ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 21, 2010

ಚೋರ ಬುದ್ಧಿ


ಚೋರ ಬುದ್ಧಿ

ಸಾವಿರಾರು ಆಸೆಗಳವು
ಬೇರುಬಿಟ್ಟು ಮನದತುಂಬ
ನೇರ ಒಮ್ಮೆ ಬೆಳೆಯಗೊಡದ
ಚೋರ ಬುದ್ಧಿ ಜನಿಸಿತು

ಹಾರ ಬೇಕು ತಿನ್ನೆಮೊದಲು
ದಾರಬೇಕು ಮೈಮುಚ್ಚಲು
ಧಾರಿಣಿಯಲಿ ಮಲಗೆ ಜಾಗ
ಮೂರು ವಿಷಯ ತೋರಿತು

ನಾರಿ ಬಯಸಿ ನರನ ಸಂಗ
ಜಾರಿಬಿದ್ದು ಜೀವಸೃಷ್ಟಿ
ಊರುತುಂಬ ಜನರು ತುಂಬಿ
ಆರು ಅದಕೆ ಸೇರಿತು

ಹಾರಲು ವಿಮಾನವಿರಲಿ
ಏರಬಯಸೆ ನೆಗವದಿರಲಿ
ಭಾರೀ ಮಹಲು ಸ್ವಂತಕಿರಲಿ
ಮೂರು ಮತ್ತೆ ಕೂಡಿತು

ಊರಹೊರಗೆ ತೋಟವಿರಲಿ
ತೇರೆತ್ತರ ಲಾಭಬರಲಿ
ಕೂರುವಲ್ಲೇ ಮುಗಿವಕೆಲಸ
ಕೋರಿಕೆಗಳು ಕೂಡುತ

ಮೇರೆಮೀರುವಷ್ಟು ಬಯಕೆ
ತೋರುತಿತ್ತು ಧ್ಯಾನದಲ್ಲಿ
ಯಾರುಕರೆದರವುಗಳನ್ನು ?
ಸೇರಿಬಂದವೆಲ್ಲವು !

ಮಾರುದ್ದದ ಬೀಳಲುಗಳ
ನೀರಹೀರೆ ಆಳಕಿಳಿಸಿ
ಸಾರಹೀನವಾಯ್ತು ಬದುಕು
ದಾರಿಕಾಣದೊಮ್ಮೆಲೇ !

8 comments:

  1. ವಿ ಆರ್.ಬಿ ಸರ್..ಮನದ ಬಯಕೆಗಳ ಹುಚ್ಚುಕುದುರೆಯ ಮೇಲೆ ಮದಿರೋನ್ಮತ್ತು ಸವಾರಿ ಮಾಡುವುದನು ನೆನಪಿಸುತ್ತೆ ನಿಮ್ಮ ವಾಸ್ತವಕ್ಕೆ ಕನ್ನಡಿ-ಕವನ...ಸರಳ ಆದರೂ ಗಹನ ವಿಚಾರ ಹುದುಗಿಸಿ ಮೂಡಿಸಿದ ಸಾಲುಗಳು...

    ReplyDelete
  2. ಬದುಕೆಂದರೆ ಅದೆ ಅಸ್ಟೆ ಅಲ್ವಾ ! ಚಂದದ ಕವನ ಸಾರ್ .
    ಮಾರುದ್ದದ ಬೀಳಲುಗಳ
    ನೀರಹೀರೆ ಆಳಕಿಳಿಸಿ
    ಸಾರಹೀನವಾಯ್ತು ಬದುಕು
    ದಾರಿಕಾಣದೊಮ್ಮೆಲೇ !
    ವಾಹ್ ಎಂತ ಸಾಲುಗಳು ! :)

    ReplyDelete
  3. ಚೆನ್ನಾಗಿದೆ, ಮನವೆ೦ಬ ಮರ್ಕಟ ಯಾವಾಗ ಹೇಗೆ ಇರುತ್ತದೆ ಎ೦ದು ಹೇಳಲಾಗದು.

    ReplyDelete
  4. ಭಟ್ಟರೆ,
    ಸಂಕೀರ್ಣ ತತ್ವವನ್ನು ಸರಳ ಭಾಷೆಯಲ್ಲಿ ಹೇಳುವ ಕಲೆ ನಿಮ್ಮಲ್ಲಿ ಮೈಗೂಡಿದೆ. ಈ ಪದ್ಯ ಓದುತ್ತಿದ್ದಂತೆ ಮುಪ್ಪಿನ ಷಡಕ್ಷರಿಯವರು ರಚಿಸಿದ ‘ತಿರುಕನ ಕನಸು’ ನೆನಪಾಯಿತು!

    ReplyDelete
  5. ಎಲ್ಲರಿಗೂ ವಂದನೆಗಳು

    ReplyDelete
  6. ನಿಜವಾಗಿಯು ಸುನಾಥರು ಹೇಳಿದ ಹಾಗೆ ಸ೦ಕೀರ್ಣ ತತ್ವವನ್ನ ಸರಳವಾಗಿ ಹೇಳಿದ್ದಿರಾ... ವ೦ದನೆಗಳು.

    ReplyDelete