ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 8, 2012

ದೀಪಂ ದೇವ ದಯಾನಿಧೇ-೩


ದೀಪಂ ದೇವ ದಯಾನಿಧೇ-೩

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]
ಭಗವದ್ಗೀತೆಯ ಸಮರ್ಪಣೆಯಲ್ಲಿ ನಿರತರಾಗಿರುವ ಜಗದ್ಗುರು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪದಕಮಲಕ್ಕೆ ಭಾಗವು ಅರ್ಪಿತವಾಗಿದೆ.


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಕೃಷ್ಣಯಜುರ್ವೇದದ ವಿಷ್ಣುಸೂಕ್ತದ ಈ ಶ್ಲೋಕದ ಮೂಲಕ ಮೂಢಮನಸ್ಸಿಗೆ ಕವಿದ ಮೋಡವನ್ನು ದೂಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದಾಗಿ ಮೊದಲಾಗಿ ಇಲ್ಲೊಂದು ಪ್ರಾರ್ಥನೆ. ಯಾವುದೇ ಯಜ್ಞಕಾರ್ಯಗಳನ್ನು ಮಾಡುವಾಗ ಮಧ್ಯೆ ನಿಲ್ಲಿಸಬೇಕಾದ ಪ್ರಸಂಗ ಬಂದರೆ ಅದನ್ನು ಪುನಃ ಮುಂದುವರಿಸುವ ಸಮಯದಲ್ಲಿ ಈ ಮೇಲಿನ ಶ್ಲೋಕವನ್ನು ಉಚ್ಚರಿಸುವುದು ವಾಡಿಕೆ. ಭಗವತ್ಪಾದರ ಜೀವನಚರಿತ್ರೆಯನ್ನು ಬರೆಯುವುದು, ಓದುವುದು ಯಾ ಪುನರಪಿ ಅವಲೋಕಿಸುವುದು ಅಥವಾ ಗೊತ್ತಿದ್ದೂ ಮನನ ಮಾಡುವುದು ಮಾಡುವವರಿಗೂ/ಮಾಡಿಸುವವರಿಗೂ ಯಜ್ಞದಂತಹ ಒಂದು ಪುಣ್ಯತಮ ಕೆಲಸವೇ ಎಂದು ಭಾವಿಸಿ ಹೀಗೆ ಆ ಶ್ಲೋಕವನ್ನು ಉಚ್ಚರಿಸಿ ಜ್ಞಾನ ದಾಹಿಗಳಾದ ತಮ್ಮೆಲ್ಲರನ್ನೂ ಶಂಕರ ಚರಿತ್ರೆಯ ಈ ಭಾಗಕ್ಕೆ ಸ್ವಾಗತಿಸುತ್ತಿದ್ದೇನೆ. ಹೀಗೆ ಮಾಡುವುದಕ್ಕೆ ಕಾರಣವಿಷ್ಟೇ: ವರ್ಷವೊಂದಕ್ಕೂ ಹಿಂದೆ ಈ ಚರಿತ್ರೆಯನ್ನು ಹೇಳಲಾರಂಭಿಸಿದ್ದೆ, ಆದರೆ ಕಾರಣಾಂತರಗಳಿಂದ ಮುಂದುವರಿಸದೇ ಹಾಗೇ ಬಿಟ್ಟಿದ್ದೆ, ಈಗ ಮುಂದುವರಿಸುತ್ತಿದ್ದೇನೆ. ಹಿಂದಿನ ಭಾಗಗಳನ್ನು ’ದೀಪಂ ದೇವ ದಯಾನಿಧೇ’ ಹೆಸರಿನಲ್ಲೇ ’ಭಕ್ತಿ ಸಿಂಚನ’ಮಾಲಿಕೆಯಲ್ಲಿ ಓದಿಕೊಳ್ಳಬಹುದಾಗಿದೆ. ಮಧ್ಯೆ ಮಧ್ಯೆ ಬೇರೆ ಬೇರೆ ಕೃತಿಗಳ ಜೊತೆ ಇನ್ನು ಮುಂದೆ ಈ ಚರಿತ್ರೆಯ ಭಾಗವೂ ಆಗಾಗ ಬರುತ್ತಿರುತ್ತದೆ; ಮುಂದುವರಿಸಲ್ಪಡುತ್ತದೆ.

ಮೂರನೆಯ ವಯಸ್ಸಿನಲ್ಲಿ ಬಾಲಕ ಶಂಕರನಿಗೆ ತಂದೆ ಶಿವಗುರು ಚೂಡಾಕರ್ಮ ನೆರವೇರಿಸಿದನು. ನಂತರದ ಕೆಲವು ತಿಂಗಳಲ್ಲೇ ಶಿವಗುರು ವಿಧಿವಶನಾದನು. ಶಂಕರರ ಹಾಗೂ ಮನೆಯ ಸಂಪೂರ್ಣ ಜವಬ್ದಾರಿ ಈಗ ಆರ್ಯಾಂಬೆಯ ಹೆಗಲಿಗೆ ಬಂದಿತ್ತು. ವೇದಾಂತದಲ್ಲಿ ಅಪ್ರತಿಮ ಆಸಕ್ತಿ ತೋರುತ್ತಿದ್ದ ಮಗನಿಗೆ ವಿದ್ಯಾಭ್ಯಾಸ ಕೊಡಿಸುವ ಇಚ್ಛೆ ಆರ್ಯಾಂಬೆಯದು. ಆದರೆ ವಿದ್ಯಾಭ್ಯಾಸ ನಡೆಸಲು ಉಪನಯನವಾಗಬೇಕಿತ್ತು. ಕಷ್ಟದಲ್ಲೇ ಹೇಗೋ ತಾನೇ ಮುಂದೆನಿಂತು ಮಗನಿಗೆ ಉಪನಯನವನ್ನು ನಡೆಸಿದಳು ಆರ್ಯಾಂಬೆ. ಪೂರ್ಣಾನದಿಯ ದಡದಲ್ಲಿದ್ದ ಅಗ್ರಹಾರದಲ್ಲಿ ಗುರುಕುಲವಿದ್ದು ಅಲ್ಲಿಗೆ ಶಂಕರರನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದಳು. ಗುರುಕುಲದಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಅವರು ಹೇಳಿಕೊಡುವ ವಿದ್ಯೆಗಳನ್ನು ಕಲಿಯಬೇಕಾದುದು ಸಂಪ್ರದಾಯವಾಗಿತ್ತು. ಗುರುಗಳೂ ಕೂಡ ಆದರ್ಶಪ್ರಾಯರಾಗಿದ್ದು ಶಿಷ್ಯರನ್ನು ಸ್ವಂತ ಮಕ್ಕಳಂತೇ ಪರಿಭಾವಿಸಿ ತಮ್ಮಲ್ಲಿರುವ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಬಹುಕುಶಾಗ್ರಮತಿಯಾದ ಶಂಕರರು ಗುರುಕುಲದಲ್ಲೇ ಇದ್ದುಕೊಂಡು ವೇದ, ವೇದಾಂಗಗಳು, ಉಪನಿಷತ್ತುಗಳು, ಪುರಾಣಗಳು, ತತ್ವಶಾಸ್ತ್ರ, ನ್ಯಾಯ, ತರ್ಕಶಾಸ್ತ್ರ, ಮೀಮಾಂಸೆ, ವೈಶೇಷಿಕ, ಸ್ಮೃತಿ ಹೀಗೇ ಎಲ್ಲವನ್ನೂ ಕಲಿತುಕೊಂಡರು.

ಗುರುಕುಲದಲ್ಲಿರುವ ವಟುಗಳು ಭಿಕ್ಷಾನ್ನದಿಂದ ಜೀವಿಸಬೇಕೆಂಬ ಒಂದು ಕಟ್ಟುಕಟ್ಟಳೆ ಇದ್ದಿತು. ಪ್ರತಿದಿನ ಬೆಳಿಗ್ಗೆ ಶೌಚಕರ್ಮಗಳನ್ನು ತೀರಿಸಿಕೊಂಡು ಶುಚಿರ್ಭೂತರಾದ ವಟುಗಳು ವಿದ್ಯಾಭ್ಯಾಸದ ಆಯಾದಿನಗಳ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಊರ ಸಜ್ಜನರ ಮನೆಗಳೆದುರು ಭಿಕ್ಷೆ ಎತ್ತುತ್ತಿದ್ದರು. ಹಾಗೆ ತಂದ ಭಿಕ್ಷೆಯನ್ನು ಮಧ್ಯಾಹ್ನದ ಹೊತ್ತಿಗೆ ಭುಂಜಿಸುತ್ತಿದ್ದರು. ಒಂದು ದಿನ ಹೀಗೆ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾಗ ಆ ಮನೆಯೊಡತಿ ಹೊರಗೆ ಬಂದು ಮನೆಯಲ್ಲಿ ಏನೂ ಇಲ್ಲವೆಂದೂ ಮನಸಾ ಭಿಕ್ಷೆ ನೀಡುವುದಕ್ಕೆ ಸಿದ್ಧವಿದ್ದರೂ ಕೈಲಾಗದ ಬಡತನಕ್ಕೆ ತಮ್ಮನ್ನು ಕ್ಷಮಿಸಬೇಕು ವಟುವೇ ಎಂದು ಅಲವತ್ತುಕೊಂಡಳು. " ಅಮ್ಮಾ ಏನೂ ಇಲ್ಲಾ ಎನ್ನಬೇಡಮ್ಮಾ ಏನಾದರೂ ಪರವಾಗಿಲ್ಲ ನಿನಗೆ ಕಾಣಿಸುವುದನ್ನು ಕೊಡಮ್ಮಾ " ಎಂದು ಹಠಕ್ಕೆ ಬಿದ್ದ ಶಂಕರರಿಗೆ ಉಪ್ಪಿನಲ್ಲಿ ಹಾಕಿಟ್ಟಿದ್ದ ನೆಲ್ಲಿಯ ಕಾಯೊಂದನ್ನು ತಂದು ಭಿಕ್ಷೆಯಾಗಿ ಅದನ್ನು ಕೊಡುತ್ತಿರುವುದಕ್ಕೆ ಪುನರಪಿ ಕ್ಷಮೆಯಾಚಿಸಿದಳು. ಶಂಕರರು ಅದನ್ನೇ ತೃಪ್ತಿಯಿಂದ ಅಲ್ಲೇ ಸ್ವೀಕರಿಸಿ ಲೋಟ ನೀರು ತರಿಸಿ ಕುಡಿದು ದಾರಿದ್ರ್ಯ ತುಂಬಿದ ಆ ಮನೆಯಲ್ಲಿ ಸಿರಿ-ಸಂಪತ್ತು ತುಂಬಲೆಂದು ತಾಯಿ ಮಹಾಲಕ್ಷ್ಮಿಯನ್ನು ಕುರಿತು ಪ್ರಾರ್ಥಿಸಿದರು. ಮಹಾಲಕ್ಷ್ಮಿ ಶಂಕರರಿಗೆ ಕಾಣಿಸಿಕೊಂಡು " ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಆ ಮನೆಗೆ ಇದೇ ಗತಿ" ಎಂದರೂ ಶಂಕರರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು. ಆಗ ಲಕ್ಷ್ಮೀಕಟಾಕ್ಷಕ್ಕಾಗಿ ಶಂಕರರ ಬಾಯಿಂದ ಹೊರಟಿದ್ದೇ ಕನಕಧಾರ ಸ್ತೋತ್ರ. ಶಂಕರರ ಸ್ತುತಿಗೆ ಒಲಿದ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿದಳು!

ಶ್ರದ್ಧಾವಾನ್ ಲಭತೇ ಜ್ಞಾನಂತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮ್ ಆಚಿರೇಣಾಧಿಗಚ್ಛತಿ ||

ಇದು ಭಗವದ್ಗೀತೆಯ ಒಂದು ಉಲ್ಲೇಖ. ಶ್ರದ್ಧೆಯುಳ್ಳ ಜಿತೇಂದ್ರಿಯನಾದ ಸಾಧಕನು ಆತ್ಮಜ್ಞಾನ ಲಭಿಸಿ ಪರಮಶಾಂತಿಯನ್ನು ಹೊಂದುತ್ತಾನೆ. ಶಂಕರರು ಶ್ರದ್ಧೆಯುಳ್ಳವರಾಗಿದ್ದರು. ಕರ್ನಾಟಕದ ಕರಾವಳಿಗಳಲ್ಲಿ ಯಕ್ಷಗಾನವಿರುವಂತೇ ಕೇರಳದಲ್ಲಿ ಮೋಹಿನಿಯಾಟ್ಟಂ ಇದೆ. ಅದರ ಅನೇಕ ಪ್ರಸಂಗಗಳನ್ನು ಶಂಕರರು ಅದಾಗಲೇ ನೋಡಿ ಕಥಾಭಾಗಗಳನ್ನು ತಿಳಿದುಕೊಂಡಿದ್ದರು. ಕಲಿತ ವಿದ್ಯೆ ಮತ್ತು ಪರಿಸರ ಶಂಕರರು ತನ್ನನ್ನು ಆಳವಾದ ಚಿಂತನೆಗೆ ಒಳಪಡಿಸಿಕೊಳ್ಳುವಂತೇ ಪ್ರೇರೇಪಿಸಿತು. ವೇದವೇದಾಂತಗಳೇ ಮೂಲ ಗಮನವಾಗಿ ಆತ್ಮಜ್ಞಾನದ ಉತ್ಕಟೇಚ್ಛೆಯಿಂದ ಸದಾ ಸನ್ಯಾಸಿಯಾಗಲು ಹಂಬಲಿಸತೊಡಗಿದ-ಆ ಎಳೆಯ ಬಾಲಕ ಶಂಕರ.

ನ ಕರ್ಮಣಾ ನ ಪ್ರಜಯಾ ಧನೇನ
ತ್ಯಾಗೇನೈಕೇ ಅಮೃತತ್ವಮಾನಶುಃ |
ಪರೇಣ ನಾಕಂ ನಿಹಿತಂ ಗುಹಾಯಾಂ
ವಿಭ್ರಾಜದೇತದ್ಯತಯೋ ವಿಶಂತಿ |
ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ
ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |
ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ
ಪರಾಮೃತಾತ್ಪರಿಮುಚ್ಯಂತಿ ಸರ್ವೇ ||

ಕೈವಲ್ಯೋಪನಿಷತ್ತಿನ ಈ ಹೇಳಿಕೆ ಸಾರುವುದು ಯಾವುದೇ ಕರ್ಮಬಂಧನವಿರದ, ಮಕ್ಕಳು-ಸಂಸಾರ ಎಂಬ ಮೋಹಪಾಶವಿರದ, ಧನ-ಕನಕ ಸಂಪತ್ತಿನ ಒಡೆತನವಾಗಲೀ ಅಪೇಕ್ಷೆಯಾಗಲೀ ಇರದ, ತ್ಯಾಗದಿಂದ ಅಮೃತತ್ವದೆಡೆಗೆ ನಡೆಸುವ ಸನ್ಯಾಸ ಜೀವನವೇ ಶ್ರೇಷ್ಠ. ವೇದಾಂತದ ಅರ್ಥವನ್ನು ಸರಿಯಾಗಿ ಗ್ರಹಿಸಿ ಎಳ್ಳಷ್ಟೂ ಸಂದೇಹವಿರಿಸಿಕೊಳ್ಳದೇ ತಿಳಿದು ಆಚರಣೆಗೆ ತರುವುದು ಕೇವಲ ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು, ಮತ್ತು ಅದನ್ನು ಸಾಧಿಸುವ ಅಧಿಕಾರ ಅಂದರೆ ಅರ್ಹತೆ ಮತ್ತು ಔಚಿತ್ಯ ಇರುವುದು ಸನ್ಯಾಸ ಯೋಗಕ್ಕೆ ಮಾತ್ರ, ಜೀವಿತಾವಧಿಯಲ್ಲಿಯೇ ಇಹ[ ಈ ಲೋಕ] ಮತ್ತು ಪರ[ಬ್ರಹ್ಮಲೋಕ]ಎರಡನ್ನೂ ಅರಿಯುವ ಮತ್ತು ಜನನ-ಮರಣಗಳ ಚಕ್ರದಿಂದ ಮುಕ್ತಿಪಡೆಯುವ ಸನ್ಯಾಸಿ ನಿಜಕ್ಕೂ ಧನ್ಯ. ಮೋಕ್ಷದಾಯಕವಾದ ವೇದಾಂತವನ್ನು ಆಮೂಲಾಗ್ರ ಅರಿಯತೊಡಗಿದ ಶಂಕರರು ’ತನ್ನೊಳಗಿನ ತನ್ನ’ ಪ್ರಭೆಯಿಂದ ಪರಿಪೂರ್ಣ ಜ್ಞಾನವನ್ನು ಪಡೆದರು; ಅದು ಜ್ಞಾನದ ಪರಿಸಮಾಪ್ತಿ! ಯಾವುದನ್ನು ಅರಿಯುವುದರಿಂದ ಎಲ್ಲದರ ಅರಿವುಂಟಾಗುವುದೋ ಮತ್ತು ಯಾವುದನ್ನು ಅರಿಯದೇ ಅರಿತಿದ್ದೆಲ್ಲವೂ ಮಿಥ್ಯವಾಗಿ ತೋರುತ್ತದೋ ಆ ಗಹನವಾದ ವಿಷಯವೇ ವೇದಾಂತದ ಗುರಿ ಎಂದಿದ್ದಾರೆ ಪ್ರಾಜ್ಞರು. ಅಷ್ಟು ಚಿಕ್ಕವಯಸ್ಸಿಗೇ ಪರಮಜ್ಞಾನವನ್ನು ಪಡೆಯುವ ಹಂಬಲ ಶಂಕರರಲ್ಲಿ ಉಂಟಾಗಿದ್ದು ಅವರೊಬ್ಬ ದೈವಾಂಶ ಸಂಭೂತನೆಂಬುದನ್ನು ತೋರಿಸುತ್ತದೆ.

ವಿದ್ಯಾಭ್ಯಾಸ ಪೂರೈಸಿದ ಶಂಕರರಿಗಿನ್ನೂ ತೀರಾ ಚಿಕ್ಕವಯಸ್ಸು. ಆಗಿನ್ನೂ ಎಂಟನೇ ವಯಸ್ಸು ತುಂಬಿದ್ದ ಕಾಲ. ಆ ಮುಗ್ಧ ಬಾಲಕ ತಾಯಿಯ ಜೊತೆಗೆ ಮನೆಯಿಂದ ತುಸು ದೂರವಿರುವ ಪೂರ್ಣಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದ. ಬೇಸಿಗೆಯ ಬಿಸಿಲಿನ ಝಳಕ್ಕೆ ಆ ನದಿಯ ನೀರು ಆರಿಹೋಗಿ ಅಲ್ಲಲ್ಲಿ ನದಿಯ ಮಧ್ಯಭಾಗದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ನದಿಸ್ನಾನ ಮಾಡುವುದು ತಾಯಿ ಆರ್ಯಾಂಬೆಯ ನಿತ್ಯಕರ್ಮಗಳಲ್ಲಿ ಒಂದು. ನದಿಸ್ನಾನವಿಲ್ಲದೇ ಒಂದು ದಿನವೂ ಹಾಗೇ ಆಹಾರ ಸೇವಿಸಿದ್ದೇ ಇಲ್ಲ. ನದಿ ಸ್ನಾನಕ್ಕಾಗಿ ಹೋಗುವಾಗ ಬತ್ತಿದ ನದೀಪಾತ್ರದ ಭಾಗಗಳಲ್ಲಿರುವ ಮರಳುದಿಬ್ಬಗಳನ್ನು ಕ್ರಮಿಸಿ ಸಾಗಬೇಕಾಗಿತ್ತು. ಒಮ್ಮೆ ಹಾಗೆ ಸ್ನಾನಮಾಡಿಬರುವಾಗ ಜೊತೆಯಲ್ಲಿ ಬಾಲಕ ಶಂಕರನಿದ್ದ. ಅಮ್ಮನ ಕೈಹಿಡಿದು ನಡೆದು ಬರುತ್ತಿದ್ದಾಗ ಶಾರೀರಿಕವಾಗಿ ದುರ್ಬಲಳಾಗಿದ್ದ ಆ ತಾಯಿ ಬಿಸಿಲಲ್ಲಿ ಕುಸಿದು ಬಿದ್ದು ಬಿಟ್ಟಳು. ಉರಿಯುವ ಸೂರ್ಯನ ಪ್ರಖರ ಕಿರಣಗಳ ಸೋಕಿನಿಂದ ಬಸವಳಿದರೋ ಏನೋ. ತಲೆಸುತ್ತು ಬಂದು ಬಿದ್ದ ಅಮ್ಮನನ್ನು ಕಂಡು ಶಂಕರರು [ಅಮ್ಮ ಬಿಂದಿಗೆಯಲ್ಲಿ ತಂದಿದ್ದ] ಪಕ್ಕದಲ್ಲಿ ಬಿದ್ದು ಚೆಲ್ಲುತ್ತಿದ್ದ ಬಿಂದಿಗೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಅಮ್ಮನ ಮುಖದಮೇಲೆ ಪ್ರೋಕ್ಷಿಸಿ ತಲೆಗೂ ಸ್ವಲ್ಪ ನೀರು ಹಾಕಿ ತಟ್ಟಿದರು. ಏನೂ ಅರಿಯದ ವಯಸ್ಸಿಗೇ ಇದನ್ನೆಲ್ಲಾ ಶಂಕರರು ಅದು ಹೇಗೆ ಅರಿತರು ಎಂಬುದನ್ನು ಇಲ್ಲಿಯೇ ಅವಲೋಕಿಸಬೇಕು.

ಸಾವರಿಸಿಕೊಂಡ ಅಮ್ಮ ಎದ್ದನಂತರ ನಿಧಾನವಾಗಿ ಕೈಹಿಡಿದು ಮನೆಗೆ ನಡೆಸಿ ತಂದರು. ಅಂದು ರಾತ್ರಿ ಶಂಕರರು ಜಾಗ್ರತರಾಗಿದ್ದರು. ಅವರಿಗೆ ವಿಶ್ರಾಂತಿಯೇ ಬೇಕಿರಲಿಲ್ಲ. ಕೈಮುಗಿದು ಕುಳಿತು ಪೂರ್ಣಾದೇವಿಯಲ್ಲಿ ಪ್ರಾರ್ಥಿಸಿದರು. " ಹೇ ಜಗನ್ನಿಯಾಮಕ ಶಕ್ತಿಯೇ, ನದಿಯ ರೂಪದಲ್ಲಿ ಅಷ್ಟು ದೂರ ಹರಿಯುತ್ತಿರುವ ನಿನ್ನಲ್ಲಿ ನನ್ನ ಪ್ರಾರ್ಥನೆ. ಅಮ್ಮನಿಗೆ ಮುಪ್ಪು, ಜಾಸ್ತಿ ಓಡಾಡಲಾಗದು, ಕೃಪೆಮಾಡಿ ನೀನು ನಮ್ಮ ಮನೆಗೆ ಹತ್ತಿರದಲ್ಲೇ ಹರಿದು ಅಮ್ಮನ ನದಿಸ್ನಾನದ ಬಯಕೆಯನ್ನು ಪೂರೈಸುವವಳಾಗು." ಆ ರಾತ್ರಿ ಮುಗಿಲುತುಂಬ ಮೋಡ ಕಟ್ಟಿ ಎಲ್ಲಿಲ್ಲದ ಮಳೆ ಭೋರ್ಗರೆಯಿತು. ಎಲ್ಲೆಲ್ಲೂ ನೀರು. ಬೆಳಿಗ್ಗೆ ನೋಡಿದಾಗ ಪೂರ್ಣಾ ತನ್ನ ಪಾತ್ರವನ್ನು ಬದಲಾಯಿಸಿ ಶಂಕರರ ಮನೆಯ ಸಮೀಪವೇ ಹರಿಯತೊಡಗಿದ್ದಳು. ದಿವ್ಯಪುರುಷನಾದ ಆ ಬಾಲಕ ಅಮ್ಮನ ಸಲುವಾಗಿ ತೋಡಿಕೊಂಡ ಅಳಲನ್ನು ದಿವ್ಯಶಕ್ತಿ ಪೂರ್ಣೆ ಮನ್ನಿಸಿದ್ದಳು. ಪ್ರಾಯಶಃ ಶಂಕರರ ಸಾಂಗತ್ಯವೂ ಪರೋಕ್ಷವಾಗಿ ಪೂರ್ಣೆಗೆ ಬೇಕಿತ್ತೋ ಏನೋ. ಊರ ಜನತೆಗೆ ಆಶ್ಚರ್ಯ ಹುಟ್ಟಿಸಿದ ಈ ಘಟನೆ ಶಂಕರ ಎಲ್ಲರಂತೇ ಸಾದಾ ಬಾಲಕನಲ್ಲ ಎಂಬ ಅನಿಸಿಕೆಯನ್ನೂ ನೀಡಿತ್ತು!


ಭಾಗ್ಯದ ಬಾಗಿಲು ತೆರೆಯಿತು ಜಗದಲಿ
ಬಾಲಕ ಶಂಕರ ರೂಪದಲಿ |
ಯೋಗ್ಯತೆ ಬಲು ಅಪರೂಪವು ಯುಗದಲಿ !
ಪಾಲಕರಿಗೆ ಮುದನೀಡುತಲಿ ||

ಪೂರ್ಣಾನದಿಯಾದಂಡೆಯ ಮನೆಯೊಳು
ಪೂರ್ಣಚಂದ್ರನವ ಉದಯಿಸಿದ |
ಕರ್ಣಾನಂದದ ಕೃತಿಗಳ ಕೊಡುವೊಲು
ಪರ್ಣಕುಟಿಯೆಡೆಗೆ ತಾ ನಡೆದ ||

ನೆಲ್ಲಿಯ ಕಾಯಿಯ ಭಿಕ್ಷೆಯ ಪಡೆಯುತ
ಒಲ್ಲದ ಲಕ್ಷ್ಮಿಯ ಪ್ರಾರ್ಥಿಸಿದ |
ಬೆಲ್ಲಭಕ್ಷಗಳು ಧನ-ಕನಕಂಗಳು
ಸಲ್ಲುವ ಧಾರೆಯ ಮಂತ್ರಿಸಿದ ||

ತಾಪಸವೊಂದೇ ಕಳೆವುದು ತಾಪವ
ಈಪರಿ ಜನನ-ಮರಣಗಳ |
ಆಪದ್ಭಾಂಧವನೆಲೆಯನು ತೋರುವ
ರೂಪದೊಳಾತ್ಮವ ನೋಡೆನುತ ||

ಬಲುಮುದದಿಂದಾ ಅಮ್ಮನ ರಮಿಸುತ
ಹಲವೆನ್ನದೆ ಕರಜೋಡಿಸಿದ |
ಗೆಲುವಾಗಲು ಹರಸೆನ್ನನು ನ್ಯಾಸಕೆ
ಕಳುಹಿಸುವಂತೇ ಗೋಗರೆದ ||

|| ಸರ್ವೇ ಜನಾಃ ಸುಖಿನೋ ಭವಂತು ||

.......ಮುಂದುವರಿಯುವುದು

Wednesday, January 4, 2012

ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !


ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !

ಬೊಗಸೆಕಂಗಳ ಆ ಚಲುವನನ್ನು ನೋಡುವುದೇ ಕಣ್ಣಿಗೆ ಹಿತ; ಆತ ಮಾತನಾಡುವ ಶುದ್ಧ ಕನ್ನಡವಂತೂ ಮನಕ್ಕೆ ಹಿತ. ಮಾಧ್ಯಮಗಳಲ್ಲಿ ಮೊದಲಾಗಿ ಕಂಡಾಗ ಆತ ಯಾರು ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಉತ್ತಮ ದಿರಿಸುಗಳನ್ನು ಧರಿಸಿ ಸದಾ ಹಸನ್ಮುಖದಿಂದಿರುವ ಆತನನ್ನು ನೋಡುತ್ತಿರುವಾಗಲೇ ಗೌರವಭಾವ ತಂತಾನೇ ಮನದಾಳದ ಮೂಲೆಯಿಂದ ಉಕ್ಕಿ ಬರುತ್ತಿತ್ತು. ಯಾರೆಂದು ಪಕ್ಕಾ ಗೊತ್ತಿಲ್ಲ, ಹುದ್ದೆ ಕೂಡ ತಿಳಿದಿಲ್ಲ, ಆದರೂ ಆ ಪರಿಶುದ್ಧ ಕನ್ನಡದ ವಾಗ್ಝರಿ ನನ್ನ ಮನಸ್ಸನ್ನು ಸೆರೆಹಿಡಿದು ಬಿಟ್ಟಿತ್ತು. ಮಾಧ್ಯಮಗಳು ಹೆಸರನ್ನು ಆಗಾಗ ಬಿತ್ತರಿಸಿದಮೇಲೆ ಕುತೂಹಲ ಕೆರಳಿತು. ಅಂದಿನಿಂದ ಇಂದಿನವರೆಗೂ ನೋಡುತ್ತಲೇ ಬಂದಿದ್ದೇನೆ, ಈ ವಿಠಲ ಐ.ಎಂ.ವಿಠಲ ನಿಜಕ್ಕೂ ನಮ್ಮ ಹೆಮ್ಮೆಯ ವಿಠಲ!

ಒಂದಾನೊಂದು ಕಾಲಕ್ಕೆ ಅಂದರೆ ಎರಡು ದಶಕಗಳ ಹಿಂದೆ ಸರ್ಕಾರೀ ಸ್ವಾಮ್ಯದ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ಲುಕ್ಸಾನಿನಲ್ಲಿ ನಡೆಯುತ್ತಿತ್ತು. ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಥರದಲ್ಲೇ ಇನ್ನೇನು ಮುಳುಗಿಹೋಗುವ ಹಡಗು ಅದು. ಅಂತಹ ಹಡಗಿಗೆ ನಾವಿಕನಾಗಿ ನಡೆದು ಬಂದವರು ದಕ್ಷ ಭಾ.ಆ.ಸೇ ಅಧಿಕಾರಿ ಐ.ಎಂ ವಿಠ್ಠಲಮೂರ್ತಿ. ಕುತ್ಸಿತ ರಾಜಕಾರಣಕ್ಕೆ ನೊಂದಿದ್ದರೂ ಬ್ರಷ್ಟ ರಾಜಕಾರಣಿಗಳ ವರ್ಗಾವರ್ಗಿ ಅವಾಂತರಗಳಿಗೆ ಬೆದರದ ಏಕೈಕ ಅಧಿಕಾರಿ ಅವರು ಎಂದರೆ ತಪ್ಪಲ್ಲ! ತನಗೆ ಇಂತಹ ಜಾಗವನ್ನೇ ಕೊಡಿ ಎಂದು ಮಂತ್ರಿಗಳಲ್ಲಿ ಅವರು ಎಂದೂ ಕೇಳಲಿಲ್ಲ. ಎಲ್ಲಿಗೆ ವರ್ಗಾಯಿಸಿದ್ದಾರೋ ಅಲ್ಲಿಗೆ ಸಾಗಿ ತನಗೆ ಒದಗಿಬಂದ ಕೆಲಸದಲ್ಲಿ ಕರ್ತವ್ಯಪರತೆಯನ್ನು ಅತಿ ಪ್ರಾಮಾಣಿಕವಾಗಿ ಮಾಡಿದ ವ್ಯಕ್ತಿ. ಎಮ್. ಎಸ್. ಐ.ಎಲ್ ಒಂಥರಾ ಹಣವನ್ನು ತಿಂಬ ಯಾವ ಆಡೂ ಮುಟ್ಟದ ಗಿಡವಾಗಿತ್ತು. ಯಾಕೆಂದರೆ ಅದರಲ್ಲಿ ಇರುವ ಸತ್ವವನ್ನು ಹೀರಿ ಹೀರಿ ಬಿಸಾಡಿದ ಕಬ್ಬಿನ ಸಿಪ್ಪೆಯಂತಿತ್ತು ಅದರ ಸ್ವರೂಪ. ಅನೇಕರು ಬಂದರು ಹೋದರು ಆದರೆ ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹಾಳು ಬಾವಿಗೆ ನೂಕಿದಂತೇ ವಿಠ್ಠಲಮೂರ್ತಿಯವರನ್ನು ಅಲ್ಲಿಗೆ ವರ್ಗಾ ಮಾಡಿದರು. ನಮ್ಮ ವಿಠಲ ಕ್ಯಾರೇ ಅನ್ನಲಿಲ್ಲ. ಆದೇಶ ಕೈಗೆ ಬಂದ ಕ್ಷಣದಿಂದ ಎಮ್.ಎಸ್.ಐ.ಎಲ್ ಅನ್ನು ಸುಂದರ ನಂದನವನ್ನಾಗಿ ರೂಪಿಸುವ ಕನಸುಕಂಡರು.

ಅಧಿಕಾರಿಗಳಿಗೆ ಅಧಿಕಾರೀ ವರ್ಗಕ್ಕೆ ತಮ್ಮ ಖಾಸಗೀ ಬೊಕ್ಕಸ ತುಂಬಿಸಿಕೊಳ್ಳುವ ರಹದಾರಿಯ ಚಿಂತೆಯೇ ಸದಾ ಇರುತ್ತದೆ. ಅವರಿಗೆ ಸಂಗೀತ, ಸಾಹಿತ್ಯ, ಕಲೆ ಇವೆಲ್ಲಕ್ಕೂ ಸಮಯ ವ್ಯಯಿಸುವ ವ್ಯವಧಾನವಿಲ್ಲ. ಏನಿದ್ದರೂ ಕಂತೆಗಳನ್ನು ಎಣಿಸಿಕೊಳ್ಳಬೇಕು. ಬರುವುದರಲ್ಲಿ ಮುಕ್ಕಾಲು ಪಾಲು ತನಗೆ, ಕಾಲು ಪಾಲು ಮುಂದಿನ ತನ್ನ ಪೋಸ್ಟಿಂಗ್ ಮಾಡಿಸಿಕೊಳ್ಳಲು ಸಂಬಂಧಿಸಿದ ಮಂತ್ರಿಗೆ ಸೂಟ್ಕೇಸ್ ಸಲುವಾಗಿ! ಇವತ್ತಿಗೆ ಸರಕಾರೀ ಇಲಾಖೆಗಳಲ್ಲಿ ಕೆಲಸ ಮಾಡುವವರ ಹಣೆಬರಹವೇ ಇದು. ಸರ್ಕಾರೀ ನೌಕರಿ ಎಂದ ತಕ್ಷಣ ’ವರ್ಗಾವರ್ಗಿಗೆ’ ಎಂಬ ಅಕೌಂಟನ್ನು ತೆರೆಯಲಾಗುತ್ತದೆ! ಸರಕಾರದಲ್ಲಿರುವ ಮಂತ್ರಿಮಹೋದಯ ಬ್ರಷ್ಟರು ತಮ್ಮ ಖಾತೆ ಹಂಚಿಕೊಳ್ಳುವಾಗಲೂ ಈ ಬೊಕ್ಕಸದಮೇಲೆ ನಿಗಾ ಇರಿಸಿಯೇ ಹಾಗೆ ಕೋರುವುದು. ಖಾತೆ ಸರಿಯಾಗಿಲ್ಲ ಎಂಬ ಅಸಮಾಧಾನದಿಂದ ರಾಜೆನಾಮೆ ಒಗೆದ ಮಂತ್ರಿಗಳೂ ಇದ್ದಾರೆ! ಯಾರು ಪಾಪದ ಶಾಸಕರಾಗಿ ಅನೇಕಬಾರಿ ಆರಿಸಿಬಂದು ಮಂತ್ರಿಯಾಗಲು ಮಿಕ್ಕೆಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೋ ಅಂಥವರಿಗೆ ’ಬೊಕ್ಕಸ ರಹಿತ’ ಖಾತೆಗಳನ್ನು ಕರುಣಿಸಲಾಗುತ್ತದೆ. ಪ್ರಧಾನ ಖಾತೆಗಳಲ್ಲಿ ವಿರಾಜಮಾನರಾಗುವ ಶ್ರೀಮಾನ ಮಂತ್ರಿಗಳನ್ನು ಕಾಣಲು ಬರಿಗೈಯ್ಯಿಂದ ಹೋದರೆ ದರ್ಶನಭಾಗ್ಯ ಲಭಿಸಲಾರದು! ಅದಕ್ಕೆ ಏನಿದ್ದರೂ ಸೂಟ್ ಕೇಸ್ ಬೇಕಾಗುತ್ತದೆ. ಅಧಿಕಾರಿಗಳು, ತಂತಮ್ಮ ಕೆಲಸಗಳಿಗೆ ಮಂಜೂರಾತಿ ಬಯಸುವ ನಾಗರಿಕರು, ಪರಿಹಾರ ಕೋರಿ ಬರುವ ಹಳ್ಳಿಗರು ಯಾರೇ ಇರಲಿ |ಕಾಂಚಾಣಂ ಕಾರ್ಯ ಸಿದ್ಧಿಃ | ಅದಿರದಿರೆ ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆಯಂತೇ ತೊಲಗಿ ಎಂಬುದು ಸಚಿವಾಲಯಗಳ ಸೈಲೆಂಟ್ ಸ್ಲೋಗನ್ನು! ಇಂತಹ ಬ್ರಷ್ಟಸಾಗರ[ಸಪ್ತಸಾಗರಗಳಿಗೂ ಬೃಹತ್ತಾದ ಮಹಾಸಾಗರ ಇದು!]ದಲ್ಲಿ ಯಾರಿಂದಲೂ ಪೈಸೆ ಗಿಂಜದೇ, ತನ್ನ ಸೀಟಿನ ಉಳಿವಿಗಾಗಿ ಬ್ರಷ್ಟರಿಗೆ ಸೊಪ್ಪುಹಾಕದೇ ಧೀರನಾಗಿ ಕರ್ತವ್ಯಪಾಲನೆ ಮಾಡಿದ ಹೆಗ್ಗಳಿಕೆ ನಮ್ಮ ವಿಠಲರದು.

ಅಧಿಕಾರಿಗಳೆಲ್ಲರೂ ಮನೆಗಳ ಮೇಲೆ ಮನೆಗಳನ್ನು ಕಟ್ಟುವ, ಹತ್ತಾರು ಸೈಟು ಖರೀದಿಸುವ ಹುನ್ನಾರದಲ್ಲಿದ್ದರೆ ವಿಠಲರು ಕನ್ನಡವನ್ನು ಕಟ್ಟುವ ಯೋಜನೆಯಲ್ಲಿದ್ದರು. ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿಯೂ ಸಾಹಿತ್ಯಕವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಐ.ಎ.ಎಸ್. ಅಧಿಕಾರಿ ಇದ್ದರೆ ಅವರು ವಿಠ್ಠಲ ಮೂರ್ತಿ ಒಬ್ಬರೇ! ತಮಗೆ ಕೊಟ್ಟ ಎಮ್.ಎಸ್. ಐ.ಎಲ್ ಊರ್ಜಿತಗೊಳ್ಳಬೇಕು, ಕನ್ನಡದ ಸೇವೆಯೂ ನಡೆಯಬೇಕು ಈ ಎರಡೂ ಘನ ಉದ್ದೇಶಗಳನ್ನು ಇಟ್ಟುಕೊಂಡು ಹಲವುಕ್ಷಣ ಯೋಚಿಸಿ, ಯೋಜಿಸಿ ಚಂದನದಲ್ಲಿ ’ನಿತ್ಯೋತ್ಸವ’ ಎಂಬ ಕಾರ್ಯಕ್ರಮವನ್ನು ರೂಪಿಸಿದವರು ಇದೇ ವಿಠ್ಠಲಮೂರ್ತಿಗಳು. ಸುಗಮಸಂಗೀತದ ಸೊಗಸಾದ ಪ್ರಸ್ತುತಿಯೊಡನೆ ಅನೇಕ ಹಿರಿಯ ಕವಿಗಳ ಕವಿತೆಗಳ ಮೆಲುಕುವಿಕೆಯೊಡನೆ ಎಮ್.ಎಸ್.ಐ.ಎಲ್ ಎಂಬ ಸಂಸ್ಥೆಯೊಂದಿದೆ-ಅದರ ಉತ್ಫನ್ನಗಳು ಇಂತಿಂಥವು ಎಂಬುದನ್ನು ಜನತೆಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾದವರು ವಿಠ್ಠಲಮೂರ್ತಿ. ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಬಂದರು. ಅಲ್ಲೂ ಕೂಡ ತಮ್ಮ ಛಾಪನ್ನು ಒತ್ತಿದರು. ಅವರು ಹೋದಲ್ಲೆಲ್ಲಾ ಕನ್ನಡದ್ದೇ ಸುದ್ದಿ. ಕನ್ನಡದ ಅಭಿವೃದ್ಧಿ ಹೇಗೆ ? ಕನ್ನಡಕ್ಕೆ ಏನೇನು ಕೊಡಲಾದೀತು ? ಇಂಥದ್ದೇ ಮಾತು.

ಜನಪದ ಕಲಾಪ್ರಕಾರಗಳಿಗೆ ಆದ್ಯತೆ ದೊರೆತು ರಾಜಧಾನಿಯಲ್ಲಿ ಅವು ಬಹುಕಾಲ ವಿಜೃಂಭಿಸಿದ್ದೂ ಕೂಡ ವಿಠ್ಠಲಮೂರ್ತಿಗಳ ಪ್ರಯತ್ನದಿಂದಲೇ. ಕನ್ನಡ ನೆಲದ ಯಾವ ಕಲೆಯೂ ಹಿಂದಕ್ಕೆ ಬೀಳಬಾರದು, ಕಡೆಗಣಿಸಲ್ಪಟ್ಟು ನಶಿಸಿಹೋಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಸೇರಿದಂತೇ ಅನೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಜನಪದ ಸೊಗಡು ಮೆರೆಯುವಂತೇ ಮಾಡಿದರು. ಅನೇಕಾವರ್ತಿ ಹಲವು ವೇದಿಕೆಗಳಲ್ಲಿ ಅವರನ್ನು ಕಾಣುವ ಮೊದಲೇ ಅವರ ಹೆಸರಿನ ಪ್ರಸ್ತುತಿಯಾಗುವ ಮೊದಲೇ ನಾನು ಮನದಲ್ಲೇ ಲೆಕ್ಕಹಾಕಿಕೊಂಡು ಇದು ವಿಠ್ಠಲಮೂರ್ತಿಗಳ ಮಾರ್ಗದರ್ಶನದ ಕಾರ್ಯಕ್ರಮ ಎಂದು ಅನೇಕ ಮಿತ್ರರ ಎದುರಿಗೆ ಹೇಳುವುದಿತ್ತು; ಅದು ಹೌದಾಗಿಯೂ ಇರುತ್ತಿತ್ತು. ಇಂತಹ ವಿಠ್ಠಲಮೂರ್ತಿ ಮಧ್ಯೆ ಮಧ್ಯೆ ಅದೆಲ್ಲೆಲ್ಲಿಗೋ ಎತ್ತಂಗಡಿಯಾದರು. ಎಲ್ಲಿಗೇ ಹೋದರು ತನ್ನತನ ಬಿಡಲಿಲ್ಲ; ಕನ್ನಡತನ ಮರೆಯಲಿಲ್ಲ! ಜಂಬದ ಅಧಿಕಾರಿಗಳು ಆಂಗ್ಲಭಾಷೆಯಲ್ಲಿ ಎರಡು ಮಾತನಾಡಿದರೇ ಜಾಸ್ತಿ ಅಂಥದ್ದರಲ್ಲೂ ಅಚ್ಚಗನ್ನಡದಲ್ಲಿ ನೆಚ್ಚಿಮಾತನಾಡುವ ಪರಭಾಷೆಗಳ ಮಹಾಪೂರದಲ್ಲಿ ಕೊಚ್ಚಿಹೋಗದಂತೇ ಎಚ್ಚರಿಕೆಯ ಗಂಟೆ ಅಲ್ಲಾಡಿಸುವ ಕೆಚ್ಚೆದೆಯ ಕನ್ನಡಿಗ ಅಧಿಕಾರಿ ಇವರಾಗಿದ್ದರಿಂದ ನನಗಿವರು ಅಚ್ಚುಮೆಚ್ಚು, ಅವರನ್ನೊಮ್ಮೆ ಖುದ್ದಾಗಿ ಕಾಂಬ ಹುಚ್ಚು.

ಮೊನ್ನೆ ಸಂಸ್ಕೃತಿ ಬಾಗಿನ ಎಂದು ವರದಿ ಬಂದಾಗಲೇ ನಾನೆಚ್ಚೆತ್ತುಕೊಂಡಿದ್ದು, ಓಹೋ ನಮ್ಮ ವಿಠ್ಠಲಮೂರ್ತಿಗೆ ನಿವೃತ್ತಿಯಾಯ್ತು ಎಂಬುದು. ಅವರನ್ನೂ ಅವರ ಮುಖಲಕ್ಷಣವನ್ನೂ ಅವರ ಶಾರೀರಿಕ ನವಚೈತನ್ಯವನ್ನೂ ನೋಡಿದಾಗ ಹಾಗನ್ನಿಸುವುದೇ ಇಲ್ಲ; ಆದರೂ ದಾಖಲೆಯಲ್ಲಿ ವಯಸ್ಸು ನಮೂದಿತವಾಗಿರುವ ಮೀಟರ್ ಓಡುತ್ತಿರುತ್ತದಲ್ಲಾ ! ಇಂತಹ ಅಧಿಕಾರಿಗಳಿಗೆ ೫೮-೬೦ ವಯಸ್ಸೆಲ್ಲಾ ಲೆಕ್ಕವಲ್ಲ, ಬಹುಶಃ ಜೀವಿತದಲ್ಲಿರುವವರೆಗೂ ಅವರು ಜಾಗ್ರತರಾಗಿರುತ್ತಾರೆ, ನಿರಂತರ ಒಂದಿಲ್ಲೊಂದು ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಇಂಥವರ ಸಲಹೆ ಯಾವಕಾಲಕ್ಕೂ ಸರಕಾರಕ್ಕಾಗಲೀ ಸಮಾಜಕ್ಕಾಗಲೀ ಒಳಿತು. ಅದಕ್ಕೆಂತಲೇ ಜನಪದ ಕಲಾವಿದರು, ಕವಿ-ಸಾಹಿತಿಗಳು, ಗಣ್ಯ-ಮಾನ್ಯರು ಸೇರ್‍ರಿ ಅವರಿಗೆ ಸಂಸ್ಕೃತಿ ಬಾಗಿನ ಅರ್ಪಿಸಿದರು-ಸಲ್ಲಲೇ ಬೇಕಾಗಿದ್ದ ಗೌರವ ಅದು. ನಿವೃತ್ತರಾದ ಅವರು ಹೇಳಿದ್ದು ಒಂದೇ ಮಾತು" ಅಧಿಕಾರಿಗಳೇ ಬ್ರಷ್ಟಾಚಾರಕ್ಕೆ ಮಣಿಯಬೇಡಿ, ವರ್ಗಾವರ್ಗಿಗೆ ಹೆದರಬೇಡಿ ಹಾಕಿದಲ್ಲಿಗೆ ಹೋಗಿ ನಿಮ್ಮತನ ಉಳಿಸಿಕೊಳ್ಳಿ " ಎಂಬುದು. ಹಾಗೊಮ್ಮೆ ಅಧಿಕಾರಿಗಳೆಲ್ಲಾ ಆರಂಭಿಸಿದರೆ ಆಗ ಸೂಟ್ ಕೇಸ್ ವ್ಯವಹಾರ ಕಮ್ಮಿಯಾಗುತ್ತದೆ. ರಾಜಕೀಯದವರ ಖಾಸಗೀ ಬೊಕ್ಕಸದ ಒಂದು ಭಾಗ ಬರಿದಾಗುತ್ತದೆ! ಆದರೆ ಅವರ ಮಾತನ್ನು ಎಷ್ಟುಮಂದಿ ಅಧಿಕಾರಿಗಳು ಕಿವಿಗೆ ಹಾಕಿಕೊಂಡರು? ನಮ್ಮ ನಡುವೆ ಇರುವ ಇಂತಹ ಶುದ್ಧಹಸ್ತರನ್ನು ಗೌರವಿಸುವುದು, ಅವರ ಸಲಹೆಗಳನ್ನು ಪಡೆಯುವುದು ಬಹಳ ಆರೋಗ್ಯಕರ ಎನಿಸುತ್ತದೆ. ಹೆಚ್ಚಿಗೆ ಏನು ಹೇಳಲಿ ಸಂಸ್ಕೃತಿ ಬಾಗಿನ ಪಡೆದ ವಿಠಲರೇ ಕೇವಲ ಸರಕಾರೀ ಅಧಿಕಾರದಿಂದ ನಿವೃತ್ತರಾದ ನಿಮಗೆ ನಮ್ಮೆಲ್ಲರ ಶುಭಹಾರೈಕೆಗಳು ಮತ್ತು ಮುಂದಿನ ನಿಮ್ಮ ದಿನಗಳಲ್ಲಿ ನಾವು ನಿಮ್ಮಿಂದ ಇನ್ನೂ ಹೆಚ್ಚಿನ ಕನ್ನಡ ಸೇವೆಯನ್ನು ಬಯಸುತ್ತೇವೆಯೇ ಹೊರತು ನಿಮಗೆ ಶುಭವಿದಾಯ ಕೋರಲು ನಾವು ಸಿದ್ಧರಿಲ್ಲ! ಕನ್ನಡ ನಾಡು ಕಂಡ ಅಗ್ದೀ ಛೊಲೋ ಅಧಿಕಾರಿಗಳಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು, ಒಪ್ಪಿಸಿಕೊಳ್ಳಿ: ಈ ಕ್ಷಣಕ್ಕೆ ಈ ಲೇಖನದ ಮೂಲಕ ನಿಮಗೆ ಹೀಗೊಂದು ಗೌರವಪೂರ್ವಕ ನಮಸ್ಕಾರ.

Monday, January 2, 2012

ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!


ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!

ಈ ಲೋಕದ ಪ್ರತಿಯೊಂದು ವಸ್ತುವಿಗೂ ಜೀವಿಗೂ ಧರ್ಮ ಎಂಬುದೊಂದಿದೆ. ಧರ್ಮ ಎಂದರೆ ಮತವಲ್ಲ. ಧರ್ಮ ಮತಕ್ಕೆ ಹೊರತಾಗಿದೆ. ಮತವೆಂದರೆ ಅದಕ್ಕೊಬ್ಬ ರೂವಾರಿ ಇರುತ್ತಾನೆ, ಮತವನ್ನು ಹುಟ್ಟುಹಾಕಿ ಅದನ್ನು ಪ್ರಚಲಿತಕ್ಕೆ ತಂದು ಮುಂದುವರಿಸುವಂತೇ ಆ ಕುರಿತು ಕೆಲವು ತನ್ನದೇ ಆದ ಸಿದ್ಧಾಂತಗಳನ್ನು ಮಂಡಿಸಿರುತ್ತಾನೆ. ಮತವೆಂಬುದು ಸೀಮಿತ ಪರಿಧಿಯ ಒಂದು ಜೀವಿತ ಕ್ರಮ. ಧರ್ಮ ಎಂಬುದು ಹಾಗಲ್ಲ. ಹುಟ್ಟಿದ ಪ್ರತೀ ಜೀವಿಗೆ ಹಸಿವು ಎಂಬುದಿದೆ, ಹೊಟ್ಟೆಯಿದೆ, ಅದು ಆಹಾರ ಸ್ವೀಕರಿಸುತ್ತದೆ. ಇಲ್ಲಿ ಆಹಾರ ಸ್ವೀಕರಿಸುವುದು ಸಹಜ ಧರ್ಮ. ಮನುಷ್ಯ ಜೀವನಕ್ಕೆ ಆಹಾರ, ವಸತಿ ಮತ್ತು ಬಟ್ಟೆ [ಫುಡ್, ಶೆಲ್ಟರ್ ಅಂಡ್ ಕ್ಲೋದಿಂಗ್] ಅತೀ ಪ್ರಮುಖವಾದ ಅಂಶಗಳು. ತದನಂತರ ನಿದ್ರೆ, ಮೈಥುನ ಇವೆಲ್ಲಾ ಬರುತ್ತವೆ. ಈ ಎಲ್ಲಾ ಅಂಶಗಳು ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳು. ಮನುಷ್ಯನಿಗೆ ಮಿಕ್ಕೆಲ್ಲಾ ಜೀವಿಗಳಿಗಿಂತ ವಿಶೇಷವಾದ ಪ್ರಾಕೃತಿಕ ಸಂಪತ್ತೊಂದಿದೆ! ಅದೇ ಹೆಚ್ಚಿನ ಶಕ್ತಿಯನ್ನು ಪಡೆದ ಮೆದುಳು. ಆ ಮೆದುಳನ್ನು ಬಳಸಿಕೊಂಡು ಮನುಷ್ಯ ಸ್ವತಂತ್ರವಾಗಿ ಯೋಚಿಸಬಲ್ಲ, ನಾನಾ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲ, ಕೆಲವು ಮಟ್ಟಿಗೆ ಬೇರೇ ಜೀವಿಗಳನ್ನು ನಿಯಂತ್ರಿಸಬಲ್ಲ, ತನಗೆ ಬೇಕಾದ ಯಂತ್ರೋಪಕರಣಗಳನ್ನು ಸೃಜಿಸಿಕೊಳ್ಳುವುದರೊಂದಿಗೆ ಅವುಗಳ ಕಾರ್ಯಗಳನ್ನೂ ನಿಯಂತ್ರಿಸಬಲ್ಲ. ಇದೇ ಮನುಷ್ಯ ಮನುಷ್ಯನಾಗಿ ಹೇಗೆ ಜೀವಿಸಬೇಕು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತಾನೆ! ಆ ಮರೆಯುವಿಕೆಯಲ್ಲಿ ತನ್ನ ಸಹಜಧರ್ಮದಿಂದ ಆತ ವಿಚಲಿತನಾಗುತ್ತಾನೆ. ಹಾಗಾದರೆ ಏನಾಗುತ್ತದೆ ಮತ್ತು ಹಾಗಾಗದಿದ್ದರೆ ಏನು ಒಳಿತಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶದಪಡಿಸುವ ಮೂಲಕ ಮಾನವ ಜೀವನ ಧರ್ಮವನ್ನು ಉತ್ಕೃಷ್ಟರೀತಿಯಲ್ಲಿ ಎತ್ತಿ ಹಿಡಿಯುವ ಭಾರತೀಯ ಪುರಾತನ ಗ್ರಂಥವೇ ಭಗವದ್ಗೀತೆ!


ಗೀತೆಯ ಬಗ್ಗೆ ಹಿಂದೊಮ್ಮೆ ಸುಮಾರು ಬರೆದಿದ್ದೇನೆ. ಮತ್ತೆ ಮತ್ತೆ ಅದನ್ನೇ ಬರೆದರೆ ಚಂದವಾಗಲಿಕ್ಕಿಲ್ಲ. ಗೀತೆಯ ಬಗೆಗಿನ ಆ ಲೇಖನವನ್ನು ಇಲ್ಲಿ ಓದಿಕೊಳ್ಳಬಹುದಾಗಿದೆ : http://nimmodanevrbhat.blogspot.com/2011/07/blog-post_24.html [|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ||]

ಪ್ರಸಕ್ತ ನಾನು ಹೇಳಹೊರಟಿರುವುದು ಇಸ್ಕಾನ್ ಸ್ಥಾಪನಾಚಾರ್ಯರಾದ ಪ್ರಭುಪಾದರ ಅರ್ಥವಿವರಣೆಯ ಕುರಿತು. ಪ್ರಭುಪಾದರ ಕಾಲಘಟ್ಟದಲ್ಲಿ ಅವರು ತಮಗೆ ಲಭಿಸಿದ ಆಕರಗಳ ಮೂಲಕ ಗೀತೆಯನ್ನು ಅರ್ಥವಿಸಿಕೊಂಡಿದ್ದನ್ನು ಹೇಳಿಹೋಗಿದ್ದಾರೆ; ಅದನ್ನೇ ಕನ್ನಡಕ್ಕೂ ಇನ್ನಿತರ ಹಲವು ಭಾಷೆಗಳಿಗೂ ತರ್ಜುಮೆಮಾಡಿ ಕೋಟ್ಯಂತರ ಪ್ರತಿಗಳನ್ನು ಜಗದಾದ್ಯಂತ ಹಂಚಿದ್ದೇವೆ ಎಂಬ ಹೆಗ್ಗಳಿಕೆ ಇಸ್ಕಾನ್ ಭಕ್ತರದು. ಪ್ರಭುಪಾದರು ಹೇಳಿದ್ದೇ ಎಲ್ಲವೂ ಅಲ್ಲ, ಅಲ್ಲಿ ಅರ್ಥಗ್ರಹಣದಲ್ಲಿ ಸ್ವಲ್ಪ ವಿವೇಚಿಸಬೇಕಾಗಿದೆ ಎಂಬುದು ಇಸ್ಕಾನ್ ಹೊರತಂದ ಆ ಅನುವಾದಿತ ಗೀತೆಯನ್ನು ಓದಿದವರ ಅಂಬೋಣ. ಇರಬಹುದು; ಅವರು ಅಂದು ಹೇಳಿದ್ದು ಇಂದಿಗೆ ತೀರಾ ನೂರಕ್ಕೆ ನೂರು ಸಮಂಜಸ ಎನ್ನುವುದು ಕಷ್ಟವಾಗಬಹುದು ಆದರೆ ಪ್ರಭುಪಾದರು ಹೇಳಿದ ಕೆಲವು ಅಂಶಗಳು ಈಗಾಗಲೇ ಸತ್ಯವಾಗಿ ತೋರುತ್ತವೆ! ಹೀಗಾಗಿ ಅವುಗಳನ್ನು ತೀರಾ ಅಲ್ಲಗಳೆಯಲಿಕ್ಕೂ ಆಗುವುದಿಲ್ಲ!

ಪ್ರಭುಪಾದರ ಅನುವಾದಿತ ಆ ಗೀತೆಯಲ್ಲಿ ಒಂದೆರಡು ಮುಖ್ಯ ಅಂಶಗಳು ಹೀಗಿವೆ :
* ಮೊದಲನೆಯದು ವರ್ಣಾಶ್ರಮದ ಬಗ್ಗೆ.
* ಎರಡನೆಯದು ಸಮಾಜದ ಮುಂದಿನ ಪೀಳಿಗೆಯ ಬಗ್ಗೆ.


ಯಾವುದೇ ವ್ಯಕ್ತಿ ತನ್ನ ಸಹಜ ಧರ್ಮವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಕೂಡದು ಎಂದು ಅವರು ಪ್ರತಿಪಾದಿಸಿದ್ದಾರೆ. ಉದಾಹರಣೆ ಹೀಗಿದೆ: ವೈಶ್ಯನೊಬ್ಬ ವ್ಯಾಪಾರ ಮಾಡುವುದು ಸಹಜ. ವ್ಯಾಪಾರದಲ್ಲಿ ಮೋಸಮಾಡುವುದೂ ಕೂಡ ಸಹಜ. ಲಾಭವನ್ನೇ ಗುರಿಯಾಗುಳ್ಳ ವ್ಯಾಪಾರಿಗೆ ಪರಹಿತದ ಚಿಂತನೆ ಸಾಧ್ಯವಾಗುವುದಿಲ್ಲ; ಹಾಗೆ ಅದನ್ನೇ ನೋಡುತ್ತಾ ಆತ ವೃತ್ತಿಯನ್ನು ಬದಲಾಯಿಸುವುದು ಸರಿಯಲ್ಲ--ಎನ್ನುತ್ತಾರೆ ಪ್ರಭುಪಾದರು. ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಹೇಳಿದ್ದು : ||ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಸ್ವಭಾವ ಇವೆರಡನ್ನು ಅವಲಂಬಿಸಿ ವರ್ಣಾಶ್ರಮವನ್ನು ನಾನೇ ನಿರ್ಧರಿಸಿದ್ದೇನೆ ಎನ್ನುತ್ತಾನೆ. ಹಾಗಾದರೆ ವರ್ಣಾಶ್ರಮಗಳು ಯಾವುವು ಎಂಬುದನ್ನೂ ಹೇಳಿದ್ದಾನೆ--ಅದು ತಮಗೆಲ್ಲಾ ವಿದಿತವೇ ಅಗಿದೆ. ಶರೀರವೊಂದರಲ್ಲಿ ಮುಖ ಕೈ ಕಾಲು ಹೊಟ್ಟೆ ಅಥವಾ ಹೃದಯ, ಪುಪ್ಪುಸ, ಜಠರ, ಕರುಳು ಇತ್ಯಾದಿ ಅಂಗಗಳಲ್ಲಿ ಯಾವುದು ಹೆಚ್ಚು ಯಾವುದು ಕಮ್ಮಿ ಎನ್ನಲು ಸಾಧ್ಯವಾಗುವುದಿಲ್ಲ ಹೇಗೋ ಈ ಜೀವನ ಪದ್ಧತಿಯಲ್ಲಿ ವರ್ಣಾಶ್ರಮಗಳಲ್ಲಿ ಇದೇ ಮೇಲು ಇದೇ ಕೀಳು ಎನ್ನಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನುಷ್ಯರಾದ ನಾವು ಮನಗಾಣಬೇಕಾಗಿದೆ.

ಶರೀರವೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಇಡೀ ಶರೀರದಲ್ಲಿ ಮುಖ ಅಥವಾ ತಲೆ ಬ್ರಾಹ್ಮಣನೆಂತಲೂ, ಕೈಗಳು ಕ್ಷತ್ರಿಯ ಎಂತಲೂ, ತೊಡೆಯ ಭಾಗ ವೈಶ್ಯ ಎಂತಲೂ ಪಾದದ ಭಾಗ ಶೂದ್ರ ಎಂತಲೂ ಸಾಂಕೇತಿಕವಾಗಿ ನಾವು ಹೇಳಿಕೊಳ್ಳಬಹುದಾಗಿದೆ. ಇಡೀ ಶರೀರಕ್ಕೆ ಆಧಾರಸ್ಥಂಭ ಪಾದಗಳು. ಅವುಗಳಮೇಲೆ ಶರೀರ ನಿಲ್ಲುವಂತೇ ನೋಡುವುದು ಕಾಲು/ತೊಡೆಗಳು. ಶರೀರಕ್ಕೆ ರಕ್ಷಣೆಯನ್ನೊದಗಿಸುವ ಅಥವಾ ಕೆಲಸಗಳನ್ನು ಮಾಡಿ ಆಹಾರ/ವಸ್ತುಗಳನ್ನು ಪೂರೈಕೆ ಮಾಡುವುದು ಕೈಗಳು. ಪಂಚೇಂದ್ರಿಯಗಳನ್ನು ಇರಿಸಿಕೊಂಡು ಸಂದೇಶಗಳನ್ನು ಸ್ವೀಕರಿಸುವ ಮತ್ತು ರವಾನಿಸುವ ಕೆಲಸ ಮಾಡುವುದು ತಲೆ. ಇವುಗಳಲ್ಲಿ ಯಾವುದು ಇರದಿದ್ದರೆ ಕೆಲಸ ನಡೆಯುತ್ತದೆ ? ಎಲ್ಲವೂ ಬೇಕು ಅಲ್ಲವೇ? ಹಾಗೆಯೇ ಜನಜೀವನದಲ್ಲಿ ಆಯಾಯ ವೃತ್ತಿಗಳು ಇಂತಿಂಥಾ ವರ್ಣಗಳಿಗೆ ಸಂಬಂಧಿಸಿವೆ ಎಂಬುದನ್ನೂ ಕೃಷ್ಣ ಹೇಳಿದ. ಕೇವಲ ಹುಟ್ಟಿನಿಂದ ಯಾವನೂ ಯಾವುದೇ ವರ್ಣಕ್ಕೂ ಸೇರಿದಾತ ಎಂಬುದನ್ನು ನಿರ್ಣಯಿಸಲಾಗುವುದಿಲ್ಲ; ಬದಲಾಗಿ ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಮನೋಧರ್ಮವನ್ನು ತಿಳಿದು ಆತ ಯಾವ ವರ್ಣದವನು ಎಂಬುದನ್ನು ಅಳೆಯಬೇಕಾಗುತ್ತದೆ.

ವೇದಕಾಲದಲ್ಲಿ ವೃತ್ತಿಗಳು ವಂಶಪಾರಂಪರ್ಯವಾಗಿ ಗುರುಕುಲ ಪದ್ಧತಿಯಲ್ಲಿ ನಡೆದುಬಂದವು. ಗುರುವಿಗೆ ಶಿಷ್ಯಂದಿರು ಮಕ್ಕಳೇ ಆಗಿರುವುದೂ ಮಕ್ಕಳಿಗೆ ಮನೆಯಲ್ಲೇ ತಂದೆ ಗುರುವಾಗಿ ಪೂರಕ ವಾತಾವರಣದಲ್ಲಿ ತಾನುತಿಳಿದ ವೃತ್ತಿವಿದ್ಯೆಯನ್ನು ಧಾರೆ ಎರೆಯುವುದು ಸತತವಾಗಿ ನಡೆದುಬಂದಿತ್ತು. ಈಗ ಹಾಗಿಲ್ಲ. ಕಾಲದ ಪರಿಕ್ರಮದಲ್ಲಿ ಭಟ್ಟರೊಬ್ಬರು ಕೋಳಿಫಾರ್ಮ ಮಾಡುತ್ತಾರೆ, ಶೆಟ್ಟರೊಬ್ಬರು ಇಡೀದಿನ ಹೋಮ ಮಾಡುತ್ತಾರೆ, ದಲಿತನೊಬ್ಬ ಅನ್ಯಾಹಾರ ತೊರೆದು ತಪಸ್ಸುಮಾಡತೊಡಗುತ್ತಾನೆ ಹೀಗೇ ಯಾರ್ಯಾರೋ ಯಾವ್ಯಾವುದೋ ವೃತ್ತಿಯನ್ನು ಹಿಡಿಯುತ್ತಾರೆ; ಅದರಿಂದ ತಮ್ಮ ಉಪಜೀವನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ಅಂದರೆ ಗುರುಕುಲ ಪದ್ಧತಿಯಲ್ಲಿ ಬಂದಿದ್ದ ವೃತ್ತಿಧರ್ಮ ಈಗ ನಶಿಸಿಹೋಗಿದೆ. ಕಾಲಚಕ್ರದ ಹಲ್ಲುಗಳು ತಿರುಗುವಾಗ ಜಾಗತೀಕರಣ ಬಂದಮೇಲಂತೂ ಕುಂಬಾರರು, ಬಡಿಗರು, ಅಕ್ಕಸಾಲಿಗರೇ ಮೊದಲಾದ ಗುಡಿಕೈಗಾರಿಕೆಯ ವೃತ್ತಿಯವರು ದಿಕ್ಕೆಟ್ಟು ಬದುಕಿಗಾಗಿ ಸಿಕ್ಕ ಸಿಕ್ಕ ದಂಧೆಗಳನ್ನೋ ನೌಕರಿಯನ್ನೋ ಮಾಡಬೇಕಾಗಿ ಬಂತು. ತಂದೆಯ ಮನೆಯಲ್ಲಿ ಹುಟ್ಟಿನಿಂದ ಕಂಡು ಕಲಿತ ವೃತ್ತಿಯಲ್ಲಿ ಪರಿಪೂರ್ಣತೆಯನ್ನು ಅಥವಾ ಪರಿಪಕ್ವತೆಯನ್ನು ಗಳಿಸಿದ್ದ ವ್ಯಕ್ತಿಯೊಬ್ಬ ಅದನ್ನೇ ನೆಚ್ಚಿ ಬದುಕುವ ಕಾಲ ಇಲ್ಲವಾಯ್ತು. ಅಂತಹ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಬದುಕಿಗಾಗಿ ಬೇರೇ ಬೇರೆ ವಿದ್ಯೆಗಳನ್ನು ವಿಶ್ವವಿದ್ಯಾಲಯಗಳ ಮೂಲಕ ಪಠ್ಯ ಓದಿ ಕಲಿಯಬೇಕಾಯ್ತು. ಕೇವಲ ಪಠ್ಯಮಾತ್ರದಿಂದ ಕಾರ್ಯಾನುಭವ ಸಾಲದಾದಾಗ ವ್ಯಕ್ತಿ ಮುಗ್ಗರಿಸುವ ಸಮಯವೂ ಬಂತು. ಒಟ್ಟಾರೆ ಗುರುಕುಲ ಪದ್ಧತಿ ನಶಿಸಿ ವಿಶ್ವವಿದ್ಯಾಲಯಗಳು ಬಾಗಿಲು ತೆರೆದವು.

ಇವತ್ತಿನ ಮಾನವನಲ್ಲಿ ಪ್ರತಿಯೊಬ್ಬನಲ್ಲೂ ನಾಲ್ಕೂ ವರ್ಣಗಳು ಮಿಳಿತವಾಗಿವೆ ಎಂಬುದು ನನ್ನ ಅಭಿಮತವಾಗಿದೆ. ವ್ಯಕ್ತಿಯೊಬ್ಬ ಶುಚಿರ್ಭೂತನಾಗಿ ಪೂಜೆ ಮಾಡುವಾಗ ಬ್ರಾಹ್ಮಣನಾಗುತ್ತಾನೆ, ತನ್ನನ್ನು ತಾನು ರಕ್ಷಿಸಿಕೊಳ್ಳುವಗ ಕ್ಷತ್ರಿಯನಾಗುತ್ತಾನೆ, ಚಿಕ್ಕ ಪುಟ್ಟ ವ್ಯಾಪಾರಗಳಲ್ಲಿ ಅಲ್ಲಲ್ಲಿ ತೊಡಗಿಕೊಂಡಾಗ ವೈಶ್ಯನಾಗುತ್ತಾನೆ ಮತ್ತು ಸೇವೆಯಲ್ಲಿ [ಸಲಹೆಕೊಡುವುದು, ಕೆಲಸಮಾಡಿಕೊಡುವುದು ಇವಕ್ಕೆಲ್ಲಾ ಪ್ರತಿಯಗಿ ಹಣಪಡೆಯುವುದು] ತೊಡಗಿಕೊಂಡು ಶೂದ್ರನಾಗುತ್ತಾನೆ. ಅಂದಮೇಲೆ ನಾಲ್ಕೂ ವರ್ಣಗಳು ಎಲ್ಲರಲ್ಲೂ ಇವೆ ಎಂದಾಯ್ತಲ್ಲ !

ವರ್ಣಾಶ್ರಮ ನಶಿಸಿದಾಗ ಅಥವಾ ವರ್ಣಸಂಕರವಾದಾಗ ಕೆಲಸಗಳು ಹೇಗೆ ಸಾಗಬೇಕೋ ಹಾಗೆ ಸಾಗುವುದಿಲ್ಲ; ಸಮಾಜದಲ್ಲಿ ಸ್ಥಿತ್ಯಂತರವಾಗಿ ಸ್ವೇಚ್ಛಾಚಾರ ಜಾಸ್ತಿಯಾಗುತ್ತದೆ ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು. ಇವತ್ತು ಆಗಿದ್ದೇನು ? ಸಮಾಜದಲ್ಲಿ ಯಾರನ್ನೂ ಯಾರೂ ನಿಯಂತ್ರಿಸುವ ಹಾಗಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಹಕ್ಕುಗಳಿವೆ. ಆತ ಕದ್ದೂ ಮುಚ್ಚಿ ನೂರಾರು ಅನೈತಿಕ ಸಂಪರ್ಕ ಇಟ್ಟುಕೊಳ್ಳಬಹುದು-ಆದರೆ ಕಾಯ್ದೆಬದ್ಧವಾಗಿ ಯಾವುದಕ್ಕೂ ದಾಖಲೆ ಸಿಗದಿದ್ದರಾಯ್ತು! ಬ್ರಾಹ್ಮಣ ಎನಿಸಿಕೊಂಡವನು ಸಾರಾಯಿ ಕುಡಿಯಬಹುದು-ಮಾಂಸ ತಿನ್ನಬಹುದು-ಪರಸ್ತ್ರೀ ಸಂಗ ಮಾಡಬಹುದು; ಆದರೆ ಯಾರಿಗೂ ಗೊತ್ತಾಗದ ಹಾಗೇ ಮಾಡಿಕೊಂಡರಾಯ್ತು! ವರ್ಣಸಂಕರದಿಂದ ಪ್ರಮುಖವಾಗಿ ಏನಾಗುತ್ತದೆ ಎಂದರೆ ವ್ಯಕ್ತಿಗಳ ನ್ಯಾಚುರಲ್ ಹ್ಯಾಬಿಟಾಟ್ ಇರುತ್ತದಲ್ಲ ಅದು ಯೂನಿವರ್ಸಲ್ ಆಗುತ್ತದೆ! ಆಗ ಎಲ್ಲರ ಆಹಾರ ಕ್ರಮವೂ ಒಂದೇ, ಸ್ನಾನ ಮಾಡದೇ ತಿಂದರೂ ಸರಿ ಮಾಡಿದರೂ ಸರಿ, ಎಡಗೈಲಿ ತಿಂದರೂ ಸರಿ ಬಲಗೈಲಿ ಮುಕ್ಕಿದರೂ ಸರಿ, ಹಗಲಿಗೆ ನಿದ್ದೆಮಾಡಿ ರಾತ್ರಿ ಕೆಲಸಮಾಡಿದರೂ ಸರಿ, ಎಲ್ಲರಿಗೂ ಎಲ್ಲವುದಕ್ಕೂ ಸ್ವಾತಂತ್ರ್ಯ--ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಅಪರಿಮಿತ ಸ್ವೇಚ್ಛೆಯ ಅನುಮತಿ! ಇದಕ್ಕೆ ಒಂದು ಚಿಕ್ಕ ಉದಾಹರಣೆ ಎಂದರೆ ಇವತ್ತಿನ ಸಮಾಜ ನಡೆದು ಮುಂದೆ ಸಾಗುವ ಸ್ಥಿತಿಯನ್ನು ಅವಲೋಕಿಸಿದರೆ ಪಾನಮತ್ತನಾದ ಚಾಲಕ ವಾಹನ ಚಲಾಯಿಸುವ ರೀತಿ ಗೋಚರವಾಗುತ್ತದೆ! ಇದು ಬೇಡವಾಗಿತ್ತು ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು.

ಎರಡನೆಯದು ಮುಂದಿನ ಪೀಳಿಗೆಯ ಬಗ್ಗೆ: ಹಲವು ಬ್ಲಾಗ್ ಗಳಲ್ಲಿ ಬರಹಗಳೇನಕವುಗಳಲ್ಲಿ ನಾನು ಓದಿದ್ದು ಹೆಂಗಸರಿಗೆ ಸ್ವಾತಂತ್ರ್ಯವಿಲ್ಲ-ಮುಕ್ತಸ್ವಾತಂತ್ರ್ಯವಿಲ್ಲ ಎಂಬುದನ್ನು. ಇವತ್ತು ಹೆಂಗಸರು ಹೆಣ್ಣುಮಕ್ಕಳು ಮುಕ್ತರಾಗಿದ್ದಾರೆ. ಹೆಣ್ಣು ಎಂಬ ಶಬ್ದಕ್ಕೆ ಹಡೆಯುವುದು ಎಂಬ ಅರ್ಥವೂ ಇದೆ ಎಂದು ಭಾವಿಸುತ್ತೇನೆ. ಅಂದಮಾತ್ರಕ್ಕೆ ಹೆಣ್ಣು ಕೇವಲ ಹಡೆಯುವ ಯಂತ್ರವೇ ಎಂದು ವಿತಂಡ ವಾದ ಬೇಡ. ನೈಸರ್ಗಿಕವಾಗಿ ಹೆಣ್ಣು ಸ್ವೀಕರಿಸುವ ಗುಣವುಳ್ಳವಳು. ಗಂಡು ಬೀರುವ/ಕೊಡುವ ಗುಣವುಳ್ಳವನು. ಆತ್ಮಕ್ಕೆ ಲಿಂಗಭೇದವಿರದಿದ್ದರೂ ಮಾನವ ಜನ್ಮಕ್ಕೆ ಬಂದಮೇಲೆ ಆ ಯಾ ಲಿಂಗಕ್ಕೆ ತಕ್ಕಂತೇ ಮಾನವ ತನ್ನ ಗುಣಧರ್ಮಗಳನ್ನು ಹೊಂದಿರುವುದು ಸಹಜ. ಹೆಣ್ಣನ್ನು ಹೂವಿಗೂ ಗಂಡನ್ನು ದುಂಬಿಗೂ ಹೋಲಿಸುತ್ತಾರೆ ತಿಳಿದವರು. ದುಂಬಿ ಒಂದೆಡೆ ನಿಲ್ಲುವುದಿಲ್ಲ ಹೇಗೋ ಹಾಗೇ ಗಂಡಿಗೆ ಒಂದೆಡೆ ನಿಲ್ಲುವ ಮನೋಧರ್ಮ ಸ್ವಲ್ಪ ಕಡಿಮೆ ಇರುತ್ತದೆ; ಅವಕಾಶ ಸಿಕ್ಕಿದರೆ ದುಂಬಿ ಹಲವು ಹೂವುಗಳಿಗೆ ಹಾರುತ್ತದೆ; ಕೂರುತ್ತದೆ. ಸ್ವೀಕರಿಸುವ ಹೆಣ್ಣಿನಲ್ಲಿ ಸಂತಾನೋತ್ಫತ್ತಿಯ ಪ್ರಕ್ರಿಯೆ ನಡೆಯುತ್ತದೆ. ಹೂವು ಪರಾಗವನ್ನು ಹೀರಿ ಫಲಭರಿತವಾಗುತ್ತದೆ, ಪೀಚು ಕಾಯಿಗಳು ಕಾಣಿಸಿಕೊಳ್ಳುತ್ತವೆ. ಮಾನವನ ಸಂಶೋಧನೆಗಳಿಂದ ಹೆಣ್ಣಿನಲ್ಲಿ ಸಂತಾನೋತ್ಫತ್ತಿ ಆಗದಂತೇ ನಿಯಂತ್ರಿಸಿಕೊಳ್ಳುವ ಹಲವು ದಾರಿಗಳು ಲಭ್ಯವಾಗಿವೆ. ಓದಿದ ಹೆಣ್ಣುಮಕ್ಕಳು ಹಲವು ವೃತ್ತಿಗಳಲ್ಲಿ ಗಂಡಸರಿಗೆ ಸರಿಸಮವಾಗಿ ದುಡಿಯ ಹೊರಟು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ.

ಈ ಆರ್ಥಿಕ ಸ್ವಾತಂತ್ರದ ಜೊತೆಗೆ ಇಂದಿಗೆ ನಮಗೆ ಸಾಮಾಜಿಕ ಜಾಲತಾಣಗಳು, ಸಂವಹನಕ್ಕೆ ಜಂಗಮ ದೂರವಾಣಿಗಳು, ಮಿಂಚಂಚೆಯ ರಹ[ಸ್ಯ]ದಾರಿಗಳು ಎಲ್ಲವೂ ಲಭ್ಯವಾಗಿವೆ. ಸ್ವಾಮೀ ನಂಬಿದರೆ ನಂಬಿ ಬಿಟ್ಟರೆ ಬಿಡಿ ಹೆಣ್ಣುಮಕ್ಕಳಲ್ಲಿ ಪ್ರೇಮದ ಸಾಫ್ಟ್ ಕಾರ್ನರ್ ಮರೆಯಾಗಿ ಕಾಮದ ತೆವಲು ಜಾಸ್ತಿಯಾಗಿದೆ. ಸಮಾಜದಲ್ಲಿ ಎಲ್ಲೆಂದರಲ್ಲಿ ಬೇಕುಬೇಕಾದ ವೈಖರಿಯ ದಿರಿಸುಗಳನ್ನು ಧರಿಸಿ ಓಡಾಡುವ ಹೆಣ್ಣುಮಕ್ಕಳನ್ನು/ಹೆಂಗಸರನ್ನು ಕಂಡಾಗ ಜನಸಾಮಾನ್ಯ ಹುಡುಗ/ಗಂಡಸು ತನ್ನನ್ನೇ ತಾನು ಮರೆತು ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತಾಗಿ ಅವರ ಹಿಂದೆ ಬೀಳುವುದು ನಡೆಯುತ್ತಿದೆ. ಇಲ್ಲಿ ಎರಡು ವೈಖರಿ. ಹೆಣ್ಣಿಗೆ ತನಗೆ ಬೇಕಾದವ ಸಿಕ್ಕಿದರೆ ಲಿವ್-ಇನ್, ತನಗೆ ಬೇಡದವ ಎಂದಾದರೆ ಗೆಟ್-ಔಟು! ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಮದುವೆಯಾದ ಹೆಂಗಸರು/ಮುದುಕಿಯರು ಫೇಸ್ ಬುಕ್ ಗಾಗಿ ನಾನಾ ಥರದ ವೇಷಗಳಲ್ಲಿ ತಾನಿನ್ನೂ ಷೋಡಶಿ ಎಂಬ ರೀತಿ ಪೋಸುಕೊಡುವ ಭಾವಚಿತ್ರಗಳನ್ನು ಪ್ರಕಟಿಸುವುದನ್ನು ತಾವೆಲ್ಲಾ ಕಾಣಬಹುದಾಗಿದೆ! ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ವಿವಾಹ ವಿಚ್ಛೇದನ ಬಹಳೇ ಜಾಸ್ತಿಯಾಗಿದೆ! ನನಗೆ ತಿಳಿದಿರುವಂತೇ ಕಾರಣವೇ ಇಲ್ಲದೇ ನಡೆದ ಮೂರ್ನಾಲ್ಕು ವಿಚ್ಛೇದನಗಳನ್ನು ಕಂಡಿದ್ದೇನೆ. ನಮ್ಮಲ್ಲಿ ಅಜ್ಜಿ ಗಾದೆಯೊಂದನ್ನು ಹೇಳುತ್ತಿದ್ದರು" ಗಂಡು ಕುಳಿತು ಕೆಡ್ತು; ಹೆಣ್ಣು ತಿರುಗಿ ಕೆಡ್ತು" --ಇದರ ಅರ್ಥ ಗಂಡು ಸೊಂಬೇರಿಯಾದರೆ ಆಲಸಿಯಾದರೆ ಸಂಸಾರ ನಡೆಯುವುದಿಲ್ಲ, ಹೆಣ್ಣು ಕಂಡಕಂಡಲ್ಲಿ ತಿರುಗುವಾಗ ನಾಕಾರು ಗಂಡಸರ ಕಣ್ಣು ಹೆಣ್ಣಿನಮೇಲೆ ಬೀಳುವುದರಿಂದ ಆ ಹೆಣ್ಣು ಯಾರ ಸಂಪರ್ಕಕ್ಕೂ ಮುಂದಾಗಬಹುದು, ಅಥವಾ ಅತ್ಯಾಚಾರಕ್ಕೂ ಗುರಿಯಾಗಬಹುದು ಎಂದು. ಹೌದು ಎನ್ನುತ್ತೀರಾ?

ಇವತ್ತಿನ ಅನೇಕ ಕಚೇರಿಗಳಲ್ಲಿ ಕದ್ದು ಮುಚ್ಚಿ ಯಾ ಒತ್ತಡಕ್ಕೆ ಸಿಲುಕಿ ನಡೆಯುವ ಹೆಂಗಸರ ಅನೈತಿಕ ಸಂಬಂಧಗಳು ಬಹಿರಂಗಗೊಂಡರೆ ಭಾರೆತೀಯ ಸಮಾಜದಲ್ಲಿ ಮದುವೆ ಎಂಬ ಪದಕ್ಕೆ ಹೊಸ ಅರ್ಥ ಬರೆಯಬೇಕಾಗಬಹುದೇ? ಇನ್ನು ಸಿನಿಮಾ ಅಥವಾ ರಂಗಭೂಮಿ ಕಲಾವಿದರಲ್ಲಿ ಇದರ ಬಗ್ಗೆ ಹೇಳುವುದೇ ಬೇಡ; ಅದೆಲ್ಲಾ ಅನಿವಾರ್ಯ ಅಂತಾರೆ ಅವರು! ಸಂವಹನ ಪ್ರಕ್ರಿಯೆ, ಪ್ರಚೋದಕ ಸಿನಿಮಾ, ವಿಕೃತ ಸಾಹಿತ್ಯ, ವೈಭವೀಕೃತ ಮಾಧ್ಯಮಗಳ ವರದಿ ಇವೆಲ್ಲಾ ಒದಗಿ ಪ್ರಸ್ತುತ ಪ್ರೌಢಶಾಲೆಯಲ್ಲೇ ಮಕ್ಕಳು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಾರೆ. ಅಪ್ಪ-ಅಮ್ಮಂದಿರಿಗೆ ಹೇಗೆ ಟೋಪಿ ಹಾಕಿ ಎಲ್ಲೆಲ್ಲಿ ಬಾಯ್ ಫ್ರೆಂಡು /ಗರ್ಲ್ ಫ್ರೆಂಡುಗಳನ್ನು ಭೇಟಿಯಾಗಬೇಕೆಂಬುದನ್ನು ಯೋಚಿಸುವಷ್ಟು ಮುಂದುವರಿದ ಜನಾಂಗ ಅವರಾಗಿದ್ದಾರೆ! ನನಗೆ ತಿಳಿದ ಬೆಂಗಳೂರಿನ ರಾಜಾಜಿನಗರದ ಒಳ್ಳೆಯ ಹೆಸರುಳ್ಳ ಶಾಲೆಯೊಂದರಲ್ಲಿನ ವಿದ್ಯಾರ್ಥಿನಿಯನ್ನು ತಾಯಿ ಗೈನಾಕಾಲಜಿಸ್ಟ್ ಹತ್ತಿರ ಪರೀಕ್ಷೆಗೆ ಕರೆದೊಯ್ದಾಗ ತಿಳಿದುಬಂದ ವಿಷಯ: ಆಕೆಯ ಸಹಪಾಠಿ ಬಾಯ್ ಫ್ರೆಂಡು ಮತ್ತು ಅವಳು ’ಅದನ್ನು’ ನಡೆಸಿದ್ದರು; ಅದರಿಂದಾಗಿ ಅವಳೀಗ ’ಇದು’ ! ಗುರುವಿಲ್ಲದ ವಿದ್ಯೆ ಜಗತ್ತಿನಲ್ಲಿ ಇದೊಂದೇ ಇರಬೇಕು!

ಕಾಟಾಚಾರಕ್ಕೆ ಮದುವೆ ಎಂಬ ’ಬಂಧನ’ಕ್ಕೆ ಒಳಗಾಗುವ ಇಂದಿನ ಹುಡುಗಿಯರು ಸಾಮಾಜಿಕ ತಾಣಗಳಲ್ಲಿ ತಮ್ಮ ಗಂಡು ಸ್ನೇಹಿತರೊಂದಿಗೆ ಸಂವಹಿಸುವ ವ್ಯಾಖ್ಯೆಗಳನ್ನು ಒಮ್ಮೆ ನೀವು ನಿಗಾ ಇರಿಸಿ ನೋಡಬೇಕು. ಸಮಾಜದಲ್ಲಿ ದಾಂಪತ್ಯದ ಪ್ರೀತಿ ಎಂಬುದು ಮರುಭೂಮಿಯ ಜಲವಾಗಿದೆ. ಹರೆಯ ಇರುವ ವರೆಗೆ, ಸೌಂದರ್ಯ ಇರುವವರೆಗೆ, ಮೈಯ್ಯಲ್ಲಿ ಕಸುವು ಇರುವವರೆಗೆ ಆದಷ್ಟೂ ’ಅನುಭವಿಸಬೇಕು’ ಎಂಬ ಹೊಸಯುಗದ ಪೀಳಿಗೆಯನ್ನು ನೋಡುತ್ತಿದ್ದರೆ ಪ್ರಭುಪಾದರು ಹೇಳಿದ್ದು ನೆನಪಿಗೆ ಬರುತ್ತದಲ್ಲವೇ? ಬಿಗ್ ಬಾಸಿಗೆ ಅವಳ್ಯಾರೋ ಸನ್ನಿ ಲಿಯಾನ್ ಬಂದು ಸುದ್ದಿ ಮಾಡಿದಳಲ್ಲ? ಅವಳೇನೋ ಪತಿವ್ರತೆ ಎಂಬಂತೇ ನಮ್ಮ ಮಂದಿ ಹೊತ್ತು ಕುಣಿದರಲ್ಲಾ ಅಂತಹ ಸಾವಿರಾರು ಘಟನೆಗಳು ಇಂದಿನ ನಮ್ಮ ಸಮಾಜದಲ್ಲಿ ಕಾಣಿಸುತ್ತಿವೆ. ಸ್ವೇಚ್ಛೆಯಿಂದ ತಿರುಗುವ ಬೇಕಾದ್ದನ್ನು ತನ್ನ ಬಾಯ್ ಫ್ರೆಂಡುಗಳ ಥೈಲಿಯಿಂದ ಖರೀದಿಸಬಲ್ಲ ಗಂಡುಬೀರಿ ಹೆಣ್ಣಿನ ಹಿಂದೆ ಅವೆಷ್ಟು ಗಂಡುಗಳು ಅಲೆಯುವುದಿಲ್ಲ? ರಾಜಕಾರಣಿಗಳಿಲ್ಲವೇ? ಸಿನಿಮಾ ಪ್ರಮುಖರಿಲ್ಲವೇ? ಮಂಚದ ಕೆಳಗೆ ಸಂಸಾರ ನಡೆಸುವ ಮತಗಳ ಅನುಯಾಯಿಗಳಿಲ್ಲವೇ ? ಇಂದಿನ ನಮ್ಮ ಮಾಧ್ಯಮಗಳು ಅಂತಹ ಗಂಡುಬೀರಿಯರ ವೃತ್ತಾಂತಗಳನ್ನೇ ಮತ್ತೆ ಮತ್ತೆ ಬಿತ್ತರಿಸಿ ಅವರನ್ನು ಎತ್ತಿ ಹುರಿದುಂಬಿಸುತ್ತಿಲ್ಲವೇ? ಲಿವ್-ಇನ್ ರಿಲೇಶನ್ ಅಥವಾ ಮದುವೆ-ವಿಚ್ಛೇದನ-ಮದುವೆ-ವಿಚ್ಛೇದನಗಳಿಂದ ನಡುವೆ ಜನಿಸುವ ಕೂಸುಗಳು ಮುಂದಿನ ವಾರಸುದಾರರಾದರೆ ಅವರನ್ನು ಅಪೇಕ್ಷೆ ಪಡಬೇಕಾದ ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯ ಅವರುಗಳಿಗೆ ದೊರೆಯದಾದಾಗ ಆ ಮಕ್ಕಳನ್ನು ಅನಪೇಕ್ಷಿತ ಮಕ್ಕಳೆಂದರೆ ತಪ್ಪೇ? ಅಂತಹ ಮಕ್ಕಳಿಗೆ ಸರಿಯಾದ ಜೀವನ ಮಾರ್ಗದರ್ಶನವಿಲ್ಲದೇ ಮುಂದೆ ಅವರವರೇ ಉಳಿವಿಗಾಗಿ ಬಡಿದಾಡುವ ರಕ್ಕಸ ಮನೋವೃತ್ತಿ ಅವರಲ್ಲಿ ಬರದೇ ಇದ್ದೀತೇ ?

ಇದನ್ನೆಲ್ಲಾ ಕಾಣುತ್ತಾ ನನ್ನಂತಹ ಬಡಪಾಯಿಗೆ ಅಲ್ಲೆಲ್ಲೋ ಒಂದುಕಡೆ ಪ್ರಭುಪಾದರು ಹೇಳಿದ್ದರಲ್ಲಿ ತಪ್ಪು ಕಾಣಿಸುವುದಿಲ್ಲ. ಗೀತೆಯ ಅರ್ಥವ್ಯಾಪ್ತಿ ಬಹಳ ಅಗಾಧವಾಗಿದ್ದುದನ್ನು ಅವರು ಈ ತೆರನಾಗಿ ಅರ್ಥೈಸಿದ್ದರೂ ಇದರಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ ಅಲ್ಲವೇ? ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮವಾದ ಹಾಗೇ ನೀತಿಗೆಟ್ಟ ಸಮಾಜದ ಬಹಿರಂಗದಲ್ಲಿ ಗೌರವದ ಲೇಪ ಹಚ್ಚಿ ಬದುಕುವ ನಮಗೆ ಅಂತರಂಗದಲ್ಲಿ ಆಗುತ್ತಿರುವ ಅನಾಹುತಗಳ ಕಲ್ಪನೆ ಇದೆಯೇ? ಆರೋಗ್ಯಕರ ಸಮಾಜವನ್ನು ಭಾರತ ಉಳಿಸಿಕೊಳ್ಳಬೇಕಾದರೆ ಪಶ್ಚಿಮಾಗ್ರಹ ಬಂದು ಪೂರ್ಣವಾಗಿ ಒತ್ತರಿಸುವ ಮುನ್ನ ಎಚ್ಚೆತ್ತುಕೊಂಡು ಭಾರತೀಯ ಕುಟುಂಬವ್ಯವಸ್ಥೆ ಬುಡಮೇಲಾಗದಂತೇ ಕಾಪಾಡುವುದು ನಮ್ಮ ಧರ್ಮವಾಗಿದೆ; ಕರ್ತವ್ಯವಾಗಿದೆ. ಭಾರತೀಯರಿಗೆ ಸಿಗುತ್ತಿರುವ ಗೌರವ ಕೂಡಾ ಇಲ್ಲಿನ ಶಾಂತ ಸಹಜ ಸುಲಲಿತ ಕುಟುಂಬ ವ್ಯವಸ್ಥೆಯ ಮೇಲೆ, ದಾಂಪತ್ಯದ ಲಲಿತಕಲೆಯಮೇಲೆ ಅವಲಂಬಿಸಿದೆ. ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಮನುಷ್ಯನಾಗಿ ಹುಟ್ಟಿದ್ದಕ್ಕೆ ಮನುಷ್ಯ ಸಹಜಧರ್ಮ ಯಾವುದು ಎಂಬುದನ್ನರಿತು ಇತರೆ ಪ್ರಾಣಿವರ್ಗಗಳಿಂದ ನಮ್ಮನ್ನು ಬೇರ್ಪಡಿಸಿಕೊಳ್ಳಬೇಕಾಗಿದೆ; ಈ ದಿಸೆಯಲ್ಲಿ ಗೀತೆ ಆದರ್ಶಗಳನ್ನು ಎತ್ತಿ ತೋರುತ್ತದೆ.

Friday, December 30, 2011

ಬದುಕಿಗೊಂದು ನಿತ್ಯ ಪಾಠ


ಬದುಕಿಗೊಂದು ನಿತ್ಯ ಪಾಠ

[ಸ್ನೇಹಿತರೆಲ್ಲರಿಗೂ ೨೦೧೨ ಹಾರ್ದಿಕ ಶುಭಾಶಯಗಳು]

ಬದುಕಿಗೊಂದು ನಿತ್ಯ ಪಾಠ ಆಟ ಹಾಸ್ಯ ಹೂರಣ
ಕೆದಕಿತೆಗೆದು ಭಾವಗಳನು ಅದಕೆ ಕಟ್ಟಿ ತೋರಣ !

ಮುಗಿಯದಿರಲಿ ಮಂದಹಾಸ ಲಘುವಿಗದುವೆ ಕಾರಣ
ತೆಗೆದು ಬಿಸುಡಿ ಕೋಪತಾಪ ಜೀವಕದುವೆ ಮಾರಣ !

ನಡೆವ ಹಾದಿಯಲ್ಲಿ ನಾವು ನಮ್ಮಷ್ಟಕೇ ವಾರಣ!!
ಪಡೆವ ಕಷ್ಟ-ಸುಖಗಳೆಲ್ಲ ಖರ-ನಂದನ-ತಾರಣ !

ಗೆಲುವು-ಸೋಲು ಮಜದ ಮಜಲು ತಾರದಿರಲಿ ದಾರುಣ
ಒಲವು-ಸ್ನೇಹ ಎಳೆದುತರಲಿ ಕೊರತೆ ಭರಿಸೆ ಪೂರಣ

ನವನವೀನ ಜಾಯಮಾನ ನಾಗರಿಕತೆ ಪ್ರೇರಣ
ಜನರಾಶಿಯು ಅರಿತು ಬದುಕೆ ದಿನವು ನವ್ಯ ಚಾರಣ !

Thursday, December 29, 2011

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

೯೪ ರ ಹೂತ್ತಿಗೆ ನಾನಿನ್ನೂ ಏನೂ ಅಲ್ಲದೇ ಬೆಂಗಳೂರಲ್ಲಿ ನೆಲೆನಿಲ್ಲಲು ಸರಿಯಾದ ಜಾಗ ಹುಡುಕುತ್ತಿರುವಾಗಲೇ ಕೇಳಿಬಂದದ್ದು ಕುವೆಂಪು ಅಸ್ತಂಗತರಾದ ಸುದ್ದಿ. ಬಾಲ್ಯದಲ್ಲಿ ಪಠ್ಯಗಳನ್ನು ಓದುವಾಗ ಅವರು ಬರೆದ ಅದೆಷ್ಟು ಹಾಡುಗಳು ಬಂದಿದ್ದವೋ ನೆನಪಿಲ್ಲ, ಒಟ್ಟಾರೆ ಎಲ್ಲಿ ನೋಡಿದರೂ ಕುವೆಂಪು ಕುವೆಂಪು ಕುವೆಂಪು. ಬಾಯಿಪಾಠಮಾಡಲಾಗದ ಹಾಡುಗಳ ಮಧ್ಯದ ಸಾಲುಗಳನ್ನು ನಮ್ಮ ಶಿಕ್ಷಕರು ಕೇಳಿದಾಗ ಒಮ್ಮೊಮ್ಮೆ ಕೋಪದಿಂದ " ಅವನ್ಯಾರೋ ಕುವೆಂಪುವಂತೆ ಕುವೆಂಪು ಯಾಕಾದ್ರೂ ಅಷ್ಟೆಲ್ಲಾ ಹಾಡು ಬರೆದ್ನೋ ಪುಣ್ಯಾತ್ಮ, ಬೇರೆ ಕೆಲ್ಸ ಇರ್ಲಿಲ್ವೆ ಕುವೆಂಪುಗೆ? ಇಲ್ಲಿ ನಮ್ ತಲೆ ತಿಂತಾರೆ" ಎಂದುಕೊಂಡಿದ್ದೂ ಇದೆ! ಆ ವಯಸ್ಸೇ ಹಾಗಿತ್ತು, ಅಲ್ಲಿ ಅಪ್ಪ-ಅಮ್ಮ ನಮಗಾಗಿ ಪಡುವ ಪಾಡು, ಅವರ ಕಷ್ಟ-ಸುಖ, ಕವಿ-ಕಾವ್ಯ-ಪರಂಪರೆ ಇದನ್ನೆಲ್ಲಾ ಅರ್ಥವಿಸಿಕೊಳ್ಳಲಾಗದ ಮುಗ್ಧ ಬುದ್ಧಿಮಟ್ಟ. ಕುವೆಂಪು ಅಂದರೆ ಯಾರು ಆತ ಯಾಕೆ ಹಾಗೆಲ್ಲಾ ಬರೆದರು ಎಂದು ಎಂದೂ ಚಿಂತಿಸುವುದಕ್ಕೆ ಒಗ್ಗದ ಮನ. ಕಾಲ ನಿಲ್ಲುವುದಿಲ್ಲವಲ್ಲ, ಸರಿದೇ ಹೋಗುತ್ತದೆ, ಮುಪ್ಪಡರಿದ ಕುವೆಂಪು ಸಾಹಿತ್ಯಲೋಕವನ್ನು ಬಿಟ್ಟು ಉದಯರವಿಯಲ್ಲಿ ಅಸ್ತಂಗತರಾಗಿದ್ದರು-ಅದು ಈಗ ಕಥೆ ಅಥವಾ ನೆನಪು ಮಾತ್ರ.

ಬರವಣಿಗೆ ಬರಹಗಾರನಿಗೆ ಖುಷಿ ಕೊಡುವುದರ ಜೊತೆಜೊತೆಗೇ ಓದುಗರ ಮಹಾಸಾಗರದಲ್ಲಿ ಎಷ್ಟು ದಿನ ತೇಲುತ್ತದೆ, ಎಷ್ಟುದಿನ ತನ್ನತನವನ್ನು ಎತ್ತಿಹಿಡಿದು ಮೆರೆಸುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ಅನೇಕ ಲಕ್ಷಮಂದಿ ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಗಳನ್ನು ನೀಡಿದರೂ ಕೇವಲ ಕೆಲವರು ಮಾತ್ರ ತಮ್ಮ ಅತ್ಯುತ್ತಮ ಕೃತಿಗಳಿಂದ ಅಜರಾಮರರಾಗುತ್ತಾರೆ. ರಸಋಷಿಗಳಾದ ಅಂಥವರಿಗೆ ’ಗೌಡಾ’ ಕೊಡುವುದೂ ಬೇಕಾಗಿಲ್ಲ. ಯಾಕೆಂದರೆ ಅವರ ಹೆಸರುಗಳ ಅಂದಗೆಟ್ಟುಹೋಗುತ್ತದೆ. ಉನ್ನತ ಸ್ತರದ ಯಾವುದೇ ವ್ಯಕ್ತಿಗೆ ಡಾ. ಸೇರಿಸಿದರೆ ಮೈಯ್ಯೆಲ್ಲಾ ಉರಿದ ಅನುಭವ, ಪ್ರಾಯಶಃ ಅದು ಇತ್ತೀಚೆಗೆ ಕೊಡು-ಕೊಳ್ಳುವ ವಿಷಯಕ್ಕೆ ಇಳಿದು ಬೆಲೆಕಳೆದುಕೊಂಡಿದ್ದಕ್ಕೋ ಏನೋ. ಅಂತೂ ಕನ್ನಡದ ಹಿರಿಯ ಜೀವಗಳಿಗೆ ಗೌಡಾ ಹಚ್ಚಿದರೂ ಬಿಟ್ಟರೂ ಅವರ ಗೆಲ್ಮೆ ಹೆಚ್ಚಿನದೇ ಆಗಿದೆ. ಯಾಕೆಂದರೆ ಅವರು ಅನುಸರಿಸಿದ ಬಾಳ ಪಥ ಆ ಮಟ್ಟದ್ದಿದೆ. ಕಥೆಗಾರ ಎಸ್. ದಿವಾಕರ್ ಜೊತೆ ಒಮ್ಮೆ ಮಾತನಾಡುವಾಗ ಡೀವೀಜಿಯವರ ಬಗ್ಗೆ ಹೇಳುತ್ತಿದ್ದೆ, ಆಗ ಅವರು ಹೇಳಿದ್ದೂ ಇದನ್ನೇ " ಬರಹಗಾರನ ಬರಹಗಳು ಎಷ್ಟು ಬಾಳಿಕೆ ಬರುತ್ತವೆ, ಎಂಡ್ಯೂರನ್ಸ್ ಎಷ್ಟಿರುತ್ತದೆ ಎಂಬುದರ ಮೇಲೆ ಆತನ ಬರಹವನ್ನು ಗುರುತಿಸಬಹುದು " ಎಂದರು. ಕನ್ನಡಕ್ಕೊದಗಿದ ಅಂತಹ ಮಹಾನುಭಾವರಲ್ಲಿ ಕುವೆಂಪುವೂ ಒಬ್ಬರು.

ಎಂಬತ್ತರ ದಶಕ ಮುಗಿಯುತ್ತಿರುವ ವೇಳೆ ಎಲ್ಲೆಲ್ಲೂ ಕೇಳಿಸಿದ್ದು ಮೈಸೂರು ಅನಂತಸ್ವಾಮಿಗಳು ಹಾಡಿದ " ಓ ನನ್ನ ಚೇತನಾ ಆಗು ನೀ ಅನಿಕೇತನ ...." ಅದನ್ನೇ ಎ ಸೈಡು ಬಿ ಸೈಡು ಕೇಳೀ ಕೇಳೀ ಕೇಳೀ ಬೇಸರವಾದರೂ ಅರ್ಥವನ್ನು ಅವಲೋಕಿಸುತ್ತಾ ನಡೆದಾಗ ನಮ್ಮನ್ನೇ ನಾವು ಕಳೆದುಕೊಳ್ಳುವ ಲೋಕವೊಂದರ ಸೃಷ್ಟಿಯನ್ನು ನಮ್ಮೊಳಗೇ ಹುಟ್ಟಿಸಿಬಿಡುತ್ತದೆ ಆ ಹಾಡು ! ಎಲ್ಲಿಯೂ ನಿಲ್ಲದಿರು... ಮನೆಯನೊಂದ ಕಟ್ಟದಿರು... ಇದು ಕವಿ ಹೃದಯದಲ್ಲಿ ಹೇಗೆ ಬಂತು ಎಂಬುದು ಅವರಿಗಿಂತ ತೀರಾ ಎಳಬನಾದ ನನಗೆ ಸ್ಪಷ್ಟವಿಲ್ಲ. ಕುಪ್ಪಳ್ಳಿಯಂತಹ ಕುಗ್ರಾಮದ ಮಜಭೂತಾದ ತೊಟ್ಟಿಮನೆಯಿಂದ ಮೈಸೂರು ನಗರದ ’ಉದಯರವಿ’ಗೆ ಅವರು ಹೋಗಬೇಕಾಗಿ ಬಂದಾಗ ಹಾಗೆ ಬರೆದರೇ ? ಗೊತ್ತಿಲ್ಲ. ’ಅಣ್ಣನ ನೆನಪು’ ಎಂಬುದನ್ನು ಬರೆದೇ ಅಷ್ಟಿಷ್ಟು ಹೆಸರುಪಡೆದ ಪೂಚಂತೇ ಮಹಾಮೇರು ಕುವೆಂಪುವಿನ ಮಗನಾದರೂ ಆ ಮಟ್ಟಕ್ಕೆ ಬೆಳೆಯಲಿಲ್ಲ! ಅದೊಂದು ಶಕೆ; ಒಬ್ಬರಂತೇ ಇನ್ನೊಬ್ಬರು ಆಗಲು ಸಾಧ್ಯವಾಗದೇ ಹೋಗಬಹುದು, ಬಹುತೇಕರಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಹಿತ್ಯಕ ರಸಾಭಿಜ್ಞತೆಗೆ ಅದರದ್ದೇ ಆದ ಆಯಾಮ ಇದೆ. ಬರೆದಿದ್ದೆಲ್ಲಾ ಸಾಹಿತ್ಯವಾಗುವುದಿಲ್ಲವಲ್ಲ? ಅಂತೆಯೇ ತೇಜಸ್ವಿಯವರ ಬರಹಗಳೆಲ್ಲ ಎಲ್ಲರನ್ನೂ ಮೆಚ್ಚಿಸಬಲ್ಲ ’ಸತ್ಯಾವತಾರ’ದ ನುಡಿಗಳಾಗಿರಲಿಲ್ಲ!

ಪೂಚಂತೇ ಜೊತೆಗೆ ಅವರ ಬರಹಗಳನ್ನು ಬೆರಳಚ್ಚು ಮಾಡಿಕೊಟ್ಟ ಅನುಭವವಿರುವ ಮಿತ್ರ ಪರಾಂಜಪೆ ಹೇಳುತ್ತಿದ್ದರು " ತೇಜಸ್ವಿ ಅಪ್ಪನಷ್ಟು ತಾದಾತ್ಮ್ಯ ಭಾವವನ್ನು ಹೊಂದಿದವರಾಗಿರಲಿಲ್ಲ. ಬರೆಯಬೇಕೋ ಬರೆಯಬೇಕು ಆದರೆ ಬರವಣಿಗೆಯ ಗುಣಮಟ್ಟದ ಬಗ್ಗೆ ಅವರು ತಲೆಕೆಡಿಸಿಕೊಳ್ಳದ ಬರಹಗಾರರು " ಎಂದು. ತೀರಾ ಇತ್ತೀಚೆಗೆ ಕುವೆಂಪು ಅವರ ಮೊಮ್ಮಗಳು ಈಶಾನ್ಯೆ ದಿನಪತ್ರಿಕೆಯೊಂದರಲ್ಲಿ ಚಿಕ್ಕ ಲೇಖನ ಬರೆದಿದ್ದು ಓದಿದೆ; ಇಲ್ಲ-ಕುವೆಂಪು ಮೊಮ್ಮಗಳು ಎನ್ನುವ ಮಟ್ಟದ್ದಲ್ಲ! ಕುವೆಂಪು ಕುವೆಂಪುವೇ; ಅದೊಂದು ರಸಋಷಿಯ ಕನ್ನಡಾವತಾರ !

ಕುವೆಂಪು ಅವರ ತಾದಾತ್ಮ್ಯತೆಯ ಬಗ್ಗೆ ಘಟನೆಯೊಂದು ಹೀಗಿದೆ: ಒಮ್ಮೆ ಕುವೆಂಪು ಮನೆಯಲ್ಲಿ ಕಳ್ಳತನವಾಯ್ತು. ಕದ್ದ ಕಳ್ಳ ಆಮೇಲೆ ದಿನವೆರಡರ ನಂತರ ಸಿಕ್ಕಿ ಬಿದ್ದಾಗ ಆತನನ್ನು ಪೋಲೀಸರು ಕುವೆಂಪು ಅವರ ಮನೆಗೆ ಎಳೆತಂದು ಎಲ್ಲೆಲ್ಲಿ ಹೇಗ್ಹೇಗೆ ಏನೇನು ಕದ್ದೆ ? ಎಂದು ಪ್ರಶ್ನಿಸಿದಾಗ, ಕಳ್ಳ ಹೇಳಿದ್ದು "ನಾನು ಕಳ್ಳತನಮಾಡುವಾಗ [ಕುವೆಂಪುವನ್ನು ಬೆರಳಿಟ್ಟು ತೋರಿಸಿ]ಓ ಇವರು ಇಲ್ಲೇ ಓದ್ತಾ ಕೂತಿದ್ರು " ! ಇನ್ನೊಂದು ಚಿಕ್ಕ ವೈಯ್ಯಕ್ತಿಕ ಟಿಪ್ಪಣಿ ಎಂದರೆ ಆಗಿನ ಕಾಲದಲ್ಲಿ ಅನೇಕರು ಕುವೆಂಪು ಅವರಿಗೆ ಕಾಗದ ಬರೆದು ಮಕ್ಕಳಿಗೆ ಹೆಸರು ಸೂಚಿಸುವಂತೇ ಕೋರುತ್ತಿದ್ದರು. ಉತ್ತರ ಬರೆಯಲು ಅಂಚೆ ಕಾರ್ಡುಗಳನ್ನು ಯಾರಾದರೂ ಕೆಲಸಗಾರರಲ್ಲಿ ಹೇಳಿಕಳಿಸಿ ಕುವೆಂಪು ತರಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಅವರು ಒಂದೋ ಎರಡೋ ರೂಪಾಯಿ ಕೊಡುತ್ತಿದ್ದರಲ್ಲಾ ಖರ್ಚಾಗಿ ಉಳಿದ ಚಿಲ್ಲರೆ ಹಣ ಕೈಗೆ ಮರಳಿ ಬರುವವರೆಗೆ ಕಾರ್ಡು ತಂದವರನ್ನು ಕೇಳುತ್ತಲೇ ಇರುತ್ತಿದ್ದರು.

ವಿಜಯಕರ್ನಾಟಕದಲ್ಲಿ ಹಿಂದೊಮ್ಮೆ ’ಮಹಾಕಾವ್ಯಗಳು ಎಂದರೆ ಅವು ಸಾಮಾನ್ಯರಿಗೆ ಅರ್ಥವಾಗದ್ದು’ ಎಂದು ಅಸಡ್ಡೆಯಾಗಿ ’ಸ್ಫೂರ್ತಿ ಸೆಲೆ’ ಎಂಬ ಶೀರ್ಷಿಕೆಯಡಿಯಲ್ಲಿ ಯಾರೋ ನಿತ್ಯ ಬರೆಯುವವರು ಬರೆದಿದ್ದರು, ಅದನ್ನು ವಿರೋಧಿಸಿ ಅಣಕವನ್ನೂ ಬರೆದ ನೆನಪು ನನಗಿದೆ, ಅದೂ ಈ ಬ್ಲಾಗ್ ನಲ್ಲೇ ಇದೆ. ರಟ್ಟೆಗಾತ್ರದ ಕೆಲಸಕ್ಕೆ ಬಾರದ ಭಾಷಾಂತರಮಾಡಿದ ಪುಸ್ತಕಗಳನ್ನು ಬರೆಯಬಹುದು ಆದರೆ ಮಹಾಕಾವ್ಯಗಳನ್ನು ಬರೆಯುವುದು ಅಷ್ಟು ಸುಲಭವೇ? ನಮ್ಮಲ್ಲಿ ಒಂದು ದಂತಕಥೆಯಿತ್ತು: ’ರಾಮಾಯಣ ದರ್ಶನಂ’ ಬರೆಯುವ ಸಮಯದಲ್ಲಿ ಕುವೆಂಪು ಸ್ನಾನಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಒಂದು ಮಣೆಯಮೇಲೆ ಕುಳಿತು ಬರೆಯುತ್ತಿದ್ದರಂತೆ. ಬರೆಯುತ್ತಾ ಬರೆಯುತ್ತಾ ಬಟ್ಟೆ ಒಣಗಿದಮೇಲೆ ಕಾವ್ಯ ಅಲ್ಲಿಗೇ ನಿಲ್ಲುತ್ತಿತ್ತು ಮತ್ತೆ ಮಾರನೇ ದಿನ ಮುನ್ನಡೆಯುತ್ತಿತ್ತು--ಎಂಬುದಾಗಿ. ಎಷ್ಟು ಸುಳ್ಳೋ ಎಷ್ಟು ಖರೆಯೋ ಗೊತ್ತಿಲ್ಲ, ಆದರೆ ನಾವೆಲ್ಲಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾದ ಯಾವುದೋ ಅಂತಃಸತ್ವ ಅವರಲ್ಲಿತ್ತು, ಆ ಧೀ ಶಕ್ತಿ ಆ ದಿನಗಳಲ್ಲಿ ನಿಂತು ಆ ಮಹಾಕಾವ್ಯವನ್ನು ಕನ್ನಡದಲ್ಲಿ ಅವರು ಬರೆದರು ಎಂಬುದಂತೂ ಸತ್ಯವೇ ಸರಿ. ನಾವೆಲ್ಲಾ ಬರೆಯಬೇಕು ಎಂದುಕೊಳ್ಳುತ್ತೇವೆ, ಅಂದುಕೊಂಡಿದ್ದನ್ನೆಲ್ಲಾ ಬರೆಯಲು ಪದಪುಂಜಗಳ ಕೊರತೆ ಕೆಲವರಿಗಾದರೆ, ಸಮಯದ ಮಿತಿ ಇನ್ನು ಕೆಲವರಿಗೆ, ಬರೆಯಬೆಕೆನ್ನುವಷ್ಟರಲ್ಲಿ ಮರೆತುಹೋಗುವ ಬವಣೆ ಇನ್ನೂ ಕೆಲವರಿಗೆ! ಆದರೆ ಯಾವುದನ್ನೂ ತಪ್ಪದೇ ನಿರರ್ಗಳವಾಗಿ ಕುಮಾರವ್ಯಾಸ ಭಾರತವನ್ನು ಬರೆದಂತೇ ಕುವೆಂಪು ರಾಮಾಯಣ ಬರೆದರು ಎಂಬುದು ವಿಶೇಷ; ಅದು ಕನ್ನಡಿಗರಿಗೆ ಹೆಮ್ಮೆ.

೨೯ ಡಿಸೆಂಬರ್ ೧೯೦೪ ರಂದು ಇಂದಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಿರೇಕೊಡಿಗೆ ಎಂಬ ಕುಗ್ರಾಮದಲ್ಲಿ ಕುಪ್ಪಳಿ ವೆಂಕಟಪ್ಪಗೌಡರ ಮಗನಾಗಿ ಜನಿಸಿದ ಈ ಕಿಂದರಿಜೋಗಿ ಕುಣಿಸದ ಹುಡುಗರಿಲ್ಲ!ಬಾಲ್ಯ ಕಳೆದಿದ್ದು ಮಲೆನಾಡ ಸಿರಿದೇವಿ ನೆಲೆನಿಂತ ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ.

ಕುವೆಂಪು ಅವರ ಕುಪ್ಪಳಿ ಮನೆ

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ದನಿಯು ದನ ಕಾಯುವನ ಕೊಳಲೊಡನೆ ಬರಲಿ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂತಹ ಸಹಜ ಭಾವೋನ್ಮಾದ ನೋಡಿ! ಜಮೀನ್ದಾರರಾದ ತಂದೆ ಮಗನ ಉತ್ತಮ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿಕ್ಷಕರನ್ನು ಕರೆಸಿಕೊಂಡು ಮನೆಯಲ್ಲೇ ಪ್ರಾಥಮಿಕ ಓದು-ಬರಹ ಕಲಿಯುವಂತೇ ಅನುಕೂಲ ಕಲ್ಪಿಸಿದರು; ಬಹುಶಃ ಸುಸಂಕೃತ ದಕ್ಷಿಣ ಕನ್ನಡದ ಸುಶಿಕ್ಷಿತ ಉಪಾಧ್ಯಾಯ ಪಾಠ ಹೇಳದಿದ್ದರೆ ನಮಗೆ ಕುವೆಂಪು ಪ್ರಸಿದ್ಧ ’ಕುವೆಂಪು’ವಾಗಿ ಸಿಗುತ್ತಿದ್ದರೋ ಇಲ್ಲವೋ. ಅಡಿಪಾಯಕ್ಕೆ ಬಳಸಿದ ವಸ್ತುಗಳು ವಜ್ರಾದಪಿ ಕಠಿಣವಾಗಿದ್ದರೆ ಕಟ್ಟಡ ಸಹ ಚೆನ್ನಾಗಿರುವುದಂತೆ, ಹಾಗೇನೇ ಇಲ್ಲೂ ಕುವೆಂಪು ಅವರ ಪ್ರಾಥಮಿಕ ಶಾಲೆ ಮನೆಯಲ್ಲೇ ಸುಲಲಿತವಾಗಿ ನಡೆಯಿತು. ನಂತರ ತೀರ್ಥಹಳ್ಳಿಯಲ್ಲಿದ್ದ ಆಂಗ್ಲೋ ವರ್ನೇಕ್ಯೂಲರ್ ಶಾಲೆಗೆ ಮಧ್ಯಮ ತರಗತಿಗಳ ಓದಿಗಾಗಿ ಸೇರಿದರು. ೧೨ ನೇ ಎಳೆಯ ವಯಸ್ಸಿನಲ್ಲಿ ಇದ್ದಾಗ ತಂದೆ ವೆಂಕಟಪ್ಪ ಗೌಡ ಅನಾರೋಗ್ಯದಿಂದ ಮಡಿದರು. ಪ್ರೌಢಶಾಲೆಗಾಗಿ ಮೈಸೂರಿನ ವೆಸ್ಲಿಯನ್ ಹೈ ಸ್ಕೊಲ್ ಸೇರಿದ ಕುವೆಂಪು ಪದವಿಗಾಗಿ ತೆರಳಿದ್ದು ಮಹಾರಾಜಾ ಕಾಲೇಜಿಗೆ. ೧೯೨೯ರಲ್ಲಿ ಕನ್ನಡ ಪ್ರಾಮುಖ್ಯವಾಗುಳ್ಳ ಪದವಿಯನ್ನು ಪಡೆದರು. ಕಾಲೇಜು ವ್ಯಾಸಂಗದ ವೇಳೆ ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀಕಂಠಯ್ಯರಂತಹ ಘಟಾನುಘಟಿಗಳ ಕಲಿಸುವಿಕೆ ಮತ್ತು ಪ್ರಭಾವ ಕುವೆಂಪುವಿನಮೇಲಾಯಿತು ಎಂಬುದನ್ನು ಮರೆಯುವಂತಿಲ್ಲ. ೧೯೩೭ ರಲ್ಲಿ ಹೇಮಾವತಿ ಎಂಬ ಕನ್ಯೆಯನ್ನು ಮದುವೆಯಾದರು. ಎರಡು ಹೆಣ್ಣು-ಎರಡು ಗಂಡು ಹೀಗೇ ನಾಕು ಮಕ್ಕಳ ತಂದೆಯ ತುಂಬು ಸಂಸಾರ ನಡೆಸಿದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚಂದ್ರ, ಇಂದುಕಲಾ ಮತ್ತು ತಾರಿಣಿ ಇವು ಆ ಮಕ್ಕಳ ಹೆಸರುಗಳು. ತಾರಿಣಿಯನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಚಿದಾನಂದಗೌಡರಿಗೆ ಮದುವೆಮಾಡಲಾಗಿತ್ತು.

ಹೊಸದಾಗಿ ಕೊಂಡ ಕಾರು ಮನೆಯೆದುರು ಬಂದು ನಿಂತಾಗ " ಚಕ್ರಚರಣಕೆ ಸ್ವಾಗತ" ಎಂದಿದ್ದ ಭಾವಜೀವಿ ಮೈಸೂರಿನ ತಮ್ಮ ಮನೆಗೆ ’ಉದಯರವಿ’ ಎಂದು ಹೆಸರಿಸಿದ್ದರು. ನೂರಾರು ಹೊಸ ಶಬ್ದಗಳನ್ನು ಕನ್ನಡಕ್ಕೆ ಜೋಡಿಸಿದ್ದಲ್ಲದೇ ತನ್ನದೇ ಆದ ವಿಚಾರಲಹರಿಯಲ್ಲಿ ಕನ್ನಡ ಕಾವ್ಯ-ಮಿಮಾಂಸೆಯಲ್ಲಿ ವಿಹರಿಸುತ್ತಾ ಹಲವು ಹತ್ತು ಉಪಯುಕ್ತ ಪದಗಳನ್ನು ನಿಗದಿತವಾಗಿ, ಸರ್ವಸಮ್ಮತ ಬಳಕೆಗೆ ಅರ್ಹವಾಗಿ, ದಾರ್ಶನಿಕ ಆದರ್ಶಗಳಿಂದ ಕೂಡಿದ್ದಾಗಿ ಕಂಡು ಕನ್ನಡದಲ್ಲಿ ಅವುಗಳ ಬಳಕೆಗೆ ಬೇಕಾದ ಪರಿಕಲ್ಪನೆ ತಂದರು. ಈ ಕಾರಣದಿಂದಲೇ ಅನೇಕ ಜನ ಹೊಸದಾಗಿ ಜನಿಸಿದ ತಮ್ಮ ಮಕ್ಕಳಿಗೆ ಹೆಸರು ಸೂಚಿಸುವಂತೇ ಕುವೆಂಪು ಅವರನ್ನು ಕಾಣಲು ಹೋಗುತ್ತಿದ್ದರಂತೆ !

'ಉದಯರವಿ' -ಮೈಸೂರು ಮನೆ

೧೯೨೯ರಲ್ಲಿ ಪದವಿ ಮುಗಿದ ತಕ್ಷಣಕ್ಕೇ ಅಧ್ಯಾಪಕ ವೃತ್ತಿ ಅವರಿಗೆ ಅದೇ ಕಾಲೇಜಿನಲ್ಲಿ ದಕ್ಕಿತು! ನಂತರ ೧೯೩೬ರಲ್ಲಿ ಸಹಾಯಕ ಅಧ್ಯಾಪಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಮತ್ತೆ ೧೯೪೬ರಲ್ಲಿ ಮರಳಿ ಮಹಾರಾಜಾ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದರು. ೧೯೫೫ ರಲ್ಲಿ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದರು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ್ ಸ್ವೀಕರಿಸಿ ೧೯೬೦ರ ಅಂದರೆ ನಿವೃತ್ತಿ ವಯಸ್ಸಿನ ವರೆಗೂ ಅದನ್ನು ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಲಿತವರಲ್ಲಿ ಈ ಸ್ಥಾನಕ್ಕೆ ಏರಿದ ಮೊದಲಿಗರಾದರು ಕುವೆಂಪು. ಯಾವುದೋ ರಸನಿಮಿಷದಲ್ಲಿ ಬರೆಯಲು ಆರಂಭಿಸಿದ್ದು ’ಬಿಗಿನರ್ ಮ್ಯೂಸ್’ ಎಂಬ ಆಂಗ್ಲ ಕವನ ಸಂಕಲನ! ಅಚಾನಕ್ಕಾಗಿ ಅವರ ದೃಷ್ಟಿ ಕನ್ನಡದತ್ತ ಹೊರಳಿತು; ನಂತರ ಅವರಲ್ಲಿ ಕನ್ನಡವೇ ಎಲ್ಲದಕ್ಕೂ ಆದ್ಯತೆ ಪಡೆಯಿತು. ಕನ್ನಡಕ್ಕೆ ಅಷ್ಟಾಗಿ ಆದ್ಯತೆ ಇರದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ’ಕನ್ನಡ ಅಧ್ಯಯನ ಸಂಸ್ಥೆ’ಯನ್ನು ಕಟ್ಟಿದರು. ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಹಲವು ಅನುಕೂಲ ಕಲ್ಪಿಸುವಲ್ಲಿ ಕುವೆಂಪು ಬಹಳ ಪ್ರಯತ್ನ ನಡೆಸಿದರು. ಜಿ. ಹನುಮಂತರಾವ್ ಹಿಂದೆ ನಡೆಸಿದ್ದ :ಜನಸಾಮಾನ್ಯನಿಗೆ ಸಿಗಬೇಕಾದ ಜ್ಞಾನಕ್ಕಾಗಿ ಆ ಮಟ್ಟದ ಪುಸ್ತಕಗಳನ್ನು ಹೊರತರುವ ಕಾಯಕದಲ್ಲಿ ಕುವೆಂಪು ಯಶಸ್ವಿಯಾದರು. ತನ್ನ ನಡೆ-ನುಡಿ ಜೀವನಗತಿಗಳಲ್ಲಿ ಜಾತೀಯತೆಯನ್ನು ಮೀರಿನಿಂತ ಕುವೆಂಪು ೧೯೪೬ರಲ್ಲಿ ’ಶೂದ್ರ ತಪಸ್ವಿ’ ಎಂಬ ಕೃತಿಯನ್ನು ಬರೆದು ಶೂದ್ರರು ಜ್ಞಾನವನ್ನು ಪಡೆಯಲು ಅರ್ಹರಲ್ಲ ಎಂಬುದನ್ನು ಅಲ್ಲಗಳೆದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ವಾಕ್ಯವನ್ನು ಗುನುಗುತ್ತಿದ್ದ ಅವರು ಬರೆದ ರಾಮಾಯಣ ದರ್ಶನದಲ್ಲಿ ರಾಮ ಸೀತೆಯೊಂದಿಗೆ ತಾನೂ ಬೆಂಕಿಗೆ ಜಿಗಿದು ತನ್ನ ಸತ್ವಪರೀಕ್ಷೆಮಾಡಿಕೊಳ್ಳುತ್ತಾನೆ! ಬೆಂಗಳೂರು ವಿಶ್ವವಿದ್ಯಾನಿಲಯದ ೧೯೭೪ ರ ಪದವೀಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಕುವೆಂಪು ಅವರ ಭಾಷಣ ’ವಿಚಾರಕ್ರಾಂತಿಗೆ ಆಹ್ಬಾನ’ ಇಂದಿಗೂ ಪ್ರಸ್ತುತವಾಗಿದೆ. ೧೯೮೭ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ ಶಿವಮೊಗ್ಗೆಯಲ್ಲಿ ಜ್ಞಾನ ಸಹ್ಯಾದ್ರಿಯ ಮಡಿಲಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು.

ಕೃತಿಗಳು :
___________

ಮಹಾಕಾವ್ಯ:

ಶ್ರೀ ರಾಮಾಯಣ ದರ್ಶನಂ ಭಾಗ-೧ [೧೯೪೯] ಮತ್ತು ಭಾಗ-೨ [೧೯೫೭]


ಕವನ ಸಂಕಲನಗಳು:

ಕೊಳಲು (೧೯೩೦)
ಪಾಂಚಜನ್ಯ (೧೯೩೬)
ನವಿಲು (೧೯೩೭)
ಕಿಂದರಿಜೊಗಿ ಮತ್ತು ಇತರ ಕವನಗಳು (೧೯೩೮)
ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ (೧೯೪೪)
ಶೂದ್ರ ತಪಸ್ವಿ (೧೯೪೬)
ಕಾವ್ಯ ವಿಹಾರ (೧೯೪೬)
ಕಿಂಕಿಣಿ (೧೯೪೬)
ಅಗ್ನಿಹಂಸ (೧೯೪೬)
ಪ್ರೇಮ ಕಾಶ್ಮೀರ (೧೯೪೬)
ಚಂದ್ರಮಂಚಕೆ ಬಾ ಚಕೋರಿ (೧೯೫೪)
ಇಕ್ಷುಗಂಗೋತ್ರಿ (೧೯೫೭)
ಕಬ್ಬಿಗನ ಕೈಬುತ್ತಿ
ಪಕ್ಷಿಕಾಶಿ
ಜೇನಾಗುವಾ
ಕುಟಿಚಕ
ಕಾದಿರದಕೆ
ಕಥನ ಕವನಗಳು

ರೂಪಕಗಳು :

ಬಿರುಗಾಳಿ (೧೯೩೦)
ಮಹರಾತ್ರಿ (೧೯೩೧)
ಸ್ಮಶಾನ ಕುರುಕ್ಷೇತ್ರಮ್ (೧೯೩೧)
ಜಲಗಾರ (೧೯೩೧)
ರಕ್ತಾಕ್ಷಿ(೧೯೩೨)
ಶೂದ್ರ ತಪಸ್ವಿ (೧೯೪೪)
ಬೆರಳ್ಗೆ ಕೊರಳ್ (೧೯೪೭)
ಯಮನ ಸೋಲು
ಚಂದ್ರಹಾಸ
ಬಲಿದಾನ

ಆತ್ಮಚರಿತ್ರೆ :

ನೆನಪಿನ ದೋಣಿಯಲಿ (೧೯೮೦)


ಕಥಾಸಂಕಲನಗಳು :

ಮಲೆನಾಡಿನ ಚಿತ್ರಗಳು (೧೯೩೩)
ಸನ್ಯಾಸಿ ಮತ್ತು ಇತರೆ ಕತೆಗಳು (೧೯೩೭)
ನನ್ನ ದೇವರು ಮತ್ತು ಇತರ ಕತೆಗಳು (೧೯೪೦)

ಕುವೆಂಪು ಸ್ಮಾರಕ

ಸಾಹಿತ್ಯ ವಿಮರ್ಶೆ :

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (೧೯೪೪)
ಕಾವ್ಯವಿಹಾರ (೧೯೪೬)
ತಪೋನಂದನ (೧೯೫೧)
ವಿಭೂತಿ ಪೂಜೆ (೧೯೫೩)
ದ್ರೌಪದಿಯ ಶ್ರೀಮುಡಿ (೧೯೬೦)
ವಿಚಾರಕ್ರಾಂತಿಗೆ ಆಹ್ವಾನ (೧೯೭೬)
ಸಾಹಿತ್ಯಪ್ರಾಚರ

ಜೀವನಚರಿತ್ರೆ :

ಸ್ವಾಮಿ ವಿವೇಕಾನಂದ(೧೯೨೬)
ಶ್ರೀ ರಾಮಕೃಷ್ಣ ಪರಮಹಂಸ(೧೯೩೪)
ಗುರುವಿನೊಡನೆ ದೇವರೆಡೆಗೆ

ಮಕ್ಕಳ ಕಥೆಗಳು :

ಬೊಮ್ಮನಹಳ್ಳಿಯ ಕಿಂದರಿಜೋಗಿ(೧೯೩೬)
ಮರಿ ವಿಜ್ಞಾನಿ(೧೯೪೭)
ಮೇಘಾಪುರ(೧೯೪೭)
ನನ್ನ ಮನೆ(೧೯೪೭)
ನನ್ನ ಗೋಪಾಲ
ಅಮಲನ ಕಥೆ

ಸಿನಿಮಾಕ್ಕೆ ಅಳವಡಿಸಿದ ಕಾದಂಬರಿ :

ಕಾನೂರು ಸುಬ್ಬಮ್ಮ ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು

ಪ್ರಶಸ್ತಿಗಳು :

ಜ್ಞಾನಪೀಠ ಪ್ರಶಸ್ತಿ - ೧೯೬೭ [೪]
ಪದ್ಮ ಭೂಷಣ - ೧೯೫೮[೫]
ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೫೫[೬]
ರಾಷ್ಟ್ರಕವಿ - ೧೯೬೪[೬]
ಪಂಪ ಪ್ರಶಸ್ತಿ - ೧೯೮೭[೬]
ಪದ್ಮ ವಿಭೂಉಷಣ - ೧೯೮೮[೫]
ಕರ್ನಾಟಕ ರತ್ನ- ೧೯೯೨[೬]

ಕುವೆಂಪು ಅವರ ಸಹಿ

ಹೀಗೇ ಅನೇಕ ಕೃತಿಗಳು ಒಂದೊಂದೂ ಜನಮನಗೆಲ್ಲುವಲ್ಲಿ ದಿನೇ ದಿನೇ ದಾಪುಗಾಲು ಹಾಕಿದವು. ಕುವೆಂಪು ನಮ್ಮೊಡನಿಲ್ಲ ೧೧ ನವೆಂಬರ್ ೧೯೯೪ ರಂದು ಅವರು ಇಹಲೋಕ ತೊರೆದರು ಎಂದರೂ ನಂಬಲು ಸಾಧ್ಯವಾಗದಷ್ಟು ಆಪ್ತವಾಗಿ ಓದುಗನ ಹೃದಯಮಂಚವನ್ನೇರಿ ವಿಹರಿಸತೊಡಗಿದ ಬರಹಗಳನ್ನು ಬಾಗಿಲುಹಾಕಿ ಹೊರದ್ದಬ್ಬುವ ದಾರ್ಷ್ಟ್ಯವಾಗಲೀ ಅಗತ್ಯವಾಗಲೀ ಯಾರಲ್ಲೂ ಇರಲಿಲ್ಲ; ಯಾಕೆಂದರೆ ಅವು ನಮ್ಮದೇ ಜೀವನದ ಭಾಗಗಳನ್ನು ಘಳಿಗೆಗಳನ್ನು ಹೋಲುತ್ತಿದ್ದವು! ಮಹಾತಪಸ್ವಿಯೊಬ್ಬ ತನ್ನ ದೇಹತ್ಯಾಗಮಾಡಿದ ಮಹಾಸಮಾಧಿಯ ಸ್ಥಳದಲ್ಲಿ ಯಾವುದೋ ಅವ್ಯಕ್ತ ಪ್ರಭೆ ಅವಿತು ಎಲ್ಲರನ್ನೂ ಪ್ರಲೋಭಿಸುವಂತೇ ಕುಪ್ಪಳಿಯ ಕವಿಯ ಮೂಲ ಮನೆ, ಅಲ್ಲಿನ ಜೀವನ ವಿಧಾನ, ಹಿಂದೊಮ್ಮೆ ಅಲ್ಲಿ ವಾಸವಿದ್ದ ಜನ ಬಳಸಿದ ವಸ್ತುಗಳು, ಕುವೆಂಪು ಬಳಸಿದ ವಸ್ತುಗಳು, ಬರೆಯಲು ಕೂರುತ್ತಿದ್ದ ಜಾಗ, ಆ ಕಾಲದ ಬಾಣಂತೀ ಕೋಣೆ, ಮೀನು ಹುರಿಯುವ ಕಾವಲಿ ಒಂದೇ ಎರಡೇ ಹಲವು ನೆನಪಿನ ಕುರುಹುಗಳು ಅಲ್ಲಿವೆ; ಕರೆಯುತ್ತವೆ. ಮಳೆಗಾಲದಲ್ಲಿ ನೆನೆದು ಬಂದು ಕಂಬಳಿ ಒಣಗಿಸಿ ಜೋರಾಗಿ ಉರಿವ ಬಚ್ಚಲ ಒಲೆಯಲ್ಲಿ ಚಳಿಗೆ ಮೈಕಾಸಿ, ಬಿಸಿ ಬಿಸಿ ನೀರು ಸ್ನಾನಮಾಡಿ, ನಾಮದ ಪೆಟ್ಟಿಗೆ ತೆರೆದು ನಾಮ ಹಚ್ಚಿಕೊಳ್ಳುತ್ತಿದ್ದ ’ಕಥೆಗಾರ ಮಂಜಣ್ಣ’ಮಾತ್ರ ಅಲ್ಲಿಲ್ಲ, ಆತನೂ ಕುವೆಂಪು ಅವರಿಗಿಂತ ಮೊದಲೇ ಕಾಲವಾಗಿರಬೇಕು; ಆದರೂ ಅತ ಕುವೆಂಪು ಅವರೊಟ್ಟಿಗೇ ಬದುಕಿದ್ದಾನೆ-ಅವರ ಕಥೆಗಳಲ್ಲಿ, ಕವನ-ಸಾಹಿತ್ಯಗಳಲ್ಲಿ, ಕುವೆಂಪುವೆಂಬ ಆ ಮಹಾನ್ ಚೇತನಕ್ಕೆ ನಿಮ್ಮೆಲ್ಲರೊಟ್ಟಿಗೆ ನನ್ನದೊಂದು ಸಣ್ಣ ನಮಸ್ಕಾರ.

Monday, December 26, 2011

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ಚಿತ್ರ ಕೃಪೆ : ಮಂಜುನಾಥ ಹೆಗಡೆ, ಸಾಯೀಮನೆ.

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ದಿನ ಪೂರ್ತಿ ಭಜನೆಗಳ ಮಹಾಪೂರವೇ ಹರಿದರೆ ಕುಳಿತ ದೇವರಿಗೆ ಎಷ್ಟು ಸಂತಸವಾಗಬಹುದು! ಇಂಥಾ ಭಜನೆಗಳ ಮಹಾಪೂರವನ್ನೇ ಭಜನೆ ಪ್ರಹರ ಎಂದು ನಮ್ಮಲ್ಲಿ ಕರೆಯುತ್ತಾರೆ. ಅಪರೂಪಕ್ಕೊಮ್ಮೆ ಈ ಸುಸಂಧಿ ನನಗೊದಗಿತ್ತು! ನನ್ನ ಬಾಲ್ಯದ ದಿನಗಳು, ಚಳಿಯಲ್ಲೂ ಗಡಗಡ ಗುಡುತ್ತಾ ಹರಕಲು ಚಾಪೆಯ ಮೇಲೆ ಕುಳಿತು ಕೈಲಿ ತಾಳ ಹಿಡಿದು ಓರಗೆಯ ಒಂದಿಬ್ಬರು ಬಾಲಕರು ಮತ್ತು ಮಿಕ್ಕುಳಿದ ಹಿರಿಯರೊಡನೆ ನಾನು ಊರ ದೇವಸ್ಥಾನಗಳ ಭಜನೆಪ್ರಹರಗಳಲ್ಲಿ ತಲ್ಲೀನನಾಗುತ್ತಿದ್ದುದು ನೆನಪಿಗೆ ಬಂತು; ಜೊತೆಗೆ ಕೆಲವು ಸ್ನೇಹಿತರು ಕೂಡಾ ಸಿಕ್ಕಿದ್ದು ಸಂತೋಷವನ್ನು ದ್ವಿಗುಣಗೊಳಿಸಿತ್ತು. ಅನೇಕ ಹಿರಿಯ ಜೀವಗಳು ಇನ್ನೂ ಭಜನೆಯಲ್ಲಿ ಆಸ್ಥೆ ವಹಿಸಿದ್ದು ಬಹಳ ಹಿಡಿಸಿತು. ಹಳೇಕಾಲದ ಭಜನೆಗಳು, ಆದಿತಾಳ-ಜಂಪೆತಾಳ-ತ್ರಿತಾಳ-ಏಕತಾಳ ಇತ್ಯಾದಿ ಹಲವು ತಾಳಗಳು, ಸಾಥ್ ಕೊಡುವ ಚಿಕ್ಕ ಭಜನೆ ಡೋಲು, ಹಾರ್ಮೋನಿಯಂ, ತಬಲಾ ಇತ್ಯಾದಿ ಕೆಲವು ಮಿತ ವಾದ್ಯ ಪರಿಕರಗಳಿದ್ದವು. ಪರವೂರ ಕೆಲವು ಭಜನಾಸಕ್ತರು ತಮ್ಮ ಕಂಠಸಿರಿಯನ್ನು ತೋರಿಸಿ ಗಮನ ಸೆಳೆಯಲು ಹತ್ತಾರು ಕಿಲೋಮೀಟರು ಕ್ರಮಿಸಿ ಬಂದಿದ್ದರು.

ಊರಿಗೆ ಹೋದದ್ದು ನಮ್ಮ ಕೆಲವು ವೈಯ್ಯಕ್ತಿಕ ಕಾರ್ಯಕ್ರಮಗಳಿಗಾದರೆ ಅಲ್ಲಿಗೆ ಹೋದಾಗ ತಿಳಿದದ್ದು--ಕಾರ್ತೀಕ ಅಮಾವಾಸ್ಯೆಗೆ ಅಲ್ಲಿನ ಜನರಿಗೆ ಸೂತಕವಿದ್ದುದರಿಂದ ಈ ಸರ್ತಿಯ ಭಜನೆ ಪ್ರಹರನ್ನು ಈ ಮಾರ್ಗಶೀರ್ಷ ಅಮಾವಾಸ್ಯೆಗೆ ನಡೆಸುತ್ತಿದ್ದಾರೆಂದು. ’ಸಿಕ್ತಲೇ ಮಗನೇ ಚಾನ್ಸು’ ಎಂದುಕೊಂಡವನು ನೇರವಾಗಿ ದೌಡಾಯಿಸಿದ್ದೇ ದೇವಸ್ಥಾನಕ್ಕೆ! ಬೆಳಿಗ್ಗೆ ೧೦ಕ್ಕೆ ಆರಂಭವಾದ ಭಜನೆ ಮಾರನೇದಿನ ಬೆಳಿಗ್ಗೆ ೧೦ಕ್ಕೆ ಓಕುಳಿಯಾಗುತ್ತದೆ, ಅಲ್ಲಿಗೆ ತಿಂಗಳದಿನ ಪ್ರತೀ ಸಂಜೆ ನಡೆಸುವ ಭಜನೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಮುಕ್ತಾಯದ ಮಂಗಳದಿನದಂದು ದೇವರಿಗೆ ವಿಶೇಷ ಅಭಿಷೇಕ, ಪೊಜೆ, ಉಪಚಾರ ಮತ್ತು ಮಹಾಮಂಗಳಾರತಿ, ಸೇರಿದ ಭಕ್ತರಿಗೆ ಊಟ. ಇವು ಸದಾ ನಡೆದೇ ಇವೆ. ಸೇವಾ ಸಮಿತಿಯ ಮಂದಿ ವರ್ಗಿಣಿ ಹಾಕಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ಹೆಚ್ಚುಳಿದ ಸಾಮಾನುಗಳನ್ನು ಆ ರಾತ್ರಿ ಹರಾಜಿನ ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ದೇವರ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಾರೆ.ದೇವರಿಗೇ ಬೊಕ್ಕಸವೇ ಎಂದು ಕೇಳಬೇಡಿ, ಸ್ಥಾನಿಕವಾಗಿ ದೇವರು ತನ್ನ ಆಸ್ಥಾನದಲ್ಲಿ ನಡೆಸುವ ಎಲ್ಲಾ ಚಡಂಗಗಳಿಗೂ ಖರ್ಚಿಗೆ ಬೇಡವೇ ಮತ್ತೆ?

ಸದಾಶಿವ, ಗಜಾನನ ಇತ್ಯಾದಿ ಕೆಲವು ಸ್ನೇಹಿತರೊಂದಿಗೆ ಮಾತುಕತೆ ರಸವತ್ತಾಗಿತ್ತು. ಅದೇ ನಾವೆಲ್ಲಾ ಒಂದೆಲ್ಲಾ ಒಂದು ಕಾಲದಲ್ಲಿ ಈ ದೇವಸ್ಥಾನಗಳಲ್ಲಿ ಭಜನೆ ಪ್ರಹರದ ರಾತ್ರಿ ಚಳಿಕಾಯಿಸಲು ದೇವಸ್ಥಾನದ ಮಗ್ಗುಲ ತುಸುದೂರದ ಖಾಲೀ ಜಾಗದಲ್ಲಿ ಹೊಡಚ್ಲು[ಕ್ಯಾಂಫೈರ್]ಹಾಕಿಕೊಳ್ಳುವುದಿತ್ತು. ಅಕ್ಕಪಕ್ಕ ಗಿಡಮರಗಳಿಂದ ಬಿದ್ದಿರುವ ಕಸ-ಕಡ್ಡಿಗಳನ್ನೂ ಯಾರೋ ಎಸೆದ ಒಂದಷ್ಟು ರದ್ದೀ ಕಾಗದಗಳನ್ನೂ ಯಾವುದೋ ಕೆಲಸಕ್ಕೆ ಅಂತ ತಂದು ಬಳಕೆಗೆ ಜಾಸ್ತಿ ಎನಿಸಿ ಬಿಸಾಕಿದ ಹಗರದಬ್ಬೆಯ ತುಂಡುಗಳನ್ನೂ ಒತ್ತಟ್ಟಿಗೆ ಒಟ್ಟಿ ಕಡ್ಡಿಗೀರಿ ಉರಿಯುವ ಬೆಂಕಿಯ ಸುತ್ತ ಕುಳಿತು ಚಳಿಹೋಯ್ತೆಂದುಕೊಳ್ಳುವುದು ನಮಗೆ ಬಲು ಖುಷಿಕೊಡುತ್ತಿತ್ತು. [ಇಂದು ಅಂತಹ ಮಕ್ಕಳೂ ಇಲ್ಲ, ಮಕ್ಕಳಲ್ಲಿ ಆ ಉತ್ಸಾಹವೂ ಇಲ್ಲ!]ಅದೇ ಮಕ್ಕಳು ನಾವಿಂದು ಒಬ್ಬ ಬಿ.ಇ.ಓ ಆದರೆ ಇನ್ನೊಬ್ಬ ಡಾಕ್ಟರೇಟ್ ಪಡೆದು ಪ್ರಾಂಶುಪಾಲನಾಗಿದ್ದಾನೆ, ನಾನು ಹೀಗಿದ್ದೇನೆ ನಿಮ್ಮೊಡನೆ!--ಹೇಗಿದೆ ಜೀವನ ವ್ಯಾಪಾರ ? ಮಜವೆನಿಸುವುದಿಲ್ಲವೇ?

ಒಂದೆಡೆ ಸೇರಿದ್ದ ನಮ್ಮಲ್ಲಿ ಹಲವು ಮಾತುಕತೆಗಳಾದವು. ಬಾಲ್ಯದ ಲಹರಿಯಿಂದ ಹಿಡಿದು ಇಂದಿನ ಗಡಸು ಜೀವನದ ಹಲವು ಮಗ್ಗಲುಗಳು ಮಾತಿನಲ್ಲಿ ಸುಳಿದವು. ಒಮ್ಮೆಯಾದರೂ ಈ ಸರ್ತಿ ಊರಲ್ಲೊಂದು ಸಾಂಸ್ಕೃತಿಕ ಹಬ್ಬ ಮಾಡಬೇಕು. ಅದಕ್ಕೆ ಜಾತಿ-ಧರ್ಮಗಳ ಬಂಧನವಿಲ್ಲ. ನಮ್ಮ ಊರ ಮಹನೀಯರಲ್ಲಿ ಬಣ್ಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗೋಪಾಲ್ ಮಾಸ್ತರರಿದ್ದಾರೆ, ಗದಾಯುದ್ಧದಲ್ಲಿ ಭೀಮನಾಗಿ ಮಿಂಚಿದ ಡಿಯೇಗ್ ಗೊನ್ಸಾಲ್ವಿಸ್ ಇದ್ದಾರೆ, ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮಾಜೀ ಯುವಕರ ಸಂಘವೇ ಇದೆ! ಉತ್ತಮ ಸಂಗೀತಗಾರರಿದ್ದಾರೆ, ಉತ್ತಮ ವಕೀಲರಿದ್ದಾರೆ,ವಾಗ್ಮಿಗಳಿದ್ದಾರೆ, ವಿದ್ವಾಂಸರಿದ್ದಾರೆ, ನುರಿತ ವೈದ್ಯರಿದ್ದಾರೆ, ದಂತತಜ್ಞರುಗಳಿದ್ದಾರೆ, ಆಯ್.ಎ.ಎಸ್ ಅಧಿಕಾರಿಗಳಿದ್ದಾರೆ, ಯಕ್ಷಗಾನದ ಪ್ರಮುಖ ಪಾತ್ರಧಾರಿಯಾಗಿ ಮೆರೆದವರಿದ್ದಾರೆ, ಭಾಗವತರಿದ್ದಾರೆ, ಚಿತ್ರಕಲೆಯಲ್ಲಿ ಛಾಪು ಒತ್ತಿದವರಿದ್ದಾರೆ, ಜನಪದ ಸಂಗೀತವನ್ನು ತಮ್ಮದೇ ಸುಶ್ರಾವ್ಯ ಕಂಠದಲ್ಲಿ ಹಾಡುವ ಮಂದಿ ಇದ್ದಾರೆ, ರೈತರಿದ್ದಾರೆ, ಶ್ರಮಿಕರಿದ್ದಾರೆ, ಪುರೋಹಿತರಾಗಿ ದೂರದ ಊರುಗಳಿಗೆ ಸಾಗಿಹೋದ ಜನ ಇದ್ದಾರೆ---ಎಂದಮೇಲೆ ನಮ್ಮೂರಲ್ಲಿ ಯಾವರಂಗದಲ್ಲೂ ಕಮ್ಮಿ ಎನಿಸುವ ಕೊರತೆ ತೋರಿಬರುವುದಿಲ್ಲ. ಆದರೆ ವೃತ್ತಿಯನ್ನಾಧರಿಸಿ ಹಲವಾರು ಮಂದಿ ಊರಿನಿಂದ ಬಹುದೂರ ನೆಲೆಸಿದ್ದಾರೆ. ಅವರುಗಳನ್ನೆಲ್ಲಾ ಕರೆದು ಕಲೆಹಾಕಿ ಕೊನೇಪಕ್ಷ ಏಕದಿನ ಕಾರ್ಯಕ್ರಮ ನಡೆಸಬಹುದೇ ಎಂಬಕುರಿತು ನಾವು ನಾವೇ ಮಾತಾಡಿಕೊಂಡೆವು. ಗೆಳೆಯರ ಬಳಗದಲ್ಲಿ ಅನೇಕ ಜನ ಸಾಹಿತ್ಯಾಸಕ್ತರೂ ಬರಹಗಾರರೂ ಇರುವುದರಿಂದ ಈ ಕಾರ್ಯಕ್ರಮಕ್ಕೂ ಮುಂಚೆ ಬರಹಗಳಲ್ಲಿ ಕೆಲವನ್ನಾದರೂ ಪುಸ್ತಕರೂಪದಲ್ಲಿ ತರುವಂತೇ ಕೇಳಿದ್ದಾರೆ. ಕ್ಷಣವೊಮ್ಮೆ ಮೈ ಜುಂ ಎಂತು, ನಮ್ಮೂರ ಬಗ್ಗೆ ಬಹಳ ಹೆಮ್ಮೆ ಎನಿಸಿತು.

ತುತ್ತಿನ ಚೀಲ ತುಂಬಿಸುವ ಭರದಲ್ಲಿ ಸಾಗುವ ದಾರಿ ಸೇರುವ ಗಮ್ಯ ಮೊದಲು ಅರಿವಿಗೆ ಬಾರದಲ್ಲ ? ಕಾಲೇಜು ವಿದ್ಯೆಯಲ್ಲಿ ಎರಡುವರ್ಷ ಪೂರೈಸಿದ ಮೇಲೆ ಯಾರ್ಯಾರೋ ಎಲ್ಲೆಲ್ಲಿಗೋ ಹೋದೆವು; ಯಾರು ಎಲ್ಲಿ ಎತ್ತ ಎಂಬುದರ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡವರಲ್ಲ, ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯೂಸಿ ಬ್ಯೂಸಿ. ಆದರೂ ಬಾಲ್ಯಕಾಲದ ಚಡ್ಡೀ ದೋಸ್ತಿಯ ಆ ಅನ್ಯಾದೃಶ ಅನುಭವ ಮತ್ತೆ ಮತ್ತೆ ಸ್ನೇಹಿತರು ಸಿಕ್ಕಾಗ ಮನಃಪಟಲದಲ್ಲಿ ಸುಳಿದಾಡುತ್ತದೆ. ಸುಬ್ರಹ್ಮಣ್ಯನೆಂಬ ಗೆಳೆಯನಿಗೂ ನನಗೂ ಯಾವುದೋ ಮಾತಿನ ಜಟಾಪಟಿ ನಡೆದಿದ್ದು, ನನ್ನ ಉಪನಯನಕ್ಕೆ ಆತನಿಗೆ ಬರದಂತೇ ನಾನು ತಾಕೀತು ಮಾಡಿದ್ದು, ಬರದಂತೇ ಮುಳ್ಳಬೇಲೀ ಹಾಕುತ್ತೇನೆಂದು ಹೆದರಿಸಿದ್ದು, ಇನ್ನೂ ಹಸಿಹಸಿ ಎಂಟನೇ ವಯಸ್ಸಿಗೇ ನನಗೆ ಉಪನಯನವಾಗಿದ್ದು ಎಲ್ಲವನ್ನೂ ನೆನೆದು ನನ್ನಷ್ಟಕ್ಕೇ ಒಂಥರಾ ಆನಂದಪಡುತ್ತೇನೆ. ಸುಬ್ರಹ್ಮಣ್ಯ ಸಿಗದೇ ದಶಕಗಳೇ ಸಂದವು. ಆತ ಹೇಗಿದ್ದಾನೋ ಈ ಸರ್ತಿಯೂ ಸಂದರ್ಶಿಸಲಾಗಲಿಲ್ಲ. ಬಡತನದಲ್ಲಿದ್ದ ಅವರ ಮನೆಯ ಹೊರಜಗುಲಿಗೆ ಶಿರವಾಳೆ [ಕಿಟಕಿ ಜಾಲಂದ್ರ]ಇರಲಿಲ್ಲ. ಒಂದೇ ಚಡ್ಡಿ-ಅಂಗಿಯಲ್ಲಿ ಇಡೀವಾರ ಶಾಲೆಯನ್ನು ಮುಗಿಸಬೇಕಾಗಿತ್ತು. ಚಪ್ಪಲಿಯಿಲ್ಲದ ಬರಿಗಾಲಲ್ಲಿ ಆತ ನಡೆದುಬರುತ್ತಿದ್ದ. ಸಣ್ಣಗೆ ಕಿಲಾಡಿಯಾಗಿದ್ದ ಆತ ಶಾಲೆಗೆ ಮಾತ್ರ ಸರಿಯಾಗಿ ಬರುತ್ತಿದ್ದ. ಬಡತನದ ಆ ಮುಖವನ್ನೊಮ್ಮೆ ನೆನೆದು ಕಣ್ಣಾಲಿ ತುಂಬಿಕೊಳ್ಳುತ್ತದೆ.

ವಿಶ್ವನಾಥ ನಮಗಿಂತ ಮೂರ್ನಾಕು ವರ್ಷ ಹಿರಿಯ. ಆತನ ತಂದೆ ೭೫-೭೬ ವರ್ಷದ ರಾಮಣ್ಣ ಮೊನ್ನೆ ಕೂಡಾ ಭಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಳೆಯ ರಾಗಗಳನ್ನು ಹಾಡಿ ಎಲ್ಲರ ಮನಗಳಲ್ಲೂ ಭಾವತರಂಗಗಳು ಮಾರ್ದನಿಸುವಂತೇ ಮಾಡಿದರು. ಕಳೆದವರ್ಷ ಅಕಾಲ ಜ್ವರದಿಂದ ಬಳಲಿ ವಿಶ್ವನಾಥ ತೀರಿಕೊಂಡಿದ್ದರ ಬಗ್ಗೆ ನಾನು ಬರೆದಿದ್ದೆ. ಜಾಸ್ತಿ ಓದಿರದಿದ್ದರೂ ಎಲ್ಲರಿಗೂ ಸ್ನೇಹಿತನಾಗಿದ್ದ ವಿಶ್ವನಾಥನ ಬಗ್ಗೆ ಹೊಸದಾಗಿ ಮತ್ತೆ ಬರೆಯುವುದಾಗುವುದಿಲ್ಲ. ಈ ಸಲದ ಭಜನೆ ಪ್ರಹರದಲ್ಲಿ ಪಾಪ ವಿಶ್ವನಾಥ ಇರಲಿಲ್ಲ. ಜೀವಿಯ ಜೀವನದಲ್ಲಿ ಯಾವುದು ಘಟಿಸಬೇಕೋ ಅದು ನಡೆಯಲೇ ಬೇಕಾದುದು ವಿಧಿಯನಿಯಮ. ಊರಕಡೆ ಎರಡು ಪ್ರದೇಶಕ್ಕೆ ನಾನು ಭೇಟಿಕೊಟ್ಟಿದ್ದೆ: ಎರಡೂ ಕಡೆಗಳಲ್ಲಿ ಮುದ್ದಾದ ಒಂದೊಂದು ಬೆಕ್ಕಿನ ಮರಿಗಳಿದ್ದವು. ಒಂದರ ತಾಯಿ ಮನೆಯ ಹತ್ತಿರದ ರಾಷ್ಟ್ರೀಯ ರಸ್ತೆ ದಾಟುತ್ತಿರುವಾಗ ವಾಹನಕ್ಕೆ ಸಿಲುಕಿ ಅಸುನೀಗಿದೆಯಂತೆ. ಆಗಿನ್ನೂ ಆ ಮರಿ ಕಣ್ಣನ್ನೇ ತೆರೆದಿರಲಿಲ್ಲವಂತೆ. ಬಾಟಲಿಯಲ್ಲಿ ಹಾಲುಣಿಸಿ ಆ ಮರಿಯನ್ನು ಬೆಳೆಸಿದ್ದಾರೆ-ಈಗ ಅಲ್ಲಿ ಇಲ್ಲಿ ಓಡಾಡುತ್ತಿದೆ. ಇನ್ನೊಂದರ ಅಮ್ಮನಿಗೆ ವಾತವೋ ಏನೋ ಮುದುರಿಕೊಂಡು ಸತ್ತುಹೋಯಿತಂತೆ, ಆ ಮರಿಯೂ ಚಿಕ್ಕದೇ ಇತ್ತು, ಹೊಟ್ಟೆಗೆ ಆಹಾರ ಹುಡುಕಿ ತಿನ್ನುವುದನ್ನು ಕಲಿತಿರದ ಅಮ್ಮನನ್ನೇ ಅವಲಂಬಿಸಿದ ಆ ಮರಿಗಳನ್ನು ಕಂಡಾಗ ’ಅಮ್ಮನ ಪಾತ್ರ’ದ ಋಣ ತೀರಿಸಲಾಗುವುದಿಲ್ಲ ಎಂಬುದು ನೆನಪಿಗೆ ಬಂತು. ಆ ವಿಷಯದಲ್ಲಿ ನನಗೆ ಅಮ್ಮನ ಪ್ರೀತಿಯಲ್ಲಿ ಕಿಂಚಿತ್ತೂ ಕೊರತೆಯಾಗಲಿಲ್ಲ; ಇವತ್ತಿಗೂ ನನಗೆ ಅಮ್ಮನ ಪ್ರೀತಿಯ ಆಸರೆ ಇದೆ.

ಹಳೆಯ ಮನೆಗಳು ಕಸುವು ಕಳೆದುಕೊಂಡು ಅಲ್ಲಲ್ಲಿ ಬಳಸಿದ ಕಟ್ಟಿಗೆಗಳಲ್ಲಿ ಹುಳುಬಿದ್ದು ಅಜಡಾಗಿವೆ. ಹೊಸಮನೆಗಳು ತಾರಸಿಯವು ಇನ್ನೂ ಮೇಲೆದ್ದಿಲ್ಲ. ದಶಕಗಳ ಹಿಂದೆ ಕಾಡು ಸಮೃದ್ಧವಾಗಿತ್ತು, ನಾಟುಗಳು, ಮರಮಟ್ಟುಗಳು ಸಿಗುತ್ತಿದ್ದವು, ಮನೆ ಕಟ್ಟುವುದಿರಲಿ, ದುರಸ್ತಿಯಿರಲಿ ಸಲೀಸಾಗಿ ನಡೆಯಬಹುದಿತ್ತು. ಆದರೆ ಈಗ ದುರಸ್ತಿಯೂ ತೀರಾ ದುಬಾರಿ, ಹೊಸಮನೆಕಟ್ಟಿದರೆ ಹಳೆಯ ಆ ಕಟ್ಟಿಗೆಯ ಅಥವಾ ಹಂಚಿನ ಮನೆಗಳ ಆಪ್ತತೆ ತಾರಸಿ ಮನೆಗಳಲ್ಲಿ ಕಾಣುವುದಿಲ್ಲ! ಕಾಲಗತಿಗೆ ತಕ್ಕಂತೇ ಚಳಿ-ಮಳೆಗಳಲ್ಲಿ ಬೆಚ್ಚಗೂ ಬಿಸಿಲಲ್ಲಿ ತಣ್ಣಗೂ ಇರುತ್ತಿದ್ದ ಹಂಚಿನ ಮನೆಗಳನ್ನು ಮತ್ತೆ ಕಟ್ಟಿದರೆ ಪರೋಕ್ಷವಾಗಿ ಕಾಡು ಕಡಿಯುವ ಕೆಲಸಕ್ಕೆ ನಾವೇ ಪ್ರೇರೇಪಣೆ ನೀಡಿದಂತಾಗುತ್ತದೆಯಲ್ಲವೇ? ಸದ್ಯ ನಮ್ಮನೆಗೆ ಅಂತಹ ತೊಂದರೆ ತೀರಾ ಇಲ್ಲ, ಸಾಕಷ್ಟು ಸರ್ತಿ ಸುಣ್ಣ, ಬಣ್ಣ ಹಚ್ಚಿಸಿಕೊಂಡ ಮನೆಯ ಕಟ್ಟಿಗೆಯಲ್ಲಿ ಇರುವ ಹುಳಗಳು ಅಲ್ಲಲ್ಲೇ ಸತ್ತುಹೋದವೋ ಏನೋ!

ಊರಿಗೆ ಹೋದಾಗೆಲ್ಲಾ ಹತ್ತಾರು ಸಾರಿ ಅಂದುಕೊಳ್ಳುವುದು ನಾವು ಕಲಿತ ಶಾಲೆಕಡೆ ಹೋಗಿ ಬರಬೇಕು ಎಂದು. ಇಂದು ಅಂತಹ ಮಾಸ್ತರಮಂದಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾವು ಹುತುತು ಕಬಡ್ಡಿ ಆಡಿದ ಜಾಗ ಈಗ ಕ್ರಿಕೆಟ್ಟಿಗೆ ಬಳಕೆಯಾಗುತ್ತಿರಬಹುದು. ಮಗ್ಗಿ ಹೇಳಿಕೊಡುತ್ತಾರೋ ಇಲ್ಲವೋ ಎಂಬುದೂ ತಿಳಿದಿಲ್ಲ. ಆಗ ನಮ್ಮಲ್ಲಿದ್ದಿದ್ದು ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯೊಂದೇ! ಅದೂ ನಮ್ಮ ಶಾಲೆಯಲ್ಲಿ ಗಂಡುಮಕ್ಕಳೇ ಒಂದು ಕಾಲಕ್ಕೆ ಜಾಸ್ತಿ ಇದ್ದುದರಿಂದ ’ಕನ್ನಡ ಗಂಡುಮಕ್ಕಳ ಶಾಲೆ’ ಎಂದು ನಾವೂ ಓದಲು ಆರಂಭಿಸುವ ಮುನ್ನ ಅದಕ್ಕೆ ಹೆಸರಿದ್ದಿದ್ದು ತಿಳಿದುಬರುತ್ತದೆ. ಒಂದಾನೊಂದು ದಿನ ನಾವು ಅಂತಹ ಠಸ್ಸೆಯನ್ನೂ ಕಾಗದಪತ್ರಗಳಲ್ಲಿ ಕಂಡಿದ್ದೆವು; ಈಗ ಅದು ಹಾಗಿಲ್ಲ, ಬರೇ ಗಂಡುಮಕ್ಕಳಿರಲಿ ಮಕ್ಕಳ ಸಂಖ್ಯೆಯೇ ಇದೆಯೋ ಇಲ್ಲವೋ ಗೊತ್ತಾಗಿಲ್ಲ! ಊರಲ್ಲಿ ಅಲ್ಲಲ್ಲಿ ಖಾಸಗೀ ಶಾಲೆಗಳು ತಲೆ ಎತ್ತಿವೆ, ಎಲ್ಲರಿಗೂ ಒಳಗೊಳಗೇ ಇಂಗ್ಲೀಷ್ ವ್ಯಾಮೋಹ! ಶಾಲೆಯ ಆ ದಿನಗಳಲ್ಲಿ ನಮಗೆ ಆಡಲು ಅಷ್ಟೊಂದೆಲ್ಲಾ ಆಟದ ಪರಿಕರಗಳಿರಲಿಲ್ಲ. ಇಡೀ ಶಾಲೆಯಲ್ಲಿ ಕಲಿಯುವ ಒಟ್ಟೂ ಸುಮಾರು ೩೫೦-೪೦೦ ಮಕ್ಕಳಿಗೆ ಇದ್ದುದು ಎರಡೇ ಕೇರಂಬೋರ್ಡು, ಹಳೆಯ ಕೆಲವು ಡಂಬೆಲ್ಸು. ನಮ್ಮ ಶಾಲೆಯಲ್ಲಿ ಅಂದು ಯಾವುದೇ ವಾದ್ಯ ಪರಿಕರಗಳಿರಲಿಲ್ಲ. ಕುಡಿಯುವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ವಿದ್ಯುದ್ದೀಪ ಇರಲಿಲ್ಲ. ನಕಾಶೆಗಳು ಸಾಕಷ್ಟು ಇರಲಿಲ್ಲ. ಆದರೂ ಮಕ್ಕಳಲ್ಲಿ ಮಾತ್ರ ಅವುಗಳ ಕೊರತೆ ಕಂಡುಬರಲಿಲ್ಲ. ಇರುವುದನ್ನೇ ಬಳಸಿಕೊಂಡಿದ್ದೆವು. ಒಟ್ಟಾಗಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು.

ಶಾಲೆಯ ಅಂಗಳದಲ್ಲಿ ಸಣ್ಣ ಹೂದೋಟವಿತ್ತು. ಅಲ್ಲಿ ನಿತ್ಯವೂ ಗಿಡಗಳಿಗೆ ಪಾಳಿಯ ಪ್ರಕಾರ ನೀರು ಹಾಕುವುದು[ಚಳಿ ಮತ್ತು ಬೇಸಿಗೆ ಕಾಲಗಳಲ್ಲಿ]ಮತ್ತು ಅವುಗಳ ಲಾಲನೆ ಪಾಲನೆ ಮಕ್ಕಳ ಜವಾಬ್ದಾರಿಯೇ ಆಗಿತ್ತು. ಶಂಖಪುಷ್ಪದ ಬಳ್ಳಿ, ಗಡಿಯಾರ ಸಂಪಿಗೆ ಮುಂತಾದ ಅಪರೂಪದ ಹೂಗಳು ಅರಳಿ ನಿಲ್ಲುತ್ತಿದ್ದವು. ಬಣ್ಣಬಣ್ಣದ ಗಿಡಗಳನ್ನು ನೋಡುತ್ತಾ ಗಾಳಿಗೆ ಅವು ತಲೆಯಾಡಿಸುವಾಗ ನಮಗೂ ಅವುಗಳಿಗೂ ಭಾವಬಂಧನ ಬೆಸುಗೆಯಾಗುತ್ತಿತ್ತು. ಅದರ ಮಗ್ಗುಲಲ್ಲೇ ಮರದ ಧ್ವಜಸ್ತಂಭ ನೆಟ್ಟಿದ್ದರು. ಆಗಾಗ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ನಡೆಸಲು ಅದು ಬಳಕೆಯಾಗುತ್ತಿತ್ತು. ಸ್ಥಳೀಯ ಯುವಕ ಸಂಘದ ಸಹಕಾರದೊಂದಿಗೆ ನಾವು ಮಕ್ಕಳೆಲ್ಲಾ ಶ್ರಮದಾನಮಾಡಿ ಅಂಗಳದ ಒಂದು ಪಕ್ಕದಲ್ಲಿ ವೇದಿಕೆಯೊಂದನ್ನು ಕಟ್ಟಿದ್ದೆವು. ವಾರ್ಷಿಕ ಸ್ನೇಹ ಸಮ್ಮೇಲನಕ್ಕೆ ಅದು ಬಳಕೆಯಾಗುತ್ತಿತ್ತು. ಡಿಸೆಂಬರ್, ಜನವರಿ ಹೊತ್ತಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತೀರಾ ದೂರವೇನೂ ಅಲ್ಲ. ಹೆಚ್ಚೆಂದರೆ ಗೋಕರ್ಣ, ಮುರ್ಡೇಶ್ವರ, ಬನವಾಸಿ ಈ ಥರದ ಜಾಗಗಳಿಗೆ. ಆದರೂ ಅಲ್ಲಲ್ಲೇ ಅದೂ ಇದೂ ನೋಡುತ್ತಾ ಎರಡು ದಿನಗಳು ಕಳೆದುಹೋಗುತ್ತಿದ್ದವು. ಒಟ್ಟಿಗೇ ಕೂತು ಒಂದೇ ವಾಹನದಲ್ಲಿ ಪ್ರಯಾಣಿಸುವುದು, ’....ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಜಯವಾಗಲಿ/ಜಯವಾಯಿತು’ ಎಂದು ಕೈಬರಹದಲ್ಲಿ ಬರೆದಿದ್ದ ಚೀಟಿಕಟ್ಟುಗಳಿಂದ ಒಂದೊಂದನ್ನೇ ಅಲ್ಲಲ್ಲಿ ಹಾರಿಬಿಡುತ್ತಾ ಸಾಗುವುದು, ದಾರಿಯುದ್ದಕ್ಕೂ ಹಾಡು, ಜೈಕಾರ, ತೆರಳಿದ ಜಾಗಗಳಲ್ಲಿ ಒಟ್ಟಿಗೇ ಊಟ, ತಿಂಡಿ, ವಿಶ್ರಾಂತಿ ಬಹಳ ಮಜವಾಗಿರುತ್ತಿತ್ತು. ನೆನೆಸಿದರೆ ಬಾಲ್ಯ ಮತ್ತೆ ಬರುವುದೇ?

ಯಾವುದೇ ತಾಪತ್ರಯವಿರದ ಆ ದಿನಗಳ ಮಹತ್ವ ಇವತ್ತಿಗೆ ಅರಿವಿಗೆ ಬರುತ್ತದೆ. ಇದ್ದರೂ ಒಂದೇ ಇರದಿದ್ದರೂ ಒಂದೇ ಎಂಬ ಮನೋಭಾವ ಅಂದಿಗೆ ಆಗುತ್ತಿದ್ದುದು ಕಾಲಕಳೆದಮೇಲೆ ಅದುಬೇಕು, ಇದುಬೇಕು ಎಂಬ ಆಸೆಗೆ ಇಳಿದುಬಿಡುತ್ತದೆ! ಹೆತ್ತವರಾಗಿ ಸಹಜವಾಗಿ ನಮ್ಮ ಏಳ್ಗೆಗೆ ಕಾರಣೀಭೂತರಾದ ನಮ್ಮ ಪಾಲಕರು ತಾವು ಪಡೆಯದ ಸೌಲಭ್ಯಗಳನ್ನು ನಮಗಾಗಿ ಕಲ್ಪಿಸಿದ್ದರು. ಮಕ್ಕಳ ಮುಖದ ಗೆಲುವಿನ ನಗುವಿನಲ್ಲಿ ಕಷ್ಟದ ಚಣಗಳನ್ನು ಕಳೆಯಲೆತ್ನಿಸುತ್ತಾ ಓದಿಸಿದ ಅವರಿಗೆ ನಾವೆಷ್ಟೇ ಕೃತಜ್ಞರಾಗಿದ್ದರೂ ಕಮ್ಮಿ ಎನಿಸುತ್ತದೆ. ಜೀವನದ ಭಾಗವಾಗಿ ಕೆಲವು ಕೆಲಸಗಳನ್ನೂ ಮಾಡಿಕೊಳ್ಳುವ ಕಲೆಯನ್ನು ಅವರು ನಮಗೆ ಧಾರೆ ಎರೆದರು. ಕೇವಲ ಪುಸ್ತಕದ ವಿದ್ಯೆ ವಿದ್ಯೆಯಲ್ಲಾ ಜೀವನಕ್ಕೆ ಬೇಕಾದ ಕಾರ್ಯಗಳನ್ನು ನಿಭಾಯಿಸಲು ಕಲಿಯಬೇಕೆಂಬುದೂ ಅವರ ಇಚ್ಛೆಯಾಗಿತ್ತು. ಅದು ಇಂದು ನಮಗೆ ಹೆಜ್ಜೆಹೆಜ್ಜೆಗೆ ಸಹಕಾರಿಯಾಗಿದೆ. ಅಂತಹ ಕಾರ್ಯಗಳಲ್ಲಿ ಸಾಮೂಹಿಕವಾಗಿ ಕಲೆಯುವ ಎಲ್ಲರೊಳಗೊಂದಾಗುವ ಕಲೆ ಕೂಡ ಒಂದು. ಅದೇ ಈ ಭಜನೆ ಕಾರ್ಯಕ್ರಮ. ಭಾವಪೂರಿತವಾಗಿ ಭಜನೆಗಳಲ್ಲಿ ನಾವು ತೊಡಗಿಕೊಂಡಾಗ ನಮ್ಮದೆಲ್ಲವನ್ನೂ ಪರಮಾತ್ಮನ ಪಾದಕ್ಕೆ ಹಾಕಿ ಶರಣಾದಾಗ ಯಾವುದೋ ರಕ್ಷಣಾ ಕವಚ ಸಿಕ್ಕ ಅನುಭವ ನಮಗಾಗುತ್ತದೆ; ಯಾವುದೋ ಅವ್ಯಕ್ತ ಆಸರೆ ನಮ್ಮನ್ನು ಪೊರೆಯುವ ಭರವಸೆ ಇತ್ತಂತಾಗುತ್ತದೆ. ಅಂತಹ ಆ ಆಸರೆ ಪುಟ್ಟ ಕಂದಮ್ಮಗಳ ಅಮ್ಮಂದಿರನ್ನು ಕಸಿದುಕೊಳ್ಳದಿರಲಿ, ಯಾವುದೇ ಜೀವಿಯೂ ಅಮ್ಮನ ಪ್ರೀತಿಯಿಂದ ವಂಚಿತವಾಗದಿರಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ಭಜನೆಯ ಸಾಲೊಂದಿಗೆ ಇದೋ ಲೋಕದ ಹಿತಾರ್ಥ ವಂದಿಸಿಕೊಳ್ಳುತ್ತಿದ್ದೇನೆ :

ಸೀತಾರಾಮ್ ಜೈಜೈರಾಮ್ ಭಜರೇ ಮನ......ಭಜರೇ ಮನ ಭಜ ರಾಮನಾಮ
ಸೀತಾರಾಮ್ ಜೈಜೈರಾಮ್ ಭಜರೇ ಮನ...

Wednesday, December 21, 2011

ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ !

ಚಿತ್ರಕೃಪೆ : ಪಿಕ್ಚರ್ಸ್ ಇಂಡಿಯಾ
ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ !

[ಆತ್ಮೀಯ ಸ್ನೇಹಿತರೇ, ಕವನ ಹುಟ್ಟುವ ರಸನಿಮಿಷಗಳನ್ನು ಕೂಸಿನ ಹುಟ್ಟಿಗೆ ಹೋಲಿಸಿ ಬರೆದ ಜನಪದ ಶೈಲಿಯ ಈ ಹಾಡಿನೊಂದಿಗೆ ವಾರ ಕಾಲ ನಾನು ನಿಮ್ಮಿಂದ ಬೀಳ್ಕೊಂಡು ಆಮೇಲೆ ಮುಂದಿನ ಮಂಗಳವಾರದಿಂದ ಮತ್ತೆ ಬರೆಯುತ್ತೇನೆ. ಚಳಿಗಾಲದಲ್ಲಿ ನಮ್ಮೂರ ಶಾಲೆಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನ ನಡೆಯುತ್ತಿತ್ತು. ಅದಕ್ಕೆ ಮಕ್ಕಳೆಲ್ಲಾ ಸೇರಿ ಇಂತಹ ಹಾಡುಗಳಿಗೆ ನರ್ತಿಸುತ್ತಿದ್ದುದು ನೆನಪಾಗ್ತಾ ಇದೆ. ಅದೇ ನೆನಪು ನಿಮ್ಮನ್ನೂ ನಿಮ್ಮ ಬಾಲ್ಯದ ಬಾಹ್ಯ ಪ್ರಪಂಚದ ಆಳಕ್ಕೆ ಕರೆದೊಯ್ಯಬಹುದು, ಕಾಲು ಹಾಕಿ ಕೈಯ್ಯ ತಟ್ಟಿ ಇಂಥದ್ದನ್ನು ಅನುಭವಿಸಿದರೇ ಅದರ ಮಜಾ ಬೇರೇಯೇ ಆಗಿರುತ್ತದೆ. ಅಂದುಕೊಳ್ಳುತ್ತೇನೆ ಈ ಹಾಡಿನೊಂದಿಗೆ ನೀವೆಲ್ಲಾ ಮನಸಾ ಆ ಲಹರಿಯನ್ನು ಅನುಭವಿಸುತ್ತೀರಿ ಅಂತ. ನಿಮ್ಮೊಡನೆ ಸದಾ -ವಿ.ಆರ್.ಭಟ್, ನಮಸ್ಕಾರ.]

ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ
ಇದರ ಸುತ್ತ ನಿಂತು ಜೋಗುಳವ ಹಾಡಬನ್ನಿ !

ಹಲವು ಹೆತ್ತಿದ್ದೆ ವರುಷಗಳ ದಿನಗಳಲ್ಲಿ
ಗೆಲುವು ಬೆಳೆಬೆಳೆದು ಏರಿದವು ಬಾನಿನಲ್ಲಿ !
ಅಗೋ ಅಲ್ಲೊಂದಿದೆ
ಇಗೋ ಇಲ್ಲೊಂದಿದೆ
ತಗೊಳಿ ಸಂಭ್ರಮದ ಓಲೆಯಿದು ಪ್ರೀತಿಯಿಂದ
ನಿಮ್ಮ ಅಭಿಮಾನ ಬಹುಮಾನ ನಂಗೆ ಅಂದ !

ತಿಂಗಳೊಂಬತ್ತು ಬೇಡದಾ ಕೂಸುಗಳಿವು
ಅಂಗಳಕ್ಕಿಳಿದು ಆಡುವಾ ಕಂದಮ್ಮಗಳಿವು
ಹುಟ್ಟಿದಾಕ್ಷಣದಲ್ಲೇ
ನೆಗೆತಕುಣಿತವದಿಲ್ಲೇ
ಅಹಹ ಎಂತೆಂಥಾ ರಸನಿಮಿಷ ಅವುಗಳಿಂದ
ಬದುಕು ರಂಗಾಯ್ತು ದಿನದಿನಕು ಈ ಖುಷಿಯಿಂದ

ಹೊತ್ತ ಗರ್ಭವೆಲ್ಲ ಕೂಸುಗಳು ಆಗುವುದಿಲ್ಲ !
ಹುಟ್ಟೋಕ್ಕಿಂತ ಮೊದಲೆ ಗರ್ಭಪಾತ ಆಗುತ್ತಲ್ಲ !!
ಒಲವು ಹೆಚ್ಚೇ ಇದ್ರೂ
ಕೆಲವು ಜನಿಸುವುದಿಲ್ಲ
ಹೋಗ್ಲಿ ಅದಕೆಲ್ಲಾ ತಲೆಕೆಡಿಸಿ ಕೂರುವುದಿಲ್ಲ
ಆಗ್ಲಿ ಬೇಕಾದ್ದು ಮತ್ತೆ ಹಡೆದೇ ತೀರುವೆನಲ್ಲ !

ಚಳಿಯ ನಡುಕದಲೂ ಹಡೆಯುವುದು ನಿಲ್ಲುವುದಿಲ್ಲ
ಗಿಳಿಯ ಉಲಿಯಲ್ಲೂ ಹೊಸ ಕೂಸು ಜನಿಸುವುದಲ್ಲ !
ನಾಕು ಮತ್ತೊಂದೈದು
ಹೆಜ್ಜೆ ಹಾಕೀ ಗೆಯ್ದು
ಬಣ್ಣ ಬಣ್ಣದ ಕುಲಾವಿ ಕುಚ್ಚು ಕಟ್ಟುವೆ
ಅಣ್ಣ-ಅಕ್ಕ-ತಮ್ಮ ಎಲ್ಲರನು ತಲ್ಪಿ ತಟ್ಟುವೆ !

ಅಕ್ಕ ನೋಡೂ ಬಾ ನಿಮ್ಮನೆಯ ಚೊಕ್ಕ ಕನ್ನಡ
ಅಕ್ಕಿ ಬೇಳೆ ಕಾಳು ಎಲ್ಲ ಶುದ್ಧ ಬೆರಕೆ ಎನ್ನಡ !
ತತ್ತಾ ತತ್ತೋಂ ತೈಯ್ಯ
ಧಿತಾಂ ಧಿತ್ತೋಂ ತೈಯ್ಯ
ಸಕ್ಕರೆಯ ಪಾಕ ಸೇರ್ಸೀ ಸಿಹಿಯಮಾಡಿದೆ
ಮಕ್ಕಳೊಂದಿಗೇ ನೀವು ಬಂದು ತಿನ್ನಬಾರದೇ ?

Monday, December 19, 2011

|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ಅಂತರ್ಜಾಲದ ಕೃಪೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗಾಗಿ


|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ವ್ಯಾಸಂ ವಶಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಮೂಕಂ ಕರೋತಿ ವಾಚಾಲಂ ಪಂಗು ಲಂಘಯತೇ ಗಿರಿಮ್|
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ಪ್ರಿಯ ಶ್ರೋತೃವೃಂದವೇ, ಅಷ್ಟಾದಶ ಪುರಾಣಗಳನ್ನು ಬರೆದ ಮಹಾಮುನಿಗಳು ಮಿಕ್ಕಿದ್ದನ್ನು ನೀವೇ ಬರೆದುಕೊಳ್ಳಿ ಎಂದು ಜನರಿಗೇ ಬಿಟ್ಟುಬಿಟ್ಟರು. ಆ ಸಮಯದಲ್ಲಿ ಭಯಂಕರವಾಗಿ ತಲೆಕೆರೆಸಿಕೊಂಡ ಸೂತರು ಶೌನಕಾದಿ ಮುನಿಗಳಿಗೆ ಕಲಿಯುಗದ ಬ್ಯಾಂಕಮ್ಮಗಳ ಕುರಿತಾಗಿ ಒಂದು ಮಹಾಪುರಾಣವನ್ನು ಬೋಧಿಸಿದರು. ಪುರಾಣಗಳನ್ನು ಕದ್ದೂಮುಚ್ಚಿ ಕೇಳುವ ಚಟದವರಾದ ತಿಪ್ಪಾ ಭಟ್ಟರು ಇನ್ಯಾರೋ ಅದನ್ನು ಮತ್ಯಾರಿಗೋ ಮತ್ತೆಲ್ಲೋ ಹೇಳುವಾಗ ಆಡ್ಡಗೋಡೆಯ ಸಂದಿಯಲ್ಲಿ ನಿಂತು ಕೇಳಿಸಿಕೊಂಡರು ಎಂಬಲ್ಲಿಗೆ ಬ್ಯಾಂಕಮ್ಮಗಳ ಪುರಾಣ ಆರಂಭವಾದ ಹಾಗೇ.

ತ್ರೇತಾಯುಗದಲ್ಲಿ ವೈಕುಂಠದ ಶ್ರೀಮನ್ನಾರಾಯಣ ಭುವಿಯೆಂಬ ಈ ಭುವಿಯಲ್ಲಿ ಅಯೋಧ್ಯೆಯಲ್ಲಿ ದಶರಥ ಎಂಬಂಥಾ ರಾಜನಿಗೆ ಮಗನಾಗಿ ಜನಿಸಿದ. ಜನಿಸಿದ ಮಗನಿಗೆ ವಶಿಷ್ಠರಾದಿಯಾಗಿ ಋಷಿಗಳು ಸೇರಿ ’ರಾಮ’ ಎಂದು ನಾಮಕರಣಮಾಡಿದರು. ವಿದ್ಯಾಭ್ಯಾಸಕ್ಕಾಗಿ ಗುರು ವಿಶ್ವಾಮಿತ್ರರನ್ನು ಆಶ್ರಯಿಸಿದ ರಾಮ-ಲಕ್ಷ್ಮಣರು ಅಲ್ಲಿ ಹಲವಾರು ಅಸುರರನ್ನು ಕೊಂದರು. ಮಿಥಿಲಾ ನಗರದಲ್ಲಿ ಜನಕರಾಜನ ಕುವರಿಗೆ ಸ್ವಯಂವರವೆಂದರಿತ ವಿಶ್ವಾಮಿತ್ರರ ಅಣತಿಯಂತೇ ರಾಮ ಮಿಥಿಲೆಗೆ ತೆರಳಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು ಸೀತೆಯನ್ನು ಮದುವೆಯಾದ. ಪಟ್ಟಕ್ಕೆ ಉತ್ತರಾಧಿಕಾರಿ ರಾಮನಾಗುತ್ತಾನೆ ಎಂದು ಮಂಥರೆಯಿಂದ ಕಿವಿಯೂದಿಸಿಕೊಂಡ ಕೈಕೇಯಿ ರಾಮನ ವನವಾಸಕ್ಕೆ ಕಾರಣಳಾದಳು. ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮ ವನವಾಸಕ್ಕೆ ತೆರಳಿಯೇ ಬಿಟ್ಟ! ದಿನಗಳು ಕೆಲವು ಕಳೆದಮೇಲೆ ರಾಮ-ಲಕ್ಷ್ಮಣ ಕಾಡಿನಲ್ಲಿ ಕಂದಮೂಲಫಲಗಳನ್ನು ಹುಡುಕಿ ತಿರುಗುತ್ತಿರುವಾಗ ಭಯಂಕರವಾಗಿ ಭೋರ್ಗರೆವ ದನಿಯನ್ನು ಕೇಳಿದರು. ರಾಮನೆಂಬ ರಾಮನೇ ತತ್ತರಿಸಿ ಹೋಗಬೇಕು ಆ ಸದ್ದಿಗೆ! ಕೆಲವೇ ಕ್ಷಣಗಳಲ್ಲಿ ಸುಂದರವಾದ ರೂಪದ ಹೆಣ್ಣೊಬ್ಬಳು ರಾಮನನ್ನು ಮುಖಾಮುಖಿಯಾಗಿ ತನ್ನನ್ನು ಮದುವೆಯಾಗು ಎಂದಳು. ರಾಮ-ಲಕ್ಷ್ಮಣರು ಅಲ್ಲಿ ನಿಂತಾಗ ಅವರ ನಡುವೆ ಸುಮಾರು ದೂರದ ಜಾಗವಿತ್ತು. ರಾಮ ತಾನೊಲ್ಲೆ ತನಗೆ ಮದುವೆಯಾಗಿದೆ, ನನ್ನ ಅನುಜ ಲಕ್ಷ್ಮಣನಿದ್ದಾನೆ ಕೇಳು ಎಂದ. ಲಕ್ಷ್ಮಣನಲ್ಲಿಗೆ ತೆರಳಿದ ಆಕೆ ಅವಮಾನಿತಳಾಗಿ ಮತ್ತೆ ರಾಮನಲ್ಲಿಗೆ ಬಂದಳು. ಹೀಗೇ ಎರಡು ಮೂರು ರೌಂಡು ಹೊಡೆದಮೇಲೆ ಕೋಪದಿಂದ ಲಕ್ಷ್ಮಣ ಬಂದಿದ್ದ ಆ ಶೂರ್ಪನಖಿಯ ಮೂಗನ್ನು ಕತ್ತರಿಸಿ ಬಿಸಾಕಿದ.

ಮೂಗು ಕುಯ್ಸಿಕೊಂಡ ತಂಗಿ ಅಣ್ಣ ರಾವಣನ ಲಂಕೆಗೆ ಕೂಗುತ್ತಲೇ ತೆರಳಿದಳು. " ಓಹೋ ಹಾಗೋ ನೋಡಿಕೊಳ್ಳುತ್ತೇನೆ ಚಿಂತಿಸಬೇಡ " ಎಂದು ರಾವಣ ಸಮಾಧಾನಿಸಿದ. ಮುಂದೆ ರಾಮಾಯಣ ನಡೆದದ್ದು ನಿಮಗೆ ತಿಳಿದೇ ಇದೆ. ರಾಮಾಯಣ ಕಾಲದಲ್ಲಿ ಈ ಮೂಗು ಕುಯ್ಸಿಕೊಂಡ ಶೂರ್ಪನಖಿ ಅಲಾಯ್ದ ಒಂದು ದಿನ ಬಂದು ರಾಮನನ್ನು ಕಂಡಳು. " ಹೋಯ್ ರಾಮ ಇದೆಂಥದು ಮಾರಾಯ ? ನಿಂದೆಲ್ಲಾ ಬರೀ ಹೆಂಗಸರಲ್ಲಿ ಪೌರುಷ ತೋರೋದೇ ಆಗ್ಹೋಯ್ತು. ತಾಕತ್ತಿದ್ದರೆ ನನ್ನ ಕುಲ ಸಾವಿರವಾಗಲಿ ಎಂದು ವರ ಕೊಡು " ಎಂದು ಚಾಲೇಂಜ್ ಮಾಡಿಬಿಟ್ಟಳು! ಎಷ್ಟೆಂದರೂ ಹೆಣ್ಣಲ್ಲವೇ ಪಾಪ ಎಂದುಕೊಂಡ ಶ್ರೀರಾಮ " ತಥಾಸ್ತು, ಕಲಿಯುಗದಲ್ಲಿ ನಿಮ್ಮ ಕುಲ ಸಾವಿರವಾಗಿ ಬ್ಯಾಂಕುಗಳಲ್ಲಿ ಕೆಲಸಮಾಡುವಂತಾಗಲಿ " ಎಂದು ಹರಸಿಬಿಟ್ಟ!!

ಬರುತ್ತ ಬರುತ್ತಾ ತ್ರೇತ, ದ್ವಾಪರ ಕಳೆದು ಕಲಿಯುಗ ಬಂದೇಬಿಟ್ಟಿತು! ಹಣಕಾಸಿನ ವ್ಯವಹಾರಕ್ಕಾಗಿ ವ್ಯವಸ್ಥಿತ ರೂಪವೊಂದನ್ನು ಕೊಡುವಲ್ಲಿ ಕಲಿಯುಗದ ಗಂಡಸರು ಮುಂದಾದರು. ಆ ವ್ಯವಸ್ಥಿತ ಹಣಕಾಸು ಸಂಸ್ಥೆಗಳು ಮೂಲದಲ್ಲಿ ಖಾಸ್ಗೀ ಮಟ್ಟದಲ್ಲಿ ನಡೆಯುತ್ತಿದ್ದವು. ಯಾವಾಗ ಅದೂ ಸ್ಥಿರವಲ್ಲ; ಹಣದ ವ್ಯವಹಾರ ನೋಡಿ, ಯಾರಿಗಾದರೂ ಮೋಸವಾದೀತು ಎಂಬ ಕಾರಣಕ್ಕೆ ಪ್ರಜೆಗಳು ಎಂಬತಕ್ಕಂಥವರು ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ನಡೆಸುವ ಸರಕಾರ ಎಂಬ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಅದನ್ನು ಹತೋಟಿಯಲ್ಲಿ ಇಟ್ಟುಕೊಂಡರು. ಇಂತಹ ಸಂಸ್ಥೆಗಳನ್ನು ನ್ಯಾಷನಲೈಸ್ಡ್ ಬ್ಯಾಂಕುಗಳು ಎಂದು ಕರೆಯಲಾಯಿತು.

ಈ ನ್ಯಾಷನಲೈಸ್ಡ್ ಬ್ಯಾಂಕುಗಳಲ್ಲಿ ಕೆಲಸಮಾಡುವ ಮಂದಿಯನ್ನು ನಿಗದಿಪಡಿಸಬೇಕಲ್ಲಾ ? ಅದಕ್ಕೇ ಕೆಲವು ಪೂರಕ ಪರೀಕ್ಷೆಗಳನ್ನು ಆಯಾ ಬ್ಯಾಂಕುಗಳ ಆಡಳಿತ ಮಂಡಳಿ ಕೈಗೊಂಡಿತು. ರಾಮನ ಶಾಪ ಓ ಸಾರಿ ವರ ಎಲ್ಲಾದರೂ ಸುಳ್ಳಾಗುವುದುಂಟೇ ? ಒಡ್ಡಿದ ಪರೀಕ್ಷೆಗಳಿಗೆ ಎಲ್ಲೆಲ್ಲಿಂದಲೋ ಈ ಶೂರ್ಪನಖಿ ವಂಶಸ್ಥರು ಬಂದುಬಿಟ್ಟರು! ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೀಟುಗಳಲ್ಲಿ ಆಸೀನರಾಗಿಯೂ ಬಿಟ್ಟರು !!ತಮ್ಮೊಳಗೇ ಪುಳಕಗೊಂಡ ಬ್ಯಾಂಕಿನ ಗಂಡು ಕೆಲಸಗಾರರು ನಿತ್ಯವೂ ಶೂರ್ಪನಖಿಯರನ್ನು ಹೊಗಳಿಯೇ ಹೊಗಳಿದರು.

’ಶೂರ್ಪನಖಾ’ ಎಂದರೆ ಹೆಸರೇ ಎಷ್ಟು ಚಂದನೋಡಿ! ಅಂತಹ ಶೂರ್ಪನಖಿಯರ ನಖಗಳೂ ಕೆಲವೊಮ್ಮೆ ಶೂರ್ಪವಾಗೇ ಇರುತ್ತವೆ, ಹಲವು ಬಣ್ಣಗಳನ್ನು ಧರಿಸುತ್ತವೆ. ಎಲ್ಲರೂ ಶೂರ್ಪನಖವುಳ್ಳವರಲ್ಲ ಎಂಬ ಕಾರಣಕ್ಕೆ ಸಮೂಹಿಕವಾಗಿ ಬ್ಯಾಂಕಮ್ಮಗಳು ಎಂದುಬಿಡೋಣ ಅಲ್ಲವೇ? ಇಂತಹ ಬ್ಯಾಂಕಮ್ಮಗಳು ನಿತ್ಯವೂ ಚಳಿಯಲ್ಲಿ ಬೆಳಿಗ್ಗೆ ಬರುವುದು ತಡವಾಗಿ. ನಿಗದಿತ ಸಮಯಕ್ಕಿಂತ ೧೫ ನಿಮಿಷಗಳು ಮೊದಲೇ ಬ್ಯಾಂಕಿನ ದಿನದ ವಹಿವಾಟು ಮುಗಿಸದಿದ್ದರೆ ಅವರು ಬ್ಯಾಂಕಮ್ಮಗಳೇ ಅಲ್ಲ ! ಬೆಳ್ಳಂಬೆಳಿಗ್ಗೆ ಹತ್ತುಗಂಟೆಗೆಲ್ಲಾ ಸೀಟನ್ನು ಅಲಂಕರಿಸುವ ಅವರ ನಿತ್ಯದ ದಿರಿಸುಗಳು ಸಿನಿಮಾ ನಟಿಯರನ್ನು ಹೋಲುವಂತಿರುತ್ತವೆ. ಒಂದೇ ಸಮ ಕೆಲಸಮಾಡಿ ಬೇಜಾರಾಗುತ್ತದೆ ನೋಡಿ ಯಾರಾದರೂ " ನೀವು ತುಂಬಾ ಚೆನ್ನಾಗ್ ಕಾಣಸ್ತೀರ " ಎಂದರೆ ಆಕಾಶಕ್ಕೆ ಮೂರೇ ಗೇಣು!! ನಿಮಗೆ ಬ್ಯಾಂಕುಗಳಲ್ಲಿ ಕೆಲಸ ಬೇಗ ಆಗಬೇಕೋ ? ಹಾಗಾದರೆ ಬ್ಯಾಂಕಮ್ಮಗಳನ್ನು ಹೊಗಳಿ! ಅದಿಲ್ವೋ " ಏನ್ ಬೇಕ್ರಿ ಅಲ್ಹೋಗ್ರಿ " ಎಂದು ಅವರು ವಾಚಾಮಗೋಚರವಾಗಿ ನೀವು ಬ್ಯಾಂಕಿಗೆ ಬಂದಿದ್ದೇ ಅಪರಾಧ ಎನ್ನುವ ರೀತಿಯಲ್ಲಿ ನೋಡುವುದರಲ್ಲಿ ಯಾವುದೇ ಸಂಶಯವಿಲ್ಲ!

ಬಂಗಾರದ ಸರ ಖರೀದಿಸಿದ್ದು, ಚೀಟಿ ಹಾಕಿದ್ದು, ಮಗ-ಮಗಳು ಓದುತ್ತಿರುವುದು ಅಥವಾ ಇನ್ಫೋಸಿಸ್ಸು-ವಿಪ್ರೋ ಸೇರಿರುವುದು ಇತ್ಯಾದಿಗಳಿಂದ ಹಿಡಿದು ತರಕಾರೀ ಮಾರುಕಟ್ಟೆಯ ವರೆಗಿನ ಎಲ್ಲಾ ಸುದ್ದಿ ಮತ್ತು ಕ್ಷೇಮಸಮಾಚಾರಗಳ ಪರಸ್ಪರ ವಿಲೇವಾರಿ ಆದಮೇಲೇಯೇ ನಿಮಗೆ ಬಟವಾಡೆಮಾಡಬೇಕಾದ ಕೆಲಸಕ್ಕೋ ಠೇವಣಿ ತೆಗೆದುಕೊಳ್ಳಬೇಕಾದ ಕೆಲಸಕ್ಕೋ ಮತ್ತಿನ್ಯಾವುದಕ್ಕೋ ಅವರು ಬರುವುದು. ಅಲ್ಲೀವರೆಗೆ ಅವರಿಗೆ ಪುರುಸೊತ್ತಿರುವುದಿಲ್ಲ. ಅಷ್ಟೇ ಹೊತ್ತಿಗೆ ಸರಿಯಾಗಿ ಕಾಫಿ ಬರುತ್ತದೆ, ಮಾರ್ನಿಂಗ್ ಕಾಫೀ ಬ್ರೇಕು. " ಸರ್ವರ್ ಬರ್ತಾ ಇಲ್ಲ" " ಲಾಗಿನ್ ಆಗ್ತಾ ಇಲ್ಲ" ಎಂಬ ಹೇಳಿಕೆಗಳು ತೀರಾ ಸಾಮಾನ್ಯ. ಅವನ್ಯಾವನೋ ಹತ್ತಿರ ಬಂದು " ಈಗ ಬರ್ತಾ ಇದೆ ನೋಡಿ " ಎಂದು ಅರ್ಧಘಂಟೆ ಬಿಟ್ಟು ಹೇಳಿಹೋಗುತ್ತಾನೆ. ಅಲ್ಲೀವರೆಗೂ ನೀವು ನಿಂತೇ ಇರಬೇಕು, ಕಾದೇ ಇರಬೇಕು.

ಕೆಲವು ಬ್ಯಾಂಕುಗಳಲ್ಲಿ ಕರೆಂಟು ಹೋದರೆ ಬ್ಯಾಂಕಮ್ಮಗಳಿಗೆ ಹಬ್ಬವೇ ಹಬ್ಬ! ಸುದ್ದಿಯ ಸಡಗರ!! ಯೂಪಿಎಸ್ಸು ಎರಡು ಮೂರು ಕಂಪ್ಯೂಟರುಗಳಿಗೆಮಾತ್ರ ಸಾಕು, ಮಿಕ್ಕಿದ್ದಕ್ಕೆ ಕರೆಂಟು ಬರಬೇಕು ಎಂಬ ಹೇಳಿಕೆ ನೀಡಿ ಕೂತಿರುತ್ತಾರೆ. ಜಾಸ್ತಿ ಮಾತಾಡಿದಿರೋ ನಿಮ್ಮನ್ನು ನಖದಿಂದ ಶಿಖದವರೆಗೂ ದುರುಗುಟ್ಟಿ ನೋಡಿ ಜನ್ಮ ಜಾಲಾಡಿಬಿಟ್ಟಾರು ಹುಷಾರು! ಯಾಕೆಂದರೆ ವಂಶವಾಹಿನಿ ಪ್ರಭಾವ !!ಯಾರದೋ ಹುಟ್ಟಿದ ಹಬ್ಬವಾದರೆ ಬ್ಯಾಂಕಮ್ಮಗಳಲ್ಲಿ ಕೆಲವರಿಗೆ ಪರ್ಮಿಶನ್ ಮೇಲೆ ರಜೆ! ಎಲ್ಲೋ ಜಾತ್ರೆ ಇದ್ದರೆ ಅವರೂ ಹೋಗಬೇಕು ಪಾಪ ಮನುಷ್ಯರಲ್ವೇ? ಅಂತೂ ಯಾರದೋ ದುಡ್ಡು ಎಣಿಸುವವರು ಎಲ್ಲಮ್ಮನ ಜಾತ್ರೆ ಮಾಡುವುದಂತೂ ಗ್ಯಾರಂಟಿ! ಪಾಸ್ ಬುಕ್ ವಗೈರೆ ನೀವು ವಾರಕ್ಕೂ ಮೊದಲೇ ಕೊಟ್ಟಿರಬೇಕು! ಈಗ ಕೈಲಿ ಬರೆಯುವ ಪ್ರಮೇಯವೇ ಇಲ್ಲ, ಎಲ್ಲಾ ಸಸಾರ, ಆದರೆ ಬಟನ್ ಒತ್ತುವುದು ತ್ರಾಸದಾಯಕ!! ಅಲ್ಲಿ ಶೂರ್ಪ’ನಖ’ ಅಡ್ಡಬರುತ್ತದೆ! ಉಗುರು ಕಟ್ಟಾದರೆ ಥೂ ಅಸಹ್ಯವಪ್ಪ, ಅವರಂತೂ ಸಹಿಸಲಾರರು! ತಿಂಗಳ ಸಂಬಳ ಎಣಿಸಿಕೊಳ್ಳುವಾಗಲೂ ನಖದ ಪ್ರಶ್ನೆಯೇ ಬರುವುದಿಲ್ಲ, ಸಂಬಳ ನೇರ ಅಕೌಂಟಿಗೇ ಜಮಾ ಆಗುತ್ತದೆಯಲ್ಲ!

ಇಂತೀ ಪರಿಯಲ್ಲಿ ಒಂದಾನೊಂದು ಕಾಲಕ್ಕೆ ಒಂದಾನೊಂದು ಬ್ಯಾಂಕಿನಲ್ಲಿ ಒಬ್ಬ ಆಂಟಿ ಸೋ ಸಾರಿ ಒಬ್ಬ ಬ್ಯಾಂಕಮ್ಮ ಇದ್ದಳು. ಅವಳಮನೆ ಫ್ಯಾಷನ್ನೋ ಅವಳನ್ನು ನೋಡಬೇಕಾಗಿತ್ತು. ತ್ರೀಪೋರ್ಥ್ ಪ್ಯಾಂಟು ಟೀ ಶರ್ಟಿನಲ್ಲಿ ರಾರಾಜಿಸುತ್ತಿದ್ದ ಅವಳ ಸುತ್ತ ಹಲವು ಕಥೆಗಳೇ ಇದ್ದವು. ತಾನು ಯಾವುದೇ ಸಿನಿಮಾ ನಟಿಗೂ ಕಮ್ಮಿ ಇಲ್ಲ ಎಂದುಕೊಂಡು ಓಡಾಡುತ್ತಿದ್ದ ಅವಳಿಕೆ ಅದಾಗಲೇ ಮೂರ್ನಾಲ್ಕು ಮದುವೆಗಳೂ ವಿಚ್ಛೇದನಗಳೂ ನಡೆದುಹೋಗಿದ್ದವಂತೆ ಎಂಬುದು ಕೆಲವು ಗ್ರಾಹಕರ ಅಂಬೋಣವಾಗಿತ್ತು. ಸಖಿಯರ ಮಧ್ಯೆ ಕುಳಿತುಕೊಳ್ಳುವ ರಾಣಿಯಂತೇ ಮಿಕ್ಕ ಬ್ಯಾಂಕಮ್ಮಗಳ ಮಧ್ಯೆ ವಿಹರಿಸುತ್ತಿದ್ದ ಆ ಬ್ಯಾಂಕಮ್ಮನ ಖರ್ಚಿಗೆ ಬರುವ ಸಂಬಳ ಸಾಲುತ್ತಿದ್ದುದು ಡೌಟು. ಜಗತ್ತಿನಲ್ಲಿರುವ ಎಲ್ಲಾ ಸೆಂಟೂ, ಎಲ್ಲಾ ಲೋಶನ್ನೂ ಎಲ್ಲಾ ಪೌಡರೂ ಅವಳ ತಾಬಾ ಇದ್ದವು!ಇಷ್ಟೆಲ್ಲಾ ಹಾರಾಡುತ್ತಿದ್ದ ಆಕೆಯೆ ವೃತ್ತಿಜೀವನದಲ್ಲಿ ಕೆಲಸಮಾತ್ರ ಆಮೆವೇಗಕ್ಕೂ ಕಮ್ಮಿಯದು. ತಪ್ಪೆಣಿಸುವ ಮ್ಯಾನೇಜರ ಕಡೆಗೆ ಹೆಪ್ಪುಗಟ್ಟಿದ ಕಡು ಲಿಪ್‍ಸ್ಟಿಕ್ ಪೂಸಿತ ದಿವ್ಯ ನಗೆಯನ್ನು ಬೀರಿಬಿಟ್ಟರೆ ಅವರು ತೆಪ್ಪಗಾಗಿಬಿಡುತ್ತಿದ್ದರು!

ಪುರಾಣ ಮುಂದುವರಿಸುವ ಸಮಯದಲ್ಲಿ ಬೆಕ್ಕು ಅಡ್ಡ ಬಂದಿದ್ದರಿಂದ ಇಲ್ಲಿಗೇ ನಿಲ್ಲಿಸಿಬಿಟ್ಟರು! ತಿಪ್ಪಾ ಭಟ್ಟರಿಗೆ ರಸಭಂಗವಾಗಿ ಮಹಾಕೋಪಾವಿಷ್ಟರಾಗಿ ಪಂಚೆ ಕೊಡವಿಕೊಂಡು ಎದ್ದುಹೋದರು ಎಂಬಲ್ಲಿಗೆ ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ಸದ್ಯಕ್ಕೆ ಮಂಗಲವಪ್ಪುದು.

ಮಂಗಲಂ ಕೋಸಲೇಂದ್ರಾಯ ಮಹನೀಯ ಗುಣಾಭ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್ ||

ವೇದವೇದಾಂತವೇದ್ಯಾಯ ಮೇಘಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಳಮ್ ||

ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇಃ |
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಳಮ್ ||

Sunday, December 18, 2011

ಆ ಮುಖ


ಆ ಮುಖ

೧೯೯೭ರಲ್ಲಿ ನಾಗಮಂಗಲ ತಾಲೂಕು ಯಾವುದೋ ಹೋಬಳಿಯ ಕೆಂಪೇಗೌಡರ ಮಗ ನಾರಾಯಣ ಗೌಡರ ಕುಟುಂಬ ಆತನನ್ನು ಊಟಕ್ಕೆ ಕರೆದಿತ್ತು. ಬ್ರಾಹ್ಮಣನಾದ ಆತ ತಮ್ಮನೆಯಲ್ಲಿ ಊಟ ಮಾಡಬಹುದೇ ಎಂಬ ಸಂದೇಹವಿದ್ದರೂ ಏನೋ ಕರೆದು ನೋಡೋಣ ಎಂಬ ಅನಿಸಿಕೆಯಿರಬೇಕು. ಮಗ ದೊಡ್ಡವನಾಗಿ ಏನಾದರೂ ದುಡೀಲಿ ಎಂಬಂತೇ ರೈತ ಕೆಂಪೇಗೌಡರು ನಾರಾಯಣನನ್ನು ಬೆಂಗಳೂರಿಗೆ ಕಳಿಸಿದ್ದರು. ಅಲ್ಲಿಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನಾರಾಯಣ ದಿನಪತ್ರಿಕೆಯ ಸಬ್ ಏಜೆಂಟ್ ಆಗಿ ಕೆಲಸಮಾಡತೊಡಗಿದ್ದ. ಬರುವ ಹಣದಲ್ಲೇ ಕಷ್ಟಕ್ಕೇ ಅಂತ ಅಷ್ಟಿಷ್ಟು ಎತ್ತಿಟ್ಟು ನಂಬುಗೆಯವರಲ್ಲಿ ಚೀಟಿ ಹಾಕಿ ಸ್ವಲ್ಪ ಜಾಸ್ತಿ ಹಣ ಕೈಗೆ ಸಿಕ್ಕಾಗ ಚಿಕ್ಕ ಅಂಗಡಿಯೊಂದನ್ನು ಆರಂಭಿಸಿದ. ವರ್ಷಾರು ತಿಂಗಳಲ್ಲೇ ನಾರಾಯಣನ ಒಡನಾಟದಿಂದ ಆ ರಾಜಾಜಿನಗರದ ಆ ಪ್ರದೇಶದ ಸುತ್ತುವರಿ ಜನ ಆತನ ಅಂಗಡಿಗೆ ಅದೂ ಇದೂ ಕೇಳಿಕೊಂಡು ಬರಲು ಆರಂಭಿಸಿದರು. " ಚನ್ನಕೇಶವ ಪ್ರಾವಿಜನ್ ಸ್ಟೋರ್ಸ್" ಎಂಬುದು ಬರೇ ಅಂಗಡಿಯಾಗಿರದೇ ಸ್ನೇಹಿತರ ಬಳಗಕ್ಕೆ ಮೆಸ್ಸೆಂಜರ್ ಆಗಿ ಕಾರ್ಯನಿರ್ವಹಿಸುವ ಕೇಂದ್ರವಾಗಿತ್ತು. ಆತನೂ ಸೇರಿದಂತೇ ಹಲವಾರು ಜನ ಹಳ್ಳಿಯಿಂದ ಬಂದ ಮಿತ್ರರು ಅಲ್ಲಿ ಆಗಾಗ ಸೇರುತ್ತಿದ್ದರು. ಬೇರೇ ಬೇರೇ ರೂಮುಗಳಲ್ಲಿ ವಾಸಮಾಡುತ್ತಿದ್ದ ಅವರು ಪರಸ್ಪರ ಸಿಗಬೇಕಾದರೆ ಅದಕ್ಕೆ ನಾರಾಯಣನಲ್ಲಿ ತಿಳಿಸಿರುವ ಸಂದೇಶವೇ ಕಾರಣವಾಗಿರುತ್ತಿತ್ತು. ನಾರಾಯಣನಿಗೂ ಆತನಿಗೂ ವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಒಂದೇ ಓರಗೆಯ ಹುಡುಗರಾದುದರಿಂದಲೋ ಏನೋ ಅಲ್ಲಿ ಸೇರುವ ಎಲ್ಲಾ ಹುಡುಗರೂ ನಾರಾಯಣನನ್ನೂ ಗೆಳೆಯನನ್ನಾಗಿ ಸ್ವೀಕರಿಸಿದ್ದರು; ಸಾಮನುಗಳನ್ನೂ ನಾರಾಯಣನ ಅಂಗಡಿಯಲ್ಲೇ ಖರೀದಿಸುತ್ತಿದ್ದರು.

ನಾರಾಯಣನ ಅಂಗಡಿಗೆ ಹತ್ತಿರದ ಒಂದು ಮನೆಯಿಂದ ಪೀಯೂಸಿ ಓದುವಂತಹ ವಯದ ಹುಡುಗಿಯೊಬ್ಬಳು ಆಗಾಗ ಬರುತ್ತಿದ್ದಳು. ವಯೋಮಾನದ ಸಹಜ ವಾಂಛೆಯಿಂದ ನಾರಾಯಣನಿಗೂ ಅವಳಿಗೂ ಪ್ರೇಮಾಂಕುರವಾಗಿತ್ತೆಂದು ಬೇರೇ ಹೇಳಬೇಕೇನು ? ಕೃಷ್ಣವರ್ಣದ ಸಾದಾ ಸೀದಾ ಸುಂದರಿ ಆಕೆ. ಅವರೂ ಗೌಡರೇ ಎಂಬುದನ್ನರಿತ ಸ್ನೇಹಿತರಿಗೆ ನಾರಾಯಣನ ಲವ್ವು ಮುಗ್ಗರಿಸುವುದಿಲ್ಲ ಎಂಬ ಭರವಸೆಯಿತ್ತು. ಆರಂಭದಲ್ಲಿ ಆಕೆಗೆ ಅಪ್ಪನ ವಿರೋಧವಿತ್ತೇನೋ. ಅಪ್ಪನಿಗೆ ಬರುವ ಸಂಬಳ ಸಾಲುತ್ತಿರಲಿಲ್ಲವೋ ತಿಳಿಯದು; ಆತ ಮಗಳನ್ನು ಜಾಸ್ತಿ ಓದಿಸಲೊಲ್ಲ. ಅದೇ ವೇಳೆಗೆ ನಾರಾಯಣನ ಪರಿಚಯ ಮತ್ತು ಇನ್ನೂ ಬಲಿತಿರದ ಪ್ರೇಮ ಇದ್ದುದರಿಂದ ಹುಡುಗಿ ನಾರಾಯಣನಲ್ಲಿ ಸ್ಥಿತಿಗತಿ ಹೇಳಿಕೊಂಡಿದ್ದಳು. ಬಡತನದಲ್ಲೇ ಹುಟ್ಟಿಬೆಳೆದ ಅನುಭವವಿದ್ದ ನಾರಾಯಣ ಆಕೆಗೆ ಓದಿಸುವ ಅಭಯ ನೀಡಿದ! ಫೀಸನ್ನೂ ಬೇಕಾದ ಪರಿಕರಗಳನ್ನೂ ಕೊಡಿಸುವುದಾಗಿ ಒಪ್ಪಿ ಆಕೆಯನ್ನು ಕಾಲೇಜಿಗೆ ಸೇರಿಸಿದ. ಹಾಗೂ ಹೀಗೂ ಪೀಯೂಸಿ ಮುಗಿಸಿದ ಆಕೆ ನಾರಾಯಣನ ಹೃದಯದಲ್ಲಿ ಬಲವಾಗಿ ತಳವೂರಿದ್ದಳು. ಊರಿಗೆ ತಿಳಿಸಿದ ನಾರಾಯಣ ಮತ್ತು ರತ್ನ[ಆಕೆಯ ಹೆಸರು]ರ ವಿವಾಹ ಪಶ್ಚಿಮ ಕಾರ್ಡ್ ರಸ್ತೆಯ ಸಾದರ ವಿದ್ಯಾಭಿವೃದ್ಧಿಸಂಘದ ಕಲ್ಯಾಣಮಂಟಪದಲ್ಲಿ ನಡೆಯಿತು. ಬಹಳ ವಿಶೇಷವೆಂದರೆ ಮದುವೆಗೆ ಆತ ಕೂಡ ಬಂದಿದ್ದ!

ಮದುವೆ ಮುಗಿದು ಮನೆಮಾಡಿ ವರ್ಷದ ಕಾಲ ಕಳೆದುಹೋಯ್ತು. ಮದುವೆ ವಾರ್ಷಿಕೋತ್ಸವದ ಸಲುವಾಗಿ ಸ್ನೇಹಿತರ ಬಳಗಕ್ಕೆ ಮನೆಯಲ್ಲೇ ಚಿಕ್ಕದಾಗಿ ಊಟ ಇಟ್ಟುಕೊಂಡಿದ್ದರು. ಆತನೇನಪ್ಪಾ ಅಂದರೆ ಆತ ಪುಳಿಚಾರೆ ! ತುಂಡು ತಿನ್ನುವ ಜಾತಿಯವನಲ್ಲ. ಶತಮಾನಗಳಿಂದ ವೇದಗಳನ್ನು ಓದುತ್ತಾ ಬಂದ, ಪೂಜೆ-ಪುನಸ್ಕಾರ ನಡೆಸುತ್ತಾ ಬಂದ ಕುಲೀನ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಬೆಳೆದ ಆತನಿಗೆ ಸಹಜವಾಗಿ ಬ್ರಾಹ್ಮಣ್ಯದ ಲಕ್ಷಣಗಳು ಪ್ರಾಪ್ತವಾಗಿದ್ದವು. ಹಾಗಂತ ಆತ ಸ್ವಚ್ಛತೆಯುಳ್ಳ, ಪರಿಶುದ್ಧವಾದ ಮತ್ತು ಮಾಂಸಾಹಾರ ಇಲ್ಲದ ಯಾವುದೇ ತಿನಿಸುಗಳನ್ನಾಗಲೀ ಯಾರದೇ ಮನೆಯಲ್ಲಾದರೂ ಭುಂಜಿಸಲು ಸಿದ್ಧನಿದ್ದ; ನಡೆಸಿಯೂ ಇದ್ದ. || ಆಚಾರಹೀನಂ ನಪುನಂತಿ ದೇವಾಃ || ಆಯಾ ಜನ್ಮಕ್ಕೆ ತಕ್ಕಂತೇ ವ್ಯವಹಾರ ಮತ್ತು ಆಚಾರವಿಧಿಗಳನ್ನು ಪಾಲಿಸಬೇಕಂತೆ. ಅದನ್ನರಿತಿದ್ದ ಆತನಿಗೆ ಹಲವಾರು ಬಾರಿ ಬ್ರಾಹ್ಮಣನಾಗಿ ಹುಟ್ಟಿದ್ದೇ ತಪ್ಪಾಯಿತೇ ಎಂಬ ಅನುಮಾನ ಕೂಡ ಬಂದಿತ್ತು. ಬೇಕಾದ್ದನ್ನು ತಿನ್ನಲಾಗದ ಕುಡಿಯಲಾಗದ ಕಾರಣಕ್ಕೆ ಹಾಗೆ ಸಂದೇಹ ಹುಟ್ಟಿದ್ದಲ್ಲ; ಬದಲಾಗಿ ಸಮಾಜದಲ್ಲಿ ಎಲ್ಲಿ ನೋಡಿದರೂ ಬ್ರಾಹ್ಮಣರ ಅವಹೇಳನ, ಚುಚ್ಚುಮಾತುಗಳು ನಡೆದೇ ಇದ್ದವು. ಸರಕಾರೀ ರಂಗಗಳಲ್ಲಿ ಬ್ರಾಹ್ಮಣರಿಗೆ ಅವಕಾಶ ಇಲ್ಲದಾಗುತ್ತಾ ನಡೆದಿತ್ತು. ಬ್ರಾಹ್ಮಣರು ಮಡಿವಂತರು ಅವರು ಯಾರನ್ನೂ ಹತ್ತಿರ ಸೇರಿಸಲೊಲ್ಲರು ಎಂಬ ಧೋರಣೆಯನ್ನು ತಳೆದ ಇತರೆ ವರ್ಗಗಳ ಜನ ಬ್ರಾಹ್ಮಣ ದೂಷಣೆಯನ್ನು ಸಾಮೂಹಿಕವಾಗಿ ಆರಂಭಿಸಿದ್ದರು. ಯಾಕೆ ಬ್ರಾಹ್ಮಣರು ಮಡಿ ಎನ್ನುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಜ್ಞೆಯೇ ಇರಲಿಲ್ಲ. ಅಯ್ಯಪ್ಪ ಮಾಲೆ ಧರಿಸಿದ ಭಕ್ತರೇ ಅಷ್ಟು ಮಡಿ ಎನ್ನುತ್ತಾ ತಿರುಗುವಾಗ ನಿತ್ಯವೂ ಬ್ರಾಹ್ಮಣ್ಯವೆಂಬ ವ್ರತವನ್ನು ಆಚರಿಸಿ ಬದುಕುವ ಬ್ರಾಹ್ಮಣನನ್ನು ಯಾಕೆ ಆ ರೀತಿ ಹಳದಿಗಣ್ಣಿನಿಂದ ನೋಡುತ್ತಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ.

ನಾರಾಯಣ ಗೌಡರ ಮನೆಯಲ್ಲಿ ಶುದ್ಧವಾದ ಕೆಂಪುನೆಲದಮೇಲೆ ಅಗ್ರದ ಬಾಳೆಲೆ ಇಟ್ಟು ತೊಳೆದು ಉಪ್ಪು, ಉಪ್ಪಿನಕಾಯಿ ಇತ್ಯಾದಿಗಳನ್ನು ಬ್ರಾಹ್ಮಣರ ರೀತಿಯಲ್ಲೇ ಬಡಿಸಿದ್ದರು. ಬರುವವರಲ್ಲಿ ಆತನೂ ಇದ್ದನಲ್ಲ! ಚಿತ್ರಾನ್ನ, ಹಪ್ಪಳ, ಮುದ್ದೆ, ಅನ್ನ-ಸಾರು, ಪಲ್ಯ ಎಲ್ಲವೂ ಚೆನ್ನಾಗೇ ಇದ್ದವು. ಆತ ಖುಷಿಯಿಂದಲೇ ನಾರಾಯಣ ದಂಪತಿಯ ಆತಿಥ್ಯ ಸ್ವೀಕರಿಸಿದ. ನಾರಾಯಣ ದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ವೈಯ್ಯಕ್ತಿಕವಾಗಿ ಬ್ರಾಹ್ಮಣರಲ್ಲಿ ಪೂಜ್ಯಭಾವನೆಯನ್ನು ಹೊಂದಿದ್ದ ಜನ ಅವರು. " ಅನ್ನದಾತಾ ಸುಖೀಭವ" ಎಂದು ಹಾರೈಸಿ ಬೀಳ್ಕೊಂಡ ಆತನ ಬಳಗ ಹೀಗೇ ಬಲುದೊಡ್ಡದು. ಹೋದಲ್ಲೆಲ್ಲಾ ಸ್ನೇಹಿತರು ಮುತ್ತಿಕೊಳ್ಳುವ ಏನನ್ನಾದರೂ ಕೇಳುತ್ತಲೇ ಇರುವ ವ್ಯಕ್ತಿತ್ವವನ್ನು ಆತ ಬೆಳೆಸಿಕೊಂಡಿದ್ದ. ಜಾತಿಯ ನೀತಿಗಿಂತ ವ್ಯಕ್ತಿ-ವ್ಯಕ್ತಿಗಳ ಒಡನಾಟ ಮತ್ತು ಸ್ವಚ್ಛತೆಗೆ ಆತ ತುಂಬಾ ಬೆಲೆಕೊಡುತ್ತಿದ್ದ.

ಆತನ ಮದುವೆಯ ಸಮಯ ಬೆಂಗಳೂರಿನ ಎಲ್ಲಾ ಮಿತ್ರರನ್ನೂ ಅಹ್ವಾನಿಸಲು ತೆರಳಿದ್ದ. ಅಲ್ಲಿಯೂ ಅಷ್ಟೇ ಜಾತಿ-ಧರ್ಮಕ್ಕೆ ಪ್ರಾಮುಖ್ಯತೆ ಇರಲಿಲ್ಲ. ತನ್ನ ನೀತಿ ತನಗೆ ಅವರವರ ನೀತಿ ಅವರವರಿಗೆ ಎಂಬ ಮನೋಭಾವ ಆತನದ್ದು. ನಾನು ಆತನನ್ನು ಬಹಳಕಾಲದಿಂದ ಹತ್ತಿರದಿಂದ ಬಲ್ಲೆ! ಅವನ ಪ್ರತೀ ಹೆಜ್ಜೆಯೂ ನನಗೆ ತಿಳಿದೇ ಇದೆ. ಮದುವೆಗೆ ಆಮಂತ್ರಿಸಲು ಹೋದ ಆತ ದಲಿತರ ಶಿವು ಮನೆಯಲ್ಲಿ ಪ್ರೀತಿಯಿಂದ ಕೊಟ್ಟ ಪಾನಕ ಕುಡಿದ! ದಾವೂದ್ ಸಾಬರ ಮನೆಯಲ್ಲಿ ತಿಂಡಿತಿಂದ! ಹೀಗೇ ಎಲ್ಲರೊಳಗೂ ಆತ ಒಬ್ಬನಾಗಿದ್ದ. ದಾವೂದರ ಮನೆಯವರಿಗಂತೂ ಆತ ಬಹಳ ಮೆಚ್ಚು. ಆತನ ಸ್ನೇಹದ ಸಂಕೋಲೆಯಲ್ಲಿ ಕೃಷ್ಣಪ್ಪ ಗೌಡರು, ದಾವೂದ್ ಸಾಬರು, ಮಂಗಳೂರು ಮೂಲದ ಫ್ರಾನಿಸ್ ಮೆನೆಜಿಸ್, ನನ್ನಯ್ಯ ಮೇಸ್ತ, ದಾಮೋದರ ನಾಯ್ಕ, ವಾಸು ಪಟಗಾರ ಮೊದಲಾದವರಿದ್ದರು.

೧೨-೦೯-೨೦೧೧ ರಂದು ಪಂಡಿತೋತ್ತಮರಾದ ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರನ್ನು ಈ ಜಗತ್ತು ಕಳೆದುಕೊಂಡಿತು. ನಾವೆಲ್ಲಾ ತಿನ್ನುವುದಕ್ಕಾಗಿ ಬದುಕಿದ್ದರೆ ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದ ಕೆಲವರಲ್ಲಿ ಅವರೂ ಒಬ್ಬರು! ಅವರ ಸಂಸ್ಕೃತ ಮತ್ತು ಕನ್ನಡ ಭಾಷಾಪ್ರೌಢಿಮೆ ಅಸದೃಶವಾದುದು, ಅಮೋಘವಾದುದು. ಋಗ್ವೇದ ಮತ್ತು ಯಜುರ್ವೇದಗಳೆರಡನ್ನು ಆಳವಾಗಿ ಅಧ್ಯಯನ ಮಾಡಿ ದ್ವಿವೇದಿಯಾಗಿದ್ದ ಅವರು ಪಂಚ-ಪ್ರಪಂಚ, ಮೂರರ ಮಹಿಮೆ, ಭಾಸಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿ, ಸುದರ್ಶನ ಹೋಮ ವಿಧಿ, ಪಂಚ-ದುರ್ಗಾ ದೀಪ ನಮಸ್ಕಾರ ವಿಧಿ, ಮಹಾಗಣಪತೀ ಹವನವಿಧಿ, ಬ್ರಹ್ಮಕಲಶ ವಿಧಿ ಮುಂತಾದ ಜನಪ್ರಿಯ ಧಾರ್ಮಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಯಕ್ಷಗಾನ ಪ್ರಿಯರಾದ ಅವರು ನಾಕೈದು ಪ್ರಸಂಗಗಳ ಕರ್ತೃವೂ ಹೌದು. ಆಕಾಶವಾಣಿ ಕೇಂದ್ರಗಳಿಂದ ಅವರ ಸಂದರ್ಶನಗಳು ಬಿತ್ತರಗೊಂಡಿವೆ, ಪುರೋಹಿತರಾಗಿ ಅವರು ಪಠಿಸಿದ ಮಂತ್ರಗಳ ೯ ಧ್ವನಿಸುರುಳಿಗಳೂ ಮಾರುಕಟ್ಟೆಯಲ್ಲಿವೆ. ಕಸ್ತೂರಿ ಮಾಸಿಕದಲ್ಲಿ ’ಶಬ್ದ ಸಂಸಾರ’ವೆಂಬ ಚಿಕ್ಕ ಅಂಕಣವನ್ನು ಬಹಳ ಚೊಕ್ಕವಾಗಿ ಬರೆಯುತ್ತಿದ್ದ ಅವರು ಸಮಾಜಕ್ಕೆ ಇನ್ನೂ ಬೇಕಾಗಿತ್ತು, ವಿಧಿ ಯಾರನ್ನೂ ಹೇಳಿ-ಕೇಳಿ ಮಾಡುವುದಿಲ್ಲವಲ್ಲ, ಅನಾರೋಗ್ಯ ಬಾಧಿಸಿದ್ದ ಅವರು ದಿವಂಗತರಾಗಿದ್ದಾರೆ. ಸರಕಾರದ ಕಣ್ಣಿಗೆ ಬದುಕಿರುವವರೆಗೂ ಅವರು ಕಾಣಲಿಲ್ಲ-ಯಾವ ಪ್ರಶಸ್ತಿಗಳನ್ನೂ ಕೊಡಮಾಡಲಿಲ್ಲ. ಇರಲಿಬಿಡಿ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದವರಲ್ಲಿ ಆತನೂ ಒಬ್ಬ!

ಇತ್ತೀಚೆಗೆ ೨೦೧೧ ಡಿಸೆಂಬರ್ ೧೧ ರಂದು ಆತ ಕೆಲಸದ ನಿಮಿತ್ತ ವಿಜಯನಗರಕ್ಕೆ ತೆರಳಿದ್ದ. ದಾವೂದ್ ಸಾಬರ ಮನೆ ಇರುವುದು ವಿಜಯನಗರದಲ್ಲೇ. ಕೇರಳಮೂಲದ ದಾವೂದ್ ಮದುವೆಯಾದದ್ದು ಮದ್ರಾಸೀ ಹುಡುಗಿಯನ್ನು. ಮನೆಯಲ್ಲಿ ಆಡು ಭಾಷೆ ತಮಿಳು! ದಾವೂದ್ ಮಗ ರಶೀದ್ ಎಂಬಾತ ಆತನ ಸ್ನೇಹಿತ. ಆತನ ವಯಸ್ಸಿನವನೇ ಆದ ರಶೀದ್ ಎಷ್ಟು ಒಳ್ಳೆಯ ಹುಡುಗನೆಂಬುದು ಆತನಿಗೆ ಮಾತ್ರ ಗೊತ್ತು! ದಾವೂದ್ ಮನೆಯಲ್ಲಿ ಸ್ವಚ್ಛತೆಯಿದೆ. ಎಲ್ಲವೂ ಕ್ಲೀನು ಕ್ಲೀನು. ಅದರಲ್ಲಂತೂ ರಶೀದ್ ದಿನಕ್ಕೆರಡುಬಾರಿ ಸ್ನಾನ ಮಾಡುವಾತ. ಮನೆಯಲ್ಲಿ ಅವರು ಮಾಂಸಾಹಾರ ತಿಂದರೂ ಆತ ಬರುವ ದಿನ ಅಥವಾ ಬಂದ ದಿನ ಆ ವ್ಯವಹಾರವಿಲ್ಲ! ಆ ದಿನ ಎಲ್ಲೆಲ್ಲೂ ಅದರ ಸುದ್ದಿಕೂಡಾ ಇರುವುದಿಲ್ಲ. ಯಾವುದೋ ತಾಂತ್ರಿಕ ಕೆಲಸ ಸಮಯದಲ್ಲಿ ಮುಗಿಯದ್ದಾಗಿತ್ತು, ಅದಕ್ಕೆ ರಶೀದ್ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ. ದಾವೂದರ ಮನೆಯಲ್ಲೇ ಆ ಕೆಲಸ ನಡೆಸುತ್ತಿದ್ದುದರಿಂದ ಹೊತ್ತು ಸರಿದದ್ದು ಗೊತ್ತಾಗಲೇ ಇಲ್ಲ. ದಾವೂದ್ ಮನೆಗೆ ಆತ ಬಂದಾಗಲೇ ಬೆಳಗಿನ ೧೧ ಗಂಟೆ. ಕಪ್ ಟೀ ಕುಡಿದು ಕೆಲಸ ಆರಂಭಿಸಿದ್ದ. ಸಮಯ ಮೂರಾದರೂ ಕೆಲಸ ಮುಗಿಯಲೇ ಇಲ್ಲ. ಹೊರಗೆ ಊಟಕ್ಕೆ ಹೋಗಿಬರಲು ಅವರ ಒಪ್ಪಿಗೆ ಇರಲಿಲ್ಲ! ಇಂದು ತಮ್ಮನೆಯಲ್ಲೇ ಊಟಮಾಡಿ ಎಂಬ ಹಠಕ್ಕೆ ಆತ ಮಣಿದಿದ್ದ. ಅವರಿಗೂ ಅನ್ನಿಸಿತ್ತೋ ಏನೋ. ಅಂದು ಶುದ್ಧ ಸಸ್ಯಾಹಾರ. ಟೊಮೇಟೋ ಸಾರು, ಬೀನ್ಸಿನ ಪಲ್ಯ, ನಂದಿನಿ ಮೊಸರು[ ಅವರು ಮೊಸರನ್ನು ಮನೆಯಲ್ಲಿ ಮಾಡೋದಿಲ್ಲ]. ಉಂಡೆದ್ದು ತಾಟು ತೊಳೆಯುತ್ತೇನೆಂದರೆ ಅವರು ಕೇಳಿಯಾರೇ ? ಮತ್ತೆ ಕೆಲಸ ಸಾಗಿತ್ತು. ಇಡೀ ದಿನ. ಮತ್ತೆ ಸಾಯಂಕಾಲ ೬ ಗಂಟೆಗೆ ಅಲ್ಲೇ ಚಹಾ. ರಾತ್ರಿಯೂ ಆಗಿ ಹೋಯ್ತು. ಮಾರನೇ ದಿನ ಸಂಕಷ್ಟಿ! ಆತನಿಗೆ ಪೂಜೆಯಿದೆ-ವ್ರತವಿದೆ!! ರಾತ್ರಿ ೧೨ರ ತನಕವೂ ಕೆಲಸ ನಡೆದಿತ್ತು. ಮತ್ತೆ ರಾತ್ರಿ ೧೦ರ ಸುಮಾರಿಗೆ ಚಪಾತಿ ಮಾಡಿದ್ದೇವೆ ಎಂದು ಹಠಮಾಡಿದರೂ ಆತ ಸ್ವೀಕರಿಸಲಿಲ್ಲ, ಯಾಕೆಂದರೆ ಮನೆಯಲ್ಲಿ ಮಾಡಿದ್ದನ್ನು ಮಾರನೇ ದಿನಕ್ಕೆ ಬಾಕಿ ಉಳಿಸುವ ಹಾಗಿರಲಿಲ್ಲ! ರಾತ್ರಿ ಹನ್ನೆರಡಕ್ಕೆ ಹೊರಟು ಹತ್ತು ಕಿಲೋಮೀಟರು ಕ್ರಮಿಸಿ ಮನೆ ತಲುಪಿ ಊಟಮಾಡಿ ಮತ್ತೆ ಬೆಳತನಕ ಆತ ಕೆಲಸಮಾಡಿದ. ನಿದ್ದೆಗೆಟ್ಟರೂ ಕರ್ತವ್ಯವನ್ನು ಮರೆಯದ ಆತನನ್ನು ನಾನು ಮೆಚ್ಚುತ್ತೇನೆ.

ಮಡೆಸ್ನಾನದ ಬಗ್ಗೆ ಆತ ಅದೂ ಇದೂ ಮಾತಾಡುವವರ ಮಧ್ಯೆ ತನ್ನ ಅಭಿಪ್ರಾಯ ತಿಳಿಸಿದ್ದ. ಅದು ಬ್ರಾಹ್ಮಣರು ಜಾರಿಗೆ ತಂದ ಅನಿಷ್ಟ ಪದ್ಧತಿ ಎಂಬ ಧೋರಣೆ ಸರಿಯಲ್ಲ ಎಂಬುದನ್ನು ವಿಶದವಾಗಿ ತಿಳಿಯಪಡಿಸಿದ. ಹಲವುಜನ ಆತನ ಅಭಿಪ್ರಾಯವನ್ನು ಓದಿದರು. ಕೆಲವರು ಪರ ಮತ್ತೆ ಕೆಲವರು ವಿರುದ್ಧವಾಗಿದ್ದರು. ಒಬ್ಬಾತನಂತೂ ಆತನನ್ನೇ ಗುರಿಯಾಗಿಸಿ ಹರಿಹಾಯ್ದ. ಎಲ್ಲಾ ಬ್ರಾಹ್ಮಣರನ್ನೂ ಏಕದೃಷ್ಟಿಯಿಂದ ನೋಡುತ್ತಾ ಬೆರಳುಮಾಡಿ ತೋರಿಸುತ್ತಾ ಹೀಗಳೆಯುವುದು ಆತನಿಗೆ ಅಸಹನೀಯವಾಗಿತ್ತು. ಬ್ರಾಹ್ಮಣ್ಯವೆಂಬ ವ್ರತದ ಪಾಲನೆಯಲ್ಲಿ ಆದ ಕೆಲಮಟ್ಟಿನ ದೋಷಗಳೇ ಈ ಗತಿಗೆ ಕಾರಣ ಎಂಬುದು ಆತನ ಇಂಗಿತವಾಗಿತ್ತು. ಉನ್ನತ ಪೀಠಗಳಲ್ಲಿ ಕುಳಿತು ಪೂಜೆಗೊಳ್ಳುವ ದೇವರುಗಳನ್ನು ನಿತ್ಯ ಆರಾಧಿಸುವ ಬ್ರಾಹ್ಮಣರಿಗೆ ನಿಜವಾದ ಬ್ರಾಹ್ಮಣ್ಯದ ಅವಶ್ಯಕತೆಯಿದೆ. ಬ್ರಾಹ್ಮಣ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಣಬೆಗಳ ಸೇವನೆ ಕೂಡ ನಿಷೇಧ. ಸಾಮೂಹಿಕ ಜಾಗಗಳಲ್ಲಿ ಹೋಟೆಲ್ ಗಳಲ್ಲಿ ತಿನ್ನುವುದು ನಿಷಿದ್ಧ. ಸ್ನಾನ ಮುಖಮಾರ್ಜನೆ ಶುದ್ಧಾಚಾರ ಇಲ್ಲದೇ ತಯಾರಿಸುವ ಅಡಿಗೆಯ ಸೇವನೆ ನಿಷಿದ್ಧ. ಅತಿಖಾರ-ಅತಿ ಹುಳಿ-ಅತಿಸಿಹಿ ಮತ್ತು ಅತಿ ಉಪ್ಪು ಪದಾರ್ಥಗಳು ನಿಷಿದ್ಧ. ಪ್ರಾಣಿಗಳ/ಜೀವಿಗಳ ಮಾಂಸಲಭಾಗಗಳನ್ನು ತಿನ್ನುವುದು ನಿಷಿದ್ಧ. ಧಾನ್ಯಗಳಲ್ಲೇ ಕೆಲವು ಕೆಲವುದಿನಗಳಲ್ಲಿ ನಿಷಿದ್ಧ, ಕೆಲವುದಿನಗಳಲ್ಲಿ ಅನ್ನವೇ ನಿಷಿದ್ಧ!

ಇದಕ್ಕೆಲ್ಲಾ ವೈಜ್ಞಾನಿಕ ಕಾರಣವಿದೆಯೆಂದು ಆತ ಬಲ್ಲ. ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆಂಬುದನ್ನೂ ಆತ ಬಲ್ಲ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ ಎಂಬುದು ಆತನಿಗೆ ತಿಳಿದೇ ಇದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ[ಇದಕ್ಕೆ ತಾಕತ್ತು ಬೇಕಾಗುತ್ತದೆ]ಶಕ್ತರು ಎಂಬುದು ಆತನಿಗೆ ಗೊತ್ತು. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ಆತನಿಗೆ ತಲೆನೋವಾಗಿರುವ ವಿಷಯ.

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ [ವಿದ್ಯೆ ಕಲಿಸುವಿಕೆ] ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ ಆ ಗುರುಸ್ಥಾನಕ್ಕೆ ಆತ ಸದಾ ಕೃತಜ್ಞನಾಗಿದ್ದಾನೆ. ’ಆ ಮುಖ’ವೇ ಈ ಮುಖ, ಆತ ಬೇರಾರೂ ಅಲ್ಲ ನಾನೇ ! ನನ್ನೊಳಗಿನ ’ನಾನು’ ಹೊರಬಂದು ಇದನ್ನು ಬರೆದಿದ್ದೇನೆ.

Friday, December 16, 2011

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....

ಬೆಂಗಳೂರಿಗೆ ನಾನು ಬಂದಿದ್ದು ಅಜ್ಜಿಗೆ ಬಹಳ ಬೇಸರವಾಗಿತ್ತು. ನನ್ನನ್ನು ಅತಿಪ್ರೀತಿಯಿಂದ ತಾಯಿಯಂತೇ ಸಲಹಿದ ಅಜ್ಜಿಗೆ ಮಕ್ಕಳಲ್ಲೇ ನಾನು ಅಚ್ಚುಮೆಚ್ಚು. ಊರಿಗೆ ಬಹುದೂರದ ಬೆಂಗಳೂರಿಗೆ ಹೊರಟಮೇಲೆ ಇನ್ನು ತನಗೆ ಅಷ್ಟಾಗಿ ಹತ್ತಿರ ಸಿಗಲೊಲ್ಲ ಎಂಬ ಕಾರಣಕ್ಕೆ ಅಜ್ಜಿ ಬೇಸರಪಟ್ಟಿದ್ದು. ಹಾಗಂತ ಎಲ್ಲರಮನೆ ಮಕ್ಕಳಂತೇ ಏನೋ ಸಾಧನೆ ಮಾಡಲಿ ಎಂಬ ಎರಡನೇ ಮನಸ್ಸೂ ಇತ್ತು ! ಆದರೂ ಪ್ರೀತಿಯ ಮೊದಲನೇ ಮನಸ್ಸು ಬೇಡಿಕೆಯ ಎರಡನೇ ಮನಸ್ಸನ್ನು ಹಿಂದಕ್ಕೆ ಹಾಕಿಬಿಟ್ಟಿತ್ತು. ೯೩ರಲ್ಲಿ ಬೆಂಗಳೂರಿಗೆ ಹೊರಟು ನಿಂತಾಗ ಕಣ್ಣು ತುಂಬಾ ನೀರು ತುಂಬಿಕೊಂಡು ಬೀಳ್ಕೊಟ್ಟ ಅಜ್ಜಿಗೆ ಮೊಮ್ಮಗ ಊರಿಗೆ ಬರುವುದನ್ನೇ ನೆನೆವ ಅಪೇಕ್ಷೆ. ಅಲ್ಲಲ್ಲೇ ಮನದಲ್ಲೇ ಲೆಕ್ಕ: ಈಗ ಹೇಗಿರಬಹುದು? ಮೊಮ್ಮಗ ಒಳ್ಳೇ ಪೌಲ್ದಾರನ ಹಾಗೇ ಡ್ರೆಸ್ಸು ಹಾಕಿಕೊಂಡು ಯಾವುದೋ ಆಫೀಸಿಗೆ ಹೋಗುತ್ತಿರಬೇಕೇನೋ, ಸರ್ಕಾರೀ ಕೆಲಸ ಸಿಕ್ಕಿರಬಹುದೇ? ನಮ್ಮಂತೇ ಕಷ್ಟಪಡುವುದು ಬೇಡ, ಮೊಮ್ಮಗ ಕೈತುಂಬಾ ಹಣಸಂಪಾದಿಸಿ ಸುಖವಾಗಿ ಬಾಳಲಿ ---ಹೀಗೆಲ್ಲಾ ಯಾವ್ಯಾವುದೋ ಗಣಿತ, ಗುಣಿತ, ಭಾಗಾಕಾರ, ಸಂಕಲನ!

ಹಬ್ಬಹರಿದಿನಗಳು ಬಂದರೆ ಸಾಕು ಅಜ್ಜಿಗೆ ಇನ್ನೇನು ಮೊಮ್ಮಗ ಊರಿಗೆ ಬಂದೇ ಬಿಡುತ್ತಾನೆ ಎಂಬ ಸಂತಸ. ಎಲ್ಲರಲ್ಲೂ ಹೇಳಿಕೊಳ್ಳುವ ಹುಮ್ಮಸ್ಸು. ವಯಸ್ಸನ್ನು ಮರೆತು ಮಕ್ಕಳೊಂದಿಗೆ ಮಗುವಾಗಿ ಕುಣಿದು, ನಲಿದು ಕುಪ್ಪಳಿಸುವಾಸೆ. ಇಲ್ಲಿ ನಮ್ಮ ಕಥೆ ನಮಗೇ ಗೂತ್ತು. ಸಿಗುವ ಸಂಬಳ ನಮ್ಮ ಖರ್ಚಿಗೇ ಸಾಕಾಗದ ಪರಿಸ್ಥಿತಿಯಲ್ಲಿ ಊರಿಗೆ ಎಲ್ಲಾ ಹಬ್ಬಗಳಿಗೂ ಹೋಗಲು ಸಾಧ್ಯವೇ? ಆದರೂ ಮೊಮ್ಮಗನನ್ನು ಕಾಣುವ ಆಸೆಯಿಂದ ಮೊಮ್ಮಗ ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದ ರವೆಉಂಡೆ, ಕೊಬ್ಬರಿಮಿಠಾಯಿ ಮಾಡಿ ಹಿತ್ತಾಳೆಯ ಡಬ್ಬದಲ್ಲಿ ತುಂಬಿಸಿಡುತ್ತಿದ್ದಳು. ಊರಿಗೆ ಪ್ರವೇಶಿಸುತ್ತಿದ್ದಂತೆಯೇ ಒಂದೋಂದೇ ಡಬ್ಬ ಈಚೆ ಬರುತ್ತಿತ್ತು. ನಾಕಾರು ಬಗೆಯ ತಿಂಡಿಗಳನ್ನು ಕೊಡುತ್ತಾ ಮೊಮ್ಮಗ ತಿಂದು ಸುಖಿಸುವುದನ್ನು ಕಂಡು ತಾನು ಸುಖಪಡುವ ಮಹಾತಾಯಿ ಅವಳಾಗಿದ್ದಳು.

೬ನೇ ವಯಸ್ಸಿನಷ್ಟು ಚಿಕ್ಕವನಿದ್ದಾಗ ಮನೆಯಲ್ಲಿ ಬಾಳೆಗೊನೆ ಕೊಯ್ದು ಹಣ್ಣಿಗೆ ಹಾಕಿದ್ದರು. ಯಾವುದೋ ಕಾರ್ಯದ ನಿಮಿತ್ತ ನಾವು ಮಕ್ಕಳು ಮತ್ತು ನಮ್ಮ ತಾಯಿ ಅಜ್ಜನಮನೆಗೆ ಹೋಗಬೇಕಾಗಿತ್ತು. ಅಜ್ಜನಮನೆಗೆ ಹೋಗುವ ದಿನದವರೆಗೊ ಬಾಳೇಕಾಯಿ ಹಣ್ಣಾಗಿರಲಿಲ್ಲ. ಅಜ್ಜನಮನೆಗೆ ಹೋದ ನಾವು ವಾರಕ್ಕೂ ಅಧಿಕ ದಿನ ಅಲ್ಲೇ ಇರಬೇಕಾಗಿತ್ತು. ಅಜ್ಜಿಗೆ ನಾವೆಲ್ಲಾ ಕರೆಯುತ್ತಿದ್ದುದು " ಅಮ್ಮ" ಎಂದೇ. ಅಮ್ಮನನ್ನು " ಆಯಿ" ಎಂದು ಸಂಬೋಧಿಸುವ ಪದ್ಧತಿಯಿತ್ತು, ಬಹುಶಃ ಅದು ಮಹಾರಾಷ್ಟ್ರದ ಗಾಳಿ ಮುಂಬೈ, ಪುಣೆ, ಬೆಳಗಾಂವ್, ಧಾರವಾಡ, ಹುಬ್ಬಳ್ಳಿ ಮಾರ್ಗವಾಗಿ ಶಿರಸಿ ಘಟ್ಟ ಇಳಿದು ನಮ್ಮಲ್ಲಿಗೆ ಬಂದಿರಬೇಕು! ಹೀಗಾಗಿ ಚಿಕ್ಕವರಿದ್ದಾಗ ನಮಗೆಲ್ಲಾ ’ಅಮ್ಮ’ ಎಂದರೆ ಅಜ್ಜಿ. " ಅಮ್ಮಾ, ಬಾಳೇಕಾಯಿ ಹಣ್ಣಾಯ್ದೇ ಇಲ್ಯಲೇ, ನಾನು ಅಜ್ಜನಮನೆಗೆ ಹೋಗಿ ಬಪ್ಪಲ್ಲಿಯವರೆಗೆ ಹಾಂಗೇ ಇರ್ತು ಅಲ್ದಾ ? " ಎಂದು ಹವಿಗನ್ನಡದಲ್ಲಿ ನಾನು ಕೇಳಿದ್ದೆನಂತೆ. ಅಜ್ಜನಮನೆಗೆ ಹೋದವನನ್ನು ಒಮ್ಮೆ ಯಾರದೋ ಜೊತೆಗೆ ಮನೆಗೆ ಕರೆಸಿಕೊಂಡಿದ್ದರಂತೆ. ನನಗೋ ಅಜ್ಜಿ ಬೇಕು ಆಯಿಯನ್ನು ಬಿಡಲಾಗದು! ಇಬ್ಬರೂ ಇದ್ದರೆ ನಮ್ಮಷ್ಟಕ್ಕೇ ನಾವು ಹಾಯಾಗಿ ಆಡಿಕೊಂಡಿರುತ್ತಿದ್ದೆವು. ಅದ್ಯಾವ ಪರಿ ಎಂದು ಕೇಳಿದಿರೇ ? [ಅದು ಹಾಗೇಯಪ್ಪ ಒಂಥರಾ ಸರ್ಕಾರಿ ಸಂಬಳ-ಹತ್ತಮಂದಿ ಕೈ ಗಿಂಬಳ ಎರಡನ್ನೂ ಪಡೆದು ಬೀಗುವ ಸರ್ಕಾರಿ ಅಧಿಕಾರಿಗಳ ಹಾಗೇ ಇತ್ತು !] ಮನೆಗೆ ಬಂದವ ಒಂದೆರಡು ಗಂಟೆ ಕಳೆದಮೇಲೆ " ಆಯಿ ಬೇಕು ಬೋಂಂಂಂ " ಎಂದು ಅತ್ತೆನಂತೆ. ಅದಕ್ಕೇ ಮತ್ಯಾರನ್ನೋ ಜೊತೆಮಾಡಿ ವಾಪಸು ಅಜ್ಜನಮನೆಗೆ ಕಳಿಸಿದರಂತೆ.

ವಾರ ಕಳೆದರೂ ಮನೆಗೆ ಬಂದಿರಲಿಲ್ಲ. ಬಾಳೆಕೊನೆ ಹಣ್ಣಾಗಿಬಿಟ್ಟಿತ್ತು. ಅಮ್ಮನಿಗೆ [ಅಜ್ಜಿಗೆ] ಮನಸ್ಸು ತಡೆಯಲಿಲ್ಲ. ಒಂದು ದಿನ ಬೆಳಿಗ್ಗೆ ಬೇಗನೇ ಮನೆವಾರ್ತೆ ಕೆಲಸಮುಗಿಸಿ, ಸ್ನಾನಾದಿಗಳನ್ನು ತೀರಿಸಿಕೊಂಡು, ಮನೆಯಲ್ಲಿ ಹೊರಗೆ ಕೆಲಸಕ್ಕೆ ಬಂದಿದ್ದ ಹೆಣ್ಣಾಳನ್ನು ಜೊತೆಗಿರಿಸಿಕೊಂಡು ಭಾರವಾದ ಬಾಳೇಹಣ್ಣುಗೊನೆ ಹೊತ್ತು ಅಜ್ಜನಮನೆಗೇ ಬಂದಿದ್ದಳು ನಮ್ಮಮ್ಮ! ಹಲಸಿನಕಾಯಿ ಹಪ್ಪಳ, ಬಾಳೆಗೊನೆ ಕಟ್ಟಿಕೊಂಡು ಬಂದ ಅಜ್ಜಿಯನ್ನು [ ಅಮ್ಮನನ್ನು] ನೋಡಿ ನಮಗೆ ಆಶ್ಚರ್ಯ. ಮೂಕವಿಸ್ಮಿತ ಎಂದು ಈಗ ಹೇಳಬಹುದು, ಆಗ ಆ ಶಬ್ದಗಳೆಲ್ಲಾ ಗೊತ್ತಿರಲಿಲ್ಲ ಹೀಗಾಗಿ!! ಅಜ್ಜನಮನೆಗೆ ಬಂದ ಅಮ್ಮ ಅಲ್ಲಿನವರಿಗೆ ಬೀಗಿತ್ತಿ. ಅಪರೂಪಕ್ಕೆ ಬಂದ ಬೀಗಿತ್ತಿಗೆ ಔತಣ ಏರ್ಪಡಿಸಬೇಕೆಂದರೂ ಹಠಮಾಡಿ ಸಾದಾ ಊಟ ಮುಗಿಸಿಕೊಂಡು ಊರಿಗೆ ಮರಳಿದ್ದರು ನಮ್ಮಮ್ಮ. ಅವಿಭಕ್ತ ಕುಟುಂಬವಾಗಿದ್ದ ನಮ್ಮನೆಯಲ್ಲಿ ಬಾಕಿ ಉಳಿದಂತೇ ಚಿಕ್ಕಪ್ಪಂದಿರು, ಅಜ್ಜ ಎಲ್ಲಾ ಇದ್ದರಲ್ಲ....ಯಾರಿಗೂ ಬಾಳೇಹಣ್ಣು ತಿನ್ನುವ ಯೋಗವಿರಲಿಲ್ಲ. ಯಾರಿಗೇ ಇರಲಿ ಬಿಡಲಿ ಮೊಮ್ಮಗ ಕೇಳಿದ್ದಾನೆ-ಕೊಡಬೇಕು----ಇದಿಷ್ಟೇ ನಮ್ಮಮ್ಮನ ಅನಿಸಿಕೆಯಾಗಿತ್ತು; ಅದನ್ನು ಪೂರೈಸಿದ್ದಳು.

ಪಂಜರಗಡ್ಡೆ[ ಸುವರ್ಣಗಡ್ಡೆ] ಪಲ್ಯ, ಹಾಗಲಕಾಯಿ ಹಸಿ, ಬದನೇಕಾಯಿ ಎಣ್ ಬಜ್ಜಿ, ಹೀರೇಕಾಯಿ ಗೊಜ್ಜು ಅಥವಾ ಸಿಹಿ ತಂಬ್ಳಿ...ಹೀಗೇ ಅಜ್ಜಿಯ ಅಡುಗೆಯ ಪಟ್ಟಿ ಬಹಳ ವಿಸ್ತಾರ. ಮಾಡುವ ಪ್ರತೀ ಅಡುಗೆಗೂ ಪ್ರತೀ ಪದಾರ್ಥಕ್ಕೂ ಅದರದ್ದೇ ಆದ ವಿಶಿಷ್ಟ ರುಚಿ. ಕಾಡಿನಿಂದ ಸೊಪ್ಪು ತರುವವರು ಆಗಾಗ ಮಡಾಗಲಕಾಯಿ ತರುತ್ತಿದ್ದರು. ಬಾಳೇದಿಂಡು ಸದಾ ಇರುತ್ತಿತ್ತು. ಕನ್ನೆಕುಡಿ, ತಗಟೆ [ಚಗಟೆ]ಸೊಪ್ಪು, ಬಸಲೆ, ಕೆಂಪು ಹರಿಗೆ ಹೀಗೇ ತರಾವರಿ ಸೊಪ್ಪುಗಳೂ ಬಳಸಲ್ಪಡುತ್ತಿದ್ದವು. ಮಳೆಗಾಲದ ಆದಿಯಲ್ಲಿ ಕಳಲೆ [ಬಿದಿರಿನ ಮೊಳಕೆ] ಕೂಡ ಬಳಸುತ್ತಿದ್ದರು. ಕಳಲೆ ಬಳಸುವುದರಿಂದ ಬೆನ್ನಲ್ಲಿ ಆಗಬಹುದಾದ ನಾರುಹುಣ್ಣು ಎಂಬ ಸಮಸ್ಯೆ ತಲೆಹಾಕುವುದಿಲ್ಲವಂತೆ. ಬಳಸುವ ಪ್ರತಿಯೊಂದೂ ಸಾಮಗ್ರಿ ಆದಷ್ಟೂ ಕ್ರಿಮಿನಾಶಕ ರಹಿತವಾಗಿರುತ್ತಿತ್ತು; ಆರೋಗ್ಯ ವರ್ಧಕವಾಗಿರುತ್ತಿತ್ತು.

ನಾವು ಚಿಕ್ಕವರಿದ್ದಾಗ ತಾಮ್ರ, ಕಂಚು ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಯಲ್ಲಿದ್ದವು. ಹಿತ್ತಾಳೆಯ ಲೋಟಗಳಲ್ಲೇ ಚಹಾ ಅಥವಾ ಕಷಾಯ [ನಮ್ಮೂರ ಕಡೆ ನಾವು ದಿನ ನಿತ್ಯ ಕುಡಿಯುವ ಭಾರತೀಯ ಮೂಲದ ಆರೋಗ್ಯಕರ ಪೇಯ] ಇತ್ಯಾದಿಗಳನ್ನು ಕುಡಿಯುತ್ತಿದ್ದರು. ಮಣ್ಣಿನ ಪಾತ್ರೆಗಳು ಬಹಳ ಬಳಸಲ್ಪಡುತ್ತಿದವು. ಊರಿಗೊಂದೋ ಮೂರು ನಾಕು ಗ್ರಾಮಗಳಿಗೊಂದೋ ಜಾತ್ರೆ ನಡೆಯುತ್ತಿತ್ತು. ಜಾತ್ರೆಗಳಲ್ಲಿ ಹೆಂಗಸರಿಗೆ ಬೇಕಾದ ಬಳೆ, ಪಿನ್ನು, ಬಾಚಣಿಗೆ, ಕ್ಲಿಪ್ಪು, ಸ್ನೋ, ಪೌಡರ್, ಪಾತ್ರೆಗಳು, ಮಕ್ಕಳ ಆಟಿಕೆಗಳು ಮಾರಾಟಕ್ಕೆ ಬರುತ್ತಿದ್ದವು. ಅಲ್ಲಲ್ಲಿ ಚಿಕ್ಕಪುಟ್ಟ ಸರ್ಕಸ್, ಡೊಂಬರಾಟ, ಬಾವಿಯಲ್ಲಿ ಸೈಕಲ್ ಓಡಿಸುವುದು, ಎರಡು ಕುತ್ತಿಗೆ ಮನುಷ್ಯ ಪ್ರದರ್ಶನ ಹೀಗೇ ಕೆಲವು ಅಪರೂಪದ ಸಂಗತಿಗಳು, ಆಟಗಳು ಹೆಂಗಸರು-ಮಕ್ಕಳಿಗೆ ಮುದನೀಡುತ್ತಿದ್ದವು. ಗಂಡಸರು ತಮಗೆಲ್ಲಾ ಏನೂ ಇದು ಹೊಸದಲ್ಲಾ ಎನ್ನುವ ರೀತಿ ಪೋಸುಕೊಟ್ಟು ಓರೆ‍ಗಣ್ಣಿನಲ್ಲೇ ಕುತೂಹಲಿಗಳಾಗಿ ನೋಡುತ್ತಾ ಸಾಗುತ್ತಿದ್ದರು. ಜಾತ್ರೆ ನಡೆದು ತಿಂಗಳುಗಳ ಕಾಲ ಎಲ್ಲರ ಬಾಯಲ್ಲೂ ಜಾತ್ರೆ, ಈ ಬಾರಿಯ ಜಾತ್ರೆಯ ವಿಶೇಷ ವೈಖರಿ, ಖರೀದಿಸಿದ ವಸ್ತುಗಳ ಬಗೆಗೆ, ಅಲ್ಲಿ ನೋಡಿದ ಸರ್ಕಸ್ಸು, ಏರಿದ ತೊಟ್ಟಿಲು ಇಂಥವುಗಳ ಬಗ್ಗೆ ಸುದ್ದಿ ಮುಗಿಯುತ್ತಲೇ ಇರಲಿಲ್ಲ. ನಮ್ಮೂರು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದೇ ಅವರ ಅಂಬೋಣ! ಜಾತ್ರೆಯ ಒಂದು ಮೂಲೆಯಲ್ಲೆಲ್ಲೋ ಮಣ್ಣಿನ ಪಾತ್ರೆಗಳೂ ಮಾರಾಟಕ್ಕೆ ಬರುತ್ತಿದ್ದವು. ಉದ್ದನೆಯದು, ಉರುಟುಗಟ್ಟಿನದು, ಅಗಲ ಬಾಯಿಂದು, ಬುಡ ಅಗಲ-ಕಂಠ ಚಿಕ್ಕದಾಗಿದ್ದು, ಗುಡಾಣ, ಮಡಿಕೆ-ಕುಡಿಕೆ, ಬೋಗುಣಿ, ಮೊಗೆ, ಹಣತೆಗಳು ಹೀಗೇ ಹಲವು ಆಕಾರ ವೈವಿಧ್ಯದ ಮಣ್ಣಿನ ಗೃಹೋಪಯೋಗೀ ಸಾಮಾನುಗಳು ದೊರೆಯುತ್ತಿದ್ದವು.

ಜಾತ್ರೆಗೆ ಸಾಗುವಾಗ ಕೆಲವರು ಎತ್ತಿನಗಾಡಿಗಳಲ್ಲಿ ಹೋಗುತ್ತಿದ್ದರು. ಚೆನ್ನಾಗಿ ಉಂಡು-ತಿಂಡು ಕಸುವುಳ್ಳ ಎತ್ತುಗಳು ಗಾಡಿಯನ್ನು ಖುಷಿಯಿಂದಲೇ ಎಳೆಯುತ್ತಿದ್ದವು. ಊರ ಹೊರಗಿನ ಸಮತಟ್ಟಾದ ಹಾದಿಯಲ್ಲಿ ಅವು ಸಾಗುವಾಗ ಅವುಗಳ ಕೊರಳ ಗಂಟೆಗಳ ನಿನಾದ ಬಹಳ ಮುದ ನೀಡುತ್ತಿತ್ತು. ಇಕ್ಕೆಲಗಳ ಹಸಿರು ಗಿಡಮರಗಳ ನಡುವಿನ ಹಾದಿಯಲ್ಲಿ ಅವು ನಡೆಯುವ ರಭಸಕ್ಕೆ ಮೇಲೆದ್ದ ಧೂಳಿ ಸುಂದರ ಸನ್ನಿವೇಶವನ್ನು ಸೃಷ್ಟಿಸುತ್ತಿತ್ತು. ಗಾಡಿಕಾರ ಅವುಗಳ ಹೆಸರು ಹಿಡಿದು " ಚುಚುಚುಚುಚು ಏ ಕರಿಯಾ, ಏ ನಂದಿ ಹೋಗ್ರಪ್ಪ ಬೇಗಾ " ಎಂದು ಬಾರುಕೋಲು ಎಳೆಯುವಷ್ಟರಲ್ಲಿ ಋತುಪರ್ಣನ ರಥದ ಕುದುರೆಗಳಿಗೆ ಇದ್ದ ವೇಗದಂತಹ ವೇಗದಲ್ಲಿ ಎತ್ತುಗಳು ಓಡುತ್ತಿದ್ದವು! [ಈಗಲೂ ನೆನೆಸಿಕೊಂಡರೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.... ಎಂಬ ನರಸಿಂಹಸ್ವಾಮಿಯವರ ಪದ್ಯದ ನೆನಪಾಗುತ್ತದೆ] ನಮ್ಮಂತಹ ಮಕ್ಕಳು ಎತ್ತುಗಳಿಗೆ ಭಾರ ಹೆಚ್ಚಾದೀತೆಂಬ ಅರಿವಿಲ್ಲದೇ ಗಾಡಿ ಹತ್ತಲು ಹಾತೊರೆಯುತ್ತಿದ್ದೆವು. ಕೊನೇಪಕ್ಷ ಹತ್ತುಮಾರಾದರೂ ಸರಿ ಗಾಡಿಪ್ರಯಾಣ ಏನೋ ಆಹ್ಲಾದಕರವಾಗಿರುತ್ತಿತ್ತು. ಜಾತ್ರೆಗೆ ಸಾಗಿ ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಸಂಜೆಯ ಇಳಿಬಿಸಿಲಿನಲ್ಲಿ ಹೊಳೆವ ರಥದ ಕಳಸನೋಡಿ ಮೈಮರೆಯುತ್ತಿದ್ದೆವು. ಕಿತ್ತಳೇ ಹಣ್ಣಿನ ಸುಗಂಧ ಇಡೀ ಜಾತ್ರೆಯ ಎಲ್ಲೆಲ್ಲೂ ಆವರಿಸಿರುತ್ತಿತ್ತು! ಪುಗ್ಗಿ, ಪೀಪಿ, ಪ್ಲಾಸ್ಟಿಕ್ ಹಾವು, ತಿರುಗಿಸಿ ನೋಡುವ ಚಿತ್ರಗಳ ಡಬ್ಬ, ಬಣ್ಣಬಣ್ಣದ ಬೊಂಬೆಗಳು ಅಲ್ಲಿರುತ್ತಿದ್ದವು; ಅನುಕೂಲವಿದ್ದರೆ ಖರೀದಿಸುವುದು, ಇರದಿದ್ದರೆ ಅಪ್ಪಂದೋ ಅಮ್ಮಂದೋ ಕೈ ಹಿಡಿದುಕೊಂಡು ಹಿಂತಿರುಗಿ ಆಸೆಗಣ್ಣಿನಲ್ಲಿ ಅವುಗಳನ್ನು ಇಟ್ಟಿರುವ ಅಂಗಡಿಗಳನ್ನು ನೋಡುತ್ತಾ ಸಾಗುತ್ತಿದ್ದೆವು. ಜಾತ್ರೆ ಮುಗಿದು ಅಂಗಡಿಗಳನ್ನು ಮುಚ್ಚುವ ದಿನಗಳಲ್ಲಿ ಅಂಗಡಿ ಹಾಕಿದವರು ಕಮ್ಮಿ ಬೆಲೆಗೆ ವಸ್ತುಗಳನ್ನು ಮಾರುತ್ತಾರೆ ಎಂದು ಇನ್ನೊಮ್ಮೆ ಹೋಗುವುದೂ ಇತ್ತು!

ಇಂತಹ ಜಾತ್ರೆಗಳಲ್ಲಿ ಖರೀದಿಸಿ ತಂದ ಮಣ್ಣಿನ ಪಾತ್ರೆಗಳು ನಮ್ಮಲ್ಲಿ ಬಹಳಕಾಲ ಇದ್ದವು. ರೀಯಲ್ ವಂಡರ್ಫುಲ್ ಅರ್ದನ್ ಪಾಟ್ಸ್ ! ಕಾಲ ಬದಲಾದ ಹಾಗೇ ಜರ್ಮನ್ ಬೆಳ್ಳಿ, ಅಲ್ಯೂಮೀನಿಯಂ ಮತ್ತು ಸ್ಟೀಲ್ ಪಾತ್ರೆಗಳು ಕಾಲಿಟ್ಟವು. ಆಚೀಚೆಯ ಮನೆಗಳಲ್ಲಿ ಸ್ಟೀಲ್ ಪಾತ್ರೆಗಳನ್ನೂ ಲೋಟಗಳನ್ನೂ ಬಳಸಲು ತೊಡಗಿದಾಗ ನಮ್ಮನೆಯಲ್ಲಿ ಮಾತ್ರ ಹಳೇ ಪಾತ್ರೆಗಳಿದ್ದರೆ ಮಾರ್ಯದೆಗೆ ಕಮ್ಮಿ ಎಂದು ಚಿಕ್ಕಪ್ಪಂದಿರು ಎಲ್ಲಿಂದಲೋ ಸ್ಟೀಲ್ ಪಾತ್ರೆಗಳನ್ನು ಖರೀದಿಸಿ ತಂದರು. ಹೊಸದಾಗಿ ಹೊಳೆಯುತ್ತಿದ್ದ ಲೋಟಗಳಲ್ಲಿ ಏನನ್ನಾದರೂ ಹಾಕಿಸಿಕೊಂಡು ಕುಡಿಯುವುದೇ ನಮ್ಮಂಥಾ ಮಕ್ಕಳಿಗೆ ಒಂದು ಗತ್ತು ! [ಅದು ಅಂದಿನ ದೊಡ್ಡವರಿಗೂ ಸಹ!] ಹೊಳೆಯುವ ಪಾತ್ರೆಗಳ ನಕಲೀ ವೈಖರಿಯ ಮುಂದೆ ಶುಭ್ರವಾದ, ಆರೋಗ್ಯಕರವಾದ ಮಣ್ಣಿನ ಮಡಕೆಗಳು ಒಂದೊಂದಾಗಿ ಹೀಗಳೆಯಲ್ಪಟ್ಟು ಅಟ್ಟಸೇರಿದವು. ಕೆಲವು ಹೆಂಗಸರು ಬಹಳಕಾಲದ ತಮ್ಮ ಕೋಪವನ್ನು ಅವುಗಳ ಮೇಲೆ ತೀರಿಸಿಕೊಂಡರೋ ಗೊತ್ತಿಲ್ಲ, ಕೆಲವು ಮಡಕೆಗಳು ಒಡೆದು ತೋಟದ ಮರದಬುಡದಲ್ಲಿ ಹೋಗಿ ಬಿದ್ದವು! ಅಟ್ಟವೇರಿದ ಮಡಕೆಗಳು-ಕುಡಿಕೆಗಳು ಧೂಳುಹಿಡಿದ ದಯನೀಯ ಸ್ಥಿತಿಯಲ್ಲಿ ನಮ್ಮನ್ನು ಆಗಾಗ ನೋಡುತ್ತಿದ್ದವು!

ಅಜ್ಜ ಕೊಟ್ಟ ಹಣದಲ್ಲಿ ಕೊತ್ತಂಬರಿ ಕರಡಿಗೆಯಲ್ಲಿ ಬಿಸ್ಕಿಟ್ ಪೊಟ್ಟಣದ ಜೊತೆ ಇಟ್ಟಿದ್ದ ಮೂರು ರೂಪಾಯಿಗಳನ್ನು ಒಯ್ದು ಅಜ್ಜಿ ಜಾತ್ರೆಯಲ್ಲಿ ಬಹಳಹೊತ್ತು ಕೂತು ಆಸ್ಥೆಯಿಂದ ಸೋರದ ಮತ್ತು ಆಕಾರಬದ್ಧವಾಗಿರುವ ಮಣ್ಣಿನ ಪಾತ್ರೆಗಳನ್ನು ತಂದಿದ್ದಳು. ಬಹಳ ಪ್ರೀತಿಯಿಂದ ಅವು ಒಡೆಯದ ಹಾಗೇ ಚೂಳಿಯಲ್ಲಿ ಹುಲ್ಲಿನಮೇಲೆ ಜೋಡಿಸಿಕೊಂಡು ಆಳಿನಕೈಲಿ ಹೊರಿಸಿಕೊಂಡು ಬಂದಿದ್ದಳು. ಹುಳಿಗೆ ಇಂಥದ್ದು, ಸಾರಿಗೆ ಓ ಇದು, ಸಾಸಿವೆ ಮಾಡುವಾಗ ಇದು, ಗೊಜ್ಜು ಹಾಕಿಡುವುದು ಇದರಲ್ಲಿ, ಇದರಲ್ಲಿ ತಂಬ್ಳಿಮಾಡಿದರೆ ನಮ್ಮನೆಯಲ್ಲಿ ಎಲ್ಲರಿಗೂ ಸಾಲುತ್ತದೆ, ಮತ್ತೆ ಓ ಈ ಚಿಕ್ಕದಿದೆಯಲ್ಲಾ ಅದು ಹತ್ತನಗೊಜ್ಜಿಗೆ ...ಹೀಗೇ ಆರಿಸಿ ಆರಿಸಿ ಪಾತ್ರೆಗಳು ನಿರ್ವಹಿಸಿಬೇಕಾದ ಪಾತ್ರಗಳನ್ನು ಮೊದಲೇ ಹಂಚಿಬಿಟ್ಟಿದ್ದಳು. ಪ್ರತಿಯೊಂದೂ ಪಾತ್ರೆ ಅವಳ ಪ್ರೀತಿಯ ಕರಗಳಲ್ಲಿ ಸಿಕ್ಕಾಗ ಮುದ್ದಿನ ಮಗುವಿನಂತೇ ಆಡುತ್ತಿತ್ತು; ಜೀವವಿಲ್ಲದ ಪಾತ್ರೆಗಳು ಸಜೀವಿಗಳ ರೀತಿ ಅಮ್ಮನ ಜೀವನದ ಭಾಗವಾಗಿದ್ದವು, ಅವಳೊಂದಿಗೆ ಮಾತನಾಡುತ್ತಿದ್ದವು, ಅವಳ ಸ್ಪರ್ಶದಿಂದ ಪುಳಕಗೊಳ್ಳುತ್ತಿದ್ದವು, ಅವಳ ಕೈಲೇ ನಿತ್ಯ ಸ್ನಾನಮಾಡಿಸಿ, ಕೂದಲು ಬಾಚಿಸಿಕೊಳ್ಳುತ್ತಿದ್ದವು! ಕಪ್ಪಿನದು, ಕಡುಗಪ್ಪಿನದು, ಮಣ್ಣಿನ ಬಣ್ಣದ್ದು, ನಸುಗೆಂಪಿನದು, ನಸುಗೆಂಪಿನ ಮೈಗೆ ಒಂದು ಭಾಗದಲ್ಲಿ ಕಪ್ಪು ಬಣ್ಣ ಹೊಂದಿರುವುದು ಹೀಗೇ ಅವುಗಳ ಬಣ್ಣಗಳು. ಒಂದೊಂದು ಪಾತ್ರೆಯೂ ನಿಧಾನಕ್ಕೆ ತಟ್ಟಿದರೆ ಒಂದೊಂದು ಸ್ವರ ಹೊರಡಿಸುತ್ತಿತ್ತು.

ನಾನು ಕಲಿತು ಬೆಂಗಳೂರಿಗೆ ಸೇರುವ ಹೊತ್ತಿನಲ್ಲಿ ಅಮ್ಮ ಮುದುಕಾಗಿದ್ದಳು. ಅಜಮಾಸು ೬೮-೬೯ ವರ್ಷ. ಅಡಿಗೆಮಾಡಲು ಆಗುತ್ತಿರಲಿಲ್ಲ; ಮಾಡುವುದು ಬೇಕಾಗೂ ಇರಲಿಲ್ಲ. ಆ ಸಮಯ ನಮ್ಮ ಅಡುಗೆ ಮನೆಯಲ್ಲಿ ಮಣ್ಣಪಾತ್ರೆಗಳು ಇರಲೇ ಇಲ್ಲ. ಅಟ್ಟದಮೇಲೆ ಕೆಲವು ಮಾತ್ರ ಇದ್ದವು. ಅಮ್ಮ ಅಪರೂಪಕ್ಕೆ ಹಠಮಾಡಿ ಅವುಗಳನ್ನು ಕೆಳತರಿಸಿಕೊಂಡು ಅವುಗಳಲ್ಲಿ ಏನನ್ನಾದರೂ ಮಾಡುತ್ತಿದ್ದಳು. ಬೆಂಗಳೂರಿಂದ ಮನೆಗೆ ಬರುವ ಪೌಲ್ದಾರನಂಥಾ ಮೊಮ್ಮಗನಿಗೆ ಬರುವ ಸುದ್ದಿ ಕೇಳೇ ಮಣ್ಣಿನ ಪಾತ್ರೆಗಳಲ್ಲಿ ಏನದರೂ ಪದಾರ್ಥಗಳನ್ನು ಪ್ರೀತಿಯಿಂದ ತಾನೇ ಮಾಡುತ್ತಿದ್ದಳು. " ಬೋಗುಣಿಯಲ್ಲಿ ಸೌತೇಕಾಯಿ ಸಾಸಿವೆ, ಕೆಸುವಿನ ಸೊಪ್ಪಿನ ಕರ್ಗ್ಲಿ ಮಾಡಿದ್ದೇನೆ ಮಗಾ ಎಷ್ಟು ರುಚಿಯಾಗಿದೆ ನೋಡು" ಎಂದು ಅವರು ಕರೆದರೆ ಕಿವಿ ನಿಮಿರುತ್ತಿತ್ತು; ಯಾಕೆಂದರೆ ಒಳಕಲ್ಲಿನಲ್ಲಿ ರುಬ್ಬಿ ಹಾಕಿದ ಪದಾರ್ಥವನ್ನು ಮಣ್ಣಿನ ಪಾತ್ರೆಗಳಲ್ಲಿ ಹದಗೊಳಿಸಿದಾಗ ಸಿಗುವ ಸ್ವಾದ ಇಂದಿನ ಟಪ್ಪರವೇರ್ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಸಿಗುವುದಿಲ್ಲ, ಯಾವುದೇ ಸ್ಟೀಲ್ ಪಾತ್ರೆಗಳಲ್ಲೂ ಸಿಗುವುದಿಲ್ಲ. ಮಣ್ಣಿನ ಮಡಿಕೆ-ಕುಡಿಕೆಗಳಲ್ಲಿ ಬೆಂದ ಆಹಾರದ ರುಚಿಗಟ್ಟು ಕುಕ್ಕರ್ ಒಳಗೇ ಬೆಂದ ಆಹಾರಕ್ಕೆ ದಕ್ಕುವುದಿಲ್ಲ!

೧೯೯೪ ರಲ್ಲಿ ಅಂದರೆ ಬೆಂಗಳೂರಿಗೆ ನಾನು ಬಂದ ಒಂದೇ ವರ್ಷದಲ್ಲಿ ಅಜ್ಜಿ ತೀರಿಕೊಂಡಳು. ಗತಿಸಿದ ಅಮ್ಮನೊಡನೆ ಮಡಿಕೆಗಳೂ ಕಾಲಗರ್ಭದ ಇತಿಹಾಸದ ಪುಟಗಳಾದವು. ಕಾಲ ಬದಲಾಗಿ ಹೋಯ್ತು. ಗ್ರಾಮೀಣ ಭಾಗಕ್ಕೂ ಕುಕ್ಕರ್ ಗಳು ಬಂದವು, ಗಿಡಮರಗಳೆಲ್ಲ ಸಂಖ್ಯಾಬಲದಲ್ಲಿ ಮೈನಾರಿಟಿಗೆ ಸೇರಿದವು ! ಹಿಂದಕ್ಕೆ ಹಿಂದಕ್ಕೆ ಹೊರಳಿ ನೋಡಿದಾಗ ಅಂದಿನ ನಮ್ಮ ದಿನಗಳಲ್ಲಿ ಇದ್ದ ಗಣಪತಜ್ಜ, ಮಂಜ್ನಾಥ ಮಾವ, ಪಟೇಲಜ್ಜ, ಗೌಡ್ರಕೇರಿ ಚಂದ್ರು, ಹರಿಜನ ಸಂಕ್ರು, ದೇವಪ್ಪ ಶೆಟ್ಟರು, ಮಿಡಿ ಆಚಾರಿ ಎಲ್ಲರೂ ಸಿಕ್ಕು ಮಾತಾಡುತ್ತಿರುತ್ತಾರೆ! ಹಾಗೇ ಆ ಎಳವೆಯ ದಿನಗಳಲ್ಲಿ ಎಲ್ಲವೂ ಸುಂದರ, ಎಲ್ಲರೂ ಹತ್ತಿರ! ಜೀಮೇಲೂ ಇಲ್ಲ, ಈಮೇಲೂ ಇಲ್ಲ; ಇದ್ದವರೆಲ್ಲಾ ಮೇಲು ಮತ್ತು ಫೀಮೇಲುಗಳು ಮಾತ್ರ. ಇದ್ದವರಲ್ಲಿ ಜೀವಂತಿಕೆಯಿತ್ತು, ಪರಸ್ಪರ ಸೌಹಾರ್ದವಿತ್ತು. ಜೀವನದಲ್ಲಿ ಅತಿಯಾದ ಆಸೆಯಿರಲಿಲ್ಲ, ಅತಿರೇಕದ ಸಿರಿವಂತಿಕೆಯ ಸೋಗಿರಲಿಲ್ಲ, ಆಕಾಶಕ್ಕೆ ಏಣಿಹಾಕುವ ಹುಚ್ಚು ಹಂಬಲವಿರಲಿಲ್ಲ.

ಆಧುನಿಕತೆ ಕಾಲಿಟ್ಟಂತೇ ಮಾನವೀಯ ಮೌಲ್ಯಗಳು ಮರೆತುಹೋದವು, ದುಡ್ಡೇ ದೊಡ್ಡಪ್ಪನಾಗಿ ಸದ್ಗುಣಿಗಳು ಮರೆಯಾಗತೊಡಗಿದರು. ಊರಜನರ ವ್ಯಾವಹಾರಿಕ ಚಾತುರ್ಯ ಕುಹಕವನ್ನೂ ಅಳವಡಿಸಿಕೊಂಡಿತು. ಮರಗಿಡಗಳು ಕಮ್ಮಿಯಾದವು, ಮನೆಗಳು ಜಾಸ್ತಿಯಾಗಿ ಹತ್ತಿರ ಹತ್ತಿರವಾದವು ಆದರೆ ಮನಗಳು ಮಾತ್ರ ದೂರ ದೂರ ಸರಿದವು. ಶಂಕ್ರಣ್ಣ ಪೇಟೆಗೆ ಹೋದರೆ ಅಕ್ಕ-ಪಕ್ಕದ ಮನೆಗಳಿಗೆ ಬೇಕಾದ್ದೂ ಬರುತ್ತಿತ್ತು, ಮತ್ತೊಂದಿನ ಮಾದೇವಣ್ಣನ ಪಾಳಿ! ಇಂದು ಹಾಗಿಲ್ಲ, ಚಿಕ್ಕ ಸಾಮಾನು ಹಳ್ಳಿಗಳಲ್ಲಿ ಸಿಗದ ಔಷಧಿಮಾತ್ರೆಗಳು ಎಲ್ಲಕ್ಕೂ ಅವರವರ ಮನೆಯವರೇ ಹೋಗಬೇಕು. ಯಾರೂ ಯಾರಿಗೂ ಆಪ್ತರಲ್ಲ; ಒಟ್ಟಾರೆ ಇರಬೇಕು, ಇದ್ದಾರೆ! ಗಣಪತಜ್ಜ ಅಪರೂಪಕ್ಕೆ ಅನ್ನದ ಕೇಸ್ರೀಬಾತು ಮಾಡಿಸಿದ್ದರೆ ಒಂದೊಂದೇ ಚಮಚೆಯಷ್ಟು ಬಂದರೂ ಸರಿ ನಮ್ಮಂತಹ ಪೋರಗಳನ್ನೂ ಕರೆದು ಹಂಚುವ ವೈವಾಟಿತ್ತು. ಹಲವರ ಬಾಯಲ್ಲಿ ನಲಿದ ಕೇಸ್ರೀಬಾತನ್ನು ನೋಡಿದಾಗ ಗಣಪತಜ್ಜನ ಬಾಯಲ್ಲಿ ಕೇಸ್ರೀಬಾತು ಇನ್ನೂ ರುಚಿಸುತ್ತಿತ್ತು. ಮದುವೆ-ಮುಂಜಿಗಳಲ್ಲಿ ಪರಸ್ಪರ ಅಡುಗೆಮಾಡುವುದು, ಬಡಿಸುವುದು ಇತ್ಯಾದಿ ಕೆಲಸಗಳಲ್ಲಿ ಅನುವಾಗುತ್ತಿದ್ದ ಜನ ಈಗ ಅಡುಗೆ ಭಟ್ಟರುಗಳನ್ನು ಆಶ್ರಯಿಸಿದ್ದಾರೆ; ಕರೆದರೂ ಊಟದ ಹೊತ್ತಿಗೆ ಬಂದು ಹೋಗಲು ತುಟ್ಟಿ! ಗತಿಸಿದ ಆ ಕಾಲಘಟ್ಟವನ್ನು ಆಗಾಗ ನೆನೆದಾಗ ನನ್ನ ಮನ ನೆನೆಯುವ ನೆನೆದು ಮುದಗೊಳ್ಳುವ ಹಾಡು


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ........ ನಮಸ್ಕಾರ.


Wednesday, December 14, 2011

ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಇದು ನನ್ನ ಒತ್ತಾಯವಲ್ಲ, ನಿಮ್ಮೆಲ್ಲರ ಗೆಳೆಯನಾಗಿ, ಅಂತರ್ಜಾಲದ ಮೂಲಕ ನಿಮ್ಮ ಆಪ್ತ ಸಹವರ್ತಿಯಾಗಿ ಕೊಡುತ್ತಿರುವ ನನ್ನ ಸಲಹೆ ಅಷ್ಟೇ. ಕಳೆದವಾರ ನಂಬಿಕೆಯ ಬಗ್ಗೆ ಬರೆದಿದ್ದೆ. ಆಮೇಲೆ ಅತಿಯಾದ ಕೆಲಸಗಳ ನಡುವೆ ನನ್ನ ಅಂತರ್ಜಾಲದ ’ಅಂತರ್ಜಲ’ ಕಮ್ಮಿಯಾಗಿ ಹೋಗಿತ್ತು. ಬರೆಯಲು ಮನಸ್ಸಿದ್ದರೂ ವಿಷಯಗಳು ಹಲವು ಹತ್ತು ಮನಸ್ಸನ್ನು ಮುತ್ತಿಕೊಂಡು ಬರೆಯುವಂತೇ ಒತ್ತಾಯಿಸುತ್ತಿದ್ದರೂ ಬರೆಯಲು ಸಮಯಮಾತ್ರ ಕೊನೆಗೂ ಆಗಿರಲಿಲ್ಲ. ಕೇಳದೇ ಧುಮ್ಮಿಕ್ಕಿದ ಭಾವನೆಗಳ ಜಲಪಾತದಲ್ಲಿ ಕಂಡ ದೃಶ್ಯವೇ ಕನ್ನಡ ನಾಡ ಭಕ್ತಿಗೀತೆಗಳು-ನೀವದನ್ನು ಓದಿದ್ದೀರಿ.

ನಿಮ್ಮೊಡನೆ ಬ್ಲಾಗ್ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಕೆಲವು ದಿನಗಳು ಕಳೆದವು. ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುವ ಮನುಷ್ಯ ನಾನಲ್ಲ. ಸಮಾಜಕ್ಕೆ ಅಂತಹ ಕೊಡುಗೆಯನ್ನು ಕೊಟ್ಟು ಹಸಿವಿನಲ್ಲಿರುವವರಿಗೆ ಅನ್ನಕೊಡಲು ಸಾಧ್ಯವಿದ್ದರೆ, ಬಡವರ ಬಡತನಕ್ಕೆ ಕಾರಣ ಹುಡುಕಿ ಸ್ವಿಸ್ ಬ್ಯಾಂಕಿನಲ್ಲಿ ಕದ್ದೂಮುಚ್ಚಿ ಹಣವಿಟ್ಟು ಚುನಾವಣೆ ಬಂದಾಗ ಬಡವರನ್ನುದ್ಧರಿಸುವ ಸೋಗು ಹಾಕುವವರ ಆ ಕಳ್ಳಹಣವನ್ನು ತಂದು ಬೇಕಾದವರಿಗೆ, ನೊಂದವರಿಗೆ, ಆರ್ತರಿಗೆ ಹಂಚಿ ಸಮತ್ವವನ್ನು ಕಾಪಾಡಿಕೊಳ್ಳಬಹುದಾದ ತಾಕತ್ತು ನನ್ನಲ್ಲಿದ್ದಿದ್ದರೆ, ನನ್ನ ಹುಟ್ಟುಹಬ್ಬ ಎಲ್ಲರಿಗೂ ಸಂಭ್ರಮವಾದರೆ ಹೋಗಲಿ ಬಹುತೇಕರಿಗಾದರೂ ಸಂಭ್ರಮವಾದರೆ ಅದನ್ನು ಆಚರಿಸಬಹುದಿತ್ತು. ಇದು ಕೀಳರಿಮೆಯಲ್ಲ, ಇದು ಸಾಮಾನ್ಯಾತಿಸಾಮಾನ್ಯನೊಡನೆ ಸಹಜೀವನ ನಡೆಸುವ ಪ್ರವೃತ್ತಿ. ಅಂದಾದುಂಧಿ ಖರ್ಚುಮಾಡಿ, ಕೇಕು ಕತ್ತರಿಸಿ ಸಂಭ್ರಮಿಸುವ ಬದಲು ಅದೇ ಹಣವನ್ನು ಯಾರು ಅಸಹಾಯರು ಅವರಿಗೆ ನೀಡಿದರೆ ಅದರಲ್ಲಿರುವ ಖುಷಿ ನಿಜಕ್ಕೂ ಇದರಲ್ಲಿಲ್ಲ! ನನ್ನ ಮಗನಿಗೆ ಚಾಕೋಲೇಟ್ ಕೊಡಿಸುವಾಗ ಕೂಡ ಕಟ್ಟಡ ಕೂಲಿಗಳ ಮಗು ರಸ್ತೆಯಲ್ಲಿ, ಮರಳದಿಬ್ಬದಲ್ಲಿ ಹಸಿವಿನಿಂದ ಹೊರಳಾಡುದನ್ನು ಮನ ನೆನೆಯುತ್ತದೆ; ಮರುಗುತ್ತದೆ! ರಸ್ತೆಗಳಲ್ಲಿ ಡೊಂಬರಾಟನಡೆಸುವ ಎಳೆಯ ಮಕ್ಕಳನ್ನು, ಬಿಸಿಲಿನಲ್ಲಿ ಹಸಿದ ಮಗುವನ್ನು ಜೋಳಿಗೆಯಲ್ಲಿ ಹೊತ್ತು ಬೇಡುವ ತಾಯಂದಿರನ್ನೂ ನೋಡಿದಾಗ ಅಯ್ಯೋ ಎನಿಸುತ್ತದೆ. ಈ ಎಲ್ಲದರ ನಡುವೆ ನನಗೆ ಹುಟ್ಟಿದ ಹಬ್ಬದ ಸಂಭ್ರಮ ಬೇಕಾಗಿಲ್ಲ; ಅದರಂತೆಯೇ ಬ್ಲಾಗ್ ಯಾವತ್ತು ಹುಟ್ಟಿತು ಎಂಬುದನ್ನೂ ಅಷ್ಟಾಗಿ ಮತ್ತೆ ಮತ್ತೆ ಅವಲೋಕಿಸುವುದಿಲ್ಲ. ಬರೆಯುವುದಷ್ಟೇ ನನ್ನ ಆದ್ಯತೆ.

ಒಮ್ಮೆ ನಾವು ಇನ್ನೂ ದ್ವಿತೀಯ ಪಿಯೂಸಿಯನ್ನು ಓದುತ್ತಿರುವ ಸಮಯ, ನನ್ನೊಟ್ಟಿಗೆ ನನ್ನೊಬ್ಬ ಮಿತ್ರ, ಇಬ್ಬರದೂ ಒಂದು ರೂಮು, ನಮ್ಮದೇ ಅಡುಗೆ. ಒಂದು ರಾತ್ರಿ ಸುಮಾರು ೧ ಗಂಟೆಗೆ ಹೊಟ್ಟೆಯನೋವು ಎಂದು ಚೀರಹತ್ತಿದ ಆತನಿಗೆ ಏನುಕೊಡಬೇಕೆಂದು ನನಗೆ ತಿಳಿಯಲಿಲ್ಲ. ನನ್ನಲ್ಲಿ-ಅವನಲ್ಲಿ ಯಾವುದೇ ಔಷಧವಿರಲಿಲ್ಲ, ಕೆಳಮಧ್ಯಮದರ್ಜೆಯ ಪಟ್ಟಣಗಳಲ್ಲಿ ರಾತ್ರಿ ೮:೩೦ ನಂತರ ಔಷಧದ ಅಂಗಡಿಗಳು ಬಾಗಿಲು ಮುಚ್ಚಿರುತ್ತವೆ. ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ಯಾರಲ್ಲಿ ಕೇಳುವುದು? ಮಾರ್ನೇ ದಿನ ನನಗೆ ಪರೀಕ್ಷೆ. ಆ ಪರೀಕ್ಷೆಯೆ ನಡುವೆಯೇ ಈ ಪರೀಕ್ಷೆ! [ಆತನಿಗೆ ಅಗ ಪರೀಕ್ಷೆಯಿರಲಿಲ್ಲ ಎಂಬುದು ಸಮಾಧಾನ] ಕತ್ತಲ ದಾರಿಯಲ್ಲಿ ಆ ಅಪರಾತ್ರಿಯಲ್ಲಿ ರಸ್ತೆಹಿಡಿದು ಆತನನ್ನು ಯಾವುದಾದರೂ ಆಸ್ಪತ್ರೆಗೆ ಒಯ್ಯಲು ನನ್ನಲ್ಲಿ ಜಾಸ್ತಿ ಹಣಕೂಡ ಇರಲಿಲ್ಲ. ಹಣವಿರದಿದ್ದಾಗ ಯಾವುದೇ ಕೆಲಸವಾಗಲಿ ಅರ್ಧ ಜಂಘಾಬಲವೇ ಉಡುಗಿಹೋಗುತ್ತದೆ! ಈಗಂತೂ ಎಲ್ಲೆಲ್ಲೂ ಎಲ್ಲರಿಗೂ ಹಣವೇ ಪ್ರಧಾನ.

ಎರಡು ನಿಮಿಷ ಯೋಚಿಸಿದೆ. ನಾನೊಬ್ಬ ಭಕ್ತಿ ಭಂಡಾರಿ. ನನಗೆ ನಾನು ನಂಬಿದ ಕಾಣದ ಆ ಶಕ್ತಿಯಲ್ಲಿ ಅತೀವ ನಂಬಿಕೆಯಿದೆ. ಅದು ರಾಮನೋ ರಹೀಮನೋ ಬುದ್ಧನೋ ಕ್ರಿಸ್ತನೋ ಎಲ್ಲವೂ ಕೂಡ; ಹಲವು ರೂಪಗಳನ್ನು ಪಡೆಯಬಲ್ಲ ನಿರಾಕಾರ ರೂಪ! ನನ್ನ ಚೀಲದಲ್ಲಿ ಒಂದು ಕರಡಿಗೆಯಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಗುರುಗಳಾಗಿದ್ದ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ತಮ್ಮ ಕರಕಮಲದಿಂದ ಶ್ರೀರಾಮ[ಶಂಕರಾಚಾರ್ಯರಿಂದ ನೀಡಲ್ಪಟ್ಟು, ಅವಿಚ್ಛಿನ್ನವಾದ ಪರಂಪರೆಯ ಸ್ವಾಮಿಗಳಿಂದ ಸದಾ ಪೂಜೆಗೊಳ್ಳುವ]ನನ್ನು ಪೂಜಿಸಿದ್ದ ಶ್ರೀಗಂಧದ ಪ್ರಸಾದದ ಉಂಡೆಗಳು ಇದ್ದವು. ನಿತ್ಯವೂ ನಾನು ಅವುಗಳಲ್ಲಿ ಚೂರು ತುಣುಕು ತೆಗೆದು ಸ್ವಲ್ಪ ನೀರು ಸೇರಿಸಿ ಕಲಸಿ ಹಣೆಗೆ ಹಚ್ಚಿಕೊಳ್ಳುತ್ತಿದ್ದೆ. ಯಾಕೋ ಶ್ರೀರಾಮನ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು, ಮನಸಾ ಗುರುಪರಂಪರೆಗೆ, ಶ್ರೀರಾಮನಿಗೆ ಒಮ್ಮೆ ನಮಿಸಿ ಸ್ವಲ್ಪ ಅವೇ ಗಂಧದ ತುಣುಕುಗಳನ್ನು ಲೋಟವೊಂದರಲ್ಲಿ ಹಾಕಿ ನೀರಿನಲ್ಲಿ ಕದಡಿ ಮಿತ್ರನಿಗೆ ಕುಡಿಸಿದೆ. ಅರ್ಧಗಂಟೆಯೂ ಕಳೆದಿರಲಿಲ್ಲ, ಹೊಟ್ಟೆನೋವು ನಿಂತಿತ್ತು!

ಇನ್ನೊಂದೆರಡು ಪ್ರಸಂಗ ಹೀಗಿದೆ: ನಾನು ಓಡಿಸುತ್ತಿರುವ ಸ್ಕೂಟರಿಗೆ ಒಂದು ಕಾರು ಬಂದು ಗುದ್ದುವ ಸನ್ನಿವೇಶ ಎದುರಾಯ್ತು. ಕಾರು ಎಡದಿಂದ ನನಗೆ ತಾಗುತ್ತಿರುವುದು ಕಾಣುತ್ತಿತ್ತು; ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆತ ಬಹಳವೇಗದಲ್ಲಿದ್ದ. ನುಗ್ಗಿ ಬಂದ ಆತ ಎಡಕ್ಕೆ ಹೊಡೆದೇ ಬಿಟ್ಟ. ಸ್ಕೂಟರಿಗೆ ಸ್ವಲ್ಪ ಪೆಟ್ಟುಬಿದ್ದಿದ್ದು ಬಿಟ್ಟರೆ ನನಗೆ ಏನೂ ಆಗಲಿಲ್ಲ! ಗೇರುಸೊಪ್ಪೆಯ ಘಟ್ಟದ ಇಳಿಜಾರಿನಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಜಾಯಿಂಟ್ ಕಟ್ಟಾಗಿಹೋಯ್ತು. ಬಸ್ಸು ಹೇಗ್ಹೇಗೋ ಓಡಲು ತೊಡಗಿತ್ತು, ಸಾಲದ್ದಕ್ಕೆ ಬ್ರೇಕ್ ಕೂಡ ಚೆನ್ನಾಗಿರಲಿಲ್ಲ. ಡ್ರೈವರ್ ಚಿಂತೆಗೀಡಾಗಿದ್ದ. ಬಸ್ಸಿನಲ್ಲಿ ನಿದ್ದೆಮಾಡಿಕೊಂಡಿದ್ದವರನ್ನು ಬಿಟ್ಟರೆ ಮಿಕ್ಕುಳಿದವರಿಗೆ ವಿಷಯದ ಅರಿವಾಗಿತ್ತು. ಆದರೂ ಚಲಿಸುವ ವಾಹನದಲ್ಲಿ ಕುಳಿತು ಅದರ ನಿಯಂತ್ರಣ ನಮ್ಮ ಕೈಮೀರಿದಾಗ ಏನುಮಾಡಲು ಸಾಧ್ಯ ? ಇಲ್ಲೆಲ್ಲಾ ನನಗೆ ಅನಿಸಿದ್ದು ನನ್ನ ನಂಬಿಕೆ ನನ್ನನ್ನು ಇನ್ನೂ ಇಲ್ಲಿ ಉಳಿಸಿದೆ. ನನ್ನ ’ಅವತಾರ’ಕ್ಕೆ ಕರ್ತವ್ಯ ಇನ್ನೂ ಬಾಕಿ ಇದೆ!

ಚಿಕ್ಕವನಿರುವಾಗ ನಮ್ಮ ತೋಟದಲ್ಲಿ ಬಾವಿಯೊಂದನ್ನು ತೋಡುತ್ತಿದ್ದರು. ಹತ್ತಡಿ ಆಳದ ಬಾವಿಯಲ್ಲಿ ಅದಾಗಲೇ ನೀರು ಸಣ್ಣಗೆ ಜಿನುಗುತ್ತಿತ್ತು. ಕೆಸರುಸಹಿತದ ಆ ನೀರನ್ನು ಹೊರಹಾಕುವ ಕೆಲಸಕ್ಕೆ ತುಂಬಿಸಿಕೊಡುವ ಸಹಾಯಕ ನಾನಾಗಿದ್ದೆ. ಆ ದಿನ ಅಪರಾಹ್ನ ಮೂರುಗಂಟೆಯೂ ಆಗಿರಲಿಲ್ಲ. ನನಗ್ಯಾಕೋ ಕೋಪ ಬಂದಿತ್ತು; ನೀರು ತುಂಬಿಸುವುದಿಲ್ಲವೆಂದು ಜಗಳವಾಡಿ ಮೇಲಕ್ಕೆ ಹತ್ತಿ ಹೊರಟುಬಿಟ್ಟೆ. ನಾನು ಹಾಗೆ ಮಾಡಿದ ನಂತರ ಬಾವಿ ತೆಗೆಯುತ್ತಿದ್ದ ಆಳುಗಳು ತಮಗೂ ಯಾಕೋ ಸಾಕೆನಿಸಿ ಮೇಲಕ್ಕೆ ಬಂದಿದ್ದರು. ಕ್ಷಣಾರ್ಧದಲ್ಲಿ ಬಾವಿಯ ಪಕ್ಕೆ ಕುಸಿದು ಹತ್ತಾರು ಕ್ವಿಂಟಾಲು ಕಲ್ಲು ಮಿಶ್ರಿತಮಣ್ಣು ರಾಶಿ ಬಿತ್ತು! ಬಾವಿಯಲ್ಲೇ ಇದ್ದಿದ್ದರೆ ನಾವೆಲ್ಲಾ ಮಣ್ಣೊಳಗೇ ಮಣ್ಣಾಗುತ್ತಿದ್ದೆವೋ ಏನೋ.

ಇನ್ನೂ ಹಲವಾರು ಘಟನೆಗಳಿವೆ. ಇದನ್ನೆಲ್ಲಾ ನನೆಸಿದಾಗ ನನಗನಿಸಿದ್ದು ಯಾವುದೋ ಶಕ್ತಿ ನಮಗೇ ಅರಿವುಗೊಡದೆ ಸತತ ತನ್ನನ್ನು ಕೆಲಸದಲ್ಲಿ ನಿಯೋಜಿಸಿಕೊಂಡಿರುತ್ತದೆ. ನಂಬಿಕೆಯಿಂದ ಪ್ರಾರ್ಥಿಸಿದರೆ ಅದರಿಂದ ಕಷ್ಟಕ್ಕೆ ಪರಿವರ್ತನೆ ಸಿಗುತ್ತದೆ! ಪ್ರಾರ್ಥಿಸುವಾಗ ನಿಸ್ವಾರ್ಥರಾಗಿ ಪ್ರಾರ್ಥಿಸಬೇಕು. ಬರೇ ನಾನು-ನನ್ನದು ಹೆಂಡತಿ-ಮಕ್ಕಳು ಕುಟುಂಬ ಇವಷ್ಟನ್ನೇ ಅಲ್ಲದೇ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " [ಜಗತ್ತಿನ್ನ ಎಲ್ಲರ ಯೋಗಕ್ಷೇಮಾಭಿವೃದ್ಧಿಯನ್ನು ಬಯಸುವ] ಪ್ರಾರ್ಥನೆ ನಮದಾದರೆ ಅದಕ್ಕೆ ಸಿಗುವ ಫಲವೂ ಕೂಡ ದೊಡ್ಡದು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮೀಸಾ ಕಾಯ್ದೆ ಜಾರಿಗೊಳಿಸಿ ಅನೇಕರನ್ನು ವಿನಾಕಾರಣ ಶಿಕ್ಷೆಗೆ ಗುರಿಪಡಿಸಿದ್ದಳು. ಅದೇ ಕಾಲಕ್ಕೆ ಜನ ಒಳಗೊಳಗೇ ಗುಸುಗುಸು ದಂಗೆ ಎದ್ದಿದ್ದರು. ಪರಿಸ್ಥಿತಿಯನ್ನರಿತ ಇಂದಿರಾ ಕಾಂಚಿಯ ಕಡೆಗೆ ಬಂದು ಅಲ್ಲಿನ ಪರಮಾಚಾರ್ಯರನ್ನು ಭೇಟಿಮಾಡಲು ಮುಂದಾದಳು. ನೇರಮುಖ ದರ್ಶನಕ್ಕೆ ಅವಕಾಶವೀಯದ ಪರಮಾಚಾರ್ಯರಲ್ಲಿ ತನಗೂ-ತನ್ನ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಪರಮಾಚಾರ್ಯರು ಏನೂ ಪ್ರತಿಕ್ರಿಯಿಸಲಿಲ್ಲವಂತೆ. ದೇಶಕ್ಕೆ ಒಳಿತಾಗಲಿ ಎಂದು ಕೇಳಿದಾಗ ತಮ್ಮ ಬಲಗೈಯಾಡಿಸಿ ಆಶೀರ್ವಾದವೆಂಬಂತೇ ತೋರಿದರಂತೆ! ಬರುವ ಸೌಕರ್ಯವೇನಿದ್ದರೂ ಎಲ್ಲರಿಗೂ ಬರಲಿ, ದೊರೆವ ಸುಖವೇನಿದ್ದರೂ ಎಲ್ಲರಿಗೂ ಸಿಗಲಿ. ನನಗೆ ಮಾತ್ರ ಸಿಗಬಹುದಾದ ಸುಖಕ್ಕೆ ಎಂದೂ ಹಾತೊರೆಯುವುದಿಲ್ಲ. ನಮ್ಮೂರಿನ ಗಾದೆ ’ಊರಿಗಾದ ಹಾಗೇ ಪೋರನಿಗೆ’ ! ಊರಿಗೆಲ್ಲಾ ಏನು ಲಭ್ಯವೋ ಅದೇ ನನಗೂ ಸಾಕು. ಆದರೆ ಉತ್ತಮವಾದುದನ್ನು ಸಮಾಜ ಗಳಿಸಿಕೊಳ್ಳಲು ಪರಾಶಕ್ತಿಯಲ್ಲಿ ನಂಬಿಕೆ ಬೇಕು. ಮತ್ತೆ ಸಿಗೋಣ, ಧನ್ಯವಾದ.

Monday, December 12, 2011

ಅನ್ನ-ನೀರು ಇರುವವರೆಗೂ ಕನ್ನಡ !

ಅನ್ನ-ನೀರು ಇರುವವರೆಗೂ ಕನ್ನಡ !
[ಮೊನ್ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ,ಗುಂಗಿನಲ್ಲಿ ಬರೆದ ಒಂದು ಹಾಡು ನಿಮಗರ್ಪಿತ :]

ಚಿನ್ನದಾ ರನ್ನದಾ ಕನ್ನಡದಾ ತೇರನು
ಮುನ್ನಡೆಸುವುದಕೆ ಜಾಣ ಬೇಗ ಬಾ
ನಿನ್ನೆ ಇಂದು ನಾಳೆ ಎಂದು ಮೂರುದಿನದ ಜಾತ್ರೆಯಲ್ಲ
ಅನ್ನ-ನೀರು ಇರುವವರೆಗೂ ಕನ್ನಡ !

ಹಲವು ಸಾಧುಸಂತರು ಬಲಕೆ ದೇಶಭಕ್ತರು
ಗೆಲುವಿಗಾಗಿ ದುಡಿದರು ರಥವನೆಳೆದು ಖ್ಯಾತರು
ಒಲವಿನಿಂದ ಕೂಡಿದ ತವರು-ತಾಯಿ ಮನೆಯಿದು
ಚೆಲುವಿನಲ್ಲಿ ಚೆಲುವಿದು ನಮ್ಮ ಹೆಮ್ಮೆ ಕನ್ನಡ

ಪದಪದದಲು ಹಾಸ್ಯ ಹೊನಲು ಹದಪಾಕದ ಭಾಷೆಯು
ಕದವ ತೆರೆದು ಕೊಟ್ಟರು ಜ್ಞಾನಪೀಠ ಸರಸತಿ
ಮುದದಿ ಮೋದಗೊಳ್ಳುವಾ ಎಮ್ಮ ಮುದ್ದು ಕನ್ನಡ
ಗದುಗಿನಾರಣಪ್ಪನ ಹೃದಯ ಕದ್ದ ಕನ್ನಡ

ಅವರೆ ಎಂದರೊಮ್ಮೆ ಅದುವೆ ಬೇಳೆಯ ಹೆಸರಾಯಿತು
ಅವರೆ ಎಂಬ ಪ್ರತ್ಯಯವು ಹೆಸರಪಕ್ಕ ಕುಳಿತಿತು
ಅವರೆ ಎಂಬ ಸರ್ವನಾಮ ಬಹಳ ಬಳಕೆಲಿರುವುದು
ಅವರೆ ? ಪದದ ಸ್ವಾರಸ್ಯವು ಇಲ್ಲಿ ನಮಗೆ ತಿಳಿಯಿತು

ಕವಿಗಳಾಡಿ ಹೊಗಳಿದಾ ಸದಭಿರುಚಿಯ ವಾಙ್ಮಯ
ಗವಿಗಳಲ್ಲು ಗೋಪುರದಲು ಮೆರೆವ ರೀತಿ ವಿಸ್ಮಯ
ರವಿಕಾಣದ ಮೂಲೆಯನೂ ಕಾಣಿಸಿಹುದೀ ಕನ್ನಡ
ಪವಿತ್ರವು ಪರಿಶುದ್ಧವು ಪರಿಶೋಭಿಪ ಕನ್ನಡ