ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 9, 2011

ಶಿಷ್ಟ ’ಜೂಜು’


ಶಿಷ್ಟ ’ಜೂಜು’

ಈಜುವುದು ಸುಲಭವೇ ?ಸೋಜಿಗದ ಈ ಕೊಳದಿ
ಹೂಜಿನೀರನು ಕಾಗೆ ಕುಡಿದ ಥರವಲ್ಲ !
ರಾಜಮಹಾರಾಜರೂ ಈಜಾಡಿ ಸೋತರು
ಜೂಜು ಬಲುದೊಡ್ಡದಿದು ಆಟದರಿವಿಲ್ಲ !

ಮುರಿದು ಬೇಲಿಯನೆಲ್ಲ ಕರಗಿಸುತಾನಂತದಲಿ
ಅರಿತು ನೋಡುವಲೊಮ್ಮೆ ಅದುವೇ ಅದ್ವೈತ
ಮುರಿಯದೇ ಒಟ್ಟಿನಲಿ ಬೇರೇ ಗುಣಿಸುತ ನಡೆಯೆ
ಬರುವುದಾಗಲ್ಲೆಲ್ಲ ಹಲವಿಧದ ದ್ವೈತ

ಮುರಿಯಲೂ ಬೇಡೆನುತ ಅರಿಯಲೂ ಬೇಕೆನುತ
ಪರಿಯಲ್ಲಿ ಹುಡುಕುವುದೇ ವಿಶಿಷ್ಟಾದ್ವೈತ
ಗುರಿಯೊಂದೇ ಸೇರುವುದು ನದಿ-ಸಾಗರಗಳಂತೆ
ಹಿರಿಮೆ-ಗರಿಮೆಯ ಮರೆತು ಬರಲಿ ಜ್ಞಾನಪಥ

ತೀರದಲಿ ಕುಳಿತಾಗ ದೂರದೆಡೆ ಈಕ್ಷಿಸುತ
ಯಾರು ಕಂಡರು ಶರಧಿಯಿನ್ನೊಂದು ದಡವ ?
ಜಾರುವುದು ಈ ಮನಸು ಜಾರೆ ಹಣಕಂಡಂತೇ !
ಮೋರೆಯಿಲ್ಲದೆ ಸುತ್ತಿ ಬದುಕಾಯ್ತು ಬಡವ

ವಿಶ್ವದಲಿ ನಮ್ಮಿರವು ಹೊಳೆಗೆ ಹುಣಿಸೆಯ ಹಣ್ಣು
ಈಶ್ವರನ ಪ್ರಣಿದಾನ ಜೀವ ನಿರವದ್ಯ
ಶಾಶ್ವತವ ಪಡೆವಾಗ ಜಾರುಗಂಬವೇ ಸ್ಫೂರ್ತಿ
ನಶ್ವರವ ಕಡೆಗಣಿಸಿ ಮುನ್ನಡೆಯೆ ವೇದ್ಯ !

8 comments:

  1. ತೀರದಲಿ ಕುಳಿತಾಗ ದೂರದೆಡೆ ಈಕ್ಷಿಸುತ
    ಯಾರು ಕಂಡರು ಶರಧಿಯಿನ್ನೊಂದು ದಡವ ?
    ಜಾರುವುದು ಈ ಮನಸು ಜಾರೆ ಹಣಕಂಡಂತೇ !
    ಮೋರೆಯಿಲ್ಲದೆ ಸುತ್ತಿ ಬದುಕಾಯ್ತು ಬಡವ

    enthaha anubhavayukta saalugalu sir

    liked it

    ReplyDelete
  2. sooperb ...

    aadi praasadalli kavteyannu chennagi bareyutteeri ..

    ReplyDelete
  3. ಜೀವನ ತತ್ವವನ್ನು ತಿಳಿಸುವ ಒಳ್ಳೆಯ ಕವನ.

    ReplyDelete
  4. ಜೀವನ ಜೂಜಲ್ಲ, ಆದರೆ ಜೂಜಿನಂತೆ!
    ಜೀವನ ತತ್ವಗಳನ್ನು ಅರಿತು ನಡೆದರೆ ಅದುವೇ ಪರಮ ಪುಣ್ಯದ ಕೆಲಸ...
    ಚನ್ನಾಗಿದೆ

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅತ್ಯಂತ ಪ್ರೀತಿಪೂರ್ವಕ ಧನ್ಯವಾದಗಳು.

    ಹೊಸದಾಗಿ ಬ್ಲಾಗಿಗೆ ಬಂದು ಸೇರಿದವರಿಗೆಲ್ಲರಿಗೂ ಹಾರ್ದಿಕ ಸ್ವಾಗತ ಹಾಗೂ ನಮನ.

    ReplyDelete