ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 5, 2010

ರಾತ್ರಿ ಚಾ ಪಾರ್ಟಿ ಇರುತ್ತದಂತೆ !


ರಾತ್ರಿ ಚಾ ಪಾರ್ಟಿ ಇರುತ್ತದಂತೆ !

ಇದನ್ನು ಕೇಳಿಯೇ ಮಕ್ಕಳಾದ ನಮಗೆಲ್ಲ ಒಂಥರಾ ಥ್ರಿಲ್ಲಿಂಗ್ ! ರಾತ್ರಿ ಹೊತ್ತಿನಲ್ಲೆಲ್ಲ ಚಾ ಕುಡುಯುವುದು ಸಾಮಾನ್ಯವಾಗಿ ನಾವು ನೋಡಿದ್ದಲ್ಲ. ಅದಕ್ಕೇ ಅದು ಹೇಗಿರಬಹುದು ಮತ್ತು ಏನೆಲ್ಲಾ ತಿಂಡಿ ಇರಬಹುದು ಎಂಬುದು ನಮ್ಮ ಕುತೂಹಲ. ಮಕ್ಕಳಿಗೆ ಸಹಜವಾಗಿ ತಿಂಡಿಗಳೆಲ್ಲಾ ಇಷ್ಟ್ ತಾನೇ ? ಅದೂ ಬೇರೆಯವರ ಮನೆಗಳಲ್ಲಿ ಮಾಡಿದ್ದು ಹೇಗಿರುತ್ತದೆ ತಿಳಿಯಬೇಕು ಎಂಬುದೊಂದು ಸ್ವಲ್ಪ ಕೆಟ್ಟ ಬಯಕೆ. ಆಗಾಗ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದರೆ ಕಾಯಿಸುವಾಗ-ಬೇಯಿಸುವಾಗ್ಲೇ ಅದರ ಪರಿಮಳ ನಮ್ಮಅಸಾಧಾರಣಮೂಗಿಗೆ ಹೊಡೆಯುತ್ತಿತ್ತು. ಆಗ ಪಕ್ಕದ ಮನೆಯ ಮಕ್ಕಳನ್ನು ಆಟಕ್ಕೆ ಕರೆದು

"ಏಯ್ ನಿಮ್ಮನೇಲಿ ಇವತ್ತೇನ್ ಮಾಡಿದಾರೋ "

" ಕೈಮುಗಿಯುವ ಮೊಮ್ಮಿ "

ಕೈಮುಗಿಯುವ ಮೊಮ್ಮಿ ಎಂದರೆ ಅದು ನಮ್ಮ ಮುಗಿದ ಕೈ ಆಕಾರದ ಸಿಹಿತಿನಿಸು! ಅಕ್ಕಿಹಿಟ್ಟಿನ ಕಡುಬು ನೋಡಿದ್ದೀರಲ್ಲಾ ಆಥರದ್ದೇ ಒಂದು. ಅಂಥದ್ದೆಲ್ಲಾ ದಿನವೂ ಮಾಡುವುದಲ್ಲ. ಅಪರೂಪಕ್ಕೆ ನೂಲು ಹುಣ್ಣಿಮೆ, ನಾಗರ ಪಂಚಮಿ ಇಂತಹ ದಿನಗಳಲ್ಲೇ ಮಾತ್ರ ಸಿಗುವಂತದು. ನಮ್ಮನೆಗಳಲ್ಲಿ ಅಮ್ಮ ತಿಂಗಳ ರಜಾಕ್ಕೆ ಕೂತರೆ ಆಗ ಅದು ಸಿದ್ಧವಾಗುತ್ತಿರಲಿಲ್ಲ, ಇನ್ಯಾವುದೋ ಹಬ್ಬಕ್ಕೆ ಪೋಸ್ಟ್ ಪೋನ್ ಆಗಿಬಿಡುತ್ತಿತ್ತು. ಒಮ್ಮೊಮ್ಮೆ ಅವರ ಮನೆಗಳಲ್ಲೂ ಅದೇ ಕಥೆ. ಹೀಗಾಗಿ ಕೆಲವೊಮ್ಮೆ ತಿನ್ನಬೇಕೆನಿಸುವ ನಮ್ಮ ಜಿಹ್ವಾಚಾಪಲ್ಯಕ್ಕೆ ಅದೇ ಕಾಲಕ್ಕೆ ತುರಿಕೆ ಜಾಸ್ತಿಯಾಗಿಬಿಡೋದು. ಏನಾದರೂ ಉಪಾಯ ಮಾಡಿ ನಾವು ಅವುಗಳನ್ನು ಹೊರಗಡೆ ತಂದು ಎಲ್ಲಾ ಸೇರಿ ಆಟವಾಡುತ್ತಾ ತಿನ್ನುವುದಿತ್ತು.

ನಾಗರ ಪಂಚಮಿಗೆಸುಳಿರೊಟ್ಟಿಮಾಡುತ್ತಿದ್ದರು. ಬೇಕಾದರೆನೀವೂ ಮಾಡಿನೋಡಿ--

ನೆನೆಹಾಕಿ ರುಬ್ಬಿದ ಅಕ್ಕಿಯ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಚಪಾತಿ ಹಿಟ್ಟಿನ ಹದಕ್ಕೆ ಇಟ್ಟುಕೊಂಡು ಅದನ್ನು ತುಂಡು ಬಾಳೆಲೆಯಮೇಲೆ ನಮ್ಮ ಅಂಗೈ ಆಕಾರಕ್ಕೆ ತೆಳ್ಳಗಿನ ಪದರದ ಥರ ಆಗುವವರೆಗೆ ತಟ್ಟಿ[ಕೈಗೆ ಎಣ್ಣೆ ತಗುಲಿಸಿಕೊಂಡು ಮಾಡಬೇಕಾದ ಕೆಲಸ], ನಂತರ ಅದರಮೇಲೆ ಸಿದ್ಧಪಡಿಸಿರುವ ಕಾಯಿಸಿ ಇಳಿಸಿರುವ ಕಾಯಿತುರಿ-ಬೆಲ್ಲದ ಮಿಶ್ರಣವನ್ನು ಒಂದು ಪದರ ಹರಡಿ. ನಿಧಾನಕ್ಕೆ ಅಂಗೈ ಮಡಿಸಿದಂತೇ ಮಡಿಸಿಕೊಳ್ಳಿ, ದೋಸೆ ಕಾವಲಿಯ ಮೇಲೆ ತುಂಡು ಬಾಳೆಲೆ ಸಮೇತ ಇಡಿ, ಒಂದೈದು ನಿಮಿಷ ಆಕಡೆ ಈಕಡೆ ಮಗುಚುತ್ತ ಬೇಯಿಸಿ! ಬಾಳೆಲೆ ಬಣ್ಣ ಬದಲಾಗುತ್ತ ಬಂದಾಗ ಇಳಿಸಿ ತಣಿಯಲು ಬಿಡಿ. ತಿಂದುನೋಡಿ--ಇದು ಸುಳಿರೊಟ್ಟಿ! ಸುಳಿರೊಟ್ಟಿಯನ್ನು ನಿಜವಾಗಿ ಮಾಡುವುದು ಅರಿಶಿನ ಗಿಡದ ಎಲೆ[ಅರಿಶಿನ ಕೀಳೆ]ಯಲ್ಲಿ! ಅದು ಅರಿಶಿನದ ಎಲೆಯ ಪರಿಮಳವನ್ನು ಹೀರಿಕೊಂಡು ಬೇಯುತ್ತದೆ. ಆಗ ತಿಂದರೆ ಅದರ ಪರಿಮಳವೇ ಬೇರೆ. ಆದರೆ ಶಹರ-ಪಟ್ಟಣಗಳಲ್ಲಿ ಅರಿಶಿನದ ಎಲೆ ಎಲ್ಲಿ ಸಿಗುತ್ತದೆ ? ಹೀಗಾಗಿ ಅದಕ್ಕೆ ಪರ್ಯಾಯ ಬಾಳೆಲೆ ಹೇಳಿದ್ದೇನೆ.

ಇರಲಿ ನಾವು ಮರಳಿ ಮಕ್ಕಳಾಗೋಣ! ನಮ್ಮೂರ ದೇವಸ್ಥಾನಗಳಲ್ಲಿ ಕಾರ್ತೀಕಮಾಸ ಮುಗಿಯುವ ಹೊತ್ತಿಗೆ ತಿಂಗಳದಿನ ದಿನವೂ ಸಾಯಂಕಾಲ ನಡೆಸಿಬಂದ ಭಜನಾ ಸೇವೆಗೆ ಮಂಗಳ ಹಾಡುವ ಭಜನೆಸಪ್ತಾಹ ನಡೆಯುತ್ತದೆ. ಸಪ್ತಾಹದಲ್ಲಿ ಹಲವು ವಿಧ. ಇದರಲ್ಲೇ ಯಾಮಾಷ್ಟಕ ಎಂದರೆ ಒಂದೊಂದು ಯಾಮಕ್ಕೆ ಒಂದೊಂದು ಗುಂಪು ಕುಳಿತು ಅಖಂಡ ಭಜನಾ ಸೇವೆ ನಡೆಯುತ್ತದೆ. ಇದು ಏಳುದಿನಗಳ ಪರ್ಯಂತ ನಡೆಯುವುದರಿಂದ ಸಪ್ತಾಹವೆಂದು ಹೆಸರು. ಆದರೆ ಈಗ ಕಾಲ ಬದಲಾಗಿದೆ. ಕೇವಲ ೨೪ ಘಂಟೆಗೆ ಅಖಂಡ ಭಜನೆ ಮುಗಿದುಹೋಗುತ್ತದೆ! ನಮ್ಮದು ಹಳ್ಳಿಯಾಗಿರುವುದರಿಂದ ಅಲ್ಲಿ ಆಗಿನಕಾಲದಲ್ಲಿ ದ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ. ಇಂತಹ ವಿಶೇಷ ಕಾರ್ಯಕ್ರಮಗಳಿರುವಾಗ ಮಾತ್ರ ದೂರದ ಪಟ್ಟಣದಿಂದ ಬಾಡಿಗೆಗೆ ಮೈಕು ತರಿಸುತ್ತಿದ್ದರು. ಮೈಕಿನವ ಬಂದು ಶ್ರೀಮತಿ ಎಸ್. ಜಾನಕಿಯವರು ಹಾಡಿರುವಶುಕ್ಲಾಂಬರಧರಂ ವಿಷ್ಣುಂ ....’ ಎನ್ನುವ ದೋಸೆಥರದ ತಿರುಗುವ ಅದೇನೋ ಹಾಕುತ್ತಿದ್ದ! ತಿರುಗುತ್ತಿರುವ ಅದರ ಮೇಲೆ ಒಂದು ದಪ್ಪ ಕಡ್ಡಿಯ ಥರದ್ದನ್ನು ಎಳೆದು ಬಿಟ್ಟರೆ ಅಲ್ಲಿ ತರತರದ ಹಾಡುಗಳು ಬರುತ್ತಿದ್ದವು ! ಕೆಲವೊಮ್ಮೆ ಹಾಡು ಮುಂದೆಹಾಡಲು ಮರೆತುಹೋದ ಹಾಗೇ ೧೦-೧೨ ಬಾರಿ ಹಾಡಿದ್ದನ್ನೇ ಹಾಡುತ್ತಿತ್ತು. ಆಗ ಮೈಕಣ್ಣ ಅದೇನೋ ಬೆಕ್ಕಿನಮರಿ ಎತ್ತಿ ಬಿಟ್ಟಹಾಗೇ ದಪ್ಪದ ಕೋಲನ್ನು ಸ್ವಲ್ಪ ಎತ್ತಿ ಪಕ್ಕಕ್ಕೆ ಬಿಡುತ್ತಿದ್ದ. ಅಲ್ಲಿಂದ ಮತ್ತೆ ಮುಂದೆ ಹಾಡುತ್ತಿತ್ತು. ನಮಗೆಲ್ಲಾ ಮೈಕಣ್ಣನನ್ನೂ ಅವನ ಪೆಟ್ಟಿಗೆಯನ್ನೂ ಹೊರಗೆ ಮರಕ್ಕೋ ಎತ್ತರದ ಕಂಬಕ್ಕೋ ಕಟ್ಟುವ ಕಹಳೆಯಾಕಾರದ್ದನ್ನೂ ನೋಡುವುದೇ ಒಂದು ಹಬ್ಬ! ಅದು ಗ್ರಾಮೊಫೋನ್ ಎನ್ನುವುದು ನಮಗಂದಿಗೆ ತಿಳಿದಿರಲಿಲ್ಲ. ಆತನ ಹತ್ತಿರ ಹಲವಾರುದೋಸೆಗಳಿರುತ್ತಿದ್ದವು. ದೇವಸ್ಥಾನಗಳಿಗೆ ಬಂದರೆ ಭಕ್ತಿ ಗೀತೆ ಹಾಡುವ ದೋಸೆಮಾತ್ರ ಹಾಕುತ್ತಿದ್ದ. ಊರಲ್ಲಿ ನಾಟಕಕ್ಕೆ ಬಂದರೆ ಅದಕ್ಕೇ ಬೇರೆ ಸಿನಿಮಾ ಹಾಡುಗಳು. ’ನಾ ಬಿಡಲಾರೆ ಎಂದೂ ನಿನ್ನಾ...ನೀನಾದೆ ನನ್ನಾ ಪ್ರಾಣಾ.....’ ತರದ್ದು. ’ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯಾ.....’ ಹಾಡು ಎಲ್ಲರ ಅಚ್ಚುಮೆಚ್ಚಿನದು. ಅದರ ಅರ್ಥ ಅಷ್ಟೆಲ್ಲಾ ತಿಳಿದಿರಲಿಲ್ಲ, ಆದರೆ ದೊಡ್ಡವರೆಲ್ಲಾ ಇಷ್ಟಪಡುತ್ತಾರಲ್ಲ ಅಂತ ನಾವೂ ಇಷ್ಟಪಡುತ್ತಿದ್ದೆವು!


ಮೈಕಣ್ಣನ ಮೈಕಿನಲ್ಲಿ ಕುಳಿತು ಹಾಡಿದರೆ ಊರಿಗೆಲ್ಲಾ ಕೇಳುತ್ತದೆ ಎಂಬುದು ನಮಗೆ ತಿಳಿದುಬಿಟ್ಟಿತ್ತು. ಹಾಗಾಗಿ ಒಂದು ಅವಕಾಶ ಎಲ್ಲಾದರೂ ಸಿಗುವುದೆಂದರೆ ನಮಗೆ ನಿಧಿಸಿಕ್ಕಿದಷ್ಟು ಖುಷಿ! ಭಜನಾಮಂಡಳಿಯಲ್ಲಿ ಉಸ್ತುವಾರಿ ನೊಡುಕೊಳ್ಳುತ್ತಿದ್ದ ಬಾಳಣ್ಣ ಎಲ್ಲಾದರೂ ಮನಸ್ಸಿದ್ದರೆ ಅವಕಾಶ ಮಾಡಿಕೊಡುತ್ತಿದ್ದ. ಅವಕಾಶಕ್ಕಾಗಿ ಆತನ ಪಕ್ಕದಲ್ಲೇ ಕೂತು ಮರ್ಜಿಗಾಗಿ ಆಗಾಗ ಆತನ ಮುಖ ನೋಡುತ್ತಾ ಎಲ್ಲರ ಜೊತೆ ಭಜನೆ ಹೇಳುವುದು ನಮ್ಮ ಕೆಲಸ. ಅಲ್ಲಿಕೆಲವರು ದೇವರ ಮೇಲಿನ ಭಕ್ತಿಗಿಂತ ಮೈಕಣ್ಣನ ಮೈಕಿನಲ್ಲಿ ಹಾಡಲಾಗುತ್ತದೆಂದೇ ಬರುತ್ತಿದ್ದರು. ಎಂದೂ ಬಾರದ ಅವರ ಸವಾರಿ ಅಂದು ಮಾತ್ರ ತಪ್ಪದೇ ಹಾಜರಾಗುತ್ತಿತ್ತು. ಬಾಳಣ್ಣನಿಗೆ ಮನಸ್ಸಿಲ್ಲದಿದ್ದರೆ ಆತ ಹಾಲು ಹಿಂಡಲು ಹೋದಾಗ ಒದೆಯುವ ಆಕಳಿನಂತೇ ತನ್ನ ಕಣ್ಣುಬೇಳೆ ತಿರುಗಿಸಿಒದ್ದ ಹಾಗೇಮಾಡಿಬಿಟ್ಟರೆ ಮತ್ತೆ ಗಂಟೆಗಟ್ಟಲೆ ಆತನ ಮುಖ ನೋಡಲೇ ಹೆದರಿಕೆಯಾಗುತ್ತಿತ್ತು. ಹೆದರಿಕೆಯಲ್ಲೂ ಇನ್ನೇನೂ ಆಗದಲ್ಲ ಎಂಬ ಸಮಾಧಾನದ ನಡುವೆ ಎಲ್ಲಾದರೂ ಅವಕಾಶ ಕೊಟ್ಟಾನು ಎಂಬ ಸಣ್ಣ ಆಸೆಯೊಂದು ಅಲ್ಲೇ ತಡೆದು ಕೂರುವಂತೇ ಮಾಡುತ್ತಿತ್ತು. ದೊಡ್ಡವರು ಹಾಡಿ ದಣಿದ ಮೇಲೆ ಜನರ ಕೊರತೆ ಬಿದ್ದರೆ ಆಗಮಾತ್ರ ಮಕ್ಕಳ ಸರದಿ ಬರುತ್ತಿತ್ತು! ಅದು ತುಂಬಾ ಅಪರೂಪ ಅನ್ನಿ. ಮೈಕಿನಲ್ಲಿ ದನಿ ತೂರಿಸಲಷ್ಟೇ ಬಂದ ಅಪರೂಪದ ಜನರಿಗೆ ಭಜನೆಗಳು ಮರೆತುಹೋಗಿರುತ್ತಿದ್ದವು. ಅವರು ಹಾಡಿ ತಾನೂ ಹಾಡಿದ್ದೇನೆ ಎಂದು ಊರಿಗೆಲ್ಲ ಕೇಳಿಸುವ ಚಟದ ನಡುವೆ ಹಾಡುತ್ತಿರುವ ಭಜನೆ ತಾಳತಪ್ಪಿದ್ದಾಗ ಹೂತ ರಥವನು ಕರ್ಣ ಎತ್ತುತ್ತಿರುವಂತೇ ಅವರಿವರು ನೆನಪಿಸಿಕೊಟ್ಟಾರೂ ಎಂದು ಕಾಯುತ್ತ ಹಾಡಿದ್ದನ್ನೇ ಹಾಡುತ್ತ ಆತಂಕದಲ್ಲಿದ್ದರೆ ಉಳಿದಕೆಲವರು ಅವರನ್ನು ನೋಡಿ ಮುಸಿಮುಸಿ ನಗುತ್ತಿದ್ದರು.

ಭಜನೆ ಕಾರ್ಯಕ್ರಮಗಳಿರುವಾಗ ಗಂಟೆಗೊಂದಾವರ್ತಿ ದೇವರಿಗೆ ಆರತಿ ನಡೆಯುತ್ತಿತ್ತು. ಊರವರು ಅವರಿವರು ಅಂತಹೇಳಿ ಹಣ್ಣು-ಕಾಯಿ, ನೈವೇದ್ಯಕ್ಕೆ ಪಂಚಕಜ್ಜಾಯ, ಎಳ್ಳುಂಡೆ, ಹುಳಿಅವಲಕ್ಕಿ, ಕೋಸಂಬರಿ, ಕಡ್ಲೆ ಉಸುಳಿ ಮುಂತಾದ ಹತ್ತಾರು ಬಗೆಯ ಪನವಾರಗಳನ್ನು ತರುತ್ತಿದ್ದರು. ಊರಿಗೆ ಬಂದ ನಾರಿ ನೀರಿಗೆ ಬರದೇ ಹೋಗುತ್ತಾಳೆಯೇ ಎಂಬ ಹಳೆಯ ಗಾದೆಯಂತೇ ದೇವರಿಗೆ ಬಂದ ಪನವಾರ ಭಜನೆಗೆ ಕೂತಭಕ್ತಾದಿಗಳಿಗೂ ಪ್ರಸಾದ ರೂಪವಾಗಿ ಸ್ವಲ್ಪ ಸ್ವಲ್ಪ ಸಿಗುತ್ತಿತ್ತು! ರಾತ್ರಿ ಘಂಟೆಗೆ ದೀಪೋತ್ಸವವಿರುತ್ತಿತ್ತು.ಆಗೊಮ್ಮೆ ಮಹಾಮಂಗಲಾರತಿಗೆ ಊರಬಹುತೇಕರು ಕೊನೇಪಕ್ಷ ಮನೆಗೊಬ್ಬರಂತೇ ಬರುತ್ತಿದ್ದರು. ಅದಾದ ಮೇಲೆ ಮತ್ತೆ ರಾತ್ರಿ ಹನ್ನೆರಡು ಗಂಟೆಗೆ ಮಂಗಲಾರತಿ ಮಾಡುತ್ತಿದ್ದರು. ಮನೆಯವರು ದೀಪೋತ್ಸವ ಮುಗಿದ ಮೇಲೆ ನಮ್ಮನ್ನೆಲ್ಲಾ ಮನೆಗೆ ಹೊರಡುವಂತೇ ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದರು. ನಾವೆಲ್ಲಾ ಸಣ್ಣವರಲ್ಲವೇ-ನಿದ್ದೆ ಇಲ್ಲದೇ ಇರಲಾಗುತ್ತಿರಲಿಲ್ಲ. ಆಮೇಲೆ ಬೆಳಗಿನವರೆಗೆ ಏನೇನು ವಿಶೇಷವಿರುತ್ತದೆ ಎಂದು ನಾವು ಯಾರನ್ನಾದರೂ ಕೇಳುತ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಯ ಆರತಿ ಮುಗಿದ ಸ್ವಲ್ಪ ಹೊತ್ತಿನ ಮೇಲೆ ಭಜನೆಯವರಿಗೆಚಾ ಪಾರ್ಟಿಇರುತ್ತದೆ ಮತ್ತೆ ಇನ್ನೊಮ್ಮೆ ಬೆಳಗಿನ ಜಾವ -೫ಗಂಟೆಗೆ ಇರುತ್ತದೆ ಎಂದು ಯಾರೋ ಹೇಳಿದ್ದರು.

ಮಕ್ಕಳಿಗೆ ಕುತೂಹಲ ಶುರುವಾದರೆ ಅದು ತಣಿಯುವವರೆಗೂ ಅವಿರತವಾಗಿ ಅವರು ಅದನ್ನು ತಿಳಿಯಲು ಪ್ರಯತ್ನಿಸುತ್ತಾರಲ್ಲವೇ ಹಾಗೇ ಒಮ್ಮೆ ನಾನೂ ಮತ್ತು ಇನ್ನೊಬ್ಬ ಪಕ್ಕದ ಮನೆಯ ಹುಡುಗನೂ ರಾತ್ರಿಯೆಲ್ಲಾ ಭಜನೆ ಮಾಡುವುದಾಗಿ ಕುಳಿತುಕೊಂಡೆವು. ದೀಪೋತ್ಸವ ಆದ ಮೇಲೆ ಮನೆಗೆ ತೆರಳಿ ಊಟಮುಗಿಸಿ ಮರಳಿಬಂದೆವು. ತಲೆಗೆ ಸುತ್ತಿಕೊಳ್ಳಲು ಕೇವಲ ಒಂದು ಉಣ್ಣೆಯಮಫ್ಲರ್ಎನ್ನುವ ಸಣ್ಣ ಬಟ್ಟೆಯನ್ನು ಬಿಟ್ಟರೆ ಬೇರೆ ಶಾಲು ಅಥವಾ ಬೇಡ್ ಶೀಟ್ ಎಲ್ಲಾ ತಂದಿರಲಿಲ್ಲ. ರಾತ್ರಿ ಹನ್ನೊಂದು ಆಗಿರಬಹುದು. ಆಗ್ಲೇ ಚಳಿಯಾಗಲಿಕ್ಕೆ ಶುರುವಾಯಿತು. ಕುಳಿತಲ್ಲೇ ಭಜನೆ ಹೇಳುತ್ತ ಕಣ್ಣಿಗೆ ಆಗಾಗ ಜೋಂಪು ಹತ್ತಿ ತೂಗುತ್ತಿದ್ದೆವು, ಪಕ್ಕದಲ್ಲಿ ಕುಳಿತವರಿಗೆ ತಾಗಿದ ತಕ್ಷಣ ಎಲ್ಲೂ ಏನೂ ತೊಂದರೆಯಾಗಿಲ್ಲಾ ಎಂಬುದನ್ನು ಗಟ್ಟಿಮಾಡಿಕೊಂಡವರೇ ಭಜನೆಯ ಒಂದೆರಡು ಸೊಲ್ಲುಗಳನ್ನು ಜೋರಾಗಿ ಹಾಡಿ ಮತ್ತೆ ಮತ್ತದೇ ಸ್ಥಿತಿ! ಅಂತೂ ರಾತ್ರಿ ೧೨ ಮಂಗಲಾರತಿಯಾಯ್ತು. ನಮ್ಮ ಕಣ್ಣೆಲ್ಲಾ ಚಾ ಪಾರ್ಟಿಗಾಗಿ ಕಾದಿತ್ತು. ಮನೆಗಳಲ್ಲಾದರೆ ಅದು ಬೇರೆ ವಿಷಯ. ಹಳ್ಳಿಯ ದೇವಸ್ಥಾನಗಳಲ್ಲಿ ಯಾವುದೇ ಅಡಿಗೆಯ ವ್ಯವಸ್ಥೆ ಇರದ ಕಾಲದಲ್ಲಿ ಅದು ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಎಂಬುದರ ಜೊತೆಗೆ ಅದನ್ನು ಅನುಭವಿಸುವುದೇ ರುಚಿಯಾಗಿ ಪರಿಣಮಿಸಿತ್ತು. ಊರವರು ಭಜನೆಮಂಗಲದ ದಿನವೆರಡಕ್ಕೆ ಎಲ್ಲರೂ ತನು-ಮನ-ಧನಗಳ ಜೊತೆಗೆ ದಿನಸಿ, ಹಾಲು,ಬಾಳೆಹಣ್ಣು,ಬಾಳೆಲೆ ಹಲವಾರು ಸಾಮಗ್ರಿಗಳನ್ನು ಕೊಡುತ್ತಿದ್ದರು. ದೇವಸ್ಥಾನದ ಸ್ಥಾಯೀ ಸಮಿತಿ[ವಿಶ್ವಸ್ಥ ಸಮಿತಿ] ಇದರ ಲೆಕ್ಕಾಚಾರಗಳು ಹಾಗೂ ವ್ಯವಸ್ಥೆಗೆ ಬೇಕಾಗುವ ಪಾತ್ರೆ-ಪಗಡೆ ಎಲ್ಲವನ್ನೂ ಒಟ್ಟುಗೂಡಿಸುತ್ತಿತ್ತು.

ಅಂತೂ ಬಹು ನಿರೀಕ್ಷಿತ ಚಾ ಪಾರ್ಟಿ ಬಂದೇ ಬಿಟ್ಟಿತು. ದೇವಸ್ಥಾನದ ಚಂದ್ರಶಾಲೆಯಲ್ಲಿ [ಪಕ್ಕದ ಹೊರಾವರಣದಲ್ಲಿರುವ ಚಂದ್ರಾಕಾರದ ಕಟ್ಟಡ.] ಕಟ್ಟಿಗೆಯ ಒಲೆ ಉರಿಯತೊಡಗಿತ್ತು. ನಾಣಣ್ಣ[ನಾರಯಣ] ಮತ್ತು ಸೀತಣ್ಣ[ಸೀತಾರಾಮ]ಇಬ್ಬರು ಚಾ ಮಾಡುತ್ತಿದ್ದರು. " ಚಾ ರೆಡಿ"ಅಂತ ಕರೆಬಂದ ತಕ್ಷಣ ಭಜನೆ ಮಾಡುವವರಲ್ಲಿ ಕೆಲವರು ಚಾ ಪಾರ್ಟಿಗೆ ಕುಳಿತುಕೊಳ್ಳಲು ತಯಾರಾದರು. ಭಜನೆ ಮಾಡುವುದಕ್ಕೆ ಪರವೂರಕಲಾವಿದರೂಬರುತ್ತಿದ್ದರು. ಅವರಿಗೆ ತಮ್ಮ ಕಂಠಸಿರಿಯನ್ನು ನಮ್ಮೂರ ಜನರಿಗೆ ತೋರಿಸಿಕೊಳ್ಳುವ ಹೆಚ್ಚುಗಾರಿಕೆಯಿರುತ್ತಿತ್ತು. ಅದರಲ್ಲೂ ಮದುವೆಗೆ ಬೆಳೆದ ವಯಸ್ಸಿನ ಹುಡುಗರ ಸಂಖ್ಯೆ ಜಾಸ್ತಿ. ತಾನು ಚೆನ್ನಾಗಿ ಹಾಡುವುದನ್ನು ನೋಡಿ ಯಾರಾದರೂ ಹುಡುಗಿಯರೋ ಅವರ ಅಪ್ಪಂದಿರೋ ತಮ್ಮನ್ನು ಮಾತನಾಡಿಸಿ ಸಂಬಂಧ ಕುದುರಬಹುದೇನೋ ಎಂಬ ಅನಿಸಿಕೆ ಅವರದಾಗಿತ್ತು! ಅಪರೂಪಕ್ಕೊಮ್ಮೆ ಹಾಗೇ ನೋಡಿ ಕಣ್ಣಿಟ್ಟು ಹುಡುಗರಿಗೆ ತಮ್ಮ ಮಕ್ಕಳ ಜಾತಕಗಳನ್ನು ತಲ್ಪಿಸುವ ಕನ್ಯಾಪಿತೃಗಳೂ ಇದ್ದರು ಎಂಬುದು ನಮಗೆ ಆವಾಗ ತಿಳಿಯುತ್ತಿರಲಿಲ್ಲ. ಅಂತಹ ಕಲಾವಿದರಿಗೆ ಚಾ ಪಾರ್ಟಿಯಲ್ಲಿ ಮೊದಲ ಆದ್ಯತೆ. ನಮ್ಮ ಸರದಿ ಬಂದಾಗಲೇ ತಿಳಿದಿದ್ದು ಹಾಲು ಕಮ್ಮಿಹಾಕಿರುವ ಕೆಂಪನೆಯ ಖಡಕ್ ಚಾ ಜೊತೆಗೆ ಒಂದೊಂದು ಕೊಬ್ಬರಿ ಮಿಠಾಯಿ, ಕಲಸಿದ ತೆಳುಅವಲಕ್ಕಿ[ ಕೆಂಪಕ್ಕಿಯ ರುಚಿಯಾದ ಊರ ಮಿಲ್ಲಿನಲ್ಲೇ ಮಾಡಿಸಿದ ಪೇಪರ್ ಅವಲಕ್ಕಿಗೆ ಕಾಯಿತುರಿ,ಬೆಲ್ಲ, ಮೆಣಸು, ಸಾಂಬಾರ್ ಪುಡಿ ಹಾಕಿ ಕಲಸುತ್ತಿದ್ದರು]. ರಾತ್ರಿ ಅದೂ ದೇವಸ್ಥಾನಗಳಲ್ಲಿ ಇನ್ನೇನು ಮಾಡಲು ಸಾಧ್ಯ ಬಿಡಿ. ಇಲ್ಲಿ ಚಾ ಪಾರ್ಟಿಯಲ್ಲಿ ಸಿಗುವ ಪದಾರ್ಥಗಳಿಗಿಂತ ಚಾ ಪಾರ್ಟಿಯಲ್ಲಿ ಕುಳಿತು ದೇವಸ್ಥಾನದಲ್ಲಿ ಪಡೆದ ಆತಿಥ್ಯವೇ ಒಂಥರಾ ಥ್ರಿಲ್ಲಿಂಗ್ ಆಗಿರುತ್ತಿತ್ತು. ನಮ್ಮೂರಿಗೆ ಕಲಾವಿದರು ಬಂದಂತೇ ನಮ್ಮೂರ ಹುಡುಗಕಲಾವಿದರುಪಕ್ಕದ ಊರುಗಳಿಗೆ ಅಲ್ಲಿನ ಭಜನೆ ಮಂಗಲ ಕಾರ್ಯಕ್ಕೆ ಹೋಗುವುದಿತ್ತು. ಇದು ಒಂದು ರೀತಿ ಸೌಹಾರ್ದಕ್ಕೆ, ಸಂಬಂಧಕ್ಕೆ ಅನುಕೂಲವೂ ಆಗಿತ್ತು. ’ಭಾವೀ ಮಾವಂದಿರಮುಂದೆ ಹಾಡುವ ಕಲೆಗಾರಿಕೆ ಹುಡುಗರನ್ನು ಅಲ್ಲಲ್ಲೇ ಪುಳಕಗೊಳಿಸುತ್ತಿತ್ತು. ಇನ್ನು ಅಪ್ಪಿ ತಪ್ಪಿ ಮದುವೆಗೆ ಬೆಳೆದು ನಿಂತ ಹುಡುಗಿಯರೂ ಆಗಾಗ ಕಂಡರೆ[ಯಾಕೆಂದರೆ ಕಲಾವಿದರು ಹಗಲು ಹೊತ್ತಿನಲ್ಲೂ ಇರುತ್ತಿದ್ದರು] ಭಜನೆಯ ಗತಿಯೇ ಬದಲಾಗುತ್ತಿತ್ತೇನೋ ನಮಗದು ಅರಿವಿಲ್ಲ!

ಬರುಬರುತ್ತ ಮೈಕಾಸುರನ ಬಾಡಿಗೆ ಕಮ್ಮಿಯಾಯ್ತು. ಬಾಡಿಗೆ ಮೈಕಣ್ಣಗಳ ಸಂಖ್ಯೆ ಜಾಸ್ತಿಯಾಯ್ತು. ಹೀಗಾಗಿ ಊರಲ್ಲಿ ಮದುವೆ-ಮುಂಜಿ ಥರದ ಏನೇ ಕಾರ್ಯಕ್ರಮಗಳಿದ್ದರೂ ಮೊದಲಾಗಿ ಹಾಕುವುದು ಮೈಕು. ಮೈಕಿನ ಅವಾಂತರ ತಾಳಲಾರದೇಮೈಕಾಸುರನೆಂಬ ಬಿರುದನ್ನು ಮೈಕಿಗೆ ನೀಡಲಾಗಿತ್ತು. ಅಲ್ಲೂ ಅಷ್ಟೇ ಹೆಂಗಸರು-ಮಕ್ಕಳು ನಾ ಮುಂದು ತಾಮುಂದು ಎಂದು ಹಾಡಲು ತರಾತುರಿಯಲ್ಲಿ ನಿಂತಿರುತ್ತಿದ್ದರು. ನಮ್ಮಂತಹ ಗಂಡುಮಕ್ಕಳೂ ಹಿಂದೇನೂ ಇರಲಿಲ್ಲ. ಆದರೆ ಮೈಕ್ ಹಿಡಿದ ಹೆಂಗಸರ ದಂಡಿನ ನಡುವೆ ನಮಗೆ ಬಹಳ ಮುಜುಗರವಾಗುತ್ತಿತ್ತು-ಹೀಗಾಗಿ ಒತ್ತರಿಸಿ ಬರುವ ಒತ್ತಾಸೆಯನ್ನು ಅಲ್ಲೇ ಒತ್ತಿಟ್ಟು ತಾನಾಗೇ ಸಿಕ್ಕರೆ ಮಾತ್ರ ಹಾಡುತ್ತಿದ್ದೆವು. ಯಾರಾದರೂ ಊರವರು " ನಿನ್ನ ಹಾಡು ಕೇಳಿದೆ ಮಾರಾಯ, ಚಲೋ ಇತ್ತು " ಎಂದುಬಿಟ್ಟರೆ ಪಿ.ಬಿ.ಶ್ರೀನಿವಾಸರಿಗೆ ಪ್ರಶಸ್ತಿ ಕೊಟ್ಟರೂ ಸಿಗದಂತಹ ಗೌರವ ನಮ್ಮೊಳಗೇ ನಮಗೆ ದಕ್ಕುತ್ತಿತ್ತು. ಅದರಲ್ಲಂತೂ ಆಚೀಚೆಯ ಮನೆಯವರು ನಮ್ಮನೆಗೆ ಬಂದು " ಇಂವ ಚಲೋ ಹಾಡ್ತ ಮಾರಾಯ " ಅಂತ ಹೇಳಿ ಒಂದು ಚಾ ಕುಡಿದು ಹೋಗಿಬಿಟ್ಟರೆ ಇನ್ನೆಲ್ಲಾದರೂ ಅವರನ್ನು ಮತ್ತೆ ನೋಡಿದಾಗ ನಾಚಿಕೆಯೋ ಅವರಮೇಲೆ ಗೌರವವೋ ಏನೋ ಸಾಧಿಸಿದೆನೆಂಬ ಹೆಗ್ಗಳಿಕೆಯ ಭಾವವೋ ಅಂತೂ ಮನಸ್ಸಿನ ಮೂಲೆಯಲ್ಲಿ ಹೇಳಲಾಗದ ವಿಶೇಷ ಭವನಾಲಹರಿಯೇ ಚಿಮ್ಮಿ ಹರಿಯುತ್ತಿತ್ತು!

ಮದುವೆಗಳಲ್ಲೂ ನಮ್ಮಲ್ಲಿ ಚಾ ಪಾರ್ಟಿಗಳಿರುತ್ತಿದ್ದವು. ಬೆಳಗಿನ ೧೧ ಗಂಟೆಯ ಒಳಗೆ ಬಂದವರಿಗೆ ತಿಂಡಿ-ಚಾ ಕೊಡುವ ಪದ್ಧತಿ ಇತ್ತು. ಅದರದ್ದೇ ಒಂದು ವಿಶೇಷ ಕಥೆಯನ್ನು ಮತ್ತೊಮ್ಮೆ ನೋಡೋಣ, ಸುಮ್ಮನೇ ಓದಿದ ಹಾಗಲ್ಲ, ಮನದಲ್ಲೇ ನಕ್ಕಿ ಮಜಾತೆಗೆದುಕೊಳ್ಳುವುದಲ್ಲ, ಎಲ್ಲಾದರೂ ಚಾ ಪಾರ್ಟಿ ಇದ್ದರೆ ಹೇಳಿ, ಒಮ್ಮೆ ಸೇರಿಕುಳಿತು ಹರಟುತ್ತ ಚಾ ಕುಡಿಯೋಣ ಆಗದೇ ?

Wednesday, August 4, 2010


ಮಿತ್ರ ಓದುಗರೇ, ಇದೊಂದು ನನ್ನ ಹೊಸಮಾಲಿಕೆ 'ಸರಿಗಮಪದನಿ' . ಈಗಷ್ಟೇ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು ನೆಟ್ ನಲ್ಲೇ! ಕರೆಯಲು ಮರೆತಿದ್ದೆ, ಇರ್ಲಿ ಬಿಡಿ ಈಗ ಬನ್ನಿ ಓದಿ- ಇದರಲ್ಲಿ ನಿಮ್ಮೊಂದಿಗೆ ಕಂಗ್ಲಿಷ್ ಹಾಗೂ ಕೆಲವು ಧ್ವನಿ ವಾಹಿನಿ ಮತ್ತು ವೀಡಿಯೋಗಳನ್ನು ಕೊಡುವ ಪ್ರಯತ್ನ, ಮೊಟ್ಟಮೊದಲಾಗಿ ಇಂದು ಕಂಗ್ಲಿಷ್ ಕವನ. ಇದು ಪಕ್ಕಾ ಭಾವಗೀತೆಯಲ್ಲ, ಆದರೆ ಸ್ವಲ್ಪ ಹಾಸ್ಯ, ಸ್ವಲ್ಪ ನೋವು, ಸ್ವಲ್ಪ ನಲಿವು, ಸ್ವಲ್ಪ ತುರಿಕೆ ಹೀಗೇ ಎಲ್ಲವುಗಳ ಮಿಶ್ರಣದ ಮಿಸಳ್ ಭಾಜಿ ಈ ಮಾಲಿಕೆ. ಅನಿಸಿದ್ದನ್ನು ಯಾವ ಭಿಡೆಯವೂ ಇಲ್ಲದೇ ಹಾಗಿಂದ ಹಾಗೇ ಪ್ರಸ್ತುತ ಪಡಿಸುವ ಮಾಲಿಕೆ ಇದು.

ಇದರಲ್ಲಿ ಸ್ವಾನುಭವ, ಸ್ನೇಹಿತಾನುಭವ, ಪರಕಾಯಪ್ರವೇಶ, ಛೂ-ಮಂತರ್ ಇಂದ್ರಜಾಲ, ಕಷ್ಟಾನಿಷ್ಟ, ಸರಸ-ವಿರಸ-ಸಮರಸ, ಹಬ್ಬದ ಕಾಯಿ ಹೋಳಿಗೆ, ಅಬ್ಬರಿಸಿದ ಯಜಮಾನ, ಹಳಸಿದ ಹುಳಿಯನ್ನ, ಮುಗ್ಗಿದ ಬಟ್ಟೆ, ಒದ್ದೆ ತಲೆ, ಘಾಟಿನ ಒಗ್ಗರಣೆ, ಬ್ರಹ್ಮಾಂಡದಂತ ಹೊಟ್ಟೆ, ಅಂಬೊಡೆ-ಪತ್ರೊಡೆ-ಚಿತ್ರಾನ್ನ, ಗಜಕೇಸರಿ ಯೋಗದ ಜ್ಯೋತಿಷ್ಯ, ಪರರಗಂಟಿಗೇನಪಾಯ, ಸಪ್ತ ಸಮುದ್ರಗಳ ಮೇರೆ ಮೀರಿ, ಅಧಿಕ ಪ್ರಸಂಗ-ಅತ್ಯಧಿಕ ಪ್ರಸಂಗ, ಹಾರ್ಮೋನು-ಹಾರ್ಮೋನಿಯಮ್ಮು-ಇಂಬ್ಯಾಲೆನ್ಸು-ಮೊಬೈಲ್ ನಲ್ಲಿ ನೋ ಬ್ಯಾಲೆನ್ಸು ! ಇತ್ಯಾದಿ ಹಲವು ಹತ್ತು ಅನಿಸಿಕೆಗಳನ್ನೆಲ್ಲ ಮಧ್ಯೆ ಮಧ್ಯೆ ಒಂಚೂರು ಅದೂ ಇದೂ ಅಂತ ಕೊಡಲು ಉದ್ಯುಕ್ತನಾಗಿದ್ದೇನೆ. ಸ್ವಾಗಿತಿಸುವಿರಲ್ಲವೇ ? ಹೌದಾದರೆ ಓದಿ ಇಂದಿನ ಕವನ--ನಮಸ್ಕಾರ



ಚಿತ್ರಗಳ ಋಣ : ಅಂತರ್ಜಾಲ

ಮನದ ಹರತಾಳ


ಏಕೋ ಮುನಿಸಿದೆ ಈ ಮನವಿಂದು
ಬಿಕೋ ಎನ್ನುವುದು ಬರೆಯದ ಬದಕೊಂದು
ತಕೋ ಲೆಕ್ಕಣಿಕೆಯ ಕೈಯ್ಯೊಳಗೆ
ನಕೋ ಎನ್ನದಿರು ಈ ಘಳಿಗೆ !

ಯಾಕಾದರೂ ಈ ದಿನ ಬಂತು
ಬೇಕಾಗಿತ್ತೇ ಬಡಪಾಯ್ಗೆ ?
ನಾಕಾದರೂ ಊಟವೇ ಇಲ್ಲ
ಸಾಕಾಯಿತು ತುಸು ತೆರಪಿಲ್ಲ !

ಬೆಳಗೆದ್ದು ದೇವರ ನೆನೆದೆ
ಒಳಗಡೆಗೆ ಬಿಸಿ ಚಾ ಕುಡಿದೆ
ಕಳುವಾಗಿದೆ ಎನ್ನುವ ಫೋನು !
ತಳಮಳಿಸದೆ ತಿರುಗಿದೆ ಫ್ಯಾನು

ಸಂಪಾದಕ ಕರೆಯನು ಮಾಡಿ
ಸೊಂಪಾಗಿದೆ ಕವನವದೆಂದ
ತಂಪಾದ ಗಾಳಿಯದಷ್ಟೇ
ಕೆಂಪಾಯ್ತು ಕಾಸಿಗೆ ಕಣ್ಣು !

ಬೈಟೂ ಕಾಫಿಯ ವ್ಯವಹಾರ
ಸೈಟಿಲ್ಲದ ಮನೆ ವ್ಯಾಪಾರ !
ಹೈಟಾಗಿದೆ ನೋಡುವುದಕ್ಕೆ
ಕೈಕಟ್ಟಿದೆ ಖರ್ಚಿಗದಕ್ಕೆ

Tuesday, August 3, 2010

ಅಜ್ಞಾನ


ಚಿತ್ರ ಕೃಪೆ : ಅಂತರ್ಜಾಲ

ಅಜ್ಞಾನ

ಕನ್ನಡಿಯ ಪಕ್ಕದಿ ಕೂತು
ಗುಬ್ಬಚ್ಚಿ ಬಿಂಬಕೆ ಸೋತು
ಕುಕ್ಕುತ್ತ ಕೊಕ್ಕದು ನೋವು
ಗೊತ್ತಿಲ್ಲದೆ ಮನಕದು ಕಾವು !

ನಿನ್ನಿರುವಿಕೆ ಬ್ರಹ್ಮಾಂಡದಲಿ
ನೋಡುತ ನಾವ್ ಬೇರೆನುತಿರಲು
ಕಾಣೆವು ಅದ್ವೈತವನಲ್ಲಿ
ಕನಸದು ಅರ್ಥೈಸುವುದೆಲ್ಲಿ ?

ಬೆಳಗಾಗೆ ಸೂರ್ಯನು ಬರುವ
ಇರುಳಾಗೆ ಚಂದಿರನಿರುವ
ಈ ಲಾಂದ್ರಗಳೊಳಗಡೆಯಲ್ಲಿ
ಏನಿಹುದದು ತಿಳಿಯದು ಇಲ್ಲಿ !

ಹಿಮಪಾತವು ಒಂದೆಡೆಯಲ್ಲಿ
ಶರಧಿಗಳವು ಬೇರೆಡೆಯಲ್ಲಿ
ಕರವೀರ ಜಾಜಿ ಪುನ್ನಾಗ
ಮರೆವೆವು ನೀನಿತ್ತ ವೈಭೋಗ !

ಇರುವೆಯಿಂದ ಎಂಬತ್ತು ಕೋಟಿ
ಹರಿವು ದೊಡ್ಡ ಇರುವುದೆ ಸಾಟಿ ?
ಬರಗಾಲವು ಕೆಲಭಾಗದಲಿ
ಅನುಗಾಲವು ಚಿಂತಿಪುದಿಲ್ಲಿ !

Monday, August 2, 2010

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ಮಾನವೀಯ ಸಂಬಂಧಗಳು ಹಣದ ಝಣತ್ಕಾರದಲ್ಲಿ ತನ್ನತನ ಕಳೆದುಕೊಂಡಿರುವ ಈ ಕಾಲದಲ್ಲೂ ನಮಗೆ ಅಷ್ಟಿಷ್ಟು ಪ್ರತಿಶತ ಜನ ಇನ್ನೂ ’ಮನುಷ್ಯ’ರಾಗಿರುವುದು ಕಂಡುಬರುತ್ತದೆ. ಹಿಂದಿನ ನನ್ನ ಲೇಖನದಲ್ಲಿ ಅದಕ್ಕಾಗಿಯೇ ಹೇಳಿದ್ದು- ಎಲ್ಲರೂ ಒಂದೇ ಥರ ಇರುವುದಿಲ್ಲ ಎಂದು - ಇದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಕೂಡ.

ಗಂಡಸರಲ್ಲೂ ’ಹೃದಯ ಇರುವವರು’ ಇದ್ದಾರೆ. ಅವರ ಅಂತಃಕರಣ ಹೆಣ್ಣಿನ ಅಳಲನ್ನು ಅರ್ಥಮಾಡಿಕೊಳ್ಳುತ್ತದೆ. ಹಿಂದಿನ ಹಲವು ಕವಿಗಳು ತಮ್ಮ ಬದುಕಿನುದ್ದಕ್ಕೂ ತಾವು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಹೆಂಡತಿ-ಮಕ್ಕಳಿಗೆ ಮಾತ್ರ ಅದರ ಬಿಸಿ ಬಹಳ ತಟ್ಟದಂತೆ ನೋಡಿಕೊಂಡಿದ್ದರು. ಈ ವಿಷಯವನ್ನು ನಾನು ’ಮೈಸೂರು ಮಲ್ಲಿಗೆಯ’ ಪರಿಮಳವನ್ನು ಹಬ್ಬಿಸಿದ ದಿ|ಶ್ರೀ ಕೆ.ಎಸ್.ನರಸಿಂಹ ಸ್ವಾಮಿಯವರ ಮನೆಗೆ ೧೯೯೬-೯೭ರಲ್ಲಿ ಹೋದಾಗ ತಿಳಿದಿದ್ದೆ. ಅದೇ ಮುಗ್ಧ ಮುಗುಳ್ನಗು, ಅದೇ ಮಂದಹಾಸ ಆ ಮುಪ್ಪಡಿರಿದ್ದ ಮುಖದಮೇಲೆ. ಅವರ ದಾಂಪತ್ಯ ಬಹಳ ಉತ್ಕೃಷ್ಟ ಉದಾಹರಣೆ ಎನ್ನಬಹುದು. ಗಂಡನ ಬಡತನವನ್ನು ಯಾವುದೇ ಒತ್ತಡವಿಲ್ಲದೇ ತನ್ನದೆಂದು ಒಪ್ಪಿಕೊಂಡು, ಅವರ ಸಾದಾ ಸೀದಾ ಬಾಳನ್ನೇ ಅಪ್ಪಿಕೊಂಡು ಬದುಕಿದವರು ಅವರ ಪತ್ನಿ ಸಾಧ್ವಿಮಣಿ ದಿ| ಶ್ರೀಮತಿ ವೆಂಕಮ್ಮನವರು. ನಾನವರ ಮನೆಗೆ ಹೋದಾಗ ಕವಿಗಳು ಸಾಯಂಕಾಲ ಹೊರಗಡೆ ಬೆತ್ತದ ಖುರ್ಚಿಯಲ್ಲಿ ಕುಳಿತು ಹೊರನೋಟ ಬೀರಿದ್ದರು. ಪತ್ನಿಯನ್ನು ಅವರು ಕರೆಯುವುದಕ್ಕಿಂತ ಮುಂಚೆಯೇ ಅವರೇ ಬಂದು ನನ್ನನ್ನು ಮಾತಾಡಿಸಿದರು. ಆಗಲೇ ನಾನು ನಮ್ಮ ಶ್ರೀ ನರಸಿಂಹಸ್ವಾಮಿಯವರು ಕಂಡ ’ಶಾರದೆ’ಯನ್ನು ಕಂಡಿದ್ದು. ಎಂತಹ ಅದ್ಬುತ ಸತ್ಕಾರ ಅಂತೀರಿ- ಬೇಡವೆಂದರೂ ಕೇಳದೇ ಅವರು ಕೈಯ್ಯಾರೆ ಮಾಡಿಕೊಟ್ಟ ಲಿಂಬೂ ಪಾನಕವನ್ನು ನನ್ನ ಜನ್ಮ ಪೂರ್ತಿ ನೆನೆಯಬೇಕು. ಮಲ್ಲಿಗೆ ಕವಿ ತನ್ನ ಕವನ ಸಂಕಲನದ ಪೂರ್ತಿ ಹಾಡುಗಳನ್ನೂ ಆಲ್ಮೋಸ್ಟ್ ತನ್ನ ಹೆಂಡತಿಯನ್ನು ನೆನೆದು-ಕಂಡು-ಪ್ರೀತಿಸಿಬರೆದಿದ್ದೆಂಬುದರಲ್ಲಿ ಸಂದೇಹವೇ ಇಲ್ಲಬಿಡಿ.

ನಮ್ಮ ಇತಿಹಾಸವನ್ನು ಕೆದಕಿದರೆ ಅಲ್ಲಿ ಪ್ರೀತಿಗಾಗಿ ಬಹಳ ಅರ್ಪಿಸಿಕೊಂಡ ಷಹಾಜಹಾನ್ ಸಿಗುತ್ತಾನೆ, ಮತ್ತೆಲ್ಲೋ ಲೈಲಾ-ಮಜ್ನೂ ಕಥೆ ಕೇಳಿಬರುತ್ತದೆ. [ಅದರಂತೇ ಕೆಟ್ಟ ಚಾಳಿಯ ಔರಂಗಜೇಬನೂ ಸಿಗುತ್ತಾನೆ!] ರಾಮಾಯಣದಲ್ಲಿ ಸೀತೆಗಾಗಿ ಇಡೀ ರಾಮಾಯಣ ವಿಸ್ತರಿಸಿರುವುದು ತಿಳಿದುಬರುತ್ತದೆ. ಇನ್ನು ಇತ್ತೀಚೆಗೆ ಸಂತ ಶ್ರೀ ರಾಮಕೃಷ್ಣ ಪರಮಹಂಸರು ಮಡದಿ ಶಾರದಾದೇವಿಯವರಲ್ಲಿ ಲೋಕಮಾತೆಯನ್ನೇ ಕಂಡು ಪೂಜಿಸಿದರು ಅಲ್ಲವೇ ? ಇದೇ ಥರದ ಹಲವು ವ್ಯಕ್ತಿಗಳು ನಮ್ಮ ನಡುವೆ ಅಲ್ಲಲ್ಲಿ ಇಂದಿಗೂ ಇದ್ದಾರೆ.

ನಾನು ನೋಡಿದ ಒಂದು ಘಟನೆ- ಮಗ ದ್ವಿತೀಯ ಪಿಯೂಸಿ ಮುಗಿಸಿ ಸಿ.ಈ.ಟಿ. ಬರೆದಿದ್ದ, ಒಳ್ಳೆಯ ರಾಂಕ್ ಪಡೆದ ಆತ ತಂದೆಯೊಟ್ಟಿಗೆ ಬೆಂಗಳೂರಿಗೆ ಕೌನ್ಸೆಲಿಂಗ್ ಗಾಗಿ ಬಂದಿದ್ದ. ಮಗನಿಗೆ ಬೇಕಾದ ತಾಂತ್ರಿಕಕಾಲೇಜು ಸಿಕ್ಕು ತಂದೆ-ಮಗ ಊರಿಗೆ ಒಮ್ಮೆ ಮರಳಿದರು. ಅಷ್ಟರಲ್ಲೇ ಮಗನಿಗೆ ಮುಂಬೈ ವಿಶ್ವವಿದ್ಯಾಲಯದ ರಾಸಾಯನಿಕ ವಿಭಾಗದಿಂದ ಆದ್ಯತೆಯ ಮೇರೆಗೆ ಸೀಟು ಕೊಡಮಾಡಲ್ಪಟ್ಟಿದೆ-ಬಂದು ಕಾಣುವುದು ಎಂಬ ಕರೆ ಬಂತು. ಲಿಖಿತ ಪತ್ರವೂ ಬಂತು. ಈ ಕಡೆ ಆತನ ತಾಯಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ದಿನೇ ದಿನೇ ಉಲ್ಬಣವಾಗುತ್ತಾ ಹೋಯಿತು. ತಂದೆಯನ್ನು ಮನೆಯಲ್ಲೇ ಬಿಟ್ಟು ತಾನೊಬ್ಬನೇ ಗೊತ್ತಿರದ ಮಹಾನಗರಕ್ಕೆ ಧೌಡಾಯಿಸಿದ. ಅಲ್ಲೇ ಸೇರಿಕೊಂಡೂ ಬಿಟ್ಟ. ಆತನ ತಾಯಿಗೆ ಹಲವು ಪರೀಕ್ಷೆಗಳಾದವು-ನಂತರ ತಿಳಿದಿದ್ದು ಲೀವರ್ ಕ್ಯಾನ್ಸರ್ ಎಂಬುದು. ಅದನ್ನು ತಿಳಿದ ನಾವೆಲ್ಲಾ ಬಹಳ ಬೇಸರಗೊಂಡೆವು. ಆಕೆಯ ಯಜಮಾನನಂತೂ ಬದುಕಿದ್ದುದೇ ದೊಡ್ಡದು! ದೇವರಮೇಲೆ ಭಾರಹಾಕಿ ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿಭಾಯಿಸುತ್ತ ಹಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ. ಕಂಡ ಕಂಡ ದೇವರಲಿ ಬೇಡಿದ,ಪ್ರಾರ್ಥಿಸಿದ-ಆದರೆ ಪಡೆದು ಬಂದಿದ್ದನ್ನು ಅನುಭವಿಸಲೇ ಬೇಕಲ್ಲ! ಐದಾರು ತಿಂಗಳಲ್ಲಿ ಶೀಕು ಅಂತಿಮ ಹಂತ ತಲ್ಪಿತು. ದಿನವೂ ಹೆಂಡತಿಗಾಗಿ ಕಣ್ಣೀರುಗರೆಯುತ್ತಿದ್ದುದನ್ನು ನಾವು ಸ್ವತಃ ನೋಡಿದ್ದೇವೆ. ಅಂತಹ ಅಸಾಧ್ಯ ನೋವುಣ್ಣುತ್ತಿದ್ದರೂ ಒಡಲಲ್ಲಿ ಬೆಂಕಿ ಹೊತ್ತುರಿಯುತ್ತಿದ್ದರೂ ಆ ತಾಯಿ ಸ್ಥಿತಪ್ರಜ್ಞಳಾಗಿದ್ದಳು. ದಿನವೂ ಹಲವು ನೋವುನಿವಾರಕ ಮಾತ್ರೆ ನುಂಗುತ್ತ ಇರುವಷ್ಟು ದಿನ ತನಗಲ್ಲ-ತನ್ನ ಕುಟುಂಬಕ್ಕಾಗಿ ಎಂದು ತೀರ್ಮಾನ ಕೈಗೊಂಡಿದ್ದಳು. ಅಂತಹ ಅಸಹನೀಯ ಸ್ಥಿತಿಯಲ್ಲೂ ಮಗನನ್ನು ಓದಿಗೆ ಹುರಿದುಂಬಿಸಿದಳು. ತಾಯ ನೆನಪು ಎಷ್ಟೇ ಕಾಡಿದರೂ ಮಗ ಹಿಂಜರಿಯಲಿಲ್ಲ. ಆತನೂ ತನ್ನ ಓದನ್ನು ಮುಂದುವರಿಸುತ್ತ ನಡೆದ.

ಬದುಕಿನ ಕೊನೆಯಘಟ್ಟದಲ್ಲೂ ಬಹಳಕಾಲ ಹೆತ್ತ ಒಬ್ಬನೇ ಮಗನನ್ನೂ ಹತ್ತಿರವಿಟ್ಟುಕೊಂಡು ಆ ಪ್ರೀತಿಯನ್ನು ಅನುಭವಿಸಲಾರದ ಸ್ಥಿತಿ ಆ ತಾಯಿಯದಾಗಿತ್ತು. ಮಗನ ಮೊದಲ್ನೇ ಸೆಮಿಸ್ಟಾರ್ ಮುಗಿಯುವ ಹೊತ್ತಿಗೆ ಆ ತಾಯಿ ಇಹಲೋಕ ತ್ಯಜಿಸಿದಳು. ಅವಳ ಯಜಮಾನಕೂಡ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋದ ಮೇಲೆ ಮನಸ್ಸನ್ನು ಗೆದ್ದಿದ್ದ! ಜೀವನ ಅಂದರೆ ಇದೇ ರೀತಿಯ ಹಲವು ಜಂಜಡಗಳು ಎಂಬುದನ್ನು ಅರ್ಥವಿಸಿದ್ದ. ಹೇಂಡತಿಯ ಉತ್ತರಕ್ರಿಯಾದಿಗಳನ್ನು ಸಮರ್ಪಕವಾಗಿ ಪೂರೈಸಿ ತನ್ನ ಮಗನ ಓದನ್ನು ಮುಂದುವರಿಸಲು ಬೇಕಾಗುವ ಎಲ್ಲಾರೀತಿಯ ಏರ್ಪಾಟು ಮಾಡಿದ. ಮಗ ಬಹುದೊಡ್ಡ ವ್ಯಕ್ತಿಯಾಗಿ ಬೆಳೆಯಲೆಂದು ಆಶಿಸಿದ ಆ ತಾಯಿಯ ಮಾತು ತಂದೆಯ ಕಿವಿಯಲ್ಲಿ ಸದಾ ಗುನುಗುನಿಸುತ್ತಿತ್ತು. ತನ್ನ ಸಕಲ ಕಷ್ಟಗಳನ್ನೂ ಮೆಟ್ಟಿನಿಂತು ಆತ ತನ್ನ ಮಗನ ಓದಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟ. ಹೆಂಡತಿಯ ಮೇಲಿನ ಪ್ರೀತಿಗಾಗಿ ಅವಳ ಆ ಬದುಕಿದ ರೀತಿಯ ನೆನೆಪಿಗಾಗಿ ಮತ್ತೆ ಬೇರೆ ಮದುವೆಯಾಗದೇ ತನ್ನ ನಡುವಯಸ್ಸಿನಿಂದ ಹಾಗೇ ಬ್ರಹ್ಮಚರ್ಯದಲ್ಲಿ ಮುನ್ನಡೆದ. ಹೆಂಡತಿಯ ಭಾವಚಿತ್ರವನ್ನು ದೊಡ್ಡದಾಗಿಸಿ ಕಟ್ಟುಹಾಕಿಸಿಟ್ಟುಕೊಂಡು ಅದಕ್ಕೆ ಜಾಜಿ-ಮಲ್ಲಿಗೆ ಥರದ ಮಾಲೆಗಳನ್ನು ಇಟ್ಟು ಆ ತಾಯಿಯ ಆತ್ಮಕ್ಕೆ ಸ್ವತಃ ಈ ಯಜಮಾನ ಕೈಮುಗಿಯುತ್ತಿರುವುದನ್ನು ನೋಡಿದ ನಾನಿನ್ನೂ ಇದ್ದೇನೆ! ಮಗ ಎಂಜಿನೀಯರ್ ಆದ. ನಂತರವೂ ಓದಿ ಒಳ್ಳೆಯ ರ‍್ಯಾಂಕ್ [RANK] ಆಯ್.ಎ.ಎಸ್. ಪಾಸುಮಾಡಿ ಇವತ್ತು ಉತ್ತಮ ಅಧಿಕಾರದಲ್ಲಿದ್ದಾನೆ, ಭಾರತೀಯ ಸರಕಾರದ ಸೇವೆಯಲ್ಲಿದ್ದಾನೆ. ಆ ಯಜಮಾನ ಬೇರಾರೂ ಅಲ್ಲ, ಸ್ವತಃ ನನ್ನ ಚಿಕ್ಕಪ್ಪ ಶ್ರೀ ಸುಬ್ರಹ್ಮಣ್ಯ ಭಟ್. ಗತಿಸಿದ ಅವರ ಹೇಂಡತಿ ದಿ|ಶ್ರೀಮತಿ ಗಾಯತ್ರಿ. ಓದುವಾಗ ಹಲದಿನ ಅವರಾಶ್ರಯದಲ್ಲಿ ನಾನಿದ್ದೆ. ನನ್ನ ಮದುವೆಯ ಸಂದರ್ಭದಲ್ಲಿ ಆ ತಾಯಿ ಹಾಸಿಗೆ ಹಿಡಿದಿದ್ದರೂ ಮದುವೆಯ ನಂತರ ನಮ್ಮನ್ನು ಕರೆಸಿಕೊಂಡು ಉಡುಗೊರೆ ಇತ್ತಾಗ ನನ್ನ ಹೃದಯ ಉಕ್ಕಿ ಬಂತು, ಅವರ ಅನಾರೋಗ್ಯ ಸ್ಥಿತಿಗೆ ಒಳಗೊಳಗೇ ಮಮ್ಮಲ ಮರುಗಿದ ವ್ಯಕ್ತಿ ನಾನು. ನನ್ನ ಕಣ್ಣಲ್ಲಿ ಸಹಜವಾಗಿ ನೀರು ಹರಿಯಿತು. ಇವತ್ತಿಗೂ ಆ ತಾಯಿಯನ್ನು ನೆನೆಸಿಕೊಳ್ಳುತ್ತೇನೆ. ಅವರ ಋಣವನ್ನು ಖಂಡಿತ ತೀರಿಸಲು ಸಾಧ್ಯವಿಲ್ಲ . ಇದು ಗಂಡ-ಹೆಂಡತಿಯ ಪ್ರೀತಿಗೆ ಹಿಡಿದ ಇನ್ನೊಂದು ಕನ್ನಡಿ.

ಹಿಂದೂ ಮದುವೆಗಳಲ್ಲಿ ಹಿಂದೆಲ್ಲಾ ಹಲವು ಹಾಡುಗಳನ್ನು ಹಾಡುತ್ತಿದ್ದರು. ಇಂದೆಲ್ಲಾ ಅವು ಬರೇ ನೆನೆಪು ಮಾತ್ರ. ಆ ವಿಷಯದಲ್ಲಿ ಹಿಂದಿನ-ಇಂದಿನ ಪೀಳಿಗೆಯ ಕೊಂಡಿಯಾಗಿ ಬೆಳೆದ ನಾವೆಲ್ಲ ಭಾಗ್ಯವಂತರು. ಹಳ್ಳಿಗಳಲ್ಲಿ ಮನೆಯ ಅಂಗಳದಲ್ಲೇ ಚಪ್ಪರ ಹಾಕಿ, ಬಟ್ಟೆಯ ಮೇಲ್ಗಟ್ಟು ಕಟ್ಟಿ, ತಳಿರುತೋರಣಗಳಿಂದ ಅಲಂಕರಿಸಿ, ರಂಗೋಲಿ ಮುಂತಾದುವನ್ನು ಬರೆದು, ಚಪ್ಪರದಲ್ಲಿ ಮಂಟಪ ಕಟ್ಟಿ ಅಲ್ಲಿ ಮದುವೆ ನಡೆಯುತ್ತಿತ್ತು. ನಾವು ಬೆಳೆಯುವ ಹೊತ್ತಿಗೆ ಐದುದಿನ ನಡೆಯುತ್ತಿದ್ದ ಮದುವೆ ೨ ದಿನದ ಸಂಭ್ರಮಕ್ಕೆ ಇಳಿಯಿತು. ಈಗೆಲ್ಲ ಮದುವೆ ಎಂಬುದು ಯಾವಾಗ ಆಯಿತು ಎನ್ನುವಷ್ಟು ತ್ವರಿತಗತಿ. ಹಿಂದಿನ ಮದುವೆಯ ಸಂಭ್ರಮದಲ್ಲಿ ಹಲವು ಹಾಡುಗಳು-ಮನೆಯ ಒಳಗಡೆಯೇ ಆಡುವ ಆಟಗಳು,ಚಿಕ್ಕಪುಟ್ಟ ಸ್ಪರ್ಧೆಗಳು ಇವುಗಳೆಲ್ಲದರ ಹರವಿತ್ತು. ಮುಖ್ಯವಾಗಿ ಅಲ್ಲಿ ಹಲವು ಬಂಧು-ಭಗಿನಿಯರು ಒಟ್ಟಾಗಿ ಪರಸ್ಪರ ಸೌಹಾರ್ದದ ಮಾತುಕತೆ ನಡೆದು ಸಮಾರಂಭಕ್ಕೊಂದು ಜೀವಕಳೆಯಿರುತ್ತಿತ್ತು. ಮದುವೆಯಾದ ಹೆಣ್ಣು ಗಂಡನ ಮನೆ ಸೇರಿದಾಗ ಅಲ್ಲಿ ವಾಸ್ತು ಬಾಗಿಲ ಪೂಜೆಯನ್ನು ಮಾಡಿ ಗೃಹ ಪ್ರವೇಶಿಸಿದ ಬಳಿಕ ಸೇರಿದ ಹತ್ತು ಸಮಸ್ತರ ನಡುವೆ ಹೆಣ್ಣಿನಕಡೆಯವರು - ಗಂಡಿನಕಡೆಯವರಿಗೆ ’ಹೆಣ್ಣೊಪ್ಪಿಸು’ವ ಕಾರ್ಯಕ್ರಮವಿರುತ್ತಿತ್ತು. ಹೆಣ್ಣು ಎಂದರೆ ಹೂವಿನ ಸಸಿ ಅಥವಾ ಹೂವು-ಇವತ್ತಿನ ವರೆಗೆ ನಮ್ಮ ಆಶ್ರಯದಲ್ಲಿ ಇದ್ದ ಈ ಹೂ ಸಸಿಯನ್ನು ನಿಮ್ಮ ಕೈಗೆ ಹಾಕುತ್ತಿದ್ದೇವೆ, ಇನ್ನು ಮುಂದೆ ನಿಮ್ಮ ಆಶ್ರಯಕ್ಕೆ ಬರುವ ಈ ಹೂಸಸಿಗೆ ಕಾಲಕಾಲಕ್ಕೆ ಬೇಕಾದ ನೀರು-ಗೊಬ್ಬರ ಅರ್ಥಾತ್ ಬದುಕಲು ಬೇಕಾದ ಸೌಲಭ್ಯವನ್ನಿತ್ತು ನಿಮ್ಮ ಮಗಳಂತೇ ತಾವು ಪರಾಂಬರಿಸಿ ನೋಡಿಕೊಳ್ಳುವುದು-ಎಂದು ಹೆಣ್ಣಿನ ತಂದೆತಾಯಿ ಹೆಣ್ಣಿನ ಕೈಯ್ಯನ್ನು ಅವಳ ಗಂಡನೂ ಸೇರಿದಂತೆ ಆತನ ತಂದೆ-ತಾಯಿಗಳ ಕೈಗಳಲ್ಲಿ ಇಡಿಸಿ ಈ ಹೇಳಿಕೆ ನೀಡುತ್ತಿದ್ದುದು ಸಾಂಕೇತಿಕವಾಗಿ ಒಂದು ಜವಾಬ್ದಾರಿಯ ಹಸ್ತಾಂತರವಾಗಿತ್ತು.


ಆ ಕಾಲದಲ್ಲಿ ಹಲವು ಅಜ್ಞಾತ ಕವಿಗಳ ಹಾಡುಗಳು ನಮ್ಮ ಗ್ರಾಮಗಳಲ್ಲೆಲ್ಲ ಬಳಸಲ್ಪಡುತ್ತಿದ್ದವು. ಅವು ಹೇಗೆ ಪ್ರಚುರಗೊಳ್ಳಲ್ಪಟ್ಟವು-ಯಾರು ರಾಗ ಹಾಕಿ ಹಾಡಲು ಪ್ರಾರಂಭಿಸಿದ್ದು ಎಂಬುದು ನನಗೆ ವಿದಿತವಲ್ಲ. ಒಟ್ಟಾರೆ ಅವುಗಳೆಲ್ಲ ಬಹಳ ಭಾವನೆ ಕೆರಳಿಸುವಂತಹ ಹಾಡುಗಳಾಗಿದ್ದವು. ಮೌಲ್ಯವನ್ನು ಒತ್ತಿ ಹೇಳಿ ಎತ್ತಿಹಿಡಿಯುವ ಪದಗಳಾಗಿದ್ದವು. ಕವಿ ಪ್ರೊಫೆಸರ್ ದಿ| ವಿ. ಸೀತಾರಮಯ್ಯನವರು ಅಂತಹ ಒಬ್ಬ ಮಹಾನುಭಾವರು. ಇವರ ರೀತಿಯಲ್ಲೇ ಇನ್ನೂ ಅನೇಕ ಜನ ಬರೆದರು ಆದರೆ ನನ್ನ ಅತೀ ಬಾಲ್ಯದ ಕಾಲವಾದ್ದರಿಂದ ಹೆಸರುಗಳು ನೆನಪಿಗೆ ಬರುವುದಿಲ್ಲ. ನಮ್ಗೆ ಇವುಗಳೆಲ್ಲ ಕವಿಗಳು ಬರೆದಿದ್ದೆಂಬುದು ಗೊತ್ತಿರಲಿಲ್ಲ. ಹೆಂಗಸರು ಒಬ್ಬರಿಂದೊಬ್ಬರು ಬಾಯಿಂದ ಬಾಯಿಗೆ ಹಾಡಿಸಿ ಕೇಳಿ ಕಂಠಪಾಠ ಮಾಡುವಾಗ ನಾವೆಲ್ಲ ಮೂದಲಿಸುತ್ತಿದ್ದೆವು; ಅವುಗಳ ಅರ್ಥ ಗೊತ್ತಿರದೇ, ಅವುಗಳ ಮೌಲ್ಯ ತಿಳಿಯದೇ! ಇಂದು ಬೇಕೆಂದರೂ ಆ ಹಾಡುಗಳು ಕೇಳಸಿಗುವುದಿಲ್ಲ. ಮದುವೆಯ ಬಹುತೇಕ ಹಂತಗಳನ್ನು ಆದರ್ಶ ಸತಿಪತಿಗಳಾದ ಶ್ರೀ ಸೀತಾರಾಮಚಂದ್ರರ ಮದುವೆಯ ಸುತ್ತ ಹೆಣೆಯಲ್ಪಟ್ಟ ಹಾಡುಗಳಾಗಿದ್ದವು. ಉದಾಹರಣೆಗೆ --

ಧಾರೇ ಎರೆದ ರಾಯ ನಾರೀ ಜಾನಕಿಯ...
ಶ್ರೀರಾಮಚಂದ್ರಗೆ ಧಾರುಣೀ ಸುತೆಯಾ ....


--ಎಷ್ಟು ರಸವತ್ತಾಗಿದೆ ನೋಡಿ. ಧರಣಿಯಲ್ಲಿ ಜನಿಸಿದ್ದರಿಂದ ಧರಣೀಸುತೆಯಾದ ಜಾನಕಿಯನ್ನು ಸಾಕು ತಂದೆ ಜನಕ ಶ್ರೀರಾಮಚಂದ್ರನಿಗೆ ಧಾರೆಯೆರೆದ ಎಂದು ಹೇಳಲ್ಪಟ್ಟಿದೆ. ಮದುವೆಗೆ ಮುನ್ನ ಮಾಂಗಲ್ಯದ ಸಂಕೇತವಾದ ಕುಂಕುಮ ಹಾಕಿ ಅಕ್ಷತೆ ಕಲೆಸುವುದರಿಂದ ಹಿಡಿದು ’ಸಟ್ಟುಮುಡಿ’ [ಅನ್ನ ಬಡಿಸುವ ಸೌಟಿಗೆ ನಮ್ಮಲ್ಲಿ ಸಟ್ಟುಗ ಎಂದು ಕರೆಯುತ್ತಾರೆ, ಅದನ್ನು ಕೈಲಿ ಹಿಡಿದು ಹೊಸಸೊಸೆ ಅಡಿಗೆಮನೆಯ ಜವಾಬ್ದಾರಿ ವಹಿಸಿಕೊಂಡು ನಿಮಗೆಲ್ಲಾ ಅನ್ನಪೂರ್ಣೆ ಆದೆ ಎನ್ನುವುದೇ ಈ ಕಾರ್ಯಕ್ರಮ] ಎನ್ನುವ ಕಾರ್ಯಕ್ರಮದ ವರೆಗೂ ನೂರಾರು ಹಾಡುಗಳ ಹರವಿತ್ತು. ಊಟಕ್ಕೆ ಕುಳಿತಾಗ ಬೀಗರು ಬೀಗರನ್ನು ತಮಾಷೆಗಾಗಿ

ಆಚೆ ಪಂಕ್ತಿಗೆ ದೊನ್ನೆ ಈಚೆ ಪಂಕ್ತಿಗೆ ದೊನ್ನೆ
ಬೀಗರ ಪಂಕ್ತಿಗೆ ಹರಕ್ದೊನ್ನೆ ....

--ಎಂದು ಗೇಲಿಯಾಡುವುದೇ ಆಗಲೀ

ನಲಿದಾರತಿಗೈವಾ ಸಖಿಯೇ
ಎಲೆ ಶೋಭಿಪ ಸೀತಾರಾಮಚಂದ್ರರಿಗೇ ...

ಇವತ್ತಿಗೆ ಇವೆಲ್ಲ ಯಾರೋ ಅಜ್ಜಿಯರು ಇದ್ದರೆ, ಅವರ ಗಂಟಲು ಸರಿ ಇದ್ದರೆ ಹೇಳುತ್ತೀರಾ ಅಂತ ಕಾಡಿ ಬೇಡಿ ಹೇಳಿಸಿ ಕೇಳಬೇಕಾದ ಹಾಡುಗಳಷ್ಟೇ!

ಸೊಸೆಯಾ ನೋಡಿಕೋ ಜಾಣೆ
ಬಾ ಸುಪ್ರವೀಣೇ ......

--ಇದು ಸೊಸೆಯನ್ನು ಹೇಗಿದ್ದಾಳೆ ಎಂದು ನೋಡಿಕೊಳ್ಳಲು ಹೆಣ್ಣಿನ ಕಡೆಯವರು ಅತ್ತ್ಯಮ್ಮಂಗೆ ಹೇಳಿದರೆ

ಇಂದು ಬಂದ ಸೊಸೆಯಾ
ಇಂದು ನೋಡ್ವರೇನೆ ......

--ಇದು ಗಂಡಿನಕಡೆಯವರ ತಿರುಗುಬಾಣವಾಗಿತ್ತು!

ಅಂತೂ ಬದುಕು ಪೂರ್ತಿ ಹಸನಾಗಲೀ ಎಂಬ ಕಾರಣಕ್ಕೇ ಹಿಂದಿನವರು ಹಲವು ಘಟನೆಗಳನ್ನು ದಾಖಲಿಸಿ ಹಾಡಿನ ರೂಪದಲ್ಲಿ ಬಳಸುತ್ತಿದ್ದರು.

ಜನಪದರಲ್ಲೂ ಒಮ್ಮೆ ಕಣ್ಣಾಡಿಸಿ ನೋಡಿ: ಮದುವೆಯಾಗಿ ಮನೆಗೆ ಬಂದ ಕೆಲದಿನಗಳ ತರುವಾಯ ತವರಿನ ನೆನಪಲ್ಲಿ ಕೊರಗುವ ಹೆಂಡತಿಯನ್ನು ಕಂಡ ಗಂಡ ಆಕೆಯ ಮುಂಗುರುಳು ನೇವರಿಸಿ-

ಹಾಸೀಗಿ ಹಾಸಂದ ಮಲ್ಲೀಗಿ ಮುಡಿಯೆಂದ
ಬ್ಯಾಸತ್ರ ಮಡದೀ ಮಲಗಂದ....
ಬ್ಯಾಸತ್ರ ಮಡದೀ ಮಲಗಂದ ಪ್ರೀತೀಲೇ ತನ್ನೋಡಿ ತವರಾ ಮರೆಯೆಂದಾ....

ತನ್ನಲ್ಲೇ ಎಲ್ಲವನ್ನೂ ಕಾಣು, ಅಪ್ಪ-ಅಮ್ಮ,ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರ ಪ್ರೀತಿಯನ್ನು ತಾನೇ ಕೊಡುತ್ತೇನೆ ಮಡದೀ ಹಾಸಿಗೆ ಹಾಸಿಕೊಡು, ಇಲ್ಲವೇ ಇದೋ ತಗೋ ಮಲ್ಲಿಗೆ ಹೂವು ನೋಡು ಎಷ್ಟು ಚೆನ್ನಾಗಿದೆ ಮುಡಿದುಕೋ ಎಂದೆಲ್ಲಾ ಹೇಳಿ ಅವಳ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುವ ಆತ, ನಿಂಗೆ ಬೇಜಾರಾಗಿದ್ರೆ ತನ್ನನ್ನೇ ನೋಡಿ ಎಲ್ಲವನ್ನೂ ಮರೆ ಎಂದು ಸಂತೈಸುತ್ತಾನೆ. ಹೆಂಡತಿಯಾದರೂ ಅಷ್ಟೇ ತನ್ನ ಗಂಡ ಬಡವನೇ ಆಗಿದ್ದರೂ ಆತ ಒಳ್ಳೆಯವ, ತನಗೆ ಬದುಕು ಕೊಟ್ಟವ ಎಂಬ ತುಂಬಿದ ಹಂಬಲದಿಂದ--

ಕೂಲಿ ಮಾಡಿದರೇನ ಕಂಬಳಿ ಹೊದ್ದರೇನ
ನಮಗ ನಮರಾಯ ಬಡವೇನ ?

--ಇತರರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಿದ್ದಳು. ಇಂದಿಗೆ ಆ ಮೌಲ್ಯವೆಲ್ಲ ಕುಸಿದು ಗಂಡನಿಗೆ ಹೆಂಡತಿ ಎಷ್ಟು ದುಡಿಯುತ್ತಾಳೆ ಎಂದಾದರೆ ಹೆಂಡತಿಗೆ ಗಂಡ ತರುವ ಸಂಬಳ ಯಾತಕ್ಕೂ ಸಾಲದಾಗಿದೆ. ಶಹರ-ಪಟ್ಟಣಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಹುಟ್ಟಿ ಬೆಳೆಯುತ್ತಿರುವ ಚಿಕ್ಕ ಮಗುವಿಗೆ ಕೇವಲ ’ಸಾಕಮ್ಮ’ ಅಥವಾ ’ಸಾಕಮ್ಮನ ಗೂಡು’ [ಬೇಬಿ ಸಿಟ್ಟರ್]ಗಳೇ ದಾರಿಯಾಗಿವೆ. ಅಲ್ಲಿ ಅವರು ನೀಡಿದ್ದೇ ಆಹಾರ! ಕೆಲವು ಸಾಕಮ್ಮ ಗೂಡುಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಿದ್ರೆ ಮಾತ್ರೆ ತೇಯ್ದು ಕುಡಿಸಿ ಎಲ್ಲಾ ಮಕ್ಕಳೂ ಮಲಗುವಂತೇ ಮಾಡಿ ಸಾಕಮ್ಮಗಳು ಬೇರೆ ಕೆಲಸಮಾಡುತ್ತಿರುತ್ತವೆ ಎಂಬುದು ನನಗೆ ಗೊತ್ತಾದ ಖೇದಕರ ವಿಷಯ! ಹಾಗೆ ಬೆಳೆಯುವ ಮಗುವಿಗೆ ಯಾವ ಸಂಸ್ಕಾರ ಸಿಗಬಹುದು- ಆ ಬಾಳು ಒಂಥರಾ ನರಕದ ಬಾಳು ಅನ್ನಿಸೋದಿಲ್ವಾ? ತಂದೆ-ತಾಯಿ ಇದ್ದೂ ಮಗುವನ್ನು ಬೇರೆಯವರ ಬುಟ್ಟಿಯಲ್ಲಿ ಕೂಡ್ರಿಸಿ ಟಾಟಾ ಮಾಡಿ ಹೋದಾಗ ಆ ಮಗುವಿಗೆ ಏನನ್ನಿಸಬಹುದು? ಶಹರದ ಮಕ್ಕಳಲ್ಲಿ ಬಹುತೇಕರನ್ನು ಮಾತಾಡಿಸಿ ಅವುಗಳಿಗೆ ಆಂಗ್ಲ ಭಾಷೆಯ ಕೆಲವು ಪಲುಕುಗಳನ್ನು ಬಿಟ್ಟರೆ ಬೇರೆ ಯಾವ ಪರಿಜ್ಞಾನ ಕೂಡ ಬಂದಿರುವುದಿಲ್ಲ. ಊರಿಂದ ಹಿರಿಯರು ಬಂದಿದ್ದರೆ" ನೋಡೋ ನಿನ್ನ ಮಾವ ಬಂದಿದಾರೆ " ಅಂದರೆ "ಹಾಯ್" ಎನ್ನುವಂತೆಯೂ ಎಲ್ಲಿಗಾದರೂ ಹೊರಟರೆ " ಬಾಯ್ " ಎನ್ನುವಂತೆಯೂ ಕಲಿಸಿರುವುದನ್ನು ಬಿಟ್ಟರೆ ನಿಜಜೀವನದ ರೀಯಾಲಿಟಿ ಶೋ ಗೆ ಬೇಕಾದ ಯಾವ ತಯಾರಿ ಕೂಡ ನಡೆದಿರುವುದಿಲ್ಲ. ’ದುಡ್ಡು ಕೊಡು ಸೀಟು ಪಡಿ’ ಇದಿಷ್ಟೇ ಅನುಸರಣೆ ತಂದೆ-ತಾಯಿಗಳದ್ದು!

ಇಂದು ನಾವು ಶಹರದ ಬದುಕಿಗೆ ನಮ್ಮನ್ನು ಮಾರಿಕೊಂಡಿದ್ದೇವೆ. ಪ್ರಾಕ್ಟಿಕಲ್ ಆಗಿ ಯಾರಿಗೂ ನಾವು ಹಳ್ಳಿಯಲ್ಲಿ ಬದುಕಬಲ್ಲೆವು ಎಂದು ಹೇಳುವ ಗಟ್ಟಿ ಎದೆ ಕೂಡ ಇಲ್ಲ! ನಮಗೆ ನಮ್ಮ ಹಿರಿಯರು ಬೇಕಾಗಿಲ್ಲ! ನಾವಿಬ್ಬರು-ನಮಗೊಬ್ಬ ಹೋಗ್ತಾ ಹೋಗ್ತಾ ನಾವಿಬ್ಬರು-ನಮಗಾರು? ಎನ್ನುವ ಸ್ಥಿತಿ ಬರುತ್ತಿದೆ. ಹುಡುಗಿಯರು ಈ ವಿಷಯದಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು. ತಮ್ಮ ತಂದೆ-ತಾಯಿಗಳನ್ನು ಆದರಿಸುವ ಅವರು ಅತ್ತೆ-ಮಾವಂದಿರನ್ನೂ ಅದೇ ಮಟ್ಟದಲ್ಲಿ ನೋಡಿಕೊಳ್ಳಬೇಕು. ಒಂದೊಮ್ಮೆ ತಮಗೆ ಒಬ್ಬನೇ ಮಗ ಎಂದು ಜೊತೆಗೆ ಇರಲು ಬಯಸಿದರೆ ಅವರನ್ನು ವೃದ್ಧಾಶ್ರಮಕ್ಕೆ ಸಾಗಹಾಕುವ ಸಾಹಸ ಮೆರೆಯಬಾರದು! ಎಷ್ಟೇ ಆಗಲಿ ನಮ್ಮವರು ನಮ್ಮವರೇ-ದುಡ್ಡಿಗೆ ಸಿಗುವ ಸಾಕಮ್ಮಗಳು ಬರೇ ಹಣಕ್ಕಾಗಿ ಮಾಡುವವರು. ಮನೆಯಲ್ಲಿ ಹಿರಿಯರು ಇದ್ದಾಗ ಕೆಲವೊಮ್ಮೆ ಹೊಸ ಬದುಕಿನ ಚಟುವಟಿಕೆಗಳು ಆಡಂಬರಗಳು, ನವನವೀನ ವಿನ್ಯಾಸದ ಹೆಂಗಸರು ತೊಡಬಾರದ ದಿರಿಸುಗಳು, ಮೇಕಪ್ ಸಾಮಗ್ರಿಗಳು ಇವುಗಳನ್ನೆಲ್ಲ ನೋಡಿ ಇರುಸುಮುರುಸು ಉಂಟಾಗಿ ಅವರೇನಾದರೂ ಅನ್ನಬಹುದು-ಆದ್ರೆ ದೇವರಾಣೆ ಹೇಳುತ್ತೇನೆ ಕೇಳಿ ಯಾವ ತಂದೆ-ತಾಯಿಯೇ ಆಗಲಿ ತಮ್ಮ ಮಕ್ಕಳಿಗಾಗಿ ತಮ್ಮ ಆಚರಣೆ-ಸಂಪ್ರದಾಯಗಳಲ್ಲೇ ಬದಲಾವಣೆ ಮಾಡಿಕೊಳ್ಳುತ್ತಾರೆ. ಅವರಿಗೆ ತಿಳಿಸಿ ಹೇಳುವ-ಹೊರ ಜಗತ್ತನ್ನು ತೋರಿಸಿ ಮನವೊಲಿಸುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕೆಟ್ಟ ಚಾಳಿಯೊಂದು ಆಚರಣೆಯಲ್ಲಿದೆ-ಇಂದು ಮದುವೆಗೆ ತಯಾರಾಗುವ ಹುಡುಗಿ " ಹುಡುಗನಿಗೆ ಅಪ್ಪ-ಅಮ್ಮ ಜೊತೆಯಲ್ಲೇ ಇದ್ದರೆ ಬೇಡ, ಆಮೇಲೆ ಕಷ್ಟವಾಗುತ್ತೆ " ಎಂದು ತನ್ನ ತಂದೆ-ತಾಯಿಗಳಿಗೆ ಹೇಳುತ್ತಾರೆ. ಬದುಕಿನ ಬಹುದಿನ ಅನೇಕ ಮಹಡಿಗಳಿರುವ ಕಟ್ಟಡ ಕಟ್ಟಿದಂತೇ ಇಳಿವಯಸ್ಸಿನಲ್ಲಿ ತಮಗೆ ಸುಖಕಾಣುವ ಕನಸು ಕಟ್ಟಿ ಹಡೆದು-ಪೋಷಿಸಿ-ಬೆಳೆಸಿ-ವಿದ್ಯೆಕಲಿಸಿ ಬದುಕಿನಲ್ಲಿ ದಡ ಹತ್ತಿಸಿದ ಇದ್ದೊಬ್ಬ ಮಗನ ಒಳಿತಿಗಾಗಿ ’ವೃದ್ಧರ ಗೂಡು’ ಸೇರುವ ಹಲವು ಮಾತಾಪಿತೃಗಳಿಲ್ಲವೇ? ಇದಕ್ಕೆಲ್ಲ ನಮ್ಮ ಸಮಾಜದ ಬೇಜವಾಬ್ದಾರಿತನವೇ ಕಾರಣ ಅಲ್ಲಾಂತೀರಾ? ನಾಳೆ ನಾವೊ ನೀವೂ ಈಗ ಓದುತ್ತಿರುವ ಅಕ್ಷರಗಳನ್ನು ಓದಲಾರದಷ್ಟು ಮುದುಕಾಗಿ, ಸೋಡಾ ಗ್ಲಾಸನ್ನು ಕಣ್ಣಿಗೆ ಇಟ್ಟುಕೊಂಡು, ಕೈಲಿ ಕೋಲು ಹಿಡಿದು " ಮಗಾ ಮಗಾ ಮಗಾ" ಅಂತ ನಡೆವಾಗ ನಮಗೂ ಆ ಸ್ಥಿತಿ ಬಂದರೆ ಅದಕ್ಕೂ ನಾವೇ ಹೊಣೆಯಲ್ಲವೇ?

ಹೆಣ್ಣು ಮಕ್ಕಳ ಪಾಲಕರೇ ತಮ್ಮಲ್ಲಿ ಒಂದು ವಿನಂತಿ- ನಿಮ್ಮ ಮಗಳಿಗೆ ಹುಟ್ಟಿದ ಮನೆಗೂ-ಕೊಟ್ಟಮನೆಗೂ ಕೀರ್ತಿ ತರುವಂತಹ ಕೆಲಸಮಾಡಲು, ಅತ್ತೆ-ಮಾವಂದಿರಿದ್ದರೆ ಅವರನ್ನು ಸಂಭಾಳಿಸಿಕೊಂಡು ಹೋಗಲು, ಬದುಕಿನಲ್ಲಿ ಸಹಕಾರ ಮತ್ತು ಸಹಬಾಳ್ವೆಯನ್ನು ಅಳವಡಿಸಿಕೊಳ್ಳಲು, ಕೇವಲ ಕೂಪಮಂಡೂಕಗಳಾಗಿ ಮೆರೆಯದೇ-ಮೆರೆದು ಮರುಗದೇ ವಿಶಾಲ ಮನೋಭಾವ ಬೆಳೆಸಿಕೊಳ್ಳಲು, ಜೀವನದಲ್ಲಿ ರಾಮಾಯಣ-ಭಾರತಗಳಂತಹ ದಾರ್ಶನಿಕರ ಕಥೆಗಳ ತತ್ವವನ್ನು ಹೀರಿ ಅನುಸರಿಸಲು, ಗಂಡನ ದುಡಿಮೆಗೆ ಲೆಕ್ಕಹಾಕದೇ ಇದ್ದುದರಲ್ಲಿ ತೃಪ್ತಿಪಡಲು --ಕಲಿಸಬಹುದೇ ತಾವು? ’ ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಅಂತಾರಲ್ಲ ಈ ಗಾದೆ ತಮಗೂ ಅರ್ಥವಾಗಬಹುದಲ್ಲ ?

ಅಂತಹ ಸುಸಂಸ್ಕೃತ ಮಗಳನ್ನು ಬೆಳೆಸಿ,ಅನೇಕ ಮನಗಳನ್ನು ಬೆಳಗಿಸುವ ಮಗಳನ್ನು ಬೆಳೆಸಿ, ಒಳ್ಳೆಯ ಮನದಿಂದ ಬೆಳೆಸಿ, ಆಗ ಜನಕರಾಯ ಜಾನಕಿಯನ್ನು ಶ್ರೀರಾಮಚಂದ್ರನಿಗೆ ಧಾರೆ ಎರೆದಂತೇ ನೀವೂ ಧಾರೆ ಎರೆದು ಕೊಡಲು ಹಾಗೂ ಅದನ್ನು ಸ್ವೀಕರಿಸಲು ಶ್ರೀರಾಮಚಂದ್ರನಂತಹದೇ ವ್ಯಕ್ತಿಯೊಬ್ಬ ಒಡಮೂಡುತ್ತಾನೆ- ಇದು ಸತ್ಯ ಸಂಕಲ್ಪ, ಇದು ದೈವೀ ಸಂಕಲ್ಪ, ಇದು ನಿತ್ಯ ನಿಸರ್ಗದ ಸಂಕಲ್ಪ ಎಂಬುದರೊಂದಿಗೆ ಅಂತಹ ಸಂದರ್ಭದಲ್ಲಿ ನಾವೆಲ್ಲಾ ಅರ್ಥಗರ್ಭಿತವಾಗಿ, ಮನದಂದು ಹಾಡೋಣ ದಿ| ವೀ.ಸೀ. ಬರೆದ ಹಾಡು --

" ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು "


ನಮಸ್ಕಾರ.

Sunday, August 1, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)-2

ಚಿತ್ರ ಕೃಪೆ : ಅಂತರ್ಜಾಲ

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)

ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ

ಭಾಗ-೨

ಸರ್ವರಿಗೂ ಹಾದರದ ಸ್ವಾಗತ


" ಬಾಬಾರೋ ರಸಿಕಾ .............. " ಅಯ್ಯಯ್ಯೋ ಇದೆಂತಾ ಭರತನಾಟ್ಯವೆನ್ನುವ ಹೊತ್ತಿಗೆ ಸೈಡ್ ವಿಂಗ್ ನಲ್ಲಿ ಅನೌನ್ಸರ್ ಹೆಳಿದ " ಆಮಂತ್ರಣದಲ್ಲಿ ತಪ್ಪಾಗಿ ಭರತನಾಟ್ಯ ಎಂದು ಪ್ರಿಂಟಾಗಿದ್ದಕ್ಕೆ ನಮ್ಮ ಹೈಕ್ಳೆಲ್ಲಾ ಬೋ ಬೆಜಾರ್ದಾಗಿದ್ರು ಅದು ತಪ್ಪಾಗಿರೋದು ಈಗ್ ನೀವೆಲ್ಲಾ ನೋಡುತ್ತಿದ್ದೀರಿ ಹದ್ಬುತ ಡ್ಯಾನ್ಸು "

ಭರತನಾಟ್ಯದ ಹೆಸರಲ್ಲಿ ಇಬ್ಬರು ಪ್ರಾಯದ ಹುಡುಗಿಯರು ಅತೀ ಕಮ್ಮಿ ಬಟ್ಟೆಯಲ್ಲಿ ನಂಗಾನಾಚ್ ಗೆ ತೊಡಗಿದ್ದರು. ನನಗಂತೂ ಮಜಾ ಹಾಳ್ ಬೀಳ್ಲಿ ಅಲ್ಲಿಂದ ಎದ್ದು ಓಡಿಹೋದರೆ ಸಾಕಾಗಿತ್ತು.

ರಸಿಕಾ ರಸಿಕಾ ಹಾಡು ಮುಕ್ಕಾಲು ಆಗುತ್ತಿರುವಾಗ ಅದ್ಯಾವನೋ ಎಣ್ಣೆ ಕುಡಿದವ ವೇದಿಕೆಯೇರಿ ಒಬ್ಬ ಹುಡುಗಿಯ ಹತ್ತಿರವೇ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ! ಅದನ್ನು ನೋಡಿ ಸುಮಾರು ಹದಿನೈದಿಪ್ಪತ್ತು ಪಡ್ಡೆಗಳೂ ಕುಣಿಯ ಹತ್ತಿದವು.

ರಸಿಕಾ ಹಾಡು ಹಾಗೇ ಹಾಗೇ ಮುಗೀತು. ಮುಗಿದ ಮೇಲೆ ಸಂಘದ ಕೆಲವರು ಬಂದು ವೇದಿಕೆಯೇರಿದ್ದ ಎಲ್ಲರನ್ನೂ ಒಮ್ಮೆ ಕೆಳಗೆ ಕಳಿಸಿದರು. [ ಇಬ್ಬರು ನೃತ್ಯಾಂಗನೆಯರನ್ನು ಬಿಟ್ಟು]

" ಈಗ ಮತ್ತೊಂದು ಅದ್ಬುತ ಡ್ಯಾನ್ಸ್ ಕುಮಾರಿ ಮೆಗಾಸ್ರೀ ಮತ್ತು ಕುಮಾರಿ ಹೇಮಾಸ್ರೀರವರುಗಳಿಂದ "

" ಹೇ ಮುಚ್ಲಾ ಬಾಯ್ನ ಬ್ಯಾಗ್ ಸುರುಮಾಡ್ಲ ಡಾನ್ಸ್ ನ ತಡ್ಕೊಳಕಾಯಾಕಿಲ್ಲ ನಂ ತಾವ ಇಲ್ಲಿ " --ಸಭೆಯಿಂದ ಕೇಳಿದ್ದು!

" ಜಾಣಾ ಓ ಜಾಣಾ ಜಾಣಾ ಓ ಜಾಣಾ......ಝಣ ಝಣ ಈ ಕಾಂಚಾಣ......." ಏನಬ್ಬರ ಅಂತೀರಿ.... ತಿರುಗಿ ನೋಡಿದೆ ಸಭೆಯಕಡೆ ಚಳಿಗೆ ಚಾದರಹೊದ್ದು ಎಣ್ಣೆಯ ಅಮಲಲ್ಲಿದ್ದ ಮುದುಕರೆಲ್ಲಾ ಕುಣಿಯತೊಡಗಿದ್ದಾರೆ!
ಅಯ್ಯಯ್ಯೋ ! ನಾನೊಬ್ಬನೇ ಹಾಗೆ ಕೂತಿದ್ದು ಬಿಟ್ಟರೆ ಯಾರೂ ಸರಿಯಾಗಿ ಕೊತುಕೊಳ್ಳುತ್ತಲೇ ಇರಲಿಲ್ಲ. ಅಲ್ಲಿ ಸೇರಿದ್ದ ಹಳ್ಳಿಯ ಹೆಂಗಸರೂ ಸೇರು-ಪಾವು ಅಂತ ಸ್ವಲ್ಪ ಅಮಲಾಗಿದ್ದರು! ಅವರಲ್ಲೂ ಕೆಲವರು ಅಲ್ಲಲ್ಲೇ ಸಣ್ಣಗೆ ಕುಣಿಯುತ್ತಿದ್ದರು! ಸಿಳ್ಳೆಯೇನು , ರಾಕೆಟ್ಟೇನು , ಚಪ್ಪಾಳೆಯೇನು ಛೆ ಛೆ ಮರೆಯಲಾಗದ್ದು ಬಿಡಿ, ಇದನ್ನೆಲ್ಲ ನೀವು ಲೈವ್ ಆಗಿ[ನೇರವಾಗಿ] ನೋಡಿದರೇನೆ ಅನುಭವಕ್ಕೆ ಬರೋದು. ಎರಡು ನೃತ್ಯ ಮುಗಿಯಲು ಒಂದೂವರೆ ಗಂಟೆ ಸ್ಮಯ ಹಿಡಿಯಿತು. ಅಂತೂ ನಂಗಾನಾಚ್ ಕಲಾವಿದೆಯರು ಸುಸ್ತಾದರು-ಇನ್ನು ಕುಣಿಯದಾದರು ಎನ್ನುವಾಗ ಅನೌನ್ಸರ್ ಕೂಗಿದ " ಹಿವತ್ತಿನ ಕಾರ್ಯಕ್ರಮಗೋಳ ಮದ್ಯ ನಮ್ಮ ಮೆಗಾಸ್ರೀ ಮತ್ತು ಹೇಮಾಸ್ರೀಯವರ ಡ್ಯಾನ್ಸ್ ಸೂಪ್ಪರಾಗಾಯ್ತು "

ಆತನಿಗೆ ಮಾತನಾಡಲೇ ಬಿಡುತ್ತಿರಲಿಲ್ಲ. ಮುದುಕರಿಗೆ ಇನ್ನೂ ಡ್ಯಾನ್ಸ್ ನೋಡಬೇಕಾಗಿತ್ತಂತೆ ಅಂತ ತಿಳೀತು. ಅವರೆಲ್ಲಾ ತರತರವಾಗಿ ಬೊಬ್ಬೆಹಾಕುತ್ತಿದ್ದರು. ಹುಳಿಸೆಮುಪ್ಪಾದರೂ ಹುಳಿಮುಪ್ಪೇ ಅನ್ನುವ ಗಾದೆ ಹುಟ್ಟಿದ್ದು ಇದೇ ಊರಲ್ಲೆ ? ಅಂತೂ ಅನೌನ್ಸರ ಬೌನ್ಸರ್ ಥರನೂ ಕೆಲಸ ಮಾಡಿ ಅವರನ್ನೆಲ್ಲ ದಬ್ಬಿ ಕೂರಿಸಿದ. ಮತ್ತೆ ವೇದಿಕೆಯೇರಿ ಕೂಗಿದ " ಈಗ ನಮ್ಮ ಸಂಘದ ಅವ್ಯಾಸಿ ಕಲಾವಿದ್ರಗೋಳಿಂದ ದ್ರೌಪತೀ ವಸ್ತ್ರಾಪ ಅರಣ ಹೆಂಬ ಸುಂದರ ಪೌರಾಣಿಕ ನಾಟ್ಕ, ಹೆಲ್ಲರೂ ಸಾಂತರೀತಿಯಿಂದ ಕೂತ್ಕೊಳಿ ಇಲ್ಲಾಂದ್ರೆ ನಾಟ್ಕ ಬಂದ್ಮಾಡಾಕೋಯ್ತೀವಿ ಮತ್ತೆ ಹೇಳ್ಬುಟ್ಟಿದ್ದೇನಿ "

ಇನ್ನೊಂದ ಸಲ ಅದೇ ಹೇಳಿಕೆಯನ್ನು ರಿಪೀಟ್ ಮಾಡ್ದ.

ಅಂತೂ ನಾಟಕದ ಆರಂಭ ಇನ್ನೇನು ....

" ಗಜವದ ನಾ ಬೇಡುವೇ ಗೌರಿ ತನೇಯಾ ... ಗಜವದ ನಾ ಬೇಡುವೇ ........" ಕ್ಯಾಸಿಯೋ [ಕೀ ಬೋರ್ಡು] ಜೋರಾಗಿತ್ತು.
ನಿರ್ದೇಶಕರೇ ಹಾಡುಗಾರರೂ ಆಗಿರುವುದರಿಂದ ಹಾಡು ಪ್ರಾರಂಭವಾಯಿತು.

ಕಥೆ ಮುಂದುವರಿದಿತ್ತು. ಮೊದಲಿಗೆ ಪಾಂಡವರು ಮಾತಾಡೊದು. ಶುರುವಾಗೋಯ್ತು... ಭೀಮ ಇರಲಿಲ್ಲ! ಬಾಕಿ ಎಲ್ಲಾ ಇದ್ದರು. " ಹೇ ಹೆಲ್ಲಲೇ ಭೀಮಾ ? ಎಲ್ಲೋಗ್ ಕೂತ್ವನೋ ಅವನ್ಮನೆಕಾಯಾಕೋಗ ಇಂತಿಂತಾ ಹೆಮರ್ಜೆನ್ಸಿ ಟೇಮ್ನಾಗೇ ಇಂಗೇ ಕೈಕೊಡೋದು ಮುಂದಿನ ವರ್ಸ ಹಿಂತಾನನ್ಮಕ್ಳಿಗ್ ಒಬ್ಬರ್ಗೂ ಪಾರ್ಟ್ ಕೊಡಾಕಿಲ್ಲ " ನಾಟಕದ ವ್ಯವಸ್ಥಾಪಕರ ಕೂಗು!

ಭೀಮನ ಪಾತ್ರ ಮಾಡಿದ್ದು ಕೇಬಲ್ ಭೈರಪ್ಪ. ಅವನಿಗೆ ಊರಲ್ಲಿ ಪಕ್ಕದೂರಲ್ಲಿ ಅಲ್ಲಲ್ಲಿ ಕೆಲವು ಗೆಳತಿಯರ ಸಹವಾಸವಂತೆ! ಆದಿನ ಯಾವುದೋ ಹೊಸಗೆಳತಿ ಬಂದಿದ್ದಾಗಿಯೂ ಆಕೆಯೊಡನೆ ಆತ ಸಾಯಂಕಾಲದವರೆಗೆ ಮಾತನಾಡುತ್ತಿದ್ದುದನ್ನು ಸಾಣೆ ಹಳ್ಳದ ಸುರೇಶ ಕಂಡಿದಾನಂತೆ ! ಎಲ್ಲಾ ಅಂತೆಕಂತೆ ಇಂತದ್ದೇ ಮಾತಿತ್ತು. ಆದರೆ ಭೀಮನ ಪಾತ್ರದ ಪ್ರವೇಶದ ಅವಶ್ಯಕತೆಯಿದ್ದರೂ ಇನ್ನೂ ಭೀಮ ಬರದಿದ್ದುದು ಬಹಳಜನರಿಗೆ ಗಲಿಬಿಲಿ ಉಂಟುಮಾಡಿತ್ತು. ನಾಟಕದಲ್ಲಿ ಮಧ್ಯೆ ಹಾಗೆ ಯಾರನ್ನು ಆ ಪಾತ್ರಕ್ಕೆ ತಾಲೀಮು ಇಲ್ಲದೇ ಹೊಂದಿಸುವುದು?ನಿರ್ದೇಶಕರು ಎಲ್ಲಾ ಕಿತ್ತೆಸೆದು ಓಡಿಹೋಗುವಷ್ಟು ಕೋಪದಲ್ಲಿದ್ದರು. ಆದರೂ ನಾಟಕ ಮುಗಿದ ಹೊರತೂ ಅವರ ಸಂಭಾವನೆ ಸಿಕ್ಕಿರುವುದಿಲ್ಲವಾಗಿ ಅನಿವಾರ್ಯವಾಗಿ ಹಾಗೂ ಹೊಟ್ಟೆಪಾಡಿನ ನೆನಪಾಗಿ ಅಲ್ಲೇ ಉಳಿದರು. ಬಹಳ ಜನರ ಹತ್ತಿರ ಹುಡುಕಲು ಹೇಳಿದರು.

ಇತ್ತ ಕೇಬಲ್ ಭೈರಪ್ಪನ್ನ ಹುಡುಕಲು ಸುರೇಶನನ್ನೇ ಮುಂದಾಗಿ ಕಳಿಸಿ ಎಲ್ಲರೂ ಪ್ರಯತ್ನಿಸುತ್ತಿದ್ದರು. ಸುರೇಶ ಸುಮಾರು ಎಂಟತ್ತು ಮಂದಿ ಪಡ್ಡೆಗಳೊಂದಿಗೆ ಹುಡುಕಲು ಹೋದ. ಸಾಣೆ ಹಳ್ಳದ ಸೇತುವೆ[ ಹತ್ತಿರ ಸುಳುಕಾಡುತ್ತಿರುವಾಗ ಅವರಿಗೆಲ್ಲ ಅರೆಗತ್ತಲಲ್ಲಿ ಸಣ್ಣಗೆ ಗುಣು ಗುಣು ಮಾತಿನ ಸದ್ದು ಕೇಳಿಬರುತ್ತಿತ್ತು. ಸುರೇಶನಿಗೆ ಬಹಳ ಕುತೂಹಲವಿದ್ದುದರಿಂದ ಆತ ಸೇತುವೆ ಕೆಳಗೆ ನೋಡಲು ಮುಂದಾದ. ಟಾರ್ಚ್ ಹತ್ತಿಸಿಕೊಂಡು ಒಂದಿಬ್ಬರು ಆತನ ಜೊತೆಗೆ ಬಂದರು. ಅಲ್ಲಿಳಿದು ನೀರಿಲ್ಲದೇ ಆರಿದ್ದ ಜಾಗದಲ್ಲಿ ಬೆಳೆದಿದ್ದ ಸಣ್ಣ ಕುರುಚಲು ಗಿಡಗಳ ಮಧ್ಯೆ ನಾಲ್ಕು ಕಾಲುಗಳು ಕಂಡವು! ಸುರೇಶನ ಅನುಮಾನ ಗಟ್ಟಿಯಾಯಿತು. ಸರಿಯಾದ ಮೂರುಸೆಲ್ಲಿನ ಟಾರ್ಚ್ ನ ಬೆಳಕನ್ನು ಹತ್ತಿರವೇ ಹೋಗಿ ಫೋಕಸ್ ಮಾಡಿದ. ಪಕ್ಕದೂರಿನ ರಮ್ಯಾಳೊಂದಿಗೆ ’ಭೀಮ’ ’ ಕ್ರೀಡೆ’ಯಲ್ಲಿ ನಿರತನಾಗಿದ್ದ. ಬೆಳಕು ಮೈಮೇಲೆ ಬೀಳುತ್ತಿದ್ದಂತೆಯೇ ಯಾರಿಗೂ ಮುಖವನ್ನೂ ಸರಿಯಾಗಿ ತೋರಿಸದೇ ಬಟ್ಟೆಯನ್ನೂ ಧರಿಸದೇ ಇಬ್ಬರೂ ಸತ್ನೋ ಇದ್ನೋ ಅಂತ ಓಡಿಹೋದರು!

" ಆ ಭೀಮ ಸಿಕ್ಕ ಭೀಮ ಸಿಕ್ಕ ಇಡ್ಕೊಳಿ ಇಡ್ಕೊಳಿ " ಕೂಗುತ್ತಾ ಅವರೆಲ್ಲ ಕತ್ತಲಲ್ಲೇ ಆತನ ಬೆನ್ನುಹತ್ತಿದರು.

ನಾಟಕದ ನಿರ್ದೇಶಕರು ಪಾತ್ರಧಾರಿಗಳನ್ನು ರಂಗಕ್ಕೆ ಸಜ್ಜುಗೊಳಿಸುವಷ್ಟರಲ್ಲಿ ಹೈರಾಣಾಗಿದ್ದರು, ಆದರೂ ಈ ಬೇಡದ ಸಮಸ್ಯೆಗಳಿರದಿದ್ದರೆ ನಾಟಕ ಹೇಗೋ ನಡೆಯುತ್ತಿತ್ತು. ಈ ರೀತಿ ಹೊಸ ಹೊಸ ’ದ್ರೌಪತೀ ವಸ್ತ್ರಾಪಹರಣ’ಗಳು ಹುಟ್ಟಿಕೊಂಡು ಪಾತ್ರಧಾರಿಗಳೇ ನಾಪತ್ತೆಯಾದರೆ ಹೇಗೆ ತಾನೇ ನಾಟಕಮಾಡಲು ಸಾಧ್ಯ ? ಅಂತೂ ಮುಖ ಒಣಗಿಸಿಕೊಂಡು ಕೂತಿದ್ದರು.

ಸುಮಾರು ಅರ್ಧರಾತ್ರಿ ಕಳೆದು ಹೋಗಿ ಬೆಳಗಿನ ೨ ಗಂಟೆಯಾಗಿಬಿಟ್ಟಿತ್ತು ಅನಿಸುತ್ತದೆ. ಸಭಿಕರಲ್ಲಿ ಕೆಲವರು ಕಾಡುಗಳ್ಳರು ರಾತ್ರಿ ಕಾಡಲ್ಲಿ ಮರದದಿಮ್ಮಿಯನ್ನು ಕತ್ತರಿಸುವಾಗ ಆಗುವ ಸದ್ದಿನಂತೇ " ಗೊರಾರ್ ಸಾಂ ......ಗೊರಾರ್ ಸಾಂ...... ಗೊರಾರ್ ಸಾಂ " ಎಂದು ಗೊರಕೆ ಹೊಡೆಯುತ್ತಿದ್ದರೆ ಅತೀ ಕುಡುಕರು ಕುರುಕ್ಷೇತ್ರದಲ್ಲಿ ಮಲಗಿದ ಹೆಣಗಳಂತೇ ಬಾಯಿಂದ ಜೊಲ್ಲು ಸುರಿಸುತ್ತಾ ಈ ಲೋಕದ ಪರಿವೆಯೇ ಇಲ್ಲದೇ ಮಲಗಿದ್ದರು. ಅರ್ಧಂಬರ್ದ ಕುಡಿದವರು " ಬಾಬಾರೋ ರಸಿಕಾ ಬಾಬಾರೋ ರಸಿಕಾ ಏ ಬಾ ಮಕ್ಕಾ....ಬೂಂ... ಬಾ.... ಮನಿಕ್ಕಾ....ಹೂಂ... " ಅಂತೇನೋ ಗೊಣಗುತ್ತಿದ್ದರು. ಇನ್ನೂ ಕೆಲವರು ಅಲ್ಲಲ್ಲೇ ಹತ್ತತ್ತು ಜನ ಗುಂಪಾಗಿ ಇಸ್ಪೀಟು ಆಡುತ್ತಿದ್ದರು [ತಿಂಗಳ ಬೆಳಕಲ್ಲಿ], ಬೀಡಿ ಸಿಗರೇಟುಗಳ ಹೊಗೆ ಹೋಮಮಾಡಿದ ರೀತಿಯಲ್ಲಿ ಬರುತ್ತಲೇ ಇತ್ತು! ಹುರಿಗಡ್ಲೆ, ಕಡ್ಲೇ ಬೀಜ[ಶೇಂಗಾ], ಬಟಾಣಿ ಇವನ್ನೆಲ್ಲ ಪಕ್ಕದ ಇಕ್ಕೆಲಗಳಲ್ಲಿ ಬಂದುಕೂತ ತಾತ್ಕಾಲಿಕ ರಟ್ಟಿನ ಪೆಟ್ಟಿಗೆಯ ಅಂಗಡಿಗಳಿಂದ ಖರೀದಿಸಿ ತಿಂದವರು, ಮಕ್ಕಳು ಹೀಗೆ ಹಲವರು ಕೆಟ್ಟ ಕೆಟ್ಟ ಹೂಂಸು ಬಿಡುತ್ತಿದ್ದರು. ಸೀನುವುದು, ಕ್ಯಾಕರಿಸಿ ಕಫ ಉಗಿಯುವುದು, ಮಹಾ ರೋಗ ಹಿಡಿದವರಂತೇ ಆಗಾಗ ಕೆಮ್ಮುವುದು, ಬ್ರಾಂಕೈಟಿಸ್ ಇದ್ದವರು ಶ್ವಾಸದಲ್ಲಿ ಸಪ್ತಸ್ವರ ನುಡಿಸುವುದು-- ಈ ಎಲ್ಲಾ ಕಲಾವಿದರ ಸಹಭಾಗಿತ್ವ ಇದ್ದೇ ಇತ್ತು.


ಅಂತೂ ಬೆನ್ನತ್ತಿದ್ದರೂ ಸಿಗದ ಭೀಮ ತನ್ನ ತೆವಲು ಆದಷ್ಟು ತೀರಿತ್ತಲ್ಲ ಹೀಗಾಗಿ ಮುಸಿಮುಸಿ ನಗುತ್ತ ಅಲ್ಲೆಲ್ಲೋ ಹೇಗೋ ಪಂಚೆಸುತ್ತುಕೊಂಡು ಬಣ್ಣದ ಮನೆಗೆ ಬಂದ! ಆತನಿಗೆ ಬಣ್ಣ ಹಚ್ಚಿ ವೇಷ ಹಾಕಿದ್ದೂ ಆಯಿತು. [ನಡು ನಡುವೆ ಅವರ ಮತುಗಳನ್ನೆಲ್ಲ ಸಮಯದ ಅಭಾವದಿಂದ ಕೈಬಿಟ್ಟಿದ್ದೇನೆ ]

ನಾಟಕ ಅಷ್ಟು ಹೊತ್ತು ಹೇಗೇಗೋ ಭೀಮನಿಲ್ಲದೇ ನಡೆದಿದ್ದು ಅಂತೂ ಭೀಮನ ಪ್ರವೇಶವಾಯಿತು. ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯುವ ಸನ್ನಿವೇಶ ಬಂತು.

" ಏ ಕ್ರಿಷ್ಣಾ ವಾಸುದೇವಾ ಮುರಾರಿ, ಹೈದು ಜನ ಗಂಡಂದಿರಿದ್ದೂ ನನ್ನನ್ನು ಒಬ್ಬರೂ ಕಾಪಾಡಲು ಮುಂದೆಬರುತ್ತಿಲ್ಲವಲ್ಲಾ, ನನ್ನ ಮಾನ ಅರಣವಾಗಿ ಓಗುತ್ತಿದೆ ಕ್ರಿಷ್ಣಾ, ಹೋ ಅಣ್ಣಾ ನೀನು ಬೇಗನೇ ಬಾ ಹಣ್ಣಾ ನೀ ಬೇಗನೇ ಬಾ, ಹೀ ಆರ್ತಳ ಮೊರೆ ಕೇಳದೇ ಹಣ್ಣಾ ನಿನಗೆ ಹೀ ಬಡವಳಮೇಲೆ ದಯೆಬಾರದೇ , ದಯಮಾಡಿ ಏಗಾದರೂ ಬಡ್ಡಿಗಾದರೂ ಕೊಡು [ಎಂದುಬಿಟ್ಟ ಯಾಕೆಂದರೆ ಆತ ಲೇವಾದೇವಿ ವ್ಯವಹಾರದವನಾಗಿದ್ದುದರಿಂದ ಅದೇ ಅಭ್ಯಾಸ!] "

ನಿರ್ದೇಶಕರ ಕಣ್ಣು ಮತ್ತೆ ಕೆಂಪಗಾಯಿತು[ ಕತ್ತಲಲ್ಲೂ ನನಗೆ ಅವರ ಕೆಂಪು ಕಣ್ಣು ಕಾಣುತ್ತಿತ್ತು ಅಂದರೆ ನೀವೇ ತಿಳ್ಕೊಳಿ ಎಷ್ಟು ಕೆಂಪಾಗಿರಬಹುದು ಎಂದು!] ಹಾಗೂ ಅವರು ಸಾವರಿಸಿಕೊಂಡು ಮಾತನ್ನು ತಿದ್ದಿಕೊಟ್ಟರು. ದುಶ್ಯಾಸನ ಸೀರೆ ಎಳೆಯುತ್ತಲೇ ಇದ್ದ. ಕೃಷ್ಣ ಬರಬೇಕಾಗಿತ್ತು. ಬಂದಿರಲಿಲ್ಲ. ಯಾರೋ ಕ್ರಿಷ್ಣನ ಪಾತ್ರ ಮಾಡಿದ ಗಂಗಹನುಮಯ್ಯ[ನಿವೃತ್ತ ಬಿ.ಎಸ್.ಎನ್.ಎಲ್ ವ್ಯವಸ್ಥಾಪಕರು]ರವರಿಗೆ ಭೇದಿ ಶುರುವಾಗಿದೆ ಅದಕ್ಕೇ ಅವರು ಹತ್ತಾರುಸಲ ಭೇದಿ ಮಾಡೀ ಮಡೀ ಸೋತು ಈಗ ಡಾಕ್ಟರನ್ನು ಕಾಣಲು ಹೋಗಿದ್ದಾರೆ ಎಂಬ ಸುದ್ದಿಯನ್ನು ತಂದರು! ನಿರ್ದೇಶಕರ ಫಜೀತಿ ಬೇಕೆ !

ದುಶ್ಯಾಸನ ನಿಲ್ಲಿಸಲೇ ಇಲ್ಲ, ಸೀರೆಯನ್ನು ಎಳೆಯುತ್ತಲೇ ಇದ್ದ! ಬಣ್ಣ ಬಣ್ಣದ ಸೀರೆಗಳೈದಾರನ್ನು ನಿರ್ದೇಶಕರು ದ್ರೌಪದಿ ಪಾತ್ರಧಾರಿಗೆ ಉಡಿಸಿದ್ದರು. ಎಲ್ಲವೂ ಮುಗಿಯುತ್ತಿದ್ದರೂ ಕೃಷ್ಣ ಬರಲಿಲ್ಲ. ವಿಷಯ ಗೊತ್ತಾಯಿತು.
["ರುಖಾವಟ್ ಕೇಲಿಯೇ ಖೇದ್ ಹೈ ಕೇವಲ್ ಆಪತ್ಕಾಲಿಕ ಸೇವಾ ಯೇಹಿ ಅಭೀ ನಹೀ ಮಿಲ್ಸಕ್ತಾಹೈ " [ಬಿ.ಎಸ್.ಎನ್.ಎಲ್]]

ದ್ರೌಪದಿ ಪಾತ್ರ ಮಾಡಿದ ಚಿಕ್ಕಹನುಮಂತರಾಯಪ್ಪ ಅಲ್ಲಲ್ಲಿ ಓಡಾಡುವಾಗ ದುಶ್ಯಾಸನನ ಪಾತ್ರ ಮಾಡಿದ ಮಾಡಿದ ದಫೇದಾರ್ ತಿಮ್ಮೇಗೌಡರ ಮದುವೆಗೆ ಬೆಳೆದುನಿಂತ ಮಗಳನ್ನು ಆಗಾಗ ಚುಡಾಯಿಸುತ್ತಿದ್ದ. ಸಮಯ ಕಾಯುತ್ತಿದ್ದ ತಿಮ್ಮೇಗೌಡರು ಇದೇ ಸರಿಯಾದ ಸಮಯವೇಂದು ತಿಳಿದು ಎಲ್ಲಾ ಸೀರೇಗಳನ್ನೂ ದರದರದರನೇ ಎಳೆದು ಬಿಸಾಕಿ ಬರೇ ಪಟ್ಟಾಪಟ್ಟಿ ಚೆಡ್ಡಿಯೊಂದನ್ನು ಬಿಟ್ಟು ಎಲ್ಲವನ್ನೂ ಕಿತ್ತೂ ಹರಿದೂ ಹಾಕಿಬಿಟ್ಟರು ಮಾತ್ರವಲ್ಲ

" ನನ್ಮಗ್ನೇ ನನ್ ಮಗ್ಳ ಸುದ್ದೀಗ್ ಬತ್ತೀಯಾ, ಆದಿಬೀದೀಲಿ ಓಗ್ವಾಗ ಬರ್ವಾಗ ಇಂದೆ ಬೀಳ್ತಿಯೇನಲೇ ಮಾಡ್ಸ್ತೀನ್ ನಿಂಗೆ ಹಿರು ................................" ಅಂತ ಅವಾಚ್ಯ ಶಬ್ಧಗಳನ್ನೆಲ್ಲ ಉಪಯೋಗಿಸಿ ಬಯ್ಯುವುದರೊಂದಿಗೆ ಚೆನ್ನಾಗಿ ನಾಲ್ಕು ಏಟನ್ನೂ ಕೊಟ್ಟರು. ಅಷ್ಟರಲ್ಲಿ ಯಾರೋ ತಪ್ಪಿಸಿದರು. ಮೂಗಿನಮೇಲೆ ಏಟು ತಿಂದ ’ದ್ರೌಪತಿ’ಯ ಮೂಗಿನಿಂದ ರಕ್ತ ಒಸರಹತ್ತಿತ್ತು. ಅವನನ್ನು ಕೂಡಲೇ ಬಣ್ಣದಮನೆಗೆ [ಡ್ರೆಸ್ಸಿಂಗ್ ರೂಮ್]ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ನೀರು ಸಿಂಪಡಿಸಿ ಅದೂ ಇದೂ ಉಪಚಾರ ಮಾಡಿದ ಮೇಲೆ ಸ್ವಲ್ಪ ಚೇತರಿಸ್ಕೊಂಡ.

ನಿರ್ದೇಶಕರು ಈ ನಡುವೆ ಎಲ್ಲೋ ಎದ್ದು ಹೋದರು. ಅವರ ಕಥೆ ಏನಾಯಿತು ಎನ್ನುವುದು ತಿಳಿಯಲೇ ಇಲ್ಲ. ನಾನೊಬ್ಬ ಮಾತ್ರ ಕಾಡಲ್ಲಿ ಹುಲಿಯನ್ನು ಕಂಡ ಮಂಗ ಮರದಮೇಲೇ ಹಾಗೆ ಹೆದರಿ ಕುಳಿತಂತೇ ಕುಳಿತೇ ಇದ್ದೆ-ಬೆಳಕಿಗಾಗಿ, ಹೊಸಗಾಳಿಗಾಗಿ, ನನ್ನ ಮೂಲ ಸಂಸ್ಕೃತಿಯನ್ನು ಮರಳಿ ಸೇರುವುದಕ್ಕಾಗಿ!

Saturday, July 31, 2010

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ


Friday, July 30, 2010

ಗಾಡಿಕಾರನ ರೂಢಿ



ಗಾಡಿಕಾರನ ರೂಢಿ



ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ




ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

Thursday, July 29, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)


ಶ್ರೀ ಭೈರವೆಶ್ವರ ಯುವಕರ ಸಂಘ(ರಿ)
ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ


ಸರ್ವರಿಗೂ ಹಾದರದ ಸ್ವಾಗತ

-- ಸೊಂಟದ ಕೀಲುಗಳಲ್ಲಿ, ಪಕ್ಕೆಗಳಲ್ಲಿ, ಬೆನ್ನುಹುರಿಯಲ್ಲಿ ಚಳಿಯಾದ ಅನುಭವ !

ಮೇಲಿನ ಸಂಘದವರು ವಾರ್ಷಿಕೋತ್ಸವ ಇಟ್ಟುಕೊಂಡು ಭಾಷಣ ಮಾಡಲು ಕರೆದರು. ಆಮಂತ್ರಣದಲ್ಲಿ ಹೆಸರು ಹಾಕಿಸಿಕೊಂಡೂ ಬಂದಿದ್ದರು. ಆಮಂತ್ರಣ ಓದಿ ತಬ್ಬಿಬ್ಬಾಗಿಬಿಟ್ಟೆ ! ಯಾಕ್ರೀ ಅನ್ನೋದೇ ಸಸ್ಪೆನ್ಸು !

ಆ ಊರಿನ ಒಂಡೆರಡು ಮಂದಿಗೆ ನಾನು ಚೆನ್ನಾಗಿ ಗೊತ್ತಂತೆ, ಹಾಗಾಗಿ " ನೀವೇ ಬರಬೇಕು" ಎಂಬ ಹಠ.

ಆಮಂತ್ರಣ ಮುಂದೆ ಓದಿ --

ಮರೆಯದಿರಿ ಮರೆತು ನಿರಾಶರಾಗದಿರಿ

ದ್ರೌಪತೀ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಹಾಡಿತೋರಿಸಲಿದ್ದಾರೆ.

ವಿಸೇಷ ಆಕರ್ಶಣೆ:- ಚಲುವೇ ಗೌಡರ ಹೊಸ ಸೀನರಿ, ಹೊಸ ಡ್ರಸ್ಸು ,ಏಕಕಾಲಕ್ಕೆ ಅನೇಕ ವಾಧ್ಯಗಳನ್ನು ನೋಡಿ ಆನಂದಿಸಿ

ಪಾತ್ರದಾರಿಗಳು

ಶ್ರೀ ದಫೇದಾರ ತಿಮ್ಮೇಗೌಡರು-ದುಶ್ಯಾಶನ
ಶ್ರೀ ಪೋಲೀಸ್ ಅನುಮೇಗೌಡರು-ಶಕುನಿ
ಶ್ರೀ ಕೇಬಲ್ ಭೈರಪ್ಪ--ಭೀಮ
ಶ್ರೀ ಸಾಹುಕಾರ್ ಚಿನ್ನಪ್ಪ--ಕೌರವ
ಶ್ರೀ ನಂದಿನಿ ಮಾದೇಶ--ಅರ್ಜುನ
ಶ್ರೀ ಜಮೀನ್ದಾರ್ ಜವರಯ್ಯ-ನಕುಲ
ಶ್ರೀ ಮೀಸೆ ಹೊನ್ನಪ್ಪ-ಸಹದೇವ
ಶ್ರೀ ಕಲಾಕಾರ್ ಮಂಜು-ಧರ್ಮರಾಯ
ಶ್ರೀ ಗಂಗಹನುಮಯ್ಯ [ನಿವ್ರೂತ್ತ ಬಿಎಸೆನೆಲ್ ವ್ಯವಸ್ಥಾಪಕರು]-- ಕ್ರಿ ಷ್ಣ
ಶ್ರೀ ಚಿಕ್ಕಹನುಮಂತರಾಯಪ್ಪ-ದ್ರೌಪತಿ
ಸೀನ, ಪುಟ್ಟಣ್ಣ, ರೇವಣ್ಣ, ಕರಿಬಸವ, ಬಸ್ಯ, ವೆಂಕಿ, ಯಲಹಂಕ ಸೋಮು, ಮೈಕೊ ಕ್ರಿಷ್ಣಪ್ಪ,
ದೊಡ್ಡಹನುಮ, ದೊಡ್ಡಗಣೇಷ, ವೆಂಕಟೇಶು, ರಾಜು, ಬಾಬು, ಕಡ್ಡೀಪುಡಿ ಆನಂದ, ತರ್ಲೆರಾಮ, ಗೋವಿಂದು
ಇನ್ನೂ ಅನೇಕರು ವಿವಿಧ ಪಾತ್ರಗಳಲ್ಲಿ ತಮ್ಮನ್ನು ರಂಜಿಸಲಿದ್ದಾರೆ.

ನಾಟಕ ನಿರ್ದೇಶಕರು :- ಹಾಮಾ ಬಾಲಯ್ಯ ಬಣ್ಣ :- ಮೇಕಪ್ ರಾಜು ಕ್ಯಾಸಿಯೋ :- ಪ್ರಕಾಶ್


ಕುಮಾರಿ ಮೆಗಾಶ್ರೀ ಮತ್ತು ಕುಮಾರಿ ಹೇಮಾಶ್ರೀ ಇವರುಗಳಿಂದ ಭರತನಾಟ್ಯ

ಸಭಾ ಕಾರ್ಯಕ್ರಮ :- ರಾತ್ರಿ ೭:೩೦ ರಿಂದ

ಸ್ವಾಗತಗೀತೆ
ಸ್ವಾಗತಭಾಶಣ
ಮಾಲಾರ್ಪಣೆ
ಮುಖ್ಯ ಅತಿಥಿಗಳ ಭಾಶಣ
ಸಂಘದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ
ಅಧ್ಯಕ್ಷರ ಭಾಶಣ
ವಂದನಾರ್ಪಣೆ

ರಾತ್ರಿ ೯:೩೦ ರಿಂದ ವಿವಿಧ ಮನೋರಂಜನಾಕಾರ್ಯಕ್ರಮಗಳು ಹಾಗೂ ದ್ರೌಪತೀ ವಸ್ತ್ರಾಪಹರಣ ನಾಟಕ

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ, ನಿಮ್ಮವರನ್ನೂ ಕರೆತನ್ನಿ
-------------------

--ಇಲ್ಲಿಗೆ ಆಮಂತ್ರಣ ಪತ್ರಿಕೆ ಮುಗಿಯಿತು

ಈಗ ಅಲ್ಲಿ ನಡೆದ ಅನುಭವದ ಬಗ್ಗೆ ಕೇಳಿ

ಅವತ್ತು ಈ ಸಂಘದ ವತಿಯಿಂದ ಬಾಡಿನ ಊಟ ಎರ್ಪಾಟಾಗಿತ್ತಂತೆ ! ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಗ್ರಾಮಸ್ಥರು, ಪರಊರವರು, ಅವರವರ ನೆಂಟರಿಷ್ಟರು ಎಲ್ಲಾ ಸೇರಿ ಸರಿಸುಮಾರು ೩ಸಾವಿರ ಜನರಿದ್ದರು.ಸಭೆಗೆ ಬರುವಾಗಲೇ ಅಲ್ಲಿ ಕುಳಿತ ಕೆಲವರ ಹತ್ತಿರದಿಂದ ಪಾಸಾಗಿ ಬರುವಾಗ ಹುಳಿ ಹುಳಿ ವಾಸನೆ ಬರುತ್ತಿತ್ತು.
ಸಂಜೆ ಸಭೆ ಶುರುವಾಯ್ತು.

" ಈಗ ಸ್ವಾಗತ ಗೀತೆ-ಕುಮಾರಿ ರಶ್ಶಿತಾರವರಿಂದ "

ಸ್ವಾಗತವೂ ನಿಮಗೆ ಸುಸ್ವಾಗತವೂ ನಿಮಗೆ --ಸ್ವರ ಹೊರಟಾಗ ಡಬ್ಬುಹಾಕಿಕೊಂಡ ಕಿವಿ ಮತ್ತೆತೆರೆಯುವುದೇ ಇಲ್ಲವೇನೋ ಅಂದುಕೊಂಡಿದ್ದೆ. ಅಂತೂ ಮುಗಿಯಿತು, ಉಸ್ಸಪ್ಪಾ! ಶ್ಶು...

" ಈಗ ಸ್ವಾಗತ ಭಾಷಣ- ನಮ್ಮ ಸಂಘದ ಸದಸ್ಯರಾದ ಗೋವಿಂದುರವರಿಂದ"

" ಮಾಹನೀಯರೇ ಮಹಳಿಯರೇ ಮತ್ತು ನಮ್ಮ ಸಂಘದ ಪದಾಧಿಕಾರಿಗಳೇ, ಈಗ ಸ್ವಾಗತ ಭಾಷಣವನ್ನುಮಾಡುವಂತೆ ನಮ್ಮ ಹಿರಿಯ ಸದಸ್ಯರಾದಂತ ವೆಂಕಿರವರು ಹೇಳಿದರು. ಅವರ ಮಾತನ್ನು ಮನ್ನಿಸಿ ಈಗ ಸುರುಮಾಡುತ್ತೇನೆ.
ಮೊದಲ್ನೇದಾಗಿ ಗಣ್ಯರಾದಂತಹ ಶ್ರೀ ವಿ.ಆರ್.ಭಟ್ಟರು ಬೆಂಗಳೂರಿಂದ ನಮ್ಮ ಕರೆಗೆ ಹೋ ಗೊಟ್ಟು ಹಿಲ್ಲೀತಂಕ ಬಂದಿದಾರೆ ಹವರಿಗೆ ಹಾದರದ ಸ್ವಾಗತ.

ಎರಡ್ನೇದಾಗಿ ನಮ್ಮ ಸನ್ಮಾನ್ಯ ಅಧ್ಯಕ್ಸರಾದಂತ ಶ್ರೀ ಚೆಲುವಯ್ಯನೋರು ಬಹಳ ಮುಂಚಿತವಾಗಿ ಬಂದು ಹೀ ಸ್ಥಾನವನ್ನು ಹಲಂಕರಿಸಿದ್ದಾರೆ ಹವರಿಗೂ ಸ್ವಾಗತ.

ಮೂರನೇದಾಗಿ ಅನೇಕ ಅಳ್ಳಿಗಳಿಂದ ತಾವೆಲ್ಲಾ ಬಂದು ಸೇರಿದ್ದೀರಿ ತಮಗೆಲ್ಲಾ ಸುಸುಸ್ವಾಗತ.

ಇನ್ನು ನಾಲ್ಕನೇದಾಗಿ ನಮ್ ಗ್ರಾಮಸ್ಥರು ಹಿರೀಕ್ರು ಎಲ್ಲಾ ಬಂದವ್ರೆ, ಮಕ್ಳು-ಮರಿಗೊಳ್ನ ಎತ್ಕಂಡು ತಮ್ಮ ಅಲವಾರು ಕಷ್ಟಗೋಳ ಮಧ್ಯೆನೂವೆ ನಮ್ಮ ಎಂಗುಸ್ರೆಲ್ಲಾ ಬಂದವ್ರೆ ಅವರೆಲ್ಲರಿಗೂ ಸ್ವಾಗತ ಸುಸ್ವಾಗತ.

ಇನ್ನು ಕೊನೇಕಿತ ನಮ್ ಸಂಘದ ಕಾರ್ಯದರ್ಸಿಗೋಳಾದಂತ ಶ್ರೀಮಾನ್ ಪರಮೇಶಿ ಇದ್ದಾರೆ ಹಾಗೂ ಅನೇಕ ಸದಸ್ಯರುಗೋಳು ಬಂದವ್ರೆ, ತಮ್ಮ ಇರೋಬರೋ ಕೆಲ್ಸಾನೆಲ್ಲ ಪಕ್ಕಕ್ ಮಡೀಕಂಡು ಬಂದವ್ರೆ ಇದೆಲ್ಲಾ ಯಾಕೇಳಿ ನಮ್ಮೂರ್ ಜನ್ಕೆ ಒಸಿ ಸಂತೋಸಾಗ್ಲಿ, ವರ್ಸದಾಗ ಒಂದ್ಕಿತಾ ಈ ತರ ಕಾರ್ಯಕ್ರಮ್ಗೋಳ್ನ ಮಡೀಕಂಡ್ರೆ ಎಲ್ಲಾ ಚೆನ್ನಾಗಿರ್ತೈತೆ ಹಂತ ಅಮ್ಮಕೊಂಡೀವಿ, ತಮ್ಮೆಲ್ಲರ್ಗೂನೂವೆ ಹಾದರದ ಸ್ವಾಗತ.

ಇಷ್ಟು ಏಳಿ ನನ್ನ ಚಿಕ್ಕ ಭಾಶಣ ಮುಗಸ್ತಾ ಇದೀನಿ ನಮುಸ್ಕಾರ, ಜೈಹಿಂದ್, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ "

ನನಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

" ಈಗ ಮಾಲಾರ್ಪಣೆ ನಮ್ಮ ಸಂಘದ ಕಾರ್ಯದರ್ಸಿಗಳಾದಂತ ಸ್ರೀಮಾನ್ ಪರಮೇಶಿ ಎಲ್ಲಿದ್ರೂ ಅರ್ಜೆಂಟಾಗಿ ಸ್ಟೇಜಿನ್ ಮ್ಯಾಕೆ ಬರ್ಬೇಕು "

ಆಕಡೆ ಈಕಡೆ ಆಕಡೆ ಈಕಡೆ ಕತ್ತಾಡಿಸಿ ಹುಡುಕಾಡಬೇಕಾಯ್ತು ಹಾರಹಾಕುವವರಿಗಾಗಿ! ಅಂತೂ ಪರಮೇಶಿ ಬಂದ್ರು.

"ಮೊದಲನೇ ದಾಗಿ ನಮ್ಮ ಮುಖ್ಯ ಹತಿಥಿ ಸ್ರೀ ವಿ.ಆರ್.ಭಟ್ ರವರಿಗೆ ಮಾಲಾರ್ಪಣೆ "

" ಏ ಬಸ್ಯಾ ಹೊಡೀರ್ಲಾ ಚಪ್ಪಾಳೆನಾ ಏನ್ ಹಾಂಗ್ ಮಕಮಕ ನೋಡ್ತಾಯ್ಕಂಡ್ರಿ ? " --ಇದೂ ಅನೌನ್ಸರ್ ಹೆಳಿದ್ದೇ ಆಗಿದೆ!

" ಎರುಡ್ನೇ ದಾಗಿ ನಮ್ ಅಧ್ಯಕ್ಸರೂಗೆ ಮಾಲಾರ್ಪಣೆ "

ಸಭೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ಅಲ್ಲಿನ ಎಮ್.ಎಲ್.ಏ ಬಂದ್ರು. ಅವರನ್ನು ಕಂಡವ್ರೇ ಸಂಘದ ಅಧ್ಯಕ್ಷರು ಪರಮೇಶಿಯವರನ್ನು ಪಕ್ಕಕ್ಕೆ ಕರೆದು ಕೇಳಿದರು " ಪರಮೇಶಿ ಎಸ್ಟ್ರಾ ಆರ ತಂದಿದ್ದು ಐತೇನ್ಲಾ ಒಳೀಕ್ಕೆ ?"
ಪರಮೇಶಿ ಎದ್ನೋ ಬಿದ್ನೋ ಅಂತ ಗ್ರೀನ್ ರೂಮ್ ಕಡೆ ಚೆಕ್ ಮಾಡೋಕೆ ಹೋದ್ರು.

ಅನೌನ್ಸರ್ ಘೋಷಿಸಿದ " ಇದೀಗ ತಾನೇ ಸನ್ಮಾನ್ಯ ಎಮ್ಮೆಲ್ಲೆ ಸಾಹೇಬ್ರು ಸೋಮಣ್ಣ ಬಂದವ್ರೆ, ತಮ್ಮ ಬಿಡುವಿಲ್ದ ಕಾರ್ಯಗೋಳ ನಡುವೆ ಬರಕಾಯಾಕಿಲ್ಲ ಅಂದಿದ್ದ್ರೂನೂವೆ ಹಿಂದು ಬಂದವ್ರೆ ಹವರಿಗೆ ಹಾದರದ ಸ್ವಾಗತವನು ಕೋರುತ್ತೇವೆ "

" ಈಗ ಸನ್ಮಾನ್ಯ ಎಮ್ಮೆಲ್ಲೆ ಸೋಮಣ್ಣೋರ್ಗೆ ನಮ್ಮ ಅಧ್ಯಕ್ಸರಿಂದ ಆರಾರ್ಪಣೆ"

--ಇದೆಲ್ಲಾ ಮುಗೀತು. ನನಗೆ ಬಳಸುವ ಅಪ್ಪಟ ಕನ್ನಡ ನೋಡಿ ಬಹಳ ನಗುಬರುತ್ತಿತ್ತು, ಒಮ್ಮೊಮ್ಮೆ ವಿಷಾದವೂ ಆಗುತ್ತಿತ್ತು!

ನಮ್ಮ ಹತ್ತಿರ ಬಂದ ಅನೌನ್ಸರ್ ಯಾರು ಮೊದಲು ಭಾಷಣಮಾಡುತ್ತಾರೆ ಅಂತ ಕೂಗಲಿ ಎಂದು ಕಿವಿಗಳಲ್ಲಿ ಕೇಳಿದರು. ಅಂತೂ ನಮ್ಮೊಳಗೆ ತೀರ್ಮಾನವಾಗಿ ಮೊದಲು ನಾನೇ ಮಾತನಾಡಬೇಕೆಂದುತಿಳಿದುಬಂತು. ನಾನು ಮಾತನಾದಲು ನಿಂತೆ. ನನ್ನ ಬಾಯಿಂದ ಮಾತು ಹೊರಬರುವ ಪ್ರತೀ ಹಂತದಲ್ಲಿ ನನಗೆ ನಗು ಉಕ್ಕರಿಸಿ ಬರುತ್ತಿತ್ತು. ನನ್ನ ಭಾಷಣವನ್ನು ಕೇಳುವ ರುಚಿ-ಅಭಿರುಚಿ ಇದ್ದವರು ಅಲ್ಲಿ ಯಾರೂ ಇದ್ದಹಾಗಿಲ್ಲ ಎಂಬ ನನ್ನ ಅನಿಸಿಕೆ ನಿಜವಾಗಿತ್ತು. ನನ್ನ ಭಾಷಣದ ಅರ್ಥವನ್ನು ಕೇಳಿದರೆ ಬಹುಶಃ ರಾಮನಿಗೆ ಸೀತೆ ಏನಾಗಬೇಕು ಎಂದು ರಾಮಾಯಣ ಕೇಳಿದವರಲ್ಲಿ ಪ್ರಶ್ನಿಸಿದರೆ ಸೀತೆ ರಾಮನಿಗೆ ತಂಗಿ ಅಂದಹಾಗಾಯ್ತು ಅಂದ್ರಂತೆ-- ಈ ಥರ ಆಗಿತ್ತು. ಕೆಲವೊಮ್ಮೆ ಹೀಗೇ ಆಗಿಬಿಡುತ್ತದೆ. ನಾವು ಬರಲಾಗುವುದಿಲ್ಲ ಎನ್ನಲಾಗುವುದಿಲ್ಲ, ಹೋಗದಿದ್ದರೆ ನಮಗೆ ಸೊಕ್ಕು ಅಂತಾರೆ ಹೋದರೆ ಈ ರೀತಿ ’ ಆರಾರ್ಪಣೆ’ !

" ಸಂಘದವರ ಚಟುವಟಿಕೆಗಳ ಬಗ್ಗೆ ಹಾಗೂ ಜನೋಪಕಾರೀ ಕೆಲಸಗಳ ಬಗ್ಗೆ ಕೇಳಿದ್ದೇನೆ, ಪ್ರೀತಿಯಿಂದ ಸಂಘದ ಸದಸ್ಯರ ಆಹ್ವಾನಕ್ಕೆ ಬೆಲೆಕೊಟ್ಟು ತಾವೆಲ್ಲಾ ಇಲ್ಲಿ ಬಂದು ಸೇರಿದ್ದೀರಿ, ಇದು ನನಗೆ ಬಹಳ ಸಂತೋಷ "

ಹೇಳುತ್ತಿರುವಾಗಲೇ ಮುಂದಿರುವ ಕೆಲವು ಗಂಡಸರು ಗೊರೆಯುವುದು ಕೇಳಿಸಿತು. ಹಿಂದೆ ಕತ್ತಲಲ್ಲಿ ಯಾರ್ಯಾರೋ ಏನೇನೋ ಬಡಬಡಾಯಿಸುತ್ತಿದ್ದರು. ನನ್ನ ಮಾತು ಅತ್ಯಂತ ಬೇಗ ಮುಗೀತು-ಇದರರ್ಥ ಜಾಸ್ತಿ ನನ್ನ ಮಾತಿನ ಅವಶ್ಯಕತೆ ಅಲ್ಲಿ ಕಂಡುಬರಲಿಲ್ಲ. ಸಂಘದವರು ಪಾಪ ಭಕ್ತಿಯಿಂದ ಕರೆದಿದ್ದಾರೆ-ಹೋಗಿದ್ದೇನೆ. ಅದಕ್ಕೇ ಸ್ವೀಟ್ ಆಂಡ್ ಶಾರ್ಟ್ ಆಗಿ ಮುಗಿಸಿಬಿಟ್ಟೆ.

" ಈಗ ನಮ್ಮ ಎಮ್ಮೆಲ್ಲೆ ಸ್ರೀ ಸೋಮಣ್ಣೋರು ಸಭಿಕರನ್ನುದ್ದೇಸಿಸಿ ಹೆರಡು ಮಾತನ್ನಾಡಲಿದ್ದಾರೆ "

ಶ್ರುವಾಯ್ತು ನೋಡಿ, ಹನ್ನೆರಡು ಇಂಚಿನ ಡ್ರಿಲ್ ಬಿಟ್ಟಿನ ಕೊರೆತ ಹಾಗೂ ಮೊರೆತ, ಇಡೀ ಸಭೆ ನಿದ್ದೆಮಾಡುತ್ತಿತ್ತು ಎನ್ನಬೇಕು, ಎಮ್ಮೆಲ್ಲೆ ಬಾಲಬಡುಕರು ನೂರಾರು ಜನರನ್ನ " ಏ ಬನ್ರೋ " ಅಂತ ಅವ್ರೇ ಎಬ್ಬಿಸ್ಕೊಂಡು ಬಂದಿದ್ರು. ಅವರೆಲ್ಲ ಅಲ್ಲಲ್ಲಿ ಕೂತವರು ವಿಧಿಯಿಲ್ಲದೇ ಚಪ್ಪಾಳೆ ತಟ್ಟುತ್ತಿದ್ದರು! ಅಂತೂ ೩೦ ನಿಮಿಷಗಳ ಡ್ರಿಲ್ ಈಗ ನಿಂತಿತು.

" ಈಗ ನಮ್ಮ ಸಂಘದ ಅಧ್ಯಕ್ಸರಾದಂತ ಸ್ರೀಮಾನ್ ಸ್ರೀ ಚಲುವಯ್ಯರವರು ತಮ್ಮ ಹಭಿಪ್ರಾಯವನ್ನು ತಮ್ಮೊಡನೆ ಅಂಚಿಕೊಳ್ಳಲಿದ್ದಾರೆ"

ಚಲುವಯ್ಯನವರು ಶುದ್ಧ ಗ್ರಾಮ್ಯ ಭಾಷೆಯಲ್ಲಿ ಕೊರೆದಿದ್ದೇ ಕೊರೆದಿದ್ದು! ಇಡೀಸಭೆಯಲ್ಲಿ ಪಿನ್ ಡ್ರಾಪ್ ಸೈಲನ್ಸ್ ! ಕಾರಣ ಗೊತ್ತೇ- ಎಲ್ಲರೂ ನಿದ್ದೆಮಾಡುತ್ತಿದ್ದರು. ಸಂಘಕ್ಕೆ ಹೊಸದಾಗಿ ಸೇರಿದ ಪಡ್ಡೆಗಳಷ್ಟು ಜನ ಮಧ್ಯೆ ಮಧ್ಯೆ ಕೂತವರು ಟಪ ಟಪ ಟಪ ಟಪ ಅಂತ ನಿಲ್ಲಿಸಿ ಎನ್ನುವವರೆಗೂ ಚಪ್ಪಾಳೆ ತಟ್ಟುತ್ತಿದ್ದರು, ಅದು ಅವರ ಅಧ್ಯಕ್ಷರಮೇಲಿನ ಅಭಿಮಾನದಿಂದ. ವೇದಿಕೆಯ ಪರದೆಯ ಹಿಂದೆ ಯಾವುದೋ ಪಡ್ಡೆ ಹೇಳುತ್ತಿತ್ತು " ನಮ್ ಚಲವಯ್ಯೋರು ಯಾರ್ಗೂ ಬಿಟ್ಕೊಡಾಕಿಲ್ಲ, ಭಾಳ ಚನ್ನಾಗ್ ಮಾತಾಡ್ತರೆ, ಯಾರೂ ಎಲ್ಲಿದ್ರೂನೂವೆ ಚಪ್ಪಾಳೆ ತಟ್ಟಬೇಕು ಕಣಪ್ಪೋ"
ಮುಗೀತು!

"ಈಗ ಹೊಂದನಾರ್ಪಣೆ ನಮ್ಮ ಸಂಘದ ಹಿರಿಯ ಸದಸ್ಯರಾಗಿರತಕ್ಕಂತಹ ಶಾಂಭಪ್ಪನವರಿಂದ "

" ಮಾನ್ಯ ಅಧ್ಯಕ್ಸರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ " -ಏನಪ್ಪಾ ಇದು ಎಂದು ಆಶ್ಚರ್ಯವಾಯಿತು.
"ಶಾಂಭಪ್ಪಾ ಅದು ಸ್ಕೂಲ್ದು ಕಣ್ಲಾ, ಸಂಘದ್ದೇಳ್ಲಾ " ಅಂತ ಅನೌನ್ಸರ್ ಹೇಳಿದ್ದು ಮೈಕ್ ನಲ್ಲಿ ಎಲ್ಲರಿಗೂ ಕೇಳಿಸಿತು, ಆದರೆ ಯಾರೂ ನಗಲಿಲ್ಲ : ಕಾರಣ ನೀವೇ ಊಹಿಸಿಕೊಳ್ಳಿ. ಮತ್ತೆ ಮುಂದುವರೀತು.

" ನನ್ನ ಹೊಂದನಾರ್ಪಣೆ ಮಾಡಕಾಕವ್ರೆ, ಗೊತ್ತಿದ್ದಷ್ಟ್ ಏಳ್ಬುಡು ಅಂದ್ರು. ನಮ್ಗೆಲ್ಲಾ ತೀರಾ ಭಾಶಣ ಮಾಡಕಾಯಾಕಿಲ್ಲ. ಅದ್ಕೇ ಒಸಿ ಅಡ್ಜಸ್ಟ್ ಮಾಡ್ಕೋಬುಡಿ. ತಪ್ಪ್ನೆಲ್ಲಾ ನಿಮ್ಮ್ ಹೊಟ್ಟೆವಳೀಕಾಕೊಂಬುಡಿ. ಮೊದಲ್ನೇ ದಾಗಿ ಇಲ್ಲಿಗೆ ಭಾಶಣ ಮಾಡಲು ಬಂದಿರತಕ್ಕಂತಹ ಸ್ರೀ ವಿ.ಆರ್.ಭಟ್ಗೆ ಹೊಂದನೆಗಳು. ಎರಡ್ನೇದಾಗಿ ಸನ್ಮಾನ್ಯ ಹೆಮ್ಮೆಲ್ಲೆ ಸಾಏಬ್ರು ಕುಂತವ್ರೆ ಹವರ್ಗೂ ಹೊಂದನೆಗಳು. ಮೂರ್ನೇದಾಗಿ ನಮ್ಮ್ ಪಕ್ಕದಳ್ಳಿ ಕಡೆಗಿಂದೇಲ್ಲಾ ಕಿತ್ತೆದ್ ಬಂದಾರಲ್ಲ ಅಂತವ್ರಗೆಲ್ಲ ಹೊಂದನೆಗಳು. ಈ ಕಿತಾ ನಮ್ಮೂರ್ ಜನಗೋಳ್ಗೆ ಎಲ್ರೂಗೂನು ಹೊಂದನೆಗಳು. ನಾಟಕದಾಗೆ ನನ್ನ ಪಾರ್ಟ್ ನೋಡೋಕೋಸ್ಕರ ನಮ್ಮ ಅತ್ತೆ-ಮಾವ,ಬಾಮೈದ ಎಲ್ಲಾದಿರು ಬಂದವ್ರೆ ಅವ್ರಗೆಲ್ಲಾನುನೂವೆ ಹೊಂದನೆಗಳು. ನಮ್ ಸಂಘ ಭಾಳ ಚೆನ್ನಾಗಿ ಕೆಲ್ಸ ಮಾಡ್ತೈತೆ, ಗಣೇಶಬ್ಬ, ಊರಬ್ಬ ಇದೆಲ್ಲಾ ಮಾಡೋದು, ಅಂದಾನ, ರಸ್ತೆರಿಪೇರಿ,ರಕ್ತದಾನ ಇದೆಲ್ಲಾ ಮಾಡ್ತವ್ರೆ ನಮ್ ಹೈಕ್ಳು ಅವ್ರೀಗೆಲ್ಲಾನುನೂವೆ ಹೊಂದನೆಗಳು,ಇಲ್ಲಿಗೆ ನನ್ನ ಭಾಷಣ ಮುಗುಸ್ತೀನಿ, ನಂಗೆ ಭಾಶಣಮಾಡೋದು ಕಲ್ಸಬುಟ್ಟು ಹೀಂಗ್ ನಿಂತ್ಕಾ, ಚೀಟಿ ಹೀಂಗ ಮಡೀಕಾ ಅಂತೆಲ್ಲಾ ಹೇಳ್ಕೊಟ್ಟು ನಮ್ಮನ್ನು ಬೆಳ್ಸಸದ ನಮ್ ಅಧ್ಯಕ್ಸರುಗೆ ನನ್ನ ನಮಸ್ಕಾರ"

" ಇಲ್ಲಿಗೆ ಸಭಾ ಕಾರ್ಯಕ್ರಮ ಮುಗೀತು, ಈಗ ಭರತನಾಟ್ಯ ಸುರುವಾಗ್ತೈತೆ, ಎಲ್ಲಾ ಅಲ್ಲಲ್ಲೇ ಕೂತಿದ್ದು ಸಾಂತರೀತಿಯಿಂದ ನೊಡ್ಬೇಕು ಹಂತೇಳಿ ಪ್ರಾರ್ಥನೆ "

ಅಯ್ಯಯ್ಯೋ ರಾಮ ! ಅಂತೂ ಸಭೆ ಮುಗೀತು. ನಂತ್ರ ಮುಂದೆ ಕೂತು ಮಜಾ ತಗೋಬೇಕಲ್ಲ! ದೂರದ ಹಳ್ಳಿಗಾಡು ಬೇರೆ. ರಾತ್ರಿ ವಾಹನ ಸೌಲಭ್ಯ ಇರೋದಿಲ್ಲ. ಅದಕ್ಕಿಂತ ಬಂದದ್ದಕ್ಕೆ ಅಲ್ಲೇ ಮುಂದೆ ಕೂತು ಬೆಳಗುಮಾಡುವ ಪರಿಸ್ಥಿತಿ ನನ್ನದಾಗಿತ್ತು!

[ಮುಂದಿನ ಭಾಗದಲ್ಲಿ ನಾಟಕದ ಬಗ್ಗೆ ಓದಿ- ಒಂದೆರಡು ದಿನಗಳಲ್ಲಿ!]

Wednesday, July 28, 2010

ಹೊಲಸು ಹೊರುವರು ನಾವು !!



ಹೊಲಸು ಹೊರುವರು ನಾವು !!

[ಇಂದಿನ ರಾಜಕೀಯದ ಜನರ ಕುರಿತು, ಅವರನ್ನು ಆಯ್ದು ಕಳಿಸಿದ ನಮ್ಮ ಮಂಕು ಬುದ್ಧಿಯ ಕುರಿತು ಈ ವಿಪ್ಲವದ ಕವನ]

ಹೊಲಸು ತುಂಬಿದ ಬುಟ್ಟಿ
ಹೊತ್ತು ನಾವೀವತ್ತು
ಕಳೆಗುಂದಿ ಕುಳಿತಿಹೆವು ಮಂಗನಂತೆ !
ಕಳಿಸುವಾಗಿರಲಿಲ್ಲ
’ತಲೆ’ ನಮಗೆ ತಲೆಯಲ್ಲಿ
ಬಿಳಿಹಂದಿ ಆನೆಗಳು ಬೆಳೆದವಂತೆ!

ಹಳೆಯ ಪೈಜಾಮಿನಲಿ
ಹಲವತ್ತುಕೊಳುತಾಗ
ಬಂದಿದ್ದ ಹಲವರನು ನಾನು ಕಂಡೆ
ಕಳೆಕಳೆಯ ಹೊಸ ವೇಷ
ಹೊಸ ಭಾಷೆ ಹೊಸ ಬದುಕು
'ಬಂದಿದ್ದು ಏಕೆಂಬ' ಮಾತನುಂಡೆ!

ಇಪ್ಪತ್ತು ಅಂಶಗಳ
ಜನಸೇವೆ ತಮದೆನುತ
ಒಪ್ಪತ್ತು ಊಟಕ್ಕೂ ಸೈ ಎಂದರಾಗ
ಒಪ್ಪುತ್ತ ಭೂರಮೆಯ
ಭಾರ ಕಳೆಯುವೆವೆಂದು
ತಪ್ಪುದಾರಿಗೆ ಎಳೆದು ಬದಲಿಸುತ ರಾಗ !

ಜನತೆ ಸುಖಿಸುವುದಕ್ಕೆ
ಘನಥರದ ಕಾರ್ಯಗಳ
ಮನವಿಟ್ಟು ಮಾಡುವುದು ಅವರಿತ್ತ ವಚನ
ಘನತೆಗಪ್ಪುದು ಕುಂದು
ಗಣಿಧಣಿಗಳಿಲ್ಲದಿರೆ
ಗಹನವಾಗಿದೆ ಗಾತ್ರ ಆಗಿಲ್ಲ ಪಚನ !

ಮನುಕುಲದ ಮುನ್ನಡೆಗೆ
ತನುಮನದ ಸಹಕಾರ
ಕನವರಿಸಿ ನಡೆಸುವೆವು ಕಾಲ್ನಡಿಗೆಯೆನುತ
ಅನುಕೂಲಕೊಂದು ಥರ
ಜನಜಾತ್ರೆ ಹೊಮ್ಮಿಸುತ
ತನುಕುಣಿಸಿ ಕೈ ತೋರಿ ಹಲವಾರು ಕುಣಿತ !

ಸೌಧದಲಿ ಸಭೆಗಳಲಿ
ವಾದ ಮಂಡಿಸುವಾಗ
ಬಾಧಿಸುವುದವುಗಳಿಗೆ ಅಸಹ್ಯ ರೋಗ !
ಕೌದಿ ಹೊದ್ದುದ ಮರೆತು
ಬೈದಾಡಿ ಕಬ್ಬರಿದು
ಕಾದಾಟನಡೆಸಿ ಸಭ್ಯತೆಮರೆವರಾಗ

ನಮ್ಮನಾಳುವ ಜನಕೆ
ಬಿಡಲೊಮ್ಮೆ ಬಾಣವನು
ಇರುತಿಲ್ಲ ನಮ್ಮಕಡೆ ಸಿದ್ಧ ಬತ್ತಳಿಕೆ
ತಿಮ್ಮ ಯಂಕರ ಕರೆದು
ಭುಜ ತಟ್ಟಿ ಹೊಗಳುವರು
ಬರುತಿಲ್ಲ ನಮಗೆಲ್ಲ ಬುದ್ಧಿ ಯಾತಕ್ಕೆ ?