ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, September 27, 2010

ಅದಮ್ಯ ಚೇತನಗಳು





ಅದಮ್ಯ ಚೇತನಗಳು

ಮಂಗಳದ ಭಾರತದ ಅಂಗಳದಿ ಬಹುಜನರು
ತಿಂಗಳು-ವರ್ಷಗಳು ನಡೆಸಿ ಹೋರಾಟ
ಅಂಗಾಂಗ ಕಳೆದರೂ ಪ್ರಾಣವನೆ ತೆತ್ತರೂ
ಸಂಘದಲಿ ನಡೆಸಿದರು ಬಹಳ ಸೆಣಸಾಟ

ನನ್ನ ಭಾರತಕಾಗಿ ದುಡಿದವರ ನೆನೆವುದಕೆ
ಅನ್ನವನು ಉಂಬಾಗ ಸರಿಸಮಯವಾಯ್ತು !
ಮುನ್ನ ಸ್ವಾತಂತ್ರ್ಯ ದೊರಕಿಸಲೆಂದು ಮಡಿದವರ
ಚೆನ್ನಾಗಿ ಸ್ಮರಿಸುವೊಲು ಮನ ಸಿದ್ಧವಾಯ್ತು

ನನೆಪಿನಾ ಮೂಟೆಯಲಿ ನಾ ತಿಳಿದು ಓದಿರುವ
ದಿನಪಬೆಳಗಿದ ರೀತಿ ಬದುಕಿದಾ ಜನರ
ಒನಪು ಒಯ್ಯಾರದಲಿ ಬದುಕಿತಿಹ ನಮ್ಮನ್ನು
ನುಣುಪಾದ ಬಾಳ್ವೆ ಬಾಳಗೊಟ್ಟವರ

ಗಲ್ಲಿಗೇರುತ ಕೂಗಿ ಭಾರತದ ಹೆಸರನ್ನು
ಅಲ್ಲಿ ಪ್ರಾಣವ ತೆತ್ತ ಮಂಗಲ ಪಾಂಡೆ
ಕಲ್ಲುಮನಸಿನ ಆಂಗ್ಲರಿಗೆ ಕಠಿಣ ದಿನಗಳನು
ನಿಲ್ಲಿಸದೇ ಮುಂದಿಟ್ಟನಾ ಭಗತ್ ಸಿಂಗ

ರಾಣಿ ಲಕ್ಷ್ಮೀಬಾಯಿ ಪ್ರಾಣಕ್ಕೆ ಭಯಪಡದೆ
ಜಾಣೆಯಾಗಿದ್ದು ಸೆಣಸಿದಳು ಬಹುದಿನದಿ
ಕಾಣಿಸದ ಕೈಗಳು ಹತ್ತಾರು ಸಾವಿರವು
ಬಾಣಬಿಟ್ಟೆಡೆಗೆಲ್ಲ ಜೈಕಾರ ಕೇಳಿದವು

ಅಗೋ ನನ್ನ ಭಾರತವು ನಿಂತಿಹುದು ಶಾಶ್ವತದಿ
ಸಗರಪುತ್ರನು ತಂದ ಗಂಗೆಯನು ಧರಿಸಿ
ಮಿಗಿಲುಂಟೆ ಜಗದಿ ನನ್ನದೇಶಕೆ ಇನ್ನು ?
ಬಗೆಬಗೆಯಲೊಂದಿಪೆನು ತಾಯರೂಪವನು

16 comments:

  1. ಕವನದ ಆಶಯ ಸಕಾಲಿಕವಾಗಿದೆ, ಭಗತಸಿ೦ಹರನ್ನು ನಾವೆಲ್ಲಾ ಮರೆಯುತ್ತಿದ್ದೀ ವೇನೋ ಎಂದೆನಿಸಿತು. ಸರಕಾರಕ್ಕೆ ಅವರನ್ನು ನೆನೆಯಲು, ಅವರ ಜನ್ಮ ದಿನ ಆಚರಿಸಲೋ ಅದೇನೋ ಪೂರ್ವಾಗ್ರಹ. ಮು೦ದಿನ ಪೀಳಿಗೆಗೆ ಇ೦ತಹ ಮಹನೀಯರು ಮರೆತೋ ಹೋಗಬಾರದು ಅಲ್ವೇ ?

    ReplyDelete
  2. ಭಗತ್ ಸಿಂಗರ ಜನ್ಮದಿನದ ಈ ಸಮಯದಲ್ಲಿ ಕಾವ್ಯ ರಸಧಾರೆ ಹರಿಸಿ ಮಹಾನ್ ಚೇತನಕ್ಕೆ ನಮಿಸಿದ ಪರಿ ಅತೀ ಸುಂದರ.
    ವಂದನೆಗಳು ನಿಮಗೆ ಗುರುಗಳೆ.

    ReplyDelete
  3. sir nimma ಅದಮ್ಯ ಚೇತನಗಳು kavanada molaka bhagat singarava janma dinadandu... nammella veera chetanagalannu nenedu mattu namgu neneyalu echcharisida nimge vondanegalu sir...
    yavudo ondu jaati-mata darmada hesarinalli jayantigalannu madi, sarakari rajgalannu gosisi dombarata maaduva namam rajakaranigalu/sarakara inta mareyalagada adamya chetanagalannu mareyuttiruvudu ondu duradrustakara sir..

    nimmondige namma veera adamya chatanagalige shirabagi namisona...

    ReplyDelete
  4. ತುಂಬಾ ಚೆನ್ನಾಗಿ ಬರೆದಿದ್ದೀರಿ... ಸ್ವಾತಂತ್ರ್ಯ ಹೋರಾಟಗಾರರ ನೆನಪನ್ನು ಮರೆಯುತಿರುವ ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಈ ಮೂಲಕ ಅವರಿಗೆ ನಮಿಸೋಣ... ಜೈ ಹಿಂದ್... ವಂದನೆಗಳು...

    ReplyDelete
  5. ಸರ್‍, ಸ್ವಾತಂತ್ರ್‍ಯ ವೀರರ ಬಗೆಗಿನ ಕವನ ಸೊಗಸಾಗಿದೆ. ನಮ್ಮ ನಮನಗಳು.

    ReplyDelete
  6. ಭಟ್ಟರೆ,
    ಈ ಪುಣ್ಯಪುರುಷರ ನೆನಪನ್ನು ನಮಗೆ ತಂದುಕೊಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಗಳು.

    ReplyDelete
  7. ಭಟ್ ಸರ್,
    ಎಂದಿನಂತೆ ನಿಮ್ಮ ಕವನ ಸ್ಪೂರ್ತಿ ತುಂಬಿದೆ..... ದೇಶಭಕ್ತಿ ತುಂಬಿದ ಕವನದ ಆಶಯ ತುಂಬಾ ಒಳ್ಳೆಯದು.... ಧನ್ಯವಾದ ಸರ್...

    ನಿಮ್ಮ ಹಿಂದಿನ ಲೇಖನಕ್ಕೆ ಸಂಬಂಧಿಸಿದಂತೆ " ನಾವೆಲ್ಲಾ ಬ್ಲೊಗ್ ಬರೆಯೋದು ನಮ್ಮ ಖುಶಿಗೆ ಹೊರತು, ಹೊಟ್ಟೆಪಾಡಿಗಲ್ಲ..... ಅಕಸ್ಮಾತ್ ಯಾರಾದರು ನನ್ನ ಬರಹ ನೋಡಿ, ನಾನು ಸಿವಿಲ್ ಎಂಜಿನಿಯರ್ ಎಂದು ತಿಳಿದು ನನಗೆ ಕೆಲಸ ಕೊಡಲು ಬಂದರೆ ನಾನು ಬೇಡ ಎಂದರೆ ಅದು ಸರಿಯಲ್ಲ..... ಒಂದು ವೇಳೆ ನಾನು ಕೆಲಸ ಕಳೆದುಕೊಂಡು ಕುಳಿತರೆ, ಖಂಡಿತವಾಗಿ ಬಜ್ ನಲ್ಲಿ ಹಾಕುತ್ತೇನೆ..... ನಿಮ್ಮಂಥಹ ಸಹ್ರುದಯರು ನನಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡೇ ಮಾಡುತ್ತೀರಾ ಎನ್ನುವ ಆಶಯದೊಂದಿಗೆ..... ಹಾಗೆಯೆ, ನನಗೆ ಯಾರಾದರೂ ಕೆಲಸ ಕೊಟ್ಟರೆ ಅದು ಬರೀ ನಾನು ಬ್ಲೊಗ್ ಬರೆಯುತ್ತೇನೆ ಎಂದಲ್ಲ, ನನ್ನ ಬಗ್ಗೆ ಅವರು ವಿಷಯ ಕಲೆ ಹಾಕಿರುತ್ತಾರೆ, ನನ್ನ ಬಗ್ಗೆ ನಂಬಿಕೆ ಇದ್ದೇ ಕೆಲಸ ಕೊಡುತ್ತಾರೆ ಅಲ್ವಾ ಸರ್...... ನಮ್ಮ ಒಗ್ಗಟ್ಟು ಎಲ್ಲೂ ಸಿಗಲ್ಲ ಅಲ್ವಾ ಸರ್.... ಇಲ್ಲಿ ಗುಂಪುಗಾರಿಕೆ ಇದೆ ಎಂದರೆ ಯಾರು ನಂಬಲ್ಲ...ನನಗೆ ಅದರ ಅನುಭವವೂ ಆಗಿಲ್ಲ..... ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಖುಶಿಗಾಗಿ, ನಮ್ಮ ಗೆಳೆಯರ ಖುಶಿ ಹಂಚಿಕೊಳ್ಳೋಣ......

    ReplyDelete
  8. ನಮ ದೇಶಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳ ಕಥೆಯನ್ನು ನಮ್ಮ ಯುವಕರು ಓದುವಂತಾಗಬೇಕು. ಇಂದಿನ ಯುವ ಪೀಳಿಗೆಯ ಹಲವರು ಟಿ.ವಿ.ಮುಂದೆ, ನೆಟ್ ಮುಂದೆ ಕುಳಿತು ನೋಡುವ ದೃಶ್ಯಗಳು ಎಂತಹವೆಂದು ಎಲ್ಲರಿಗೂ ಗೊತ್ತು. ಅಂತವರನ್ನು ನಮ್ಮ ಸಮಾಜದ/ದೇಶದ ಕಡೆ ಆಕರ್ಶಿಸಲು ಏನಾದರೂ ಪ್ಲಾನ್ ಮಾಡಿ ಭಟ್ರೆ. ಒಂದು ಸಂತೋಷ ಇದೆ. ನಿಮ್ಮ ಬ್ಲಾಗ್ ಓದುಗರಲ್ಲಿ ಹಲವರು ಯುವಕರಿದ್ದಾರೆ.

    ReplyDelete
  9. ಭಗತ್ ಸಿಂಗರ ಜನ್ಮದಿನವನ್ನು ಕವನದ ಮೂಲಕ ನೆನಪಿಸಿದ್ದೀರಿ...ನಮ್ಮ ಇಂದಿನ ಯುವಕರೆಲ್ಲಾ ಈಗಿನ ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವಾಗ ಇದು ಸಕಾಲಿಕವೆನಿಸಿತು.

    ReplyDelete
  10. ಭಾರತಮಾತೆಯ ವೀರ ಪುತ್ರ/ಪುತ್ರಿಯರಿಗೆ ನನ್ನ ಭಾವನಮನಗಳು..

    ReplyDelete
  11. ಭಟ್ ಸಾರ್...
    ತುಂಬಾ ಚೆನ್ನಾಗಿದೆ. ಸಕಾಲಿಕ ಬರಹ. ನಾವೆಲ್ಲರೂ ಈ ವೀರರಿಗೆ ಅದೆಷ್ಟು ತಲೆಬಾಗಿದರೂ ಸಾಲದು ಅಲ್ವಾ..? ನನ್ನದೊಂದು ನಮನ ಈ ಮೂಲಕ... ಮನಸ್ಸು ಹೆಮ್ಮೆಯಿಂದ ತುಂಬಿತು.. ಧನ್ಯವಾದಗಳು ಸಾರ್

    ಶ್ಯಾಮಲ

    ReplyDelete
  12. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು

    ReplyDelete
  13. ಪ್ರಭುವಲ್ಯಾಪುರ್ ನಿಮಗೆ ಸ್ವಾಗತ ಹಾಗೂ ನಮನ

    ReplyDelete
  14. ಅದಮ್ಯಚೆತನಗಳಿಗೆ ನಿಮ್ಮೊಂದಿಗೆ ನಾವು ಸೇರಿ ಬಗೆಬಗೆಯೈ ವನ್ದಿಪುವೆವು ಜೊತೆಗೆ ಮಾತೆ ಭಾರತೀಗೆ.

    ReplyDelete
  15. ನಗುಮುಖದಿ ಎದೆಯೊಡ್ಡಿ
    ಆ ಸಾವಿನ ಕುಣಿಕೆಗೆ.....
    ಕೊಟ್ಟರು ನಮಗಿಂದು ಸ್ವಾತಂತ್ರ್ಯ ....

    ಆದರೆ ಅಳುಮುಖದಿ ಹಿಮ್ಮೆಟ್ಟಿ
    ಓಡಿ ಹೋಗುತಿರುವೆವು ನಮ್ಮದೇ ದೇಶದ ಸಮಸ್ಯೆಗಳಿಗೆ
    ಯಾಕೆ ಬೇಕಿತ್ತು ಈ ಸ್ವಾತಂತ್ರ್ಯ?

    ಸ್ವತಂತ್ರರು ಅವರು ಅಂದೂ ,ಎಂದೆಂದೂ
    ಪರಕೀಯರು ನಾವು ಧೈರ್ಯ , ಛಲ ಇಲ್ಲದಿರೆ
    ಇಂದು ...ಮುಂದು

    ReplyDelete
  16. Thanks to Mr Sitaram, Mr.Chinmay

    ReplyDelete