ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 15, 2013

ದೀಪಂ ದೇವ ದಯಾನಿಧೇ-೭


ದೀಪಂ ದೇವ ದಯಾನಿಧೇ-೭

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.


 ತೇಜೋಮಯಂ ದಿವ್ಯಮಮೇಯಶಕ್ತಿಂ ಸನಾತನಂ ಶಾಂತಮನಾಮಯಂಚ
ಅದ್ವೈತಮಾಶ್ಚರ್ಯಮಚಿಂತ್ಯರೂಪಂ ಪರಾತ್ಪರಂ ನಿತ್ಯಮನಂತಮಾದ್ಯಂ |
ಜ್ಞಾನಪ್ರಕಾಶೇನ ವಿಶುದ್ಧಸತ್ತ್ವೋ ಯಂ ಪಶ್ಯತಿ ಸ್ವಾತ್ಮನಿ ಚಿಂತ್ಯಮಾನಂ
ಶ್ರೀಸೌಮ್ಯಕಾಶೀಶ ಮಹೇಶ್ವರಾಯ ತಸ್ಮೈ ನಮಃ ಸ್ವಾಮಿ ತಪೋವನಾಯ ||


ಕಾಶಿ  ಅತ್ಯಂತ ಪ್ರಾಚೀನ ಪಟ್ಟಣ ಮತ್ತು ಹಿಂದೂ ಜನಾಂಗಕ್ಕೆ ಅದು ಅತ್ಯಂತ ಪವಿತ್ರ ಕ್ಷೇತ್ರ. ಹಿಂದೂ ಧರ್ಮದ ಕೇಂದ್ರಸ್ಥಾನವೇ ಕಾಶಿ ಎಂದರೆ ತಪ್ಪಾಗಲಾರದು. ವರುಣಾ ಮತ್ತು ಅಸಿ ಎಂಬೆರಡು ಪುಣ್ಯನದಿಗಳ ಮಧ್ಯದ ಈ ಭಾಗವನ್ನು ವಾರಣಾಸಿ ಅಥವಾ ವಾರಾಣಸಿ ಎಂತಲೂ ಕರೆಯುತ್ತಾರೆ. ಬನಾರ ಎಂಬ ಅರಸ ಹಿಂದಕ್ಕೆ ರಾಜ್ಯವಾಳುತ್ತಿದ್ದುದರಿಂದ ಬನಾರಸ್ ಎಂದೂ ಕರೆಯಲ್ಪಟ್ಟಿದೆ. ಸಕಲಪಾಪಗಳನ್ನೂ ತೊಳೆಯುವ ಗಂಗಾನದಿಯ ದಡದಮೇಲೆ ಕಾಶಿಯಿದೆ. ವಿಶ್ವಕ್ಕೇ ನಾಥನಾದ ವಿಶ್ವನಾಥನ ಜೊತೆ ಆತನ ಸಹಧರ್ಮಿಣಿ ವಿಶಾಲಾಕ್ಷಿ ಕೂಡ ನೆಲೆಸಿದ ಈ ಪುಣ್ಯಧಾಮ ಅನಾದಿಯಿಂದಲೂ ಘಟಾನುಘಟೀ ವಿದ್ವನ್ಮಣಿಗಳು, ಪಂಡಿತ ಶ್ರೇಷ್ಠರು, ಮಹಾಮಹೋಪಾಧ್ಯಾಯರು ನೆಲೆಸಿರುವ ನೆಲೆವೀಡು. ದುರ್ಲಭವಾದ ಸನಾತನ ವಿದ್ಯೆಗಳನ್ನು ಪಡೆಯುವ ಗಮ್ಯಸ್ಥಾನವೆಂದರೆ ಇದೊಂದೇ ಎಂಬುದು ಇಂದಿಗೂ ಸತ್ಯ. ದೇವಗಂಗೆ ಭಾಗೀರಥಿಯುದ್ದಕ್ಕೂ ಇಲ್ಲಿ ಹಲವಾರು ಸ್ನಾನ ಘಾಟ್[ಘಟ್ಟ]ಗಳಿವೆ. ಸಾವಿರದೋಪಾದಿಯ ಸಗರಸಂತತಿ ವಿನಾಶವಾದಾಗ ಅವರೆಲ್ಲರ ಸ್ವರ್ಗಪ್ರಾಪ್ತಿಗೆ, ಶಾಂತಿಗೆ ಬೇಕಾಗಿ ಸೂರ್ಯವಂಶ ಸಂಜಾತ-ಶ್ರೀರಾಮ ಪೂರ್ವಜ-ರಾಜರ್ಷಿ ಭಗೀರಥ ಘೋರ ತಪಸ್ಸನ್ನು ಮಾಡಿ, ಹರಿಯಪದದಿಂದ ಹರಿದು ಬರಿಸಿದ ದಿವ್ಯನದಿಯೇ ಭಾಗೀರಥಿ. 

ಹರಿಪಾದನಖದಿಂದ
ಹರಿದುಬಂದಳೆ ಗಂಗಾ
ಪರಮಪುರುಷ ಸಂಗ
ವರವನ್ನೆ ಕೊಡು ತುಂಗಾ

ಭಾಗ್ಯವ ಕೊಡೆ ಗರತಿ ಭಾಗೀರಥಿ.....

ಎಂಬ ಭಜನೆಯೊಂದು ನೆನಪಿಗೆ ಬರುತ್ತಿದೆ. ಹಿಂದೂಗಳಲ್ಲಿ ಅದರಲ್ಲೂ ಬ್ರಾಹ್ಮಣರಾದವರಲ್ಲಿ ಸುಳ್ಳಿಗೆ ಅವಕಾಶವಿರಲಿಲ್ಲ. ಸುಳ್ಳು ಹೇಳುವುದೂ ಇನ್ನೊಬ್ಬನನ್ನು ವಧಿಸುವುದೂ ಒಂದೇ ಮಟ್ಟದ ತಪ್ಪೆಂಬ ಮೌಲ್ಯ ಅಂದಿನಕಾಲಕ್ಕಿತ್ತು. ಯಾರೂ ಸುಳ್ಳಾಡುತ್ತಿರಲಿಲ್ಲ. ಆದರೆ ಜನರಿಗೆ ಅದರಲ್ಲೂ ದ್ವಿಜರಿಗೆ ಒಂದು ಸುಳ್ಳನ್ನು ಮಾತ್ರ ಹೇಳಲು ಅವಕಾಶವಿತ್ತು-ಈಗಲೂ ಇದೆ; ಈ ಸುಳ್ಳನ್ನು ಹೇಳಲೇಬೇಕೆಂಬ ಆಗ್ರಹಕೂಡ ಇತ್ತು, ಯಾಕೆಂದರೆ ಕಾಡುಮೇಡುಗಳೇ ತುಂಬಿ ಸಮೃದ್ಧವಾಗಿದ್ದ ಅಂದಿನ ಭಾರತದಲ್ಲಿ, ದುರ್ಗಮದ ಹಾದಿಯಲ್ಲಿ ಕಾಶೀಯಾತ್ರೆ ಎಂಬುದು ಸುಲಭವಾಗಿರಲಿಲ್ಲ. ಇಂದಿಗೂ ಮದುವೆಗೆ ಮುನ್ನ ಕಾಶೀಯಾತ್ರೆಗೆ ಹೊರಡುವ ಒಂದು ಸಾಂಕೇತಿಕ ಕ್ರಮ ರೂಢಿಯಲ್ಲಿದೆ. ಅಂದಿನ ಆರ್ಥಿಕ ಸ್ಥಿತಿಯಲ್ಲಿ ಎಲ್ಲರಿಗೂ ಹೋಗಿ ಬರಲು ಸಾಧ್ಯವಾಗುತ್ತಲೂ ಇರಲಿಲ್ಲ. ಕಾಶಿಗೆ ಹೋಗುವಮುನ್ನವೇ ತಿಂಗಳಾನುಗಟ್ಟಲೆ ತಯಾರಿ ನಡೆಯುತ್ತಿತ್ತು, ಮಕ್ಕಳ ಮುಂಜಿ-ಮದುವೆ ಕರ್ತವ್ಯಗಳನ್ನು ಪೂರೈಸಿ, ಗಂಡುಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನೆಲ್ಲಾ ವಹಿಸಿ, ಇನ್ನೇನು ಮರಳಿ ಬಂದರೂ ಸರಿ, ಬಿಟ್ಟರೂ ಸರಿ ಎಂಬ ಧೋರಣೆಯಲ್ಲೇ ಕಾಶಿಗೆ ತೆರಳುತ್ತಿದ್ದರು; ಕಾಶಿಗೆ ಹೋಗಿ ಮರಳಿಬಂದವರಿಗೆ ಇಂದಿನ ’ಫಾರಿನ್ ರಿಟರ್ನ್ಡ್’ ವೈದ್ಯರಿಗಿಂತ ಹೆಚ್ಚಿನ ಗೌರವ ದೊರೆಯುತ್ತಿತ್ತು. ಗ್ರಾಮದಹೊರಗೆ ಸರಿದೂರದಲ್ಲಿ ಸ್ವಾಗತಕಮಾನು-ತೋರಣ ನಿರ್ಮಿಸಿ ವೇದಘೋಷ, ಪೂರ್ಣಕುಂಭ, ಮಂಗಲವಾದ್ಯಗಳ ಸಮೇತ ಅವರನ್ನು ಎದುರ್ಗೊಂಡು, ಗ್ರಾಮಕ್ಕೆ ಕರೆತರಲಾಗುತ್ತಿತ್ತು. ಅವರು ಕುಂಭಗಳಲ್ಲಿ ತುಂಬಿಸಿಕೊಂಡ ಬಂದ ದೇವಗಂಗೆಯನ್ನು ವಿಧಿವತ್ತಾಗಿ ಗೌರವಿಸಿ, ಪೂಜಿಸಲಾಗುತ್ತಿತ್ತು. ಮನೆಗೆ ಮರಳಿದ ದಿನಗಳೆರಡರಲ್ಲಿ ’ಕಾಶೀದೇವಕಾರ್ಯ’ ಅಥವಾ ಕಾಶೀಸಮಾರಾಧನೆ ನಡೆಸಿ ಗ್ರಾಮದ ಜನರಿಗೆ ಅವರು ಮೃಷ್ಟಾನ್ನ ಭೋಜನವನ್ನು ನೀಡುತ್ತಿದ್ದರು. ಸತ್ಯಕ್ಕಾಗಿ ತನ್ನನ್ನೇ ಮಾರಿಕೊಂಡ ರಾಜಾ ಹರಿಶ್ಚಂದ್ರನ ಕೆಲಕಾಲದ ಕಾರ್ಯಸ್ಥಾನವನ್ನೊಳಗೊಂಡ ಕಾಶಿಗೆ ಅಷ್ಟೊಂದು ಮಹತ್ತು. ಹಾಗಾದರೆ ಯಾವ ಸುಳ್ಳನ್ನು ನಾವು ಹೇಳಬಹುದಿತ್ತು ಅಥವಾ ಹೇಳಬಹುದು ಎಂದರೆ:


ಅಹಂ ಕಾಶೀ ಗಮಿಶ್ಯಾಮಿ ಗಂಗಾಸ್ನಾನಂ ಕರೋಮ್ಯಹಮ್ |
ಕರೋಮಿ ವಿಶ್ವನಾಥಸ್ಯ ದರ್ಶನಂ ಮುಕ್ತಿ ಹೇತವೇ ||   

ಪ್ರತೀ ಮುಂಜಾವಿನಲ್ಲಿ ಪ್ರಾತಸ್ಮರಣೆಗೈಯ್ಯಬೇಕು, ಆಗ ಆ ನಡುವೆ ಒಮ್ಮೆ "ನಾನು ಕಾಶಿಗೆ ಹೋಗುತ್ತೇನೆ-ಗಂಗಾಸ್ನಾನ ಮಾಡಿ ಒಡೆಯ ವಿಶ್ವನಾಥನನ್ನು ದರ್ಶಿಸುತ್ತೇನೆ"- ಎಂದು ಹೇಳಬೇಕಂತೆ. ಆ ಆಸೆ ಪೂರ್ಣವಾಗಲಿ ಬಿಡಲಿ, ಹಾಗೊಂದು ಪುಣ್ಯಸಂಕಲ್ಪ ಮನಸ್ಸಿನಲ್ಲಿ ಉದ್ಭವಿಸಬೇಕು ಎಂಬ ಉದ್ದೇಶದಿಂದ ಅದನ್ನು ಪಠಿಸಲು ಹೇಳುತ್ತಿದ್ದರು.

ಇಂಥಾ ಪುಣ್ಯಭೂಮಿ ಕಾಶಿಯಲ್ಲಿನ ಮಣಿಕರ್ಣಿಕಾ ಘಾಟ್ ನಲ್ಲಿ ಆದಿಶಂಕರರು ಉಳಿದುಕೊಂಡಿದ್ದರು. ನಿತ್ಯವೂ ಗಂಗೆಯಲ್ಲಿ ಸ್ನಾನ, ಸ್ವಾಮಿ ವಿಶ್ವನಾಥನ ದರ್ಶನ, ಅನ್ನಪೂರ್ಣೇಶ್ವರಿಯ ಸೇವೆ, ಸಮಯದ ಹೆಚ್ಚಿನ ಭಾಗ ಧ್ಯಾನ-ತಪಸ್ಸಿಗೆ ಮೀಸಲು, ಮಿಕ್ಕುಳಿದ ಸಮಯದಲ್ಲಿ ವೇದಾಂತಸಾರವನ್ನು ಬೋಧಿಸುವ ಕೆಲಸ-ಹೀಗೆ ಅವರ ದಿನಚರಿ ಸಾಗಿತ್ತು. ಕಾಶಿಯನ್ನು ಸೇರಿದ ಪ್ರಥಮದಲ್ಲೇ ಅನ್ನಪೂರ್ಣೇಶ್ವರಿಯನ್ನು ಕಾಣುವ ಹಂಬಲ ಶಂಕರರಿಗಾಯ್ತು-ಆಕೆ ಕಾಶೀಪುರಾಧೀಶ್ವರಿ. ಹಾಗೆ ಅನ್ನಪೂರ್ಣೆಯ ಮುಂದೆ ಅವರು ಹೋಗಿ ತಲೆಬಾಗಿ ನಿಂತಾಗ ಅವರಿಗೆ ದಿವ್ಯಾನುಭವವಾಯ್ತು.

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

ನಾನಾರತ್ನ-ವಿಚಿತ್ರ-ಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜ-ಕುಂಭಾಂತರೀ |
ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

ಚಿತ್ರವಿಚಿತ್ರ ವೇಷಗಳನ್ನು ಧರಿಸಿದಂತೇ, ನಾನಾವಿಧದ ಬಂಗಾರದ ಆಭರಣಗಳನ್ನು ತೊಟ್ಟಂತೇ, ಪಾತಕಿಗಳನ್ನು ವಧಿಸಿದ ಮಹಾಕಾಳಿಯಂತೇ, ಮೂರುಲೋಕಗಳನ್ನು ರಕ್ಷಿಸಿದ ಮಾಹಾಮಾತೆಯಂತೇ ಆಕೆಯ ರೂಪ ಗೋಚರವಾಯ್ತು. ಶಂಕರರ ಅರಿವಿಗೇ ಇರದಂತೇ, ಹೃದ್ಗತವಾದ ಸ್ತೋತ್ರವೊಂದು ಅವರ ಬಾಯಿಂದ ಹೊರಹೊಮ್ಮಿತು.

ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ||

ಮಾತಾ ಚ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ |
ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ ||

[ಮಾನವತಾವಾದದ ಕುರಿತು ಯಾರೋ ಒಬ್ಬಿಬ್ಬರು ಒಂದೆರಡು ಮಾತುಗಳನ್ನು ಆಡಿಬಿಟ್ಟರೆ ಅವರನ್ನೇ ’ಮಹಾನ್ ಮಾನವತಾವಾದಿ’ ಎಂದು ತಿಳಿದುಬಿಡುತ್ತೇವೆ, ಹಾಗೆ ಕರೆದು ಗೌರವಿಸುತ್ತೇವೆ. ಆದರೆ ಮೂರುಲೋಕಗಳೂ ಸಹಿತ ನನ್ನದೇಶವೇ, ಎಲ್ಲರೂ ನನ್ನವರೇ ಎಂದ ಶಂಕರರ ಉಕ್ತಿ ಹಲವರಿಗೆ ಕಾಣದಲ್ಲಾ? ]

"ಕೇವಲ ಜ್ಞಾನವೈರಾಗ್ಯ ಸಿದ್ಧಿಗಾಗಿ ಈ ಶರೀರ ನಶಿಸದಂತೇ ಕೆಲಕಾಲ ಉಳಿಯಲು ಭಿಕ್ಷೆಯನ್ನು ನೀಡು ತಾಯಿ" ಎಂದು ದೇವಿ ಅನ್ನಪೂರ್ಣೆಯಲ್ಲಿ ಶಂಕರರು ಪ್ರಾರ್ಥಿಸಿದರು. ಶಂಕರರು ಭಾವಪೂರ್ಣವಾಗಿ ಈ ಸ್ತೋತ್ರವನ್ನು ಉದ್ಗರಿಸಿದಾಗ ಅವರೊಬ್ಬ ಮಹಾನ್ ತೇಜಸ್ವಿಯಂತೇ ಸುತ್ತ ನೆರೆದ ಭಕ್ತಭಾವುಕರಿಗೆ ಭಾಸವಾಯ್ತು; ಶಂಕರು ನಡೆದೆಡೆಗೆಲ್ಲಾ ಅನೇಕರು ಅವರನ್ನು ಹಿಂಬಾಲಿಸಿದರು, ನಿತ್ಯವೂ ಅವರ ಪ್ರವಚನಗಳನ್ನು ಅನೇಕರು ಆಲಿಸಿದರು. ಬಾಲಸನ್ಯಾಸಿಯ ಮಾತುಗಳನ್ನು ಕೇಳಲು ಅಬಾಲವೃದ್ಧರಾದಿಯಾಗಿ ಹಲವರು ಸೇರುತ್ತಿದ್ದರು. ಅವರ ಸನ್ನಿಧಿಯಲ್ಲಿ ಅನೇಕರಿಗೆ ಅತ್ಯಂತ ಶಾಂತಿ ಲಭಿಸುತ್ತಿತ್ತು. ದಿನಗಳೆದಂತೇ ಶಂಕರರು ಕಾಶೀ ಪಟ್ಟಣದಲ್ಲಿ ಮನೆಮಾತಾದರು; ಅವರ ಸುದ್ದಿ ಅಷ್ಟು ವ್ಯಾಪಕವಾಯ್ತು, ಯಾರ ಬಾಯಲ್ಲಿ ಕೇಳಿದರೂ ಬಾಲಸನ್ಯಾಸಿಯ ಬಗ್ಗೆ ಹೇಳುವವರೇ!  

ಹೀಗಿರುತ್ತಲೊಮ್ಮೆ, ಅತ್ಮಾಜ್ಞಾನಾಕಾಂಕ್ಷಿಯಾದ ಹುಡುಗನೊಬ್ಬ ಚೋಳದೇಶದ ಕಾವೇರಿತಟದಿಂದ ಗುರುಗಳ ಶೋಧದಲ್ಲಿ ಕಾಶಿಗೆ ಬಂದನು. ಬಾಲಸನ್ಯಾಸಿಯ ಕುರಿತು ಯಾರೋ ಆತನಿಗೆ ಸುದ್ದಿ ತಿಳಿಸಿದರು. ಶೀಘ್ರಾತಿಶೀಘ್ರವಾಗಿ ಶಂಕರರನ್ನು ಹುಡುಕಿಬಂದ ಆ ಬಾಲಕ ಶಂಕರರಿಗೆ ಸಾಷ್ಟಾಂಗವೆರಗಿದನು. ವಿದ್ಯೆಕಲಿಯುವುದರಲ್ಲಿ ಆತನಿಗೆ ಅತ್ಯಂತ ಶ್ರದ್ಧೆ, ಸಾಕಷ್ಟು ಓದಿಕೊಂಡಿದ್ದ ಕೂಡ. ಆತನಲ್ಲಿನ ಪರಮವಿರಕ್ತ ಭಾವವನ್ನು ಗ್ರಹಿಸಿದ ಶಂಕರರು ದಿವ್ಯದೃಷ್ಟಿಯಿಂದ ಆತನ ಹಿನ್ನೆಲೆಯನ್ನರಿತರು, ಶುಭದಿನದ ಶುಭಮುಹೂರ್ತವೊಂದರಲ್ಲಿ ಆತನಿಗೆ ಸಂನ್ಯಾಸದೀಕ್ಷೆ ನೀಡಿ ’ ಸನಂದನ’ ಎಂದು ಹೆಸರಿಸಿದರು. ಸನಂದನರು ಶಂಕರರ ಪ್ರಥಮಶಿಷ್ಯರೆನಿಸಿದರು. ಅದ್ವೈತ ಸಿದ್ಧಾಂತವನ್ನು ಸನಂದನರು ಚೆನ್ನಾಗಿ ಅರ್ಥಮಾಡಿಕೊಂಡು ಗುರುಸೇವೆಯಲ್ಲಿ ಸದಾ ತೊಡಗಿರುತ್ತಾ ಅವರ ಅನುಗ್ರಹಕ್ಕೆ ಪಾತ್ರರಾದರು. ಸನಂದನರು ಹಲವಾರು ಗ್ರಂಥಗಳನ್ನು ವಿಮರ್ಶಿಸಿದ್ದಾರೆ. ಬ್ರಹ್ಮಸೂತ್ರ ಭಾಷ್ಯವನ್ನು ಶಂಕರರು ಬರೆದಾಗ ಅದಕ್ಕೆ ವಿವರಣೆಯನ್ನು ಇದೇ ಸನಂದನರು ಬರೆದರು.   

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ |
ಜೀವನ್ಮುಕ್ತಸ್ತು ತದ್ವಿದ್ವಾನಿತಿ ವೇದಾಂತ ಡಿಂಡಿಮಃ  ||

ಬ್ರಹ್ಮವೇ ಸತ್ಯ. ಜಗತ್ತಿನಲ್ಲಿ ಕಾಣುವ ಸ್ಥಾವರಕ್ಕೆ, ಜಂಗಮಕ್ಕೆ, ಪ್ರಾಣಿವರ್ಗಕ್ಕೆ, ಜಡವಸ್ತುಗಳಿಗೆ ಎಲ್ಲದಕ್ಕೂ ಇದೊಂದೇ ಆತ್ಮ. ಈ ಜಗತ್ತು ತಾನು ತೋರುವ ರೂಪದಲ್ಲಿ ಸತ್ಯವಲ್ಲ. ಬ್ರಹ್ಮದಂತೆ ಜಗತ್ತು ಸತ್ಯವಲ್ಲವಾದುದರಿಂದ ಅದು ಮಿಥ್ಯೆ. ಈ ಜಗತ್ತಿನಲ್ಲಿ ಇರುವ ಸಮಸ್ತ ಜೀವಿಗಳೂ ಬ್ರಹ್ಮವೇ ಹೊರತು ಬೇರೆಯಲ್ಲ. ಆತ್ಮ ಪರಮಾತ್ಮರಿಗೆ ಭೇದವಿಲ್ಲ. ಎರಡೂ ಬೇರೆ ಬೇರೇ ಅಲ್ಲ. ಇದಕ್ಕೆ ನಾವು ಉದಾಹರಣೆಗಳನ್ನು ಹೀಗೆ ನೋಡಬಹುದಾಗಿದೆ:

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ || 

ಒಂದು ಪೂರ್ಣವಿತ್ತು-ಅದರಿಂದ ವಿಭಜನೆಗೊಂಡ ತುಣುಕುಗಳು ಹಲವು ಅಪೂರ್ಣವಾದರೂ ಮೂಲಮಾತ್ರ ಪೂರ್ಣವೇ, ಪರಿಪೂರ್ಣವೇ! ಮಣ್ಣಿನಿಂದ ಮಡಕೆ-ಕುಡಿಕೆ-ಬೋಗುಣಿ-ಮೊಗೆ-ಹಣತೆ-ತಾಟು ಮೊದಲಾದ ಪಾತ್ರೆಗಳನ್ನೋ ಅಲಂಕಾರಿಕ ವಸ್ತುಗಳನ್ನೋ ಸಿದ್ಧಪಡಿಸಲಾಗುತ್ತದೆ, ಆದರೆ ಅವುಗಳಲ್ಲೆಲ್ಲಾ ಇರುವುದು ಮಣ್ಣೇ ಮತ್ತು ಅವು ಒಡೆದು ಮಣ್ಣೊಳಗೆ ಮತ್ತೆ ವಿಲೀನವಾದಾಗ ಇರುವುದು ಮಣ್ಣೇ ಸರಿ. ಮಿಸುನಿಗೆ ಕೆಲವು ಲೋಹಗಳನ್ನು ಸೇರಿಸಿ ಕಾಯಿಸಿ ಎರಕಹೊಯ್ದು ಪುಟಕೊಟ್ಟಾಗ ಬಂಗಾರದ ವಿವಿಧ ಆಕಾರದ ಆಭರಣಗಳು ತಯಾರಾಗುತ್ತವೆ. ಬಳಸಿ ನೋಡುತ್ತ ಹಳಸಿ ಬೇಸರಗೊಂಡ ಆಭರಣಗಳನ್ನು ಕರಗಿಸಿದಾಗ ಬಂಗಾರವನ್ನೇ ಮರಳಿ ಪಡೆಯಬಹುದಾಗಿದೆ. ನೀರಿನ ಆಗರದಲ್ಲಿ ನೀರು ಪೂರ್ಣವಾಗಿದೆ, ತುಂಬಿಕೊಂಡ ಪಾತ್ರೆಯಲ್ಲಿ ಆ ಯಾ ಪಾತ್ರೆಯ ಆಕಾರವಾಗಿ ಗೋಚರಿಸುವ ನೀರಿಗೆ ಸ್ಪಷ್ಟವಾದ ಸ್ವತಂತ್ರ ಆಕಾರವಿಲ್ಲ! ತುಂಬಿಕೊಂಡ ನೀರನ್ನು ಮತ್ತೆ ಅದೇ ಮೂಲದಲ್ಲಿ ಚೆಲ್ಲಿದರೆ ಅದು ಅಲ್ಲಿರುವ ನೀರಿನಲ್ಲಿ ಸೇರಿಹೋಗುತ್ತದೆಯೇ ಹೊರತು ತಾನು ಬೇರೇ ಎಂದು ತೋರ್ಪಡಿಸುವುದಿಲ್ಲ. ಕನಸಿನಲ್ಲಿ ತಿರುಕನೊಬ್ಬ ರಾಜಕುವರಿಯನ್ನು ವರಿಸಿ ರಾಜನಾದದ್ದು ನಿಜ, ರಾಜಭೋಗವನ್ನು ಅನುಭವಿಸಿದ್ದು ನಿಜ, ಆದರೆ ಕನಸು ಮುಗಿದಾನಂತರ ತಾನು ರಾಜನೆಂದರೆ ದಾರಿಹೋಕರು ತಿರುಕನನ್ನು ಹುಚ್ಚನೆಂದು ಕಲ್ಲು ಹೊಡೆದಾರು! ಅಲ್ಲವೇ? ಈ ಪ್ರಪಂಚವೊಂದು ದೊಡ್ಡ ಕನಸು, ಗೊತ್ತಾಗುವ ವೇಳೆಗೆ ಕನಸು ಹರಿದಿರುತ್ತದೆ; ಜೀವನ ಮುಗಿದಿರುತ್ತದೆ!  

ಶಂಕರರ ವಾಗ್ಝರಿಯನ್ನು ಕೇಳಲು ಬಂದ ಜನರಿಗೆ ಅವರು ಹೇಳುತ್ತಿರುವ ವಿಷಯ ಸಂಪೂರ್ಣ ಮನದಟ್ಟಾಗುತ್ತಿತ್ತು. ಮಾಡುವ ಪ್ರತೀ ಕ್ರಿಯೆಯಲ್ಲೂ ಸೃಷ್ಟಿಯ ಪ್ರತೀ ಕೌತುಕದಲ್ಲೂ ಬ್ರಹ್ಮವನ್ನೇ ಅವರ್ರು ಕಂಡರು. ಶಂಕರರು ಎಲ್ಲವೂ ಬ್ರಹ್ಮಮಯ ಎಂದು ಹೇಳಲು ಕಾರಣವಿತ್ತು:

ಬ್ರಹ್ಮೈವೇದಮ್ ಅಮೃತಂ ಪುರಸ್ತಾತ್
ಬ್ರಹ್ಮಪಶ್ಚಾತ್ ಬ್ರಹ್ಮ ದಕ್ಷಿಣತಃ ಚೋತ್ತರೇಣ |
ಅಧಶ್ಚ ಊರ್ಧ್ವಂ ಚ ಪ್ರಸೃತಂ
ಬ್ರಹ್ಮೈವೇದಂ ವಿಶ್ವ ಮಿದಂವರಿಷ್ಠಮ್ ||

--ಬ್ರಹ್ಮದ ಕುರಿತು ಉಪನಿಷತ್ತು ಹೀಗೆ ಹೇಳಿದೆ. ಎದುರಿಗೆ ಕಾಣುವುದು, ಹಿಂದೆಕಾಣುವುದು, ಎಡಬಲಗಳಲ್ಲಿ ಕಾಣುವುದು, ಕೆಳಗೆ-ಮೇಲೆ ಎಲ್ಲೆಡೆಗೂ ಹರಡಿರುವುದೂ ಉತ್ತರದಕ್ಷಿಣಗಳ ಕಡೆಗಿರುವುದೂ ನಾಶರಹಿತವಾದ ಬ್ರಹ್ಮವೇ. ಚರಾಚರಾತ್ಮಕವಾದ ಜಗತ್ತಿನಲ್ಲಿರುವುದೆಲ್ಲ ಬ್ರಹ್ಮವೇ. ಎಂದಮೇಲೆ ಬ್ರಹ್ಮಮಾತ್ರ ಸತ್ಯ. 

ಒಂದು ದಿನ ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಚಾಂಡಾಲನೊಬ್ಬ ನಾಲ್ಕು ನಾಯಿಗಳನ್ನು ಹಿಡಿದುಕೊಂಡು ದಾರಿಗಡ್ಡಲಾಗಿ ಬಂದ. "ದೂರಹೋಗು ನಾನು ಸ್ನಾನಾಮಾಡಿ ಮಡಿಯಲ್ಲಿ ಬಂದಿದ್ದೇನೆ ದಾರಿ ಕೊಡೆ"ಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಆತನ ಸ್ಪರ್ಶವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ?  ನೀನು ಜ್ಞಾನಿ ಎಂದು ತಿಳಿದಿದ್ದೇನೆ, ಹೇಳು ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ಏಕಕಾಲಕ್ಕೇ ಆಶ್ಚರ್ಯವನ್ನೂ ಅವಮಾನವನ್ನೂ ಅನುಭವಿಸಿದ ಶಂಕರರು  ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು! 

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ-ಪಿಪೀಲಿಕಾಂತ-ತನುಷು ಪ್ರೋತಾ ಜಗತ್ಸಾಕ್ಷಿಣೇ |
ಸೈವಾಹಂ ನ ಚ ದೃಶ್ಯ ವಸ್ತ್ವಿತಿ ದೃಢಾಪ್ರಜ್ಞಾಪಿ ಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರ ವಿಸ್ತಾರಿತಂ
ಸರ್ವಂ ಚೈತದವಿದ್ಯಯಾ ತ್ರಿಗುಣಯಾಶೇಷ ಮಯಾ ಕಲ್ಪಿತಮ್ |
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

[ಬರಹ ಬಹಳ ದೀರ್ಘವಾಗುವುದನ್ನು ತಪ್ಪಿಸಲು ಸ್ತೋತ್ರಗಳ ಕೆಲವು ಭಾಗಗಳನ್ನು ಮಾತ್ರ ನಮೂದಿಸಿದ್ದೇನೆ.]  ಹೀಗೇ ಅಸ್ಪೃಶ್ಯತೆಯನ್ನು ಅಂದಿಗೇ ಸಲ್ಲವೆಂದವರು ಶಂಕರರು. ಸಹಸ್ರಮಾನ ಕಳೆದಮೇಲೆ ಗಾಂಧೀಜಿಯೋ ಇನ್ಯಾರೋ ಹೇಳಿದ್ದರೆ ಅವರು ಶಂಕರರ ಆದರ್ಶವನ್ನೇ ಬಳಸಿಕೊಂಡರು ಎಂದು ತಿಳಿಯಬೇಕಾಗಿದೆ. ಶಂಕರರ ಜೀವನದ ಅರೆಘಳಿಗೆಯೂ ವ್ಯರ್ಥವಾಗಲಿಲ್ಲ. ಅಲ್ಲಿ ಮಾನವ ಸಹಜ ಅನುಭವ ಮತ್ತು ಅನುಭಾವ ಕಂಡುಬರುತ್ತದೆ. ಮಾನವೀಯತೆಗಾಗಿ ಮತ್ತು ಸನಾತನ ಜೀವನಧರ್ಮದ ಉದಾತ್ತ ತತ್ತ್ವಗಳನ್ನು ಎತ್ತಿಹಿಡಿಯಲಿಕ್ಕಾಗಿ ಅವರು ಇರುವಷ್ಟೂ ಕಾಲ ಶ್ರಮಿಸಿದರು. ವಿಜ್ಞಾನಿಯೊಬ್ಬ ಸಂಶೋಧನೆಯಲ್ಲಿ ತೊಡಗಿಕೊಂಡು ಸಫಲನಾದಾಗ ಲೌಕಿಕ ಬದುಕಿಗೆ ಆಗಬಹುದಾದ ಉಪಕಾರದಂತೇ ಅಲಭ್ಯ ಆರ್ಷೇಯ ವಿದ್ಯೆಯನಾಂತು ಮುನ್ನಡೆದ ಶಂಕರರು ಲೋಕಕ್ಕೆ ನೀಡಿದ ಕಾಣಿಕೆಗಳಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ವೈಜ್ಞಾನಿಕ ಸಂಶೋಧನೆಗಳಲ್ಲಿ ರಾಸಾಯನಿಕಗಳನ್ನು ಉಪಯೋಗಿಸುವಾಗ ಹೇಗೆ ಕಟ್ಟುಪಾಡುಗಳು, ನೀತಿ-ನಿಯಮಗಳು ಇರುವವೋ ಹಾಗೇ ಸಂನ್ಯಾಸಧರ್ಮ ಎಂಬುದಕ್ಕೊಂದು ಇದಮಿತ್ಥಂ ಎಂಬ ಚೌಕಟ್ಟನ್ನು ಕಲ್ಪಿಸಿಕೊಟ್ಟವರು ಶಂಕರರು. ಅದು ಅವರ ಅನುಭವಜನ್ಯ ಅಮೃತ; ಅರಿಯಲಾರದವರಿಗೆ, ಅನುಭವಿಸಲಾರದವರಿಗೆ ವಿಚಿತ್ರ ಸಂಕಟ!

ಅಧರ್ಮವೇ ಧರ್ಮವೆಂದು ತಿಳಿದುಕೊಂಡಿದ್ದ, ಕ್ರೌರ್ಯ-ಮಾನವಬಲಿ ಮೊದಲಾದ ಪಾತಕಗಳೂ ಪಾತಕಿಗಳೂ ತುಂಬಿದ್ದ ಸಮಾಜದಲ್ಲಿ "ಧರ್ಮ ಹೀಗಿದೆ" ಎಂದು ಸಾಧಿಸುವುದು ಸುಲಭದ ಮಾತಾಗಿರಲಿಲ್ಲ, ಅದೂ ಹೇಳಿಕೇಳಿ ಬಾಲ ಸಂನ್ಯಾಸಿಯೊಬ್ಬ ಅದನ್ನು ಸಾಧಿಸುತ್ತಾನೆಂದರೆ ನಂಬಲಸಾಧ್ಯವಾದ ಸಂಗತಿಯಾಗಿತ್ತು. ಅಂತಹ ಅಭೇದ್ಯ ಅಧರ್ಮದ ಕೋಟೆಯನ್ನೊಡೆದು  ಧರ್ಮಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿದವರು ಶ್ರೀಶಂಕರ ಭಗವತ್ಪಾದರು. ಶಂಕರರ ಅವತಾರಕ್ಕೂ ಮುನ್ನ ಮಠಗಳು ಇರಲಿಲ್ಲ. ಜೀವನಧರ್ಮ ಹೀಗಿದೆ, ಅದನ್ನು ಆಚರಿಸಿ ತೋರಿಸಲು ಗುರುವೊಬ್ಬಬೇಕು, ಗುರುವಿಗೆ ಆಚರಣೆಗೆ ಶ್ರದ್ಧಾಕೇಂದ್ರವೊಂದು ಬೇಕು, ಆ ಪ್ರದೇಶದಲ್ಲೇರ್ ಗುರು ವಾಸಿಸುತ್ತಾ, ಆಗಾಗ ಪರ್ಯಟನೆ ನಡೆಸುತ್ತಾ ಧರ್ಮಪ್ರಬೋಧಮಾಡಬೇಕು ಎಂಬುದು ಶಂಕರರ ದೂರದರ್ಶಿತ್ವವಾಗಿತ್ತು; ದೇಶವಾಸಿಗಳು ಸನ್ಮಾರ್ಗದಲ್ಲಿ, ಧರ್ಮಮಾರ್ಗದಲ್ಲಿ ನಡೆಯಬೇಕು ಎಂಬುದು ಅವರ ಬಯಕೆಯಾಗಿತ್ತು. ವಿಜ್ಞಾನಿಗಳೆಲ್ಲರೂ ಒಂದೇ ಅಲ್ಲ ಹೇಗೋ ಹಾಗೇ ಸಂನ್ಯಾಸಿಗಳೆಲ್ಲರೂ ಒಂದೇ ಮಟ್ಟದವರಾಗುವುದಿಲ್ಲ. ಜಗತ್ತಿನಲ್ಲಿ ಶಂಕರರಂಥಾ ಮತ್ತೊಬ್ಬ ಅದ್ಭುತ ಬಾಲಪ್ರತಿಭೆಯ ಜನನ ಇದುವರೆಗೆ ಆಗಲಿಲ್ಲ, ಬಹುಶಃ ಭವಿಷ್ಯದಲ್ಲೂ ಆಗುವ ಲಕ್ಷಣವಿಲ್ಲ.   

ಪ್ರಾಂತವೊಂದರಲ್ಲಿ ಜನಾಂಗವೊಂದರ ಕುರಿತು ಶ್ರಮಿಸಿದ ಇಂದಿನ ಸಾಧು-ಸಂತರಿಗೆ ನಾವು ಅಪಾರವಾದ ಪ್ರಚಾರವನ್ನೂ, ಹಾರತುರಾಯಿ ಪದ್ಮಭೂಷಣ, ಭಾರತರತ್ನ, ಡಾಕ್ಟರೇಟ್ ಮೊದಲಾದ ಪ್ರಶಸ್ತಿಗಳನ್ನೂ ನೀಡಿ ಗೌರವಿಸುತ್ತೇವೆ, ಗೌರವಿಸಿದ್ದೇವೆ; ತಪ್ಪಲ್ಲ-ಸರಿಯೇ ಇದೆ, ಆಕ್ಷೇಪವಿಲ್ಲ. [ಈಗೀಗ ರಾಜಕೀಯ ಮಾಡುವುದಕ್ಕಾಗಿ ಜಾತೀವಾರು ಸ್ವಾಮಿಗಳನ್ನು ಮಾಡಿಕೊಳ್ಳುತ್ತಿದ್ದೇವೆ, ಸಂಸ್ಕಾರ ಬೇಕಿಲ್ಲ, ಧರ್ಮಸೂತ್ರ ಗೊತ್ತಿರಬೇಕಿಲ್ಲ, ಶ್ರುತಿ-ಸ್ಮೃತಿ-ಪುರಾಣಗಳ ಓದು ಬೇಕಿಲ್ಲ, ಉಟ್ಟಿದ್ದೇ ಕಾವಿ, ತೊಟ್ಟಿದ್ದೇ ದಂಡ] ಆದರೆ ದುರ್ಗಮವಾದ ಬೆಟ್ಟಗುಡ್ಡಗಳನ್ನೂ ಕಾಡುಮೇಡು ನದಿಸರೋವರಗಳನ್ನೂ ಹೊಂದಿದ್ದ ಅಖಂಡ ಭಾರತವನ್ನು ಅನೇಕಾವರ್ತಿ ಕೇವಲ ಕಾಲ್ನಡಿಗೆಯಲ್ಲಿ ಸಂಚರಿಸಿ, ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿ, ಮಾನವೀಯತೆಯನ್ನು ಕೃತಿಯಿಂದ ಮಿಡಿದ[ಕೇವಲ ಒಂದು ಜನಾಂಗದ ಒಳಿತನ್ನು ಮಾತ್ರ ಬಯಸಿದವರಲ್ಲ] ಮಹಾನ್ ಚೇತನಕ್ಕೆ ನಾವೇನು ಕೊಟ್ಟಿದ್ದೇವೆ? ಬರಿದೇ ನಿಯತಕಾಲಿಕೆಗಳಲ್ಲಿ ಶಂಕರರ ವಿರುದ್ಧ ಎಡಪಂಥೀಯ ವಿಚಾರಲಹರಿಯನ್ನು ಹರಿಬಿಡುತ್ತೇವೆ; ಆ ಮೂಲಕ ಅವರ ಅವಕೃಪೆಗೆ ಗುರಿಯಾಗಬೇಕಾದೀತೇ ಹೊರತು ಹೆಚ್ಚಿನದೇನನ್ನೂ ಮಾಡಲಸಾಧ್ಯ. ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೇ ಶಂಕರರು ಸನಾತನತೆಯ ಕುರಿತಾಗಿ ಹೇಳದ ವಿಷಯವಿಲ್ಲ. ಜೀವಿತದ ೩೨ ವಯಸ್ಸಿನೊಳಗೆ ಸಾರ್ವಕಾಲಿಕವೆನಿಸಿದ ಕೃತಿಗಳನ್ನು ಶಂಕರರು ನೀಡಿದ್ದಾರೆ. ಕೇವಲ ಬಾಯಿಗೆ ಬಂದದ್ದನ್ನು ಬಡಬಡಾಯಿಸುವ ಎಡಪಂಥೀಯರು ಮಾತನಾಡುವ ಮುನ್ನ ಅವರ ಬಗ್ಗೆ, ಅವರ ಕೃತಿಗಳ ಆಳಗಲ-ವಿಸ್ತಾರಗಳ ಅಗಾಧತೆಯ ಬಗ್ಗೆ, ಅವರ ಸಮಾಜಮುಖೀ ಕೆಲಸಗಳ ಬಗ್ಗೆ ಆಮೂಲಾಗ್ರ ತಿಳಿದುಕೊಂಡರೆಮಾತ್ರ ಆ ವ್ಯಕ್ತಿತ್ವ ಕಣ್ಣಮುಂದೆ ನಿಲ್ಲಲು ಸಾಧ್ಯವಾಗುತ್ತದೆ. ಅಂತಹ ದಿವ್ಯ ತೇಜೋಮಯ ಮೂರ್ತಿಗೆ ಸಾಷ್ಟಾಂಗ ನಮಸ್ಕಾರಗಳು.

ಅಖಂಡಭಾವ ಶಿವರೂಪತತ್ತ್ವಶ್ಚಿತಿ ಸ್ವಭಾವಃ ಪರಮಾತ್ಮ ಸತ್ಯಃ
ಸತ್ಯಸ್ಯ ಸತ್ಯಃ ಸುಧಿಯೈವ ಗಮ್ಯಃ ಪರಃ ಪ್ರಧಾನಾತ್ಪರಮೇಶ್ವರೋ ಯಃ |
ಆದ್ಯಂತಹೀನೋ ನಿರಪೇಕ್ಷದೀಪ್ತಿಃ ಸ್ವತಃ ಸ್ವರೂಪೇಣ ವಿಪುಲ್ಲಿತೋ ಯಃ
ಶ್ರೀಸೌಮ್ಯಕಾಶೀಶ ಮಹೇಶ್ವರಾಯ ತಸ್ಮೈ ನಮಃ ಸ್ವಾಮಿ ತಪೋವನಾಯ ||


[ಮತ್ತೆ ಕೆಲಸಮಯದ ನಂತರ ಮುಂದುವರಿಯುತ್ತದೆ]


7 comments:

  1. ವಿ. ಆರ್. ಭಟ್ಟರೇ ,

    ಓದಿದೆ. ಚೆನ್ನಾಗಿ ಬರೆದಿದ್ದೀರಿ. ಎರಡು ಮಾತಿಲ್ಲ.

    ಲೇಖನದಲ್ಲಿ ಸದಾ ಎಡಪಂಥೀಯರನ್ನು ದೂಷಿಸುತ್ತೀರಲ್ಲ. ಎಡಪಂಥೀಯರು ಈ ದೇಶದಲ್ಲಿ ಆವಿರ್ಭೂತರಾಗಿ , ಸಾಮಾಜಿಕ ಮೌಲ್ಯ ಪಡೆಯಲು ಬಲಪಂಥೀಯರ ಕೊಡುಗೆ ಏನಿರಬಹುದು ಯೋಚಿಸಿದ್ದೀರಾ?

    ಸಮಾಜದಲ್ಲಿ ಸಂಸ್ಕೃತ ಬಲ್ಲವರ ಸಂಖ್ಯೆ ನಾಲ್ಕಾರು ಶತಮಾನಗಳಿಂದ ಕ್ಷೀಣಿಸುತ್ತಿದೆ ಎಂಬುದು ಸರಳ ಸತ್ಯ. ಸಂಸ್ಕೃತ ಬರದೆ ಇರುವವರು ಕಲಿಕಾ ಕಾಲದಲ್ಲಿ ಸಂಸ್ಕೃತ ಕಲಿಯದಿದ್ದರೂ ಆಮೇಲೆ ವಯೋ ಪ್ರಭುದ್ದರಾದಾಗ , ವೃದ್ದಾಪ್ಯದಲ್ಲಿ ಸಂಸ್ಕೃತ ಸಾಹಿತ್ಯದಲ್ಲಿರುವ ಸತ್ವವನ್ನು ತಿಳಿಯೋಣ, ಅಭ್ಯಸಿಸೋಣ ಎಂಬ ಕಾತುರತೆ ಹೊಂದಿದರೆ , ಆತುರತೆ ತೋರಿದರೆ , ಅದೇ ಸಂಸ್ಕೃತ ಬಲ್ಲವರಿಂದ ಅವಹೇಳನಗೊಂಡಾಗ ಎಡಪಂಥದತ್ತ ವಾಲುತ್ತಾರಷ್ಟೆ . ಹೀಗೆ ತಲೆಮಾರುಗಳಿಂದ ತಲೆಮಾರುಗಳಿಗೆ ( generation to generation ) , ಅನಾದರಗೊಂಡವರೇ ಎಡಪಂಥೀಯತೆಗೆ ಭದ್ರ ಬುನಾದಿಯಲ್ಲವೇ ?

    ಇಂದಿನ ಸಂಧರ್ಭದಲ್ಲಿ ಸಂಸ್ಕೃತ ಬರೆದಲ್ಲೆಲ್ಲ , ಕನ್ನಡ (ಕರ್ನಾಟಕದಲ್ಲಿ , ಉಳಿದೆಡೆ ಉಳಿದ ಭಾಷೆಯಲ್ಲಿ ) ಭಾಷಾಂತರ ಇದ್ದರೆ , ಸಂಸ್ಕೃತ ಬರದಿರುವವರೂ ಸಂಸ್ಕೃತದತ್ತ ಒಲಿದಾಗ , ಎಡಪಂಥದ ತೀಕ್ಷ್ಣತೆ ಕಡಿಮೆಯಾದೀತಲ್ಲವೇ ?

    ಮತ್ತೇನೂ ಯೋಚಿಸದಿರಿ. ನಾನು ಎಡಪಂಥೀಯನಲ್ಲ , ಮೂಢ ಬಲಪಂಥೀಯನೂ ಅಲ್ಲ. ಹೇಳಬಹುದಾದರೆ ಮಧ್ಯಮಮಾರ್ಗಿ ಅನ್ನಬಹುದು. ಹಂಸ ಕ್ಷೀರ ನ್ಯಾಯದ ಪರ.

    ಹರಿಹರ ಭಟ್, ಬೆಂಗಳೂರು.
    ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
    Jan 16 , 2013 .

    ReplyDelete
    Replies
    1. ಹರಿಹರ ಭಟ್ಟರೇ,

      ಇದು ನಾನು ಬರೆಯುತ್ತಿರುವ ಆದಿಶಂಕರರ ಜೀವನ ಚರಿತ್ರೆಯ ಸರಣಿಯ ಒಂದು ಭಾಗ. ಆಚಾರ್ಯರ ಬಗ್ಗೆ ಸಹಜವಾಗಿ ಭಾವರಸ ಮತ್ತು ಜೀವರಸ ಎರಡೂ ತುಡಿಯುತ್ತದೆ. ಇರಲಿ, ಸಂಸ್ಕೃತ ಬರದವರಿಗೆ ನಮ್ಮ ಪ್ರಾಚೀನರು ದೇವಾಲಯಗಳಲ್ಲೋ ಊರ ಪ್ರಮುಖ ಸ್ಥಾನಗಳಲ್ಲೋ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ಸಂಸ್ಕೃತ ಅಷ್ಟಾಗಿ ಒಂದು ಭಾಷೆಯಷ್ಟೇ ? ಕಲಿಯಲಾಗದ್ದೇನಲ್ಲವಲ್ಲ! ನೀವು ಹೇಳುವ ಎಡಪಂಥೀಯರಿಗೂ ನಾನು ಪ್ರಸ್ತುತ ಪಡಿಸುವ ಎಡಪಂಥೀಯರಿಗೂ ತುಸು ವ್ಯತ್ಯಾಸವಿದೆ. ನಾನು ಹೇಳುವ ಎಡಪಂಥೀಯರನ್ನು ನೀವು ತಿಳಿಸಿ ತಿದ್ದುವುದಾದರೆ ನಿಮಗೆ ೨೦ ಜನ್ಮ ತಾಳಬೇಕಾಗಿ ಬರಬಹುದು, ಆದರೂ ಕಷ್ಟ, ಯಾಕೆಂದರೆ ಅವರು ಕಾರಣವಿಲ್ಲದೇ ಜಗಳಕಾಯುವ ಹೀಗಳೆಯುವ ಜಗಮೊಂಡರು. ನೀವು ಹೇಳಿದ ’ಮಹಾತ್ಮರುಗಳ’ನ್ನು ನಿಮ್ಮಂತಹ ಶಿಕ್ಷಕರು ತರಬೇತುಗೊಳಿಸಿದರೆ ಒಳಿತು, ಬೇಸರಿಸಬೇಡಿ, ಸಂಸ್ಕೃತ ಬಲ್ಲ ನಮ್ಮ ಕೆಲವು ಶಿಕ್ಷಕರಲ್ಲಿ ಅಧುನಿಕ ಶೋಕಿ ಜಾಸ್ತಿ: ತರಾವರಿ ಮೊಬೈಲು, ಜೀನ್ಸ್ ಪ್ಯಾಂಟು, ಫಾರಿನ್ ಸೆಂಟು, ಕಾರು ಇತ್ಯಾದಿ ಇತ್ಯಾದಿ.[ಇದು ನಿಮ್ಮನ್ನು ಉದ್ದೇಶಿಸಿ ಹೇಳಿದ್ದಲ್ಲ] ಇದನ್ನೆಲ್ಲಾ ಬಿಟ್ಟು ಅವರು ಅರಿಯಬಯಸುವ ಹಿರಿಯನಾಗರಿಕರಿಗೆ ಸಂಸ್ಕೃತವನ್ನು ಕಲಿಸಿದ್ದರೆ ಸಂಸ್ಕೃತಿ ಉಳಿಯುತ್ತಿತ್ತು. ನಾನು ಮಧ್ಯಮನಾಗಿ ಎರಡು ದೋಣಿಯಮೇಲೆ ಕಾಲಿಡುವ ಜನ ಅಲ್ಲ. ನನ್ನ ಧೋರಣೆ ನಿಖರ, ಅದಕ್ಕೆ ಬೇಕಾದ ಆಧಾರ ನನ್ನಲ್ಲಿದೆ. ಹೀಗಾಗಿ ಮೂಢ ಬಲಪಂಥೀಯರು ಎಂಬ ಮಾತು ನಿಮ್ಮಲ್ಲೇ ಇದ್ದರೆ ಒಳಿತು, ಧನ್ಯವಾದ.

      Delete
  2. ವಿ . ಆರ್ . ಭಟ್ಟರೇ,

    ಮೂಢ ಬಲಪಂಥಿಯರು ಅಂದಿದ್ದು ಬಲಪಂಥಿಯರಲ್ಲಿರುವ ಮೂಢರಿಗಷ್ಟೇ ಹೇಳಿದ್ದು. ನಿಮ್ಮನ್ನುದ್ದೇಶಿಸಿ ಅಂದರೆ ನೀವು ಹಾಗೆ ಎಂದು ಹೆಸರಿಸಿದ್ದಲ್ಲ. ಇನ್ನು ಮಧ್ಯಮಮಾರ್ಗಿ ಎಂದರೆ ಎರಡು ದೋಣಿಯ ವಿಷಯವಲ್ಲ, ಎಲ್ಲೆಡೆ ಇರುವ ಒಳ್ಳೆಯದನ್ನು ಸ್ವೀಕರಿಸಿ , ಎಡ ಯಾ ಬಲ , ನಮ್ಮತನ ಬೆಳೆಸಿಕೊಳ್ಳುವದು ಎಂದರ್ಥ.

    ವಿಮರ್ಶೆಯೇ ವಿನಃ ವಿಕ್ಷಿಪ್ತ ವ್ಯಕ್ತನೆ ಇದಲ್ಲ.

    ReplyDelete
    Replies
    1. ಹರಿಹರ ಭಟ್ಟರೇ, ಎಡಪಂಥ ಎಂಬುದೇ ಅದು ವಿಚಾರಹೀನ ಎಂಬುದರ ದ್ಯೋತಕ. ಸಹಸ್ರಾರು ವರ್ಷಗಳ ಕಾಲ ಋಷಿಮುನಿಗಳು ಅನುಭವಿಸಿ, ತಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋದ, ವರ್ಗಾಯಿಸಿ ಹೋದ ಮೌಲ್ಯಯುತ ಜೀವನದ ಸೊಬಗನ್ನೂ ಮತ್ತು ಆರ್ಷೇಯ ಅಲೌಕಿಕ ವಿದ್ಯೆಗಳನ್ನೂ, ದೇವನಾಗರೀ ಭಾಷೆಯನ್ನೂ ಅಲ್ಲಗಳೆಯುವ ಜನರನ್ನು ಎಡಪಂಥೀಯರು ಎನ್ನುತ್ತಾರಲ್ಲವೇ ? ಬಲಪಂಥೀಯರಲ್ಲಿ ಜಾತಿಭೆದವೇನೂ ಇಲ್ಲ. ತಮ್ಮ ಪೂರ್ವಜರಿಂದ, ಹಲವು ಸಂಪ್ರದಾಯಗಳಿಂದ, ಸ್ಥಾನಿಕವಾದ ಆ ಯಾ ಭಾಷೆಗಳಲ್ಲಿ ತರ್ಜುಮೆಗೊಂಡ ಶ್ರುತಿ,ಸ್ಮೃತಿ, ಪುರಾಣ-ಪುಣ್ಯಕಥೆಗಳ ಅವಲೋಕನ, ಅಧ್ಯಯನದಿಂದ ಅನೇಕರು ಅದನ್ನು ನಂಬಿದ್ದಾರೆ, ಉತ್ತಮ ಫಲವನ್ನು ಅನುಭವಿಸಿದ್ದಾರೆ. ತನ್ನ ಒಳಿತಿನ ಜೊತೆಜೊತೆಗೆ ಸುತ್ತಲ ಪ್ರಪಂಚಕ್ಕೂ ಒಳಿತನ್ನು ಬಯಸುವ ಜೀವನ ಧರ್ಮ ಇವತ್ತು ಬ್ರಹ್ಮಾಂಡದಲ್ಲೇ ಒಂದು ಮಾತ್ರ: ಅದು ಸನಾತನ ಧರ್ಮ. ಅದನ್ನು ಅಲ್ಲಗಳೆಯುವ ಎಡಪಂಥೀಯರಲ್ಲಿ ಹರಿಹರ ಭಟ್ಟರೇ, ಎಡಪಂಥ ಎಂಬುದೇ ಅದು ವಿಚಾರಹೀನ ಎಂಬುದರ ದ್ಯೋತಕ. ಸಹಸ್ರಾರು ವರ್ಷಗಳ ಕಾಲ ಋಷಿಮುನಿಗಳು ಅನುಭವಿಸಿ, ತಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋದ, ವರ್ಗಾಯಿಸಿ ಹೋದ ಮೌಲ್ಯಯುತ ಜೀವನದ ಸೊಬಗನ್ನೂ ಮತ್ತು ಆರ್ಷೇಯ ಅಲೌಕಿಕ ವಿದ್ಯೆಗಳನ್ನೂ, ದೇವನಾಗರೀ ಭಾಷೆಯನ್ನೂ ಅಲ್ಲಗಳೆಯುವ ಜನರನ್ನು ಎಡಪಂಥೀಯರು ಎನ್ನುತ್ತಾರಲ್ಲವೇ ? ಬಲಪಂಥೀಯರಲ್ಲಿ ಜಾತಿಭೆದವೇನೂ ಇಲ್ಲ. ತಮ್ಮ ಪೂರ್ವಜರಿಂದ, ಹಲವು ಸಂಪ್ರದಾಯಗಳಿಂದ, ಸ್ಥಾನಿಕವಾದ ಆ ಯಾ ಭಾಷೆಗಳಲ್ಲಿ ತರ್ಜುಮೆಗೊಂಡ ಶ್ರುತಿ,ಸ್ಮೃತಿ, ಪುರಾಣ-ಪುಣ್ಯಕಥೆಗಳ ಅವಲೋಕನ, ಅಧ್ಯಯನದಿಂದ ಅನೇಕರು ಅದನ್ನು ನಂಬಿದ್ದಾರೆ, ಉತ್ತಮ ಫಲವನ್ನು ಅನುಭವಿಸಿದ್ದಾರೆ. ತನ್ನ ಒಳಿತಿನ ಜೊತೆಜೊತೆಗೆ ಸುತ್ತಲ ಪ್ರಪಂಚಕ್ಕೂ ಒಳಿತನ್ನು ಬಯಸುವ ಜೀವನ ಧರ್ಮ ಇವತ್ತು ಬ್ರಹ್ಮಾಂಡದಲ್ಲೇ ಒಂದು ಮಾತ್ರ: ಅದು ಸನಾತನ ಧರ್ಮ. ಅದನ್ನು ಅಲ್ಲಗಳೆಯುವ ಎಡಪಂಥೀಯರಲ್ಲಿ ಯಾವ ಕ್ಷೀರ ನಿಮಗೆ ಸಿಗಬಲ್ಲುದು ? ಎಷ್ಟು ಸಿಗಬಲ್ಲದು ? ವಿವೇಚಿಸಿ ವಿಮರ್ಶಕರೇ! ಹಂಸಕ್ಷೀರ ನ್ಯಾಯ ಇದಕ್ಕೆ ಲಾಗು ಆಗುವುದಿಲ್ಲ. ಹೀಗಾಗಿ ಇಲ್ಲಿ ಮಧ್ಯಮಾವತಿ ರಾಗ ಬೇಡ, ಅಭೇರಿ ರಾಗವನ್ನು ಹಾಡಬೇಕು!!

      Delete
  3. ಬುದ್ಧನ ನಂತರ ಬಂದ ಶಂಕರರು ಅಂದರೇ, ಎಂಟನೇ ಶತಮಾನದ ನಂತರ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದನ್ನು ಈ ಜಗತ್ತು ಪರಮಾತ್ಮ ಬ್ರಹ್ಮನ ಸೃಷ್ಟಿಯೆಂದೇ ಹೇಳಿದ್ದವು. ಅವುಗಳನ್ನು ತಿರಸ್ಕರಿಸಿ ವಿರುದ್ಧವಾಗಿ ಜಗತ್ತು ಒಂದು ಬ್ರಾಂತಿಯೆಂದು, ಈ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದ ವಿರುದ್ಧವಾಗಿಯೂ, ನೈಜವಾದ ಬೌದ್ಧಧರ್ಮವನ್ನೇ ಹೀಯಾಳಿಸಿ, ತನ್ನದೇ ಆದ ಮತ ಸಿದ್ಧಾಂತವೆಂದೂ " ನಾಗಾರ್ಜುನ ಶೂನ್ಯವಾದವನ್ನೇ " ಮತ್ತೇ ಜಗತ್ತಿಗೆ ತೋರಿಸಿರುತ್ತಾರೆ. ಜಗತ್ತು ಮಿಥ್ಯೆ ಅಥವಾ ಮಾಯೇ, ಬ್ರಹ್ಮನಿಂದ ಅಥವಾ ದೇವರಿಂದ ಜಗತ್ತು ಸೃಷ್ಟಿಯಾಗಲಿಲ್ಲವೆಂದು ಹೇಳಿರುತ್ತಾರೆ. ಬ್ರಹ್ಮವೇ ಸತ್ಯವೆಂದು ಜಗತ್ತೇ ಬ್ರಹ್ಮ, ಬ್ರಹ್ಮವೇ ಜಗತ್ತು ಎರಡು ಒಂದೇ ಎಂಬ ಅದ್ವೈತ (ಎರಡಲ್ಲ ಒಂದು ) ಸಿದ್ಧಾಂತವನ್ನು ಕೊಟ್ಟಿರುತ್ತಾರೆ. ಕಲ್ಪನಾತೀತ ಜಗತ್ತು ಹಾಗು ಬ್ರಹ್ಮ ಸ್ವಯಂಭು. ತಾನೇ ತಾನಾಗಿಯೇ ಇದ್ದಿತು. ಅದೆಂದಿಗೂ ಹಾಗೇಯೇ ಇರುವಂತದು. ಅಹಂ ಬ್ರಹ್ಮಾಸ್ಮಿ ಅಂದರೇ, " ನಾನೇ ದೇವರಾಗಿದ್ದೇನೆ " ಅದರ ಹಿಂದೆ ದೊಡ್ಡ ಕಥೆಯೇ ಇದೆ.

    ಉದಾಹರಣೆಗೆ, ಜನಕ ಮಹಾರಾಜನ ಕಾಲದ ಕಥೆಯಲ್ಲಿ ಒಬ್ಬ ಜಡಭರತನೆಂಬ ಮಹಾಮೇಧಾವಿ, ಮಹಾಮುನಿ, ವೇಧಾಂತಿ ಬರುತ್ತಾನೆ. ಆತನೋ ಈ ಜಗತ್ತಿಗೆ ಅಂಟಿ ಕೊಂಡಿರುವುದುಲ್ಲ. ತಾನೊಬ್ಬನೇ ಇದ್ದು ಯಾರೊಂದಿಗೂ ಸಹವಾಸವಿಲ್ಲದೇ ಒಂಟಿಯಾಗಿ ತಮ್ಮ ಹೊಲದಲ್ಲಿಯೇ ಅಟ್ಟವನ್ನು ಮಾಡಿಕೊಂಡು ಅದರಲ್ಲಿ ಜೀವನ ನಡೆಸುತ್ತಿರುತ್ತಾನೆ. ತಾಯಿ, ಯಾರಾದರೂ ಊಟ ತಂದುಕೊಟ್ಟಲ್ಲಿ ತಿಂದು ಅಲ್ಲಿಯೇ ಮಲಗಿರುತ್ತಾನೆ. ಒಂದು ದಿನ ಜನಕ ಮಹಾರಾಜನನ್ನು ನೋಡಲು ಬಂದವ ರಾಜ ರಹುಗುಣ ಪಲ್ಲಕ್ಕಿ ಹೊರುವವರಲ್ಲಿ ಒಬ್ಬನಿಗೆ ತಾಳಲಾರದ ಹೊಟ್ಟೆ ನೋವಿನಿಂದ ನರಳುತ್ತಿರಲು. ಅಲ್ಲಿ ಹುಡುಕಲು ಬಲವಾದ ಗಟ್ಟಿಗನಾದ ಯುವಕನನ್ನು ಕಾಣುತ್ತಾರೆ. ಆತನನ್ನೇ ಪಲ್ಲಕ್ಕಿ ಹೊರಲು ಹೇಳುತ್ತಾರೆ. ವಿಧಿಯಿಲ್ಲದೇ ಒಪ್ಪಿಕೊಳ್ಳುತ್ತಾನೆ. ಹೊತ್ತು ಮುಂದೆ ನಡೆಯುವಲ್ಲಿ ಆಗಾಗ್ಗೆ ಪಲ್ಲಕ್ಕಿ ಏರಿಳಿತವಕಂಡು ರಹುಗುಣನು ಕೊಪಗೊಳ್ಳುತ್ತಾನೆ. ಅವನ ಅನುಚರರನ್ನು ಕೇಳುತ್ತಾನೆ. ಅವರು ಈ ಹೊಸದಾಗಿ ಬಂದ ಜಡಭರತನೇ ಹೀಗೆ ದಾಟಿ ದಾಟಿ ಹೆಜ್ಜೆಇಡುವುದರಿಂದ ಹೀಗಾಗುತ್ತಿದೆ ಎನ್ನಲು ವಿಷಯವರಿಯದೇ ಎಡಕಾಲಿನಿಂದ ಜಡಭರತನನ್ನು ಹೊದೆಯುತ್ತಾನೆ. ಆಗ ಕೆಳಗೆಬಿದ್ದ ಜಡಭರತನು ರಹುಗುಣನಿಗೆ ಒಂದು ಮಾತು ಪ್ರೆಶ್ನೆಯನ್ನು ಹೇಳುತ್ತಾನೆ ಕೇಳುತ್ತಾನೆ. ಅದೇನೆಂದರೇ, ನೀವು ನನ್ನ ಶರೀರವನ್ನು ಮಾತ್ರ ಹೊದೆಯಬಹುದೇ ಹೊರತು ನನ್ನನ್ನು ಮಾತ್ರ ನಿಮ್ಮಿಂದ ಹೊದೆಯಲು ಸಾಧ್ಯವೇಯಿಲ್ಲ ಎನ್ನುತ್ತಾನೆ. ಆಗ ಆಲ್ಲಿ ರಹುಗುಣ ರಾಜನೇ ಕುಸಿದು ಹೋಗುತ್ತಾನೆ. ಅಯ್ಯೋ ಎಂತಹ ತಪ್ಪುಮಾಡಿದೆ ಎಂದು ಪಲ್ಲಕ್ಕಿಯಿಂದ ಇಳಿದುಬಂದು ಜಡಭರತನ ಕಾಲಿಗೆ ಬೀಳುತ್ತಾನೆ. ತಾವು ಯಾರೆಂದು ಪ್ರೆಶ್ನಿಸುತ್ತಾನೆ. ಆಗ ಜಡಭರತನೆಂಬ ಈತನನ್ನೇ ತಾ ಹುಡುಕಿ ಬಂದುದಾಗಿ ಹೇಳಿ ಆತನ ಶಿಷ್ಯನಾಗುತ್ತಾನೆ.
    ಮುಂದೆ ಚಾಂಡಾಲನಿಂದ ಬುದ್ಧಿಯನ್ನು ಕಲಿತಿರುತ್ತಾರೆ. ಅದು ಹೇಗೆಂದರೇ, ಒಂದು ಸಂದರ್ಭದಲ್ಲಿ ಆಗಿನ ಕಾಲದಲ್ಲಿ ಕಾಲುದಾರಿ ಒಂದು ಒಣಿಯಲ್ಲಿ ಅಲ್ಲಿ ಶಂಕರಾಚಾರ್ಯರ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರಲು ಒಬ್ಬ ಚಾಂಡಾಲನು ಎದುರಾಗುತ್ತಾರೆ. ಅವನಿಗೆ ಶಂಕರರ ಶಿಷ್ಯರು ದಾರಿಬಿಡಿ, ದಾರಿಬಿಡಿ ಗುರುಗಳು ಬರುತ್ತಿದ್ದಾರೆ ಎಂದು ಕೂಗುತಿರುತ್ತಾರೆ. ಈ ಚಾಂಡಾಲನು ದಾರಿಯನ್ನು ಕೊಡುವುದಿಲ್ಲ ಆಗ ಏಕೆಂದು ಕೇಳಲಾಗಿ ಅವನು ಹೇಳುತ್ತಾನೆ. ನಿಮ್ಮ ಗುರುಗಳು ನನ್ನ ಪ್ರೆಶ್ನೇಗೆ ಉತ್ತರಿಸಿದರೇ ಮಾತ್ರವೇ ದಾರಿಕೊಡುತ್ತೇನೆ ಎನ್ನುತ್ತಾನೆ. ಇವರಿಗೆ ಎಲ್ಲಿಲ್ಲದ ಆಶ್ಚರ್ಯ, ಕೋಪ ಕಿಡಿಕೆಂಡವಾಗುತ್ತಾರೆ. ಆತನೋ ಬಲಶಾಲಿಯಾಗಿದ್ದಾನೆ. ಜೋತೆಗೆ ಅವನಲ್ಲಿ ಹೆಂಡದ ಮಡಿಕೆಯಿದೆ ನಾಲ್ಕು ನಾಯಿಗಳಿದೆ. ಶಿಷ್ಯರು ಆತನನ್ನು ಮುಟ್ಟುವಂತಿಲ್ಲ ಬೇರೆ ದಾರಿಕಾಣದೇ ಕೇಳಲು ಒಪ್ಪುತ್ತಾರೆ. ಆತನೋ ಮಹಾವೇಧಾಂತಿ ಬಹುಙ್ಞಾನವಂತ ( ಬೆಸ್ತ ವ್ಯಾಸರಂತೆ, ದರೋಡೆಕೊರ ವಾಲ್ಮೀಕಿಯಂತೆ ) ಅವನು ಶಂಕರರನ್ನು ಕುರಿತು " ನಾನು ನಿಮಗೆ ದಾರಿ ಬಿಡಬೇಕೆ ?. ಅಥವಾ ನನ್ನ ಶರೀರ ನಿಮಗೆ ದಾರಿಬಿಡಬೇಕೆ ? ". ಎನ್ನುತ್ತಾನೆ. ಶಂಕರರೋ ಭೂಮಿಗೆ ಇಳಿದುಬಿಡುತ್ತಾರೆ. ಹೇಳಲು ದಾರಿ ಕಾಣದೇ ಅತನ ಕಾಲಿಗೆಬಿದ್ದು ನಮಸ್ಕರಿಸಿ ತಪ್ಪೊಪ್ಪಿಕೊಳ್ಳುತ್ತಾರೆ. ಆದರೋ ಶಂಕರರು ಜಟ್ಟಿ ಕೆಳಗೆಬಿದ್ದರು ಮಣ್ಣಾಗಲಿಲ್ಲವೆನ್ನುವಂತೆ ಆತನೇ ಶಿವನೆಂದು ಚಾಂಡಾಲ ರೂಪದಲ್ಲಿ ಕಾಣಿಸಿಕೊಂಡನೆಂದು ಆತನ ಕೈಯಲ್ಲಿನ ಕೊಲೇ ತ್ರೀಶೂಲವೆಂದು ನಾಲ್ಕು ನಾಯಿಗಳೇ ನಾಲ್ಕು ವೇದಗಳೆಂದು. ಮಡಿಕೆಯ ಹೆಂಡವೇ ಅಮೃತವೆಂದು ಬುರುಡೆಯನ್ನು ಬಿಟ್ಟಿರುತ್ತಾರೆ.
    ಹೊಲಸಾದ ಮನುಸ್ಮೃತಿಯನ್ನು ಒಪ್ಪಿಕೊಂಡಿರುತ್ತಾರೆ. ಪ್ರತಿಯೊಂದು ಮಾತಿನಲ್ಲಿಯು ಈ ಐಹಿಕ ಜಗತ್ತಿಗೆ ಔಷದವಿದ್ದಂತೆ ಎಂದು ಘೋಷಿಸಿದ್ದಾರೆ. ಶೂದ್ರನ ಬಾಳು ಸಂಕಷ್ಟದಲ್ಲಿಯೇ ಇರಬೇಕು. ಅವನಿಗೆ ಮೋಕ್ಷವು ಲಭ್ಯವೇಯಿಲ್ಲ ವೆಂದಿರುತ್ತಾರೆ. ಏಕೆಂದರೆ, ಅವನಿಗೆ ವೇದದ ಪಾಠಕ್ಕೆ ಪ್ರವೇಶವಿಲ್ಲ ವೆಂದಿರುತ್ತಾರೆ. ವೇದ ಪಠಣವೇನಾದರೂ ಮಾಡಿದರೆ ಶೂದ್ರನ ನಾಲಿಗೆಯನ್ನು ಕತ್ತರಿಸಬೇಕು ವೇದಗಳನ್ನು ಕೇಳಿದರೇ ಕಿವಿಗೆ ಸೀಸವನ್ನು ಕಾಸಿ ಕಿವಿಗಳಿಗೆ ತುಂಬಬೇಕು ಎಂದು ಹೇಳುವ ಮನುವನ್ನು ಸಮರ್ಥಿಸುತ್ತಾರೆ.
    ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದು ಹೇಳಿರುತ್ತಾರೆ. ಇದರಲ್ಲಿ ನಾಗಾರ್ಜುನನ ಶೂನ್ಯ ಸಿದ್ಧಾಂತವಿದೆ. ಜೋತೆಗೆ ಜಡಭರತನ ಅಹಂ ಬ್ರಹ್ಮಾಸ್ಮಿಯು ಸೇರಿದೆ. ಅದನ್ನು ಸಹಿಸದ ಮಧ್ವರ ಅನುಯಾಯಿಗಳು ಇವರನ್ನು ಸಂಕರಾಚಾರ್ಯರು ( ಬೆರೆಕೆಹುಟ್ಟಿನವರೆಂದು ) ಮೊದಲಿಸಿದರು. ಹಾಗಾದರೇ, ಇವರ ಕಂಡ ಹೊಸ ಸಿದ್ಧಾಂತವಾವುದು ಅರಿಯದಾಗಿದೆ. ದಯವಿಟ್ಟು ಅರಿತವರಿದ್ದರೇ ತಿಳಿಸಿ

    ReplyDelete
    Replies
    1. ಗುಣಶೇಖರ ಮೂರ್ತಿಗಳೇ, ನಿಮ್ಮ ವಿತಂಡ ವಾದಕ್ಕೆ ಉತ್ತರವೀಯುವುದಕ್ಕಿಂತಾ ಸುಮ್ಮನಿದ್ದರೆ ನಮ್ಮ ಮರ್ಯಾದೆ ಉಳಿಯುತ್ತದೆ. ಆದರೂ ಒಂದೆರಡು ಮಾತು ಹೇಳಿಬಿಡುತ್ತೇನೆ :
      1. ಶಂಕರರು ಅದ್ವೈತ ಸಿದ್ಧಾಂತ ತನ್ನದೇ ಎಂದು ಎಲ್ಲೂ ಹೇಳಿಲ್ಲ, ಬದಲಾಗಿ ತಾನು ಅದ್ವೈತದ ಪ್ರತಿಪಾದಕ, ಅನುಯಾಯಿ ಎಂದ್ದಿದ್ದಾರೆ.
      2. ಚಂಡಾಲನಲ್ಲಿ ಶಿವ ಕಂಡಿಲ್ಲ ಎಂದು ಹೇಳುವುದಕ್ಕೆ ನಾವು ನೀವೂ ಹೋಗಿ ಆಗ ಅಲ್ಲಿ ದೀಪ ಹಿಡಿಯಲಿಲ್ಲವಲ್ಲಾ ? ಶಂಕರರಿಗೆ ನಿಮ್ಮಂತೇ ಸುಳ್ಳಾಡುವುದು, ಕುಹಕವಾಡುವುದು. ಅಣಕವಾಡುವುದು ಬೇಕಾಗಿರಲಿಲ್ಲ, ಹೀಗಾಗಿ ಶಂಕರರು ಕಂಡಿದ್ದನ್ನೇ ಹೇಳಿದ್ದಾರೆ. ಚಾಂಡಾಲನ ಕುರಿತು ಸ್ತೋತ್ರ ಮಾಡಿದ್ದನ್ನು ನೀವು ಒಪ್ಪಿಕೊಳ್ಳಿ-ಅದು ಶಿವನಾದ್ರೂ ಚಾಂಡಾಲನೇ ಆದರೂ ಅಪ್ಲಿಕೇಬಲ್ ಎಂಬುದನ್ನು ಗಮನಿಸಿ.
      3. 'ಅಹಂ ಬ್ರಹ್ಮಾಸಿ' ಎಂಬುದನ್ನು ತಾನೇ ಹುಟ್ಟು ಹಾಕಿದೆ ಎಂದು ಶಂಕರರು ಹೇಳಲಿಲ್ಲ, ಅದು ನಿಜವೆಂಬುದನ್ನು ಮತ್ತೆ ಈ ಯುಗದಲ್ಲಿ ಸಾರಿದವರು, ಪ್ರತಿಪಾದಿಸಿದವರು ಅವರಾಗಿದ್ದಾರೆ.
      ನಿಮ್ಮ ಕಾರಿಕೆಗಳಿಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ, ಧನ್ಯವಾದ.

      Delete
  4. ನನ್ನದು ಯಾವಾಗಲೂ ವಿತಂಡವಾದವೆಂದು ನಿಮ್ಮಂಥಹವರು ಹೇಳುವುದು. ಕಾರಣ, ಸರಿಯಾದನ್ನು ಉತ್ತರಿಸಲಾಗದಲ್ಲಿ ಏಲ್ಲಾ ತನಗೆ ತಾನೇ ಬುದ್ಧಿವಂತೆರೆಂಬುವ ಜನರು ಹೇಳುವುದು. ಉದಾಹರಣೆಗೆ : ದೇವರ ಬಗ್ಗೆ ಮಾತನಾಡುವಾಗ ದೇವ ಮೂಲ ಗುರು ಮೂಲ ನದಿ ಮೂಲ ಹುಡುಕಬಾರದೆಂಬರು. ಕಾರಣ, ತಾವುಗಳು ಅಙ್ಞಾನಿಗಳೆಂದು ತಿಳಿದು ಹೋಗುವುದೆಂದು. ಹಾಗೇಯೆ ಇದು ಸಹ

    ReplyDelete