ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 26, 2010

ಮಾನವ ಜನ್ಮ ದೊಡ್ಡದು-ಅದ ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'






[ಚಿತ್ರಗಳ ಋಣ : ಅಂತರ್ಜಾಲ ]





'ಮಾನವ ಜನ್ಮ

ದೊಡ್ಡದು-ಅದ

ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'



[೨೩.೦೨.೨೦೧೦ರ 'ವಿಜಯ ಕರ್ನಾಟಕ' ಲವಲvk ಯಲ್ಲಿ ಬರೆದ +ve ಥಿಂಕಿಂಗ್ ಗೆ ಪ್ರತಿಕ್ರಿಯೆ !]

ಇವತ್ತಿನ ಜೀವ ವಿಕಾಸ ವಾದ, ನಮ್ಮ ನಮ್ಮ ಅನಿಸಿಕೆ ಇವುಗಳನ್ನೆಲ್ಲ ಮೊದಲೇ ತಮ್ಮ ನೈಷ್ಥಿಕ ತಪಸ್ಸಿದ್ಧಿಯಿಂದ ಮುಂದಾಲೋಚಿಸಿದ್ದ ನಮ್ಮ ಋಷಿಮುನಿಗಳು ಎಲ್ಲವನ್ನೂ ಉಪನಿಷತ್ತು-ಪುರಾಣಗಳಲ್ಲಿ ದಾಖಲಿಸಿದರು, ಒಮ್ಮೆ ಹೀಗೆ ಯೋಚಿಸೋಣ ಹಳ್ಳಿಯಲ್ಲಿ ಒಬ್ಬ ಪೆದ್ದ ಇದ್ದ, ಆತನ ಹೆಸರು 'ಗಿಣಿಯ' ಅಂತಿಟ್ಟುಕೊಳ್ಳೋಣ. ಗಿಣಿಯನಿಗೆ ಓದು-ಬರಹ ಬಾರದು, ಅವನ ಪಾಡಿಗೆ ಅವನು ಅಲೆಯುತ್ತಾ , ಬೇಡುತ್ತಾ ಜೀವಿಸುತ್ತಿದ್ದ. ಅವನಿಗೆ ನಾನು ಭಾಷಾಶಾಸ್ತ್ರದ ನಿಘಂಟು ಕೊಟ್ಟರೆ ಆತ ಅದನ್ನು ಬಿಸಾಕಿದರೂ ತಪ್ಪಿಲ್ಲ, ಮಂಗನಿಗೆ ಮಾಣಿಕ್ಯದ ಅರಿವುಂಟೇ ? ಹೀಗೇ ಇವತ್ತು ಇಂಗ್ಲೀಷ್ ಕಲಿತು, ಡಿಗ್ರಿ ಮುಗಿಸಿದ ಮಾತ್ರಕ್ಕೆ ಆಪಾರ ವಿದ್ಯಾ ಆಗರ-ಸಾಗರವಾದ ವೇದ-ಪುರಾಣ-ಮಹಾಕಾವ್ಯಗಳು ನಮಗೆ ಅರ್ಥವಾಗಬೇಕಿಲ್ಲ, ಹೇಗೆ ಬಾವಿಯ ಆಳದಲ್ಲಿ ಬಿದ್ದಿರುವ ಏನನ್ನೋ ಹುಡುಕಲು ನೀರಲ್ಲಿ ಮುಳುಗಬೇಕಾಗುತ್ತದೋ[ಅದಕ್ಕೂ ಜಾಣ್ಮೆ ಬೇಕು,ಯುಕ್ತಿ ಬೇಕು,ಈಜು ಬರಬೇಕು ಅಲ್ಲವೇ ? ] ಆ ಮಹಾನ್ ಗ್ರಂಥಗಳಲ್ಲಿ ಸಂಪೂರ್ಣ ತನ್ಮಗ್ನರಾದರೆ ಮಾತ್ರ ಜ್ಞಾನ ಒಲಿದೀತು. ಅದಕ್ಕೇ ನಮ್ಮ ಸರ್ವಜ್ಞಕವಿ ನೇರವಾಗಿ-ಖಾರವಾಗಿ ಹೇಳುತ್ತಾನೆ -

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೆ | ಸರ್ವಜ್ಞ

ಉಪವಾಸ-ವೃತ ಇವುಗಳನ್ನೆಲ್ಲ ಕೈಗೊಳ್ಳದೆ ರಾಜಕಾರಣಿಗಳ ಥರ ಎಲ್ಲವನ್ನೂ ನುಂಗಿ ಆಪೋಶನ ತೆಗೆದುಕೊಂಡು ಹೊಟ್ಟೆಬೆಳೆಸಿಕೊಂಡು " ನನಗೆ ಸ್ವರ್ಗ ಕೊಡಿ- ತ್ರೀ ಟೈರ್ ಎ.ಸಿ.ಫಸ್ಟ್ ಕ್ಲಾಸ್ " ಅನ್ನಲಿಕ್ಕೆ ಅದು ದುಡ್ಡುಕೊಟ್ಟು ಕೊಂಡು ಕೊಳ್ಳುವ ಯಾವುದೇ ರಂಡೆಯಾಳುವ ಆಸ್ಥಾನವಲ್ಲ ಅಂತಾನೆ ! ಅದರರ್ಥ ನಾವು ಪ್ರಯತ್ನಶಾಲಿಗಳಾಗಬೇಕು, ಇರುವುದರಲ್ಲಿ ಜಪ-ತಪಾದಿ ನಿತ್ಯಾನುಷ್ಥಾನ ಮಾಡಬೇಕು, ಅವಿರತ ಪ್ರಯತ್ನದಿಂದ ಪ್ರಾರ್ಥಿಸಿ, ಒಲಿಸಿ, ಓಲೈಸಿ ಪಡೆಯಬಹುದಾದ ಮಹತ್ತರದ ಸ್ಥಾನ! ಹೇಗೆ ಮುಖ್ಯಮಂತ್ರಿಯಾಗಲು, ಪ್ರಧಾನಮಂತ್ರಿಯಾಗಲು,ರಾಷ್ಟ್ರಪತಿಯಾಗಲು ನಿರಂತರ ರಾಜಕೀಯದ ಒಲವು, ಒತ್ತಾಸೆ, ಅರ್ಪಣೆ-ತಲ್ಲೀನತೆ, ತಕ್ಕ ಮಟ್ಟದ ವಿದ್ಯೆ , ಆಡ್ಯತೆ, ಅರ್ಹತೆ ಬೇಕೋ ಹಾಗೇ ಇಲ್ಲಿಕೂಡ ಅದಕ್ಕೆ ಅದಕ್ಕಿಂತ ಹಿರಿದಾದ 'ಇಂದ್ರಿಯ ನಿಗ್ರಹ'ವೆಂಬ ಯೋಗದ ಅನುಸಂಧಾನ ಬೇಕು.

ನಮಗೆ ಅರ್ಥವಾಗಿಲ್ಲ ಅಂದಮಾತ್ರಕ್ಕೆ ಮಹಾಕವಿಯ/ದಾರ್ಶನಿಕರ ಮಹಾಕಾವ್ಯಗಳು ಅರ್ಥಹೀನ ಎಂಬ ಇತ್ತೀಚಿನ ಪತ್ರಿಕಾ ಹೇಳಿಕೆಗಳೆಲ್ಲ ಬಹಳ ನೋವು ತರಿಸುತ್ತವೆ. ಸರಿಯಾದ ಮಾರ್ಗದರ್ಶನ ಮಾಡಬೇಕಾದ ಪತ್ರಿಕೆಗಳೇ ಹೀಗಾದವೇ? ಜಗದ ಜೀವರಾಶಿಯಲ್ಲಿ ಪಶು-ಪಕ್ಷಿಗಳಾದಿಯಾಗಿ ಎಲ್ಲವೂ ನೋವನ್ನು -ಯಾತನೆಯನ್ನು ಅನುಭವಿಸುತ್ತವೆ, ಜಗಳ ಕಾಯುತ್ತವೆ, ಕಣ್ಣೀರಿಡುತ್ತವೆ. ಇದನ್ನು national geographic, discovery, animal planet ಮುಂತಾದ ಹಲವಾರು ಮಾಧ್ಯಮ ವಾಹಿನಿಗಳಲ್ಲಿ ತಾವು ನೋಡಿರುತ್ತೀರಿ! ಅವುಗಳಿಗೆ ಬಾಗಿ ನಮಿಸಲು, ಕಣ್ಣೀರು ಒರೆಸಿಕೊಳ್ಳಲು ಕೈಯಿಲ್ಲ. ಮೇಲಾಗಿ ಅವು not so evolved ಅಂತ ನಾವು ಹೇಳಬಹುದು. ಅವು ತಪ್ಪು ಮಾಡುವುದಿಲ್ಲ-ಬೇರೆಯವರ ಹಕ್ಕನ್ನು ಕಸಿಯುವುದಿಲ್ಲ ಎನ್ನುವುದೆಲ್ಲ ಸರಿಯಲ್ಲ-ಅವುಗಳನ್ನೇ ನೋಡುತ್ತಿರಿ ತಿಳಿಯುತ್ತದೆ,ಬಹಳ ಹಿಂಸೆಯಿಂದ ಹೆದರಿಕೆಯಿಂದ ಜೀವಿಸುವ ಜೀವನ ಅವುಗಳ ಪಾಡು ! ಒಂದನ್ನೊಂದು ಕೊಂದು ತಿಂದು ತೇಗುತ್ತದೆ, ಅಲ್ಲಿ ಇನ್ನೊಂದೆಡೆ ತಾಯಿಯೋ, ಮಗುವೋ ಯಾವುದನ್ನೋ ಕಳೆದುಕೊಂಡ ಇನ್ನೊಂದು ಸಂಕುಲ ಮರುಗುತ್ತದೆ-ಹಂಬಲಿಸಿ ಗೋಳಿಡುತ್ತದೆ. ಮೂಕ ರೋದನ ಅವುಗಳದು. ಹೀಗಾಗಿ ಮನುಷ್ಯಮಾತ್ರ ತಪ್ಪುಮಾಡಿ ತಪ್ಪಿನ ಅರಿವಾದಾಗ, ತನ್ನ ಮನಸ್ಸಿನಲ್ಲಿ ಸ್ಥಿರತೆ ಇರದಾಗ ದೇವರೆಂಬ ಶಕ್ತಿಯನ್ನು ಜಾಸ್ತಿಯಾಗಿ ಅವಲಂಬಿಸುತ್ತಾನೆ ಎಂಬುದು ಮೂರ್ಖರ ಮಾತಾಗದೆ ಇನ್ನೇನೂ ಇಲ್ಲ! ಈ ಹಿಂದೆ ನಾನು ಹೇಳಿದ ಹಾಗೇ ದಾಸರೆಲ್ಲ ಸಾರಿದರು

ಮಾನವ ಜನ್ಮ ದೊಡ್ಡದು
ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ
.... ಎಂದೆಲ್ಲ ವಿವರಣೆ ಸಹಿತ, with proof ಅವರು ತೋರಿಸಿದ್ದಾರೆ, ಹಾಗಾದರೆ ಅವರೆಲ್ಲಾ ಹುಚ್ಚರೇ?

ಮನುಷ್ಯ ಪ್ರಾಮಾಣಿಕನಾಗಿರಬೇಕು, ಸತ್ ಚಿಂತನೆ, ಸತ್ಕಾರ್ಯ ಇವುಗಳನ್ನು ಮಾಡುತ್ತಾ || ಪರೋಪಕಾರಾರ್ಥಮಿದಂ ಶರೀರಂ || ಎಂಬ ರೀತಿಯಲ್ಲಿ,ಮಾರ್ಗದಲ್ಲಿ ನಡೆಯಬೇಕಾದ್ದು ನಮ್ಮ ಕರ್ತವ್ಯ. ವಿಚಾರಮಾಡಿ ! ಈ ದೇವರೆಂಬ ನಂಬಿಕೆಯೇ ಕೆಟ್ಟದ್ದರ ಯೋಚನೆಯನ್ನು ತಪ್ಪಿಸುತ್ತದೆ!! ಹಲವರು ಕೆಲವರನ್ನು ಪರಿಚಯಿಸುವಾಗ ಇಂಗ್ಲೀಷ್ ನಲ್ಲಿ God Fearing Man ಅಂತ ನನ್ನೆದುರು ಹೇಳಿದ್ದನ್ನು ಕೇಳಿದ್ದೇನೆ, ಯಾಕೆ ? ಅದರರ್ಥ the other man who is introduced by him is dependable,loyal,faithful ಎಂದಲ್ಲವೇ ಆತ ಹೇಳಿರುವುದು?

ಒಂದು ಸತ್ಯವನ್ನು ಒಪ್ಪಿಕೊಳ್ಳೋಣ, ಅದು ಯಾರೇ ಬರೆದಿದ್ದಿರಲಿ, 'ಭಗವದ್ಗೀತೆ' ಎಂಬ guide ಜೀವನಕ್ಕೆ ಯಶೋಗಾಥೆ ಬರೆಯಲು ಉಪಕಾರಿ, ಜಗತ್ತಿನಲ್ಲಿಯೇ ಇಂತಹ ಅದ್ಬುತ ಗ್ರಂಥ ಮತ್ತೊಂದಿಲ್ಲ ! ಪ್ರತಿಯೊಂದು ಹಂತದಲ್ಲಿ ಅದರಲ್ಲಿ ಶ್ರೀಕೃಷ್ಣ ಅರ್ಜುನನನ್ನು ನೆಪವಾಗಿಸಿ ಜೀವನಕ್ಕೆ ಬೇಕಾದ ತತ್ವವನ್ನೆಲ್ಲ ಬೋಧಿಸುತ್ತಾನೆ. ಇವತ್ತು ಚಾನೆಲ್ ಗಳಲ್ಲಿ ಅಡುಗೆ ಹೇಳಿಕೊಡುತ್ತಿದ್ದರೆ,ಕೆಟ್ಟಧಾರಾವಾಹಿಗಳು ಬಿತ್ತರಗೊಳ್ಳುತ್ತಿದ್ದರೆ ನಮ್ಮ ಹೆಂಗಳೆಯರು ಬಹುತೇಕರು ಅದಕ್ಕೆ ಅಂಟಿಕೊಂಡಿರುತ್ತಾರೆ, ಮನೆಯಲ್ಲಿರುವ ಸಣ್ಣ ಮಕ್ಕಳೂ ಅವರನ್ನೇ ಅನುಸರಿಸುತ್ತವೆ, ಅದೇ ದೇವರ ಧ್ಯಾನಕ್ಕೆ, ಒಳಿತಿನ ಚಿಂತನೆಗೆ ಅವರಿಗೆ ಸಮಯವೇ ಇಲ್ಲ, ಇದು ನಮ್ಮ ಗಂಡಸರಲ್ಲೂ ಕಮ್ಮಿಯೇನಿಲ್ಲ, ಮೊನ್ನೆ ಒಬ್ಬ ವ್ಯಕ್ತಿ ನನಗೆ ಹೇಳಿದರು ನನಗೆ ಓದಲಿಕ್ಕೆಲ್ಲ ಸಮಯವೇ ಇರುವುದಿಲ್ಲ! ಯಾವುದಕ್ಕೂ ಸಮಯ ಇರುವುದಿಲ್ಲ ಸ್ವಾಮೀ, ಸಮಯ ಮಾಡಿಕೊಳ್ಳಬೇಕು. ಒಬ್ಬ ವೈದ್ಯನಲ್ಲಿಗೆ ಹೋಗಲು, ಸಿನಿಮಾ ನೋಡಲು, ಹುಟ್ಟಿದಹಬ್ಬ-ಮದುವೆ-ಮುಂಜಿ ಇವುಗಳಿಗೆ ಹೋಗಲು, ಕಚೇರಿಯ ಪಾರ್ಟಿಗೆ ಹೋಗಲು, ಟಿವಿ ನೋಡಲು ಇದಕ್ಕೆಲ್ಲ ಸಮಯ ಮಾಡಿಕೊಳ್ಳುವ ನಿಮಗೆ ಓದುವ ಒಳ್ಳೆಯ ಹವ್ಯಾಸಕ್ಕೆ ಸಮಯವಾದರೂ ಹೇಗೆ ಬರಬೇಕು ಪಾಪ ! ಇನ್ನೊಮ್ಮೆ ಮುಂದಿನ ಜನ್ಮದಲ್ಲಾದರೂ ಬಿಡುವು ಮಾಡಿಕೊಂಡು ಓದಿ!

ನಮ್ಮಂತಹ ಸಮಯವಿಲ್ಲದ ಹುಚ್ಚರು ಅರ್ಥಮಾಡಿಕೊಳ್ಳಲಿ ಅಂತ ಅಂತಹ ಭಗವದ್ಗೀತೆಯ ಸಾರವನ್ನೆಲ್ಲ ಹೀರಿ ನಮ್ಮ ಡೀವೀಜಿ ಎಂಬ ಮಹಾನ್ ದಾರ್ಶನಿಕ ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ, ಜೀವನ ಧರ್ಮಯೋಗ --ಈ ಹೊತ್ತಗೆಗಳನ್ನು ಬರೆದರೂ ಅವು ನಮಗೆ ಅರ್ಥವಾಗಬೇಕಲ್ಲ ಸ್ವಾಮೀ, ಇಲ್ಲೂ ಅದೇ ಕಥೆ, ಹಲವು ಸಿಕ್ಕುಗಳನ್ನು ಬಿಡಿಸಿದರೂ ಇನ್ನೂ ಕೆಲವು ನಮಗೆ ಸಿಕ್ಕಾಗೇ ಕಾಣುತ್ತವೆ! ಅಂದಮೇಲೆ ನಮ್ಮ ಯೋಗ್ಯತೆ ನಾವೇ ಅರ್ಥಮಾಡಿಕೊಳ್ಳಬೇಕಲ್ಲವೇ ? ಅದು ಬಿಟ್ಟು ಮಹಾನ್ ಕಾವ್ಯಗಳೆಲ್ಲ ಹಾಗೇ ಯಾರಿಗೂ ಅರ್ಥವಾಗುವುದಿಲ್ಲ ಎಂಬ ದುರ್ಬೋಧನೆ ಸರಿಯೇ ? ಅರ್ಥವಾಗದ , ಅರ್ಥಮಾಡಿಕೊಳ್ಳಲು ತಯಾರಿರದ ನಾವು , ರೆಡಿ ಮೇಡ್ ತಿಂಡಿಗಾಗಿ ಹಾತೊರೆಯುವ ನಾವು ಮೃಗಗಳಿಗಿಂತ ಭಿನ್ನ ಹೇಗೆ ? ನಮಗೆ ನಾವೇ

|| ಮನುಷ್ಯ ರೂಪೇಣ ಮೃಗಾಶ್ಚರಂತಿ || ಅಂದರೆ ತಪ್ಪೇನಿದೆ ?

ಮಾನ್ಯ ಪತ್ರಿಕೆಯವರೇ, ತಮ್ಮಲ್ಲಿಯ ವಿಜ್ಞಾನಿಗಳು ಚರ್ಮ-ಮಾಂಸಗಳಬಗ್ಗೆ , ಮೆದುಳಿನ ಬಗ್ಗೆ, ನಮ್ಮ ಸುತ್ತ ಆವರಿಸಿರುವ ಪ್ರಭಾವಳಿಯ ಬಗ್ಗೆ ಇನ್ನೂ Re-search [search ಅಲ್ಲ !] ಮಾಡುತ್ತಿದ್ದಾರೆ, ಅವುಗಳ ಬಗ್ಗೆ ನಮ್ಮ ವೇದ-ಪುರಾಣಗಳಲ್ಲಿ ಅವುಗಳನ್ನು ಬರೆದವರೇ ನಮೂದಿಸಿದ್ದಾರೆ, ನಮ್ಮ ಚರ್ಮದಲ್ಲಿ ೭ ಪದರಗಳಿವೆ, ನಮ್ಮ ಸುತ್ತ ಇಂತಿಷ್ಟು ವಲಯಗಳಿವೆ ಅಂತೆಲ್ಲ ಮೊದಲೇ ನಿಖರವಾಗಿ ಹೇಳಿದ್ದಾರೆ! [ನಮ್ಮ ನಾಸಾ ದವರೋ ಮತ್ತೆಲ್ಲಿಯ ಪೂಸಾದವರೋ ಕಂಡೆವು ಅಂತ ಹೇಳಿಕೆ ಕೊಟ್ಟರೇ ಸಾಕು,ನಾವು ಪುಳಕಿತರಾಗಿಬಿಡುತ್ತೇವೆ! ] ನಮ್ಮ ಪೂರ್ವಜರಿಗೆ ವಿಜ್ಞಾನ ಗೊತ್ತಿತ್ತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ! ಆದರೆ ಆರ್ಯಭಟನಂತಹ ಮೇಧಾವಿಗಳು ಖಗೋಳವನ್ನು ಕರಾರುವಾಕ್ಕಾಗಿ ಹೇಳಿದ್ದರು! ಆತ ಹೇಳಿದ ರಾಹು-ಕೇತುಗಳು ನೆಪ್ಚೂನ್ ಮತ್ತು ಪ್ಲುಟೋ ಎಂಬ ಹೆಸರನಿಂದ ಶತಮಾನಗಳ ನಂತರ ವಿದೇಶೀ ವಿಜ್ಞಾನಿಗಳಿಂದ ಹೇಳಲ್ಪಟ್ಟವು! ಇಂತಹ ವಿಷಯಗಳಲ್ಲಿ ನಾವು ಬಾಲಗ್ರಹ ಪೀಡಿತರು, ಪೂರ್ವಾಗ್ರಹ ಪೀಡಿತರು, ಅಮೇರಿಕಾಕ್ಕೆ ಕಿವಿಯೊಡ್ಡುವ ಹಿತ್ತಾಳೆ ಕಿವಿಯವರು!

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಬೇಡನೊಬ್ಬ ತನ್ನ ಜೀವನ ಪರಿವರ್ತನೆಯಿಂದ ಮುನಿಯಾಗಿ, ಕವಿ ವಾಲ್ಮೀಕಿಯಾಗಿ ರಾಮಾಯಣ ಮಹಾಕಾವ್ಯ -ಎಂಥ ಅದ್ಬುತ ಕಾದಂಬರಿಯನ್ನು ಬರೆದನಲ್ಲ, ಅಕ್ಷರ ಜ್ಞಾನವಿಲ್ಲದ ಅವನಲ್ಲಿ ಕುಳಿತು ಇಂತಹ ಮಹಾಕಾದಂಬರಿ ಬರೆಸಿದ ಶಕ್ತಿ ಯಾವುದು ?

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಮೂಕನನ್ನು ಮಾತನಾಡಿಸುವ, ಹೇಳವನನ್ನು-ಕುಂಟನನ್ನು ಪರ್ವತವೇರಿಸುವ, ಜಲಪ್ರಳಯದಿಂದ ಭೂಭಾಗವನ್ನೇ ಅಲ್ಲೋಲ-ಕಲ್ಲೋಲ [ಮೊನ್ನೆ ಉತ್ತರ ಕರ್ನಾಟಕದಲ್ಲಿ ನಮ್ಮ ರಾಜಕಾರಣಿಗಳು-ವಿಜ್ಞಾನಿಗಳು ನಿಂತು ಮಳೆ ತಡೆಯಲಾಯಿತೇ?] ಮಾಡುವ-ಮಾಡದಿರುವ, ಸುನಾಮಿ ತರುವ-ತರದಿರುವ ಹಿರಿದಾದ ಒಂದು ಶಕ್ತಿ ಇದೆ ಅನ್ನುವುದನ್ನು ಇನ್ನಾದರೂ ನಂಬಿ. ಆ ಶಕ್ತಿಯನ್ನೇ ನಾವು ದೇವರೆಂದು ಕರೆದರೆ ತಪ್ಪೇ ?

ನಮ್ಮ ವಿಮಾನಗಳು ಬರುವುದಕ್ಕಿಂತ ಮುಂಚೆ ವಿಮಾನ ಎಂಬ ಕಲ್ಪನೆಯಿರದೆ ರಾಮಾಯಣದ ಕವಿ ವಾಲ್ಮೀಕಿ, ಪುಷ್ಪಕ ವಿಮಾನವೆಂದು ಬರೆದನೇ ? ಇಂದು ನಾವು ಅಂತಹ ಒಳ್ಳೆಯ ಶಬ್ಧಗಳನ್ನೆಲ್ಲ ಕೆಟ್ಟ ಸಿನಿಮಾಗಳಿಗೆ ಇತ್ತು ಜಗತ್ತನ್ನು ಉದ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೇವೆ ! ಎಷ್ಟೋ ಸಲ ಕಣ್ಣಿದ್ದೂ ಜಾಣ ಕುರುಡರೂ ಕಿವಿಯಿದ್ದೂ ಜಾಣ ಕಿವುಡರೂ ಬಾಯಿದ್ದೂ ಜಾಣ ಮೂಕರೂ ಆಗಿಬಿಡುತ್ತೇವೆ! ನಮಗೆ ಬೇಕಾದ್ದಕ್ಕೆಲ್ಲ ತೆರೆದುಕೊಳ್ಳುತ್ತೇವೆ- ಈ ತತ್ವವನ್ನು ನಮ್ಮ ಮಹಾಕಾವ್ಯಗಳಲ್ಲಿ ಹೇಳಿಲ್ಲ ! ಹಾಗಾಗಿ ಅವು ಅರ್ಥವಾಗದ, ಅನುಪಯುಕ್ತ ಪುಸ್ತಕದ ಬದನೆಕಾಯಿಗಳು ! ತೃಪ್ತಿಯೇ ತಮಗೆ ?

ಶಂಕರಾಚಾರ್ಯರೆಂಬ ಒಬ್ಬ ಸನ್ಯಾಸಿ ಮನುಷ್ಯಮಾತ್ರನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಕೇವಲ ತನ್ನ ೩೨ ವರ್ಷ ಆಯುಷ್ಯದೊಳಗೆ ಪೂರೈಸಿ ಮಹಾನ್ ಮಹಾನ್ ಉದ್ಗ್ರಂಥಗಳನ್ನೆಲ್ಲ ಕೊಟ್ಟರಲ್ಲ ಅವರೂ ಹುಚ್ಚರೇ ಹಾಗಾದರೆ ?

ಅಲ್ಲ, ನಾವು ಹುಚ್ಚರು, ನಮ್ಮೀ ಸುತ್ತಲ ಭ್ರಮಾ ಜಗತ್ತು ಹುಚ್ಚಿನದು ಹೀಗಾಗಿ ಕಾಮಾಲೆ ರೋಗದವರಿಗೆ ಲೋಕವೆಲ್ಲ ಹಳದಿ ಹೇಗೋ ಹಾಗೇ ನಿಜದ ಅರಿವಿರದೆ ಹುಚ್ಚರಾದ ನಮಗೆ ಮಹಾ ಕವಿಗಳು-ದಾರ್ಶನಿಕರು ಹುಚ್ಚರಾಗಿ ಕಾಣುತ್ತಾರೆ, ಸ್ವಾಮೀ ಪತ್ರಕರ್ತರೇ, ದಯವಿಟ್ಟು ಅದನ್ನು ತಿದ್ದಿ ಬರೆಯಿರಿ, ಇನ್ನಾದರೂ ನಮ್ಮ ಕಾಮಾಲೆ ರೋಗ ವಾಸಿಯಾಗಲಿ ಆಗದೇ ?

ಹಿನ್ನೆಲೆಯಲ್ಲಿ ನಮ್ಮೆಲ್ಲ ದಾಸರಿಗೆ-ಕವಿಜನಸಂದಣಿಗೆ ಬಲಬಂದು ಈ ಸ್ತುತಿಗೀತೆಯನ್ನು ಬರೆಯುತ್ತಿದ್ದೇನೆ, ಆಸ್ತಿಕರೇ, ಬದುಕಿನಲ್ಲಿ ಆಸ್ತೆಯಿರುವ ಮಾಹಾಜನಂಗಳೇ ನೀವು ಓದಿ ಅನುಭವಿಸಿ ಸುಖಿಸಿದರೆ ಅದಕ್ಕಿಂತ ಬೇರೆ Certificate ಬೇಕೇ?

ಈಶನೆನಲೇ ಗಣೇಶನೆನಲೇ

ಈಶನೆನಲೇ ಗಣೇಶನೆನಲೇ ಹರಿ ಕರೆವೆ ನಿನ್ನ ವಿಧದಿ
ಏಸುದಿನದಿ ನಾವ್ ಕಲಿತರು ಬರಡದು ಬರಿದೆ ಮೂರ್ಖತನದಿ !

ವ್ಯಸನಕಳೆಯೇ ಬರೆಯಲು ತೊಡಗುತ ನಾವ್ ಮಸಿಯ ಬಳಿದುಕವಿಗೆ
ಉಸಿರಿನರ್ಥ ಅರಿವಾಗದೆ ಉರಿದೆವು ದಿನದ ಗಳಿಗೆ ಗಳಿಗೆ

ಕುಶಲತನದಿ ತನ್ನ ಕಸುವಿನಲ್ಕಡೆಯುತ ಕೊಡಲು ಮಹಾಕಾವ್ಯ
ವಶವಪ್ಪುದೆ ಈ ಲೋಕದ ಜನತೆಗೆ ಬಯಸುವರದೇ 'ನವ್ಯ'!

ಅತಿಶಯ ಪರಮಾನಂದದ ಚಂದದ ನಿನ್ನ ಸನ್ನಿಧಿಯಲಿ
ಗತಿಯಿದಷ್ಟು ಸರಿ ಬರದು ನನಗೆ ಅಹವಾಲು ಪದತಲದಲಿ

ಇನಿತು ಮೂರ್ಖರು ನಾವ್ ಏನೂ ಅರಿಯೆವು ಮನಸುತುಂಬೀಜಗವು
ಘನತೆಯೆಂಬ
ಗಾಢಾಂಧಕಾರದಲಿ ಎಲ್ಲವ ಮರೆತಿಹೆವು

ಗಣಿಸುನಮ್ಮ ಇತಿ ಮಿತಿಯನೆಲ್ಲ ಮತಿಹೀನರು ನಾವುಗಳು
ಕ್ಷಮಿಸುನಮ್ಮ ತಿದ್ದುತ ಅರೆಗಳಿಗೆಯೂ ಕುಶಲದಿ ಪ್ರಾರ್ಥಿಪೆವು

ಕಾಲೇ ವರ್ಷತು ಪರ್ಜನ್ಯಃ
ಪೃಥಿವೀಂ ಸಸ್ಯ ಸಸ್ಯಶಾಲಿನೀ|
ದೇಶೋಯಂ ಕ್ಷೋಭ ರಹಿತೋ
ಸಜ್ಜನಾಃ ಸಂತು ನಿರ್ಭಯಾಃ ||

ಸ್ವಸ್ತಿಃ
ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಮಹಿಂ ಮಹೀಷಃ|
ಗೋ
ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾ ಸಮಸ್ತಾ ಸುಖಿನೋ ಭವಂತು||

|| ಅಕ್ಷರದಾತಾ ಸುಖೀ ಭವ ||

Thursday, February 25, 2010

ಮಹಾಬಲರಿಗೆ ಕಾವ್ಯ-ನಮನ


ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಹಾಗೂ ಉಡುಪಿ ಮಲೆನಾಡುಗಳಲ್ಲಿ ವ್ಯಾಪಕವಾಗಿಯೂ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೇರೆ ಬೇರೆ ಪ್ರಾಕಾರಗಳಿಂದಲೂ ಕಂಗೊಳಿಸುವ ಕಲೆ ಯಕ್ಷಗಾನ. ಬಡಗು,ತೆಂಕು ಮತ್ತು ಬಡಾಬಡಗು ಪ್ರಾಕಾರಗಳು ಮುಖ್ಯವಾದವುಗಳು. ಅವುಗಳಲ್ಲಿ ನವರಸಗಳನ್ನೂ, ಮುನಿ ಭರತೇಶನ ಭರತನಾಟ್ಯದ ಹಲವು ಭಂಗಿಗಳನ್ನೂ, ಸಾಟಿಯಿಲ್ಲದ ಅತಿ ವಿಶಿಷ್ಟ ವೇಷಭೂಷಣಗಳನ್ನೂ, ಸಂಗೀತದ ಅನೇಕ ಸುಲಲಿತ ರಾಗಗಳನ್ನೂ-ತಾಳಗಳನ್ನೂ,ಅತ್ಯುಕೃಷ್ಟ ಹಾವ-ಭಾವ ಭಂಗಿಗಳನ್ನೂ, ಹಿತಮಿತವಾದ ಹಿಮ್ಮೇಳ ವಾದ್ಯಗಳೊಂದಿಗೆ ದೃಶ್ಯಮಾಧ್ಯಮದ ಮುಖಾಂತರ ದಶಾವತಾರದ ವಿಭಿನ್ನ ಪ್ರಸಂಗಗಳನ್ನು ಪ್ರದರ್ಶಿಸಿ, ಜನರಲ್ಲಿ ರಾಮಾಯಣ-ಮಹಾಭಾರತವೇ ಮೊದಲಾದ ಕಥೆಗಳನ್ನು ಜಾಗೃತಗೊಳಿಸಿ, ಸಮಾಜದ ಒಳಿತಿಗೆ ಜನರ ಮನೋಭೂಮಿಕೆಯನ್ನು ಪ್ರಚುರಪಡಿಸುವ ಕಲೆ ಅತ್ಯಂತಹೆಮ್ಮೆಯ ಕಲಾ ವೈಭವ. ಒಮ್ಮೆ ಇನ್ನೂ ನೋಡಿರದೆ ಹೊಸದಾಗಿ ಒಮ್ಮೆ ನೋಡಿದವರನ್ನೂ ಕೂಡ ತನ್ನತ್ತ ಕೈಬೀಸಿ ಸೆಳೆದುಕೊಳ್ಳುವ ಸಮಗ್ರ ಕಲಾ ಸಂಪತ್ತು ! ದಶಕಗಳ ಕಾಲ ಕ್ಷೇತ್ರದಲ್ಲಿ ಸತತ ತನ್ನನ್ನು ತೊಡಗಿಸಿಕೊಂಡು, ಕವಿ-ಸಾಹಿತಿಗಳಂತೆ ಅದನ್ನೇ ಬದುಕಿ, ಅದರಬಗ್ಗೆ ಸದಾ ಚಿಂತಿಸುತ್ತಾ, ಬಡಾಬಡಗಿಗೆ ತನ್ನದೇ ಆದ ಛಾಪು ಒತ್ತುವಲ್ಲಿ ಸಂಪೂರ್ಣ ಯಶಸ್ವಿಯಾದ ಡಾ| ದಿ|ಶ್ರೀ ಮಹಾಬಲ ಹೆಗಡೆ, ಕೆರೆಮನೆ ಇವರು ಕಳೆದ ೨೯ ಅಕ್ಟೋಬರ್ ೨೦೦೯ ಗುರುವಾರ ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಅಳಿಕೆಯಲ್ಲಿ ತಮ್ಮ 'ವೇಷ'ವನ್ನು ಮುಗಿಸಿದರು.


ಕೆರೆಮನೆ ಮೇಳದಲ್ಲಿ ದಿ|ಶ್ರೀ ಶಿವರಾಮ ಹೆಗಡೆ ದಿ |ಶ್ರೀ ಶಂಭು ಹೆಗಡೆ ದಿ| ಶ್ರೀ ಮಹಾಬಲ ಹೆಗಡೆ ಇವರೆಲ್ಲ ನಡೆದಾಡುವ ವಿಶ್ವವಿದ್ಯಾಲಯಗಳಂತೆ ಇದ್ದರು ಎಂದರೆ ತಪ್ಪಾಗಲಾರದು, ದಿನಂಪ್ರತಿ ಓದುತ್ತ, ಹೊಸತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತ ಕಲಾಪ್ರಕಾರಕ್ಕೆ ಮೆರುಗನ್ನೂ 'ಚಿನ್ನ-ಬೆಳ್ಳಿಯಕಿರೀಟವನ್ನೂ ', ರಾಷ್ಟ್ರ-ರಾಜ್ಯ ಪ್ರಶಸ್ತಿಗಳನ್ನೂ ತಂದುಕೊಟ್ಟ ಮಹನೀಯರು. ಶಂಭು ಹೆಗಡೆಯವರ ಅತಿ ಪರಿಶ್ರಮದಿಂದ ವಿದೇಶಗಳಲ್ಲೂ ಕಲೆ ಮಾನ್ಯತೆ ಪಡೆಯಿತು ! ಅದರಲ್ಲಂತೂ ಸರಕಾರ ಕೊಟ್ಟ ಮಾಶಾಸನವನ್ನು ಧಿಕ್ಕರಿಸಿ ವಾಪಸ್ಸಾಗಿಸಿದ ದಿ| ಮಹಾಬಲ ಹೆಗಡೆ ಬಹಳ ಸ್ವಾಭಿಮಾನೀ ವ್ಯಕ್ತಿಯಾಗಿದ್ದರು; ಯಾರಿಗಾಗಿ ಕಲೆಯಲ್ಲ-ಬದಲಾಗಿ ತನ್ನ ಸಂತುಷ್ಟಿಗಾಗಿ ತಾನು ಹಾಡಿ-ಕುಣಿಯುತ್ತೇನೆಂಬ ಛಲಹೊಂದಿದ್ದರು, ನಮ್ಮ ಹಿರಿಯ ಸಾಹಿತಿ ಮುತ್ಸದ್ದಿ ದಿ| ಕೋಟ ಶ್ರೀ ಶಿವರಾಮ ಕಾರಂತರ ಬಾಯಿಂದಲೂ ಶಹಬಾಸ್ ಪಡೆದವರು!

ಒಂದೇ ವರ್ಷದಲ್ಲಿ ಅಣ್ಣ-ತಮ್ಮ [ಮಹಾಬಲ-
ಶಂಭು] ಇಬ್ಬರನ್ನೂ ಕಳೆದುಕೊಂಡು ಯಕ್ಷಗಾನಕ್ಷೇತ್ರ ನಿಜವಾಗಿಯೂ ಬಡವಾಯಿತು, || ಜಾತಸ್ಯ ಮರಣಂ ಧ್ರುವಂ || ಬಂದವರು ಮರಳಲೇ ಬೇಕಲ್ಲವೇ ? ಎಲ್ಲಿಂದ ಬಂದೆವೆಂಬುದು ಗೊತ್ತಿಲ್ಲ, ಎಲ್ಲಿಗೆ ಹೊರಟೆವೆಂಬುದು ತಿಳಿದಿಲ್ಲ, ಆದರೆ ಪ್ರಕ್ರಿಯೆ ನಡೆದೇ ಇದೆ! ಇರುವವರೆಗೆ ನಾವು ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಳ್ಳುತ್ತೇವೆ. ಬಂದು-ಹೋಗುವ ನಡುವಿನ ಕಾಲ ಯಾರಿಗೆ ಎಷ್ಟೆಂಬುದು ಯಾರಿಂದಲೂ ಗುರುತಿಸಲ್ಪಟ್ಟಿಲ್ಲ ! ಇದೇ ಜೀವನ. ಶ್ರೀಯುತ ಶಂಭು ಹೆಗಡೆ ಅನೇಕ ಸಲ ವೇದಿಕೆಯಲ್ಲಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಅಂತ ಪ್ರಾಜ್ಞರು ಹೇಳಿದ್ದಾರೆ " ಎನ್ನುತ್ತಿದ್ದುದನ್ನು ಕೇಳಿದ್ದೆ, ಅವರೂ ಅದಕ್ಕೆ ಅಷ್ಟುಬೇಗ ಸಾಕ್ಷೀಭೂತರಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾವ ದೇವರನ್ನು ನಂಬಿ ನೆಚ್ಚಿ ನಡೆದರೋ ಅಂತಹ ದಿವ್ಯ ಸಾನ್ನಿಧ್ಯದಲ್ಲಿ, ಅದೂ ಮರ್ಯಾದಾಪುರುಷೋತ್ತಮನಾದ 'ಶ್ರೀರಾಮನಾಗಿ' , ಆವೇಷದಲ್ಲಿ ತನ್ನ ಬದುಕಿನ ವೇಷವನ್ನು ತೆರೆಗೆ ಸರಿಸಿಬಿಟ್ಟರು ಎಂಬುದನ್ನು ಟಿ.ವಿ. ಬಿತ್ತರಿಸಿದಾಗ ತಡೆಯಲಾರದೆ ಆತ್ತೆ, ಎರಡುದಿನಗಳ ತರುವಾಯ ಅವರ ಮಗ ಶಿವಾನಂದರಿಗೆ ದೂರವಾಣಿಯಲ್ಲಿ ಮಾತನಾಡಿದೆ-ಮನಸಂತೈಸಿಕೊಂಡೆ. ಮಹಾಬಲರು 'ಚೌಕಿ'ಗೆ ತೆರಳಿದಾಗ ಅಂಥದಕ್ಕೆ ಆಸ್ಪದ ದೊರೆಯಲಿಲ್ಲ. ಹೀಗಾಗಿ ಭಾವಜೀವಿಯಾದ ನನ್ನ ಕಣ್ಣ ಹನಿಗಳೇ ಅವರಿಗೆ ಕಾಣಿಕೆಯಾದವು. ಇಂದು ಅವರಬಗ್ಗೆ ಕಾರ್ಯಕ್ರಮ ಏರ್ಪಟ್ಟಿದೆ -ಬೆಂಗಳೂರಿನ ಮಲ್ಲೇಶ್ವರದ-ಹವ್ಯಕ ಸಭಾಂಗಣದಲ್ಲಿ, ನಾಡಿದ್ದು ಭಾನುವಾರ ೨೮.೦೨.೨೦೧೦ ರಂದು[ಕಾರ್ಯಕ್ರಮದ ರೂವಾರಿಯಾದ ಶ್ರೀ ಜಿ.ಎಸ್.ಹೆಗಡೆಯವರು ತಮ್ಮ 'ಸಪ್ತಕ'ಎಂಬ ಟ್ರಸ್ಟ್ ವತಿಯಿಂದ ಇದನ್ನು ಆಯೋಜಿಸಿದ್ದಾರೆ,ನನಗೆ ಅವರು ಕಳಿಸಿದ ಆಮಂತ್ರಣದ ಪ್ರತಿಯನ್ನು ತಮಗೆಲ್ಲಾ ಇಲ್ಲಿ ಕೊಡುತ್ತಿದ್ದೇನೆ],ವಿಷಯ ತಿಳಿದು ಬಹಳ ಸಂಬ್ರಮಿಸಿದವರಲ್ಲಿ ನಾನೂ ಒಬ್ಬ. ಅವರ ಸಂಗೀತ,ಶಹನಾಯಿವಾದನ ಇದರ ಬಗ್ಗೆ ಕೇಳಿ ಗೊತ್ತೇ ಹೊರತು ಅದನ್ನು ಆಸ್ವಾದಿಸುವ ಅವಕಾಶ-ಅನುಕೂಲ ನನಗೊದಗಲಿಲ್ಲ. ಆದರೂ ಅವರ ಪಾತ್ರಗಳನ್ನು ಮನಸಾರೆ ಕಣ್ತುಂಬಿಸಿಕೊಂಡು ಚಪ್ಪಾಳೆ ತಟ್ಟಿದವರಲ್ಲಿ ಚಿಕ್ಕ ಪ್ರೇಕ್ಷಕನಾಗಿ ನಾನೂ ಒಬ್ಬ. ಗತಿಸಿದ ಎರಡೂ ನಕ್ಷತ್ರಗಳಿಗೆ ಭಗವಂತ ಶ್ರೀ ಇಡಗುಂಜಿ ಮಹಾಗಣಪತಿ ಸದ್ಗತಿ ಕೊಡಲಿ, ಅವರು ಮತ್ತೆ ಹುಟ್ಟಿ ಯಕ್ಷಗಾನವನ್ನು ಮುನ್ನಡೆಸಲಿ ಎಂದು ಪ್ರಾರ್ಥಿಸಿ ಸ್ವಸಂತೋಷಕ್ಕಾಗಿ ಬರೆದುಕೊಂಡ ಹಾಡನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ --

ಖ್ಯಾತ ಹಿಂದುಸ್ತಾನೀ ಗಾಯಕ ಶ್ರೀ ವೆಂಕಟೇಶಕುಮಾರ್ ಹಾಡಿರುವ 'ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ....' ಹಾಡಿನ ದಾಟಿಯಲ್ಲಿ ಇದನ್ನು ಬರೆದಿದ್ದೇನೆ.

ಮಹಾಬಲರಿಗೆ ಕಾವ್ಯ-ನಮನ
ಬಿಡದೆ ಬಾಧಿಸುತಿಹುದು ಭೀಷ್ಮ ನಿನ್ನಯ ನೆನಪು
ನಡೆದೆ ಎಲ್ಲಿಗೆ ಹೇಳು ಇನ್ನೆಲ್ಲಿ ಒನಪು ?

ಬೇರೆ ಹಲವರು ಇಲ್ಲಿ ಪಾತ್ರ ಮಾಡಲುಬಹುದು
ನಾನಾ ರಾಗದಿ ಹಾಡಿ ಕುಣಿಯಬಹುದು
ಯಾರು ಸಾಟಿಯು ನಿನಗೆ ಯಕ್ಷರಂಗದಲಿ
ಮೀರಿ ನಿಂತಿಹರಿಲ್ಲ ನಿನ್ನ ತಿಟ್ಟಿನಲಿ

ಇಡಗುಂಜಿ ಮೇಳದಲಿ ಬಡಗುತಿಟ್ಟಿನ ವೇಷ
ಗಡಗುಡಿಸಿ ನಡುಗಿಸಿದೆ ನೀನು ಜಮದಗ್ನಿ
ಬೆಡಗು ನಾ ಮರೆವೆನೇ ಬಿಲ್ಲ ಹಬ್ಬದ ಕಂಸ
ಎಡಬಿಡದೆ ನೋಡಿದೆನು ಕೃಷ್ಣ -ಕೌರವರ

ಕೆರೆಮನೆಯ ಅಂಗಳದಿ ಆಡಿಬೆಳೆದಿಹ ಕೂಸು
ನೆರೆದೇಶದಂಗಳಕೆ ಜಿಗಿದು ಬಂತು
ಹರಕೆ ತೀರಿಸಿ ಜಗದ ಪಾತ್ರವನು ಮುಗಿಸುತ್ತ
ಗರಿಕೆಪೂಜೆಯ ನೀಡೆ ಗಣಪನೈದಿದೆಯಾ ?
------------
ಸತ್ಕಾರ್ಯವನ್ನು ಕೈಗೊಂಡಿರುವ ಶ್ರೀ ಜಿ.ಎಸ್.ಹೆಗಡೆಯವರನ್ನು ಅಭಿನಂದಿಸುತ್ತಾ , ತಮ್ಮನ್ನೆಲ್ಲಾ ಆಮಂತ್ರಿಸುತ್ತಿದ್ದೇನೆ - ಬನ್ನಿ ಸ್ನೇಹಿತರೇ, ಕಾರ್ಯಕ್ರಮವನ್ನು ಚಂದಗಾಣಿಸೋಣ ಬನ್ನಿ, ಮೇರು ನಟನಿಗೆ ನಮನ ಹೇಳೋಣ ಬನ್ನಿ !

Wednesday, February 24, 2010

'ಆಪ್ತ ರಕ್ಷಕ'

ಮನುಷ್ಯ ಹುಟ್ಟಿನಿಂದ ಎಲ್ಲವನ್ನೂ ಗಳಿಸಿರುವುದಿಲ್ಲ, ಪಡೆದ ಸುಕೃತದಿಂದ ಅನೇಕ ಅವಕಾಶಗಳನ್ನು ಆತ ಪಡೆದುಕೊಳ್ಳುತ್ತಾನೆ. ಎಷ್ಟೋ ಬಾರಿ ಒಳ್ಳೆಯ ಮನುಷ್ಯನೂ ಕೂಡ ತನ್ನದಲ್ಲದ ತಪ್ಪಿಗೆ ಯಾವುದೇ ತಪ್ಪು ಗ್ರಹಿಕೆಯಿಂದ ಜೀವನಪೂರ್ತಿಮಾನಸಿಕವಾಗಿ,ದೈಹಿಕವಾಗಿ ಶಿಕ್ಷೆಗೊಳಗಾಗುತ್ತಾನೆ ! ಆಧುನಿಕ ಜೀವನದ ಇಂತಹ ಒತ್ತಡಗಳಿಂದ ಸಕ್ಕರೆ ಕಾಯಿಲೆಯಂತಹದನ್ನು ಅನುಭವಿಸುತ್ತಾರೆ. ಅಂತಹ ವಿಷಮ ಪರಿಸ್ಥಿತಿಯಲ್ಲೂ ಹುಟ್ಟಿದ ಮನೆಗೂ, ಊರಿಗೂ, ರಾಜ್ಯ-ದೇಶಂಗಳಿಗೂ ಒಳಿತನ್ನೇ ಬಯಸುವಕರ್ಮಯೋಗಿಗಳಾಗಿ ಜೀವಿಸುತ್ತಾರೆ. ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಹಾಗೇ ಇರುತ್ತಾ ತನ್ನಿಂದಾದ ರೀತಿಯಲ್ಲಿ ದಾನ-ಧರ್ಮಾದಿ ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹೇಳಲಾರದ-ಅನುಭವಿಸಲಾರದ ತನ್ನಿರವನ್ನೂ ಮೀರಿ ಉಪಕರಿಸುವ ಇಂತಹ ವ್ಯಕ್ತಿಗಳು ಬಹು ಅರ್ಥದಲ್ಲಿ ಯೋಗಿಗಳು-ಕರ್ಮಯೋಗಿಗಳು. ಅದರಲ್ಲಂತೂ ವ್ಯಕ್ತಿ ಸಿನಿಮಾ ಮಾಧ್ಯಮದ ವ್ಯಕ್ತಿಯಾದರೆ ಅವರ ವೃತ್ತಿಜನ್ಯ ಅನಿವಾರ್ಯತೆಗಳನ್ನು ಮರೆತು ಬೇರೆಯವರಿಗೆ ಆದರ್ಶವಾಗಿ, ರೋಲ್ ಮಾಡೆಲ್ ಆಗಿ ಬದುಕುವವರು ವಿರಳ-ಅತಿ ವಿರಳ. ಅವರದೇನಿದ್ದರೂ ಗಳಿಕೆ-ಪ್ರಚಾರ [Money, Name & Fame].ಜನಸಾಮಾನ್ಯರಿಗೆ ಅವರು ಲಭ್ಯರಲ್ಲ, ಪರದೆಯಮೇಲೆ ಬಿಟ್ಟು ಹಾಗೆಲ್ಲ ಕಾಣಸಿಗುವುದೂ ಇಲ್ಲ. ಇಂತಹ ಹೀರೋ ಒಬ್ಬ ನಿಜಜೀವನದಲ್ಲಿಯೂ ಹೀರೋ ಆಗಿ ಬದುಕಿ ವೀರೋದಾತ್ತ ಮರಣವನ್ನು ಪಡೆದು ಮಡಿದೂ ಬದುಕಿದ್ದಾನೆ. ಎಲ್ಲೋ ರಸ್ತೆಯಲ್ಲಿ ಹೋಗುವಾಗ ಬಡವನೊಬ್ಬ ಅಡ್ಡ ಬಂದು ಅಂಗಲಾಚಿದರೆ ಇಂಥವರೂ ಅದನ್ನು ನೋಡುವುದುಂಟೇ ಎಂಬುದಕ್ಕೆ ವಿರುಧ್ಧವಾಗಿ ಗೊತ್ತಿರದ,ಸರಿಯಾಗಿ ಆಸರೆಯಿರದ ಮುದುಕನೋರ್ವನ ಅಹವಾಲಿಗೆ ಕಟ್ಟುಬಿದ್ದು ಕಣ್ಣುಕೊಡಿಸಿದ ಆ ವ್ಯಕ್ತಿ ನಮ್ಮ ಹೆಮ್ಮೆಯ ಕನ್ನಡ ಕುವರ ದಿ| ಡಾ| ವಿಷ್ಣುವರ್ಧನ್ ! ಹೀಗೆ ಬದುಕಿದವರ ಬದುಕು ಎಲ್ಲರಿಗೂ ಆದರ್ಶವಾಗಲಿ ಎಂಬ ನನ್ಲುಡಿಯೊಂದಿಗೆ ನನ್ನ ಕವಿಹೃದಯ ಅವರಿಗೆ ನುಡಿನಮನ ಸಲ್ಲಿಸುತ್ತಿದೆ; ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬದುಕಿದರೆ 'ಆಪ್ತರಕ್ಷಕ'ರಾಗಿ ಬದುಕೋಣ ಎಂಬ ಸಂದೇಶದೊಂದಿಗೆ !


'ಆಪ್ತ ರಕ್ಷಕ'
[ಚಿತ್ರಗಳ ಋಣ : ಅಂತರ್ಜಾಲ]

ಮಾಡಿದನ ಹೊಗಳಿದರೆ ಮಾರನಾಗಲು ಬೇಡ
ಆಡಿಕೊಂಬರು ನಿನ್ನ ಮತ್ತೊಂದು ಗಳಿಗೆ
ಕಾಡದಿರಲೀ ನಿನ್ನ ಮನುಜಸಹಜದ ವಾಂಛೆ
ರೂಢಿಗುತ್ತಮನಾಗು | ಜಗದಮಿತ್ರ

ನಡೆಯುವರು ಎಡಹುವುದು ಪ್ರಕೃತಿ ಸಹಜದಧರ್ಮ
ನಡೆಯದೆಯೇ ಆಡುವುದು ಬಲು ವಿಕೃತಕರ್ಮ
ಅಡಿಯಿಡಲು ಅಂಜುತ್ತ ಹಿಂದೇಟು ಹಾಕಿದರೆ
ಪಡಪೋಶಿ ನೀನಪ್ಪೆ | ಜಗದಮಿತ್ರ

ಹಾರತುರಾಯಿಗಳು ಭಾರೀ ಭಾರವದಕ್ಕು
ವಾರದಲಿ ದಿನಬೆಳಗು ತಾನರಸಿ ಬರಲು
ಯಾರಕೃಪೆಗಾಗಿ ನೀ ಕೈಯ್ಯೊಡ್ಡದಿರು ಮುನ್ನ
ವೀರಯೋಧನ ನೆನೆಯೊ | ಜಗದಮಿತ್ರ



















ವೇಷದಲಿ
ಕಾಯುವರು ದೇಶದಂಚಲಿನಿಂತು
ಕೋಶ ಓದದೆ ಬಹಳ ನಿಸ್ವಾರ್ಥದಿಂದ
ರಾಶಿವಿದ್ಯೆಯನರಿತು ನೀನಾಗು ಉಪಕಾರಿ
ಭೂಷಣವು ನಿನಗದುವೆ | ಜಗದಮಿತ್ರ

ಆರ್ತರನು ರಕ್ಷಿಪುದು ಅತಿ ವಿಶೇಷದ ಕೆಲಸ
ಕಾರ್ತವೀರ್ಯನ ತೋಳು ನೀಡುತೀ ಜಗದಿ
ವಾರ್ತಾಲಾಪದಿ ಕಾಲಕಳೆಯದೇ ಕೈಗೊಳ್ಳು
ಪ್ರಾರ್ಥಿಸುತ ಸಂಘಟಿಸು | ಜಗದಮಿತ್ರ

ಉಡಿತುಂಬ ಗುಡಿತುಂಬ ಗಳಿಸಿ ಕೂಡಲುಬೇಡ
ಬಡಬಡಿಸಿ ಹೆದರಿಸುತ ಬಡಜನಂಗಳನು
ಒಡವೆ-ವಸ್ತ್ರವು ಬರದು ಕಡಿದಾಗ ಭೂ ಋಣವು
ಮಡಿದರೂ ಬದುಕು ನೀ | ಜಗದಮಿತ್ರ














ವ್ಯಾಪ್ತಿಯನು
ವಿಸ್ತರಿಸಿ ಸ್ನೇಹದಿಂ ಬದುಕುತಲಿ
ಪ್ರಾಪ್ತ ಕರ್ತವ್ಯದಲಿ ತನ್ಮಯತೆಯಿಂದ
ತಪ್ತ ದೇಶದ ಭೂಮಿ ವಿಸ್ತಾರಗಳಲೆಲ್ಲ
ಆಪ್ತ ರಕ್ಷಕನಾಗು | ಜಗದಮಿತ್ರ


Tuesday, February 23, 2010

'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'



'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'

ಕಳೆದವಾರ ವಿದ್ಯೆ , ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಓದಿದಿರಿ. ಈಗ ಮತ್ತೆ ಕೆಲವು ಪರೀಕ್ಷೆಗಳ ಬಗ್ಗೆ ನೋಡೋಣ-

ವ್ಯಕ್ತಿಯೋರ್ವನ ವ್ಯಕ್ತಿತ್ವದಲ್ಲಿ ಅಂತಹುದೇನಿದೆ ಎಂದು ಕೆದಕ ಹೊರಟರೆ ಅದು ದಿನವೊಂದಕ್ಕೆ ಹೊಸ ಹೊಸ ಅಧ್ಯಾಯವನ್ನು ವಿಸ್ತಾರದಿಂದ ತೋರಿಸುವ ಸಾಗರದೋಪಾದಿಯ ವಿಷಯವಾಗಿ ತನ್ನನ್ನೇ ತೋರ್ಪಡಿಸುತ್ತದೆ. ನಾವು ಸಮಾಜದಲ್ಲಿ ಅನೇಕ ತೆರನಾದ ವ್ಯಕ್ತಿಗಳನ್ನು ನೋಡುತ್ತೇವೆ. ಎಲ್ಲರೂ ಎಲ್ಲಾ ಕೆಲಸಕ್ಕೂ ಅರ್ಹರಾಗಿರುವುದಿಲ್ಲ. ಯಾರಿಗೆ ಯಾವಕೆಲಸದಲ್ಲಿ ಪರಿಣತಿ, ಪರಿಪಕ್ವತೆ ಇರುತ್ತದೋ ಅಂಥವರಿಗೆ ಅಂತಂತಹ ಕೆಲಸಗಳನ್ನು ಮಾತ್ರ ಮಾಡಲು ಸಾಧ್ಯ! ಒಳ್ಳೆಯ ಅಡುಗೆ ಮಾಡುವವ ಉತ್ತಮ ಬರಹಗಾರನಾಗಲು ಇಷ್ಟಪಡುವುದಿಲ್ಲ ; ಹಾಗೇ ಇಷ್ಟಪಡದೇ ಬರೆದರೆ ಬರಹಗಳು ಓದುವುದಕ್ಕೆ ಕಷ್ಟವಾದ ಬರಹಗಳಾಗುತ್ತವೆ! ಉತ್ತಮ ವಾಗ್ಮಿ ಒಳ್ಳೆಯ ಪೇಂಟರ್ ಆಗಲು ಹೋಗುವುದಿಲ್ಲ, ಸಿನಿಮಾ ಹೀರೋ ಸಾಹಿತಿಯಾಗುವುದಿಲ್ಲ, ಒಳ್ಳೆಯ ಮೇಷ್ಟ್ರು ಸಕ್ರಿಯರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಗಾರೆ ಕೆಲಸದವ ನಾಟಕದಲ್ಲಿ ಒಳ್ಳೆಯ ಪಾತ್ರ ಪೋಷಣೆ ಮಾಡಲಾರ, ಒಬ್ಬಮಾರ್ಕೆಟಿಂಗ್ ಹೆಡ್ ಸಾಹಿತ್ಯ -ಕಾವ್ಯಗಳ ಓದು/ಬರೆಹದಲ್ಲಿ ತೊಡಗಿಸಿಕೊಳ್ಳಲು ಅನುವಾಗುವುದಿಲ್ಲ; ಅವರಿಗೆ ಅದೆಲ್ಲಾ ಅರ್ಥವಿಲ್ಲದ ಕೆಲಸಗಳು, ಒಬ್ಬ ಉತ್ತಮ ವೈದ್ಯಉತ್ತಮ ಮೆಕಾನಿಕ್ ಆಗಿರುವುದಿಲ್ಲ ಹೀಗೇ ಒಂದೊಂದು ವ್ಯಕ್ತಿತ್ವವೂ ವಿಭಿನ್ನ ಮತ್ತು ವಿಶಿಷ್ಟ !

ವ್ಯಕ್ತಿ ತನ್ನ ಮೂಲ ಆಸಕ್ತಿ ಮತ್ತು ಅರ್ಹತೆಯನ್ನು ಗುರುತಿಸಿಕೊಂಡು ನಡೆದರೆ ವ್ಯಕ್ತಿಗೂ ಮತ್ತು ಸಮಾಜಕ್ಕೂ ಅದರಿಂದ ಒಳಿತು. ವ್ಯಕ್ತಿತ್ವದ ಅರಿವಿರದೇ ಎಲ್ಲರೂ 'ರಾಷ್ಟ್ರಪತಿ'ಗಳಾಗುವ ಕನಸು ಕಂಡರೆ ಕನಸು ಕನಸೇ ಹೊರತು ಅದು ಸಾಧ್ಯತೆಗಳ ಹಂದರದಲ್ಲಿ ಬರುವ ಅರ್ಹ ಕನಸಲ್ಲ. ಇಂತಹ ಸನ್ನಿವೇಶದಲ್ಲಿ ಅನೇಕ ಪರೀಕ್ಷೆಗಳು ವ್ಯಕ್ತಿ 'ಏನಾಗಲು ಯೋಗ್ಯ' ಎಂಬುದನ್ನುತೋರಿಸಿಕೊಡುತ್ತವೆ. ಅದರ ಮುಖೇನ ವ್ಯಕ್ತಿ ತನ್ನನು ಹಾಗೇ ಗುರುತಿಸಿಕೊಳ್ಳಲು ಸುಲಭವಾಗುತ್ತದೆ. ಹಣವನ್ನು ವಿಕಸನಕ್ಕೆಸರಿಯಾದ ಮಾರ್ಗದಲ್ಲಿ ತೊಡಗಿಸುವಲ್ಲಿ ಹೇಗೆ ಇನ್ವೆಸ್ಟ್ಮೆಂಟ್ ಅಡ್ವೈಸರ್ ನ್ನು ಕಾಣುತ್ತೇವೋ ಹಾಗೇ ಸರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಸಹಾಯಮಾಡುತ್ತದೆ.

ಸ್ವತಂತ್ರ ಉದ್ಯಮಿಯಾಗುವ ಅರ್ಹತೆಗಳ ಪರೀಕ್ಷೆಗಳು
ಟೈಪ್ T ಪರ್ಸನಾಲಿಟಿ ಟೆಸ್ಟ್
ಇಂದು ಜಾಗತಿಕ ಆರ್ಥಿಕ ಮುಗ್ಗಟ್ಟನ್ನು ನೋಡುತ್ತಾ ಇದ್ದೀರಿ. ಮಾರ್ಕೆಟ್ಟಿನಲ್ಲಿ ಎಷ್ಟೇ ಬದಲಾವಣೆ ಆಗುತ್ತಿದೆ ಎಂದರೂ ಅದು ಕೇವಲ ಪುಸ್ತಕಗಳಲ್ಲಿ ಲೆಕ್ಕ ಹೊಂದಿಸುವಲ್ಲಿ ಮಾತ್ರವೇ ಹೊರತು ಕ್ರಿಯಾತ್ಮಕವಾಗಿ ಚಾಲ್ತಿಯಲ್ಲಿ ಹೊಸ ಬದಲಾವಣೆ ಬಂದಿದ್ದನು ಬಹುತೇಕ ಕಂಪನಿಗಳು ಪಡೆಯಲಾಗುತ್ತಿಲ್ಲ ! ಇಂತಹ ಆರ್ಥಿಕ ಪರಿಸ್ತಿತಿಯ ಹಿನ್ನೆಲೆಯಲ್ಲಿ ಯಾವರೀತಿಯಲ್ಲಿ ಮುನ್ನಡೆ ಸಾಧಿಸ ಬಹುದು ಎಂಬುದನ್ನು ಒಂದರ್ಥದಲ್ಲಿ ರಭಸದಿಂದ ಹರಿವ ನೀರಿಗೆ ಎದುರಾಗಿ ಈಜುವುದು ಹೇಗೆ ಎಂಬುದನ್ನು ವ್ಯಕ್ತಿಗೆ ಕೊಟ್ಟು ಪರೀಕ್ಷಿಸುವುದು. ವ್ಯಕ್ತಿ ತನ್ನ ಸ್ವಂತಿಕೆಯಿಂದ ಯಾವೆಲ್ಲ ದಾರಿಗಳನ್ನು, ಹಲವಾರು ಚಿಂತನಶೀಲ ಯೋಜನೆಗಳನ್ನು ಹೇಳ ಹೊರಡುತ್ತಾನೆ/ಳೆ ಎನ್ನುವುದನ್ನು ನಿಗದಿತ ಸಮಯದಲ್ಲಿ ಪರಿವೀಕ್ಷಿಸುವುದು. ಇದನ್ನು ಪ್ರಶ್ನೋತ್ತರ ರೂಪದಲ್ಲಿ ಕೂಡ ಮಾಡಬಹುದು.

ಮಾರ್ಕೆಟಿಂಗ್ ಖ್ವಿಜ್
ಮಾರುಕಟ್ಟೆಯ ಬಗ್ಗೆ ವ್ಯಕ್ತಿಗೆ ಏನು ಗೊತ್ತಿದೆ? ಮಾರುಕಟ್ಟೆಗೆ ಹೊಸ ವಸ್ತು ಅಥವಾ ಪ್ರಾಡಕ್ಟ್ ನ್ನು ಪರಿಚಯಿಸುವುದು ಹೇಗೆ, ಹಾಗೇ ಪರಿಚಯಿಸಲು ಸುಮಾರು ಎಷ್ಟು ಹಣ ಬೇಕಾಗಬಹುದು? ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆಗೆ ಪರಿಚಯಿಸಬೇಕು ಮುಂತಾದ ಸುಮಾರು ೧೫-೨೦ ಪ್ರಶ್ನೆಗಳು ಇರುತ್ತವೆ, ಸಮಯ ಮಿತಿ ಪ್ರಯೋಗ.

ಮಾರ್ಕೆಟ್ ರಿಸರ್ಚ್
ಮಾರುಕಟ್ಟೆಯಲ್ಲಿ ಜನ ಏನನ್ನು ಬಯಸುತ್ತಿದ್ದಾರೆ? ಯಾವ ಬೆಲೆಯಲ್ಲಿ ಬಯಸುತ್ತಾರೆ ? ನಮಗೆ ಸ್ಪರ್ಧೆಯೊಡ್ಡುವ ಬೇರೆ ಕಂಪನಿಗಳು ಯಾವವು ? ನಮ್ಮ ತಯಾರಿಕೆಯಲ್ಲಿನ ತೊಂದರೆ ಏನು ? ಮಧ್ಯವರ್ತಿಗಳು ಏನು ಹೇಳುತ್ತಿದ್ದಾರೆ ಮುಂತಾಗಿ ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !

ಸಾಹಸೀ ಪ್ರವೃತ್ತಿ ಪರೀಕ್ಷೆ
ವ್ಯಕ್ತಿ ಎಷ್ಟರಮಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಕೆಲಸಮಾಡಲು ಸಿದ್ಧ ? ಪರಿಸ್ಥಿತಿ ಹೇಗಿದ್ದರೂ ಮಾರ್ಕೆಟ್ ನಲ್ಲಿ ಹೇಗೇ ಮಾಡಿಯಾದರೂ ಬದುಕಬಲ್ಲೆನೆಂಬ ಸಾಹಸೀ ಮನೋಭಾವ ವ್ಯಕ್ತಿಗಿದೆಯೇ ? ಒದರ್ಥದಲ್ಲಿ ವ್ಯಕ್ತಿಯ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಕೆಲವು ಪ್ರಶ್ನೆಗಳು, ಸಮಯಮಿತಿ ಪ್ರಯೋಗ.

ಲೀಡರ್ಶಿಪ್ ಕ್ವಾಲಿಟಿ ಟೆಸ್ಟ್
ಉತ್ತಮ ನಾಯಕರು ಹುಟ್ಟಿನಿಂದಲೇ ಆ ಥರ ಇರುತ್ತಾರೆ ಎಂಬ ಹೇಳಿಕೆಯನ್ನು ಪಕ್ಕಕ್ಕಿಟ್ಟು ವ್ಯಕ್ತಿಯೊಳಗಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ ತಕ್ಕುದಾದ ಪರಿಸ್ಥಿತಿ ಮತ್ತು ಸಹಾಯ ಸಿಕ್ಕರೆ ಆತ/ಆಕೆ ಎಷ್ಟರಮಟ್ಟಿಗೆ ಸೃಜನಶೀಲ ಸ್ವಭಾವತೋರಿಸುತ್ತಾನೆ/ಳೆ ಎಂಬುದನ್ನು ಒರೆಗೆ ಹಚ್ಚುವುದು. ಇದರಲ್ಲಿ ವ್ಯಕ್ತಿಯ ಔಟ್ ಸ್ಟೇನ್ದಿಂಗ್
ಅಥವಾ ಅತೀ ಅಪರೂಪದ ವಿಶಿಷ್ಟ ಪ್ರತಿಕ್ರಿಯೆಯನ್ನು ಗುರುತಿಸುವುದು. ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !

ಯೋಗ್ಯತಾ ಪರೀಕ್ಷೆಗಳು

ಎಸ್ಸರ್ರ್ಟಿವ್ ನೆಸ್ ಪರೀಕ್ಷೆ ಅಥವಾ ವೈಯಕ್ತಿಕ ನೇರ ನುಡಿಯ ಪರೀಕ್ಷೆ
ಯಾವುದೇ ಪರಿಸರ, ಪರಿಸ್ಥಿತಿ ಇದ್ದರೂ, ಯಾರೇ ಇದ್ದರೂ ಯಾವುದೇ ಅಂಜಿಕೆ ಇಲ್ಲದೇ ತನ್ನ ವೈಯಕ್ತಿಕ ಕರಾರುವಾಕ್ಕಾದ ಅಭಿಪ್ರಾಯಗಳನ್ನು ವ್ಯಕ್ತಿ ಮಂಡಿಸುವಲ್ಲಿ ಎಷ್ಟರಮಟ್ಟಿಗೆ ಉತ್ತೀರ್ಣ ಎಂಬುದರ ಪರೀಕ್ಷೆ. ಬೇರೆಯವರ ಒತ್ತಡ ಮತ್ತು ಒತ್ತಾಸೆಗೆ ಬಲಿಯಾಗುತ್ತಾನೋ/ಳೋ ಅಥವಾ ತನ್ನದೇ ಅಭಿಪ್ರಾಯವನ್ನು ಮಂಡಿಸುತ್ತಾನೋ/ಳೋ ಅನ್ನುವುದನ್ನು ಒರೆಗೆ ಹಚ್ಚುವುದು. ಕೆಲವು ಪ್ರಶ್ನೆಗಳು ; ಸ್ಮಯಮಿತಿ ಪ್ರಯೋಗ.

ಬುದ್ಧಿ ತೀಕ್ಷ್ಣತೆಯ ಪರೀಕ್ಷೆ
ಹಲವಾರು ಸಂಬಂಧಿತ ಕೆಲಸಗಳನ್ನೊಡ್ಡಿ ಅವುಗಳನ್ನು ಅನುಕ್ರಮವಾಗಿ ಹೇಗೆ ಜೋಡಿಸುತ್ತಾರೆ ಮತ್ತು ಅದನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲು ಹೇಗೆ ಸಮಯವನ್ನು ಪರಿಗಣಿಸುತ್ತಾರೆ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಇದು ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.

ನುಮೇರಿಕಲ್ ರೀಸನಿಂಗ್ ಟೆಸ್ಟ್ ಅಥವಾ ಅಂಕೆ-ಸಂಖ್ಯೆಗಳ ಮಹತ್ವದ ಪರೀಕ್ಷೆ
ಇದರಲ್ಲಿ ಅಂಕೆಯ ದೇ ಪವಾಡ, ಅಂಕೆಗಳನ್ನು ಒಪಯೋಗಿಸಿಕೊಂಡು ಯಾವ ಯಾವ ಅಂಕೆಗೆ ಎಷ್ಟೆಷ್ಟು ಮಹತ್ವ ಕೊಡುತ್ತಾರೆ ಮತ್ತು ಅಂಕೆಯನ್ನು ಯಾವ ಕೆಲಸಕ್ಕೆ ಮೀಸಲಿಡುತ್ತಾರೆ ಭಾವನೆಗಳು ಮತ್ತು ವಿಚಾರ ಲಹರಿಯ ಮೇಲೆ ಹೇಗೆಮುಂದುವರಿಯುತ್ತಾರೆ ಎಂಬುದನ್ನು ಪರೀಕ್ಷಿಸುವುದು. ಇದು ಕೂಡ ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.

ವರ್ಬಲ್ ರೀಸನಿಂಗ್ ಟೆಸ್ಟ್ ಅಥವಾ ಶಬ್ಧ ಪ್ರಯೋಗ ಪರೀಕ್ಷೆ
ಕೆಲವೊಂದು ಶಬ್ದಗಳನ್ನು ಮುಂದಿಟ್ಟು ಅವುಗಳನ್ನು ಉಪಯೋಗಿಸಲು ಹೇಳುವುದು ಮತ್ತು ಅವುಗಳನ್ನು ವ್ಯಕ್ತಿ ಎಷ್ಟು ಸಮಂಜಸವಾಗಿ ಉಪಯೋಗಿಸುತ್ತಾನೆ/ಳೆ ಎಂಬುದನ್ನು ಪರಿವೀಕ್ಷಿಸುವುದು. ಕಾಲೋಚಿತವಾಗಿ ಎಲ್ಲೆಲ್ಲಿ ಯಾವರೀತಿ ಮಾತನಾಡುತ್ತಾರೆ ಎಂಬುದನ್ನು ಇದರಲ್ಲಿ ವಿವೇಚಿಸಲಾಗುತ್ತದೆ.

ಫೈರ್ ಫೈಟಿಂಗ್ ಟೆಸ್ಟ್ ಅಥವಾ ಆಪತ್ಕಾಲಿಕ /ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪರೀಕ್ಷೆ
ಕೊಟ್ಟ ಸಮಯದಲ್ಲಿ, ಬರಬಹುದಾದ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಲ್ಲಿ ವ್ಯಕ್ತಿ ಹೇಗೆ ಸಕ್ರಿಯವಾಗಿ, ಮುಂದಾಲೋಚನೆಯಿಂದ, ಸೌಜನ್ಯದಿಂದ ವರ್ತಿಸಿ ಕೆಲಸ ನಿಭಾಯಿಸುತ್ತಾನೆ/ಳೆ ಎಂಬುದನ್ನು ಸಮಯ ಮಿತಿಯಲ್ಲಿ ಪ್ರಶ್ನೆಗಳ ಮತ್ತು ದೃಶ್ಯ ಸನ್ನಿವೇಶಗಳಮೂಲಕ ಪರೀಕ್ಷಿಸುವುದು.
[ಮುಂದಿನವಾರ ನೋಡೋಣ ................]

Monday, February 22, 2010

'ಆಲೂ ಗಾರುಡಿ'-ಕಥಾಕಾಲಕ್ಷೇಪ


'ಆಲೂ ಗಾರುಡಿ'

ಗಜಾನನಂ ಭೂ ತಗಣಾದಿ ಸೇವಿತಂ
ಕಪಿ ಸ್ಥ ಜಂಬೂ ಫ ಲಸಾರ ಭಕ್ಸಿತಂ
ಉಮಾ ಸುತಂ ಸೋಕ ವಿನಾಶ ಕಾ.....ರಣಂ
ನಮಾಮಿ ವಿಘ್ನೇಶ್ವರ ಪಾ ದ ಪಂಕಜಂ....ಜಂ......ಹ.......

ಗಜವದ ನಾ ಬೇಡುವೆ ಗೌರಿ ತ ನ ಯ
ಗಜವದ ನಾ ಬೇಡುವೆ.....
ತ್ರಿಜಗ ವಂ ದಿತ ನೇ ಸುಜನರಾ ಪೊರೆವ ನೇ
ಗಜವದ ನಾ ಬೇಡುವೆ........
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಮಸ್ಪಾರ್ವತೀಪತೇ.................
ಹರಹರಾ ಹರಹರಾ ಮಹಾದೇವ .........

ಮೆರೆವ ಪುರದೊಳಗೆ ಬಿಹಾರವದೆನಿಸಿಹ
ಭುವಿಯದೇಶದೊಂದು ಚರಿತೆಯ ಪಾಡೇ
ಪಾಡಿ ಪೊಗಳಲ್ ಅತಿ ಮೋದವದೆನಿಸುವ
ಪಾಮರರುಧ್ಧರಿಸುವ ಕಥೆ ನೋಡ

ನಾರಾಯಣಾ........... ಕೃಷ್ಣಾ....... ನಾರಾಯಣಾ........ಕೃಷ್ಣಾ........ನಾ...ರಾ...ಯಣ

ಕೀರ್ತನಾರಂಭಕಾಲದಲ್ಲಿ ಹರಿದಾಸರು ಭಗವನ್ನಾಮ ಸ್ಮರಣೆ ಮಾಡುತ್ತಾರೆ... ಯುಗಯುಗದಲ್ಲೂ ತನ್ನ ನಾ ನಾ ಅವತಾರಗಳಿಂದ ಜಗದೊಡೆಯನಾಗಿರತಕ್ಕಂತಹ ಸ್ರೀಮನ್ನಾರಾಯ ತನ್ನ ಭಕ್ತರಮೇಲಿನ ಕಳಕಳಿಯಿಂದ, ಅವರ ಉದ್ಧಾರಕ್ಕಾಗಿ ತಾನೇ ಹಲವು ರೂಪಗಳಲ್ಲಿ ಭುವಿಯಲಿರುವ ಅವರ ಬಳಿ ಬಂದು ಸಲಹುತ್ತಾನೆಂದು ಗ್ನಾನಿಗಳು ಹೇಳುತ್ತಾರೆ. ಅಂತಹ ದಿವ್ಯಪುರುಷನನ್ನು ಕನಕ-ಪುರಂದರಾದಿ ಅನೇಕ ಹರಿದಾಸರು ನಾ ನಾ ರೀತಿಯಲ್ಲಿ ಸ್ಮರಣೆಮಾಡಿದ್ದಾರೆ.........


ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆ ...... ....ಗಳಿಗೆಲ್ಲ.......
ಅಲ್ಲಲ್ಲೇ .....ಆಹಾರ ವಿತ್ತವರು...... ಯಾರು
ಬಲ್ಲಿದನು ಕಾಗಿನೆಲೆಯಾದಿ ಕೇ ....ಶವರಾಯ
ಎಲ್ಲರನು ಸಲ ಹುವನು ಇದಕೆ...... ಸಂ .....ಶಯವಿಲ್ಲ ........
ತಲ್ಲಣಿಸ ದಿರು ಕಂಡ್ಯ ತಾಳು ಮ.....ನ... ವೇ

ಕಲ್ಲಿಗೂ ಕಠಿಣವುಂಟೇ ..ಸ್ವಾಮೀ ? ಅಂತಹ ಕಲ್ಲೆಂಬ ಕಲ್ಲೊಳಗೆ ಹುಟ್ಟೀ ಕೂಗುವಂತಹ ಕಪ್ಪೆಗಳಿಗೂ ಕಾಡಲ್ಲಿರುವ ಗಿಡಮರಗಳಿಗೂ ಪಶು-ಪಕ್ಷಾದಿ ವನ್ಯ ಜೀವಿಗಳಿಗೂ ಅಲ್ಲಲ್ಲೇ ಇದ್ದಲ್ಲೇ...ಇರುವಲ್ಲೇ ... ಆಹಾರವನ್ನು ಕೊಟ್ಟವರು ಯಾರು .........ಎಲ್ಲವನ್ನೂ ಬಲ್ಲವನು ಆ ಸ್ರೀಹರಿ..... ಸ್ರೀಮನ್ನಾರಾಯ.....ನಂಬಿದವರಿಗೆ ಇಂಬುಗೊಟ್ಟು ಸಲಹುತ್ತಾ ಬಂದಿದ್ದಾನೆಂಬುದು ತಾತ್ಪರ್ಯ.........

ಇಂತಹ ಸ್ವಾರಸ್ಯಕರ ಕಥೆಯಲ್ಲಿ ಕಥೆಯಾಗಿ ತಮಗೆ ಅತಿ ವಿಶಿಷ್ಟವಾದೊಂದು ಕಥೆಯನ್ನು ಹೇಳುತ್ತಿದ್ದೇನೆ............
ಒಂದಾನೊಂದು ಕಾಲದಲ್ಲಿ ಬಿಹಾರ ಎಂಬ ದೇಶದಲ್ಲಿ ಆಲೂ ಪ್ರಸಾದ ಎಂಬತಕ್ಕಂತವನು ವಾಸವಿದ್ದನಂತೆ, ಅವನ ತಂದೆಗೆ ಹದಿಮೂರು ಮಕ್ಕಳು....

ಆಲೂ ಬೋಂಡಾ...ಗೆಣಸಿನ ಬೋಂಡಾ ...
ಥರ ಥರ ಬಜ್ಜೀ ........ಈರುಳ್ಳಿ ಪಕೋಡಾ .....
ಕಾಶೀ ಹಲ್ವಾ ....ಮಸಾಲ ಚೂಡಾ .......
ಬಿಸಿ ಬಿಸಿ ... ಚಾಯಿಗೆ ......ಹಲವರ ....ಬಾಯಿ .....
ಬಿಸಿ ಬಿಸಿ ... ಚಾಯಿಗೆ ......ಹಲವರ............... ಬಾ...ಯಿ

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ.............
ಹರಹರಾ ಹರಹರಾ ಮಹಾದೇವ .........

ಈ ಹದಿಮೂರು ಮಕ್ಕಳನ್ನೂ ಸಂಸಾರವನ್ನೂ ನಿಭಾಯಿಸಬೇಕಲ್ಲ? ಅದಕ್ಕಾಗಿ ಅಲೂವಿನ ತಂದೆ ಅಲೂ ಬೋಂಡ, ಗೆಣಸಿನ ಬೋಂಡಾ,ಮಿರ್ಚಿ ಬಜ್ಜೀ,ಈರುಳ್ಳಿ ಪಕೋಡ,ಕಾಶೀ ಹಲ್ವಾ,ಮಸಾಲ ಚೂಡ ಇತ್ಯಾದಿಯಾಗಿ ಜನರಿಗೆ ತಿಂಡಿ [ಮೇವನ್ನು!]ಯನ್ನು ಮಾರಾಟಮಾಡುವ ಚಿಕ್ಕ ಅಂಗಡಿ ನಡೆಸುತ್ತಿದ್ದ. ಪಾಪ ಬಡತನ! ಏನು ಮಾಡುವುದು? ಆದರೂ ತಾನು ಮಾಡುವ ಕೆಲಸದಲ್ಲಿ ಅತೀ ಶ್ರದ್ಧೆಯನ್ನು ಹೊಂದಿದ್ದ ಈತ ತನ್ನ ಮಕ್ಕಳಿಗೆ ಪ್ರೀತಿಯಿಂದ ಆತ ಮಾಡುವ ತಿಂಡಿಗಳ ಹೆಸರನ್ನೇ ಉಪನಾಮವಾಗಿ ಬಳಸುತ್ತಿದ್ದ. ಹೀಗೇ ನಮ್ಮ ಇಂದಿನ ಕಥಾನಾಯಕನಾದ ಸ್ರೀಮಾನ್ ಮುಕುಲ್ ಪ್ರಸಾದ 'ಆಲೂ ಪ್ರಸಾದ' ಎಂಬ ಹೆಸರಿನಿಂದ ಪ್ರಸಿಧ್ಧನಾಗಿದ್ದ !

ಇಂತಿಪ್ಪ ಆಲೂಪ್ರಸಾದ ಬಡತನದಲ್ಲೇ ಬೆಳೆದರೂ ವಿದ್ಯೆಯಲ್ಲಿ ಬಹಳ ಮುಂದಿದ್ದ, ಚೆನ್ನಾಗಿ ಓದುತ್ತಿದ್ದ. ಬರಬರುತ್ತಾ ಅಲೂ ಬೋಂಡದ ಥರ ಬೆಳೆಯತೊಡಗಿದ ! ಬೆಳೆದೂ ಬೆಳೆದೂ ಬೆಳೆದೂ ಕಾಲೇಜಿನ ಹಂತಕ್ಕೆ ಬಂದ!

ಸರ ಸರ ಬೆಳೆಯುತ ದೊಡ್ಡವನಾದ ನಮ್ಮ ಆಲೂ ಪ್ರಸಾದ ...
ಪರಿತಪಿಸುತ ತಮ್ಮಪ್ಪ-ಅಮ್ಮನ ಬಜ್ಜಿ ಅಂಗಡಿಯ ವಿ ...ವಾದ ...
ಗರಗರ ತಿರುಗುವ ತಮ್ಮ-ತಂಗಿಯರ ಕಂಡರೇ ಅದುವೇ ವಿಷಾದ..
ಪರಿಹರಿಸಲು ಓದಿಗೆ ಮುಂದೋಡಿದ ಮರೆಯುತ ಎಲ್ಲಾ ಖೇದ .... ...ಮರೆಯುತ........ಎಲ್ಲಾ........ಖೇದ

ಲಕ್ಷ್ಮೀರಮಣ ಗೋವಿಂದಾ ...ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........

ಹೀಗೇ ಬೆಳೆದು ದೊಡ್ಡವನಾಗಿ ಕಾಲೇಜಿಗೆ ಹೋಗುತ್ತಾ ಹೋಗುತ್ತಾ ನಮ್ಮ ಆಲೂಗೆ ಬಹಳ ಗೆಳೆತನ ಹೆಚ್ಚಿತು, ಅನೇಕ ಸ್ನೇಹಿತರು ಒಗ್ಗೂಡಿದರು, ಆಗಾಗ ಮನದಣಿಯೇ ರೋಡಲಿ ಕ್ರಿಕೆಟ್ ಆಡುವರು ! ಬ್ಯಾಡ್ ಮಿಂಟನ್ ಆಡುವರು ! ಇನ್ನೂ ಅನೇಕ ಏನೇನೋ ಆಟಗಳನ್ನು ಸಾಂಗೋಪಾಂಗವಾಗಿ ಆಡುತ್ತಿದ್ದರು. ಹೀಗೇ ಕಾಲ ಕಳೆಯುತ್ತಾ ಕಳೆಯುತ್ತಾ ಏನಾಶ್ಚರ್ಯ ! ಒಂದು ದಿನ ಆಲೂ ಕಾಲೇಜಿನಲ್ಲಿ ಕಂಪ್ಯೂಟರ್ ಎಂಬತಕ್ಕಂತಹ ಅದೇನೋ ಗಣಕಯಂತ್ರ ಅಂತಾರಲ್ಲ ಅದನ್ನು ಬಳಸಲು ಕಲಿತ ! ಅದು ಹೇಗಾಯ್ತಪ್ಪಾ ಅಂತಂದರೆ ಅಲ್ಲೊಬ್ಬ ಸತ್ನಾಂ ಸಿಂಗ್ ಅಂತ ಮೇಷ್ಟ್ರು ಇರೋರು, ಅವ್ರೀಗೆ ಸಿಸ್ಯಂದ್ರು ಅಂದ್ರೆ ಭಾಳ ಖುಷಿ ! ತಮ್ಮ ಸಿಸ್ಯಂದ್ರಿಗೆ ಎಲ್ಲಾಥರದ ಸೌಲತ್ತು ಕೊಡೋರು. ಅದ್ರಲ್ಲಂತೂ ನಮ್ಮ ಕಥಾನಾಯಕನಾದ ಆಲೂ ಅಂದ್ರೆ ಪ್ರೀತಿ ಒಂದ್ ಕೈ ಜಾಸ್ತೀನೇ ಅನ್ನಿ. ಹೀಗಾಗಿ ಏನೋ ಬಡ ಹುಡುಗಾ ಅಂತಂದು ಕಂಪ್ಯೂಟರ್ ಕಲಿಸಿದರಂತೆ.

ಇರುವದೆಮ್ಮಲೊಂದು ಗಣಯಂತ್ರ ......
ಅಯ್ಯಾ ..........ಇರುವದೆಮ್ಮಲೊಂದು ಗಣಯಂತ್ರ ......
ಅದ ಬಳಸಲರಿಯದೇ ದುಃಖಿಪರು ........ಜನರು ....
ಇರುವದೆಮ್ಮಲೊಂದು............. ಗಣಯಂತ್ರ ......
ಇರುವದೆಮ್ಮಲೊಂದು............. ಗಣಯಂತ್ರ ......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಸ್ಪಾರವತೀಪ ತೇ ................ಹರಹರಾ ಹರಹರಾ ಮಹಾದೇವ .........

ಅಂತೂ ಇಂತೂ ಕಂಪ್ಯೂಟರ್ ಕಲಿತ ನಮ್ಮ ಆಲೂ ಯೇನ್ಮಾಡಿದಾನೆ ಗೊತ್ತೇ ಅದೇನೋ ಈ ಮೇಲು, ಎಲೆಕ್ಟ್ರಾನಿಕ್ ಅಂಚೆ ಅಂತಾರಲ್ಲ ಅದು ಅದನ್ನ ಮಾಡಕ್ಕೂ ಕಲ್ತು ಬುಟ್ಟಿದ್ದಾನೆ. ಕಲ್ತು ಕಲ್ತು ಅನೇಕರಿಗೆ ಈ ಮೇಲ್ ಕಳ್ಸಿದಾನೆ. ಇದ್ರಿಂದ ಅವನಿಗೆ ಗೆಳೆಯರ ಬಳಗ ಇನ್ನೂ ಜಾಸ್ತಿ ಆಗಿದೆ. ಜಾಸ್ತಿ ಆಗುತ್ತಾ ಆಗುತ್ತಾ ಕಾಲಕ್ರಮದಲ್ಲಿ ಇಡೀ ಬ್ರಹ್ಮಾಂಡವನ್ನೇ ವ್ಯಾಪಿಸುವಷ್ಟು ಗೆಳೆಯರ ಬಳಗವನ್ನು ಪಡೆದುಕೊಂಡ! ತದನಂತರ ಅವನಿಗೆ ನಮ್ಮ ಕಲ್ಯಾಣ ನಗರಿ ಬೆಂಗಳೂರಿನ ಮಾದೇಶನ ಪರಿಚಯವಾಯ್ತು , ಪರಿಚಯ ಸ್ನೇಹಕ್ಕೆ ತಿರುಗಿತು. ಇನ್ನೇನು ಹೋಗಿ-ಬಂದೂ ಮಾಡುವಷ್ಟು ಸ್ನೇಹ ಬೆಳೆಯಿತು. ಇಬ್ಬರೂ ಬಹಳ ಆಪ್ತರಾದರು.

ಅಯ್ಯಾ ಕರುಣದಿ ಕಾಯೋ ಮಾದೇಶ್ವರಾ ಎನ್ನ
ಗೆಳೆಯನೆ ನೀನು ಮಾದೇಶ್ವರಾ ....ಹೇ ಶಂಕರ ಅಭಯಂಕರ
ನಿನ್ನ ' ಗಳಿಕೆ ' ಆಪಾರ ನೀನು ' ಈ ಮೇಲು' ದೂರ
ಕರುಣದಿ ಕಾಯೋ ಮಾದೇಶ್ವರಾ..............


ಅಂತೂ e ಸ್ನೇಹ ಈ ಸ್ನೇಹಕ್ಕೆ ತಿರುಗಿ ಗೆಳೆಯ ಮಾದೇಸನ ಬಹಳ ಒತ್ತಾಯದ ಮೇರೆಗೆ ಆಲೂ ಪ್ರಸಾದ ಬೆಂಗಳೂರಿಗೆ ಬರಬೇಕೆಂದು ತೀರ್ಮಾನಿಸಿದ, ಬಂದು ವಾರದ ಕಾಲ ಇದ್ದು ವಾಪಸ್ಸು ಹೋಗಬೇಕೆಂದು ಅಂದುಕೊಂಡ. ಹೇಗೆ ಬರಬೇಕು, ಯಾವ ರೀತಿ ಬರಬೇಕು ಎಂದೆಲ್ಲ ಕೇಳಿ ತಿಳಿದುಕೊಂಡ. ಅಷ್ಟಕ್ಕೂ ಗೆಳೆಯ ಹೇಳಿದ 'ನೀನ್ಯಾಕೆ ಇಲ್ಲೇ ಕೆಲಸಮಾಡಬಾರದು ? ಎಂದು ಕೇಳಿದ. ಅದಕ್ಕೆ ಆಲೂ ಉತ್ತರಿಸಿದ್ದು ಒಳ್ಳೆಯ ಕಂಪನಿಯಲ್ಲಿ ಜಾಬು ಸಿಕ್ಕಿದ್ರೆ ತೊಂದ್ರೆ ಇಲ್ಲಾ ಅಂತ.

' ಇನ್ಫೋಸಿಸ್ ' ಎಂಬತಕ್ಕಂತಹ ಅಸಾಮಾನ್ಯ ತಂತ್ರಾಂಶದ ಮಾನಸ ಸರೋವರ ಇದೆಯೆಂತಲೂ, ದೈವಾಂಶ ಸಂಭೂತರಾದ ಕೆಲವರು ಸೇರಿ ಅದನ್ನು ತಮ್ಮ ದಶಕಗಳ ಕಾಲದ ತಪಶ್ಯಕ್ತಿಯನ್ನೆಲ್ಲ ಧಾರೆಯೆರೆದು ಪ್ರತಿಷ್ಥಾಪಿಸಿದರೆಂತಲೂ ಮತ್ತು ಯಾರೇ ಬಂದರೂ ಮೊದಲು ಅದು ಕೈಬೀಸಿಕರೆಯುತ್ತದೆಂತಲೂ ಗೆಳೆಯ ಮಾದೇಶ ಹೇಳಿದ! ಅದರ ಬಿರಡಿಂಗನ್ನು ರಾತ್ರೋರಾತ್ರಿ ದೇವತೆಗಳಂತವರು ಕಟ್ಟಿ ಬೆಳಗಾಗುವುದರೊಳಗೆ ಮುಗಿಸಿದ ರೀತಿ ಮುಗಿಸಿದ್ದರೆಂತಲೂ ಹೇಳಿಬಿಟ್ಟ! ಇಷ್ಟೆಲ್ಲಾ ಕೇಳಿದ ಮೇಲೆ ನಮ್ಮ ಆಲೂವಿಗೆ ಬಾಯಲ್ಲಿ ಬಂತು ಜೊಲ್ಲೂ.., ಆ ಕ್ಷಣವೇ ಬೆಂಗಳೂರಲ್ಲಿ ಇರುವುದಕ್ಕೆ ನಿರ್ಧರಿಸಿದ್ದಾಗಿ ತಂದೆ-ತಾಯಿಗೆ ಹೇಳಿಬಿಟ್ಟ ! ಕೆಲವೇ ದಿನಗಳಲ್ಲಿ ಹೊರಟೂ ಬಿಟ್ಟ, ಎಲ್ಲ ಗೆಳೆಯ ಮಾದೇಶನ ಸಹಕಾರದಿಂದಾ....

ಚಂಗನೆ ಜಿಗಿದಂಬರದಲಿ ಹಾರಿದ ಡೆಕ್ಕನ್ ವಿಮಾನದಲಾಗ
ಭಂಗವ ಕಳೆಯಲು ಇನ್ಫೋಸಿಸ್ಸು ಒಂದೇ..... ದಾರಿ..... ಯದೀಗ !
ಸಂಗದಿ ಗೆಳೆಯರು ಸಲುಗೆಯಲಿದ್ದರು ಕಳೆಯಿತು ದಿನವದು ಬಹಳ
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ಕಳೆದರು ದಿನ ಸರಳ......
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ....... ಕಳೆದರು..... ದಿನ...... ಸ.. ರ.. ಳ......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........


ಹೀಗೇ ಕಾಲಕಳೆಯುತ್ತಿರಲಾಗಿ ಕನಡಾ ಬಾರದ ನಮ್ಮ ಆಲೂ, ರೂಮಿಗೆ ಸಾಮಾನು ತರಲೆಂದು ಗೆಳೆಯ ಮಾದೇಸನಿಲ್ಲದಾಗ ಸೆಟ್ಟಿ ಅಂಗಡಿಗೆ ಹೋಗುತ್ತಾನೆ.

ಸೆಟ್ಟಿ ಕೇಳಿದ " ಏನ್ ಕೊಡ್ಲೀ ಸಾರ್ ?"

" ಮೇಣ , ಸೂಜಿ ಮತ್ತು ರಿಗೆ ಕೊಡಿ " ಹೇಗೋ ಕನಡಾದಲ್ಲಿ ಗೆಳೆಯ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದ ನಮ್ಮ ಆಲೂ, ಸೆಟ್ಟಿಗೆ ಹಿಂದಿ ಬರುವುದಿಲ್ಲ, ಆಲೂಗೆ ಕನಡಾ ಬರುವುದಿಲ್ಲ!

" ಮೇಣ, ಸೂಜಿ ಕೊಡ್ತೀನಿ, ರಿಗೆ ನಮ್ಮಂಗ್ಡೀಲಿಲ್ಲ ಬೇರೆಲ್ಲಾದ್ರೂ ವಿಚಾರ್ಸಿ " ಸೆಟ್ಟಿಗೆ ' ರಿಗೆ ' ಎಂದರೆ ಏನು ಎಂಬುದು ತಲೇಲಿ ಒಂಥರಾ ಹುಳಬಿಟ್ಟ ಹಾಗಾಯ್ತು !

ಮೆಣಸು ಜೀರಿಗೆ ..... ಮೆಣಸು ಜೀರಿಗೆ......ಮೆಣಸು ಜೀರಿಗೆ .......ಮೆಣಸು
ಮೆಣಸು ಜೀರಿಗೆ .......ಮೇಣ ಸೂ ಜೀ ರಿಗೆ...... ಮೆಣಸೂ ಜೀ ರಿಗೆ...... ಮೆಣಸು
ಮೇಣ ...ಸೂಜಿ.... ರಿಗೆ....... ಮೇಣ... ಸೂಜಿ.... ರಿಗೆ........ ಮೇಣ... ಸೂಜಿ... ರಿಗೆ....ಮೇಣ ...
ಮೇಣ... ಸೂಜಿ ....ರಿಗೆ.....ಮೇಣ.... ಸೂಜಿ ...ರಿಗೆ ..ಮೇಣ.... ಸೂಜಿ ರಿಗೆ....ಮೇ ..
........

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ................
ಹರಹರಾ ಹರಹರಾ ಮಹಾದೇವ .........

'ರಿಗೆ' ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಅನೇಕ ಅಂಗಡಿಗಳ ಭೂ ಪ್ರದಕ್ಷಿಣೆ ಮಾಡಿ ಕೊನೆಗೂ ಸಿಗದೇ ನೇ...ಟ್ಟಗೆ ರೂಮಿಗೆ ಬಂದು ಮಲಗಿಬಿಟ್ಟ ನಮ್ಮ ಆಲೂ. ಕೆಲವು ಗಂಟೆ ಕಳೀತು. ಕೆಲಸಕ್ಕೆ ಹೋಗಿದ್ದ ಮಾದೇಸ ರೂಮಿಗೆ ಬಂದ, ಇನ್ನೇನು ಅಡಿಗೆ ಮಾಡಲು ಹುಡುಗ್ರು ಸುರುಹಚ್ಚಿಕೊಳ್ಳಬೇಕು, ಅಷ್ಟರಲ್ಲಿ ಮಾದೇಸ ಕೇಳಿದ " ಆಗ್ಲೇ ಫೋನ್ ನಲ್ಲಿ ಮೆಣಸು-ಜೀರಗೆ ತಂದಿಡು ಅನ್ನಲ್ಲಪ್ಪಾ ಎಲ್ಲಿಟ್ಟಿದ್ದೀಯ ? " ಆಲೂ ತಾನು ತಂದಿದ್ದನ್ನು ಮಾದೇಶನ ಕೈಗೆ ಕೊಡುತ್ತಾನೆ! ಏನಾಶ್ಚರ್ಯ ಪೊಟ್ಟಣ ಬಿಡಿಸಿ ನೋಡಿದಾಗ ಅದರೊಳಗೆ ಇದ್ದುದು ಒಂದು ಉದ್ದ ಸೂಜಿ ಮತ್ತು ಸ್ವಲ್ಪ ಮೇಣ ! ಆಲೂ ಹೇಳುತ್ತಲೇ ಇದ್ದ

" ಓ ಆಪ್ ಬೋಲಾತಾನ 'ರಿಗೆ' ಓ ಕಿದರ್ ಭೀ ನಹೀ ಮಿಲರಹಾಹೈ "


ಅಲ್ಲಯ್ಯಾ ನಾನು ತರ ಹೇಳಿದ್ದು ಮೆಣಸು-ಜೀರಿಗೆ, ನೀನು ತಂದಿದ್ದು ಏನು ಎಂದು ಹಿಂದಿಯಲ್ಲಿ ಎಕ್ಷಪ್ಲೇನ್ ಮಾಡುತ್ತಾನೆ.ಅಂತೂ ಕೊನೆಗೆ ಕನಡಾ ಬಾರದ ಮಿತ್ರನ ಹುಚ್ಚಾಟ ನೋಡಿ ಮಾದೇಸನಿಗೆ ನಗು ತಡೆಯಲಾಗಲಿಲ್ಲ ! ಗಡಗಡ ಗಡಗಡ ಮೈ ಅಲುಗಾಡಿಸಿ ಬೃಹದಾಕಾರವಾಗಿ ನಕ್ಕಿದ್ದಾನೆ ಮಾದೇಸ. ಕ್ಷಣಾರ್ಧದಲ್ಲಿ ತನ್ನ ತಪ್ಪಿನ ಅರಿವಾಗಿ ಎತ್ತರದಲ್ಲಿ ಬಹು ಎತ್ತರದಲ್ಲಿ ಹಾರಾಡುತ್ತಿರುವ ಆಲೂ ನೆಲಕ್ಕೆ ಕುಸಿದಿದ್ದಾನೆ ! ದೀನನಾಗಿ ಬಹು ದೀನನಾಗಿ ಪರಿ ಪರಿಯಾಗಿ ತನ್ನನ್ನು ಪೀಡಿಸದಿರುವಂತೆ ಗೆಳೆಯನಲ್ಲಿ ಪ್ರಾರ್ಥಿಸಿದ್ದಾನೆ ! ಆದರೂ ಮೆಣಸು-ಜೀರಿಗೆಯನ್ನು ತನ್ನ ಗಾರುಡೀ ವಿದ್ಯೆಯಿಂದ ಮೇಣ-ಸೂಜಿ-ರಿಗೆ ಮಾಡಿದ ಆಲೂ ಎಂಬ ಮಹಾಮಹಿಮನನ್ನು ಮಾದೇಸ ಬಹಳವೇ ಗೋಳುಹುಯ್ದುಕೊಳ್ಳುತ್ತಾನೆ. ಹೀಗೇ ಕಾಲಾನಂತರದಲ್ಲಿ ಅನಿವಾರ್ಯವಾಗಿ ಆಲೂಪ್ರಸಾದ ನಮ್ಮ ಕನಡಾವನ್ನು ಕಲಿತ, ಮುಂದೆ ಈ ಸ್ನೇಹಿತರು ಬಹುಕಾಲ ಸುಖದಿಂದಿದ್ದರು ಎಂಬಲ್ಲಿಗೆ 'ಲಾಲೂ ಗಾರುಡಿ' ಎಂಬ ಈ ಪುಣ್ಯ ಕಥಾಕಾಲಕ್ಷೇಪಕ್ಕೆ ಮಂಗಳಹಾಡೋಣ, ಭಗವಂತ ಈ ಕಥೆಯನ್ನು ಬಹಳ ಸ್ರದ್ಧಾ-ಭಕ್ತಿಯಿಂದ ಇಲ್ಲಿಯತನಕ ಕೇಳಿದ್ದಕ್ಕೆ ತಮಗೆಲ್ಲರಿಗೂ ಆಯುರಾರೋಗ್ಯ ಐಸ್ವರ್ಯವಿತ್ತು ಸುಖ-ಶಾಂತಿ ನೆಮ್ಮದಿಯಿಂದ ಬಾಳುವಂತಾಗಲೆಂದು ಸ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸುತ್ತಾ ಎಲ್ಲರಿಗೂ ಮಂಗಳವನ್ನು ಪಾಡೋಣ............

ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ.....
ಜಯ ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ .......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ....ಹರನಮಸ್ಪಾರ್ವತೀಪತೇ...............
ಹರಹರಾ ಹರಹರಾ ಮಹಾದೇವ .........

Sunday, February 21, 2010

' ಓ ನನ್ನ ಚೇತನಾ ಆಗು ನೀ ಅನಿಕೇತನ '

[ಚಿತ್ರ ಕೃಪೆ :ಅಂತರ್ಜಾಲ ]
' ನನ್ನ ಚೇತನಾ ಆಗು ನೀ ಅನಿಕೇತನ'

ನಾವು ಏನಾದರೊಂದು ಕೆಲಸ ಕೈಗೆತ್ತಿಕೊಳ್ಳುವಾಗ ನಮ್ಮೊಳಗಿನ ' ಆ ವ್ಯಕ್ತಿ ' ಮಾತನಾಡುತ್ತಾನೆ ! ಪರೀಕ್ಷೆ ಬರೆಯಲು ಹೋಗುವಾಗ, ವಾಹನ ಚಾಲನೆಯಲ್ಲಿ ತೊಡಗಿದಾಗ, ಸಂಗೀತ/ನೃತ್ಯಾದಿಗಳನ್ನು ನಡೆಸುವಾಗ,ಬೇರೆಯವರ ಮಾವಿನ ಮರಕ್ಕೆ ಕಲ್ಲು ಹೊಡೆಯುವಾಗ, ಬೇರೆಯವರ ಆಸ್ತಿ ಲಪಟಾಯಿಸುವಾಗ, ಓದುವಾಗ, ಓಡುವಾಗ, ಮಲಗುವಾಗ, ತಿನ್ನುವಾಗ, ತೂಕಡಿಸುವಾಗ, ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಾಗ, ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಪಾರ್ಕ್ ನಲ್ಲಿ ಲವ್ ಮಾಡುವಾಗ, ಗೆದ್ದಾಗ ಮತ್ತು ಸೋತಾಗ ಹೀಗೇ ಏನನ್ನೇ ಮಾಡುತ್ತಿರಿ ನಮ್ಮೊಳಗಿನ ' ಆ ವ್ಯಕ್ತಿ ' ಸುಮ್ಮನಿರುವುದಿಲ್ಲ ! ನಮಗೆ ಪುಗಸಟ್ಟೆ ಸಲಹೆ ಕೊಡುತ್ತಲೇ ಇರುವುದು ಆ ವ್ಯಕ್ತಿಯ ಕೆಲಸ ! ಯಾವ ಪ್ರತಿಫಲವನ್ನೂ ಬೇಡದೆ, ನಾವು ಬುಧ್ಧಿ ತಿಳಿದಾಗಿನಿಂದ ನಮಗೆ ಪರಿಷ್ಕರಿತ ಬುಧ್ಧಿ ಕೊಡುವುದು 'ಆ ವ್ಯಕ್ತಿಯ' ಕೆಲಸ ! ಒಂದೇ ಒಂದು ದಿನ ರಜಾ ಬೇಡಿಲ್ಲ, ಒಂದು ದಿನವೂ ಮಜಾ ಅನುಭವಿಸಿಲ್ಲ ! ಒಂದೇ ಒಂದು ದಿನವೂ ಹರತಾಳ ಮಾಡಿಲ್ಲ ! ತಾನಾಯಿತು ತನ್ನ ಕೆಲಸವಾಯಿತು ! ' ಹೀಗೆ ಮಾಡಬೇಡ ಇದು ಒಳಿತಲ್ಲ ಹೀಗೆ ಮಾಡು ' , ' ಅಲ್ಲಿಗೇ ಹೋಗು ನಿನಗೆ ಜಯ ದೊರೆಯುತ್ತದೆ ' , 'ಇದು ಸರಿ' , 'ಇದು ತಪ್ಪು'. 'ಇದು ಒಂಚೂರೂ ಸರಿಯಿಲ್ಲ ' ಹೇಳುತ್ತಲೇ ಇರುವ ಆ ವ್ಯಕ್ತಿಯ ಮಾತನ್ನು ನಾವು ಅನೇಕ ಸಲ ಕಡೆಗಣಿಸುತ್ತೇವೆ , ಕೊನೆಗೊಮ್ಮೆ ಆವ್ಯಕ್ತಿ ಹೇಳಿದ್ದೇ ನಡೆದಾಗ ಮರುಗುತ್ತೇವೆ. ನಿಮಗೇ ಗೊತ್ತಿಲ್ಲವೇ ಹೀಗಾಗುತ್ತಿರುವುದು ? ಇಂದೇ ಪರೀಕ್ಷೆ ಮಾಡಿ ! 'ಆ ವ್ಯಕ್ತಿ ಯೊಂದು 'ತಂತ್ರಾಂಶ' [software!]. ಈ ತಂತ್ರಾಂಶದ ಮ್ಯಾನುಫ್ಯಾಕ್ಚರರ್ ಒಬ್ಬ ಮಿತಿಮೀರಿದ ಅಥವಾ ಮಿತಿಯೇ ಇಲ್ಲದ ವಿಜ್ಞಾನಿ ! ಉತ್ತಮ ಗಣಕಯಂತ್ರ ಪ್ರೋಗ್ರಾಮರ್ ! ಹೆಸರು ಡಾ| ದೇವರು !

ನಮ್ಮೊಳಗಿನ ಆ ಅದ್ಬುತ ವ್ಯಕ್ತಿಯೇ ಹೆಣ್ಣೂ ಅಲ್ಲದ ಗಂಡೂ ಅಲ್ಲದ, ಹುಟ್ಟು-ಸಾವುಗಳೂ ಇಲ್ಲದ, ಬೆಂಕಿಯಲ್ಲಿ ಸುಡದ, ನೀರಲಿ ಕರಗದ,ಇಂಥದ್ದೇ ಎಂಬ ಆಕಾರವಿರದ, ಯಾರ ಕಣ್ಣಿಗೂ ಕಾಣದ ಆದರೆ ಅದ್ಬುತ ಶಕ್ತಿಯನ್ನು ಪಡೆದಿರುವ ದಿವ್ಯ ಚೇತನ ' ಆತ್ಮ ' ! ನಮ್ಮೊಳಗೇ ಅಡಗಿ ಕುಳಿತು ಕ್ರಿಯಾತ್ಮಕವಾಗಿ ನಮ್ಮಿಂದ ಕೆಲಸ ಮಾಡಿಸುವ, ನಮಗೇ ಮಾರ್ಗದರ್ಶಿಸುವ ನಮಗೇ ಗೊತ್ತಿರದ ನಮ್ಮ ಅತೀ ಹತ್ತಿರದ ಸ್ನೇಹಮಯಿ ಈ ಆತ್ಮ . ಜ್ಞಾನಿಗಳು-ಮುಮುಕ್ಷುಗಳು,ಕವಿ-ಕೋವಿದರು ಸ್ವಾನುಭವಕ್ಕೆ ತೆಗೆದುಕೊಂಡ ಈ ದಿವ್ಯ ಚೇತನವನ್ನು ಉದ್ದೇಶಿಸಿ ಕವಿ ದಿ| ಶ್ರೀ ಕುವೆಂಪು ಅವರು ಹೇಳಿದ್ದು ' ಓ ನನ್ನ ಚೇತನಾ ಆಗು ನೀ ಅನಿಕೇತನ' ,'ಎಲ್ಲಿಯೂ ನಿಲ್ಲದಿರು ಮನೆಯನೊಂದ ಕಟ್ಟದಿರು' ಎಂತಹ ಅದ್ಬುತ ಕೋರಿಕೆ ಕವಿಯದ್ದು ನೋಡಿ ! ಒಂದೇ ಕಡೆ ಟೆಂಟ್ ಹಾಕುವುದು ಬೇಡ, ಇದೇ-ಇಂಥದ್ದೇ ಅಂತ ಅದಕ್ಕಾಗಿ ಅಂಟಿಕೊಳ್ಳಬೇಡ ಎನ್ನುತ್ತಾರೆ. ಇದನ್ನೇ ರವಿ ಕಾಣದ ಜಾಗ ಕವಿ ಕಂಡ ಅಂತ ನಮ್ಮ ಹಿರಿಯರು ಹೇಳಿದರೇ ?


ಏನೀ ವಿಚಿತ್ರ ನೋಡಿ, ಪ್ರತಿ ವಿಷಯದಲ್ಲಿ ನೋಡಿ-ನಾವು ನಮ್ಮೊಳಗಿನ ಈ ಮಾರ್ದನಿಗೆ [echo] ವಿರುಧ್ಧವಾಗಿ ನಡೆದಾಗ ನಾವು ಮಾಡುವ ಕೆಲಸ ಯಶಸ್ವಿಯಾಗುವುದಿಲ್ಲ ! ನಾವು ಧೈರ್ಯವಹಿಸಲು ನಮ್ಮೊಡನಿದ್ದು ನಮ್ಮನ್ನು ಪ್ರಾಕ್ಟಿಕಲ್ ಆಗಿ ರೆಡಿ ಮಾಡುವುದು ಈ ನಮ್ಮ ಸುಪ್ತಮನಸ್ಸು ಅಂದರೆ 'ಆತ್ಮ' . ಈ ಆತ್ಮದಲ್ಲೋ ಹಲವಾರು ವೈವಿಧ್ಯಮಯ ಆತ್ಮಗಳಿರುತ್ತವೆ ಎಂಬುದನ್ನು ನೀವು ನಂಬಲೇ ಬೇಕು. ಇದನ್ನು ನಮ್ಮ ಮಟ್ಟಕ್ಕೆ ತಿಳಿಯುವಾಗ ಒಂಡು ಉದಾಹರಣೆ ತಗೆದುಕೊಂದರೆ ಅನುಕೂಲವೆನಿಸುತ್ತದೆ. ಶೇಂಗಾ ಅಥವಾ ಕಡಲೆಬೀಜ -ಇದನ್ನು ನಾವು ಅನೇಕ ರೂಪದಲ್ಲಿ ಸಂಸ್ಕರಿಸಿ ಆಹಾರದಲ್ಲಿ ಉಪಯೋಗಿಸುತ್ತೇವೆ. ಹಸಿ ಶೇಂಗಾ, ಒಣಗಿದ ಶೇಂಗಾ, ಸಿಪ್ಪೆ ಸಹಿತ ಹುರಿದ ಶೇಂಗಾ, ಸಿಪ್ಪೆ ರಹಿತ ಹುರಿದ ಶೇಂಗಾ, ಕರಿದ ಶೇಂಗಾ, ಬೇಯಿಸಿದ ಶೇಂಗಾ, ಖಾರ ಮೆತ್ತಿ ಹುರಿದ ಶೇಂಗಾ-ಅದರಲ್ಲೋ ಹಸಿಮೆಣಸಿನ ಖಾರಮೆತ್ತಿದ್ದು ಮತ್ತು ಕೆಂಪುಮೆಣಸಿನ ಖಾರಮೆತ್ತಿದ್ದು ! ಎಷ್ಟು ವೈವಿಧ್ಯ ಅಲ್ಲವೇ ? ಶೇಂಗಾ ಹಾಗೇ ಇದ್ದರೆ ಏನೂ ವಿಶೇಷ ಅನಿಸುವುದಿಲ್ಲ, ಆದರೆ ಪರಿಷ್ಕರಿಸಿದ ಶೇಂಗಾ ಎಲ್ಲರಿಗೂ ಇಷ್ಟ ಅಲ್ಲವೇ ? ಬೆಳೆದ ಶೇಂಗಾ ಸಿಪ್ಪೆ ಸಹಿತ ಚೆನ್ನಾಗಿ ಬಿಸಿಲಲ್ಲಿ ಒಂದು ಹದಕ್ಕೆ ಒಣಗಿದ್ದರೆ ಅದರಿಂದ ಮರು ಉತ್ಪತ್ತಿ ಸಾಧ್ಯ, ಈ ಸಿಪ್ಪೆಸಹಿತ ಶೇಂಗಾ 'ಬೀಜ' ವಾಗುತ್ತದೆ, ಅದೇ ಅತೀ ಪರಿಷ್ಕರಿಸಿದ ಶೇಂಗಾ ಮರು ಹುಟ್ಟಿಗೆ ಬೀಜವಾಗುವುದಿಲ್ಲ ! ಅದರಿಂದ ಶೇಂಗಾ ಗಿಡ ಹುಟ್ಟುವುದಿಲ್ಲ. ಹೀಗೆ ನಮ್ಮ ಆತ್ಮ ವೆಂಬ ಸುಪ್ತ ಚೇತನ ಅನೇಕ ಹಂತವನ್ನು ಪಡೆಯುತ್ತದೆ,ನಾವೇ ಮನುಷ್ಯರು ಜೀವನದಲ್ಲಿ ನಾಲ್ಕೈದು ಮಜಲುಗಳನ್ನು ಪಡೆಯುತ್ತೇವೆ, ಶೈಶವ, ಬಾಲ್ಯ, ಯೌವನ, ವಾರ್ಧಕ್ಯ, ಮುಪ್ಪು ಹೀಗೆ, ಅಥವಾ ನಾಲ್ಕು ಆಶ್ರಮಗಳನ್ನು ಹೇಳಿಕೊಂಡಿದ್ದೇವೆ : ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂದು. ಈ ಹಂತಗಳಲ್ಲಿ ಆ ಯಾ ಕೆಲಸಕ್ಕೆ ಮನಸ್ಸು ಒಗ್ಗುತ್ತದೆ. ಇದನ್ನೇ ಶ್ರೀ ಆದಿಶಂಕರರು

ಬಾಲಸ್ತಾವತ್ ಕ್ರೀಡಾಸಕ್ತಃ
ತರುಣಸ್ತಾವತ್ ತರುಣೀರಕ್ತಃ
ವೃಧ್ಧಸ್ತಾವತ್ ಚಿಂತಾಮಗ್ನಃ
ಪರೇಬ್ರಹ್ಮಣಿ ಕೋ ಪಿ ನ ಸಕ್ತಃ || ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ

ಬಾಲ್ಯದಲ್ಲಿದ್ದಾಗ ಕಂಡಿದ್ದೆಲ್ಲಾ ಆಡಬೇಕು, ಕುಣಿಯಬೇಕು, ಮೇಲಕ್ಕೆ ಹತ್ತಿ ಹಾರಬೇಕು, ಈಜಬೇಕು, ಕ್ರಿಕೆಟ್-ವಾಲೀಬಾಲ್-ಬ್ಯಾಡ್ಮಿಂಟನ್ ಹೀಗೇ ಏನೇನೋ ಆಟದ ಚಿಂತೆಯಲ್ಲೂ, ತರುಣಾವಸ್ಥೆಗೆ ಬಂದಾಗ ಸಹಜವಾಗಿ ವಿರುಧ್ಧಲಿಂಗೀ ತರುಣ-ತರುಣಿಯರಲ್ಲಿ ಆಸಕ್ತಿಯಿಂದಲೂ, ಮುಪ್ಪಿನಲ್ಲಿ ಕಳೆದುಹೋದ ದಿನಗಳ ಮೆಲುಕು-ಚಿಂತೆಯಲ್ಲೂ ನಾವು ಕಳೆಯುತ್ತೇವೆಯೇ ವಿನಃ ' ಪರಮಾತ್ಮ ' ಎಂಬುದರಲ್ಲಿ ನಮಗೆ ಆಸಕ್ತಿ ಇಲ್ಲ ! ಹೊರಗಿನಿಂದ ಪೂಜೆ ಪುನಸ್ಕಾರ, ಜಪ-ತಪ, ಪ್ರಾರ್ಥನೆ-ನಮಾಜು ಏನೇ ನಡೆದರೂ ನಮ್ಮ ಮನಸ್ಸು ಒಂದೇ ಕಡೆ ನಿಲ್ಲುವುದಿಲ್ಲ-ಏಕಾಗ್ರತೆ ಬರುವುದಿಲ್ಲ. ಹೇ ಮೂಢ ಬುದ್ಧಿಯೇ ನೀನು ಸದಾ ಗೋವಿಂದನನ್ನು ಅಥವಾ ಆ ಹಿರಿಯಶಕ್ತಿ , ಅಗೋಚರ ಶಕ್ತಿ , ಪರಬ್ರಹ್ಮನನ್ನು ನೆನೆ ಎಂದು ಶಂಕರರು ಹೇಳಿದರು, ಇದು ಸರ್ವಕಾಲ,ದೇಶ,ಧರ್ಮ ಒಪ್ಪುವ ಮಾತಲ್ಲವೇ ?

ಲೋಕದ ಜನರಲ್ಲಿ ಮೂರು ಬಗೆ --
೧. ಸ್ವಾರ್ಥಕಾಗಿ ಅದು ಕೊಡು -ಇದುಕೊಡು ಎಂದು ಪ್ರಾರ್ಥಿಸುವವರು,
೨. ನಿಸ್ವಾರ್ಥಗಳಾಗಿ ಸಮಾಜದ ಒಳಿತಿಗಾಗಿ ಪ್ರಾರ್ಥಿಸುವವರು
೩. ಜ್ಞಾನಕ್ಕಾಗಿ, ಮುಕ್ತಿಗಾಗಿ ಪ್ರಾರ್ಥಿಸುವವರು

ಇವರಲ್ಲಿ ಅನುಕ್ರಮವಾಗಿ ಆತ್ಮದ ಸ್ಥಿತಿ ಮೇಲೆರಿಕೆ ! ಕೇವಲ ಏಕಾಗ್ರತೆಯಿಂದ ಪರಬ್ರಹ್ಮವಸ್ತುವಿನಲ್ಲಿ ಧ್ಯಾನಾಸಕ್ತರಾದವರು ಅದರಲ್ಲೂ ಅನೇಕ ಜನ್ಮಗಳಲ್ಲಿ ಅದನ್ನು ನಮ್ಮ ಅಯ್ಯಪ್ಪಸ್ವಾಮಿಯ ಹದಿನೆಂಟು ಮೆಟ್ಟಿಲಿನಂತೆ ಏರುತ್ತ ಏರುತ್ತ ಹೋಗಿ ಕೊನೆಗೊಮ್ಮೆ ' ಕೇವಲಾತ್ಮ' ವಾಗಿ ಪರಮಾತ್ಮನಲ್ಲಿ ವಿಲೀನಗೊಳ್ಳುವ ಈ ' ಆತ್ಮ ' ನಮ್ಮಂತಹ ಜನಸಾಮಾನ್ಯರಿಗೆ ಅರ್ಥವಾಗದ ಚೇತನ ! ಆದರೂ ಅನುಭವಿಸಿದ ಅನಿಕೇತನ !



ಎಲ್ಲಿ ನಮ್ಮೊಳಗಿನ ' VOTE OF CONFIDENCE ' ಇರುತ್ತದೋ ಅಲ್ಲಿ ನಮಗೆ ಜಯವಿರುತ್ತದೆ; ಅದಿಲ್ಲದಿದ್ದರೆ ನಾವು ಕಳೆದುಕೊಳ್ಳುತ್ತೇವೆ; ಅನುತ್ತೀರ್ಣರಾಗುತ್ತೇವೆ ! ಈ ಜಯಶಾಲಿ ಹಂತಕ್ಕೆ ತಲುಪಲು ಮನುಷ್ಯ ನಿತ್ಯವೂ ಸ್ವಲ್ಪಕಾಲ ಆತ್ಮಧ್ಯಾನ ನಿರತನಾಗಿರಬೇಕು. ಮನೆಯಲ್ಲಿ ಹಿರಿಯರು ಹೇಳಿದ್ದನ್ನು ಹೇಗೆ ಕೆಲವು ಮಟ್ಟಿಗಾದರೂ ಪಾಲಿಸುತ್ತೇವೋ ಹಾಗೇ ಇಲ್ಲಿ ಧ್ಯಾನದಲ್ಲಿ ನಮ್ಮ ಆತ್ಮದ ಅವಿಭಾಜ್ಯ ಅಂಗವಾದ ಮನಸ್ಸು,ಚಿತ್ತ ಏನು ಹೇಳುತ್ತದೆ ಎಂಬುದನ್ನು ಆಲೈಸಬೇಕು, ಅದಕ್ಕೆ ಪುರಸ್ಕಾರಕೊಟ್ಟು ಒಲೈಸಬೇಕು. ನೀವು ಧ್ಯಾನಕ್ಕೆ ಕುಳಿತಾಗ ನಿಮ್ಮಲ್ಲಿ ಉದ್ಭವಗಂಗೆ ಹರಿಯ ತೊಡಗುತ್ತಾಳೆ-ಆದರೆ ಆ ಜ್ಞಾನ ಗಂಗೆ ಯಾವಾಗ ಹುಟ್ಟುತ್ತಾಳೆ ಎನ್ನುವುದು ನಿಮ್ಮ level of dhyaana ದ ಮೇಲೆ ಅವಲಂಬಿಸಿದೆ! ಇವತ್ತಿಗೂ ನೀವು ಕಾವೇರಿಯ ಉಗಮಸ್ಥಾನದಲ್ಲಿ ವರ್ಷಕ್ಕೊಮ್ಮೆ ತೀರ್ಥ ಉದ್ಭವವಾಗುವುದನ್ನು ಕೇಳಿದ್ದೀರಿ-ಕಂಡಿದ್ದೀರಿ-ಇದು ಅಧುನಿಕ ವಿಜ್ಞಾನಕ್ಕೆ ಅರ್ಥವಾಗದ ರಹಸ್ಯ ! ಹಾಗೇ ನಿಮ್ಮ ಮನದಲ್ಲೂ ಜ್ಞಾನಗಂಗೆಯ ಉದ್ಭವ ವಾಗುತ್ತದೆ-ಅದಕ್ಕೆ ತಕ್ಕ ಪರಿಶ್ರಮ,ನಿರೀಕ್ಷೆ ,ಸಾಧನೆ ಇರಬೇಕು. ಇದರಲ್ಲಿ ಧರ್ಮದ ಹಂಗಿಲ್ಲ! ನೀವು ಯಾರೇ ಆಗಿರಿ, ನಿಮ್ಮ ನಿಮ್ಮ ಧರ್ಮಾನುಸಾರ ಧ್ಯಾನಮಾಡಬಹುದಲ್ಲ !

ಈ ನಮ್ಮ ಒಳಗಿನ ವ್ಯಕ್ತಿ ದಿನಾಲೂ ಬೇಡುವ ಒಂದೇ ಸವಲತ್ತು ಎಂದರೆ ' ಸ್ನಾನ ' ! ಆಶ್ಚರ್ಯವಾಯಿತೇ ? ಕೇಳಿ--ನಾವು ನಮ್ಮ ಶರೀರದ ಸ್ವಾಸ್ಥ್ಯಕ್ಕಾಗಿ-ಸ್ವಚ್ಛತೆಗಾಗಿ ಹೇಗೆ ಸ್ನಾನಮಾಡಿ ಪರಿಮಳಗಂಧಗಳನ್ನು ತೊಡೆದುಕೊಳ್ಳುತ್ತೇವೆಯೋ ಹಾಗೆಯೇ ನಮ್ಮೊಳಗಿನ ಆ ವ್ಯಕ್ತಿಗೆ ಧ್ಯಾನ ಎಂಬ ಸ್ನಾನ ಬೇಕು ! ಧ್ಯಾನವಾದಮೇಲೆ ಪರೋಪಕಾರ, ಸತ್ ಚಿಂತನೆ ಎಂಬ ದಿವ್ಯ ಪರಿಮಳಗಂಧಗಳನ್ನು ತೊಡೆದುಕೊಳ್ಳುತ್ತಿರಬೇಕು. ಇದರಿಂದ ಮಾತ್ರ ನಾವು ನಮ್ಮತನವನ್ನು ಅರಿಯಬಹುದೇ ಹೊರತು ಮಿಕ್ಕಿದ್ದೆಲ್ಲಾ ಬರೀ ಬೂಟಾಟಿಕೆ !


ಹೀಗೇ ನಾವೆಲ್ಲಾ ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಮರೆತಿರುವ ಧ್ಯಾನವೆಂಬ ಸಂಸ್ಕಾರವನ್ನು ಇಂದಿನಿಂದಲಾದರೂ ಆಚರಿಸೋಣವೇ ?

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||

Saturday, February 20, 2010

ಕನ್ನಡಮ್ಮ ಅತ್ತಾಗ !!



ಹೀಗೂ ನಡೆಯುತ್ತಾ ? ಅಂದರೆ "ಹೌದು ಹೀಗೂ ನಡೆಯುತ್ತದೆ " ಅಂತ ನಮ್ಮ ೭೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನವನ್ನು ನೋಡಹೋದವರು ಹೇಳುತ್ತಾರೆ. ಕೇವಲ ಅಪಹಾಸ್ಯಕ್ಕಾಗಿ ಥರದ ಸಮ್ಮೇಳನವನ್ನು ಮಾಡಬೇಕೆ ? -ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ೭೫ ಕೋಟಿ ರೂಪಾಯನ್ನು ೫೦೦ ವರ್ಷಗಳ ಹಿಂದೆ ಆಳಿದ್ದ ಕೃಷ್ಣದೇವರಾಯನ ನೆನಪಿಗೆ ಖರ್ಚುಮಾಡುವಾಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆನಪು ನಮಗಾಗುವುದಿಲ್ಲ! ಸತತವಾಗಿ ಉನ್ನತಮಟ್ಟದಲ್ಲಿ ನಡೆಯಬೇಕಾದ ಸಂಸ್ಕೃತಿ-ಸಂಸ್ಕಾರಗಳ ಕಮ್ಮಟ, ನಮ್ಮ ತಾಯಿಯ ಜಾತ್ರೆ, ನಮ್ಮತನದ ಪ್ರದರ್ಶನ, ನಮ್ಮ ಅಭಿಮಾನದ ಕನ್ನಡಮ್ಮನಿಗೆ ನಮ್ಮಿಂದ ಸಲ್ಲಬೇಕಾದ ಗೌರವ--ಇದಕ್ಕೆ, ಇದರ ಖರ್ಚಿಗೆ ಹೊರಟಾಗ ನಮಗೆ ನೆನಪಾಗುವುದು 'ಉತ್ತರಕರ್ನಾಟಕದ ನೆರೆ ಪೀಡಿತ ಪ್ರದೇಶ' . ಏನ್ರೀ ಇದು ರಾಜಕೀಯದ ಡೊಂಬರಾಟ ! ಮಾಡುವ ಕೆಲಸಕ್ಕೊಂದು ಮರ್ಯಾದೆ ಬೇಡವೇ? ಯಾವನೋ ರೌಡಿ ಇಂದು ಮಂತ್ರಿ ,ಶಾಸಕ, ಪುಡಾರಿ-ಇವರ ಹೇಳಿಕೆಯ ಆದ್ಯತೆಯ ಮೇರೆಗೆ ಕೆಲಸ ಕಾರ್ಯ!












ಹುಚ್ಚು
ಅಂದರೆ ಇದು ! ಕನ್ನಡವನ್ನು ಸ್ಪಷ್ಟವಾಗಿಮಾತನಾಡಲಾಗದೇ ಅನೇಕ ಶಬ್ಧಗಳನ್ನು ತೊದಲುವ ಶ್ರೀರಾಮುಲು ಇದಕ್ಕೆ ಉಸ್ತುವಾರಿ-ಉದ್ಘಾಟನಾ ರಾಯಭಾರಿ ! ನಿನ್ನೆ ಅಂದರೆ ೨೦.೦೨.೨೦೧೦ ಸಭೆಯಲ್ಲಿ ಆಕಳಿಸುತ್ತಾ-ತೂಕಡಿಸುತ್ತಾ ಶ್ರೀಮಾನ್ ಶ್ರೀರಾಮುಲು ಅವರು ಸಭೆಗೆಕಳೆಕಟ್ಟಿದರು-ಕಲಶಪ್ರಾಯರಾದರು ! ಜನ ಮರುಳೋ ಜಾತ್ರೆಮರುಳೋ ಎಂಬುದು ಗಾದೆ ತಾನೇ ? ಇಲ್ಲಿ ನಮ್ಮ ಜನವೂಮರುಳೆನ್ನುವವ ನಾನು. ಯಾಕೆ ಅಂದರೆ ನಮ್ಮ ಜನರಿಗೆ ನಾಡಿಮಿಡಿತವೇ ಹೋಗಿಬಿಟ್ಟಿದೆ, ಇಲ್ಲದಿದ್ದರೆ ಸರಕಾರದ ಪೂರ್ವತಯಾರಿಯನ್ನು ಸರಿಯಾಗಿ ಪರಿವೀಕ್ಷಿಸಬೇಕಿತ್ತು ! ಒಮ್ಮೊಮ್ಮೆಅನಿಸುತ್ತಿದೆ ರಾಜಕೀಯ ಬರೀ ಗೂಂಡಾ ಸಂತೆ ! ಅದಕ್ಕೇ ಮರ್ಯಾದಸ್ತ ನಮ್ಮ ಜನ ಬೇಸತ್ತು ಯಾವುದರಲ್ಲೂ ಆಸಕ್ತಿ ತೋರುತ್ತಿಲ್ಲ. ಯಾವ ರೀತಿಯಲ್ಲಿ ಚಿಂತಿಸಿದರೂ ಸಮಾಧಾನ ಅನ್ನೋದು ಸಿಗುತ್ತಲೇ ಇಲ್ಲ ! ಯಾವ
! ದೃಷ್ಟಿಕೋನದಿಂದ ನೋಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲ, ರಾಜಕೀಯ ಮೇಲಾಟಕ್ಕೆ ದುಡ್ಡಿನ ಕೊರತೆ ಇಲ್ಲ ; ಸುಸಂಸ್ಕೃತರು ಸೇರುವ ಈ ಸಂಸ್ಕೃತಿ ಜಾತ್ರೆಗೆ ಮಾತ್ರ ದುಡ್ಡಿಲ್ಲ ಎಂಬ ಹೇಳಿಕೆ!

ಇನ್ನೊಬ್ಬ ಅಮ್ಮ ಬಂದರು, ಅವರಿಂದ ಒಂದಷ್ಟು ಕೊಡು-ಕೊಳ್ಳುವ ವ್ಯವಹಾರವೇ ? ಕೇರಳದಿಂದ ಬಂದು ನಮ್ಮ ಮುಖ್ಯಮಂತ್ರಿಗಳಿಗೆ ಕೀಲಿಕೈ ಗಳನ್ನು ಕೊಡಲು ಬಂದರು, ಅದಕ್ಕೊಂದು ಸಮಾರಂಭ ರಸ್ತೆ ಮೋರಿ ಉದ್ಘಾಟನೆಗೊಂದು, ಹೊಸದಾಗಿ ಡಾಂಬರೆಂಬ ಬಣ್ಣ ಬಳಿದ ರಸ್ತೆಗೊಂದು, ಅಂಡರ್ ಪಾಸ್ ಗೊಂದು, ಫ್ಲೈ ಓವರ್ ಗೊಂದು ಹೀಗೇ ನಾ ನಾ ಥರದ ಇಂತಹ ಕ್ಷುಲ್ಲಕ ಸಭೆಗಳಿಗೆ, ಹಾರ-ತುರಾಯಿಗಳಿಗೆ, ಪಕ್ಷದ ಬಾವುಟ-ಬ್ಯಾನರ್ ಗಳಿಗೆ, ರಸ್ತೆಯುದ್ದದ ಕಟ್ ಔಟ್ ಗಳಿಗೆ ಇದಕ್ಕೆಲ್ಲ ಖರ್ಚಿಗೆ ದುಡ್ಡಿದೆ ! ಇಲ್ಲಿ ಬಂದ ಕೇರಳದ ಅಮ್ಮಗೆ ೧೫ ಎಕರೆ ಭೂಮಿ, ೫ ಕೋಟಿ ಹಣ ಕೊಡುವ ಮಾತು, ಯಾಕ್ರೀ ಅಂತಹ ಸಂತರಿಗೆ ಜಾಗ ? ಅವರಿಗೆ ಕೊಡುವ ಆ ದುಡ್ಡು + ಅಳಿದ ಅರಸನ ವ್ಯಸನಕ್ಕೆ ಖರ್ಚಾಯಿಸಿದ ಆ ದುಡ್ಡು + ಸಮಾವೇಶಗಳಿಗೆ ಖರ್ಚುಮಾಡುವ ದುಡ್ಡು + ಆಪರೇಶನ್ ಕಮಲವೋ ವಿಮಲವೋ ಅದಕ್ಕೆ ಸುರಿವ ಕಳ್ಳ ದುಡ್ಡು ಎಲ್ಲಾ ಸೇರಿಸಿ ಅದರಲ್ಲಿ ನಾಲ್ಕು ಭಾಗ ಮಾಡಿ ಕೇವಲ ಕೇವಲ ಕೇವಲ ಒಂದು ಭಾಗವನ್ನು ನಮ್ಮ ಉತ್ತರ ಕರ್ನಾಟಕದ ಜನತೆಯ ಉದ್ಧಾರಕ್ಕೆ ಉಪಯೊಗಿಸಿದ್ದರೆ ಇವತ್ತಿನ ಈ ಹಾ ಹಾ ಕಾರವಿರುತ್ತಿರಲಿಲ್ಲ ಅಂದರೆ ನಂಬುತ್ತೀರಾ? ನೀವೇ ಕಾಲಿ ಇರುವಾಗ ಕುಳಿತು ಲೆಕ್ಕಹಾಕಿ!

ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು ಅಂದರೆ ಅದೊಂದು ಸ್ಥಾನಕ್ಕೆ ಕೊಡುವ ಗೌರವ ಸ್ವಾಮೀ, ಹೇಗೆ ರಾಷ್ಟ್ರಪತಿ ಎನ್ನುತ್ತೇವೋ , ಹೇಗೆ ರಾಜ್ಯಪಾಲರು ಎನ್ನುತ್ತೇವೋ ಹಾಗೇ. ಅಲ್ಲಿ ಸರ್ತಿ ಒಬ್ಬರು ಮತ್ತೆ ಮುಂದೆ ಇನ್ನೊಬ್ಬರು ಬರುತ್ತಿರುತ್ತಾರರಲ್ಲವೇ ? ಸಾಹಿತ್ಯಿಕ ಕೃತಿಗಳಿಂದಲೂ, ವಯಸ್ಸಿನಿಂದಲೂ ಹಿರಿಯರಾಗಿ ತೋರ್ಪಡುವ ಮುತ್ಸದ್ಧಿ ವ್ಯಕ್ತಿಯೋರ್ವರನ್ನು ಸ್ಥಾನದಲ್ಲಿ ಗೌರವಯುತವಾಗಿ ಕೂರಿಸುವುದು ಕನ್ನಡಮ್ಮನಿಗೆ ಒಂದು ಸಾಂಕೇತಿಕ ಸೇವೆ ಅಷ್ಟೇ ! ಅದು ಆ ವ್ಯಕ್ತಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ದೊರೆಯುವ ಸ್ಥಾನ - ಇದರಿಂದಾಗಿ ಇದೇ ಒಂದು ಹೆಮ್ಮೆಯ ಸಮ್ಮಾನ ! ಕೊನೇಪಕ್ಷ ಒಂದು ಸಣ್ಣ ಸುಂದರ ರಥ, ಕೆಲವಾದರೂ ಭಾಜಾ ಭಜಂತ್ರಿಗಳು, ಕೆಲವು ಜನಪದ ನೃತ್ಯಗಳು, ಛದ್ಮ ವೇಷಗಳು ಇವಕ್ಕೆಲ್ಲ ಖರ್ಚಿಗೆ ಎಷ್ಟು ಬರುತ್ತದೆ ಅಂತೀರಾ ? ಇಷ್ಟನ್ನೂ ಮಾಡದ ಯಾವನ್ರೀ ಅವನು ಸಂಸ್ಕಾರರಹಿತ ಮಂತ್ರಿ ! ಇಂತಹ ಕೆಟ್ಟ ರಾಜಕಾರಣಿಗಳಿಗೆ ನಮ್ಮ ಧಿಕ್ಕಾರವಿರಲಿ !! ನಮ್ಮ ಧಿಕ್ಕಾರವಿರಲಿ !!

ಹಳೆಯ ಮುರುಕಲು ಜೀಪಿಗೆ ಬಣ್ಣ ಹೊಡೆದು, ನಾಲ್ಕು ಹೂವಿಟ್ಟು, ಮೇಲೆ ಅಸಹ್ಯಕರವಾಗಿ ಗಲಗಲನೆ ಅಲುಗಾಡುವ ಕೊಡೆಯೊಂದನ್ನು ಸಿಗಿಸಿ ಅದರಲ್ಲಿ ನಮ್ಮ ಕನ್ನಡದ ಹಿರಿಯಕ್ಕ ಶ್ರೀಮತಿ ಗೀತಾ ನಾಗಭೂಷಣ ರನ್ನು ಕರೆತಂದರಲ್ಲ, ಎಷ್ಟುಸೌಜನ್ಯವಿರಬೇಕ್ರೀ ಸಾಹಿತ್ಯಕ್ಕನಿಗೆ ? ಅಂತಹದುರಲ್ಲಿ ಕುಳಿತು ಬಂದರಲ್ಲ ಮಹಾತಾಯಿ ! ನನ್ನ ಮಗನ ಹುಟ್ಟು ಹಬ್ಬಕ್ಕೆನಾನು ಖರ್ಚುಮಾಡುವ ದುಡ್ಡು ಕೊಡುತ್ತಿದ್ದೆನಲ್ಲರೀ ರಾಜಕೀಯ ಧನಪಿಶಾಚಿಗಳಿಗೆ; ಅದು ಸಾಕಾಗಿತ್ತು ಒಂದು ರಥವನ್ನುಕಟ್ಟಲಿಕ್ಕೆ !!

ಈ ರಥ ಕಥೆಯನ್ನು ಹೇಳುತ್ತಿರುವಾಗ ಅಷ್ಟನ್ನೂ ಕೇಳುತ್ತಿದ್ದವನಂತೆ ತಲೆದೂಗುತ್ತಿದ್ದ ಒಬ್ಬ ವ್ಯಕ್ತಿಯ ಹತ್ತಿರ ಅರ್ಥವಾಯ್ತಾ ಅಂತ ಕೇಳಿದೆ ಸ್ವಾಮೀ , ಬಂತು ಮಾರುತ್ತರ

" ನೀ ಎನ್ನ ಪೇಸರಂಗ ಎನಕೆ ತೆರಿಯಾದು ? " !

ಅಯ್ಯೋ ಎನ್ನಿಸುತ್ತದಲ್ಲವೇ ? ಸತ್ಯ ಕಹಿಯಾಗಿದ್ದರೂ ಸ್ವೀಕರಿಸಲೇ ಬೇಕಲ್ಲವೇ?

ಕನ್ನಡದ ಯುವಕರೇ ಎದ್ದೇಳಿ , ಇನ್ನಾದರೂ ಇಂತಹ ಅಪಚಾರವನ್ನು ತಪ್ಪಿಸಿ, ಇದೋ ನಿಮ್ಮಮ್ಮ ಕನ್ನಡಮ್ಮ ನಿಮ್ಮನ್ನ ಕೈಬೀಸಿಕರೆಯುತ್ತಿದ್ದಾಳೆ, ಕೈಮುಗಿದು ಹೊರಡಲು ಅಣಿಯಾಗಿದ್ದಾಳೆ, ಅವಳ ಬಗ್ಗೆ ಅವಳ ಬೇಕು-ಬೇಡ, ಆರೋಗ್ಯದ ಬಗ್ಗೆ ನಿಮ್ಮಗಮನವಿರಲಿ,


ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಸಿರಿಗನ್ನಡಂ ಗಲ್ಲಿಗಲ್ಲಿಗೆ

|| ಜೈ ಭುವನೇಶ್ವರಿ ||




[ಸಮ್ಮೇಳನದ ಎರಡು ಚಿತ್ರಕೃಪೆ : ಸಂಜು ವಡೆಯರ್]

' ಕನ್ನಡಮ್ಮ ಅತ್ತಾಗ '

ಹೊಳೆವ ಬಿಸಿಲಿನ ರಸ್ತೆಯೊಳಗೆ ಹಳೆಯ ಜೀಪನು ತಂದು ನಿಲ್ಲಿಸಿ
ತೊಳೆದು ನಾಲ್ಕು ಹೂವ ಹಚ್ಚಲು ರಥವು ನಮಗದು ಸಿದ್ಧವು !

ಮೊಳೆಗೆ ಸಿಗಿಸುತ ಒಂದು ಕೊಡೆಯನು ಗಲಗಲನೆ ಅಲುಗಾಡಿಸುತಲಿರೆ
ಕಳೆಯೆ ಇಲ್ಲದ ಮೆರವಣಿಗೆಯದು ನಮ್ಮ ತಾಯಿಯ ಜಾತ್ರೆಯು !

ಆರ ಬಳಿಯಲಿ ಹೇಳಲಿ ಮಗೂ ಆರ ಜೊತೆಯಲಿ ಕಳೆಯಲಿ ಮಗೂ
ಆರು ದುಡ್ಡನು ನುಂಗದವರು ಆರು ನನಗೆ ಹಿತವರು ?

ಅಮ್ಮಗಳಿರಾ ಅಕ್ಕಗಳಿರಾ ನನ್ನ ತಾಯೊಡ ಹುಟ್ಟುಗಳಿರಾ
' ಕನ್ನಡಮ್ಮನು ನಿಮ್ಮ ಅಮ್ಮನು 'ಎನುತ ಮನವದು ಕೂಗಲು

ಒಂದು ಬಿನ್ನಹ ಜನರೇ ಕೇಳಿ ಅಮ್ಮನಿರುವಳು ಸಂಕಟದಲಿ !
ಒಂದು ನಿಮಿಷದಿ ಕಿವಿಯಕೊಟ್ಟು ಆಲಿಸಿರಿ ಅವಳಳಲನು

ಕನ್ನಡಮ್ಮನು ಬಿಟ್ಟುಬಂದು ಊರು ತೊರೆದು ದೇಶ ತೊರೆಯುತ
ಒಮ್ಮೆ ಹಾದಿಯೊಳಡ್ಡನಿಂತು ನಮ್ಮ ಕಡೆ ಕೈ ಮುಗಿದಳು

ಸತ್ಯವೇ ಕನ್ನಡವು ಎಂಬಾ ನಮ್ಮ ತಾಯಿಯ ಕಥೆಯಿದು !

Friday, February 19, 2010

ಅಮೃತಾತ್ಮವೆ ನೆನೆ 'ನಾರಾಯಣ'

ನೂರು ಜನ್ಮಗಳನ್ನು ಕಳೆದ ನಂತರ ಒಮ್ಮೆ ಮನುಷ್ಯಜನ್ಮ ಬರುತ್ತದೆಂದು ಸನಾತನ ಧರ್ಮದಲ್ಲೂ, ಬುದ್ಧ ಜಾತಕ ಕಥೆಗಳ ಮುಖಾಂತರವೂ ನಮಗೆ ತಿಳಿದುಬರುತ್ತದೆ. ಬಡತನ-ಸಿರಿತನಗಳು ಕಾಲಾನುಕ್ರಮದಲ್ಲಿ ಬದಲಾಗುತ್ತಿರುತ್ತವೆ, ಇದಕ್ಕೆ ಕಾರಣ ಸಿರಿ ಶಾಶ್ವತವಲ್ಲ ! ಲಕ್ಷ್ಮಿ ಒಂದೇ ಕಡೆ ನಿಲ್ಲುವುದಿಲ್ಲ! ಹಿಂದೊಮ್ಮೆ ವಿಜಯನಗರ ಸಾಮ್ರಾಜ್ಯದಲ್ಲಿ ಇಂತಹ ಅಪರೂಪದ ಘಟನೆ ನಡೆಯಿತು, ತಮಗೆಲ್ಲಾ ಗೊತ್ತಿರುವಂತೆ ಶ್ರೀನಿವಾಸ ನಾಯಕ ಆಗರ್ಭ ಶ್ರೀಮಂತಿಕೆ ತುಂಬಿ 'ನವಕೋಟಿ ನಾರಾಯಣ' ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ವೇಳೆ, ಅವರು ಮನೆಯಿಂದಾಚೆ ಹೋದಾಗ ಶ್ರೀನಿವಾಸರ ಮನೆಗೆ ಯಾರೋ ಬಡ ವ್ಯಕ್ತಿ ಬಂದು ಮಗಳ ಮದುವೆಗೆ ಸಹಾಯಮಾಡಿರೆಂದು ದುಂಬಾಲು ಬಿದ್ದಾಗ ಶ್ರೀನಿವಾಸರ ಹೆಂಡತಿ ಏನು ಕೊಟ್ಟರೂ ತನ್ನ ಯಜಮಾನರಿಗೆ ಜವಾಬು ಕೊಡಲು ಸಾಧ್ಯವಿಲ್ಲವೆಂದು ಪರಿಗಣಿಸಿ ಸಹಾಯ ಬಯಸಿ ಬಂದ ವ್ಯಕ್ತಿಗೆ ತನ್ನ ಮೂಗುತಿ [ನತ್ತು]ಯನ್ನು ಕೊಟ್ಟು ಅದನ್ನು ಮಾರಿ ಪ್ರತಿಯಾಗಿ ಬೇರೆ ಏನಾದರೂ ಪಡೆಯುವಂತೆ ಹೇಳುತ್ತಾಳೆ, ಸ್ವಲ್ಪ ಸಮಯದ ನಂತರ ಹೊರಗಿನಿಂದ ಬಂದ ಶ್ರೀನಿವಾಸ ನಾಯಕ ಹೆಂಡತಿಯ ಮೂಗಿನಲ್ಲಿ ಮೂಗುತಿ ಕಾಣದೆ ಸಿಟ್ಟಿನಿಂದ ಆರ್ಭಟಿಸುತ್ತಾನೆ. ಯಜಮಾನನ ಕೋಪಕ್ಕೆ ಹೆದರಿ ಆಕೆ ದಾರಿ ಕಾಣದೆ ಮಹಡಿಯೇರಿ ಒಂದು ಹರಿವಾಣದಲ್ಲಿ ವಿಷಯುಕ್ತ ನೀರೆತ್ತಿಕೊಂಡು 'ದೇವಾ ನಿನ್ನಿಚ್ಛೆ ಇದ್ದಂತಾಗಲಿ' ಎಂದು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಮೇಲಿಂದ ಏನೋ ಹರಿವಾಣದಲ್ಲಿ ಬಿದ್ದ ಸದ್ದು ! ಎತ್ತಿ ನೋಡುತ್ತಾಳೆ ತನ್ನ ಮೂಗುತಿ ! ಏನಿದು ಎಲ್ಲಿಂದ ಬಂತು ಎಂದು ಚಕಿತಳಾಗುತ್ತಾಳೆ, ನಡೆದದ್ದನ್ನೆಲ್ಲ ಶ್ರೀನಿವಾಸರಿಗೆ ಅರುಹುತ್ತಾಳೆ. ಕ್ಷಣಾರ್ಧದಲ್ಲಿ ಮನಸ್ಸಿನ ಸ್ಥಿತಿ ಬದಲಾಗಿ ಇಹದ ಶ್ರೀಮಂತಿಕೆಗೆ ಅರ್ಥವಿಲ್ಲ ಎಂಬುದನ್ನು ಮನಗಂಡ ಶ್ರೀನಿವಾಸರು ದೈವಭಕ್ತರಾಗುತ್ತಾರೆ; ಪುರಂದರದಾಸರೆಂದು ಅಂಕಿತ ಪಡೆದು ವಿಠಲನ ಪರಮ ಭಕ್ತರಾಗಿ ಮುಂದೆ ಅನೇಕ ಕೀರ್ತನೆ, ಸಂಕೀರ್ತನೆ, ಭಜನೆಗಳನ್ನು ರಚಿಸುತ್ತಾರೆ; ಖ್ಯಾತನಾಮರಾಗುತ್ತಾರೆ.

|| ಆಕಾಶಾತ್ಪತಿತಮ್ ತೋಯಂ ಯಥಾ ಗಚ್ಛತಿ ಸಾಗರಮ್ ||

ಹೇಗೆ ಮಳೆ ನೀರು ಎಲ್ಲೇ ಬಿದ್ದರೂ ಹರಿದು ಅನೇಕ ಹೊಳೆ-ಹಳ್ಳಗಳಿಗೆ ಸೇರಿ ಕೊನೆಗೊಮ್ಮೆ ಸಾಗರವನ್ನು ಸೇರುತ್ತದೋ ಹಾಗೇ ನಾವು ಯಾವುದೇ ಧರ್ಮ,ಭಾಷೆ,ಜನಾಂಗ ಏನೇ ಆಗಿದ್ದರೂ ನಮ್ಮಎಲ್ಲಾ ರೂಪದ ಪ್ರಾರ್ಥನೆಗಳು ಸಲ್ಲುವುದು ಮೂಲ ಪರಾಶಕ್ತಿಗೆ; 'ಪರಬ್ರಹ್ಮ' ಶಕ್ತಿಗೆ
. ಮನುಷ್ಯ ಹಿಂದೂ, ಕ್ರೈಸ್ತ, ಮುಸ್ಲಿಂ ಅಥವಾ ಇನ್ನಾವುದೇ ಧರ್ಮದವನಾಗಿರಲಿ ಅವನಿಗೆ ಬೇಕಾದ ರೂಪದಲ್ಲಿ, ರೀತಿಯಲ್ಲಿ ಕಣ್ಣಿಗೆ ಅಗೋಚರವಾದ ಆ ದಿವ್ಯ ಶಕ್ತಿಯನ್ನು ಆರಾಧಿಸಬಹುದು. ಜೀವನದಲ್ಲಿ ತಾನು ಸೋತಾಗ, ಪರೀಕ್ಷೆಗಳನ್ನು ಪಾಸುಮಾಡದಾಗ, ತನ್ನ ಕುದುರೆ ಗೆಲ್ಲದಾಗ, ಅನಿರೀಕ್ಷಿತ ಅವಘಡಗಳಲ್ಲಿ ಸಿಲುಕಿಕೊಂಡಾಗ, ಯಾರಿಂದಲೂ ಸಹಾಯ ಸಿಗದಾಗ,ಪರಿಹರಿಸಲಾರದ ಸಂಕಷ್ಟದಲ್ಲಿ ಸಿಲುಕಿಕೊಂಡಾಗ ಕೊನೆಯ ಆಸರೆಯಾಗಿ ತನಗಿಂತ ಹೆಚ್ಚಿನ ಶಕ್ತಿಯೊಂದಿದೆ ಅದನ್ನು ನಂಬಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹಂಬಲಿಸುತ್ತಾನೆ.

ಅದನ್ನೇ ಶಿವಶರಣರು ಹೇಳಿದ್ದು -
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ - ಎಂದು


ಮಹಾಭಾರತದಲ್ಲಿ ತುಂಬಿದಸಭೆಯಲ್ಲಿ, ಪಾಪಿ ದುಶ್ಯಾಸನನಿಂದ ತನ್ನ ವಸ್ತ್ರಾಪಹರಣವಾಗುತ್ತಿರುವಾಗ, ದ್ರೌಪದಿಯು ತನ್ನ ಐದುಮಂದಿ ಅಸಾಮಾನ್ಯ ಪತಿಯರು ನಿಂತಲ್ಲೇ ನಿತ್ರಾಣರಾಗಿಹೋದಾಗ, ನಿಶ್ಶಕ್ತ ರಾದಾಗ ಕೊನೆಯದಾಗಿ ಏನಾದರಾಗಲೆಂದು ತನ್ನಿಂದಾಗದೆಂದು ಎರಡೂ ಕೈ ಮೇಲಕ್ಕೆತ್ತಿ ಆರ್ತಳಾಗಿ, ದೀನಳಾಗಿ ಕೃಷ್ಣನನ್ನು ಕರೆಯುತ್ತಾಳೆ; ಫಲವಾಗಿ ಅಕ್ಷಯಾಂಬರ ಪಡೆಯುತ್ತಾಳೆ. ಭಾಗವತದಲ್ಲಿ ಗಜೇಂದ್ರನೆಂಬ ಆನೆಯ ಕಾಲನ್ನು ಮೊಸಳೆ ಕಚ್ಚಿ ಹಿಡಿದಾಗ, ತನ್ನ ರಕ್ಷಕರು ಯಾರೂ ಇಲ್ಲವೆಂದು ತಿಳಿದವೇಳೆ ಗಜೇಂದ್ರ ದೈವಕ್ಕೆ ಮೊರೆಹೋಗುತ್ತಾನೆ, ಆನೆಯ ಆರ್ತನಾದ ಕೇಳಿ ಮಹಾವಿಷ್ಣು ಗರುಡ ವಾಹನನಾಗಿಬಂದು ತನ್ನ ಚಕ್ರದಿಂದ ಮೊಸಳೆಯನ್ನು ಘಾಸಿಗೊಳಿಸಿ ಆನೆಯ ಸಂಕಷ್ಟವನ್ನು ಪರಿಹರಿಸುತ್ತಾನೆ. ಹೀಗೇ 'ನನ್ನದಲ್ಲ' ಎಂಬ ನಮ್ಮ ಅನಿಸಿಕೆಯ ಬೆಳವಣಿಗೆ ನಮಗೆ ಹೆಚ್ಚಿನ ಶಕ್ತಿ ಕೊಡುತ್ತದೆ ಮಾತ್ರವಲ್ಲ ಮನಸ್ಸು ಕೆಟ್ಟದಾರಿಗೆ ಹೋಗದಂತೆ ನಮ್ಮ ಮನಸ್ಸಿಗೆ ನಮ್ಮ ಆಂತರ್ಯವೇ ಪ್ರಚೋದಿಸುತ್ತದೆ. ಅದನ್ನೇ ನಾವು

|| ಧೀ ಯೋ ಯೋನಃ ಪ್ರಚೋದಯಾತ್ ||

ಎಂದು
ಈ ರೂಪದಲ್ಲಿ ಪ್ರಾರ್ಥಿಸುತ್ತೇವೆ. ಇಂತಹ ಪ್ರಾರ್ಥನೆಗಳಿಂದ ನಮ್ಮ ಮನಸ್ಸಿಗೆ ಸನ್ಮಾರ್ಗದಲ್ಲಿ ಕ್ರಿಯಾತ್ಮಕತೆ ಬರುತ್ತದೆ [positive attitude],ತನ್ಮೂಲಕ ಲೋಕದಲ್ಲಿ ನಾವು ಪರೋಪಕಾರಿಗಳಾಗಿ, ಪರಹಿತರಕ್ಷಕರಾಗಿ ಯಾವೊಂದೂ ಕೆಟ್ಟ ಚಾಳಿಯನ್ನು ಮೈಗೂಡಿಸಿಕೊಳ್ಳದೆ ಉತ್ತಮ ಮಾರ್ಗದಲ್ಲಿ ಬದುಕಲು ಪ್ರೇರೇಪಿಸುತ್ತದೆ !

ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾ| ವಿದ್ವಿಷಾವ ಹೈ

ಓಂ ಶಾಂತಿಃ ಶಾಂತಿಃ ಶಾಂತಿಃ

ಆಹಾ ಎಷ್ಟೊಂದು ಅರ್ಥಗರ್ಭಿತ ನಮ್ಮ ಮಂತ್ರಗಳು, ಎಲ್ಲರೂ ಸಹಬಾಳ್ವೆ ಬಾಳೋಣ, ಎಲ್ಲರೂ ಒಟ್ಟಾಗಿ ಕೆಲಸಮಾಡೋಣ, ಒಟ್ಟಾಗಿ ಊಟಮಾಡೋಣ, ಒಟ್ಟಾಗಿ-ಸಹನಶೀಲರಾಗಿ ತೇಜಸ್ವಿಗಳಾಗಿ ಬದುಕೋಣ ಎಂದಲ್ಲವೇ ಈ ಮಂತ್ರ ತಿಳಿಸುವುದು. ಅದಕ್ಕೇ ನಮ್ಮ ಸನಾತನ ಧರ್ಮದಲ್ಲಿ ಪರಧರ್ಮ ಸಹಿಷ್ಣುತೆ ಇದೆ. ಪರನಿಂದೆ ಸಲ್ಲ, ಎಲ್ಲಾ ಧರ್ಮಗಳೂ ಬೋಧಿಸುವ ಮೂಲ ಒಳಿತೇ, ಎಲ್ಲರೂ ಒಂದೇ ಎಂಬ ಭಾವವಿದೆ. ಅದನ್ನೇ ಸಂಸ್ಕೃತದಲ್ಲಿ

|| ವಸುದೈವ ಕುಟುಂಬಕಮ್ ||

ಎಂದಿದ್ದಾರೆ ನಮ್ಮ ಪ್ರಾಜ್ಞರು. ಅಂದರೆ ವಿಶ್ವವೇ, ಜಗತ್ತೇ ನಮ್ಮ ಕುಟುಂಬ ಎಂದು ಭಾವಿಸೋಣ, ನಮ್ಮ ನಮ್ಮಲ್ಲೇ ಜಗಳಗಳು, ಅರ್ಥಹೀನ ಕೃತ್ಯಗಳು,ಹಿಂಸೆ-ದುರಾಚಾರಗಳು ಬೇಡ ಎಂಬ ಉದ್ದೇಶ-ಆರ್ಷೇಯ ಸಂಸ್ಕೃತಿ ; ಎಷ್ಟು ಸುಸಂಕೃತವಲ್ಲವೇ ?

ಇಹದ ನಮ್ಮ ಬಾಧೆಗಳನ್ನು ಕಳೆಯಲು ದೇವರ ಮಿಕ್ಕುಳಿದ ಎಲ್ಲ ನಾಮಗಳಿಗಿಂತಲೂ 'ನಾರಾಯಣ' ಎಂಬ ನಾಮ ಶ್ರೇಷ್ಠ ವೆಂದು ನಾವು ಅಜಾಮಿಳನ ಕಥೆಯಲ್ಲಿ ತಿಳಿಯುತ್ತೇವೆ. ವ್ಯಭಿಚಾರಿಯಾಗಿದ್ದ ಅಜಾಮಿಳ, ಅನೇಕ ಕೆಟ್ಟಕೆಲಸಗಳಲ್ಲಿ ತೊಡಗಿ ಕೊಂಡಿದ್ದ ಅಜಾಮಿಳ, ರೋಗಿಯಾಗಿ ಹಾಸಿಗೆ ಹಿಡಿದು ನರಳುತ್ತಿರುವಾಗ ಸಾಯುವ ಕೊನೇ ಗಳಿಗೆಯಲ್ಲಿ 'ನಾರಾಯಣ'ಸ್ಮರಣೆ ಮಾಡುತ್ತಾನೆ; ಅದರಿಂದ ಪಾಪಮುಕ್ತನಾಗಿ ಮಹಾವಿಷ್ಣುವಿನ ಸಾಯುಜ್ಯವನ್ನು ಪಡೆಯುತ್ತಾನೆ. ಇವತ್ತಿಗೂ ಅದಕ್ಕೇ ಯಾರಾದರೂ ಗತಿಸಿದಾಗ ಪುರೋಹಿತರು ಭಗವನ್ನಾಮ ಸ್ಮರಣೆ ಅದರಲ್ಲೂ 'ನಾರಾಯಣ' ಜಪವನ್ನು ಮಾಡಲು ಹೇಳುತ್ತಾರೆ. ಹೀಗೇ ಕಾಲ, ದೇಶ, ಸಮಯದ ಪರಿಮಿತಿಗೆ ಒಳಪಡದ ನಾಮ 'ನಾರಾಯಣ'. ಇಂತಹ ನಾರಾಯಣ ಧ್ಯಾನದ ಗೀತೆಯೊಂದಿಗೆ, ನಮಗೆಲ್ಲ ಮೇರೆ ಮೀರಿದ ಸುಖ-ಸಂತೋಷ, ಸಮೃದ್ಧಿ, ನೆಮ್ಮದಿ, ಆಯುರಾರೋಗ್ಯ ಕೊಡಲೆಂದು ನಿಮ್ಮನ್ನು ನನ್ನೊಂದಿಗೆ ಪ್ರಾರ್ಥನೆಯಲ್ಲಿ ಭಾಗಿಗಳಾಗಲು ಕರೆಯುತ್ತಿದ್ದೇನೆ--

[ಚಿತ್ರ ಕೃಪೆ : ಅಂತರ್ಜಾಲ ]

ಅಮೃತಾತ್ಮವೆ ನೆನೆ 'ನಾರಾಯಣ'


ಸಾವಿರ ಜನುಮದ ಪಾಪವ ತೊಳೆಯಲು
ಅಮೃತಾತ್ಮವೆ ನೆನೆ ' ನಾರಾಯಣ '|
ಸಾಗರ ಜೀವನ, ಪಯಣಿಕರೈ ನಾವ್
ನೌಕೆಯ ನಾವಿಕ ನಾರಾಯಣ ||ಪ||

ವಿಸ್ತರವೀ ಜಗ ಸುಸ್ಥಿರವಲ್ಲ
ಹಸ್ತ ಪಿಡಿದು ಪೊರೆ ನಾರಾಯಣ|
ಕಸ್ತೂರಿ ತಿಲಕ ಲಲಾಟ ಪಲಕವೈ
ಕೌಸ್ತುಭಧಾರಿಯೇ ನಾರಾಯಣ ||೧ ||

ಆಗೊಮ್ಮೆ ಈಗೊಮ್ಮೆ ಮಗುದೊಮ್ಮೆ ಎನ್ನದೆ
ಬಗಲಲೇ ಇರಿಸಿಕೊ ' ನಾರಾಯಣ '|
ಬಾಗಿಶಿರವ ಮುಗಿದೊಮ್ಮೆ ಈ ಕರವ
ಮೊಗೆದು ಭಜಿಸೊ ನಿತ್ಯ 'ನಾರಾಯಣ' ||೨||

ದಿನವಹಿ ತಿರುಗುತ ಕೆಲಸವ ಮಾಡುವ
ಮನದ ದುಗುಢ ನೀಗೋ ನಾರಾಯಣ|
ಘನಮಹಿಮನುನೀ ಪರಮಪದವು ನೀ
ಅಮೃತ ತತ್ವವೇ ಲಕ್ಷ್ಮೀನಾರಾಯಣ ||೩||

ಹರಿಯೂ ನೀ ಮತ್ತೆ ಹರನೂ ನೀನೇ
ಪರಿಪರಿ ರೂಪವೋ ನಾರಾಯಣ|
ಸರಿಗಮಪದ ಹಾಡಿ ಕೊಂಡಾಡುವೆನಿನ್ನ
ಹರಸೊ ಅಮೃತ ಸ್ವಾಮಿ ನಾರಾಯಣ ||೪||

Thursday, February 18, 2010

ಸೃಷ್ಟಿ - ಸುರಭೋಗ

ಸೃಷ್ಟಿಯ ಸೊಬಗು ಅನನ್ಯ-ಅಪರಿಮಿತ. ಅದರಿಂದ ಸಿಗುವ ಆನಂದವೇ ಬೇರೆ! ಆ ಆತ್ಮತೃಪ್ತಿ ದುಡ್ಡುಕೊಟ್ಟು ಕೊಂಡುಕೊಳ್ಳಲಾಗದ್ದು ! ಎಷ್ಟೇ ದುಡ್ದಿರಲಿ ಅದರಿಂದ ಮಾತ್ರವೇ ಸುಖ-ನೆಮ್ಮದಿ ಎಂಬುದು ಸುಳ್ಳು. ಮುಂದಿನವಾರ 'ತಲಕಾಡಿಗೆ ಪಿಕ್ನಿಕ್ ಇದೆ' ಅನ್ನಿ ನಮ್ಮೆಲ್ಲರ ಕಿವಿ ನಿಮಿರುತ್ತದೆ! ಯವುದೋ ನಿಸರ್ಗಧಾಮವೆಂದರೆ, ಜಲಪಾತವೆಂದರೆ ಇದ್ದ-ಬದ್ದ ರಜಗುಜರಾಯಿಸಿ ಹೊರಟುಬಿಡುತ್ತೇವೆ, ಸ್ವಲ್ಪ ನೆಗಡಿ-ಜ್ವರ ಇದ್ದರೂ ಮಾತ್ರೆ ತೆಗೆದುಕೊಂಡಾದರೂ ಪ್ರವಾಸ ಹೊರಡುತ್ತೇವೆ! ಯಾಕೆಂದರೆ ಮನುಷ್ಯ ಕೂಡ ಒಂದು ಪ್ರಾಣಿ. ಇಹದ ಪ್ರತೀ ಜೀವಿಯೂ ಸೃಷ್ಟಿಯ ನಿಯಮಕ್ಕೊಳಪಟ್ಟಿದೆ. 'ಹಸಿರು' ಕಣ್ಣಿಗೆ ಹಬ್ಬವನ್ನು ಕಟ್ಟುತ್ತದೆ ! ನಿತ್ಯ ಹಸಿರಿನ ವನಗಳಲ್ಲಿ ಕಾಡು ಪ್ರಾಣಿಗಳ-ಪಕ್ಷಿಗಳ ಆವಾಸದ ಮಧ್ಯೆ ಒಂದಷ್ಟು ಹೊತ್ತು ಕಳೆದರೆ ಮನಸ್ಸಿಗೆ ಪುನಃಶ್ಚೇತನ ! ಅವುಗಳ ನಿತ್ಯ ನೈಸರ್ಗಿಕ ಬದುಕು-ಹಾರುವ-ಕೂಗುವ-ಕುಣಿಯುವ ರೀತಿ ನಮಗೆ ಹರುಷವನ್ನುಂಟುಮಾಡುತ್ತದೆ. ಬಹಳ ದಿನಗಳ ಬಳಿಕ ತಮಗೆ ಇದರಬಗೆಗೊಂದು ಗೀತೆ ಕಟ್ಟಿಕೊಡುತ್ತಿದ್ದೇನೆ. ನೀವಿದನ್ನ ಮನಸಾ ಅನುಭವಿಸಿ ಆನಂದಿಸಿದರೆ ನನ್ನ ಕೆಲಸ ಸಾರ್ಥಕ.



ಸೃಷ್ಟಿ - ಸುರಭೋಗ

ದಟ್ಟಕಾಡಿನಲೊಂದು ಪುಟ್ಟ ತೊರೆಯೆಡೆಯಲ್ಲಿ
ಮಟ್ಟಿಬಿದಿರನು ಬಳಸಿ ಗೂಡು ಕಟ್ಟಿಹೆನು
ಬೆಟ್ಟದಿಂದಿಳಿಯುತಾ ಬೆಳ್ಳಿ ನೊರೆಯನು ಚೆಲ್ಲಿ
ಹುಟ್ಟಿ ಹರಿಯುವ ನೀರಲೆನ್ನಮರೆತಿಹೆನು











ನವಿಲಿನಾ ನರ್ತನಕೆ ಕೋಗಿಲೆಯ ಗಾಯನವು

ಭುವಿಯ ನಂದನವಿದುವೆ ಎಂಥ ಸುರಭೋಗ
ಕವಿದ ಕಾರ್ಮೋಡಗಳ ಜಾತ್ರೆಯದು ಹೊರಟಾಗ
ಅವಧಿ ಮೀರಿದ ಕುಣಿತ ಇದು ರಾಜಭೋಗ !


ಶುಕ-ಪಿಕಗಳಾದಿ ಪಕ್ಷಿಗಳೆಲ್ಲ ಸಭೆ ಸೇರಿ
ಶಕುತಿ ಮೀರುತ ಹಾಡಿ ದಣಿಯುವಾ ವೇಳೆ
ಯುಕುತಿಯಿಂದಲ್ಲಲ್ಲಿ ಅಡಗುತ್ತ ನಾ ಕಳೆದೆ
ಭಕುತಿ ಮೂಡಿತು ಮನದಿ ಈ ಸೃಷ್ಟಿಮೇಲೆ












ಜಿಂಕೆ ಸಾರಂಗಗಳು ಕಡವೆ ಹಂದಿಗಳೆಲ್ಲ

ಮಂಕುಬಡಿದಾ ರೀತಿ ನಿಂತು ನೋಡಿಹವು
ಬಿಂಕದಾ ಕೆಂಭೂತ ಬಿನ್ನಾಣ ತೋರಿಸುತ
ಅಂಕದಾ ಪರದೆಯನು ಸರಿಸಿತೆರೆಯುತಿರೆ


ಚಿಟ್ಟೆಗಳು ಹಾರಾಡಿ ಬಣ್ಣದೋಕುಳಿಯಾಡಿ
ಮಟ್ಟಸದಿ ಸೃಜಿಸಿದವು ದೃಶ್ಯ ರೂಪಗಳ
ಒಟ್ಟಿನಲಿ ಹಾರಾಡಿ ಮಕರಂದ ಹೀರುತ್ತ
ಕಟ್ಟಿಹವು ಕಲಶಗಳ ಕುಶಲ ಜೇನುಗಳು


ರವಿಕಾಣದೀ ಜಾಗ ಅಹ ಎಂಥ ವೈಭೋಗ !
ಸವಿಯುತಿರೆ ಹೃನ್ಮನದ ಭಾವವದು ಕೆರಳಿ
ಕಿವಿಗಿಂಪು ಮನತಂಪು ಜುಳು ಜುಳು ನಿನಾದದಲಿ
ಕವಿ ಸೋತೆ ಶರಣು ಜನಕನ ಸೃಷ್ಟಿಯಲ್ಲಿ