ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 7, 2010

ರಾಜ ನೀತಿ

ಇವತ್ತಿನ ದಿನಮಾನವನ್ನು ನೆನೆಸಿಕೊಂಡರೆ ಒಮ್ಮೆ ನಗುವೂ ಇನ್ನೊಮ್ಮೆ ವಿಷಾದವೂ, ಮಗುದೊಮ್ಮೆ ಭಯವೂ, ಮತ್ತೊಮ್ಮೆ ಕ್ಲೇಶವೂ ಆವರಿಸುತ್ತದೆ. ಕಾರಣ ಹುಡುಕಿದರೆ ಧುತ್ತನೆ ಎದುರಾಗುವುದು ಪ್ರಕ್ಷುಬ್ಧ ರಾಜಕೀಯ! ಎಲ್ಲಿಲ್ಲ ರಾಜಕೀಯ ಹೇಳಿ? ದಿಲ್ಲಿಯಲ್ಲಿರಬೇಕಾದ ರಾಜಕೀಯ ಹಳ್ಳಿಯ ಮೂಲೆ ಮೂಲೆಗೂ ತಲುಪಿ ಹುಲುಸಾಗಿದ್ದ ಜೀವನ ಹೊಲಸಾಗಿಬಿಟ್ಟಿದೆ! ಮಿತ್ರರು, ದಾಯದಿಗಳು ಹೆಚ್ಚೇಕೆ ಮನೆಮಂದಿಯೇ ತಮ್ಮೊಳಗೆ ಪಕ್ಷಪಂಗಡವೆಂತ ಹೊಡೆದಾಡಲು ತೊಡಗಿರುವುದು ಈ ದುರಂತ ರಾಜಕೀಯದ ಅಪಶ್ರುತಿ ಫಲಶ್ರುತಿ. ಸಿಂಹದ ಹೊಟ್ಟೆಯಲ್ಲಿ ಹೇಗೆ ಸಿಂಹವೇ ಜನಿಸುವುದೋ ನರಿಯ ಹೊಟ್ಟೆಯಲ್ಲಿ ಹೇಗೆ ನರಿಯೇ ಹುಟ್ಟುವುದೋ ಹಾಗೇ ಖೂಳರೇ ತುಂಬಿದ ರಾಜಕೀಯದಲ್ಲಿ ಮತ್ತೆ ಸಾಕಷ್ಟು ಖೂಳರು ಸೇರಿಕೊಳ್ಳುತ್ತಿದ್ದಾರೆ. ರಾಜಕೀಯವೆಂದರೆ ಅದೊಂದು ಅಘೋಷಿತ ’ಸಮಾನ ಮನಸ್ಕ ದುಡ್ಡುಮಾಡುವವರ ಸಹಕರ ಸಂಘ’! ಅಲ್ಲಿ ಒಬ್ಬರಿಗೊಬ್ಬರು ಪಕ್ಷಭೇದ ಮರೆತು ಒಳಗೊಳಗೆ ಮಿತ್ರರಾಗಿರುತ್ತಾರೆ,ಆಗಾಗ ದೂರವಾಣಿಯಲ್ಲಿ ಮಾತನಾಡುತ್ತ ಹರಟುತ್ತ ಪರಸ್ಪರರ ವೈಯ್ಯಕ್ತಿಕ ಹಿತಾಸಕ್ತಿಗಳಿಗೆ ಸೊಪ್ಪುಹಾಕುತ್ತಿರುತ್ತಾರೆ ! ಎನೂ ಅರಿಯದ ಮುಗ್ಢ ಜನಸಾಮಾನ್ಯ ಪಕ್ಷದ ಹೆಸರಿನ ರಾಜಕೀಯದಲ್ಲಿ ಬಲಿಪಶುವಿನರೀತಿ ಬದುಕುತ್ತಿದ್ದಾನೆ. ’ಯಾರು ಬಂದ್ರೂ ಇಷ್ಟೇ ಹಣೆಬರಹ’ ಎಂದುಕೊಂಡು ಸುಮ್ಮನಾಗಿ ಪಾಲಿಗೆ ಬಂದ ತಲೆಯಮೇಲಿನ ತಲಗಂದಾಯವನ್ನು ಸಂದಾಯಮಾಡುತ್ತ ರಾಜಕೀಯದವರ ಡೊಂಬರಾಟಕ್ಕೆ ಪರೋಕ್ಷ ದೇಣಿಗೆ ನೀಡುತ್ತ ಬದುಕು ಸವೆಸುತ್ತಿದ್ದಾನೆ.

ರಾಜಕೀಯದಲಿ ಇಂದು ಮುತ್ಸದ್ಧಿಗಳು ದೂರ್ವಾಗುತ್ತಿದ್ದಾರೆ, ಇನ್ನೇನಿದ್ದರೂ ಅದು ಕನಸಿನ ಮಾತೇ ಸರಿ! ಇನ್ನು ಮುಂದೆ ರಾಜಕೀಯ ಬರೇ ರೌಡಿಗಳ,ಕಿಡಿಗೇಡಿಗಳ,ಖೂಳರ ಅಧಿಕೃತ ಅಡ್ಡೆಯಾಗಿ ಮಾರ್ಪಡುತ್ತದೆ. ಯಾವ ಹಿಂದೂಸ್ಥಾನದಲ್ಲಿ,ಯಾವ ಭಾರತದಲ್ಲಿ ಅಮೇರಿಕದ ಥರ ಕೇವಲ ಎರ್‍ಅಡು ದೊಡ್ಡಪಕ್ಷಗಳಿರಬೇಕಿತ್ತೋ ಅಂಥಲ್ಲಿ ಈಗ ಸಾವಿರಾರು ಪಕ್ಷಗಳಿವೆ, ಮನೆಗೊಂದು,ಜಾತಿಗೊಂದು,ಗಲ್ಲಿಗೊಂದು,ಹಳ್ಳಿಗೊಂದು ಹೀಗೇ ಪಕ್ಷಗಳಿಗೆ ಲೆಕ್ಕವೇ ಇಲ್ಲ. ದುಡ್ಡಿದೆಯಾ ಬನ್ನಿ ಪಕ್ಷಮಾಡೋಣ! ನನಗೆ ಸೀಟು ಸಿಕ್ಕಿಲ್ಲ, ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ, ನನಗೆ ಬೇಕಾದ ಖಾತೆ ಸಿಕ್ಕಿಲ್ಲ, ನನಗೆ ಪಕ್ಷದಲ್ಲಿ ಆದ್ಯತೆ ಸಿಕ್ಕಿಲ್ಲ --ಎಂಬೀಥರದ ಕ್ಷುಲ್ಲಕ ಕಾರಣಗಳಿಂದ ಪಕ್ಷಾಂತರ ಅಥವಾ ಹೊಸ ಪಕ್ಷದ ಉದಯ! ನ್ಯಾಯ ನೀತಿ ಕೇವಲ ಬೋರ್ಡಿನಲ್ಲಿರುವ ಅಂಕಿಅಂಶಗಳು! ’ಮೌಲ್ಯಯುತ ರಾಜಕಾರ್‍ಅಣ’ ಎಂಬ ಹೇಸಿಗೆ ಹುಟ್ಟಿಸಿದ ಶಬ್ಧದ ಸತತ ಬಳಕೆ. ಹೀಗೇ ಹೇಳಹೊರಟರೆ ಸರಕಾರದ ಕೆಲಸ (ಎದುರಿಗೆ ಬಂದು ಉಗಿಯಲಾರದೇ ಕಳವಳಿಸುತ್ತ ಕುಳಿತ) ಕೆಲಸ ! ಸಂವಿಧಾನವನ್ನು ಸ್ವಾತಂತ್ರ್ಯ ಬಂದಾಗ ಅಂದಿನ ಕಾಲಕ್ಕೆ ನಾವು ಬರೆದೆವು, ಅಂದು ಅದರ ಬಗ್ಗೆ ಬಹಳ ವಿಶ್ಲೇಷಣೆ ನಡೆಯಲು ಸಮಯವಿರಲಿಲ್ಲ, ಇಂದು ಅದು ನಮಗೆ ಆಸ್ತಿಭಾರ-ಅದನ್ನು ತಿದ್ದಲು ನಾವು ಬಿಡುವುದಿಲ್ಲ ಯಾಕೆಂದರೆ ನಮಗೆ ಬೇಕಾದ ರೀತಿಯ ರಾಜಕಾರ್‍ಅಣಕ್ಕೆ ಮುಂದೆ ಅವಕಾಶವಿರುವುದಿಲ್ಲ ಎಂದು ಮನಸಲ್ಲೇ ಮಂತ್ರ ಜಪಿಸಿ ಹಾಗೇ ಕಾಲಕಳೆಯುತ್ತಿದ್ದರೆ ನಮ್ಮ ರಾಜಕರಣಿಗಳು; ಇದು ದೇಶದ ದುರಂತ, ದೇಶದ ಜನರ ದುರಂತ! ೨೧ನೇ ಶತಮಾನದ ಅಕ್ಷರಸ್ಥ ಪ್ರಜೆಗಳ ದುರಂತ! ಒಮ್ಮೆ ಸಂವಿಧಾನವನ್ನು ಸರಿಯಾಗಿ ಪುಸ್ತಕ ರೂಪದಲ್ಲಿ ತಂದು ಎಲ್ಲರಿಗೂ ಓದಿಸಿ, ಅದಕ್ಕೆ ಸ್ವಲ್ಪ ಬದಲಾವಣೆಗಳು ಅನಿವಾರ್ಯ,ಭಾಷೆ ಹೇಗೆ ಬೆಳೆಯುತ್ತದೋ ಹಾಗೇ ಸಂವಿಧಾನಕೂಡ ಬೆಳೆಯುತ್ತದೆ. ಪ್ರಸಕ್ತ ಅಲ್ಲಿರುವ ಅನೇಕ ರೂಪರೇಷೆಗಳು ಈಗಿನ ಖೂಳ ರಾಜಕರಣಿಗಳ ಖೊಳ್ಳೆಹೊಡೆಯುವ ಸಂಸ್ಕೃತಿಗೆ ಪೂರಕವಗಿವೆ, ಹೀಗಾಗಿ ಅವುಗಳ ಮಾರ್ಪಾಟು ಆಗಲೇ ಬೇಕೆಂದರೆ ಬೆಕ್ಕಿಗೆ ಗಂಟೆಕಟ್ಟುವ ಕಥೆಯಾಗಿದೆ ನಮ್ಮ ಜೀವನ, ಕಥೆಯಲ್ಲ ಜೀವನ.


ಇಂತಹ ದಿನಗಳಲ್ಲಿ ಹಿಂದಿನ ತನ್ನ ಆದರ್ಶ ಜೀವನ ಕ್ರಮದಿಂದ ಶಾಶ್ವತ ದೈವತ್ವವನ್ನು ಪಡೆದ ಶ್ರೀರಾಮನ ಅಂದಿನ ರಾಜಕಾರ್ಯವೆಲ್ಲಿ ಇಂದಿನ ರಾಮನ ವೇಷದವರ ರಾಜಕೀಯವೆಲ್ಲಿ! ಛೆ ಛೆ .. ಈ ಜನ ರಾಮನ ವೇಷವಲ್ಲ ಹೆಸರು ಹೇಳಲೂ ಅರ್ಹರಲ್ಲ! ಆದರೆ ಹೆಚ್ಚಾಗಿ ವೇದಿಕೆಯೇರಿ ರಾಮನ ವೇಷಹಾಕುವವರೇ ಇವರಾಗಿರುವುದು ವಿಪರ್ಯಾಸವೂ ಉಪದ್ವ್ಯಾಪವೂ ಆಗಿದೆ. ಕಂಡಲ್ಲಿ ನುಗ್ಗುವ ನುಸುಳುವ ಕಚ್ಚೆಹರುಕ ರಾಜಕರಣಿಗೆ ದೊಡ್ಡ ಕಚ್ಚೆಹರುಕರಿಂದ ಶ್ರೀರಕ್ಷೆ ಬೇರೆ! ಇದು ನಮಗೇ ನಾವು ಮಾಡಿಕೊಂಡ ಅವಮಾನವಲ್ಲವೇ? ಒಪ್ಪ ಆಪಾದಿತ ರಾಜಕಾರಣಿ ಇದ್ದಕ್ಕಿದ್ದಲ್ಲೇ ಭೂಗತನಾದಾಗ ಬಂಧಿಸಲಾಗದ ನಮ್ಮ ಆರಕ್ಷಕರು, ಸುಳಿವೇ ಸಿಗದ ಯಾವುದೋ ಮೂಲೆಯಿಂದ ನಿತ್ಯಾನಂದನನ್ನು ಹುಡುಕಿತಂದರು! ಗೊತ್ತಾಗದ್ದೋ ಗೊತ್ತಾಗಿದ್ದೋ ಅಂತೂ ನಾವೆಲ್ಲ ಕಣ್ಣೀದ್ದೂ ಕುರುಡರು,ಕಿವಿಯಿದ್ದೂ ಕಿವುಡರು! ಪ್ರತೀಬಾರಿ ಯಾರೋ ಬರುತ್ತಾರೆ, " ಅಮ್ಮಾ ತಾಯೇ, ಹಸಿವೂ " ಅಂದ ಹಾಗೇ ಮತದಾರರಾದ ನಮ್ಮ ಕಾಲಿಗೆ ಬೀಳುತ್ತಾರೆ-ತಮ್ಮ ಸ್ವಾರ್ಥಸಾಧನೆಯಾಗುವವರೆಗೆ. ಹುಟ್ಟಿದ ತಪ್ಪಿಗೋ, ಒತ್ತಾಯಕ್ಕೋ,ಅನಿವಾರ್ಯತೆಗೋ, ದೇಶಾಭಿಮಾನಕ್ಕೋ ಕಟ್ಟುಬಿದ್ದು ನಾವು ಮತದಾನಮಾಡುತ್ತೇವೆ-ಅಪಾತ್ರರಿಗೆ! ನೆನಪಿಡಿ ಸ್ನೇಹಿತರೇ ನಾವು ಮಾಡುವುದು ಬಹುತೇಕ ಅಪಾತ್ರದಾನ! [ಅಪಾತ್ರದಾನಮಾಡುವುದರಿಂದ ಕೇಡು, ಅದಕ್ಕಿಂತ ದಾನಮಾಡದಿರುವುದು ಒಳ್ಳೆಯದು ಎಂದಿದ್ದಾರೆ ಪ್ರಾಜ್ಞರು.] ಚುನಾಯಿತ ಪ್ರತಿನಿಧಿ ಯಾರೆಂದು ನಾವು ಟಿ.ವಿ.ಯಲ್ಲೇ ನಾವು ನೋಡಬೇಕೇ ಹೊರತು ಅವರು ರಾತ್ರಿ ಕಳೆದು ಬೆಳಗಾಗುವಾಗ ಹೀರ್‍ಓ ಆಗಿರುತ್ತಾರೆ! ನಮ ಕೈಗೆಸಿಗಲಾರದ, ಸಮಾಜದ ಅವಶ್ಯಕ ಕೆಲಸ ಮಾಡಿಕೊಡಲಾಗದ ’ಜನನಾಯಕ’ ರಾಗಿ ಅಭಿಮಾನಿಗಳೆಂಬ ಸೋಗಿನಲ್ಲಿ ಬೆಂಗಾವಲಿಗೆ ರೌಡಿಪಡೆನಿರ್ಮಿಸಿಕೊಂಡು ನಾವು ಕೆಲಸ ಮಾಡಿಕೊಡಿ ಎಂದು ಒತ್ತಾಯಿಸಿದರೆ ನಮ್ಮ ಮೇಲೆ ಚೂ ಬಿಡುತ್ತಾರೆ! ಅನೇಕ ಹೀನಾಯ ಕೆಲಸ, ಕೊಲೆ-ಸುಲಿಗೆ,ದುರಾಚಾರ,ಅತ್ಯಾಚಾರ,ಬ್ರಷ್ಟಾಚಾರ ನಡೆಸುತ್ತ, ಜನರಿಂದ ತೆರಿಗೆ ಬಂದ ಹಣದಲ್ಲಿ ಸಿಂಹಪಾಲನ್ನು ನೀರಿನಂತೆ ಖರ್ಚುಮಾಡುತ್ತಾರೆ-ತಮ್ಮ ಕೆಲಸಕ್ಕೆ,ಪಡೆದ ಲಂಚವನ್ನು ವರ್ಗಾಯಿಸುತ್ತರೆ ತಮ್ಮ ಗುಪ್ತ ಖಾತೆಗೆ. ಸನ್ಮಾನ್ಯ ಲೋಕಾಯುಕ್ತರೆಂಬವರು ಇಂಥವರನ್ನು ಹಿಡಿಯಲು ಯೋಗ್ಯರಲ್ಲ! ಯಾಕೆಂದರೆ ನಮ್ಮ ಸಂವಿಧಾನದಲ್ಲಿ ಅದಕ್ಕೆ ಆಸ್ಪದವಿಲ್ಲ! ಯಾರೋ ಪುಣ್ಯಾತ್ಮರು ಇಂಥವರ ಕಥೆಯನ್ನು ಬಹಿರಂಗಗೊಳಿಸಿದರೆ ಅವರಮೇಲೆ ಸಾಕಿಕೊಂಡ ರೌಡಿಪಡೆಯನ್ನು ಚೂ ಬಿಡುತ್ತಾರೆ, ಬದುಕಿದೆಯಾ ಬಡಜೀವವೇ ಅಂದು ತಪ್ಪಿಸಿಕೊಳ್ಳಲು ಏನೇ ಮಾಡಿದರೂ ಅನೇಕಾವರ್ತಿ ಸೋಲು ಖಚಿತ;ಸಾವು ಉಚಿತ! ಅನಾಥ ಶವವಾಗಿ ಎಲ್ಲೆಲ್ಲೋ ಬೀಳುವುದಕ್ಕಿಂತ ’ನಮಗೆ ಯಾಕೆ ಬೇಕು ಎನ್ನುತ್ತ’ ಕಾಲಹಾಕುವ ಪಾಪದ ಜನ ನಾವಾಗುತ್ತೇವೆ;ಇದು ಇಂದಿನ ನಮ್ಮ ಪ್ರಜಾಪ್ರಭುತ್ವ! ಒಬ್ಬ ರೇಣುಕಾಚಾರ್ಯ, ಒಬ್ಬ ಸಂಪಂಗಿ, ಒಬ್ಬ ಹಾಲಪ್ಪ ಹೀಗೇ ನಮ್ಮ ಸುತ್ತಲ ರಾಜಕೀಯವೇ ಎಲ್ಲಾ ಈ ರೀತಿ ರಾಮವೇಷದವರ ವೇದಿಕೆಯಾಗಿಬಿಟ್ಟಿದೆ. ನಿನ್ನೆ ಸಂಪಾದಕರೊಬ್ಬರು ಬರೆದಿದ್ದಾರೆ-ಬರೆಯುವ ಮನಸ್ಸು ಬರುತ್ತಿಲ್ಲ ಎಂದು, ಸ್ವಾಮೀ ಬರೆಯಲು ಮನಸ್ಸಿಲ್ಲದಿದ್ದರೂ ಬರೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಬರೆಯಬೇಕಾಗಿದೆ. ಬರೆದರೆ ಮಿತ್ರರನೇಕರು ಓದಿ ಮುಂದಿನ ಸಮಾಜದ ಉದ್ಧಾರಕ್ಕೆ ಅಲ್ಲೆಲ್ಲೋ ಅವರಲ್ಲೊಬ್ಬ ವಿವೇಕಾನಂದ ಹುಟ್ಟಿಬರಬಹುದು, ಸುಭಾಷ್ಚಂದ್ರ ಬೋಸ್ ಹುಟ್ಟಿಬರಬಹುದು, ಲಾ ಲಾ ಲಜಪತರಾಯ್ ಬರಬಹುದು, ಲೋಕಮಾನ್ಯ ಮತ್ತೆ ಜನಿಸಬಹುದು ಎಂಬುದೇ ನನ್ನ ಆಶಯ. ನಾವಂತೂ ಅಂತಹ ಮೇಧಾವಿಗಳಾಗಲು,ದೇಶಾಭಿಮಾನಿಗಳಾಗಲು ಸಾಧ್ಯವಾಗಿಲ್ಲ ನಮ್ಮ ಕೃತಿಯನ್ನು ಓದಿ ಸ್ಪೂರ್ತಿಪಡೆದು ಯಾರಾದರೂ ಅಂಥವರು ಒಡಮೂಡಲಿ, ದೇಶದ ಹೊಲಸು ರಾಜಕೀಯವನ್ನು ಬೇರು ಕಿತ್ತು, ಬೆಂಕಿಹಚ್ಚಿ ಬೂದಿಮಾಡಿ, ಸಾಗರಗಳಲ್ಲಿ ಚೆಲ್ಲಲಿ, ಇಲ್ಲಿ ಪುನಃ ಚಪ್ಪನ್ನೈವತ್ತಾರು ರಾಜರು ಬಂದರೂ ಚಿಂತೆಯಿಲ್ಲ ಶ್ರೀರಾಮನ ಸ್ವಭಾವದ ಲಕ್ಷಭಾಗಗಳಲ್ಲಿ ಒಂದು ಭಾಗವನ್ನಾದರೂ ಅಳವಡಿಸಿಕೊಂಡ ರಾಜರು ಬರಲಿ, ನಮಗೆ ಆಗ ಇಂದಿನ ಈ ಹೊಲಸು ತುಂಬಿದ, ಹೂಳುತುಂಬಿದ, ಹಾಳಪ್ಪಗಳು-ಖೂಳರು ನಡೆಸುವ ಪ್ರಜಾಪ್ರಭುತ್ವವೆಂಬ ನಾಟಕವೇ ಬೇಡ!



ರಾಜ ನೀತಿ
ಅಂದು....

ಜನನಿ ಜನಕರ ಮನದ ಅಳಲುಗಳ ತಾನರಿದು
ವನಕೆ ನಡೆದನು ರಾಮ ಸಿರಿಭೋಗ ತೊರೆದು
ಜನತೆ ಕಣ್ಣೀರಿಡುತ ತಾವ್ ನಡೆಯಲ್ಜೊತೆಯಲ್ಲಿ
ಮನುಕುಲೋತ್ತಮ ಮರುಗಿ | ಜಗದಮಿತ್ರ


ಭಾರ್ಯೆಯನು ಕಳಕೊಂಡು ಮನದಿ ಚಿಂತಿತನಾಗಿ
ಆರ್ಯಾವರ್ತದಿ ಹುಡುಕಿ ಮುನ್ನಡೆದ ರಾಮ
ವೀರ್ಯವಂತನು ಗುಡುಗಿ ವಧಿಸುತಾರಾವಣನ
ಶೌರ್ಯಮೆರೆಯುತ ಗೆದ್ದ | ಜಗದಮಿತ್ರ


ಕಲ್ಲಾಗಿ ಬಿದ್ದ ಅಹಲ್ಯೆ ತಾ ಕೂಗಿರಲು
ಅಲ್ಲಿಗೈತಂದು ಮನ್ನಿಸಿ ದೋಷತೊಡೆದು
ಎಲ್ಲವನು ಕ್ಷಮಿಸಿ ಮರುಜನುಮವಂ ನೀಡಿ
ಬಲ್ಲನೆನ್ನುತ ನುಡಿದ | ಜಗದಮಿತ್ರ


ಶಬರಿ ಭಕ್ತಿಗೆ ಮೆಚ್ಚಿ ಹಣ್ಣು ಎತ್ತುತ ಕಚ್ಚಿ
ಶಬರರಂದದಿ ಮಗನ ಪ್ರೀತಿಯನು ತೋರಿ
ಶುಭವು ಸತತವು ಎಂದು ಹರಸಿ ಹಾರೈಸುತ್ತ
ಅಭಯನೀಡಿದ ನೋಡ | ಜಗದಮಿತ್ರ


ಅಗಸನಾಡಿದ ಮಾತು ಅನುಗಾಲ ಮನಕೆಣಕಿ
ಅರಸ ಕಳುಹಿದ ಮಡದಿ ಜಾನಕಿಯ ವನಕೆ
ಸೊಗಸಲ್ಲ ಜನಮನದ ನುಡಿಯ ಕಡೆಗಣಿಸಿದರೆ
ವರಸೆಯಲಿ ಮಿಗಿಲಿಲ್ಲ | ಜಗದಮಿತ್ರ


....ಇಂದು

ಪ್ರಜೆಗಳಾಡುವ ಮಾತು ಪ್ರಭುವಾಲಿಸದೆ ಕುಂತು
ರಜವಹಾಕುತ ಭೂಗತರಾಗಿ ಕ್ಷಣದಿ
ಮಜದಿ ಮಾರ್ಜಾಲ ಕಣ್ಮುಚ್ಚಿ ಹಾಲ್ಕುಡಿದಂತೆ
ನಜಭಂಡರಾಗಿಹರು | ಜಗದಮಿತ್ರ

ರಾಜಕಾರ್ಯದಿ ಹಲವು ನೀತಿ ಬಾಹಿರರಾಗಿ
ರಾಜಿಪರು ಧನಮದದಿ ಗೆಲುವೆನೆಂದೆನುತ
ಬೀಜದಲೇ ಕುಷ್ಟ ಹಿಡಿದಿಹ ನಮ್ಮ ಪ್ರಭುಗಳಿಗೆ
ರಾಜಿಸೂತ್ರವು ಒಳಗೆ | ಜಗದಮಿತ್ರ

ಚಡ್ಡಿಹರುಕರು ಕುಡುಕ ಖೂಳರಕ್ಕಸ ರೌಡಿ
ಬಡ್ಡಿಕಾಸಿನ ದೊರೆಗಳ್ ಸೇರುತದುಪಕ್ಷ
ದುಡ್ಡುಮಾಡುವ ದಂಧೆ ಪ್ರಜೆಗೆ ಪುಂಗಿಯ ಊದಿ
ಖಡ್ಡ ಕೆಂಚರ ತಾಣ | ಜಗದಮಿತ್ರ

ಹಾಲೋ ಹಾಲಾಹಲವೋ ತಿಳಿಯದಾಗಿದೆ ಜಗದಿ
ಕಾಲನೆಳೆಯುತ ಬೇಯಿಸುತ ತಮ್ಮ ಬೇಳೆ
ವಾಲಿ ರಾವಣರೆಲ್ಲ ರಾಮವೇಷದಿ ಬಂದು
’ಹಾಲಪ್ಪ’ರಾಗಿಹರು | ಜಗದಮಿತ್ರ

Saturday, May 1, 2010

ಕನಸು

ಕನ್ನಡದ ಇಂದಿನ ಪ್ರಖ್ಯಾತ ಕವಿಗಳಲ್ಲಿ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಒಬ್ಬರು. ನಾನು ಇಷ್ಟಪಡುವ ಕವಿಗಳಲ್ಲಿ ಅವರೂ ಒಬ್ಬರು. ನವೋದಯ ಸಾಹಿತ್ಯ ಮತ್ತು ನವ್ಯಕಾವ್ಯಗಳ ಭರಾಟೆಯಿಂದ ತತ್ತರಿಸಿದ ಕನ್ನಡ ಸಾಹಿತ್ಯ ಲೋಕಕ್ಕೆ ಸದಭಿರುಚಿಯ ಸರಾಗವಾಗಿ ಹಾಡಬಲ್ಲ ಕವನ ಸಾಹಿತ್ಯವನ್ನು ಒದಗಿಸಿದ ಮಹಾನುಭಾವ ಅವರು. ಅವರ ಅನೇಕ ಭಾವಗೀತೆಗಳು ರಾಗಬದ್ಧವಾಗಿದ್ದು ಹಲವು ಸಂಗೀತಗಾರರಿಂದ ಸಂಗೀತ ಸಂಯೋಜನೆಗೊಂಡು ಬಹುತೇಕ ಪ್ರತಿಯೊಂದು ಸಂಗೀತ ಗೋಷ್ಠಿಯಲ್ಲಿ ಹಾಡಲ್ಪಡುವಷ್ಟು ಜನಪ್ರಿಯವಾಗಿವೆ. ಅನೇಕ ಧ್ವನಿ ಸುರುಳಿಗಳರೂಪದಲ್ಲಿ ನಮ್ಮ ಮಧ್ಯೆಯಲ್ಲಿ ಅನುರಳಿಸುತ್ತಿವೆ. ಆಲೈಸಿದಾಗ ತುಂಬಾ ಇಂಪಾಗಿ ಕೇಳಿ ಬಹಳ ಮುದನೀಡುತ್ತವೆ! ಮೇಲಾಗಿ ಅವರ ಕವನಗಳು ಅವರೇ ಎದುರು ನಿಂತು ಅರ್ಥ ಹೇಳಿದರೇನೋ ಎನ್ನುವಷ್ಟು ಸರಳ ಶಬ್ಧಗಳಿಂದ ಕೂಡಿವೆ. ಓದುಗರ ಮನಸ್ಸಿನಲ್ಲಿ ಭಾವತರಂಗಗಳನ್ನೆಬ್ಬಿಸುವ ಅವು ಕವಿ ನಮಗಾಗೇ ಬರೆದರೇನೋ ಎಂಬಷ್ಟು ನಮಗೆ-ನಮ್ಮ ಹೃದಯಕ್ಕೆ ಹತ್ತಿರವಾಗುತ್ತವೆ. ಪ್ರತೀ ಕವನದಲ್ಲೂ ಏನೋ ಆಪ್ತತೆ, ಏನೋ ಅಪ್ಯಾಯಮಾನ ಅನಿಸಿಕೆ, ಏನೋ ಅನನ್ಯ ಭಾವನೆ ! ಈ ಕವಿ ನಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂಬಷ್ಟು ಮಾಂತ್ರಿಕತೆ, ಮಾಯದ ಮೋಡಿಗಾರನಂತೆ ತನ್ನತ್ತ ಸೆಳೆಯುವ ಕಾಂತತ್ವ []ಶ್ರೀಯುತರ ’ ದೀಪಿಕಾ ’ ಕವನ ಸಂಕಲವನ್ನು ಬಹಳ ಹಿಂದೆಯೇ ಓದಿದ್ದೆ. ಅದರಲ್ಲಿನ ಕವನಗಳು ಬಹಳ ಜನಪ್ರಿಯವಾಗಿವೆ. ಅವುಗಳಲ್ಲೊಂದು ’ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ !...’ ಇದನ್ನು ಬಹಳ ಸಮಯ ನನ್ನ ಮನಸ್ಸು ಗುನುಗುನಿಸುತ್ತಲೇ ಇರುತ್ತದೆ.

ಮೊನ್ನೆ ಅನಿರೀಕ್ಷಿತವಾಗಿ ಮೊದಲು ಬಿದ್ದ ಬೇಸಿಗೆ ಮಳೆಗೆ ಹಾಗೇ ರಸ್ತೆಯಲ್ಲಿ ನೆನೆದಿದ್ದೆ. ಆ ದಿನ ಗುಡುಗು ಸಿಡಿಲಿನ ಆರ್ಭಟ ಬಹಳವಾಗಿತ್ತು. ರಾತ್ರಿ ಮಲಗಿದ ಮೇಲೆ ಕೂಡ ಮಳೆ ಹನಿಯುತ್ತಿತ್ತು. ವಿದ್ಯುದ್ದೀಪ ಇರಲಿಲ್ಲ. ಆ ರಾತ್ರಿ ಕನಸುಕಂಡೆ. ಕನಸಿನಲ್ಲಿ ಎಲ್ಲಿಂದಲೋ ಹಾರುವ ತಟ್ಟೆಯೊಂದು ಬಂದು ನನ್ನ ಮೈಗೆ ಸೋಕಿ ನಿಂತಹಾಗೆ, ಅದರ ಥಳುಕಿನ ಬಣ್ಣಗಳು,ಬಣ್ಣದ ದೀಪಗಳು ಕಣ್ಣುಕೋರೈಸುವ ವೈಭವದಿಂದ ಕೂಡಿದ್ದವು. ಅದರಲ್ಲಿನ ವ್ಯಕ್ತಿಗಳಾಗಲೀ,ಬೇರೆ ಯಾವುದೇ ಥರದ ಜೀವಿಗಳಾಗಲೀ ಕಾಣುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಯಾವುದೋ ಮಾಧ್ಯಮದಲ್ಲಿ ಆಗಾಗ ಕಾಣುವ ಆದರೆ ಗುರುತಿಸಿ ಹಿಡಿಯಲು, ಸಂಶೋಧಿಸಲು ಸಿಗದ ಹಾರುವ ತಟ್ಟೆಗಳು ಮತ್ತು ಅವುಗಳು ವಿದೇಶಗಳಲ್ಲಿ ನೆಲಕ್ಕಿಳಿದು ಹೊಲಗದ್ದೆಗಳಲ್ಲಿ ಮೂಡಿಸಿದ ನಕ್ಷೆ-ಚಿತ್ತಾರಗಳು ಬಿತ್ತರಗೊಳ್ಳುವಾಗ ನೋಡಿದ್ದೆ. ಅದರ ಪ್ರತಿಫಲಿತ ಪರಿಣಾಮವೋ ಏನೋ ಕನಸಿನ ರೂಪದಲ್ಲಿ ಬಂದಿತ್ತು. ನಾನು ಆ ತಟ್ಟೆಯನ್ನು ಕನಸಲ್ಲೂ ಅಷ್ಟು ದೂರದಿಂದ ನೋಡುತ್ತಿದ್ದೆ. ತಟ್ಟೆಯ ಜೊತೆ ಒಬ್ಬನೇ ಇರುವುದರಿಂದ ತುಂಬಾ ಭಯ ಹುಟ್ಟಿಸಿತ್ತು, ಯಾಕೆಂದರೆ ಅದರಲ್ಲಿ ಯಾರಿರಬಹುದು, ಏನುಮಾಡಬಹುದು ಎಂಬುದು ತಿಳಿಯುತ್ತಿರಲಿಲ್ಲ!ಆದರೂ ಅದನ್ನು ನೋಡಿದಾಗ ಮೈಮನವೆಲ್ಲ ಪುಳಕಗೊಂಡಿತ್ತು,ಬಹಳ ಖುಷಿಯಾಗಿತ್ತು. ಆ ಭಯಮಿಶ್ರಿತ ಖುಷಿ ಹಾಗೇ ಸುಮಾರು ಹೊತ್ತು ಮುಂದುವರಿದಿರಬೇಕು ! ಕೊನೆಗೊಮ್ಮೆ ಯಾಕೋ ಎಚ್ಚರವಾಗಿಬಿಟ್ಟಿತು, ಗಡಿಯಾರ ನಾಲ್ಕುಗಂಟೆ ತೋರಿಸುತ್ತಿತ್ತು. ಅದನ್ನು ನಮ್ಮ ಲಕ್ಷ್ಮೀನಾರಾಯಣಭಟ್ಟರ ಶೈಲಿಯಲ್ಲಿ ಕವನಿಸಿ ನಿಮ್ಮ ಮುಂದಿಡುತ್ತಿದ್ದೆನೆ---


ಕನಸು

ಎಲ್ಲೋ ನಡೆಯಿತೋ ಮನಸು
ತಲ್ಲಣಿಸಿತೋ !
ಹುಲ್ಲೆಯಂತೆ ಹಾರಿ ಹೆದರಿ
ಒಲ್ಲೆನೆಂದಿತೋ


ದೂರದೊಂದು ಲೋಕದಿಂದ
ಹಾರುವಾ ತಟ್ಟೆಯಲೀ ಬಂದ
ಯಾರೋ ತಾಕಿ ನನ್ನಾ ಮೈಗೆ
ಭಾರೀ ಭಯವ ತಂದರಿಲ್ಲಿ


ಹಸಿರು ಕೆಂಪು ನೀಲಿ ಹಳದಿ
ಹೊಸತು ದೀಪ ರಾಶಿಗಳಲಿ
ಮಿಸುನಿ ಮೆರುಗು ಥಳುಕು ಬಣ್ಣ
ಎಸೆದು ಕೋರೈಸಿಹುದು ಕಣ್ಣ


ಎಂದೂ ನೋಡದಂಥಾ ಕನಸು
ಇಂದು ನನ್ನ ಮನದಾ ತುಂಬಾ
ಮಿಂದೆ ಅದರ ಸೆಳವಿನಲ್ಲಿ
ಚಂದದಿಂದ ನಲಿಯುತಲ್ಲಿ


ನೌಕೆಯಷ್ಟೇ ಕಂಡೆ ನಾನು
ನೂಕಿದವರು ಕಾಣಲಿಲ್ಲ
ಬಾಕಿಯಿತ್ತು ಹಲವು ಸಂಗ್ತಿ
ನಾಕು ಗಂಟೆಗೆಚ್ಚರವಾಗಿ

Friday, April 30, 2010

ಉಳ್ಳವರಿಗೆ ದಿನವೂ ಹಬ್ಬ !!



ಉಳ್ಳವರಿಗೆ ದಿನವೂ ಹಬ್ಬ !!

ನಮ್ಮ ಜೀವನದಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವಿನ ಹಿಂದೆ ಕನಿಷ್ಟಪಕ್ಷ ಒಬ್ಬ ವ್ಯಕ್ತಿಯ ಕೆಲಸದ ಸಾಧನೆ ಇರುತ್ತದೆ. ಒಮ್ಮೆ ಹಾಗೆ ಕೂತು ಚಿಂತನೆ ಮಾಡಿದರೆ ಆಗ ನಮಗೆ ಕಾಣುವುದು ಮನುಷ್ಯ ತನ್ನ ಬದುಕಿಗಾಗಿ ಇಷ್ಟೆಲ್ಲಾ ಸಾಮಾನು ಸರಂಜಾಮುಗಳನ್ನು ಬಳಸುತ್ತಾನಲ್ಲ, ಒಂದೊಮ್ಮೆ ಯಾರಿಗೂ ಬಿಡುವಿರದಿದ್ದರೆ ಇವನ್ನೆಲ್ಲ ಮಾಡಲಾಗುತ್ತಿತ್ತೇ?-ಅಂತ. ಕೆಲವರು ಕೆಲಸವನ್ನು ನೇರವಾಗಿ ಮಾಡಿದರೆ ಉಳಿದವರು ಅದನ್ನು ಪರೋಕ್ಷವಾಗಿ ಮಾಡುತ್ತಾರೆ, ಯಾಕೆಂದರೆ ಒಂದು ಕಟ್ಟಡದ ನಿರ್ಮಾಣ ಎಂದುಕೊಳ್ಳೋಣ--ಅಲ್ಲಿ ತಂತ್ರಜ್ಞರ ಕೆಲಸವಿದೆ,ಗಣಕಯಂತ್ರದಲ್ಲಿ ನಕ್ಷೆ ಹಾಗೂ ಕಟ್ಟಡದ ಭಾವೀ ರೂಪರೇಷೆಗಳನ್ನು ತಯಾರಿಸಿಕೊಡುವವರ ಕೆಲಸವಿದೆ,ಹಣಕಾಸು-ಖರ್ಚು ವೆಚ್ಚದ ಲೆಕ್ಕಹಾಕಿ ಸಂಭಾವ್ಯ ಬಜೆಟ್ ಮಾಡಿಕೊಡುವವರ ಕೆಲಸವಿದೆ, ಆಮೆಲೆ ಕೂಲಿಗಳು,ಗಾರೆಯವರೌ,ಬಡಗಿಗಳು,ವಿದ್ಯುತ್ ಕೆಲಸದವರು,ಬಣ್ಣದವರು ಹೀಗೆಲ್ಲಾ ಅಂತ ಅನೇಕ ಕೆಲಸವಿರುತ್ತದೆ. ಆ ಕಟ್ಟಡಕ್ಕೆ ಬೇಕಾಗುವ ಪರಿಕರ ಸಾಮಗ್ರಿಗಳನ್ನು ಮತ್ತೆ ಬೇರೆಲ್ಲೊ ಕೆಲಸದ ಮೂಲಕವೇ ತಯಾರಿಸಲಾಗುತ್ತದೆ. ಹೀಗೆ ಒಟ್ಟಾರೆ ಕೆಲಸವನ್ನು ಮಾಡಿದರೇನೇ ಅದಕ್ಕೊಂದು ಫಲ ಸಿಗುತ್ತದೆ.

ಕಾರ್ಮಿಕರು ಅಂದಾಕ್ಷಣ ನಮಗೆ ಕಣ್ಣಿಗೆ ಬೀಳುವುದು ಕಾರ್ಖಾನೆಯ ಕೆಲಸಗಾರರು. ಆದರೆ ಕಾರ್ಮಿಕರಲ್ಲಿ ಕಟ್ಟಡದ ಕೂಲಿ ಕಾರ್ಮಿಕರು ಬಹಳ ನಗಣ್ಯರು. ಎಲ್ಲಿಂದಲೋ ಗುತ್ತಿಗೆದಾರರು ಕರೆದಾಗ ಬರುತ್ತಾರೆ, ಅವರಿಗೆ ಉಳಿದುಕೊಳ್ಳಲು ಜಾಗವೂ ಕಷ್ಟ! ಕಲ್ಲು, ಮಣ್ಣು, ಮರಳು, ಇಟ್ಟಿಗೆ, ಸಿಮೆಂಟು ಇವನ್ನೆಲ್ಲ ಹೊರುತ್ತಾರೆ. ತಮ್ಮ ಚಿಕ್ಕ ಮಕ್ಕಳಿನ ನಾಳಿನ ಭವಿಷ್ಯದ ಕನಸನ್ನು ಹೊತ್ತವರಲ್ಲ ಅವರು! ಇವತ್ತಿನ ಬದುಕು- ಹೊಟ್ಟೆ ತುಂಬಿಸಲು ತುತ್ತು ಸಿಕ್ಕರೆ ಸಾಕು. ಆ ಅನೇಕ ಮಹಲುಗಳನ್ನು, ಆಪಾರ್ಟ್ಮೆಂಟ್ ಗಳನ್ನು ನೋಡುವಾಗ ತುತ್ತಿಗಾಗಿ ಎಷ್ಟೆಲ್ಲಾ ಕೂಲಿಜನರು ಬಂದು ಪರದಾಡುತ್ತ ಅವುಗಳನ್ನು ಕಟ್ಟಲು ಕೆಲಸ ಮಾಡಿರಬಹುದು ಎಂದೆನಿಸುತ್ತದೆ. ಮನೆಯನ್ನು ಕಟ್ಟಿಸಿದವ, ಖರೀದಿಸಿದವ ಆ ಚಿಂತೆಯ ಹಂಗಿಲ್ಲದೆ ಬರೇ ದುಡ್ಡುಕೊಟ್ಟ ಚಿಂತೆಯಲ್ಲೇ ಇರುತ್ತಾನೆ! ಗುತ್ತಿಗೆದಾರ ಕೆಲಸ ಮುಗಿದಮೇಲೆ ಅವರನ್ನೆಲ್ಲ ಅಲ್ಲಿಂದ ಸಾಗಹಾಕುತ್ತಾನೆ.ಆಮೇಲೆ ಬೇರೇಡೆ ಕೆಲಸವಿದ್ದರೆ ಕೆಲಸ ಇಲ್ಲದಿದ್ದರೆ ಕೆಲಸಹುಡುಕುವ ಕೆಲಸ ! ಜಲ್ಲಿ-ಮರಳಿನ ರಾಶಿಗಳಲ್ಲಿ ಅವರ ಚಿಕ್ಕ ಕಂದಮ್ಮಗಳು ಯಾವ ಆಟದ ಸಾಮಗ್ರಿಗಳೂ ಇಲ್ಲದೇ ಸಹಜ ಬಾಲಿಶ ಪ್ರವೃತ್ತಿಯಾದ ಆಟಕ್ಕೆ ಏನೂ ಇಲ್ಲದೇ ಅಳುತ್ತಲೋ ನಿದ್ದೆಮಾಡುತ್ತಲೋ ಏಳುತ್ತ ಬೀಳುತ್ತಲೋ ಇರುತ್ತವೆ.

ಹಿಂದೆ ನಾನೊಂದು ಬಾಡಿಗೆಮನೆಯಲ್ಲಿರುವಾಗ ಅದರ ಎದುರಿನ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಎಲ್ಲಿಂದಲೋ ಕಾರ್ಮಿಕರು ಬಂದರು. ಅವರಪೈಕಿ ಒಂದು ಜೋಡಿಗೆ ನಡೆದಾಡುವಷ್ಟುದೊಡ್ಡದಾದ ಒಂದು ಮಗುವಿತ್ತು. ಸುಮಾರು ೪ ವರ್ಷ ವಯಸ್ಸು ಇರಬಹುದು. ಎದುರಿನ ರಸ್ತೆಯಲ್ಲಿ ಪಕ್ಕದ ಉಳ್ಳವರ ಮನೆಗಳ ಹಲವು ಮಕ್ಕಳು ಸೇರಿಕೊಂಡು ಆಡುತ್ತಿದ್ದರು. ಆ ಮಗುವಿಗೆ ತಾನೂ ಆಡಬೇಕೆಂಬ ಆಸೆ.ತನಗೆ ಚಂಡು ಬೇಕೆಂಬ ಬಯಕೆ! ಆ ಮಗು ಓಡೋಡಿ ಬಂದು ಆ ಆಡುತ್ತಿರುವ ಮಕ್ಕಳ ಜೊತೆ ಆಡಲು ಬಯಸುತ್ತಿತ್ತು. ಆದರೆ ಅವರು ಆ ಮಗುವನ್ನು ತಮ್ಮ ಗುಂಪಿಗೆ ಸೇರಿಸುತ್ತಿರಲಿಲ್ಲ. ಆ ಮಗು ಒಂದೇ ಸಮ ಅಳಲು ತೊಡಗಿತ್ತು. ಅದಕ್ಕೆ ತನ್ನ ತಂದೆ-ತಾಯಿ ಕೂಲಿಯವರು, ನನಗೆ ಇದನ್ನೆಲ್ಲ ತಂದುಕೊಡಲು ಶಕ್ತರಲ್ಲ ಎಂದು ತಿಳಿದಿರಲಿಲ್ಲ! ತನಗೊಂದು ಚೆಂಡು ಬೇಕು, ತಾನೂ ಆಡಬೇಕು. ಅಳುತ್ತಿರುವ ಆ ಮಗುವಿಗೆ ಮಗುವಿನ ಅಮ್ಮ ಬಂದು ಒಂದೇಟು ಕೊಟ್ಟು ಕರೆದುಕೊಂಡುಹೋದಾಗ ನನಗೆ ಕಣ್ಣೀರು ಬಂತು.

ಅದೇ ಪರಿಸರದ ಪಕ್ಕದ ಮನೆಯಲ್ಲಿ ಇರುವ ಚಿಕ್ಕ ಹುಡುಗನ ಹತ್ತಿರ ಒಂದು ಮಕ್ಕಳ ಮೂರು ಗಾಲಿಯ ಸೈಕಲ್ ಇತ್ತು. ಅದನ್ನು ಆತ ಹೊರಗಡೆ ತಂದು ಆಡುತ್ತಿದ್ದ. ಅವರಮನೆಯ ಗೇಟಿನ ಸಂದಿಯಿಂದ ಇನ್ನೊಬ್ಬ ಹುಡುಗ ಸದಾ ಅದನ್ನು ನೋಡುತ್ತಿದ್ದ. ಆತನಿಗೆ ಒಂದೇ ಒಂದುಸಲ ಸೈಕಲ್ ಆಡಬೇಕೆಂಬ ಹಂಬಲ.ತಂದೆ-ತಾಯಿ ತಂದುಕೊಡುವಷ್ಟು ಸ್ಥಿತಿವಂತರಲ್ಲ. ಆತ ಮುಖ ಸಪ್ಪಗೆ ಮಾಡಿಕೊಂಡು ನಿಂತಿದ್ದ, " ಏನಪ್ಪಾ ಮರಿ ಏನಾಗಬೇಕಿತ್ತು ? " ಅಂತ ಕೇಳಿದಾಗ, ಒಮ್ಮೆ ದೃಷ್ಟಿನೆಟ್ಟು ಆಳವಾಗಿ ನನ್ನನ್ನು ನೋಡಿದ ಆತನಿಗೆ ನಾನು ಬಯ್ಯುವವನಲ್ಲ ಎಂಬುದು ಖಾತರಿಯಾದಮೇಲೆ " ಅಂಕಲ್ ನಾನು ಸೈಕಲ್ ಆಡಬೇಕಾಗಿತ್ತು, ಅಲ್ಲಿ ಒಳಗಡೆ ಹೋದ್ರೆ ಆಂಟಿ ಬೈತಾರೆ ಅದಕ್ಕೆ ಸುಮ್ನೇ ಹೀಗೆ ನೋಡ್ತಾ ಇದೀನಿ" ನನಗೆ ಪಾಪ ಅನ್ನಿಸಿತು. ಮಕ್ಕಳಿಗೆ ಏನುತಾನೇ ಗೊತ್ತು?


ಇಂತಹ ಮನಕಲಕುವ ಹಲವು ಸನ್ನಿವೇಶಗಳು ಕೂಲಿಕಾರ್ಮಿಕರ ಬದುಕಲ್ಲಿವೆ. ಅವರು ಬಡತನದಲ್ಲೇ ಹಲವು ಮಕ್ಕಳನ್ನು ಹೆರುತ್ತಾರೆ. ಬೇಗ ದೊಡ್ಡವರಾಗಿ ಎಲ್ಲರೂ ದುಡಿದು ಹೆಚ್ಚು ಕೂಲಿ ಸಂಪಾದಿಸಿ ತಮ್ಮನ್ನು ನೋಡಿಕೊಳ್ಳಲಿ ಎಂಬ ಆಸೆ. ಹಡೆದ ಅನೇಕ ಮಕ್ಕಳಲ್ಲಿ ಹಲವು ಮಕ್ಕಳು ರೋಗರುಜಿನಗಳಿಗೆ ತುತ್ತಾಗಿ ಬಳಲಿ ಅಲ್ಲೇ ಮರಳ ರಾಶಿಗಳ ಮೇಲೆ ಸತ್ತುಹೋಗುತ್ತವೆ, ನಿಸ್ಸಹಾಯ ಕೂಲಿ ದಂಪತಿ ಆ ನೋವನ್ನು ಮರೆಯಲು ಕುಡಿಯುತ್ತಾರೆ. ಮೊನ್ನೆ ಒಬ್ಬ ಅಂಗಡಿಯಲ್ಲಿ ನಿಂತಾಗ ತಾತನೊಟ್ಟಿಗೆ ಒಂದು ಮಗುಬಂತು.ಆ ತಾತ ಹೆಳಿದ " ಒಂದು ೫೦ಪೈಸೆ ಚಾಕ್ಲೇಟ್ ಕೊಡಿ ಸರ್ " ಆಗ ಆ ಮಗು "ತಾತಾ ತಾತಾ ನಂಗೆ ಅದು ಕೊಡ್ಸು ಇದಲ್ಲ ಅದು ಕೊಡ್ಸು " ಅಂತ ಒಂದು ಚಿಕ್ಕ ’ಪರ್ಕ್’ ತೋರಿಸಿ ಅಳುತ್ತಿತ್ತು. ನಾನು ಹೆಳಿದೆ "ಕೊಡಿ ಸರ್ ನಾನು ದುಡ್ಡು ಕೊಡ್ತೇನೆ" ಅಂಗಡಿಯಾತ ತೆಗೆದು ಕೊಟ್ಟಾಗ ಆ ಮಗು ಕುಣಿದು ಕುಪ್ಪಳಿಸಿತು ! ಮಕ್ಕಳ ಲೋಕವೇ ಹಾಗೆ! ಅವರಿಗೆ ತಂದೆತಾಯಿಗಳ ಆರ್ಥಿಕತೆ ಅರ್ಥವಾಗುವುದಿಲ್ಲ. ಅರ್ಥವಾಗುವ ದಿನವನ್ನು ಅವರು ತಲ್ಪುವ ವೇಳೆಗೆ ಅಂದರೆ ೭-೮ ವಯಸ್ಸಿಗೆ ಅವು ಅದೂ ಇದೂ ಕೆಲಸಕ್ಕೆ ತೊಡಗಬೇಕಾದ ಪರಿಸ್ಥಿತಿ.

ಒಬ್ಬರು ಹೇಳಿದ್ರು- ರಾತ್ರಿಯಿಡೀ ಎದುರುಗಡೆ ಕೂಲಿಯವರ ಮಗು ನಿಮಿಷ ಬಿಡದೇ ಕೆಮ್ಮುತ್ತಿತ್ತು, ತಂದೆ-ತಾಯಿ ಎಣ್ಣೆಹಾಕಿಕೊಂಡು ನಿದ್ದೆಯಲ್ಲಿದ್ದರು, ಮಗುವಿನ ಪಾಡುಬೇಡ. ಎಲ್ಲೋ ಎಚ್ಚರವಾದಾಗ ತಂದೆ ಮಗುವಿಗೊಂದು ಹೊಡೆತ ಕೊಟ್ಟು ಬೈದಿದ್ದನ್ನು ಕೇಳಿದೆ. ಮಗು ಕೆಮ್ಮಿನೊಂದಿಗೆ ಅಳುತ್ತಲೂ ಇತ್ತು.ಈ ಕಡೆ ಮನೆಯಲ್ಲಿ ಇದ್ದ ಕೆಮ್ಮಿನ ಔಷಧ ಕೊಡಲು ಹೋದರೆ ಆ ಕುಡುಕ ದಂಪತಿ ತನಗೆ ಬೈದರೆ ಎಂಬ ಭಯ, ಆ ಕಡೆ ಮಗುವಿನ ಸಹಿಸಲಾರದ ಬಳಲುವಿಕೆಯ ಕೆಮ್ಮಿನ ಸದ್ದು. ಇಡೀ ರಾತ್ರಿ ಹಾಗೇ ಕಳೆದಿದ್ದೇನೆ-- ಎನ್ನುತ್ತ ತನ್ನ ಅಸಹಾಯಕತೆಯನ್ನು ಹೇಳಿದರು.

ಹೀಗೇ ಅವರೂ ಮನುಷ್ಯರೇ ನಾವೂ ಮನುಷ್ಯರೇ, ಆದರೆ ಸೌಲಭ್ಯ ವಂಚಿತರ ಅಹವಾಲನ್ನು ಒಮ್ಮೆ ಅವಲೋಕಿಸೋಣ. ಅವರ ಮಕ್ಕಳೂ ನಮ್ಮ ಮಕ್ಕಳಂತೆಯೇ. ಮಕ್ಕಳ ಮನಸ್ಸು ಮುಗ್ಧ. ಅವುಗಳಿಗೆ ಆಸ್ತಿ-ಅಂತಸ್ತಿನ ಗೊಡವೆ ಇಲ್ಲ.


ನಮ್ಮಲ್ಲಿ ಅನೇಕರು ನಾವು ಜನ್ಮದಿನ, ಆದಿನ ಈ ದಿನ ಅಂತೆಲ್ಲಾ ಬಹಳ ದುಂದುವೆಚ್ಚಮಾಡುತ್ತೇವೆ. ವಿವಿಧ ತಿಂಡಿ,ಪಾರ್ಟಿ, ಸ್ವೀಟು, ಗಿಫ಼್ಟು ಎಂದು ಖರ್ಚುಮಾಡುತ್ತೇವೆ, ಅದರ ಬದಲಿಗೆ ಆ ಜನ್ಮದಿನದಂದು ಇಂತಹ ಕೂಲಿಗಳ ಮಕ್ಕಳಿಗೆ, ಅನಾಥಾಶ್ರಮದ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕೆ ಏನಾದರೂ ಕೊಡಿಸುವುದರಲ್ಲಿ ಆಚರಿಸಿದರೆ ಅದು ಎಷ್ಟು ಅರ್ಥಪೂರ್ಣ ಅಲ್ಲವೇ ? ಇತ್ತೀಚೆಗೆ ಒಬ್ಬರ ಮನೆಯಲ್ಲಿ ಕೆಲವು ಪಠ್ಯಪುಸ್ತಕಗಳು-ನೋಟ್ ಬುಕ್ ಗಳ ರಾಶಿ ನೋಡಿದೆ. ಅವರದ್ದೇನೂ ಅಂಗಡಿಯಿರಲಿಲ್ಲ. ಆದರೂ ಅಷ್ಟೆಲ್ಲಾ ಏಕೆ ಎಂದು ನಾನು ವಿಚಾರಿಸಿದೆ, ಯಾವುದನ್ನೂ ಹೇಳಿಕೊಳ್ಳದ ಆತ ಅಂತೂ ಕೊನೆಗೊಮ್ಮೆ ಹೇಳಿದ್ದು, ನನ್ನ ಮಗನ ಜನ್ಮದಿನದಂದು ನಾವು ಅನಾಥಾಶ್ರಮದ ಮಕ್ಕಳಿಗೆ ಒಂದುದಿನದ ಊಟ ಮತ್ತು ಈ ಪುಸ್ತಕಗಳನ್ನು ಕೊಡುತ್ತೇವೆ ಎಂದು. ಎಂತಹ ಆದರ್ಶಪ್ರಾಯ ಗುಣ! ನಮ್ಮ ನಡುವೆಯೇ ಎಲೆಮರೆಯ ಕಾಯಿಯಂತೆ ಇರುವ ಇಂಥವರು ಇದ್ದಾರೆ, ಆದರೆ ಸಂಖ್ಯೆ ತೀರಾ ವಿರಳ !

ಎಷ್ಟೋ ಜನ ಚಟಗಳಿಗಾಗಿ ದಿನವೂ ಸಹಸ್ರಾರು ರೂಪಾಯಿ ವ್ಯಯಿಸುತ್ತಾರೆ,ಅಂತಹ ಮಹಾನುಭಾವರಲ್ಲಿ ನನ್ನ ಅರಿಕೆ ಇಷ್ಟೇ-- "ಸ್ವಾಮೀ ನಿಮ್ಮ ಚಟಕ್ಕೆಂದು ಉಪಯೋಗಿಸುವ ನೂರು ರೂಪಾಯಿಗಳಲ್ಲಿ ಕೇವಲ ಒಂದು ರೂಪಾಯಿಯನ್ನು ಬಡಮಕ್ಕಳ ಖರ್ಚಿಗೆ ಎತ್ತಿಡಿ.ಅಂಥವರನ್ನು ಕಂಡು ಅವರ ಕೈಗೆ ವಸ್ತು-ಆಹಾರ-ಬಟ್ಟೆ-ಆಟಿಕೆ ಈ ರೂಪಗಳಲ್ಲಿ ಕೊಡಿ,ಹಲವು ಚಟಗಳಲ್ಲಿ ಇದೂ ಒಂದು ಎಂದು ತಿಳಿದುಕೊಳ್ಳಿ,ಇದರಿಂದ ನಿಮಗೆ ಪುಣ್ಯ ಲಭಿಸೀತು! ನೀವು ಕಳೆಯುವ ಹಣ ದ್ವಿಗುಣವಾಗಿ ನಿಮ್ಮ ಕೈಗೆ ಮರಳೀತು !"


ನಮ್ಮ ಹಳ್ಳಿಯಲ್ಲಿ ಹಿಂದೊಮ್ಮೆ ನೋಡಿದ್ದು-- ಮದುವೆ ಮನೆಯಲ್ಲಿ ಊಟ ಮುಗಿದಾಗ ಎಂಜಲೆಲೆಗಳನ್ನು ಬಿಸಾಡಿದ ಜಾಗದಲ್ಲಿ ೨-೩ ಜನ ಇದ್ದರು. ಅವರು ಅಲ್ಲಿ ಎಲೆಗಳಲ್ಲಿ ಮಿಕ್ಕುಳಿದ ಸ್ವೀಟು, ಅನ್ನ ಮುಂತಾದ್ದನ್ನು ಎತ್ತಿಕೊಂಡು ಬೇರೆ ಬೇರೆ ಪಾತ್ರೆಗೆ ತುಂಬಿಸಿಕೊಳ್ಳುತ್ತಿದ್ದರು! ಬಹಳ ಬೇಸರವಾಯಿತು. ಅನೇಕರು ಹೆಚ್ಚೆಂದು ಚೆಲ್ಲಿದ ಆಹಾರ, ತಿಪ್ಪೆಗೆ ತೂರಿದ ಆಹಾರ, ಬೀಡಾಡಿ ನಾಯಿಗಳಿಗೆ ಸೇರಬೇಕಾದ ಆ ಆಹಾರ ಭಿಕ್ಷುಕರನ್ನು ಕೈ ಬೀಸಿ ಕರೆದಿತ್ತು. ನನಗೆ ಅಂದೇ ಅನ್ನಿಸಿತ್ತು ನಾವೆಲ್ಲ ವಿನಾಕಾರಣ ದುಂದುವೆಚ್ಚಮಾಡುತ್ತೇವೆ ಎಂದು ! ಇಂತಹ ದುಂದುವೆಚ್ಚಕ್ಕೆ ಕಡಿವಾಣ ಇರಲಿ. ಆರ್ತರಿಗೆ ಹಸಿದವರಿಗೆ ಹಂಚಿತಿನ್ನುವ ಮನೋಭಾವ ಬರಲಿ.


ಅನೇಕ ವರ್ಗದ ಕಾರ್ಮಿಕರೂ ಕೂಡ ಅಸಂಘಟಿತರೇ, ಇವತ್ತು ಅದಕ್ಕೇ ತಮ್ಮ ಉಳಿವಿಗಾಗಿ ಎಲ್ಲರೂ ಅವರವರ ವೃತ್ತಿಪರ ಸಂಘಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಒಳ್ಳೆಯದೇ. ಆದರೆ ಸಂಘಟನೆಗಳೇ ಇಲ್ಲದ ಜನರಿಗೆ ಅವರ ಜೀವನಕ್ಕೆ ಯಾರೂ ದಿಕ್ಕಿರುವುದಿಲ್ಲ. ಅವರು ನಿರಕ್ಷರಕುಕ್ಷಿಗಳಾಗಿ ಜೀವನವೇ ಹೀಗೆ ಎಂದು ನಡೆದಿದ್ದಾರೆ! ಅವರ ಹೆಸರಲ್ಲಿ ಸಿಗುವ ಸರಕಾರೀ ಸೌಲಭ್ಯ ಬೇರಾರದೋ ಪಾಲಾಗುತ್ತಿರುವುದು ವಿಪರ್ಯಾಸ. ಬೀಡಿ ಕಾರ್ಮಿಕರು, ಗುಡಿಕೈಗಾರಿಕೆಯವರು,ಊದುಬತ್ತಿ ಹೊಸೆಯುವವರು ಹೀಗೆ ಹಲವಾರು ರಂಗ ಕಂಡು ಬರುತ್ತದೆ.

ಎಲ್ಲರೂ ದುಡಿಯುವುದು ಹೊಟ್ಟೆಗಾಗಿ. || ಉದರ ನಿಮಿತ್ತಂ ಬಹುಕೃತ ವೇಷಂ || ನಮ್ಮ ನಮ್ಮ ಬದುಕಿಗಾಗಿ ನಮ್ಮಿಷ್ಟದ ರಂಗಗಳನ್ನು ಆಯ್ಕೆಮಾಡಿಕೊಂಡು ಕೆಲಸಮಾಡುತ್ತಿರುತ್ತೇವೆ, ಮಧ್ಯೆಯೇ ಪರರ ಬಗ್ಗೆ, ಕೈಲಾಗದವರ ಬಗ್ಗೆ, ವಿದ್ಯೆಯಿಲ್ಲದೆ ಏನೂಮಾಡಲಾಗದೇ ಇರುವವರ ಬಗ್ಗೆ, ಕೂಲಿಗಳ ಮಕ್ಕಳ ಹಾಗೂ ಅನಾಥ ಮಕ್ಕಳ ಬಗ್ಗೆ ನಮ್ಮ ಕಾಳಜಿ ಇರಲಿ. ಕೂಲಿಯೋರ್ವನಿಗೆ ಏನಾದರೂ ಅವಶ್ಯಕ ವಸ್ತು-ಸಾಮಾನು ಕೊಟ್ಟು [ದುಡ್ಡುಕೊಟ್ಟರೆ ಎಣ್ಣೆಗೆ ಹೋದೀತು !]ನಾವು ಈ ದಿನವನ್ನು ಕಳೆದರೆ ಅದು ನಿಜವಾದ ಕಾರ್ಮಿಕ ದಿನಾಚರಣೆ ! ಇಂತಹದ್ದಕ್ಕೆ ಆದರ್ಶರಾಗಿದ್ದ ದಿ. ಡಾ|ವಿಷ್ಣುವರ್ಧನ್ ಅವರು ಹಾಡಿದ ಹಾಡಿನ ಸಾಲಿನೊಂದಿಗೆ ಲೇಖನ ಪೂರ್ನಗೊಳಿಸಲೇ ?


ತುತ್ತು ಅನ್ನ ತಿನ್ನೋಕೇ ಬೊಗಸೇ ನೀರು ಕುಡಿಯೋಕೇ...
ತುಂಡುಬಟ್ಟೆ ಸಾಕು ನಮ್ಮ ಮಾನಾಮುಚ್ಚೋಕೇ......
ಅಂಗೈಯ್ಯಗಲ ಜಾಗಾ ಸಾಕು ಹಾಯಾಗಿರೋಕೇ ....

Monday, April 26, 2010

ನೆನೆವುದೆನ್ನ ಮನ ಶ್ರೀಗಜಾನನ



ಅನಂತ ಶಕ್ತಿ ಸಂದೋಹ ಪೂರ್ಣಸ್ಯ ಪರಮಾತ್ಮನಃ |
ವಿಘ್ನ ವಿದ್ವಂಸಿನೀ ಶಕ್ತಿಂ ಗಜರಾಜಮುಪಾಸ್ಮಹೇ ||

ಅನಂತ ಶಕ್ತಿಗಳ ಆಗರವಾಗಿ ಭಗವಂತನ ಪೂರ್ಣರೂಪ ಪಡೆದ ವಿಘ್ನ ವಿದ್ವಂಸಕ ಶಕ್ತಿಯೇ ಶ್ರೀ ಮಹಾಗಣಪತಿ. ಗಣಗಳಿಗೆಅಧಿಪತಿಯಾಗಿ ಮೆರೆವ ಒಂದು ದೈವೀಶಕ್ತಿಯೇ ಗಣಾಧಿಪತಿ ಅಥವಾ ಗಣಪತಿ. ಈ ಗಣಪತಿ ಎಂಬ ಗಜಮುಖ ರೂಪ ವಿಶ್ವದ ಎಲ್ಲೆಡೆಜನಪ್ರಿಯತೆ ಪಡೆದ ದೈವರೂಪ. ಅನೇಕ ದೇಶಗಳಲ್ಲಿ ವಿವಿಧ ರೂಪಗಳಿಂದ ಕಂಗೊಳಿಸುವ ಮೂರ್ತಿ ಈ ವಿಶ್ವಂಭರ. ವಿಶ್ವವನ್ನೇಧರಿಸಿಯೂ ಮತ್ತು ವಿಶ್ವದೊಳಗೆ ಹೊಕ್ಕೂ ಇರುವುದರಿಂದ ಈತನಿಗೆ ವಿಶ್ವಂಭರ ಎಂಬ ಹೆಸರು. ಬಹಳ ದೊಡ್ಡ ಹಾಗೂ ಉದ್ದನೆಯಹೊಟ್ಟೆ ಇರುವುದರಿಂದ ಲಂಬೋದರ ಎಂದರೆ ಒಂದೇ ಕೋರೆ ಹಲ್ಲನ್ನು ಇಟ್ಟುಕೊಂಡಿದ್ದರಿಂದ ಏಕದಂತ ಎಂತಲೂ ಹೊಗೆಯಬಣ್ಣದಲ್ಲಿ ಕೆಲವೊಮ್ಮೆ ಕಾಣುವುದರಿಂದ ಧೂಮ್ರವರ್ಣ ಎಂತಲೂ ಕರೆಯುತ್ತಾರೆ. ಹಣೆಯ ಮೇಲೆ ಅಪ್ಪ ಕೊಟ್ಟ ಚಂದ್ರನನ್ನುಧರಿಸಿದ್ದರಿಂದ ಬಾಲಗಣಪನನ್ನು ಬಾಲಚಂದ್ರನೆಂದೂ ವಿಕಟನಾಟಕಗಳನ್ನು ಪ್ರದರ್ಶಿಸುವುದರಿಂದ ವಿಕಟನೆಂದೂ ನಾರದರುಕರೆದರು. ವಕ್ರತುಂಡನಾದ ಈತ ಕೃಷ್ಣಪಿಂಗಾಕ್ಷ ಎಂಬ ನಾಮಧೇಯವನ್ನೂ ಪಡೆದ. ಪಾರ್ವತಿಯ ಮಗನೆಂಬ ಹೆಗ್ಗಳಿಕೆಯಿಂದಅಮ್ಮನ ರಕ್ಷಣೆಯ ಬಾಗಿಲ ಭಟನಾಗಿ ಅಮ್ಮನ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸಿ ತನ್ನ ಪ್ರಾಣಹರಣವಾದರೂ
ಕರ್ತವ್ಯದಲ್ಲಿ ಒಮ್ಮೆ ವೀರಮರಣವನ್ನಪ್ಪಿದ್ದ ಗೌರಿಯ ಮುದ್ದುಕಂದ ಶ್ರೀಮುದ್ದುಗಣಪ. ಮೂಷಿಕಾಸುರನನ್ನು ಮರ್ದಿಸಿ ತನ್ನವಾಹನವನ್ನಾಗಿಸಿಕೊಂಡ ಇಲಿದೇರ ಈ ಬೆನಕ. ಆನೆಯ ಮೊಗವನ್ನು ಹೊತ್ತರೂ ಅಲ್ಲೇ ನಸುನಗುತ್ತಾ ಎಲ್ಲರನ್ನು ನಗಿಸುವಸ್ವಭಾವದ ಜನಪ್ರಿಯ ದೈವ ನಮ್ಮ ಜನಗಣಾಧಿಪ. ಪ್ರತಿ ಮನೆಯಲ್ಲೂ ವಾಹನದಲ್ಲೂ ಹಾದಿ ಬೀದಿಯ ಮಧ್ಯೆಯೂ ಮನೆಯಮುಂದಿನ ಕಾಂಪೌಂಡ್ ಗೋಡೆಯಲ್ಲೂ ಹೀಗೆ ಬಹುತೇಕ ಎಲ್ಲಕಡೆ ತನಗೊಂದು ಶಾಶ್ವತ ಸ್ಥಾನ ದೊರಕಿಸಿಕೊಂಡ ನಮ್ಮೀವಿನಾಯಕ ಸದಾ ವಿಶ್ವವಂದ್ಯ. ನಂಬಿದವರಿಗೆ ಇಷ್ಟಾರ್ಥಗಳನ್ನು ಇತ್ತು ಪೊರೆವ ನಮ್ಮ ಸುಮುಖ ದುರ್ಮುಖನೆಂದೂ ಕರೆದರೆ ಇಲ್ಲಾಎನ್ನಲಿಲ್ಲ.

ಸ್ಥೂಲವಾಗಿ ನಮಗೆ ಕಾಣುವ ಗಣಪತಿಯ ರೂಪಕ್ಕೆ, ಅವನ ಪ್ರತೀ ಅಂಗಾಂಗಗಳು ಇಂತಿಂಥದ್ದನ್ನೇ ತಿಳಿಸುತ್ತವೆ ಎಂಬುದುಅನೇಕರ ವಾದವಾದರೆ ಮತ್ತೆ ಮೂಲಾಧಾರ ಚಕ್ರದಲ್ಲಿ ಪ್ರತೀ ಮಾನವನಲ್ಲಿ ಇರುವ ಕುಂಡಲಿನೀ ಶಕ್ತಿಯೇ ಈ ಗಜಕರ್ಣಿಕ. ಅಥರ್ವಣ ವೇದದಲ್ಲಿ ಗಣಪತಿಯನ್ನು

ತ್ವಂ ಗುಣತ್ರಯಾತೀತಃ | ತ್ವಂ ಅವಸ್ಥಾತ್ರಯಾತೀತಃ | ತ್ವಂ ದೇಹತ್ರಯಾತೀತಃ | ತ್ವಂ ಕಾಲತ್ರಯಾತೀತಃ |ತ್ವಂ ಮೂಲಾಧಾರಸ್ಥಿತೋಸಿ ನಿತ್ಯಮ್| ತ್ವಂ ಶಕ್ತಿತ್ರಯಾತ್ಮಕಃ | ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್ |

ಹೀಗೆಲ್ಲ ವರ್ಣಿಸಿ ಈತ ಜ್ಞಾನಮಯನೂ ವಿಜ್ಞಾನಮಯನೂ ಆಗಿದ್ದಾನೆ ಎಂದಿದ್ದಾನೆ ಸ್ವತಃ ಅಥರ್ವ ವೇದಕರ್ತ ದೇವರು!

ಮೂಲ ಪರಬ್ರಹ್ಮ ರೂಪವಾದ ಈ ಮಹಾಗಣಪತಿ ಪಾರ್ವತೀಪರಮೇಶ್ವರರ ಮಗನಾಗಿ ಗಜಮುಖನಾಗಿ ಅವತರಿಸುತ್ತಾನೆ. ಗಣೇಶಪುರಾಣದಲ್ಲಿ ಗಣಪತಿಯ ೧೭ ಅವತಾರಗಳನ್ನು ಕಾಣಬಹುದು. ತ್ರೇತಾಯುಗದಲ್ಲಿ ಮಯೂರೇಶ್ವರನಾಗಿ ಕಂಗೊಳಿಸಿದಈತ ಕಾಲಾನುಕ್ರಮದಲ್ಲಿ ಸಿಂಹವಾಹನನಾಗಿ ಅತ್ರಿ-ಅದಿತಿಗಳಿಗೂ ಮಗನಾಗಿ ಜನಿಸಿದ್ದ! ರಕ್ತಬೀಜಾಸುರನನ್ನು ಸಂಹರಿಸಿರಕ್ತಾಂಬರಧರನಾಗಿ ಕೆಂಪು ಬಣ್ಣದಿಂದ ಪ್ರಜ್ವಲಿಸಿದ. ಪಾಶ ಅಂಕುಶಗಳನ್ನು ಹಿಡಿದು ನಡೆದು ವಿಘ್ನಕರ್ತನೂ-ವಿಘ್ನಹರ್ತನೂ ಆಗಿವಿಘ್ನೇಶ್ವರನಾದ. ಐದು ಮುಖವುಳ್ಳ ಹೇರಂಭನಾದ. ಕಲಿಯುಗದಲ್ಲಿ ದ್ವಿಭುಜನಾದ.

ಗನೇಶಕವಚವೆಂಬ ಮಂತ್ರದಲ್ಲಿ--

ಧ್ಯಾಯೆತ್ ಸಿಂಹಗತಂ ವಿನಾಯಕಮಮುಂ ದಿಗ್ಭಾಹುಮಾದ್ಯೇ ಯುಗೇ |
ತ್ರೇತಾಯಂ ತು ಮಯೂರ ವಾಹನಮುಮಂ ಷಡ್ಭಾಹುಕಂ ಸಿದ್ಧಿದಂ ||
ದ್ವಾಪರೇತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭು ತುರ್ಯೇತು |
ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ||

ಹೀಗೆ ಹೆಳಿದ್ದಾರೆ. ಗೌರಿ ತನ್ನ ಮುದ್ದು ಕಂದನಿಗೆ ರಾಕ್ಷಸ ಬಾಧೆ ತಪ್ಪಲಿ ಎಂಬ ಕಾರಣದಿಂದ ಋಷಿಗಳಿಂದ ಕೇಳಿ ಪಡೆದ ಮೂಲಗಣಪನ ಸ್ತೋತ್ರ ಇದು. ಒಂದು ಶಕ್ತಿ ತನ್ನ ರಕ್ಷಣೆಗೆ ತನ್ನಮೂಲರೂಪವನ್ನೇ ಹೇಗೆ ಬಳಸುತ್ತದೆ ಎಂದು ಇಲ್ಲಿ ಕಾಣಬಹುದು. ಇಂದಿಗೂ ’ಗಣೇಶಕವಚ’ವನ್ನು ಮಕ್ಕಳ ರಕ್ಷಣೆಗಾಗಿ ಪಠಿಸಿ ಅರ್ಚನೆಮಾಡಿ ಪ್ರಾಸದ ಕುಂಕುಮವನ್ನು ಧರಿಸುವಂತೆಯೂ ಅಥವಾ ಆಮಂತ್ರವನ್ನೇ ಯಂತ್ರರೂಪದಲ್ಲಿ/ತಾಯತರೂಪದಲ್ಲಿ ಧರಿಸುವಂತೆಯೂ ಬಳಸುತ್ತಾರೆ.

ಒಟ್ಟಿನಲ್ಲಿ ಗಣೇಶ ಎಂಬುದು ಅದೊಂದು ಅದ್ಬುತ ಶಕ್ತಿ! ಪರಮ ಚೈತನ್ಯ ! ಹಾಗಾಗಿಯೇ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

--ಅಂತ ಶ್ವೇತ ಪೀತಾಂಬರ ಧಾರಿಯೂ ಸ್ವತಃ ಮಹಾವಿಷ್ಣುವೂ ಚಂದ್ರನ ಬಣ್ಣವುಳ್ಳವನೂ ನಾಲ್ಕು ಕೈ ಉಳ್ಳವನೂ ಆದಗಣಪತಿಯನ್ನು ಹೀಗೊಮ್ಮೆ ಸೌಮ್ಯವಾಗಿ ಧ್ಯಾನಿಸಿದರೂ

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |

ಎಂದು ತಡೆಯಲಾರದ ಬರಿಗಣ್ಣಿಂದ ನೋಡಲಾರದ ಆ ದಿವ್ಯ ಪ್ರಭೆಯನ್ನು ನಮಿಸುತ್ತೇವೆ. ಒಂದೇ ಸೂರ್ಯನನ್ನು ನೆಟ್ಟಗೆನೋಡಲಾರದ ನಾವು ಕೋಟಿಸೂರ್ಯನ ಪ್ರಭೆಯನ್ನು ನೋಡಲು ಸಾಧ್ಯವೇ ? ಆದರೂ ಮಹಾತ್ಮರಾಗಿ ಬದುಕನ್ನುಮನುಕುಲಕ್ಕಾಗಿ ಸವೆಸಿದ ಋಶಿಗಳನೇಕರು, ಮನೀಷಿಗಳು ಎಲ್ಲರ ಹಿತಕ್ಕಾಗಿ ಅವರೆಲ್ಲ ಸಾಕ್ಷಾತ್ಕರಿಸಿಕೊಂಡು ದಿವ್ಯ ಚಕ್ಷು ಪಡೆದುನೋಡಿದ ರೂಪಗಳನ್ನು ಬೇರೆ ಬೇರೆ ಶ್ಲೋಕಗಳಲ್ಲಿ ಹೀಗೆಲ್ಲಾ ಹೇಳಿದ್ದಾರೆ.


ಅಣಿಮಾ ಗರಿಮಾದಿ ಅಷ್ಟಸಿದ್ಧಿಗಳನ್ನು ತನ್ನಲ್ಲೇ ಇರಿಸಿಕೊಂಡ ಗಜಾನನನನ್ನು ಕೇವಲ ಬರವಣಿಗೆಯಿಂದ ವರ್ಣಿಸಲು ಸಾಧ್ಯವಿಲ್ಲ.

ಕವಿಂ ಕವೀನಾಂ ಮುಪವಶ್ರವಸ್ತಮಂ | ----ಕವಿಗಳಿಗೇ ಕವಿಯಾಗಿ, ಲಿಪಿಕಾರನಾಗಿ ನಮಗೆಲ್ಲ ವ್ಯಾಸರು ಹೇಲಿದ
ಮಹಾಭಾರತವನ್ನು ಭಗವದ್ಗೀತೆಯ ಸಹಿತ ಬರೆದು ಕರುಣಿಸಿದ ಗೀರ್ವಾಣ ಲಿಪಿಕರ್ತ ಜ್ಯೇಷ್ಟರಾಜನನ್ನು ನಾವು ಸಣ್ಣಕಾವ್ಯರೂಪದಲ್ಲಿ ಧ್ಯಾನಿಸಿ ಪುನೀತರಾಗೋಣವೇ ?


[ನೆನೆವುದೆನ್ನ ಮನ ಎಂದು ಮೂರಾವರ್ತಿ ಅಂದರೆ ತ್ರಿಕರಣ ಪೂರ್ವಕ ಸ್ಮರಿಸಿ ೩ ವರ್ಷಗಳ ಹಿಂದೆ ಇಡಗುಂಜಿಮಹಾಗಣಪತಿಯನ್ನು ನೆನೆದು ಬರೆದ ಭಕ್ತಿ ರೂಪ, ಆತನ ಪ್ರಸಾದ ಇಂದು ತಮ್ಮೆಲ್ಲರಿಗಾಗಿ, ಭುಂಜಿಸಿ ಕೃತಾರ್ಥರಾಗಿ --]


ನೆನೆವುದೆನ್ನ ಮನ ಶ್ರೀಗಜಾನನ

ನೆನೆವುದೆನ್ನಮನ ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ || ಪ ||

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ || ೧ ||

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಶದಿ ಲಿಂಗ ಧರೆಗಿಳಿಸಿಹ ಗಣಿಮಾ || ೨ ||

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ || ೩ ||

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಶೆ ಸಾಲದು ನಿನಗೆ ನಮಿಸಲು ದಿನಪತಿ
ರೋಶದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ || ೪ ||

ಮಲಗಿಹಳಹ ನೀರೆ

ಇಡೀ ಭಾರತವನ್ನೇ ಒಂದು ನಾರಿಯ ಥರ ನೋದುವ ಪ್ರಯತ್ನ ಇದು. ಭಾರತಮಾತೆಯ ಸೊಬಗನ್ನು ನೈಸರ್ಗಿಕವಾಗಿ ಮನುಷ್ಯ ರೂಪಕ್ಕೆ ಹೊಲಿಸುತ್ತ ನಡೆದರೆ ಆಗ ನಮಗೆ ಯಾರೋ ಮಲಗಿದ ರೀತಿ ಕಾಣುತ್ತದೆಯಲ್ಲವೇ ? ನಮ್ಮ ನೋಟವನ್ನೂ ಆ ರೀತಿಯಲ್ಲಿ ಇಟ್ಟುಕೊಂಡಾಗ ಸಮೃದ್ಧ ನಾರಿಯೋರ್ವಳು ಮಲಗಿದ ರೀತಿ ಕಾಣಸಿಗುತ್ತದೆ.



ಮಲಗಿಹಳಹ ನೀರೆ


ಮಲಗಿಹಳಹ ನೀರೆ ನೀರವದಿ
ಹೊಲಗಳ ಹೊದಿಕೆಯಡಿ ವಿಸ್ತಾರದಿ


ಬಣ್ಣದ ಸೀರೆ ಕುಬುಸವ ತೊಡುತಾ
ಬಿನ್ನಾಣಗಿತ್ತಿ ಮೆರುಗನು ಪಡೆದು
ನುಣ್ಣನೆ ಮೈಗೆ ಪುಣ್ಯ ನದಿಗಳಾ
ಸಣ್ಣಗೆರೆಗಳಾ ಚೌಕಳಿ ಹಿಡಿದು


ಬೆಣ್ಣೆ ಹಚ್ಚಿದ ಹಿಮದ ಜಡೆಗಳು
ಕಣ್ಮನ ತಣಿಸುವ ಶರಧಿಯ ಸೀರೆ
ತಣ್ಣನ ಪರ್ವತ ಸ್ತನಗಳ ತೋರಿ
ಉಣ್ಣಲಾಸೊಬಗನು ಹಂಚುತೆಲ್ಲರಿಗೆ


ಭೂಶಿರಗಳ ಥರ ಉದ್ದನೆ ಉಗುರು
ಭೇಷಾಗಿಹ ಕರಾವಳಿ ತೊಡೆಗಳು
ಆಶೆಯ ಚಪ್ಪಟೆ ಭೂಮಿಯ ಉದರ
ರಾಶಿ ರಾಶಿ ಮನು ಮಕ್ಕಳ ಹಡೆದು


ಹಲವು ತೆರನ ಆ ನಸುಮೈಗಂಪು
ಬೆಳವಲ ಮಡಿಲು ನಳಿದೋಳುಗಳು
ಒಲವ ಸೂಸಿ ಮಂದಸ್ಮಿತ ಸುಸ್ಮಿತ
ಬಲವು ಬ್ರಹ್ಮನದು ಕರಗಿ ಹರಿಯಲು

Saturday, April 24, 2010

ದೀಪ, ಆರತಿ ,ಮತ್ತು ತೀರ್ಥ ದ ಸುತ್ತ


ದೀಪ, ಆರತಿ ,ಮತ್ತು ತೀರ್ಥ ದ ಸುತ್ತ

ದೀಪ

ಎಣ್ಣೆಯ ದೀಪಕ್ಕೆ ವಿಶೇಷ ಕಳೆ ಇದೆ,ತುಪ್ಪದ ದೀಪಕ್ಕೆ ಅತಿ ವಿಶಿಷ್ಟ ಲಕ್ಷಣವಿದೆ, ಈ ದೀಪಗಳ ಸುತ್ತ ಪರ್ಭೆಯಿದೆ,ಪ್ರಕಾಶವಿದೆ,ಶಾಖವಿದೆ, ಒಂಥರಾ ಆಹ್ಲಾದಕರ ಸುವಾಸನೆಯಿದೆ. ಬೆಳಗುವ ದೀಪ ನೋಡಿದಾಗ ಮನಸ್ಸು ತುಂಬಾ ಲವಲವಿಕೆ ತುಂಬಿಕೊಳ್ಳುತ್ತದೆ, ನೀಲಾಂಜನವನ್ನು ನೋಡಿದಾಗ ನಮ್ಮಲ್ಲಿ ವಿಶಿಷ್ಟ ಅನುಭೂತಿ ಉಂಟಾಗುತ್ತದೆ. ದೀಪ ಎಲ್ಲಿದೆಯೋ ಅಲ್ಲಿ ಅಂಧಕಾರ ಕರಗುತ್ತದೆ, ಕ್ರಿಮಿ ಕೀಟಗಳು ಆವಾಸವಾಗಿರುವ ಕತ್ತಲ ಜಾಗ ಬೆಳಕಿನಿಂದ ಪ್ರಜ್ವಲಿಸಿದಾಗ ಅವುಗಳು ದೂರ ಸರಿದುಹೋಗಿ ನಮ್ಮ ಆವಾಸಕ್ಕೆ ಅನುಕೂಲವಾಗುತ್ತದೆ. ತುಪ್ಪದ ದೀಪದ ಪರಿಮಳ ಮನದ ಕ್ಲೇಶವನ್ನು ಕಳೆಯುತ್ತದೆ, ಸರಿಯಾಗಿ ದಿಟ್ಟಿಸಿ ನೋಡಿ - ತುಪ್ಪದ ದೀಪದ ಬಣ್ಣವೇ ದೀಪಗಳಲ್ಲಿ ವಿಶಿಷ್ಟ! ಬೆಳ್ಳಿಯ ಹಣತೆಯಲ್ಲಿ ತುಪ್ಪವನ್ನು ಹಾಕಿ, ಶುದ್ಧ ಹತ್ತಿಯ ಬತ್ತಿಯಿಂದ ದೀಪ ಬೆಳಗಿದರೆ ಅದರ ಸಲ್ಲಕ್ಷಣ ನಮಗೆ ತರುವ ಸಂತಸ ಬಹಳ. ದೀಪವನ್ನು ಮಣ್ಣ ಹಣತೆಯಲ್ಲೂ ಬೆಳಗಬಹುದು. ಜ್ಞಾನಕ್ಕೂ ದೀಪಕ್ಕೂ ಇರುವ ಸಾಮಾನ್ಯತೆ ಎಂದರೆ ದೀಪ ಕತ್ತಲೆಯನ್ನು ಓಡಿಸುತ್ತದೆ ಹೇಗೋ ಹಾಗೆ ಓದು-ಜ್ಞಾನಾರ್ಜನೆ ನಮ್ಮ ಮನದ ಕತ್ತಲೆಯನ್ನು ಓಡಿಸುತ್ತದೆ. ಅದಕ್ಕೇ

ದೀಪ ಮೂಲೇ ತತೋ ಬ್ರಹ್ಮಾ ದೀಪ ಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಃ ಪ್ರೋಕ್ತ ದೀಪರಾಜಾಯತೇ ನಮಃ ||

ಈ ಶ್ಲೋಕದಲ್ಲಿ ದೀಪವನ್ನೇ ದೈವವೆಂದು ತಿಳಿದು ಅದರ ಮೂಲ ಭಾಗವನ್ನು ಬ್ರಹ್ಮ, ಮಧ್ಯೆ ವಿಷ್ಣು, ತುದಿಯಲ್ಲಿ ಶಿವ ಎಂದು ಹೆಸರಿಸಿ ನಮಿಸುವುದು ಬಹಳ ಆಪ್ತ ಕೆಲಸ ಅಲ್ಲವೇ, ಅದಲ್ಲದೆ ಸಾಯಂಕಾಲ ದೀಪ ಬೆಳಗುವಾಗ

ಶಿವಂಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜೋತಿರ್ನಮೊಸ್ತುತೇ ||

ಆಹಾ ಎಷ್ಟು ಹಿತವಾಗಿ ಹೇಳಿದ್ದಾರೆ ನೋಡಿ! ನನ್ನ ಶತ್ರುವಿಗೂ ಈ ದೀಪ ಹಿತಕರವಾಗಲಿ, ಅಂದರೆ ಯಾರಿಗೂ ಸಂಕಷ್ಟ ಬಾರದಿರಲಿ ಎಂಬ ಅರ್ಥವಲ್ಲವೇ?
ಮೇಲಾಗಿ ಇದನ್ನೆಲ್ಲಾ ನೋಡಿ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದರ ಮೂಲಕ ಪ್ರಾರಂಭಿಸುತ್ತೇವೆ ಅಲ್ಲವೇ ? ದೀಪದಲ್ಲಿ ತಾತ್ಕಾಲಿಕ ದೀಪ ಮತ್ತು ನಂದಾದೀಪ ಎಂಬ ಎರಡು ಬಗೆ, ತಾತ್ಕಾಲಿಕ ದೀಪ ಆ ಕ್ಷಣದಲ್ಲಿ ಹಚ್ಚಿಕೊಳ್ಳುವುದಾದರೆ ನಂದಾದೀಪ ಆರದೇ ಉರಿಯುವ ದೀಪ. ಹಳೆಯ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನೋಡ ಸಿಗುವ ಈ ದೀಪ ಆರುವುದಕ್ಕೆ ಅವಕಾಶವಿಲ್ಲದಂತೆ ಅದನ್ನು ನೋಡಿಕೊಳ್ಳುತ್ತಾರೆ.
|| ತಮಸೋಮಾ ಜ್ಯೋತಿರ್ಗಮಯ || ಅಂತ ಹೇಳಿ ಬೆಳಗುವ ಈ ದೀಪ ಎಲ್ಲರ ಮನೆಮನ ಬೆಳಗುವುದಲ್ಲವೇ ?

ಆರತಿ

ದೀಪದ ಸಂಕ್ಷಿಪ್ತ ರೂಪ ಆರತಿ. ದೀಪ ಬಹಳ ಹೊತ್ತು ಉರಿದರೆ ಆರತಿ ಕೆಲಸಮಯ ಉರಿಯುವ ದೀಪ. ಆರತಿಯಲ್ಲಿ ಹಲವು ಥರದ, ಆಕಾರದ, ದೊಡ್ಡ,ಸಣ್ಣ ಆರತಿಗಳಿವೆ. ನಾಗಾರತಿ, ಕುಂಭಾರತಿ, ಕೂರ್ಮಾರತಿ,ಗರುಡಾರತಿ, ರಥಾರತಿ, ಏಕಾರತಿ, ಪಂಚಾರತಿ, ದ್ವಿದಳ ನಾಗಾರತಿ,ತ್ರಿದಳ ನಾಗಾರತಿ, ಉರುಟು ಕರ್ಪೂರದಾರತಿ ಇವೆಲ್ಲ ಆರತಿಯ ವಿವಿಧ್ಯಗಳು. ಆಕಾರ, ಗಾತ್ರ ಮತ್ತು ಎತ್ತರಗಳಲ್ಲಿ ವೈವಿಧ್ಯತೆ ಮೆರೆಯುವ ಆರತಿಗಳದ್ದು ದೇವರಿಗೆ ತಮ್ಮನ್ನು ಅರ್ಪಿಸಿಕೊಂಡ ಹೆಮ್ಮೆ ! ಅದು ಒಪ್ಪಲೇಬೇಕಾದ ನಿಜವಷ್ಟೇ ? ಈ ಆರತಿಗಳಿಂದ ಮನಸ್ಸು ಬಹಳ ಪ್ರಪುಲ್ಲ ಗೊಳ್ಳುತ್ತದೆ. ಆರತಿ ಬೆಳಗಿದಾಗ ಸಿಗುವ ಪ್ರತಿಸಲದ ಆನಂದ ಅದೊಂದು ಅವಿಸ್ಮರಣೀಯ ಕ್ಷಣವಾಗಿ ಅನುರಣಿಸುತ್ತಿರುತ್ತದೆ. ಭಾವುಕರಾದ ನಾವನೇಕರು ಆ ಆರತಿಗಳ ಅಂದದಲ್ಲಿ ಕಳೆದುಹೋಗುತ್ತೇವೆ;ನಮ್ಮನ್ನೇ ನಾವು ಮರೆಯುತ್ತೇವೆ. ಹೀಗಾಗಿ ಇಂತಹ ಮಂಗಲಾರತಿಗಳಿಗೆ ಹುಚ್ಚು ಮಂಗಳಾರತಿ ಎಂದು ಕರೆಯುವ ವಾಡಿಕೆ ಕೂಡ ಕೆಲವುಕಡೆ ಕಂಡುಬರುತ್ತದೆ! ನಮ್ಮ ಮನಸ್ಸಿನ ಭಾವನೆಗಳನ್ನು ದೇವರಿಗೆ ಅರ್ಪಿಸುತ್ತ, ಆ ಕ್ಷಣದಲ್ಲಿ ಏನೋ ಒಂದು ವೈಭವವನ್ನು ಅನುಭವಿಸುವ ಕಲ್ಪನೆಯಿಂದ ಸಾಕಾರಗೊಂಡ ಈ ಆರತಿಗಳು ಒಂದೊಂದೂ ಒಂದೊಂದು ವೈಶಿಷ್ಟ್ಯವನ್ನು ತೋರುತ್ತವೆ. ಆರತಿ ನೋಡಿ ಸಂತಸಪಡಬೇಕೆಂಬ ನಮ್ಮ ಹುಚ್ಚು ತಣಿವವರೆಗೂ ನಾವು ಆರತಿ ಬೆಳಗುವುದರಿಂದ ಈ ಆರತಿಗಳು ಹಾಗೆ ಕರೆಸಿಕೊಂಡಿವೆ ಎಂದರೆ ತಪ್ಪಾಗಲಾರದೇನೋ! ಒಟ್ಟಿನಲ್ಲಿ ಆರತಿಗಳು ನಮ್ಮ ಮನಸ್ಸಿಗೆ ಆನಂದವನ್ನು, ತನ್ಮಯತೆಯನ್ನು ತಂದುಕೊಡುವ ಸಾಧನಗಳು. ಮೇಲಾಗಿ ಈ ಆರತಿಗಳಿಂದ ಹೊರಡುವ ಧೂಮಗಳು ನಮ್ಮ ಭಾವನೆಗೆ ರೆಕ್ಕೆ ಪುಕ್ಕ ಕೊಟ್ಟು ಬಲಿಯಲು ಸಹಕಾರಿಯಾಗುತ್ತವೆ. ಕೊನೆಯಲ್ಲಿ ಬೆಳಗುವ ಕರ್ಪೂರದ ಆರತಿಯಿಂದ ಹೊರಡುವ ಧೂಮ ಕ್ರಿಮಿನಾಶಕವಾಗಿದೆ. ಕರ್ಪೂರದಾರತಿ ಯನ್ನು ಕೊನೆಯಲ್ಲಿ ಬೆಳಗುವ ಐತಿಹ್ಯವೇನೆಂದರೆ ಹೇಗೆ ಕರ್ಪೂರ ತನ್ನನ್ನೇ ತಾನು ಕರಗಿಸಿ ಬೆಳಕು ಕೊಟ್ಟು ನಿಶ್ಯೇಷವಾಗುವುದೋ ಹಾಗೆ ನಮ್ಮನ್ನೂ ನಿನ್ನಲ್ಲಿ ಕರಗಿಸಿಕೊಂಡು ಕೀರ್ತಿಶೇಷರನ್ನಾಗಿ ಮಾಡೆಂದು ದೇವರಲ್ಲಿ ಪ್ರಾರ್ಥಿಸುವುದೇ ಈ ಆರತಿಯ ವಿಶೇಷ. ಆರತಿಗಳನ್ನು ಬೆಳಗಲು ಯಾವುದರ ನಂತರ ಯಾವುದು ಮತ್ತು ಎಷ್ಟು ಆವರ್ತಿ ಅವುಗಳನ್ನು ಎತ್ತಬೇಕು ಎನ್ನುವುದರ ಬಗ್ಗೆ ನಿಯಮಗಳಿವೆ, ಆದರೆ ನಮ್ಮ ಹುಚ್ಚಿನಲ್ಲಿ ಬೆಳಗುವ ಆರತಿಗಳನ್ನು ಬತ್ತಿ ಆರುವವರೆಗೂ ಎತ್ತುತ್ತಲೇ ಇರುತ್ತೇವೆ !

ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ
ದೀಪಂ ಗ್ರಹಾಣ ದೇವೇಶ ತ್ರಿಲೋಕ್ಯ ತಿಮಿರಾಪಹ |
ಭಕ್ತ್ಯಾ ದೀಪಂ ಪ್ರಯಚ್ಚಾಮಿ ದೇವಾಯ ಪರಮಾತ್ಮನೇ
ತ್ರಾಹಿಮಾಮ್ ನರಕಾದ್ಘೋರಾತ್ ದಿವ್ಯಃ ಜ್ಯೋತಿ ನಮೋಸ್ತುತೆ ||

ಹೀಗೆಲ್ಲ ಹಲವಾರು ಮಂತ್ರಗಳಿಂದ, ಸ್ತುತಿಗಳಿಂದ ದೇವರನ್ನು ಪ್ರಾರ್ಥಿಸುತ್ತ ಎತ್ತುವ ಆರತಿ ವೈಜ್ಞಾನಿಕವಾಗಿ, ಮನೋವೈಜ್ಞಾನಿಕವಾಗಿ ಶುಭಫಲಕಾರಿ ಎನ್ನುವುದು ಸ್ತುತ್ಯಾರ್ಹ ವಿಷಯ, ನಮ್ಮ ಪೂರ್ವಜರು ದಡ್ಡರಲ್ಲವಷ್ಟೇ ? !!!

ತೀರ್ಥ

ತೀರ್ಥ ಎಂಬುದು ದೇವರ ಅಭಿಷೇಕದ ನೀರು, ಪಂಚಾಮೃತ, ಎಳೆನೀರು, ಕಾಯಿನೀರು, ಕಷಾಯ ಹೀಗೇ ಯಾವರೂಪದಲ್ಲಾದರೂ ಇರಬಹುದು, ಆದರೆ ಮೂಲ ದ್ರವರೂಪ ಅಷ್ಟೇ. ಸಾಲಿಗ್ರಾಮ ಎಂಬುದನ್ನು ನಾವು ನೋಡಿರುತ್ತೇವೆ, ಇಂದಿನ ಹೊಸ ಪೀಳಿಗೆಗೆ ಪಂಚಾಯತನ ವಿಗ್ರಹಗಳ ಪರಿಚಯವಿಲ್ಲವಾಗಿ ಹೇಳಬೇಕಾಗಿಬರುತ್ತದೆ. ಸಾಲಿಗ್ರಾಮದ ಮೇಲೆ ಪಚ್ಚಕರ್ಪೂರ ಸಹಿತ ಅಷ್ಟಗಂಧ ಲೇಪಿಸಿ, ಅದನ್ನು ಶಂಖದಲ್ಲಿ ತುಂಬಿಸಿಕೊಂಡ ಶುದ್ಧ ನೀರಿನಿಂದ ತುಳಸಿ ಇಟ್ಟು ಪುರುಷ ಸೂಕ್ತದಿಂದ ಅಭಿಷೇಚಿಸಿದಾಗ ದೊರೆಯುವ ಆ ಮಿಶ್ರಿತ ನೀರೆ ನಮಗೆ ಮನೆಗಳಲ್ಲಿ ಸಿಗಬಹುದಾದ ತೀರ್ಥ. ಇದಕ್ಕೆ ರೋಗನಿವಾರಕ ಶಕ್ತಿ ಇದೆ. IT ENHANCES IMMUNITY IN OUR BODY. ಇನ್ನುಳಿದಂತೆ ಎಲ್ಲಾ ತೀರ್ಥಗಳೂ ಪರಿಣಾಮಕಾರಿಗಳೇ. ವಿಶೇಷವಾದ ಕಷಾಯ ತೀರ್ಥಗಳನ್ನು ಬ್ರಹ್ಮೋತ್ಸವ ಅಥವಾ ವಿವಿಧ ಉತ್ಸವದ ಸಮಯದಲ್ಲಿ ಉತ್ಸವ ಮುಗಿಸುವ ವೇಳೆ ದೇವರಿಗೆ ಅವಬೃತ ಕಾರ್ಯ ನಡೆಸುವಾಗ ನಿವೇದಿಸಲಾಗುವ ವಿವಿಧ ಗಿಡಮೂಲಿಕೆಗಳು ಮತ್ತು ಯಾಲಕ್ಕಿ,ಲವಂಗ,ಪಿಪ್ಪಲಿ ಇತ್ಯಾದಿ ಹಲವಾರು ದ್ರವ್ಯಗಳಿಂದ ಕುದಿಸಿ ತಯಾರಿಸಿದ ಕಷಾಯ--ಒಮ್ಮೆ ಅವಕಾಶವಾದರೆ ಕುಡಿದು ನೋಡಿ, ಜನ್ಮದಲ್ಲಿ ಅದರ ರುಚಿ ಮರೆಯಲಾರಿರಿ, ಅದ್ಬುತ ಮತ್ತು ಅದರ ಪರಿಣಾಮ ಕೂಡ ಅಷ್ಟೇ ಅದ್ಬುತ. ತೀರ್ಥಗಳು ಸಹಜವಾಗಿ ಖನಿಜಯುಕ್ತವಾಗಿರುತ್ತವೆ.

ಹೀಗೇ ನಮ್ಮ ಸುತ್ತ ದಿನನಿತ್ಯ ನಾವು ಬಳಸುವ ಈ ಮೂರು ಅಂಶಗಳು ವೈಜ್ಞಾನಿಕ ಮತ್ತು ಅರ್ಥಪೂರ್ಣ, ನಮ್ಮ ಪೂರ್ವಜರ ಪ್ರತೀ ನಡೆಯೂ ಹಾಗೇ ಅಲ್ಲವೇ ?

--------
ಇನ್ನು ಮತ್ತೆ ಮುಂದಿನ ಕೃತಿ ಸ್ವಲ್ಪ ತಡವಾಗಿ, ಈ ಕೃತಿ ಕೂಡ ಸೈಬರ್ ನಲ್ಲಿ ಕುಳಿತು ಪ್ರಕಟಿಸಿದ್ದು, ನೆಟ್ ತೊಂದರೆ ಇರುವುದರಿಂದ ದಯವಿಟ್ಟು ಸಹಕರಿಸಿ.

Tuesday, April 20, 2010

ಮಗುವಿನ ಮೊಗದ ಜಗ

ಮಗುವಿನ ಮೊಗದಲ್ಲಿ ಅರಳುವ ಮುಗ್ಧ ನಗೆಯಲ್ಲಿ ಎಣಿಸಲಾರದಷ್ಟು ಅದ್ಬುತ ಭಾವನೆಗಳಿವೆ. It is a treasure of thoughts ! ದಿನವಿಡೀ ಕೆಲಸ ಮಾಡಿ ದಣಿದು ಬಂದರೂ ಸಂಜೆ ಮಗುವಿನ ಮುಖದಲ್ಲಿ ಅರಳುವ ನಗು ನೋಡಿ ನಮ್ಮ ಕ್ಲೇಶವನ್ನು, ಸುಸ್ತನ್ನು ಒಮ್ಮೆಲೇ ಕಳೆದುಕೊಳ್ಳುತ್ತೇವೆ. Such an electrifying smile ! ಅದಕ್ಕಿರುವ ಆ ಶಕ್ತಿ ಬಹುಶಃ ಬೇರೆ ಯಾವುದಕ್ಕೂ ಇರಲಾರದು. ಮಕ್ಕಳ ಜಗತ್ತೇ ಹಾಗೆ. ದೂರದಲ್ಲಿ ಯಾರದೋ ಮಗು ನಗುತ್ತಿದ್ದರೂ ಅದನ್ನು ನೋಡಿಯೇ ನಾವು ಸಂತಸ ಪಡುತ್ತೇವೆ. ಮಗುವಿನಲ್ಲಿ ಆ ಮುಗ್ಧ ಭಾವನೆಗಳಿವೆ. ಅದಕ್ಕೆ ವ್ಯವಹಾರದ ಹೊರ ಜಗತ್ತು ಗೊತ್ತಿಲ್ಲ ! ಅದು ತಿಳಿದಿರುವುದು ಕಣ್ಣಿಗೆ ಕಾಣುವ ಅಪ್ಪ-ಅಮ್ಮ ಮತ್ತು ಸುತ್ತಲ ಹತ್ತಾರು ಹತ್ತಿರದ ಬಂಧುಗಳನ್ನು ಮಾತ್ರ. ಚಿಕ್ಕ ಶಿಶುವಿನಿಂದ ಹಿಡಿದು ೭-೮ ವರ್ಷಗಳ ವರೆಗೂ ಮಗುವಿನ ಲೋಕದ ಪರಿಯೇ ವಿಭಿನ್ನ.

ಅನೇಕ ಆಟಿಕೆಗಳನ್ನು ತಂದುಕೊಳ್ಳುವುದು, ರಾಶಿ ಹಾಕುವುದು, ಕಿತ್ತಾಡಿ ಹರಡುವುದು, ಅದರಲ್ಲಿ ಕೆಲವನ್ನು ಎತ್ತಿಕೊಂಡು ಇನ್ನೊಂದು ಕಡೆ ಜೋಡಿಸಿಕೊಳ್ಳುವುದು, ಜೋಡಿಸಿದ ವಸ್ತುಗಳು ಬಿದ್ದಾಗ ಅಳುವುದು, ಮತ್ತೆ ಪುನರಪಿ ಪ್ರಯತ್ನಿಸುವುದು, ಪಕ್ಕದ ಮನೆಗಳ ಮಕ್ಕಳೊಡನೆ ಆಟವಾಡುವುದು, ದೊಡ್ಡವರನ್ನು ಅನುಕರಿಸುವುದು, ಟಿವಿ ಕಾರ್ಯಕ್ರಮಗಳನ್ನು ಅನುಕರಿಸುವುದು, ಕೆಲವೊಮ್ಮೆ ತನ್ನದೇ ಆದ ಶೈಲಿಯಲ್ಲಿ ಏನೋ ಹಾಡಿಕೊಳ್ಳುವುದು, ಜೋರಾಗಿ ಓಡಿ ಬೀಳುವುದು, ಬೀಳುವುದನ್ನು ಯಾರೂ ನೋಡಲಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಸುಮ್ಮನೇ ಎದ್ದು ಹೋಗುವುದು, ಬೀಳುವುದನ್ನು ನಾವು ನೋಡಿಬಿಟ್ಟರೆ ಬೋ ಅಂತ ಮರ್ಯಾದೆಯಾಗಿ ಅಳಲು ಮುಂದಾಗುವುದು, ವೈದ್ಯರ ಆಟ, ಅಡಿಗೆ ಆಟ, ವಾಹನ ಚಾಲನೆ ಆಟ, ಅಡಗಿಕೊಳ್ಳುವ ಆಟ, ಪುಸ್ತಕಗಳಲ್ಲಿ ಏನೋ ಗೀಚಿ ಚಿತ್ರ ಬರೆದೆನೆಂದು ತೋರಿಸುವುದು, ಅಪ್ಪನ ಮೇಲೆ ಆನೆ ಸವಾರಿ, ಉಪ್ಪು ಬೇಕಾ ಚಪ್ಪೆ ಬೇಕಾ ಪುರ್ ಪುರ್ ಪುರ್ ಎಂದು ಬೆನ್ನಮೇಲೇರಿ ಕುಣಿಯುವುದು ....ಹೀಗೇ ಒಂದೇ ಎರಡೇ ? ಅಲ್ಲೆಲ್ಲಾ ಮಧ್ಯೆ ಮಧ್ಯೆ ಕಿಲ ಕಿಲ ನಗು, ಕಾಲ ಗೆಜ್ಜೆಯ ಸಣ್ಣನೆಯ ನಿನಾದ, ತಪ್ಪು ಹೆಜ್ಜೆಗಳ ನಡೆತ, ಕೆಲವೊಮ್ಮೆ ಭಯಮಿಶ್ರಿತ ವಿಷಾದ, ಮುರಿದ ಗೊಂಬೆಯ ಬಗ್ಗೆ ರೋದನ, ತಿಂಡಿ-ಊಟ ಬೇಡವೆಂಬ ಹಠ, ದೂರದ ಚಂದ್ರನ ಲೋಕಕ್ಕೆ ಹೋಗಿ ಏನೆಲ್ಲಾ ಹುಡುಕಿ ತೆಗೆದು ತರುವ ಆಸೆ, ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಮಗುವಿನ ಮೊಗದ ಜಗತ್ತನ್ನು ಕಂಡು ಬರೆದ ನಾಲ್ಕು ಸಾಲು ಈ ಕವನದ ರೂಪ---





ಮಗುವಿನ ಮೊಗದ ಜಗ


ಮಗುವೆ ನಿನ್ನಯ ಮೊಗದ ಮೊಗೆದು ಬಡಿಸುವ ಖುಷಿಯ

ನಗುವಿನೊಂದಿಗೆ ನಲಿವಾ ಜಗದೊಡೆಯ ನಾನು !
ಬಗೆಬಗೆಯ ವೇಷದಲಿ ನನ್ನ ರಮಿಸುವ ವಿಷಯ
ಲಘುಬಗೆಯಲೀ ಕಲಿತ ಜಾಣ ಮರಿ ನೀನು

ಇಂದ್ರ ನಂದನದಂತೆ ಭುವಿಯ ಅಂಗಣದಲ್ಲಿ
ಚಂದ್ರಮನ ನಾಚಿಸುವ ದುಂಡು ಮುಖವರಳಿ
ಸಾಂದ್ರತೆಯ ಹೆಚ್ಚಿಸುವ ವಿದ್ಯುನ್ಮಾನದ ದೀಪ
ಲಾಂದ್ರದಲಿ ಜಗದ ಭಾವಗಳೆಲ್ಲ ಕೆರಳಿ

ಬಿಂದು ಹನಿ ಹನಿಯಾಗಿ ಹನಿಯು ಹಳ್ಳವದಾಗಿ
ಕುಂದಣದ ಚಿತ್ತಾರ ಮೂಡಿ ಜೀವದಲಿ
ನೊಂದ ಮನವಿರಲೇನು ನಿನ್ನ ನಗುವದು ಸಾಕು
ಒಂದಿನಿತು ಮರೆಯೆ ಚಿಂತೆಯ ತೊರೆಯುತಿಲ್ಲಿ

ರಂಜಿಸುವ ಆಟಗಳು ಬಹು ವಿಧದ ನೋಟಗಳು

ಮಂಜಹನಿ ಹರಳುಗಟ್ಟಿದ ತೆರನ ಸೊಗಸು
ನಂಜನರಿಯದ ಮನಸು ಮುಗ್ಧತೆಯ ಸಾಕಾರ
ಸಂಜೆಸೂರ್ಯನ ಕಿರಣ ನೆನೆಯಿತದು ಮನಸು

Monday, April 19, 2010

ಗುರು ತತ್ವ



ಹಿಂದೊಮ್ಮೆ ಗುರುವಿನ ಬಗ್ಗೆ ಬರೆದಿದ್ದೆ, ಇಂದು ಜಗದಮಿತ್ರ ಮತ್ತೊಮ್ಮೆ ತನ್ನ ಶೈಲಿಯಲ್ಲಿ ಸದ್ಗುರುವಿನ ವರ್ಣನೆ ಮಾಡಹೊರಟಿದ್ದಾನೆ. ಗುರುವಿನ ಬಗ್ಗೆ ಬರೆದಷ್ಟೂ ಕಮ್ಮಿಯೇ ಯಾಕೆಂದರೆ ಆ ತತ್ವವೇ ಹಾಗೆ;ಆ ಪದವೇ ಒಂದು ಬ್ರಹ್ಮ ಬೋಧ ಪದ. ಗುರು ಅಂದರೆ ಯಾರು ಎಂತ ತಿಳಿಯ ಹೊರಟರೆ ಅದು ಮೂಲ ಪರಬ್ರಹ್ಮನನ್ನು ತಲುಪುತ್ತದೆ, ಆ ಪರಬ್ರಹ್ಮನೇ ಗುರು! ಹಾಗಾದರೆ ನಾವು ನೋಡುವ ಗುರುಗಳೆನಿಸಿದವರೆಲ್ಲ ಪರಬ್ರಹ್ಮರೇ ? ಅವರೆಲ್ಲ ಪರಬ್ರಹ್ಮನ ಅವತರಣಿಕೆ ಕಂಡುಕೊಳ್ಳ ಹೊರಟ ಅವನ ಸಂಪೂರ್ಣ ಅನುಯಾಯಿಗಳು.

ಒಂದು ಶ್ಲೋಕ ನೋಡಿ --

ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||

ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.

ಇನ್ನೊಂದು ನೋಡಿ --

ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||





ಗುರು ತತ್ವ

ಇಹದ ಬದುಕಿನ ಬವಣೆ ಕಿತ್ತೊಗೆಯ ಬಯಸುತ್ತ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ

ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ

ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ

ಮೀಟಿ ತಂತಿಯ ಮೆರೆವ | ಜಗದಮಿತ್ರ


ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ

ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ

ಅಣ್ಣ ತೆರೆದನು ಶಾಲೆ | ಜಗದಮಿತ್ರ


ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ

ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ

ಮಥಿತ ಮೊಸರಿನ ತೆರದಿ | ಜಗದಮಿತ್ರ


ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ

ಸಜೆಯ ಬಿಡಿಸುವ ನೋಡ | ಜಗದಮಿತ್ರ


ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ

ಹರಸಿ ಎಲ್ಲರ ಪೊರೆವ | ಜಗದಮಿತ್ರ


Sunday, April 18, 2010

ಮಾರುತಿ ಪ್ರತಾಪ



ಮಾರುತಿ ಪ್ರತಾಪ

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣ ವಂದೇ ಜಗದ್ಗುರುಂ ||

ಯಯಾತಿ ಮಹಾರಾಜ ಕಾರಣಾಂತರಗಳಿಂದ ತನ್ನ ಮುಂದಿನ ಯಾದವ ಪೀಳಿಗೆಯಲ್ಲಿ ಸಿಂಹಾಸನದಲ್ಲಿ ಒಬ್ಬರು ಕುಳಿತು ರಾಜ್ಯಭಾರವನ್ನು ನಡೆಸಲಾರದಂತೆ ಶಪಿಸಿದ ಪ್ರಯುಕ್ತ ಯಾದವ ಕುಲ ಹಾಗೇ ಅರಾಜಕತೆಯಿಂದ ಕೂಡಿದ್ದ ಕಾಲವದು. ಅಂತಹ ಸಮಯದಲ್ಲಿ ಭಗವಾನ್ ಮಹಾವಿಷ್ಣು ಶ್ರೀಕೃಷ್ಣನಾಗಿ, ದೇವಕಿ-ವಸುದೇವರ ಮಗನಾಗಿ ಜನಿಸುತ್ತಾನೆ. ಕೃಷ್ಣನ ಅಣ್ಣನಾಗಿ ಬಲರಾಮ ಇರುತ್ತಾನೆ. ರಾಮಾಯಣದಲ್ಲಿ ಲಕ್ಷ್ಮಣನಾಗಿ ರಾಮನ ಸೇವೆಗೈದ ವಾಸುಕಿಯೇ ಈಗ ಬಲರಾಮನಾಗಿ ಜನಿಸಿರುತ್ತಾನೆ. ದಕ್ಷ ಆಡಳಿತವನ್ನು ನಡೆಸುವ ರಾಜನೆಂದು ಹೆಸರುಪಡೆಯುತ್ತ ಬಲರಾಮ ಒಂದುದಿನ ಒಡ್ಡೋಲಗದಲ್ಲಿ [ ರಾಜಸಭೆಯಲ್ಲಿ ] ತಮ್ಮ ಕೃಷ್ಣ ಹದಿನಾರು ಸಾವಿರದ ನೂರೆಂಟು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದು ನ್ಯಾಯವಲ್ಲ ಎಂಬ ಕಾರಣದಿಂದ ಕೋಪಗೊಂಡು ಶ್ರೀಕೃಷ್ಣನನ್ನು ಧಿಕ್ಕರಿಸುತ್ತಾನೆ. ಹೊರಗಡೆ ಎಲ್ಲೋ ಇದ್ದ ಆತ ಅಸ್ಥಾನವನ್ನು ಪ್ರವೇಶಿಸದಂತೆ ತಡೆಯಲು ದೂತನಿಗೆ ಆಜ್ಞೆಮಾಡುತ್ತಾನೆ. ದೂತನಿಗೆ ಇದು ಕಷ್ಟದ ಕೆಲಸ ಅಂತ ಗೊತ್ತಾದರೂ ರಾಜಬಲರಾಮರ ಆಜ್ಞೆಗೆ ಪ್ರತಿರೋಧಿಸಲಾರದೇ ಹಾಗೇ ಆಗಲಿ ಎಂಬಂತೆ ಕೃಷ್ಣ ಪ್ರವೇಶಿಸದಂತೆ ತಡೆಯುವ ಕೆಲಸವನ್ನು ಮಾಡುತ್ತಿರುತ್ತಾನೆ,



ಇತ್ತ ಕೃಷ್ಣ ಎಂದಿನಂತೆ ಸಹಜವಾಗಿ ಬಂದು ಅಣ್ಣ ಬಲರಾಮನ ಆಸ್ಥಾನಕ್ಕೆ ಹೋಗಬೇಕು ಎಂಬಷ್ಟರಲ್ಲಿ ದೂತ ತಡೆದು ನಿಲ್ಲಿಸುತ್ತಾನೆ. ಅನೇಕಾವರ್ತಿ ದೂತ ಹೇಳಿದರೂ ದೂತನಿಗೆ ತಿಳಿಹೇಳಿ ಅಂತೂ ಕೃಷ್ಣ ಬಲಾರಾಮನ ಆಸ್ಥಾನಕ್ಕೆ ಪ್ರವೇಶಿಸಿಬಿಡುತ್ತಾನೆ. ಅಣ್ಣ ತಮ್ಮರಲ್ಲಿ ನಾಲ್ಕು ಮಾತು ಬೆಳೆಯುತ್ತದೆ. ತಮ್ಮನನ್ನು ತುಂಬಾ ಹಳಿದ ಬಲರಾಮ ಆಸ್ಥಾನದಿಂದ ಹೊರದಬ್ಬಿಬಿಡುತ್ತಾನೆ. ಅವಮಾನಿತನಾದ ಶ್ರೀಕೃಷ್ಣ ಮನದಲ್ಲೇ ಅಂದುಕೊಳ್ಳುತ್ತಾನೆ,

" ಎಲೈ ನಾನು ಮಲಗಿಕೊಳ್ಳುವ ಶೇಷನೇ ರಾಮಾಯಣದಲ್ಲಿ ತಮ್ಮ ಲಕ್ಷ್ಮಣನಾಗಿ ಸೇವೆಗೈದ ಫಲಕ್ಕೆ ಈ ಮಹಾಭಾರತದಲ್ಲಿ ಅಣ್ಣ ಬಲರಾಮನಾಗಿ ಜನಿಸಿದೆಯಲ್ಲ, ಆದರೆ ತಾನು ಉರಗಪತಿ ಎಂಬುದನ್ನೇ ಮರೆತು ಧನಮದ, ರಾಜ್ಯಮದದಿಂದ ಕೊಬ್ಬಿ ನನ್ನನ್ನೇ ಧಿಕ್ಕರಿಸಿದೆಯಲ್ಲ,ನಿನ್ನ ಅಹಂಕಾರವನ್ನು ಮುರಿಯಬೇಕು " ಅಂತಂದುಕೊಂಡು ಬಂದ ಬೇಸರವನ್ನು ನಿವಾರಿಸಿಕೊಳ್ಳುವ ನೆಪದಲ್ಲಿ ಮಡದಿ ಸತ್ಯಭಾಮೆಯ ಅಂತಃಪುರಕ್ಕೆ ಹೋಗುತ್ತಾನೆ. ದೂತನೊಟ್ಟಿಗೆ ಅಲ್ಲಿಗೆ ಬಂದ ಆತ ೩ ದಿನಗಳಿಂದ ಅಲ್ಲಿಗೆ ಬಂದಿರಲಿಲ್ಲ. ಇದೇ ನೆಪವೊಡ್ಡಿ ಸತ್ಯಭಾಮೆ ಗಂಡ ಶ್ರೀಕೃಷ್ಣನಿಗೆ ಪುನಃ ಇಲ್ಲೂ ಕೊಡ ಪ್ರವೇಶ ನಿರಾಕರಿಸುತ್ತಾಳೆ. ಒಳಗೆಬಂದ ಕೃಷ್ಣನನ್ನು ಛೇಡಿಸಿ ಝರಿದು, ಎಷ್ಟೇ ಪರಿಪರಿಯಾಗಿ ರಮಿಸಿದರೂ ಕೇಳದೇ ಕೃಷ್ಣನನ್ನು ಹೊರಗೆ ಅಟ್ಟುತ್ತಾಳೆ. ಕ್ರುದ್ಧನಾದ ಶ್ರೀಕೃಷ್ಣ ಚಿಂತಾಕ್ರಾಂತನಾಗಿರುವಾಗ ದೇವರ್ಷಿ ನಾರದರು ಅಲ್ಲಿಗೆ ಬರುತ್ತಾರೆ. ನಾರದರ ಆಗಮನವನ್ನು ಕೃಷ್ಣ ಅರಮನೆಯ ತನ್ನ ವಾಸದಲ್ಲಿದ್ದು ಗಮನಿಸದಂತೆ ಬೇರೇನೋ ಚಿಂತೆಯಲ್ಲಿರಲು ನಾರದರು ತಯಾರಾಗುತ್ತಾರೆ. ಎಚ್ಚೆತ್ತ ಶ್ರೀಕೃಷ್ಣ ಅವರನ್ನು ಆಸನದಲ್ಲಿ ಕೂರಿಸಿ ಅವರಲ್ಲಿ ತನ್ನ ದುಃಖವನ್ನು ನಿವೇದಿಸಿಕೊಳ್ಳುತ್ತಾನೆ. ನಾರದರು ಪೂರ್ವೇತಿಹಾಸವನ್ನು ಕೃಷ್ಣನಿಗೆ ಆತನ ತಪ್ಪೇ ಹಲವಾರಿದೆ ಎಂಬಂತೆ ಅದನ್ನೆಲ್ಲ ಕೆದಕುತ್ತ ತ್ರೇತಾಯುಗದ ಆಂಜನೇಯನಿಗೆ ರಾಮನಾಗಿ ದರುಶನ ನೀಡುವ ಭರವಸೆ ಕೊಟ್ಟಿದ್ದನ್ನು ಈಡೇರಿಸುವಂತೆ ಹೇಳುತ್ತಾರೆ. ಸೊಕ್ಕಿದ ಬಲರಾಮ ಮತ್ತು ಸತ್ಯಭಾಮೆಯರ ಗರ್ವವನ್ನು ಇಳಿಸಲು ಕೃಷ್ಣ ಆ ಕೆಲಸಕ್ಕೆ ಹನುಮನೆ ಸರಿ ಎಂಬ ಧೋರಣೆಯಿಂದ ಹನುಮನನ್ನು ಕರೆತರಲು ನಾರದರಲ್ಲೇ ಪ್ರಾರ್ಥಿಸಿ ಕಳುಹಿಸಿಕೊಡುತ್ತಾನೆ. ಮೊದಲು ಹೆದರಿದ ನಾರದರಿಗೆ ಅಭಯವನ್ನಿತ್ತು ಕಳುಹಿಸಿಕೊಡುತ್ತಾನೆ.





ನಾರದರು ಹೊರಟು ಮೇರು ಪರ್ವತದಲ್ಲಿ ಘನಘೋರ ತಪಸ್ಸಿನಲ್ಲಿ ನಿಮಗ್ನನಾದ ಆಂಜನೇಯನನ್ನು ಕರೆತರಲು ನಡೆಯುತ್ತಾರೆ. ನಡೆದೂ ನಡೆದೂ ಹನುಮನಿದ್ದಲ್ಲಿಗೆ ಬಂದ ನಾರದರು ಆತನ ತಪೋಭಂಗ ಮಾಡಲು ಸಂನದ್ಧರಾಗುತ್ತಾರೆ.

ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ಜಯ ರಾಮ ರಾಮ ಜಯ ಶೃಂಗಾರ ರಾಮ ಗುಣಧಾಮ
ರಾಮ ರಾಮ ಜಯ ರಾಮ ರಾಮ ಜಯ ಲಾವಣ್ಯ ರಾಮ ರಘುರಾಮ
ರಾಮ ರಾಮ ಜಯ ರಾಮ ರಾಮ ಜಯ ಪಟ್ಟಾಭಿರಾಮ ಪ್ರಭು ರಾಮ

" ರಾಮಾ ರಾಮಾ ರಾಮಾ " ಎನ್ನುತ್ತಾ ಬಂದ ಯಾರದೋ ಧ್ವನಿಗೆ ಹನುಮ ಎಚ್ಚರಗೊಳ್ಳುತ್ತಾನೆ. ಕಡುಕೋಪದಿಂದ ತಪೋಭಂಗಗೈದವರನ್ನು ಹುಡುಕುತ್ತ ಅನತಿ ದೂರದಲ್ಲಿ ವ್ಯಕ್ತಿಯೋರ್ವನನ್ನು ಕಾಣುತ್ತಾನೆ, ದರದರನೆ ಆತನನ್ನು ಎಳೆದುತಂದು ಇನ್ನೇನು ಎರಡು ಬಿಡಬೇಕು ಎನ್ನುವಷ್ಟರಲ್ಲಿ ನಾರದರು ಪುನಃ ರಾಮನಾಮವನ್ನು ಜೋರಾಗಿ ಪಠಿಸುತ್ತಾರೆ. " ಯಾರು ನೀನೆಂದು ಹೇಳು " ಎಂದು ಹನುಮ ಕೂಗುತ್ತಿರಲು, ಶ್ರೀರಾಮಚಂದ್ರನ ಆಣೆಯಾಗಿ ತನಗೆ ತೊಂದರೆ ಕೊಡುವುದಿಲ್ಲಾ ಎಂದರೆ ಹೇಳುತ್ತೇನೆ ಎನ್ನುತ್ತಾರೆ. ಒಪ್ಪಿದ ಹನುಮ ಜೀವ ಹೋಗುವ ಸನ್ನಿವೇಶದಲ್ಲೂ ರಾಮನನ್ನು ನೆನೆಯುವ ನೀನು ಯಾರೆಂದು ಬಹಳ ಸಂತಸದಿಂದ ಕೇಳಿ ವಿಷಯ ತಿಳಿದು ಪ್ರಸನ್ನನಾಗುತ್ತಾನೆ. ನಾರದರಿಂದ ರಾಮನ ಬಗ್ಗೆ ತಿಳಿದ ಹನುಮ ರಾಮದರ್ಶನಕ್ಕಾಗಿ ನಾರದರ ಜೊತೆ ಹೊರಟು ದ್ವಾರಕೆಗೆ ಬರುತ್ತಾನೆ. ದ್ವಾರಕಾ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಕಂಗೊಳಿಸುವ ಉದ್ಯಾನವೊಂದನ್ನು ನೋಡುತ್ತಾ ಅದರ ಬಗ್ಗೆ, ಆ ರಾಜ್ಯ-ರಾಜ ಇದರ ಬಗ್ಗೆ ಎಲ್ಲಾ ಕೇಳುತ್ತಾನೆ. ರಾಜನ ಹೆಸರು ಬಲರಾಮ ಎಂಬುದನ್ನು ತಿಳಿದ ಆಂಜನೇಯ ತನ್ನ ಒಡೆಯ ಶ್ರೀರಾಮ, ಈತನ್ಯಾರು ಬಲರಾಮ ಎಂದುಕೊಳ್ಳುತ್ತ ಕ್ರುದ್ಧನಾಗುತ್ತಾನೆ.

ಉಲ್ಲಂಘ್ಯಸಿಂಧೋಃ ಸಲಿಲಂ ಸಲೀಲಂ
ಯಃ ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂ ಪ್ರಾಂಜಲಿರಾಂಜನೇಯಮ್ ||

ಕ್ರುದ್ಧನಾದ ಹನುಮನಿಗೆ ಉದ್ಯಾನವನವನ್ನು ಹಾಳುಗೆಡಹುವಂತೆ ಹೇಳಿದ ನಾರದರು ಹನುಮನನ್ನು ಅಲ್ಲೇ ಬಿಟ್ಟು ಸೀದಾ ಬಲರಾಮನ ಆಸ್ಥಾನಕ್ಕೆ ಬರುತ್ತಾರೆ. ತಾನು ದಾರಿಯಲ್ಲಿ ಬರುತ್ತಾ ಉದ್ಯಾನದಲ್ಲಿ ಕಪಿಯೊಂದನ್ನು ಕಂಡೆನೆಂತಲೂ ಜನರಿಗೆ ಹೆದರದ ಆ ಕಪಿ ಉದ್ಯಾನವನ್ನು ಹೇಳುಗೆಡವಿತು ಎಂತಲೂ ಹೇಳುತ್ತಾರೆ,ಮತ್ತು ಅದನ್ನು ಅಟ್ಟಿಸಿ ಓಡಿಸುವಂತೆ ಬಲರಾಮನಿಗೆ ಹೇಳುತ್ತಾರೆ. ಅದೆಲ್ಲಾ ಯಾವ ಮಹಾ ಕೆಲಸ ಎಂದುಕೊಂಡ ಬಲರಾಮ ನೇರವಾಗಿ ಉದ್ಯಾನಕ್ಕೆ ಬರುತ್ತಾನೆ. ಕೋಪದಲ್ಲಿದ್ದ ಹನುಮ ಬಲರಾಮನಿಗೆ ನಾಲ್ಕೇಟು ಬಿಗಿದು ಬಲರಾಮನ ಹಲಾಯುಧವನ್ನು ಎತ್ತುಕೊಂಡು ಅಲ್ಲಿಂದ ನಾಪತ್ತೆಯಾಗುತ್ತಾನೆ. ನೋವಿರುವ ಮೈಕೈಯ್ಯನ್ನು ನೀವಿಕೊಳ್ಳುತ್ತ ಎದ್ದ ಬಲರಾಮನಿಗೆ ಪುನಃ ನಾರದರು ಕಾಣುತ್ತಾರೆ, ಅವರಲ್ಲಿ ಮಾತನಾಡುವಾಗ ಕೃಷ್ಣ ಅಲ್ಲಿಗೆ ಬರುತ್ತಾನೆ. ಪೆಟ್ಟು ತಿಂದಿದ್ದ ಬಲರಾಮನನ್ನು ಮಾತನಾಡಿಸಲಾಗಿ ನೋವನ್ನು ಬಚ್ಚಿಡಲು ಪ್ರಯತ್ನಿಸಿದ ಬಲರಾಮನನ್ನು ತನ್ನ ಕೈಯಿಂದ ಕೃಷ್ಣ ಸ್ಪರ್ಶಿಸುತ್ತಾನೆ. ಕೇವಲ ಆ ಸ್ಪರ್ಶದಿಂದ ತಾಳಲಾರದಷ್ಟಿದ್ದ ನೋವು ತಕ್ಷಣದಲ್ಲಿ ಮಾಯವಾಗುತ್ತದೆ. ಆಗ ಬಲರಾಮನಿಗೆ ಕೃಷ್ಣನ ಅತಿಮಾನುಷ ಶಕ್ತಿಯ ಅರಿವಾಗಿ ಆತ ಸಾಮಾನ್ಯನಲ್ಲ ಎಂಬ ಅರಿವುಮೂಡುತ್ತದೆ. ನಂತರ ಹನುಮನನ್ನು ಕರೆದು ಬಲರಾಮ ಹಿಂದೆ ಲಕ್ಷ್ಮಣನಾಗಿದ್ದ ಕಥೆಯನ್ನು ಹನುಮನಿಗೆ ಕೃಷ್ಣ ವಿವರಿಸುತ್ತಾನೆ. ಸೀತೆಯನ್ನು ತೋರಿಸುವ ನೆಪವೊಡ್ಡಿ ಹನುಮನ್ನು ಸತ್ಯಭಾಮೆಯಿದ್ದಲ್ಲಿಗೆ ಕರೆದುಕೊಂಡು ಹೋಗಿ ಸ್ವಲ್ಪ ಆಕೆಯ ಮದವಿಳಿಸುವಂತೆ ಕೃಷ್ಣ ನಾರದರಲ್ಲಿ ಕೇಳಿಕೊಳ್ಳುತ್ತಾನೆ.

ಸೀತೆಯನ್ನು ತೋರಿಸುವ ಪೂರ್ವಭಾವಿ ತಯಾರಿ ನಡೆಸಲು ಹನುಮ ಸತ್ಯಭಾಮೆಯಿದ್ದಲ್ಲಿಗೆ ಬಂದು ಆಕೆಗೆ ಹನುಮನ ಕಥೆಯನ್ನೂ, ಆತ ಸೀತೆಯನ್ನು ನೋಡಲು ಬಯಸುವ ಕಥೆಯನ್ನೂ ಹೇಳುತ್ತಾರೆ. ಮದದಿಂದ ಎಲ್ಲಾ ತಾನೇ ಎಂದುಕೊಳ್ಳುವ ಸತ್ಯಭಾಮೆಗೆ ಇರುವಷ್ಟೂ ಆಭರಣಗಳನ್ನು ಹಾಕಿ ಅಲಂಕರಿಸಿಕೊಳ್ಳಲು ಹೇಳುತ್ತಾರೆ. ಕಾಡಲ್ಲಿ ಬಿಸಿಲಲ್ಲಿ ಅಲೆದಲೆದು ಸೀತೆ ಕಪ್ಪಾಗಿದ್ದಳು,ಹೀಗಾಗಿ ಮುಖತುಂಬ ಕಪ್ಪು ಬಣ್ಣ ಬಳಿದುಕೊಂಡರೆ ಮಾತ್ರ ಹನುಮ ಸೀತೆ ಎಂದು ಒಪ್ಪಿಯಾನು ಎನ್ನುತ್ತಾ ಸತ್ಯಭಾಮೆಯ ಹತ್ತಿರ ಮುಖದ ತುಂಬಾ ಮಸಿಬಳಿದುಕೊಂಡು ಬರಲು ಹೇಳುತ್ತಾರೆ ನಾರದರು. ಸರ್ವಾಲಂಕೃತ ಕಪ್ಪುಬಳಿದ ಸತ್ಯಭಾಮೆಯನ್ನು ಹನುಮನಿದ್ದಲ್ಲಿಗೆ ಕುಂಟುತ್ತಾ ಬರಲು ಹೇಳುತ್ತಾರೆ ನಾರದರು! ಹಾಗೇ ಬಂದ ಸತ್ಯಭಾಮೆಯನ್ನು ಕೃಷ್ಣನ ಪಕ್ಕ ಕುಳ್ಳಿರಿಸಿದಾಗ ಹನುಮ ಆಕೆ ಯಾರೆಂದು ವಿಚಾರಿಸುತ್ತಾನೆ. ಆಕೆ ಸೀತೆ ಎಂದರೆ ಆತ ಒಪ್ಪುವುದಿಲ್ಲ, ಬದಲಾಗಿ ಆಕೆಗೆ ಧರ್ಮದೇಟುಗಳನ್ನು ಕೊಡಲು ಉದ್ಯುಕ್ತನಾಗುತ್ತಾನೆ. ಒಂದೆರಡು ಬಾರಿ ಕೈಯ್ಯೆತ್ತಿ ಇನ್ನೇನು ಬಿಡಬೇಕು ಎನ್ನುವಾಗ ಸತ್ಯಭಾಮೆ ಕಂಗಾಲಾಗಿ ಕೃಷ್ಣನ ಮೊರೆ ಹೋಗುತ್ತಾಳೆ. ಸತ್ಕರಿಸದೆ ತಿರಸ್ಕರಿಸಿದ ತನ್ನ ತಪ್ಪನ್ನು ಮನ್ನಿಸಿ ತನ್ನನ್ನು ಹನುಮನಿಂದ ರಕ್ಷಿಸುವಂತೆಯೂ ತನಗೆ ಈಗ ಕೃಷ್ಣನ 'ನಿಜದ' ಅರಿವು ಬಂತೆಂದೂ ಪ್ರಾರ್ಥಿಸುತ್ತಾಳೆ. ಅಂತೂ ಪ್ರಾರ್ಥನೆ ಆಲಿಸಿದ ಕೃಷ್ಣ ಕೊನೆಗೊಮ್ಮೆ ಒಪ್ಪಿ ಮನ್ನಿಸಿ ಹನುಮನಿಗೆ ಶಾಂತನಾಗುವಂತೆ ಹೇಳುತ್ತಾನೆ.

ಬಲರಾಮ ಮತ್ತು ಸತ್ಯಭಾಮೆಯರ ಗರ್ವ ಮರ್ದಿಸಿದ ಹನುಮ, ರಾಮ ತನಗೆ ಕೊಟ್ಟ ಮಾತಿನಂತೆ ಮೂಲರೂಪದಲ್ಲೇ ಸಪತ್ನೀಕನಾಗಿ ಲಕ್ಷ್ಮಣ ಸಹಿತನಾಗಿ ತನಗೆ ದರ್ಶನ ನೀಡುವಂತೆ ಕೇಳಿಕೊಂಡಾಗ, ಅದನ್ನು ಪೂರೈಸಲು ಕೃಷ್ಣ ಬಲರಾಮ,ಸತ್ಯಭಾಮೆಯರೊಂದಿಗೆ ನಿಂತು ತಾನು ರಾಮಾವತಾರದಲ್ಲಿ ಹೇಗೆ ಇದ್ದೆನೋ ಹಾಗೇ ಆ ರೂಪವನ್ನು ಆಂಜನೇಯನಿಗೆ ಪ್ರದರ್ಶಿಸುತ್ತಾನೆ.

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇಚ ಜನಕಾತ್ಮಜಾ |
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್ ||


ಆಲಸ್ಯ ಗುರಿತಲುಪುವ ವ್ಯಕ್ತಿಗೆ ಮಾರಕ

ಆಲಸ್ಯ-ಗುರಿತಲುಪುವ ವ್ಯಕ್ತಿಗೆ ಮಾರಕ

ಒಂದಾನೊಂದು ರಾಜ್ಯವಿತ್ತು, ಆ ರಾಜ್ಯದಲ್ಲಿ ರಾಜನಿಗೆ ಇಬ್ಬರು ಹೆಂಡಂದಿರು. ಒಬ್ಬೊಬ್ಬರಲ್ಲಿ ಒಬ್ಬೊಬ್ಬ ಗಂಡು ಸಂತತಿಯಾಗಿತ್ತು. ಕರುಳಿನ ಕುಡಿಗಳು ಬೆಳೆದು ದೊಡ್ಡವರಾಗುತ್ತಾ ನಡೆದರು. ಇಬ್ಬರಲ್ಲಿ ಒಬ್ಬನಿಗೆ ಯುವರಾಜ ಪಟ್ಟವನ್ನು ಕೊಡಲೇಬೇಕಲ್ಲ. ಹೀಗಾಗಿ ಆ ಪಟ್ಟವನ್ನು ಯಾರಿಗೆ ಕೊಡಬೇಕು ಎಂಬುದು ರಾಜನಿಗೆ ಉದ್ಭವಿಸಿದ ಸಮಸ್ಯೆ. ಎರಡೂ ಮಕ್ಕಳು ಎರಡು ಕಣ್ಣುಗಳಿಗೆ ಸಮ. ಅಂದಮೇಲೆ ಈಗ ಯಾರಿಗೆ ಯುವರಾಜ ಪಟ್ಟವನ್ನು ಕಟ್ಟಲಿ? --ಇದನ್ನೇ ತಲೆಯಲ್ಲಿ ತುಂಬಿಕೊಂಡು ರಾಜ ಬಹಳ ಶತಾಯ ಗತಾಯ ತಿರುಗುತ್ತಿದ್ದ. ರಾಜನಿಗೆ ಆ ಕ್ಷಣಕ್ಕೆ ರಾಜಗುರುಗಳ ಸ್ಮರಣೆಯಾಯಿತು. ಅವರನ್ನು ಆಸ್ಥಾನಕ್ಕೆ ಕರೆಯಿಸಿ ಏಕಾಂತದಲ್ಲಿ ಈ ವಿಷಯ ಅವರಲ್ಲಿ ಹೇಳಿಕೊಂಡ. ರಾಜಗುರುಗಳು ಕೆಲವೊಂದು ಸಮಯ ಕಳೆಯಲಿ ಎಂದೂ, ಅಷ್ಟರಲ್ಲಿ ಹಲವಾರು ರೀತಿಯಲ್ಲಿ ತಾವು ಈರ್ವರನ್ನೂ ಪರೀಕ್ಷಿಸಿ ಕೊನೆಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ರಾಜ ಅದಕ್ಕೆ ಸಮ್ಮತಿಸಿದ.

ದಿನಗಳು ಉರುಳಿದವು. ರಾಜಗುರುಗಳು ಇಬ್ಬರೂ ರಾಜಕುಮಾರರನ್ನು ಪ್ರಜೆಗಳ ವಾಸಸ್ಥಾನದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿದರು. ಮಧ್ಯೆ ಮಧ್ಯೆ ಅನೇಕ ಥರದ ಸಮಸ್ಯೆಗಳನ್ನು ಅವರ ಮುಂದೊಡ್ಡಿ ಅದಕ್ಕೆ ರಾಜನಾದವನು ಯಾವರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಅವರಿಂದ ಕೇಳುತ್ತಿದ್ದರು. ಹೀಗೇ ಕೆಲಸಮಯದ ನಂತರ ಒಂದು ಗ್ರಾಮದಲ್ಲಿ ಒಬ್ಬ ರೈತನನ್ನು ಭೇಟಿಯಾದರು. ಮಾರುವೇಷದಲ್ಲಿರುವ ಇವರ ಬಗ್ಗೆ ತಿಳಿಯದ ರೈತ ಸಹಜವಾಗಿ ಯಾರೋ ಒಬ ಮುನಿಮಹಾತ್ಮ ಮತ್ತು ಅವರ ಶಿಷ್ಯರು ಬಂದಿದ್ದಾರೆ ಎಂದು ತಿಳಿದು ಬಹಳ ಸಂತೋಷದಿಂದ ಹಣ್ಣು-ಹಂಪಲು ಹಾಲು ಇತ್ಯಾದಿ ಇತ್ತು ಸತ್ಕರಿಸಿದ. ನಂತರ ತನ್ನ ಮಕ್ಕಳಿಬ್ಬರ ಬಗ್ಗೆ ಹೇಳಿಕೊಂಡ. " ಸ್ವಾಮೀ ನನಗೆ ಇಬ್ಬರು ಗಂಡು ಮಕ್ಕಳು, ಇಬ್ಬರೂ ಪ್ರಾಯ ಪ್ರಬುದ್ಧರು. ಒಬ್ಬ ಮಾತ್ರ ನಿಧಾನವಾಗಿಯಾದರೂ ಕೆಲಸ ಮಾಡೇ ಮಾಡುತ್ತಾನೆ, ಆದರೆ ಇನ್ನೊಬ್ಬ ಕೆಲಸ ಮಾಡಿದರೆ ಮಾಡಿಬಿಡಬಹುದು, ಇಲ್ಲವೇ ಮಧ್ಯೆ ಆಲಸ್ಯದಿಂದ ಕುಳಿತುಬಿಟ್ಟರೆ ಕೆಲಸ ಮುಗಿಯುತ್ತದೆ ಎಂಬುದನ್ನೇ ಹೇಳಲಾಗದು. ಕೆಲಸ ಮಾಡುವಲ್ಲಿ ಆತನೂ ಯೋಗ್ಯನೇ ಆದರೆ ವಿನಾಕಾರಣ ಮಧ್ಯೆ ಆಲಸ್ಯ ಅವನಿಗೆ, ಅದು ಸರಿಯೇ ಎಂಬ ವಾದ ಅವನದ್ದು, ಇದಲ್ಲದೆ ಇನ್ನೊಬ್ಬನನ್ನು ಆತ ಹೆಳವ ಅಂತ ಅಪಹಾಸ್ಯಮಾಡುತ್ತಾನೆ.ಮತ್ತೊಬ್ಬ ಮಗ ಎಲ್ಲಾ ನಿಧಾನ, ಏನು ಹೇಳಿದರೂ ಆತ ಬೇಗ ಮಾಡಲೊಲ್ಲ, ಆದರೆ ಆತ ತಾನಾಯಿತು ತನ್ನ ಪಾಡಾಯಿತು ಎಂದು ಕೆಲಸದಲ್ಲೇ ಸದಾ ಮಗ್ನನಾಗಿರುತ್ತಾನೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ? ಅವರಿಗೆ ಬೇರೆ ತರಬೇತಿ ಬೇಕೇ ಅಥವಾ ಹೀಗೇ ಮುನ್ನಡೆಯಲೇ ಎಂದು ತಿಳಿಯದಾಗಿದೆ,ತಾವು ಮಹಾತ್ಮರು ಏನಾದರೊಂದು ಮಾರ್ಗ ತೋರಿಸಬೇಕು " ರೈತನ ಅಲವತ್ತುಕೊಳ್ಳುವಿಕೆ ರಾಜಗುರುಗಳಿಗೆ ಅರ್ಥವಾಯಿತು. ಅವರು ಆ ವಿಷಯವದಲ್ಲಿ ಯಾರದ್ದು ಸರಿ ಎಂಬ ಪ್ರಶ್ನೆಯನ್ನು ಮಾರುವೇಷದಲ್ಲಿರುವ ರಾಜಕುಮಾರರ ಮುಂದಿಟ್ಟರು.

ರಾಜಕುಮಾರರು ಒಬೊಬ್ಬರು ಒಬ್ಬೊಬ್ಬರನ್ನು ಬೆಂಬಲಿಸಿದರು. ಒಬ್ಬ ಹೇಳವನನ್ನೂ, ಇನ್ನೊಬ್ಬ ಆಳಸಿಯನ್ನೂ ಬೆನ್ನು ತಟ್ಟಿದರು. ಅಲ್ಲಿಗೆ ಮುನಿಗೆ ಅವರ ಮನೋಗತ ಅರ್ಥವಾಯಿತು. ಆಳಸಿಗಿಂತ ಮಂದಗತಿಯಲ್ಲಿ ಕೆಲಸಮಾಡುವವನೇ ಮೇಲು ಎಂದು ಒಂದು ಉದಾಹರಣೆಯ ಸಹಿತ ಹೇಳಿದರಲ್ಲದೇ ಆಲಸ್ಯವನ್ನು ದೂರಮಾಡಿದರೇ ಗುರಿಯನ್ನು ಸಕಾಲದಲ್ಲಿ ತಲುಪಲು ಸಾಧ್ಯ ಎಂಬ ಮಾತನ್ನು ಹೇಳಿದರು, ರೈತನ ಮಕ್ಕಳಿಗೆ ಬುದ್ಧಿ ಹೇಳುವ ನೆಪದಲ್ಲಿ ರಾಜಕುಮಾರರಿಗೂ ಲೋಕದ ಪರಿಜ್ಞಾನ ಬೆಳೆಸಿದರು.ರಾಜಕುಮಾರರ ಪರೀಕ್ಷೆ ಇಲ್ಲಿಗೇ ಮುಗಿಯದಿದ್ದರೂ ಅವರ ಆಂತರ್ಯವನ್ನು ಅರಿಯುವಲ್ಲಿ ಇದೂ ಒಂದು ಸಹಕಾರಿಯಾಯಿತು. ಮುನಿಗಳು ಅಂದು ಒಂದು ಕಥೆಯ ಮೂಲಕ ಅವರೆಲ್ಲರಿಗೆ ತಿಳುವಳಿಕೆ ಹೇಳಿದರು ---




ಗಚ್ಛತ್ ಪಿಪೀಲಿಕಾಯಾತಿ
ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ
ಪದಮೇಕಂ ನ ಗಚ್ಛತಿ ||

ಇದೊಂದು ಸುಭಾಷಿತ, ರತ್ನದ ಇನ್ನೊಂದು ರೂಪ ಅಂತ ಪ್ರತ್ಯೇಕ ಹೇಳಬೇಕಿಲ್ಲ ! ಇದರ ಅರ್ಥ ಇಷ್ಟೇ - ಆಮೆ ಮತ್ತು ಗರುಡ ಇವುಗಳ ನಡುವೆ ಒಂದು ಸ್ಪರ್ಧೆ. ಆಮೆ ನಿಧಾನ ನಡಿಗೆಗೆ ಹೆಸರಾದ ಪ್ರಾಣಿ. ಆದರೆ ಗರುಡ [ವೈನತೇಯ] ಜಗತ್ತನ್ನೇ ಶೀಘ್ರಗತಿಯಲ್ಲಿ ಸುತ್ತಬಲ್ಲ ಪಕ್ಷಿ.ಇವುಗಳ ನಡುವೆ ಒಂದೇ ಸ್ಥಳವನ್ನು ತಲಪುವ ಬಗ್ಗೆ ಯಾರು ಬೇಗ , ಯಾರು ಮೊದಲು ತಲಪುತ್ತಾರೆ ಎಂಬ ಬಗ್ಗೆ ಏರ್ಪಟ್ಟ ಸ್ಪರ್ಧೆ. ಪ್ರಾರಂಭವಾಯಿತು. ಎರಡೂ ಹೊರಟಿವೆ. ಆಮೆ ಅದರಪಾಡಿಗೆ ಆಮೆನಡಿಗೆಯಲ್ಲಿ ಹೊರಟಿತು, ಗರುಡ ಕೇಳಬೇಕೇ? ಬುರ್ರನೆ ಹಾರಿ ಕ್ಷಣಾರ್ಧದಲ್ಲಿ ಅಷ್ಟು ದೂರ ಕ್ರಮಿಸಿ ಮಾರ್ಗ ಮಧ್ಯದ ಒಂದು ಮರದ ಮೇಲೆ ಕುಳಿತು ಹೇಗೂ ಆಮೆ ನಿಧಾನ ಬರುತ್ತದೆಯಾದ್ದರಿಂದ ಸ್ವಲ್ಪ ವಿಶ್ರಮಿಸಲು ತೊಡಗಿತು, ಹಾಗೆ ವಿಶ್ರಮಿಸುತ್ತ ನಿದ್ದೆಗೆ ಜಾರಿಬಿಟ್ಟಿತು. ಇತ್ತ ಆಮೆರಾಯರು ನಿಧಾನವಾಗಿ ನಡೆಯುತ್ತಾ ನಡೆಯುತ್ತಾ ಕ್ರಮಿಸುತ್ತ, ಗರುಡ ಮರದಮೇಲೆ ಕುಳಿತಿರುವ ಪರಿವೆಯೂ ಇಲ್ಲದೇ ಹಾಗೇ ಮುಂದೆ ಸಾಗಿತು. ಸಂಜೆಯಾಗುವಷ್ಟರಲ್ಲಿ ಆಮೆ ಆ ನಿರ್ಧರಿತ ಸ್ಥಳವನ್ನು ತಲಪಿತು. ತಲುಪಿದ ನಂತರ ಮಿತ್ರ ಗರುಡ ಬಹಳ ಮೊದಲೇ ಬಂದಿರಬೇಕೆಂದು ಚಿಂತನೆ ನಡೆಸಿತು.ಮರದ ಮೇಲೆ ಕುಳಿತ ಗರುಡ ಮಹಾರಾಜರಿಗೆ ಎಷ್ಟೋ ಹೊತ್ತಿನ ನಂತರ ಎಚ್ಚರಿಕೆಯಾಯಿತು. ನೋಡುತ್ತಾರೆ ಸಂಜೆಯಾಗಿಬಿಟ್ಟಿದೆ. ಆಮೆ ಇನ್ನೂ ಬಂದಿಲ್ಲವಾಗಿರಬೇಕು ಎಂದು ಕೊಳ್ಳುತ್ತಾ ಒಮ್ಮೆ ಗರಿಗೆದರಿ ಹಾರಿ ನಿರ್ಧರಿತ ಅದೇ ಆ ಸ್ಥಳಕ್ಕೆ ತಲಪಿತು. ನೋಡಿದರೆ ಆಮೆ ಮೊದಲೇ ಹಾಜರಿದ್ದು ವಿಶ್ರಮಿಸಿಕೊಂಡಿತ್ತು. ಆಗ ಗರುಡನಿಗೆ ಆಮೆಯ ವೇಗವನ್ನು ಲೆಕ್ಕಹಾಕುತ್ತ ಅಲ್ಲಿ ನಿದ್ದೆ ಮಾಡಿದ್ದು ತಪ್ಪು ಎಂದು ಅರ್ಥವಾಯಿತು.





ಹೀಗೆ ಜೀವನದಲ್ಲಿ ಇನ್ನೊಬ್ಬರ ತಾಕತ್ತನ್ನು ಅವಲೋಕಿಸಿ, ತನ್ನೊಂದಿಗೆ ಹೋಲಿಸುತ್ತ ಕೆಲಸಮಾಡುವಲ್ಲಿ ವಿಳಂಬಮಾಡಿದರೆ ಇದೇ ರೀತಿ ಅಂತೂ ಮಾಡಿರುವ ಸಾಲಿಗೆ ಸೇರಬಹುದೇ ಹೊರತು ತ್ವರಿತ ಮತ್ತು ಉತ್ತಮ ಕೆಲಸ ಅದಗಲಾರದು. ಯಾವುದು ಸಕಾಲದಲ್ಲಿ ಪೂರೈಸಲ್ಪಡುತ್ತದೋ ಅದು ಮಾತ್ರ ಉತ್ತಮ ಕೆಲಸ.

Wednesday, April 14, 2010

ನಿವೇದನೆ

ದೇಹದ ಶುದ್ಧಿಗೆ, ಸ್ವಚ್ಛತೆಗೆ ಸ್ನಾನ ಹೇಗೆ ಬೇಕೋ ಹಾಗೇ ಮನಸ್ಸನ್ನು ಶುದ್ಧೀಕರಿಸಲು ಧ್ಯಾನದ ಅವಶ್ಯಕತೆಯಿದೆ. ಆಗಾಗ ಆಗಾಗ ಅನುಕೂಲವಾದಾಗ ಇದ್ದಲ್ಲೇ ಇದ್ದು ಭಾವ ತನ್ಮಯತೆಯಿಂದ ಮನಸ್ಸನ್ನು ಬಂಧಿಸಿ ಹಿಡಿದುಕೊಂಡು ನಮಗೆ ಇಷ್ಟವಾದ ಒಂದು ಶಕ್ತಿಯನ್ನೂ ದೇವರನ್ನೋ ನೆನೆದು, ನಾವೇನು ಮಾಡುತ್ತಿದ್ದೇವೆ ಎಂಬ ವರದಿಯನ್ನು ಒಪ್ಪಿಸುವ ಕೆಲಸ ಸಾಗುತ್ತಿರಬೇಕು. ಜಗಮೆಚ್ಚುವ ಮುನ್ನ ಮನ ಮೆಚ್ಚಬೇಕು, ಮನ ಮೆಚ್ಚುವ ಮುನ್ನ ನಮ್ಮೊಳಗಿನ ಆ ಆಂತರ್ಯದ ಕೂಗು ಆತ್ಮದ ಮೆಚ್ಚುಗೆಯ ಕೂಗು [echo] ಬರಬೇಕು. ನಾವೆಲ್ಲೇ ಕೆಲಸಮಾಡಲಿ ಕೆಲಸದ ಪರಿಯನ್ನು ಅದರಹಂತವನ್ನು ನಮ್ಮ ಮೇಲಧಿಕಾರಿಗಳಿಗೆ ವರದಿಯ ರೂಪದಲ್ಲಿ ಒಪ್ಪಿಸುತ್ತೇವೆ ಅಥವಾ ನಾವೇ ನಡೆಸುವ ವ್ಯವಹಾರವಾದರೆ ಅದನ್ನುಸರಿಯಾಗಿ ಅವಲೋಕಿಸುತ್ತೇವೆ ಹೇಗೋ ಹಾಗೇ ನಮ್ಮದಲ್ಲದ ಬದುಕೆಂಬ ನೌಕರೀ ವೃತ್ತಿಯಲ್ಲಿ ನಮಗೆ ಕಾಣದ ಮೇಲಧಿಕಾರಿಕರೆದಿದ್ದಾನೆ, ಕರೆದಿರುತ್ತಾನೆ-ಅವನ ಅವ್ಯಕ್ತ ಕರೆಯನ್ನು ಅರ್ಥೈಸಿ ಅವನಿಗೆ ಆಗಾಗ ನಮ್ಮ ದೈನಂದಿನ ಕೆಲಸದ ವರದಿಒಪ್ಪಿಸಿದರೆ ಆತ ಮುಂದೆ ಹೇಗೆ ಹೋಗಬೇಕೆಂದು, ಹೇಗೆ ಮಾಡಬೇಕೆಂದು, ಯಾವುದನ್ನು ಎತ್ತಿಕೊಳ್ಳಬೇಕೆಂದು, ಯಾವುದುಬೇಡವೆಂದು ಎಲ್ಲವನ್ನೂ ನಮ್ಮ ಮನದ ಮೂಲಕ ಆದೇಶಿಸುತ್ತಾನೆ. ಅವನು ಬೇಡವೆಂದ ಕೆಲಸ ಮಾಡಿನೋಡಿ ಅಲ್ಲಿ ನಾವುಸೋಲುತ್ತೇವೆ, ಅವನ ಪರವಾನಿಗೆ ಸಿಕ್ಕ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಯಾಕೆಂದರೆ ಫಲಾಫಲಗಳ ಹಿಡಿತ ಅವನ ಕೈಲೇಇದೆ. ಅವನು ಬೇಡವೆಂದಾಗ ನೀವು ಬಾವಿ ತೋಡಿದರೆ ನೀರು ಸಿಗುವುದಿಲ್ಲ, ಯವುದೋ ಕೆಲಸಕ್ಕೆ ಹಠಹಿಡಿದು ಹೋದರೆವಿಜಯಿಯಾಗುವುದಿಲ್ಲ! ಅಂದಮೇಲೆ ನಮ್ಮ ಮೇಲೆ ನಮ್ಮ ನಿಯಂತ್ರಣವೆಷ್ಟು ಆತನ ನಿಯಂತ್ರಣವೆಷ್ಟು ? ಅಲ್ಲವೇ?

ಮಹಾತ್ಮರೊಬ್ಬರು ಹೇಳಿದ್ದಾರೆ, ತ್ಯಾಗ ಭೋಗಗಳ ಸಮನ್ವಯವೇ ಯೋಗ ಎಂಬುದಾಗಿ. ಅಂದರೆ ಜೀವನದಲ್ಲಿ ತ್ಯಾಗವೂ ಬೇಕು ಭೋಗವೂ ಬೇಕು, ಆ ತ್ಯಾಗಭೋಗಗಳಿಗೆ ಕೆಲವು ನಿಬಂಧನೆಗಳಿವೆ,ಅವುಗಳನ್ನು ಮೀರದ ರೀತಿಯಲ್ಲಿ ನಡೆದರೆ ಆಗ ಅವುಗಳ ಸಮನ್ವಯವಾಗುತ್ತದೆ. ಆ ಸಮಯನ್ವಯಕ್ಕೆ ಗುರುಮುಖದ ಅವಶ್ಯಕತೆಯಿದೆ. ಅರಿವೇ ಗುರು-ಅರಿವಿನ ದಾರಿಯಲ್ಲಿ ನಮಗಿಂತ ಬಹಳ ಮುಂದೆ ಸಾಗಿದಾತ ಗುರುವಾಗಿರುತ್ತಾನೆ. ಅಂತಹ ಸದ್ಗುರುವನ್ನು ಹುಡುಕಿ ಸೇವೆಗೈದು ಅವರ ಮನವೊಲಿಸಿ ಅವರಿಂದ ಈ ಧ್ಯಾನದ ಮಾರ್ಗವನ್ನು, ಸಮನ್ವಯತೆಯ ಮಾರ್ಗವನ್ನು ಹೇಳಿಸಿಕೊಳ್ಳಬೇಕು. ಆತ ಒಲಿದು ಹರಸಿದರೆ ನಮ್ಮ ಸಂಸಾರವೆಂಬ ಜೀವನವೆಂಬ ಯವುದೋ ರಾಜ್ಯದಲ್ಲಿ ಅರ್ಧವನ್ನು ಗೆದ್ದಂತೆ ! ಇನ್ನರ್ಧ ಅದು ನಮ್ಮ ವರದಿವಾಚನ,ನಿತ್ಯಾನುಸಂಧಾನ, ಸತತ ಸಮನ್ವಯ ಇವುಗಳ ಮೇಲೆ ಅವಲಂಬಿತ ! ನಮ್ಮನ್ನೇ ನಾವು ನಿಜವಾಗಿಯೂ ಪ್ರೀತಿಸುವವರಾಗಿದ್ದರೆ ನಾವೆಂದೂ ನಮ್ಮೊಳಗಿನ ಆ ಮಾರ್ದನಿಯನ್ನು ಮರೆಯುವುದಿಲ್ಲ ! ಬದಲಾಗಿ ಆ ಮಾರ್ದನಿಗೆ ಕಟ್ಟುಬಿದ್ದು ಅದನ್ನು ಕೇಳಿ ನಂತರ ನಮ್ಮ ಕೆಲಸದಲ್ಲಿ ಮುಂದೆ ನಡೆಯುತ್ತೇವೆ. ಹೀಗೆಲ್ಲ ನಾವು ಚಿಂತನೆಯಲ್ಲಿ ತೊಡಗಿದಾಗ ನಮಗೆ ಧ್ಯಾನ ಎಂಬುದೂ ಒಂದು ಔಷಧಿಯ ರೂಪ ಎಂಬುದು ಸ್ಪಷ್ಟವಾಗುತ್ತದೆ! ನಮ್ಮ ಶರೀರದ ಅನೇಕ ಕಾಯಿಲೆಗಳಿಗೆ ನಮ್ಮ ಮನಸ್ಸೇ ಕಾರಣ ! ಅಂತಹ ದುರ್ಬಲ ಮನಸ್ಸನ್ನು ಸಬಲಗೊಳಿಸಲು ಯೋಗ-ಧ್ಯಾನ ಬೇಕು. [ amplifying the good weak signals of the mind into strong useful signals] ಅಂತಹ ಧ್ಯಾನಕ್ಕೆ ಕಟ್ಟುಬಿದ್ದಾಗ ಜನಿತ ಧ್ವನಿಯೇ ಈ ಕವನ ---



ನಿವೇದನೆ


ಎನ್ನ ಚಿತ್ತದ ವೃತ್ತಿ ಚಿನ್ನದ ಹರಿವಾಣದೊಳಿಟ್ಟು
ಘನ್ನ ಮಹಿಮನೆ ಅರ್ಪಿಸುವೆ ನಿನ್ನ ಪದಕೆ
ಮುನ್ನ ಮಾಡಿದ ಕರ್ಮಬಂಧನವ ತೆಗೆದಿಟ್ಟು
ಚೆನ್ನಾಗಿಡುತ ಹರಸೋ ಜೀವನದೀ ಪಥಕೆ


ಇಂದು ನಿನ್ನೆಯದಲ್ಲ ನನ್ನ ನಿನ್ನಯ ಒಸಗೆ

ಕಂದುಮಸುಕದ ಲೋಹದಲ್ಲದಾ ಬೆಸುಗೆ
ಸಂದ ಕಾಲವದೆಷ್ಟೋ ನೊಂದ ಸಮಯವದೆಷ್ಟೋ
ಎಂದು ದರುಶನ ಈವೆ ಜೀವನಾಟಕಕೆ ?


ದೇಹದೀ ಮನೆಯಲ್ಲಿ ಹೃದಯ ತೊಟ್ಟಿಲ ಕಟ್ಟಿ
ಮಾಯದಾ ಮನದ ಜೋಗುಳವ ಹಾಡೀ
ನೋಯದಿರಲೀ ನಿನ್ನ ನಾಜೂಕು ಕಾಯವದು
ವಾಯಿದೆಯ ಮಿತಿಯಿಡದೆ ಜೋಪಾನ ಮಾಡಿ


ನರನಾಡಿಗಳ ಹುರಿಯ ಹಗ್ಗವನು ಹಿಡಿಯುತ್ತ
ಕರದಿ ತೂಗುತ ಹೇಳಲೆ ಹಲವು ಕಥೆಯ ?
ವರ ವಿರಂಚಿಯೇ ನಿನ್ನ ಅರಿವಿಗಿರದೇನಿಹುದು ?
ಬರಿದೇ ಸುಮ್ಮನೇ ಅದುವೆ ಕಳೆಯಲೀ ವ್ಯಥೆಯ


ಆಜಾನು ಬಾಹು ಕಮನೀಯ ಲೋಚನ ನಿನ್ನ
ಜೂಜಾಟದಲಿ ಬೇಗ ಸೋಲಿಸುವ ತವಕ
ಗಾಜಿನಾ ಬಿರಡೆಯಂತಿಹ ಜೀವದೀ ದೇಹ
ಕೋಜಾಗರೀ ಹಾಡಿ ನುತಿಸುವಾ ತನಕ
------

Tuesday, April 13, 2010

ಶ್ರೀರಾಮ ನಿರ್ಯಾಣ

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೆ ನೈವ ಜಾನೇ ನ ಜಾನೇ ||

ಪುಣ್ಯಪುರುಷರನ್ನು ಕಳೆದುಕೊಳ್ಳಲು ಮನಸ್ಸು ತಯಾರಾಗುವುದಿಲ್ಲ. ಅವರು ನಮ್ಮೊಟ್ಟಿಗೆ ಶಾಶ್ವತವಾಗಿ ಇದ್ದುಬಿಡಲಿ ಎಂಬ ಬಯಕೆ ನಮ್ಮದು. ಆದರೆ ಕಾಲನಿಗೆ ಹಾಗಲ್ಲ. ಕಾಲಚಕ್ರ ತಿರುಗುವ ಗತಿಯಲ್ಲಿ ಅದು ದಿವ್ಯ ಪುರುಷರನ್ನೂ ಇಲ್ಲಿ ಬಹಳ ಸಮಯ ಇರಗೊಡುವುದಿಲ್ಲ. ಮಹಾತ್ಮರ ನಿರ್ಯಾಣಗಳನ್ನು ಅವಲೋಕಿಸುವಾಗ ಹೃದಯವಂತರಿಗೆ ಕಣ್ಣಕೊನೆಯಲ್ಲಿ ಹನಿಗಳೆರಡು ಬಾರದೇ ಇರವು. ಭರತಖಂಡ ಕಂಡ ಅಂತಹ ಮಹಾಮಹಿಮನ ಅವತಾರ ಮುಕ್ತಾಯವನ್ನು ಅನಿವಾರ್ಯವಾದರೂ ನಾವು ಒಪ್ಪಿಕೊಳ್ಳಬೇಕಷ್ಟೇ. ಪರಮಾತ್ಮ ಮಾಹವಿಷ್ಣುವಿನ ಪೂರ್ಣಾವತಾರಗಳಲ್ಲಿ ಕೋಸಲಾಧಿಪ ಸೂರ್ಯ ವಂಶಜ ಶ್ರೀರಾಮಚಂದ್ರನ ರೂಪ ಕೂಡ ಒಂದು. ಅವತಾರಗಳಲ್ಲೇ ಶ್ರೇಷ್ಠ, ಎಂದಿಗೂ ನೆನಪಿಡಬಹುದಾದ ಅವತಾರಗಳಾದ ರಾಮಾವತಾರ ಮತ್ತು ಕೃಷ್ಣಾವತಾರಗಳು ಅತೀ ಪ್ರಾಮುಖ್ಯತೆ ಪಡೆದವುಗಳು. ಇವುಗಳಲ್ಲಿ ರೂಪ ಭೇದಗಳಿದ್ದರೂ ಯಾವುದೂ ಮೇಲೆ ಅಥವಾ ಕೆಳಗೆ ಎಂಬ ಯೋಚನೆ ಸಲ್ಲ. ಮಾನವ ಬದುಕಿಗೆ ಯಥಾ ಯೋಗ್ಯವಾದ ದಾರ್ಶನಿಕರಾಗಿ, ತಮ್ಮ ಜೀವಿತವನ್ನೇ ನಮಗಾಗಿ ಧಾರೆ ಎರೆದುಕೊಟ್ಟು ಹೋದ ಮಹಾನ್ ವ್ಯಕ್ತಿಗಳು ಶ್ರೀರಾಮ ಮತ್ತು ಶ್ರೀಕೃಷ್ಣ. ಈ ವ್ಯಕ್ತಿಗಳ ನೆನಪು ಬಂದಾಗ ಮನಸ್ಸು ಏನನ್ನೋ ಕಳಕೊಂಡಂತೆ ಒಳಗೊಳಗೇ ವಿಲವಿಲನೆ ಒದ್ದಾಡುತ್ತದೆ,ಚಡಪಡಿಸುತ್ತದೆ, ಕಾಣದ ಆ ಇಬ್ಬರನ್ನು ಎಲ್ಲೋ ಹುಡುಕಲು ತೊಡಗುತ್ತದೆ. ಅವರು ದೇವರು ಎನ್ನುವುದಕ್ಕಿಂತ ದಾರ್ಶನಿಕರು ಎಂದು ನೆನೆದು ನಮ್ಮಂತೆ ಮನುಷ್ಯರಾಗಿ ಪರೋಪಕಾರಿಯಾಗಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ನಮಗೆ ಅವರ ಒಂದಂಶವೂ ಸಾಧ್ಯವಿಲ್ಲವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಕೊನೇಪಕ್ಷ ನೆನೆಸಿ ಕೊಳ್ಳುವುದು ನಮ್ಮ ಕರ್ತವ್ಯವಷ್ಟೇ ?

ಶ್ರೀರಾಮನವಮಿಯ ಸುತ್ತ ಹೆಣೆದ ವಿಷಯ ಸಂಚಾಲಿತ ಈ ಕಂತಿನಲ್ಲಿ ರಾಮ ನಿರ್ಯಾಣವನ್ನು ಬರೆಯುವಾಗ ಮನಸ್ಸು ಅದುರಿತು, ಚದುರಿತು, ಬರೆಯದೇ ಆಚೆ ಓಡಿ ಹೋಗುವ ಸ್ಥಿತಿಗೆ ಬರುತ್ತಿತ್ತು. ಯಾಕೆಂದರೆ ರಾಮ ಎಲ್ಲೂ ಹೋಗಿಲ್ಲ, ರಾಮ ಗುಡಿಗಳಲ್ಲಿಲ್ಲ, ರಾಮ ನಮ್ಮಲ್ಲೇ ನೆಲೆಸಿದ್ದಾನೆ, ಅಂತಹ ರಾಮನ ಅವಸಾನವಾಯ್ತು ಎಂದು ಬರೆಯಲು ಮನಸ್ಸು ತಯಾರಾಗುತ್ತಲೇ ಇರಲಿಲ್ಲ. ಕಣ್ಣ ಹನಿಗಳೊಂದಿಗೆ ಕೊನೆಗೂ ಮನಸ್ಸನ್ನು ಕಟ್ಟಿಹಾಕಿ ಬರೆದ ಕಥನ-ಕಾವ್ಯ ಈ ಶ್ರೀರಾಮ ನಿರ್ಯಾಣ.

ಸತ್ಪ್ರಜೆಗಳಿಂದ ತುಂಬಿ, ರಾಮರಾಜ್ಯವೆಂದೇ ಹೆಸರು ಪಡೆದ ಅಯೋಧ್ಯೆ ಎಂದಿನಂತೆ ರಾಮನ ರಾಜ್ಯಭಾರದಲ್ಲಿ ಕಂಗೊಳಿಸುತ್ತಿತ್ತು. ಶ್ರೀರಾಮ ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತಿರಲು ಕಾಲನ ಆಗಮನವಾಗಿ ಆತ ನಡೆಸಿದ ಮಾತುಕತೆಯ ಫಲಶ್ರುತಿಗೆ ಮೊದಲನೆಯ ಆಹುತಿಯಾಗಿ ಶ್ರೀ ಲಕ್ಷ್ಮಣನ ದೇಹಾಂತ್ಯವಾಗುತ್ತದೆ. ಸರಯೂ ನದಿಯಲ್ಲಿ ಮುಳುಗಿ ಸರ್ಪದಂತೆ ಹೊರಳಿ ಹೊರಳಿ ತನ್ನ ದೆಹಾರ್ಪಣೆಗೈದ ಲಕ್ಷ್ಮಣ ವೈಕುಂಠದಲ್ಲಿ ಮಹಾವಿಷ್ಣುವಿನ ಹಾಸಿಗೆಯಾಗಿರುವ ವಾಸುಕಿಯೇ ಆತನ ರೂಪದಲ್ಲಿ ಭುವಿಗೆ ಬಂದಿದ್ದ ನೆಂಬ ಸಂದೇಶ ನಮಗೆ ಸಿಗುತ್ತದೆ. ಅಂತೆಯೇ ಸೀತಾಮಾತೆ ಕೂಡ ಶೀ ಮಹಾಲಕ್ಷ್ಮಿಯ ಭುವಿಯ ಅವತಾರ ! ಸಾಕ್ಷಾತ್ ಮಹಾವಿಷ್ಣು ರಾಮನಾಗಿ ಭೂಮಿಗೆ ಬಂದಾಗ ಅವರೆಲ್ಲ ಅವನ ಸಂಗಡಿಗರಾಗಿ ಬಂದರು. ಇದನ್ನೇ ಕಾಲ ಹೇಳಲು ಬಂದಿದ್ದ.
" ಶ್ರೀರಾಮ ಬಂದು ಬಹಳ ಕಾಲ ಸಂದುಹೋಯಿತು, ಇಲ್ಲೇ ಈ ಭೂಮಿಯಲ್ಲಿ ಇದ್ದುಬಿಟ್ಟೆಯಲ್ಲ, ನೀನು ವೈಕುಂಠದ ಶ್ರೀ ಮಹಾವಿಷ್ಣು ಎಂಬುದನ್ನು ನಿನಗೇ ನೆನಪಿಸಲೂ, ನಿನ್ನನ್ನು ಅಲ್ಲಿಗೆ ಪುನಃ ಆಹ್ವಾನಿಸಲೂ ಬಂದಿದ್ದೇನೆ, ಇನ್ನು ಇಲ್ಲಿಯ ರಾಜ್ಯಭಾರ ಸಾಕು, ತಿಳಿದು ಸಮಯನೋಡಿ ಶೀಘ್ರ ನಿನ್ನ ಅವತಾರ ಸಮಾಪ್ತಿಗೊಳಿಸು" --ಕಾಲಪುರುಷ ಆದೇಶಿಸಿದ್ದಾನೆ, ಎಚ್ಚರಿಸಿದ್ದಾನೆ.

ರಾಮ ಎಲ್ಲವನ್ನೂ ಅವಲೋಕಿಸಿದ್ದಾನೆ. ಪ್ರಜೆಗಳ ಹಿತಕ್ಕಾಗಿಯೇ ತನ್ನೆಲ್ಲ ಜೀವಿತವನ್ನು ಕಳೆದಿದ್ದಾನೆ. ರಾಮನಿಗೆ ದಿನವಹಿ ಪ್ರಜೆಗಳಬಗ್ಗೇ ತುಡಿತ ಬಿಟ್ಟರೆ ತನ್ನ ವೈಯಕ್ತಿಕ ಬೇಕು-ಬೇಡಗಳನ್ನು ಎಂದೂ ಆತ ಲಕ್ಷ್ಯಿಸಲಿಲ್ಲ. ಅಗ್ನಿದೇವನ ಅನುಗ್ರಹದಿಂದ ಪಾಯಸದ ಪಾಲನ್ನು ಉಂಡ ತನ್ನ ತಾಯಿ ಕೌಸಲ್ಯೆಯ ಉದರದಲ್ಲಿ ಜನಿಸಿದ ಕೌಸಲ್ಯಾರಾಮ. ಋಷಿಗಳು ನಿರ್ಧರಿಸಿ ತನಗೆ ಈ ಹೆಸರು ಕೊಟ್ಟರು. ಬಾಲ್ಯದಲ್ಲಿ ವಿದ್ಯಾಭ್ಯಾಸದ ಹಂತ ಬಂತು. ಮಹರ್ಷಿ ವಿಶ್ವಾಮಿತ್ರರು ಗುರುವಾಗಿ ಆಸ್ಥಾನಕ್ಕೆ ಬಂದು ತನ್ನನ್ನೂ ತಮ್ಮ ಲಕ್ಷ್ಮಣನನ್ನೂ ಕಾಡಿಗೆ ಕರೆದೊಯ್ದರು. ಅಲ್ಲಿ ನಮಗೆ ಬಿಲ್ಲು ವಿದ್ಯೆ ಹೇಳಿಕೊಟ್ಟರು, ಅದಕ್ಕೆ ಪೂರಕ ಮಂತ್ರೋಪದೇಶ ನೀಡಿದರು. ತಂದೆ ದಶರಥ ಚಿಕ್ಕವರೆಂಬ ಕಾರಣದಿಂದ ಕಾಡಿಗೆ ಕಳಿಸಲು ಹಿಂದೆ ಮುಂದೆ ನೋಡಿದಾಗ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತು ಕಾಡಿಗೆ ಕರೆದೊಯ್ದು ಬದುಕಿನ ಮಜಲುಗಳನ್ನು ತೋರಿಸುತ್ತ ನಡೆದರು.ಪೂಜ್ಯರಾದ ವಿಶ್ವಾಮಿತ್ರರು ಬರದೇ ಇದ್ದರೆ ಅಂದು ತಮಗೆ ಇಷ್ಟೊಂದು ಮನೋ ದಾರ್ಷ್ಟ್ಯತೆ ಬರುತ್ತಿರಲಿಲ್ಲ. ತಾಟಕೆಯನ್ನು ವಧಿಸಿ,ಸುಭಾಹು-ಮಾರೀಚರನ್ನು ಓಡಿಸಿ ಯಜ್ಞಪೂರ್ತಿಗೆ ಕಾವಲುನಿಂತು ಹಲವನ್ನು ಗುರುಮುಖದಿಂದ ಕಲಿತೆವು. ಪ್ರಾಯ ಪ್ರಭುದ್ಧರಾದಾಗ ಮತ್ತೆ ಋಷಿಗಳು ಹೇಳಿದ ಪ್ರಕಾರ ಶಿವಧನುಸ್ಸನ್ನು ಮುರಿದಿದ್ದಾಯ್ತು, ಸೀತೆಯನ್ನು ಮಡದಿಯಾಗಿ ಪಡೆದಿದ್ದಾಯ್ತು.

ರಾಜ್ಯಭಾರ ನಡೆಸಲು ಯುವರಾಜ ಪಟ್ಟಕ್ಕೆ ಮಂಥರೆಯ ಕುಹಕ ಉಪದೇಶದಿಂದ ಚಿಕ್ಕಮ್ಮ ಕೈಕೇಯಿ ಜಗಳಕ್ಕೆ ನಿಂತಾಗ ತಾಯಿ-ತಂದೆಯ ಮೂಕ ಆಜ್ಞೆಗೆ ಕಟ್ಟುಬಿದ್ದು ಪುನಃ ೧೪ ವರುಷ ವನವಾಸಕ್ಕೆ ತೆರಳಿದ್ದಾಯ್ತು ಆ ದಾಶರಥಿರಾಮ. ಕಾಡಿನಲ್ಲೂ ತಮಗೆ ತಮ್ಮಪಾಡಿಗೆ ಇರಲು ರಾಕ್ಷಸೀ ಪ್ರವೃತ್ತಿಯವರು ಬಿಡಲಿಲ್ಲ. ತಮ್ಮ ಭರತ ತಮ್ಮನ್ನು ಹುಡುಕುತ್ತ ಪಿತೃವಿಯೋಗದ ಸುದ್ದಿ ತಂದ,ಏನು ಮಾಡೋಣ, ವಿಧಿ ಕೊನೆಯ ಕ್ಷಣದಲ್ಲೂ ತಂದೆಯನ್ನು ನೋಡಲು ಅವಕಾಶಕೊಡಲಿಲ್ಲ. ಅತ್ತ ಕಾಡಲ್ಲಿ ಅಲ್ಲೊಬ್ಬಳು ಶೂರ್ಪನಖಿ ಅಡ್ಡ ಬಂದಳು, ಅವಳನ್ನು ಮಟ್ಟಹಾಕಲು ಹೋಗಿ ಗೊತ್ತಿಲ್ಲದ ರಾವಣನನ್ನು ಎದುರುಹಾಕಿಕೊಳ್ಳುವ ಪ್ರಮೇಯ ಬಂತು! ಬಂಗಾರದ ಜಿಂಕೆಯ ಆಮಿಷ ತೋರಿಸಿ ತನ್ನ ಸೆಳೆದು, ತನ್ನ ಅನಿವಾರ್ಯತೆಯಲ್ಲಿ ಸೀತೆಯನ್ನು ರಾವಣ ಕದ್ದೊಯ್ದ. ಸೀತೆಗಾಗಿ ಹುಡುಕಿ ಅಲೆದು ಬಳಲಿದೆ.ಮುಂದೆ ಸಾಗುತ್ತ ಜಟಾಯುವಿನ ಮೂಲಕ ವಿಷಯ ತಿಳಿದು ಹಾಗೇ ಹುಡುಕುವಾಗ ವಾನರ ವೀರರ ಪರಿಚಯವಾಯ್ತು. ವಾಲಿ-ಸುಗ್ರೀವ-ಹನುಮ-ಅಂಗದ ಮೊದಲಾದ ಹಲವರು ಸಿಕ್ಕರು. ನಿಸ್ಪೃಹ ಸೇವಕ ದಾಸಶ್ರೇಷ್ಠ ಹನುಮ ಜೊತೆಗೂಡಿದ, ಆತನ ಸಾಹಚರ್ಯದಿಂದಲೇ ಲಂಕೆಯ ಪತ್ತೆ, ಅಲ್ಲಿಗೆ ಗಮನ ಮತ್ತು ರಾವಣ ವಧೆ ಇವೆಲ್ಲ ನಡೆಯಿತು. ಅಂತೂ ಸೀತೆಯನ್ನು ಮರಳಿ ಪಡೆದು ರಾಜ್ಯಕ್ಕೆ ಮರಳುವಷ್ಟರಲ್ಲಿ ಎಲ್ಲಾ ಸೇರಿ ರಾಜ್ಯದ ಪಟ್ಟ ಕಟ್ಟಿ ಪಟ್ಟಾಭಿರಾಮನನ್ನಾಗಿಸಿದರು. ಮತ್ತೆ ಅಗಸನ ಮಾತಿಗೂ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಬೇಕಾದ ಪ್ರಸಂಗ ಬಂತು. ಕಾಡಲ್ಲಿ ಬಸುರಿ ಹೆಂಗಸನ್ನು ಬಿಟ್ಟುಬರುವ ಅನಿವಾರ್ಯತೆ ಬಂತು, ನಂತರ ಪುರದ ಪುಣ್ಯವೋ ತನ್ನ ಭಾಗ್ಯವೋ ಮಹರ್ಷಿ ವಾಲ್ಮೀಕಿಯ ಆಶ್ರಯ ತಮ್ಮ ಸೀತೆಗೆ ಸಿಕ್ಕು ಸುಪುತ್ರರಾದ ಲವ-ಕುಶರಿಗೆ ಒಳ್ಳೆಯ ಮುಹೂರ್ತದಲ್ಲಿ ಜನ್ಮನೀಡಿದಳು ಎಂಬುದು ವರ್ಷಗಳ ತರುವಾಯ ತಿಳಿದುಬಂತು. ಮರಳಿ ಕರೆತರಲು ಹೋದಾಗ ದುಃಖಿತ ಸೀತೆ ಜನನಿ ಭೂಮಿಯನ್ನು ಧ್ಯಾನಿಸಿ ಬಾಯ್ದೆರೆದ ಭೂಮಿಯಲ್ಲಿ ಹೊಕ್ಕು ನಮ್ಮನ್ನೆಲ್ಲ ತೊರೆದಳು.ಮಡದಿಯನ್ನು ಕಳೆದುಕೊಂಡ ರಾಮ ಯಾಕಾಗಿ ಬದುಕಬೇಕು, ಯಾವ ಮಡದಿಗಾಗಿ,ಅವಳ ರಕ್ಷಣೆಗಾಗಿ ಘನಘೋರ ಯುದ್ಧ ನಡೆಯಿತೋ ಅಂತಹ ಮಡದಿಯನ್ನೇ ಕಳೆದುಕೊಂಡು ಸೀತಾರಾಮ ಸೀತೆಯಿರದ ರಾಮನಾಗಿ ಬದುಕಿ ಏನು ಪ್ರಯೋಜನ,ಆದರೆ ಕರ್ತವ್ಯದ ಕೆರೆಯಿತ್ತು, ರಾಮ ತನಗಾಗಲ್ಲ, ಆತನೊಬ್ಬ ರಾಜ. ರಾಜಕಾರ್ಯದ ನಿಮಿತ್ತ ಆತ ಜೀವಿಸಬೇಕಾಗಿತ್ತು. ಇಂತಹ ವಿಷಮ ಸ್ಥಿತಿಗಳಲ್ಲೂ ಪರಿಸ್ಥಿಯನ್ನು ನಿಭಾಯಿಸುವ ಪಾಠಕಲಿತ-ಕಲಿಸಿದ ರಾಮ ಇಂದು ಹೊರಟು ನಿಂತಿದ್ದ!
ಕಾಲನ ಅನುಜ್ಞೆಯಂತೆ ಮರಳಿ ವೈಕುಂಠಕ್ಕೆ!

ಪ್ರೀತಿ ಪಾತ್ರರಾದ ಪ್ರಜೆಗಳ ಕಣ್ಣಲ್ಲಿ ನೀರು ಕಂಡವನಲ್ಲ ರಾಮ. ಅದನ್ನು ಕಾಣಬಯಸುವ ವ್ಯಕ್ತಿಯೂ ಅಲ್ಲ. ರಾಮನೇ ಸರ್ವಸ್ವವೆಂದು ತಿಳಿದು ಬದುಕಿದ್ದ ಪ್ರಜೆಗಳಿಗಾಗಿ ಬದುಕಿದ್ದ ರಾಜಾರಾಮ,ಆದರೂ ಇಂದು ಕರೆಯನ್ನು ಹಿಮ್ಮೆಟ್ಟಿಸುವಂತಿರಲಿಲ್ಲ.ತನ್ನ ಸ್ವಾರ್ಥಕ್ಕಾಗಿ ತಾನು ಬದುಕಿಲ್ಲ, ಸಿಂಹಾಸನಕ್ಕೆ ಅಂಟಿಕೊಂಡಿಲ್ಲ, ಬದಲು ಆಪ್ತತೆ ತುಂಬಿದ, ಮುಗ್ಧ ಪ್ರಜೆಗಳ ಪ್ರೀತಿಗಾಗಿ, ಅವರ ರಕ್ಷಣೆಗಾಗಿ, ಅವರ ಪೋಷಣೆಗಾಗಿ, ಅವರ ರಂಜನೆಗಾಗಿ, ಅವರ ಮುಖದ ಮುಗ್ಧ ನಗುವಿಗಾಗಿ, ಅವರ ಇಷ್ಟಾರ್ಥ ಸಿದ್ಧಿಗಾಗಿ, ಅವರ ಸಮಸ್ಯೆಗಳನ್ನು ಆಲೈಸಿ ಪರಿಹರಿಸಲಾಗಿ, ಅವರಿಗೊಂದು ಚಂದದ ಬಾಳ್ವೆ ಕಟ್ಟಿಕೊಡಲಾಗಿ, ಅವರ ನೆಂಟನಾಗಿ-ಭಂಟನಾಗಿ ರಾಮ ಪ್ರಜೆಗಳಿಗೆ ಮನಸೋತಿದ್ದ, ವೈಕುಂಠವನ್ನೇ ಮರೆತುಬಿಟ್ಟಿದ್ದ. ಪ್ರಜೆಗಳೂ ಅಷ್ಟೇ-- ಕಡ್ಡಿ ಅಲ್ಲಾಡಿದರೂ ರಾಮ, ಗಾಳಿಗೆ ಕಸ ತೂರಿಬಂದರೂ ರಾಮ, ನಿಂತರೂ ರಾಮ ಕುಂತರೂ ರಾಮ, ರಾಮಾವಲಂಬಿತ ಜೀವನ ಅವರದಾಗಿತ್ತು. ಏನಾದರೂ ರಾಮ ಮಾತ್ರ ತಮ್ಮನ್ನು ಬಿಟ್ಟುಕೊಡಲಾರ, ಎಂತಹ ಕ್ಷಣದಲ್ಲೂ ರಾಮನಿದ್ದಾನೆ ಎಂದೇ ಅವರು ಧೈರ್ಯದಿಂದ, ಪ್ರೀತಿಯಿಂದ,ಭಕ್ತಿಯಿಂದ ಜೀವಿಸಿದ್ದರು. ಪರಸ್ಪರ ನಿರಾತಂಕವಾಗಿ, ಸುಲಿಗೆ-ದರೋಡೆ-ಕಳ್ಳತನ-ಮೋಸ-ವಂಚನೆ ಇಲ್ಲದೇ ಪ್ರಾಮಾಣಿಕವಾಗಿ ಬದುಕು ನಡೆಸಿದ್ದರು. ಇಂತಹ ಸತ್ಪ್ರಜೆಗಳನ್ನು ಬಿಟ್ಟು ಹೊರಡಲು ರಾಮನ ಮನಸ್ಸು ಇಷ್ಟಪಟ್ಟಿರಲಿಲ್ಲ. ಆದರೂ ಇಂದು ಹೊರಟುನಿಂತಿದ್ದಾನೆ ಶ್ರೀರಾಮ. ಸ್ಥಿತಪ್ರಜ್ಞ ಋಷಿಸದೃಶ ರಾಮ ಅಳಲಾರ, ಅಳಲು ತೋಡಿಕೊಳ್ಳಲಾರ, ಹೇಳಲಾರ, ಹೇಳದೆ ಇರಲಾರ, ಆಡಲಾರ, ಅನುಭವಿಸಲಾರ. ಆತನ ಮನದಲ್ಲಿ ಉದ್ಭವಿಸಿದ ಆ ಮೂಕ ರೋದನ ಅದು ಅಸಾಧ್ಯ ವೇದನೆ. ತಣ್ಣೀರನ್ನೂ ತಣಿಸಿ ಕುಡಿ ಎಂಬ ಗಾದೆಯಂತೆ ನಿಧಾನವಾಗಿ ಪ್ರಜೆಗಳನ್ನು ಕರೆದು ತನ್ನ ನಿರ್ಯಾಣದ ನಿರ್ಧಾರವನ್ನು ಚಿಕ್ಕ ಮಕ್ಕಳಿಗೆ ಅಮ್ಮ " ಮನೆಯಲ್ಲೇ ಇರು ಇಲ್ಲೇ ವೈದ್ಯರಹತ್ತಿರ ಹೋಗಿಬರುತ್ತೇನೆ" ಎಂದು ಹೇಳಿ ಹೋಗುವಂತೆ ಹೇಳಿದ್ದಾನೆ, ನಿಧಾನ ನಿಧಾನ ನಿಧಾನ ಮಾಡುತ್ತಾ ಪುನಃ ಈ ರಾಮ ಬರುವುದಿಲ್ಲವೆಂತಲೂ ಸಾರಿಬಿಟ್ಟಿದ್ದಾನೆ. ಸಹಿಸಲು ಸಾಧ್ಯವೇ ಇಲ್ಲದ ಪ್ರಜೆಗಳು ಭೋರ್ಗರೆದು ಧುಮ್ಮಿಕ್ಕುವ ಜಲಲ ಧಾರೆಯಂತೆ ಕಣ್ಣೀರು ಹರಿಸಿದ್ದಾರೆ. ಇಂದು ಮಾತ್ರ ಆ ಕಣ್ಣೀರು ಒರೆಸುವ ಕೈ ಕೆಲಸಮಾಡುವ ಮಿತಿಯನ್ನು ಮೀರಿತ್ತು. ಆ ಸಂದರ್ಭ ರಾಮ ತನ್ನ ಬದುಕಿನ ಸಿಂಹಾವಲೋಕನ ಮಾಡಿದ್ದಾನೆ ---





ಶ್ರೀರಾಮ ನಿರ್ಯಾಣ


ಬದುಕು ಬಳ್ಳಿಯ ಹರಿವ ಕ್ಷಣವು ಬಂದಿಹುದೆನಗೆ
ಇದಕೆ ಸಂಕಟವಾಯ್ತು ಈ ಜಿಹ್ವೆಯೊಳಗೆ
ತದಕಾಡಿದರು ಸಿಗದ ಸತ್ಪ್ರಜೆಗಳಿಹ ರಾಜ್ಯ
ಅದಕಾಯ್ತು ವೇದನೆಯು ಮನದಗುಡಿಯೊಳಗೆ


ಉಂಡುಟ್ಟು ಸುಖವಾಗಿ ನಲಿವ ಪ್ರಜೆಗಳ ದಂಡು
ಕಂಡಷ್ಟೂ ಖುಷಿಯೆನಗೆ ದಿನವೂ ರಾಜ್ಯದಲಿ
ಒಂದಷ್ಟು ನಗೆಯ ಅಲೆಗಳು ಅವರ ವದನದಲಿ
ಬಂದಷ್ಟು ನಡೆವುದದು ರಾಜ್ಯ ತುಷ್ಟಿಯಲಿ


ಪುಣ್ಯ ನದಿ ಸರಯೂ ಹರಿದಿಹ ನಾಡು ಕೋಸಲೆಯು
ಗಣ್ಯ ಮನಗಳ ಇಹದ ಸ್ವರ್ಗಸಮ ಬೀಡು
ನಾಣ್ಯನಗದಾ ಚಿಂತೆ ಕಾಡದಿಹ ಸಿರಿತನವು
ವನ್ಯಸಂಪದ ತುಳುಕಿ ಹರಿದ ನಲುನಾಡು


ಮುನಿವರೇಣ್ಯರು ಹರಸಿ ನಡೆತಂದ ರಾಜ್ಯವಿದು
ಘನತೆವೆತ್ತಿಹ ದಶರಥನ ಸಂಸ್ಥಾನ
ಧನಕನಕ ಮುತ್ತು ರತ್ನವು ಹವಳ ವಜ್ರಗಳು
ಮನೆಮನೆಯ ತುಂಬಿಸಿದ ಪ್ರಜೆಗಳಾಸ್ಥಾನ


ಸೂರ್ಯವಂಶದ ಸಾಹಸಿಗಳಾಳಿದೀ ಭೂಮಿ
ಕಾರ್ಯಭಾರವು ಬೆಸೆದು ಮನದ ಮೂಸೆಯಲಿ
ಆರ್ಯ ಸಂಸ್ಕೃತಿಯಲ್ಲಿ ಮೇರುತೆರದಲಿ ಮೆರೆವ
ವೀರ್ಯವಂತರು ಬದುಕಿದೀ ದೇಶದಲ್ಲಿ


ಚಿನ್ನದಂತಹ ಮಡದಿ ಸೀತೆಗತಿಸಲು ಕೂಡ
ನನ್ನ ನೋವನು ಮರೆತೆ ರಾಜ್ಯಭಾರದಲಿ
ರನ್ನದಂತಹ ತಮ್ಮ ಲಕ್ಷ್ಮಣನ ಕಳಕೊಂಡೆ
ಇನ್ನಾಯ್ತು ವಿಧಿಯೆನಗೆ ಕಾಲರೂಪದಲಿ

Monday, April 12, 2010

ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......

ಸಾಧಿಸಲಾರದ್ದು ಅಂತ ಯಾವುದೂ ಇಲ್ಲದೇ ಹೋಗಿರುವುದು ರಾಜಕೀಯದ ನೆಂಟಸ್ತನಗಳಲ್ಲಿ ಮಾತ್ರ ! ನಾವು ಯಾರನ್ನು ಯಾವಾಗ ಹೇಗೆ ಯಾಕೆ ಬೆಂಬಲಿಸಬೇಕು ಎಂದು ತಿಳಿಯದೇ ಬೆಪ್ಪರಾಗಿ ಕೂರುವುದು ಅಲ್ಲಿ ಮಾತ್ರ, ಯಾಕೆಂದರೆ ಕಂಡ ಅಮಾವಾಸ್ಯೆ ಕಾಣುವ ಹುಣ್ಣಿಮೆಯಾಗುವುದು ಅಲ್ಲಿನ ವೈಶಿಷ್ಟ್ಯಗಳಲ್ಲೊಂದು ! ಆಮೇಲೆ

  1. ಯಾರೂ ಶಾಶ್ವತವಲ್ಲ
  2. ಆಗಿದ್ದು ಆಗಿಹೋಯಿತು ಬಿಟ್ಬಿಡಿ
  3. ನನ್ನ ತೇಜೋವಧೆಮಾಡಲು ಯಾರೋ ಹೊಂಚುಹಾಕಿದ ಕ್ರಮ
  4. ನನ್ನ ವಿರುದ್ಧ ಉದ್ದೇಶ ಪೂರಿತವಾಗಿ ಮಾಡಿದ ರಾಜಕೀಯ ಷಡ್ಯಂತ್ರ
  5. ಇರಲಿ ಬಿಡಿ ಅವರಿಗೂ ಒಂದು ಕಾಲ ಬರತ್ತೆ
  6. ಈಗ ಎಲ್ಲ ಮರೆತು ಹೊಂದಿಕೊಂಡು ಹೋಗೋಣ
  7. ನಮ್ಮ ಒಗ್ಗಟ್ಟಿನ ಪ್ರಯತ್ನ ಸಾಲಲಿಲ್ಲ
  8. ಸತ್ಯಕ್ಕೆ ದೂರವಾದ ಆಪಾದನೆ
  9. ನನ್ನ ಇಮೇಜ್ ಹಾಳುಮಾಡಲು ಆಗದವರು ಕೈಗೊಂಡ ಕ್ರಮ
  10. ನನ್ನ ಜನರಿಗಾಗಿ ನಾನು ಹಗಲಿರುಳೂ ಶ್ರಮಿಸುತ್ತೇನೆ
  11. ನನ್ನದು ಪಾರದರ್ಶಕ ನಡವಳಿಕೆ
  12. ಎಷ್ಟೇ ತೊಂದರೆ ಬರಲಿ ನಮ್ಮ ನಾಗರಿಕರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವರ ಸೇವೆ ಮಾಡುತ್ತೇನೆ
---ಇವೆಲ್ಲಾ ರಾಜಕೀಯ ಲೈಬ್ರರಿಯ ಶಬ್ಧಕೋಶದ 12 ಸ್ಯಾಂಪಲ್ ಗಳು. ನಮ್ಮಲ್ಲಿ ಯಾರಾದರೂ ರಾಜಕೀಯ ಸೇರುವವರಿದ್ದರೆ ಈ ಮೇಲಿನದು ಸೇರಿದಂತೆ ಅನೇಕ ಒಕ್ಕಣೆಗಳನ್ನು ಮತ್ತು ಅವುಗಳನ್ನು ಬಾಂಬು ಹಾಕಿದಂತೆ ಎಲ್ಲೆಲ್ಲಿ ಯಾವ್ಯಾವಾಗ ಹಾಕಬೇಕು ಎಂಬುದನ್ನು ಚೆನ್ನಾಗಿ ಚೋರಗುರುವಿನಲ್ಲಿ ಚಾಂಡಾಲ ಶಿಷ್ಯವೃತ್ತಿಯಿಂದ ಕಲಿತು, ಪಳಗಿ, ಉರುಹೊಡೆದು ನಂತರ ಒಂದು ದೊಡ್ಡ ಗಂಟನ್ನು ರೆಡಿ ಮಾಡಿಕೊಂಡು ರಾಜಕೀಯ ಪ್ರವೇಶಮಾಡಬೇಕು, ಹೇಗೆ ಭರತನಾಟ್ಯಕ್ಕೆ, ಕೂಚಿಪುಡಿ, ಕಥಕ್ ಇವಕ್ಕೆಲ್ಲ ರಂಗಪ್ರವೇಶ ಇದೆಯೋ ರಾಜಕೀಯದಲ್ಲೂ ಹಾಗೇ ಕಾರ್ಪೊರೇಟರ್ ಅಥವಾ ಪಂಚಾಯ್ತಿ ಸದಸ್ಯತ್ವದಿಂದ ವೇದಿಕೆಯಲ್ಲಿ ಪ್ರದರ್ಶನ ಆರಂಭ.

ಲಂಚಾಧಿಪ ನಮಸ್ತುಭ್ಯಂ ಪ್ರಜಾನಾಂ ಸಂಕಷ್ಟದಾಯಕಃ |
ಕೊಂಚವೂ ಬಿಡದೆ ನೆಕ್ಕುತ್ತ ಅರ್ಥ ಸಂಚಯನಂ ಕುರು ||

---ಇದು ಅವರ ಮೂಲ ಮಂತ್ರವಾಗಿರುತ್ತದೆ, ಇದನ್ನು ಉಪದೇಶವಿಲ್ಲದೇ ಹಾಗೇ ಬಳಸುವಂತಿಲ್ಲ ! ಹೀಗಾಗಿ ರಾಜಕೀಯಕ್ಕೆ ಉಪದೇಶವೂ ಬೇಕು. ಇಂತಹ ರಾಜಕೀಯದ ಹಲವು ಡೊಂಬರಾಟಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಕ್ಷಮಾಶೀಲರಾದ ನಮ್ಮ ಸಹಜ ಮನೋವೃತ್ತಿ ಎಲ್ಲವನ್ನೂ ಕ್ಷಮಿಸಿ ಸಹಿಸುತ್ತ ಖೂಳರ ಬೆಳವಣಿಗೆಗೆ ಸುಗಮ ಹಾದಿಯನ್ನು ಕಲ್ಪಿಸುತ್ತದೆ. ಸಾಲದ್ದಕ್ಕೆ ಇಂದಿನ ಹೊಸ ತಂತ್ರಜ್ಞಾನ ಪೂರಕದಷ್ಟೇ ಮಾರಕವೂ ಆಗಿರುವುದರಿಂದ ಅದನ್ನೇ ಏಟಿಗೆ ತಿರುಗೇಟಾಗಿ, ಬ್ರಹ್ಮಾಸ್ತ್ರಕ್ಕೆ ಸರ್ಪಾಸ್ತ್ರವಾಗಿ ಉಪಯೋಗಿಸುತ್ತಾ ಸಡ್ಡುಹೊಡೆದು ಎದ್ದು ನಿಲ್ಲಲು ಅವಕಾಶ ಸಿಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಕಾಣುತ್ತಿರುವ ದೃಶ್ಯಗಳಲ್ಲಿ ನನ್ನ ಫೋಟೋ ಬಳಸಿಕೊಂಡು ಅನಿಮೇಷನ್ ನಿಂದ ತಿರುಚಲಾಗಿದೆ--ತಕ್ಕಳ್ರಪ್ಪಾ ಮುಗಿದೇ ಹೋಯಿತು, ಇದೂ ಒಂದು ಬಾಂಬು! ಹೀಗೆ ವರ್ಷಗಳ ಹಿಂದೆ ಹೂತಿಟ್ಟ ಒಂದು ಬಾಂಬು ನಿನ್ನೆ ಸಿಡಿದಿದೆ ! ಮೂರು-ನಾಲ್ಕುವರ್ಷಗಳಿಂದ ನಡೆದುಕೊಂಡು ಬಂದಿದ್ದ ಕೇಸು ಪರಸ್ಪರರ ಆಪಸ್ನಾತೀ ಮಾತುಕತೆಯಿಂದ ರಾಜಿಯಾಗಿದೆ,ಕೇಸು ಖುಲಾಸೆಗೊಂಡಿದೆ ! ಇದರಲ್ಲಿ ಸೋತವರು ಪ್ರಜೆಗಳೇ ವಿನಃ ರಾಜಕೀಯವೂ ಅಲ್ಲ, ವಾದಿ-ಪ್ರತಿವಾದಿಗಳೂ ಅಲ್ಲ. ಯಾವುದನ್ನು ಸತ್ಯ ಅಂತ ನಿರ್ಧರಿಸಿ ಬೆಂಬಲಿಸಿ ಇಲ್ಲಿಯವರೆಗೆ ತಲೆಯಮೇಲೆ ಹೊತ್ತರೋ ಅದನ್ನು " ಸತ್ಯಾಸತ್ಯದ ಮಾತು ನಮಗ್ಯಾಕೆ, ಬನ್ನಿ ಹೋಗೋಣ ಸಾಕು " ಎಂಬ ರೀತಿಯಲ್ಲಿ ಒಂದೇ ನಿಮಿಷದಲ್ಲಿ ಇಬ್ಬರೂ ಸೇರಿಕೊಂಡು ಉಳಿದವರನ್ನು ಮಂಗಗಳ ಥರ ನೋಡಿ ನಗುತ್ತಿದ್ದಾರೆ ! ಎಂತಹ ವೈಪರೀತ್ಯ ನೋಡಿ ! ಇದನ್ನು ನೋಡಿದ ನಮ್ಮ ಗೀ ಗೀ ಮೇಳ ತಂಬೂರಿ ಮೀಟುತ್ತ ಹೀಗೆ ಹಾಡಿತು .........





ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......
[ ರೇಣುಕಾ ಮಹಾತ್ಮೆ-ಭಾಗ ]

ನಾವು ಬಂದೇವ ನಾವು ಬಂದೇವ ನಾವು ಬಂದೇವ ಕೇಸನ್ನು ನೋಡುದಕ್ಕ
ಮತ್ತೆ ವಾಪಸ್ ಪಡೆದು ರಾಜಿಯಾಗುದಕ್ಕ ಗೀಯ ಗೀಯ ಗಾಗೀಯ ಗೀಯ
ಗೀಯ ಗೀಯ ಗಾಗೀಯ ಗೀಯ.......


ಏನ್ರಪಾ ಎನಾತು ರಾಜೀ ಮಾಡ್ಕೊಳ್ಲಾಕ ಹತ್ತೀರಲ್ಲ ಅಂದ್ರ........ ಪೆದ್ರಾಂಗ ನಕ್ರಂತ..............
ಹಿರೀಕರು ಹೇಳ್ಯಾರಂತ .......ಎಂತಾ ನಗ್ತಾ ನಡೆದರಂತ............ ವಾರೆವ್ಹಾ ನಗ್ತಾ ನಡೆದರಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಎಂದೂ ಇಲ್ದಂತಾ ಖುಸಿ ಇಂದು ಮುಸುಡಾಗ್ ಬಂದು ನಾವು ಒಂದೇ ಎಂದರಂತ............. ಜನಾ ಕೇಳ್ರಿ ಮುಂದೆ ನಾವು ಒಂದೇ ಅಂದರಂತ........... ಯಾಕ್ರಪಾ ಏನಾತು ? ಮಠದೋರು ಹೇಳ್ಯಾರಂತ........ ಸುಮ್ನೇ ಒಂದಾಗಿ ಇರಿ ಅಂತ ಅದ್ಕೇ ಸುಮ್ನೇ ಒಂದಾಗುತಾರಂತ......... ಅದ್ಕೇ ಸುಮ್ನೇ ಒಂದಾಗುತಾರಂತಾ......... ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ಹೊನ್ನಾಳಿ ಪ್ಯಾಟ್ಯಾಗ ಪಡಗಾ ಹಿಡಿದು ಹಾನಾ ತಗೀತೀನಂತ ಕುಂತಿದ್ಳಲ್ಲ ಯವ್ವ ಆಕಿ ಕರಾಮತ್ತು ಎಲ್ಲಿಗೋತ ? .........ಸುಮ್ಕಿರಪ್ಪಾಸಿವಾ ನಿಂಗೊತ್ತಾಗಾಕಿಲ್ಲ.............. ಅವೆಲ್ಲ ಬರೇ ಡೊಂಬರಾಟ ನೋಡಂತ ಸುಮ್ಕೇ ಅದು ಡೊಂಬರಾಟ ನೋಡಂತ ................ತಾ ತಾ ತಾತಾ ಗೀಯಗೀಯ ಗಾಗೀಯ ಗೀಯ.......


ಯಪ್ಪಗ ಈಗ ಮಂಕ್ರಿಯಪ್ಪನ ಜಾಗ ಸಿಕ್ಕಾವಂತ ಬಕಾರಿ ಮಂಕ್ರಿಯಂತ
ಹಾಂಗಂದ್ರೇನಪಾ
ಸಿವಾ .........ಸಾರಾಯಿ ಹಿಡ್ಯೊದಂತ ........ಕಳ್ಳ ಭಟ್ಟಿ ನಿಲ್ಸೋದಂತ ಊರೂರು ಕೇರೀಲಿ ಅಲ್ದಾಡಿ ಸಾರಾಯಿ ನಿಲ್ಸೊದಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಯಕ್ಕನ್ನ ಕರಸ್ಕೊಂಡು ಬುದ್ಧಿ ಹೇಳಿದ್ರಂತ............. ಈಗ ಅಧಿಕಾರ ಐತಿ ನೋಡ ...........ಅದ್ಕ ಹೊಂದಾಣ್ಕಿ ಮಾತನಾಡ............... ನಿಂಗಒಳ್ಳೇದಾಗುತೈತ ............ಮತ್ತೆ ಸುಖಾ ಸಿಗುವುದೆಂತ ........ಒಹೋಹೋ ಅದ್ಕ ರಾಜಿ ಆತೇನು ? ....ಹುಂ ಮತ್ತ .............ಖುರ್ಚಿ ದುಡ್ಡು ಇರುವುದೆಂತ........ಅರಿತು ನಡೆದಾಗ ಖುಸಿಯಂತಾ ......ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ನರ್ಸಮ್ಮ ಆಚಾರಪ್ಪ ಒಂದೇ ಕಾರಲ್ಲಿ ಸದ್ಯ ಹೋಗಿಲ್ವಂತ ಮತ್ತೆ ಅದು ಮುಂದೀನ ಎಪಿಸೋಡ ಒಳ್ಳೆ ಬಣ್ಣಾದ ಎಪಿಸೋಡ ಕಣ್ಣುತಂಪಾಗೋ ಎಪಿಸೋಡ.............. ಯಾಕ್ರಪ್ಪಾ ಅಚಾರಪ್ಪಂಗ ತಡ್ಕೊಳ್ಳಾಕಾತೇನು?....ಸ್ವಲ್ಪ ತಡ್ಕೊಂಡು ಹೋದನಂತ ..ಹೆಂಗೂಗೊತ್ತಿರೋ ಮಾಲು ಅಂತ ......ರಾತ್ರಿ ಮತ್ತೆ ಸಿಗುವ ಅಂತಾ ........ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......