ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 27, 2010

ಮಗ ಹೇಳಿದ ನರಿಕಥೆ

ಮೊನ್ನೆ ಹರಿಕಥೆಯನ್ನೇನೋ ಕೇಳಿ ಬಿಟ್ಟಿರಿ ಆದರೆ ಹೊಸಕಾಲದ ನರಿಕಥೆ ನಿಮಗೆ ಗೊತ್ತೇ ? ಅದನ್ನು ಈಗಿನ ಮಕ್ಕಳ ಬಾಯಿಂದ ಕೇಳಿದರೇ ಸಂತೋಷ ! ನಮ್ಮ ಕಾಲಕ್ಕೇ ಮಕ್ಕಳ ಬುದ್ಧಿ ಅಂಟಿಕೊಂಡಿಲ್ಲ, ಅದು ವಿಕಸಿತವಾಗಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಇಂದಿನ ಮಕ್ಕಳು ಟಿವಿ ಮಾಧ್ಯಮದಲ್ಲಿ ನೋಡಿ ಅನೇಕ ಹೆಸರುಗಳನ್ನೂ, ಅನೇಕ ಕಾರ್ಯಕ್ರಮಗಳವೇಳೆಯನ್ನೋ ತಿಳಿದು ನೆನಪಿಟ್ಟುಕೊಂಡಿರುತ್ತಾರೆ. ನಾವು ಅವರಿಗೆ ಏನನ್ನೋ ಹೇಳಿದ್ದರೆ ಅವರ ಮನಸ್ಸು ಸೃಜನಶೀಲವಾಗಿ ಆ ವಿಷಯಗಳಿಗೆ ಮತ್ತೇನನ್ನೋ ತುಲನೆ ಮಾಡುತ್ತದೆ, ಕಲ್ಪನೆಯನ್ನು ಜೋಡಿಸಲು ಸಾಧ್ಯವಾದರೆ ಜೋಡಿಸುತ್ತದೆ. ನಮ್ಮ ಸುತ್ತಲ ಪರಿಸರ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂಬುದೂ ಕೂಡ ಗಹನವಾದ ವಿಚಾರ! ಹೀಗಾಗಿ ಪಾಲಕರೇ ಮಕ್ಕಳ ಮುಂದೆ ಯಾವ ದುಶ್ಚಟಗಳನ್ನು ಶುರುವಿಟ್ಟುಕೊಳ್ಳಬೇಡಿ. ಚಟಗಳೇ ಬೇಡ, ಒಂದೊಮ್ಮೆ ಇದ್ದರೂ ನಿಮ್ಮ ಚಟಗಳೆಲ್ಲ ಅವರ ಕಣ್ಣಿಗೆ ಕಾಣಿಸದಂತಿರಲಿ. ನಮ್ಮ ಕಾಲಕ್ಕಿದ್ದ ಪೆದ್ದು ನರಿ ಈ ಕಾಲದಲ್ಲಿಲ್ಲ ! ನರಿಗೂ ಬುಧ್ಧಿ ಬೆಳೆದಿದೆ , ಓದಿ ನಿಮಗೇ ಗೊತ್ತಾಗುತ್ತೆ ...............


ಮಗ ಹೇಳಿದ ನರಿಕಥೆ
[ಚಿತ್ರಗಳ ಋಣ : ಅಂತರ್ಜಾಲ ]

ಹೀಗೆ ತಿಂಗಳ ಹಿಂದಿನ ಒಂದು ಭಾನುವಾರ, ಸ್ವಲ್ಪ ಚಳಿ ಮಿಶ್ರಿತ ವಾತಾವರಣ. ನಾನು ಮಗನೊಟ್ಟಿಗೆ ಆಟವಾಡುತ್ತ ವಿರಮಿಸುತ್ತಿದ್ದೆ. ೪.೫ ವಯಸ್ಸಿನ ಅವನಿಗೆ ಈಗ ಕಥೆಯ ಗೀಳು. " ಅಪ್ಪಾ ಆ ಕಥೆ ಹೇಳು, ಈ ಕಥೆ ಹೇಳು " ಹೀಗೆ ಕಂಡರೆ ಬೆನ್ನುಹತ್ತುವುದು ಅಭ್ಯಾಸವಾಗಿಬಿಟ್ಟಿದೆ. ಹೀಗೇ ಮಲಗಿರುವಾಗ ಅವತ್ತೂ ಕೂಡ ಕಥೆಹೇಳುವ ಮಾತು ಬಂತು, ನೀನೇ ನನಗೆ ನರಿ ದ್ರಾಕ್ಷಿ ತಿಂದ ಕಥೆ ಹೇಳು ಅಂತ ಹಠಹಿಡಿದೆ. ಮೊದಲು ಆಗುವುದಿಲ್ಲ ಅಂತ ಕುಳಿತ ಆತ ನಂತರ ಹೇಳಲು ಶುರುಮಾಡಿದ--

" ಒಂದಾನೊಂದು ಕಾಲದಲ್ಲಿ ಒಂದು ನರಿ ಇತ್ತಂತೆ, ಅದು ಅಲ್ಲಿ ಇಲ್ಲಿ ಸುತ್ತಾಡುತ್ತ ಇರುವಾಗ ಅದಕ್ಕೆ ದ್ರಾಕ್ಷಿ ತಿನ್ನುವ ಮನಸ್ಸಾಯಿತಂತೆ. ಹಾಗೇ ಹುಡುಕುತ್ತ ಒಂದು ದ್ರಾಕ್ಷಿ ತೋಟವನ್ನು ಕಂಡಿತಂತೆ. ಅಲ್ಲಿ ತುಂಬಾ ದ್ರಾಕ್ಷಿಹಣ್ಣುಗಳು ಇದ್ದವಂತೆ. ಆದರೆ ಎತ್ತರದಲ್ಲಿ, ಚಪ್ಪರದ ಎತ್ತರಕ್ಕೆ, ಮರಕ್ಕೆ ಹಬ್ಬಿಸಿದ ಬಳ್ಳಿಗಳಲ್ಲಿ ಇದ್ದವಂತೆ. ಅದನ್ನು ತಿನ್ನಬೇಕೆಂದು ನರಿ ಹತ್ತಿರ ಹೋಯಿತಂತೆ. ಒಂದು ಸರ್ತಿ ಎತ್ತರಕ್ಕೆ ಜಿಗಿಯಿತು ...ಸಿಗಲಿಲ್ಲ ........ಎರಡು ಸರ್ತಿ ಜಿಗಿಯಿತು.......ಸಿಗಲಿಲ್ಲ....ಮೂರು ಸರ್ತಿ ಜಿಗಿಯಿತು ಸಿಗಲಿಲ್ಲ.............." ಎನ್ನುತ್ತಾ ಸ್ವಲ್ಪ ನಿಧಾನ ಮಾಡತೊಡಗಿದ.

" ಆಮೇಲೆ ? " ಕೇಳಿದೆ

" ಅಲ್ಲೇ ಹತ್ತಿರ ಒಂದುಕಡೆ ಏಣಿ ಇತ್ತಂತೆ, ಅದನ್ನು ತಂದು ನಿಧಾನಕ್ಕೆ ಸಾಚಿ ಇಟ್ಟುಕೊಂಡು ಹಣ್ಣು ಕೀಳಲು ಪ್ರಯತ್ನಿಸುವ ಯೋಚನೆ ಮಾಡಿತಂತೆ "

" ನರಿಗೆಲ್ಲ ಕೈ ಇರಲ್ಲಾ ಕಣೋ, ನರಿ ಹೇಗೋ ಏಣಿನೆಲ್ಲ ಎತ್ತಿ ಇಡತ್ತೆ ? "




" ಅಪ್ಪಾ, ಸ್ವಲ್ಪ ಇರು ಹೇಳ್ತೀನಿ, ಅದು ಹಾಗೆ ವಿಚಾರ ಮಾಡಿತ್ತು ಅಷ್ಟೇ......"



"ನಂತರ ಏನಾಯ್ತು ? "

" ಹತ್ತಿರದಲ್ಲಿ ತೋಟದ ಮಾಲಿ ಒಂದು ದೋಟಿ [ಜೋಟಿ-ಉದ್ದನೆಯ ಕೊಕ್ಕೆ ] ಇಟ್ಟಿದ್ನಂತೆ ಯಾಕೋ ಬೇಕು ಅಂತ, ಅದನ್ನು ತಂದು ದ್ರಾಕ್ಷಿ ಕೊಯ್ಯಲು ಪ್ರಯತ್ನಿಸಿತಂತೆ "

" ಮಗಾ, ಏನು ತಲೆಯೋ ನಿಂದು ಈಗ ಹೇಳಿಲ್ವೇನೋ ನರಿಗೆ ಕೈ ಇಲ್ಲ ಅದು ಏನನ್ನೂ ಎತ್ತಕ್ಕಾಗಲ್ಲಾ ಅಂತ, ಮತ್ತೆ ಅದು ಹೇಗೆ ದೋಟಿ ತಂತು ? "

" ಅಲ್ಲಲ್ಲ , ದೋಟಿ ತರುವ ಯೋಚನೆ ಮಾಡುತ್ತಿತ್ತು , ದೋಟಿಯನ್ನು ಎತ್ತಲು ಆಗ್ಲಿಲ್ಲ ಅದಕ್ಕೇ ಬೇಡಾ ಅಂತ ವಾಪಸ್ ದ್ರಾಕ್ಷಿ ಬಳ್ಳಿಯ ಹತ್ತಿರ ಬಂತು"

" ಮುಂದೆ ? "

" ಮತ್ತೆ ಜಿಗಿಯಿತು, ಒಂದು ಎರಡು....ಮೂರು, ಸುಮಾರು ಸರ್ತಿ ಜಿಗೀತು, ಜಿಗ್ದೂ ಜಿಗ್ದೂ ಸುಸ್ತಾಯ್ತಲ್ಲ , ಸ್ವಲ್ಪ ಹೊತ್ತು ಅಲ್ಲೇ ಕುಂತಿತ್ತು . ಆಮೇಲೆ ಅದಕ್ಕೆ ಏನೋ ನೆನಪಾಯ್ತು "

" ಏನು ನೆನಪಾಯ್ತಪ್ಪಾ ಅದಕ್ಕೆ ? "










" ದ್ರಾಕ್ಷಿ ಹಣ್ಣುಗಳಿಗೆ ಔಷಧಿ ಹೊಡೀತಾರಲ್ಲ, ಅದನ್ನ ತಿಂದರೆ ತುಂಬಾ ಹಾಳು, ಶರೀರಕ್ಕೆಲ್ಲ ವಿಷ ಸೇರ್ಬಿಡುತ್ತೆ. ಅದಕ್ಕೇ ಜಾಣ ನರಿ ದ್ರಾಕ್ಷಿ ತಿನ್ನುವುದೇ ಬೇಡಾ ಅಂತ ತೀರ್ಮಾನಮಾಡಿ ವಾಪಸ್ ಹೊರಟೇ ಹೋಯ್ತು ! "

















[ಅಪ್ಪ-ಮಗನ 'ನರಿಕಥಾ ಕಾಲಕ್ಷೇಪ' ವನ್ನು ಶ್ರದ್ಧಾಳುವಾಗಿ ಭಕ್ತಿಯಿಂದ ಆಲಿಸುತ್ತಿದ್ದ ನನ್ನ ಹೆಂಡತಿಗೆ ೧೫ ನಿಮಿಷಗಳ ಕಾಲ ನಗೆಹಬ್ಬವನ್ನು ತಂದ ಈ ಕಥೆಯಲ್ಲಿ ಮಧ್ಯೆ ಮಧ್ಯೆ ತಾನು ಹೇಳುತ್ತಿರುವುದು ತಪ್ಪಿದೆ ಅಂತ ಅರಿವಾದಾಗ ಅವನ ಎಳೆಯ-ಮುಗ್ಧ ಮುಖದ ಭಾವನೆಗಳು ಹೇಗಿರಬಹುದು ಎಂಬುದನ್ನು ನಿಮ್ಮ ಊಹೆಗೆ-ಕಲ್ಪನೆಗೆ ಬಿಡುತ್ತಿದ್ದೇನೆ, ಎಂಜಾಯ್ ಮಾಡಿದಿರಲ್ಲವೇ ? ]

4 comments:

  1. :-) thumba chennagide. EEgina makkalige buddi jasthi, avara alochana shakthi nammagaligintha thumba hecchagide. Nimma maganige nimma prothsaha hecchige sigali, avaninda innastu olleya kathegalu barali.

    ReplyDelete
  2. Nisha, Thanks, prayatna maaduttene.

    ReplyDelete
  3. very nice.
    He added his innovations in the story.
    my wishes to your son.

    ReplyDelete
  4. Thanks you Sir on his behalf , many a times i had rejected listening to his telling thinking that what he may tell, to utter my surprise it went on for several stories when added with his add-ups they become funny !

    ReplyDelete