ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 5, 2012

’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ

 ಚಿತ್ರಗಳ ಋಣ: ಅಂತರ್ಜಾಲ 
’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ 

ತಮ್ಮೊಳಗೇ ತಾವು ತತ್ವಜ್ಞಾನಿ ಎಂದುಕೊಂಡಿರುವ ’ಅಗ್ನಿ’ ಪತ್ರಿಕೆಯ ಶ್ರೀಧರರೇ,

ಬ್ರಹ್ಮಾಂಡದ ರಹಸ್ಯವನ್ನೇ ಅರೆದು ಕುಡಿದಿದ್ದೇನೆ ಎಂಬ ಆತುರದ ಅನಿಸಿಕೆಯಲ್ಲಿ ಜುಲೈ ೧೨ರ ನಿಮ್ಮ ಸಂಚಿಕೆಯಲ್ಲಿ ’ವೈದಿಕ ವೈರಸ್’ ಎಂಬ ಶಿರೋನಾಮೆಯನ್ನು ಇಟ್ಟು ಇಡೀ ಸಂಚಿಕೆಯಲ್ಲಿ ತಮ್ಮ ಹಾಗೂ ತಮ್ಮ ಸಮಾನ ಮನಸ್ಕರ ಒಳತೋಟಿಯನ್ನು ಬಹಿರಂಗಗೊಳಿಸಿದ್ದೀರಿ. ಅಷ್ಟಾಗಿ ಬ್ರಾಹ್ಮಣ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದ ನಿಮಗೆ, ಬೆಂಗಳೂರಿನ ಕನಕಪುರ ರಸ್ತೆಯ ’ಆರ್ಟ್ ಆಫ್ ಲಿವಿಂಗ್’ ನ ಶ್ರೀ ರವಿಶಂಕರ್ ಗುರೂಜಿಯವರನ್ನು ಕಂಡರೆ ಎಂತಹ ದ್ವೇಷ ಎಂಬುದು ನಮೆಗೆಲ್ಲಾ ಗೊತ್ತೇ ಇದೆ. ಅದರ ಹಿಂದಿನ ಸ್ವಾರಸ್ಯವೇನು ಎಂಬುದನ್ನೂ ಎಲ್ಲರೂ ಮನಗಂಡಿದ್ದಾರೆ. ಇತ್ತೀಚೆಗೆ ಆಧುನಿಕತೆಯ ಅನುಸರಣೆ ಎಂಬ ಸೋಗಿನಲ್ಲಿ ಎಡಪಂಥೀಯರು ಎನಿಸಿಕೊಳ್ಳುವವರ ಸಂಖ್ಯೆ ತೀವ್ರವಾಗಿ ಜಾತಿಯಾಗತೊಡಗಿದೆ. ಹೀಗೆ ಜಾಸ್ತಿಯಾಗುವುದಕ್ಕೆ ಹಲವರಿಗೆ ತಮ್ಮೊಳಗಿನ ಬ್ರಾಹ್ಮಣದ್ವೇಷವೇ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲವಷ್ಟೇ? ತಮ್ಮ ತತ್ವಜ್ಞಾನಕ್ಕೆ ಇನ್ನೂ ಸೇರ್ಪಡೆಗೊಂಡಿರದ ಅಥವಾ ಉದ್ದೇಶ ಪೂರ್ವಕವಾಗಿ ಬಿಟ್ಟುಹೋದ : ಬ್ರಾಹ್ಮಣರು ಯಾರು? ಯಾಕಾಗಿ ಕೆಲವುಜನ ಬ್ರಾಹ್ಮಣರು ಎನಿಸಿಕೊಂಡರು?  ಮತ್ತು ಬ್ರಾಹ್ಮಣ್ಯ ಎಂದರೇನು?-- ಈ ಕೆಲವು ಅಂಶಗಳ ಬಗ್ಗೆ ಇಲ್ಲಿ ನಮೂದಿಸುವ ಸಲುವಾಗಿ ಹೀಗೆ ಬರೆಯುತ್ತಿದ್ದೇನೆ.

ಪೂರ್ವೈತಿಹಾಸಕಾರರು ಹೇಳಿದ್ದಕ್ಕೆಲ್ಲಾ ಆಧಾರಗಳು ಸಿಗುವುದಿಲ್ಲ. ಅದೊಂದು ಅಂದಾಜಿನ ಲೆಕ್ಕಾಚಾರವಾಗಿದೆ. ಹೀಗಾಗಿ ಪುಣ್ಯಭೂಮಿ ಭಾರತದ ಮೂಲ ನಿವಾಸಿಗಳು ಬರೇ ದ್ರಾವಿಡರು ಎಂಬುದನ್ನು ನಂಬಲು ಯಾವುದೇ ದಾಖಲುಪತ್ರಗಳು ದೊರೆಯುವುದಿಲ್ಲ. ಇಡೀ ಈ ಭೂಮಂಡಲವನ್ನೇ ಒಂದು ಕಾಲಕ್ಕೆ ನಾಗಕುಲದವರು ಆಳುತ್ತಿದ್ದರು ಎಂಬುದು ಪುರಾಣೋಕ್ತವಾಗಿದೆ-ಅದನ್ನು ನೀವು ಅಲ್ಲಗಳೆಯುತ್ತೀರಿ ಯಾಕೆಂದರೆ ವೇದ-ಶಾಸ್ತ್ರ-ಪುರಾಣಗಳು ಬ್ರಾಹ್ಮಣರ ಸೃಷ್ಟಿ ಎಂದು ಭಾವನೆಯುಳ್ಳ ಜನ ನೀವಾಗಿದ್ದೀರಿ. ನಾವೆಲ್ಲಾ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ’ಆರ್ಯರು ಭಾರತಕ್ಕೆ ಬಂದುದು’ ಎಂಬ ಅಧ್ಯಾಯವನ್ನು ಇತಿಹಾಸದ ವಿಷಯಕವಾಗಿ ಓದಿದ್ದೆವು. ಆರ್ಯಾವರ್ತ ಎಂಬ ಸಿಂಧೂನದಿಯ ಕಣಿವೆಯ ಜನಾಂಗ ಈ ಭವ್ಯ ಭಾರತಕ್ಕೆ ಅಲ್ಲಿಂದ ವಲಸೆ ಬಂತು ಎಂದುಕೊಂಡರೂ ಸಿಂಧೂ ನದಿ ಒಂದು ಕಾಲಕ್ಕೆ ಭಾರತದ ಅಂಗವೇ ಆಗಿತ್ತಲ್ಲಾ? ಇಡೀ ಈ ಜಗತ್ತಿನಲ್ಲಿ ಇವತ್ತು ಭಾರತ ಪುಣ್ಯಭೂಮಿ, ಶಾಂತ-ಪ್ರಶಾಂತ ಪ್ರದೇಶ ಎನಿಸಿಕೊಳ್ಳಲಿಕ್ಕೆ ಮೂಲಭೂತ ಕಾರಣವೇ ಇಲ್ಲಿನ ಸಂಸ್ಕೃತಿಯಾಗಿದೆ ಎಂಬುದನ್ನಾದರೂ ಒಪ್ಪುತ್ತೀರೇ?  

ಭಾರತೀಯ ಸಂಸ್ಕೃತಿಗೆ ಇಲ್ಲಿನ ಸುಲಲಿತ ಸಂಸ್ಕೃತವೇ ಕಾರಣ ಎಂಬುದು ಸ್ವಲ್ಪ ತಿಳುವಳಿಕೆಯುಳ್ಳ ಯಾವ ಮಗುವಿಗಾದರೂ ಗೊತ್ತು! ಮನುಷ್ಯರು ಎನಿಸಿಕೊಂಡವರಿಗೆ ಮೆದುಳು ಎಂಬ ತಲೆಯೊಳಗಿನ ಅಂಗ ಜಾಸ್ತಿ ವಿಕಸಿತವಾಗಿರುತ್ತದೆ ಎಂಬುದು ಇಂದಿನ ವಿಜ್ಞಾನವೂ ಒಪ್ಪಿಕೊಂಡ ವಿಷಯವಷ್ಟೇ? ಅಂತಹ ಮೆದುಳನ್ನು ಪಡೆದ ಮನುಷ್ಯ ಅದನ್ನು ಉನ್ನತಿಗೂ ಅವನತಿಗೂ ಯಾವರೀತಿಯಲ್ಲೇ ಬೇಕಾದರೂ ಬಳಸಿಕೊಳ್ಳಬಹುದು ಎಂಬುದೂ ಸತ್ಯ ಅಲ್ಲವೇ? ವಿಕಸಿತ ಮೆದುಳಿನ ವಿಕೃತ ನಿರ್ಧಾರಗಳಿಗೆ ಕಡಿವಾಣ ಹಾಕುವ ಸಲುವಾಗಿ, ಜಗತ್ತಿಗೇ ಆದರ್ಶಪ್ರಾಯವಾದ ’ವೇದಗಳು’ಎಂಬ ಜೀವನಸೂತ್ರಗಳನ್ನು ಅಪೌರುಷೇಯವಾಗಿ ಅನುಗ್ರಹರೂಪದಲ್ಲಿ ಪಡೆದು, ಅವುಗಳನ್ನು ಅನುಷ್ಠಾನದಲ್ಲಿ[ಅನುಷ್ಠಾನ ಎಂದರೆ ಜಪ ಎಂದುಕೊಳ್ಳಬೇಡಿ, ಅನುಷ್ಠಾನ ಎಂದರೆ ಕಾರ್ಯಗತ ಎಂದರ್ಥ]ಇಟ್ಟುಕೊಂಡಿರುವುದರಿಂದ  ಜಗತ್ತಿನಾದ್ಯಂತ ಭಾರತಕ್ಕೆ ಮಾನ್ಯತೆ ಇದೆ. ನಮ್ಮಲ್ಲಿನ ಇಂದಿನ ಬ್ರಾಹ್ಮಣ ಯುವಕರಲ್ಲಿ ಕೆಲವರೂ ಸೇರಿದಂತೇ ಎಡಪಂಥೀಯರು ಅಸಡ್ಡೆಯಿಂದ ಕಾಣುವ ವೇದಗಳನ್ನು ವಿದೇಶೀಯರು ಓದಿಕೊಳ್ಳತೊಡಗಿದ್ದಾರೆ; ಅನುಸರಿಸಲು ಮುಂದಾಗಿದ್ದಾರೆ!

ಚಂದ್ರಮಾ ಮನಸೋ ಜಾತಃ 
ಚಕ್ಷೋಸ್ಸೂರ್ಯೋ ಅಜಾಯತ

ದೇವರ ಮನಸ್ಸಿನಿಂದ ಚಂದ್ರನೂ ದೇವರ ಕಣ್ಣುಗಳಿಂದ ಸೂರ್ಯನೂ ಜನಿಸಿದರಂತೆ.

ಋಗ್ವೇದದ ಪವಮಾನ ಪಂಚಸೂಕ್ತಗಳಲ್ಲಿ ಒಂದಾದ ಪುರುಷಸೂಕ್ತದ

ಬಾಹ್ಮಣೋಸ್ಯ ಮುಖಮಾಸೀತ್
ಬಾಹೂರಾಜನ್ಯಃ ಕೃತಃ|
ಊರೂ ತದಸ್ಯ ಯದ್ವೈಶ್ಯಃ
ಪದ್ಭ್ಯಾಂ ಶೂದ್ರೋ ಅಜಾಯತ ||    

--ಈ ಭಾಗವನ್ನು ತಾವು ತಪ್ಪುತಪ್ಪಾಗಿ ’ಗರ್ದಭ ಗಾಥೆ’ಯಂತೇ ಒದರಿಕೊಂಡಿದ್ದೀರಿ; ಮತ್ತು ಯಾವ ಬ್ರಾಹ್ಮಣನೂ ಈ ಒಂದು ಮಂತ್ರಕ್ಕೆ ಅರ್ಥ ಹೇಳುವ ಸಮಯ ಬಂದಾಗ ಸೋಲುತ್ತಾನೆಂದೂ ಇದೊಂದೇ ಮಂತ್ರ ಇಡೀ ಬ್ರಾಹ್ಮಣ ಕುಲದ ಭಾವನೆಯನ್ನು ತಿಳಿಸಿಕೊಡುವುದರಿಂದ ವೇದದಲ್ಲಿ ಇದು ಅಡಕವಾಗಿರುವುದು ಇಂದಿನ ಬ್ರಾಹ್ಮಣರಿಗೆ ಅರಗಿಸಿಕೊಳ್ಳಲಾಗದ ಕಬ್ಬಿಣದ ಕಡಲೆ ಎಂದೂ ಅಪ್ಪಣೆ ಕೊಡಿಸಿದ್ದೀರಿ!! ಶ್ರೀಧರರೇ ಹೇಳುತ್ತೇನೆ ಕೇಳಿ: ಈ ಮಂತ್ರ ಭಾಗದ ಅರ್ಥವಿಷ್ಟೇ:

ಅಮೂರ್ತರೂಪದ ಜಗನ್ನಿಯಾಮಕ ಶಕ್ತಿಯನ್ನು ಪುರುಷರೂಪದಲ್ಲಿ ಇಲ್ಲಿ ವರ್ಣಿಸಲಾಗಿದೆ. ದೇವರ ಮುಖದ ಭಾಗ ಬ್ರಾಹ್ಮಣ ಎಂತಲೂ ತೋಳುಗಳ ಭಾಗ ಕ್ಷತ್ರಿಯ ಎಂತಲೂ, ತೊಡೆಗಳ ಭಾಗ ವೈಶ್ಯ ಎಂತಲೂ ಪಾದಗಳ ಭಾಗ ಶೂದ್ರ ಎಂತಲೂ ತಿಳಿಸಲಾಗಿದೆ. ದೈವ ಸಂಕಲ್ಪದಿಂದ ಆ ಯಾ ಭಾಗಗಳಿಂದ ಜನಿಸಿದ ಜನಾಂಗವೇ ಮುಂದೆ ಹೀಗೆ ವರ್ಣಾಶ್ರಮವಾಗಿ ಬೆಳೆಯಿತೇ ಹೊರತು ಇದು ಯಾರೋ ಬ್ರಾಹ್ಮಣರು ಮಾಡಿದ  ಗುಂಪುಗಾರಿಕೆಯಲ್ಲ. ನಿಮ್ಮ ಹಿಂದಿನ ಸಂಚಿಕೆಯೊಂದರಲ್ಲಿ, ಯಾರೋ ನಿಮ್ಮ ಬ್ರಾಹ್ಮಣ ಮಿತ್ರ, "ಸಾವಿರಾರು ವರ್ಷಗಳಿಂದ ನಮ್ಮನ್ನು ನಮ್ಮ ಹಿರಿಯರು ಇಂಥಾ ಆಹಾರಗಳಿಂದ ವಂಚಿತರಾಗುವಂತೇ ಮಾಡಿಬಿಟ್ಟಿದ್ದಾರೆ" ಎಂದು ಹೇಳಿ ಮಾಂಸಾಹಾರದ ಹೋಟೆಲ್ಲಿಗೆ ಕರೆದೊಯ್ದ ಎಂದೂ ಬರೆದಿದ್ದೀರಿ. ಬ್ರಾಹ್ಮಣ್ಯ ಎಂಬುದೊಂದು ಜೀವನಪರ್ಯಂತದ ವ್ರತ. ಹುಟ್ಟಿನಿಂದ ಸಾವಿನವರೆಗೆ ಅನುದಿನ ಜರುಗಬೇಕಾದ ಕಠಿಣ ನಿಯಮಗಳನ್ನು ಅನುಸರಿಸಿ ನಡೆಸುವ ಈ ವ್ರತಕ್ಕೆ ಎಲ್ಲರೂ ಒಗ್ಗುವುದಿಲ್ಲ. ಬ್ರಾಹ್ಮಣ ಎಂದರೆ ನೀವಂದುಕೊಂಡಂತೇ ಕುಳಿತು ಉಂಬವನಲ್ಲ; ನಿಜವಾದ ಬ್ರಾಹ್ಮಣ ಎಷ್ಟೋ ದಿನ ಊಟವನ್ನೇ ಮಾಡುವುದಿಲ್ಲ ಎಂಬುದೂ ತಮ್ಮ ಗಮನಕ್ಕಿರಲಿ! ಸಮಾಜದ ಇತರೇ ವರ್ಗಗಳನ್ನು ದುಡಿಸಿ ಅವರಮೂಲಕ ದಾನವಾಗಿಯೋ ಕಾಣಿಕೆಯಾಗಿಯೋ ಧನಕನಕ ಸುವಸ್ತು,ಧಾನ್ಯಾದಿಗಳನ್ನು ಸ್ವೀಕರಿಸುವ ಹುನ್ನಾರ ಬ್ರಾಹ್ಮಣರದ್ದು ಎಂಬುದು ತಮ್ಮ ಹೇಳಿಕೆಯಾಗಿದೆ; ದಾನವನ್ನು ಸ್ವೀಕರಿಸುವುದು ಇನ್ನೊಬ್ಬರ ಇಹಜೀವಿತದ ಪಾಪಕರ್ಮಗಳನ್ನು ಸ್ವೀಕರಿಸಿದಂತೇ ಎಂದು ವೇದ ಹೇಳುತ್ತದೆ, ಸ್ವೀಕರಿಸಿದ ದಾನದಿಂದ ಆರ್ಜಿತವಾದ ಪಾಪವನ್ನು ಕಳೆದುಕೊಳ್ಳುವುದಕ್ಕೆ ಕೆಲವು ಕಠಿಣ ನಿಯಮಗಳೂ ಹೇಳಲ್ಪಟ್ಟಿವೆ, ಅಂತಹ ನಿಯಮಗಳನ್ನು ಎಲ್ಲರೂ ಪಾಲಿಸಲು ಸಾಧ್ಯವಿಲ್ಲವಾದ್ದರಿಂದ ಬ್ರಾಹ್ಮಣರು ಗುರುವಿನ ಸ್ಥಾನದಲ್ಲಿ ನಿಂತು ಸನ್ಮಾರ್ಗವನ್ನು ಬೋಧಿಸುತ್ತಾ ದಾನಾದಿಗಳನ್ನು ಸ್ವೀಕರಿಸುತ್ತಾರೆಯೇ ವಿನಃ ಅದು ಇಷ್ಟಪಟ್ಟು ನಡೆಸುವ ಕೆಲಸವಲ್ಲ.

ಸಮಾಜದಲ್ಲಿ ಹಾಗೆ ಕುಳಿತಲ್ಲೇ ಗಂಟುಕಟ್ಟುವ ಕೆಲಸಮಾಡಿದ್ದರೆ, ಕಟ್ಟಿದ ಗಂಟುಗಳಿಂದ ಹಲವು ಮನೆಗಳನ್ನೋ ಆಸ್ತಿಪಾಸ್ತಿಗಳನ್ನೋ ಸಂಪಾದಿಸಿಕೊಂಡು ಎಲ್ಲರಿಗಿಂತಾ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿ ಇರಬೇಕಾಗಿತ್ತು. ಬ್ರಾಹ್ಮಣರನ್ನು ಪರಿಗಣಿಸಿದರೆ ಇವತ್ತಿನ ಸ್ಥಿತಿ ತಮಗೆ ತಿಳಿಯುತ್ತದೆ: ಸಮಾಜದಲ್ಲಿ ಹಿಂದಕ್ಕೆ ರಾಜಾಶ್ರಯದ ಉಂಬಳಿ ವಗೈರೆಯಿಂದ ಸಹಜಪ್ರಾಪ್ತವಾದ ಜಮೀನುಗಳು ಇಂದು ಉಳಿದಿಲ್ಲ.  ಸರ್ಕಾರ ಸೇರಿದಂತೇ ಯಾರ ಕೃಪಾಪೋಷಣೆಯೂ ಬ್ರಾಹ್ಮಣರಿಗೆ ಈಗ ಲಭ್ಯವಿಲ್ಲ. ಬ್ರಾಹ್ಮಣ ಹೊರಗೆ ಬಂದು ಸಮಾಜದ ಎಲ್ಲರೊಡನೆ ಬೆರೆಯುವುದರಿಂದ ಬ್ರಾಹ್ಮಣ್ಯಕ್ಕೆ ತೊಂದರೆಯಾಗುತ್ತದೆ-ಮಲಿನ ಮನಸ್ಕ ಬ್ರಾಹ್ಮಣ ಬ್ರಾಹ್ಮಣ್ಯವನ್ನು ಕಾಪಿಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬ್ರಾಹ್ಮಣರು ತಮ್ಮ ವ್ರತಭಂಗವಾಗದಂತೇ ನೋಡಿಕೊಳ್ಳಲು ಕೇವಲ ಆಧ್ಯಯನ, ಅಧ್ಯಾಪನ, ಪೂಜೆ-ಪುನಸ್ಕಾರ, ಪ್ರವಚನ, ಪಾರಾಯಣ ಇತ್ಯಾದಿಗಳಲ್ಲಷ್ಟೇ ತೊಡಗಿಸಿಕೊಂಡಿದ್ದರು. ವೇದಗಳ ಆಧಾರದಲ್ಲಿ ರಾಜರುಗಳಿಗೆ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಅಂತಹ ಮಹಾನುಭಾವರುಗಳಿಂದ ಹಲವು ರಾಜ್ಯಗಳು ಅಭಿವೃದ್ಧಿಯಲ್ಲಿ ನಡೆದಿದ್ದವು.     

ಕರ್ನಾಟಕದ ಮೊದಲ ರಾಜ್ಯವಾದ ಕದಂಬರ ಸ್ಥಾಪಕ ಮಯೂರ ವರ್ಮ ಎಂಬುದು ತಮಗೆ ತಿಳಿದಿರಲೂ ಬಹುದು. ಆತ ಮೂಲದಲ್ಲಿ ವೇದಪಾರಂಗತರಾದ ವೈದಿಕರೊಬ್ಬರ ಮಗನಾಗಿ ಮಯೂರಶರ್ಮನಾಗಿದ್ದ. ಚೋಳರ ದುರಾಡಳಿತಕ್ಕೆ ಬೇಸತ್ತ ಮಯೂರಶರ್ಮ ಕಾಲಾನಂತರದಲ್ಲಿ ಮಯೂರವರ್ಮನಾಗಿ ಕ್ಷತ್ರಿಯನಾಗಿ ಬದಲಾಗಿದ್ದು ಈಗ ಇತಿಹಾಸ. ಯಾವುದೋ ಕಾಲಘಟ್ಟದಲ್ಲಿ ಕದಂಬರು ಜೈನಧರ್ಮಕ್ಕೆ ಮತಾಂತರಗೊಂಡಿದ್ದೂ ಕೂಡ ಈಗ ಕಥೆ! ’ಕರ್ನಾಟಕ ಸಿಂಹಾಸನ’ವನ್ನು ಸ್ಥಾಪಿಸುವುದಕ್ಕೆ ಶೃಂಗೇರೀ ಪೀಠದ ಮಹರ್ಷಿ ವಿದ್ಯಾರಣ್ಯರು ಕಾರಣೀಭೂತರಾದರು; ಈ ಭೂಪ್ರದೇಶದ ಒಳಿತನ್ನು ಸಂಕಲ್ಪಿಸಿದ ಅವರ ಮನದಲ್ಲಿ ಹಕ್ಕ-ಬುಕ್ಕರು ಯೋಗ್ಯರು ಎನಿಸಿದಾಗ, ಅವರೀರ್ವರನ್ನೂ ಕರೆದು, ಹೇಗೆ ನಡೆಸಬೇಕೆಂದು ಮಾರ್ಗದರ್ಶಿಸಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಮೌರ್ಯರ ಕಾಲಕ್ಕೆ ಚಾಣಕ್ಯನೆಂಬ ಮೇಧಾವಿ ಅವರ ಉನ್ನತಿಗೆ ಕಾರಣನಾದ. ಇಂತಹ ಅಪ್ರತಿಮ ಮೇಧಾವಿಗಳೆಲ್ಲಾ ವೇದಗಳನ್ನೇ ಅಧಾರವಾಗಿಟ್ಟುಕೊಂಡು ನಡೆದರು; ಲೋಕೋಪಕಾರಕವಾದ ಗ್ರಂಥಗಳನ್ನೂ ನೀತಿಪಾಠಗಳನ್ನೂ ಬರೆದರು. ಇಂತಹ ಮಹನೀಯರನ್ನೆಲ್ಲಾ ನೀವು ಸ್ವಾರ್ಥಿಗಳು, ಪ್ರಧಾನ ಮಂತ್ರಿಸ್ಥಾನಗಳಲ್ಲಿ ನಿಂತು ತಮಗೆ ಬೇಕಾದ ರೀತಿ ರಾಜ್ಯಭಾರ ಮಾಡಿಸಿದರು ಎಂದು ತುಚ್ಛವಾಗಿ ಬರೆದಿದ್ದೀರಿ. ಸ್ವಾರ್ಥವಿದ್ದರೆ ಅವರುಗಳೇ ಬೇಕಾದ್ದು ಮಾಡಬಲ್ಲ ಬ್ರಹ್ಮತೇಜವನ್ನು ಪಡೆದಿದ್ದರು ಎಂಬುದನ್ನು ಮರೆಯಬೇಡಿ.

ಸರ್ ಎಂ ವಿಶ್ವೇಶ್ವರಯ್ಯ ಇರದಿದ್ದರೆ ಅರ್ಧ ಕರ್ನಾಟಕಕ್ಕೆ ಇವತ್ತು ನೀರಿನ ಸೌಲಭ್ಯವಾಗಲೀ, ರಾಜ್ಯಕ್ಕೂ ದೇಶಕ್ಕೂ ಜಲವಿದ್ಯುತ್ ಸೌಲಭ್ಯವಾಗಲೀ ಇರುತ್ತಿರಲಿಲ್ಲ. ಅಂದಿನ ಬೆಂಗಳೂರಿಗೆ ಅಭೂತಪೂರ್ವ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿದ ಆ ಮಹಾತ್ಮ ತನ್ನ ಕಾರ್ಯವೈಖರಿಗೆ ಮನಸೋತು ಮೈಸೂರು ಮಹಾರಾಜರು ಕೊಟ್ಟ ಬಹುಮಾನಧನದಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟಿಸಿದರು. ಬದುಕಿನಲ್ಲಿ ಕೌಟುಂಬಿಕ ಸುಖವನ್ನೂ ಸ್ವಾರ್ಥವನ್ನೂ ಬದಿಗೊತ್ತಿದವರು ಸರ್.ಎಂ.ವಿ. ಇನ್ನು ಎಸ್.ಎಲ್ ಭೈರಪ್ಪನಂತಹ ಕಾದಂಬರಿಕಾರರು ಸರಕಾರ ಕೊಟ್ಟ ಸನ್ಮಾನಧನ ೫ ಲಕ್ಷವನ್ನು ಇಡಿಯಾಗಿ ಅದೇ ಸಭೆಯಲ್ಲಿ ಬಡಮಕ್ಕಳ ಉದ್ಧಾರಕ್ಕೆ ಸರಕಾರ ಕೈಗೊಂಡ ಯೋಜನೆಗೆ ನೀಡಿಬಿಟ್ಟರು. ಮೀಸಾ ಕಾಯ್ದೆಯಿಂದ ಸಮಾಜ ತತ್ತರಿಸಿರುವಾಗ ಬೇಸತ್ತಿದ್ದ ಶಿವರಾಮ ಕಾರಂತರು ತಮಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸದೇ ಮರಳಿಸಿ ಅಂದಿನ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದರು. ಇದಲ್ಲದೇ ಸರಕಾರದಿಂದ ಖರ್ಚುಹಾಕಿಸದೇ,  ಪಿತ್ರಾರ್ಜಿತವಾಗಿ ತಮಗೆ ಬಂದಿದ್ದ ಜಮೀನಿನಲ್ಲಿ ಅರ್ಧವನ್ನು ಮಾರಿ-ಬಂದ ಹಣದಿಂದ ಹೆಚ್ಚಿನ ತಿಳುವಳಿಕೆಗಾಗಿ ವಿದೇಶಕ್ಕೆ ಹೋಗಿ ಬಂದರು. ಬದುಕಿನ ಕಡೆತನಕ ಬಡತನದಲ್ಲೇ ಬದುಕಿದ್ದ ಧೀಮಂತ ಡೀವಿಜಿ, ೧೯೭೫ನೇ ಇಸವಿಯಲ್ಲಿ ತನಗೆ ಸಮಾಜದಿಂದ ಸನ್ಮಾನಧನವಾಗಿ ಬಂದ ಹಣವನ್ನು[ ಇಂದಿಗೆ ಆ ಹಣ ಅಜಮಾಸು ಒಂದುಕೋಟಿ ೨೦ ಲಕ್ಷಗಳಷ್ಟು!] ಸಮಾಜದ ಒಳಿತಿಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಲು ನೀಡಿಬಿಟ್ಟರು; ಸನ್ಮಾನ ಪಡೆದ ಮಾರನೇ ದಿನವೇ ಕಾಣಲು ಮನೆಗೆ ಬಂದ ಅತಿಥಿಗಳಿಗೆ ಕಾಫಿ ಕೊಡಲೂ ಸಾಮಗ್ರಿ ಇಲ್ಲದಾಗ ಹತ್ತಿರದ ಶೆಟ್ಟರ ಅಂಗಡಿಗೆ ಹುಡುಗನೊಬ್ಬನ ಮೂಲಕ ಚೀಟಿ ಕಳಿಸುತ್ತಾರೆ: "ಅತಿಥಿಗಳು ಬಂದಿದ್ದಾರೆ, ದಯವಿಟ್ಟು ಕಾಫಿಪುಡಿ ಸಕ್ಕರೆ ಕೊಟ್ಟು ಕಳಿಸಿ, ಒಂದೆರಡು ದಿನಗಳಲ್ಲಿ ಹಣ ತಲ್ಪಿಸುತ್ತೇನೆ." ಡೀವಿಜಿಯವರ ಬಗ್ಗೆ ತುಂಬಾ ಕಳಕಳಿಯಿದ್ದು ಆಡಿದ ಮಾತನ್ನು ತಪ್ಪದವರು ಎಂಬ ವಿಶ್ವಾಸವನ್ನು ಹೊಂದಿದ್ದ ಶೆಟ್ಟರು ಸಾಮಾನು ಕಳಿಸಿದರು, ಮಾರನೇ ದಿನ ತನ್ನ ಗಳಿಕೆಯ ಹಣದಿಂದಲೇ ಡೀವೀಜಿ ಸಾಲವನ್ನು ತೀರಿಸಿದರು.  ಇವರೆಲ್ಲಾ ಬ್ರಾಹ್ಮಣರಲ್ಲವೇ?

ಬ್ರಹ್ಮರ್ಷಿ ವಿಶ್ವಾಮಿತ್ರ ಒಂದಾನೊಂದು ಕಾಲಕ್ಕೆ ಕ್ಷತ್ರಿಯ ರಾಜನಾಗಿದ್ದನೆಂಬುದನ್ನು ನೀವು ಓದಿರಬಹುದೇ? ತನ್ನ ಸಮಸ್ತ ಕ್ಷತ್ರಿಯಬಲವನ್ನೇ ಉಪಯೋಗಿಸಿ ಮುನಿ ವಶಿಷ್ಠರ ಮೇಲೆ ದಾಳಿ ನಡೆಸಿದಾಗ ಪರಿಣಾಮ ಏನಾಯ್ತು ಎಂಬುದರ ಬಗ್ಗೆ ನೀವು ಕೇಳಿರಬಹುದೇ? "ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ" ಎಂಬ ಅನುಭವವನ್ನು ಪಡೆದ ಚಂಡ ಕೌಶಿಕ ವಶಿಷ್ಠರಿಂದಲೇ "ಬ್ರಹ್ಮರ್ಷಿಯಾದೆ" ಎನಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದು ಬ್ರಾಹ್ಮಣ್ಯವನ್ನು ಅನುಸರಿಸಿ ಘೋರವೂ ಕಠಿಣಾತಿಕಠಿಣವೂ ಆದ ಜಪತಪಾದಿಗಳನ್ನು ನಡೆಸಿದ್ದರಿಂದ ಅಲ್ಲವೇ? ಈ ಲೋಕದಲ್ಲಿ ದೇವರ ಅವತಾರಿಯಾಗಿ ಬ್ರಾಹ್ಮಣನಾಗಿ ಜನಿಸಿದ ಪರಶುರಾಮ, ತಂದೆಯ ಸಾವಿನ ದ್ವೇಷವನ್ನು ತೀರಿಸಿಕೊಳ್ಳುವ ಸಲುವಾಗಿ ಕ್ಷತ್ರಿಯ ಕುಲವನ್ನೇ ಬಹುಪಾಲು ಮುಗಿಸಿ ಬ್ರಹ್ಮಕ್ಷತ್ರಿಯನಾಗಿಬಿಟ್ಟ; ಕ್ಷತ್ರಿಯಕುಲದಲ್ಲಿ ಜನಿಸಿದ ಶ್ರೀರಾಮನನ್ನೂ ಯಾದವ ಕುಲದಲ್ಲಿ ಜನಿಸಿದ ಶ್ರೀಕೃಷ್ಣನನ್ನೂ ನಿತ್ಯ ಪೂಜಿಸುವ ಬ್ರಾಹ್ಮಣರು ಪರಶುರಾಮನನ್ನು ಪೂಜಿಸುವಗೊಡವೆಗೆ ಹೋಗಲಿಲ್ಲ!--ಇಲ್ಲಿ ಜಾತ್ಯಾತೀತ ಮನೋಸ್ಥಿತಿಯನ್ನು ತಾವು ಕಾಣಬಲ್ಲಿರೇ? ರಾಮಾಯಣವನ್ನು ಬರೆದ ವಾಲ್ಮೀಕಿ ಬೇಡನಾಗಿದ್ದ ಎಂದು ಎಂದೂ ಹಳಿಯಲಿಲ್ಲ, ವೇದಗಳನ್ನೇ ವಿಂಗಡಿಸಿದ ವೇದವ್ಯಾಸರ ಮೂಲವನ್ನು ದೂಷಿಸಲಿಲ್ಲ ಎಂಬುದನ್ನೂ ಗಮನಿಸಿದರೆ ಒಳಿತು. ಮೇಲಾಗಿ ತೀರಾ ಇತ್ತೀಚಿನವರೆಗೂ ಬದುಕಿದ್ದ ಮಹರ್ಷಿ ಮಹೇಶ್ ಯೋಗಿ ಎಂಬವರು ಈ ದೇಶಕ್ಕೆ ’ಭಾವಾತೀತ ಧ್ಯಾನ’ವನ್ನು ಸುಲಭರೀತಿಯಲ್ಲಿ ತೋರಿಸಿಕೊಟ್ಟರು; ಮಹೇಶ್ ಯೋಗಿ ಹುಟ್ಟಿನಿಂದ ಅಬ್ರಾಹ್ಮಣರಾಗಿದ್ದರೂ ಬ್ರಾಹ್ಮಣರನೇಕರು ಅವರನ್ನು ಗುರುವೆಂದೇ ಗೌರವಿಸಿದರು; ಉತ್ತಮ ಗುರುವಿನ ಸಲ್ಲಕ್ಷಣಗಳನ್ನು ಹೊಂದಿದ್ದ ಅವರು ವಿದೇಶಗಳಲ್ಲೂ ತಮ್ಮ ಧ್ಯಾನಕ್ರಮವನ್ನೂ ಆ ಮೂಲಕ ಲೋಕಹಿತವನ್ನು ಪ್ರಚುರಪಡಿಸಿದರು-ಇದನ್ನೂ ಸ್ವಾರ್ಥಕ್ಕಾಗಿ ಅಥವಾ ಹಣ-ಆಸ್ತಿ ಗಳಿಕೆಗಾಗಿ ಎನ್ನುತ್ತೀರೇನೋ ಅಲ್ಲವೇ? 


ಮಹರ್ಷಿ ಮಹೇಶ್ ಯೋಗಿ

ಭಾವಾತೀತ ಧ್ಯಾನ[Transcendental Meditation]

’ಭಾವಾತೀತ ಧ್ಯಾನ’ವೆನ್ನಿ, ’ಸುದರ್ಶನ ಕ್ರಿಯೆ’ ಅನ್ನಿ ಎಲ್ಲವೂ ನಮ್ಮಲ್ಲಿನ ಧ್ಯಾನಕ್ರಮದ ವಿಭಿನ್ನ ರೂಪಗಳಷ್ಟೇ. ಹಿಂದೂ ಯೋಗವಿಧಿಯ ಅಷ್ಟಾಂಗಯೋಗದಲ್ಲಿ ’ಧಾರಣ’ ಹಂತಕ್ಕೂ ಮೊದಲಿನ ಸ್ಥಿತಿ ಧ್ಯಾನ. ಧ್ಯಾನಸ್ಥ ಸ್ಥಿತಿಯಲ್ಲಿ ಮನುಷ್ಯ ದೈವತ್ವಕ್ಕೆ ಹತ್ತಿರವಾಗುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿ ಪದ್ಮಾಸನಹಾಕಿ ಧ್ಯಾನಕ್ಕೆ ಕುಳಿತ ಹಲವು ಯೋಗಿಗಳು ಗಾಳಿಯಲ್ಲಿ ಬಲೂನು ತೇಲಿದಂತೇ ತೇಲುವುದು ಅಲ್ಲಲ್ಲಿ ಕೇಳಿಬರುತ್ತದೆ; ವಿಜ್ಞಾನಿಗಳೂ ಸೇರಿದಂತೇ ಇದನ್ನು ಹಲವು ಜನ ನೋಡಿಯೂ ಇದ್ದಾರೆ! ಸದ್ಯಕ್ಕೆ ವಿಜ್ಞಾನದಲ್ಲಿ ಇದಕ್ಕೆ ಕಾರಣಗಳಿಲ್ಲ-ಜಾದೂ ಇಲ್ಲದೇ ಮಾನವ ಶರೀರ ಗಾಳಿಯಲ್ಲಿ ತೇಲುವಂತೇ ಮಾಡುವ ಯಾವುದೇ ಸೂತ್ರವೂ ಇಲ್ಲ; ಆದರೆ ಪರಿಪೂರ್ಣ ಧ್ಯಾನಕ್ಕೆ ಅಂತಹ ತೇಲಿಸುವ ತಾಕತ್ತು ಇದೆ ಎಂಬುದು ದಾಖಲೆಗಳ ಸಹಿತ ತಿಳಿದುಬರುತ್ತದೆ. ’ಭಾವಾತೀತ ಧ್ಯಾನ’ವನ್ನು ಕೈಗೊಂಡ ಮಹೇಶ್ ಯೋಗಿಗಳೂ ಮತ್ತು ಅವರ ಶಿಷ್ಯಂದಿರನೇಕರು ಹಾಗೆ ತೇಲುತ್ತಿದ್ದರು ಎಂಬುದನ್ನು ಚಿತ್ರಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಸೆರೆಹಿಡಿಯಲಾಗಿದೆ. ಮೇಲಾಗಿ ಯಾವುದೇ ವೈಜ್ಞಾನಿಕ ಉಪಕರಣಗಳಿಲ್ಲದ ಕಾಲಘಟ್ಟದಲ್ಲಿ ಧ್ಯಾನದಿಂದ ತಪಸ್ಸಿದ್ಧಿಯಿಂದ ತನಗೆ ದೊರೆತ ಖಗೋಳದ ಬಗೆಗಿನ ಮಾಹಿತಿಯನ್ನು ಆರ್ಯಭಟ ಬರೆದಿಟ್ಟಿದ್ದಾನೆ! ವಿಜ್ಞಾನ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಗಣಿತಜ್ಞರು ಪಂಚಾಂಗಶ್ರವಣ ಮಾಡಿಸುತ್ತಿದ್ದರು. ಅಶ್ವಘೋಷ, ಬಾಣ, ಭಾರವಿ, ಭಾಸ, ಕಾಳಿದಾಸ, ಪಾಣಿನಿ ಮೊದಲಾದ ಮಹಾನ್ ಕವಿಗಳು ದಾರ್ಶನಿಕರಂತೆನಿಸಿದ್ದು ಬ್ರಾಹ್ಮಣ್ಯವನ್ನು ಆಚರಿಸಿ ಬರೆದ ತಮ್ಮ ಮಹಾಕಾವ್ಯಗಳಿಂದ.    

ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ ಅರ್ಹರು. ಇದಕ್ಕೆ ತಾಕತ್ತು ಬೇಕಾಗುತ್ತದೆ. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ವಿಚಿತ್ರವೆನಿಸುತ್ತದೆ!

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ-ವಿದ್ಯೆ ಕಲಿಸುವಿಕೆ ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನ, ವೈದ್ಯಕೀಯ[ಆಯುರ್ವೇದ]ಚಿಕಿತ್ಸೆಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು.

 ಒಪಿಕೊಳ್ಳುತ್ತೇನೆ: ಕೆಲವು ಕಾಲಘಟ್ಟದಲ್ಲಿ ಅತಿರೇಕದ ಮಡಿಯೆಂಬ ಭೂತವೂ, ಬಾಲ್ಯವಿವಾಹ-ವಿಧವಾ ಘಟಶ್ರಾದ್ಧ ಇತ್ಯಾದಿ ದುರ್ವಿಧಿಗಳು ನಡೆದಿವೆ. ಅವು ಹಾಗೆ ನಡೆಯಲಿಕ್ಕೆ ಕಾರಣಗಳು ಹಲವು. ಬ್ರಾಹ್ಮಣರಲ್ಲೇ ಹಲವು ಕೂಪಮಂಡೂಕಗಳು ಇದ್ದವು-ಈಗಲೂ ಇವೆ! ಅಂತಹ ಮಂಡೂಕಗಳಿಂದ ರಚಿಸಲ್ಪಟ್ಟು ಮಧ್ಯೆ ತೂರಿಕೊಂಡ ಆಧಾರರಹಿತ ಚಾಳಿಗಳು ಮೂಢನಂಬಿಕೆಗಳಾಗಿವೆ. ಸಂವಹ ಮಾರ್ಗ ಇಷ್ಟೊಂದು ಸುರಳೀತ ನಡೆಯಲು ಆಸ್ಪದವಿಲ್ಲದ ಆ ಕಾಲಗಳಲ್ಲಿ ವಿಪರ್ಯಾಸಗಳೇ ಮಗ್ಗಲು ಬದಲಾಯಿಸಿ ಶಾಸ್ತ್ರಗಳ ಜೊತೆ ಸೇರಿಕೊಂಡು ಶಾಸ್ತ್ರವೇ ಮೂಢನಂಬಿಕೆಯೇನೋ ಎಂಬಂತಾಗಿಬಿಟ್ಟಿದೆ. ಇದಕ್ಕೆ ಚಿಕ್ಕದೊಂದು ಉದಾಹರಣೆ ಕೊಟ್ಟುಬಿಡುತ್ತೇನೆ: ದನದ ಸಗಣಿಯನ್ನು ನಾವು ಗೋಮಯ ಎನ್ನುತ್ತೇವೆ. ಗೋಮಯ ಹೇಗಿರಬೇಕು: ಕರುವನ್ನು ಹಡೆದ ದೇಶೀ ತಳಿಯ ಗೋವು ಬೆಳಗಿನಜಾವ ಎದ್ದಾಗ ಹೊರಹಾಕಿದ ತಾಜಾ ಸಗಣಿ ಮಾತ್ರ ಗೋಮಯವೆನಿಸುತ್ತದೆಯೇ ಹೊರತು ಇಡೀ ದಿನ ಎಲ್ಲೆಲ್ಲೋ ರಸ್ತೆಗಳಲ್ಲೋ ಇನ್ನೆಲ್ಲೋ ಹೆಕ್ಕಿತಂದ ಸಗಣಿ ಗೋಮಯ ಎನಿಸುವುದಿಲ್ಲ. ’ಗೋಮಯ’ ತಾಜಾ ಇದ್ದಾಗ ಅದು ಕ್ರಿಮಿನಾಶಕವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಿದ್ಧಗೊಂಡ ವಿಷಯ. ಶುದ್ಧಾಚರಣೆಯಲ್ಲಿ ಗೋಮಯವನ್ನು ಬಳಸುವುದು ಪದ್ಧತಿ. ಆದರೆ ಅದನ್ನು ಹೇಗೆ ಬಳಸಬೇಕೆಂಬುದೇ ಗೊತ್ತಿಲ್ಲದೇ ಮನಸ್ಸಿಗೆ ಬಂದಹಾಗೇ ಬಳಸಿದರೆ ವಾತಾವರಣದಲ್ಲಿ ಕ್ರಿಮಿಗಳು ದೂರವಾಗುವ ಬದಲು ಹತ್ತಿರವಾಗುತ್ತವೆ; ಯಾಕೆಂದರೆ ಅದೇ ಸಗಣಿಯಲ್ಲಿ ಕಾಲಾನಂತರದಲ್ಲಿ ಸಗಣಿ ಹುಳಗಳು ಹುಟ್ಟಿ  ಸಗಣಿ ಭೂಮಿಯಲ್ಲಿ ಮಣ್ಣಾಗಿ ಸೇರಿಹೋಗುವುದು ಪ್ರಕೃತಿ ನಿಯಮ. ಇದೇ ರೀತಿ ನಮ್ಮೆಲ್ಲಾ ಆಚರಣೆಗಳ ಹಿಂದೆಯೂ ಸಮರ್ಪಕ ಕಾರಣಗಳಿವೆ ಎಂಬುದನ್ನು ನಿಮ್ಮ ಮುಂದೆ ಇಡಲು ಸಂತಸವಾಗುತ್ತದೆ.

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಶ್ರೀಧರರೇ, ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ-ಆ ಗುರುಸ್ಥಾನಕ್ಕೆ ನೀವು ’ವೈದಿಕ ವೈರಸ್’ ಎಂದು ಪರೋಕ್ಷವಾಗಿ ಹೀಯಾಳಿಸಿದ್ದೀರಿ, ಹೀಗಳೆದಿದ್ದೀರಿ. ಬದಲಾವಣೆ ಪ್ರಕೃತಿ ನಿಯಮ ಎಂದು ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. [ತಮಾಷೆಗೆ ಹೀಗೊಂದು ಉದಾಹರಣೆ : ನಾಯಿಯ ಬಾಲಕ್ಕೆ ಮಾತ್ರ ಇಲ್ಲಿ ಡಿಸ್ಕೌಂಟು! ನಳಿಕೆಯಲ್ಲಿರುವವರೆಗೂ ಅದು ನೆಟ್ಟಗೇ ಆದಂತೆನಿಸುತ್ತದೆ, ನಳಿಕೆಯಿಂದ ಹೊರಗೆಳೆದಾಗ ಯಥಾಸ್ಥಿತಿ!! ಇದರರ್ಥ ಭಗವಂತನ ಹೇಳಿಕೆಯಲ್ಲಿ ನಮಗೆ ನಂಬಿಕೆಯಿಲ್ಲದೇ ಉಡಾಫೆ ಎಂದು ಗ್ರಹಿಸಬೇಡಿ, ಇಲ್ಲಿ ನಾಯಿ ಮತ್ತೊಂದು ಜನ್ಮವೆತ್ತುವುದೇ ಪರಿವರ್ತನೆಯೆನಿಸುತ್ತದೆ.] ಬೇಡನೊಬ್ಬ ತಪಸ್ಸಿಗೆ ಕುಳಿತು ಪರಿವರ್ತಿತವಾಗಿ, ಔನ್ನತ್ಯಕ್ಕೆ ನಡೆದ ಮನದಲ್ಲಿ ರಾಮಾಯಣವನ್ನೇ ಬರೆದು ಪೂಜ್ಯನಾದ, ಸರ್ವವಂದ್ಯನಾದ. ರೌಡಿಯೊಬ್ಬ ಮಾಜಿಯಾಗಿ ಪತ್ರಿಕೆಯನ್ನು ನಡೆಸುವಾಗ ಸಮಾಜದ ಎಲ್ಲಾ ಸ್ತರಗಳಲ್ಲೂ ಎಲ್ಲಾ ಜನಾಂಗಗಳಲ್ಲೂ ವೈಷ್ಯಮ್ಯಕ್ಕೆ ನಾಂದಿಹಾಡದೇ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಉತ್ತಮ ಸಂದೇಶಗಳನ್ನು ಹೊತ್ತುಬರುವ ಲೇಖನಗಳನ್ನು ಪ್ರಕಟಿಸಲಿ ಎಂಬುದು ಬ್ರಾಹ್ಮಣರಾದ ನಮ್ಮ ಆಸೆ; ಯಾಕೆಂದರೆ ಹಾಲಿಗೂ ಹಾಲಾಹಲಕ್ಕೂ ಭೇದವೆಣಿಸದ ಮುಗ್ಧಮನೋಸ್ಥಿತಿಯಿಂದ ನಾವು ಹಾಗೆ ಶತಶತಮಾನಗಳಿಂದ ಹಾರೈಸುತ್ತಲೇ ಬಂದಿದ್ದೇವೆ; ನೆಲೆನಿಂತ ಪುರದ ಹಿತವನ್ನು ಕಾಪಾಡುವವರಾಗಿ ’ಪುರೋಹಿತ’ರೆನಿಸಿದ್ದೇವೆ. ’ಅಗ್ನಿ’ ಎಂಬ ಜ್ವಲಿಸುವ ಹೆಸರನ್ನು ಬಳಸುವ [ಅಗ್ನಿ ಎಂಬುದು ಸಂಸ್ಕೃತ ಪದ. ಎಡಪಂಥೀಯರೂ ಸೇರಿದಂತೇ ಬ್ರಾಹ್ಮಣಕುಲದ ಯುವಪೀಳಿಗೆಯ ’ಸುಧಾರಿಸಿದ ಜನ’ ಎನಿಸಿಕೊಂಡವರು ಸಂಸ್ಕೃತವನ್ನು ಸತ್ತಭಾಷೆ ಎಂದಿದ್ದಾರೆ]  ಶ್ರೀಧರರೇ, ತಮ್ಮಿಂದ ನಾವು ಬಯಸಿದ ಬದಲಾವಣೆಯನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸಬಹುದೇ?   

34 comments:

  1. ಬರಹದ ಉತ್ತರ ಚೆನ್ನಾಗಿದೆ.

    ReplyDelete
  2. ವೀ ಆರ್ ಭಟ್ಟರೇ ಚೆನ್ನಾಗಿ ಬರೆದಿದ್ದೀರಿ -- ಆದರೆ ಪೂರ್ವಾಗ್ರಹ ಪೀಡಿತರನ್ನು ಸರಿಗೊಳಿಸುವ ಪ್ರಯತ್ನ ವ್ಯರ್ಥ | ಚಾಣಕ್ಯನ ವಿಷಯ ಬರೆದಿದ್ದೀರಿ -- ಚಾಣಕ್ಯನು ಹೇಗೆ ಜೀವಿಸಿತ್ತಿದ್ದನು ಎಂಬುದಕ್ಕೆ ಆ ಕಾಲದಲ್ಲಿ ನಡೆದ ಕಥೆ -- ಒಂದು ತೀವ್ರ ಚಳಿಗಾಲದಲ್ಲಿ -- ಬಡಬಗ್ಗರಿಗೆ ಹಂಚುವುದಕ್ಕಾಗಿ ರಾಜಾ ಚಂದ್ರಗುಪ್ತನು ಹಲವಾರು "ಕಂಬಳಿ" ಗಳನ್ನೂ ಊರ ಮುಖ್ಯರ ಕೈ ಗೆ ಕೊಟ್ಟಿದ್ದನು | ಅದರಲ್ಲಿ ಒಂದು ಪಾಲು ಚಾಣಕ್ಯ ನ ಕೈ ಗೆ ಬಂದಿತ್ತು | ಆಗ ಚಳಿ ಯಾದುದರಿಂದ "ಕಂಬಳಿ " ಗಳು ತುಂಬಾ ಬೆಲೆ ಬಾಳುತ್ತಿದ್ದವು | ಆದುದರಿಂದ ಇದನ್ನು ತಿಳಿದ "ಕಳ್ಳರು " ಚಾಣಕ್ಯ ನ ಮನೆಗೆ (ಅದೊಂದು ಚಿಕ್ಕ ತಪ್ಪಸ್ಸು ಗೈಯ್ಯುವ ಗುಡಿಸಲು) ನಡು ರಾತ್ರಿ ಯಲ್ಲಿ ಹೊಕ್ಕರು -- ಒಂದು ಕೋಣೆಯಲ್ಲಿ ಕಂಬಳಿ ಇತ್ತು | ಕೈಯ್ಯಲ್ಲಿ ಹಿಡಿಯುವಷ್ಟು ದೊಚಿಕೊಂಡರು -- ಹಾಗೆಯೇ ಮಂತ್ರಿ ಯ ಮನೆಯಾದುದರಿಂದ ಇನ್ನು ಉತ್ತಮ ವಸ್ತುಗಳು ಸಿಗಬಹುದೆಂದು ಇನ್ನೊಂದು ಕೋಣೆಗೆ ಕಾಲಿಟ್ಟರು -- ನೋಡಿದರೆ ಬಹಳ "ಪ್ರಶಾಂತ ಸ್ಥಿತಿಯಲ್ಲಿ" ಕೊರೆಯುತ್ತಿರುವ ಚಳಿ ಯಲ್ಲೂ ಚಾಣಕ್ಯನು ತನ್ನ ಬರಿಯ ಉತ್ತರೀಯವನ್ನೇ ಹೊದೆದುಕೊಂಡು ನೆಲದ ಮೇಲೆ ಮಲಗಿದ್ದನು --" ಜ್ಞಾನೋದಯವಾದ " ಕಳ್ಳರು ಆ ಕಂಬಳಿಗಳನ್ನು ಅಲ್ಲೇ ಇಟ್ಟು - ಮಹಾತ್ಮನ ಪಾದ ಸ್ಪರ್ಶ ಮಾಡಿ ನಮಸ್ಕರಿಸಿದರು -- | ಹಾಗೆಯೇ ಕೇಳಿದರು ಗುರುವರ್ಯಾ ಇದೇನು ಇಷ್ಟು ಕಂಬಳಿಗಳನ್ನು ಇಲ್ಲೇ ಇಟ್ಟು ಬರೇ ನೆಲದಲ್ಲಿ ಮಲಗಿದ್ದಾದರು ಏಕೆ ? -- ಚಾಣಕ್ಯನೆಂದ -- ನಾಳೆ ಈ ಎಲ್ಲಾ ಕಂಬಳಿಗಳನ್ನು ಬಡವರಿಗಿತ್ತು -- ಹಾಗೆಯೇ ಎಲ್ಲರು ಕಂಬಳಿ ಗಳನ್ನು ಪಡೆದುಕೊಂಡ ಮೇಲೂ ಉಳಿಕೆಯಾಗಿದ್ದರೆ (ಮಿಕ್ಕಿದ್ದರೆ) ಮಾತ್ರ ಆ ಕಂಬಳಿಯು ರಾಜನು ನನಗಾಗಿ ಕೊಟ್ಟುದು ಎಂದು ತಿಳಿದುಕೊಂಡು ನನ್ನ ಉಪಯೋಗಕ್ಕೆ ಇರಿಸುವೆನು ಎಂದನು |
    ಆಗಿನ ಆ " ಕಳ್ಳರಿಗಾದರು " ಮನಃ ಪರಿವರ್ತನೆ ಯಾಯಿತು -- ಆದರೆ ಈಗಿನ - ಪರಿವರ್ತನೆಗೆ ಯಾವ ಕಾಲಕ್ಕೂ ವಿಷಯವಲ್ಲದ ಈ " ಅಗ್ನಿ" ಗೆ ನಮೋ ನಮಃ | ಇದು ಶಮನ ವಾಗದ "ಈರ್ಷೆ" ಎಂಬ ವಿಶಾಗ್ನಿ ! |

    ReplyDelete
    Replies
    1. ಮಹನಿಯರೇ ಸರಿಯಾಗಿ ಹೇಳಿದ್ದಿರಿ

      Delete
  3. ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಹಂದಿಯೊಡನೆ ಕಾದಾಡಬಾರದು, ಅದಕ್ಕೆ ಕೆಸರು ಇಷ್ಟ, ಕೆಸರಿನಲ್ಲಿ ಹೊರಳಾಡಿದಷ್ಟೂ ಅದಕ್ಕೆ ಸಂತಸವಾಗುತ್ತಿರುತ್ತದೆ.

    ReplyDelete
  4. Arunkumar sir heLiddu sari ide....
    in this process you shared a wonderful information....
    super article sir.....

    ReplyDelete
  5. Article has come out with the proper reply. However, I really do not feel this could make any impact on the the people who are blindfolded.

    "Konana Munde Kinnari Barisidante".

    ReplyDelete
  6. criticizing Brahmin's is fashion in post Independence India.I don't not understand the reason for that, is it because they don't react.Do these people have same guts to criticize Muslims in same way ?

    ReplyDelete
  7. Superb article...We are all know that what Agni Shridhar's background, what he has done some years back...Only word we can say is 'Naayi Bogalidre Devaloka halagolla'. That's it..

    ReplyDelete
  8. ಇದನ್ನು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಿಸಿರಿ.
    ಚೆನ್ನಾಗಿ ಮೂಡಿಸಿದ್ದೀರಿ.
    ಬ್ರಾಹ್ಮಣ್ಯ ಹುಟ್ಟಿನಿಂದಲ್ಲ. ಕರ್ಮದಿಂದ.

    ReplyDelete
  9. ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಜ್ಞಾನಕ್ಕೆ ಮತ್ತು ಅದನ್ನು ಸರಳವಾಗಿ ವಿವರಿಸುವ ಕಲೆಗೆ ಮತ್ತು ವ್ಯಯಿಸಿದ ಕಾಲಕ್ಕೆ ನಮೋ ನಮಃ.

    ReplyDelete
  10. ನೀವು ನಿಮ್ಮನ್ನ ಶ್ರೇಷ್ಠರು ಎಂದೇ ತಿಳಿದಿದ್ದೀರಿ ಅಲ್ಲವೇ ವಿ.ಆರ್.ಭಟ್..
    ನೀವು ಕೇವಲ ಪ್ರಸಿದ್ಧಿಗಾಗಿ ಹೀಗೆ ಬರೆಯುವುದು ಶ್ರೇಯಸ್ಕರವಲ್ಲಾ.ಬ್ರಾಹ್ಮಣರು ಎಂದೆನಿಸಿಕೊಂಡವರಿಂದ ಸಮಾಜದ ಉಳಿದ ಪಂಗಡದವರಿಗೆ ಅತ್ಯಾಚಾರ ಆಗೇ ಇಲ್ಲ ಎಂಬುದು ನಿಮ್ಮ ವಾದವೇ?..
    ಮೂಲ ವೇದಗಳು ನಮ್ಮೆಲ್ಲಾ ಆತ್ಮಗಳು ದೇವಾತ್ಮಗಳು ಎಂದು ಹೇಳಿವೆ.ಆದರೆ ಸಾಮಾಜಿಕ ಜೀವನವನ್ನ ಒಡೆದವರು ಬ್ರಾಹ್ಮಣರೇ...ಕುವೆಂಪುರವರ ಬಾಲ್ಯದಲ್ಲಿ ಬ್ರಾಹ್ಮಣರಿಂದಾದ ದೌರ್ಜನ್ಯವನ್ನ ನೀವು ಅಲ್ಲಗಳೆಯುತ್ತೀರೆನು??...
    ಅವರು ಮಾಡಿದ ಅನಾಚಾರಗಳನ್ನು ಮುಚ್ಚಿಕೊಳ್ಳುತ್ತೀರೇನು??...
    ಕೆಳಜಾತಿಯವರೆಂದು ಹೀಗಳೆದು ಅಂಬೇಡ್ಕರ ಅವರನ್ನ ತುಳಿದಿದ್ದು ಬ್ರಾಹ್ಮಣರೇ..
    ಮಾಂಸದ ಸೇವನೆ ಮಾಡುವವರೆಂದು ಕೆಟ್ಟ ದೃಷ್ಟಿಯಿಂದ ನೋಡಿದವರು ಬ್ರಾಹ್ಮಣರೇ ಅಲ್ಲವೇ??...
    ನಾಚಿಕೆಯಾಗುತ್ತೆ ನೀವು ಮಾತಾಡುವುದನ್ನ ಕೇಳಿ...ಶ್ರೀಧರ ಅವರು ಬರೆದರು ಅಂತ ನೀವೂ ಕೂಡ ಜಾತಿಯ ಪರಿಧಿಯೊಳಗೆ ಸಾಯುವುದನ್ನ ಕಂಡು..ಥೂ..
    ಜಾತಿಯನ್ನ ಬಿಟ್ಟು ಹೊರಗೆ ಬಂದಾಗ ಮಾತ್ರ ನಿಮ್ಮ ಮಾತಿಗೆ ಬೆಲೆ.ವಿಶ್ವ ಮಾನವರಾಗಿ ಮೊದಲು.
    ಬ್ರಹ್ಮ ಪರಮಾತ್ಮ.ಈಶ ಪರಮಾತ್ಮ.ಅಲ್ಲಾ ಪರಮಾತ್ಮ.ಏಸು ಪರಮಾತ್ಮ...
    ಹೀಗಿರುವಾಗ ಎಲ್ಲಿಯ ಬ್ರಾಹ್ಮಣ ಎಲ್ಲಿಯ ಜಾತಿ ಪಂಗಡ...
    ನೋಡಿ ನೀವು ಮನುಜಮತ ವಿಶ್ವಪಥದ ಹಾದಿಯಲ್ಲಿ ಯೋಚನೆ ಮಾಡಿ...
    ಬ್ರಾಹ್ಮಣ ಬ್ರಾಹ್ಮಣ ಅಂತಾ ನಾಯಿಯ ಹಾಗೆ ಬೊಗಳಬೇಡಿ...

    ReplyDelete
    Replies
    1. ಓಹೋ ಹಾಗಿದ್ದರೆ ಬ್ರಾಹ್ಮಣರ ಮೇಲೆ ಯಾರು ದೌರ್ಜನ್ಯ ಮಾಡೇ ಇಲ್ಲಾ ?

      Delete
  11. ವೀರೇಶ, ನಿಮ್ಮ ಹೆಸರಲ್ಲಿ ಸಜ್ಜನ್ ಇದ್ದಮಾತ್ರಕ್ಕೆ ಒಳಗಿನ ದುರ್ಗುಣ ಹೋಗುವುದಿಲ್ಲ! ಸಲಿಗೆ ಸ್ವಲ್ಪ ಜಾಸ್ತಿಯಾಗಿ ನಾಲಿಗೆ ಉದ್ದವಾಗುತ್ತಿದೆ ಎನಿಸುತ್ತಿದೆ, ಹದ್ದುಮೀರಿ ಮಾತನಾಡಿದ್ದೀರಿ, ನಿಮ್ಮಂಥವರ ಸಖ್ಯವನ್ನು ಬಯಸುವುದು ನನ್ನಧರ್ಮವಲ್ಲ, ಕುವೆಂಪುವಿಗೆ ಇದ್ದ ರಾಯಗಿರಿಗೆ ಅವರ ಮನೆಗೇ ಬಂದು ವಿದ್ಯೆ ಕಲಿಸಿದವರು ದಕ್ಷಿಣ ಕನ್ನಡಡ ಉಪಾಧ್ಯಾಯರು, ಕುವೆಂಪು ಸಹಪಂಕ್ತಿ ಭೋಜನಕ್ಕೆ ಅವಕಾಶ ಕೊಡಲಿಲ್ಲ ಎಂದು ವಿನಾಕಾರಣ ಬ್ರಾಹ್ಮಣರನ್ನು ಹೀಗಳೆದು ಆಮೇಲೆ ಹಾಗೆ ಮಾಡಿಲ್ಲಾ ಎನ್ನುತ್ತಾ 'ರಾಮಾಯಣ ದರ್ಶನಂ' ಪುಸ್ತಕವನ್ನು ಅವರ ಗುರು ವೆಂಕಣ್ಣಯ್ಯ[ಬ್ರಾಹ್ಮಣ] ನವರಿಗೆ ಅರ್ಪೀದ್ದೇನೆ ಎಂದರು. ಆಚಾರವಂತ ಮತ್ತು ಪೂಜವೃತ್ತಿನಿರತ ಕರ್ಮಠ ಬ್ರಾಹ್ಮಣರ ಜೊತೆ ನಾವೂ ಕುಳಿತು ಊಟಮಾಡುವುದಿಲ್ಲ, ಅಂಥವರಿಗೆ ನಾವೂ ದಾನ ಕೊಡುತ್ತೇವೆ ಎಂಬುದನ್ನು ಅರಿಯಿರಿ, ಸಂಸ್ಕೃತದ ಗಂಧಗಾಳಿಯಿಲ್ಲದ ನೀವೂ ಅಟ್ಟಿಸಿಕೊಂಡು ಬರುತ್ತೀರಿ ಅಲ್ಲವೇ ? ನಿಮ್ಮ ಅರ್ಹತೆಗೆ ಇದಕ್ಕಿಂತಲೂ ಹೆಚ್ಚಿಗೆ ಹೇಳುವುದು ಬೇಕಾಗಿಲ್ಲ.

    ReplyDelete
  12. This comment has been removed by the author.

    ReplyDelete
  13. ಚೆನ್ನಾಗಿ ಬರೆದಿದ್ದೀರಿ ಸರ್ , ಆದರೆ ನನಗೆ ಅನಿಸೋದು ಏನೆಂದರೆ ಇಂತಹವರಿಗೆ ಉದಾಸೀನವೇ ಮದ್ದೇನೋ ಅಂತ!

    ReplyDelete
  14. ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ...

    ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಕಳೆದವು. ಅದೆಷ್ಟು ಮೀಸಲಾತಿಗಳು, ಅದೆಷ್ಟು ಜಾತ್ಯಾಧಾರಿತ ಮಾನ-ಸಂಮಾನಗಳು, ಜಾತಿಯನ್ನೇ ನೋಡಿ ಮಣೆಹಾಕುವ ರಾಜಕೀಯ ವಿದ್ಯಮಾನಗಳು, ಜಾತಿ-ಜಾತಿ-ಜಾತಿ ಎಂಬ ಸರ್ಕಾರಿ ಪತ್ರಗಳು ಮತ್ತು ತಾಪತ್ರಯಗಳು. ಹೀಗಿರುವಾಗ ನೀವು ಆ ಕುರಿತು ಒಂದು ಅಭಿಪ್ರಾಯ ಹೇಳಿದರೆ, "ನೀವೂ ಹೀಗೇ ಅಂತ ತಿಳಿದಿರಲಿಲ್ಲ" ಎಂಬ ಅಪಸ್ಡರಗಳು ಕೇಳಿಬರುತ್ತವೆ. ಇದೆಂಥ ನ್ಯಾಯ!!!ಹೇಳಿ ಕೇಳಿ ನಮ್ಮದು ಜಾತ್ಯತೀತ ರಾಷ್ಟ್ರ!ವಿಚಿತ್ರ ವೆನಿಸುವುದಿಲ್ಲವೇ?

    ಭಟ್ಟರೇ,
    ಇಲ್ಲೊಂದು ಸೂಕ್ಷ್ಮ ಇದೆ! 'ಜಾತಿ' ಮತ್ತು 'ವರ್ಣ' ಇವೆರಡೂ ಬೇರೆ, ಬೇರೆ! ಹುಟ್ಟಿನಿಂದ ನಿರ್ಣಯವಾಗುವದು ಜಾತಿ, ಕೆಲಸ(ಕರ್ಮ)ದಿಂದ ನಿರ್ಣಯಮಾಡಿದ್ದು ವರ್ಣ. ಹೆಚ್ಚಾಗಿ ಸಂಸ್ಕೃತದಲ್ಲಿ ಹೇಳುವ ಬ್ರಾಹ್ಮಣ, ಕ್ಷತ್ತ್ರಿಯ... ಈ ಪದಗಳು ವರ್ಣ ಎಂಬ ಅರ್ಥದಲ್ಲಿ ಬಳಕೆಯಾಗಿವೆ. ಹಾಗಾಗಿ ಸಮಾಜರೂಪೀ ಪರಮಾತ್ಮನ ವರ್ಣನೆಯ ಸಂದರ್ಭದಲ್ಲಿ ಆಯಾ ಕೆಲಸ-ಕಾರ್ಯಗಳಿಗನುಸಾರವಾಗಿ ದೇವದೇಹವನ್ನು ಗುರುತಿಸಿ ಸ್ತುತಿಸಲಾಗಿದೆ. ಇಲ್ಲಿ ಮೇಲು-ಕೀಳು ಎಂಬ ಪ್ರಶ್ನೆಯೇ ಇಲ್ಲಾ! ದೇಹದ ಪ್ರತಿಭಾಗವೂ ತನ್ನದೇ ಆದ ಮಹತ್ವವನ್ನು ತಾನು ಪಡೆದಿದೆ...ಅಲ್ಲವೇ???

    ReplyDelete
  15. ಆತ್ಮೀಯ ವಿ.ಆರ್.ಭಟ್ ರವರೆ,

    ಅಗ್ನಿ ಶ್ರೀಧರ್ ರವರ ಲೇಖನಕ್ಕೆ ತಾವು ಪ್ರತಿಕ್ರಿಯಿಸಿರುವುದು ನನ್ನ ಅನಿಸಿಕೆಯಲ್ಲಿ ವ್ಯರ್ಥ ಪ್ರಯತ್ನವೇ ಸರಿ. ಈ ಸ್ವ ಘೋಷಿತ ಬುಧ್ಧಿಜೀವಿಗಳಿಗೆ ಸತ್ಯವು ಖಂಡಿತವಾಗಿಯೂ ಗೊತ್ತಿದೆ. ಆದರೆ ಇವರುಗಳಿಗೆ ಬ್ರಾಹ್ಮಣರನ್ನು ಬಯ್ಯುವುದರಿಂದ ಒಂದು ತರಹ ಮಾನಸಿಕ ವಿಕೃತ ನೆಮ್ಮದಿ ದೊರಕುತ್ತದೆ. ನಮ್ಮನ್ನು ಬಯ್ಯುವುದು ಇವರುಗಳಿಗೆ ಒಂದು ತರಹ ಮಾನಸಿಕ ಖಾಯಿಲೆ. ಇವರು ಮತ್ತು ಇವರ ಬ್ರಾಹ್ಮಣ ನಿಂದನಾ ವಿಚಾರಗಳು ಚರ್ವಿತ ಚರ್ವಣ. ಈ ವಿಕೃತ ಮನಸ್ಸಿನ ಬ್ರಾಹ್ಮಣ ನಿಂದಕರಿಗೆ ಬೇರೆ ಬೇರೆ ತರಹದ ಪದಗಳನ್ನು ಸಂಶೂಧಿಸಿ- ನಿಂದಿಸಿ ಅವರ ವಲಯಗಳಲ್ಲಿ ಅವರ ಬೆನ್ನುಗಳನ್ನು ಅವರೇ ತಟ್ಟಿಕೊಳ್ಳುತ್ತಾರೆ. ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ.
    ಆಂಗ್ಲರು ಬರುವ ಪೂರ್ವದಲ್ಲಿ ಭಾರತ ದೇಶದ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಅನ್ನುವುದರ ಬಗ್ಗೆ ಪ್ರಖ್ಯಾತ ಗಾಂಧಿವಾದಿಗಳಾದ ದಿ.ಧರ್ಮಪಾಲ್ ರವರು "The Beatiful Tree" ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಇರುವ ಯಾವುದೇ ಅಭಿಪ್ರಾಯಗಳು ಲೇಖಕರದ್ದಲ್ಲ. ಆಂಗ್ಲರೆ ಅವರು ಭಾರತ ದೇಶಕ್ಕೆ ಹೊಸದಾಗಿ ಬಂದತ್ತ ಸಂದರ್ಭದಲ್ಲಿ ಬೇರೆ ಬೇರೆ ತನಿಖಾ ಸಮಿತಿಗಳನ್ನು ನೇಮಿಸಿ ಸಂಗ್ರಹಿಸಿದ ವರದಿಗಳು ನಕಲಷ್ಟೇ ಆ ಪುಸ್ತಕದಲ್ಲಿ ಇರುತ್ತದೆ. ಈ ಬುಧ್ಧಿಜಿವಿಗಳು ನಮ್ಮ ಮೇಲೆ ಆಪಾದಿಸುವ ಎಲ್ಲ ಸಂಗತಿಗಳಿಗೆ ಇದರಲ್ಲಿ ಉತ್ತರವಿರುತ್ತದೆ.
    ಈ ಪುಸ್ತಕವು ಉಚಿತವಾಗಿ ಅಂತರ್ಜಾಲದಲ್ಲಿ ದೊರಕುತ್ತದೆ. ಇದನ್ನು ಎಲ್ಲ ಬುಧ್ಧಿ ಜೀವಿಗಳಿಗೆ ನಾನೇ ನಿಡಿರುತ್ತೆನೆ. ದುರಾದೃಷ್ಟವೆಂದರೆ ನಮ್ಮ ಜನಾಂಗದ ಯಾವ ಬುಧ್ಧಿಜಿವಿಗಳಾಗಲಿ, ಪತ್ರಿಕಾಕರ್ತಾರಾಗಲಿ ಇದರ ಬಗ್ಗೆ ಎಲ್ಲೂ ಕಿಂಚಿತ್ ಉಲ್ಲೇಖ ಮಾಡುವುದಿಲ್ಲ. ನಮ್ಮ ಆಧ್ಯಾತ್ಮಿಕ ಉಪನ್ಯಾಸಕರಿಗೂ ಕೂಡ ನಾನು ಈ ವಿಷಯಗಳನ್ನು ಉಲ್ಲೇಖ ಮಾಡಿ ಎಂದು ವಿನಂತಿ ಮಾಡಿಕೊಂಡಿರುತ್ತೇನೆ. ಆದರು ಯಾರ ಗಮನವೂ ಇದರ ಬಗ್ಗೆ ಇಲ್ಲ. ನೀವು ಕೂಡ ಬಿಡುವು ಮಾಡಿಕೊಂಡು ಇದನ್ನು ಓದಾಗ ಬೇಕಾಗಿ ವಿನಂತಿ. ಅಥವಾ ತಾವು ಈಗಾಗಲೇ ಓದಿರಬಹುದು. ಈ ಪುಸ್ತಕದ ವಿಚಾರಗಳನ್ನು ಪ್ರಚಾರ ಮಾಡಲು ವಿನಂತಿ.

    ReplyDelete
  16. ನಮಸ್ಕಾರ ವಿ.ಆರ್.ಭಟ್ಟರಿಗೆ

    ನೀವು ಹೀಗೆ ಬರೆದಿದ್ದೀರಿ:

    >>ಯಾವುದೇ ವೈಜ್ಞಾನಿಕ ಉಪಕರಣಗಳಿಲ್ಲದ ಕಾಲಘಟ್ಟದಲ್ಲಿ ಧ್ಯಾನದಿಂದ ತಪಸ್ಸಿದ್ಧಿಯಿಂದ
    >> ತನಗೆ ದೊರೆತ ಖಗೋಳದ ಬಗೆಗಿನ ಮಾಹಿತಿಯನ್ನು ಆರ್ಯಭಟ ಬರೆದಿಟ್ಟಿದ್ದಾನೆ!

    ಹೀಗೆ ಬರೆಯಲು ನಿಮಗೆ ಆಧಾರಗಳೇನಾದರೂ ಇದ್ದುವೇ? ಇದ್ದರೆ ತಿಳಿಸಿ. ತಿಳಿಯಲು ನನಗೆ ಕುತೂಹಲವಿದೆ.

    ನನ್ನೆಣಿಕೆಯಲ್ಲಿ ಆರ್ಯಭಟನ ಕಾಲದಲ್ಲೂ ಉಪಕರಣಗಳು ಇದ್ದೇ ಇದ್ದಿರಬೇಕು.( ನನ್ನ ನೆನಪಿಗೆ ತಿಳಿದ ಮಟ್ಟಿಗೆ) ಆರ್ಯಭಟನ ಗ್ರಂಥ ಬಹಳ ಸಂಕ್ಷಿಪ್ತವಾದದ್ದರಿಂದ (ಅವನ ಶೈಲಿಯೇ ಹಾಗೆ) ಅವನು ಅದರ ವಿವರಗಳನ್ನೇನೂ ಕೊಟ್ಟಿಲ್ಲದೇ ಇರಬಹುದು. ಆದರೆ ನಂತರದ ವರಾಹಮಿಹಿರ ಬ್ರಹ್ಮಗುಪ್ತ ಮೊದಲಾದವರು, ಹೇಗೆ ಲೆಕ್ಕಾಚಾರ ಮಾಡಬೇಕು, ಯಂತ್ರಗಳನ್ನು ಹೇಗೆ ಜೋಡಿಸಬೇಕು - ಈ ಮೊದಲಾದ ವಿಷಯಗಳನ್ನೂ ಚೆನ್ನಾಗಿಯೆ ಬರೆದಿದ್ದಾರೆ.

    ಹಾಗಾಗಿ ಧ್ಯಾನದಿಂದಲೇ ಖಗೋಳದ ವಿಷಯವನ್ನೆಲ್ಲ ಬರೆದಿದ್ದಾರೆ ಎಂದು ಹೇಳುವುದು ಕಷ್ಟವಾಗುತ್ತದೆ.

    ReplyDelete
    Replies
    1. ನಮಸ್ಕಾರ ಹಂಸಾನಂದಿಗಳೇ
      ಆರ್ಯಬಟನ ಕಾಲದಲ್ಲಿ ಬರೆದ "ಜಗತ್ ಪ್ರವ್ಯಹತ " ಇದು ಗುರುತ್ವಬಲ ಮತ್ತು ಆಕಾಶ,ಸ್ತಳ ಮುಂತಾದವುಗಳನ್ನು ವಿವರಿಸುತ್ತವೆ.
      ಇಂದಿನ quantum physics ವಿವರಿಸುವ ಗುರುತ್ವ ಬಲದ ವರ್ತನೆ ಮುಂತದವುಗನ್ನು ಆಗಲೇ ಬರೆದಿಟ್ಟಿದ್ದಾರೆ
      ಒಂದು ಕಡೆ (ಪ್ರವ್ಯಹತ ಭಾಗ ೨,ಉಪಕರಣಾನಿ ) ಇಲ್ಲಿ ವಿವರಿಸಿದಂತೆ ಹಲವರು ಉಪಕರಣಗಳು ಮನೋಶಕ್ತಿಯಿಂದ ಚಲಿತವಾದದ್ದು .
      "ಜಗತ್ ಪ್ರವ್ಯಹತ " ಇದು ನಿಮಗೆ ಅಂತರಜಾಲದಲ್ಲಿ ಸಿಗುವದಿಲ್ಲ ಆದರೆ ಹಳೆಯ ಯಾವುದರು ಗ್ರಂಥಾಲಯದಲ್ಲಿ ಸಿಗಬಹುದು .

      Delete
  17. ನಮಸ್ಕಾರ ಹಂಸಾನಂದಿಗಳೇ,

    ಲೇಖನದ ಮೂಲ ಉದ್ದೇಶದ ಹೊರಗಿನ ಪ್ರಶ್ನೆಯನ್ನು ಕೇಳಿದ್ದೀರಿ. ಒಂದೊಮ್ಮೆ ಆರ್ಯಭಟನಲ್ಲಿ ಉಪಕರಣಗಳೇ ಇದ್ದವು ಎಂದುಕೊಂಡರೂ ಅವು ಇಂದಿನ ಉಪಕರಣಗಳಿಗಿಂತಾ ಹೆಚ್ಚಿನ ಸಾಮರ್ಥ್ಯದವು ಎಂಬುದನ್ನು ನಾವು ಅರಿಯಬೇಕಾಗುತ್ತದೆ. ಆರ್ಯಭಟನ ಕುರಿತೇ ಬರೆದರೆ ಆಗ ತಮಗೆ ಸಾಧಾರ ವಿವರಣೆ ಕೊಡುವಲ್ಲಿ ಮುಂದಾಗುತ್ತೇನೆ, ಈಗ ಕಾಲಮಿತಿಯೊಳಗೆ ಕಾರ್ಯ ನಿರ್ವಹಿಸುವುದರಿಂದ ಆ ಕೆಲಸ ಸದ್ಯಕ್ಕೆ ಸಾಧ್ಯವಿಲ್ಲ. ಮನದ ಹಸಿವಿಗೆ ಆಹಾರ ಹುಡುಕುವ ಕಲೆ ಹೇಗೂ ನಿಮಗೆ ಗೊತ್ತೇ ಇದೆ, ಅದನ್ನೇನು ಇನ್ನೊಂದುಕಡೆಯಿಂದ ಕಡಾ ತಂದು ಬಳಸಬೇಕೇ ? ಇಲ್ಲ, ಹೀಗಾಗಿ ಆರ್ಯಭಟನ ಕಾಲಕ್ಕೆ ಇದ್ದ ಉಪಕರಣಗಳ ಪರಿಚಯ ತಾವೇ ಮಾಡಿಸಿದರೂ ಬಹಳ ಉಪಕಾರ,

    ಧ್ಯಾನದ ಮಹತ್ವ ತಮಗೆ ತಿಳಿದೇ ಇದೆಯಲ್ಲ, ಇಲ್ಲೇ ಮೇಲೆ ಉದಾಹರಣೆ ಹೇಳಿದ್ದೇನೆ. ಧ್ಯಾನಸ್ಥ ಸ್ಥಿತಿಯಲ್ಲಿ ಕಾಣದ್ದೂ ಕಾಣುತ್ತದೆ, ಈ ಲೋಕದ ಅರಿವಿಗೆ ನಿಲುಕದ ಹಲವು ವಿಷಯಗಳು ಅರಿವಿಗೆ ಬರುತ್ತವೆ. ಧ್ಯಾನದಲ್ಲಿ ಮುನ್ನಡೆಯುತ್ತಾ ಹಲವು ಸಿದ್ಧಿಗಳು ಸಿದ್ಧಿಸುತ್ತವೆ-ಎಡವಿದರೆ ಆ ಸಿದ್ಧಿಗಳನ್ನು ಬಳಸಿಕೊಂಡು ಪವಾಡ ನಡೆಸಬಹುದು. ಎಡವಲಿ ಎಂದೇ ಅವು ದಾರಿಗೆ ಅಡ್ಡಲಾಗಿ ಬರುತ್ತವೆ ಎಂಬುದು ಸಾಧಕರ ಅಭಿಮತ. ಅಂತಹ ಹಲವು ಸಿದ್ಧಿಗಳನ್ನೂ ಲೆಕ್ಕಿಸದೇ ಸಾಧನೆ ಮುಂದುವರಿದಾಗ ಈ ಲೋಕದ ಮೋಹ ಕ್ಷಯವಾಗುತ್ತದೆ!-ಮೋಕ್ಷವಾಗುತ್ತದೆ. ಧನ್ಯವಾದ

    ReplyDelete
  18. shree v r bhattare, chennaagi lEkhana barediddeeri. innoo bareyutthaa iri. it is very important for the young, the adult, the next generations, in order to set matters straight.

    ReplyDelete
  19. chennagide sir.. adru bande mele neeru surida hage, aa vykthige yestu baydaru waste annisutte.

    ReplyDelete
  20. V.R.Bhatji, your answer is very informative and superb . But I think we can convince ignorants, we can convince intelligents, but you can't convince stupids. The people like Sridhar, gouri lankesh, UR ananthmurthy and so called intellectuals earn their bread by criticizing Hinduism, brahmins, india and so on . and praising islam and other religion

    ReplyDelete
  21. ಅರ್ಥ ಪೂರ್ಣ ಲೆಖನ ..........

    ReplyDelete
  22. Sir Wonderful!!!!!!!! Vaidika Dharmada pradaana devathe Aagneyaadhipathi agniya hesrittukondu vaidika dharmakke baythiro Vaidika Deva vishnuvina anya naama dhaarak Shreedhara nimagistu dikkaaravirali.....

    ReplyDelete
  23. excellent article excellent replies, excellent clarifications,THANKS TO V R BHATT

    ReplyDelete
  24. Really excellent reply liked it very much.purvagraha peeditharige idella artha agutta anta annisute.But these things are our responsibility to make them understand.l know that sathya yavagalu apathya intha janagalige.Once again it is a wonderful article.Thank you.

    ReplyDelete