ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 30, 2010

ಮುಂಗಾರಿನ ಕಹಳೆ


[ಚಿತ್ರ ಋಣ : ಅಂತರ್ಜಾಲ ]

ಮುಂಗಾರಿನ ಕಹಳೆ

ಮಳೆಯ ಹನಿ ಪಟಪಟನೆ ಭುವಿಯ ಅಂಗಣಕುದುರಿ
ನಳಿನ ಮುಖಿಗಾಗಿಹುದು ಮಂಗಳದ ಸ್ನಾನ
ಇಳೆಯ ಮಂಟಪದಲ್ಲಿ ಹೊಳೆವ ಮೂರುತಿಯಿರಿಸಿ
ಸುಳಿದು ಒಡೆದಂತಿಹುದು ತೆಂಗು ಫಲವನ್ನಾ

ನವಿಲು ನೋಡುತ ಮೋಡ ನರ್ತಿಸಿತು ನಲಿವಿನಲಿ
ಒಲವಿನಲಿ ಗರಿಗೆದರಿ ತೋರಿಸುತ ಬಣ್ಣ
ಉಲಿಯಿತದೋ ನಡು ನಡುವೆ ಸಂಗಾತಿಯನು ಕರೆದು
ಗೆಲುವ ಭಾವದಿ ಮಿಟುಕಿಸುತ ತನ್ನ ಕಣ್ಣ

ಕಪ್ಪೆಗಳು ಎಲ್ಲಿಂದಲೋ ಇರವ ತೋರ್ಗೊಡುತ
ಕುಪ್ಪಳಿಸಿ ನೆಗೆದಿಹವು ರಸ್ತೆಯುದ್ದಗಲ
ಒಪ್ಪಿಸುತ ಒದರಿಹವು ಗೊಟರು ಗೊಟರಿನಮಾತು
ಸಪ್ಪೆ ಬದುಕಲಿ ತಂತು ಜೀವಕಳೆಯನ್ನ

ಬಲಿದ ಮಾರುತ ತನ್ನ ಮಂದ ಧೋರಣೆ ತೊರೆದು
ವಿವಿಧ ದಿಸೆಯಲಿ ಹರಿಸಿ ಹರಿಹಾಯ್ದು ಬೀಸಿ
ಸವಿದು ನುಂಗಿದ ಜಗದ ಜಡತತ್ವಗಳನೆಲ್ಲ
ತಿವಿದು ಜನಶಕ್ತಿಯನು ಬೆಚ್ಚಿಸುತ ಕುಣಿಸಿ

ಬಟ್ಟಬಯಲಲಿ ಒಣಗಿ ಮುರುಟಿ ಸತ್ತಿಹ ಸಸ್ಯ
ತಟ್ಟನೇ ಮೈಕೊಡವಿ ಮೇಲೆದ್ದು ಚಿಗುರಿ
ಕಟ್ಟೆ-ಕೆರೆಗಳು ತುಂಬಿ ಮಗುಚಿ ನುಗ್ಗುತ ನೀರು
ಸೃಷ್ಟಿಯಲಿ ಹೊಸಹಬ್ಬ ಜೀವಸಂಕುಲಕೆ

ಏಡಿ ಎರೆಹುಳವೆದ್ದು ಜಾಡಿಸುತ ಮೈಮುರಿದು
ಓಡಿಹವು ಊರಗಲದುದ್ದ ಜಾಗದಲಿ
ಆಡಿಸುತ ಬಾಲವನು ಹೊಸೆದು ಮೈಯ್ಯನು ಮುದುಡಿ
ಬೀಡುಬಿಟ್ಟಿವೆ ಒಳಗೆ ನಾಯಿ-ಬೆಕ್ಕುಗಳು

ಭುಗಿಲೆದ್ದ ಆಗಸದಿ ನೇಸರನು ಮರೆಯಾಗಿ
ಹಗಲಿನಾ ಚಹರೆ ಕಳೆದೋಯ್ತು ಮೋಡದಲಿ
ಬಗಲೊಳಗೆ ಮಿಂಚು ಕರೆತಂದು ಗುಡುಗುಮ್ಮನನು
ಒಗೆದು ಕೆಡವಿದ ಶಬ್ಧ ಮಕ್ಕಳವು ಹೆದರಿ

9 comments:

  1. ಮಳೆಗಾಲದ ಆಗಮನದ ಈ ಸಮಯದಲ್ಲಿ ನಿಮ್ಮ ಕವನ ಅರ್ಥಪೂರ್ಣ.
    ಈ ಬಾರಿ ಒಳ್ಳೆ ಮಳೆಯಾಗಲೆಂದು ವರುಣದೆವನಿಗೆ ನಮಿಸೋಣ

    ReplyDelete
  2. tumba chennagi bardiddiri..
    Raaghu

    ReplyDelete
  3. ನಮ್ಮಲ್ಲಿ ಮಳೆ ಎಂದರೆ ನಾಲಕ್ಕು ತಿಂಗಳ ಗೃಹ ಬಂಧನ.ಬೇಂದ್ರೆ ಯವರ 'ಶ್ರಾವಣ'
    ಕವಿತೆ ಜ್ಞಾಪಕಕ್ಕೆ ಬರುತ್ತದೆ.ಬೆಂಗಳೂರಿನಲ್ಲೂ ಮಳೆ ಬಂದಾಗ ಆಗುವ ಅನಾಹುತಗಳು
    ಕಡಿಮೆಯೇನಲ್ಲ.ಕೆರೆಗಳನ್ನೆಲ್ಲಾ ಒತ್ತುವರಿ ಮಾಡಿ ಈಗೆ ಫಜೀತಿ ಅನುಭವಿಸ ಬೇಕಾಗಿದೆ.
    ಆದರೂ ಮಳೆ ಚೆನ್ನಾಗಿ ಬರಲಿ ,ಅಣೆಕಟ್ಟುಗಳು ತುಂಬಲಿ ,ಎಲ್ಲೆಡೆ ಸಂತೋಷ ,ಸಮೃದ್ಧಿ ಬರಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.ಕವನ ಚೆನ್ನಾಗಿದೆ.ಧನ್ಯವಾದಗಳು.

    ReplyDelete
  4. maleya aagamanada bagge tumbaa chennaagi abrediddiraa! Excellent!!

    ReplyDelete
  5. ಮಾನ್ಸೂನ್, ಗಾಗಿ,, ಒಳ್ಳೆಯ ಕವನ,,, ಚೆನ್ನಾಗಿ ಇದೆ....

    ReplyDelete
  6. ಮಳೆಗಾಲವೇ ಒಂದು ಸುಂದರ ಅನುಭವ, ಬದುಕಿನಲ್ಲಿ ಕಾಲಗಳ ಬದಲಾವಣೆ ಇರದಿದ್ದರೆ ಅದು ಬೇಸರಕ್ಕೆ ಕಾರಣವಾಗುತ್ತಿತ್ತೇನೋ ಹೀಗಾಗಿ ಸೃಷ್ಟಿಯೇ ಅದರ ಕರ್ತೃವಾಗಿ ಆಗಾಗ ೪ತಿಂಗಳಿಗೊಮ್ಮೆ ಕಾಲಬದಲಾಯಿಸುತ್ತ ನಡೆಯುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಸುತ್ತಲ ಪಶು-ಪಕ್ಷಿ-ಪರಿಸರ ನೀರನ್ನು ಸಾಕಷ್ಟು ಪಡೆದು ಖುಶಿಗೊಳ್ಳುವ ಕಾಲ,ಭೂರಮೆ ಹಸಿರುಟ್ಟು ನಗುವ ಕಾಲ, ಮಕ್ಕಳು ಮಳೆಯಲ್ಲಿ ನೆನೆಯುತ್ತ ಕೇಕೇ ಹಾಕುವ ಕಾಲ, ರೈತ ತನ್ನ ಬೆಳೆಯನ್ನು ಬೆಳೆಯಲು ತೊಡಗುವ ಕಾಲ. ಈ ಎಲ್ಲಾ ಕಾರಣಗಳಿಂದ ಹೀಗೆ ಮಳೆಯ ಬಗ್ಗೆ ಬರೆದೆ, ಪ್ರತಿಕ್ರಿಯಿಸಿದ ಸರ್ವಶ್ರೀ ಪ್ರವೀಣ್, ರಾಘು, ಡಾ|ಕೃಷ್ಣಮೂರ್ತಿ,ಸೀತಾರಮ್, ಗುರು ಮತ್ತು ಡಾ|ಗುರುಮೂರ್ತಿ ಎಲ್ಲರಿಗೂ ಇನ್ನೂ ಓದಲಿರುವ ಎಲ್ಲಾ ಮಿತ್ರರಿಗೂ ನಮನಗಳು.

    ReplyDelete
  7. ವಿ.ಆರ್.ಬಿ. ಸರ್, ಬಹಳ ರಸವತಾಗಿ, ಮೋಜು-ಮಜಗಳ ವರ್ಣನೆಯೂ ಸೇರಿದೆ ನಿಮ್ಮ ಮಾನಸೂನ್ ಕವನಕ್ಕೆ...

    ReplyDelete