ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 9, 2010

ಎಲ್ಲಿಯ ಸಂಬಂಧ ?


ಚಿತ್ರ ಋಣ : ಅಂತರ್ಜಾಲ

ಎಲ್ಲಿಯ ಸಂಬಂಧ ?

ಮಾನವ ಜೀವನ ಭಾವನೆಗಳ ಸರ
ಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ

ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು

ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !

ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?

ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !

17 comments:

  1. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬರುತ್ತದೆ.ಆಧ್ಯಾತ್ಮಿಕ ಅನುಭೂತಿಯುಳ್ಳ ಉತ್ತಮ ಕವನ.ಧನ್ಯವಾದಗಳು.

    ReplyDelete
  2. ಧನ್ಯವಾದಗಳು ವೈದ್ಯ ಮಿತ್ರರೇ, ಈ ಮಾಲಿಕೆ ಅಧ್ಯಾತ್ಮದ ವಿಶ್ವಸ್ಥ ಸ್ಥಿತಿಯನ್ನು ಆಗಾಗ ಸಿಂಹಾವಲೋಕನ ಮಾಡಲು ಪೂರಕವಾಗಿರುತ್ತದೆ, ಇದು ಅದಕ್ಕೆಂದೇ ಮೀಸಲಿರುವುದರಿಂದಲೂ, ಚಿಂತನೆಗೆ ಆಹಾರವಾಗುವುದರಿಂದಲೂ ಇದನ್ನು 'ಚಿಂತನಶೀಲ ಕವನಗಳು' ಎಂದಿದ್ದೇನೆ, ತಮಗೆ ಧನ್ಯವಾದಗಳು

    ReplyDelete
  3. ಅವಲೋಕನ ಮಾಡಿಕೊಳ್ಳಲೇ ಬೇಕು. ಯಾವಾಗಲೂ ನಾನು, ನನ್ನವರು, ಹಣ,ಸುಖ ಎನ್ನುತ್ತಾ ಕಾಣದ ಸಿರಿಯ ಹಿಂದೆ ಓಡುವ ಮಾನವನಿಗೆ ಸಿಗುವುದು ಶೂನ್ಯ!ಸಾವು ಬೆನ್ನು ಹತ್ತಿ ಬಂದರೂ ಸತ್ಯ ಅರಿಯುವುದೇ ಇಲ್ಲ!
    ಆಲೋಚನಾಶೀಲ ಬರಹ,

    ReplyDelete
  4. ಎಲ್ಲವನ್ನೂ ಅರಿತು ಅದರಿಂದ ತಪ್ಪಿಸಿಕೊಳ್ಳಲಾಗದ ಬಂಧನ ಈ ಬದುಕು ಅಲ್ಲವೇ ? ಎಂತಹಾ ವಿಪರ್ಯಾಸ ನೋಡಿ. ಧನ್ಯವಾದಗಳು ಶ್ರೀ ಪ್ರವೀಣ್

    ReplyDelete
  5. ಚಿಂತನಕ್ಕೆ ಹಚ್ಚುವ ನಿಮ್ಮ ಚಿಂತನಶೀಲ ಕವನ ಚೆನ್ನಾಗಿದೆ ಸಾರ್. ನಿಜ ಆತ್ಮ ವಿಮರ್ಶೆ ಮಾಡಿಕೊಳ್ಳಲೇ ಬೇಕು ಎಲ್ಲರೂ... ಅರಿತೂ ಅರಿಯದಂತೆ ನಡೆಯುವುದೇ ಮಾನವನ ವಿಶೇಷತೆ ಅಲ್ವಾ ಸಾರ್. ಎಲ್ಲ ತಿಳಿದಿದ್ದರೂ, ಬಿಡಿಸಿಕೊಳ್ಳಲು ಹವಣಿಸುವ ಬದಲಿಗೆ, ಅದರಲ್ಲಿ ಇನ್ನೂ ಆಳಕ್ಕೆ ಮುಳುಗುವ ಕಡೆಗೇ ವಾಲುತ್ತೇವೆ. ಇದು ವಿಪರ್ಯಾಸ. ಇಷ್ಟವಾಯಿತು ಸಾರ್...

    ಶ್ಯಾಮಲ

    ReplyDelete
  6. ತತ್ವಜ್ಞಾನವನ್ನು ಎಷ್ಟು ಸರಳ,ಸುಂದರ ಕನ್ನಡದಲ್ಲಿ ಹೇಳಿದ್ದೀರಲ್ಲ!

    ReplyDelete
  7. * ಶ್ಯಾಮಲ ಮೇಡಂ, ಆಧ್ಯಾತ್ಮ ಅನುಭವಿಸಿದಿರೇ ? ಧನ್ಯವಾದಗಳು

    * ಶ್ರೀ ಸುನಾಥರೇ, ತಮಗೂ ಹಿತವೆನಿಸಿತೇ? ನಮಸ್ಕಾರ

    ReplyDelete
  8. ಅದ್ಯಾತ್ಮಿಕ ಲೇಪನದ ಸುಂದರ ಕವನ .. ಕೊನೆಯ ಸಾಲುಗಳ೦ತು ತುಂಬಾನೇ ಇಷ್ಟವಾಯ್ತು ಸರ್ ..

    ReplyDelete
  9. tumbaa sogasaagide kavana...... nijakkoo chintanege hacchuva kavana..... dhanyavaada sir...

    ReplyDelete
  10. ತತ್ವಜ್ಞಾನವನ್ನು ಸರಳ ಸು೦ದರ ಭಾಷೆಯಲ್ಲಿ ಸಾದರ ಪಡಿಸಿದ್ದೀರಿ, ಚೆನ್ನಾಗಿದೆ

    ReplyDelete
  11. ಆತ್ಮಾವಲೋಕನ ಆಧ್ಯಾತ್ಮ ಚಿಂತನ ಸರಳ ಬರಹದಲ್ಲಿ! ಚೆನ್ನಾಗಿದೆ.

    ReplyDelete
  12. ಸರ್
    ಕೆಳಗಿನ ಸಾಲುಗಳು
    ''ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
    ಬಂಧನ ಮರೆತು ಮೆರೆಯುವೆವು
    ಸಂದುವೆವಲ್ಲಿ ಬರಿಮೈಯ್ಯಲ್ಲಿ
    ಅಂದಿಗೆ ಬಿಡುಗಡೆ ಕಾಣುವೆವು''

    ಎಷ್ಟು ಸತ್ಯ ಆಲ್ವಾ

    ತುಂಬಾ ಸುಂದರ ಕವನ

    ReplyDelete
  13. 'ಚಿಂತನಶೀಲ ಕವನಗಳು' ಮಾಲಿಕೆಯಲ್ಲಿ ಬ೦ದಿರುವ ಉತ್ತಮ ಕವನ ಭಟ್ ಸರ್.ಒಟ್ಟಿಗೆ ಇರಲೂ ಒಮ್ಮನಸಿಲ್ಲದ
    ಉತ್ತರ ರಹಿತ ಪ್ರಶ್ನೆಗಳು.. ಸಾಲುಗಳು ಇಷ್ಟವಾದವು.

    ಅನ೦ತ್

    ReplyDelete
  14. ಅಧ್ಯಾತ್ಮವನ್ನು ಕವನಿಸುವುದು ಸುಲಭದ ಮಾತಾಗುವುದಿಲ್ಲ, ಅದರ ಇತಿಮಿತಿಗಳು ಎಲ್ಲರಿಗೂ ರುಚಿಸುವಂತಹುದೂ ಅಲ್ಲ, ಹೇಗಾದರೂ ಮಾಡಿ ಆತ್ಮದ ಪರಿಕಲ್ಪನೆಯನ್ನು ನೀಡುವುದು ಕವನಗಳ ಉದ್ದೇಶ, ತಾವೆಲ್ಲಾ ಈ ಸರಳ ಕವನ ಓದಿದಿರಿ, ಖುಷಿ ಪಟ್ಟಿರಿ, ಅದೇ ಸ್ವಲ್ಪ ಒಗಟಾಗಿ ಬರೆದರೆ ಎರಡು ಜನ ಇಷ್ಟಪಡುವುದೂ ದೂರದ ಮಾತು. ಇರಲಿ, ಆತ್ಮ ಬೇರೆ ದೇಹ ಬೇರೆ-ದೇಹದ ಒಳಗಿರುವವರೆಗೆ ಒಂದು ಕುಟುಂಬಕ್ಕೆ ಚೌಕಟ್ಟಿಗೆ ಬಾಧ್ಯಸ್ಥವಾಗುವ ಆತ್ಮ ದೇಹ ತೊರೆದು ಆಚೆ ಬಂದಾಗ ಅದಕ್ಕೆ ಯಾವ ನಂಟೂ ಇಲ್ಲ ಎಂಬ ಅನುಭೂತಿ ಪಡೆಯುವುದು ಈ ಕವನದ ಕಲ್ಪನೆ. ಆತ್ಮದ ಬರುವಿಕೆ-ಹೋಗುವಿಕೆ ಇದೆಲ್ಲಾ ನಮಗೆ ಕಾಣುವ ವ್ಯವಾಹಾರವಲ್ಲ ಆದ್ರೆ ಮೊಬೈಲ್ ನಲ್ಲಿ ಸಿಮ್ಮು ಇರುವಂತೇ , ಗಣಕಯಂತ್ರದಲ್ಲಿ ತಂತ್ರಾಂಶ ಇರುವಂತೇ ಈ ದೇಹದೊಳಗೆ ಆತ್ಮ ಎಂಬುದು ಇದ್ದರೇನೆ ಅದು ಜೀವ! ಅದು ವ್ಯಕ್ತಿ , ಅದಿಲ್ಲಾ ಅದೊಂದು ಬರೇ ದೇಹ-ಬಾಡಿ, ಅಲ್ಲವೇ ?


    * ರಂಜಿತಾ ಮೇಡಂ ತಾವು ಕವನದ ಅನುಭೂತಿ ಪಡೆದಿರಿ ಎಂದಿರಿ, ಧನ್ಯವಾದ

    * ಶ್ರೀ ದಿನಕರ್, ಸೊಗಸಾಗಿದೆ ಎಂದಿರಿ-ತಮಗೂ ಕೃತಜ್ಞ

    * ಶ್ರೀ ಪರಾಂಜಪೆ, ತತ್ವಜ್ಞಾನವನ್ನು ಸರಳವಾಗಿ ಹೇಳಿದೆನೆಂದಿರಿ ತಮಗೆ ನಮನ

    * ಶ್ರೀ ಸೀತಾರಾಮ್, ಆತ್ಮಾವಲೋಕನ-ಚಿಂತನ ಸರಳ ಬರಹ ಎಂದಿರಿ, ನಮಸ್ಕಾರ

    * ಶ್ರೀ ಗುರುಮೂರ್ತಿ, ಕವನದ ಭಾಗವನ್ನೇ ಆಯ್ದು ಚೆನ್ನಾಗಿದೆ ಎಂದಿರಿ, ನೆನಕೆಗಳು

    * ಸುಗುಣ ಮೇಡಂ, ಯೋಚಿಸಬೇಕಾದ ಸಾಲುಗಳು ಎಂದಿರಿ, ತಮಗೆ ಆಭಾರಿ

    * ಶ್ರೀ ಅನಂತರಾಜ್, ತಾವೂ ಸಹಿತ ಕಾವ್ಯದ ಒಂದು ಭಾಗವನ್ನು ಇಷ್ಟಪಟ್ಟಿರಿ, ಇನ್ನೂ ಹಲವು ಕವನಗಳು ಈ ಮಾಲಿಕೆಯಲ್ಲಿ ಬರಲಿವೆ, ಈಗ ಬಂದಿರುವುದರಲ್ಲಿ ಚೆನ್ನಾಗಿದೆ ಎಂದಿರಿ-ಧನ್ಯವಾದಗಳು.

    ReplyDelete
  15. ಸ್ವ ವಿಮರ್ಶೆ ಮಾಡಿಕೊಳ್ಳಲು ಪ್ರೇರೇಪಿಸುವ ಸು೦ದರ ಕವನ. ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

    ReplyDelete
  16. ಧನ್ಯವಾದಗಳು ಪ್ರಭಾಮಣಿ ಮೇಡಂ, ಆಗಾಗ ಭೇಟಿ ನೀಡಿದ್ದೇನೆ, ಮತ್ತೆ ಖಂಡಿತ ಭೇಟಿನೀಡುತ್ತೇನೆ

    ReplyDelete