ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 12, 2010

ಕುದುರೆಲಾಯದಲ್ಲಿ ನಗೆಲಾಯ !


ಕುದುರೆಲಾಯದಲ್ಲಿ ನಗೆಲಾಯ !

ವೇದಾಂತಿ ಹೇಳಿದನೂ ಹೊನ್ನೆಲ್ಲ ಮಣ್ಣೂ ಮಣ್ಣೂ
ಗಣಿಲೊಬ್ಬ ಹೇಳಿದನು ಮಣ್ಣೆಲ್ಲ ಹೊನ್ನೂ ಹೊನ್ನೂ !
ಅಧ್ಯಕ್ಷ ಹೇಳಿದನು ಈ ವೇಳೆ ಶೂನ್ಯ ಶೂನ್ಯ
ಸಿದ್ದು-ಕುಮಾರ ಹೇಳಿದರು ರೀ ನಮ್ಮದೈತೆ ಭವ್ಯ !


ದೊಡ್ಡ ಬಂಡೆ, ಶಿಲ್ಪಿಯೊಬ್ಬ ಚಾಣದಿಂದ ಚೇಣುಹಾಕುತ್ತಿದ್ದ. ಈತ ಸರಸರ ಅಲ್ಲಿಗೆ ಬಂದವನೇ " ಏನುಮಾಡುತ್ತಿದ್ದೀರಿ ಶಿಲ್ಪಿಗಳೇ ? " ಎಂದ

ಶಿಲ್ಪಿಯಿಂದ ಬಂದ ಉತ್ತರ " ಈ ಬಂಡೆಯಲ್ಲಿ ಬಂಧಿಸಲ್ಪಟ್ಟಿರುವ ದೇವತೆಯನ್ನು ಬಂಧಮುಕ್ತಗೊಳಿಸುತ್ತಿದ್ದೇನೆ "

ಆತ ಮುನ್ನಡೆದ. ಚಿತ್ರಕಾರನೊಬ್ಬನನ್ನು ಕಂಡ ಮತ್ತು ಕೇಳಿದ " ಏನುಮಾಡುತ್ತಿರುವಿರಿ ಚಿತ್ರಕಾರರೇ ?"

ಚಿತ್ರಕಾರ ಉತ್ತರಿಸಿದ " ಕವಿಯ ಕಲ್ಪನೆಗೊಂದು ಚಿತ್ತಾರದ ಆಕಾರ ಕೊಡುತ್ತಿದ್ದೇನೆ"

ಆತ ಮುನ್ನಡೆದು ವಿಧಾನಸೌಧದ ಎದುರು ಬಂದ. ಅಲ್ಲಿ ನಿಂತಿದ್ದ ರಾಜಕೀಯ ನಾಯಕರನ್ನು ಕುರಿತು ಕೇಳಿದ " ಏನು ಮಾಡುತ್ತಿರುವಿರಿ ರಾಜಕೀಯ ನಾಯಕರೇ ? "

ರಾಜಕಾರಣಿ ಉತ್ತರಿಸಿದ " ನಮ್ಮ ಮುಂದಿರುವ ಈ ಭವ್ಯ ಕಟ್ಟಡದಲ್ಲಿ ಕುದುರೆ ವ್ಯಾಪಾರಕ್ಕೆ ಹೊಸ ಶಾಶ್ವತ ಕೇಂದ್ರವನ್ನು ಇಲ್ಲಿ ಕಾಣುತ್ತಿದ್ದೇವೆ, ಶತಶತಮಾನಗಳ ಹಿಂದೆ ಆಗಬೇಕಾಗಿದ್ದ ಕೆಲಸ, ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳಾದ್ರೂ ಆಗಿರ್ಲಿಲ್ಲ, ಈಗ ಅದು ಒಂದು ರೂಪಕ್ಕೆ ಬರುತ್ತಿದೆ "


------------

ರಾಜನೊಬ್ಬ ಮಂತ್ರಿಗೆ ಮರದಮೇಲಿದ್ದ ಕಾಗೆಗಳನ್ನು ಎಣಿಸಿ ತಿಳಿಸಲು ಹೇಳಿದ್ದನ್ನು ನೆನೆಸಿಕೊಂಡ ಈತ ರಾಜಕೀಯ ನಾಯಕರೊಬ್ಬರ ಹತ್ತಿರ ಕೇಳಿದ " ಸ್ವಾಮೀ ನಿಮ್ಮ ಸಂಖ್ಯೆ ಎಷ್ಟು ? "

ರಾಜಕಾರಣಿ ಪಟ್ಟನೆ ಉತ್ತರಿಸಿದ " ನಮ್ಮದು ೧೨೦ "

ಈತ ಕೇಳಿದ " ಅದು ಹೇಗೆ ಹೇಳುತ್ತೀರಿ ?

" ಸದ್ಯಕ್ಕೆ ಎಣಿಸಿದಾಗ ಕಾಣುವುದು ೧೨೦, ಹತ್ತು-ಹನ್ನೆರಡು ಜಾಸ್ತಿಯಾದರೆ ಎಲ್ಲಿಂದಲೋ ಅವು ಬಂದಿವೆ ಎಂದರ್ಥ, ೧೬-೧೭ ಕಮ್ಮಿ ಇದ್ದರೆ ಎಲ್ಲಿಗೋ ಅವು ಹೋಗಿವೆ ಎಂದರ್ಥ "

-------------

ಎಲಿಜಬೆತ್ ಟೇಲರ್ ನ ಬಹುವಾಗ ನೆನೆಸಿಕೊಂಡ ಈತ ಯಾಕೋ ತಲೆತುರಿಕೊಳ್ಳುತ್ತಿದ್ದ. ಯಾರೋ ಪರಿಚಯದವರು ಕೇಳಿದರು " ಯಾಕಯ್ಯಾ ಬಹಳ ಸುಸ್ತಾಗಿದ್ದೀಯಾ ? "

" ಏನಿಲ್ಲಾ ಸ್ವಾಮೀ, ಎಲಿಜಬೆತ್ ಟೇಲರ್ ಒಬ್ಬಳೇ ಹಲವಾರು ಮದುವೆಯಾದಳು, ಮದುವೆಯಾಗಿ ತೊರೆದಿದ್ದ ಗಂಡನನ್ನೇ ಮತ್ತೆ ಮದುವೆಯಾದಳು. ನಮ್ಮಲ್ಲಿ ರಾಜಕೀಯ ಪಕ್ಷಗಳು ಅವಳ ಹಾದಿಯಲ್ಲೇ ಇವೆ. ಅವುಗಳಿಗೆ ಹಳೇ ಸ್ನೇಹಿತರು, ಒಟ್ಟಿಗೆ ಪಡೆದದ್ದು, ತಿಂದಿದ್ದು, ನುಂಗಿದ್ದು ಎಲ್ಲಾ ನೆನಪಿಗೆ ಬಂದಾಗ ಮತ್ತೆ ಒಂದಾಗಿಬಿಡುತ್ತವೆ "


---------------


ಈತ ನಡೆಯುತ್ತಾ ಹೋಗುವಾಗ ಮರಮೇಲೆ ಮಂಗವೊಂದು ಬಹಳೇ ಹಾರಾಡುತ್ತಿತ್ತು! ಕಲ್ಲೆಸೆದು ಓಡಿಸಲು ಹೋದರೆ ತನಗೇ ಏನಾದರೂ ಮಾಡಿಬಿಡಬಹುದೆಂಬ ಹೆದರಿಕೆಯಲ್ಲಿ ಮುನ್ನಡೆದುಹೋದ. ಮರಳಿಬರುವಾಗ ಮಂಗ ಮರ ಕೆಳಗೆ ನೆಲದಮೇಲೆ ಮಲಗಿತ್ತು! ಅದರ ಹಾರಾಟ ತಂತಾನೇ ನಿಂತುಹೋಗಿತ್ತು ಯಾಕೆಂದರೆ ಕಾಲು ಮುರಿದಂತಿತ್ತು. ಈತ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ತುಲನೆಮಾಡಿದ, ಬುದ್ಧಿವಂತ ಎನಿಸಿಕೊಂಡ ಮಂಗಗಳು ನೀರಲ್ಲಿನ ಮೀನಿನ ಹೆಜ್ಜೆಯ ಗುರುತು ಹೇಗೆ ಸಿಗದೋ ಹಾಗೇ, ಮುಸುಕಲ್ಲಿ ಗುದ್ದಿದ್ದು ನೋವಾದರೂ ಗಾಯ ಹೇಗೆ ಕಾಣದೋ ಹಾಗೇ, ಕಾನೂನಿನ ಚೌಕಟ್ಟಿಗೆ ಕಾಗದದಲ್ಲಿ ಸಿಗದಂತೇ ತಪ್ಪಿಸಿಕೊಂಡು ಹಾರಾಡಿ ಹಾರಾಡಿ ಇನ್ನೇನು ’ಎಣ್ಣೆ ಬರುವಾಗ ಗಾಣ ಮುರಿದಂತೇ’ ಆದಾಗ ಹತಾಶೆಯಿಂದ ಕುಳಿತಿದ್ದನ್ನು ನೆನೆಸಿಕೊಂಡ

------------------

ಮಗ್ಗಿ ಹೇಳು ಎಂದರು ಮೇಷ್ಟ್ರು. ಈತ ಹೇಳಿದ. ೧೨೧-೧೦೫+೧ ನ್ನು ಸೇರಿಸಿ ಒಂದೇ ನಿಮಿಷದಲ್ಲಿ ಹೇಳಿಬಿಟ್ಟ-೧೦೬. ಪಾಪ ಗಣಿತದಲ್ಲಿ ಪಕ್ಕಾ! ಆದರೇನು ಮಾಡೋದು " ಯಾಕಪ್ಪಾ ಅಷ್ಟು ಅವಸರ ಮಾಡಿದೆ" ಎಂದರೆ ಕುದುರೆ ಖರೀದಿಸಿದ ಜನ ಮಗ್ಗಿ ತಪ್ಪು ಎಂದು ಹೊಡೆಯಲು ಬಂದಿದ್ದರು, ಅದಕ್ಕೇ ಅನಿವಾರ್ಯವಾಗಿ ಹಾಗೆಮಾಡಿದೆ ಎನ್ನುವುದನ್ನೇ ಬೇರೇ ರೀತಿ ಹೇಳಿದ.

----------------

ಈತನಿಗೆ ಸಂಭ್ರಮವೂ ಇರಲಿಲ್ಲ, ಭ್ರಮೆಯೂ ಇರಲಿಲ್ಲ! ಯಾಕೆಂದರೆ ಅದರಲ್ಲಿ ಹುರುಳೇ ಇಲ್ಲ ಎಂಬುದು ಈತನ ಅನಿಸಿಕೆ. ಯಾರೋ ಹೇಳಿದರು ಮತ್ತೆ ರೆಕ್ಕೆ-ಪುಕ್ಕ ಬಲಿಯುತ್ತಿದೆ, ಕುದುರೆವ್ಯಾಪಾರಕ್ಕೆ ಕಣ ತಯಾರಾಗುತ್ತಿದೆ! --ಎಂದು. ಈತ ಆತನನ್ನು ನೋಡಿದ. ಆತ ಏನೂ ತಿನ್ನದ ಸೊಳ್ಳೆಯಂತಿದ್ದ, ಯಾವ ಥೆರಪಿಯಿಂದಲೂ ಆತ ರಿಪೇರಿ ಕಂಡಿರಲಿಲ್ಲ. ಯಾಕೋ ಒಂದು ಕೈ ನೋಡೋಣವೆನ್ನುವ ಮನಸ್ಸಾಯಿತು ಆತನಿಗೆ. ತಾನು ಬೇಹುಗಾರಿಕೆಯಲ್ಲಿ ಬಹಳಜಾಣ ಎಂದ! ಆಚೀಚೆ ಓಡಡತೊಡಗಿದ ನೋಡಿ--ಸೊಳ್ಳೆಯಂತಿದ್ದವ ತಿಂದೂ ತಿಂದೂ ’ಉಬ್ಬಿ’ಹೋದ !

----------------

ಈತ ಇನ್ನೇನು ಮನೆಗೆ ಹೊರಟಿದ್ದ. ದಾರಿಯಲ್ಲಿ ಯಾರದೋ ಆರ್ತನಾದ " ಕಾಪಾಡೀ ಕಾಪಾಡೀ ". ಹೋಗಿ ನೋಡುತ್ತಾನೆ. ’ವಿದಳನ’ ಕ್ರಿಯೆಯಲ್ಲೂ, ಜಯಸಿರಿ-ಜಯಲಕ್ಷ್ಮಿ ದೊರೆತಾಗ ’ವಿಲೀನ’ಕ್ರಿಯೆಗೂ ಬಹಳವಾಗಿ ತೊಡಗಿಕೊಂಡಿದ್ದ ಪ್ರಾಣಿ-ಗೋಸುಂಬೆ ಎಂಬ ನಾಮಾಂಕಿತ ಪಡೆದು ಖ್ಯಾತಿವೆತ್ತ ಮಹಾನುಭಾವ ಜೀವಿ! ಈತ ಕೇಳಿದ " ಯಾಕಪ್ಪಾ ಏನಾಯ್ತು ? "

ಬಂದ ಉತ್ತರ " ನಾವೆಲ್ಲಾ ಸುಮ್ನೇ ಹೋಗಿದ್ದಲ್ಲಾ, ನಮ್ನೆಲ್ಲಾ ರೌಡಿಗಳು ಬಂದು ಹೆದರಿಸಿ ಕರ್ಕೊಂಡು ಹೋದ್ರು "
ಈತ ಕೇಳಿದ " ಅಲ್ಲಯ್ಯಾ ಮತ್ತೆ ೪-೫ದಿನ ಅಲ್ಲಿ ಆರಾಮಾಗಿ ಮೇದ್ಕೊಂಡಿದ್ದೆ "

" ಇಲ್ಲಣ್ಣಾ, ನಾನೆಲ್ ನಿಂತ್ ಬೇಕಾರೂ ಹೇಳ್ತೀನಿ, ನಾನು ಪಕ್ಷವಿರೋಧಿ ಅಲ್ಲ "

ಈತನಿಗೆ ನಗಬೇಕೋ ಅಳಬೇಕೋ ಒಂದೂ ತಿಳೀಲಿಲ್ಲ! ಹಾಳಾಗ್ ಹೋಗ್ಲಿ ನಮ್ ಹಣೇಬರ ಎಂದ್ಕೋತಾ ಮನೆದಾರಿ ಹಿಡ್ದ.

15 comments:

  1. ಭಟ್ ಸರ್;ಅದ್ಭುತ ವಿಡಂಬನಾತ್ಮಕ ಬರವಣಿಗೆ.ಪ್ರಸಕ್ತ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ.

    ReplyDelete
  2. ಭಟ್ಟರೆ,
    ನಿಮ್ಮ ನಗೆಹನಿಗಳನ್ನು ಓದಿ ನಕ್ಕಿದ್ದೂ ನಕ್ಕಿದ್ದೇ. At the same time, ನಮ್ಮ ಶಾಸಕರು ಏನಾಗಿ ಹೋದರಲ್ಲಾ ಅಂತ ದುಃಖವೂ ಆಯಿತು!

    ReplyDelete
  3. ಮೊನ್ನೆ ನಡೆದ ಘಟನೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ ಸರ್.

    ReplyDelete
  4. ಭಟ್ಟರ ಅದ್ಭುತ ಸರಣಿ-ನಗೆಹನಿಗಳ ವರ್ಷಾಧಾರೆ.. ವ೦ದನೆಗಳು ಸರ್.

    ಅನ೦ತ್

    ReplyDelete
  5. ತುಂಬಾ ವ್ಯಂಗ್ಯದಲ್ಲಿ ಪ್ರಸ್ತುತ ರಾಜಕೀಯ ನಾಟಕ ವಿಡ೦ಬಿಸಿದ್ದಿರಾ...
    ಅಂದ ಹಾಗೇ ರಾಜಕಾರಣಿಗಳ ಮಾರಾಟವನ್ನ ಕುದುರೆ ಅಥವಾ ಕತ್ತೆ ವ್ಯಾಪಾರ ಅನ್ನದಿರಿ. ಅವೆರಡು ದುಡಿದು ತಿನ್ನುವ ಕಷ್ಟ ಜೀವಿಗಳು. ಪರವಾಲಂಬಿ ಮತ್ತು ಕೊಳೆತಿನಿಗಿಂತಲೂ ಕೀಳಾದ ಈ ಜೀವಿಗಳನ್ನು ರಾಜಕಾರಣಿ ಎಂಬ ಶಬ್ದ ಬಿಟ್ಟು ಬೇರೆ ಯಾವ ಶಬ್ದದಲ್ಲೂ ವಿಡ೦ಬಿಸಲಾಗದು.
    ಲೇಖನ ಅದ್ಭುತವಾಗಿದೆ.

    ReplyDelete
  6. ಕುದುರೆಲಾಯದಲ್ಲಿ ಅಣಕ ಚೆನ್ನಾಗಿದೆ. ಪ್ರಸ್ತುತ ವಿದ್ಯಮಾನಗಳ ಮೇಲೆ ವಿಡ೦ಬನಾತ್ಮಕವಾಗಿದೆ.

    ReplyDelete
  7. Bhatre....

    tumbaane chennaagide..

    yaakaadaroo ee rajakaranigalu kanoonina 'loop holes' galanne huduki bhrashtaraaguttaaro....!!!!????

    ReplyDelete
  8. ಗುರುಗಳೆ,
    ರಾಜಕೀಯ ’ನಾಯಿ’ಕರುಗಳೆಂಬ ಮಾಹಾನರ ಕೀಳು ವ್ಯಕ್ತಿತ್ವವನ್ನು ವಿಡಂಬನೆಯ ರೂಪದಲ್ಲಿ ಚೆನ್ನಾಗಿ ವರ್ಣಿಸಿದ್ದೀರಾ.........
    ಧನ್ಯವಾದಗಳು

    ReplyDelete
  9. ನಗೆಯ ಈ ಚಾಟಿ ಏಟು ತಲುಪಬೇಕಾದವರಿಗೆ ತಲುಪಿ ಚುರುಕು ಮುಟ್ಟಿಸಿದರೆ ಸಾಕು.ಅದುವೇ ಸಾರ್ಥಕ . ಬಾರುಕೋಲು ಏಟು ಚುರುಕಾಗಿದೆ.

    ReplyDelete
  10. ಹಾಸ್ಯದಲ್ಲಿ ಪ್ರಸ್ತುತ ವಿದ್ಯಾಮಾನಗಳ ವಿಡಂಬನೆ. ಚೆನ್ನಾಗಿದೆ ಭಟ್ ಸಾರ್..

    ಶ್ಯಾಮಲ

    ReplyDelete
  11. ಎಲ್ಲರಿಗೂ ಅನಂತ ಧನ್ಯವಾದಗಳು, ಅನಂತ ಕೃತಜ್ಞತೆಗಳು

    ReplyDelete
  12. Bhatre,

    nimma vidmbanaa baraha ishta aitu, nakku nakku saakaitu..

    ReplyDelete
  13. ವಿಡಂಬನೆ ಚೆನ್ನಾಗಿ ಮೂಡಿಬಂದಿದೆ. ಒಟ್ಟಿನಲ್ಲಿ "ನಮ್ಮ ಹಣೇಬರಹ"!!!

    ReplyDelete