ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 18, 2011

ಆ ಮುಖ


ಆ ಮುಖ

೧೯೯೭ರಲ್ಲಿ ನಾಗಮಂಗಲ ತಾಲೂಕು ಯಾವುದೋ ಹೋಬಳಿಯ ಕೆಂಪೇಗೌಡರ ಮಗ ನಾರಾಯಣ ಗೌಡರ ಕುಟುಂಬ ಆತನನ್ನು ಊಟಕ್ಕೆ ಕರೆದಿತ್ತು. ಬ್ರಾಹ್ಮಣನಾದ ಆತ ತಮ್ಮನೆಯಲ್ಲಿ ಊಟ ಮಾಡಬಹುದೇ ಎಂಬ ಸಂದೇಹವಿದ್ದರೂ ಏನೋ ಕರೆದು ನೋಡೋಣ ಎಂಬ ಅನಿಸಿಕೆಯಿರಬೇಕು. ಮಗ ದೊಡ್ಡವನಾಗಿ ಏನಾದರೂ ದುಡೀಲಿ ಎಂಬಂತೇ ರೈತ ಕೆಂಪೇಗೌಡರು ನಾರಾಯಣನನ್ನು ಬೆಂಗಳೂರಿಗೆ ಕಳಿಸಿದ್ದರು. ಅಲ್ಲಿಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನಾರಾಯಣ ದಿನಪತ್ರಿಕೆಯ ಸಬ್ ಏಜೆಂಟ್ ಆಗಿ ಕೆಲಸಮಾಡತೊಡಗಿದ್ದ. ಬರುವ ಹಣದಲ್ಲೇ ಕಷ್ಟಕ್ಕೇ ಅಂತ ಅಷ್ಟಿಷ್ಟು ಎತ್ತಿಟ್ಟು ನಂಬುಗೆಯವರಲ್ಲಿ ಚೀಟಿ ಹಾಕಿ ಸ್ವಲ್ಪ ಜಾಸ್ತಿ ಹಣ ಕೈಗೆ ಸಿಕ್ಕಾಗ ಚಿಕ್ಕ ಅಂಗಡಿಯೊಂದನ್ನು ಆರಂಭಿಸಿದ. ವರ್ಷಾರು ತಿಂಗಳಲ್ಲೇ ನಾರಾಯಣನ ಒಡನಾಟದಿಂದ ಆ ರಾಜಾಜಿನಗರದ ಆ ಪ್ರದೇಶದ ಸುತ್ತುವರಿ ಜನ ಆತನ ಅಂಗಡಿಗೆ ಅದೂ ಇದೂ ಕೇಳಿಕೊಂಡು ಬರಲು ಆರಂಭಿಸಿದರು. " ಚನ್ನಕೇಶವ ಪ್ರಾವಿಜನ್ ಸ್ಟೋರ್ಸ್" ಎಂಬುದು ಬರೇ ಅಂಗಡಿಯಾಗಿರದೇ ಸ್ನೇಹಿತರ ಬಳಗಕ್ಕೆ ಮೆಸ್ಸೆಂಜರ್ ಆಗಿ ಕಾರ್ಯನಿರ್ವಹಿಸುವ ಕೇಂದ್ರವಾಗಿತ್ತು. ಆತನೂ ಸೇರಿದಂತೇ ಹಲವಾರು ಜನ ಹಳ್ಳಿಯಿಂದ ಬಂದ ಮಿತ್ರರು ಅಲ್ಲಿ ಆಗಾಗ ಸೇರುತ್ತಿದ್ದರು. ಬೇರೇ ಬೇರೇ ರೂಮುಗಳಲ್ಲಿ ವಾಸಮಾಡುತ್ತಿದ್ದ ಅವರು ಪರಸ್ಪರ ಸಿಗಬೇಕಾದರೆ ಅದಕ್ಕೆ ನಾರಾಯಣನಲ್ಲಿ ತಿಳಿಸಿರುವ ಸಂದೇಶವೇ ಕಾರಣವಾಗಿರುತ್ತಿತ್ತು. ನಾರಾಯಣನಿಗೂ ಆತನಿಗೂ ವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಒಂದೇ ಓರಗೆಯ ಹುಡುಗರಾದುದರಿಂದಲೋ ಏನೋ ಅಲ್ಲಿ ಸೇರುವ ಎಲ್ಲಾ ಹುಡುಗರೂ ನಾರಾಯಣನನ್ನೂ ಗೆಳೆಯನನ್ನಾಗಿ ಸ್ವೀಕರಿಸಿದ್ದರು; ಸಾಮನುಗಳನ್ನೂ ನಾರಾಯಣನ ಅಂಗಡಿಯಲ್ಲೇ ಖರೀದಿಸುತ್ತಿದ್ದರು.

ನಾರಾಯಣನ ಅಂಗಡಿಗೆ ಹತ್ತಿರದ ಒಂದು ಮನೆಯಿಂದ ಪೀಯೂಸಿ ಓದುವಂತಹ ವಯದ ಹುಡುಗಿಯೊಬ್ಬಳು ಆಗಾಗ ಬರುತ್ತಿದ್ದಳು. ವಯೋಮಾನದ ಸಹಜ ವಾಂಛೆಯಿಂದ ನಾರಾಯಣನಿಗೂ ಅವಳಿಗೂ ಪ್ರೇಮಾಂಕುರವಾಗಿತ್ತೆಂದು ಬೇರೇ ಹೇಳಬೇಕೇನು ? ಕೃಷ್ಣವರ್ಣದ ಸಾದಾ ಸೀದಾ ಸುಂದರಿ ಆಕೆ. ಅವರೂ ಗೌಡರೇ ಎಂಬುದನ್ನರಿತ ಸ್ನೇಹಿತರಿಗೆ ನಾರಾಯಣನ ಲವ್ವು ಮುಗ್ಗರಿಸುವುದಿಲ್ಲ ಎಂಬ ಭರವಸೆಯಿತ್ತು. ಆರಂಭದಲ್ಲಿ ಆಕೆಗೆ ಅಪ್ಪನ ವಿರೋಧವಿತ್ತೇನೋ. ಅಪ್ಪನಿಗೆ ಬರುವ ಸಂಬಳ ಸಾಲುತ್ತಿರಲಿಲ್ಲವೋ ತಿಳಿಯದು; ಆತ ಮಗಳನ್ನು ಜಾಸ್ತಿ ಓದಿಸಲೊಲ್ಲ. ಅದೇ ವೇಳೆಗೆ ನಾರಾಯಣನ ಪರಿಚಯ ಮತ್ತು ಇನ್ನೂ ಬಲಿತಿರದ ಪ್ರೇಮ ಇದ್ದುದರಿಂದ ಹುಡುಗಿ ನಾರಾಯಣನಲ್ಲಿ ಸ್ಥಿತಿಗತಿ ಹೇಳಿಕೊಂಡಿದ್ದಳು. ಬಡತನದಲ್ಲೇ ಹುಟ್ಟಿಬೆಳೆದ ಅನುಭವವಿದ್ದ ನಾರಾಯಣ ಆಕೆಗೆ ಓದಿಸುವ ಅಭಯ ನೀಡಿದ! ಫೀಸನ್ನೂ ಬೇಕಾದ ಪರಿಕರಗಳನ್ನೂ ಕೊಡಿಸುವುದಾಗಿ ಒಪ್ಪಿ ಆಕೆಯನ್ನು ಕಾಲೇಜಿಗೆ ಸೇರಿಸಿದ. ಹಾಗೂ ಹೀಗೂ ಪೀಯೂಸಿ ಮುಗಿಸಿದ ಆಕೆ ನಾರಾಯಣನ ಹೃದಯದಲ್ಲಿ ಬಲವಾಗಿ ತಳವೂರಿದ್ದಳು. ಊರಿಗೆ ತಿಳಿಸಿದ ನಾರಾಯಣ ಮತ್ತು ರತ್ನ[ಆಕೆಯ ಹೆಸರು]ರ ವಿವಾಹ ಪಶ್ಚಿಮ ಕಾರ್ಡ್ ರಸ್ತೆಯ ಸಾದರ ವಿದ್ಯಾಭಿವೃದ್ಧಿಸಂಘದ ಕಲ್ಯಾಣಮಂಟಪದಲ್ಲಿ ನಡೆಯಿತು. ಬಹಳ ವಿಶೇಷವೆಂದರೆ ಮದುವೆಗೆ ಆತ ಕೂಡ ಬಂದಿದ್ದ!

ಮದುವೆ ಮುಗಿದು ಮನೆಮಾಡಿ ವರ್ಷದ ಕಾಲ ಕಳೆದುಹೋಯ್ತು. ಮದುವೆ ವಾರ್ಷಿಕೋತ್ಸವದ ಸಲುವಾಗಿ ಸ್ನೇಹಿತರ ಬಳಗಕ್ಕೆ ಮನೆಯಲ್ಲೇ ಚಿಕ್ಕದಾಗಿ ಊಟ ಇಟ್ಟುಕೊಂಡಿದ್ದರು. ಆತನೇನಪ್ಪಾ ಅಂದರೆ ಆತ ಪುಳಿಚಾರೆ ! ತುಂಡು ತಿನ್ನುವ ಜಾತಿಯವನಲ್ಲ. ಶತಮಾನಗಳಿಂದ ವೇದಗಳನ್ನು ಓದುತ್ತಾ ಬಂದ, ಪೂಜೆ-ಪುನಸ್ಕಾರ ನಡೆಸುತ್ತಾ ಬಂದ ಕುಲೀನ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಬೆಳೆದ ಆತನಿಗೆ ಸಹಜವಾಗಿ ಬ್ರಾಹ್ಮಣ್ಯದ ಲಕ್ಷಣಗಳು ಪ್ರಾಪ್ತವಾಗಿದ್ದವು. ಹಾಗಂತ ಆತ ಸ್ವಚ್ಛತೆಯುಳ್ಳ, ಪರಿಶುದ್ಧವಾದ ಮತ್ತು ಮಾಂಸಾಹಾರ ಇಲ್ಲದ ಯಾವುದೇ ತಿನಿಸುಗಳನ್ನಾಗಲೀ ಯಾರದೇ ಮನೆಯಲ್ಲಾದರೂ ಭುಂಜಿಸಲು ಸಿದ್ಧನಿದ್ದ; ನಡೆಸಿಯೂ ಇದ್ದ. || ಆಚಾರಹೀನಂ ನಪುನಂತಿ ದೇವಾಃ || ಆಯಾ ಜನ್ಮಕ್ಕೆ ತಕ್ಕಂತೇ ವ್ಯವಹಾರ ಮತ್ತು ಆಚಾರವಿಧಿಗಳನ್ನು ಪಾಲಿಸಬೇಕಂತೆ. ಅದನ್ನರಿತಿದ್ದ ಆತನಿಗೆ ಹಲವಾರು ಬಾರಿ ಬ್ರಾಹ್ಮಣನಾಗಿ ಹುಟ್ಟಿದ್ದೇ ತಪ್ಪಾಯಿತೇ ಎಂಬ ಅನುಮಾನ ಕೂಡ ಬಂದಿತ್ತು. ಬೇಕಾದ್ದನ್ನು ತಿನ್ನಲಾಗದ ಕುಡಿಯಲಾಗದ ಕಾರಣಕ್ಕೆ ಹಾಗೆ ಸಂದೇಹ ಹುಟ್ಟಿದ್ದಲ್ಲ; ಬದಲಾಗಿ ಸಮಾಜದಲ್ಲಿ ಎಲ್ಲಿ ನೋಡಿದರೂ ಬ್ರಾಹ್ಮಣರ ಅವಹೇಳನ, ಚುಚ್ಚುಮಾತುಗಳು ನಡೆದೇ ಇದ್ದವು. ಸರಕಾರೀ ರಂಗಗಳಲ್ಲಿ ಬ್ರಾಹ್ಮಣರಿಗೆ ಅವಕಾಶ ಇಲ್ಲದಾಗುತ್ತಾ ನಡೆದಿತ್ತು. ಬ್ರಾಹ್ಮಣರು ಮಡಿವಂತರು ಅವರು ಯಾರನ್ನೂ ಹತ್ತಿರ ಸೇರಿಸಲೊಲ್ಲರು ಎಂಬ ಧೋರಣೆಯನ್ನು ತಳೆದ ಇತರೆ ವರ್ಗಗಳ ಜನ ಬ್ರಾಹ್ಮಣ ದೂಷಣೆಯನ್ನು ಸಾಮೂಹಿಕವಾಗಿ ಆರಂಭಿಸಿದ್ದರು. ಯಾಕೆ ಬ್ರಾಹ್ಮಣರು ಮಡಿ ಎನ್ನುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಜ್ಞೆಯೇ ಇರಲಿಲ್ಲ. ಅಯ್ಯಪ್ಪ ಮಾಲೆ ಧರಿಸಿದ ಭಕ್ತರೇ ಅಷ್ಟು ಮಡಿ ಎನ್ನುತ್ತಾ ತಿರುಗುವಾಗ ನಿತ್ಯವೂ ಬ್ರಾಹ್ಮಣ್ಯವೆಂಬ ವ್ರತವನ್ನು ಆಚರಿಸಿ ಬದುಕುವ ಬ್ರಾಹ್ಮಣನನ್ನು ಯಾಕೆ ಆ ರೀತಿ ಹಳದಿಗಣ್ಣಿನಿಂದ ನೋಡುತ್ತಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ.

ನಾರಾಯಣ ಗೌಡರ ಮನೆಯಲ್ಲಿ ಶುದ್ಧವಾದ ಕೆಂಪುನೆಲದಮೇಲೆ ಅಗ್ರದ ಬಾಳೆಲೆ ಇಟ್ಟು ತೊಳೆದು ಉಪ್ಪು, ಉಪ್ಪಿನಕಾಯಿ ಇತ್ಯಾದಿಗಳನ್ನು ಬ್ರಾಹ್ಮಣರ ರೀತಿಯಲ್ಲೇ ಬಡಿಸಿದ್ದರು. ಬರುವವರಲ್ಲಿ ಆತನೂ ಇದ್ದನಲ್ಲ! ಚಿತ್ರಾನ್ನ, ಹಪ್ಪಳ, ಮುದ್ದೆ, ಅನ್ನ-ಸಾರು, ಪಲ್ಯ ಎಲ್ಲವೂ ಚೆನ್ನಾಗೇ ಇದ್ದವು. ಆತ ಖುಷಿಯಿಂದಲೇ ನಾರಾಯಣ ದಂಪತಿಯ ಆತಿಥ್ಯ ಸ್ವೀಕರಿಸಿದ. ನಾರಾಯಣ ದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ವೈಯ್ಯಕ್ತಿಕವಾಗಿ ಬ್ರಾಹ್ಮಣರಲ್ಲಿ ಪೂಜ್ಯಭಾವನೆಯನ್ನು ಹೊಂದಿದ್ದ ಜನ ಅವರು. " ಅನ್ನದಾತಾ ಸುಖೀಭವ" ಎಂದು ಹಾರೈಸಿ ಬೀಳ್ಕೊಂಡ ಆತನ ಬಳಗ ಹೀಗೇ ಬಲುದೊಡ್ಡದು. ಹೋದಲ್ಲೆಲ್ಲಾ ಸ್ನೇಹಿತರು ಮುತ್ತಿಕೊಳ್ಳುವ ಏನನ್ನಾದರೂ ಕೇಳುತ್ತಲೇ ಇರುವ ವ್ಯಕ್ತಿತ್ವವನ್ನು ಆತ ಬೆಳೆಸಿಕೊಂಡಿದ್ದ. ಜಾತಿಯ ನೀತಿಗಿಂತ ವ್ಯಕ್ತಿ-ವ್ಯಕ್ತಿಗಳ ಒಡನಾಟ ಮತ್ತು ಸ್ವಚ್ಛತೆಗೆ ಆತ ತುಂಬಾ ಬೆಲೆಕೊಡುತ್ತಿದ್ದ.

ಆತನ ಮದುವೆಯ ಸಮಯ ಬೆಂಗಳೂರಿನ ಎಲ್ಲಾ ಮಿತ್ರರನ್ನೂ ಅಹ್ವಾನಿಸಲು ತೆರಳಿದ್ದ. ಅಲ್ಲಿಯೂ ಅಷ್ಟೇ ಜಾತಿ-ಧರ್ಮಕ್ಕೆ ಪ್ರಾಮುಖ್ಯತೆ ಇರಲಿಲ್ಲ. ತನ್ನ ನೀತಿ ತನಗೆ ಅವರವರ ನೀತಿ ಅವರವರಿಗೆ ಎಂಬ ಮನೋಭಾವ ಆತನದ್ದು. ನಾನು ಆತನನ್ನು ಬಹಳಕಾಲದಿಂದ ಹತ್ತಿರದಿಂದ ಬಲ್ಲೆ! ಅವನ ಪ್ರತೀ ಹೆಜ್ಜೆಯೂ ನನಗೆ ತಿಳಿದೇ ಇದೆ. ಮದುವೆಗೆ ಆಮಂತ್ರಿಸಲು ಹೋದ ಆತ ದಲಿತರ ಶಿವು ಮನೆಯಲ್ಲಿ ಪ್ರೀತಿಯಿಂದ ಕೊಟ್ಟ ಪಾನಕ ಕುಡಿದ! ದಾವೂದ್ ಸಾಬರ ಮನೆಯಲ್ಲಿ ತಿಂಡಿತಿಂದ! ಹೀಗೇ ಎಲ್ಲರೊಳಗೂ ಆತ ಒಬ್ಬನಾಗಿದ್ದ. ದಾವೂದರ ಮನೆಯವರಿಗಂತೂ ಆತ ಬಹಳ ಮೆಚ್ಚು. ಆತನ ಸ್ನೇಹದ ಸಂಕೋಲೆಯಲ್ಲಿ ಕೃಷ್ಣಪ್ಪ ಗೌಡರು, ದಾವೂದ್ ಸಾಬರು, ಮಂಗಳೂರು ಮೂಲದ ಫ್ರಾನಿಸ್ ಮೆನೆಜಿಸ್, ನನ್ನಯ್ಯ ಮೇಸ್ತ, ದಾಮೋದರ ನಾಯ್ಕ, ವಾಸು ಪಟಗಾರ ಮೊದಲಾದವರಿದ್ದರು.

೧೨-೦೯-೨೦೧೧ ರಂದು ಪಂಡಿತೋತ್ತಮರಾದ ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರನ್ನು ಈ ಜಗತ್ತು ಕಳೆದುಕೊಂಡಿತು. ನಾವೆಲ್ಲಾ ತಿನ್ನುವುದಕ್ಕಾಗಿ ಬದುಕಿದ್ದರೆ ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದ ಕೆಲವರಲ್ಲಿ ಅವರೂ ಒಬ್ಬರು! ಅವರ ಸಂಸ್ಕೃತ ಮತ್ತು ಕನ್ನಡ ಭಾಷಾಪ್ರೌಢಿಮೆ ಅಸದೃಶವಾದುದು, ಅಮೋಘವಾದುದು. ಋಗ್ವೇದ ಮತ್ತು ಯಜುರ್ವೇದಗಳೆರಡನ್ನು ಆಳವಾಗಿ ಅಧ್ಯಯನ ಮಾಡಿ ದ್ವಿವೇದಿಯಾಗಿದ್ದ ಅವರು ಪಂಚ-ಪ್ರಪಂಚ, ಮೂರರ ಮಹಿಮೆ, ಭಾಸಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿ, ಸುದರ್ಶನ ಹೋಮ ವಿಧಿ, ಪಂಚ-ದುರ್ಗಾ ದೀಪ ನಮಸ್ಕಾರ ವಿಧಿ, ಮಹಾಗಣಪತೀ ಹವನವಿಧಿ, ಬ್ರಹ್ಮಕಲಶ ವಿಧಿ ಮುಂತಾದ ಜನಪ್ರಿಯ ಧಾರ್ಮಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಯಕ್ಷಗಾನ ಪ್ರಿಯರಾದ ಅವರು ನಾಕೈದು ಪ್ರಸಂಗಗಳ ಕರ್ತೃವೂ ಹೌದು. ಆಕಾಶವಾಣಿ ಕೇಂದ್ರಗಳಿಂದ ಅವರ ಸಂದರ್ಶನಗಳು ಬಿತ್ತರಗೊಂಡಿವೆ, ಪುರೋಹಿತರಾಗಿ ಅವರು ಪಠಿಸಿದ ಮಂತ್ರಗಳ ೯ ಧ್ವನಿಸುರುಳಿಗಳೂ ಮಾರುಕಟ್ಟೆಯಲ್ಲಿವೆ. ಕಸ್ತೂರಿ ಮಾಸಿಕದಲ್ಲಿ ’ಶಬ್ದ ಸಂಸಾರ’ವೆಂಬ ಚಿಕ್ಕ ಅಂಕಣವನ್ನು ಬಹಳ ಚೊಕ್ಕವಾಗಿ ಬರೆಯುತ್ತಿದ್ದ ಅವರು ಸಮಾಜಕ್ಕೆ ಇನ್ನೂ ಬೇಕಾಗಿತ್ತು, ವಿಧಿ ಯಾರನ್ನೂ ಹೇಳಿ-ಕೇಳಿ ಮಾಡುವುದಿಲ್ಲವಲ್ಲ, ಅನಾರೋಗ್ಯ ಬಾಧಿಸಿದ್ದ ಅವರು ದಿವಂಗತರಾಗಿದ್ದಾರೆ. ಸರಕಾರದ ಕಣ್ಣಿಗೆ ಬದುಕಿರುವವರೆಗೂ ಅವರು ಕಾಣಲಿಲ್ಲ-ಯಾವ ಪ್ರಶಸ್ತಿಗಳನ್ನೂ ಕೊಡಮಾಡಲಿಲ್ಲ. ಇರಲಿಬಿಡಿ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದವರಲ್ಲಿ ಆತನೂ ಒಬ್ಬ!

ಇತ್ತೀಚೆಗೆ ೨೦೧೧ ಡಿಸೆಂಬರ್ ೧೧ ರಂದು ಆತ ಕೆಲಸದ ನಿಮಿತ್ತ ವಿಜಯನಗರಕ್ಕೆ ತೆರಳಿದ್ದ. ದಾವೂದ್ ಸಾಬರ ಮನೆ ಇರುವುದು ವಿಜಯನಗರದಲ್ಲೇ. ಕೇರಳಮೂಲದ ದಾವೂದ್ ಮದುವೆಯಾದದ್ದು ಮದ್ರಾಸೀ ಹುಡುಗಿಯನ್ನು. ಮನೆಯಲ್ಲಿ ಆಡು ಭಾಷೆ ತಮಿಳು! ದಾವೂದ್ ಮಗ ರಶೀದ್ ಎಂಬಾತ ಆತನ ಸ್ನೇಹಿತ. ಆತನ ವಯಸ್ಸಿನವನೇ ಆದ ರಶೀದ್ ಎಷ್ಟು ಒಳ್ಳೆಯ ಹುಡುಗನೆಂಬುದು ಆತನಿಗೆ ಮಾತ್ರ ಗೊತ್ತು! ದಾವೂದ್ ಮನೆಯಲ್ಲಿ ಸ್ವಚ್ಛತೆಯಿದೆ. ಎಲ್ಲವೂ ಕ್ಲೀನು ಕ್ಲೀನು. ಅದರಲ್ಲಂತೂ ರಶೀದ್ ದಿನಕ್ಕೆರಡುಬಾರಿ ಸ್ನಾನ ಮಾಡುವಾತ. ಮನೆಯಲ್ಲಿ ಅವರು ಮಾಂಸಾಹಾರ ತಿಂದರೂ ಆತ ಬರುವ ದಿನ ಅಥವಾ ಬಂದ ದಿನ ಆ ವ್ಯವಹಾರವಿಲ್ಲ! ಆ ದಿನ ಎಲ್ಲೆಲ್ಲೂ ಅದರ ಸುದ್ದಿಕೂಡಾ ಇರುವುದಿಲ್ಲ. ಯಾವುದೋ ತಾಂತ್ರಿಕ ಕೆಲಸ ಸಮಯದಲ್ಲಿ ಮುಗಿಯದ್ದಾಗಿತ್ತು, ಅದಕ್ಕೆ ರಶೀದ್ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ. ದಾವೂದರ ಮನೆಯಲ್ಲೇ ಆ ಕೆಲಸ ನಡೆಸುತ್ತಿದ್ದುದರಿಂದ ಹೊತ್ತು ಸರಿದದ್ದು ಗೊತ್ತಾಗಲೇ ಇಲ್ಲ. ದಾವೂದ್ ಮನೆಗೆ ಆತ ಬಂದಾಗಲೇ ಬೆಳಗಿನ ೧೧ ಗಂಟೆ. ಕಪ್ ಟೀ ಕುಡಿದು ಕೆಲಸ ಆರಂಭಿಸಿದ್ದ. ಸಮಯ ಮೂರಾದರೂ ಕೆಲಸ ಮುಗಿಯಲೇ ಇಲ್ಲ. ಹೊರಗೆ ಊಟಕ್ಕೆ ಹೋಗಿಬರಲು ಅವರ ಒಪ್ಪಿಗೆ ಇರಲಿಲ್ಲ! ಇಂದು ತಮ್ಮನೆಯಲ್ಲೇ ಊಟಮಾಡಿ ಎಂಬ ಹಠಕ್ಕೆ ಆತ ಮಣಿದಿದ್ದ. ಅವರಿಗೂ ಅನ್ನಿಸಿತ್ತೋ ಏನೋ. ಅಂದು ಶುದ್ಧ ಸಸ್ಯಾಹಾರ. ಟೊಮೇಟೋ ಸಾರು, ಬೀನ್ಸಿನ ಪಲ್ಯ, ನಂದಿನಿ ಮೊಸರು[ ಅವರು ಮೊಸರನ್ನು ಮನೆಯಲ್ಲಿ ಮಾಡೋದಿಲ್ಲ]. ಉಂಡೆದ್ದು ತಾಟು ತೊಳೆಯುತ್ತೇನೆಂದರೆ ಅವರು ಕೇಳಿಯಾರೇ ? ಮತ್ತೆ ಕೆಲಸ ಸಾಗಿತ್ತು. ಇಡೀ ದಿನ. ಮತ್ತೆ ಸಾಯಂಕಾಲ ೬ ಗಂಟೆಗೆ ಅಲ್ಲೇ ಚಹಾ. ರಾತ್ರಿಯೂ ಆಗಿ ಹೋಯ್ತು. ಮಾರನೇ ದಿನ ಸಂಕಷ್ಟಿ! ಆತನಿಗೆ ಪೂಜೆಯಿದೆ-ವ್ರತವಿದೆ!! ರಾತ್ರಿ ೧೨ರ ತನಕವೂ ಕೆಲಸ ನಡೆದಿತ್ತು. ಮತ್ತೆ ರಾತ್ರಿ ೧೦ರ ಸುಮಾರಿಗೆ ಚಪಾತಿ ಮಾಡಿದ್ದೇವೆ ಎಂದು ಹಠಮಾಡಿದರೂ ಆತ ಸ್ವೀಕರಿಸಲಿಲ್ಲ, ಯಾಕೆಂದರೆ ಮನೆಯಲ್ಲಿ ಮಾಡಿದ್ದನ್ನು ಮಾರನೇ ದಿನಕ್ಕೆ ಬಾಕಿ ಉಳಿಸುವ ಹಾಗಿರಲಿಲ್ಲ! ರಾತ್ರಿ ಹನ್ನೆರಡಕ್ಕೆ ಹೊರಟು ಹತ್ತು ಕಿಲೋಮೀಟರು ಕ್ರಮಿಸಿ ಮನೆ ತಲುಪಿ ಊಟಮಾಡಿ ಮತ್ತೆ ಬೆಳತನಕ ಆತ ಕೆಲಸಮಾಡಿದ. ನಿದ್ದೆಗೆಟ್ಟರೂ ಕರ್ತವ್ಯವನ್ನು ಮರೆಯದ ಆತನನ್ನು ನಾನು ಮೆಚ್ಚುತ್ತೇನೆ.

ಮಡೆಸ್ನಾನದ ಬಗ್ಗೆ ಆತ ಅದೂ ಇದೂ ಮಾತಾಡುವವರ ಮಧ್ಯೆ ತನ್ನ ಅಭಿಪ್ರಾಯ ತಿಳಿಸಿದ್ದ. ಅದು ಬ್ರಾಹ್ಮಣರು ಜಾರಿಗೆ ತಂದ ಅನಿಷ್ಟ ಪದ್ಧತಿ ಎಂಬ ಧೋರಣೆ ಸರಿಯಲ್ಲ ಎಂಬುದನ್ನು ವಿಶದವಾಗಿ ತಿಳಿಯಪಡಿಸಿದ. ಹಲವುಜನ ಆತನ ಅಭಿಪ್ರಾಯವನ್ನು ಓದಿದರು. ಕೆಲವರು ಪರ ಮತ್ತೆ ಕೆಲವರು ವಿರುದ್ಧವಾಗಿದ್ದರು. ಒಬ್ಬಾತನಂತೂ ಆತನನ್ನೇ ಗುರಿಯಾಗಿಸಿ ಹರಿಹಾಯ್ದ. ಎಲ್ಲಾ ಬ್ರಾಹ್ಮಣರನ್ನೂ ಏಕದೃಷ್ಟಿಯಿಂದ ನೋಡುತ್ತಾ ಬೆರಳುಮಾಡಿ ತೋರಿಸುತ್ತಾ ಹೀಗಳೆಯುವುದು ಆತನಿಗೆ ಅಸಹನೀಯವಾಗಿತ್ತು. ಬ್ರಾಹ್ಮಣ್ಯವೆಂಬ ವ್ರತದ ಪಾಲನೆಯಲ್ಲಿ ಆದ ಕೆಲಮಟ್ಟಿನ ದೋಷಗಳೇ ಈ ಗತಿಗೆ ಕಾರಣ ಎಂಬುದು ಆತನ ಇಂಗಿತವಾಗಿತ್ತು. ಉನ್ನತ ಪೀಠಗಳಲ್ಲಿ ಕುಳಿತು ಪೂಜೆಗೊಳ್ಳುವ ದೇವರುಗಳನ್ನು ನಿತ್ಯ ಆರಾಧಿಸುವ ಬ್ರಾಹ್ಮಣರಿಗೆ ನಿಜವಾದ ಬ್ರಾಹ್ಮಣ್ಯದ ಅವಶ್ಯಕತೆಯಿದೆ. ಬ್ರಾಹ್ಮಣ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಣಬೆಗಳ ಸೇವನೆ ಕೂಡ ನಿಷೇಧ. ಸಾಮೂಹಿಕ ಜಾಗಗಳಲ್ಲಿ ಹೋಟೆಲ್ ಗಳಲ್ಲಿ ತಿನ್ನುವುದು ನಿಷಿದ್ಧ. ಸ್ನಾನ ಮುಖಮಾರ್ಜನೆ ಶುದ್ಧಾಚಾರ ಇಲ್ಲದೇ ತಯಾರಿಸುವ ಅಡಿಗೆಯ ಸೇವನೆ ನಿಷಿದ್ಧ. ಅತಿಖಾರ-ಅತಿ ಹುಳಿ-ಅತಿಸಿಹಿ ಮತ್ತು ಅತಿ ಉಪ್ಪು ಪದಾರ್ಥಗಳು ನಿಷಿದ್ಧ. ಪ್ರಾಣಿಗಳ/ಜೀವಿಗಳ ಮಾಂಸಲಭಾಗಗಳನ್ನು ತಿನ್ನುವುದು ನಿಷಿದ್ಧ. ಧಾನ್ಯಗಳಲ್ಲೇ ಕೆಲವು ಕೆಲವುದಿನಗಳಲ್ಲಿ ನಿಷಿದ್ಧ, ಕೆಲವುದಿನಗಳಲ್ಲಿ ಅನ್ನವೇ ನಿಷಿದ್ಧ!

ಇದಕ್ಕೆಲ್ಲಾ ವೈಜ್ಞಾನಿಕ ಕಾರಣವಿದೆಯೆಂದು ಆತ ಬಲ್ಲ. ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆಂಬುದನ್ನೂ ಆತ ಬಲ್ಲ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ ಎಂಬುದು ಆತನಿಗೆ ತಿಳಿದೇ ಇದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ[ಇದಕ್ಕೆ ತಾಕತ್ತು ಬೇಕಾಗುತ್ತದೆ]ಶಕ್ತರು ಎಂಬುದು ಆತನಿಗೆ ಗೊತ್ತು. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ಆತನಿಗೆ ತಲೆನೋವಾಗಿರುವ ವಿಷಯ.

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ [ವಿದ್ಯೆ ಕಲಿಸುವಿಕೆ] ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ ಆ ಗುರುಸ್ಥಾನಕ್ಕೆ ಆತ ಸದಾ ಕೃತಜ್ಞನಾಗಿದ್ದಾನೆ. ’ಆ ಮುಖ’ವೇ ಈ ಮುಖ, ಆತ ಬೇರಾರೂ ಅಲ್ಲ ನಾನೇ ! ನನ್ನೊಳಗಿನ ’ನಾನು’ ಹೊರಬಂದು ಇದನ್ನು ಬರೆದಿದ್ದೇನೆ.

18 comments:

  1. ಭಟ್ ಸರ್;ಆ ಮುಖ ಬಹುಮುಖ ಪ್ರತಿಭೆಯುಳ್ಳ ಪರಿಚಿತ ಆತ್ಮೀಯ ಮುಖ!ನಿಮ್ಮೊಳಗಿನ ಆ ಅದ್ಭುತ ಪ್ರತಿಭೆಗೆ ನಮೋನ್ನಮಃ!

    ReplyDelete
  2. ಓದಿದೆ.ಚಿಂತನೆಗೆ ಹಚ್ಚಿತು.ಪರಿಣಾಮಕಾರಿ ವಿಶ್ಲೇಷಣೆ.

    ReplyDelete
  3. ಬ್ರಾಹ್ಮಣ್ಯದ ವಿಶೇಷತೆ, ಅವಶ್ಯಕತೆಗಳನ್ನ ನವಿರಾಗಿ ವಿಶದಪಡಿಸಿದ್ದೀರಿ. ಅಯ್ಯಪ್ಪ ಭಕ್ತರ ಮಡಿಗಳ ಬಗ್ಗೆ ಅಷ್ಟೆಲ್ಲ ಕಾಳಜಿವಹಿಸುವವರು, ಬ್ರಾಹ್ಮಣರ ಬಗ್ಗೆ ಏಕೆ ಇಷ್ಟೊಂದು ಉಗ್ರರಾಗಿದ್ದಾರೆಂದು ನನಗೂ ಖೇದವಾಗುತ್ತದೆ. ಇದು ಹೀಗೆಯೇ ಮುಂದುವರಿದರೆ, ಕೆಲವು ದಶಕಗಳ ಬಳಿಕ ಬ್ರಾಹ್ಮಣರು ಭಾರತದಲ್ಲಿ ಇರಲಾರರೇನೋ!

    ReplyDelete
  4. ಅಯ್ಯಯ್ಯಪ್ಪಾ...ಸುಪ್ಪರ್ರ್ ಆಗಿದೆ...ಓದುತ್ತಾ ಹೋದಂತೆ ನಾನೇ ಹಲವಾರು ಬಾರಿ ಕೇಳಿ ಕೊಂಡ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಹೋಗಿದ್ದೀರಿ...ಬಹುಷಃ ಬ್ರಾಹ್ಮಣತ್ವದ ಬಗ್ಗೆ ಗೌರವ ಹೊಂದಿದ ಎಲ್ಲರಿಗೂ ಇಲ್ಲಿ ಹಲವಾರು ಉತ್ತರಗಳು ಸಿಗುತ್ತವೆ... ನಾನೂ ಈಗೀಗ ಪೇಟೆಯನ್ನು ನೋಡುತ್ತಿದ್ದವನು, ನಮ್ಮೂರಲ್ಲಿ ಇತರೇ ಜನರ ಮನೆಯಲ್ಲಿ ಎನನ್ನೂ ತಿನ್ನಲು ಹೋಗದ ಮಾಣಿ,ಇಂದು ನೊಣ ಹಾರುತ್ತಿರುವ ಹೋಟೆಲ್ಲುಗಳಲ್ಲಿ ಹೊಟ್ಟೆ ಬಿರಿ ತಿನ್ನುವುದು ಎಷ್ಟು ಸರಿ ಎಂದು ನನಗೆ ನಾನೇ ಕೇಳಿ ಕೊಂಡಿದ್ದೇನೆ... ಉತ್ತರ ತಾಸಿಗೊಂದು ಬರುತ್ತಿತ್ತು..ಹಸಿವಾದಾಗಲೊಂದು,ಬಾಯಿ ಚಪಲಕೊಂದು,ಚರ್ಚೆಗಳಲ್ಲೊಂದು,ಸ್ನೇಹಿತರ ನಡುವೆ ಒಂದು..ಮನೆಯಲ್ಲಿ ಅಬ್ಬೆಯ ಮುಂದೊಂದು...ಎಲ್ಲದಕ್ಕೂ ಇವತ್ತಿನ ತಮ್ಮ ಲೇಖನದಿಂದ ಪೂರ್ಣ ವಿರಾಮ ಬಿತ್ತೇನೋ ಅನಿಸುತ್ತಿದೆ.

    ಇನ್ನು ಗಮನ ಸೆಳೆದದ್ದು ಆ ವೈಜ್ನಾನಿಕ ಕಾರಣಗಳು,ಹಲವು ಬಾರಿ ಅದರ ಅರ್ದಂಬರ್ದ ಗೊತ್ತಿದ್ದರೂ ,ಅದನ್ನು ಸರಿಯಾಗಿ ಮಂಡಿಸಲಾಗದೇ ವಾದದಲ್ಲಿ ಸೋತಿದ್ದೇನೆ,ಈಗ ಇನ್ನಷ್ಟು ಸರಕು ಸಿಕ್ಕಿತು ನೋಡಿ ..ಧನ್ಯವಾದಗಳು ಅದಕ್ಕೂ..


    ಹಾಂ ಮತ್ತೆ ಬ್ರಾಹ್ಮಣರ ಇನ್ನೊಂದು ಮನಸ್ಥಿತಿಯನ್ನು ಸುಲಭವಾಗಿ ಅರ್ಥೈಸಿದ್ದೀರಿ...ಸರಕಾರಿ ನೌಕರಿ ಇಲ್ಲದಿರುವುದು,ಜಾತಿಯಿಂದಲೇ ಹರಿಹಾಯುವುದು ಇನ್ನಿತರ ಸಾಮಾಜಿಕ ವಿಷಯಗಳ ಬಗ್ಗೆ ಸರಳವಾಗೆ ಬರೆದಿದ್ದೀರಿ..

    ಎನೇ ಹೇಳಿ ನನಗನಿಸಿದ್ದಿಷ್ಟು.. ಬ್ರಾಹ್ಮಣ್ಯವನ್ನು ನಂಬಿದವರು ಸ್ವಲ್ಪ ಶಿಸ್ತು -ಒಂದು ಯಾವುದೋ ತತ್ವಕ್ಕೆ ಕಟಿಬದ್ಧರಾಗಿರುತ್ತಾರೆ,ಪ್ರಾಯಶಃ ಅದೇ ಅವರ ಏಳಿಗೆಗೆ ಕಾರಣವೇನೋ....ಇದಕ್ಕಿಂತ ಜಾಸ್ತಿ ಇಂತಹ ವಿಷಯಗಳ ಬಗ್ಗೆ ಬರೆಯುವಷ್ಟು ದೊಡ್ಡವನು ನಾನಲ್ಲ..ಕ್ಷಮಿಸಿ.
    ನಂಗಂತೂ ಸಕತ್ ಖುಷಿ ಆಯ್ತು..ಬರೆಯುತ್ತಿರಿ,ಓದುತ್ತಿರುತ್ತೀನಿ

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  5. ಭಟ್ರೇ, ಉತ್ತಮ ಲೇಖನ. ಆದರೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯವನ್ನು ಒಂದೇ ಎನ್ನುವಂತೆ ನಿರೂಪಿಸಿದ್ದೀರಿ. ಎಲ್ಲರು ಹುಟ್ಟಿನಿಂದ ಬ್ರಾಹ್ಮಣ್ಯವನ್ನು ಪಡೆದುಕೊಳ್ಳುತ್ತಾರೆ ಎಂಬಂತಾಯಿತು ನಿಮ್ಮ ಮಾತು.

    ReplyDelete
  6. ನಿಮ್ಮ ನಿರೂಪಣೆಗೆ ಬೆರಗಾದೆ ಭಟ್ ಸರ್, ತುಂಬಾ ರಸವತ್ತಾಗಿದೆ ನಿಮ್ಮ ವಿಚಾರಧಾರೆ.. ಬ್ರಾಹ್ಮಣ್ಯದ ಒಳ-ಹೊರಗುಗಳನ್ನು ತುಂಬಾ ಸುಂದರವಾಗಿ ಎಲ್ಲರಿಗೂ ಅರ್ಥವಾಗುವಂತೆ ಮಾಡುವಲ್ಲಿನ ನಿಮ್ಮ ಜಾಣ್ಮೆ ಮನಸ್ಸಿಗೆ ಮೆಚ್ಚುಗೆಯಾಯ್ತು.. ಮನಸ್ಸನ್ನು ಚಿಂತನೆಗೆ ಹಚ್ಚಿತು ನಿಮ್ಮ ಬರಹ.. ಆತ ಯಾರು-ಯಾರು ಎಂಬ ಕುತೂಹಲವೇ ಲೇಖನವನ್ನು ಪೂರ್ತಿಯಾಗಿ ಓದಿಸುತ್ತದೆ.. ಇಷ್ಟವಾಯ್ತು ನಿಮ್ಮೀ ಲೇಖನ..:)))

    ReplyDelete
  7. This comment has been removed by the author.

    ReplyDelete
  8. ಭಟ್ಟರೇ,
    ತಕ್ಷಣಕ್ಕೆ ನೆನಪಾದ ಒಂದು ಘಟನೆ ಬರೆದು ನನ್ನ ಅಭಿಪ್ರಾಯ ಹಂಚಿಕೊಳ್ಳುವೆ. ಹೊಳೇನರಸೀಪುರದಲ್ಲಿ ನೌಕರಿಯಲ್ಲಿದ್ದೆ. ಸಂಘಪರಿವಾರದ ಕೃ.ನರಹರಿಯವರ ಭಾಷಣ ಒಂದನ್ನು ಹಮ್ಮಿಕೊಂಡಿದ್ದೆವು.ಅಲ್ಲಿನ ಕಾಲೇಜು ಪ್ರಾಂಶಪಾಲರಾದ ಗೋವಿಂದಯ್ಯನವರ ಮನೆಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು.ಜೊತೆಯಲ್ಲಿ ನಾವು ಇಬ್ಬರುಮೂವರು ಇರುತ್ತೇವೆಂದು ತಿಳಿಸಿದ್ದೆವು. ಅವರ ಮನೆಯವರರಿಗೆ ಸಂಶಯ. ಕೃ.ನರಹರಿಯವರು ಯಾವ ಜಾತಿಯವರೋ ಗೊತ್ತಿಲ್ಲ. ಅವರು ನಮ್ಮ ಮನೆಗೆ ಬರುತ್ತಾರೆ. ಆದರೆ ಇವರೆಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವರೆಂದು ಚೆನ್ನಾಗಿ ಗೊತ್ತು. ನಾವಾದರೋ ಹರಿಜನ ಜಾತಿಗೆ ಸೇರಿದವರು. ಇವರು ಬರುತ್ತಾರೆಯೇ! ಸಂಶಯ ಅವರನ್ನು ನಾವು ಊಟಕ್ಕೆ ಕುಳಿತುಕೊಳ್ಳುವ ವರೆಗೂ ಕಾಡಿತ್ತು.
    ಅಂದು ಅವರು ಮಾಡಿದ್ದ ಊಟದ ಶುಚಿ-ರುಚಿಯನ್ನು ಮರೆಯುವಂತೆಯೇ ಇಲ್ಲ. ತಿಳಿಸಾರು, ಪಲ್ಯ ,ಕೀರು ಕೋಸಂಬ್ರಿ...ಇನ್ನೂ ಒಂದೆರಡು ಐಟಮ್ ಗಳು. ಯಾವ ಸಂಕೋಚವಿಲ್ಲದೆ ಅಂದು ಅವರ ಮನೆಯಲ್ಲಿ ಊಟ ಮಾಡಿದ್ದರಿಂದ ಇಂದೂ ಗೋವಿಂದಯ್ಯನವರು ನನ್ನ ಆತ್ಮೀಯ ಮಿತ್ರರು. ಹೌದು, ಅವರಲ್ಲಿದ್ದ ಅನೇಕ ಸಂದೇಹಗಳಿಗೆ ಅಂದಿನ ಊತದ ಜೊತೆಗೆ ನರಹರಿಯರ ಒಡನಾತ ಉತ್ತರ ಕೊಟ್ಟಿತ್ತು. ನನ್ನ ನಾಲ್ಕು ದಶಕಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಇಂತಹ ನೂರಾರು ಉಧಾಹರಣೆಗಳು.
    ಇನ್ನೊಂದು ತಿಳಿಸಿ ಬಿಡುವೆ.ಆಗ ನಾನು ಹಾಸನದ ಪವರ್ ಸ್ತೇಶನ್ನಿನ ನಿರ್ವಹಣಾ ಇಂಜಿನಿಯರ್. ರಾತ್ರಿ ಹನ್ನೊಂದು ಗಂಟೆ. ಫಾತಿಮಾ ಫೋನ್ ಮಾಡಿದ್ದಳು." ಸರ್ ಅಪ್ಪನ ಸ್ಥಿತಿ ತುಂಬಾ ಚಿಂತಾಜನಕ ವಾಗಿದೆ, ನಿಮ್ಮ ದೇವರಲ್ಲಿ ಪ್ರಾರ್ಥನೆ ಮಾಡಿ ಸಾರ್, ಅಪ್ಪನನ್ನು ಬದುಕಿಸಿ ಕೊಡಿ"
    ನನ್ನಲ್ಲಿ ಅಷ್ಟೊಂದು ನಂಬಿಕೆ. ಘಟನೆಯ ವಿವರಣೆ ಅಗತ್ಯವಿಲ್ಲ.

    ಭಟ್ಟರೇ,
    ಹೃದಯದಲ್ಲಿನ ಭಾವನೆಗಳಿಗೆ ಅಕ್ಷರ ಕೊಡುವುದರಲ್ಲಿ ಅನೇಕರು ಸೋಲುತ್ತಾರೆ. ಆದರೆ ನಿಮ್ಮದು ಹಾಗಲ್ಲ.
    "ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ ನಾ ಬರೆಯ ಬಲ್ಲೆನೇ ನಾನು ಕವಿಯು" ಎನ್ನುತ್ತಾನೆ ಒಬ್ಬ ಕವಿ. ನಿಮ್ಮದೂ ಹಾಗೆಯೇ. ಬ್ರಾಹ್ಮಣ್ಯವನ್ನು ತೆಗಳುವುದನ್ನು ನಿಮ್ಮ ಮನ ಒಪ್ಪುತ್ತಿಲ್ಲ. ಅನ್ಯಾಯವಾಗಿ ಜನ ದೂಷಿಸುತ್ತಾರಲ್ಲಾ! ಎಂಬ ಚಿಂತೆಯೇ ನಿಮ್ಮ ಬರಹಕ್ಕೆ ಮೂಲ ಕಾರಣ. ನಿಜ, ಅನ್ಯಾಯವಾಗಿ ನಿಂದಿಸುವ ಜನರೂ ಇದ್ದಾರೆ. ಆದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ ಬ್ರಾಹ್ಮಣ್ಯಕ್ಕೆ ಅಪಚಾರ ಮಾಡಿ ಬ್ರಾಹ್ಮಣರೆಲ್ಲರೂ ಹೀಗೆಯೇ ಎಂದು ಜನ ಭಾವಿಸುವಂತೆ ಕೆಟ್ಟದಾಗಿ ಬದುಕುವ ಜನರೂ ಇದ್ದಾರೆ. ಕಡೆಯದಾಗಿ ಒಂದು ಮಾತು. ವೈದ್ಯನ ಮಗ ವೈದ್ಯನಾಗಬೇಕಾದರೆ ವೈದ್ಯ ಪದವಿ ಪಡೆಯಲೇ ಬೇಕು. ಅದಿಲ್ಲದೆ ವೈದ್ಯನ ಮಗನಾದ ಮಾತ್ರಕ್ಕೆ ವೈದ್ಯನಾಗಲಾರ. ಬ್ರಾಹ್ಮಣನೂ ಅಂತೆಯೇ. ಅಲ್ಲವೇ ಕೇವಲ ಬ್ರಾಹ್ಮಣನ ಮಗನಾಗಿ ಜನಿಸಿದ್ದ ಮಾತ್ರಕ್ಕೆ ಅವನು ಬ್ರಾಹ್ಮಣ ನಾಗಲಾರ. ನಿಮ್ಮ ಲೇಖನದಲ್ಲಿ ವಿವರಿಸಿರುವಂತೆ ನಡವಳಿಕೆ ಇರಬೇಕು.
    ಆ ಮುಖ ನನ್ನ ಗೆಳೆಯನ ಮುಖವೇ ಆಗಿರುವುದು ಸಂತಸದ ಸಂಗತಿಯಾಗಿದೆ.

    Read more: http://nimmodanevrbhat.blogspot.com/2011/12/blog-post_18.html#ixzz1gxfPTqJW
    Under Creative Commons License: Attribution Non-Commercial Share Alike

    ReplyDelete
  9. ನಿಜವಾಗಲೂ ಹೃದಯಸ್ಪರ್ಷಿಯಾದ ವಿವರಣೆ ಸರ್.. ಇವತ್ತಿಗೂ ಸಹ ಬ್ರಾಹ್ಮಣರ ನಂಬಿಕೆಗಳನ್ನು ಆಚರಿಸುವವರಿದ್ದಾರೆ ಹಾಗೂ ಅದಕ್ಕೆ ಸೂಕ್ತವಾದ ಅರ್ಥವಿದೆ ಎಂಬುದನ್ನು ತುಂಬಾ ಸರಳ ಮಾತುಗಳಲ್ಲಿ ವಿವರಿಸಿದ್ದೀರ.. ಅಭಿನಂದನೆಗಳು.. ನಿಮ್ಮ ಮನದಾಳದ ಮಾತುಗಳು ಎಲ್ಲರ ಮನದಾಳವನ್ನು ತಲುಪಲಿ ಎಂದು ಹಾರೈಸುತ್ತೇನೆ.

    ನಿಮ್ಮ
    ಗಣೇಶ ಕೊಪ್ಪಲತೋಟ

    ReplyDelete
  10. ಬ್ರಾಹ್ಮಣ, ಬ್ರಾಹ್ಮಣ್ಯದ ವಿಶ್ಲೇಷಣೆ ವಿಚಾರಪೂರ್ಣವಾಗಿದೆ ಭಟ್ ಸರ್. ಇವರ ಅಚಾರಗಳನ್ನು ಸಾಮಾಜಿಕ ಪಿಡುಗು ಎನ್ನುವ ಮಟ್ಟಕ್ಕೆ ವೈಭವೀಕರಿಸುವ ವರ್ಗದವರು ಈ ವಿಚಾರಗಳನ್ನು ಗಮನಿಸಬೇಕು. ಆದರೆ 'ವೈದ್ಯನ ಮಗ ವೈದ್ಯನಾಗಬೇಕಾದರೆ ವೈದ್ಯ ಪದವಿ ಪಡೆಯಲೇ ಬೇಕು' ಎನ್ನುವ ಶ್ರೀಧರ್ ಅವರ ಪ್ರತಿಕ್ರಿಯೆ ತು೦ಬಾ ಪ್ರಸ್ತುತ. ಅಭಿನ೦ದನೆಗಳು.

    ಅನ೦ತ್

    ReplyDelete
  11. ಪ್ರಿಯರೇ, ನಿಮ್ಮ ಮನಸ್ಸು ತಿಳಿದು ನೋವೂ ನಲಿವೂ ಒಟ್ಟೊಟ್ಟಿಗೇ ಆದವು. ನೋವಾಗಿದ್ದು ಯಾಕೆ ಎಂಬುದು ನಿಮಗೂ ತಿಳಿದೇ ಇದೆ. ಬ್ರಾಹ್ಮಣ್ಯ ಎಂಬುದನ್ನು ಆಚರಿಸುವುದು ಸುಲಭಸಾಧ್ಯವಲ್ಲ, ಅಲ್ಲಿ ಇಂದ್ರಿಯನಿಗ್ರಹ, ಪೂರಕ ಉಪವಾಸ, ಸ್ನಾನ-ಪವನ, ಮಂತ್ರಾಚಮನ,ಪ್ರಾಯಶ್ಚಿತ್ತ, ಕೃಚ್ಛ್ರಾಚರಣೆ, ಪಂಚಗವ್ಯ ಸೇವನೆ, ನಿತ್ಯಾಗಿಕಾರ್ಯ, ಸಂಧ್ಯಾವಂದನೆ.....ಹೀಗೇ ನಿತ್ಯದಲ್ಲಿ ನಡೆಸಬೇಕಾದ ಕೆಲಸಗಳೇ ಅನೇಕ, ಕರ್ತವ್ಯಗಳು ಮುಗಿದವು ಎಂಬ ಹಾಗಿಲ್ಲ. in a sense brahmanya is 24/7 work or worship! ಹೊರಗಿನ ಸಂಪರ್ಕ ಬೆಳೆದಾಗ, ಹೊರಜಗತ್ತಿನ ಬಾಹ್ಯಾಚರಣೆಗಳು ಬ್ರಾಹ್ಮಣ್ಯವನ್ನು ಮುತ್ತಿದಾಗ ಬ್ರಾಹ್ಮಣ್ಯಕ್ಕೆ ಕುತ್ತುಬರುತ್ತದೆ!!-this is 100% true to best of my knowledge! ಆ ಒಂದು ಪ್ರಮುಖ ಕಾರಣದಿಂದ ಬ್ರಾಹ್ಮಣ್ಯದ ಉಳಿಕೆಗಾಗಿ ಬ್ರಾಹ್ಮಣರು ಒಳಗೇ ಇದ್ದರು, ಮಡಿಯೆಂದು ಅದನ್ನೇ ಸಾರಿದರು. ನವಯುಗದಲ್ಲಿ ಹೆಂಗಸರು ಮತ್ತು ಹುಡುಗಿಯರು ಚಡ್ಡಿ, ಬಿಕನಿ ಹಾಕಿ ಎಲ್ಲವನ್ನೂ ಪ್ರದರ್ಶಿಸುವತ್ತ ದಾಪುಗಾಲು ಹಾಕುತ್ತಿರುವಾಗ ಅದನ್ನೆಲ್ಲಾ ಹತ್ತಿರಕ್ಕೆ ಬಿಟ್ಟುಕೊಂಡರೆ ಬ್ರಾಹ್ಮಣ್ಯದ ಮಿತಿ ಜಾರಿಹೋಗುತ್ತದೆ ಸ್ವಾಮೀ. ಹುಟ್ಟಾ ಯಾವ ಮನುಷ್ಯನೂ 100% ನಿಗ್ರಹ ಸಮರ್ಥನಲ್ಲ, ಒಳ್ಳೆಯ ತಿಂಡಿ ಇದ್ದರೆ ಬೇಕೆನಿಸುತ್ತದೆ, ಉತ್ತಮ ಸಂಗೀತ ಕೇಳಬೇಕೆನಿಸುತ್ತದೆ, ಚಂದದ ದೃಷ್ಯಾವಳಿಗಳನ್ನು ನೋಡಬೇಕೆನಿಸುತ್ತದೆ, ಫಾರಿನ್ ಸೆಂಟ್ ಇದ್ದರೆ ಹಚ್ಚಿಕೊಳ್ಳುವ ಬಯಕೆಯಾಗುತ್ತದೆ ಅಂತೆಯೇ ಕೊನೆಯ ಮತ್ತೊಂದೂ ಕೂಡಾ ಅದರ ಬಗ್ಗೆ ನಾನು ಪ್ರತ್ಯೇಕ ಹೇಳಲಾರೆ! ಬಾಹ್ಯಾಚರಣೆಗೆ ತೆರೆದುಕೊಂಡ ಮನಸ್ಸು ಐಹಿಕ ಸುಖಭೋಗಗಳಿಗೆ ಮನಸೋಲುತ್ತದೆ, ಇದಕ್ಕೆ ಜ್ವಲಂತ ಉದಾಹರಣೆ ನಮಗೆಲ್ಲರಿಗೂ ತಿಳಿದಿರುವ ಗಾಯಕ ವಿದ್ಯಾಭೂಷಣರ ಜೀವನ! ಬ್ರಾಹ್ಮಣಪದವಿಯಿಂದ ಮೇಲೇರಿ ಸನ್ಯಾಸದೀಕ್ಷೆ ಪಡೆದಿದ್ದ ಅವರು ಸಂಗೀತಕ್ಕೆ ಒತ್ತುಕೊಟ್ಟು ಹಾಡಲಾರಂಭಿಸಿದಾಗ ಹುಡುಗಿಯೊಬ್ಬಳಿಗೆ ಮನಸೋತು ಸನ್ಯಾಸವನ್ನೇ ತ್ಯಜಿಸಿಬಿಟ್ಟರು, ಹೀಗಾಗಿ ಸಾಧನಾಮಾರ್ಗ ಸುಲಭದ್ದಲ್ಲ. ಸನ್ಯಾಸಿಗಳು ಹಾಡು/ನರ್ತನಗಳಲ್ಲಿ ಭಾಗವಹಿಸಬಾರದು ಎಂಬ ನಿಯಮವಿದೆ, ಕೇಳುವವರಾರು ? ಈ ಎಲ್ಲದರಿಂದ ಮುಕ್ತಿಪಡೆಯಲಾಗಿ ಸಮಾಜದ ಇತರ ಎಲ್ಲಾ ಜನರೊಟ್ಟಿಗೆ ಬ್ರಾಹ್ಮಣರು ಬೆರೆಯಲಿಲ್ಲ ಎಂಬುದು ಮೂಲ ಕಾರಣವಾಗಿದೆ. ಬರುಬರುತ್ತಾ ಇಲ್ಲೂ ಇಲ್ಲ ಅಲ್ಲೂ ಇಲ್ಲ ಆದ ಬ್ರಾಹ್ಮಣ ಯುವಪೀಳಿಗೆಯ ಅನೇಕರಿಗೆ ಬ್ರಾಹ್ಮಣ್ಯದ ಬಗ್ಗೆ ಮೊದಲೇ ತಿಳಿದಿಲ್ಲ, ಬ್ರಾಹ್ಮಣ ಎಂದುಕೊಳ್ಳಲೂ ನಾಚಿಕೆಯಾಗುತ್ತದೆ, ಅಸಹ್ಯವಾಗುತ್ತದೆ. ಜನಿವಾರವೆಂಬ ದಾರ ಅರಿತರೆ ಜೀವನಕ್ಕಾಧಾರ ಅದಿರದಿರೆ ಅದೇ ಜೀವನಕ್ಕೆ ಭಾರ ಎಂದು ನಾನೊಂದು ಲೇಖನದಲ್ಲಿ ಹೇಳಿದ್ದೇನೆ. " ಬ್ರಹ್ಮಜ ಜ್ಞಾನಂ ಪ್ರಥಮಂ ಪುರಸ್ತಾತ್ " ಎಂಬಂತೇ ನಿಜವಾದ ಬ್ರಾಹ್ಮಣನನ್ನು ಕಂಡಾಗ ಬ್ರಾಹ್ಮಣರನ್ನು ದ್ವೇಷಿಸುವವರೇ ಆದರೂ ಕೈಮುಗಿಯುವ ಮನಸ್ಸಾಗುತ್ತದೆ, ಯಾಕೆಂದರೆ ಅವರಲ್ಲಿನ ಬ್ರಹ್ಮವರ್ಚಸ್ಸು ಆ ಕೆಲಸಮಾಡಿಸುತ್ತದೆ! ಉಪಜೀವನಕ್ಕಾಗಿ ಹೊರಬಂದ ಬ್ರಾಹ್ಮಣರಲ್ಲಿ ಅನೇಕರು ತಮ್ಮ ನೇಮ-ನಿಷ್ಠೆಗಳನ್ನೆಲ್ಲಾ ಗಾಳಿಗೆ ತೂರಿ ಕುಡಿತ, ಜುಗಾರು, ಪರಸ್ತ್ರೀಗಮನ ಮುಂತಾದ ದುಷ್ಚಟಗಳಿಗೆ ಬಲಿಯಾಗಿದ್ದಾರೆ. ಸಮಾಜದಲ್ಲಿ ಒಳಿತು ಯಾವುದು ಕೆಡುಕು ಯಾವುದು ಎಂಬುದನ್ನು ಗುರ್ತಿಸಿ ಇತರರಿಗೆ ಬೋಧಿಸಬೇಕಾಗಿದ್ದ ಅವರು ಆ ಸ್ಥಾನದಿಂದ ಜಾರಿಬೀಳುತ್ತಿದ್ದಾರೆ; ಇದು ಖೇದಕರವಾಗಿದೆ. ಬ್ರಾಹ್ಮಣ್ಯದ ಪರಿಪೂರ್ಣ ಅರಿವನ್ನು ತಮಗೆ ಈ ಚಿಕ್ಕ ಜಾಗದಲ್ಲಿ ಮಾಡಿಸಲು ಸಾಧ್ಯವಾಗುವುದಿಲ್ಲ. ನಿಜವಾದ ಬ್ರಾಹ್ಮಣ ಶಾಪಾನುಗ್ರಹ ಸಮರ್ಥನಿರುತ್ತಾನೆ. ಹೇಗೆ ಓದಿ ಕಲಿತು ವಿವಿಧ ಪದವಿ ಪಡೆಯುತ್ತಾರೋ ಹಾಗೇ ಬ್ರಾಹ್ಮಣನಾಗುವ ಮೊದಲು ಆತ ವೇದಗಳನ್ನು ಓದಬೇಕಾಗುತ್ತದೆ, ಆಚರಿಸಬೇಕಾಗುತ್ತದೆ. ಅದರ ಆರಂಭಕಾಲವನ್ನೇ ’ಉಪನಯನ’! [ಮತ್ತೊಂದು ಕಣ್ಣು--ಅದೇ ಜ್ಞಾನಚಕ್ಷು.] ಬರಿದೇ ಹಾಕಿಕೊಂಡ ದಾರಕ್ಕೂ ಅರಿತು ಧರಿಸುವ ಯಜ್ಞೋಪವೀತಕ್ಕೂ ವ್ಯತ್ಯಾಸ ಬಹಳ ಇದೆ. ತಮಗೆ ಚಿಕ್ಕದಾಗಿ ಉತ್ತರಿಸಲು ಪ್ರಯತ್ನಿಸಿದ್ದೇನೆ.

    ReplyDelete
  12. ...ಮುಂದುವರಿದ ಭಾಗ

    ವೈದ್ಯನ ಮಗ ವೈದ್ಯನಾಗಲು ವೈದ್ಯಪದವಿ ಪಡೆಯಬೇಕಾಗುತ್ತದೆ ಎಂಬ ನಿಮ್ಮೆಲ್ಲರ ಅನಿಸಿಕೆ ಸಮರ್ಪಕವಾಗೇ ಇದೆ. ರಾಜಾಶ್ರಯ ತಪ್ಪಿದ ಬ್ರಾಹ್ಮಣರಿಗೆ ಉಪಜೀವನಕ್ಕೆ-ಊಟಕ್ಕೇ ಕೊರತೆಯಾಗುವ ಬಡತನ ಬಂದಾಗ ಸಹಜವಾಗಿ ಅವರು ಬೇರೇ ವೃತ್ತಿಗಳತ್ತ ಮುಖಮಾಡಿದ್ದಾರೆ. ಬಹಿರ್ಮುಖರಾದ ಬ್ರಾಹ್ಮಣ ಮಂದಿಗೆ ಹೊರಗಿನ ಪ್ರಪಂಚದ ಬಾಧ್ಯತೆಗಳು ಅಟಕಾಯಿಸಿವೆ! ಅನಿವಾರ್ಯವಾಗಿ ನವಯುಗದ ಜೀವನವನ್ನು ಆತುಕೊಂಡ ಅವರಿಗೆ ತಮ್ಮ ಮೂಲದ ಆಶಯ ಮರೆತುಹೋಗುತ್ತಿದೆ. ಈಗಿನ ಎಷ್ಟೋ ಬ್ರಾಹ್ಮಣಜಾತಿಯ ಜನರಿಗೆ ಯಾವ ಮಂತ್ರಗಳೂ ಗೊತ್ತಿಲ್ಲ!! ನಟ ರಾಜಕುಮಾರರ ಮಕ್ಕಳೆಂಬ ಅಭಿಮಾನಕ್ಕೆ ಜನತೆ ಅವರನ್ನು ಒಪ್ಪಿಕೊಂಡಂತೇ ಒಂದಾನೊಂದು ಕಾಲಕ್ಕೆ ಕಮ್ರಠಬ್ರಾಹ್ಮಣರ ಮನೆಗಳಲ್ಲಿ ಜನಿಸಿದ್ದರು ಎಂಬ ಕಾರಣಕ್ಕೆ ಅವರು ಬ್ರಾಹ್ಮಣರೆಂದು ಜಾತಿಯಿಂದ ಗುರುತಿಸಲ್ಪಟ್ಟಿದ್ದಾರೆಯೇ ವಿನಃ ಬ್ರಾಹ್ಮಣ್ಯದ ಸೊಗಡು, ಆ ದೈವತ್ವದ ಸೊಬಗು ಅವರಲ್ಲಿಲ್ಲ!

    ಬದಲಾದ ಪರಿಸರದಲ್ಲಿ ಎಲ್ಲಾ ಜನರಲ್ಲೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಇದ್ದಾರೆ. ನನ್ನನ್ನೇ ತೆಗೆದುಕೊಳ್ಳಿ: ಮನೆಯಲ್ಲಿ ಅನುಷ್ಠಾಣಾ ನಿರತನಾದಾಗ ಬ್ರಾಹ್ಮಣ, ನನ್ನನ್ನು ರಕ್ಷಿಸಿಕೊಳ್ಳುವಾಗ ನಾನೊಬ್ಬ ಕ್ಷತ್ರಿಯ,ಹೊರಗೆ ಮಾರಾಟದಲ್ಲಿ ತೊಡಗಿದಾಗ ವೈಶ್ಯ, ಸಲಹೆಗಾರನಾಗಿಯೂ ತರಬೇತುದಾರನಾಗಿಯೂ ಸೇವೆ ಸಲ್ಲಿಸಿ ಅದಕ್ಕೆ ಆದಾಯ ಪಡೆಯುವಾಗ ಶೂದ್ರ!

    ಕೊನೆಯ ಒಂದು ಮಾತು: ಬ್ರಾಹ್ಮಣ ಜಾತಿಯಲ್ಲಿ ಸ್ನಾನಮಾಡಬೇಕು ಎಂಬ ನಿಯಮದಿಂದಲಾದರೂ ಸ್ನಾನಮಾಡುತ್ತಾರೆ. ಬೆಂಗಳೂರಿನಲ್ಲಿ ನನಗೆ ಗೊತ್ತಿರುವ ಬೇರೇ ಜನಾಂಗದ ಆಗರ್ಭ ಶ್ರೀಮಂತರೊಬ್ಬರ ಮನಯಲ್ಲಿ ವಾರಕ್ಕೊಮ್ಮೆ ಮಾತ್ರ ಸ್ನಾನ! ಅಂತಹ ಮನೆಗಳಲ್ಲಿ ನಾವು ಭುಂಜಿಸುವುದರಿಂದ ಅದು ನಮಗೂ ಒಳಿತಲ್ಲ[ವೈಜ್ಞಾನಿಕ]. ಇನ್ನೊಂದು ಬಲವಾದ ಕಾರಣವೆಂದರೆ: ಇತರೇ ಜನಾಂಗದ ಕೆಲವರ ಮನೆಗಳಲ್ಲಿ ಅವರೇ ಬಡತನದಲ್ಲಿ ದಿನಗಳೆಯುತ್ತಾರೆ. ಇದ್ದೂ ಉಪವಾಸಮಾಡುವವರು ಬ್ರಾಹ್ಮಣರಾದರೆ ಇರದೇ ಉಪವಾಸಬೀಳುವ ಜನ ಅವರಾಗಿದ್ದಾರೆ. ಅಂಥಾ ಜನರಲ್ಲಿ ನಾವು ಊಟಕ್ಕೆ ಬರುತ್ತೇವೆ, ತಿಂಡಿಗೆ ಬರುತ್ತೇವೆ ಎಂದು ಹೇಳಿ ಹೊರಟರೆ ಅವರಿಗೂ ಇರುಸು-ಮುರುಸು ಜೊತೆಗೆ ಸಾಲಮಾಡಿಯಾದರೂ ಅತಿಥಿ ಸತ್ಕಾರ ಮಾಡಹೊರಟಾರು ಎಂಬ ಅಂಶವನ್ನೂ ಹಲವು ಜನ ಪರಿಗಣಿಸುತ್ತಾರೆ.

    ನಲಿವು ಯಾಕೆ ಎಂದರೆ ನೀವು ಕೊನೇಪಕ್ಷ ಇದನ್ನೆಲ್ಲಾ ಓದುವ ಮನಸ್ಸು ತೆಗೆದುಕೊಂಡಿರಲ್ಲಾ ಎಂಬುದಕ್ಕೆ. ನಿಮ್ಮ ಭಾಗವಹಿಸುವಿಕೆಗೆ, ಪ್ರತಿಕ್ರಿಯೆಗಳಿಗೆ ಅನಂತಾನಂತ ಧನ್ಯವಾದಗಳು, ನಮಸ್ಕಾರ.

    ReplyDelete
  13. ಭಟ್ಟರೇ,
    ಆಳವಾಗಿ ಒಂದು ವಿಷಯವನ್ನು ಅಧ್ಯಯನ ಮಾಡುವ, ತಿಳಿದಿದ್ದನ್ನು ಪ್ರಸ್ತುತಪಡಿಸುವ ನಿಮ್ಮದು ಅಂತರ್ಜಾಲ ಸಾಹಿತ್ಯದಲ್ಲಿ ಒಂದು ತಪಸ್ಸು.ನಿಮಗೆ ಅಭಿನಂದನೆಗಳು.

    ReplyDelete
  14. ಭಟ್ಟರೆ,
    ಲೇಖನ ಹಾಗು ನಿಮ್ಮ ಮರುಸ್ಪಂದನೆ ವಿಚಾರಪೂರ್ಣವಾಗಿವೆ. ಬ್ರಾಹ್ಮಣರು ಇತರ ವರ್ಣದವರನ್ನು ಶೋಷಿಸಿದರೆ? ಮತ್ತು ಆ ಕಾರಣಕ್ಕಾಗಿ ಇತರ ವರ್ಣಿಯರು ಬ್ರಾಹ್ಮಣರನ್ನು ದ್ವೇಷಿಸುತ್ತಾರೆಯೆ? ಎನ್ನುವ ಚರ್ಚೆಯೇ ಬೇರೆ. ಆದರೆ ವೇದ ಕಾಲದಲ್ಲಿ ಎಲ್ಲ ವೃತ್ತಿಗಳ ಶಿಕ್ಷಣವು family apprentice ಪದ್ಧತಿಯಲ್ಲಿ ನಡೆಯುತ್ತಿತ್ತು ಎನ್ನುವದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಆ ಕಾರಣಕ್ಕಾಗಿ ಎಲ್ಲ ವೃತ್ತಿಗಳೂ,including ಪೌರೋಹಿತ್ಯ, ಪರಂಪರಾಗತವಾಗಿರುತ್ತಿತ್ತು.
    ಅಧ್ಯಯನ ಹಾಗು ಅಧ್ಯಾಪನಗಳನ್ನು ಕಠಿಣ ರೀತಿಯಲ್ಲಿ ಕೈಗೊಳ್ಳಬೇಕಾದ ಅವಶ್ಯಕತೆ ಇದ್ದಾಗ, ಇತರ ವೃತ್ತಿಜರು ಪೌರೋಹಿತ್ಯಕ್ಕೆ ಮನಸ್ಸು ಮಾಡುತ್ತಿರಲಿಲ್ಲವೇನೊ!
    ನಿಮ್ಮ ಲೇಖನವು ಕಣ್ಣು ತೆರೆಯಿಸುವಂತಿದೆ.

    ReplyDelete
  15. ಪುನರಪಿ ಎಲ್ಲರಿಗೂ ಧನ್ಯವಾದಗಳು.

    ReplyDelete
  16. ತುಂಬಾ ಅತ್ಯುತ್ತಮ ಲೇಖನ. ಮೇಲ್ಮಟ್ಟದ ವಿವರಣೆ...

    ReplyDelete
  17. Really outstanding and awesome.....,
    keep writing....
    Thanks

    ReplyDelete