ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 27, 2011

ಇಳೆಯ ಸಡಗರ


ಇಳೆಯ ಸಡಗರ

ಇಳೆಯು ಸಡಗರದಲ್ಲಿ ಮಳೆಯಲ್ಲಿ ತಾ ಮಿಂದು
ಕಳೆಕಳೆಯ ಮುಖ ಹೊತ್ತು ನಗುವ ಚೆಲ್ಲಿಹಳು
ತೊಳೆದುಟ್ಟ ಸೀರೆ ಬಣ್ಣದ ಕುಬುಸ ಬಲುಚಂದ
ಹೊಳೆಯಿತದೋ ರೇಷಿಮೆಯ ತಲೆಗೂದಲು

ಬಳುಕು ಬಳ್ಳಿಯು ಹುಟ್ಟಿ ಬೆಳೆಬೆಳೆದು ವೇಗದಲಿ
ಸುಳಿವು ನೀಡದೆ ಹೂವು ಕಾಯಿ ಹಣ್ಣುಗಳು
ಘಳಿಗೆಗೊಂದಾವರ್ತಿ ಬಲುವಿಧದ ಹಕ್ಕಿಗಳು
ಮೊಳಗಿದವು ಇಲ್ಲಿ ಇಂಚರದಿ ಹಾಡುಗಳು

ಜುಳುಜುಳನೆ ಹರಿವ ತೊರೆಗಳು ಭರದಿ ಮೈದುಂಬಿ
ಕೊಳೆಯ ತೊಳೆಯುತಲತ್ತ ಮುಂದೆ ಸಾಗುವವು !
ಹೊಳೆಯು ರಭಸದಿ ನುಗ್ಗಿ ನದಿ ಸಾಗರವ ಸೇರಿ
ಕಳುವು ಮಾಡಿತು ಕವಿಯ ಆರ್ದ್ರ ಹೃದಯವನು !

ಬಳೆಗಳಂದದಿ ಬಾಗಿ ನಿಂದಿಹವು ಬಿದಿರುಗಳು
ಮೆಳೆತುಂಬ ಎಲೆಚಿಗುರಿ ಚಲುವಚಿತ್ತಾರ
ಮಳೆರಾಯ ಬಾನ ಮದುಮಗನ ಕರೆತರುವಾಗ
ಸೆಳೆವಳದೋ ಹಸಿರು ಪೀತಾಂಬರದಿ ಅವನ

ಹಳೆಯದೆಲ್ಲವು ಮರೆತು ಹೊಸತು ಜೀವದಿ ಬೆರೆತು
ಅಳತೆ ಮೀರಿದ ಆನಂದವನು ತಂದು
ಕಳಿತ ಫಲಗಳ ತಿಂದ ಸಿಹಿಯಮೃತ ಜಿಹ್ವೆಯಲಿ
ಮಿಳಿಯುತೀ ಮನಸು ನೋಂಪಿಯ ನೋಡಿ ನಿಂದು

8 comments:

  1. ಭಟ್ಟರೆ...

    ಸೊಗಸಾದ ಕವನ..

    ಇನ್ನಷ್ಟು ಬರಲಿ...

    ReplyDelete
  2. ಭಟ್ಟರೆ,
    ಇಪ್ಪತ್ತೂ ಸಾಲುಗಳಲ್ಲಿ ಒಂದೇ ಆದಿಪ್ರಾಸವನ್ನು ಬಳಸಿರುವದು ವಿಸ್ಮಯದ ಸಾಧನೆಯಾಗಿದೆ!

    ReplyDelete
  3. ಇಳೆಯು, ಬಳುಕು ಬಳ್ಳಿಯು, ಜುಳುಜುಳುನೆ ಹರಿದು, ಬಳೆಗಳ೦ದದಿ ಬಾಗಿ, ಹಳೆಯದೆಲ್ಲವ ಮರೆಸಿತು..! ಮೊದಲಕ್ಷರದ ಜೋಡಣೆಗಳ ಅಪಹರಿಸಿದರೆ, ಮತ್ತೊ೦ದು ಹನಿಗವನದ ಸೃಷ್ಟಿಯಾಯಿತು. ಉತ್ತಮ ಕವನದ ಪ್ರಸ್ತುತಿಗೆ ಅಭಿನ೦ದನೆಗಳು ಭಟ್ ಸರ್.

    ಅನ೦ತ್

    ReplyDelete
  4. ಸು೦ದರ ಪ್ರಾಸದ ಅ೦ದದ ಕವನ ನೀಡಿದ್ದಕ್ಕಾಗಿ ವ೦ದನೆಗಳು ಸರ್.

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ಕೃತಜ್ಞತೆಗಳು

    ReplyDelete
  6. ತುಂಬಾ ಉತ್ತಮ ಪ್ರಾಸ ಹಾಗು ಸುತ್ತಮ ಕವನ.

    ReplyDelete