ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 10, 2011

ಅಸಮತೋಲನ


ಅಸಮತೋಲನ

ಹೃದಯ ದೀವಿಗೆಯುರಿದು ಭಾವಗಳು ಸಂಗಮಿಸಿ
ಉದಯವಾಗಲಿ ಜಗದ ಗುಡಿಯು ನೂತನದಿ
ಅದಕಾಗಿ ಜನರೆಲ್ಲ ವಿಶ್ವ ಬಾಂಧವ್ಯದೊಳು
ಹದಮಾಡಿ ಮನಗಳನು ಮುದಗೊಳಿಸುತಿರಲಿ

ವಿಸ್ತರದ ಈ ಜಗಕೆ ಬಾಗಿಲುಗಳೆಲ್ಲಿಹವು ?
ಹೊಸ್ತಿಲದು ಕಾಣಿಸದು ತಿರುಗೆತ್ತ ನೋಡೆ
ವಾಸ್ತವವ ಅರಿತಾಗ ನಾವೆಷ್ಟು ಚಿಕ್ಕವರು !
ಶಿಸ್ತಾಗಿ ಸಹಜೀವನವ ಬಾಳಬೇಕು

ಆರ್ಯಾವರ್ತದ ನಡುವೆ ಹಾರುವಾ ಪಕ್ಷಿಗಳು
ಸೂರ್ಯನುದಿಸುವ ವೇಳೆ ವಲಸೆ ತೆರಳುವವು
ಕಾರ್ಯಮುಗಿದಾವೇಳೆ ಮರಳಿ ತವರಿಗೆ ಬಂದು
ಪರ್ಯಾಯ ಸಂದೇಶ ನಮಗೆ ನೀಡುವವು !

ಗಡಿಗಳಾ ಮಿತಿಯಿರದೇ ಕಾಡೊಳಗೆ ಸಂಚರಿಸಿ
ಸಡಗರದಿ ಆಹಾರ ಭುಂಜಿಪ ಮೃಗಗಳು
ಉಡುಗೊರೆಯ ನೀಡುವವು ಸುಂದರ ದೃಶ್ಯಗಳ
ಗಿಡಮರಗಳಂಚಿನಲಿ ನಿಂತು ನಲಿಯುತಲಿ

ಯಾವುದೇ ಪಶುಪಕ್ಷಿ ಈ ನಿಸರ್ಗದ ನಡುವೆ
ತಾವಾಯ್ತು ತಮ್ಮ ಕೆಲಸಗಳಾಯ್ತೆಂದು ತಿಳಿದು
ಆವ ಸಂಪತ್ತನೂ ಲೂಟಿಮಾಡದೇ ಉಳಿದು
ನಾವು ಮಾಡುವ ಹಾನಿ ನೋಡಿ ಮಿಡಿಯುವವು

ಹಸಿರು ಕಾನನ ಬೇಕು ಶುದ್ಧ ಜಲವದುಬೇಕು
ಉಸಿರಾಡುವೊಲು ನಮಗೆ ನಿರ್ಮಲದ ಗಾಳಿ
ಬಸಿದುಕೊಳ್ಳುವ ಬದಲು ದೋಚಿಬದುಕುವ ನಾವು
ಹೆಸರಿಗೂ ಇರದಂತೆ ಮಾಡುವೆವು ದಾಳಿ !

8 comments:

  1. ಒ೦ದೊ೦ದು ಸಾಲು ಕೂಡ ಅರ್ಥವತ್ತಾಗಿದೆ

    ReplyDelete
  2. tumba chennagide sir saalugaLu... wow... namge bekiruvudellavannu naavu salaha beku allave.. kavana tumba istavaytu

    ReplyDelete
  3. ನಿಸರ್ಗದ ಸಹಜ ಶಿಶುಗಳನ್ನು ನೋಡಿ, ಮಾನವನು ಕಲಿಯಬೇಕಾದದ್ದು ಸಾಕಷ್ಟಿದೆ. ಮಾನವಕುಲಕ್ಕೆ ಉತ್ತಮ ಸಂದೇಶ ನೀಡಿದ್ದೀರಿ.

    ReplyDelete
  4. ತುಂಬಾ ಚೆನ್ನಾಗಿದೆ ಸಾರ್ ಎರಡು ದಿನಗಳ ಕೆಳಗೆ ಹಾಸನದಲ್ಲಿ ಸತ್ತ ಎರಡು ಪುಟ್ಟ ಆನೆಮರಿಗಳ ದಾರುಣ ಕಥೆ ನೆನಪಾಯ್ತು..

    ReplyDelete
  5. ಭಟ್ಟರೆ ...

    ಅರ್ಥಪೂರ್ಣ ಸಾಲುಗಳು..

    ಇಂಥಹ ಕವಿತೆಗಳು ಇನ್ನಷ್ಟು ಬರಲಿ... ಧನ್ಯವಾದಗಳು...

    ReplyDelete
  6. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ವಂದನೆಗಳು, ಅಭಿನಂದನೆಗಳು.

    ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಸವಿ ಸವಿ ಪ್ರೀತಿಯವರಿಗೆ ಸ್ವಾಗತ ಹಾಗೂ ನಮನ.

    ReplyDelete