ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 22, 2010

ಸರ್ ಡಬ್ ವಾಂಯ್ !!

ಚಿತ್ರ ಋಣ : ಅಂತರ್ಜಾಲ
ಸರ್ ಡಬ್ ವಾಂಯ್ !!

ತೆನ್ನಾಲಿ ರಾಮಕೃಷ್ಣನ ಕಥೆಗಳನ್ನು ಕೇಳುವಾಗ ಕೆಲವೊಮ್ಮೆ ನನಗೆ ನೆನಪಾಗುವುದು ಅವನ ಸರ್ ಡಬ್ ವಾಂಯ್ ಕಥೆ! ಪ್ರಾಯಶಃ ಅಂದಿನ ಕಾಲಘಟ್ಟದಲ್ಲಿ ಬಹಳ ಸೃಜನಶೀಲತೆ [ಕ್ರಿಯೇಟಿವಿಟಿ] ಇರುವ ಜನರಲ್ಲಿ ಆತ ಒಬ್ಬನಾಗಿದ್ದ. ದುಡಿಮೆಗೆ ಮಾರ್ಗವಿಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದ ಕಾಲದಲ್ಲಿ ಕೇವಲ ತನ್ನ ಬುದ್ಧಿವಂತಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರಾಜಮರ್ಯಾದೆ ಪಡೆದ ಮಹಾನುಭಾವ ತೆನ್ನಾಲಿರಾಮ. ಆಸ್ಥಾನ ವಿದ್ವಾನ್ ಬಿರುದಿಗೆ ಪಾತ್ರನಾಗುವಷ್ಟು ಪಾಂಡಿತ್ಯವನ್ನು ಸ್ವಯಾರ್ಜಿತವಾಗಿ ಅಭ್ಯಸಿಸಿ ಕರಗತ ಮಾಡಿಕೊಂಡ ತೆನ್ನಾಲಿ ಸಮಾಜಕ್ಕೆ ನ್ಯಾಯಪರತೆಯಿಂದ ನಡೆದುಕೊಂಡವ. ಶ್ರಾದ್ಧಕ್ಕೆ ಬರುವ ಪುರೋಹಿತರು ಶಾಸ್ತ್ರಸಮ್ಮತವಲ್ಲದ ಹೊರೆಕಾಣಿಕೆಗ ಭಾರವನ್ನು ಬಡಬಗ್ಗರಿಗೆ ಹೊರಿಸುವುದು ತಿಳಿದಾಗ ಕಾಯಿಸಿ ಬರೆ ಎಳೆದು ಪುರೋಹಿತರನ್ನೇ ದಂಗುಬಡಿಸಿದ ಅಪ್ಪಟ ಜನಪ್ರೇಮಿ. ರಾಜರು ಯಾವುದೇ ಮಹತ್ತಿನ ಕೆಲಸ ಮಾಡುವಾಗಲೂ ತನ್ನ ಸಲಹೆಯನ್ನು ಪಡೆಯುವಷ್ಟು ಎತ್ತರಕ್ಕೆ ಬೆಳೆದ ಮಹಾನ್ ಮೇಧಾವಿ. ಅಧಿಕಪ್ರಸಂಗಿಗಳಾಗಿ ತಾವೇ ಪಂಡಿತರೆಂದು ಮೆರೆಯುತ್ತಿದ್ದ ಹಲವಾರು ಜನರನ್ನು ತನ್ನ ಹಲವಾರು ಹಾಸ್ಯಪ್ರಸಂಗಗಳಿಂದಲೇ ಸೋಲಿಸಿ ಅವರಿಗೆ ಮಂಕುಕವಿದ ಬುದ್ಧಿಗೆ ಬೆಳಕು ಹರಿಸಿದ್ದೂ ಅಲ್ಲದೇ ಆ ಕಾರ್ಯದಲ್ಲೇ ಜನರಂಜಕನಾಗಿ ರಾಜರಂಜಕನಾಗಿ ಬಹುಪ್ರಸಿದ್ಧಿಯನ್ನು ಪಡೆದ ಹಾಸ್ಯರತ್ನ. ವಿಜಯನಗರ ಸಂಸ್ಥಾನಕಂಡ ಅದ್ಬುತ ವ್ಯಕ್ತಿಗಳಲ್ಲಿ ತೆನ್ನಾಲಿಯೂ ಒಬ್ಬ.

ತೆನ್ನಾಲಿಯ ಅನೇಕ ಕಥೆಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾಕೆಂದರೆ ಪ್ರತಿಯೊಂದೂ ಕಥೆ ಅಷ್ಟು ಪ್ರಸರಿಸಲ್ಪಟ್ಟಿದೆ, ಜನಪ್ರಿಯವಾಗಿದೆ. ಅಲ್ಲಿ ಬರುವ ಕ್ಷುಲ್ಲಕ ಸಂಗತಿಗಳೇ ಕಥೆಗಳ ಜೀವಜೀವಾಳ. ತೆನ್ನಾಲಿ ರಾಮಕೃಷ್ಣನ ಬೆಕ್ಕು ಹಾಲು ಕುಡಿದಿದ್ದು, ತೆನ್ನಾಲಿಯ ಕುದುರೆ ಕಾಂಪಿಟಿಶನ್, ತಿಲಕಾಷ್ಠ ಮಹಿಷ ಬಂಧನ ಇವೆಲ್ಲಾ ಅನಾಯಾಸವಾಗಿ ಎಲ್ಲರ ಕಿವಿಗೂ ತಲ್ಪಿದ ಹಾಸ್ಯಕಥಾನಕಗಳು. ಕೆಲವನ್ನು ಕನ್ನಡದ ’ಹಾಸ್ಯರತ್ನ ರಾಮಕೃಷ್ಣ’ ಸಿನಿಮಾ ನೋಡಿದರೆ ಕೆಲವು ಕಥೆಗಳು ದೃಶ್ಯರೂಪದಲ್ಲೂ ಲಭ್ಯ. ಅದಲ್ಲದೇ ’ಕೃಷ್ಣದೇವರಾಯ’ ಸಿನಿಮಾದಲ್ಲೂ ದಿ| ನರಸಿಂಹರಾಜು ತೆನ್ನಾಲಿಯ ಪಾತ್ರವನ್ನು ಬಹಳ ಸುಲಲಿತವಾಗಿ ಅಭಿನಯಿಸಿದ್ದಾರೆ. ಇಂತಹ ಕಥೆಗಳ ಪೈಕಿ ’ಸರ್ ಡಬ್ ವಾಂಯ್’ ಕೂಡ ಒಂದು.

ಮಹಾಮೇಧಾವಿ ಅಂದುಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಪಾಠ ಕಲಿಸುವ ಸಲುವಾಗಿ ತಲೆತುರಿಸಿಕೊಂಡ ತೆನಾಲಿ, ಬರುವ ದಾರಿಯಲ್ಲೇ ಘಟಿಸಿದ ಘಟನೆಯೊಂದನ್ನು ಅಸ್ತ್ರವಾಗಿ ಬಳಸಿ ಆತನನ್ನು ಹಿಮ್ಮೆಟ್ಟಿಸಿದ ಪ್ರಸಂಗ ನಮಗಿಲ್ಲಿ ಕಾಣಸಿಗುತ್ತದೆ. ಅವು ಮೂರು ವಿಭಿನ್ನ ಶಬ್ಧಗಳು ಒಂದನ್ನೊಂದು ಅವಲಂಬಿಸಿ ನಡೆದ ಕ್ರಿಯೆಗಳ ಸುತ್ತ ಬಳಸಲ್ಪಟ್ಟು ತೆನ್ನಾಲಿಯ ಮನದಲ್ಲಿ ಹುಟ್ಟಿ ಭಯಂಕರವಾದ ಅರ್ಜುನನ ಪಾಶುಪತಾಸ್ತ್ರವೋ ರಾಮನ ನಾರಾಯಣಾಸ್ತ್ರವೋ ಅಥವಾ ಅದಕ್ಕಿಂತ ಹೆಚ್ಚಿನ ಪರಿಣಾಮವುಳ್ಳದ್ದೋ ಎಂದೆನಿಸುವ ಈ ಅಸ್ತ್ರದ ನಿಜರೂಪ ತಿಳಿದಾಗ ನಾವು ನಗುತಡೆಯದಾಗುತ್ತೇವೆ. ಏನಿಲ್ಲಾ ಸ್ವಾಮಿ ಇದರಲ್ಲಿ ಇಷ್ಟೇ ಎನಿಸುವುದುದಾದರೂ ಮುಳ್ಳನ್ನು ಮುಳ್ಳಿಂದಲೇ ತೆಗೆವ ಚಾಕಚಕ್ಯತೆಯನ್ನು ಮೆರೆದು ವಿಜಯನಗರದ ಮಾನಕಾಪಾಡಿದ ಹಾಗೂ ಮಾನಸಮ್ಮಾನವನ್ನು ಪಡೆದ ತೆನ್ನಾಲಿ ಇಂದಿಗೂ ಸ್ತುತ್ಯಾರ್ಹ.

ಸರ್ ಎಂದರೆ[ ಇಂಗ್ಲೀಷ್ ಸರ್ ಅಲ್ಲ! ಅದೊಂದು ಸದ್ದು]ಹಿತ್ತಲಲ್ಲಿ ನಿಂತ ತೆಂಗಿನ ಮರದ ಗರಿ ಜಾರುವುದು, ಡಬ್ ಎಂದರೆ ಅದು ಕೆಳಗೆ ಬಿದ್ದಾಗಿನ ಸದ್ದು, ವಾಂಯ್ ಎಂದರೆ ಹತ್ತಿರದಲ್ಲೇ ಮೇಯುತ್ತಿದ್ದ ಎಮ್ಮೆ ಹೆದರಿ ಕೂಗಿದ್ದು. ಇದು ಒಟ್ಟಿಗೆ ಸೇರಿ ’ಸರ್ ಡಬ್ ವಾಂಯ್’ ಆಗಿದೆ. ಇದನ್ನು ಅರ್ಥೈಸದೇ ಹೈರಾಣಾದ ಮಹಾಪಂಡಿತ, ತೆನ್ನಾಲಿಯ ಕರ್ತೃತ್ವ ಶಕ್ತಿಗೆ ತಲೆಬಾಗಿ ನಮಿಸಿ ಹೊರಟುಹೋದದ್ದು ಇಂದಿಗೆ ನಮಗೆ ಇತಿಹಾಸ. ವೈರಸ್ ಬಂದಾಗ ಕಂಪ್ಯೂಟರಿಗೆ ಆಂಟಿವೈರಸ್[ಆಂಟಿ ಯಲ್ಲ ಸ್ವಾಮೀ ತಪ್ಪಾಗಿ ಭಾವಿಸಬೇಡಿ!] ಬೇಕೇಬೇಕು. ಅಲ್ಲಿ ಬರುವ ವೈರಸ್ ಗಳು ಈ ಕಥೆಯಲ್ಲಿ ಇರುವ ಮಹಾಪಂಡಿತನಂತೇ ಕಂಪ್ಯೂಟರನ್ನೇ ತಿಂದುಹಾಕುವಂತಿರುತ್ತವೆ! ಅಸಲಿಗೆ ಅವುಗಳ ದುರಹಂಕಾರ ಅಟಾಟೋಪ ಬಹಳ ಜಾಸ್ತಿ[ಟಿವಿಯಲ್ಲಿ ’ಡೊಮೆಕ್ಸ್’ ಜಾಹೀರಾತು ನೋಡಲು ಕೋರಲಾಗಿದೆ!]. ತನಗೆ ಮದ್ದೇ ಇಲ್ಲಾ ಅಂತ ತಿಳಿದರೆ ಅವು ಮಗ್ಗಲು ಬದಲಿಸಿ ದೈತ್ಯಾಕಾರವಾಗಿ ಇಡೀ ಕಂಪ್ಯೂಟರ್ ವ್ಯಾಪಿಸಿ ಇರಿಸಿರುವ ಮಾಹಿತಿಗಳನ್ನು ಅಳಿಸುವುದೋ, ನಾಪತ್ತೆಮಾಡುವುದೋ, ಪ್ರಿಂಟ್ ಬರದಂತೆಯೋ ನೆಟ್ ಕನೆಕ್ಟ್ ಆಗದಂತೆಯೋ ಮಾಡುವುದೋ ಮೆಮರಿ ಅಥವಾ ಹಾರ್ಡ್ ಡಿಸ್ಕ್ ಸುಟ್ಟುಹೋಗುವಂತೆ ಮಾಡುವುದೋ ಅವುಗಳ ’ಕ್ರಿಮಿ’ನಲ್ ಕೆಲಸ! ಈ ಕ್ರಿಮಿ ಸೂಕ್ಷಾಣುವಲ್ಲ, ಇದು ಕೂಡ ಒಂದು ತೆರನ ಸುಪ್ತಾಂಶವೇ! ಎಷ್ಟೋ ಜನ ಇನ್ನೂ ಕಂಪ್ಯೂಟರ್ ವೈರಸ್ ಎಂದರೆ ಅದು ಡೊಮೆಕ್ಸ್ ಜಾಹೀರಾತಿನಲ್ಲಿ ಬರುವ ರೂಪದಲ್ಲೋ ಅಥವಾ ಮನುಷ್ಯರಿಗೆ ಕಾಯಿಲೆತರುವಂಥದ್ದೇ ಕೀಟಾಣುವಾಗಿರಬಹುದೆಂದು ಅಂದುಕೊಂಡಿರುತ್ತಾರೆ, ಆದರೆ ಯಾರಲ್ಲಿ ಕೇಳುವುದು-ಕೇಳಿದರೆ ತನಗೆ ಗೊತ್ತಿಲ್ಲಾ ಎಂಬುದು ಆ ಕೇಳಿದ ವ್ಯಕ್ತಿಗೆ ತಿಳಿದು ತನ್ನನ್ನು ಆತ ’ಇಷ್ಟೇನೆ ಈತ’ ಎಂದು ತಿಳಿದುಬಿಟ್ಟರೆ ಕಷ್ಟ ಎಂದುಕೊಂಡು ನಮ್ಮ ಎಗೋ[ದುರಭಿಮಾನ]ಕ್ಕೆ ಧಕ್ಕೆಯಾಗದಂತೆ ಹಾಗೆ ಕೇಳಬೇಕಾದ ಹಲವು ಪ್ರಶ್ನೆಗಳನ್ನು ನಮ್ಮೊಳಗೇ ಹತ್ತಿಕ್ಕಿ ಬಂಧಿಸಿರುತ್ತೇವೆ. ಒಂದೇ ವ್ಯಾಖ್ಯೆಯಲ್ಲಿ ಹೇಳಬಹುದಾದರೆ- ವೈರಸ್ ಈಸ್ ಆಲ್ಸೋ ಎ ಸಾಪ್ಟವೇರ್ ಡಿಸ್ಟ್ರಕ್ಟಿವ್ ಇನ್ ನೇಚರ್ ! ಇಂತಹ ವೈರಸ್ ಬಂದಾಗ ಅದನ್ನು ತೆಗೆಯಲು ಉಪಾಯಹುಡುಕಿ ಅದಕ್ಕೆ ಬೇಕಾದ ತಂತ್ರಾಂಶ ಬರೆಯುವವರು ಕೆಲವರು[ ಅಸಲಿಗೆ ವೈರಸ್ ಬಿಡುವವರೂ ಅವರೇ, ಅವರ ಕೆಲಸವೇ ಅದು.ಕೆಲವೊಮ್ಮೆ ಹಾವಾಡಿಗರು ಹಳ್ಳಿಯ ಮನೆಗಳ ಹತ್ತಿರದಲಿ ಹಾವನ್ನು ಬಿಟ್ಟು ದೂರ ಹೋಗಿ ಒಂದೆರಡು ಗಂಟೆ ಕಳೆದು ಮತ್ತೆ ಬರುತ್ತಾರೆ-ಆಗ ಅವರಿಗೆ ಹಾವು ಹಿಡಿಯುವ ’ಅವಕಾಶ’ ಸಿಗುತ್ತದೆ. ಇದು ಹೊಟ್ಟೆ ಹೊರೆದುಕೊಳ್ಳುವ ವಿವಿಧೋದ್ದೇಶ ಯೋಜನೆಗಳಲ್ಲೊಂದು! ]

ಇರಲಿ, ನಾನು ಹೇಳ ಹೊರಟ ’ಸರ್ ಡಬ್ ವಾಂಯ್’ ಬೇರೇನೇ ಇದೆ! ನಾವೆಲ್ಲಾ ಪ್ರಾಥಮಿಕ ಶಾಲೆಗೆ ಹೋಗುವಾಗ ನಮ್ಮಗಿಂತ ಮೇಲಿನ ತರಗತಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಸ್ವಲ್ಪ ಕಿಡಿಗೇಡಿಗಳಿದ್ದರು. ಹೇಳಿದ ಕೆಲಸವನ್ನು ಮಾಡದೇ ಹಾಗೇ ಬಂದು ತರಗತಿಯಲ್ಲಿ ಕೂತುಕೊಳ್ಳುವುದು, ಶಿಕ್ಷಕರು ಶಿಕ್ಷೆ ವಿಧಿಸಿದರೆ ಅನುಭವಿಸುವುದು, ಆಮೇಲೆ ದಿನವೊಪ್ಪತ್ತು ಶಿಕ್ಷೆಕೊಟ್ಟ ಶಿಕ್ಷಕರಮೇಲೆ, ಅವಮಾನದಿಂದ ಕೆಂಡಾಮಂಡಲವಾಗಿ ಏನಾದ್ರೂ ಅನ್ನುತ್ತಿರುವುದು-ಇದೆಲ್ಲಾ ಅವರ ಚಾಳಿ. ಒಮ್ಮೆ ನಾವೆಲ್ಲಾ ಮೂರನೇ ಕ್ಲಾಸಿನಲ್ಲಿದ್ದ ವೇಳೆ ಇರಬೇಕು, ಆಗ ಐದನೇ ಈಯತ್ತೆಯಲ್ಲಿ ಒಬ್ಬ ಹುಡುಗನಿದ್ದ. ಹೆಸರು ವಿನಾಯಕ. ಆತ ವಿನಾಯಕನೇ ಹೌದು! ಆ ವಿನಾಯಕನಿಗೂ ಈ ವಿನಾಯಕನಿಗೂ ಅಂತರ ಬರೇ ಸೊಂಡಿಲು ಎಂಬಷ್ಟು ಬಹಳ ಕೀಟಲೆಯುಕ್ತ ಜಾಣ. ಆದರೆ ಸೊಂಬೇರಿ[ಆಳಸಿ]. ಮೈಗಳ್ಳನಾದ ಆತ ಕೆಲವೊಮ್ಮೆ ಹೋಮ್ ವರ್ಕ್ ಮಾಡದೇ ಹಾಗೇ ಬರುತ್ತಿದ್ದ. ಅವನ ಕ್ಲಾಸ್ ಟೀಚರ್ ಮುಕ್ತಕ್ಕವರು. ಅವರೂ ಅಷ್ಟೇ ಮಕ್ಕಳಿಲ್ಲದ ಅವರಿಗೆ ಮಕ್ಕಳನ್ನು ಪಾಲನೆ ಮಾಡುವ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲಾ ಎನಿಸುತ್ತದೆ; ಬಹಳ ಕೋಪ ಜಾಸ್ತಿ.

ನಾವೆಲ್ಲಾ ಆಗಾಗ ಅಜ್ಜನಮನೆಗೆ ತಾಯಿಯ ಜೊತೆ ಹೋಗಿಬಿಟ್ಟರೆ ಒಂದೆರಡು ದಿನ ಸ್ಕೂಲಿಗೆ ಬಂಕ್! ಮರಳಿ ಬಂದಾಗ ಶಾಲೆಗೆ ಮುಖತೋರಿಸಲೂ ಒಂಥರಾ. ನಮಗಿಂತ ನಮ ಸಹಪಾಠಿಗಳು ಹೆಚ್ಚು ವಿಷಯಗಳನ್ನು ಕಲಿತುಬಿಡುತ್ತಿದ್ದರಲ್ಲ! ಹೆದರಿಕೆ ಒಂದುಕಡೆಗಾದ್ರೆ ಬಾಕಿಬಿದ್ದ ವಿಷಯಗಳ ಕಲಿಯುವಿಕೆ ನೆನೆದು ಮನಸ್ಸು ಹೈರಾಣಾಗುತ್ತಿತ್ತು. ಆದ್ರೂ ಮಾತ್ರೆ ತಿಂದೂ ತಿಂದೂ ಅಭ್ಯಾಸ ಆಗಿ ಹೋದ ರೋಗಿಯರೀತಿ ನಮ್ಮ ಮನಸ್ಸು ಕೊನೆಗೊಮ್ಮೆ ಬರುವಂತಹ ಶಿಕ್ಷೆಗಳನ್ನೂ,ನಿಭಾಯಿಸಬೇಕಾದ ಬಾಕಿ ಕೆಲಸಗಳನ್ನೂ ಒಪ್ಪಿಕೊಳ್ಳುತ್ತಿತ್ತೇ ವಿನಃ ಅಜ್ಜನಮನೆಯ ಅಥವಾ ನೆಂಟರಮನೆಯ ವಿಸಿಟ್ ನಾವು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ! ಹಳ್ಳಿ ಜೀವನ ನೋಡಿ--ಅಲ್ಲಿ ಬಸ್ ವ್ಯವಸ್ಥೆ ಸ್ವಲ್ಪ ಕಮ್ಮಿಯೇ ಇರುತ್ತಿತ್ತು. ಸಾರಿಗೆಯ ಅಭಾವದಿಂದ ಅಮ್ಮ ಒಂದುದಿನ ಜಾಸ್ತಿ ಅಲ್ಲಿ ಉಳಿದರೆ ನಮಗೆ ಅಲ್ಲಿನ ಮಕ್ಕಳೊಂದಿಗೆ ಮತ್ತೊಂದು ದಿನದ ಹಬ್ಬ! ಮರಳಿ ನಮ್ನಮ್ಮ ಶಾಲೆಗೆ ಬಂದಾಗ ಟೀಚ ಕೇಳಿದರೆ ನಾವು " ಅಜ್ಜನ ಮನೆಯಲ್ಲಿ ಎಮ್ಮೆ ಕರುಹಾಕಿತ್ತು ಅದಕ್ಕೇ ನೋಡಲು ಹೋಗಿದ್ದೆವು" ಅಂತಲೋ ಅಥವಾ " ಅತ್ತೆಮನೆಯಲ್ಲಿ ಸತ್ಯನಾರಾಯಣ ಕಥೆ ಇತ್ತು " ಅಂತಲೋ ಪ್ರಾಮಾಣಿಕವಾಗಿ ಹೇಳುತ್ತಿದ್ದೆವು. ಗ್ರಾಮ್ಯ ಜೀವನಶೈಲಿಯ ಅನುಭವದಲ್ಲಿದ್ದು ಬಿಡುವುಸಿಕ್ಕಾಗ ಹಳ್ಳಿಯ ಕೆಲವುಜನರೊಂದಿಗೆ ಇಸ್ಪೀಟ್ ಆಟ, ತೆಂಗಿನಕಾಯಿ ವ್ಯಾಪಾರ ಇವೆಲ್ಲಾ ಮಾಡಿ ಗೊತ್ತಿದ್ದ ಕೆಲವು ಶಿಕ್ಷಕರು ಮತ್ತೇನೂ ಕೇಳದೇ ಹಿಂದೆ ಕಲಿಸಿದ್ದನ್ನು ಓದಿ,ಬರೆದು ತಯಾರಾಗಿ ಬರಲು ತಾಕೀತು ಮಾಡುತ್ತಿದ್ದರು. ಛೆ! ಅಷ್ಟಕ್ಕೆಲ್ಲಾ ಎಂದಾದ್ರೂ ನಾವು ಸೋಲುವುದುಂಟೇ !

ಕೋಪ ಬಂದ ಒಂದು ದಿನ ವಿನಾಯಕನಿಗೆ ಇಡೀ ಶಾಲೆಯನ್ನು ಮೂರುಸುತ್ತು ಬರುವಂತೇ ಮತ್ತು ಆಮೇಲೆ ಬೆಂಚಿನಮೇಲೆ ನಿಲ್ಲುವಂತೇ ಮುಕ್ತಕ್ಕವರ ಆಜ್ಞೆಯಾಯಿತು! ವಿನಾಯಕ ಕುದ್ದುಹೋದ. ಅವನಿಗೆ ಎಲ್ಲಾತರಗತಿಗಳವರೂ ಸುತ್ತುಹಾಕುವಾಗ ನೋಡುತ್ತಾರಲ್ಲ ಎಂಬ ಅವಮಾನವಾಗಿ ಬಹಳ ಹಳಹಳಿಸಿದ, ಕೇಳಿಕೊಂಡ. ಆದ್ರೂ ಮುಕ್ತಕ್ಕವರು ಪ್ರಸನ್ನರಾಗಲಿಲ್ಲ. ಶಿಕ್ಷೆ ಪಾಲಿಸಲೇ ಬೇಕಾಗಿತ್ತು! ಅಷ್ಟಕ್ಕೂ ಅದು ಸರಿಯೇ ಆದರೂ ವಿನಾಯಕನ ದೃಷ್ಟಿಯಲ್ಲಿ ಅದು ತಪ್ಪು. ವಿನಾಯಕ ತಡಮಾಡಲಿಲ್ಲ ಮೂರುಸುತ್ತು ಹಾಕೇ ಬಿಟ್ಟ. ಹಾಗೇ ಬೆಂಚಿನ ಮೇಲೆ ನಿಂತು ಶಾಲೆಯ ಅಂದಿನ ದಿನ ಮುಗಿಸಿದ.

ಮಾರನೇ ದಿನ ಬೆಳಿಗ್ಗೆ ಶಾಲೆಯ ಬಾಗಿಲು ತೆಗೆದಿದ್ದೇ ತಡ, ವಿನಾಯಕ ಅಲ್ಲಿದ್ದ. ಯಾಕೆ ಆ ದಿನ ಮಾತ್ರ ಅಷ್ಟುಬೇಗ ಎಂಬುದು ನಮಗೆ ತಿಳಿಯಲಿಲ್ಲ. ಶಾಲೆ ಎಂದಿನಂತೇ ಆರಂಭವಾಯಿತು. ಅರ್ಧಗಂಟೆಯೂ ಕಳೆದಿರಲಿಲ್ಲ. ಮುಕ್ತಕ್ಕವರು ಕೈ ಮೈ ತುರಿಸಿಕೊಳ್ಳುತ್ತಾ ಓಡುತ್ತಾ ಏನೋ ಆಗಿದೆಯೆಂದು ತಿಳಿಸಲು ಮುಖ್ಯಾಧ್ಯಾಪಕರ ಕೋಣೆಗೆ ಬಂದರು! ಇಡೀ ಮೈಕೈ ಲಿಬಿಲಿಬಿ ತುರಿಕೆ, ತುರಿಸಿದಷ್ಟೂ ಮತ್ತಷ್ಟು ಜಾಸ್ತಿ. ನಾನೆಲ್ಲೋ ಸಂದಿಯಲ್ಲಿ ಸುಮ್ಮನೇ ನೋಡುತ್ತಾ ವಿನಾಯಕ ಕಂಡ! ಗೆದ್ದ ಸಂಭ್ರಮದಲ್ಲಿ ಒಳಗೊಳಗೇ ನಗುತ್ತಿದ್ದ! ತುರಿಕೆ ಜಾಸ್ತಿಯಾಗಿ ವೈದ್ಯರನ್ನು ಕಾಣುತ್ತೇವೆ ಎಂದು ತಿಳಿಸಿ ಮುಕ್ತಕ್ಕವರು ಮನೆಗೆ ತೆರಳಿದರು. ಶಾಲೆಯಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ಪಠ್ಯಾವಧಿಗಳು ಖಾಲೀ ಬಿದ್ದವು. ಅಂತೂ ಅಂದಿಗೆ ಶಾಲೆಯ ಅವಧಿ ಮುಗಿದು ಮನೆಗೆ ತೆರಳಲು ಸೂಚಿಸುವ ಗಂಟೆಬಡಿಯಿತು. ಎಲ್ಲರೂ ಮನೆಗೆ ತೆರಳುವಾಗ ವಿನಾಯಕ ಬಹಳ ಸಂತೋಷದಿಂದ ನಗುತ್ತಿದ್ದ. " ಸರ್ ಡಬ್ ವಾಂಯ್ " ಎಂದ.

ಕೊನೆಗೆ ಗೊತ್ತಾಗಿದ್ದು ಇಷ್ಟು: ಹಿಂದಿನ ಸಾಯಂಕಾಲವೇ ವಿನಾಯಕ ಕೋಪದಿಂದ ಚೊಣಗಿ ಗಿಡ[ತುರಿಕೆ ಗಿಡ]ದ ಎಲೆಗಳನ್ನು ಪೇಪರಿನಲ್ಲಿ ಕಟ್ಟಿ ತಂದಿಟ್ಟುಕೊಂಡಿದ್ದ, ಬೆಳಿಗ್ಗೆ ಶಾಲೆಗೆ ಬಂದವನೇ ಮುಕ್ತಕ್ಕವರು ಕೂರುವ ಚೇರಿನ ಹಿಡಿಕೆ ಹಾಗೂ ಇನ್ನುಳಿದ ಎಲ್ಲಾ ಭಾಗಕ್ಕೆ ಅದನ್ನು ಸವರಿದ್ದ! ಅದರ ಪರಿಣಾಮ ಹೇಗಿರುತ್ತದೆ ಎಂದರೆ ಅನುಭವಿಸಿದ ಹಳ್ಳಿಗರಿಗೆ ಅಥವಾ ಹಳ್ಳಿಯ ಮೂಲದ ಜನರಿಗೆ ಮಾತ್ರ ಗೊತ್ತು! ಖುರ್ಚಿಯ ಮೇಲೆ ಕುಳಿತ ಮುಕ್ತಕ್ಕವರು ಕೈಮೈ ಖುರ್ಚಿಗೆ ಸೋಕಿರುವುದರಿಂದ ಆ ಸೊಪ್ಪಿನ ಪಸೆ ಮೈಗೆ ಹತ್ತಿಕೊಂಡಿದೆ, ತುರಿಕೆ ಶುರುವಾದಾಗ ಸರ್ ಅಂತ ಚೇರ್ ಎಳೆದು ಜಾರಿದ್ದಾರೆ, ಕೈಲಿದ್ದ ಡಸ್ಟರ್ ಡಬ್ ಎಂದಿ ನೆಲಕ್ಕೆ ಬಿದ್ದಿದ್ದೆ, ’ ಅಯ್ಯೋ ಏನಪ್ಪಾ ಇದು ’ ಎಂದು ಅವರು ತುರಿಸಿ ತುರಿಸಿ ಸುಸ್ತಾಗಿ ಕೈಮೈ ಕೆಂಪಗಾಗುತ್ತ ನಡೆದಿದೆ! ಕೊಬ್ಬರಿ ಎಣ್ಣೆ ಸವರಿಕೊಂಡರೆ ಆ ತುರಿಕೆ ನಿಲ್ಲುತ್ತಿತ್ತು. ಆದ್ರೆ ಹೇಳುವವರಾರು. ಯಾರಾದ್ರೂ ಬಾಯಿಬಿಟ್ಟರೆ ವಿನಾಯಕ ಮತ್ತೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಮೇಲಾಗಿ ಯಾವಮಕ್ಕಳನ್ನೂ ಎಂದಿಗೂ ಪ್ರೀತಿಯಿಂದ ಕಾಣದ ಮುಕ್ತಕ್ಕವರ ಮೇಲೆ ಬಹುತೇಕ ಮಕ್ಕಳಿಗೆ ಕೋಪವಿತ್ತು. ಯಾಕೆಂದರೆ ಒಂದಲ್ಲಾ ಒಂದುದಿನ ಅವರೂ ಬರೆಯದೇ ಬಂದವರೋ ಅಜ್ಜನಮನೆಗೆ ಹೋಗಿ ೩ ದಿನ ಬಿಟ್ಟು ಬಂದವರೋ ಆಗಿ ಶಿಕ್ಷೆ ಅನಿಭವಿಸಿದ್ದುಂಟು. ಹೀಗಾಗಿ ಯಾರೂ ಏನೂ ಚಕಾರವೆತ್ತಲಿಲ್ಲ. ವಿನಾಯಕನ ಕೈ ಮೇಲಾಯಿತು!

ಉಪಸಂಹಾರ [ ಇದು ಯಾರ ಸಂಹಾರವೂ ಅಲ್ಲ ಎಂಬುದಕ್ಕೆ !]
ಇದು ತಪ್ಪೋ ಒಪ್ಪೋ ಬೇರೆ ಪ್ರಶ್ನೆ. ತಪ್ಪೇ ಎಂದಿಟ್ಟಿಕೊಳ್ಳೋಣ. ಆದ್ರೆ ಇದೆಲ್ಲಾ ಅಂದಿನ ಬಾಲಕರ ಅಟಾಟೋಪಗಳು. ಅಂದು ಬಾಲಕರಿಗೆ ಮನೆಯಲ್ಲಿ ಯಾವ ಸಪ್ಪೋರ್ಟ್ ಸಿಗುತ್ತಿರಲಿಲ್ಲ. ಇಂದಾದರೆ ಸ್ವಲ್ಪ ಅಬ್ಬರಿಸಿದರೆ ಸಾಕು ಶಿಕ್ಷಕರಿಗೆ ಗ್ರಹಚಾರ ಕಾದಿರುತ್ತದೆ, ಪಾಲಕರು ಶಾಲೆಗಳಿಗೆ ನುಗ್ಗುತ್ತಾರೆ, ಕೊನೇಪಕ್ಷ ಯಾಕೆ ಹಾಗೆ ಮಾಡಿದ್ದು ಎಂದು ವಿಚಾರಿಸಿ ಮತ್ತೆ ಹಾಗೆ ಮಾಡದಂತೇ ಹೇಳುತ್ತಾರೆ. ಅಂದಿನ ನಮ್ಮ ಬಾಲ್ಯಕಾಲದಲ್ಲಿ ನಮಗೆ ನಾವೇ ಮಕ್ಕಳ ಮರಿ ಸೈನ್ಯ! ಏನಿದ್ದರೂ ನಾವೇ ಬಗೆಹರಿಸಿಕೊಳ್ಳಬೇಕು. ಶಾಲೆಗಳಲ್ಲಿ ಏನಾದರೂ ವಿಶೇಷವಿದ್ದರೆ ಮಾತ್ರ ಮನೆಯವರು ಬರುತ್ತಿದ್ದರು. ಅವರು ಎಂದಿಗೂ ಶಿಕ್ಷಕರಿಗೆ ಎದುರಾಡಿದವರಲ್ಲ! ನಮ್ಮಗಳ ಮನೆಯಲ್ಲಿ ಶಿಕ್ಷಕರು ಹಬ್ಬ ಹರಿದಿನಗಳಲ್ಲಿ ಆಗಾಗ ಆಮಂತ್ರಣದ ಮೇಲೆ ಊಟಕ್ಕೆ ಬರುತ್ತಿದ್ದರು.ಅವರು ಬಂದು ಹೋಗುವವರೆಗೂ ನಾವು ಕೋಣೆಯಿಂದಾಚೆ ಕಾಲಿಟ್ಟವರೇ ಅಲ್ಲ! " ಎಲ್ಲಿ ಇವನು " ಅಂತ ಮಾಸ್ತರು ಕೇಳಿದರೆ " ಇದ್ದಾನೆ ಇದ್ದಾನೆ, ಅವನಿಗೆ ನೀವು ಬಂದಿದ್ದೀರಲ್ಲಾ ಅದಕ್ಕೇ ನಾಚಿಕೆ " ಎಂದುತ್ತರಿಸುವ ಮನೆಯವರು ನಮ್ಮನ್ನು ಕರೆದು ಹೊರಬರುವಂತೇ ಹೇಳುತ್ತಿದ್ದರು. ಬಂದು ಹೋದ ಶಿಕ್ಷಕರು ಒಂದೆರಡು ದಿನ ಮೊಬೈಲ್ ಚಾರ್ಜ್ ಇದ್ದಹಾಗೇ ನಮ್ಮಗಳ ಮನೆಯ ನೆನಪಿನಲ್ಲಿದ್ದು ಆ ಮನೆಯ ಮಕ್ಕಳಿಗೆ ಶಿಕ್ಷೆ ಕೊಡುತ್ತಿರಲಿಲ್ಲ, ಮೂರನೇ ದಿನ ಯಥಾಸ್ಥಿತಿ ಅಂದ್ಕೊಳಿ! ಆದರೂ ನಮ್ಮ ಪಾಲಕರು ಕೊಡುವ ಊಟ ಮಕ್ಕಳನ್ನು ಶಿಕ್ಷಿಸದಿರಲಿ ಎಂಬುದಕ್ಕೆ ಲಂಚವಲ್ಲವಲ್ಲ,ಬದಲಾಗಿ ಮಕ್ಕಳನ್ನು ಇನ್ನೂ ಬಡಿದು,ತಿದ್ದಿ-ತೀಡಿ ಎಂಬ ಒತ್ತೇ ಅದರಲ್ಲಿರುತ್ತಿತ್ತು.

ಓದಿದಿರಿ ತಾನೇ? ಇಷ್ಟುಸಾಕು, ಸರ್ ಡಬ್ ವಾಂಯ್ ನಿಮ್ಮಲ್ಲೂ ಇದ್ದರೆ ಹೇಳಿ, ನಾನು ಕೇಳಬೇಕು. ಈ ಸರ್ ಡಬ್ ವಾಂಯ್ ಹಲವು ತೆನ್ನಾಲಿಗಳನ್ನು ಹುಟ್ಟುಹಾಕಲಿ ಎಂದು ಹಾರೈಸುತ್ತೇನೆ,ನಮಸ್ಕಾರ.

’ಅಹಂ ಬ್ರಹ್ಮಾಸ್ಮಿ’ !!


’ಅಹಂ ಬ್ರಹ್ಮಾಸ್ಮಿ’!!

[ ಅನೇಕ ಮಿತ್ರರು ಮೇಲ್ ಮಾಡಿ ಕೇಳಿದ್ದರಿಂದ ನನಗೆ ನವ್ಯಕಾವ್ಯ ಬರೆಯಲು ಇಷ್ಟವಿಲ್ಲದಿದ್ದರೂ ಬರೆಯಬೇಕಾಗಿ ಬರೆದೆ, ಓದಿನೋಡಿ, ಖುಷಿಕೊಡಲಿ ಬಿಡಲಿ ಓದುವುದು ನಿಮ್ಮ ಧರ್ಮ, ಬರೆಯುವುದು ನಮ್ಮ ನಿತ್ಯಕರ್ಮ ! ]

ಹದಿನಾರು ಸಲ ಬರೆದೆ
ಹದಿನಾರು ಅಪೂರ್ಣ ಕೃತಿಗಳು
ಎಲ್ಲವೂ ನನಗಂತೂ ಭಾವಪೂರ್ಣ
ಮಿಕ್ಕವರಿಗೆ ಅರ್ಥಹೀನ !
ಇದು ನನ್ನ ಪ್ರಾಮಾಣಿಕ ಪ್ರಯತ್ನ
ಹಲವುದಿನಗಳ ನಿದ್ದೆಗೆಟ್ಟ ಶ್ರಮ
ಶಬ್ದಗಳನ್ನೆಲ್ಲ ಕಲೆಹಾಕಿ
ಬೇಯಿಸಿ ಸೋಸಿ ಬಸಿದು ಕೊಟ್ಟ
ಹೊಚ್ಚಹೊಸ ಕವನಗಳು
ನೀವು ನಂಬಿ ಬಿಡಿ ಇದು ನನ್ನವೇ
ಸದ್ಯಕ್ಕೆ ನೀವು ನಂಬುತ್ತೀರಿ
ಯಾಕೆಂದರೆ ಇವೆಲ್ಲವೂ ಅಪೂರ್ಣ!
ಅವುಗಳಿಗೆ ಹಾಲು-ಮೊಸರನ್ನವುಣಿಸಿ
ನೀರೆರೆದು ಎಣ್ಣೆಹಚ್ಚಿ ತಲೆಬಾಚಿ
ಒಳ್ಳೆಯ ಬಟ್ಟೆ ತೊಡಿಸಿ ರಂಗಿಗೆ ಪೌಡರ್ ಹಾಕಿ
ಕಾಲಿಗೆ ಸಾಕ್ಸು ಶೂ ಹಾಕಿ
ನಿಮ್ಮ ಮುಂದೆ ನಡೆಯಬಿಟ್ಟಾಗಲೇ ನೀವೆನ್ನುತ್ತೀರಿ
ವಾ ವಾ ಎಂತಹ ಚೆಂದದ ಕವಿತೆಗಳಪ್ಪಾ!

ನನ್ನಗೋಳು ನನಗೇ ಗೊತ್ತು
ಮಲಬದ್ಧತೆಯಾದವರ ರೀತಿ
ಅವುಗಳ ಮುನ್ನಡೆಸುವಿಕೆ ಇನ್ನೂ ಹೊಳೆದಿಲ್ಲ
ನನ್ನೊಳಗೆ ಹಲವು ಕವಿ ಹುಟ್ಟಿ ಹುಟ್ಟಿ
ಮತ್ತೆ ಮತ್ತೆ ಸತ್ತುಹೋದ ಅನುಭವ
ಆದರೂ ಬಿಡಲಾರದ ತ್ರಿವಿಕ್ರಮ ನಂಟು !
ಹೊರಪ್ರಪಂಚಕೆ ಇದರ ಅರಿವುಂಟೇ ?
ನಿದ್ದೆ ಬಾರದೇಕೆ ಕನಸು ಬೀಳದೇಕೆ
ಕನಸಿನಲ್ಲಿ ಯಾರೋ ಬಂದು ಹೇಳಿಕೊಟ್ಟರೆ
ಮಾರನೇ ಬೆಳಿಗ್ಗೆಯೊಳಗೆ ಕವನಗಳನ್ನು
ಬರೆದು ಪ್ರಕಟಿಸಿಬಿಡುತ್ತಿದ್ದೆ
ಆಗ ಒತ್ತಟ್ಟಿಗೆ ಕೊಡುವ ಕೃತಿಗಳನ್ನು
ನೋಡಿ ಬೇಗ ಓದಿ ಅರ್ಥಮಾಡಿಕೊಳ್ಳಲಾರದ
ನಿಮ್ಮನ್ನು ಮರೆಯಲ್ಲಿ ನಿಂತು
ರಾಮ ವಾಲಿಗೆ ಬಾಣ ಬಿಟ್ಟಂತೇ
ಛೂಬಾಣ ಬಿಟ್ಟು ನಿಮ್ಮನ್ನು ಗೆದ್ದು ತೃಪ್ತನಾಗುತ್ತಿದ್ದೆ!
ಆದರೂ ರಾಮ ಕನಿಕರಿಸಿದಂತೆ
ಆಮೇಲೆ ನಿಮಗೆಲ್ಲಾ ನಾನೇ ಹೇಳಿಬಿಡುತ್ತಿದ್ದೆ
"ಓದಿದ ಮಹನೀಯರೇ ನಿಮಗಿದೋ ನಮನ" ಎಂದು

ಒಮ್ಮೆ ಹೀಗೂ ಅನಿಸುತ್ತದೆ
ಇಷ್ಟೆಲ್ಲಾ ಮಾಡುವುದು ಯಾವ ಪುರುಷಾರ್ಥಕ್ಕೆ ?
ನಾಕು ಜನರಿಗೆ ಅನ್ನಹಾಕಲಾರೆ
ಬೇಕಾದಂತೆಲ್ಲಾ ಬದುಕಲಾರೆ
ಸಂಬಳವೂ ಇಲ್ಲ ಗಿಂಬಳವೂ ಇಲ್ಲ
ಅಂದಮೇಲೆ ಇಂತಹ ನನಗೆ ಅಪೂರ್ವವಾದ
ಕೃತಿಗಳನ್ನು ಸುಮ್ಮನೇ ತಲೆಕೆಡಿಸಿಕೊಂಡು ನಾ ಬರೆದರೆ
ಓದುವ ಜನರಿಗೆ ಅರ್ಧವಾದ ರೀತಿಯಲ್ಲಿ
ಅದು ರುಚಿಸದೇ ಇದ್ದಾಗ
ಯಾವೊಬ್ಬನೂ ಹೂತ ರಥದ ಚಕ್ರವನ್ನು
ಎತ್ತಲು ಕರ್ಣನಿಗೆ ಸಹಾಯಮಾಡದಾಗ
ಚಕ್ರವ್ಯೂಹದಿಂದ ಹೊರಬರುವ
ಪ್ಲಾನು ಹೇಳಿಕೊಡದಾದಾಗ
ಮರುಕ ಹುಟ್ಟುತ್ತದೆ ನನ್ನ ಬಗೆಗೇ ನನಗೆ
ಜಗತ್ತೇ ಹೀಗೆ--ಸ್ವಾರ್ಥವೇ ತುಂಬಿದೆ!

ಅದಾಗಿ ಮೂರುದಿನ ಮಂಚಬಿಟ್ಟೇಳದಷ್ಟು
ಚಳಿಜ್ವರ ಬಂದಾಗ ನಾನು ಹಲವತ್ತಿದ್ದೇನೆ
ಯಾಕಪ್ಪಾ ಇದೂ ಬದುಕೇ ?
ನಾನು ಭಂಡಾಯನಲ್ಲ ಭಕ್ತಿ ಭಂಡಾರಿಯೂ ಅಲ್ಲ
ವರಕವಿಯೂ ಆಗಲಿಲ್ಲವೆಂಬ ನರಕಯಾತನೆ!
ಬರೆದೂ ಬರೆದೂ ಬರೆದೂ ತೂರಿಬಿಡುತ್ತೇನೆ
ಓದುವರು ಓದಲಿ ಓದದೇ ಇದ್ದರೆ ಬಿದ್ದಿರಲಿ
ಇವತ್ತಲ್ಲಾ ನಾಳೆ ಹಳೇ ಪೇಪರ್ ಮಾರುವ ಹುಡುಗ
ಅವನ ಪೇಪರ್ ಗಂಟಿನಿಂದ ಹೊರಡುವ
ಅಸಾಧ್ಯ ದನಿಕೇಳಿ ಬಿಚ್ಚಿ ತೆಗೆದು ನೋಡುತ್ತಾನೆ
ಸರಿಯಾಗಿ ಅರ್ಥವಾಗದಾಗ
ಹಿರಿಯರಿಗೆ ಕೊಡುತ್ತಾನೆ ಆಗ
ಅಲ್ಲಿ ಘಟಿಸುತ್ತದೆ ಶುಭಮುಹೂರ್ತ
ಮತ್ತೆ ಚಿಗುರುತ್ತವೆ ನನ್ನ ಕೃತಿಗಳು
ಮಂಕುತಿಮ್ಮನ ಕಗ್ಗದಂತೆ
ಮೈಸೂರು ಮಲ್ಲಿಗೆಯಂತೆ
ಹೆಚ್ಚೇಕೆ ಬೇಂದ್ರೆಯರನಾಕು ತಂತಿಯಂತೇ
ಹೀಗೆಂದುಕೊಂಡು ಮುಸುಕೆಳೆದು ಮಲಗುತ್ತೇನೆ
ತಪಸ್ಸು ಮಾಡುತ್ತೇನೆ ಮನಸಾರೆ
ಮುಂದೆಂದಾದರೂ ಮತ್ತೆ ಕವಿಯಾಗಿ ನಾ ಕಣ್ತೆರೆದರೆ
ಆಗ ನೀವೆನ್ನುತ್ತೀರಿಕಾವ್ಯ ಬ್ರಹ್ಮರ್ಷಿ’ !
ಅಂದಾದರೂ ಅನ್ನಿ ಬಿಟ್ಟಾದರೂ ಬಿಡಿ
ನಾನು ಬರೆದೇ ತೀರುತ್ತೇನೆ
ಇಂದಿಂಗೂ ಎಂದಿಗೂ ನಾನಿರುವವರೆಗೂ !

Monday, September 20, 2010

|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||



|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||


ಹೆಸರು ಕೇಳಿದಾಕ್ಷಣ ನಿಮಗೆ ಅಚ್ಚರಿಯೇ ? ಛೆ ಛೆ ಹಾಗೇನೂ ಗಾಬರಿ ಬೀಳಬೇಡಿ. ಇವು ನಮ್ಮ ಇವತ್ತಿನ ಸಮಾಜದ ದೇವ ದೇವಿಯರು ! ಇದೆಂತಾ ಹೆಸರು ಎಂದು ನೀವು ವಿಚಾರಿಸ ಬಂದರೆ ನಾನು ಹೇಳುವುದಕ್ಕಿಂತ ನೀವೇ ಸುತ್ತ ನೋಡಿದರೆ ನಿಮಗೇ ಸಿಗುತ್ತಾರೆ ನಡೆದಾಡುವ ಈ ದೇವ ದೇವಿಯರು! ಛೆ ಇವರನ್ನೆಲ್ಲಾ ದೇವ ದೇವಿರಎಂದು ಬಿಟ್ಟಿರಲ್ಲಾ ನಿಮಗೇನು ಕೆಲಸವಿಲ್ಲವೇ ಎಂದರೆ ನನಗನ್ನಿಸಿದ್ದನ್ನು ಹೇಳುವ ಅಢಿಕ ಪ್ರಸಂಗಿಯೂ ನಾನಾಗ ಬಾರದೇ ? ಅಬಬಬಬ ! ಅಲ್ರೀ ನಿವೂ ಹೇಳುವುದಿಲ್ಲ ನಂಗೂ ಹೇಳಲು ಬಿಡುವುದಿಲ್ಲಾ ಎಂದರೆ ಇದೆಂಥದ್ದು ನಮ್ಮ ಕರ್ಮ!

ಬ್ಯಾಂಕಿನಲ್ಲಿ ಅರ್ಜೆಂಟಾಗಿ ಕೆಲಸವಿತ್ತೆಂದು ಹೋಗಿದ್ದೆನಾ ಅಲ್ಲಿ ನೋಡಿದರೆ ಬರ್ಮುಡೇಶ್ವರ ಪ್ರತ್ಯಕ್ಷ! ಆತನ ಬಗಲಲ್ಲಿ ಸಣ್ಣ ಮಗು ಬೇರೇ ರೊಚ್ಚೆ ಹಿಡಿದಿತ್ತು. ೨೧ ನೇ ಶತಮಾನ ಕಳೆದು ೨೨ನೇ ಶತಮಾನದ ಹೊಸ್ತಿಲು : ಈಗಾದರೂ ನಾವು ವಿದೇಶೀಯರ ಅದರಲ್ಲೂ ಅಮೇರಿಕನ್ನರ ಅನುಕರಣೆ ಮಾಡದೇ ಹೋದರೆ ನಮ್ಮಷ್ಟು ದಡ್ಡರು ಇನ್ನೊಬರಿಲ್ಲ! ನಿಮಗೆ ಗೊತ್ತೇ ? ನಾನು ಕೇಳಿರಲೂ ಇಲ್ಲ ಆದರೂ ಎದುರಿಗೆ ಬಂದ ಬರ್ಮುಡೇಶ್ವರ " ಹಾಯ್ " ಅಂದ ! ಬಹಳ ಕ್ರತ್ರಿಮವಾಗಿ ನಕ್ಕ. ಜೊತೆಗೆ ಆ ನಗು ಯಾವುದೋ ಡಬ್ಬದ ಮುಚ್ಚಳ ಓ ಸರಿ ಸರಿ ಕೋಕಾ ಕೋಲಾ, ಪೆಪ್ಸಿ ಟಿನ್ ಗಳ ಓಪನರ್ ಭಾಗ ಇರುತ್ತದಲ್ಲ--ಆ ಶೇಪಿನ ಗಡ್ಡದ ಮಧ್ಯದ ಬಾಯಿಂದ ಹೊರಟಿರುವುದರಿಂದ ನನಗೆ ಬಹಳ ಕೋಪ! ನನಗೆ ಮೊದಲೇ ಬರ್ಮುಡೇಶ್ವರರನ್ನು ಕಂಡ್ರೆ ಆಗುವುದಿಲ್ಲ, ಅದರಲ್ಲೂ ಓಪನರ್ ಗಡ್ಡದ ಬರ್ಮುಡೇಶ್ವರ ಸಿಕ್ಕರೆ ಝಾಡಿಸಿ ಒದೆಯುವಷ್ಟು ಕೋಪ! ಇದೆಲ್ಲಾ ನಾನಂದುಕೊಳ್ಳುವುದಷ್ಟೇ ! ನನ್ನನ್ಯಾರಾದರೂ ಕೇಳುತ್ತಾರೆಯೇ ? ನಾನೇನಾದರೂ ಅಂದರೆ ಕೆಂಗಣ್ಣಿನಿಂದ ಗುರಾಯಿಸಿ ನೋಡಿ ಹೋದಾರು!

" ಹ್ವಾಯ್ ಎಂತು ಮಾರಾಯರೆ ನಿಮ್ಮದು, ಈಗ ನೀವು ಎಲ್ಲಿ ಇರುವುದು? ನೋಡದೇ ಬಹಳ ಸಮಯವಾಯಿತು "
ಧ್ವನಿಬಂದ ಕಡೆಗೆ ಮುಖ ತಿರುಗಿಸಿದರೆ ಅಲ್ಲೂ ಅದೇ ಗೋಳು ಮತ್ತೊಬ್ಬ ಪರಿಚಯದ ಬರ್ಮುಡೇಶ್ವರ! ಮುರುಡೇಶ್ವರನನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಬರ್ಮುಡೇಶ್ವರ ಯಾರೆಂದು ಬೇಕಲ್ಲ ! ಇದು ನಮ್ಮ ಅಜ್ಜಿಯೋ ತಾತನೋ ಯಾವುದೋ ಹರಕೆ ಹೊತ್ತು ಆ ಕಾಲದಲ್ಲಿ ಹೆಸರು ಇಡುತ್ತೇನೆಂದು ಇಟ್ಟಿದ್ದಲ್ಲ! ಅಸಲಿಗೆ ಇದು ದೇವರ ಹೆಸರೇ ಅಲ್ಲ! ಹಾಗಾದರೆ ಬರ್ಮುಡೇಶ್ವರ ಅಂದರೆ ಯಾರು. ಇದು ಕನ್ನಡದ ಬಹುವ್ರೀಹಿ ಸಮಾಸವನ್ನು ಮಟ್ಟಸವಾಗಿ ಬಳಸಿಕೊಂಡು ಇಟ್ಟ ಹೆಸರು: ಬರ್ಮುಡಾ ಚಡ್ಡಿಯನ್ನು ಧರಿಸಿದವರು ಯಾರೋ ಅವರೇ ಬರ್ಮುಡೇಶ್ವರರು!

ಕನ್ನಡ ವ್ಯಾಕರಣಕ್ಕೆ ಎಷ್ಟು ಒಳ್ಳೇಯ ಉದಾಹರಣೆ ನೋಡಿ. ಅಷ್ಟಾಗಿ ಕನ್ನಡ ವ್ಯಾಕರಣ ಕಲಿಯದವರೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಶಾಂಪಲ್ಲು [ಈ ಶಬ್ದ ಕಾಗೋಡು ತಿಮ್ಮಪ್ಪರ ಅನುಗ್ರಹದಿಂದ ಗಳಿಸಿದ್ದು!] ಹೀಗಾಗಿ ನಮ್ಮ ಕನ್ನಡ ಭಾಷೆ ಇದೆಯಲ್ಲ ಇದು ಬಹಳ ಅಡ್ಜಸ್ಟೇಬಲ್ಲು! ಎಲ್ಲಿ ಹೋದರೂ ತನ್ನತನವನ್ನು ಉಳಿಸಿಕೊಳ್ಳುವುದರ ಜೊತೆಗೆ ಬೇರೆ ಸಂಸ್ಕೃತಿಗೂ ಪುರಸ್ಕಾರ ಕೊಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಬರ್ಮುಡೇಶ್ವರರ ಉಗಮವಾಗಿದ್ದು! ಕರ್ನಾಟಕದಲ್ಲಿ ಅವರ ಅಗ್ಮ ಸ್ಥಾನ ತಲಕಾವೇರಿಯೋ ಅಂಬು ತೀರ್ಥವೋ ಇನ್ಯಾವುದೋ ಗೊತ್ತಿಲ್ಲ. ಆದರೆ ಅವರು ಹರಿದದ್ದು ಮಾತ್ರ ಕರ್ನಾಟಕದಾದ್ಯಂತ. ಕಾವೇರಿ ನದಿಯಲ್ಲಿ ಒಂದೊಮ್ಮೆ ನೀರಿರದಿದ್ದರೂ ಚಿಂತೆಯಿಲ್ಲ ನಮ್ಮಲ್ಲಿ ಬರ್ಮುಡೇಶ್ವರರ ಬರ್ಮುಡಾಗಳು ಬಾಳ ಇವೆ. ಬರ್ಮುಡೇಶ್ವರರು ಸಿಗದಿದ್ದ ದಿನ ನಾನು ನನ್ನೊಳಗೇ ಖುಷಿಯಿಂದ ಜಗಗೆದ್ದ ಹರುಷದ ಖಳನಗೆ [ಯಾಕೆಂದರೆ ಬರ್ಮುಡೇಶ್ವರರಿಗೆಲ್ಲ ನಾನು ಖಳನಾಯಕನ ಥರ ಕಾಣಬಹುದೇನೋ ಅಂತ!] ನಗುತ್ತೇನೆ -" ಮುಗೇಂಬೋ ಬಹುತ್ ಖುಷ್ ಹುವಾ "

ಹಾಕಿಕೊಳ್ಳಲಿ ಪಾಪ, ಮನೆಯಲ್ಲಿ ಹೆಂಡತಿ ಮಕ್ಕಳ ಮುಂದೆ ಚಹ್ಡ್ಡಿ ಹಾಕಿಕೊಂಡರೆ ಬೇಸರವಿಲ್ಲ. ಕೆಲವರು ಈ ಚಡ್ಡಿಗೂ ಮುನ್ನ ಬಣ್ಣದ ಲುಂಗಿ ಉಡುತ್ತಿದ್ದರೆ ಇನ್ನು ಕೆಲವರು ಪೈಜಾಮಾ ಬಳಸುತ್ತಿದ್ದರು. ಬಣ್ಣದ ಲುಂಗಿಯನ್ನು ನಾನು ತಿಳಿದ ಮಟ್ಟಿಗೆ ೧೫ ದಿನಗಳಿಗೊಮ್ಮೆಯೂ ತೊಳೆದವರನ್ನು ಕಾಣೆ! ಅದು ವಾಕರಿಕೆ ಬರಿಸಬೇಕೆ --ಆಗ ತೊಳೆಯಬೇಕೆ! ಈಗ ಅದರ ಸರದಿ ಹೋಗಿದೆ. ಅದರ ಬದಲಿಗೆ ಬಳಕೆಗೆ ಬಂದಿದ್ದೇ ಬರ್ಮುಡಾ! ಬರ್ಮುಡಾ ಹಿಡಿದ ಬಚ್ಚಾಗಳು ತರಾವರಿ ಮೊಬೈಲು ಹಿಡಿದು ಬೆಳ್ಳಂಬೆಳಿಗ್ಗೆ ಹಾಲು ತರಲೋ ಕೊತ್ತಂಬರಿ ಸೊಪ್ಪು ತರಲೋ ಅಥವಾ ಒಂದು ರೂಪಾಯಿಗೆ ಶುಂಠಿ, ಅಷ್ಟೇ ಬೆಲೆಯೆ ಹಸಿಮೆಣಸು ಮತ್ತು ಕರಬೇವು ಇದನ್ನೆಲ್ಲಾ ತರಲೋ ಅಡ್ಡಾಡುವುದು ಒಂದು ತೆರನ ಗುಂಪಾದರೆ, ಟೆರೇಸಿನಲ್ಲಿ ಕುಳಿತು ಮೊಬೈಲು ಚಾಟಿಂಗ್ ನಲ್ಲಿ ತೊಡಗುವುದು ಇನ್ನೊಂದು ಬಗೆಯ ಗುಂಪು! ಒಟ್ಟಿನಲ್ಲಿ ನಾಯಿಗಳಿಗೆ ಹಿಂದೆ ಬಾಲವಿದ್ದರೆ ಬರ್ಮುಡೇಶ್ವರರಿಗೆ ಮುಂದೆ ಅಲೆಯುವ ಬಾಲವಿರುತ್ತದೆ! ಪಡ್ಡೆ ಬರ್ಮುಡೇಶ್ವರರಂತೂ ಪಾತಾಳದಿಂದ ಎದ್ದು ಬಂದವರಂತೇ ಮಾಡುತ್ತಾರೆ. ವಾಕಿಂಗ್ ಹೋಗುವಾಗ ಎರಡು ಮೂರು ಮಂದಿ ಒಟ್ಟಿಗೆ ಹೊರಡುವ ಇವರದ್ದು ಲಿವಿಂಗ್ ಇನ್ ಇಂಡಿಯಾ ಥಿಂಕಿಂಗ್ ಅಮೇರಿಕಾ. ತಮಗೆ ಒಂದು ಮಾತು ಗೊತ್ತೇ ನನಗೆ ಗೊತ್ತಿರುವ ಒಬ್ಬರು ಎದುರಿಗೆ ಬಂದ ಮಳ್ಳೇಗಣ್ಣಿ[ಮಾಲಗಣ್ಣು,ಕೊಂಬಗಣ್ಣು]ನವನನ್ನು ಹೆಸರಿಸುವ ಸಲುವಾಗಿ ಒಂದು ಕೋಡ್ ಉಪಯೋಗಿಸುತ್ತಿದ್ದರು. ಎಲ್ ಎಲ್ ಟಿ.ಟಿ. ಅಂತ. ನನಗ್ಯಾಕೋ ಅದು ಹಿಡಿಸಲಿಲ್ಲ--ಅದು ಅಪಹಾಸ್ಯವಾಗುತ್ತದೆ ಎಂಬ ಸಲುವಾಗಿ ಇರಬಹುದೆನ್ನಿ. ಅಂದಹಾಗೆ ಎಲ್.ಎಲ್.ಟಿ.ಟಿ. ಯ ವಿಸ್ತಾರದ ರೂಪ-ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ ಅಂತ! ಅಂದರೆ ಎಲ್ಲೋ ನೋಡುತ್ತಾ ಇಲ್ಲಿ ಮಾತನಡುವುದು ಎಂದರ್ಥ! ಮಳ್ಳೆಗಣ್ಣಿನವರದು ಹಾಗೇ ತಾನೇ ? ಅವರು ನಮ್ಮನ್ನು ನೋಡುತ್ತಿದ್ದಾರೋ ಬೇರೇ ಯಾರನ್ನೋ ನೋಡುತ್ತಿದ್ದಾರೋ ಗೊತ್ತೇಆಗುವುದಿಲ್ಲವಲ್ಲ, ಪಾಪ ದೈವೀ ಅವಕೃಪೆ! ಆದರೂ ಕೆಲವೊಮ್ಮೆ ಒಳ್ಳೆಯ ಹುಡುಗಿಯರನ್ನು ನೊಡುವಾಗ ಮಳ್ಳೆಗಣ್ಣಿನ ಪಡ್ಡೆಗಳಿಗೆ ಇದು ವರದನವೇ ಆಗಿರಬಹುದೇನೋ ಅನಿಸುತ್ತದೆ !

ನಿಮಗೆ ಇಷ್ಟೇ ಗೊತ್ತಿರುವುದು ಎಂಬುದು ನನಗೆ ಈಗಲೇ ತಿಳಿದದ್ದು. ಯಾಕೆ ಗೊತ್ತೇ ? ನೀವೇ ಹೇಳಿಬಿಡಿ ನೋಡೋಣ! ಕೆಲವರು ಇಂತಹದೇ ಪ್ರಶ್ನೆ ಕೇಳುತ್ತಾರಲ್ಲವೇ ? ಆನೆ ಇರುವೆಯನ್ನು ಮದುವೆಯಾದ ಕಥೆ ತಮಗೆ ಇದೇ ರೀತಿಯಲ್ಲಿ ಮೊಬೈಲಿನಲ್ಲಿ ಫಾರ್ವರ್ಡ್ ಆಗಿರುತ್ತದೆ. ಆಗಲಿಲ್ಲವೇ ಹಾಗಾದರೆ ಯಾಕೆ ಆಗಲಿಲ್ಲ ಎಂದು ಆನೆಯನ್ನೇ ಕೇಳಿ ! ಈಗಂತೂ ದಿನಂಪ್ರತಿ ಮೊಬೈಲಿನಲ್ಲಿ ಮೆಸ್ಸೇಜೋ ಮೆಸ್ಸೇಜು, ಚೆನ್ನಾಗಿ ಉಜ್ಜಿ ಮಸ್ಸಾಜುಮಡಿಕೊಳ್ಳುವಷ್ಟು ಮೆಸ್ಸೇಜು! ಬೇಕಾದ್ದು ಬೇಡಾದ್ದು ಅಂತೂ ಬಂದೇ ಬರುತ್ತವೆ. ನೋಡುತ್ತಲೇ ಇರಬೇಕು! ಯಾಕೆಂದರೆ ನಮಗೆ ನೋಡುವ ಚಟ ಅಲ್ಲವೇ ? ಬರ್ಮುಡಾದ ಬಗ್ಗೆ ಮಾತ್ರ ಒಂದೂ ಜೋಕು ಬರಲಿಲ್ಲ ಇದುವರೆಗೆ, ಯಾಕೆಂದರೆ ಅದರ ಸಂಖ್ಯೆ ಜಾಸ್ತಿ ಇರುವುದರಿಂದ. ಇನ್ನು ದಿನಗಳೆಯುತ್ತಾ ಬರ್ಮುಡಾದಿನಾಚರಣೆ, ಬರ್ಮುಡಾ ರಕ್ಷಣಾ ವೇದಿಕೆ ಇವೆಲ್ಲಾ ಹುಟ್ಟಿಕೊಂಡರೆ ಆಶ್ಚರ್ಯವೇನೂ ಇಲ್ಲ! ಅಲ್ಲಾರೀ ಪಾಪ ಒಂದು ಚಡ್ಡೀ ಹಾಕಿಕೊಳ್ಳಲಿಕ್ಕೂ ಸ್ವಾತಂತ್ರ್ಯವಿಲ್ಲವೇನ್ರೀ ಎನ್ನುತ್ತೀರಾ ಹಾಕ್ಕೊಳಿ ಸ್ವಾಮೀ ಒಂದ್ಯಾಕೆ ಹತ್ತರು ಚೆಡ್ಡಿ ಹಾಕ್ಕೊಳಿ. ಆರ್.ಎಸ್.ಎಸ್. ನವರು ಖಾಕಿ ಚೆಡ್ಡಿ ಧರಿಸಿದರೆ ನಿಮಗೆ ಕೆಂಗಣ್ಣು, ಅವರಿಗೆ ಚೆಡ್ಡಿ ಅನ್ನುತ್ತೀರಿ, ಆದ್ರೆ ನೀವು ಮಾತ್ರ ಹಾಕಿಕೊಳ್ಳಬಹುದೇ ? ಬಣ್ಬಣ್ಣದ ಚೆಡ್ಡಿ, ಪಟ್ಟಾಪಟ್ಟಿ, ಲಾಲ್ ರಂಗೀ, ನೀಲ್ ರಂಗೀ, ಪಂಚರಂಗೀ .....
ಅಂತೂ ಬರ್ಮುಡಾ ಮಹಾತ್ಮೆ ಬಹಳ ಅಗಾಧ. ಕೆಲವು ವರ್ಷ ಕಳೆದರೆ ಅದರ ಮೇಲೆ ಪಿ.ಎಚ್.ಡಿ.ಮಾಡುತ್ತಾರೇನೋ ಅನಿಸುತ್ತದೆ;ಯಾಕೆಂದರೆ ನಮ್ಮಲ್ಲಿ ಬಹುತೇಕರು ಸಂಶೋಧನೆಮಾಡುವುದು ಅಂಥದ್ದೇ ವಿಷಯಗಳಮೇಲಲ್ಲವೇ ?

ದಾಸರ ಪದವನ್ನು ಸ್ವಲ್ಪ ತಿರುಗಿಸಿ ಹಾಡಿದರೆ ಅದರಿಂದ ಸಿಗುವ ಮಜಾನೇ ಬೇರೇ ಅನ್ನಿಸ್ತು-

ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು
ಬರ್ಮುಡಾವ ಧರಿಸಿಕೊಂಡು ಆನಂದದಿಂದ ಮೊಬೈಲುಚಾಟ್ ಮಾಡದ
ಜನ್ಮವೇತಕೋ ಅಮೇರಿಕಾ ಬದುಕ ಬದುಕದ

ಇನ್ನೂ ಹಲವು ಹಾಡುಗಳಿವೆ ಹಾಗೇ ಹೇಳಿಕೊಂಡು ಕಡಲೆಪುರಿ ತಿನ್ನಿ --

೨> ಸದಾ ಎನ್ನ ಜೋಳಿಗೆಯಲಿ ಬರಲಿ ಮೂರು ಬರ್ಮುಡಾ
ಬರ್ಮುಡಾವನ್ನು ಬಳಸುವುದಕೆ ಎನಗೆಮನವ ಈಯೊದೇವ


೩> ಕೈಲಾಸವಾಸ ಗೌರೀಶ ಈಶ
ಬಾಲಮುಂದಲೆವಂತ ಬರ್ಮುಡವ ಕೊಡೊ ಎನಗೆ ಶಂಭೋ .......

ಯುವ ಗೃಹಸ್ಥರನೇಕರು ಬರ್ಮುಡಾವನ್ನೇ ನೆಚ್ಚಿಕೊಂಡಿದ್ದಾರೆಂದಮೇಲೆ ಯಾರೋ ಕೆಲವು ನಮ್ಮಂಥವರು ತಪ್ಪಿಸಿಕೊಂಡಿರಬಹುದು ಅಷ್ಟೇ! ಬಕ್ರೀಕಾ ದಾಡಿ ಅಥವಾ ಓಪನರ್ ಶೇಪ್ ದಾಡಿ ಇವೆರಡರಲ್ಲಿ ಒಂದು ದಾಡಿ ಬಿಟ್ಟು, ಬರ್ಮುಡಾ ತೊಟ್ಟು, ಕೈಲಿ ಮೊಬೈಲ್ ಹಿಡಿದಾಗಲೇ ನಿಜವಾದ ಅಮೇರಿಕನ್ ದೀಕ್ಷೆ ! ಬರ್ಮುಡಾವನ್ನು ಕಾಲೇಜಿಗೂ ಹಾಕಿಕೊಂಡು ಹೊದರೆ ತಪ್ಪಿಲ್ಲವೆಂತ ನನ್ನ ಅಭಿಪ್ರಾಯ. ಬೇರೇಡೆಗೆಲ್ಲಾ ಅಡ್ಡಿಲ್ಲವಾದರೆ ಕಾಲೇಜಿನಲ್ಲಿ ಮಾತ್ರ ಬೇಡವೇ ? ಕಾಲೇಜಿನಲ್ಲಿ ಯುವ ಅಧ್ಯಾಪಕರಿಂದಲೇ ಈ ಕುರಿತು ಪ್ರಾರಂಭವಾಗಿಬಿಟ್ಟರೆ ಆಮೇಲೆ ವಿದ್ಯಾರ್ಥಿಗಳಲ್ಲೂ ಸಹಜವಗಿ ಬರುತ್ತದೆ. ಅಮೇಲೆ ಎಲ್ಲಾ ಅಫೀಸುಗಳಲ್ಲಿ, ಸರಕಾರೀ ಕಚೇರಿಗಳಲ್ಲಿ ಎಲ್ಲೆಲ್ಲೂ ಬರ್ಮುಡಾ ಬಳಕೆ ಕಡ್ಡಾಯವಾಗಿ ಅನ್ಯಾಯವಾಗಿ ಸಾವಿರಾರು ರೂಪಾಯಿ ಪೋಲುಮಾಡಿ ಪ್ಯಾಂಟು ಖರೀದಿಸುವ ಬದಲು, ನ್ಯಾಷನಲ್ ವೇಸ್ಟ್ ಮಾಡುವ ಬದಲು ಕೇವಲ ಬರ್ಮುಡಾ ಧರಿಸಿ ಎಲ್ಲೆಡೆಯೂ ಕೆಲಸಮಾಡಬಹುದು. ಮುಂಬೈ ಡಬ್ಬಾವಾಲಾಗಳಿಗೂ ಆರಾಮು, ನಮಗೂ ಆರಾಮು, ನಿಮಗೂ ಆರಾಮು ಅಲ್ಲವೇ ? ಆರಾಮಾಗಿ ನಿರುಂಬಳವಾಗಿ ಒಂದು ಬರ್ಮುಡಾ ಮತ್ತು ಟೀ ಶರ್ಟ್ ಹಾಕಿಕೊಂಡು ಬಿಟ್ಟರೆ ಬದುಕೆಷ್ಟು ಸುಂದರ ಅಂತೀರಿ ? ಸ್ವಲ್ಪ ವಿವೇಚಿಸಿ ನೋಡಿ. ನಿಮಗೆ ಒಪ್ಪಿಗೆಯಾದರೆ ಆಮೇಲೆ ಒಂದು ವೇದಿಕೆ ಸ್ಥಾಪಿಸಿಕೊಂಡು ನಮ್ಮ ಅಧ್ಯಕ್ಷರಿಗೆ ಕೆಂಪು ಗೂಟದ ಕಾರು ಕೊಡಿಸೋಣ ಮತ್ತು ಅದಕ್ಕೆ ಮುಂದೆ ಬರ್ಮುಡಾಧ್ವಜವಿರಿಸೋಣ.

ಮಂಗಲಂ ಬರ್ಮುಡೇಶಾಯ ಓಪನರ್ ಗಡ್ಡಧರಾಯಚ |
ಮಂಗಲಂ ಸಂಸ್ಕೃತೀಶಾಯ ಮಂಗಲಂ ಬರ್ಮುಡಧ್ವಜಃ ||

ಹೀಗೇ ಬರ್ಮುಡೆಶ್ವರರನ್ನು ಸ್ಮರಿಸುತ್ತ ಈಗ ನಟೀದೇವಿಯ ಕಥೆ ಕೇಳೊಣ ಬನ್ನಿ. ದೇವನಿಗೊಬ್ಬ ದೇವಿ ಇದ್ದರೆ ಚೆಂದ ಅನಿಸಿತು ಮತ್ತು ಇಲ್ಲಿ ಸರಿಹೊಂದುವ ’ದೇವಿ’ಯೂ ಸಿಕ್ಕಳು. ಅದಕ್ಕೇ ನೈಟೀ ದೇವಿಯಬಗ್ಗೆ ಮುಂದಿನ ಮಾತುಕತೆ.
ನೈಟಿ ಎನ್ನುವುದು ನೈಟ್ ಗೌನ್ ಎನ್ನುವುದರ ಶಾರ್ಟ್ ಫಾರ್ಮ್ ಎಂದು ಕೆಲವರು ಹೇಳಿದ್ದಾರೆ. ನಾನು ಅದಕ್ಕೆಲ್ಲಾ ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಆದರೆ ತಲೆತಿರುಗುವುದು ನೈಟೀ ದೇವಿಯರು ತಪಸ್ಸಿಲ್ಲದೆಯೂ ಕಣ್ಣೆದುರಿಗೆ ಧುತ್ತೆಂದು ಬಂದು ನಿಂತಾಗ. ಇಲ್ಲೂ ಅದೇ ರಾಗ ಅದೇ ಹಾಡು! ಆಕಾರ ಸ್ವಲ್ಪ ಬದಲು! ನೈಟೀ ದೇವಿಯರೆಂದರೆ ನೈಟಿಂಗೇಲ್ ಗೆ ನೆಂಟರೆಂದು ತಿಳಿಯಬೇಡಿ. ಕೆಲವೊಮ್ಮೆ ಬೆಳಗಿನ ಜಾವ ಕೋಳಿಕೂಗುವ ಮೊದಲೇ ನೈಟೀದೇವಿಗಳ ಬೀದಿ ರಂಪ ಶುರುವಾಗಿರುತ್ತದೆ. ಅವರ ಶುದ್ಧ ಸಂಸ್ಕೃತದ ಸುಪ್ರಭಾತವನ್ನು ಕೇಳಲೂ ಯೋಗಬೇಕು!

ನೈಟಿ ಧರಿಸಲು ಇಂಥದ್ದೇ ಅಂತ ಅರ್ಹತಾ ಪತ್ರವೆಲ್ಲ ಬೇಕಿಲ್ಲ. ಪ್ರಾಯಶಃ ಬರ್ಮುಡಾದ ಜೊತೆ ಜೊತೆಗೋ ಅಥವಾ ಸ್ವಲ್ಪ ಮೊದಲೋ ಹುಟ್ಟಿದ್ದು ಈ ನೈಟೀರೂಪ. ಒಂದು ನೈಟಿ ಸಿಕ್ಕಾಕಿಕೊಂಡರೆ ಜಗತ್ತಿನ ವ್ಯವಹರವನ್ನೇ ಅದರಲ್ಲಿ ನಿಭಾಯಿಸಬಲ್ಲಷ್ಟು ನಿಪುಣ ಗೃಹಿಣಿಯರು ನಮ್ಮಲ್ಲಿದ್ದಾರೆ. ಖರ್ಚಿನ ಲೆಕ್ಕದಲ್ಲಿ ಹಲವರು ಸೀರೆಗಳ ಉಳಿತಾಯ! ಅಗೇನ್ ನ್ಯಾಶನಲ್ ವೇಸ್ಟ್ ಆಗುತ್ತಿದ್ದುದನ್ನು ತಡೆಗಟ್ಟುವುದು! ನೈಟಿ ತೊಟ್ಟ ದೇವಿ ಹೊರಗೆ ಕಾಲಿಟ್ಟರೆ ಆಕೆ ಬರೇ ಅವಳ ಮನೆಯ ಹೊರಬಾಗಿಲಲ್ಲ ಅವಳ ಮನೆಯಿರುವ ಬೀದಿಯೂ ಅಲ್ಲ, ಇಡೀ ಊರನ್ನೆ ಸುತ್ತುಹಾಕಲು ಅದೇ ಸಾಕು. ಸೀರೆ ಉಡುವುದು ರಾಮಾರಗಳೆ! ಮೇಲಾಗಿ ಪ್ರತೀದಿನ ತೊಳೆದು, ಇಸ್ತ್ರಿ ಮಾಡಬೇಕು-ಇವೆಲ್ಲಾ ಯಾರಿಗೆ ಬೇಕು. ಒಮ್ಮೆ ಶುಭ ಮುಹೂರ್ತ್ವನ್ನೂ ನೋಡದೇ ಹಾಗೇ ತೊಡಬಹುದಾದ ಕಾಲಾತೀತ ನೈಟಿಯನ್ನು ತೊಟ್ಟುಬಿಟ್ಟ್ರೆ ವಾಸ್ನೆ ಹೊಡೆಯುವವರೆಗೆ ತೊಳೆಯುವ ಗೋಜೇ ಇಲ್ಲ. ಅಡಿಗೆಮನೆಯಲ್ಲಿ ಕೆಲಸಮಾಡುವಾಗ ಕೈತೊಳೆದು ಒರೆಸಲೂ ನೈಟಿಯ ಇಕ್ಕೆಲಗಳು ಸಹಾಯಕ್ಕ ಬರುತ್ತವೆ! ಬಣ್ಣದ ನೈಟಿಗೆ ಕೈ ಒರೆಸಿದ ಜಾಗದ ಮತ್ತೊಂದು ಬಣ್ಣ ಬಹಳ ಕಳೆಗಟ್ಟಿಸುತ್ತದೆ!

ಕೆಲವೊಮ್ಮೆ ಇವರೂ ಬೆಳಿಗ್ಗೆ ಅಂಗಡಿಗಳಿಗೆ ಅರ್ಧ ಲೀಟರ್ ಹಾಲು ತರಲೋ ಅಥವಾ ಮಾಮೂಲಿ ಮೇಲೆ ಹೇಳಿದ ಹಾಗೇ ಶುಂಠಿ, ಕರಬೇವು, ಕೊತ್ತಂಬ್ರಿ ಸೊಪ್ಪು ಅದಕ್ಕೆ ಇದಕ್ಕೆ ಅಂತ ಓಡಾಡುತ್ತ ಬರುತ್ತಾರೆ. ಹೀಗೆ ಓಡಾಡುವಾಗ ಕೆಲವರಂತೂ ಖಂಡ್ಗಕ್ಕಿ ಮುನಿಯ ರೀತಿ ಕಂಡರೆ ಇನ್ನು ಕೆಲವರು ಸಣ್ಣ ಮರಿಯಾನೆ ಬಂದಂತೇ ತೋರ್ಪಡುತ್ತಾರೆ! ಇದುವರೆಗೆ ಕಾಡುಕೋಣ, ಹಂದಿ, ಕಡವೆ ಇಂಥಾ ಪ್ರಾಣಿಗಳನ್ನು ನೋಡದ ಜನ ಹೀಗೇ ಇರುತ್ತಿದ್ದವಂತೆ ಎಂದು ನೋಡಿದ ತೃಪ್ತಿಪಡೆಯಬಹುದು. ಈ ನೈಟೀದೇವಿಯರಲ್ಲಿ ಕೆಲವರು ಮೇಲೊಂದು ಟವಲು ಹಾಕಿಕೊಳ್ಳುತ್ತಾರೆ. ಇದು ವೇಲಿನ ಬದಲಿಗೋ ಅಥವಾ ಸಿಂಬಳ ಒರೆಸಲೋ ಗೊತ್ತಿಲ್ಲ. ಅಂತೂ ನೈಟೀದೇವಿಗಳಿಗೆ ಹೀಗೇ ಇರಬೇಕೆಂಬ ನಿಯಮವೇನಿಲ್ಲ.

ವಿಪರ್ಯಾಸವೆಂದರೆ ನೈಟೀದೇವಿಗಳಲ್ಲಿ ಹುಡುಗಿಯರು ಕಮ್ಮಿ. ಹುಡುಗಿಯರದೇನಿದ್ದರೂ ಲೋ ಜೀನ್ಸು ಮತ್ತು ಮಿನಿ ಟಾಪು! ಇಲ್ಲಾಂದ್ರೆ ಹುಡುಗಿಯರಿಗೂ ನೈಟಿ ಬಹಳ ಉಪಯೋಗಕ್ಕೆ ಬರುತ್ತಿತ್ತೇನೋ. ಹಾಗಾಗಿ ಕಾಲೇಜಿಗೆ ನೈಟೀ ಧರಿಸಿಬರುವವರಿದ್ದರೆ ಅವರು ಅಧ್ಯಾಪಕಿಯರು ಮಾತ್ರ! ಬರಲೇಬೇಕೆಂಬುದು ನನ್ನ ತಕರಾರಲ್ಲ, ಆದ್ರೆ ಬಂದರೂ ಬರಬಹುದೇನೋ ಎನಿಸುತ್ತದೆ. ಆದರೆ ಅವರು ಒಂದೊಮ್ಮೆ ನೈಟೀದೇವಿಗಳಾದರೂ ಹುಡುಗಿಯರು ಮಾತ್ರ ಅದಕ್ಕೆ ಒಗುವುದಿಲ್ಲ. ಈಗ ಕಾಲವೇ ಹಾಗಲ್ಲವೇ. ಹುಡುಗಿಯರು ಹುಡುಗರ ಡ್ರೆಸ್ಸು ಹುಡುಗರು ಹುಡುಗಿಯರ ಡ್ರೆಸ್ಸನ್ನು ಇನ್ನೂ ಶುರುಮಾಡಿಲ್ಲ......ಮಾಡಲೂ ಬಹುದು. ಹಲವಾಅರು ಸಲ ಗಾಡಿಯಲ್ಲಿ ಓಡುವಾಗ ನಮಗೆ ಕಾಣಸಿಗುವ ಉದ್ದ ಕೂದಲಿನ ಹುಡುಗಿ ಮುಂದೆ ಓಪನರ್ ಗಡ್ಡ ಬಿಟ್ಟಿದ್ದನ್ನು ನೋಡಿದಾಗಲೇ ಅದು ಹುಡುಗಿಯಲ್ಲ ಎಂಬುದು ತಿಳಿಯುತ್ತದೆ! ಹೀಗೇ ಹೇಂಗೂದಲನ್ನು ಬಿಟ್ಟ ಗಂಡಸು ಬಹಳಷ್ಟು ಹೆಂಗಸನ್ನೇ ಹೋಲುವುದರಿಂದ ವೇಷವನ್ನೂ ಹೆಂಗಸರದ್ದೇ ಹಾಕ್ಕೊಂಡುಬಿಟ್ಟರೆ ರಗಳೆಯೇ ಇಲ್ಲ!

ಸಮಸ್ಯೆ ಇರುವುದು ಎಲ್ಲಿ ಗೊತ್ತೇ ಇಂದಿನ ನಮ್ಮ ಹೊಸ ಸಮಾಜದಲ್ಲಿ ಮಂಗಳ ಮುಖಿಯರು ಯಾರು,ಗಂಡಸು ಯಾರು ಮತ್ತು ಹೆಂಗಸು ಯಾರು ಎಂದು ಗುರುತಿಸಲು ಕಷ್ಟವಾಗುವ ಕಾಲ ಬರುತ್ತಿದೆ! ಎಲ್ಲರಿಗೂ ಯುನಿಸೆಕ್ಸ್ ಉಡುಗೆಗಳು-ತೊಡುಗೆಗಳು, ಚಪ್ಪಲಿಗಳು ಹೀಗೇ ಎಲ್ಲವೂ ಯುನಿ ಯುನಿ ಯಾಗಿ ಕೊನೆಗೊಮ್ಮೆ ಕಣಿಕೇಳುವ ಪ್ರಸಂಗ ಬಂದರೂ ತಪ್ಪೇನಿಲ್ಲ. ವಾಸ್ತವವಾಗಿ ಇಂದಿನ ಎಷ್ಟೋ ಜೀನ್ಸ್ ಹುಡುಗಿಯರು ಮೋಟು ಕೂದಲನ್ನೂ ಬಾಬ್ ಮಾಡಿಕೊಂಡು ಥೇಟ್ ಹುಡುಗರೇಯೇನೋ ಅನ್ನಿಸುವಷ್ಟು ರೆಡಿಯಾಗಿರುತ್ತಾರೆ. ಹುಡುಗಿಯರಲ್ಲಿರುವ ನಯ-ನಾಜೂಕುತನ ಇವನ್ನೆಲ್ಲಾ ಕಳೆದುಕೊಂಡು ಗಡುಸುತನವನ್ನೂ ಪಡೆದುಕೊಂಡಿರುತ್ತಾರೆ. ಇವತ್ತು ಬೀದಿಯಲ್ಲಿ ನಡೆಯುವಾಗ ತಲೆ ತಗ್ಗಿಸಿ ನಡೆಯುವುದು ಹುಡುಗನೇ ಹೊರತು ಹುಡುಗಿ ತನ್ನೆದುರಿಗೆ ಬರುವ ಹುಡುಗನನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಾಳೆ. ನಾಚಿಕೆ, ಮರ್ಯಾದೆ ಇವುಗಳೆಲ್ಲಾ ವ್ಯಾಕರಣದ ಶಬ್ದಗಳು-ನಮಗ್ಯಾಕೆ ಅವುಗಳ ಗೋಳು! ಕೆಲವೊಮ್ಮೆ ಹುಡುಗರೇ ನಾಚಿ ನೀರಾಗುವುದನ್ನು ನಾನು ನೋಡಿದ್ದೇನೆ! ಈಗ ಹಾಡು ಹಾಡುವ ಗೌರಮ್ಮನ ಬದಲು ಪಾಪ್ ಹಾಡುವ ಜೆನ್ನಿಪರ್ ಗಳಿದ್ದಾರೆ! ಎಲ್ಲವುದರಲ್ಲೂ ಸೈ ಎನಿಸಿಕೊಂಡ ಹೆಂಗಸರು ಸಮಾಜಕ್ಕೆ ತಮ್ಮದೂ ಒಂದು ಕೊಡುಗೆ ಇರಲಿ ಎಂದು ತಮ್ಮಲ್ಲೇ ನೈಟೀದೇವಿಗಳನ್ನು ಸೃಷ್ಟಿಸಿಕೊಂಡಿದ್ದಾರೆ!

ಮೊದಲ ನೈಟಿಗೂ ಎರಡ್ನೇ ನೈಟಿಗೂ ಹದಿನೈದು ದಿನದ ಅಂತರ
ತೊಳೆದು ಉಟ್ಟರೆ ವಾಸನೆಯು ಬರ ಅದಕೆ ತೊಳೆವುದೇ ಒಂಥರಾ !

ಸ್ನೇಹದಾ ನೈಟೀಯಲೀ ಕಳೆದೆ ಒಂದು ವರುಷವ
ಕೊನೆಗೂ ಹರಿದೇ ಹೋಯಿತೇ ಮುಗಿಯದಿರಲೀ ಬಂಧನ !

ತಮ್ಮ ವಾಸನಾಬಲದಿಂದಲೇ ಒಂದು ನೈಟೀದೇವಿ ಇನ್ನೊಂದು ನೈಟೀದೇವಿಯನ್ನು ಪತ್ತೆಹಚ್ಚಬಲ್ಲಳು! ಅವರ ಅಘೋಷಿತ ಸಂಘದ ಕಾರ್ಯ ವೈಖರಿ ಡಬ್ಬಾವಾಲಗಳ ಕಾರ್ಯವೈಖರಿಯಂತೆಯೇ! ಏನನ್ನೇ ಖರೀದಿಸಲಿ, ಮಾಡ್ಲಿ-ಮಟ್ಲಿ ಎಲ್ಲಾದಕ್ಕೂ ಜೊತೆಗಾಗಿ ನೈಟೀದೇವಿಯ ಸಹಭಾಗಿತ್ವ ಇದ್ದೇ ಇರುತ್ತದೆ. ಒಮ್ಮೊಮ್ಮೆ ಬೌ ಬೌ ಅಂತ ಪರಸ್ಪರ ಕಚ್ಚಾಡಿಕೊಂಡರೂ ಮತ್ತೆ ಯಥಾವತ್ ಮುಂದಿನ ಅಮಾವಾಸ್ಯೆಯೋ ಹುಣ್ಣಿಮೆಯೋ ಬಂದಾಗ ಒಂದಾಗುತ್ತಾರೆ. ನೋ ಟೂ ಆರ್ ನೋ ಸೇ ! ಇದೊಂಥರಾ ಮಕ್ಕಳಾಟದಂತೇ! ನೆಚ್ಚಿಕೊಂಡು ಯಾರದಾದರೂ ಪಕ್ಷವಹಿಸಿ ಮಾತನಾಡಿದರೆ ಆಡಿದವರು ಸೋಲುತ್ತಾರೆ! ನೋಡಿ ಎಂತಹ ಅದ್ಬುತ ಸಂಘಟನೆ. ಹೀಗಾಗಿ ಅಪ್ಪಿತಪ್ಪಿಯೂ ನೈಟೀದೇವಿಗಳ ಅವಕೃಪೆಗೆ ಪಾತ್ರರಾಗಬೇಡಿ. ಇಲ್ಲೂ ಕೂಡ ನೈಟೀ ಹಿತರಕ್ಷಣಾ ಸಮಿತಿ ರಚನೆಯಾಗುವುದರಲ್ಲಿದೆ !

ಅಂತೂ ಇಂತೂ ದೇವ ದೇವಿಯರ ಮಹಾತ್ಮೆ ಕೇಳಿ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೀರಿ. ಇಲ್ಲಿ ಎಲ್ಲಾ ಬರ್ಮುಡೇಶ್ವರರೂ ಮತ್ತು ನೈಟೀದೇವಿಗಳೂ ಗಂಡಹೆಂಡಂದಿರಲ್ಲ,ಆದರೆ ಅಲ್ಲಲ್ಲಿ ಆಗಾಗ ಆ ಶಾಂಪಲ್ಲುಗಳೂ ಸಿಗುತ್ತವೆ! ಈಗ ಏನ್ ಕೊಡ್ಲಿ ಬರ್ಮುಡಾ ? ನೈಟಿ ? ಹೋಗ್ಲಿಬಿಡಿ ಇಲ್ಲಿ ಈ ವಿಷಯದಲ್ಲಿ, ಅದೂ ಇದನ್ನೆಲ್ಲಾ ಓದಿದಮೇಲೆ ನೀವೇನೂ ಖರೀದಿ ಮಾಡದ ಖಂಜೂಸು ಅಂತ ನನಗ್ಗೊತ್ತು! ಹೋಗಿ ನಿನ್ಮಿಮ್ ಕೆಲ್ಸ ನೋಡ್ಕಳಿ. ಮತ್ತೆ ಎಲ್ಲಾದ್ರೂ ಬರ್ಮುಡೇಶ್ವರ ಅಥವಾ ನೈಟೀದೇವಿ ಕಂಡರೆ ನಾನು ಹೇಳಿದೆ ಅಂತ ಹೇಳಬೇಡಿ, ಉ[ಚ್ಚೆ]ಚ್ಚ ಸಂಸ್ಕೃತಿಯ ಹರಿಕಾರರಾದ ಅವರನ್ನು ಸುಮ್ನೇ ಕೇಳಿ ನೋಡಿ--ಬಹಳ ಚೆನ್ನಾಗಿರುತ್ತೆ ಅಲ್ವಾ ಅಂತ. " ಮುಗೇಂಬೋ ಅಭಿ ನಹೀ ಖುಷ್ ಹುವಾ " !!

Sunday, September 19, 2010

ಚಿಗುರು


ಚಿಗುರು

ಬತ್ತಿಹೋದ ಭಾವಗಳನು
ಮತ್ತೆ ಚಿಗುರುವಂತೆ ಬೆದಕಿ
ಎತ್ತಿ ತೆಗೆದು ಮೂಟೆ ಕಟ್ಟಲಾಯ್ತು ಹಾಡು ಕ್ಷಣದಲಿ !
ಸತ್ತು ಹೋಗುತಿದ್ದ ಗಿಡಕೆ
ಸುತ್ತ ನೀರಹನಿಸಿ ಒಮ್ಮೆ
ಮತ್ತೆ ಗಾಳಿ ಪೂಸಲಾಗ ಅರಳಿ ಹೂವು ಮುದದಲಿ !

ಕುತ್ತುಗಳವು ಹಿಂಡಿ ಮನವ
ಕುತ್ತಿಗೆಯನು ಒತ್ತಿ ಹಿಡಿದು
ಎತ್ತೆತ್ತಲೂ ಕಗ್ಗತ್ತಲು ನಗುತಲಿದ್ದ ದಿನದಲಿ
ಬೆತ್ತಲಾದ ಆಗಸದಲಿ
ಮತ್ತೆ ಮಿಂಚು ಹರಿದು ಭರದಿ
ಬುತ್ತಿ ಅನ್ನ ನೀಡಿತೆನಗೆ ಚಿಗಿತ ನೆಲದ ನೆರಳಲಿ

ಮೆತ್ತಗಿರುವ ದಿಂಬು ಗಾದಿ
ಅತ್ತುಕರೆಯೆ ಸಹಕರಿಸುತ
ಇತ್ತ ಆಸರೆಯೊಳ ಬದುಕು ನೀರಸವೆನಿಸಿರಲಲಿ
ತುತ್ತತುದಿಗೆ ಇರುವ ಹಣ್ಣು
ಗೊತ್ತಿಲ್ಲದೆ ಕೈಗೆ ಎಟುಕಿ
ನಿತ್ತ ನನ್ನ ಚಲಿಸುವಂತೆ ಮಾಡಿತಾಗ ಮನದಲಿ

ನೆತ್ತಿಯಲ್ಲಿ ಉರಿವ ಸೂರ್ಯ
ಕತ್ತಲಲ್ಲಿ ಹೊಳೆವ ಚಂದ್ರ
ಇತ್ತಯಾರೂ ಬರಲೇ ಇಲ್ಲ ಕಷ್ಟದಿನಗಳೆಡೆಯಲಿ
ಪತ್ತಿನಲ್ಲಿ ದೈವಲೀಲೆ
ಹತ್ತಿಬಂದು ಮೆಟ್ಟಿಲುಗಳ
ಪಿತ್ತನೆತ್ತಿಗೇರದಂತೆ ಹಿಡಿದು ಮನವ ಬಿಡದಲಿ

ಅತ್ತ ನೆಂಟರಿಷ್ಟರೆಲ್ಲ
ಎತ್ತಿನೋಡಿ ನೀರ ಆಳ
ಒತ್ತುಕೊಡದೆ ದೂರವಿರಲು ಕಹಿಸಮಯದ ನಡುವಲಿ
ಬಿತ್ತ ಬೀಜ ಬೆಳೆವರಿಲ್ಲ !
ಉತ್ತುತೆಗೆದು ಮುಗಿವುದಲ್ಲ !
ಇತ್ತಲಾಯ್ತು ದೈವಕೃಪೆಯು ಕವಿಸಮಯದ ಬಿಡುವಲಿ

Saturday, September 18, 2010

ನಂದದ ನಂದಾದೀಪ


ನಂದದ ನಂದಾದೀಪ

ಪ್ರತ್ಯಾಹಾರದ ಬಗ್ಗೆ ಕೆಲದಿನಗಳ ಹಿಂದೆ ಬರೆಯುತ್ತ ಹೇಳಿದ್ದೆ-- ಒಳಗಿರುವ ಆತ್ಮವನ್ನು ಬಾಹ್ಯವಾಗಿ ನಾವು ಪಂಚೇಂದ್ರಿಯಗಳ ಮೂಲಕ ವಿಭಿನ್ನವಾಗಿ ನೋಡುತ್ತೇವೆ ಎಂದು. ಇದಕ್ಕೆ ಜ್ವಲಂತ ಉದಾಹರಣೆ ಬ್ರಹ್ಮೈಕ್ಯ ಡಾ|ಪುಟ್ಟರಾಜ ಗವಾಯಿಗಳು. ಅವರಿಗೆ ಕಣ್ಣೆಂಬ ಹೊಸ ಇಂದ್ರಿಯ ಬೇಕಾಗಿರಲಿಲ್ಲ. ಅವರು ಕಣ್ಣಿಲ್ಲದೆಯೂ ಹಲವನ್ನು ಕಂಡಿದ್ದರು ! ಇದು ಅವರ ಆತ್ಮ ಶಕ್ತಿ! ಜೀವಿತದ ಎಳವೆಯಿಂದ ಮಣ್ಣಲ್ಲಿ ಮಿಳಿವವರೆಗೂ ಪರಹಿತಕ್ಕಾಗಿ ದುಡಿದ, ಸೇವೆಸಲ್ಲಿಸಿದ ಅದ್ಬುತ ಚೈತನ್ಯವದು. ಖುದ್ದಾಗಿ ನಾನವರನ್ನು ನೋಡಿದ್ದಿಲ್ಲ,ಆದರೆ ಅವರ ಬಗ್ಗೆ ಸಾಕಷ್ಟು ಓದಿದ್ದೆ, ಕೇಳಿದ್ದೆ,ಮಾಧ್ಯಮಗಳಲ್ಲಿ ನೋಡಿದ್ದೆ. ’ಗಾನಯೋಗಿ ಪಂಚಾಕ್ಷರಿ ಗವಾಯಿ’ ಎನ್ನುವ ಸುಮಧುರ ಕನ್ನಡ ಸಿನಿಮಾವನ್ನು ಕೂಡ ನೋಡಿದ್ದೆ.

ದೇವರು ಒಂದನ್ನು ಕೊಟ್ಟರೆ ಇನ್ನೊಂದನ್ನು ಕೊಡ ಎನ್ನುತ್ತಾರೆ ಅನುಭಾವಿಗಳು. ಇದು ನಿಜವೇನೋ ಅನಿಸುತ್ತದೆ: ಹಲವು ಸನ್ನಿವೇಶಗಳಲ್ಲಿ. ಒಬ್ಬಾತ ಕುರುಡನೋ ಕಿವುಡನೋ ಆಗಿದ್ದರೆ ಅವನಿಗೆ ಉಳಿದ ಇಂದ್ರಿಯಗಳಲ್ಲಿ ಸ್ಪಂದನ ಜಾಸ್ತಿಯಾಗಿ [ಒಬ್ಬನೇ ವ್ಯಕ್ತಿ ಎರಡೆರಡು ಕೆಲಸಮಾಡಿದ ಹಾಗೇ ] ಕೆಲಸಮಾಡದ ಇಂದ್ರಿಯದ ಜಾಗವನ್ನು ತುಂಬುತ್ತವೆ. ಇಂತಹ ವ್ಯಕ್ತಿಗಳಿಗೆ ದೇವರು ವಿಶೇಷ ಚೈತನ್ಯವನ್ನು ಕೊಟ್ಟಿರುತ್ತಾನೆ. ದೇ ಆ ಬ್ಲೆಸ್ಡ್ ವಿತ್ ರಿಮೇನಿಂಗ್ ಸ್ಪೆಷಲ್ ಸೆನ್ಸಿಟಿವ್ ಆರ್ಗನ್ಸ್. ಹಾಗಾಗಿ ಇಂಥವರು ಮಾಡಿದ ಪ್ರಯತ್ನಗಳೆಲ್ಲ ಫಲದಾಯಕವಾಗುವ ಹಾಗೇ ಭಗವಂತ ಅನುಗ್ರಹಿಸುತ್ತಾನೆ. ಇದನ್ನು ಹಿಂದೆ ನಾನು ಹೇಳಿದ್ದ ಮಾರ್ಜಾಲ ನ್ಯಾಯಕ್ಕೆ ಹೋಲಿಸಬಹುದು.ಅದರಲ್ಲೂ ಕೆಲವರು ಬಹಳ ಅದ್ಬುತ ಶಕ್ತಿಯನ್ನು ಪಡೆದಿರುತ್ತಾರೆ. ಬದುಕಿನ ಸಾರವನ್ನು ಬಹುಬೇಗ ಅರಿಯುವ ಇವರು ಮಿಕ್ಕುಳಿದವರಿಗೆ ದಾರಿದೀಪವಾಗುತ್ತಾರೆ.

ಪಂಡಿತ್ ಪುಟ್ಟರಾಜ ಗವಾಯಿಗಳು ಅಂತಹ ಒಬ್ಬ ಅದಮ್ಯ ಚೇತನ. ಅವರು ತನಗಾಗಿ ಬದುಕಲಿಲ್ಲ, ಹಲವರಿಗಾಗಿ ಬದುಕಿದರು. ನಾನು ಕೇಳಿದ ಒಂದು ವಿಷಯ- ಒಬ್ಬ ತಾಯಿ ಹಡೆದ ಶಿಶುವನ್ನು ೪-೫ ತಿಂಗಳಾಗುವ ಹೊತ್ತಿಗೆ ಅದು ಕುರುಡು ಎಂದು ತಿಳಿದಾಗ, ಎತ್ತಿ ತಂದು ಪುಟ್ಟರಾಜ ಗವಾಯಿಗಳ ಆಶ್ರಮದ ಹೊರಾಂಗಣದ ಬಾವಿಯ ಪಕ್ಕ ಮಲಗಿಸಿ ಹೊರಟುಹೋಗಿದ್ದಳಂತೆ, ಇದು ನಡೆದಿದ್ದು ಯಾವುದೋ ಒಂದು ರಾತ್ರಿ. ಬೆಳಿಗ್ಗೆ ಶಿಷ್ಯರಿಂದ ವಿಷಯ ತಿಳಿದ ಗವಾಯಿಗಳು ಆ ಮಗುವನ್ನು ತನ್ನ ಕೈಗೆತ್ತಿಕೊಂಡು ಸ್ವತಃ ಅದಕ್ಕೆ ಬಾಟಲಿಯಿಂದ ಹಾಲುಣಿಸಿ ನಂತರ ಹಾಗೇ ಜೋಪಾನಮಾಡಿದರಂತೆ. ಈಗ ಆ ಗಂಡು ಮಗು ಬೆಳೆದು ಸಂಗೀತ ಕಲಿತು ಸಂಗೀತ ಶಿಕ್ಷಕನಾಗಿ ಕೆಲಸಮಾಡುತ್ತಿದೆಯಂತೆ! ಇದು ಗವಾಯಿಗಳ ವೈಖರಿ. ಅದಕ್ಕೇ ನಿಜವಾಗಿ ಅದು ಪುಣ್ಯಾಶ್ರಮ--ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ.

ಬದುಕಿನ ಬಂಡಿ ಎಳೆಯುವಾಗ ಎಷ್ಟೋ ತಂದೆ-ತಾಯಿಗಳಿಗೆ ಕೆಲವೊಮ್ಮೆ ಅಂಗವಿಕಲರೋ ವಿಕಲ ಚೇತನರೋ ಹುಟ್ಟುವುದು ಅವರ ವಿಧಿಬರಹ! ಇಂತಹ ಹುಟ್ಟಿ ಯಾವುದೋ ಕೆಟ್ಟ ಘಳಿಗೆಯಲ್ಲಿ ಪಾಲಕರಿಂದ ತ್ಯಜಿಸಲ್ಪಟ್ಟ ಹಲವು ಮಕ್ಕಳ ಮಾತಾ-ಪಿತೃವಾಗಿ ಅವರನ್ನು ಉಳಿಸಿ-ಬೆಳೆಸಿ, ಸಂಗೀತ ಕಲಿಸಿ, ಅವರಿಗೆ ಒಂದರ್ಥದಲ್ಲಿ ಪುನರ್ಜನ್ಮವಿತ್ತ ಸದ್ಗುರುವೇ ಶ್ರೀ ಪುಟ್ಟರಾಜರು. ತಮಗೆ ಅಭಿಮಾನಿಗಳು ಪ್ರೀತ್ಯಾದರಗಳಿಂದ ನಡೆಸಿದ ನೂರಾರು ತುಲಾಭಾರಗಳಿಂದ ಬಂದ ಆದಾಯವನ್ನೂ ಸೇರಿದಂತೆ ಉಳ್ಳವರು ಕೊಟ್ಟ ಎಲ್ಲಾ ಸಹಾಯವನ್ನು ಕೇವಲ ಸಮಾಜದ ಇಂತಹ ಮಕ್ಕಳ ಸೇವೆಗಾಗಿ, ಅವರಿಗೊಂದು ಬದುಕು ಕಟ್ಟಿಕೊಡಲಾಗಿ ಬಳಸಿದ ಬೃಹತ್ ಕುಟುಂಬದ ಯಜಮಾನ ಶ್ರೀ ಗವಾಯಿಗಳು.

ಅಂಧನೊಬ್ಬ ಮೂರು ಭಾಷೆಗಳಲ್ಲಿ ಪಂಡಿತನೆಂದರೆ, ಹಲವು ಸಂಗೀತವಾದ್ಯಗಳಲ್ಲಿ ಪರಿಣತನೆಂದರೆ ಅವನ ಅಸಾಧಾರಣ ತಪಸ್ಸನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗೆ ಅವರಿಗೆ ಇವೆಲ್ಲವನ್ನೂ ಕಲಿಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆ ಗವಾಯಿಗಳು ಕನ್ನಡ, ಸಂಸ್ಕೃತ ಮತ್ತು ಹಿಂದಿ ಈ ಮೂರು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು, ಅಲ್ಲದೇ ಅದನ್ನು ಹಲವರಿಗೆ ಧಾರೆ ಎರೆಯುವ ಹೊಸ ಮಾರ್ಗವನ್ನು ಹುಟ್ಟುಹಾಕಿಕೊಂಡಿದ್ದರು. ’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹಳೆಯ ಗಾದೆ ಈಗ ಅದು ಹಾಗಲ್ಲ ಸದ್ಗುರುವೊಬ್ಬನಿದ್ದರೆ ಸಮಾಜವೆಲ್ಲ ಕಲಿತಂತೆ, ಕಲಿತು ಜೇನು ಸವಿದಂತೆ ಎಂದರೆ ತಪ್ಪಲ್ಲ. ಪ್ರತಿನಿತ್ಯ ಪೂಜೆ, ಧ್ಯಾನ, ಸಂಗೀತಾರಾಧನೆ, ಕಲಿಸುವಿಕೆ, ಅನ್ನದಾಸೋಹವೇ ಮೊದಲಾದ ಜ್ಞಾನ, ಅಶನ-ವಶನಾದಿ ಹಲವು ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳಕು ಕಾಣದ ಕಂದಮ್ಮಗಳಿಗೆ ಮಾನಸ ಬೆಳಕನ್ನು ಹರಿಸಿದ ಜ್ಞಾನ ಜ್ಯೋತಿ ಶ್ರೀ ಪುಟ್ಟರಾಜರು. ಕಾಣುವ ಪ್ರಪಂಚದ ಜನ ಕಾಣಲಾರದ ಜನರಿಗೆ ತೊಂದರೆಕೊಟ್ಟು ತಪ್ಪು ಮಾಡಿದರೂ ಅಂತಹ ಕಣ್ಣಿರುವ ಪಾತಕಿಗಳನ್ನು ಕರೆದು ತಿಳಿಹೇಳಿ ತಿದ್ದಿದ ಖ್ಯಾತಿ ಅವರದ್ದು.

ಕಣ್ಣಿರುವ ನಾವು ಮಾಡದ ಮೇರು ಸಾಧನೆಯನ್ನು ಕಣ್ಣಿರದ ಈ ಪುಣ್ಯಜೀವಿ ಇದುವರೆಗೆ ನಡೆಸಿಕೊಟ್ಟರು. ಕಣ್ಣಿರದ ಮಗುವಾಗಿ ಆಶ್ರಮಕ್ಕೆ ಬಂದ ಗವಾಯಿಗಳು ಗುರು ಪಂಚಾಕ್ಷರಿಗವಾಯಿಗಳ ಕೃಪೆಗೆ ಪಾತ್ರರಾಗಿ ಅದನ್ನು ನೆನೆಸಿ ಹಲವು ಸಾವಿರ ಕುರುಡು,ಕಿವುಡು, ಮೂಕ ಮಕ್ಕಳಿಗೆ ವಿದ್ಯಾದಾನ ಮಾಡಿದರು. ದಾಸರು ಹೇಳಿದ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತನ್ನು ಅಕ್ಷರಶಃ ಪಾಲಿಸಿ ತೋರಿಸಿದ ಈ ನಂದಾದೀಪ ನಂದಲಿಲ್ಲ, ಅದು ಬೆಳಗಿದ್ದು ಒಂದೆರಡು ದೀವಿಗೆಗಳನ್ನಲ್ಲ-ಹಲವು ಸಾವಿರ ದೀವಿಗೆಗಳನ್ನು. ಅಂತಹ ಹಲವು ದೀವಿಗಗಳನ್ನು ಸಮಾಜಕ್ಕೆ ಕೊಟ್ಟ ಶ್ರೀಗಳು ಭೌತಿಕವಾಗಿ ತನ್ನ ಅಸ್ಥಿತ್ವವನ್ನು ಮೊಟಕುಗೊಳಿಸಿದರೂ ಚೈತನ್ಯರೂಪದಲ್ಲಿ ಪುಣ್ಯಾಶ್ರಮದಲ್ಲಿ ನೆನೆನಿಂತಿದ್ದಾರೆ. ಈ ಸತ್ಪರಂಪರೆ ಸತತ ಮುನ್ನಡೆಯಲಿ, ಅವರ ಸದಾಶಯ ಸದಾ ಪೂರ್ತಿಗೊಳ್ಳುತ್ತಿರಲಿ, ಕಣ್ಣಿರುವ ಜನತೆ ಕಾಣ್ಣಿರದ,ಕಿವಿಯಿರದ, ಮಾತುಬಾರದ ಆ ಜನತೆಗೆ ಪ್ರೀತಿಯಿಂದ ಸಹಕರಿಸಲಿ ಎಂದು ಪ್ರಾರ್ಥಿಸೋಣ. ಅಗಲಿದ ಮಹಾತ್ಮರಿಗೆ ನಮ್ಮ ಭಾಷ್ಪಾಂಜಲಿಯನ್ನು ಸಮರ್ಪಿಸೋಣ.

ಸಂಗೀತದ ಸುಸ್ವರಸಾಮ್ರಾಜ್ಯದಿ
ಮಂಗಳಕುವರನು ಉದಯಿಸುತ
ಅಂಗವಿಕಲಚೇತನರನು ಸೇವಿಸಿ
ಕಂಗಳಿರದ ತನ್ನನೇ ಮರೆತ

ತಾನು ತನದೆಂಬ ಕಣ್ಣಿಹ ಜನತೆಗೆ
’ನಾನಿ’ಲ್ಲದ ತತ್ವವನರುಹಿ
ಗಾನದಿ ಜನರನು ರಂಜಿಸಿ ನಿತ್ಯವೂ
ಯಾನವ ಬೇಳೆಸುತ ಹಲವೆಡೆಗೆ

ಗಾನಯೋಗಿ ಪಂಚಾಕ್ಷರಿ ಹರಸಲು
ಮಾನಸಮ್ಮಾನ ಸಾಸಿರವು
ದೀನಬಂಧುವನು ನೆನೆಸಿ ಬಂದವರ
ಧೇನುರೂಪದಲಿ ಕಂಡಿಹುದು

ಯೋಗಿಯಾದ ಭವರೋಗವೈದ್ಯ
ಭೋಗಿಸಲಿರದಿರೆ ಕಣ್ಣು-ಕಿವಿ
ತ್ಯಾಗದಿ ಪೂಜೆಯ ನಡೆಸುತ ಹರಸಿದ
ಬೀಗದೆ ಪುಟ್ಟರಾಜನು ತಾ

Friday, September 17, 2010

ಸ್ವಯಂ ಚಾಲಿತ


ಸ್ವಯಂ ಚಾಲಿತ

ಗಾಳಿ ಕೇಳಿ ಬೀಸಲಿಲ್ಲ
ನನ್ನ ನಿನ್ನ ಅವರನು
ವೇಳೆ ನಿಂತು ಕಾಯಲಿಲ್ಲ
ನಿನ್ನ ನನ್ನ ಬರವನು

ಮಳೆಯು ಹನಿದು ಬೀಳಲಿಲ್ಲ
ನಮ್ಮ ಇಚ್ಛೆ ಮೇರೆಗೆ
ಇಳೆಯು ಕುಸಿದು ಕಟ್ಟಲಿಲ್ಲ
ನಿಮ್ಮ ಆಜ್ಞೆ ಯಾರಿಗೆ ?

ಸೂರ್ಯ ಬೆಳಕ ಹರಿಸಲಿಲ್ಲ
ಕತ್ತಲಲ್ಲಿ ಬಾ ಎನೆ
ಚಂದ್ರ ಗುರುತು ಮರೆಸಿಕೊಂಡ
ಹಗಲು ನೋಡಬೇಕೆನೆ !

ನೀರ ಮಟ್ಟ ಏರಲಿಲ್ಲ
ಯಾರಿಗೋ ಬಾಯಾರಿಕೆ
ಬೆಂಕಿ ಕಸುವ ಕಳಚಲಿಲ್ಲ
ಉರಿಯಬೇಡ ಅನಲಿಕೆ !

ಬಾನು ಹೊಳೆಯದಿರದು ನಿತ್ಯ
ನಾನು ನೀನು ಮಲಗಿರೆ
ಏನು ನಿನ್ನ ಕೊಡುಗೆ ನೋಡು
ಇವುಗಳೆಲ್ಲ ನಡೆದಿರೆ !

Thursday, September 16, 2010

ನಾ ಡೊಂಕಾದರೆ ನಿನ್ನ ನಾಮ ಡೊಂಕೇ ವಿಠಲಾ ?



ನಾ ಡೊಂಕಾದರೆ ನಿನ್ನ ನಾಮ ಡೊಂಕೇ ವಿಠಲಾ ?


" ಅಣಾ ಹಬ್ಬ ಮುಗೀತಾ ? "

" ಹೂಂ ಮುಗೀತ್ ಕಣಪ್ಪಾ...ವಾರಾ ಕಳ್ದೋತಲ್ಲ ಎಂಗಿದೀಯ ? "

" ಏನಿಲ್ಕಣಣ್ಣಾ ಇಂಗೇ ಇವ್ನಿ...ಅಣಾ ಅಲ್ಲಾ ರಾಚಂಗೌನ ಮನೆಕ್ಕಳ್ಸವ್ರಂತೆ ? "

" ಏನ್ಲೇ ನಿಂಗೇನ್ ಬೇರೆ ಮಾತೇ ಇಲ್ವೇನ್ಲಾ ? ಇಂತದ್ದೇ ತಕಂಬತ್ತೀಯಲ್ಲ...ಹೌದು ಓದ್ರು ಹೇನಾಯ್ತೀಗ ? "

" ಪಾಪಾ ಅನ್ನುಸ್ಬುಡ್ತು ಕಣಣ್ಣಾ, ಏನೋ ಕೈ ಹಾಕ್ಬುಟ್ಟವ್ರೆ...ರೇಣುಕ್ನ ಥರ ಪಾಲ್ಟಿ ಪಾಲಿಟಿಕ್ಸ್ ಇರ್ಲಿಲ್ಲ....ಓಕ್ಕಳ್ಳಿ ಬುಡು ಇನ್ನೇನಾತದೆ ನೋಡನ "

" ಅಣಾ ಎಂತೆಂತಾ ಕುರಿ ಮೇಯ್ಸ್ಕಂಡ್ ಇದ್ದವರೆಲ್ಲ ಮಂತ್ರಿಗೊಳಾಗವ್ರೆ ನೀನು ಒಂದ್ಕಿತಾ ನಿಂತ್ಕೊಬಾರ್ದಾ ? "

" ಹೋಗಲೇ ಹೋಗೋ ನಾನೇನು ಬಿಡ್ತೀನಾ ಮುಂದಿನ್ಸಲ ದೇಸ್ಪಾಂಡೇ ಹಿಡ್ಕಂಡು ನಿಲ್ಲಾಕಿಲ್ಲಾ ನಾ ಗಂಡಸೇ ಹಲ್ಲಾ ಹನ್ನು "

" ಇಂಗ್ ಬಾ ನಂಗೂ ಬಾಳಾ ಖುಸಿ ಆಯ್ತು ಕಣಪ್ಪೋ ಅಣಾ ನನ್ ಮಾತ್ರ ಮರ್ತಾಕ್ ಬುಟ್ಟೀಯ ಏನಾರಾ ವರ್ಗಾವರ್ಗೀ ಯವಾರಾ ಬತ್ತದಲ್ಲ ಒಸಿ ಚಿಲ್ರೆ ಕಾಸಾದ್ರು ಮಾಡ್ಕಣಕೆ ಸಲ್ಪ ಎಲ್ಪ್ ಮಾಡು ಬುದ್ಧಿ ಇರ್ಲಿ "

" ನಿನ್ ಕಡೆ ಹೋಟರ್ಸ್ ಎಸ್ಟ್ ಮಂದಿ ಅವ್ರೆ ? "

" ಲೂಸ್ ಮಾದ, ಸೀನ, ಮಾದೇಸ, ಯೆಂಕಿ, ರಮೇಸ, ಸತೀಸು, ಕೇಬಲ್ ವಾಸು, ಆಪಲ್ ಮಂಜ, ಕೋಳಿ ಹನ್ಮಂತು.....ಓ ಸುಮಾರು ೨೦೦-೩೦೦ ಮಂದಿ ಆಗೋತರೆ "
" ಅವ್ರ್ನೆಲ್ಲಾ ಕರ್ಕಂಬಾ ಆಮೇಲೆ ಕೂತು ಮಾತಾಡವ "


--------------


" ಅಣಾ ತುಪ್ಪ ಹಾಲಪ್ಪಂದೇ ಅಂತೆ "

" ಹಯ್ಯೋ ಸಿವಾ ನಿಂಗಿನ್ನೂ ಹನ್ಮಾನನೇನ್ಲಾ ? ಹಾಲಪ್ಪ ಬೋ ಉಸಾರು ಆದ್ರೂ ತುಪ್ಪ ಬಿದ್ದು - ತಿಂಗ್ಳಾಗದೆ ಇನ್ನು ಅದ್ರ ಪತ್ತೆ ಮಾಡಾಕಾಯಕಿಲ್ಲ ಹಂತ ಕೂತ್ಗಂಡು ಈಗ ತಲೆ ಕೆರೀಕತವ್ನೆ "

" ಯಾಕೆ ಒಂದಷ್ಟು ಕಾಸ್ಕೊಟ್ಟು ತಪ್ಪಸ್ಕೊಳಾಕಿಲ್ವ "

" ಅದು ಮೊದ್ಲಾದ್ರೆ ನಡೀತಾ ಇತ್ತು... ಎಂಕಟೇಸು ಅದಕ್ಕೇ ಪ್ಲಾನ್ ಮಾಡಿದ್ದು... ವಯ್ಯಾ ಕೇಳೀ ಕೇಳೀ ಸುಸ್ತಾದ ಈವಯ್ಯ ಹಾಗ ಜಗ್ಲಿಲ್ಲ "

" ಈವಯ್ಯಂಗೆ ಇಂಗಾಗೋತದೆ ಹಂತ ಗೊತ್ತಾಗಿದ್ರೆ ಮತ್ತೇನಾರ ಮಾಡಿರ್ವ ಹಲ್ವೇನಣ ? "

" ಹಿಲ್ಲಾ ಕಣ್ಲಾ ಮನ್ಸನೂ ಸಣ್ ಕುಳ ಆಲ್ಲ..ಸಾನೆ ದೊಡ್ ರಕಂ ಕೇಳ್ಯವ್ನೆ ...ಅದ್ಕೇಯ ಪಾಲ್ಟಿ ಸುಮ್ಕೇ ಒದೀತಾ ಇತ್ತು "

" ಮುಂದೇನಾತದೆ ಹಂತೀಯ "

" ನೋಡ್ತಾಯಿರು ಏನಾತದೆ ಹಂತಾ ನಂಗೂ ಗೊತ್ತಾಯಾಕಿಲ್ಲ ... ಹೇನೋ ನಡೀತದೆ ಹಂತಾ ಕಾಯ್ತಿವ್ನಿ... ನಡೀಲಿ ಬುಡು ನಂಗೆ ನಿಂಗೆ ಒಂದ್ಕಿತಾ ಗುಂಡಾಕಂಡು ಮಜಾತಗಳಕಾದ್ರೂ ಇಸ್ಯಾ ಬೇಕಲ್ಲಪ್ಪಾ "

" ಹಂತೂ ಹಾಲಪ್ಪನ್ ತುಪ್ಪ ಜಾರಿ ರೊಟ್ಟೀಗ್ ಬಿತ್ತು ... ಕೇಸು ಹುಲ್ಟಾ ಅಂತೀಯ ಓಗ್ಲಿ ಬುಡು "

-------------

" ಅಣಾ ನಯನತಾರಾ ಮದ್ವೆ ಹಂತೆ ? "

" ಅಂಗಂದ್ರ ಯಾರ್ಲಾ ? "

" ತಮ್ಳು ಫಿಲ್ಮ್ನಾಗೈತಲ್ಲ ಹೀರೋಯಿಣಿ ಹವ್ಳು ಕಣಣ್ಣಾ "

" ಔದಾ ... ಯಾರನ್ ಮದ್ವೆ ಆಯ್ತವ್ಳಂತೆ ? "

" ಪ್ರಭುದೇವ ಹಿದಾನಲ್ಲ ಅವುನ್ನಾ "

" ಪ್ರಭುದೇವ ಕನ್ನಡದ ಹುಡ್ಗಾ ಅಲ್ವೇನ್ಲಾ ? "

" ಔದ್ಕಣಣ್ಣಾ...ನಮ್ಮ ಮೂಗೂರು ಸುಂದ್ರಪ್ಪೋರದಾರಲ್ಲ ಅವ್ರ ಮಗ "

" ಮತ್ತೆ ಆಗ್ಲಿ ಬುಡು ಒಳ್ಳೇದಾತಲ್ಲ "

" ಅದಲ್ಲ ಇಸ್ಯ ಕಣಣ್ಣಾ... ಹಿನ್ಮೇಲೆ ಆಯಮ್ಮ ಯಾವ ಸಿನ್ಮಾದಾಗೂ ನಟ್ಸೋ ಆಗಿಲ್ವಂತೆ "

" ಹಾಗ್ಲಿ ಹದಕ್ಕೇನಂತೆ ..ಲಗ್ಣ ಕಟ್ಟಿಸ್ಕ್ಯಂಡ ಮ್ಯಾಕೆ ಸುಮ್ಕೇ ಇರ್ಬೇಕಪ್ಪ "

" ನನ್ನಂತಾ ಪಡ್ಡೆ ಐಕ್ಳುಗಳ ಗತಿ ಏನಣಾ ...ಟೆಂಟಾಗೊಂದಷ್ಟು ತಮ್ಳು ಸಿನ್ಮಾ ನೋಡಿ ಬೋ ಖುಸಿಯಾತಿತ್ತು "

" ಓಗ್ಲಿ ಬಿಟ್ಟಾಕು ಒಂದೋದ್ರೆ ಇನ್ನೊಂದ್ ಬತ್ತದೆ ಹೆಂತೆಂತಾ ಫಿಗರ್ ಗಳವ್ರೆ ಯಾಕ್ತಲೆಕೆಡ್ಸ್ಕತೀಯ "


--------------

" ಊರ್ನಾಗೆ ರೌಂಡೊಡ್ದು ಕಾಸ್ ತಕಂಬರ್ಲಿಲ್ವೇನ್ಲಾ ಗಣೇಶನ ಇಡಾಕೆ ? "

" ಹೂನಣಾ ನಮ್ಮೈಕ್ಳು ಓಗ್ಯವೆ "

" ಹೆಷ್ಟಾಯ್ತು ಕಲೆಕ್ಸನ್ನು "

" ಹಿಲ್ಲೀಗಂಟ ೨೫೦೦೦ ಆಗೈತೆ...ಹಿನ್ನೂ ಬಾಳ ಬರೋದವೆ ಅಂದವ್ರೆ "

" ನೋಡಪಾ ಸಲ ನಂಗಂತೂ ಎಲ್ಡೆಲ್ಡ್ ದಿನ ಪಾಲ್ಟಿ ಬೇಕು...ಸಾನೆ ಬೇಜಾರಾಗೋಗದೆ "

" ನಮ್ಮೈಕ್ಳು ಬೆಂಗ್ಳೂರ್ಗೋಗಿ ಲೈವ್ ಬ್ಯಾಂಡ್ ನೋಡವ ಅಂತವ್ರೆ ಕಣಣ್ಣೋ "

" ಮತ್ತೆ ಹಿಲ್ಲೀ ಖರ್ಚು ಕಳ್ದ್ ಮ್ಯಾಕೆ ನಮ್ಕೈನಾಗೇನಿರತೈತೆ ಹಂತೀಯ ? "

" ಹೇನಣಾ ನೀ ಇಂಗಂತೀಯ ಹೇನಿಲ್ಲಾ ಹಂದ್ರೂ ಕೊನೇಪಕ್ಸ ೩೦ ಸಾವ್ರ ಉಳ್ಸ್ಕೋಬೇಕಣ...ಪಾಪ ಪಡ್ಡೆಗೋಳು ಕಾಯ್ತಾ ಅವೆ "

" ಏನೋ ಅಂಗೊ ಇಂಗೂ ಮಾಡಿ ಗಣೇಶನ್ನ ಇಟ್ಟಾಂಗ್ ಮಾಡ್ಬುಟ್ಟು ಡಂ ಅನ್ಸ್ಬುಡಿ ಅತ್ಲಾಗೆ...ಹಾಮೇಲೆ ನೋಡ್ಕಳವ "


--------------

" ಅಣಾ ಆಟೋ ಮೀಟರ್ನ ಟ್ಯಾಂಪರ್ ಮಾಡಿ ಕಾಸು ಎಗುರ್ಸುದ್ರೆ ಕಡ್ಡಾಯ ಜೈಲಂತೆ "

" ಗೊತ್ತದೆ ಕಣಪ್ಪಾ ಹಿವ್ರ ಹಾರಂಭ ಸೂರತನ ನಾವ್ಕಂಡಿಲ್ವಾ....ಯೋಳ್ತಲೇ ಇರ್ತರೆ... ಆಮ್ಯಾಕಾಮ್ಯಾಕೆಮಾಮೂಲಿಸುರುಹಚ್ಚುತ್ಲೂವೆ ಹೆಲ್ಲಾ ಬಿಟ್ಟೊತದೆ "

" ಹದ್ಕೂ ಮಾಮೂಲಿ ಬೇರೆ ಅಚ್ತಾರಾ "

" ಯಾವ್ದಕ್ಕೇ ಹಾಗ್ಲಿ ಸಿಕ್ಸೆ ಪಕ್ಸೆ ದಂಡ ಹಂತೆಲ್ಲಾ ಬಂದ್ಮ್ಯಾಗೆ ಮಾಮೂಲಿ ಐತೆ ಹಂತ್ಲೇ ಲೆಕ್ಕ.... ಸರಕಾರೀ ಕಾಯ್ದೆ ಮುಂದಗಡೀಕಿಂದ ಬಂದ್ರೆ ಮಾಮೂಲಿಯವ್ರ ಕಾಯ್ದೆ ಅದಾಗ್ಲೇ ಒಳೀಕೋಗಿ ಕೂತ್ಬುಟ್ಟಿರ್ತದೆ ಕಣ್ಲಾ... ಹೆಲ್ಲೋ ಸಾವ್ರಕ್ಕೊಂದ್ ಕೇಸ್ನ ಇಡ್ದೆ ಅಂತ ಮಾಡ್ತರೆ... ಟಿವಿನಾಗೆ ತೋರ್ಸದ್ಮ್ಯಾಕೆ ಬಿಟ್ಟಾಕ್ತರೆ ಹೆಲ್ಲಾ ನಾಟ್ಕ "

" ಹಲ್ಲಣಾ ಆಟೋದವ್ರು ಕರದ್ರೆ ಅಲ್ಲೀಗ್ ಬರಾಕಿಲ್ಲ ಹಿಲ್ಲೀಗ್ ಬರಾಕಿಲ್ಲ ಹಂತಾರಲ್ಲ ಇದ್ಯಾವ ನ್ಯಾಯ ? "

" ಅದೆಲ್ಲಾ ನಡೀತದೆ ಯಜಮಾನ್ ಅವ್ರಿಸ್ಟ ಬಂದ್ಕಡೆ ಹೋಯ್ಕತರೆ ನೀನ್ಯಾರು ಕೇಳಕೆ... ಬಂದ್ರೆ ಓಗು ಇಲ್ಲಾಂದ್ರೆ ಸುಮ್ನಾಕ್ಕೊ "

" ಅಣಾ ಬಸ್ರಿದೀರೆಲ್ಲಾ ಅರ್ಜೆಂಟ್ನಾಗಿರ್ತರೆ ಟೇಮ್ನಾಗೂ ಹಿವ್ರು ಕೈ ತಿರುಗುಸ್ಬುಟ್ರೆ ? "

" ಬಸ್ರಿದೀರ್ನ ಕೇಳ್ಬುಟ್ಟು ಆಟೋ ಮಡಗವರೇನ್ಲಾ ...ಪಾಪ ಹವ್ರಗೆ ಹವ್ರದೇ ಚಿಂತೆ....ನಿಂದೊಂದ್ ಗೋಳು "


--------------

" ಅಣಾ ಬೆಂಗ್ಳೂರಗೆ ಕುಡ್ಯಕೆ ನೀರಿಲ್ಲ ಹಂತ ಯೋಳಿದ್ಯಲ "

" ಔದು ಯೇನಾಯ್ತೀಗ ? "

" ನಮ್ಮಂಜವನಲ್ಲ ಅವ್ನ ಬಾಮೈದ ಸಾನೆ ನೀರ್ ಸಪ್ಲೈ ಬಿಜ್ನೆಸ್ ಮಾಡ್ತವ್ನಂತೆ "

" ಮಾಡ್ಲಿಬಿಡೋ ನಿಂಗೇನ್ ಒಟ್ಟೆಕಿಚ್ಚಾ ? "

" ಹೆಲ್ಲಾ ೨೦- ೨೦ ಲೀಟ್ರು ಬಾಟ್ಲಿ ತುಂಬ್ಸಿ ಮಡೀಕಂಡು ಒಂದಷ್ಟು ಸ್ಟಿಕ್ಕರ್ ಪ್ರಿಂಟಾಕ್ಸಿ ಇಟ್ಕೋಬುಟ್ಟವ್ನಂತೆ... ಬಾಟ್ಲಿಗೆಲ್ಲ ಸ್ಟಿಕ್ಕರ್ ಅಚ್ಚದು ಕಳ್ಸದು ಸ್ಟಿಕ್ಕರ್ ಅಚ್ಚದು ಕಳ್ಸದು "

" ಮಾಡ್ಲಿ ಬುಡಲೇ ಎಲ್ಲರೂ ಹದನ್ನೇ ಮಾಡ್ತಿರೋದು ನಿಂಗೊತಾಯಾಕಿಲ್ಲ ಹಸ್ಟೇಯ "

" ಹಲ್ಲಣಾ ಹೆಂತೆಂತಾ ಕಂಪ್ನಿ ಮಡಗವ್ರೆ ಹವ್ರೆಲ್ಲಾ ಅಂಗೇ ಮಾಡಾರಾ ? "

" ಕೋಕಾಕೋಲಾ ಪೆಪ್ಸಿನಾಗೆಲ್ಲಾ ಹೊಲಕ್ಕೊಡ್ಯೋ ಔಸ್ದೀನ ಸಣ್ಣಪ್ರಮಾಣ್ದಾಗೆ ಆಕ್ತರೆ... ಕೆಟ್ಟೋಗ್ದಿರ್ಲಿ ಹಂತಾವ ಹಿಂತಿಂತದ್ದೆಲ್ಲಾ ನಡ್ದೈತೆ ಹಿದ್ಯಾವ ಮಹಾ ಏಳು "

" ಹಂತೂ ಬಾಟ್ಲಿನಾಗೆ ತುಂಬ್ಸಿ ಸ್ಟಿಕ್ಕರ್ ಅಚ್ಚಿರೋ ನೀರಿನ್ ಕತೆಯೆಲ್ಲಾ ಇಂಗೇಯ ಹನ್ನು... ಕಾಸ್ ಮಾಡಕೆ ಬೇಜ್ಜಾನ್ ದಾರಿ ನೋಡು ಸಿಟಿನಾಗೆ "

" ಹೋಕ್ಕಳ್ಳಿ ಬಿಡು ಸಿವಾ ಜನ ಅಣೇಲ್ ಬರ್ದ್ರೆ ಬದೀಕತರೆ ಇಲ್ಲಾಂದ್ರೆ ಸತ್ಕತರೆ ಅದಕ್ಕೆಲ್ಲಾ ನೀನ್ಯಾಕಿಸ್ಟು ಬೇಜಾರಾಯ್ತೀಯ ಅಂತೀನಿ "

-------------

" ಅಣಾ ಮಂಗ್ಳಿ ಹವ್ಳಲ್ಲಾ ಹಳ್ವ ಬಿಜ್ನೆಸ್ ನೋಡ್ದಾ "

" ಹೇನಪ್ಪಾ ಹವ್ಳ ಬಿಜ್ನೆಸ್ಸು ಮಾಮೂಲಿ ಮಾಂಸದ್ ದಂದೆನಾ ? "

" ಯೇ ಇಲ್ಕಣಣಾ ಹದು ಬೇರೆ ಇಸ್ಯ ಆತರ ಮಾಮೂಲಿ ಇಸ್ಯ ಹಲ್ಲ "

" ಅಂಗಂದ್ರೇನ್ಲಾ ? "

" ಆಯಮ್ಮ ಮದ್ವೆ ಆಗೋದು ಗಂಡನ್ ಮೇಲೆ ಸುಮ್ಸುಮ್ನೇ ಡೌರೀ ಕೇಸ್ ಜಡ್ಯದು ...ಸ್ವಲ್ಪ ದಿನ ಆಗುತ್ಲೂವೆ ಒಟ್ಟಿಗೇ ಇರಕಾಯಾಕಿಲ್ಲ ಹಂತ ಕೊರ್ಟ್ಗೋಗಿ ಇಚ್ಚೇದ್ನ ಕೇಳದು....ಪರಿಹಾರ ಕೊಡ್ಸಿ ಅನ್ನದು"

" ಈಗ ಎಸ್ಟನೇ ಗಂಡ "

" ನಾಲ್ಕ್ನೇದೋ ಹೈದ್ನೇದೋ ಇರ್ಬೋಕು....ನಂಗೂ ಸರಿ ಗೊತ್ತಿಲ್ಲ...ಅವ್ರು ದೂರ್ದ ಊರ್ನಾಗೆ ಗಂಡ್ ಹುಡ್ಕದು ಪ್ರತೀಸಲಿನೂವೆ "

" ಹಯ್ಯೋ ಇದೆನ್ಲಾ ಹಂತಾ ಮಾದೊಡ್ಡ ಇಸ್ಯಾ ? "

" ಪಾಪ ಗಂಡಾದೋನ್ಗೆ ಎಸ್ಟು ತೊಂದ್ರೆ ಯೋಳು ....ಕಾಯ್ದೆ ಐತೆ ಹಂತಾ ಇಂಗೂ ಮಾಡಾರಲ್ಲ ಜನ ಇದಕ್ಕೇನಂತ್ಯ ನೀನು ? "

" ಔದಪ್ಪಾ ಕೆಲ್ವು ಕಾಯ್ದೇನೇ ಹಲವ್ರೀಗೆ ಮುಳುವಾಗದೆ ಎನ್ಮಾಡುದು ಸಮಾಜ ಹಿಂತವ್ರ ಕಂಡ್ರೆ ಸರ್ಯಾಗಿ ಇಡ್ದು ಬಡ್ದು ಮಾಡ್ಬೇಕಪ್ಪ ಅಸ್ಟೇಯ ಇನ್ನಿರಾದು "

-------------

ಕುಮ್ಟಾ ಊರ್ ಗೊತ್ತೈತೇನಣಾ ನಿಂಗೆ ? "

" ಯಾಕ್ಲಾ ಬಡ್ಸಾಮಿ ? "

" ಹಲ್ಲಿ ಈಡಿ ಭಟ್ ಹಂತನ್ನೋ ಪತ್ರುಕರ್ತುನ್ನಾ ಸುಮ್ಸುಕ್ಕೇ ಎತ್ಗೊಂಡೋಗಿ ಒಳಗಾಕಿ ತ್ರಾಸಕೊಟ್ರಂತೆ ಸಬ್ ಇನ್ಸ್ಪಟ್ರು "

" ಯಾಕ್ಲಾ ಅಂತದೆಂತಾ ಆಗೋಗದೆ ಹಲ್ಲಿ ? "

" ಹೇನಿಲ್ಲಾ ಹೆಲ್ಲಾ ಜಾತೀ ರಾಜ್ಕೀಯ ಎಚ್ಬುಟದೆ....ಒಂದೆರಡು ಹೆಂಗುಸ್ರಿಂದ ಸುಮ್ಸುಮ್ಕೇ ಕಂಪ್ಲೇಟ್ ಕೊಡ್ಸ್ಕ್ಯಂಡು ರಾದ್ಧಾಂತ ಮಾಡವ್ರೆ "

" ಹಲ್ಲೂ ನಮ್ ಮಂಗ್ಳಿ ಥರದ ಎಂಗ್ಸ್ರೂ ಅದಾರೇನ್ಲ ? "

" ಯಾಕಿಲ್ಲ ? ಇದ್ಕೂ ಜೋರ್ನ ಎಂಗುಸ್ರವ್ರೆ ಹಂತಾ ತಿಮ್ಮ ಯೋಳ್ದ, ಪಾಪ ಈಡಿಭಟ್ಟು ತಾನಾಯ್ತು ತನ್ ಕೆಲ್ಸಾಯ್ತು ಅಂದ್ಕಂಡಿದ್ದ, ಹಂತೋನ ಬೆನ್ನತ್ತಿ ಬೈಕ್ ಬೀಳ್ಸಿ ಎತ್ತಾಕೊಂಡೋಗಿದ್ರಲ್ಲ ಹದ್ಕೇಯ ಈಗ ರಜಧಾನೀ ತಂಕ ಕೇಸು ಬಂದದಂತೆ...ಸದ್ಯ್ ಸಬ್ ಇನ್ಸ್ಪಟ್ರುನ ಅಮಾನತ್ ಮಾಡ್ಯವ್ರೆ ಹಂತಿದ್ನಪ್ಪ "

" ಮಾಡ್ಲಿ ಬುಡು ಹಿಲ್ಲೇನ್ ಕಮ್ಮಿ ಐತಾ ಬೆಂಗ್ಳೂರ್ ಎಂಬೋ ಬೆಂಗ್ಳೂರಾಗೇ ಹುಡುಗನ ಕಡೆ ದುಡ್ ತಿನ್ಕೊಂಡು ನಂದಿನಿ ಲೇ ಔಟ್ ಠಾಣೆ ಮಂದಿ ಕಳ್ದ್ಸಲ ಅದ್ಯಾವ್ದೋ ಹುಡ್ಗೀ ಲವ್ ಕೇಸ್ನ ಗಾಳಿಗೆ ತೂರಿದ್ರಲ್ಲ...ಹಂಥೋರ್ಗೆಲ್ಲಾ ಸಿಕ್ಸೆ ಆಗ್ಬೇಕು ಸಿವಾ ಹಿಲ್ಲಾಂದ್ರೆ ಸುಮ್ಕೇ ಕಾರ್ಯಾಂಗ ಹನ್ನೋದ್ಯಾಕೆ ? "

" ಹಂತೂ ಬೇಲಿನೇ ಹೊಲ ಮೇಯೋ ಕಾಲ ಹನ್ನು "

" ಹೊತ್ತಾತದೆ ಮುಂದಿನವಾರ ಸಿಗುಮು....ಮತ್ತೆ ನಾ ಹೇಳಿದ್ ತಂದ್ಯೇನ್ಲಾ ? "

" ಅಣಾ ...ಹೂತಿಟ್ ಜಾಗ ಮರ್ತ್ಬುಟ್ಟು ತಿಮ್ಮೇಗೌಡ ಹುಡೀಕಂಡ್ ಕುಂತವ್ನೆ "

" ಓಗ್ಲಿ ಬುಡು ಮುಂದಿನ್ವಾರನಾದ್ರೂ ಮರೀಬ್ಯಾಡ ಸಾನೆ ಮೈಕೈನೋವು...ಒಂದಪಾ ಸಲ್ಪ ಏರಿಸ್ಕ್ಯಂಡು ಗಮ್ಮತ್ತಾಗಿ ಲೋಕಾನೆ ಮರ್ತು ಒಂದಸ್ಟೊತ್ತು ಇದ್ರೇನೆ ಮನ್ಸೀಗೆ ನೆಮ್ದಿ "

" ಆಯ್ತಣೋ ನಾ ಓಯ್ತಿದೀನಿ ಬರ್ಲಾ ? "

" ಹಾಂ "