ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, April 18, 2012

ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಚಿತ್ರಋಣ : ಅಂತರ್ಜಾಲ
ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಒಂದು ಕೆ.ಜಿ ಹಣ್ಣುಗಳೊಂದಿಗೆ ವೃದ್ಧ ದಂಪತಿಯನ್ನು ಭೇಟಿಯಾದೆ. ಬೆಂಗಳೂರಿನ ಮಲ್ಲೇಶ್ವರದ ಅಪಾರ್ಟ್ ಮೆಂಟ್ ಒಂದರಲ್ಲಿ ಅವರ ವಾಸ. ಯಜಮಾನರಿಗೆ ಅಜಮಾಸು ೯೩-೯೪ ವರ್ಷ, ಯಜಮಾನರ ಯಜಮಾನತಿಯವರಿಗೆ ಒಂದೈದು ಕಮ್ಮಿ ಇರಬಹುದು. ಒಂದು ಚಿಕಿತ್ಸಾಲಯದಲ್ಲಿ, ಅವರು ಮುಪ್ಪಿನ ನೋವಿನ ತೊಂದರೆಗಳಿಗೆ ಅಲ್ಲಿಗೆ ಬಂದಾಗ, ನಾನು ಇನ್ನವುದೋ ಕಾರಣದಿಂದ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದ್ದಾಗ, ವೈದ್ಯರ ಸಂದರ್ಶನಕ್ಕೆ ಸರದಿಯಲ್ಲಿ ಕಾಯುವಾಗ ಆದ ಚಿಕ್ಕ ಪರಿಚಯ. ಗಂಟೆಯ ಕಾಲ ಮಾತನಾಡಿ ನಮಗೇ ಯಾವುದೋ ಜನ್ಮದ ಋಣವೆಂಬಂತೇ ಹರಟಿದ್ದು ವಿಶೇಷ! ಆ ವೃದ್ಧರ ಜೊತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲ. ಅವರೇ ಸಾಮಾನು ತಂದುಕೊಳ್ಳಬೇಕು, ಅವರೇ ಅಡಿಗೆ ಮಾಡಿಕೊಳ್ಳಬೇಕು, ಅವರೇ ಪರಸ್ಪರ ಮಾತನಾಡಿ ಕಾಲವ್ಯಯಿಸಬೇಕು, ಅವರೀರ್ವರ ನೋವಿಗೂ-ನಲಿವಿಗೂ ಅವರೇ ಅವರೇ ಮತ್ತು ಅವರೇ! ಯಾಕೆ ಸಂತನಭಾಗ್ಯ ಇಲ್ಲವೇ? ಇದೆಯಪ್ಪಾ, ಎಲ್ಲವೂ ಇದೆ; ಮಗ ಅಮೇರಿಕದಲ್ಲಿ ದೊಡ್ಡ ವೈದ್ಯ, ಮಗಳು ಬೆಂಗಳೂರಿನಲ್ಲೇ ಇದ್ದು ಆಕೆ ಇವರಿಗಿಂತಾ ಮುಪ್ಪಾದವರಂತೇ ಇದ್ದಾಳಂತೆ-ಗೂರಲು ಉಬ್ಬಸ ರೋಗದ ಅವಳ ಯಜಮಾನರನ್ನೂ ಅವಳ ಮಕ್ಕಳನ್ನೂ ಸಂಭಾಳಿಸುವುದೇ ಅವಳಿಗೆ ಕಷ್ಟವಾಗಿ ಈ ಕಡೆ ತಲೆಹಾಕಲು ಆಗುತ್ತಿಲ್ಲವಂತೆ. ವೈದ್ಯ ಮಗ ಅಮೇರಿಕಾದಿಂದ ಎರಡೋ ಮೂರೋ ವರ್ಷಗಳಿಗೊಮ್ಮೆ ಫ್ಲೈಯಿಂಗ್ ವಿಸಿಟ್ ಕೊಡುತ್ತಿರುತ್ತಾನಂತೆ. ಮಗನ ಜೀವನ ಅಲ್ಲಿ ಸುಖಕರವಾಗಿದೆ ಎಂಬ ಮಾನಸಿಕ ಸಂತೋಷದಲ್ಲೇ ತಮ್ಮ ಕಷ್ಟಗಳನ್ನು ಮರೆಯುತ್ತಾ ಕಾಲಹಾಕುತ್ತಿದ್ದಾರೆ. ಇಬ್ಬರೂ ಹುಷಾರಿಲ್ಲದೇ ಏಳಲಾಗದಿದ್ದರೆ ದೂರವಾಣಿಯ ಮುಖಾಂತರ ಔಷಧ ಅಂಗಡಿಯ ಮಾಲೀಕನಿಗೆ ಅಥವಾ ಗೊತ್ತಿರುವ ಚಿಕಿತ್ಸಾಲಯದ ವೈದ್ಯರ ಸಹಾಯಕರಿಗೆ ದುಂಬಾಲು ಬೀಳುತ್ತಾರೆ; ಒಲ್ಲದ ಮನಸ್ಸಿನಲ್ಲೇ ಅವರು ಅಲ್ಪಸ್ವಲ್ಪ ಸಹಕಾರ ನೀಡಿದರೆ ಉಂಟು ಇಲ್ಲದಿದ್ದರೆ ಇಲ್ಲ.

ಯಾರಾದರೂ ಮನೆಗೆ ಬಂದರೆ ಕಷ್ಟಪಟ್ಟು ಬಾಗಿಲು ತೆರೆಯುತ್ತಾರೆ; ಬೆಂಗಳೂರಿನಂತಹ ನಗರದಲ್ಲಿ ಹೆಚ್ಚುತ್ತಿರುವ ಕೊಲೆ-ಸುಲಿಗೆಗಳಿಂದ ಹೆದರುತ್ತಾ ದೇವರಮೇಲೆ ಭಾರ ಹಾಕಿ ಬಾಗಿಲು ತೆರೆಯುವುದು ಅವರ ಅಭ್ಯಾಸ. ಬಾಗಿಲಿಗೆ ಅಂಟಿಸಿರುವ ನಿಮ್ನ ಮಸೂರದ ಗಾಜಿನಲ್ಲೂ ಹೊರಗೆ ನಿಂತವರ ಗುರುತು ಹಿಡಿಯುವುದು ಕಷ್ಟ. ಬಾಗಿಲು ತೆರೆಯುವವರೆಗೆ ಮಾತಂತೂ ಕೇಳಿಸದು. "ನಮಗಂತೂ ಓಡಾಟ ಕಷ್ಟ, ನೀವು ಬರ್ತಾ ಇರಿ" ಎಂದಿದ್ದರು, ಬಹಳ ದಿನಗಳ ನಂತರ ಒಮ್ಮೆ ಹೋಗಿದ್ದೆ. ಆಮೇಲೆ ಮತ್ತೊಮ್ಮೆ ಮಗುದೊಮ್ಮೆ ಹೀಗೇ ಆಗಾಗ ಆದಾಗ ಕಂಡು ಬರುತ್ತೇನೆ. ಅದಕ್ಕೂ ಹೆಚ್ಚಿನದೇನನ್ನೂ ನಾನು ಮಾಡಲಾಗಿಲ್ಲ. ಅವರದನ್ನು ಬಾಯ್ಬಿಟ್ಟು ಕೇಳಲೂ ಇಲ್ಲ ಎನ್ನಿ. ನಾನು ಹೋದಾಗ ಇಬ್ಬರೂ ಕೂತು ಮಾತನಾಡುತ್ತಾರೆ. ಮುದುಕರಾದರೂ ಮನೆ ಗುಡಿಸಿ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ. ಕೆಲಸದಾಕೆಯನ್ನು ಕರೆಯಲು ಹೆದರಿಕೆಯಂತೆ. ಅವರದ್ದೇ ಮನೆಗೆಲಸ! ಎಲ್ಲಕ್ಕೂ ಸ್ವಾವಲಂಬನೆ! ನನ್ನನ್ನು ಕಂಡರೆ ಮೊಮ್ಮಗನನ್ನು ಕಂಡಂತಾಗುತ್ತದೋ ಏನೋ, ಪಾಪ ಬಹಳ ಖುಷಿಪಡುತ್ತಾರೆ. ಇದನ್ನು ಹೀಗೆ ಯಾಕೆ ಹೇಳಿದೆ ಎಂಬುದನ್ನು ಮುಂದೆ ಅವಲೋಕಿಸೋಣ.

ಧಾವಂತದ ಜೀವನಘಟ್ಟದಲ್ಲಿ ಹುಟ್ಟಿದ್ದೇವೆ. ಜನಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಪಶುಗಳ ಮೆಂದೆಯ ಮುಂದೆ ಆಹಾರ ರಾಶಿಹಾಕಿದರೆ, ಅವು ಗಬಗಬನೇ ತಿನ್ನುತ್ತವೆ, ತನಗೇ ಎಲ್ಲವೂ ಸಿಗಲಿ ಎಂದು ಹಾತೊರೆಯುತ್ತವೆ. ಅದೇ ತರಹದ ಹವಣಿಕೆ ನಮ್ಮೆಲ್ಲರದಾಗಿದೆ. ಸಿಕ್ಕಿದ್ದಕ್ಕೆ ತೃಪ್ತರಲ್ಲ; ಭಾರತೀಯ ಸಂಸ್ಕೃತಿ ಇಲ್ಲೂ ಮಾಯವಾಗುತ್ತಿದೆ! ಮಕ್ಕಳು ಹುಟ್ಟುತ್ತಿರುವಂತೆಯೇ ಅವರಿಗೆ ವಿದ್ಯಾಭ್ಯಾಸ ಕೊಡಿಸುವ ತವಕ, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ದೊಡ್ಡ ಸ್ಕೂಲಿಗೇ ಸೇರಲಿ ಎಂಬ ಬಯಕೆ. ಆಂಗ್ಲ ಮಾಧ್ಯಮದಲ್ಲೇ ಓದಲಿ ಎಂಬುದರ ಜೊತೆಗೆ ಎಲ್.ಕೆ.ಜಿ ಯಿಂದಲೇ ಅವರಮೇಲೆ ಒತ್ತಡ. ಹೆಚ್ಚಿನ ಅಂಕಗಳನ್ನು ಪಡೆಯುವುದಕ್ಕೆ ಚಾಕಲೇಟ್ ಐಸ್ ಕ್ರೀಮ್ ಅಥವಾ ಆಡುವ ಸಲಕರಣೆಗಳ ಕೊಡಿಸುವಿಕೆಯ ಆಮಿಷ! ಪ್ರತೀ ನಿತ್ಯ ಮಕ್ಕಳಿಗೆ "ನೀನು ಜಾಣ ಆಗಬೇಕು, ಎಲ್ಲರಿಗಿಂತಾ ಜಾಸ್ತಿ ಮಾರ್ಕ್ಸು ತೆಗೀಬೇಕು" ಇದೇ ಗೀತೆಯ ಬೋಧನೆ! ಯಾರ ಎದುರೂ ಸೋಲಬಾರದು, ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳಬಾರದು ಎಂಬ ಪಾಠ! "ಹೆಚ್ಚಿನ ಅಂಕ ತೆಗೆಯದಿದ್ದರೆ ಮಮ್ಮಿ-ಡ್ಯಾಡಿಗೆ ಬೇಸರವಾಗಿ ನಾವೇನ್ ಮಾಡ್ತೀವೋ ಗೊತ್ತೇಇಲ್ಲ" ಎಂಬ ಇಮೋಶನಲ್ ಬ್ಲ್ಯಾಕ್ ಮೇಲ್ ! ಒಂದೊಮ್ಮೆ ಕಡಿಮೆ ಅಂಕದ ಫಲಿತಾಂಶ ಬಂದರೆ ಮಕ್ಕಳಲ್ಲಿ ಮಾನಸಿಕೆ ಉದ್ವಿಗ್ನತೆ, ಖಿನ್ನತೆ-ಆತ್ಮಹತ್ಯೆಗೆ ಯತ್ನ, ಕೆಲವೊಮ್ಮೆ ಆತ್ಮಹತ್ಯೆ ಕೂಡ!

ಕೇವಲ ಹೆಚ್ಚಿನ ಅಂಕಗಳೇ ಪ್ರಧಾನವೇ? ನಿಜಕ್ಕೂ ಅಲ್ಲ! ವ್ಯಕ್ತಿ ಏನಾಗಬೇಕೋ ಅದು ಮೊದಲೇ ಆತನ ಹಣೆಯಮೇಲೆ ಬರೆದಿರುತ್ತದೆ. ಇಲ್ಲಿ ಸಣ್ಣ ತಮಾಷೆಯನ್ನೂ ಅನುಭವಿಸಿಬಿಡೋಣ ಅಲ್ಲವೇ? ಹಾಸ್ಯಸಾಹಿತಿ ಬೀಚಿ ವೈಯ್ಯಕ್ತಿಕವಾಗಿ ಹೇಗೆ ಇದ್ದರೆಂಬುದನ್ನು ಬಿಟ್ಟರೆ, ಹಾಸ್ಯಚಟಾಕಿಗಳನ್ನೇ ಕೊಟ್ಟಿದ್ದಾರೆ! ತಿಮ್ಮ ಶಾಲೆಯಲ್ಲಿ ಓದುತ್ತಿದ್ದ. ದಡ್ಡ ಅಂದರೆ ಆ ಶಬ್ದಕ್ಕೇ ಅಪಮಾನ! ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದ ತಿಮ್ಮನ ಮನೆಗೆ ಒಮ್ಮೆ ಆತನ ಮೇಷ್ಟ್ರು ಬಂದಿದ್ದರು. ಊಟ ಮುಗಿಸಿ ಹರಟುತ್ತಾ ತಿಮ್ಮನ ಪಾಲಕರು " ನಮ್ಮ ತಿಮ್ಮ ಓದಿನಲ್ಲಿ ಈ ಸರ್ತಿ ಉತ್ತೀರ್ಣನಾಗಬಹುದೇ?" ಕೇಳಿದ್ದರಂತೆ. "ಏನು ಮಾಡೋಣ, ಸಾಕಷ್ಟೂ ಪರಿಶ್ರಮದಿಂದ ಕಲಿಸಿದ್ದೇನೆ, ತಲೆಗೇ ಹತ್ತೋದಿಲ್ಲ. ಆತನ ಹಣೆಯಲ್ಲಿ ಬರೆದಹಾಗೇ ಆಗುತ್ತದೆ-ನೀವೇನೂ ಚಿಂತಿಸಬೇಡಿ" ಎಂದಿದ್ದರಂತೆ ಮೇಷ್ಟ್ರು. ಫಲಿತಾಂಶ ನೀಡುವ ದಿನ ತಿಮ್ಮ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿ ಕನ್ನಡಿಯ ಮುಂದೆ ಕುಳಿತಿದ್ದ. ಕನ್ನಡಿನೋಡಿಕೊಂಡು ನಾಮದ ಕಡ್ಡಿಯಿಂದ ’ಪಾ’ ಎಂದು ತಿರುವು ಮುರುವಾಗಿ ಬರೆದುಕೊಂಡ! ಬೇಗನೇ ಹೊರಟು ಶಾಲೆಗೆ ತಲ್ಪಿದ. ಶಾಲೆಗೆ ಬಂದ ತಿಮ್ಮನನ್ನು ಕಂಡ ಅನೇಕ ವಿದ್ಯಾರ್ಥಿಗಳು ನಕ್ಕರು. ತಿಮ್ಮನ ಮೇಷ್ಟ್ರು ಕೇಳಿದರು "ಅದೇನೋ ತಿಮ್ಮ ಹಣೆಯಮೇಲೆ ’ಪಾ’ ಎಂದು ಬರೆದುಕೊಂಡು ಬಂದ್ಬುಟ್ಟಿದ್ದೀಯಾ?" ತಿಮ್ಮ ಹೇಳಿದರೆ"ನೀವೇ ಹೇಳಿದ್ರಲ್ಲ ಗುರುಗಳೇ ನನ್ನ ಹಣೆಯಮೇಲೆ ಬರೆದ ಹಾಗೇ ಆಗುತ್ತದೆ ಎಂದು ಅದಕ್ಕೇ" ಎಂದನಂತೆ! ಮೇಷ್ಟ್ರೂ ಸೇರಿದಂತೇ ಅಲ್ಲಿರುವ ಎಲ್ಲರೂ ನಕ್ಕು ನಕ್ಕು ಸುಸ್ತಾದರಂತೆ.

ನಾನು ಹೇಳಿದ್ದು ಈ ಹಣೆಬರಹವನ್ನಲ್ಲ; ಬದಲಾಗಿ ಬ್ರಹ್ಮ ಬರಹ. ಅದನ್ನು ನಾವು ಓದಲಾರೆವು; ಆದರೆ ಕೊನೆಗೆ ವ್ಯಕ್ತಿ ಏನಾಗಬೇಕೋ ಅದು ಅಲ್ಲಿ ಗುಪ್ತಮುದ್ರಿತವಾಗಿರುತ್ತದೆ. ಇವತ್ತಿನ ಎಂತಹುದೇ ಮೇಧಾವಿ, ಮಹನೀಯ, ರಾಷ್ಟ್ರಪಿತ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಬ್ಯುಸಿನೆಸ್ ಟೈಕೂನ್ ಇಂತಹ ಯಾವುದೇ ಸ್ಥಾನವೂ ಆಗಬಹುದು-ವ್ಯಕ್ತಿ ಯಾವ ಸ್ಥಾನಕ್ಕೆ ಏರಬೇಕೆಂಬುದು ಪೂರ್ವನಿರ್ಧರಿತ ವಿಷಯವಾಗಿರುತ್ತದೆ. ನಾವು ಪ್ರಯತ್ನಿಸಿದ್ದೆಲ್ಲಾ ಆಗುವುದಿಲ್ಲ ಯಾಕೆಂದರೆ ಪ್ರಯತ್ನ ಮಾಡಿದ್ದೆಲ್ಲಾ ಸಿಗಲೇಬೇಕೆಂಬುದು ಸೃಷ್ಟಿಯ ನಿಯಮವಲ್ಲ! ಒಳ್ಳೆಯ ಉದ್ದೇಶವನ್ನಿಟ್ಟು ಪ್ರಯತ್ನಿಸುವುದು ನಮ್ಮ ಕರ್ತವ್ಯ; ಫಲಾಫಲಗಳು ದೈವೀ ಸಂಕಲ್ಪ. ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ಅಥವಾ ಮಗು ಸಾಮಾನ್ಯ ಮಗುವಲ್ಲಾ, ಅದು ಬಹಳ ದೊಡ್ಡ ವ್ಯಕ್ತಿಯಾಗಿ ಬೆಳಗಬೇಕು, ನಮ್ಮಂತೇ ಕಷ್ಟಪಡಬಾರದು ಎಂಬುದು ಸಹಜ ಅನಿಸಿಕೆಯಾಗಿರುತ್ತದೆ. ಕೂಲಿ ಮಾಡುವ ದಂಪತಿಗೆ ಸ್ವಲ್ಪ ಆದಾಯ ಹೆಚ್ಚಿಸಿಕೊಂಡು ತಮ್ಮ ಮಗುವನ್ನು ಓದಿಸಿ-ಅದು ಯಾವುದಾದರೂ ಚಿಕ್ಕ ಉದ್ಯೋಗ ಹಿಡಿಯಲಿ ಎಂದೂ, ಮೇಷ್ಟ್ರು ತಮ್ಮ ಮಗ ವೈದ್ಯನೋ ಎಂಜಿನೀಯರೋ ಆಗಲೆಂದೂ, ವಕೀಲರು ತಮ್ಮ ಮಗಳು ಎಮ್.ಎಸ್ ಮುಗಿಸಿ ಯಾವುದಾದ್ರೂ ಎಮ್.ಎನ್.ಸಿ.ಯಲ್ಲಿ ಒಳ್ಳೆಯ ಹುದ್ದೆಗಳಿಸಿ ವಿದೇಶದಲ್ಲಿರುವ ಗಂಡನನ್ನು ಪಡೆಯಲೆಂದೂ ಹೀಗೆಲ್ಲಾ ಪ್ರತಿ ದಂಪತಿಗೂ ಅವರ ಮಟ್ಟಕ್ಕೆ ತಕ್ಕಂತೇ ಹಲವು ಕನಸುಗಳು ಇರುತ್ತವೆ. ಆ ಕನಸುಗಳನ್ನು ಪರಿಪೂರ್ಣಗೊಳಿಸುವಲ್ಲಿ ಅವರ ಮನಸ್ಸು ನೆಟ್ಟಿರುತ್ತದೆ. ಆ ಕಾರಣದಿಂದ ತಮ್ಮ ಮಕ್ಕಳನ್ನು ಸದಾ ಈ ಮೇಲೆ ಹೇಳಿದಂತೇ ಒತ್ತಡಕ್ಕೀಡುಮಾಡುತ್ತಾರೆ. ಬೇಸಿಗೆಯ ರಜಾ ಬಂದರೆ ಸಾಕು-ಚಿಕ್ಕ ಮಕ್ಕಳು ಜೈಲಿನಿಂದ ಹೊರಬಿಟ್ಟ ಖೈದಿಗಳಂತೇ ಸಂತಸವನ್ನು ಅನುಭವಿಸುತ್ತಾರೆ; ಯಾವಾಗ ಸ್ಕೂಲಿನ ಮರುಚಾಲನೆಯ ಸಮಯ ಬಂತೋ ತಲೆಯಮೇಲೆ ಗೋಡೆ ಹರಿದುಬಿದ್ದವರ ರೀತಿ ಇರುತ್ತಾರೆ!

ಹಾಗಾದರೆ ಮಕ್ಕಳಿಗೆ ನಾವು ಒತ್ತಡ ಹಾಕುವುದು ತಪ್ಪೇ? ಇಲ್ಲದಿದ್ದರೆ ಆಡುವ ವಯಸ್ಸಿನಲ್ಲಿ ಅವರು ಆಟವಾಡುತ್ತಾ ಓದುವುದೇ ಇಲ್ಲವಲ್ಲಾ? ಒತ್ತಡ ಹಿತಮಿತವಾಗಿರಬೇಕು, ಅತಿಯಾಗಬಾರದು. ನೇರವಾಗಿ ಹಾಗೆ ಒತ್ತಡ ಹಾಕುವುದಕ್ಕಿಂತಾ ಭಿನ್ನಮಾರ್ಗದಲ್ಲಿ ಅವರಿಗೆ ಅದನ್ನು ತಿಳಿಸುವ ಕೆಲಸವಾಗಬೇಕು. ಎಲ್ಲಕ್ಕೂ ಮೊದಲಾಗಿ ಅವರಿಗೆ ಕಾಲಕ್ಕೆ ತಕ್ಕ ಉತ್ತಮ ಸಂಸ್ಕಾರಗಳನ್ನು ಕೊಡಬೇಕು. ಚಿತ್ರಗಳಿಂದ ಕೂಡಿದ ರಂಜನೀಯ ನೀತಿಕಥೆಗಳ ಮೂಲಕ, ನಮ್ಮ ರಾಮಾಯಣ-ಮಹಾಭಾರತದ ಕಥೆಗಳ ಮೂಲಕ, ಪಂಚತಂತ್ರದಂತಹ ಕಥೆಗಳ ಮೂಲಕ ನೀತಿಸಾರವನ್ನು ಅವರು ಅರಿಯುವಂತೇ ಮಾಡಬೇಕು. ಅದು ಅವರಿಗೆ ರಂಜನೆಯನ್ನೂ ನೀಡುವುದರ ಜೊತೆಗೆ ಸಮಾಜದಲ್ಲಿ ಅವರು ನಿರ್ವಹಿಸಬೇಕಾದ ಪಾತ್ರದ ಪರಿಕಲ್ಪನೆಯನ್ನೂ ಅವರ ಮನಸ್ಸಿಗೆ ತಂದುಕೊಡುತ್ತದೆ. ಶಿವಾಜಿ ಮಹಾರಾಜರಿಗೆ ಅವರ ತಾಯಿ ಜೀಜಾಬಾಯಿ ರಾಮಾಯಣ-ಮಹಾಭಾರತದ ಕಥೆಗಳನ್ನು ರಂಜನೀಯವಾಗಿ ಹೇಳುತ್ತಿದ್ದಳಂತೆ. ಶಿವಾಜಿಯವರಿಗೆ ಯಾರಾದರೂ ರಾಜನಾಗೆಂದು ಬೋಧಿಸಿದರೇ? ನೀನು ಹೆಚ್ಚಿನ ಅಂಕಗಳಿಸಲಿಲ್ಲವೆಂದು ಜರಿದರೇ? ಇಲ್ಲ. ನಾವೇ ಗೌರವಿಸುವ ಗಾಂಧೀಜಿಯ ಹೆಸರಿನಲ್ಲಿ ’ಗಾಂಧೀಕ್ಲಾಸು’ ಎಂದು ನಾವು ಆಡಿಕೊಳ್ಳುತ್ತಿರುತ್ತೇವೆ; ನಮ್ಮ ಗಾಂಧೀಜಿ ಓದಿನಲ್ಲಿ ಹೆಚ್ಚಿನ ಅಂಕಗಳಿಸುತ್ತಿದ್ದರೇ? ಹಾಗಾದರೆ ಅವರು ರಾಷ್ಟ್ರಪಿತ ಎನಿಸಿದರಲ್ಲ ಹೇಗೆ?

ಅಂಕಕ್ಕೂ ಪ್ರಾಯೋಗಿಕತೆಗೂ ಯಾವ ಸಂಬಂಧವೂ ಇಲ್ಲ. ನಮ್ಮ ಮಲೆನಾಡಿನಲ್ಲಿ ಕೆಲವು ಹಳ್ಳಿಯ ಅಭಿಯಂತರರಿದ್ದಾರೆ. ಹರಿಯುವ ನೀರಿಗೆ ಟರ್ಬೈನ್ ಅಳವಡಿಸಿ ಅಲ್ಲಲ್ಲಿ ಪ್ರಾದೇಶಿಕ ವಿದ್ಯುತ್ ಕೊರತೆಯನ್ನು ನೀಗಿಸಿದ್ದಾರೆ. ನೀರು ಈ ಮಟ್ಟದಲ್ಲಿ ಹರಿಯುತ್ತದೆ-ಇದಕ್ಕೆ ಇಂತಹ ಯಂತ್ರ ಮತ್ತು ಗಾಲಿಗಳನ್ನು ಅಳವಡಿಸಬೇಕು ಎಂದು ಪಕ್ಕಾ ಲೆಕ್ಕಕೊಡುವ ಅವರು ಯಾವ ವಿಶ್ವವಿದ್ಯಾಲಯಗಳಿಂದ ಪದವಿಪತ್ರ ಪಡೆದವರಲ್ಲ; ಆದರೆ ಪದವಿ ಪಡೆದ ಇಲೆಕ್ಟ್ರಿಕಲ್ ಎಂಜಿನಿಯರ್ ಅವರ ಮುಂದೆ ಕೈಕಟ್ಟಿ ನಿಂತು ’ಜೀ ಹುಜೂರ್’ ಎನ್ನುವಷ್ಟು ಪ್ರಯೋಗಶೀಲತೆ ಅವರದ್ದು. ಅನೇಕ ಕೃಷಿಪರ ಯಂತ್ರಗಳನ್ನು ಎಂಜಿನೀಯರಿಂಗ್ ಕಲಿಯದ ವ್ಯಕ್ತಿಗಳೇ ತಯಾರಿಸಿದ್ದಾರೆ. ಪದವಿ ಎಂದರೇನು ? ವಿಶ್ವವಿದ್ಯಾಲಯ ಕೊಡುವ ಅರ್ಹತಾಪತ್ರ. ವಿಶ್ವವಿದ್ಯಾಲಯ ಹೇಗೆ ಹುಟ್ಟಿತು? ಅನಾದಿ ಕಾಲದಲ್ಲಿ ವಿಷಯಗಳನ್ನು ಅರಿತ ಜನ ತಮ್ಮ ಅನುಭವ ಜನ್ಯ ವಿಷಯಗಳನ್ನು ಪುಸ್ತಕಗಳನ್ನಾಗಿ ಬರೆದು ಮಾಹಿತಿಗಳನ್ನು ಕ್ರೋಡೀಕರಿಸಿದರು. ಆ ಕ್ರೋಡೀಕರಣಗೊಂಡ ಮಾಹಿತಿಗಳನ್ನು ವಿಂಗಡಿಸಿ ಬೇರೆ ಬೇರೆ ವಿಭಾಗಗಳನ್ನು ಮಾಡಿದರು. ಉದಾಹರಣೆಗೆ ಮೂಲದಲ್ಲಿ ಇದ್ದ ಎಂಜಿನೀಯರಿಂಗ್ ವಿಭಾಗದಲ್ಲಿ ಸಿವಿಲ್, ಮೆಕಾನಿಕಲ್ ಮತ್ತು ಇಲೆಕ್ಟ್ರಿಕಲ್ ವಿಷಯಗಳು ಮಾತ್ರ ಇದ್ದವು. ಈಗ ವಿದ್ಯುನ್ಮಾನ, ಇನ್ಫಾರ್ಮೇಶನ್ ಸೈನ್ಸ್, ಬಯೋ ಟೆಕ್ನಾಲಜಿ ಸೇರಿದಂತೇ ಹಲವಾರು ವಿಷಯಗಳೂ ವಿಭಾಗಗಳೂ ಇವೆ. ಅನುಭವದ ಮೂಟೆಯನ್ನು ಹಂಚಿಕೊಳ್ಳುವುದಕ್ಕೆ ಪಠ್ಯವೊಂದೇ ಆಧಾರವಲ್ಲ; ಪ್ರಯೋಗಶೀಲತೆಯೂ ಆಧಾರವೇ. ಸುಮಾರು ೧೮ನೇ ಶತಮಾನದ ವರೆಗೂ ಕುಲಕಸುಬು ಎಂಬುದೊಂದಿತ್ತು. ಅಪ್ಪ ಏನುಮಾಡುತ್ತಾನೆ ಎಂಬುದನ್ನು ಗಮನಿಸಿದ ಮಗು ಸಹಜವಾಗಿ ಆಡಾಡುತ್ತಾ ಅದನ್ನು ಕಲಿತು ಪಳಗುತ್ತಿತ್ತು. ಈಗ ಕುಲಕಸುಬು ಎಂಬುದಿಲ್ಲ; ಯಾರು ಯಾವ ಕಸುಬನ್ನೇ ಬೇಕಾದರೂ ಆಯ್ದುಕೊಳ್ಳಬಹುದು. ಆದರೆ ಪ್ರಾಯೋಗಿಕವಾಗಿ ಅಪ್ಪ ತನ್ನ ಮಗುವಿಗೆ ಕಲಿಸಿದಂತೇ ಕಲಿಸುವ ಯಾವ ಗುರುವೂ ಇವತ್ತಿನ ದಿನ ಕಾಣುತ್ತಿಲ್ಲ.

’ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬುದೊಂದು ಗಾದೆ. ಮುರುಡೇಶ್ವರ ಆರ್.ಎನ್. ಶೆಟ್ಟರು ಎಂಜಿನೀಯರಿಂಗ್ ಪದವೀಧರರಲ್ಲ; ಅವರ ವಯೋಮಾನದ ಅನೇಕ ಉದ್ಯಮಿಗಳೂ ಹಾಗೇನೆ. ಆಗ ಈಗಿನಂತೇ ಕುಳಿತಲ್ಲೇ ಕಲಿಯಲು ಗಣಕಯಂತ್ರಗಳೂ ಇರಲಿಲ್ಲ. ಆದರೆ ಶೆಟ್ಟರು ಸಿವಿಲ್ ಕಟ್ಟಡಗಳನ್ನೂ ರಸ್ತೆಗಳನ್ನೂ ನಿರ್ಮಿಸುವತ್ತ ಮನಮಾಡಿದರು. ಯಾರೂ ಕೈಹಾಕದ ಕೆಲವು ಸಾಹಸಕಾರ್ಯಗಳಿಗೆ ಎಳವೆಯಲ್ಲೇ ಎದೆಗಟ್ಟಿಮಾಡಿಕೊಂಡು ನುಗ್ಗಿದರು. ಹಾಗಾದರೆ ಅವರಲ್ಲಿ ಅಷ್ಟೊಂದು ಹಣವಿತ್ತೇ? ಇರಲಿಲ್ಲ. ಹಿಂದೆ ಯಾರಾದರೂ ಬೆಂಬಲ ಇತ್ತರೇ? ಅದೂ ಇಲ್ಲ. ಅವರು ಸ್ವಯಂಭೂ! ಸ್ವಯಂಭೂ ಎಂದರೆ ಸ್ವತಃ ತಾನೇ ಉದ್ಭವಗೊಂಡ ಎಂದರ್ಥ. ಈ ಭರತ ಭೂಮಿಯ ಕೆಲವು ಜಾಗಗಳಲ್ಲಿ ಸ್ವಯಂಭೂ ಲಿಂಗಗಳೂ ವಿಗ್ರಹಗಳೂ ಇವೆ. ನೆಲದಿಂದ ತಂತಾನೇ ಮೇಲೆದ್ದುನಿಂತ ಅಂತಹ ಘನಾಕೃತಿಯನ್ನು ’ಸ್ವಯಂಭೂ’ಎಂದು ಹೆಸರಿಸಿದ್ದಾರೆ. ಇಂತಹ ಹಲವಾರು ’ಸ್ವಯಂಭೂ’ಗಳು ನಮ್ಮಲ್ಲಿದ್ದಾರೆ. ಇವತ್ತು ಆರ್.ಎನ್.ಶೆಟ್ಟರಲ್ಲಿ ಕೆಲಸಮಾಡುತ್ತಿರುವ ಎಂಜಿನೀಯರುಗಳೆಷ್ಟೋ! ಅದರಂತೆ ವಿ.ಆರ್.ಎಲ್ ಸಮೂಹದ ವಿಜಯ ಸಂಕೇಶ್ವರರನ್ನು ಕಾಣುತ್ತೇವೆ; ಕ್ಲೀನರ್ ಆಗಿ ಆರಂಭಿಸಿದ ವೃತ್ತಿಯಲ್ಲೇ ತಾದಾತ್ಯ್ಮತೆ ತಂದುಕೊಂಡು, ತನ್ನ ಕಷ್ಟಾರ್ಜಿತದಲ್ಲಿ ಒಂದೊಂದೇ ಲಾರಿ ಖರೀದಿಸುತ್ತಾ, ಈಗ ಯಾವ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದು ನಮಗೆ ತಿಳಿದೇ ಇದೆ. ಪತ್ರಿಕೋದ್ಯಮ ಅವರ ರಂಗವೇ ಆಗಿರಲಿಲ್ಲ; ಅನಿರೀಕ್ಷಿತವಾಗಿ ಅದಕ್ಕಿಳಿದ ಅವರು ಅದರಲ್ಲೂ ಯಶಸ್ಸು ಪಡೆದಿದ್ದಾರೆ. ಇವರಿಗೆಲ್ಲಾ ಯಾರಾದರೂ ಹೆಚ್ಚಿನ ಅಂಕಪಟ್ಟಿ ನೀಡಿದರೇ? ಖಂಡಿತಾ ಇಲ್ಲ. ಅಂದಮೇಲೆ ಅಂಕವೇ ನಿರ್ಣಾಯಕವಲ್ಲ; ಪದವಿಯೇ ಪ್ರಮಾಣವಲ್ಲ ಎಂಬುದು ಅರಿವಾಗುತ್ತದೆ. ಆದರೂ ಲೆಕ್ಕದ ಭರ್ತಿಗೆ ಪದವಿ ಇರಲಿ, ಬೇಡಾ ಎನ್ನುವುದಿಲ್ಲ. ಬೆಳೆಯುವ ವ್ಯಕ್ತಿ ಹಬ್ಬುವ ಬಳ್ಳಿಯಂತೇ ಪದವಿಯಿಂದಾಚೆಯ ಪ್ರಾತ್ಯಕ್ಷಿಕ ಜ್ಞಾನದ ಹಿತ್ತಲಲ್ಲಿ ತನನ್ನು ಹಬ್ಬಿಸಿಕೊಳ್ಳಬೇಕು!

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ

ಮಹಾತ್ಮ ಡೀವೀಜಿ ಹೇಗೆ ಹೇಳಿದ್ದಾರೆ ನೋಡಿ. ತಲೆಯಮೇಲೆ ಮಣಿಯೊಂದನ್ನು ಇಟ್ಟರೆ ಚೆನ್ನಾಗಿಯೇ ಕಾಣುತ್ತದೆ. ಬಾಗಿದರೆ ಅಲುಗಾಡಿದರೆ ಅದು ವಾಲಲೂ ಬಹುದು, ಬಿದ್ದುಹೋಗಲೂ ಬಹುದು. ತಲೆಯೊಳಗಂತೂ ಹೋಗಲು ಆಗದಲ್ಲಾ? ಪುಸ್ತಕಗಳನ್ನು ಓದಿ ಪಡೆದ ಪದವಿಯಿಂದ ಪ್ರಯೋಗಶೀಲತೆ ಅಥವಾ ಸ್ವಾನುಭವ ಎಂಬುದು ಸಾಕಾಗುವುದಿಲ್ಲ! ಅದೇ ಚಿತ್ತದಲ್ಲಿ ತಂತಾನೇ ಬೆಳೆದರಿವು ಗಿಡಮರಗಳಲ್ಲಿ ಅರಳಿದ ಪುಷ್ಪದಂತೇ ಎಂದಿದ್ದಾರೆ. ಇವತ್ತೀಗ ನಾವು ಉಪಯೋಗಿಸುವ ವಿದ್ಯುತ್ತಿನಿಂದ ಹಿಡಿದು ಹಲವು ಉಪಕರಣಗಳನ್ನು ಕಂಡುಹಿಡಿದ ವಿಜ್ಞಾನಿಗಳಲ್ಲಿ ಹಲವರು ಪದವಿಯ ಗೊಡವೆಗೆ ಸಿಲುಕಿದವರಲ್ಲ! ಆಟವಾಡುತ್ತಿದ್ದ ಬೆಂಜಮಿನ್ ಫ್ರಾಂಕ್ಲಿನ್ ನ ಗಾಳಿಪಟ ಮಿಂಚಿನ ಸೆಳೆತಕ್ಕೆ ಅದುರಿ ಆತನ ಕೈಗೆ ಶಾಕ್ ತಗುಲಿದ ಘಳಿಗೆಯಿಂದ ಆತನ ಚಿತ್ತದಲ್ಲಿ ಸದಾ ಅದೇ ಧ್ಯಾನ; ಅದನ್ನೇ ಕಾಣುವ ಮತ್ತೆ ಅವಧರಿಸುವ ಆಸೆ. ಆ ಪ್ರಯತ್ನವೇ ವಿದ್ಯುತ್ತಿನ ಅರಿವನ್ನು ಆತನಿಗೆ ನೀಡಿತು; ಆತನ ಶೋಧನೆ ಹಲವರಿಗೆ ಉಪಕೃತಿಯಾಯಿತು. ಇದನ್ನೇ ವಸ್ತುಸಾಕ್ಷಾತ್ಕಾರ ಎನ್ನುವುದು!

ಯಾರೋ ಒಬ್ಬಾತ ತಮಾಷೆ ಮಾಡುತ್ತಿದ್ದ. ತನಗೆ ಕಂಪ್ಯೂಟರ್ ನಲ್ಲೇ ಡ್ರೈವಿಂಗ್ ಹೇಳಿಕೊಡುತ್ತಾರೆ, ರಸ್ತೆಗೆ ಹೋಗುವುದೇ ಬೇಡ ಎಂದ! ನನಗೋ ದಿಗಿಲು. ಗಣಕಯಂತ್ರದಲ್ಲಿ ಚಿತ್ರಗಳ ಮೂಲಕ ವೀಡಿಯೋಗಳ ಮೂಲಕ ಪಾಠಮಾಡಬಹುದು, ಆದರೆ ವಸ್ತುತಃ ಆತ ಕಾರನ್ನೋ ಮತ್ಯಾವುದೋ ವಾಹನವನ್ನೋ ಸ್ವತಃ ಚಲಾಯಿಸುತ್ತಾ ರಸ್ತೆಗೆ ನಡೆದಾಗ ಅಲ್ಲಿ ಆತ ಎದುರಿಸುವ ಸವಾಲುಗಳು ಹಲವು. ವಾಹನವೊಂದು ಯಂತ್ರವಷ್ಟೇ? ಅದರ ವೇಗ, ವೇಗೋತ್ಕರ್ಷ, ಇಂಧನನಿರ್ವಹಣೆ, ಎದುರಿಗೆ ಬರುವ ಇತರ ವಾಹನಗಳಿಗೆ ಜಾಗಕೊಡುವಿಕೆ, ಅಡ್ಡಬರುವ ಜೀವಿಗಳಿಂದ/ವಾಹನಗಳಿಂದ ತಪ್ಪಿಸಿಕೊಳ್ಳುವಿಕೆ, ಅನಿರೀಕ್ಷಿತವಾಗಿ ಸಂಭವಿಸಬಹುದಾದ ಅವಘಡಗಳನ್ನು ಎದುರಿಸುವ ಸಿದ್ಧತೆ--ಹೀಗೇ ಕಲಿಯಬೇಕಾದದ್ದು ಹಲವಾರು. ಸಂಗೀತ ಹೇಳಿಕೊಡುವ ಗುರುಗಳ ಜೊತೆಗೇ ಹಾಡುವುದು ಬೆಣ್ಣೆತಿಂದಷ್ಟೇ ಸುಲಭ, ಅವರು ಹಾಡುವುದನ್ನು ನಿಲ್ಲಿಸಿಬಿಟ್ಟರೆ ನಮ್ಮ ಬಾಯಿಂದ ಹೊರಡುವ ಸ್ವರಗಳನ್ನು ಕೇಳಿ ಅವರೂ ಸೇರಿದಂತೇ ಉಳಿದವರು ಮೆಚ್ಚಬೇಕಲ್ಲಾ? ಇಲ್ಲದಿದ್ದರೆ "ಓ ಅವ ಮಾರಾಯ ಬಾಯಿ ತೆಗೆದರೆ ಬೊಂಬಾಯಿ" ಎಂದುಕೊಂಡು ಜನ ಎದ್ದುಹೋದಾರು! ನಮ್ಮಲ್ಲಿ ನಗರಗಳಲ್ಲಿರುವ ಅಧುನಿಕ ವೈದಿಕರಲ್ಲಿ ಕೆಲವರು ಪ್ರಾಯೋಗಿಕವಾಗಿ ತರಬೇತಿ ಪಡೆಯದೇ ಬಂದವರೂ ಇರುತ್ತಾರೆ, ಸಾಕಷ್ಟು ಓದಿಕೊಳ್ಳದೇ ಯಜ್ಞಕ್ಕೆ ಆಹುತಿ ನೀಡುವಾಗ ಪ್ರಧಾನ ಪುರೋಹಿತರ ಜೊತೆಗೆ ಕೊನೆಯಲ್ಲಿ ಸ್ವಾಹಾ ಎನ್ನುತ್ತಿರುತ್ತಾರೆ! "ಸ್ವಾಮೀ ಯಾರಿಗೆ ಸ್ವಾಹಾ ಎಂದು ಆಹುತಿ ಹಾಕಿದಿರಿ" ಎಂದರೆ ಅರಿವಿರುವುದಿಲ್ಲ, ಸಂಸ್ಕೃತ ಭಾಷಾಪ್ರೌಢಿಮೆಯೂ ಇರುವುದಿಲ್ಲ. ಗಟ್ಟುಹಾಕಿದ ಮಂತ್ರಗಳನ್ನು ಉಪಯೋಗಿಸುವಾಗ ಅವುಗಳ ಅರ್ಥವ್ಯಾಪ್ತಿಯ ಅವಲೋಕನವೇ ಇರುವುದಿಲ್ಲ! ಶಾಸ್ತ್ರವಷ್ಟೇ ಮುಗಿಯಿತೇ ಬಿಟ್ಟರೆ ಪುರೋಹಿತರ ಸ್ವಾಧ್ಯಾಯ ಯಾವ ಮಟ್ಟಕ್ಕೆ ಬಂತು ಎಂಬುದನ್ನು ನಾವು ಕೇಳಬೇಕಾಗುತ್ತದೆ. ಸಮಾಜದಲ್ಲಿ ಇನ್ನೊಬ್ಬರಿಗೆ ಉಪದೇಶ ನೀಡುವ ಮೊದಲು ನಾವು ಅಧ್ಯಯನ ಶೀಲರಾಗಬೇಕು; ಪ್ರಾಕ್ಟಿಕಲ್ ಮಾಡಿ ಪರಿಣತರಾಗಬೇಕು.

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೆ ನೆಲವಿಹುದು-ಮಂಕುತಿಮ್ಮ

ಎಂದ ಡೀವೀಜಿ ಈ ಮುಕ್ತಕವನ್ನು ಬರೆಯುವಾಗ ಸ್ವತಃ ತಾವು ಜಟಕಾ ಗಾಡಿಗಳಿಗೆ ಬಣ್ಣ ಬಳಿಯುವ ಕೆಲಸಮಾಡಿದ್ದರಂತೆ!

ಏನಾನುಮಂ ಮಾಡು ಕೈಗೆದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿಬೇಡ
ಹೀನಮಾವುದುಮಿಲ್ಲ ಜಗದಗುಡಿಯೂಳಿಗದಿ
ತಾಣ ನಿನಗಿಹುದಿಲ್ಲಿ-ಮಂಕುತಿಮ್ಮ

ಯಾವ ಕೆಲಸವೂ ಯವ ಉದ್ಯೋಗವೂ ಮೇಲು-ಕೀಳು ಎಂದೆಣಿಸದೇ ಪಾಲಿಗೆ ಬಂದದ್ದನ್ನು ಶ್ರದ್ಧೆಯಿಂದ ಮಾಡು ಎಂದಿದ್ದ ಅವರು ಆಡಿದ್ದನ್ನು ಮಾಡಿಯೂ ತೋರಿಸಿದ ಪುಣ್ಯಾತ್ಮ! ಮಕ್ಕಳ ಬದುಕನ್ನು ಪಾಲಕರೇ ನಿರ್ಧರಿಸಲಾಗುವುದಿಲ್ಲ; ಹಾಗಂತ ಹಾಗೇ ಕೂರುವುದೂ ಅಲ್ಲ. ನಮ್ಮ ಕರ್ತವ್ಯಗಳನ್ನಷ್ಟೇ ನಾವು ಮಾಡಲು ಸಮರ್ಥರು. ಫಲಾಫಲಗಳು ನಮ್ಮ ನಿರ್ಧಾರವಲ್ಲ. ನಮಗಿಂತ ಹಿರಿದಾದ, ನಮ್ಮಲ್ಲಿದ್ದೂ ನಮಗೆ ಕಾಣದ ಜಗನ್ನಿಯಾಮಕ ಶಕ್ತಿ ಅದನ್ನು ನಿರ್ಧರಿಸುತ್ತದೆ. ಮದುವೆ ಮನೆಗೆ ಹೊರಟ ದಿಬ್ಬಣಿಗರು ಸ್ಮಶಾನ ಸೇರುವ ವಾರ್ತೆಯನ್ನು ಹಲವಾರು ಸರ್ತಿ ಕೇಳುತ್ತೇವೆ. ಹೊರಟಿದ್ದು ಮದುವೆಗೆ-ತೆರಳಿದ್ದು ಮಸಣಕ್ಕೆ: ನಿರ್ಧಾರ ವಿಧಿಯೆಂಬ ಸಾಹೇಬನದು!

ನನಗೆ ಗೊತ್ತಿರುವ ಒಬ್ಬ ದಂಪತಿ ತಮ್ಮ ಚಿಕ್ಕ ಮಗನಿಗೆ ಈಗಿನಿಂದಲೇ ಅತಿಯಾದ ಒತ್ತಡವನ್ನು ಹಾಕುತ್ತಿದ್ದಾರೆ; ನಾನು ಅದನ್ನು ಅವರಿಗೆ ಹೇಳಿಯೂ ಇದ್ದೇನೆ. ಮೊನ್ನೆ ಮೊನ್ನೆ ಯಾವುದೋ ಚಿಕ್ಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಬಂದಿದ್ದಕ್ಕೆ ಮಗು ಇಡೀ ದಿನ ಅಳುತ್ತಿತ್ತಂತೆ! ಕಾರಣರು ಯಾರು: ಅಪ್ಪ-ಅಮ್ಮ. ಜೀವನ ಎಂಬುದು ಪರೀಕ್ಷೇಯೇ ವಿನಃ ಮಿಕ್ಕಿದ ಪರೀಕ್ಷೆಗಳಲ್ಲಿ, ಚುನಾವಣೆಗಳಲ್ಲಿ ಸೋಲು-ಗೆಲುವು ಇದ್ದಿದ್ದೇ. ಪ್ರಯತ್ನಿಸದೇ ಗೆಲ್ಲುವ ಭರವಸೆಯನ್ನು ತಳೆಯಬೇಕೆಂದು ನಾನು ಹೇಳುತ್ತಿಲ್ಲ. ಒಂದುಪಕ್ಷ ಗೆಲ್ಲದೇ ಇದ್ದರೂ ಆ ಫಲಿತಾಂಶವನ್ನು ಸ್ವೀಕರಿಸುವ, ಯಾಕೆ ತಪ್ಪಾಯ್ತು ಎಂದು ಪರಾಮರ್ಶಿಸುವ ಸ್ವಭಾವವನ್ನು ಮಕ್ಕಳಿಗೆ ಕಲಿಸಿದರೆ, ಫಲಿತಾಂಶ ವ್ಯಕ್ತಿರಿಕ್ತವಾದಾಗ ಈ ಜಗತ್ತೆಷ್ಟು ಕ್ರೂರಿ ಎಂದುಕೊಳ್ಳುತ್ತಾ ಸಾಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ವಸ್ತುಸ್ಥಿತಿಯನ್ನು ಇದ್ದಹಾಗೆ ಸ್ವೀಕರಿಸಿಕೊಂಡು ಜೀವನ ನಿಭಾಯಿಸುವ ಕಲೆಯನ್ನು ಪಾಲಕರು ಮಕ್ಕಳಿಗೆ ಕಲಿಸಿಕೊಡಬೇಕು. ಜವಾನನ ಮಗ ಜವಾನನೇ ಆಗಬೇಕೆಂದಲ್ಲ, ಕಂಡಕ್ಟರ್ ಮಗ ಕಂಡಕ್ಟ್ರೇ ಆಗಬೇಕೆಂದೂ ಅಲ್ಲ, ಹಿಂದೊಮ್ಮೆ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕವಾಡ್ ಇಂದು ರಜನೀಕಾಂತ್ ಆಗಿಲ್ಲವೇ? ಇದನ್ನೇ ನಾನು ಹೇಳಿದ್ದು-ಅದು ಬರೆದಿರುತ್ತದೆ!

ಆಯ್ತು, ಇನ್ನು ಮಕ್ಕಳು ತಮ್ಮನ್ನು ಪೊರೆಯಲಿ, ನಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ತಮ್ಮ ಸಹಾಯಕ್ಕೆ ಬರಲಿ ಎಂಬ ನಿರೀಕ್ಷಣೆಯನ್ನು ಇಟ್ಟುಕೊಳ್ಳುವ ಕಾಲ ಇದಲ್ಲ! ನಾನು ಆರಂಭದಲ್ಲಿ ಹೇಳಿದ ಕಥೆಯನ್ನು ಇಲ್ಲಿ ಬಳಸಿಕೊಳ್ಳಿ. ಜಮಾನ ಬದಲಾಗಿದೆ ಎನ್ನುವ ನಮ್ಮ ಜನಾಂಗ ಅವಿಭಕ್ತ ಕುಟುಂಬದ ಸಂಸ್ಕೃತಿಯನ್ನು ತೊರೆದು ಎರಡು-ಮೂರು ದಶಕಗಳೇ ಕಳೆದವು. ಈಗ ಎಲ್ಲರಿಗೂ ವೈಯ್ಯಕ್ತಿಕ ಸ್ವಾತಂತ್ರ್ಯ ಬೇಕು ಎನ್ನುವ ಹೊಸ ಜಮಾನ. ಗಂಡನಿಗೇ ಬೇರೆ ರೂಮು ಹೆಂಡತಿಗೇ ಬೇರೆ ಕೋಣೆ ಮತ್ತು ಮಗು ಅಥವಾ ಮಕ್ಕಳಿಗೂ ಬೇರೆ ಬೇರೆ ರೂಮು ಬಯಸುವ ಕಾಲ! ವ್ಯಕ್ತಿ ತನಗೆ ತನ್ನದೇ ಆದ ಸಮಯ ಬೇಕು ಎಂದುಕೊಳ್ಳುತ್ತಾ ಕೆಲವು ವಿಷಯಗಳಲ್ಲಿ ಗೌಪ್ಯವಾಗಿರುವುದರಿಂದ ಅವಿಭಕ್ತ ಕುಟುಂಬದಲ್ಲಿರುವಂತೇ ಕುಟುಂಬದ ಇತರ ಸದಸ್ಯರೊಡನೆ ತನ್ನ ವಿಷಯಗಳನ್ನು ಹಂಚಿಕೊಳ್ಳ ಬಯಸುವುದಿಲ್ಲ!

ಒಂದು ಕಾಲಘಟ್ಟದಲ್ಲಿ ಪನ್ನಾ ಲೆಕ್ಕದಲ್ಲಿ ಬಟ್ಟೆ ತೆಗೆದುಕೊಂಡು ಎಲ್ಲರಿಗೂ ಸಮವಸ್ತ್ರ ಎಂಬರೀತಿ ಚಡ್ಡಿ-ಅಂಗಿ ಹೊಲಿಸಿಕೊಂಡ ಅವಿಭಕ್ತ ಕುಟುಂಬದ ಮಕ್ಕಳು ಈಗ ಅಪ್ಪಂದಿರಾಗಿದ್ದಾರೆ; ಅವರ ಮಕ್ಕಳಿಗೆ ಆ ತರಹದ ಉಡುಪು ಅಸಹ್ಯ. ಉಡುಪು ಇರಲಿ, ಯಾವುದೇ ವಿಷಯದಲ್ಲೂ ಹೊಂದಾಣಿಕೆ ಎಂಬುದೇ ಇರುವುದು ಕಷ್ಟ. ಯಾಕೆ ಹೀಗೆ ಎಂದರೆ ಮಮ್ಮಿ-ಡ್ಯಾಡಿ ಹೇಳಿಕೊಟ್ಟ ಸೋಲೊಪ್ಪಿಕೊಳ್ಳಬಾರದ ದುರಭಿಮಾನ! ಅವಿಭಕ್ತ ಕುಟುಂಬದಿಂದ [ಕೆಲವು ಚಿಕ್ಕಪುಟ್ಟ ವಿಷಯಗಳಿಗೆ ಅನಾನುಕೂಲವೆನಿಸಿದರೂ]ಆಗುವ ಲಾಭ ಬಹಳವಿತ್ತು. ಇವತ್ತು ವಿಭಕ್ತ ಕುಟುಂಬಗಳಲ್ಲಿ ಆಜ್ಜ-ಅಜ್ಜಿಯ ಕಾನ್ಸೆಪ್ಟ್ ಇರುವುದೇ ಕಮ್ಮಿ! ಗ್ರಾನ[ಗ್ರಾಂಡ್ ಪಾ] ಗ್ರಾನಿ ವೃದ್ಧಾಶ್ರಮದಲ್ಲಿ ಇರುತ್ತಾರೆ, ಮೊಮ್ಮಕ್ಕಳಿಗೆ ಅವರ ಸಂಪರ್ಕವೇ ಇರುವುದಿಲ್ಲ! ಸುದೈವವಶಾತ್ ವಿಭಕ್ತ ಕುಟುಂಬದ ತಮ್ಮ ಮಕ್ಕಳ ಮನೆಯಲ್ಲೇ ಇದ್ದರೂ ಅಜ್ಜ ಒಬ್ಬ ಮಗನ/ಳ ಮನೆಯಲ್ಲಿ ಅಜ್ಜಿ ಇನ್ನೊಬ್ಬ ಮಗನ/ಳ ಮನೆಯಲ್ಲಿ! ಇದು ಸರದಿಯ ಪ್ರಕಾರ ಅದಲು ಬದಲಾಗಬಹುದು. ವೃದ್ಧಾಪ್ಯದಲ್ಲಿ ಗಂಡ-ಹೆಂಡತಿ ಸಾಮೀಪ್ಯವನ್ನು ಹಂಚಿಕೊಳ್ಳಲು ಆಸ್ಪದವಿಲ್ಲ. ಈ ಸಂಸ್ಕಾರ ನಮಗೆ ಬೇಕಿತ್ತೇ? ಅಧುನಿಕರೆನಿಸಿದ ನಮ್ಮಲ್ಲಿ ಯಾರ ಬಾಯಿಂದಲಾದರೂ ನೆಮ್ಮದಿಯಿಂದಿದ್ದೇವೆ ಎಂದು ಹೇಳಿಸಿ ನೋಡೋಣ! ದೂರವಾಣಿಯಲ್ಲಿ "ಎಲ್ಲಾ ಚೆನ್ನಾಗಿದ್ದೀವಿ" ಎಂದವನ ಮನೆಯಲ್ಲಿ ಮಡದಿ ಬೊಗಸೆಗಟ್ಟಲೆ ಮಾತ್ರೆ ನುಂಗುತ್ತಿರುತ್ತಾಳೆ. "ಬನ್ನಿ ಮನೆಗೆ, ಆರಾಮಾಗಿ ಒಂದೆರಡು ದಿನ ಇದ್ದು ಹೋಗಬಹುದಂತೆ" ಎಂದವನೇ ತನ್ನ [ಒತ್ತಡಗಳಲ್ಲಿ ಜರ್ಜರಿತನಾಗಿ] ಅಕಸ್ಮಾತ ಬಂದುಬಿಟ್ಟರೆ "ಅಯ್ಯೋ ವಕ್ರಸ್ತಲ್ಲಪ್ಪಾ ಶನಿ" ಎಂದು ಸ್ವಗತದಲ್ಲಿ ಹೇಳಿಕೊಳ್ಳುವ ಕಾಲ ಇದಾಗಿದೆ.

ಕಾಲಕ್ಕೆ ತಕ್ಕಂತೇ ರಸ್ತೆಬದಿಯಲ್ಲಿ ಫಾಸ್ಟ್ ಫುಡ್ ವ್ಯವಸ್ಥೆ; ಕುಂತು ತಿನ್ನಲೂ ಆಗದ ಅವ್ಯವಸ್ಥೆ! ನಮಗೆ ಸ್ವಾಸ್ಥ್ಯವಿಲ್ಲ ಯಾಕೆಂದರೆ ನಾವು ತಿನ್ನುವುದೂ ಕೂಡ ಧಾವಂತದಲ್ಲಿ. ಎಷ್ಟೋ ದಿನ ನಾನು ತಿಂಡಿಯಾದ ಮೇಲೆ ಚಾ ಕುಡಿದೆನೋ ಇಲ್ಲವೋ ಎಂಬುದನ್ನೇ ಮರೆತಿರುತ್ತೇನೆ ಯಾಕೆಂದರೆ ಅದರ ಬಗ್ಗೆ ಲಕ್ಷ್ಯ ಇರುವುದಿಲ್ಲ! ತಿನ್ನುವ ಆಹಾರ ನಮ್ಮೊಳಗಿರುವ ಪರಮಾತ್ಮನ ಭಾಗವಾದ ಆತ್ಮನಿಗೆ ನಿವೇದಿಸುವ ಪೂಜೆಯ ಕೆಲಸ ಎಂದು ತಿಳಿದು, ಸ್ವಚ್ಛತೆಯುಳ್ಳ ಪ್ರದೇಶದಲ್ಲಿ, ಸ್ವಚ್ಛ ಬಟ್ಟೆ ಧರಿಸಿ, ಶುಚಿ-ರುಚಿಯಾಗಿ ಮಾಡಿದ ಆಹಾರವನ್ನು ನಿಧಾನವಾಗಿ ಸೇವಿಸಿದರೆ ಅದರ ಅಗುಳು ಅಗುಳೂ ಕೂಡ ನಮಗೆ ರಯಿಸುತ್ತದೆ. ಒಬ್ಬಾತ ಕೇಳಿದರು: ನಾನು ಫಾಸ್ಟ್ ಫುಡ್ ನಲ್ಲಿ ಊಟ ಮಾಡುವುದು, ಅಲ್ಲಿ ಎಲ್ಲಿ ಯಾವ ಅಪೋಶನ ತೆಗೆದುಕೊಳ್ಳಲಿ/ಚಿತ್ರ ಇಡಲಿ--ಎಂದು. ಆಹಾರವನ್ನು ವಾಣಿಜ್ಯವ್ಯವಹಾರವಾಗುಳ್ಳ ಪ್ರದೇಶಗಳಲ್ಲಿ ಅಂತಹ ಕೆಲಸಕ್ಕೆ ಕೈಹಾಕದಿರುವುದೇ ಒಳಿತು. ತಮಾಷೆಗೆ ನಾವು ಹೇಳುವುದಿದೆ: ಜಿರಲೆ ಬಿದ್ದ ದೋಸೆಹಿಟ್ಟಿನಿಂದ ಜಿರಲೆಯನ್ನು ಎತ್ತಿ ಬಿಸಾಡಿ, ಅದನ್ನೇ ಹುಯ್ದುಕೊಡುವುದರಿಂದ ದೋಸೆ ಗರಿಗರಿಯಾಗಿರುತ್ತದೆ ಎಂದು. ಎಷ್ಟೇ ಸ್ವಚ್ಛತೆ ಎಂದು ಬೋರ್ಡು ಹಾಕಿಕೊಂಡರೂ ಹೋಟೆಲ್ ಗಳಲ್ಲಿ ಕೆಲವಂಶಗಳಲ್ಲಾದರೂ ಮಾಲಿನ್ಯ ಇದ್ದೇ ಇರುತ್ತದೆ; ಅದು ಕಾಣದಂತೇ ಕ್ಲೋಸ್ಡ್ ರೂಮ್ ನಲ್ಲಿರುತ್ತದೆ!

ಮಹಾರಾಷ್ಟ್ರ ಮೂಲದವರಾಗಿ ಬೆಂಗಳೂರಿನಲ್ಲಿ ಉದ್ಯಮಿಯಾದ ವಯೋವೃದ್ಧ ಮರಾಠೀ ವ್ಯಕ್ತಿಯೊಬ್ಬರಲ್ಲಿ ಹರಟುತ್ತಿದ್ದೆ. ಪಕ್ಕದ ಮನೆಯಾತ ಸತ್ತರೂ ಗೊತ್ತಾಗದ, ಮಾನವೀಯ ಸಂಬಂಧಗಳಿಗೆ ಮೌಲ್ಯವೇ ಇಲ್ಲದ ಈ ಕಾಲದಲ್ಲೂ, ಮಳೆಗಾಲವೊಂದರಲ್ಲಿ ಮುಂಬೈಯ್ಯಲ್ಲಿ ಮಳೆನೀರು ನಿಂತು ಜನಸಂದಣಿ ಅಲ್ಲಲ್ಲೇ ಉಳಿಯಬೇಕಾದ ಪ್ರಸಂಗವೊದಗಿದಾಗ, ರಕ್ತಗತವಾಗಿ ಬಂದ ಭಾರತೀಯತೆ ಎಚ್ಚೆತ್ತು, ಗುರುತು ಪರಿಚಯ ಇರದವರು ನಿಂತ ಆ ಯಾ ಪ್ರದೇಶಗಳ ಮನೆಗಳಲ್ಲೇ ಎರಡೆರಡು ದಿನ ಆತಿಥ್ಯ ಪಡೆದರು ಎಂದ ಅವರು, ಭಾರತೀಯ ಮೂಲ ಸಂಸ್ಕೃತಿಯ ’ಅತಿಥಿ ದೇವೋಭವ’ ಎಂಬ ಉಲ್ಲೇಖವನ್ನು ನೆನೆದು ಗದ್ಗದಿತರಾದಾಗ ಅವರ ಗರಳೇ ಬದಲಾಗಿತ್ತು; ಕಣ್ಣ ಹನಿಗಳು ಉದುರಿದವು! ಹರಟಿದರೆ ಮುಗಿಯದ ಸಂಸ್ಕೃತಿ-ಸಂಸ್ಕಾರಗಳ ಕುರಿತ ಬರಹಗಳು, ನಮ್ಮ ಲೆಕ್ಕವನ್ನೆಲ್ಲಾ ಪಕ್ಕಕ್ಕಿಟ್ಟು ಹನುಮಗಾತ್ರಕ್ಕೆ ಬೆಳೆಯುತ್ತಲೇ ಹೋಗುತ್ತವೆ! ರಾಮಕೃಷ್ಣ ಮಠದ ಸ್ವಾಮಿ ಜಗದಾತ್ಮಾನಂದರು ಸುಮಾರು ೨೦ ವರ್ಷಗಳಿಗೂ ಮುನ್ನವೇ ’ಬದುಕಲು ಕಲಿಯಿರಿ’ ಎಂಬ ದೀವಿಗೆಯನ್ನು ಬೆಳಗಿಸಿದರು, ಇಂತಹ ಹೊತ್ತಗೆಯನ್ನು ನಮ್ಮೆಲ್ಲಾ ಅಧುನಿಕ ಕನ್ನಡಿಗರು, ಯುವಕರು ದಯಮಾಡಿ ಓದಿಕೊಳ್ಳಿ. ಆರ್ಷೇಯ ಸಂಸ್ಕೃತಿಯನ್ನು ಮರಳಿ ಜಾರಿಗೆ ತನ್ನಿ, ಮಮ್ಮಿ-ಡ್ಯಾಡಿ ಎಂಬ ವಿದೇಶೀ ಪದಗಳ ಅಂಧಾನುಕರಣೆ ಬಿಟ್ಟು ಸ್ವಚ್ಛಗನ್ನಡದಲ್ಲಿ ಅಪ್ಪ-ಅಮ್ಮ ಎಂದು ಹೇಳಲು ಮಕ್ಕಳಿಗೆ ತಿಳಿಸಿ, ಹಿರಿಯರು ನೀಡಿದ ಪುಣ್ಯಕಥಾನಕಗಳ ಆಂತರ್ಯವನ್ನು ನೀವರಿಯದಿದ್ದರೂ, ಅರಿತವರ ಮೂಲಕ ಮಕ್ಕಳಿಗೆ ಉಣಬಡಿಸಿ. ಮಕ್ಕಳಮೇಲೆ ಇಲ್ಲದ ಒತ್ತಡ ಹಾಕಬೇಡಿ. ಹಣೆಯಲ್ಲಿ ಯಾರಾಗಬೇಕೆಂದಿದೆಯೋ ಅವರು ’ಅವರೇ’ ಆಗುತ್ತಾರೆ! ದುಡಿಯುವ ಯಂತ್ರಗಳ ಬದಲಿಗೆ ಮಾನವರನ್ನು ಬೆಳೆಸಿ! ಪ್ರಕೃತಿಯನ್ನೂ ಸುತ್ತಲ ಜನರನ್ನೂ ಅರಿತು ಬದುಕುವ, ಬದುಕ ಕಲಿಯುವ ಭಾರತೀಯರನ್ನಾಗಿ ಬೆಳೆಸಿ ಎಂಬ ಬಿನ್ನವತ್ತಳೆಯೊಂದಿಗೆ ನೀವು ಹಾಗೆ ಮಾಡುತ್ತೀರಿ ಎಂಬ ವಿಶ್ವಾಸದಿಂದ ನಿಮಗೆ ಅಡ್ವಾನ್ಸ್ ಆಗಿ ನನ್ನ ಧನ್ಯವಾದಗಳೂ, ಅಭಿನಂದನೆಗಳೂ, ನಮಸ್ಕಾರಗಳೂ ಸಲ್ಲುತ್ತವೆ.

6 comments:

  1. ನಿಮ್ಮ ಅಂತರಂಗದ ತುಡಿತವನ್ನೇ ನಾನು ಬೇರೆಡೆಗೆ(ಎಪ್.ಬಿ) ನಿವೇದಿಸಿಕೊಂಡಾಗ ಮಾಡಿದ ಅಸಂಬದ್ಧ ಪ್ರಲಾಪಗಳು ಹಲವು ಪೋಷಕರಿಂದಲೇ ಬಂದುದು ಖೇದವೆನಿಸಿತು.(ಬಿನ್ನಾಣದ ಬೇಸಿಗೆ ಶಿಬಿರಗಳು..)ನಿಮ್ಮ ಲೇಖನ ಸ್ಪರ್ಷಿಯಾಗಿದೆ.ಧನ್ಯವಾದಗಳು.

    ReplyDelete
    Replies
    1. ಹೌದು, ನೀವು ಹೇಳಿದ್ದು ನಿಜ, ನನಗೂ ಹಾಗೇ ಅನ್ನಿಸಿತು, ಧನ್ಯವಾದ

      Delete
  2. ಭಟ್ಟರೆ - ನಿಮ್ಮೀ ಲೇಖನವು ಚೆನ್ನಾಗಿದ್ದರೂ, ನನಗೊಂದು ಭಿನ್ನಾಭಿಪ್ರಾಯವಿದೆ :: ಮಕ್ಕಳಲ್ಲಿ ಒಂದು ಅಂತಃಶಕ್ತಿಯಿರುತ್ತದೆ (potential). ಅವರು ತಮ್ಮ ಶಕ್ತಿಯ ಮಟ್ಟಕೆ ಏರಲು ಸಹಾಯ ಮಾಡುವದು ತಂದೆತಾಯಂದಿರ, ಗುರುಗಳ ಕರ್ತವ್ಯವಾಗಿರುತ್ತದೆ. ಹಾಗೆ ಮಾಡದೆ ಹೇಗೂ ಮಾಡು, ಹಣೆಯಲ್ಲಿ ಬರೆದಂತಾಗುತ್ತದೆಯೆಂದರೆ ಅದು ಬೇಜವಾಬ್ದಾರಿತನವಾದೀತು. ಏಕೆಂದರೆ, ಎಲ್ಲ ಮಕ್ಕಳಲ್ಲೂ ಸ್ವಯಂಚಾಲನೆಯಿರುವುದಿಲ್ಲ (self-drive). ಮಕ್ಕಳಲ್ಲಿ ಸಾಧ್ಯತೆ ಎಷ್ಟಿದೆ, ಎಷ್ಟು ದೂಡಬಹುದು ಎಂಬ ಬಗ್ಗೆ ಎಚ್ಚರಿಕೆಯಂತೂ ಬೇಕೇ ಬೇಕು. ಅವರಿಗಾಗದಿದ್ದಾಗ ಅರಿತು ಕೊಳ್ಳುವ ತಿಳುವಳಿಕೆಯೂ ಬೇಕು.ಹೇಳಿದನ್ನು ಸಾವಿರ ಸಲ ತಿರುತಿರುಗಿ ಹೇಳುವುದರಲ್ಲಿ ಪ್ರಯೋಜನವಿಲ್ಲವೆಂಬ ಅರಿವು ಬೇಕು (to keep repeating the same action expecting a different result is a sign of madness)
    ಇನ್ನು ಕಡಿಮೆ ಅಂಕ ತೆಗೆದುಕೊಂಡವರಲ್ಲಿ ಕೆಲವೊಬ್ಬರು ಉನ್ನತ ಸ್ಥಾನಗಳಿಗೇರಿದ್ದರೂ, ಪ್ರಮಾಣದಾಲ್ಲಿ ಇನ್ನೆಷ್ಟೋ ಹೆಚ್ಚು ಪಾಲು ಜನ ಕಷ್ಟ, ಬಡತನ, ಮಾತ್ಸರ್ಯ, ದುಃಖದಲ್ಲೇ ಜೀವನ ಕಳೆದಿರಬಹುದು. ಉದಾಹರಣೆಗಳ ತೊಡಕೇನೆಂದರೆ, ಎರಡು ಕಡೆಗಳಿಗೂ ಉದಾಹರಣೆಗಳಿರುತ್ತವೆ.
    ನಮ್ಮ ನಂಸ್ಕೃತಿ ಕೊಟ್ಟಿರುವ ಪುರುಷಾರ್ಥಗಳಲ್ಲಿ ಧರ್ಮದ ಜೊತೆಗೆ ಅರ್ಥ, ಕಾಮಗಳೂ ಇದ್ದು, ಇವಕ್ಕಾಗಿ ಶ್ರಮಿಸುವುದು ಎಲ್ಲರ ಹಕ್ಕು ಹಾಗೂ ಬಾಧ್ಯತೆಯಾಗಿದ್ದು, ಇದರತ್ತ ಮಕ್ಕಳನ್ನು ಪ್ರೇರಪಿಸುವುದರಲ್ಲಿ ತಪ್ಪಿಲ್ಲ.ಧರ್ಮದ ಚೌಕಟ್ಟಿನಲ್ಲಿ ಅರ್ಥ-ಕಾಮಗಳನ್ನು ಪಡೆಯಲು, ಉತ್ತಮ ಅಂಕಗಳು ಒಂದು ಅಮೂಲ್ಯ ಸಾಧನ. ಅದಕ್ಕಾಗಿ ಶ್ರಮಿಸುವುದರಲ್ಲಿ ತಪ್ಪಿಲ್ಲ.
    ನಿಮಗೆ ತಿಳಿದಂತೆ ಉತ್ತರ ಕನ್ನಡದ ಅನೇಕ ಹಳ್ಳಿಗಳಲ್ಲಿನ ಹವ್ಯಕರು ಬಡತನದಿಂದ ಮೇಲೆದ್ದಿರುವುದು ಹೀಗೇ ಕಷ್ಟಪಟ್ಟು ಅಂಕ ಗಳಿಸಿದ ಮಕ್ಕಳಿಂದ.
    ಒಟ್ಟಿನಲ್ಲಿ ಹೇಳುವುದಾದರೆ, ಈ ನಾಣ್ಯಕ್ಕೂ ಎರಡು ಮುಖಗಳಿವೆ. ಎರಡೂ ಸತ್ಯ. ಪಾಲಕರ ತಿಳುವಳಿಕೆ (ಎರಡೂ ದೃಷ್ಟಿಕೋನಗಳಿಂದ) ಮಕ್ಕಳ ಹಿತಕ್ಕೆ ಬಹಳ ಮುಖ್ಯ.
    :-)

    ReplyDelete
  3. ಸರ್, ತಮ್ಮ ಅಭಿಪ್ರಾಯಕ್ಕೆ ನನ್ನ ಸರ್ವಸಮ್ಮತವಿದೆ, ಅದನ್ನೇ ನಾನೂ ಲೇಖನದಲ್ಲಿ ಹೇಳಿದ್ದೇನೆ. ಹನುನಂತನಿಗೆ ಋಷಿಗಳ ಶಾಪದಿಂದ ವಿಸ್ಮೃತಿ ಉಂಟಾದ ಹಾಗೂ ಜಾಂಬವ, ಅಂಗದ ಮೊದಲಾದವರ ಉತ್ತೇಜನದಿಂದ ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತ ಕಥೆಯನ್ನು ನಾವು ಕೇಳಿಯೇ ಇದ್ದೇವೆ. ಕೇವಲ ಹಣೆಬರಹದ ಮೇಲೆ ಅವಲಂಬಿಸಿ ಕೂರಬೇಕು ಎಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಇಲ್ಲಿ ನಾನು ಹೇಳಿರುವುದು ವಯಸ್ಸಿಗೂ ಮೀರಿದ ಕೆಲಸವನ್ನು ನಿಭಾಯಿಸುವ ಒತ್ತಡಕ್ಕೆ ಮಾತ್ರ.

    ಉತ್ತರಕನ್ನಡ ಎಂದ ತಕ್ಷಣ ನನಗೆ ನೆನಪಿಗೆ ಬಂದಿದ್ದು: ಬಡತನವಿದ್ದರೂ ನಮ್ಮ ಮಕ್ಕಳಿಗೆ ಕೋನೇಪಕ್ಷ ನಿಸರ್ಗದ ಮಡಿಲಿತ್ತು; ಇದೆ, ನಮ್ಮ ಹಳ್ಳಿಗಳು ಆ ಮಟ್ಟಿಗೆ ಸಮೃದ್ಧವಾಗಿಯೇ ಇವೆ. ಇವತ್ತು ನಾನು ಬೆಳಗಿನ ಅರ್ಧಭಾಗವನ್ನು ಶ್ರೀ ಶಿವಶಂಕರ್ ಮತ್ತಿತರ ಸಮಾಜ ಸೇವಕರು ಉಚಿತವಾಗಿ ನಡೆಸುತ್ತಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ ನನ್ನಿಂದಾಗಬಹುದಾದ ತರಬೇತಿ ನೀಡಿದೆ. ಅಲ್ಲಿದ್ದ ಮಕ್ಕಳನ್ನು ಕಂಡಾಗ ಅಂತಹ ಬಡತನ ಎಂಬುದೇನೂ ಕಾಣಿಸಲಿಲ್ಲ; ಆದರೆ ಆ ಮಕ್ಕಳಿಗೆ ಬೇಸಿಗೆ ಅಥವಾ ಚಳಿಗಾಲದ ರಜಾದಿನಗಳಲ್ಲಿ ಆಡಲು ನಿಸರ್ಗದ ಮಡಿಲು ಲಭ್ಯವಿಲ್ಲ! ಹಳ್ಳಿಗಳನ್ನೇ ಕಾಣದ ಅದೆಷ್ಟು ಮಕ್ಕಳಿದ್ದಾರೋ ನಾನರಿಯೆ! ಹಳ್ಳಿಗಳ ಮಕ್ಕಳ ಹೊಸಬಗೆಯ ಆಟಪರಿಕರಗಳಿಂದ ಸ್ವಲ್ಪ ಮಟ್ಟಿಗೆ ವಂಚಿತರಾದರೂ ನಿಸರ್ಗವೆಂಬ ಅಮ್ಮ ಅವರನ್ನು ಬಹುವಾಗಿ ಪ್ರೀತಿಸುತ್ತದೆ. ಅಂತಹ ನೈಸರ್ಗಿಕ ಪ್ರದೇಶಗಳಲ್ಲಿ ಮಕ್ಕಳು ವರ್ಷದಲ್ಲಿ ಕೆಲದಿನವಾದರೂ ಕಳೆದರೆ ಅವರಿಗೆ ನವಚೈತನ್ಯ ಬರುತ್ತದೆ.

    ಈಗೀಗ ಸಿ.ಬಿ.ಎಸ್.ಈ ಮತ್ತು ಐ.ಸಿ.ಎಸ್.ಈ ಅಂತೆಲ್ಲಾ ವಯಸ್ಸಿಗೆ ಮೀರಿದ ಪಠ್ಯಕ್ರಮಗಳು/ಬೋಧನಾಕ್ರಮಗಳು ಜಾರಿಯಲ್ಲಿವೆ. ಕೆಲವು ಮಕ್ಕಳು ಹೊರುವ ಪುಸ್ತಕಗಳ ಭಾರ ಅವರ ಬೆನ್ನನ್ನೇ ಬಾಗಿಸುತ್ತದೆ! ಮಕ್ಕಳೆಲ್ಲರ ಮನೋದಾರ್ಢ್ಯತೆ ಮತ್ತು ಅರಿಕೆಯ ಸಾಮರ್ಥ್ಯ ಒಂದೇ ತೆರನಾಗಿ ಇರುವುದಿಲ್ಲವಲ್ಲಾ ಹೀಗಾಗಿ ೮೯ ಪ್ರತಿಶತ ಅಂಕ ಪಡೆದ ಮಗುವನ್ನು ೯೭-೯೮ ಪ್ರತಿಶತ ಪಡೆದ ಇನ್ನೊಂದು ಮಗುವಿಗೆ ಹೋಲಿಸಿ ಹಂಗಿಸುತ್ತಾರೆ ಪಾಲಕರು. ಆಗ ಆ ಮಗುವಿಗೆ ಆಗಬಹುದಾದ ಮಾನಸಿಕ ಯಾತನೆಯನ್ನು ನಾವು ತಿಳಿಯಬೇಕಾಗಿದೆ. ಮಕ್ಕಳ ಐಕ್ಯೂ ಬದಲಾಗಿದೆ. ಈಗಿನ ಮಕ್ಕಳು ಹಿಂದಿನ ತಲೆಮಾರಿನ ಮಕ್ಕಳಂತೇ ದಡ್ಡರ ರೀತಿ ಇರುವುದಿಲ್ಲ. ಹಾಗೆಯೇ ಅವರ ಸ್ಪಂದನಾ ಕ್ರಮವೂ ಬದಲಾಗಿದೆ; ಅವರು ಸೂಕ್ಷ್ಮ ಸಂವೇದಿಗಳಾಗಿದ್ದಾರೆ. ಅಪ್ಪ-ಅಮ್ಮ ಬೈಯ್ಯುವ ಬದಲು ಕೂರಿಸಿಕೊಂಡು ಬಿಡಿಸಿ ಅರ್ಥವಾಗುವಂತೇ ನಿಧಾನವಾಗಿ ತಿಳಿಸಿಹೇಳಿದರೆ ಉತ್ತಮ; ಇಲ್ಲದಿದ್ದರೆ ಅಂತಹ ಮಕ್ಕಳು, ಮನಸ್ಸಿಗೇ ನೋವಾದಾಗ ಸಾಯುವುದಕ್ಕೂ ಹೆದರುವುದಿಲ್ಲ. ಈ ದೃಷ್ಟಿಕೋನದಿಂದ ಈ ಲೇಖನವನ್ನು ಬರೆದಿದ್ದೇನೆ.

    ತಮ್ಮ ಅನಿಸಿಕೆಗೆ ತುಂಬಾ ಆಭಾರಿ.

    ReplyDelete
  4. ಶ್ರೀ ವಿ. ಆರ್. ಭಟ್ ರವರೆ ತಾವು ನಮ್ಮ ಬೇಸಿಗೆ ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿಸಿಕೊಕೊಟ್ಟದ್ದಕ್ಕಾಗಿ ಬಹಳ ಅಭಾರಿಯಾಗಿದ್ದೇನೆ. ಆ ದಿನ ನಾನು ಅಲ್ಲಿ ಇರಲಾಗದಿದ್ದಕ್ಕೆ ಕ್ಷಮೆ ಇರಲಿ. ಇದೇ ವಾರದಲ್ಲಿ ನಮ್ಮ ತಂದೆಯ ಮೂಲ ಊರಿನಲ್ಲಿ ಮಾರಿ ದೇವಿಯ ಉತ್ಸವಗಳು ಜರುಗುತ್ತಿದ್ದರಿಂದ ವರ್ಷಕ್ಕೊಮ್ಮೆ ಊರಿನ ಎಲ್ಲಾ ವಯೋಮಾನದವರನ್ನು ಸಂದಿಸುವ, ಭೇಟಿಯಾಗುವ ಸದವಕಾಶವನ್ನು ಬಿಡಲು ಸಾಧ್ಯವಾಗದೆ ಅಲ್ಲದೆ ನಮ್ಮ ಕರ್ತವ್ಯಗಳನ್ನು ಅಲ್ಲಿ ತಪ್ಪಿಸಿಕೊಳ್ಳುವ ಮನಸ್ಸಾಗದೆ ಅನಿವಾರ್ಯವಾಗಿ ನಾನು ಊರಿಗೆ ಕುಟುಂಬದೊಡನೆ ತೆರಳಬೇಕಾಯಿತು ಆದರೆ, ಮಿತ್ರರ ಅಭಿಮತ ಮತ್ತು ಮುಖ್ಯವಾಗಿ ಮಕ್ಕಳು ಹೇಳಿದಂತೆ ತಮ್ಮ ತರಗತಿಯೂ ವಿಭಿನ್ನ ಮತ್ತು ಔಚಿತ್ಯ ಪೂರ್ಣವಾಗಿತ್ತು ಎಂದು ತಿಳಿದು ಬಹಳ ಸಂತೋಷವಾಯಿತು ಮುಂದೆಯೂ ಇದೇ ರೀತಿಯ ಸಹಾಯ ಸಹಕಾರಗಳನ್ನು ನಮ್ಮ ಉಚಿತ ಬೇಸಿಗೆ ಶಿಬಿರಕ್ಕೆ ತಮ್ಮ ಹಾಗು ಇತರೆ ಮಿತ್ರರಿಂದ ಬಯಸುತ್ತೇನೆ.
    ಅಸ್ಟು ಮಾತ್ರವಲ್ಲದೆ ಇಂದಿನ ಶಿಕ್ಷಣ ಕ್ರಮ ಕೇವಲ ವಿಷಯ ಪೂರಣೆಯ ಕಸರತ್ತಾಗಿದ್ದು ಇಂದಿನ ಗಣಕ ಅಂತರ್ಜಾಲ ಯುಗದಲ್ಲಿ ನಿರರ್ಥಕ ವಾಗುತ್ತಿದೆಯೇನೋ ಎನಿಸುತ್ತಿದೆ. ಇಲ್ಲಿ ನಾವು ಪ್ರಾಯೋಗಿಕತೆಗೆ ಹೆಚ್ಚಿನ ಒತ್ತು ಕೊಡದೆ ಮಕ್ಕಳಿಗೆ ಸರಿಯಾಗಿ ಮಾತ್ರುಭಾಷೆಯನ್ನೂ ಕಲಿಸದೆ ಅವರನ್ನು ಕೇವಲ ಕರಣಿಕ, ಯಂತ್ರ ಚಾಲಕ, ಆಜ್ಜ್ಞಾಪಾಲಕ ಗುಲಾಮರನ್ನಗಿಸುತ್ತಾ ಶಿಕ್ಷಣದ ಉದ್ದೇಶ ಕೇವಲ ಹಣಗಳಿಕೆಯ ಅದರಲ್ಲಿಯೂ ಸುಲಭಧನ ಗಳಿಕೆಯ ಸಾಧನವಾಗಿಸುತ್ತಿರುವುದಕ್ಕೆ ಖೇದನೀಯ ವೆನಿಸುತ್ತಿದೆ, ಇಂದಿನ ಅನೇಕ ಮಕ್ಕಳಿಗೆ ನೀವು ಹೇಳಿದಂತೆ ಜೀವನದಲ್ಲಿ ಅಂಕಗಲಿಸುವುದೊಂದೇ ಗುರಿ ಆಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಕೆಲವೊಮ್ಮೆ ೯೨ ಅಂಕ ಪಡೆದೂ ೯೬ ಪಡೆದು ಪ್ರಥಮ ಸ್ಥಾನ ಗಲಿಸಲಿಲ್ಲವೆಂದು ಸಾವಿಗೆ ಶರಣಾಗುತ್ತಿರುವ ಘಟನೆಗಳು ಜರುಗುತ್ತಿರುವುದು ಆತನಕ ಕಾರಿಯಾಗಿದೆ. ಆದ್ದರಿಂದಲೇ ಅಂತ ಒತ್ತಡದ ಪರಿಸ್ಥಿತಿಗಳಿಂದ ಮಕ್ಕಳನ್ನು ಕೇವಲ "ಓದು ಓದು" ಎಂದು ಪೀಡಿಸುವ ಕತ್ತಲೆಯ ಏಕ ಬಾಟಲಿ ಮುಖದ್ವಾರದ ಮನೆಗೆ ಇರಬಹುದಾದ ಹತ್ತು ಹಲವು ಅವಕಾಶಗಳನ್ನು ತಿಳಿಸಿಕೊಡುವ ಪ್ರಯತ್ನ ಮತ್ತು ಹಲವು ದ್ವಾರಗಳನ್ನು ತೆರೆದು ಅವರು ನಿರಾತಂಕವಾಗಿ ಉಸಿರಾಡುವ ವಾತಾವರಣ ನಿರ್ಮಿಸುವ ಪ್ರಯತ್ನ ನಮ್ಮದಾಗಿದೆ. ಇಂತಲ್ಲಿ ನಿಮ್ಮ ಕಾಣಿಕೆ ಬಹಳ ಔಚಿತ್ಯ ಪೂರ್ಣವಾಗಿತ್ತು ಎಂದು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತಿ ಧನ್ಯವಾದಗಳೊಂದಿಗೆ
    ರ. ಶಿವಶಂಕರ
    ಅಧ್ಯಕ್ಷರು : ಸಂಸ್ಕೃತಿ ಸೇವಾ ವಾರಿಧಿ - ಸಂಸೇವಾ.

    ReplyDelete
    Replies
    1. ಸಹೃದಯೀ ಸಂಸೇವಾ ಕಾರ್ಯನಿರತ ಶ್ರೀ ಶಿವಶಂಕರರೇ, ನಿಮ್ಮ ಅಭಿಮಾನದ ನುಡಿಗೆ ನನ್ನ ಧನ್ಯವಾದಗಳು, ಹೀಗೆ ತೋರಿಸಿಕೊಳ್ಳುವುದು ನನಗೆ ಮುಜುಗರ, ಮೇಲಾಗಿ ಸಮಾಜದ ಉನ್ನತಿಗಾಗಿ ಹಂಬಲಿಸಿ ಸೇವಾನಿರತರಾದ ನಿಮ್ಮಂಥವರಿಂದ ಹೊರೆಗಾಣಿಕೆಯನ್ನು ಸ್ವೀಕರಿಸುವ ಬಯಕೆ ನನಗಿರಲಿಲ್ಲ; ಆದರೂ ನಿಮ್ಮ ಬಳಗದ ತೃಪ್ತಿಗಾಗಿ ಸ್ವೀಕರಿಸಿದ್ದೇನೆ.

      ನಿಮ್ಮಂಥಾ ಕೆಲವು ಜನರ ನಿಸ್ವಾರ್ಥ ಸೇವೆ ನಿಜಕ್ಕೂ ಇಂದಿನ ಸಮಾಜಕ್ಕೆ ಬೇಕಿದೆ. ಆ ಸೇವೆಯಲ್ಲಿ ಕಿಂಚಿತ್ ನನಗಾದ ರೀತಿಯಲ್ಲಿ ಸಹಕರಿಸಲು ನಾನು ಹೃತ್ಪೂರ್ವಕವಾಗಿ ಒಪ್ಪಿದ್ದೇನೆ. ನಾನು ತರಬೇತಿ ನೀಡಿದ್ದು ಏನೂ ಇಲ್ಲದಿದ್ದರೂ ನನ್ನನ್ನು ಆತ್ಮೀಯವಾಗಿ ಗೌರವಿಸಿದ ನಿಮ್ಮ ಬಳಗದ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ನಿಮಗೂ ನನ್ನ ಧನ್ಯವಾದಗಳು.

      ಊರ ಹಬ್ಬದ ನಿಮಿತ್ತ ಸ್ಥಳದಲ್ಲಿರದ ನಿಮ್ಮನ್ನು ಮೌಖಿಕವಾಗಿ ಭೇಟಿಮಾಡಲಾಗದಿದ್ದರೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಆದಿನಾರಾಯಣ ರೆಡ್ಡಿಯವರು ಸಕಾಲದಲ್ಲಿ ನನ್ನ ಕೆಲಸಕ್ಕೆ ಅನುವುಮಾಡಿಕೊಟ್ಟರು. ನಿಮ್ಮ ಈ ಸೇವೆಯನ್ನು ಸಮಾಜ ಅದಾಗಲೇ ಗುರುತಿಸುತ್ತಿದೆ. ಜೀವನದಲ್ಲಿ ನಮಗೆಲ್ಲಾ ನಮ್ಮ ವೈಯ್ಯಕ್ತಿಕಕ್ಕೇ ಸಮಯ ಸಾಲದಾಗ ಉದ್ಯೋಗದಲ್ಲಿದ್ದೂ ಇಂತಹ ಸಾಧನೆಗಳನ್ನು ಮಾಡಿದ ನಿಮ್ಮ ಕಾರ್ಯಕ್ಕೆ ನನ್ನ ಅಭಿನಂದನೆಗಳು ಮತ್ತು ಅಭಿವಂದನೆಗಳು. ಸಂಸೇವಾ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಎತ್ತರಕ್ಕೆ ಬೆಳೆದು ಸಮಾಜದ ಹಲವು ಸ್ತರಗಳಿಗೆ ಸನ್ನಡತೆ ಬೋಧಿಸುವಂತಾಗಲಿ ಎಂಬುದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಪುನರಪಿ ನಿಮ್ಮೆಲ್ಲರಿಗೂ ನನ್ನ ನೆನಕೆಗಳು.

      Delete