ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 2, 2010

’ ರಾಜಕೀಯ ಸನ್ಯಾಸ ’


’ ರಾಜಕೀಯ ಸನ್ಯಾಸ ’

ನಮ್ಮ ದೇಶದಲ್ಲಿ ಫಸ್ಟ್ ಕ್ಲಾಸಿನವರು
ಡಾಕ್ಟರು-ಎಂಜಿನೀಯರು
ಹೀಗಾಗಿ ಅವರೆಲ್ಲಾ ಅವರವರ
ಕೆಲಸದಲ್ಲಿ ತೊಡಗಿ ಬ್ಯೂಸಿಯಾಗಿದ್ದಾರೆ
ಸೆಕೆಂಡ್ ಕ್ಲಾಸಿನವರು ಎಂಬಿಎ ಗಳು ಅವರು
ಫಸ್ಟ್ ಕ್ಲಾಸಿನವರನ್ನು ಕಂಟ್ರೋಲ್ ಮಾಡುತ್ತಾರೆ
ಥರ್ಡ್ ಕ್ಲಾಸಿನವರು ರಾಜಕಾರಣಿಗಳು
ಅವರು ಫಸ್ಟ್ ಮತ್ತು ಸೆಕೆಂಡ್ ಕ್ಲಾಸಿನವರನ್ನು
ಕಂಟ್ರೋಲ್ ಮಾಡುತ್ತಾರೆ
ಫೇಲ್ ಆದವರು ಅಂಡರ್ವರ್ಲ್ಡಿನಲ್ಲಿದ್ದು
ಎಲ್ಲರನ್ನೂ ಕಂಟ್ರೋಲ್ ಮಾಡುತ್ತಾರೆ
ಎಂಬ ಎಸ್ಸೆಮ್ಮೆಸ್ಸು ಬಂದ ಮರುಘಳಿಗೆಯೇ
ಹೊರಟು ಮಂತ್ರಿಮಾಲಿನ ಮೂರನೇ ಮಹಡಿಯ
ಮೂಲೆಯೊಂದನ್ನು ಹಿಡಿದು ತಪಸ್ಸಿಗೆ ಕುಳಿತುಬಿಟ್ಟೆ
ತಪೋಭಂಗಕ್ಕೆ ಹಲವರು ರಂಭೆ
ಮೇನಕೆ ತಿಲೋತ್ತಮೆಯರು ಬಂದರು
ಹಿಡಿಂಬೆ ಪೂತನಿಗಳಂತವರೂ ಬಂದರು
ರಾವಣ ಭಕಾಸುರ ಎಲ್ಲರ
ಏಷ್ಯಾದಲ್ಲೇ ಮರೆಯಲಾರದ
ಗುಡಾಣಹೊಟ್ಟೆಗಳನ್ನೂ ಕಂಡೆ
ಹತ್ತು ಮೀಟರ್ ಬಟ್ಟೆಯಲ್ಲೂ ಹೊಲಿದು
ಯಾವ ಆಕಾರದಿಂದಲೂ ಒದಗಿಸಿ ಮುಗಿಸಲಾರದ
ಅಕರಾಳ ವಿಕರಾಳ ಸ್ವರೂಪ ಕಂಡಾಗ
ಶ್ರೀಕೃಷ್ಣನ ನೆನಪಾಯ್ತು
ನನಗೆ ದಿವ್ಯಚಕ್ಷುವೇ ಬೇಕೇನೋ ಅಂತ !
ಮಾಲಿನ ಬಿಲ್ಡಿಂಗಿನ ಪಿಲ್ಲರುಗಳು ಕಣ್ಮುಂದೆ ಬಂದು
"ಸ್ವಾಮೀ" ಅಂದಹಾಗೆನಿಸಿ ಪಾಪ ಅನ್ನಿಸಿತು !
ಆದಷ್ಟೂ ಬೇಗ [ಪುಣ್ಯ?] ಒಂದಷ್ಟು ಕೋಟಿಮಾಡಿ
ನಿಮಗೆಲ್ಲಾ ಮೋಕ್ಷಕರುಣಿಸುತ್ತೇನೆಂದು ಭರವಸೆಗಳ
ಇಪ್ಪತ್ತು ಅಂಶಗಳ ಮಾಲಿಕೆಯನ್ನೇ ಕೊಟ್ಟೆ!

ತಪಸ್ಸಿನ ಮಧ್ಯೆ ಹಲವು ಅಪಶಕುನಗಳು
ಕಟ್ಟಾನ ಬಾಲಬಡುಕರು ಅಟ್ಟಿಸಿಕೊಂಡು ಬಂದಹಾಗೇ
ನಿತ್ಯಾನಂದ ಕಿವಿ ತೂತು ಬೀಳುವಂತೇ
ಗಹಗಹಿಸಿ ನಕ್ಕಹಾಗೇ !
ರೇಣುಕನ ವ್ಯಾಯಾಮ ಬೇಳೂರಿನ ಊಳು
ಹಾಲಪ್ಪನ ತುಪ್ಪದ ರಂಪ
ಸಂಪಂಗಿಯ ಘಮಘಮ ಘಾಟುಪರಿಮಳ
ಲಿಂಬೆಹುಳಿ ಉಪ್ಪು ಖಾರ ಎಲ್ಲಾ ತೆಗೆದಮೇಲೆ
ಮೊಳೆ ತಂತಿ ಫೆವಿಕಾಲು ಸುತ್ತಿಗೆ ಇಟ್ಟುಕೊಂಡು
ಡಾ| ಯಡ್ಯೂರಣ್ಣ ಖುರ್ಚಿ ರಿಪೇರಿಮಾಡುತ್ತಿರುವ ಹಾಗೆ
ಯಾರೋ ಮೈಸೂರಿಂದ ಕೂಗುತ್ತಿದ್ದರು !
ಇನ್ನಾರೋ ಬಸ್ಸಿಗೆ ಕಲ್ಲು ತೂರಲು ಹೇಳಿ
ತನ್ನ ಕಸುವನ್ನು ಮೆರೆಯುತ್ತಿದ್ದರು
ಮತ್ಯಾರೋ ಬೆಂಕಿ ಹಚ್ಚಿ ಅಮೇಲೆ ನೋಡುವಾ ಅಂದರು !
ಬಲಗಡೆಯಿಂದ ರಾಜಕೀಯದ ಕರಿಬೆಕ್ಕು
ಎಡಕ್ಕೆ ಹೋಗಿ ಎಡವಿಬಿದ್ದಹಾಗೇ !
ಬಡವರ ತಲೆಯನ್ನೆಲ್ಲಾ ನುಣ್ಣಗೆ ಬೋಳಿಸಿ
ಡಾಮರು ಬಳಿದ ಹಾಗೇ !
ಛೇ, ಎಂಥೆಂಥಾ ಕೆಟ್ಟ ಶಕುನಗಳು
ತುಪ್ಪದ ದೀಪಹಚ್ಚಿದರೂ ಇಲ್ಲ, ಕೈಮುಗಿದರೂ ಅಲ್ಲ
ಕಾಲಿಗೆರಗಿ ಬೇಡಲೂ ಸಲ್ಲ ಮತ್ತಿನ್ನೇನು ಮಾಡಲಿ ?

ಪ್ರಯತ್ನಿಸುತ್ತಲೇ ಇದ್ದೆ
ಫಲಾಫಲ ಭವಂತನಿಗೆ ಬಿಟ್ಟಿದ್ದು !
ತಪಸ್ಸು ಮಾಡುವುದು ಮಾಡುವುದೇ.
ಅದೂ ಕುಳಿತದ್ದು ಮಂತ್ರಿಮಾಲೆಂಬ ಜನಾರಣ್ಯದಲ್ಲಿ !
ಅನೇಕ ’ಸಿದ್ಧಪುರುಷರು’ ಸಾಧನೆಗೈದ
ಏಷ್ಯಾದಲ್ಲೇ ಮೊದಲಸ್ಥಾನವೆಂದು
ತಾವೇ ಘೋಷಿಸಿಕೊಂಡ ದಿವ್ಯಕ್ಷೇತ್ರ !
ಬರೋಬ್ಬರಿ ೩ ತಾಸು ಜಪಮಾಡಿದ್ದೇನೆ!
ಕಲಿಯುಗದಲ್ಲಿ ’ದರ್ಶನ’ವೆಲ್ಲ ಬೇಗನೇ!
ಬರಿದೇ ಈ ಮೂಲೆ ಹಿಡಿದು ಕುಂತರೆ ಆಗದು
ಎಂಬ ಜ್ಞಾನೋದಯವಾಗುತ್ತಿದ್ದಂತೆಯೇ
ನನಗೆ ’ಸಾಕ್ಷಾತ್ಕಾರ’ವಾಗಿದೆಯೆಂದು ಹೇಳಿ ಕಳಿಸಿದಾಗ
[ಡಾ|| ?]ಕುಮಾರಣ್ಣ [ನಮ್ಮನ್ನು]ಸ್ವಾಮಿಗಳನ್ನು ನೋಡಲು
ಡೀನೋಟಿಫೈ ಮಾಡಿರುವ ದಾಖಲೆಗಳ
ಆರತಿ ತಟ್ಟೆಹಿಡಿದು ಬಂದಿದ್ದ!
ಸ್ವೀಕರಿಸಿ ಅವರನ್ನೆಲ್ಲಾ ಹರಸಿ
ನಾನಿನ್ನು ಇಲ್ಲಿದ್ದಿದ್ದು ಸಾಕು
ಭಕ್ತರಾದ ನೀವೆಲ್ಲಾ ನನ್ನನ್ನು
ಇಷ್ಟೊಂದು ಪ್ರೀತಿಸುತ್ತಿರುವಾಗ
ನಿಮ್ಮ ’ಕೈ’ ’ಕಮಲ’ ’ದಳ’ಗಳನ್ನು ಅರ್ಪಿಸುತ್ತಿರುವಾಗ
ನಾನು ವಿಧಾನಸೌಧದಲ್ಲೇ
ತಪಸ್ಸಿಗೆ ಕೂರುತ್ತೇನೆ
ನಿಮ್ಮೆಲ್ಲರ ಕಷ್ಟಗಳನ್ನೂ ನಿವಾರಿಸಿ
ತನ್ಮೂಲಕ ನಾನೂ ’ಕೋಟಿ- ಜನ್ಮ’ದ ಫಲವನ್ನ
ಪಡೆಯುತ್ತೇನೆ ಎಂದು ಹೊರಟೆ!

12 comments:

  1. ಭಟ್ಟರೇ,
    ವಿಡಂಬನೆ ಚೆನ್ನಾಗಿದೆ. ಇಂದು ಬೆಳಿಗ್ಗೆ ಅಯೋಧ್ಯ ವಿಷಯವಾಗಿ ಒಂದು ಪುಟ್ಟಭಾಷಣ ಮಾಡುವ ಅವಕಾಶವಿತ್ತು.ಮನದಾಳದಿಂದ ನಾನು ಹೇಳಿದ್ದಿಷ್ಟೆ " ಶಿವನನ್ನು ಪೂಜೆ ಮಾಡು ಮಾಡುತ್ತಾ ಶಿವನೇ ಆಗಬೇಕೆನ್ನುವಂತೆ ರಾಮನ ಚಳುವಳಿ ಮಾಡುತ್ತಾ ಮಾಡುತ್ತಾ ರಾಮರೇ ಆಗಬೇಕಿತ್ತು ಹಾಗಾಗಲಿಲ್ಲ. ಇನ್ನಾದರೂ ಮರ್ಯಾದಾ ಪುರುಶೋತ್ತಮನ ಗುಣಗಳಲ್ಲಿ ಕೆಲವನ್ನಾದರೂ ಮೈಗೂಡಿಸಿಕೊಳ್ಳೋಣ". ಈ ರಾಜಕಾರಣಿಗಳಿಗೆ ಈ ಪಾಠ ಮಾಡುವವರಾರು?

    ReplyDelete
  2. ಇದು ತೀವ್ರ ವಿಡಂಬನೆ!

    ReplyDelete
  3. ಸಕಾಲಿಕವಾಗಿದೆ. ನಿಮಗೆ ಬೆ೦ಗಳೂರು ನಗರದ ಆಯಕಟ್ಟಿನ ಜಾಗದಲ್ಲಿ "ಜಿ" ಕೆಟಗರಿ ಸೈಟು ಕೊಡಿಸೋಣ. "ಕೋಟಿ" ಫಲ ನನಗೂ ಸ್ವಲ್ಪ ಕರುಣಿಸಿ, ಕೃತಾರ್ಥನಾಗುವೆ.

    ReplyDelete
  4. ಚೆನ್ನಾಗಿದೆ ಭಟ್ ಸಾರ್.....

    ಶ್ಯಾಮಲ

    ReplyDelete
  5. ತೀಕ್ಷ್ನಸಾಧ್ಯ ವಿಡಂಬನೆ. ಆದರು ಮೂದೇವಿಗಳಿಗೆ ತುಂಬಾ ಕಡಿಮಿಯೇ ಆಯಿತು ಅವರ ಯೋಗ್ಯತೆಗೆ...

    ReplyDelete
  6. ರಾಜಕೀಯ ವಿಡ೦ಬನೆ ಸೊಗಸಾಗಿ ಮೂಡಿ ಬ೦ದಿದೆ.

    ಶುಭಾಶಯಗಳು
    ಅನ೦ತ್

    ReplyDelete
  7. ಎಲ್ಲರಿಗೂ ನಮನಗಳು, ಹೊಸದಾಗಿ ಲಿಂಕಿಸಿಕೊಂಡ ಚಿನ್ಮಯ್ ಅವರಿಗೆ ಸ್ವಾಗತ ಮತ್ತು ನಮನ

    ReplyDelete
  8. ನಮ್ಮದು ಪ್ರಜಾ-ಸತ್ತೆ! ದೇಶ. 'ಮೂರೂ ಬಿಟ್ಟವರು ಊರಿಗೆ ದೊಡ್ಡವರು'- ಅವರನ್ನು ದೊಡ್ಡವರನ್ನಾಗಿ ಮಾಡಿರುವ ನಾವು.... ಚಿಗುರಲ್ಲಿ ಮರೆತ ನಾವು ಈಗ ಹೆಮ್ಮರವಾಗಿರುವ ಈ ವಿಷವೃಕ್ಷದ ನೆರಳಿನಲ್ಲಿಯೇ ಬಾಳಬೇಕಾಗಿದೆ. ಈ 'ವಿಷವರ್ತುಲ' ವನ್ನು ಭೇದಿಸುವುದು ಸುಲಭಸಾಧ್ಯವಲ್ಲ. ವಿಷಯ ಪ್ರಸ್ತುತಿ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.

    ReplyDelete
  9. ನೋಡೀ ಸ್ವಾಮೀ ನಾವಿರೋದೇ ಹೀಗೆ ! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete