ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 7, 2010

ಒಲವಿನ ಸೆಳೆತ

ರಾಜಾರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ಒಲವಿನ ಸೆಳೆತ


ಗೆಳೆಯ ಕರೆದಿಹನೆಂದು ನಾ ಹೋದೆ ಜೊತೆಯಾಗಿ
ಗಿಳಿಯ ಮರಿ ಕೂತಿರುವ ಆ ಮನೆಯ ಕಡೆಗೆ
ಅಳಿವಿನಂಚಲಿ ಇರುವ ಹಲವು ಜೀವಿಗಳನ್ನು
ಬಳಗ ಸಹಿತದಿ ನೋಡಲೊಮ್ಮೆ ಆ ಬದಿಗೆ

ಲಿಂಬೂ ಪಾನಕದೊಡನೆ ಬಂದವಳ ನೋಡಿದೆನು
ಬೆಂಬಿಡದೆ ಅಚ್ಚಿಸಿತು ಮನವು ಚಿತ್ತಾರ
ತುಂಬಿ ಚೆಲ್ಲಿತು ಲೋಟದಲ್ಲಿ ಆ ಪಾನೀಯ
ಹಂಬಲಿಸಿ ಅವಳಿರವ ಅಲ್ಲಿ ಮನಸಾರ

ಕರೆಬಂದು ನಾ ತೆರಳಿ ಜಿಂಕೆ-ಕಡವೆಗಳನ್ನು
ಹೆರೆ ಬಿಟ್ಟ ಹಾವು ಮತ್ತೊಂದಷ್ಟು ಮೃಗವ
ಅರಿವಿರದೇ ಮನಸೆಲ್ಲ ಆಕೆಯೊಡನಾಡಿತ್ತು !
ಬರುವಿಕೆಯ ಬಯಸುತ್ತ ನಮ್ಮೂರ ಕಡೆಗೆ

ಹೆಸರು ಕೇಳಲು ಭಯವು ಉಸಿರುಗಟ್ಟಿದ ರೀತಿ
ಹಸುಳೆಗೆನ್ನೆಯ ಮೇಲೆ ಗುಳಿ ನಗಲು ತುಸುವೇ
ಹೆಸರುಕಾಳಿನ ಉಸ್ಲಿ ಮಜ್ಜಿಗೆಯ ನೀಡಿದಳು
ಕೆಸರಲರಳಿದ ಕಮಲ ಮುಗುದೆಯವಳು !

ಹೊಸಬನಾನೆಂಬಂತೆ ಒಂದಿನಿತು ತೋರ್ಗೊಡದೆ
ಗಸಗಸೆಯ ಪಾಯಸವ ಧಾರಾಳ ಬಡಿಸಿ
ಎಸಳಯಾಲಕ್ಕಿ ಪೂರಿತ ವಿವಿಧ ತಿನಿಸುಗಳ
ನಸುನಕ್ಕು ನೀಡಿದಳು ಕುಶಲದಲಿ ಬಹಳ

ಹೊರಟು ನಿಂತೆವು ನಾವು ಮನವು ಹೊರಟಿರಲಿಲ್ಲ!
ಕರಟ ತಟ್ಟಿದ ಸದ್ದು ತಿರುಗಿ ನಾ ನೋಡೆ
ಹರಟುವುದು ಹಲವಿತ್ತು ಇನ್ನೆಲ್ಲಿ ತರವಲ್ಲ
ಮುರುಟಿ ನಿಂತಲ್ಲೇ ಕಣ್ಮಿಂಚಿನಲಿ ಕರೆದೂ !


9 comments:

  1. ವಿ ಆರ್ ಭಟ್ ಸರ್........
    ರವಿವರ್ಮನ ಚಿತ್ರದಂತೆ ಚಂದದ ಕವನ........

    ReplyDelete
  2. ಚಂದದ ಚಿತ್ರ ಸೊಗಸಾದ ಕವಿತೆ..ಕೊನೆಯ ನಾಲ್ಕು ಸಾಲುಗಳು ತುಂಬಾ ಹಿಡಿಸಿತು.

    ReplyDelete
  3. ಪ್ರವೀಣ್ ಸರ್, ತಮ್ಮ ಅನಿಸಿಕೆಗೆ ಬಹಳ ಆಭಾರಿ

    ReplyDelete
  4. ಶಶಿ ಮೇಡಂ, ಹೆಣ್ಣು ಮಕ್ಕಳೇ ಹಾಗೇ ತಾನೇ, ಬೇಕಾದಾಗ ಅಲ್ಲೆಲ್ಲೋ ಮರೆಯಲ್ಲಿ ನಿಂತು ಯಾವುದೋ ನೆಪದಿಂದ ಕರೆದು ಮನಕೆದಕಿ ನೆನಪಿನ ಬೀಜಬಿತ್ತಿ ಕಳುಹಿಸು ಬಿಡುತ್ತಾರಲ್ಲವೇ? ಬಡಪಾಯಿ ಹುಡುಗ ಆತನ ಸ್ವಸ್ಥಾನಕ್ಕೆ ಹಿಂದುರಿಗಿದ ಮೇಲೆ ವಿರಹ-ಸಾವಿರ ತರಹ, ನಮಸ್ಕಾರ

    ReplyDelete
  5. ಭಟ್ಟರೆ,
    ಇದು ನಿಮಗಾದ ಅನುಭವವೆ?

    ReplyDelete
  6. * ಸುಗುಣ ಮೇಡಂ, ತಮಗೆ ಧನ್ಯವಾದಗಳು

    * ಶ್ರೀ ಸುಧೀಂಧ್ರರೇ, ಇದು ನನ್ನ ಸ್ವಾನುಭವವಲ್ಲ, ಕಲ್ಪನೆ ಅಷ್ಟೇ, ಕಾವ್ಯ ಹಲವು ಬಾರಿ ಕಲ್ಪನೆಯೇ ಆಗಿರುತ್ತದೆ!

    ಓದಿದ ಎಲ್ಲರಿಗೂ ಧನ್ಯವಾದಗಳು

    ReplyDelete
  7. ಚೆಂದದ ರಸಮಯ ಮೊದಲ ಕಣ್ಣೋಟದ ಆಕರ್ಷಣೆಯ ಮೇಲಿನ ಕವನ!

    ReplyDelete
  8. ಧನ್ಯವಾದಗಳು ಸರ್, ಅಂತೂ ವಾರದ ಮೇಲೆ ಯಾವುದನ್ನೂ ಬಿಡದೇ ಓದುತ್ತಿರುವಿರಿ,ನಿಮ್ಮ ತಾಳ್ಮೆಗೆ ಶರಣು

    ReplyDelete