ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 2, 2012

ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

 ಚಿತ್ರಋಣ: ಅಂತರ್ಜಾಲ

 ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

ಬದುಕಿನ ಮಜಲುಗಳಲ್ಲಿ ಘಟಿಸಬಹುದಾದ ಘಟನೆಗಳನ್ನು ಚಿತ್ರಗಳರೂಪದಲ್ಲಿ ಸೆರೆಹಿಡಿದಿಡುವ ಬಯಕೆ ಜನರಲ್ಲಿ ಇವತ್ತಿಗೂ ಇದೆ. ಆಗಿಹೋದ ಕಾಲ ಮರಳಿಬರುವುದಿಲ್ಲ; ನಡೆದುಹೋದ ಕಾರ್ಯ ಮತ್ತೆ ಜರುಗುವುದಿಲ್ಲ ಎಂಬ ಕಾರಣಕ್ಕಾಗಿ ಫೋಟೋಗ್ರಫಿ ಎಂಬ ಕುಶಲಕಲೆಯೊಂದು ಹುಟ್ಟಿಕೊಂಡಿತು.

ಕಾಲಘಟ್ಟವೊಂದರಲ್ಲಿ ವಿಜ್ಞಾನದ ಮುನ್ನಡೆ ಅಷ್ಟಾಗಿ ಇನ್ನೂ ಆಗಿರದಿದ್ದಾಗ ಕ್ಯಾಮೆರಾ ಎಂಬ ವಸ್ತುವೇ ಒಂದು ರೋಚಕ ಪರಿಕರವಾಗಿತ್ತು! ಪ್ರಪಂಚದ ದುಬಾರಿ ವಸ್ತುಗಳಲ್ಲಿ ಒಂದಾಗಿದ್ದ ಅದನ್ನು ಜನಸಾಮಾನ್ಯರು ಖರೀದಿಸಲಾಗುತ್ತಿರಲಿಲ್ಲ; ಬದಲಿಗೆ ಹಲವರಿಗೆ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಡುವುದನ್ನೇ ಕೆಲವರು ವೃತ್ತಿಯನ್ನಾಗಿಸಿಕೊಂಡರು. ಕ್ಯಾಮೆರಾ ಅಷ್ಟೇ ಅವರ ಬಂಡವಾಳ. ಮಿಕ್ಕಿದಂತೇ ಅವರ ಸಮಯ ಮತ್ತು ಸಂಯಮ ಇವುಗಳು ಕೆಲಸಮಾಡಲು ಬೇಕಾದ ಅಂಶಗಳಾಗಿದ್ದವು. ಸ್ವಂತಕ್ಕಾಗಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಇವತ್ತಿಗೆ ಹಲವರಿಗೆ ಇರುವಂತೇ ಸ್ವಂತಕ್ಕಾಗಿ ಕ್ಯಾಮೆರಾ ಇಟ್ಟುಕೊಳ್ಳಬೇಕೆಂಬ ಆಸೆ ಬಹುತೇಕರಲ್ಲಿತ್ತು; ಅದರಲ್ಲಿ ಕೆಲವರು ಮಾತ್ರ ಯಶಸ್ಸು ಪಡೆದಿದ್ದರು. ದುಬಾರಿ ವೆಚ್ಚದ ಸಾಮಗ್ರಿಗಳನ್ನು ಬೇಡುತ್ತಿದ್ದ ಅಂದಿನ ಕಪ್ಪು-ಬಿಳುಪಿನ್ ಮೆಕಾನಿಕಲ್ ಕ್ಯಾಮೆರಾ ಬಳಕೆಯ ಮಾಹಿತಿ ಇರದೇ ಬಳಸಿದರೆ ಕೆಲವೊಮ್ಮೆ ಕೆಟ್ಟು ಕೂರುತ್ತಿತ್ತು. ಗೊತ್ತಿಲ್ಲದೇ ಅಗುಳಿ ತೆಗೆದರೆ ಒಳಗಡೆ ಇಟ್ಟಿರುವ ಫಿಲ್ಮ್ ರೋಲ್ ಬೆಳಕನ್ನು ಕಾಣುತ್ತಿದ್ದಂತೇ ಕೆಟ್ಟುಹೋಗುತ್ತಿತ್ತು! ಕತ್ತಲಲ್ಲಿ ಆ ಫಿಲ್ಮ್ ರೋಲ್ ಕ್ಯಾಮೆರಾದೊಳಕ್ಕೆ ಅಳವಡಿಸುವ ಮತ್ತು ಫಿಲ್ಮ್ ರೋಲ್ನ ಕೊನೆಯ ಚಿತ್ರಗ್ರಹಣ ಮುಗಿದಮೇಲೆ ಅದನ್ನು ಮತ್ತೆ ಕತ್ತಲಲ್ಲಿ ಕ್ಯಾಮೆರಾದಿಂದ ಹೊರತೆಗೆದುಕೊಂಡು ಹಾಗೇ ಅದನ್ನು ಡೆವಲಪರ್ ಹಾಕಿ ಪ್ರಾಸೆಸ್ ಮಾಡುವುದು ಕೆಲವರಿಗೆ ಮಾತ್ರ ಕರತಲಾಮಲಕವಾಗಿತ್ತು.

ಮೆಕಾನಿಕಲ್ ಕ್ಯಾಮೆರಾಗಳಲ್ಲಿ ಶಟರ್ ಆಪರೇಷನ್ ಕೆಲವೊಮ್ಮೆ ಸರಿಯಾಗಿ ಆಗದೇ ತೆಗೆಯುವ ಚಿತ್ರಗಳು ಬಾರದೇ ಹೋಗುವ ಪರಿಸ್ಥಿತಿ ಕೂಡ ಇತ್ತು. ಕೊಡಾಕ್,ಯಾಶಿಕಾ, ಮಿನೋಲ್ಟಾ ಮೊದಲಾದ ಕಂಪನಿಗಳು ಹೊಸಹೊಸ ಮಾದರಿಯ ಕ್ಯಾಮೆರಾಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸುತ್ತಲೇ ಬಂದವು. ’ಎಸ್.ಎಲ್.ಆರ್.’ ಅಥವಾ ಸಿಂಗಲ್ ಲೆನ್ಸ್ ರಿಪ್ಲೆಕ್ಸ್ ಟೆಕ್ನಾಲಜಿ ಬಳಕೆಯಾಗುವ ವರೆಗೆ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಜನರಿಗೆ ಅದು ಸಮಯವನ್ನು ಬೇಡುವ ಕೆಲಸವಾಗಿತ್ತು. ಪ್ಲಾಷ್ ಇರದಿದ್ದಾಗ ಸೂರ್ಯನ ಬಿಸಿಲನ್ನೋ ಬೆಳಕನ್ನೋ ಅವಲಂಬಿಸಿ ಚಿತ್ರ ಸೆರೆಹಿಡಿಯಬೇಕಾಗುತ್ತಿತ್ತು. ಎದುರುಗಡೆಯ ದೃಶ್ಯವನ್ನು ಹೇಗೆ ಚಿತ್ರವನ್ನಾಗಿ ಸೆರೆಹಿಡಿಯಬೇಕೆಂದು ತಿಳಿಯದೇ ಬಳಸಿದರೆ ಚಿತ್ರದಲ್ಲಿ ಬರಬೇಕಾದ ಪೂರಕ ಅಂಶಗಳನ್ನು ಬಿಟ್ಟು ಮಿಕ್ಕವುಗಳೇ ವಿಜೃಂಭಿಸುತ್ತಿದ್ದವು! ನಮ್ಮೂರ ಕಡೆಗಳಲ್ಲಿ ಪ್ರೊಫೆಶನಲ್ ಫೋಟೋಗ್ರಾಫರ್ ಎಂದು ಬರೆದುಕೊಂಡಿರುವ ವೃತ್ತಿನಿರತರೇ ಅಂದಿಗೆ ತೆಗೆದ ಕೆಲವು ಛಾಯಾಚಿತ್ರಗಳಲ್ಲಿ ಕೆಲವರ ಮುಖ ಸೊಟ್ಟಗೆ ಬಂದಿದ್ದು, ಗುಂಪಿನಲ್ಲಿ ನಿಂತವರಲ್ಲಿ ಕೆಲವರ ತಲೆ ಕಾಣಿಸದೇ ಹೋಗಿದ್ದು ಹೀಗೇ ಭಿನ್ನ ಭಿನ್ನ ಕಲಾಕೃತಿಗಳು ಆ ವೃತ್ತಿಪರ ಕಲಾವಿದರಿಗೆ ಗೊತ್ತಿಲ್ಲದಂತೆಯೇ ಸಿದ್ಧವಾಗಿಬಿಡುತ್ತಿದ್ದವು; ಗ್ರಾಹಕರಿಗೂ ಚಿತ್ರಗಳ ಗುಣಮಟ್ಟದ ಬಗ್ಗೆ ತೀರಾ ಜಾಸ್ತಿ ತಿಳಿದಿರದ ಕಾರಣ ಫೋಟೋಗ್ರಾಫರ್ ಕೊಟ್ಟಿದ್ದನ್ನೇ ಮಹಾಪ್ರಸಾದ ಎಂಬ ರೀತಿಯಲ್ಲಿ ಆಲ್ಬಮ್ ಮಾಡಿ ಇಟ್ಟುಕೊಂಡು ಬಂದ ಅತಿಥಿಗಳಿಗೆ ತೋರಿಸುತ್ತಿದ್ದರು.     

ಚಿತ್ರಗ್ರಹಣವನ್ನು ಸಮರ್ಪಕವಾಗಿ ಮಾಡಲು ಬರದ ಹಲವರಿಗಾಗಿ ಫೋಟೋಗ್ರಫಿ ಕಲಿಸುವ ಸ್ಕೂಲ್ಗಳೂ ಹುಟ್ಟಿಕೊಂಡವು. ಅನೇಕ ಜನ ಅಂತಹ ಸ್ಕೂಲ್ಗಳ ಮೊರೆಹೋಗಿ ಕಲಿತರೂ ಅದನ್ನು ವೃತ್ತಿಯನ್ನಾಗಿಸಿಕೊಳ್ಳುವಲ್ಲಿ ಮುಂದಾಗಲಿಲ್ಲ. ಏನೂ ಗೊತ್ತಿರದೇ ಇದ್ದರೂ ಕುತೂಹಲಿಯಾಗಿ ಕಲಿಯಬಯಸಿದ ಕೆಲವರು ಅಲ್ಲಿಲ್ಲಿ ನೋಡೇ ಅಷ್ಟಿಷ್ಟು ಕಲಿತುಕೊಂಡು ಅದನ್ನೇ ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು. ಈ ಕುತೂಹಲದ ಹಿಂದೆ ಅವರೊಳಗಿದ್ದ ’ಕಲಾವಿದ’ನ ಕೈವಾಡವಿರುತ್ತಿತ್ತು. ಅಭಿಜಾತ ಕಲಾವಿದರಿಗೆ ಕಲಿಕೆ ನೆಪಮಾತ್ರ. ಒಮ್ಮೆ ನೋಡಿದರೆ ಸಾಕು ಅದನ್ನು ಅನುಕರಿಸುವ, ಮತ್ತಷ್ಟು ಕಸರತ್ತುಗಳನ್ನು ಮಾಡಿ ಆ ಕಲೆಯನ್ನು ಉದ್ದೀಪಿಸುವ ಮನೋಭಾವ ಅಂಥಾವ್ಯಕ್ತಿಗಳಲ್ಲಿ ಒಡಮೂಡುತ್ತದೆ. ಅದು ಕೇವಲ ಫೋಟೋಗ್ರಫಿ ರಂಗದಲ್ಲಲ್ಲ, ಯಾವುದೇ ರಂಗವನ್ನು ತೆಗೆದುಕೊಂಡರೂ ಅದಮ್ಯ ಕುತೂಹಲವೇ ಕಲಿಕೆಗೆ ಮೂಲಕಾರಣ ಎನ್ನಬಹುದು. ಛಾಯಾಚಿತ್ರವನ್ನು ಸೆರೆಹಿಡಿಯುವ ಫೋಟೋಗ್ರಾಫರ್ ಕಣ್ಣು ಒಮ್ಮೆ ಮುಂದಿರುವ ದೃಶ್ಯವನ್ನು ಕಂಡಕೂಡಲೇ ಮನದಲ್ಲಿ ಅದರ ಲೋಪದೋಷಗಳು ಕಾಣಿಸಿಕೊಳ್ಳುತ್ತಿದ್ದವು. ಚಿತ್ರ ಹೇಗಿರಬೇಕೆಂಬ ಸಮಗ್ರ ಕಲ್ಪನೆ ಆತನ ಮನದಲ್ಲಿ ಮೂಡುವುದರ ಜೊತೆಗೆ ಕ್ಯಾಮೆರಾದಂತಹ ಉಪಕರಣಗಳಲ್ಲಿನ ದೋಷಗಳೂ ಅವನಿಗೆ ತಿಳಿದಿರುತ್ತಿದ್ದವು. ಹೀಗಾಗಿ ಕಾಯಿಲೆಗಳನ್ನು ಹೇಳದೇ ಬಚ್ಚಿಟ್ಟು ಹುಡುಗಿಯನ್ನು ಮದುವೆಮಾಡುವ ಹಾಗೇ ನ್ಯೂನತೆಗಳನ್ನು ಮರೆಮಾಚಲು ಕೆಲವರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದರು!   

ತಮಾಷೆಯ ಪ್ರಸಂಗವೊಂದು ಹೀಗಿದೆ: ಒಂದು ಮದುವೆಮನೆಯಲ್ಲಿ ಆ ಊರ ದಡ್ಡನೊಬ್ಬ ಕುಳಿತಿದ್ದ. ಆತನಿಗೆ ತನ್ನದೂ ಛಾಯಾಚಿತ್ರ ಇರಲಿ ಎಂಬ ಆಸೆ. ಮದುವೆಗೆ ಬಂದ ಫೋಟೋಗ್ರಾಫರ್ ನ ಹಿಂದೆಬಿದ್ದ ಆತ ತನ್ನ ಫೋಟೋ ತೆಗೆಯುವಂತೇ ದುಂಬಾಲು ಬೀಳುತ್ತಿದ್ದ. ದಡ್ಡನಿಗೆ ಮುಂದಿನ ಎರಡು ಹಲ್ಲುಗಳು ವಕ್ರವಾಗಿ ಮುಂದೆಚಾಚಿದ್ದವು. ಫೋಟೋಗ್ರಾಫರ್ ಒಮ್ಮೆ ಆತನಿಗೆ ಹೇಳಿದ "ನೋಡಣ್ಣಾ ನಿನ್ನ ಫೋಟೋ ತೆಗೆದಿದ್ದು ತೊಳೆಯುವಾಗ ಉಬ್ಬಿರುವ ನಿನ್ನ ಎರಡು ಹಲ್ಲುಗಳು ಕ್ಯಾಮೆರಾಕ್ಕೆ ಸಿಕ್ಕಿಹಾಕಿಕೊಂಡು ರೀಲ್ ಹೊರತೆಗೆಯಲಾಗದೇ ಬಹಳ ಕಷ್ಟವಾಗಿ ಹೋಯ್ತು, ನಿನ್ನ ಮುಂದಿನ ಹಲ್ಲುಗಳು ಉಬ್ಬಿರುವುದರಿಂದ ಫೋಟೋ ಬರಲ್ಲ."  ಕೆಲವುದಿನಗಳು ಸಂದವು. ಊರಕಡೆಗೆ ಫೋಟೋಗ್ರಫಿ ಮಾಡುವವರು ಯಾರೋ ಒಬ್ಬರೋ ಇಬ್ಬರೋ ಇರುತ್ತಾರಲ್ಲ ಹೀಗಾಗಿ ಮತ್ತೊಂದು ಮದುವೆಮನೆಯಲ್ಲಿ ಮತ್ತದೇ ಫೋಟೋಗ್ರಾಫರ್ ಮತ್ತು ಮತ್ತದೇ ದಡ್ಡನ ಮುಖಾಮುಖಿ ನಡೆದೇ ಹೋಯ್ತು. ಈಸರ್ತಿ ದಡ್ಡ ಬಹಳ ಧೈರ್ಯದಿಂದ ಫೋಟೊಗ್ರಾಫರ್ ನ ರಟ್ಟೆ ಹಿಡಿದು ಹೇಳಿದ "ಈ ಸಲ ನನ್ನ ಫೋಟೋ ಬಂದೇ ಬರುತ್ತೆ ಯಾಕೆ ಗೊತ್ತಾ ಮುಂದಿನ ಎರಡು ಹಲ್ಲುಗಳನ್ನು ಕೀಳಿಸಿಕೊಂಡೇ ಬಂದಿದೀನಿ ನೋಡು" ಎಂದ! 

ಬ್ಲಾಕ್ ಅಂಡ್ ವ್ಹೈಟ್ ಸಿನಿಮಾಗಳ ಹಾಗೇ ಛಾಯಾಚಿತ್ರಗಳೂ ಬ್ಲಾಕ್-ಅಂಡ್ ವ್ಹೈಟ್ ಆಗಿದ್ದ ಕಾಲ.ಕೆಲವು ವೃತ್ತಿಪರರು ಬಹಳ ತಾದಾತ್ಮ್ಯತೆಯಿಂದ ಚಿತ್ರಕ್ಕೆ ಪೂರಕವಾದ ಅಂಶಗಳನ್ನು ಸೆರೆಹಿಡಿಯುವಲ್ಲಿ ಒಳ್ಳೆಯ ಹೆಸರುಮಾಡಿದರು. ಬೆಂಗಳೂರಿನ ಮಟ್ಟಿಗೆ ಈ.ಹನುಮಂತ ರಾವ್, ಈಗಲೂ ನಮ್ಮ ನಡುವೆ ಇರುವ ಹಿರಿಯಮಿತ್ರ ಎಮ್.ಎಸ್. ಹೆಬ್ಬಾರ್, ಜಿ.ಕೆ.ವೇಲ್ ಮೊದಲಾದ ಕೆಲವು ಕಲಾವಿದರು ತಮ್ಮತನವನ್ನು ಸಾಬೀತುಗೊಳಿಸಿದರು. ಬಣ್ಣದ ಚಿತ್ರಗಳಿಲ್ಲದ ಆ ಕಾಲಕ್ಕೆ ಕೈಯ್ಯಲ್ಲಿ ಬ್ರಶ್ ಹಿಡಿದು ಬಣ್ಣವನ್ನು ಕೊಡುವ ವ್ಯವಸ್ಥೆಯಲ್ಲೂ ಕೆಲವರು ಯಶಸ್ಸು ಪಡೆದರು. ಆ ಚಿತ್ರಗಳು ಅಂದಿನ ಬಣ್ಣದ ಛಾಯಾಚಿತ್ರಗಳೆನಿಸಿದವು;ಹಲವು ಕಡೆ ಅಂಥವು ಈಗಲೂ ನೋಡಸಿಗುತ್ತವೆ. ಛಾಯಾಚಿತ್ರಗ್ರಹಣಕಾರರಲ್ಲಿ ವ್ಯಕ್ತಿಗಳ ಚಿತ್ರ, ನೈಸರ್ಗಿಕ ದೃಶ್ಯಗಳ ಚಿತ್ರ, ವನ್ಯಜೀವಿ ಚಿತ್ರ ಗ್ರಹಣಕಾರರಾಗಿ ಕೆಲವರು ತಮ್ಮನ್ನು ಆ ಯಾ ವಿಭಾಗಗಳಿಗೆ ಸೀಮಿತಗೊಳಿಸಿಕೊಂಡರು. ಪಟ್ಟಣಗಳಲ್ಲೂ ಸ್ವಲ್ಪ ಜನಸಂಪರ್ಕ ಜಾಸ್ತಿ ಇರುವ ಹಳ್ಳಿಗಳಲ್ಲೂ ಸ್ಟುಡಿಯೋಗಳು ಬಾಗಿಲು ತೆರೆದವು. ಯಾವುದೇ ಉತ್ತಮ ಕಾರ್ಯಕ್ರಮವಿರಲಿ-ಫೋಟೋಗ್ರಫಿ ಎಂಬುದು ಅನಿವಾರ್ಯ ಎನಿಸುವಷ್ಟು ಹಾಸುಹೊಕ್ಕಾಯ್ತು.           

ಈ ಮಧ್ಯೆ ಒಂದೆರಡು ದಶಕಗಳ ಕಾಲ ಕಲರ್ ಕ್ಯಾಮೆರಾಗಳೂ ಬಂದವು. ಅಂತಹ ಕ್ಯಾಮೆರಾಗಳು ಬಂದಾಗ ಅವುಗಳನ್ನು ಖುದ್ದಾಗಿ ನೋಡುವ ಕುತೂಹಲ ನಮ್ಮಂತಹ ಬಹಳ ಮಂದಿಗೆ ಇತ್ತು. ಅವುಗಳಿಂದ ತೆಗೆದ ಚಿತ್ರಗಳು ಹೇಗೆ ಬಣ್ಣಬಣ್ಣಗಳಲ್ಲಿ ದೊರೆಯಬಹುದು ಎಂಬ ಪ್ರಮೇಯವೂ ಕಾಡುತ್ತಿತ್ತು. ಅವುಗಳಲ್ಲಿ ಬಳಸುವ ಫಿಲ್ಮ ರೋಲ್ಗಳು ಮತ್ತು ಚಿತ್ರಗಳನ್ನು ಅಚ್ಚುಮೂಡಿಸಲು ಬಳಸುವ ಮುದ್ರಣಕಾಗದಗಳು ವಿಶಿಷ್ಟ ರಾಸಾಯನಿಕ ಗುಣಧರ್ಮದವು ಎಂಬುದರ ಅರಿವಾಗಲೀ ಪರಿವೆಯಾಗಲೀ ನಮಗೆ ಇರಲಿಲ್ಲ. ಕಲರ್ ಫೋಟೋ ಕರುಣಿಸುವ ನೆಪದಲ್ಲಿ ವೃತ್ತಿಪರರು ಆ ಕಾಲಕ್ಕೆ  ಸ್ವಲ್ಪ ಕಾಸನ್ನೂ ಮಾಡಿಕೊಂಡರು. ಬಣ್ಣದ ಚಿತ್ರಗಳನ್ನು ಮುದ್ರಿಸುವ ಮುದ್ರಕಯಂತ್ರಗಳನ್ನು ತರಿಸಿಕೊಂಡ ಕೆಲವರು ಹಾಕುವ ಬಣ್ಣದಲ್ಲೇ ಪ್ರತಿಶತ ಕಮ್ಮಿ ಮಾಡಲು ತೊಡಗಿದರು. ೩-೪ ಪಾಸ್ಗಳಿರುವಲ್ಲಿ ಒಂದೇ ಪಾಸ್ ಕೊಟ್ಟು ಮುದ್ರಣ ಕಲರ್ಫುಲ್ ಆಗಿ ಬರುತ್ತಲೇ ಇರಲಿಲ್ಲ. ಬೆಂಗಳೊರಿನಲ್ಲಂತೂ ವೃತ್ತಿಪರ ಛಾಯಾಗ್ರಾಹಕರಿಗೆ ಮೆಜೆಸ್ಟಿಕ್ ಏರಿಯಾದಲ್ಲಿ ಒಬ್ಬ ಮಹಾಶಯ ಬಣ್ಣದ ಛಾಯಚಿತ್ರಗಳನ್ನು ಹೋಲ್ ಸೇಲ್ ದರದಲ್ಲಿ [ಕಳಪೆಯಾಗಿ]ಮುದ್ರಿಸಿಕೊಡುತ್ತಿದ್ದ!ಒಂದೇ ಛಾಯಾಚಿತ್ರದ ನೆಗೆಟಿವ್ ಬೆಂಗಳೂರಿನಲ್ಲಿ ಮುದ್ರಣಕಾಣುವುದಕ್ಕೂ ಕುಂದಾಪುರದಲ್ಲಿ ಮುದ್ರಣಕಾಣುವುದಕ್ಕೂ ಗುಣಮಟ್ಟದ ಅಂತರ ಕಾಣಿಸುತ್ತಿತ್ತು. ಕ್ಯಾಮೆರಾಗಳಿಗೆ ರೀಲು ತುಂಬಿ ಸೆಲ್ಲು ತುಂಬಿ ಸುಸ್ತಾದ ಮಂದಿಗೆ ವರದಾನವಾಗಿ ಬಂದಿದ್ದೇ ಡಿಜಿಟಲ್ ಕ್ಯಾಮೆರಾ. 

ಕಾಲಬದಲಾಗಿ ಕಂಪ್ಯೂಟರ್ ಕಾಲಿಟ್ಟಮೇಲೆ ಜಗದ ಎಲ್ಲಾರಂಗಗಳಲ್ಲೂ ಜಾಗೃತಿ ಮೂಡಿತು; ತೀವ್ರಗತಿಯಲ್ಲಿ ನಾನಾ ಆವಿಷ್ಕಾರಗಳೂ ಬದಲಾವಣೆಗಳೂ ಆದವು. ಮನೆ ಕಟ್ಟಿಸುವ ಮೊದಲೇ ಗಣಕಯಂತ್ರದಲ್ಲಿ ಕಟ್ಟುವ ಮನೆಯ ರೂಪರೇಷೆಗಳನ್ನು ಕಂಡು, ಬಣ್ಣ-ಬೇಡಗೆ ಅರಿತುಕೊಂಡು, ಮನೆಯೊಳಗಣ ಕೋಣೆಕೊಠಡಿ ದೇವರಮನೆ, ಮಲಗುವ ಕೋಣೆ, ಬಚ್ಚಲುಮನೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ತಿಳಿದುಕೊಂಡು ಆಮೇಲೆ ಮನೆಕಟ್ಟಿಸುವಷ್ಟು ಆಧುನಿಕೀಕರಣ ಆರಂಭವಾಯ್ತು. ಗಣಕಯಂತ್ರದ ಬಳಕೆ ಮತ್ತು ಅಳವಡಿಕೆಯಿಂದ ಆದ ಮಾರ್ಪಾಟುಗಳಲ್ಲಿ ಗುಣಮಟ್ಟದ ಬಗ್ಗೆ ಬಹಳ ಆದ್ಯತೆ ನೀಡಲಾಯ್ತು. ನಿಖರವಾದ ಅಳತೆಯ ಮಾನದಂಡಗಳು ಒಡಮೂಡಿದವು. ಮನೋವೇಗದಂತಹ ವೇಗದಲ್ಲಿ ನಡೆದ ಆವಿಷ್ಕಾರಗಳಲ್ಲಿ ವಿದ್ಯುನ್ಮಾನ ರಂಗದಲ್ಲಿ ಹುಟ್ಟಿಕೊಂಡಿದ್ದು ಡಿಜಿಟಲ್ ತಂತ್ರಜ್ಞಾನ! ಈ ತಂತ್ರಜ್ಞಾನವನ್ನು ವಿದ್ಯುನ್ಮಾನ ಕ್ಷೇತ್ರದ ಎಲ್ಲಾ ಉಪಕರಣಗಳಿಗೂ ಬಳಸಿಕೊಳ್ಳುವ ಪ್ರಯತ್ನ ನಡೆಯಿತು. ಸೆಲ್ಯುಲಾರ್ ಫೋನ್ಗಳೂ ಡಿಜಿಟಲ್ ಕ್ಯಾಮೆರಾಗಳೂ ಹುಟ್ಟಿಕೊಂಡವು. ಬೇಕಾದಾಗ ತೆಗೆದು ನೋಡುವ, ಮುದ್ರಿಸಿಕೊಳ್ಳುವ, ನಕಲುಮಾಡಿಕೊಳ್ಳುವ ಸೌಕರ್ಯ ಮತ್ತು ಸೌಲಭ್ಯಗಳು ಲಭ್ಯವಾದವು.      

ಡಿಜಿಟಲ್ ಕ್ಯಾಮೆರಾ ಬಂದಮೇಲೆ ಫೋಟೋಗ್ರಫಿ ಎನ್ನುವುದು ಬಹಳ ಈಸಿಯಾಗಿದೆ, ಅತಿ ಸರಳ ಮತ್ತು ಸುಲಭವಾಗಿದೆ. ತರಹೇವಾರಿ ಫ್ಲಾಷ್ಗಳು ಜ಼ೂಮ್ ಲೆನ್ಸ್ಗಳು ಕ್ಯಾಮೆರಾದೊಳಗೂ ಇರುವಂತೇ ಅಥವಾ ಅಳವಡಿಕೆಯಾಗಿ ಜೋಡಿಸಿಕೊಳ್ಳುವಂತೇ ಸಿಗುವ ಡಿಜಿಟಲ್ ಕ್ಯಾಮೆರಾವನ್ನು ತರಬೇತುಗೊಳಿಸಿದ ಮಂಗನ ಕೈಲಿ ಕೊಟ್ಟರೂ ಗುಂಡಿ ಅದುಮಿ ಚಿತ್ರತೆಗೆಯಬಲ್ಲದು ! ಸೆರೆಹಿಡಿಯುವ ಮೊದಲೇ ಚಿತ್ರ ಹೇಗೆ ಬರುತ್ತದೆ ಎಂಬುದೂ ತಿಳಿದುಹೋಗುವ, ಅಗತ್ಯಕ್ಕೆ ತಕ್ಕಂತೇ ದೃಶ್ಯಗಳ ಆಯ-ಅಗಲಗಳನ್ನು ಹಿರಿದು-ಕಿರಿದು ಮಾಡಿಕೊಳ್ಳಬಹುದಾದ ಆಯ್ಕೆಗಳ ಅನುಕೂಲತೆಯುಳ್ಳ ಇವತ್ತಿನ ಕ್ಯಾಮೆರಾಗಳಲ್ಲಿ ಚಿತ್ರ ಸೆರೆಹಿಡಿಯುವ ವೃತ್ತಿ ಕಷ್ಟವೇನಲ್ಲ. ಯಾವುದೋ ಕಾಡುಪ್ರಾಣಿಯೋ ಹಕ್ಕಿಯೋ ದುಂಬಿಯೋ ಬೇಕು ಎಂಬ ಕಾರಣಕ್ಕಾಗಿ ಮಾತ್ರ ಸ್ವಲ್ಪ ಸಮಯ ಅಲೆದಾಡಬೇಕಾದೀತೇ ಹೊರತು, ಕಾಡತೂಸಿಗೆ ಮಸಿತುಂಬಿ-ಗುಂಡುತುಂಬಿ ಈಡುಮಾಡಲು ಅಣಿಗೊಳಿಸುವಂತೇ ಕ್ಯಾಮೆರಾವನ್ನೇ ಹದಗೊಳಿಸಿಕೊಳ್ಳುವ ಪ್ರಮೇಯ ಇರುವುದಿಲ್ಲ.

ವಿಪರ್ಯಾಸ ಎಂದರೆ ವೈಜ್ಞಾನಿಕ ಶೋಧಗಳು, ಆವಿಷ್ಕಾರಗಳು ಪೂರಕವಾಗಿರುವಂತೇ ಮಾರಕವೂ ಆಗಿಬಿಡುತ್ತವೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಗುಣಮಟ್ಟದ ಬದುಕಿಗೆ ಗುಣಮಟ್ಟದ ವಸ್ತು-ಯಂತ್ರ-ಕಟ್ಟಡಗಳನ್ನು ಒದಗಿಸಿದ ಗಣಕಯಂತ್ರ ಗುಣಮಟ್ಟದ ಚಿತ್ರಗಳನ್ನು ಕೊಡುವಲ್ಲಿಯೂ ಬಳಕೆಯಾಗುತ್ತಿದೆ. ಗಣಕಯಂತ್ರಕ್ಕೆ ಡಿಜಿಟಲ್ ಕ್ಯಾಮೆರಾ ಅಥವಾ ಮೆಮರಿ ಕಾರ್ಡ್ ಅಳವಡಿಸಿದಾಗ ಅವುಗಳಲ್ಲಿರುವ ಚಿತ್ರಗಳನ್ನು ಗಣಕಯಂತ್ರದಲ್ಲಿ ಕಾಣಬಹುದಾಗಿದೆ, ಬಣ್ಣ-ಆಕಾರ, ಬೆಳಕು, ಹಿನ್ನೆಲೆ ಸನ್ನಿವೇಶ ಎಲ್ಲವುಗಳ ಅಷ್ಟೇ ಏಕೆ ಚಿತ್ರಗಳ ಭಾಗಗಳನ್ನೇ ತಿದ್ದುಪಡಿಮಾಡಬಹುದಾಗಿದೆ.ಚಿತ್ರಗಳನ್ನೂ ವೀಡಿಯೋಗಳನ್ನೂ ತಿದ್ದುಪಡಿ ಮಾಡಬಹುದು ಎಂಬುದನ್ನೇ ದಾಳವಾಗಿ ಬಳಸಿಕೊಂಡು ತಮ್ಮ ತಪ್ಪೇನೂ ಇಲ್ಲ ಎಂದು ಹೆಂಡದಮಂತ್ರಿ ರೇಣುಕಾಚಾರ್ಯ ಮತ್ತು ಚೋರಗುರು ನಿತ್ಯಾನಂದ ಹೇಳಿಕೊಂಡಿದ್ದಾರೆ. ತಿದ್ದುಪಡಿ ಮಾಡುವ ಅನುಕೂಲತೆ ಕಂಡ ಚಿತ್ರಚೋರರು ಮೂಲ ಫೋಟೋಗ್ರಾಫರ್ ಹೆಸರನ್ನು ಅಳಿಸಿ ಅಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ.

ಡಿಜಿಟಲ್ ಮೀಡಿಯಾ ಚೌರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಹಲವು ತಂತ್ರಾಂಶಗಳೂ ಮತ್ತು ಸಿನಿಮಾಗಳು ಅಲ್ಲದೇ ಆಡಿಯೋ ಆಲ್ಬಮ್ಗಳು ಕೃತಿಚೋರರಿಂದ ಚೋರಿಮಾಡಲ್ಪಟ್ಟಿವೆ; ಮಾಡಲ್ಪಡುತ್ತಿವೆ. ಆಗಾಗ ಅಲ್ಲಲ್ಲಿ ಗುಲ್ಲೆಬ್ಬಿಸಿದ ಕದ್ದ ಕಥೆಗಳು ಕಾಲಾನಂತರದಲ್ಲಿ ತಣ್ಣಗಾಗಿಹೋಗುತ್ತವೆ; ಚೋರೀಮಾಡುವವರು ತಮ್ಮ ಕೆಲಸವನ್ನು ನಡೆಸೇ ಇರುತ್ತಾರೆ. ಕೃತಿ ಚೌರ್ಯ ಎಂಬುದು ಇಂಟೆಲೆಕ್ಚ್ವಲ್ ಪ್ರಾಪರ್ಟಿಯನ್ನು ಕದ್ದು ಬಳಸುವಿಕೆಗೆ ಇರುವ ಹೆಸರು ಎಂಬುದು ನನಗೆ ಹಲವುದಿನ ಗೊತ್ತೇ ಇರಲಿಲ್ಲ. ಇಂಗ್ಲೀಷಿನಲ್ಲಿ ಪೈರಸಿ ಎಂದು ಕರೆಸಿಕೊಳ್ಳುವ ಈ ಕೆಲಸ ಡಿಜಿಟಲ್ ಮಾಧ್ಯಮಗಳ ಈ ಕಾಲದಲ್ಲಿ ತೀರಾ ಮತ್ತು ತುಂಬಾ ಸುಲಭ. ಹಲವರು ಬರಹಗಳನ್ನೂ ಕದ್ದು ಕಾಪೀ ಮಾಡಿಕೊಂಡು ತಮ್ಮ ಬರಹಗಳೆಂದು ಹೇಳಿಕೊಳ್ಳುತ್ತಾರೆ ಎಂದು ಕೇಳುತ್ತಲೇ ಇದ್ದೇನೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇದಕ್ಕೆಲ್ಲಾ ಕಡಿವಾಣ ಹಾಕುವುದು ಹೇಗೆ ಎಂಬುದು ಇನ್ನೂ ಯಕ್ಷಪ್ರಶ್ನೆಯೇ ಸರಿ. ನಾಣ್ಯಕ್ಕೆ ತೂತು ಮಾಡಿ ದಾರಕಟ್ಟಿ ಸಾರ್ವಜನಿಕ ಕಾಯ್ನ್ ಬೂತ್ಗಳಲ್ಲಿ ಕರೆಮಾಡಲು ಬಳಸಿ ಕರೆಮುಗಿದ ನಂತರ ಎತ್ತಿಕೊಂಡು ಹೋಗುವ ಕುಚಾತುರ್ಯ ಮೆರೆದ ಕಳ್ಳರೂ ಇದ್ದರಂತೆ, ಒಂದು ರೂಪಾಯಿಯ ನಾಣ್ಯವನ್ನೇ ಹೋಲುವ, ಅದೇ ತೂಕದ ಕಬ್ಬಿಣದ ಬಿಲ್ಲೆಗಳನ್ನು ಮಾಡಿಸಿತಂದು ಅದನ್ನು ಒಂದೊಂದಾಗಿ ಹಾಕಿ ಕರೆಮಾಡುವವರೂ ಇದ್ದರಂತೆ! ಅಷ್ಟೆಲ್ಲಾ ಮಾಡುವವರಿರುವಾಗ ಡಿಜಿಟಲ್ ಮಾಧ್ಯಮಗಳ ಮೂಲಕ ದೊರಕುವ ಸರಕಿಗೆ ಕೈಹಾಕಿ ಬಾಚಿಬರಗಿಕೊಳ್ಳುವುದು ಯಾವ ಮಹಾ ಕೆಲಸ ಹೇಳಿ? ಮೇಲಾಗಿ ಇಲ್ಲಿ ಕಳ್ಳತನದ ಹೆಜ್ಜೆಗುರುತು ಸಿಗುವುದೂ ಕೂಡ ಕಷ್ಟ. ಮುಂಡೇ ಮದುವೇಲಿ ಉಂಡೋನೇ ಜಾಣ ಅಂತಾರಲ್ಲ ಹಾಗೇ ಸಿಕ್ಕಿದ ಸರಕುಗಳನ್ನು ಸ್ವಾಹಾಮಾಡುವ ಸ್ವಭಾವ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಳ್ಳುವ ಕೆಲವು ವ್ಯಕ್ತಿಗಳಲ್ಲಿ ಕಾಣಸಿಗುತ್ತದೆ. ಪ್ರತಿಭಾನ್ವಿತರು ಎನಿಸಿಕೊಂಡ ಕೆಲವರ ’ಪಾಂಡಿತ್ಯ’ವನ್ನು ಒರೆಗೆ ಹಚ್ಚದ ಹೊರತು ಅವರ ಒಳಹುರುಳು ಗೊತ್ತಾಗುವುದಿಲ್ಲ. ಪಂಡಿತರು ನ್ಯಾಷನಲ್ ಲೆವೆಲ್ಲೋ ಅಥವಾ ಇಂಟರ್ನ್ಯಾಷನಲ್ ಲೆವೆಲ್ಲೋ ಎಂಬುದು ತಿಳಿಯುವುದು ಅವರ ಘನಂದಾರೀ ಕೆಲಸ ಯಾರದೋ ಮೂಲಕ ಬಹಿರಂಗಗೊಂಡಾಗ ಮಾತ್ರ. ಬಿಡದಿ ನಿತ್ಯಾನಂದ ಅವತಾರವೆತ್ತಿದಮೇಲೆ ಹಲವು ಕಾವಿಧಾರಿಗಳು ಒಳಗೊಳಗೇ ಬಸವಳಿದುಹೋಗಿದ್ದಾರಂತೆ. ಅದೇ ರೀತಿ ಘನತೆವೆತ್ತ ಚೋರ ಮಹಾಮಹಿಮರು ಮುಖ್ಯಬೀದಿಯಲ್ಲಿ ತಮ್ಮ ತೇರನ್ನು ಎಳೆಯುವಾಗ ಸಿಕ್ಕಿಹಾಕಿಕೊಂಡರೆ ಆಗ ಆಗಬಹುದಾದ ಸನ್ಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ?             

"ನಾನು ಅಲ್ಲಿ ಅದು ಮಾಡಿದೆ ಇಲ್ಲಿ ಇದು ಮಾಡಿದೆ", ಊರಿಗೆ ಊರೇ ಮೆಚ್ಚುವ ’ಮಹಾನ್ ಕಲಾವಿದ’ ತಾನು ಎಂಬುದನ್ನು ತಾನೇ ಹೇಳಿಕೊಳ್ಳುವ, ಕಂಡಲ್ಲೆಲ್ಲಾ ಅದನ್ನೇ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಬಯಸುವ, ಪ್ರಶಸ್ತಿಗಳಿಗಾಗಿ ಲಾಬಿ-ವಶೀಲಿಬಾಜಿಗೆ ಇಳಿದಿರುವ ಇಂದಿನ ಕೆಲವು ಛಾಯಾಚಿತ್ರಗ್ರಾಹಕರು ದಯವಿಟ್ಟು ಗಮನಿಸಿ: ನನ್ನಂತಹ ಕೆಲಸಕ್ಕೆ ಬಾರದ ವ್ಯಕ್ತಿಯೂ ಕೂಡ ಇಂದು ಉತ್ತಮ ಛಾಯಾಚಿತ್ರಗಳನ್ನು ತೆಗೆಯಬಲ್ಲ ಎಂಬುದನ್ನು ನಿಮ್ಮೆದುರು ಸಾರಿ ಹೇಳುತ್ತಿದ್ದೇನೆ. ಕಣ್ಣುಗಳು ಸರಿಯಿದ್ದರೆ, ನೋಡುವ ದೃಷ್ಟಿಕೋನ ಸರಿಯಿದ್ದರೆ, ಉಪಕರಣ ಸುಸ್ಥಿತಿಯಲ್ಲಿದ್ದರೆ, ಸ್ವಲ್ಪ ಸಮಯ ವಿನಿಯೋಗಿಸಿದರೆ ಎಂತಹ ಮೂಢನೂ ಛಾಯಾಗ್ರಾಹಕನಾಗಬಹುದು-ಇದು ಡಿಜಿಟಲ್ ಕ್ಯಾಮೆರಾಗಳು ಅನುಗ್ರಹಿಸಿದ ಸರಳೀಕೃತ ಛಾಯಾಗ್ರಹಣ. ಮಿಕ್ಕಿದಂತೇ ಫೋಟೋ ಶಾಪ್, ಕೋರಲ್ ಡ್ರಾ ಮೊದಲಾದ ಕೆಲವು ತಂತ್ರಾಂಶಗಳ ಬಳಕೆ ತಕ್ಕಮಟ್ಟಿಗೆ ಬಳಸಲು ತಿಳಿದಿದ್ದರೆ ಫೋಟೊ ಪರಿಪರಿ ರೂಪವನ್ನು ಪಡೆಯಬಹುದು! ಛಾಯಾಗ್ರಹಣ ಎಂಬುದು ಈ ಕಾಲದಲ್ಲಿ ಗುರುದ್ರೋಣ ಕಲಿಸಬೇಕಾದ ಶಬ್ದವೇದಿ ವಿದ್ಯೆಯಲ್ಲ; ಯಾವ ಛಾಯಾಗ್ರಾಹಕನೂ ಸವ್ಯಸಾಚಿಯೂ ಅಲ್ಲ!   

Tuesday, June 26, 2012

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ


ಪೂರ್ಣಿಮಾ ಸ್ವಾಮಿ ತೆಗೆದ ಈ ಛಾಯಾಚಿತ್ರವನ್ನು ಕರುಣಿಸಿದ್ದು: ಅಂತರ್ಜಾಲ 

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ

ಭಾವಜೀವಿಯಾದ ವ್ಯಕ್ತಿಗೆ ಕೆಲವು ಹಾಡುಗಳನ್ನು ಆಲಿಸುತ್ತಾ ಕುಳಿತರೆ ಅವು ನಮ್ಮನ್ನು ಬೇರೊಂದು ಲೋಕಕ್ಕೆ ಸೆಳೆದೊಯ್ದು ಅಲ್ಲಿ ಬೀಡು ಬಿಡುವಂತೇ ಮಾಡುತ್ತವೆ ಎಂಬ ಅನಿಸಿಕೆ ಒಮ್ಮೆಯಾದರೂ ಜೀವಿತದಲ್ಲಿ ಬಂದೇ ಬರುತ್ತದೆ. ಎಲ್ಲೋ ಯಾರೋ ಹಾಗೊಮ್ಮೆ ಗುನುಗುನಿಸಿದರೂ ಮೊದಲೆಲ್ಲೋ ಕೇಳಿದ ಇಂಪಿನ ಕಂಪು ಕಿವಿಯಲ್ಲಿ ಗುಂಯ್ಯೆನ್ನಲು ಆರಂಭಿಸುತ್ತದೆ; ಮನಸ್ಸು ತಾಳಹಾಕುತ್ತ ಸಾಗುತ್ತದೆ! ಹಾಡಿನ ಜಾಡನ್ನೇ ಹಿಡಿದು ಅದರ ಮೂಲವನ್ನು ಅರಸಿ ಹೊರಟಾಗ ಕವಿತಾ ಪಿತೃವಿನ ಪರಿಚಯ ಅಷ್ಟಿಷ್ಟು ಮಾತ್ರ ದೊರೆಯುತ್ತದೆ. ಆಳಕ್ಕೆ ಇಳಿಯುತ್ತಾ ನಡೆದಾಗ ಸಾವಿರ ಮೆಟ್ಟಿಲ ಬಾವಿಯ ಹಾಗೇ ಇನ್ನೂ ಆಳಕ್ಕೆ ಕಾಣುವ ಕವಿಗಳ ಅದ್ಭುತ ಅಂತರಂಗ ಬಹಿರಂಗಗೊಳ್ಳುತ್ತದೆ. ಸೆಳೆಮಿಂಚಿನ ಬೆಳಕಲ್ಲಿ ಕವಿಯ ಸಾಕ್ಷಾತ್ಕಾರವಾದರೆ ಕೋಲ್ಮಿಂಚಿನ ಭರದಲ್ಲಿ ಅವರ ಕೃತಿಗಳ ಸಾಲು ತೋರಿಬರುತ್ತದೆ. ಕವಿಯೊಬ್ಬ ಹಾಗಿರಬಹುದೇ ಹೀಗಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸೀಮಿತ ಸಂವಹನದ ಕಾಲವೊಂದಿತ್ತು; ಕವಿ ಸಾಹಿತಿಗಳಿಗೆ ಪತ್ರ ಬರೆದು ಅವರುಗಳ ಅನಿಸಿಕೆಗಳಿಗಾಗಿ ಕಾಯುವ ಅದಮ್ಯ ಭಾವವೂ ಇರುತ್ತಿತ್ತು. ಇಂದು ಅಂತರ್ಜಾಲದ ಕಾಲಘಟ್ಟದಲ್ಲಿ ಜಗತ್ತು ಕಿರಿದಾಗಿದೆ; ಕವಿ-ಸಾಹಿತಿಗಳ ಛಾಯಾಚಿತ್ರಗಳೂ ಮಾತುಗಳೂ ಅಲ್ಲಲ್ಲಿ ನೋಡ/ಕೇಳ ಸಿಗುತ್ತವೆ.

ನಮ್ಮ ಗೋಕರ್ಣದ ಗೌರೀಶ್ ಕಾಯ್ಕಿಣಿಯವರು ಉದಯೋನ್ಮುಖ ಬರಹಗಾರರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ: "ಅವರು ಬರೆಯಲಿ ಬಿಡಿ, ಒಳ್ಳೆಯದೇ, ದಿನಕ್ಕೆ ಎಷ್ಟುಗಂಟೆ ಅವರು ಬರವಣಿಗೆಯಲ್ಲಿ ತೊಡಗಿರುತ್ತಾರೋ ಅಷ್ಟುಕಾಲ ಅವರಿಂದ ಕೆಟ್ಟ ಯೋಚನೆ, ಸಮಾಜ ಘಾತುಕ ಯೋಚನೆ ದೂರವಿರುತ್ತದೆ. ಬರವಣಿಗೆಯಲ್ಲಿ ಅವರು ಮಹತ್ತರವಾದುದನ್ನು ಸಾಧಿಸಲಾಗದಿದ್ದರೂ ಸಮಾಜಕ್ಕೆ ಅವರ ಆ ಕೆಲಸದಿಂದ ಕೆಲವು ಒಳ್ಳೆಯವ್ಯಕ್ತಿಗಳು ದೊರೆತಂತಾಗುತ್ತದೆ." ಬರವಣಿಗೆ ಸಹ್ಯವಾಗಿಲ್ಲ ಎಂದೆನಿಸಿ ಯಾರೋ ಓದುಗರು ಕೆಲವು ಬರಹಗಾರರ ಬಗ್ಗೆ ಹೇಳಿದಾಗ ಕಾಯ್ಕಿಣಿ ಹಾಗೆ ಹೇಳಿದ್ದರಂತೆ. ಬರವಣಿಗೆ ಸಹ್ಯವೋ ಅಸಹ್ಯವೋ ಅದು ಓದುಗರಿಗೆ ತಿಳಿದಿರುತ್ತದೆ; ಶಿರಸಿ ಪೇಟೆಗೆ ಹೋದರೆ ಜನ ಬೆಂಡೆಗದ್ದೆ ಜಿಲೇಬಿಯನ್ನು ಹುಡುಕಿ ಹೋಗುತ್ತಾರೆ, ರುಚಿಯಾದ ಚೂಡಾಕ್ಕೆ ಕುಮಟಾದ ಅಲಕಾ ಕೆಫೆಯನ್ನೇ ಹುಡುಕಿ ಹೋಗುತ್ತಾರೆ!  ಧಾರವಾಡದ ಬಾಬು ಸಿಂಗ್ ಠಾಕೂರ್ ಪೇಡಾ ಹದವನ್ನು ಬೇರಾರೂ ಕೊಡಲು ಸಾಧ್ಯವಾಗಿಲ್ಲ! ಅದೇರೀತಿ ಬರವಣಿಗೆಯೂ ಸಹ ತನ್ನ ಯುನಿಕ್ ನೆಸ್ ನಿಂದ ಕೂಡಿರುತ್ತದೆ. ಕೆಲವರು ಬರೆದದ್ದನ್ನು ಓದುತ್ತಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಮನಸ್ಸಾಗುತ್ತದೆ, ಇನ್ನು ಕೆಲವರ ಬರವಣಿಗೆಗೆ ನಮ್ಮನ್ನೇ ಒಪ್ಪಿಸಿಕೊಳ್ಳಬೇಕೆನಿಸುತ್ತದೆ. ನಮ್ಮನ್ನೇ ಓದಿಗೆ ಒಪ್ಪಿಸಿಕೊಳ್ಳುವ ಸೆಳವನ್ನು ತನ್ನ ಬರಹಗಳಲ್ಲಿ ತೋರಿದ ಕೆಲವು ಮಹಾನುಭಾವರಲ್ಲಿ ನಮ್ಮ ಪ್ರೀತಿಯ ಎಚ್.ಎಸ್.ವಿ ಕೂಡ ಒಬ್ಬರು.

ಕನ್ನಡ ಸಾಹಿತ್ಯಲೋಕದಲ್ಲಿ ಕಥೆ, ಕವನ, ಕಥನ ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಬೆಳೆತೆಗೆದವರು ಡಾ| ಎಚ್. ಎಸ್. ವೆಂಕಟೇಶಮೂರ್ತಿ. ಎಚ್.ಎಸ್.ವಿಯವರನ್ನು ಪರಿಚಯಿಸಬೇಕೆ ಎಂಬುದು ಪ್ರಸಕ್ತ ನನ್ನ ಮುಂದಿರುವ ಪ್ರಶ್ನೆ! ಯಾಕೆಂದರೆ ಚಿಕ್ಕ ಹುಡುಗನಿಂದ ಮುಪ್ಪಾನ ಮುದುಕರವೆಗೂ ಎಲ್ಲರೊಡನೆ ಬೆರೆತು, ಎಲ್ಲರ ನಡುವೆ ಓಡಾಡಿಕೊಂಡು ಜೀವನ ನಡೆಸುತ್ತಿರುವ ಕವಿ ಎಚ್.ಎಸ್.ವಿ; ಯಾರನ್ನೇ ಕೇಳಿದರೂ ಅವರ ಭಾವಚಿತ್ರ ತೋರಿಸಿ’ಇವರೇ ಎಚ್.ಎಸ್.ವಿ’ ಎಂದು ಬೊಟ್ಟುಮಾಡಿ ತೋರಿಸುವಷ್ಟು ಚಿರಪರಿಚಿತರು. ಹಾಗಾಗಿ ಪರಿಚಿತರನ್ನೇ ಮತ್ತೆ ಪರಿಚಯಿಸುವುದು ದುಸ್ಸಾಹಸದ ಕೆಲಸ ಎನಿಸುತ್ತದೆಯಾದರೂ ಅವರ ಬದುಕಿನ ಕೆಲವು ನೋಟಗಳನ್ನು ಮೆಲುಕುಹಾಕುವ ಪ್ರಯತ್ನಕ್ಕಾಗಿ ಬರೆಯುತ್ತಿದ್ದೇನೆ.  

June 23, 1944ರಂದು ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ನಾರಾಯಣ ಭಟ್ಟರು ಮತ್ತು ನಾಗರತ್ನಮ್ಮನ ಮಗನಾಗಿ ಎಚ್ ಎಸ್ ವೆಂಕಟೇಶಮೂರ್ತಿ ಜನಿಸಿದರು. ತಾಯಿ ಶಿಕ್ಷಕಿಯಾಗಿದ್ದರು. ಪ್ರಾಥಮಿಕ ಶಿಕ್ಷಣ ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದರು ಎನ್ನುತ್ತದೆ ಅವರ ಅನಾತ್ಮಕಥನದ ಕಥಾಭಾಗ. ಅಂದಹಾಗೇ ಸದ್ರಿ ಎಚ್.ಎಸ್.ವಿಯವರನ್ನು ಖುದ್ದಾಗಿ ನಾನು ನೋಡಿದ್ದು ಅವರ ’ಅನಾತ್ಮಕಥನ’ದ ಮೊದಲ ಭಾಗ ಬಿಡುಗಡೆಗೊಂಡ ದಿನ; ಅದಕ್ಕೂ ಮೊದಲು ಅವರ ಸಮಗ್ರ ಕೃತಿಗಳ ಬಿಡುಗಡೆ ಇತ್ತಾದರೂ ಆ ಕಾರ್ಯಕ್ರಮಕ್ಕೆ ನನಗೆ ಹೋಗಲಾಗಿರಲಿಲ್ಲ. ಅನಾತ್ಮಕಥನದ ಮೊದಲಭಾಗವನ್ನು ರವಿ ಬೆಳಗೆರೆಗೆ ಅರ್ಪಿಸಿದ್ದು ನನಗೆ ನಿಜಕ್ಕೂ ಸೋಜಿಗ ಹುಟ್ಟಿಸಿದೆ. ರವಿ ಬೆಳಗೆರೆ ವಿಶಿಷ್ಟ ಛಾಪಿನ ಬರಹಗಾರ ಎನ್ನುವುದು ಸುಳ್ಳಲ್ಲವಾದರೂ ಬಹುತೇಕ ಅವರ ಬರವಣಿಗೆಗಳು ಧನಾತ್ಮಕವಾಗಿರುವುದಿಲ್ಲ; ಯಾರನ್ನೋ ಹೀಗಳೆಯಲಿಕ್ಕೆ, ಯಾರನ್ನೋ ಛೇಡಿಸಲಿಕ್ಕೆ, ಇನ್ಯಾರದೋ ತೇಜೋವಧೆಗೆ, ಮತ್ಯಾವುದೋ ಕೃತ್ಯವನ್ನು ತನಗೆ ಬೇಕಾದಂತೇ ತಿರುಗಿಸಿ ಹೇಳಲಿಕ್ಕೆ, ಕಾಮ-ಕ್ರೌರ್ಯಗಳನ್ನು ವೈಭವೀಕರಿಸಿ ಓದುಗರಲ್ಲಿ ಗಲಿಬಿಲಿ ಉಂಟುಮಾಡಲಿಕ್ಕೆ ಅವರ ಬರಹಗಳು ಸೀಮಿತವೆಂಬುದು ಅವರ ಜೀವಿತದ ಇಲ್ಲಿಯವರೆಗಿನ ಪ್ರತೀ ಅಧ್ಯಾಯವೂ ಹೇಳುತ್ತದೆ. ಇದೆಲ್ಲಾ ಗೊತ್ತಿದ್ದೂ ರಾತ್ರಿಕಂಡ ಬಾವಿಯಲ್ಲಿ ಹಗಲು ಬಿದ್ದರು ಅನ್ನೋ ಹಾಗೇ ಬೆಳಗೆರೆಗೆ ತಮ್ಮ ಕೃತಿಯನ್ನು ಅರ್ಪಿಸಿದ್ದಾರೆ!

ಭದ್ರಾವತಿಯಲ್ಲಿ ಡಿಪ್ಲೋಮಾ ಮಾಡುತ್ತಿರುವಾಗ ಹುಡುಗ ಎಚ್.ಎಸ್.ವಿ ಮತ್ತು ಅವರ ಗೆಳೆಯರು ಉಳಿದುಕೊಂಡಿದ್ದ ಪಕ್ಕದ ಮನೆಯಲ್ಲಿ ನವದಂಪತಿ ವಾಸವಿದ್ದರಂತೆ; ಅವರ ಮನೆತನದ ಹೆಸರು ಹಾಲಬಾವಿ ಯೋ ಹಂಸಬಾವಿಯೋ ಇರಬೇಕು. ನವದಂಪತಿಯಲ್ಲಿ ಹರೆಯದ ಹೆಂಡತಿಯನ್ನು ಕಂಡು ಥೇಟ್ ಅಂಥದ್ದೇ ಹುಡುಗಿ ತನ್ನವಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹಂಬಲಿಸಿದವರು ಎಚ್.ಎಸ್.ವಿ! ಉಕ್ಕೇರುತ್ತಿರುವ ಹರೆಯ ಮತ್ತೂ ಮತ್ತೂ ಕದ್ದು ಆಕೆಯನ್ನು ನೋಡುವ ಹುಚ್ಚನ್ನು ಹಿಡಿಸಿತ್ತು ಎಂದಿದ್ದಾರೆ: ತಮ್ಮ ಅನಾತ್ಮಕಥನದಲ್ಲಿ. ಕಪ್ಪಗಿನ ಹುಡುಗಿಯನ್ನು ಮನದುಂಬಿಕೊಂಡ ಕವಿಹೃದಯಕ್ಕೆ ಭದ್ರಾವತಿ ಬಿಟ್ಟ ಕೆಲವು ದಿನ ಒಮ್ಮುಖ ವಿರಹವೇದನೆ ಕಾಡಿತ್ತು; ಯಾರಲ್ಲಿಯೂ ಹೇಳಿಕೊಳ್ಳಲೂ ಆಗದ ಮನದಲ್ಲೇ ಅನುಭವಿಸುತ್ತ ಬಚ್ಚಿಟ್ಟುಕೊಳ್ಳಲೂ ಆಗದ ಭಾವದ ಹಾವುಗಳು ಮನವೆಂಬ ಬುಟ್ಟಿಯ ಮುಚ್ಚಳವನ್ನು ತಮ್ಮ ಹೆಡೆಯಿಂದ ತಟ್ಟಿ ತೆರೆಯಲು ಹೊರಡುತ್ತಿದ್ದವು!

ಕಾವ್ಯರಚನೆಯಲ್ಲಿ ಎಳವೆಯಲ್ಲೇ ಆಸಕ್ತಿ ಹೊಂದಿದ ಎಚ್.ಎಸ್.ವಿಯವರು ಪ್ರೌಢ ವಿದ್ಯಾಭ್ಯಾಸವನ್ನು ಹೊಳಲ್ಕೆರೆಯ ಮಲ್ಲಾಡಿಹಳ್ಳಿ ಮಾದಣ್ಣನವರ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮಾಡಿ ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದುಕೊಂಡರು. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿರಾಗಿದ್ದಾರೆ. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಂದರೆ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಇತ್ಯಾದಿಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಅನಾಯಾಸವಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಚ್.ಎಸ್ಸ್.ವಿ ಚಿತ್ರಕಲೆಯಲ್ಲೂ ನಿಪುಣರು ಎಂಬುದು ಹಲವರಿಗೆ ಗೊತ್ತಿಲ್ಲ! 


ಅನಿರೀಕ್ಷಿತವಾಗಿ ಎದುರುಬದುರು ಮನೆಯವರಾಗಿ, ಸಿಕ್ಕು-ಆಪ್ತರಾಗಿ ಅಪ್ಪಟ ಸ್ನೇಹಿತರಾದವರು ಎಚ್.ಎಸ್.ವಿ ಮತ್ತು ಬಿ.ಆರ್ ಲಕ್ಷ್ಮಣರಾವ್. ಲಕ್ಷ್ಮಣರಾಯರನ್ನು ಕೆದಕಿದರೆ ದಿನಗಟ್ಟಲೆ ಏಕೆ ತಿಂಗಳುಗಟ್ಟಲೆ  ಎಚ್.ಎಸ್.ವಿ ಯವರ ಬಗ್ಗೆ ಹೇಳುತ್ತಾರೆ. ಅಂದಹಾಗೇ ಸ್ನೇಹಕ್ಕೆ ಅಪಾರವಾದ ಗೌರವ ಕೊಡುತ್ತಾ ಲಕ್ಷ್ಮಣರಾಯರಲ್ಲಿನ ಕವಿಯನ್ನು ಗುರುತಿಸಿದ್ದೂ ಇದೇ ಎಚ್.ಎಸ್.ವಿಯವರೇ ಅಂದರೆ ತಪ್ಪಲ್ಲ; ಹಾಗಂತ ಬಿ.ಆರ್.ಎಲ್ ಬಾಯಲ್ಲೇ ನಾನು ಕೇಳಿದ್ದೇನೆ. ಈ ಇಬ್ಬರ ಆ ಸ್ನೇಹ ಹಸಿರಾಗಿರಲಿ. 

ಕಮಲ ಕೆಸರಿನಲ್ಲೇ ಅರಳಬಹುದಾದರೂ, ಬಹುತೇಕ ಜೀವಕೋಟಿಗಳ, ಸಸ್ಯಕೋಟಿಗಳ, ವ್ಯಕ್ತಿಗಳ ಬೆಳವಣಿಗೆಯಲ್ಲಿ ಅವುಗಳ/ಅವರುಗಳ ಎಳವೆಯ ಪರಿಸರ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಬಾಲ್ಯದಲ್ಲಿ ತಮ್ಮ ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ನೀಡಿದವು ಎನ್ನುತ್ತಾರೆ ಎಚ್.ಎಸ್.ವಿ.  ಬದುಕೇ ಬರವಣಿಗೆ ಎನಿಸಿದಾಗ ಬರಹಗಾರನಿಗೆ ಬಿಡುವೆಲ್ಲಿಯದು? ದಿನನಿತ್ಯದ ತಮ್ಮ ಹಲವು ಸಾಹಿತ್ಯಕ ಕೆಲಸಗಳ ನಡುವೆಯೇ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡವರು ಎಚ್.ಎಸ್.ವಿ. ’ಚಿನ್ನಾರಿಮುತ್ತ’, ’ಕೊಟ್ರೇಶಿ ಕನಸು’, ’ಕ್ರೌರ್ಯ’, ’ಕೊಟ್ಟ’, ’ಮತದಾನ’ ಚಲನಚಿತ್ರಗಳಿಗೆ ಹಾಡುಗಳನ್ನು ಬರೆದುಕೊಟ್ಟಿದ್ದರೆ ಇನ್ನೂ ಕೆಲವಕ್ಕೆ ಸಂಭಾಷಣೆ ಬರೆದುಕೊಟ್ಟಿದ್ದಾರೆ. ದೂರದರ್ಶನ ’ಯಾವ ಜನ್ಮದ ಮೈತ್ರಿ’, ’ಸವಿಗಾನ’, ’ಮುಕ್ತ’ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದುಕೊಟಿದ್ದಾರೆ. ’ಮಕ್ಕಳ ಗೀತೆಗಳು’, ’ಅನಂತ ನಮನ’, ’ತೂಗುಮಂಚ’, ’ಸುಳಿಮಿಂಚು’, ’ಅಪೂರ್ವ ರತ್ನ’, ’ಭಾವಭೃಂಗ’- ಧ್ವನಿ ಸುರಳಿಗಳಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿವೆ. 
 

ಪ್ರತಿಭೆಗೆ ದೊರೆತ ವಿಶೇಷ ಗೌರವ ಪುರಸ್ಸರಗಳು:

* ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ದೇವರಾಜ ಬಹದ್ದೂರ್ ಪ್ರಶಸ್ತಿ
* ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
* ಬಿ.ಎಚ್. ಶ್ರೀಧರ ಪ್ರಶಸ್ತಿ
* ಆರ್ಯಭಟ ಸಾಹಿತ್ಯ ಪ್ರಶಸ್ತಿ
* ಮೈಸೂರು ಅನಂತಸ್ವಾಮಿ ಪ್ರಶಸ್ತಿ
* ೨ ಬಾರಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ
* ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ’ಗಂಧವ್ರತ.’


ಪ್ರಕಟಿತ ಬರಹಗಳು:
===================

ಪರಿವೃತ್ತ(೧೯೬೮)
ಬಾಗಿಲು ಬಡಿವ ಜನಗಳು(೧೯೭೧)
ಮೊಖ್ತಾ(೧೯೭೪)
ಸಿಂದಬಾದನ ಆತ್ಮಕಥೆ(೧೯೭೭)
ಒಣ ಮರದ ಗಿಳಿಗಳು(೧೯೮೧)
ಮರೆತ ಸಾಲುಗಳು(೧೯೮೩)
ಸೌಗಂಧಿಕ(೧೯೮೪)
ಇಂದುಮುಖಿ(೧೯೮೫)
ಹರಿಗೋಲು(೧೯೮೫)
ವಿಸರ್ಗ(೧೯೮೮)
ಎಲೆಗಳು ನೂರಾರು(೧೯೮೯)
ಅಗ್ನಿಸ್ತಂಭ(೧೯೯೦)
ಎಷ್ಟೊಂದು ಮುಖ(೧೯೯೦)
ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
ವಿಮುಕ್ತಿ(೧೯೯೮)
ಭೂಮಿಯೂ ಒಂದು ಆಕಾಶ(೨೦೦೦)
ಮೂವತ್ತು ಮಳೆಗಾಲ(೨೦೦೧)

ಪ್ರಕಟಗೊಂಡ ಕಥೆಗಳು
=======================

ಬಾಣಸವಾಡಿಯ ಬೆಂಕಿ(೧೯೮೦)
ಪುಟ್ಟಾರಿಯ ಮತಾಂತರ(೧೯೯೦)

ಕಾದಂಬರಿಗಳು
=============

ತಾಪಿ(೧೯೭೮)

ಸಾಹಿತ್ಯಚರಿತ್ರೆ
===============

ಕೀರ್ತನಕಾರರು(೧೯೭೫)

ವಿಮರ್ಶೆ
========

ನೂರು ಮರ, ನೂರು ಸ್ವರ(೧೯೮೩)
ಮೇಘದೂತ(೧೯೮೯)
ಕಥನ ಕವನ(೧೯೯೦)
ಆಕಾಶದ ಹಕ್ಕು(೨೦೦೧)

ಅನುಭವ ಕಥನ
================

ಕ್ರಿಸ್ಮಸ್ ಮರ(೨೦೦೦)


ಸಂಪಾದನೆ
==========

ಶತಮಾನದ ಕಾವ್ಯ(೨೦೦೧)


ನಾಟಕಗಳು
===========

ಹೆಜ್ಜೆಗಳು(೧೯೮೧)
ಒಂದು ಸೈನಿಕ ವೃತ್ತಾಂತ(೧೯೯೩)
ಕತ್ತಲೆಗೆ ಎಷ್ಟು ಮುಖ(೧೯೯೯)
ಚಿತ್ರಪಟ(೧೯೯೯)
ಉರಿಯ ಉಯ್ಯಾಲೆ(೧೯೯೯)
ಅಗ್ನಿವರ್ಣ(೧೯೯೯)
ಸ್ವಯಂವರ(ಅಪ್ರಕಟಿತ);


ಅನುವಾದ
========

ಋತುವಿಲಾಸ(ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)


ಪ್ರಬಂಧ
=========
ಕನ್ನಡದಲ್ಲಿ ಕಥನ ಕವನಗಳು(ಪಿ.ಎಚ್.ಡಿ ಪ್ರಬಂಧ:೧೯೮೭)


ಮಕ್ಕಳ ಸಾಹಿತ್ಯ
===============

ಸಿ.ವಿ.ರಾಮನ್(೧೯೭೪)
ಹೋಮಿ ಜಹಾಂಗೀರ ಭಾಭಾ(೧೯೭೫)
ಸೋದರಿ ನಿವೇದಿತಾ(೧೯೯೫)
ಬಾಹುಬಲಿ(೨೦೦೦)


ಕವನಗಳು
==========

ಹಕ್ಕಿಸಾಲು(೧೯೮೭)
ಹೂವಿನ ಶಾಲೆ(೧೯೯೭)
ಸೋನಿ ಪದ್ಯಗಳು(೨೦೦೧)
ನದೀತೀರದಲ್ಲಿ


ಸಂದ ಪ್ರಶಸ್ತಿಗಳು
==================

ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೭೭
ತಾಪಿ-ದೇವರಾಜ ಬಹಾದ್ದೂರ ಪ್ರಶಸ್ತಿ-೧೯೭೮
ಅಮಾನುಷರು-ಸುಧಾ ಬಹುಮಾನ೧೯೮೧
ಹೆಜ್ಜೆಗಳು- ರಂಗಸಂಪದ ಬಹುಮಾನ-೧೯೮೦
ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ-೧೯೮೫
ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೫
ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೬
ಋತುವಿಲಾಸ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ-೧೯೮೮
ಎಷ್ಟೊಂದು ಮುಗಿಲು ಬಿ.ಎಚ್.ಶ್ರೀಧರ ಪ್ರಶಸ್ತಿ-೧೯೯೦
ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩
ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೭
ಸ್ವಯಂವರ(ಅಪ್ರಕಟಿತ)-ಉಡುಪಿ ರಂಗಭೂಮಿ ಪುರಸ್ಕಾರ

’ಕವಿನೆನಪುಗಳು’ ಮಾಲಿಕೆಯಲ್ಲಿ ಆಗಿಹೋದ ಮತ್ತು ಈಗಿರುವ ಕವಿಗಳ ಕುರಿತು ಆಗಾಗ ಬರೆಯುತ್ತಲಿದ್ದೇನೆ. ಕವಿ-ಸಾಹಿತಿಗಳನ್ನು ನೇರವಾಗಿ ನೋಡುವುದು ನನಗಿಷ್ಟವಾದ ವಿಷಯ. ಅವರ ಜೊತೆ ಒಂದಷ್ಟು ಸಮಯ ಕಳೆದರೆ ಅಲ್ಲಿ ಸಿಗಬಹುದಾದ ಅಮೃತತುಲ್ಯ ಜ್ಞಾನಧಾರೆಯಲ್ಲಿ ಹಾಗೊಮ್ಮೆ ಮೀಯುವಾಸೆ. ’ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ಎಂದ ಪಂಪನಂತೇ ಭಾವುಕ ಮನಕ್ಕೆ ಜನ್ಮವಿದ್ದರೆ ಮತ್ತಿದೇ ಕನ್ನಡದಲ್ಲೇ ಪುನರಪಿ ಹುಟ್ಟುವ ಬಯಕೆ! ಸರಳ ಸಜ್ಜನ ಎಚ್.ಎಸ್.ವಿಯವರು ನನ್ನ ಬ್ಲಾಗಿಗೂ ಒಮ್ಮೆ ಬಂದು ಹರಸಿದ್ದಾರೆ. ಜೂನ್ ತಿಂಗಳು ಬಂದಾಗ ಅವರ ಹುಟ್ಟುಹಬ್ಬದ ನೆಪದಲ್ಲಿ ಹಲವು ಜನ ಅವರನ್ನು ಕಾಣಬಯಸುತ್ತಾರೆ. ಮೊನ್ನೆಯಂತೂ ಅವರೇ ಬರೆದ ಕಾವ್ಯಗಳಧಾರೆ ಗಾಯಕ/ಗಾಯಕಿಯರ ಕಂಠಗಳಲ್ಲಿ ಹೊರಹೊಮ್ಮಿತು ಎಂದು ಕೇಳಿಯೇ ಸಂತಸಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಎಚ್.ಸ್.ವಿಯವರು ಬಹುಕಾಲ ನಮ್ಮೊಟ್ಟಿಗಿರಲಿ, ನಮ್ಮಂಥವರಿಗೆ ಇನ್ನೂ ಹಲವು ಕೃತಿಗಳನ್ನು ಬಡಿಸಲಿ, ಬರಹಗಳ ಗದ್ದೆ-ತೋಟಗಳಲ್ಲಿ ಫಸಲು ಹುಲುಸಾಗಿ ಬರುವಂತೇ ಪ್ರೇರೇಪಿಸಲಿ ಎಂಬ ಪ್ರಾರ್ಥನೆಯೊಂದಿಗೆ ಎಚ್.ಎಸ್.ವಿಯವರಿಗೆ ನನ್ನ ವಂದನೆಗಳು, ಅಭಿನಂದನೆಗಳು.

’ನಮ್ಮೂರಲ್ಲಿ’ ಎಂಬ ಸಿನಿಮಾಕ್ಕಾಗಿ ಎಚ್.ಎಸ್.ವಿ ಬರೆದ ಒಂದು ಅಪರೂಪದ ಹಾಡು ನಿಮಗಾಗಿ :    

Wednesday, June 20, 2012

ಮಳೆಹುಡುಗಿ



ಚಿತ್ರಋಣ: ಅಂತರ್ಜಾಲ 

ಅರಿಕೆ : 


ನನ್ನಾತ್ಮೀಯ ಓದುಗ ಬಳಗವೇ, ಮಿತ್ರರೇ, 

ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ದಿನವಹಿ ಅನೇಕರು ನನ್ನ ಸ್ನೇಹಕೋರುತ್ತಿದ್ದೀರಿ, ಅನೇಕರು ನನ್ನ ಬರಹಗಳನ್ನು ಆಸ್ವಾದಿಸುತ್ತಿದ್ದೀರಿ. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ನಿಮಗೆ ವೈಯ್ಯಕ್ತಿಕವಾಗಿ ನಾನು ಸ್ಪಂದಿಸಲಾಗದಿದ್ದರೂ ಸಾಮೂಹಿಕವಾಗಿ ನಿಮ್ಮೆಲ್ಲರಿಗೂ ಆಗಾಗ ನನ್ನ ಬರಹಗಳ ಮೂಲಕ ಸಿಗುತ್ತಲೇ ಇದ್ದೇನೆ. ಯಾರನ್ನೇ ಆಗಲಿ ಕಡೆಗಣಿಸಿದೆನೆಂಬ ಭಾವನೆ ಬೇಡ. ಬರಹಗಾರನಿಗೆ ಸಮಯದ ಅಭಾವ ಸಹಜ, ಸಿಗುವ ಸಮಯದಲ್ಲಿ ಕೆಲಹೊತ್ತು ಭಾವಲೋಕ, ಕೆಲಹೊತ್ತು ಅಧ್ಯಯನ, ಕೆಲಹೊತ್ತು ಅಧ್ಯಾಪನ, ಇನ್ನೂ ಕೆಲಹೊತ್ತು ಉದರನಿಮಿತ್ತದ ಕೆಲಸಗಳು ಹೀಗೇ ಸಮಯದ ಹೋಳುಗಳು ಹಂಚಿ ಹೋಗುತ್ತವೆ. ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ಮಾಡಿದಾಗಿನಿಂದ ಬರಹವನ್ನೇ ಉದ್ಯಮವನ್ನಾಗಿಯೂ ಅಂಗೀಕರಿಸಿದ್ದೇನೆ; ಅದರಲ್ಲೇ ಪ್ರಾಮಾಣಿಕತೆಯಿಂದ ದೇವರನ್ನೂ ಕಾಣಲು ಪ್ರಯತ್ನಿಸುತ್ತೇನೆ. ಈ ನಡುವೆ ಹತ್ತಿರದ ನೆಂಟರುಗಳ/ಸ್ನೇಹಿತರುಗಳ ಮನೆಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ನಾನು ಅಷ್ಟಾಗಿ ಹೋಗಲಾಗಲಿಲ್ಲ; ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಡಗಿಹೋಗಿದ್ದರಿಂದ ಬ್ಲಾಗ್ ಬರವಣಿಗೆಗಳಿಗೂ ವಿಳಂಬನೀತಿ ಅನುಸರಿಸಿದ್ದೇನೆ. ಆಮಂತ್ರಿಸಿದ್ದರೂ ಆಗಮಿಸದಿದ್ದುದಕ್ಕೆ ಹಲವರ ಆಕ್ಷೇಪಣೆಗಳನ್ನೂ ಎದುರಿಸಿದ್ದೇನೆ; ಅನಿವಾರ್ಯತೆಯಿಂದ ಭಾಗವಹಿಸಲಾಗದ್ದು ಮುಂದೆ ಅವರಿಗೆ ಅರಿವಾದಾಗ ಸರಿಹೋಗುತ್ತದೆಂಬ ವಿಶ್ವಾಸವನ್ನೂ ಇಟ್ಟುಕೊಂಡಿದ್ದೇನೆ. 

ಅಪರೂಪಕ್ಕೊಮ್ಮೆ ಹೀಗೆ ಮಳೆಯಲ್ಲಿ ತೆರಳುವಾಗ ಮಳೆಯೆಂಬ ಹುಡುಗಿಯ ನೆನಪಾಯ್ತು. ಅವಳ ಅಪ್ಪ-ಅಮ್ಮ, ಬೇರು-ಬಿತ್ತು ಎಲ್ಲದರ ವಿವರಗಳನ್ನು ಲೆಕ್ಕಹಾಕಲು ಕುಳಿತ ಮನದಲ್ಲಿ ಹೊಸದೊಂದು ಭಾವಗೀತೆ ಹುಟ್ಟಿಕೊಂಡಿತು. ಅದನ್ನೇ ಇವತ್ತು ನಿಮಗೆ ಉಪಾಹಾರವಾಗಿ ಬಡಿಸುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹಕ್ಕೆ, ಪ್ರೀತಿಗೆ, ನಿಮ್ಮ ಒಡನಾಟಕ್ಕೆ, ನಿಮ್ಮ ಓದಿಗೆ-ಸ್ಪಂದಿಸುವಿಕೆಗೆ ಸತತ ಆಭಾರಿಯಾಗಿದ್ದೇನೆ. ನೇರವಾಗಿ ಸಂವಹಿಸಲಾಗದಿದ್ದರೂ ನನ್ನ ಕೃತಿಗಳ ಮೂಲಕ ನಿಮ್ಮೊಡನೆ ವಿ.ಆರ್.ಭಟ್ ಎನಿಸಿದ್ದೇನೆ. ಸದಭಿರುಚಿಯ ಸಾಹಿತ್ಯದ ಓದಿನ ಗೀಳು ನಿಮ್ಮಲ್ಲಿ ಸದಾ ಉಕ್ಕುತ್ತಿರಲಿ, ಬರೆಯುವ ಕೆಲವು ಕೃತಿಗಳಾದರೂ ನಿಮ್ಮೆಲ್ಲರನ್ನೂ ರಂಜಿಸಲಿ ಎಂದು ಆಶಿಸುತ್ತಾ, ಬಯಸುತ್ತಾ ನಿಮ್ಮನ್ನು ಉಪಾಹಾರಕ್ಕೆ ಆಹ್ವಾನಿಸುತ್ತಿದ್ದೇನೆ-ಹೀಗೆ ಬನ್ನಿ, ಧನ್ಯವಾದಗಳು:      


ಮಳೆಹುಡುಗಿ 

ಶರಧಿಯೊಡಲಿನ ನೀರೆ ಸೂರ್ಯನಿಗೆ ಮನಸೋತು
ಹೊರಹೊರಟು ಗುಪ್ತಮಾರ್ಗದಿ ನಭಕೆ ನೆಗೆದು
ಭರದಿಂದ ಸಾಗುತ್ತ ಬರಸೆಳೆಯೆ ರವಿಯವನ
ಶರವೇಗದಲಿ ಹೇಗೆ ನಡೆವಳದೊ ಕಾಣೆ !


ಹಿರಿಹೊನ್ನ ಕಿರಣಗಳ ಬೆಡಗುರಾಯನ ಕಂಡು
ಗರಿಗರಿಯ ದಿರಿಸುಗಳ ಧರಿಸಿ ನಡೆಯುವಳೋ?
ಬರಿದಾಗಿ ಒಣಗುತ್ತ ಬಾಯ್ದೆರೆದ ಬಯಲುಗಳ
ಸರಸರನೆ ದಾಟುತ್ತ ಮುಂದೆ ಸಾಗುವಳೋ?


ಚರನಂತೆ ಗೋಚರಿಸಿ ಬಿರುಗಣ್ಣ ತೆರದಷ್ಟು
ತಿರೆಯೆಡೆಗೆ ತಿರುಗಿದನ ಹಿಡಿದು ಕಾಡುವಳೋ?
ಹರವಾದ ವಸುಧೆಯನು ಬೆಳಬೆಳಗಿ ರಂಜಿಸಿದ
ದೊರೆರಾಯನಾಟಕ್ಕೆ ಮರುಳಾಗಿರುವಳೋ?


ಹರಿಯನ್ನು ಹರನನ್ನು ಸರಸಿಜೋದ್ಭವನನ್ನು
ಗುರಿಹಿಡಿದು ತಲ್ಪಿದಳು ಹೆಣ್ಣುತಾನವಳು
ಅರಿವುಂಟೆ ಈ ಜಗಕೆ ಮಹಿಳೆಯೊಳತೋಟಿಯದು ?
ಮೆರೆಯುವಳು ಎಲ್ಲೆಡೆಗು ಭಾವರೂಪದೊಳು


ಅರೆರೆ ಅಲ್ಲೇನಾಯ್ತು ನಡುನಡುವೆ ನಿಂತಿಹಳು ?
ಮರೆಯಾದ ಮಿತ್ರನನು ಹುಡುಕಿಸೋಲುವಳೇ?
ಹಿರಿಯಲೋಸುಗ ನುಗ್ಗಿ ಪೈಪೋಟಿ ಅನುಭವಿಸಿ
ಬರಿಗೈಯ್ಯ ತಿರುವಿದನ ಕಂಡು ಬಳಲಿಹಳೇ?


ಸೊರಗಿ ಸೊಂಟದ ನೋವು ಸಿಗದಕ್ಕೆ ಸಮಯದಲಿ
ಮರುಗಿ ಮಮ್ಮಲ ತನ್ನ ಒಮ್ಮುಖದ ನಡೆಗೆ
ಕರಗಿ ಕಂಬನಿಯಾಗಿ ಹರಿದಿಹಳು ಭುವಿಯಲ್ಲಿ
ನೆರೆಬಂತು ನದಿಗೆಲ್ಲ ಅವಳ ಕೋಪದಲಿ !



Sunday, June 17, 2012

ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ!

ಚಿತ್ರಋಣ: ಅಂತರ್ಜಾಲ
ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ! 

ಇಂತಹ ವಿಷಯಗಳನ್ನು ಬರೆಯುತ್ತಲೇ ಇದ್ದೇನೆ. ಇತ್ತೀಚೆಗೆ ದಿನಪತ್ರಿಕೆಯೊಂದನ್ನು ವೇದಿಕೆಯಾಗಿ ಬಳಸಿಕೊಂಡು ಕನ್ನಡದ ಸ್ವರ ವ್ಯಂಜನಗಳ ಬಗ್ಗೆ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಬಗ್ಗೆ ಪುಂಕಾನುಪುಂಕವಾಗಿ ಲೇಖನಗಳನ್ನು ವಿಶದೀಕರಿಸುವ ಹೊಸ ಅನಾಮಧೇಯ ಸಂಘವೊಂದು ಬೆಳೆಯುತ್ತಿದೆ! ಕನ್ನಡದ ಬೆಳವಣಿಗೆಗೆ ನಮ್ಮ ಭಾಷೆಯಲ್ಲಿನ ಕೆಲವು ಅಕ್ಷರಗಳ ಮತ್ತು ಮಹಾಪ್ರಾಣಗಳ ಬಳಕೆಯೇ ಕಾರಣ ಎಂಬ ಅವರ ವಿಚಿತ್ರಗತಿಯ ಅನಿಸಿಕೆ ತೀರಾ ಬಾಲಿಶವಾಗಿ ತೋರಿಬರುತ್ತಿದೆ. ಭಾಷಾ ಬೆಳವಣಿಗೆಗೆ ಭಾಷೆಯ ಮೂಲಾಕ್ಷರಗಳು, ಸ್ವರಗಳು, ವ್ಯಂಜನಗಳು ಅಡ್ಡಿಯಾಗಿವೆ ಎಂದು ಇದೇ ಹೊಸದಾಗಿ ಮತ್ತು ನನ್ನ ಜೀವಿತಾವಧಿಯಲ್ಲಿ ಇದೇ ಮೊದಲಾಗಿ ನಾನು ಕೇಳುತ್ತಿದ್ದೇನೆ. ಮಹಾಪ್ರಾಣದ ಉಪಯೋಗ ಬೇಡ ಎನ್ನುವ ಆ ಸಂಘದ ಸದಸ್ಯರು ’ಭಟ್ಟ’ ಎನ್ನುವ ಪದವನ್ನು ’ಬಟ್ಟ’ ಎಂದು ಬರೆದರೆ ’ಮಧ್ಯ’ ಎನ್ನುವ ಪದವನ್ನೂ ಹಾಗೇ ಬಳಸಬೇಕಾಯ್ತಲ್ಲವೇ? ಈಗಾಗಲೇ ಅಪಭ್ರಂಶವನ್ನೇ ಕನ್ನಡವೆಂದು ಆಡತೊಡಗಿದ ಕೆಲವರಿಗೆ ’ಮಧ್ಯ’ಕ್ಕೂ ’ಮದ್ಯ’ಕ್ಕೂ ಅಂತರವೇ ಇಲ್ಲಾ ಅನ್ನಿ!   

ಈ ಬೆಳವಣಿಗೆಗೆ ಕಾರಣ ಭಾಷೆಯಲ್ಲ, ಬದಲಾಗಿ ಕನ್ನಡದಲ್ಲಿ ಸಂಸ್ಕೃತವೆಂಬ ’ಪುರೋಹಿತಶಾಹಿ ಭಾಷೆ’ಯ ಪದಗಳು ಬೇಡ ಎಂಬ ಅನಿಸಿಕೆ ಅವರದಾಗಿದೆ. ಮೊನ್ನೆ ಒಬ್ಬ ಪತ್ರಕರ್ತರಲ್ಲಿ ನಾನು ಮಾತನಾಡುತ್ತಿದ್ದೆ: ಎಡಪಂಥೀಯರಾದರೆ ಜನ ಬೇಗ ಗುರುತಿಸುತ್ತಾರೆ ಅದೇ ಬಲಪಂಥೀಯರ ಜೊತೆಗಿದ್ದರೆ ಹತ್ತರ ಜೊತೆ ಹನ್ನೊಂದರಂತೇ ಇರಬೇಕಾಗುತ್ತದೆ ಎಂದು ನಕ್ಕೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿದರು. ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ಎತ್ತಿ ತೋರಿಸಿ ತಮಗೆ ಅದ್ದೂರಿಯ ಪ್ರಚಾರ, ಸ್ಥಾನಮಾನ ಸಿಗಲಿ ಎಂಬ ಉದ್ದೇಶದಿಂದ ’ಎಡಪಂಥ’ವೆಂಬ ವಾಮಮಾರ್ಗದಿಂದ ಸಮಾಜಕ್ಕೆ ಹೊಸವ್ಯಕ್ತಿಯಾಗಿ ಪ್ರವೇಶಿಸುವುದು ನಿಜಕ್ಕೂ ಸ್ವಾಗತಾರ್ಹವಲ್ಲ. ಪುರದ ಹಿತವನ್ನೇ ಬಯಸುವ ಜನರಿಗೆ ಪುರೋಹಿತರು ಎನ್ನುತ್ತೇವೆ. ’ಪುರೋಹಿತಶಾಹಿ’ ಎಂಬ ಪದವನ್ನು ಯಾವ ಪುಣ್ಯಾತ್ಮ ಸೃಷ್ಟಿಸಿದನೋ ನನ್ನರಿವಿಗಿಲ್ಲ. ಪುರೋಹಿತರು ಮಾಡಿಸುವ ಯಾಗ, ಯಜ್ಞ, ಹೋಮ ನೇಮಗಳು ಸಮಾಜದ ಒಳಿತಿಗಾಗಿ ವೇದಗಳಲ್ಲಿ ಹೇಳಲ್ಪಟ್ಟಿವೆ ಮತ್ತು ವೈಜ್ಞಾನಿಕವಾಗಿ ಈಗಾಗಲೇ ಅವುಗಳ ಉತ್ತಮ ಪರಿಣಾಮಗಳು ನಿಷ್ಕರ್ಷೆಗೆ ಒಳಗಾಗಿವೆ. ಅಷ್ಟಕ್ಕೂ ಯಾವ ಪುರೋಹಿತನೂ ಇಂಥಾ ಹೋಮವನ್ನು ಮಾಡಿಸಲೇ ಬೇಕು ಎಂದು ತಾನಾಗಿ ಯಾರನ್ನೂ ಹುಡುಕಿ ಹೋಗಿ ಹೇಳಿದ್ದು ಸುಳ್ಳು. ಮಾಡುವ ಪೂಜೆ, ಹೋಮ-ನೇಮಗಳಿಂದ ಏನೂ ಸಿಗದಿದ್ದರೂ ಕೊನೇಪಕ್ಷ ಕರ್ತೃವಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ.

ವೇದಮಂತ್ರಗಳು, ಉಪನಿಷತ್ತು-ಭಾಷ್ಯಗಳು ಮೊದಲಾದವೆಲ್ಲಾ ಸಂಸ್ಕೃತದಲ್ಲಿ ಉಪಲಬ್ಧವಿದ್ದುದರಿಂದ ಅವುಗಳನ್ನು ತಿಳಿದುಕೊಳ್ಳಲು ಪುರೋಹಿತವರ್ಗ ಸಂಸ್ಕೃತಭಾಷೆಯನ್ನು ಓದಿತೇ ಹೊರತು ಅದು ಯಾರಿಗೂ ಗೊತ್ತಾಗದ ಭಾಷೆಯಾಗಿ ತಮಗೆ ಮಾತ್ರ ಸೀಮಿತವಾಗಿರಲಿ ಎಂಬ ದುರುದ್ದೇಶ ಅವರದಲ್ಲ. ಅಷ್ಟಕ್ಕೂ ಭಾರತೀಯ ಮೂಲದ ಸಂಸ್ಕೃತ ಭಾಷೆಯಷ್ಟು ಸೊಗಸಾದ ಭಾಷೆ ಪ್ರಪಂಚದಲ್ಲೇ ಇನ್ನೊಂದಿಲ್ಲ ಎಂಬುದನ್ನು ಎಲ್ಲೇ ನಿಂತು ಹೇಳಲೂ ಹೆದರುವ ವ್ಯಕ್ತಿ ನಾನಲ್ಲ. ಭಾರತೀಯ ಮೂಲ ಸಂಸ್ಕೃತಿಯನ್ನು ಸಾರಿದ್ದೇ ಸಂಸ್ಕೃತ ಎಂದರೆ ತಪ್ಪಲ್ಲ. ಅಂತಹ ಸಂಸ್ಕೃತ ಭಾಷೆಯನ್ನು ಪುರೋಹಿತವರ್ಗಗಳು, ಬ್ರಾಹ್ಮಣರು ಬಳಸಿದ್ದಾರೆ, ಬಳಸುತ್ತಿದ್ದಾರೆ ಮತ್ತು ಬಳಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅದನ್ನು ’ಸತ್ತ ಭಾಷೆ’ ಎಂದು ದೂರುವುದು ಕಾಣುತ್ತಿದೆ; ಈ ಬೆಳವಣಿಗೆ ವಿಷಾದನೀಯ ಮತ್ತು ಖಡಾಖಂಡಿತವಾಗಿಯೂ ಖಂಡನೀಯ. ಭಾಷೆ ಚೆನ್ನಾಗಿರಬೇಕೆಂದರೆ ಅದಕ್ಕೆ ಅದರದ್ದೇ ಆದ ನಿರ್ದಿಷ್ಟ ಛಂದಸ್ಸು, ವ್ಯಾಕರಣಗಳ ನಿರ್ಬಂಧನೆ ಇರಲೇಬೇಕು. ಬೇರೇ ಭಾಷೆಗಳಿಂದ ಪದಗಳನ್ನು ಸ್ವೀಕರಿಸಬಹುದೇ ಹೊರತು ತನ್ನ ಮೂಲಸ್ವರೂಪದಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳಬಾರದು-ಆಗಮಾತ್ರ ಭಾಷೆ ಸದಾ ಎತ್ತರದ ಸ್ಥಾನದಲ್ಲಿರುತ್ತದೆ ಎಂಬುದು ಭಾಷಾತಜ್ಞರ ಅನಿಸಿಕೆಯಾಗಿದೆ; ಅದು ನನ್ನ ಅನಿಸಿಕೆಯೂ ಕೂಡಾ.

ಹರಿಯುವ ನದಿಯು ಕಾಲಕ್ರಮದಲ್ಲಿ ತನ್ನ ಪಾತ್ರವನ್ನು ಅಲ್ಲಲ್ಲಿ ಬದಲಾಯಿಸಿದಂತೇ ನಮ್ಮ ಕನ್ನಡ ಆಗಾಗ ಬದಲಾಗಿದೆ! ನದಿಯಲ್ಲಿ ಹೂಳು ಸೇರಿಕೊಂಡಂತೇ ಕನ್ನಡದಲ್ಲಿ ಬೇರೇ ಭಾಷೆಗಳ ಪದಗಳೂ ಅತಿಯಾಗಿ ವಿಜೃಂಭಿಸುತ್ತಿವೆ. ಸಂಸ್ಕೃತವೊಂದನ್ನುಳಿದು ಉಳಿದ ಭಾಷೆಗಳ ಅತಿಯಾದ ಪ್ರಭಾವವೇ ಕನ್ನಡದಮೇಲೆ ಜಾಸ್ತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ತನ್ನ ಮೂಲವನ್ನೇ ಮರೆತು ಹಲವನ್ನು ಸ್ವೀಕರಿಸಿದರೆ ಆಗ ಬೆಳವಣಿಗೆಯ ಬದಲಿಗೆ ವಿನಾಶದ ಹಾದಿ ಹಿಡಿಯಬೇಕಾದೀತು! ಕೇವಲ ’ಪುರೋಹಿತಶಾಹಿಯ ಭಾಷೆ’ ಎಂಬ ಒಂದೇ ಕಾರಣಕ್ಕೆ ಸಂಸ್ಕೃತವನ್ನು ದೂರುತ್ತಾ ಕನ್ನಡದಿಂದ ಸಂಸ್ಕೃತವನ್ನು ಆಮೂಲಾಗ್ರವಾಗಿ ಕಿತ್ತೆಸೆಯಲು ಹೊರಟ ಅಸಂಘಟಿತ ’ಅನಾಮಧೇಯ ಸಂಘ’ದವರು ಕನ್ನಡದಲ್ಲಿನ  ಹಲವು ಮೂಲ ಪದಗಳು ಸಂಸ್ಕೃತದ ಕೊಡುಗೆಗಳೇ ಆಗಿವೆ ಎಂಬುದನ್ನು ಕಿಂಚಿತ್ತಾದರೂ ಯೋಚಿಸಬೇಕಾಗುತ್ತದೆ. ಉದಾಹರಣೆಗೆ: ನೀರು ಎಂಬ ಪದಕ್ಕೆ ಕನ್ನಡದಲ್ಲಿ ಯಾವ ಪದವನ್ನು ಬಳಸುತ್ತೀರಿ? ಜಲ, ಉದಕ...ಇವೆಲ್ಲಾ ಸಂಸ್ಕೃತಮೂಲದವೇ ಆಗಿವೆ. ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯವನ್ನೂ ಮುಚ್ಚಿಸುವ ತರಾವರಿ ಪ್ರಯತ್ನಗಳು ನಡೆದಿವೆ!

ದೇಶವಾಸಿಗಳ ಔನ್ನತ್ಯವನ್ನು ಬಯಸಿದ ಸಮಾಜದ ಒಂದು ಸ್ವಸ್ಥ ವರ್ಗ, ಮಾನವ ಬದುಕಿನ ಉತ್ತಮ ಅಂಶಗಳನ್ನು ಕಲೆಹಾಕಿದ ಅಥವಾ ಬದುಕುವ ಕಲೆಯನ್ನು ತಿಳಿಸಿಕೊಡುವ ಉನ್ನತ ಆಕರ ಗ್ರಂಥಗಳನ್ನು ಬಳಸುವ ಸಲುವಾಗಿ, ಅತಿವಿಶಿಷ್ಟವಾದ ದೇವನಾಗರೀ ಲಿಪಿಯನ್ನು ಕಲಿಯುತ್ತದೆ, ಸಂಸ್ಕೃತ ಭಾಷೆಯನ್ನು ಕಲಿಯುತ್ತದೆ ಎಂದಾದಾಗ, "ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ-ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತ ಭಾಷೆ ಬಳಸಿಕೊಳ್ಳುತ್ತಾರೆ-ಹೋಮ-ನೇಮ ಮಾಡಿಸುತ್ತಾರೆ" ಎಂಬ ಅಪವಾದ ಹೊರಬೇಕಾಗಿ ಬಂದಿರುವುದು ಸಮಾಜದಲ್ಲಿ ಎಡಪಂಥೀಯ ರಕ್ಕಸಕುಲದ ಬೆಳವಣಿಗೆ ಸಂಖ್ಯೆಯಲ್ಲಿ ವಿಪರೀತವಾಗುತ್ತಿರುವುದನ್ನು ತಿಳಿಸುತ್ತದೆ. ವಿದೇಶೀ ಮೂಲದ, ಲಂಗುಲಗಾಮು ರಹಿತ ಸ್ವೇಚ್ಛಾಚಾರದ ಲಿವ್-ಇನ್ ಭಾರತಕ್ಕೆ ಬಂದಮೇಲಂತೂ ದೇಶವಾಸಿಗಳ ಮೂಲ ಸಂಸ್ಕೃತಿಯ ಮೇಲೆ ಅದರ ಅಡ್ಡ ಪರಿಣಾಮ ಈಗಾಗಲೇ ಆಗುತ್ತಿದೆ ಎಂಬುದು ದೃಗ್ಗೋಚರವಾದ ವಿಷಯ. ನಾನು ಹಿಂದೊಮ್ಮೆ ಬರೆದಿದ್ದೆ: ಮರಾಠೀ ಮೂಲದ ಉದ್ಯಮಿಯೊಬ್ಬರು, ಕಳೆದ ಸಾಲಿನಲ್ಲಿ ಮುಂಬೈಯಲ್ಲಿ ಅದ ಏಕಕಾಲದ ಅತಿವೃಷ್ಟಿಯಂದು ಯಾರ್ಯಾರೋ ಯಾರ್ಯಾರಿಗೋ ತಮ್ಮ ಮನೆಗಳಲ್ಲಿ ಅತಿಥಿಗಳಾಗಿ ಕರೆದು ಆಶ್ರಯ ನೀಡಿ ಸತ್ಕರಿಸಿದ್ದನ್ನು ನೆನೆದರು-ಭಾರತೀಯ ಸಂಸ್ಕೃತಿಯನ್ನು ನೆನೆದು ಕಣ್ಣೀರಾದರು ಎಂದು. ಹೆಚ್ಚಿನ ಆರ್ಥಿಕತೆ ಇದ್ದರೂ ಇಲ್ಲದಿದ್ದರೂ ಇರುವುದರಲ್ಲೇ ಸಂತೃಪ್ತಭಾವವನ್ನು ಪಡೆಯುವ ಕಲೆಯನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟಿದೆಯೇ ವಿನಃ ಕ್ರೆಡಿಟ್ ಕಾರ್ಡ್ ಕಲ್ಚರನ್ನಲ್ಲ! ’ಢೋಂಗೀ ಧನಿಕ’ರಾಗಿ ಒಳಗೊಳಗೇ ಅನುಭವಿಸುವ ಆರ್ಥಿಕ-ಮಾನಸಿಕ ಒತ್ತಡಗಳನ್ನಲ್ಲ. 

ದಿನಪತ್ರಿಕೆಯೊಂದರ ಸಂಪಾದಕರು ಬದಲಾಗುತ್ತಿದ್ದಂತೆಯೇ ಆ ಪತ್ರಿಕೆಯ ಅಂಕಣಗಳೂ, ಅಂಕಣಕಾರರೂ ಬದಲಾಗಿದ್ದು ಕಾಣಿಸುತ್ತಿದೆ. ಸಮಾಜಕ್ಕೆ ನೀತಿಯನ್ನು, ಸನ್ಮಾರ್ಗವನ್ನು ಬೋಧಿಸುವ ನೈತಿಕ ಜವಾಬ್ದಾರಿಯನ್ನು ಮಾಧ್ಯಮ ಮಾಡುತ್ತಿತ್ತು; ಆದರೆ ಈಗ ಅದು ಹಾಗಿಲ್ಲ. ’ಮಾಧ್ಯಮ’ ಎಂಬುದು ’ಹೆಚ್ಚಿನ ಸಂಪಾದನೆಯ-ಮಾಧ್ಯಮ’ವಾಗಿ ಪರಿಣಮಿಸಿದ ಈ ಕಾಲದಲ್ಲಿ ಬೇಕಾದ್ದು-ಬೇಡಾದ್ದು ಎಲ್ಲವನ್ನೂ ಸೇರಿಸಿಕೊಂಡು ಪತ್ರಿಕೆಯೋ ವಾಹಿನಿಯೋ ಸಮಾಜವನ್ನು ತಲ್ಪುತ್ತಿದೆ. ದಿನವೂ ವಾಹಿನಿಗಳಲ್ಲಿ ಕೆಟ್ಟಘಟನೆಗಳು, ಕೊಲೆ-ಸುಲಿಗೆ-ದರೋಡೆಗಳು ವೈಭವೀಕರಿಸಲ್ಪಡುತ್ತಿವೆ. ಒಬ್ಬಾತ ಹನ್ನೆರಡು ಮದುವೆಯಾಗಿದ್ದ, ಪೋಲೀಸರು ಕೇಳಿದಾಗ ಆತ ಹೇಳಿದ: "ಟಿವಿ ಯಲ್ಲಿ ಒಬ್ಬ ಮಾಡಿದ್ದನ್ನು ತೋರಿಸಿದ್ದರು ಅದೇರೀತಿ ನಾನೂ ಮಾಡಿದೆ!" ನಿತ್ಯವೂ ವೀಕ್ಷಕರಲ್ಲಿ, ಓದುಗರಲ್ಲಿ ಮಕ್ಕಳ ಸಂಖ್ಯೆಯೂ ಒಂದು ಭಾಗವಿರುತ್ತದಷ್ಟೇ? ಕೆಟ್ಟದನ್ನೇ ಒಳ್ಳೆಯದೇನೋ ಎಂಬಂತೇ ಎತ್ತಿ ಎತ್ತಿ ತೋರಿಸುವ, ಓದಿಸುವ ಮಾಧ್ಯಮವಿರುವಾಗ ಎಳೆಯ ಮಕ್ಕಳ ಮನಸ್ಸಿನಮೇಲೆ ಅದು ವ್ಯತಿರಿಕ್ತ ಪರಿಣಾಮ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವರದಿಯಾದ ಒಂದು ಘಟನೆ ಹೀಗಿದೆ: ಮನೆಯಲ್ಲಿ ಹೋಳಿಗೆ ಮಾಡುತ್ತಿದ್ದರು, ಅನುಕೂಲಸ್ಥರ ಮಹಡಿಮನೆ, ಬಾಲಕ ಮಹಡಿಗೆ ತೆರಳಿದ. ನೇಣುಹಾಕಿಕೊಳ್ಳುವ ದೃಶ್ಯವನ್ನು ಆತ ಟಿವಿಯಲ್ಲಿ [’ಮರುಸೃಷ್ಟಿ’ಯಲ್ಲಿ]ನೋಡಿದ್ದನಂತೆ-ಅದನ್ನು ಕ್ರಿಯಾತ್ಮಕವಾಗಿ ನಡೆಸಿದ. ಹೋಳಿಗೆಮಾಡಿ ಮುಗಿಯುವ ವೇಳೆಗೆ ಮನೆಜನ ಬಾಲಕನನ್ನು ಹುಡುಕಿದರು-ಬಾಲಕ ಸತ್ತುಹೋಗಿದ್ದ! ಸಂವೇದನೆಯೇ ಇಲ್ಲದ ಮತ್ತು ಸಂಪಾದನೆಯೇ ಮುಖ್ಯವಾದ ಮಾಧ್ಯಮಗಳಿಂದ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ?

ಹೊಸ ಸಂಪಾದಕತ್ವದಲ್ಲಿ ಜನರನ್ನು ತಲ್ಪುತ್ತಿರುವ ದಿನಪತ್ರಿಕೆಯೊಂದು ಜನರಿಗೆ ’ಬಯ್ಗುಳ’ದ ಬಗ್ಗೆ ಅಂಕಣವನ್ನೇ ಆರಂಭಿಸಿದ ಹಾಗಿದೆ! ಸಭ್ಯ ಮತ್ತು ಸ್ವಸ್ಥ ಸಮಾಜಕ್ಕೆ ಬಯ್ಗುಳದ ಬಗ್ಗೆಯೂ ಹೊಸದಾಗಿ ತಿಳುವಳಿಕೆ ನೀಡಬೇಕೇ? ನೋಡೀ ಸ್ವಾಮೀ ಸಂಸ್ಕೃತದಂತಹ ’ಪುರೋಹಿತಶಾಹಿ ಭಾಷೆ’ ಇಂತಹ ಕೆಟ್ಟ ಯೋಜನೆ ಮತ್ತು ಯೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ! ನವಿಲು ಕುಣಿಯಿತು ಎಂದು ಕೆಂಬೂತನೂ ...ಎಂಬ ಗಾದೆ ನಿಮಗೆ ತಿಳಿದೇ ಇದೆ. ನಾಯಿಗೆ ಆಹಾರ ಸಿಗದಾಗ, ಸಿಕ್ಕ ಹಳೆಯ ಎಲುಬಿನ ತುಂಡನ್ನೇ ಅಗಿಯುತ್ತಾ, ತನ್ನ ದವಡೆಯಲ್ಲಿ ಗಾಯವಾಗಿ ಸೋರುವ ರಕ್ತವನ್ನೇ ತಾನು ಚಪ್ಪರಿಸುತ್ತದಂತೆ, ಅದೇರೀತಿ ಸುದ್ದಿಮನೆಯಲ್ಲಿ ಸಿಗುವ ಸುದ್ದಿಗಳು ಸಾಲದಾದಾಗ ಯಾ ಹೊಸತನವನ್ನು ಕೊಡುವ ಹುಚ್ಚುಹಂಬಲ ಅತಿಯಾದಾಗ ’ಬಯ್ಗುಳ’ದಂತಹ ವಿಪರೀತ ಅಂಕಣಗಳು ಒಡಮೂಡಲು ಸಾಧ್ಯ; ಇದಕ್ಕೆ ಸಂಪಾದಕರು ಕಾರಣವೋ ವರದಿಗಾರರು ಕಾರಣವೋ ಓದುಗರೇ ಹುಡುಕಬೇಕಾಗಿದೆ.

ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ’ಪತ್ರಿಕಾಕರ್ತರನ್ನು ಗೌರವಿಸುವ ಕಾರ್ಯಕ್ರಮ’ಕ್ಕೆ ಒಮ್ಮೆ ಡೀವೀಜಿಯವರು ಹೋಗಿದ್ದರಂತೆ. ಮೈಸೂರು ಸರಕಾರ ಪತ್ರಿಕಾಕರ್ತರನ್ನು ಹೊಗಳಿ ಅವರಿಗೆ ಒಂದಷ್ಟು ಹಣಕೊಟ್ಟು ಕಳಿಸುವ ಇರಾದೆ ಮಹಾರಾಜರ ಕಾಲದಲ್ಲೂ ಇತ್ತು ಎನಿಸುತ್ತದೆ. ಸನ್ಮಾನ ಮುಗಿದು ಡೀವೀಜಿ ಬೆಂಗಳೂರಿಗೆ ಮರಳಿ ಬಂದ ಕೆಲವೇ ದಿನಗಳಲ್ಲಿ ಅವರಿಗೆ  ೨೦೦ ರೂ. ತಲ್ಪಿತಂತೆ! ತನಗೆ ತಲ್ಪಿದ ಇನ್ನೂರು ರೂಪಾಯಿಯನ್ನು ಹಿಡಿದುಕೊಂಡು ನೇರವಾಗಿ ಸಂಬಂಧಪಟ್ಟ ಕಚೇರಿಗೆ ತೆರಳಿದ ಡೀವೀಜಿಯವರು ಯಾಕೆ ಹಾಗೆ ತನಗೆ ಹಣ ಕಳಿಸಿದ್ದು ಎಂದು ಕೇಳಿದರಂತೆ. "ನೀವು ಮೈಸೂರಿಗೆ ಬರ-ಹೋಗುವ ಖರ್ಚೂ ಸೇರಿದಂತೇ ನಿಮಗೆ ಖರ್ಚುಗಳಿರುತ್ತವೆ-ಅದಕ್ಕಾಗಿ" ಎಂದು ಬಂದ ಉತ್ತರಕ್ಕೆ ದಂಗಾದ ಡೀವೀಜಿ ಆ ಇನ್ನೂರು ರೂಪಾಯಿಗಳನ್ನು ಸರಕಾರಕ್ಕೆ ಮರಳಿಸಿದರು. ಪತ್ರಕರ್ತನಿಗೆ ತನ್ನ ದಿನನಿತ್ಯದ ಖರ್ಚಿನ ಭಾಗವಾಗಿ ಪತ್ರಿಕೆಗೆ ವರದಿಮಾಡಲು ವಿನಿಯೋಗಿಸುವ ಸಮಯ-ಪರಿಕರಗಳೂ ಸೇರಿವೆ ಎಂಬುದು ಅವರ ಅನಿಸಿಕೆಯಾಗಿತ್ತಂತೆ. ಹಣವನ್ನೇ ಗುರಿಯಾಗಿಸಿಕೊಂಡು ಅವರೆಂದೂ ಪತ್ರಿಕಾಕರ್ತರಾಗಲಿಲ್ಲ; ಡೀವೀಜಿ ತಮ್ಮ ತಪ್ಪುಗಳನ್ನು ಬರೆದುಬಿಡುತ್ತಾರೆ ಎಂಬ ಹೆದರಿಕೆಯೂ ಸರಕಾರಕ್ಕೆ ಇಲ್ಲದಿರಲಿಲ್ಲ! ಅಂದಿನ ಸರಕಾರದ ಕೆಲಸಕ್ಕೆ ಮುಂಚಿತವಾಗಿ ಸಲಹೆ ಪಡೆಯುವ ಸಲುವಾಗಿ ಸ್ವತಃ ವಿಶ್ವೇಶ್ವರಯ್ಯನವರೇ ಡೀವೀಜಿಯವರ ಕಚೇರಿಗೆ ಬರುತ್ತಿದ್ದರಂತೆ!! 

ಹಲವು ಬೇಡದ ಹೂರಣಗಳನ್ನು ತುಂಬಿಸಿ ವರದಿಯನ್ನು ಒಪ್ಪಿಸಿ, ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದೇವೆಂದು ಬಡಾಯಿಕೊಚ್ಚಿಕೊಳ್ಳುವುದಕ್ಕಿಂತಾ, ಸಮಾಜಮುಖಿಯಾಗಿ ಕೆಲವೇ ವರದಿಗಳನ್ನು ಸಲ್ಲಿಸುವುದು ಹಿತಕರವೆನಿಸುತ್ತದೆ. ಕೆಲಸಕ್ಕೆ ಬಾರದ ವ್ಯಕ್ತಿಗಳ ಒಣಕಥೆಗಳನ್ನೂ ಜಂಬದ ಸರಕುಗಳನ್ನೂ ಬಿಂಬಿಸುವುದಕ್ಕಿಂತಾ ಸಶಕ್ತವಾದ ಮತ್ತು ಮೊನಚಾದ ಲೇಖನಗಳು ಪ್ರಕಟಿಸಲ್ಪಟ್ಟರೆ, ಅವು ಖಡ್ಗದಂತೇ ಕೆಲಸಮಾಡಬಲ್ಲವು ಮತ್ತು ಆಳುವ ಪ್ರಭುಗಳಿಗೆ [ಅವರಿಗೆ ಒಪ್ಪಿಕೊಳ್ಳುವ ಸ್ವಭಾವ ಇದ್ದರೆ] ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಹೇಳಬಲ್ಲವು; ಅಶಕ್ತವಾದ ಮತ್ತು ರೋಗಗ್ರಸ್ತ ಮನಸ್ಸುಗಳ ವಿಚಿತ್ರ ತೆವಲುಗಳುಳ್ಳ ಬರಹಗಳಿಗಿಂತ ಈ ದಾರಿ ಉತ್ತಮವೆನಿಸುತ್ತದೆ. ಎಲ್ಲಿಯವರೆಗೆ ಎಡಪಂಥೀಯ ಅಧುನಿಕ ರಾಕ್ಷಸರ ಮನದಲ್ಲಿ, ಬಾಯಲ್ಲಿ, ಕೃತಿಯಲ್ಲಿ  ಸುಖಾಸುಮ್ನೇ ’ಪುರೋಹಿತಶಾಹಿ’ ಮತ್ತು ಪುರೋಹಿತಶಾಹಿ ಭಾಷೆ [ಸಂಸ್ಕೃತ]’ ಎಂಬ ಧೋರಣೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಸ್ವಸ್ಥ ಸಮಾಜದ ನಿರ್ಮಾಣ ’ಕನ್ನಡಿಯಲ್ಲಿ ಕಂಡ ಗಂಟಾ’ಗಿರುತ್ತದೆಯೇ ವಿನಃ ಅದು ನಮಗೆಟುವುಕಿದಿಲ್ಲ! ಕನ್ನಡದ ಬೆಳವಣಿಗೆಯೂ ಆಗ ಸಾಧ್ಯವಾಗುವುದಿಲ್ಲ.  


Friday, June 15, 2012

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಚಿತ್ರಋಣ : ಅಂತರ್ಜಾಲ 

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಒತ್ತಿಹಾಕುವ ಡಬ್ಬದ ಮುಚ್ಚಳ ಗಟ್ಟಿಯಾಗಿದ್ದರೆ ತೆರೆಯಲು ಬಳಸುವುದು ಉಗುರುಗಳನ್ನು. ನೋಡುವುದಕ್ಕೆ ಉಗುರುಗಳು ಬರೇ ಅಲಂಕಾರಿಕ, ಆದರೆ ಅವುಗಳ ಕೆಲಸಮಾತ್ರ ಜಾಸ್ತಿ ಪರಿಗಣಿತವಾಗುವುದಿಲ್ಲ. ಮನೆಯ ಮುಂದಿನ ಕುನ್ನಿಗೆ ಅಂತಹ ಕೆಲಸವಾದರೂ ಏನು ? ಆದರೆ ಅದರ ಕೆಲಸ ಏನು ಎಂಬುದು ಅದಕ್ಕೆ ಮಾತ್ರ ಗೊತ್ತು! ಅದಕ್ಕೇ ನಮ್ಮಲ್ಲೊಂದು ಗಾದೆ ಇದೆ: " ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ." ಈಗೀಗ ನಗರಗಳಲ್ಲಿ ಕುನ್ನಿಗಿಂತಾ ಪಾಪ ಕುನ್ನಿ ಮಾಲೀಕರಿಗೇ ಹೆಚ್ಚಿನ ಕೆಲಸ. ನಿತ್ಯ ಕುನ್ನಿ ಮೈ ತೊಳೆಸಬೇಕು, ಕೂದಲು ಬಾಚಬೇಕು, ಸ್ನೋ ಪೌಡರ್, ಬಟ್ಟೆ ಬೆಲ್ಟು [ಚಡ್ಡಿ, ಟೈ] ವಗೈರೆ ಹಾಕಬೇಕು. ಊಟಕ್ಕೆ ದುಬಾರಿ ಬೆಲೆಯ, ಎಲುಬಿನ ಆಕಾರದ ಬ್ರಾಂಡೆಡ್ ತಿನಿಸುಗಳನ್ನು ತಂದುಕೊಡಬೇಕು. ಬೆಳ್ಳಂಬೆಳಗ್ಗೆ ಪಕ್ಕದ ಮನೆಯವ ಏಳುವ ಮೊದಲೇ ಕುನ್ನಿಯನ್ನು ಒಯ್ದು ಅವರ ಮನೆ ಕಂಪೌಂಡ್ ಹೊರಗಿನ ರಸ್ತೆಯಲ್ಲಿ ಕಕ್ಕ-ಸೂಸು ಮಾಡಿಸಿಕೊಂಡು ವಾಪಸ್ಸಾಗಬೇಕು. ಸಾಯಂಕಾಲ ಕುನ್ನಿಗೆ ವಾಕಿಂಗ್ ಮಾಡಿಸಬೇಕು. ಛೆ ಛೆ ಪ್ರೀತಿಯ ನಾಯಿಗೆ ಅಷ್ಟೂ ಮಾಡದಿದ್ದರೆ ಹೇಗೆ ಪಾಪ ?

ನಮ್ಮಲ್ಲೆಲ್ಲಾ ಗಾಂವ್ಟಿ ಕುನ್ನಿಗಳಿದ್ದವು. ಹೆಸರೇ ದಾಸ, ಹಂಡ, ಕಾಳ ಇತ್ಯಾದಿ ಇರುತ್ತಿದ್ದು ನಾವು ತಿನ್ನುವ ಆಹಾರವನ್ನೇ ಕುನ್ನಿಗೆ ಕೊಡುತ್ತಿದ್ದೆವು. ಕುನ್ನಿಗೆ ನಿತ್ಯ ಸೇವೆ ಎಂದು ಹೆಚ್ಚಿನದೇನೂ ಇರುತ್ತಿರಲಿಲ್ಲ. ಮನೆಯ ಅಂಗಳದ ಮೂಲೆಯಲ್ಲಿ ಮಲಗಿದ್ದು ತನ್ನ ಕೆಲಸಗಳನ್ನು ಮಾಡಿಕೊಂಡಿರುತ್ತಿತ್ತು. ಈಗ ನಗರಗಳಲ್ಲಿ ಕುನ್ನಿಗೆ ನಮ್ಮ ಜೊತೆಗೇ ಬೆಡ್ಡು, ನಮ್ಮ್ ಜೊತೆಗೇ ಬ್ರೆಡ್ಡು! "ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು" ಎಂಬ ಹೊಸ ಗಾದೆಯನ್ನು ಬರೆದಿಟ್ಟಿದ್ದೆ-ಈಗ ನಿಮಗೆ ಕೊಡುತ್ತಿದ್ದೇನೆ; ಸಾಂದರ್ಭಿಕವಾಗಿ ಉದಾರವಾಗಿ ಬಳಸಿಕೊಳ್ಳಬಹುದು! ಪುಣ್ಯಕ್ಷೇತ್ರಗಳಲ್ಲಿ ದೇವರಿಗೆ ಆ ಸೇವೆ ಈಸೇವೆ ಎಂತ ನೂರೆಂಟು ಸೇವೆಗಳನ್ನು ನಡೆಸುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಅಲ್ಲಿ ದೇವರಿಗೆ ಹೊತ್ತಿನಿಂದ ಹೊತ್ತಿಗೆ ಹೇಗೆ ಸೇವೆಗಳು ಸಲ್ಲಿಸಲ್ಪಡುತ್ತವೋ ಹಾಗೇ ಅಥವಾ ಅದಕ್ಕಿಂತಾ ಉತ್ತಮ ಸಮಯ ಪರಿಜ್ಞಾನದಿಂದ ನಗರವಾಸಿಗಳು ತಮ್ಮ ಕುನ್ನಿಗೆ ಸೇವೆ ಸಲ್ಲಿಸುತ್ತಾರೆ. ಹೆಣ್ಣಾದರೆ ಕಾಡಿಗೆ, ಬಿಂದಿ ಬಣ್ಣದ ರಿಬ್ಬನ್ನು, ಲೇಸ್ ಹಚ್ಚಿದ ಫ್ರಾಕು, ಇನ್ನೇನು ಲಿಪ್ ಸ್ಟಿಕ್ ಕೂಡಾ ಬಳಸುವ ದಿನ ಹತ್ತಿರದಲ್ಲೇ ಇದೆ!

ಜಾತೀ ನಾಯಿಗಳಲ್ಲಿ ಹಲವು ವಿಧಗಳು ಅಂತ ತಿಳಿದಿದೆಯಲ್ಲಾ, ಅವುಗಳ ಮುಖವನ್ನೊಮ್ಮೆ ನೋಡುತ್ತಿರಿ: ಕೆಲವು ಪೋಲೀಸ್ ಇನ್ಸ್ಪೆಕ್ಟರ್ ನಂತೇ ನೋಡುತ್ತಿರುತ್ತವೆ, ಕೆಲವುಗಳ ಮುಖ ಟ್ರಾಫಿಕ ಪೇದೆ ಮೂಗಿಗೆ ಏರ್ ಫಿಲ್ಟರ್ ಹಾಕಿಕೊಂಡಾಗ ಹೇಗೆ ಕಾಣಿಸುತ್ತಾನೋ ಹಾಗಿರುತ್ತದೆ, ಕೆಲವು ಹಳೇಕಾಲದ ದಫೇದಾರರು ನಡೆದಂತೇ ನಡೆಯುತ್ತಾ ನಿಧಾನವಾಗಿ ಅಡ್ಡಡ್ಡ ಆಚೀಚೆ ನೋಡುವ ದೊಡ್ಡ ಮುಖದವು, ಇನ್ನು ಕೆಲವು ಮೈಗಿಂತಾ ಮುಖವೇ ಉದ್ದವೇನೋ ಎಂಬ ರೀತಿ ಮುಖವನ್ನು ಪಡೆದಿವೆ, ಕೆಲವಕ್ಕೆ ಉರುಟುರುಟು ಮುಖ, ಇನ್ನೂ ಕೆಲವಕ್ಕೆ ದೊಡ್ಡ ಕಣ್ಣು- ಕಣ್ಣ ಹುಬ್ಬಿನಲ್ಲಿ ಉದ್ದುದ್ದ ಕೂದಲು. ಬಣ್ಣದಲ್ಲಿ ಕೆಲವು ಸಿಮೆಂಟ್ ವಿಗ್ರಹಗಳಂತೇ ಕಂಡರೆ ಕೆಲವು ಹಂಡುಪಟ್ಟೆ [ಕಪ್ಪು-ಬಿಳುಪು, ಕಂದು ಬಿಳುಪು]. ಕೇಸರಿ ಬಣ್ಣದ ಕುನ್ನಿಯೊಂದು ಎದುರಾದಾಗ ಬಿಜೆಪಿಗೆ ಹೇಳಿಮಾಡಿಸಿದ್ದು ಎನಿಸಿತಾದರೂ ಕೈಗೆ ಮಿಶ್ರಬಣ್ಣದ್ದನ್ನ ಹೇಗೋ ಒದಗಿಸಿಕೊಂಡರೂ ದಳದಕ್ಕೆ ಏನು ಮಾಡೋಣ ಎಂಬ ಚಿಂತೆ ಜಾಸ್ತಿಯಾಗ್ಹೋಯ್ತು ಹೀಗಾಗಿ ಸತ್ಕೊಂಡ್ ಹೋಗ್ಲಿ ಎಂದು ಸುಮ್ನಾಗಿಬಿಟ್ಟೆ. ಅಂದಹಾಗೇ ಹಸಿರು ಮತ್ತು ನೀಲಿ ನಾಯಿಗಳು ಜಗತ್ತಿನ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿಯಾದರೂ ಬಳಕೆಯಲ್ಲಿರಬಹುದು ಎಂದು ಈಗ ಹೊಸ ಆಲೋಚನೆ ಒಡಮೂಡಿದೆ.

ಹಳ್ಳಿಕಡೆ ಹತ್ತುಮಂದಿ ಸಾಕಿದ ಬಡಕಲು ನಾಯಿ ಕಂಡಾಗ, ಪಾಪ ನಾಯಿ ಜಾತಿ ಎಂದು ನಾವು ತಮಾಷೆಯಾಡುವುದಿತ್ತು. ಸಣಕಲು ಶರೀರದ, ಇನ್ನೇನು ಸತ್ತೇ ಹೋಗುವುದೇನೋ ಎಂಬಂತಿರುವ ಅಂತಹ ಕುನ್ನಿಗಳಿಗೆ ಎಲ್ಲೋ ಬೀದಿಗಳಲ್ಲೋ ತೋಟದ ಬದುಗಳಲ್ಲೋ ಜನ ತಿಂದು ಮಿಕ್ಕಿದ್ದನ್ನು ಬಿಸಾಕಿದರೇ ಉಂಟು ಇಲ್ಲದಿದ್ದರೆ ಇಲ್ಲ. ಕೆಲವೊಮ್ಮೆ ಅವುಗಳನ್ನು ಕಂಡಾಗ ನಿಜವಾದ ’ಉಪವಾಸ’ದ ಅರ್ಥವೇನು ಮತ್ತು ಉಪವಾಸ ಮಾಡುವುದು ಹೇಗೆ ಎಂಬುದನ್ನು ಅವುಗಳಿಂದ ತಿಳಿದುಕೊಳ್ಳಬಹುದೇನೋ ಅನಿಸುತ್ತಿತ್ತು. ಹಾದಿಯಲ್ಲಿ ಸಿಗುವ ಹುಚ್ಚರನ್ನು ಕಂಡೋ ಇನ್ಯಾವುದೋ ಸದ್ದನ್ನು ಆಲಿಸಿಯೋ ಅವೂ ಕೂಗುತ್ತವೆ!  ಅಂದಹಾಗೇ ನಮ್ಮ ಹಳ್ಳೀಲಿ ಒಬ್ಬರ ಮನೇಲಿ ಒಂದು ಕುನ್ನಿ ಸಾಕಿದ್ದರು. ಅವರ ಲೆಕ್ಕದಲ್ಲಿ ಬಹಳ ಪರಾಕ್ರಮಿ! ನಡೆದಿದ್ದಿಷ್ಟೇ: ಒಂದು ಕಾರ್ತೀಕದ ರಾತ್ರಿ ಊರ ನಡುವಿನ ದೇವಸ್ಥಾನದಲ್ಲಿ ರಾತ್ರಿಯ ದೀಪೋತ್ಸವ ಮುಗಿಸಿಕೊಂಡು ನಾನು ಮರಳುತ್ತಿದ್ದೆ. ಕಾಲುದಾರಿಯಲ್ಲಿ ಕೇರಿಯ ಮೂಲಕ ಸಾಗಿಬರುವಾಗ ಆ ಕುನ್ನಿ ಮಾಲೀಕರ ಮನೆ ಸಿಗುತ್ತಿತ್ತು. ರಾತ್ರಿ ೯ ಮೀರಿ ಹೋಗಿತ್ತು,  ಆ ಮನೆಯ ಆಜುಬಾಜು ದೀಪ ಕಾಣುತ್ತಿರಲಿಲ್ಲ. ಮಾಲೀಕರು ಒಂದೇ ಮಲಗಿರಬೇಕು; ಇಲ್ಲಾ ಇನ್ನೆಲ್ಲೋ ಹೋಗಿರಬೇಕು. ಸರಿ, ನನ್ನ ಪಾಡಿಗೆ ನಾನು ಟಾರ್ಚ್ ಹಾಕಿಕೊಂಡು ಸಾಗುತ್ತಾ ಬಂದಾಗ ದೂರದಿಂದಲೇ ಅವರ ನಾಯಿಯ ’ಘರ್ಜನೆ’ ಕೇಳುತ್ತಿತ್ತು. ಮುಂದೆ ಹಾದಿ ತುಳಿದರೆ ಎಲ್ಲಾದ್ರೂ ಕಚ್ಚಿಬಿಟ್ರೆ ಎಂಬ ಭಯ ನನ್ನಲ್ಲಿ ಉದ್ಭವವಾದರೂ, ನೋಡೋಣ ಅಂದ್ಕೊಂಡು  ಟಾರ್ಚನ್ನು ಸ್ವಲ್ಪ ಕೂಗುವ ನಾಯಿಯ ಮುಖದೆಡೆಗೆ ತಿರುಗಿಸಿದೆ, ಇಲ್ಲಾ ಸರಪಳಿ ಹಾಕಿಲ್ಲ, ದಪ್ಪ ನಾಯಿ ಬೇರೆ! ಮೈಮೇಲೆ ಹಾರಿದರೂ ಹಾರಿಬಿಡಬಹುದು ಎಂಬುದು ನನ್ನ ಆ ಕ್ಷಣದ ಅನಿಸಿಕೆ.             

ಯಾವಾಗ ಮುಖದಮೇಲೆ ಬೆಳಕು ಬಿತ್ತೋ ನಾಯಿ ಅವರ ಮನೆಯ ಆ ಕಡೆ ಪಕ್ಕಕ್ಕೆ ಸ್ವಲ್ಪ ಸರಿದ ಹಾಗೇ ಕಂಡಿತು. ಓಹೋ ಆ ಕಡೆ ಹೋಗಿ ಕ್ರಿಕೆಟ್ ಬೌಲರ್ ಥರಾ ಒಮ್ಮೆಲೇ ಜಿಗಿದು ಬರುತ್ತದೇನೋ ಎಂಬ ಅನುಮಾನ ಇದ್ದರೂ ಸ್ವಲ್ಪ ಧೈರ್ಯಮಾಡಿಕೊಂಡು ಮುಂದೆ ಹೆಜ್ಜೆಹಾಕಿ ಆ ಕಡೆ ಸರಿದ ನಾಯಿಗೆ ಮತ್ತೆ ಟಾರ್ಚ್ ಬೆಳಕು ಬಿಟ್ಟೆ. ನಾಯಿ ಆ ಮನೆಯ ಹಿಂದಕ್ಕೆ ಓಡಿಹೋಯ್ತು! ಏನಾಶ್ಚರ್ಯ, ನನಗೂ ನೋಡಿಬಿಡುವ ಹುಮ್ಮಸ್ಸು, ಮನೆಯ ಹಿಂದುಗಡೆ ನಾಯಿಯಿರುವ ಜಾಗದೆಡೆ ಹೋಗುತ್ತಾ ಮತ್ತೆ ಬೆಳಕು ಚೆಲ್ಲಿದೆ, ನಾಯಿ ಮನೆಯ ಪಕ್ಕದ ಎತ್ತರದ  ಜಾಗಕ್ಕೆ ಓಡಿಹೋಗಿ ಅಲ್ಲಿಂದ ಬೊಗಳು ಛೆ...ಛೆ ಘರ್ಜಿಸುತ್ತಿತ್ತು! ಇಷ್ಟೇ ಅಂದುಕೊಂಡು ಮನೆಯ ದಾರಿ ಹಿಡಿದೆ. ನಾನು ದೂರಸಾಗಿದ್ದನ್ನು ಕಂಡ ’ಹುಲಿ’ಯಂತಹ ಆ ನಾಯಿ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳಿ ’ಘರ್ಜಿಸ’ತೊಡಗಿತು. ಮಾರನೇ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಓರಗೆಯವರಲ್ಲಿ ಹೇಳಿಕೊಂಡು ನಕ್ಕದ್ದೇ ನಕ್ಕಿದ್ದು.

ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಿಗ್ಗೆ ಹಾಲುತರಲೆಂದು ನಾನು ಹೋದರೆ ಒಮ್ಮೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಹಾಲಿನ ಪ್ಯಾಕೆಟ್ ಗಳಿಂದ ತುಂಬಿದ ಪ್ಲಾಸ್ಟಿಕ್ ಬ್ಯಾಗೊಂದನ್ನು ನಾಯಿ ಬಾಯಲ್ಲಿ ಕಚ್ಚಿಕೊಂಡು ನಡೆದುಬರುತ್ತಿತ್ತು. ಅದರಿಂದ ಅನತಿ ದೂರದಲ್ಲಿ ಅದರ ಮಾಲೀಕರು ನಡೆದುಬರುತ್ತಿದ್ದರು. ಗುಡಾಣ ಹೊಟ್ಟೆಯ ಮಾಲೀಕರಿಗೆ ನಾಯಿ ಸಲ್ಲಿಸುವ ಸೇವೆಯನ್ನೂ ಮರೆಯಬಾರದಲ್ಲ! ಕೆಲವು ಮನೆಗಳಲ್ಲಿ ಯಜಮಾನ್ ನಾಯಿಗಳಿರುತ್ತವೆ! ಅವು ದಿನಪತ್ರಿಕೆಗಳನ್ನು ತೆರೆದು ಓದುವವರಂತೇ ತಿರುವಿಹಾಕುವುದನ್ನೂ ಮತ್ತೆ ಜೋಡಿಸಿ ಇಡುವ ಸರ್ಕಸ್ಸನ್ನೂ ಕಂಡಿದ್ದೇನೆ. ಇನ್ನು ಕೆಲವು ಮನೆಗಳಲ್ಲಿ ನಾಯಿಗೆ ಮಾಡಿರುವ ಗೂಡುಗಳ ಬಾಗಿಲುಗಳನ್ನು ಅವೇ ತೆರೆದುಕೊಂಡು ಒಳಗೆ ಹೋಗಿ ವಿಶ್ರಮಿಸುತ್ತವೆ. ಕೆಲವು ಮನೆಗಳ ನಾಯಿಗಳು ಅವುಗಳ ಮಾಲೀಕರು ನಡೆದಂತೇ ನಡೆಯುತ್ತವೆ: ಕೆಲವರು ಸ್ವಭಾವತಃ ವಿವಿಧ ರೀತಿಯಲ್ಲಿ ನಡೆಯುತ್ತಾರೆ, ಕೆಲವರು ನಡೆಯುವಾಗ ಇಡೀ ಶರೀರ ಹಳೇಗಡಿಯಾರದ ಲೋಲಕದ ರೀತಿ ಆ ಕಡೆ ಅರ್ಧ ಈ ಕಡೆ ಅರ್ಧ ವಾಲುತ್ತಾ ನಡೆಯುತ್ತಾರೆ, ಇನ್ನು ಕೆಲವರದು ಹವಾಲ್ದಾರ್ ನಡಿಗೆ, ಕೆಲವರು ಮಿಲಿಟ್ರಿ ರಿಟಾಯರ್ಡ್ ಇದ್ದಹಾಗೇ ನಡೆದರೆ ಮತ್ತೆ ಕೆಲವರು ಯಾಕಾದ್ರೂ ಬೇಕಿತ್ತು ಈ ಲೋಕ ಅಂದುಕೊಂಡವರ ಹಾಗೇ ನಡೆಯುತ್ತಾರೆ; ನಡಿಗೆಯಲ್ಲಿ ಅವರ ನಾಯಿಗಳು ಅವರುಗಳನ್ನೇರ್ ಅನುಸರಿಸುವುದನ್ನು ಕಂಡು ಬೆಕ್ಕಸಬೆರಗಾಗಿದ್ದೇನೆ-ಕಣ್ಣಲ್ಲೂ ಅದೆಂಥಾ ಭಾವನೆಯಪ್ಪಾ ಶಿವನೇ!

ಕೆಲವು ಮನೆಗಳಲ್ಲಿ ಕುನ್ನಿ ಮಾಲೀಕರೇ ಸಣಕಲು, ನಾಯಿ ಮಾತ್ರ ದಪ್ಪದಪ್ಪ. ಎತ್ತರದ ಕಾಡುಹಂದಿಯಂತಹ ನಾಯಿಯನ್ನು ಹೊಳೆಯುವ ದಪ್ಪದ ಸರಪಳಿ ಹಾಕಿ ಹಿಡಿದುಕೊಂಡು, ಸರ್ಕಸ್ಸಿನ ರಿಂಗ್ ಮಾಸ್ಟರ್ ಹತ್ತಿರ ಇರುವಂತಹ ಸ್ಟಿಕ್ ತೆಗೆದುಕೊಂಡು, ನಾಯಿಗೆ ಹಾಕಿರುವ ಹೊಟ್ಟೆ-ಕೈಕಾಲುಗಳನ್ನು ಸುತ್ತರಿದ ಬೆಲ್ಟನ್ನೂ ಹಿಡಿದುಕೊಂಡು ಅವರು ನಡೆದುಹೋಗುವಾಗ ಕುನ್ನಿ ಎಳೆದೆಡೆಗೆ ಅವರು ಸಾಗಬೇಕು ಪಾಪ! ಕುನ್ನಿ ಯಾವ ದಿಕ್ಕಿಗೆ ಎಳೆಯುತ್ತದೋ ಆ ದಿಕ್ಕಿಗೆ ಅವರು ಹೋಗುತ್ತಾರೆ. ಹಿಡಿದುಕೊಂಡವರು ಅವರಾದರೂ ಕಂಟ್ರೋಲ್ ಮಾಡುವುದು ನಡೆಯುವ ಕುನ್ನಿ ಎಂಬುದು ನನಗೆ ಆಗಾಗ ಕಾಣಿಸುವ ಮೋಜಿನ ಸಂಗತಿ. ಕೆಲವೊಮ್ಮೆ ಹೆದರಿದ್ದೂ ಇದೆ-ಯಾಕೆ ಗೊತ್ತೋ? ಸರಿಯಾಗಿ ಊಟವನ್ನೇ ಮಾಡದಂತಹ ಮಾಲೀಕನ ಕೈಯ್ಯಿಂದ ತಪ್ಪಿಸಿಕೊಂಡು ಎಲ್ಲಾದ್ರೂ ಮೈಮೇಲೆ ಹಾರಿಬಿಟ್ಟರೆ ಎಂದು. ಯಾರಿಗ್ಬೇಕು ಮಾರಾಯ್ರೆ? ಹದಿನಾಲ್ಕು ಲೋಕಗಳನ್ನೇ ತೋರಿಸುವಂತಹ ಯಾತನೆ ನೀಡುವ ಹೊಕ್ಕಳ ಸುತ್ತಿನ ಹದಿನಾಲ್ಕು ಇಂಜೆಕ್ಷನ್ನು, ಅಂದಹಾಗೇ ಈಗ ಅಲ್ಲೂ ಕಾಸಿನ ವ್ಯವಹಾರ! ಕಾಸು ಜಾಸ್ತಿ ಮಡಗಿದ್ರೆ ತೋಳಿಗೆ ನೀಡಬಹುದಾದ ಮೂರು ಇಂಜೆಕ್ಷನ್ನೂ ಉಂಟು, ಗೊತ್ತಾಯ್ತಲ್ಲ? ಕಾಸಿಲ್ಲದ ಬಡವನಿಗೆ ಹದಿನಾಕೇ ಗತಿ !

ಕೆಲವು ಮನೆಗಳಲ್ಲಿ ನಾಯಿಗಳೇ ಇರುವುದಿಲ್ಲ; ’ನಾಯಿಗಳಿವೆ ಎಚ್ಚರಿಕೆ’ ಎಂಬ ಬೋರ್ಡು ಮಾತ್ರ ಬರೆದಿರುತ್ತದೆ. ಅಂದಹಾಗೇ ತಿಮ್ಮೇಗೌಡರು ತಮ್ಮ ಮನೆ ಗೇಟಿಗೆ ’ನಾಯ್ಗೊಳವೆ ಹೆಚ್ಚರಿಕೆ’ ಎಂಬ ಬೋರ್ಡು ಹಾಕಿದ್ದು ಕಂಡಿದ್ದೆ. ವಾಡಿಕೆಯಿಂದ ಅವರು ಹೇಳಿದ್ದನ್ನು ’ಅಚ್ಚಗನ್ನಡ’ದಲ್ಲಿ ಬರೆದಿದ್ದು ತಮಿಳಿನ ಸೆಲ್ವಂ!  ಬೋರ್ಡು ಹಾಕಿದ ಮನೆಯಲ್ಲಿ ನಾಯಿಗಳಿಲ್ಲದಿದ್ದರೆ ಏನು ತಿಳಿದುಕೊಳ್ಳಬೇಕು ಎಂಬುದನ್ನು ನಿಮ್ಮ ಅನಿಸಿಕೆಗೆ ಬಿಟ್ಟುಬಿಡುತ್ತೇನೆ. ನಾಯಿಗಳಿದ್ದರೂ ಬೋರ್ಡು ಹಾಕದೇ ಇರುವ ದೊಡ್ಡ ಕಂಪೌಂಡಿನ ಮನೆಗಳೂ ಇವೆ. ಅಲ್ಲಿಗೆ ಅಕಸ್ಮಾತ್ ನುಗ್ಗಿದ ಮಾರ್ಕೆಟಿಂಗ್ ಹುಡುಗರ ಕಥೆ ಏನಾಗಿರಬೇಡ? ಮನೆಮನೆಗೆ ಮಾರ್ಕೆಟಿಂಗ್ ಮಾಡಲು ತೆರಳುವ ಹುಡುಗರಿಗೆ ಇನ್ನುಮೇಲೆ ಕಳಿಸುವ ಕಂಪನಿಯವರು ಭದ್ರತಾ ಕವಚವನ್ನೂ ಕೊಟ್ಟು ಕಳಿಸುವುದು ಒಳಿತು; ಬೀಳುವ ವಿಮಾನದಿಂದ ಹೊರಜಿಗಿದು ಪ್ಯಾರಾಚ್ಯೂಟ್ ಬಿಡಿಸಿಕೊಳ್ಳುವ ಯೋಧರಂತೇ, ಹಾರುವ ಕುನ್ನಿಯ ಎದುರು ತಟ್ಟನೆ ಎದ್ದುನಿಲುವ ಎತ್ತರದ ಬೇಲಿಯ ರೀತಿಯ ಕವಚವನ್ನು ಬಿಡಿಸಿಕೊಳ್ಳುವ ’ಮಾರ್ಕೆಟಿಂಗ್ ಯೋಧ’ರನ್ನು ತಯಾರುಮಾಡಿದರೆ ಒಳ್ಳೆಯದು.

ನಾಯಿಗಳನ್ನು ಕಾರಿನಲ್ಲಿ, ಬೈಕಿನಲ್ಲಿ ಕೂರಿಸಿಕೊಂಡು ಹೋಗುವುದು ಮಾಮೂಲಾಗಿಬಿಟ್ಟಿದೆ. ಕಾರಿನ ಹಿಂದುಗಡೆ ಸೀಟಿನಲ್ಲಿ ಕುಳಿತ ಕುನ್ನಿರಾಯರು ಆಗಾಗ ಕತ್ತನ್ನು ಹೊರಚಾಚಿ ಕಾಕಳಿಸುವುದು ನಮ್ಮಂತಹ ಓಡಾಟಪ್ರಿಯರಿಗೆ ಬೇಡವೆಂದರೂ ಎದುರಾಗುವ ಸನ್ನಿವೇಶ. ಹೀಗೇ ಒಮ್ಮೆ ಒಂದು ಸಿಗ್ನಾಲ್ ನಲ್ಲಿ ತಿರುಗಿ ನೋಡಿದೆ, ಆ ಕಡೆ ನಾಯಿಯೊಂದು ಕಾರಿನ ಕಿಟಕಿಯಿಂದ ನೋಡುತ್ತಿತ್ತು. ನನ್ನನ್ನು ನೋಡಿ ನಕ್ಕಿತೋ, ಅಪಹಾಸ್ಯ ಮಾಡಿತೋ ಅರಿಯೆ. ನನ್ನ ಮುಖ ತಿರುಗಿಸಿ ಮತ್ತೆಲ್ಲೋ ನೋಡಿ ನಿಮಿಷದ ನಂತರ ಮತ್ತೆ ನಾಯಿಯೆಡೆ ದೃಷ್ಟಿ ಹೋಯಿತು. ಆ ಕಡೆ ತಿರುಗಿದ್ದ ಕತ್ತನ್ನು ಮತ್ತೆ ನನ್ನೆಡೆ ತಿರುಗಿಸಿ ನೋಡಿದ ನಾಯಿಯ ಮುಖದಲ್ಲಿ ರಾಜಕೀಯ ಪುಢಾರಿಯ ಭಾವವನ್ನು ಕಂಡೆ! ಪಕ್ಕದಲ್ಲಿ  ಕುಳಿತ ವ್ಯಕ್ತಿ ಏನನ್ನೋ ಕೊಟ್ಟಿದ್ದನ್ನು ಬಾಯಲ್ಲಿ ಹಾಕಿಕೊಂಡು ಅಲ್ಲಾಡಿಸುವಾಗ ಸಿನಿಮಾ ಹೀರೋ ಪೋಸು ಕಂಡೆ! ಇನ್ನೊಮ್ಮೆ ಪಮೆರಿಯನ್ ನಾಯಿಯೊಂದು ಹಾಗೆ ನೋಡುತ್ತಿತ್ತು- ’ಹಿಂಭಾಗದ ಸೀಟಲ್ಲಿ ಕೂತ ಜಂಬದ ಹೆಂಗಸಿನ ನೋಟ’ವನ್ನು ಆಗ ಅದರ ಮುಖದಲ್ಲಿ ಕಂಡಿದ್ದೆ.

ಅಲಲಲಲಾ, ಗಂಗಾವತಿ ಪ್ರಾಣೇಶರು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ದೂರದಿಂದ ತಮಗೆ ಶಾಲು ಎಸೆದು ಸನ್ಮಾಸಿದ್ದನ್ನು ಹೇಳಿದ್ದು ನೆನಪಿಗೆ ಬಂತು! ನಮ್ಮ ಹಳ್ಳಿಗಳಲ್ಲಿ ದಾಸ, ಹಂಡ, ಕಾಳರಿಗೆ ಎಂದೂ ಪಾತ್ರೆಯಲ್ಲಿ ಊಟ ಹಾಕುತ್ತಿರಲಿಲ್ಲ. ಬಾಳೆಲೆಯ ತುಂಡು ಅದೂ ಇರದಿದ್ದರೆ ನೆಲದಮೇಲೇ ಬಡಿಸುವುದು ಪದ್ಧತಿಯಾಗಿತ್ತು. ಬೆಳಗಿನ ದೋಸೆಯನ್ನು ಹತ್ತಾರು ಸಲ ಎತ್ತರಕ್ಕೆ ಹಿಡಿದು, ಅವು ಮುಂಗಾಲೆತ್ತಿ ಹಾರುತ್ತಾ ಪಡೆಯಲು ಪ್ರಯತ್ನಿಸಿದಮೇಲೆ ಬೀಸಿ ಎಸೆಯುವುದಿತ್ತು. ತಿರುಗಾಟಕ್ಕೆ ಅವು-ಅವುಗಳ ಪಾಡಿಗೆ, ನಾವು-ನಮ್ಮ ಪಾಡಿಗೆ. ನಮಗೇ ಕಾರು,ಬೈಕು ಇರಲಿಲ್ಲ-ಇನ್ನು ಕುನ್ನಿಗಳಿಗೆಲ್ಲಿ ಬಂತು ಸ್ವಾಮೀ? ಅಪರೂಪಕ್ಕೆ ತೋಟತುಡಿಕೆಗಳಿಗೆ ನೀರು ಹಾಯಿಸುವಾಗ ಹರಿವ ನೀರಲ್ಲಿ ಅವು ಮಲಗೇಳುವುದು ಬಿಟ್ಟರೆ ಸಾಬೂನು ಹಾಕಿ ಸ್ನಾನಮಾಡಿಸಿದ ನೆನಪಿಲ್ಲ. ಬಿಸ್ಕೀಟು ನಮಗೇ ದುಬಾರಿಯಾಗಿ ನೆಂಟರು ತಂದರೆ ಮಾತ್ರ ದೊರೆಯುತ್ತಿದ್ದ ಆ ಕಾಲದಲ್ಲಿ ನಮ್ಮ ದಾಸ,ಹಂಡ, ಕಾಳ ಅದರ ಹೆಸರನ್ನು ಕೇಳಿದ್ದಾಗಲೀ, ಆಕಾರವನ್ನು ಜೀವಿತದಲ್ಲೇ ಕಣ್ಣಲ್ಲಿ ಕಂಡಿದ್ದಾಗಲೀ ಇದ್ದ ಬಗ್ಗೆ ಯಾವುದೇ ದಾಖಲಾತಿ ಸಿಗುವುದಿಲ್ಲ. ಹೊರಗೆ ಬಿಸಾಕಿದ ಗೋಣಿ ಚಪ್ಪಿನ ಮೇಲೆ ಮಲಗಿದ್ದು ಬಿಟ್ಟರೆ ಹತ್ತಿಯ ಗಾದಿಗಳನ್ನೆಂದೂ ಹತ್ತದ ನಾಯಿಗಳವು. ಆಗಾಗ ಬಚ್ಚಲು ಒಲೆಯ ಬೂದಿಗುಡ್ಡೆಯಲ್ಲಿ ಹೊರಳಾಡುತ್ತಿದ್ದ ಅವುಗಳಿಗೆ ಯಾವುದೇ ಚರ್ಮವ್ಯಾಧಿ ತಗುಲುತ್ತಿರಲಿಲ್ಲ. ಮನೆಗೆ ಬರ-ಹೋಗುವವರನ್ನು ಯಾವುದೇ ತರಬೇತಿ ಇಲ್ಲದೇ ನಿಯಂತ್ರಿಸಬಲ್ಲ ಅವುಗಳ ಬುದ್ಧಿಮತ್ತೆ ನೆನೆದಾಗ ಪಡೆದ ಸೇವೆಯ ಮೌಲ್ಯದ ಅರಿವು ಇಂದಿಗೆ ತಿಳಿಯುತ್ತಿದೆ. ಗೊತ್ತಿರುವ ವ್ಯಕ್ತಿಗಳೂ ತನ್ನನ್ನು ಸಾಕಿದವರಿಗೆ ವಿರುದ್ಧವಾದ ಕೆಲಸವನ್ನು ಮಾಡಹೊರಟಾಗ ನಿರ್ಬಂಧಿಸಿದ ಸಾಹಸದ ಕುನ್ನಿಗಳ ಯಶೋಗಾಥೆ ಅದೆಷ್ಟೋ. ಒಂದೇ ಒಂದು ದಿನ ಹರತಾಳ ಮಾಡಿದ್ದಿಲ್ಲ, ಇಂಥಾದ್ದೇ ಊಟಕೊಡಿ-ಇಂಥಾದ್ದೇ ಸೋಪಲ್ಲಿ ಸ್ನಾನಮಾಡಿಸಿ-ಇಂಥಾ ಹಾಸಿಗೆಯನ್ನೇ ಕೊಡಿ ಎಂದು ಕೇಳಿದ್ದಿಲ್ಲ. ಬಹುಶಃ ಈ ನಿಷ್ಠೆಯನ್ನು ನೆನೆದೇ ಸಿಂಡಿಕೇಟ್ ಬ್ಯಾಂಕಿನವರು ತಮ್ಮ ಲೋಗೋದಲ್ಲಿ ಕುನ್ನಿಯ ಚಿತ್ರ ಹಾಕಿದ್ದಿರಬೇಕು ಎನಿಸುತ್ತದೆ; ಆದರೆ ಆ ಬ್ಯಾಂಕಿನವರಿಗೆ ಅಂಥದ್ದೇ ನಿಷ್ಠೆ ಇದೆಯೇ ಎಂಬುದು ಅನುಭವದಿಂದ ಅವರವರು ಅರಿತುಕೊಳ್ಳಬಹುದಾದ ವಿಷಯ!  

ಬೆಂಗಳೂರಲ್ಲಿ ಮಾತ್ರ ಜನ, ಹತ್ತುಮಂದಿ ನಾಯಿಗೆ ಅಲ್ಲಲ್ಲಿ ಮಾಂಸದ ವೇಸ್ಟೇಜ್ ಹಾಕುತ್ತಾರೆ. ಕುರಿ-ಕೋಳಿಗಳನ್ನು ಕೊಚ್ಚುವ ಬುಚ್ಚರ್ ಗಳ ಅಂಗಡಿಯ ಅಕ್ಕ-ಪಕ್ಕದಲ್ಲಿ ವಾಸಿಸುವ ನಾಯಿಗಳಿಗೆ ಅದೇ ಊಟ. ಕೆಲವು ಜನ ಅಂತಹ ವೇಸ್ಟ್ ಕೊಂಡೊಯ್ದು ದೂರದಲ್ಲಿರುವ ಬೀದಿನಾಯಿಗಳಿಗೆ ಹಾಕುತ್ತಾರೆ. ಯಾವಾಗ ಆಹಾರ ಸಿಕ್ಕದೇ ಹಸಿವಾಗುತ್ತದೋ ಆಗ ಆ ನಾಯಿಗಳು ಯಾರಾದರೇನಂತೆ ಎಂದು ಮಾಂಸವನ್ನು ಹುಡುಕುತ್ತವೆ; ಮಕ್ಕಳು-ದೊಡ್ಡವರು ಯಾರೇ ಸಿಕ್ಕರೂ ಬಿಡದೇ ಅಟ್ಟಿಸಿಹೋಗಿ ಕಚ್ಚಿ ಸಾಯಿಸಿ ತಿನ್ನಲು ಮುಂದಾಗುತ್ತವೆ. ಅದು ಮಾಂಸದ ರುಚಿಕಂಡ ಮತ್ತು ಸದಾ ಅದನ್ನೇ ಉಂಡ ಕೆಲವು ನಾಯಿಗಳ ರಿವಾಜು ಮಾತ್ರ! ಸಹಜಗತಿಯಲ್ಲಿ ಅಲ್ಲಿಲ್ಲಿ ಸಿಕ್ಕಿದ್ದನ್ನುಂಡು ಬೆಳೆವ ಬೀದಿನಾಯಿಗಳು ಹಾಗೆ ಕಂಡವರ ಮೇಲೆ ಹಾಯುವ/ಹರಿಯುವ ಗೋಜಿಗೆ ಹೋಗುವುದಿಲ್ಲ. ಕಾಮಿಸ್ವಾಮಿಯೊಬ್ಬನಿಂದ ಕಾವಿಕುಲಕ್ಕೇ ಅವಮಾನವಾದಹಾಗೇ ಕೆಲವೇ ಕೆಲವು ಮಾಂಸಾಹಾರಿ ನಾಯಿಗಳಿಂದ ಇಡೀ ಬೀದಿನಾಯಿ ಸಂಕುಲ ಒಂದೇ ಹೆಸರಿನಡಿ ಗುರುತಿಸಲ್ಪಟ್ಟಿತು. ಕಾರ್ಪೋರೇಷನ್ ನಿಂದ ಸಂತಾನಹರಣ ಚಿಕಿತ್ಸಾ ಅಭಿಯಾನ ನಡೆಸಲ್ಪಟ್ಟಿತು. ಗಾಡಿಗಳಲ್ಲಿ ಹಿಡಿದೊಯ್ದು ನೇರವಾಗಿ ಮಣ್ಣುಮಾಡುವ ಹಿಂಸಾತ್ಮಕ ಕೃತ್ಯಗಳೂ ನಡೆದವು. ಹುಲಿ-ಸಿಂಹ-ಕತ್ತೆಕಿರುಬಗಳ ಧಾಮಕ್ಕೆ ಆಹಾರವಾಗಿ ಬಿಡುವ ಮಟ್ಟಕ್ಕೂ ಬೆಳೆಯಿತು. ಆದರೂ ಕಾರ್ಪೋರೇಷನ್ ಗಾಡಿ ಬಂದಾಗ ಮೋರಿಗಳಲ್ಲಿ ಅಡಗಿ ತಪ್ಪಿಸಿಕೊಳ್ಳುವ ಪ್ರಯತ್ನ ಬೀದಿ ನಾಯಿಗಳದ್ದು. ಬಂದವರು ಆ ಪ್ರದೇಶದಲ್ಲೆಲ್ಲೂ ಬೀದಿ ನಾಯಿಗಳೇ ಇಲ್ಲವೇನೋ ಎಂದುಕೊಳ್ಳುವಷ್ಟು ಸೈಲೆಂಟ್ ಆಗಿ ಮಲಗಿಬಿಡುವ ಬುದ್ಧಿತೋರಿಸುತ್ತವೆ ಈ ನಾಯಿಗಳು. ಒಂದು ನಾಯಿಗೆ ದೂರದಿಂದಲೇ ನಗರಪಾಲಿಕೆಯ ಗಾಡಿಯ ಸುಳಿವು ಸಿಕ್ಕರೆ ಸಾಕು, ಅವುಗಳ ನಡುವಿನ ನಿತ್ಯದ ವೈಷಮ್ಯಗಳೆಲ್ಲಾ ಮಾಯವಾಗಿ ಉಳಿವಿಗಾಗಿ ಅವು ಮಾಡುವ ಜಾದೂ ವಿದ್ಯೆಯನ್ನೂ ಕಂಡಿದ್ದೇನೆ. ಬೀದಿ ಅಲೆಯುವ ಬೀಡಾಡಿ ನಾಯಿಗೂ ಕೂಡ ಒಂದು ನಿಷ್ಠೆ ಇದೆ; ಅದಕ್ಕೆ ಆಹಾರ ಹಾಕಿದವರನ್ನು ಗೌರವಿಸುವ ಮತ್ತು ಅವರ ಆಜ್ಞೆಗಳನ್ನು ಪಾಲಿಸುವ ವಿಧೇಯತೆ ಇದೆ-ಇದು ಇಲ್ಲದಿರುವುದು ಮನುಷ್ಯರಲ್ಲಿ ಮಾತ್ರ!       

ಶರೀರದಲ್ಲಿ ಪ್ರತಿಯೊಂದು ಅಂಗವೂ ಮುಖ್ಯ, ಯಾವುದೂ ನಗಣ್ಯವಲ್ಲ; ಅಂತೆಯೇ ಪರಿಸರದಲ್ಲಿ ಎಲ್ಲಾ ಜೀವಿಯೂ ಮುಖ್ಯ. ನಾಯಿಯೆಂದು ಕೇವಲವಾಗಿ ಕಾಣುವ ನಮಗೆ ಅವುಗಳ ಅನಿವಾರ್ಯತೆ ತಿಳಿಯುವುದು ಆ ಜಾಗ ಖುಲ್ಲಾ ಹೊಡೆದಾಗ ಮಾತ್ರ. ಹಾಗಂತ ನಾಯಿ ನಾಯಿಯ ಕೆಲಸವನ್ನು ಮಾಡಬೇಕೇ ಹೊರತು ನಾಯಿಯ ಸೇವೆಯನ್ನೇ ದೊಡ್ಡ ಕೈಂಕರ್ಯವನ್ನಾಗಿಸಿಕೊಳ್ಳುವುದು ಸ್ವಲ್ಪ ಅತಿ ಎನಿಸುತ್ತದೆ; ಕೆಲವೊಮ್ಮೆ ಹಾಸ್ಯಾಸ್ಪದವೂ ಆಗಿಬಿಡುತ್ತದೆ. ಉಗುರಿನ ಬಗ್ಗೆ ಆರಂಭಿಸಿದೆ, ಎಡಗೈ ಬೆರಳಿನ ಉಗುರು ಎಂದರೆ ಜಾಸ್ತಿ ಮಹತ್ವ ಕೊಡುವ ಜಾಯಮಾನ ನಮ್ಮದಲ್ಲ; ಆದರೆ ಯಾವುದೋ ಸಮಯದಲ್ಲಿ ಅದರ ಅನಿವಾರ್ಯತೆ ಕೂಡ ಇದೆ ಎಂಬುದು ಗಮನಕ್ಕೆ ಬರುತ್ತದಲ್ಲ! ’ಉಗುರಿನಿಂದ ಹೋಗುತ್ತಿದ್ದುದಕ್ಕೆ ಕೊಡಲಿ ಎತ್ತಿಕೊಂಡರು’ ಎಂಬ ನಾಣ್ನುಡಿ ಕೂಡ ಇದೆಯಲ್ಲಾ ಉಗುರಿನಿಂದಲೂ ಕೆಲವು ಕೆಲಸ ಸಾಧ್ಯ ಎಂಬುದಕ್ಕೆ ಇದೇ ಆಧಾರ ಸಾಕು ಅಲ್ಲವೇ? ಉಗುರಿನ ಹೆಳೆ[ನೆಪ]ಯಲ್ಲಿ ನಾಯಿಯ ಬೆಳೆ[ಅಥವಾ ಬೆಲೆ!] ಕಂಡಿರಿ ಅಲ್ಲವೇ? ಈಗ ನಿಮಗೂ ನನ್ನ ಹೊಸಗಾದೆಯ ಅರ್ಥ ಸಮರ್ಪಕವಾಗಿ ಆಗಿರಲಿಕ್ಕೇಬೇಕು ಎಂಬುದು ನನ್ನ ಈ ಹಂತದ ಅನಿಸಿಕೆ.   

Monday, June 11, 2012

ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಶ್ರೀ ಎದುರ್ಕಳ ಈಶ್ವರ ಭಟ್ ರ ಚಿತ್ರಋಣ: ಫೇಸ್ ಬುಕ್ 
ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಬರೆಯದೇ ವಾರ ಕಳೆಯಿತು. ಬರವಣಿಗೆಯನ್ನು ನಿರೀಕ್ಷಿಸುವವರು ತುಂಬಾ ಜನ ಇದ್ದೀರಿ ಎಂಬುದು ಗೊತ್ತು. ಆದರೂ, ಹೊಸದಾಗಿ ಆರಂಭಗೊಂಡ ’ಉದ್ದಿಮೆ’ಯ ಕಡೆ ಗಮನ ಹರಿಸುತ್ತಿದ್ದೇನೆ. ಉದ್ದಿಮೆಯ ಬಗ್ಗೆ ನಿಮಗೆ ಮತ್ತೊಮ್ಮೆ ಹೇಳಿದರೆ ಜಾಸ್ತಿಯಾಗಬಹುದೇನೋ ಎಂಬ ಆತಂಕ, ಕಮ್ಮಿಯಾದರೆ ನಿಮಗದರಬಗ್ಗೆ ಮಾಹಿತಿ ಸಾಕಾಗದೇನೋ ಎಂಬ ಚಿಂತೆ, ಹೀಗೇ ಎರಡೂ ಮಗ್ಗಲುಗಳನ್ನು ಅವಲೋಕಿಸುತ್ತಾ ಉದ್ದಿಮೆಯ ಹೆಜ್ಜೆಗಳ ಬಗ್ಗೆ ಕಾರ್ಯಗತವಾಗಿ ಮುಂದಿನ ಹೆಜ್ಜೆ ಇಡುತ್ತಿದ್ದೆ. ಯಾವುದೇ ಉದ್ದಿಮೆದಾರರು, ವೃತ್ತಿಪರರು, ಸೇವೆಗಳನ್ನು ಒದಗಿಸುವವರು, ಕಲಾವಿದರು, ತಂತ್ರಜ್ಞರು ಮೊದಲಾದ ಎಲ್ಲಾ ರಂಗಗಳವರು ತಮ್ಮಬಗ್ಗೆ ಮತ್ತು ತಮ್ಮಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕ ಗೊತ್ತುವಳಿ ಅಥವಾ ತಿಳುವಳಿಕೆ ಮೂಡಿಸುವ ಕೆಲಸವನ್ನು ನಮ್ಮ ಬಳಗದ ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ನಡೆಸುತ್ತದೆ. ಆ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡ ನನಗೆ ಮಿತ್ರ ಶ್ರೀ ಶಿವಶಂಕರ್ ಅವರು ಫೋನಾಯಿಸಿ ಬ್ಲಾಗ್ ನಿರ್ಮಾಣದ ಬಗ್ಗೆ ಸಲಹೆ ಕೇಳಿದ್ದರೂ ಸಹಕರಿಸಲು ತನ್ಮಧ್ಯೆ ಸಾಧ್ಯವಾಗಿಲ್ಲ, ಇನ್ನೆರಡು ವಾರಗಳಲ್ಲಾದರೂ ಅವರನ್ನು ಕಂಡು ಅವರಿಗೆ ಅದರ ಬಗ್ಗೆ ತೋರಿಸಿಕೊಡುವ ತರಾತುರಿ ಮನಸ್ಸಿನಲ್ಲಿದೆ.

ಗೀತೆಯಲ್ಲಿ ಕಾಮ್ಯಕರ್ಮ ಮತ್ತು ನ-ಕಾಮ್ಯಕರ್ಮದ ಬಗ್ಗೆ ಉಲ್ಲೇಖವಿದೆ. ದಾರಿಯಲ್ಲಿ ಒಬ್ಬ ಹೋಗುತ್ತಿರುವಾಗ ಸಾವಿರ ರೂಪಾಯಿಗಳ ನೋಟೊಂದು ಬಿದ್ದಿರುವುದು ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಂಡು ತನ್ನ ಯಾವುದೇ ಖರ್ಚಿಗೆ ಬಳಸಿಕೊಳ್ಳುತ್ತಾನೆ, ಇನ್ನೊಬ್ಬ ದಾರಿಹೋಕನಿಗೂ ಹಾಗೇ ಸಾವಿರ ರೂಪಾಯಿಗಳ ನೋಟು ಸಿಕ್ಕಿತು, ಆತನೂ ಅದನ್ನು ಎತ್ತಿಕೊಂಡು ಮುಂದೆಸಾಗಿ ಅನಾಥಾಶ್ರಮವೊಂದರ ಮಕ್ಕಳಿಗೆ ಅದರಿಂದಾಗುವ ಉಪಯೋಗ ಕಲ್ಪಿಸುತ್ತಾನೆ. ಮೊದಲನೆಯವನದು ಕಾಮ್ಯಕರ್ಮ, ಎರಡನೆಯವನದು ನ-ಕಾಮ್ಯಕರ್ಮ/ನಿಷ್ಕಾಮ್ಯ ಕರ್ಮ. ಮೊದಲನೆಯವ ಕ್ಷಣಿಕ ಫಲವನ್ನು ಪಡೆಯುತ್ತಾನೆ, ಎರಡನೆಯದಕ್ಕೆ ಪಾರಮಾರ್ಥಿಕ ಉತ್ತಮ ಫಲ ದೊರೆಯುತ್ತದೆ. ಇದನ್ನು ನನಗೆ ಇಷ್ಟು ಸರಳವಾಗಿ ತಿಳಿಸಿದವರು ಹೆಸರಾಂತ ಉದ್ಯಮಿ ಶ್ರೀ ಎದುರ್ಕಳ ಈಶ್ವರ ಭಟ್ಟರು. ನನ್ನ ಅಸಹಾಯಕತೆಯಲ್ಲಿ ಹಲವು ಬಾರಿ ನನಗೆ ಸಹಾಯ ನೀಡಿದ ಈ ಮಹನೀಯ ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿ, ತಮ್ಮದೇ ಆದ ಕಾರ್ಖಾನೆ ಹೊಂದಿದ್ದಾರೆ; ಕಷ್ಟ-ಸುಖಗಳ ಸ್ವಾನುಭವ ರಕ್ತದ ಕಣಕಣದಲ್ಲೂ ಇದೆ. ಎಲೆಮರೆಯ ಕಾಯಿಯಾಗಿ ಹಲವು ಜನರಿಗೆ ಗೀತೆಯ ಕುರಿತಾಗಿ ಬೋಧಿಸುತ್ತಾ, ಯಕ್ಷಗಾನ-ತಾಳಮದ್ದಳೆಗಳಲ್ಲಿ ತಮ್ಮ ಮಾತಿನ ಚಮತ್ಕಾರವನ್ನು ತೆರೆದಿಡುತ್ತಾ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡರೂ, ಕೇವಲ ಪ್ರದರ್ಶನದ ಬೂಟಾಟಿಕೆ ಅವರದ್ದಲ್ಲ. ಸೋತು ಸಣ್ಣಗಾದ ಸಮಾಜದ ಹಲವು ವ್ಯಕ್ತಿಗಳಿಗೆ ಮಾರ್ಗದರ್ಶಿಸಿದ ಅವರ ಮನೋಗತವನ್ನು ಹತ್ತಿರವಿದ್ದು ಅನುಭವಿಸಿದ ವ್ಯಕ್ತಿ ನಾನು. ಪ್ರತಿಫಲವನ್ನು ಬಯಸದೇ ಹಲವು ಕೆಲಸಗಳನ್ನು ಮಾಡುವ ಮಂದಿ ಇವತ್ತು ತೀರಾ ಕಮ್ಮಿ.

|ಸರ್ವೇ ಗುಣಾಂ ಕಾಂಚನಮಾಶ್ರಯಂತಿ| ಎಂಬ ಕಲಿಯುಗ ಮಂತ್ರದಂತೇ ಕಾಂಚಾಣವಿದ್ದವರಿಗೇ ಈಗ ಕಾಲ. ಹಣವಿಲ್ಲದೆಯೂ ಶ್ರದ್ಧೆ, ಪರಿಶ್ರಮ, ಕಾರ್ಯಕ್ಷಮತೆ ಮತ್ತು ಉತ್ತಮ ಗುರಿ ಇದ್ದರೆ ಹೇಗೆ ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ ಈಶ್ವರ ಭಟ್ಟರು. ಹತಾಶ ಸ್ಥಿತಿಯನ್ನು ತಲುಪಿದ ಹಲವು ಉದ್ಯಮಿಗಳಿಗೆ ಮರಳಿ ಹೊಸಚಿಗುರನ್ನು ಹೊರಡಿಸಿದ ಸಾರ್ಥಕತೆ ಭಟ್ಟರದಾಗಿದೆ. ನನ್ನೆದುರು ಅರ್ಧಘಂಟೆ ಯಾರಿಗೋ ತಮ್ಮ ಚರದೂರವಾಣಿಯಲ್ಲಿ ಮಾರ್ಗದರ್ಶಿಸುವುದನ್ನು ಕಂಡೆ. ಈ ಲೋಕದಲ್ಲಿ ಸ್ಥಿರಾಸ್ತಿ ಎಂದು ನಾವಂದುಕೊಳ್ಳುವುದೆಲ್ಲಾ ಸ್ಥಿರವೇನಲ್ಲ, ಕಾಲಘಟ್ಟದಲ್ಲಿ ಯಾರ್ಯಾರದೋ ಆಗಿದ್ದ ಭೂಮಿ-ಮನೆಗಳು ಇಂದು ನಮ್ಮದಾಗಿವೆ, ನಾಳೆ ಇನ್ಯಾರದೋ ಕೈಗೆ ಸಾಗುತ್ತವೆ. ಗಳಿಸಿದ ಆಸ್ಥಿಯನ್ನು ಕಳೆದುಕೊಳ್ಳಬೇಕಾಗಿ ಬಂದಾಗ ಅದರಮೇಲಿನ ವ್ಯಾಮೋಹ ತೊರೆದು, ಮತ್ತೆ ಮುಂದಿನ ದಿನಗಳಲ್ಲಿ  ಮರಳಿ  ಆಸ್ಥಿಗಳಿಸುವಂಥಾ ಅವಕಾಶ ಒದಗಲೆಂಬ ಪ್ರಾರ್ಥನೆಯೊಂದಿಗೆ ಅದನ್ನು ವಿಲೇವಾರಿ ಮಾಡುವುದು, ಮಾರಿದ ಆಸ್ಥಿಯಿಂದ ಬಂದ ಹಣವನ್ನು ಕ್ಷಣಿಕವಾಗಿ ಉದ್ಭವಿಸಿದ ಆರ್ಥಿಕ ಅನಾನುಕೂಲತೆಗೆ ಪರಿಹಾರವಾಗಿ ಬಳಸಿಕೊಂಡು ಅದರಿಂದ ಮತ್ತೆ ಪುನರ್ಗಳಿಕೆಗೂ ದಾರಿಮಾಡಿಕೊಳ್ಳುವುದು ಸರಿಯಾದ ಕ್ರಮ. ಸಮಸ್ಯೆಗಳಿಗೆ ಹೆದರದೇ ಉತ್ತರಗಳನ್ನು ಹುಡುಕಿಕೊಳ್ಳುವುದನ್ನು ಅಭ್ಯಾಸಮಾಡಿಕೊಂಡರೆ ಜೀವನದ ಕಗ್ಗಂಟುಗಳು ಬಿಡಿಸಿಕೊಳ್ಳಲಾರಂಭಿಸುತ್ತವೆ. ಯಾವ ಮನುಷ್ಯನ ಹೃದಯದಲ್ಲಿ ಕಲ್ಮಶವಿಲ್ಲವೋ ಅಂತಹ ವ್ಯಕ್ತಿ ತನ್ನ ಶ್ರದ್ಧಾ ಭಕ್ತಿ ಪುರಸ್ಸರ ತೊಡಗಿಕೊಳ್ಳುವಿಕೆಯಿಂದ ಹೊಸಜೀವನವನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ಭಟ್ಟರ ತಾಬಾ ಇವೆ. ವ್ಯಕ್ತಿ ಸರಳವಾಗಿದ್ದಷ್ಟೂ ಸುಶೀಲನಾಗುತ್ತಾನೆ, ಸುಶೀಲನಾಗಿದ್ದಷ್ಟೂ ಸದೃಢನಾಗುತ್ತಾನೆ, ಸಫಲನಾಗುತ್ತಾನೆ; ಯಾವುದೇ ತೊಂದರೆಗಳನ್ನೂ ನಿಭಾಯಿಸುವ ದಾರ್ಷ್ಟ್ಯತೆ ಗಳಿಸುತ್ತಾನೆ.

ನೆನೆಯಬೇಕಾದ ಹಲವು ಜನರಲ್ಲಿ ಎದುರ್ಕಳ ಈಶ್ವರ ಭಟ್ಟರೂ ಒಬ್ಬರು. ಭಗವದ್ಗೀತೆಯ ಸಾರವನ್ನು ಬರೆದು,ತನ್ನ ಸ್ವಂತ ಖರ್ಚಿನಲ್ಲಿ ಅದನ್ನು ಡೈರಿಗಳನ್ನಾಗಿಸಿ, ಪುಸ್ತಿಕೆಗಳನ್ನಾಗಿಸಿ ಹಲವರಿಗೆ ಅವರು ನೀಡಿದ್ದಾರೆ. ಅ-ದ್ವೈತದ ಪರಬ್ರಹ್ಮನ ಭಾಗವೇ ನಾವು ಎನಿಸಿದಾಗ ನಮ್ಮ ಕಷ್ಟಗಳನ್ನು ನಿವಾರಿಸಬಲ್ಲವ ಆತನೊಬ್ಬನೇ, ನಿರಾಕಾರನಾದ ಆತನನ್ನು ಸಾಕಾರದಿಂದ ಹಲವುರೂಪಗಳಲ್ಲಿ ಪೂಜಿಸುವ, ಆರಾಧಿಸುವ ಭಕ್ತರಿಗೆ ಆಯಾಯ ರೂಪದಲ್ಲಿ ಅವರ ಭಾವಕ್ಕೆ ತಕ್ಕಂತೇ ಫಲವನ್ನು ನೀಡುತ್ತಾನೆ ಎನ್ನುವ ಭಟ್ಟರ ಮಾತು ನಿಜಕ್ಕೂ ಒಪ್ಪಿಕೊಳ್ಳಬೇಕಾದ ಅಂಶ; ಉದ್ಯಮಿಗಳಲ್ಲಿ ಈ.ಐ.ಭಟ್ಟರ ತೆರನಾದ ವ್ಯಕ್ತಿ ಸಿಗುವುದೇ ಇಲ್ಲ. ಉತ್ತಮ ವ್ಯಕ್ತಿತ್ವಕ್ಕೆ ಯಾರನ್ನು ಹೆಸರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದಾಗ ನನ್ನ ಮನಸ್ಸು ಸಹಜವಾಗಿ ವಾಲುವುದು ಅವರಕಡೆಗೆ.  |ವ್ಯಾಪಾರಂ ದ್ರೋಹ ಚಿಂತನಂ| ಎಂಬ ಮಾತೊಂದಿದೆ, ಆದರೆ ವ್ಯಾಪಾರದಲ್ಲೂ ಯಾವುದೇ ದ್ರೋಹವೆಸಗದೇ ಮಾಡುವ ವ್ಯಾಪಾರವಿದ್ದರೆ ಅದು ಈಶ್ವರ ಭಟ್ಟರಂಥವರಿಗೆ ಮಾತ್ರ ಸಾಧ್ಯ! ತಾವು ತಯಾರಿಸುವ ಬಹುವಿಧದ ಕೈಗಾರಿಕಾ ಆಯಸ್ಕಾಂತಗಳನ್ನು  ದೇಶ-ವಿದೇಶಗಳಿಗೆ ವ್ಯಾಪಾರಮಾಡುತ್ತಾರೆ. ಗುಣಮಟ್ಟದಲ್ಲಿ, ತಾಂತ್ರಿಕತೆಯಲ್ಲಿ  ಗರಿಷ್ಠ ಪರಿಮಾಣಗಳನ್ನು ಗಣನೆಯಲ್ಲಿರಿಸಿ ತಯಾರಿಸುವ ಅವರ ಉತ್ಫನ್ನಗಳು ಹಲವು ಕೈಗಾರಿಕೆಗಳಿಗೆ ಬಳಸಲ್ಪಡುತ್ತವೆ. ಉದ್ಯಮದ ಜೊತೆಗೆ ಹಲವರ ಜೀವನದಲ್ಲಿ ಬೆಳಕು ಮೂಡಿಸುತ್ತಾ ಪ್ರಚಾರಪ್ರಿಯರಾಗದೇ ಮರೆಯಲ್ಲೇ ಇರುವ ಅವರ ಮಾತೃಸದೃಶ ಹೃದಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.

ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದೆ. ಅಲ್ಲಿ ಬಂದದ್ದು ದೇಶದ/ರಾಜ್ಯದ ರಾಜಕೀಯ/ಸಾಮಾಜಿಕ ಸ್ಥಿತಿಗತಿಯ ಬಗ್ಗೆ. ಸಮಾಜದಲ್ಲಿ ಉತ್ತಮ ಅಧಿಕಾರಿಗಳೂ ತಮ್ಮ ಕಾರ್ಯಕ್ಷಮತೆಯನ್ನು ಮೆರೆಯಲು ಸುರಕ್ಷಿತ ದಿನಮಾನವಲ್ಲ ಎಂಬುದರ ಕುರಿತೂ ಮಾತನಾಡಿದೆವು. ರಾಜ್ಯದ ಬೊಕ್ಕಸಕ್ಕೆ ಹೆಗ್ಗಣಗಳ ಕಾಟ, ಭೂಮಿಗಾಗಿ ನಡೆದ ಡಿನೋಟಿಫಿಕೇಶನ್ ಗುದ್ದಾಟ ಇಂಥವುಗಳನ್ನು ನೋಡಿದಾಗ ಕರ್ನಾಟಕದಲ್ಲಿಯೂ ಗುಜರಾತ್ ರೀತಿಯ ಸರ್ಕಾರ ಬರಲು ಸಾಧ್ಯವೇ? ಸದ್ಯಕ್ಕಂತೂ ಸಾಧ್ಯವಿಲ್ಲವೇನೋ. ಆದರೂ ಯಡ್ಯೂರಪ್ಪನವರ ವಿಷಾದದ ಈ ಕಾಲ ಜನತೆಗೆ ಅನುಕೂಲಕರವಾಗಿದೆ ಎಂದರೆ ತಪ್ಪಲ್ಲ. ಸುಖಾಸುಮ್ನೇ ಯಾವುದೇ ಒಂದು ಪಕ್ಷವನ್ನು ಜರಿಯುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ರಾಜಕೀಯ ಸ್ಥಿತಿ ಪಕ್ಷಾತೀತವಾಗಿದೆ! ಎಲ್ಲಾ ಪಕ್ಷಗಳಲ್ಲೂ ಬ್ರಷ್ಟಾಚಾರಿಗಳು ಇದ್ದೇ ಇದ್ದಾರೆ. ಅದೇ ರೀತಿ ಎಲ್ಲಾ ಪಕ್ಷಗಳಲ್ಲೂ ಮುತ್ಸದ್ಧಿಗಳು, ದೇಶ/ರಾಜ್ಯಗಳ ಹಿತಚಿಂತಕರೂ ಇದ್ದಾರೆ-ಆದರೆ ಅಂಥವರು ಮೂಲೆಗುಂಪಾಗಿದ್ದಾರೆ. ಬರೇ ಗೋಧ್ರಾ ಪ್ರಕರಣವನ್ನೇ ಹಿಡಿದುಕೊಂಡು ನರೇಂದ್ರ ಮೋದಿಯನ್ನು ಇತರೆ ಪಕ್ಷಗಳು ಜರಿದೇ ಜರಿದವು. ಆದರೆ ಅಲ್ಲಿ ನಿಜವಾಗಿಯೂ ಮೋದಿಯ ಪಾತ್ರವಿತ್ತೇ? ಇರಲಿಲ್ಲ. ಮೋದಿ ಎಂದೂ ಸಮಾಜ ಘಾತುಕ ಕೆಲಸವನ್ನು ಬಯಸಿದವರಲ್ಲ, ಮಾಡಿದವರಲ್ಲ. ಕೇವಲ ಮತ-ಧರ್ಮಗಳ ಆಧಾರದ ಮೇಲೆ ಒಡೆದು ಆಳುವ ನೀತಿಯನ್ನು ಜಾರಿಯಲ್ಲಿಟ್ಟವರೂ ಅಲ್ಲ. ಅವರ ಚಿಂತನೆಯಲ್ಲಿ ಅಡಕವಾಗಿರುವ ಅಂಶವೇ ಸಮಾಜಕ್ಕೆ ಉತ್ತಮ ಆಡಳಿತ ನೀಡುವುದು.

ಗುಜರಾತ್ನಲ್ಲಿ ಸರ್ಕಾರಿ ಅಧಿಕಾರಿಗಳು, ಮಂತ್ರಿಮಹೋದಯರು ಲಂಚ ಪಡೆಯಲು ಹೆದರಿ ಕೈಬಿಟ್ಟಿದ್ದರೆ ಅದಕ್ಕೆ ಮೋದಿಯೇ ಕಾರಣ. ನಿಷ್ಕಳಂಕ, ನಿರ್ಭೀತ ನಡತೆಯ ಮೋದಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕತೆಗೆ ಒಳಪಡಿಸಿದವರು. ಜನಜೀವನದಲ್ಲಿ ಯಾವುದರ ಕೊರತೆ ಇದೆ? ಯಾವುದು ಅನಿವಾರ್ಯ ಎಂಬುದನ್ನು ಆಮೂಲಾಗ್ರ ಪರಿಶೀಲಿಸಿ, ಕಂಡುಬರುವ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಮೋದಿ ಯಶಸ್ವೀ ಹೆಜ್ಜೆಗಳನ್ನಿಟ್ಟು ತಾವು ಆಡಳಿತ ಸಮರ್ಥ ಎಂಬುದನ್ನು ಸಾಬೀತುಪಡಿಸಿದ್ದಾರೆ. ನರ್ಮದಾ ಕಾಲುವೆಗಳಗುಂಟ ಸೌರಶಕ್ತಿ ಶೇಖರಣಾ ಘಟಕಗಳನ್ನು ಸ್ಥಾಪಿಸಿ ಬೇಕಾದ ವಿದ್ಯುತ್ತಿನ ಕೊರತೆ ನೀಗಿಸಲು ಮುಂದಾಗುವುದರ ಜೊತೆಗೆ ಕಾಲುವೆಯ ನೀರು ಬಿಸಿಲಿನ ಝಳಕ್ಕೆ ಇಂಗಿಹೋಗದಂತೇ ತಡೆಯುವಲ್ಲೂ ಸಫಲರಾದರು. ಏಕಕಾಲಕ್ಕೆ ಎರಡು ಉದ್ದೇಶಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಏರ್ಪಾಟಾಗಿರುವುದರಿಂದ ಜನ ಮೋದಿಯ ಜಾಣ್ಮೆಯನ್ನು ಗುರುತಿಸಿ  ವಿಶಿಷ್ಟರೀತಿಯ ಸಾಧನೆಗೆ ಮುಂದಾಗಿರುವ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಕಲಾಂ ಮೇಷ್ಟ್ರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರಪತಿ ಸ್ಥಾನಕ್ಕೆ ನಾನು ನೇರವಾಗಿ ಬೆರಳುಮಾಡಿ ತೋರಿಸಬಹುದಾದರೆ ಅದು ಅಬ್ದುಲ್ ಕಲಾಂ ಮಾತ್ರ! ದೇಶಸೇವೆಗೆ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸ್ವಾರ್ಥ ಎಂಬ ವಿಷಯ ಹತ್ತಿರ ಸುಳಿಯದಿದ್ದರೆ ಒಳ್ಳೆಯದು. ಜೊತೆಗೆ ದೇಶದ ಬಗ್ಗೆ, ದೇಶದ ಜನತೆಯ ಬಗ್ಗೆ ಅಪಾರ ಕಾಳಜಿ ಇರಬೇಕು; ದೇಶದ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇರಬೇಕು. ದೇಶದ ಆರ್ಥಿಕತೆ, ವೈಜ್ಞಾನಿಕತೆಯ ಬಗ್ಗೆ ಗಮನವಿರಬೇಕು. ರಾಷ್ಟ್ರಪತಿ ಎಂಬ ಹುದ್ದೆ ರಬ್ಬರ್ ಸ್ಟಾಂಪ್ ಆಗಿರುವುದರ ಬದಲು ಅಲ್ಲಿ ಕುಳಿತ ವ್ಯಕ್ತಿ ಲೋಕಮುಖಿಯಾಗಿದ್ದು ಚೈತನ್ಯದಾಯಿಯಾಗಿದ್ದರೆ ಅದು ದೇಶಕ್ಕೆ ಬಲುಹಿತ. ಇದನ್ನು ಗಮನಿಸಿಯೇ ಅಂದಿನ ಎನ್.ಡಿ.ಏ ಸರಕಾರ ಕಲಾಂ ಅವರನ್ನು ರಾಷ್ರ್ಟ್ರಪತಿಯನ್ನಾಗಿ ನೇಮಿಸಿತು. ಸ್ವಾತಂತ್ರ್ಯಾ ನಂತರ ಬಂದ ಕಾಂಗ್ರೆಸ್ಸೇತರ ಸರಕಾರದಲ್ಲಿ ಕೇವಲ ಶ್ರೀಮಾನ್ ಅಟಲ್ ಬಿಹಾರಿ  ವಾಜಪೇಯಿಯವರ ನೇತೃತ್ವದ ಎನ್.ಡಿ.ಎ ದೇಶಕ್ಕೆ ಹೊಸಬೆಳಕು ನೀಡುವಲ್ಲಿ ಶ್ರಮಿಸಿದ್ದು ಸುಳ್ಳಲ್ಲ. ಅಂದು ನಿರ್ಮಾಣವಾದ ದಕ್ಷಿಣೋತ್ತರ ಮತ್ತು ಪೂರ್ವಪಶ್ಚಿಮವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿಗಳು ದೇಶದ ಸಂವಹನ ಕ್ರಮವನ್ನೇ ಬದಲಿಸಿ, ಸಾಗಾಟವನ್ನು ಸರಳವಾಗಿ ಮತ್ತು ಶೀಘ್ರವಾಗಿ ಆಗುವಂತೇ ಮಾಡಿದ ಸಾಧನೆಯನ್ನು ಯಾರೂ ಮರೆಯುವಂತಿಲ್ಲ. ಒಂದೇ ಮನೆಯಲ್ಲಿ ಮನೆಮಂದಿ ಸೇರಿ ನಡೆಯುವುದು ಕಷ್ಟವಾದ ಇಂದಿನ ಕಾಲದಲ್ಲಿ ಸರಿಸುಮಾರು ಇಪ್ಪತ್ತು ಪಕ್ಷಗಳ ಬೆಸುಗೆಯ ಎನ್.ಡಿ.ಎ ಪಕ್ಷದ ನಾವಿಕನಾಗಿ ನೌಕೆಯನು ನಾಲ್ಕೂವರೆ ವರ್ಷ ನಡೆಸಿ, ದೇಶದಲ್ಲಿ ಕ್ಷಿಪ್ರಬದಲಾವಣೆಗಳನ್ನು ತಂದು ತೋರಿಸಿದ ಹೆಗ್ಗಳಿಕೆ ಅವರದ್ದು; ಇನ್ನೂ ಚುನಾವಣೆಗೆ ಆರು ತಿಂಗಳ ಅವಕಾಶ ಇರುವಾಗಲೇ ಸರಕಾರವನ್ನು ವಿಸರ್ಜಿಸಿ ಜನರಿಗೆ ಹೊಸ ಆಯ್ಕೆಗೆ ಅವಕಾಶ ಮಾಡಿಕೊಟ್ಟ ವಿಶಿಷ್ಟ ಮಾರ್ಗ ಕೂಡಾ ವಾಜಪೇಯಿಯವರದ್ದು. 

ಪ್ರಸಕ್ತ ದಿನಗಳಲ್ಲಿನ ಧನಾತ್ಮಕ ಆಡಳಿತ ಕ್ರಮಗಳನ್ನು ನೋಡಿದರೆ ಕೇಂದ್ರದಲ್ಲಿ ಒಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಕಲಾಂ ಮೇಷ್ಟ್ರು ಮತ್ತೊಮ್ಮೆ ರಾಷ್ಟ್ರಪತಿಯಾಗಿ ಒಂದೈದು ವರ್ಷ ಆಡಳಿತ ನಡೆಸಿದರೆ ಅದು ದೇಶದ ಪರಮಭಾಗ್ಯ ಎನಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಅರ್ಹತೆಯನ್ನರಿತು, ತನಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಲು ಎಲ್ಲಾ ಅನುಕೂಲಗಳತೆಗಳು ಕಲ್ಪಿತವಾಗುತ್ತವೆ ಎಂಬುದು ನನ್ನ ಅನಿಸಿಕೆಯಾಗಿದೆ. ಒಂದೊಮ್ಮೆ ಹಾಗೇನಾದರೂ ಆದರೆ, ನಮ್ಮ ವಯಸ್ಸಿಗರ ಜೀವಮಾನದಲ್ಲಿಯೇ ಅದು ಒಮ್ಮೆ ಮಾತ್ರ ಕಾಣಬಹುದಾದ ಉತ್ತಮ ರಾಜಕೀಯ ಬೆಳವಣಿಗೆ ಎಂಬುದನ್ನು ಉಲ್ಲೇಖಿಸಲು ಮರೆಯುವುದಿಲ್ಲ. ಮಾತಾಡುತ್ತಿದ್ದರೆ, ಹರಟುತ್ತಿದ್ದರೆ ಸಮಯ ಹೋಗಿದ್ದು ತಿಳಿಯುವುದೇ ಇಲ್ಲವಾದ್ದರಿಂದ ಇಲ್ಲಿಗೇ ನಿಮ್ಮನ್ನು ನಿಲ್ಲಿಸಿ ಮತ್ತೊಮ್ಮೆ ಸಿಗೋಣವೆಂದು ತಿಳಿಸುವುದನ್ನೂ ಮರೆಯುವಹಾಗಿಲ್ಲ!  


Sunday, June 3, 2012

ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು


ಚಿತ್ರಋಣ: ಅಂತರ್ಜಾಲ
ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು

ಮನುಜ ಜೀವನಕ್ಕೆ ಗುರಿ ಬೇಕು ಎಂಬುದು ಬಹಳ ಜನರಿಗೆ ಗೊತ್ತು; ಗೊತ್ತಿಲ್ಲದೇ ಗುರಿಯನ್ನು ಸಾಧಿಸಿದವರೂ ಇದ್ದಾರೆ ಎಂದಿಟ್ಟುಕೊಳ್ಳೋಣ, ಆದರೂ ಗುರಿ ಇರಬೇಕಾದುದು ಕ್ರಮ. ಸರಿಯಾದ ಗುರಿ ಸಮರ್ಪಕ ಗುರು ಇದ್ದರೆ ಜೀವನ ಸುಲಭವೆನಿಸುತ್ತದೆ. ನಿಶ್ಚಿತ ಗುರಿಯನ್ನು ತಲುಪಲು ಹಲವು ಮಾರ್ಗಗಳಿದ್ದಾವೆ ಎಂದಿಟ್ಟುಕೊಂಡರೆ, ಯಾವ ಮಾರ್ಗ ಅತ್ಯಂತ ಸಮಂಜಸ ಎಂಬುದನ್ನು ನಿರ್ಧರಿಸುವುದು ಗುರಿ ಸಾಧನೆಯಲ್ಲಿ ತೊಡಗಿಸಿಕೊಳ್ಳುವವನ ಜಾಣ್ಮೆಯನ್ನವಲಂಬಿಸಿರುತ್ತದೆ; ಇದು ಯಾರೋ ಹೇಳಿಕೊಟ್ಟು ಬರುವ ಜ್ಞಾನವಲ್ಲ. ’ಬರ್ನಿಂಗ್ ಡಿಸಾಯರ್’ ಎಂಬ ಮನದೊಳಗಿನ ’ಬರ್ನಿಂಗ್ ಛೇಂಬರ್’ನಲ್ಲಿ ಸದಾ ಉರಿಯುವ ಗುರಿಯೆಂಬ ಅಗ್ನಿ ತನ್ನ ಕಸುವನ್ನು ಕಳೆದುಕೊಳ್ಳದೇ ಇದ್ದರೆ ಸಾಧನೆ ಸಾಧ್ಯವಾಗುತ್ತದೆ. ಗುರಿ ಸಾಧನೆಯ ಮಾರ್ಗದರ್ಶಕ  ವೆನಿಸಿದ,  ’ಥಿಂಕ್ ಅಂಡ್ ಗ್ರೋ ರಿಚ್’ ಶಿರೋನಾಮೆಯಲ್ಲಿ ನೆಪೋಲಿಯನ್ ಹಿಲ್ ಬರೆದ ಪುಸ್ತಕದಲ್ಲಿ ಒಂದೆಡೆ ಮಗುವೊಂದು ಚಿಕ್ಕ ಬಿಲ್ಲಿ ಕಾಸನ್ನು ಪಡೆಯಲೇಬೇಕೆಂಬ ಅನಿವಾರ್ಯತೆಯಿಂದ ಹೇಗೆ ನಡೆದುಕೊಂಡಿತು ಎಂಬುದರ ಬಗ್ಗೆ ತಿಳಿಸಿದ್ದಾನೆ. ’ಹೌ ಟು ವಿನ್ ಫ್ರೆಂಡ್ಸ್’ ಮೊದಲಾದ ಪುಸ್ತಕಗಳನ್ನು ಅನೇಕರು ಓದಿರುತ್ತೀರಿ. ಇಂತಹ ಪುಸ್ತಕಗಳನ್ನು ಓದುವವರು ಓದುತ್ತಲೇ ಇದ್ದಾರೆಯೇ ಹೊರತು ಅದನ್ನು ಪ್ರಯೋಗವಾಗಿ ಅಳವಡಿಸಿಕೊಳ್ಳಲಿಲ್ಲ. ರಿಚರ್ಡ್ ಬ್ರಾನ್ಸನ್  ಬಗ್ಗೆ ಓದಿ ಅದನ್ನೇ ಬಹಳಕಾಲ ಪತ್ರಿಕೆಗಳಲ್ಲಿ ಬರೆದ ಪತ್ರಕರ್ತರೂ ಇದ್ದಾರೆ. ಆದರೆ ಓದಿದ ಘಟನೆಗಳಲ್ಲಿನ ತತ್ವಗಳನ್ನು ಅಳವಡಿಸಿಕೊಂಡವರ ಪೈಕಿ ಕೆಲವರನ್ನು ನೆನಪಿಸಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ.

ಸುಹಾಸ್ ಗೋಪಿನಾಥ್ ಎಂಬ ಹುಡುಗ ಸೈಬರ್ ಕೆಫೆಯಲ್ಲೇ ತನ್ನ ಕಂಪನಿಯನ್ನು ಹುಟ್ಟುಹಾಕಿದ ಕಥೆಯ ಬಗ್ಗೆ ತಾವು ಟಿವಿಗಳಲ್ಲಿ ಸುದ್ದಿ ಕೇಳಿದ್ದೀರಿ. ಕ್ಯಾಪ್ಟನ್ ಗೋಪಿನಾಥ್ ಅವರ ಸಾಧನೆಯನ್ನೂ ಅದಾಗಲೇ ಕಂಡಿದ್ದೀರಿ. ಇವರುಗಳ ಬಗ್ಗೆ ಜಾಸ್ತಿ ಹೇಳುವುದು ಬೇಡವೇನೋ ಅನ್ನಿಸುತ್ತದೆ. ಓದುವುದಕ್ಕೂ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಬಂದ ಈ ಇಬ್ಬರೂ ತಮ್ಮ ಅವಿರತ ಪ್ರಯತ್ನದ ಫಲವಾಗಿ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ. ಉತ್ತಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುವುದು ಪ್ರಕೃತಿ ಧರ್ಮ! ಪ್ರತಿಯೊಬ್ಬ ಸಾಧಕನ ಹಿಂದೆಯೂ ಆ ರಂಗದಲ್ಲಿ ಅವನ ಅಗ್ರ ತಪಸ್ಸು ಅಡಗಿದೆ ಎಂಬುದನ್ನು ಮರೆಯುವ ಹಾಗಿಲ್ಲ;ಕೈ ಕೆಸರಾಗದ ಹೊರತು ಬಾಯಿಗೆ ಮೊಸರು ಸಿಗುವುದಿಲ್ಲ. ಕೈಯ್ಯನ್ನು ಕೆಸರುಮಾಡಿಕೊಳ್ಳುವುದು ಮೇಟಿವಿದ್ಯೆಯ ಯೋಗಿಯ ಕೆಲಸವಾದರೆ ಮನಸಾ ತನ್ನ ಅಂಗಾಂಗಗಳನ್ನು ದುಡಿಮೆಯಲ್ಲಿ ಹರಿಬಿಟ್ಟು, ಅವಿಶ್ರಾಂತವಾಗಿ ಪ್ರಯತ್ನಿಸುವುದೂ ಕೂಡ ಪರೋಕ್ಷ ಕೈಕೆಸರು ಮಾಡಿಕೊಂಡಂತೆಯೇ ಸರಿ. ಲೋಕದಲ್ಲಿ ಎಲ್ಲರೂ ರೈತರಾಗಲು ಸಾಧ್ಯವಿಲ್ಲ, ವ್ಯವಹಾರಕ್ಕೊಂದಷ್ಟು, ಆಡಳಿತಕ್ಕೊಂದಷ್ಟು, ಕಲೆ-ಸಾಹಿತ್ಯ-ಸಂಗೀತಕ್ಕೊಂದಷ್ಟು ಹೀಗೆಲ್ಲಾ ಬೇರೇ ಬೇರೇ ರಂಗಗಳಲ್ಲಿ ಜನ ತೊಡಗಿಕೊಂಡಾಗಲೇ ಈ ಜಗನ್ನಾಟಕ ನಡೆಯುತ್ತದೆ.


ಜೇಂಟ್ ವ್ಹೀಲ್ ಸುತ್ತುತ್ತಿರುವಾಗ, ಅದರಲ್ಲಿರುವ ಕೆಲವರು ಕೂಗಿಕೊಳ್ಳುವಾಗ ಕೆಳಗಡೆ ನಿಂತು ನೋಡುವ ನಾವು "ಅಯ್ಯೋ ಅದ್ಯಾಕೆ ಆ ಥರಾ ಹುಯ್ಕೋತೀರಪ್ಪಾ ? ಏನೂ ಆಗಲ್ಲ" ಎಂದು ಅನುಭವದಿಂದ ಹೇಳುವಂತೇ ಹೇಳುವುದಾಗಲೀ, ನೋಡಿ ನಗುವುದಾಗಲೀ ಸುಲಭ; ಅದೇ ಜೇಂಟ್ ವ್ಹೀಲ್ನಲ್ಲಿ ನಾವೇ ಕೂತಾಗ ಆಗುವ ಸ್ವಾನುಭವ ಬೇರೆಯೇ ಆಗಿರುತ್ತದೆ. ತೊಟ್ಟಿಲ ಜೋಡಿಕೆಗಳು ಅಕಸ್ಮಾತ್ ತುಂಡಾಗಿ ಕೆಳಗೆ ಬಿದ್ದುಬಿಟ್ಟರೆ? ನಾವು ಏಟುತಿಂದು ಕೆಲಸಮಾಡದಂತಾದರೆ ನಮ್ಮನ್ನೇ ನಂಬಿರುವ ನಮ್ಮ ಸಂಸಾರಕ್ಕೆ? ತೊಟ್ಟಿಲಿನಿಂದ ಬಿದ್ದು ಸತ್ತುಹೋದರೆ? ಕೈಯ್ಯೋ ಕಾಲೋ ಮುರಿದು ಮತ್ತೆ ಪುನಃ ಸರಿಪಡಿಸಲಾಗದ ಸ್ಥಿತಿಗೆ ತಲ್ಪಿದರೆ? ---ಎಂಬೀ ಹಲವು ರೀತಿಯ ಪ್ರಶ್ನೆಗಳು ನಮ್ಮಲ್ಲಿ ಉದ್ಭವವಾಗುತ್ತವೆ. ನಮ್ಮ ಪಕ್ಕದಲ್ಲೇ ನಿರಾಳವಾಗಿ ಜಗತ್ತನ್ನೇ ಮರೆತು ಕೂತಂತೇ ಕೂತ, ಮಜಾ ಅನಿಭವಿಸಿದ ಜನರೂ ಇರುತ್ತಾರೆ. ತೂಗುವ ಅದೇ ತೊಟ್ಟಿಲಲ್ಲಿ ಕೂತು ಮತ್ತಿನ್ಯಾವುದೋ ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿಕೊಳ್ಳುವ ಜನರೂ ಇದ್ದಾರೆ! ಮನುಷ್ಯನ ಮೆದುಳಿಗೆ ಅಂತಹ ಅಪರಿಮಿತ ತಾಕತ್ತಿದೆ; ಅದು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿದೆ. ಮೆದುಳಿಗಿರುವ ಅಂತಹ ಅದ್ಭುತ ಶಕ್ತಿ ಜಗನ್ನಿಯಾಮಕನ ಕೊಡುಗೆಯಾಗಿದೆ. ಇರುವ ಶಕ್ತಿಯನ್ನು ಉದ್ದೀಪಿಸಬಹುದೇ ಹೊರತು ಹೊಸದಾಗಿ ಮೆದುಳಿಗೆ ಅದನ್ನು ತುಂಬಲು ಸಾಧ್ಯವಿಲ್ಲ.


ನಮ್ಮ ನೆರೆಕೆರೆಯ ಸದಾನಂದ ಮಯ್ಯ ಆಹಾರೋದ್ಯಮದಲ್ಲಿ ತೊಡಗಿಕೊಂಡವರು. ಎಂಜಿನೀಯರಿಂಗ್ ಮಾಡಿದ ನಂತರ ತನ್ನ ಅಪ್ಪ ಸ್ಥಾಪಿಸಿದ್ದ ’ಮಾವಳ್ಳಿ ಟಿಫಿನ್ ರೂಮ್’ ಗೆ ಹೊಸ ರೂಪ ಕೊಡಲು ಮುಂದಾದರು. ನಾನು ಅವರನ್ನೊಮ್ಮೆ ಪ್ರತ್ಯಕ್ಷವಾಗಿ ಭೇಟಿಯಾಗಿದ್ದೆ. ಬರೇ ಹೋಟೆಲ್ ಒಂದೇ ರೂಪ ಸಾಲದು, ತಾವು ತಯಾರಿಸುವ ಆಹಾರ ಪರಿಕರಗಳು ದೇಶವ್ಯಾಪಿ ಅಷ್ಟೇ ಏಕೆ ವಿದೇಶಗಳಲ್ಲೂ ಸಿಗುವಂತಾಗಬೇಕು ಎಂಬುದು ಅವರ ಕನಸಾಗಿತ್ತು. ಹಾಗಾದರೆ ಆಹಾರವನ್ನು ಸಿದ್ಧಪಡಿಸುವುದು ಹೇಗೆ? ಸಿದ್ಧ ಆಹಾರ ಕೆಡದಂತೇ ರಕ್ಷಿಸಿ ಮಾರುಕಟ್ಟೆ ಪಡೆಯುವುದು ಹೇಗೆ? ಗಿರಾಕಿಗಳನ್ನು ತಮ್ಮ ತಯಾರಿಕೆಯ ಹೆಸರಿನಲ್ಲಿ ಕೊಳ್ಳಲು ಒಪ್ಪಿಸಿವುದು ಹೇಗೆ? ಇಂತಹ ಹಲವು ಸಮಸ್ಯೆಗಳು ಮೊದಲಾಗಿ ಅವರನ್ನು ಬಾಧಿಸಿದ್ದವು. ಎಂ.ಟಿ.ಆರ್ ಗೆ ತೆರಳಿ ೭೫ರೂ ಕೊಟ್ಟು, ಶುಚಿರುಚಿಯಾದ ಪುಷ್ಕಳ ಭೋಜನವನ್ನು ಸವಿದವರಲ್ಲಿ ನಾನೂ ಒಬ್ಬ. ಅದೇ ಎಂ.ಟಿ.ಆರ್ ತನ್ನದಾದ ಬ್ರಾಂಡ್ ನಲ್ಲಿ ಹೊಸ ಹೊಸ ಸಿದ್ಧ ಆಹಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆರಂಭಿಕ ಹಂತದಲ್ಲಿ ಕೆಲವು ಸರಕುಗಳು ಮಾರಾಟವಾಗದೇ ಉಳಿದಿದ್ದೂ ದಾಖಲೆ ಇದೆ! ಆದರೆ ಮಯ್ಯ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ; ಎಂ.ಟಿ.ಆರ್ ಫುಡ್ಸ್-ಲಿಮಿಟೆಡ್ ಕಂಪನಿಯಾಗಿ ಬೆಳೆಯಿತು. ಮಯ್ಯ ಅವರ ಕನಸು ನನಸಾಯ್ತು. ಶುದ್ಧ ಸಿದ್ಧ ಆಹಾರವಸ್ತುಗಳು ಬೇಕೆಂದರೆ ಇಂದಿಗೂ ಜನ ಎಂ.ಟಿ.ಆರ್ ಬ್ರಾಂಡ್ ಹುಡುಕುತ್ತಾರೆ. ಯಾವುದೋ ಹಂತದಲ್ಲಿ ಮಯ್ಯ ಸಂಸ್ಥೆಯನ್ನು ವಿದೇಶೀ ಮೂಲದ ಕಂಪನಿಗೆ ಮಾರಿದರು. ನಂತರ ಈಗ ’ಮಯ್ಯಾಸ್’ ಎಂಬ ಹೆಸರಿನಲ್ಲಿ ಮತ್ತೆ ಅಂಥದ್ದೇ ಇನ್ನೊಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದು ಮತ್ತೊಂದು ಸಾಧನೆ. ಮಾಮೂಲೀ ಹೋಟೆಲಿಗರಂತೇ ಚಿಂತಿಸದೇ ತಾರ್ಕಿಕವಾಗಿ ಹಲವು ವಿಚಾರಗಳನ್ನು ಮಥಿಸಿದ ಮಯ್ಯರಿಗೆ ಕಂಡ ಗುರಿಗಳೆಷ್ಟು? ಗುರಿಗಳ ಈಡೇರಿಕೆಯ ಹಿಂದಿರುವ ಅವರ ಶ್ರಮವೆಷ್ಟು? ಸಾಧನೆಯ ನಂತರ ಅವರಿಗೆ ಸಿಕ್ಕ ಮಾನಸಿಕ ಸಂತೋಷವೆಷ್ಟು? -ಇವನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.


ಆದಿತ್ಯ ಘೋಷ್ ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭಿಸಿದ್ದು ತನ್ನ ೨೨ನೇ ವಯಸ್ಸಿನಲ್ಲಿ. ತಮ್ಮದೇ ಕಚೇರಿಯೊಂದನ್ನು ತೆರೆದು ಕೆಲಸನಿರ್ವಹಿಸುತ್ತಿದ್ದ ಅವರು ನಂತರ ಜ್ಯೋತಿ ಸಾಗರ್ ಎಂಬ ಹಿರಿಯ ನ್ಯಾಯವಾದಿಗಳ ಸಹಾಯಕ ನ್ಯಾಯವಾದಿಗಳಾಗಿ ’ಜ್ಯೋತಿ ಸಾಗರ್ ಅಸ್ಸೋಸಿಯೇಟ್ಸ್’ ನಲ್ಲಿ ಕೆಲಸ ನಿರ್ವಹಿಸಿದರು. ಎಳವೆಯಲ್ಲಿ ತಮ್ಮ ಮಗ ಯಾವುದಕ್ಕೂ ಅರ್ಹನಲ್ಲ ಎಂಬ ಭಾವನೆ ಅವರ ಅಮ್ಮನಲ್ಲಿತ್ತಂತೆ! ಆದರೆ ತಾನು ಏನಾಗಬೇಕು ಎಂಬುದನ್ನು ಅವರ ಮನಸ್ಸು ನಿರ್ಧರಿಸಿತ್ತು. ’ಜ್ಯೋತಿ ಸಾಗರ್ ಆಸ್ಸೋಸಿಯೇಟ್ಸ್’ ಗೆ ಭಾಟಿಯಾ ಎಂಬೊಬ್ಬರು ಕಕ್ಷಿದಾರರಿದ್ದರು. ಉತ್ತಮ ವಾಣಿಜ್ಯವ್ಯವಹಾರಗಳನ್ನು ನಡೆಸುತ್ತಿದ್ದ ಭಾಟಿಯಾ ಅವರ ಸಂಸ್ಥೆಯ ಕಾನೂನು ಸಲಹೆಗಾರರಾಗಿ ಜ್ಯೋತಿ ಅವರು ಕೆಲಸಮಾಡುತ್ತಿದ್ದರು. ಭಾಟಿಯಾ ಅವರು ಇನ್ನೊಬ್ಬರೊಡನೆ ಭಾಗೀದಾರರಾಗಿ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆಯನ್ನು ಸ್ಥಾಪಿಸಿದರು. ಸಂಸ್ಥೆಗೆ ನಾಲ್ಕುವರ್ಷ ತುಂಬಿದರೂ ಅಷ್ಟಾಗಿ ಬೆಳವಣಿಗೆ ಕಂಡಿರಲಿಲ್ಲ. ಅನಿರೀಕ್ಷಿತವಾಗಿ ಭಾಟಿಯಾ, ಆದಿತ್ಯ ಘೋಷ್ ಅವರನ್ನು ತಮ್ಮ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವಂತೇ ಕೋರಿದರು. ಆದಿತ್ಯ ಅವರೂ ಒಪ್ಪಿದರು.


ಆದಿತ್ಯ ಘೋಷ್ ’ಅಧಕ್ಷ’ರೆನಿಸಿ ಇಂಡಿಗೋ ಸೇರಿದಾಗ ಅವರಿಗೆ ೩೨ ವಯಸ್ಸಾಗಿತ್ತಷ್ಟೇ! ಇಂಡಿಗೋದ ಆಡಳಿತ ಮಂಡಳಿಯಲ್ಲಿರುವ ಎಲ್ಲರೂ ಆದಿತ್ಯರಿಗಿಂತ ಹಿರಿಯರಾಗಿದ್ದರು. ಮೇಲಾಗಿ ಆದಿತ್ಯ ಓದಿಕೊಂಡ ವಿಷಯಕ್ಕೂ ಅವರು ಆಯ್ದುಕೊಂಡ ರಂಗಕ್ಕೂ ಸಂಬಂಧವೇ ಇರಲಿಲ್ಲ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆದಿತ್ಯ ಚಿಂತಿಸಿದ ರೀತಿ ಬೇರೆಯಾಗಿತ್ತು: ಏರ್ಲೈನ್ಸ್ ವ್ಯವಹಾರಕ್ಕೆ ಬೇರೇ ಯಾವ್ಯಾವ ಉದ್ಯಮಗಳ ಸಹಕಾರ ಅಗತ್ಯ? ಎಲ್ಲೆಲ್ಲಿ ಯಾವ ಯಾವ್ ರೀತಿಯ ಸಮಸ್ಯೆಗಳು ಎದುರಾಗುತ್ತವೆ? ಅನವಶ್ಯಕ ಖರ್ಚುವೆಚ್ಚಗಳೆಷ್ಟು? ಖರ್ಚುವೆಚ್ಚಗಳನ್ನು ತಹಬಂದಿಯಲ್ಲಿಟ್ಟು ಪ್ರಯಾಣಿಕರಿಗೆ ಆದಷ್ಟೂ ಕಮ್ಮಿ ದರದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬಹುದೇ?--ಇಂತಹ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರ ಹುಡುಕಿದರು. ವಿಮಾನ ತಯಾರಕರೊಡನೆ, ಬಿಡಿಭಾಗಗಳ ತಯಾರಕರೊಡನೆ ಕಂತ್ರಾಟು ನಡೆಸಿದರು. ಸಿಬ್ಬಂದಿಯನ್ನು ಕರೆದು ಗಿರಾಕಿಗಳನ್ನು ಸಂತುಷ್ಟಗೊಳಿಸುವ ಬಗೆಯನ್ನು ಚರ್ಚಿಸಿದರು. ಪ್ರಥಮವಾಗಿ ಡೆಲ್ಲಿಯಿಂದ ಗೌಹಾಟಿಗೆ ಪ್ರಯಾಣಿಸಿದ ವಿಮಾನಕ್ಕೆ ಬಳಸಲಾಗುವ ಏಣಿ ಮತ್ತು ಟ್ರಾಕ್ಟರ್ ಬಂದು ತಲ್ಪುವುದು ತಡವಾಗಿ, ಅವುಗಳಿಗೆ ಇಂಡಿಗೋ ಕಂಪನಿಯು ಬಳಸುವ ಬಣ್ಣವನ್ನು ಹಚ್ಚಲಾಗಿರಲಿಲ್ಲ; ರಾತ್ರೋರಾತ್ರಿ ಆದಿತ್ಯ ಅವರ ಟೀಮ್ ಅವುಗಳಿಗೆ ಇಂಡಿಗೋ ಸಂಸ್ಥೆಯ ಬಣ್ಣವನ್ನು ಬಳಿಯಿತು!


ಡೆಲ್ಲಿಯಲ್ಲಿ ಇತ್ತೀಚೆಗೆ ನಡೆಸಿದ ಏರ್ಲೈನ್ಸ್ಗಳು ಮತ್ತು ಸರಕಾರದ ನಡುವಿನ ಮೀಟಿಂಗ್ ಒಂದಕ್ಕೆ ಆದಿತ್ಯ ಪ್ರಯಾಣಿಸಿದ್ದು ವ್ಯಾಗನ್ ಆರ್ ಕಾರಿನಲ್ಲಿ-ಸ್ವತಃ ಚಾಲನೆಮಾಡಿಕೊಂಡು. ಮಿಕ್ಕಿದ ಏರ್ಲೈನ್ಸ್ ಸಂಸ್ಥೆಗಳವರು ವಿದೇಶೀ ಕಾರುಗಳಲ್ಲೋ ಜೆಟ್ ಗಳಲ್ಲೋ ಬಂದಿಳಿದರು. ಪ್ರಯಾಣಿಕ ಪ್ರಯಾಣಿಸುವಾಗ ಅಧ್ಯಕ್ಷ ಯಾರೆಂದು ನೋಡುವುದಿಲ್ಲ ಬದಲಾಗಿ ತನ್ನ ಅನುಕೂಲತೆಗಳನ್ನು ನೋಡುತ್ತಾನೆ ಎಂಬುದು ಆದಿತ್ಯರ ಹೇಳಿಕೆ. ಇಂಡಿಗೋ ಸಂಸ್ಥೆಗೆ ಪೈಪೋಟಿ ನೀಡುತ್ತಿರುವ ಬೇರೇ ಸಂಸ್ಥೆಗಳು ಜಾಸ್ತಿ ಸಂಭಾವನೆ ನೀಡುವುದಾದರೆ ಹೋಗಲು ಸಿದ್ಧರಿದ್ದೀರಾ ? --ಎಂಬ ಪ್ರಶ್ನೆಯನ್ನು ಕೇಳಿದಾಗ, ಆದಿತ್ಯ ಹೇಳಿದ್ದು " ನನ್ನಿಂದ ಇಂಡಿಗೋ ಬೆಳೆದಿದೆ ಎಂದು ನಾನು ತಿಳಿದಿಲ್ಲ, ಇಂಡಿಗೋ ಬೆಳೆದಿರುವುದರ ಹಿಂದೆ ನಮ್ಮ ಟೀಮ್ನ ಪರಿಶ್ರಮ ಅಡಗಿದೆ. ಇಂಡಿಗೋ ನನಗೂ ಬೆಳೆಯುವ ಉತ್ತಮ ಅವಕಾಶ ಒದಗಿಸಿದೆ. ಹೀಗಾಗಿ ನನ್ನಿಂದಲೇ ಇಂಡಿಗೋ ಬೆಳೆದಿದೆ ಎಂದು ತಿಳಿದುಕೊಂಡು ನಾನು ಬೇರೇ ಸಂಸ್ಥೆಗೆ ಜಿಗಿದರೆ ಅಂತಹ ಮೂರ್ಖತನ ಬೇರೊಂದಿಲ್ಲ."೩೬ ವರ್ಷ ವಯಸ್ಸಿನ ಆದಿತ್ಯ ಅಧ್ಯಕ್ಷರಾಗಿರುವ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆಯಲು ಮುಂದಾಗಿದೆ, ದೇಶದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವಲ್ಲಿ ನಂಬರ್ ಒನ್ ಎನಿಸಿದೆ.


ಗ್ರಾಂಡ್ ಮಾಸ್ಟರ್ ಎಂದ ತಕ್ಷಣವೇ ನೆನಪಾಗುವುದು ವಿಶ್ವನಾಥನ್ ಆನಂದ್. ಚೆಸ್ ಲೋಕದ ಮಾಂತ್ರಿಕ ಅವರು. ಭಾರತಕ್ಕೆ ೫ನೇ ಬಾರಿ ವಿಶ್ವಮಟ್ಟದ ಚಾಂಪಿಯನ್ ಆಗಿ ಕೀರ್ತಿ ತಂದುಕೊಟ್ಟಿದ್ದಾರೆ. ಗಣಕಯಂತ್ರಗಳಲ್ಲೂ ಚೆಸ್ ಆಟವಿರುತ್ತದೆ. ಅಲ್ಲೆಲ್ಲಾ ಸಾಮಾನ್ಯವಾಗಿ ಬಳಸುವುದು ಸರ್ಚ್ ಅಲ್ಗೊರಿದಮ್ ಪದ್ಧತಿಯನ್ನು. ಸಾಮಾನ್ಯವಾಗಿ ಆಟಗಾರರು ಆಡುವಾಗಲೂ ಇಂತಹ ಅಲ್ಗೊರಿದಮ್ ಅವರ ಮನದಲ್ಲಿ ಉದ್ಭವವಾಗಿರುತ್ತದೆ! ಚಿಂತನೆಯ ಮಟ್ಟದಲ್ಲಿ ಸಾಂಪ್ರದಾಯಿಕವಾಗಿ ಮೂಡುವ ಇಂತಹ ಅಲ್ಗೊರಿದಮ್ ಮೀರಿ ಬೆಳೆದವರು ವಿಶ್ವನಾಥನ್ ಆನಂದ್. ಕಾಯಿಗಳನ್ನು ಚಲಿಸುವಾಗ ಯಾವ ರೀತಿಯಲ್ಲಿ ಚಲಿಸಿದರೆ ತಾನು ಮುಂದೆಸಾಗಬಹುದು ಎಂಬುದರ ಜೊತೆಗೆ ಎದುರಾಳಿಗಳ ಮುಂದಿನ ನಡೆ ಹೇಗಿರಬಹುದೆಂಬುದನ್ನೂ ಅವಲೋಕಿಸಿ ನಡೆಯುವ ಜಾಣ್ಮೆಯದು. ಕಾಯಿ ಉರುಳಿಸುವುದು ಅಥವಾ ಮುಂದೆ ಹೆಜ್ಜೆ ಇಡುವುದು ಎಲ್ಲರಿಗೂ ಗೊತ್ತಿರುವ ಪ್ರಯತ್ನ; ಅದನ್ನೇ ಭಿನ್ನವಾಗಿ ಚಿಂತಿಸಿ ಎದುರಾಳಿ ಮತ್ತೆ ಮುಂದೆಸಾಗದಂತೇ ಮಂತ್ರಹಾಕುವುದು ಯಾವುದೇ ಪುಸ್ತಕದಲ್ಲಿ ಹೇಳಿಕೊಟ್ಟ ನಿಯಮವಲ್ಲ! ಅದು ಅವರ ಮಾನಸಿಕ ಸಿದ್ಧತೆ!


ನಮ್ಮಲ್ಲಿ ’ದ್ರಾವಿಡ ಪ್ರಾಣಾಯಾಮ’ ಎಂಬ ಒಂದು ಗಾಂವ್ಟಿ ಶಬ್ದ ಬಳಕೆಯಲ್ಲಿದೆ! ನೇರವಾಗಿ ಸಿಗುವ ಮೂಗನ್ನು ಬಲಗೈಯಲ್ಲಿ ಹಿಡಿದುಕೊಳ್ಳುವ ಬದಲು, ಅದೇ ಬಲಗೈಯ್ಯಿಂದ ತಲೆಯನ್ನು ಸುತ್ತಿಬಂದು ಮೂಗು ತಲ್ಪುವುದು ದ್ರಾವಿಡ ಪ್ರಾಣಾಯಾಮದ ಕ್ರಮವಾಗಿತ್ತಂತೆ. ದಯವಿಟ್ಟು ದ್ರಾವಿಡರು ಕ್ಷಮಿಸಿ! ಇದು ಚಿಂತನೆಗೆ ಸಕಾಲ. ಧುಮ್ಮಿಕ್ಕಿ ಹರಿಯುವ ಶರಾವತಿಯ ದಬದಬೆಯನ್ನು ಕಂಡು ಸಾವಿರಾರು ಜನ ಸಂತಸ ವ್ಯಕ್ತಪಡಿಸುತ್ತಿದ್ದರೆ ಅದನ್ನು ನೋಡಿದ ಘಳಿಗೆಯಲ್ಲೇ "ವ್ಹಾಟ್ ಎ ವೇಸ್ಟ್?" ಎಂದು ಉದ್ಗರಿಸಿದವರು ಸರ್ ಎಂ. ವಿಶ್ವೇಶ್ವರಯ್ಯ! ಅವರು ಕಂಡ ಕನಸೇ ಇವತ್ತು ಕಾರ್ಯನಿರ್ವಹಿಸುತ್ತಿರುವ, ರಾಜ್ಯದ ಹೆಗ್ಗಳಿಕೆಯ, ಮಹಾತ್ಮಾಗಾಂಧಿ ಜಲವಿದ್ಯುದಾಗಾರ. ಕೃಷ್ಣರಾಜ ಸಾಗರ ನಿರ್ಮಾಣದ ವೇಳೆ, ಗುರಿ ಸಾಧನೆಗೆ ಅವರು ಬಳಸಿದ ವಿಶಿಷ್ಟ ಮಾರ್ಗಗಳನ್ನು ಹಿಂದೊಮ್ಮೆ ಬರೆದಿದ್ದೆ. ಸಾಧಕರಿಗೆ ಬಾಧಕಗಳು ಹಲವು; ಮತ್ತು ಅದು ಸಹಜವೇ. ಅದನ್ನರಿತುಕೊಂಡೇ, ಗುರಿ ಸಾಧನೆಗೆ ಇರಬಹುದಾದ ಮಾರ್ಗಗಗಳಲ್ಲಿ ಉತ್ತಮವಾದ ಮಾರ್ಗ ಯಾವುದು ಎಂಬುದನ್ನು ತಿಳಿದು ಮುನ್ನಡೆದರೆ ವ್ಯಕ್ತಿ ವಿಶಿಷ್ಟನಾಗುತ್ತಾನೆ; ವಿಶೇಷನಾಗುತ್ತಾನೆ. ಸಾಧಕರಿಗೆ ಅಭಿನಂದನೆಗಳು, ಸಾಧಿಸ ಬಯಸುವ ಯುವಜನತೆಗೆ ಹಾರ್ದಿಕ ಶುಭಾಶಯಗಳು.   


Thursday, May 31, 2012

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಚಿತ್ರಋಣ : ಅಂತರ್ಜಾಲ 

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಕೆಲವುದಿನಗಳಿಂದ ನನ್ನಲ್ಲಿ ಕೆಲವರು ಕೇಳಿದ್ದೀರಿ, ಕನ್ನಡ ಸಿನಿಮಾ ರಂಗದ ಡಬ್ಬಿಂಗ್ ಬಗ್ಗೆ ಮತ್ತು ಗಿರೀಶ್ ಕಾಸರವಳ್ಳಿಯವರ ಬಗ್ಗೆ ಬರೆಯಿರಿ ಎಂದು. ನಾನು ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡ ಜನ ಅಲ್ಲ. ಆದರೂ ನಿಮ್ಮ ಕೋರಿಕೆಯನ್ನು ಮನ್ನಿಸಿ ನನಗೆ ತಿಳಿದ ಮಟ್ಟಿಗೆ ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ.

ಕನ್ನಡ ಸಿನಿಮಾ ರಂಗದಲ್ಲಿ ಹಿಂದೆ ಉತ್ತಮ ಕಥೆಗಳಿದ್ದವು. ಆರಂಭದಲ್ಲಿ ಪೌರಾಣಿಕ ಕಥೆಗಳಿದ್ದವು, ಅದಾದ ಮೇಲೆ ಉತ್ತಮ ಸಾಮಾಜಿಕ ಕಥೆಗಳು, ಕಾದಂಬರಿಗಳ ಮೂಲಕ ನಿರ್ದೇಶಕರಿಗೆ ಸಿಕ್ಕು ಸಿನಿಮಾಗಳಾದವು. ಬರುಬರುತ್ತಾ ಹೊಸ ಅಲೆಗಳು ಎದ್ದವು; ಕೆಲವು ಜನರ ಬೇಡಿಕೆಯನ್ನು ಗಮನಿಸಿ ಹೆಣ್ಣುಮಕ್ಕಳಿಂದ ಕ್ಯಾಬರೆ ಮಾಡಿಸುವ ಹಂತವನ್ನು ತಲುಪಿದರು! ಕ್ರಮೇಣ ಅದೇನೋ ’ಮೈಚಳಿ ಬಿಟ್ಟು’ ’ಮೈಚಳಿ ಬಿಟ್ಟು’ ಎಂಬ ಪದ ಬಳಸಿ ನಾಯಕಿಯರಿಗೆ ಈಜುಡುಗೆ [ಬಿಕನಿ] ಹಾಕಿಸಲಾಯ್ತು. ಬರುಬರುತ್ತಾ ಕ್ಯಾಬರೆಗೆ ಬೇರೇ ನರ್ತಕಿಯರೇಕೆ ಅದನ್ನು ನಾಯಕಿಯರೇ ಮಾಡಿದರೆ ಹೇಗೆ? -ಎಂಬ ಅಂಶವನ್ನು ಮುಂದಿಟ್ಟುಕೊಂಡು  ನಾಯಕಿಯಾಗಲು ಅವಕಾಶ ಕೋರಿ ಬರುವ ಹೊಸ ನಟಿಯರನ್ನು ಆ ಕೆಲಸಕ್ಕೆ ಒಪ್ಪಿಸಲಾಯ್ತು. ಬಟ್ಟೆ ಬಿಚ್ಚುವುದೇ ಕಲೆ ಎಂಬಂತೇ ಬಿಂಬಿಸ ಹೊರಟಾಗಿನಿಂದ ಚಿತ್ರರಂಗದ ಚಹರೆ ಬದಲಾಗಿ ಹೋಯ್ತು.

ಡಬ್ಬಿಂಗ್ ಮಾಡುವುದರಿಂದ ಕಲಾವಿದರಿಗೆ ಅವಕಾಶ ಇರುವುದಿಲ್ಲ ಎಂಬ ಮಾತು ಕೆಲಮಟ್ಟಿಗೆ ಸತ್ಯವಾದರೂ ತಯಾರಿಸಿದ್ದನ್ನೇ ಮರುತಯಾರಿ ಮಾಡುವ ನ್ಯಾಶನಲ್ ವೇಸ್ಟ್ಗಿಂತ ಡಬ್ಬಿಂಗ್ ಒಳ್ಳೇದು ಅನಿಸುತ್ತದೆ. ಮೂಲ ಕಥೆಯನ್ನಾಧರಿಸಿ ಒಮ್ಮೆ ಒಂದು ಭಾಷೆಯಲ್ಲಿ ತಯಾರಿಸಲ್ಪಟ್ಟು ಯಶಸ್ವಿಯಾದ ಚಿತ್ರವನ್ನು, ಮತ್ತೊಂದು ಭಾಷೆಯಲ್ಲಿ ನೇರವಾಗಿ ಬಳಸಿಕೊಂಡರೆ ಕಥೆಯ ದೃಶ್ಯಾವಳಿಗಳಲ್ಲಿ ಮಾರ್ಪಾಟು ಆಗುವುದಿಲ್ಲ. ಕನ್ನಡವೂ ಸೇರಿದಂತೇ ಎಲ್ಲಾ ಚಿತ್ರರಂಗಗಳಲ್ಲೂ ಅನೇಕ ಕಲಾವಿದರು ನಿರ್ವಹಿಸುವ ಪಾತ್ರಗಳಿಗೆ ಹೇಗೂ ಕಂಠದಾನ ನೀಡಬೇಕಾದ ಅನಿವಾರ್ಯತೆ ಇದ್ದೇ ಇದೆ, ಅದರ ಬದಲು ಡಬ್ಬಿಂಗ್ಗೆ ಆದ್ಯತೆ ಕೊಡುವುದೇ ಒಳಿತು ಎಂಬುದು ಹಲವರ ಅಭಿಪ್ರಾಯ. ಅಷ್ಟಕ್ಕೂ ಉತ್ತಮ ಕಥೆಗಳು ನಮ್ಮಲ್ಲೇ ಹುಟ್ಟಿಕೊಂಡರೆ ಬೇರೇ ಭಾಷೆಯ ಚಿತ್ರರಂಗಗಳಿಂದ ನಾವು ಕಡಾ ಪಡೆಯುವ ಕೆಲಸ ತಪ್ಪುತ್ತದಲ್ಲಾ? --ಆ ಬಗ್ಗೆ ಮೊದಲು ತಲೆ ಓಡಿಸಬೇಕು.

ಇವತ್ತು ಚಿತ್ರರಂಗದಲ್ಲಿ ಕೋಟಿ ಕೋಟಿಗಳಲ್ಲಿ ಸೆಟ್ಟಿಂಗ್ ಗಳನ್ನು ಹಾಕಲಾಗುತ್ತದೆ. ಸಿನಿಮಾ ಅಂದರೆ ಕೋಟಿಗಳಲ್ಲಿ ಎಂಬುದೇ ಅಭ್ಯಾಸವಾಗಿಬಿಟ್ಟಿದೆ. ಹಿಂದೆ ಪುಟ್ಟಣ್ಣ ಕಣಗಾಲ್ರಂತಹ  ನಿರ್ದೇಶಕರಿದ್ದಾಗ ಸಿನಿಮಾ ತಯಾರಿಕೆ ಬರೇ ಸೆಟ್ಟಿಂಗ್ಗಳಲ್ಲಿ ನಡೆಯುತ್ತಿರಲಿಲ್ಲ, ಬದಲಾಗಿ ಹಲವಾರು ನೈಸರ್ಗಿಕ ತಾಣಗಳಲ್ಲಿ ತಯಾರಿಸಲ್ಪಡುತ್ತಿತ್ತು. ಆಗಿನ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು, ನಿರ್ದೇಶಕರು, ನಿರ್ಮಾಪಕರು, ಬಣ್ಣದವರು, ಬೆಳಕಿನವರು ಎಂದೆಲ್ಲಾ ಹಿಡಿದು ಎಲ್ಲರನ್ನೂ ಒಂದೇ ಕುಟುಂಬದ ರೀತಿ ಭಾವಿಸಿ ನಡೆದುಕೊಳ್ಳುತ್ತಿತ್ತು, ಒಬ್ಬೊಬ್ಬರದೂ ಒಂದೊಂದು ಸ್ಟೈಲು ! ಕಲಾವಿದರಲ್ಲಿ ಸಮಯಪ್ರಜ್ಞೆ ತುಸು ಕಮ್ಮಿಯೇ ಎಂದರೆ ಇದು ಅವಹೇಳನದ ಮಾತಾಗುವುದಿಲ್ಲ. ಎಲ್ಲರಿಗೂ ಸಿಗುವ ಸಂಭಾವನೆ ಕಮ್ಮಿಯೇ ಎಂಬ ಭಾವನೆಯೇ ಹೊರತು ಪಡೆಯುವ ಸಂಭಾವನೆಗೆ ತಾವು ಅರ್ಹರೇ ಎಂಬುದು ಅವರ ಮನದಲ್ಲಿ ಎಂದೂ ಬರುವ ಪ್ರಶ್ನೆಯಲ್ಲ. ನಿರ್ದೇಶಕನ ಕನಿಷ್ಠ ಅರ್ಹತೆ ಇರದವರೂ ನಿರ್ದೇಶನ ಮಾಡತೊಡಗಿ ವರ್ಷಕ್ಕೆ ಎಲ್ಲರಿಗೂ ಮೀರಿದಷ್ರ್ಟು ಸಿನಿಮಾ ಮಾಡಿದೆ ಎಂದು ಕೊಚ್ಚುತ್ತಾ ಕೊನೆಗೊಮ್ಮೆ ಮಾಡಿದ ಎಲ್ಲಾ ಚಿತ್ರಗಳು ನೆಗೆದು ಬಿದ್ದು ನೆಲಕಚ್ಚಿದಾಗ, ನಿದ್ರೆ ಮಾತ್ರೆಯ ಮೊರೆಹೋಗುವುದು ವಿಷಾದನೀಯ. ಉತ್ತಮ ನಿರ್ದೇಶನ ಎಂದರೆ ಏನು ಎಂಬುದನ್ನು ಒಂದೇ ವಾಕ್ಯದಲ್ಲಿ ಬಣ್ಣಿಸುವುದು ಕಷ್ಟವಾದರೂ ಉತ್ತಮ ನಿರ್ದೇಶನ ಇದ್ದರೆ ಯಾವುದೇ ಕಾಲಕ್ಕೂ ಸಿನಿಮಾ ಸೋಲುವುದಿಲ್ಲ ಎನ್ನಬಹುದಾಗಿದೆ, ಹಾಗಾದರೆ ನಿರ್ದೇಶಕ ಉತ್ತಮವಾಗಿದ್ದರೆ ಸಾಕೇ? ಒಳ್ಳೆಯ ಕಥೆ ಬೇಡವೇ? ಎಂಬ ಪ್ರಶ್ನೆಗೆ ಉತ್ತರ  ಉತ್ತಮ ನಿರ್ದೇಶಕ ಒಳ್ಳೆಯ ಕಥೆಯನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡುತ್ತಾನೆ. ಕಥೆ ಚೆನ್ನಾಗಿಲ್ಲಾ ಎಂದಾದರೆ ಒಳ್ಳೆಯ ಕಥೆ ಸಿಗುವವರೆಗೂ ಹುಡುಕಾಟ ನಡೆಯುತ್ತದೆ.

ಒಳ್ಳೆಯ ಕಥೆಗಳ ಹುಡುಕಾಟದಲ್ಲಿ ಹಾಗೆ ಮುಂದೆ ಸಾಗಿದ್ದವರು ದಿ|ಪುಟ್ಟಣ್ಣ ಕಣಗಾಲ್. ಕಥೆ ಸಿಗದಾಗ ಕನ್ನಡದಲ್ಲಿ ಅಂದಿನದಿನ ಸಿಗಬಹುದಾದ ಉತ್ತಮ ಕಾದಂಬರಿಗಳನ್ನು ತಂದು ರಾಶಿಹಾಕಿಕೊಂಡು, ಕೂತು, ಓದಿ, ಮನದಲ್ಲೇ ಕಥೆಯ ಪರಾಮರ್ಶೆ ನಡೆಸಿಕೊಂಡು, ಆಯ್ಕೆಯಾದ ಕಥೆಗೆ ತಾವು ನಡೆಸಬೇಕಾದ ದೃಶ್ಯಾವಳಿಗಳನ್ನು ಮನದಲ್ಲೇ ಕಲ್ಪಿಸಿಕೊಳ್ಳುತ್ತಿದ್ದರು. ಕಥೆಯಲ್ಲಿ ಬರುವ ಪಾತ್ರಗಳಿಗೆ ಹೋಲುವ ವ್ಯಕ್ತಿಗಳನ್ನು ಸಿಗುವ ಕಲಾವಿದರ ಬಳಗದಲ್ಲಿ ಹುಡುಕುತ್ತಿದ್ದರು. ಇಂತಹ ಪಾತ್ರಮಾಡಲು ಇಂಥವರೇ ಲಾಯಕ್ಕು ಎಂಬುದನ್ನು ನಿರ್ಧರಿಸುತ್ತಿದ್ದರು. ಇವತ್ತು ಈ ರೀತಿಯ ಯಾವುದೇ ಗುಣಾತ್ಮಕ ಅಥವಾ ಧನಾತ್ಮಕ ಪ್ರಕ್ರಿಯೆಗಳು ಕಾಣಸಿಗುವುದು ವಿರಳ. ಯಾರದ್ದೋ ಹುರುಳಿಲ್ಲದ ಕಥೆ, ಇನ್ಯಾರದ್ದೋ ಅಸಂಬದ್ಧ ಸಂಭಾಷಣೆ, ಕಥೆಗೆ ಯಾವುದೇ ರೀತಿಯಲ್ಲೂ ಪೂರಕವಲ್ಲದ ಐಟಮ್ ಸಾಂಗು, ಬರಿಬರಿದೇ ಬಿಚ್ಚುಡುಗೆಯ ಹಾಟ್ ಸೀನುಗಳು, ಕರ್ಕಶವೆನಿಸುವ ಸಂಗೀತ, ಒಂದಷ್ಟು ಫೈಟು-ಗಲಾಟೆ, ಜೀವನದಲ್ಲಿ ಮತ್ತೆಂದೂ ಕೇಳಲು ಇಷ್ಟಪಡದ ಹಾಡುಗಳು !--ಇದು ಇವತ್ತಿನ ಸಿನಿಮಾಗಳ ಲಕ್ಷಣವಾಗಿದೆ. 

ಕಣಗಾಲ್ರಂಥವರು ಮತ್ತೆ ಸಿಗುವುದು ಕಷ್ಟವೆನಿಸಬಹುದು. ಚಿಕ್ಕ ವಯಸ್ಸಿಗೇ ಮಹತ್ತರ ಸಾಧನೆಗಳನ್ನು ಮಾಡಿ ಜನಮನವನ್ನು ಗೆದ್ದ ಅವರು, ಕಲಾವಿದರ ಮಟ್ಟಿಗೆ ವಿಶ್ವವಿದ್ಯಾಲಯದಂತಿದ್ದರು. ಅವರ ಗರಡಿಯಲ್ಲಿ ಕನ್ನಡದ ಅನೇಕ ಘಟಾನುಘಟಿ ಕಲಾವಿದರು ಹುಟ್ಟಿಕೊಂಡರು. ಪುಟ್ಟಣ್ಣನ ಕಲಾಶಾಲೆ ಕೇವಲ ನಾಲ್ಕುಗೋಡೆಗಳ ಶಾಲೆಯಾಗಿರದೇ ಅದು ಕಲೆಯನ್ನು ನೇರವಾಗಿ ಪ್ರಾಯೋಗಿಕವಾಗಿ ಕಲಿಯುವ ಕಲಾಕೇಂದ್ರವಾಗಿತ್ತು ಎಂದರೆ ತಪ್ಪಲ್ಲ. ಪುಟ್ಟಣ್ಣನ ನಂತರದಲ್ಲಿ ಮತ್ತಿನ್ಯಾವ ನಿರ್ದೇಶಕರೂ ಆ ರೀತಿಯಲ್ಲಿ ಕಲಾವಿದರನ್ನು ತಯಾರುಮಾಡಲಿಲ್ಲ. ವಾಣಿಜ್ಯಕವಾಗಿ ಹಲವು ಕಲಾಶಾಲೆಗಳೇನೋ ಹುಟ್ಟಿಕೊಂಡವೇ ವಿನಃ ಅವುಗಳಿಂದ ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದ ಪ್ರತಿಭಾವಂತ ಕಲಾವಿದರು ತಯಾರಾಗಲಿಲ್ಲ, ಆಗುತ್ತಲೂ ಇಲ್ಲ. ಕಲೆ ವ್ಯಕ್ತಿಯಲ್ಲಿ ದೈವಿಕ ಕೊಡುಗೆಯಾಗಿದೆ, ಶಿಲೆಯಲ್ಲಿನ ಮೂರ್ತಿಯನ್ನು ಕಂಡ ಶಿಲ್ಪಿ ತನ್ನ ಚಾಣದ ಸಾವಿರಾರು ಏಟುಗಳಿಂದ ಆ ಮೂರ್ತಿಯ ರೂಪವನ್ನು ವಿಶ್ವದ ಜನತೆಗೆ ಅನಾವರಣಗೊಳಿಸಿ ತೋರಿಸುವಂತೇ, ಕಲಾವಿದನಾಗುವ ವ್ಯಕ್ತಿಯ ಲಕ್ಷಣವನ್ನು ಕಂಡು, ಅದನ್ನು ಸಮರ್ಪಕ ವೇಳೆಗೆ ಪ್ರಚುರಪಡಿಸುವುದು ನಿರ್ದೇಶಕರ ಚಾತುರ್ಯವಾಗಿರುತ್ತದೆ. ಈಗ ಹೊಸದಾಗಿ ಪ್ರವೇಶಿಸುವ ನಾಯಕ/ನಾಯಕಿಯ ಮನೆಯವರೇ ನಿರ್ಮಾಪಕರು, ನಾಯಕ/ನಾಯಕಿಗೆ ಅರ್ಹತೆ ಇರುತ್ತದೋ ಅಥವಾ ಬರೇ ಗ್ಲಾಮರ್ ಇದೆಯೆಂಬ ಕಾರಣಕ್ಕೆ ಸಿನಿಮಾ ರಂಗಕ್ಕೆ ಬರುತ್ತಾರೋ ತಿಳಿಯದಾಗಿದೆ.  ಒಟ್ಟಾರೆ ಬಹಳಷ್ಟು ಯುವಜನರಿಗೆ ಸಿನಿಮಾಗಳಲ್ಲಿ ನಟಿಸುವಾಸೆ, ಗೋಡೆಚಿತ್ರಗಳಲ್ಲಿ ಮಿರಮಿರನೆ ಮಿಂಚುವಾಸೆ, ಸಿನಿಮಾ ಬಿದ್ದುಹೋದರೂ ತಾವು ನಟ/ನಟಿಯರೆಂಬ ಹೆಸರು ಪಡೆಯುತ್ತೇವಲ್ಲಾ, ಜನ ನಮ್ಮನ್ನು ಭಿನ್ನವಾಗಿ ಗೌರವಿಸುತ್ತಾರಲ್ಲಾ ಎಂಬ ಭಾವನೆ!

ಪುಟ್ಟಣ್ಣನವರನ್ನು ಬಿಟ್ಟಮೇಲೆ ಹಳ್ಳಿಯ ಸನ್ನಿವೇಶಗಳನ್ನೂ ಗ್ರಾಮೀಣ ಬದುಕಿನ ಸೊಗಡುಳ್ಳ ದೃಶ್ಯಕಾವ್ಯಗಳನ್ನು ಬರೆದವರು ಗಿರೀಶ್ ಕಾಸರವಳ್ಳಿ ಎಂದರೆ ತಪ್ಪಾಗಲಾರದು. ಅವರ ಧಾರಾವಾಹಿಗಳಲ್ಲಿ ’ಗೃಹಭಂಗ’, ಮತ್ತು ’ಮೂಡಲ ಮನೆ’ ಬಹಳ ಮನೋಜ್ಞವಾಗಿವೆ. ಸಿನಿಮಾ ಅಥವಾ ಅಭಿನಯ ಕಲೆಯ ಜಾಡುಹಿಡಿದು ಹೊರಟಾಗ ಕನ್ನಡದಲ್ಲಿ ಅವರನ್ನು ಪ್ರತಿಭಾವಂತ ನಿರ್ದೇಶಕ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಉತ್ತಮ ನಿರ್ದೇಶಕ ತಾನೆಂದೂ ಉತ್ತಮ ಎಂದು ಹೇಳಿಕೊಳ್ಳುವುದಿಲ್ಲ, ಅವನ ಚಿತ್ರಗಳೇ ಅದನ್ನು ಹೇಳುತ್ತವೆ. ಗಿರೀಶ್ ಕಾಸರವಳ್ಳಿ ಚಿತ್ರಗಳಿಗೆ ರಾಷ್ಟ್ರೀಯ ಪುರಸ್ಕಾರಗಳು ಸಿಕ್ಕಿರುವುದೇ ಅವರ ನಿರ್ದೇಶನದ ಔನ್ನತ್ಯವನ್ನು ಹೇಳುತ್ತದೆ.  

ಕನ್ನಡ ದಿನಪತ್ರಿಕೆಯೊಂದರಲ್ಲಿ ಕಥೆಯೊಂದು ಹೇಳುತ್ತದೆ: ಹೊರಗಿನಿಂದ ಮಾನ-ಸನ್ಮಾನಗಳನ್ನು ಪಡೆಯುವ ಯಜಮಾನರುಗಳ ಕೆಲಸಗಳ ಹಿಂದಿನ ನಿಜವಾದ ಕಾರ್ಯವಾಹಕರು ಅವರ ಕೆಲಸಗಾರರಾಗಿರುತ್ತಾರಂತೆ; ಅದರಂತೇ ದಿನಪತ್ರಿಕೆಯೊಂದರಲ್ಲಿ ಬರುವ ಹಲವು ತಪ್ಪುಗಳಿಗೆ ಅದರ ಸಂಪಾದಕರು ಕಾರಣವಲ್ಲ, ಬದಲಾಗಿ ಅಲ್ಲಿನ ಇತರ ವರದಿಗಾರರು/ಕೆಲಸಗಾರರು ಕಾರಣ ಎಂದು ಅವರು ಹೇಳಿದಹಾಗಿದೆ. ಕೆಲವೊಮ್ಮೆ ಭಾಷಾಂತರಗೊಳ್ಳುವ ಪುಸ್ತಕಗಳ ಹಿಂದೆಯೂ ಕೂಡ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಎಂಬ ಅಡಪಡ ಸುದ್ದಿಗಳು ತೀರಾ ಅಧಿಕೃತವಲ್ಲದೆಯೂ ನಂಬಲರ್ಹಮೂಲಗಳಿಂದ ತಿಳಿದುಬರುತ್ತವೆ. ಅದೇ ದಿನಪತ್ರಿಕೆಯಲ್ಲಿ ಗಿರೀಶ್ ಕಾಸರವಳ್ಳಿಯವರ ಬಗ್ಗೆ ವಿಚಿತ್ರವಾಗಿ ಬರೆಯಲಾಗಿದೆ. 

ನಾನು ಕಾಸರವಳ್ಳಿಯವರ ಖಾಸಾ ದೋಸ್ತನಾಗಲೀ, ಸಂಬಂಧಿಕನಾಗಲೀ, ಅಭಿಮಾನಿಯಾಗಲೀ ಅಲ್ಲ. ಸಹಜವಾಗಿ ಚಿತ್ರವಿಮರ್ಶಕನಾಗಿ ನಾನು ನೋಡಿದ ಅವರ ನಿರ್ದೇಶನದ ಚಲನಚಿತ್ರಗಳು ಮತ್ತು ಧಾರಾವಾಹಿಗಳು ನನಗೆ ಖುಷಿಕೊಟ್ಟಿವೆ. ಕಲಾವಿದರ ವೈಯ್ಯಕ್ತಿಕ ಬದುಕು ಎಲ್ಲ ಸಮಯದಲ್ಲೂ ಸುಖದ ಸುಪ್ಪತ್ತಿಗೆಯಲ್ಲವಲ್ಲ? ಅಲ್ಲಿರುವ ಮುಳ್ಳಿನಹಾಸಿಗೆ ನಮಗೆ ನೇರವಾಗಿ ಕಾಣಸಿಗುವುದಿಲ್ಲ. ಹರೆಯದಲ್ಲಿ ಕಲಾವಿದರಿಬ್ಬರಲ್ಲಿ ಪ್ರೇಮಾಂಕುರವಾಯ್ತು. ವೈಶಾಲಿ-ಗಿರೀಶ್ ರ ಮಡದಿಯಾದರು. ಇಬ್ಬರೂ ಪ್ರತಿಭಾವಂತರೇ. ’ಮೂಡಲಮನೆ’ಯ ನಿರ್ಮಾಣದ ಆರಂಭಿಕ ಹಂತದಲ್ಲಿ ನಾನು ವೈಶಾಲಿ ಮತ್ತವರ ಮಗಳು ಅನನ್ಯಾ ಕಾಸರವಳ್ಳಿ ಈ ಈರ್ವರನ್ನೂ ಮಲ್ಲೇಶ್ವರದಲ್ಲಿ ಕಂಡಿದ್ದೆ. ಅದಾದ ಕೆಲವು ತಿಂಗಳಲ್ಲಿ ವೈಶಾಲಿಯವರಿಗೆ ದೈಹಿಕ ಸ್ವಾಸ್ಥ್ಯ ಸರಿಯಿರಲಿಲ್ಲವೆಂದು ತಿಳಿದಿತ್ತು. ಆಮೇಲೆ ಪುನಃ ಚೇತರಿಸಿಕೊಂಡ ಅವರು ಆ ಧಾರಾವಾಹಿಯನ್ನು ಮುಗಿಸಿದ ನಂತರ ವರ್ಷದಕಾಲ ಸುಮ್ಮನೇ ಇದ್ದರು. ಅದರ ನಂತರ ’ಮುತ್ತಿನತೋರಣ’ವನ್ನು ತಯಾರಿಸುತ್ತಿದ್ದರು. ಮುತ್ತಿನತೋರಣದಲ್ಲಿ ಮುತ್ತು ಪೋಣಿಸುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ವೈಶಾಲಿಯನ್ನು ಕಳೆದುಕೊಂಡ ಕೆಲದಿನಗಳಲ್ಲೇ ಗಿರೀಶ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೊಂದರ ಘೋಷಣೆಯಾಯ್ತು. ಮೆಚ್ಚಿನ ಮಡದಿಯನ್ನು ಕಳೆದುಕೊಂಡ ದುಃಖವೂ ಹೆಚ್ಚಿನ ಗೌರವ ದೊರೆತ ಸುಖವೂ ಏಕಕಾಲಕ್ಕೆ ಅನುಭವಕ್ಕೆ ಬಂದಾಗ ಕಲಾವಿದರ ಬದುಕು ಹೇಗಿರಬೇಡ? 

ಗಿರೀಶ್ ನಿರ್ದೇಶಿಸಿದ ಚಿತ್ರಗಳಾಗಲೀ ಧಾರಾವಾಹಿಗಳಾಗಲೀ ಯಾವುದೂ ಕಳಪೆ ಎನಿಸಲಿಲ್ಲ.  ಅವರ ನಿರ್ದೇಶನದ ಬಹುತೇಕ ಕೃತಿಗಳು ನಿಜಕ್ಕೂ ದೃಶ್ಯಕಾವ್ಯಗಳೇ ಸರಿ. ’ಮುಂಗಾರುಮಳೆ’ಯೆಂಬ ಕನ್ನಡದ ’ದೇವದಾಸ್’ ಸಿನಿಮಾವನ್ನು ನಿರ್ದೇಶಿಸಿದ ಯೋಗರಾಜ್ ಭಟ್ಟರು ನಂತರ ಅಂತಹ ಉತ್ತಮ ಸಿನಿಮಾಗಳನ್ನು ಕೊಡಲಾಗದೇ ಜನರಿಂದ ’ಯವ್ಡಾಸ್’ ಎಂಬ ಬಿರುದನ್ನು ಪಡೆದಿದ್ದಾರೆ. ಅರ್ಥಹೀನ ಕವನಗಳು, ಏನೇನೋ ಸಂಭಾಷಣೆಗಳು ಜನರಿಗೆ ಕೇಳಿದ್ದನೇ ಕೇಳಿ ರೋಸಿಹೋಗಿದೆ. ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಎಂಬ ಹಾಡು ಭಟ್ಟರು ತಮ್ಮನ್ನೇ ಕರಡಿ ಎಂದು ಹೋಲಿಸಿಕೊಂಡು ಬರೆದ ಹಾಗಿದೆ! ಚೊಂಬೆದ್ದುಹೋದ ಅವರ ಇತ್ತೀಚಿನ ಸಿನಿಮಾಗಳು ಅವರಿಗೆ ’ಚೊಂಬೇಶ್ವರ’ ಎಂಬ ನಾಮಧೇಯವನ್ನು ಗಳಿಸಿಕೊಟ್ಟಿವೆ! ಏನೇನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಸರದಿ ಈಗ ನಾಗತಿಹಳ್ಳಿಗೆ ದಕ್ಕಿದೆ! ಒಂದೆರಡು ಉತ್ತಮ ಚಿತ್ರಗಳನ್ನು ಅವರೂ ಕೊಟ್ಟಿದ್ದರೂ ತಮ್ಮ ಇತ್ತೀಚಿನ ಚಿತ್ರದಲ್ಲಿ ನಿರ್ದೇಶಕ ಎಡವಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಮಾಡಿದ ಯಾವುದೂ ಸಿನಿಮಾದಲ್ಲಿ ಹೆಸರನ್ನು ಕಳೆದುಕೊಳ್ಳದ ನಿರ್ದೇಶಕರ ಸಾಲಿನಲ್ಲಿ ಗಿರೀಶ್ ಕಾಸರವಳ್ಳಿಯೂ ನಿಲ್ಲುತ್ತಾರೆ. ’ಕನ್ನಡದ ಪ್ರಮುಖ ದಿನಪತ್ರಿಕೆ’ ಎಂದು ಸಾರಿಕೊಳ್ಳುತ್ತಾ ಓದುಗರ ಕೈಗೆ ಚೊಂಬು ಕೊಡುವ ಪತ್ರಿಕೆಯೊಂದರಲ್ಲಿ ಕನ್ನಡ ಸಿನಿಮಾ ರಂಗಕ್ಕೂ ಮತ್ತು ಕಾಸರವಳ್ಳಿಯವರಿಗೂ ಇರುವ ಸಂಬಂಧದ ವಿಶ್ಲೇಷಣೆ ವಿಚಿತ್ರಗತಿಯಲ್ಲಿ ಮೂಡಿಬಂದಿದ್ದು ’ಚೊಂಬು ನಿರ್ದೇಶಕರುಗಳ’ ಸಾಲಿನಲ್ಲಿ ಈ ’ಚೊಂಬು’ ಪತ್ರಿಕೆಯನ್ನೂ ಪರಿಗಣಿಸಿದರೆ ಒಳ್ಳೆಯದು ಎಂಬುದು ಬಹುತೇಕ ಓದುಗರ ಅಭಿಮತವಾಗಿದೆ!

ರಾಜರುಗಳ ಕಾಲ ಮುಗಿದು ಶತಮಾನಗಳೇ ಕಳೆದಿವೆ. ಈಗೇನಿದ್ದರೂ ರಾಜಧರ್ಮವನ್ನು ಪಾಲಿಸಬೇಕಾದವರು ಪ್ರಜೆಗಳೇ. ಯಾಕೆಂದರೆ ಇದು ಪ್ರಜಾರಾಜ್ಯ. ಕಾಗದದ ಹುಲಿ-ಸಿಂಹಗಳನ್ನು ಮುಂದಿರಿಸಿಕೊಂಡು, ಇತ್ತೀಚೆಗೆ ವಿಪ್ರ ಸಮಾವೇಶದಲ್ಲಿ ಪೇಜಾವರ ಮಠಾಧೀಶರು ಮಾಡಿದ ಪ್ರವಚನದ  ವಿರುದ್ಧ ವರದಿಗಳನ್ನು ಪ್ರಕಟಿಸಿ ಒಂದಷ್ಟು ಜನರನ್ನು ಸೆಳೆಯಲು ಪ್ರಯತ್ನಿಸಿ, ಪ್ರತಿಫಲವಾಗಿ ಅನೇಕ ಓದುಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಓದುಗರನ್ನು ಕಳೆದುಕೊಂಡ ಈ ಪತ್ರಿಕೆ ನಿತ್ಯವೂ ಒಂದಿಲ್ಲೊಂದು ತಗಾದೆ ತೆಗೆಯುತ್ತ ಜನರಲ್ಲಿ ತಪ್ಪು ಧೋರಣೆ ಮೂಡುವಂತೇ ಮಾಡುತ್ತಿರುವುದು ವಿಷಾದಕರ. ಇಂತಹ ಪತ್ರಿಕೆಗಳೂ ಕನ್ನಡಕ್ಕೆ ಬೇಕೇ ಎಂಬುದನ್ನು ಸ್ವಚ್ಛ ಕನ್ನಡದ ಕೆಚ್ಚೆದೆಯ ಓದುಗರು ನಿರ್ಧರಿಸಲು ಇದು ’ಸಕಾಲ’ ! 


Friday, May 25, 2012

ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !

ಚಿತ್ರಋಣ: ಅಂತರ್ಜಾಲ
ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !


’ಅನುಮಾನದ ಹುತ್ತ’ ಎಂಬುದು ಸಮಾನ್ಯವಾಗಿ ಬಳಕೆಯಾಗುವ ಪದ. ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೂ ಮೊದಲೇ ತಿಳಿದಿರುವುದಿಲ್ಲ; ಅದನ್ನು ತಿಳಿದುಕೊಳ್ಳಲು ಯಾವುದೇ ಯಂತ್ರಗಳ ಸಂಶೋಧನೆಗೂ ಯಾರೂ ತೀರಾ ತಲೆಕೆಡಿಸಿಕೊಂಡಿಲ್ಲ. ದೂರ ದರ್ಶಕಗಳು, ದೂರ ಸಂವೇದೀ ಯಂತ್ರಗಳೆಲ್ಲಾ ಇದ್ದರೂ ಜನಸಾಮಾನ್ಯರು ಹೋದೆಡೆಗೆಲ್ಲಾ ಅವುಗಳನ್ನು ಹೊತ್ತೊಯ್ಯುವುದು ಸಾಧ್ಯವಿಲ್ಲವಲ್ಲ? ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸಮಾಡುತ್ತಿದ್ದರೂ ಅವುಗಳ ಕಾರ್ಯಕ್ಷಮತೆಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಇನ್ನೂ ಸರಿಯಾಗಿ ಸಿಗುತ್ತಿಲ್ಲ; ಮಾಸಲು ಮಾಸಲಾಗಿ ಕಾಣುವ ಬಿಂಬಗಳ ಜಾಡು ಹಿಡಿದು ಜಾಲಾಡುವುದು ಕಷ್ಟವಾದಾಗ ಅಪರಾಧಿಗಳಿಗೆ ಅದು ಅನುಕೂಲವಾಗಬಹುದು. ರಾಜಕಾರಣಿಗಳಿಗೂ ಧೂರ್ತರಿಗೂ ಅದು ಪರೋಕ್ಷ ಅನುಕೂಲವನ್ನೇ ಕಲ್ಪಿಸಬಹುದು.  

ಸರಕಾರಿ ಅಧಿಕಾರಿಗಳಿಗೆ ಬೆದರಿಕೆ, ಹತ್ಯೆ ಇತ್ತೀಚೆಗೆ ಬಹಳ ಸಲೀಸಾಗಿ ನಡೆಯುತ್ತಿರುವ ವಿಚಾರ! ದಾಂಡೇಲಿಯಲ್ಲಿ ವಾರದ ಹಿಂದೆ ಎ.ಸಿ.ಎಫ್ ಮದನ್ ನಾಯಕ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಮುಗಿಸಿದರು. ಅದೇ ರೀತಿ ಬೆಂಗಳೂರಿನ ಜನನಿಬಿಡ ಪ್ರದೇಶವಾದ ಏಟ್ರಿಯಾ ಹೋಟೆಲ್ ಎದುರಿಗೇ ಮಹಾಂತೇಶ್ ಅವರನ್ನು ನೆಲಕ್ಕೆ ಉರುಳಿಸಿಕೊಂಡು ಬಡಿದು ಹಲ್ಲೆ ನಡೆಸಿದ್ದು ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜೀವಕ್ಕೆ ಬೆಲೆಯೇ ಇಲ್ಲವೇ ಎನ್ನುವಷ್ಟು ಸುಲಭವಾಗಿ ಸೊಳ್ಳೆ ಹೊಡೆದ ರೀತಿಯಲ್ಲಿ ಇಂತಹ ಅಧಿಕಾರಿಗಳನ್ನು ಹೊಡೆಯುವುದನ್ನು ಕಂಡಾಗ ಸರಕಾರೀ ಅಧಿಕಾರಿಗಳಾಗುವವರ ಗತಿ ಮುಂದೇನು ಎಂಬ ಪ್ರಶ್ನೆಕೂಡ ಕಾಡುತ್ತದೆ. ಒಂದುಕಡೆ ರಾಜಕೀಯ ಪ್ರೇರಿತ ಒತ್ತಡಗಳಿಂದ ಎತ್ತಂಗಡಿ ಸಮಸ್ಯೆ-ಅವುಗಳ ಶಮನಕ್ಕೆ ಮತ್ತು ತಮಗೆ ಬೇಕಾದ ಜಾಗಕ್ಕೆ ವರ್ಗಾ ಮಾಡಿಸಿಕೊಳ್ಳಲು ಲಂಚತೆರಬೇಕಾದ ಸಮಸ್ಯೆ, ಇನ್ನೊಂದೆಡೆ ರಾಜಕೀಯ ಇಚ್ಛಾಶಕ್ತಿಗಳ ಕೈವಾಡದಿಂದ ಎದುರಾಗುವ ಪ್ರಾಣ ಭೀತಿ--ಈ ಮೂರರ ನಡುವೆ ಸಾಚಾ ಅಧಿಕಾರಿಗಳ ಸ್ಥಿತಿ ಬಹಳ ಡೋಲಾಯಮಾನ. ಆಡುವುದಕ್ಕಿಲ್ಲ; ಅನುಭವಿಸುವುದು ತಪ್ಪುವುದಿಲ್ಲ!

ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ನಿರ್ಮಿಸಿದ್ದನ್ನು ಕೆಲವು ವರ್ಷಗಳ ಹಿಂದೆಯೇ ಕೇಳಿದ್ದೆ. ಅಲ್ಲಿ ಅನೇಕ ಮೊಸಳೆಗಳಿವೆ ಎಂಬುದೂ ಗೊತ್ತಿದ್ದ ವಿಷಯವೇ ಆಗಿತ್ತು. ಆದರೆ ಆ ಪ್ರದೇಶದಲ್ಲಿ ಪೂಜೆ-ಬಲಿ-ಬಾಡೂಟ ಇವುಗಳ ಬಗ್ಗೆ ತಿಳಿದಿರಲಿಲ್ಲ. ಮಹಾರಾಷ್ಟ್ರ ಮೂಲದ ಕೆಲಜನ ಬಲಿಹಾಕಿದ ಕುರಿಯ ಬಾಡೂಟ ನಡೆಸಿ, ಮಿಕ್ಕುಳಿದ ಮಾಂಸವನ್ನು ನದೀಪಾತ್ರದ ಹೊರಗೆ ಚೆಲ್ಲಿ ಮೊಸಳೆಗಳನ್ನು ಕರೆದಿದ್ದಾರೆ. ಮೊಸಳೆಗಳು ಬಂದು ತಿನ್ನುತ್ತಿರುವುದನ್ನು ಅಲ್ಲಿಗೆ ಅನಿರೀಕ್ಷಿತವಾಗಿ ಬಂದ ಮದನ್ ನಾಯಕ್ ಅವರು ಕಂಡಿದ್ದಾರೆ; ಹಾಕಿದವರಿಗೆ ಹಾಗೆ ಹಾಕಬಾರದಿತ್ತು ಎಂದು ಕಿವಿಮಾತು ಹೇಳಿದ್ದಾರೆ. ಎಲ್ಲದಕ್ಕೂ ತಮ್ಮದೇ ಆದ ಧೋರಣೆಯನ್ನು ಕಾಯ್ದೆಯನ್ನೂ ಮಾಡಿಕೊಳ್ಳುವ ಕೆಲವು ಜನ ಇಂತಹ ಸಮಯದಲ್ಲಿ ವಾದಕ್ಕಿಳಿಯುತ್ತಾರೆ. ಮೊಸಳೆ ಪಾರ್ಕಿಗೆ ಸಂಬಂಧಿಸಿದ ಹಿರಿಯ ಅರಣ್ಯಾಧಿಕಾರಿ ತಾನು ಎಂಬುದನ್ನು ಹೇಳಿದಮೇಲೂ "ನೀನ್ಯಾರು ದೊಣ್ಣೆ ನಾಯ್ಕ, ಮಾಡೋಕೆ ಬೇರೇ ಕೆಲಸ ಇಲ್ವಾ?"  ಎಂಬೀ ಥರದ ಮಾತುಗಳು ಹೊರಬಂದಿವೆ. ಮಾತಿಗೆ ಮಾತು ಬೆಳೆದು ತನ್ನ ಖಾಸಗೀ ವಾಹನದಲ್ಲಿ ಕುಳಿತಿದ್ದ ಮದನ್ ನಾಯಕ್ ಅವರನ್ನು ಹೊರಗೆಳೆದು ಜಗಳವಾಡಿ ಹೊಡೆದಿದ್ದಾರೆ. ತಲೆಗೆ, ಎದೆಯ ಭಾಗಕ್ಕೆ ತೀರಾ ಜಾಸ್ತಿ ಎನಿಸುವಷ್ಟು ಪೆಟ್ಟು ತಗುಲಿದ ನಾಯಕರನ್ನು ತ್ವರಿತ ಗತಿಯಲ್ಲಿ ಆಸ್ಪತ್ರೆಗೆ ಸಾಗಿಸುವ ಬದಲು ನಮ್ಮ ಪೋಲೀಸರು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ನೋವು ಉಲ್ಬಣಿಸಿ "ತಲೆನೋವು" ಎಂದು ಬಡಬಡಿಸಿದರೂ ಇನ್ನೂ ವಿವರ ಕೇಳುತ್ತಿದ್ದರೇ ಹೊರತು ದವಾಖಾನೆಗೆ ಕರೆದೊಯ್ಯಲಿಲ್ಲ. ತಡವಾಗಿ ಕರೆದೊಯ್ಯುವಷ್ಟರಲ್ಲಿ ಮದನ್ ನಾಯಕ್ ಇಹಲೋಕವನ್ನು ತ್ಯಜಿಸಿದ್ದಾರೆ.     

ಸಂಬಂಧಪಟ್ಟ ಕಡತಗಳಿಗೆ ಕಣ್ಮುಚ್ಚಿ ಸಹಿಮಾಡಲೊಪ್ಪದ ಮತ್ತು ದಾಖಲೆಗಳನ್ನು ಬದಲಾಯಿಸಲು ಅವಕಾಶ ಕೊಡದ ಮಹಾಂತೇಶರ ವಿರುದ್ಧ ಯಾರೋ ಕಿಡಿಕಾರುತ್ತಿದ್ದರೆಂದೂ, ಆಗಾಗ ಧಮಕಿ ಹಾಕುತ್ತಿದ್ದು ಹಿಂದೆ ಮೂರ್ನಾಲ್ಕು ಬಾರಿ ಚಿಕ್ಕಪ್ರಮಾಣದ ಹಲ್ಲೆಗಳು ಮಹಾಂತೇಶ್ ಅವರಮೇಲೆ ನಡೆದಿದ್ದವೆಂದೂ ಕೆಲವು ಬಲ್ಲ ಮೂಲಗಳು ತಿಳಿಸುತ್ತವಾದರೂ, ಯಾರಲ್ಲೂ ಅಧಿಕೃತ ದಾಖಲೆಗಳಾಗಲೀ ಸಾಕ್ಷಿಗಳಾಗಲೀ ಇಲ್ಲ. ಸಹಜವಾಗಿ ಅನೇಕ ಪ್ರಾಮಾಣಿಕ ವ್ಯಕ್ತಿಗಳು ಹೇಳಿಕೊಳ್ಳಲಾಗದಂತಹ ಸನ್ನಿವೇಶಗಳನ್ನು ಹೇಗೋ ನಿಭಾಯಿಸುವಂತೇ ಹಾಗೇ ಮುಂದುವರಿದವರು ಮಹಾಂತೇಶ್. ಮೊನ್ನೆ ಗುನ್ನೆ ನಡೆಯುವ ಕೆಲವು ದಿನಗಳ ಹಿಂದೆ ಕೂಡ ಪ್ರತಿನಿತ್ಯ ಕಾಡುವ-ದೂರವಾಣಿ ಕರೆಗಳು ಬರುತ್ತಿದ್ದು ಅವರು ಖಿನ್ನವದನರಾಗಿದ್ದರು ಎಂದು ಅವರ ಮನೆಯ ಮೂಲಗಳು ತಿಳಿಸುತ್ತವೆ. ಆದರೆ ಯಾರ ಕರೆಗಳು, ಯಾರು ಯಾತಕ್ಕಾಗಿ ಹಾಗೆ ಮಾಡುತ್ತಿದ್ದಾರೆ ಎಂಬುದನ್ನು ಮಹಾಂತೇಶ್ ಯಾರಲ್ಲೂ ಹೇಳಿಕೊಳ್ಳಲಿಲ್ಲ. ಹೇಳಿಕೊಂಡರೂ ಮುಗಿಸುತ್ತಿದ್ದರು; ಹೇಳದೇ ಇದ್ದರೂ ಈಗ ಮುಗಿಸಿದ್ದಾರೆ!  

ದಕ್ಷ ಅರಣ್ಯಾಧಿಕಾರಿಯೋರ್ವರು ನಾಟಾ ಕಳ್ಳಸಾಗಾಣಿಕೆಯಾಗುವುದನ್ನು ಕೇಳಿ ತಿಳಿದು, ರಾತ್ರಿ ಕಾದು ನಿಂತು, ಮಾಲು ತುಂಬಿದ ಲಾರಿಗಳನ್ನು ಹಿಡಿದರೆ, ಕೆಲವೇ ಕ್ಷಣಗಳಲ್ಲಿ ಚರದೂರವಾಣಿಗಳಲ್ಲಿ ಬೇಡದಮಾತುಗಳು ಕೇಳಿಬರುತ್ತವೆ; ಪ್ರಾಮಾಣಿಕ ಅಧಿಕಾರಿಗಳಿಗೆ ಜೀವ ಭಯವನ್ನೊಡ್ಡುವ ರಾಜಕೀಯ ಕುತಂತ್ರಿಗಳು ತಮ್ಮ ಮತ್ತು ತಮ್ಮ ಅನುಯಾಯಿಗಳಿಗೆ ಬೇಕಾದ ಕೆಲಸವನ್ನು ಆ ಮೂಲಕ ಪೊರೈಸಿಕಳ್ಳಲು ಹಿಡಿದ ಮಾಲಿನ ಸಮೇತ ಲಾರಿಗಳನ್ನು ಹಾಗೇ ಬಿಟ್ಟುಬಿಡುವಂತೇ ಆಜ್ಞೆಮಾಡುತ್ತಾರೆ. ಸರಕಾರದ/ಪ್ರಜೆಗಳ ಉಪ್ಪನ್ನವನ್ನು ತಿಂದ ಋಣಕ್ಕೆ ಪ್ರಾಮಾಣಿಕವಾಗಿ ಕೆಲಸಮಾಡುವ ಹಾಗೂ ಇಲ್ಲ, ಮಾಡದೇ ಇರುವ ಹಾಗೂ ಇಲ್ಲ. ಮಾಡಿದರೆ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಬೇಕು; ಮಾಡದಿದ್ದರೆ ನಾಗರಿಕರಿಂದ ’ನಿಷ್ಪ್ರಯೋಜಕ’ನೆಂಬ ಅವಹೇಳನಕ್ಕೆ ಒಳಗಾಗಬೇಕು. ಪೈಸೆ ತಿನ್ನದೇ ಪ್ರಾಮಾಣಿಕವಾಗಿ ಪಡೆದ ಸಂಬಳದಲ್ಲಿ ಕುಟುಂಬನಡೆಸಿಕೊಂಡು, ವರ್ಗಾವರ್ಗಿಗೆ ಕೊಡುವ ಲಂಚದ ಸಲುವಾಗಿ ಎರಡೆರಡು ವರ್ಷಗಳಿಗೆ ಇಂತಿಷ್ಟು ಎಂದು ದೊಡ್ಡ ಹುಂಡಿ ತಯಾರಿಸಿಟ್ಟುಕೊಂಡು ದುಡಿದ ಪ್ರಾಮಾಣಿಕ ಸಂಬಳದಲ್ಲಿ ಅರ್ಧವನ್ನು ಅದಕ್ಕೆ ಸುರಿಯಬೇಕು!"ನೋಡಪ್ಪಾ ನೀನು ಊಟ ಮಾಡಿದ್ಯೋ ಬಿಟ್ಯೋ ನಮಗದ್ ಬ್ಯಾಡ, ನಮ್ಮ ಹೊಟ್ಟೆಗೆ ಆಹಾರ ಇಡೋದ್ ಕಲೀತಿಯೋ ನಿನಗೂ ಕ್ಷೇಮ, ನಿನ್ನ ಕುಟುಂಬಕ್ಕೂ ಕ್ಷೇಮ" ಎಂಬಂತಹ ಮಾತುಗಳು ಧೂರ್ತ ರಾಜಕಾರಣಿಂದ ಪ್ರಾಮಾಣಿಕ ಅಧಿಕಾರಿಗಳ ಕಿವಿ ತಲುಪಿದಾಗ ’ಬಡವನ ಕೋಪ ದವಡೆಗೆ ಮೂಲ’ ಎನ್ನುವ ರೀತಿಯಲ್ಲಿ ಕೆಟ್ಟ ರಾಜಕಾರಣಿಗಳನ್ನು ಬೇರು ಸಹಿತ ನಿರ್ನಾಮಮಾಡುವ ರೋಷಾವೇಶ ಅಧಿಕಾರಿಗಳ ಒಳತೋಟಿಯಲ್ಲಿ ಹರಿಯುತ್ತದೆ; ಪ್ರಾಮಾಣಿಕತೆಗೆ ಸಿಕ್ಕ ಅಗೌರವಕ್ಕೆ ಅವರ ರಕ್ತ ಕೊತಕೊತ ಕುದಿಯತೊಡಗುತ್ತದೆ. ಆದರೂ ನಿರ್ವಾಹವಿಲ್ಲದೇ ಸಹಿಸಿಕೊಂಡಿರಬೇಕಾಗುತ್ತದೆ; ತನಗಲ್ಲದಿದ್ದರೂ ತನ್ನನ್ನೇ ನಂಬಿದ ಸಂಸಾರಕ್ಕೆ ಆದಾಯಮೂಲ ಬತ್ತಿಹೋಗಬಹುದಾದ ಕಾರಣದಿಂದ ಹೆದರಿ ಸುಮ್ಮನಾಗುತ್ತಾರೆ.  

ಅಧಿಕಾರಿಯೊಬ್ಬರು ನನ್ನಲ್ಲಿ ಹೇಳುತ್ತಿದ್ದರು: ವಿಧಾನಸೌಧದಲ್ಲಿರುವ ಕುರ್ಚಿಗಳೆಲ್ಲಾ ಕಾಸು ಕೇಳುತ್ತವೆ ಎಂದು! ಹರಿದ ಪೈಜಾಮಾದಲ್ಲಿ, ೧೯೮೦ ರಲ್ಲಿ ನಮ್ಮೂರ ಕಡೆಗೆ "ಚುನಾವಣೆಗೆ ನಿಲ್ಲುತ್ತೇನೆ ದಯಮಾಡಿ ಮತನೀಡಿ" ಎಂದು ಬೇಡುತ್ತಿದ್ದ ಬಿಳಿತಲೆಯೊಂದು, ದಶಕದ ಹಿಂದೆ ಮಂತ್ರಿಯಾಗಿದ್ದು ಇಂದು ಕೈಪಡೆಯಲ್ಲಿದೆ. ಉತ್ತರಕರ್ನಾಟಕದ ನೆರೆಪೀಡಿತರಿಗೆ ಸಾರ್ವಜನಿಕರಿಂದ ದೇಣಿಗೆಯಾಗಿ ಬಂದ, ’ಕೈಬಳಗ’ ಸಂಗ್ರಹಿಸಿದ ನಿಧಿಯಲ್ಲಿ ಒಂದಷ್ಟನ್ನು ಬಸಿದುಕೊಂಡು ನುಂಗಿದ ’ಹೆಗ್ಗಳಿಕೆ’ಗೆ ಪಾತ್ರವಾದ ಆ ತಲೆ ಅತ್ಯಂತ ಕೆಟ್ಟ ತಲೆ ಎಂಬುದಾಗಿ ಕೇಳಿದ್ದೇನೆ. "ಬಾರೊ ಬೋಳೀಮಗನೆ ಸೂಟ್ ಕೇಸ್ ತಂದಿದೀಯಾ ?" ಎಂದೇ ಅಧಿಕಾರಿಗಳನ್ನು ಮಾತನಾಡಿಸುತ್ತಿದ್ದ ಆ ಮಾಜಿ ಮುಂದೆ ಮತ್ತೆ ಹಾಲಿಯಾಗಲೂ ಬಹುದು-ಯಾಕೆಂದರೆ ಇದು ಪ್ರಜಾತಂತ್ರ! ಹಾಡಾ ಹಗಲೇ ಮಾಡಿದ ಘನತರವಾದ ಅಪರಾಧಗಳು ಪ್ರಜೆಗಳ ಮನಸ್ಸಿನಿಂದ ಮಾಯವಾಗಿಬಿಡುತ್ತವೆ. ಅಪರಾಧೀ ಹಿನ್ನೆಲೆಯುಳ್ಳದಿದ್ದರೆ ರಾಜಕಾರಣಿಗಳಾಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ; ಒಂದೊಮ್ಮೆ ಶಾಸಕರೋ ಮಂತ್ರಿಯೋ ಆದರೂ, ಕೊಟ್ಟ ಖಾತೆ ತೆಗೆದುಕೊಳ್ಳಬೇಕು, ಪಕ್ಷದಲ್ಲಿ ಪರರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು-ಬಾಯಿ ಬಿಟ್ಟರೋ ಖಾತೆ ಮಗುಚಿಬಿದ್ದು ಶಾಸಕಸ್ಥಾನಕ್ಕೆ ರಾಜೀನಾಮೆ ಕೊಡಿಸುವವರೆಗಿನ ಜವಾಬ್ದಾರಿಯನ್ನು ಮಿಕ್ಕುಳಿದ ಭಕಗಳೇ ಹೊರುತ್ತವೆ! ಹಿಂದೆ ಯಾವುದೋ ಕಾವ್ಯದಲ್ಲಿ ಓದಿದ್ದೆ ಭಕ, ಘೂಕ, ಬಲ್ಲುಕ, ಜಂಬುಕ ಮೊದಲಾದ ಪ್ರಾಣಿಗಳು ಲೋಹಿತಾಶ್ವನನ್ನು ಅಟ್ಟಾಡಿಸಿ ತಿಂದವೋ ಏನೋ ಇನ್ನೂ ಬರಲಿಲ್ಲಾ ಎಂದು ಚಂದ್ರಮತಿ ಪ್ರಲಪಿಸುವ ಹಂತ ಅದು. ಇವತ್ತು ಆ ಎಲ್ಲಾ ’ಪ್ರಾಣಿಗಳು’ ವಿಧಾನಸೌಧದಲ್ಲೇ ಕಾಣಸಿಗುತ್ತವೆಯೇ ಹೊರತು ಕಾಡುಗಳಲ್ಲಿ ಅವುಗಳ ವಂಶ ನಿರ್ವಂಶವಾಗಿ ಹೋಗಿದೆ.    

ಇನ್ನೊಂದು ಹೊಸ ಸಂಗತಿಯೆಂದರೆ, ಎಫ್.ಐ.ಆರ್ ದಾಖಲಿಸಿಕೊಳ್ಳುವಾಗ ಇವತ್ತಿನ ಕೆಲವು ಠಾಣೆಗಳಲ್ಲಿ ಆರಕ್ಷಕರು ನೋವುಂಡವರಲ್ಲಿ ಹೀಗೇ ಬರೆಯಿರಿ ಎಂದು ತಾಕೀತುಮಾಡುತ್ತಾರೆ! ವಾರದ ಹಿಂದೆ ನಮ್ಮ ಏರಿಯಾದ ಒಬ್ಬರ ಮನೆಯಲ್ಲಿ ಕಳ್ಳತನ ನಡೆಯಿತು. ಯಜಮಾನ ದುಬೈಯಲ್ಲಿ ಕೆಲಸಮಾಡುತ್ತಾರೆ; ಇಲ್ಲಿ ಅಮ್ಮ-ಮಗ ಮಾತ್ರ ಇರುತ್ತಿದ್ದರು. ಮಗನಿಗೆ ರಜಾಕಾಲವಾದ್ದರಿಂದ ಅಮ್ಮ-ಮಗ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರಂತೆ. ಮನೆಯ ಮೇಲ್ಗಡೆ ಇರುವ ಪರಿಚಿತರ ಮನೆಯಲ್ಲಿ ಕೀಲಿ ನೀಡಿದ್ದು ಆಗಾಗ ನೋಡಲು ತಿಳಿಸಿದ್ದರಂತೆ. ಇನ್ನೇನು ಅವರು ಹಿಂದಿರುಗಿ ಬರುತ್ತಾರೆ ಎನ್ನುವ ದಿನ ಕುಡಿಯುವ ನೀರು ಬಿಂದಿಗೆ ತುಂಬಿಸಿಡಲು ಆ ಪರಿಚಿತ ಮಹಿಳೆಗೆ ಕರೆಮಾಡಿದ್ದಾರೆ. ಕೀಲಿ ಹೊಂದಿದ್ದ ಮಹಿಳೆ ಕೆಳಗಡೆ ಮನೆಯ ಬಾಗಿಲು ತೆರೆದು ನೀರು ತುಂಬಿಸಬೇಕು ಎಂದುಕೊಂಡರೆ ಮನೆಯ ಹಿಂದಿನ ಬಾಗಿಲು ತೆರೆದೇ ಇತ್ತು. ಗಲಿಬಿಲಿಗೊಂಡು ಅಡಿಗೆಮನೆಗೆ ಹೋದರೆ ಡಬ್ಬಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೆದರಿಕಂಗಾಲಾದ ಆ ಮಹಿಳೆ, ಊರಿಂದ ಮರಳುತ್ತಿದ್ದ ಆ ಮನೆಯ ವಾರಸುದಾರಿಣಿಗೆ ತಿಳಿಸಿದ್ದಾರೆ. ನೋಡಿದರೆ ಮನೆ ಕಳ್ಳತನವಾಗಿತ್ತು. ಮನೆಯ ಮುಂಭಾಗದಲ್ಲಿಸುತ್ತಾ ಗ್ರಿಲ್ ಗಳಿದ್ದೂ ಹೊರಗಿನಿಂದ ಯಾರೂ ಬರುವಂತಿರಲಿಲ್ಲ, ಹಿಂದುಗಡೆ ಮಾತ್ರ ಒಂದು ಸಣ್ಣ ಶೀಟ್ ಮನೆ ಇದ್ದು ಅಲ್ಲಿ ಒಬ್ಬ ಪ್ಲಂಬರ್ ಸಂಸಾರ ವಾಸವಿದೆಯಂತೆ. ಹೇಳಿಕೇಳಿ ಪ್ಲಂಬರ್ ವೃತ್ತಿ, ಎದುರಿನ ಮನೆಯಲ್ಲಿ ಯಾರೂ ಇಲ್ಲಾ ಎಂಬುದನ್ನು ಖಚಿತಪಡಿಸಿಕೊಂಡು ತಾವೇ ಏಕೆ ಮಾಡಿರಬಾರದು ಎಂಬುದು ಕಳ್ಳತನಕ್ಕೆ ಒಳಗಾದ ಮಹಿಳೆಯ ಆರೋಪ.  ಹತ್ತು ಸಾವಿರ ನಗದು, ೬ ಜೊತೆ ಕಿವಿಯೋಲೆಗಳು, ದೊಡ್ಡ ಬೆಳ್ಳಿಯ ತಟ್ಟೆ ಸೇರಿದಂತೇ ೪ ಲಕ್ಷ ಮೌಲ್ಯದ ಸಾಮಾನುಗಳು ಕಳ್ಳತನವಾಗಿವೆಯಂತೆ. ಪೋಲೀಸರು ಎಲ್ಲದಕ್ಕೂ ಖರೀದಿಯ ರಶೀದಿ ಕೇಳಿದ್ದಾರೆ. ಬಂದಕಳ್ಳ ಕ್ರೆಡಿಟ್ ಕಾರ್ಡ್ ಸಮೇತ ಎಲ್ಲಾ ರಶೀದಿಗಳಿರುವ ಬ್ಯಾಗನ್ನೂ ಹೊತ್ತುಹೋಗಿದ್ದಾನೆ ಎಂದರೆ ಅರ್ಥವನ್ನೇ ಮಾಡಿಕೊಳ್ಳದ ಪೋಲೀ[ಸ್]ಮಂದಿ "ಕೇವಲ ೨೫ ಸಾವಿರ ಮೌಲ್ಯವೆಂದು" ಬರೆಯಿರಿ ಎಂದಿದ್ದಾರೆ. ಆಭರಣಗಳನ್ನು ಇಟ್ಟುಕೊಂಡಿದ್ದ ಮಹಿಳೆಗೆ ಅಲ್ಲಿ ಸುಮಾರು ಎಷ್ಟು ಮೌಲ್ಯದ ನಗಗಳಿದ್ದವು ಎಂಬುದು ಗೊತ್ತಿರದೇ ಇರುತ್ತದೆಯೇ?

ಇದೇ ರೀತಿಯಲ್ಲಿ, ಪೋಲೀಸರು ಮಹಾಂತೇಶ್ ಪ್ರಕರಣದಲ್ಲೂ ಅದು ಹಲ್ಲೆಯಲ್ಲ ಅಪಘಾತ ಎಂಬ ಹೊಸ ತಿರುವನ್ನು ನೀಡಬಯಸಿದ್ದರು; ಈಗ ಅದು ಇನ್ನೊಂದು ಹೊಸ ತಿರುವಿಗೆ ಸಿಕ್ಕು ಯಾವುದೋ ಕಾಲ್ ಗರ್ಲ್ ಪ್ರಕರಣವೆಂದು ಹೇಳಲ್ಪಡುತ್ತಿದೆ. ಹೊರಗಿನಿಂದ ನೋಡಿದಾಗಲಂತೂ ಮಹಾಂತೇಶ್ ಮೇಲಿನ ಹಲ್ಲೆಯಲ್ಲಿ ರಾಜಕೀಯದವರ ಕೈವಾಡ ಇದೆ ಎಂಬುದು ತೋರಿಬರುತ್ತದೆ; ಅದನ್ನು ಮುಚ್ಚಿಹಾಕುವ ತಂತ್ರಗಳೂ ನಡೆಯುತ್ತಿವೆ ಎಂಬುದು ಮನದಟ್ಟಾಗುತ್ತದೆ. ಈ ಲೇಖನ ಸಿದ್ಧಗೊಳ್ಳುತ್ತಿರುವ ವೇಳೆಯಲ್ಲಿ ಬಿ.ಬಿ.ಎಂ.ಪಿ ಎಂಜಿನೀಯರ್ ಒಬ್ಬರಿಗೆ ಆರುಜನರ ಗುಂಪು ಬೆದರಿಕೆ ಹಾಕಿದ ಸುದ್ದಿ ಬಿತ್ತರಗೊಂಡಿದೆ; ಅದು ಮತ್ಯಾವ ತಿರುವು ಪಡೆದುಕೊಳ್ಳುತ್ತದೋ ತಿಳಿಯದು. ಕೆಲವೊಮ್ಮೆ ಪೋಲೀಸರೂ ರಾಜಕೀಯದವರ ಒತ್ತಡಕ್ಕೆ ಮಣಿದು ಮೂಲಕಥೆಯನ್ನು ’ಕಟ್ಟುಕಥೆ’ಯಾಗಿ ಪರಿವರ್ತಿಸಿದಾಗ ವಕೀಲರುಗಳು ಪೋಲೀಸರಮೇಲೆ ದಾಳಿ ಮಾಡಿದ್ದು ಸರಿಯೇ ಇತ್ತೇನೋ ಅನಿಸುವಷ್ಟು ಸಹನೆಯ ಕಟ್ಟೆ ಒಡೆಯುತ್ತದೆ. ಒಟ್ಟಿನಲ್ಲಿ ಯಾರು ಯಾರನ್ನು ಸಂಭಾಳಿಸಬೇಕು? ಯಾರು ಯಾರಿಗೆ ಪ್ರಾಮಾಣಿಕರಾಗಿರಬೇಕು ಎಂಬುದನ್ನು ಸಮಾಜ ನಿರ್ಧರಿಸಬೇಕಾಗಿದೆ; ಇಲ್ಲದಿದ್ದರೆ ಅಧಿಕಾರಿಗಳೂ ಹತರಾಗುತ್ತಾರೆ, ಅಪಮೌಲ್ಯಗಳೇ ಮೌಲ್ಯಗಳಾಗಿ ರೌಡೀರಾಜ್ಯಭಾರವಾಗುವುದರಲ್ಲಿ ಅನುಮಾನವಿಲ್ಲ, ಇದು ಅನುಮಾನವಿಲ್ಲದ ಹುತ್ತವಾಗಿರುತ್ತದೆ-ಕಾಣಿಸುವ ಹಾವುಗಳು ಕಾಣಕಾಣುತ್ತಲೇ ಕಚ್ಚುವ ಮೊದಲು ಅವುಗಳನ್ನು ನಿರ್ನಾಮ ಮಾಡುವುದು ಸಾರ್ವಜನಿಕರ / ನಾಗರಿಕರ ಮುಂದಿರುವ ಏಕೈಕ ಸೂತ್ರವಾಗಿದೆ. ನಾಗರಿಕರು ಎಚ್ಚೆತ್ತುಕೊಳ್ಳುವರೇ? 

Wednesday, May 23, 2012

ಹಕ್ಕಿಯ ಹೆಗಲೇರಿ ಬಂದವಗೆ ನೋ- ಡಕ್ಕಾ ಮನಸೋತೆ ನಾನವಗೆ...

  
ಚಿತ್ರಋಣ: ಅಂತರ್ಜಾಲ
ಹಕ್ಕಿಯ ಹೆಗಲೇರಿ ಬಂದವಗೆ ನೋ-
ಡಕ್ಕಾ ಮನಸೋತೆ ನಾನವಗೆ...


ಜಗತ್ತಿನಲ್ಲಿ ಎಲ್ಲವನ್ನೂ ಎಲ್ಲರನ್ನೂ ಒಂದೇ ಮುಖದಲ್ಲಿ ಅಥವಾ ಒಂದೇಕೋನದಲ್ಲಿ ಅಳೆಯಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ವಿಮರ್ಶಿಸುವಾಗ ಹಲವು ಸಲ ಕೂಡಿ, ಕಳೆದು, ಗುಣಿಸಿ, ಭಾಗಿಸಿ, ವಿಭಜಿಸಿ, ಅಳೆದು, ತೂಗಿ ವ್ಯಕ್ತಿತ್ವದ ಪರಾಮರ್ಶೆಗೆ ಬರಬೇಕಾಗುತ್ತದೆ. ಜಗತ್ತನ್ನೇ ಬೆತ್ತಲೆಯಾಗಿಸಿ ನೋಡುವ ಕೆಲವರು ತಮ್ಮ’ಕತ್ತಲೆ’ಯಲ್ಲೇ ಹುಲಿ-ಸಿಂಹಗಳಂತೇ ಘರ್ಜಿಸುವುದನ್ನು ಕಂಡರೆ ನಗಬೇಕೋ ಅಳಬೇಕೋ ಎಂಬ ಸಮಸ್ಯೆ ಸಹಜವಾಗಿ ಪ್ರಾಪ್ತವಾಗುತ್ತದೆ. ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಗಳು, ಮೊನ್ನೆ ಶಿವಮೊಗ್ಗೆಯಲ್ಲಿ ನಡೆದ ವಿಪ್ರಸಮ್ಮೇಳನದಲ್ಲಿ ಮಾಡಿದ ಭಾಷಣವನ್ನೇ ಹಿಡಿದುಕೊಂಡು, ಅದನ್ನು ಅರ್ಥಮಾಡಿಕೊಳ್ಳಲಾಗದ ತಮ್ಮ ಮಂಕುಬುದ್ಧಿಗೆ ಕನ್ನಡಿ ಹಿಡಿದು, "ಕನ್ನಡದ ಪ್ರಮುಖ ದಿನಪತ್ರಿಕೆ" ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡ ಪತ್ರಿಕೆಯಲ್ಲಿ ನಿನ್ನೆ ಮೊನ್ನೆ ಬಂದ ಲೇಖನಗಳನ್ನು ಓದಿದರೆ ಯಾವುದು ಬೆತ್ತಲೆ ಮತ್ತು ಯಾವುದು ಕತ್ತಲೆ ಎಂಬುದು ಸ್ವಲ್ಪ ತಿಳುವಳಿಕೆ ಉಳ್ಳವನಿಗೆ ಅರ್ಥವಾಗುತ್ತದೆ. ಸದಾ ’ತಪ್ಪಾಯ್ತು ತಿದ್ಕೋತೀವಿ’ ಎನ್ನುವ ಅಂಕಣವನ್ನೇ ನಡೆಸುವ ಆ ದಿನಪತ್ರಿಕೆಯಲ್ಲಿ ಆ ಅಂಕಣದಲ್ಲಿ ಈ ಸಲುವಾಗಿಯೂ ಕ್ಷಮೆಯಾಚನೆ ಬಂದರೆ ವಿಶೇಷವಲ್ಲ!!

ತಮ್ಮನ್ನೇ ತಾವು ’ಪ್ರಜ್ಞಾನಬ್ರಹ್ಮ’ ಎಂದು ತಿಳಿದುಕೊಂಡ ಮಹಾನುಭಾವರು ಕೆಲವರು ತಮ್ಮ ಮನೋವೈಕಲ್ಯವನ್ನು ದೃಢಪಡಿಸುವುಕ್ಕಾಗಿಯೇ ಬರೆದ  ಬರಹಗಳು ಒಟ್ಟೊಟ್ಟಿಗೆ ಒಂದೇ ಪುಟದಲ್ಲಿ ಪ್ರಕಟಗೊಂಡಿವೆ; ಸುದ್ದಿಯ ಕೊರತೆಯಿಂದ ಹಗ್ಗಜಗ್ಗಾಡುವ ಬರಗಾಲದ ಈ ದಿನಗಳಲ್ಲಿ, ಸಿಕ್ಕ ಇಂತಹ ವಿಷಯಗಳನ್ನೇ ಅನಪೇಕ್ಷಿತವಾಗಿ ಎಳೆದೂ ಎಳೆದೂ ಸಮಾಜದ ಒಂದು ವರ್ಗವನ್ನು ಅವಹೇಳನ ಮಾಡುವುದು ಸುದ್ದಿಸಿಗದ ದಾರಿದ್ರ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗುತ್ತದೆ. ಅತಿ ಚಿಕ್ಕ ಮಕ್ಕಳಿಗಾದರೂ ಗೊತ್ತು ಈ ಶ್ಲೋಕ:

’ಸಹನಾವವತು
ಸಹನೌ ಭುನಕ್ತು...’

ಲೇಖನದಲ್ಲಿ ಒಬ್ಬರು ಮಂಡಿಸಿದ್ದಾರೆ ಹೇಗೆಂದರೆ

ಸಹನಾಭವತು
ಸಹನೌಭುನಕ್ತು ....!

ಸಂಸ್ಕೃತವನ್ನು ಹೇಗೆ ಬೇಕಾದರೂ ಬರೆಯಲು ಅದು ನಮ್ಮ ಅಜ್ಜಿಮನೆ ಹಕ್ಕೆಚಡಿಯಲ್ಲ ! ಮಂತ್ರಗಳನ್ನು ಬಳಸಲು ಅವುಗಳ ಪೂರಕ ಮಾಹಿತಿ ಬೇಕಾಗುತ್ತದೆ. ಸರಿಯಾದ ಮಾಹಿತಿ ಇಲ್ಲದೇ ಸ್ವಾಮಿಗಳಿಗೇ ಸವಾಲೆಸೆಯುವುದು ಎಂಥಾ ದುರದೃಷ್ಟಕರವೆಂದರೆ ಪತ್ರಿಕೆಯ ಮೌಲ್ಯಮಾಪನಮಾಡುವ ಕಾಲದಲ್ಲಿ ನಾವು ಮುಂದಾಗಬೇಕಾಗಿದೆ. ಕನ್ನಡದ ಇನ್ನೊಂದು ದಿನಪತ್ರಿಕೆಯಲ್ಲಿ ಇಂದು ಬಂದ ಲೇಖನದಲ್ಲಿ ಸ್ವಾಮಿಗಳು ಹೇಳಿದ ಮಾತುಗಳ ಬಗ್ಗೆ ಸಮರ್ಪಕ ವಿಶ್ಲೇಷಣೆಗಳು ಆಧಾರ ಸಹಿತವಾಗಿ ದೊರೆತಿವೆ. ವಿಷಯವಿಷ್ಟೇ : ಸಹಪಂಕ್ತೀ ಭೋಜನ! ಸಹಪಂಕ್ತೀ ಭೋಜನ ಇವತ್ತಿನ ದಿನದಲ್ಲಿ ಸ್ವಾಗತವೇ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅಲ್ಲಿ ದೊರೆಯಬಹುದಾದ ಸಲುಗೆಯಿಂದ, ಪ್ರೀತಿಯಿಂದ ಶಾಕಾಹಾರಿಗಳಾದವರು  ಮಾಂಸಾಹಾರಿಗಳಾಗುವ ಅಪಾಯವಿದೆ ಎಂಬ ವಾದ ಸುಳ್ಳಲ್ಲ.

ತುಸು ವರ್ಷಗಳ ಹಿಂದಕ್ಕೆ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಬಸಲೆಸೊಪ್ಪು ಇಂತಹ ಪದಾರ್ಥಗಳನ್ನು ಔಷಧಕ್ಕೂ ಕೂಡ ಬಳಸುತ್ತಿರಲಿಲ್ಲ! ಇಂದು ಹಾಗಲ್ಲ, ಸಮಾಜದ ಹಲವು ವರ್ಗಗಳ ಜೊತೆ ಸಹಬಾಳ್ವೆ ನಡೆಸುತ್ತಾ ಹಲವು ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬ್ರಾಹ್ಮಣರು, ಅನಿವಾರ್ಯವಾಗಿ ಹೋಟೆಲ್ಗಳಲ್ಲೋ ಕ್ಯಾಂಟೀನ್ಗಳಲ್ಲೋ ತಿಂಡಿ-ತೀರ್ಥಗಳನ್ನು ಸ್ವೀಕರಿಸತೊಡಗಿದ್ದಾರೆ. ಆಹಾರಗಳ ತಯಾರಿಯನ್ನೇ ವ್ಯವಹಾರವನ್ನಾಗಿಸಿಕೊಂಡ ಜಾಗದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಕೆಯನ್ನು ನಿಷೇಧಿಸಿ ಎನ್ನಲು ಸಾಧ್ಯವಾಗಲಿಲ್ಲ; ಕ್ರಮೇಣ ಅವುಗಳ ರುಚಿ ಮೈಗೊಂಡು ಅವುಗಳು ಇಲ್ಲದೇ ಅಡುಗೆಯೇ ಆಗುವುದಿಲ್ಲ ಎಂಬಷ್ಟು ಆತುಕೊಂಡು ಈಗ ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳ ಬಳಕೆ ಕಾಯಮ್ಮಾಗಿ ಹೋಗಿದೆ! ಯಾಕೆ ಅವುಗಳನ್ನು ಬಳಸಬಾರದು ಎಂದಿದ್ದರು ಎಂದು ತಿಳಿಯುವುದಾದರೆ ವೇದವಿಜ್ಞಾನದ ಮೂಲಗಳ ಪ್ರಕಾರ ತಿಳಿದು ಬರುವ ಅಂಶ ಹೀಗಿದೆ: ಅವು ಕಾಮೋತ್ತೇಜಕ ಪದಾರ್ಥಗಳು. ಇಂದ್ರಿಯನಿಗ್ರಹವನ್ನೇ ಗುರಿಯಾಗಿಸಿಕೊಂಡು ಅಧ್ಯಯನ, ಅಧ್ಯಾಪನ ಮತ್ತು ಅನುಸರಣ ಇವುಗಳಲ್ಲಿ ನಿರತರಾದ ಮಂದಿಗೆ ನಿಗ್ರಹ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತವೆ ಎಂಬುದು ಈ ಬಳಕೆಯ ನಿಷೇಧದ ಹಿಂದಿರುವ ಸತ್ಯವಾಗಿತ್ತು. ಇವತ್ತು ಅಧ್ಯಾಪನರಂಗದಲ್ಲಿ ಇರುವ ಬಹಳ ವ್ಯಕ್ತಿಗಳು ಕಾಮುಕರಾಗಿದ್ದಾರೆ ಮತ್ತು ನಾವದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲೂ ಕಾಣುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರ ಆಹಾರ-ವ್ಯವಹಾರದ ವೈಖರಿಯೇ ಆಗಿರುತ್ತದೆ! 

ಆಹಾರಕ್ಕೂ ಆಚರಣೆಗೂ ಅದೆಲ್ಲಿಯ ಸಂಬಂಧ ಎಂದು ಅಸಡ್ಡೆ ಮಾಡುವವರಿಗೆ ಒಂದು ಉದಾಹರಣೆ: ’ಮದ್ಯಪಾನಮಾಡಿ ವಾಹನ ಚಲಿಸಬೇಡಿ’ ಎಂಬುದು ಸಂಚಾರೀ ನಿಯಮಗಳಲ್ಲಿ ಒಂದು. ಮದ್ಯಪಾನ ಮಾಡುವುದಕ್ಕೂ ವಾಹನ ಚಲಾಯಿಸುವಿಕೆಗೂ ಏನು ಸಂಬಂಧ? ಅದನ್ನು ನಾನು ಹೊಸದಾಗಿ ವಿವರಿಸುವುದು ಬೇಡಾ ಎನಿಸುತ್ತದೆ. ಅದೇ ರೀತಿ ವೇದಾಗಮ ಶಾಸ್ರ್ರಗಳನ್ನು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಪ್ರತಿನಿತ್ಯ ಬಳಸುವ ಬ್ರಾಹ್ಮಣ ವರ್ಗದ ಜನ ಸಹಪಂಕ್ತೀ ಭೋಜನದಲ್ಲಿ, ದೊರೆತ ಇತರರ ಸಲುಗೆಯನ್ನುಪಯೋಗಿಸಿಕೊಂಡು,  ನಿಧಾನವಾಗಿ ಮದ್ಯ-ಮಾಂಸಗಳ ಬಳಕೆಯ ಕಡೆಗೆ ವಾಲಬಹುದು ಎಂಬ ಅಂಶ ನಿಜಕ್ಕೂ ಚಿಂತನಾರ್ಹವೇ. ಯಾಕೆಂದರೆ ಅದು ಈಗಾಗಲೇ ನಡೆಯುತ್ತಿದೆ. ಲೌಕಿಕದ ಕಡೆಗೆ ಗಾಢವಾಗಿ ಎಳೆದು ಇಂದ್ರಿಯಗಳನ್ನು ಸಬಲಗೊಳಿಸುವ ಕಾರ್ಯವನ್ನು ಈ ಎರಡು ಪದಾರ್ಥಗಳು ಮಾಡುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸಂಸರ್ಗದ ಸಲುಗೆ ಆಹಾರಕ್ರಮಕ್ಕಿರುವ ಅಡ್ಡಬೇಲಿಯನ್ನು ಹಾರಿ ಕಾಳರಾತ್ರಿಯಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುವ ಮದ್ಯ-ಮಾಂಸಗಳನ್ನು ಸ್ವೀಕರಿಸುವಲ್ಲಿಯವರೆಗೂ ಬ್ರಾಹ್ಮಣ ಜನರನ್ನು ಸೆಳೆದೊಯ್ಯಬಹುದು ಎಂಬ ಶಂಕೆಯಿಂದ ಸ್ವಾಮಿಗಳು ಹಾಗೆ ಹೇಳಿದ್ದಾರೆ.   

ನನ್ನ ಬಹುತೇಕ ಸ್ನೇಹಿತರು ಎಲ್ಲರೂ ಮಾಂಸಾಹಾರಿಗಳೇ. ಹಾಗಂತ ಅವರು ಸುಸಂಸ್ಕೃತರಲ್ಲ ಎಂದು ನಾನೆಂದೂ ಅನ್ನುವುದಿಲ್ಲ. ನಮ್ಮಲ್ಲಿರುವ ಆ ಗಾಢ ಸ್ನೇಹಭಾವಕ್ಕೆ ಯಾವಕೊರತೆಯೂ ಇಲ್ಲ. ಆದರೆ ಮಾಂಸಾಹಾರಕ್ಕೆ ನನ್ನನ್ನು ಅವರು ಕರೆಯುವುದಿಲ್ಲ, ಶಾಕಾಹಾರಿಗಳಾಗಿ ಎಂಬ ಒತ್ತಾಯವನ್ನು ನಾನಂತೂ ಅವರಮೇಲೆ ಹೇರಲಿಲ್ಲ. ಕೆಲವು ವ್ಯವಹಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಆ ಯಾ  ವ್ಯವಹಾರಕ್ಕೆ ಸಂಬಂಧಿಸಿದಂತೇ ನಿಯಮಗಳಿರುವುದು ಸೂಕ್ತ. ಗಡದ್ದಾಗಿ ರಾತ್ರಿ ಊಟ ಹೊಡೆದ ವಿದ್ಯಾರ್ಥಿ ಓದಲು ಕುಳಿತರೆ ಆತನಿಗೆ ಓದಿನ ಬದಲಿಗೆ ನಿದ್ದೆ ಹತ್ತುತ್ತದೆ. ಇಡೀದಿನ ಅದೂ ಇದೂ ತಿನ್ನುತ್ತಾ

ಆಚೆಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ
ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ-ಉಪ್ಪಿಟ್ಟು-ಪಾಯಸ

ಅಂದಹಾಗೇ ಹೊಟ್ಟೆತುಂಬಿಸಿಕೊಂಡು ಜಾಗರಣೆ ಮಾಡುವುದು ಸಾಧ್ಯವಾಗುವುದಿಲ್ಲ! ಅದಕ್ಕೇ ಜಾಗರಣೆಯ ದಿನವಾದ ಶಿವರಾತ್ರಿಯಂದು ಲೋಕಕ್ಕೆ ಉಪವಾಸವನ್ನು ಹೇಳಿದ್ದಾರೆ. ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ, ರಾಜ್ಯಪಾಲ-ರಾಷ್ಟ್ರಪತಿ ಈ ಎಲ್ಲರಿಗೆ ಹೀಗ್ಹೀಗೆ ನಡೆದುಕೊಳ್ಳಬೇಕು ಎಂಬ ನಿಯಮ-ನಿಬಂಧನೆಗಳಿವೆ. ಅದನ್ನು ಸರಕಾರದ ಭಾಷೆಯಲ್ಲಿ ’ಪ್ರೋಟೋಕಾಲ್’ ಎನ್ನುತ್ತಾರೆ. ಅಂತಹ ಪ್ರೋಟೊಕಾಲ್ ದೂರವಿರಿಸಿ ಬೇಕಾಬಿಟ್ಟಿ ವರ್ತಿಸಿದರೆ ವ್ಯವಸ್ಥೆ ಹದಗೆಡುತ್ತದೆ, ಸಮಾಜದ ಸ್ಥಿತಿ ಉದ್ವಿಗ್ನವಾಗುತ್ತದೆ, ಆಡಳಿತ ಯಂತ್ರ ತನ್ನ ಸ್ವರೂಪವನ್ನೂ ಮೌಲ್ಯವನ್ನೂ ಕಳೆದುಕೊಳ್ಳುತ್ತದೆ. ಸಹಸ್ರಮಾನಗಳಿಂದ ವಂಶಪಾರಂಪರ್ಯವಾಗಿ ಮದ್ಯ-ಮಾಂಸಗಳನ್ನು ಬಳಸದೇ ಇದ್ದ ಜನಾಂಗಕ್ಕೆ ಹೊಸದಾಗಿ ಅದನ್ನು ಬಳಸುವ ಬುದ್ಧಿ ಪ್ರಚೋದನೆಗೊಂಡರೆ ಅವರು ನಡೆಸಬೇಕಾದ ಕೈಂಕರ್ಯದಲ್ಲಿ ಸಹಜವಾಗಿ ವ್ಯತ್ಯಾಸಗಳನ್ನು ಕಾಣಬೇಕಾಗಿ ಬರುತ್ತದೆ. ಪೋಲೀಸರೇ ಕಳ್ಳರಾದರೆ, ಬೇಲಿಯೇ ಎದ್ದು ಹೊಲವನ್ನು ಮೇದರೆ ಹೇಗಾಗಬೇಡ? ಅಂದಹಾಗೇ ಅಲ್ಲಲ್ಲಿ ಅಪರೂಪಕ್ಕೆ ನಮ್ಮ ಪೋಲೀಸರೂ ಎಣ್ಣೆಹಾಕಿ ನರ್ತಿಸಿ ತಮ್ಮ ’ದಿವ್ಯಾನುಭೂತಿ’ಯನ್ನು ಪ್ರಸ್ತುತಪಡಿಸುವುದನ್ನೂ ಕಂಡಿದ್ದೇವೆ!

ಹಿಂದೂಜನ ಒಪ್ಪಿರುವ ಅಪ್ಪಿರುವ, ಸನಾತನವಾದ ಗ್ರಂಥ ಭಗವದ್ಗೀತೆಯ ಹದಿನೈದನೇ ಅಧ್ಯಾಯ-’ಪುರುಷೋತ್ತಮ ಯೋಗ’ ಎಂಬುದರಲ್ಲಿ ಜಗನ್ನಿಯಾಮಕ ಹೀಗೆ ಬೋಧಿಸಿದ್ದಾನೆ :   

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||

ಎಲ್ಲಾ ಜೀವಿಗಳ ದೇಹದಲ್ಲಿ ನಾನೇ ಸ್ಥಿತನಾಗಿದ್ದೇನೆ ಮತ್ತು ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪಿಯಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣವಾಗಿಸುತ್ತೇನೆ.

ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ|
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವಿದೇವ ಚಾಹಮ್ ||

ನಾನೇ ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿದ್ದೇನೆ; ನನ್ನಿಂದಲೇ ಸ್ಮೃತಿ, ಜ್ಞಾನ ಉಂಟಾಗುತ್ತದೆ ಹಾಗೂ ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲಾ ವೇದಗಳ ಮೂಲಕ ನಾನೇ ತಿಳಿಯಲು ಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ಸಹ ನಾನೇ ಆಗಿದ್ದೇನೆ.  

ವೇದಗಳನ್ನು ಓದುವ, ಆಸ್ವಾದಿಸುವ, ಆಚರಿಸುವ, ಅನುಮೋದಿಸುವ, ಗೀತೆಯ ನುಡಿಗಳನ್ನು ಪಾಲಿಸುವ ಬಹುತೇಕ ಬ್ರಾಹ್ಮಣರಿಗೆ ಇದರ ಅರ್ಥ ತಿಳಿದಿರುತ್ತದೆ. ಬ್ರಹ್ಮಾಂಡದ ಪ್ರತೀ ಜೀವಿಯಲ್ಲೂ ತಾನೇ ಇದ್ದೇನೆ ಎಂದ ಭಗವಂತನ ಮಾತನ್ನು ಒಪ್ಪಿಕೊಂಡಾಗ ಇನ್ನೊಂದು ಪ್ರಾಣಿಯನ್ನು ಆಹಾರವಾಗಿ ಬಳಸಿಕೊಳ್ಳಲು ಆ ದೇಹ-ಜೀವಗಳ ಬೇರ್ಪಡಿಸುವಿಕೆ ಮನಸ್ಸಿಗೆ ಒಪ್ಪಿತವಾಗುವ ವಿಷಯವಲ್ಲ. ಆಹಾರವಾಗಿ ಹಲವು ಪದಾರ್ಥಗಳು ಸಿಗುತ್ತವೆ. ಮಾಂಸವೇ ಆಗಬೇಕೆ? ಇಲ್ಲವಲ್ಲ. ಜೀವವೇ ಇಲ್ಲದ ಅಥವಾ ಜೀವನ ಮುಗಿದ ಸಸ್ಯಜನ್ಯ ಪದಾರ್ಥಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡವರು ಬ್ರಾಹ್ಮಣರು. ಸತತ ತೌಲನಿಕ ಅಧ್ಯಯನದಿಂದ, ಮಾಂಸ ಪದಾರ್ಥಗಳ ಬಳಕೆ ಅಜ್ಞಾನ-ಅಂಧಕಾರ, ಅಹಂಕಾರ, ಪ್ರಮಾದ, ಆಲಸ್ಯ ಮತ್ತು ನಿದ್ರೆಯನ್ನು ವೃದ್ಧಿಸಿ ಮನುಷ್ಯನ ದೇಹಾಭಿಮಾನವನ್ನು ಹೆಚ್ಚಿಸಿ ಅದರಿಂದ ಜೀವಾತ್ಮನನ್ನು ಬಂಧಿಸುತ್ತದೆ ಎಂಬುದು ತಿಳಿದುಬಂದಿದೆ. 

ಹೀಗಾಗಿ ಸರ್ವಪ್ರಜಾ ಸಂಸರ್ಗದಿಂದ, ಸಂಗದಿಂದ, ಊಟದಲ್ಲಿ ಒಟ್ಟಿಗೆ ಕುಳಿತು ಮದ್ಯಮಾಂಸಾದಿಗಳ ಬಗೆಗೆ ಹೇಳಿಕೇಳಿ ಮಾಡಿಕೊಳ್ಳಬಹುದಾದ ಸನ್ನಿವೇಶ ಉಂಟಾಗಬಹುದೆಂಬ ಕಾರಣದಿಂದ ಪಂಕ್ತಿಯಲ್ಲಿ ಭೇದಮಾಡಿದರೇ ಹೊರತು, ಇತರೆ ಜನಾಂಗಗಳನ್ನು ಹೀನವಾಗಿ ಕಾಣುವ ದುರುದ್ದೇಶದ ನಡೆ ಅದಲ್ಲ. ವೈಜ್ಞಾನಿಕವಾಗಿ ಸ್ವಚ್ಛತೆಯ ಸಲುವಾಗಿ ಮಡಿಯನ್ನೂ, ಸಾತ್ವಿಕ ಆಹಾರಕ್ರಮದ ಸಲುವಾಗಿ ಪಂಕ್ತಿಭೇದವನ್ನೂ ನಡೆಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಇಂದು ನಗರಗಳಲ್ಲಿ ಕೆಲವು ಬ್ರಾಹ್ಮಣರು ಮದ್ಯ-ಮಾಂಸಗಳಲ್ಲಿ ನಿರತರಾಗಿ ತಮ್ಮ ಮೂಲ ಆಶಯಗಳನ್ನು ಮರೆತಿದ್ದಾರೆ; ಲೌಕಿಕ ಜೀವನಕ್ಕೇ ಜಾಸ್ತಿ ಆತುಕೊಂಡಿದ್ದಾರೆ, ಆತ್ಮೋನ್ನತಿಯ ವಿಚಾರ ಕೈಬಿಟ್ಟಿದ್ದಾರೆ. ಸಮಾಜದಲ್ಲಿ ಅಸತ್ಯ, ಕೆಟ್ಟವಿಚಾರ, ಚಟಗಳು, ದುರ್ನಡತೆ ಇವೆಲ್ಲಾ ಬಹಳ ಬೇಗ ಹೇಗೆ ಪ್ರಸಾರವಾಗುತ್ತವೋ ಹಾಗೆಯೇ ಮದ್ಯ-ಮಾಂಸಾದಿಗಳ ಬಳಕೆಯೂ ಕೂಡ. ಮಾಂಸಾಹಾರವನ್ನು ಬಳಸಿದವರೆಲ್ಲಾ ಕೆಟ್ಟವರೆಂದೋ ಅಥವಾ ಸಮಾಜ ಘಾತುಕರೆಂದೋ ನಾನು ಹೇಳುತ್ತಿಲ್ಲ; ಅದೇ ಅವರು ಮಾಂಸಾಹಾರವನ್ನು ತ್ಯಜಿಸಿದ್ದರೆ ಇನ್ನೂ ಉನ್ನತ ಜ್ಞಾನದ ಮಟ್ಟವನ್ನು ಸಾಧಿಸಬಹುದಿತ್ತು ಎಂಬುದು ನನ್ನ ಹೇಳಿಕೆ. ಈ ಜ್ಞಾನ ಕೇವಲ ಲೌಕಿಕ/ಪ್ರಾಪಂಚಿಕ ವ್ಯವಹಾರ ಜ್ಞಾನವಲ್ಲ; ಇಲ್ಲಿ ’ಜ್ಞಾನ’ ಎಂಬ ಪದವನ್ನು ಪಾರಮಾರ್ಥಿಕ ಸಾಧನೆಗೂ ಬಳಸಿಕೊಳ್ಳಲಾಗಿದೆ ಎಂಬುದನ್ನು ಓದುಗರು ಅರಿಯಬೇಕು. ಪಾರಮಾರ್ಥಿಕ ಸಾಧನೆಯನ್ನು ಲೌಕಿಕವಾಗಿ ಅಳೆಯುವ ಯಾವುದೇ ಮಾಪನಗಳಿಲ್ಲ; ಅಂದಮಾತ್ರಕ್ಕೆ ಅದನ್ನು ಅಲ್ಲಗಳೆಯಲಾಗುವುದಿಲ್ಲ!  

ರಜಸ್ತಶ್ಚಾಭಿಭೂಯ ಸತ್ತ್ವಂ ಭವತಿ ಭಾರತ|
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ||

ರಜೋಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ಸತ್ವಗುಣವು ವೃದ್ಧಿಸುತ್ತದೆ, ಸತ್ವಗುಣ ತಮೋಗುಣಗಳನ್ನು ಅದುಮಿಕೊಂಡು ರಜೋಗುಣವು ವೃದ್ಧಿಸುತ್ತದೆ, ಅಂತೆಯೇ ಸತ್ವಗುಣ ಮತ್ತು ರಜೋಗುಣಗಳನ್ನು ಅದುಮಿಕೊಂಡು ತಮೋಗುಣವು ವೃದ್ಧಿಸುತ್ತದೆ ಎಂದು ಶ್ರೀಕೃಷ್ಣ ಅರ್ಜುನನಿಗೆ ೧೪ನೇ ಅಧ್ಯಾಯ ’ಗುಣತ್ರಯ ವಿಭಾಗಯೋಗ’ದಲ್ಲಿ ವಿವರಿಸಿದ್ದಾನೆ. ಕೃಷ್ಣಹೇಳಿದ ಮೂರರಲ್ಲಿ ಮೊದಲನೆಯ ರೀತಿಯನ್ನು ನಾವು ಅನುಸರಿಸಿದರೆ ಇಂದ್ರಿಯನಿಗ್ರಹ, ಅರಿಷಡ್ವರ್ಗಗಳ ಹತೋಟಿ ತಕ್ಕಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಮಹಾತ್ಮರ/ತಪಸ್ವಿಗಳ ಅನುಭವದ ಮಾತಾಗಿದೆ. ಅದನ್ನು ಸಾಧ್ಯವಾಗಿಸಿಕೊಳ್ಳುವಲ್ಲಿ ಬ್ರಾಹ್ಮಣವರ್ಗ ನಡೆದು ಬಂದಿತ್ತು. ದೇಶಾಂತರ ಪರ್ಯಟನೆಯಲ್ಲಿ ಬಂಗಾಳದ ಕಡೆಗೆ ನೆಲೆನಿಂತ ಬ್ರಾಹ್ಮಣವರ್ಗ ಸಂಸರ್ಗದ ಫಲವಾಗಿ ಮಾಂಸಾಹಾರವನ್ನು ಸ್ವೀಕರಿಸತೊಡಗಿತು! ಇವತ್ತಿಗೂ ಬಂಗಾಳದ ಬ್ರಾಹ್ಮಣರಿಗೂ ನಮ್ಮಲ್ಲಿನ ಬ್ರಾಹ್ಮಣರಿಗೂ ಸಹಪಂಕ್ತೀ ಭೋಜನ ನಡೆಯುವುದಿಲ್ಲ!! ಸಹಪಂಕ್ತೀ ಭೋಜನ-ನಿಷೇಧ ಜಾತಿಯಿಂದ ಅಥವಾ ಜಾತಿಗಳ ಸಲುವಾಗಿ ಜನಿಸಿದ್ದಲ್ಲ, ಬದಲಾಗಿ ಆಹಾರನೀತಿಯಿಂದ ಜನಿಸಿದ್ದಾಗಿದೆ; ಅಲ್ಲಿ ಅನ್ಯ ಜನಾಂಗವನ್ನು ಅವಹೇಳನಮಾಡುವ ಉದ್ದೇಶ ಇರುವುದಿಲ್ಲ. 

ಪತ್ರಿಕೆಯಲ್ಲಿ ಬರೆದ ಮಹಾನುಭಾವನೊಬ್ಬ ಋಷಿ ದೂರ್ವಾಸರ, ಕಶ್ಯಪರ ಮತ್ತು ಇನ್ನಿತರ ಹಲವರ ಮೂಲವನ್ನು ಕೆದಕುತ್ತಾ ಅವರೆಲ್ಲಾ ಮಾಂಸಾಹಾರಿಗಳಾಗಿರಲಿಲ್ಲವೇ ? ಎಂಬ ಪ್ರಶ್ನೆ ಹಾಕಿದ್ದಾನೆ. ನೋಡಿ: ಮಹರ್ಷಿ ವಾಲ್ಮೀಕಿ ಮೂಲದಲ್ಲಿ ಬೇಡನಾಗಿದ್ದುದು ನಮಗೆಲ್ಲಾ ತಿಳಿದೇ ಇದೆ; ಆದರೆ ಬದಲಾದ ಜೀವನದಲ್ಲಿ ಅದೇ ಬೇಡ ಹಕ್ಕಿಗಳ ವಧೆಯನ್ನು ತಾನೇ ನಿಷೇಧಿಸಿದ-ಮಾಂಸಾಹಾರವನ್ನು ವರ್ಜಿಸಿದ,  ’ಮರಾ ಮರಾ ಮರಾ ’ ಎನ್ನುವ ಜಪದಲ್ಲಿ ಧ್ಯಾನಸ್ಥನಾಗಿ ಕುಳಿತು ಜ್ಞಾನಿಯಾದ! ಸಹನೌಭುನಕ್ತು --ಎಂಬಲ್ಲಿ ಸಹನೆಯಿಂದ ಎಲ್ಲರೂ ಭುಂಜಿಸೋಣ ಎಂದರ್ಥವಾಗುತ್ತದೆಯೇ ಹೊರತು ಅದನ್ನೇ ವಿಪರ್ಯಾಸದ ಅರ್ಥಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಬದಲಾದ ಪರಿಸರದಲ್ಲಿ ಎಲ್ಲರೊಂದಿಗೆ ಸಹಪಂಕ್ತಿಯಲ್ಲಿ ಬ್ರಾಹ್ಮಣರು ಊಟಮಾಡುತ್ತಾ ಅದೇಷ್ಟೋ ಕಾಲ ಗತಿಸಿದೆ; ಮಾಡುತ್ತಲೇ ಇದ್ದಾರೆ, ಮಾಡುತ್ತಾರೆ. "ಆದರೆ ಊಟದ ಸಮಯದ ಸ್ನೇಹ, ಭಿನ್ನ ಆಹಾರದ ರುಚಿನೋಡುವ ಚಟದೆಡೆಗೆ ಹಚ್ಚದಂತೇ ಎಚ್ಚರವಹಿಸುವುದು ಬ್ರಾಹ್ಮಣರ ಕರ್ತವ್ಯ-ಎಂಬುದನ್ನು ಬ್ರಾಹ್ಮಣರು ಮರೆಯಬಾರದು" ಎಂದು ಶ್ರೀಗಳು ಹೇಳಿದ್ದಾರೆ; ಇದು ರಾಜಕೀಯ ಪ್ರೇರಿತವೂ ಅಲ್ಲ, ಮಾತನ್ನು ಹೊರಳಿಸಲೂ ಇಲ್ಲ ಎಂಬುದನ್ನು ಕಾಗದದ ’ಹುಲಿ’-’ಸಿಂಹ’ಗಳು ತಿಳಿದುಕೊಂಡು ಮಾತಾಡಬೇಕಾಗಿದೆ.

ಇನ್ನೊಂದು ನೋವು ತಂದ ಮಾತೆಂದರೆ. ಮಹಾನುಭಾವನೊಬ್ಬ ಬರೆದಿದ್ದು: ಅನ್ಯ ಜನಾಂಗಗಳಲ್ಲಿ ಮಠಗಳು ಹುಟ್ಟಿಕೊಂಡಮೇಲೆ ಬ್ರಾಹ್ಮಣ ಮಠಗಳಿಗೆ ದಕ್ಷಿಣೆ, ಪಾದಕಾಣಿಕೆ, ದಾನ ಇವೆಲ್ಲಾ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಪೇಜಾವರ ಸ್ವಾಮಿಗಳಂಥವರು ದಲಿತರ ಕೇರಿಗಳಲ್ಲಿ ಪಾದಯಾತ್ರೆ, ಸಂಚಾರ ನಡೆಸುತ್ತಾ ದೀಕ್ಷೆ ಕೊಡುತ್ತೇವೆ ಎನ್ನುತ್ತಾ ಪರೋಕ್ಷವಾಗಿ ಕಾಣಿಕೆ ಎತ್ತಲು ಬರುತ್ತಾರೆ ಎಂದಿದ್ದಾನೆ. ಜಾತೀವಾರು ಮಠಗಳು ತಲೆ ಎತ್ತಿದ್ದು, ಅವು ರಾಜಕೀಯವಾಗಿ ಆ ಯಾ ಜಾತಿಗಳಿಗೆ ಸರಕಾರೀ ಸೌಲಭ್ಯ/ಮಾನ್ಯತೆ/ಮೀಸಲಾತಿ ಇವುಗಳನ್ನು ಕೊಡಿಸಲಿಕ್ಕೆ ಎಂಬುದರಲ್ಲಿ ಸಂದೇಹವಿಲ್ಲ. ಪಾರಮಾರ್ಥಿಕವಾಗಿ ನಡೆಸುವ ಕಾರ್ಯಗಳಿಗೂ ಭಿನ್ನವಾಗಿ ಒಬ್ಬೊಬ್ಬ ಸ್ವಾಮಿ ಒಂದೊಂದು ರೀತಿಯಲ್ಲಿ ತನ್ನ ಲೌಕಿಕನಡೆಯಿಂದ ಪ್ರಚಾರಕ್ಕೆ ಬರುತ್ತಾನೆ; ಜನಾಂಗದ ಬಲವನ್ನು ಸಾಕ್ಷೀಕರಿಸಲು ವಿಧಾನಸೌಧದಂತಹ ರಾಜಕೀಯ ಮಹಲುಗಳಿಗೂ ನಡೆದುಬರುತ್ತಾನೆ. ಸನಾತನ ಧರ್ಮದಲ್ಲಿ ಎಲ್ಲಾ ಜನಾಂಗಗಳಿಗೆ ಗುರುವಿನ ಸ್ಥಾನದಲ್ಲಿ ನಡೆದಿದ್ದು ಬ್ರಾಹ್ಮಣ ಜನಾಂಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬದಲಾದ ಸನ್ನಿವೇಶದಲ್ಲಿ ಉದರಂಭರಣೆಗಾಗಿ ಬ್ರಾಹ್ಮಣರು ವೇದಾಧ್ಯಯನ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡಿದ್ದೂ ಅಷ್ಟೇ ಸತ್ಯ. ವೃತ್ತಿ ಸಂಬಂಧದ ಒಡನಾಟ ತಿರುಗಾಟಗಳಿಂದ ಆಹಾರ-ವ್ಯವಹಾರಗಳಲ್ಲಿ ವ್ಯತ್ಯಯವುಂಟಾಗುವುದೂ ಅನಿವಾರ್ಯ ಸಹಜ. ಆದರೂ ಇವತ್ತಿಗೂ ಬ್ರಾಹ್ಮಣ ಮಠಗಳು ಆದಾಯಕ್ಕಾಗಿ ಅಥವಾ ಪಾದಗಾಣಿಕೆಗಾಗಿ ಯಾವಕೆಲಸದಲ್ಲೂ ತೊಡಗಿಕೊಂಡಿಲ್ಲ. ಅವರು ವಿಧಾನಸೌಧದ ಜಗಲಿಗೆ ಮೀಸಲಾತಿ ಕೇಳಲು ಬರುವುದಿಲ್ಲ. ಸಮಾಜದ ಯಾವ ವರ್ಗದವರಿಂದಲೂ ತಮಗೆ ಇಂತಿಷ್ಟು ಸಂದಾಯವಾಗಬೇಕೆಂದು ಎಂದೂ ಬಯಸುವುದಿಲ್ಲ. ಅವರಿಗೆ ಬೇಕಾಗಿರುವುದು ಸಮಷ್ಟಿಯ ಸಮಾಜದ ಸ್ವಾಸ್ಥ್ಯ! ಸರ್ವಜನಾಂಗದ ಸರ್ವತೋಮುಖ ಅಭಿವೃದ್ಧಿ. ಹೀಗಾಗಿ ದಲಿತರ ಸಂಕಷ್ಟದ ಅಳಲನ್ನು ಆಲೈಸಲು, ನಕ್ಸಲೈಟ್ಸ್ ಗಳ ಮನವನ್ನು ಸಮಾಜಮುಖಿಯಾಗಿ ಪರಿವರ್ತಿಸಲು ಆದಾಯ-ನಿರಪೇಕ್ಷಿತ ಮತ್ತು ಧರ್ಮಸಂತುಲಿತ ಸಂಚಾರವನ್ನೋ ಪಾದಯಾತ್ರೆಯನ್ನೋ ಆಂದೋಲನವನ್ನೋ ಬ್ರಾಹ್ಮಣ ಮಠಗಳು ನಡೆಸುತ್ತವೆ-ಕಾಣಿಕೆಗಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಹಕ್ಕಿಯ ಹೇಗಲೇರಿ ಬಂದ ಭಗವಂತ ಕೃಷ್ಣನಾಗಿ, ಜಗದ್ಗುರುವಾಗಿ ಬೋಧಿಸಿದ ನೀತಿಗೆ ಆತುಕೊಂಡಿರುವ, ಆತನ ಲೀಲಾವಿನೋದದ ಪಾತ್ರಧಾರಿಗಳಾಗಿರುವ ಎಲ್ಲರ ನಡುವೆ, ಕೇವಲ ಮೇಲ್ವರ್ಗವೆಂದು ಗುರಿಮಾಡಲ್ಪಟ್ಟು, ಸದಾ ಅನ್ಯಜನಾಂಗದ ಮಾತಿನ ಚಾಟಿಏಟು, ರಾಜಕೀಯದ ಅವಗಣನೆ ಇವುಗಳನ್ನು ಸಹಿಸುತ್ತಾ ಬದುಕುವ ವಿಪ್ರಜನಾಂಗದ ಮೇಲಿನ, ಸ್ವಾಮಿಗಳ ಮೇಲಿನ ಆರೋಪ ಸರಿಯಲ್ಲ; ಮಾಡಿದ ಆರೋಪದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಲೇಖಕರುಗಳ ಮತ್ತು ಅವರ ಮಂಡಳಿಯ ’ಯಜಮಾನರ’ ’ಕತ್ತಲೆ’ಕಳೆದು ಅವರು ನಿಜವಾದ ಬೆತ್ತಲೆ ಪ್ರಪಂಚವನ್ನು ಅವಲೋಕಿಸುವ ಮಟ್ಟಕ್ಕೆ ತಲುಪಲಿ ಎಂದು,  ನಾನೂ ಮನಸೋತ ಹಕ್ಕೀಹೆಗಲಿಗನಲ್ಲಿ ಪುನಃ ಪುನಃ ಪ್ರಾರ್ಥಿಸುತ್ತಿದ್ದೇನೆ, ನಮಸ್ಕಾರ.