ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 7, 2011

ದುಃಸ್ವಪ್ನವಾಗಿ ಕಾಡಿದ ಮನೆ ’ಪ್ಯಾಕರ್ಸ್ ಆಂಡ್ ಮೂವರ್ಸ್’


ದುಃಸ್ವಪ್ನವಾಗಿ ಕಾಡಿದ ಮನೆಪ್ಯಾಕರ್ಸ್ ಆಂಡ್ ಮೂವರ್ಸ್

ಮನುಷ್ಯನ ಜೀವನಪೂರ್ತಿ ಆತ ಕಲಿಯುವುದಕ್ಕಿದೆ. ಹಿಂದಿನಕಾಲದಲ್ಲಿ ಸ್ವಲ್ಪ ಕಮ್ಮಿ ಇತ್ತೋ ಏನೋ ಈಗಂತೂ ಕ್ಷಣ ಕ್ಷಣವೂ ಕಲಿಯುವುದು ಅನಿವಾರ್ಯವಾಗಿದೆ; ಕಲಿತದ್ದು ಕಮ್ಮಿ ಎಂದುಕೊಂಡು ಮರುಗಬೇಕಾಗಿದೆ. ಯಾವಾಗ ಎಲ್ಲ ಕ್ಷೇತ್ರಗಳಲ್ಲೂ ಕಾಂಚಾಣವೇ ಮುಖ್ಯ ಎಂಬುದು ಹಲವರ ಅನಿಸಿಕೆಯಾಯಿತೋ ಆಗ ಮಾನವೀಯ ಮೌಲ್ಯಗಳು ಕುಸಿದುಹೋಗಿವೆ. ಬದುಕುವ ಹಲವು ರೀತಿಗಳಲ್ಲಿ ಕೆಲವರದು ಬಸಿದುಕೊಂಡು ಬದುಕುವುದು, ಇನ್ನೂ ಕೆಲವರದು ಇಸಿದುಕೊಂಡು ಬದುಕುವುದು, ಮತ್ತೂ ಕೆಲವರದು ಕಸಿದುಕೊಂಡು ಬದುಕುವುದು! ’ನನ್ನದು ನನ್ನದೇ ನಿನ್ನದೂ ನನ್ನದೇಎಂಬ ತತ್ವವನ್ನು ಜನತಾದಳದವರು ಹೇಳಿಕೊಟ್ಟರು. ಆವಾಗಿನಿಂದ ಶುರುವಾದ ತಮ್ಮದೆನ್ನುವ ಪರಿಪಾಟ ಇಂದು ಅತಿರೇಕಕ್ಕೆ ಹೋಗುತ್ತಿದೆ; ಹೋಗಿದೆ. ಭೂಮಿಯ ವ್ಯವಹಾರವಿರಲಿ, ಆಡಳಿತಾತ್ಮಕ ವಿಷಯವಿರಲಿ ಅಲ್ಲೆಲ್ಲಾ ಪರರ ಹಕ್ಕನ್ನು ಕಸಿದು ಎಲ್ಲವೂ ತಮ್ಮದೇ ಎಂಬ ಧೋರ್ಅಣೆಯನ್ನು ಹೊಂದಿ ವಿನಾಕಾರಣ ಹಲವರಿಗೆ ತೊಂದರೆಯಾಗುತ್ತಿದೆ.

ಮಾತಾಡ ಹೊರಟಿದ್ದು ಅತಿ ಚಿಕ್ಕ ವಿಷಯವೇ ಆದರೂ ಇದರ ಅನುಭವ ನಿಮಗೂ ಧಕ್ಕಲಿ ಮೂಲಕ ಎಲ್ಲಾದರೂ ಅಪ್ಪಿತಪ್ಪಿ ನಿಮಗೂ ಆಗಬಹುದಾದ ಇಂತಹ ತೊಂದರೆಗಳು ಬಾಧಿಸದೇ ಇರಲಿ ಎಂಬ ಉದ್ದೇಶದಿಂದ ಹೀಗೆ ಬರೆಯಲು ಹೊರಟಿದ್ದು. ಜೇನು ಹುಳುಗಳು ತಮ್ಮ ಅತಿ ಸಣ್ಣ ಬಾಯಿಯಲ್ಲಿ ಹೀರಿದ ಮಕರಂದವನ್ನು ಗೂಡಿನಲ್ಲಿ ಪೇರಿಸಿ ಪೇರಿಸಿ ಪೇರಿಸಿ ಅಂತೂ ಅದು ಲೀಟರುಗಟ್ಟಲೆಯಾಗುತ್ತದೆ! ಹಾಗೆ ಅವು ಶೇಖರಣೆ ಮಾಡುವುದು ತಮ್ಮ ಮರಿಗಳಿಗಾಗಿ; ಹಾರಲಾಗದ ಅವುಗಳಿಗೂ ಮತ್ತು ಮಕರಂದ ಸಿಗದ ವೇಳೆ ತಮ್ಮೆಲ್ಲರಿಗೂ ಆಹಾರವಾಗಿ ಅದನ್ನು ಬಳಸಲಾಗಿ. ಆದರೆ ಪಾಪಿ ಮನುಷ್ಯನ ಕಣ್ಣಿಗೆ ಬಿದ್ದ ಜೇನುಗೂಡು ಅಮೃತತುಲ್ಯ ಮಕರಂದ ರಹಿತವಾಗಿ ಮತ್ತೆ ಹುಳುಗಳು ತಡಕಾಡುವಂತೇ ಆಗುತ್ತದೆ. ಅದೇ ರೀತಿ ತನ್ನ ಬದುಕಿನ ಮುಂದಿನ ಅಧ್ಯಾಯಕ್ಕಾಗಿ ತನ್ನ ಸುತ್ತ ಗೂಡನ್ನು ಸುತ್ತಿಕೊಳ್ಳುವ ರೇಷ್ಮೆ ಹುಳು ಕಣ್ಣಿಗೆ ಕಂಡಾಗ ಅದನ್ನು ಬಿಸಿನೀರಲ್ಲಿ ಅದ್ದಿ ಸಾಯಿಸಿ ಆಮೇಲೆ ರೇಷ್ಮೆ ದಾರವನ್ನು ಬಿಡಿಸಲಾಗುತ್ತದೆ. ಒಂದೊಂದು ರೇಷ್ಮೆ ಸೀರೆಯ ಹಿಂದೆ, ಬಟ್ಟೆಯ ಹಿಂದೆ ಸಹಸ್ರಾರು ಹುಳಗಳ ಸಾವಿನ ನೋವು ಅಡಗಿರುತ್ತದೆ. ಆದರೂ ಮನುಷ್ಯ ಸಭೆ-ಸಮಾರಂಭಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ ಬಣ್ಣ ಬಣ್ಣದ ರೇಷ್ಮೆ ಬಟ್ಟೆಗಳನ್ನು ಧರಿಸಿ ತನ್ನ ಅಂದವನ್ನು ಹೆಚ್ಚಿಸಿಕೊಳ್ಳುತ್ತಾನೆ, ಮೆರೆಯುತ್ತಾನೆ. ಕರುವಿನ ಪಾಲಿನ ಹಾಲನ್ನು ತಾನು ಹಿಂಡಿಕೊಂಡು ಕರುವಿಗೆ ಬೇರೇ ಆಹಾರ ನೀಡುತ್ತಾನೆ....ಹೀಗೇ ಎಣಿಸುತ್ತಾ ನಡೆದರೆ ಪ್ರಪಂಚ ಬರೀ ಸ್ವಾರ್ಥದಿಂದ ಕೂಡಿರುತ್ತದೆ. ಯಾರೊಬ್ಬರೂ ಪರರ ನೋವು-ನಲಿವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಲ್ಲವೇ?

ಹೇಗೆ ಜೇನುಹುಳು ಮಕರಂದ ಸಂಗ್ರಹಿಸುತ್ತದೋ ಹೇಗೆ ಗೆದ್ದಲು ಮಣ್ಣಿನ ಕಣಗಳನ್ನು ಪೇರಿಸಿ ಹುತ್ತಕಟ್ಟುತ್ತದೋ ಹಾಗೆಯೇ ನಾವು ಹಲವರು ನಮ್ಮ ಅನುಕೂಲಕ್ಕಾಗಿ ಮನೆಯೊಂದನ್ನು ಕಟ್ಟಿಯೋ ಬಾಡಿಗೆ ಪಡೆದೋ ವಾಸಿಸುತ್ತೇವೆ. ಕಟ್ಟಿದ ಮನೆಗೋ ಇನ್ನೊಂದು ಬಾಡಿಗೆ ಮನೆಗೋ ನಾವು ಸದ್ಯ ಇರುವ ಮನೆಯಿಂದ ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತೇವಲ್ಲ. ಅದಕ್ಕೇ ಅಂತಲೇ ಕೆಲವು ಕಂಪನಿಗಳು ಬಾಗಿಲು ತೆರೆದಿವೆ. ನಗರಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಅಥವಾ ಒಂದು ನಗರದಿಂದ ಇನ್ನೊಂದಕ್ಕೆ ಸಾಮಾನುಗಳನ್ನು ಸುರಕ್ಷಿತವಾಗಿ ಸಾಗಿಸಿಕೊಡುವುದೇ ಅವರ ಕಸುಬು: ಅದಕ್ಕೆ ಅವರು ಪ್ರತಿಫಲವಾಗಿ ಹಣವನ್ನು ತೆಗೆದುಕೊಳ್ಳುತ್ತಾರೆ. ಆಧುನಿಕ ಜೀವನದಲ್ಲಿ ಸಾಗಾಟ ಇದ್ದಿದ್ದೇ. ಹಾಗೆ ಸಾಗಿಸುವಾಗ ಕೇವಲ ಒಬ್ಬಿಬ್ಬರು ಸಾಕಾಗುವುದಿಲ್ಲ. ದೊಡ್ಡ ವಾಹನದ ಅವಶ್ಯಕತೆ ಕೂಡ ಇರುತ್ತದೆ. ಸಾಮಾನುಗಳು ನಜ್ಜುಗುಜ್ಜಾಗದಂತೇ, ನುಗ್ಗಿಹೋಗದಂತೇ. ಐಬಿಗೆ ಈಡಾಗದಂತೇ ನೋಡಿಕೊಳ್ಳುವುದೇ ಒಂದು ಹರಸಾಹಸ! ಹಾಗೆ ಮಾಡಲು ರಟ್ಟಿನ ಹಲವು ಪೆಟ್ಟಿಗೆಗಳು, ಹಗ್ಗಗಳು, ಗುಳ್ಳೆಪದರದ ಪ್ಲಾಸ್ಟಿಕ್ಗಳು[ಬಬಲ್ ಶೀಟ್], ದಾರಗಳು, ಗಮ್ ಟೇಪ್ಗಳು, ಸುತ್ತಿಗೆ, ಇಕ್ಕಳ, ಅಲೆನ್ ಕೀಸ್, ಸ್ಕ್ರ್ ಡ್ರೈವರ್ಸ್, ನಟ್ ಡ್ರೈವರ್ಸ್, ಸ್ಪಾನರ್ ಮುಂತಾದವುಗಳಿರುವ ಟೂಲ್ ಬಾಕ್ಸ್ ಇವೆಲ್ಲಾ ಬೇಕಾಗುತ್ತವೆ. ಇದೆಲ್ಲವನ್ನೂ ತಿಳಿದು ಸಾಗಾಟವನ್ನೇ ದಂಧೆಯನ್ನಾಗಿ ನಡೆಸುವ ಕಂಪನಿಗಳು ಹುಟ್ಟಿದವು. ಏನಾದರೂ ಸಾಗಿಸಬೇಕೆಂದರೆ ಅಂಥವರನ್ನು ಸಂಪರ್ಕಿಸಿದರೆ ಅವರು ಮಾಡಿಕೊಡುತ್ತಾರೆ.

ಹಲವು ದಿನಗಳ, ತಿಂಗಳುಗಳ, ವರುಷಗಳಕಾಲ ವಾಸಿಸಿ ತನ್ಮೂಲಕ ಭಾವನಾತ್ಮಕವಾಗಿದ್ದೂ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧವನ್ನು ಹೊಂದಿರುವ ಮನೆಯನ್ನು ಮನಮುರಿದು ನಮ್ಮ-ನಿನ್ನ ಸಂಬಂಧ ಮುಗಿಯಿತು ಎಂದು ಹೇಳಿ ಬೇರೆ ಮನೆಗೆ ತೆರಳಬೇಕಾಗುತ್ತದೆ. ಓಡಾಡಿ, ನಿಂಟು, ಮಲಗಿ, ಕೂತು, ತಿಂಡಿ-ಊಟ-ವಿಶ್ರಾಂತಿ ಮಾಡಿ ಕಳೆದ ಹಲವು ಅಮೂಲ್ಯ ಗಳಿಗೆಗಳ ಸಾಕ್ಷೀಭೂತವಾದ ಮನೆಯನ್ನು ನಮ್ಮದಲ್ಲದ ಕಾರಣಕ್ಕೆ ಬಿಟ್ಟು ಹೊರಡುವುದು ಅನಿವಾರ್ಯ-ಸಹಜ. ನಮ್ಮ ನಲಿವಿನ ಕ್ಷಣಗಳಲ್ಲಿ ಅಲ್ಲಿನ ಗೋಡೆಗಳು ನಕ್ಕಿವೆ, ನಮ್ಮ ನೋವಿನ ಚಣಗಳಲ್ಲಿ ಅವು ಅತ್ತಿವೆ, ನಮ್ಮ ಅನುವು-ಆಪತ್ತುಗಳಲ್ಲಿ ನಮಗೆ ಕಾಣದ ಯಾವುದೋ ರೀತಿಯಲ್ಲಿ ಸಾಂತ್ವನ ನೀಡಿವೆ! ಇಷ್ಟೇ ಅಲ್ಲ: ಕತ್ತಲಲ್ಲೇ ನಾವು ನಡೆದುಹೋದರೂ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ, ಎಷ್ಟು ದೂರದಲ್ಲಿದೆ ಇವುಗಳೆಲ್ಲಾ ನಮಗೆ ಮನದಲ್ಲಿ ಅಚ್ಚೊತ್ತುಬಿಟ್ಟಿರುತ್ತದೆ. ನಾಳೆಯೇ ಮನೆಯನ್ನು ಬಿಟ್ಟು ಹೊರಡುವವರಿದ್ದರೂ ಇಂದು ರಾತ್ರಿ ಕೂಡ ಮನೆಯ ಒಂದು ಸಂಪರ್ಕ ಕಡಿದುಹೋಗುವುದನ್ನು ನಾವು ಇಷ್ಟಪಡುವವರಲ್ಲ! ಮನೆ ಬಹಳ ಆಧುನಿಕವಲ್ಲದಿರಬಹುದು, ಇಕ್ಕಟ್ಟಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಅಂದವಾಗಿರಬಹುದು ಅಥವಾ ಆದಿಮಾನವನ ಚಿತ್ರಕಲಾಶಾಲೆಯಂತೇ ಇರಬಹುದು --ಆದರೂ ಮನೆಯನ್ನು ನಾವು ತುಚ್ಛೀಕರಿಸುವುದಿಲ್ಲ: ಅದು ನಮ್ಮನೆ!

ದಾಸರು ಹೇಳುತ್ತಾರೆ: ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ. ಆದರೆ ಸುಮ್ಮನೇ ಇರಲೆಂದಾದರೂ ಉಳಿದ ಮನೆಯಲ್ಲಿ, ಮನೆಯ ವ್ಯವಸ್ಥೆಯಲ್ಲಿ ಒಳಹೊಕ್ಕು ನಮ್ಮ ಮನಸ್ಸು ಮನೆಗೆ ಒಗ್ಗಿಕೊಂಡಿರುತ್ತದೆ. ತಾಯಿ ಸುಂದರವಾಗಿರದಿದ್ದರೂ ತಾಯಿಯೇ ಅಲ್ಲವೇ ? ಹಾಗೇ ಸುಮ್ಮನೆಹೇಗೂ ಇರಲಿ ಅಲ್ಲಿ ಉಳಿದಾಗ ನಿತ್ಯವೂ ಅದೂ ಇದೂ ಅಂತ ಏನಾದರೊಂದನ್ನು ತಂದು ಜೋಡಿಸುತ್ತಲೇ ಇರುತ್ತೇವೆ. ಅಕ್ಕ ಫಾರಿನ್ ನಿಂದ ತಂದ ಸೆಂಟು, ಗೆಳೆಯ ದಿಲ್ಲಿಯಿಂದ ತಂದ ಜರ್ಕಿನ್ನು, ಇನ್ನೊಬ್ಬ ಗೆಳೆಯ ದುಬೈಯಿಂದ ತಂದ ಶರ್ಟ್ ಫೀಸು, ಅಂಚಿಮನೆ ಸುಬ್ರಾಯ ಕಾಶಿಯಿಂದ ತಂದ ಗಂಗೆಯ ಸಣ್ಣ ಕರಂಡಕ, ಶೋಲೆ ಸಿನಿಮಾ ಸೀಡಿ ಹೀಗೇ ಅತಿ ಚಿಕ್ಕ ವಸ್ತುಗಳಿಂದ ಹಿಡಿದು ವಾಶಿಂಗ್ ಮಶಿನ್ನು, ಫ್ರಿಜ್ಜು, ದಿವಾನ್ ಕಾಟು ಹೀಗೆ ಪಟ್ಟಿ ಬಹಳ ದೊಡ್ಡ! ಇಲ್ಲಿರುವ ಪ್ರತಿಯೊಂದೂ ವಸ್ತುಗಳ/ಪರಿಕರಗಳ ಹಿಂದೆ ನಮ್ಮ ಶ್ರಮ ಅಡಗಿರುತ್ತದೆ. ಅವುಗಳಲ್ಲಿ ಕೆಲವು ಸಿಂಪ್ಲೀ ನಥಿಂಗ್ ಅಂತ ಅನಿಸಿದರೂ ಅವುಗಳನ್ನು ಬಿಡಲು ನಮ್ಮ ಮನಸ್ಸು ತಯಾರಾಗುವುದೇ ಇಲ್ಲ. ಎಲ್ಲವೂ ಇರಲಿ ಇರಲಿ ಆಮೇಲೇ ಏನೋ ಕೆಲಸಕ್ಕೆ ಬರಬಹುದು; ಮುಂದೆಲ್ಲೋ ಯಾವುದಕ್ಕೋ ಉಪಕಾರವಾಗಬಹುದು ಎಂಬ ಒತ್ತಾಸೆಯಿಂದ ರಟ್ಟಿನ ಹಳೆಯ ಪೆಟ್ಟಿಗೆಗಳು, ಬಳಸದೇ ಬಿಟ್ಟ ಬಾಚಣಿಗೆಗಳು, ಹಳೆಯ ಕರ್ಲಾನ್ ದಿಂಬುಗಳು, ಅಲ್ಲಿಲ್ಲಿ ಕಿತ್ತುಹೋದ ಬೆತ್ತದ ಖುರ್ಚಿಗಳು, ಓಬೀರಾಯನ ಕಾಲದ ಎಕ್ಸ್-‍ಟೆನ್ಶನ್ ಬಾಕ್ಸುಗಳು, ಫೂಟ್ಪಾತ್ನಲ್ಲಿ ತಂದ ಹಳೆಯ ಇಂಗ್ಲೀಷ್ ಕಾದಂಬರಿಗಳು, ಬಿವಿ ಕಾರಂತರ ಬಗ್ಗೆ ಯಾರೋ ಬರೆದ ಲೇಖನಗಳಿರುವ ಹಳೆಯ ಪುಟಗಳು, ೧೯೯೮ರಲ್ಲಿ ಯಾಕೋ ಬೇಕು ಎನಿಸಿ ಎತ್ತಿಟ್ಟಿದ್ದ ನಾಲ್ಕುತಿಂಗಳಸುಧಾಪತ್ರಿಕೆ, ಏನೂ ಅಲ್ಲದ ನಮಗೆ ನೀವೂ ಗಣ್ಯರೆಂದು ಅರ್ಪಿಸಿದ್ದ ಪರಿಮಳ ರಹಿತಗಂಧದ ಹಾರಗಳು ಎಲ್ಲವೂ ಬೇಕು ಎಲ್ಲವೂ ಬೇಕು! ಅವುಗಳನ್ನು ಬಳಸದೇ ನೋಡದೇ ವರ್ಷಗಳೇ ಸಂದರೂ ಪರವಾಗಿಲ್ಲ ಅಂತೂ ಅವು ಬೇಕು. ಇವೆಲ್ಲವುಗಳ ಜೊತೆಗೆ ಇರುವ ಸಂಬಂಧವೇ ಅಂಥದ್ದು!

ಮೊನ್ನೆ ನನ್ನ ಮನೆಯನ್ನು ಬದಲಾಯಿಸುತ್ತಿದ್ದೆ. ಹಾಗೆ ಬದಲಾಯಿಸುವಾಗ ಹೊಸ ಬಾಡಿಗೆ ಮನೆ ಈಗಿರುವ ಮನೆಗಿಂತ ತುಸು ದೂರವೇ ಇದ್ದರೂ ತಲೆಯಲ್ಲಿ ಹೊತ್ತೋ ಕೈಯ್ಯಲ್ಲಿ ಎತ್ತೋ ಸಾಗಿಸಿ ಮುಗಿಸಲಾಗದಷ್ಟು ಸಾಮಾನುಗಳಿರುವುದರಿಂದಪ್ಯಾಕರ್ಸ್ ಆಂಡ್ ಮೂವರ್ಸ್ತಿಳಿದುಕೊಳ್ಳಲು ಜಸ್ಟ್ ಡಯಲ್ಗೆ ಕರೆಮಾಡಿದೆ. ಅವರು ಕಳುಹಿಸಿದ ಸಂದೇಶದಲ್ಲಿ - ಕಂಪನಿಗಳ ಹೆಸರುಗಳಿದ್ದವು. ಜಸ್ಟ್ ಡಯಲ್ನಲ್ಲಿ ಹೆಸರು ನೋಂದಾಯಿಸಿದ ಕೆಲವುಪ್ಯಾಕರ್ಸ್ ಆಂಡ್ ಮೂವರ್ಸ್ಗಳಿಗೆ ಸಂದೇಶಗಳು ಕಳುಹಿಸಲ್ಪಟ್ಟು ಅವರು ನೇರವಾಗಿ ನನ್ನ ಜಂಗಮವಾಣಿಗೆ ಕರೆಮಾಡಲು ಆರಂಭಿಸಿದರು. ಅವರಲ್ಲಿ ಒಂದೆರಡು ಕಂಪನಿಗಳು ತುಂಬಾ ಆಸಕ್ತಿ ತೋರಿಸಿದವು. ಅವುಗಳ ಪೈಕಿ ಒಂದುಕಂಪನಿ ಮಾರ್ಕೆಟಿಂಗ್ ಪ್ರತಿನಿಧಿ ನಮ್ಮನೆಗೆ ಬಂದು ಇರುವ ಒಟ್ಟೂ ಸಾಮಾನುಗಳಿಗೆ ಕಣ್ಣು ಹೊಡೆದು ಆಮೇಲೆ ನನ್ನೊಡನೆ ಮಾತನಾಡಿ ಒಂದುರೀಸನೇಬಲ್ರಕಮಿಗೆ ಬಾಯಲ್ಲಿ ಒಪ್ಪಂದ ಮಾಡಿಕೊಂಡ. ವಿಸಿಟಿಂಗ್ ಕಾರ್ಡ್ ಕೇಳಿದಾಗ ತಾನು ಎಲ್ಲೋ ಇದ್ದೆ, ನಿಮಗೆ ಬೇಕಿ ಅಂತ ಕರೆಬಂದ ಕೂಡಲೇ ಬಂದುಬಿಟ್ಟೆ, ಅದಕ್ಕಾಗಿ ಕಾರ್ಡ್ ತನ್ನ ಜೇಬಲ್ಲಿಲ್ಲ, ಆಮೇಲೆ ಕಳಿಸುತ್ತೇನೆ ಎಂದ ಮತ್ತು ನೀವು ಮನೆ ಬದಲಾಯಿಸುವ ಮುನ್ನಾದಿನ ಕರೆನೀಡುವುದಾಗಿ ಹೇಳಿದ. ನಾನು ಎಷ್ಟು ಕಾಳಜಿಯಿಂದ ಮಾಡುತ್ತಾರಪ್ಪಾ ಎಂದು ಖುಷಿಯಿಂದಿದ್ದೆ. ವಿಸಿಟಿಂಗ್ ಕಾರ್ಡ್ ಕಳಿಸಲಿಲ್ಲ. ಮನೆ ಬದಲಾಯಿಸುವ ದಿನ ಬಂದೇ ಹೋಯ್ತು. ಮುನ್ನಾದಿನ ರಾತ್ರಿ ಆತ ಹೇಳಿದಹಾಗೇ ಕರೆಬರಲಿಲ್ಲ; ಕೊನೆಗೆ ನಾನೇ ಅವರು ಬರುತ್ತಾರಾ ಇಲ್ಲವಾ ತಿಳಿದುಕೊಳ್ಳುವಾ ಅಂತ ಆತ ನೀಡಿದ್ದ ಜಂಗಮವಾಣಿಗೆ ಕರೆಮಾಡಿದೆ. ಕರೆಯನ್ನು ಸ್ವೀಕರಿಸಲಿಲ್ಲ. ಜಸ್ಟ್ ಡಯಲ್ನವರು ನೀಡಿದ್ದ ಅವರ ಪ್ರಥಮ ಮೊಬೈಲ್ ನಂಬರಿಗೆ ಕರೆಮಾಡಿದಾಗ ಅಲ್ಲಿರುವ ವ್ಯಕ್ತಿರೋಹಿತ್ಎಂಬ ವ್ಯಕ್ತಿ ಬಂದಮೇಲೆ ತಾನು ತಿಳಿಸುವುದಾಗಿ ಹೇಳಿದ. ಆಮೇಲೆ ಅರ್ಧಘಂಟೆ ಬಿಟ್ಟು ನನಗೊಮ್ಮೆ ನನ್ನನ್ನು ಮೊದಲು ಸಂಪರ್ಕಿಸಿದ್ದರೋಹಿತ್ಕರೆಮಾಡಿದ, " ಬೆಳಿಗ್ಗೆ :೩೦ಕ್ಕೆ ನಿಮ್ಮನೆ ಮುಂದೆ ನಮ್ಗಾಡಿ ಬರುತ್ತೆ " ಎಂದ.

ಮನೆ ಬದಲಾಯಿಸುವಾಗ ಸಹಜವಾಗಿ ಇರುವ ಪ್ಯಾಕಿಂಗ್ ತಲೆನೋವು ನಮ್ಮನ್ನು ರಾತ್ರಿ ಯೋಚನೆಗೀಡುಮಾಡಿತ್ತು. ತೀರಾ ವೈಯ್ಯಕ್ತಿಕ ಎನ್ನುವ ಕೆಲವು ಒಡವೆ-ಒಸ್ತುಗಳನ್ನು ನಾವೇ ಪ್ಯಾಕ್ ಮಾಡಿಕೊಂಡು ಗುರುತಿಸಿಕೊಂಡೆವು. ರಾತ್ರಿ ಕಳೆದು ಬೆಳಗಿನ :೩೦ ಗಂಟೆ ಸಮೀಪಿಸಿತು. ಅವರ ಗಾಡಿ ಬರಲಿಲ್ಲ. ಇನ್ನೇನು ನಾನು ವಿಚಾರಿಸಬೇಕು ಎನ್ನುವ ಸಮಯದಲ್ಲಿ :೦೦ ಘಂಟೆಗೆ ಒಬ್ಬಾತ ಕರೆಮಾಡಿ " ನಾವು ಇಲ್ಲಿದೀವಿ ದಾರಿ ತಿಳಿಸಿ" ಎಂದ. ದಾರಿ ಹೇಳಿದ ಕಾಲುಘಂಟೆಗೆ ಗುಜರಿಗೆ ಹಾಕುವ ಥರದ ಮೆಟಡಾರ್ ಒಂದು ಬಂದುನಿಂತಿತು. ಅದರಿಂದ ನಾಲ್ವರು ಹುಡುಗರು ದಬದಬ ಇಳಿದು ನಮ್ಮನೆಗೆ ಬಂದರು. ’ರೋಹಿತ್ಕಳ್ಸಿದಾರೆ ಎನ್ನುತ್ತಾ ಕೈಯ್ಯಲ್ಲಿ ಒಂದೆರಡು ರಟ್ಟಿನ ಬಾಕ್ಸ್ ಗಳನ್ನೂ ಒಂದು ಬಾಂಬ್ ಟೇಪನ್ನೂ ಹಿಡಿದು ಬಂದರು. ನಾನು ಕೆಲಸಗಾರರ ಮುಖ್ಯಸ್ಥನೆನಿಸುವ " ಮೇಸ್ತ್ರಿ ಯಾರು? " ಎಂದು ಕೇಳಿದೆ. ಅವರಿಗೆ ಅದು ಗೊತ್ತೇ ಇರಲಿಲ್ಲ. "ಟೂಲ್ ಬಾಕ್ಸ್ ಇದ್ಯಾ ?" ಎಂದೆ, " ಇದೆ ಸರ್ ಏನ್ ಬೇಕ್ ಹೇಳಿ ? " ಉತ್ತರಬಂತೇ ವಿನಹ ಅದು ಕಾಣಿಸಲಿಲ್ಲ! ಬಂದವರೇ "ನಮಗೆ ಇವತ್ತು ಆಮೇಲೆ ಇನ್ನೊಂದು ಕಡೆ ಶಿಪ್ಟಿಂಗ್ ಇದೆ ಸಾರ್ ಜಲ್ದಿ ಮುಗಿಸಿ ಹೋಗ್ಬೇಕು " ಎನ್ನುತ್ತಾ ಬಡಬಡ ಸಾಮಾನುಗಳನ್ನು ತಂದಿರುವ ನಾಲ್ಕಾರೇ ಬಾಕ್ಸ್ಗಳಲ್ಲಿ ತುಂಬಿಸತೊಡಗಿದರು. ನಾನು " ಯಾಕೆ ಹಳೇ ಗುಜರೀಗಾಡಿ ಕಳ್ಸಿದಾರಲ್ಲಾ ಕ್ಲೋಸ್ಡ್ ಕಂಟೇನರ್ ಇಲ್ವಾ ? " ಎಂದು ಕೇಳಿದೆ. " ನಮ್ಗಾಡಿ ಕೆಟ್ಟೋಗಿದೆ ಸಾರ್ ನಿಮ್ಗೆ ತೊಂದ್ರೆ ಆಗ್ಬಾರ್ದು ಅದ್ರ ಬದ್ಲೀ ಗಾಡಿ ಕಳ್ಸವರೆ " ಬಂತು ಉತ್ತರ. ಬಂದವರೆಲ್ಲಾ ಅಹೋರಾತ್ರಿ ಎಣ್ಣೆಯ ಉಪಾಸಕರು ! ಮೈತುಂಬಾ ವಾಸನೆ ಹೊಡೆಯುತ್ತಿದ್ದರು. ಅವರು ಬಂದ ಕ್ಷಣದಲ್ಲೇ ನಮ್ಮನೆಎಣ್ಣೆಯ ಬಾರ್ಆದಂತೇ ಭಾಸವಾಗುತ್ತಿತ್ತು. ಯಾವುದೇ ಬಬಲ್ ರೋಲ್, ಪಕ್ಕಾ ಪ್ಯಾಕಿಂಗ್ ಮಟೀರಿಯಲ್, ಟೂಲ್ ಬಾಕ್ಸ್, ಹಗ್ಗ ಯಾವುದೂ ಇರಲಿಲ್ಲ!

ನಮಗೆ ಅನಿವಾರ್ಯತೆ ಇತ್ತು. ನಾವು ದಿನ ಕಚೇರಿಗೆ ರಜವಿರುವುದರಿಂದ ಶಿಫ್ಟ್ ಕೆಲಸ ಮುಗಿಸಲೇ ಬೇಕಿತ್ತು. ಯಾಕೋ ಬಂದ ಗಾಡಿಯನ್ನೇ ದುರ್ಬಲ ಮನಸ್ಸು "ಆಯ್ತು ಹೋಗಲಿ" ಎಂದು ಒಪ್ಪಿಬಿಟ್ಟಿತ್ತು. ಬಾಕ್ಸ್ ಗಳು ಸಾಲದಾಗ ನಮ್ಮಲ್ಲೇ ಇರುವ ಕೆಲವು ಬಾಕ್ಸ್ ಗಳಿಗೆ ತುಂಬಿಸಿದರು. ಟೇಪ್ ಕಾಲಿಯಾದಾಗ ಬಾಕ್ಸ್ ಗಳು ಮುಚ್ಚದೇ ಹಾಗೇ ತೆರೆಯಲ್ಪಟ್ಟಿದ್ದವು. ಅಂತೂ ಧಾವಂತದಲ್ಲಿ ಗಾಡಿಗೆ ಏರಿಸಲು ಆರಂಬಿಸಿಯೇ ಬಿಟ್ಟರು. ಕೇವಲ ನಾಲ್ಕಾರು ಮುಖ್ಯರಸ್ತೆಗಳ ಕಡೆಗೆ ಇನ್ನೊಂದು ಮನೆಗೆ ನಾವು ಹೋಗುತ್ತಿರುವುದರಿಂದ ನಂಗೂ ತೀರಾ ಅದೆಲ್ಲಾ ಅವಶ್ಯಕವೇನೋ ಅನಿಸಲಿಲ್ಲ. ನನ್ನ ಔದಾರ್ಯಬಂದವರಿಗೆ ಬಹಳ ಅನುಕೂಲಕರವಾಗಿತ್ತು. ಗಾಡಿಯಲ್ಲಿ ಮುಂದೆ ನನ್ನನ್ನು ಕೂರಿಸಿಕೊಂಡು ಹಿಂದೆ ಹುಡುಗರು ಹತ್ತಿಕೊಂಡು ಹೊರಟರು, ಸೇರಬೇಕಾದ ಮನೆ ತಲುಪಿ ಎಲ್ಲವನ್ನೂ ಮತ್ತೆ ಅವಸರದಿಂದ ಇಳಿಸತೊಡಗಿದರು. ಬಾಕ್ಸ್ ‍ಗಳಿಗೆ ಹೆಸರು, ಸಂಖ್ಯೆ ಏನೊಂದೂ ಇರಲಿಲ್ಲ. ಕೆಲವು ವಸ್ತುಗಳನ್ನು ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ಗಳಲ್ಲೇ ಹಾಗೇ ತುಂಬಿಸಿ ತಂದಿದ್ದರು. ಒಟ್ಟೂ ಟ್ರಿಪ್ ಮಾಡಿದರು. ಅಲ್ಮೆರಾ ಇಳಿಸುವಾಗ ಅಸಹ್ಯಕರವಾಗಿ ಕಾಣುವಸ್ಟು ಅದನ್ನು ಸಂಪೂರ್ಣ ಡ್ಯಾಮೇಜು ಮಾಡಿದರು. ಒಂದು ಬೆಲ್ಜಿಯಮ್ ಗ್ಲಾಸಿನ ಕನ್ನಡಿ ಒಡೆದು ಹಾಕಿದರು. ನಾಲ್ಕಾರು ಹೂವಿನಕುಂಡಗಳ ಕಥೆ ಮುಗಿದುಹೋಗಿತ್ತು. ಟಿವಿ ವಾಲ್ ಕ್ಯಾಬಿನೆಟ್ ಅಲ್ಲಲ್ಲಿ ಕಣ್ಣೀರಿಡುತ್ತಿತ್ತು! ಫ್ರಿಜ್ ಮತ್ತು ವಾಶಿಂಗ್ ಮಶಿನ್ ಮಾತ್ರ ನನ್ನ ಅತೀ ಕಾಳಜಿ ಇದ್ದಿದ್ದರಿಂದ ತೀರಾ ಏನೂ ಡ್ಯಾಮೇಜಾಗದಂತೇ ತಂದರು. ಮಂಚಗಳು ಮೈಕೈ ತರಚಿಕೊಂಡಿದ್ದವು. ಅಂತೂ ನಾಜೂಕಿನ ಹಲವು ವಸ್ತುಗಳು ಅನಾಯಾಸವಾಗಿ ತಮ್ಮ ಮೂಲರೂಪವನ್ನು ಕಳೆದುಕೊಂಡವು!

ಶಿಫ್ಟಿಂಗ್ ಮುಗಿಸಿದಾಗ ಮಧ್ಯಾಹ್ನ ಘಂಟೆಯಾಗಿತ್ತು, ನಮಗೆ ಬೆಳಿಗ್ಗೆಯಿಂದಲೇ ತಿಂಡಿ ಸಹಾ ಮಾಡಲಾಗಿರಲಿಲ್ಲ. ಹೊಟ್ಟೆಯಲ್ಲಿರೋ ಹುಳಗಳೆಲ್ಲಾ ಸತ್ತು ಮಲಗಿದ್ದವು! ಹಸಿವು ತಾಂಡವವಾಡಲು ತೊಡಗಿತ್ತು. ಸಾಮಾನುಗಳನ್ನು ಪುನಃ ಜೋಡಿಸಿಕೊಡುವ ಮಾತಿತ್ತು. ಹಾಗೆ ಅದನ್ನು ಕೇಳಿದಾಗ ತೀರಾ ಕುಡಿದಿರದ ಒಬ್ಬ ಹುಡುಗನನ್ನುನಮ್ಮ ಸಹಾಯಕ್ಕೆಅಂತ ನೇಮಿಸಿ ಮಿಕ್ಕವರು ತಾವು ತಿಂಡಿ ತಿಂದು ಬರುತ್ತೇವೆ ಎಂದು ಹೊರಟುಹೋದರು. ನಮ್ಜೊತೆ ಇರುವ ಹುಡುಗ ಅದೂ ಇದೂ ಮಾಡುತ್ತಾ ಅವರೇ ತಂದಿದ್ದ ಕೆಲವೇ ಬಾಕ್ಸ್ ಗಳು ತುರ್ತಾಗಿ ಬೇಕಾಗುತ್ತವೆ ಎನ್ನುತ್ತಾ ಅವುಗಳನ್ನು ಮೊದಲು ಖಾಲೀ ಮಾಡಹತ್ತಿದ. ಹೊಟ್ಟೆಗೆ ಒಂದಷ್ಟು ನೀರು ತುಂಬಿಸಿಕೊಂಡು ನಾವೇ ಎಲ್ಲವನ್ನೂ ಅಲ್ಲಿಲ್ಲಿ ಎತ್ತಿಟ್ಟುಕೊಳ್ಳುತ್ತಿದ್ದೆವು. ತಿಂಡಿತಿಂದು ಮರಳಿ ಬಂದ ಹುಡುಗರಲ್ಲಿ ಡ್ರೈವರ್ ಆಗಿರುವಾತ " ಸಾರ್ ಎಲ್ಲಾ ಮುಗಿತ್ಲೂವೆ ಇವನತ್ರ ಕಾಸು ಕೊಟ್ಬಿಡಿ ಅಂತೇಳವ್ರೆ " ಅಂದ. ನಾನು ಒಡೆದುಹೋದ ನಜ್ಜುಗುಜ್ಜಾದ ವಸ್ತುಗಳ-ಪರಿಕರಗಳ ಬಗ್ಗೆ ಕೇಳಿದಾಗ " ನೋಡೀ ಸಾರ್ ನಾವೂ ಕಷ್ಟಪಟ್ಟು ನಿಯತ್ತಿನಿಂದ ಎಲ್ಲಾ ಸಾಗ್ಸಿದೀವಿ ನೀವೆಲ್ಲಾನಾ ಕೇಳ್ಕೊಳಿ ಹಾಗೆ ಒಂದ್ಸ್ವಲ್ಪ ಆಗೇ ಆಗುತ್ತೆ ಸಾರ್ " ಅಂದ. ಜಗಳಮಾಡಿ ಗೊತ್ತಿರದ ನಾವು ಸುಮಾರಾಗಿ ಎಲ್ಲಾ ಸಾಮಾನುಗಳು ಬಂದಿವೆ ಎಂಬುದನ್ನು ಮನದಟ್ಟುಮಾಡಿಕೊಂಡು ಕಾಸುಕೊಟ್ಟು ಅವರನ್ನು ಕಳಿಸಿಬಿಟ್ಟೆವು. ಹೋಗುವಾಗ ನಿಯತ್ತಿನ ಜನ " ನೋಡ್ಕೊಳಿ ಸಾರ್ ಗಾಡಿಯಲ್ಲಿ ಏನೂ ಇಲ್ಲಾ " ಎಂದು ಕರೆದು ತೋರಿಸಿ ತಮ್ಮನಿಯತ್ತನ್ನು ಪ್ರದರ್ಶಿಸಿದರು! ಇನ್ನಿಲ್ಲದ ತಲೆನೋವಿಗೂ ವಾಕರಿಗೆಗೂ ಕಾರಣವಾದಎಣ್ಣೆಯ ಉಪಾಸಕರುಹೋದರೆ ಸಾಕಾಗಿತ್ತು.

ಸುಮಾರು ಸಂಜೆ :೩೦ ರವರೆಗೆ ಎಲ್ಲವನ್ನೂ ಜೋಡಿಸಿ ಮೊದಲೇ ಕರೆದಿದ್ದ ಹತ್ತಿರದ ಬಂಧುವೊಬ್ಬರ ಮನೆಗೆ ಊಟಕ್ಕೆ ಹೋದೆವು. ಊಟ ಮುಗಿಸಿ ೩೦ ನಿಮಿಷಗಳಲ್ಲಿ ಮರಳಿದೆವು. ಮತ್ತೆ ಜೋಡಿಸುವ ಕೆಲಸ. ನಡುವೆ ನಮ್ಮ ಹೊಸಮನೆಯ ಪಕ್ಕದ ಮನೆಯವರ ಪರಿಚಯವಾಯಿತು. ಅವರು ಮಾತನಾಡುತ್ತಾ "ನಿಮ್ಮ ಸಾಮಾನುಗಳನ್ನು ಶಿಫ್ಟ್ ಮಾಡುವ ಜನ ಮೇಲಿನಿಂದ ಏನನ್ನೋ ಒಂದೆರಡು ಕವರ್‍‍ಗಳನ್ನು ನಮ್ಮನೆ ಹಾಗೂ ಮನೆ ನಡುವೆ ಇರುವ ಖಾಲೀ ಸೈಟಿನಲ್ಲಿ ಹಾಕಿದ್ದರು. ಆಮೇಲೆ ಬಂದು ಎತ್ತಿಕೊಂಡು ಹೋದರು. ನಮಗೆ ನಿಮ್ಮ ಪರಿಚಯವಿರಲಿಲ್ಲ. ಆದರೂ ಈಗ ಪರಿಚಯವಾಯ್ತಲ್ಲಾ ಅದಕ್ಕೇ ಹೇಳೋಣಾಂತ ಬಂದೆ" ಎಂದರು. ನಂಗಂತೂ ಸಾಕಾಗಿ ಹೋಗಿತ್ತು. ಜೋಡಿಸುತ್ತಾ ಹೋದ ಹಾಗೇ ಹಲವಾರು ವಸ್ತುಗಳು-ಪರಿಕರಗಳು ನಾಪಾತ್ತೆಯಾಗಿರುವುದು ಕಂಡುಬಂತು. ಅಜಮಾಸು - ಸಾವಿರ ಬೆಲೆಯ ವಸ್ತುಗಳನ್ನು ಕದ್ದುಹೋಗಿದ್ದರು. ಸಂಜೆ ಮರಳಿಕಂಪನಿ ಮೊಬೈಲ್ಗಳಿಗೆ ಕರೆಮಾಡಲು ಆರಂಭಿಸಿದರೆ ಜಸ್ಟ್ ಡಯಲ್ ಕೊಟ್ಟ ಮೊದಲನೇ ಅವರ ನಂಬರು ಕರೆ ಸ್ವೀಕರಿಸಲಿಲ್ಲ. ಎರಡನೇದನ್ನು ಪ್ರಯತ್ನಿಸಲಾಗಿ ಅದೂ ಕೂಡ ಅಷ್ಟೇ. ರಾತ್ರಿ ನಾನು ಆತಂಕದ ನಡುವೆತೀರಾ ಕೋಪಬಂದಿದೆ, ಟಿವಿ೯ ಗೆ ತಿಳಿಸುತ್ತೇನೆಎಂದಿದ್ದೇ ತಡ ರಾತ್ರಿಯಿಂದಲೇರೋಹಿತ್ಎಂಬಾತನ ಮೊಬೈಲು ಮಲಗಿಬಿಟ್ಟಿತ್ತು! ಮಾರನೇದಿನ ೧೨ ಗಂಟೆಯಾದರೂ ಅದಕ್ಕೆ ಎಚ್ಚರವಾಗಲೇ ಇಲ್ಲ. ೫೦-೬೦ ಸರ್ತಿ ಕರೆಮಾಡಿಸಿಕೊಂಡ ಮೊದಲ ನಂಬರು ಒಮ್ಮೆ " ಹಲೋ" ಎಂದಿತು. ಸಮಸ್ಯೆಗಳನ್ನು ಕೇಳಿದ ಆತ ತಾನು ಒಂದು ಘಂಟೆಯಲ್ಲಿ ನೋಡಬರುವುದಾಗಿ ತಿಳಿಸಿದ. ಬಂದೂಬಿಟ್ಟ: ’ತುಂಬಾ ನಿಯತ್ತು’ !

"ರೋಹಿತ್ ಎಲ್ಲಪ್ಪಾ? " ಎಂದಿದ್ದಕ್ಕೆ

" ಅವರ ಬ್ರದರ್ ಆಕ್ಸಿಡೆಂಟ್ ಆಗ್ಬುಟ್ಟು ತೀರ್ಕೊಂಡವ್ರೆ ಸರ್ ಅದ್ಕೇ ಉಡುಪಿಗೆ ಹೋಗವ್ರೆ."

" ಯಾವಾಗ ಬತ್ತಾರಪ್ಪಾ ? ನಾನು ಮಾತಾಡ್ಬೇಕು "

" ಯಾವಾಗ ಬತ್ತಾರೋ ಗೊತ್ತಿಲ್ಲ ಸಾರ್ ಬನ್ನಂತ್ರ ಹೇಳ್ತೀವಿ " -’ಕಂಪನಿಯಿಂದ ಬಂದಡ್ಯಾಮೇಜು ಸರ್ವೇಮಾಡುವವನ ಉತ್ತರ.

ದಿನ ನನಗೆ ಕೂತುಕೊಳ್ಳಲಾಗಲಿಲ್ಲ. ಆಫೀಸಿನ ಕೆಲಸಕ್ಕೆ ಹೋಗಲಾಗಲಿಲ್ಲ. ಬದಲಾಗಿ ಮಧ್ಯಾಹ್ನ ನಾನುನಿಯತ್ತಿನ ಪ್ಯಾಕರ್ಸ್ ಕಂಪನಿಯನ್ನು ಹುಡುಕಿ ಹೊರಟಿದ್ದೆ. ಜಸ್ಟ್ ಡಯಲ್ ಕೊಟ್ಟಿದ್ದ ಅವರ ವಿಳಾಸಕ್ಕೆ ಹೋಗಿ ನೋಡಿದರೆ ಅಲ್ಲಿ ಯಾವ ಕಂಪನಿಯೂ ಇರಲಿಲ್ಲ. ಮತ್ತೆ ಮೊದಲ ಮೊಬೈಲಿಗೆ ಕರೆಮಾಡಿದಾಗ ವ್ಯಕ್ತಿ

" ಯಶವಂತಪುರ ಲಾರಿ ಟರ್ಮಿನಲ್ ಹತ್ತಿರ ಬನ್ನಿ ಸಾರ್ ಅಲ್ಲೈತೆ ತೋರುಸ್ತೀವಿ " ಅಂದ.

ಜೋರಾಗಿ ಮಳೆ ಸುರಿಯುತ್ತಿತ್ತು. ಆದರೂ ಬಿಡಲಿಲ್ಲ. ಹೊರಟುಹೋದೆ. ಅಂತೂ ಅವರಕಂಪನಿ ಆಫೀಸು ನೋಡಿದೆ. ಅದು ಯಾವುದೋ ಬೇರೇ ಒಬ್ಬರ ಲಾಜಿಸ್ಟಿಕ್ ಹೆಸರಿನ ಅಂಗಡಿ. ಅಳತೆ ಅಡಿ ಅಗಲ ಮೂರು ಅಡಿ ಉದ್ದ! ಅದರೊಳಗೆ "ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ"! ಒಳಗೆ ಒಂದು ಮೇಜು ಅದರ ಹಿಂದೆ ಒಂದು ಖುರ್ಚಿ, ಎದುರುಗಡೆ ಬಂದವರಿಗೋ ಇನ್ಯಾರಿಗೋ ಕೂರಲು ಕಿತ್ತುಹೋಗಿರುವ ಎರಡು ಪ್ಲಾಸ್ಟಿಕ್ ಖುರ್ಚಿಗಳು. ಪಕ್ಕದಲ್ಲಿ ನಿನ್ನೆ ನಮ್ಮನೆಗೆ ತಂದಿದ್ದ ಅರ್ಜೆಂಟಾಗಿ ಮರಳಿ ಕೊಂಡೊಯ್ದ ಖಾಲೀ ಬಾಕ್ಸ್ಗಳು! ಮೇಜಿನ ಕಡೆ ಇರುವ ಖುರ್ಚಿಯಲ್ಲಿಕಂಪನಿ ಯಜಮಾನ ರೋಹಿತ್ ಕುಳಿತಿದ್ದ. ನನ್ನನ್ನು ಕಂಡ ಕೂಡಲೇ ಮುಖಸುಟ್ಟುಕೊಂಡ ಬೆಕ್ಕಿನಂತಾದ! ಬಂದು ಅರ್ಧ ಘಂಟೆ ಆಯ್ತು ಅಂದ. ಬಹುಶಃ ಉಡುಪಿಯಿಂದ ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಬಂದಿರಬೇಕು. ಕೂತೆ, ನನಗಾಗಿರುವ ತೊಂದರೆ ಹೇಳಿ ಸರಿಪಡಿಸುವಂತೇ ಹೇಳಿದೆ.

" ಇಲ್ಲಾ ಸಾರ್ ನಮ್ ಕಂಪ್ನಿ ಗಾಡಿ ಕೆಟ್ಟೋಗಿತ್ತು ಅದ್ಕೇ ಮಾರ್ಕೆಟ್ ಗಾಡಿ ಅಡ್ಜೆಸ್ಟ್ ಮಾಡಿ ಕಳ್ಸಿರೋದು.. ಅವರಿಗೈತೆ ಬಿಡಿ ಇವತ್ತು ಸರಿಯಾಗಿ ಕ್ಲಾಸ್ ತಗೋತೀನಿ ಒಟ್ನಲ್ಲಿ ನಾಳೆ ಅರ್ಲಿ ಮಾರ್ನಿಂಗ್ :೩೦ ರೊಳಗೆ ನಿಮ್ಗೆ ಸೆಟ್ಲ್ ಮಾಡಸ್ತೀನಿ" ಅಂದ. " ಬೇಡಾ" ಎಂದರೂ ಬಲವಂತಮಾಡಿ ಅರ್ಧ ಗ್ಲಾಸು ಕೆಟ್ಟ ಚಾ ಕುಡಿಸಿದ. ಹೊರಟುಬಂದೆ. ಮಾರನೇ ದಿನ ಬೆಳಿಗ್ಗೆ : ೫೦ರ ತನಕ ಸುಮ್ಮನೇ ಇದ್ದೆ. ಯಾವ ಕರೆಯೂ ಬರಲಿಲ್ಲ. ಮರಳಿ ನಾನೇ ಕರೆಮಾಡಲು ಆರಂಭಿಸಿದೆ. ಮೊದಲ ಮೊಬೈಲು ಹತ್ತುಸಲ ಕರೆಮಾಡಿದ ನಂತರ ಒಮ್ಮೆ ಆತನೇ ವಾಪಸ್ಸು ಕರೆಮಾಡುವದೊಡ್ಡವ್ಯಕ್ತಿಯಾಗಿ " ರೋಹಿತ್ ಸಾರ್ ಇನ್ನೂ ಬಂದಿಲ್ಲ ೧೦:೩೦ ಆಗ್ಬೌದು " ಎಂದ. ಅದೂ ಮುಗಿದು ೧೨ ಬಾರಿಸಿತು. [ಈಗ ಬಾರಿಸುವುದಿಲ್ಲ ಬಿಡಿ ಹಾಗೆ ಹೇಳುವುದು ವಾಡಿಕೆ ಅಷ್ಟೇ] ನಾನು ಮತ್ತೆ ಮೊದಲ ನಂಬರಿಗೆ ಕರೆಮಾಡಿದಾಗ " ನಂಗೂ ಅದ್ಕೂ ಸಂಬಂಧವಿಲ್ಲಾ ನೀವು ರೋಹಿತ್ ಹತ್ರ ನೋಡ್ಕೊಳಿ" ಎಂದ. ನಾನು ಜಸ್ಟ್ ಡಯಲ್ಗೆ ಕರೆಮಾಡಿ

" ಇಂಥಾ ಬೋಗಸ್ ಕಂಪನಿಯನ್ನು ನನಗೆ ಪರಿಚಯಿಸಿ ಉಪಕರಿಸಿದ್ದೀರಿ ಇನ್ನುಮುಂದಾದರೂ ಇಂಥವನ್ನೆಲ್ಲಾ ಫಿಲ್ಟರ್ ಮಾಡಿ" ಎಂದು ಹೇಳಿದಾಗ ಅವರು ಲೈನ್ ನಲ್ಲೇ ಇರಿ ಎಂದರು. ಕಡೆ ಅವರುಕಂಪನಿ ಮೊದಲ ನಂಬರಿಗೆ ಕರೆಮಾಡಿ ಆಲ್ಲಿರುವಾತನ ಹತ್ತಿರ ಮಾತನಾಡಿ ಟೆಲಿ ಕಾನ್ಫರೆನ್ಸಿಂಗ್ ನಡೆಸಿದರು. ಅವರ ಕೋರಿಕೆಯ ಮೇರೆಗೆ ಒಂದು ವಾರದ ಸಮಯಾವಕಾಶ ನೀಡಿದ್ದೇನೆ. ಮುಂದಿನವಾರ ಅವರು ಡ್ಯಾಮೇಜು ತುಂಬಿಸಿಕೊಡದಿದ್ದಲ್ಲಿ ಮಾಧ್ಯಮಗಳಲ್ಲಿ ಬರುವ ಸಾಧ್ಯತೆ ಖಂಡಿತಾ ಇದೆ. ಇದು ಪ್ರಚಾರಕ್ಕಾಗಿ ಅಲ್ಲ; ಮತ್ತೆ ಯಾರಿಗೂ ಇಂಥಾ ಬೋಗಸ್ ಕಂಪನಿಗಳಹಲಾಲ್ ಕಟ್ನಡೆಯುವ ಮೊದಲು ಅವರ ನಜರಿಗೆ, ಗಮನಕ್ಕೆ ವಿಷಯ ತಂದುಬಿಟ್ಟರೆ ಹಲವು ಜನರಿಗೆ ಅದು ಉಪಕಾರವಾಗಬಹುದು.

Friday, June 3, 2011

೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !


೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !

ವೀಕ್ಷಕರೇ ತಮಗೆಲ್ಲಾ ಮತ್ತೊಮ್ಮೆ ಕಳಪೆ ಟಿವಿ ೨೪ ಬಾರ್ ೭ ’ನ್ಯೂಸ್ ರೈಲ್’ಗೆ ಸ್ವಾಗತ. ನಾನು ಅಸಹ್ಯಾ.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಅಪ್ಪಟ ನ್ಯಾಯವನ್ನು ಅನುಸರಿಸುತ್ತಿರುವ ಘನಸರಕಾರ ೨೦೧೨ರೊಳಗೆ ಅಣುರೇಣುತೃಣಕಾಷ್ಠ ಸಹಿತ ಸಕಲಕ್ಕೂ ಇ-ಮೇಲ್ ಐಡಿಯನ್ನು ಕಡ್ಡಾಯಮಾಡುತ್ತದೆ! ನಾವೆಲ್ಲರೂ ಇದರ ಫಲಾಭನುವಿಗಳಾಗುತ್ತಿದ್ದೇವೆ ಎಂದು ಮಾಧ್ಯಮದೊಂದಿಗೆ ಮಾತನಾಡಿದ್ದು ಸೊಳ್ಳೆ ಸಕಲಾಪುರ. ಯಾವಾಗಲೂ ಗುಂಯ್ ಗುಡುತ್ತಾ ತಮಗೆ ಅವಕಾಶ ಸಿಗಲಿಲ್ಲಾ ಎಂದು ಗೊಣಗುತ್ತಿದ್ದ ಅವರು ಇಂದು ಯಾಕೋ ತುಂಬಾ ಉತ್ತಮ ಮೂಡ್‍ನಲ್ಲಿದ್ದರು. ತಡರಾತ್ರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರ ಮುಖದಲ್ಲಿ ಹರೆಯದ ಕಳೆ ಉಕ್ಕಿ ಹರಿಯುತ್ತಿತ್ತು! ಸೂಕ್ಷ್ಮ ಸಂವೇದನಾಶೀಲರಾದ ಸೊಳ್ಳೆ ಸಮೂಹದವರಿಗೆ ಸಿಗಬೇಕಾದ ಮಾನ್ಯತೆ ಇಂದು ಸಿಕ್ಕಿರುವ ಖುಷಿ ಅವರ ಸಂತಸಕ್ಕೆ ಕಾರಣವಿದ್ದಿರಬೇಕು.

ಏತನ್ಮಧ್ಯೆ ಆಗಾಗ ನಡೆಯುತ್ತಿರುವ ವಿರೋಧಿಗಳ ಮತ್ತು ಭಿನ್ನಮತೀಯ ಬಣಗಳವರ ಬಾಯಿ ಮುಚ್ಚಿಸಲು ಈ ಲೋಕದ ಅಣುರೇಣುತೃಣಕಾಷ್ಠ ಸಹಿತ ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಮಾಡುವುದಾಗಿ ಘೋಷಿಸಿದೆ. ಯಾವುದೇ ಕ್ಷಣದಲ್ಲೂ ಇದನ್ನು ಜಾರಿಗೆತರುವ ನಿರೀಕ್ಷೆ ಇದ್ದು ಎಲ್ಲರೂ/ಎಲ್ಲವೂ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಇದನ್ನು ಅಧಿಕಾರದ ದುರ್ಬಳಕೆ ಎಂದು ಬಣ್ಣಿಸಿ ಅಧಿವೇಶನದಲ್ಲಿ ಸಭಾತ್ಯಾಗಮಾಡಿದ್ದಾರೆ. ಯಾರು ಏನೇ ಹೇಳಿದರೂ ತಮಗೆ ಅದೇನೂ ನಾಟುವುದಿಲ್ಲ ಎಂದು ಮುಖ್ಯಮಂತ್ರಿಗಳು ಸಾರಿದ್ದಾರೆ.

ಅದಾಗಲೇ ತೀವ್ರಗೊಂಡ ಬೆಳವಣಿಗೆಯಲ್ಲಿ ಪರಂಪರಾಗತ ಮೂಲಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಬೇಕೆಂಬ ಸರಕಾರದ ಆದೇಶದಂತೇ ಈ ಕೆಳಗಿನ ಇ-ಮೇಲ್ ಐಡಿಗಳ ಯಾದಿಯನ್ನು ತಯಾರುಮಾಡಲಾಗಿದೆ:

1. cute_solle@charandigabbu.com
2. dum_beddy@bedsidegroups
3. smelly_jirale@sandigondi.co.in
4. sondili_heggana@bila.org
5. kaala_sarpa@hutta.net.in
6. naayanna@boubouchamber.com
.
.
.
.
.
.
99999. vandragappe@kesaruhonda.com
.
.
.
.
.

ಇದನ್ನೆಲ್ಲಾ ಗಮನಿಸಿದ ಸಚಿವರ ಪರಮಾಪ್ತ ಸಲಹೆಯಂತೇ [ಇತ್ತೀಚೆಗೆ ಸರಕಾರ ನೀಡುವ ಪ್ರಶಸ್ತಿಗಳನ್ನು ’ಪಡೆಯುವವರ’ ಪಟ್ಟಿ ಆಂಜನೇಯ ಬಾಲ ಬೆಳೆದಂತೇ ಬೆಳೆಯುತ್ತದಾದ್ದರಿಂದ] ಸಜೀವಿಗಳನ್ನೂ ಮೀರಿ ನಿರ್ಜೀವಿಗಳಿಗೂ ಗುರ್ತಿಸುವ ಸಲುವಾಗಿ ಇ-ಮೇಲ್ ಐಡಿಗಳನ್ನು ಕೊಡಮಾಡುವ ಪ್ರಕ್ರಿಯೆಯಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯತಪ್ತರಾಗಿದ್ದಾರೆ. ಈ ಯಾದಿಯಲ್ಲಿ :


1. benne@mosarukudike.com
2. tuppa@boguni.net
3. uppu@baaTali.com
4. gani@dhani.org
5. kappuhana@swissbank.hid
.
.
.
.

ಈ ಯಾದಿಗಳನ್ನು ಆಮೂಲಾಗ್ರ ಪರಿಶೀಲಿಸಿದ ಇಂಧನ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸದ್ಯ ಈ ಯಾದಿಗಳಲ್ಲಿ ಯಾವುದೂ ಸುಳ್ಳು ಹೆಸರುಗಳು ಕಂಡುಬರುತ್ತಿಲ್ಲ, ಯಾವುದೇ ಬೇನಾಮೀ ಅಡಿಗೆ ಅನಿಲ ವಗೈರೆ ದುರ್ಬಳಕೆಯಾಗುವುದೂ ಕಾಣುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಪ್ರಳಯಕಾಲದಲ್ಲಿ ಮನೆಯಲ್ಲಿ ಬದುಕಿರುವಷ್ಟು ಹೊತ್ತೂ ಟಿವಿ ಮುಂದೆ ಕುಳಿತು ಬ್ರೇಕಿಂಗ್ ನ್ಯೂಸ್ ನೋಡುತ್ತಾ ಲ್ಯಾಪ್ ಟಾಪ್ ಮೂಲಕ ಮೇಲ್ ಸಂಪರ್ಕಹೊಂದಿ " ಕಾಪಾಡೀ...ಕಾಪಾಡೀ " ಎಂದು ಕೂಗಿಕೊಳ್ಳಲಾದರೂ ಇರಲಿ ಎಂಬ ಮಾನವೀಯ ಮೌಲ್ಯಕ್ಕೆ ಮಹತ್ವಕೊಟ್ಟು ಜಾರಿಗೊಳಿಸಿದ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರ ೧೨೦೦ ಕೋಟಿಗಳನ್ನು ತೆಗೆದಿರಿಸಿದೆ! ಪ್ರಳಯದಂತಹ ಆಪತ್ಕಾಲದಲ್ಲಿ ಎಲ್ಲಿಂದ ಎಲ್ಲಿಗಾದರೂ ತಪ್ಪಿಸಿಕೊಂಡು ಓಡಿಹೋಗಲು ಬೇಡದ ಪ್ರದೇಶಗಳಲ್ಲೂ ಶತಮಾನಗಳ ಹಿಂದಿನ ಮರಗಳನ್ನು ಕಡಿದು ಚತುಷ್ಪಥ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕೆ ಪ್ರತ್ಯೇಕ ಹಣವನ್ನು ತೆಗೆದಿರಿಸಲಾಗಿದೆ!

ಕನ್ನಡ ನೆಲ-ಜಲ ಸಂರಕ್ಷಣೆಗೆ ಸದಾ ಕಟಿಬದ್ಧವಾಗಿರುವ ಸರಕಾರ ಒಪ್ಪೊತ್ತು ಊಟವನ್ನಾದರೂ ಘೋಷಿಸಿ ೨೫ ಕೋಟಿ ರೂ.ವೆಚ್ಚದಲ್ಲಿ ಭುವನೇಶ್ವರಿ ವಿಗ್ರಹದ ಸ್ಥಾಪನೆ ನಡೆಸುತ್ತದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆಯಲ್ಲದೇ ಕಮ್ಮಿ ಬಿದ್ದಲ್ಲಿ ಇನ್ನೂ ೨೫ ಕೋಟಿ ವ್ಯಯಿಸಿ ಕೆಲಸ ಪೂರ್ತಿ ಮಾಡಲಾಗುವುದು ಎಂದು ತಿಳಿಸಿದೆ. ಯಾರೇ ರಾಜಕಾರಣಿ ಸತ್ತರೂ ಪಕ್ಷಾತೀತವಾಗಿ ಅವರ ಜೀವಿತ ಕಾಲದಲ್ಲಿ ನಡೆಸಿದ ಕಾನೂನು ಬಾಹಿರ ಅಕ್ರಮ ದಂಧೆಗಳು,’ಘನಕಾರ್ಯ’ಗಳು ಮತ್ತು ಬ್ರಷ್ಟಾಚಾರವನ್ನು ನೆನೆದು ಸಕಲ ಸರಕಾರೀ ಗೌರವಗಳೊಂದಿಗೆ ನೇರವಾಗಿ ಸ್ವರ್ಗಕ್ಕೆ ಕಳಿಸುವ ಏರ್ಪಾಟುಮಾಡಲಾಗುವುದು ಎಂದು ಅಧಿವೇಶನದಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಎಲ್ಲಾ ಪಕ್ಷಗಳವರೂ ಸ್ವಾಗತಿಸಿದ್ದಾರೆ! ಮಳೆಗಾಲದ ಆರಂಭದಲ್ಲಿ ನಾಡಿನ ಬೆನ್ನೆಲುಬಾದ ರೈತರಿಗೆ ಬೀಜದ ಕೊರತೆ ಬಾಧಿಸದಂತೇ ನೋಡಿಕೊಳ್ಳುವಂತೇ ಆ ಯಾ ತಾಲೂಕುಗಳ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ; ಆದಾಗ್ಯೂ ಒಂದೊಮ್ಮೆ ಬೀಜದ ಕೊರತೆ ಅತಿಯಾಗಿ ಕಂಡುಬಂದಲ್ಲಿ ಬಂದೂಕು, ಕಾಡತೂಸು, ರೈಫಲ್ ಮತ್ತು ಗುಂಡಿನ ಕಾರ್ಟ್ರಿಜ್‍ಗಳನ್ನು ತಯಾರಿ ಇಟ್ಟುಕೊಳ್ಳಲು ಆದೇಶಿಸಲಾಗಿದೆ.

ಇಷ್ಟೆಲ್ಲಾ ಔದಾರ್ಯವನ್ನು ಮೆರೆದಿದ್ದರೂ ತಾವೇ ಬೇರೆ ತಮ್ಮ ಖದರ್ರೇ ಬೇರೆ ಎಂಬ ಪ್ರತಿಪಕ್ಷಗಳವರು ಗುಡುಗಿದ್ದರೆ ಪಕ್ಷಗಳ ಪ್ರಚಾರ, ಸದಸ್ಯರ ನೇಮಕಾತಿ, ಮುಳುಗುತ್ತಿರುವ ಮಣ್ಣಿನ ಮಕ್ಕಳ ಪಕ್ಷದ ಸಭೆಗಳಿಗೆ ಜನರನ್ನು ಕರೆತರುವ ಸಗಟು ವ್ಯವಹಾರ-ವೈಖರಿಗಳಿಗೆ ಯಾವುದೇ ಇ-ಮೇಲ್ ಐಡಿಗಳನ್ನು ಸರಕಾರೀ ಖರ್ಚಿನಲ್ಲಿ ಪಡೆಯಲಾಗದಿದ್ದುದಕ್ಕೆ ಮುದ್ದೆಗಳೆಲ್ಲಾ ಎದ್ದು ತಂತಮ್ಮಲ್ಲೇ ಗುದ್ದಾಡಿದ್ದು ಕಂಡುಬಂತು! ಜನರಿಂದ ಟಾ ಟಾ ಬೈ ಬೈ ಮಾಡಿಸಿಕೊಳ್ಳುತ್ತಿರುವ ’ಕೈ’ಗಳೂ ಹೆಗಲುಮೇಲೆ ಟವೆಲ್ ಹಾಕಿಕೊಂಡು ’ಸಿದ್ಧ’ರಾಗಿ ಅಲ್ಲೆಲ್ಲೋ ಅಡ್ಡ ನಿಂತು ಉದ್ದುದ್ದ ಕೂಗುತ್ತಾ ಮಣ್ಣಿನಮಕ್ಕಳ ಪಂಚೆ ಹಿಡಿದು ಜೈಕಾರ ಹಾಕುತ್ತಿದ್ದು ತಮಗೂ ’ಸಮಪಾಲು’, ’ಸಮಬಾಳು’ ಬರಲಿ ಎಂದು ಪರೋಕ್ಷ ಘಂಟಾಘೋಷವಾಗಿ ಕೂಗಿ ಜನರೆಲ್ಲರ ಲಕ್ಷ್ಯ ಸೆಳೆಯುವಲ್ಲಿ ನಿರತರಾಗಿದ್ದಾರೆ. ಏನಾದರೇನಾಯ್ತು ನಾವು ಸದ್ಯ ಹಾಯಾಗಿದ್ದೇವೆ ಎಂಬ ಕುರುಡು ನಂಬಿಕೆಯಲ್ಲಿ ಮತದಾರ ಕುರಿಗಳು ನಾಳೆ ಎರಗಬಹುದಾದ ಕತ್ತಿಯನ್ನು ಕನಸಲ್ಲೂ ಕಂಡಿಲ್ಲ; ಕಾಣುತ್ತಿಲ್ಲ. ಅಂದಹಾಗೇ ಈ ಎಲ್ಲದರ ನಡುವೆ ಮಾಂತ್ರಿಕರ ಮತ್ತು ಜ್ಯೋತಿಷಿಗಳ ಐಡಿಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಬಾರದು ಹಾಗೆ ಮಾಡಿದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಎಸಗುವ ದ್ರೋಹ ಎಂದು ’ರೇವೂಸ್’ ಮಂಗಳೂರಿನಲ್ಲಿ ಮಾತನಾಡುತ್ತಾ ಹೇಳಿದರು. ’ನಂದಿನಿ ಹಾಲ’ನ್ನು ಕುಡಿಯಲಿ ಬಿಡಲಿ ಲಿಂಬೆ ಹಣ್ಣಿನ ಸತತ ಸ್ನೇಹ ತಮಗೆ ಅತ್ಯಂತ ಮುದನೀಡುವ ವಿಚಾರವೆಂತಲೂ ೧೦ನೇ ತರಗತಿ ಪಾಸಗದಿದ್ದರೂ ಏನಾಯ್ತು ರಾಜ್ಯವನ್ನಾಳಲು ಅದು ಬೇಕಾಗಿಲ್ಲ ಎಂಬುದನ್ನು ಅವರು ಮೇಜುಗುದ್ದುವುದರ ಮೂಲಕ ಒತ್ತಿಹೇಳಿ ತಮ್ಮ ಕೈಗೆ ಮೂವ್ ಸವರಿಕೊಂಡಿದ್ದಾರೆ!

ಆಗ್ನಿ ಪರೀಕ್ಷೆಯಲ್ಲಿ ಹಲವರು ಬಾರಿ ಗೆದ್ದುಬಂದಿರುವ ಆಳುವ ಪಕ್ಷದವರಿಗೆ ವಾಯು ಪರೀಕ್ಷೆ ಮತ್ತು ಮಲಪರೀಕ್ಷೆ ಜಲಪರೀಕ್ಷೆಗಳಾದಿಯಾಗಿ ಇನ್ನೇನೆಲ್ಲಾ ಪರೀಕ್ಷೆಗಳನ್ನು ಸಮಯೋಚಿತವಾಗಿ ಯಾವ್ಯಾವಾಗ ನೀಡಬಹುದು ಎಂದು ಮುದ್ದೆಗಳ ಪಡೆಯಲ್ಲಿ ಚಿಂತನ-ಮಂಥನ ನಡೆದಿದೆ. ಅಹರ್ನಿಶಿ ತಲೆ-ಮೈ ಪರಚಿಕೊಂಡಿದ್ದೇ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಂದಲೂ ಹಾಲೀ ಸರಕಾರವನ್ನು ಪತನಗೊಳಿಸಲು ಸಾಧ್ಯವಾಗದ್ದಕ್ಕೆ ಹುಲಿಯ ಹುಣ್ಣಿನ ಥರ ಹುಣ್ಣುಗಳಾಗಿವೆ ಎಂಬುದು ಅನೇಕರ ಅನಿಸಿಕೆಯಾಗಿದೆ. ಹುಳಿಸೇ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಎನ್ನುವ ಮಣ್ಣಿನ ಮಕ್ಕಳು ’ಶಾಕಿಂಗ್ ನ್ಯೂಸ್’ ಕೊಡಲು ಏರ್ಪಾಟುಮಾಡಿಕೊಂಡು ಮೊನ್ನೆ ದೆಹಲಿಗೆ ದೌಢಾಯಿಸಿ ’ಮರಳಿ ಯತ್ನವಂ’ ಮಾಡಿ " ಬಂದ ದಾರಿಗೆ ಸುಂಕವಿಲ್ಲ " ಎನ್ನಿಸಿಕೊಂಡು ತಾನೇ ಶಾಕ್ ಪಡೆದು ಬೆಂಗಳೂರಿಗೆ ವಾಪಸ್ಸಾದಮೇಲೆ ತನಗೆ ಮುತ್ತಿಕೊಂಡ ಮಾಧ್ಯಮದವರನ್ನು ಗರ್ಜಿಸಿ ಹಿಮ್ಮೆಟ್ಟಿಸಿದ್ದಾರೆ ಎನ್ನಲಾಗಿದೆ.

ಮುದ್ದೆಗಳ ಹಳಸಲು ವಾಸನೆಯನ್ನು ಅದಾಗಲೇ ರುಚಿನೋಡಿದ ಹಲವಾರು ಜನ ಮುದ್ದೆಗಳ ಗೋಜೇ ಬೇಡಾ ಎನ್ನುವ ಮನದಿಂಗಿತವನ್ನು ಆಗಾಗ ಅಲ್ಲಲ್ಲಿ ಮಾಧ್ಯಮಗಳವರೆದುರು ಗೌಪ್ಯವಾಗಿ ಬಹಿರಂಗಗೊಳಿಸಿದ್ದಾರೆ! ಆದರೂ ಹಳೆಯ ಪ್ರೀತಿಯ ’ಮನಿಪ್ಲಾಂಟ್’ ಬಳ್ಳಿ ಒಮ್ಮೊಮ್ಮೆ ಕಾಲಿಗೆ ಅಡರಿಕೊಂಡು ಮತ್ತೆ ಹಳಸಿದ್ದನ್ನೂ ಒಪ್ಪುವ ಮನಸ್ಸು ಕೆಲವರದ್ದಾಗಿದೆ! ಒಂದುಕಾಲದಲ್ಲಿ ಎಲ್ಲರನ್ನೂ ಹೊರಟ್ಟಿದವರು ಈಗ " ಒಳೀಕ್ ಬನ್ನಿ ಒಳೀಕ್ ಬನ್ನಿ" ಅಂತಾ ರತ್ನಗಂಬಳಿ ಹಾಸುತ್ತಿರುವುದು ಪಕ್ಷದ ಅಧೋಗತಿಯನ್ನು ಎತ್ತಿತೋರಿಸುತ್ತದೆ. ಅನಂತಮೂರ್ತಿಯಾದರೂ ಬರಲಿ ರಾಧಾಕೃಷ್ಣರಾದರೂ ಬರಲಿ ’ಬರುವವರಿಗೆಲ್ಲಾ ಸ್ವಾಗತ’ ಎಂದು ತಾತ್ಕಾಲಿಕ ಬೋರ್ಡನ್ನು ಹಾಕಿ ರಾಷ್ಟ್ರಾಧ್ಯಕ್ಸರೂ ರಾಜ್ಯಾಧ್ಯಕ್ಸರೂ ಒಂದೇ ಆಫೀಸಿನಲ್ಲಿ ಕೂತು ತಲೆಮೇಲೆ ಬಹಳಹೊತ್ತು ’ಕೈ’ಹೊತ್ತು ಈಗ ಗಡ್ಡಕ್ಕೆ ಕೈಕೊಟ್ಟು ಕೂತಿದ್ದಾರೆ! ಯಡ್ಯೂರಣ್ಣನಿಗೆ ಉಂಡೆನಾಮ ಎಳೆಯಲು ಹೊರಟಿದ್ದ ಸರ್ಕಸ್ ಕಂಪನಿಯಲ್ಲಿ ಅಧಿಕಾರವಿಲ್ಲದೇ 'ಶೋ' ನಡೆಸಲು ಸಾಧ್ಯವಾಗದೇ ಇರುವಾಗ ’ಬಂಡೆ’,’ಉಂಡೆ’, ’ಬಸ್ಸು’ ಮುಂತಾದ ಬಿಳಿಯ ಆನೆಗಳನ್ನು ಸಾಕುವುದು ’ಕುದುರೆ ವ್ಯಾಪಾರ’ಕ್ಕಿಂತಾ ದುಬಾರಿ ಎಂಬುದು ಮುದ್ದೆಗಳ ಲೆಕ್ಕಾಚಾರ; ಅದೊಂದೇ ಮುದ್ದೆಗಳು ಕಂಡ ಹದಿನಾರಾಣೆ ಸತ್ಯ-ಬಿಡಿ. ಯಾವುದೇ ಕಠಿಣ ಪರೀಕ್ಷೆಗಳನ್ನು ತಂದೊಡ್ಡಿದ್ದರೂ ತಾವು ಪಾಸು ಮಾಡುವುದಾಗಿ ತಿರುಗಾಟದಲ್ಲಿರುವ ಈಸ್ವರಣ್ಣ ಶಿವಮೊಗ್ಗದಲ್ಲಿ ಸಾರಿದ್ದಾರೆ. ಸರಿಯಾಗಿ ಉಡಲು ಬಾರದ ಉದ್ದ ಪಂಚೆಯನ್ನು ಹೇಗಾದರೂ ಸುತ್ತಿಕೊಂಡು ಅವರು ಬಹಳ ಉದ್ವೇಗದಿಂದ ಮಾತನಾಡುತ್ತಿದ್ದರು.

ಖಡುಗಂದುಬಣ್ಣದ ಮುದ್ದೆಗಳೂ ಅವುಗಳ ಎಣ್ಣೆಯಂತಹ ಹೊಳಪುಳ್ಳ ಮೈಕಾಂತಿಯ ನಡುವೆ ಕರಿಮುದ್ದೆಯ ಬೀಜವೊಂದು ಬಿದ್ದು ಬಿಳಿ ಮುದ್ದೆಯೊಂದು ಹೊರಬಂದಿರುವುದನ್ನು ಸಹಿಸದ ದೊಡ್ಡಮುದ್ದೆ ನಿಜಕ್ಕೂ ಹೈರಾಣಾಗಿದೆ. ಏಕಾದಶಿಯಮನೆಗೆ ಶಿವರಾತ್ರಿಯೂ ಬಂದರೆ ಹೇಗಾಗಬಹುದೋ ಹಾಗೇ ಪತ್ರಿಕೆಗಳಲ್ಲಿ ಇದನ್ನು ಚಿತ್ರಸಮೇತ ಕಂಡಾಗಲೆಲ್ಲಾ ಆನೆ ಸಿಂಹದ ಕನಸುಕಂಡಂತೇ ಹೆದರಿ ಬೀಳುವ ಸ್ಥಿತಿ ಉಂಟಾಗಿದೆ. ಗಾಂಧೀನಗರದಲ್ಲಿ ಹಲವು ಗಂಡುಗಳ ’ಪೌರುಷ’ವನ್ನು ಉಂಡ ಬಿಳಿಯ ಗೋಧೀನಾಗವೊಂದು ’ಲಾಡಿ’ನ ಸ್ನೇಹದಿಂದಾಗಿ ದೊರೆಯಿತು ಎನ್ನುವ ಕೆಲವರು ರಾಜ್ಯಾಧ್ಯಕ್ಸರ ರಸಿಕತೆಯನ್ನು ನಿಬ್ಬೆರಗಾಗಿ ನೋಡುತ್ತಿದ್ದಾರೆ! ಹೆಣ್ಣು ಸಂತಾನವಿಲ್ಲದೇ ಪಟ್ಟದಕ್ಕುವುದಿಲ್ಲವೆಂತಲೂ ಹಾಗೆ ಪಡೆಯಲು ಧರ್ಮಪತ್ನಿ ವಯೋವೃದ್ಧೆಯೆಂತಲೂ ಸಬೂಬು ಹೇಳಿದ ಕುಮಾರ ತೆವಲನ್ನು ತೀರಿಸಲು ಬಳಸಿಕೊಂಡ ಬಿಳಿನಾಗಕ್ಕೆ ಪೂರಕ ಆಸ್ತಿಯನ್ನೂ ಕೊಡಬೇಕಾಗಿ ಬಂದಿದೆ, ಅದನ್ನು ಗಟ್ಟಿಮಾಡಿಕೊಳ್ಳುವ ಸಲುವಾಗಿಯೇ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಈ ಸಂಬಂಧದ ಕುರಿತು ಸಾಕ್ಷ್ಯಾಧಾರವಾಗಿ ಕೆಲವು ಛಾಯಾಚಿತ್ರಗಳನ್ನು ಪ್ರಕಟಿಸಲಾಗಿತ್ತು.

ಮಳೆಗಾಲ ಆರಂಭವಾಗುತ್ತಿದ್ದ ಹಾಗೇ ಅರಣ್ಯ ಇಲಾಖೆಯವರು ತಾವು ಗಿಡಗಳನ್ನು ನೆಡಲು ತೊಡಗಿದ್ದರೆ ವಿದ್ಯುಚ್ಛಕ್ತಿ ನಿಗಮದವರು ತಾವು ಬೇಕುಬೇಕಾದಹಾಗೇ ಕಡಿದು ಕರ್ತವ್ಯ ಪಾಲಿಸುವುದಾಗಿ ಹೇಳಿದ್ದಾರೆ. ಪಿ.ಡಬ್ಲ್ಯೂ.ಡಿ ಯವರು ಕಂತ್ರಾಟುದಾರರ ಮೂಲಕ ರಸ್ತೆಗಳನ್ನು ನಿರ್ಮಿಸುತ್ತಿದ್ದರೆ ನೀರು ಸರಬರಾಜು ಮತ್ತು ಒಳಚರಂಡಿಯವರು ತಮಗೆ ಬೇಕಾದ ರೀತಿಯಲ್ಲಿ ರಸ್ತೆಗಳಲ್ಲಿ ಗುಂಡಿತೆಗೆದು ಕರ್ತವ್ಯ ಪಾಲಿಸುವುದು ಕಂಡುಬಂದಿದೆ! ಸದಾ ಕರ್ತವ್ಯ ನಿರತ ಅಭಿಯಂತರರುಗಳು ತಂತಮ್ಮ ಕರ್ತವ್ಯಗಳಲ್ಲಿ ತನ್ಮಗ್ನರಾಗಿರುವುದಕ್ಕೆ ಇದಕ್ಕಿಂತಾ ಉತ್ತಮ ಉದಾಹರಣೆ ಬೇಕೆ ? ಇದು ಸರಕಾರೀ ಇಲಾಖೆಗಳ ನಡುವೆ ಇರುವ ಪರಸ್ಪರ ಅನ್ಯೋನ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮನಗಂಡ ನಗರ ನಾಗರಿಕ ವೇದಿಕೆ ಆಯಾ ಇಲಾಖೆಗಳ ಸೇವಾ ಆಯುಕ್ತರು, ಅಭಿಯಂತರರುಗಳಿಗೆ ಸನ್ಮಾನಮಾಡುವ ಹಂಬಲ ಇದೆ ಎಂಬುದನ್ನು ಗೂಢವಾಗಿ ಹೇಳಿದೆ !

ಕಲಬೆರಕೆ ಆಹಾರ, ದೂಷಿತಹವೆ, ಕಲುಷಿತ ನೀರು ಇತ್ಯಾದಿಗಳಿಂದ ಎಲುವಿನ ಹಂದರವಾದ ನಾಗರಿಕರು ಅಲೋಪಥಿ ಔಷಧಿಗಳನ್ನು ಹೊತ್ತು ಹೊತ್ತಿಗೆ ಬೊಗಸೆತುಂಬಾ ಮೊಗೆದು ನುಂಗುವುದರಿಂದ ಅವರ ಶಾಂತಿಗಾಗಿ ದಿನಸಿ ಅಂಗಡಿಗಳಲ್ಲೂ ಬ್ರಾಂಡೆಡ್ ಮದ್ಯ ಬಾಟಲಿಗಳ ಮಾರಾಟವನ್ನು ವಿತರಿಸಲು ಅಬಕಾರೀ ಇಲಾಖೆ ಆಯೋಜನೆ ರೂಪಿಸುತ್ತಿದೆ. ನರ್ಸ್‍ಗಳ ಪ್ರೀತಿಗೆ ಪಾತ್ರವಾದ ಈ ಇಲಾಖೆ ಇದೀಗಾಗಲೇ ಮಹಿಳಾ ವೇಟರ್ ಗಳನ್ನು ಬಾರ್ ಗಳಲ್ಲಿ ನೇಮಕಾತಿ ಮಾಡಿಸುವುದರ ಮೂಲಕ ಹೊಸ ಸಾಧನೆಗೈದಿದೆ. ತಮ್ಮ ಇಲಾಖೆಯ ಗಿರಾಕಿಗಳೆಲ್ಲಾ ’ಬಾಟಲೀಪುತ್ರ’ರೇ ಆಗಿರುವುದರಿಂದ ಇದರ ಸಚಿವರು ನರ್ತನಕ್ಕೆ ಹೆಸರುವಾಸಿಯಾಗಿ ಹಗಲಿರುಳೂ ತುಸುವೂ ತೆರಪಿಲ್ಲದೇ ನರ್ತನಮಾಡುತ್ತಿದ್ದಾರೆ! ಸಮಾಜದಲ್ಲಿ ಎಲ್ಲರೂ ’ಬಾಟಲೀಪುತ್ರ’ರಾಗಿಬಿಟ್ಟರೆ ಆಗ ’ಮಾನವಕುಲ ತಾನೊಂದೆವಲಮ್’ ಆದಹಾಗೇ ಆಗಿಬಿಡುತ್ತದೆ. ಚುನಾವಣೆಗಳು ಬಂದಾಗ ಇನ್ನೂ ಅನುಕೂಲಕರವಾಗುತ್ತದೆ ಎಂಬ ದು[ದೂ]ರಾಲೋಚನೆಯಿಂದ ಇಂತಹ ಹಲವು ಯೋಜನೆಗಳು ಈ ಇಲಾಖೆಯ ಮುಂದಿವೆ. ಸಿಡಿದೆದ್ದರೆ ರಿಸಾರ್ಟು ಯಾತ್ರೆ ’ಒಡನಾಡಿದರೆ’ ಪಾದಯಾತ್ರೆ ಎಂಬ ಮಂತ್ರವನ್ನು ಎಲ್ಲರಿಗೂ ಬೋಧಿಸಿದ ಸನ್ಮಾನ್ಯರಿಗೆ ಯಾವಾಗ ಎಲ್ಲಿ ಯಾವ ಜ್ಞಾನೋದಯವಾಗುತ್ತದೆ ಎಂಬುದು ತಿಳಿಯುವುದಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ. ಕೆಲವರು ’ಯಡ್ಯೂರಣ್ಣ ಹೊತ್ತುಬಂದಾಗ ಕತ್ತೆಕಾಲನ್ನೂ ಹಿಡಿಯುತ್ತಾರೆ’ ಎಂಬ ಕಟುಸತ್ಯವನ್ನು ಹಾಡಹಗಲೇ ಹೇಳಿ ಲೇವಡಿಮಾಡಿದ್ದಾರೆ!

ಕನ್ನಡ ನಾಡನ್ನು ಹಿಂದಿನಿಂದ ಸ್ವಾತಂತ್ರ್ಯ ಪೂರ್ವದವರೆಗೆ ಹಲವಾರು ಅರಸರು/ರಾಣಿಯರು ಆಳಿದ್ದಾರೆ. ಆದರೆ ಇತ್ತೀಚೆಗೆ ಯಾಕೋ ’ನಾಡಪ್ರಭು ಕೆಂಪೇಗೌಡ’ ಎಂಬ ಹೆಸರು ಪದೇ ಪದೇ ಕೇಳಿಬರುತ್ತಿದೆ. ಕೆಂಪೇಗೌಡರು ಮಾಗಡಿಯ ಸಾಮಂತರಾಗಿ ಬೆಂಗಳೂರನ್ನು ನಿರ್ಮಿಸಿದ್ದು ನಿಜ. ಅವರು ನಿರ್ಮಿಸಿದ ಹಳೆಯ ಬೆಂಗಳೂರಿಗೆ ಹೊಸರೂಪ ಕೊಡುವಲ್ಲಿ ಮೈಸೂರು ಅರಸರೂ ದುಡಿದಿದ್ದಾರೆ. ಹಾಗಾದರೆ ಮೈಸೂರು ಮಹಾರಾಜರುಗಳು ನಾಡಪ್ರಭುಗಳಾಗಿರಲಿಲ್ಲವೇ ? ಹೊಯ್ಸಳರು, ಕದಂಬರು, ವಿಜಯನಗರದವರು ಆಗಿರಲಿಲ್ಲವೇ ? ಅವರೆಲ್ಲರ ಕೊಡುಗೆ ಬಹು ಹೆಚ್ಚಿನದು. ಒಂದರ್ಥದಲ್ಲಿ ’ನಾಡಪ್ರಭು’, ’ರಾಷ್ಟ್ರಕವಿ’ ಈ ಶಬ್ದಗಳ ಪ್ರಯೋಗ ಸರಿಯಲ್ಲ. ಅದರಿಂದ ಕೆಲವರಿಗಷ್ಟೇ ಗೌರವ ಸಿಕ್ಕಂತಾಗುತ್ತದೆಯೇ ಹೊರತು ಸಮಕಾಲೀನರಾದ ಹಲವರಿಗೆ ಅದು ಬೇಸರತರುವ ವಿಷಯವಾಗಬಹುದು--ಎಂದು ಹಿರಿಯ ಸಾಹಿತಿಗಳಾದ ಗುಮ್ಮಣ್ಣ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ತಾವು ಕೆಂಪೇಗೌಡರ ಅಪ್ಪಟ ಅಭಿಮಾನಿಯಾಗಿದ್ದು ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಯಾರೂ ವಿಚಲಿತರಾಗಬೇಕಿಲ್ಲಾ ಎಂದೂ ಅವರು ಹೇಳಿಕೆ ನೀಡಿದ್ದಾರೆ. ಅವರು ಇಂದು ಬೆಂಗಳೂರಿನ ಕೆಂಪೇಗೌಡ ಸರ್ಕಲ್‍ನಲ್ಲಿ ನಿಂತು ಮಾತನಾಡುತ್ತಿದ್ದರು. ಗಡಿಬಿಡಿಯಲ್ಲಿ ಮಾತನಾಡಿದ ಅವರು ಅಗತ್ಯ ಕೆಲಸದ ನಿಮಿತ್ತ ಪುಸ್ತಕ ಮಳಿಗೆಯೊಂದರ ಎರಡನೇ ಮಹಡಿಗೆ ಧಾವಿಸಿದರು.

ಒಂದೇ ವಿಷಯದಮೇಲೆ ಘಳಿಗೆಗೊಂದು ಬಾರಿ ಬೇರೆ ಬೇರೆ ಅಭಿಪ್ರಾಯವನ್ನು ಕೊಡುವವರಿಗೆ ' ತರಲೆ ಭಾರದ್ವಾಜ ಪ್ರಶಸ್ತಿ ' ಯನ್ನು ಕೊಡಲಾಗುವುದು ಎಂದು ಚಿಂತಕ ಜಿ.ಕೆ.ಮುಕುಂದರಾವ್ ಹೇಳಿದ್ದಾರೆ. ಅವರು ಚಿಂತಕರ ಚಾವಡಿಯ ಮೂರನೇ ಮೆಟ್ಟಿಲ ಮೇಲೆ ನಿಂತು ಮಾತನಾಡುತ್ತಿದ್ದರು. ಪ್ರಶಸ್ತಿ ಅಸಂಬದ್ಧ ಶಿಫಾರಸ್ಸು ಪತ್ರಗಳನ್ನಷ್ಟೇ ಒಳಗೊಂಡಿರುತ್ತದೆ ಎಂಬುದು ಇಲ್ಲಿನ ವಿಶೇಷ. ಕನ್ನಡ ಸಂಗಟನೆಗಳ ಹೆಸರಿನಲ್ಲಿ ಕೆಲವರು ರೋಲ್ ಕಾಲ್ ಮಾಡುತ್ತಿರುವುದು ಕನ್ನಡಾಭಿಮಾನಿಗಳ ದುರಾದೃಷ್ಟ ಎಂದೂ ಹೇಳುತ್ತಿದ್ದರು. ಮಾತನ್ನು ಮುಂದುವರಿಸಿದ ಅವರು ಮುಂದಿನ ಸರ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ಶಾಸಕ ಮತ್ತು ಸಂಸದರಿಗೆ ಕಬ್ಬಿಣದ ಕೊಡಲಿ, ಮಚ್ಚು. ಲಾಂಗು ಇಂಥವನ್ನೆಲ್ಲಾ ಮೊದಲೇ ಕೊಟ್ಟು ನಾಗರಿಕ ಸನ್ಮಾನ ಮಾಡಿ ಆಮೇಲೆ ಅವರವರ ಕರ್ತವ್ಯಕ್ಕೆ ಕಲಿಸಲಾಗುವುದು ಎಂದರು.

ಅತ್ಯುತ್ತಮ ಸುದ್ದಿಗಳನ್ನು ಸಕಾಲದಲ್ಲಿ ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಕಳಪೆ ಟಿವಿಗೆ ’ಮಾಧ್ಯಮದ ಮಿಂಚು’ ಪ್ರಶಸ್ತಿ ಲಭ್ಯವಾಗಿದೆ. ಗೊತ್ತಿಲ್ಲದ ಸಂಘವೊಂದು ಕೊಡಮಾಡುವ ಈ ಪ್ರಶಸ್ತಿಗೆ ದೇಶದಲ್ಲೇ ಕಳಪೆ ಟಿವಿ ಪ್ರಪ್ರಥಮವಾಗಿ ಆಯ್ಕೆಗೊಂಡಿರುವುದು ನಮಗೆಲ್ಲಾ ಸಂತೋಷದ ವಿಷಯ. ಈ ಸಮಯದಲ್ಲಿ ನಮ್ಮ ಕಳಪೆ ಟಿವಿಯ ಮುಖ್ಯಸ್ಥರಾದ ಕಡ್ಡಿ ರಂಗಣ್ಣನವರು ವೀಕ್ಷಕರಿಗೆ ಕೃತಜ್ಞತೆ ತಿಳಿಸಿದ್ದಾರೆ. ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಕಳಪೆ ಟಿವಿ ಬಳಗ ಹಾರೈಸುತ್ತದೆ.

ಒಟ್ಟಾರೆ ಗಣಕಯಂತ್ರದಿಂದಾದ ಸುಧಾರಣೆಗಳನ್ನು ಅಣುರೇಣುತೃಣಕಾಷ್ಠಾದಿಗಳೂ ಒಪ್ಪಲೇಬೇಕಾಗಿದೆ. ಇದು ನಿಜಕ್ಕೂ ನಾವು ಕಂಡ ಮಹತ್ತರ ಸಾಧನೆ ಎಂದು ವಿಜ್ಞಾನಿಗಳೂ ಗಣಕಶಾಸ್ತ್ರಿಗಳೂ ಒಳಗೊಳಗೇ ಬ್ರಷ್ಟಾಚಾರಕ್ಕೆ ಕರ್ತರಿ ಮತ್ತು ಕರ್ಮಣಿ ಪ್ರಯೋಗ ಮಾಡಲು ಮುನ್ನುಗ್ಗುತ್ತಿದ್ದಾರೆ. ಅತ್ಯಂತ ಕುತೂಹಲಕಾರಿ ಐಡಿಯೊಂದು ನಮ್ಮ ಗಮನವನ್ನು ತನ್ನತ್ತ ಸೆಳೆಯಿತು. ಅದೆಂದರೆ :

cute_raadhika@kswamy.net

ಇದೀಗ ತಾನೇ ಬಂದ ಸುದ್ದಿ :
ಕಾಯ್ದೆಬಾಹಿರ ವೆಬ್‍ಸೈಟ್‍ಗಳನ್ನು ಖಡಾಖಂಡಿತ ರದ್ದುಗೊಳಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ತಡವಾಗಿ ಹೇಳಿಕೆ ನೀಡಿದೆ.

ಇದು ಈ ಹೊತ್ತಿನ ನ್ಯೂಸ್, ಕ್ಷಣ ಕ್ಷಣದ ಸುದ್ದಿಗಾಗಿ ಆತಂಕದಿಂದ ನೋಡುತ್ತಾ ಇರಿ: ಕಳಪೆ ಟಿವಿ ೨೪ ಬಾರ್ ೭, ನಮಸ್ಕಾರ.

Thursday, June 2, 2011


ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ

ರಾಯ್ಪುರದ ಕುರುದ್ ಊರಿನ ಬಡ ರೈತನೊಬ್ಬನ ಮಗ ಮಧುಸೂದನ್ ಕೇಳಗೆ ಹಳ್ಳಿಯ ಮನೆಯಲ್ಲಿ ಕಲಿಕೆಗೆ ಅಷ್ಟೇನೂ ಸೌಲಭ್ಯಗಳಿರಲಿಲ್ಲ. ಒಟ್ಟಾರೆ ಏನಾದರೂ ಒಂದಷ್ಟು ಓದಿದರಾಯಿತು-ಬದುಕಲು ಅದು ಸಹಕಾರಿಯಾಗಬಹುದು ಎಂಬುದು ಮಧು ಕೇಳಅಪ್ಪ-ಅಮ್ಮನ ಅನಿಸಿಕೆಯಾಗಿತ್ತು. ಕಷ್ಟಾರ್ಜಿತದಲ್ಲೇ ಮಗನನ್ನು ಪದವಿಯವರೆಗೆ ಓದಿಸಿದರು. ಸುಮ್ಮನೇ ಊರು ನೋಡಲಾಗಿ ಮಿತ್ರ ರಾಹುಲ್ ಮಹಾವರನೊಂದಿಗೆ ೧೯೯೮ರಲ್ಲಿ ಮುಂಬೈಗೆ ಒಂದೆರಡು ದಿನಗಳ ಮಟ್ಟಿಗೆ ಬಂದಿದ್ದ ಮಧುಕೇಳ. ಯಾಕೋ ಆತನಿಗೆ ತನ್ನ ಮುಂದಿನ ಜೀವಿತಕ್ಕಾಗಿ ಎಂ.ಬಿ. ಮಾಡುವ ಕನಸು ಹುಟ್ಟಿತು. ಊರಿಗೆ ಮರಳಿದ ಮಧು ಕೆಲವುದಿನಗಳ ತರುವಾಯ ಮತ್ತೆ ಸ್ನೇಹಿತ ರಾಹುಲ್ ಜೊತೆಗೆ ಮುಂಬೈಗೆ ಬಂದಿಳಿದ. ಹೇಳಿಕೇಳಿ ಅದು ಮುಂಬೈ ಶಹರ. ತನ್ನವರು ಎಂಬವರು ಯಾರೂ ಇರಲಿಲ್ಲ. ಪರಿಚಿತರಾಗಲೀ, ಸ್ನೇಹಿತರಾಗಲೀ, ನೆಂಟರಿಷ್ಟರಾಗಲೀ ಯಾರೂ ಅಲ್ಲಿರಲಿಲ್ಲ. ಇದ್ದಾತ ಒಬ್ಬನೇ ಒಬ್ಬ ಊರಕಡೆ ಮನುಷ್ಯ. ಆತ ಜುಹು ಸಮುದ್ರತೀರದಲ್ಲಿ ಪಾನೀಪೂರಿ ಮಾರಾಟಮಾಡುವ ಅತಿ ಚಿಕ್ಕ ವ್ಯಾಪಾರಿ. ಅದು ಬಿಟ್ಟರೆ ಬೇರಾವ ಸಂಪರ್ಕವೂ ಇರಲಿಲ್ಲ.

ಮನಸ್ಸಿನಲ್ಲಿ ದೃಢ ನಿರ್ಧಾರಕ್ಕೆ ಬಂದಿದ್ದ ಮಧು ಕೇಳ ಸ್ನೇಹಿತ ರಾಹುಲ ಜೊತೆಗೆ ಸೋಮೈಯ್ಯಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ಬಾಗಿಲು ತಟ್ಟಿದ. ಅಲ್ಲಿ ಅವರು ಎಲ್ಲರಿಗೂ ಅವಕಾಶ ನೀಡುತ್ತಿರಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ಸಂದರ್ಶಕರೊಟ್ಟಿಗೆ ಮಾತನಾಡುತ್ತಾ ಪ್ರತೀ ಕಾಲುವರ್ಷದ [ ತಿಂಗಳ]ಪರೀಕ್ಷೆಯಲ್ಲೂ ತನ್ನ ಅಭಿವೃದ್ಧಿ ಪಥವನ್ನು ತೋರಿಸುವೆನೆಂಬ ಛಲವನ್ನು ಒತ್ತಿಒತ್ತಿ ಹೇಳಿದ ಹುಡುಗನಿಗೆ ಅಲ್ಲಿ ಅವಕಾಶ ಸಿಕ್ಕಿತು. ಆದರೆ ಅದೇ ಸ್ನೇಹಿತನಿಗೆ ಸಿಗಲಿಲ್ಲ. ಸ್ನೇಹಿತ ರಾಹುಲ್ ಕುರುದ್ಗೆ ಮರಳಿದ. ಮುಂಬೈಯ್ಯಲ್ಲಿ ಎಂ.ಬಿ. ಮಾಡತೊಡಗಿದ ಮಧು ಕೇಳ ಪ್ರತೀ ದಿನವನ್ನು ತನ್ನ ವ್ಯಾಸಂಗದ ಮಹತ್ವದ ದಿನವೆಂದೇ ಪರಿಗಣಿಸಿ ಅಭ್ಯಸಿಸಿದ. ಅವನ ಮುಂದೆ ಎರಡೇ ಆಯ್ಕೆಗಳಿದ್ದವು. ಒಂದೋ ಆತ ಗೆಲುವು ಸಾಧಿಸಬೇಕು ಅಥವಾ ಅಂತೂ ಇಂತೂ ಏನೋ ಮಾಡಿದೆ ಎಂದು ಮುಗಿಸಿ ಊರಿಗೆ ಮರಳಬೇಕು. ಗೆದ್ದರೆ ಹಾರ-ತುರಾಯಿ-ಸನ್ಮಾನ; ಸೋತರೆ ಬದುಕಲು ಅನರ್ಹನೆಂಬ ಅಪಮಾನ ! ಹಿಮಾಲಯದ ಪರ್ವತರೋಹಿಗಳಿಗೆ ಇರುವ ಕಡಿದಾದ ಮಾರ್ಗಗಳಲ್ಲಿ ಮೊನಚಾದ ಶಿಖರಗಳನ್ನೇರುವ ದುಸ್ಸಾಹಸದ ರೀತಿ, ಹುರಿದು ಮುಕ್ಕುವ ಪ್ರಬಲ ವಿರೋಧಿ ಬಣದ ಸೇನಾನಿಗಳ ಮುಂದೆ ಸೆಣಸಿ ಗೆಲ್ಲಬೇಕಾದ ಸೈನಿಕನ ರೀತಿಯ ಸವಾಲುಗಳು ಅಲ್ಲಿದ್ದವು!

ಮಧು ತನ್ನ ಹಠ ಬಿಡಲಿಲ್ಲ. ಸಾಧನೆಯೊಂದೇ ತನಗಿರುವ ಹಾದಿ ಎಂಬುದನ್ನು ಆತ ಮೊದಲೇ ನಿರ್ಧರಿಸಿದ್ದನಲ್ಲಾ ಬಾಧಕಗಳು ಕಣ್ಣಿಗೆ ಕಂಡರೂ ಅವುಗಳನ್ನು ದಮನಿಸಿ ಮುನ್ನುಗ್ಗಿದ. ವಿಜಯಿಯಾದ ಮಧುವಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಅದೇ ಸಂದರ್ಭದಲ್ಲಿ ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಆಗತಾನೇ ಆರಂಭಗೊಂಡಿತ್ತು. ಅಲ್ಲಿನ ಕೆಲವು ವ್ಯವಹಾರಗಳು ಪಾರಾದರ್ಶಕವಾಗಿರಲಿಲ್ಲ. ಕುರಿತು ಅನಿಲ್ ಅಂಬಾನಿಗೆ ನೇರವಾಗಿ ಒಂದು ಸಲಹಾಪತ್ರವನ್ನು ಬರೆದ. ಪತ್ರವನ್ನು ಓದಿದ ಅನಿಲ್ ಮಧುವನ್ನು ತನ್ನಲ್ಲಿಗೆ ಕರೆಸಿಕೊಂಡನಲ್ಲದೇ ಕೆಲವೇದಿನಗಳಲ್ಲಿ ಅವನನ್ನು ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಸಂಸ್ಥೆಯ ನಿರ್ದೇಶಕರ ಸಮಿತಿಗೆ ಸೇರಿಸಿಕೊಂಡ. ಅದಾದ ಕೆಲವೇ ದಿನಗಳಲ್ಲಿ ಮಧು ತನ್ನ ಹಲವು ದೀರ್ಘಾಲೋಚನೆಗಳಿಂದ ಅನೇಕ ಮಾರ್ಪಾಟುಮಾಡಿದ್ದರಿಂದ ಏನೂ ಇಲ್ಲದ ಆರ್.ಎಂ.ಎಫ್ ಮಾರುಕಟ್ಟೆಯಲ್ಲಿ ನಂ. ಸ್ಥಾನಕ್ಕೆ ಬಂದು ನಿಂತಿತು.

ವ್ಯಾಸಂಗದ ದಿನಗಳಲ್ಲಿ ಅತಿ ಚಿಕ್ಕ ಖೋಲಿಯಲ್ಲಿ ಇನ್ನೊಬ್ಬ ಮಿತ್ರನೊಡನೆ ದಿನಕಳೆದ ಮಧುವಿಗೆ ಖೋಲಿಯ ಬಾಗಿಲನ್ನು ತೆರೆಯಲೂ ಅವಕಾಶವಿರಲಿಲ್ಲ. ಬಾಗಿಲು ತೆರೆದರೆ ಸಾಮೂಹಿಕ ಬಳಕೆಗೆಂದು ಇರುವ ಚಾಳಿನ ವಾಸಿಗರ ಶೌಚಾಲಯದ ಗಬ್ಬು ವಾಸನೆ ಮೂಗನ್ನು ಒಡೆಯುವಷ್ಟು ರಾಚುತ್ತಿತ್ತು. ಆದರೆ ಈಗ ಮುಂಬೈನ ಅತಿ ಉತ್ತಮ ವಸತಿ ಸಮುಚ್ಚಯವೊಂದರಲ್ಲಿ ೪೦೦೦ ಚದರಡಿಗಳ ಮನೆಯಲ್ಲಿ ವಾಸ. ಮುದ್ದಾದ ಎರಡು ಹೆಣ್ಣುಮಕ್ಕಳು ಮತ್ತು ಹೆಂಡತಿಯೊಂದಿಗೆ ಸುಖದ ಸಂಸಾರ. ೪೩ ವರ್ಷದ ಮಧು ಕೇಳ ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ೯೦,೦೦೦ ಕೋಟಿ ವಹಿವಾಟಿನ ಅನಿಲ್ ಧೀರೂಬಾಯ್ ಅಂಬಾನಿ ಗ್ರೂಪ್ಗೆ ಆರ್ಥಿಕ ವ್ಯವಹಾರ ನಿರ್ವಹಣೆಯ ಪರಿಕಲ್ಪನೆಗಾರ. ತನಗೆ ಒದಗುವ ಯಾವುದೇ ಸವಾಲನ್ನೂ ಅತ್ಯಂತ ಆಸಕ್ತಿಯಿಂದ ನಿಭಾಯಿಸುವ ಮಧು ಕೇಳ ಮೊನ್ನೆ ಒಂದು ವಿಶೇಷ ಕಾದಿತ್ತು! ಅದೆಂದರೆ ಆತನನ್ನು ಆರ್.ಎಂ. ಎಫ್ ನಿಂದ ರಿಲಾಯನ್ಸ್ ಕೆಪಿಟಲ್ಗೆ ಸ್ಥಾನ ಬಲಾಯಿಸಿ ನಿಯಮಿಸಲಾಗಿದೆ. ಈಗಿರುವ ಅತಿ ದೊಡ್ಡ ಸವಾಲು ಮತ್ತದೇ ಏನೂ ಅಲ್ಲದ ರಿಲಾಯನ್ಸ್ ಕೆಪಿಟಲ್ ಸಂಸ್ಥೆಯನ್ನು ಮತ್ತೆ ಉನ್ನತ ದರ್ಜೆಗೆ ಏರುವಂತೇ ಬೆಳೆಸುವುದು!

ಮಧು ಕೇಳ ಸಾಧಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ಯಾಕೆಂದರೆ ಆತನಲ್ಲಿ ಇನ್ನಿಲ್ಲದ ಆತ್ಮವಿಶ್ವಾಸ, ಧೈರ್ಯ,ಸ್ಥೈರ್ಯ ಎಲ್ಲವೂ ಮೇಳೈಸಿವೆ. ಶೇರು ಮಾರುಕಟ್ಟೆಯನ್ನು ಆಮೂಲಾಗ್ರ ಅರೆದು ಕುಡಿದಿರುವ ಮಧು ಎಲ್ಲಿ ಯಾರು ಯಾವುದನ್ನು ಕೊಳ್ಳುತ್ತಾರೆ ಮತ್ತು ಎಲ್ಲಿ ಯಾರು ಯಾವುದನ್ನು ಮಾರಾಟಮಾಡುತ್ತಾರೆ ಎಂಬುದನ್ನು ನಿಕೃಷ್ಟವಾಗಿ ಗುರುತಿಸಬಲ್ಲ ಚಾಣಾಕ್ಷ. ಒಮ್ಮೆ ಗಿರಾಕಿಯೊಬ್ಬರಿಗೆ ಗಾದ್ರೆಜ್ ಕಂಪನಿಯ ೧೦೦,೦೦೦ ಶೇರುಗಳು ಬೇಕಾಗಿದ್ದವು. ಅಂತಹ ಕಂಪನಿಯ ಅಷ್ಟೊಂದು ಶೇರುಗಳು ಮಾರುಕಟ್ಟೆಯಲ್ಲಿ ನೇರವಾಗಿ ಒಮ್ಮೆಲೇ ಸಿಗುವುದು ದುರ್ಲಭವಾಗಿತ್ತು. ಮಧು ತಡಮಾಡಲಿಲ್ಲ. ಗಾದ್ರೆಜ್ ಕಂಪನಿಯ ಮಾಲೀಕರಾದ ಆದಿ ಗಾದ್ರೆಜ್ ರವರನ್ನೇ ದೂರ್ವಾಣಿಯಲ್ಲಿ ಸಂಪರ್ಕಿಸಿಬಿಟ್ಟ. ಅವರಿಗೇ ಶಾಕು! ಯಾಕೆಂದರೆ ಮೊದಲು ಯಾರೂ ಹಾಗೆ ಮಾಡಿದ್ದಿಲ್ಲ. ಮೊದಲೇ ಪರಿಚಯ ಬೇರೇ ಇಲ್ಲ, ಕೇಳುವ ವಿಷಯ ತಮ್ಮಲ್ಲಿರುವ ತಮ್ಮಕಂಪನಿಯ ಕೆಲವು ಶೇರುಗಳನ್ನು ಮಾರಲು ತಯಾರಿದ್ದೀರಾ ಎಂಬುದು ! ಮಧು ಬೇಕಾದ ಶೇರುಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಪಡೆದುಬಿಟ್ಟ!

ಮಾರುಕಟ್ಟೆಯಲ್ಲಿ ಅತ್ಯಂತ ಪರಿಶ್ರಮದಿಂದ ತನ್ನ ಕೆಲಸದಲ್ಲಿ ನಿರತನಾಗುವ ಮಧುವಿಗೆಗೋ ಗೆಟರ್‍’ ಎನ್ನುವ ಅನ್ವರ್ಥಕವಿದೆ. ಪ್ರಮುಖ ಕಂಪನಿಗಳ ಮುಖ್ಯ ವ್ಯಕ್ತಿಗಳನ್ನು ಮತ್ತು ನಿರ್ದೇಶಕರುಗಳನ್ನು ಭೇಟಿಮಾಡಲು ಅವರುಗಳು ಪ್ರಯಾಣಿಸುವ ವರ್ಷದ ವೇಳಾಪಟ್ಟಿಯನ್ನು ಹೇಗಾದರೂ ಪಡೆದುಕೊಂಡು ಮೂಲಕ ಅವರ ಬೆನ್ನು ಹತ್ತಿ ಅಲ್ಲಿ ಭೇಟಿಯಾಗುತ್ತಿದ್ದ. ಇದೇ ರೀತಿ ಒಮ್ಮೆ ಡಿವಿಸ್ ಫಾರ್ಮಾಸ್ಯೂಟಿಕಲ್ಸ್ ನಿರ್ದೇಶಕರನ್ನು ಭೇಟಿಯಾಗಲು ಅಮೇರಿಕಾಗೆ ಅವರು ಹೋಗುವ ಸುದ್ದಿ ತಿಳಿದು ತಾನೂ ವಿಮಾನ ಹತ್ತಿ ಅಲ್ಲಿಗೇ ತೆರಳಿ ಅಲ್ಲೇ ಭೇಟಿಯಾಗಿ ತನ್ನ ಕೆಲಸದ ಬಗ್ಗೆ ಮಾತನಾಡಿದ್ದ! ಸದಾ ಒಂದಿಲ್ಲೊಂದು ಇಂತಹ ಮಾತುಕತೆಯಲ್ಲೇ ತೊಡಗಿಕೊಂಡು ಮಾರುಕಟ್ಟೆಯಲ್ಲಿ ತಾನು ನಿರ್ವಹಿಸುವ ಕಂಪನಿಯ ವಹಿವಾಟು ಸರಾಗವಾಗಿ ಮುಂಚೂಣಿಯಲ್ಲಿರುವಂತೇ ನೋಡಿಕೊಳ್ಳುವಲ್ಲಿ ಮಧು ಸಫಲನಾಗಿದ್ದಾನೆ.

ಬರುವ ೨೦೧೨ರ ಬಗ್ಗೆ ಕೇಳಿದಾಗ ಆತನ ಮನದಲ್ಲಿ ಸಾಕಷ್ಟು ತಯಾರಿ ಈಗಲೇ ನಡೆದಿದೆ. ಈಗಿನ ಹೊಸ ಕಛೇರಿ ಸರಿಸುಮಾರು ,೦೦೦ ಚದರಡಿಗಳಷ್ಟು ದೊಡ್ಡದಾಗಿದೆ. ಮಧು ಜೊತೆಗೆ ಇನ್ನೂ ನಾಲ್ವರು ಅಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ನಿಪುಣರೇ ಆಗಿದ್ದಾರೆ. ಮಾರುಕಟ್ಟೆಯಲ್ಲಿಕ್ರೂಡ್ಜಾಗತಿಕ ಮಾರುಕಟ್ಟೆಯ ಬಹುಪಾಲು ತೊಡಗಿಸುವಿಕೆಯನ್ನು ನಿರ್ಧರಿಸುವುದರಿಂದ ಒಬ್ಬರನ್ನು ಕ್ರೂಡ್ಬಗ್ಗೆ ಸೂಕ್ಷ್ಮ ಗಮನವಿಡಲು ಹೇಳಿದ್ದಾನೆ. ಇನ್ನುಳಿದಂತೇ ಹೆಲ್ತ್ಕೇರ್ [ಆರೋಗ್ಯ] ಮತ್ತು ಎಜುಕೇಶನ್ [ವಿದ್ಯೆ] ಎರಡು ರಂಗಗಳಲ್ಲಿ ಆತ ಕಣ್ಣಿರಿಸಿದ್ದಾನೆ. ಸದ್ಯಕ್ಕೆ ಹಲವು ಕಂಪನಿಗಳು ರಂಗಗಳಲ್ಲಿ ತೊಡಗಿಕೊಂಡಿಲ್ಲ. ಯಾವಾಗ ವಿದ್ಯಾರಂಗ ಸರಕಾರೀ ಸ್ವಾಮ್ಯದಿಂದ ಹೊರದೂಡಲ್ಪಟ್ಟು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೋ ಆಗ ಇಂದು ದೂರಸಂಪರ್ಕ ಮತ್ತು ಅಂತರ್ಜಾಲ, ಪೆಟ್ರೋಕೆಮಿಕಲ್ ರಿಫೈನರಿಗಳ ವ್ಯವಹಾರದಲ್ಲಿ ನಡೆದಂತೇ ಆದಂತೇ ಮಹತ್ತರ ಬದಲಾವಣೆ ಸಾಧ್ಯ ಎಂಬುದು ಮಧುವಿನ ಅಂಬೋಣ.

ಏನೂ ಗೊತ್ತಿಲ್ಲದ ನಗಣ್ಯ ವ್ಯಕ್ತಿಯೊಬ್ಬ ಸಾಧನೆಮಾಡಿ ದೇಶವೇ ಬೆರಳುಮಾಡಿ ತೋರಿಸುವ ಎತ್ತರಕ್ಕೆ ಏರಿದಾಗ ವ್ಯಕ್ತಿಯ ಸಾಧನೆ ಸಾಧನಾಪಥವನ್ನು ತುಳಿಯಬಯಸುವವರಿಗೆ ಆದರ್ಶವಾಗುತ್ತದೆ. ಅದೂ ಆರ್ಥಿಕತೆ ಮಾನವ ಜೀವನದ ಅತೀ ಪ್ರಮುಖ ಅಂಗ. ಯಾವುದೇ ವ್ಯಕ್ತಿಯನ್ನೋ ಸಂಸ್ಥೆಯನ್ನೋ ಇಂದು ನಾವು ಗಣಿಸುವುದು ವ್ಯಕ್ತಿಯ/ಸಂಸ್ಥೆಯ ಆದಾಯ, ವ್ಯವಹಾರ, ಆಸ್ತಿ ಇವುಗಳ ಮೇಲೆ. ಹೀಗಾಗಿ ದೇಶದಲ್ಲೇ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಗ್ರೂಪ್ ಸಂಸ್ಥೆಯೊಂದರ ಆರ್ಥಿಕ ವ್ಯವಹಾರಗಳ ನಿರ್ದೇಶಕನಾಗಿ ಮಧು ಏರಿದ ಎತ್ತರ ನಿಜಕ್ಕೂ ಶ್ಲಾಘನೀಯ. ನಾವು ಹಲವು ಪುಸ್ತಕಗಳನ್ನು ಓದುತ್ತೇವೆ, ಹಲವು ಸಿರಿವಂತರ ಕಥೆಗಳನ್ನು ಕೇಳುತ್ತೇವೆ. ತಿಪ್ಪೆ ಎತ್ತುವ ಹುಡುಗ ಅತ್ಯಂತ ಶ್ರೀಮಂತನಾದ ಘಟನೆಯ ಥರದ ಸಂಗತಿಗಳು ನಮ್ಮೆದುರು ಕಾಣಸಿಗುತ್ತವೆ. ಶಾಲೆಯಲ್ಲಿ ಅನುತ್ತೀರ್ಣನಾದ ಬಿಲ್ ಗೇಟ್ಸ್ ತಾನುಮೈಕ್ರೋ ಸಾಫ್ಟ್ಕಟ್ಟಿದ; ಬೆಳೆದ. ಅಪ್ರತಿಮ ಸಾಹಸಿಯಾದ ರಿಚರ್ಡ್ ಬ್ರಾನ್ಸನ್ವರ್ಜಿನ್ಎಂಬ ಬ್ರಾಂಡನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಿದ; ಜನಸಾಮಾನ್ಯರು ಎಂದೂ ಮರೆಯಲಾಗದಂತಹ ತನ್ನ ಹಲವು ದುಸ್ಸಾಹಸಗಳಿಂದ ಸಾಧನೆಗೈದಿದ್ದಾನೆ, ಹೆಸರುವಾಸಿಯಾಗಿದ್ದಾನೆ. ಜೀವನದಲ್ಲಿ ಸಾಹಸ ಬೇಕು. ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ. ಆದರೆ ಸಾಹಸವನ್ನು ನಡೆಸುವಾಗ ಅದನ್ನು ಯಶಸ್ವಿಯಾಗಿ ನಡೆಸುವ ಯಾ ಗೆಲ್ಲುವ ಚಿತ್ರಣ ನಮ್ಮ ಮನದಲ್ಲಿ ಮೊದಲೇ ಮೂಡಿರಬೇಕು. ಹೇಗೆ ಮೂರ್ತಿಯ ಸ್ವರೂಪ ಶಿಲ್ಪಿಯ ಮನದಲ್ಲಿ ಮೊದಲೇ ಚಿತ್ರಿತವಾಗುವುದೋ, ಹೇಗೆ ರಾಗದ ಲಯಬದ್ಧ ಗತಿ ಸಂಗೀತಗಾರನ ಮನದಲ್ಲಿ ಮೊದಲೇ ಆವಿರ್ಭವಿಸುವುದೋ, ಹೇಗೆ ವಿಜ್ಞಾನಿಯ ಮನದಂಗಳದಲ್ಲಿ ಕ್ಷಿಪಣಿ ಮೊದಲೇ ಹಾರಿ ಕಕ್ಷೆಗೆ ಸೇರಿರುವುದೋ ಹಾಗೇ ನಾವು ಕೈಗೊಳ್ಳುವ ಸಾಹಸದ ಪಶ್ಚಾತ್ ಸಿಗುವ ಯಶಸ್ಸು ನಮ್ಮ ಮನದಲ್ಲಿ ಮೊದಲೇ ನಿಖರವಾಗಿ ಚಿತ್ರಿತವಾಗಿರಬೇಕು. ಕನಸು ಸಾಹಸ ನಮ್ಮ ಯುವಪೀಳಿಗೆಯ ಎಲ್ಲರದಾಗಲಿ, ಎಲ್ಲರೂ ಹಲವು ಮಾರ್ಗಗಳಲ್ಲಿ ಸಾಧನೆಮಾಡಲಿ ಎಂದು ಹಾರೈಸುತ್ತೇನೆ.