ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 3, 2012

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ !

ಚಿತ್ರಕೃಪೆ: ಅಂತರ್ಜಾಲ

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ!

ಚಿಕ್ಕದೊಂದು ವಿಷಯವನ್ನು ದೊಡ್ಡದಾಗಿ ಹೇಳಿ ಸಂಭ್ರಮಿಸುವ ಪರಿಪಾಟ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಅದು ತಪ್ಪು ಎನ್ನುವುದಿಲ್ಲ. ಆದರೆ ಚಿಕ್ಕದನ್ನೇ ದೊಡ್ಡದನ್ನಾಗಿ ಮಾಡುವ/ಬೆಳೆಸುವ ಸ್ವಭಾವ ಕೆಲವೊಮ್ಮೆ ಹೋದಲ್ಲೆಲ್ಲಾ ಅದನ್ನೇ ಮಾಡುವುದು ಅರಿವಿಗಿಲ್ಲದೇ ನಡೆದುಬಿಡುತ್ತದೆ. ಕೆಲವೊಮ್ಮೆ ಚಿಕ್ಕದನ್ನು ದೊಡ್ಡದನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಡುತ್ತದೆ! ಅದಕ್ಕೊಂದು ಚಿಕ್ಕ ಉದಾಹರಣೆ: ನಮ್ಮೂರಕಡೆ ಹಳ್ಳಿಯ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಬ್ಬ ಅನಿರೀಕ್ಷಿತವಾಗಿ ಸೈಕಲ್ ಏರಿ ಹೊರಟ. ಅವನು ತುರ್ತಾಗಿ ತಾಲೂಕಾ ಪ್ರದೇಶವನ್ನು ತಲ್ಪಲೇಬೇಕಾದ ಅನಿವಾರ್ಯತೆ ಇತ್ತಂತೆ. ಹೋಗುತ್ತಾ ಹೋಗುತ್ತಾ ತಾಲೂಕು ಕೇಂದ್ರ ತಲುಪುವಾಗ ಪಟ್ಟಣದ ವ್ಯಾಪ್ತಿ ಬರುತ್ತದಲ್ಲಾ....ಅಲ್ಲಿ ಪೋಲೀಸನೊಬ್ಬ ಕೈ ಅಡ್ಡಹಾಕಿ ನಿಲ್ಲಿಸಿದ್ದಾನೆ.


" ಹೇಯ್ ನಿಲ್ಲು "

ಸೈಕಲ್‍ನಲ್ಲಿದ್ದವನಿಗೆ ಉಚ್ಚೆ ಬರುವುದೊಂದು ಬಾಕಿ! ಯಾಕೆಂದರೆ ಹಳ್ಳೀಜನ ಪೋಲೀಸರಿಗೆ ಅಷ್ಟು ಹೆದರುತ್ತಿದ್ದರು ಆಗ.

" ಮಹಾಸ್ವಾಮೀ ನಿಂತೆ, ಯಾಕೆ ಎಂದು ಕೇಳಬಹುದಾ ? "


" ಎಲ್ಲಯ್ಯ ನಿನ್ನ ಸೈಕಲ್ ಡೈನೆಮೋ ? "

[ಆಗೆಲ್ಲಾ ರಾತ್ರಿ ಓಡಿಸೋ ಸೈಕಲ್ಲಿಗೆ ಡೈನೆಮೋ ಎಂಬ ಚಿಕ್ಕ ಹೆಡ್ ಲೈಟು ಇರಬೇಕಾದುದು ಕಡ್ಡಾಯವಾಗಿತ್ತು]


" ಮಹಾಸ್ವಾಮೀ ಡೈನೆಮೋ ಇಲ್ಲ, ಮನೇಲಿ ಯಾರಿಗೋ ಹುಷಾರಿಲ್ಲ, ಅದಕ್ಕೇ ವೈದ್ಯರನ್ನು ಕಾಣಲು ಬಂದೆ "


" ಎಲಾ ಇವನ ನನ್ನ ಹತ್ರ ಸುಳ್ ಹೇಳ್ತೀಯಾ ? ಬಿಡುವುದಿಲ್ಲ ಇಲ್ಲೇ ಇರು "

ಪರಿಪರಿಯಾಗಿ ಸೈಕಲ್ಲಿನಾತ ಬೇಡಿಕೊಂಡಮೇಲೆ ...


" ಆಯ್ತು ನಿನ್ನ ಹೆಸರು ಹೇಳು ಬರೆದುಕೊಳ್ತೇನೆ "


" ಭಯಕೃದ್ಭಯನಾಶನಾಚಾರ್ " --ಉತ್ತರ ಬಂತು !

ಪೋಲೀಸ ಇನ್ನೊಮ್ಮೆ ಕೇಳಿದ, ಮತ್ತೊಮ್ಮೆ ಕೇಳಿದ. ಸರಿಯಾಗಿ ಬರೆದುಕೊಳ್ಳಲು ಆಗಲೇ ಇಲ್ವಂತೆ!

" ಹೂಂ ..ಹೋಗ್ ಹೋಗು ಇನ್ಮೇಲೆ ಡೈನೆಮೋ ಇಲ್ದೇ ಓಡಿಸ್ಬೇಡ "

ಎಂದನಂತೆ!

ಸೈಕಲ್ ಸುದ್ದಿ ಬಂದಾಗಲೆಲ್ಲಾ ಈ ಕಥೆ ನೆನಪಾಗುತ್ತದೆ; ಗೆಳೆಯರ ಗುಂಪಿನಲ್ಲಿ ತಮಾಷೆಯಾಗಿ ಬೆಳೆಯುತ್ತದೆ, ದೊಡ್ಡದಾಗುತ್ತದೆ!

ಆದರೆ ಹಿಂದೊಮ್ಮೆ ಚಿಕ್ಕದಾದ, ಪೋಲೀಸರು ಮತ್ತು ವಕೀಲರ ನಡುವಿನ ತೊಡಕೊಂದನ್ನು ಮಾಧ್ಯಮದವರು ದೊಡ್ಡದಾಗಿ ತೋರಿಸಿದ್ದೇ ನಿನ್ನೆಯ ಅನಾಹುತಕ್ಕೆ ಕಾರಣವಾಯ್ತು ಎಂಬುದು ನನ್ನ ಅನಿಸಿಕೆಯಾಗಿದೆ. ಸಮಾಜಕ್ಕೆ ಎಲ್ಲರೂ ಬೇಕು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಮಾಧ್ಯಮ ಚತುರ್ಥ ಅಂಗವಾಗಿ ಬರುತ್ತದೆ ಎಂದರೆ ತಪ್ಪಲ್ಲ. ಕೆಲವೊಮ್ಮೆ ಸರಕಾರೀ ವಿಭಾಗಗಳಲ್ಲೇ ಕೆಲವು ತಂಟೆ-ತಕರಾರು ಉದ್ಭವವಾಗುವುದು ಸಹಜ. ಅದಕ್ಕೂ ನ್ಯಾಯಾಲಯ ಪರಿಶೀಲಿಸಿ ಪರಿಹಾರ ಸೂಚಿಸುತ್ತದೆ. ವಕೀಲರ ಮತ್ತು ಪೋಲೀಸರ ನಡುವೆ ನಡೆದ ಚಿಕ್ಕ ಬಡಿದಾಟವನ್ನು ತಿಂಗಳುಗಳ ಹಿಂದೆ ಮಾಧ್ಯಮದವರು ಬಿತ್ತರಿಸಿದ್ದೇ ನಿನ್ನೆಯ ಘಟನೆಗೆ ಮೂಲ ಕಾರಣವಿರಬಹುದೇ ಎಂಬುದು ಹಲವರಿಗೆ ಬಂದ ಸಂಶಯ.

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮಾಧ್ಯಮದವರ ವೃತ್ತಿ ಗುಣಧರ್ಮ ಅವತ್ತು ವಕೀಲರುಗಳ-ಆರಕ್ಷಕರ ನಡುವಿನ ಕಥೆಯನ್ನೂ ತೋರಿಸಿತ್ತು! ಆ ಈರ್ಷ್ಯೆಯೇ ವಕೀಲರುಗಳಿಗೆ ಕೋಪಬರಿಸಿತ್ತು ಎನಿಸುತ್ತದೆ. ಏನಿದ್ದರೂ ನ್ಯಾಯಾಂಗದಲ್ಲಿ ಕೆಲಸಮಾಡುವ ವಕೀಲರುಗಳು ಹೊಡೆದಾಟಕ್ಕೆ ಇಳಿದಿದ್ದು ಖಂಡನಾರ್ಹವೇ ಸರಿ. ಅದು ಎಲ್ಲರಿಗೂ ಬೇಸರ ತರಿಸಿದೆ. ಹೀಗಾಗಿ ಚಿಕ್ಕದನ್ನು ದೊಡ್ಡದುಮಾಡಿ ಸಂಭ್ರಮಿಸುವ ಮೊದಲು ಯೋಚಿಸಲೇ ಬೇಕು ಎಂಬುದು ಪಥ್ಯ.

ಇತ್ತೀಚೆಗೆ ಮಾಧ್ಯಮದವರ ಮೇಲೂ ಸಾಕಷ್ಟು ಆಪಾದನೆಗಳಿವೆ. ಮಾಧ್ಯಮದ ಕೆಲವರು [ಎಲ್ಲವರೂ ಅಲ್ಲ ಎಂಬುದನ್ನು ಈಗಲೇ ಸ್ಪಷ್ಟಪಡಿಸುತ್ತೇನೆ] ದಬ್ಬಾಳಿಕೆ ಮಾಡುತ್ತಾರಂತೆ. " ಏನ್ರೀ ನಾವು ಮಾಧ್ಯಮದವ್ರು " ಎಂದು ಎಲ್ಲದಕ್ಕೂ ಬೆದರಿಕೆ ಹಾಕುತ್ತಾರಂತೆ! ಇದಕ್ಕೆ ಪೂರಕವಾಗಿ ನಾನು ಕೇಳಿದ ಘಟನೆಯೊಂದು ಹೀಗಿದೆ : ಒಂದುಕಡೆ ಪ್ರಾಚೀನ ದೇವಳವೊಂದಿದೆ. ಅಲ್ಲಿ ಯಾತ್ರಿಕರು ಜಾಸ್ತಿ ಬರುತ್ತಿದ್ದಾರೆ. ಯಾರ್ಯಾರೋ ನಿಸರ್ಗ, ಪ್ರವಾಸ ಎಂದೆಲ್ಲಾ ಹೇಳಿಕೊಂಡು ತಿನ್ನುವುದಕ್ಕೆ, ಕುಡಿಯುವುದಕ್ಕೆ ಒಂದಷ್ಟು ಕಟ್ಟಿಸಿಕೊಂಡು ಬರುತ್ತಾರೆ. ಹಾಗೆ ಬರುವ ನಾಕುಚಕ್ರದ ಗಾಡಿಗಳನ್ನು ಗೇಟಿನಲ್ಲಿ ಪಾಸ್ ಮೂಲಕ ಒಳಗೆ ನಿಲ್ಲಿಸಲು ಬಿಡಲಾಗುತ್ತದೆ. ಯಾಕೆಂದರೆ ಯಾರು ಯಾರು? ಯಾರು ಭಯೋತ್ಫಾದಕರು-ಯಾರು ಅಲ್ಲಾ ? ಎಂದೆಲ್ಲಾ ಗೊತ್ತಾಗುವುದಿಲ್ಲವಲ್ಲಾ! ಹೀಗಾಗಿ ವಾಹನದಲ್ಲಿ ಬಂದವರು ಒಬ್ಬರು ಕೆಳಗಿಳಿದು ಅಲ್ಲಿನ ಕಚೇರಿಗೆ ಹೋಗಿ ಹೆಸರು, ವಿಳಾಸ, ಗಾಡಿಯ ಮಾಹಿತಿ ನೀಡಿ ಪಾಸು ಪಡೆದು ಬರಬೇಕು. ಆಮೇಲೆ ಗೇಟ್ ಕೀಪರ್ ಗಾಡಿಯನ್ನು ಒಳಗೆ ಬಿಡುತ್ತಾನೆ.

ಒಂದುದಿನ ಅನಿರೀಕ್ಷಿತವಾಗಿ ಒಂದು ನಾಕುಚಕ್ರದ ವಾಹನ ಬಂದಿದೆ. ಅದರಲ್ಲಿ ಒಬ್ಬಳು ಹೆಂಗಸು ಇದ್ದಳಂತೆ. ಕೂತಲ್ಲಿಂದಲೇ ಅದೇನೋ ಮಾತು ನಡೆಯಿತು ಗೇಟ್ ಕೀಪರ್ ಜೊತೆಗೆ. ಮಾತು ವಾದಕ್ಕಿಳಿಯಿತು. ಆತ ಪಾಸು ಇಲ್ಲದೇ ಬಿಡುವುದಿಲ್ಲ ಎಂದು...ಈಕೆ "ನಾವು ಮಾಧ್ಯಮದವರು" ಎಂದು! ಮಾಧ್ಯಮದ ಮಹಿಳೆಯ ಧಮಕಿ ಎಲ್ಲೀವರೆಗೆ ಬಂತೆಂದರೆ ಪಾಪದ ಗೇಟ್ ಕೀಪರನನ್ನು ಕಾಲರ್ ಹಿಡಿದು ಕೆನ್ನೆಗೆ ಒಂದು ಹೊಡೆದಳಂತೆ. ಆಮೇಲೆ ಗಾಡಿಯಲ್ಲಿ ಅವಳ ಜೊತೆ ಬಂದಿರುವವರೆಲ್ಲಾ ಸೇರಿಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರಂತೆ. ಆಮೇಲೆ ಕಚೇರಿಗೆ ನುಗ್ಗಿ ಅಲ್ಲಿನ ಆಡಳಿತ ಕಚೇರಿಯಲ್ಲಿರುವ ಗುಮಾಸ್ತರನ್ನೂ ಬಿಡದೇ ಅವರ ಕಾಲರ್ ಕೂಡ ಹಿಡಿದು ದಬಾಯಿಸಿದರಂತೆ! ಆಯ್ತು ಆ ಪಾಪದ ಜನ ಸುಮ್ಮನಿದ್ದರು. ಗುಮಾಸ್ತರು ಅಲ್ಲಿನ ಆಡಳ್ತೆಯ ಹಿರಿಯರಿಗೆ ಸುದ್ದಿ ತಲ್ಪಿಸಲೋ ಬೇಡವೋ ಎಂದುಕೊಂಡು ಅಳುಮುಖದಲ್ಲಿ ಕೆಲಸ ಮುಂದುವರಿಸಿದ್ದರಂತೆ.

ಮಾಧ್ಯಮದವರು ಎನಿಸಿಕೊಂಡವರು ಒಳಗೆ ಹೋದರು. ತಮಗೆ ಬೇಕಾದ ಕೆಲಸ ಮುಗಿಸಿಕೊಂಡು ಹೊರಗೆ ಬಂದರು. ಮರಳಿ ಗಾಡಿ ತೆಗೆಯಲು ಹೊರಟಾಗ ಆ ಸುತ್ತಮುತ್ತಲಿನ ಅಲ್ಲಿನ ಸ್ಥಾನಿಕ ನಿವಾಸಿಗಳು ೨೫೦-೩೦೦ ಮಂದಿ ಜಮಾಯಿಸಿದ್ದರಂತೆ. ಎಲ್ಲರೂ ಸೇರಿ ಮಾಧ್ಯಮದವರು ಎಂದು ಹೇಳಿಕೊಂಡವರಿಗೆ ಎರಡೆರಡು ಬಿಟ್ಟು ಇನ್ನು ಆ ಕಡೆ ಮುಖಹಾಕದಹಾಗೇ ಮಾಡಿದ ಘಟನೆ ನಡೆದಿದೆ. ಇದನ್ನು ಆ ಮಾಧ್ಯಮದವರೂ ಸೇರಿದಂತೇ ಯಾರೂ ಸುದ್ದಿಮಾಡಲಿಲ್ಲ ಯಾಕೆಂದರೆ ಮಾಧ್ಯಮದವರೂ ತಪ್ಪು ಮಾಡುವ ಸಾಧ್ಯತೆ ಇರುತ್ತದೆ ಎಂಬುದು ಸಾಬೀತಾಗಿ ಜನ ಹಾಗೇ ಭಾವಿಸಬಹುದು ಎಂದು! ಹೀಗಾಗಿ ಮಾಧ್ಯಮದವರು ಸಿಕ್ಕಾಪಟ್ಟೆ ಸಂಭಾವಿತರು ಎಂಬುದು ತಳ್ಳಿಹಾಕಿದ ಮಾತು!

ಮಾಧ್ಯಮದಲ್ಲಿರುವ ವರದಿಗಾರರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ, ಯಾರ ಹತ್ತಿರ ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಪರಿವೆಯೂ ಇರುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆ : ಕಳೆದಸಾಲಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷರಾಗಿದ್ದ ಜೀವಿಯವರನ್ನು ಒಬ್ಬ ವರದಿಗಾರ್ತಿ ಸಂದರ್ಶಿಸಿದ್ದು ನನಗಿನ್ನೂ ನೆನಪಿದೆ. ನೂರರ ವಯೋಮಾನದ ಅವರಲ್ಲಿ " ಕನ್ನಡಕ್ಕೆ ನೀವೇನು ಕೊಡ್ಬೇಕು ಅಂತಿದೀರಾ ? " ಎಂದು ಕೇಳಿದ್ದಾಳೆ. ಅವರು ನಗುತ್ತಲೇ ತುಸು ಬಿಗುವಿನಿಂದ " ಕನ್ನಡಕ್ಕೆ ನಾನು ಕೊಡುವುದನ್ನು ಕೊಟ್ಟಾಗಿದೆ ಇನ್ನು ಬೇರೆಯವರು ಕೊಡುವುದನ್ನು ನೋಡುವುದು " ಎಂದಿದ್ದಾರೆ. ಕನ್ನಡಕ್ಕೆ ಅತ್ಯಮೂಲ್ಯ ನಿಘಂಟನ್ನೇ ತಯಾರಿಸಿ ಕೊಟ್ಟ ಜೀವಿಯವರಲ್ಲಿ ಆಕೆ ಹಾಗೆ ಕೇಳಬಹುದಿತ್ತೇ ?

ಒಪ್ಪಿಕೊಳ್ಳೋಣ: ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೇ ಮಾಧ್ಯಮದವರು ಕ್ಯಾಮೆರಾ, ಮೈಕು ಹಿಡಿದು ವೀಕ್ಷಕ ಪ್ರಭುಗಳಿಗೆ, ಜನಸಾಮಾನ್ಯರಿಗೆ, ಪ್ರಜೆಗಳಿಗೆ ವಿಷಯತಲ್ಪಿಸುವಲ್ಲಿ ಬಹಳ ಪ್ರಯಾಸಪಡುತ್ತಾರೆ. ಅಷ್ಟಷ್ಟೇ ಪ್ರಯಾಸವನ್ನು ಆ ಯಾ ರಂಗಗಳಲ್ಲಿ ಇರುವವರು ಅನುಭವಿಸುವುದು ಬದುಕಿನ ಅನಿವಾರ್ಯತೆ. ಮಾಧ್ಯಮವೂ ಒಂದು ವೃತ್ತಿ ತಾನೇ? ಅಲ್ಲಿ ಕೆಲಸಮಾಡಿ ಅದಕ್ಕೆ ಹಣಸಂಪಾದಿಸುತ್ತಾರಲ್ಲ? ಕೊನೇಪಕ್ಷ ರೈತರ ಹಾಗಲ್ಲ! ನಿಗದಿತ ಸಂಬಳವೋ ಪ್ಯಾಕೇಜೋ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಂತೂ ಇರುತ್ತದೆ. "ಪ್ರಯಾಸ ಪಡ್ತೀವಿ ಪ್ರಯಾಸ ಪಡ್ತೀವಿ " ಅಂತ ಅದನ್ನೇ ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಎಲ್ಲಾ ವೃತ್ತಿಗಳ ಹಾಗೇ ಅಲ್ಲೂ ಅದು ಅನಿವಾರ್ಯು!

ಶುಕ್ರವಾರ ೦೨.೦೩.೧೦೧೨ ರ ಸಂಜೆ, ವಾಹಿನಿಯೊಂದರಲ್ಲಿ , ವಕೀಲರುಗಳ ದೌರ್ಜನ್ಯದಿಂದ ಒಬ್ಬ ಪೋಲೀಸ ಸತ್ತನೆಂದೂ, ಸುಮಾರು ೨೦ ಮಂದಿ ಪೋಲೀಸರನ್ನು ಕಟ್ಟಡವೊಂದರಲ್ಲಿ ಕೂಡಿಟ್ಟು ಇಬ್ಬರ ಕಣ್ಣುಕೀಳಲಾಯಿತೆಂದೂ ಪೇದೆಗಳ ಹೆಸರು ಸಹಿತ ತಿಳಿಸಿ ವರದಿ ಬಿತ್ತರಿಸುತ್ತಿದ್ದ ಒಬ್ಬ ಪುಣ್ಯಾತ್ಮ!! ಇದರ ಸತ್ಯಾಸತ್ಯತೆ ಎಷ್ಟು? ಬರೇ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಹಪಾಹಪಿಯಿಂದ ಇಲ್ಲದ್ದನ್ನೂ ಇದ್ದಹಾಗೇ ಹೇಳುವುದಕ್ಕೆ ಇದು ಸಾಕ್ಷಿಯಲ್ಲವೇ? "ವಕೀಲರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಕೆಲಸವಿಲ್ಲದೇ ಅಲೆಯುವ ವಕೀಲರು ಈ ದೊಂಬಿಗೆ ಕಾರಣರಾಗಿರಬಹುದೇ?"--ಎಂಬ ಪ್ರಶ್ನೆಯನ್ನೂ ಆ ಪುಣ್ಯಾತ್ಮ ಎದುರು ಕೂತವರಲ್ಲಿ ಕೇಳುತ್ತಿದ್ದ. ಇನ್ನೊಂದು ವೃತ್ತಿ ಸಮುದಾಯದ ಸಂಖ್ಯಾಬಲ-ನಿರುದ್ಯೋಗದ ಬಗ್ಗೆ ಅವಹೇಳನಕಾರೀ ಮಾತು ಇದಾಗುವುದಿಲ್ಲವೇ? ಇದರಿಂದ ನೋಡುಗರ ಮನದಲ್ಲಿ ಕೆರಳುವ ಭಾವನೆಗಳೇನಿರಬಹುದು? [ಸುಳ್ಳನ್ನೇ ನೂರು ಸಲ ತೋರಿಸಿದರೆ ದೂರದಲ್ಲಿನ ಜನ ಅದನ್ನೇ ಸತ್ಯ ಎಂದು ನಂಬುವಷ್ಟು ಪರಿಣಾಮಕಾರೀ ಮಾಧ್ಯಮವಾಹಕಗಳೇ ಮಾಧ್ಯಮದವರ ಹತ್ತಿರ ಇವೆ!] ಇಂಥಾದ್ದೆಲ್ಲಾ ನೋಡಿದರೆ ಮಾಧ್ಯಮದವರು ಹೇಗಾದರೂ ಏನಾದರೂ ಹೇಳಿ ಯಾವರೀತಿಯಲ್ಲಾದರೂ ನುಣುಚಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆಲ್ಲಾ ಒಂದು ನಿಯಂತ್ರಕ ಕಾನೂನು ಜಾರಿಗೆ ಬರಬೇಕಾಗಿದೆ.

ಕೆಲವೊಮ್ಮೆ ಮಾಧ್ಯಮವಾಹಿನಿಗಳ ಕುರ್ಚಿಗಳಲ್ಲಿ ಕುಳಿತಾಗ ಅಧಿಕಾರ ಮದವೋ ಎಂಬಂತೇ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಗಿರುವ ಮಹಾನ್ ವ್ಯಕ್ತಿಗಳಲ್ಲಿ ಕೇಳುತ್ತಾರೆ. ಸ್ವರ್ಗದಿಂದ ಧರೆಗಿಳಿದವರಂತೇ ಕಾಣಿಸುತ್ತಾ, ಜನಸಾಮಾನ್ಯರಿಗಿಂತ ತಾವು ಭಿನ್ನ ತಾವು ಮಾಧ್ಯಮದವರು ಎಂಬ ಅಹಮಿಕೆ ಮೆರೆಯುವ ನಿರೂಪಕರೂ/ಸಂದರ್ಶಕರೂ ಇದ್ದಾರೆ. ತಾವು ಜನಸಾಮಾನ್ಯರಲ್ಲಿ ಒಂದುಭಾಗ ಎನ್ನುವ ಭಾವನೆ ಬರುವವರೆಗೂ ಅವರು ತಪ್ಪುಗಳನ್ನು ಮಾಡಬಹುದು ಎನಿಸುತ್ತದೆ! ಯಾವಾಗ ತಮ್ಮನ್ನು ತಾವು ಸರಿಯಾಗಿ ಅರಿಯುತ್ತಾರೋ ಆಗ ಇಂತಹ ತಾಪತ್ರಯಗಳು ನಿವಾರಣೆಯಾಗಬಹುದು.

ಪತ್ರಿಕೆ ನಡೆಸುವ ಒಬ್ಬಾತ ಹಿಂದೊಮ್ಮೆ ಅತ್ಯಂತ ಹಳೆಯ, ಉತ್ತಮ ಸಂಪ್ರದಾಯದ, ಯಾವುದೇ ತಪ್ಪನ್ನೆಸಗದ ಮಠವೊಂದಕ್ಕೆ ಕರೆಮಾಡಿ ಹಣ ಕೇಳಿದ್ದೂ ಸುದ್ದಿ ಮೊದಲೇ ಬಂದಿದೆ. ಆದರೆ ಆ ಮಠದವರು ಅದಕ್ಕೆ ಸೊಪ್ಪುಹಾಕಲಿಲ್ಲ. ಅವರ ವಿರುದ್ಧ ಒಂದಷ್ಟು ಬರೆದ ಆತ ಇನ್ಯಾರಿಗೋ ಕರೆಮಾಡಿ ಕೈಕಾಲು ಮುರಿಸಿಕೊಂಡಿದ್ದ! ’ಮಾಧ್ಯಮದವರು’ ಎನಿಸಿಕೊಂಡು ರೋಲ್ ಕಾಲ್ ಮಾಡುವ ಜನವೂ ಇದ್ದಾರೆ. ರೋಲ್ ಕಾಲ್ ನಲ್ಲೇ ಪತ್ರಿಕೆ ಓಡಿಸಿ ಮನೆ-ಮಠ ಕಟ್ಟಿಕೊಂಡವರೂ ಇದ್ದಾರೆ. ಹೀಗಾಗಿ ದೇಶದ ಎಲ್ಲೆಡೆ ಮಾಧ್ಯಮವೂ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಪರೂಪಕ್ಕೆ ಆರಕ್ಷಕರಲ್ಲಿ ಕೆಲವರು ಎಣ್ಣೆಹಾಕಿ ಡ್ಯೂಟಿ ಮಾಡಿದಂತೇ ಮಾಧ್ಯಮದಲ್ಲೂ ಎಡವಟ್ಟುಗಳು ಸೇರ್ಕೊಂಡಿರ್ತಾರೆ. ಇನ್ನು ಹಣ ಸ್ವೀಕೃತಿಯ ಬಗ್ಗೆ ದಿನಪತ್ರಿಕೆಗಳೇ ವರದಿ ಮಾಡಿವೆ! ಲೋಕಾಯುಕ್ತರ ವರದಿಯಲ್ಲೂ ಗಣಿಧಣಿಗಳಿಂದ ಕೆಲವರು ಹಣಪಡೆದದ್ದರ ಬಗ್ಗೆ ದಾಖಲೆ ಇದೆ ಎಂಬುದು ಗುಸುಗುಸು! ಹೀಗಾಗಿ ಮಾಧ್ಯಮದವರೂ ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನ ವಕೀಲರ ಬಗ್ಗೆ ಬರೆಯುವ ಅಗತ್ಯವೇ ಇಲ್ಲ! ೦೨.೦೩.೧೦೧೨ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ರಾತ್ರೀವರೆಗೆ ಅದನ್ನು ಜನ ನೋಡೀ ನೋಡೀ ಸುಸ್ತಾಗಿ, ಬೇಸತ್ತು ಟಿವಿ ಆನ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ! ಇದೊಂದು ತ್ರಿಕೋನ ದ್ವೇಷ ಸರಣಿಯೆನ್ನಬಹುದೇ? ಪೋಲೀಸರ ಮೇಲಿನ ಸಿಟ್ಟಿಗೆ ವಕೀಲರು ಅವರಮೇಲೆ-ವಕೀಲರಮೇಲಿನ ಸಿಟ್ಟಿಗೆ ಪೋಲೀಸರು ವಕೀಲರ ಮೇಲೆ, ತಮ್ಮೊಳಗಿನ ಜಗಳವನ್ನು ಕೋಟ್ಯಂತರ ಜನರಿಗೆ ತೋರಿಸಿದ್ದಕ್ಕಾಗಿ ವಕೀಲರು ಮಾಧ್ಯಮದವರ ಮೇಲೆ ಹೀಗೆ ನಡೆದಿದೆ ಈ ನಿಯಮ ಉಲ್ಲಂಘನೆ! ಸರಕಾರೀ ಇಲಾಖೆಗಳಿಗೆ-ವಿಭಾಗಗಳಿಗೆ ಸಂಬಂಧಿಸಿದ ವಕೀಲರು ಮತ್ತು ಪೋಲೀಸರು ತಮ್ಮೊಳಗಿನ ಸಮಸ್ಯೆಗಳನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಆದಷ್ಟೂ ಚಿಕ್ಕದಾಗಿ ಮಾಧ್ಯಮ ತೋರಿಸಿದ್ದರೆ ಅವರುಗಳಿಗೂ ಬೇಸರವಾಗುತ್ತಿರಲಿಲ್ಲವೇನೋ. ಹೀಗೆ ನೋಡಿದಾಗ ವಕೀಲರುಗಳೂ ಪೋಲೀಸರೂ ತಮ್ಮತಮ್ಮೊಳಗೇ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆನಿಸುತ್ತದೆ.

ಇಲ್ಲಿ ರಾಜಕಾರಣಿಗಳ ಸ್ವಾರ್ಥಪರತೆಯಿಂದ, ಪರಸ್ಪರ ಕಚ್ಚಾಟಗಳಿಂದ ಹಡಾಲೆದ್ದುಹೋದ ಪ್ರಜಾತಂತ್ರದ ವ್ಯವಸ್ಥೆಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಆಳುವವರು ಸರಿಯಾಗಿದ್ದರೆ ಎಲ್ಲರೂ ಸರಿಯಾಗಿರುತ್ತಾರೆ. ಸ್ವಾತಂತ್ರ್ಯಬಂದ ಆ ಕಾಲಘಟ್ಟದಲ್ಲಿ ಆತುರದಲ್ಲಿ ಮಾಡಿದ ಸಂವಿಧಾನದಲ್ಲಿ ಸಾಕಷ್ಟು ಲೋಪದೋಷಗಳಿವೆ-ಅದನ್ನೇ ಬಂಡವಾಳ ಮಾಡಿಕೊಂಡ ಧೂರ್ತ ರಾಜಕಾರಣಿಗಳು ಅದರಿಂದಲೇ ಲಾಭಪಡೆಯಲು ತಂತ್ರಗಾರಿಕೆ ಮಾಡಿಕೊಂಡಿದ್ದಾರೆ. ವೈಯ್ಯಕ್ತಿಕ ಬದುಕಿನ ನಡತೆಯೇ ಸರಿಯಿಲ್ಲದ ಖೂಳಜನರನೇಕರು ಆಡಳಿತ ಯಂತ್ರಕ್ಕೆ ಸೇರಿಕೊಂಡಿದ್ದಾಗ, ಆಳುವ ಪಕ್ಷದ ಒಳಹುಳುಕು-ಜಗಳ ವಿಪರೀತವಾದಾಗ, ವಿರೋಧ ಪಕ್ಷಗಳು ಕೇವಲ ಚಿಕ್ಕಚಿಕ್ಕ ತಪ್ಪುಗಳನ್ನೇ ದೊಡ್ಡದು ಮಾಡಿ ವಿಜೃಂಭಿಸಿ ತಮ್ಮ ಬೇಳೇ ಬೇಯಿಸಿಕೊಳ್ಳುವ ಪರಿ ನಡೆಯುವಾಗ ಆಡಳಿತ ಹಿಡಿತವಿಲ್ಲದೇ ಸಡಿಲಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಮ್ಮಿ ಇರುವ ಬಲಹೀನ ಶರೀರಕ್ಕೆ ಹಲವು ಕಾಯಿಲೆಗಳು ಅಮರಿಕೊಂಡಂತೇ ಸಡಿಲವಾದ ಪ್ರಜಾತಂತ್ರದ ಅಂಗಾಂಗಗಳಲ್ಲಿ ಇಂತಹ ಬಡಿದಾಟ ಮೊದಲಾದ ’ಸಾಮಾಜಿಕ ರೋಗಗಳು’ ಕಾಣಿಸಿಕೊಳ್ಳುತ್ತವೆ.

ಒಟ್ಟಿನಲ್ಲಿ ನಿನ್ನೆಯ ಈ ತ್ರಿಕೋನ ಜಗಳದಲ್ಲಿ, ದೊಂಬಿಯಲ್ಲಿ, ಯಾರದು ತಪ್ಪು ಯಾರದು ಒಪ್ಪು ಎಂಬುದನ್ನು ಬಹಳ ಸಂಯಮದಿಂದ ನಿಗಾವಹಿಸಿ ನಿರ್ಧರಿಸಬೇಕಾಗಿದೆ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕಾಗಿದೆ. ಸಂಬಂಧಿಸಿದ ಈ ಮೂರೂ ವಿಭಾಗಗಳವರು ಕೂತು ಮಾತಾಡಿ ಜಗಳ ಪರಿಹರಿಸಿಕೊಳ್ಳಬೇಕಾಗಿದೆ. ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮೊದಲು ಹತ್ತಾರುಸಲ ಯೋಚನೆ ಮಾಡುವ ಅಗತ್ಯ ಕಾಣುತ್ತದೆ.

Thursday, March 1, 2012

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಚಿತ್ರಗಳ ಋಣ : ಗೂಗಲ್ ಅಂತರ್ಜಾಲ

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಗುಜರಿ ಆಯುವ ಹುಡುಗನೊಬ್ಬ ಬರೆಯುತ್ತಾನೆ- ’ಗೋರಿ ಕಾಯುವವರು’ ಎಂಬ ತನ್ನ ಕೆಟ್ಟ ಪದಗಳ ಬರಹದಲ್ಲಿ! ಆತನಿಗೆ ಗೋರಿಯಾವುದು ದೇವಳಯಾವುದು ಬೇರ್ಪಡಿಸಲಾಗದ ಹುಟ್ಟುಕುರುಡು! ಇಂಥವರೆಲ್ಲಾ ಇವತ್ತು ಪತ್ರಕರ್ತರಾಗಿ ಬರಹಗಾರರಾಗಿ ತಯರಾಗಿದ್ದಾರೆ ಎಂದಾಗ ಕಾಲದ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೊನ್ನೆಯಷ್ಟೇ ಒಬ್ಬ ಮಹಾತ್ಮರು ಹೇಳಿದ್ದಾರೆ " ಧರ್ಮ ಕಾಲಕ್ಕೆ ತಕ್ಕಂತೇ ಬದಲಾಗುವುದಿಲ್ಲ, ಧರ್ಮವೆಂಬುದು ಮಾನವ ಜೀವನದ ಒಳಿತಿಗಾಗಿ ಇರುವ ನೀತಿಯುಕ್ತ ಜೀವನಮಾರ್ಗ. ಧರ್ಮವನ್ನು ಬದಲಿಸಹೊರಡುವುದೇ ಅಧರ್ಮ, ಅದಕ್ಕೆ ಬದಲಾಗಿ ಧರ್ಮಕ್ಕೆ ನಾವು ನಮ್ಮನ್ನು ಅಳವಡಿಸಿಕೊಳ್ಳಬೇಕಾಗುತ್ತದೆ." ಅವರ ಮಾತು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದು ಎಂಬ ಪ್ರಶ್ನೆ ಮೂಡಬಹುದು: ಅದು ಮಾನವ ಜೀವನಧರ್ಮ. ಮಹಾಕವಿ ಡೀವೀಜಿಯವರು ’ಜೀವನಧರ್ಮ ಯೋಗ’ ಎಂಬ ಗ್ರಂಥವನ್ನು ಬರೆದರು. ’ಮಂಕುತಿಮ್ಮನ ಕಗ್ಗ’ ಅರ್ಥವಾಗದವರಿಗೆ/ಕಗ್ಗಂಟು ಎನಿಸುವವರಿಗೆ ಇದು ಬಳಕೆಯಾಗಲಿ ಎಂಬುದು ಅವರ ಆಶಯವಾಗಿತ್ತು. ಅಂತಹ ಡೀವೀಜಿಯವರು ಬಾಳಿ ಬದುಕಿದ್ದ ಅವರ ಮನೆ ಇಂದು ಇಲ್ಲವೇ ಇಲ್ಲ. ಅ.ನ.ಕೃಷ್ಣರಾಯರು ಒಂದುಕಾಲಕ್ಕೆ ಉಪವಾಸವಿದ್ದ ಕನ್ನಡದ ಕೆಲಸಗಾರರಿಗೆ ಊಟವೊದಗಿಸಿದವರು! ಅವರ ಮನೆ ಇರುವ ಜಾಗ ಚಪ್ಪಲಿಗಳ ಗೋದಾಮು ಎಂಬುದು ತಿಳಿದರೆ ಬೇಸರವಾಗುವುದಿಲ್ಲವೇ? ಅದರಂತೇ ಮಲ್ಲಿಗೆಕವಿ ನರಸಿಂಹಸ್ವಾಮಿಯವರ ಮನೆಗೆ ಖುದ್ದಾಗಿ ನಾನು ಹೋಗಿ ನೋಡಿಬಂದಿದ್ದಿದೆ. ಇವತ್ತು ಹುಡುಕಿದರೆ ಆ ಮನೆ ಇಲ್ಲವೇ ಇಲ್ಲ!

ಕಾರಂತರು ಹುಟ್ಟಿಬೆಳೆದ ಮನೆ

ಕುಪ್ಪಳ್ಳಿಯ ವಿಸ್ತಾರವಾದ ಪ್ರದೇಶದಲ್ಲಿ ರಾಷ್ಟ್ರೀಯ ರಸ್ತೆಗಳಿಂದ ದೂರ ಉಳಿದ ಕುವೆಂಪು ಅವರ ಮನೆ ಮಾತ್ರ ಉಳಿದುಕೊಂಡಿತು. ಅದನ್ನು ರಕ್ಷಿಸಿಕೊಳ್ಳಲು, ನೋಡಿಕೊಳ್ಳಲು ಹಲವರು ಇದ್ದಾರೆ ಬಿಡಿ, ಕಾರಂತರ ಮನೆ ಹಾಗಲ್ಲ! ’ಬೆಟ್ಟದ ಜೀವ’, ’ಚೋಮನ ದುಡಿ’, ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತುಮುಖಗಳು’ ಮುಂತಾದ ಮನನೀಯ ಕಾದಂಬರಿಗಳನ್ನು ಕೊಟ್ಟ ಕಾರಂತರು ಕೈಯಾಡಿಸಿದ ಕಾರ್ಯಕ್ಷೇತ್ರ ಒಂದೇ ಎರಡೇ? ಕನ್ನಡಕ್ಕಾಗಿ ಅವರು ಕೊಟ್ಟ ಕೊಡುಗೆ ಲೆಕ್ಕಹಾಕಿದರೆ ಕುವೆಂಪುವಿಗಿಂತ ಮೇಲೆ ಕೂರಬೇಕಾದ ವ್ಯಕ್ತಿತ್ವ ಅವರದ್ದು! ಅಪಾರ ಪಾಂಡಿತ್ಯದ ಕಾರಂತರು ಸಾಹಿತ್ಯಾಸಕ್ತಿಯುಳ್ಳ ಹೊರದೇಶದಲ್ಲಿನ ಜನ ಕರೆದಾಗ ತನ್ನ ಸ್ವಂತ ಜಮೀನಿನ ಭಾಗವನ್ನೇ ಮಾರಿ ಅದರಿಂದ ಖರ್ಚನ್ನು ನಿಭಾಯಿಸಿದರೂ ಮತ್ತೂ ಸಾಲ ಬಾಕಿ ಉಳಿದಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಕಾರಂತರು ವೇತನ ಪಡೆಯುವ ಯಾವುದೇ ಹುದ್ದೆಗೆ ಅಂಟಿಕೊಳ್ಳಲಿಲ್ಲ. ಕನ್ನಡಕ್ಕಾಗಿ ತನ್ನಲ್ಲಿದ್ದುದನ್ನೇ ಖರ್ಚುಮಾಡಿದರು!’ಈ ಜಗತ್ತು’ ಎಂಬ ಐದು ಸಂಪುಟಗಳ ಅವರ ಖಗೋಳಗ್ರಂಥವನ್ನು ಇಂದಿನ ಖಗೋಳಶಾಸ್ತ್ರಿಗಳು ಓದಿ ತಿಳಿದುಕೊಳ್ಳುವಂಥದ್ದಿದೆ! ಯಕ್ಷಗಾನ, ಬ್ಯಾಲೆ ನರ್ತನ, ಹಾಡು-ಹಸೆ, ಸಾಹಿತ್ಯ, ರಾಜಕೀಯ, ಶರಾವತೀ ಟೇಲರೇಸ್ ಎಂಬ ನಿಸರ್ಗಾಂದೋಲನ, ಮಕ್ಕಳಿಗೆ ಶಿಕ್ಷಣ ಹೀಗೇ ಕಾರಂತರದು ಆನೆಗಾತ್ರದ ಹೆಜ್ಜೆಗಳು! ಎಲ್ಲೇ ಹೋಗಲಿ ಕಾರಂತರು ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಈ ಉಯ್ಯಾಲೆ ಮಂಚದಲ್ಲಿ ಕಾರಂತರು ಕುಳಿತು ಅದೆಷ್ಟು ಚಿಂತಿಸಿದರೋ ! [ಹಳೆಯ ಪರಿಕರಗಳನ್ನು ಗಮನಿಸಿ]

ಇವತ್ತು ಸರಕಾರದ ಸವಲತ್ತುಗಳಿಗೆ ಬುದ್ಧ್ಯಾಪೂರ್ವಕ ನಿಷೇಧಕ್ಕೊಳಗಾಗಿರುವ ಮೇಲ್ವರ್ಗದಲ್ಲಿ ಜನಿಸಿದ್ದರೂ ’ಚೋಮನ ದುಡಿ’ಯಲ್ಲಿ ಅವರ ಮನಮಿಡಿದ ರೀತಿಯನ್ನು ಕಾದಂಬರಿ ಓದದ ಅನೇಕರು ಅದೇ ಹೆಸರಿನ ಸಿನಿಮಾ ನೋಡಿ ಅರಿತಿದ್ದಾರೆ. ನಿಮ್ನವರ್ಗದವರ ಬಗ್ಗೆ ಕಾಳಜಿ ಇರದಿದ್ದರೆ ಅವರು ಅದನ್ನು ಬರೆಯಲು ಸಾಧ್ಯವಿತ್ತೇ ? ಒಂದು ಕಾಲಕ್ಕೆ ಕಾರಂತರು ಇದ್ದಾರೆಂದರೆ ಅವರೆದುರು ಕೆಲವರು ನಿಲ್ಲಲು ಹೆದರಿಕೊಳ್ಳುತ್ತಿದ್ದರು ಯಾಕೆಂದರೆ ತನಗನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೇ ನೇರಾನೇರ ಮುಖದಮೇಲೆ ಬಡಿದಹಾಗೇ ಹೇಳುವ ನಿಷ್ಠುರವಾದಿಯಾಗಿದ್ದರು ಕಾರಂತರು. ಮೀಸಾಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕೇಂದ್ರ ಕೊಡಮಾಡಿದ ಪ್ರಶಸ್ತಿಯನ್ನು ಧಿಕ್ಕರಿಸಿ ಜನರ ನೋವಿರುವವರೆಗೂ ತನಗೆ ಪ್ರಶಸ್ತಿ ಬೇಡವೆಂದ ಮಹಾಜನ ಕಾರಂತರು!

ಬರೆದು ಮುಗಿಯದಷ್ಟು ಬರೆಯಲ್ಲಿಕ್ಕಿರುವ ಅಗಾಧ ವ್ಯಕ್ತಿತ್ವ ಕಾರಂತರದ್ದು. ಅವರ ಬಗ್ಗೆ ಹೆಚ್ಚಿನದಾಗಿ ಇಲ್ಲಿ ಓದಿ :

ಥೈ ಥೈ ತದ್ದಿನ ಧೇಂ ಧೇಂ......[ http://nimmodanevrbhat.blogspot.in/2010/07/blog-post_14.html ]

ಕಾರಂತರೇ ಬದುಕಿದ್ದರೆ ಚತುಷ್ಪಥಕ್ಕೆ ಏನೆನ್ನುತ್ತಿದ್ದರೋ ತಿಳಿಯದು! ಯಾಕೆಂದರೆ ಇರುವ ಭೂಪ್ರದೇಶವನ್ನೆಲ್ಲಾ ಗಣಿಗೊಂದಿಷ್ಟು, ರಸ್ತೆಗಳಿಗೊಂದಿಷ್ಟು ಕೊಟ್ಟುಬಿಟ್ಟರೆ ಜನಜೀವನ ಸುಧಾರಿಸುತ್ತದೇನು ? ಅಷ್ಟಕ್ಕೂ ಅಲ್ಲಿ ಚತುಷ್ಪಥ ಯಾರಿಗೆ ಬೇಕಾಗಿದೆ? ನಾವು ವಿದೇಶೀಯರಲ್ಲ, ನಾವು ಅಮೇರಿಕನ್ನರಲ್ಲ,ನಾವು ಭಾರತೀಯರು! ನಮ್ಮದು ಕೃಷಿಪ್ರಧಾನ ದೇಶ; ಹಳ್ಳಿಗಳೇ ನಮ್ಮ ಪ್ರಮುಖ ಜೀವಜೀವಾಳ! ಅನೇಕ ಹಳ್ಳಿಗಳ ಜನಜೀವನವನ್ನೂ ಹಳ್ಳಿಗಳ ಜನರ ಜೀವನಕ್ರಮವನ್ನೂ ತಿರುಚಿಹಾಕುವ ಇಂತಹ ಹೆದ್ದಾರಿಗಳು ಯಾವ ಉದ್ಧಾರಕ್ಕಾಗಿ? ಕೇಂದ್ರ ರಸ್ತೆಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟುಪಾಲು ? ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ರಾಜ್ಯಗಳ ಸಂಪರ್ಕವನ್ನು ಕಲ್ಪಿಸುವುದಕ್ಕೆ ಚತುಷ್ಪಥ ಅನಿವಾರ್ಯವಿತ್ತೇ ಹೊರತು ಇಲ್ಲೆಲ್ಲಾ ಅದರ ಅನಿವಾರ್ಯತೆ ಕಾಣಲಿಲ್ಲ. ಕರ್ನಾಟಕ ರಾಜ್ಯದಲ್ಲೂ ಅನವಶ್ಯಕವಾಗಿ ನಿರ್ಮಾಣಗೊಂಡ ರಾಜ್ಯಹೆದ್ದಾರಿಗಳೆಷ್ಟೋ! ಇಲ್ಲೆಲ್ಲಾ ಅಭಿವೃದ್ಧಿಯ ನೆಪದಲ್ಲಿ ಕಳ್ಳ ರಾಜಕಾರಣಿಗಳ ಬೊಕ್ಕಸಕ್ಕೆ ಎಷ್ಟೆಷ್ಟು ಹರಿದುಬಂತು ಎಂಬುದು ತಿಳಿಯುತ್ತಿಲ್ಲ!

ಕಾರಂತರ ಮನೆಯ ಹಿಂಪಾರ್ಶ್ವದಲ್ಲಿ ಔಟ್ ಹೌಸ್

ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು! ಗುಜರಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ. ಕವಿ-ಸಾಹಿತಿಗಳು ಗತಿಸಿದಮೇಲೆ ಅವರ ಮನೆಗಳು, ಅವರು ಬಳಸಿದ್ದ ವಸ್ತುಗಳು ಇಂಥವೆಲ್ಲಾ ಮುಖ್ಯವಲ್ಲಾ ಕೇವಲ ಅವರ ಬರಹಗಳು-ತತ್ವಗಳು ಮಾತ್ರ ಮುಖ್ಯವೆಂಬ ಆತನ ಅನಿಸಿಕೆಯೊಂದಿಗೆ ಕಾರಂತರ ಮನೆ ಕೆಡವಿದಂತೇ ಅನೇಕ ಜನಸಾಮಾನ್ಯರ ಮನೆ ಕೆಡವಿದ್ದಾರೆ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ ಎನ್ನುವ ಆತನ ’ಸಾಮಾಜಿಕ ಕಳಕಳಿ’ಯಲ್ಲಿ ಕಾರಂತರೇ ಇದಕ್ಕೆಲ್ಲಾ ಪರೋಕ್ಷ ಕಾರಣವೋ ಎಂಬಂತೇ ಪ್ರತಿಧ್ವನಿತವಾಗಿದೆ. ಜನಸಾಮಾನ್ಯರು ಎಲ್ಲೆಡೆಯೂ ಇರುತ್ತಾರೆ ಆದರೆ ಎಲ್ಲರೂ ಕಾರಂತರಾಗಲು ಸಾಧ್ಯವೇ? ಕಾರಂತರ ಸಾಹಿತ್ಯ ದಾರ್ಷ್ಟ್ಯತೆ ಆ ವೈವಿಧ್ಯತೆ ಯಾರಲ್ಲಿದೆ ಕನ್ನಡದಲ್ಲಿ ? ಕಾರಂತರ ಮನೆ ಹೋಗಿದ್ದು ತನಗಂತೂ ಬೇಸರವಿಲ್ಲಾ ಎನ್ನುವ ಗುಜರಿ ಹುಡುಗನನ್ನು ಅನುಮೋದಿಸುವ ಮಂದಿಯೂ ಇದ್ದಾರೆ ಎಂಬುದು ಗೊತ್ತಾಗಿ ಬಹಳಖೇದವೂ ಆಯ್ತು. ಅಕಸ್ಮಾತ್ ಕುವೆಂಪು ಮನೆಯ ಒಂದು ಹಂಚನ್ನು ಕೆಡವಲಿ : ಅದರ ಪರಿಣಾಮ ಅನುಭವಕ್ಕೆ ಬರುತ್ತದೆ!

ಕುವೆಂಪು ಅವರಿಗೆ ಕೊಡಮಾಡಿದ ಘನತೆ ಗೌರವವನ್ನು ಕಾರಂತ, ಮಾಸ್ತಿ, ಡೀವೀಜಿ, ಅನಕೃ ಮುಂತಾದವರಿಗೆ ಸರಕಾರ ಕೊಡಲಿಲ್ಲ. [ಕುವೆಂಪು ಹುಟ್ಟಾ ಶ್ರೀಮಂತರಾಗಿದ್ದರು! ದಕ್ಷಿಣಕನ್ನಡದ ಉಪಾಧ್ಯಾಯರೊಬ್ಬರು ಅವರ ಮನೆಗೇ ಹೋಗಿ ಪಾಠಹೇಳಿಕೊಡುತ್ತಿದ್ದರು! ಈ ಸವಲತ್ತು ನಾನು ಇಲ್ಲಿ ಪಟ್ಟಿಮಾಡಿದ ಎಷ್ಟು ಜನರಿಗಿತ್ತು? ] ಡೀವೀಜಿ ಬದುಕಿನಲ್ಲಿ ಬಡತನದಿಂದ ಬಳಲಿದರೂ ಸಾರ್ವಜನಿಕರಿಗಾಗಿ ಗೋಖಲೆ ಸಂಸ್ಥೆಯನ್ನು ಕಟ್ಟಿಕೊಟ್ಟರು-ತನಗೆ ಬಂದ ಸನ್ಮಾನಧನದಲ್ಲಿ! ಸನ್ಮಾನ ಪಡೆದ ಮಾರನೇ ದಿನವೂ ಸೆಟ್ಟಿ ಅಂಗಡಿಯಿಂದ ತರಿಸುವ ಕಾಫಿ ಪುಡಿಗೆ ಕಾಸಿರಲಿಲ್ಲ ಡೀವೀಜಿಯಲ್ಲಿ! ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡಲು ಅನುಕೂಲವಿಲ್ಲದಾಗ " ಶೆಟ್ಟರೇ, ದಯಮಾಡಿ ಕಾಫಿಪುಡಿ, ಸಕ್ಕರೆ ಕೊಟ್ಟು ಕಳಿಸಿ, ಲೆಕ್ಕ ಬರೆದಿಟ್ಟುಕೊಳ್ಳಿ ಆಮೇಲೆ ತೀರಿಸುತ್ತೇನೆ" ಎಂದು ಗುಪ್ತವಾಗಿ ಹುಡುಗನೊಬ್ಬನ ಮೂಲಕ ಚೀಟಿ ಕಳಿಸಿದ್ದಾರೆ ಅಂಗಡಿಗೆ! ಎಂತೆಂತೆಹ ಮಹಾನುಭಾವರು ಕನ್ನಡದಲ್ಲಿ ಆಗಿಹೋದರೂ ಅವರಿಗಿಲ್ಲದ ವಿಶೇಷ ರಾಜಮರ್ಯಾದೆ ಕುವೆಂಪು ಅವರಿಗೆ ಮಾತ್ರ ದೊರೆತಿದೆ; ದೊರೆಯುತ್ತಿದೆ; ದೊರೆಯುತ್ತದೆ!!ಕವಿ-ಸಾಹಿತಿಗಳ ಬಗ್ಗೆಯೂ ಜಾತೀ ರಾಜಕಾರಣ ಎನಿಸುವುದಿಲ್ಲವೇ?

ಕಾರಂತರ ಮನೆಯನ್ನು ಕೆಡವಿದ್ದು ಕನ್ನಡದ ಮನೆಯ ಒಂದು ಕಂಬ ಕೆಡವಿದಂತೆಯೇ ಸರಿ. ಮುಕ್ತಮನದಿಂದ ಕಾರಂತರನ್ನು ಆಮೂಲಾಗ್ರವಾಗಿ ತಿಳಿದುಕೊಂಡ ಜನ ಕಾರಂತರು ಕೇವಲ ಮೇಲ್ವರ್ಗಕ್ಕಾಗಿ ಅಥವಾ ಮೇಲ್ವರ್ಗವನ್ನು ಹೊಗಳಿ ಏನನ್ನೋ ಬರೆದರು ಎನ್ನುವುದಿಲ್ಲ. ’ಚೋಮನ ದುಡ”ಯ ಕೆಲವು ಸನ್ನಿವೇಶಗಳು ಅಸಹಾಯ ದಲಿತನ ಕಣ್ಣೀರಕಥೆ ಹೃದಯದೊಳಗೆ ಮಡುಗಟ್ಟಿ-ಹಾಡಾಗಿ, ಆತ ದುಡಿಬಡಿದು ಕುಣಿಯುವುದನ್ನು ನೆನಪಿಸಿಕೊಳ್ಳುವಾಗ ಓದುಗನ ಕಣ್ಣಲ್ಲಿ ಆರ್ದ್ರತೆ ಒಸರದಿದ್ದರೆ ನನ್ನ ಮಾತನ್ನು ತೆಗೆದುಹಾಕಿ! ಇವತ್ತಿಗೂ ಕಾರಂತರು ಕಟ್ಟಿದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮುಖ್ಯಸ್ಥರಾಗಿರುವ ಸಂಜೀವ ಸುವರ್ಣರನ್ನು ಕೇಳಿದರೆ ಕಾರಂತರ ಬಗ್ಗೆ ತುಸು ಆತ್ಮೀಯವಾಗಿ ಹೇಳಿಯಾರು. ನನಗೆ ಆಶ್ಚರ್ಯವಾಗಿದ್ದು, ದಕ್ಷಿಣ ಕನ್ನಡ ಜನತೆ ಯಾಕೆ ಹಾಗೆ ಸುಮ್ಮನೇ ಕುಳಿತಿದ್ದಾರೆ, ಕಾರಂತರ ಮನೆ ಹೋಗುತ್ತದೆ ಎಂದಾಗಲೂ ಅವರಿಗೆ ಏನೂ ಅನಿಸಲಿಲ್ಲವೇ? ಅಥವಾ ಹತ್ತಿರವಿರುವ ದೇವರು ಸಸಾರವಾದಂತೇ ಆಯ್ತೇ?

ಧರ್ಮಸ್ಥಳ/ತಿರುಪತಿ ದೇವಳದ ಪಕ್ಕದಲ್ಲೇ ಇರುವವರಿಗೆ ಆ ದೇವರು ಸಸಾರ! ನೋಡೀ ನೋಡೀ ಚಡ್ಡೆ! ಅದೇ ದೂರದಿಂದ ಹೋಗುವ ಯಾತ್ರಿಗೆ ಅವು ಕಣ್ತುಂಬಿಸಿಕೊಳ್ಳುವ ಭಕ್ತಿಯ ಸ್ವರ್ಗ! ಅದೇ ರೀತೀ ಕವಿ-ಸಾಹಿತಿಗಳನ್ನು ಖುದ್ದಾಗಿ ಕಾಣುವುದು ಸಾಧ್ಯವಾಗದಾಗ ಕೊನೇಪಕ್ಷ ಅವರು ಈ ಜಾಗದಲ್ಲಿ ಬದುಕಿದ್ದರು ಎನ್ನಲಿಕ್ಕೆ, ಅವರು ಬಳಸಿದ ವಸ್ತುಗಳನ್ನು ನೋಡಿ ಖುಷಿಪಡಲಿಕ್ಕೆ ಒಂದು ಸ್ಮಾರಕವಿದ್ದರೆ ಅದರಿಂದ ಸಿಗುವ ಆತ್ಮತೃಪ್ತಿ ಹೇಳಿಕೊಳ್ಳಲು ಆಗುವಂಥದ್ದಲ್ಲ. ’ಗೋರಿ’ ಎಂಬ ಗುಜರಿ ಹುಡುಗ ಬಳಸಿದ ಪದ ಇದೆಯಲ್ಲ ಅದು ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ.
ಏನೇ ಇರಲಿ ಕಾರಂತರ ಮನೆ ಕೆಡವಿದ್ದು ಖಂಡನೀಯ, ವಿಷಾದನೀಯ, ಅದನ್ನು ಸಮರ್ಥಿಸಿ ಬರೆಯುವ ಎಲ್ಲರ ಲೇಖನಗಳೂ ಖಂಡನೀಯ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.

Wednesday, February 29, 2012

ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....


ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....

ನನ್ನ ಬಾಲ್ಯದ ಚಳಿಗಾಲದ ಒಂದುದಿನ. ಬೆಳಗಿನ ಚುಮುಚುಮು ಚಳಿ ಇನ್ನೂ ಹರಿಯದ ಸಮಯ. ನಮ್ಮ ಹಳ್ಳಿಯ ರಿವಾಜಿನಂತೇ ಬೆಳಿಗ್ಗೆ ಬೇಗ ಎದ್ದು, ಮುಖಮಾರ್ಜನೆ ಶೌಚವಿಧಿಗಳನ್ನು ತೀರಿಸಿಕೊಂಡು ದೇವರಿಗೆ ಹೂವುಗಳನ್ನು ಕೊಯ್ದಿಟ್ಟು ನಮಿಸಿ, ೭ ಗಂಟೆಗೇ ತಿಂಡಿತಿಂದು ಪ್ರಾಥಮಿಕ ಶಾಲೆಗೆ ನಮ್ಮ ಪಯಣ. ಆದರೆ ಅಂದು ಭಾನುವಾರ ಬೆಳಿಗ್ಗೆ ಎಂದಿನಂತೇ ಮಿಕ್ಕೆಲ್ಲಾ ಮುಗಿದಿತ್ತು. ರಜಾದಿನವಾದ್ದರಿಂದ ಸ್ವಲ್ಪ ಆಟೋಪಚಾರಗಳು ನಡೆಯುವ ಸಮಯ. ಅಂಗಳದ ಮೂಲೆಯಿಂದ ಹಾರ್ಮೋನಿಯಂ ನಿಂದ ಹೊರಟ ಸದ್ದು..ಸ.ರಿ.ಗ.ಮ.ಪ...ಮುದುಕಿಯೊಬ್ಬಳು ಹೆಗಲಿಂದ ಇಳಿದ ದಾರಕ್ಕೆ ಹಾರ್ಮೋನಿಯಂ ಕಟ್ಟಿಕೊಂಡು ನುಡಿಸುತ್ತಾ ಮುಂದೆ ಬರುತ್ತಿದ್ದಳು. ಹಣೆಯಲ್ಲಿ ವಿಭೂತಿ, ಮಧ್ಯೆ ಕಾಸಿನಗಲದ ಕುಂಕುಮ, ಮೊಳಕಾಲ್ಮೂರು ಸೀರೆ ಧರಿಸಿದ್ದಳು. ಬಂದವಳೇ ಅಂಗಳದ ಒಂದು ಪಕ್ಕದಲ್ಲಿ ಕೂತು

ಬಾರೊ ಗೋಪಾಲ ಮುಖವನೇ ತೋರೊ ಶ್ರೀಲೋಲ
ಬಾರಿಬಾರಿಗೂ ಭಾಗ್ಯವ ಕೊಡುವಾ ತುಳಸೀ ವನಮಾಲ ....

ರಾಗವಾಗಿ ಹಾಡುತ್ತಿದ್ದಳು. ಕಂಠ ಸುಮಧುರವಾಗಿತ್ತು, ತಾಳದ ಗತಿಯೂ ಇತ್ತು, ಹಾರ್ಮೋನಿಯಂ ಸಾಥ್ ಕೂಡ ಅವಳೇ ಕೊಟ್ಟುಕೊಂಡು ಕೇಳುಗರಿಗೆ ಮುದನೀಡುವಂತೇ ಭಕ್ತಿ-ಶ್ರದ್ಧೆಯಿಂದ ಹಾಡುತ್ತಿದ್ದಳು. ಹಾಡುವ ಮುಖ ಭಾವದಲ್ಲಿ ಪರಮಾತ್ಮನನ್ನು ಕರೆಯುವ ಭಾವತಲ್ಲೀನತೆ ಕಾಣುತ್ತಿತ್ತು. ಹೇಳೀಕೇಳೀ ಅವಳೊಬ್ಬ ಸಾದಾಸೀದಾ ಬೇಡುವ ಹೆಂಗಸು, ಬಯಲಸೀಮೆಯ ಕಡೆಯವಳು. ಅವಳಿಗೆ ಯಾರು ಸಂಗೀತ ಕಲಿಸಿದರು ? ತಿಳಿದುಬಂದಿಲ್ಲ. ಹಿತಮಿತ ಆಲಾಪದ ಜೊತೆಗೆ ಹಾಡುತ್ತಿದ್ದ ಅವಳ ಹಾಡು

ಇಂದುಧರ ಸಖನೇ ಇಂದ್ರಾದಿ ವಂದಿತನೇ
ಇಂದು ನಿನ್ನಯ ಪಾದವ ಪೊಗಳುವೆ ವೆಂಕಟಾಚಲನೇ .....

ಆಹಾ ...ಇನ್ನೂ ಆ ಗರಳಿನ ನೆನೆಪು ನನಗಾಗುತ್ತಿದೆ. ಹಾಡು ಮುಗಿಸಿ ಕೈಮುಗಿದು " ತಮ್ಮಾ ಅಜ್ಜೀಗೆ ಏನಾರಾ ತಿನ್ನಾಕ್ ಕೊಡಪ್ಪಾ ಶಿವಾ ....ಏನೋ ಒಂಚೂರು ಮನೇಲಿ ಮಾಡಿದ್ದು ಮಿಕ್ಕಿದ್ದು ಪಕ್ಕಿದ್ದು....ಅಜ್ಜಿಗೆ ಚಳಿಗೆ ಹಾಕ್ಕೊಳ್ಳೋದಕ್ಕೆ ಹಳೇ ಹರಿದ ಬಟ್ಟೆಬರೆ ಇದ್ರೆ. " ಯಾವುದಕ್ಕೂ ಆ ಅಜ್ಜಿಯ ಒತ್ತಾಯವಿರಲಿಲ್ಲ. ಅದೊಂದು ಪ್ರಾರ್ಥನೆಯಷ್ಟೇ. ಎಂತಹ ಪ್ರತಿಭೆಗೂ ಇದೆಂತಹ ಸ್ಥಿತಿ ಎಂಬುದು ಮುಗ್ಧಬಾಲಕನಾಗಿದ್ದ ನನ್ನ ಮನಸ್ಸಿಗೆ ಅಂದೇ ನಾಟಿದ ವಿಷಯ! ಎಂತೆಂಥವರಿಗೂ ಎಂತೆಂಥಾ ವಿಶಿಷ್ಟ ಶಕ್ತಿಯನ್ನೂ ಚೈತನ್ಯವನ್ನೂ ಕೊಟ್ಟ ಭಗವಂತ ಅವರವರ ಪಾಲಿಗೆ ಸಂಚಿತ ಕರ್ಮಫಲಗಳನ್ನಷ್ಟೇ ನೀಡುತ್ತಾನೆ ಎಂಬುದು ಸುಳ್ಳಲ್ಲ ಎಂದು ನನಗೀಗ ಅನ್ನಿಸುತ್ತಿದೆ. ಅಜ್ಜಿಗೆ ತಿಂಡಿ, ಹಳೆಬಟ್ಟೆ ಕೊಡಿಸಿ ಅಜ್ಜಿ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ ಹಾಡುವುದನ್ನೂ ಹಿಂಬಾಲಿಸಿ ಹೋಗಿ ಕೇಳಿ ಸುಖಪಟ್ಟೆ. ಅಜ್ಜಿಯ ರಾಗಕ್ಕೆ ಹಿರಿಕಿರಿಯರಾದಿಯಾಗಿ ಹಲವು ಜನ ನಿಂತು ಆಲೈಸುತ್ತಿದ್ದರು! ಅಂಥಾ ಸುಶ್ರಾವ್ಯ ಸಂಗೀತವದು! ಸಾಹಿತ್ಯದಲ್ಲೂ ತಪ್ಪಿಲ್ಲದೇ ಲಯಬದ್ಧವಾಗಿ ಹಾಡುವ ಕಲೆಗಾರಿಕೆಯನ್ನೇ ಬಂಡವಾಳವನ್ನಾಗಿ ಭಗವಂತ ಆಕೆಗೆ ನೀಡಿದ್ದ.

ಹುಟ್ಟು ಆಯ್ಕೆಯಲ್ಲ, ಅದು ಕೇವಲ ಅನಿವಾರ್ಯ ಸಹಜ ಎಂದು ಹಲವರು ಹೇಳುತ್ತಾರೆ. ಬೆಳೆಯುತ್ತಾ ತಮ್ಮನ್ನು ಬದಲಿಸಿ ದುಡಿಮೆಗೆ ಹಚ್ಚಿಕೊಳ್ಳುವ ದುಡಿದು ಶ್ರೀಮಂತಿಕೆ ಪಡೆಯಬಹುದೆನ್ನುವ ಇರಾದೆ ಬಹುತೇಕರದ್ದು. ಅದರ ಜೊತೆಜೊತೆಗೇ ಬದುಕಿನಲ್ಲಿ ಅದೃಷ್ಟದಾಟವೂ ಕೆಲಮಟ್ಟಿಗೆ ನಡೆಯುತ್ತದೆ ಎಂಬುದನ್ನು ಮರೆಯುವಹಾಗಿಲ್ಲ! ಇದರರ್ಥ ಅದೃಷ್ಟವೇ ಎಲ್ಲವನ್ನೂ ಮಾಡುತ್ತದೆ ಎಂದಲ್ಲ, ಅಡಿಗೆಯಲ್ಲಿ ಉಪ್ಪಿನ ಪಾತ್ರ ಎಷ್ಟು ಮಹತ್ವವೋ ಅಂಥದ್ದೇ ಮಹತ್ವವನ್ನು ಜೀವನದ ಅಡಿಗೆಯಲ್ಲಿ ಅದೃಷ್ಟವೆಂಬ ಉಪ್ಪು ನಿರ್ವಹಿಸುತ್ತದೆ. ಅದೃಷ್ಟ ಸರಿಯಾಗಿಲ್ಲದಿದ್ದರೆ ಎಷ್ಟೇ ದುಡಿದರೂ ಅದರ ಫಲಗಳು ಸಂಚಿತಕರ್ಮ ನಿಷ್ಪನ್ನವಾಗಿರುತ್ತವೆ. ಆಗಲೂ ಜಗನ್ನಿಯಾಮಕ ಶಕ್ತಿ ಯಾವುದೋ ಒಂದು ರೀತಿಯಲ್ಲಿ ಅದನ್ನು ನಿಭಾಯಿಸಲು ಬೇಕಾಗುವ ವಿಶೇಷ ಸೌಲತ್ತುಗಳನ್ನು ಕೊಟ್ಟಿರುತ್ತದೆ ಎಂಬುದಕ್ಕೆ ಹುಟ್ಟಾ ಕಣ್ಣುಗಳಿದ್ದೂ ಶೈಶವಾವಸ್ಥೆಯಲ್ಲಿ ಕುರುಡರಾಗಿಹೋಗಿ ನಂತರ ಗಾನಯೋಗಿ ಎಂದೇ ಖ್ಯಾತರಾದ ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಪಡೆದ ದಿ|ಪುಟ್ಟರಾಜ ಗವಾಯಿಗಳ ಜೀವನಗಾಥೆಯನ್ನು ನೋಡಿ ತಿಳಿಯಬಹುದಾಗಿದೆ. ಕಳೆದುಹೋದ ಚೊಂಬನ್ನೂ ತಮ್ಮ ಆಶ್ರಮದ್ದೆಂದು ಕೇವಲ ಅದನ್ನು ಬಡಿದಾಗ ಹೊರಡುವ ಸದ್ದಿನಿಂದಲೇ ಅವರು ನಿರ್ಧರಿಸಿದ್ದ/ನಿರ್ಧರಿಸಬಲ್ಲ ವಿಶಿಷ್ಟ ಶಕ್ತಿ ಉಳ್ಳವರಾಗಿದ್ದರು. ಇಂದ್ರಿಯಗಳ ನ್ಯೂನತೆ ಹೊಂದಿದ ಜನರಿಗೆಲ್ಲಾ ಸಾಮಾನ್ಯರಿಗೆ ಅಗೋಚರವಾದ ಹೆಚ್ಚಿನ ಶಕ್ತಿಯೊಂದು ಲಭಿಸಿರುತ್ತದೆ.

ಸೃಷ್ಟಿ ಒಂದು ಮಾಯೆ ಅಥವಾ ಮಿಥ್ಯೆ ಎಂಬುದು ಬಲ್ಲವರ/ವಿಮುಕ್ತರ ಮಾತು. ನಾವು ಕಾಣಲಾಗದ ಪರಾಶಕ್ತಿ ತನ್ನ ಲೀಲಾನಾಟಕವಾಗಿ ಈ ಬ್ರಹ್ಮಾಂಡವನ್ನು ಸೃಷ್ಟಿಸಿದೆ, ಇಲ್ಲಿನ ಪ್ರತಿಯೊಂದೂ ಕ್ರಿಯೆಗಳೂ ಆ ಶಕ್ತಿಯ ಪ್ರೇರಣೆಯಿಂದ ನಡೆಯುತ್ತವೆ ಎಂಬುದೂ ಕೂಡ ನಂಬಲರ್ಹ ಸತ್ಯ. ಏನೂ ತಪ್ಪೆಸಗದ ಯಾತ್ರಿಗಳು ಹೊರಟ ವಾಹನದ ಚಾಲಕ ಎಲ್ಲೋ ಅಪಘಾತಕ್ಕೆ ಈಡುಮಾಡಿದಾಗ ಕೆಲವರು ಮಡಿಯಬಹುದು, ಏಟು ಅನುಭವಿಸಬಹುದು, ದೈಹಿಕ ನ್ಯೂನತೆಗಳಿಗೆ ಒಳಗಾಗಬಹುದು. ವಾಹನ ಚಲಾಯಿಸುತ್ತಿರುವ ಚಾಲಕನಿಗೆ ಹೃದಯಾಘಾತವಾಗಿ ಆತ ಬದುಕಿನ ಕೊನೇ ಕ್ಷಣದಲ್ಲೂ ತನ್ನನ್ನು ನಂಬಿ ವಾಹನವೇರಿದ್ದ ಜನರನ್ನು ಬದುಕಿಸಿ ತಾನು ಸತ್ತ ಘಟನೆಗಳನ್ನೂ ಓದಿ ತಿಳಿದುಕೊಂಡಿದ್ದೇವೆ. ಯಾವುದೋ ರಸ್ತೆ ಅಪಘಾತದಲ್ಲಿ ಕಾರಿನಲ್ಲಿರುವ ಎಲ್ಲರೂ ಸತ್ತು ಮಗುವೊಂದು ಹಾರಿಹೋಗಿ ದೂರಬಿದ್ದರೂ ಬದುಕಿರುವುದನ್ನು ಅರಿತಿದ್ದೇವೆ. ಸುನಾಮಿ ಬಂದು ಎಲ್ಲರನ್ನೂ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕೆಲವರು ಮಾತ್ರ ಉಳಿಯುವಂತೇ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಎಂದಮೇಲೆ ನಿಸರ್ಗದ ಕೈಲಿ ಮಾನವನೇ ಹೊರತು ಮಾನವನ ನಿಯಂತ್ರಣಕ್ಕೆ ನಿಸರ್ಗ ಒಳಪಡುವುದಿಲ್ಲ.

ಈ ಬದುಕು ಮಾಯೆಯ ಆಟ ಎಂಬುದನ್ನು ಸ್ವಾನುಭವದಿಂದ ಅರಿತ ಕವಿವರ್ಯ ಬೇಂದ್ರೆ ಅದನ್ನೇ ಒಂದು ಕಾವ್ಯವಾಗಿ ಬರೆದರು. ಪ್ರಾಯಶಃ ಬೇಂದ್ರೆಯಷ್ಟು ಕಷ್ಟದ ಜೀವನಗತಿಯನ್ನು ಯಾವ ಕವಿಯೂ ಅನುಭವಿಸಿರಲಿಕ್ಕಿಲ್ಲ. ಕಷ್ಟಗಳನ್ನು ನುಂಗಿ ಹೇಗೆ ಬದುಕಬೇಕು ಎಂಬುದಕ್ಕೆ ಬೇಂದ್ರೆ ಮಾದರಿಯಾಗುತ್ತಾರೆ. ಸಿರಿವಂತರಾಗಬೇಕೆಂಬ ಆಸೆ, ಆಸಕ್ತಿ ಎಲ್ಲರಿಗೂ ಸಹಜ. ಕಾಣುವ ಓ ಅವರಿಗಿಂತಾ ತಾವೇನೂ ಕಮ್ಮಿಯಿಲ್ಲಾ ಎಂಬ ಅನಿಸಿಕೆಯೂ ಅಹಂಕಾರವೂ ನಮ್ಮನ್ನು ನಮಗೇ ಅರಿವಿಲ್ಲದಂತೇ ಆಕ್ರಮಿಸಿರುತ್ತದೆ. ಎಲ್ಲರಂತೇ ಬದುಕಬೇಕೆಂಬ ತಹತಹ ನಮ್ಮನ್ನು ನಿತ್ಯ ಧನೋಪಾಸಕರನ್ನಾಗುವಂತೇ ಹಚ್ಚುತ್ತದೆ! ಆಸೆಗಳ ಮಟ್ಟ ಅಧಿಕವಾದಾಗ ಅನೇಕಾವರ್ತಿ ನಿರೀಕ್ಷೆಗಳು ಹುಸಿಯಾಗುತ್ತವೆ, ಗುರಿಗಳು ನೆರವೇರದೇ ಚಡಪಡಿಸುವಂತಾಗುತ್ತದೆ. ಮಗ ಕೊನೆಯ ಕ್ಷಣದಲ್ಲಿ ಸಹಾಯಕ್ಕೆ ಬರುತ್ತಾನೆಂದು ನಿರೀಕ್ಷಿಸಿದ ಅಪ್ಪನ-ಅಮ್ಮನ ಮುಪ್ಪಿನ ವಯದಲ್ಲಿ, ಇದ್ದೊಬ್ಬ ಮಗ ಅಮೇರಿಕಾದಲ್ಲಿ ತಂತ್ರಾಂಶ ತಂತ್ರಜ್ಞನಾಗಿದ್ದು, ಅಪ್ಪ-ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ, ಸಾವಿನ ಕ್ಷಣದಲ್ಲೂ ಮಗನ ಮುಖ ಕಾಣುವ ಹಂಬಲದಲ್ಲೇ ಅವರು ಅಸುನೀಗುತ್ತಾರೆ. ಹೀಗೆಲ್ಲಾ ಆಗುವಾಗ ನೆನಪಾಗುವುದು ಬದುಕು ಮಾಯೆಯ ಮಾಟ!

ಮರದಮೇಲಿನ ಮುಸ್ಯಾನನ್ನೂ[ಮಂಗನನ್ನೂ] ಮಾತನಾಡಿಸುವ ಕಲೆ ಬೇಂದ್ರೆಯವರಿಗಿತ್ತು. ಧಾರವಾಡದ ಜನರಿಗಷ್ಟೇ ಅವರ ಬಳಕೆಯಲ್ಲ, ಪಶು-ಪಕ್ಷಿಗಳೂ ಬೇಂದ್ರೆಯವರ ಕವಿಹೃದಯವನ್ನು ಅರಿತಿದ್ದವು ಎಂದರೆ ತಪ್ಪಾಗಲಾರದು. ಸಮಾನ್ಯವಾಗಿ ಬಯಲಸೀಮೆ ಮಂದಿ ಮಂಗಗಳನ್ನೆಲ್ಲಾ ಹತ್ತಿರಬಿಟ್ಟುಕೊಳ್ಳುವುದಿಲ್ಲ. ಕಾಗೆ, ಮಂಗ, ಪಾರಿವಾಳ ಇಂತಹ ಸುತ್ತಲ ವಾಸಿಗಳನ್ನೂ ಬೇಂದ್ರೆ ಹತ್ತಿರ ಕರೆಯುತ್ತಿದ್ದರು. ಅವು ಬರುತ್ತಿದ್ದವು. ಬೇಂದ್ರೆ ಕೊಡುವ ಏನಾದರೂ ಚೂರುಪಾರು ಪಡೆದುಕೊಂಡು ತಿಂದು ಸುಖಿಸುತ್ತಿದ್ದವು! ಇಂತಹ ಬೇಂದ್ರೆ ಹಲವು ಮಕ್ಕಳನ್ನು ಕಳೆದುಕೊಂಡರು. ಶೈಶವಾವಸ್ಥೆಯ ಮಕ್ಕಳು-ಅವರ ನಗು, ಮುಗ್ಧ-ಸ್ನಿಗ್ಧ ಮುಖಭಾವ-ಭಂಗಿ, ಅವರುಗಳ ಆಟ-ಪಾಟ ಯಾರಿಗೆ ತಾನೇ ಹಿತವಲ್ಲ ? ಅದನ್ನು ಮರೆಯಲು ಸಾಧ್ಯವೇ? ರಾಮನನ್ನು ಕಾಡಿಗೆ ಕಳುಹಿಸಿದ ಕೊರಗಿನಲ್ಲೇ ಪುತ್ರನ ಅಗಲುವಿಕೆಯ ಶೋಕದಿಂದ ದಶರಥ ಮಹಾರಾಜ ಸತ್ತ! || ಪುತ್ರಶೋಕಂ ನಿರಂತರಂ|| ಎಂಬೊಂದು ಉಲ್ಲೇಖವಿದೆ. ಇಲ್ಲಿ ಪುತ್ರ ಎಂದರೆ ಕೇವಲ ಗಂಡು ಮಗು ಎಂದಲ್ಲ, ಮಕ್ಕಳು ಎಂಬ ಭಾವ. ರಾಮ ಜೀವಂತವಾಗಿಯೇ ಇದ್ದರೂ ಆತ ವನವಾಸದಲ್ಲಿ ಅದೆಷ್ಟು ಕಷ್ಟಪಡಬೇಕಾಗಬಹುದು ಎಂಬುದನ್ನು ಚಿಂತಿಸಿಯೇ ಕಂಗೆಟ್ಟು ಇಹಲೋಕ ತ್ಯಜಿಸಿದ್ದ ರಾಜಾ ದಶರಥ ಎಂದಮೇಲೆ ಹಲವು ಮಕ್ಕಳ ಸಾವಿನ ಸಮಯದಲ್ಲಿ ಕಣ್ಣಾರೆ ಕಾಣುತ್ತಾ ಬದುಕಿಸಿಕೊಳ್ಳಲಾಗದ ಆ ಅಸಹನೀಯ ಕ್ಷಣಗಳು ತಂದೆ-ತಾಯಿಗೆ ಯಾವ ನೋವನ್ನು ಕೊಡಬಹುದು ಎಂಬುದು ಚಿಂತನ ಮಾಡಬೇಕಾದ ವಿಷಯ.

ಮಗುವನ್ನು ಕಳೆದುಕೊಂಡ ಹಲವು ಘಳಿಗೆಗಳು ಮೌನವಾಗಿದ್ದವು, ಅಲ್ಲಿ ಬರೇ ಬೇಂದ್ರೆಯಲ್ಲ-ಆ ಇಡೀ ವಾತಾವರಣವೇ ರೋದಿಸುತ್ತಿತ್ತು! ಒಮ್ಮೆ ಹೆಂಡತಿ ಮಮ್ಮಲ ಮರುಗುತ್ತಾ ಬೇಂದ್ರೆಯವರನ್ನು ತಿರುಗಿ ನೋಡುವಾಗ ಹುಟ್ಟಿದ್ದು ’ನೀ ಹೀಂಗ ನೋಡಬ್ಯಾಡ ನನ್ನ..’ಕವನವಾದರೆ ಇನೊಮ್ಮೆ ಹೆಂಡತಿಗೆ ಬದುಕೇ ಬೇಡವೆನಿಸಿದಾಗ ಹುಟ್ಟಿದ್ದು ’ಕುಣಿಯೋಣು ಬಾರಾ ಕುಣಿಯೋಣು ಬಾ... .’ ಇಂಥದ್ದೇ ಇನ್ನೊಂದು ಘಳಿಗೆಯಲ್ಲಿ ಬೇಂದ್ರೆ ಬರೆದರು

ಬದುಕು ಮಾಯೆಯೆ ಮಾಟ
ಮಾತು ನೊರೆತೆರೆಯಾಟ
ಜೀವ ಮೌನದ ತುಂಬಾ ...

ಇದನ್ನು ಸಂಗೀತಕ್ಕೆ ಅಳವಡಿಸಿದ್ದ ಸುಗಮ ಸಂಗೀತದ ದಿಗ್ಗಜ ದಿ| ಸಿ. ಅಶ್ವತ್ಥ್ ರವರು ತಮ್ಮ ಬದುಕಿನ ಮಹತ್ತರ ಘಟ್ಟವಾಗಿ ’ ಕನ್ನಡವೇ ಸತ್ಯ’ ಎಂಬ ಸಂಗೀತ ಕಾರ್ಯಕ್ರಮದಂತೇ ಇನ್ನೊಂದು ಅತಿದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮೈಸೂರು ಅನಂತಸ್ವಾಮಿಯವರ ನಂತರ ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಗಾಢವಾಗಿ ಒತ್ತಿ, ಹಲವು ಕವಿಗಳ ಭಾವನೆಗಳಿಗೆ ಕಂಠವಾಗಿದ್ದ, ಅನೇಕ ಕೃತಿಗಳನ್ನು ರಾಗಬದ್ಧವಾಗಿ ಸಂಯೋಜಿಸಿ ನಿರೂಪಿಸಿ ಶ್ರೋತೃಗಳಿಗೆ ತಲುಪಿಸಿದ್ದ ಅಶ್ವತ್ಥರಿಗೂ ಕೂಡ ಅವರ ಬದುಕಿನ ಕೊನೆಯ ಮಾಯೆಯ ಮಾಟ ಗೊತ್ತಿರಲಿಲ್ಲ ಅಲ್ಲವೇ? ಈ ಬದುಕೇ ಹೀಗೆ. ಇರುವಷ್ಟುಕಾಲ ಇರುವಷ್ಟು ಘಳಿಗೆ ಉತ್ತಮ ಕೆಲಸಗಳನ್ನು ಮಾಡಬೇಕು, ಆದಷ್ಟೂ ಪರೋಪಕಾರಿಯಾಗಿ, ನಿಸ್ವಾರ್ಥಿಯಾಗಿ, ಮನುಜಮತವನ್ನು ಅರಿತು ಜೀವನ ನಡೆಸಿದರೆ ಆ ಕರ್ಮಫಲವನ್ನು ಮುಂದಿನ ನಮ್ಮ ಜನ್ಮದಲ್ಲಿ ಪಡೆಯಲು ಅನುಕೂಲವಾಗುತ್ತದೆ. ಮಾಯೆಯ ಮಾಟಕ್ಕೆ ಬಲಿಯಾದ ರಾಜೀವ ದೀಕ್ಷಿತರನ್ನೂ ನಾವು ಕಂಡಿದ್ದೇವೆ. ನಿನ್ನೆ ಕಂಡವರು ಇವತ್ತು ಕಾಣುತ್ತಾರೆಂಬ ಗ್ಯಾರಂಟಿ ಇಲ್ಲ. ಇಂದು ಇರುವವರು ನಾಳೆ ಇರುತ್ತಾರೋ ಗೊತ್ತಿಲ್ಲ. ಯಾರು ಯಾವ ಕ್ಷಣವೂ ಹೋಗಬಹುದು ಇಲ್ಲಾ ನೂರಾರು ವರುಷಗಳ ಕಾಲ ಆರಾಮಾಗಿಯೇ ಬದುಕಬಹುದು! ತಾಮಾಷೆಗೆ ಹನಿಗವಿ ಜೋಕು ಹೇಳಿದ್ದರು :

ರಾತ್ರಿ ಮಲಗುವಾಗ
ನೆನೆಸಿಡಿ ಉದ್ದು

ಎದ್ದರೆ ದೋಸೆ
ಇಲ್ಲದಿದ್ದರೆ ವಡೆ !

ಇಷ್ಟೇ ನಮ್ಮ ಬದುಕು ಎಂದಾದಾಗ ಬದುಕಿನ ಮುಖಗಳ ಅರಿವಿಲ್ಲದೇ ನಾವು ಗಟ್ಟಿ ನಾವು ಗಟ್ಟಿ ಎಂದು ಪರಾಕ್ರಮ ಕೊಚ್ಚಿಕೊಳ್ಳುವ ಹಲವರಿಗೆ ಮಾಯಯೆ ಮಾಟದ ಅರಿವು ಯಾವಕ್ಷಣದಲ್ಲಾದರೂ ಆಗಬಹುದು. ನಾವೆಲ್ಲಾ ಯೋಚಿಸಲೂ ಹಿಂದೇಟುಹಾಕುವ ವಿಷಯವನ್ನು ವರಕವಿ ಬೇಂದ್ರೆ ಕವನವಾಗಿಸಿದರು. ಅಶ್ವತ್ಥರು ಅದಕ್ಕೆ ಸಂಗೀತ ಜೋಡಿಸಿದರು! ಇಬ್ಬರೂ ದಿಗ್ಗಜರೇ ಅವರವರ ಕ್ಷೇತ್ರಗಳಲ್ಲಿ. ಈ ಇಬ್ಬರ ಜೊತೆಗೆ ಎಲ್ಲಾ ಪಕ್ಕವಾದ್ಯಗಳವರಿಗೂ ವಂದಿಸುತ್ತಾ , ಹಾಡನ್ನು ನಿಮ್ಮ ಮುಂದಿಡುತ್ತಾ ಈ ಲೇಖನಕ್ಕೆ ಮಂಗಳಹಾಡುತ್ತೇನೆ.



Monday, February 27, 2012

ಸಗ್ಗವೀ ವಸುಂಧರಾ !

ಸಗ್ಗವೀ ವಸುಂಧರಾ !

ಚಿಗುರು ಹೂವು ಕಾಯಿ ಹಣ್ಣು
ನಗದು ಲೋಕ ಸುಂದರ !
ಬಗೆಬಗೆಯಲಿ ಬದಲುಗೊಳುವ
ಸಗ್ಗವೀ ವಸುಂಧರಾ !!

ಜಲದ ಚಿಲುಮೆ ಹರಿದು ಮುಂದೆ
ವಲಯ ಮಲಯಗಳಲಿ ಸಾಗಿ
ಸಲಿಲ ಜಲಲಧಾರೆಯಾಗಿ
ನಲಿದು ಧುಮ್ಮಿಕ್ಕುತಾ |
ಒಲಿದ ಮಿಥುನಗಳವು ನಿಂದು
ಕಲೆಯುತಲ್ಲಿ ದೇವಳದಲಿ
ನಲಿವುದಂತು ದೃಶ್ಯಕಾವ್ಯ
ಕಲೆಯು ಹಿಗ್ಗಿ ಸೊಕ್ಕುತಾ ||

ವನದ ತುಂಬ ವೃಕ್ಷರಾಶಿ
ದಿನವು ಮೊಲ್ಲೆ ಹುಲ್ಲು ಹಸಿರು
ಮನಕೆ ಮುದವ ನೀಡ್ವ ರಂಗು
ಘನತರಂಗವೆಬ್ಬಿಸೀ |
ಜಿನುಗುತಿರುವ ಜೇನು ಮಿಸರೆ
ಗುನುಗು ದುಂಬಿನಾದ ತುಂಬಿ
ಸನಿಹ ನವಿಲ ನಾಟ್ಯ ಭಂಗಿ
ಬನದಿ ಗುಲ್ಲು ಹಬ್ಬಿಸೀ ||

ಕೆಂಪು ಹಳದಿ ಪಚ್ಚೆ ನೀಲಿ
ಗುಂಪಿನ ಬಂಗಾರ ಸೇರಿ
ತಂಪು ಸ್ಫಟಿಕ ಮುತ್ತು ಹವಳ
ಸೊಂಪಾಗಿಸಿ ಭರಣವ |
ಇಂಪಿನ ಸಂಗೀತ ಗಾನ
ಮಂಪರಿನಲು ಸುಖದ ಧ್ಯಾನ
ನೋಂಪಿ ನಾಂದಿ ಮಂತ್ರ ಘೋಷ
ಗಂಪಾಗಿಸಿ ಕರಣವ ||

ಗಿರಿ ಸಾಗರ ನದಿ ಪರ್ವತ
ಪುರಿ ದ್ವಾರಕೆ ಹರಿದ್ವಾರ
ಮರೆಯಲಪ್ಪುದೇ ಅಜಂತಾ
ಕರೆವ ಎಲ್ಲೋರವಾ ?
ಬರಿಯದಲ್ಲ ಶಿಲೆಯ ಕಬ್ಬ
ಹಿರಿದು ಹಂಪೆ ಹಳೆಬೀಡಲಿ
ಬರಿದೇ ಜನ್ಮತಳೆದ ಕಾವ್ಯ
ಹರಿದು ಬಂತು ಕಲರವ ||

Sunday, February 26, 2012

ಸತ್ಯಾನಂದ


ಸತ್ಯಾನಂದ

ಪೀಠಸ್ಥಾಪನೆ ಮಾಡುವ ಉದ್ದೇಶವೇ ಬೇರೆ ಎಂಬುದು ಭಕ್ತರಿಗೆ ತಿಳಿದರೆ ನಾಕಾರು ಜನರೂ ಇರಲಿಕ್ಕಿಲ್ಲ! ಅದಕ್ಕೇ ಉದ್ದೇಶ ವಿವರಿಸುವ ಗೋಜು ಯಾರಿಗೆ ಬೇಕು ? ಯಾರೋ ಒಂದಷ್ಟು ಜನ ಕೇಳಿದಾಗ ಅವರಲ್ಲಿ ಸಮಾನ ಮನಸ್ಕರನ್ನು ಆಯ್ದುಕೊಂಡು ಹತ್ತಿರಕ್ಕೆ ಬಿಟ್ಟುಕೊಂಡರೆ ಸರಿಯಪ್ಪ ! ಪೀಠವಿಲ್ಲದೇ ಯಾವುದನ್ನೂ ಸಾಧಿಸಲಾಗದು. ರಾಜಕೀಯದ ಕಳ್ಳ-ಖದೀಮರ ಕಪ್ಪುಹಣ ದೇಖರೇಖೆಯಲ್ಲಿ ಬಂದೋಬಸ್ತು ಮಾಡಿಡಲು ಅವರಿಗೂ ಜನಬೇಕು, ಜಾಗಬೇಕು. ಅಂತಹ ಜಾಗವನ್ನು ತಾನೇ ಸೃಷ್ಟಿ ಮಾಡಿಕೊಂಡುಬಿಟ್ಟರೆ ಹುಡುಕುವ ಕಣ್ಣುಗಳು ಸಾವಿರಾರು. ಅಲ್ಲಿಗೆ ತನ್ನ ಉದ್ದೇಶ ಸಾರ್ಥಕವೆಂದುಕೊಂಡ ಸತ್ಯಾನಂದ ಕಾವಿ ಶಾಟಿಯನ್ನು ಕೊಡವಿ ಮೇಲೆದ್ದ.

ಹೆಬ್ಬಂಡೆಯ ಹಾಸಿನಮೇಲೆ ಮೈಚಾಚುತ್ತಾ ಮತ್ತೆ ಮೆತ್ತಗೆ ಒರಗಿಕೊಂಡ ಸತ್ಯಾನಂದನಿಗೆ ಬಾಲ್ಯದ ನೆನಪುಗಳು. ಅಪ್ಪ-ಅಮ್ಮ-ಬಡತನ ಬಡತನ ಮತ್ತು ಬಡತನ ! ಎಳವೆಯಲ್ಲಿ ಓದು-ಬರಹ ಕಲಿಯಬೇಕಾಗಿದ್ದ ತನ್ನನ್ನು ದನಕಾಯಲು ಕಳುಹಿಸುವುದು ಅನಿವಾರ್ಯವಾಗಿತ್ತು. ಅಪ್ಪ-ಅಮ್ಮ ನಿತ್ಯದ ಕೂಳಿಗೇ ಪರದಾಡುವಾಗ ಇನ್ನೆಲ್ಲಿ ಓದಿಸಿಯಾರು? ಆದರೂ ಕಷ್ಟಪಟ್ಟು ಅಷ್ಟಿಷ್ಟು ಓದಿಸಲು ಮುಂದಾದರು. ಹಸಿರುಟ್ಟ ಹೊಲಗದ್ದೆಗಳ ನಡುವೆ ಬಿಸಿಲ ಬೋಳು ಗುಡ್ಡಗಳ ನಡುವೆ ಹಳ್ಳಿಯ ಬಾಲಕನಾಗಿದ್ದ ಸತ್ಯಾನಂದ ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಓರಗೆಯ ಬಾಲಕರ ಜೊತೆ ಸಿನಿಮಾ ನೋಡುತ್ತಿದ್ದ. ಆಹಹಾ...ಎಂತೆಂತಹ ಬಣ್ಣಬಣ್ಣದ ಸಿನಿಮಾಗಳು...ಕಾಣುವ ನಟ-ನಟಿಯರೆಲ್ಲಾ ದೇವ-ದೇವತೆಗಳ ಪ್ರತಿರೂಪದಂತೇ ಕಾಣುತ್ತಿದ್ದರೆ ಸತ್ಯ ತನ್ನನ್ನೇ ಮರೆಯುತ್ತಿದ್ದ! ವಾರಕ್ಕೊಮ್ಮೆಯಾದರೂ ಟೆಂಟ್ ಸಿನಿಮಾ ನೋಡದಿದ್ದರೆ ಊಟ ರುಚಿಸುತ್ತಿರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಹಾಗಿರಲೂ ಇಲ್ಲ!

ಬರುಬರುತ್ತಾ ಸತ್ಯನಿಗೆ ಹನ್ನೊಂದು-ಹನ್ನೆರಡು ವಯಸ್ಸು ಕಾಲಿಟ್ಟಿತು. ಸಿನಿಮಾ ಮಾತ್ರ ವಾರದ ಆರಾಧನೆಯಾಗಿ ಮುಂದುವರೆದೇ ಇತ್ತು. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣುವ ನಾಯಕಿಯರು ಬಹಳ ಸುಂದರವಾಗಿದ್ದಾದರೂ ಯಾಕೆ ಎಂಬುದು ಅವನಿಗೇ ತಿಳಿಯುತ್ತಿರಲಿಲ್ಲ! ಸಿನಿಮಾ ಮುಗಿದು ವಾರಗಳೇ ಕೆಲವೊಮ್ಮೆ ತಿಂಗಳುಗಳೇ ಕಳೆದರೂ ಕೆಲವು ನಾಯಕಿಯರನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೋ ನಾಯಕಿಯರನ್ನು ಹತ್ತಿರದಿಂದ ಕಾಣುವಾಸೆ, ಕೈಹಿಡಿಯುವಾಸೆ. ಆ ತುಡಿತದಲ್ಲೇ ಕೆಲವು ಕಾಲ ದೂಡುತ್ತಾ ದೂಡುತ್ತಾ ಹದಿಮೂರು ವಯಸ್ಸು ಕಳೆದು ಹದಿನಾಲ್ಕಕ್ಕೆ ಬಂತು. ಈಗ ಮಾತ್ರ ನಿಜಕ್ಕೂ ಒಳಗಿನ ತಹತಹ ತಾಳಲಾರದಾದ ಸತ್ಯಾನಂದ ದಿನವಿಡೀ ಸುಂದರಿಯರ ಕಲ್ಪನೆಯಲ್ಲೇ ಸುಸ್ತಾಗಿಹೋದ! ಊರಲ್ಲೆಲ್ಲಾ ಅಲೆದರೂ ಅಂತಹ ಸುಂದರ ಹುಡುಗಿಯರು ಎಲ್ಲೂ ಸಿಗುವುದಿಲ್ಲಾ ಎಂಬುದು ಆತನಿಗೆ ಗೊತ್ತು. ರಂಭೆ-ಊರ್ವಶಿ-ಅಪ್ಸರೆ-ಮೇನಕೆ ಆ..ಥೂ ..... ಎಲ್ಲರಿಗಿಂತಾ ಮೇಲು ಅಂಜಿತಾ ! ಸುಪುಷ್ಟವಾದ ಅವಳ ಉಬ್ಬುತಗ್ಗುಗಳನ್ನು ಕಣ್ತುಂಬ ತುಂಬಿಕೊಂಡ ಸತ್ಯ ನಿತ್ಯಾನುಷ್ಠಾನಕ್ಕೆ ತೊಡಗಿಬಿಟ್ಟ! ಅದು ತ್ರಿಕಾಲಪೂಜೆಯಲ್ಲ, ಸದಾ ಅದೇ ಧ್ಯಾನ-ಅದೇ ಮೌನ! ದೇವಿ ಅಂಜಿತಾ ’ಕಾಮೇಶ್ವರಿ’ಯ ಮೋಡಿ ಅಪಾರ-ಅವಳ ಮಹಿಮೆ ಅಪಾರ ಎಂದು ತಿಳಿದ ಸತ್ಯ ಸತ್ಯಾನ್ವೇಷಣೆಗಾಗಿ ’ರಮಣೀಚಲ’ ಪರ್ವತಕ್ಕೆ ತೆರಳಿ ತಪಸ್ಸಿಗೆ ಕೂತುಬಿಟ್ಟ!

ಅಪ್ಪ-ಅಮ್ಮ ಸಾಕಷ್ಟು ತಿಳಿಹೇಳಿದರು. ಮಗನೇ ಎಮ್ಮೆ ತೊಳೆದುಕೊಂಡು ದನಮೇಯಿಸಿಕೊಂಡು ಆರಾಮಾಗಿ ಸಂಸಾರಿಯಾಗಿ ಬದುಕಬೇಕಿದ್ದ ನಿನಗೆ ಸ್ವಲ್ಪ ವಿದ್ಯೆ ಕಲಿಸಿದ್ದರಿಂದ ನಮ್ಮ ಕೈಮೀರಿಹೋದೆಯಲ್ಲಾ... ನೀನು ಸಂಸಾರಿಯಾಗಿರಲಿ ಎಂದು ನಾವು ಬಯಸಿದ್ದರೆ ಎಲ್ಲವನ್ನೂ ಬಿಟ್ಟು ’ಸರ್ವಸಂಗ ಪರಿತ್ಯಾಗಿ’ಯಾಗಿ ಖಾವಿ ತೊಟ್ಟು ಬೆಟ್ಟವೇರಿಬಿಟ್ಟೆಯಲ್ಲಾ ಎಂದು ಪರಿತಪಿಸಿದರು. ಮರಳಿ ಕರೆದೊಯ್ಯಲು ಬಂದರು. ಆದರೆ ಸತ್ಯ ಮನಸ್ಸು ಮಾಡಲೇ ಇಲ್ಲ. ಅವನು ಸಾಕ್ಷಾತ್ ಅಂಜಿತಾ ’ಕಾಮೇಶ್ವರಿ’ಯಲ್ಲಿ ತನ್ನ ಕಣ್ಣುಗಳನ್ನು ನೆಟ್ಟಿದ್ದ. ಅಂಜಿತಾ ದೇವಿಯ ಭಕ್ತಿನಾದ ಆತನಿಗೆ ಅಂಜಿತಾ ಅಥವಾ ತತ್ಸಮಾನ ದೇವಿಯ/ದೇವಿಯರ ಸಾಕ್ಷಾತ್ಕಾರ ಆಗುವವರೆಗೂ ಆ ತಪಸ್ಸು ಬಿಟ್ಟು ಆತ ಮೇಲೇಳಲು ಸಿದ್ಧನಿರಲಿಲ್ಲ. ಹಗಲೆಲ್ಲಾ ಘೋರ ತಪಸ್ಸು! ಅಘೋರ ತಪಸ್ಸು !! ರಾತ್ರಿಯಾಯ್ತೆಂದರೆ ತಡೆಯಲಾರದ ಹುಮ್ಮಸ್ಸು! ಹಾರಿ ಕುಣಿವ ಗಮ್ಮತ್ತಿನ ಹುಮ್ಮಸ್ಸು! ಕುಂತಲ್ಲೇ ಹಾರುವುದೂ ಅಲ್ಲೇ ಕರಗತವಾಗಿಬಿಟ್ಟಿತು! ಮಗನ ಊಟ-ತಿಂಡಿಯ ಚಿಂತೆ ಹತ್ತಿದ ಮನೆಮಂದಿ ಕೆಲವುಕಾಲ ಅಲ್ಲಿಗೇ ಸಪ್ಲೈ ಮಾಡಿದರು. ಹೀಗಾಗಿ ತಪಸ್ಸು-ತಿಂಡಿ-ಊಟ-ಹಾರಾಟ, ತಪಸ್ಸು-ತಿಂಡಿ-ಊಟ-ಹಾರಾಟ ಇವಿಷ್ಟರಲ್ಲೇ ಕೆಲಕಾಲ ಕಳೆದ ಸತ್ಯನನ್ನು ಕಾಣಲು ಸುದ್ದಿಕೇಳಿದ ಸುತ್ತಲ ಗ್ರಾಮಗಳ ಜನ ನಿಧಾನವಾಗಿ ಒಬ್ಬೊಬ್ಬರೇ ಬರಹತ್ತಿದರು.

ಸ್ವಾಮಿಗಳು ಬಂದಿದ್ದಾರೆ ಎಂಬುದು ಸಹಜವಾಗಿ ಅನೇಕರಿಗೆ ಬಹಳ ಖುಷಿತರುವ ವಿಷಯವಾಗಿತ್ತು. ಏನೋ ತಮ್ಮ ಐಹಿಕ ಜೀವನದ ಕಷ್ಟನಷ್ಟಗಳಿಗೆ-ರೋಗರುಜಿನಗಳಿಗೆ ಪರಿಹಾರ ಕಲ್ಪಿಸಬಹುದೇನೋ ಎಂಬ ಆಸೆಕಂಗಳಿಂದ ಸ್ವಾಮಿಯನ್ನು ಖುದ್ದಾಗಿ ದರುಶನಮಾಡಲು ಜನ ಬಂದೇ ಬಂದರು! ಬಂದವರು ದಣಿದಿದ್ದರು. ಅಲ್ಲಿ ಕುಡಿಯಲು ನೀರಿಗೂ ತತ್ವಾರ. ಬಂದವರಲ್ಲೇ ಕೆಲವರು ಸೇವೆಗೆ ಒಂದು ಸಂಘ ಯಾಕೆ ಮಾಡಿಕೊಳ್ಳಬಾರದು? ಊಟ-ತಿಂಡಿ ವ್ಯವಸ್ಥೆಯನ್ನೂ ಮಾಡಿಕೊಂಡರೆ ಎಲ್ಲರಿಗೂ ಅನುಕೂಲ ಎಂಬ ಅನಿಸಿಕೆಯಿಂದ ಸ್ವಾಮಿಯ ಸೇವೆಗಿಂತ ಹೆಚ್ಚಾಗಿ ಬರುವ ’ಭಕ್ತರ’ ಸೇವೆಗಾಗಿ ಸಂಘ ಆರಂಭವಾಗಲೆಂದು ಸತ್ಯಾನಂದನಾಗಿ ಬದಲಾದ ಸತ್ಯ ಹೇಳಿಕೆಕೊಟ್ಟು ’ಅನುಗ್ರಹಿ’ಸಿದ! ಅಲ್ಲೇ ಸತ್ಯ ತನ್ನ ’ಅನುಕೂಲಗಳನ್ನೂ’ ಗ್ರಹಿಸಿದ! ಬಂದವರನ್ನು ತನ್ನ ಹತ್ತಿರವೇ ಇಟ್ಟುಕೊಳ್ಳಲು ಸ್ವಾಮಿ ಸರಳತೆಯನ್ನು ಮೆರೆದ; ನಿತ್ಯವೂ ಅದೇನು ಭಜನೆ, ಅದೇನು ಧ್ಯಾನ ಅಂತೀರಿ ! ಜನ ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹೇಳಿಕೊಂಡು ಸುದ್ದಿ ಬೆಂಕಿಯ ಕೆನ್ನಾಲಗೆಯಂತೇ ಬಹುಬೇಗ ಆವರಿಸಿಬಿಟ್ಟಿತು!

ಇಂತಿಪ್ಪ ಸ್ವಾಮಿಗೆ ಒಮ್ಮೆ ಕುಳಿತಲ್ಲೇ ಹೆಚ್ಚಿನಮಟ್ಟದ ’ಜ್ಞಾನೋದಯ’ವಾಯಿತು. ತಪಸ್ಸಿನ ಕೇಂದ್ರವನ್ನು ಈ ಕುಗ್ರಾಮದ ಬೋಳುಬೆಟ್ಟವಾದ ’ರಮಣೀಚಲ’ದಲ್ಲಿ ಇರಿಸುವುದಕ್ಕಿಂತಾ ಬೆಟ್ಟಹತ್ತುವ ತೊಂದರೆಯೇ ಇರದ ಜಾಗದ ಬಗ್ಗೆ ಚಿಂತನ-ಮಂಥನ ನಡೆಸುತ್ತಾ ಇದ್ದಾಗ ಬೆಂಗಳೂರಿನ ಪಕ್ಕದಲ್ಲೇ ಆದರೆ ’ಒಳ್ಳೊಳ್ಳೆಯ ಭಕ್ತರು’ ಬರಬಹುದೆಂಬ ಅನಿಸಿಕೆಯೂ ಆ ಕಾಲಕ್ಕೊದಗಿ ಸೈಂಧವಲವಣವನ್ನು ಅಭಿಮಂತ್ರಿಸಿ ಎದುರು ಹಿಡಿದಾಗ ಕಣ್ಣಿಗೆ ಗೋಚರವಾದದ್ದು : ಹಿಂದೆ ಅನೇಕ ಜನ್ಮಗಳಲ್ಲಿ ಸ್ವತಃ ತಾನೇ ತಪಸ್ಸಿದ್ಧಿಗೈದ ’ಪುಣ್ಯಕ್ಷೇತ್ರ’--’ಪರಿಧಿ’! ಪರಿಧಿಯಲ್ಲೇ ಪೀಠಸ್ಥಾಪನೆಯಾಗಿಬಿಟ್ಟರೆ ಬೆಳ್ಳನೆಯ ಜಿಂಕೆಗಳಂತಹ ಭಕ್ತರು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಸೋತು ನಿಡುಸುಯ್ದು ಬರುವಾಗ ತಣ್ಣಗೆ ಕೈಯ್ಯಾಡಿಸಿದರೆ ಸಮಾಧಾನ ಅವರಿಗೂ ತನಗೂ ಆಗುತ್ತದೆಂಬ ’ಜ್ಞಾನಚಕ್ಷು’ವಿಗೆ ಗೋಚರಿಸಿದ ಸತ್ಯವನ್ನೇ ನೆಚ್ಚಿ ರಾಜಧಾನಿಯನ್ನು ಓ ಸಾರಿ ಸಾರಿ ತಪೋಭೂಮಿಯನ್ನು ಪರಿಧಿಗೆ ವರ್ಗಾಯಿಸುವುದಾಗಿ ಘೋಷಿಸಿಯೇ ಬಿಟ್ಟ.

ಪೀಠ ಎಂದಮೇಲೆ ಒಂದಷ್ಟು ಪೂಜೆ-ಪುನಸ್ಕಾರ ಅಂತೆಲ್ಲಾ ನಡೆಸಬೇಕಲ್ಲಾ ಎಂಬ ಕಾರಣದಿಂದ ಮಂತ್ರವೇ ಅಲ್ಲದ ಮಂತ್ರಗಳನ್ನು ಕಲಿತ ಮಹಾಸ್ವಾಮಿಗಳು ಪರಿಧಿಯಲ್ಲಿ ಧ್ವಜ ನೆಟ್ಟು ಪೀಠಸ್ಥಾಪನೆ ಗೈದರು. ಅಹೋರಾತ್ರಿ ಉತ್ಸವವೋ ಉತ್ಸವ ಉತ್ಸವವೋ ಉತ್ಸವ! ಊರಕಡೆಗಳಿಂದ ಬಂದ ’ಭಕ್ತರು’ ಬೆಂಗಳೂರಿನಲ್ಲಿರುವ ತಮ್ಮ ನೆಂಟರಿಷ್ಟರಿಗೂ ಸ್ನೇಹಿತರಿಗೂ ವಿಷಯ ತಲ್ಪಿಸಿಯೇ ತಲ್ಪಿಸಿದರು. ಭಾನುವಾರ ಉಂಡಾಡಿಗಳಾಗುವ ಬೆಂಗಳೂರಿನ ಕೆಲವು ಬ್ರೆಮ್ಮಚಾರಿಗಳು ಭೋ ಗುಡುತ್ತಾ ಓಡೋಡಿ ಬಂದವರೇ ’ಸಂಭೋ’ ಎಂದು ಬೋರಲು ಬಿದ್ದರು. ಕುಳಿತಲ್ಲೇ ವಿನಾಕಾರಣ ಪಕಪಕನೇ ನಗುತ್ತಿದ್ದ ಸತ್ಯಾನಂದರನ್ನು ಕಂಡು ಜನ್ಮಸಾರ್ಥಕ ಮಾಡಿಕೊಂಡರು! ಮನದಣಿಯೇ ಜಾಜ್-ಪಾಪ್-ಇಂಡಿಪಾಪ್-ರಾಕ್-ಸಲ್ಸಾ ಎಂಬೆಲ್ಲಾ ತೆರನಾದ ಕುಣಿತಗಳಲ್ಲಿ ಸತ್ಯಾನಂದರಿಗೆ ಸೇವೆ ಸಲ್ಲಿಸಿದರು. ಆನಂದತುಂದಿಲರಾದ ಸತ್ಯಾನಂದರು ಇದು ನಿತ್ಯೋತ್ಸವವಾಗಲಿ ಎಂದು ಅಪ್ಪಣೆಕೊಡಿಸಿದರು. ಇಲ್ಲಿ ಜಾತಿ-ಮತ-ಪಂಥ, ಸಂಪ್ರದಾಯ-ಮಡಿ-ಮೈಲಿಗೆ-ವೇಷಭೂಷಣ ಎಂಬ ಕಟ್ಟುಪಾಡುಗಳಿಲ್ಲಾ, ನೀವು ಏನೇ ಮಾಡಿದರೂ ಎಲ್ಲಾ ವೆಲ್ ಕಂ ಎಲ್ಲಾ ನಮ್ಮ ಸೇವೆಯೇ ಸರಿ ಎಂದ ಸತ್ಯಾನಂದರ ಕಣ್ಣುಗಳಲ್ಲಿ ಹೊಸಹುರುಪನ್ನು ಕಂಡ ಪಡ್ಡೆಗಳು ಗುರುವಿನ ಜೊತೆಗೇ ಪಕಪಕಪಕಪಕನೆ ನಕ್ಕವು!

ವರುಷವೊಂದೆರಡು ಕಳೆದಿರಲು ನಿಧಾನವಾಗಿ ಆ ಬ್ರೆಮ್ಮಜಾರಿಗಳ ಜೊತೆಗೆ ಗಾಂಜಾವಾಲಾಗಳೂ ಅಫೀಮಿನವರೂ ಜೊತೆಯಾದರು! ಬ್ರೆಮ್ಮಜಾರಿಗಳು ತಾವಿನ್ನು ಹೀಗಿದ್ದಿದ್ದು ಸಾಕೂ...ಇನ್ನು ಏನಾದ್ರೂ ಸಾಧಿಸಬೇಕು ಎಂದುಕೊಂಡರು. ಲಿವ್-ಇನ್ ಎಂಬ ಹೊಸಪೀಳಿಗೆಯ ಜೀವನಕ್ರಮವನ್ನು ಪೀಠಕ್ಕೆ ಪರಿಚಯಿಸಿದ ಖ್ಯಾತಿ ಈ ’ಭಕ್ತರಿ’ಗೇ ಸಲ್ಲಬೇಕು. ಈಗೀಗ ಬ್ರೆಮ್ಮಜಾರಿಗಳ ಜೊತೆಗೆ ಬ್ರೆಮ್ಮಜಾರಿಣಿಯರೂ ಬರತೊಡಗಿದರು! ವಿದೇಶೀ ಬ್ರೆಮ್ಮಜಾರಿಗಳೂ ಬ್ರೆಮ್ಮಜಾರಿಣಿಯರೂ ಬಂದರು! ಎಲ್ಲವೂ ಬ್ರೆಮ್ಮಮಯವಾಗಿ ಫಾರಿನ್ ವೈನುಗಳು ಘಮಘಮಿಸತೊಡಗಿದವು! ಎಲ್ಲೆಲ್ಲೂ ಜೈಜೈಕಾರ, ಎಲ್ಲೆಲ್ಲೂ ನಿತ್ಯ ನೃತ್ಯ! ಪರಿಧಿ ಆಶ್ರಮ ನಿತ್ಯ-ಸತ್ಯ-ನಿರಂತರವೆಂಬ ಸ್ಲೋಗನ್ನು ಹಾಕಿಕೊಂಡು ಧ್ಯಾನ ಮತ್ತು ತಪಸ್ಸು ಈ ಪದಗಳಿಗೆ ಹೊಸ ’ಆಯಾಮ’ವನ್ನೇ ಕೊಟ್ಟಿತು! ನಿತ್ಯವೂ ಸಮಾನಮನಸ್ಕ ಹೊಸಹೊಸ ’ಭಕ್ತರು’ ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ ಪರಿಧಿಯ ಪೀಠಕ್ಕೆ ಬರುತ್ತಲೇ ಇದ್ದರು. ಪರಿಧಿಯ ವ್ಯಾಪ್ತಿ ಭೂಮಿಯಲ್ಲೂ ಗಾಳಿಯಲ್ಲೂ ವಿಸ್ತಾರವಾಗಿ ಸಿನಿಮಾ ಮಂದಿ-ರಾಜಕಾರಣಿಗಳಿಗೂ ಇದರ ಗಂಧ ಬಡಿಯಿತು!

ಕೆಲವು ಸಿನಿಮಾಗಳಲ್ಲಿ ನೋಡಿದ್ದನ್ನೇ ನೋಡಿ ಬೇಸತ್ತ ಪ್ರೇಕ್ಷಕ ಬೇರೇ ತೋರ್ಸಿ ಎಂದು ಬಡಕೊಂಡಿದ್ದರಿಂದ ಮಾರ್ಕೆಟ್ಟು ಬಿದ್ದುಹೋದ ನಟಿಯರಲ್ಲಿ ಅಂಜಿತಾ ದೇವಿಯೂ ಒಬ್ಬಳು. ಅವಳ ಅಂಗಸೌಷ್ಠವವನ್ನೇ ಅಂದಕಾಲತ್ತಿಲ್ ನಮ್ಮ ಸತ್ಯಾನಂದರು ಬಯಸಿದ್ದಲ್ಲವೇ? ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗದೇ ಇದ್ದುದರಿಂದ ಆರ್ಥಿಕ ಹಿನ್ನಡೆಯನ್ನು ಸತತ ಅನುಭವಿಸುತ್ತಿದ್ದ ಅಂಜಿತಾ ಪತಿಯ ಜೊತೆ ಜೀವಿಸುವುದೇ ಕಷ್ಟ ಎಂಬಂತಹ ಮಟ್ಟಕ್ಕೆ ಬಂದಿದ್ದಳು! ಲೆಕ್ಕಕ್ಕೆ ಪತಿಯಾದವ ನಟೀಮಣಿ ಪತ್ನಿಯ ಮಾತುಗಳಿಗೆಲ್ಲಾ ಅಸ್ತು ಅನ್ನುತ್ತಿರಲಿಲ್ಲವಾಗಿ ಹೆಸರಿಗೆ ಆದ ಮದುವೆ ಒಳಗೊಳಗೇ ಮುರಿದು ಬೀಳುವ ಹಂತ ತಲ್ಪಿತ್ತು. ಬೇಸರದಲ್ಲಿ ಬ್ರಹ್ಮಾಂಡ ಸುತ್ತುತ್ತಾ ಇದ್ದ ಅಂಜಿತಾಳಿಗೆ ಪರಿಧಿಯ ನಿತ್ಯಾನಂದರ ಪರದೆ ಸರಿಸಿದರೆ ಹೇಗೆ? -ಎಂಬ ವಿಚಾರ ಮನಸ್ಸಿಗೆ ಬಂತು! ಸಾಮಾನ್ಯವಾಗಿ ಈಗಿನ ಕಾಲಕ್ಕೆ ಹೊಸ ನಟಿಯರಿಗೆ ನಾಯಕಿ ಎಂದು ಸಿಗುವ ಅವಕಾಶ ಒಂದೋ ಎರಡೋ ಸಿನಿಮಾಗಳಿಗೆ ಮಾತ್ರ. ಆಮೇಲೆ ನೋಡುವ ನಮ್ಮ ಮಂದಿಗೂ ಬೇರೇ ಬೇಕು-ನಟಿಸುವ ನಾಯಕನಟ, ಸಹನಟ, ನಿರ್ದೇಶಕ, ನಿರ್ಮಾಪಕ ಎಲ್ಲರಿಗೂ ಬೇರೇ ಬೇಕು!--ಇದು ಸಿನಿಮಾ ರಂಗದ ನೆಳಲು-ಬೆಳಕಿನಾಟದ ನಿತ್ಯಸತ್ಯ! ಗೊತ್ತಿದ್ದೂ ಗೊತ್ತಿದ್ದೂ ತಮ್ಮ ಸೌಂದರ್ಯ-ನೇಮ್ ಆಂಡ್ ಫೇಮ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಇರುಳುಕಂಡ ಬಾವಿಗೆ ಹಗಲು ಉರುಳುವುದು ಇಂದಿನ ನಾಯಕಿಯರ ಇಚ್ಛಾಪ್ರಾರಬ್ಧ!

ಒಂದು ದಿನ ಪೀಠದಜನ ಬಾಗಿಲು ತೆಗೆಯುತ್ತಾರೆ ...ಏನಾಶ್ಚರ್ಯ : ಸ್ವತಃ ಅಂಜಿತಾ ದೇವಿ ಬಾಗಿಲಲ್ಲೇ ಪ್ರತ್ಯಕ್ಷವಾಗಿದ್ದಾಳೆ! ಆಶ್ರಮದ ಜನ ಒಳಗಡೆ ’ಧ್ಯಾನ’ಸ್ಥರಾಗಿದ್ದ ಸತ್ಯಾನಂದರೆಡೆಗೆ ಓಡಿಯೇ ಓಡಿದರು. " ಸತ್ಯಾನಂದ ಮಹಾಸ್ವಾಮಿಗಳೇ ಅಂಜಿತಾ ದೇವಿ ಬಂದಿದ್ದಾರೆ " ಎಂದಿದ್ದೇ ತಡ ಪೀಠದಿಂದ ಬೆಕ್ಕು ಹಾರಿದ ರೀತಿಯಲ್ಲಿ ಹಾರಿದ ಸತ್ಯಾನಂದರು ಆಶ್ರಮದ ಬಾಗಿಲಿಗೆ ತಾವೇ ತೆರಳಿ ಸ್ವಾಗತ ಕೋರಿದರು! ಬಂದಿರತಕ್ಕಂತಹ ಅಂಜಿತಾ ’ಕಾಮೇಶ್ವರಿ’ಯ ಸಾಕ್ಷಾತ್ ದರುಶನಮಾತ್ರದಿಂದ ಪುನೀತರಾದ ಸತ್ಯಾನಂದರು ಇರುವ ಮೂವತ್ತೆರಡು ಹಲ್ಲಿಗೆ ಮತ್ತೆರಡು ಹೆಚ್ಚಿಗೆ ಜೋಡಿಸಿದವರಂತೇ ಕಿವಿಯವರೆಗೂ ಬಾಯಿ ಚಿಲಿದರು! ನಗದೇ ವರ್ಷಗಳೇ ಕಳೆದಿದ್ದ ಅಂಜಿತಾ ಮನದಣಿಯೇ ’ಗುರು’ಗಳೊಂದಿಗೆ ನಕ್ಕಳು! ಸಮಾಗಮ ಬಹಳ ಸಂತೋಷಮಯವಾಗಿತ್ತು; ಆಶ್ರಮಕ್ಕೆ ಹೊಸ ಕಳೆಯೇ ಪ್ರಾಪ್ತವಾಗಿತ್ತು!

ಪೀಠಸ್ಥಾಪನೆಯಾಗಿ ವರ್ಷಗಳೇ ಕಳೆದರೂ ಆಪ್ತ ಸಹಾಯಕನಾಗಿ ಸತ್ಯಭಕ್ತಾನಂದನಾದ ತನಗೆ ಹೆಚ್ಚಿನ ಆದ್ಯತೆಯನ್ನಾಗಲೀ ತನ್ನ ಖರ್ಚಿಗೆ ಹೆಚ್ಚೆಂಬಷ್ಟು ಹಣವನ್ನಾಗಲೀ ನೀಡದೇ ಕೇವಲ ತನ್ನ ಸ್ವಾರ್ಥವನ್ನಷ್ಟೇ ನೋಡಿಕೊಳ್ಳುತ್ತಿದ್ದ ಸತ್ಯಾನಂದನನ್ನು ಕಂಡರೆ ಸತ್ಯಭಕ್ತಾನಂದನೊಬ್ಬನಿಗೆ ಈಗೀಗ ಅಷ್ಟಕ್ಕಷ್ಟೇ ಆಗಿತ್ತು. ಆಶ್ರಮದ ನಿತ್ಯ-ಸತ್ಯ ರಂಜನೀಯ ಕಥೆಗಳ ಸತ್ಯದರ್ಶನಮಾಡಿಕೊಂಡಿದ್ದ ಆತನಿಗೆ ’ಪೀಠ ಸೇವೆ ಸಾಕು’ ಎಂಬ ಭಾವ ಉದ್ಭವವಾಗಿತ್ತು. ವಯಸ್ಸೂ ಹೆಚ್ಚಾಗಿ ಸ್ವಂತ ಬುದ್ಧಿ ತುಸು ಬಲಿತು ಈ ಸಮಯದ ’ಸದುಪಯೋಗ’ ಮಾಡಿಕೊಳ್ಳುವ ರಾಜಕೀಯ ಬುದ್ಧಿಯೂ ಪ್ರಾಪ್ತವಾಗಿತ್ತು! ಪೀಠದ ಸಮಸ್ತ ವ್ಯವಹಾರಗಳನ್ನು ’ಗುರುಗಳಿ’ಗೆ ತೋರಿಸುವ ಟ್ರಾನ್ಸ್‍ಪರೆನ್ಸಿ ವ್ಯವಹಾರಕ್ಕಾಗಿ ಹೈಟೆಕ್ ಮಾಡಲು ಅನುಮತಿ ಪಡೆದ ಆತ ಎಲ್ಲೆಲ್ಲಾ ಕ್ಯಾಮೆರಾ ಇಟ್ಟಿದ್ದನೋ ಶಿವನೇ ಬಲ್ಲ-ಸತ್ಯನಿಗೆ ದೇವರಾಣೆ ಗೊತ್ತಿರಲಿಲ್ಲ! ಆನ್ ಲೈನ್ ದರ್ಶನ ಬುಕಿಂಗ್ ವ್ಯವಸ್ಥೆಯೂ ಇತ್ತು ! ಸರ್ವಾಂಗಸುಂದರ ಸತ್ಯಾನಂದರ ಸರ್ವಾಭರಣ ಪೂಜೆ, ಅಷ್ಟಾಂಗಸೇವೆ ಎಲ್ಲವೂ ಸೇರಿದಂತೇ ಶಯನೋತ್ಸವವನ್ನೂ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಸತ್ಯಭಕ್ತಾನಂದ ಕೈಗೊಂಡಿದ್ದು ಬಂದ ಹಾಲೀ ’ಭಕ್ತರಿ’ಗಾಗಲೀ ಅಲ್ಲಿರುವ ’ನಿತ್ಯಭಕ್ತ’ರಿಗಾಗಲೀ ತಿಳಿದಿರಲೇ ಇಲ್ಲ. " ಜೈ ಜಗದೀಶಹರೇ ಸ್ವಾಮಿ ಸತ್ಯಾನಂದ ಹರೇ ...." ಎಂದು ಬಿಲ್ಡಿಂಗು ಹರಿದುಬೀಳುವಂತೇ ಪ್ರಾರ್ಥಿನೆ ನಡೆಸಿ ಮುಖಕ್ಕೆ ಮಂಗಳಾರತಿ ಬೆಳಗುವ ಆ ’ಭಕ್ತರಿ’ಗೆ ಅವರವರ ಇಷ್ಟಾರ್ಥ ಅಲ್ಲಲ್ಲಿ ಪ್ರಾಪ್ತವಾಗುತ್ತಿತ್ತು!

ಒಳಗೊಳಗೇ ಉರಿದುಬೀಳುತ್ತಿದ್ದ ಸತ್ಯಭಕ್ತಾನಂದ ತನ್ನ ಕೊನೆಯ ಕರಾರನ್ನು ಖಡಾಖಂಡಿತವಾಗಿ ಸತ್ಯಾನಂದರಲ್ಲಿ ಹೇಳಿದ. " ನೀನು ಏನು ಮಾಡ್ಕೋತೀಯೋ ಮಾಡ್ಕೋ ಹೋಗು " ಎಂದು ಸತ್ಯಾನಂದರು ಆಶೀರ್ವದಿಸಿದ್ದು ಜಾಸ್ತಿ ಜೀರ್ಣವಾಗದೇ ಯಾವುದೋ ಮಾಧ್ಯಮದ ವಠಾರದಲ್ಲಿ ವಾಂತಿಮಾಡಿಕೊಂಡುಬಿಟ್ಟಿದ್ದಾನೆ! ಸಾಸಿವೆಯನ್ನು ಸಾಗರದಷ್ಟು ವಿಸ್ತರಿಸಬಲ್ಲ ಅಪರಮಿತ ತಾಕತ್ತುಳ್ಳ ಮಾಧ್ಯಮ ವಾಹಿನಿಗಳಲ್ಲಿ ದಿನಗಟ್ಟಲೆ ವಾರಗಟ್ಟಲೇ ಅದೇ ಕಥೆ ! ಸತ್ಯಾನಂದರ ’ತಪಸ್ಸಿ’ನ ಕಥೆ! ವಿಷಯ ಗಂಭೀರ ಎಂಬ ಕುರುಹು ತಿಳಿದ ಆಡಳಿತ ಪಕ್ಷದವರು ಸಂಬಂಧಿಸಿದವರನ್ನು ಆಶ್ರಮಕ್ಕೆ ದರ್ಶನಕ್ಕೆ ಕಳುಹಿದರೆ ಅಷ್ಟೊತ್ತಿಗಾಗಲೇ ಗಾಳಿಸುದ್ದಿ ಪಡೆದ ಸ್ವಾಮಿ ಸತ್ಯಾನಂದರು ಘೋರ ತಪಸ್ಸಿಗಾಗಿ ಹಲವು ಸಿಮ್ಮುಗಳ ಸಮೇತ ಹಿಮಾಲಕ್ಕೆ ತೆರಳಿಬಿಟ್ಟಿದ್ದರು!

ಅದು ಹೇಗೋ ಯಾವುದೋ ಆಧಾರ ದೊರೆತ ಕಾಲಜ್ಞಾನೀ ಪೋಲೀಸರು ಕೆಲವೊಮ್ಮೆ ಉತ್ತಮ ಕೆಲಸವನ್ನೂ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದು ಸತ್ಯಾನಂದರಿಗೆ ಕಷ್ಟವಾಗಿತ್ತು. ಜನ್ಮದಲೇ ಇಂತಹ ಶತ್ರುಗಳನ್ನು ಕಂಡಿರದ ಸತ್ಯಾನಂದರು ನಸುನಗುತ್ತಲೇ ತಾವು ’ಹುದುಗಿ ತಪಸ್ಸಿಗೆ’ ಕೂತಿದ್ದ ಸ್ಥಳದಿಂದ ನಿಧಾನವಾಗಿ ನಡೆತಂದರು! ಪೋಲೀಸರು ಕರೆದಲ್ಲೆಲ್ಲಾ ಹೋದರು! ರಾಜಕೀಯದವರ ಕೃಪೆಯಿಂದ ಸತ್ಯಾನಂದರಿಗೆ ಕಠಿಣ ಸಜೆಯಿರಲಿಲ್ಲ. ಅವರನ್ನು ಗೌರವಾನ್ವಿತ ಖೈದಿ ಎಂಬುದಾಗಿ ತಿಂಗಳುಗಳ ಕಾಲ ನಡೆಸಿಕೊಳ್ಳಲಾಯ್ತು!

ಹಲವು ಸರ್ಕಸ್ಸುಗಳನ್ನು ಮಾಡಿದ ಮಿಕ್ಕುಳಿದ ಸತ್ಯಭಕ್ತಾನಂದ ಸಮೂಹ ’ಗುರುಗಳನ್ನು’ ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವಲ್ಲಿ ಅಂತೂ ಯಶಸ್ವಿಯಾಯ್ತು! ಹೊರಗೆ ಬಂದ ’ಸ್ವಾಮಿಗಳು’ ಪಕಪಕಪಕಪಕನೇ ನಕ್ಕರು! ಮರುದಿನ ಪ್ರಾಯಶ್ಚಿತ್ತಕ್ಕಾಗಿ ಬೆಂಗಳೂರಿನ ಸುತ್ತ ಸಿಗುವ ಎಲ್ಲಾ ಅಂಗಡಿಗಳಲ್ಲಿ ಸಿಗಬಹುದಾದ ಸೀಮೆ ಎಣ್ಣೆ ಖರೀದಿಸಲಾಯ್ತು. ಉರುಟಾದ ಚಿಕ್ಕ ಅಗಳ ಹೊಡೆದು ಅದರಲ್ಲಿ ಕಟ್ಟಿಗೆ ತುಂಡುಗಳನ್ನು ಹಾಕಿ ಸೀಮೆ ಎಣ್ಣೆ ಸುರಿದು ’ಪಂಚಾಗ್ನಿ’ ಹೊತ್ತಿಸಿ ಸತ್ಯಾನಂದರು ರಾಮಾಯಣದ ಸೀತೆಯ ಅಗ್ನಿದಿವ್ಯಕ್ಕಿಂತಲೂ ಹೆಚ್ಚಿನ ಸತ್ವಪರೀಕ್ಷೆ ಎಂದು ಸ್ವಯಂ ಘೋಷಿಸಿದರು! ಮತ್ತೆ ಮಾಧ್ಯಮವಾಹಿನಿಗಳಿಗೆ ಹಬ್ಬವೋ ಹಬ್ಬ ! ಆಶ್ರಮಕ್ಕೆ ಎಲ್ಲಿಲ್ಲದ ಜನ !! ಮತ್ತೆ ಮುಖಕ್ಕೆ ಮಂಗಳಾರತಿ! "ಸಂಭೋ ಮಹಾದೇವ ಸತ್ಯಾನಂದ"!

ಅಂಜುತ್ತಲೇ ಇದ್ದ ಅಂಜಿತಾ ತನ್ನ ಸ್ವಾಮಿ ಜೈಲಿನಿಂದ ಹೊರಬರುವವರೆಗೂ ಅಜ್ಞಾತವಾಸ ಅನುಭವಿಸಿದಳು! ಸತ್ಯಾನಂದ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಕ್ಕೆ ಮುಖ ಕೊಟ್ಟ ಅಂಜಿತಾ ತಮ್ಮ ನಡುವೆ ಅಂಥಾದ್ದೇನೂ ನಡೆದಿರಲಿಲ್ಲ ಎಲ್ಲಾ ವೀಡಿಯೋ ಮಾರ್ಫಿಂಗು ಎಂದಳು ! ಥೂ ಹಾಳಾದ್ ನನ್ಮಗಂದು ಟೆಕ್ನಾಲಜಿ ಕೆಲವೊಮ್ಮೆ ಸದ್ಬಳಕೆಯಾದರೂ ಕೆಲವೊಮ್ಮೆ ದುರ್ಬಳಕೆಯಾಗುತ್ತದೆ ಎಂಬುದಕ್ಕೆ ಈ ಮಾರ್ಫಿಂಗ್ ಎಂದಿ ಜಾರಿಕೊಳ್ಳುವ ಕ್ರಿಯೆ ಉದಾಹರಣೆ ಆಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ! ಸಿಕ್ಕಿದ ಅಷ್ಟೂ ಸಿಡಿಗಳನ್ನೂ ವೀಡಿಯೋ ನೋಡಿ ಅದು ಒರಿಜಿನಲ್ಲೋ ಮಾರ್ಫಿಂಗೋ ಎಂದು ಹೇಳಲು ಪ್ರಯೋಗಾಲಯಕ್ಕೆ ಕಳಿಸಿದರು! ಪ್ರಯೋಗಾಲಯದಲ್ಲಿ ವೀಡಿಯೋ ಮಾರ್ಫಿಂಗ್ ಎಂಬ ವಿಷಯವೇ ಹೊಚ್ಚಹೊಸದು-ಅಲ್ಲಿ ಅದನ್ನು ಪರಿಶೀಲಿಸಲು ಅಂತಹ ಯಾವುದೇ ಉಪಕರಣ ಇನ್ನೂ ಸಿದ್ಧವಿಲ್ಲ--ಹೀಗಾಗಿ ಅಲ್ಲಿನ ಸಿಬ್ಬಂದಿ ಮುಖಮುಖ ನೋಡಿಕೊಂಡು ನಕ್ಕರು! ಅಂತೂ ವಿಷಯ ಸಮಂಜಸವಾಗಿ ಇತ್ಯರ್ಥವಾಗದೇ ’ಸತ್ಯಾನಂದರ ಕಥೆ’ ಸುಳ್ಳೆಂದು ತೀರ್ಮಾನಿಸಿದರು!

ಜೈಲಿನಿಂದ ಮರಳಿದ ಸತ್ಯಾನಂದರಿಗೆ ಕನಸಲ್ಲೂ ಹಾರಿಬೀಳುವ ಅನುಭವ! ನಿತ್ಯ ದುಃಸ್ವಪ್ನ ಆರಂಭವಾಗಿ ಕೆಲವು ರಾತ್ರಿ ನಿದ್ದೆಯನ್ನೇ ತೊರೆದರು. ಹೊಸ ಇಮೇಜಿನ ಬಿಲ್ಡಪ್ಪಿಗಾಗಿ ಹೊಸಹೊಸ ಯೋಜನೆಗಳನ್ನೂ ಆಯೋಜನೆಗಳನ್ನೂ ಆರಂಭಿಸಿದರು! ಕುಂಡೆಯೋಗವನ್ನೂ ಕಲಿಸಿ ಬಂದ ಭಕ್ತರು ತಾವಾಗಿಯೇ ಕುಳಿತಲ್ಲೇ ಹಾರುವುದನ್ನೂ ಕಲಿಸಿದರು! ಹೋದವರು ಹೋಗಲಿ ಬಾರದವರು ಬಾರದೇ ಇರಲಿ ಎಂದುಕೊಂಡ ಒಂದು ತೆರನಾದ ಸಮೂಹ ಇವತ್ತಿಗೂ ಅಲ್ಲಿ ತನ್ನ ನಿತ್ಯಸೇವೆಯನ್ನು ಜಾರಿಯಲ್ಲಿಟ್ಟಿದೆ. ಆಶ್ರಮದಲ್ಲಿ ರಾತ್ರಿ ವಿದ್ಯುತ್ ಸರ್ಕಿಟ್ ಬದಲಾಗಿಹೋಗುತ್ತದೆ! ಯಾವ ಕ್ಯಾಮೆರಾಗಳೂ ಕೆಲಸಮಾಡದಂತೇ ಅದರ ಪವರ್ ಆನ್ ಪೆಟ್ಟಿಗೆಯನ್ನು ಖಜಾನೆಗಿಂತಲೂ ಭದ್ರಪಡಿಸಿದ ಸತ್ಯಾನಂದರು ಕೀಲಿಯನ್ನು ಕಾವಿಶಾಟಿಯಲ್ಲೇ ಕಟ್ಟಿಕೊಂಡಿದ್ದಾರೆ! ಅಂಜಿತಾ ಮತ್ತೆ ಮತ್ತೆ ಬರುತ್ತಾ ತನ್ನ ’ದೈಹಿಕ ಕಾಯಿಲೆ’ಗೆ ಪರಿಹಾರ ಕಂಡುಕೊಂಡಿದ್ದಾಳೆ! ಒಂದಾನೊಂದು ಕಾಲಕ್ಕೆ ಸಿನಿಮಾಗಳಲ್ಲಿ ನೋಡಿದ, ನೋಡಿ ಪಡೆಯಲಾರದೇ ಕನವರಿಸಿ ಕಾತರಿಸಿ ಬಳಲಿದ್ದ ಬಾಲಕ ಸತ್ಯ ಸ್ವಲ್ಪ ತಡವಾದರೂ ಸತ್ಯಾನಂದರಾಗಿ ಅಂಜಿತಾ ಕಾಮೇಶ್ವರಿಯ ಸಾಕ್ಷಾತ್ ದರ್ಶನ ಭಾಗ್ಯವನ್ನು ಕಾಯಂ ಕಬ್ಜಾಕ್ಕೆ ಪಡೆದಿದ್ದು ನಿಜಕ್ಕೂ ಈ ಭುವಿಯ ’ಸಾಧಕರಿ’ಗೆ ಆಶ್ಚರ್ಯವಾಗಿದೆ!

Friday, February 24, 2012

ಒತ್ತಡ-ನಿಗ್ರಹ


ಒತ್ತಡ-ನಿಗ್ರಹ

ಅನುಗಾಲವೂ ಚಿಂತೆ ಈ ಜೀವ ಜೀವನಕೆ
ತನುಮನಕೆ ಇಲ್ಲ ಸುಖ ಎಲ್ಲ ಸಂದೇಹ
ಕನಸುಗಳು ಏರುತ್ತ ತಕತಕನೆ ಕುಣಿವಾಗ
ಮನಸು ಬಳಲುತಲಿಹುದು | ಜಗದಮಿತ್ರ

ಅಧಿಕಾರ ಬೇಕೆಂಬ ಆಸೆ ಒಂದೆಡೆಯಲ್ಲಿ
ಪದಕುಸಿವ ಭಯವಿಹುದು ಇನ್ನೊಂದು ಕಡೆಗೆ
ಬೆದಕುತ್ತ ಹಲವರಲಿ ಅಂಗಲಾಚುವ ಕಾಲ
ಬದುಕು ಹೋರಾಟವೈ | ಜಗದಮಿತ್ರ

ಒಡೆಯನಣತಿಯ ಮೀರೆ ಹದಗೆಡುಗು ಜೀವನವು
ಬಿಡುಗಡೆಗೆ ಬಯಸುವುದು ಸೋತ ತನುಮನವು
ಕಡೆಗೊಮ್ಮೆ ತನುವೆದುರು ಮನಸೋತು ಮಣಿದಾಗ
ಕೆಡುಗು ದೇಹಸ್ಥಿತಿಯು | ಜಗದಮಿತ್ರ

ಸಿರಿವಂತ ನೆಂಟರನು ಕಂಡೊಮ್ಮೆ ಕುಳಿತಾಗ
ಕರೆವಂತೆ ಧನಿಕನಾಗುವ ಆಸೆ ಮನಕೆ !
ಹರಸಾಹಸದಿ ನಿತ್ಯ ಹಣಗಳಿಸುವಾಸೆಯಲಿ
ತಿರುಚಿ ಕೊಂಬುದು ಹೃದಯ | ಜಗದಮಿತ್ರ

ಸತಿಯಾಸೆ ಅತಿಯಾಗೆ ಪತಿಗಧಿಕದೊತ್ತಡವು
ಪತಿಯಾಸೆ ಅತಿಯಾಗೆ ಸತಿಗಕ್ಕು ನೋವು
ಸತಿಪತಿಗಳಿಬ್ಬರಿಗೂ ಅತಿಯಾಸೆ ಜೋರಾಗೆ
ಕಥೆಗೆ ಮಂಗಳವಕ್ಕು ! ಜಗದಮಿತ್ರ

ಮಕ್ಕಳಿಗೆ ಶಿಕ್ಷಣದಿ ಹೆಚ್ಚು ಗುಣಪಡೆವಂತೆ
ಇಕ್ಕಳದ ಅಡಕೊತ್ತು ಇಟ್ಟು ಹೆದರಿಸುತ
ಹೊಕ್ಕಳಿನ ಬಳ್ಳಿಕೊಯ್ಯುವಮುಂಚೆಯೇ ಶಾಲೆ !
ಮಕ್ಕಳಾಟವೆ ಬದುಕು ? ಜಗದಮಿತ್ರ

ಯುಗಧರ್ಮ ನಗಧರ್ಮ ಆಗಿಹುದು ಈ ದಿನದಿ
ಬಗೆಬಗೆಯ ಹಾದಿಯಲಿ ಮೋಸ-ವಂಚನೆಯು !
ನಗುನಗುತ ಬಂದವರೆ ನುಗ್ಗಿ ಕದ್ದೊಯ್ಯುವರು
ನಗಕೆ ಚೋರರ ಭಯವು | ಜಗದಮಿತ್ರ

ನಿತ್ಯ ಕುಳಿತಾಗೊಮ್ಮೆ ಬರೆದು ಕರ್ಮಂಗಳನು
ಸತ್ಯ-ಮಿಥ್ಯದ ಲೆಕ್ಕ ಒಪ್ಪಿಸುತ ಮನಕೆ
ತಥ್ಯದೊಳ್ ಪರಮಾತ್ಮ ಅಡಗಿಹನು ಮನದೊಳಗೆ
ಪಥ್ಯ ಸರಳತೆ ಇಹಕೆ | ಜಗದಮಿತ್ರ

ತಾಪ-ತ್ರಯಗಳಿಂ ಬೇಯುವುದು ಜೀವನವು
ಕೋಪ ಮೋಹಾದಿ ಮದ-ಮಾತ್ಸರ್ಯ ಗುಣಗಳ್
ವ್ಯಾಪಾರ ನಡೆದಿಹುದು ನಮಗರಿವೆ ಇಲ್ಲದಲೆ
ದೀಪಬುಡ ಕತ್ತಲವು | ಜಗದಮಿತ್ರ

ಯೋಗ-ಧ್ಯಾನವು ಬೇಕು ಭೋಗವೈಖರಿ ಜೊತೆಗೆ
ಕಾಗೆ-ಕುನ್ನಿಗೆ ಹಾರ ಇಡಬೇಕು ಬದುಕೆ
ಸಾಗರವು ಸಂಸಾರ ಆಗುವುದು ಸಾಕಾರ
ನೀಗು ಒತ್ತಡ ನಿರತ | ಜಗದಮಿತ್ರ

Thursday, February 23, 2012

ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......


ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......

ರಾಜಾರಾಮನ ರಾಜಸಭೆ ಸೇರಿದೆ. ವಂದಿಮಾಗಧರು, ಪಂಡಿತ-ವಿದ್ವನ್ಮಣಿಗಳು, ಕಲಾವಿದರು, ಸಂಗೀತಗಾರರು, ಅರಮನೆ ಆಡಳಿತ ವರ್ಗ ಎಲ್ಲಾ ಸೇರಿದ ಶ್ರೀರಾಮನ ಒಡ್ಡೋಲಗ. ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿಂಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ ’ನಮ್ಮ ಕಾಲ ಸನ್ನಿಹಿತವಾಗಿದೆ’ ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೇನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ’ ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು’ ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಠಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ’ ರಾಮನ ಕೂಗ ’ ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ತೊರೆದುಹೋಗುವ ಕಾಲಕ್ಕೆ ಅಣ್ಣನನ್ನೊಮ್ಮೆ ಭಕ್ತಿಯಿಂದ ನೆನೆದುಕೊಂಡಿದ್ದಾನೆ.ಇದು ಮಹಾಕವಿ ವಾಲ್ಮೀಕಿ ಬರೆದ ರಾಮಾಯಣದ ಕಥಾಭಾಗ. ಹಿಂದೆಯೂ ನನ್ನೊಂದು ಕವನಕ್ಕೆ ಪೂರಕವಾಗಿ ಇದನ್ನು ಹೇಳಿದ್ದೆ.

ಇವತ್ತಿನ ನಮ್ಮ ರಾಜಕೀಯದ ಮಾಜಿಗಳ ಭೋಜನಾಂತರ್ಗತ ಸಂದೇಶವನ್ನು ಅನೇಕರು ಈಗಲೇ ತಿಳಿದಿದ್ದೇವೆ! ಹಣಬಲವೋ ಜನಬಲವೋ ಅಥವಾ ಹಣದ ಆಸೆಗೆ/ಅಧಿಕಾರದ ಅಸೆಗೆ ಹಲ್ಕಿರಿದು ಬರುವ ಗೋಸುಂಬೆ ತೆರನ ಬಾಲಬಡುಕರ ಬಲವೋ ರಾಜಕೀಯ ಸ್ಥಿತ್ಯಂತರ ಕಾಣುತ್ತಿದೆ! ನೆಲಗಳ್ಳತನದಲ್ಲಿ ಆರೋಪಗಳನ್ನು ಹೊತ್ತ ಯಡ್ಯೂರಪ್ಪ ಜನರ ಒತ್ತಡಕ್ಕೆ ಮಣಿದು ಖುರ್ಚಿ ಬಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದೊಮ್ಮೆ ಪಕ್ಷದ ಮುಖಂಡರು ಅಸ್ತು ಎನ್ನದಿದ್ದರೆ ಪಕ್ಷ ಒಡೆಯಲು ಸಿದ್ಧವಿರುವುದೂ ಅಷ್ಟೇ ’ಅಪಾರ’ದರ್ಶಕ ! ಯಾರ ಕೈಗೆ ಅಧಿಕಾರ ಕೊಟ್ಟು ಮೂಗುದಾರವನ್ನು ತನ್ನ ಕೈಲೇ ಇರಿಸಿಕೊಂಡು ಕುಣಿಸಬೇಕೆಂದುಕೊಂಡಿದ್ದಿತ್ತೋ ಹಿಂದೆ ಸ್ನೇಹಿತ, ಮಿತ್ರ, ಆಪ್ತ ಎನಿಸಿದ್ದ ಅದೇ ವ್ಯಕ್ತಿ-ಅನಾಯಾಸವಾಗಿ ತನಗೆ ಒದಗಿಬಂದ ಅವಕಾಶದಲ್ಲಿ ತನ್ನತನವನ್ನು ಮೆರೆದು ರಾಜ್ಯದ ಜನತೆಗೆ ಒಳಿತನ್ನು ಮಾಡಲು ಇನ್ನೇನು ಕೂರಬೇಕೆನ್ನುವ ಹೊತ್ತಲ್ಲೇ ಕಿಬ್ಬದಿಯ ಕೀಲು ಮುರಿದಂತೇ ಪರೋಕ್ಷ ಝಾಡಿಸಿ ಒದ್ದಿರುವುದು ಕಣ್ಣಲ್ಲಿ ಕಂಡರೂ ಪರಾಂಬರಿಸಬೇಕಿಲ್ಲದ ವಿಷಯ !

ಕೊಟ್ಟ ಒಂದು ಮಾತಿಗೆ ತಪ್ಪಿ ನಡೆದಿದ್ದಕ್ಕೆ ಶ್ರೀರಾಮ ಒಪ್ಪಿನಡೆದ; ತನಗತೀ ಪ್ರಿಯನಾಗಿದ್ದ ತಮ್ಮ ಲಕ್ಷ್ಮಣನನ್ನು ಅಗಲಿರಲಾರದ ಸ್ಥಿತಿಯಲ್ಲೂ ಅಗಲಿದ, ದೇಹಾಂತ ಶಿಕ್ಷೆ ವಿಧಿಸಿದ. ಅದರೆ ಅದು ಇಂದಿಗೆ ಕಥೆಯಾಗಿ ಪುಸ್ತಕವಾಗಿ ಕುಳಿತಿದೆಯೇ ಹೊರತು ಯಾರಿಗೆ ಆ ಆದರ್ಶ ಬೇಕಾಗಿದೆ ಸ್ವಾಮೀ ? ರಾಜೀನಾಮೆ ಕೊಟ್ಟು ಬೇಡವೆಂದು ಕಾಣಿಸಿಕೊಳ್ಳದೇ ಉತ್ತರಭಾರತಕ್ಕೆ ಓಡಿದರೂ ಅಂದಿನ ರಾಜ್ಯಪಾಲರು ಅದನ್ನು ಅಂಗೀಕರಿಸದೇ ಹಾಗೇ ಇರಿಸಿದ ಘಟನೆ ನಡೆದಿದ್ದು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ. ಅಂದಿನ ರಾಜಕೀಯದವರಿಗೆ ಕೊನೇ ಪಕ್ಷ ಒಂದು ರೀತಿ ಮರ್ಯಾದೆ ಇತ್ತು; ಇವತ್ತು ಮರ್ಯಾದೆ ಎಂದರೇನು ಎಂದು ರಾಜಕೀಯದವರೇ ನಮ್ಮನ್ನು ಹಂಗಿಸಲು ಮುಂದಾಗುತ್ತಾರೆ. ಎಂತೆಂಥವರಿದ್ದಾರೆ: ನೇರವಾಗಿ ವಿಧಾನಸೌಧದಲ್ಲೇ ಲಂಚ ಪಡೆದವರಿದ್ದಾರೆ, ಮಿತ್ರನ ಹೆಂಡತಿಯನ್ನು ಭೋಗಿಸಿದವರಿದ್ದಾರೆ, ನರ್ಸ್ ಗಳನ್ನು ಅಪ್ಪಿಮುದ್ದಾಡಿ ಕೋರ್ಟಿನಲ್ಲಿ ಅವಳೊಡನೆಯೇ ರಾಜಿಮಾಡಿಕೊಂಡ ಡ್ಯಾನ್ಸ್ ರಾಜಾಗಳಿದ್ದಾರೆ,ಶಾಸಕಾಂಗ ಸಭೆಯಲ್ಲೇ ಕೂತು ನೀಲಿಚಿತ್ರದ ಮಜಾ ತೆಗೆದುಕೊಂಡ ಮಹಿಮಾನ್ವಿತರಿದ್ದಾರೆ! ಸಾಕೋ ಬೇಕೋ ?

ಇವರನ್ನೆಲ್ಲಾ ಆಡಿಸಲು ತನ್ನಿಂದ ಸಾಧ್ಯವಾಗುವುದಿಲ್ಲಾ ಅದಕ್ಕೇ ತನಗೆ ಮುಖ್ಯಮಂತ್ರಿ ಗಾದಿ ಬೇಡಾ ಎಂದಿದ್ದರಂತೆ ದಿ| ವಿ.ಎಸ್.ಆಚಾರ್ಯ ! ಅವರ ದೂರಾಲೋಚನೆ ಎಷ್ಟು ನಿಜವಾಗಿದೆ ಅಲ್ಲವೇ? ಹಾಸಿಗೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ನುಸುಳಿಕೊಳ್ಳುವ ಮನೆಹಾಳ ನಿಸ್ಸೀಮರಿರುವಾಗ ಪ್ರಜಾರಾಜ್ಯದ ಪ್ರಜೆಗಳ ಸುಖ ಯಾರಿಗೆ ಬೇಕಾಗಿದೆ? ಕಥೆಯೊಂದು ಹೀಗಿದೆ : ಅಕ್ಬರ್ ರಾಜನಾಗಿದ್ದಾಗ ಅವನಿಗೆ ಚಾಣಾಕ್ಷ ಮಂತ್ರಿಯಾಗಿದ್ದಾತ ಬೀರ್ಬಲ್. ಒಮ್ಮೆ ರಾಜಭಕ್ತಿಯನ್ನು ಪರಿಶೀಲಿಸುವ ಆಸೆಯಿಂದ ಬೀರ್ಬಲ್ ಪ್ರಜೆಗಳಿಗೆ ಒಂದು ಪರೀಕ್ಷೆ ಒಡ್ಡಿದ. ಹೊಸದಾಗಿ ಕಟ್ಟಿಸಿದ ಟಾಕಿಯೊಂದಕ್ಕೆ ಮೇಲ್ಭಾಗದಲ್ಲಿ ಚಿಕ್ಕ ಕೊಳವೆಯ ಕಿಂಡಿಯೊಂದನ್ನು ಬಿಟ್ಟು ಪ್ರತಿಯೊಬ್ಬರೂ ಒಂದೊಂದು ಚೊಂಬು ಹಾಲು ಸುರಿಯುವಂತೇ ಡಂಗುರ ಹೊಡೆಸಿದ. ರಾಜನಮೇಲಿನ ನಿಚ್ಚಳ ಭಕ್ತಿಯಿದ್ದವರು ಕಮ್ಮಿ ಇದ್ದರು! ಅರೆಮನಸ್ಸಿನಿಂದಲೇ ರಾಜನ ಟಾಕಿಗೆ ಚೊಂಬು ಹಾಲನ್ನು ನಾವೇಕೆ ಸುರಿಯಬೇಕೆಂದುಕೊಂಡು ’ಹಲವರು ಹಾಲನ್ನು ಹಾಕಿದಾಗ ತಾನೊಬ್ಬನೇ ನೀರು ಹಾಕಿದರೆ ತಾನು ಹಾಕಿದ್ದು ಹಾಲೇ ಎಂದು ತಿಳಿಯುತ್ತಾರೆ, ಯಾರಿಗೂ ಗೊತ್ತಾಗುವುದಿಲ್ಲ’ ಎಂದುಕೊಂಡು ಮುಚ್ಚಿದ ಬಾಯ ಚೊಂಬು ಹಿಡಿದು ಒಬ್ಬೊಬ್ಬರೂ ನಿಧಾನವಾಗಿ ಬಿಟ್ಟೂ ಬಿಟ್ಟೂ ಬಂದು ಟಾಕಿಗೆ ಸುರುವಿದರು! ಗೊತ್ತಾದ ಹೊತ್ತಿಗೆ ಬೀರ್ಬಲ್ ಅಕ್ಬರನ ಎದುರಲ್ಲಿ ಟಾಕಿಯ ಕೆಳಭಾಗದ ನಳವನ್ನು ತಿರುಗಿಸಿದ್ದಾನೆ. ಏನಾಶ್ಚರ್ಯ ಪರಿಶುದ್ಧ ಗಂಗಾಭವಾನಿ ಹೊರಗೆ ಹರಿದು ಬಂದಿದ್ದಾಳೆ ! ಅಕ್ಬರನ ಕಾಲಕ್ಕೇ ಪ್ರಜೆಗಳು ಈ ರೀತಿ ಇದ್ದರೆಂದಮೇಲೆ ಇಂದಿನ ಪ್ರಜೆಗಳಲ್ಲಿ ತಾವು ಮಾಡಿಸಿಕೊಂಡು ಹೋಗುವ ಸರಕಾರೀ ಮೊಹರಿನ ಅವಶ್ಯಕತೆಯ ಕೆಲಸಗಳಿಗಾಗಿ ಲಂಚ ನೀಡದೇ ಇರುವವರೆಷ್ಟು? ತಾವೊಬ್ಬರೇ ಒಳಗಿಂದಲೇ ಮನೆಗೇ ಹೋಗಿ ಕೊಟ್ಟು ಕೆಲಸಮಾಡಿಸಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡ ಮಹನೀಯರೆಷ್ಟು ಎಂದು ಪ್ರಜೆಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಯಥಾ ಪ್ರಜಾ ತಥಾ ರಾಜಾ ಎಂದು ಸಂಸ್ಕೃತ ತನ್ನ ಹೇಳಿಕೆಯನ್ನು ಬದಲಿಸಿಕೊಳ್ಳಲು ಸೂಚಿಸಿದೆ, ಇದಕ್ಕೆ ಕಾರಣ: ಪ್ರಜಾಸತ್ತೆ! ಪ್ರಜೆ ಸಾಯದೇ ಬದುಕಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ತನ್ನೊಳಗೆ ಹರಿಶ್ಚಂದ್ರನನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವಾಗ ಪ್ರಜಾಮೂಲದಿಂದ ಲಂಚ ಎಂಬ ಶಬ್ದವೇ ನಾಶವಾಗುತ್ತದೋ ಆಗ ರಾಜಕೀಯ ಒಂದು ಹಿಡಿತಕ್ಕೆ ಬರುತ್ತದೆ. ಪ್ರಜಾರಾಜ್ಯಕ್ಕೊಂದು ಘನತೆ, ಮರ್ಯಾದೆ ಇರುತ್ತದೆ. ಮೇವು ಕಂಡಲ್ಲಿ ಪಶುವೊಂದು ಸಹಜವಾಗಿ ನುಗ್ಗುವಂತೇ ರಾಜಕೀಯ ಆಡುಂಬೊಲದಲ್ಲಿ ಧನದಾಹದ ಹೆಬ್ಬುಲಿಗಳೇ ಸೇರಿಕೊಂಡು ಆಡುಗಳು ಬಲಿಯಾಗಿವೆ! ಪ್ರಜಾಸತ್ತೆ ಎಂಬ ನದಿ ಮಲಿನವಾಗಿದೆ; ಕೆಲವು ಕಡೆ ಹೂಳುತುಂಬಿದೆ; ಇನ್ನೂ ಎಲವುಕಡೆ ನೀತಿ-ನಿಯಮಗಳೆಂಬ ನೀರಿಲ್ಲದ ಬರಡು ನದಿಯಾಗಿದೆ! ಸಾಕ್ಷಾತ್ ದೂರ್ವಾಸನೋ ಕಾಲಪುರುಷನೋ ಬಂದರೂ ಅವರಿಗೇ ತಿರುಮಂತ್ರ ಹಾಕುವ ಪ್ರತ್ಯಂಗಿರಾ ದೇವಿಯ ಕಳ್ಳ ಭಕ್ತರು ವಿಧಾನಸೌಧ ಸೇರಿದ್ದಾರೆ-ಸೂರೆ ಹೊಡೆಯುತ್ತಿದ್ದಾರೆ!

ಕೆಲವರು ೫೦ ವರ್ಷದಿಂದ ಮೇದರೆ ಇನ್ನೂ ಕೆಲವರು ೪೦ ರಿಂದ ಮತ್ತೆ ಕೆಲವರು ೩೦...೨೦..೧೦...೫ ಹೀಗೇ ಶಕ್ತ್ಯಾನುಸಾರ ಮೇಯುತ್ತಲೇ ಸಮಯ ಸರಿದುಹೋಗುತ್ತಿದೆ; ಬಡರೈತ, ಬಡಪ್ರಜೆ ಹೊತ್ತಿನ ತುತ್ತಿಗೂ ಅಲ್ಲಿಲ್ಲಿ ತೂರಾಡುತ್ತಾ ಕೈಒಡ್ಡುವ ಪ್ರಸಂಗ ನಡೆದೇ ಇದೆ. ಕಾಡುಗಳು ನಾಶವಾಗಿ ಕಾಡುಪ್ರಾಣಿಗಳು ಹಸಿದು ಊರಿಗೆ ನುಗ್ಗಿ ಹಳ್ಳಿಗಳ ರೈತರ ವಸಾಹತುಗಳನ್ನು ನಾಶಪಡಿಸಿದರೆ, ಕಾಡುನಾಶಕ್ಕೆ ಕಾರಣವನ್ನು ಹುಡುಕಿದರೆ ಇದೇ ಕಳ್ಳರು ಅಲ್ಲೂ ಸಿಗುತ್ತಾರೆ! ಒಂದುಕಾಲಕ್ಕೆ ಶ್ರೀಗಂಧ ಭರಿತ ನಾಡಾದ ಕರ್ನಾಟಕ ಇಂದು ಅಪರೂಪಕ್ಕೆ ಔಷಧಿಗೂ ಗಂಧದ ಮರಗಳು ಸಿಗದಂತಹ ಪ್ರದೇಶವಾಗಿದೆ! ಶ್ರೀಮಂತೆಯಾಗಿದ್ದ ಭೂಮಿಯಾಯಿಯ ಬಸಿರನ್ನೇ ಬಗೆದು ಅದಿರುಗಳನ್ನು ಬರಿದಾಗಿಗಿಸಿ ಕೈಚೆಲ್ಲುವ ಹಂತಕ್ಕೆ ಆಳುವ ಪ್ರಭುಗಳು ಮುನ್ನಡೆದಿದ್ದಾರೆ. ತಮ್ಮ ಖುರ್ಚಿ, ತಮ್ಮ ಬೊಕ್ಕಸ ಇವುಗಳ ಬಗ್ಗೆ ಮಾತ್ರ ಸದಾ ಆಸಕ್ತರಾದ ಈ ಖೂಳರಿಗೆ ಕೂಳೂ ಸಿಗದಂತೇ ಗಡೀಪಾರು ಮಾಡಬೇಕಾದ ಜನಸಾಮಾನ್ಯರಾದ ಮತದಾರರು ಆಡಳಿತ ಕೇಂದ್ರವಾದ ಬೆಂಗಳೂರಿಗೆ ಬರುವುದಕ್ಕೂ ಕಾಸಿಲ್ಲದ ಸ್ಥಿತಿಯಲ್ಲಿ ಮರುಗಿದ್ದಾರೆ. ಕೈಲಾಗದ ಅನಿವಾರ್ಯತೆಗೆ, ಚುನಾವಣೆಯ ಸಂದರ್ಭದ ಮುಖ ತೋರಿಸಿ ಹಲ್ಲುಗಿಂಜುವ ನೇತಾರ ಪುಡಿಗಾಸಿಗೆ ಕಯ್ಯೊಡ್ಡಿ, ಕುಡಿಸಿದ ಅಮಲಿನಲ್ಲಿ ಧಣಿಹೇಳಿದ ಗುರುತಿಗೆ ಒತ್ತುವ ದಯನೀಯ ಸ್ಥಿತಿಯಲ್ಲಿರುವ ಜನಾಂಗಕ್ಕೆ ತಿಳಿಸಿಹೇಳಿದರೂ ಅವರು ಅರಿಯುತ್ತಿಲ್ಲ; ತಿಳಿಸಿ ಹೇಳುವವರಿಗೂ ಇಷ್ಟವಿಲ್ಲ! ಸುಶಿಕ್ಷಿತರಿಗೆ ಮತದಾನವೇ ಬೇಡವಾದರೆ ಅಶಿಕ್ಷಿತರಿಗೆ ಮತದಾನ ಮತ್ತೆ ಮತ್ತೆ ಬರುವ ಹೆಂಡದ ಹಬ್ಬವಾಗಿದೆ!

’ನೀತಿ ಇದು’ ಎಂದು ಸರಿಯಾದ ಮಾರ್ಗದಲ್ಲಿ ನಡೆವ ಮನಸ್ಸುಳ್ಳ ಪ್ರಬುದ್ಧ ರಾಜಕಾರಣಿಗಳ ಸಂಖ್ಯೆ ಕಮ್ಮಿ ಇದೆ. ಅವರ ಮಾತು ನಡೆಯುತ್ತಿಲ್ಲ. ಅಪರಾಧ ಮಾಡದೇ ಇದ್ದರೂ ಅಪರಾಧಿಯಂತೇ ತಲೆತಗ್ಗಿಸಿ ಕೂರಬೇಕಾದ ಅಶೋಕವನದ ಸೀತೆಯ ಅರಣ್ಯ ರೋದನದಂತೇ ಒಬ್ಬಿಬ್ಬರು ಕೂಗುತ್ತಿದ್ದಾರೆ-ಅವರ ಕೂಗು ಯಾರಿಗೂ ಕೇಳಿಸುತ್ತಿಲ್ಲ! ಪಕ್ಷ-ಪಕ್ಷಗಳಲ್ಲಿ ಇದ್ದ ಕೆಟ್ಟ ರಾಜಕೀಯ ಪಕ್ಷಗಳಲ್ಲೇ ಬಣಗಳಾಗಿ ವಿಜೃಂಭಿಸಿ ಯಾರು ಮಿತ್ರ ಯಾರು ಶತ್ರು ಎಂಬೆಲ್ಲಾ ಕೆಟ್ಟ ಭಾವಗಳನ್ನು ಒಡಮೂಡಿಸಿ ಶಾಸಕಾಂಗ ಎಂಬುದೊಂದು ಡೊಂಬರಾಟದ ಕಂಪನಿಯಾಗಿದೆ, ಅದರ ಪ್ರೋತ್ಸಾಹದಿಂದ ನಡೆಯುವ ಸರಕಾರ ಸರ್ಕಸ್ ಕಂಪನಿಯಾಗಿದೆ! ಅನೀತಿಯನ್ನೇ ನೀತಿ ಎಂದು ಸಾರುವ ದುಡ್ಡಿನ ದೊಡ್ಡಪ್ಪಗಳು ಪ್ರಜಾಸೇವೆಗೆ ಇದ್ದ ಜಾಗವನ್ನು ರಾಜಕೀಯ ಇಂಡಸ್ಟ್ರಿ ಮಾಡಿದ್ದಾರೆ; ಅದರಿಂದ ಬೇಜ್ಜಾನು ಹಣ ಗುಂಜುತ್ತಾರೆ! ಅಧಿಕಾರ ಹಿಡಿದವರ ಹಾಗೂ ಅವರ ಬಂಟರ ಬಳಗಕ್ಕೇ ಖಾಸಗೀ ತಾಂತ್ರಿಕ/ಮೆಡಿಕಲ್ ಕಾಲೇಜುಗಳನ್ನು ನಡೆಸಲು ಅನುಮತಿ, ಪೆಟ್ರೋಲ್ ಬಂಕ್ ನಡೆಸಲು ಅನುಮತಿ ಇತ್ಯಾದಿಯಾಗಿ ಅಧಿಕ ಇಳುವರಿಯ ಆಯಕಟ್ಟಿನ ಜಾಗಗಳಲ್ಲಿ ಆ ಧನದಾಹೀ ಹುಲಿಗಳು ಅಡಗಿ ಕೂತಿವೆ; ಸದಾ ಮೇಯುತ್ತಲೇ ಇರುತ್ತವೆ!

ಗತಿ ಮುಂದಿನದೇನು? ಎಂದರೆ ಎಲ್ಲರೂ ಆಕಾಶದತ್ತ ಮುಖಮಾಡಿ ಬರಗಾಲದ ಭೂಮಿಯಲ್ಲಿ ಗದ್ದೆ ನಾಟಿ ಮಾಡಿಕೊಂಡು ಆಕಾಶದತ್ತ ಹಣುಕುವ ಬಡರೈತರಂತೇ ಕಾಣುತ್ತಾರೆ! ರಾಜಕೀಯದ ಇಂತಹ ಡೊಂಬರಾಟಗಳನ್ನು ನಿಯಂತ್ರಿಸುವ ಸಲುವಾಗಿ ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಬೇಕಾಗಿದೆ. ಕೆಲವರು ಹೇಳುತ್ತಾರೆ ಮುದುಕು ರಾಜಕಾರಣಿಗಳು ಆಸ್ತಿ-ಪಾಸ್ತಿ ನ್ಯಾಯವತ್ತಾಗಿ ಮಾಡಿಕೊಂಡರು ಎಂದು; ಆ ಕಾಲಕ್ಕೆ ರೈಟ್ ಟಿ ಇನ್ಫಾರ್ಮೇಷನ್ ಆಕ್ಟ್ ಇರಲಿಲ್ಲ, ಲೋಕಾಯುಕ್ತ ಇರಲಿಲ್ಲ. ಹಾಗೊಮ್ಮೆ ಇದ್ದಿದ್ದರೆ, ಗಣಕಯಂತ್ರಗಳಲ್ಲಿ ಸರಕಾರೀ ಕಡತಗಳು ನೋಡಸಿಗುವಂತಿದ್ದರೆ ೫೦-೬೦ ವರ್ಷಗಳ ಕಾಲ ಯಾರೂ ಹಾಗೇ ರಾಜಕೀಯದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆಗ ಗಂಟುಕಟ್ಟಿದವರು ಭದ್ರವಾದರು-ಈಗ ಬಂದವರು ಪ್ರಯತ್ನಿಸಿ ಕೆಲವರು ವಿಫಲರದರು; ಇನ್ನೂ ಕೆಲವರು ಉಂಡೂ-ಕೊಂಡೂ ಹೋದರು! ಯಾರ್ಯಾರು ಎಷ್ಟೆಷ್ಟು ನುಂಗಿದರು ಎಂಬುದಕ್ಕೆ ದಾಖಲೆ ಸಿಗದಂತೇ ಆಗಿಬಿಟ್ಟಿದೆ-ಹೀಗಾಗಿ ಅವರು ಗೆದ್ದೆವೆಂದು ವೃದ್ಧನಾರೀ ಪತಿವೃತೆ ಎಂಬಂತಾಡುತ್ತಿದ್ದಾರೆ. ಈ ರಾಜ್ಯದ ’ಮುತ್ಸದ್ಧಿಗಳು’ ಎನಿಸಿಕೊಳ್ಳುವ ಕೆಲವು ಮುದುಕರಿಗೆ 'ಮೊಸಳೆಕಣ್ಣೀರಿನ ಕರಾಮತ್ತು ಕೆಲಸಮಾಡುವುದು' ಗೊತ್ತಿದೆ! ಅಂತಹ ’ಮುತ್ಸದ್ಧಿಗಳು’ ರಾಜ್ಯಕ್ಕಾಗಿಯಾಗಲೀ ದೇಶಕ್ಕಾಗಿಯಾಗಲೀ ಕೊಟ್ಟ ಕೊಡುಗೆಗಳೇನೂ ಇಲ್ಲ!! ಪ್ರಜಾತಂತ್ರದಲ್ಲಿ ಪ್ರಜೆಗಳಿಂದ ಬಂದ ಹಣವನ್ನೇ ಪ್ರಜೆಗಳಿಗಾಗಿ ಸ್ವಲ್ಪವಾದರೂ ಪ್ರಾಯೋಗಿಕವಾಗಿ ಬಳಸಿದ್ದರೆ ಇಲ್ಲಿನವರೆಗೆ ಈ ಸ್ಥಿತಿ ಇರುತ್ತಿರಲಿಲ್ಲ! ಮೇಲಿನ ಟಾಕಿಗೆ ಹಾಲು ತುಂಬಿದ ಕಥೆಯಂತೇ ಆಳುವ ದೊರೆಗಳಲ್ಲಿ ಬಹುತೇಕರು ಟಾಕಿಗೆ ಸುರಿದಿದ್ದು ನೀರನ್ನೇ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದಂತೇ ಎತ್ತಣ ರಾಮಾಯಣ ಎತ್ತಣ ರಾಜಕಾರಣ ? ಯಾವುದೇ ರೀತಿ-ನೀತಿ ಇಲ್ಲದ ದುಷ್ಟರಿಂದ, ಲಜ್ಜೆಗೆಟ್ಟ ಪಾತಕಿಗಳೂ ಧನಪಿಶಾಚಿಗಳೂ ಕುಣಿಯುವ ರಂಗಸ್ಥಳವಾಗಿ ವಿಧಾನಸೌಧ ಆಶ್ರಯ ನೀಡುತ್ತಿದೆ. ತಮ್ಮನ್ನೇ ಸರಿಪಡಿಸಿಕೊಳ್ಳಲಾರದ ಜನ [ಯಾವುದೇ ಪಕ್ಷವಿರಲಿ]ಪ್ರಜೆಗಳ ಕುಂದುಕೊರತೆಗಳನ್ನು ಲಕ್ಷ್ಯಿಸುವರೇ? ಉತ್ತರವನ್ನು ನಿಮ್ಮೆಲ್ಲರ ಊಹೆಗೆ ಬಿಟ್ಟು ಪೂರ್ಣವಿರಾಮ ಹಾಕಿದ್ದೇನೆ.

Sunday, February 19, 2012

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಪಶುಪತಿನಾಥ ಮಂದಿರದ ಮುಖ್ಯ ಮಹಾದ್ವಾರ

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ ಕರೆದು ಅರ್ಜುನ ಪಾಶುಪತಾಸ್ತ್ರವನ್ನೇ ಪಡೆದರೆ ರಾವಣ ಆತ್ಮ ಲಿಂಗವನ್ನೇ ಪಡೆದಿದ್ದ ಎಂಬುದು ಈ ನೆಲದ ಕಥೆ. ಇಂತಹ ನಮ್ಮ ಬೋಲೇನಾಥ ಯಾ ಬೋಳೇ ಶಂಕರ ಪುರಾಣದ ಭಾಗವತದ ಕಥಾಭಾಗಗಳಲ್ಲಿ ರಕ್ಕಸರಿಗೆ ವರಗಳನ್ನು ಕರುಣಿಸಿ ಸಂದಿಗ್ಧದಲ್ಲಿ ಸಿಲುಕಿಕೊಳ್ಳುವುದನ್ನೂ ಕೂಡ ಕಾಣಬಹುದಾಗಿದೆ. ಭೂತಗಣಗಳಿಗೆ, ರಕ್ಕಸರಿಗೆ ಪ್ರಿಯ ದೈವ ಶಿವನೇ ಆದರೂ ಪರೋಕ್ಷ ಅವರುಗಳ ನಿಯಂತ್ರಣಕ್ಕೂ ಆತ ಕಾರಣನಾಗಿದ್ದಾನೆ.

ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |.....

ಒಂದು ಚೊಂಬು ನೀರನ್ನು ನಿಷ್ಕಲ್ಮಶ ಹೃದಯದಿಂದ ಲಿಂಗರೂಪೀ ಶಿವನಮೇಲೆ ಎರಚಿದರೆ ಆತ ಸಂತೃಪ್ತ! ಸರಳತೆಯಲ್ಲಿ ಅತಿ ಸರಳ ಪೂಜೆ ಶಿವನ ಪೂಜೆ. ಇದೇ ಶಿವ ಕ್ರುದ್ಧನಾದರೆ ಮಾತ್ರ ಆಡುವುದು ತಾಂಡವ ! ಶಿವತಾಂಡವದ ಡಮರು ನಿನಾದಕ್ಕೆ ಸಮಸ್ತಲೋಕಗಳೂ ಅಂಜುತ್ತವೆ ಎಂಬುದು ಪ್ರತೀತಿ. ನರ್ತನದಲ್ಲಿಯೂ ಈತನದೇ ಮೊದಲಸ್ಥಾನವಾದ್ದರಿಂದ ನಟರಾಜ ಎಂಬ ಹೆಸರಿನಿಂದಲೂ ಪೂಜಿಸಲ್ಪಡುತ್ತಾನೆ.

ರಾತ್ರಿಯ ದೀಪಗಳಲ್ಲಿ ಪಶುಪತಿನಾಥ ದೇವಸ್ಥಾನ ಸಮುಚ್ಛಯ

ಶಿವನಿಲ್ಲದೇ ಶುಭ ಸಾಧ್ಯವೇ? ಶಿವ ಎಂದರೆ ಶುಭ ಎಂದೇ ಅಲ್ಲವೇ? ಮುಕ್ಕಣ್ಣ ತನ್ನ ಮೂರನೇ ಕಣ್ಣು ತೆರೆಯುವುದೂ ಕೂಡ ಕೋಪಗೊಂಡಾಗ ಎಂಬುದು ಸತ್ಯ. ಈ ಭೂಮಿ ಕಾಯುವುದೂ ಆರುವುದೂ ಬೇಗ ಹೇಗೋ ಹಾಗೇ ಈಶ್ವರನ ಸಿಟ್ಟು. ಅದು ಬಂದಷ್ಟೇ ಬೇಗ ಹೋಗುವುದೂ ಜನಜನಿತ. ಶಿವನನ್ನು ತಂಪಾಗಿರಿಸಿದರೆ ಜಗತ್ತಿಗೇ ತಂಪು ಎಂಬ ಕಾರಣದಿಂದ ಜಲಾಭಿಷೇಕ ನಡೆಸುವುದು ಸರ್ವವಿದಿತ. ಈಶ್ವರ ತನ್ನ ಅದಮ್ಯ ಶಕ್ತಿಯನ್ನು ತೇಜೋರೂಪದಲ್ಲಿ ಪ್ರಕಟಗೊಳಿಸಿದ್ದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಬುದು ಆಸ್ತಿಕರ ಅನಿಸಿಕೆ; ಇದು ವೈಜ್ಞಾನಿಕವಾಗಿಯೂ ಗಣಿಸಬಹುದಾದ ಅಂಶ!

ಕಾಶೀ ವಿಶ್ವನಾಥ ಜ್ಯೋತಿರ್ಲಿಂಗ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಮ್ ಮಹಾಕಾಳಮೋಂಕಾರಮಮಲೇಶ್ವರಮ್ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್|
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ|
ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ ||

ಏತಾನಿಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಭವ್ಯ ಭಾರತದ ಇಂತಿಂತಹ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳಿವೆ ಎಂಬುದನ್ನು ನೆನಪಿಸುವಂತೇ ರಚಯಿತವಾದ ಈ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಪಠಿಸಿದರೆ ಏಳು ಜನ್ಮಗಳ ಸಂಚಿತ ಕರ್ಮಗಳು ನಾಶವಾಗುತ್ತವೆ ಎಂದು ತಿಳಿಸಿದ್ದಾರೆ. ಜ್ಯೋತಿರ್ಲಿಂಗಗಳ ದರ್ಶನ ಎಲ್ಲರಿಗೂ ಸಾಧ್ಯವಲ್ಲ! ಅದಕ್ಕೆ ಬರೇ ಹಣವಿದ್ದರೆ ಸಾಲದು, ಯೋಗಬೇಕು! ಮೊದಲು ಮನಸ್ಸು ಸಿದ್ಧವಾಗಬೇಕು. ಆಮೇಲೆ ಯಾತ್ರೆಗೆ ಅನುಕೂಲಕರವಾದ ದೈಹಿಕ ಅನುಕೂಲವಿರಬೇಕು, ಸಮಯ ದೊರೆಯಬೇಕು, ಸಾಂಸಾರಿಕ ತಾಪತ್ರಯಗಳಿಂದ ತುಸು ಬಿಡುಗಡೆ ದೊರೆಯಬೇಕು. ಈ ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಪೂಜೆಗಳು ಜರುಗುತ್ತವೆ. ಶಿವಪೂಜಾ ವೈಭವಗಳನ್ನು ಈ ಹನ್ನೆರಡು ಕ್ಷೇತ್ರಗಳಲ್ಲಿ ಪಡೆಯಬಹುದಾಗಿದೆ.

ಶ್ರೀ ಪಶುಪತಿನಾಥ ಲಿಂಗ ಚಿತ್ರ-೧

ಶ್ರೀ ಪಶುಪತಿನಾಥ ಲಿಂಗ ಚಿತ್ರ-೨

ಪಂಚ ಮುಖಗಳುಳ್ಳ ಶ್ರೀ ಪಶುಪತಿನಾಥನ ಪ್ರಧಾನ ಲಿಂಗ

ಇವೆಲ್ಲವುಗಳಿಗಿಂತ ನಮ್ಮ ಅವಿಭಜಿತ ಭಾರತದ ಒಂದು ಭಾಗವಾಗಿದ್ದ ನೇಪಾಳದಲ್ಲಿ ಶಿವ ಪಶುಪತಿನಾಥನಾಗಿದ್ದಾನೆ! ಈ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಭಕ್ತಜನ ಬೋಲೇನಾಥ ಎಂದು ಕರೆಯುವ ಶಿವ ಪಶುಪತಿ ಎನಿಸಿದ ಬಗ್ಗೆ ಅಲ್ಲಿನ ಪ್ರಾದೇಶಿಕ ಕಥೆಗಳು ಹಲವು. ನಂದೀವಾಹನನಾದ ಶಂಕರ ಸಹಜವಾಗಿ ಪಶುಪತಿಯೆನಿಸಿದರೂ ಅಲ್ಲಿರುವ ಕಥೆಗಳೇ ಬದಲು !

ಮೊದನಲೆಯ ಕಥೆ ಸಾರುವುದು ಶಿವ-ಪಾರ್ವತಿ ಸುತ್ತಾಡುತ್ತಾ ಬಾಗ್ಮತೀ ದಡಕ್ಕೆ ಬಂದಾಗ ಶಿವನಿಗೆ ಜಿಂಕೆಯಾಗಿ ವಿಹರಿಸುವ ಆಸೆಯಾಗುತ್ತದೆ. ಪರಮಾತ್ಮನಾತ ಕೇಳಬೇಕೇ ? ಆ ಕ್ಷಣದಲ್ಲೇ ಶಿವ-ಪಾರ್ವತಿ ಹರಿಣಗಳಾಗಿ ಅಲ್ಲಿನ ಕಾಡಿನಲ್ಲಿ ವಿಹರಿಸತೊಡಗಿದರಂತೆ. ದೇವತೆಗಳು ದೇವಲೋಕದಲ್ಲಿ ಶಿವನ ಬರವನ್ನು ಕಾದೇ ಕಾದರು! ಶಿವ-ಸತಿಯರ ಪತ್ತೆಯೇ ಇರಲಿಲ್ಲ. ಭೂಮಿಗೆ ಬಂದು ಹುಡುಕುತ್ತಾ ಹುಡುಕುತ್ತಾ ಬಾಗ್ಮತೀ ನದಿಯ ದಡದಲ್ಲಿ ಹರಿಣದ ರೂಪದಲ್ಲಿರುವ ಶಿವ-ಪಾರ್ವತಿಯರನ್ನು ಕಂಡು ಬೆನ್ನಟ್ಟಿದರು! ಶಿವ ಭುವಿಯಲ್ಲೇ ಇರುವ ಮನದಿಚ್ಛೆಯಿಂದ ಅಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ. ಓಡತೊಡಗಿದ ಶಿವನನನ್ನು ಹಿಡಿಯುವಾಗ ಮೃಗದ ಕೊಂಬು ಕಿತ್ತು ದೇವನೊಬ್ಬನ ಕೈಗೆ ಬಂತು. ಶಿವನ ಕೋಪಕ್ಕೆ ಹೆದರಿದ ದೇವತೆಗಳು ಅಲ್ಲೇ ನಿಂತು ಆ ಕೊಂಬನ್ನು ಭೂಮಿಯಲ್ಲಿ ನೆಟ್ಟು ಪ್ರಾರ್ಥಿಸಿತೊಡಗಿದರು; ಪೂಜಿಸತೊಡಗಿದರು. "ಹೇ ಪಶುಪತೇ ಕೃಪಯಾ ದೇವಲೋಕಮಾಗಚ್ಛತು " ಎಂದು ಪರಿಪರಿಯಾಗಿ ಕೇಳಿಕೊಂಡಾಗ ಶಿವ ದೇವಲೋಕಕ್ಕೆ ಮರಳಿದನಾದರೂ ಕೊಂಬು ಮಾತ್ರ ಭುವಿಯಲ್ಲೇ ಉಳಿಯಿತು. ಭುವಿಯ ಭಕ್ತರ ಸಂತೋಷಕ್ಕಾಗಿ, ಇಲ್ಲಿನ ಜನರ ಸಂಕಷ್ಟಗಳ ನಿವಾರಣೆಗಾಗಿ ಅದನ್ನೇ ಪೂಜಿಸಲಿ ಎಂದ ಪರಶಿವ ಪಶುಪತಿಯಾಗಿ ಆ ಜಾಗದಲ್ಲುಳಿದ! ಮುಗ್ಧ ಶಿವ ಏನು ಕೇಳಿದರೂ ಕೊಡುವ ಸ್ವಭಾವದವನಾದ್ದರಿಂದ ಅಲ್ಲಿನ ಜನ ಪ್ರೀತಿಯಿಂದ ಬೋಲೇನಾಥ ಎಂದೂ ಕರೆಯತೊಡಗಿದರು.

ಎರಡನೆಯ ಕಥೆ ಹೀಗಿದೆ: ದಕ್ಷಯಜ್ಞದಲ್ಲಿ ಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿಕೊಂಡ ಸತಿಯನ್ನು ಎತ್ತಿಕೊಂಡ ಹೊರಟ ಶಿವ. ಸತಿಯ ಶರೀರದ ಭಾಗಗಳು ಆಗಲೇ ಅಲ್ಲಲ್ಲಿ ಕುಸಿದು ಬೀಳತೊಡಗಿದ್ದವು. ಹಾಗೆ ಬಿದ್ದ ಸ್ಥಳಗಳಲ್ಲೆಲ್ಲಾ ದೇವೀ ದೇವಾಲಯಗಳು ಸ್ಥಾಪಿತವಾದವು. ಅಂತಹ ದೇವಾಲಯವೊಂದು ಗುಹ್ಯೇಶ್ವರೀ ದೇವಿ ಸ್ಥಾನ. ಅದು ಪಶುಪತಿನಾಥ ಮಂದಿರದ ಸಮುಚ್ಛಯದಲ್ಲೇ ಇದೆ! ಸತಿಗಾಗಿ ಶಿವ ಅಲ್ಲಿ ನೆಲೆಸಿದ ಎಂಬುದು ಈ ಕಥೆಯ ಐತಿಹ್ಯ.

ಕಥೆ ಮೂರು : ಭೂಮಂಡಲವನ್ನು ಒಂದು ಕಾಲಕ್ಕೆ ನಾಗಗಳು ಆಳುತ್ತಿದ್ದವು. ಅವುಗಳಲ್ಲಿ ವಾಸುಕಿ ಒಬ್ಬ. ವಾಸುಕಿ ತನ್ನ ಆಡಳ್ತೆಯ ಪ್ರದೇಶವಾದ ನೇಪಾಳದಲ್ಲಿ ಶಿವನನ್ನು ಪೂಜಿಸುವ ಸಲುವಾಗಿ ಶಿವಲಿಂಗವೊಂದನ್ನು ಸ್ಥಾಪಿಸಿದ. ಅದೇ ಪಶುಪತಿನಾಥ ಲಿಂಗ !

ಹಗಲು ವೀಕ್ಷಣೆಯಲ್ಲಿ ಪಶುಪತಿನಾಥ ದೇಗುಲದ ವಿಮಾನ ಗೋಪುರ

ಕಥೆ ನಾಲ್ಕು : ಬೌದ್ಧಾವತಾರೀ ಮಹಾವಿಷ್ಣು ತನ್ನ ಸಿದ್ಧಿಗಾಗಿ ನೇಪಾಳದ ಮಂಡಿಹಾಟು ಪ್ರದೇಶದಲ್ಲಿ ಪಂಚಾಗ್ನಿಯನ್ನು ಸೃಷ್ಟಿಸಿ ತಪಸ್ಸು ನಡೆಸಿದ. ಅಲ್ಲಿನ ಆ ಉಷ್ಣತೆಗೆ ಮಣಿಮತಿ ಎಂಬ ನದಿಯ ಉಗಮವಾಯಿತು. ಸ್ಥಾನಿಕವಾಗಿ ಅಲ್ಲಿದ್ದ ಪಾರ್ವತೀ ದೇವಿ ಪ್ರಸನ್ನಳಾಗಿ ಬುದ್ಧನಿಗೆ ವಜ್ರಯೋಗಿನಿಯಾಗಿ ಕಂಡು ವರವನ್ನು ನೀಡಲು ಮುಂದಾದಳು. ಬುದ್ಧ ತಪಗೈದ ಆ ಪ್ರದೇಶದಲ್ಲಿ ಆತ ಲಿಂಗವೊಂದನ್ನು ಸ್ಥಾಪಿಸಲೆಂದೂ, ಅಲ್ಲಿ ಬೌದ್ಧರು ಮತ್ತು ಹಿಂದೂ ಸಮುದಾಯದವರು ಪರಸ್ಪರ ಸೌಹಾರ್ದಯುತ ಬದುಕು ಬದುಕುವರೆಂದು ತಿಳಿಸಿ ಅಂತರ್ಧಾನಳಾದಳು. ವಜ್ರಯೋಗಿನಿಯ ಇಚ್ಛೆಯಂತೇ ಬಾಗ್ಮತಿ ಮತ್ತು ಮಣಿಮತಿ ನದಿಗಳ ಸಂಗಮದ ಜಾಗದಲ್ಲಿ ಸ್ವತಃ ಬುದ್ಧನೇ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ. ಅದೇ ಇಂದಿನ ಪಶುಪತಿನಾಥ ಲಿಂಗ !

ಮೂಲ ಭಟ್ಟ ಮತ್ತು ಸಹಭಟ್ಟ : ಕನ್ನಡ ಕರಾವಳಿಯ ಪುರೋಹಿತರು, ಅಲ್ಲಿನ ಸಾಂಪ್ರದಾಯಿಕ ಪೂಜಾ ತೊಡುಗೆಯಲ್ಲಿ

ಒಂದುಕಾಲಕ್ಕೆ ಕನ್ನಡದ ಪ್ರಥಮ ದೊರೆ ಬನವಾಸಿಯ ಮಯೂರವರ್ಮ ತನ್ನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಯಲ್ಲಿ ಅನೇಕ ರಾಜ್ಯಗಳನ್ನು ಜಯಿಸುತ್ತಾ ನೇಪಾಳಕ್ಕೆ ಬಂದ. ಅಲ್ಲಿಯೂ ಜಯಭೇರಿ ಬಾರಿಸಿ ತನ್ನ ಸಂಸ್ಥಾನದ ಭಾಗವಾಗಿ ನೇಪಾಳವನ್ನು ಸ್ವೀಕರಿಸಿದ! ತನ್ನ ಇಷ್ಟದಂತೇ ಅಲ್ಲಿನ ಪಶುಪತಿನಾಥನನ್ನು ಪೂಜಿಸಲು ಕರ್ನಾಟಕದ ಕರಾವಳಿಯ ಬ್ರಾಹ್ಮಣ ಪುರೋಹಿತರನ್ನೇ ನೇಮಿಸಿದ.

ಪಶುಪತಿನಾಥನ ಹಿಂದೆ ಇಂತಹ ಹಲವು ಐತಿಹ್ಯಗಳಿವೆ. ಕ್ರಿಸ್ತನ ಮರಣಾನಂತರ ೪೦೦ ವರ್ಷಗಳಿಂದ ದೇವಾಲಯ ಇದ್ದ ದಾಖಲೆ ಸಿಗುತ್ತದೆ. ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿ ಕೆಲವು ಮೌಢ್ಯಗಳು ಸೇರಿಕೊಂಡು ಅಲ್ಲಿ ದೇವದೇವನ ಸಂಪ್ರೀತಿಗಾಗಿ ಮಾನವ ಬಲಿಯನ್ನು ನಡೆಸುತ್ತಿದ್ದರು. ಕೇದಾರದಲ್ಲಿ ತಪಸ್ಸು ನಡೆಸಿದ ಆದಿ ಶಂಕರರು ನೇಪಾಳದ ಕಂಠ್ಮಂಡುವಿನ ಪಶುಪತಿನಾಥ ದೇವಸ್ಥಾನಕ್ಕೆ ತೆರಳಿ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಕರೆದು ನರಬಲಿಯನ್ನು ನಿಲ್ಲಿಸುವಂತೇ ತಿಳಿಸಿಹೇಳಿದರು, ಮಾತ್ರವಲ್ಲ ನಡೆಸಬೇಕಾದ ಪೂಜಾವಿಧಾನಗಳ ಬಗ್ಗೆಯೂ ತಿಳಿಸಿದರು. ಅಲ್ಲಿರುವ ಮೌಢ್ಯಗಳನ್ನು ತೆಗೆದುಹಾಕಿ ಹೊಸದಾಗಿ ಆ ಲಿಂಗವನ್ನು ಕಳಾಪೂರ್ಣವಾಗುವಂತೇ ಮಾಡಿದರು. ಶಂಕರರ ಅಣತಿಗೆ ಮಣಿದ ಮಹಾರಾಜ ಸಾತ್ವಿಕ ಪೂಜೆಗೆ ಒಪ್ಪಿದನಲ್ಲದೇ ಪೂಜೆ ಸಮರ್ಪಕವಾಗಿ ನಡೆಯಲು ಭಾರತದ ದಕ್ಷಿಣ ಭೂಪ್ರದೇಶದಿಂದ ವೇದ-ವೇದಾಂಗಗಳನ್ನು ಓದಿಕೊಂಡ ಬ್ರಾಹ್ಮಣರನ್ನು ಕಳುಹಿಸಬೇಕಾಗಿ ಪ್ರಾರ್ಥಿಸಿದ. ಶಂಕರರು ಒಪ್ಪಿ ಪೂಜೆ ಸರಿಯಾದ ಕ್ರಮದಲ್ಲಿ ನಡೆಯಲು ಆರಂಭವಾಯ್ತು. ಅಂದಿನಿಂದ ಸದಾ ಕರ್ನಾಟಕದ ಅದರಲ್ಲೂ ಕರಾವಳೀ ಪ್ರಾಂತದ ಬ್ರಾಹ್ಮಣ ಪುರೋಹಿತರು ಪಶುಪತಿನಾಥನ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮ್ಮ ರಾಜ್ಯಕ್ಕೂ ಮತ್ತು ಪಶುಪತಿನಾಥನಿಗೂ ಇರುವ ನೇರ ಸಂಬಂಧ !

ಕೈಲಾಸ ಮಾನಸ ಸರೋವರದ ಒಂದು ವಿಹಂಗಮ ದೃಶ್ಯ

ಅಲ್ಲಿ ಪೂಜೆಗೆ ಒಟ್ಟೂ ಐದು ಮಂದಿ ಬ್ರಾಹ್ಮಣರು ಇರುತ್ತಾರೆ. ಮುಖ್ಯ ಪುರೋಹಿತನನ್ನು ಮೂಲ ಭಟ್ಟ ಅಥವಾ ರಾವಳ ಎಂಬುದಾಗಿ ಕರೆಯುತ್ತಾರೆ. ದೇವಸ್ಥಾನದ ವ್ಯಾವಹಾರಿಕ ಆಗುಹೋಗುಗಳ ಕುರಿತು ಕಾಲಕಾಲಕ್ಕೆ ಈತ ನೇರವಾಗಿ ನೇಪಾಳದ ರಾಜನಿಗೆ ವರದಿ ಒಪ್ಪಿಸಬೇಕಿತ್ತು. ರಾಜನೊಡನೆ ನೇರ ಸಂಪರ್ಕ ಇರುವುದು ಮೂಲ ಭಟ್ಟನಿಗೆ ಮಾತ್ರ! ಅಂದರೆ ಎಂತಹ ಆದ್ಯತೆ ನೀಡಿದ್ದರು ಎಂಬುದನ್ನು ಗಮನಿಸಬಹುದಾಗಿದೆ. ಕ್ರಿ.ಶ. ೨೦೦೯ ರಲ್ಲಿ ರಾಜಾಧಿಕಾರ ತಪ್ಪಿ ಪ್ರಜಾತಂತ್ರ ಆಡಳಿತಕ್ಕೆ ಬಂತು. ಮಾವೋವಾದಿಗಳು ಬ್ರಾಹ್ಮಣ ಪೂಜೆಯನ್ನು ವಿರೋಧಿಸಿ ತಾವೇ ಪೂಜೆ ಮಾಡುತ್ತೇವೆ ಎಂದು ಅಲ್ಲಿರುವ ಭಟ್ಟರುಗಳನ್ನು ಹಿಡಿದರು, ಬಡಿದರು. ಲಿಂಗವನ್ನು ಸ್ಪರ್ಶಿಸುವುದಕ್ಕೆ ಐದುಮಂದಿ ಬ್ರಾಹ್ಮಣ ಪುರೋಹಿತರ ಹೊರತು ಮತ್ತೆ ಯಾರಿಗೂ ಅವಕಾಶವಿರಲಿಲ್ಲ. ಆಗಮೋಕ್ತ ರೀತ್ಯಾ ದೇವಾಲಯದ ಪೂಜೆಗಳು ನಡೆಯುತ್ತಿದ್ದವು. ಇದನ್ನೇ ವಿರೋಧಿಸಿ ಕೆಲಕಾಲ ಗಲಭೆ-ಹಿಂಸೆ ನಡೆಯಿತು. ಕಟ್ಲೆ ನೇಪಾಳದ ಪರಮೋಚ್ಚ ನ್ಯಾಯಾಲಯದ ಕಟ್ಟೆಗೇರಿತು. ನ್ಯಾಯಾಲಯ ದೇವಸ್ಥಾನದಲ್ಲಿ ಯಾರೇ ಆದರೂ ಪೂಜೆ ಮಾಡಬಹುದೆಂಬ ಆಜ್ಞೆ ಹೊರಡಿಸಿದ ಕೆಲವೇ ದಿನಗಳಲ್ಲಿ ಕೆಲವು ಅವಘಡಗಳು ಘಟಿಸಿದವು! ನೇಪಾಳದ ಜನ ಮತ್ತೆ ಪೂಜೆಯ ಸಲುವಾಗಿ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ನಡೆದರು! ಪುನಃ ಅಲ್ಲಿ ನಮ್ಮ ಕರಾವಳಿಯ ಬ್ರಾಹ್ಮಣರನ್ನೇ ಪೂಜೆಗೆ ನಿಯಮಿಸಲಾಗಿದೆ!

ಅಂತೂ ಪಶುಪತಿಯ ಪೂಜೆಗೆ ಇಷ್ಟೆಲ್ಲಾ ಕಥೆಗಳು ಕಾಲಕಾಲಕೂ ಜನಿಸಿದವು ಎಂಬುದು ಆತನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಭೋಲೇನಾಥನ ಸನ್ನಿಧಾನ ನೋಡಲೂ ಕೂಡ ಸಹಜವಾಗಿ ರಮಣೀಯವಾಗಿದೆ. ಹಿಮಾಲಯದವರೆಗೂ ತೆರಳುವ ಭಕ್ತರು ಅನುಕೂಲವಿದ್ದರೆ ನೇಪಾಳದ ಕಂಠ್ಮಂಡುವಿನ ಪಶುಪತಿನಾಥನನ್ನೂ ದರ್ಶಿಸಿದರೆ ಒಳ್ಳೆಯದು. ಅದರಂತೇ ಶಿವನ ವಾಸಸ್ಥಳವೆಂದು ಪ್ರಚಲಿತವಾದ ಆದರೆ ವಿಪರ್ಯಾಸವಾಗಿ ಈಗ ಚೈನಾ ಆಳ್ವಿಕೆಯ ಭೂಭಾಗಕ್ಕೆ ಸೇರ್ಪಡೆಯಾದ ಕೈಲಾಸ-ಮಾನಸ ಸರೋವರ ಕೂಡ ನೋಡಲೇಬೇಕಾದ ರಮಣೀಯ ಸ್ಥಳಗಳಲ್ಲಿ ಒಂದು. ಇಲ್ಲೆಲ್ಲಾ ಹೋಗಲು ಎದೆಗಾರಿಕೆ ಬೇಕು! ಪ್ರಯಾಣ ದುರ್ಗಮ, ಹವಮಾನದ ವೈಪರೀತ್ಯಗಳನ್ನು ಲೆಕ್ಕಿಸುತ್ತಾ, ಸಿಗಬಹುದಾದ ಹೆಲಿಕಾಪ್ಟರ್ ಗಳಲ್ಲಿ ಧೈರ್ಯಗೆಡದೇ ಕೂತು, ಆಮ್ಲಜನಕದ ಕೊರತೆ ಬಾಧಿಸಿದರೂ ತಾಳಿಕೊಂಡು ದರ್ಶಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ದೂರದಲ್ಲಿ ಕೈಲಾಸ ಪರ್ವತ ಹಿನ್ನೆಲೆಯಾಗುಳ್ಳ ಮಾನಸ ಸರೋವರದ ಚಿತ್ರ

ಪರಶಿವನ ಆರಾಧನೆಗೆ ಪ್ರಮುಖವಾಗಿ ಬಳಸುವುದು ರುದ್ರ: ನಮಕ-ಚಮಕಗಳು. ಸುಶ್ರಾವ್ಯ ಸ್ವರಮೇಳದಲ್ಲಿ ರುದ್ರಾಭಿಷೇಕ ನಡೆಸಿದಾಗ, ಅದನ್ನು ಕೇಳುವ ಮನಸ್ಸಿಗೆ ಸಿಗುವ ಆನಂದ ಇನ್ನಾವ ಮಂತ್ರದಿಂದಲೂ ಸಿಗುವುದು ಆಸಾಧ್ಯ! ಜೀವವೈಜ್ಞಾನಿಕ ವಿಶ್ಲೇಷಣೆಯಂತೇ ನರಮಂಡಲ ಮತ್ತು ಮೆದುಳಿನ ಸಂತುಲಿತ ಕ್ರಿಯೆಗೆ ಸ್ವಸ್ಥ ಮನಸ್ಸು ನಮ್ಮದಾಗುವುದಕ್ಕೆ ಈ ವೇದಮಂತ್ರಗಳ ಅದರಲ್ಲೂ ರುದ್ರ ಪಠಣ, ಶ್ರವಣ ಮತ್ತು ಮನನ ಕಾರಣ ಎಂಬುದಾಗಿ ತಿಳಿದುಬಂದಿದೆ. ರಕ್ತದೊತ್ತಡ ಸಮತೋಲನವಿಲ್ಲದ ಜನ ರುದ್ರಾಭಿಷೇಕ ನಡೆಯುವ ಸ್ಥಳದಲ್ಲಿ ಆಗಾಗ ಕೂರುವುದರಿಂದ, ರುದ್ರಾಕ್ಷಿಯ ಮಾಲೆ ಧರಿಸುವುದರಿಂದ ಅದರಿಂದ ಪರಿಹಾರ ಕಾಣಬಹುದಾಗಿದೆ! ಅಭಿಷೇಕ ಮಾಡಿ ತೆಗೆದ ತೀರ್ಥವನ್ನು ಪ್ರಾಶನಮಾಡುವುದರಿಂದ, ಪ್ರೋಕ್ಷಿಸಿಕೊಳ್ಳುವುದರಿಂದ ಶಾರೀರಿಕ ಬಾಧೆಗಳನ್ನು ಕಳೆದುಕೊಳ್ಳುವುದು ತಿಳಿದುಬಂದ ವಿಷಯ! ಇಂದು ನಾವು ತಿಳಿದ ವಿಜ್ಞಾನಕ್ಕಿಂತ ಹೆಚ್ಚಿನ ಆಳವಾದ ಜ್ಞಾನ ನಮ್ಮ ಋಷಿಮುನಿಗಳಿಗೆ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೇ ಉದಾಹರಣೆ ಬೇಕೇ ?

ಬೇಡನೊಬ್ಬ ಬೇಟೆಗೆ ತೆರಳಿ ಏನೂ ಸಿಗದೇ, ದಾರಿತಪ್ಪಿ, ಹಸಿದ ಹೊಟ್ಟೆಯಲ್ಲಿ ದಟ್ಟ ಕಾನನದಲ್ಲಿ ರಾತ್ರಿ ಕಳೆಯಬೇಕಾಗಿ ಬಂತು. ಮನೆಯಲ್ಲಿರುವ ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ, ಮೇಲೆರಗಬಹುದಾದ ಹಿಂಸ್ರ ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹತ್ತಿರವೇ ಇದ್ದ ಮರವೊಂದನ್ನು ಏರಿದ. ಬೇಸರ ಕಳೆಯಲು ತನಗೇ ಅರಿವಿಲ್ಲದೇ ಎಲೆಗಳನ್ನು ಕಿತ್ತು ಕಿತ್ತು ನೆಲಕ್ಕೆ ಬಿಸುಟ. ನೆಲದಲ್ಲಿ ನೆಲೆಯಾಗಿದ್ದ ಶಿವಲಿಂಗ ಆತನಿಗೆ ಗೋಚರಿಸಲೂ ಇಲ್ಲಾ; ಹತ್ತಿದ ಮರ ಬಿಲ್ವ ವೃಕ್ಷವೆಂಬುದೂ ತಿಳಿದಿಲ್ಲ! ಬೆಳಗಿನ ಜಾವ ಸಾಕ್ಷಾತ್ ಪರಶಿವ ಬೇಡನ ಮುಂದೆ ಪ್ರತ್ಯಕ್ಷನಾಗಿದ್ದ!! ಬೇಡನ ಅಜ್ಞಾನದಲ್ಲೂ ಆತನ ಪೂಜೆಯನ್ನು ಮೆಚ್ಚಿದ ಬೀರೇಶ್ವರ ಬೇಡನ ಸಂಕಷ್ಟವನ್ನು ನೀಗಿದ ಮಾತ್ರವಲ್ಲ ಆ ಜನ್ಮಾನಂತರ ಭವದ ಬಂಧನದಿಂದ ಮುಕ್ತಿಯನ್ನು ಕರುಣಿಸಿದ! ದೇವ-ದಾನವರು ಸಮುದ್ರ ಮಥನ ಮಾಡಿದಾಗ ಮೊದಲು ಉಕ್ಕಿದ ಹಾಲಾಹಲದಿಂದ ಲೋಕಗಳು ಕಂಗೆಟ್ಟವು. ಹರಿದುಬಂದ ಹಾಲಹಲವೆಂಬ ನಂಜನ್ನು ನಂಜಿಲ್ಲದ ಶಿವ ಭುಂಜಿಸಿದ..ನಂಜುಂಡೇಶ್ವರನಾದ. ಶಿವನ ಉಳಿವಿಗೆ ಹಾವನ್ನು ಕೊರಳಲ್ಲಿ ಬಂಧಿಸಿ ನಂಜು ಒಳಸೇರದಂತೇ ಅರ್ಧಾಂಗಿ ಪಾರ್ವತಿ ತಡೆದಿದ್ದರಿಂದ ಕಂಠ[ಕತ್ತು]ನೀಲಿಯಾದ ಶಿವ ನೀಲಕಂಠನಾದ!

ಶಂಕರ ಆತ್ಮಲಿಂಗವನ್ನೇ ನಮ್ಮ ಕರ್ನಾಟಕದ ಮಂದಿಗೆ ಕೊಟ್ಟ-ಇಷ್ಟು ಪ್ರೀತಿ ಸಾಲದೇ? ಯಾವುದೇ ಜಾತಿ-ಮತಗಳ ಭೇದವಿಲ್ಲದೇ ಸಾಂಪ್ರದಾಯಿಕ ಕ್ರಮದಲ್ಲಿ ಮುಟ್ಟು ಪೂಜಿಸಬಹುದಾದ ಗೋಕರ್ಣ ನಮ್ಮ ಕನ್ನಡಿಗರ ಹೆಮ್ಮೆ ! ವಿಶ್ವಮಾನವ ತತ್ವದಿಂದ ವಿದೇಶಿಗರಿಗೂ ಸಂಸ್ಕಾರ ಕಲಿಸಿ ಅಲ್ಲೀಗ ಆಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ-ಇದು ನಮ್ಮ ಕನ್ನಡಿಗರ ಕೊಡುಗೆ-ಇಡೀ ಜಗತ್ತಿಗೆ ! ಅಂತಹ ಶಿವನನ್ನು ಈ ದಿನ ಅಹೋರಾತ್ರಿ ಪೂಜಿಸುವ ಕೈಂಕರ್ಯ ಲೋಕದಲ್ಲಿ. ಶಿವ ಪೂಜೆ ಈ ದಿನ ಮಾತ್ರವಲ್ಲ ನಿತ್ಯವೂ ನಡೆಯಲಿ, ಬದುಕಿನ ಜಂಜಡಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಲಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ಪ್ರಾರ್ಥನೆ. ಸರ್ವರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಶಂಭುವಿಗೆ ಮನಸಾ ಬಿಲ್ವಪತ್ರೆಯೊಂದನ್ನು ಅರ್ಪಿಸುವ ಮೂಲಕ ಈ ಲೇಖನಕ್ಕೆ ಶಿವಾಯನಮಃ ಎನ್ನೋಣವೇ ? :


ಅಜ್ಞಾನೇನ ಕೃತಂ ಪಾಪಂ ಜ್ಞಾನೇನಾಪಿ ಕೃತಂ ಚ ಯತ್ |
ತತ್ಸರ್ವಂ ನಾಶಯಾಮಾತು ಏಕಬಿಲ್ವಂ ಶಿವಾರ್ಪಣಂ ||

Thursday, February 16, 2012

ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....



ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....

ಹಾಗೆ ನೋಡಿದರೆ ಸಜ್ಜನರಿಗೆ ಅದೊಂದು ದುಃಸ್ವಪ್ನ! ಹಾಗೆ ಉಡುಪಿಯಿಂದ ಬಂದ ಆಚಾರ್ಯರು ಹೀಗೆ ಮೊನ್ನೆ ಕುಸಿದು ಇಹಲೋಕವನ್ನೇ ತ್ಯಜಿಸಿದರು. ಸುದ್ದಿ ತಿಳಿದಾಗ ಕ್ಷಣಕಾಲ ಎಲ್ಲೆಲ್ಲೂ ಜನ ಸ್ತಂಭೀಭೂತರಾದರು! ವೇದವ್ಯಾಸರು ಹಿಂದೆ ವೇದಗಳನ್ನು ವಿಂಗಡಿಸಿದಂತೇ ಈ ವೇದವ್ಯಾಸರು ಜನಸಂಘದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ವಿಂಗಡಿಸುತ್ತಾ ಜನಸೇವೆಯಲ್ಲಿ ತೊಡಗಿಸಿಕೊಂಡು ಬೆಳಗಿನ ತಿಂಡಿಯನ್ನೂ ಬಿಟ್ಟು ಕಾರ್ಯತತ್ಪರರಾಗಿದ್ದರು ಎಂದಮೇಲೆ ಜನ ಅವರನ್ನು ಮರೆತಾರ್ಯೇ ? ಸಜ್ಜನ ರಾಜಕಾರಣಿಗಳಿಗೆ ಇವತ್ತು ಕಾಲವಲ್ಲ. ಆದರೂ ಕಣದಲ್ಲಿ ಇದ್ದಮೇಲೆ ಕರ್ತವ್ಯ ಮಾಡಲೇಬೇಕಲ್ಲಾ ? ನಮ್ಮ ಯಕ್ಷಗಾನದಲ್ಲಿ ಭಾಗವತರಿಗೆ ಸೂತ್ರಧಾರರು ಎನ್ನುತ್ತಾರೆ-ಇಡೀ ಆಟ ನಡೆಯುವುದು ಅವರು ಹೇಳುವ ಹಾಡುಗಳ ಮೇಲೆ! ಅದೇ ರೀತಿ ಭಾಜಪದ ಮೇಳಕ್ಕೆ ಸೂತ್ರಧಾರನಾಗಿ ಮರೆಯಲ್ಲಿ ನಿಂತೇ ಜನಸೇವೆಯಲ್ಲಿ ತೊಡಗಿದ್ದ ನಿಸ್ಪೃಹ ವ್ಯಕ್ತಿ ಡಾ| ವಿ.ಎಸ್. ಆಚಾರ್ಯ. ಸತ್ತ ಎಮ್ಮೆಗೆ ಹತ್ತು ಸೇರು ಹಾಲು ಎಂಬುದು ನಮ್ಮಲ್ಲಿನ ಗಾದೆ, ಜನ ಹೋದವರನ್ನು ಸ್ಮರಿಸಿ ಹಾಗಿದ್ದರು ಹೀಗಿದ್ದರು ಎಂಬುದು ಸಹಜವೇ; ಆಚಾರ್ಯರ ವಿಷಯದಲ್ಲಿ ಹಾಗಿಲ್ಲ, ಅದು ಪ್ರಜೆಗಳ ಆಂತರ್ಯದ ಮಾತು, ಕುಟುಂಬದ ಹಿರಿಯನೊಬ್ಬ ಅಗಲಿದ ನೋವು ಇದ್ದಂತೇ!

ಬ್ರಾಹ್ಮಣ ವಿರೋಧೀ ಭಾವದವರಿಗೆ ಒಂದು ಮಾತು ಹೇಳಬೇಕು: ೪೦ ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಇದೇ ವಿ.ಎಸ್. ಆಚಾರ್ಯರು. ರಾಜಕಾರಣಿಗಳಿಗೆ ಆ ಕೆಲಸ ಮಾಡಬೇಕೆಂದೇನೂ ಇರಲಿಲ್ಲ; ಮಾಡದೇ ಇರುವ ಜನ ಇವರಾಗಿರಲಿಲ್ಲ! ಉತ್ತರ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ಎನ್ನುವ ಮಂದಿ ಕಣ್ಣು ತೆರೆದರೆ ಇವತ್ತಿನ ಮಹಾನಗರಗಳಲ್ಲಿ ಮ್ಯಾನ್‍ಹೋಲ್‍ಗಳಲ್ಲಿಳಿದು ಎದೆಮಟ್ಟದ ಹೊಲಸುನೀರಲ್ಲಿ ನಿಂತೇ ಕೆಲಸಮಾಡುವ ಜನರು ಕಾಣಸಿಗುತ್ತಾರೆ. ಇದು ಮಲಹೊರುವ ಪದ್ಧತಿಯಲ್ಲವೇ? ಶಿಕ್ಷಿತ ಜನಾಂಗ ಕೈಗೆ ಮಣ್ಣು ಹತ್ತಿದರೆ ಡೆಟ್ಟಾಲ್ ಹಾಕಿ ತೊಳೆಯುವ ಈ ಕಾಲದಲ್ಲೂ ಮಹಾನಗರದ ಗಲ್ಲಿಗಲ್ಲಿಗಳಲ್ಲಿ ಅಲ್ಲಲ್ಲಿ ಮಲಶೋಧಿಸುವ ಕೊಳವೆಗಳಲ್ಲಿ ಸಿಲುಕಿದ ಘನ ಕಲ್ಮಶಗಳನ್ನೂ ಕಸಗಳನ್ನೂ ಸ್ವತಃ ಕೈಯ್ಯಿಂದಲೇ ತೆಗೆಯುವ ಜನರಿಗೆ ಯಾವ ಡೆಟ್ಟಾಲ್ ಯಾರು ನೀಡಿದ್ದಾರೆ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಸಂದಿವೆ, ಇಲ್ಲೀವರೆಗೂ ಬರೇ ಭಾಜಪವೇನೂ ಅಧಿಕಾರದಲ್ಲಿರಲಿಲ್ಲವಲ್ಲ, ಹಾಗಾದ್ರೆ ಉಳಿದ ಪಕ್ಷಗಳು ಅವುಗಳ ಕಾರ್ಯಕರ್ತರು ಏನು ಮಾಡಿದರು ? ಅನೇಕಬಾರಿ ಓಡಾಡುವಾಗ ನಾನು ರಸ್ತೆಗಳಲ್ಲಿ ನಿಂತು ನೋಡುವುದಿದೆ; ಯಾರೋ ಅನಾಥ ಮಕ್ಕಳು ಕಸ ವಿಲೇವಾರಿಗೆ ಬರುತ್ತಾರೆ. ಅಪ್ಪ ಇಲ್ಲ-ಅಮ್ಮ ಇಲ್ಲ, ಹೆಚ್ಚುಕಮ್ಮಿ ಆದರೆ ಕೇಳುವುದಕ್ಕೆ ಯಾರೂ ದಿಕ್ಕಿಲ್ಲ!-ಇಂಥಾ ಪಾಪದವರ ಬದಲಿಗೆ ಪರ್ಯಾಯ ಯಂತ್ರಗಳ ಬಗ್ಗೆ ಯಾವುದೇ ಆಲೋಚನೆ ಇಲ್ಲೀವರೆಗೂ ಬರಲಿಲ್ಲವೇ ?

ಭಾಜಪದ ಮಂದಿಯೇ ಒಪ್ಪುವಂತೇ ಭಾಜಪದ ಸರಕಾರದ ಪ್ರತೀ ಮುಂಗಡಪತ್ರದಲ್ಲೂ ಮತ್ತು ಚುನಾವಣಾ ಪ್ರಣಾಳಿಕೆಯಲ್ಲೂ ಆಚಾರ್ಯರೇ ಪ್ರಧಾನ ಅಧ್ವರ್ಯುಗಳಾಗಿ ಇರುತ್ತಿದ್ದರು. ಹುಂಬ ಯಡ್ಯೂರಣ್ಣನವರ ಡೊಂಬರಾಟ ಆರಂಭವಾದಗಲೂ ಅನಿವಾರ್ಯವಾಗಿ ಪಕ್ಷದ ಹಿತಾಸಕ್ತಿಯಿಂದ ಅವರ ಜೊತೆಗಿದ್ದವರು ಆಚಾರ್ಯರು! ೭೪ ವಯೋಮಾನದ ಈ ಮಂತ್ರಿಗೆ ಹಗಲಿರುಳೂ ಜನತಾ ಜನಾರ್ದನನ ಕುರಿತೇ ಯೋಚನೆ. ಜನರಿಗೆ ಹೇಗೆ ಮಾಡಿದರೆ ಒಳಿತಾದೀತು ಎಂಬುದೇ ಅವರ ಚಿಂತನೆ. ಇಡೀ ವಿಧಾನ ಪರಿಷತ್ತಿನ ಕಲಾಪ ಮುಗಿದರೂ ಇನ್ನೂ ಅದೇ ಕುರ್ಚಿಯಲ್ಲೇ ಕುಳಿತು ಆ ದಿನದ ಮಂಡನೆಗಳನ್ನು ಆಮೂಲಾಗ್ರವಾಗಿ ಪರಿಶೋಧಿಸುವ/ಅವಲೋಕಿಸುವ ವ್ಯಕ್ತಿಯೊಬ್ಬರಿದ್ದರೆಂದರೆ ಅವರೇ ಆಚಾರ್ಯರಾಗಿದ್ದರು. ತನ್ನ ಮಕ್ಕಳಗಿಂತಲೂ ಕಿರಿಯ ವಯಸ್ಸಿನ ಶಾಸಕರು ಹಗರಣಗಳಲ್ಲಿ ಸಿಲುಕಿಕೊಂಡಾಗ ನಿಜವಾಗಿ ನೋವುಂಡವರು ಇದೇ ಆಚಾರ್ಯರು. ಜನತಂತ್ರದ ಅಪಮೌಲ್ಯವಾಗಕೂಡದು ಎಂಬ ಅನಿಸಿಕೆಯಿಂದ ಎಲ್ಲೆಲ್ಲೂ ಪೈಸೆಯನ್ನೂ ಸ್ವಂತಕ್ಕಾಗಿ ಖರ್ಚುಮಾಡದೇ ಇದ್ದ ಇವರು ದಕ್ಷಿಣ ಕನ್ನಡದೆಡೆ ಎಲ್ಲೇ ಹೋದರೂ ಐಬಿಗಳಲ್ಲಿರದೇ ಕೆಲಸ ಮುಗಿಸಿ ನೇರವಾಗಿ ತನ್ನ ಮನೆಗೇ ತೆರಳುತ್ತಿದ್ದರು!

ಮೀಸಾ ಕಾಯಿದೆಯಡಿ ಬಂಧಿಸಲ್ಪಟ್ಟು ಜೈಲು ಸೇರಿದಾಗ ಅವರಿಗಿನ್ನೂ ಮೂರನೆಯ ಚಿಕ್ಕ ಮಗುವೊಂದಿತ್ತು. ಆ ಮಗು ವಿಪರೀತ ಭೇದಿಯಿಂದ ನರಳುತ್ತಿತ್ತು. ಸ್ವತಃ ವೈದ್ಯರಾದ ಇವರು ಮನೆಯಿಂದ ಸುದ್ದಿ ಬಂದಾಗ ವಿನಂತಿಸಿ ಒಮ್ಮೆ ಹೋಗಲು ಅವಕಾಶ ಪಡೆದರೂ ಮಗುವಿನ ಆರೋಗ್ಯ ಸುಧಾರಿಸುವವರೆಗೆ ಮನೆಯಲ್ಲಿರಲು ಅವಕಾಶ ದೊರೆಯಲಿಲ್ಲ. ಹೋಗಿ ಅರ್ಧಗಂಟೆ ನೋಡಿ ಮರಳಿ ಬಂದಿದ್ದರು. ದಿನಗಳೆರಡರಲ್ಲೇ ಆ ಮಗು ಅಸು ನೀಗಿತು. ಸಮಾಜ ಸೇವೆಗಾಗಿ ನಿಂತ ಯುವ ನೇತಾರನೊಬ್ಬ ತನ್ನದೇ ಮಗುವನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೂ ತನ್ನೆಲ್ಲಾ ವೈಯ್ಯಕ್ತಿಕ ನೋವುಗಳನ್ನೂ ಬದಿಗೊತ್ತಿ ದೇಶದ/ರಾಜ್ಯದ ಜನತೆಯ ಹಿತಾಸಕ್ತಿಯೆಡೆಗೆ ಮನಮಾಡಿದವರು ಆಚಾರ್ಯರು! ಭಾಜಪದಲ್ಲಿರುವ ಮೊಂಡರು, ಶುಂಠರು, ಜಾತೀವಾದಿಗಳು, ಸಮಾಜಘಾತುಕರು, ಗಣಿಧಣಿಗಳು, ಲಂಪಟರು ತನ್ನ ಮಾತಿಗೆ ಸೊಪ್ಪುಹಾಕದಿದ್ದರೂ ಎಲ್ಲರನ್ನೂ ಸಹೃದಯ ಮನೋಭಾವದಿಂದ ಕಂಡು ಎಲ್ಲರಿಗೂ ಹಿತವಚನಗಳನ್ನು ಹೇಳುತ್ತಿದ್ದರು. ಅಷ್ಟೇ ಏಕೆ ಯಡ್ಯೂರಣ್ಣ ರಾಜೀನಾಮೆ ಕೊಟ್ಟಾಗ ಅನಾಯಾಸವಾಗಿ ದೊರೆಯುತ್ತಿದ್ದ ಮುಖ್ಯಮಂತ್ರಿ ಗದ್ದುಗೆ ತನಗೆ ಬೇಡ, ತನ್ನ ವಯಸ್ಸು ಜಾಸ್ತಿ ಆಗಿದೆ, ಒತ್ತಡ ಜಾಸ್ತಿಯಾಗುತ್ತದೆ - ಸದಾನಂದ ಗೌಡರು ಆ ಜಾಗಕ್ಕೆ ಹಡಂಗ ಎಂದು ಸೂಚಿಸಿದವರು ಇದೇ ಆಚಾರ್ಯರು ಎಂಬುದು ಬಹಳ ಜನರಿಗೆ ತಿಳಿದಿಲ್ಲ! ಮೌಲ್ಯಗಳಿಗೆ ಮೌಲ್ಯವೇ ಕಳೆದುಹೋಗಿರುವ ಇಂದಿನ ದಿನಮಾನದಲ್ಲಿಯೂ ಮೌಲ್ಯಾಧಾರಿತ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವುದು ಆಚಾರ್ಯರ ಇಚ್ಛೆಯಾಗಿತ್ತು; ಈ ಕಾರಣದಿಂದಲೇ ವಿಪಕ್ಷಗಳ ಜನರೂ ಸೇರಿದಂತೇ ಎಲ್ಲರಿಗೂ ಬೇಕಾಗಿದ್ದರು! ರಾಜ್ಯ ಕಂಡ ಮುತ್ಸದ್ಧಿಗಳಲ್ಲಿ ಒಬ್ಬರಾದ ಆಚಾರ್ಯರು ಪಾಠಮಾಡುತ್ತಲೇ ಮತ್ತೆಲ್ಲೋ ಕಾಣದ ಶಾಲೆಗೆ ನಡೆದುಹೋದರು ! ಜನರ ಜೀವನಾಡಿಯಾಗಿದ್ದ ಅವರು ಜನಸಂಪರ್ಕಕ್ಕಾಗಿ ೨೦೦೭ ರಿಂದ ಬ್ಲಾಗ್ ಕೂಡ ಬರೆಯುತ್ತಿದ್ದರು [ http://drvsacharya.blogspot.in]. ಇದೇ ಫೆಬ್ರುವರಿ ೯ ರಂದು ಅವರ ಕೊನೆಯ ಬ್ಲಾಗ್ ಪೋಸ್ಟ್ ಪ್ರಕಟಿಸಲ್ಪಟ್ಟಿತ್ತು ಎಂದು ತಿಳಿದುಬರುತ್ತದೆ. ಅವರ ಆ ದಿವ್ಯ ಚೇತನಕ್ಕೊಂದು ಸಾಷ್ಟಾಂಗ ನಮನ.

ಎರಡನೆಯದಾಗಿ, ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿ-ಪರಂಪರೆಯಬಗ್ಗೆ ಭಾರತೀಯ ಮೂಲದ ಪದ್ಧತಿಯಿಂದಲೇ ಅವಲೋಕನ ಮಾಡುವುದಕ್ಕೆ ನಮ್ಮ ಶತಾವಧಾನಿಗಳು ಮುಂದಾಗಿದ್ದಾರೆ. ಇದುವರೆಗೆ ಸಂಶೋಧಿಸುತ್ತೇವೆ ಎಂದುಕೊಂಡು ವಿದೇಶೀ ಸಂಶೋಧನಾ ರೀತ್ಯಾ ನಮ್ಮ ಸಂಸ್ಕೃತಿಯ ಕುರಿತು ಸಂಶೋಧನೆಗಳು ನಡೆದಿವೆ, ಅವೆಲ್ಲವೂ ಪೂರ್ವಾಗ್ರಹ ಪೀಡಿತವೇ ಆಗಿವೆ. ಇಲ್ಲಿಯದೇ ಸಂಶೋಧನಾ ಪದ್ಧತಿಯಲ್ಲೇ ಇಲ್ಲಿನ ಸಂಸ್ಕೃತಿಯ ಸಂಶೋಧನೆ ನಡೆದರೆ ಉತ್ತಮವೆಂಬ ಅಭಿಲಾಷೆಯಿಂದ ಇದೇ ಫೆಬ್ರುವರಿ ೨೧, ೨೨, ೨೩ ದಿನಾಂಕಗಳಂದು ಸಾಯಂಕಾಲ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಸಂಶೋಧನಾ ಪರಿಷತ್ ಆಶ್ರಯದಲ್ಲಿ ಈ ಕೆಲಸ ಜರುಗುತ್ತದೆ-ಸಂಜೆ ೬:೩೦ ರಿಂದ ೮:೦೦ರ ವರೆಗೆ. ಆಸಕ್ತರು ಭಾಗವಹಿಸಬಹುದಾಗಿದೆ; ತಿಳಿದುಕೊಳ್ಳುವ ಮನಸ್ಸಿಗೆ ಸುಗ್ರಾಸ ’ಭೋಜನ’ ಸಿಗುತ್ತದೆ! ಈ ಕೆಳಗೆ ಇರುವ ಆಮಂತ್ರಣವನ್ನು ಕ್ಲಿಕ್ಕಿಸಿ ಹಿಗ್ಗಿಸಿ ಓದಿಕೊಳ್ಳಿ:


ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ೩೦೦೦ ವರ್ಷಗಳಿಗೂ ಹಿಂದೆಯೇ ಬಳಕೆಯಿದ್ದ ಇತಿಹಾಸವುಳ್ಳ, ಚರಕ-ಸುಶ್ರುತರಾದಿಯಾಗಿ ಅನೇಕ ಆಯುರ್ವೇದಾಚಾರ್ಯರುಗಳಿಂದ ಬಳಸಲ್ಪಟ್ಟು ಅಂದಿನ ರಾಜಮಹಾರಾಜರುಗಳಿಗೂ ಪ್ರಜೆಗಳಿಗೂ ಉಪಯೋಗಕರವಾಗಿದ್ದ ಆಯುರ್ವೇದ ಭವಿಷ್ಯದ ಭಾರತದ ರೋಗಿಗಳನ್ನು ನಿರೋಗಿಗಳನ್ನಾಗಿ ಮಾಡಲಿ ಎಂಬುದು ನನ್ನ ಬಯಕೆ. ಆಯುರ್ವೇದದ ಹಲವು ಮೂಲಿಕೆಗಳನ್ನೂ ಔಷಧ ತಯಾರಿಕಾ ಸೂತ್ರಗಳನ್ನೂ ವಿದೇಶೀಯರು ಈಗಾಗಲೇ ಅರಿತಿದ್ದಾರೆ. ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಲಾಭಗಳಿಸುವ ಹುನ್ನಾರದಿಂದ ಆಯುರ್ವೇದಕ್ಕೇ ಪೇಟೆಂಟ್ ಪಡೆಯಲು ಅವರೆಲ್ಲಾ ಮುಂದಾಗುತ್ತಿದ್ದರೆ ನಾವೆಲ್ಲಾ ಕುರುಡು ಅನುಯಾಯಿಗಳಾಗಿ ಅವರ ಕೆಮಿಕಲ್ ಔಷಧೀಯ ಕ್ರಮವನ್ನು ಅನುಸರಿಸುತ್ತಿದ್ದೇವೆ!

ವೈದ್ಯರೊಬ್ಬರು ವಾರಪತ್ರಿಕೆಯೊಂದರಲ್ಲಿ ಕಳೆದವಾರ ಅರ್ಬುದ ರೋಗದ ಕುರಿತು ಬರೆದಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಆಯುರ್ವೇದದಲ್ಲಿ ಅರ್ಬುದ ರೋಗ ಎನ್ನುತ್ತಾರೆ. ಅಂತಹ ಅರ್ಬುದ ರೋಗದಲ್ಲಿ ಹಲವು ವಿಧಗಳಿವೆ. ಆಂಗ್ಲ ಔಷಧೀಯ ಪದ್ಧತಿಯಲ್ಲಿ ಒಂದೊಂದಕ್ಕೂ ವಿಭಿನ್ನ ಕಾರಣಗಳನ್ನು ಹೇಳುತ್ತಾರಾದರೂ ಆಯುರ್ವೇದ ಹೇಳುವುದು ಅರ್ಬುದ ರೋಗಕ್ಕೆ ಸೇವಿಸುವ ದೂಷಿತ ಆಹಾರ, ಆಹಾರದಲ್ಲಿನ ಕೆಮಿಕಲ್ ಜೀವಕೋಶ ನಿರೋಧಕ ಅಂಶಗಳು, ಕಲ್ಮಶಗೊಂಡ ರಕ್ತ ಇವೇ ಕಾರಣಗಳಾಗಿರುತ್ತವೆ! ಲೇಖನ ಬರೆದ ವೈದ್ಯರು ರೋಗಿಯೊಬ್ಬಳ ಸತ್ಯಕಥೆಯನ್ನು ಉದಾಹರಿಸಿದ್ದಾರೆ. ಅವಳ ತಂದೆಯೂ ವೈದ್ಯರಾಗಿದ್ದು ವಿದೇಶದ ವರೆಗೂ ಅವಳನ್ನು ಕರೆದೊಯ್ದು ಚಿಕಿತ್ಸೆ, ಕೀಮೋಥೆರಪಿ ಎಲ್ಲಾ ಮಾಡಿಸಿದರೂ ಯಾವುದೇ ಪರಿಣಾಮ ಕಾಣದೇ ಮತ್ತೆ ಮರುಕಳಚಿದ ಅರ್ಬುದ ರೋಗವನ್ನು ಕೇವಲ ಭಾರತೀಯ ಮೂಲದ ಶುದ್ಧ ಅರಿಷಿನಪುಡಿ ಮತ್ತು ಕಾಣುಮೆಣಸಿನ ಕಷಾಯ ಪರಿಹಾರ ಮಾಡಿದೆ ಎಂದರೆ ಆಯುರ್ವೇದದ ಮಹತ್ವ ನಮಗೆ ಅರಿವಾಗಬಹುದು! ಹೀಗೆ ಕಂಡುಕೊಂಡ ಪರಿಹಾರವನ್ನು ದಾಖಲೆ ಸಮೇತ ವಿದೇಶೀ ವೈದ್ಯರಲ್ಲಿ ತೋರಿಸಿದರೂ ಆಯುರ್ವೇದ ಚಿಕಿತ್ಸೆಯನ್ನು ಅವರು ಒಪ್ಪುವ ಮನಸ್ಸು ಮಾಡಲಿಲ್ಲ ಎಂದು ನಮ್ಮ ಈ ವೈದ್ಯ ಬರೆದಿದ್ದಾರೆ; ಎಂತಹ ವಿಪರ್ಯಾಸ! ಒಳಗೊಳಗೇ ಅದರಲ್ಲೇನೋ ಇದೆ ಎಂಬ ಅನಿಸಿಕೆಯಿರುವ ನಾಸ್ತಿಕವಾದಿಗಳಂತೇ ಆ ವೈದ್ಯರು ತಮ್ಮಿಂದಾಗದ್ದನ್ನು ಆಯುರ್ವೇದ ಸಾಧಿಸಿದಾಗ ಒಪ್ಪಲು ಸಿದ್ಧರಾಗಲಿಲ್ಲ!

ಆಯುರ್ವೇದದಲ್ಲಿ ಭಾರತೀಯ ಮೂಲದ ಹಳೆಯ ಕಂಪನಿಯೊಂದು ಬೆಂಗಳೂರಿನಲ್ಲೇ ಇದೆ. ಹಿಮಾಲಯ ಡ್ರಗ್ ಕಂಪನಿ ಎಂದು ಅದರ ಹೆಸರು. ಅದು ನೂರಾರು ಆಯುರ್ವೇದೀಯ ಔಷಧಗಳನ್ನು ತಯಾರಿಸುತ್ತದೆ! ಕೆಲವಂತೂ ವಿದೇಶಗಳಿಗೂ ರಫ್ತಾಗುತ್ತವೆ-ಆ ಮೂಲಕ ಕಂಪನಿಯ ಆದಾಯ ಹೆಚ್ಚಿಸಿ ಕಂಪನಿಯ ಬೆಳವಣಿಗೆಗೆ ಕಾರಣವಾಗಿವೆ. ಉದಾಹರಣೆಗೆ ಲಿವ್-೫೨ ಎಂಬ ಔಷಧ ಮನುಷ್ಯರಿಗೂ ಪಶುಗಳಿಗೂ ಉಪಯೋಗಕ್ಕೆ ಬರುವ ಉತ್ಕೃಷ್ಟ ಔಷಧವಾದರೆ, ಸ್ಪೆಮೆನ್ ಪೋರ್ಟ್ ಎಂಬ ಮಾತ್ರೆ ಮುದುಕರಲ್ಲಿ ವೀರ್ಯೋತ್ಫಾದಕ ಗ್ರಂಥಿಗಳ ವಿಕೃತ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತವೆ. ಸಿಸ್ಟೋನ್ ಎಂಬ ಮಾತ್ರೆ ಮೂತ್ರಾಶಯದ ಕಲ್ಲುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ! ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬಳಸಿ ಆರೋಗ್ಯ ಮರಳಿ ಗಳಿಸಬಹುದಾದ ಆಯುರ್ವೇದವನ್ನು ಭಾರತೀಯರಾಗಿ ನಾವು ಅನೇಕಬಾರಿ ಅಲ್ಲಗಳೆಯುತ್ತೇವೆ. ಚರಕ-ಸುಶ್ರುತಾಚಾರ್ಯರುಗಳು ಅಂದೇ ಆಪರೇಷನ್ ಕೂಡ ಮಾಡಿದ್ದರಂತೆ! ಆದರೆ ಈ ನಡುವೆ ಸರಿಯಾದ ಪರಿಣತರಿಲ್ಲದೇ ಆ ವಿದ್ಯೆ ಕೈಬಿಟ್ಟು ಹೋಗಿತ್ತು, ಅರೆಜೀವವಾಗಿದ್ದ ಅದಕ್ಕೆ ಮತ್ತೆ ಜೀವಬಂದಿದೆ! ಭಾರತೀಯ ಮೂಲದ ಯಾವುದೇ ತತ್ವದಲ್ಲೂ ಸತ್ವವಿದೆ; ಅದು ಫೀನಿಕ್ಸ್ ಪಕ್ಷಿಯಂತೇ ಮತ್ತೆ ಜನಿಸುತ್ತದೆ ಹೊರ್ತು ಸಾಯುವುದಿಲ್ಲ!

ಬಡರೈತರಿಗೆ ಹಿಮಾಲಯ ಡ್ರಗ್ ಕಂಪನಿ ಯೋಜನೆಯೊಂದನ್ನು ಇದೀಗಾಗಲೇ ಜಾರಿಗೊಳಿಸಿದೆ. ಸಾಮಾನ್ಯ ಗದ್ದೆಯಲ್ಲೂ ಬೆಳೆಯಲು ಆಗಬಹುದಾದ ಬೀಜಗಳನ್ನು ಅದೇ ಒದಗಿಸಿ ಬೆಳೆದ ಮೂಲಿಕೆಗಳನ್ನು ಅದೇ ಕಂಪನಿ ಸ್ವೀಕರಿಸುತ್ತದೆ. ಬೆಳೆಗಾರನಿಗೆ ತಿಂಗಳಿಗೆ ೪೦೦೦ ರೂಪಾಯಿ ಸಂಬಳದಂತೇ ಅದು ಕೊಡಮಾಡುತ್ತದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಕಾರಾಗ್ರಹದ ಖೈದಿಗಳೂ ಮತ್ತು ಬೆಂಗಳೂರಿನ ಹೊರವಲಯದ ಕೆಲವು ರೈತರು ಇದರ ಪ್ರಯೋಜನ ಪಡೆದಿದ್ದಾರೆ. ನೇರವಾಗಿ ರೈತರ ಸಂಪರ್ಕಕ್ಕೆ ಅವಕಾಶ ನೀಡುವುದರಿಂದ ರೈತರಿಗೆ ಹಣದ ಭರವಸೆ ಇದೆ, ಅಲ್ಲದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ವರ್ಷಕ್ಕೆ ಎಕರೆಯೊಂದಕ್ಕೆ ೫೦,೦೦೦ ರೂ ನಿಗದಿತ ಹಣವನ್ನು ರೈತರು ಯಾವುದೇ ಒತ್ತಡವಿಲ್ಲದೇ ಗಳಿಸಬಹುದಾಗಿದೆ. ಇಂತಹ ಅವಕಾಶವನ್ನು ಕನ್ನಡ ನೆಲದಲ್ಲೇ ಹುಟ್ಟಿಬೆಳೆದ ಈ ಕಂಪನಿ ಕನ್ನಡಿಗರಿಗಾಗಿ ಕೊಡುತ್ತಿದ್ದು ನಂತರ ಆಂಧ್ರ ಮತ್ತು ತಮಿಳುನಾಡು ರಾಜ್ಯಕ್ಕೂ ಇದನ್ನು ವಿಸ್ತರಿಸಲು ಕಂಪನಿ ಮುಂದಾಗುತ್ತಿದೆ. ವಿದೇಶಗಳಲ್ಲೂ ಕಛೇರಿಗಳನ್ನು ಹೊಂದಿರುವ ಈ ಕಂಪನಿಯಂತೇ ಇನ್ನೂ ಹಲವು ಕಂಪನಿಗಳು ಹುಟ್ಟಲಿ, ಬೆಳೆಯಲಿ ಮತ್ತು ಆಯುರ್ವೇದದ ಬಳಕೆ ಎಲ್ಲೆಲ್ಲೂ ಜಾರಿಗೆ ಬಂದು ಜನರೆಲ್ಲಾ ಆರೋಗ್ಯದಿಂದ ಬದುಕಲಿ ಎಂಬುದು ನನ್ನ ಹಾರೈಕೆಯಾಗಿದೆ. ಹಿಮಾಲಯ ಡ್ರಗ್ ಕಂಪನಿಯ ವಿವರಗಳ ಕೊಂಡಿ ಇಲ್ಲಿದೆ:

http://www.himalayahealthcare.com


Saturday, February 11, 2012

ದೀಪಂ ದೇವ ದಯಾನಿಧೇ -೪


ದೀಪಂ ದೇವ ದಯಾನಿಧೇ -೪
[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ಎರಡನೇ ವಯಸ್ಸಿಗೆ ತಂದೆಯಿಂದ ಚೌಲಕರ್ಮ ಮುಗಿಸಿಕೊಂಡ ಬಾಲಕ ಶಂಕರ ೩ನೇ ವಯಸ್ಸಿನೊಳಗೇ ಸಾಹಿತ್ಯ, ವ್ಯಾಕರಣಗಳನ್ನೂ, ಭಾರತದ ಪುರಾಣೇತಿಹಾಸಗಳನ್ನೂ ಸಂಪೂರ್ಣವಾಗಿ ತಿಳಿದು ನೋಡುಗರನ್ನು ನಿಬ್ಬೆರಗಾಗಿಸಿದ್ದ. ತಂದೆಯ ಮರಣಾನಂತರ ತಾಯಿಯ ಆಶ್ರಯದಲ್ಲಿ ಐದನೇ ವಯಸ್ಸಿಗೆ ಉಪನಯನವಾಗಿ ಎಂಟನೇ ವಯಸ್ಸು ಆರಂಭವಾಗುವ ಹೂತ್ತಿಗೆ ಅಧ್ಯಯನ ಮುಗಿಸಿದ ಶಂಕರರ ಬಾಲ್ಯವನ್ನು ತಿಳಿದರೇ ಅವರು ಅವತಾರ ಪುರುಷರೆಂಬುದು ಗೊತ್ತಾಗುತ್ತದೆ. ಗುರುಕುಲ ನೆಪಮಾತ್ರಕ್ಕೆ ಅವರಿಗೆ ಗುರುಕುಲವಾಗಿತ್ತೇ ಹೊರತು ವೇದ-ವೇದಾಂಗಗಳು ಅವರಲ್ಲೇ ಹುದುಗಿದ್ದವು! ಗುರುಗಳು ಹೇಳಿಕೊಡುವ ಮುನ್ನವೇ ಶಂಕರರೇ ಕೆಲವನ್ನು ಹೇಳಿಬಿಡುತ್ತಿದ್ದರು. ಜನಸಾಮಾನ್ಯರಿಗೆ ಒಂದೊಂದು ವೇದಕ್ಕೆ ೧೨ ವರ್ಷಗಳಂತೇ ಚತುರ್ವೇದಗಳನ್ನು ಸಮರ್ಪಕವಾಗಿ ಓದಿ ಮುಗಿಸಲು ೪೮ ವರ್ಷಗಳು ಬೇಕು. ಸರಿಸುಮಾರು ೮ ವಯಸ್ಸಿಗೆ ಉಪನಯನ ಸಂಸ್ಕಾರ ನಡೆದರೆ ಅದಕ್ಕೆ ೪೮ ವರ್ಷ ಸೇರಿಸಿ ಅಂದರೆ ೫೬ ವಯಸ್ಸಿನ ವರೆಗೂ ವೇದವನ್ನು ತಿಳಿದುಕೊಳ್ಳುವುದೇ ಆಗುತ್ತದೆ. ಅಂಥಾದ್ದರಲ್ಲಿ ಶಂಕರರು ಕೇವಲ ಮೂರೇ ವರ್ಷಗಳಲ್ಲಿ ವೇದ-ವೇದಾಂಗ, ಶಾಸ್ತ್ರ, ತರ್ಕ, ನ್ಯಾಯ-ಮೀಮಾಂಸೆ ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು ! ಇಂದಿನ ವಿಜ್ಞಾನಕ್ಕೆ ಇದೊಂದು ಸವಾಲು! ಶಂಕರರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಅವರ ದಿವ್ಯ ಕೃತಿಗಳು ಇಂದಿಗೂ ಎಲ್ಲೆಲ್ಲೂ ಲಭಿಸುತ್ತವೆ. ಆಧುನಿಕ ವಾಹನಸಾರಿಗೆ ಇರದ ಆ ಕಾಲದಲ್ಲಿ ಶಂಕರರು ಅಸೇತು ಹಿಮಾಚಲದವರೆಗೂ ಬಂಗಾಳದಿಂದ ದ್ವಾರಕೆಯ ವರೆಗೂ ಭಾರತದುದ್ದಗಲಕ್ಕೂ ಸಂಚರಿಸಿರುವುದು ನಮಗೆ ತಿಳಿದೇ ಇರುವ ವಿಷಯ ಅಲ್ಲವೇ ? ಇರಲಿ, ಮುಂದೆ ನೋಡೋಣ.

ಹೀಗೇ ಗುರುಕುಲ ವಿದ್ಯಾಭ್ಯಾಸ ಮುಗಿದು ಬಾಲಕ ಶಂಕರ ಮನೆಗೆ ಮರಳಿದ. ಬಾಲಕನ ಪಾಂಡಿತ್ಯ ಆ ವೇಳೆಗಾಗಲೇ ಎಲ್ಲೆಲ್ಲೂ ಜನಜನಿತವಾಗಿ ಅನೇಕ ಪಂಡಿತ್ತೋತ್ತಮರು ತಾವು ಬಿಡಿಸಲಾಗದ ಸಮಸ್ಯೆಗಳನ್ನು ಹೊತ್ತು ಶಂಕರನಲ್ಲಿಗೆ ಬರುತ್ತಿದ್ದರು. ಅದೇನು ಮಹಾ ಎಂಬಂತೇ ಶಂಕರ ಅವುಗಳನ್ನೆಲ್ಲಾ ಅರೆನಿಮಿಷದಲ್ಲೇ ಬಗೆಹರಿಸಿಬಿಡುತ್ತಿದ್ದ. ಹೀಗಾಗಿ ಕಾಲಡಿಯ ಶಂಕರನ ಮನೆಯೇ ಒಂದು ಗುರುಕುಲದ ರೀತಿ ಆಗಿಬಿಟ್ಟಿತ್ತು. ತಾಯಿಗೆ ಶಂಕರ ಮಹಾಜ್ಞಾನಿ ಎಂಬುದು ಅರ್ಥವಾಗಿ ಹೋಗಿತ್ತು. ಶಂಕರನ ಗಹನ ಪಾಂಡಿತ್ಯವನ್ನು ತಿಳಿದ ಕೇರಳದ ಆ ಪ್ರದೇಶದ ರಾಜ ರಾಜಶೇಖರ ಪಲ್ಲಕ್ಕಿ ಸಹಿತ ಹಾರ-ತುರಾಯಿ, ಛತ್ರ-ಚಾಮರಾದಿ ಸಕಲ ರಾಜಮರ್ಯಾದೆಯ ಗೌರವದೊಂದಿಗೆ ತನ್ನ ಮಂತ್ರಿಯನ್ನೂ ಸಕಲ ಪರಿವಾರವನ್ನೂ ಶಂಕರನಲ್ಲಿಗೆ ಕಳುಹಿಸಿ ಅರಮನೆಗೆ ಬರಬೇಕೆಂದು ವಿನಂತಿಸಿದ. ಆಗಲೇ ವಿರಕ್ತನಾಗಿದ್ದ ಶಂಕರ ಧನ-ಕನಕದ ಹೊರೆಹೊತ್ತು ರಾಜಮರ್ಯಾದೆ ನೀಡಿ ಕರೆದೊಯ್ಯಲು ಬಂದ ಮಂತ್ರಿಗೆ ತನಗವ್ಯಾವವೂ ಬೇಡವೆಂದೂ ಅಂಥದ್ದರಲ್ಲಿ ಆಸಕ್ತಿ ಇಲ್ಲವೆಂದೂ ಹಲವು ಕೆಲಸಗಳಲ್ಲಿ ನಿರತನಾಗಿರುವುದರಿಂದ ಅರಮನೆಗೆ ಬರಲಾಗುವುದಿಲ್ಲವೆಂದು ನಯವಾಗಿ ಹೇಳಿಕಳುಹಿಸಿದ!

ರಾಜಾ ರಾಜಶೇಖರನಿಗೆ ಎಲ್ಲಿಲ್ಲದ ಆಶ್ಚರ್ಯ! ಕೊಟ್ಟ ಯಾವುದನ್ನೂ ಸ್ವೀಕರಿಸದ ರಾಜಮರ್ಯಾದೆಯೂ ಬೇಡವೆಂದ ಬಾಲ ಪಂಡಿತ ಮಹಾಮಹೋಪಾಧ್ಯಾಯನನ್ನು ನೋಡುವ ಕಾತರದಿಂದ ರಾಜ ಖುದ್ದಾಗಿ ತಾನೇ ಶಂಕರನ ಮನೆಗೆ ಧಾವಿಸಿ ಬಂದ! ತಾನೊಂದಷ್ಟು ಗ್ರಂಥಗಳನ್ನು ಬರೆದಿರುವೆನೆಂದೂ ಅವುಗಳಲ್ಲಿರಬಹುದಾದ ದೋಷಗಳನ್ನು ಸರಿಪಡಿಸಿಕೊಡಬೇಕೆಂದೂ ಪ್ರಾರ್ಥಿಸಿಕೊಂಡ. ತನ್ನೆದುರಲ್ಲೇ ರಾಜನೇ ಅದನ್ನು ಓದುವಂತೇ ಮಾಡಿದ ಶಂಕರ ರಾಜನ ಶಾಸ್ತ್ರಪಾಂಡಿತ್ಯಕ್ಕೆ ತಲೆದೂಗಿದನಲ್ಲದೇ ಗ್ರಂಥಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಸಂತೋಷ ವ್ಯಕ್ತಪಡಿಸಿದ. ರಾಜನೂ ಸಂತುಷ್ಟನಾಗಿ ಮತ್ತೆ ತಾನು ತಂದಿದ್ದ ನಿಧಿಯನ್ನು ಅರ್ಪಿಸಲಾಗಿ ತನಗೆ ಅದರ ಅವಶ್ಯಕತೆಯಿಲ್ಲವೆಂದೂ ಅಗತ್ಯವಿರುವ ಬಡಜನರಿಗೆ ಅದನ್ನು ತನ್ನ ಪರವಾಗಿ ಹಂಚಿಬಿಡಬೇಕೆಂದೂ ಶಂಕರ ಸಾರಿದ. ರಾಜನಿಗೆ ಪುನರಪಿ ಆಶ್ಚರ್ಯವೇ ಕಾದಿತ್ತು! ರಾಜನಿಗೆ ಆಕ್ಷಣಕ್ಕೆ ಶಂಕರರ ಅಂತಃಕರಣ ಅರ್ಥವಾಗಲಿಲ್ಲ. ಜೀವನದಲ್ಲಿ ಯಾರ್ಯಾರು ಏನೇನು ಸಾಧಿಸುತ್ತಾರೆ ಖ್ಯಾತಿಯನ್ನೋ ಕುಖ್ಯಾತಿಯನ್ನೋ ಪಡೆಯುತ್ತಾರೆ ಎಂಬುದು ಸಾಮಾನ್ಯವಾಗಿ ಹೇಳಲು ಬರುವುದಿಲ್ಲ. ಪೂರ್ವಸಂಸ್ಕಾರ ಮತ್ತು ಬೆಳೆದ ಪರಿಸರ ಇವೆರಡನ್ನು ಅವಲಂಬಿಸಿ ಕೆಲವರು ಮಹಿಮಾನ್ವಿತರಾಗಿ ಲೋಕೋಪಕಾರಿಗಳಾದರೆ ಇನ್ನು ಕೆಲವರು ಸಮಾಜಘಾತುಕರೋ ದರೋಡೆಕೋರರೋ ಆಗುತ್ತಾರೆ. ಸಮಯಾನುಸಾರ ಯವುದೋ ಅಗೋಚರ ತಿರುವಿನಿಂದ ಉತ್ತಮರಾಗಿ ಬಾಳುವವರೂ ಇದ್ದಾರೆ. ಶಂಕರರು ಲೋಕೋಪಕಾರಿಯಾಗುವ ಸನ್ಯಾಸಿಯಾಗಬೇಕೆಂಬುದು ಪರಶಿವನ ಇಚ್ಛೆಯಾಗಿತ್ತು! ಆದರೆ ಆ ದಿವ್ಯ ಸಂಕಲ್ಪ ಆ ಸಮಯದಲ್ಲಿ ಯಾರಿಗೂ ತಿಳಿದಿರಲಿಲ್ಲ.

ಬಾಲಕ ಶಂಕರ ಒಮ್ಮೆ ಮನೆಯಲ್ಲಿ ಅಮ್ಮನ ಶುಶ್ರೂಷೆ ನೋಡಿಕೊಳ್ಳುತ್ತಾ ಇದ್ದಾಗ ಈರ್ವರು ತೇಜಸ್ವೀ ಬ್ರಾಹ್ಮಣರು ಮಧ್ಯಾಹ್ನದ ಹೊತ್ತು ಅಲ್ಲಿಗೆ ಬಂದರು. ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದ ಮನೆಯದು. ಬಂದ ಅತಿಥಿಗಳಿಗೆ ಕೈ-ಕಾಲು-ಮುಖ ತೊಳೆಯಲು ನೀರು ಕೊಟ್ಟು ಒಳಗೆ ಕರೆದು ಯಥೋಚಿತ ಆಸನಗಳನ್ನು ನೀಡಿದ ಶಂಕರರ ತಾಯಿ ಹಣ್ಣು-ಹಂಪಲು ಮತ್ತು ಹಾಲನ್ನು ನೀಡಿ ತುಸುಹೊತ್ತು ವಿಶ್ರಮಿಸಲು ಅನುವುಮಾಡಿಕೊಟ್ಟಳು. ಆಮೇಲೆ ಅತಿಥಿಗಳಿಗೆ ಊಟನೀಡಿದಳು. ಶಂಕರ ಬಂದ ಆ ಬ್ರಾಹ್ಮಣರ ಜೊತೆ ಸದಾ ವೇದ-ಶಾಸ್ತ್ರಾದಿಗಳ ಕುರಿತು ಮಾತನಾಡುತ್ತಲೇ ಇದ್ದ. ಆ ವಯಸ್ಸಿನ ಶಂಕರನ ಅಗಾಧ ಪಾಂಡಿತ್ಯ ನೋಡಿ ಬ್ರಾಹ್ಮಣರಿಗೆ ಅತ್ಯಾಶ್ಚರ್ಯವಾಗಿತ್ತು! ಭೋಜನಾನಂತರ ಹೊರಟು ನಿಂತ ಅವರಲ್ಲಿ ಆರ್ಯಾಂಬೆಯು " ಪಂಡಿತೋತ್ತಮರೇ, ನನ್ನ ಮಗು ಶಂಕರ ವೇದ-ವೇದಾಂಗಗಳನ್ನೂ ಶಾಸ್ತ್ರ-ತರ್ಕಾದಿಗಳನ್ನೂ ಓದಿದ್ದು ನನಗೆ ಖುಷಿತಂದಿದೆ ಆದರೆ ಅವನ ಭವಿಷ್ಯದ ಬಗ್ಗೆ ನನಗೆ ತಿಳಿದುಕೊಳ್ಳಬೇಕಾಗಿತ್ತು ದಯಮಾಡಿ ತಿಳಿಸಿಕೊಡುತ್ತೀರಾ ?" ಎಂದಳು. " ಅಮ್ಮಾ ಶಂಕರನಿಗೆ ಆಯುಷ್ಯ ತುಂಬಾ ಕಮ್ಮಿ, ೮ನೇ ವಯಸ್ಸಿಗೆ ಆತ ........ಗತಿಸುತ್ತಾನೆ " ಎಂಬುದನ್ನು ದುಃಖಪಡುತ್ತಲೇ ತಿಳಿಸಿದರು. ಅದಾಗಲೇ ೮ನೇ ವರ್ಷ ಮುಗಿಯುವ ಸಮಯ ಬಂದಿತ್ತು. ವಿಷಯ ತಿಳಿದ ಆರ್ಯಾಂಬೆ ಬ್ರಾಹ್ಮಣರಲ್ಲಿ ಗೋಗರೆದು ಇನ್ನೊಮ್ಮೆ ಪರಿಶೀಲಿಸುವಂತೇ ಜಾತಕ ನೀಡಿದಳು. ಜಾತಕ ನೋಡಿದ ಅವರು " ತಾಯೀ, ೮ನೇ ವರ್ಷಕ್ಕೆ ಸನ್ಯಾಸವಾಗುವ ಯೋಗಕಾಣುತ್ತದೆ. ಸಾಧನೆ ಮತ್ತು ತಪಸ್ಸಿನಿಂದ ೮ ವರ್ಷ ಹೆಚ್ಚಿಗೆ ಬದುಕುತ್ತಾನೆ, ನಂತರ ಅವನಲ್ಲಿಯೇ ಅಡಕವಾಗಿರುವ ದೈವಿಕ ಶಕ್ತಿಯಿಂದ ಇನ್ನೂ ಹದಿನಾರು ವರ್ಷ ಹೆಚ್ಚಿಗೆ ಜೀವಿಸುತ್ತಾನೆ, ಒಟ್ಟೂ ೩೨ ವರ್ಷ ಪರಮಾಯುಷ್ಯ " ಎಂದು ತಮಗೆ ವೇದ್ಯವಾಗಿದ್ದನ್ನು ವಿಷದಪಡಿಸಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿಯೊಂದು ಸಿಕ್ಕಂತೇ ಬತ್ತದ ಬದುಕುವ ಸೆಲೆಯೊಂದು ಕಾಣಿಸಿ ಆರ್ಯಾಂಬೆ ಇದ್ದುದರಲ್ಲೇ ದೇವರು ಇಟ್ಟಹಾಗಾಗಲೆಂದು ತನ್ನನ್ನೇ ತಾನು ಸಮಾಧಾನಪಡಿಸಿಕೊಳ್ಳುತ್ತಾ ಅತಿಥಿಗಳನ್ನು ನಮಸ್ಕರಿಸಿ ಬೀಳ್ಕೊಟ್ಟಿದ್ದಾಳೆ.

ತಮ್ಮ ಮಗ ಎಲ್ಲರಂತೇ ಮದುವೆಯಾಗಿ ಸುಂದರ ಕುಟುಂಬಜೀವನವನ್ನು ನಡೆಸಲಿ ಎಂಬ ಬಯಕೆ ಎಲ್ಲಾ ತಾಯಿಯರಂತೇ ಆರ್ಯಾಂಬೆಗೂ ಇತ್ತು. ಆಗಲೇ ವೃದ್ಧಾಪ್ಯವಾಗಿದ್ದರಿಂದ ಬ್ರಾಹ್ಮಣರ ಮಾತನ್ನು ಕೇಳಿ ಆಕೆಗೆ ಚಣಕಾಲ ಮುಪ್ಪಿನ ಆ ಶರೀರದಲ್ಲಿ ಇದ್ದಬದ್ದ ಶಕ್ತಿಯೂ ಉಡುಗಿ ಹೋದಂತೇ ಭಾಸವಾಯಿತು. ಹಿಂದೊಮ್ಮೆ ಆರಾಧ್ಯದೈವವಾದ ವೃಷಾಚಲೇಶ್ವರ ಕನಸಲ್ಲಿ ಬಂದು ಅಲ್ಪಾಯುಷಿಯಾಗಿ ಲೋಕೋತ್ತರ ಕೀರ್ತಿವಂತನೂ ಭಾರತವನ್ನು ಬೆಳಗುವವನೂ ಆದ ಮಗ ಜನಿಸುತ್ತಾನೆ ಎಂದಿದ್ದು ನೆನಪಿಗೆ ಬಂತು. ದೇವರ ಬಯಕೆಯೇ ಹಾಗಿರುವಾಗ ಎಲ್ಲಾ ತಾಯಿಯರಂತೇ ತಾನು ಮಗ ದೀರ್ಘಾಯುವಾಗಲಿ ಎಂದು ಬಯಸುವುದು ತಪ್ಪು ಎಂದುಕೊಂಡರೂ ಸನ್ಯಾಸಿಯಾಗಿ ತನ್ನನ್ನು ತೊರೆದು ಹೋಗುವ ಮಗನ ಚಿತ್ರಣವೊಂದು ಮನಃಪಟಲದಲ್ಲಿ ಹಾದು ಹೋಯಿತು. ನಿಂತಲೇ ಆ ಹಗಲುಗನಸಿನಲ್ಲಿದ್ದ ಆರ್ಯಾಂಬೆಯನ್ನು ಬ್ರಾಹ್ಮಣರು ಮಾತನಾಡಿಸಿ

" ಅಮ್ಮಾ ನಾವಿನ್ನು ಬರುತ್ತೇವೆ. ನಿಮ್ಮ ಮಗ ಸಾಮಾನ್ಯನಲ್ಲ! ಅಳಿದುಹೋಗುತ್ತಿರುವ ಸನಾತನ ಧರ್ಮವನ್ನು ಪುನರ್ಪ್ರತಿಷ್ಠಾಪಿಸುವ ಸಲುವಾಗಿ ಧರೆಗಿಳಿದ ಸಾಕ್ಷಾತ್ ಭಗವಂತ. ಲೋಕಕ್ಕೇ ಮಾರ್ಗದರ್ಶನ ಮಾಡಬಲ್ಲ ಮಹಾಮಹಿಮ. ಅಧರ್ಮ ತಾಂಡವವಾಡುತ್ತಿರುವ ಭಾರತದಲ್ಲಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿಯೇ ಆತನ ಜನನವಾಗಿದೆ. ಶಂಕರನಿಂದ ಲೋಕಕಲ್ಯಾಣವಾಗಲಿ " ಎಂದು ಹೇಳುತ್ತಾ ಹೊರಟುಬಿಟ್ಟರು.

ಬಾಲಕ ಶಂಕರನಿಗೆ ತಾಯಿ ಅತಿಥಿಗಳೊಡನೆ ನಡೆಸಿದ ಸಂವಾದದ ಸಾರಾಂಶ ತಿಳಿದು ಹೋಗಿತ್ತು. ತನಗಿರುವ ಆಯುಷ್ಯ ಅಲ್ಪವಾಗಿದ್ದುದರಿಂದ ಹೇಗಾದರೂ ಮಾಡಿ ಅಮ್ಮನನ್ನು ಒಪ್ಪಿಸಿ ತಾನು ಸನ್ಯಾಸ ಸ್ವೀಕರಿಸಿ ಲೋಕೋಪಕಾರಕ್ಕೆ ಹೊರಡಬೇಕು ಎಂದು ಶಂಕರ ಭಾವಿಸಿದ. ಮದುವೆಯಾಗಿ ಸಂಸಾರ ಬಂಧನದಲ್ಲಿ ಸಿಲುಕಿದರೆ ಹೊರಜಗತ್ತಿಗೆ ಕೊಡಬೇಕಾದ ಮಾರ್ಗದರ್ಶನ ಪೂರ್ಣವಾಗುವುದಿಲ್ಲ, ತನ್ನ ಕಾರ್ಯಗಳಲ್ಲಿ ತಾನು ಯಶಸ್ಸು ಕಾಣಬೇಕಾದರೆ ಕಾಷಾಯ ವಸ್ತ್ರ ಧಾರಿಯಾಗಿ ಸನ್ಯಾಸಿಯಾಗುವುದು ವಿಹಿತವಾಗಿದೆ ಎಂದು ಆತ ನಿರ್ಧರಿಸಿದ.

ಸನಾತನ ಧರ್ಮಕ್ಕೆ ಯಾರೂ ಸಂಸ್ಥಾಪಕರಿಲ್ಲ. ಅನೇಕಾನೇಕ ಋಷಿಮುನಿಗಳಿಗೆ ಅವರ ದಿವ್ಯದೃಷ್ಟಿಗೆ ಗೋಚರವಾಗಿ ಬಾಯಿಂದ ಬಾಯಿಗೆ ಹರಿದ ಜ್ಞಾನಧಾರೆಗಳಾದ ವೇದಗಳನ್ನು ವೇದವ್ಯಾಸರು ವಿಂಗಡಿಸಿದರಷ್ಟೇ ವಿನಃ ವೇದಗಳು ಅಪೌರುಷೇಯ. ಇಂಥಾ ಜ್ಞಾನಭಂಡಾರ ಕೇವಲ ಎಲ್ಲೋ ಬಿದ್ದು ಕೆಲವು ಪುರೋಹಿತರುಗಳು ಮಾತ್ರ ಬಳಸಿ ಅಳಿದುಹೋಗಬಾರದೆಂಬ ವಾಂಛೆಯಿಂದ ಶಂಕರರು ಸನಾತನ ಧರ್ಮದ ಆಧಾರ ಸ್ತಂಭಗಳಾದ ವೇದ-ವೇದಾಂಗಗಳನ್ನು ಸಮರ್ಪಕವಾಗಿ ಎಲ್ಲರಿಗೂ ಲಭಿಸುವಂತೆಯೂ ಪ್ರಾಣಿಹಿಂಸೆ-ಬಲಿ ಮೊದಲಾದ ಗೊಡ್ಡು ಸಂಪ್ರದಾಯಗಳನ್ನು ತಡೆಯುವಂತೆಯೂ ಮಾಡುವ ಅವಶ್ಯಕತೆಯಿತ್ತು. ಕುಳಿತಲ್ಲೇ ಅದಾಗಲೇ ಶಂಕರ ಇವುಗಳನ್ನೆಲ್ಲಾ ಮೂರ್ತರೂಪದಲ್ಲಿ ಕಂಡು ಸಂಕಲ್ಪಿಸಿಬಿಟ್ಟಿದ್ದ. ಮಾನವರಿಗೆ ಸಹಜವಾಗಿ ಅನುಕೂಲಕರವಾದ ಸನಾತನಧರ್ಮ ಪ್ರಳಯಕಾಲದಲ್ಲೂ ಸಂಪೂರ್ಣ ವಿನಾಶವಾಗದ ಅಂಶಗಳಲ್ಲೊಂದು. ಆದರೂ ಆ ಕಾಲಘಟ್ಟದಲ್ಲಿ ಅನ್ಯಾಯ-ಅಧರ್ಮಗಳೇ ಜಾಸ್ತಿಯಾಗಿ ಧರ್ಮಯಾವುದು ಅಧರ್ಮಯಾವುದು ಎಂಬುದು ಅನೇಕರಿಗೆ ತಿಳಿಯದಂತಾಗಿತ್ತು. ಹಲವು ಕ್ಲೀಷೆಗಳಿಗೆ ಒಳಗಾಗಿದ್ದ ಆಚರಣೆಗಳು ಯಾರ್ಯಾರದೋ ಅಂಧಾನುಕರಣೆಗಳನ್ನೂ ಸೇರಿಸಿಕೊಂಡು ಮೂಲದಲ್ಲಿ ಇದ್ದ ನಿಜವಾದ ಆಚಾರ-ವಿಚಾರಗಳು ಬದಲಾಗಿಬಿಟ್ಟಿದ್ದವು. ಅಂತಹ ಧರ್ಮಗ್ಲಾನಿಯ ಸನ್ನಿವೇಶದಲ್ಲಿ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ ಸಾರಿದಂತೇ ದೇವರು ಒಂದಲ್ಲಾ ಒಂದು ರೂಪದಿಂದ ಧರ್ಮವನ್ನು ರಕ್ಷಿಸಲೇ ಬೇಕಿತ್ತು. ಆ ಕೆಲಸಕ್ಕಾಗಿ ತನ್ನನ್ನೇ ಪರಮೇಶ್ವರ ಶಂಕರನ ರೂಪದಲ್ಲಿ ನಿಯೋಜಿಸಿಕೊಂಡಿದ್ದ! ಸನಾತನ ಧರ್ಮದ ಮೂಲ ಸೂತ್ರಗಳು ಯಾವ ಕಾಲದಲ್ಲೂ ಯಾರಿಗೇ ಆದರೂ ಸಮನ್ವಯವಾಗುವ ಬದುಕುವ ಕಲೆಯನ್ನು ತಿಳಿಸುತ್ತವೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ.

[ಮೂರ್ತಿ ಪೂಜೆ ಬೇಕೋ ಬೇಡವೋ ಎಂಬುದು ಹಲವರ ಪ್ರಶ್ನೆ. ಆಗಾಗ ಇದು ಅಲ್ಲಲ್ಲಿ ಕೇಳಿಬರುತ್ತಲೇ ಇರುತ್ತದೆ. ಮೂರ್ತಿ ಪೂಜೆಯ ವಿಚಾರದಲ್ಲಿ ಶಂಕರರು ಖಡಾಖಂಡಿತವಾಗಿ ತಮ್ಮ ನಿರ್ಧಾರ ಪ್ರಕಟಿಸಿರುವುದನ್ನು ಈಗಲೇ ಹೇಳಿಬಿಡುತ್ತೇನೆ: ಜನಸಾಮಾನ್ಯರಾಗಿ ಪ್ರಾಪಂಚಿಕ ವ್ಯವಹಾರ ನಿರತ ನಮ್ಮಂಥವರಿಗೆ ಮನಸ್ಸಿಗೆ ಏಕಾಗ್ರತೆ ಬರುವುದು ಸುಲಭವಲ್ಲ. ಏಕಾಗ್ರತೆ ಎಂದರೆ ಕೇವಲ ತಾದಾತ್ಮ್ಯತೆಯಲ್ಲ. ಒಬ್ಬ ಓದುವಾಗ ಓದುವ ವಿಷಯಕ್ಕಷ್ಟೇ ಮನಸ್ಸನ್ನು ಸೀಮಿತಗೊಳಿಸಬಹುದು-ಅದು ಬೇರೇ ಪ್ರಶ್ನೆ. ಇಹವನ್ನು ಸಂಪೂರ್ಣ ಮರೆತು, ಭವದ ರಾಗದ್ವೇಷಗಳನ್ನು ಮರೆತು ಸಮಾಧಿಸ್ಥಿತಿಯನ್ನು ಸಾಧಿಸುವುದು ಸಾಮಾನ್ಯರಿಗೆ ಸಿದ್ಧಿಸುವುದಿಲ್ಲ. ಅಷ್ಟಾಂಗಯೋಗ ನಿರತರಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವುಗಳನ್ನು ನಡೆಸುತ್ತಾ ಇರುವಾಗ ನಿದಿಧ್ಯಾಸನ ಕ್ರಿಯೆ ನಡೆಸುತ್ತಾ ಸಮಾಧಿ ತಲ್ಪುವುದು ಲಕ್ಷದಲ್ಲಿ ಕೇವಲ ಬೆರಳೆಣಿಕೆಯ ಮಂದಿಗೆ ಮಾತ್ರ ಸಾಧ್ಯ! ಅಂಥವರಿಗೂ ಸಮಾಧಿ ಸ್ಥಿತಿಯಿಂದ ಅವರು ವಿಮುಖರಾದಾಗ ಮತ್ತೆ ಲೌಕಿಕದ ವ್ಯಾಪಾರ ಅಂಟಿಕೊಳ್ಳುತ್ತದೆ. ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ-ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ ಈ ಚಕ್ರ ನಿರಂತರ ನಡೆದು ತುರ್ಯಾವಸ್ಥೆಗೆ ತಲುಪುವವರೆಗೆ ಅಮೂರ್ತ ಪರಮಾತ್ಮನ ಮೂರ್ತರೂಪಗಳನ್ನು ಕಾಣುತ್ತಲೇ ಇರಬೇಕಾಗುತ್ತದೆ. ಯಾವಾಗ ವ್ಯಕ್ತಿ ಐಹಿಕ ಬಂಧನವನ್ನು ಯಾವ ಮೋಹವೂ ಇಲ್ಲದೇ ಕಿತ್ತೆಸೆದು ಪಾರಮಾರ್ಥಿಕ ಆನಂದಾನುಭೂತಿಯನ್ನು ಪಡೆಯಲು ಅರ್ಹನಾಗುತ್ತಾನೋ ಆ ಹಂತದವರೆಗೂ ಮೂರ್ತಿ ಪೂಜೆ ಅನಿವಾರ್ಯ. ಅದೊಂದು ಸ್ಲ್ಯಾಬ್ ಇದ್ದ ಹಾಗೇ. ಅಲ್ಲಿಂದಾಚೆ ಆ ವ್ಯಕ್ತಿ ಮೂರ್ತಿಗಳನ್ನು ಪೂಜಿಸುವ ಬದಲು ಭಗವಂತನನ್ನು ಅಮೂರ್ತರೂಪದಲ್ಲೇ ಕಾಣುತ್ತಾನೆ.

ವ್ಯಕ್ತಿ ಆ ಹಂತಕ್ಕೆ ತಲುಪಿದ್ದಾನೆ ಎಂದು ಗುರ್ತಿಸುವುದು ಹೇಗೆ ಎಂದರೆ-- ಮಹಾತ್ಮರು ಎಂದು ಸುತ್ತ ಇರುವ ಹಲವರು ಸಹಜ ಅನುಭವದಿಂದ ಅದನ್ನು ಒಪ್ಪುತ್ತಾರೆ. ಸಾಧನೆ ಮಾಡಿದ ವ್ಯಕ್ತಿಯ ಯೋಜನೆಗಳು, ಯೋಚನೆಗಳು ಕೇವಲ ಸಂಕಲ್ಪಮಾತ್ರದಿಂದಲೇ ಘಟಿಸುತ್ತವೆ! ಯಾವ ವಿಜ್ಞಾನಕ್ಕೂ ನಿಲುಕದ ಅಘಟಿತ ಘಟನಾ ವಿಷಾರದನಾಗುವ ವ್ಯಕ್ತಿ ಸುತ್ತಲೂ ಇರುವ ಜನರ ಲೌಕಿಕವಾದ ತಾಪತ್ರಯಗಳೆನಿಸಿದ ಅದಿದೈವಿಕ-ಅದಿಭೌತಿಕ-ಆಧ್ಯಾತ್ಮಿಕ ಆದಿ-ವ್ಯಾಧಿಗಳನ್ನು ತನ್ನ ತಪೋಬಲದಿಂದ ನಿವಾರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ. ಇನ್ನೊಬ್ಬರ ಪೂರ್ವಕುಕೃತ ಸಂಚಿತ ಫಲಗಳಿಂದುಟಾದ ರೋಗಗಳನ್ನೂ ಬವಣೆಗಳನ್ನೂ ಪರಿಹರಿಸುವ ತಾಕತ್ತನ್ನು ಪಡೆದ ವ್ಯಕ್ತಿ ಪಾರಮಾರ್ಥಿಕ ಸಾಧನೆಯ ಆ ಮಟ್ಟಕ್ಕೆ ಏರಿದ್ದಾನೆ-ದೈವತ್ವವನ್ನು ಪಡೆದಿದ್ದಾನೆ, ಅಮೂರ್ತದಲ್ಲಿ ಆನಂದಲೋಕದಲ್ಲಿ ವಿಹರಿಸುವ ಅಲೌಕಿಕ ಅತಿಮಾನುಷ ಶಕ್ತಿಯನ್ನು ಗಳಿಸಿದ್ದಾನೆ, ಆತ್ಮ-ಪರಮಾತ್ಮನಲ್ಲಿ ವಿಲೀನಗೊಳ್ಳುವ ಕ್ರಿಯೆಗೆ ಸಜ್ಜಾಗಿದೆ ಎಂಬುದು ತಿಳಿಯಬೇಕಾದ ಅಂಶ. ಅಲ್ಲಿಯವರೆಗೂ ಬರಿದೇ ಮೂರ್ತಿ ಪೂಜೆ-ಯಜ್ಞ-ಯಾಗ ಇವೆಲ್ಲಾ ಬೇಡಾ ತಾನು ಆ ಹಂತವನ್ನು ಬಿಟ್ಟು ಮೇಲೇರಿಬಿಟ್ಟಿದ್ದೇನೆ, ಅದೆಲ್ಲಾ ನರ್ಸರಿ-ಪ್ರೈಮರಿ ಹುಡುಗರ ಹಂತ ಎಂಬುದು ಮತ್ತದೇ ಅಜ್ಞಾನವಾಗುತ್ತದೆ! ಉದಾಹರಣೆಯಾಗಿ ಇತ್ತೀಚಿನವರೆಗೂ ಇದ್ದ ಸನ್ಯಾಸಿಗಳಲ್ಲಿ ಭಗವಾನ್ ಶ್ರೀಧರರು ಸಂಪೂರ್ಣ ಮೋಕ್ಷಶ್ರೀಯನ್ನು ಧರಿಸಿದ್ದರು-ಲೋಕದ ಹಲವರ ಸಂಕಷ್ಟಗಳನ್ನು ಯಾವುದೇ ಪವಾಡ ಮಾಡದೇ ಆದರೆ ಪವಾಡ ನಡೆದ ರೀತಿಯಲ್ಲೇ ಬಗೆಹರಿಸಿದ್ದಾರೆ. ಅದೇ ಹಂತವನ್ನು ರಮಣಮಹರ್ಷಿಗಳೂ ತಲ್ಪಿದ್ದರು, ಶಿರಡೀ ಸಾಯಿಬಾಬಾ ಕೂಡ. ಅವರೆಲ್ಲಾ ಮೂರ್ತಿಪೂಜೆಯನ್ನು ನಿಷೇಧಿಸಲಿಲ್ಲ, ಬದಲಾಗಿ ಅವರೂ ಅನೇಕ ವಿಗ್ರಹಗಳಲ್ಲಿ ದೇವರನ್ನು ಕಂಡರು. ವಿಗ್ರಹವೇ ದೇವರಲ್ಲಾ ವಿಗ್ರಹದ ಆವಾಸಿ ದೇವರೆಂಬುದು ಸತ್ಯ. ಆದರೆ ಅಮೂರ್ತರೂಪ ಮೂರ್ತರೂಪದಲ್ಲಿ ತನ್ನನ್ನು ಲೋಕಕ್ಕೆ ತೋರಗೊಡುವಾಗ ಅದೆಲ್ಲಾ ಸುಳ್ಳು ಎಂಬ ವಿತಂಡ ವಾದವನ್ನು ನಾನು ಒಪ್ಪುವುದಿಲ್ಲ. ಶಂಕರರ ತತ್ವಗಳು ಸರಿಯಾಗೇ ಇವೆ. ಆಧುನಿಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಪರಮಾಣು ವಿಭಜನೆಯ ಕಾಲದಲ್ಲಿ ಅದ್ವೈತ ಸತ್ಯವನ್ನು ಅನುಭವಿಸಿದುದಾಗಿ ವಿಶಿಷ್ಟಾದ್ವೈತ ಸಂಪ್ರದಾಯದವರಾಗಿದ್ದ ವಿಜ್ಞಾನಿ ಡಾ|ರಾಜಾರಾಮಣ್ಣ ಹೇಳಿದ್ದಾರೆ-ತಮ್ಮ 'YEARS OF PILGRIMAGE' ಎಂಬ ಅತ್ಮಚರಿತ್ರೆಯಲ್ಲಿ ! ಮೊಲಕ್ಕೆ ಮೂರೇ ಕಾಲು ಎಂಬುದು ಎಷ್ಟು ಹಾಸ್ಯಾಸ್ಪದವೋ ’ಕಾಣಲಾಗದವರ’ ಪಾಲಿಗೆ ಮೊಲಕ್ಕೇ ಮೂರೇ ಕಾಲು ಎಂಬುದೂ ಅಷ್ಟೇ ಸತ್ಯ-ಅದು ಅವರ ತಪ್ಪಲ್ಲ , ಅವರ ಬೌದ್ಧಿಕ ಸಾಧನೆಯ ಮಟ್ಟ ಅಷ್ಟೇ! ]

ಲೋಕದ ನೋವನು ಮಡಿಲಲಿ ಧರಿಸುತ
ನಾಕವ ಕರುಣಿಸೆ ತಾ ಮುನ್ನಡೆದ |
ಆ ಕರುಣಿಯ ವಯ ಅಲ್ಪವು ಎನಿಸಲು
ಸಾಕು ಎಂದನವ ಈ ಲೌಕಿಕಕೆ ||

ಏಕವನೇಕವು ಮೂರ್ತವಮೂರ್ತವು
ಪಾಕದೊಳಾಮನ ಸಿದ್ಧಿಯಪಡೆದು |
ಚಾಕರಿ ಧರ್ಮದ ಪುನರುಜ್ಜೀವನ
ಏಕಾಂಗಿಯು ತೆರಳಿದ ಸಾಧನೆಗೆ ||

ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್‍ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ |
ಮಾಯಾವೀವ ವಿಜೃಂಭಿಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


.........ಮುಂದುವರಿಯುತ್ತದೆ