ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 4, 2015

ಇರುವೆ ಸರಿಯುವ ಸದ್ದು, ಮೊಗ್ಗು ಬಿರಿಯುವ ಸದ್ದು, ಮಂಜು ಇಳಿಯುವ ಸದ್ದು ಕೇಳಬಲ್ಲ...ನನ್ನ ಮೊರೆಯನು ಏಕೆ ಕೇಳಲೊಲ್ಲ?

ಇರುವೆ ಸರಿಯುವ ಸದ್ದು, ಮೊಗ್ಗು ಬಿರಿಯುವ ಸದ್ದು, ಮಂಜು ಇಳಿಯುವ ಸದ್ದು ಕೇಳಬಲ್ಲ...ನನ್ನ ಮೊರೆಯನು ಏಕೆ ಕೇಳಲೊಲ್ಲ?  

ನನ್ನ ಜೀವನದಲ್ಲಿ ಕಾವ್ಯಾರಾಧನೆ ಆರಂಭಗೊಂಡಿದ್ದು ಪ್ರಾಥಮಿಕ ಶಾಲೆಯಿಂದಲೇ ಎನ್ನಬೇಕು. ಅಂದು ಇಂದಿನಂತೆ ಕಂಡಿದ್ದಕ್ಕೆಲ್ಲ ಕಂಪ್ಯೂಟರು-ಗೂಗಲ್ಲು ಇರಲಿಲ್ಲ. ಹೊಸ ಪಠ್ಯಪುಸ್ತಕ ನಮ್ಮ ಕೈಗೆ ಬಂದಾಗ, ಅದರ ವಾಸನೆಯನ್ನು ಆಘ್ರಾಣಿಸಿ ಸುಖಿಸಿದವರು ನಾವು. ತುಂಗಳುಗಳ ತರುವಾಯ, ಅಂತಹ ಪುಸ್ತಕಗಳಲ್ಲೇ ನವಿಲುಗರಿಯನ್ನು ಇರಿಸಿ ಅದು ಮರಿಹಾಕುತ್ತದೆ ಎಂದು ಯಾರೋ ಹೇಳಿದ್ದನ್ನು ನಂಬಿಕೊಂಡು ಕಾದು ಕುಳಿತವರು. ಚಿಕ್ಕ ಸೀಸೆಯಲ್ಲಿ ಕೊಬ್ಬರಿ ಎಣ್ಣೆಯನ್ನು ತುಂಬಿಸಿಕೊಂಡು ಇಷ್ಟವೆನಿಸಿದ ಪರಿಮಳದ ಊದುಬತ್ತಿಯನ್ನು ತಿರುಚಿ-ಪುಡಿಮಾಡಿ ಆ ಬಾಟಲಿಯೊಳಕ್ಕೆ ಹಾಕಿ, ಕುಲುಕಿ ಅದನ್ನೇ ಅತ್ತರುಮಾಡಿ ಕೈ-ಮೈಗೆ ಹಚ್ಚಿಕೊಂಡು ಸಂಭ್ರಮಿಸಿದವರು. ಬಹುಕಾಲದ ನಂತರ ಯಾರೋ ನೆಂಟರು ತಂದ ಲಿಂಬು ಪೆಪ್ಪರಮಿಂಟನ್ನು ಶಾಲೆಯಲ್ಲಿ ಒಬ್ಬರೇ ತಿನ್ನಲಾಗದೇ ಅಂಗಿಯಲ್ಲಿ ಕಚ್ಚಿ-ಕಾಗೆ ಎಂಜಲು ಮಾಡಿ ಹಂಚಿತಿಂದವರು. ಮಾಗಿಯ ಚಳಿಯ ಮುಂಜಾವಿನಲ್ಲಿ ಅರೆಬಿರಿದ ಹೂಗಳ ಮೇಲೆ ಮುತ್ತುಗಟ್ಟಿದ ಇಬ್ಬನಿಗಳನ್ನು ಕಂಡು ಆಹ್ಲಾದವನ್ನು ಎದೆಗಿಳಿಸಿಕೊಂಡವರು. ಸುತ್ತಲ ಪರಿಸರದ ಹಸಿರು ಗಿಡಮರಗಳ ಟೊಂಗೆಗಳಲ್ಲಿ ಸ್ವಚ್ಛಂದದಲ್ಲಿ ಅಲೆಯುವ-ಇಷ್ಟಬಂದಲ್ಲಿ ಕುಳಿತು ಕೂಗುವ ಹಾಡು ಹಕ್ಕಿಗಳ ವಿಭಿನ್ನ ರಾಗಮಾಲಿಕೆಗಳನ್ನು ಕಣ್ಮನದ ತುಂಬ ಗಟ್ಟಿಯಾಗಿ ತುಂಬಿಸಿಕೊಂಡವರು. ಹರಿಯುವ ನೀರಿನಲ್ಲಿ ತೆಪ್ಪವನ್ನು ತೇಲಿಬಿಟ್ಟು ಅದರ ಮೇಲೆ ಸವಾರಿಹೊರಟು ಗೋತಾ ಹೊಡೆದು ದಡ ಸೇರಿದವರು. ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ಕಳಿಯುವ ಸಾಹಸಕ್ಕೆ ತೊಡಗಿ ಮೈಕೈಗಳಲ್ಲಿ ಆದ ಗಾಯ ಮನೆಮಂದಿಗೆ ಕಾಣಿಸಿದಂತೆ ಕದ್ದುಮುಚ್ಚಿ ಕಳೆದವರು. ವಸಂತದ ಮಾವಿನ ಪೀಚುಗಳನ್ನು ಕಿಸೆಗಳಲ್ಲಿ ತುಂಬಿಸಿ ತಂದು, ಸಹಪಾಠಿಗಳೊಡನೆ ಭುಂಜಿಸಿದವರು. ಜೀವನದ ಆ ಘಟ್ಟದಿಂದಲೇ ಕಾವ್ಯಾಲಾಪ ಹರಿದುಬಂದಿತು. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸದೇ ಇದ್ದರೂ ರಾಗ-ತಾಳ-ಲಯಗಳನ್ನು ಅನುಭವಿಸಲಾರದ ಜನವಲ್ಲ.   

ಕನ್ನಡಕ್ಕೆ ತನ್ನ ಅಂತಃಸತ್ವದ ಅಮೃತಧಾರೆಯನ್ನು ಪಂಪ್ ಮಾಡಿದ ಪಂಪನಿಂದ ಹಿಡಿದು ಕುಮಾರವ್ಯಾಸ, ಹರಿಹರ, ರಾಘವಾಂಕ, ರನ್ನ, ಜನ್ನ, ಪೊನ್ನ, ಲಕ್ಷ್ಮೀಶ ಎಂಬೆಲ್ಲಾ ಮಹನೀಯ ಪೂರ್ವಸೂರಿಗಳ ಕಾವ್ಯಾಲಾಪವನ್ನು ಕೇಳದ ಅರಸಿಕರು ನಾವಾಗಿರಲಿಲ್ಲ.

ಪೌರಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದೆಡೆಗೆ

ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡೆಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ

ಕನ್ನಡದ ಹರವಿ ಎಂಬ ಪದ ಇಂದಿನ ಕೆಲವರಿಗೆ ಗೊತ್ತಿಲ್ಲ, ಈಗೀಗ ಹಳ್ಳಿಗಳಲ್ಲೂ ಸಹ ಆ ವಸ್ತುವೂ ಮತ್ತು ಆ ಶಬ್ದವೂ ಮಾಯವಾಗತೊಡಗಿವೆ! ಉತ್ತರ ಕರ್ನಾಟಕದಲ್ಲಿ ಮತ್ತು ಆ ಭಾಷೆಯ ಪದ ಬಾಹುಳ್ಯದ ಪ್ರಭಾವವಿರುವ ಉತ್ತರ ಕನ್ನಡದಲ್ಲಿಯೂ ಸಹ ಹರವಿ ಅಥವಾ ಹರಿವೆ ಎಂಬ ಪದವನ್ನು ಬಳಸುವುದುಂಟು. ಹರವಿ ಎಂದರೆ ದೊಡ್ಡ ಪಾತ್ರೆ, ಮಣ್ಣಿನ ಅಥವಾ ಲೋಹದ ಹಂಡೆ ಎಂದರ್ಥ. ಕುಮಾರವ್ಯಾಸನ ಭೀಮ ಹಾಲು-ತುಪ್ಪವನ್ನೂ ಸಹ ಹಂಡೆಗಳೋಪಾದಿಯಲ್ಲಿ ಹೊಡೆದು-ಸುರಿದು, ಜಗತ್ತಿಗೆಲ್ಲ ಕೇಳಿಸುವಂತೆ "ಡರ್" ಎಂದು ತೇಗಿದ್ದನ್ನು ಕಲ್ಪಿಸಿಕೊಂಡು ತೃಪ್ತರಾದವರು ನಾವು. 

ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ

ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ

ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ

ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ

ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ

ಖ್ಯಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ

ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ

ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ

ಕೊಂದು ಧನುಜನ ಹೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ

-ಕುಮಾರವ್ಯಾಸ ಭಾರತದ ಈ ಭಾಗ ನಮ್ಮ ಪಠ್ಯದಲ್ಲಿತ್ತು. ವರ್ಷಗಳ ಕಾಲ ಜಪ-ತಪ-ಉಪವಾಸ ನಿರತ ಕೃಶಕಾಯದ ಮಹಾಮುನಿಯೊಬ್ಬನ ಶರೀರವನ್ನು ಹೋಲುವ ಸಣಕಲು ಶರೀರದ ಶಾನಭಾಗ್ ಮಾಸ್ತರರು ಕುಮಾರವ್ಯಾಸನ ಕಾವ್ಯದ ಭಕಾಸುರ ವಧೆಯ ಸಂದರ್ಭದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸುವಾಗ ಮಾಸ್ತರರಿಗೆ ಧಾರಾಳ ಸಹಕಾರವನ್ನಿತ್ತು ಮನದಲ್ಲೇ  ಬಕಾಸುರನಿಗೆ  ನಾಲ್ಕು ಬಿಟ್ಟು ಖುಷಿಪಟ್ಟುಕೊಂಡವರು ನಾವು!

ಹಿಂದೆಲ್ಲ ಮುಂಜಾವಿನಲ್ಲೇ ಎದ್ದ ಗರತಿಯರು ಅಂಗಳ ಸಾರಿಸಿ ರಂಗೋಲಿ ಇಟ್ಟು ಉದಯರಾಗದಲ್ಲಿ "ನಾರಾಯಣ ಗೋವಿಂದ ಜಯಜಯ" ಎಂಬೀ ಮೊದಲಾದ ದೇವರ ನಾಮಗಳನ್ನು ಹಾಡಿಕೊಳ್ಳುತ್ತಿದ್ದುದಕ್ಕೆ ಸಾಧ್ಯವಾದಷ್ಟು ದನಿಗೂಡಿಸಿದವರು. ಈಚೆಮನೆಯ ಸಾವಿತ್ರಕ್ಕ ಅದನ್ನು ಹಾಡುವಾಗ ಆಚೆಮನೆಯ ಸೀತಕ್ಕ "ನಂದೂ ಹಾಗೇಯ" ಎಂದಾರೆ, ಸೀತಕ್ಕ ಹಾಗೆ ಸಾಂಕೇತಿಕವಾಗಿ ಹೇಳಿದ್ದಕ್ಕೆ ಸಾವಿತ್ರಕ್ಕನಲ್ಲಿ ಕಾರಣ ಕೇಳಿದವರು ನಾವು. ಗಂಡನ ಹೆಸರನ್ನು ಹೇಳದಷ್ಟು ಗೌರವವನ್ನು ಕೊಡುತ್ತಿದ್ದ ನೀರೆಯರನ್ನು ಅಂದಿನ ನಮ್ಮ ಸಮಾಜ || ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ || ಎಂಬುದನ್ನು ಆಚರಣೆಯಲ್ಲಿಟ್ಟ ಜನರನ್ನು ಕಂಡವರು ನಾವು. ಅಂಗಳವೇ ಇಲ್ಲದ ಇಂದಿನ ದಿನಗಳಲ್ಲಿ ರಂಗೋಲಿ-ಹಾಡು-ಹಸೆಗಳೆಲ್ಲ ಕಥೆಗಳೆಂತೆನಿಸಿದ ಬಳಿಕ, ನೀರೆಯರು ಸೀರೆಗಳನ್ನು ತೊರೆದು ಜೀನ್ಸ್-ಟೀ ಶರ್ಟ್ ತೊಟ್ಟು ತರಾವಾರಿಯಲ್ಲಿ ಗುಡ್ಡ-ದಿಣ್ಣೆ-ಪ್ರಸ್ಥಭೂಮಿಗಳನ್ನು ಪ್ರದರ್ಶಿಸುತ್ತಿರುವಾಗ, ಹಲ್ಕಿರಿದು ಹಿಂದೆಬಿದ್ದ ಪಡ್ಡೆಗಳ-ವಿಟರ ಮನದ ಭಕಾಸುರನ ವಧೆಗೆ ಇಂದು ಕುಮಾರವ್ಯಾಸನ ಕಾವ್ಯ ಬಳಕೆಯಾಗದಿರುವುದು ವಿಷಾದನೀಯ. ಎತ್ತರದ ಎದೆಯನ್ನು ಇನ್ನಷ್ಟು ಎತ್ತರಿಸಿ ಒತ್ತರಿಸಿ ಒಕ್ಕೊರಲಲ್ಲಿ "ನಮ್ಮಲ್ಲಿ ಒಡಕಿರುವವರೆಗೂ ಈ ಗಂಡಸರು ಹತ್ತಿಕ್ಕುತ್ತಲೇ ಇರುತ್ತಾರೆ" ಎನ್ನುತ್ತಾ ಬಾವುಟ ಬೀಸುವ ಸಂಘಟನೆಗಳನ್ನು ಕಟ್ಟುವುದರಲ್ಲಷ್ಟೇ ಮುಂದಾದ ಆ ಮಂದಿಗೆ ಜಾರುವ ಸೆರಗನ್ನು ಕೊರಳ ಸುತ್ತ ಎಳೆದು, ಬಲಭಾಗದಿಂದ ಕೊಂಡೊಯ್ದು ಸೊಂಟಕ್ಕೆ ಸಿಕ್ಕಿಸಿಕೊಂಡು, ಡೈವೋರ್ಸ್ ಇಲ್ಲದ ಸುಂದರ ಜೀವನವನ್ನು ನಡೆಸುತ್ತಿದ್ದ ಭಾರತೀಯ ನಾರಿಯ ಸಂಸ್ಕೃತಿಯ ಮಹತ್ವದ ಅರಿವಾದರೂ ಎಲ್ಲಿ ಬರಬೇಕು?    

’ಎಂಡ್ಕುಡುಕ ರತ್ನ’ನಿಂದ ಖ್ಯಾತರಾದ ರಾಜರತ್ನಂ ಮಕ್ಕಳಿಗಾಗಿ ಬರೆದ ಬಣ್ಣದ ತಗಡಿನ ತುತ್ತೂರಿಯಿಂದ ಆರಂಭಗೊಂಡ ನಮ್ಮ ಕಾವ್ಯಾರಾಧನೆ ಇಂದಿಗೂ ಹಾಗೆಯೇ ಮುಂದರಿದಿದೆ. ಆಗಾಗ ನಡುನಡುವೆ ಹಲವಾರು ಕವಿಜನರು ಬಂದು ಹೋಗಿದ್ದಾರೆ. ಕವಿ ನಿಸಾರ್ ಅಹಮದ್ ಅವರು ನಾವು ಕಂಡ ಅದೇ ನಿಸರ್ಗದ ನಿತ್ಯೋತ್ಸವವನ್ನು ಪದಗಳಲ್ಲಿ ಹೀಗೆ ಹೇಳಿದ್ದಾರೆ:

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ 

ನಮ್ಮ ಜೀವನದುದ್ದಕ್ಕೂ ಹೊಸದನ್ನು ಸ್ವೀಕರಿಸುತ್ತಲೇ ಹಳತನ್ನು ಕಳೆದುಕೊಳ್ಳುತ್ತಲೇ ಬಂದವರು ನಾವು. ಈ ಜಗತ್ತು ಯಾರಿಗೂ ಶಾಶ್ವತವಲ್ಲ ಎಂಬ ಅನಿಸಿಕೆ ನಮ್ಮಲ್ಲಿರಲಿಲ್ಲ; ಅದರ ಅರಿವು ಬರುವ ಹೊತ್ತಿಗೆ ನಾವು ಅತಿ ಎಳವೆಯಲ್ಲಿ ಕಂಡ ಹಲವು ಹಿರಿಯರು ಗೋಡೆಯಲ್ಲಿ ಚಿತ್ರಪಟಗಳಾಗಿಬಿಟ್ಟರು. ಬದುಕಿದ್ದರೆ ಇಂದಿಗೆ ನೂರು ತುಂಬುತ್ತಿದ್ದ ನರಸಿಂಹಸ್ವಾಮಿಗಳು ಹೀಗೆ ಬರೆದಿದ್ದಾರೆ:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ನರಸಿಂಹ ಸ್ವಾಮಿಗಳ ಹಾಡುಗಳಲ್ಲಿ ಇರುವ ಭಾವತೀವ್ರತೆಗೆ ಅವರು ಬಳಸುವ ಪದವಿನ್ಯಾಸಗಳೇ ಕಾರಣವಾಗಿವೆ. ಬಡತನದಲ್ಲಿ ಹಲವು ಮಕ್ಕಳ ತಂದೆಯಾಗಿ ಸಂಸಾರದ ನೊಗವೆಳೆದ ನರಸಿಂಹ ಸ್ವಾಮಿಗಳಿಗೆ ಎಲ್ಲೋ ಅಲ್ಪಸಮಯ ಮನೆಯಲ್ಲಿ ಕುಳಿತಾಗ ಕೂಡ ಗೋಡೆಯಮೇಲಿನ ಹಿರಿಯರ ಚಿತ್ರಪಟಗಳ ಸಾಲು ಕಣ್ಣಿಗೆ ಬಿದ್ದಿದೆ. ಮುಂದೊಂದು ದಿನ ತನಗೂ ಸಹ ಆ ಚಿತ್ರ ಪರಿಷತ್ತಿನಲ್ಲಿ ಜಾಗ ದೊರೆಯಬಹುದು ಎಂಬ ಭಾವನೆ ಕವಿ ಮನದಲ್ಲಿ ಹಾದು ಹೋಗಿದೆ. ಆ ಯೋಚನೆಯನ್ನೇ ಪದಗಳಲ್ಲಿ ಅವರು ಹೇಳಿದ್ದಾರೆ.

ಇಂದು ಕಾಲ ಬದಲಾಗಿದೆ ಎಂದರೆ ಅನೇಕರು ತಕರಾರು ತೆಗೆಯುವುದುಂಟು. ಎಲ್ಲಾ ಕಾಲದಲ್ಲೂ ಒಳಿತು-ಕೆಡುಕುಗಳು ಇದ್ದೇ ಇದ್ದವು; ಒಳಿತು ಕೆಡುಕಿಗೆ ಕಾಲ ಕಾರಣವಲ್ಲ ಎಂಬುದು ಕೆಲವರ ವಾದ. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಪರಿಸರದಲ್ಲಾದ ಬದಲಾವಣೆಗಳನೂ ವೈಪರೀತ್ಯಗಳನ್ನೂ ಗಮನಿಸಿದರೆ ಹಿಂದೆಂದೂ ಇಷ್ಟೊಂದು ಬದಲಾವಣೆಗಳು ಆಗಿರಲಿಕ್ಕಿಲ್ಲ ಎನಿಸುತ್ತದೆ. ವಿಜ್ಞಾನಯುಗ ತನ್ನ ಪ್ರಖರತೆಯನ್ನು ದಟ್ಟವಾಗಿಸುತ್ತ ನಡೆದಂತೆ ಮಾನವೀಯ ಮೌಲ್ಯಗಳು ಮತ್ತು ಪರಿಸರ ಕಾಳಜಿ ಎಲ್ಲವೂ ಕಡಿಮೆಯಾಗುತ್ತ ಹೋಗಿರುವುದು ಕಾಣುತ್ತದೆ. ಆಧುನಿಕತೆಯ ಕಾರಣವೊಡ್ಡಿ ಆದರ್ಶಗಳನ್ನು ಬಲಿಗೊಟ್ಟಿರುವುದು ಢಾಳಾಗಿ ಕಾಣುತ್ತದೆ. ಇಂದಿನ ನವ ಗೃಹಗಳಲ್ಲಿ ಹಿರಿಯರ ಚಿತ್ರಪರಿಷತ್ತು ಕಾಣುವುದು ಕಡಿಮೆ.  ಕವಿ ಕನಕದಾಸರು ಮನುಷ್ಯ ಸಂಸ್ಕಾರದ ಬಗೆಗೆ ಹೀಗೆ ಬರೆಯುತ್ತಾರೆ:

ಗಿಳಿಯ ಮರಿಯನು ತಂದು ಪಂಜರ | ದೊಳಗೆ  ಪೋಷಿಸಿ
ಕಲಿಸಿ ಮೃದು ನುಡಿಗಳನು ಲಾಲಿಸಿ | ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹಿ ಮತಿಯನು ಎನ್ನ ಜಿಹ್ವೆಗೆ | ಮೊಳಗುವಂದದಿ ನಿನ್ನ ನಾಮಾ|
ವಳಿಯ ಪೊಗಳಿಕೆಯಿತ್ತು  ರಕ್ಷಿಸು  ನಮ್ಮ ನನವರತ ||

ಅದೇನೋ ಸರಿ ಆದರೆ ನಮ್ಮ ಸಂತೋಷಕ್ಕಾಗಿ ಕಾಡುಹಕ್ಕಿಗಳನ್ನು ನಾಡಿನ ಗೂಡಿನಲ್ಲಿ ಬಂಧಿಸುವುದೆಷ್ಟು ಸರಿ ಎಂಬುದು ಇನ್ನೊಬ್ಬ ಕವಿಯ ಪ್ರಶ್ನೆ:

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?
ಯಾರ ನಂಬಿ ಇನ್ನು ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು?

ನಾನು ಪಂಜರ ಪಕ್ಷಿ ಇನ್ನು ನನಗಾರು ಗತಿ
ಕೇಳಬಯಸುವಿಯೇನು ನನ್ನ ಕಥೆಯಾ?
ಯಾರ ಸಂತೋಷಕ್ಕೆ ಹಿಡಿದು ತಂದರೋ ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯಾ?


-ಕವಿ ಎಸ್.ಎಸ್.ಮಸಳಿಯವರ ಈ ಕವನವನ್ನು ಅರ್ಥೈಸಿಕೊಂಡು ನಾವು ಅತ್ತ ದಿನಗಳು ಹಲವು; ಇಂದಿಗೂ ಬಂಧಿತ ಹಕ್ಕಿಗಳನ್ನು ಕಂಡಾಗ ಅವರ ಈ ಹಾಡು ನೆನಪಿಗೆ ಬರುತ್ತದೆ.  ತನ್ನ ಸುಖಕ್ಕಾಗಿ ಮನುಷ್ಯ ಏನೆಲ್ಲವನ್ನೂ ಮಾಡುತ್ತಾನೆ ಎಂಬುದನ್ನು ಗ್ರಹಿಸಿದಾಗ ಮನುಷ್ಯನೆಷ್ಟು ಕ್ರೂರಿ ಎಂಬುದು ಗೊತ್ತಾಗುತ್ತದೆ. ಅಧುನಿಕತೆಯ ದಾಪುಗಾಲಿನ ಭರಕ್ಕೆ ನಲುಗಿದ ಹಳ್ಳಿಗಳಲ್ಲೂ ಸಹ  ಮೊಬೈಲ್  ಟವರ್ ಗಳು ತಲೆಯೆತ್ತಿವೆ, ಹಳೆಯ ಮರಗಳು ಕಡಿಯಲ್ಪಟ್ಟಿವೆ. ಹಕ್ಕಿಗಳ ಸಂತತಿ ಕ್ಷೀಣಿಸುತ್ತಿದೆ. ದೇಸೀ ಗೋವುಗಳೂ ಸಹ ಮಾಯವಾಗುತ್ತಿವೆ. ಮಲೆನಾದಿನ ತನ್ನ ಬಾಲ್ಯದ ಪರಿಸರದಲ್ಲಿ ತಾನು ಕಂಡುಂಡು ಸುಖಿಸಿದ ಸುಂದರ ದೃಶ್ಯಗಳನ್ನು ಕುರಿತು ಕವಿ ಕುವೆಂಪು ಹೀಗೆ ಬರೆಯುತ್ತಾರೆ:


ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ

ಬಾಲ್ಯ ಸುಖವಾಗಿರುವುದಕ್ಕೆ, ನೆಮ್ಮದಿಯಾಗಿರುವುದಕ್ಕೆ, ನೈಸರ್ಗಿಕವಾಗಿರುವುದಕ್ಕೆ ಪಡೆದುಬಂದಿರಬೇಕು. ಸುದೈವ ವಶಾತ್ ನನ್ನ ಬಾಲ್ಯದಲ್ಲಿ ನನಗೆ ನಿಸರ್ಗ ಸೌಂದರ್ಯದ ಕೊರತೆ ಕಾಡಲಿಲ್ಲ. ಕುವೆಂಪು ಅವರು ವರ್ಣಿಸಿದ ಪರಿಸರವೇ ಹೆಚ್ಚುಕಡಿಮೆ ನಮ್ಮದಾಗಿತ್ತು. ನಾವು ಹಳ್ಳಿಗಳಲ್ಲಿ ನಿಸರ್ಗದೊಂದಿಗೆ ಮತ್ತು ಅಲ್ಲಿನ ಕೃಷಿ-ಕೃಷಿಯೇತರ ಕೆಲಸಗಾರರೊಂದಿಗೆ ಬೆರೆತು-ಕಲೆತು-ಮಿಳಿತು ಕಲಿತ ಪಾಠಗಳೇ ನಮ್ಮ ಜೀವನದ ನಿಜವಾದ ಪಾಠಗಳು ಎನ್ನಬಹುದು. ಚೊಂಯ ಪಟ್ಕ ಚೊಂಯ ಪಟ್ಕ ಚೊಂಯ ಪಟ್ಕ  ಎಂದು ಉಜ್ಜಿತೆಗೆದ ಕೂಪಿನ ಹೆರೆಯುವಿಕೆಗೆ ತಲೆಯೊಡ್ಡಿ ಕಲ್ಲಮೇಲೆ ಕುಳಿತು ಕೂದಲು ಕತ್ತರಿಸಿಕೊಂಡವರು ನಾವು. ಇದ್ದಿಲು+ಉಮಿ ಸೇರಿಸಿ ಮಾಡಿಟ್ಟ ಪುಡಿಯಿಂದ ಹಲ್ಲುಜ್ಜುತ್ತಿದ್ದ ಮತ್ತು ಹಲ್ಲನ್ನು ಚೆನ್ನಾಗಿಯೇ ಇಟ್ಟುಕೊಂಡಿದ್ದ ಜನರನ್ನು ಕಂಡವರು ನಾವು. ಗೋಪರೊಡನೆ ಗೋಪರಾಗಿ ತಿಮ್ಮರೊಡನೆ ತಿಮ್ಮರಾಗಿ ನಿಸರ್ಗದಮ್ಮನ ಕೆಚ್ಚಲ ಹಾಲನ್ನು ನೇರವಾಗಿಯೇ ಹೀರಿದವರು. ಹಲವು ಹಸು-ಕರುಗಳನ್ನು ಸ್ವತಃ ಮೇಯಿಸಿ, ಲಾಲನೆ-ಪಾಲನೆಮಾಡಿ, ಆಡಿಸಿ ಬೆಳೆದ ನನಗೆ ಇಂದಿನ ಹಳ್ಳಿಗಳು ಆ ವಿಷಯದಲ್ಲಿ ಬರಡಾಗಿ ಬಿಕೋ ಎಂದಂತೆನಿಸುತ್ತದೆ. 

ಅಂತಹ ನನ್ನ ಬಾಲ್ಯದಿಂದ ಕನ್ನಡದ ಅನೇಕ ಕವಿಗಳ ಕವನಗಳನ್ನು ಓದುತ್ತಲೇ ಬೆಳೆದವನು ನಾನು. ಬಾಲ್ಯದಲ್ಲಿ ಚೆನ್ನಾಗಿ ಹಾಡುತ್ತೇನೆಂದು ಶಹಭಾಸ್ಗಿರಿಯನ್ನೂ ಪಡೆದುಕೊಂಡಿದ್ದೆ. ನನ್ನ ಬಾಲ್ಯದ ಕಾಲ ನವೋದಯ ಕವಿಗಳ ಕಾಲ. ಹಾಗಿದ್ದರೂ ಇಂದಿನ ನವ್ಯ-ನವ್ಯೋತ್ತರ ಮತ್ತು ಪ್ರಗಾಥಗಳಂಥ ಆಘಾತಕಾರೀ ಕವನಗಳು ಅಂದಿರಲಿಲ್ಲ. ಛಂದಸ್ಸು-ಅಲಂಕಾರ ಇಲ್ಲದಿದ್ದರೂ ಕೊನೇ ಪಕ್ಷ ಕವನದಲ್ಲಿ ಪ್ರಾಸವಾದರೂ ಇರುತ್ತಿತ್ತು. ಅಂತಹ ನವೋದಯ ಕಾಲದಲ್ಲಿಯೇ ಕುವೆಂಪು, ಬೇಂದ್ರೆ, ಪುತಿನ, ಕಣವಿ ಮೊದಲಾದ ಕವಿಗಳ ಹಾಡುಗಳನ್ನು ಕೇಳುತ್ತಲೇ ಬೆಳೆದೆ. ಕವಿಗಳ ಸಾಲಿನಲ್ಲಿ ಒಬ್ಬೊಬ್ಬರದ್ದೂ ವಿಶಿಷ್ಟ ಅನುಭೂತಿಯನ್ನು ನೀಡುವ ಕವಿಶೈಲಿ. ಆದರೂ ಎಲ್ಲಾ ಕವಿಗಳ ನಡುವೆ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನಗಳು ಮಾತ್ರ ಸದಾ ನನ್ನನ್ನು ಸೆರೆಹಿಡಿದುಬಿಟ್ಟವು.

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?

ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು,
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ,
ನಿದ್ದೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು!

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ,
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ,
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ!

-ಜಗವನ್ನಾಳುವ ತಿಮ್ಮಪ್ಪನಿಗೂ ಮೂರು ನಾಮ ಹಾಕಿ ರಮಿಸ ಬಲ್ಲ ಇಂಥಾ ಸಾಹಿತ್ಯಕ್ಕೆ ಮನಸೋಲದ ಅರಸಿಕರುಂಟೇ?   

ಬಾಲ್ಯದಲ್ಲಿ ನಾನು ಓದಿದ ಅನೇಕ ಕವಿಗಳನ್ನು ಖುದ್ದಾಗಿ ನೋಡುವುದು ಸಾಧ್ಯವಿರಲಿಲ್ಲ; ಕಾಣದ ದೂರದಿಂದ ಕವನಿಸುವ ಕವಿಗಳೆಲ್ಲರ ಬಗೆಗೆ ಅಪಾರವಾದ ಗೌರವವಿತ್ತು. ಬೆಂಗಳೂರಿಗೆ ನಾನು ಬಂದ ನಂತರ ನಾನು ಓದಿದ್ದ ಕೆಲವು ಕವಿಗಳು ತಮ್ಮ ವೃದ್ಧಾಪ್ಯದಲ್ಲಿ ಇಲ್ಲಿಯೇ ಇದ್ದಾರೆ ಎಂಬುದು ತಿಳಿಯಿತು. ಆ ಪೈಕಿ ಕೆಲವರನ್ನು ನಾನು ಭೇಟಿ ಮಾಡಿದ್ದೇನೆ; ಸಾಕ್ಷಾತ್ ದರ್ಶನದಿಂದ ಅತೀವ ಸಂತೋಷ ಅನುಭವಿಸಿದ್ದೇನೆ. ಎರಡು ವರ್ಷಗಳ ಕೆಳಗೆ ಸಮಾರಂಭವೊಂದರಲ್ಲಿ ಎನ್.ಎಸ್.ಎಲ್ ಅವರನ್ನೂ ಮಾತನಾಡಿಸಿದೆ.   

ಇರುವೆ ಸರಿಯುವ ಸದ್ದು -ಎಂದು ನಾನು ಆರಂಭಿಸುತ್ತಿದ್ದಂತೆ ಮುಂದಿನ ಸಾಲುಗಳನ್ನು ಸ್ವತಃ ಅವರೇ ಹೇಳಿದರು. ಇಂತಹ ಸಾಲುಗಳಲ್ಲಿ ಕವಿ ಪರಕಾಯ ಪ್ರವೇಶಮಾಡುತ್ತಾನೆ. ಭಟ್ಟರು ಸೃಷ್ಟಿಸಿದ ರಾಧೆಯ ಪ್ರತಿಮೆಯಲ್ಲಿ ಎಂತಹ ಭಾವೋತ್ಕಟತೆ ಇದೆಯೆಂದರೆ, ತನ್ನ ನಲ್ಲ ಕೃಷ್ಣ ಎಷ್ಟೆಲ್ಲಾ ಸಮರ್ಥ ಎಂಬುದನ್ನು ತಿಳಿಸುವ ಆಕೆ ತನ್ನನ್ನು ಮಾತ್ರ ಕೇಳನಲ್ಲಾ ಎಂದು ಸಮಸ್ಯೆ ಹೇಳಿಕೊಳ್ಳುತ್ತಾಳೆ. ಹಾಗಂತ ಅದು ಆಕ್ಷೇಪವೇನೂ ಅಲ್ಲ, ತನ್ನನ್ನು ನೇರವಾಗಿ ಆಲಿಸದಿದೆಯೂ   ತನ್ನೊಳಗನ್ನು ಅರಿಯಬಲ್ಲ ಗಂಡನ ಬಗ್ಗೆ ಆಕೆಗೆ ಹೆಮ್ಮೆಯಿದೆ. ಭವಬಂಧನದಿಂದ ಮುಕ್ತಿಯನ್ನು ಕರುಣಿಸಬಲ್ಲ ಅಸಾಮಾನ್ಯನ ನಲ್ಲೆಯಾಗಿರುವ ಈ ಗೋಪಿಕೆ ಬಣ್ಣಿಸುವ ವೈಖರಿಯನ್ನೊಮ್ಮೆ ನೋಡಿ:

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು


-ಇಂತಹ ಕವನಗಳು ನೇರವಾಗಿ ಎದೆಯಲ್ಲಿ ಜಾಗ ಗಿಟ್ಟಿಸಿಕೊಂಡುಬಿಡುತ್ತವೆ. ಈ ಹಿಂದೆ ಲೇಖಕ ಚೇತನ್ ಭಗತ್ ಅವರ ಕಾದಂಬರಿಯೊಂದರ ಬಗ್ಗೆ ಬರೆದಿದ್ದೆ. ಆರಂಭಿಕ ಒಂಬತ್ತು ವರ್ಷಗಳ ಕಾಲ ಅವರ ಬರಹಗಳನ್ನು ಪ್ರಕಟಿಸುವ ಪ್ರಕಾಶನಗಳು ಅವರಿಗೆ ಸಿಕ್ಕಿರಲಿಲ್ಲವಂತೆ. ಆಂಗ್ಲ ಭಾಷೆಯಲ್ಲಿ ಬರೆದ ಹೊತ್ತಗೆಗಳಾದರೂ ಸಹ ಪುಸ್ತಕ ಓದುವವರೇ ಇಲ್ಲ ಎನ್ನುತ್ತಿದ್ದರಂತೆ ಪ್ರಕಾಶಕರು. ಒಬ್ಬನಂತೂ "ಹಾಲಿವುಡ್ ಸಿನಿಮಾದವರಿಗೆ ಕೊಡಿ, ಯಶಸ್ವಿಯಾದರೆ ನಂತರ ಪುಸ್ತಕ ಮಾಡೋಣ" ಎಂದಿದ್ದನಂತೆ. ಇಂದು ಅವರ ಪುಸ್ತಕಗಳಿಗೆ ಇರುವ ಬೇಡಿಕೆ ನಿಮಗೆ ತಿಳಿದಿರಬಹುದು. ಕವಿ-ಸಾಹಿತಿಗಳಿಗೆ ತಮ್ಮದೇ ಅದ ಆಪ್ತ ಶೈಲಿ ಮತ್ತು ಇಷ್ಟದ ಕಥಾವಸ್ತುಗಳಿರುತ್ತವೆ. ಬರಹವೆಂಬುದು ಬರಹಗಾರನಿಗೆ ಕೇವಲ ವೃತ್ತಿಯಾಗದೇ ಅದು ಶಕ್ತಿಯೂ ಆಗಿದ್ದರೆ, ಆಗ ಮೈದಳೆಯುವ ಬರಹಗಳು ಸಶಕ್ತವಾಗಿರುತ್ತವೆ, ಸಮೃದ್ಧವಾಗಿರುತ್ತವೆ; ಓದುಗರಿಗೆ ಪುಷ್ಕಳ ಭೋಜನವನ್ನು ಒದಗಿಸುತ್ತವೆ. ಬರಹಗಾರನಾಗಿ ನಾನೂ ಸಹ ಚೇತನ್ ಭಗತ್ ಅವರು ಅನುಭವಿಸಿದ ಅನಾಮಿಕ ಸ್ಥಿತಿಯನ್ನು ಅನುಭವಿಸಿದ್ದೇನೆ; ಈಗ ಆ ಸ್ಥಿತಿಯಿಲ್ಲ, ಪುಸ್ತಕಗಳನ್ನು ಪ್ರಕಾಶಕರೇ ನೇರವಾಗಿ ಕೇಳಿ ಪಡೆಯುತ್ತಾರೆ. ಸಹೃದಯೀ ಓದುಗರೂ ಸಹ ಅಪಾರ ಸಂಖ್ಯೆಯಲ್ಲಿ ಬೆಳೆದು ನಿಂತಿದ್ದಾರೆ. ನಾನೆಲ್ಲೇ ಬರೆದರೂ ನನ್ನ ಜಾಡನ್ನು ಹಿಡಿದು ಓದುವ ಮಟ್ಟಕ್ಕೆ ಅಭಿಮಾನ ಹೊಂದಿದ್ದಾರೆ; ಎಲ್ಲೆಲ್ಲಿ ಬರೆಯುತ್ತೀರಿ ಎಂದು ಮಿಂಚಂಚೆ ಕಳಿಸಿ ಎಂದು ಕೋರಿಕೊಂಡವರೂ ಇದ್ದಾರೆ.  ಅವರೆಲ್ಲರಲ್ಲಿಯೂ ಸ್ಥಿತನಾಗಿರುವ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಈ ಕಾವ್ಯಾರಾಧನೆಯ ಒಡ್ಡೋಲಗ ಇಲ್ಲಿಗೇ ಮುಗಿಯುವುದಿಲ್ಲ, ಮೆಚ್ಚಿನ ಅನೇಕ ಕವಿಗಳನ್ನೂ ಸಂದರ್ಶಿಸಬೇಕೆಂಬ ಉತ್ಕಟೇಚ್ಛೆಯೊಂದು ಹಾಗೆಯೇ ಉಳಿದಿದೆ. ಕವಿ ಎನ್.ಎಸ್.ಎಲ್. ಅವರಲ್ಲಿ ನಿಮ್ಮನ್ನು ಕಾಣಬರುತ್ತೇನೆಂದಾಗ ಒಪ್ಪಿಗೆ ನೀಡಿದ್ದರು, ಅದಕ್ಕೆ ಸಮಯ ಸನ್ನಿಹಿತವಾಗುತ್ತಾ ಇದೆ ಎನಿಸುತ್ತದೆ. ಮತ್ತೊಮ್ಮೆ ಆಗ ಅವರ ಬಗೆಗೆ ಬರೆಯುತ್ತೇನೆ. ಮಧುರವಾದ ಅವರ ಹಾಡಿನೊಂದಿಗೆ ಇಂದಿನ ಲೇಖನ ಭಾಗವನ್ನು ಮುಗಿಸೋಣ, ನಮಸ್ಕಾರ.    


No comments:

Post a Comment