಿತೆಯಲ್ಲಿ ಏನನ್ನು ವಸ್ತುವನ್ನಾಗಿ ಕೊಡಬೇಕೆಂದೇ ತೋಚಲಿಲ್ಲ! ಏನೇನೋ ಚೀಟಿಗಳಲ್ಲಿ ಬರೆದುಕೊಂಡಿದ್ದೆ, ಬರೆದಿದ್ದನ್ನು ಕೇಳಲೇ ಇಲ್ಲ. ವೇದಿಕೆಯಲ್ಲಿ ನಿಜಕ್ಕೂ ಹೂತರಥದ ಗಾಲಿಯನ್ನೆತ್ತುವ ಕರ್ಣನಂತಹ ಮನೋಸ್ಥಿತಿಯಲ್ಲಿ ನನ್ನ ಮನೋಗತವನ್ನು ಯಾರಲ್ಲಿ ಹೇಳಿಕೊಳ್ಳಲಿ? ಸುದೈವದಿಂದ ಬಹಳಹೊತ್ತು  ನನ್ನ ಸರದಿ ಬರಲಿಲ್ಲ; ದೇವರು ಬಚಾವ್ ಮಾಡಿದ ಎಂದುಕೊಂಡೆ. ಸುತ್ತಲೂ ಕಣ್ಣಾಡಿಸಿದಾಗ ಭೀಷ್ಮ, ದ್ರೋಣ, ಜಯದ್ರಥರಂತಹ ವೀರ ಸೇನಾನಿಗಳು ಒಂದೆಡೆಯಾದರೆ ಪರಮಾತ್ಮ ಕೃಷ್ಣ ಗಣೇಶರ ರೂಪದಲ್ಲಿ ಇರುವಂತೇ ಕಂಡಿತು, ಕೌರವ-ಪಾಂಡವ ಎಂಬ ಪಕ್ಷಗಳೇನೂ ಇಲ್ಲದಿದ್ದರೂ ಅತಿರಥ ಮಹಾರಥರ ಮುಂದೆ ನಾನಾದರೂ ಏನು ಎಂದು ಚಿಂತಿಸುವಾಗ ಕುಳಿತಲ್ಲೇ ಸ್ತಬ್ಧನಾದೆ [ಇದು ಕೀಳರಿಮೆಯಲ್ಲ,    ಆತ್ಮವಿಶ್ವಾಸದ ಕೊರತೆಯೂ ಅಲ್ಲ, ಕೇವಲ ಅನಿಸಿಕೆ ಎಂಬುದನ್ನು ಗಮನಿಸಬೇಕು] ; ಆ ಕ್ಷಣಕ್ಕೆ ನೆನಪಾಗಿದ್ದು ’ಬಂಗಾರದ ಅಂಗಡಿಯಲ್ಲಿ ನೊಣಕ್ಕೇರ್ನು ಕೆಲಸ’!  ಶತಾವಧಾನದ ಇಡೀ ವೇದಿಕೆಯೇ ಒಂದು ಬಂಗಾರದ ಅಂಗಡಿಯಾದರೆ ಅಲ್ಲಿ ನಾನೊಬ್ಬ ನೊಣ ಎಂಬುದು ಕಲ್ಪನೆ.  ನನ್ನ ಸರದಿ ಬಂದೇ ಬಿಟ್ಟಿತು ! ನನ್ನ ಮಾತು ಹೀಗಿತ್ತು :

ಶೆಟ್ಟಿಯಂಗಡಿಯಿಟ್ಟ ಸಾವ್ರಾರು ಸಾಮಾನು ! 
ಸಟ್ಟನೆಯೆ ಕೊಟ್ಟನವ ಭಟ್ಟ ಕೇಳಿದನ
ಮಟ್ಟಸದ ಮಾತುಂಟು ಹಾಡುಂಟು ಕಥೆಯುಂಟು
ಗಟ್ಟಿಗನು ಅವಧಾನಿ | ಜಗದಮಿತ್ರ

ಜಗದಮಿತ್ರನ ಕಾವ್ಯದ ಮೂಲಕ ಅವಧಾನಿಗಳಿಗೆ ನುಡಿನಮನ ಸಲ್ಲಿಸಿದ್ದೇನೆ. ಅವಧಾನಕಲಾಪುನರ್ಪ್ರತಿಷ್ಠಾಪನಾಚಾರ್ಯ ಋಷಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು, ಪ್ರಚ್ಛಕಬಂಧುಗಳಿಗೆ ನಮಸ್ಕಾರಗಳು, ಸಭಾಸದರಿಗೆ ನಮಸ್ಕಾರಗಳು. ವಸ್ತು ಹೀಗಿದೆ-

’ಬಂಗಾರದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ’ ಎಂಬುದನ್ನು ಸಾಂಗತ್ಯದಲ್ಲೂ

ಅಥವಾ ಇನ್ನೊಂದು ಆಯ್ಕೆ,

ಬಿಡದಿ ನಿತ್ಯಾನಂದನ [ರಾಸಲೀಲಾ ರಹಿತ]ವೇಷಗಳನ್ನು ಭೋಗಷಟ್ಪದಿಯಲ್ಲಿ ಕೆಟ್ಟದಾಗಿ ಬಣ್ಣಿಸಬೇಕಾಗಿ ಪ್ರಾರ್ಥನೆ.

ಅವಧಾನಿಗಳು ನೊಣದ ಪ್ರಶ್ನೆಯನ್ನೇ  ತೆಗೆದುಕೊಂಡರು, ಸಾಂಗತ್ಯ ಹೇಳಿದರು :


ಹೊನ್ನೀನ ತೂಕದೆ ನೊಣಕೇನು ಕೆಲಸವು
ಬಿನ್ನಾಣವಾಯ್ತೆನ್ನಬೇಡಾ
ಹೊನ್ನೀನ ತೂಕದಿ ನೊಣಕೇನು ಕಜ್ಜವು
ಭಿನ್ನವು ತಾನಾಯ್ತು ಬೆಲೆಯು

ಹೊನ್ನಿನಂಗಡಿಯಲ್ಲಿ ದುಬಾರಿ ಬೆಲೆಯ ಹೊನ್ನನ್ನು ತೂಗುತ್ತಾರಲ್ಲಾ ಅದನ್ನು ತೂಗುವಾಗ ನೊಣ ತಕ್ಕಡಿಯಲ್ಲಿ ಕೂತರೆ ಅದರ ಭಾರವೂ ಲೆಕ್ಕಕ್ಕೆ ಬರುತ್ತದೆ, ನೊಣದ ತೂಕ ನಗಣ್ಯವಾದರೂ ಹೊನ್ನಿನ ತೂಕದಲ್ಲಿ ಅದು ದುಬಾರಿ ಬೆಲೆಯುಳ್ಳದ್ದು ಎಂಬುದು ಉತ್ತರ.


ನಾನು ಬರೆದ ಪದ್ಯ ಹೀಗಿತ್ತು -

ಕುಳಿತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ಪುಳಕಗೊಳ್ಳುತ ಲೇಸನರಸಿ
ಫಳಫಳನೆ ಹೊಳೆವ ಬಂಗಾರದ ಮೇಲ್ಗಾಳಿ
ಥಳುಕು ರೆಕ್ಕೆಗೆ ತಾಗಲೆನಿಸಿ

ಅಥವಾ

ಕೂತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ನಾಕದ ಲೇಸತಾನರಸಿ
ತೂಕದ ಬಂಗಾರ ಸೋಕಿದ ಗಾಳಿಯು
ತಾಕುತ ಹೊಳೆವುದ ಬಯಸಿ

ಬಂಗಾರದಂಗಡಿಯಲ್ಲಿ ಹೊಳೆವ ಬಂಗಾರದ ಆಭರಣಗಳಮೇಲೆ ಹಾಯ್ದ ಗಾಳಿ ತನ್ನ ರೆಕ್ಕೆಗಳಿಗೆ ತಾಗಿ ಅವುಗಳಿಗೂ ತುಸು ಹೊಂಬಣ್ಣ ಬರಲಿ ಎಂದೆನಿಸಿ ನೊಣ ಬಂಗಾರದಂಗಡಿಯಲ್ಲಿ ಕುಳಿತಿತ್ತು. ಭಾವಾರ್ಥ: ಅವಧಾನದಲ್ಲಿ ಕುಳಿತ ವಿದ್ವಾಂಸರನೇಕರ ರಸಾಭಿಜ್ಞತೆ, ಕರ್ತೃತ್ವಶಕ್ತಿ ಮತ್ತು ಕ್ರಿಯಾಶೀಲತೆಯಿಂದ, ಅವರ ಜ್ಞಾನದಾಸೋಹದಿಂದ ನನಗೂ ಸ್ವಲ್ಪ ಜ್ಞಾನಾನ್ನ ಲಭಿಸಿದರೆ ಒಳಿತು ಎಂದುಕೊಂಡು ನಾನು ವೇದಿಕೆಯಲ್ಲಿ ಕುಳಿತಿದ್ದೆ ಎಂಬುದಾಗಿ.


ಗಂಟೆ ಕಳೆದು ನನ್ನ ಇನ್ನೊಂದು ಪ್ರಶ್ನೆ :


ಕವಿಕಲ್ಪನೆಯಲ್ಲಿ  ವ್ಯಾಸ-ಕುಮಾರವ್ಯಾಸ ಪ್ರಥಮಭೇಟಿಯಲ್ಲಿ ಮೊದಲ ಮಾತು ಎಂಬ ಕುರಿತು ಭಾಮಿನಿಯಲ್ಲಿ ಬಣ್ಣಿಸಬೇಕೆಂಬ ವಿನಂತಿ.

ಅವಧಾನಿಗಳು ಈ ಲೇಖನದ ಆರಂಭದಲ್ಲಿ ಹೇಳಿದ ಭಾಮಿನಿಯನ್ನು ಉತ್ತರವಾಗಿ ನೀಡಿದರು.

ನನ್ನ ನಿವೇದನೆ ಹೀಗಿತ್ತು--

ವ್ಯಾಸರ ಮಾತು :

ಕುವರಬಾರೆಲೆ ಬರೆದು ಭಾರತ
ವಿವರವಾಗಿಯೆ  ತಿಳಿಸುತೆಲ್ಲೆಡೆ
ಪ್ರವರ ಪೇಳದೆ ನುಡಿದ ಪರಿಯದು ಛಂದ ಚಂದನವು |
ಬೆವರ ಹನಿಯಲು ಕಂಡೆ ಭಾಮಿನಿ
ತವರುನಾಡಿಗರೆಲ್ಲ ಧನ್ಯರು
ನವಿರು ಕಾವ್ಯದ ಸೊಬಗು ಸವಿಯಲು ಮನಕೆ ನಂದನವು || 


ಕುಮಾರವ್ಯಾಸನ ಮಾತು :

ದೇವನಾಗರಿ ಅರಿಯದವರಿಗೆ
ದೇವ ನಿಮ್ಮಯ ಮೂಲಕಥೆಯನು
ಭಾವಪೂರಿತವಾಗಿ ತಲುಪಿಸೆ ಓಲೆಕಾರನಿವ |
ಜೀವತುಂಬುತ ಜಡಕೆ ಚೇತನ
ವೀವ ನಾರಾಯಣನ ಚರಣಕೆ
ತೇವಮನದಲಿ ತಲೆಯಬಾಗಿಹೆ ತಿಳಿಸಿ ಕಾರಣವ ||

ಹೀಗೆ ಪದ್ಯಗಳನ್ನು ರಚಿಸುತ್ತಾ ಆಸ್ವಾದಿಸುತ್ತಾ ಸಮಯ ಸರಿದದ್ದು ತಿಳಿಯಲೇ ಇಲ್ಲ. ನೂರು ಪ್ರಶ್ನೆಗಳಿಗೆ ನೂರಕ್ಕಿಂತಾ ಹೆಚ್ಚಿನ ಉತ್ತರಗಳನ್ನು ನೀಡಿದ ಅವಧಾನಿಗಳನ್ನು ಕಂಡಾಗ ನಾವೆಲ್ಲ ಮತ್ತೊಮ್ಮೆ ಬೆರಗಾಗಿದ್ದೆವು. ಅವಧಾನವನ್ನು ಧಾರಣೆ ಮಾಡಿಮುಗಿಸಿದ ಅವಧಾನಿಗಳಿಗೆ ಮೇಲಿನಿಂದ ಪುಷ್ಪವೃಷ್ಟಿಯಾಗುತ್ತಿದ್ದಂತೆಯೇ ನಡುವೇದಿಕೆಯಲ್ಲಿ ಅವಧಾನಿಗಳು ಸಭೆಗೆ ನಮಸ್ಕಾರ ಮಾಡಿದರು. ನಂತರ ’ಪದ್ಯಪಾನ’ ಕೇಳಿಕೊಂಡಮೇರೆಗೆ ಚಿತ್ರಕಾವ್ಯದ ಬಂಧಗಳನ್ನು ಸಭಿಕರಿಗೆ ವಿವರಿಸಿದರು. ಪದ್ಯಪಾನದ ಸಲಹೆಗಾರರಾದ ಡಾ| ರಾಮಸ್ವಾಮಿಯವರು ಎರಡುಮಾತುಗಳನ್ನಾಡಿದರು. ಆ ನಂತರ ಅವಧಾನಿಗಳು  ತಮ್ಮ ಹಸ್ತದಿಂದಲೇ ಪೃಚ್ಛಕರಿಗೆ ಸನ್ಮಾನ ನೆರವೇರಿಸಿದರು. ಪದ್ಯಪಾನದ ವತಿಯಿಂದ  ಗಣೇಶರನ್ನು ಸನ್ಮಾನಿಸಿ ಕೈಗೆ ಬಂಗಾರದ ಕಡಗವನ್ನು ತೊಡಿಸಲಾಯ್ತು. ಶಾಲು ಹೊದೆಸಿ,ಫಲತಾಂಬೂಲ ನೀಡಿ ಗೌರವಿಸಿದ ಜನ ಅವಧಾನಿಗಳನ್ನು ನೋಡುತ್ತಾ ವೇದಿಕೆಯೆಡೆಗೇ ಬರುತ್ತಿದ್ದರು. ಯಾರಿಗೂ ಅವಧಾನ ಮುಗಿಸುವುದು ಬೇಕಿರಲಿಲ್ಲ. ಆದರೆ ಕಾಲನಿಲ್ಲಬೇಕಾಲ್ಲಾ? ಸಮಯ ೮:೩೦ ಸಂದಾಗ ಸಭೆ ಮುಕ್ತಾಯವಾಯ್ತು. ಮಂಗಳಮಂಟಪದಲ್ಲಿ ನಡೆದ ಶತಾವಧಾನ ಮಂಗಳ ಕಂಡಿತು. ರಾಜಕೀಯದವರ ಮೇಜುಗುದ್ದುವ ಕುಟಿಲ ಕಾರಸ್ಥಾನಸಹಿತದ ಕುಹಕದ ಆರ್ಭಟವಾಗಲೀ, ಭಾಷಣದ ಹುಳಗಳೆನಿಸಿದ ಕೆಲವರ ಪುಂಖಾನುಪುಂಕದ ಬಿಂಕದ ಶಂಖನಾದವಾಗಲೀ, ಕಾಡುಜಿರಲೆ [ಕಾನ್ ಜಿರಲೆ]ಕೂಗುವಂತೇ ಬಿಟ್ಟೂಬಿಡದೇ ಕೂಗುವವರು ಕೂಗುವುದಾಗಲೀ, ’ಪಿಟೀಲು ಕುಯ್ಯುವವರು’ ಕುಯ್ಯುವುದಾಗಲೀ  ಶ್ರೋತೃಗಳ ವ್ಯವಧಾನವನ್ನು ಒರೆಗೆಹಚ್ಚುವ ಸನ್ನಿವೇಶ ಎಲ್ಲೂ ಇರಲಿಲ್ಲ ಎಂಬುದು ಅತ್ಯಂತ ದೊಡ್ಡ ವಿಷಯ. ಇದ್ದರೆ ಸಭೆ ಹೀಗಿರಬೇಕು ಎನಿಸಿದ್ದು ಜನ್ಮದಲ್ಲಿಯೇ ನನಗೆ ಇಲ್ಲಿಮಾತ್ರ ಎಂದರೆ ತಪ್ಪಾಗಲಾರದು. ಅಪ್ರಸ್ತುತ ಪ್ರಸಂಗಿ ಕೇಳಿದ "ಯಾವುದು ಸತ್ಯ ಯಾವುದು ಭ್ರಮೆ ಎಂಬ ಬಗ್ಗೆ ಉದಾಹರಣೆ ಕೊಡ್ತೀರಾ?" ಎಂಬ ಪ್ರಶ್ನೆಗೆ ಅವಧಾನಿಗಳು " ಅವಧಾನಿಗಳಿಗೆ ಏನೂ ಸಿದ್ಧಿಯಾಗಲೀ ವಿಶೇಷ ಅತಿಮಾನುಷ ಶಕ್ತಿಯ ಸಹಾಯವಾಗಲೀ ಇಲ್ಲ ಎಂಬುದು ಸತ್ಯ, ಬಹಳಜನ ಹಾಗೇನೋ ಇದೆ ಎಂದುಕೊಂಡಿರುವುದು ಭ್ರಮೆ" ಎಂದುತ್ತರಿಸಿದರು. ಅವಧಾನಿಗಳು ಹೇಳಿದ್ದು ಅವರ ವಿಷಯದಲ್ಲಿ ಸರಿಯೇ ಇದೆ. ಅದರಂತೆಯೇ ಗಣೇಶರಂತಹ ದೇವಲೋಕದ ಹೂವಿನ ಜೊತೆಗೆ ನನ್ನಂತಹ ಭೂಲೋಕದ ನಾರು ಸೇರಿಕೊಂಡು ಅವಧಾನಸರಸ್ವತಿಯ ಮುಡಿಗೇರಿದ್ದು ನನಗಿನ್ನೂ ಜೀರ್ಣವಾಗಿಲ್ಲ ಎಂಬುದು ಮಾತ್ರ ಸತ್ಯ, ಭಟ್ಟರು ಉತ್ತಮ ಪ್ರಶ್ನೆ ಕೇಳಿದರು ಎಂಬುದು ಸಭಿಕರಲ್ಲಿ, ಪೃಚ್ಛಕರಲ್ಲಿ, ಅವಧಾನಿಗಳಲ್ಲಿ ಹುಟ್ಟಿದ ಭ್ರಮೆ.     

ಭುವನದ ಭಾಗ್ಯ ಶತಾವಧಾನಿ ರಾ. ಗಣೇಶರ ಜನ್ಮ ಕನ್ನಡನಾಡಲ್ಲೇ ಆಯ್ತು, ಇವತ್ತು ಅಕ್ಷರಶಃ ಸರ್ವಜ್ಞ ಪದವಿಗೆ ಅರ್ಹರಾದವರೆಂದರೆ ಅತಿಶಯೋಕ್ತಿಯಲ್ಲ. ತಮಾಷೆಯೊಂದು ಹೀಗಿದೆ: ಎಳವೆಯಲ್ಲಿ ಮನೆಯಮುಂದೆ ಓಡಾಡುತ್ತಿದ್ದ ನಾಯಿಯ ಬಾಲಕ್ಕೆ ಕಬ್ಬಿಣದ ಪೈಪಿನ ತುಂಡನ್ನು ಸದಾ ತೂರಿಸಿ ಆಟವಾಡುತ್ತಿದ್ದ ಬಾಲಗಣೇಶರನ್ನು ಕಂಡು ಅಮ್ಮ "ಬೇಡಪ್ಪಾ ಗಣಿ[ಅವರಮ್ಮ ಅವರಿಗೆ ಪ್ರೀತಿಯಿಂದ ಕರೆಯುತ್ತಿದ್ದುದು ಹೀಗೇನೆ]ಅದು ನೆಟ್ಟಗಾಗಲ್ಲ, ಅದು ಸದಾ ಡೊಂಕೇ" ಎಂದರೆ "ಇಲ್ಲಮ್ಮಾ  ನಾನು ಪೈಪನ್ನು ಬೆಂಡ್ ಮಾಡಿಕೊಳ್ತಾ ಇದ್ದೀನಿ" ಎಂದಿದ್ದರಂತೆ ಗಣೇಶರು; ಕ್ರಿಯಾಶೀಲತೆಗೆ ಇದಲ್ಲವೇ ಉದಾಹರಣೆ? ಅವರ ಸಹಪಾಠಿ, ಚಿತ್ರನಟ ರಮೇಶ್ ಅರವಿಂದ್ ಹೇಳಿದ್ದಾರೆ:"ಸದಾ ಪಂಚೆಯನ್ನುಟ್ಟು ಶಾಲು ಹೊದ್ದು ಬರುವ ಗಣೇಶರು ನಮ್ಮಿಂದ ಬೇರೆಯಾಗಿ ತೋರುತ್ತಿದ್ದರು, ಆಟ-ಪಾಠ-ನಾಟಕಗಳಲ್ಲಿ ನಮ್ಮೆಲ್ಲರೊಂದಿಗೂ ಸಹಜವಾಗಿ ಬೆರೆಯುತ್ತಿದ್ದರೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಈತ ಮುಂದೇನಾಗಬಹುದು ಎಂಬುದೇ ನಮ್ಮೆಲ್ಲರ ಆಲೋಚನೆಯಾಗಿತ್ತು." ಮೆಟಲರ್ಜಿಕಲ್ ಎಂಜಿನೀಯರಿಂಗ್ ಮುಗಿಸಿಯೂ ಆ ಆಧಾರದ ಉದ್ಯೋಗವನ್ನು ಬಯಸದ ಗಣೇಶರ ಮಾರ್ಗ ಮೊದಲೇ ನಿರ್ಧರಿತವಾಗಿತ್ತು. ಇವತ್ತು ಈ ಅಖಂಡ ಭಾರತದಾದ್ಯಂತ ಇರುವ ಸನ್ಯಾಸಿಗಳಲ್ಲಿಲ್ಲದ ಅಗಣಿತ ಪಾಂಡಿತ್ಯವನ್ನು ಗಣೇಶರು ಪಡೆದುಕೊಂಡಿದ್ದಾರೆ-ಅದು ನಮ್ಮೆಲ್ಲರ ಹೆಮ್ಮೆ. ಅಭಿಜಾತ ಕಾವ್ಯ-ಸಾಹಿತ್ಯವನ್ನೂ ಭಾರತೀಯ ಸಂಸ್ಕೃತಿ ಪರಂಪರೆಯನ್ನೂ ಪುನರುಜ್ಜೀವನಗೊಳಿಸುವಲ್ಲಿ ತನ್ನಿಂದಾಗುವ ಸೇವೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೇ ನಡೆಸುತ್ತಿರುವ ಅವರಿಗೆ ಮುಗಿಯಲು ನನ್ನೊಬ್ಬನ ಕೈ ಸಾಲದು; ಈ ವಿಷಯದಲ್ಲಿ ನನಗೆ ಕಾರ್ತವೀರ್ಯನ ತೋಳುಗಳೇ ಸಿಕ್ಕರೂ ತೀರದಾದೀತು! ಆರ್ಷೇಯ ಋಷಿಪರಂಪರೆಯ ಆದರ್ಶವನ್ನು ಪ್ರಾಮಾಣಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಹಂಚುತ್ತಿರುವ ಗಣೇಶರಿಗೆ ಸಮಾಜ ಯಾವ ಪಡಿನೀಡೀತು? ನೀಡಿದರೂ ಅದು ಅವರ ಸೇವೆಗೆ ಸಂದ ಮೌಲ್ಯವಾಗಲು ಸಾಧ್ಯವಿಲ್ಲ! ಜನಸಾಮಾನ್ಯನೊಬ್ಬ ತನ್ನ ಒಂದು ಜನ್ಮದಲ್ಲಿ ಓದಿ ಮುಗಿಸಲಾರದಷ್ಟು ಓದಿದ, ಬರೆದ, ಹಂಚುತ್ತಿರುವ ಗಣೇಶರ ಜ್ಞಾನಸತ್ರ ಸದಾ ನಮಗೆಲ್ಲ ಸಿಗುತ್ತಿರಲಿ ಎಂಬುದಷ್ಟೇ ಭಗವಂತನಲ್ಲಿ ನಮ್ಮ ಬೇಡಿಕೆಯಾಗಿದೆ. ಅಂತಹ ಗಣೇಶರಿಗೆ ನನ್ನ-ನಮ್ಮೆಲ್ಲರ ಸಾಷ್ಟಾಂಗ ವಂದನೆಗಳು.

ಚಂದ್ರಶೇಖರಾಷ್ಟಕ[’ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ’]ದಾಟಿಯಲ್ಲಿ ಈ ಕೆಳಗಿನ ಪದ್ಯ ರಾ.ಗಣೇಶಾರ್ಪಿತ. 

ರಾಗಣೇಶಗೆ ವಂದನೆ ಅಭಿನಂದನೆ ಅಭಿವಂದನೆ
ಈಜಗದ ಸೋಜಿಗವೆ ಸಾಗಲಿ ಸಾಸಿರದ ಅವಧಾನವು |
ಮಾಗಣಿಯು ನಮ್ಮೆಲ್ಲರದು ಅತಿ ಪ್ರೀತಿಯಂದಲಿ ಕಾಡುತಂ
ಬೇಗದಿಂದದನೆಲ್ಲ ಕಾಣುವ ಯೋಗಬರಲೆಂಬರ್ಥದಿಂ ||

Wednesday, November 28, 2012

ಪುರುಷೋತ್ತಮ ಪುರಿ ರಹಸ್ಯ-೩


ಚಿತ್ರಕೃಪೆ: ಅಂತರ್ಜಾಲ
ಪುರುಷೋತ್ತಮ ಪುರಿ ರಹಸ್ಯ-೩

[ರಹಸ್ಯವನ್ನು ತೆರೆದಿರಿಸುವ ಲೇಖನದ ಕೊನೆಯ ಭಾಗ ]

ಪ್ರಣೋ ದೇವೀ ಸರಸ್ವತೀ ವಾಜೇಭಿರ್ವಾಜಿನೀವತಿ| ಧೀನಾಮವಿತ್ರ್ಯವತು| ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್| ಹವಂ ದೇವೀ ಜುಜುಷಾಣಾ ಘೃತಾಚೀ ಶಗ್ಮಾಂ ನೋ ವಾಚಮುಶತೀ ಶೃಣೋತು| ವಾಗ್ದೇವ್ಯೈ ನಮಃ ||

ವಿಜ್ಞಾಪನೆ:

ಸನ್ಮಿತ್ರರೇ, ಸಹೃದಯಿಗಳೇ, ಕನ್ನಡ ಸಾಹಿತ್ಯದ ಒಂದು ಅದ್ಭುತ ಅಂಗ ಅವಧಾನ. ಜಟ್ಟಿಕಾಳಗದಲ್ಲಿ ಮೀಸೆ ತಿರುವುವ ಮಲ್ಲರು ಸೆಣಸಾಡುತ್ತಾರೆ, ಅದು ಕೇವಲ ಭೌತಿಕ ಪಟ್ಟು. ಈ ಮೊದಲೊಮ್ಮೆ ಹೇಳಿದಂತೇ ಮಲ್ಲಗಂಬವನ್ನೇರಿ ನಡೆಸುವ ಕಸರತ್ತು ಮಲ್ಲನ ತಾಕತ್ತು ! ಅದರಲ್ಲೂ ಮೊದಲೇ ನುಣುಪಾದ ಮಲ್ಲಗಂಬಕ್ಕೆ ಎಣ್ಣೆಸವರಿದಮೇಲೆ ಅದನ್ನೇರಿ ಮಧ್ಯೆ ಇನ್ಯಾರೋ ಎರಚುವ ನೀರನ್ನು ಸಹಿಸಿಕೊಂಡು  ಜಾರದೇ, ಬೀಳದೇ ಕಂಬದಮೇಲೆ ನಿಲ್ಲುವುದು, ಕಂಬವನ್ನಾತು ಕಸರತ್ತು ನಡೆಸುವುದು ಪೈಲ್ವಾನನ ಯಾ ಜಟ್ಟಿಯ ಸಾಧನೆ. ಮಾನಸವಾಗಿ ನಿರ್ಮಿತಗೊಳ್ಳುವ ಅಂತಹ ಎಣ್ಣೆಗಂಬವನ್ನೇರಿ ಅಲ್ಲಿ ತನ್ನ ಸಾಧನೆಯನ್ನು ಸಾದರಪಡಿಸುವುದು ಅವಧಾನಿಯ ಕಸರತ್ತು. ಪುಣ್ಯವಶಾತ್, ಸುದೈವವಶಾತ್, ಸೌಭಾಗ್ಯವಶಾತ್ ನಮ್ಮ ಕನ್ನಡನಾಡು ಅಂತಹ ಒಬ್ಬ ಶತಾವಧಾನಿಯನ್ನು ಪಡೆದಿದೆ. ಅಳಿದುಹೋಗುತ್ತಿದ್ದ ಕಲೆಯನ್ನು ಎತ್ತಿಹಿಡಿದು ಹಲವರಿಗೆ ಅದರ ಭಾವ ಲಾಲಿತ್ಯವನ್ನೂ, ಕಾವ್ಯ ವಿನೋದವನ್ನೂ, ಛಂದದ ಚಂದವನ್ನೂ, ಪ್ರಾಸದ ಹಾಸವನ್ನೂ, ಪದಪುಂಜಗಳ ಯುಗಳಯುಗ್ಮ ವಿಶೇಷಗಳನ್ನೂ, ಸಂಧಿ-ಸಮಾಸಗಳ ಸಾನ್ನಿಧ್ಯವನ್ನೂ ಹಿತಮಿತವಾಗಿ ಹಾಕಿಮಾಡುವ ಪಾಯಸಕ್ಕೆ ಕನ್ನಡದ ಆದಿ-ನವ್ಯ ಕವಿಗಳ ಕವನಗಳ ಸಕ್ಕರೆ ಸೇರಿಸಿ, ಅಪ್ರಸ್ತುತ ಪ್ರಸ್ತುತಿಯೆಂಬ ಲಘುಹಾಸ್ಯವನ್ನು ವ್ಯಂಜನವಾಗಿ ನೆಂಜಿಕೊಳ್ಳಲು ಇರಿಸಿ, ಸಂಖ್ಯಾಬಂಧದೊಂದಿಗೆ ಎಲ್ಲರ ಮನಸ್ಸಿಗೂ ಉಣಬಡಿಸುವ ಸಾಹಿತ್ಯಕ ಕ್ರೀಡೆ ಸುಲಭದ ಕಾರ್ಯವಲ್ಲ. ಇಂಥದ್ದೊಂದಿತ್ತು ಎಂಬುದನ್ನು ಅಂದಾಜು ಕಟ್ಟಲೂ ಸಾಧ್ಯವಿಲ್ಲದ ದಿನಗಳಲ್ಲಿ ೨೨ ವರ್ಷಗಳ ಅಂತಹ ಶತಾವಧಾನವೊಂದು ನಡೆದಿತ್ತು; ಭಾರತದ ಬಹುತೇಕ ಭಾಷೆಗಳೂ ಸೇರಿದಂತೇ ಹಲವು ಭಾಷಾಕೋವಿದರಾದ ಶ್ರೀಯುತ ರಾ, ಗಣೇಶರು ಇದೀಗ ಕನ್ನಡದ ಮೇಲಿನ ಅಭಿಮಾನದಿಂದ, ಅತ್ಯಂತ ಪ್ರೀತಿಯಿಂದ ಅಪ್ಪಟ ಕನ್ನಡವನ್ನೇ ಬಳಸಿ ಶತಾವಧಾನವನ್ನು ನಡೆಸಿಕೊಡುತ್ತಾರೆ. ಚಲಿಸುವ ವಿಶ್ವಕೋಶವಾದ ಅವರನ್ನು  ಯಾರೂ ಈ ಜನ್ಮದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲ! ದೈವೀದತ್ತ ನೆನಪಿನ ಕೋಶಗಳಲ್ಲಿ ಅಪಾರ ಪರಿಶ್ರಮದಿಂದ ಹುದುಗಿಸಿದ ಪಾಂಡಿತ್ಯ ಅನನ್ಯವಾಗಿದೆ; ನಿಜಕ್ಕೂ  ಅವರೊಬ್ಬ ಸವ್ಯಸಾಚಿಯೇ, ಗಾಂಡೀವಿಯೇ, ಸರ್ವಜ್ಞನೇ. ನೈಷ್ಠಿಕ ಬ್ರಹ್ಮಚರ್ಯವನ್ನು ಪಾಲಿಸಿ ನಡೆದುಬಂದ ಅವರು ಯಾವ ಋಷಿಗೂ ಕಮ್ಮಿಯಿಲ್ಲ.  

ಕನ್ನಡ ಪಂಡಿತರೆನಿಸಿ ವಿಶ್ವವಿದ್ಯಾಲಯಗಳಲ್ಲಿ ಪಾಠಮಾಡುವ ಉಪನ್ಯಾಸಕರೂ ಕೂಡ ಇವತ್ತು ಕನ್ನಡದ ಬಗ್ಗೆ ಅಷ್ಟಾಗಿ ಪರಿಣತರಲ್ಲ!![ಅಲ್ಲೇನಿದ್ದರೂ ಹಣ ಮತ್ತು ಹುದ್ದೆಗಾಗಿ ನಡೆಯುವುದು ರಾಜಕೀಯದ ಆಟವಷ್ಟೇ] ಹಲವು ವಿದ್ವನ್ಮಣಿಗಳು ಭಾಗವಹಿಸುವ ಶತಾವಧಾನ ಕಾರ್ಯಕ್ರಮ ನಾಡಿದ್ದು ೩೦ ನವೆಂಬರ್ ಮತ್ತು ೧, ೨ ಡಿಸೆಂಬರ್ ದಿನಾಂಕಗಳಂದು ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ಜರುಗಲಿದೆ. ಸರಳಜೀವಿಗಳಾದ ಶತಾವಧಾನಿ ಗಣೇಶರನ್ನು ಮೆರವಣಿಗೆಯಲ್ಲಿ ಕರೆತರುವ ಬಗ್ಗೆ ಪ್ರಸ್ತಾಪಿಸಲಾಗಿ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಬರೆದ ಕೆಲವು ಪುಸ್ತಕಗಳು ಮತ್ತು ಅವಧಾನದ ಕುರಿತ ಹಲವು ಪುಸ್ತಕಗಳ ಜೊತೆಗೆ ಸರಸ್ವತಿಯ ವಿಗ್ರಹದ ಮೆರವಣಿಗೆಯನ್ನು ಶತಾವಧಾನದ ಆಯೋಜಕ ’ಪದ್ಯಪಾನ’ ಸಂಸ್ಥೆ ಹಮ್ಮಿಕೊಂಡಿದೆ. ಇಂಥದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಹಿತ್ಯಾಸಕ್ತರಿಗೆ ಜ್ಞಾನಯಜ್ಞದಲ್ಲಿ ಭಾಗವಹಿಸಲೂ, ತಿಳಿದುಕೊಳ್ಳಲೂ, ಅವಕಾಶ ಮಾಡಿಕೊಟ್ಟ ಪದ್ಯಪಾನ ಸಂಸ್ಥೆಗೂ ಮತ್ತು ಅವಧಾನಿ ಗಣೇಶರಿಗೂ ಮೊದಲಾಗಿ ಕೃತಜ್ಞನಾಗಿದ್ದೇನೆ. ಕಾರ್ಯಕ್ರಮದ ಮೊದಲ ದಿನ ಅಂದರೆ ನವೆಂಬರ್ ೩೦ರಂದು ಅಪರಾಹ್ನ ೩ ಘಂಟೆಗೆ, ವೇದಘೋಷ ಮತ್ತು ಪೂರ್ಣಕುಂಭಗಳೊಡನೆ ಬಹುಶಾಸ್ತ್ರೀಯವಾಗಿ ನಡೆಯುವ ಈ ಮೆರಣಿಗೆ ಮಂಗಳಮಂಟಪದಿಂದ ತುಸು ದೂರದಲ್ಲಿರುವ ಗಣಪತಿ ದೇವಸ್ಥಾನದಿಂದ ಆರಂಭವಾಗುತ್ತದೆ. ಇದೊಂದು ಸಾಹಿತ್ಯಕ ಐತಿಹಾಸಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಅತ್ಮೀಯವಾಗಿ, ಹೃತ್ಪೂರ್ವಕವಾಗಿ ಸ್ವಾಗತವನ್ನು ಕೋರುತ್ತಿದ್ದೇನೆ. ಇನ್ನಷ್ಟು ಮಾಹಿತಿ ಇಲ್ಲಿದೆ: http://shathaavadhaani.com/

---------------
ಈಗ ಪುರುಷೋತ್ತಮ ಪುರಿಯ ಕಥೆಯನ್ನು ಮುಂದುವರಿಸೋಣ ಅಲ್ಲವೇ?

ಸಹಸ್ರಾರು ವರ್ಷಗಳ ಹಿಂದೆ ಅವಂತೀ ದೇಶವನ್ನು ಇಂದ್ರದ್ಯುಮ್ನನೆಂಬ ಧರ್ಮಾತ್ಮನಾದ ರಾಜ ಆಳುತ್ತಿದ್ದ. ಸಾಧು ಸಂತರ ಆರಾಧಕನಾಗಿದ್ದ ಆತನಿಗೆ ತೀರ್ಥಯಾತ್ರಿಗಳ ಮುಖೇನ ಪುರುಷೋತ್ತಮ ಕ್ಷೇತ್ರದಲ್ಲಿ ಸಾಕ್ಷಾತ್ ತ್ರಿಲೋಕೀನಾಥನ ದರ್ಶನವಾಗುವುದೆಂಬ ವಿಷಯ ತಿಳಿದುಬಂದಿತ್ತು. ಪುರುಷೋತ್ತಮ ಕ್ಷೇತ್ರದ ಬಗ್ಗೆ ಎಲ್ಲರೂ ಹೇಳುತ್ತಾರೆ ಆದರೆ ಅದು ಎಲ್ಲಿದೆಯೆಂಬ ಬಗ್ಗೆ ಯಾರೂ ಹೇಳುವವರೇ ಇಲ್ಲವಾಗಿದ್ದರು. ಹೀಗಾಗಿ ಪುರುಷೋತ್ತಮ ಕ್ಷೇತ್ರ ಒಂದು ದಂತಕಥೆಯಾಗಿತ್ತು. ರಾಜನಿಗೆ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಅರಿಯುವ ಮನಸ್ಸಾಯ್ತು. ರಾಜಗುರುವನ್ನು ಕರೆದು ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುವಂತೇ ವಿನಂತಿಸಿದ. ಇದಕ್ಕೆ ತನ್ನ ತಮ್ಮ ವಿದ್ಯಾಪತಿಯೇ ಯೋಗ್ಯವ್ಯಕ್ತಿಯೆಂದು ಭಾವಿಸಿದ ರಾಜಗುರು ಅವನಿಗೆ ಆ ಕಾರ್ಯವನ್ನು ಒಪ್ಪಿಸಿದ.

ಶುಭಮುಹೂರ್ತವೊಂದರಲ್ಲಿ ವಿದ್ಯಾಪತಿ ಪುರುಷೋತ್ತಮ ಕ್ಷೇತ್ರವನ್ನು ಅರಸುತ್ತ ಹೊರಟ. ನೂರಾರು ತೀರ್ಥಸ್ನಾನಗಳನ್ನು ಸಂದರ್ಶಿಸಿದ ಬಳಿಕ ವಿದ್ಯಾಪತಿ ಭುವನೇಶ್ವರಕ್ಕೆ ತಲುಪಿದ. ಅಲ್ಲಿಯ ನೀಲಾದ್ರಿ ಪರ್ವತದಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿದ್ದಾನೆಂದು ಅವನಿಗೆ ಯಾರೋ ತಿಳಿಸಿದರು. ವಿದ್ಯಾಪತಿ ಅಲ್ಲಿನ ದುರ್ಗಮ ಅರಣ್ಯವನ್ನು ದಾಟಿ ಅಲ್ಲಿಗೆ ತಲ್ಪಿದಾಗ, ಅಲ್ಲಿನ ಪ್ರಾಚೀನ ಮೂಲನಿವಾಸಿ ಸಬರ್ ರಾಜನಿಗೆ ತ್ರಿಲೋಕೀನಾಥನ ಸ್ಥಾನದ ಅರಿವಿದೆಯೆಂಬ ವಿಚಾರ ಗೊತ್ತಾಯ್ತು. ಒಮ್ಮೆ ಸಬರ್ ರಾಜ ಸಮುದ್ರದಲ್ಲಿ ತನ್ನ ನೌಕೆಗಳೊಂದಿಗೆ ಸಾಗುತ್ತಿದ್ದಾಗ, ಅಕಸ್ಮಾತ್ ಸಮುದ್ರದಲ್ಲಿ ಜ್ಯೋತಿಯ ದರ್ಶನವಾಯ್ತು. ಚಂಚಲ ಅಲೆಗಳ ನಡುವೆಯೂ ಆ ಜ್ಯೋತಿ ಸ್ಥಿರವಾಗಿ ಪ್ರಜ್ವಲಿಸುತ್ತಿತ್ತು. ಜ್ಯೋತಿಯಿದ್ದೆಡೆಗೆ ನಡೆದ ಸಬರ್ ರಾಜ ಭಾವಾವಿಷ್ಟನಾಗಿ ಜ್ಯೋತಿಯೆದುರು ನಿಂತುಬಿಟ್ಟ. ತನ್ನ ಆಂಗಾಂಗಗಳಲ್ಲಿ ಸಾಕ್ಷಾತ್ ಈಶ್ವರನೇ ತುಂಬಿಕೊಂಡಹಾಗಾಯ್ತು ಆತನಿಗೆ. ನಿತ್ಯವೂ ರಾಜ ಸಮುದ್ರದೆಡೆಗೆ ತೆರಳುತ್ತಿದ್ದ, ಜ್ಯೋತಿ ನಿತ್ಯವೂ ಕಾಣಿಸುತ್ತಿತ್ತು. ಆ ದಿವ್ಯ ಜ್ಯೋತಿಯನ್ನು ಊರಿನಲ್ಲೇ ಸ್ಥಾಪಿಸಿಬಿಡಿ ಎಂದು ಮಂತ್ರಿಗಳು ಸಲಹೆ ಇತ್ತರು. ಸಲಹೆಯೇನೋ ಒಳ್ಳೆಯದೇ ಆದರೆ ಸಾಕ್ಷಾತ್ ಈಶ್ವರನ ಪರಂಜ್ಯೋತಿಯನ್ನು ಎಲ್ಲರೆದುರೂ ಪ್ರದರ್ಶಿಸುವುದು ಸರಿಯೇ? ಎಂಬ ಸಂದೇಹ ಉಂಟಾಯ್ತು. ಜ್ಯೋತಿಯನ್ನು ಗುಟ್ಟಾಗಿ ಸ್ಥಾಪಿಸಬೇಕೆಂದೂ ಅದರ ಮಾಹಿತಿಯನ್ನು ಗೌಪ್ಯವಾಗಿಟ್ಟು ಸ್ವತಃ ರಾಜ ಮಾತ್ರ ಅದನ್ನು ಪೂಜಿಸಬೇಕೆಂದೂ ನಿರ್ಧರಿಸಲಾಯ್ತು.

ಕಟ್ಟಕಡೆಗೆ ದಟ್ಟ ಅಡವಿಗಳ ಮಧ್ಯದ ದುರ್ಗಮ ಪ್ರದೇಶವೊಂದರ ಗುಹೆಯೊಂದರಲ್ಲಿ ರಾಜ ಜ್ಯೋತಿಯನ್ನು ಸ್ಥಾಪಿಸಿದ; ದಿನಾಲೂ ಗುಟ್ಟಾಗಿ ಅಲ್ಲಿಗೆ ಪೂಜೆಗೆ ತೆರಳುತ್ತಿದ್ದ. ಜ್ಯೋತಿ ತಲ್ಪಿದ ಕೆಲವೇ ದಿನಗಳಲ್ಲಿ ಸಬರ್ ದೇಶದ ಸ್ಥಿತಿ ಪೂರ್ತಿ ಬದಲಾಯ್ತು. ಎಲ್ಲೆಡೆಯಲ್ಲೂ ಸುಖ ಸಂಪತ್ತು ನಲಿಯತೊಡಗಿತು. ಇದೆಲ್ಲವೂ ಆ ಜ್ಯೋತಿಯ ಮಹಿಮೆಯೆಂದು ಅಲ್ಲಿನ ಜನ ಹೇಳತೊಡಗಿದರು. ಜ್ಯೋತಿ ಇರುವ ಜಾಗದ ರಹಸ್ಯ ಬಹಿರಂಗಗೊಳ್ಳಬಾರದೆಂದು ಸ್ವತಃ ತಾವೂ ಆ ಜಾಗವನ್ನು ನೋಡದಿರಲು ನಿರ್ಧರಿಸಿದರು. ಪುರುಷೋತ್ತಮ ಕ್ಷೇತ್ರಕ್ಕೆ ತಾನು ಬಂದಿರುವುದು ವಿದ್ಯಾಪತಿಗೆ ಖಚಿತವಾಯ್ತು. ದಿವ್ಯಜ್ಯೋತಿಯ ದರ್ಶನ ಪಡೆಯುವುದು ಮಾತ್ರ ಬಾಕಿ ಉಳಿಯಿತು. ಆತ ಈ ಕುರಿತು ಸಬರ್ ರಾಜನೊಡನೆ ಹಲವು ಬಾರಿ ವಿನಂತಿಸಿದ. ಆದರೆ ರಾಜ ಪ್ರತೀ ಸಲವೂ ನುಣುಚಿಕೊಳ್ಳುತ್ತಿದ್ದ. ವಿದ್ಯಾಪತಿ ಸಬರ್ ರಾಜನ ಅತಿಥಿ ಗೃಹದಲ್ಲೇ ತಂಗಿದ್ದ. ಒಂದು ವರ್ಷ ಪರ್ಯಂತ ರಾಜನಲ್ಲಿ ಬಿಟ್ಟೂ ಬಿಡದೇ, ಜ್ಯೋತಿಯನ್ನು ತೋರಿಸುವಂತೇ ವಿನಂತಿಸುತ್ತಿದ್ದರೂ, ಏನಾದರೂ ನೆಪವೊಡ್ಡಿ ರಾಜ ತಪ್ಪಿಸಿಕೊಳ್ಳುತ್ತಿದ್ದ.   

ಸಬರ್ ರಾಜನಿಗೆ ಲಲಿತೆಯೆಂಬ ಒಬ್ಬ ಮಗಳಿದ್ದಳು. ಅತಿಥಿ ಬ್ರಾಹ್ಮಣನ ಸತ್ಕಾರದಲ್ಲಿ ಯಾವುದೇ ಕೊರತೆ ಉಂಟಾಗಬಾರದೆಂದು ರಾಜ ಮಗಳಿಗೆ ಮೊದಲೇ ಹೇಳಿದ್ದ. ಲಲಿತೆ ಆ ಪ್ರಕಾರ, ಅತಿಥಿಯ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಳು. ದೈನಿಕ ಜಪ-ತಪಗಳ ನಂತರ ವಿದ್ಯಾಪತಿ ನಗರಕ್ಕೆ ಸಂಚಾರ ಹೊರಡುತ್ತಿದ್ದ. ಅವನು ಕುಶಲಶಿಲ್ಪಿಯಾಗಿದ್ದು, ಮೂರ್ತಿ ಮಾಡಲುಬೇಕಾದ ಎಲ್ಲಾ ಸಾಮಗ್ರಿಗಳನ್ನು ತರಿಸಿಕೊಂಡು ಅತಿಥಿಗೃಹದಲ್ಲೇ ಕಲ್ಲಿನ ಮೂರ್ತಿಯೊಂದನ್ನು ನಿರ್ಮಿಸತೊಡಗಿದ. ಒಂದು ದಿನ ಲಲಿತೆಯನ್ನು ಅಲ್ಲಿಗೆ ಬರಹೇಳಿ, ಮೂರ್ತಿಯಮೇಲಿನ ಪರದೆಯನ್ನು ಏರಿಸುವಂತೇ ಸೂಚಿಸಿದ. ಪರದೆ ಸರಿಯುತ್ತಲೇ, ಎದುರಿಗೆ ಕೈಯ್ಯಲ್ಲಿ ಲೆಕ್ಕಣಿಕೆ ಹಿಡಿದು ಕಾಗದ ಬರೆಯುತ್ತಿರುವ ತನ್ನದೇ ಮೂರ್ತಿಯನ್ನು ಕಂಡು ದಂಗಾದಳು! "ನಾನು ಪತ್ರಬರೆಯುವುದನ್ನು ಯಾವಾಗ ನೋಡಿದಿರಿ? ಈ ಮೂರ್ತಿಯನ್ನು ಯಾವಾಗ ತಯಾರಿಸಿದಿರಿ ? ನೀವು ಗುಟ್ಟಾಗಿ ನನ್ನ ಕೋಣೆಗೆ ಬರುತ್ತಿದ್ದಿರಾ?" ಎಂದು ಕೇಳಿದಳು.  ಅದು ತನ್ನ ಕಲ್ಪನೆಯ ಪರಿಣಾಮವೆಂದೂ, ನೋಡಿದಂದಿನಿಂದ ತನ್ನಲ್ಲಿ ಲಲಿತೆಯೇ ತುಂಬಿಕೊಂಡು ಎಲ್ಲೆಲ್ಲೂ ಅವಳೇ ಕಾಣುತ್ತಾಳೆಂದೂ, ತಾನು ಲಲಿತೆಯನ್ನು ಹಾರ್ದಿಕವಾಗಿ ಪ್ರೀತಿಸುತ್ತೇನೆಂದೂ ತಿಳಿಸಿದ. ವಿದ್ಯಾಪತಿ ಅವಳಿಗೆ ಪ್ರೀತಿಯ ಆಮಿಷವೊಡ್ಡಿ ಜ್ಯೋತಿಯ ದರ್ಶನ ಪಡೆಯುವ ಮಸಲತ್ತು ನಡೆಸಿದ್ದ; ವಾಸ್ತವವಾಗಿ ಅವನಿಗೆ ಅವಳಮೇಲೆ ಪ್ರೀತಿಯೇನೋ ಇರಲಿಲ್ಲ. ಆದರೆ ಲಲಿತೆ ವಿದ್ಯಾಪತಿಯನ್ನು ಬಹಳವಾಗಿ ಮೆಚ್ಚಿದ್ದಳು; ಪ್ರೀತಿಸುತ್ತಿದ್ದಳು. ವಿದ್ಯಾಪತಿಗೆ ಬರೆದ ಪ್ರೇಮಪತ್ರವನ್ನು ನಾಚಿಕೆಯಿಂದ ಕೊಟ್ಟಿರಲಿಲ್ಲ; ಈಗ ಆ ಪತ್ರವನ್ನು ಅವಳು ವಿದ್ಯಾಪತಿಗೆ ಕೊಟ್ಟಳು. ಪತ್ರದ ಪ್ರತೀ ಪದವೂ ಪ್ರೀತಿಯ ಮೇರುವನ್ನು ತೋರುತ್ತಿತ್ತು, ಆದರೆ ವಿದ್ಯಾಪತಿಗೆ ದಿವ್ಯ ಜ್ಯೋತಿಯ ದರ್ಶನ ಪಡೆಯುವ ಉಪಾಯಗಳ ಬಗ್ಗೆ ಮಾತ್ರ ಮನಸ್ಸು ಮುಂದಾಗಿತ್ತು. ಪ್ರೀತಿಯ ಬಲೆಯಲ್ಲಿ ತನ್ನ ಕೆಲಸ ಪೂರ್ಣವಾಗುವುದೆಂದು ಆತ ನಂಬಿದ.   

ವಿದ್ಯಾಪತಿಯ ಸೂಚನೆಯಂತೇ, ಅವನಿಗೆ ಜ್ಯೋತಿಯ ದರ್ಶನ ಮಾಡಿಸಬೇಕೆಂದು ಲಲಿತೆ ದಿನಾಲೂ ತಂದೆಯನ್ನು ಒತ್ತಾಯಿಸತೊಡಗಿದಳು. ಆದರೆ ರಾಜ ತನ್ನ ನಿರ್ಧಾರದಿಂದ ಕದಲಲಿಲ್ಲ. ವಿದ್ಯಾಪತಿಯ ಒತ್ತಾಯವೂ ಹೆಚ್ಚುತ್ತ ಹೋಯ್ತು. ಕಟ್ಟಕಡೆಗೆ ಲಲಿತೆ ಸಿಟ್ಟಿನಿಂದ "ನಾಳೆ ನೀವು ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸದೇ ಹೋದ ಪಕ್ಷದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ" ಎಂದಳು. ಸಬರ್ ರಾಜನಿಗೆ ಬೇರಾವುದೇ ದಾರಿ ಉಳಿಯಲಿಲ್ಲ; ಮಗಳೆಂದರೆ ಅವನಿಗೆ ಸರ್ವಸ್ವ. ಹೆಂಡತಿ ಸತ್ತ ಬಳಿಕ ಮಗಳಿಗಾಗಿಯೇ ಆತ ಬದುಕಿದ್ದ. ಅವಳ ಬಾಯಿಂದ ಇಂಥಾ ಕಠೋರ ವಚನವನ್ನು ಕೇಳಿ ರಾಜ ನಿರುಪಾಯನಾಗಿ, ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸಲು ಒಪ್ಪಿಕೊಂಡ. ಆದರೆ ಜ್ಯೋತಿಯಿರುವ ಜಾಗದವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ಹೋಗಬೇಕೆಂದು ಷರತ್ತುವೊಡ್ಡಿದ. ವಿದ್ಯಾಪತಿಗೆ ಈ ವಿಷಯ ಹೇಳಿ ಲಲಿತೆ ಮುಗುಳುನಕ್ಕು ಅವನ ಕೈಲಿ ಒಂದು ಮುಷ್ಠಿ ಸಾಸಿವೆ ಬೀಜಗಳನ್ನಿಡುತ್ತಾ ದಾರಿಯುದ್ದಕ್ಕೂ ಅವುಗಳನ್ನು ಚೆಲ್ಲುತ್ತಾ ಹೋಗಲು ತಿಳಿಸಿದಳು. ಗುಹೆಗೆ ತಲುಪುತ್ತಲೇ ಸಬರ್ ರಾಜ ವಿದ್ಯಾಪತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಡಿಸಿದ. ಪರಬ್ರಹ್ಮ ಪರಮೇಶ್ವರ ಸ್ವರೂಪಿಯಾದ ಆ ಜ್ಯೋತಿಯನ್ನು ಕಂಡು ವಿದ್ಯಾಪತಿ ಭಾವಾವಿಷ್ಟನಾದ. ರಾಜನಿಗೆ ಶಾಸ್ತ್ರಗಳ ಜ್ಞಾನವಿರಲಿಲ್ಲ; ಆದರೆ ವಿದ್ಯಾಪತಿಗೆ ಅವು ತಿಳಿದಿದ್ದವು. ದಿವ್ಯದೇಹಧಾರಿಯಾದ ಪರಮಪಿತ ಪರಮೇಶ್ವರ ಸಾಕ್ಷಾತ್ ಎದುರುನಿಂತ ಹಾಗನ್ನಿಸಿತು-ವಿದ್ಯಾಪತಿಗೆ; ಒಂದಷ್ಟೂ ಅಲುಗಾಡದೇ ಭಗವಂತನನ್ನು ಆತ ಸ್ತುತಿಸತೊಡಗಿದ. ಎಷ್ಟೋ ತಾಸುಗಳ ಬಳಿಕ ಸಬರ್ ರಾಜ ವಿದ್ಯಾಪತಿಯನ್ನು ಅಲ್ಲಾಡಿಸಿದ. ನಂತರ ಇಬ್ಬರೂ ಅರಮನೆಗೆ ಮರಳಿದರು. ಈ ವಿಷಯವನ್ನು ಬೇರ್ರಾರಿಗೂ ಹೇಳುವುದಿಲ್ಲವೆಂದು ಪ್ರತಿಜ್ಞೆಮಾಡುವಂತೇ ಸಬರ್ ರಾಜ ವಿದ್ಯಾಪತಿಯನ್ನು ಒತ್ತಾಯಿಸುತ್ತಿದ್ದ. ಆದರೆ ವಿದ್ಯಾಪತಿ ವಿಷಯಾಂತರ ಮಾಡುತ್ತಾ ನುಣುಚಿಕೊಂಡ. ಅವನ ಉದ್ದೇಶ ಈಡೇರಿತ್ತು. ತಾನಿನ್ನು ಊರಿಗೆ ಹೊರಡುವೆನೆಂದ. ತಡೆಯಲು ಲಲಿತೆ ಅದೆಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳಿಗೆ ಸುಳ್ಳು ಭರವಸೆ ಇತ್ತು ಆತ ಹೊರಟೇಹೋದ.  

ಇಂದ್ರದ್ಯುಮ್ನ ರಾಜನಿಗೆ ಪುರುಷೋತ್ತಮ ಕ್ಷೇತ್ರದ ದಿವ್ಯಜ್ಯೋತಿಯ ಕತೆ ಹೇಳಿದಾಗ ಅವನ ಕಂಗಳಿಂದ ಶ್ರದ್ಧೆಯ ಕಣ್ಣೀರು ಉಕ್ಕಿಬಂತು. ತನ್ನ ಸೈನ್ಯದೊಂದಿಗೆ ಆ ಸ್ಥಾನಕ್ಕೆ ಆತ ಹೊರಟುನಿಂತೇಬಿಟ್ಟ! ನೀಲಾದ್ರಿ ಪರ್ವತ ಅತಿ ಫಲವತ್ತಾದ ಪ್ರದೇಶ. ಅಲ್ಲಲ್ಲಿ ಹಣ್ಣಿನ ಮರಗಳು ಕಾಣಿಸುತ್ತಿದ್ದವು. ಬೇಸಾಯ ಪ್ರಾಕೃತಿಕ ರೂಪದಲ್ಲೇ ನಡೆಯುತ್ತಿತ್ತು. ವಿದ್ಯಾಪತಿ ಚೆಲ್ಲಿದ್ದ ಸಾಸಿವೆ ಬೀಜಗಳಿಂದ ಗಿಡಗಳು ಹುಟ್ಟಿಬಂದಿದ್ದವು. ದಾರಿ ಸುಲಭವಾಗಿ ತಿಳಿಯುತ್ತಿತ್ತು. ರಾಜ ಇಂದ್ರದ್ಯುಮ್ನ ಅಲೌಕಿಕ ಪರಮಜ್ಯೋತಿಯ ದಿವ್ಯದರ್ಶನ ಪಡೆಯಲು ಕಾತುರನಾಗಿದ್ದ. ಅತ್ಯುತ್ಸಾಹದಲ್ಲಿ ಧಾವಿಸುವ ಭರದಲ್ಲಿ ಸಬರ್ ರಾಜನಿಗೆ ಸಂದೇಶ ಕಳಿಸುವ ಪರಂಪರೆಯನ್ನೂ ಆತ ಮರೆತುಬಿಟ್ಟಿದ್ದ. ರಾಜ ವಿದ್ಯಾಪತಿಯೊಂದಿಗೆ ವೇಗವಾಗಿ ಮುಂದೆಸಾಗಿದ. ಎಲ್ಲವೂ ಮೊದಲಿನಂತೆಯೇ ಇದ್ದವು. ಅಕ್ಕಪಕ್ಕದ ಕಲ್ಲುಗಳೂ ವಿದ್ಯಾಪತಿ ಕೆಲದಿನಗಳ ಹಿಂದೆ ಕುಳಿತು ಧ್ಯಾನಿಸಿದ್ದ ಜಾಗವೂ ಹಾಗೆಯೇ ಇದ್ದವು. ಆತ ಆಚಮನಕ್ಕಾಗಿ ಬಳಸಿ ಮತ್ತೆ ತೊಳೆದಿರಿಸಿದ ತಾಮ್ರದ ಪುಟ್ಟಪಾತ್ರೆಯೂ ಹಾಗೇ ಅಲ್ಲೇ ಇತ್ತು. ಆದರೆ ಅಲ್ಲಿ ಆ ದಿವ್ಯಜ್ಯೋತಿಮಾತ್ರ ಇರಲಿಲ್ಲ!! ಅದು ಅಲ್ಲಿಂದ ಅಂತರ್ಧಾನವಾಗಿತ್ತು. ಇಂದ್ರದ್ಯುಮ್ನ ನಿರಾಶನಾದ. ವಿದ್ಯಾಪತಿ ಚಿಂತಾಮಗ್ನನಾದ, ಅವನು ಲಲಿತೆಯನ್ನು ವಂಚಿಸಿದ್ದೂ ಅಲ್ಲದೇ ಸಬರ್ ರಾಜನಿಗೂ ವಿಶ್ವಾಸಘಾತಕ ಕೃತ್ಯ ಅಮಾಡಿದ್ದ; ಯಾವುದೇ ಸ್ವಾರ್ಥವಿಲ್ಲದೇ ಕೇವಲ ತನ್ನ ರಾಜ್ಯದ ರಾಜನ ಸಲುವಾಗಿಯೇ ಹಾಗೆ ಮಾಡಿದ್ದರೂ ಜನ್ಮಾಂತರಗಳಲ್ಲಾದರೂ ಅದರ ಪಾಪವನ್ನು ಅನುಭವಿಸಬೇಕಾಗುತ್ತದೆ ಎಂಬುದು ಆತನಿಗೆ ಸ್ಪಷ್ಟವಾಗಿತ್ತು; ಆತ ಪದ್ಮಾಸನದಲ್ಲಿ ಕುಳಿತು ಈಶ್ವರನ ಕ್ಷಮೆಯಾಚಿಸಿದ. ಕಾಣದ ಆ ದಿವ್ಯ ಜ್ಯೋತಿಯನ್ನು ರಾಜಾ ಇಂದ್ರದ್ಯುಮ್ನ ಕನಸಿನ ರೂಪದಲ್ಲಿ ಕಂಡ. ಕನಸಿನಲ್ಲಿ ಜಗನ್ನಾಥಸ್ವಾಮಿ ಕಾಣಿಸಿಕೊಂಡು ಸೂಚಿಸಿದಂತೇ  ರಾಜಾ ಇಂದ್ರದ್ಯುಮ್ನ ಮುಂದೆ, ಪುರಿಯಲ್ಲಿ ಜಗನ್ನಾಥ ಮಂದಿರವನ್ನು ನಿರ್ಮಿಸಿ ಅದರಲ್ಲಿ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ.   

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪೇ ಚೇತಸಾ
ಸೇವ್ಯೇ ಸೇವ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ |
ಯಂ ಕಂಚಿತ್ಪುರುಷಾಧಮಂ ಕತಿಪಯಾಗ್ರಾಮೇಶಮಲ್ಪಾರ್ಥದಂ
ಸೇವಾಯೈ ಮೃಗಯಾಮಹೇ ನರಮಹೋ ಮೂಕಾ ವರಾಕಾ ವಯಮ್ ||

ಕೃಷ್ಣೋ ರಕ್ಷತು ನೋ ಜಗತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಂ
ಕೃಷ್ಣೇನಾಮರ-ಶತ್ರವೋ ವಿನಿಹತಾಃ ಕೃಷ್ಣಾಯ ತಸ್ಮೈ ನಮಃ |
ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಸ್ಮ್ಯಹಂ
ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಮ್ ||

                                                          --ಮುಕುಂದಮಾಲಾ

ಪುರಿ ಜಗನ್ನಾಥ ಕ್ಷೇತ್ರದ ಸುತ್ತ ಇಂತಹ ಹಲವಾರು ಕಥೆಗಳೇ ಇವೆ! ಒಂದೊಂದು ಕಥೆಯೂ ವಿಭಿನ್ನ ಮೂಲದಿಂದ ಆರಂಭಗೊಳ್ಳುತ್ತದೆ. ನಿರ್ಗುಣದಿಂದ ಸಗುಣರೂಪವನ್ನು ಉಪದದಾನ ಮಾಡುವ ಪರಬ್ರಹ್ಮ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎರಡನ್ನೂ ಒಪ್ಪಿಕೊಳ್ಳುತ್ತಾನೆ. ಪುರಿಯ ವಿಗ್ರಹಗಳು ಪೂರ್ಣವಲ್ಲ; ಅವು ಅಪೂರ್ಣ ಆಕೃತಿಗಳು; ನೋಡಲು ವಿಚಿತ್ರವಾಗಿವೆ, ಮರದ ವಿಗ್ರಹಗಳಾದರೂ ಗರ್ಭಗುಡಿಯಲ್ಲೂ ನೆಲೆನಿಂತು, ವರ್ಷಂಪ್ರತಿ ಜಾತ್ರೆಯಲ್ಲಿ ರಥಾರೂಢವೂ ಆಗಿ ಚಲಾಚಲ ಮೂರ್ತಿಗಳೆನಿಸಿವೆ. ಬ್ರಹ್ಮದೇವರು ಮೂರ್ತಿಯನ್ನು ಪೂರ್ಣಗೊಳಿಸುವ ಮುನ್ನವೇ, ಭವನದ ಬಾಗಿಲು ತೆರೆದಿದ್ದರಿಂದ ಮೂರ್ತಿಯ ತಯಾರಿ ಅಷ್ಟಕ್ಕೇ ನಿಂತು ಅದೇ ರೂಪದಲ್ಲಿ ಮೂರ್ತಿಗಳು ಪೂಜೆಗೊಳ್ಳುತ್ತಿವೆ ಎಂದೂ ಜನಪದ ಕಥೆ ತಿಳಿಸುತ್ತದೆ. ಇವತ್ತಿಗೂ ಪುರಿಯಲ್ಲಿ ನಾವು ಬಲಭದ್ರ, ಸುಭದ್ರ ಮತ್ತು ಜಗನ್ನಾಥರೆಂಬ ಮುಖವಾಡಗಳ ರೀತಿಯ ಮೂರು ವಿಗ್ರಹಗಳನ್ನು ಕಾಣುತ್ತೇವೆ. ರಾಜಬೀದಿಯಲ್ಲಿ ರಥವೇರಿ ಅವು ಬರುವಾಗ ರಾಜವಂಶಸ್ಥರು ಬೀದಿ ಗುಡಿಸಿ ಸ್ವಚ್ಛಗೊಳಿಸುವ ಶಾಸ್ತ್ರ ನಡೆಸುತ್ತಾರೆ. ವರ್ಷವರ್ಷವೂ ಹೊಸ ಹೊಸದಾಗಿ ಸಿದ್ಧಪಡಿಸಿದ ರಥಗಳನ್ನು ಲಕ್ಷೋಪಲಕ್ಷಜನ ಎಳೆದು ಸಂತಸಪಡುತ್ತಾರೆ. ಇಂತಹ ಪರಬ್ರಹ್ಮನನ್ನು ಸ್ವರೂಪಸಂಧಾನಾಷ್ಟಕ ಆಚಾರ್ಯರು ಹೀಗೆ ವರ್ಣಿಸಿದ್ದಾರೆ:

ಅನಂತಂ ವಿಭುಂ ಸರ್ವಯೋನಿರ್ನಿರೀಹಂ
ಶಿವಂ ಸಂಗಹೀನಂ ಯದೋಂಕಾರಗಮ್ಯಂ |
ನಿರಾಕಾರಮತ್ಯುಜ್ಜ್ವಲಂ ಮೃತ್ಯುಹೀನಂ
ಪರಬ್ರಹ್ಮ ನಿತ್ಯಂ ತದೇವಾಹಮಸ್ಮಿ || 

ಗೀತಗೋವಿಂದವನ್ನು ಬರೆದ ಕವಿ ಜಯದೇವ ತನ್ನ ಅಷ್ಟಪದೀ ಎಂಬ ಸ್ತೋತ್ರದಲ್ಲಿ ಹೀಗೆ ಹೇಳುತ್ತಾನೆ:

ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಿಭ್ರತೇ
ದೈತ್ಯಾನ್ ದಾರಯತೇ ಬಲಿಂ ಛಲಯತೇ ಕ್ಷತ್ರಕ್ಷಯಂ ಕುರ್ವತೇ |
ಪೌಲಸ್ತ್ಯಂ ಜಯತೇ ಹಲಂಕಲಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛಾನ್ ಮೂರ್ಛಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||

ಅಂತೂ ಪುರುಷೋತ್ತಮ ಪುರಿಯ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ರಹಸ್ಯ ನಿಮಗೆಲ್ಲಾ ತಿಳಿದರೂ ಅದು ಹಾಗೇ ಗೌಪ್ಯವಾಗಿರಲಿ!  ಇಲ್ಲದಿದ್ದರೆ ಸಬರ್ ರಾಜ ಕೋಪಿಸಿಕೊಂಡಾನು, ವಿದ್ಯಾಪತಿ ಮಾಡಿದ ತಪ್ಪಿಗೆ ಅನವರತ ನೊಂದುಕೊಂಡಾನು! ಲಲಿತೆ ಮಾತ್ರ ಸಂತತ ತನ್ನ ಪ್ರಿಯಕರನ ಹಾದಿಕಾಯುತ್ತಿರುವಳೋ ಏನೋ, ಪಾಪ! ಇಂತಹ ಕಥೆಗಳನ್ನು ಕಾರ್ತಿಕ-ಮಾರ್ಗಶೀರ್ಷ ಮಾಸಗಳಲ್ಲಿ ಕೇಳಬೇಕು. ಅಚ್ಚರಿಯೆನಿಸಿದರೂ, ನಂಬಲಸಾಧ್ಯವೆನಿಸಿದರೂ ಘಟಿಸಿದ ಘಟನೆಗಳನ್ನೇ ಆಧರಿಸಿ ಪೂರ್ವಜರು ಕಥೆಗಳನ್ನು ಬರೆಯುತ್ತಿದ್ದರು. ಹುಟ್ಟಿದ ಪ್ರತಿಯೊಂದು ಜೀವಿಗೂ ತನ್ನದ್ದೇ ಆದ ಒಂದು ಕಥೆ ಇದೆ ಅಲ್ಲವೇ? ಹಾಗೊಮ್ಮೆ ನೋಡಿದಾಗ ಹಲವು ಇಂದ್ರದ್ಯುಮ್ನರು ತತ್ಸಮಾನ ವಿದ್ಯಾಪತಿಗಳೂ ಲಲಿತೆಯರೂ ಈ ಜಗದಲ್ಲಿ ಜನ್ಮಾಂತರಗಳಲ್ಲಿ ಹಲವುಬಾರಿ ಬಂದುಹೋಗಿರಬಹುದು, ಈಗಲೂ ಇನ್ನಾವುದೋ ರೂಪದಲ್ಲಿರಲೂ ಬಹುದು; ವಿಚಾರ ಮಥಿಸಿದರೆ ಈ ಜಗ ಸೋಜಿಗ, ಜಗಕ್ಕೊಬ್ಬನೇ ಬಹುದೊಡ್ಡ ಬಾಣಸಿಗ-ಅವನೇ ಪರಬ್ರಹ್ಮ. ಅಂತಹ ಪರಬ್ರಹ್ಮನ ನೆನಕೆಗೆ ಕಾಲ-ದೇಶಗಳ ಗಡುವೇ ಎನ್ನಬೇಡಿ, ಆತ ಗೀತೆಯಲ್ಲಿ ಹೇಳಿದ ಪ್ರಕಾರ ಕಾಲದ/ವರ್ಷದ/ಋತುಗಳ ಕೆಲವೊಂದು ಭಾಗಗಳು ಇಂತಿಂಥಾ ಕೆಲಸಕ್ಕೇ ಮೀಸಲಾಗಿವೆ; ಸಂವತ್ಸರದ ಈ ಕಾಲ ಪುಣ್ಯಕಥೆಗಳನ್ನು ಶ್ರವಣ ಮಾಡುವ ಕಾಲ, ತೀರ್ಥಯಾತ್ರೆಗೂ ಹೋಗುವ ಕಾಲ. ಕಥಾಶ್ರವಣ ಮಾಡಿದ ನಿಮಗೆಲ್ಲಾ ಭಗವಂತ, ಪುರಿಯ ಪುರುಷೋತ್ತಮ ಸುಫಲವನ್ನೀಯಲಿ, ನಮಸ್ಕಾರ. 

Thursday, November 22, 2012

ಪುರುಷೋತ್ತಮ ಪುರಿಯ ರಹಸ್ಯ-೨


ಪುರುಷೋತ್ತಮ ಪುರಿಯ ರಹಸ್ಯ-೨

[ಮುಂದುವರಿದು ಈಗ ಇದು ಎರಡನೇ ಭಾಗ ]

ಪ್ರಮಾದ [ಪೀತ] ಸಾಹಿತ್ಯವನ್ನು ಓದುವುದು ಕ್ಷಣಿಕವಾಗಿ ಮುದವನ್ನು ನೀಡಬಹುದಾದರೂ ಅಂತ್ಯದಲ್ಲಿ ಅದರಿಂದ ಮನೋವೈಕಲ್ಯತೆ ಉಂಟಾಗುತ್ತದೆ; ಹಲವು ವಿಕಾರಗಳು ಮನದ ತುಂಬೆಲ್ಲಾ ತುಂಬಿಕೊಳ್ಳುತ್ತವೆ. ಕಾಲದ ಮಹಿಮೆಯಿಂದ ಬೇಡದ್ದು ಬೇಕಾಗುವುದು, ದುಷ್ಟರೇ ಶಿಷ್ಟರಂತೇ ವಿಜೃಂಭಿಸುವುದು, ಮದ್ಯ-ಮಾಂಸ-ಮಾನಿನಿಯರ ಸಹವಾಸ ಇರುವವರೇ ಸಂಭಾವಿತರಾಗಿಯೂ ನಾಗರಿಕರೆನಿಸಿಯೂ ಬದುಕುವುದು ಇಂದಿನ ವಿಧಿನಿಯಮ. ಮಾಧ್ಯಮಗಳಲ್ಲಿ ಪ್ರತೀ ಹಗಲು ಪ್ರತೀ ರಾತ್ರಿ ಕೊಲೆ-ಸುಲಿಗೆ-ದರೋಡೆ-ಮಾನಭಂಗ-ಪರಸ್ತ್ರೀ ಸಂಗ ಮೊದಲಾದ ಹಲವು ಸಲ್ಲದ ಘಟನಾವಳಿಗಳ ಮಹಾಪೂರವೇ ಹರಿದುಬರುತ್ತಿದೆ. ಘಟನೆಗಳನ್ನು ಪುನರ್ಸೃಷ್ಟಿಗೊಳಿಸಿ ವೈಭವೀಕರಿಸಿ ತನ್ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದನ್ನೇ ಉದ್ದೇಶವಾಗಿಸಿಕೊಂಡವರು ಮೌಲ್ಯಗಳಿಗೆ ಆದ್ಯತೆ ನೀಡುತ್ತಿಲ್ಲ. ಎಷ್ಟೋ ಕಡೆ ಅಬಾಲವೃದ್ಧರಾದಿಯಾಗಿ ಮನೆಯವರೆಲ್ಲರೂ ಕುಳಿತು ನೋಡುವ ಕೆಟ್ಟಪರಿಪಾಠ ಬೆಳೆದುಬಿಟ್ಟಿದೆ. ಭಜನೆ, ಕೀರ್ತನೆ-ಸಂಕೀರ್ತನೆ, ಪ್ರವಚನ, ಅಥವಾ ಜೀವನದ ಉನ್ನತ ಮೌಲ್ಯಗಳ ಬಗೆಗೆ ಯಾವುದೇ ಕಾರ್ಯಕ್ರಮಗಳಿದ್ದರೆ ಅವುಗಳನ್ನು ನೋಡುವವರು ಕಮ್ಮಿಯಾಗಿದ್ದಾರೆ. ನಾವು ಸೇವಿಸುವ ಆಹಾರ ಕೂಡ ನಮ್ಮ ಮನದಮೇಲೆ ಪರಿಣಾಮ ಬೀರುತ್ತದೆ ಎಂಬ ವೈಜ್ಞಾನಿಕ ನಿಲುವನ್ನು ಅನೇಕರು ಅಲ್ಲಗಳೆಯುತ್ತಾರೆ. ಅಧುನಿಕ ವಿಜ್ಞಾನದ ಆವಿರ್ಭಾವ ಆಗಿರದ ಆ ಕಾಲದಲ್ಲೇ ಬೆಳಿಗ್ಗೆ ಎದ್ದೊಡನೆ [ಶುದ್ಧ ಆಮ್ಲಜನಕವನ್ನು  ಹೇರಳವಾಗಿ ಹೊರಸೂಸುವ] ಅಶ್ವತ್ಥವೃಕ್ಷವನ್ನು ಸುತ್ತಬೇಕೆಂದರು ನಮ್ಮ ಪೂರ್ವಜರು, ಕೊನೇಪಕ್ಷ ಅಂಗಳದಲ್ಲಿರುವ [ಕಾಮಹಾರಿಣಿಯಾದ] ತುಳಸಿಯನ್ನಾದರೂ ಸುತ್ತಬೇಕು ಎಂದರು. ಆಹಾರದಲ್ಲಿ ಸ್ವಾಭಾವಿಕವಾಗಿ ಕೆಲಮಟ್ಟಿಗೆ ಕಾಮೋತ್ತೇಜಕ ಪದಾರ್ಥಗಳು ಸೇರಿರುತ್ತವೆ.

ಕಾಂದಾಬಜೆ ಅಥವಾ ಈರುಳ್ಳಿ ಬಜ್ಜಿ-ಪಕೋಡ ಕರಿಯುವಾಗ ಮೈಲಿಗಟ್ಟಲೇ ಅದರ ಪರಿಮಳ ಹರಡಿ ಜಿಹ್ವಾಚಾಪಲ್ಯದವರನ್ನು ತಿನ್ನಲು ಕರೆಯುತ್ತದೆ! ಈರುಳ್ಳಿ-ಬೆಳ್ಳುಳ್ಳಿ ಇಂಥವೂ ಕೂಡ ಕಾಮೋತ್ತೇಜಕಗಳಾಗಿವೆ. ಅಡಿಗೆ ಮಾಡಿ ತೋರಿಸುವಾಗ ಜನ ರುಚಿಗೆ ತಕ್ಕಷ್ಟು ಉಪ್ಪು ಎಂಬುದು ವಾಡಿಕೆ, ಅದರಂತೇ ಜೀವನಕ್ಕೆ ಧರ್ಮ, ಅರ್ಥ, ಕಾಮ, ಮೋಕ್ಷದ ಜೊತೆಗಿರುವ ಕಾಮ ಇರಬೇಕಾದುದು ಸಂಸಾರಿಗಳಿಗೆ ಸಹಜ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸಾಲಿನಲ್ಲಿರುವ ಕಾಮ ಅಂಟಿಕೊಂಡಾಗ ಜೀವನ  ಇಲ್ಲದ್ದನ್ನು ಬಯಸುತ್ತದೆ! ಧರ್ಮದ ಮೇರೆಮೀರಿ ಕಾಮ ವಿಕಾರಗಳು ಉದ್ಭವವಾಗುತ್ತವೆ. ಪೀತ ಸಾಹಿತ್ಯ ಕೂಡ ಕೆಟ್ಟ ಕೆಲಸಕ್ಕೆ ಅನುಮೋದನೆ ನೀಡುತ್ತದೆ! ಉತ್ತಮವಾದುದನ್ನು ಓದಿದಾಗ ಮನಸ್ಸು ಉತ್ತಮ ನಡೆಯಲ್ಲೇ ಹೆಜ್ಜೆ ಹಾಕುತ್ತದೆ. ನಿಮ್ನವಾದುದನ್ನು ಓದಿದರೆ, ನೋಡಿದರೆ ಮನಸ್ಸು ಆ ಕಡೆಗೇ ವಾಲುತ್ತದೆ. ಕೊಳೆಗೇರಿಯಲ್ಲೇ ಹುಟ್ಟಿ ಅಲ್ಲೇ ಬೆಳೆಯುವ ವ್ಯಕ್ತಿಗೆ ಅದರಿಂದಾಚೆ ಬಂದರೂ ಅದೇ ಸುಖವೆನಿಸುತ್ತದೆ! ಜನ್ಮದಾರಭ್ಯ ಶುಭ್ರವಾದ ಬಟ್ಟೆಗಳನ್ನೋ ಶ್ವೇತವರ್ಣದ ಬಟ್ಟೆಗಳನ್ನೋ ಧರಿಸಿ ಬೆಳೆದ ವ್ಯಕ್ತಿಗೆ ಕೊಂಚ ಕೊಳೆ ತಗುಲಿದರೂ ಅದನ್ನು ತೊಳೆದುಕೊಳ್ಳುವ ವರೆಗೆ ಮನಸ್ಸು ಚಡಪಡಿಸುತ್ತದೆ! ಆಚಾರವಂತ ಬ್ರಾಹ್ಮಣರನೇಕರು ಇಂದಿಗೂ ಈರುಳ್ಳಿ-ಬೆಳ್ಳುಳ್ಳಿಯನ್ನು ಈ ಕಾರಣದಿಂದ ತಿನ್ನುವುದಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಊಟವಾದಮೇಲೆ ಅವರು "ಸುಮನಸಃ ಅಸ್ತು  ಸೌಮನಸ್ಯಂ" ಎಂದುಚ್ಚರಿಸುತ್ತಾ ತುಳಸೀ ದಳಗಳನ್ನು ತಿನ್ನುತ್ತಾರೆ. ತುಳಸಿಯಲ್ಲಿ ಕಾಮವಿಕಾರಗಳನ್ನು ತಡೆಗಟ್ಟುವ ಗುಣವಿದೆ. ತುಳಸಿಯ ಸುತ್ತಲ ಹವೆಯಲ್ಲಿ ಕಾಮನಿಗ್ರಹದ ಗುಣವಿರುತ್ತದೆ! ಅದಕ್ಕೆಂದೇ ಋಷಿಗಳಾದಿಯಾಗಿ ಪೂರ್ವಜರು ತುಳಸಿಯನ್ನು ಬಳಸಿದರು. ಕಂಡ ಕಂಡ ಕಾಡುಗಿಡಗಳಿಗೆಲ್ಲಾ ಹಾಗೆ ಆದ್ಯತೆ ನೀಡಲಾಗುವುದೇ? ತುಳಸಿಯಲ್ಲಿ ಹಲವು ಔಷಧೀಯ ಗುಣಗಳನ್ನು ಅವರು ಕಂಡುಕೊಂಡಿದ್ದರು; ತುಳಸಿ ನಿತ್ಯ ಪೂಜನೀಯ ಎಂದರು, ಮನೆಯಮುಂದೆ ಬಲಪಾರ್ಶ್ವದಲ್ಲಿ ಇದ್ದರೆ ಒಳಿತು ಎಂದರು; ದೇವರಿಗೆ ಅತಿ ಪ್ರೀತಿ ಎಂದರು. ಕಾಮಹಾರಿಣಿಯಾದ ತುಳಸಿ ಸನ್ಯಾಸಿಗಳಿಗೂ ಬಹಳ ಇಷ್ಟ. ಅದಕ್ಕೆಂದೇ ಸನ್ಯಾಸಿಗಳಿಗೆ ಬೇರೆಲ್ಲಾ ಹಾರಗಳಿಗಿಂತಾ ತುಳಸೀಕೊಂಬೆಗಳ ಹಾರವನ್ನು ಹಾಕುತ್ತಾರೆ. ಪ್ರಪಂಚದಲ್ಲಿ ಯಾವ ಧರ್ಮ ಶ್ರೇಷ್ಠ ಎಂಬ ಪ್ರಶ್ನೆ ಬಂದಾಗ ಯಾವ ಧರ್ಮ ಆಚರಿಸುವ ವ್ಯಕ್ತಿಯ ಒಳಿತನ್ನೂ ಮತ್ತು ಸುತ್ತಲ ಸಮಾಜದ ಒಳಿತನ್ನೂ ಏಕಕಾಲಕ್ಕೆ ಎತ್ತಿಹಿಡಿಯುತ್ತದೋ ಅಂತಹ ಧರ್ಮ ಶ್ರೇಷ್ಠ ಮಾನವಧರ್ಮವಾಗುತ್ತದೆ; ಈ ಪ್ರಪಂಚದಲ್ಲಿ ಹಾಗಿರುವುದು ಸನಾತನ ಜೀವನಧರ್ಮ ಮಾತ್ರ ಎಂಬುದನ್ನು ಮರೆಯಬಾರದು-ಅದಕ್ಕೇ ’ಧರ್ಮೋ ರಕ್ಷತಿ ರಕ್ಷಿತಃ’ ಎಂದು ಪ್ರಾಜ್ಞರು ತಿಳಿಸಿದ್ದಾರೆ[ಈ ವಿಷಯವನ್ನು ಪ್ರತ್ಯೇಕವಾಗಿ ಸವಿವರವಾಗಿ ಮುಂದೊಮ್ಮೆ ತಿಳಿಯೋಣ.]   

ಪಂಚತಂತ್ರದ ಅಪರೀಕ್ಷಿತಕಾರಕ ಭಾಗದಲ್ಲಿ ತಿರುಕನ ಕನಸು ಎಂಬ ಕಥೆಯೊಂದು ಬರುತ್ತದೆ. ತಿರುಕನ ಕನಸಿನ ಬಗ್ಗೆ ಕನ್ನಡದ ಕವಿಯೋರ್ವರು ಬರೆದ ಹಾಡನ್ನು ನಾವೆಲ್ಲಾ ಕೇಳಿದ್ದೇವಲ್ಲವೇ?   

ತಿರುಕನೋರ್ವನೂರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸು ಕಂಡನಂತೇನೆ
.
.
.
.
ಬಿಡದೆ ಯಾರ ಕೊರಳಿನಲ್ಲಿ
ತೊಡರಿಸುವುದೊ ಅವರ ಪಟ್ಟ
ಪೊಡವಿಯಾಳ್ವೆನೆಂದು ಮನದಿ ಹಿಗ್ಗುತಿರ್ದನು
.
.
.
ಮುನಿದ ನೃಪರ ದಂಡುಬಂದು
ಮನೆಯಮುತ್ತಿದಂತೆಯಾಗಿ
ಕನಸುಕಾಣುತೆದ್ದು ಹೆದರಿ ಕಣ್ಣುತೆರೆದನು 


ಅಲ್ಲವೇ ? ಈ ಕಥೆಗೆ ತುಸು ಭಿನ್ನವಾಗಿ ಕಾಣುವ ತಿರುಕನ ಕಥೆ ಭಿಕ್ಷುಕರಲ್ಲೂ ಲೋಭಿಗಳು ಇರುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಕನಸಿನ ಸೌಧ ಕಟ್ಟುವ ಮನಸ್ಸಿಗೆ  ಯಾವುದೇ ಇತಿಮಿತಿಗಳಿರುವುದಿಲ್ಲ ಎಂಬುದನ್ನೂ ಸೂಚಿಸುತ್ತದೆ. ಆ ಕಥೆ ಹೀಗಿದೆ: ಓಬೀರಾಯನ ಕಾಲದ ನಗರವೊಂದರಲ್ಲಿ ರಂಗಣ್ಣನೆಂಬ ತಿರುಕ ಮಹಾಕೃಪಣನಾಗಿದ್ದು, ದಿನಾ ಬೇಡಿತಂದ ಹಿಟ್ಟಿನಲ್ಲಿ ಅಲ್ಪಸ್ವಲ್ಪವನ್ನು ಉಳಿಸಿ ಒಂದು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ ಅದನ್ನು ಆತ ನೆಲೆಸಿದ್ದ ಮುರುಕಲು ಮನೆಯ ಗೋಡೆಯ ಗೂಟಕ್ಕೆ ನೇತು ಬಿಟ್ಟಿದ್ದ. ಹರಕುಮುರುಕು ಮಂಚದಲ್ಲಿ ಅಂಗಾತ ಮಲಗಿ ನಿತ್ಯವೂ ಬಹಳ ಹೊತ್ತು ಅದನ್ನೇ ದಿಟ್ಟಿಸುತ್ತಾ ಒರಗಿರುತ್ತಿದ್ದ. ಒಮ್ಮೆ ಹೀಗೇ ಒರಗಿರುತ್ತಾ ಕನಸುಕಂಡು ಈಗೇನಾದರೂ ಕ್ಷಾಮಬಂದರೆ ಹಿಟ್ಟಿನಿಂದ ತುಂಬಿಹೋಗಿರುವ ಮಡಿಕೆಯನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಎರಡು ಆಡುಗಳನ್ನು ಕೊಂಡುಕೊಳ್ಳುತ್ತೇನೆ ಎಂದುಕೊಂಡ. ಕನಸು ಮುಂದುವರಿಯಿತು. ಆಡುಗಳು ಮರಿಹಾಕಿದವು, ಅವುಗಳನ್ನೆಲ್ಲಾ ಮಾರಿ ಹಸುಗಳನ್ನು ಕೊಂಡ, ಹಸುಗಳ ಹೈನವನ್ನೆಲ್ಲಾ ಮಾರಿ ಎಮ್ಮೆಗಳನ್ನು ಕೊಂಡ, ಎಮ್ಮೆಗಳನ್ನೆಲ್ಲಾ ಮಾರಿ ಕುದುರೆಗಳನ್ನು ಕೊಂಡ. ಕುದುರೆಗಳ ಸಂತಾನಾಭಿವೃದ್ಧಿಯಿಂದ ಅವುಗಳ ಸಂಖ್ಯಾವೃದ್ಧಿಯಾಗಿ, ಅವುಗಳನ್ನೆಲ್ಲಾ ಮಾರಿ ಭಾರೀ ಶ್ರೀಮಂತನಾಗಿ ಬಂಗಲೆಯೊಂದನ್ನು ಕಟ್ಟಿಸಿದ. ಊರಿನ ದೊಡ್ಡ ಶ್ರೀಮಂತರು ಬಂದು ತಮ್ಮ ಮಗಳನ್ನು ಕೊಡುತ್ತೇವೆ ಮದುವೆಯಾಗು ಎಂದು ಒತ್ತಾಯಿಸಿದರು. ಸುರಸುಂದರಾಂಗಿಯೋರ್ವಳನ್ನು ಮದುವೆಯಾದ ಆತನಿಗೆ ಗಂಡುಮಗುವೊಂದು ಜನಿಸಿ, ಮಗುವಿಗೆ ಪೂರ್ಣಚಂದ್ರನೆಂದು ನಾಮಕರಣವನ್ನೂ ಮಾಡಿದ. ಮಗುವು ಅಂಬೆಗಾಲಿಡುತ್ತಾ, ಆತ ಸವಾರಿ ಮಾಡುವ ಕುದುರೆ ಲಾಯದೆಡೆಗೆ ಹೋದಾಗ, ಮೋಹನಾಂಗಿಯಾದ ಅರ್ಧಾಂಗಿಯನ್ನು ಕರೆದು, " ಎಲಗೇ, ಪಾಪು ಕುದುರೆಬಳಿ ಹೋಗುತ್ತಿದ್ದಾನೆ, ಜೋಕೆ, ನೋಡಿಕೋ" ಎಂದು ಗತ್ತಿನಿಂದ ಆಜ್ಞಾಪಿಸಿಯೂ ಬಿಟ್ಟ. ಆಕೆ ಸಲಿಗೆಯಿಂದ "ನಿಮಗೇನು ಧಾಡಿ? ನಾನು ಒಂಬತ್ತು ತಿಂಗಳು ಹೊತ್ತು ಹೆತ್ತು ಸುತ್ತಿದುದು ಸಾಲದೇ? ನಿಮ್ಮ ಕೂಸನ್ನು ನೀವೇ ನೋಡಿಕೊಳ್ಳಿ" ಎಂದೇನಾದರೂ ಅಂದರೆ ತಕ್ಷಣ ಹೆಂಡತಿಗೆ ಹೀಗೆ ಒದೆಯುತ್ತೇನೆ ಎನ್ನುತ್ತಾ ಗೂಟಕ್ಕೆ ನೇತುಬಿಟ್ಟಿದ್ದ ಹಿಟ್ಟಿನ ಕುಡಿಕೆಗೆ ಚೆನ್ನಾಗಿ ಒದ್ದೇಬಿಟ್ಟ. ಗಡಿಗೆ ಇಬ್ಭಾಗವಾಯ್ತು ಕನಸೂ ಹಾರಿಹೋಯ್ತು! ತಿರುಕ ವಾಸ್ತವಕ್ಕೆ ಬಂದ.  

ಕನಸುಕಾಣುವುದ ತಪ್ಪಲ್ಲ, ಆದರೆ ಕಾಣುವ ಕನಸೆಲ್ಲಾ ನನಸಾಗಲೇಬೇಕೆಂದೇನೂ ಇಲ್ಲ. ಕನಸಿನಲ್ಲೂ ವಿಧಗಳಿವೆ. ದೈವಿಕವಾದ ಅಥವಾ ಅಲೌಕಿಕವಾದ ಕನಸು, ಲೌಕಿಕವಾದ ಅಥವಾ ಪ್ರಾಪಂಚಿಕ ವ್ಯವಹಾರಗಳ ಕನಸು, ಹಗಲುಗನಸು ಹೀಗೆ ಅವುಗಳನ್ನು ಹೆಸರಿಸಬಹುದಾಗಿದೆ. ಭೌತಿಕ ಶರೀರಕ್ಕೂ ಕೂಡ ಮೂರು ಆಯಾಮಗಳು: ಅವು ಜಾಗೃತ್, ಸುಷುಪ್ತ ಮತ್ತು ಸ್ವಪ್ನ. ಎಚ್ಚರವಾಗಿರುವುದು ಜಾಗೃತಾವಸ್ಥೆ, ಗಾಢವಾಗಿ ನಿದ್ರಿಸುವುದು ಸುಷುಪ್ತಾವಸ್ಥೆ ಮತ್ತು ಕನಸುಕಾಣುವುದು ಸ್ವಪ್ನಾವಸ್ಥೆ. ದೈವೀಭಕ್ತರು, ಸಾಧಕರು ಸ್ವಪ್ನಾವಸ್ಥೆಯಲ್ಲಿ ಅಲೌಕಿಕವಾದ ಕನಸನ್ನೇ ಕಾಣುತ್ತಾರೆ. ಸಂಸಾರಿಗಳು, ಜನಸಾಮಾನ್ಯರು ಲೌಕಿಕವಾದ ಕನಸುಗಳನ್ನು ಕಾಣುತ್ತಾರೆ. ಅರಿಷಡ್ವರ್ಗಗಳನ್ನು ಅನವರತ ಆರಾಧಿಸಿ ತಮ್ಮಲ್ಲೇ ಹುದುಗಿಸಿಕೊಂಡವರು ಹಗಲುಗನಸನ್ನು ಬಹುವಾಗಿ ಕಾಣುತ್ತಾರೆ: ಉದಾಹರಣೆಗೆ ನಮ್ಮ ರಾಜಕಾರಣಿಗಳು: ಪಾಕಿಸ್ತಾನ-ಭಾರತ ಯುದ್ಧದಲ್ಲಿ, ಪಾಕಿಗಳು ಸೋತು, ಭಾರತದ ಸೈನ್ಯಕ್ಕೆ ಸೆರೆಸಿಕ್ಕ ಸಹಸ್ರಾರು ಪಾಕೀ ಸೈನಿಕರನ್ನು ತಮ್ಮ ಸ್ವಾರ್ಥ ಸಾಧನೆಯ ಹಗಲುಗನಸುಕಂಡು ಬಿಡುಗಡೆಗೊಳಿಸಿದವರು ಇಂದಿರಾಗಾಂಧಿಯವರು. ಅದೇ ಇಂದಿರಾ ಅವರು ಭಾರತೀಯರೇ ತನ್ನ ವಿರುದ್ಧ ಸಿಡಿದೆದ್ದಾಗ ಮೀಸಾಕಾಯ್ದೆಯನ್ನು ಜಾರಿಗೊಳಿಸಿ ಹಲವರನ್ನು ಬಂಧಿಸಿದರು. ಭಾರತ ತನ್ನ ಸಂತತಿಯ ಕಾಂಗ್ರೆಸ್ ಸಾಮ್ರಾಜ್ಯವೇ ಅಗಿರಬೇಕೆಂಬ ಹಗಲುಗನಸು ಅವರದಾಗಿತ್ತು! ವಿಮಾನ ಸಾರಿಗೆಯ ಅನುಭವವಿಲ್ಲದ ಉದ್ಯಮಿ ಮಲ್ಯ ಸಾವಿರ ಸಾವಿರ ಕೋಟಿಗಳನ್ನು ಬಾಚಿಕೊಳ್ಳುವ ಹಗಲುಗನಸು ಕಂಡಿದ್ದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಾಗೈತಿಹಾಸದಲ್ಲಿ ಕಂಸನಿಗೆ ಹಳಸ್ಲು ಅನ್ನವನ್ನುಂಡು ಕತ್ತೆಯನ್ನಡರಿ ದಕ್ಷಿಣದಿಕ್ಕಿಗೆ ಹೋದಂತೇ ದುಃಸ್ವಪ್ನ ಕಾಣಿಸಿತ್ತು, ಸಹಿಸಲಾರದ ತಲೆನೋವುಬಂದಿತ್ತು; ಅದಾದ ಕೆಲದಿನಗಳಲ್ಲೇ ಕೃಷ್ಣ ಕಂಸನನ್ನು ವಧಿಸಿದ- ಇದು ದೈವಿಕ ದಾಳಿಯ ಮುನ್ಸೂಚನೆಯ ಕನಸು. ಇಂದು ಸಮಾಜದಲ್ಲಿ ಹಲವು ಮಂದಿ ಕಂಸರಿದ್ದಾರೆ-ಕೃಷ್ಣರುಗಳ ಬರುವಿಕೆಗೆ ನಾವೆಲ್ಲಾ ಕಾದಿದ್ದೇವೆ!      

ದಶಾವತಾರಗಳಲ್ಲಿ ಒಂದಾದ ಶ್ರೀರಾಮಾವತಾರದ ಕಥೆಯೇ ವಾಲ್ಮೀಕಿ ರಾಮಾಯಣ; ಅದು ಸೂರ್ಯವಂಶದವರ ಕಥೆಯಾಗಿದ್ದು ದೈವತ್ವವನ್ನೇ ಮೈವೆತ್ತ ರಾಮನೇ ಅಲ್ಲಿ ಕಥಾನಾಯಕ. ಧರ್ಮಾಧರ್ಮಗಳ ನಿಷ್ಕರ್ಷೆಯಲ್ಲಿ ರಾಜರುಗಳ ಜೊತೆಗೆ ಮಿಕ್ಕವರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಅಲ್ಲಿ ಸಿಗದ ವಿವರಗಳನ್ನು ತಿಳಿಸಿಕೊಡುವುದಕ್ಕಾಗಿ ಮಹರ್ಷಿ ವೇದವ್ಯಾಸರು ಭಾರತವನ್ನು ಬರೆದರು; ಅದು ಚಂದ್ರವಂಶದವರ ಕಥೆ. ಭಾರತ ಭಾರತದ ಕಥೆ-ಅದು ನಂತರ ಮಹಾಭಾರತವೆಂದೂ ಪಂಚಮವೇದವೆಂದೂ ಪ್ರಸಿದ್ಧವಾಯ್ತು. ರಾಜನೀತಿಯನ್ನು ವಿಶದವಾಗಿ ತಿಳಿದುಕೊಳ್ಳಲು ಇಂದಿಗೂ ಅದು ಆಕರವಾಗುತ್ತದೆ; ಆಧಾರವಾಗುತ್ತದೆ. ರಾಜನೀತಿಯಲ್ಲಿ ನಾವು ನಡೆಯುವುದಾದರೆ ಪಾಕಿಸ್ತಾನದ ಕಥೆ ಅದೆಂದೋ ಮುಗಿದುಹೋಗಬೇಕಿತ್ತು; ಸಾಮ, ದಾನ, ದಂಡ, ಭೇದ ಯಾವ ನೀತಿಗೂ ನಿಲುಕದ ಪಾತಕಿಗಳೇ ತುಂಬಿರುವ ಪಾಕಿಸ್ತಾನ ಆಮೂಲಾಗ್ರ ನಿರ್ನಾಮವಾಗದ ಹೊರತು ಭಾರತವಷ್ಟೇ ಅಲ್ಲ, ಜಗತ್ತಿಗೇ ನೆಮ್ಮದಿಯಿಲ್ಲ, ಸುಖವಿಲ್ಲ; ಯಾವ ಕ್ಷಣದಲ್ಲೂ ಎಲ್ಲಾದರೂ ಉಗ್ರರು ಯಾವುದೋ ಸೋಗಿನಲ್ಲಿ ಬಂದು ಮಾರಣಹೋಮ ನಡೆಸುಬಹುದಾದ ಚಾಲ್ತಿ ಖಾತೆ ಅದು! ಗಾಂಧಾರ[ಈಗಿನ ಕಂದಹಾರ] ದೇಶ ಮೊದಲಿನಿಂದಲೂ ಅಂತಹ ಜನಗಳನ್ನೇ ಹೆತ್ತಿದ್ದಕ್ಕೆ ದಾಖಲೆಗಳಿವೆ; ಅಲ್ಲಿ ಜನಿಸುವವರೆಲ್ಲಾ ರಕ್ಕಸ ಸ್ವಭಾವದವರೇ. ಸೆರೆಸಿಕ್ಕ ಉಗ್ರರನ್ನು ವಿಚಾರಣೆಗಾಗಿ ಇಟ್ಟುಕೊಳ್ಳಲು ತಗಲುವ ವೆಚ್ಚದ ಹಣ ದೇಶದ ಬಡವರ ಭಾಗ್ಯನಿಧಿಯಾಗಿ ವಿನಿಯೋಗಿಸಲ್ಪಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಸೆರೆಸಿಕ್ಕ ಪಾಪಿಗಳನ್ನು ನಿರ್ದಾಕ್ಷಿಣ್ಯವಾಗಿ ವಾರವೊಪ್ಪತ್ತರಲ್ಲಿ [ಅವರಿಂದ ಮಾಹಿತಿಗಳನ್ನು ಪಡೆದು] ಮುಗಿಸಿಬಿಟ್ಟರೆ ಉಗ್ರರ ಅಟ್ಟಹಾಸಕ್ಕೆ ಅದೇ ತಕ್ಕಮದ್ದಾಗುತ್ತದೆ. ಮನೆಯಲ್ಲೇ ಇರುವ ಹೊಸ ಹೊಸ ಉಗ್ರ ಸಂಘಟನೆಗಳು ಮದರಸಾದಲ್ಲಿ ತಯಾರಾಗುತ್ತವೆ! ದೇಶವ್ಯಾಪಿ ಅಕ್ಟೋಪಸ್ ರೀತಿಯಲ್ಲಿ ಹಬ್ಬಿರುವ ಅಂಥಾ ಸಂಘಟನೆಗಳನ್ನು ಬೇರುಸಹಿತ ಕಿತ್ತೆಸೆಯದ ಹೊರತು ಭಾರತೀಯತೆಗೆ ಉಳಿಗಾಲವಿಲ್ಲ; ಜಿಹಾದಿಗಳು ಸಭ್ಯರಲ್ಲ. ಒತ್ತಾಯದಿಂದ ಹೊಡೆದು, ಬಡಿದು ಮಾಡಿಯಾದರೂ ಧರ್ಮವನ್ನು ವಿಸ್ತರಿಸು ಎಂಬ ಹೇಳಿಕೆಯಿರುವ ಧರ್ಮಗ್ರಂಥವನ್ನಾಧರಿಸಿದ ಧರ್ಮ ಅದೆಂಥದ್ದು ಎಂದು ಪ್ರತ್ಯೇಕ ಹೇಳಬೇಕಿಲ್ಲ; ಜಿಹಾದಿಗಳ ಸಂಖ್ಯೆ ವಿಪರೀತಕ್ಕೆ ಏರುವ ಮೊದಲು ಅವರನ್ನು ಮಟ್ಟಹಾಕದಿದ್ದರೆ ನಮ್ಮ ವಿನಾಶಕ್ಕೆ ನಾವೇ ಪರೋಕ್ಷ ಕಾರಣರಾಗುತ್ತೇವೆ. ಈ ನಿಟ್ಟಿನಲ್ಲಿ ಒಂದಂತೂ ಸ್ಪಷ್ಟ: ಪಾಕಿಸ್ತಾನಕ್ಕೆ ಬಹಳಕಾಲದ ಭವಿಷ್ಯವಿಲ್ಲ, ಹಿಂದೂಸ್ಥಾನದಲ್ಲಿದ್ದೇ ಒಳಗಿನಿಂದ ಆ ಪಾಕಿಸ್ತಾನವನ್ನು ಅನುಮೋದಿಸುವ ದೇಶದ್ರೋಹಿಗಳಿಗೂ ಕೂಡ ಬಹಳಕಾಲದ ಗಡುವು ಇರುವುದಿಲ್ಲ.

ಇರಲಿ, ಪಂಚತಂತ್ರದ ಲಬ್ಧಪ್ರಣಾಶ ವಿಭಾಗದಲ್ಲಿ ಸಿಂಹಸಾಕಿದ ನರಿಯ ಕಥೆ ಬರುತ್ತದೆ. ಆ ಕಥೆಯನ್ನು ಸ್ವಲ್ಪ ತಿಳಿದುಕೊಳ್ಳುವುದು ಮುದನೀಡುತ್ತದೆ ಎನಿಸಿತು [ಕಥೆಗಳ ಸಾರವನ್ನಷ್ಟೇ ಹೇಳುತ್ತಿದ್ದೇನೆ]: ಕಾಡೊಂದರಲ್ಲಿ ಸಿಂಹ-ಸಿಂಹಿಣಿ ವಾಸವಾಗಿದ್ದರು. ಮಾಮೂಲಿಯಾಗಿ ಹಸಿದಾಗ ಬೇಟೆಯಾಡುತ್ತಿದ್ದರು. ಒಂದುದಿನ ಬೇಟೆಗೆ ತೆರಳಿದ ಸಿಂಹಕ್ಕೆ ಯಾವುದೂ ಸಿಗಲಿಲ್ಲ; ನರಿಯ ಮರಿಯೊಂದು ಹತ್ತಿರಕ್ಕೆ ಬಂತು. ಅದನ್ನೇ ನಡೆಸಿಕೊಂಡು ಸಿಂಹಿಣಿಯಿದ್ದ ಗುಹೆಗೆ ಸಿಂಹ ನಡೆದ. "ಪ್ರಿಯೆ, ಇದು ನರಿಯಮರಿ, ಈ ಮೃಗಶಾಬಕನನ್ನು ಕೊಲ್ಲುವುದು ನನಗೆ ಸರಿಕಾಣಲಿಲ್ಲ. ಇದು ಆಹಾರದಿಂದ ನಮ್ಮ ಜಾತಿಗೆ ಹತ್ತಿರದ ಪ್ರಾಣಿ. ನೀತಿಸಾರ ಹೀಗಿದೆ: ಸ್ತ್ರೀಯರನ್ನೂ, ಬಾಲಕ-ಬಾಲಕಿಯರನ್ನೂ, ಯತಿಗಳನ್ನೂ ಎಂತಹ ಪ್ರಸಂಗದಲ್ಲೂ ಕೊಲ್ಲಬಾರದು ಎಂದು." ಗಂಡನ ಹೇಳಿಕೆಗೆ ಉತ್ತರಿಸಿದ ಸಿಂಹಿಣಿ ಪ್ರಾಣಹೋಗುವ ಕಾಲದಲ್ಲೂ ಅಕೃತ್ಯವನ್ನು ಎಸಗಬಾರದೆಂದೂ ತಾನೂ ಕೂಡ ನರಿಮರಿಯನ್ನು ಕೊಲ್ಲುವುದಿಲ್ಲವೆಂದು ತಿಳಿಸಿದಳು. ಸಿಂಹ ಸಿಂಹಿಣಿ ಆ ಮರಿಯನ್ನು ಬೆಳೆಸಲಾರಂಭಿಸಿದರು. ಕಾಲಕ್ರಮದಲ್ಲಿ ಸಿಂಹಿಣಿ ಗರ್ಭವತಿಯಾಗಿ ಎರಡು ಮರಿಸಿಂಹಗಳಿಗೆ ಜನ್ಮವಿತ್ತಳು. ಮರಿಗಳು ಆಡುತ್ತಾ ಬೆಳೆಯತೊಡಗಿದವು. ಒಂದು ದಿನ ಕಾಡಾನೆಯೊಂದು ಆ ಮಾರ್ಗವಾಗಿ ಧಾವಿಸಿ ಬಂತು. ಅಟ್ಟಿಸಿಕೊಂಡು ಹೋದ ಸಿಂಹದ ಮರಿಗಳ ಮುಂಚೂಣಿಯಲ್ಲಿದ್ದ ನರಿಮರಿ"ತಮ್ಮಂದಿರೇ ಅದು ನಮ್ಮವಂಶದ ವೈರಿ, ಅದರ ಬಳಿಗೆ ಹೋಗುವುದು ಒಳಿತಲ್ಲ" ಎನ್ನುತ್ತಾ ಹಿಂದಿರುಗಿ  ಗುಹೆಯೆಡೆಗೆ ಓಡಿತು. ತುಸುಹೊತ್ತು ತಡೆದು ಸಿಂಹದ ಮರಿಗಳು ಗುಹೆಗೆ ಮರಳಿ ನಗುತ್ತಾ ನಡೆದ ಘಟನೆಯನ್ನು ಅಮ್ಮನಿಗೆ ಅರುಹಿದವು. ಕೋಪಗೊಂಡ ಸೃಗಾಲವು ಹುಬ್ಬುಗಂಟಿಕ್ಕಿ ಕಠಿಣವಾಗಿ ಅವುಗಳನ್ನು ನಿಂದಿಸಿತು. ಆಗ ಸಿಂಹಿಣಿ ಆ ಸೃಗಾಲವನ್ನು ಪಕ್ಕಕ್ಕೆ ಕರೆದು" ಅಪ್ಪಾ ಮಗನೇ, ನೀನು ಹಾಗೆಲ್ಲಾ ಮಾಡಲಾಗದು, ಅವರು ನಿನ್ನ ತಮ್ಮಂದಿರಿರಬಹುದು, ಆದರೆ ಅವರು ಮಹಾ ಸತ್ವಶಾಲಿಗಳು." ನರಿಮರಿಗೆ ಇನ್ನಷ್ಟು ಕೋಪ ಉಕ್ಕಿ " ಅಮ್ಮಾ, ನಾನೇನು ರೂಪದಲ್ಲಿ, ಶೌರ್ಯದಲ್ಲಿ, ವಿದ್ಯಾಭ್ಯಾಸದಲ್ಲಿ, ಜಾಣತನದಲ್ಲಿ ಇವರಿಗಿಂತ ಕಡಿಮೆಯವನೇ? ಅವರು ನನ್ನನ್ನು ಇನ್ನೊಮ್ಮೆ ಹಾಸ್ಯಮಾಡಿದರೆ ನಾನು ಅವರನ್ನು ಕಚ್ಚಿ ಕೊಂದೇ ಬಿಡುವೆನು." ಇದನ್ನೆಲ್ಲಾ ನೋಡಿದ ಸಿಂಹಿಣಿಗೆ ಮುಂದೆ ಸೃಗಾಲಪುತ್ರನಿಗೆ ಒದಗಬಹುದಾದ ಆಪತ್ತಿನ ಅರಿವಾಗಿ " ಹಾಂಗಲ್ಲ ಅಪ್ಪಯ್ಯೋ, ನನ್ನ ಮುದ್ದು ಕಂದಾ ನೀನು ಬಹಳ ಜಾಣ, ಬಹಳ ಗಟ್ಟಿಗ, ನೀನು ಚಟುವಟಿಕೆಯಲ್ಲಿ ಸಮರ್ಥ, ತಂತ್ರ ಪಾರಾವಾರ ನಿಜ. ನೀನು ಸೃಗಾಲಿಯ ಪುತ್ರ. ನಾನು ನಿನ್ನ ಸಾಕುತಾಯಿ, ನಿನಗೆ ಎದೆಹಾಲು ಕೊಟ್ಟು ಮಮತೆಯಿಂದ ಸಾಕಿದವಳು ನಾನು. ನನ್ನ ಕುವರರಿಗೆ ನರಿಯೆಂದು ತಿಳಿದರೆ ಅವರು ನಿನ್ನನ್ನು ಶಿಕ್ಷಿಸದೇ ಬಿಡರು. ಅವರು ಅರಿಯುವ ಮುನ್ನ ನೀನು ಸಜಾತಿ ಬಾಂಧವರನ್ನು ಸೇರುವುದು ವಿಹಿತ." ಜಂಭುಕಸೂನು ವಿಷಯವನ್ನು ಕೇಳಿ ಭಯದಿಂದ ತಳಮಳಗೊಂಡಿತು. ಸಿಂಹಿಣಿಗೆ ವಂದಿಸಿ ಮೆಲ್ಲನೆ ನುಸುಳಿ ತನ್ನ ಜಾತಿಬಾಂಧವರನ್ನು ಸೇರಿಕೊಂಡು ಹರ್ಷಗೊಂಡಿತು.  

ಈ ಕಥೆಯಲ್ಲಿ ಭಾರತಮಾತೆ ಸಿಂಹಿಣಿ, ಸನಾತನ ಜೀವನಧರ್ಮವೇ ದೇವರು ಅರ್ಥಾತ್ ದೇವರೇ ಸಿಂಹ; ಸಿಂಹಿಣಿಯ ಯಜಮಾನ. ನಾವೆಲ್ಲಾ ಸಿಂಹ-ಸಿಂಹಿಣಿಯ ಮಕ್ಕಳು. ದೇಶವನ್ನು ಸೇರಿಕೊಂಡ ಸೃಗಾಲದ ಮರಿ ಯಾವುದೆಂದು ಹೇಳಬೇಕೇ? ಆ ಸೃಗಾಲದ ಮರಿ ಅದರ ಸ್ವಸ್ಥಾನಕ್ಕೆ ವಾಪಸ್ಸು ಹೋದರೆ ಅದಕ್ಕೇ ಒಳಿತು. ಒಂದೊಮ್ಮೆ ಹೋಗದೇ ಇಲ್ಲೇ ಇರುವುದಾದರೆ ಇಲ್ಲಿನ ಜೀವನಧರ್ಮಕ್ಕೆ ತೊಂದರೆಯಾಗದಂತೇ ನಡೆದುಕೊಳ್ಳಬೇಕು. ಅದುಬಿಟ್ಟು ಬಾಲಬಿಚ್ಚಿ ಸಿಂಹದಮರಿಗಳ ಜೊತೆ ಸೆಣಸಾಟಕ್ಕಿಳಿದರೆ ಸೃಗಾಲ ಬದುಕಿ ಉಳಿಯುವುದಿಲ್ಲ! ಹಾಗಾಗಿ ಈ ದೇಶವಾಸೀ ಗುಪ್ತ-ಜಿಹಾದಿಗಳು ಈ ಕುರಿತು ಚಿಂತಿಸಬೇಕು. ಈ ಕಥೆಯ ಸಾರ್ವಕಾಲಿಕತೆಯನ್ನು ನೋಡಿ: ಕೆಲಸಕ್ಕೆ ಬಾರದವರು ಕೆಲಸಕ್ಕೆ ಸೇರಿಕೊಂಡರೆ ಆಗ ಎದುರಾಗಬಹುದಾದ ಸನ್ನಿವೇಶಕ್ಕೂ ಈ ಕಥೆ ಉದಾಹರಣೆಯಾಗುತ್ತದೆ; ಅರ್ಹತೆಯಿಲ್ಲದೇ ಗಳಿಸಿದ ಪದವಿ, ಸ್ಥಾನಮಾನ ಕೊನೆಗೊಮ್ಮೆ ಬಹಿರಂಗಗೊಳ್ಳುತ್ತದೆ! ಸಿಂಹದ ವೇಷದಲ್ಲಿ ನರಿ ಎಷ್ಟುದಿನವೇ ಇದ್ದರೂ ಅದರ ಒಳಗಿನ ಕುಬುದ್ಧಿ, ಅಧೈರ್ಯ ಇವೆಲ್ಲಾ ಅಳಿಸಿಹೋಗದಲ್ಲಾ?   

ಧರ್ಮಾರ್ಥ ಕಾಮ ಮೋಕ್ಷಾಣಾಂ ಉಪದೇಶ ಸಮನ್ವಿತಂ |
ಪೂರ್ವವೃತ್ತಂ ಕಥಾಯುಕ್ತಂ ಇತಿಹಾಸಂ ಪ್ರಚಕ್ಷತೇ ||

ಪುರುಷೋತ್ತಮ ಪುರಿಯ ರಹಸ್ಯಮಾತ್ರ ಹಾಗೇ ಉಳಿಯಿತು, ಅದನ್ನು ತಿಳಿಯಲು ಬಹುದೂರ ಕ್ರಮಿಸಬೇಕಾಗುತ್ತದೆಂಬ ಸಂಜ್ಞೆಯನ್ನು ನಾನು ತಮಗೆಲ್ಲಾ ಕೊಟ್ಟುಬಿಟ್ಟಿದ್ದೇನಲ್ಲಾ ? ಹೀಗಾಗಿ ಮೂರನೆಯ ಕಂತಿನಲ್ಲಿ ಅದರಬಗ್ಗೆ ತಿಳಿಸಲು ಉದ್ಯುಕ್ತನಾಗಿ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತೇನೆ,

ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ |
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||                


Tuesday, November 20, 2012

ಪುರುಷೋತ್ತಮ ಪುರಿಯ ರಹಸ್ಯ !

ಚಿತ್ರಕೃಪೆ: ಅಂತರ್ಜಾಲ
ಪುರುಷೋತ್ತಮ ಪುರಿಯ ರಹಸ್ಯ !


ಘುಷ್ಯತೇ ಯಸ್ಯನಗರೇ ರಂಗಯಾತ್ರಾ ದಿನೇ ದಿನೇ |
ತಮಹಂ ಶಿರಸಾ ವಂದೇ ರಾಜಾನಂ ಕುಲಶೇಖರಮ್ ||

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನ-ಕೋವಿದೇತಿ|
ನಾಥೇತಿ ನಾಗಶಯನೇತಿ ಜಗನ್ನಿವಾಸೇ-
ತ್ಯಾಲಾಪಿನಂ ಪ್ರತಿಪದಂ ಕುರು ಮಾಂ ಮುಕುಂದ   ||

ನಾಸ್ಥಾ ಧರ್ಮೇ ನ ವಸುನಿಚಯೇ ನೈವ ಕಾಮೋಪಭೋಗೇ
ಯದ್ಯದ್ಭಾವ್ಯಂ ಭವತು ಭಗವನ್ ಪೂರ್ವಕರ್ಮಾನುರೂಪಮ್ |
ಏತತ್ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ
ತ್ವತ್ಪಾದಾಂಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು ||

ಮುಕುಂದಮಾಲಾ ಸ್ತೋತ್ರ ಶ್ರೀವೈಷ್ಣವರಿಗೆ ಪರಮಪ್ರಿಯ. ಶ್ರೀವೈಷ್ಣವರಲ್ಲದೇ ಎಲ್ಲರೂ ಅದನ್ನು ಬಯಸುವವರೇ ಯಾಕೆಂದರೆ ಪುರುಷೋತ್ತಮನ ಗುಣಗಾನವೇ ಅದಾಗಿರುವುದರಿಂದ ಅದು ಯಾರಿಗೂ ಅಪ್ರಿಯವೆನಿಸುವುದಿಲ್ಲ. ವೇದಗಳನ್ನು ಪೂರ್ವಜರು ಶ್ರುತಿಯೆಂದರು-ಅಪೌರುಷೇಯವಾದ ವೇದ ಹುಟ್ಟಿ ಹರಿದಿದ್ದು ಸಮಾಧಿಸ್ಥರಾದ ಋಷಿಗಳ ಬಾಯಿಂದ. ಹಾಗೆ ಹರಿದಿದ್ದನ್ನು ತಮ್ಮ ತಪೋಬಲದ ಪುಣ್ಯದಿಂದ ಪಡೆದ ಸಿದ್ಧಿಯಿಂದ, ಕಂಠಸ್ಥವಾಗಿಸಿಕೊಂಡು ತಮ್ಮ ಶಿಷ್ಯರಿಗೆ ವರ್ಗಾಯಿಸಿದವರು ಸುತ್ತ ಇದ್ದ ಇತರ ಮಹಾನ್ ಋಷಿಗಳು. ಹಾಗೇ ಅದು ಕಿವಿಯಿಂದ ಕಿವಿಗೆ ದಾಟಿಸಲ್ಪಟ್ಟು ದೇವನಾಗರೀ ಲಿಪಿಯಲ್ಲಿ ಬರೆಯಲ್ಪಡುವ ಮುನ್ನ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿತು. ಶ್ರುತವಾದದ್ದೇ ಶ್ರುತಿಯೆನಿಸಿತು. ಶ್ರುತಿಯೇ ಪ್ರಧಾನ ಮಾಧ್ಯಮವಾಗಿದ್ದ ಕಾಲದಲ್ಲಿ ಹಿರಿಯರು ತಮ್ಮ ಕಿರಿಯರಿಗೆ ಎಳೆಯ ಮಕ್ಕಳಿಗೆ ಹಲವು ಮಹತ್ತರ ವಿಷಯಗಳನ್ನು ಹಠಹಿಡಿದು ಕಂಠಪಾಠಮಾಡಿಸುತ್ತಿದ್ದರು. ಹಾಗೆ ಮಾಡಿದ್ದರಿಂದಲೇ ನಾವೆಲ್ಲಾ ಇಂದು ಅಲಭ್ಯ ವಿದ್ಯೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗಿದೆ. ಶ್ರುತಿಪ್ರಧಾನವೆನಿಸಿದ್ದ ಕಾಲ ಬಹುಕಾಲ ತನ್ನ ಖಂಡಚ್ಛಾಯೆಯನ್ನು ಹಾಗೇ ಇರಿಸಿಕೊಂಡಿತ್ತು. ವೇದಮಂತ್ರಗಳನ್ನೂ, ಸ್ತುತಿ-ಸ್ತೋತ್ರಗಳನ್ನೂ ಕಂಠಪಾಠಮಾಡಿಕೊಂಡು ಮುನ್ನಡೆಸುವ ಪರಂಪರೆ ಇವತ್ತಿಗೂ ಅದು ಜಾರಿಯಲ್ಲಿದೆ. ಹಾಗೇ ಆಳ್ವಾರರ ಕಾಲದಿಂದಲೂ ನಡೆದು ಬಂದಿದ್ದು ಮುಕುಂದಮಾಲಾ ಸ್ತೋತ್ರ.  

--------
ನುಡಿನಮನ: ಲೇಖನಾರಂಭಕ್ಕೂ ಮುನ್ನ, ಭಾರತಕಂಡ ದೇಶಭಕ್ತರಲ್ಲಿ ಒಬ್ಬರಾಗಿ ಹಿಂದೂ ಧರ್ಮಜಾಗರಣೆಗೆ ದುಡಿದ, ಮಡಿದ ಬಾಳಾ ಸಾಹೇಬ ಠಾಕ್ರೆಯವರಿಗೂ ಮತ್ತು ಐರ್ ಲ್ಯಾಂಡ್ ನಲ್ಲಿ ಧರ್ಮದ ಕಾನೂನಿನ ಅಂಧಕಾರದಿಂದ ಯಾತನಾಮಯವಾಗಿ ಮರಣವನ್ನಪ್ಪಿದ ಭಾರತೀಯ ಮೂಲದ ದಂತವೈದ್ಯೆ ಸವಿತಾ ಅವರಿಗೂ ಓದುಗರೆಲ್ಲರ ಪರವಾಗಿ ಮೌನವಾಗಿ ನನ್ನ ನುಡಿನಮನ ಸಲ್ಲಿಸುತ್ತಿದ್ದೇನೆ.

---------- 

ಸಾಹಿತ್ಯದಲ್ಲಿ ಮೂರು ವಿಭಾಗಗಳು: ೧. ಪ್ರಬೋಧ ಸಾಹಿತ್ಯ,  ೨. ಪ್ರಮೋದ ಸಾಹಿತ್ಯ,  ೩. ಪ್ರಮಾದ ಸಾಹಿತ್ಯ. ಓದುಗರಿಗೆ ಪುಸ್ತಕಗಳ ಬರವೇನೂ ಇಲ್ಲ!! ಬರವಣಿಗೆಯ ಸಲಕರಣೆಗಳು ಮಾಧ್ಯಮಗಳು ಜಾಸ್ತಿ ಆದಮೇಲಂತೂ ಬರಹಗಾರರು ಬಹಳ ಸಂಖ್ಯೆಯಲ್ಲಿ ತಯಾರಾಗಿದ್ದಾರೆ; ತರಹೇವಾರಿ ಮಾಧ್ಯಮಗಳೂ ಹುಟ್ಟಿಕೊಂಡಿವೆ. ಓದುತ್ತಾ ಓದುತ್ತಾ ಅಕ್ಷರಿಗಳಾದ ಹಲವರು ಬರೆಯುವುದಕ್ಕೆ ತೊಡಗುತ್ತಾರೆ. ಸರಸ್ವತಿಯ ಜಾಗೃತಿಯಾಗಿದೆಯಾದರೂ ಸರಸ್ವತಿಯ ಸಲ್ಲಾಪವನ್ನು ಸರಿಯಾಗಿ ಅರ್ಥವಿಸಿಕೊಂಡವರು ಅದೆಷ್ಟು ಮಂದಿ ಎಂಬುದು ತಿಳಿಯಬೇಕಾದ ಅಂಶ. ಮುದ್ರಣಕಾಗದ, ಬಣ್ಣಬಣ್ಣಗಳಲ್ಲಿ ಮುದ್ರಿಸುವ ಯಂತ್ರಗಳು, ಪ್ರಕಾಶಕರು ಇರುವುದರಿಂದ ನಿತ್ಯವೂ ಸಾವಿರಾರು ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಮುದ್ರಿತಗೊಂಡ ಪುಸ್ತಕಗಳೆಲ್ಲಾ ಸಾಹಿತ್ಯವೆನ್ನಲು ಸಾಧ್ಯವಿಲ್ಲ. ಅಕ್ಷರಕಲಿತವರೆಲ್ಲರೂ ಜ್ಞಾನಿಗಳೆನ್ನಲು ಸಾಧ್ಯವಿಲ್ಲ! ಓದು-ಬರಹ-ಲೆಕ್ಕ ಇವಿಷ್ಟನ್ನು ಕಲಿತಮಾತ್ರಕ್ಕೆ ಅದು ಪರಿಪೂರ್ಣ ಶಿಕ್ಷಣವೆನಿಸುವುದಿಲ್ಲ. ಮಾಹಿತಿ ಸಂಗ್ರಹಿಸಿದ ಮಾತ್ರಕ್ಕೆ ಅದನ್ನು ವಿದ್ಯಾರ್ಜನೆ ಎಂದು ಪರಿಗಣಿಸಬೇಕಾಗಿಲ್ಲ.

ಸೇಠುವೊಬ್ಬ ಪ್ರಕಟಿತ ಪುಸ್ತಕಗಳನ್ನು ಮಾರುತ್ತಿದ್ದ. ಮಾರವಾಡಿಯಾದ ಆತನಿಗೆ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಮಾರುವುದು ಗೊತ್ತು. ಅವನ ಮಳಿಗೆಯಲ್ಲಿ,  ’ಮಂಕುತಿಮ್ಮನ ಕಗ್ಗ’ ಗ್ರಂಥದ ಹಲವು ಸಾವಿರ ಪ್ರತಿಗಳು ಮಾರಾಟವಾಗಿವೆ. "ಬಹುತ್ ಲೋಗ್ ಆತೇ ಹೈಂ ಇದರ್ ಮಂಕುತಿಮ್ಮಾ ಮಂಕುತಿಮ್ಮಾ ಬೋಲ್ಕೇ ಯೇ ಕಿತಾಬ್ ಲೇಕರ್ ಜಾತೇ ಹೈಂ ಕ್ಯಾ ಹೈ ಇಸ್ಮೇ ಪಥಾ ನಹಿ." ಸಾವಿರಾರು ಪ್ರತಿಗಳನ್ನು ಇಟ್ಟುಕೊಂಡು ಮಾರಾಟಮಾಡಿಯೂ ಮಂಕುತಿಮ್ಮನ ಕಗ್ಗದ ಬಗ್ಗೆ ಸೇಠುವಿಗೆ ತಿಳಿದಿಲ್ಲ; ಅದು ಕನ್ನಡ ಭಾಷೆಯಲ್ಲಿದ್ದುದರಿಂದ ಓದಲಂತೂ ಗೊತ್ತಿಲ್ಲ. ಯಾರನ್ನೂ ಕೇಳಲೂ ಹೋಗಲಿಲ್ಲ. ವ್ಯಾಪಾರವೇನೋ ಚೆನ್ನಾಗೇ ಆಗುತ್ತಿದೆ-ಅದು ಏನಾದರೇನು?-ಎಂಬುದು ಸೇಠುವಿನ ಅನಿಸಿಕೆ. ಹೀಗಾಗಿ ಕೇವಲ ಲಕ್ಷೋಪಲಕ್ಷ ಗ್ರಂಥಗಳನ್ನೋ ಮಾಹಿತಿಮೂಲಗಳನ್ನೋ ಕಲೆಹಾಕಿದ ಮಾತ್ರಕ್ಕೆ ಆತ ವಿದ್ಯೆಯನ್ನು ಪಡೆದಹಾಗಲ್ಲ. ವಿದ್ವಾಂಸರೆಂದು ಯಾರೋ ಹೊಗಳಿದವರೆಲ್ಲಾ ವಿದ್ವಾಂಸರೆನ್ನಲೂ ಬರುವುದಿಲ್ಲ. ವಿದ್ವತ್ತೆಂಬ ಪದವಿ ಗಳಿಸಿದ ಮಾತ್ರಕ್ಕೂ ಆತನನ್ನು ವಿದ್ವಾಂಸ ಎನ್ನಬೇಕೆ ಎಂಬುದು ಪ್ರಶ್ನೆಯಾಗಿದೆ ಯಾಕೆಂದರೆ ಅವರ ವಿದ್ವತ್ತು ಕೂಡ ಕ್ಷಣಬಂಗುರವಾದುದು! ಒಂದು ವಿದ್ಯೆಯಲ್ಲಿ ವಿದ್ವಾಂಸನಾದವ ಎಲ್ಲದರಲ್ಲೂ ಪಾರಂಗತನಾಗಿದ್ದಾನೆ ಎನ್ನಲೂ ಸಾಧ್ಯವಿಲ್ಲ. ಹೀಗಾಗಿ ವಿದ್ವಾಂಸನಾದವನಿಗೆ ತನ್ನನ್ನೂ ಮೀರಿಸುವ ಇನ್ನೊಬ್ಬ ವಿದ್ವಾಂಸ ಎದುರಾದರೆ ಎಂಬ ಚಿಂತೆಯಂತೆ! ವಿದ್ವಾಂಸರಲ್ಲದೆಯೂ ವಿದ್ವಾಂಸರೆಂದು ಕರೆಸಿಕೊಳ್ಳುವವರು, ಗುರುವಲ್ಲದೆಯೂ ಟಿವಿ ಜ್ಯೋತಿಷಿಯಾಗಿ ಗುರೂಜಿಯಾಗಿ ಬಡಾಯಿ ಕೊಚ್ಚಿಕೊಳ್ಳುವವರು ಬಹಳ ಮಂದಿ ಇದ್ದಾರೆ!   

ಇರಲಿ, ಸಾಹಿತ್ಯದ ಪ್ರಕಾರಗಳಲ್ಲಿ  ಪ್ರಬೋಧಸಾಹಿತ್ಯವನ್ನು ಓದುವುದು ಉತ್ತಮ. ಪ್ರಬೋಧ ಸಾಹಿತ್ಯ ಮೂಲದಲ್ಲಿ ಪರಮಾತ್ಮನಿಂದಲೇ ಪ್ರಚುರಗೊಂಡದ್ದಾಗಿದೆ. ಶ್ರುತಿ, ಸ್ಮೃತಿ, ಪುರಾಣಗಳೂ, ರಾಮಾಯಣ-ಮಹಾಭಾರತ ಕಾವ್ಯಗಳೂ ಮತ್ತು ಅವುಗಳನ್ನವಲಂಬಿಸಿದ ಹಲವು ಕೃತಿಗಳು ಪ್ರಬೋಧ ಸಾಹಿತ್ಯವೆನಿಸುತ್ತವೆ.  ಉತ್ತಮವಾದ ಅಂಶಗಳನ್ನೊಳಗೊಂಡ  ಪ್ರಬಂಧ, ಕಥೆ, ಕವನ, ಕಾದಂಬರಿ, ಯಶೋಗಾಥೆ, ಜೀವನಗಾಥೆ, ಹಾಸ್ಯ-ವಿಡಂಬನೆ ಇತ್ಯಾದಿಗಳು ಅಂದರೆ ಮನಸ್ಸನ್ನು ಮುದಗೊಳಿಸುವುದರ ಜೊತೆಗೆ ಉತ್ತಮವಾದ ಅಂಶಗಳನ್ನು ಕಿಂಚಿತ್ತಾದರೂ ಹೇಳುವ ಸಾಹಿತ್ಯವನ್ನು ಪ್ರಮೋದ ಸಾಹಿತ್ಯವೆಂದು ಪರಿಗಣಿಸಿದ್ದಾರೆ-ಪ್ರಾಜ್ಞರು. ಸಮಾಜದಲ್ಲಿ ಯಾರದೋ ಬಗ್ಗೆ ಅವಹೇಳನಕಾರೀ ಬರಹ, ಹೆಂಗಸರ-ಹೆಣ್ಣುಮಕ್ಕಳ ಶೀಲಹರಣ-ಮಾನಹರಣ ಮಾಡುವ ಬರಹ, ಮಹಾತ್ಮರ ಬಗ್ಗೆ ಇಲ್ಲಸಲ್ಲದ್ದನ್ನು ಸೃಷ್ಟಿಸಿ ಆಡಿಕೊಳ್ಳುವ ಬರಹ, ಅನೈತಿಕ ಚಟುವಟಿಕೆಗಳನ್ನು ರಸವತ್ತಾಗಿ ಬಣ್ಣಿಸಿ ಬರೆಯುವ ಬರಹ, ಸಮಾಜದ ಕೆಲವರ ದುರ್ನಡತೆಯನ್ನೇ ಸನ್ನಡತೆಯಂತೇ ಬಿಂಬಿಸುವ ಬರಹ, ದುಡ್ಡು ತೆಗೆದುಕೊಂಡು ಅಸಭ್ಯರನ್ನೂ ಧೂರ್ತರನ್ನೂ ಸಮಾಜಘಾತುಕರನ್ನೂ, ಖೂಳರನ್ನೂ ಧರ್ಮಬೀರುಗಳಂತೇ ಚಿತ್ರಿಸುವ ಬರಹ--ಈ ಎಲ್ಲಾ ರೀತಿಯ ಬರಹಗಳು ಮತ್ತು ಇಂತಹ ಬರಹಗಳನ್ನು ಪ್ರಕಟಿಸುವ ಪೀತ ಪುಸ್ತಕಗಳ, ಪತ್ರಿಕೆಗಳ, ಪ್ರಕಾಶನಗಳ ಪ್ರಕಟಣೆಗಳು ಪ್ರಮಾದ ಸಾಹಿತ್ಯವಾಗಿವೆ. ಕನ್ನಡದಲ್ಲಿ ಸದ್ಯಕ್ಕೆ ಅಂತಹ ಒಂದೆರಡು ವಾರಪತ್ರಿಕೆಗಳು ಕಾಣಸಿಗುತ್ತಿವೆ! ಬರೆಯುವವರೂ ಓದುವವರೂ ನಾವು ಯಾವ ತರಗತಿಯವರು ಎಂಬುದನ್ನು ಸ್ವವಿಮರ್ಶೆಯ ಮೂಲಕ ನಿರ್ಧರಿಸಿಕೊಳ್ಳುವುದು ಕಾಲೋಚಿತವಾಗಿದೆ. [ಈ ವಿಷಯಕವಾಗಿ ಮುಂದೊಮ್ಮೆ ಸ್ವಾಧ್ಯಾಯ ಎಂಬ ಲೇಖನದ ಮೂಲಕ ಪ್ರತ್ಯೇಕವಾಗಿಯೂ ವಿಸ್ತೃತವಾಗಿಯೂ ತಿಳಿಯೋಣ.]

ಅಜಮಾಸು ೧೦ನೇ ಶತಮಾನದಲ್ಲಿ ಬದುಕಿದರೆನ್ನಲಾದ ಆಳ್ವಾರರುಗಳೆಂದರೆ ಶ್ರೀವೈಷ್ಣವ ಕವಿಗಳು; ವಿಷ್ಣುಭಕ್ತಿ ಪರಾಯಣರು. ವಿಷ್ಣುವನ್ನುಳಿದು ಇನ್ನೊಬ್ಬ ದೈವವನ್ನೇ ಕಾಣದಷ್ಟು ಅಪ್ಪಟ ಹರಿಪಾದಸೇವಕರು. ’ವಿಷ್ಣುಚಿತ್ತ’ ಎಂಬವರು ಆಳ್ವಾರರಲ್ಲಿ ಒಬ್ಬರು. ಅವರಿಗೊಬ್ಬಳೇ ಸಾಕು ಮಗಳು ಗೋದಾ. ಶ್ರೀವಳ್ಳಿಪುತ್ತೂರು ವಿಷ್ಣುಚಿತ್ತರ ಊರು. ಶ್ರೀಹರಿಗಾಗಿ ತುಳಸೀ ವನವನ್ನು ನಿರ್ಮಿಸಿ ನಿತ್ಯವೂ ತುಳಸೀ ಕುಡಿಗಳನ್ನು ಆಯ್ದು ತಂದು ಮಾಲೆಯಾಗಿ ಪೋಣಿಸಿ ಭಗವಂತನ ಗುಡಿಗೆ ಅರ್ಪಿಸುವವರು. ಭಜನೆ-ಧ್ಯಾನಾನಿರತರಾಗಿ  ದಿನದ ಬಹುಭಾಗ ಕಳೆಯುತ್ತಿದ್ದ ವಿಷ್ಣುಚಿತ್ತರು ಮಗಳು ಚಿಕ್ಕವಳಿದ್ದಾಗಲಿಂದಲೂ  ಶ್ರೀಕೃಷ್ಣನೇ ತನ್ನ ಗಂಡನೆಂದುಕೊಳ್ಳುವುದನ್ನು ಕೇಳುತ್ತಾಬಂದರು. ಭಗವಂತನ ಕೈಂಕರ್ಯದಲ್ಲಿ ತನ್ನನ್ನೂ ತೊಡಗಿಸಿಕೊಂಡ ಗೋದಾ, ತುಳಸೀವನದಲ್ಲಿರುವ ತುಳಸೀಗಿಡಗಳಿಂದ ದಿನವೂ ತುಳಸೀ ಕುಡಿಗಳನ್ನು ಕೊಯ್ದು ತಂದು ಮಾಲೆಮಾಡುತ್ತಿದ್ದಳು. ಹರೆಯಕ್ಕೆ ಕಾಲಿಡುತ್ತಿದ್ದ ಅವಳಿಗೆ ಪ್ರತೀದಿನ ಮಾಲೆಕಟ್ಟಿದ ನಂತರ ಹಾಕಿಕೊಂಡರೆ ಹೇಗೆ ಕಾಣಿಸುತ್ತದೆ ಎಂದು ನೋಡುವ ಆಸೆಯಾಗುತ್ತಿತ್ತು. ತಯಾರಿಸಿದ ಹಾರವನ್ನು ತಾನೊಮ್ಮೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿಕೊಂಡು ನಕ್ಕು ಆಮೇಲೆ ಅದನ್ನು ತೆಗೆದಿರಿಸಿ ಗಂಡನೆಂದು ತಾನು ತಿಳಿದುಕೊಂಡ ದೇವರಿಗೆ ಅರ್ಪಿಸಲು ಅಪ್ಪನ ಮೂಲಕ ಕಳಿಸುತ್ತಿದ್ದಳು. ಈ ವಿಷಯ ವಿಷ್ಣುಚಿತ್ತರಿಗೆ ತಿಳಿದಿರಲೇ ಇಲ್ಲ; ಮಗಳು ಚೆನ್ನಾಗಿ ಹಾರತಯಾರಿಸಿಕೊಡುವುದಷ್ಟನ್ನೇರ್ ಅವರು ಬಲ್ಲರು.

ಒಂದು ದಿನ ನಿತ್ಯದಂತೇ ಗುಡಿಗೆ ಒಯ್ದ ಮಾಲೆಯನ್ನು ಭಗವಂತನಿಗೆ ಏರಿಸುವಾಗ ಉದ್ದನೆಯ ಕೂದಲೊಂದನ್ನು ಕಾಣುತ್ತಾರೆ. ತುಳಸೀಹಾರದಲ್ಲಿ ಕೂದಲು ಹೇಗೆ ಬಂತು? ಎಂದು ಕುತೂಹಲಗೊಂಡ ಅವರು ಆ ಕ್ಷಣಕ್ಕೆ ಪ್ರಾಯಶ್ಚಿತ್ತವನ್ನು ಮಡಿಕೊಂಡು, ನಂತರದ ದಿನ ಮಾಲೆ ತಯಾರಿಸುವುದನ್ನು ಹಂತಹಂತದಲ್ಲೂ ಸೂಕ್ಷ್ಮವಾಗಿ ಅವಿತುನೋಡುತ್ತಾರೆ. ಮಗಳು ತಾನೇ ಹಾರ ಧರಿಸಿ ನೋಡಿಕೊಂಡು, ಆಮೇಲೆ ಅದನ್ನು ದೇವರಿಗೆ ಕೊಡುತ್ತಿರುವುದು ಕಂಡಾಗ ಮಗಳನ್ನು ಗದರಿಕೊಳ್ಳುತ್ತಾರೆ. ವಿಷ್ಣುವೇ ತನ್ನ ಪತಿಯೆಂದೂ ಪತಿ-ಪತ್ನಿಯರಲ್ಲಿ ಅದೆಂಥಾ ಭೇದವೆಂದೂ ಕೇಳಲು ತೊಡಗಿದ ಗೋದಾ ಗುಡಿಯಲ್ಲಿರುವ ವಿಗ್ರಹವನ್ನೇ ತನ್ನ ಪತಿಯೆಂದು ಪಟ್ಟುಹಿಡಿಯುತ್ತಾಳೆ-ಮಾತ್ರವಲ್ಲ  ಭಗವಂತನ ಪ್ರಾಪ್ತಿಗಾಗಿ ೩೦ ದಿನಗಳ ಕಾಲ ನಿತ್ಯವೂ ಒಂದೊಂದು ಹಾಡನ್ನು ರಚಿಸಿ ಹಾಡುತ್ತಾಳೆ. ಆ ಹಾಡುಗಳೇ ’ತಿರುಪ್ಪಾವೈ’ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿವೆ. ಮಾರ್ಗಶಿರ ಮಾಸದ ಬೆಳಗಿನ ಜಾವದ ಕೊರೆಯುವ ಚಳಿಯಲ್ಲಿ ನಿತ್ಯವೂ ಶ್ರೀವೈಷ್ಣವರು ದೇವಸ್ಥಾನಗಳಲ್ಲಿ ತಿರುಪ್ಪಾವೈ ಹಾಡುತ್ತಾರೆ, ಕೊನೆಯ ದಿನ ಭೋಗಿ ಹಬ್ಬವೆಂದು ಆಚರಿಸುತ್ತಾರೆ. ೩೦ ದಿನಗಳ ನಂತರ ಕೊನೆಗೊಮ್ಮೆ ಗೋದಾ, ಭಗವಂತನಲ್ಲೇ ಸೇರಿ ಅಂತರ್ಧಾನವಾದಳಂತೆ. ಅಂತಹ ಮಗಳನ್ನು ಪಡೆದ ಆಳ್ವಾರರ ಗುಂಪಿನ ಈ ನಾಯಕನಿಗೆ ಪೆರಿಯಾಳ್ವಾರ್ ಎಂಬ ಹೆಸರುಬಂತು. ಕೇರಳದ ರಾಜ ಕುಲಶೇಖರನಿಗೆ ಅಪಾರ ರಾಮ ಭಕ್ತಿ. ರಾಮಾಯಣವನ್ನು ಓದುತ್ತಾ ಓದುತ್ತಾ ರಾಮಯಾಣದ ಪಾತ್ರಗಳಲ್ಲೂ ಆ ಕಾಲಘಟ್ಟದಲ್ಲೂ ತನ್ನನ್ನೇ ಕಂಡುಕೊಳ್ಳುತ್ತಿದ್ದ ಕುಲಶೇಖರ, ಶ್ರೀರಾಮ ಒಂಟಿಯಾಗಿ ಸೀತಾನ್ವೇಷಣೆಗೆ ಹೊರಟಾಗ, ರಕ್ಕಸ ಸಂಹಾರ ನಡೆಸುವಾಗ, ಆತನಿಗೆ ಸಹಾಯಮಾಡಬೇಕೆಂಬ ಅನಿಸಿಕೆ ಉದ್ಭವಿಸಿ, ಭಾವೋತ್ಕಟತೆಯಲ್ಲಿ ತನ್ನ ಸೇನಾಪತಿಗಳನ್ನು ಕರೆದು ಸೇನೆಯನ್ನು ಸಜ್ಜುಗೊಳಿಸುವುದೂ ಬಹಳಸಲ ನಡೆದಿತ್ತಂತೆ. ಮುಕುಂದನ ಪರಮಭಕ್ತರೆನಿಸಿದ ಕುಲಶೇಖರರು ಮುಕುಂದಮಾಲಾ ಸ್ತೋತ್ರವನ್ನು ರಚಿಸಿದರು; ಅವರೇ ಕುಲಶೇಖರ ಅಳ್ವಾರರು.

ಪ್ರಮೋದ ಸಾಹಿತ್ಯಕ್ಕೊಂದು ಉತ್ತಮ ಉದಾಹರಣೆ ವಿಷ್ಣುಶರ್ಮನೆಂಬ ಋಷಿಸದೃಷ ಉಪಾಧ್ಯಾಯ ರಚಿಸಿದ ಪಂಚತಂತ್ರ. ಮಹಿಳಾರೋಪ್ಯ ಎಂಬ ರಾಜಧಾನಿಯಿಂದ ದಕ್ಷಿಣದೇಶವನ್ನಾಳುತ್ತಿದ್ದ  ಅಮರಶಕ್ತಿ ಎಂಬ ರಾಜನ ಮೂವರು ಮಕ್ಕಳಾದ ಅನೇಕಶಕ್ತಿ, ವಸುಶಕ್ತಿ ಮತ್ತು ರುದ್ರಶಕ್ತಿ ಎಂಬ ಉದ್ಧಟರಿಗೆ ಬುದ್ಧಿ ಹೇಳುವ ಸಲುವಾಗಿ, ರಾಜನ ಸವಿನಯ ವಿನಂತಿಯಮೇರೆಗೆ, ವಿರಕ್ತನಾಗಿ ಸನ್ಯಾಸದೀಕ್ಷೆಗೆ ಹೊರಟುನಿಂತಿದ್ದ ಮುದಿ ಬ್ರಾಹ್ಮಣ ವಿಷ್ಣುಶರ್ಮ, ತನ್ನೊಬ್ಬನ ಆತ್ಮೋದ್ಧಾರವಾದರೆ ಸಾಲದು ತನ್ನ ಬೋಧನೆಯಿಂದ ಈ ರಾಜ್ಯದ ಆಡಳಿತವನ್ನು ಮುನ್ನಡೆಸುವ ಆಳರಸರು ಸರಿದಾರಿಯಲ್ಲಿ ನಡೆಯುವಂತಾದರೆ ಅದೇ ಬದುಕಿನ ಸಾರ್ಥಕ್ಯ ಎಂಬ ಅನಿಸಿಕೆಯಿಂದ, ಯಾವುದೇ ಹಣ-ದಾನ ಇವುಗಳನ್ನು ಸ್ವೀಕರಿಸದೇ, ಲೋಕೋಪಕಾರಾರ್ಥವಾಗಿ ಹೇಳಿದ ಕಥೆಗಳ ಸಂಕಲನವೇ ಪಂಚತಂತ್ರ. ಮಿತ್ರಲಾಭ, ಮಿತ್ರಭೇದ, ಕಾಕೋಲುಕೀಯ[ಸಂಧಿ ವಿಗ್ರಹ], ಲಬ್ಧಪ್ರಣಾಶ, ಅಪರೀಕ್ಷಿತಕಾರಕ ಎಂಬ ಐದು ತಂತ್ರಗಳ ಆಧಾರದ ಮೇಲೆ ಹೆಣೆದ ಕಥೆಗಳು ’ಪಂಚತಂತ್ರ ಕಥೆಗಳು’ ಎಂದೇ ಖ್ಯಾತವಾದವು.     

ಮಿತ್ರಭೇದ ತಂತ್ರದ ಒಂದು ಕಥೆ ಬಹಳ ಪ್ರಸ್ತುತವೆನಿಸಿದ್ದರಿಂದ ಅದನ್ನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ’ಕಬ್ಬಿಣದ ತಕ್ಕಡಿಯನ್ನು ಇಲಿ ತಿಂದ ಕಥೆ’ನಿಮಗೆ ಗೊತ್ತಿರಲೂ ಸಾಕು. ಮಹಾರಾಷ್ಟ್ರದ ನಗರವೊಂದರಲ್ಲಿ ಜೀರ್ಣಧರನೆಂಬ ವ್ಯಾಪಾರಿಯಿದ್ದ. ಅವನು ಬಹಳ ಧನಿಕನೂ ಉದಾರಿಯೂ ಆಗಿದ್ದು, ವ್ಯಾಪಾರದಲ್ಲಿ ಉಂಟಾದ ಅಪಾರ ನಷ್ಟದಿಂದ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬದುಕಬೇಕಾದ ಸ್ಥಿತಿ ಬಂತು. ಕೊನೆಗೊಮ್ಮೆ ಪಿತ್ರಾರ್ಜಿತವಾಗಿ ಬಂದಿದ್ದ ಕಬ್ಬಿಣದ ತಕ್ಕಡಿಯೊಂದನ್ನು ಮಾರದೇ, ಮಿತ್ರನಾದ ಲಕ್ಷ್ಮಣನ ಹತ್ತಿರ ತಾನು  ದೇಶಾಂತರ ಹೋಗಿ ಬರುವವರೆಗೆ ಇಟ್ಟುಕೊಳ್ಳುವಂತೇ ವಿನಂತಿಸಿದ. ಲಕ್ಷ್ಮಣ ಅದಕ್ಕೆ ಒಪ್ಪಿ ತಕ್ಕಡಿಯನ್ನು ತನ್ನಲ್ಲಿ ಇರಿಸಿಕೊಂಡ. ಬಾರಕೂರು, ಮಲಖೇಡ, ಪೈಠಾನ, ಸೋಲಾಪುರ, ಪೂರ್ಣನಗರ, ಸುರಪುರ, ಪಟ್ಟದಕಲ್ಲು, ಐಹೊಳೆ, ಬಾದಾಮಿ ಮೊದಲಾದ ನಗರಗಳಿಗೆ ಹೋಗಿ ವ್ಯಾಪಾರಮಾಡಿ ಹಣ ಸಂಗ್ರಹಿಸಿದ ಜೀರ್ಣಧರ ಸ್ವಂತ ಊರಾದ ಎಲ್ಲೋರಾ ನಗರಕ್ಕೆ ಮರಳಿಬಂದ. ತಕ್ಕಡಿಯನ್ನು ಮರಳಿಸೆಂದು ಲಕ್ಷ್ಮಣನಲ್ಲಿ ಪ್ರಾರ್ಥಿಸಿದಾಗ " ಅಯ್ಯಾ ಜೀರ್ಣಧರ, ನೀನು ಹೋಗಿ ಆಗಾಗಲೇ ಹತ್ತು ವರ್ಷಗಳು ಸಂದುಹೋಗಿವೆ. ನೀನು ನನ್ನಲ್ಲಿ ನ್ಯಾಸವಾಗಿಟ್ಟ ಕಬ್ಬಿಣದ ತ್ರಾಸನ್ನು ಇಲಿ-ಹೆಗ್ಗಣಗಳು ತಿಂದುಹಾಕಿಬಿಟ್ಟಿವೆ" ಎಂದ. ಜೀರ್ಣಧರನಿಗೆ ಲಕ್ಷ್ಮಣದ ಮೋಸದ ಮಾತಿನ ಅರಿವಾಯ್ತು. ತಾನು ಸ್ನಾನಮಾಡಲು ಅನತಿದೂರದಲ್ಲಿರುವ ಕೆರೆಗೆ ತೆರಳಬೇಕಾಗಿಯೂ, ತನ್ನ ಬಟ್ಟೆಬರೆಗಳನ್ನು ಒಯ್ಯಲು ಲಕ್ಷ್ಮಣನ ಮಗನನ್ನು ಜೊತೆಗೆ ಕಳಿಸಬೇಕೆಂತಲೂ ವಿನಂತಿಸಿದ. ಒಪ್ಪಿದ ಲಕ್ಷ್ಮಣ ಆತನ ಮಗನನ್ನು ಜೀರ್ಣಧರನೊಟ್ಟಿಗೆ ಕಳಿಸಿದ. ಸ್ನಾನ ಸಂಧ್ಯಾವಂದನೆ ಮುಗಿಸಿದ ಜೀರ್ಣಧರ ಲಕ್ಷ್ಮಣನ ಮಗನನ್ನು ಅಜಂತಾದ ಗುಹೆಯೊಂದರಲ್ಲಿ ತಳ್ಳಿ, ಬಾಗಿಲಿಗೆ ದೊಡ್ಡ ಬಂಡೆಯನ್ನು ಅಡ್ಡಲಾಗಿ ಇರಿಸಿದ. ಸ್ನಾನ ಮಾಡಿ ಮರಳಿದ ಜೀರ್ಣಧರನ ಜೊತೆಗೆ ಮಗ ಬಾರದಿದ್ದುದನ್ನು ನೋಡಿ ಲಕ್ಷ್ಮಣ ದಂಗಾಗಿ ವಿಚಾರಿಸಿದಾಗ "ಹಾರುತ್ತಿದ್ದ ಗಿಡುಗವೊಂದು ನಿನ್ನ ಮಗನನ್ನು ಎತ್ತಿಕೊಂಡು ಹಾರಿಹೋಯ್ತು" ಎಂದುತ್ತರಿಸಿದ. ಕೋಪಗೊಂಡ ಲಕ್ಷ್ಮಣ, ಜೀರ್ಣಧರ ಸುಳ್ಳುಹೇಳಿದನೆಂದು ವಾದಿಸಿದ ಮತ್ತು ನ್ಯಾಯಪಂಚಾಯತಿಗೆ ಜನರನ್ನು ಸೇರಿಸಿದ. ಪಂಚರ ಸಮಕ್ಷಮದಲ್ಲಿ ವಿಷಯಗಳು ಬಹಿರಂಗಗೊಳಿಸಲ್ಪಟ್ಟವು. "ಕಬ್ಬಿಣದ  ತಕ್ಕಡಿಯನ್ನು ಇಲಿ ತಿನ್ನಬಹುದಾದರೆ ಹುಡುಗನನ್ನು ಗಿಡುಗವೇಕೆ ಹೊತ್ತೊಯ್ಯಲಾಗದು?" ಎಂದು ಜೀರ್ಣಧರ ಮೂಲವನ್ನು ತಿಳಿಸಿದಾಗ ಸಭೆ ಘೊಳ್ಳೆಂದು ನಕ್ಕಿತು. ಲಕ್ಷ್ಮಣ ತಕ್ಕಡಿಯನ್ನು ಜೀರ್ಣಧರನಿಗೆ ತಂದೊಪ್ಪಿಸಿದ, ತನ್ನ ಮಗನನ್ನು ಅವನಿಂದ ಮರಳಿ ಪಡೆದುಕೊಂಡು ಮನೆಗೆ ತೆರಳಿದ.       

ಕಬ್ಬಿಣದ ತಿಜೋರಿಯಲ್ಲಿರುವ ಕಡತಗಳನ್ನೂ ಕಬ್ಬಿಣ ತಿನ್ನುವ ಹೆಗ್ಗಣಗಳು ತಿನ್ನುತ್ತವೆ ಎಂಬುದು ಇಂದಿನ ನಮ್ಮ ಆಳರಸರ ಅಂಬೋಣ. ಬೆಂಗಳೂರಿನ ಮಹಾನಗರ ಪಾಲಿಕೆ ಕಳೆದ ೬ ವರ್ಷಗಳಲ್ಲಿ ಬರೊಬ್ಬರಿ ೪೮೦ ಕೋಟಿ ಹಣವನ್ನು ತಾನು ನಡೆಸುವ ಶಾಲೆಗಳಿಗೆ ನೀಡಿದೆಯಂತೆ! ಆದರೆ ಖರ್ಚಾದ ಹಣದಲ್ಲಿ ಯಾವ ಕಾರ್ಯಗಳು ಕಾರ್ಯಗತವಾದವು ಎಂಬುದು ಮಾತ್ರ ದೇವರಿಗೇ ಗೊತ್ತು!  ಅಂದಹಾಗೇ ತತ್ಸಂಬಂಧೀ ಕಡತಗಳನ್ನೂ ಸಹ,  ಹೆಗ್ಗಣಗಳು ಕಬ್ಬಿಣದ ತಿಜೋರಿಗಳನ್ನು ತಿಂದು ಒಳನುಗ್ಗಿ ಯಾವ ಕುರುಹೂ ಸಿಗದಂತೇ ತಿಂದುಹಾಕಿಬಿಟ್ಟಿವೆಯಂತೆ !!  ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರಲ್ಲವೇ? ಹೇಳಲೂ ಕೇಳಲೂ ಮತ್ತೆ ಬೇರಾವ ರಾಜರೂ ಇರುವುದಿಲ್ಲ. ಈಗೇನಿದ್ದರೂ ಕಬ್ಬಿಣ ತಿನ್ನುವ ಹೆಗ್ಗಣಗಳು ಪಕ್ಷಾತೀತವಾಗಿವೆ! ದೇಶ-ಕಾಲ ಇವುಗಳೂ ಅವುಗಳಿಗೆ ಬಾಧ್ಯವಲ್ಲ. ಹೆಗ್ಗಣ ಬಿಲ ಎಲ್ಲಿಯವರೆಗೂ ಇದೆಯೆಂದರೆ ಸ್ವಿಸ್ ಬ್ಯಾಂಕಿಗೂ ಹೋಗಿದೆ-ಅರ್ಥಾತ್ ಸಾಗಿಸಿದ ವಸ್ತು ಅಲ್ಲಿರುತ್ತದೆ! ’ಗಂಡಾಗುಂಡಿಮಾಡಿಯಾದರೂ ಗಡಿಗೆ ತುಪ್ಪ ತಿನ್ನಬೇಕು’ಎಂಬುದೊಂದು ಗಾದೆ ಇದ್ದ ನೆನಪು-[ಮಹಾನಗರಗಳಲ್ಲಿ] ಹೊಂಡಾಗುಂಡಿಗಳನ್ನು ಮಾಡಿಯಾದರೂ ದೊಡ್ಡ ಹುಂಡಿ ಹೊಡೆಯಬೇಕು-ಎಂಬುದು ಹೊಸ ಗಾದೆ!  ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಚರಂಡಿ ದುರಸ್ತಿ ಮುಗಿಯುವ ವ್ಯವಹಾರವಲ್ಲ; ಬೇಕಾದ್ರೆ ಚರಂಡಿ ಬೇಡವಾದ ಜಾಗದಲ್ಲೂ ಚರಂಡಿ ನಿರ್ಮಿಸುತ್ತೇವೆ ನಾವು!! ಅಂದಹಾಗೇ ಹೆಗ್ಗಣಗಳು ಚರಂಡಿಯ ಸಂದುಗೊಂದುಗಳಲ್ಲೇ ವಾಸಿಸುವುದು ಜಾಸ್ತಿ ಅಲ್ಲವೇ? ಹೊಗಲಿ ಬಿಡಿ, ಹಾಳೂರಿಗೆ ........ಮುತ್ತೈದೆ !!

ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇರ್ತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||

ಪುಣ್ಯನದಿಗಳ ಹೆಸರನ್ನು ನೆನೆಯಲೂ ಭಾಗ್ಯವಂತರಾಗಿ ಜನಿಸಿರಬೇಕು ಎನ್ನುತ್ತದೆ ಸ್ಮೃತಿ. ಸತ್ಯಯುಗದಿಂದ ಕಲಿಯುಗದ ಈ ತನಕ ಹರಿಯುತ್ತಲೇ ಹಲವು ಕೋಟಿ ಜೀವರಾಶಿಗಳ ಪಾಪವನ್ನು ತೊಳೆದ ಪುಣ್ಯನದಿಗಳನ್ನು ಜನ್ಮದಲ್ಲೊಮ್ಮೆಯಾದರೂ ದರ್ಶಿಸುವುದು, ಸ್ನಾನಮಾಡುವುದು ಮನುಕುಲಕ್ಕೆ ಒಳಿತು ಎಂಬುದು ಭಾರತೀಯ ಸಂಸ್ಕೃತಿ. "ಮಾಸಾನಾಂ ಮಾರ್ಗಶೀರ್ಷೋಸ್ಮಿ" ಎಂದು ಗೀತೆಯಲ್ಲಿ ಭಗವಂತ ಹೇಳಿರುವುದರಿಂದ ಮಾರ್ಗಶೀರ್ಷ ಮಾಸದಲ್ಲಿ ಪುಣ್ಯನದಿಗಳ ಸ್ನಾನ ಮತ್ತು ಪುಣ್ಯಕ್ಷೇತ್ರಗಳ ದರ್ಶನ ವಿಶೇಷ ಫಲವನ್ನು ಕೊಡುತ್ತವೆ ಎಂಬುದು ಪೂರ್ವಜರು ತಿಳಿಸಿಕೊಟ್ಟ ಸಂಗತಿ. ಪುಣ್ಯನದಿಗಳು ಹರಿದ ಪುಣ್ಯಭೂಮಿ ಭಾರತದಲ್ಲಿ ಹಿಂದಕ್ಕೆ ಸಹಸ್ರಾರು ರಾಜರುಗಳು ಆಳರಸರಾಗಿ ರಾಜ್ಯಭಾರಮಾಡಿದರು; ಧರ್ಮದ ಗಡಿಯನ್ನು ಮೀರದ ಅವರಲ್ಲಿನ ಬಹುತೇಕರು ಪ್ರಜಾರಂಜಕರಾಗಿಯೂ ದೈವಭಕ್ತರಾಗಿಯೂ ಆಡಳಿತವನ್ನು ನಡೆಸಿದವರು. ಪುರುಷೋತ್ತಮ ಪುರಿಯ ರಹಸ್ಯ ಅಷ್ಟು ಸಸಾರಕ್ಕೆ ಮುಗಿಯುವುದಿಲ್ಲ; ಇದೇನಿದ್ದರೂ ಆರಂಭಮಾತ್ರ; ಎರಡು ಅಥವಾ ಮೂರು ಭಾಗಗಳಲ್ಲಿ ಇದನ್ನು ಹೇಳಹೊರಟಿದ್ದೇನೆ. ಬರೆಯಬೇಕಾದ್ದು ಬಹಳವಿದೆ, ಬರೆದದ್ದು ಕಮ್ಮಿ ಇದೆ. ನನ್ನಲ್ಲಿ ಅವಿತಿರುವ ಆ ಪುರಾಣಿಕ ನಿಮಗೆ ಪ್ರಮಾದ ಸಾಹಿತ್ಯವನ್ನಂತೂ ಬಡಿಸಲಾರ ಎಂಬ ಭರವಸೆಯಿದೆ! ಹೇಳುತ್ತಿರುವ ನನ್ನಲ್ಲೂ ಕೇಳುತ್ತಿರುವ ನಿಮ್ಮೆಲ್ಲರಲ್ಲೂ ನೆಲೆಸಿದ, ಸಾಸಿವೆಯಲ್ಲಿ ಸಾಗರತುಂಬಬಲ್ಲ ಅದೇ  ಪುರಾಣಿಕನ ಹಲವು ಮುಖಗಳಿಗೆ ನಮಸ್ಕಾರ.

Sunday, November 11, 2012

ಗೋವು ಮತ್ತು ದೀಪಾವಳಿ

ಿತ್ರೃಪೆ : ಾಮ.ಇನ್ [http://www.hareraama.in]
ಗೋವು ಮತ್ತು ದೀಪಾವಳಿ

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೨


೨೧ನೇ ದಿನ ಮಧ್ಯಾಹ್ನದ ಹೊತ್ತಿಗೆ  ಗಾಂವ್ ಗಾಂವ್ ಗಾಂವ್ ಗಾಂವ್...........ಕರುಳಲ್ಲಿ ನಡುಕ ಹುಟ್ಟಿಸುವಂತೇ ಆರ್ಭಟಿಸುತ್ತ ಭಯಂಕರವಾದ ಸಿಂಹವೊಂದು ನಂದಿನಿಮೇಲೆ ಎರಗಲು ಮುಂದೆ ಬಂದುಬಿಟ್ಟಿತು. ಸೇವೆಗೈಯ್ಯುತ್ತಿದ್ದ ದಿಲೀಪ ಸ್ತಂಭೀಭೂತನಾದನಾದರೂ ಸಿಂಹವನ್ನು ಹಿಮ್ಮೆಟ್ಟಿಸುವತ್ತ ಮುನ್ನಡೆದ. ಶಸ್ತ್ರಗಳೇ ಇಲ್ಲದ ಸನ್ನಿವೇಶದಲ್ಲಿ ಬೊಬ್ಬಿರಿಯುತ್ತಿರುವ ಸಿಂಹವನ್ನು ನಿಯಂತ್ರಿಸುವುದಾದರೂ ಹೇಗೆ? ಎದುರಾಗಿ ಬರುತ್ತಿರುವ ದಿಲೀಪನನ್ನು ಕುರಿತು ಸಿಂಹ ಮಾತನಾಡತೊಡಗಿತು. " ಎಲವೋ ಮಾನವನೇ ಇದು ನನ್ನ ಆಹಾರ, ನನ್ನ ಆಹಾರಕ್ಕೆ ಅಡ್ಡಿಪಡಿಸಬೇಡ."  ದಿಲೀಪ ಕೇಳಿದ " ಅಯ್ಯಾ ಸಿಂಹವೇ ನೀನು ಎಲ್ಲಿಂದ ಬಂದೆ? ನಿನಗೆ ಈ ಧೇನುವೇ ಏಕೆ ಬೇಕು?"  ಸಿಂಹ ಉತ್ತರಿಸಿತು " ಪರಶಿವನ ಸೇವಕ ನಾನು. ಈ ಪ್ರಾಂತದಲ್ಲಿ ಆತನ ಸೇವೆಗೆ ನಿಂತವನು. ಮೇಯಲು ಬರುವ ಜೀವಿಗಳು ದೇವದಾರು ಮರಗಳಿಗೆ ತಮ್ಮ ಮೈಯ್ಯುಜ್ಜುವಾಗ ಅಲ್ಲಾಡಿಸಿ ಮರಗಳನ್ನು ಹಾಳುಗೆಡವದಂತೇ ರಕ್ಷಿಸುವುದು ನನ್ನ ಕೆಲಸ. ಮಧ್ಯಾಹ್ನದ ಹೊತ್ತಿಗೆ ಯಾವ ಪ್ರಾಣಿ ಇಲ್ಲಿಗೆ ಮೊದಲಾಗಿ ಬರುವುದೋ ಅದನ್ನು ಆಹಾರವಾಗಿ ಸ್ವೀಕರುಸುವುದು ನನ್ನ ವಾಡಿಕೆ. ಇಂದು ಈ ಹಸು ಬಂದಿದೆ. ದಾರಿ ಬಿಡು ನಾನು ಈ ಹಸುವನ್ನು ತಿನ್ನಬೇಕು." "ಸಿಂಹವೇ, ನಿನ್ನ ಹಸಿವಿಗೆ ನಿನಗೆ ಹಸುವೊಂದೇ ಕಾಣುವುದೇ? ಇಗೋ ದಯವಿಟ್ಟು ನನ್ನನ್ನು ಸ್ವೀಕರಿಸು. ಹಸುವನ್ನು ಬಿಟ್ಟುಬಿಡು." --ಹೀಗೆ ಸಿಂಹದೆದುರು ವಿನೀತನಾಗಿ ಪ್ರಾರ್ಥಿಸಿ ತಲೆಬಾಗಿದ ದಿಲೀಪ. ಮರುಕ್ಷಣದಲ್ಲಿ ಸಿಂಹ ನಾಪತ್ತೆ ! ರಕ್ಷಣೆಗಾಗಿ ತನ್ನ ತನುವನ್ನೇ ತ್ಯಜಿಸಲು ಸಿದ್ಧನಾದ ದಿಲೀಪನ ಮನೋಗತವನ್ನು ನೋಡಿ ಅರಿತ ನಂದಿನಿ ಆತನಿಗೆ ತನ್ನ ಚಮತ್ಕಾರವನ್ನು ಅರುಹಿದಳು.

ಭಕ್ತ್ಯಾ ಗುರೌ ಮಯ್ಯನುಕಂಪಯಾ ಚ ಪ್ರೀತಾಸ್ಮಿ ತೇ ಪುತ್ರ ವರಂ ವೃಣೀಷ್ವ |
ನ ಕೇವಲಾಯಾಂ ಪಯಸಾಂ ಪ್ರಸೂತಿಂ ಅವೇಹಿ ಮಾಂ ಕಾಮದುಘಾಂ ಪ್ರಸನ್ನಾಂ ||  
--ಕಾಳಿದಾಸ ’ರುವಶ’ದ ಶ್ಲೋಕ

"ಮಗನೇ, ನಿನ್ನ ಗುರುಭಕ್ತಿ ಮತ್ತು ನನ್ನ ಮೇಲಿನ ದಯೆ ಇವುಗಳಿಂದ ನಾನು ಸಂತೋಷಗೊಂಡಿರುವೆನು. ನಿನಗೆ ಬೇಕಾದ ವರವನ್ನು ಕೇಳು ನಾನು ಕೊಡುವೆನು. ನಾನು ಬರಿಯ ಹಾಲನ್ನು ಮಾತ್ರ ಕರೆಯುವ ಒಂದು ಪ್ರಾಣಿಯಲ್ಲ, ನೀನು ಏನೇನು ಬಯಸುವಿಯೋ ಅದನ್ನು ಸುರಿಸುವ ಕಾಮಧೇನು." ಎನ್ನಲು ಚಕ್ರವರ್ತಿ ದಿಲೀಪ ವಿನೀತನಾಗಿ ಮಂಡಿಯೂರಿ ಆಕೆಯಲ್ಲಿ ಸಂತಾನಭಾಗ್ಯವನ್ನು ಮಾತ್ರ ಕೋರಿದ್ದಾನೆ. " ನಿನ್ನ ಮನದಿಚ್ಛೆಯಂತೇ ಅತ್ಯುತ್ತಮವಾದ ಸಂತಾನವನ್ನು ಪಡೆ" ಎಂದು ಹರಸಿ ತಾಯಿ ಕಾಮಧೇನುವಿನಿಂದ ಪ್ರಾಪ್ತವಾದ ಶಾಪದಿಂದ ಮುಕ್ತಗೊಳಿಸಿದಳು.

ಇಕ್ಷಾಕುವಂಶ ಅಥವಾ ಸೂರ್ಯವಂಶದ ಆರಂಭಪುರುಷ ವೈವಸ್ವತ ಮನು. ಮನು, ಇಂದ್ರ, ವ್ಯಾಸ ಈ ಎಲ್ಲ ಭಗವಂತನಿಂದ ಆಯ್ಕೆಮಾಡಲ್ಪಟ್ಟ ಕೆಲವರು ಕೆಲಸಮಾಡುವ ಅಧಿಕಾರದ ಸ್ಥಾನಗಳು ಮಾತ್ರ. ಅಲ್ಲಿರುವವರು ಅಲ್ಲೇ ಶಾಶ್ವತವಲ್ಲ! ಅಲ್ಲಿ ಬದಲಾವಣೆ ನಡೆಯುತ್ತಿರುತ್ತದೆ. ಹಾಗೆ ಬದಲಾಗುವ ಪರಿಕ್ರಮಗಳಲ್ಲಿ ವಿಭಿನ್ನ ೧೪ ಹೆಸರಿನ ಮನುಗಳು ಆಳುವ ಹಲವಾರು ಮನ್ವಂತರಗಳು ಬಂದುಹೋಗುತ್ತವೆ. ಈಗ ನಾವು ಇರುವುದು ೭ನೇ ಮನುವೆನಿಸಿದ ವೈವಸ್ವತ ಮನ್ವಂತರದಲ್ಲಿ; ಅಂದರೆ ವೈವಸ್ವತ ಮನು ಇದನ್ನು ಆರಂಭಿಸಿದಾತ, ನಡೆಸುವಾತ. ಮನು ಎಂದರೆ ರಾಜನೇ ಎಂದು ಶತಪಥ ಬ್ರಾಹ್ಮಣ ಗ್ರಂಥ ಹೇಳುತ್ತದೆ. ಆತನ ವಂಶವೇ ಮುಂದೆ ಸೂರ್ಯವಂಶವಾಯ್ತು. ಸೂರ್ಯವಂಶವನ್ನು ಕಾಲಾನಂತರ ರಘುವಂಶವೆಂದೂ ಕರೆದರು. ಖ್ಯಾತನಾಮನಾದ ರಘು ರಾಜಾ ದಿಲೀಪನ ಮಗ! ಮಾಲವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಮೊದಲಾದ ಮಹಾನ್ ನಾಟಕಕೃತಿಗಳನ್ನು ಬರೆದ ಮಹಾಕವಿ ಕಾಳಿದಾಸ ರಘುವಂಶ, ಕುಮಾರ ಸಂಭವ, ಋತುಸಂಹಾರ, ಮೇಘದೂತ ಮುಂತಾದ ಕಾವ್ಯಗಳನ್ನೂ ಬರೆದು ಪ್ರಸಿದ್ಧನಾದ. ನಮ್ಮ ಭಾರತದ ಪ್ರಾಗೈತಿಹಾಸದ ಬಗ್ಗೆ ಜಾಸ್ತಿ ತಿಳಿದುಕೊಳ್ಳಬಯಸುವವರು ಕಾಳೀದಾಸನ ರಘುವಂಶವನ್ನು ಉಂಡು ಅಗುಳಗುಳನ್ನೂ ಅರಗಿಸಿಕೊಳ್ಳಬೇಕು. ಆದಿಕವಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯಕ್ಕೆ ಪೂರಕ ಪೀಠಿಕೆಯನ್ನು ಕಲ್ಪಿಸುವುದು ಈ ’ರಘುವಂಶ’. ರಘುವಂಶವನ್ನು ಓದಿಕೊಂಡು ಆಮೇಲೆ ರಾಮಾಯಣವನ್ನು ತಿಳಿದುಕೊಂಡರೆ ಶ್ರೀರಾಮನ ಪೂರ್ವಜರ ಮತ್ತು ಆತನ ನಂತರದ ಪೀಳಿಗೆಯ ಪರಿಚಯ ನಮಗೆ ಲಭಿಸುತ್ತದೆ.       

ಅನುಷ್ಟುಪ್, ಇಂದ್ರವಜ್ರ, ಉಪಜಾತಿ, ಉಪೇಂದ್ರವಜ್ರ, ಔಪಚ್ಛಂದಸಿಕ, ತೋಟಕ, ಧೃತವಿಲಂಬಿತ, ಪುಷ್ಪಿತಾಗ್ರಾ, ಪ್ರಹರ್ಷಿಣೀ, ಮಂಜುಭಾಷಿಣಿ, ಮತ್ತಮಯೂರ, ಮಂದಕ್ರಾಂತ, ಮಾಲಿನಿ, ರಥೋದ್ಧತಾ, ವಂಶಸ್ಥ, ವಸಂತತಿಲಕ, ವೈತಲೀಯ, ಶಾರ್ದೂಲವಿಕ್ರೀಡಿತ, ಶಾಲಿನಿ, ಸ್ವಾಗತಾ, ಹರಿಣಿ ಮೊದಲಾದ ೨೧ ಛಂದಸ್ಸುಗಳ ಸಮಾಗಮದ ಚಂದವನ್ನು ರಘುವಂಶದಲ್ಲಿ ಕಾಣಬಹುದಾಗಿದೆ. ಹಾಗೆ ಅದನ್ನು ಅರ್ಥಮಾಡಿಕೊಳ್ಳುವಾಗ, ಕವಿಯ ಪರಿಶ್ರಮದ ಸಾಧನೆಯನ್ನು ಅರಿಯುವಾಗ, ನಾವೆಷ್ಟು ಕುಬ್ಜರು ಎಂಬ ಅರಿವು ತಂತಾನೇ ನಮಗೆ ಬಂದರೆ ಅಶ್ಚರ್ಯವಲ್ಲ! ಇಂದು ಕವಿ-ಸಾಹಿತಿಗಳೆನಿಸುವ ನಾವು ಹಿಮಾಲಯದೊಡನೆ ನಮ್ಮನ್ನು ಹೋಲಿಸಿಕೊಳ್ಳುವ ಮಾನವನಿರ್ಮಿತ ಚಿಕ್ಕ ಮಣ್ಣಿನಗುಡ್ಡವಾಗಿ ಕಾಣುತ್ತೇವೆ ಎಂಬುದರಲ್ಲಿ ಲವಲೇಶದಷ್ಟೂ ದೋಷವಿಲ್ಲ. ಅದಕ್ಕೇ ಪೂರ್ವಜರು ಹೇಳಿದರು, ’ದೇಶ ತಿರುಗು ಅಥವಾ ಕೋಶ ಓದು’-ಅಂದರೆ ಮಾತ್ರ ಜಗತ್ತು ಏನು ಎಂಬುದರ ಅರಿವು ನಮಗೆ ಸ್ವಲ್ಪವಾದರೂ ಆದೀತು. ಮಹಾಕವಿ ಕಾಳಿದಾಸನ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿ ಕಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇನೆ.

ಸೂರ್ಯವಂಶದ ರಾಜಾ ದಿಲೀಪ ಬಹುದೊಡ್ಡ ಚಕ್ರವರ್ತಿ. ಸತ್ಯಯುಗದಲ್ಲಿ ದೇವತೆಗಳು ದಾನವರೊಡನೆ ಯುದ್ಧಮಾಡುವಾಗ ಇಂತಹ ಚಕ್ರವರ್ತಿಗಳ ಸಹಕಾರವನ್ನು ಕೋರುತ್ತಿದ್ದರು. ಸ್ವರ್ಗವನ್ನು ಸಶರೀರಿಯಾಗಿ ಪ್ರವೇಶಿಸುವ ಮತ್ತು ಹೋಗಿಬಂದು ಮಾಡುತ್ತಿರುವ ಅವಕಾಶ ಅಂದಿನ ಚಕ್ರವರ್ತಿಗಳಿಗಿತ್ತು! ಅಂತಹ ಸಮಯವೊಂದರಲ್ಲಿ ದೇವತೆಗಳ ನೆರವಿಗೆ ತೆರಳಿದ್ದ ದಿಲೀಪ ತನ್ನ ರಾಜ್ಯಕ್ಕೆ-ಅರಮನೆಗೆ-ಅಂತಃಪುರಕ್ಕೆ ಧಾವಿಸುವ ಆತುರದಲ್ಲಿದ್ದ. ಹಾಗೆ ಸ್ವರ್ಗದಲ್ಲಿ ದಾಪುಗಾಲು ಹಾಕುತ್ತಾ ಸಾಗುತ್ತಿರುವಾಗ ಕಾಮಧೇನುವನ್ನು ಅಲಕ್ಷ್ಯಿಸಿದ, ಕಾಮಧೇನುವಿಗೆ ಗೌರವ ನೀಡಲೇ ಇಲ್ಲ. ತತ್ಪರಿಣಾಮ ಕಾಮಧೇನುವಿನಿಂದ " ಸಂತಾನವಾಗದೇ ಹೋಗಲಿ" ಎಂಬ ಶಾಪಕ್ಕೆ ಪರೋಕ್ಷ ಗುರಿಯಾದ. ಬಹುಕಾಲ ಮಕ್ಕಳಾಗದ ಚಿಂತೆಯಲ್ಲಿ ಗುರು ವಶಿಷ್ಠರನ್ನು ಕಂಡು ರಣವನ್ನು ಕೇಳಿದ. ವಶಿಷ್ಠರು ನಡೆದ ಸಂಗತಿಯನ್ನು ಅವನಿಗೆ ತಿಳಿಸಿದರು. ಶಾಪಮುಕ್ತಿಗಾಗಿ ಕಾಮಧೇನುವಿನ ಮಗಳಾದ ನಂದಿನಿಯನ್ನು ಆರಾಧಿಸಿ ಅವಳ ಕರುಣೆಗೆ ಪಾತ್ರನಾಗೆಂದು ಬೋಧಿಸಿದರು. ಬ್ರಹ್ಮಮಾನಸ ಪುತ್ರರಾದ ವಶಿಷ್ಠರ ಆಶ್ರಮದಲ್ಲಿಯೇ ಇದ್ದ ನಂದಿನಿ ವಶಿಷ್ಠರ ಕರೆಯಮೇರೆಗೆ ನಡೆದು ಬಂದಳು. ಮುಂದೆ ೨೧ ದಿನಗಳ ಪರ್ಯಂತ ವ್ರತನಿಷ್ಠನಾಗಿ ನಂದಿನಿಯನ್ನು ಉಪಚರಿಸಿ ಸೇವೆಗೈಯ್ಯುವಲ್ಲಿ ರಾಜಾ ದಿಲೀಪ ಸನ್ನದ್ಧನಾದ, ಕಂಕಣಬದ್ಧನಾದ. ನಿತ್ಯವೂ ನಂದಿನಿಯ ಮೈತೊಳೆಯುವುದು, ಆಕೆ ಮಲಗುವ ಜಾಗವನ್ನು ಸ್ವಚ್ಛಗೊಳಿಸುವುದು, ಆಕೆ ಅಡವಿಗೆ ಮೇಯಲು ಹೋಗುವಾಗ ಹಿಂಬಾಲಿಸಿ ಹೋಗಿ ಆಕೆಯನ್ನು ಕಾಯುವುದು, ಆಕೆ ಮಲಗಿದರೆ ಮಲಗುವುದು, ಆಕೆ ಆಹಾರ ತಿಂದರೆ ತಾನು ಅಲ್ಪಾಹಾರ ಸೇವಿಸುವುದು... ಅಂತೂ ೨೧ ದಿನಗಳೂ ನಿರಂತರ ಸೇವೆ ನಡೆಸಿದ. ೨೧ನೇ ದಿನ ನಡೆದ ಘಟನೆಯನ್ನು ಮೇಲೆ ಓದಿದಿರಲ್ಲಾ...ನಂತರ ಜನಿಸಿದವನೇ ರಘುಚಕ್ರವರ್ತಿ. ಅದೇ ರಘುವಂಶ ಮುನ್ನಡೆದು ಮುಂದೆ ಭಗೀರಥ, ಅಜ, ದಶರಥ, ಶ್ರೀರಾಮ, ಲವ-ಕುಶ, ಶುದ್ಧೋಧನ, ಸಿದ್ಧಾರ್ಥ [ಬುದ್ಧ]ಪ್ರಸೇನ ಜಿತ್, ಸುಮಿತ್ರ ಹೀಗೇ ಸೂರ್ಯವಂಶ ಸತ್ಯಯುಗದಿಂದ ದ್ವಾಪರಯುಗದವರೆಗೂ ಹಬ್ಬಿದೆ!! 

ಮಹರ್ಷಿ ಗೌತಮರು ಆಂಧ್ರ ಪ್ರಾಂತದಲ್ಲಿ ಆಶ್ರಮವಾಸಿಯಾಗಿದ್ದರು. ತಪೋ ನಿರತರಾದ ಅವರಿಗೆ ಹಲವು ಜನ ವಟುಗಳು ಸೇವೆಗೈಯ್ಯುತ್ತಿದ್ದರು. ಕಾಲಾನಂತರದಲ್ಲಿ ವೇದಾಧ್ಯಯನ ಸಂಪನ್ನರಾದ ವಟುಗಳಿಗೆ ಸಂಸಾರಿಗಳಾಗುವ ಬಯಕೆ ಬಂತು. ಗೌತಮರ ಆಶ್ರಮವನ್ನು ತೊರೆಯಲು ಬಯಸಿದರು. ಅದಕ್ಕೆ ಗೌತಮರು ಅವಕಾಶ ನೀಡಲೇ ಇಲ್ಲ. "ನೀವೆಲ್ಲಾ ಮುಂದೆ ಸಂಸಾರಿಗಳಾದರೂ ಸಹಿತ ಈ ಆಶ್ರಮದಲ್ಲೇ ಇರತಕ್ಕದ್ದು" ಎಂದು ಅಪ್ಪಣೆ ಕೊಡಿಸಿಬಿಟ್ಟರು. ಗೌತಮರು ಹೊರಗೆ ಹೋದ ಸಮಯ ಸಾಧಿಸಿ ಬ್ರಾಹ್ಮಣರು ದರ್ಭೆಯನ್ನು ಅಭಿಮಂತ್ರಿಸಿ ಅದನ್ನು ಧೇನುವಾಗಿಸಿ ಆಶ್ರಮದ ಹೊಲದಲ್ಲಿ ಅದನ್ನು ಕಟ್ಟಿಹಾಕಿದರು. ಕಾರ್ಯನಿಮ್ಮಿತ್ತ ತೆರಳಿದ್ದ ಗೌತಮರು ಮರಳುವಾಗ ಹೊಲದಲ್ಲಿ ಮೇಯುತ್ತಿರುವ ದನವನ್ನು ನೋಡಿ ಸಂತೋಷದಿಂದ ಮೈದಡವಿದರು. ಮೈಮುಟ್ಟಿದ ತಕ್ಷಣವೇ ಆ ಹಸುವು ಹೆದರಿಕೆಯಿಂದ ಪ್ರಾಣಬಿಟ್ಟಿತು. ಗೋ ಹತ್ಯೆಗೆ ಕಾರಣನಾದೆ ಎಂದು ತನ್ನನ್ನೇ ಜರಿದುಕೊಳ್ಳುತ್ತಾ ಗೌತಮರು ಈಶ್ವರನ ಕುರಿತು ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಈಶ್ವರ ಕಾರಣವನ್ನು ತಿಳಿದುಕೊಂಡ ಮತ್ತು ಅದು ದೋಷವೇ ಅಲ್ಲವೆಂತಲೂ ಅದು ದರ್ಭೆಯಿಂದ ನಿರ್ಮಿತವಾಗಿದ್ದ ದನವೆಂಬ ಸಂಗತಿ ಮುನಿಗಳ ಗೋಚಾರ ದೃಷ್ಟಿಗೆ ನಿಲುಕುವಂತೇ ಮಾಡಿದ. ಆದರೂ ಮನದ ಕ್ಲೇಶವನ್ನು ಕಳೆದುಕೊಳ್ಳುವ ಸಲುವಾಗಿ ಗೌತಮರು ತೀರ್ಥವನ್ನು ಸೃಜಿಸಿ ಅದರಲ್ಲಿ ಸ್ನಾನಮಾಡಿದರು. ಮುಂದೆ ಅದೇ ತೀರ್ಥ ನದಿಯಾಗಿ ಹರಿಯಿತು. ಅದು ಇಂದಿಗೂ ನಾವು ಕಾಣುವ ಸಪ್ತನದಿಗಳಲ್ಲಿ ಒಂದಾದ ಗೋ-ದಾವರಿ!       

ಹೀಗೇ ಈ ಕಥೆಗಳನ್ನು ಇಂದು ಹೇಳಲು ಕಾರಣ ಭಾರತ ಗೋ-ಪ್ರಧಾನ ದೇಶ. ಗೋವು ಬಹುತೇಕರ ಆರಾಧ್ಯ ಸ್ಥಾನದಲ್ಲಿರುವ ಮಾತೆ. ಗೋಜನ್ಯ  ವಸ್ತುಗಳ-ಆಹಾರಗಳ ವೈಜ್ಞಾನಿಕ ಉಪಯೋಗವನ್ನು ನಾವು ಇದೀಗಾಗಲೇ ಹಲವಾರು ಮಾರ್ಗಗಳಿಂದ ತಿಳಿದಿದ್ದೇವೆ. ಗೋಮಾತೆಯ ರಕ್ಷಣೆಯಲ್ಲಿ ಹಲವು ಸಾಧು-ಸಂತರು ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ಇದಲ್ಲಿ ಶ್ರೀ ರಾಮಂದ್ರಾಪುರ ಪ್ರಾನಾಗಿದೆ,  ಅವ ಆದರ್ಿಕ್ಕಿದಿಗೆ ಅನುಕೀಯಾಗಿದೆ.  ಿಶ್ವೋ ಸಮ್ಮೇಳ, ಅರೆ ಮೈದಾನಲ್ಲಿ ೋಮಾತೆಗೆ ಕೋಟಿನೀರಾಜ, ವಿಶ್ವಂಗೋಗ್ರಾಮಾತ್ರೆ [ಎರು ಕೋಟಿಿ ಸಂಗ್ರಹ ದೆ]ುಂತಾದು ಕಾರ್ಯಕ್ರು ಪಸ್-ಸಂಕಲ್ಪಿದ್ಿಪೆದ ಶ್ರಶ್ರೀರಶ್ವ ೀ ಮಾಸ್ವಾಮಿಗಿಂದೆಸಲ್ಪಟ್ಟಿವೆ. ಶ್ರೀಮ ೧೩ ಕ್ಕೂ ಹೆಚ್ಚು ಗಾಲೆಗನ್ನು ಸ್ವಃ ನೆಸುತ್ತಿದ್ದಈಗಿರುವ ಾರೀಯ ಎಲ್ಲಾ ತಿಗೂ ಇಲ್ಲಿ ಲಭ್ಯಿವೆ.  ಇಂಶ್ಲೀಯೆಲಾಡಿದ ಆಚಾರ್ಯಿಗಾರೀಯೆಲ್ಲಾಗಿ ಅನಂತೋಟಿ ಪ್ರಾಮು. ಗೋವಿಲ್ಲದೇ ಈ ಜಗತ್ತು ಒಂದೇ ದಿನವೂ ನಡೆಯುವುದು ಕಷ್ಟ. ನಾವು ತಿನ್ನುವ ಎಲ್ಲಾ ಆಹಾರಗಳ ಹಿನ್ನೆಲೆಯಲ್ಲಿ ಬಳಸುವ ಹಾಲು-ಹೈನ ಪದಾರ್ಥಗಳನ್ನು ನೆನೆಸಿಕೊಂಡಾಗ ಜನ್ಮ ಕೊಟ್ಟ ಮಾತೆಯ ನಂತರ ಸಾವಿನವರೆಗೂ ಹಾಲೂಡುವ ಎರಡನೇ ಮಾತೆ ಗೋವು ಎಂಬುದು ತಿಳಿದುಬರುತ್ತದೆ.
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮದೃಢಾಶಯಃ |
ಗೋಭಕ್ತಃ ಭಾರತಗುರುಃ ಹಿಂದುಃ ಹಿಂಸನದೂಷಕಃ ||

ಮಾಧವ ದಿಗ್ವಿಜಯ ಕೃತಿಯಲ್ಲಿ ಹೇಳಲ್ಪಟ್ಟ ಈ ಶ್ಲೋಕ ಹಿಂದೂಗಳು ಯಾರು ಎಂಬ ಕಲ್ಪನೆಯಲ್ಲಿ ಹಿಂದೂಗಳು ಓಂಕಾರವನ್ನು ಮಂತ್ರವನ್ನಾಗಿ ಉಳ್ಳವರು, ಆತ್ಮನು ಅಮರನಾದ ಕಾರಣ ಪುನರ್ಜನ್ಮದಲ್ಲಿ ನಂಬಿಕೆಯುಳ್ಳವರು, ಅಹಿಂಸಾ ಪ್ರೇಮಿಗಳು-ಹಿಂಸೆಯನ್ನು ದೂಷಿಸುವವರು, ಗೋವಿನ ಭಕ್ತರು ಮತ್ತು ಭಾರತೀಯ ಗುರುಗಳನ್ನು ಗೌರವಿಸುವವರು ಎಂದಿದ್ದಾರೆ.

ಅಂತರ್ಜಾಲ ಕೃಪೆಯಿಂದ ಈ ಚಿತ್ರ , ಉತ್ತರಭಾರತದಲ್ಲಿ ದೀಪಾವಳಿಯಲ್ಲಿ ನಡೆಯುವ ಗೋವರ್ಧನ ಪೂಜೆಯ ಸಂದರ್ಭದ್ದು

ಯಾವುದು ಗೋವಿನ ತ್ಯಾಜ್ಯವೋ ಅದು ನಮ್ಮ ಶರೀರಕ್ಕೆ ದಿವ್ಯೌಷಧವಾಗಿರುತ್ತದೆ ಎಂದಮೇಲೆ ಗೋವಿನ ಮಹತ್ವವನ್ನು ಮತ್ತೆ ಬಿಡಿಸಿಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ. ಭಗವಾನ್ ಶ್ರೀಕೃಷ್ಣ ಗೋಕುಲದಲ್ಲೇ ಬೆಳೆದ, ಗೋವುಗಳನ್ನೇ ಕಾದ, ಗೋಪಾಲನೆನಿಸಿದ ಆತ ಇಂದ್ರ ಸುರಿದ ಮಳೆಗೆ ಗೋವರ್ಧನ ಗಿರಿಯನ್ನೇ ಕಿರುಬೆರಳಲ್ಲಿ ಎತ್ತಿಹಿಡಿದ! ಅದು ದೀಪಾವಳಿಯ ಸಂದರ್ಭದಲ್ಲಿ. ಭೂಮಿಪುತ್ರನಾಗಿ ಜನಿಸಿದ್ದ ನರಕಾಸುರ, ೧೬೦೦೦ ಹೆಣ್ಣುಮಕ್ಕಳನ್ನು ಕೂಡಿಟ್ಟುಕೊಂಡು ಸುಖಿಸುವ ಅಟ್ಟಹಾಸದಲ್ಲಿದ್ದ. ಅಂಥಾ ನರಕಾಸುರನನ್ನು ಶ್ರೀಕೃಷ್ಣ ಆಶ್ವೀಜ ಕೃಷ್ಣ ಚತುರ್ದಶಿಯ ಬೆಳಗಿನ ಜಾವ ವಧಿಸಿದ, ನೋವೆದ್ದ ಮೈಕೈಗೆ ಎಣ್ಣೆ ಪೂಸಿಕೊಂಡು ಅಭ್ಯಂಜನ ಮಾಡಿದ. ಭೂಮಿತಾಯಿಯ ಕೋರಿಕೆಯ ಮೇರೆಗೆ ಅಶ್ವಿನಕೃಷ್ಣ ಚತುರ್ದಶಿಯನ್ನು ಆಕೆಯ ಸತ್ತ ಮಗನ ಹೆಸರಲ್ಲೇ ನರಕ ಚತುರ್ದಶಿಯಾಗಿ ಆಚರಿಸಿ ಅಭ್ಯಂಜನ ನಡೆಸಲು ಆದೇಶಿಸಿದ. ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯ ವಚನಪಾಲನೆಗೆ ಮನಸೋತು ಮುಂದಿನ ಕಲ್ಪದಲ್ಲಿ ಇಂದ್ರನನ್ನಾಗಿಸುವ ವಚನವನ್ನಿತ್ತು ಆತನನ್ನು ಪಾತಾಳಕ್ಕೆ ಕಳುಹಿಸಿದ; ಆತನಾಳಿದ ಈ ಭೂಮಿಯಲ್ಲಿ ಸಿರಿಸಂಪತ್ತಿಗೆ ಕೊರತೆಯೇ ಇರಲಿಲ್ಲ! ಜನರೆಲ್ಲಾ ಉಂಡುಟ್ಟು ಸುಭಿಕ್ಷವಾಗಿದ್ದ ಆ ಸಮಯದಲ್ಲಿ ಬಲಿಯನ್ನು ಸದೆಬಡಿಯಲು ಕಾರಣವೇ ಇರಲಿಲ್ಲ. ಅಂಥಾ ಚಕ್ರವರ್ತಿ ಬಲಿ ದೇವಕಾರ್ಯದಲ್ಲಿ ಉದ್ಯುಕ್ತರಾದ ದೇವತೆಗಳ ಪಟ್ಟವನ್ನು ಕಸಿದುಕೊಳ್ಳುವ ಪ್ರಮೇಯವೇ ಬಂದಿದ್ದರಿಂದ ಅನಿವಾರ್ಯವಾಗಿ ಆತನನ್ನು ಪರೀಕ್ಷೆಗೆ ಒಳಪಡಿಸಿ ಉಪಾಯವಾಗಿ ಪಾತಾಳಕ್ಕೆ ಕಳಿಸಿದ್ದರೂ ವರ್ಷಂಪ್ರತಿ ದೀಪಾವಳಿಯಲ್ಲಿ ಮೂರುದಿನ ಭೂಮಿಯ ಆಳ್ವಿಕೆಯನ್ನು ಬಲಿಗೇ ಒಪ್ಪಿಸಿ ಆತನ ಸಾಮ್ರಾಜ್ಯದ ಬಾಗಿಲಭಟನಾಗಿ ಸೇವೆಗೈಯ್ಯುವುದಾಗಿ ಅನುಗ್ರಹಿಸಿದ ವಾಮನ ತ್ರಿವಿಕ್ರಮನ ಮಾತಿನ ಒಡಂಬಡಿಕೆಗೆ ಒಳಪಟ್ಟು ದೀಪಾವಳಿಯ ಮೂರುದಿನ ಈ ಭೂಮಿಯಲ್ಲಿ ಬಲಿಚಕ್ರವರ್ತಿ ಆಡಳಿತಾರೂಢನಾಗುತ್ತಾನೆ ಎನ್ನುವುದು ಪ್ರತೀತಿ. ಆತನ ನೆನಪಿಗಾಗಿ ಕೆಲವು ಸುವಸ್ತುಗಳನ್ನಿಟ್ಟು, ರಂಗೋಲಿಗಳನ್ನು ಬರೆದು, ದೀಪಗಳನ್ನು ಬೆಳಗಿಸಿ ಪೂಜಿಸುವುದು ಆರಾಧನೆಯ ಒಂದು ಪದ್ಧತಿ. ದಾನವಕುಲದಲ್ಲಿ ಜನಿಸಿಯೂ ದೇವರಿಂದಲೇ ಸೇವೆಪಡೆದ ಹೆಗ್ಗಳಿಕೆಗೆ ಪಾತ್ರನಾದ ಏಕಮೇವಾದ್ವಿತೀಯ ವ್ಯಕ್ತಿ ಬಲಿಚಕ್ರವರ್ತಿ!  

ನ್ಯಾಸರ್ಮನ್ನಟ್ಟುನಿಟ್ಟಾಗಿ ೆಸೂಕಪ್ಪಾಮಿಗೆಂದಖ್ಯಾದು 

ದೀಪಾವಳಿಯ ಸಂದರ್ಭದಲ್ಲಿ ಅಖಂಡ ಭಾರತದಲ್ಲಿ ಗೋವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ನಮಸ್ತೇ ಜಾಯಮಾನಾಯೈ ಜಾತಾಯಾ ಉತ ತೇ ನಮಃ |
ಬಾಲೇಭ್ಯಃ ಶಫೇಭ್ಯೋ ರೂಪಾಯಾಘ್ನ್ಯೇ ತೇ ನಮಃ || 
---ಅಥರ್ವಣವೇದ  ೧೦/೧೦/೧

ಕೊಲ್ಲಲು ಸರ್ವಥಾ ಅರ್ಹವಲ್ಲದ, ಕೊಲ್ಲಲ್ಪಡಬಾರದ ಗೋವೇ, ಹುಟ್ಟುತ್ತಿರುವ ಸಮಯದಲ್ಲಿ ನಿನಗೆ ನಮಸ್ಕಾರ. ಹುಟ್ಟಿದ ಮೇಲೆಯೂ ನಮಸ್ಕಾರ. ನಿನ್ನ ಕೂದಲುಗಳಿಗೂ ನಿನ್ನ ಗೊರಸುಗಳಿಗೂ ಮತ್ತು ನಿನ್ನ ರೂಪಕ್ಕೂ ಎಲ್ಲವುದಕ್ಕೂ ನಮಸ್ಕಾರ.

ಯಯಾ ದ್ಯೌಃ ಯಯಾ ಪೃಥಿವೀ ಯಯಾಪೋ ಗುಪಿತಾ ಇಮಾಃ |
ವಶಾಂ ಸಹಸ್ರಧಾರಾಂ ಬ್ರಹ್ಮಣಾಚ್ಛಾ ವದಾಮಸಿ || 
----ಅಥರ್ವಣವೇದ  ೧೦/೧೦/೪

ಗೋವಿನಿಂದ ಈ ಭೂಮಿ,  ಈ ಸ್ವರ್ಗ ಮತ್ತು ನೀರಿಗೆ ಆಶ್ರಯವಾದ ಅಂತರಿಕ್ಷ --ಈ ಲೋಕಗಳು ಕಾಪಾಡಲ್ಪಟ್ಟಿವೆ. ಅವಳು ಸುಲಭವಾಗಿ ಒಡೆಯನ ವಶದಲ್ಲಿ ಇರುವಂತಹ ಸೌಮ್ಯರೂಪಳು. ಸಹಸ್ರಧಾರೆಗಳ ಹಾಲಿನಿಂದ ನಮ್ಮನ್ನು ಪೋಷಿಸುವವಳು. ನಾನು ಇಂತಹ ಗೋವನ್ನು ವೇದಮಂತ್ರಗಳಿಂದ ಚೆನ್ನಾಗಿ ಹೊಗಳುವೆನು.

ನಮೋ ಗೋಭ್ಯಃ ಶ್ರೀಮತೀಭ್ಯಃ ಸೌರಭೇಯಿಭ್ಯ ಏವ ಚ |
ನಮೋ ಬ್ರಹ್ಮಸುತಾಭ್ಯಶ್ಚ ಪವಿತ್ರಾಭ್ಯೋ ನಮೋ ನಮಃ ||
  ---ಸ್ಮೃತಿ

ಎಲೈ ಗೋವುಗಳೇ, ನೀವು ಕಶ್ಯ-ಬ್ರಹ್ಮ ಮತ್ತು ಸುರಭೀದೇವಿಯರ ಸಂತಾನ. ನೀವು ಕಾಂತಿ, ಪುಷ್ಟಿ ಮುಂತಾದ ವಿವಿಧ ಸಂಪತ್ತಿನಿಂದ ಬೆಳಗುವಿರಿ. ನೀವು ಯಾವಾಗಲೂ ಅತ್ಯಂತ ಪವಿತ್ರರು. ನಿಮಗೆ ಮತ್ತೆ ಮತ್ತೆ ನಮಸ್ಕಾರಗಳು.

ಸರ್ವಕಾಮದುಘೇ ದೇವಿ ಸರ್ವತೀರ್ಥಾಭಿಷೇಚಿನಿ |
ಪಾಿ ಸುರಭಿ ಶ್ರೇಷ್ಠೇ ದೇವಿ ತುಭ್ಯಂ ನಮೋ ನಮಃ ||

ನೀನು ಪಾವನ ಮಾಡುವವಳು, ಶ್ರೇಷ್ಠಳು, ನಮ್ಮ ಎಲ್ಲ ಬಯಕೆಗಳನ್ನೂ ಪೂರೈಸುವ ದೇವಿಯು. ಸುರಭಿಯೇ! ನೀನು ಸುರಿಸುವ ಹಾಲೇ ಎಲ್ಲಾ ತೀರ್ಥಗಳು. ಇಂತಹ ನಿನಗೆ ಮತ್ತೆ ಮತ್ತೆ ನಮಸ್ಕಾರಗಳು.

ಮಾತರಃ ಸರ್ವಭೂತಾನಾಂ ಗಾವಃ ಸರ್ವಸುಖಪ್ರದಾಃ |
ವೃದ್ಧಿಮಾಕಾಂಕ್ಷತಾ ನಿತ್ಯಂ ಗಾವಃ ಕಾರ್ಯಾಃ ಪ್ರದಕ್ಷಿಣಾಃ ||

ಗೋವುಗಳು ಎಲ್ಲಾ ಪ್ರಾಣಿಗಳಿಗೂ ತಾಯಂದಿರು. ಎಲ್ಲರಿಗೂ, ಎಲ್ಲ ರೀತಿಯ ಸುಖಗಳನ್ನು ಕೊಡುವವರು. ಆದ್ದರಿಂದ ವೃದ್ಧಿಯನ್ನು ಬಯಸುವವನು ನಿತ್ಯವೂ ಗೋವುಗಳನ್ನು ಸ್ತುತಿ, ಪ್ರದಕ್ಷಿಣೆ, ನಮಸ್ಕಾರ ಮತ್ತು ಆಹಾರದಾನಗಳಿಂದ ಪೂಜಿಸಲಿ.    

ಚ್ಯವನ ಮಹರ್ಷಿ ಗಂಗೆಯಲ್ಲಿ ಮುಳುಗಿ ಬಹಕಾಲ ತಪಸ್ಸುಮಾಡುತ್ತಿರುವಾಗ ಬೆಸ್ತರು ಮೀನಿಗಾಗಿ ಬೀಸಿದ ಬಲೆಗೆ ಸಿಕ್ಕಿಬಿದ್ದುಬಿಟ್ಟನು. ಬೆಸ್ತರು ಮೀನುಗಳೊಂದಿಗೆ ಅವನನ್ನೂ ಎಳೆದು ದಡಕ್ಕೆ ಹಾಕಿದರು. ಸಮಾಧಿಯಿಂದ ಎಚ್ಚೆತ್ತ ಮುನಿ ಸುತ್ತಮುತ್ತಲೂ ನೋಡಿ ಒದ್ದಾಡುತ್ತಿರುವ ಮೀನುಗಳ ಬಗ್ಗೆ ದಯೆತಾಳಿ ದೀರ್ಘವಾಗಿ ನಿಟ್ಟುಸಿರು ಬಿಡತೊಡಗಿದನು. ಬೆಸ್ತರು ಈ ವಿಚಿತ್ರವನ್ನು ನೋಡಿ ಓಡಿಹೋಗಿ ರಾಜಾ ನಹುಷನನ್ನು ಕರೆತಂದರು. ರಾಜನು ಮುನಿಗೆ ಪ್ರಣಾಮ ಮಾಡಿ ಏನಾಗಬೇಕೆಂದು ಬೇಡಿದನು. "ಈ ಮೀನುಗಳ ಬಿಡುಗಡೆಯಾಗಿ ಪ್ರಾಣ ಉಳಿದರೆ ಮಾತ್ರ ನಾನೂ ಉಳಿಯುವೆನು ಇಲ್ಲದಿದರೆ ನಾನೂ ಸಾಯುವೆನು" ಎಂದ ಮುನಿಯ ಮಾತು ಕೇಳಿ ರಾಜನು ಬೆಸ್ತರಿಗೆ ಹಣ ಸಲ್ಲಿಸಿ ಮೀನುಗಳನ್ನು ಮರಳಿ ನೀರಿಗೆ ಹಾಕಿಸಿದನು. "ದಯಮಾಡಿ ಎದ್ದು ನಗರಕ್ಕೆ ಬನ್ನಿ" ಎಂದ ರಾಜನ ಮಾತಿಗೆ " ರಾಜಾ ನಾನೂ ಬೆಸ್ತರಿಗೆ ಸೇರಿದ ವಸ್ತು. ನನ್ನ ಬೆಲೆಯನ್ನು ಇವರಿಗೆ ಕೊಟ್ಟು ನನ್ನನ್ನು ಬಿಡುಗಡೆಮಾಡಿಕೋ" ಎಂದುತ್ತರಿಸಿದನು ಆ ಮುನಿ. ಸಾವಿರ ಚಿನ್ನದ ವರಹಗಳನ್ನು ಕೊಡಲು ಮುಂದಾದಾಗ "ಛೆ| ನನ್ನ ಬೆಲೆ ಅಷ್ಟೇ ಅಲ್ಲ" ಎಂದು ಮುನಿ ನಿರಾಕರಿಸಿದನು. ರಾಜನು ಹತ್ತುಸಾವಿರ, ಲಕ್ಷ್ಯ, ಕೋಟಿ ಹೀಗೇ ಏರಿಸುತ್ತಾ ಹೋದರೂ ಮುನಿ "ಇದು ನನಗೆ ಸಮನಾದ ಬೆಲೆಯೇ ಅಲ್ಲ" ಎನ್ನುತ್ತಲೇ ಇದ್ದನು. ಅರ್ಧರಾಜ್ಯವನ್ನು ಕೊಡಲು ಮುಂದಾದ ದೊರೆಗೆ ಇಡೀ ರಾಜ್ಯವನ್ನೇ ಕೊಟ್ಟ ಅದು ತನ್ನ ಬೆಲೆಯಲ್ಲವೆಂದುಬಿಟ್ಟನು. " ರಾಜಾ ನಿನ್ನ ಜೊತೆಯಲ್ಲಿ ಬಂದ ಜ್ಞಾನಿಗಳನ್ನು ಅವರು ಹೇಳಿದಹಾಗೇ ಆಗಬಹುದು "ಎಂದನು ಚ್ಯವನ ಮಹರ್ಷಿ. ರಾನ ಪಕ್ಕದಲ್ಲಿ ನಿಂತಿದ್ದ ವಾನಪ್ರಸ್ಥನೊಬ್ಬ ಮುಂದೆಬಂದು "ರಾಜಾ ಒಂದು ಒಳ್ಳೆಯ ಹಸುವನ್ನು ತರಿಸಿ ಬೆಸ್ತರಿಗೆ ನೀಡು, ಅದೇ ಈ ಮುನಿಯ ನ್ಯಾಯವಾದ ಬೆಲೆ" ಎಂದನು. ರಾಜ ಹಾಗೇ ಮಾಡಲು, ಮುನಿ ಎದ್ದುನಿಂತು "ಇದೀಗ ಸರಿಹೋಯ್ತು ರಾಜಾ, ನನಗೆ ಸರಿಯಾದ ಬೆಲೆ ಎಂದರೆ ಗೋವು ಮಾತ್ರ" ಎಂದನು. ನಂತರ ಗೋಮಾತೆಯ ಗುಣಗಾನವನ್ನು ಆರಂಭಿಸದನು.

"ಗೋವಿಗೆ ಸಮನಾದ ಧನವಿಲ್ಲ. ಗೋವುಗಳನ್ನು ನೋಡುವುದು, ಹೊಗಳುವುದು, ಹೊಗಳಿಕೆಯನ್ನು ಕೇಳುವುದು, ಗೋದಾನ-ಇವು ಎಲ್ಲಾ ಪಾಪಗಳನ್ನೂ ಪರಿಹರಿಸುವ, ಮಂಗಳಕರವಾದ, ಸ್ತುತ್ಯವಾದ ಕರ್ಮಗಳು. ಗೋವುಗಳು ಯಾವಾಗಲೂ ಐಶ್ವರ್ಯಕ್ಕೆ ಮೂಲ. ಗೋವಿನಲ್ಲಿ ಪಾಪವಿಲ್ಲ. ಗೋವು ಯಜ್ಞದ ಕಣ್ಣು; ಯಜ್ಞದ ಮುಖ್ಯ ಸಾಧನ. ವೇದಮಂತ್ರಗಳೂ ಗೋವಿನಲ್ಲಿ ನೆಲೆಸಿವೆ. ದಿವ್ಯ ಮತ್ತು ಅವ್ಯಯವಾದ ಅಮೃತ ಗೋವಿನಲ್ಲಿ ನೆಲೆಸಿದೆ ಮತ್ತು ನಮಗಾಗಿ ಗೋವು ಅದನ್ನು ಸುರಿಸುತ್ತದೆ. ಗೋವು ತೇಜಸ್ಸಿನಲ್ಲಿ ಬೆಂಕಿಗೆ ಸಮಾನ. ಗೋವಿನಿಂದ ಪ್ರಾಣಿಗಳಿಗೆಲ್ಲ ಸುಖ. ಗೋವುಗಳು ನಿರ್ಭಯವಾಗಿ ಉಸಿರಾಡಲು ಅವಕಾಶವಿರುವ ದೇಶವು ಬೆಳಗುತ್ತದೆ. ಗೋವೇ ಸ್ವರ್ಗಕ್ಕೆ ಸೋಪಾನ; ಸ್ವರ್ಗದಲ್ಲಿಯೂ ಗೋವು ಪೂಜ್ಯ. ಗೋವುಗಳು ಕಾಮಧೇನುಗಳು. ತನ್ನ ಹಾಲಿನಿಂದಲೂ ಹವಿಸ್ಸುಗಳಿಂದಲೂ ಪ್ರಜೆಗಳನ್ನು ಪೋಷಿಸುವಳು. ಎತ್ತುಗಳು ಕೃಷಿಕೆಲಸಗಳಲ್ಲಿ, ಭಾರ ಎಳೆಯುವುದರಲ್ಲಿ ಸಹಕಾರಿಗಳು. ತಮ್ಮ ಹಸಿವು, ನೀರಡಿಕೆ, ಬಳಲಿಕೆಗಳನ್ನು ಸಹಿಸಿಕೊಂಡು ನಮಗಾಗಿ ಅವು ಬದುಕುತ್ತವೆ. ಈ ವರೆಗೆ ನಾನು ಹೇಳಿದ್ದು ಗೋವಿನ ಮಹಿಮೆಯಲ್ಲಿ ಒಂದು ಭಾಗಮಾತ್ರ. ಅಷ್ಟನ್ನೇ ನಾನು ಹೇಳಲು ಸಾಧ್ಯ, ಪೂರ್ತಿ ಹೇಳಿ ಮುಗಿಸಲು ಸಾಧ್ಯವಿಲ್ಲ"

---ಇದು ಮಹಾಭಾರತದ ಅನುಶಾಸನದ ೫೧ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.    

ಒಂದು ಸಂಗತಿಯನ್ನು ನಾನು ವೈಯ್ಯಕ್ತಿಕವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ನನ್ನ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸುಮಾರು ೩೦-೩೨ ರಷ್ಟು ಹಸುಕರುಗಳಿದ್ದವು. ದೀಪಾವಳಿಯಲ್ಲಿ ಅಭ್ಯಂಜನದ ದಿನ ಬೆಳಗಿನ ಜಾವ ಅಜ್ಜಿ ಮನೆಯಿಂದ ದೀಪಮುಡಿಸಿ ಅದನ್ನು ಆಕ್ಕಿ ತುಂಬಿದ ಪಾತ್ರೆಯಲ್ಲಿ ಇಟ್ಟುಕೊಂಡೊಯ್ದು ಕೊಟ್ಟಿಗೆಯಲ್ಲಿ ಇಳಿಸಿ, ಎಲ್ಲಾ ಗೋವುಗಳಿಗೂ ಎಣ್ಣೆಯನ್ನು ಹಚ್ಚುತ್ತಿದ್ದರು. ಹಣೆಗೆ ಅರಿಶಿನ, ಕುಂಕುಮ ಮತ್ತು ಮಂಗಲ ಸೇಸೆಗಳನ್ನು ಹಚ್ಚುತ್ತಿದ್ದರು. ಪಾದಗಳಿಗೂ ಮಂಗಾಕ್ ಮತ್ತು ಹೂವುಗಳನ್ನು ಹಾಕಿ ನಮಸ್ಕರಿಸಿ ತಿನ್ನಲು ತೊಳೆದ ಅಕ್ಕಿಯನ್ನು ಬಾಳೆಲೆಯಲ್ಲಿ ಸುತ್ತಿ ಕೊಡುತ್ತಿದ್ದರು. ಅಂದಿನಿಂದ ಆರಂಭಗೊಳ್ಳುವ ದೀಪಾವಳಿ ಗೋಪೂಜೆ, ಮಾರನೇ ದಿನ ಅಮಾವಾಸ್ಯೆಯ ರಾತ್ರಿಯಲ್ಲಿ ವಿಶಿಷ್ಟ ತಿನಿಸಾದ ಕರಿಕೆಸವೆಯ ಕಡುಬನ್ನು ಮಾಡಿ, ಗೋವುಗಳನ್ನು ಪೂಜಿಸಿ, ಅವುಗಳಿಗೆ ತಿನ್ನಿಸುವುದರ ಮೂಲಕ ನಡೆಯುತ್ತಿತ್ತು. ಬಲಿಪಾಡ್ಯದ ದಿನ ಮಹಾಪೂಜೆಯ ಸಂಭ್ರಮ. ಅಂದು ಬೆಳಗಿನಜಾವ ಎಲ್ಲಾ ಗೋವುಗಳನ್ನೂ ಸ್ನಾನಮಾಡಿಸಿ ಮೈಗೆ ಮತ್ತು ಕೊಂಬುಗಳಿಗೆ ಕೆಮ್ಮಣ್ಣು ಮತ್ತು ಶೇಡಿ ಗಳಿಂದ ಹುಬ್ಬು ಹಾಕುತ್ತಿದ್ದರು. ಕೊರಳಿಗೆ ಗಂಟೆಗಳ ಸರ ಮತ್ತು ಹೊಸ ಹಗ್ಗಗಳನ್ನು ಹಾಕಲಾಗುತ್ತಿತ್ತು. ನಮ್ಮಲ್ಲಿನ ಪದ್ಧತಿಯಂತೇ ವೀಳ್ಯದೆಲೆ, ಅಡಕೆ, ಶಿಂಗಾರ, ದನಮಾಲೆ ಹೂವು ಎಂಬ ವಿಶಿಷ್ಟ ಪರಿಮಳಸೂಸುವ ಕಾಡು ಹೂವುಗಳ ತೆನೆ, ಪಚ್ಚೆತೆನೆ ಇತ್ಯಾದಿ ಹಲವು ಸಾಮಾಗ್ರಿಗಳಿಂದ ಕೊರಳನ್ನು ಅಲಂಕರಿಸುತ್ತಿದ್ದರು. ಶಾಸ್ತ್ರೋಕ್ತವಾಗಿ ಗಣಪತಿ ಪೂಜೆಯೊಂದಿಗೆ ಆರಂಭಗೊಳ್ಳುವ ಪೂಜೆ ಅಲಂಕೃತಗೊಂಡಿರುವ ಗೋವುಗಳ ಪಾದಗಳನ್ನು ತೊಳೆಸುವ ಸಾಂಕೇತಿಕ ಕ್ರಿಯೆಗಳೊಂದಿಗೆ ಮುಂದುವರಿಯುತ್ತಿತ್ತು. ಅನ್ನ-ತುಪ್ಪ-ಸಕ್ಕರೆ[ಅಥವಾ ಕಲ್ಲುಸಕ್ಕರೆ ಅಥವಾ ಬೆಲ್ಲ]-ಕಾಯಿತುರಿ-ಬಾಳೇಹಣ್ಣು ಮತ್ತು ಯಾಲಕ್ಕಿ ಭರಿತ ಸುವಾಸನೆಯುಳ್ಳ ಸುಮಧುರ ಗೋಗ್ರಾಸವನ್ನು ತಿನ್ನಲು ಕೊಡಲಾಗುತ್ತಿತ್ತು. ತಿಂದಾದ ನಂತರ ಅವುಗಳ ಬಾಯನ್ನು ಉದ್ದರಣೆಯ ನೀರಿನಿಂದ ತೊಳೆದ ಸಂಕೇತ ಮುಗಿದ ನಂತರ ಮಹಾಮಂಗಲಾರತಿ ಜರುಗುತ್ತಿತ್ತು. ನಂತರ ಅವುಗಳನ್ನು ಮೇಯಲು ಗೋಮಾಳಕ್ಕೆ ಬಿಡುವ ಕಾರ್ಯಕ್ರಮ ಶುಭಮುಹೂರ್ತದಲ್ಲಿ ನಡೆಯುತ್ತಿತ್ತು. ಹೊಲದಲ್ಲಿ, ಗೋಮಾಳದಲ್ಲಿ ನಮ್ಮ ದನಕರುಗಳನ್ನು ತಿನ್ನದಂತೇ ಪ್ರಾರ್ಥಿಸಿ ಹುಲಿಯಪ್ಪನ ಗುತ್ತುಗಳಿಗೆ ಪೂಜೆ ನಡೆಯುತ್ತಿತ್ತು. ಊರ ಆಯಕಟ್ಟಿನ ಸ್ಥಳಗಳಲ್ಲಿ ನೆಲೆಸಿರುವ ಚೌಡಿ-ಮಾಸ್ತಿ-ಜಟ್ಗ[ಜಟ್ಟುಗ] ಇತ್ಯಾದಿ ದೇವತೆಗಳಿಗೆ ವಿಶೇಷ ಪೂಜೆ-ಪ್ರಾರ್ಥನೆ ಅರ್ಪಣೆಯಾಗಿ ದನಕರುಗಳ ಬಾಲಕ್ಕೆ ಒಂದರಂತೇ ತೆಂಗಿನಕಾಯಿ ಸಮರ್ಪಿಸಿ ಅವುಗಳ ರಕ್ಷಣೆಯೆ ಭಾರವನ್ನು ಆ ಎಲ್ಲಾ ದೇವತೆಗಳಿಗೆ ವಹಿಸಲಾಗುತ್ತಿತ್ತು. ನೀವು ನಂಬಿ ಬಿಡಿ: ಗೋಮಾಳಕ್ಕೆ ಮೇಯಲು ಹೋಗಿ ತಪ್ಪಿಸಿಕೊಂಡ ದನ, ಚೌಡಿಗೆ ಪೂಜೆಯ ಹರಕೆ ಗೌರವ ಅರ್ಪಣೆಯಾದ ಮರುಘಳಿಗೆಯಲ್ಲೇ ಕೂಗುತ್ತಾ ಬಂದ ಘಟನೆಗಳನ್ನು ನಾನು ಸ್ವತಃ ಕಂಡಿದ್ದಿದೆ. ಬಲಿಪಾಡ್ಯದ ಸಂಜೆ  ಐದು ಗಂಟೆಗೆ ಕೊಟ್ಟಿಗೆಗೆ ಮರಳುವ ಹಸುಕರುಗಳಿಗೆ ಮಲಗಿಸಿದ ಕತ್ತಿ ಮತ್ತು ಹಾನ [ಓಕುಳಿ] ತೋರಿಸುವಲ್ಲಿಗೆ ದೀಪಾವಳಿ ಗೋಪೂಜೆಯ ಕಾರ್ಯ ಮುಗಿಯುತ್ತಿತ್ತು. [ಇಲ್ಲಿ ಕತ್ತಿಯನ್ನು ತೋರಿಸುವುದು  ಬಹುಶಃ ಅವುಗಳ ರಕ್ಷಣೆಯನ್ನು ನಾವು ಮಾಡುತ್ತೇವೆ ಎಂದು ಹೇಳುವ ಸಂಕೇತ ಇರಬಹುದೇ?] ಇವ್ತಿಗೂ ಇಂತ ಕಾರ್ಯಕ್ರಮಗಳು ನಡೆದರೂ ಗೋಮಾಳಗಳು ಇಲ್ಲವಾಗಿವೆ.

ಗೋ-ಗೀತೆಯೊಂದು ಹೀಗಿದೆ:

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಬಿಟ್ಟರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದು ನಾನಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಕೇಳು
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಹಾಯ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯಿತು ಹೊಡೆಯೇ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆಮಾನವಾ?
ಹರಿಹರಿ ಗೋವು ನಾನು||

ಗೋವಿನ ಮನೋಗತವನ್ನು ಕವಿ ಹೀಗೆ ಬಣ್ಣಿಸಿದ್ದಾರೆ. ಪ್ರಾಯಶಃ ಗೋವು ಹೀಗೂ ಯೋಚಿಸಲಾರದು, ಯಾಕೆಂದರೆ ಗೋವೆಂದರೇ ನಿಷ್ಕಲ್ಮಶ ಮನಸ್ಸು, ದಯೆ-ಕಾರುಣ್ಯಗಳ ಅಗಾಧ ಸಾಗರ. ಗೋವುಗಳ ಬಗ್ಗೆ ಸಹಸ್ರಾರು ಘಟನೆಗಳು ನಮ್ಮ ಪ್ರಾಗೈತಿಹಾಸದುದ್ದಕ್ಕೂ ದೊರೆಯುತ್ತವೆ. ಗೋವುಗಳಿಲ್ಲದೇ ಮಾನವ ಬದುಕು ಸಾಗುವುದಿಲ್ಲ!  ಗೋವು ಯಾವುದಕ್ಕಿಲ್ಲ? ಇವತ್ತಿನ ವಿಜ್ಞಾನ ಪಂಚಗವ್ಯವನ್ನೂ ಪಂಚಾಮೃತವನ್ನೂ ಹೊಗಳುತ್ತಿದೆ ಯಾಕೆಂದರೆ ಅವೆರಡರ ಪ್ರಾಶನದಿಂದ ದೇಹದಲ್ಲಿ ಇನ್ನಿಲ್ಲದ ಬದಲಾವಣೆಗಳು ನಡೆಯುತ್ತವೆ. ಒಂದು ಅಮೃತತುಲ್ಯವಾದರೆ ಇನ್ನೊಂದು ಅಘನಾಶಿನಿಯಾಗಿದೆ-ಶರೀರದಲ್ಲಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿದವರಿಗೆ ಇವುಗಳ ಫಲಾನುಭವ ದೊರೆತಿರುತ್ತದೆ.

ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕಂ |
ಪ್ರಾಶನಂ ಪಂಚಗವ್ಯಸ್ಯ ದಹತು ಅಗ್ನಿರಿವ ಇಂಧನಂ ||

ನನ್ನ ಈ ದೇಹದಲ್ಲಿ ಚರ್ಮದಿಂದ ಮೊದಲುಮಾಡಿ ಮೂಳೆಯವರೆಗೆ ಏನೇನು ಪಾಪವು ಸೇರಿಕೊಂಡಿದೆಯೋ ಅದೆಲ್ಲವನ್ನೂ ಬೆಂಕಿಯು ಕಟ್ಟಿಗೆಯನ್ನು ಸುಡುವಂತೇ ಈ ಪಂಚಗವ್ಯವು ಸುಟ್ಟುಹಾಕಲಿ ಎಂಬುದು ಮೇಲಿನ ಶ್ಲೋಕದ ಅರ್ಥ. ಗುಣಪಡಿಸಲಾರದ ಹಲವು ರೋಗಗಳು ಭಾರತೀಯ ತಳಿಯ ಗೋವಿನ ಮೂತ್ರ ಸೇವನೆಯ ಚಿಕಿತ್ಸೆಯಿಂದ, ಪಂಚಗವ್ಯ ಚಿಕಿತ್ಸೆಯಿಂದ ವಾಸಿಯಾದ ದಾಖಲೆಗಳಿವೆ. ಗೋಮೂತ್ರ ಅರಿಶಿನ ಕಾಮಾಲೆಯ[ಜಾಂಡಿಸ್]ನ್ನು ತೊಡೆದುಹಾಕುತ್ತದೆ. ಆಯುರ್ವೇದದಲ್ಲಿ ಗೋವಿನ ಉಪಯೋಗದ ವಿಸ್ತಾರ ಬಹಳವಾಗಿದೆ. ಇಂಥಾ ಗೋವಿಗೆ ನಮೆಲ್ಲರ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುವುದರ ಜೊತೆಗೆ ಗೋವುಗಳ ರಕ್ಷಣೆ, ಪಾಲನೆ ನಮ್ಮೆಲ್ಲರ ದೈನಂದಿನ ಚಟುವಟಿಕೆಯ ಭಾಗವಾಗಬೇಕಾಗಿದೆ; ನೇರವಾಗಿ ಮಾಡಲಾಗದ ಅನಿವಾರ್ಯತೆಯಲ್ಲಿ ಮಾಡುವ ಸಂಘ-ಸಂಸ್ಥೆಗಳಿಗೆ ಸಹಕಾರವನ್ನೋ ಸಹಾಯಧನವನ್ನೋ ಕೊಡುವ ಮೂಲಕ ಗೋವುಗಳ ಪುನರ್ವಸತಿ ಮತ್ತು ಅವುಗಳ ಹತ್ಯೆ ನಿಷೇಧಿಸುವತ್ತ ನಾವು ಮುನ್ನಡೆಯಬೇಕಾಗಿದೆ. ವಿಪರ್ಯಾಸವೆಂದರೆ ಯಜ್ಞಭೂಮಿಯಾಗಿದ್ದ ಭಾರತದಲ್ಲೇ, ಗೋವುಗಳಿಗೆ ಅನಾದಿಯಿಂದಲೂ ಕೊಟ್ಟ ಮರ್ಯಾದೆಗಳನ್ನು ಹಿಂಪಡೆದು ಅವುಗಳನ್ನು ವಧಿಸಲೂ ಭುಂಜಿಸಲೂ ಕೆಲವರಿಗೆ ಅಧಿಕಾರ ನೀಡಿರುವುದು-ನೆನಪಿಡಿ ಈ ಲೇಖನ ಬರೆಯುವ ಹೊತ್ತಿನಲ್ಲೂ ಭಾರತದಲ್ಲಿ ನಿಮಿಷಕ್ಕೆ ೧೫,೦೦೦ ಹಸುಗಳು ಬಲಿಯಾಗುತ್ತಿರುತ್ತವೆ! ಎಂಥಾ ದುರ್ಭರ ಕಾಲ ಎಂಬುದನ್ನು ಊಹಿಸಿಕೊಳ್ಳಿ. ತಿನ್ನುತ್ತೇನೆ ಎಂಬ ಹುಲಿಯನ್ನಾದರೂ ನಿಗ್ರಹಿಸಬಹುದು ತಿನ್ನುವ ಕಟುಕ ಮನುಜರನ್ನು ನಿಗ್ರಹಿಸುವುದು ಕಷ್ಟ; ಅಂಥವರ ಮನೋಸ್ಥಿತಿ ಬದಲಾಗಲಿ ಎಂದು ದೇವರಲ್ಲೇ ಮೊರೆಯಿಡಬೇಕು, ದನ ತಿನ್ನುವವರಿಗೆ ಕೋಳಿ ಜ್ವರ ರೀತಿ ಏನಾದರೂ ಕಾಯಿಲೆ ಬಾಧಿಸಿದರೆ ಆಗಲಾದರೂ ದನಗಳಿಗೆ ನಿರುಮ್ಮಳ ಸಾಧ್ಯವಾಗಬಹುದು.

ಭಗವಾನ್ ವಶಿಷ್ಠರ ಈ ಹೇಳಿಕೆಯೊಂದಿಗೆ ದೀಪಾವಳಿಯ ಸಂಪೂರ್ಣ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ :

ಗಾವೋ ಮಾಂ ಉಪತಿಷ್ಠಂತು ಹೇಮಶೃಂಗ್ಯಃ ಪಯೋಮುಚಃ
ಸುರಭ್ಯಃ ಸೌರಭೇಯ್ಯಶ್ಚ ಸರಿತಃ ಸಾಗರಂ ಯಥಾ |
ಗಾ ವೈ ಪಶ್ಯಾಮ್ಯಹಂ ನಿತ್ಯಂ ಗಾವಃ ಪಶ್ಯಂತು ಮಾಂ ಸದಾ
ಗಾವೋsಸ್ಮಾಕಂ ವಯಂ ತಾಸಾಂ ಯತೋ ಗಾವಃ ತತೋ ವಯಂ ||

ನದಿಗಳು ಸಮುದ್ರದೆಡೆಗೆ ಓಡಿಹೋಗಿ ಸೇರುವಂತೇ, ಹಸುಗಳು ನನ್ನಬಳಿಗೆ ಓಡಿಬರಲಿ....ನಾನು ನಿತ್ಯವೂ ಹಸುಗಳನ್ನು ನೋಡುವೆನು; ಹಾಗೆಯೇ ಹಸುಗಳೂ ನನ್ನನ್ನು ನೋಡಲಿ. ಹಸುಗಳು ನಮ್ಮವು, ನಾವು ಹಸುಗಳಿಗೆ ಸೇರಿದವರು.ಎಲ್ಲಿ ಹಸುಗಳಿರುವವೋ ಅಲ್ಲಿ ನಾವು ಇರುವೆವು.