ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 16, 2010

ಮಾನಸ ಪೂಜೆ


ಮಾನಸ ಪೂಜೆ

ಭಗವತ್ಪಾದ ಶ್ರೀ ಆದಿಶಂಕರರು ಪ್ರಕಾಂಡ ಪಂಡಿತರೂ ಉತ್ತಮ ಕವಿಗಳೂ ಆಗಿದ್ದರು. ಆ ದಾರ್ಶನಿಕರ ಬಗ್ಗೆ ಬರೆಯತೊಡಗಿ ಮಧ್ಯದಲ್ಲಿ ಅನಿವಾರ್ಯತೆಯಲ್ಲಿ ನಿಲ್ಲಿಸಿದ್ದೆ. ಮತ್ತೆ ಕೆಲದಿನಗಳಲ್ಲಿ ಅದನ್ನು ಆರಂಭಿಸುತ್ತಿದ್ದೇನೆ. ಮನುಷ್ಯ ಏನೂ ಇರಲಿ ಇಲ್ಲದಿರಲಿ ತನ್ನ ದೈನಂದಿನ ವ್ಯವಹಾರಗಳ ಮಧ್ಯೆ ಇದ್ದಲ್ಲೇ ಹೇಗೆ ದೈವಧ್ಯಾನ ಮಾಡಬಹುದು ಎಂಬುದನ್ನು ಅಂದೇ ಅವರು ಸೂಚಿಸಿದ್ದರು. ಪಾಂಡವರಲ್ಲಿ ಭೀಮ ಇಂತಹುದೇ ಉಪಾಸನೆಯನ್ನು ಮಾಡುತ್ತಿದ್ದ ಎಂಬುದೊಂದು ಐತಿಹ್ಯ. ಮನುಷ್ಯನ ಮನಸ್ಸೇ ಎಲ್ಲಕ್ಕೂ ಮೂಲ ಕೇಂದ್ರವಾಗಿರುವುದರಿಂದ ಅಲ್ಲೇ ಹೊರಜಗತ್ತಿನ ವೈಭವ-ವೈಭೋಗಗಳನ್ನು ಕಲ್ಪನೆಮಾಡಿಕೊಳ್ಳುತ್ತಾ ದೈವಕ್ಕೆ ಅವುಗಳಿಂದ ಮನಸಾ ಪೂಜಿಸುವುದು ಮಾನಸ ಪೂಜೆ ಎನಿಸಿದೆ. ಶುದ್ಧ ಮನಸ್ಸಿನಲ್ಲಿ ದೇವರನ್ನು ಆಹ್ವಾನಿಸಿ ನಡೆಸಬಹುದಾದ ಈ ಪೂಜೆಗೆ ಬೇಕಾಗುವ ಒಂದೇ ಪ್ರಮುಖ ವಸ್ತು--ಮನಸ್ಸು. ಶಂಕರರ ಅಡಿಗಳಿಗೆರಗುತ್ತ ಅವರು ರಚಿಸಿದ ಶಿವಮಾನಸ ಸ್ತೋತ್ರವನ್ನು ಕನ್ನಡೀಕರಿಸಲು ನನ್ನ ಶಬ್ದಗಳನ್ನೂ ಸೇರಿಸಿ ಹೀಗೆ ಪ್ರಯತ್ನಿಸಿದ್ದೇನೆ : ]

ಆಂತರ್ಯದಲಿ ಕುಳಿತು
ನನ್ನಾಳ್ವ ಓ ದೊರೆಯೇ
ಅರ್ಪಿಸುವೆ ನಿನಗಿದುವೇ
ನನ್ನ ಹಾಡು
ನಿತ್ಯವೂ ಬೆಳಗಿನಲಿ
ಮತ್ತದೇ ಬೈಗಿನಲಿ
ಸ್ವಸ್ತ ಚಿತ್ತವ ಕೊಡುವ
ಕೃಪೆಯ ಮಾಡು

ರತ್ನ ಸಿಂಹಾಸನವ
ಕಲ್ಪಿಸುವೆ ಮನಸಿನಲಿ
ಪಟ್ಟೆ ಪೀತಾಂಬರವ
ಅಣಿಗೊಳಿಸುತಲ್ಲಿ
ಜಾತೀಯ ಪುಷ್ಪಗಳ
ಧೂಪದೀಪಗಳಿಟ್ಟು
ಪ್ರೀತಿಯಲಿ ಸ್ವಾಗತಿಸಿ
ಕುಳ್ಳಿರಿಸುತಲೀ

ಅರ್ಘ್ಯ ಪಾದ್ಯಾದಿಗಳು
ಸ್ನಾನ ಪಾನೀಯಗಳು
ಭೂಷಣಕೆ ಗಂಧ
ಮಾಲೆಗಳನ್ನು ಇಡುತ
ಭೇಷಾಯ್ತು ನಿನ್ನಿರವು
ನಾ ಸೋಲದಂತಿರಲು
ಕೇಶವನೇ ಶಿವನೇ ನೀ
ಪ್ರೀತಿಸೈ ಸತತ

ನವರತ್ನ ಖಚಿತ
ಬಂಗಾರದಾ ಪಾತ್ರೆಯಲಿ
ತುಪ್ಪ ಹಾಲ್ಮೊಸರು ಪಂಚ
ಭಕ್ಷ್ಯಾದಿಗಳನು
ಬಾಳೆ ಮಾವಿತ್ಯಾದಿ
ವಿಧದ ಹಣ್ಣಿನ ಜತೆಗೆ
ಪಾನಕ ತಾಂಬೂಲವಂ
ಕೊಡುತಲಿಹೆನು

ಅವಸರದ ಜೀವನದಿ
ಮರೆತಿರುವೆ ನಿನ್ನನ್ನೇ
ಭವಸಾಗರವು ಬಹಳ
ವಿಸ್ತಾರವಹುದು
ಕ್ಷಮಿಸೆನ್ನ ಮಂದಮತಿ
ಕರುಣಿಸುತ ಚಂದಗತಿ
ಮರುಳು ಮಾನವ ಜನ್ಮ
ಮುಸುಕು ಕವಿದಿಹುದು

ಕರಚರಣ ಕೃತಪಾಪ
ಕಾಯದಲಿ ಕರ್ಮದಲಿ
ಶ್ರವಣ ನಯನಗಳಲ್ಲಿ
ಜನಿಸಿದಪರಾಧ
ವಿಹಿತವೋ ಅವಿಹಿತವೋ
ಸರ್ವವನು ಕಡೆಗಣಿಸು
ಜಯಜಯವು ಜಯವೆನುತ
ದರ್ಶಿಸುವೆ ಪಾದ

5 comments:

  1. ಆತ್ಮೀಯ ಭಟ್ಟರೇ
    ಸರಳವಾಗಿ ಚೆನ್ನಾಗಿದೆ.ಒಂದು ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಕೇಳುತ್ತಿರುವೆ.ಭಗವಂತನು ಸರ್ವವ್ಯಾಪಿಯಾಗಿರುವಾಗ ನಾವು ಪೂಜೆಮಾಡುವಾಗಲೇನು ಎಲ್ಲಾ ಸಮಯದಲ್ಲೂ ಎಲ್ಲಬಳಿ ಇರುವಾಗ ಅವನನ್ನು ಬಾ ಎಂದು ಕರೆಯುವುದಕ್ಕೆ ಅರ್ಥವೆಲ್ಲಿ? ಎಂಬ ವಾದವಿದೆ. ಈ ಬಗ್ಗೆ ಸ್ವಲ್ಪ ತಿಳಿಸಬಹುದೇ? ವೇದಸುಧೆಯಲ್ಲಿ ಈ ವಿಚಾರಗಳದೇ ಚರ್ಚೆ ನಡೆಯುತ್ತಿದೆ.ಅದಕ್ಕೆ ಪೂರಕವಾದೀತು, ಎಂಬ ಉದ್ಧೇಶದಿಂದ ಕೇಳಿರುವೆ.ಇದು ಮೊ೦ಡುವಾದಕ್ಕೆ ಕೇಳಿದ್ದಲ್ಲ. ಅಂದಹಾಗೆ ವೇದಸುಧೆಯಲ್ಲೂ ಬರಹವನ್ನು ನೀವು ಹಾಕಬಹುದೆ?

    ReplyDelete
  2. ಸರಳ ಕನ್ನಡದಲ್ಲಿ ಅನುವಾದಿಸಿದ ಪರಿ ಚೆನ್ನಾಗಿದೆ. ಮು೦ದುವರಿಸಿ

    ReplyDelete
  3. ಶಂಕರಾಚಾರ್ಯರ ಶಿವಮಾನಸಸ್ತೋತ್ರವನ್ನು ಭಕ್ತಿಯುಕ್ಕಿಸುವಂತೆ ಸರಳವಾಗಿ ಕನ್ನಡಿಸಿದ್ದೀರಿ. ಅಭಿನಂದನೆಗಳು.

    ReplyDelete
  4. ತಮ್ಮೆಲ್ಲರ ಮೊದಲ ಸಂದೇಹ ದೇವರು ಅಣುರೇಣು ತೃಣಕಾಷ್ಠಗಳಲ್ಲಿದ್ದರೂ ಮತ್ತೇಕೆ ಮೂರ್ತಿ ಪೂಜೆ ಎಂಬುದಾಗಿ

    ಯಾಕೇ ಅಂತ ಸ್ವಲ್ಪ ವಿಶ್ಲೇಷಿಸೋಣ: ಜನಸಾಗರದಲ್ಲಿ ಎಲ್ಲರಿಗೂ ಒಂದೇ ಹಂತದ ಅಥವಾ ತಾಕತ್ತಿನ ಮೆದುಳಿ ಇರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಷ್ಟೇ ? ನೀವೇನೇ ಕಲಿಸಿದರೂ ಕೇವಲ ಕೆಲವರು ಮಾತ್ರ ಹೆಸರುವಾಸಿ ವೈದ್ಯರು, ತಂತ್ರಜ್ಞರು, ಕಲಾವಿದರು ಹೀಗೆಲ್ಲಾ ಆಗುತ್ತಾರೆ ಆದರೆ ಎಲ್ಲರಿಗೂ ಏಕಪ್ರಕಾರದ ಅವಕಾಶ ಕೊಟ್ಟು ನೋಡಿ-ಎಲ್ಲರಿಂದಲೂ ಒಂದೇ ರೀತಿಯ ವ್ಯುತ್ಫತ್ತಿಯನ್ನು ಕಾಣುವುದು ಸಾಧ್ಯವಿಲ್ಲ! ಅದೇ ರೀತಿ ನಾವ್ಯಾರೂ ದೇವರನ್ನು ಅಥವಾ ವಿಶೇಷವಾದ ಅತಿಮಾನುಷ ಶಕ್ತಿಯನ್ನು ನೇರವಾಗಿ ಕಂಡಿಲ್ಲ. ಆದರೆ ನಾವು ಕಾಣದ್ದೆಲ್ಲಾ ಇಲ್ಲಾ ಎಂದರೆ ಅದೂ ಕೂಡ ತಪ್ಪೇ ತಾನೇ ? ವಿಜ್ಞಾನಿಯೊಬ್ಬ ವಿಶ್ಲೇಷಿಸಿದ ಸೂತ್ರವನ್ನು ಮತ್ತೊಬ್ಬ ವಿಜ್ಞಾನಿ ಅನುಸರಿಸಿದಾಗ ಮಾತ್ರ ಮೊದಲಿನಾತ ಹೇಳಿದ ಉತ್ತರ ನಮಗೆ ದೊರೆಯುತ್ತದೆ ಅಲ್ಲವೇ ?

    ಕೆಲವರಿಗೆ ಅವರ ಮನೋಸ್ಥಿತಿಗೆ ಮೂರ್ತಿಯಿರದೇ ಏಕಾಗ್ರತೆ ಬರುವುದಿಲ್ಲ. ಕೇವಲ ಏಕಾಗ್ರತೆ ಪಡೆಯುವ ಸರಳ ಸಾಧನವಾಗಿ ಕಲೆಯ ರೂಪದ ಕಲ್ಲಿನಲ್ಲಿ ಇಂತಿಂಥಾ ದೇವರೆಂದು ಕರೆದು ಪೂಜಿಸುತ್ತೇವೆ.

    ReplyDelete
  5. ಎಲ್ಲರಿಗೊ ಧನ್ಯವಾದಗಳು

    ReplyDelete