ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 4, 2012

ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !


ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !

ಬೊಗಸೆಕಂಗಳ ಆ ಚಲುವನನ್ನು ನೋಡುವುದೇ ಕಣ್ಣಿಗೆ ಹಿತ; ಆತ ಮಾತನಾಡುವ ಶುದ್ಧ ಕನ್ನಡವಂತೂ ಮನಕ್ಕೆ ಹಿತ. ಮಾಧ್ಯಮಗಳಲ್ಲಿ ಮೊದಲಾಗಿ ಕಂಡಾಗ ಆತ ಯಾರು ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಉತ್ತಮ ದಿರಿಸುಗಳನ್ನು ಧರಿಸಿ ಸದಾ ಹಸನ್ಮುಖದಿಂದಿರುವ ಆತನನ್ನು ನೋಡುತ್ತಿರುವಾಗಲೇ ಗೌರವಭಾವ ತಂತಾನೇ ಮನದಾಳದ ಮೂಲೆಯಿಂದ ಉಕ್ಕಿ ಬರುತ್ತಿತ್ತು. ಯಾರೆಂದು ಪಕ್ಕಾ ಗೊತ್ತಿಲ್ಲ, ಹುದ್ದೆ ಕೂಡ ತಿಳಿದಿಲ್ಲ, ಆದರೂ ಆ ಪರಿಶುದ್ಧ ಕನ್ನಡದ ವಾಗ್ಝರಿ ನನ್ನ ಮನಸ್ಸನ್ನು ಸೆರೆಹಿಡಿದು ಬಿಟ್ಟಿತ್ತು. ಮಾಧ್ಯಮಗಳು ಹೆಸರನ್ನು ಆಗಾಗ ಬಿತ್ತರಿಸಿದಮೇಲೆ ಕುತೂಹಲ ಕೆರಳಿತು. ಅಂದಿನಿಂದ ಇಂದಿನವರೆಗೂ ನೋಡುತ್ತಲೇ ಬಂದಿದ್ದೇನೆ, ಈ ವಿಠಲ ಐ.ಎಂ.ವಿಠಲ ನಿಜಕ್ಕೂ ನಮ್ಮ ಹೆಮ್ಮೆಯ ವಿಠಲ!

ಒಂದಾನೊಂದು ಕಾಲಕ್ಕೆ ಅಂದರೆ ಎರಡು ದಶಕಗಳ ಹಿಂದೆ ಸರ್ಕಾರೀ ಸ್ವಾಮ್ಯದ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ಲುಕ್ಸಾನಿನಲ್ಲಿ ನಡೆಯುತ್ತಿತ್ತು. ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಥರದಲ್ಲೇ ಇನ್ನೇನು ಮುಳುಗಿಹೋಗುವ ಹಡಗು ಅದು. ಅಂತಹ ಹಡಗಿಗೆ ನಾವಿಕನಾಗಿ ನಡೆದು ಬಂದವರು ದಕ್ಷ ಭಾ.ಆ.ಸೇ ಅಧಿಕಾರಿ ಐ.ಎಂ ವಿಠ್ಠಲಮೂರ್ತಿ. ಕುತ್ಸಿತ ರಾಜಕಾರಣಕ್ಕೆ ನೊಂದಿದ್ದರೂ ಬ್ರಷ್ಟ ರಾಜಕಾರಣಿಗಳ ವರ್ಗಾವರ್ಗಿ ಅವಾಂತರಗಳಿಗೆ ಬೆದರದ ಏಕೈಕ ಅಧಿಕಾರಿ ಅವರು ಎಂದರೆ ತಪ್ಪಲ್ಲ! ತನಗೆ ಇಂತಹ ಜಾಗವನ್ನೇ ಕೊಡಿ ಎಂದು ಮಂತ್ರಿಗಳಲ್ಲಿ ಅವರು ಎಂದೂ ಕೇಳಲಿಲ್ಲ. ಎಲ್ಲಿಗೆ ವರ್ಗಾಯಿಸಿದ್ದಾರೋ ಅಲ್ಲಿಗೆ ಸಾಗಿ ತನಗೆ ಒದಗಿಬಂದ ಕೆಲಸದಲ್ಲಿ ಕರ್ತವ್ಯಪರತೆಯನ್ನು ಅತಿ ಪ್ರಾಮಾಣಿಕವಾಗಿ ಮಾಡಿದ ವ್ಯಕ್ತಿ. ಎಮ್. ಎಸ್. ಐ.ಎಲ್ ಒಂಥರಾ ಹಣವನ್ನು ತಿಂಬ ಯಾವ ಆಡೂ ಮುಟ್ಟದ ಗಿಡವಾಗಿತ್ತು. ಯಾಕೆಂದರೆ ಅದರಲ್ಲಿ ಇರುವ ಸತ್ವವನ್ನು ಹೀರಿ ಹೀರಿ ಬಿಸಾಡಿದ ಕಬ್ಬಿನ ಸಿಪ್ಪೆಯಂತಿತ್ತು ಅದರ ಸ್ವರೂಪ. ಅನೇಕರು ಬಂದರು ಹೋದರು ಆದರೆ ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹಾಳು ಬಾವಿಗೆ ನೂಕಿದಂತೇ ವಿಠ್ಠಲಮೂರ್ತಿಯವರನ್ನು ಅಲ್ಲಿಗೆ ವರ್ಗಾ ಮಾಡಿದರು. ನಮ್ಮ ವಿಠಲ ಕ್ಯಾರೇ ಅನ್ನಲಿಲ್ಲ. ಆದೇಶ ಕೈಗೆ ಬಂದ ಕ್ಷಣದಿಂದ ಎಮ್.ಎಸ್.ಐ.ಎಲ್ ಅನ್ನು ಸುಂದರ ನಂದನವನ್ನಾಗಿ ರೂಪಿಸುವ ಕನಸುಕಂಡರು.

ಅಧಿಕಾರಿಗಳಿಗೆ ಅಧಿಕಾರೀ ವರ್ಗಕ್ಕೆ ತಮ್ಮ ಖಾಸಗೀ ಬೊಕ್ಕಸ ತುಂಬಿಸಿಕೊಳ್ಳುವ ರಹದಾರಿಯ ಚಿಂತೆಯೇ ಸದಾ ಇರುತ್ತದೆ. ಅವರಿಗೆ ಸಂಗೀತ, ಸಾಹಿತ್ಯ, ಕಲೆ ಇವೆಲ್ಲಕ್ಕೂ ಸಮಯ ವ್ಯಯಿಸುವ ವ್ಯವಧಾನವಿಲ್ಲ. ಏನಿದ್ದರೂ ಕಂತೆಗಳನ್ನು ಎಣಿಸಿಕೊಳ್ಳಬೇಕು. ಬರುವುದರಲ್ಲಿ ಮುಕ್ಕಾಲು ಪಾಲು ತನಗೆ, ಕಾಲು ಪಾಲು ಮುಂದಿನ ತನ್ನ ಪೋಸ್ಟಿಂಗ್ ಮಾಡಿಸಿಕೊಳ್ಳಲು ಸಂಬಂಧಿಸಿದ ಮಂತ್ರಿಗೆ ಸೂಟ್ಕೇಸ್ ಸಲುವಾಗಿ! ಇವತ್ತಿಗೆ ಸರಕಾರೀ ಇಲಾಖೆಗಳಲ್ಲಿ ಕೆಲಸ ಮಾಡುವವರ ಹಣೆಬರಹವೇ ಇದು. ಸರ್ಕಾರೀ ನೌಕರಿ ಎಂದ ತಕ್ಷಣ ’ವರ್ಗಾವರ್ಗಿಗೆ’ ಎಂಬ ಅಕೌಂಟನ್ನು ತೆರೆಯಲಾಗುತ್ತದೆ! ಸರಕಾರದಲ್ಲಿರುವ ಮಂತ್ರಿಮಹೋದಯ ಬ್ರಷ್ಟರು ತಮ್ಮ ಖಾತೆ ಹಂಚಿಕೊಳ್ಳುವಾಗಲೂ ಈ ಬೊಕ್ಕಸದಮೇಲೆ ನಿಗಾ ಇರಿಸಿಯೇ ಹಾಗೆ ಕೋರುವುದು. ಖಾತೆ ಸರಿಯಾಗಿಲ್ಲ ಎಂಬ ಅಸಮಾಧಾನದಿಂದ ರಾಜೆನಾಮೆ ಒಗೆದ ಮಂತ್ರಿಗಳೂ ಇದ್ದಾರೆ! ಯಾರು ಪಾಪದ ಶಾಸಕರಾಗಿ ಅನೇಕಬಾರಿ ಆರಿಸಿಬಂದು ಮಂತ್ರಿಯಾಗಲು ಮಿಕ್ಕೆಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೋ ಅಂಥವರಿಗೆ ’ಬೊಕ್ಕಸ ರಹಿತ’ ಖಾತೆಗಳನ್ನು ಕರುಣಿಸಲಾಗುತ್ತದೆ. ಪ್ರಧಾನ ಖಾತೆಗಳಲ್ಲಿ ವಿರಾಜಮಾನರಾಗುವ ಶ್ರೀಮಾನ ಮಂತ್ರಿಗಳನ್ನು ಕಾಣಲು ಬರಿಗೈಯ್ಯಿಂದ ಹೋದರೆ ದರ್ಶನಭಾಗ್ಯ ಲಭಿಸಲಾರದು! ಅದಕ್ಕೆ ಏನಿದ್ದರೂ ಸೂಟ್ ಕೇಸ್ ಬೇಕಾಗುತ್ತದೆ. ಅಧಿಕಾರಿಗಳು, ತಂತಮ್ಮ ಕೆಲಸಗಳಿಗೆ ಮಂಜೂರಾತಿ ಬಯಸುವ ನಾಗರಿಕರು, ಪರಿಹಾರ ಕೋರಿ ಬರುವ ಹಳ್ಳಿಗರು ಯಾರೇ ಇರಲಿ |ಕಾಂಚಾಣಂ ಕಾರ್ಯ ಸಿದ್ಧಿಃ | ಅದಿರದಿರೆ ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆಯಂತೇ ತೊಲಗಿ ಎಂಬುದು ಸಚಿವಾಲಯಗಳ ಸೈಲೆಂಟ್ ಸ್ಲೋಗನ್ನು! ಇಂತಹ ಬ್ರಷ್ಟಸಾಗರ[ಸಪ್ತಸಾಗರಗಳಿಗೂ ಬೃಹತ್ತಾದ ಮಹಾಸಾಗರ ಇದು!]ದಲ್ಲಿ ಯಾರಿಂದಲೂ ಪೈಸೆ ಗಿಂಜದೇ, ತನ್ನ ಸೀಟಿನ ಉಳಿವಿಗಾಗಿ ಬ್ರಷ್ಟರಿಗೆ ಸೊಪ್ಪುಹಾಕದೇ ಧೀರನಾಗಿ ಕರ್ತವ್ಯಪಾಲನೆ ಮಾಡಿದ ಹೆಗ್ಗಳಿಕೆ ನಮ್ಮ ವಿಠಲರದು.

ಅಧಿಕಾರಿಗಳೆಲ್ಲರೂ ಮನೆಗಳ ಮೇಲೆ ಮನೆಗಳನ್ನು ಕಟ್ಟುವ, ಹತ್ತಾರು ಸೈಟು ಖರೀದಿಸುವ ಹುನ್ನಾರದಲ್ಲಿದ್ದರೆ ವಿಠಲರು ಕನ್ನಡವನ್ನು ಕಟ್ಟುವ ಯೋಜನೆಯಲ್ಲಿದ್ದರು. ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿಯೂ ಸಾಹಿತ್ಯಕವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಐ.ಎ.ಎಸ್. ಅಧಿಕಾರಿ ಇದ್ದರೆ ಅವರು ವಿಠ್ಠಲ ಮೂರ್ತಿ ಒಬ್ಬರೇ! ತಮಗೆ ಕೊಟ್ಟ ಎಮ್.ಎಸ್. ಐ.ಎಲ್ ಊರ್ಜಿತಗೊಳ್ಳಬೇಕು, ಕನ್ನಡದ ಸೇವೆಯೂ ನಡೆಯಬೇಕು ಈ ಎರಡೂ ಘನ ಉದ್ದೇಶಗಳನ್ನು ಇಟ್ಟುಕೊಂಡು ಹಲವುಕ್ಷಣ ಯೋಚಿಸಿ, ಯೋಜಿಸಿ ಚಂದನದಲ್ಲಿ ’ನಿತ್ಯೋತ್ಸವ’ ಎಂಬ ಕಾರ್ಯಕ್ರಮವನ್ನು ರೂಪಿಸಿದವರು ಇದೇ ವಿಠ್ಠಲಮೂರ್ತಿಗಳು. ಸುಗಮಸಂಗೀತದ ಸೊಗಸಾದ ಪ್ರಸ್ತುತಿಯೊಡನೆ ಅನೇಕ ಹಿರಿಯ ಕವಿಗಳ ಕವಿತೆಗಳ ಮೆಲುಕುವಿಕೆಯೊಡನೆ ಎಮ್.ಎಸ್.ಐ.ಎಲ್ ಎಂಬ ಸಂಸ್ಥೆಯೊಂದಿದೆ-ಅದರ ಉತ್ಫನ್ನಗಳು ಇಂತಿಂಥವು ಎಂಬುದನ್ನು ಜನತೆಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾದವರು ವಿಠ್ಠಲಮೂರ್ತಿ. ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಬಂದರು. ಅಲ್ಲೂ ಕೂಡ ತಮ್ಮ ಛಾಪನ್ನು ಒತ್ತಿದರು. ಅವರು ಹೋದಲ್ಲೆಲ್ಲಾ ಕನ್ನಡದ್ದೇ ಸುದ್ದಿ. ಕನ್ನಡದ ಅಭಿವೃದ್ಧಿ ಹೇಗೆ ? ಕನ್ನಡಕ್ಕೆ ಏನೇನು ಕೊಡಲಾದೀತು ? ಇಂಥದ್ದೇ ಮಾತು.

ಜನಪದ ಕಲಾಪ್ರಕಾರಗಳಿಗೆ ಆದ್ಯತೆ ದೊರೆತು ರಾಜಧಾನಿಯಲ್ಲಿ ಅವು ಬಹುಕಾಲ ವಿಜೃಂಭಿಸಿದ್ದೂ ಕೂಡ ವಿಠ್ಠಲಮೂರ್ತಿಗಳ ಪ್ರಯತ್ನದಿಂದಲೇ. ಕನ್ನಡ ನೆಲದ ಯಾವ ಕಲೆಯೂ ಹಿಂದಕ್ಕೆ ಬೀಳಬಾರದು, ಕಡೆಗಣಿಸಲ್ಪಟ್ಟು ನಶಿಸಿಹೋಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಸೇರಿದಂತೇ ಅನೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಜನಪದ ಸೊಗಡು ಮೆರೆಯುವಂತೇ ಮಾಡಿದರು. ಅನೇಕಾವರ್ತಿ ಹಲವು ವೇದಿಕೆಗಳಲ್ಲಿ ಅವರನ್ನು ಕಾಣುವ ಮೊದಲೇ ಅವರ ಹೆಸರಿನ ಪ್ರಸ್ತುತಿಯಾಗುವ ಮೊದಲೇ ನಾನು ಮನದಲ್ಲೇ ಲೆಕ್ಕಹಾಕಿಕೊಂಡು ಇದು ವಿಠ್ಠಲಮೂರ್ತಿಗಳ ಮಾರ್ಗದರ್ಶನದ ಕಾರ್ಯಕ್ರಮ ಎಂದು ಅನೇಕ ಮಿತ್ರರ ಎದುರಿಗೆ ಹೇಳುವುದಿತ್ತು; ಅದು ಹೌದಾಗಿಯೂ ಇರುತ್ತಿತ್ತು. ಇಂತಹ ವಿಠ್ಠಲಮೂರ್ತಿ ಮಧ್ಯೆ ಮಧ್ಯೆ ಅದೆಲ್ಲೆಲ್ಲಿಗೋ ಎತ್ತಂಗಡಿಯಾದರು. ಎಲ್ಲಿಗೇ ಹೋದರು ತನ್ನತನ ಬಿಡಲಿಲ್ಲ; ಕನ್ನಡತನ ಮರೆಯಲಿಲ್ಲ! ಜಂಬದ ಅಧಿಕಾರಿಗಳು ಆಂಗ್ಲಭಾಷೆಯಲ್ಲಿ ಎರಡು ಮಾತನಾಡಿದರೇ ಜಾಸ್ತಿ ಅಂಥದ್ದರಲ್ಲೂ ಅಚ್ಚಗನ್ನಡದಲ್ಲಿ ನೆಚ್ಚಿಮಾತನಾಡುವ ಪರಭಾಷೆಗಳ ಮಹಾಪೂರದಲ್ಲಿ ಕೊಚ್ಚಿಹೋಗದಂತೇ ಎಚ್ಚರಿಕೆಯ ಗಂಟೆ ಅಲ್ಲಾಡಿಸುವ ಕೆಚ್ಚೆದೆಯ ಕನ್ನಡಿಗ ಅಧಿಕಾರಿ ಇವರಾಗಿದ್ದರಿಂದ ನನಗಿವರು ಅಚ್ಚುಮೆಚ್ಚು, ಅವರನ್ನೊಮ್ಮೆ ಖುದ್ದಾಗಿ ಕಾಂಬ ಹುಚ್ಚು.

ಮೊನ್ನೆ ಸಂಸ್ಕೃತಿ ಬಾಗಿನ ಎಂದು ವರದಿ ಬಂದಾಗಲೇ ನಾನೆಚ್ಚೆತ್ತುಕೊಂಡಿದ್ದು, ಓಹೋ ನಮ್ಮ ವಿಠ್ಠಲಮೂರ್ತಿಗೆ ನಿವೃತ್ತಿಯಾಯ್ತು ಎಂಬುದು. ಅವರನ್ನೂ ಅವರ ಮುಖಲಕ್ಷಣವನ್ನೂ ಅವರ ಶಾರೀರಿಕ ನವಚೈತನ್ಯವನ್ನೂ ನೋಡಿದಾಗ ಹಾಗನ್ನಿಸುವುದೇ ಇಲ್ಲ; ಆದರೂ ದಾಖಲೆಯಲ್ಲಿ ವಯಸ್ಸು ನಮೂದಿತವಾಗಿರುವ ಮೀಟರ್ ಓಡುತ್ತಿರುತ್ತದಲ್ಲಾ ! ಇಂತಹ ಅಧಿಕಾರಿಗಳಿಗೆ ೫೮-೬೦ ವಯಸ್ಸೆಲ್ಲಾ ಲೆಕ್ಕವಲ್ಲ, ಬಹುಶಃ ಜೀವಿತದಲ್ಲಿರುವವರೆಗೂ ಅವರು ಜಾಗ್ರತರಾಗಿರುತ್ತಾರೆ, ನಿರಂತರ ಒಂದಿಲ್ಲೊಂದು ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಇಂಥವರ ಸಲಹೆ ಯಾವಕಾಲಕ್ಕೂ ಸರಕಾರಕ್ಕಾಗಲೀ ಸಮಾಜಕ್ಕಾಗಲೀ ಒಳಿತು. ಅದಕ್ಕೆಂತಲೇ ಜನಪದ ಕಲಾವಿದರು, ಕವಿ-ಸಾಹಿತಿಗಳು, ಗಣ್ಯ-ಮಾನ್ಯರು ಸೇರ್‍ರಿ ಅವರಿಗೆ ಸಂಸ್ಕೃತಿ ಬಾಗಿನ ಅರ್ಪಿಸಿದರು-ಸಲ್ಲಲೇ ಬೇಕಾಗಿದ್ದ ಗೌರವ ಅದು. ನಿವೃತ್ತರಾದ ಅವರು ಹೇಳಿದ್ದು ಒಂದೇ ಮಾತು" ಅಧಿಕಾರಿಗಳೇ ಬ್ರಷ್ಟಾಚಾರಕ್ಕೆ ಮಣಿಯಬೇಡಿ, ವರ್ಗಾವರ್ಗಿಗೆ ಹೆದರಬೇಡಿ ಹಾಕಿದಲ್ಲಿಗೆ ಹೋಗಿ ನಿಮ್ಮತನ ಉಳಿಸಿಕೊಳ್ಳಿ " ಎಂಬುದು. ಹಾಗೊಮ್ಮೆ ಅಧಿಕಾರಿಗಳೆಲ್ಲಾ ಆರಂಭಿಸಿದರೆ ಆಗ ಸೂಟ್ ಕೇಸ್ ವ್ಯವಹಾರ ಕಮ್ಮಿಯಾಗುತ್ತದೆ. ರಾಜಕೀಯದವರ ಖಾಸಗೀ ಬೊಕ್ಕಸದ ಒಂದು ಭಾಗ ಬರಿದಾಗುತ್ತದೆ! ಆದರೆ ಅವರ ಮಾತನ್ನು ಎಷ್ಟುಮಂದಿ ಅಧಿಕಾರಿಗಳು ಕಿವಿಗೆ ಹಾಕಿಕೊಂಡರು? ನಮ್ಮ ನಡುವೆ ಇರುವ ಇಂತಹ ಶುದ್ಧಹಸ್ತರನ್ನು ಗೌರವಿಸುವುದು, ಅವರ ಸಲಹೆಗಳನ್ನು ಪಡೆಯುವುದು ಬಹಳ ಆರೋಗ್ಯಕರ ಎನಿಸುತ್ತದೆ. ಹೆಚ್ಚಿಗೆ ಏನು ಹೇಳಲಿ ಸಂಸ್ಕೃತಿ ಬಾಗಿನ ಪಡೆದ ವಿಠಲರೇ ಕೇವಲ ಸರಕಾರೀ ಅಧಿಕಾರದಿಂದ ನಿವೃತ್ತರಾದ ನಿಮಗೆ ನಮ್ಮೆಲ್ಲರ ಶುಭಹಾರೈಕೆಗಳು ಮತ್ತು ಮುಂದಿನ ನಿಮ್ಮ ದಿನಗಳಲ್ಲಿ ನಾವು ನಿಮ್ಮಿಂದ ಇನ್ನೂ ಹೆಚ್ಚಿನ ಕನ್ನಡ ಸೇವೆಯನ್ನು ಬಯಸುತ್ತೇವೆಯೇ ಹೊರತು ನಿಮಗೆ ಶುಭವಿದಾಯ ಕೋರಲು ನಾವು ಸಿದ್ಧರಿಲ್ಲ! ಕನ್ನಡ ನಾಡು ಕಂಡ ಅಗ್ದೀ ಛೊಲೋ ಅಧಿಕಾರಿಗಳಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು, ಒಪ್ಪಿಸಿಕೊಳ್ಳಿ: ಈ ಕ್ಷಣಕ್ಕೆ ಈ ಲೇಖನದ ಮೂಲಕ ನಿಮಗೆ ಹೀಗೊಂದು ಗೌರವಪೂರ್ವಕ ನಮಸ್ಕಾರ.

6 comments:

  1. ಭಟ್ಟರೆ,
    ವಿಠ್ಠಲಮೂರ್ತಿಯವರ ಬಗೆಗೆ ಚೆನ್ನಾಗಿ ತಿಳಿಸಿರುವಿರಿ. ಹಿರಿಯ ಹುದ್ದೆಯಲ್ಲಿರುವ ಅಧಿಕಾರಿಗಳು ಉತ್ತಮ ಕೆಲಸ ಮಾಡಬಲ್ಲರು. ಆದರೆ ಅದಕ್ಕೆ ಮನಸ್ಸು ಬೇಕಷ್ಟೆ!

    ReplyDelete
  2. ತುಂಬಾ ಚೆಂದವಾದ ವಿಠ್ಠಲಮೂರ್ತಿಯವರ ಪರಿಚಯ, ಅವರ ಬಗ್ಗೆ ತಿಳಿದು ತುಂಬಾ ಖುಷಿಪಟ್ಟೆ.. ಅಂತಹ ಮಹಾನ್ ಕನ್ನಡದ ಕುವರ ಮತ್ತು ಎಲ್ಲಾ ಇಲಾಖೆಗಳಲ್ಲಿಯೂ ತನ್ನ ತನವನ್ನು ಕಾಯ್ದುಕೊಂಡ ನಿಷ್ಠಾವಂತ ಐ.ಎ.ಎಸ್ ಅಧಿಕಾರಿ ಎಂಬುದನ್ನು ತಿಳಿದು ಅವರ ಬಗ್ಗೆ ಇನ್ನಷ್ಟು ಗೌರವ ಮೂಡಿತು.. ನಿಮ್ಮ ವಿಷಯ ವಿಸ್ತಾರದ ಶೈಲಿ ನನಗೆ ತುಂಬಾ ಹಿಡಿಸುತ್ತದೆ ಸರ್.. ಮತ್ತು ಈ ಲೇಖನ ಕೇವಲ ವಿಠ್ಠಲಮೂರ್ತಿಯವರ ಪರಿಚಯ ಮತ್ತು ಗುಣಗಾನಕ್ಕೆ ಸೀಮಿತವಾಗದೆ ಈ ಭ್ರಷ್ಟ ವ್ಯವಸ್ತೆಯಲ್ಲಿ ನೀಚ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ.. ಮನಮುಟುವ ಲೇಖನ, ಹಿಡಿಸಿತು ಸರ್..

    ReplyDelete
  3. ಐ.ಎಂ. ವಿಠ್ಠಲಮೂರ್ತಿಯವರಯವರ ಬಗ್ಗೆ ಮಾಹಿತಿ ಕೊಟ್ಟ ಮೊದಲ ಬ್ಲಾಗಿಗರು ನೀವು. ಪರಿಚಯ ಚೆನ್ನಾಗಿ ಮೂಡಿ ಬಂದಿದೆ. ಮತ್ತಷ್ಟು ವಿವರಣೆ ಇವರ ಬಗ್ಗೆ ಅಗತ್ಯವಿದೆ ಅನ್ನಿಸಿತು. ತಾವು ಇವರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಉಣಬಡಿಸಿದಲ್ಲಿ ಹಲವರಿಗೆ ಆ ಮಾಹಿತಿ ಮಾರ್ಗದರ್ಶನವಾಗುತ್ತದೆ . ತಮ್ಮ ಲೇಖನಕ್ಕೆ ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] ವಿಠ್ಠಲಮೂರ್ತಿಯವರ

    ReplyDelete
  4. ನನ್ನ ಸರ್ಕಾರಿ ಸೇವೆಯು ಶ್ರೀಯುತರ ಹಸ್ತ ಆದೇಶದಿಂದ ಪ್ರಾರಂಭವಾಯಿತೆಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆ ನನಗೆ.

    ReplyDelete
  5. ಭಟ್ರೇ,

    ವಿಠಲ ಮೂರ್ತಿಯವರ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ...ಧನ್ಯವಾದಗಳು...

    ReplyDelete