ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 16, 2010

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ

[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !


ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

9 comments:

  1. ಕೇವಲ ಹಸುವಾಗಿ ಹುಟ್ಟಿದ ತಪ್ಪಿಗೆ, ನೀರು ಕುಡಿದು ಅಮೃತತುಲ್ಯ ಹಾಲನ್ನಿತ್ತ ತಪ್ಪಿಗೆ, ಮಾತನಾಡಲು ಬಾರದ ತಪ್ಪಿಗೆ, ಜೀವನದ ಮುಪ್ಪಿನ ಕಾಲದಲ್ಲಿ ಎಲ್ಲವನ್ನೂ ಮರೆತು ಮಾರುವ ಓ ನಿರ್ದಯಿ ರೈತ ಹೃದಯಗಳೇ ನಿಮ್ಮ ರಾಸುಗಳನ್ನು ಸಾಕುವ ಮಠಮಾನ್ಯಗಳಿಗೆ ನೀಡಿ ಪುಣ್ಯ ಕಟ್ಟಿಕೊಳ್ಳಿ, ಹಾಲುಂಡು ವಿಷವಿಕ್ಕುವ ಕೆಲಸ ಮಾಡುವವರಿಗೆ ಮರುಜನ್ಮವೊಂದಿದ್ದರೆ ಹಸುವಾಗಿ ನೀವೂ ಅದನ್ನು ಅನುಭವಿಸಿ ಎಂದು ಶಪಿಸಿಬಿಡುವ ಮನಸ್ಸಾಗುತ್ತಿದೆ,

    ಮಿತ್ರ ರಾಘು ತಮ್ಮ ಪ್ರತಿಕ್ರಿಯೆಗೆ ಅಭಿವಂದನೆಗಳು.

    ReplyDelete
  2. ವಿ.ಆರ್.ಬಿ, ಮಾನವ ತನ್ನ ವಂಶಜರನ್ನೇ ದಯಾ ದಾಕ್ಷಿಣ್ಯವಿಲ್ಲದೇ ಕೊಲ್ಲುವ ಮೌಲ್ಯಹೀನ ಆಗಿರುವಾಗ ಇನ್ನು ಪಾಪ ಮೂಕ ಪ್ರಾಣಿಗಳ ಅದರಲ್ಲೂ ಹಾಲು, ಗೊಬ್ಬರ ನೀಡಿ ರೈತನ ದಿನವಿಡೀ ಸಾಥ್ ನೀಡುವ ಗೋವಿನ ಬಗ್ಗೆ ಕನಿಕರ ತಂದುಕೊಳ್ಳುವನೇ...? ಪಾಶವೀ ಕೃತ್ಯ ಕಡಿಮೆಯಾದರೆ ಅದೇ ಸಾಧನೆ ಎಂದುಕೊಳ್ಳಬಹುದು...ಸದ್ಯಕ್ಕೆ... ತುಂಬಾ ಕಳಕಳಿಯ ಮನ ಮಿಡಿವ ಲೇಖನ.

    ReplyDelete
  3. ಗೋವುಗಳ ಬಗ್ಗೆ ನಿಮ್ಮ ಸಾತ್ವಿಕ ಪ್ರೀತಿಯಿ೦ದ ಕೂಡಿದ ಲೇಖನ ಮನಮಿಡಿಯುವ೦ತಿದೆ. 'ಹಣ'ದಲ್ಲಷ್ಟೇ ತನ್ನನ್ನು ತಾನು ಕ೦ಡುಕೊಳ್ಳುತ್ತಿರುವ ಮಾನವ ಏಕಿಷ್ಟು ಕ್ರೂರಿಯಾಗುತ್ತಿದ್ದಾನೆ?

    ReplyDelete
  4. ಭಟ್ಟರೇ,
    ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.
    ಹೃದಯಶೂನ್ಯ ರಾಜಕಾರಣಿಗಳ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಸಂಕಟಪಡುವ ಸ್ಥಿತಿ ಬಂದೊದಗಿದೆ. ಗೋಹತ್ಯಾ ನಿಷೇಧ ಕಾನೂನಿಗೆ ವಿರುದ್ಧವಾಗಿ ಹೋರಾಟಮಾಡಲು ನಮ್ಮ ಮಾಜಿ ಪ್ರಧಾನಿಗಳು ಹೊರಟಿದ್ದಾರೆ.ಯಾಕೆ ಹೀಗೆ? ಎಲ್ಲಕ್ಕೂ ರಾಜಕೀಯವೇ? ನಮಗೆ ಈ ರಾಜಕಾರಣಿಗಳಿಂದ ಇನ್ನೇನೂ ಬೇಡ, ಪ್ರತ್ಯಕ್ಷ ದೇವತೆಯಾದ ಗೋಮಾತೆಯ ಮೇಲೆ ಇಂತಹಾ ಅತ್ಯಾಚಾರವೆಸಗುವ ರಾಕ್ಷಸರನ್ನು ಬಗ್ಗುಬಡೆಯಬಾರದೇ? ಇಲ್ಲೂ ರಾಜಕೀಯ ಬೇಕೆ? ಕಣ್ಣಲ್ಲಿ ನೀರು ಬರುವುದರ ಜೊತೆಗೆ ರಕ್ತ ಕುದಿಯುತ್ತಿದೆ, ನಮ್ಮ ಯುವಜಜಾಂಗಕ್ಕೇನಾಗಿದೆ? ಶ್ರೀ ರಾಮಚಂದ್ರಾಪುರದ ಮಠದ ರಾಘವೇಶಭಾರತಿಗಳಂತೂ ಗೋರಕ್ಷಣೆಗಾಗಿ ಅದೆಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ! ಆದರೂ ನಿರಂತರ ಗೋಹತ್ಯೆ ನಡೆಯುತ್ತಿದೆಯಲ್ಲಾ! ಗೋಹತ್ಯಾ ನಿಶೇಧ ಕಾನೂನಿಗೆ ಪ್ರತಿಭಟಿಸುವ ನಮ್ಮ ರಾಜಕಾರಣಿಗಳ ಶೈಲಿ ಹೇಗಿದೆ, ಗೊತ್ತಾ? ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗೋಮಾಂಸ ಭಕ್ಷಿಸಿ ಪ್ರತಿಭಟಿಸಿದ ಅಸಹ್ಯಕರ ಪ್ರತಿಭಟನೆ ನಡೆದಿದೆ!
    ತಾಯಿಯ ಹಾಲುಂಡು ಬೆಳೆಯುವುದು ಮಗುವಾಗಿದ್ದಾಗ ೧-೨ ವರ್ಷಗಳು. ಇನ್ನು ಜೀವನ ಪರ್ಯಂತ ಗೋಮಾತೆಯ ಹಾಲಿನಿಂದಲೇ ಬೆಳೆವ ನಾವು ಎಂತಹಾ ನೀಚರಾಗಿ ವರ್ತಿಸುತ್ತಿದೇವೆ?!
    ಹಾ!! ಈ ನೀಚ ಪ್ರತಿಭಟನೆಯೆಲ್ಲಾ ರಾಜಕೀಯ ಪ್ರೇರಿತ. ವೈಯಕ್ತಿಕವಾಗಿ ನೀವು ರಾಜಕಾರಣಿಗಳನ್ನು ಮಾತನಾಡಿಸಿದರೆ ನೂರಕ್ಕೆ ೯೫ ಜನ ರಾಜಕಾರಣಿಗಳಿಗೆ ಗೋಹತ್ಯೆ ನಿಷೇಧವಾಗಬೇಕೆಂಬ ಮನಸ್ಸು. ಆದರೆ ಇದು ಎಲ್ಲಿ ಬಿ.ಜೆ.ಪಿ ಯವರಿಗೆ ಇದರ ಲಾಭವಾಗುತ್ತದೋ ಎಂದು ಕೆಟ್ಟ ರಾಜಕಾರಣ!
    ಜನಸಾಮಾನ್ಯರಾದ ನಮಗೆ ಈ ರಾಜಕಾರಣ ಬೇಕೆ? ಯಾವ ಪಕ್ಷವಾದರೇನು? ಉತ್ತಮ ಆಡಳಿತ ಮಾಡಿದರಾಯ್ತು. ಈಗಿನ ಬಿ.ಜೆ.ಪಿ ಆಡಳಿತದಲ್ಲಿ ಜನರಿಗೆ ಬೇಸರಮೂಡಿಯಾಗಿದೆ.ಮುಂದೆ ವಿರೋಧ ಪಕ್ಷದವರೇ ಆಳಲು ಅವಕಾಶವಿದ್ದೇ ಇದೆ. ಜನ ಜಾಗೃತಿ ಮೂಡಿಸಿ ಬೇರೆ ಸರ್ಕಾರದ ರಚನೆಯಾಗಲಿ. ಆದರೆ ಯಾವ ಪಕ್ಷದ ಸರ್ಕಾರವಾದರೂ ಇರಲಿ, ಇಲ್ಲಿ ನೆಲದ ಸಂಸ್ಕೃತಿಯುಳಿಸುವ ಹೊಣೆ ಎಲ್ಲರದ್ದೂ ಅಲ್ಲವೇ? ಅದು ಯಾವ ಪಕ್ಷದ ಗುತ್ತಿಗೆಯೂ ಅಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಗೋಹತ್ಯಾ ನಿಷೇಧಕಾನೂನಿಗೆ ಬೆಂಬಲಿಸಿ ಜನರ ಒಲವು ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ನೆಲದ ಪರಂಪರೆಗೆ ಮಾರಕವಾಗುವ ಯಾವುದೇ ವಿಷಯದಲ್ಲಿ ಪಕ್ಷಬೇಧಮರೆತು ಹೋರಾಡಿದರೆ ದೇಶಕ್ಕೂ ಒಳ್ಳೆಯದು, ಜನರ ಒಲವನ್ನೂ ವಿರೋಧಪಕ್ಷಗಳು ಜಾಣತನದಿಂದ ಪಡೆಯಲೂಬಹುದು. ರಾಜಕೀಯ ಮಾತು ಬೇಡವೆಂದರೂ ಅದಿಲ್ಲದೆ ಏನೂ ಇಲ್ಲ. ಹಾಗಾಗಿ ಕ್ಷಮೆ ಇರಲಿ.
    -ಹರಿಹರಪುರಶ್ರೀಧರ್

    ReplyDelete
  5. ಮಿತ್ರರೇ, ನಿಮ್ಮೆಲ್ಲರ ಕಳಕಳಿ ನೋಡಿ ನನ್ನ ವೈಯಕ್ತಿಕ ರೋದನವನ್ನು ತುಸು ಕಮ್ಮಿಮಾಡಿಕೊಂಡಿದ್ದೇನೆ. ಆದರೂ ಈ ವಿಷಯ ನಮ್ಮ ಕಣ್ಣಿಗೆ ರಪ್ಪನೆ ರಾಚಿ -ಮನ ಕೆದಕಿ-ದಿಗಿಲೆದ್ದು,ಕಾಣದ ಕೋಪ ಭುಗಿಲೆದ್ದು ಸುಡುವ ಕೆನ್ನಾಲಿಗೆಗಳು ನಮ್ಮ ಮನಸ್ಸನ್ನೇ ತಿನ್ನುವ ಹಂತಕ್ಕೆ ಬೆಳೆಯುತ್ತವೆ ಅಲ್ಲವೇ ? ಅಮ್ಮನ ತರುವಾಯ ಜೀವನ ಪೂರ್ತಿ ಪ್ಯಾಕೆಟ್ ಮೂಲಕವೋ ಪಾತ್ರೆ ಮೂಲಕವೋ ನಮಗೆಲ್ಲ ತನ್ನ ಶುದ್ಧ ಅಮೃತವನ್ನು ಧಾರೆ ಎರೆಯುವ ಇಂತಹ ಕಾಮಧೇನುಗಳನ್ನು ಯಾರೋ ಒಂದಷ್ಟು ಜನ ರಾಕ್ಷಸರು ತಿನ್ನುವ ಹಂತದಲ್ಲಿ ಮಾರುವ ಮಾರೀಚರಿಗಾದರೂ ಬುದ್ಧಿಬೇಡವೇ ? ತಿನ್ನಲೇ ಖರೀದಿಸಿದರೂ ಕತ್ತರಿಸುವವರೆಗೆ ಆ ಕಟುಕರಿಗೆ ಅದು ಸುಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಲಾಗುತ್ತಿರಲಿಲ್ಲವೇ? ಕೆಲದಿನಗಳ ಹಿಂದೆ ಬೆಂಗಳೂರಿನ ಶಿವಾಜಿನಗರದ ಶಿವಾಜಿ ವೃತ್ತದ ಬಳಿ ಒಂದು ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಹೊರಟಿದ್ದೆ, ಅಲ್ಲಿ ಒಂದು ಮುದ್ದಾದ ಬಿಳಿಯ ಕಿಲಾರಿ ತಳಿಯ ಹೋರಿಗರುವೊಂದನ್ನು ಬಿರುಬಿಸಿಲಲ್ಲಿ ಕಟ್ಟಿನಿಲ್ಲಿಸಿದ್ದರು, ಅದು ವಧೆಗಾಗಿಯೇ ಅಲ್ಲಿಗೆ ತರಲ್ಪಟ್ಟಿದ್ದು ಎಂದು ತಕ್ಷಣಕ್ಕೆ ಅರ್ಥವಾದರೂ ಕೆಲವರಿಗೆ ಸುದ್ದಿ ತಲ್ಪಿಸಿದೆ, ಆದರೆ ಅಲ್ಲೆಲ್ಲ ಹಾಗೇ ಗುಲ್ಲೆಬ್ಬಿಸಿದರೆ, ಜಗಳವಾಡಿದರೆ ರಾಜಕೀಯ ಮುಖಂಡರು ಸುಮ್ಮನಿರುತ್ತಾರೆಯೇ? ಹಾಗಂತ ಎಷ್ಟುದಿನ ತಡೆದು ಕೊಳ್ಳಲಾದೀತು? ಸಾಹಿತಿಗಳಾದ ಕಾರ್ನಾಡ, ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ ಇವರೆಲ್ಲ ಹಸುಗಳು ತಮ್ಮ ಜೀವನದಲ್ಲಿ ಕಂಡ, ಓದಿಕೊಂಡ ಖಳನಾಯಕರು ! ಅವರು ದಿನಬೆಳಗಾದರೆ ಕತ್ತೆಯ ಹಾಲನ್ನು ಕುಡಿದು ಬದುಕುತ್ತಾರೆ. ಇಂತಹ ಮಾನಗೆಡೀ ರಾಜಕೀಯ ಮಾಡುವ ವ್ಯವಹಾರಕ್ಕೆ ಮೂತಿ ತೂರಿಸಿ ಮೊದಲು ರಾಜಕೀಯಮಾಡಿ ಪಡೆದ ಪ್ರಶಸ್ತಿಗಳ ಆ ಮೌಲ್ಯವನ್ನೂ [ಮೊದಲೇ ಇಲ್ಲ ಅನ್ನಿ, ಆದರೂ]ಕಡಿಮೆಮಾಡಿಕೊಳ್ಳುವ ಬದಲು ತೆಪ್ಪಗೆ ಕುಳಿತುಕೊಳ್ಳಬಾರದೇ? ರೈತನಲ್ಲಿ ಹಲವು ಸಮಸ್ಯೆಗಳಿವೆ-ಬರೇ ಮುದಿಹಸುಗಳನ್ನು ಮಾರುವುದರಿಂದ ಅವರ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕಿಬಿಡುತ್ತದೆಯೇ? ಹಾಗಿದ್ದರೆ ಈಗೀಗ ಮುದುಕಾಗುತ್ತಿರುವ ಮೇಲೆಹೇಳಿದ ಎಲ್ಲಾ ಸಾಹಿತಿಗಳನ್ನೂ {?] ಕಸಾಯಿಖಾನೆ ಹಾಕಿ ಅವರವರ ಮಕ್ಕಳ-ಮನೆಯ ಭಾರ ಕಮ್ಮಿ ಮಾಡಿ ! ರಾಸುಗಳಿಗಾಗುವ ಈ ದುರಂತವನ್ನು ಮನದಂದು ಶ್ರೀ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿಗಳಂತೂ ಗೋರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ- ಆದರೆ ಅದನ್ನು ಕಂಡ ಪಂಕ್ಚರ್ದ್ ಸೈಕಲ್ ನ ಬಂಗಾರಪ್ಪ ಬೀದಿನಾಯಿ ಬೊಗಳಿದ ಹಾಗೇ ಆಡಬಾರದ ಮಾತನ್ನೆಲ್ಲ ಆಡಿದ್ದಾನೆ, ಇಂತಹ ಧೂರ್ತ,ಕುತ್ಸಿತ ರಾಜಕಾರಣಿಗಳನ್ನೆಲ್ಲಾ ನಾವು ಸಾಕುತ್ತೆವಲ್ಲಾ ನಮಗೆ ಬುದ್ಧಿ ಇದೆಯೇ ?

    ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತಲೆಬಾಗಿದ್ದೇನೆ. ಹೆಚ್ಚಿಗೆ ಬರೆಯುವ ಮನಸ್ಸಾಗುತ್ತಿಲ್ಲ, ಎಲ್ಲೇ ಹೋದರೂ ನಿಂತರೂ ಕುಂತರೂ ಹಸುಗಳದೇ ಧ್ಯಾನ. ನಿಮ್ಮ ಒಬ್ಬೊಬ್ಬರ ಅನಿಸಿಕೆಯೂ ಮನದಾಳಕ್ಕೆ ಇಳಿಯುತ್ತದೆ, ಅಂಬಿನ ಅಲುಗು ನಾಟಿದಂತೆ ನಾಟುತ್ತದೆ! ನನ್ನ ಈ ಅನಿಸಿಕೆಗೆ ದುಃಖಪೂರಿತವಾಗಿ ಸ್ಪಂದಿಸಿದ ನಿಮ್ಮೆಲ್ಲರ ಪ್ರತಿಕ್ರಿಯೆ ಓದಿ ನೋವಾಗುತ್ತದೆ. ನಾವು ಇನ್ನೂ ಹೀಗೇ ಕುಳಿತುಕೊಳ್ಳಬೇಕೆ ಅಥವಾ ವಿಧಾನಸೌಧಕ್ಕೆ ನುಗ್ಗಿ ಪಾಠ ಕಲಿಸಲು ಸಜ್ಜಾಗಬೇಕೆ ನೀವೇ ಯೋಚಿಸಿ. ನಮ್ಮದಾದ ಗೋವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ-ಇದು ಮಾನವ ಧರ್ಮ, ಮಾನವ ಸಹಜ ಪ್ರವೃತ್ತಿ ಇರುವವರಿಗೆ ಇರಬೇಕಾದ ಧರ್ಮ. ಬನ್ನಿ ಮಿತ್ರರೇ, ಇನ್ನಾದರೂ ಈ ವಿಷಯದಲ್ಲಿ ತುಸು ಚಿಂತಿಸೋಣ, ನಮ್ಮ ಮಠಗಳು ರಾಜಕಾರಣ ಮಾಡುತ್ತಿಲ್ಲ, ಧರ್ಮಕಾರಣ ಮಾಡುತ್ತಿಲ್ಲ ಬದಲಾಗಿ ಮಾನವಧರ್ಮಕಾರಣ ಮಾಡುತ್ತಿದ್ದಾರೆ, ಇದು ಬೇಕಾದದ್ದೇ, ಇದರಿಂದ ಯಾರಿಗೂ ಹಾನಿ ಇಲ್ಲ.

    ಪ್ರತಿಕ್ರಿಯಿಸಿದ ಸರ್ವಶ್ರೀ ಆಜಾದ್, ಹರಿಹರಪುರ ಶ್ರೀಧರ್, ವಸಂತ್ ಮತ್ತು ಪ್ರಭಾಮಣಿ ಮೇಡಂ ತಮಗೆಲ್ಲ ಹೃತ್ಪೂರ್ವಕ ನಮನಗಳು ಜೊತೆಗೆ ದೇಶೀಯ ಗೋವಿನ ಸವಿನೆನಪುಗಳು, ಈ ನೆನಪುಗಳು ಸದಾ ನಿಮ್ಮಲ್ಲಿ ಹಸಿರಾಗಿರಲಿ,ಉಸಿರಾಗಿರಲಿ, ನಿಮ್ಮೆಲ್ಲರಿಗೂ ನಿತ್ಯ ಹಾಲುಣಿಸುವ ನಮ್ಮ ಗೋವಮ್ಮ ನಿಮ್ಮ ಕರುಣೆಯ ಆಶ್ರಯಕ್ಕೆ ಬೇಡುತ್ತಿದೆ-ಇದನ್ನು ಅರಿತು ಒತ್ತಟ್ಟಿಗೆ ನಾವು ಸಾಗೊಣವೇ?

    ReplyDelete
  6. ತುಂಬಾ ನೋವಿನ ವಿಚಾರ,,,, ಇದನ್ನು ವಿಜಯ ಕರ್ನಾಟಕ ಪೇಪರ್ ನಲ್ಲಿ ನೋಡಿದಾಗ,,, ಮನಸ್ಸು ತುಂಬಾ ಹಿಂಸೆ ಅನುಭವಿಸಿತು..... ತುಂಬಾ ನೋವು ಕೂಡ ಆಯಿತು,,, ಇಷ್ಟು ಕ್ರೂರ ವಾಗಿ ನಮ್ಮ ಗೋವುಗಳ ನೋಡಿಕೊಳ್ಳುತ್ತಾರೆ.... ಛೆ,,,, ನೀವು ಹೇಳಿದಂತೆ,,, ನಾವೆಲ್ಲ ಜಾಗೃತ ರಾಗಿ,,, ಇಂಥ ಅನಿಷ್ಟ ಗಳನ್ನು ತಡೆಯಬೇಕು,,,,
    ತುಂಬಾ ಒಳ್ಳೆಯ ಲೇಖನ,,,, ಹಾಗು ಪ್ರತಿಕ್ರಿಯೆಗಳು....
    Guru

    ReplyDelete
  7. ಹಾಲ್ಕೊಟ್ಟು ನಮ್ಮ ಸಲುಹಿದ ಗೊಮಾತೆಯನ್ನು ಉಳಿಸುವಲ್ಲಿನ ತಮ್ಮ ಕಾಳಜಿ ಇಡೀ ಜಗತ್ತಿಗೆ ಸಾರಬೇಕಾಗಿದೆ! ಇದು ಕೇವಲ ಒಂದು ಕೋಮಿನ ಮತೀಯ ಅಥವಾ ದೇಶದ ವಿಷಯವಲ್ಲ! ಇದು ಸಮಗ್ರ ಮಾನವನ ಚಿಂತನೆಯಾಗಬೇಕು! ಗೋವೊಂದೆ ಅಲ್ಲ ಸಕಲ ಪ್ರಾಣಿಗಳ ಬಕ್ಷಣೆ ನಿಂತು ರಕ್ಷಣೆಯಾಗಬೇಕು.
    ಆದರೇ ಗೋಹತ್ಯಾ ನಿಷೇಧದಿಂದ ಗೋಹತ್ಯ ನಿಲ್ಲುವದೆ೦ದಾಗಲಿ, ಮಾಡದಿದ್ದರೆ ಗೋವುಗಳ ಸಂತತಿ ಉಳಿಯುವದೆನ್ದಾಗಲಿ ನನಗೆ ನಂಬಿಕೆಯಲ್ಲಿ. ಈ ವಿಷಯದಲ್ಲಿ ಕಾನೂನು ಮುಖಾಂತರ ಮಾಡುವ ಬದಲು ಸ್ವ-ನೀತಿ ಸ್ವಯಂ ಸ೦ರಕ್ಶನೆ ಯಲ್ಲಿ ರೈತರ ಮತ್ತು ಎಲ್ಲರ ಮನಪರಿವರ್ಥನೆಯಲ್ಲಿ ಕಾರ್ಯವಾಗಬೇಕಿದೆ. ರೈತನ್ನು ಸದ್ರುಡನನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನುಗಳು ಮಾಡಿದರೆ ಅನುಕೂಲವಾಗುವದೇ ಹೊರತು ಹತ್ಯ ನಿಷೇಧದಿಂದಲ್ಲ!
    ಇದನ್ನು ನಮ್ಮ ರಾಜಕೀಯ ಧುರೀಣರು ತಿಳಿದುಕೊಳ್ಳಬೇಕು.
    ಒಂದು ಕಡೆ ರೈತನಿಂದ ಭೂಮಿಯನ್ನೇ ಕಸಿದು ವಿಶೇಷ ವಿತ್ತ ವಲಯವನ್ನಾಗಿ ಮಾಡಿ ಇನ್ನೊಂದು ಕಡೆ ಗೋಹತ್ಯ ಮಸೂದೆ ಮಾಡುವ ರಾಜಕೀಯದವ ಡೋಂಗಿತನ ತಡೆಯಬೇಕಾಗಿದೆ.
    ದಯವಿಟ್ಟು ರೈತರು ಸ್ವಯಮ ಪ್ರೇರಿತ ಹತ್ಯ ನಿಷೆಧವನ್ನು ಸಂಕಲ್ಪಿಸುವಲ್ಲಿ ನಮ್ಮ ಹೆಜ್ಜೆ ಇಡೋಣ!

    ReplyDelete
  8. ಗುರುರವರೇ, ಇದು ಕಣ್ಣಿಗೆ ಕಾಣುವಂತಿದ್ದರೂ ಕೊಡುವ ಮತ್ತು ಕೊಳ್ಳುವ,ಕೊಲ್ಲುವ ಕೆಲಸ ನಡೆದೇ ಇದೆ,ವಿಚಾರ ಮಾಡಿ ಎಂಥಾ ಅನ್ಯಾಯ, ಯರೋ ಸಹಾಯ ಮಾಡಿದರೆ ಅವರಿಗೆ ಋಣಿಯಾಗಿರುತ್ತೇವೆ, ಸಾಯುವವರೆಗೆ ಅದನ್ನು ನೆನಪಿದುತ್ತೇವೆ, ಆದರೆ ದಿನವೂ ನಾವೇನು ಕೊಟ್ಟೆವು-ಬಿಟ್ಟೆವು ಎಂಬ ಹಂಗಿಲ್ಲದೆ ತನ್ನಿಂದಾದಷ್ಟು ಹಾಲನ್ನು ಕೊಡುವ ಗೋವನ್ನು ಮಾತ್ರ ಮರೆಯುತ್ತೇವೆ, ಮುದುಕಾಗಿದೆ-ಕೆಲ್ಸಕ್ಕೆ ಬಾರದು, ಸುಮ್ನೇ ಇಟ್ಕೊಂಡು ಹೊಟ್ಟೆ ಹೊರೀಬೇಕು ಎಂದೆಲ್ಲಾ ಬೈದು ಅದನ್ನು ಮಾರುತ್ತೇವೆ, ಇದು ನ್ಯಾಯವೇ ? ತಮಗೆ ಧನ್ಯವಾದ.

    ಸೀತಾರಾಮರಾಯರೇ, ತಮ್ಮ ಪ್ರತಿಕ್ರಿಯೆ ಸದಾ ವಿಶಿಷ್ಟವಾಗಿರುತ್ತದೆ. ಇಲ್ಲಿ ಕಾನೂನು ಮಾಡುವದು ಯಾಕೆಂದರೆ ಕೊನೇಪಕ್ಷ ರಾಜಾರೋಷವಾಗಿ ಈ ವ್ಯವಹಾರ ನಡೆಯದಿರಲಿ ಎಂದು. ಕಾನೂನು ಇದ್ದರೆ ನಮ್ಮ-ನಿಮ್ಮಂಥವರು ಎಲ್ಲಾದರೂ ಯಾರನ್ನಾದರೂ ಹಿಡಿದರೆ ನಮಗೆ ಆ ಖೂಳರು ತೊಂದರೆ ಕೊಡದಂತೆ ಸಹಾಯಕ್ಕೆ ಪೊಲೀಸರಾದರೂ ಸಿಗಬಹುದು ಎಂಬದು ಅನಿಸಿಕೆ, ಇನ್ನೊಂದು ರೀತಿಯಲ್ಲಿ ನೋಡಿದಾಗ ನೆರವಾಗಿ ಕೊಳ್ಳುವ ದಲ್ಲಾಳಿಗಳು ಕಾಮಿ ಆಗುತ್ತಾರೆ. ತಾವು ಹೇಳಿದಂತೆ ರೈತನ ಮಟ್ಟದಲ್ಲಿ ಜಾಗೃತಿ ಮೂಡಿಸಲು ಮೇಲೆ ಹೇಳಿದ ಮಠ-ಮಾನ್ಯಗಳು ಶ್ರಮಿಸುತ್ತಿವೆ. ಆದರೂ ಕಳ್ಳ ಮನುಷ್ಯನಿಗೆ ಕದ್ದು ಮಾರಲು ದಾರಿ ಹೇಳಬೇಕೇ ? ಆಕಡೆ ಮಾರಿ ದುಡ್ಡೆಣಿಸಿಕೊಂಡು ಈಕಡೆ ಆತನೇ ಗೋಸಂರಕ್ಷಣೆ ಮಾಡಿ ಅಂತ ಬಾವುಟ ಹಾರಿಸುವ ಕಿರಾತಕರು ರೈತರಲ್ಲಿ ಹಲವಿರಿದ್ದಾರೆ. ಕೆಲವರಿಗೆ ಅವರ ಆರ್ಥಿಕತೆ ಆ ರೀತಿ ಮಾಡಿಸುತ್ತಿದೆ, ಇದೇನೇ ಇದ್ದರೂ ಪಕ್ಕಕ್ಕಿರಲಿ ಕೊನೇಪಕ್ಷ ಮಾರುವ ಘಳಿಗೆಯಲ್ಲಿ ಆ ಹಸುವಿನ ಕೊನೆಯ ಒಂದು ನೋಟ ಹೇಗಿರಬಹುದು, ಜನ್ಮಪೂರ್ತಿ ಒಡೆಯನನ್ನು ಹಾಲು ಕೊಟ್ಟು ಸಲಹಿದ ತಪ್ಪಿಗೆ, ಎರಡನೆಯ ಅಮ್ಮನಾಗಿ ವಾತ್ಸಲ್ಯ ತೋರಿದ ತಪ್ಪಿಗೆ ಆತನ ಕಣ್ಣೆದುರೇ ಕಾಲುಮುರಿದು ಲಾರಿಗೆ ಏರಿಸುವಾಗಿನ ಆ ಆಕ್ರಂದನ ನಿಜವಾಗಿ ಕಟುಕಹೃದಯಿಯಾದ ರೈತನಿಗೆ ಕೇಳದೇ ? ಜಾಗ್ರತಿ ಯಾವಾಗ ಯಾರು ಎಲ್ಲಿ ಮಾಡಬೇಕೆನ್ನುವದಕ್ಕಿಂತ ಇರುವ ಕನ್ನಡಸಂಘಟನೆಗಳು ಈ ಸೇವೆ ಮಾಡಬಹುದು, ದೇಶವ್ಯಾಪಿ ಹಲವು ಸಂಘ-ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಬಹುದು, ಆದರೆ ಸದ್ಯಕ್ಕೆ ನಮ್ಮ ಸ್ಥಾನಿಕ ಮಠಗಳವರು ಹಲವು ಜಾಗಗಳಲ್ಲಿ ಗೋಶಾಲೆ ಆರಂಭಿಸಿದ್ದಾರೆ-ನಿಜಕ್ಕೂ ಅದ್ಬುತ ಆಂದೋಲನ, ನಾವೆಲ್ಲಾ ಅದನ್ನು ಒಮ್ಮೆ ನೋಡಿದರೂ ಅದೊಂದು ಸಂತೃಪ್ತಿ ತರುವಂಥದು, ನಮ್ಮಿಂದ ಯಾವ ಗೊವನ್ನೂ ಉಳಿಸಲಾಗದಿದ್ದರೂ ಪರೋಕ್ಷ ಕೇವಲ ಮೂರು ಸಾವಿರ ರೂಪಾಯಿ ದೇಣಿಗೆ ನೀಡಿ ಒಂದು ಹಸುವಿಗೆ ವರ್ಷಪೂರ್ತಿ ಆಹಾರ ಸಿಗುವಂತೆ ಆಶ್ರಮವಾಸಿಗಳು ಅದನ್ನು ಸಲಹುವಂತೆ ಮಾಡುವ ಅವಕಾಶ ಶ್ರೀ ರಾಮಚಂದ್ರಾಪುರ ಮಠದ ಗೊಶಾಲೆಗಳಲ್ಲಿದೆ, ಇದನ್ನು ಸದ್ಯ ಅನುಸರಿಸಿದರೆ ನಾವೂ ಆ ಆಂದೋಲನದಲ್ಲಿ ಸಹಭಾಗಿಗಳಾದ ಹಾಗೇ. ಅವರ ಅವಿರತ ಪ್ರಯತ್ನವಿರದಿದ್ದರೆ ನಮಗೆಲ್ಲ ಇಷ್ಟೆಲ್ಲಾ ಆಗುತ್ತಿದ್ದುದು ಲಕ್ಷ್ಯಕ್ಕೆ ಬರುತ್ತಿರಲಿಲ್ಲ, ತಮಗೂ ಅನಂತ ನಮನಗಳು

    ReplyDelete