ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, April 7, 2010

ಕಳೆದು ಹೋಯ್ತು ಮನ !!

ಎಲ್ಲೋ ಕಳೆದು ಹೋಗಿದೆ ಮನಸ್ಸು, ಶಹರದ ಕಾಂಕ್ರೀಟು ಕಾಡುಗಳನ್ನು ನೋಡಿ ಬೇಸತ್ತು ಹೆಣ್ಣೊಬ್ಬಳು ತವರುಮನಗೆ ನಡೆದಂತೆ, ಬಣ್ಣದ ಓಕುಳಿಯಾಡುವ ಮಕ್ಕಳು ಅದೆಷ್ಟೋ ಹೊತ್ತು ತಮ್ಮನ್ನು ತಾವೇ ಮರೆತು ಕುಣಿವಂತೆ, ಕಣ್ಣತುಂಬಿಸಿಕೊಂಡ ದುಂಬಿ ತಾ ಹೂದೋಟದಿ ಹಾರಾಡಿ ಮಕರಂದ ಭುಂಜಿಸುತ್ತ ತನ್ನ ಮರೆತಂತೆ, ಹಾಡುತಿರುವ ಗಾಯಕನೊಬ್ಬ ಹಾಡಿ ಹಾಡಿ ಆ ಸ್ವರಗಳ ಆಲಾಪದಲ್ಲಿ ತನ್ಮಯತೆ ಮೆರೆದಂತೆ, ನೃತ್ಯಗಾತಿಯೊಬ್ಬಳು ನೃತ್ಯದಲ್ಲಿ ಸುತ್ತಲ ಜನರ ಇರವ ಮರೆತಂತೆ, ಚಿಗುರಿದ ಮಾಮರವ ಕಂಡು ಕೋಗಿಲೆ ಅದರಲಿ ಅವಿತಂತೆ, ಕೆಸರಹೊಂಡದಲ್ಲಿ ಎಮ್ಮೆ ತಾ ಮಲಗಿ ಹಾಯಾಗಿ ಇದ್ದುಬಿಡುವಂತೆ, ಮಗುವೊಂದು ಅಜ್ಜಿಯ ಕಥೆಯಲ್ಲಿ ಚಂದ್ರಲೋಕಕ್ಕೆ ಹೋಗಿರುವಂತೆ, ಹೊಟ್ಟೆಬಾಕನೊಬ್ಬ ಎದುರಿಗೆ ಇಟ್ಟದ್ದನ್ನೆಲ್ಲಾ ಕಬಳಿಸುತ್ತಾ ಮಿಕ್ಕುಳಿದವರಿಗೆ ಸ್ವಲ್ಪ ಇರಲಿ ಎಂಬುದ ಮರೆತಂತೆ--ಕಳೆದು ಹೋಗಿದೆ ಮನಸ್ಸು. ನಮ್ಮಲ್ಲಿನ ಜಾತ್ರೆ-ಅಲ್ಲಿನ ರಥ ವೈಭವ, ಅಲ್ಲಿನ ನದಿ-ತೊರೆ-ಗಿರಿ-ಪರ್ವತ, ಅಲ್ಲಿನ ಹಸಿರುಟ್ಟ ಭೂಮಿ-ತೋಟ-ಗದ್ದೆ, ಅಲ್ಲಿನ ಹಳ್ಳಿಯ ಆಲೆಮನೆ ಸಂಭ್ರಮ, ಗ್ರಾಮೀಣ ಜನರ ನಾಟಕ ಪ್ರದರ್ಶನವೇ ಮೊದಲಾಗಿ ಹಲವು ಹತ್ತು ಅಂಶಗಳು ಮನಸ್ಸನ್ನು ಆವರಿಸುತ್ತವೆ, ಮದುವೆಯಾಗಿ ದೂರದೂರಲ್ಲಿ ಇರುವ ಹುಡುಗಿ ತನ್ನ ತಂದೆ-ತಾಯಿಯನ್ನು ಕಂಡಂತೆ, ಪಶು ಮೇವನ್ನು ಕಂಡಂತೆ ಮನಸ್ಸು ಸಂತಸಪಡುತ್ತದೆ;ಪ್ರಪುಲ್ಲವಾಗುತ್ತದೆ

|| ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ || ---- ಎಂದಂತೆ

ಆಗಾಗ ಮನಸು ತನ್ನ ಮೂಲ ಜಾಗಕ್ಕೆ, ತೌರುಮನೆಗೆ ಹೋಗಿಬಿಡುತ್ತದೆ. ಅಲ್ಲಿನ ಆ ಆಹ್ಲಾದಕರ ವಾತಾವರಣ, ಆ ಸ್ವಚ್ಛಗಾಳಿ-ನೀರು, ಅಲ್ಲಿನ ಜನರ ನಿಷ್ಕಪಟ ಮನಸ್ಸು-ಆಡಂಬರ ರಹಿತ ಬದುಕು, ಅಲ್ಲಿನ ಪ್ರಕೃತಿಯ ನಿತ್ಯನೂತನ ಸೊಬಗು, ಅಲ್ಲೀಗ ಆಡುತ್ತಿರುವ ಮಕ್ಕಳ ಆಟ ಈ ಎಲ್ಲಾ ವಿಷಯಗಳು ಸೇರಿ ಸೆಳೆದು ಸೆಳೆದು ಹಸುವಿನ ಮುಂದೆ ಹುಲ್ಲನ್ನು ಹಿಡಿದು ಕರೆದೊಯ್ದಂತೆ ಅಲ್ಲಿಗೆ ಎಳೆದೊಯ್ದುಬಿಡುತ್ತವೆ.ಕಿಡ್ನಾಪ್ ಮಾಡಿಬಿಡುತ್ತವೆ! ಅಲ್ಲೆಲ್ಲಿಯೋ ಅಂಡಲೆಯುವ ಮನಸ್ಸು ಅದೆಲ್ಲಿ ಹೋಯಿತು ಎಂದು ಹುಡುಕುವ ಪ್ರಮೇಯ ಬರುತ್ತದೆ.

ಪ್ರತಿಯೊಬ್ಬ ಜೀವಿಗೂ ಹೀಗೇ. ತನ್ನ ಜನ್ಮ ಭೂಮಿಯ ಬಗ್ಗೆ ಬಹಳ ಆಪ್ತತೆ ಇರುತ್ತದೆ, ಎಂದೂ ಹೋಗಲಾರದಷ್ಟು ದೂರದಲ್ಲಿದ್ದರೂ ಒಮ್ಮೆ ಅಲ್ಲಿಯ ನೆನಪಲ್ಲಾದರೂ ಕಾಲ ಕಳೆಯುವ ಕೆಲಸ ಇಷ್ಟವಾಗುತ್ತದೆ. ಹೊರದೇಶಗಳಲ್ಲಿ ಇರುವ ಜನರ ಸದಾ ಒಂದು ಕೊರತೆಯೆಂದರೆ ಬೇಕಷ್ಟು ದುಡಿದರೂ ಅವರ ಊರಲ್ಲಿ, ಅವರ ಜಾಗದಲ್ಲಿ ಕಳೆದಿದ್ದ ಸಮಯ ಅವರನ್ನು ಸದಾ ಕಾಡುತ್ತಿರುತ್ತದೆ. ಆಗಾಗ ಹೋಗಿಬರುವಾ ಅನ್ನಿಸಿದರೂ ಆಗುವಮಾತಲ್ಲವಾಗಿ ವರ್ಷಕ್ಕೊಮ್ಮೆಯೋ ಎರಡಾವರ್ತಿಯೋ ಬಂದು ಸ್ವಲ್ಪ ಕಾಲ ಇದ್ದು ಮರಳಿ ಹೋಗುತ್ತಾರೆ. ಇಂತಹ ಘಳಿಗೆಯೊಂದು ಮನಃಪಟಲದ ಮೇಲೆ ಸರಿದುಹೊದಾಗ ಮೂಡಿದ ಕವನ---




ಕಳೆದು ಹೋಯ್ತು ಮನ !!

ಕಳೆದು ಹೋಯ್ತು ನನ್ನ ಮನವು ಹುಡುಕ ಹೊರಟೆ ಅದರನು
ಉಳಿದು ಬಿಡುತ ಹಾಗದೆಲ್ಲೋ ಅವಿತುಕೊಳುವ ಪರಿಯನು



ಶಹರವಾಸಕೊಮ್ಮೆ ರೋಸಿ ಕಹಳೆಯೂದಿ ಕಿವಿಯೊಳು
ಪಹರೆಯಲ್ಲಿ ಕಾಯುತಿದ್ದೆ ಕಣ್ತಪ್ಪಿಸಿ ಭುವಿಯೊಳು

ಮಲೆನಾಡಿನ ಸಿರಿ ಸೊಬಗನು ದಿನವಹಿ ಅದು ನೆನೆಸುತ
ಅಲೆಯುತ್ತಿತ್ತು ಮೇವನರಸಿ ಹಸಿರು ತೋಟ ಹುಡುಕುತ




ಮತ್ತೆ ಕರಾವಳಿಯಲೊಮ್ಮೆ ಉತ್ತಮ ಜಾತ್ರೆಗಳೊಳು
ಮೆತ್ತನೆ ಬಿರಿದಾನಂದದಿ ಮಘಮಘಿಸುವ ರಥದೊಳು




ಆಲೆಗಾಣ ತಿರುಗುವಾಗ ಸ್ವರಗಳ ಆಲೈಸುತ
ಶಾಲೆಮಕ್ಕಳಾಟ ಕಂಡು ಅವರಜೊತೆಗೆ ಮಿಳಿಯುತ





ಕೇದಿಗೆಬನ ಜಾಜಿ ಜೂಜಿ ಮಲ್ಲಿಗೆ ಸಂಪಿಗೆಗಳು
ಮೇದಿನಿ ಅಘನಾಶಿನಿ ಶರಾವತಿಯ ತಟದೊಳು




ಅರಳಿನಿಂತ ಕೆಂದಾವರೆ ಕೆರೆಯನೊಮ್ಮೆ ಈಕ್ಷಿಸಿ
ಮರುಳಾಗುತ ಕಳೆಯಿತೆಲ್ಲೋ ಸೋತೆ ನಾನು ವೀಕ್ಷಿಸಿ

7 comments:

  1. ಪ್ರಕೃತಿಯ ಒಡನಾಟ ಮನುಷ್ಯನಿಗೆ ತನ್ನ ನೂರೆಂಟು ಚಿಂತೆಗಳನ್ನು ಕಳೆಯಲು ಒಂದು ವರದಾನವಿದ್ದಂತೆ .ಮಾನವ ನಿರ್ಮಿತ ನೂರೆಂಟು ಕಟ್ಟುಪಾಡು, ವಾದ ವಿವಾದ ,ವೈಮನಸ್ಸು ಈ ಎಲ್ಲವನ್ನು ಕಿತ್ತೆಸದು ಪ್ರಕೃತಿಯ ಮಡಿಲಲ್ಲಿ ಎಲ್ಲವನ್ನು ಮರೆತು ಮತ್ತೆ ಮಗುವಾಗುತ್ತಾನೆ !
    ಚಿತ್ರಗಳು ಮತ್ತು ಕವಿತೆ ಸೊಗಸಾಗಿವೆ.ಧನ್ಯವಾದಗಳು.

    ReplyDelete
  2. ನಿಸರ್ಗದ ಮಡಿಲಿಗೆ ಕೊಂಡೊಯ್ದ ನಿಮಗೆ ಶರಣು

    ReplyDelete
  3. ಸರ್
    ಎಷ್ಟು ಸುಂದರವಾಗಿ ಮನಮೋಹಕ ಫೋಟೋದೊಂದಿಗೆ ಕವನ
    ಬರೆದಿದ್ದಿರಾ
    ನನಗೆ ಊರಿನ ನೆನಪು ಬಂತು

    ReplyDelete
  4. ಸಹಜವಾಗಿ ನಮ್ಮ ಹುಟ್ಟಿ-ಬೆಳೆದ ಕ್ಷೇತ್ರ, ಆ ಊರು ಅದು ನಮಗೆ ಆಪ್ತವೇ, ಅದು ಹೇಗಿದ್ದರೂ ಅದು ನಮ್ಮೂರು ಎಂಬ ಅಭಿಮಾನ,ಆಸಕ್ತಿ, ಸಂತೋಷ, ಮಾಧ್ಯಮಗಳಲ್ಲಿ ನಮ್ಮೂರುಗಳ ಹೆಸರಿನಲ್ಲಿ ಏನಾದರೂ ಬಂದರೆ ಕಣ್ಣರಳುತ್ತದೆ, ಕಿವಿ ನಿಮಿರುತ್ತದೆ, ಯಾರೋ ನಮ್ಮ ಊರಲ್ಲಿ ಸಾಧನೆ ಮಾಡಿದರೆ ಅದು ನಮ್ಮದೇ ಸಾಧನೆ ಎಂಬಷ್ಟು ಖುಷಿಯಾಗುತ್ತದೆ. ರಾಜಕಾರಣದಲ್ಲಿ ಮುತ್ಸದ್ಧಿಯಾಗಿದ್ದ, ವಿಶ್ವದ ಬುದ್ಧಿವಂತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ದಿ| ರಾಮಕೃಷ್ಣ ಹೆಗಡೆಯವರು ಇದ್ದಾಗ ಬಹಳ ಜನ ಅವರು ನಮ್ಮೂರಿನವರೇ, ಅವರು ನಮ್ಮ ಪರಿಚಯದವರೇ, ಅವರು ನಮಗೆ ಬಹಳ ಹತ್ತಿರದವರೇ ಎಂದುಕೊಳ್ಳುವುದನ್ನು ಕೇಳಿದ್ದೆ. ಅವರ ಆ ಸಾಧನೆಯನ್ನು ಜನತೆ ಮೆಚ್ಚಿ ಅವ್ರು ಹುಟ್ಟಿದ ಊರಿಗೇ ಅವರೊಂದು ದೊಡ್ಡ ಗುರುತಾಗಿ ಮಾರ್ಪಟ್ಟಿದ್ದರು, ಅದರಂತೆ ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ ಇವರೆಲ್ಲ. ಹೀಗೆ ನಮ್ಮ ನಮ್ಮ ಊರಿಗೆ ನಾವಂತೂ ಏನೂ ಕೊಡಲಿಲ್ಲ,ಕೊನೇಪಕ್ಷ ಅಲ್ಲಿನ ಬದುಕನ್ನಾದರೂ ನೆನೆಯೋಣ ಎನಿಸಿ ಬರೆದೆ, ಪ್ರತಿಕ್ರಿಯಿಸಿದ ಸರ್ವಶ್ರೀ ಡಾ|ಕೃಷ್ಣಮೂರ್ತಿ, ಹರಿಹರಪುರ ಶ್ರೀಧರ್, ಸೀತಾರಾಮ್, ಡಾ| ಗುರುಮೂರ್ತಿ ಈ ಎಲ್ಲರಿಗೂ, ಓದಿದ-ಓದುವ-ಓದದ ಎಲ್ಲಾ ಮಿತ್ರರಿಗೂ ನಮನಗಳು

    ReplyDelete
  5. ಅತ್ಯುತ್ತಮ ಚಿತ್ರಗಳ ಜೊತೆಗೆ, ಅತ್ಯುತ್ತಮ ಕವನ ನೀಡಿದ ನಿಮಗೆ ಅಭಿನಂದನೆಗಳು.

    ReplyDelete
  6. ಧನ್ಯವಾದಗಳು ಸುನಾಥ್ ಸಾಹೇಬರಿಗೆ

    ReplyDelete