ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 18, 2014

ಹಣತೆಯೆನ್ನದಲ್ಲ ದೇವ



ಹಣತೆಯೆನ್ನದಲ್ಲ ದೇವ

ಹಣತೆಯೆನ್ನದಲ್ಲ ದೇವ ಬತ್ತಿಯಲ್ಲ ಎಣ್ಣೆಯಿಲ್ಲ
ಫಣತವೆಂದು ಕರೆದರೆನ್ನ ಕುಣಿತ ಕಂಡ ಹಲವರು
ಎಣಿಕೆಯಿಲ್ಲ ಬರೆದದೆಷ್ಟೊ ಕನಸು ಹರಿದ ನಿಜವದೆಷ್ಟೊ
ಕುಣಿಕೆಗಳನು ಸೇರಿಸೆಳೆವ ಸೂತ್ರಧಾರ ಓ ಪ್ರಭು

ತಿಣುಕಲಿಲ್ಲ ನಿನ್ನ ಕೃಪೆಯಿಂ ಮನಕೆ ಬಂದುದಾಯ್ತು ಬರಹ
ವಣಿಕನಾನು ಹೊತ್ತಗೆಗಳ ಹೊತ್ತು, ಹೊತ್ತು-ಹೊತ್ತಿಗೆ
ಸಣಕಲಾದ ಮನದ ಮನೆಯೊಳಿಣುಕಿ ತೆಗೆದ ಭಾವಗಳನು
ಗಣಿಕೆಯೊರೆದು ತೆರೆದು ಇಟ್ಟೆ ಲೋಕಮುಖಕೆ ಅರ್ಪಿಸಿ 

ಪಣಕೆ ಒಡ್ಡಲಾರೆ ಭಾಷ್ಯ ಸೂತ್ರಕಾರನೆನ್ನಲಾರೆ
ಚುಣುಕು ರಾಗ-ತಾಳದಲ್ಲಿ ನುಡಿವೆ ತನನ ತೋಂ ತನ
ಸೊಣಕು ಸೊಗಡು ನೆಲ-ಜಲಗಳ ದೇಶ-ಕೋಶ ಪರಿವೆಯಿರದ
ಮಿಣುಕು ಹುಳದ ತೆರದಿ ಹಾರಿ-ಹರೆವೆನಷ್ಟು ಭರದಲಿ!

ಕಣಕ-ಹೂರಣಗಳನರಿಯೆ ಕಣಿಕೆಯೆತ್ತಿ ಕೊಣಕುತಿರುವೆ
ಕುಣುಕು ಬಹಳವಿದೆಯದೆಂದು ಹೇಳಲಾರೆ ನಿನ್ನೊಳು
ಗಣಕ-ಗುಣಕವೆಲ್ಲ ನಿನದು ಅಣಕವಾಡ ಬೇಡ ದೊರೆಯೆ
ಇನಕುಲೇಂದ್ರ ಮಣಿದು ಮುಗಿವೆ ಚಣಚಣದಲು ಚರಣಕೆ

No comments:

Post a Comment